Sunday, November 13, 2011

ಓಂಕಾರ






  
ಓಂ ....ಓಂ.. ..ಭಗವಂತನ ಓಂಕಾರ ಸ್ವರೂಪದ ಈ ಆದಿ ಮಂತ್ರದ ಪೂರ್ಣ ಮಹತ್ವದ ಅರಿವಾದದ್ದು ಇತ್ತೀಚೆಗೆ. ಧ್ಯಾನ ಯೋಗದಲ್ಲಿ ಅತ್ಯಂತ ಮಹತ್ವವಿರುವ ಈ ಮಂತ್ರ ಹಲವು ರೀತಿಯಲ್ಲಿ ಉಚ್ಚರಿಸಲ್ಪಡುತ್ತದೆ. ಸಹಜವಾಗಿ ವೇದ ಮಂತ್ರಗಳಲ್ಲಿ ಗುರು ಉಪದೇಶವಾದಂತೆ ನೇರವಾಗಿ ಕುಳಿತು ನಾಭಿಯಿಂದ ಉಚ್ಚರಿಸಲ್ಪಡುವ ಓಂಕಾರ ಕೇವಲ ಉಚ್ಚಾರಕ್ಕೆ ಮಾತ್ರವೇ ಸೀಮಿತವಾದಂತೆ ಈ ಮೊದಲು ಕಂಡಿತ್ತು. ಸ್ವಲ್ಪ ಮಟ್ಟಿಗೆ ಯೋಗಾಭ್ಯಾಸ ಆರಂಭಿಸಿದ ಮೇಲೆ ಧ್ಯಾನದಲ್ಲಿ ಏಕಾಗ್ರತೆಯನ್ನು ಸಾಧಿಸಿ ಭಗವಂತನ ಧ್ಯಾನದಲ್ಲಿ ಲೀನವಾಗುವಾಗ ಓಂಕಾರ ಮಹತ್ವವನ್ನು ಪಡೆಯುತ್ತಿತ್ತು. ಯೋಗ ಮಾಡುತ್ತಿದ್ದಂತೆ ಪ್ರತೀ ಬಾರಿಯೂ ಒಂದು ವಿಶಿಷ್ಟ ಅನುಭವಕ್ಕೆ ನಾನು ಒಳಗಾಗುತ್ತೆದ್ದೆ. ಅದೇ ರೀತಿ ಈ ಬಾರಿಯೂ ವಿಚಿತ್ರವಾದ ಅನುಭವ Ooಓಂಕಾರ ಧ್ಯಾನದ ಮೂಲಕ ಆದಾಗ ಅದರ ನೆನಪು ಮತ್ತೂ ಮತ್ತೂ ಮರುಕಳಿಸುತ್ತದೆ.
ಧ್ಯಾನಕ್ಕೆ ತೊಡಗುವಾಗ ಆರಂಭದಲ್ಲಿ ಸಹಜವಾಗಿ ಪದ್ಮಾಸನದಲ್ಲಿ ನೇರವಾಗಿ ಕುಳಿತು ಒಂದೇ ಕಡೆಗೆ ಮೇಲ್ಮುಖವಾಗಿ ದಿಟ್ಟಿಸಿ ನಿಧಾನವಾಗಿ ಕಣ್ಣು ಮುಚ್ಚಬೇಕು. ನಿಧಾನವಾದ ದೀರ್ಘವಾದ ಉಸಿರಾಟ ಕೆಲವು ಬಾರಿ ಮಾಡಿದಾಗ  ಮನಸ್ಸು ಮತ್ತು ದೇಹ ಒಂದು ಸ್ಥಿರತೆಯನ್ನು ಪಡೆದು ಕೊಳ್ಳುತ್ತದೆ. ಆ ಸ್ಥಿರತೆಯಲ್ಲೆ ಎಲ್ಲವೂ ಲೀನವಾದ ಅನುಭವ. ಬಾಹ್ಯ ಜಗತ್ತಿನ ಸದ್ಧು ಗದ್ದಲ ಕೇಳುತ್ತಿದ್ದರೂ,  ನಿಧಾನವಾಗಿ ನಮ್ಮ ಅರಿವಿನ ವರ್ತುಲದಿಂದ ದೂರವಾಗುತ್ತದೆ ಆ ಅವ್ಯಕ್ತ ಅನುಭವವೇ ಯೊಗ. ಯೋಗವೆಂದರೆ ಒಟ್ಟು ಸೇರುವುದು. ಎಲ್ಲಾ ಪ್ರಚೋದನೆಗಳಜತೆಗೆ  ದೇಹ ಮತ್ತು ಮನಸ್ಸನ್ನು ಒಂದೇ ಕೇಂದ್ರದಲ್ಲಿ ಒಟ್ಟು ಸೇರಿಸುವುದು.   
ಇದರ ಆರಂಭವೇ ಉಸಿರಾಟದಿಂದ. ಎಲ್ಲವನ್ನೂ ಉಸಿರಾಟದ ಮೂಲಕ ಕೇಂದ್ರಿಕರಿಸುವ ಪ್ರಯತ್ನದಿಂದಲೇ ಶುರು ಮಾಡಬೇಕು.   ನಾಸಿಕಾಗ್ರದಿಂದ ಒಳ ಸೇರಿದ ಗಾಳಿ ಅದೇ  ಗಮನದಲ್ಲಿ ಗಂಟಲು ಎದೆ ಕೊನೆಗೆ ನಾಭಿಯ ಸುತ್ತಲೂ ವ್ಯಾಪಿಸಿ ಮತ್ತು ಕೆಳಗೆ ಹೋಗಿ ದೇಹದ ತುಂಬೆಲ್ಲ ವ್ಯಾಪಿಸ ತೊಡಗಿ ನಿಧಾನವಾಗಿ ಉಸಿರು ಬಿಟ್ಟಾಗ ನಾಭಿಯ ಸುತ್ತ ನಿರ್ವಾತವಾದ ಅನುಭವವಾಗುತ್ತದೆ. ಇದು ಅಲ್ಪ ಸಮಯದಲ್ಲಿ ಉಂಟಾಗುವ ಪರಿಣಾಮವಲ್ಲ. ನಿರಂತರ ಸಾಧನೆಯಿಂದ ಮಾತ್ರ ಸಾಧ್ಯ. ಹೀಗೆ ಅನುಲೋಮ ವಿಲೋಮ ಆವರ್ತನೆಯಾದಂತೆ ಅದರ ಜತೆಯಲ್ಲೇ ಓಂ... ಓಂ ಎಂದು ಓಂಕಾರವನ್ನು  ಎಷ್ಟು ಸಾಧ್ಯವೋ ಅಷ್ಟು ದೀರ್ಘವಾಗಿ ಉಚ್ಚರಿಸುತ್ತಾ ಹೋಗಬೇಕು. ಹಾಗೆ ಉಚ್ಚರಿಸಿದಾಗ ಓ...ದಿಂದ ತೊಡಗಿ ಮಕಾರದಲ್ಲಿ  ಉಚ್ಚಾರ ನಿಧಾನವಾಗಿ ಪೂರ್ಣವಾದಾಗ ನಾಭಿ ಪ್ರದೇಶ ಒಳಕ್ಕೆ ಸೆಳೆಯಲ್ಪಡುತ್ತದೆ. ಘಂಟಾ ನಿನಾದದಲ್ಲಿ ಗಂಟೆಯ ನಿರಂತರ ಕಂಪನಸ್ವರ ಹೇಗೆ ಆವರ್ತಿಸುತ್ತ ತನ್ನ ಸುತ್ತ ಕಂಪನಾವಲಯವನ್ನು ನಿರ್ಮಿಸುತ್ತದೋ ತದ್ರೀತಿ ಓಂಕಾರದ ಕಂಪನ ದೇಹದ ಸುತ್ತ ತನ್ನ ಕಂಪನದವಲಯವನ್ನು ನಿರ್ಮಿಸುತ್ತಾ.. ಆ ವಲಯಕ್ಕೆ ಕೇಂದ್ರವು ನಾಭಿಯಾಗಿಬಿಡುತ್ತದೆ.ಹೊಟ್ಟೆಯ ಕರುಳು ತೀವ್ರವಾಗಿ ಕಂಪನದ ಪರಿಣಾಮವನ್ನು ಅನುಭವಿಸುತ್ತದೆ. ಇದು ಹೊಟ್ಟೆಯ ಒಳಗಿನ ಸರ್ವ ಕ್ರಿಯೆಗಳಿಗೂ ಚೈತನ್ಯ ವನ್ನು ಪ್ರಚೋದನೆಯನ್ನು ಒದಗಿಸುತ್ತದೆ. ಹೀಗೆ ನಿರಂತರವಾದ ದೀರ್ಘವಾದ ಓಂಕಾರದ ಉಚ್ಚಾರ ಹಲವು ಸಲ ಆವರ್ತನೆಯಾದಂತೆ ಉದರದೊಳಗೆ ವಿಶಿಷ್ಟವಾದ ಅನುಭವ  ಉಂಟಾಗುತ್ತದೆ. ಹೊಟ್ಟೆಯ ಕೇಂದ್ರವಾದ ನಾಭಿಯಿಂದ ತೊಡಗಿ ದೇಹದ ತುಂಬೆಲ್ಲ ಈ ಕಂಪನ ಪಸರಿಸಿದಂತೆ ನಮ್ಮ ಅಂತರ್ ದೃಷ್ಟಿಯನ್ನು ಭ್ರೂ ಮಧ್ಯ ಇರುವ ನಿರ್ವಾತ ಪ್ರದೇಶದಲ್ಲಿ ಕೇಂದ್ರೀಕರಿಸಲ್ಪಟ್ಟರೆ  ಯಾವ ರೂಪದಲ್ಲಿ ನಾವು ಭಗವಂತನನ್ನು ಕಲ್ಪಿಸುತ್ತೇವೊ ಆ ರೂಪದ ಪ್ರತ್ಯಕ್ಷ ಅನುಭವ ಭ್ರೂ ಮಧ್ಯದಲ್ಲಿ ಆಗುತ್ತದೆ. ಆವಾಗ  ಕೇವಲ ಅಕ್ಷರ ಮಾತ್ರದ ಓಂಕಾರದ ಮಹತ್ವದ ಅರಿವಾಗುತ್ತದೆ. ಭಗವಂತನನ್ನು ಓಂಕಾರ ಸ್ವರೂಪಿ ಎನ್ನುವುದು ಇದಕ್ಕಾಗಿಯೇ ಇರಬೇಕು ಸರ್ವ ಚೈತನ್ಯರೂಪವೂ ಇದೇ ಅಲ್ಲವೆ?  
ಕೆಲವು ಸಮಯದ ಮೊದಲು ಓರ್ವರು ಹೀಗೆ ಚರ್ಚಿಸುವಾಗ ಹೇಳೀದ್ದರು ... ಪ್ರಾಣಾಯಾಮ ಅಥವಾ ಧ್ಯಾನ ಯೋಗದಲ್ಲಿ ಕ್ಯಾಲೊರಿ ಉರಿಸಲ್ಪಡುವುದಿಲ್ಲ. ಕೇವಲ ಪ್ರಾಣಾಯಾಮ ಒಂದೇ ಸಾಕಾಗುವುದಿಲ್ಲ ಎಂದು. ಆವಾಗ ನನಗೂ ಹೌದೇನೋ ಅನ್ನಿಸಿತ್ತು. ಆದರೆ ಆ ಮಾತು ಇಂದು ನಿಜವಲ್ಲ ಎಂದನಿಸುತ್ತದೆ. ನಿರಂತರ ಓಂಕಾರ ಉಚ್ಚಾರದಿಂದ ನಾಭಿವಲಯದಲ್ಲಿ ಕಂಪನವು ನಿರಂತರವಾಗಿ ಪ್ರಚೋದಿಸಲ್ಪಟ್ಟರೆ, ದೈಹಿಕವಾದ ಕ್ರಿಯೆಗಳ ಮೇಲೂ ಅದರ ಪ್ರಭಾವ ಬೀರದೆ ಇರಲಾರದು. ನಿರಂತರವಾದ ಕಂಪನವು ಹೊಟ್ಟೆ;ಯೊಳಗಿನ ಜೀರ್ಣಾಂಗ ವಿಸರ್ಜನಾಂಗ ಮಾತ್ರವಲ್ಲದೆ ಶ್ವಾಸ ಕೋಶ ಸೇರಿದಂತೆ ದೇಹದ ಎಲ್ಲಾ ಭಾಗದಲ್ಲೂ ಆವಶ್ಯಕ ಪ್ರಭಾವವನ್ನು ಬೀರಬಲ್ಲುದು. ಏನೂ ಅರಿವಿಲ್ಲದೆ ಇದು ಪ್ರಾಯೋಗಿಕವಾಗಿ ಸಿದ್ಧಿಸುವಾಗ ಆಗುವ ಅನುಭವವೇ ವಿಶಿಷ್ಟವಾದುದು.
ಈ ಪ್ರಕೃತಿ ಎಷ್ಟೊಂದು ವೈವಿಧ್ಯಮಯವಾಗಿದೆ. ಪರಮಾತ್ಮನೇ ಲೀನವಾಗಿ ಪರಮಾತ್ಮನಲ್ಲೇ ಒಂದಾಗಿ  ಯಾವ ಬಗೆಯಲ್ಲೂ ಕಾಣಬಹುದಾದ ವೈವಿಧ್ಯತೆ ಅಚ್ಚರಿಪಡುವಂತಹುದು. ಇದಕ್ಕೆ ಅತಿ ಸುಲಭದ ಮಾರ್ಗವೇ ಈ ಧ್ಯಾನ ಯೋಗ .