Sunday, November 13, 2011

ಓಂಕಾರ






  
ಓಂ ....ಓಂ.. ..ಭಗವಂತನ ಓಂಕಾರ ಸ್ವರೂಪದ ಈ ಆದಿ ಮಂತ್ರದ ಪೂರ್ಣ ಮಹತ್ವದ ಅರಿವಾದದ್ದು ಇತ್ತೀಚೆಗೆ. ಧ್ಯಾನ ಯೋಗದಲ್ಲಿ ಅತ್ಯಂತ ಮಹತ್ವವಿರುವ ಈ ಮಂತ್ರ ಹಲವು ರೀತಿಯಲ್ಲಿ ಉಚ್ಚರಿಸಲ್ಪಡುತ್ತದೆ. ಸಹಜವಾಗಿ ವೇದ ಮಂತ್ರಗಳಲ್ಲಿ ಗುರು ಉಪದೇಶವಾದಂತೆ ನೇರವಾಗಿ ಕುಳಿತು ನಾಭಿಯಿಂದ ಉಚ್ಚರಿಸಲ್ಪಡುವ ಓಂಕಾರ ಕೇವಲ ಉಚ್ಚಾರಕ್ಕೆ ಮಾತ್ರವೇ ಸೀಮಿತವಾದಂತೆ ಈ ಮೊದಲು ಕಂಡಿತ್ತು. ಸ್ವಲ್ಪ ಮಟ್ಟಿಗೆ ಯೋಗಾಭ್ಯಾಸ ಆರಂಭಿಸಿದ ಮೇಲೆ ಧ್ಯಾನದಲ್ಲಿ ಏಕಾಗ್ರತೆಯನ್ನು ಸಾಧಿಸಿ ಭಗವಂತನ ಧ್ಯಾನದಲ್ಲಿ ಲೀನವಾಗುವಾಗ ಓಂಕಾರ ಮಹತ್ವವನ್ನು ಪಡೆಯುತ್ತಿತ್ತು. ಯೋಗ ಮಾಡುತ್ತಿದ್ದಂತೆ ಪ್ರತೀ ಬಾರಿಯೂ ಒಂದು ವಿಶಿಷ್ಟ ಅನುಭವಕ್ಕೆ ನಾನು ಒಳಗಾಗುತ್ತೆದ್ದೆ. ಅದೇ ರೀತಿ ಈ ಬಾರಿಯೂ ವಿಚಿತ್ರವಾದ ಅನುಭವ Ooಓಂಕಾರ ಧ್ಯಾನದ ಮೂಲಕ ಆದಾಗ ಅದರ ನೆನಪು ಮತ್ತೂ ಮತ್ತೂ ಮರುಕಳಿಸುತ್ತದೆ.
ಧ್ಯಾನಕ್ಕೆ ತೊಡಗುವಾಗ ಆರಂಭದಲ್ಲಿ ಸಹಜವಾಗಿ ಪದ್ಮಾಸನದಲ್ಲಿ ನೇರವಾಗಿ ಕುಳಿತು ಒಂದೇ ಕಡೆಗೆ ಮೇಲ್ಮುಖವಾಗಿ ದಿಟ್ಟಿಸಿ ನಿಧಾನವಾಗಿ ಕಣ್ಣು ಮುಚ್ಚಬೇಕು. ನಿಧಾನವಾದ ದೀರ್ಘವಾದ ಉಸಿರಾಟ ಕೆಲವು ಬಾರಿ ಮಾಡಿದಾಗ  ಮನಸ್ಸು ಮತ್ತು ದೇಹ ಒಂದು ಸ್ಥಿರತೆಯನ್ನು ಪಡೆದು ಕೊಳ್ಳುತ್ತದೆ. ಆ ಸ್ಥಿರತೆಯಲ್ಲೆ ಎಲ್ಲವೂ ಲೀನವಾದ ಅನುಭವ. ಬಾಹ್ಯ ಜಗತ್ತಿನ ಸದ್ಧು ಗದ್ದಲ ಕೇಳುತ್ತಿದ್ದರೂ,  ನಿಧಾನವಾಗಿ ನಮ್ಮ ಅರಿವಿನ ವರ್ತುಲದಿಂದ ದೂರವಾಗುತ್ತದೆ ಆ ಅವ್ಯಕ್ತ ಅನುಭವವೇ ಯೊಗ. ಯೋಗವೆಂದರೆ ಒಟ್ಟು ಸೇರುವುದು. ಎಲ್ಲಾ ಪ್ರಚೋದನೆಗಳಜತೆಗೆ  ದೇಹ ಮತ್ತು ಮನಸ್ಸನ್ನು ಒಂದೇ ಕೇಂದ್ರದಲ್ಲಿ ಒಟ್ಟು ಸೇರಿಸುವುದು.   
ಇದರ ಆರಂಭವೇ ಉಸಿರಾಟದಿಂದ. ಎಲ್ಲವನ್ನೂ ಉಸಿರಾಟದ ಮೂಲಕ ಕೇಂದ್ರಿಕರಿಸುವ ಪ್ರಯತ್ನದಿಂದಲೇ ಶುರು ಮಾಡಬೇಕು.   ನಾಸಿಕಾಗ್ರದಿಂದ ಒಳ ಸೇರಿದ ಗಾಳಿ ಅದೇ  ಗಮನದಲ್ಲಿ ಗಂಟಲು ಎದೆ ಕೊನೆಗೆ ನಾಭಿಯ ಸುತ್ತಲೂ ವ್ಯಾಪಿಸಿ ಮತ್ತು ಕೆಳಗೆ ಹೋಗಿ ದೇಹದ ತುಂಬೆಲ್ಲ ವ್ಯಾಪಿಸ ತೊಡಗಿ ನಿಧಾನವಾಗಿ ಉಸಿರು ಬಿಟ್ಟಾಗ ನಾಭಿಯ ಸುತ್ತ ನಿರ್ವಾತವಾದ ಅನುಭವವಾಗುತ್ತದೆ. ಇದು ಅಲ್ಪ ಸಮಯದಲ್ಲಿ ಉಂಟಾಗುವ ಪರಿಣಾಮವಲ್ಲ. ನಿರಂತರ ಸಾಧನೆಯಿಂದ ಮಾತ್ರ ಸಾಧ್ಯ. ಹೀಗೆ ಅನುಲೋಮ ವಿಲೋಮ ಆವರ್ತನೆಯಾದಂತೆ ಅದರ ಜತೆಯಲ್ಲೇ ಓಂ... ಓಂ ಎಂದು ಓಂಕಾರವನ್ನು  ಎಷ್ಟು ಸಾಧ್ಯವೋ ಅಷ್ಟು ದೀರ್ಘವಾಗಿ ಉಚ್ಚರಿಸುತ್ತಾ ಹೋಗಬೇಕು. ಹಾಗೆ ಉಚ್ಚರಿಸಿದಾಗ ಓ...ದಿಂದ ತೊಡಗಿ ಮಕಾರದಲ್ಲಿ  ಉಚ್ಚಾರ ನಿಧಾನವಾಗಿ ಪೂರ್ಣವಾದಾಗ ನಾಭಿ ಪ್ರದೇಶ ಒಳಕ್ಕೆ ಸೆಳೆಯಲ್ಪಡುತ್ತದೆ. ಘಂಟಾ ನಿನಾದದಲ್ಲಿ ಗಂಟೆಯ ನಿರಂತರ ಕಂಪನಸ್ವರ ಹೇಗೆ ಆವರ್ತಿಸುತ್ತ ತನ್ನ ಸುತ್ತ ಕಂಪನಾವಲಯವನ್ನು ನಿರ್ಮಿಸುತ್ತದೋ ತದ್ರೀತಿ ಓಂಕಾರದ ಕಂಪನ ದೇಹದ ಸುತ್ತ ತನ್ನ ಕಂಪನದವಲಯವನ್ನು ನಿರ್ಮಿಸುತ್ತಾ.. ಆ ವಲಯಕ್ಕೆ ಕೇಂದ್ರವು ನಾಭಿಯಾಗಿಬಿಡುತ್ತದೆ.ಹೊಟ್ಟೆಯ ಕರುಳು ತೀವ್ರವಾಗಿ ಕಂಪನದ ಪರಿಣಾಮವನ್ನು ಅನುಭವಿಸುತ್ತದೆ. ಇದು ಹೊಟ್ಟೆಯ ಒಳಗಿನ ಸರ್ವ ಕ್ರಿಯೆಗಳಿಗೂ ಚೈತನ್ಯ ವನ್ನು ಪ್ರಚೋದನೆಯನ್ನು ಒದಗಿಸುತ್ತದೆ. ಹೀಗೆ ನಿರಂತರವಾದ ದೀರ್ಘವಾದ ಓಂಕಾರದ ಉಚ್ಚಾರ ಹಲವು ಸಲ ಆವರ್ತನೆಯಾದಂತೆ ಉದರದೊಳಗೆ ವಿಶಿಷ್ಟವಾದ ಅನುಭವ  ಉಂಟಾಗುತ್ತದೆ. ಹೊಟ್ಟೆಯ ಕೇಂದ್ರವಾದ ನಾಭಿಯಿಂದ ತೊಡಗಿ ದೇಹದ ತುಂಬೆಲ್ಲ ಈ ಕಂಪನ ಪಸರಿಸಿದಂತೆ ನಮ್ಮ ಅಂತರ್ ದೃಷ್ಟಿಯನ್ನು ಭ್ರೂ ಮಧ್ಯ ಇರುವ ನಿರ್ವಾತ ಪ್ರದೇಶದಲ್ಲಿ ಕೇಂದ್ರೀಕರಿಸಲ್ಪಟ್ಟರೆ  ಯಾವ ರೂಪದಲ್ಲಿ ನಾವು ಭಗವಂತನನ್ನು ಕಲ್ಪಿಸುತ್ತೇವೊ ಆ ರೂಪದ ಪ್ರತ್ಯಕ್ಷ ಅನುಭವ ಭ್ರೂ ಮಧ್ಯದಲ್ಲಿ ಆಗುತ್ತದೆ. ಆವಾಗ  ಕೇವಲ ಅಕ್ಷರ ಮಾತ್ರದ ಓಂಕಾರದ ಮಹತ್ವದ ಅರಿವಾಗುತ್ತದೆ. ಭಗವಂತನನ್ನು ಓಂಕಾರ ಸ್ವರೂಪಿ ಎನ್ನುವುದು ಇದಕ್ಕಾಗಿಯೇ ಇರಬೇಕು ಸರ್ವ ಚೈತನ್ಯರೂಪವೂ ಇದೇ ಅಲ್ಲವೆ?  
ಕೆಲವು ಸಮಯದ ಮೊದಲು ಓರ್ವರು ಹೀಗೆ ಚರ್ಚಿಸುವಾಗ ಹೇಳೀದ್ದರು ... ಪ್ರಾಣಾಯಾಮ ಅಥವಾ ಧ್ಯಾನ ಯೋಗದಲ್ಲಿ ಕ್ಯಾಲೊರಿ ಉರಿಸಲ್ಪಡುವುದಿಲ್ಲ. ಕೇವಲ ಪ್ರಾಣಾಯಾಮ ಒಂದೇ ಸಾಕಾಗುವುದಿಲ್ಲ ಎಂದು. ಆವಾಗ ನನಗೂ ಹೌದೇನೋ ಅನ್ನಿಸಿತ್ತು. ಆದರೆ ಆ ಮಾತು ಇಂದು ನಿಜವಲ್ಲ ಎಂದನಿಸುತ್ತದೆ. ನಿರಂತರ ಓಂಕಾರ ಉಚ್ಚಾರದಿಂದ ನಾಭಿವಲಯದಲ್ಲಿ ಕಂಪನವು ನಿರಂತರವಾಗಿ ಪ್ರಚೋದಿಸಲ್ಪಟ್ಟರೆ, ದೈಹಿಕವಾದ ಕ್ರಿಯೆಗಳ ಮೇಲೂ ಅದರ ಪ್ರಭಾವ ಬೀರದೆ ಇರಲಾರದು. ನಿರಂತರವಾದ ಕಂಪನವು ಹೊಟ್ಟೆ;ಯೊಳಗಿನ ಜೀರ್ಣಾಂಗ ವಿಸರ್ಜನಾಂಗ ಮಾತ್ರವಲ್ಲದೆ ಶ್ವಾಸ ಕೋಶ ಸೇರಿದಂತೆ ದೇಹದ ಎಲ್ಲಾ ಭಾಗದಲ್ಲೂ ಆವಶ್ಯಕ ಪ್ರಭಾವವನ್ನು ಬೀರಬಲ್ಲುದು. ಏನೂ ಅರಿವಿಲ್ಲದೆ ಇದು ಪ್ರಾಯೋಗಿಕವಾಗಿ ಸಿದ್ಧಿಸುವಾಗ ಆಗುವ ಅನುಭವವೇ ವಿಶಿಷ್ಟವಾದುದು.
ಈ ಪ್ರಕೃತಿ ಎಷ್ಟೊಂದು ವೈವಿಧ್ಯಮಯವಾಗಿದೆ. ಪರಮಾತ್ಮನೇ ಲೀನವಾಗಿ ಪರಮಾತ್ಮನಲ್ಲೇ ಒಂದಾಗಿ  ಯಾವ ಬಗೆಯಲ್ಲೂ ಕಾಣಬಹುದಾದ ವೈವಿಧ್ಯತೆ ಅಚ್ಚರಿಪಡುವಂತಹುದು. ಇದಕ್ಕೆ ಅತಿ ಸುಲಭದ ಮಾರ್ಗವೇ ಈ ಧ್ಯಾನ ಯೋಗ .



Wednesday, October 26, 2011

ಮಲೆನಾಡ ಮುಂಜಾನೆ




ಮನೆಯಿಂದ ಹೊರಬಂದು ನೋಡಿದೆ ಮೊದಲ ದಿನ ಇರುಳಿನ ಮಳೆಗೆ ಭೂಮಿ ತೇವವಾಗಿತ್ತು. ಅದು ಮಳೆಯಂತೆ ಇಬ್ಬನಿಯ ರಸಧಾರೆ. ಮಲೆನಾಡು ಎಂದರೆ ಹಾಗೆ. ಅದು ಮಳೆಯೋ ಇಬ್ಬನಿಯೋ ನನ್ನಂಥವರಿಗೆ ಅರ್ಥವಾಗುವಾಗ ಪೂರ್ಣ ಒದ್ದೆಯಾದ ಅನುಭವ.

ನಾನು ಇದ್ದುದು ಮಲೆನಾಡ ಮಡಿಲಿನ ಒಂದು ಪುಟ್ಟ ನಗರ ಕೊಪ್ಪದ ನನ್ನ ಮಾವನ ಮನೆಯ ಅಂಗಳದಲ್ಲಿ. ಕೊಪ್ಪ ಎಂದರೆ ಶೃಂಗೇರಿಯಿಂದ ಒಂದು ಘಂಟೆಯ ಬಸ್ ಪ್ರಯಾಣದಷ್ಟು ದೂರ. ತೀರ್ಥಹಳ್ಳಿಗೂ ಅಷ್ಟೇ. ನನ್ನ ಮಟ್ಟಿಗೆ ಹೇಳುವುದಾದರೆ ಅತ್ಯಂತ ಸುಂದರ ನಗರ. ಯಾಕೆಂದರೆ ಅದು ನನ್ನ ಪತ್ನಿಯ ತವರೂರು. ಸ್ನೇಹ ಸಂಪನ್ನರು. ಸಹೃದಯಿಗಳು ಇರುವ ಮೇಲಾಗಿ ನನ್ನ ಪತ್ನಿಯ ಊರು.  ಸುಂದರವಾಗದೇ ಇರಲು ಕಾರಣವು ಬೇಕಲ್ಲ.?.

ಅದು ಮುಂಜಾನೆಯ ಐದರ ಸಮಯ. ಮಲೆನಾಡಿನ ಮುಂಜಾವು ಎಂದರೆ ಅದೂ ವಿಶಿಷ್ಟ ಅನುಭವವನ್ನು ತರುತ್ತದೆ. ಸುತ್ತಲೂ ಇಬ್ಬನಿಯ ಹನಿ. ತಣ್ಣನೆಯ ವಾತಾವರಣ. ಆಗಿನ್ನೂ ಸೂರ್ಯೋದಯವಾಗಿರದೆ ನೀರವ ಮೌನದ ಗಾಡಾಂಧಕಾರ ಇದ್ದರೆ ಅಲ್ಲೊಂದು ಇಲ್ಲೊಂದು ಬೀದಿ ದೀಪಗಳು ಬೀಳುತ್ತಿರುವ ಮಂಜಿನ ನಡುವೆ ಉರಿಯುತ್ತ ತಮ್ಮ ಅಸ್ತಿತ್ವವನ್ನು ಸಾರಲು ಹರಸಾಹಸ ಪಡುತ್ತಿದ್ದವು.

ಯಾವ ರೀತಿ ಗಾಢವಾದ ನಿದ್ದೆಯಲ್ಲಿ ಅಮರಿಕೊಂಡಿದ್ದರೂ ಬೆಳಗ್ಗೆ ನಾಲ್ಕುವರೆಗೆ ನನಗೆ ಎಚ್ಚರವಾಯಿತೆಂದರೆ ಮತ್ತೆ ನಿದ್ದೆ ಹತ್ತಿರ ಸುಳಿಯದು. ಇದು ರೂಢಿಯಾಗಿ ನಿದ್ರಾ ಹೀನನಾಗಿ  ಹಾಸಿಗೆಯಲ್ಲಿರುವುದು,  ಅದೂ ಮುಂಜಾನೆ ನನ್ನ ಜಾಯಮಾನಕ್ಕೆ ಒಗ್ಗಿಕೊಳ್ಳುವಂತಹುದಲ್ಲ. ಮನೆಯಲ್ಲಿ ಎಲ್ಲರೂ ಸಿಹಿನಿದ್ರೆಯ ವಶವಾಗಿದ್ದರೂ ನಾನು ಬಚ್ಚಲು ಹೊಕ್ಕು ತಣ್ಣೀರ  ಸ್ನಾನ ಮುಗಿಸಿ ಪ್ರಾತಃ ಸಂಧ್ಯಾಕರ್ಮವನ್ನು ಪೂರೈಸಿ ಮನೆಯ ಎದುರಿನ ಅಂಗಳದಲ್ಲಿ ನಿಂತುಕೊಂಡು ಸುತ್ತಲು ಹಬ್ಭಿದ ಮೌನವನ್ನು ಏಕಾಂತವಾಗಿ ಆಸ್ವಾದಿಸುತ್ತಿದ್ದೆ. ಮನೆಯ ಎದುರಿನ ರಸ್ತೆಯ ಆ ತುದಿಯ ಅಂಚಿನಲ್ಲಿ ಒಂದಿಬ್ಬರು ಮೆಲುದನಿಯಲ್ಲಿ ಮಾತನಾಡುತ್ತ ಚಳಿಗೆ ಮುದುರಿಕೊಂಡು ಹೋಗುತ್ತಿದ್ದರು. ತುಸು ಹೊತ್ತಿನಲ್ಲಿ ಒಬ್ಬಾತ ಸೈಕಲು ಏರಿ ಅವಸರವಸರವಾಗಿ ಮನೆಯ ಎದುರಿನ ರಸ್ತೆಯಲ್ಲಿ ಹಾದು ಹೋದಂತಾಗಿ ಮತ್ತೆ ಸ್ವಲ್ಪ ಹೊತ್ತಿನಲ್ಲಿ ಹತ್ತಿರದಲ್ಲಿರುವ ಮಸೀದಿಯಿಂದ ಬಾಂಗ್ ಕೇಳಲಾರಂಭಿಸಿತು. ಬಹುಶಃ ಹೋದಾತ ವ್ಯಕ್ತಿ ಅದಕ್ಕೆ ಸಂಭಂಧ ಪಟ್ಟವನಿರಬೇಕು.

ಆಗ ಮಾವನ ಮನೆಯ ನೆಂಟ ನಾನು  ಅಂತಹ ತರಾತುರಿಯ ಕೆಲಸಗಳಾವುದೂ ಇರಲಿಲ್ಲ. ಮೈ ಮನ ಜಡತನವನ್ನು ಹೊರಹಾಕುವ ಉತ್ಸಾಹದಲ್ಲಿತ್ತು.  ಅಂಗಿ ಬನಿಯನು ಧರಿಸದ  ಬರಿ ಮೈಗೆ ತಣ್ಣನೆಯ ಗಾಳಿ ಸೋಂಕಿ ಹಾಯೆನಿಸಿತು. ಬೆಂಗಳೂರಿನ ಕೃತ್ರಿಮ ಗಾಳಿಯಿಂದ ಜಡ್ಡಾಗಿದ್ದ ಮೈ ಮನ ಉಲ್ಲಸಿತವಾಯಿತು. ಬರಿ ಮೈಗೆ ಗಾಳಿ ಸೋಂಕಿ, ಎದೆಯೊಳಗೂ ಹೊರಗು ತಣ್ಣಗಿನ ಗಾಳಿಯ ಆಹ್ಲಾದ ಅನುಭವದ ಸುಖ ಅನನ್ಯವಾದುದು.  ಮನೆಯ ಎದುರಲ್ಲೆ ನಿಲ್ಲಿಸಿದ ಕಾರಿನಿಂದ ಯೋಗ ಚಾಪೆಯನ್ನು ತೆಗೆದು ಅಂಗಳದಲ್ಲೇ ಹಾಸಿದೆ.

ಆಗ ಒಂದು ಕ್ಷಣ ಅನಿಸಿತು,  ಯೋಗ ಮಾಡುತ್ತ ಶವಾಸನವನ್ನು ಅಲ್ಲೆ ಮಾಡಿದರೆ? ಅತ್ತ ಇತ್ತ ಸುಳಿವ ಜನ ಕಂಡರೆ... ಮನೆಯ ಅಂಗಳದಲ್ಲಿ ಅಳಿಯಂದಿರು ಏಕೆ  ಮಲಗಿದರಪ್ಪಾ? ಬೆಳ್ಳಂಬೆಳಗ್ಗೆ ಈ ಅಚಾನಕ್ ಆಗಿ ಈ ದೃಶ್ಯ ಕಂಡರೆ ಕೆಲವರಂತೂ ಗಲಿಬಿಲಿಗೊಳಗಾಗುವುದು ಸ್ಪಷ್ಟ.   ಕಂಡರೆ ಕಾಣಲಿ ಎಂಬ ಉದಾಸೀ ಭಾವ. ಕಂಡರೇನು?  ನನ್ನ ಮಟ್ಟಿಗೆ ಯೋಗದ ಮೊದಲ ಪಾಠವೇ ಅದು. ನಾವು ನಮಗಾಗಿ ಬದುಕಬೇಕು.  ಪರರಿಗಿರುವ ಬದುಕು,  ಅದು ಸಾರ್ವಜನಿಕವಾದ ಲೌಕಿಕ ಬದುಕು. ಇದು ಆಧ್ಯಾತ್ಮದ ಬದುಕು. ಯಾರು ಏನೆಂದರೂ ಅದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಾದರೂ ಏನಿದೆ? . ಅಂತರ್ ಮುಖಿಯಾಗಿ ಪರಮಾತ್ಮನ ಸಾನ್ನಿಧ್ಯದ ಸುಖವನ್ನು ಅನುಭವಿಸುವಾಗ ಯಾರು ಏನೆಂದರೂ ಅದರ ಬಗ್ಗೆ ಪರಿವೆಯಿಲ್ಲ.

ನಿಧಾನವಾಗಿ ಮನೆ ಎದುರು ಪದ್ಮಾಸನದಲ್ಲಿ ಕುಳಿತವನೇ ಸಾವಧಾನವಾಗಿ ಕಣ್ಣು ಮುಚ್ಚಿ ದೀರ್ಘವಾದ ಶ್ವಾಸವನ್ನೆಳೆದೆ. ಹೊರಗಿನ  ತಣ್ಣನೆಯ ಪರಿಶುದ್ದ ಗಾಳಿಯಲ್ಲಿದ್ದ ಚೈತನ್ಯ ಭರಿತ ಆಮ್ಲ ಜನಕ ಹೃದಯ ತುಂಬ ವ್ಯಾಪಿಸಿದಂತೆ .. ಅಹಾ ಎಂತಹ ಅನುಭವ. ಹಸಿವಿನಿಂದ ಹಪ ಹಪಿಸಿದ ಪ್ರಾಣಿಗಳಿಗೆ ಒಮ್ಮಿಂದೊಮ್ಮೆಲೇ ಆಹಾರವು ರಾಶಿ ರಾಶಿಯಾಗಿ ದೊರೆತಂತೆ ತೆಲೆಯಲ್ಲಿ, ಹೃದಯದಲ್ಲಿ, ಮೈತುಂಬೆಲ್ಲ ಹರಡಿದ ನರನಾಡಿಗಳು ಒಳನುಗ್ಗಿದ ಆಮ್ಲ ಜನಕವನ್ನು ಹೀರತೊಡಗಿದಂತೆ ಭಾಸವಾಯಿತು. ಶುಭ್ರವಾದ ಗಾಳಿಯ ಉಗ್ರಾಣವನ್ನೆ ತೆರೆದಿಟ್ಟ ಅನುಭವವಾಯಿತು. ಉಸಿರಾಟ ಒಂದು ...ಎರಡು ಹೀಗೆ ಅದೆಷ್ಟು ಬಾರಿ ದೀರ್ಘವಾಗಿ ಉಸಿರಾಡಿದರೂ ಇನ್ನು ಇನ್ನೂ ಉಸಿರಾಡಬೇಕೆಂಬ ಹಂಬಲ. ತಂಪಾದ ಹೃದಯ ಪ್ರಕೃತಿಯೊಂದಿಗೆ ಒಂದಾದ ಅನುಭವ. ಬರಿ ಎದೆಯ ಬಡಿತ ಮಾತ್ರವೇ ಕೇಳಿಸುತ್ತಿದೆ. ಹೊರಗೆ ಮೊದಲೇ ಮೌನ. ನಿಶ್ಯಭ್ದ ವಾತಾವರಣ ಪೂರ್ಣ ಸಹಕಾರ ಸಿಕ್ಕಿ ಶುಭ್ರವಾದ ಗಾಳಿಯ ಪ್ರವಾಹಕೆ ಹೃದಯ ತೆರೆದುಕೊಂಡಿತು. ಯಾವುದರ ಪರಿವೆಯೂ ಇಲ್ಲ. ಅಲುಗಾಡದೆ  ಚಲನರಹಿತವಾಗಿ ನೆಟ್ಟಗೆ ಕುಳಿತಿದೆ ಶರೀರ. ಮನಸ್ಸು ನಿಧಾನವಾಗಿ ಒಂದೇ ಗುರಿಯತ್ತ ಚಲಿಸುತ್ತಿದೆ. ಉಸಿರು ಎದೆ ಬಡಿತವು ಸರ್ವಸ್ವವಾಗಿ ಎಲ್ಲವನ್ನೂ ಮರೆತ ಅನುಭವ.     ಹೀಗೆ ಪ್ರಾಣಾಯಾಮದ ಮೊದಲ ಹಂತದಾಟಿದೊಡನೆ ಮನಸ್ಸಲ್ಲಿ ಪ್ರಮಾತ್ಮನ ಧ್ಯಾನ ಚಕ್ರ ಚಲನೆಯನ್ನು ಆರಂಭಿಸಿತು. ಯಾರೂ ಇಲ್ಲದ ನಿರ್ಜನ ಲೋಕದಲ್ಲಿ ಒಂಟಿಯಾಗಿ ವಿಹರಿಸಿದೆ.

ಮನಸ್ಸನ್ನು ಭಾವನೆಗಳಿಂದ ದೂರವಾಗಿಸಿ ಭಾವನಾರಹಿತವನ್ನಾಗಿಸಬೇಕು. ಅದಕ್ಕಾಗಿ ದೀರ್ಘವಾದ ಉಸಿರಾಟವನ್ನು ಸಾವಧಾನವಾಗಿ ಅರಂಭಿಸಿದೆ. ಮನಸ್ಸು ಎಕಾಗ್ರತೆ ಗಳಿಸುತ್ತಿದ್ದಂತೆ ಭಾವನಾರಹಿತ ಪ್ರಪಂಚ ತೆರೆದುಕೊಳ್ಳುತ್ತದೆ.ಹೊರಜಗತ್ತಿನ ಚಟುವಟಿಕೆಗಳು ಎಲ್ಲವು ಕ್ಷೀಣವಾಗುತ್ತ ಸುಪ್ತವಾದ ಸ್ಥಿತಿ ತಂದೊಡನೆ ದೇಹ ಸಂಬಂದಗಳು ಕಳಚಿದಂತಹ ಅನುಭವ. ಉಸಿರಿನ ಮೂಲ ಚೇತನವನ್ನು ಅರಸುತ್ತಾ ಪರಮಾತ್ಮನ ಇರವಿನ ಅನುಭವವಾಗುತ್ತದೆ.ಸುತ್ತಲಿನ ವಾತಾವರಣ ಅದೆಷ್ಟು ಅದ್ಭುತವಾಗಿ ಸಹಕರಿಸಿದ ಅನುಭವವಾಗುತ್ತಿದೆ. ತಣ್ಣನೆಯ ಗಾಳಿ.. ನಿಶ್ಯಭ್ದ ನೀರವ ಮೌನ.. ಸುಳಿಗಾಳಿಗೆ ಸಿಕ್ಕಿದ ತರಗೆಲೆ ಕಸ ಕಡ್ಡಿಗಳೆಲ್ಲವೂ ಒಂದೆ ಕಡೆ ಕೇದ್ರೀಕೃತವಾಗಿ ಊರ್ಧ್ವಮುಖಿಯಾಗಿ ಚಿಮ್ಮಿದಂತೆ ಅಂತರಾತ್ಮದ ಭಾವಗಳೆಲ್ಲವೂ ಒಂದೇ ಗುರಿಯತ್ತ ಚಿಮ್ಮಿದ ಅನುಭವ. ಕೇವಲ ನಾಸಿಕಾಗ್ರದಿಂದ ಉಸಿರಾಡಿದರೂ ಸಂಪೂರ್ಣ ದೇಹ ಯಾವುದೇ ಅಡೆತಡೆ ಇಲ್ಲದೆ ಶಕ್ತಿಯನ್ನು ಹೀರಿದ ಅನುಭವ.  

ಪ್ರಾಣಾಯಾಮ ಮಾಡುತ್ತಿದ್ದಷ್ಟೂ ಹೊತ್ತು ಸುಂದರ ಸರೋವರದಲ್ಲಿ ತೇಲಿದಂತೆ, ನಂತರ ದೇಹವನ್ನು ಶಿಥಿಲವಾಗಿಸಿ ಭೂಮಿ ಮೇಲೆ ಹರಡಿದಾಗ ಗಾಳಿಯಲ್ಲಿ ತೇಲಾಡುತ್ತ ಆದ್ಯಂತವಿಲ್ಲದ ಲೋಕದಲ್ಲಿ ವಿಹರಿಸಿದ ಅನುಭವ.

                ಮಲೆನಾಡ ಯೋಗ ಪ್ರಥಮ ಬಾರಿಗೆ ಅಹ್ಲಾದನೆಯ ಅನುಭವ ನೀಡಿತು. ತಣ್ಣನೆಯ ಶುಭ್ರವಾದ ಹವಾಮಾನ, ಗಾಢವಾದ ಕತ್ತಲಿನ ಮೌನ . ಬೆಂಗಳೂರಲ್ಲಿ ಕನಸೇ ಸರಿ. ಸೂರ್ಯೊದಯವಾಗಿ ಬೆಳಕು ಹರಿದಂತೆ ಸುತ್ತಲಿನ ವಾತಾವರಣ ನಿಧಾನವಾಗಿ ಬದಲಾಗತೊಡಗಿತು. ಹಗಲು,ಇರುಳು,  ಕೆಟ್ಟದ್ದು ಒಳಿತು ಮನುಷ್ಯನ ಜತೆಯಲ್ಲೇ ಹುಟ್ಟಿಕೊಳ್ಳುತ್ತವೆ ಎಂಬುದರ ಸಂಕೇತವೋ ಎಂಬಂತೆ ದೂರದಲ್ಲಿ ಎಲ್ಲೋ ಕಟ್ಟಿನಿಂತ ನೀರು ಕದಡಿದಂತಾಗಿ ಸೊಳ್ಳೆಗಳು ಮುತ್ತಲಾರಂಭಿಸಿ ಏಕಾಗ್ರತೆಗೆ ತೋದರೆಯನ್ನುಂಟು ಮಾಡತೊಡಗಿತು.ಪುರಾಣದಲ್ಲಿ ಧರ್ಮರಾಯ ಸ್ವರ್ಗಾರೋಹಣ ಮಾಡುವಾಗ ಕಣ್ಣಿಗೆ ಬೆಂಕಿಯ ಕಿಡಿಯೊಂದು ತಾಗಿತಂತೆ.ಕುರುಕ್ಷೇತ್ರ ಯುದ್ದದಲ್ಲಿ ದ್ರೋಣರು ಹತರಾಗುವ ಸಂದರ್ಭದಲ್ಲಿ ಸುಳ್ಳನ್ನು ಆಡಿದುದಕ್ಕೆ ಈ ಬಗೆಯಾಯಿತು ಎಂದು ಪ್ರತೀತಿಯಿದೆ. ಈ ಕಥೆ ನೆನಪಾಯಿತು. ಆದರು ಮಲೆನಾಡ ಯೋಗ ಸ್ವರ್ಗಾನುಭವ ನೀಡಿದ್ದು ಮರೆಯಲಾಗದ ಅನುಭವಾಯಿತು. ಯೋಗ ನಿದ್ರಯನ್ನು ಬಿಟ್ಟೆದ್ದಾಗ ತಿಂಗಳಲ್ಲಿ ಒಂದು ಬಾರಿಯಾದರು ಮಾವನ ಮನೆಯ ಉಪಚಾರಕ್ಕಲ್ಲದಿದ್ದರೂ ಈ ಅಮೃತ ಸದೃಶವಾದ ಯೋಗಾನುಭವ ಪಡೆಯಲು ಬರಬೇಕೆನೆಸಿತು. ಆ ಮಧುರಾನುಭವದ ಗುಂಗಿನಲ್ಲಿರುವಾಗಲೇ ಬಿಸಿ ಬಿಸಿ ಅಕ್ಕಿರೋಟ್ಟಿಯ ಪರಿಮಳದೊಂದಿಗೆ, ಬೆಳಗಿನ ಉಪಾಹಾರಕ್ಕೆ  ಅತ್ತೆಯವರ ಕರೆ ಕೇಳಿಸಿತು. ಬೆಳಗ್ಗಿನ ಉಪಾಹಾರವೇ ನನ್ನ ಮಟ್ಟಿಗೆ  ಪ್ರಧಾನ ಆಹಾರವಾಗಿ ಬದಲಾಗಿ ಹೋಗಿದೆ. ಈಗೀಗ ಮಧ್ಯಾಹ್ನ ಮತ್ತು ರಾತ್ರೆ ಸೇವಿಸುವ ಆಹಾರದ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ.

ಈ ಮಧುರ ಯೋಗಾನುಭವದೊಂದಿಗೆ ತಿಂಡಿಯನ್ನು ಸೇವಿಸುವಾಗ ತಿಂಗಳಿಗೊಮ್ಮೆಯಾದರೂ ಈ ಅನುಭವ ಪಡೆಯುವ ಆಶೆಯಾಗಿದೆ ಎಂದಾಗ ಅರಳಿದ ಅತ್ತೆಯವರ ಮುಖ ಇನ್ನು ಕಣ್ಣೆದುರು ನಿಂತ ಹಾಗೆ ಭಾಸವಾಗುತ್ತಿದೆ.

                    ಕೆಲವೊಮ್ಮೆ ಈ ಯೋಗದ ಬಗ್ಗೆ ಒರೆಯುವುದು ಅತಿಯಾಯಿತೇನೋ ಅನ್ನಿಸುವುದಿದೆ. ಆದರೂ ಮಧುರಾನುಭವವನ್ನು ನಿರಂತರವಾಗಿ ನೀಡುವ ಈ ಯೋಗಾನುಭವದ ಪ್ರಭಾವ ಎಲ್ಲವನ್ನೂ ಮೀರಿ ನಿಂತಂತೆ ಹೊಸ ಆಯಾಮವನ್ನು ತಂದಾಗ,   ತಲೆನೋವು ಇದು ಸಾಮಾನ್ಯವಾಗಿ ಎಲ್ಲರನ್ನೂ ಬಾಧಿಸುವ ಕಾಯಿಲೆ, ನೆಗಡಿ ಮುಂತಾದ ಸಾಮಾನ್ಯ ಖಾಯಿಲೆಯಿಂದ ತೊಡಗಿ ಹಲವು ಮಹಾ ವ್ಯಾಧಿಗಳನ್ನು ಬೇಕೆಂದೇ ಪಡೆದು ಜೀವಿಸುವವರನ್ನು ಕಂಡಾಗ ಈ ಅನುಭವ ಅನಪೇಕ್ಷಿತವಾಗಿ ವ್ಯಕ್ತವಾಗುತ್ತದೆ. ತುಸುವಾದರೂ ತಲೆನೋವು ಖಾಯಿಲೆಗಳು ಇಲ್ಲವಾದರೆ ಬದುಕುವುದಾದರೂ ಹೇಗೆ? ಹಾಗಾಗಿ ಅವನ್ನು ಬೇಕೆಂದೇ  ಪಡೆದು ಜೀವಿಸುವವರನ್ನು ಕಂಡಾಗ ಭಗವಂತ ಅನುಗ್ರಹಿಸಿದ ವರವನ್ನು ಪಡೆಯದೆ ಶಾಪವನ್ನೇ ಆಗ್ರಹ ಪೂರ್ವಕವಾಗಿ ಪಡೆಯುತ್ತಿರುವುದು ಹಾಸ್ಯಾಸ್ಪದವಾಗಿ ಕಾಣುವುದು. ಹೊಟ್ಟೆಯ ಹಸಿವೆ ಎಂಬ ರೋಗಕ್ಕೆ ಅನ್ನಾಹಾರದ ರೂಪದಲ್ಲಿ ಔಷಧವಾಗಿ ತಪ್ಪದೆ ಸೇವಿಸುವ ನಾವು ನಮ್ಮ ಕಲುಷಿತ ಜೀವನ ಶೈಲಿಯನ್ನು ಬದಲಿಸಬೇಡವೆ? ದಿನದ ಕೆಲವು ನಿಮಿಷಗಳನ್ನಾದರೂ ಪ್ರತಿಯೋರ್ವ ಇದಕ್ಕೆ ಮೀಸಲಿಟ್ಟರೆ ಸಾಕು ವ್ಯಾಧಿರಹಿತ ದೇಹ ನಮ್ಮದಾಗುವುದು.



Saturday, October 8, 2011

ಯೋಗನಿದ್ರೆ - ಸುಖನಿದ್ರೆ



ಒಂದು ವಸ್ತುವಿಗೆ  ಮೌಲ್ಯವನ್ನು ನಿರ್ಧರಿಸಿ ಅದರ ಹಿಂದೆ ಹೋಗುವುದು ಕೈವಶವಾದಾಗ ಹಿಗ್ಗಿ ಸಂತೋಷಿಸಿದರೆ ಸಿಗದಾಗ ನಿರಾಶನಾಗುವುದು, ಸಾಧ್ಯವಾದರೆ ಮಗುದೊಮ್ಮೆ ಯತ್ನಿಸುವುದು. ಇದು  ಮಾನವನ ಐಹಿಕ ಜೀವನದಲ್ಲಿ ಕಂಡುಬರುವ ಪರಮ ಸತ್ಯ. ಮೌಲ್ಯವನ್ನು ನಿರ್ಧರಿಸುವುದೇ ಐಹಿಕ ಜಗತ್ತು.   ಮೌಲ್ಯಮಾಪನ ಎಂಬುದು ಆಗದೇ ಇರುತ್ತಿದ್ದರೆ, ಅತ್ಯಂತ ಮೌಲ್ಯಭರಿತ ವಸ್ತುವು ಯಃಕಶ್ಚಿತ್ ವಸ್ತುವಾಗಿಬಿಡುತ್ತದೆ.ಚಿನ್ನವೋ ಅಥವಾ ಇನ್ನಾವುದೋ ಅಮೂಲ್ಯವಸ್ತುವು ಅದು ಅಮೂಲ್ಯವಾಗುವುದು ಮನುಷ್ಯನಿಂದಲೇ. ಒಂದು ವೇಳೆ ಮೌಲ್ಯ ಅದಕ್ಕೆ ಇಲ್ಲದೇ ಇರುತ್ತಿದ್ದರೆ ಅದು ಬರಿದೇ ಒಂದು ಲೋಹ. ಅದರ ಗುಣದಿಂದಲೋ ಉಪಯೋಗದಿಂದಲೋ ಅದರ ಮೌಲ್ಯ ನಿರ್ಧರಿಸಲ್ಪಟ್ಟರೂ ಮೌಲ್ಯ ನಿರ್ಧಾರಣೆಯ ಮೂಲ ಇರುವುದು ಮನುಷ್ಯನಲ್ಲೇ.

            ತನಗೆ ಮೌಲ್ಯಯುತವಾದದ್ದು ಇನ್ನೋರ್ವನಿಗೆ ಅಪಮೌಲ್ಯ ಎನಿಸಿಬಿಡಬಹುದು. ಜಗನ್ನಿಯಾಮಕನಾದ ಭಗವಂತನು ಯಾವುದೇ ಒಂದು ವಸ್ತುವಿಗೆ ಕಾರಣೀಭೂತನಾದರೂ.. ಭಗವಂತ ಯವುದನ್ನು ಅಮೂಲ್ಯ  ಎಂದು ಪರಿಗಣಿಸಿರುತ್ತಾನೋ ಅದು ನಮ್ಮ ಅರಿವಿಗೆ  ಬರುವುದಿಲ್ಲಹೊರಗಿನ ಜಗತ್ತು ಮತ್ತದರ  ಸೃಷ್ಟಿ, ಮನುಕುಲ ಪ್ರಾಣಿ ಸಂಕುಲ ಹೀಗೆ ಬಾಹ್ಯ ಜಗತ್ತಿನ ಸೃಷ್ಟಿ ಕರ್ತ ಭಗವಂತ. ಎಲ್ಲವನ್ನೂ ಸೃಷ್ಟಿಸಿದ ಭಗವಂತ ಆತ್ಮವನ್ನು ಜತೆಗಿರಿಸಿಬಿಡುತ್ತಾನೆ. ಆತ್ಮ ಮೌಲ್ಯಯುತವೆಂದು ನಿರ್ಧರಿಸಿಯೂ ಬಿಡುತ್ತಾನೆ. ಆತ್ಮದ ಮೌಲ್ಯ ಅರಿಯುವುದೇ ಅಧ್ಯಾತ್ಮ . ಬಹುಶಃ  ಆತ್ಮದ ಅಧ್ಯಯನವೇ ಅಧ್ಯಾತ್ಮ ವಾಗಿರಬಹುದು.

            ಮುಂಜಾನೆ ನಸುಕಿನ ವೇಳೆ ಆತ್ಮವನ್ನು ಅರಿಯುವ ಅಮೃತ ಘಳಿಗೆ. ಏಕಾಂತದ ಧ್ಯಾನಾಸಕ್ತನಾಗಿ ಪ್ರಾಣಾಯಾಮದ ಮೊದಲ ಚರಣದಲ್ಲಿ ನಿಂತಿರುವಾಗ ಬದುಕು ಎಷ್ಟು  ಸುಂದರ ಎನಿಸಿದರೂ ಅದು ನಶ್ವರವಲ್ಲವೇ ಎಂಬ ಜಿಜ್ಞಾಸೆ ಮೂಡುತ್ತದೆ. ಬಹುಶಃ ದ್ವಂದ್ವಗಳ ಉಗಮ ಮೂಲವೇ ಇದು ಅನ್ನಿಸುತ್ತದೆ. ದ್ವಂದ್ವಮಯ ಬದುಕು ಅನಾವರಣಗೊಳ್ಳಲು ಆರಂಭಿಸುವುದು ಇಲ್ಲಿಂದಲೇ. ದೀರ್ಘವಾದ ಹಾಗು ನಿಧಾನವಾದ ಉಸಿರಾಟದಲ್ಲಿ ಚೈತನ್ಯ ಹೃದಯದ ಮೂಲಕ ದೇಹಾದ್ಯಂತ ವ್ಯಾಪಿಸಿದಾಗ.... ಹಾ ಉಸಿರಿನ ಮೌಲ್ಯ ಏನೆಂದು ಅರಿವಾಗುತ್ತದೆ. ಪ್ರಾಣಾಯಾಮದ ಮಜಲುಗಳು ಅವು ಕೊಡುವ ವಿಶಿಷ್ಟ ಅನುಭವಗಳು ಅದರಲ್ಲಿ ತನ್ಮಯರಾಗಿ ಅರ್ಥೈಸಿಕೊಳ್ಳಬೇಕು.


ನಿಧಾನವಾದ ಉಸಿರಾಟದ ಪ್ರಕ್ರಿಯೆಯಲ್ಲಿ ಗಾಳಿಯನ್ನು ಒಳಕ್ಕೆಳೆದು ಹೃದಯ ತುಂಬಿದ ಅನುಭವವಾಗಿ ಅದನ್ನು ನಿಧಾನಾವಾಗಿ ಬಿಡುತ್ತಿದ್ದಂತೆ ಹೊಕ್ಕಳಿನ ಸುತ್ತ ಸುತ್ತಿದ ಕರುಳಿನಲ್ಲಿ ಸಂವೇದನೆಯೊಂದು ಅನುಭವವಾಗುತ್ತದೆ.ಗಾಳಿತೆಗೆದ ಚೆಂಡಿನಂತೆ, ಸತ್ವ ಹೀನ ವಾಹನದ ಗಾಲಿಯಂತೆ ಹೊಟ್ಟೆಯಲ್ಲಿ ಒಳ ಸೆಳೆತ ಆರಂಭವಾಗುತ್ತದೆ. ನಿರ್ವಾತದ ಅನುಭವ ನಿಧಾನವಾಗಿ ಶರೀರದಾದ್ಯಂತ ವ್ಯಾಪಿಸಿ ಮನಸ್ಸಿನ ಯೋಚನೆಗೆ ಗುರಿಯೊಂದನ್ನು ಕಲ್ಪಿಸಿದ ಅನುಭವಾಗುತ್ತಿದ್ದಂತೆ ಶರೀರ, ಒಳಗಿನ ಆತ್ಮ ಇವುಗಳ ಸಂಬಂಧದ ಅರಿವಾಗುತ್ತದೆ. ಆಗಲೆ ಬದುಕಿನ ಜ್ಞಾನೋದಯದ ಜ್ಯೋತಿಯ ಅತ್ಯಂತ ಸೂಕ್ಷ್ಮ ಅನುಭವಾಗುವುದು. ಎಷ್ಟು ವಿಚಿತ್ರವಲ್ಲವೆ? ಇದುವೇ ಅಧ್ಯಾತ್ಮವಾಗಿರಬಹುದೇ?

ಬೊಜ್ಜು ತುಂಬಿದ ಹೊಟ್ಟೆ, ತನ್ನ ಅಸ್ತಿತ್ವವನ್ನು ಕಳೆದು ಕೊಂಡರೆ, ಜನಿಸಿದಾರಭ್ಯದಿಂದ ಯಾವುದನ್ನು ತುಂಬಿಸುವುದಕ್ಕಾಗಿ ಪ್ರತಿಯೊಂದು ಪ್ರಾಣಿಯೂ ಯತ್ನಿಸುವುದೋ ಅದೆಲ್ಲ ಕ್ಷಣದಲ್ಲಿ ಕ್ಷುಲ್ಲಕ ಎನಿಸಿಬಿಡುತ್ತದೆ. ಹಗುರವಾಗುವ ದೇಹ ಪಂಚಭೂತಗಳಲ್ಲಿ ಲೀನವಾಗುವುದೋ ಎಂಬ ಭ್ರಮೆ.   ನಿಧಾನವಾದ ದೀರ್ಘವಾದ ಉಸಿರಾಟದಲ್ಲಿ ಶ್ವಾಸ ಒಳಕ್ಕೆಳೆಯುತ್ತಿದ್ದಂತೇ, ಒಳಕ್ಕೆಳೆದ ಗಾಳಿ ನಾಸಿಕದಿಂದ ಶ್ವಾಸಕೋಶಕ್ಕೆ ಇಳಿದರೂ ತೆಲೆಯಿಂದ ಶರೀರದಾಂದ್ಯಂತ ಚೈತನ್ಯದ ವಿದ್ಯುತ್ ಪ್ರವಹಿಸಿದಂತೆ ಭಾಸವಾಗುವುದು. ಕೇವಲ ದೀರ್ಘ ಉಸಿರಾಟದಿಂದ ಹೀಗಾಗುವುದೆಂದರೆ,  ಆವಾಗ ಅನುಲೋಮ ವಿಲೋಮದ ಲೆಕ್ಕಾಚಾರ ಮನಸ್ಸಿನಲ್ಲ್ಲಿ ಮೂಡುವುದು. ಇರುಳಿನ ವಿರಾಮದಿಂದ ಶರೀರ ಕೊಡವಿಕೊಂಡು ಮೇಲೆದ್ದು ದಿನದ ಚಟುವಟಿಕೆಗೆ ಸಜ್ಜಾದಾಗ... ಮನೆಯೊಡತಿ ಅಡುಗೆ ಕೋಣೆ ಹೊಕ್ಕು ಅಹಾರದ ಸಿದ್ದತೆ ತೊಡಗಲು ಬೆಂಕಿ ಹಚ್ಚಿದಂತೆ.. ಪ್ರಾಣಾಯಾಮ ದೀರ್ಘ ಉಸಿರಾಟ ಆರಂಭವಾದಾಗ ಶರೀರದ ಅಡುಗೆ ಕೋಣೆಯಲ್ಲಿ ಬೆಂಕಿ ಹಚ್ಚಿ ಚೈತನ್ಯದ ಆಹಾರ ಸಿದ್ದವಾದಂತೆ.


ಪ್ರಾಣಾಯಾಮ ಮಾಡುತ್ತಿದ್ದಂತೆ ದಿನದಿಂದ ದಿನಕ್ಕೆ ಹೊಸ ಅನುಭವ ಉಂಟಾಗುವುದು ಸಾಮಾನ್ಯ. ಶ್ರದ್ದೆಯನ್ನು ಹೊಂದಿ ಎಕಾಗ್ರತೆ ಬರುತ್ತದೆ. ಅದರ ಜತೆಯಾಗಿ ವಿಬ್ಭಿನ್ನ ಪರಿಣಾಮಗಳು ಶರೀರದಲ್ಲಿ ಆಗತೊಡಗುತ್ತದೆ. ಪ್ರಾಣಾಯಮದ ಉತ್ತುಂಗಕ್ಕೆ ಸನಿಹವಾದಂತೆ ದೇಹ ಬೆವರುದಕ್ಕೆ ಆರಂಭಿಸುತ್ತದೆ. ಸಾಮಾನ್ಯವಾಗಿ ಮೈಗಂಟಿಕೊಂಡ ಬಟ್ಟೆಯನ್ನು ವೇಳೆಯಲ್ಲಿ ಧರಿಸಬಾರದೆಂದು ಸಲಹೆ ಮಾಡುತ್ತಾರೆ. ಬರಿ ಮೈ ಆದರೆ ಪರಿಣಾಮ ಇನ್ನೂ ಅಧಿಕ. ಶರೀರ ಹೊರ ಪ್ರಪಂಚಕ್ಕೆ ಸುಂದರವಾಗಿ ಸ್ಪಂದಿಸುವುದರ ಅನುಭವ ಆವಾಗ ಆಗುತ್ತದೆ. ಬರೀ ಉಸಿರಾಟ ಕ್ರಿಯೆಯಲ್ಲಿ ಮೈ ಬೆವರುವುದೆಂದರೆ, ವಿಚಿತ್ರ ಅನುಭವ.ಶರೀರ ಸ್ಪಂದಿಸಿದಂತೆಲ್ಲ ಎಕಾಗ್ರತೆ ಅಧಿಕವಾಗಿ ಬಾಹ್ಯಪ್ರಪಂಚದ ಅರಿವು ಕ್ಷೀಣವಾಗುತ್ತ ಹೋಗುತ್ತದೆ. ಉಸಿರಾಟದೊಂದಿಗೆ ಶರೀರ  ಮನಸ್ಸು ಸ್ಥಿರವಾಗಿ ಚಂಚಲತೆ ಮಾಯವಾಗಿ ಶರೀರ ಮತ್ತು ಆತ್ಮದ ಸಂಬಂಧ ಅರಿವು ಉಂಟಾಗುತ್ತದೆ. ಆವಾಗ ದೇಹಕ್ಕೆ ದಣಿವಿನ ಅರಿವಾಗ ತೊಡಗುತ್ತದೆ ಬೆವೆತ ಶರೀರ ಮತ್ತು ಆತ್ಮದ ಸಂಬಂಧ ಒಂದು ಉತ್ತುಂಗ ಶಿಖರಕ್ಕೆ ಒಂದು ಹಂತದವರೆಗೆ ಏರುತ್ತ ನಂತರ  ಇಳಿದು ಭಾಹ್ಯಪ್ರಪಂಚಕ್ಕೆ ಬಂದಾಗ ದೇಹಕ್ಕೆ ವಿಶ್ರಾಂತಿ ಮತ್ತು ಮನಸ್ಸಿಗೆ ನಿರಾಳತೆಯ ಅವಶ್ಯಕತೆ ಉಂಟಾಗುತ್ತದೆ. ಸ್ಥಿತಿಯಲ್ಲಿ ಅತಿಮುಖ್ಯವಾದ ಮುಂದಿನ ಹಂತವೇ ಶವಾಸನ.

ನಿದ್ರೆ ಎಂಬುದು ಒಂದು ಪ್ರಜ್ಞಾಹೀನ ಸ್ಥಿತಿ. ನಿಗದಿತ ಸಮಯದಲ್ಲಿ ಮನಸ್ಸು ದೇಹ ಬಳಲಿದಾಗ ಯಾವುದೇ ಜೀವಿ ನಿದ್ರಾ ಸ್ಥಿತಿಗೆ ಜಾರಿಕೊಂಡು ದೈನಿಕ ಬದುಕಿನ ಎಲ್ಲ ಜಂಝುಡಗಳಿಂದ ದೂರವಾದಂತೆ ಅನಿಸಿದರೂ ಕನಸಿನ ಮೂಲಕ ಕೆಲವೊಮ್ಮೆ ಮನಸ್ಸು ಜಾಗೃತವಾಗುವುದು. ಸಂತೋಷ ದುಃಖ ಭಯ ದುಮ್ಮಾನಗಳ ಅನುಭವ ಮನಸ್ಸಿಗೂ ದೇಹಕ್ಕೂ ಆಗಬಹುದು. ನಿದ್ದೆಯಲ್ಲೂ ಕಾಡುವ ಚಿಂತೆ ಯೋಚನೆಗಳು ಮನಸ್ಸಿಗೆ ಆವಶ್ಯವಿರುವ ನಿರಾಳತೆಯನ್ನು ಒದಗಿಸದೇ ಇರಬಹುದು. ಅದಕ್ಕಾಗಿಯೇ ಯೋಗದಲ್ಲಿ  ಶವಾಸನ ಅತ್ಯಂತ ಮಹತ್ವವನ್ನು ಪಡೆಯುತ್ತದೆ. ಶವಾಸನ..!! ಕಾಣುವುದಕ್ಕೆ ಹಾಸ್ಯಸ್ಪದವಾಗಿ ಕಂಡರೂ ಯೋಗಾಭ್ಯಸದ ಯಾವುದೇ ಘಟ್ಟದಲ್ಲೂ ಮಾಡಲೇಬೇಕಾದಂತಹ ಆಸನ ಶವಾಸನ (sleeping posture).

            ನಿದ್ರೆಯಲ್ಲಿ ಮನಸ್ಸು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದರೆ, ಯೋಗ ನಿದ್ರೆಯಲ್ಲಿ ದೇಹ ಸ್ತಬ್ಧವಾಗಿ ಚೇತನವು ಜಾಗೃತವಾಗಿರುತ್ತದೆ. ಊರ್ದ್ವಮುಖಿಯಾಗಿ ಮಲಗಿ ಶರೀರದ ಒಂದೋಂದೆ ಭಾಗವನ್ನು ತಮ್ಮ ನಿಯಂತ್ರಣದಿಂದ ದೂರವಿರಿಸುತ್ತಾ ನಿರಾಳತೆಯತ್ತ ಸಾಗುವುದೇ ಶವಾಸನ. ಕಾಲಿನ ಬೆರಳಿನಿಂದ ಆರಂಭಿಸಿ ಒಂದೊಂದನ್ನೆ ನಿಧಾವಾಗಿ ನಮ್ಮ ನಿಯಂತ್ರಣದ ಅರಿವಿನಿಂದ ದೂರವಿರಿಸುತ್ತಾ ಸಾಗಬೇಕು. ಅರಂಭದಲ್ಲಿ ಇದು ಬಹಳ ಕಷ್ಟಕರವಾಗಿ ಕಂಡರೂ ನಂತರ ಸಹಜ ಕ್ರಿಯೆಯಾಗಿ ಬದಲಾಗುತ್ತದೆ. ಕೈಕಾಲು ದೇಹ ಎಲ್ಲವನ್ನು ಸಡೀಲಿಸಿ ಮಲಗಿ ಕಾಲಿನಿಂದ ತೊಡಗಿ ತಲೆಯ ವರೆಗೂ ಒಂದೊಂದೇ ಭಾಗದ ನಿಯಂತ್ರಣವನ್ನು ಕಡಿದು ಕೊಳ್ಳುತ್ತ, ಮನಸ್ಸಲ್ಲಿ ಯಾವುದೇ ಯೋಚನೆ ಮಾಡದೆ ನಿರಾಳವಾಗಿ ಮಲಗಿ ಬಿಡುವುದು. ಸುತ್ತ ಮುತ್ತಲ ಸದ್ದು ಗದ್ದಲವನ್ನು ಗಣ್ಯ ಮಾಡದೆ ಅಲುಗಾಡದೆ ಶವದಂತೆ ಮಲಗಿ ಬಿಡುವುದು. ದೇಹದಲ್ಲಿ ಕೇವಲ ಉಸಿರಾಟ ಒಂದೇ ಕ್ರಿಯಾತ್ಮಕವಾಗಿರುತ್ತದೆ ಮತ್ತು ನಿರಾಳತೆಯ ಸಂಕೇತದಂತೆ ಮುಖದಲ್ಲಿ ಕಿರು ಮಂದಹಾಸ ಮೂಡಬೇಕು. ಉಳಿದಂತೆ ದೇಹ ಮನಸ್ಸು ಎಲ್ಲವೂ ಸ್ಥಭ್ದವಾಗಿಬಿಡಬೇಕು. ಹತ್ತರಿಂದ ಹದಿನೈದು ನಿಮಿಷಗಳ ಕಾಲ ಅದೇ ಸ್ಥಿತಿಯಲ್ಲಿದ್ದಾಗ ಕೆವಲ ಒಂದು ಸರಳ ರೇಖೆಯಲ್ಲಿ ದೇಹವು ಭೂಮಿಯನ್ನು ಸ್ಪರ್ಶಿಸಿದಂತೆ ಭಾಸವಾಗತೊಡಗುತ್ತದೆ.ಎಲ್ಲೆಡೆ ಶೂನ್ಯತೆಯ ಅನುಭವವಾಗುತ್ತದೆ. ನಿಧಾನವಾಗಿ ಮಾಡುತ್ತ ಸಾಗಿದಂತೆ ಆಗುವ ಅನುಭವಗಳು ಬಹಳ ವಿಚಿತ್ರವಾಗಿರುತ್ತದೆ.
           
                        ಶವಾಸನದ ಕೊನೆಯ ಹಂತದಲ್ಲಿ ಮನಸ್ಸು ಪ್ರಫುಲ್ಲತೆಯಲ್ಲಿ ಅರಳಿರುತ್ತದೆ. ದುಃಖವಿದ್ದಲ್ಲಿ ಸುಖಕತ್ತಲು ಇರುಳು , ಸುಳ್ಳು ಸತ್ಯ ಹೀಗೆ ಜಗತ್ತು ಹೇಗೆ ದ್ವಂದ್ವಮಯವಾಗಿದೆಯೋ ಮನಸ್ಸಿನ ಯೋಚನೆಗಳು ಅಷ್ಟೇ ದ್ವಂದ್ವಮಯವಾಗಿರುತ್ತದೆ. ಅಸತ್ಯದಿಂದ ಸತ್ಯದೆಡೆಗೆ, ತಮಸ್ಸಿನಿಂದ ಬೆಳಕಿನೆಡೆಗೆ, ಮೃತ್ಯುವಿನಿಂದ ಅಮೃತತ್ವದ ಕಡೆಗೆ, ಹೀಗೆ ಚಿಂತನೆಗಳು ಪ್ರಚೋದಿಸಲ್ಪಡುತ್ತದೆ. ಎಲ್ಲ ಬಗೆಯ ದ್ವಂದ್ವಗಳು ಮನಸ್ಸಿನಲ್ಲೇ ಹುದುಗಿರುತ್ತದೆ. ಪ್ರಚೋದನೆಗೆ ಹೊಂದಿಕೊಂಡು  ನಮ್ಮ  ವ್ಯಕ್ತಿತ್ವ ಬದಲಾಗುತ್ತದೆ. ವ್ಯಗ್ರತೆ ದೂರವಾಗಿ ಸೌಮ್ಯತೆ ಪ್ರಚೋದಿಸಲ್ಪಡುತ್ತದೆ.   ಪ್ರಚೋದನೆಯನ್ನು ಅರಿತು ನಮ್ಮ ಮನಸ್ಸನ್ನು ತೆರೆದಿಟ್ಟು ಸ್ಪಂದಿಸಬೇಕುಆಗಲೆ ಹೊರ ಜಗತ್ತು ಸುಂದರವಾಗಿ ಭಾಸವಾಗುವುದು. ಬದುಕಿನಲ್ಲಿ  ನಾವು ಕಳೆದ ದಿನಗಳ ಘಟನೆಗಳು ಸ್ಮೃತಿ ಪಟಲದಲ್ಲಿ ಮೂಡುವುದು.  ಅಸೂಯೆ ವಂಚನೆ ವೈಶಮ್ಯ ಸಮಸ್ತ ಷಡ್ವೈರಿ ಭಾವನೆಗಳು ಹೇಗೆ ನಮ್ಮ ಬದುಕನ್ನು ಘಾಸಿಗೊಳಿಸಿವೆ ಎಂಬುದು ಅರಿವಿಗೆ ಬರುತ್ತದೆ. ನಮ್ಮ ಸಹವರ್ತಿಗಳು.. ಅದು ಪತ್ನಿ ಯಾಗಿರಬಹುದು ತಾಯಿ ತಂದೆಯೇ ಮಕ್ಕಳೇ ಆಗಿರಬಹುದು, ಅಥವಾ ಪರಕೀಯ ವ್ಯಕ್ತಿಗಳೇ ಆಗಿರಬಹುದು ಅವರೊಂದಿಗಿನ  ನಮ್ಮ ವರ್ತನೆಯನ್ನು ಮನಸ್ಸು ಪರಾಮರ್ಶೆಗೊಳಿಸುತ್ತದೆ. ವ್ಯಗ್ರವಾಗಿಯೋ ಇನ್ನಿತರ ತಾಮಸೀ ಪ್ರವೃತ್ತಿಯ ನಮ್ಮ ವರ್ತನೆಗೆ ನಮ್ಮ ಮನಸ್ಸು ಪರಿತಪಿಸುವ ಹಂತಕ್ಕೆ ಬಂದು ಬಿಡುತ್ತದೆ. ಯಾಕೆ ಸಿಟ್ಟಾದೆ? ಯಾಕಿದೇ ವೈಷಮ್ಯಪ್ರತಿಯೊಂದು ಜೀವಿಯೂ ಪರಮಾತ್ಮನ ಪ್ರತಿನಿಧಿಯಾಗಿ ಭಾಸವಾಗಿ,   ಮುಂಬರುವ ಸಮಯವದಲ್ಲಿ ಎಲ್ಲಾ ತಾಮಸೀ ಸ್ವಭಾವದ ವರ್ತನೆ ದೂರಿಕರಿಸುವಂತಹ ಚಿಂತನೆ ಮನಸ್ಸಿನಲ್ಲಿ ಉದ್ಭವಿಸುತ್ತದೆ. ಒಟ್ಟಿನಲ್ಲಿ ಮನಸ್ಸಿನ ಚಿಂತನೆಯ ದಿಶೆಯೇ ಬದಲಾಗಿಬಿಡುತ್ತದೆ.

ಒಳಿತಾಗಲಿ ಕೆಡುಕಾಗಲಿ ಅದು ನಮ್ಮೋಳಗಿನ ಭಾವನೆಗಳು. ಅದರ ಹುಟ್ಟಿಗೆ ನಾವೇ ಕಾರಣರು. ಸ್ನೇಹವಾಗಲಿ ವೈಷಮ್ಯವಾಗಲೀ ಎರಡೂ ನಮ್ಮ ಮನಸ್ಸಲ್ಲೇ ನೆಲೆಯಾಗಿರುತ್ತದೆ. ಯಾವ ಭಾವನೆ ಪ್ರಚೋದನೆಗೆ ಒಳಗಾಗುವುದೋ ಅದು ಬಾಹ್ಯದಲ್ಲಿ ಅಭಿವ್ಯಕ್ತೀಕರಿಸಿಕೊಳ್ಳುತ್ತದೆ. ಪರರನ್ನು ಪ್ರೀತಿಸಿದವ ಪರರ ಆತ್ಮವನ್ನು ಗೌರವಿಸಿದಂತೆಆತ್ಮವನ್ನು ಗೌರವಿಸುವುದು ಪರಮಾತ್ಮನನ್ನು ಗೌರವಿಸಿದಂತೆ. ವಿಶ್ವದ ಶಾಂತಿ ಮಂತ್ರದ ಮೂಲಭೂತ ತತ್ವ ಅಡಗಿರುವುದೇ ಇಲ್ಲಿ.

            ತನ್ನನ್ನು ತಾನರಿಯುವುದು, ಒಂದುರೀತಿಯಲ್ಲಿ ತನ್ನೊಳಗಿನ ಅರಿ ಅಂದರೆ ವೈರಿ ಯನ್ನು ಅರಿಯುವುದು ಅಥವಾ ತನ್ನನ್ನೇ ತಾನು ವೈರಿಯೆಂದು ತಿಳಿಯುವುದು, ಇಲ್ಲಿ ಮನಸ್ಸಿನ ದುರ್ಯೋಚನೆಗಳೇ ವೈರಿಗಳು ಇದನ್ನು ಅರಿತರೆ ಜ್ಞಾನೋದಯವಾದಂತೆ. ಅಸತ್ಯದಿಂದ ಸತ್ಯದೆಡೆಗೆ, ತಮಸ್ಸಿನಿಂದ ಬೆಳಕಿನೆಡೆಗೆ ಮೃತ್ಯುವಿನಿಂದ ಅಮೃತತ್ವದ ಕಡೆಗೆ.. ಇಲ್ಲಿ ಅಮೃತತ್ವ ಹೇರಲ್ಪಡುವುದು ನಮ್ಮ ಸಧ್ಬಾವನೆಯ ಮೇಲೆ. ಸದ್ಭಾವನೆ ಸದ್ವಿನಿಯೋಗವಾಗಿ ಸ್ಥಾಯೀಯಾಗಿ ಉಳಿದಲ್ಲಿ ಅದುವೆ ಅಮರವಾದಂತೆ. ಪರೋಕ್ಷವಾಗಿ ನಮ್ಮ ಭಾವನೆಗಳೇ ಅಮರವಾದಂತೆ ಅಲ್ಲವೆ? ಯೋಗದಿಂದ ಕೇವಲ ದೈಹಿಕ ಮಾತ್ರವಲ್ಲ ಮಾನಸಿಕ ಆರೋಗ್ಯವೂ ಲಭ್ಯವಾಗಿ ಸುಂದರ ಆತ್ಮ ಶರೀರ ಹೊಂದಿ ಸುಂದರ ಪರಿಸರಕ್ಕೆ ನಾಂದಿಯಾಗುವುದು.


            .