Wednesday, December 31, 2025

ಕಳೆದು ಹೋದ ದಿನ

ಎರಡು ವರ್ಷದ ಹಿಂದೆ ಗೋವಾದಲ್ಲಿರುವ  ನನ್ನ ಹತ್ತಿರದ ಸಹೋದರ ಸಂಬಂಧಿಯೊಬ್ಬರು ಅವರ ಸಹೋದರ  ಮೃತ ಪಟ್ಟ ವಾರ್ತೆ ಕರೆ ಮಾಡಿ ಹೇಳೀದರು. ಜತೆಗೆ ಆ ಸಹೋದರ ಬಹಳ ದುಃಖದಲ್ಲಿ ವಿಷಾದ ಭರಿತರಾಗಿ ಒಂದು ಸಂದೇಶ ಕಳುಹಿಸಿದರು. ನಾವು ಆತನನ್ನು ಕಳೆದುಕೊಂಡೆವು. (we lost him). ಎಂದೆಂದೂ ಭರಿಸಲಾಗದ ನಷ್ಟದ ದುಃಖ ಅವರ ಸಂದೇಶದಲ್ಲಿ ವ್ಯಕ್ತವಾದಾಗ ನನಗೂ ಕಣ್ಣಂಚು ಒದ್ದೆಯಾದ ಅನುಭವವಾಯಿತು. ಬಹುಶಃ ಪೂರ್ಣಾಯುಷ್ಯದ ಜೀವನ ಕಳೆದು ಮೃತ ಪಟ್ಟಿದ್ದರೆ ಹೀಗೆ ಹೇಳುತ್ತಿರಲಿಲ್ಲವೇನೋ.  

ತಮ್ಮ ವಯಸ್ಸಿಗಿಂತಲೂ ಕೆಳಗಿನವರು ಅಥವಾ ನಮ್ಮ ಸಮವಯಸ್ಕರು ಇನ್ನಿಲ್ಲ ಎನ್ನುವಾಗ ನಾವೂ ಅಧೀರರಾಗಿಬಿಡುತ್ತೇವೆ. ಯಾಕೆ ಹೀಗೆ ಅಂತ ಕಾರಣ ಹುಡುಕುತ್ತೇವೆ. ಹಲವು ಸಲ ಇದು ಸ್ವಯಂಕೃತ ಅಪರಾಧ ಎನ್ನುವಾಗ ಪರಿತಪಿಸುತ್ತೇವೆ. ಈಗತ್ತಿನಲ್ಲಿ ಗಳಿಸುವುದಕ್ಕೆ ಏನು ಇರುವುದಿಲ್ಲ. ಎಲ್ಲವನ್ನು ಕಳೆದುಕೊಳ್ಳುವುದೇ ಜಗತ್ತಿನ ನಿಯಮ. ಆದರೂ ಅವಾಸ್ತವಿಕವಾಗಿ ಕಳೆದುಕೊಳ್ಳುವಾಗ ನಮ್ಮಲ್ಲಿ ಅಪರಾಧಿ ಭಾವ ಮೂಡುವುದು ಸಹಜ. ನಾವು  ಆತನನ್ನು ಕಳೆದುಕೊಂಡೆವು ಅಂತ ಸಹೋದರ ಹೇಳುವಾಗ ಆತನ ನಷ್ಟಕ್ಕೆ ಕೇವಲ ಜಗತ್ತಿನ ನಿಯಮ ಕಾರಣವಾಗುವುದಿಲ್ಲ. ಕಾರಣ ಇಷ್ಟೆ, ಮೃತ ವ್ಯಕ್ತಿ ನಾಲ್ಕು ದಶಕದ ಬದುಕನ್ನೂ ಕಳೆಯುವ ಮೊದಲೆ ಬದುಕನ್ನು ಕಳೆಯುವುದಕ್ಕೆ ಆತನ ಮದ್ಯವ್ಯಸನವೇ ಕಾರಣ. ಕರೆ ಮಾಡಿದಾಗ ನಿನ್ನೆ ಅತನನ್ನ ಕಳೆದುಕೊಂಡೆವು ಅಂತ ದುಃಖದಲ್ಲಿ ಹೇಳುವಾಗ ನಾನು ಹೇಳಿದೆ ಸತ್ಯ ಅದಲ್ಲ.. ಆತನನ್ನು ಕೆಲವು ವರ್ಷಗಳ ಹಿಂದೆ ಕಳೆದುಕೊಂಡಾಗಿದೆ. ಈಗ ಅದು ಕೇವಲ ವಾಸ್ತವಿಕ ಸತ್ಯವಾಗಿದೆ. ಯಾಕೆಂದರೆ ಮದ್ಯ ಸೇವನೆ ಅತನನ್ನು ಎಂದೋ ಮಾನಸಿಕವಾಗಿ ನಮ್ಮಿಂದ ದೂರ ಮಾಡಿತ್ತು. 

ಒಂದು ಕುಟುಂಬದಲ್ಲಿ ಒಬ್ಬ ಮದ್ಯ ವ್ಯಸನಿ ಇದ್ದರೆ ಆತ ಇದ್ದರೂ ಇಲ್ಲದಂತೆ. ಹಿಂದೆ ಒಂದು ಸಲ ಮದುವೆ ಕಾರ್ಯಕ್ರಮಕ್ಕೆ ಗೋವಕ್ಕೆ ಹೋಗಿದ್ದೆ. ಆ ಮದುವೆಯ ಮದುಮಗಳು ನಮ್ಮೂರಿನವಳು. ಸಹಜವಾಗಿ ಆಕೆಯ ಕೆಲವು ಸಂಭಂಧಿಗಳು ಜತೆಗೆ ವಾಹನದಲ್ಲಿ ಬಂದಿದ್ದರು. ವಿಚಿತ್ರವೆಂದರೆ ಮದುವೆ ಎಂಬುದು ಅವರಿಗೆ ಗೋವಕ್ಕೆ ಹೋಗುವುದಕ್ಕೆ ಒಂದು ಕಾರಣವಾಗಿತ್ತು. ಏನನ್ನು ಕಾಣಬೇಕಿತ್ತೋ ಅದನ್ನು ಕಾಣದೇ ಇನ್ನೆನೋ ಒಂದರ ಭ್ರಮೆಯಲ್ಲಿ ಮುಳುಗಿಬಿಡುವುದು ಗೋವದ ಆಕರ್ಷಣೆ ಇರಬೇಕೇನೋ.  ಗೋವದ ಸೀಮೆ ಪ್ರವೇಶಿಸಿದ ನಂತರ ಅವರಲ್ಲಿ ಹಲವರು ಗೋವೆಯ ಪ್ರವೇಶದ ಉದ್ದೇಶವನ್ನು ಬಿಚ್ಚಿಟ್ಟರು. ಹೋದದ್ದು ವಿವಾಹ ಕಾರ್ಯಕ್ರಮಕ್ಕೆ,  ಆದರೆ ಗೋವಾದ ಮದ್ಯದ ಪ್ರಭಾವದಿಂದ ವಿವಾಹ ಕಾರ್ಯಕ್ರಮದ ಒಂದು ಘಳಿಗೆಯಲ್ಲೂ   ಅವರ ಅಸ್ತಿತ್ವ ಇರಲಿಲ್ಲ. ಹಗಲು ರಾತ್ರಿ ನಿಶೆ ಏರಿಸಿ ಮುಖ ತೋರಿಸುವ ಯೋಗ್ಯತೆಯಿಂದ ವಂಚಿಸಲ್ಪಟ್ಟು ಕಾರ್ಯಕ್ರಮದಿಂದ ಸೇರಿದ ಬಂಧು ಬಳಗದಿಂದ ಅವರು ದೂರವೇ ಉಳಿದರು. ಮದ್ಯ ಎಂಬುದು ಹತ್ತಿರವಾದಾಗ ಲೋಕ ಅವರಿಂದ ದೂರವಾಗಿಬಿಟ್ಟಿತು.  ಮದ್ಯ ವ್ಯಸನ ಎಲ್ಲವನ್ನೂ ದುಃಖವನ್ನು ಮರೆಸುವುದಕ್ಕೆ, ಸುಖದ ಉತ್ತುಂಗದ ಶಿಖರಕ್ಕೆ ಒಯ್ಯುವುದಕ್ಕೆ ಕಾರಣವಾಗುತ್ತದೆ. ಆದರೆ ನಶೆ ಮಾನಸಿಕವಾಗಿ ಇಹವನ್ನು ಮರೆಸಿ ದೂರ ಮಾಡುವಾಗ ನಮ್ಮವರಿಂದ ದೂರಾಗುತ್ತೇವೆ ಎಂಬುದನ್ನೂ ಮರೆಸಿಬಿಡುತ್ತದೆ. 

ಒಂದು ಮನೆಯಲ್ಲಿ ಒಬ್ಬ ಮದ್ಯವ್ಯಸನಿ ಇದ್ದರೆ, ಆತ ಯಾವ ಸುಖವನ್ನು ಅನುಭವಿಸುತ್ತಾನೋ ತಿಳಿಯದು, ಆದರೆ ಆತನ ಸಂಸಾರ ಮಾತ್ರ ಹಲವು ಸುಖಗಳಿಂದ ದೂರಾಗುತ್ತದೆ. ಎಂದೂ ಕೌಟುಂಬಿಕವಾಗಿ ದೂರಾಗಿ ಪ್ರತ್ಯೇಕವಾಗುವಾಗ ಕುಟುಂಬ ಎಲ್ಲವನ್ನೂ ಕಳೆದುಕೊಂಡು ಬಿಡುತ್ತದೆ. ಸಂಸಾರದಲ್ಲಿ ಎಲ್ಲರೂ ಹತ್ತಿರವಾದರೂ ಈತ ಮಾತ್ರ ಎಲ್ಲರಿಂದಲೂ ದೂರಾಗಿ ಉಳಿದುಬಿಡುತ್ತಾನೆ. ಎಂದಿಗೂ ಸಂಸಾರದ ಅಂಗವಾಗಿ ಆತ ಉಳಿದುಬಿಡುವುದಿಲ್ಲ. ಎಲ್ಲ ಇದ್ದಂತೆ ಇದ್ದರೂ ಎಲ್ಲದರಿಂದಲೂ ಕಳೆದು ಬಿಡುವ ಈ ಮದ್ಯ ಎಲ್ಲವನ್ನು ಕಸಿದುಕೊಳ್ಳುತ್ತದೆ.   ವಿವಾಹ ಇತ್ಯಾದಿ ಸುಖ ಸಂಭ್ರಮದಲ್ಲಿ  ಕುಟುಂಬ ಇದ್ದರೆ ಮದ್ಯ ವ್ಯಸನ ಎಲ್ಲರಿಂದಲೂ ಆತನನ್ನು ಪ್ರತ್ಯೇಕಿಸುತ್ತದೆ. ಇದ್ದರೂ ಇರದಂತೆ ಮದ್ಯ ಎಲ್ಲವನ್ನೂ ಕಳೆದುಕೊಳ್ಳುವಂತೆ ಮಾಡಿಬಿಡುತ್ತದೆ. 

ಇದೀಗ ಹೊಸ ವರ್ಷದ ಸಂಭ್ರಮ. ಎಲ್ಲಾ ದಿನಗಳಂತೆ ಇದೂ ಒಂದು ಕತ್ತಲು ಬೆಳಕಿನ ದಿನ. ಹಳೆಯದಿನಗಳ ಜತೆ ಮತ್ತೊಂದನ್ನು ಸೇರಿಸಿ ಕಳೆವಾಗ ಎಲ್ಲವನ್ನೂ ಕಳೆದು ಬಿಡುವ ಸಂಭ್ರಮದಲ್ಲಿ ಜಗತ್ತನ್ನೂ ಕಳೆದುಕೊಳ್ಳುವ ಆತುರ. ಎಲ್ಲವನ್ನು ಕಳೆದುಕೊಳ್ಳುವುದೇ ಬದುಕು ಎನ್ನುವಾಗ ಎಲ್ಲವನ್ನು ಕಳೆದುಕೊಳ್ಳುವ ನಡುವೆ ಯಾವುದನ್ನೋ ಗಳಿಸುವ ಉನ್ಮಾದ ಸ್ಥಿತಿಯಲ್ಲಿ ಈ ವರ್ಷಾಂತ್ಯದ ಇರುಳು ಕಳೆದು ಬಿಡುತ್ತದೆ. ನಮ್ಮನ್ನು ಆಳುವ ಸರಕಾರಕ್ಕೂ ಇದೊಂದು ಆತುರ. ಹನಿ ಹನಿ ಮದ್ಯದಲ್ಲೂ ಸರಕಾರ ಜೀವ ಹನಿಯನ್ನು ಹುಡುಕುತ್ತದೆ. ಉನ್ಮಾದ ಅವಸ್ಥೆಯಲ್ಲಿ ಎಲ್ಲವನ್ನು ಕಳೆದುಬಿಡಲಿ ಎಂದು ಬಯಸುತ್ತದೆ. ಎಷ್ಟು ವಿಚಿತ್ರ. ಕೈ ಹಿಡಿವ ಕೈಗಳೇ ಮದ್ಯದ ಪ್ರವಾಹದಲ್ಲಿ ಕೈಬಿಟ್ಟು ಕೇಕೆ ಹಾಕಿದಂತೆ. ಮದ್ಯ ಎಲ್ಲವನ್ನು ಎಲ್ಲವನ್ನು ಕಳೆದುಬಿಡುತ್ತದೆ. 


ಹೊಸ ವರುಷ ಕಳೆದುದನ್ನು ಮತ್ತೆ ಕೊಡಲಿ  ಎಂಬ ಆಶಯ. ಇದಕ್ಕೆ  ಮದ್ಯ ಎರವಾಗದಿರಲಿ. 



  

Friday, December 19, 2025

ವಿಡಂಬನೆಯ ಚಕ್ರವರ್ತಿ...ಶ್ರೀನಿವಾಸನ್

"ಎಡಾ ವಿಜಯ..." ಎಂಬ ಕರೆಗೆ ಧ್ವನಿಗೂಡಿಸುವ ನಾಡೋಡಿಕ್ಕಾಟ್ಟು ಎಂಬ ಸಿನಿಮಾದ ವಿಜಯನ ಪಾತ್ರ ನೋಡಿ ಆನಂದಿಸದ ಕೇರಳಿಗನಿರಲಾರನು. ಒಂದು ಅದ್ಭುತ ಸಿನಿಮಾದ ಮುಖ್ಯ ಜೀವಾಳ ಎಂದರೆ ಆ ಬುದ್ದಿವಂತ ವ್ಯಕ್ತಿ ನಟ , ನಿರ್ದೇಶಕ, ಚಿತ್ರಕಥೆಗಾರ ಶ್ರೀನಿವಾಸನ್. ನಾಡೋಕ್ಕಾಟ್ಟು ಎಂಬ ಸಿನಿಮಾ ಹಲವು ಭಾಷೆಗಳಿಗೆ ತರ್ಜುಮೆಯಾದ ಸಿನಿಮಾದ ಚಿತ್ರಕಥೆ ಅಂದರೆ ಸ್ಕ್ರಿಪ್ಟ್ ನ ಬರದ ಶ್ರೀನಿವಾಸ್ ಇನ್ನಿಲ್ಲ ಎಂಬ ವಾರ್ತೆ ಕೇಳುವಾಗ ಈತನ ಹಲವು ಸಿನಿಮಾಗಳು ಕಣ್ಣಮುಂದೆ ತೇಲಿಬಂತು. 

ನಾಡೋಡಿಕ್ಕಾಟು ಅದರ ದ್ವಿತೀಯ ಭಾಗ ಪಟ್ಟಣ ಪ್ರವೇಶಂ ನಂತರ ಅಕ್ಕರೆ ಅಕ್ಕರೆ...ಈ ಎಲ್ಲಾ ಸಿನಿಮಾ ನೋಡಿದವರು ಶ್ರೀನಿವಾಸನ್ ನಿರ್ವಹಿಸಿದ ವಿಜಯ ಪಾತ್ರವನ್ನುಮರೆಯುವುದಕ್ಕೆ ಸಾಧ್ಯವಿಲ್ಲ.  ನೋಡುವುದಕ್ಕೆ ಸಿನಿಮಾ ನಟನಿಗೆ ಇರಬೇಕಾದ ಸೌಂದರ್ಯವಾಗಲೀ ಗ್ಲಾಮರ್ ಆಗಲಿ ಇಲ್ಲದ ಸುಮ್ಮನೇ ಕಂಡರೆ ಪೆದ್ದು ಪೆದ್ದು ಎಂಬಂತೆ ಕಾಣುವ ಒಬ್ಬ ವ್ಯಕ್ತಿ ಮಲಯಾಳ ಚಿತ್ರರಂಗದ ಬುದ್ಧಿವಂತ ವ್ಯಕ್ತಿ ಎಂದು ಕರೆಸಿಕೊಳ್ಳುತ್ತನೆ ಎಂದರೆ ಈತನ ಅದ್ಭುತ ಪ್ರತಿಭೆಯ ಅರಿವಾಗಬಹುದು. ಮಲಯಾಳಂ ನ ಸಹಜವಾದ ನವಿರು ಹಾಸ್ಯಕ್ಕೆ ಹೊಸ ಆಯಾಮವನ್ನು ಒದಗಿಸಿದ ವ್ಯಕ್ತಿ ಶ್ರೀನಿವಾಸನ್. ಈತನ ಹಾಸ್ಯ ಸಂಭಾಷಣೆ ಎಂದರೆ ಅದು ವಿಡಂಬನಾತ್ಮಕವಾಗಿ, ಮನಸ್ಸನ್ನು ಹೊಕ್ಕು ಕರುಳನ್ನೇ ಇರಿದುಬಿಡುತ್ತದೆ. ಅಂತಹ ಹರಿತ ಮೊನಚು ಹಾಸ್ಯಕ್ಕೆ ಈತನ ಪಾತ್ರಗಳು ಪ್ರಸಿದ್ಧಿಯನ್ನು ಪಡೆದಿತ್ತು. ಸಹಜವಾಗಿ ಮಾತನಾಡುವಾಗಲೂ ಈತರ ವಿಡಂಬನೆಗಳಿಂದ  ವಿಶಿಷ್ಟ ಮಾತುಗಾರಿಕೆಗೆ ಶ್ರೀನಿವಾಸ್ ಹೆಸರುವಾಸಿ. ಎಂಭತ್ತರ ದಶಕಗಳಲ್ಲಿ  ಮಲಯಾಳಂ ಸಿನಿಮಾಕ್ಕೆ ಹೊಸ ಆಕರ್ಷಣೆಯನ್ನು ಈತನ ಸಿನಿಮಾಗಳು ಒದಗಿಸಿಕೊಟ್ಟಿತ್ತು. ಮಲಯಾಳಂ ಸಿನಿಮಾ ರಂಗದ ಒಬ್ಬ ಜೀನಿಯಸ್ ವ್ಯಕ್ತಿ ಎಂದರೆ ತಪ್ಪಾಗಲಾರದು. 

ಮಲಯಾಳಂ ಸಿನಿಮಾಗಳೆಂದರೆ ಅಲ್ಲಿ ಮೊದಲು ಪ್ರಾಮುಖ್ಯತೆ ಪಡೆಯುವುದು ಕಥೆ ಮತ್ತು ಚಿತ್ರಕಥೆ. ಅಲ್ಲಿನ ಸಿನಿಮಾಗಳ ನಿಜವಾದ ಕಥಾನಾಯಕ ಎಂದರೆ ಆ ಸಿನಿಮಾದ ಕಥಾವಸ್ತು. ಆನಂತರ ಯಾವುದೇ ಮುಲಾಜಿಲ್ಲದೆ ಆ ಕಥೆಯ ಪಾತ್ರಗಳಿಗೆ ಅತ್ಯಂತ ಸೂಕ್ತ ನಟನಟಿಯರ ಆಯ್ಕೆ. ಅದೇ ಮಲಯಾಳಂ ಸಿನಿಮಾದ ಯಶಸ್ಸಿನಗುಟ್ಟು. ಉಳಿದೆಲ್ಲ ಕಡೆ ನಟನ ದಿನ ಅವಕಾಶಗಳು ಮೊದಲು ನಿರ್ಣಯಿಸಲ್ಪಟ್ಟರೆ ಮತ್ತೆ ಅದಕ್ಕೆ ಹೊಂದಿಕೊಂಡು ಕಥೆ ರಚಿಸುವ ಮತ್ತು ಅದನ್ನು ಆಗಾಗ ಅವರ ಮರ್ಜಿಗೆ ಅನುಸರಿಸಿ ಬದಲಾಯಿಸುವ ವಾಡಿಕೆ ಇದ್ದರೆ ಮಲಯಾಳಂ ನಲ್ಲಿ ಅದರ ಕಥೆಯೇ ಮೊದಲು ಜೀವಾಳವಾಗುತ್ತದೆ. ಈ ಕಥೆ ಚಿತ್ರಕಥೆಗೆ ಹೆಸರಾದವರು ಎಂ ಟಿ ವಾಸುದೇವ ನಾಯರ್ ಅಂತೆ ಶ್ರೀನಿವಾಸನ್ ನಂತರ ಇವರಂತಹ ಹಲವು ಪ್ರತಿಭೆಗಳು ಮಲಯಾಳಂ ಸಿನಿಮಾರಂಗದ ಅದ್ಭುತ ಸೊತ್ತುಗಳು. 

ಶ್ರೀನಿವಾಸನ್ ಸಿನಿಮಾಗಳು ಮತ್ತು ಕಥಾ ಪಾತ್ರಗಳು ನಮ್ಮ ಜನಜೀವನಕ್ಕೆ ಹಿಡಿದ ಕನ್ನಡಿಯಂತೆ ಇರುತ್ತಿದ್ದವು. ಒಂದು ಸಿನಿಮಾ ನೋಡಿ ಹೊರಬಂದರೆ ಆ ಸಿನಿಮಾದ ಕಥಾ ಪಾತ್ರಗಳನ್ನು ನಮ್ಮ ಸುತ್ತ ಮುತ್ತಲು ಧಾರಾಳವಾಗಿ ಕಂಡು ಬಂದು ನೋಡಿದ ಸಿನಿಮಾ ಕೇವಲ ಸಿನಿಮಾವಾಗಿ ಭಾಸವಾಗದೇ ಅದು ನಿಮ್ಮ ಜೀವನದ ಅಂಗವಾಗಿ ಜೀವನವೇ ಎಂಬಂತೆ ಭಾಸವಾಗುತ್ತಿದ್ದವು. ಭ್ರಾಮಕ ಜಗತ್ತಿನ ನೈಜ ಕಥಾಪಾತ್ರಗಳು ನೈಜತೆಗೆ ಹತ್ತಿರವಾಗಿರುತ್ತಿದ್ದವು. 

ಶ್ರೀನಿವಾಸನ್ ಹಲವು ಸಿನಿಮಾಗಳು ನಮ್ಮ ನನಪಿನ ಪರದೆಯಲ್ಲಿ ಅಚ್ಚಳಿಯದ ಪ್ರಭಾವವನ್ನು  ಉಂಟು ಮಾಡಿ ಶಾಶ್ವತವಾಗಿ ನೆಲೆನಿಲ್ಲುತ್ತವೆ. ಅದರ ಛಾಯೆಯ ನೆರಳು ಎಂದಿಗೂ ಮಾಸುವುದಕ್ಕೆ ಸಾಧ್ಯವಿಲ್ಲ. ನಾಡೋಡಿಕ್ಕಾಟು, ಸಂದೇಶಂ, ಕಥ ಪರಯುಂಬೋಳ್, ಮಯಯತ್ತು ಮುಂಬೆ, ಅಯಾಳ್ ಕಥ ಎಳುದುಗೆಯಾಣ, ಪೊನ್ಮುಟ್ಟ ಯಿಡುನ್ನ ತಾರಾವು, ವಿದ್ಯಾರಂಭಂ, ತಳಯಾಣ ಮಂತ್ರಂ. ಚಿಂತಾವಿಷ್ಟಮಾಯ ಶ್ಯಾಮಲ, ವಡಕ್ಕು ನೋಕ್ಕು ಯಂತ್ರಂ, ಞಾನ್ ಪ್ರಕಾಶನ್, ಟಿ ಪಿ ಬಾಲಗೋಲನ್ ಎಂ ಎ, ಗಾಂಧಿನಗರ್ ಸೆಕೆಂಡ್ ಸ್ಟ್ರೀಟ್, ಸನ್ಮನಸ್ಸುಳ್ಳವರ್ಕ್ ಸಮಾಧಾನಂ, ಭಾಗ್ಯವಾನ್,  ಓಡರುದಮ್ಮಾವ,  ಅರಂ + ಅರಂ+ ಕಿನ್ನಾರಂ, ಮುಕುಂದೇಟ್ಟಾಅ ಸುಮಿತ್ರ ವಿಳಿಕ್ಕುನ್ನು, ತೇನ್ ಮಾವಿನ್ ಕೊಂಬತ್ತ್ , ಚಂದ್ರಲೇಖ, ಚಿಂತಾವಿಷ್ಟಮಾಯ ಶ್ಯಾಮಲ,  ಮುಂತಾದ ಸಿನಿಮಾಗಳನ್ನು ಇಂದಿಗೂ ಮಲಯಾಳಿ ಪ್ರೇಕ್ಷಕ ಮರೆಯುವುದಕ್ಕೆ ಸಾಧ್ಯವಿಲ್ಲ.  ಖ್ಯಾತ ನಟ ಮೋಹನ್ ಲಾಲ್ ಜತೆಗಾರಿಕೆಯಲ್ಲಿ ಹಲವು ಮರೆಯಲಾಗದ ಸಿನಿಮಾಗಳು ಬಂದಿವೆ. ಇವರಿಬ್ಬರ ಜತೆಗಾರಿಕೆ ಸಿನಿಮಾಗಳಿ ಹೊಸ ಮೆರುಗನ್ನು ತಂದುಕೊಡುತ್ತಿದ್ದವು. 

ವಿಡಂಬನಾತ್ಮಕ ನವಿರು ಹಾಸ್ಯಕ್ಕೆ ಶ್ರೀನಿವಾಸನ್ ಹೆಸರುವಾಸಿ. ಸಿನಿಮಾ ನೋಡಿದಾಗ ಪಕ್ಕನೆ ನಗು ಬರದೇ ಇದ್ದರೂ ಮತ್ತೆ ಮತ್ತೆ ಚಿಂತಿಸಿ ನಗುವ ಹಾಸ್ಯಗಳು. ಮಲಯಾಳಂ ಖ್ಯಾತ ನಿರ್ದೇಶಕ ಸತ್ಯನ್ ಅಂತಿಕಾಡ್ ಜತೆಗಾರಿಕೆಯಲ್ಲಿ ಹಲವು ಉತ್ತಮ ಸಿನಿಮಾಗಳು ಬಂದಿವೆ. ಅದರಂತೆ ಪ್ರಿಯದರ್ಶನ್ ಜತೆಯಲ್ಲಿ ಹಲವಾರು ಸಿನಿಮಾಗಳು ಜನಪ್ರಿಯವಾಗಿವೆ. 

ಒಂದು ರೀತಿಯಲ್ಲಿ ಮಲಯಾಳಂ ಮಾತ್ರವಲ್ಲ ಭಾರತೀಯ ಚಿತ್ರರಂಗದ ವಿಶಿಷ್ಟವ್ಯಕ್ತಿ ಶ್ರೀನಿವಾಸನ್ ಎಂದರೆ ತಪ್ಪಲ್ಲ. ಇನ್ನು ಬಿಟ್ಟು ಹೋದ ಸಿನಿಮಾಗಳಷ್ಟೇ ಸೀಮಿತವಾಗಿ ಶ್ರೀನಿವಾಸನ್ ನೆನಪುಗಳನ್ನು ಒದಗಿಸಿ ನಮ್ಮಿಂದ ಮರೆಯಾಗಿದ್ದಾರೆ. ಅಗಲಿದ ಆತ್ಮಕ್ಕೆ ಚಿರಶಾಂತಿಯನ್ನು ಭಗವಂತ ಕರುಣಿಸಲಿ.