Saturday, November 29, 2025

ಗಾಯತ್ರಿ ಪುರಶ್ಚರಣ


 


ಇತಿ ತೇ ಜ್ಞಾನಮಾಖ್ಯಾತಂ ಗುಹ್ಯದ್ಗುಹ್ಯತರಂ ಮಯಾ|

ವಿಮೃಶ್ಯೈ  ತದಶೇಷೇಣ ಯಥೇಚ್ಛಸಿ ತಥಾ ಕುರು||

(ಹೀಗೆ ನಿನಗೆ ರಹಸ್ಯಕ್ಕಿಂತಲೂ ರಹಸ್ಯವಾದ ಜ್ಞಾನವನ್ನು ನನ್ನಿಂದ ವಿರಸಲ್ಪಟ್ಟಿದೆ. ಇದನ್ನು ಪೂರ್ಣವಾಗಿ ವಿಮರ್ಶಿಸಿ ವಿವೇಚಿಸಿ ನಿನ್ನಿಚ್ಛೆಯಂತೆ ಆಚರಿಸು. )

ಇದು ಭಗವದ್ಗೀತೆಯ ಅಂತ್ಯದಲ್ಲಿ ಹೇಳಿರುವ ಶ್ಲೋಕಗಳಲ್ಲಿ ಒಂದು. ಭಗವಂತನು ಅದುವರೆಗೆ ಗೀತೆಯ ಸಾರವನ್ನು ಅರ್ಜುನನಿಗೆ ಬೋಧಿಸಿ ಆನಂತರ ವಿವೇಚನೆ ಮಾಡಿ ಇದನ್ನು ಅನುಸರಿಸು ಅಂತ ಹೇಳುತ್ತಾನೆ. ಭಗವಂತ ಸ್ವತಃ ಹೇಳಿದರೂ ಅದನ್ನು ಅರಿತು ವಿವೇಚಿಸುವ ಅವಕಾಶವನ್ನು ಅರ್ಜುನನಿಗೆ ಕೊಡುತ್ತಾನೆ. ಅಂದರೆ ಪ್ರತಿಯೊಂದು ಕಾರ್ಯವನ್ನು ಅರಿತು ವಿವೇಚಿಸಿ ಮಾಡಬೇಕು ಎನ್ನುವುದೇ ಸಾರ.  ಯಾವುದೇ ಕಾರ್ಯವೂ ಅರಿತು ವಿವೇಚಿಸಿ ಮಾಡಿದಾಗ ಅದು ಅರ್ಥ ಪೂರ್ಣವಾಗುತ್ತದೆ.  ಇಲ್ಲದೇ ಇದ್ದರೆ ಅದು ಕೇವಲ ಕಾಟಾಚಾರದ ಕೆಲಸವಾಗಿ ಪರಿಣಾಮಕಾರಿಯಾಗದೇ ಉಳಿಯುತ್ತದೆ. ಕಾಟಾಚಾರದಲ್ಲಿ ಮಾಡುವ ಕೆಲಸದಲ್ಲಿ ಚಿತ್ತ ವೃತ್ತಿಯಲ್ಲಿ ನಿರತವಾಗಿ ಅದು ಏಕಾಗ್ರತೆಯನ್ನು ಕೊಡದೇ ಕಾರ್ಯರೂಪದಲ್ಲಿ ಅದು ಪರಿಣಾಮಕಾರಿಯಾಗುವುದಿಲ್ಲ. ನಾವು ಯಾವುದಕ್ಕಾಗಿ ಸಂಕಲ್ಪಿಸಿ ಮಾಡುತ್ತೇವೆ ಅದು ಫಲಕಾರಿಯಾಗುವುದಿಲ್ಲ. ದೇವರನ್ನು ಪ್ರಾರ್ಥಿಸುವ ಮೊದಲು ದೇವರನ್ನು ಅರಿತು ಆನಂತರ ಪ್ರಾರ್ಥಿಸಿದರೆ ಪ್ರಾರ್ಥನೆಯಲ್ಲಿ ಏಕಾಗ್ರತೆ ಬರುತ್ತದೆ. ನಮ್ಮ ಎಷ್ಟೋ ಕಾರ್ಯಗಳು ಯಾರೋ ಹೇಳಿದ್ದಾರೆ, ಯಾರದೋ ಆದೇಶ ಇದೆ ಅಂತ ನಾವು ಮಾಡುವಾಗ ಆ ಕಾರ್ಯದ ಆಳ ವಿಸ್ತಾರವನ್ನು ತಿಳಿದಿರುವುದಿಲ್ಲ. ಅದರ ಪಾವಿತ್ರ್ಯತೆಯನ್ನು ತಿಳಿಯದೆ ತೋಚಿದಂತೆ ಮಾಡುವುದರಿಂದ ಅದು ಕೇವಲ ಕಾಟಾಚಾರ ಮತ್ತು ಢಂಬಾಚಾರವಾಗುತ್ತದೆ.  ಹಾಗಾಗಿ ಗಾಯತ್ರೀ ಪುರಶ್ಚರಣದ ಈ ದಿವ್ಯ ಕಾರ್ಯದಲ್ಲಿ ಗಾಯತ್ರಿ ಮಂತ್ರದ ಬಗ್ಗೆ ಪ್ರಾಥಮಿಕ ಅರಿವನ್ನು ಯಥಾ ಶಕ್ತಿ ಯಥಾ ಜ್ಞಾನದಿಂದ ವಿವರಿಸುವ ಒಂದು ಪ್ರಯತ್ನ ಇದು. 

ಗಾಯತ್ರಿ ಮಂತ್ರ ವಾಸ್ತವದಲ್ಲಿ ಇದು ಗಾಯತ್ರಿ ಮಂತ್ರ ಎನ್ನುವುದು ಕೇವಲ ವಾಡಿಕೆಯಲ್ಲಿ ಬಂದ ಹೆಸರಾಗಿದೆ. ಇದು ಮೂಲತಃ ಸವಿತೃ ಮಂತ್ರ.  ಉದಾಹರಣೆಗೆ..ಗಣಪತಿ ಸ್ತುತಿ ಇದೆ, ಗಣಾನಾಂತ್ವಾ ಗಣಮತಿಂ ಹವಾ ಮಹೆ ಎನ್ನುವ ಮಂತ್ರ ಅಥವಾ ಗಜಾನನಂ ಭೂತ ಗಣಾಧಿ ಸೇವಿತಂ ಎನ್ನುವ ಶ್ಲೋಕ ಯಾವ ದೇವರಸ್ತುತಿ ಎಂದು ಅರ್ಥವಾಗುತ್ತದೆ. ಅದೇ ರೀತಿ ಸರ್ವ ಮಂಗಲ ಮಾಂಗಲ್ಯೆ..ಇದು ದೇವಿ ಸ್ತುತಿ ಎಂದು ಹೇಳಬಹುದು. ಯಾಕೆಂದರೆ ಅಲ್ಲಿ ಆಯಾಯಾ ದೇವರ ಹೆಸರು ಉಲ್ಲೇಖವಾಗುತ್ತದೆ. ಆದರೆ " ಓಂ ಭೂರ್ಭುವಸ್ವಃ ತತ್ಸ ವಿತುರ್ ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋಯೋನಃ ಪ್ರಚೋದಯಾತ್| " ಇಲ್ಲಿ ಗಾಯತ್ರಿ ದೇವಿಯ ಅಥವಾ ಇನ್ನು ಯಾವುದೇ ಸ್ತ್ರೀ ದೈವದ ಹೆಸರೇ ಉಲ್ಲೇಖಿಸಲ್ಪಡುವುದಿಲ್ಲ. ತತ್ ಸವಿತಾ  ಜಗತ್ತನ್ನು ಸೃಷ್ಟಿಸಿದ ತಂದೆಯೇಅಂತ ಸೂರ್ಯನ ಉಲ್ಲೇಖವಾಗುವುದರಿಂದ ಇದನ್ನು ಮೂಲತಃ  ಸವಿತೃ ಮಂತ್ರ ಅಂತಲೇ ಕರೆಯುವುದು. ವಾಡಿಕೆಯಲ್ಲಿ ಇದು ಗಾಯತ್ರೀ ಮಂತ್ರವಾಗಿ ಪರಿಗಣಿಸಲ್ಪಟ್ಟಿತು. 

ಬ್ರಹ್ಮ ಋಷಿ ವಿಶ್ವಾಮಿತ್ರ ಈ ಮಂತ್ರದ ದೃಷ್ಟಾರ. ಹಾಗಾಗಿ ಗಾಯಂತ್ರಿ ಮಂತ್ರದ ಜಪಾನುಷ್ಠಾನದಲ್ಲಿ ವಿಶ್ವಾಮಿತ್ರನನ್ನು ಸ್ಮರಿಸುವುದು ನಿಯಮ. ಈ ಮಂತ್ರದ ದೃಷ್ಟಾರನಾದ ಬಳಿಕ ಕೌಶಿಕ ವಿಶ್ವಾಮಿತ್ರನಾದ. ಮಿತ್ರ ಅಂದರೆ ಸೂರ್ಯನನ್ನು ಉದ್ದೇಶಿಸಿ ಹೇಳುವುದು. ಮಿತ್ರ ಎಂದರೆ ಜ್ಞಾನವನ್ನು ಕೊಡುವವನು.  ಮಿತಿ ಅಂದರೆ ಜ್ಞಾನ ಬೆಳಕಿನ ಮೂಲಕ ಅಂದರೆ ಜ್ಯೋತಿ ಸ್ವರೂಪದ ಮೂಲಕ ಅರಿವನ್ನು ಒದಗಿಸುವುದೇ ಈ ಮಂತ್ರದ ತಾತ್ಪರ್ಯ. ಭಗವಂತ ಎಂದರೆ ಜ್ಯೋತಿ ಸ್ವರೂಪ. ಆದು ಈ ಮಂತ್ರದಲ್ಲಿ ವ್ಯಕ್ತವಾಗುತ್ತದೆ. ಜಗತ್ತಿನ ಎಲ್ಲ ಜ್ಯೋತಿಗೂ ಮೂಲ ಸ್ವರೂಪ ಭಗವಾನ ಭಾಸ್ಕರ. ದ್ವಾದಶಾದಿತ್ಯರರಲ್ಲಿ ಎರಡು ಜನ ಮೂಲ ಸ್ವರೂಪಗಳು. ಒಂದು ಸೂರ್ಯ ಇನ್ನೊಂದು ವರುಣ ದೇವ. ಸೂರ್ಯ ಹಗಲಿನ ದೇವತೆಯಾದರೆ ವರುಣ ರಾತ್ರಿಯ ದೇವತೆ. ಹಾಗಾಗಿ ಮುಂಜಾನೆ ಸೂರ್ಯನಿಗೆ ಅರ್ಘ್ಯ ಸಮರ್ಪಿಸಿದರೆ ಸಾಯಂ ಸಂಧ್ಯೆಯಲ್ಲಿ ವರುಣನಿಗೆ ಅರ್ಘ್ಯ ಸಲ್ಲಿಸುವುದು. ಸಮದ್ರವನ್ನೇ ಆರಿಸಿ ಹೀರಿಕೊಳ್ಳುವ ಸೂರ್ಯನಿಗೆ ಒಂದು ಬೊಗಸೆ ಅರ್ಥ್ಯದಿಂದ ಪರಿಣಾಮ ಏನು ಎಂದು ಯೋಚಿಸಿದರೆ ಗಾಯತ್ರಿ ಮಂತ್ರದ ಮಹತ್ವ ಅರಿವಾಗುತ್ತದೆ.  ಹೀಗೆ ಈ ಮಂತ್ರದ ವೈಶಿಷ್ಟ್ಯತೆ ಸಾಕಷ್ಟು ಇದೆ. ಇದನ್ನು ಅಧ್ಯಯನ ಮಾಡಿ ತಿಳಿದುಕೊಳ್ಳಬಹುದು.  ನನ್ನದೇನೂ ಇಲ್ಲವೂ ನಿನ್ನದೇ ಎನ್ನುವುದರ ಸಂಕೇತವೇ ಈ ಅರ್ಘ್ಯ ಸ್ಸಲ್ಲಿಕೆ. ಇದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯ. ಹಾಗಾಗಿ ಸಂಧ್ಯಾ ವಂದನೆ  ಆಚರಿಸುವ ಉದ್ದೇಶ ಕೇವಲ ನಮ್ಮ ದುರಿತವನ್ನು ಕಳೆಯುವುದು ಹೊರತು ಇಲ್ಲಿ ಯಾವುದೇ ಬಯಕೆಗಳು ಹರಕೆಗಳು ಇರುವುದಿಲ್ಲ. ಇದರ ಸಂಕಲ್ಪದಲ್ಲಿ ಮಮೋಪಾತ್ತ ದುರಿತಕ್ಷಯದ್ವಾರ  ಸಂಕಲ್ಪಿಸಿ ಹೇಳುವುದು ಕ್ರಮ. ಸಂಧ್ಯಾವಂದನೆ ಬೇರೆ ಯಾವುದೇ ಫಲಾಪೇಕ್ಶೆಯಲ್ಲಿ ಮಾಡದೇ ಇದು ನಿತ್ಯ ಆಚರಿಸಲೇಬೇಕಾದ ಕರ್ಮ ಎನಿಸಲ್ಪಡುತ್ತದೆ. 

ಓಂ ಭೂರ್ ಭುವ ಸ್ವಃ ಅಂದರೆ ಇದು ಮೂರು ವ್ಯಾಹೃತಿ ಅಂತ ಕರೆಯಲಾಗುತ್ತದೆ. ಓಂ ಕಾರದ ಬೀಜಾಕ್ಷರದಿಂದ ತೊಡಗಿ, ಭೂ.. ಅಂದರೆ ಭೂಮಿ, ಭುವಃ ಅಂದರೆ ಆಕಾಶ, ನಂತರ ಸ್ವಃ ಅಂದರೆ ಸ್ವರ್ಗ...ಇದು ಒಂದು ಜ್ಯೋತಿಸ್ವರೂಪನಾದ ಭಗವಂತನಲ್ಲಿ ಬೇಡಿಕೊಳ್ಳುವುದು.. ಭೂಮಿ ಆಕಾಶ ಸ್ವರ್ಗದಲ್ಲಿ ತತ್ ಸವಿತಾ ..ಅಂದರೆ ಆ ಸೂರ್ಯನಲ್ಲಿ ತಂದೆಯನ್ನು ಕಂಡು ಹೇಳುವುದು, ವರೇಣ್ಯಂ ಅಂದರೆ ಅತ್ಯಂತ ಶ್ರೇಷ್ಠವಾದ ಭರ್ಗೋ ಅಂದರೆ ಜ್ಯೋತಿ ಸ್ವರೂಪ ಆ ಜ್ಯೋತಿಯನ್ನೆ ದೇವ ಎಂದು ಪರಿಗಣಿಸಿ ಆ ಪರಬ್ರಹ್ಮನ ಕುರಿತಾಗಿ ತನ್ನ ಶ್ರೇಯಸ್ಸಿಗಾಗಿ ಆ ಜ್ಞಾನವನ್ನು ಪ್ರಚೋದಿಸು ಅಂತ ಈ ಮಂತ್ರದ ತಾತ್ಪರ್ಯ. ಪ್ರಚೋದಯಾತ್ ಎನ್ನುವುದಕ್ಕೆ ಆ ಜ್ಯೋತಿ ಸ್ವರೂಪಕ್ಕೆ ನಮಸ್ಕರಿಸುತ್ತೇನೆ ಅಂತಲೂ ಇದೆ. .  ಸೂರ್ಯನ ಬೆಳಕಿನಲ್ಲಿ ಭಗವಂತನು ಅಡಗಿದ್ದಾನೆ. ಆ ಬೆಳಕನ್ನು ಸರಿಸಿ ಭಗವಂತನ ಸ್ವರೂಪವನ್ನು ತೋರಿಸು ಅಂತಲೂ ಈ ಮಂತ್ರದ ವಿಶ್ಲೇಷಣೆ ಇದೆ. ಭಗವಂತ ಎಂದರೆ ಜ್ಞಾನಸ್ವರೂಪ ಆ ಜ್ಞಾನದ  ದರ್ಶನವೇ ಈ ಗಾಯತ್ರೀ ಮಂತ್ರ. ಧಿಯಃ ಯಃ ನಃ ಪ್ರಚೋದಯಾತ್ ಆ ಧೀಶಕ್ತಿ ನನ್ನ ಮನಸ್ಸಿನಲ್ಲಿ ಇಳಿದು ನನ್ನ ಮನಸ್ಸಿನಲ್ಲಿ ಒಳ್ಳೆಯದು ಏನಿದೆಯೋ ಅದಕ್ಕೆ ಪ್ರಚೋದನೆಯಾಗಲಿ. 

  ಗಾಯತ್ರೀ ಮಂತ್ರದ ವಿಶೇಷತೆ ಎಂದರೆ ದೈವದ ಸ್ವರೂಪವನ್ನು ಪೂರ್ಣವಾಗಿ ನಮ್ಮ ಕಲ್ಪನೆಗೆ ಬಿಟ್ಟು ನಮ್ಮ ಆತ್ಮಸ್ವರೂಪವನ್ನೇ ನಾವು ಜಾಗೃತಗೊಳಿಸಿ ಅದರಲ್ಲೇ ಭಗವಂತನನ್ನು ಕಾಣುವುದಾಗಿದೆ. ಸಮುದ್ರದ ಮುಂದೆ ನಿಂತು ಸಮುದ್ರವನ್ನು ನೋಡಿದಂತೆ. ಕೇವಲ ನಮ್ಮ ದೃಷ್ಟಿಗೆ ಎಷ್ಟು ಸಾಧ್ಯವೋ ಅಷ್ಟು ಮಾತ್ರ ನಮ್ಮಿಂದ ನೋಡಬಹುದು. ಪೂರ್ಣವಾದ ಸಮುದ್ರವನ್ನು ನೋಡುವುದಕ್ಕೆ ನಮಗೆ ಸಾಧ್ಯವಾಗುವುದಿಲ್ಲ. ಆದರೆ ಮನಸ್ಸಿನಿಂದ ಗ್ರಹಿಸಬಹುದು.  ಅದಕ್ಕೆ ಜ್ಞಾನ ಬೇಕು. 

ಇನ್ನು ಇಪ್ಪತ್ತನಾಲ್ಕು ಅಕ್ಷರಗಳು ಗಾಯತ್ರೀ ಮಂತ್ರದಲ್ಲಿ ಇದೆ. ಇವುಗಳ ಬಗ್ಗೆ ಹಲವು ವ್ಯಾಖ್ಯಾನಗಳು ಅಧ್ಯಯನದಲ್ಲಿ ವೇದ್ಯವಾಗುತ್ತದೆ. ಗಾಯತ್ರೀ ಮಂತ್ರದ ಒಂದೊಂದು ಅಕ್ಷರದ ಉಚ್ಚಾರಣೆಯ ಪರಿಣಾಮ ನಮ್ಮ ದೇಹದಲ್ಲಿ ಮನಸ್ಸಿನಲ್ಲಿ ಹಲವು ಪರಿಣಾಮವನ್ನು ಉಂಟು ಮಾಡುತ್ತದೆ. ಹನ್ನೊಂದು ಇಂದ್ರಿಯಗಳು, ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯದ ಮೇಲೆ ಇದು ನಿಯಂತ್ರಣ ಸಾಧಿಸುತ್ತದೆ.  ನಮ್ಮ ದೇಹದ ನಾಡಿಯ ಮೇಲೆ ಪರಿಣಾಮ ಬೀರುತ್ತದೆ. ನಾಡಿಯಲ್ಲಿ ಚೈತನ್ಯ ಪ್ರಚೋದಿಸಲ್ಪಡುತ್ತದೆ. ನಮ್ಮ ದೇಹದಲ್ಲಿ 72000 ನಾಡಿಗಳು ಇವೆ. ಅಂದರೆ ಒಂದು ಸಾವಿರ ಸಂಖ್ಯೆಯಲ್ಲಿ  ಗಾಯತ್ರೀ  ಜಪ ಮಾಡಿದಾಗ  ಇಪ್ಪತ್ತನಾಲ್ಕು ಸಾವಿರ  ನಾಡಿ ಶಕ್ತಿಯನ್ನು ಪಡೆದು ಕೊಂಡು ಜಾಗೃತವಾಗುತ್ತದೆ.  ಮೂರು ಹೊತ್ತು ಒಂದು ಸಾವಿರದಂತೆ ದಿನಕ್ಕೆ ಮೂರು ಸಾವಿರ ಮಂತ್ರ ಜಪವನ್ನಷ್ಟೆ ಮಾಡುವುದಕ್ಕೆ ಮನುಷ್ಯ ದೇಹಕ್ಕೆ ಸಾಮಾರ್ಥ್ಯವಿರುತ್ತದೆ. ಅದಕ್ಕಿಂತ ಹೆಚ್ಚಿಗೆ ಜಪವನ್ನು ಮಾಡಿದರೆ ಆ ಶಕ್ತಿಯನ್ನು ತಾಳಿಕೊಳ್ಳುವುದಕ್ಕೆ ಮನುಷ್ಯನಿಗೆ ಸಾಧ್ಯವಿಲ್ಲ. ಇದು ಹಲವು ಸಲ ಚಿತ್ತ ವಿಕಲ್ಪಕ್ಕೆ ಇನ್ನಿತರ ತೊಂದರೆಗೂ ಕಾರಣವಾಗಬಲ್ಲುದು. ಇದಕ್ಕೆ ಹಲವು ಸಾಕ್ಷಿಗಳು ಇವೆ.  ಹಾಗಾಗಿ ಗಾಯತ್ರಿ ಮಂತ್ರದ ಜಪವನ್ನು ದಿನಕ್ಕೆ ಮೂರು ಸಾವಿರಕ್ಕಿಂತ ಅಧಿಕ ಹೇಳುವುದು ಅಷ್ಟು ಸೂಕ್ತ ಅಲ್ಲ ಅಂತ ವಿದ್ವಾಂಸರು ಹೇಳುತ್ತಾರೆ

ಇನ್ನು ಈ ಗಾಯತ್ರಿ ಮಂತ್ರದ ಅರ್ಥವನ್ನು ಅರಿತು ನಾವು ಇದರ ಜಪವನ್ನು ಮಾಡಿದರೆ ನಮಗೆ ಅದರ ಮಹತ್ವದ ಅರಿವಾಗಿ ಅದರಲ್ಲಿ ಏಕಾಗ್ರತೆ ಒದಗಿ ಬರುತ್ತದೆ ಮಾತ್ರವಲ್ಲ ಅದು ಕೇವಲ ಕಾಟಾಚಾರದ ಜಪವಾಗಿರುವುದಿಲ್ಲ. ವಾಸ್ತವದಲ್ಲಿ ನಮ್ಮ ಸಂಧ್ಯಾವಂದನೆಯಂತಹ ನಿತ್ಯ ಕರ್ಮಗಳು ದಿನಾ ಚರ್ವಿತ ಚರ್ವಣವಾಗುವುದರಿಂದ ಮತ್ತು ಅದರ ಬಗ್ಗೆ ವಿವೇಚನೆ ಇಲ್ಲದಿರುವುದರಿಂದ ಅದು ಕೇವಲ ಕಾಟಾಚಾರವಾಗಿರುತ್ತದೆ. ಆದರೂ ನಿತ್ಯ ಸಂಧ್ಯಾವಂದನೆಯಲ್ಲಿ ಹತ್ತು ನಿಮಿಷ ಧ್ಯಾನ ಪ್ರಕ್ರಿಯೆಯನ್ನು ಸೇರಿಸಿದರೆ ಅದು ಪ್ರತಿನಿತ್ಯ ಹೊಸ ಅನುಭವವನ್ನು ಕೊಡುವುದರಿಂದ ಚರ್ವಿತ ಚರ್ವಣವಾಗುವುದಿಲ್ಲ. 

  ಸಾಮಾನ್ಯವಾಗಿ ನಿತ್ಯ ಸಂಧ್ಯಾವಂದನೆಯಲ್ಲಿ ನೂರ ಎಂಟು ಸಲ ಗಾಯತ್ರಿ ಜಪ ಮಾಡಬೇಕು ಎನ್ನುವುದಿದೆ. ಆದರೆ ಸಮಯದ ಅಭಾವದಿಂದ ಇನ್ನಿತರ ಕಾರಣಗಳಿಂದ ಕೇವಲ ಹತ್ತು ಸಲವಾದರೂ ಹೇಳಬೇಕು ಎನ್ನುವುದು ನಿಯಮ. ಆದರೆ ಇದು ಹೇಗಾಗಿದೆ ಎಂದರೆ,  ಹತ್ತಕ್ಕಿಂತ ಒಂದು ಬಾರಿಯೂ ಹೆಚ್ಚಿಗೆ ಹೇಳದೆ ಇರುವಂತಹ ಕಾಟಾಚಾರ ಬಳಕೆಯಲ್ಲಿದೆ. ಇದರಿಂದ ಏನು ಸತ್ಫಲ ಸಿಗಬಹುದು?  ಇನ್ನು ಸಂಧ್ಯಾವಂದನೆ ಆಚರಿಸುವ ರೀತಿಯೂ ಅದೇ ರೀತಿಯಲ್ಲಿ   ಎನೋ ಒಂದು ಬೆಳಗ್ಗೆ ಹತ್ತು ನಿಮಿಷದ ಕೆಲಸ ಅಂತ ಸೀಮಿತ ಗೊಳಿಸುತ್ತಾರೆ. ಮುಖ್ಯವಾಗಿ ಏಕಾಗ್ರತೆ ಇಲ್ಲ. ಸ್ವಚ್ಚ ಮನಸ್ಥಿತಿ ಇಲ್ಲ. ಕೇವಲ ಯಾಂತ್ರಿಕ ಕ್ರಿಯೆ. ಸ್ನಾನ ಮಾಡಿ,  ಮಡಿಯಲ್ಲಿ ಯಾರನ್ನುಮುಟ್ಟದೇ ಶುಭ್ರವಾಗಿ , ಮನಸ್ಸಿನಿಂದಲು ಅಷ್ಟೇ ಶುಭ್ರವಾಗಿ ಯಾವುದೇ ಮನೋವಿಕಾರವಿಲ್ಲದೇ ಇದನ್ನು ಮಾಡಬೇಕು. ಮಡಿ ಎಂದರೆ ಭಗವಂತನಿಗೆ ಸಮೀಪವಾಗುವದು ಎಂದರ್ಥ. ಮಡಿ ಕೇವಲ ದೇಹದಿಂದ ಮಾತ್ರವಲ್ಲ ಮನಸ್ಸಿನಿಂದಲೂ ಮಡಿಯಾಗಬೇಕು. ಏಕಾದಶ ಇಂದ್ರಿಯಗಳಿಂದಲೂ ನಾವು ಪರಿಶುದ್ದರಾಗಬೇಕು.  ಮನುಷ್ಯನ ಜನ್ಮವೇ ಪರಿಶುದ್ದಿಯೆಡೆಗೆ ಸಾಗುವ ಅರ್ಥವಿರುವುದರಿಂದ ಮಡಿ ಎಂಬುದಕ್ಕೆ ವಿಶೇಷ ಮಹತ್ವ ಸನಾತನ ಧರ್ಮ ಸಂಸ್ಕೃತಿಯಲ್ಲಿದೆ. ಸಂಧ್ಯಾವಂದನೆ ಇದು ಶ್ರದ್ಧೆಯಿಂದ ಮಾಡುವ ಕೆಲಸ. ಆದರೆ ನಮ್ಮ ಜೀವನ ಶೈಲಿ ಹೇಗಾಗಿದೆ ಎಂದರೆ,  ಸಂಧ್ಯಾವಂದನೆ ಸಮಯ ಇರುವಾಗ ಮಾಡುವ ಕರ್ಮವಾಗಿದೆ. ಜನಿವಾರ ಅವಶ್ಯ ಇರುವಾಗ ಧರಿಸುವ ಆಭರಣವಾಗಿದೆ.  ಅದನ್ನು ಆಭರಣ ಅಂತ ಉಪಮೆ ಕರಿಸುವುದು ತಪ್ಪು.  ತೆಗೆಯಲೇ ಬಾರದು ಅದೂ ಭಾರವಾಗುವುದಾದರೆ ಬ್ರಾಹ್ಮಣ್ಯ ಎಂಬ ಶಬ್ದಕ್ಕೆ ಅರ್ಥ ಎಲ್ಲಿಯದು? ಇನ್ನು ಸಂಧ್ಯಾವಂದನೆ ಆಚರಿಸುವಾಗಲೂ ಯಾರಲ್ಲೋ ಮಾತನಾಡುತ್ತ ಮೊಬೈಲ್ ಗೆ ಅಥವಾ ಇನ್ನಿತರ ಕರೆಗಳಿಗೆ ಕಿವಿಗೊಡುತ್ತ ಬಿಡುವಾದಾಗ ಮಾಡುವ ಕಾರ್ಯ ಸಂಧ್ಯಾವಂದನೆಯಾಗಿದೆ. ಬೆಳಗ್ಗೆ ಎಚ್ಚರವಾದ ತಕ್ಷಣ ಯಾರಲ್ಲೂ ಮಾತನಾಡದೆ ಪರಿಶುದ್ದನಾಗಿ ಸಂಧ್ಯೆಯನ್ನು ಮಾಡಬೇಕು. ಅದು ಆದ್ಯ ಕರ್ತವ್ಯ.  ದಿನದ ಇಪ್ಪತ್ತನಾಲ್ಕು ಘಂಟೆಗಳಲ್ಲಿ ಹತ್ತು ನಿಮಿಷ ಕೇವಲ ಇದಕ್ಕಾಗಿ ಮೀಸಲಿಡಲಾಗದ ಸ್ಥಿತಿಯಲ್ಲಿ ಸಂಧ್ಯಾವಂದನೆ ಮಾಡುವುದಾದರೆ  ಇದು ಶ್ರದ್ಧೆ ಎನಿಸುವುದಿಲ್ಲ. ಪ್ರಾಣಾಯಾಮ ಅಂತ ಮೂಗಿನಲ್ಲಿ ಕೈ ಹಿಡಿದು ಮಂತ್ರ ಉಚ್ಚರಿಸಿದರೆ ಅದು ಪ್ರಾಣಾಯಾಮವಾಗುವುದಿಲ್ಲ ಎಂಬ ಪರಿಜ್ಞಾನ ನಮ್ಮಲ್ಲಿರಬೇಕು. ಆಚಮನ ಪ್ರಾಣಾಯಾಮದ ವಿಧಾನ ಮತ್ತು ಅದರ ಅರ್ಥವನ್ನು ಮೊದಲು ತಿಳಿಯಬೇಕು. ಅದರ ಉದ್ದೇಶವನ್ನು ಅರ್ಥವಿಸಿಕೊಳ್ಳಬೇಕು. ಇವೆರಡೂ ಅಂತರಂಗವನ್ನು ಶುದ್ಧಿಗೊಳಿಸುವ ಕ್ರಿಯೆಗಳು.  ಗಡಿಬಿಡಿಗೆ ಹೆಗಲ ಮೇಲೆ ಜನಿವಾರ ಅಲ್ಲದೆ ಒಂದು ಶಲ್ಯ ಇರಲೇಬೇಕು. ಇಲ್ಲವಾದರೆ ಅದು ಅಪರ ಕ್ರಿಯೆಯಾಗಿಬಿಡುತ್ತದೆ. ಹಾಗಾಗಿ ಸಂಧ್ಯಾವಂದನೆಯ ಮಹತ್ವ ತಿಳಿಯದೇ ಸಂಧ್ಯಾವಂದನೆ ಮಾಡಿದ ಹಾಗೆ ಗಾಯತ್ರೀ ಜಪವೂ ತನ್ನ ಮಹತ್ವವನ್ನು ಕಳೆದುಕೊಳ್ಳಬಹುದು. ಬ್ರಾಹ್ಮಣ ಎಂದರೆ  ಪರಬ್ರಹ್ಮದ ಅನ್ವೇಷಣೆ.  ಬ್ರಾಹ್ಮಣ  ಅದರ ಅನ್ವೇಷಣೆಯಲ್ಲೇ ಸಾಗುವವನು ಎಂದು ತಿಳಿಯಲಾಗುತ್ತದೆ. 

ಯಾವುದೇ ಕಾರ್ಯವಾದರೂ ನಾವು ಅದರ ಮಹತ್ವವನ್ನು ಅರಿತು ಶ್ರಧ್ದೆಯಿಂದ ಆಚರಿಸಬೇಕು. ಜ್ಞಾನಸ್ವರೂಪವೇ ಭಗವಂತ ಸ್ವರೂಪ. ಅದನ್ನೇ ಜ್ಞಾನೊದಯ ಅಂತ ಕರೆಯುತ್ತಿದ್ದರು. ಇದನ್ನು ತಿಳಿಯದೇ ಮಾಡಿದರೆ ಅದು ಕೇವಲ ಕಾಟಾಚಾರವಾಗುತ್ತದೆ. ಬ್ರಾಹ್ಮಣ ಎಂದರೆ ಕೇವಲ ಬ್ರಾಹ್ಮಣನಾಗಿ ಜನ್ಮದಿಂದ ಬರುವ ಪದವಿಯಲ್ಲ. ಆಚರಣೆಯಿಂದ ಲಭ್ಯವಾಗುವಂತಹ ಪದವಿ. ಜನ್ಮದಿಂದ ಕ್ಷತ್ರಿಯನಾಗಿ ತನ್ನ ಸಾಧನೆಯಿಂದ ಬ್ರಹ್ಮ ಪದವಿಗೇರಿದ ವಿಶ್ವಾಮಿತ್ರನೇ ಇದಕ್ಕೆ ಸಾಕ್ಷಿ. ನನ್ನ ಪ್ರಕಾರ ಮನುಷ್ಯನಾದವನು ನಾಲ್ಕು ವಿಷಯಗಳಲ್ಲಿ ಕಾಟಾಚಾರವನ್ನು ತೋರಬಾರದು. ಒಂದು ಸಂಧ್ಯಾವಂದನೆ ಜತೆಯಲ್ಲಿ   ಯೋಗಾಭ್ಯಾಸ ಇವೆರಡೂ ಮನಸ್ಸನ್ನೂ ಬದುಕನ್ನೂ ರೂಪಿಸುವ ವಿಷಯಗಳು ಇನ್ನು ಮೂರನೆಯದು ಪಿತೃ ಕಾರ್ಯ ಪ್ರತಿಯೊಬ್ಬನೂ ಅದರಲ್ಲಿ ಬ್ರಾಹ್ಮಣನೆನಿಸಿದನು ಪಿತೃಗಳಿಗೆ ಪಿಂಡದಾನವನ್ನು ಮಾಡಬೇಕು. ಮತ್ತು ತಿನ್ನುವ ಆಹಾರ ಮತ್ತು ಅದನ್ನು ತಯಾರಿಸುವುದು. ಇವುಗಳು ಕೇವಲ ಕಾಟಾಚಾರವಾದರೆ ಮನುಷ್ಯನ ಬದುಕಿಗೆ ಅರ್ಥವೇ ಇರುವುದಿಲ್ಲ. 

ಮನು ಎಂದರೆ ಮನನ.. ಮನಸ್ಸಿನ ಒಳಗಿನ ಅರಿವು. ಮನುಷ್ಯನಿಗೆ ಮಾತ್ರವೇ ಈ ಯೋಚನೆಯ ಶಕ್ತಿ ಇರುತ್ತದೆ. ಮನು ಇದರ ಬಗ್ಗೆ ತಿಳಿಯದೇ ಮೂರ್ಖರಂತೆ ಮನುವಿನ  ಬಗ್ಗೆ ವಿಚಿತ್ರ ವ್ಯಾಖ್ಯಾನಗಳನ್ನು ಮಾಡುತ್ತಾರೆ. ಮನು ಎಂದರೆ ತಿಳಿದುಕೊ ಅಂದರೆ ಇದು ಜ್ಞಾನದ ಸಂಕೇತ. ಎಲ್ಲಿ ಅರಿವು ಇರುತ್ತದೋ ಅಲ್ಲಿ ಭಗವಂತನಿದ್ದಾನೆ. 

ಮೇಲೆ ಹೇಳಿದ ವಿಷಯಗಳು ಕೇವಲ ನನ್ನ ಜ್ಞಾನಕ್ಕೆ ಸೀಮಿತವಾದ ವಿಚಾರಗಳು. ಈ ಜ್ಞಾನಕ್ಕೆ ಮಿಗಿಲಾಗಿ ಇನ್ನೂ ಇವೆ. ಹೇಳಿದ ವಿಚಾರಗಳಲ್ಲಿ ತಪ್ಪು ಇದ್ದರೂ ಅದರ ಹಿಂದೆ ಇರುವ ಭಾವ ಒಂದೇ ನಾವು ಭಗವಂತನನ್ನು ಅರಿತು ಆರಾಧಿಸುವುದರಲ್ಲಿ ಹೆಚ್ಚು ಪರಿಣಾಮವಿದೆ. ನಮ್ಮ ಹೆತ್ತ ಅಪ್ಪ ಅಮ್ಮನನ್ನು ಅರಿತು ನಾವು ಅವರಲ್ಲಿ ನಡೆದುಕೊಳ್ಳುವಂತೆ ಅದರಲ್ಲಿ ಬದುಕಿನ ಸಾರ್ಥಕತೆ ಇರುತ್ತದೆ. 


ಓಂ ಶಾಂತಿಃ ಶಾಂತಿಃ ಶಾಂತಿಃ


 


No comments:

Post a Comment