ಇತ್ತೀಚೆಗೆ ಯೋಗದಿನದಲ್ಲಿ ಹಲವರ ಯೋಗಾಭ್ಯಾಸ ನೋಡಿ ಒಂದೆರಡು ಅನಿಸಿಕೆಗಳು ಹೇಳಬೇಕೆಂದೆನಿಸಿತು. ಯೋಗ ದಿನ ಮೂರ್ಖದಿನವಾಗುವಂತೆ ಆಚರಿಸುವುದನ್ನು ನೋಡಿದಾಗ ವಿಷಾದವಾಗುತ್ತದೆ. ಒಂದು ದಿನ ಸಮವಸ್ತ್ರ ಹಾಕಿ ದೊಡ್ಡ ಬ್ಯಾನರ್ ಕಟ್ಟಿ ಯೋಗಾಭ್ಯಾಸ ಮಾಡುವುದರಲ್ಲಿ ಯಾವ ಪ್ರಯೋಜನವೂ ಇಲ್ಲ. ಒಂದು ದಿನಕ್ಕೆ ಸೀಮಿತವಾಗುವ ಯೋಗಭ್ಯಾಸ ನಿಜಕ್ಕೂ ಅದಕ್ಕೆ ಮಾಡುವ ಅವಮಾನವಾಗುತ್ತದೆ.
ಯೋಗ, ಅಂತ ಹೇಳಿದ ಕೂಡಲೇ ಕೆಲವು ಆಸನ, ಮತ್ತೆ ಪ್ರಾಣಾಯಾಮ ಅಂತ ತಿಳಿದು ಅದೇ ಭ್ರಮೆಯಲ್ಲಿ ಇದ್ದು ಬಿಡುತ್ತಾರೆ. ಹಲವರು ಇದನ್ನು ಪ್ರದರ್ಶನದ ವಸ್ತುವಾಗಿ ಮಾಡಿಬಿಡುತ್ತಾರೆ. ಇನ್ನು ಕೆಲವರಿಗೆ ಇದು ಸಮಯ ಸಿಕ್ಕಾಗ ಮಾಡುವ ಕೆಲಸವಾಗಿದೆ. ಆರಂಭದ ದಿನಗಳಲ್ಲಿ ಇದು ಇಷ್ಟೇ ಅಂತ ಅನಿಸಿದರೂ, ಅಷ್ಟಕ್ಕೇ ಸೀಮಿತಗೊಳಿಸಬಾರದು. ಆದರೆ ಇಂದಿನ ಫ್ಯಾಷನ್ ಯುಗದಲ್ಲಿ ಅದಕ್ಕೇ ಸೀಮಿತ ವಾಗಿಸುವುದು ಮೂರ್ಖತನ ಎನ್ನಬೇಕು.
ಯೋಗ ಮುಖ್ಯವಾಗಿ ಯಾವುದೇ ಧರ್ಮಕ್ಕೆ ಸೀಮಿತವಾಗುವ ಧಾರ್ಮಿಕ ಆಚರಣೆಯಲ್ಲ. ಆದರೆ ಸನಾತನ ಧರ್ಮ, ಅಂದರೆ ಅತ್ಯಂತ ಹಳೆಯ ಮನುಷ್ಯ ಜೀವನ ಧರ್ಮ ಇದನ್ನೇ ಅಳವಡಿಸಿಕೊಂಡಿತ್ತು. ಇಂದು ಹಲವು ರೀತಿಯಲ್ಲಿ ಇದನ್ನು ಧಾರ್ಮಿಕ ಕ್ರಿಯೆಗೆ ಸೀಮಿತ ಗೊಳಿಸಿದ್ದೂ ಒಂದು ಬಗೆಯಲ್ಲಿ ವಿಷಾದನೀಯ ಎನ್ನಬೇಕು. ಅದು ಹಾಗೆ ಒಂದು ಧರ್ಮಕ್ಕೆ ಸೀಮಿತವಾಗುವುದಕ್ಕೆ ಕಾರಣ ಇಲ್ಲದಿಲ್ಲ. ಬಾಲ್ಯದಲ್ಲೇ ನಮಗೆ ನಮ್ಮ ಕರ್ತವ್ಯಗಳನ್ನು ಇದೇ ಬಗೆಯಲ್ಲಿ ಖಡ್ಡಾಯಗೊಳಿಸುತ್ತಾರೆ. ಅನ್ನ ಎಂಬದನ್ನು ದೇವರಾಗಿಸಿ ಅದರ ಮೌಲ್ಯವನ್ನು ಗೌರವವನ್ನು ತೋರಿಸುವ ಯತ್ನ ಮಾಡುತ್ತಾರೆ. ಅದೇ ಮುಂದೆ ಧಾರ್ಮಿಕವಾಗುತ್ತದೆ. ಇದೇ ಬಗೆಯಲ್ಲಿ ನಮಗೆ ಹಲವು ಮೌಲ್ಯಗಳ ಪಾಠವಾಗುತ್ತದೆ. ಅದೇ ಜೀವನ ಧರ್ಮವಾಗುತ್ತದೆ.
ಯೋಗ ಎಂದೋ ಒಂದು ದಿನದ ಆಚರಣೆಯಲ್ಲ. ಹಾಗೆ ಮಾಡಿದರೆ ಅದು ಜೀವನವನ್ನು ಅರ್ಥಮಾಡಿಕೊಳ್ಳದ ಅಜ್ಜಾನವಾಗುತ್ತದೆ. ಅಹಾರ ವಿಸರ್ಜನಾದಿಗಳು ಹೇಗೆ ಅನಿವಾರ್ಯವೋ, ಹೊತ್ತು ಹೊತ್ತಿಗೆ ಹೇಗೆ ಊಟವನ್ಮು ಮಾಡುತ್ತೀರೋ ಅದೆ ಬಗೆಯಲ್ಲಿ ಇದು ಜತೆಯಲ್ಲಿರಬೇಕು ಯಾರನ್ನೋ ಮೆಚ್ಚಿಸುವುದಕ್ಕೆ ಯಾರದೋ ಮೇಲಿನ ಅಭಿಮಾನ ದರ್ಶನಕ್ಕೆ ಯೋಗಾಭ್ಯಾಸವಲ್ಲ. ಅದೊಂದು ಜೀವನ ವಿಧಾನ. ತೆಳ್ಳಗಾಗುವುದಕ್ಕೋ, ದಪ್ಪಗಾಗುವುದಕ್ಕೋ ಅಯುರಾರೋಗ್ಯಕ್ಕೋ ಇದು ಉದ್ದೇಶವಾಗಬಾರದು. ಹಾಗಾದರೆ ಇದರ ಮೂಲ ಉದ್ದೇಶಕ್ಕೆ ಅನ್ಯಾಯವಾಗುತ್ತದೆ. ಜೀವನದ ಪ್ರತಿಯೊಂಕ್ಕೂ ಯೋಗಾಭ್ಯಾಸ ಕಣ್ಣಾಗಬೇಕು.ಆಗಲೇ ಜೀವ ಮತ್ತು ಆತ್ಮದ ಸಂಯೋಗವಾಗುತ್ತದೆ.
ಪ್ರತಿ ವರ್ಷವೂ ಯೋಗದಿನ ಆಚರಿಸಲ್ಪಡುತ್ತದೆ. ನೂರಾರು ಜನ ಸೇರಿ, ವಿಶೇಷ ಸಮವಸ್ತ್ರ ಧರಿಸಿ, ಒಂದಷ್ಟು ಕಸರತ್ತು ಮಾಡಿ ನಾವೂ ಆರೋಗ್ಯವಂತರಾದೇವು, ಯೋಗಪಟುಗಳಾಗಿದ್ದೇವೆ ಎಂಬ ಭ್ರಮೆ ಆವರಿಸುತ್ತದೆ. ಹೆತ್ತವರ ದಿನದಂದು ಅಪ್ಪ ಅಮ್ಮನ ನೆನಪಾದಂತೆ ಯೋಗದಿನ ಯೋಗದ ಆಚರಣೆಯಾಗುತ್ತದೆ. ಮತ್ತೆ ಮುಂದಿನ ವರ್ಷದ ತನಕವೂ ಅದರ ಜ್ಞಾಪಕವೇ ಇರುವುದಿಲ್ಲ.
ನಿಯಮಬದ್ದವಾದ ಜೀವನಕ್ರಮವೇ ಯೋಗ. ಕಸರತ್ತು ವ್ಯಾಯಾಮ ಮಾಡುವುದಕ್ಕಿಂತಲೂ ಅಲ್ಲಿ ನಿಯಮವನ್ನು ಅನುಸರಿಸುವುದು ಪ್ರಧಾನವಾಗಿಬಿಡುತ್ತದೆ. ಚಿತ್ತವೃತ್ತಿಯಿಂದ ದೂರವಿದ್ದು ಒಂದು ಜೀವನ ಕ್ರಮವನ್ನು ಅನುಸರಿಸಬೇಕು. ಮನಸ್ಸು ನಿಯಂತ್ರಣದಲ್ಲಿರಬೇಕು. ಯೋಗದ ದಿನವೇ ಮನಸ್ಸು ನಿಯಂತ್ರಣವನ್ನು ಮೀರುತ್ತದೆ. ಏನೇನೋ ಚಿತ್ತವಿಕಾರಗಳು ಆವರಿಸಿದ್ದರೆ ಅದು ಯೋಗಾಭ್ಯಾಸವಾಗುವುದಕ್ಕೆ ಸಾಧ್ಯವಿಲ್ಲ.
ಯೋಗಾಸನ ಅಂದರೆ ಕೆಲವೊಂದು ಭ್ರಮೆಯಿಂದ ಮೊದಲು ಹೊರಗೆ ಬರಬೇಕು. ಕೃತಿಗಿಂತಲೂ ಶಿಸ್ತು ನಿಯಮ ಪಾಲನೆ ಇಲ್ಲಿ ಅತೀ ಮುಖ್ಯ. ಕಷ್ಟದ ಆಸನ ಮಾತ್ರ ಯೋಗಾಸನವಲ್ಲ. ಅತ್ಯಂತ ಸರಳವಾದ ಲಘುವಾದ ಆಸನಗಳು ಹಲವು ಸಲ ಹೆಚ್ಚು ಪ್ರಯೋಜನಕಾರಿಯಾಗಿ ಪರಿಣಾಮವನ್ನು ನೀಡುತ್ತದೆ. ಮನಸ್ಸಿಗೆ ನಿರಾಳತೆಯನ್ನು ಒದಗಿಸುತ್ತದೆ. ಆದರೆ ಕಷ್ಟದ ಆಸನಗಳಿಗೆ ಎಲ್ಲರೂ ಹೆಚ್ಚು ಆಕರ್ಷಿತರಾಗುತ್ತಾರೆ. ಯಾವುದೋ ಕಷ್ಟದ ಆಸನ ಮಾಡುವಾಗ ಮನಸ್ಸು ಒತ್ತಡವನ್ನು ಅನುಭವಿಸುತ್ತದೆ. ಅದು ಸಾಧ್ಯವಾಗದೇ ಇದ್ದಾಗ ಹತಾಶೆಗೊಳಗಾಗುತ್ತದೆ. ಹಾಗಾಗಿ ಸರಳವಾದ ಲಘು ಆಸನಗಳನ್ನು ನಿತ್ಯ ಮಾಡಬೇಕು. ಇದರಲ್ಲಿ ಪರಿಣಾಮದ ಜತೆಗೆ ಮಾನಸಿಕ ನೆಮ್ಮದಿ ಇರುತ್ತದೆ. ತುಂಬ ಆಸನ ಮಾಡಿದರೆ ಹೆಚ್ಚು ಪರಿಣಾಮ ಎಂಬ ಭ್ರಮೆ ಸರಿಯಲ್ಲ. ಹತ್ತು ಹದಿನೈದು ನಿಮಿಷ ಆಸನಗಳನ್ನು ಮಾಡಿದರೆ ಧಾರಾಳವಾಗುತ್ತದೆ. ಯೋಗಾಭ್ಯಾಸ ಎಂಬುದು ಶಿಕ್ಷೆಯಲ್ಲ. ಅದು ಒಂದು ಭದ್ರವಾದ ರಕ್ಷೆ. ನಿಯಮ ಮೀರಿ ತಿಳಿಯದೇ ಇದನ್ನು ಮಾಡಿದರೆ ಇದು ಶಿಕ್ಷೆಯಾಗಿ ಪರಿಣಮಿಸುತ್ತದೆ. ಅಂತರ್ಜಾಲವನ್ನು ನೋಡಿ, ಯಾರೋ ಮಾಡಿದ್ದನ್ನು ನೋಡಿ ಯೋಗಾಭ್ಯಾಸ ಮಾಡುವುದು ದೊಡ್ಡ ತಪ್ಪು. ಯಾಕೆಂದರೆ ಪ್ರತಿಯೊಬ್ಬರ ದೇಹ ಪ್ರಕೃತಿ ವೆತ್ಯಸ್ತವಾಗಿರುತ್ತದೆ. ಪ್ರತೀ ದೇಹದ ಆವಶ್ಯಕತೆಗಳೂ ಬೇರೆ ಬೇರೆಯಾಗಿರುತ್ತದೆ. ಇದನ್ನು ತಿಳಿಯದೆ ಮಾಡುವುದು ದೊಡ್ಡ ಮೂರ್ಖತನವಾಗಬಹುದು. ಭುಜಂಗಾಸನ, ಬಾಲಾಸನ ವಜ್ರಾಸನ ಹೀಗೆ ಸರಳವಾದ ಆಸನಗಳನ್ನು ಬಿಡದೆ ಮಾಡಬೇಕು. ಇವುಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
ಯೋಗಾಭ್ಯಾಸ ಕೇವಲ ಒಂದೆರಡು ಘಂಟೆಯ ಕ್ರಿಯೆಯಲ್ಲ. ದಿನದ ಇಪ್ಪತ್ತನಾಲ್ಕು ಘಂಟೆಯೂ ಅದರ ಆಚರಣೆಯಾಗಬೇಕು. ಆಸನ ಪ್ರಾಣಾಯಾಮಕ್ಕಿಂತಲು ಯೋಗದ ನಿಯಮಗಳು ಅತೀ ಮುಖ್ಯ . ಯಮ ನಿಯಮ ಆಚರಿಸಿದ ನಂತರೆವೇ ಆಸನ ಪ್ರಾಣಾಯಾಮ. ನಮ್ಮ ದೈನಂದಿನ ಚಟುವಟಿಕೆಗಳು ಸೇವಿಸುವ ಆಹಾರ ಕ್ರಮಗಳು ಇವುಗಳು ಯೋಗಾಭ್ಯಾಸಕ್ಕೆ ಪೂರಕವಾದ ಸಂಬಂಧ ಹೊಂದಿರಬೇಕು. ಮುಖ್ಯವಾಗಿ ನಾವು ಭ್ರಮೆಯಿಂದ ಹೊರಬರಬೇಕು. ಇತ್ತೀಚೆಗೆ ಯೋಗದಿನದ ಕೆಲವರ ಯೋಗಾಭ್ಯಾಸವನ್ನು ನೋಡಿದಾಗ ಇದು ಪರಮ ಮೂರ್ಖತನ ಅಂತ ಅನ್ನಿಸುತ್ತದೆ. ಮುಖ್ಯವಾಗಿ ನಾವು ಸರಳವಾಗಿರಬೇಕು. ಆಧುನಿಕ ಐಷಾರಾಮ ಜೀವನದಿಂದ ಆದಷ್ಟು ದೂರವಿರಬೇಕು. ಉಡುಗೆ ತೊಡುಗೆ ಎಲ್ಲವೂ ಸರಳವಾಗಿದ್ದಷ್ಟು ಅದು ಜೀವನಕ್ಕೆ ಹತ್ತಿರವಾಗಿ ಮನಸ್ಸಿಗೆ ನಿರಾಳತೆಯನ್ನು ಒದಗಿಸುತ್ತದೆ.





