Monday, December 19, 2016

ಆತ್ಮ ವಂಚನೆ..

            ಬಹಳ ಹಿಂದೆ ಊರಲ್ಲಿ ಅಂದರೆ ಪೈವಳಿಕೆಯಲ್ಲಿರುವಾಗ ಒಂದು ದಿನ ಮಧ್ಯಾಹ್ನ ನಾನು ಉಪ್ಪಳದಿಂದ ಮನೆ ಕಡೆಗೆ ಹೋಗುವುದಕ್ಕಾಗಿ ಉಪ್ಪಳದಿಂದ ಬಸ್ ಹತ್ತಿದೆ. ಉಪ್ಪಳವೆಂದರೆ ಮಂಗಳೂರಿನಿಂದ ಕಾಸರಗೋಡಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗುವ ಒಂದು ಪ್ರಾಮುಮುಖ್ಯ ನಗರ. ಬಸ್ಸು ಹೊರಡುವಾಗಲೇ ಕೆಲವು ನಿಮಿಷತಡವಾಯಿತು. ನಮ್ಮೂರಿನ ಖಾಸಗೀ ಬಸ್ಸಿನವರ ಲೆಕ್ಕದಲ್ಲಿ ನಿಮಿಷ ನಿಮಿಷವೂ ಅಮೂಲ್ಯ. ಸಮಯದ ಬೆಲೆ ತಿಳಿಯಬೇಕಾದರೆ ನಮ್ಮೂರಿನ ಖಾಸಗೀ ಬಸ್ಸುಗಳಲ್ಲಿ ಚಾಲಕ ಅಥವ ನಿರ್ವಾಹಕ ಇಲ್ಲವಾದರೆ ಕ್ಲೀನರ್ ನಾಗಿಯೋ ಇರಬೇಕು. ನಿಮಿಷಗಳಷ್ಟು ತಡವಾದ ಬಸ್ಸು ಅವಸರ ಅವಸರವಾಗಿ ಹೊರಡಲು ಸಿದ್ದತೆ ನಡೆಸಿತು. ಅದಾವಾಗಲೇ ಹಿಂದಿನ ಬಸ್ಸಿನ ಕಂಡಕ್ಟರ್ ಬಂದು ರಂಪಾಟ ನಡೇಸಿ ಬಸ್ಸು ದಬ ದಬ ಬಡಿದಾಗಿತ್ತು. ಊಹೂಂ ಅದಾರೋ ಕೆಲವು ಹತ್ತುವುದರಲ್ಲಿದ್ದರೂ ಬಸ್ಸು ಮತ್ತೂ ನಿಧಾನವಾಗಿ ಹೊರಟಿತು.
            ಬಸ್ಸು ನಿಧಾನವಾಗಿ ಹೊರಡುತ್ತಿದ್ದಂತೆ ಹಿಂದಿನ ಬಸ್ಸು ಇದರ ಹಿಂದೆಯೆ ಹೊರಟು ಬಂತು. ಉಪ್ಪಳದಂತೆ ಅದಕ್ಕೆ ಒತ್ತಿಕೊಂಡು ಕಿಲೊಮೀಟರ್ ದೂರದಲ್ಲಿ ಇರುವ ಇನ್ನೊಂದು ಊರು ಕೈಕಂಬ, ಇಲ್ಲಿಂದ ನಂತರ ಪೈವಳಿಕೆ ಬಾಯಾರು ಕಡೆಗೆ ರಸ್ತೆ ತಿರುಗುತ್ತದೆ. ಮಂಗಳೂರಿನಿಂದ ಬರುವಾಗ ಉಪ್ಪಳದಲ್ಲಿ ಬಸ್ಸು ತಪ್ಪಿ ಹೋದರೆ ನೇರ ಕೈಕಂಬದಲ್ಲಿ ಇಳಿದು ಅದೇ ಬಸ್ಸು ಹಿಡಿಯುವುದು ಸಾಮಾನ್ಯ ವಾಡಿಕೆ. ಹಾಗೆ ಕಾಸರಗೋಡಿನಿಂದ ಬರುವವರಿಗೂ ಇದು ಅನೂಕೂಲ ತಾಣ. ನಾನಿದ್ದ ಬಸ್ಸು ಕೈಕಂಬದಲ್ಲಿ ಬಂದು ನಿಂತಾಗ ಹಿಂದಿನ ಬಸ್ಸು ವೇಗವಾಗಿ ಬಂದು ಇದನ್ನು ಹಿಂದಿಕ್ಕಿ ಮುಂದಿನ ಇಕ್ಕಟ್ಟಾದ ಸಂದಿಯಲ್ಲಿ ಅಡ್ಡವಾಗಿ ನಿಂತು ಬಿಟ್ಟಿತು. ನಿಂತೊಡನೇ ಡ್ರೈವರ್ ಕಂಡಕ್ಟರ್ ಗಳ ಜಗಳ ಹತ್ತಿಕೊಂಡಿತು. ನಾವಿದ್ದ ಬಸ್ಸಿನ ಡ್ರೈವರ್ ಸೀಟಲ್ಲಿ ಕುಳಿತೇ ಏನೇನೋ ಸಮಜಾಯಿಷಿ ನೀಡಲಾರಾಂಭಿಸಿದ. ಊಹೂಂ, ಜಗಳ ಮತ್ತೂ ಜೋರಾಯಿತು. ಎರಡೂ ಬಸ್ಸು ನಿಂತಲ್ಲೆ. ಒಳಗೆ ಪ್ರಯಾಣಿಕರಲ್ಲಿ ಕೆಲವರು ಇಳಿದು ಜಗಳ ನೋಡತೊಡಗಿದರು. ಸುತ್ತ ಮುತ್ತಲಿನ ಜನಗಳೆಲ್ಲ ಇದೊಂದು ಸುಲಭದ ಮನರಂಜನೆ ಎಂಬೆಂತೆ, ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದಂತೆ ನಿಂತೇ ನೋಡುತ್ತಿದ್ದರು. ಬಹಳ ಹೊತ್ತು ಕಳೆಯಿತು. ನಮ್ಮ ಬಸ್ಸಿನಲ್ಲಿ ಹಿಂದೆ ಕುಳಿತ ಹಿಂದುಳಿದವನೊಬ್ಬ ಅಂಗಿಯ ತೋಳೆರಿಸಿ ಪಕ್ಕದಲ್ಲಿ ಇದ್ದವರೊಡನೆ ತಾನು ಅಡ್ಡ ಇರಿಸಿದ ಬಸ್ಸು ತೆಗೆಸಿಯೇ ತೀರುತ್ತೇನೆ ಎಂದು ಎದೆ ಮುಂದೆ ಮಾಡಿಕೊಂಡು ಪಂಚೆ ಮೇಲೆರಿಸಿ ಬಸ್ಸಿಳಿದು ಮುಂದೆ ಹೋದ. ಅಷ್ಟೆ ಅರ್ಧದಲ್ಲೇ ವಾಪಾಸು “ ಎಲ್ಲ ಞಮ್ಮಳ ಆಳ್.....” (ಎಲ್ಲಾ ನಮ್ಮದೇ ಜನ)  ಎನ್ನುತ್ತಾ ಸುಮ್ಮನೇ ತನ್ನ ಸೀಟಲ್ಲಿ ಕುಳಿತ.  ಅದುವರೆಗೂ ಎಲ್ಲರನ್ನು ತದುಕಿ ಬಸ್ಸು ಹೊರಡಿಸುತ್ತೇನೆ ಎಂದವನು ಸಮಾಧಾನದಿಂದ ಬಂದು ಕುಳಿತ.  ನಮ್ಮದೇ ಜನ ಅಲ್ಲದೇ ಇರುತ್ತಿದ್ದರೆ, ಈತ ಏನು ಮಾಡಬಹುದಿತ್ತು? ನ್ಯಾಯ ವೆಂಬುದು ನಮ್ಮದೇ ಜನಗಳನ್ನು ಹೊಂದಿಕೊಂಡು ಬದಾಲಾಗಿ ಬಿಡುತ್ತದೆ. ಇದನ್ನೇ ಹೇಳುವುದು ಆತ್ಮವಂಚನೆ ಎಂದು.
            ಪ್ರವಚನ ಒಂದರಲ್ಲಿ ಗುರುಗಳು ಸುಂದರವಾಗಿ ಪ್ರವಚಿಸುತ್ತಿದ್ದರು. ಕೈಯಲ್ಲಿ ಅದಾವುದೋ ಒಂದು ವಸ್ತುವನ್ನು ಹಿಡಿದು ಹೇಳುತ್ತಿದ್ದರು. ಈ ವಸ್ತು ಇದು ತಾತ್ಕಾಲಿಕವಾಗಿ ಬೇರೊಬ್ಬರಿಂದ ಈಗ ಹಿಂದಿರಿಗಿಸುತ್ತೇನೆ ಎಂದು ಎರವಲು ಪಡೆದುಕೊಂಡುದಾಗಿತ್ತು. ಈ ವಸ್ತುವನ್ನು ಒಂದು ಕ್ಷಣವಾದರೂ ಇದು ನನ್ನದಾಗಿದ್ದರೇ ಎಂದು ಮನಸ್ಸಿನ ಗ್ರಹಿಸಿದರೆ. ಈ ವಸ್ತು ನನ್ನದಾದರೆ  ಎಂದು ಆಶಿಸಿದರೆ ಅದು ಮಾನಸಿಕ ವ್ಯಭಿಚಾರವಾಗುತ್ತದೆ. ಬಹಳ ಸುಂದರವಾದ ಕಲ್ಪನೆ. ಕೇವಲ ಯೋಚಿಸುವುದೇ ಮಾನಸಿಕ ವ್ಯಭಿಚಾರ. ವ್ಯಭಿಚಾರ ಅಥವಾ ವೆತ್ಯಸ್ತವಾದ ಅಪಚಾರ ಅದು ಅಪರಾಧವವೇ. ಅದು ಮಾನಸಿಕವಾಗಿ ಅಥವಾ ದೈಹಿಕವಾಗಿ ಹೇಗೆ ಮಾಡಿದರೂ ಅದು ವ್ಯಭಿಚಾರ. ಅಪರಾಧ. ಇದರ ಅರಿವು ಮೂಡಬೇಕಾದರೆ ವಂಚನೆ ಇಲ್ಲದ ಮನಸ್ಸು ನಮ್ಮದಾಗಬೇಕು.

            ಹೌದು , ವ್ಯಭಿಚಾರ ಈಗ ಇದು ಮಾಡುವನಿಂದಲೂ ಅದನ್ನು ನೋಡಿ ತೋರಿಸಿಕೊಡುವವನೇ ಹೆಚ್ಚು ಅಪರಾಧಿಯಾಗುತ್ತಾನೆ. ಕೇವಲ ಮನಸ್ಸಿನಿಂದ ಗ್ರಹಿಸುವುದೇ ವ್ಯಭಿಚಾರ ಎಂದು ಪರಿಗಣಿಸುವ ಭಾರತೀ ಸಂಸ್ಕೃತಿಯಲ್ಲಿ ಹೀಗೂ ಕಂಡವರೂ ತೋರಿಸಿದವರೂ ಅಪರಾಧಿಗಳಾಗುವಾಗ ಆತ್ಮ ವಂಚನೆ ಎಂಬುದು ಅರ್ಥವನ್ನು ಕಳೆದುಕೊಳ್ಳುತ್ತದೆ. ಹೆತ್ತ ತಂದೆ ತನ್ನ ಮಗನ ಅಪರಾಧವನ್ನು ಮುಚ್ಚುವಲ್ಲಿ ಆತನ ವ್ಯಭಿಚರಿಕೆಯನ್ನು ಹಲವು ಕಾರಣ ನೀಡಿ ಸಮರ್ಥಿಸಬಹುದು. ಆದರೆ ವ್ಯಭಿಚಾರ ಅದಕ್ಕಿರುವ ಮಾನದಂಡ ಒಂದೇ  ಅದು ಅಪರಾಧ.  ಇಲ್ಲಿ ಆತ್ಮ ಎನ್ನುವುದರ ಅರಿವಿರಬೇಕು. ಆತ್ಮ ಮನಸ್ಸು ಇವುಗಳ ಕಲ್ಪನೆ ಇರಬೇಕು. ಯಾವಾತ ತನ್ನ ಮನಸ್ಸಿಗೆ ವಂಚನೆ ಮಾಡುತ್ತಾನೋ ಅತನೆಂದಿಗೂ ಪ್ರಾಮಾಣಿಕನಾಗಿ ಇರುವುದಕ್ಕೆ ಸಾಧ್ಯವಿಲ್ಲ. ಒಂದಿಲ್ಲೊಂದು ಬಗೆಯಲ್ಲಿ ಅದು ಸ್ವತಃ ತನಗೇ ಆದರೂ ಅತ ಅಪ್ರಾಮಾಣಿಕ ವ್ಯಕ್ತಿಯಾಗುತ್ತಾನೆ.  ತನಗೆ ತಾನು ವಂಚಿಸುವವನಲ್ಲಿ ಪ್ರಾಮಾಣಿಕತೆ ಇರುವುದಿಲ್ಲ. ಅಲ್ಲಿ ಪ್ರಾಮಾಣಿಕತೆ ಇದ್ದರೆ ಅದಕ್ಕೂ ಒಂದು ಬಣ್ಣವಿರುತ್ತದೆ. ಪ್ರಾಣಿ ಪಕ್ಷಿಗಳು ಆತ್ಮವಂಚನೆ ಎಸಗುವುದಿಲ್ಲ. ಮನುಷ್ಯನ ಅರ್ಹತೆಗಳಲ್ಲಿ ಒಂದು ಅರ್ಹತೆ ಅತ್ಮವಂಚನೆ ಇಲ್ಲದೇ ಬದುಕುವುದು. ಹಾಗಿದ್ದರೆ ಜಗತ್ತಿನಲ್ಲಿ ಪ್ರಾಣಿಗಳ ಸಂಖ್ಯೆಯೇ ಹೆಚ್ಚಾಯಿತು ಎಂದು ತಿಳಿಯಬೇಕು. 

Monday, June 20, 2016

ಸಜ್ಜಿಗೆ ರೊಟ್ಟಿ...ರವಾ ರೋಟಿ ಅಹಾ ಹಾ..!!!




ಇಂದಿನ ವೇಗದ ಆಹಾರ ಪದ್ದತಿಯಲ್ಲಿ ಪರಂಪರೆಯ ಆಹಾರ ಪದ್ದತಿಯೇ ಬದಲಾಗಿ ಹೋಗಿದೆ. ಇಡ್ಲಿ ದೋಸೆ ಕಡುಬು ಶಾವಿಗೆ ಪತ್ರೋಡೆ ಎಂಬುದು ನಮ್ಮ ಬಾಲ್ಯದ ಮುಂಜಾನೆ ಉಪಾಹಾರದ ಸಾಮಾನ್ಯ ತಿಂಡಿಗಳಾಗಿತ್ತು. ಆದರೆ ಅದನ್ನೆಲ್ಲ ತಯಾರಿಸಬೇಕೆಂದರೆ ಮೊದಲ ದಿನ ಬೆಳಗ್ಗೆಯೇ ಯೋಜನೆಯನ್ನು ಸಿದ್ದಪಡಿಸಬೇಕು.
 ಈಗಿನ ವೇಗದ ಯುಗದಲ್ಲಿ ಅದಕ್ಕೆಲ್ಲ ಸಹನೆ ವ್ಯವಧಾನ ಇದ್ದರೂ ಸಮಯ ವೆಲ್ಲಿದೆ ಹೇಳಿ?  ರುಚಿಯಾಗುತ್ತದೆ ಎಂದು ತಿಳೀದರೂ ಮಾಡಲಾಗದ ಅಸಹಾಯಕತೆ ಒಂದೆಡೆಯಾದರೆ ಅದರ ಬಗ್ಗೆ ಸಂಪೂರ್ಣ ತಿಳುವಳಿಕೆಯೂ ಬೇಕಲ್ಲವೇ?  ಹಾಗಾಗಿ ಇಂದು ಏನಿದ್ದರೂ ಕ್ಷಿಪ್ರ ತಿಂಡಿ ತಿನಿಸುಗಳು ಜನಪ್ರಿಯವಾಗುವುದು ಮಾತ್ರವಲ್ಲ ಅನಿವಾರ್ಯವಾಗುತ್ತದೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಯೋಚನೆ ಇಲ್ಲದೆ ಆಭ್ಯಾಸ ಇಲ್ಲದೆ ಎಲ್ಲರು ಮಾಡಬಹುದಾದ ತಿಂಡಿ ಎಂದರೆ ಉಪ್ಪಿಟ್ಟು. ಅಡಿಗೆ ಕಲಿಕೆ ಆರಂಭವಾಗುವುದೇ ಈ ಉಪ್ಪಿಟ್ಟು ತಯಾರಿಕೆಯಿಂದ. ಮಾತ್ರವಲ್ಲ  ಪ್ರಪ್ರಥಮ ಮಾಡಿದ ಉಪ್ಪಿಟ್ಟಿಗೆ ಉಪ್ಪು ಹಾಕುವುದಕ್ಕೆ ಮರೆಯುವುದೂ ಅಷ್ಟೇ ಸಾಮಾನ್ಯ.  ಹಾಗಾಗಿ ಇಂದಿನ ಕಾಲಮಾನಕ್ಕೆ ಹೊಂದಿಕೊಳ್ಳುವ ಒಂದು ರುಚಿಕರ ತಿಂಡಿಯನ್ನು ಇಲ್ಲಿ ತೋರಿಸುವ ಪ್ರಯತ್ನವಿದು.


ಸಜ್ಜಿಗೆ ರೊಟ್ಟಿ, ಇದು ಹಲವರ ಮನೆಯಲ್ಲಿ ರುಚಿಕರವಾಗಿ ತಯಾರಿಸುತ್ತಿರಬಹುದು. ಆದರೂ ನಾನು ತಿಳಿದ ಮಟ್ಟಿಗೆ ಇನ್ನೂ ಬಹಳಷ್ಟು ಪ್ರದೇಶದಲ್ಲಿ ಇದರ ಪರಿಚಯವೇ ಇಲ್ಲ. ಇದು ನೌಕರಿಗೆ ಹೋಗುವ  ಯುವಕ ಯುವತಿಯರು ಮಾತ್ರವೇ ವಾಸಿಸುವ ಮನೆಗಗಳಲ್ಲಿ ಸಿದ್ದಪಡಿಸುವುದಕ್ಕೆ ಅತ್ಯಂತ ಸೂಕ್ತ. ಇದಕ್ಕೆ ಮಿಕ್ಸಿಯ ಅವಶ್ಯಕಗೆ ಇರುವುದಿಲ್ಲ. ಮಾಡಬೇಕಿದ್ದರೂ ಅಷ್ಟೆ ಕೇವಲ ಕೆಲವು ನಿಮಿಷಗಳು ಸಾಕು. ರುಚಿಕರ ರೊಟ್ಟಿಯ ತುಂಡು ನಮ್ಮ ಬಾಯಿಯಲ್ಲಿರುತ್ತದೆ.  ರವೆರೊಟ್ಟಿಗೆ ಬೇಕಾಗುವ ಸಾಮಾಗ್ರಿಗಳು. ರವೆ, ಬನ್ಸಿ ರವೆ ಯಾ ಖಂಡ್ವ ಸಜ್ಜಿಗೆ ಇದಕ್ಕೆ ಅತ್ಯುತ್ತಮ ಮತ್ತು ಗರಿ ಗರಿಯಾಗಿ ರುಚಿಯಾಗಿರುತ್ತದೆ. ಇದು ಇಲ್ಲವಾದರೆ ಚಿರೋಟಿ ಅಥವಾ ಇನ್ನಿತರ ರವೆಯಾದರೂ ಆಗಬಹುದು. ಇದು ಉಪ್ಪಿಟ್ಟಿನಂತೆ. ಉಪ್ಪಿಟ್ಟಿಗೆ ನಾವು ಏನೆಲ್ಲ ಹಾಕುತ್ತೇವೆಯೋ  ಒಗ್ಗರಣೆ ಹೊರತಾಗಿ ಅದನ್ನು ಇಲ್ಲಿ ಹಿಟ್ಟಾಗಿ ಉಪಯೋಗಿಸುವುದು. ಹಾಗಾಗಿ ....ಒಂದಷ್ಟು ರವೆ, ಅದಕ್ಕೆ ಸ್ವಲ್ಪ ಈರುಳ್ಳಿ,  ಹಸಿ ಮೆಣಸು,  ಶುಂಠಿ ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು  ಇದಿಷ್ಟು ಪ್ರಧಾನ ಮತ್ತು ತೀರ ಅಗತ್ಯ. ಮತ್ತೆ ಜತೆಯಲ್ಲಿ ತುರಿದ ಕ್ಯಾರೆಟ್, ಚಿಕ್ಕದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು, ಮತ್ತು ಟೊಮೆಟೊ ಸ್ವಲ್ಪ ಅರಶಿನ ಪುಡಿ ಎಲ್ಲವನ್ನು ಹಾಕಿ ತಣ್ಣಗಿನ ನೀರು ಹಾಕಿ ಕಲಸಿ ಇಟ್ಟುಕೊಳ್ಳಿ. ಸ್ವಲ್ಪ ಹೊತ್ತಿನಲ್ಲೇ ರವೆ ನೀರಿನೊಂದಿಗೆ ಹಿಗ್ಗಿಕೊಂಡು ಮಿಶ್ರವಾಗುತ್ತದೆ. ಇದನ್ನು ದೋಸೆ ಕಾವಲಿ ಬಿಸಿ ಮಾಡಿ ಬರಿ ಕೈಯಿಂದ ಕಾವಲಿ ಮೇಲೆ ಸಾರಿಸಬಹುದು. ಹೀಗೆ ಮಾಡುವುದಕ್ಕೆ ಸ್ವಲ್ಪ ಅಭ್ಯಾಸ ಬೇಕು.
ಅದಿಲ್ಲವಾದರೆ ಸೌಟಿನಿಂದ ದಪ್ಪ ದೋಸೆ ಎರೆದಂತೆ ಕಾವಲಿಯಲ್ಲಿ ಎರೆಯಬಹುದು.  ಸಣ್ಣ ಉರಿಯಲ್ಲಿ ಸ್ವಲ್ಪ ನಿಧಾನವಾಗಿ ಕಾಯಿಸಿ ತಟ್ಟೆಗೆ ಹಾಕಿದರೆ ಅತ್ಯಂತ ರುಚಿಕರವಾದ ಸಜ್ಜಿಗೆ ರೊಟ್ಟಿ ಎಂಬ ನಮ್ಮೂರಿನ ಜನಪ್ರಿಯ ಖಾದ್ಯ ನಿಮ್ಮ ತಟ್ಟೆಯಲ್ಲಿರುತ್ತದೆ.  ತಿಂದು ನೋಡಿ. 


Saturday, June 11, 2016

ಹಾಗಲ ಸೊಪ್ಪಿನ ಸೊಲಮೀರಿಯಾ ಬೆಂದಿ


            “ಕಂಚಲ ಇತ್ತಿಂಡ ಎಂಚಲ ಉಣೊಲಿ”   ಕಂಚಲ ಎಂದರೆ ಹಾಗಲ ಅದು ಇದ್ದರೆ ಹೇಗೂ ಊಟಮಾಡಬಹುದು್. ಇದು ತುಳು ಗಾದೆ ಮಾತು. ಅದರ ಒಂದು ರೂಪವೇ ಈ ಲೇಖನ.
ಮನೆಯ ಮೆಟ್ಟೆಲ ತನಕವೂ ರಸ್ತೆ ಹಾಸಿ ಮಲಗಿಕೊಂಡರೆ  ಮತ್ತೆ ಅಂಗಳಕ್ಕೆಲ್ಲಿದೆ ಜಾಗ? ಅಂಗಳ ವಿಲ್ಲದಾಗ ನಗರದಲ್ಲಿ ಮನೆಯ ತಾರಸಿಯೇ ಅಂಗಳವಾಗಿ ಬದಲಾಗಿಬಿಡುತ್ತದೆ. ಕಾಲ ಬುಡದಲ್ಲಿರಬೇಕಾದದ್ದು ತಲೆಯ ಮೇಲೆ. ಆದರೂ ನಗರವಲ್ಲವೇ? ಬದುಕು ಅನಿವಾರ್ಯವಾದಾಗ ಮತ್ತೆಕೆಲವು ಅನಿವಾರ್ಯವಾಗಿ ಪರಿಣಮಿಸುತ್ತದೆ.  ಹಾಗಾಗಿ ನಮ್ಮ ಮನೆಯ ತಾರಸಿ ಮೆಲೆ ಒಂದು ಪುಟ್ಟ ಕೈತೋಟವಿದೆ. ಅಲ್ಲಿ ಒಂದಿಷ್ಟು ಹಸಿರು ಕಂಗೊಳಿಸುವಾಗ ಮನಸ್ಸಿಗೆ ಒಂದಷ್ಟು ಆನಂದ. ಕೆಲವು ಹೂವಿನ ಗಿಡ ಬಳ್ಳಿಗಳಾದರೆ ಇನ್ನು ಕೆಲವು ತರಕಾರಿ ಗಿಡಬಳ್ಳಿಗಳು. ಹೂವಿನ ಬಳ್ಳಿ ಹೂ ಬಿಟ್ಟಾಗ ಮನೆಯ ತಲೆಯ ಮೇಲೆ ಹೂ ಅಲಂಖಾರ ಮಾಡಿದರೆ ಈ ಹಸಿರಬಳ್ಳಿಗಳು ತೋರಣವಾಗಿಬಿಡುತ್ತವೆ.
ಹೀಗೆ ಬೆಳೆದ ಸಸ್ಯಗಳ ನಡುವೆ ಒಂದು ಬಳ್ಳಿಯಿದೆ ಹಾಗಲಕಾಯಿ ಬಳ್ಳಿ. ಆಗಲೋ ಈಗಲೋ ಆಗುವ ಒಂದು ಮಿಡಿ ಹಾಗಲದ ಆಶೆಗಾಗಿ ಅಲ್ಲವಾದರೂ ಬಳ್ಳಿ ಬೆಳೆದು ನಿಂತಿದೆ. ಪ್ರತಿಯೋಬ್ಬನೂ ಒಂದಷ್ಟು ಹಸಿರನ್ನು ಬೆಳೆಸಬೇಕು. ಆ ಮೂಲಕ ತಾನು ಸೇವಿಸುವ ಆಮ್ಲಜನಕದ ಋಣವನ್ನು ಪ್ರಕೃತಿಗೆ ಸಲ್ಲಿಸಿದ ಹಾಗಾಗುತ್ತದೆ.  ಹಾಗೆ ಒಂದಷ್ಟು ಹಸಿರ ಕಾಣುವ ಆಶೆಯಾದರೆ ಹಾಗಲದ ಬಳ್ಳಿ ಬೆಳೆಯುವುದಕ್ಕೆ ಮತ್ತೊಂದು ಮುಖ್ಯ ಕಾರಣವಿದೆ.  ಅದುವೇ ಇಲ್ಲಿನ ವಿಶೇಷ.
ಸಾಮಾನ್ಯವಾಗಿ ಹಾಗಲಕಾಯಿಯನ್ನು ಅರೋಗ್ಯದ ದೃಷ್ಟಿಯಿಂದ ಬಹಳ ಜನ ಉಪಯೋಗಿಸುತ್ತಾರೆ. ಮಾತ್ರವಲ್ಲ ಇದರ ರುಚಿ ಸ್ವಾದಕ್ಕೊಸ್ಕರವೂ ಇದನ್ನು ಇಷ್ಟ ಪಡುವವರು ಬಹಳಷ್ಟು ಮಂದಿ. ಇದರ ಕಹಿಯಿಂದ ಬಹಳಷ್ಟು ಜನ ಇದನ್ನು ಇಷ್ಟ ಪಡದವರೂ ಇದ್ದಾರೆ. ಆದರೆ ಸೋಜಿಗವೆಂದರೆ ತರಕಾರಿಗಳಲ್ಲಿ ಅತ್ಯಂತ ಪೌಷ್ಟಿಕ ಮತ್ತು ಆರೋಗ್ಯದಾಯಕ ತರಕಾರಿ ಎಂದರೆ ಅದು ಹಾಗಲಕಾಯಿ.  ಪ್ರಕೃತಿಯೇ ಹಾಗೆ ತೀರ ಬೇಕಾದದ್ದನ್ನು ಬಹಳ ತ್ರಾಸದಾಯಕವಾಗಿ ಮಾಡಿ ಅದರ ಮಹತ್ವವನ್ನು ಹೆಚ್ಚಿಸುತ್ತದೆ. ಅದಕ್ಕೆ ಉದಾಹರಣೆ ಹಾಗಲಕಾಯಿ.  ಇಲ್ಲಿ ಈಗ ನಾನು ಹೇಳುವುದು ಹಾಗಲ ಕಾಯಿ ಉಪಯೋಗವಲ್ಲ. ಬದಲಾಗಿ ಹಾಗಲದ ಸೊಪ್ಪಿನ ಉಂದು ಸ್ವಾದಿಷ್ಟ ಅಡುಗೆಯನ್ನು.
ಹಾಗಲ ಕಾಯಿ ಸೊಪ್ಪಿನ ಬೆಂದಿ ಅಂದರೆ ಸಾಂಬಾರ್, ಅಥವಾ ಹುಳಿ ಹೀಗೆ ಏನಾದರೂ ಕರೆಯಿರಿ. ಆದರೆ ವಾಡಿಕೆಯಂತೆ ನಮ್ಮಲ್ಲಿ ಇದನ್ನು ಕರೆಯುವುದು ಸೋಲ ಮೀರಿ ಬೆಂದಿ.  ಸೋಲ ಅಂದರೆ ಕೆತ್ತೆ ಹುಳಿ, ಮೀರಿ ಎಂದರೆ ಮೆಣಸು. ಹುಳಿ ಮೆಣಸು ಏಕಪ್ರಕಾರವಾಗಿ ಉಪಯೋಗಿಸಿ ಮಾಡುವಂತಹ ಒಂದು ವಿಭವವಿದು. ಮಳೆಗಾಲ ಇದಕ್ಕೆ ಅತ್ಯಂತ ಸೂಕ್ತ.

ಇದಕ್ಕೆ ಬೇಕಾಗುವ ಸಾಮಾಗ್ರಿಗಳು, ಒಂದು ಬೊಗಸೆ ತುಂಬ ಹಾಗಲಕಾಯಿ ಸೊಪ್ಪುಇದು ಹೆಚ್ಚಾದರೂ ಪರವಾಗಿಲ್ಲ. ಒಂದು ವರೆ ಹಿಡಿಯಷ್ಟು ಮೆಣಸು, ಸ್ವಲ್ಪ ಕರಿಮೆಣಸು ಒಂದು ಮುಷ್ಠಿ ಕೆತ್ತೆ ಹುಳಿ, ಬೆಲ್ಲ , ಸ್ವಲ್ಪ ಬೆಲ್ಲ, ಅರಶಿನ ಎರಡು ಮುಷ್ಠಿ ತುರಿದ ತೆಂಗಿನಕಾಯಿ, ಬೆಳ್ಳುಳ್ಳಿ ಒಗ್ಗರಣೆಗೆ ಎಣ್ಣೆ ಸಾಸಿವೆ ಮತ್ತು ರುಚಿಗೆ ಒಂದಷ್ಟು ಉಪ್ಪು.
ಮೊದಲು ಹಾಗಲ ಕಾಯಿ ಸೊಪ್ಪುನ್ನು ಹೆಚ್ಚಿ ಒಂದು ಪಾತ್ರೆಗೆ ಹಾಕಿ ಅದಕ್ಕೆ ಮೇಲೆ ಹೇಳಿದ ಮೆಣಸು ಸ್ವಲ್ಪ ಕರಿಮೆಣಸು ಹುಳಿ ಅರಶಿನ ನುಣ್ಣಗೆ ಅರೆದು ಸೇರಿಸಿ ಬಿಸಿ ಮಾಡಬೇಕು. ಅದಕ್ಕೆ ಬೆಲ್ಲ ಉಪ್ಪು ಹಾಕಿ ಹದಿನೈದು ನಿಮಿಷ ಬೇಯಿಸಬೇಕು. ಸೊಪ್ಪು ಚೆನ್ನಾಗಿ ಉಪ್ಪು ಹುಳಿ ಖಾರವನ್ನು ಹೀರಿಕೊಳ್ಳುತ್ತದೆ. ಆನಂತರ ಅದಕ್ಕೆ ತೆಂಗಿನಕಾಯಿಯನ್ನು ನುಣ್ಣಗೆ ಅರೆದು ಸೇರಿಸಿ ಮತ್ತಷ್ಟು ಹೊತ್ತು ಚೆನ್ನಾಗಿ ಕುದಿಸಬೇಕು. ಆನಂತರ ಸಾಸಿವೆ ಒಗ್ಗರಣೆ ಹಾಕಿ ಅದಕ್ಕೆ ಬೆಳ್ಳುಳ್ಳಿಯನ್ನು( ಬೇಕಾದರೆ)  ಹಾಕಿ ಕರಿದು ಇಲ್ಲಿ ಸೇರಿಸಿದರೆ ರುಚಿಯಾದ ಸೋಲ ಮೀರಿ ಬೆಂದಿ ಸಿದ್ದ.



ಇದನ್ನು ಒಂದು ಸಲ ಮಾಡಿದರೆ ತಿಂಗಳುಗಳಷ್ಟು ಕಾಲ ಉಪಯೋಗಿಸಬಹುದು. ಪ್ರತೀ ದಿನವೂ ಇದನ್ನು ಬಿಸಿ ಮಾಡಿದಂತೆ ಇದರ ರುಚಿ ವೃದ್ದಿಸುತ್ತಾ ಹೋಗುವುದು. ಒಂದು ವಾರ ಕಳೆದ ನಂತರ ಇದು ಪದೇ ಪದೇ ಬಿಸಿಯಾಗುತ್ತಾ ಹಾಗಲ ಕಾಯಿ ಕಹಿ ಹೋಗಿರುತ್ತದೆ. ತಟ್ಟೆಯ ಬದಿಯಲ್ಲಿ ಒಂದಷ್ಟು  ಬಡಿಸಿಕೊಂಡು ಕೊಬ್ಬರಿ ಎಣ್ಣೆಯೊಂದಿಗೆ ನಂಜಿಕೊಳ್ಳುತ್ತಾ ಬಿಸಿ ಬಸಿ ಅನ್ನವನ್ನು ಊಟ ಮಾಡುತ್ತಿದ್ದರೆ ಸ್ವರ್ಗಕ್ಕೆ ಮೂರು ಗೇಣು ಸ್ವಾಮಿ.  ಕರಾಡ ಬ್ರಾಹ್ಮಣರ ವಿಶಿಷ್ಟ ಆಹಾರಗಳಲ್ಲಿ ಇದೂ ಒಂದು. ಬೆಳ್ಳುಳ್ಳಿ ಇಲ್ಲದೆಯೂ ಇದನ್ನು ಬಳಸಬಹುದು.

ನಮ್ಮ ಬಾಲ್ಯದಲ್ಲಿ ನಮ್ಮ ದೊಡ್ಡಮ್ಮ (ತಾಯಿಯ ಅಮ್ಮ) ಇದನ್ನು ಬಹಳ ರುಚಿಯಾಗಿ ಮಾಡಿ ಇಡುತ್ತಿದ್ದರು.  ಮನೆಯಲ್ಲಿ ಯಾವುದಾದರು ಬಾಣಂತನವಿದ್ದರೆ ಅದರ ಆರೈಕೆಯಲ್ಲಿ ಈ ಸೋಲ ಮೀರಿ ಬೆಂದಿ ಕೂಡ ಒಂದು ಪ್ರಧಾನ ಅಂಗ. ಬಾಣಂತಿಯರಿಗೆ ಇದನ್ನು ಆಹಾರದ ಜತೆ ತಪ್ಪದೆ ಕೊಡುತ್ತಿದ್ದರು. ಬಹಳ ಉಷ್ಣ ಆಹಾರವಾದುದರಿಂದ ಎಷ್ಟು ರುಚಿಯಾದರೂ ದಿನದಲ್ಲಿ ಸ್ವಲ್ಪವೇ ನಂಜಿಕೊಂಡು ಸೇವಿಸುವುದು ಹೆಚ್ಚು ಸೂಕ್ತ. ಈಗ ಮಳೆಗಾಲ ಆರಂಭವಾಗಿದೆ,  ನಿಮ್ಮ ಮನೆಯಲ್ಲಿ ಹಾಗಲ ಬಳ್ಳಿ ಇದ್ದರೆ ಒಂದು ಸಲ ಪ್ರಯೋಗ ಮಾಡಿ,  

Monday, May 30, 2016

ಉಷ್ಟಾಸನ...ಒಂಟೆ ಭಂಗಿ


            ನಾನು ಯೋಗಾಭ್ಯಾಸಕ್ಕೆ ತೊಡಗುವಾಗ ಕೆಲವು ಆಸನಗಳು ನನ್ನಿಂದ ಸಾಧ್ಯವೇ ಇಲ್ಲವೇನೋ ಅಂತನ್ನಿಸುತ್ತಿತ್ತು. ನನ್ನ ಹಿಡಿತದಲ್ಲಿ ಇಲ್ಲದ ದೇಹದ ಬಗ್ಗೆ ಹಲವಾರು ಸಲ ವೈರಾಗ್ಯ ಮೂಡಿದ್ದಿದೆ. ರುಚಿ ಅನ್ನಿಸಿದ್ದೆಲ್ಲ ತಿನ್ನುತ್ತಾ ಒಂದು ರೀತಿಯ ಶ್ವಾನ ರೂಪದ  ಭಕ್ಷಣೆಯ  ಜೀವನ ಶೈಲಿಯಿಂದ ದೇಹವೆಂದರೆ ಮನಸ್ಸಿನ ಸಂಬಂಧವನ್ನೂ ನಿಯಂತ್ರಣವನ್ನು ಮೀರಿ ಬೆಳೆದಿದೆ ಎಂದನ್ನಿಸುತ್ತಿತ್ತು. ನನ್ನಿಂದ ಸಾಧ್ಯವೇ ಇಲ್ಲ ಎಂದು ಭಾವಿಸಿದ ಆಸನಗಳು ಯೋಗಾಭ್ಯಾಸ ಮಾಡುತ್ತಾ ಮಾಡುತ್ತ ನನ್ನಿಂದ ಆಗದೇ ಇರುವಂತಹುದು ಯಾವುದು ? ಅದರ ಅನ್ವೇಷಣೆಗೆ ಪ್ರೇರೆಪಣೆ ನೀಡಿದ್ದು ಸುಳ್ಳಲ್ಲ. ಅಂತಹ ಆತ್ಮ ಸ್ಥೈರ್ಯವನ್ನು ಕೊಟ್ಟಂತಹ ಆಸನಗಳಲ್ಲಿ ಒಂದು ’ಉಷ್ಟ್ರಾಸನ” .

ಇದು ಒಂಟೆ ಭಂಗಿ. ಉಷ್ಟ್ರ ಅಂದರೆ ಒಂಟೆ.  ಈ ಆಸನ ಧನುರಾಸನದ ವಿರುದ್ಧ ದಿಕ್ಕಿನಲ್ಲಿರುತ್ತದೆ. ಎರಡು ಮೊಣಕಾಲುಗಳ ಮೇಲೆ ನೀಂತುಕೊಂಡು ಪಾದಗಳು ನಿಂತಂಬಂದ ಕೆಳಗಿರಬೇಕು. ಹಿಂದಕ್ಕೆ ಬಾಗುತ್ತ ಎಡಕೈಯಿಂದ ಎಡಪಾದದ ಹಿಮ್ಮಡಿಯನ್ನೂ ಬಲಕೈಯಿಂದ ಬಲಪಾದದ ಹಿಮ್ಮಡಿಯನ್ನು ಹಿಡಿದು ತಲೆಯನ್ನು ಹಿಂದಕ್ಕೆ ಬಾಗಿ ಎದೆಯ ಭಾಗವನ್ನು ಅಗಲಿಸಬೇಕು. ಇದೆ ಭಂಗಿಯಲ್ಲಿ ಕೆಲವಾರು ಉಸಿರಾಟವನ್ನು ನಡೆಸಿದ ಮೇಲೆ ಮತ್ತೆ ನಿಧಾನವಾಗಿ ಮೊದಲಿನ ಸ್ಥಿತಿಗೆ ಬರಬೇಕು. ಕಡಿಮೆ ಸಮಯದಲ್ಲಿ ಮಾಡುವ ಅತ್ಯಂತ ಸರಳವಾದ ಆಸನವಿದು.
ಸಾಮಾನ್ಯವಾಗಿ ಸ್ತ್ರೀ ಸಂಬಂಧೀ ಸಮಸ್ಯೆಗಳಿಗೆ ಈ ಆಸನ ಅತ್ಯಂತ ಉಪಯುಕ್ತವಾಗಿದೆ. ಅಸ್ತಮ ಉಬ್ಬಸದಂತಹ ಕಾಯಿಲೆ ನಿವಾರಣಗೆ ಇದು ಸಹಕಾರಿ. ಮಾತ್ರವಲ್ಲ ಸೊಂಟದ ಭಾಗದಲ್ಲಿ ಸ್ಥಿರತೆಯನ್ನೂ ಒದಗಿಸುವುದರಿಂದ ಹೊಟ್ಟೆ ಸಂಬಂಧೀ ಕ್ರಿಯೆಗಳಾದ ಜೀರ್ಣ ಆಹಾರ ಸೇವನೆ ಇವುಗಳನ್ನು ಸಂತುಲಿತವಾಗಿರಿಸುವುದಕ್ಕೆ ಸಹಕಾರಿಯಾಗುತ್ತದೆ. ಮಾನಸಿಕವಾಗಿ ನಮ್ಮಲ್ಲಿ ಆತ್ಮ ಶಕ್ತಿಯನ್ನು ವೃದ್ದಿಸುವ ಒಂದು ಉಪಯುಕ್ತ ಆಸನ. ಮತ್ತು ದೇಹದ ಚಲನೆಗಳನ್ನು ನಿಯಂತ್ರಿಸು ಭಾಗುವಿಕೆ ಬಹಳ ಸುಲಭವಾಗುತ್ತದೆ. ಉಸಿರಾಟದ ಸಮಸ್ಯೆಗಳು, ಅಲರ್ಜಿ ಮುಂತಾದ ಸಮಸ್ಯೆ ನಿವಾರಣೆಗೆ ನಿಯಮಿತವಾಗಿ ಈ ಆಸನವನ್ನು ಮಾಡಿದಲ್ಲಿ ಬಹಳ ಉಪಯುಕ್ತವಾಗಿರುತ್ತದೆ. ಪ್ರತಿಯೋಬ್ಬ ಸ್ತ್ರೀ ಯು ಮಾಡಲೇ ಬೇಕಾದ ಉತ್ತಮ ಆಸನ. 

Sunday, May 29, 2016

ಬುದ್ದಿವಂತರು ಆದರೆ.....???


ಪ್ರತಿಯೊಬ್ಬರು ಅವರವರ ಪರಿಧಿಯಲ್ಲಿ ಬುದ್ಧಿವಂತರೇ ಆಗಿರುತ್ತೇವೆ. ಹಾಗಿದ್ದರೂ ನಾವು ಹಲವು ಸಲ ತಿಳಿದೂ ಮಂದಮತಿಗಳಾಗಿ ದ್ವಂದ್ವಗಳಲ್ಲಿ ಸಿಕ್ಕಿಬಿಡುತ್ತೇವೆ. ನಮ್ಮ ಬುದ್ದಿಗೆ ಅರ್ಥವನ್ನು ಕಂಡುಕೊಳ್ಳುವಲ್ಲಿ ವಿಫಲರಾಗಿ ನಾವೇ ಮೂರ್ಖರೇನೋ ಎಂದು ಅನ್ನಿಸಿಬಿಡುತ್ತದೆ.
ಸಾಮಾನ್ಯವಾಗಿ ನಾನು ದಿನ ಪತ್ರಿಕೆಯನ್ನು ಅದರ ತಲೆಬರಹಕ್ಕಷ್ಟೇ ಸೀಮಿತಗೊಳಿಸುತ್ತೇನೆ. ಮುಂಜಾನೆಯ ಗಡಿಬಿಡಿಗೆ ಅದಕ್ಕೆ ಸಮಯವೂ ಇರುವುದಿಲ್ಲ ಒಂದಾದರೆ,  ನನ್ನ ಮನೋಭಾವಕ್ಕೆ ಒಪ್ಪುವ ವಿಚಾರಗಳ ಕೊರತೆ ಇನ್ನೊಂದು ಮುಖ್ಯ ಕಾರಣ.  ಆದರೂ ಕೆಲವೊಂದು ಬರಹಗಳು ನನ್ನನ್ನು ಗಾಢವಾಗಿಸುತ್ತವೆ. ಅವುಗಳಲ್ಲಿ ಒಂದು ಉದಯವಾಣಿಯ ಭಾನುವಾರದ “ಜೋಗಿ ಕಾಲಂ”. ಈ ಕಾಲಂನ ಒಳಗೆ ಒಂದಷ್ಟು ಹೊತ್ತು ಸುತ್ತಾಟ ಆದಿನದ ದಿನಚರಿ. ಕೆಲವೊಮ್ಮೆ ಈ ಸುತ್ತಾಟವೂ ಕಳೆದುಕೊಳ್ಳುವುದುಂಟು.  ಹೀಗೆ ಸುತ್ತಾಡುವಾಗ ಇಂದಿನ ಕಾಲಂ ನ ಬಗ್ಗೆ ಬರೆಯೋಣ ಅನ್ನಿಸಿತು. 
ಕಾಲಂನ ಆರಂಭವೇ ಹಾಗೆ, ಬದಲಾದ ಕಾಲದ ಕಾಲದ ನೆನಪು ಈ ಕಾಲಂ.  ನಮ್ಮ ಪರಿಸರ ನಾವುಗಳು ಸಾಕ್ಷಿಯಾಗಿದ್ದುಕೊಂಡೇ ಬದಲಾಗುತ್ತದೆ. ಅಥವಾ ಬದಲಾವಣೆಗೆ ನಾವು ಸಾಕ್ಷಿಯಾಗುತ್ತೇವೆ. ಈ ನಡುವೆ ನಾವು ಬುದ್ಧಿವಂತರೆಂಬ ಭಾವ ನಮ್ಮಲ್ಲಿರುತ್ತದೆ. ಆದರೆ ನಮ್ಮ ಬುದ್ದಿಯೂ ಒಂದು ಪ್ರಶ್ನಾರ್ಹವಾಗಿ ಭಾಸವಾಗುವುದು ಈ ಕಾಲಂ ಸುತ್ತಾಡಿದಾಗ. ನಮ್ಮೂರಿನ ತೀರ್ಥಕ್ಷೇತ್ರದ ದರ್ಶನದಿಂದ ತೊಡಗುತ್ತದೆ. ಬದಲಾದ ಈ ಪರಿಸರದಲ್ಲಿ ನಮ್ಮ ನಿಲುವನ್ನು ನಾವೇ ಮುಟ್ಟಿಯೋ ತಟ್ಟಿಯೋ ನೋಡುವಂತಾಗುತ್ತದೆ.  ನಾವು ಎಲ್ಲೆಂದರಲ್ಲಿ ಸುತ್ತಾಡಿ ಓಡಾಡಿ ಸುಸ್ತಾದಗ ವಿರಮಿಸಿ ಹೊರಳಾಡಿದ ದೇವಸ್ಥಾನದ ಪರಿಸರ ಬದಲಾಗಿಬಿಟ್ಟಿರುತ್ತದೆ. ಇಲ್ಲಿ ನಾವೇ ಪರಕೀಯರಂತೆ ನಿಂತಿರುತ್ತೇವೆ.  ನಮ್ಮ ಹರಕೆ ನಮಸ್ಕಾರಕ್ಕೂ ಲೆಕ್ಕವಿಟ್ಟು ನಮ್ಮ ಭಕ್ತಿಗೊಂದು ಮಿತಿಯನ್ನು ಎಳೆದುಬಿಡುತ್ತಾರೆ. ಕಾಲದ ಪರಿಮಿತಿಯಲ್ಲೇ ಮುಗಿಸಬೇಕಾದ ನಮ್ಮ ದೇವತಾರ್ಚನೆಯಲ್ಲಿ ನಮ್ಮ ಬುದ್ದಿಮತ್ತೆಯನ್ನು ನಾವೇ ಹುಡುಕಬೇಕಾದ ಅನಿವಾರ್ಯತೆ ಇರುತ್ತದೆ.
ಇಲ್ಲಿ ಬರುವ ಒಂದು ಮಾತು ಬಹಳ ಅಪ್ಯಾಯಮಾನವಾಗುತ್ತದೆ.  ’ದೈವ ಭಕ್ತಿ   ಎಂಬುದು ಆತ್ಮವಿಶ್ವಾಸವಾಗಬೇಕೇ ಹೊರತು, ಅದು ಮೂಢನಂಬಿಕೆಯಾಗಬಾರದು.”  ಹೌದು ದೇವರಲ್ಲಿ ಭಕ್ತಿ ಗೌರವ ಇರಬೇಕು ಆದರೆ ಭಯವನ್ನು ಹುಟ್ಟಿಸುವ ಮೂಢನಂಬಿಕೆ ಇರಬಾರದು.   ಯೋಚಿಸುವ ನಮ್ಮ ಅಪ್ಪ ಅಮ್ಮನಲ್ಲಿ ನಮಗೆ ಭಕ್ತಿ ಗೌರವ ಪ್ರೀತಿ ಇರಬೇಕು  ಅಲ್ಲಿ ಭಯವಿದ್ದರೆ ?  ಇವುಗಳೆಲ್ಲ ಬಲವಂತದ ಭಾವನೆಗಳಾಗಿಬಿಡುತ್ತದೆ. ಅಲ್ಲಿ ಪ್ರಾಮಾಣಿಕತೆ ಇರುವುದಿಲ್ಲ. ಅನಿವಾರ್ಯತೆ ಇರುತ್ತದೆ.
ಮತ್ತೊಂದು ಮಾತು ಗಮನೀಯವಾಗುತ್ತದೆ. ’ ಭಕ್ತರ ಸಂಖ್ಯೆ ಹೆಚ್ಚಾಗಿದೆ ಆದರೆ ದೇವರ ಸಂಖ್ಯೆ ಹೆಚಾಗಿಲ್ಲ. ಅದಕ್ಕೆ ಈ ಪರಿಯ ಒದ್ದಾಟ. ’ ಭಕ್ತರು ಜಾತಿ ಪಂಗಡ ಹೀಗೆ ಸಂಖ್ಯೆಯಲ್ಲಿ ಎಷ್ಟಿದ್ದರೂ ದೇವರೊಬ್ಬನೇ ಎಂದು ಸರಳವಾಗಿ ಸೂಚಿಸುವ ವಾಕ್ಯವಿದು. ಮಾತ್ರವಲ್ಲ  ಇಂದು ಎಲ್ಲ ದೇವಾಲಯ ಕ್ಷೇತ್ರಗಳಲ್ಲೂ ಭಕ್ತರ  ಸಂಖ್ಯೆಯಲ್ಲಿ ವೃದ್ಧಿಯಾಗಿದೆ. ಹಾಗಾಗಿ ಮೊದಲು ಆಗುತ್ತಿದ್ದ ಖಾಸಗೀತನದ ಅನುಭವ ಊರಿನ ಸಣ್ಣ ಪುಟ್ಟ ಗುಡಿಗಳಲ್ಲೂ ಆಗುವುದಿಲ್ಲ.  ಯೋಚಿಸಿದರೆ ನಾವೇ ಪರಕೀಯರೇನೋ ಎಂಬ ಅನುಭವ.  ನಾವು ಊರು ಬಿಟ್ಟು ಹೋಗಿ ಒಂದಷ್ಟು ವರ್ಷ ಕಳೆದು ಬಂದರೆ  ಮನೆಯ ಕೆಲಸದಾಳು ಮನೆಯ ಮೂಲೆ ಮೂಲೆಯನ್ನೂ ಪರಿಚಯಿಸುತ್ತಾನೆ.  ಅದೂ ನಾವು ಬೆಳೆದ ಮನೆಯಬಗ್ಗೆ?!!!
ಊರು ಹಾಳು ಮಾಡಲು ಒಬ್ಬ ದೇವರು ಸಾಕು ಮಾರಾಯ..... ಇದನ್ನು ಕೇಳಿದರೆ ದೇವರು ನಗಬಹುದು. ಇಂದು ಹಾಳಾಗುತ್ತಿರುವುದು ದೇವರಿಂದ ಅಲ್ಲ. ನಮ್ಮ ನಮ್ಮ ಭಾವನೆಗಳಿಂದ. ಮನುಷ್ಯನ ಭಾವನೆ ಕಾಲ ಕಳೆದಂತೆ ಬದಲಾಗುತ್ತದೆ. ಆದರೆ ನೋಡಿ...ಸ್ವತಂತ್ರವಾಗಿ ಬದುಕುವ ಪ್ರಾಣಿಗಳು ಅಂದು ಹೇಗೆ ಬದುಕುತ್ತಿತ್ತೋ ಇಂದು ಹಾಗೇ ಬದುಕುತ್ತವೆ. ಶೈಲಿ ಬದಲಾಗಿರಬಹುದು. ಆದರೆ ಅವುಗಳ ಸ್ವಭಾವ ಬದಲಾಗಿಲ್ಲ. ಯಾಕೆಂದರೆ ಅವುಗಳ ಭಾವನೆ ಮನುಷ್ಯನಂತೆ ಬದಲಾಗುವುದಿಲ್ಲ.
ಯಾವುದೋ ಪಾಪ ಭಯದಿಂದ ದೇವಸ್ಥಾನಕ್ಕೆ ಹೋಗುತ್ತೇವೆ. ಸರ್ಪವನ್ನು ನೋಡದೇ ಇದ್ದವರೂ ನಾಗದೋಷದ ಭಯದಿಂದ ಪರಿತಪಿಸುತ್ತಾರೆ. ಆದರೆ ಕ್ಷೇತ್ರಕ್ಕೆ ಬಂದನಂತರವೇ ನಾವು ಪಾಪಗಳನ್ನು ಮಾಡುತ್ತೇವೆ. ಬಹಳ ಸತ್ಯವಾದ ಮಾತು. ದೇವಸ್ಥಾನಕ್ಕೆ ಹೋದಕೂಡಲೆ ನಮ್ಮ ಸಹನೆ ಹರಿದುಬಿಡುತ್ತದೆ. ದರ್ಶನದ  ಸರದಿ ಸಾಲಲ್ಲಿ ನಿಂತ ಒಡನೆ ಊಟದ ಸರದಿ ಸಾಲು ಕಾಣಿಸುತ್ತದೆ. ಸರದಿ ಸಾಲು ಮುಂದೆ ಹೋಗದಾಗ ಅಸಹನೆಯಿಂದ ಮುಂದಿನವರನ್ನು ಇಲ್ಲಾ ವ್ಯವಸ್ಥೆಯನ್ನು ಶಪಿಸುತ್ತೇವೆ. ನಮ್ಮ ಉದ್ವೇಗ ಉದ್ರೇಕ ಶಮನಕ್ಕಾಗಿ ದೇವಾಲಯಕ್ಕೆ ಬಂದರೆ ಇವೆರಡೂ ಅಧಿಕವಾಗಿಬಿಡುತ್ತದೆ.!!!
ನಾವು ಹೊರಟ ತಾಣಕ್ಕಿಂತ ದೇವಾಲಯ ಹೆಚ್ಚು ನೆಮ್ಮದಿ ಶಾಂತಿ ಸಮಾಧಾನ ಕೊಡುತ್ತದೆ ಎಂದು ಭಾವಿಸುತ್ತೇವೆ.  ಇದು ನಮ್ಮ ಭಾವನೆಯಷ್ಟೆ. ಆಧ್ಯಾತ್ಮದ ತತ್ವದಲ್ಲಿ ಅತರಂಗದ ಚೇತನವನ್ನು ಜಗತ್ತಿಗೇ ಸಾರಿದ ಬುದ್ದಿವಂತರು ನಾವು.  ಶಾಂತಿ ಎಲ್ಲಿಯೂ ಇಲ್ಲ ಅದು ನಮ್ಮ ಮನದಲ್ಲೆ ಇರುತ್ತದೆ. ಇದನ್ನು ಸಾರಿದವರು ನಾವು.
ಇಂದು ಊರಿನ ಹಲವು ದೇವಾಲಯದ ಉತ್ಸವಾದಿಗಳ ಕಾರ್ಯಕ್ರಮ ಪಟ್ಟಿ ನೋಡುವಾಗ ನಗು ಬರುತ್ತದೆ.  ಇಂದು ಕ್ಷೇತ್ರ ಮಹಿಮೆ ಅಥವ ಕಾರ್ಣಿಕ ಉಳ್ಳದ್ದು ಎನಿಸಿಕೊಳ್ಳಬೇಕಾದರೆ ಅಲ್ಲಿಗೆ ಆಗಮಿಸುವ ಭಕ್ತರ ಸಂಖ್ಯೆ ವೃದ್ಧಿಯಾಗಬೇಕು. ಅದು ವೃದ್ಧಿಯಾದಷ್ಟು ಕ್ಷೇತ್ರ ಪ್ರಸಿದ್ಧವಾಗುತ್ತದೆ. ಕ್ಷೇತ್ರದ ಆದಾಯ ಹೆಚ್ಚುತ್ತದೆ. ಮಜರಾಯಿ ಇಲಾಖೆಗೂ ಆದಾಯ ವೃದ್ಧಿಯಾಗುತ್ತದೆ. ಅದೂ ಬಯಸುವುದು ಈ ಮಾರ್ಕೆಟಿಂಗ್ ತಂತ್ರವನ್ನೆ. ಆಗ ಹೋದ ನಾವುಗಳು ವ್ಯವಸ್ಥೆಯ ಕುಂದು ಕೊರತೆಯ ಬಗ್ಗೆ ದೂರಿಕೊಳ್ಳುತ್ತೇವೆ.   ಜನ ಸೇರಿಸುವ ತಂತ್ರವೆಂದರೆ ಜನಪ್ರಿಯ ವ್ಯಕ್ತಿಗಳನ್ನು (ಸೆಲೆಬ್ರಿಟಿ) ಕರೆಸುವುದು. ಹೊಸ ಹೊಸ ಕಾರ್ಯಕ್ರಮ ಸಂಗೀತ ರಸಮಂಜರಿ ನಾಟಕ ಹೀಗೆ ಕಾರ್ಯಕ್ರಮಗಳನ್ನು ಮಾಡುವುದು. ಬಂದ ಸೆಲೆಬ್ರಿಟಿಗಳು ದೇವಸ್ಥಾನದ ಮಹಿಮೆ ನೋಡಿ ಭಕ್ತಿಯಿಂದ ಬರುವುದಲ್ಲ. ಬಂದ ಮೇಲೆ ಭಕ್ತಿ ಪ್ರಕಟಿಸುತ್ತಾರೆ. ಅದೂ ಪ್ರದರ್ಶನಕ್ಕೆ.  ಹೀಗೆ ಮಾಡುವ ಕಾರ್ಯಕ್ರಮದ ಸಂಘಟಕರಲ್ಲೇ ಒಂದು ಸಲ ಕೇಳಿದೆ ....ಉತ್ತರ  ಜನ ಸೇರಬೇಕಲ್ವ.. ಹೌದು ಜನ ಸೇರಿದರೆ ಅವರ ಜೀವನ ಸಾಗುತ್ತದೆ.  ಇದೆಲ್ಲ ಬೇಡ ನಮ್ಮ ಮನೆಯಲ್ಲೇ ಕುಳಿತು ನಾವು ನಾವಾಗಿ ದೇವರ ಧ್ಯಾನವೋ ಪೂಜೆಯೋ ಮಾಡಿದರೆ.....ಎಲ್ಲೂ ಸಿಗದ ಶಾಂತಿ ಆ ಎಕಾಂತದಲ್ಲಿ ಸಿಗುತ್ತದೆ. ಇಲ್ಲಿ ಮಾರ್ಕಟಿಂಗ್ ಆಗುತ್ತಿರುವುದು ನಮ್ಮ ಭಾವನೆಗಳ ಬಲದಲ್ಲಿ.  ಅದನ್ನು ತಿಳಿಯದ ನಮ್ಮ ಬುದ್ಧಿವಂತಿಗೆ ಎಂತಹುದು?

ಸಾಧ್ಯವಾದರೆ ಈ ಕಾಲಂ ನ ಒಳಗೆ ಒಂದೆರಡು ಸುತ್ತು ಹೊಡೆಯಿರಿ. ವಿವೇಚನೆಗೆ ಹಚ್ಚುವ ಒಂದಷ್ಟು ವಿಚಾರಗಳು ಸಿಗುತ್ತವೆ. 

Wednesday, May 25, 2016

ಭದ್ರವಾಗಿಸುವ ವೀರಭದ್ರಾಸನ


ಯೋಗಾಸನಗಳು  ಕಾಣುವಾಗ ಬಹಳ ಸರಳವಾಗಿ ಕಾಣುತ್ತದೆ. ಆದರೆ ಅದನ್ನು ಅನುಷ್ಠಾನಕ್ಕೆ ತಂದು ಮಾಡುವಾಗ ಕಠಿಣತೆಯ ಅರಿವಾಗುತ್ತದೆ. ಕಠಿಣವಾಗಿ ಕಂಡರು ನಂತರ ಅದನ್ನು ದೇಹ ರೂಢಿಸಿಕೊಂಡಾಗ ಅದು ಸರಳವಾಗಿ ಕಂಡು ದೇಹ ಮತ್ತು ಮನಸ್ಸಿಗೆ ಸುಸ್ಥಿತಿಯನ್ನು ಒದಗಿಸುತ್ತದೆ.  ಹೀಗೆ ಸರಳವಾಗಿ ಆಚರಿಸುವ ಒಂದು ಕಠಿಣ ಆಸನ ವೀರಭದ್ರಾಸನ. ದೇಹ ಮನಸ್ಸಿಗೆ ತಾದಾತ್ಮ್ಯವನ್ನು ಸ್ಥಿರತೆಯನ್ನೂ ಒದಗಿಸುವ ಆಸನವಿದು.
ಆರಂಭದಲ್ಲಿ ಸಮಸ್ಥಿತಿಯಲ್ಲಿ  ತಾಡಸನಲ್ಲಿ ನಿಂತುಕೊಳ್ಳಬೇಕು. ನಂತರ ಉಸಿರನ್ನು ಒಳಕ್ಕೆ ಎಳೆದುಕೊಳ್ಳುತ್ತಾ ಎರಡು ಪಾದಗಳನ್ನು  ಅಗಲಿಸಿ ನಿಲ್ಲಬೇಕು, ಕೈಗಳೆರಡನ್ನು ನೆಲಕ್ಕೆ ಸಮಾನಾಂತರವಾಗಿ ಚಾಚಬೇಕು. ಅಂಗೈ ನೆಲಕ್ಕೆ ಮುಖಮಾಡಿರಬೇಕು. ಆನಂತರ ಬಲಗಾಲಿನ ಪಾದವನ್ನು ಲಂಬವಾಗಿ ತಿರುಗಿಸಬೇಕು. ಬಲಪಾದ ಎಡಪಾದಕ್ಕೆ ಲಂಬವಾಗಿರಬೇಕು. ನಂತರ ಚಾಚಿರುವ ಕೈಯನ್ನು ತಲೆಯಮೇಲಕ್ಕೆ ತಂದು ದೇಹವನ್ನು ಸೊಂಟದಿಂದ ಮೇಲಕ್ಕೆ ಲಂಬವಾಗಿ ತಿರುಗಿಸಿದ ಎಡೆಗೆ ಅಂದರೆ ಬಲಗಡೆಗೆ ತಿರುಗಿಸಿ ಬಲಗಾಲಿನ ಮೇಲೆ ಭಾರವನ್ನು ಹಾಕಿ ಹಿಂದಕ್ಕೆ ಬಾಗಬೇಕು. ಹದೈನೈದರಿಂದ ಮೂವತ್ತು ಸೆಕೆಂಡ್ ಗಲ ಕಾಲ., ಹತ್ತರೀದ ಹದಿನೈದು ಎಣಿಕೆ ಎಣಿಸುವಷ್ಟು ಅವಧಿ ಅದೇಸ್ಥಿತಿಯಲ್ಲಿ ನಿಲ್ಲಬೇಕು. ತಲೆಯನ್ನು ದೇಹವನ್ನು ಎಷ್ಟು ಸಾಧ್ಯವೋ ಅಷ್ಟು ಹಿಂದಕ್ಕೆ ಬಾಗಿಸಿರಬೇಕು.  ಆನಂತರ ಪೂರ್ವ ಸ್ಥಿತಿಗೆ ಬರಬೇಕು. ಇದು ವೀರಭದ್ರಾಸನ.  ಎಡಭಾಗಕ್ಕೂ ಇದೇರೀತಿ ಪುನರಾವರ್ತಿಸಬೇಕು.   ಸಮಸ್ಥಿತಿಗೆ ಬಂದು ವಿರಾಮವನ್ನು ಒಂದೆರಡು ನಿಮಿಷಗಳ ಕಾಲ ಅನುಸರಿಸಬೇಕು.  ಹೀಗೆ ನಿಯಮಿತವಾಗಿ ಈ ಆಸನವನ್ನು ಮಾಡಿದಲ್ಲಿ ಹಲವಾರು ಉಪಯೋಗಗಳು ಸಾಧ್ಯವಾಗುತ್ತದೆ.

ಉಪಯೊಗಗಳು.

ತೋಳುಗಳು ಕಾಲುಗಳಲ್ಲಿ ಬಲವನ್ನು ತುಂಬುತ್ತದೆ. ಸೊಂಟದ ಚಲಿಸುವುಕೆಯನ್ನು ಸುಲಭಗೊಳಿಸುತ್ತದೆ. ದೇಹದ ತುಕವನ್ನು ಸಮಗೊಳಿಸಿ ಬೊಜ್ಜನ್ನು ಕರಗಿಸುವಲ್ಲಿ ಸಹಾಯಕವಾಗುತ್ತದೆ.  ಏಕಾಗ್ರತೆಯನ್ನು ವೃದ್ಧಿಸುತ್ತದೆ. ದೈವಭಕ್ತಿಯಲ್ಲಿ ಏಕಾಗ್ರತೆಯನ್ನು ಮೂಡಿಸುತ್ತದೆ. ದೇಹದ ಅಂಗಾಗಳನ್ನು ಗಟ್ಟಿಗೊಳಿಸುತ್ತದೆ. ಮಂಡಿನೋವು ಕೀಲು ನೋವು ಮುಂತಾದ ಸಮಸ್ಯೆಗಳನ್ನು ನಿವಾರಿಸುತ್ತದೆ. ವೀರಭದ್ರಾಸನವನ್ನು ರಕ್ತದ ಒತ್ತಡ ಅಧಿಕವಿರುವರು ಆಚರಿಸಬಾರದು. ವೈದ್ಯರ ಸಲಹೆಯಂತೆ ಈ ಆಸನವನ್ನು ಆಚರಿಸುವುದು ಸೂಕ್ತ. 

Thursday, May 19, 2016

ಹಲಸಿನ ಬೇಳೆ ರೊಟ್ಟಿ.


ಸೊಳೆ ಉಪ್ಪಿನಲ್ಲಿ ಹಾಕುವುದಕ್ಕಾಗಿ ಮೊನ್ನೆ ಹಲಸಿನಕಾಯಿ ಬಂದಿತ್ತು. ಅದರಲ್ಲಿ ಒಂದಷ್ಟು ಹಲಸಿನ ಬೀಜ ಸಿಕ್ಕಿದವು. ಬಾಲ್ಯದಲ್ಲಿ ಅದರ ಸಾಂತಾಣಿ ಪಲ್ಯ ಮುಂತಾದ ವಿಭವಗಳನ್ನು ತಿಂದ ನೆನಪು. ಆವಾಗಿನ ಬಡತನವೇ ಅಂತಹುದು. ದಿನದ ಎರಡು ಹೊತ್ತು ಅದರ ಪಲ್ಯ ತಿಂದು ಮಲಗಿದ ದಿನಗಳೆಷ್ಟೊ.  ಅಂದು ಅದನ್ನು ತರಬೇಕಾದರೆ ಯಾರದೋ ಮನೆ ತೋಟಕ್ಕೆ ಹೋಗುತ್ತಿದ್ದದ್ದು ಅನಿವಾರ್ಯ. ಆ ನೆನಪುಗಳಿಂದಾಗಿ ಈ ಹಲಸಿನ ಬೇಳೆಗಳನ್ನು ಕಸದ ಬುಟ್ಟಿಗೆ ಎಸೆಯುವುದಕ್ಕೆ ಅಮ್ಮನಿಗೆ ಮನಸ್ಸಾಗಲಿಲ್ಲ. ಪಲ್ಯ ಸಾಂಬಾರು ಎಂದು ಮಾಡಿದರೂ ಅದನ್ನು ನಮ್ಮ ಮನೆಯಲ್ಲಿ ಈಗ ತಿನ್ನುವ ಮಂದಿ ಬಹಳ ಕಡಿಮೆ. ಮತ್ತೇನು ಮಾಡುವುದು. ಆಗ ಅಮ್ಮ ಮಾಡಿದ ಒಂದು ಅದ್ಭುತ ರುಚಿಯನ್ನು  ಇಲ್ಲೀಗ ಪ್ರಸ್ತುತ ಪಡಿಸುತ್ತಿದ್ದೆನೆ.  ಸಾಧ್ಯವಾದರೆ ಮಾಡಿ ನೋಡಿ.  ಅಥವಾ ನಿಮಗೆ ಇದರ ಪರಿಚಯ ಮೊದಲೆ ಇದ್ದರೆ  ಒಂದು ಸಲ ನಕ್ಕು ಬಿಡಿ.
ಇದಕ್ಕೆ ಬೇಕಾಗುವ ಸಾಮಾನು...ಹಲಸಿನ ಬೇಳೆ..(ನಿಮಗೆ ಬೇಕಾದಷ್ಟು....!!!)  ಅಕ್ಕಿ ಹಿಟ್ಟು ಅಥವಾ ಚಿರೋಟಿ ರವೆ.  ಈರುಳ್ಳಿ, ಕರಿಬೇವು , ಮೆಣಸಿನ ಹುಡಿ,  ಹಸಿ ಮೆಣಸು ಬೇಕಾದರೆ ಶುಂಠಿ.




ಹಲಸಿನ ಬೇಳೆ ಸಿಮ್ಮೆ ತೆಗೆದು ಬೇಯಿಸಬೇಕು. ಅದರ ಕಂದು ಬಣ್ಣದ  ಸಿಪ್ಪೆಯನ್ನೂ  ತೆಗೆದರೆ ಅನುಕೂಲ.   ಆನಂತ್ರ ತುಸು ಅಕ್ಕಿ ಹಿಟ್ಟು ಸೇರಿಸಿ ಮಿಕ್ಸಿಗೆ ಹಾಕಿ  ಗಟ್ಟಿ ಹಿಟ್ಟಿನ ಹಾಗೆ ತಯಾರಿಸಿ. ಆ ಪೇಸ್ಟ ಸಣ್ಣದಾಗಿ ಹೆಚ್ಚಿದ ಈರುಳ್ಳಿ ಹಸಿಮೆಣಸು ಕರಿಬೇವು ಮೆಣಸಿನ ಪುಡಿ ಹಾಕಿ ಕಲಸಿ ಬಾಳೆ ಎಲೆಯಲ್ಲಿ ರೊಟ್ಟಿಯನ್ನು ತಟ್ಟಿ ಕಾಯಿಸಿ.  ತಟ್ಟೆಗೆ ಹಾಕಿ  ಇದ್ದರೆ ಚಟ್ನಿ ಅಥವಾ ಚಟ್ನಿ ಪುಡಿ ಬೆರಸಿ ಬಿಸಿ ಬಿಸಿ ತಿನ್ನಿ....ಎಂತಹ ಮಧುರವಾದ ರೊಟ್ಟಿ. ಸುಮ್ಮನೇ ಎಸೆಯುವ ಹಲಸಿನ ಬೀಜ ಬೆಳಗ್ಗಿನ ಒಂದು ಸೇರು ಅಕ್ಕಿಯನ್ನು ಉಳಿಸಿದ್ದಂತು ಬಹಳ ಸತ್ಯ.  ಬೆಂಗಳೂರಿಗರು ಇದನ್ನು ಕನಸಿನಲ್ಲಿ ಊಹಿಸುವುದಕ್ಕೂ ಸಾಧ್ಯವಿಲ್ಲದ ವಿಭವ. .

Saturday, May 14, 2016

ವಜ್ರಾಸನ ಒಂದು ಅನುಭವ

ನಿತ್ಯದಂತೆ   ಸ್ನಾನಾದಿಗಳನ್ನು ಪೂರೈಸಿ ಮನೆಯ ತಾರಸಿ ಮೇಲೆ ಬಂದೆ.  ಬೆಳಗ್ಗಿನ ನೀರವ ತಣ್ಣಗಿನ ವಾತಾವರಣ.  ಅಹ್ಲಾದಮಯ ಗಾಳಿ ಬೀಸುತ್ತಿದ್ದರೆ ಹಿಂದಿನ ಇರುಳ ಬೇಸಿಗೆಯ ಧಗೆಯಿಂದ ಮುಕ್ತವಾದ ಅನುಭವ. ಪೂರ್ವದ ತುದಿಯ ಮಹಡಿಯ ಕಟ್ಟಡವೊಂದರ ಮೇಲಿದ್ದ ಮೊಬೈಲ್ ಟವರ್ ಒಂದರಲ್ಲಿ ಅದೀಗ ಸೂರ್ಯ ನೇತಾಡುತ್ತಿದ್ದಂತೆ ಕಂಡಿತು.  ಕಂಕುಳಲ್ಲಿದ್ದ ಯೋಗ ಹಾಸನ್ನು ನೆಲದಲ್ಲಿ ಹರಡಿ ಸುತ್ತಲೂ ವಿಹಂಗಮ ನೋಟ ಬೀರಿದಾಗ ಈ ಘಳಿಗೆ ಸ್ಥಾಯಿಯಾಗಿ ಉಳಿಯಬಾರದೇ ಎಂದನಿಸಿತು.  ಪ್ರಕೃತಿ ಹಳ್ಳಿಯಾದರೂ ನಗರವಾದರೂ ಸುಂದರವಾಗಿಯೇ ಇರುತ್ತದೆ. ಹಳ್ಳಿಯ  ಸುಂದರಿಯಲ್ಲೂ ಪೇಟೆ ಹುಡುಗಿಯ ಬೆಡಗಿನಲ್ಲೂ ಸ್ನಿಗ್ಧ ಸೌಂದರ್ಯ ಇಲ್ಲದಿರುತ್ತದೆಯೇ? ಅದನ್ನು ಕಾಣುವ ಕಣ್ಣಿರಬೇಕು.   

ಅತ್ತಿತ್ತ ಕೈ ಬೀಸಿ ಮೈಬಾಗಿಸಿ ಒಂದಷ್ಟು ಶರೀರವನ್ನು ಬೆಚ್ಚಗಾಗಿಸಿದೆ. ಹಾಗೇ ವಜ್ರಾಸನ ಬಲಿದು ದೂರದಲ್ಲಿನ ಕಟ್ಟಡದ ತುದಿಯ ಸೂರ್ಯನನ್ನು ಕಣ್ಣಲ್ಲಿ ತುಂಬಿಕೊಂಡೆ. ಕಣ್ಣಲ್ಲಿ ತುಂಬಿದ ಸೂರ್ಯನ ಕೆಂಬಣ್ಣ ಹಾಗೇ ನಿಧಾನವಾಗಿ ಹೃದಯವನ್ನು ವ್ಯಾಪಿಸಿದ ಅನುಭವವಾಗಿ  ಕಣ್ಣು ಮುಚ್ಚಿಕೊಂಡು ತಟಸ್ಥನಾದೆ. ಉಸಿರ ರಾಗಕ್ಕೆ ಎದೆಬಡಿತ ತಾಳವಾದಾಗ ಅಂತರಗದ ಕಣ್ಣು ಮಿಸುಕಾಡಿತು. ಹಾಗೇ ಎಲ್ಲವೂ ತಟಸ್ಥವಾಗಿ ಸ್ಥಬ್ಧವಾದ ಅನುಭವ. ಹಾಗೇ ಉಸಿರು ಒಂದು ಎರಡು ಮೂರು.....ಛೇ ಜೀವನ ಪರ್ಯಂತದ ಉಸಿರು ಲೆಕ್ಕವಿಟ್ಟವರಾರು? ಈಗ ಮೂಲಾಧಾರದಿಂದ ಸಹಸ್ರಾರದವರೆಗೆ ಕಂಪನ ವ್ಯಾಪಿಸಿದಂತೆ ವಿಸ್ತಾರವಾದ ಬದುಕು ಸೂಜಿಮೊನೆಯಂತಾದ ಅನುಭವ.

ವಜ್ರಾಸನ ಶರೀರದ ಶಿಥಿಲತೆಯನ್ನು ಕಡಿಮೆ ಮಾಡಿ ಕಾಠಿಣ್ಯವನ್ನು ತುಂಬಿಬಿಡುತ್ತದೆ. ಶರೀರದಲ್ಲಿ ಸ್ಥಿರತೆ ಅನೈಚ್ಛಿಕವಾಗಿ ಪ್ರಚೋದಿತವಾಗುವ ಅದ್ಭುತ ಆಸನವಿದು. ಮೊಣಕಾಲು ಮಡಚಿ ಪಾದದ ಹಿಮ್ಮಡಿಯ ಒಂದು ಭಾಗವನ್ನು ಪೃಷ್ಠದಂಚಿಗೆ ಒತ್ತಿ ನಿರಾಳವಾಗಿ ಕುಳಿತುಬಿಡುವ ಆಸನವಾಗಿ  ಕಾಣುವಾಗ ಇದು ಸುಲಭ ಸಾಧ್ಯದಂತೆ ಭಾಸವಾಗುತ್ತದೆ. ಆದರೆ ಆಸನದಲ್ಲಿ ಕುಳಿತನಂತರವೇ ಅದರ ಪ್ರಭಾವ ಅರಿವಿಗೆ ಬರುವುದು. ಪೃಷ್ಠ ಹಿಮ್ಮಡಿಯಲ್ಲಿ ವಿರಮಿಸುವಾಗ ದೇಹದ ಜಡತ್ವ ನಾಶವಾಗಿ ಚೈತನ್ಯ ಜಾಗ್ರತವಾಗುತ್ತದೆ.
ಪೃಷ್ಠ ಎಂದಾಗ ಒಂದು ಅಸ್ಪೃಶ್ಯ ಭಾವದಲ್ಲಿ ಮಡಿವಂತಿಕೆಯನ್ನು ಗ್ರಹಿಸುತ್ತೇವೆ.  ಹೀಗೆ ಯೋಚಿಸುವ ಮಡಿವಂತಿಕೆ ಮೂರ್ಖತನ ಎಂದೇ  ಹೇಳಬೇಕು. ಮನೆಯ ಮೂಲೆಯಲ್ಲೊಂದು ಕಸದ ಬುಟ್ಟಿ ಇರುತ್ತದೆ. ಅದನ್ನು ಕೈಗೆತ್ತಿಕೊಂಡಾಗ ಮೂಗು ಬಾಯಿ ಸಾಧ್ಯವಾದರೆ ಕಣ್ಣು ಮುಚ್ಚಿ ದೇಹದಿಂದ ಒಂದಷ್ಟು ದೂರ ಹಿಡಿದು ಅಸ್ಪೃಶ್ಯತೆಯನ್ನು ತೋರುತ್ತೇವೆ. ಅದು ಸಹಜ.  ಆದರೆ ಈ ಕಸದ ಬುಟ್ಟಿ ಇಲ್ಲವಾದರೆ ಮನೆಯ ಸ್ಥಿತಿ ಹೇಗಿರಬಹುದು? ಊಹಿಸಿ. ಕಸದ ಸಮಸ್ಯೆ ಕಾಣುವಾಗ ನಿಕೃಷ್ಟವಾದರೂ ಇಂದು ಮಹಾನಗರ ಏಕೆ ಸಣ್ಣ ಹಳ್ಳಿಯೂ ಈ ಸಮಸ್ಯೆಯಿಂದ ಹೊರತಾಗಿಲ್ಲ. ಅಸಮರ್ಪಕ ನಿರ್ವಹಣೆಯೇ ಇದಕ್ಕೆ ಪ್ರಧಾನ ಕಾರಣ. ಇದೇ ರೀತಿ ನಮ್ಮ ದೈಹಿಕ ಸ್ಥಿತಿ. ವಿಸರ್ಜನಾಂಗದ ಅಸಮರ್ಪಕ ನಿರ್ವಹಣೆಯಾದರೆ ದೇಹದಲ್ಲೂ ಇದೇ ರೀತಿ ಕಸದ ಸಮಸ್ಯೆ ಉಂಟಾಗುತ್ತದೆ. ಆದುದರಿಂದ ಜೀರ್ಣ ಕ್ರಿಯೆ ದೇಹಾರೋಗ್ಯದ ಪ್ರಧಾನ ಅಂಗವಾಗಿದೆ.
ವಜ್ರಾಸನದಲ್ಲಿ ಪ್ರೃಷ್ಠ ಅಥವಾ ನಿಂತಂಬ ಮರ್ದಿಸಲ್ಪಡುತ್ತದೆ. ಹಾಗಾಗಿ ಜೀರ್ಣಾಂಗ ಪ್ರಚೋದನೆಗೆ ಒಳಗಾಗಿ ಜೀರ್ಣ ಕ್ರೀಯೆ ಮತ್ತು ವಿಸರ್ಜನೆ ಸರಾಗವಾಗಿ ನಡೆಯುತ್ತದೆ. ದಿನದಲ್ಲಿ ಅದೂ ಆಹಾರ ಸೇವನೆಯ ನಂತರ ಒಂದಷ್ಟು ಹೊತ್ತು ವಜ್ರಾಸನದಲ್ಲಿ ಕುಳಿತಲ್ಲಿ ತಿಂದ ಆಹಾರ ಸರಿಯಾಗಿ ಕರಗಿ ಜೀರ್ಣ ಸಂಬಂಧೀ ಬಾಧೆಗಳ ಪ್ರಭಾವ ಬಹಳಷ್ಟು ಕಡಿಮೆಯಾಗುತ್ತದೆ. ಹಾಗಾಗಿ ಊರಿನ ಕಸದ ಸಮಸ್ಯೆಯ ಬಗ್ಗೆ ಚಿಂತಿಸುವಾಗ ನಮ್ಮ  ದೇಹದ ಕಸದ ನಿರ್ವಹಣೆಯ ಬಗ್ಗೆಯೂ ಗಂಭೀರವಾಗಿ ಯೋಚಿಸಬೇಕು.  ಹಾಗಾಗಿ ಸ್ವಚ್ಛ ಭಾರತ ಅಭಿಯಾನದಲ್ಲಿ ಯೋಗ ದಿವಸ ಆಚರಣೆಯೂ ಅರ್ಥಪೂರ್ಣವಾಗುತ್ತದೆ. ಯಾವುದೇ ವಸ್ತುವನ್ನು ಹೊಸದಾಗಿ ಮನೆಗೆ ತಂದಾಗ ಒಂದಿಷ್ಟು ಸಂಭ್ರಮವಿರುತ್ತದೆ. ಅದು ಹಳೆಯದಾಗಿ ಕಸವಾಗುವಾಗ ಅದನ್ನು ಕಳೆಯುವುದೇ ಒಂದು ಸಮಸ್ಯೆಯಾದಂತೆ ನಾವು ಆಹಾರ ಸೇವಿಸುವಾಗ ಇರುವ ಸಂಭ್ರಮ ವಿಸರ್ಜಿಸುವಲ್ಲಿ ಇರುವುದಿಲ್ಲ. ಯಾಕೆಂದರೆ ಬಾಧಿಸುವ ಜೀರ್ಣ ಸಮಸ್ಯೆ. ಹಾಗಾಗಿ  ಶೌಚಕ್ಕೆ ಕುಳಿತಾಗಲೇ ತಾವೇನು ಸೇವಿಸಿದ್ದೇವೆ ಎಂಬುದರ ಬಗ್ಗೆ ಯೋಚನೆ ಬರುವುದು.  ಇಂದು ಪ್ರತಿಶತ ಎಪ್ಪತ್ತರಿಂದಲೂ ಅಧಿಕ ಮಂದಿಯ ಸಮಸ್ಯೆ ಜೀರ್ಣಾಂಗ ಸಂಬಂಧಿಯಾಗಿರುತ್ತದೆ. ಒಂದಷ್ಟು ಸರಳ ಆಸನ ಪ್ರಾಣಾಯಾಮ ಇದಕ್ಕೆಲ್ಲ ಸೂಕ್ತ ಪರಿಹಾರ ಎಂದು ಅರಿತರೂ ಅದನ್ನು ಹಿಂಬಾಲಿಸಲಾಗದ ಔದಾಸಿನ್ಯ ಆವರಿಸಿರುತ್ತದೆ.

 ವಜ್ರಾಸನದಲ್ಲಿ ಸ್ಥಿರವಾಗುವಾಗ ಮನಸ್ಸಿನ ಬಾಗಿಲು ತೆರೆಯಲ್ಪಡುತ್ತದೆ. ದೇಹ ಮನಸ್ಸು ಒಂದಾಗುವ ಹಂತವದು. ಅದಕ್ಕೆ ಉಸಿರು ಮಾಧ್ಯಮವಾಗುತ್ತದೆ. ಉಸಿರು ದೇಹ ಮತ್ತು ಮನಸ್ಸಿನ ಸೇತುವೆಯಾದಾಗ ಅದು ಧ್ಯಾನ,  ಅತರಂಗದ ದರ್ಶನ ಹೀಗೆ ಆಧ್ಯಾತ್ಮಿಕವಾಗಿ ಹೇಳುವುದುಂಟು. ಆದರೆ ಅದರ ಅರಿವಿಲ್ಲ. ಆದರೂ ಒಂದು ಜಿಜ್ಞಾಸೆ  ಹೀಗಿರಬಹುದೇ?  ಒಂದು ಸಲ ಮನಸ್ಸು ಕೇಂದ್ರೀಕೃತವಾದ ನಂತರ ಅದರಿಂದ ಹೊರಗೆ ಬರುವುದು ಸಾಧ್ಯವಾಗುವುದಿಲ್ಲ. ಬಲವಂತವಾಗಿ ಪರಿಧಿಯನ್ನು ಮೀರಬೇಕಾಗುತ್ತದೆ. ’ಧ್ಯಾನ”  ಇದು ಮುಂಜಾನೆಯ ಮಧುರ ನೆನಪಾಗಿ ದಿನವಿಡೀ ಉಳಿದು ಬಿಡುತ್ತದೆ. ಹಾಗಾಗಿ ಸಮಯವಿಲ್ಲದ ಆತುರತೆಯಲ್ಲೂ ಈ ಕೆಲವು ನಿಮಿಷಗಳನ್ನು ಬದಲಿಸುವುದು ಸಾಧ್ಯವಾಗುವುದಿಲ್ಲ.   
ವಜ್ರಾಸನದಲ್ಲಿ ನೇರವಗಿ  ಕುಳಿತಾಗ  ದೇಹ ಕುಬ್ಜವಾಗಿ ಸೂಕ್ಷವಾದ ಅನುಭವವಾದರೆ ಅಂತರಂಗ ವಿಶಾಲವಾಗುತ್ತಾ ಹೋಗುತ್ತದೆ ಅಂತರಂಗದ ಪ್ರಪಂಚ ತೆರೆದಷ್ಟು ಧ್ಯಾನ ಅರ್ಥಪೂರ್ಣವಾಗುತ್ತದೆ. ಹೀಗೆ ಅಂತರ್ಮುಖಿಯಾದಾಗ ಏಕಾಂತ ಮೌನವನ್ನು ಸುಖವಾಗಿ ಅನುಭವಿಸುವ ಮನೋಭಾವ ಮೂಡುತ್ತದೆ. ಏಕಾಂತತೆ ಎಂಬುದು ವರವಾಗುತ್ತದೆ.  ಹೀಗೆ  ಧ್ಯಾನ ಪ್ರಾಣಾಯಾಮದ ಒಂದೊಂದು ಮಜಲುಗಳಲ್ಲೂ ವಿಭಿನ್ನ ಅನುಭವವನ್ನು ಕಂಡಾಗ ಅದನ್ನೇ ಸುಯೋಗ ಎನ್ನಬೇಕು.  ಈ ಅನುಭವಗಳಿಂದ ಪಕ್ವವಾಗುವಾಗ ಮುಂದಿನ ಚಟುವಟಿಕೆಗಳು ಉಲ್ಲಾಸದಾಯಕವಾಗಿ ಅದರಲ್ಲಿ ತಾದಾತ್ಯ್ಮವನ್ನು ಬೆಳೆಸುವ ಪ್ರಚೋದನೆಯುಂಟಾಗುತ್ತದೆ.

 ಪ್ರತಿದಿನವೂ ವಜ್ರಾಸನದ ಸ್ಥಿತಿಗೆ ಬರುವಾಗ ಮನಸ್ಸು ಹತ್ತು ವರ್ಷಗಳ ಹಿಂದಿನ ದಿನವನ್ನು ನೆನಪಿಗೆ ತರುತ್ತದೆ. ಮಂಡಿ ನೋವು ಬಾಧೆಯಲ್ಲಿ ವಜ್ರಾಸನ ಕೆಲವು ಘಳಿಗೆಗಳಿಗಷ್ಟೆ ಸೀಮಿತವಾಗುವುದಿತ್ತು.  ಎಂದಿನಿಂದ  ಯೋಗಾಭ್ಯಾಸ ತೊಡಗಿತೋ ಅಂದಿನಿಂದ ಆಸನಗಳ ಜತೆ ವಜ್ರಾಸನವೂ ಪಟ್ಟಿಯಲ್ಲಿ ಸೇರಿಕೊಂಡುಬಿಟ್ಟಿತು. ಪ್ರತೀ ದಿನ ವಜ್ರಾಸನದ ಅವಧಿ ಹೆಚ್ಚಿಸುತ್ತಾ ಈಗ ಘಳಿಗೆ ಏಕೆ ಘಂಟೆ ಕಾಲ ವಜ್ರಾಸನದಲ್ಲಿ ಸುಖವಾಗಿ ವಿರಮಿಸುತ್ತೇನೆ. ಆದರೆ  ಮನಸ್ಸು  ಮಾತ್ರಾ ಹಿಂದಕ್ಕೆ ಒಂದರೆ ಘಳಿಗೆ ಓಡುತ್ತದೆ.  ಹೇಗಿದ್ದ ದೇಹ ಅಂಗಾಂಗಗಳು ಹೇಗಾದವು? ಅಂಗಾಂಗಗಳು ಸ್ವಾವಲಂಬನೆಯನ್ನು ಪಡೆದ ಅನುಭವವಾಗುತ್ತದೆ.
ವಜ್ರಾಸನ ಅದು ಕೇವಲ ಒಂದು ಸ್ಥಿತಿಯಲ್ಲ. ಮನಸ್ಸಿಗೆ ದೇಹಕ್ಕೆ ವಜ್ರದಂತೆ ಕಾಠಿಣ್ಯವನ್ನು ಸ್ಥಿರತೆಯನ್ನು  ತರಬಲ್ಲ ಆಸನ.  ಧ್ಯಾನ ಪ್ರಾಣಾಯಾಮ ಆಸನ ಹೀಗೆ  ಎಲ್ಲದರ ನಡುವೆ ವಜ್ರಾಸನದಲ್ಲಿ ವಿರಮಿಸುತ್ತಾ ಪರಿಸರವನ್ನು ಏಕಾಂತವಾಗಿ  ಅವಲೋಕಿಸುವಾಗ ಮುಂಜಾನೆ ಎಂಬುದು ಮಧುರಸ್ಮೃತಿಯಾಗಿಬಿಡುತ್ತದೆ.  
ಯೋಗಾಭ್ಯಾಸದ ಕೊನೆಯ ಹಂತವಾಗಿ ಸೂರ್ಯನಮಸ್ಕಾರ. ನಂತರ ಶವಾಸನ. ಕಣ್ಣು ಮುಚ್ಚಿ ನಿರಾಳತೆಯ ಸುಖವನ್ನು ಅನುಭವಿಸಿ ದೇಹ ಮನಸ್ಸು ಭಾರವನ್ನು ಕಳೆದು ಎದ್ದು ಕಣ್ಣು ತೆರೆಯುತ್ತೇನೆ. ಈಗ ಪುನಃ ವಜ್ರಾಸನದದಲ್ಲಿ ಒಂದಿಷ್ಟು ಹೊತ್ತು ಆದಿನದ ಕೊನೆಯ ಅನುಭವ. ಅಲ್ಲಿ  ಮರುದಿನ ಮುಂಜಾನೆಗೆ ಬಿಟ್ಟು ಹೋಗುವ ಮಧುರ ಸ್ಮ್ಟುತಿಯನ್ನು ಕಟ್ಟಿ ಉಳಿಸುತ್ತೇನೆ.  ದೂರಲ್ಲಿ ಪ್ರಖರವಾಗುವ ಭಾಸ್ಕರ ಇದಕ್ಕೆ ಸಾಕ್ಷಿಯಾಗಿ ನಗುತ್ತಾನೆ. ಹೋಗಿ ಬಾ ಎಂದು ಹರಸಿದ ಅನುಭವವಾಗಿ ನಿಧಾನವಾಗಿ ಎದ್ದು ಲೌಕಿಕ ಪ್ರಪಂಚವನ್ನು ಪ್ರವೇಶಿಸುತ್ತೇನೆ.


Sunday, May 1, 2016

ಮುಳ್ಳು ಸೌತೆ ಕರ್ಮಣೆ (ಎಳೇ ಸೌತೆ ತಂಬುಳಿ)





ಮುಳ್ಳು ಸೌತೆ ಕರ್ಮಣೆ (ಎಳೇ ಸೌತೆ  ತಂಬುಳಿ)

ಬೇಸಿಗೆ ಬಿರು ಬಿಸಿಲ ತಾಪಕ್ಕೆ ಮಧ್ಯಾಹ್ನದ ಭೋಜನವೆಂದರೆ ಹಲವು ಸಲ ಶಿಕ್ಷೆಯಂತೆ ತೋರುವುದುಂಟು. “ ಅಬ್ಬಾಅ ಈ ಸೆಕೆ ಎಂತದೂ ಬೇಡಪ್ಪಾ  ನೀರು ಕುಡಿದೇ ಹೊಟ್ಟೆ ತುಂಬಿತು ಹಸಿವಿಲ್ಲ”  ಎಂಬ ರಾಗದ ನಡುವೆ ಮಧ್ಯಾಹ್ನ ಊಟದ ತಟ್ಟೆಯ ಹತ್ತಿರ ಕುಳಿತಾಗ ಬಹಳ ಖಾರವಾದ ಬಿಸಿಯಾದ ಸಾಂಬಾರ್ ಅಥವಾ ಇನ್ನಿತರ ಖಾದ್ಯಗಳನ್ನು ಕಂಡು ಮತ್ತಷ್ಟು ನಿರುತ್ಸಾಹ ಮೂಡುತ್ತದೆ. ಹೇಗಾದರೂ ಊಟದ ಶಾಸ್ತ್ರ ಮುಗಿಸಿ ಎದ್ದರಾಯಿತು ಎಂದು ಹಸಿದಿರದ ಹೊಟ್ಟೆಗೆ ಮತ್ತಷ್ಟು ತುಂಬಿಸಿ ಹೊಟ್ಟೆ ಮೇಲೆ ಕೈಯಾಡಿಸಿ ಏಳುವುದಿದೆ.  ಇಂತಹ ಸಮಯದಲ್ಲಿ ಕಣ್ಣನ್ನೂ ಮನಸ್ಸನ್ನೂ ತಂಪಾಗಿಸುವ ವಿಭವ ಮಧ್ಯಾಹ್ನದ ಭೋಜನಕ್ಕೆ ಇದ್ದರೆ ಹಸಿವಿಲ್ಲದ ಹೊಟ್ಟೆಯಲ್ಲು ತೃಪ್ತಿಯ ತೇಗು ಬರಿಸಬಹುದು. ಅಂತಹ ಒಂದು ಖಾದ್ಯವೇ “ ತವಶಾ ಕರ್ಮಣೆ.....ಮುಳ್ಳು ಸೌತೆ ಕರ್ಮಣೆ”
ಇದೊಂದು ಕರಾಡ ಬ್ರಾಹ್ಮಣರ ವಿಶೇಷ ಪಾಕಗಗಳಲ್ಲಿ ಒಂದು. ಈಗ ಎಲ್ಲ ಮನೆಗಳಲ್ಲೂ ಇದು ಊಟದ ಒಂದು ಅಂಗವಾಗಿದೆ.  ಕೇವಲ ಹತ್ತಿಪ್ಪತ್ತು ನಿಮಿಷದಲ್ಲಿ ಬೆಂಕಿಇಲ್ಲದೇ ತಯಾರಿಸಬಲ್ಲ ಈ ಅದ್ಭುತ ಖಾದ್ಯ ಮೆಚ್ಚದವರು ಇಲ್ಲ. ಈ ಬಿಸಿಲ ಝಳಕ್ಕೆ ಹೇಳಿ ಮಾಡಿಸಿದಂತಹ ಭೋಜನವಸ್ತುವಿದು. ಇದನ್ನು ಮಾಡುವ ವಿಧಾನ.
ಒಂದು ಮುಳ್ಳು ಸೌತೆ (ಎಳೆ ಸೌತೆ) ತುರಿಯಬೇಕು. ತುರಿಯುವುದರಿಂದಲೂ ಇದನ್ನು ಸೂಕ್ಷ್ಮವಾಗಿ ಕೊಚ್ಚುವುದು ರುಚಿಗೆ ಅತಿ ಸೂಕ್ತ. ತುರಿದಾಗ ನೀರು ಬೇರೆ ಯಾಗಿಬಿಡುವುದರಿಂದ ರುಚಿಗೆ ಅದು ಸೂಕ್ತವಲ್ಲ. ಆದರೂ ಅಭಿರುಚಿ ಮತ್ತು ಸಮಯಕ್ಕೆ ಅನುಸಾರವಾಗಿ ಮಾಡಿಕೊಳ್ಳಬಹುದು.
ಹೀಗೆ ಕೊಚ್ಚಿದ ಸೌತೆಗೆ ರುಚಿಗೆ ತಕ್ಕ  ಉಪ್ಪು ಮತ್ತು ಕಾಯಿ ಮೆಣಸು ಹಿಸುಕಿ  ಮಿಶ್ರಮಾಡಿ ಇಟ್ಟುಕೊಳ್ಳಬೇಕು. ನಂತರ ಒಂದು ಸಾಧಾರಣ ಗಾತ್ರದ ಸೌತೆಗೆ ಒಂದು ಅರ್ಧ ತೆಂಗಿನಕಾಯಿ ನುಣ್ಣಗೆ ಅರೆದು ಅದಕ್ಕೆ ಒಂದಷ್ಟು ಹುಳಿ ಮಜ್ಜಿಗೆ ಯನ್ನು ಸೇರಿಸಿ ಎಲ್ಲವನ್ನು ಸೌತೆ ಮಿಶ್ರಣಕ್ಕೆ ಬೆರಸಬೇಕು. ನಂತರ ಇದಕ್ಕೆ ಒಗ್ಗರಣೆ ಹಾಕಬೇಕು. ಒಗ್ಗರಣೆಗೆ ಸಾಸಿವೆ ಒಣಮೆಣಸು ಒಂದೆರಡು ತುಂಡು ಹಾಕಿ ಸಾಸಿವೆ ಸಿಡಿದ ಸ್ವಲ್ಪ ಮೇಲೆ ಕರಿಬೇವು ಹಾಕಬೇಕು. ತಣ್ಣಗಿನ ತಂಪಾದ   ಈಗ ತವಶಾ ಕರ್ಮಣೆ......ಸಿದ್ದ. ಮಧ್ಯಾಹ್ನದ ಬಿಸಿಲ ಬಿಸಿಗೆ ತಂಪಾದ ಈ ಊಟ ಸವಿಯುವುದೇ ಒಂದು ಮಜ. ಇದಕ್ಕೆ ಮಿಡಿ ಉಪ್ಪಿನಕಾಯಿ,  ಬೆಂಡೆಕಾಯಿ ಅಥವಾ ಅಲಸಂಡೆ ಪಲ್ಯ ವಿದ್ದರೆ ಕೇಳುವುದೇ ಬೇಡ ಒಂದು ಸೇರು ಅನ್ನ ಖಾಲಿ ಸಂಶಯವಿಲ್ಲ. 

ಇದನ್ನು ತೆಂಗಿನ ಕಾಯಿ ಹಾಲಿನಿಂದಲೇ ತಯಾರಿಸುತ್ತಿದ್ದರು . ಅದನ್ನು ನೆನಸಿಕೊಂಡರೆ ಬಾಯಿಯಲ್ಲಿ ನೀರು ಸುರಿಯುತ್ತದೆ.  

Sunday, February 21, 2016

ಅ-ತಿಥಿ ಸತ್ಕಾರ

           ಇಂದು ಯಾವುದೇ ಮದುವೆಗೆ ಹೋಗಲಿ. ವಧೂವರರಿಗೆ ಶುಭ ಹಾರೈಸಿದ ಮೇಲೆ ಯಜಮಾನ ಅಥವಾ ಮನೆಯವರು ಮೊದಲು ಹೇಳುವ ಮಾತಿದೆ "ಊಟ ಮಾಡಿ ಹೋಗಿ".  ಹೌದು,  ಹಲವು ಸಲ ಊಟವೇ ಪ್ರಧಾನವಾಗಿಬಿಡುತ್ತದೆ. ಊಟ ಉಂಟು ಅಂತ ನಮ್ಮ ಬಾಲ್ಯದ ಬಡತನದಲ್ಲಿ  ಒಂದೂರಿಂದ ಇನ್ನೊಂದೂರಿಗೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದುದು ನೆನಪಾಗುತ್ತಿದೆ. ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ಎನ್ನುವುದು ಅದಕ್ಕೆ ಅಲ್ಲವೇ. 

ಇಂದು ಯಾವುದೇ ಕಾರ್ಯಕ್ರಮವಿರಲಿ ಊಟೋಪಚಾರ ಎಂಬುದು ಪ್ರಧಾನವಾದ ಅವಿಭಾಜ್ಯ ಅಂಗ. ಮದುವೆ ಮುಂಜಿ ಯಾವುದೇ ಕಾರ್ಯವಿರಲಿ ಅತಿಥಿಗಳನ್ನು ಹೊಟ್ಟೆ ತುಂಬಿಸಿ  ಸತ್ಕರಿಸುವುದು ಅವಿಭಾಜ್ಯ ಅಂಗವಾಗಿದೆ. ಆದರೆ ಈಗೀಗ ಬಂದ ಅತಿಥಿಗಳ ಹೊಟ್ಟೆ ತುಂಬುಸಿ ಬಿಡುವುದಷ್ಟಕ್ಕೇ ಇದು ಸೀಮಿತವಾಗುವುದು ನಿಜಕ್ಕೂ ಖೇದನೀಯ. ಅತಿಥಿಯಾದವನು ತಮ್ಮ ಮನೆಯ ಕಾರ್ಯಕ್ರಮಕ್ಕೆ ನಿಮಿತ್ತವಾಗಿ ಮನೆಯಿಂದ ಹೊರಟಮೇಲೆ ಪುನಃ ಮನೆಗೆ ಸುಕ್ಷೇಮವಾಗಿ ತಲಪುವವರೆಗೂ ಆ ಕಾರ್ಯಕ್ರಮದ ಗುಣಾವಗುಣ ಅವಲಂಬಿಸಿದೆ ಎಂದು ಬಹಳಷ್ಟು ಮಂದಿ ಯೋಚಿಸುವುದಿಲ್ಲ. ಬಂದವರಿಗೆ ಅದ್ಧೂರಿತನದ ಭೂರೀ ಭೋಜನವನ್ನು ಕೊಡುವುದಷ್ಟೇ ಹೆಗ್ಗಳಿಕೆಯಾಗಿದೆ. ಹಾಗೆ ನೋಡಿದರೆ ತಿಂದುಂಡ ಆಹಾರ ಯಾವ ಪರಿಣಾಮ ಬೀರಿದೆ ಇದು ಮುಖ್ಯವಾಗುತ್ತದೆ.  ಕಾರ್ಯಕ್ರಮ ಅದ್ದೂರಿ ಆಡಂಬರದತ್ತ ದೃಷ್ಟಿ ಬೀರುವಾಗ ಬಹಳ ಅರ್ಥಪೂರ್ಣವಾದ ವಿಷಯ ನಮ್ಮ ನೆನಪಿಗೆ ಬರುವುದೇ ಇಲ್ಲ. 

ಸಾಮಾನ್ಯವಾಗಿ ಯಾವುದೇ ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಹೋದಾಗ ಹಲವರು ಕುತೂಹಲಕ್ಕೆ ಅಡುಗೆ ಕೋಣೆಯತ್ತ ಒಂದು ಸಲ ಇಣುಕು ನೋಟ ಬೀರುವುದು ಸಹಜ. ನಾನೂ ಅಷ್ಟೇ ಒಂದು ಸಲ ಅಡುಗೆ ಮನೆಯನ್ನು ಅವಲೋಕಿಸುವ ಅಭ್ಯಾಸ ಇರಿಸಿಕೊಂಡಿದ್ದೇನೆ. ಇದು ಅಲ್ಲಿ ಯಾವ ಆಹಾರ ಭಕ್ಷ್ಯ ತಯಾರಗುತ್ತದೆ ಎಂಬ ಕುತೂಹಲದಿಂದ ಎಂದು ಕೊಂಡರೆ ಅದು ತಪ್ಪು. ಅಡುಗೆ ಶಾಲೆಯ ವ್ಯವಸ್ಥೆ ಹೇಗಿದೆ ಎಂಬುದಷ್ಟೇ ಅವಲೋಕನದ ಉದ್ದೇಶ. 

ಹೀಗೆ ಅವಲೋಕನದಲ್ಲಿ ಇತ್ತೀಚೆಗೆ ಬಹಳಷ್ಟು ಗಾಬರಿಯಾಗುವಂತಹ ವಿಚಾರಗಳು ಕಣ್ಣಿಗೆ ಬೀಳುವುದು ಸಹಜವಾಗಿಬಿಟ್ಟಿದೆ.  ಒಂದು ನಗರದಲ್ಲಿನ ಮದುವೆಗೆ ಹೋಗಿದ್ದೆ. ಅಡುಗೆ ಸಿದ್ದತೆ ಬಹಳ ಜೋರಾಗಿಯೇ ಇತ್ತು. ಹತ್ತೆಂಟು ಬಾಣಸಿಗರು  ಅಡುಗೆಯ ರುಚಿಕಟ್ಟಿನ ಬಗ್ಗೆ ಟೊಂಕ ಕಟ್ಟಿ ಬೆವರು ಸುರಿಸುತ್ತಿದ್ದರು.  ಈ ಮಧ್ಯೆ ನೋಡುತ್ತಿದ್ದೆ. ತರಕಾರಿ ಹಚ್ಚುವವರು ಅದು ಸೊಪ್ಪು ಕಾಯಿ ಪಲ್ಲೆ ಯಾವುದನ್ನೂ ತೊಳೆಯದೆ ಯಥಾರೀತಿ ಕತ್ತರಿಸಿ ಪೇರಿಸುತ್ತಿದ್ದರು. ಆಚ್ಚರಿಯಿಂದಲೂ ಗಾಬರಿಯಿಂದಲೂ ನಾನು ಕಳವಳಿಸಿ ಹೋದೆ.  ಸೌತೆ ಯಾಗಿರಬಹುದು ಬೆಂಡೆ ಯಾಗಿರಬಹುದು ಮಾಗಿದ ಟೊಮೆಟೊ ವಾಗಿರಬಹುದು ಬುಟ್ಟಿ ಚೀಲಗಳಿಂದ ಯಥಾವತ್ತಾಗಿ ಕತ್ತರಿಸಲ್ಪಟ್ಟು ಪಾತ್ರೆಯನ್ನು ಸೇರುತ್ತಿದ್ದವು. ಹೋಗಲಿ ಅತ್ತ ಅನ್ನಮಾಡುತ್ತಿರುವವರು ಅಕ್ಕಿಯನ್ನು ತೊಳೆಯದೇ ಹಾಗೆಯೇ ಕುದಿವ ನೀರಿಗೆ ಸಹಜವೆಂಬಂತೆ ಗೋಣಿಯಿಂದ ಸುರಿಯುತ್ತಿದ್ದರು.  ಒಂದು ಸಲ ಅಲ್ಲಿದ್ದ ಒಬ್ಬರಲ್ಲಿ ತಡೆಯದೇ ಕೇಳಿಬಿಟ್ಟೆ....  ಇತ್ತೀಚೆ ಸಿದ್ದ ತರಕಾರಿ ಆಹಾರವಸ್ತುಗಳು ಮಾರುಕಟ್ಟೆಯಲ್ಲಿ ಸಿಗುವುದು ಸಾಮಾನ್ಯ. ದೋಸೆ ಹಿಟ್ಟು, ಸಿಪ್ಪೆ ತೆಗೆದ ಈರುಳ್ಳಿ ಬೆಳ್ಳುಳ್ಳಿ....ಹೀಗೆ    ತರಕಾರಿ ಅಕ್ಕಿ ತೊಳೆಯುವ ಅಗತ್ಯ ಇಲ್ಲಂತ ಕಾಣ್ತದೆ. ಆತ ವಿಚಿತ್ರವಾಗಿ ನೋಡಿದ. 

ಒಂದು ಸಲ ನಗರದ ಕೇಂದ್ರ ಮಾರುಕಟ್ಟೆಗೆ ಭೇಟಿಕೊಡಿ. ಅದು ಯಾವ ನಗರವಾದರೂ ಪರವಾಗಿಲ್ಲ. ಬೆಂಗಳೂರಿನ ಕೆ. ಆರ್ ಮಾರುಕಟ್ಟೆಯಾದರೆ ಉತ್ತಮ. ತರಕಾರಿ ಸೊಪ್ಪು ಪಲ್ಲೆಗಳನ್ನು ಅಲ್ಲಿ ರಾಶಿ ಹಾಕುವುದನ್ನು ನೋಡಿ. ಅದನ್ನು ಹಾಗೇ ತೊಳೆಯದೆ ತಿನ್ನುವುದನ್ನು ಕಲ್ಪಿಸುವುದೇ ಹೇಸಿಗೆಯಾಗಿಬಿಡುತ್ತದೆ. ಕಾಲೂರುವುದಕ್ಕೂ ಹೇಸುವಂತಹ ಸ್ಥಳದಲ್ಲಿ ಪೇರಿಸಿದ ತರಕಾರಿ ಹಾಗೆಯೇ ನಮ್ಮ ಉದರಸೇರುತ್ತದೆ ಎಂದಾದರೆ ಇದರಲ್ಲಿ ಉದರ ಶಮನ ಎಂಬುದು ಯಾವ ರೀತಿಯದ್ದಾಗಿರಬಹುದು? 

ಇಂದು  ಹೆಚ್ಚಿನ ಎಲ್ಲಾ ನಗರಗಳ ಹೆಚ್ಚಿನ ಎಲ್ಲ ಕಲ್ಯಾಣಮಂಟಪಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಇದರಲ್ಲೂ ನೀರಿಗೆ ಕ್ಷಾಮವಿದ್ದರಂತೂ ಕೇಳುವುದೇ ಬೇಡ.  ಹಳ್ಳಿಗಳಲ್ಲಿ ಕಾರ್ಯಕ್ರಮ ವಾದರೆ ...ನಮ್ಮ ಊರಲ್ಲಿ ತರಕಾರಿ ಹೆಚ್ಚುವುದು ಮುಂತಾದ ಸಹ ಕೆಲಸಗಳನ್ನು ಮನೆಯವರೇ ಸೇರಿ ಮಾಡಿಕೊಡುತ್ತಾರೆ. ಹಾಗಾಗಿ ಅಂತಹ ಕಡೆಯಲ್ಲಿ ಸ್ವಚ್ಛತೆಯ ಬಗ್ಗೆ ಕಾಳಜಿ ಇರುತ್ತದೆ. ಆದರೆ ಅತೀ ಸಣ್ಣ ನಗರದಲ್ಲೂ ಎಲ್ಲವನ್ನೂ ಗುತ್ತಿಗೆ ಆಧಾರದಲ್ಲಿ ಸಿದ್ಧ ಪಡಿಸುವಾಗ ಈ ಸ್ವಚ್ಛತೆ ಎಂಬುದು ಅನಿವಾರ್ಯ ಎಂದನಿಸುವುದೇ ಇಲ್ಲ. ಹಾಗಾಗಿ ಇಂದು ವಿಷಾಹಾರಸೇವನೆ ಪ್ರಕರಣ ಮಾಮೂಲು ಎಂಬಂತಾಗಿದೆ.  ಅದು ಕಾರ್ಯಕ್ರಮದ ಆಡಂಬರ ಹೆಚ್ಚಿದಷ್ಟು ಸ್ವಚ್ಛತೆಯ ಗುಣಮಟ್ಟ ಕಳಪೆಯಾಗುತ್ತಾ ಸಾಗುವುದು ವಿಚಿತ್ರ ಎನ್ನಬೇಕು.  ಅದ್ಧೂರಿತನಕ್ಕೆ ವ್ಯಯಿಸುವ ಸ್ವಲ್ಪ ಭಾಗವೂ ಸ್ವಚ್ಛತೆಗೆ ವ್ಯಯವಾಗುವುದಿಲ್ಲ ಎಂದಾದರೆ ಅದನ್ನು ಅತಿಥಿ ಸತ್ಕಾರ ಎನ್ನಬೇಕೆ? 

ಹಾಗಾಗಿ ಒಂದು ಕಳಕಳಿ, ಮನೆಯವರು ಬಂದ ಅತಿಥಿಗಳನ್ನು ಊಟ ಮಾಡಿ ಹೋಗಿ ಎನ್ನುವಲ್ಲಿನ  ಕಾಳಜಿಯನ್ನು ಅಡುಗೆ ಕೋಣೆಯತ್ತವೂ ಹರಿಸುವುದು ಅತೀ ಅಗತ್ಯ. ಅದು ನಿಜ ಅರ್ಥದಲ್ಲಿ ಅತಿಥಿ ಸತ್ಕಾರವಾದೀತು. ಇಲ್ಲವಾದರೆ ಅತಿಥಿ ದೇವೋಭವ ಎನ್ನುವುದು ಕೇವಲ ನಾಮ ಫಲಕಕ್ಕಷ್ಟೇ ಸೀಮಿತವಾಗಬಹುದು.  ತೊಳೆಯದೇ ಹಾಕಿದ ಅಕ್ಕಿಯನ್ನು ನೈವೇದ್ಯ ಎಂದು ಬಳಸುವ ಪರಿಪಾಠವಿದೆ. ಅದಕ್ಕಾಗಿಯೇ ಅನ್ನಬ್ರಹ್ಮ ಎಂದು ಪೂಜ್ಯನೀಯ ಭಾವನೆಯಲ್ಲಿ ಕಾಣುತ್ತೇವೆ. ಇದೇ ಅನ್ನವನ್ನು ವಿಷವಾಗಿಸಿ ವಮನ ಮಾಡುವ ಅಗತ್ಯವಿದೆಯೇ?