Tuesday, April 16, 2024

ಭಾಷೆ ಒಂದು ಸಂಸ್ಕಾರ

"ಭಾಷೆ ಉಳಿಯಬೇಕು. ಅದರೆ ಅದು ಹೇಗೆ ಉಳಿಯಬೇಕು?"

ಪ್ರತಿ ಬಾರಿ ಏನಾದರೊಂದು ವಿಚಾರವನ್ನು ಪ್ರಸ್ತಾಪಿಸಿ ಚರ್ಚೆಮಾಡಿ ಅಭಿಪ್ರಾಯ ಕೇಳುವುದು ನನ್ನ ಮಗಳ ಒಂದು ಹವ್ಯಾಸ. ಆಕೆಗೆ ಅನುಭವಕ್ಕೆ ಬರುವ ವಿಚಾರ ವೈವಿಧ್ಯಗಳು ತಂದು ನನ್ನಲ್ಲಿ ವಿನಿಮಯ ಮಾಡುತ್ತಿರುತ್ತಾಳೆ.   ಹಲವು ಸಲ ಗಂಭೀರ ವಿಚಾರಗಳು ನಮ್ಮೊಳಗೆ ಚರ್ಚೆಯಾಗುತ್ತವೆ. ಈ ಬಾರಿ ಆಕೆಯ ಕಾಲೇಜಲ್ಲಿ ನಡೆದ ಒಂದು ಘಟನೆಯ ಬಗ್ಗೆ ಚರ್ಚೆ. ಯಾರೋ ಒಬ್ಬರು ಹಿಂದಿ ಭಾಷೆಯವರು ಬಂದಿದ್ದರು. ಅವರು ಬಂದು ಮೂರು ವರ್ಷವಾದರೂ ಕನ್ನಡ ಭಾಷೆಯಲ್ಲಿ ಮಾತನಾಡುತ್ತಿರಲಿಲ್ಲ. ಆಗ ಒಬ್ಬಾಕೆ ಅವರಲ್ಲಿ ಕೇಳಿದಳಂತೆ ಕನ್ನಡ ರಾಜ್ಯದಲ್ಲಿ ಕನ್ನಡಕ್ಕೆ ಆದ್ಯತೆ. ಯಾಕೆ ಕನ್ನಡ ಕಲಿತಿಲ್ಲ? ಕರ್ನಾಟಕದಲ್ಲಿದ್ದರೆ ಕನ್ನಡ ಕಲಿಯಬೇಕು? ಇಲ್ಲಿ ಬಂದು ಹಿಂದಿ ಮಾತನಾಡುವ ಬದಲು ಕನ್ನಡವನ್ನು ಕಲಿತು ಮಾತನಾಡಬೇಕು. ಈಬಾರಿ ಇದರ ಬಗ್ಗೆ ನನ್ನಲ್ಲಿ ಅಭಿಪ್ರಾಯ ಕೇಳಿದಳು. ನನಗೂ ಇದರಲ್ಲಿ ತಪ್ಪೇನು ಕಾಣಲಿಲ್ಲ.  ಆದರೆ ಚಿಂತನೆ ಯಾವಾಗಲೂ ಸೀಮಿತವಾಗಿರಬಾರದು. ಚಿಂತನೆಯ ದೃಷ್ಟಿ ವಿಶಾಲವಾಗಿರಬೇಕು. ಇದು ನನ್ನ ಅಭಿಮತ. ಪ್ರತಿಬಾರಿಯು ಹಲವು ವಿಚಾರಗಳಲ್ಲಿ ವಿಷದವಾಗಿ ನನ್ನೊಡ ಪಾಟ್ ಕ್ಯಾಶ್ ಮಾಡುವ ಮಗಳಿಗೆ ನಾನು ಏನು ಹೇಳಬಲ್ಲೆ ಎಂಬ ಕುತೂಹಲವಿತ್ತು. ಆ ಹುಡುಗಿ ಹೇಳಿದ ಮಾತು  ಬಹಳ ನ್ಯಾಯವಾದ ಮಾತು. ಕನ್ನಡನಾಡಲ್ಲಿ ಕನ್ನಡವನ್ನು ಕಲಿತು ಮಾತನಾಡಬೇಕು. ಅದು ನಾಡಿಗೆ ಭೂಮಿಯ ಸಂಸ್ಕೃತಿಗೆ ಸಲ್ಲಿಸುವ ಗೌರವ.  ಚಿಂತನೆಯನ್ನು ಮತ್ತಷ್ಟು ವಿಶಾಲಗೊಳಿಸಿದರೆ, ನಾನು ಅದನ್ನೇ ಆಕೆಯಲ್ಲಿ ಹೇಳಿದೆ. ಭಾಷೆ ಉಳಿಯಬೇಕು. ಅದರೆ ಅದು ಹೇಗೆ ಉಳಿಯಬೇಕು ಯಾವ ಬಗೆಯಲ್ಲಿರಬೇಕು? ಎನ್ನುವುದು ಅಷ್ಟೇ ಮುಖ್ಯವಾಗುತ್ತದೆ.

  ಹಿಂದಿಯವರು ಒಂದುವೇಳೆ ಕನ್ನಡ ಕಲಿಯುವ ಮನಸ್ಸು ಮಾಡಿದರೆ ಅವರು ಕಾಣುವ ಕನ್ನಡ ಹೇಗಿರಬೇಕು ಎನ್ನುವುದು ಅಷ್ಟೇ ಪ್ರಾಮುಖ್ಯತೆಯನ್ನು ಕೊಡುತ್ತದೆ.  ಆಕೆಯ ಆವೇಶ ಭರಿತವಾದ ಗಂಭೀರವಾದಕ್ಕೆ ಎಲ್ಲರೂ ಚಪ್ಪಾಳೆ ಹೊಡೆಯುತ್ತಾರೆ. ಆದರೆ ಉಳಿದಂತೆ  ಭಾಷೆಯ ಬಗ್ಗೆ ಚಿಂತಿಸುವವರು ಕಡಿಮೆ.  ವಾಸ್ತವದ ಸ್ಥಿತಿ ಹೇಗಿರುತ್ತದೆ ಎಂದರೆ ಒಂದುವೇಳೆ ಆಕೆಯಲ್ಲೇ ಕೇಳಿದರೆ,  ಕನ್ನಡದ ಸಾಹಿತಿಗಳ ಹೆಸರು, ಕವಿಗಳ ಹೆಸರು. ಹೋಗಲಿ ಕನ್ನಡದ ಅಕ್ಷರಮಾಲೆಯನ್ನಾದರೂ ಹೇಳುವಷ್ಟು ಜ್ಞಾನ ಇರಬಹುದೇ? ನಂಬುವುದು ಕಷ್ಟ. ಸಾಹಿತಿ ಕವಿಗಳ ಹೆಸರಿಗಿಂತ ಅವರು ಬರೆದ ಪುಸ್ತಕಗಳಿಗಿಂತ ಸಿನಿಮಾ ನಟ ನಟಿಯರ ಬಗ್ಗೆ ಅವರ ಸಿನಿಮಾಗಳ ಬಗ್ಗೆ ತಿಳಿದಿರುತ್ತದೆ. ಬಾಯಾರಿದಾಗ ನೀರು ಕುಡಿಯಬೇಕು ಹೌದು. ನಾವು ಕುಡಿಯುವ ನೀರು ಪರಿಶುದ್ದವಾಗಿರಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. 

ಭಾಷೆ ಎಂಬುದು ಪರಸ್ಪರ ಸಂವಹನಕ್ಕೆ ಇರುವ ಒಂದು ಮಾಧ್ಯಮ. ಮನುಷ್ಯ ಮನುಷ್ಯನದ್ದು ಜೀವ ಜೀವಗಳ ಸಂಸ್ಕಾರ ಅರಿವಿಗೆ ಬರುವುದೇ ಭಾಷೆಗಳಿಂದ. ಅದು ಯಾವ ಭಾಷೆಯೂ ಇರಬಹುದು. ಒಂದು ಶುದ್ದ    ಸಂಸ್ಕಾರ ಒಂದು ಭಾಷೆಯಿಂದ ವ್ಯಕ್ತವಾಗುವಾಗ ಸಂಸ್ಕಾರಕ್ಕೆ ವ್ಯಕ್ತವಾಗುವ ಗೌರವ ಭಾಷೆಗೂ ವ್ಯಕ್ತವಾಗುತ್ತದೆ. ಅದರಂತೆ ಕೆಟ್ಟ ಸಂಸ್ಕಾರಕ್ಕೆ ಭಾಷೆ ಮಾಧ್ಯಮವಾಗುವಾಗ ಅಲ್ಲಿ ಭಾಷೆಗೂ ಸಲ್ಲುವ ಮಾನದಂಡ ಅದೇ ಆಗಿರುತ್ತದೆ. ಒಬ್ಬ ಪ್ರವಚನಕಾರ ಉದಾತ್ತ ತತ್ವಗಳನ್ನು ಭಾಷೆಯ ಮೂಲಕ ಪ್ರವಚಿಸುವಾಗ ಭಾಷೆಗೌರವಿಸುವಂತೆ, ಒಬ್ಬ ಮದ್ಯವ್ಯಸನಿ ಕುಡುಕ ಅದೇ ಭಾಷೆಯಲ್ಲಿ ಆವಾಚ್ಯತೆಯನ್ನು ಪ್ರದರ್ಶಿಸುತ್ತಾನೆ ಎಂದಾದರೆ ಭಾಷೆ ಯಾವ ಮಟ್ಟಕ್ಕೆ ಇಳಿದು ಬಿಡುತ್ತದೆ ಎಂದು ಅರಿವಾಗುತ್ತದೆ.  ಇದು ಒಂದಾದರೆ ಭಾಷೆ ಕೇವಲ ಮಾತುಗಳ ಶಕ್ತಿ, ಅಂದರೆ ವಾಕ್ ಸಾಮಾರ್ಥ್ಯವನ್ನು ಅನುಸರಿಸುತ್ತದೆ. ಹೀಗಿರುವಾಗ ಒಬ್ಬ ಮೂಗನಿಗೆ ಯಾವ ಭಾಷೆಯ ಬಾಂಧವ್ಯ ಒದಗಿ ಬರುತ್ತದೆ? ಆತನ ಸಂವಹನ ಸಲ್ಲಿಸುವ ಮಾತುಗಳು ಯಾವ ಭಾಷೆಯಲ್ಲಾದರೂ ಅದು ಒಂದೇ ಆಗಿರುತ್ತದೆ. ಕನ್ನಡವನ್ನು ಅರ್ಥವಿಸುವಂತೆ, ಅದನ್ನು ಹಿಂದಿಯವನೂ ಅರ್ಥವಿಸಿಕೊಳ್ಳಬಲ್ಲ. ಹಕ್ಕಿಯ ಕಲರವಕ್ಕೆ ಪ್ರಕೃತಿಯ ಸಂವೇದನೆಗಳಿಗೆ  ಯಾವ ಭಾಷೆಯ ಸೀಮೆಯೂ ಇರುವುದಿಲ್ಲ. ಕರ್ನಾಟಕದಲ್ಲಿ ಕೋಗಿಲೆ ಕೂಗಿದಂತೆ ಅಲ್ಲಿ ದೂರದ ಉತ್ತರದಲ್ಲೂ ಕೋಗಿಲೆ ಕೂಗಿಬಿಡುತ್ತದೆ. ಪ್ರಕೃತಿಯ ಸ್ಪಂದನೆಯೂ ಅದೇ ಬಗೆಯಲ್ಲಿರುತ್ತದೆ. ಕೂಗುವ ಕೋಗಿಲೆಗೆ, ಕೈ ಭುಜ ಕುಣಿಸುವ ಮೂಗನಿಗೆ ಇಲ್ಲದ ಭಾಷಾಭೇದ ನಾಲಿಗೆಯಲ್ಲಿ ವಾಕ್ ಶಕ್ತಿಯನ್ನು ಹೊಂದಿರುವವನಿಗೆ ಇರುತ್ತದೆ. ಮಾತನಾಡಬಲ್ಲವನು ಸಾಮರಸ್ಯ ಬಲ್ಲವನಲ್ಲ. 

ಯಾವುದೇ ವಸ್ತುವಿನ ಅಥವಾ ಜೀವಗಳ ಅಸ್ತಿತ್ವ ಇರುವುದು ಅದರ ಬಳಕೆಯಲ್ಲಿ ಮನುಷ್ಯನಾದರೂ ಜೀವದಲ್ಲಿರುವುದಕ್ಕಿಂತಲೂ ತಾನು ಹೇಗಿದ್ದೇ ಎಂಬುದರಲ್ಲಿ ಅಸ್ತಿತ್ವವನ್ನು ಕಾಣುತ್ತಾನೆ. ಹಾಡುವ ಸಂಗೀತ ಒಂದೇ ಆದರೂ ಬೀದಿ ಬದಿಯ ಭಿಕ್ಷುಕನ ಹಾಡಿಗೂ ವೇದಿಕೆಯ ಮೇಲಿನ ಗಾಯಕನ ಗಾಯನಕ್ಕೂ ಅಸ್ತಿತ್ವದಲ್ಲಿ ವೆತ್ಯಾಸವಿರುತ್ತದೆ.  ಭಾಷೆಯೂ ಹಾಗೆ ಅದರ ಉಪಯೋಗದಲ್ಲಿ ಅದರ ಅಸ್ತಿತ್ವ ಇರುತ್ತದೆ. ಲೋಟದಲ್ಲಿ ಹಾಲು ತುಂಬಿಸಿದರೂ ಮದ್ಯ ತುಂಬಿದರೂ ಕೆಲಸ ಒಂದೇ. ತುಂಬಿಸುವುದು. ಅದರಂತೆ ಭಾಷೆ. ಅದು ಪರಿಶುದ್ದವಾಗುವುದು ಅದರ ಬಳಕೆಯಲ್ಲಿ.  ಕನ್ನಡ ಎಷ್ಟು ಪರಿಶುದ್ದವಾಗಿ ಉಳಿದೆ ಎಂಬುದನ್ನು ಆತ್ಮಾವಲೋಕನ ಮಾಡಬೇಕು. ಬೆಂಗಳೂರಿನ ಹಾದಿ ಹೋಕನಲ್ಲಿ ಒಂದು ಸಲ ವಿಳಾಸ ವಿಚಾರಿಸಿ, ಆತ ಹೇಳುವ ವಿಳಾಸ, ಸ್ಟ್ರೈ ಟ್ ಹೋಗಿ, ಡೆಡ್ ಎಂಡಲ್ಲಿ ರೈಟ್ ತೆಗೆಯಿರಿ, ಹೀಗೆ ಕನ್ನಡವೇ ಇಲ್ಲದ ಕನ್ನಡ ಭಾಷೆಯ ಅನುಭವವಾಗುತ್ತದೆ. ಉಪಯೋಗಿಸುವ ಭಾಷೆಯಲ್ಲಿ ಅಲ್ಲೊಂದು ಇಲ್ಲೊಂದು ಕನ್ನಡವಿದ್ದರೆ ಅದು ಕನ್ನಡದ ಜೀವಂತಿಗೆಯ ಲಕ್ಷಣ ಎಂದು ತಿಳಿಯಬೇಕು. ನಮಗರಿವ ಇಂಗ್ಲೀಷ್  ಸಾಹೇಬನ ಭಾಷೆ ನಮಗೆ ಸುಲಭವಾಗಿ ಇಷ್ಟವಾಗುತ್ತದೆ. ಇಲ್ಲಿ ಇಂಗ್ಲೀಷ್ ಮಾತನಾಡಿದರೆ ತಪ್ಪಲ್ಲ. ಬದಲಿಗೆ ಹಿಂದಿಯೋ ತಮಿಳೋ ಮಲಯಾಳವೋ ಅಪ್ಪಟ ಭಾರತೀಯ ಭಾಷೆ  ಮಾತನಾಡಿದರೆ ಅಲ್ಲಿ ಭಾಷಾಭಿಮಾನದ ಪಾಠ ಎದುರಾಗುತ್ತದೆ.  ಇಂಗ್ಲೀಷ್ ಬೇಕಾಗುವವನಿಗೆ ನಮ್ಮದೆ ಹಿಂದಿ ತಮಿಳು ಯಾಕೆ ಬೇಡವಾಗುತ್ತದೆ? ನಿಜವಾಗಿಯೂ ನಮ್ಮಲ್ಲಿ ಆತ್ಮಾಭಿಮಾನ ಜಾಗೃತವಾಗಬೇಕಾಗಿರುವುದು ನಮ್ಮ ಸಾಹೋದರ್ಯದಲ್ಲಿ. ನಮ್ಮ ಒಡ ಹುಟ್ಟಿದವನ ಮಾತು ನಾವು ಕೇಳಲಾರೆವು. ಆತನನ್ನು ನಮ್ಮವ ಎಂದು ತಿಳಿಯಲಾರೆವು,  ಬದಲಿಗೆ ಯಾರೋ ಬೀದಿ ಹೋಕ, ತೃತಿಯ ಪ್ರಜೆ ನಮ್ಮ ಬಂಧುವಾಗುತ್ತಾನೆ. 

ಕನ್ನಡ ಭಾಷೆಯ ಪ್ರತಿನಿಧಿಗಳು ಎಂದು ಸ್ವತಃ ಕರೆಸಲ್ಪಡುವ ಸಿನಿಮಾ ನಟ ನಟಿಯರು ಆಗಾಗ ತಮ್ಮ ಅಸ್ತಿತ್ವ ಪ್ರದರ್ಶನಕ್ಕೆ ಮಾಧ್ಯಮಗಳ ಎದುರು ಬಂದು ಬಿಡುತ್ತಾರೆ. ತಮ್ಮ ಸಿನಿಮಾಗಳಲ್ಲಿ ಉದ್ದುದ್ದ ಭಾಷಾಭಿಮಾನವನ್ನು ತೋರಿಸುವ  ಇವರು ಅಭಿಮಾನಿಗಳ ಕರತಾಡನ ಗಿಟ್ಟಿಸುತ್ತಾರೆ. ಕರತಾಡನದೋಂದಿಗೆ ಅವರ ಸಿನಿಮಾಗಳೂ ಓಡುತ್ತವೆ, ಒಂದಷ್ಟು ಸಂಪಾದನೆಯೂ ಆಗಿಬಿಡುತ್ತದೆ. ಅದೇ ನಟ ನಟಿಯರು ಹೀಗೆ ಮಾಧ್ಯಮಗಳ ಎದುರು ಬಂದು ಮಾತನಾಡುವಾಗ ಅಲ್ಲಿ ಕನ್ನಡಕ್ಕಿಂತ ಹೆಚ್ಚು  ಆಂಗ್ಲ ಭಾಷೆ ಬಳಕೆಯಾಗುತ್ತದೆ. ಯಾಕೆಂದರೆ ಅವರಿಗೆ ಬರುವ ಕನ್ನಡ ಅಷ್ಟೇ. ಸಿನಿಮಾದಲ್ಲಿ ಅವರಿಗೆ ಸಹಾಯಕ್ಕೆ ಬರುವ ನಿರ್ದೇಶಕ, ಸಂಭಾಷಣೆ ಬರಹಗಾರ ಇಲ್ಲಿ ಸಹಾಯಕ್ಕೆ ಬರುವುದಿಲ್ಲ. ಹಾಗಾಗಿ ಸಿನಿಮಾದಲ್ಲಿ ವ್ಯಕ್ತವಾಗುವ ಭಾಷಾಭಿಮಾನದ ಕಾರಣ ವ್ಯಕ್ತವಾಗುತ್ತದೆ.  ಇತ್ತೀಚೆಗೆ ಹೋರಾಟಗಾರರೊಬ್ಬರು ಅನ್ಯ ಭಾಷೆಯವರಿಗೆ ಬೈಯುವ ಮಾತುಗಳನ್ನು ಕೇಳುವಾಗ ನಿಜಕ್ಕೂ ಆತಂಕವಾಗಿದ್ದು ಇದೂ ನಮ್ಮ ಕನ್ನಡ ಭಾಷೆಯಲ್ಲಿದೆಯಾ ...ಇದ್ದರೂ ಅದು ಹೀಗೂ ಬಹಿರಂಗ ಪ್ರದರ್ಶನಕ್ಕೆ ಬಂದು ವೀರಾವೇಶಕ್ಕೆ ಪ್ರತೀಕವಾಗಬೇಕಾ? ಹೋರಾಟ ಅತ್ಯವಶ್ಯ ಆದರೆ ಆ ಮೂಲಕ ಹೊರಗೆ ದರ್ಶಿಸಲ್ಪಡುವ ಸಂಸ್ಕಾರ ಭಾಷೆಯ ಗೌರವವನ್ನು ಹೇಗೆ ಅವನತಿಗೆ ತಳ್ಳಿಬಿಡುತ್ತದೆ ಎಂದು  ಯೋಚಿಸುವುದಿಲ್ಲ. ಕನ್ನಡ ಉಳಿಯಬೇಕು ನಿಜ. ಆದರೆ ಮುಂದಿನ ತಲೆಮಾರಿಗೆ ನಾವು ಎಂತಹ ಕನ್ನಡ ಭಾಷೆಯನ್ನು ಉಳಿಸಿಬಿಡುತ್ತೇವೆ ಎಂದರೆ ದಿಗಿಲಾಗಿಬಿಡುತ್ತದೆ. 

ಇದು ಕೇವಲ ಕನ್ನಡಕ್ಕೆ ಸೀಮಿತವಾಗಿಲ್ಲ. ಪ್ರತಿಯೊಂದು ಭಾಷೆಗೂ ಇದು ಅನ್ವಯವಾಗಬಹುದು. 


Sunday, March 31, 2024

ಶಾಲೆಯ ಸಜ್ಜಿಗೆಯ ನೆನಪು

  ಅಂದು ಪುಟ್ಟ ಬಾಲಕ ಪೈವಳಿಕೆ ಶಾಲೆಯ ಎರಡನೇ ತರಗತಿಯಲ್ಲಿ ಕಲಿಯುತ್ತಿದ್ದೆ. ಆದಿನ ಬಹಳ ಖುಷಿಯಲ್ಲಿ ಶಾಲೆಗೆ ಹೊರಟಿದ್ದೆ.  ಹೆಗಲಿಗೆ ನೇತಾಡಿಸಿದ ಬಟ್ಟೆ ಚೀಲದಲ್ಲಿದ್ದ ಸ್ಲೇಟು ಪುಸ್ತಕದ ನಡುವೆ ಇಟ್ಟಿದ್ದ ಸಣ್ಣ ಅಲ್ಯುಮಿನಿಯಂ ತಟ್ಟೆಯನ್ನು ಆಗಾಗ ತಡವಿ ನೋಡಿಕೊಳ್ಳುತ್ತಿದ್ದೆ.  . ಕಪ್ಪು ಕಪ್ಪಾದ ತಟ್ಟೆ. ಮನೆಯಲ್ಲಿ ಅದನ್ನು ಅಷ್ಟಾಗಿ ಉಪಯೋಗಿಸುತ್ತಿರಲಿಲ್ಲ.  ಆತಟ್ಟೆಯನ್ನು ಮನೆಯಿಂದ ಯಾರಿಗೂ ತಿಳಿಯದಂತೆ ಎತ್ತಿಟ್ಟಿದ್ದೆ.  ಆಗ ನನ್ನಂತೆ ಕೆಲವರು ನಮ್ಮ ಮನೆಯಿಂದ ಒಟ್ಟಿಗೇ ಹೋಗುತ್ತಿದ್ದೆವು. ಎಲ್ಲರೂ ನನ್ನಿಂದ ಹಿರಿಯರು. ತಟ್ಟೆಯ ವಿಚಾರ ತಿಳಿದರೆ ಖಂಡಿತ ಬೈಯುತ್ತಾರೆ.  

ಆದಿನ ಹನ್ನೊಂದುಘಂಟೆಯಾಗುವುದನ್ನೇ ಕಾಯುತ್ತಿತ್ತು ಮನಸ್ಸು. ಹನ್ನೊಂದು ಎರಡನೇ ಘಂಟೆ ಬಾರಿಸಿದ ಪೀಯೊನ್ ನಮ್ಮ ತರಗತಿಗೆ ಬಂದು ಸಜ್ಜಿಗೆ ತಿನ್ನಲು ಬನ್ನಿ ಎಂದು ಕರೆದ.  ಮಕ್ಕಳು ಎಲ್ಲರೂ ತಂದಿದ್ದ ತಟ್ಟೆಯನ್ನು ಎತ್ತಿಕೊಂಡು ಹೊರಟರು. ನಾನೂ ಹೊರಟೆ. ಎರಡು ದಿನ ನನಗೆ ಸಜ್ಜಿಗೆ ಸಿಗಲಿಲ್ಲ. ಕಾರಣ ತಟ್ಟೆ ಇಲ್ಲ. ಅದುವರೆಗೆ ಯಾವುದೋ ಕಾಗದದ ತುಂಡು ತೆಗೆದುಕೊಂಡು ಅದರಲ್ಲೇ ಹಾಕಿಸಿ ತಿನ್ನುತ್ತಿದ್ದೆವು. ಮೊನ್ನೆ ಪೇಪರ್ ಗೆ ಸಜ್ಜಿಗೆ ಬಡಿಸುವುದಿಲ್ಲ ಎಂದು ಹೇಳಿದ ನಂತರ, ತಿನ್ನದೇ ಹಾಗೇ ವಾಪಾಸು ಬಂದಿದ್ದೆ. ಅಂದಿನ ಹಸಿವಿಗೆ ಉತ್ತರವಿರಲೇ ಇಲ್ಲ. ಆದಿನದ ಸಂಭ್ರಮ ಸಜ್ಜಿಗೆ ತಿನ್ನುವುದರಲ್ಲಿತ್ತು. ಎಲ್ಲರ ಜತೆಗೆ ತಾನೂ ತಿನ್ನಬಹುದು ಎನ್ನುವ ಬಯಕೆ ಈಡೇರಿತ್ತು. ಮನೆಯಿಂದ ಕದ್ದು ತಂದಿದ್ದ ತಟ್ಟೆಯಲ್ಲಿ ಸಜ್ಜಿಗೆ ಹಾಕಿ ತಿಂದಾಗ ಜಗತ್ತನ್ನೇ ಗೆದ್ದ ಅನುಭವ ಆ ಪುಟ್ಟ ಮನಸ್ಸಿಗೆ ಆಗಿತ್ತು. ಶಾಲೆಯಲ್ಲಿ ಮಾಡುತ್ತಿದ್ದ ಸಜ್ಜಿಗೆ ತಿನ್ನುವುದಕ್ಕೆ ಮನೆಯಲ್ಲಿ ಬಿಡುತ್ತಿರಲಿಲ್ಲ. ಆದರೆ ನನ್ನ ಹಸಿವಿಗೆ ಉತ್ತರವಾಗಿ ಆ ಸಜ್ಜಿಗೆ ಇರುತ್ತಿತ್ತು. ಆದಿನ ಆ ತಟ್ಟೆಯನ್ನು ಶಾಲೆಯಲ್ಲೇ ಬಿಟ್ಟಿದ್ದೆ. ತರಗತಿಯ ಅಂಚಿಗೆ ಎರಡು ದೊಡ್ಡ ಕಪಾಟು ಇತ್ತು. ಅದರ ಅಡಿಗೆ ತಟ್ಟೆಯನ್ನು ಇಟ್ಟಿದ್ದೆ. ಮನೆಗೆ ಕೊಂಡು ಹೋದರೆ ಪುನಃ ತರುವ ಭರವಸೆ ಇರಲಿಲ್ಲ.   ಸಾಯಂಕಾಲ ಮನೆಗೆ ಹೋದಾಗ ಅಮ್ಮನಲ್ಲಿ ತಟ್ಟೆಯನ್ನು ಎತ್ತಿಕೊಂಡು ಹೋದ ವಿಷಯ ಹೇಳಿದೆ. ಪುಟ್ಟ ಬಾಲಕ ನನಗೆ ಮುಚ್ಚಿಡುವುದಕ್ಕೆ ಬರಲಿಲ್ಲ. ಅಮ್ಮ ಯಾಕೋ ಬೈಯಲಿಲ್ಲ. ಬೈಗುಳದ ನಿರೀಕ್ಷೆಯಲ್ಲಿದ್ದೆ. ಆದರೆ ಅಮ್ಮ ಕೇಳಿದರು ಸಜ್ಜಿಗೆ ತಿಂದಿಯಾ ಅಂತ?  ಮನೆಯಲ್ಲಿ ಆಕೆಗೆ ಮಾತ್ರ  ನನ್ನ ಹಸಿವಿನ ಅರಿವಿತ್ತು. ಹೆತ್ತಮ್ಮ ಅಲ್ಲವೇ? ಏನೂ ಬೈಯಲಿಲ್ಲ.

  ಪೈವಳಿಕೆ ನಗರದ ಪ್ರಾಥಮಿಕ ಶಾಲೆ ಮತ್ತು ಬಾಯಾರು ಸಮೀಪ  ಇದ್ದ ಗಾಳಿಯಡ್ಕದ ಶಾಲೆಯ ಬಳಿಯಲ್ಲೆ ಹಲವು ಸಲ ನಾನು ಹೋಗುತ್ತಿರುತ್ತೇನೆ. ಒಂದು ಕಾಲದಲ್ಲಿ, ಒಂದರಿಂದ ಎರಡನೆ ತರಗತಿಗೆ ಹೋದ ಪೈವಳಿಕೆ ಶಾಲಾ ದಿನದ ನೆನಪು ಹಾಗು ಗಾಳಿಯಡ್ಕ ಶಾಲೆಯ ಮೂರನೆಯ ತರಗತಿಯ ದಿನಗಳು ನೆನಪಾಗುತ್ತವೆ. ಸುಮಾರು ಎಪ್ಪತರ ದಶಕದ ಆರಂಭದ  ದಿನಗಳು ಅವು. ಪೈವಳಿಕೆ ಚಿಕ್ಕ ಹಳ್ಳಿಯಾದರೆ, ಗಾಳಿಯಡ್ಕದ ಶಾಲೆ ಜನ ವಸತಿಯೇ ಇಲ್ಲದ ಗುಡ್ಡದ ಬಯಲಿನಲ್ಲಿ ಇತ್ತು. ಈಗ ಅಲ್ಲಿ ಹಲವು ಜನವಸತಿಗಳಾಗಿ ಹೊಸ ಊರು ಸೃಷ್ಟಿಯಾಗಿದೆ. ಬಾಲ್ಯದಲ್ಲಿ ಅಲ್ಲಿ ಹಗಲಿನಲ್ಲಿ ಸುತ್ತಾಡುವುದಕ್ಕೂ ಭಯ ಪಡಬೇಕಿತ್ತು. ಈಗ ಇಲ್ಲೆಲ್ಲ ಸಂಚರಿಸುವಾಗ ಬಾಲ್ಯದ ಶಾಲಾ ದಿನಗಳು ನೆನಪಾಗುತ್ತವೆ ಎಂಬುದು ಹೌದಾದರೂ ಅಲ್ಲಿಯೂ ನನಗೆ ನೆನಪಿಗೆ ಬರುವುದು, ಈ ಶಾಲೆಯಲ್ಲಿ ಕಲಿತ ವರ್ಣಮಾಲೆಯ ಅಕ್ಷರಗಳಲ್ಲ. ಉರು ಹೊಡೆದ ಮಗ್ಗಿಯಲ್ಲ. ಅಥವಾ ಬಾಲ್ಯದಲ್ಲಿ ಆಡಿದ ಆಟಗಳಲ್ಲ. ಬದಲಿಗೆ ನೆನಪಿಗೆ ಬರುವುದು ಈ ಶಾಲೆಯಲ್ಲಿ ಮಾಡಿ ಬಡಿಸುತ್ತಿದ್ದ’ ಸಜ್ಜಿಗೆ’. ಒಂದು ಬದುಕಿನ ಪುಟಗಳಲ್ಲಿ ಅಳಿಸದ ನೆನಪುಗಳನ್ನು ಉಳಿಸಬೇಕಿದ್ದರೆ ಅದರ ಭಾವನಾತ್ಮಕ ನಂಟು ಅದಾವ ಬಗೆಯದಿರಬಹುದು? 

   ಸರಕಾರ ಶಾಲಾ ಮಕ್ಕಳಿಗೆ ಉಚಿತವಾಗಿ ಒದಗಿಸುತ್ತಿದ್ದ ಒಂದು ಬಗೆಯ ಸಜ್ಜಿಗೆ. ಸಜ್ಜಿಗೆ ಎಂದರೆ ಬನ್ಸಿರವೆ ಅಥವಾ ಖಂಡ್ವ ರವೆಯ ಉಪ್ಪಿಟ್ಟು ಖಾರಾ ಬಾತ್ ಅಲ್ಲ.  ಗೋಧಿಯನ್ನು ತರಿದು ಮಾಡಿದಂತೆ ಅನಿಸಿದರೂ ಅದು ಯಾವುದೋ ಒಂದು ಬಗೆಯ ಸಜ್ಜಿಗೆ. ಗೋಧಿಯ ಸಿಪ್ಪೆಗಳು ಒಂದಷ್ಟು ಇನ್ನಿತರ ಧಾನ್ಯಗಳ ಪುಡಿಯೂ ಇತ್ತು ಎಂದು ನನ್ನ ನೆನಪು.  ಆ ಕಾಲದಲ್ಲಿ ಅಮೇರಿಕದಿಂದ ಉಚಿತವಾಗಿ ಗೋಧಿ ಬರುತ್ತಿತ್ತು. ಅದನ್ನೇ ಸಜ್ಜಿಗೆ ಮಾಡಿ ಸರಕಾರ ಕೊಡುತ್ತಿತ್ತು ಎಂದು ಹೇಳುವುದನ್ನು ಕೇಳಿದ್ದೆ.  ಈ ಸಜ್ಜಿಗೆಗೆ ಉಪ್ಪು ಬಿಟ್ಟರೆ ಬೇರೆ ಎನೂ ಇರುತ್ತಿರಲಿಲ್ಲ. ಆದರೂ ಅದರ ಆಕರ್ಷಣೆ ಬಿಡದ ಮೋಹವಾಗಿತ್ತು.   ಈ ಸಜ್ಜಿಗೆ ನೆನಪಿಗೆ ಬರುವುದಕ್ಕೆ ಹಲವಾರು ಭಾವನಾತ್ಮಕ ಕಾರಣಗಳಿವೆ. ಮುಖ್ಯವಾಗಿ ಪೈವಳಿಕೆ ಶಾಲೆಯಲ್ಲಿ ನಾವು ಕದ್ದು ಮುಚ್ಚಿ ಮನೆಯವರಿಗೆ ತಿಳಿಯದಂತೆ ಸಜ್ಜಿಗೆ ತಿನ್ನುತ್ತಿದ್ದೆವು. ಶಾಲೆಯಲ್ಲಿ ಸಿಗುತ್ತಿದ್ದ ಈ ಸಜ್ಜಿಗೆ ತಿಂದರೆ ಸಹಜವಾಗಿ ಸಂಪ್ರದಾಯ ಬದ್ದರಾದ ನಮ್ಮ ಮನೆಯಲ್ಲಿ ಬೈಯುತ್ತಿದ್ದರು. ಸರಕಾರಿ ಸಜ್ಜಿಗೆ, ಅಲ್ಲಿ ಯಾರೋ ಮಾಡುತ್ತಾರೆ, ಅದರಲ್ಲಿ ಹುಳ ಎಲ್ಲ ಇರುತ್ತದೆ ಹೀಗೆ ನಮ್ಮನ್ನು ಹೆದರಿಸುತ್ತಿದ್ದರು. ಆದರೂ ನಾವು ಬೆಳಗ್ಗೆ ಶಾಲೆಗೆ ಹೋಗುವಾಗ ತಿನ್ನುವುದಿಲ್ಲ ಎಂದು ಯೋಚಿಸಿದರೂ ಸಜ್ಜಿಗೆ ಮಾಡಿ ಎಲ್ಲರನ್ನು ಕರೆಯುತ್ತಿರಬೇಕಾದರೆ ಸಹಪಾಠಿಗಳ ಜತೆಗೆ ಓಡಿ ಕುಳಿತು ಬಿಡುತ್ತಿದ್ದೆವು. ಮುಖ್ಯ ಕಾರಣ ಆಗ ಬಾಧಿಸುತ್ತಿದ್ದ ಹಸಿವು. ಹಸಿವು ಎಲ್ಲವನ್ನು ಮಾಡಿಸಿಬಿಡುತ್ತದೆ. ಅದೊಂದು ಶಾಲೆ ಕಲಿಸಿದ ಪಾಠ. 

ಹಸಿವು ಎಂದರೆ ಬಾಲ್ಯದ  ಆ ಹಸಿವಿಗೆ ಅದೊಂದು ಪ್ರಖರತೆ ಇತ್ತು. ಏನು ತಿಂದರೂ ಇಂಗದ ಹಸಿವು. ಬೆಳಗ್ಗೆ ಒಂದಷ್ಟು ತಿಳಿಗಂಜಿಯನ್ನು ತಿಂದು ಅದನ್ನೇ ಬುತ್ತಿ ಪಾತ್ರೆಗೆ ತುಂಬಿಸಿ ತಂದರೆ ಅದಕ್ಕಿಂತ ಈ ಸಜ್ಜಿಗೆಯ ಆಕರ್ಷಣೆ ಸಹಜವಾಗಿ ಅಧಿಕವಾಗಿತ್ತು. ಬಿಸಿ ಬಿಸಿ ಸಜ್ಜಿಗೆಯ ಪರಿಮಳವೇ ಅದ್ಭುತವಾಗಿತ್ತು. ಈಗ ಎಲ್ಲಬಗೆಯ ಪದಾರ್ಥಗಳನ್ನು ಹಾಕಿದ ಉಪ್ಪಿಟ್ಟಿನ ರುಚಿ ಆ ಸಜ್ಜಿಗೆ ಸಮಾನವಲ್ಲ ಅಂತ ಅನ್ನಿಸುತ್ತದೆ. ಬೆಳಗ್ಗೆ ಶಾಲೆ ಆರಂಭವಾಗುತ್ತಿದ್ದಂತೆ ಶಾಲೆಯ ಪಿಯೊನ್ ಅದರ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದರು. ಎಲ್ಲಾ ತರಗತಿಯಿಂದ ಹಿರಿಯ ವಿದ್ಯಾರ್ಥಿಗಳನ್ನು ಸಹಾಯಕ್ಕೆ ಕರೆದು ಕೊಂಡು ಹೋಗಿ ಸಜ್ಜಿಗೆ ಪಾಕ ಸಿದ್ದ ಮಾಡಿಸುತ್ತಿದ್ದರು.  ಹನ್ನೊಂದು ಘಂಟೆಯಾಗುತ್ತಿದ್ದಂತೆ ಒಂದೊಂದೇ ಕ್ಲಾಸಿನಿಂದ ಮಕ್ಕಳನ್ನು ಕರೆದು ಸಜ್ಜಿಗೆ ಬಡಿಸುತ್ತಿದ್ದರು.  ಅವರ ಕರೆಗೆ ಮಕ್ಕಳು ಕಾದಿರುತ್ತಿದ್ದರು. ಸಜ್ಜಿಗೆ ತಿನ್ನುವುದಕ್ಕೆ ತಟ್ಟೆ ಮನೆಯಿಂದ ತರಬೇಕಿತ್ತು. ತಟ್ಟೆ ಇಲ್ಲದೆ  ನಾವು ಕೆಲವರು ಕಾಗದದ ಚೂರಲ್ಲೂ ಹಾಕಿಸಿ ತಿನ್ನುತ್ತಿದ್ದೆವು.  ಒಂದು ಬಾರಿ ಕಾಗದದಲ್ಲಿ ಸಜ್ಜಿಗೆ ಕೊಡುವುದಿಲ್ಲ ಎಂದಾಗ ನಾನು ಮನೆಯಿಂದ ಹಳೆಯ ಅಲ್ಯುಮಿನಿಯಂ ತಟ್ಟೆಯೊಂದನ್ನು ಯಾರಿಗೂ ತಿಳಿಯದಂತೆ ತೆಗೆದುಕೊಂಡು ಹೋಗಿದ್ದೆ. ಸಜ್ಜಿಗೆಯ ಆಕರ್ಷಣೆ, ಹಸಿವಿನ ಒತ್ತಡ ಇದಕ್ಕೆ ಪ್ರೇರೆಪಣೆ. 

ಹಸಿವಿನ ಅರೆ ಹೊಟ್ಟೆಗೆ ಏನು ಸಿಕ್ಕಿದರೂ ಗಬ ಗಬ ತಿನ್ನುವ ತುಡಿತ. ಸಜ್ಜಿಗೆ ಯಾರು ಮಾಡಿದರೇ ಏನು? ಅಥವ ಅದರಲ್ಲಿ ಏನಿದ್ದರೆ ಏನು? ಮನೆಯವರಿಗೆ ತಿಳಿಯದಂತೆ ಅದನ್ನು ತಿನ್ನುವುದರಲ್ಲೇ ಒಂದು ಆತ್ಮ ತೃಪ್ತಿ. ಜಗಲಿಯಲ್ಲಿ ಕುಳಿತು ತಟ್ಟೆ ಇಟ್ಟು ಎಲ್ಲರ ಜತೆಗೆ ಕುಳಿತು ತಿಂದು ಏಳುವಾಗ ಹಸಿವನ್ನು ಜಯಿಸಿದ ಆ ತೃಪ್ತಿ ಈಗ ಯಾವ ಭೋಜನ ಸವಿದರೂ ಸಿಗುತ್ತಿಲ್ಲ. ಶಾಲಾ ಜೀವನದ ಬಳಿಕ ಒಂದು ಬಾರಿ ಪೈವಳಿಕೆ ಶಾಲೆಗೆ ಹೋಗಿದ್ದೆ. ಆಗ ಸಜ್ಜಿಗೆ ಮಾಡುತ್ತಿದ್ದ ಜಾಗ, ನಾವು ತಿನ್ನಲು ಕುಳಿತುಕೊಳ್ಳುತ್ತಿದ್ದ ಜಗಲಿಯಲ್ಲಿ ಓಡಾಡಿದ್ದೆ. ಆ ಸಜ್ಜಿಗೆಯ ರುಚಿಯ ಸವಿನೆನಪು ಅದು ಎಂದಿಗೂ ಮಾಸದು. ಒಂದೆರಡು ಬಾರಿ ಮನೆಗೆ ಗೋಧಿಯನ್ನು ತಂದು ಪುಡಿಮಾಡಿ ಅದೇ ರೀತಿ ಸಜ್ಜಿಗೆ ಮಾಡಲು ನೋಡಿದ್ದೆ. ಆದರೆ ಆ ರುಚಿ ಮಾತ್ರ ಅನುಭವಿಸುವುದಕ್ಕೆ ಸಾಧ್ಯವಾಗಲಿಲ್ಲ. ಈಗಲೂ ಶಾಲೆಯ ಬಳಿಗೆ ಹೋದಾಗ ಸಜ್ಜಿಗೆಯ ನೆನಪಾಗುತ್ತದೆ. ಆ ಕಾಲದಲ್ಲಿ ಅನ್ನ ತಿನ್ನುವವರು ಭಾಗ್ಯವಂತರು. ನಮಗೋ ಒಂದು ಹೊತ್ತಿಗೆ ಅನ್ನ ಸಿಗುತ್ತಿತ್ತು. ಉಳಿದಂತೆ ಗೋಧಿಯ ದೋಸೆ, ಒಣ   ಮರಗೆಣಸನ್ನು ನೆನಸಿ ಅದರಿಂದ ತಯಾರಿಸಿದ ರೊಟ್ಟಿ ಪಲ್ಯ...ಹೀಗಿರುವಾಗ ಶಾಲೆಯ ಉಪ್ಪಿಟ್ಟು ಬಿಡುವುದಕ್ಕೆ ಮಕ್ಕಳಿಗೆ ನಮಗೆ ಮನಸ್ಸಾದರೂ ಹೇಗೆ ಬರಬೇಕು.

ನಮಗೆ ಬೇಕಾದದ್ದು ಬಯಸಿದ್ದೆಲ್ಲವನ್ನೂ ಕೈವಶ ಮಾಡುವ ಈ ಸಮಯದಲ್ಲಿ ಯಾವುದು ಸಿಕ್ಕರೂ ಅಂದು ಹಸಿವಿಗೆ ಎರವಾಗಿ ಒದಗಿ ಬರುತ್ತಿದ್ದ ಈ ಸಜ್ಜಿಗೆಗೆ ಸರಿಮಿಗಿಲು ಎನಿಸುವುದಿಲ್ಲ. ಅದರಲ್ಲೂ ಕಾಗದದ ಚೂರಿನಲ್ಲಿ ಸಜ್ಜಿಗೆ ಹಾಕಿಸಿ ತಿನ್ನುತ್ತಿದ್ದ ಆ    ದಿನಗಳು, ಆ ಸವಿನೆನಪನ್ನು ಮತ್ತೊಮ್ಮೆ ಅನುಭವಿಸುವುದಕ್ಕೆ ಆದರೂ ಒದಗಿ ಬರಬಾರದೇ ಅಂತ ಅನ್ನಿಸುವುದುಂಟು. 



Friday, March 29, 2024

ಅತಿಥಿ ಸತ್ಕಾರ

        ಒಂದು ಬಾರಿ ಉತ್ತರ ಭಾರತದ ಯಾರಾದರು ಒಬ್ಬರ ಮನೆಯ ಕಾರ್ಯಕ್ರಮಕ್ಕೆ ಹೋಗಿ ನೋಡಿ, ಅಲ್ಲಿ ನಮಗಾಗಿ ಅನ್ನ ಸಾಂಬಾರ್ ಮಾಡುವುದಿಲ್ಲ. ಬದಲಿಗೆ ಪೂರಿ ಕಚೋರಿ ರೋಟಿಯಷ್ಟನ್ನೇ ತಂದಿಡುತ್ತಾರೆ. ಸಾಂಬಾರ್ ಬದಲಿಗೆ ಸಬ್ಜಿ ಕರಿಗಳಷ್ಟೇ ಇರುತ್ತವೆ. ಆದರೆ ನಮ್ಮಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಅವರೆಲ್ಲ ಒಬ್ಬಿಬ್ಬರು ಇದ್ದರೆ ಸಾಕು ಎಲ್ಲರಿಗೂ ಪೂರಿ ಪಲಾವ್ ತಿನ್ನಿಸಿಬಿಡುತ್ತೇವೆ. ಇದು ಅತಿಥಿ ಸತ್ಕಾರದ ಉತ್ತಮ ಗುಣವಿರಬಹುದು. ಆದರೆ ನಮ್ಮ ಪರಂಪರೆಯ ಭೋಜನ ಖಾದ್ಯಗಳು ನಮ್ಮ ನಡುವೇ ಇದ್ದು ಬಿಡುತ್ತದೆ. ನಮ್ಮ ಮಕ್ಕಳಿಗೇ ಅದು ಬೇಡವಾಗುತ್ತದೆ. 

ಈಗಿನ್ನು ಸಮಾರಂಭಗಳ ಸಮಯ. ಮದುವೆ ಮುಂಜಿ ಹೀಗೆ ಶುಭಕಾರ್ಯಗಳ ಸರದಿ. ಜತೆಗೆ ಅನಿರೀಕ್ಷಿತ ಎರಗುವ ಅಪರಕಾರ್ಯಗಳು. ಮತ್ತೆ ಎಂದಿನಂತೆ ವರ್ಷಾವಧಿ ಶ್ರಾಧ್ದ ಮುಂತಾದ ಅಪರ ಕಾರ್ಯಗಳು. ಹೆಚ್ಚಿನ ಕಾರ್ಯಕ್ರಮಗಳು ನಿರೀಕ್ಷಿತ. ಆಮಂತ್ರಣದ ಖಾತರಿ ಇದ್ದೇ ಇರುತ್ತದೆ. ಹೀಗಾಗಿ ಮೊದಲೇ ಸಿದ್ಧತೆಗಳು ಇದ್ದರೂ ಹೋಗುವುದಕ್ಕೆ ಬಹಳ ಕಷ್ಟ ಪಡಲೇ ಬೇಕಾದ ಅನಿವಾರ್ಯತೆ ಇದ್ದರೂ ,  ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆ ಪ್ರತಿ ಕಾರ್ಯಕ್ರಮಕ್ಕೂ ಹಾಜರಾಗಲೇ ಬೇಕು ಎನ್ನುವ ಕಾಳಜಿಯಲ್ಲಿ ಹಾಜರಾಗುತ್ತಾರೆ.  ಇನ್ನು ಒಂದೆರಡು ಘಳಿಗೆಯಾದರೂ ಒಂದು ಸಲ ಮುಖ ತೋರಿಸಿ ಹಾಜರಾಗುವ ಹರಕೆಯನ್ನು ಸಲ್ಲಿಸುವವರು ಅಧಿಕ.ಹಲವು ಸಲ ಹಲವು ಕಾರ್ಯಕ್ರಮಗಳಿಗೆ ಒಂದೇ ದಿನ ಹಾಜರಾಗುವ ಇಕ್ಕಟ್ಟಿನ ಪರಿಸ್ಥಿತಿ. ಇದೆಲ್ಲದರ ನಡುವೆ ಕಾರ್ಯಕ್ರಮ ಹೋಗುವುದೆಂದರೆ ಈಗ ಯಾಂತ್ರಿಕತೆಯಾಗಿ ಬದಲಾಗಿದೆ. ಊಟದ ಒಂದೆರಡು ಘಳಿಗೆ ಮೊದಲು ಹೋಗಿ  ಸೌಖ್ಯವಾ?  ಆರಾಮಾನ? ಅಂತ ಕುಶಲ ಸಮಾಚಾರ ವಿಚಾರಿಸುವಷ್ಟು ಹೊತ್ತಿಗೆ ಊಟಕ್ಕೆ ಸಮಯವಾಗುತ್ತದೆ. ಇನ್ನು  ಊಟದ ಹರಕೆಯಾದ ಕೂಡಲೇ ಇನ್ನು ಕಾಣುವ ಅಂತ ಕಲ್ಯಾಣ ಮಂಟಪದವರು ಖಾಲಿ  ಮಾಡಿಸುವ ಮೊದಲೆ ಜಾಗ ಖಾಲಿ ಮಾಡಿ ಬಿಡುತ್ತೇವೆ. ಇಂದು ಕಾರ್ಯಕ್ರಮಗಳಲ್ಲಿ ಸಂಭ್ರಮ ಮರೆಯಾಗಿ ಯಾಂತ್ರಿಕತೆ ಹೆಚ್ಚು ಎದ್ದು ಕಾಣುತ್ತದೆ. ಈ ನಡುವೆ ಬಂದವರ ಬಗ್ಗೆ ವಿಚಾರಿಸುವ,  ಜತೆಗೆ ಯಾರು ಬರಲಿಲ್ಲ ಎಂದು ಗಮನಿಸುವ ಕೊಂಕುತನವೂ ಇಣುಕಿಬಿಡುತ್ತದೆ. ನಾವು ಹೋಗಿದ್ದೇವೆ ಅವರು ಬರಲಿಲ್ಲ ಎಂಬ ಲೆಕ್ಕಾಚಾರ ಕೂಡ ಆರಂಭವಾಗುತ್ತದೆ. ಕಾರ್ಯಕ್ರಮದ ಯಾಂತ್ರಿಕತೆ ಸರಿಯೋ ತಪ್ಪೋ ಅಂತೂ ನಮ್ಮ ಜೀವನ ಶೈಲಿಗಳಿಗೆ ಮತ್ತು ಮನೋಭಾವಕ್ಕೆ ಇದು ಅನಿವಾರ್ಯವಾಗಿದೆ.  ಕೊಡುವ ಕೊಳ್ಳುವ ತೂಕದ ಲೆಕ್ಕಾಚಾರದಲ್ಲಿ ನಮ್ಮ ಬಾಂಧವ್ಯ ಸ್ನೇಹ ಸಲುಗೆಗಳು ಕೇವಲ ಪ್ರಹಸನವಾಗಿಬಿಡುತ್ತದೆ. 

ತಮ್ಮ ತಮ್ಮ ಮನೆಯ ಕುಟುಂಬದ ಕಾರ್ಯಕ್ರಮದ ಬಗ್ಗೆ ಪ್ರತಿಯೊಬ್ಬರಿಗೂ ಅಭಿಮಾನ ನಿರೀಕ್ಷೆಗಳು ಇದ್ದೇ ಇರುತ್ತದೆ. ಸಾಕಷ್ಟು ಯೋಜನೆ ಮಾಡಿ ತಮ್ಮ ಕಾರ್ಯಕ್ರಮಗಳನ್ನು ಹೀಗೆಯೇ ಮಾಡಬೇಕು ಎನ್ನುವ ಕನಸನ್ನು ಕಟ್ಟಿಕೊಂಡಿರುತ್ತಾರೆ. ಬಂಧುಗಳನ್ನು ಹಿತೈಷಿಗಳನ್ನು ಮಿತ್ರರನ್ನು  ಸಾಕಷ್ಟು ಜ್ಞಾಪಿಸಿ  ಆಮಂತ್ರಣ ಕೊಡುತ್ತಾರೆ. ಬಂದವರನ್ನು ಮಾತನಾಡಿಸಿ ಉಪಚಾರ ಮಾಡಿ ಕಳುಹಿಸುವ ತನಕವೂ ಕಾರ್ಯಕ್ರಮದ ಒತ್ತಡ ಮುಗಿಯುವುದಿಲ್ಲ. ಅತಿಥಿ ಸತ್ಕಾರ ಎಂಬುದು ಯಾವುದೇ ಕಾರ್ಯಕ್ರಮದ ಅತಿ ಮುಖ್ಯ ಅಂಗವಾಗುತ್ತದೆ. ಪೂಜೆ ಪುನಸ್ಕಾರ, ವೈದಿಕ ಕ್ರಿಯಾಭಾಗಗಳು ಹರಕೆ ಸಲ್ಲಿಸುವ ಯಾಂತ್ರಿಕ ಕ್ರಿಯೆಯಾಗಿ ಬದಲಾದರೂ, ಅತಿಥಿ ಸತ್ಕಾರ ಹರಕೆ ಸಲ್ಲಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಯಾಕೆಂದರೆ ಇದೊಂದು ಪ್ರತಿಷ್ಠೆಯ ಪ್ರಶ್ನೆಯಾಗಿರುತ್ತದೆ. ಹಾಗಾಗಿ ಸತ್ಕಾರದ ಹಲವು ಮುಖಗಳನ್ನು ಕಾಣಬಹುದು. ಹಲವು ಸಲ ಪುರೋಹಿತರು ಗಂಟಲು ಶೋಷಣೆ ಮಾಡುವುದಷ್ಟೇ ಉಳಿದು, ಕರ್ತೃ ಅಥವಾ ಯಜಮಾನ ಅತಿಥಿಗಳ ನಡುವೆ ಇರಬೇಕಾದ ಅನಿವಾರ್ಯತೆ ಇರುತ್ತದೆ. 

ಅತಿಥಿ ಸತ್ಕಾರದಲ್ಲಿ ಅತಿ ಮುಖ್ಯ ಅಂಶವೆಂದರೆ ಭೋಜನ ಸತ್ಕಾರ. ಈಗೀಗ ಇದೊಂದು ಹೊಸ ಹೊಸ ಅವಿಷ್ಕಾರ ಪ್ರಯೋಗಗಳಿಗೆ ತುತ್ತಾಗುತ್ತಲೇ ಇದೆ. ಭೋಜನ ಆಹಾರ ಕ್ರಮ ಎಂಬುದು ದೇಶಾಚರದ ಜತೆಗೆ ಅದರಲ್ಲಿ ಒಂದು ಸಂಸ್ಕಾರ ಇರುತ್ತದೆ. ಇವತ್ತು ಈ ಸಂಸ್ಕಾರಗಳನ್ನುನಾವು ಮರೆಯುತ್ತಿದ್ದೆವೆ. ಮೊದಲೆಲ್ಲ ಹಳ್ಳಿಯ ಮನೆಗಳ ಕಾರ್ಯಕ್ರಮಗಳೆಂದರೆ ಒಂದು ಸಂಭ್ರವಿರುತ್ತಿತ್ತು. ಈಗ ಈ ಅವಿಷ್ಕಾರ ಪ್ರಯೋಗಗಳ ನಡುವೆ ಈ ಸಹಜವಾದ ಸಂಭ್ರಮ ಮರೆಯಾಗುತ್ತಿವೆ. ಅದಕ್ಕೆ ಹಲವಾರು ಕಾರಣಗಳಿವೆ ಅದು ಬೇರೆ. ಹಳ್ಳಿ ಹಳಿಯಲ್ಲಿಯೂ ಈಗ ಕಾರ್ಯಕ್ರಮಗಳು ಮನೆಯಂಗಳದಲ್ಲಿ ನಡೆಯುತ್ತಿಲ್ಲ.ಒಂದು ತಿಂಗಳ ಮೊದಲೇ ಕಾರ್ಯಕ್ರಮಕ್ಕೆ ಸಿದ್ದತೆ ಮಾಡುವಾಗ, ಮನೆಯಂಗಳವನ್ನು ಸಮತಟ್ಟು ಮಾಡಿ ಅಡಿಕೆ ಮರದ ಕಂಬ ನೆಟ್ಟು ಮಡಲು ಹಾಕಿ ಚಪ್ಪರ ಹಾಕುವಲ್ಲಿಂದ ತೊಡಗುವ ಸಂಭ್ರಮ ಮರೆಯಾಗಿದೆ.  ಮೊದಲೇ ಹಾಕುವ ಚಪ್ಪರದಲ್ಲಿ ಮನೆಯವರೆಲ್ಲ ಒಮ್ದೇ ಕಡೆ ಸೇರಿ ಅಲ್ಲೆ ಊಟ ಅಲ್ಲೆ ಜತೆಯಾಗಿ  ನಿದ್ರೆ ಅದೊಂದು ವಿಶಿಷ್ಟ ಸಂಭ್ರಮಗಳು ಇಂದಿನ ಜನಾಂಗಕ್ಕೆ ಅರಿವೆ ಇಲ್ಲ.  ಈಗಿನ ಮಕ್ಕಳಲ್ಲಿ ಹೇಳಿದರೆ ’ಹೌದಾ’  ಎಂದು ಉದ್ಗಾರ ತೆಗೆಯುತ್ತಾರೆ.  ಕಾರ್ಯಕ್ರಮದ ಮುನ್ನಾದಿನ ಪೆಂಡಾಲ್ ನವರು ಬಂದು ಶಾಮಿಯಾನ ಎಳೆದು ಬಿಗಿದರೆ ಚಪ್ಪರ ಸಿದ್ಧವಾಗಿಬಿಡುತ್ತದೆ. ಮರುದಿನ ಕಾರ್ಯಕ್ರಮದ ಗಡಿಬಿಡಿಯಲ್ಲಿ ಸಂಭ್ರಮಕ್ಕೆ ಸಮಯವೇ ಇರುವುದಿಲ್ಲ. 

  ಇಷ್ಟೆಲ್ಲ ಒಂದು ಬದಲಾವಣೆಯಾದರೆ ಆಹಾರ ಸತ್ಕಾರದ ರೂಪವೇ ಬದಲಾಗಿ ಹೋಗಿದೆ. ನಮ್ಮ ಸಾಂಪ್ರದಾಯಿಕ ಆಹಾರಗಳಾದ, ಅನ್ನ ಸಾರು ಪಲ್ಯ ಪಾಯಸಗಳು ನಾಮ್ಕೇ ವಾಸ್ತೆಯಾಗಿರುವುದು ಮಾತ್ರವಲ್ಲ ಹಲವು ಕಡೆ ಅದು ಮಾಯವಾಗಿದೆ. ಇಂದಿನ ಜನಾಂಗಕ್ಕೆ ಬಾಳೆ ಎಲೆಯಲ್ಲಿ ಪಾಯಸ ತಿನ್ನುವುದಕ್ಕೆ ಬರುವುದಿಲ್ಲ. ಅನ್ನ ಸಾಂಬಾರ್ ನ ಬದಲಾಗಿ ಇಂದು ಪಲಾವ್, ಪೂರಿ ಪರೋಟಗಳು  ರೋಟಿ ಇತರ ಉತ್ತರ ಭಾರತದ ತಿಂಡಿಗಳನ್ನು ಕಾಣಬಹುದು.  ಕುಳಿತು ತ್ ಇದಕ್ಕೆ ಕಾರಣ ಮೊದಲೆಲ್ಲ ನಮ್ಮೂರವರೇ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದರು. ಈಗ ಹಾಗಲ್ಲ ಉತ್ತರ ಭಾರತದವರು ಕೆಲವು ಮಂದಿಯಾದರೂ ಅವರಿಗೋಸ್ಕರ ಪೂರಿ ಪರೋಟಗಳನ್ನು ಮಾಡಿ ಅದನ್ನು ಉಳಿದವರಿಗೂ ಬಲವಂತದಿಂದ ತಿನ್ನಿಸುವುದನ್ನು ಕಾಣಬಹುದು. ಅಂದವಾಗಿ ಸಾವಕಾಶವಾಗಿ ಕುಳಿತು ಊಟ ಮಾಡುವ ಕ್ರಮ ಬದಲಾಗಿ ಒಂದು ಕೈಯಲ್ಲಿ ತಟ್ಟೆ ಇನ್ನೊಂದು ಕೈಯಲ್ಲಿ ಮೊಬೈಲ್ ಹಿಡಿದು ಸರ್ಕಸ್ ಮಾಡಿಕೊಂಡು ತಿನ್ನುವ ಪರಿಪಾಠ ಹೆಚ್ಚಾಗಿದೆ. ಇಂಥವರಿಗೆ ನೂರಾರು ಬಗೆಯ ಭಕ್ಷ್ಯ ತಿನಿಸುಗಳು. ಆಶ್ಚರ್ಯವಾಗುತ್ತದೆ.  ಈ ರೀತಿಯಲ್ಲಿ ನಮ್ಮದಲ್ಲದ ಸಂಸ್ಕಾರ, ಯಾವುದೋ ಊರಿನ ಆಹಾರ ಪದಾರ್ಥಗಳ ಬಳಕೆ ನಮ್ಮಲ್ಲಿ ಮಾತ್ರವೇ ಎಂದನಿಸುತ್ತದೆ. ಹಲವು ಸಲ ನಾನು ಗೋವ ಮುಂತಾದ ಕಡೆಗೆ ಹಲವು ಕಾರ್ಯಕ್ರಮಗಳಿಗೆ ಹೋಗಿದ್ದೇನೆ. ನಾವು ದಕ್ಷಿಣ ಭಾರತದವರು ಅಂತ ಅಲ್ಲೇನು ನಮಗೆ ಪ್ರತ್ಯೆಕ ಅನ್ನ ಸಾಂಬಾರು ಮಾಡುವುದಿಲ್ಲ. ಅಲ್ಲಿನವರು ಏನು ವಾಡಿಕೆಯಲ್ಲಿ ತಿನ್ನುತ್ತಾರೋ ಅದನ್ನೆ ನಮಗೂ ಕೊಡುತ್ತಾರೆ. ಅಲ್ಲಿ ಕೊಡುವ ಸೂಪನ್ನು ಸಾರು ಅಂತ ತಿಂದು ತೃಪ್ತಿ ಪಟ್ಟುಕೊಂಡದ್ದೂ ಇದೆ. 

ಯಾವುದೋ ಊರಿನಿಂದ ಯಾರೋ ಬರುತ್ತಾರೆ, ಅತಿಥಿ ಸತ್ಕಾರದಲ್ಲಿ ಅವರಿಗೆ ಬೇಕಾದಂತೆ ಮಾಡಿ ಅವರನ್ನು ತೃಪ್ತಿಪಡಿಸಬೇಕು ಹೌದು, ಆದರೆ  ನಮ್ಮ ಆಹಾರ ಕ್ರಮಗಳನ್ನು ಸಂಪ್ರದಾಯಗಳನ್ನು ನಾವು ಅವರಂತೆ ಯಾಕೆ ತೋರಿಸುವುದಿಲ್ಲ?  ಎಲ್ಲದರಲ್ಲೂ ಅನುಕರಣೆ ಮಾಡಿ ನಮ್ಮತನವನ್ನು ನಾವೇಕೆ ದೂರ ಮಾಡಬೇಕು.? ಅದರಲ್ಲೂ ನಮ್ಮ ಬ್ರಾಹ್ಮಣರ ಊಟದದ ಅಪಸವ್ಯಗಳು ಬೇರೆ, ನಮ್ಮಲ್ಲಿ ಈರುಳ್ಳಿ ಬೆಳ್ಳುಳ್ಳಿ ಉಪಯೋಗಿಸುವುದಿಲ್ಲ.  ಹಾಗಾಗಿ ಅದೇ ಮುಖ್ಯವಾಗಿರುವ ಪಲಾವ್ ಮತ್ತು ಇತರ ಉತ್ತರದ ಕರಿಗಳು ಅದಿಲ್ಲದೇ ಮಾಡುವಾಗ ಇದನ್ನು ಯಾಕಾದರೂ ತಿನ್ನಬೇಕು ಎಂದು ಅನ್ನಿಸಿದರೆ ಅದು ದೌರ್ಭಾಗ್ಯ ಎನ್ನಬೇಕು. ಇಷ್ಟಾದರೂ ನಮ್ಮನ್ನು ನಾವು ಮೆಚ್ಚಿಕೊಳ್ಳಬೇಕು. ಇವುಗಳ ನಡುವೆಯು ಉತ್ತರ ಭಾರತದ ಶೈಲಿಯನ್ನು ನಾಚುವಂತೆ ನಮ್ಮದೇ ಸಂಪ್ರದಾಯಗಳನ್ನು ಪಾಲಿಸುವವರು ಅನೇಕರಿದ್ದಾರೆ. ಏನಿದ್ದರು ಬಂದ ಅತಿಥಿಗಳಿಗೆ ಅವರಿಗೆ ಬೇಕಾದ ಉತ್ತಮ ಆಹಾರ ಉಪಚಾರಗಳನ್ನು ಒದಗಿಸಿ ಅವರನ್ನು ತೃಪ್ತಿ ಪಡಿಸಬೇಕು, ಇದು ಉತ್ತಮ ಆತಿಥೇಯದ ಕರ್ತವ್ಯ. ನಮ್ಮಲ್ಲಿ ಬಂದು ಅವರು ಹಸಿದು ಹೋಗಬಾರದು ಎನ್ನುವುದು ನಿಜ. ಆದರೆ ನಮ್ಮದಲ್ಲದ ಅಹಾರಕ್ರಮಗಳನ್ನು ಪುರಸ್ಕರಿಸುವಾಗ ನಮ್ಮದೇ ಆದ ಆಹಾರ ಕ್ರಮಗಳಿಗೆ ತಿರಸ್ಕಾರ ಸಲ್ಲದು. ಅದನ್ನು ನಾವು ಗೌರವಿಸದೇ ಇದ್ದರೆ....ಮತ್ತೆ ಉತ್ತರದವರ ಅಭಿರುಚಿಗಳು ಮಾತ್ರವೇ ಉಳಿದುಕೊಳ್ಳಬಹುದು. 

        ಆದರು ನಮ್ಮಲ್ಲಿ ಉತ್ತಮ ರೀತಿಯ ಭೋಜನವನ್ನು ಉತ್ತಮ ಉಪಚಾರವನ್ನು ನೀಡಿ ಗೌರವಿಸುವವರು ಇದ್ದಾರೆ. ಅವರೆಲ್ಲ ಅನುಕರಣೀಯರು ಎಂಬುದರಲ್ಲಿ ಎರಡು ಮಾತಿಲ್ಲ. 


Friday, March 22, 2024

ಸುಪ್ರಜಾ ರಾಮ

                    ನಮ್ಮತಪ್ಪುಗಳನ್ನು, ನಮ್ಮ ಜವಾಬ್ದಾರಿಗಳನ್ನು ಮತ್ತೊಬ್ಬರ ಮೇಲೆ ನಾವು ನಮಗರಿಯದೇ ಹೊರಿಸಿಬಿಡುತ್ತೇವೆ. "ಕೌಸಲ್ಯಾ ಸುಪ್ರಜಾರಾಮ ಪೂರ್ವಾ ಸಂಧ್ಯಾ ಪ್ರವರ್ತತೆ. ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಂ"  ಈ ಶ್ಲೋಕದ ಅಂತರಾರ್ಥ  ಹಲವು ಇರಬಹುದು. ಆದರೂ ಕೌಸಲ್ಯಾ ಸುಪ್ರಜಾ ರಾಮ.... ಯೋಚಿಸಿ ರಾಮ ಅರಸನಾಗಿ ರಾಮ ರಾಜ್ಯದ ಒಡೆಯನಾಗಿ ಇರುವಾಗ ಅತನನ್ನು ಸುಪ್ರಜಾ ರಾಮ ಅಂತ ಕೊಂಡಾಡುವುದು ಅಲ್ಲೊಂದು ನಮ್ಮ ಜವಾಬ್ದಾರಿಯ ಉಲ್ಲೇಖವೂ ಸೂಕ್ಷ್ಮವಾಗಿ ಇದೆ. ಸುಪ್ರಜಾ ರಾಮ ಎನ್ನುವಾಗ ಅಲ್ಲಿ ರಾಮ ನೊಬ್ಬನೇ ಮಹಾ ಪುರುಷ ಅಲ್ಲ ಪ್ರಜೆಗಳೂ ಸುಪ್ರಜೆಗಳಾಗಿರುತ್ತಾರೆ. ರಾಮ ರಾಜ್ಯದಲ್ಲಿದ್ದ ಪ್ರಜೆಗಳೂ ಸುಪ್ರಜೆಗಳಾಗಿರುವಾಗ ಪರೋಕ್ಷವಾಗಿ ನಮಗೆ ರವಾನೆಯಾಗುವ ಸಂದೇಶವಾದರೂ ಏನು? ರಾಮನೊಬ್ಬ ಆದರ್ಶ ಪುರುಷನಾಗಿದ್ದ, ಜತೆಯಲ್ಲಿ ಪ್ರಜೆಗಳೂ ಸುಪ್ರಜೆಗಳಾಗಿದ್ದರು. ಅಂದರೆ ಈಗ ನಾವು ರಾಮ ರಾಜ್ಯ ಅಂತ ಬಯಸುತ್ತೇವೆ. ಅದೊಂದು ಆದರ್ಶ ರಾಜ್ಯ ಅಂತ ಯೋಚಿಸುತ್ತೇವೆ. ಆದರೆ ಅಲ್ಲಿ ನಾವು ಸುಪ್ರಜೆಗಳಾಗಿರುವ ಬಗ್ಗೆ ಯೋಚಿಸುವುದಿಲ್ಲ. ಕೇವಲ ಅರಸನೊಬ್ಬ ರಾಮನಂತೆ ಇದ್ದರೆ ಸಾಕು ಎಂದು ನಮ್ಮ ಚಿಂತನೆ ಸಂಕುಚಿತವಾಗಿಬಿಡುತ್ತದೆ. ಪ್ರಜೆಗಳು ಸುಪ್ರಜೆಗಳಾಗಿರುವಾಗ ರಾಜ್ಯವೂ ರಾಮ ರಾಜ್ಯವಾಗುತ್ತದೆ ಎಂಬುದು ಇಲ್ಲಿ ಪರೋಕ್ಷ ಸಂದೇಶ. 

                    ನಾವೊಬ್ಬರು ಉತ್ತಮರು ಮಿಕ್ಕವರೆಲ್ಲ ನಮ್ಮಷ್ಟು ಉತ್ತಮರಲ್ಲ. ನಾವು ಚಿಂತಿಸುವ ರೀತಿ ಇದು.   ನಮ್ಮ ದೌರ್ಬಲ್ಯಗಳನ್ನು ನಮ್ಮ ತಪ್ಪುಗಳನ್ನು ನಾವು ಆತ್ಮ ವಿಮರ್ಶೆ ಮಾಡುವ ಬದಲಾಗಿ ನಮ್ಮ ಎಲ್ಲ ಋಣಾತ್ಮಕ ವಿಷಯಗಳನ್ನು ಮತ್ತೊಬ್ಬರ ಮೇಲೆ ಹೊರಿಸಿ ನಾವು ಜವಾಬ್ದಾರಿಯಿಂದ ದೂರ ನಿಂತು ಬಿಡುತ್ತೇವೆ. ಕೇವಲ ರಾಮ ರಾಜ್ಯದ ಕಲ್ಪನೆಯಲ್ಲಿ ಆ ಕನಸಿನಲ್ಲಿ ನಾವು ಸುಪ್ರಜೆಗಳಾಗಬೇಕಾದ ಅನಿವಾರ್ಯತೆಯನ್ನು ಬದಿಗೆ ಸರಿಸಿ ರಾಮ ರಾಜ್ಯದ ಚಿಂತನೆಯನ್ನು ಮಾಡುವಾಗ ನಮ್ಮ ಜವಾಬ್ದಾರಿಗಳು ನಮಗೆ ಅರಿವಿಗೆ ಬರುವುದಿಲ್ಲ. ಸುಪ್ರಜೆಗಳ ಒಡೆಯ ರಾಮನನ್ನು ಎಚ್ಚರಿಸುವಾಗ  ಪೂರ್ವಾ ಸಂಧ್ಯಾ ಪ್ರವರ್ತತೆ ಎಂದು ಎಬ್ಬಿಸುವಾಗ, ಅಲ್ಲಿ ಸಂಧ್ಯೆ ಅಂದರೆ ಕತ್ತಲು ಮತ್ತು ಬೆಳಕಿನ ನಡುವಿನ ಸಮಯದಿಂದ ಮೊದಲಿನ ಕಾಲ ಪ್ರವರ್ತಿಸುವಾಗ ನಾವು ನಮ್ಮ ಕರ್ತವ್ಯವಾದ ನಿತ್ಯ ಆಹ್ನಿಕಗಳನ್ನು ಪೂರೈಸಿಕೊಳ್ಳಬೇಕು. ಆದರೆ ನಾವು ನಮ್ಮ ಕರ್ತ್ಯವ್ಯವನ್ನು ಮರೆತು ಯಾವುದೋ ಕಾಲದಲ್ಲಿ ಎದ್ದು ಉತ್ತಿಷ್ಠ ನರಶಾರ್ದೂಲ ಎಂದು ಪರಮಾತ್ಮನ ಮೇಲೆ ಜವಾಬ್ದಾರಿಯನ್ನು ಹೇರಿ ಆತನನ್ನು ಎಚ್ಚರಿಸುವ ಪ್ರಯತ್ನ ಮಾಡುತ್ತೇವೆ. ಇಲ್ಲಿ ಪರಮಾತ್ಮನ ಎಚ್ಚರಕ್ಕಿಂತಲೂ ಮೊದಲು ನಮ್ಮದಾದ ಜವಾಬ್ದಾರಿಗಳನ್ನು ನಾವು ಮರೆಯುತ್ತಿದ್ದೇವೆ. 

                    ನಮ್ಮ ತಪ್ಪುಗಳು ನಮ್ಮ ಜವಾಬ್ದಾರಿಗಳು ಯಾವಾಗ ನಮಗೆ ಅರಿವಾಗುವುದಿಲ್ಲವೋ ಮತ್ತೊಬ್ಬರ ತಪ್ಪು ಜವಾಬ್ದಾರಿಗಳು ನಮಗೆ ಹೇಗೆ ಅರಿವಾಗಬೇಕು. ಹತ್ತಿರ ಇದ್ದ ಹೊಂಡ ಕಾಣದೇ ಇದ್ದರೆ ದೂರ ಇರುವ ಹೊಂಡ ಕಂಡರೂ ಫಲವೇನು. ಆ ಹೊಂಡದ ಬಳಿಗೆ ತಲುಪುವ ಮೊದಲು ಹತ್ತಿರದ ಹೊಂಡದಲ್ಲಿ ಬಿದ್ದು ಹೊರಳಾಡುತ್ತೇವೆ.  

Sunday, March 3, 2024

ಭಾರವಾಗುವ ಮತ್ಸರ



ಅತ್ಯಂತ ಭಾರವಾದ ಸರ ಯಾವುದು? ಹೀಗೊಂದು ಪ್ರಶ್ನೆಗೆ ಯಕ್ಷಗಾನದ ವಿದೂಷಕ, ಶ್ರೀ ನಯನ ಕುಮಾರ್ ಒಂದು ಕಡೆಯಲ್ಲಿ ಹೇಳಿದ್ದ ನೆನಪು, ಭಾರವಾದ ಸರ ಎಂದರೆ ಅದು ಗಂಗಸರ. ಅಂದರೆ ಸಾರಾಯಿ. ನಮ್ಮ ಊರ ಭಾಷೆಯಲ್ಲಿ ಸಾರಾಯಿ ಅಂದರೆ ಗಂಗಸರ ಹಾಕಿದರೆ ಅತ್ಯಂತ ಭಾರವಾಗಿರುತ್ತದೆ ಅಂತ ಬೇರೆ ಹೇಳಬೇಕಾಗಿಲ್ಲ. ಇದು ವಿಡಂಬನೆ ಅಥವಾ ಹಾಸ್ಯಕ್ಕೆ ಪರಿಗಣಿಸಿದರೂ ಅದರಲ್ಲಿ ಚಿಂತನೆಗಳಿವೆ. ಭಾರವಾದ ವಸ್ತು ನಮ್ಮ ತಲೆಯಲ್ಲಿ ತುಂಬಿದಾಗ ನಾವು ಆ ಭಾರವನ್ನು ಮಾತ್ರವೇ ಯೋಚಿಸುತ್ತೇವೆ. ಬೇರೆ ಯೋಚನೆ ಬರುವುದಿಲ್ಲ. ಅಥವಾ ಯಾವ ಯೋಚನೆಗಳಾದರೂ ಅದರಿಂದ ಪ್ರೇರೇಪಿಸಲ್ಪಡುತ್ತವೆ. ಒಂದು ಸಲ ಈ ಭಾರ ಇಳಿಸಿದರೆ ಸಾಕಪ್ಪ ಎಂದು ಅನಿಸಿದರೂ  ಮನುಷ್ಯ ಭಾರವನ್ನು ತನ್ನ ಮೇಲೆ ಎಳೆದುಕೊಳ್ಳುವ ಪ್ರವೃತ್ತಿಯೇ ಅಧಿಕ.  

ಹಾಸ್ಯಗಾರರು ಯಾವ ದೃಷ್ಟಿಕೋನದಲ್ಲಿ ಹೇಳಿದರೂ ಅದು ವಾಸ್ತವಕ್ಕೆ ಹತ್ತಿರವಾಗಿರುತ್ತದೆ. ಆದರೂ ನನ್ನ ಅನಿಸಿಕೆಯಂತೆ, ಅತ್ಯಂತ ಭಾರವಾದ ಸರ ಎಂದರೆ ಅದು ’ಮತ್ಸರ’  ಈ ಸರ ಧರಿಸಿರುವಷ್ಟು ಸಮಯ ನಮ್ಮ ಮನಸ್ಸು ಬೇರೆಯದನ್ನು ಯೋಚಿಸುವುದಿಲ್ಲ. ಮತ್ಸರ ಅಂದರೆ ನಮ್ಮ ಭಾಷೆಯಲ್ಲಿ ಮುಂದೆ ಹೋಗಲಾಗದೇ ಇದ್ದ ಸ್ಥಿತಿ. ಅದು ಇದ್ದಲ್ಲೇ ಇರುತ್ತದೆ. ಹಾಗಾಗಿ ಇದು ಇದ್ದಷ್ಟು ಹೊತ್ತು ನಮ್ಮ ಚಿಂತನೆಗಳು ಮುಂದೆ ಹೋಗುವುದಿಲ್ಲ. ಅದಕ್ಕೆ ಹೊಂದಿಕೊಂಡು ನಾವು ನಿಂತಲ್ಲೇ ನಿಂತುಬಿಡುತ್ತೇವೆ. ಮತ್ಸರ ಯಾವ ಮನಸ್ಸಿನಲ್ಲಿದೆಯೋ ಆ ಮನಸ್ಸು ಬೇರೆಯದನ್ನು ಚಿಂತಿಸುವುದಿಲ್ಲ. ಸವತಿ ಮಾತ್ಸರ್ಯವಾಗಬಹುದು, ಭಾತೃ ಮಾತ್ಸರ್ಯವಾಗಬಹುದು ಯಾವಾಗ ಮನಸ್ಸನ್ನು ಅವರಿಸಿಬಿಡುತ್ತದೆಯೋ ಅಲ್ಲಿ ಅನ್ಯರ ಬಗ್ಗೆ ಸಚ್ಚಿಂತನೆಗಳು ಹುಟ್ಟಿಕೊಳ್ಳುವುದಿಲ್ಲ. ಯಾರು ಏನು ಮಾಡಿದರೂ ಅದರಲ್ಲಿ ಕೆಡುಕನ್ನೇ ಹುಡುಕುವ ಕೊಂಕು ತನಕ್ಕೆ ಅದು ಪ್ರಚೋದನೆ ಕೊಡುತ್ತದೆ.  ಮನೆಗೆ ಬಂದಾಗ ಬಾಗಿಲು ಮುಚ್ಚಿದ್ದರೆ , ಮತ್ಸರದ ಮನಸ್ಸು ಯೋಚಿಸುತ್ತದೆ ಯಾಕೆ ಬಾಗಿಲು ಮುಚ್ಚಿದ್ದಾರೆ? ಸರಿ ಬಂದರು ಎಂದು ಬಾಗಿಲು ತೆರೆದರೆ, ಯಾಕೆ ಬಾಗಿಲು ತೆರೆದರು? ಹೀಗೆ ದ್ವಂದ್ವಮಯ ಚಿಂತನೆ ಮತ್ಸರ ಎಂಬ ಭಾರದಿಂದ ಪ್ರಚೋದಿಸಲ್ಪಡುತ್ತದೆ. 

ನಮ್ಮ ಸುತ್ತ ಮುತ್ತ ಕೆಟ್ಟವರು ಇರುತ್ತಾರೆ, ಒಳ್ಳೆಯವರೂ ಇರುತ್ತಾರೆ.  ಯಾವಾಗಲೂ ಎಲ್ಲವೂ ಒಳ್ಳೆಯದೇ ಎಂದು ನಿರೀಕ್ಷಿಸುವುದೂ ತಪ್ಪು. ಕೆಟ್ಟದ್ದು ಅಂತ  ಅದನ್ನು ಚಿಂತಿಸಿಕೊಳ್ಳುತ್ತಾ ಇರುವುದು ತಪ್ಪು. ಕೆಟ್ಟದ್ದನ್ನು ದೂರವಿಡುತ್ತ ಒಳ್ಳೆಯದರ ಬಗ್ಗೆ ಯೋಚಿಸುತ್ತಾ ಇದ್ದರೆ ಮನಸ್ಸು ಮತ್ತಷ್ಟು ವಿಶಾಲಾವಾಗುತ್ತದೆ. ಯೋಚನೆಗೆಳು ಹಗುರವಾಗುತ್ತದೆ. ಇಕ್ಕಟ್ಟಾದ ಕಣಿವೆಯಲ್ಲಿ ರಭಸವಾಗಿ ಹರಿದನೀರು, ವಿಶಾಲವಾದ ಬಯಲಿಗಿಳಿದಂತೆ ತನ್ನ ರಭಸವನ್ನು ಕಡಿಮೆ ಮಾಡಿಕೊಳ್ಳುತ್ತದೆ. ಅದರಂತೆ ನಮ್ಮ ಯೋಚನೆಗಳು, ಮನಸ್ಸಿನ ವಿಶಾಲತೆ ಕಡಿಮೆಯಾದಂತೆ ಚಿಂತನೆಗಳ ಒತ್ತಡ ಅಧಿಕವಾಗುತ್ತಾ ಹೋಗುತ್ತದೆ. ಮತ್ಸರ ತುಂಬಿದ ಮನಸ್ಸು ಸಂಕುಚಿತವಾಗುತ್ತಾ ಮನಸ್ಸಿನ ಒತ್ತಡ ಹೆಚ್ಚಿಸುತ್ತ ಹೋಗುತ್ತದೆ. ಒಂದು  ಸಲ ಮತ್ಸರದ ಭಾವವನ್ನು  ದೂರವಿಟ್ಟು ಚಿಂತಿಸಿದಾಗ ಮತ್ಸರದ ಭಾರ ಅರಿವಾಗುತ್ತದೆ. ನಮ್ಮೊಳಗಿನ ಮತ್ಸರ ಮೇಲ್ನೋಟಕ್ಕೆ ಹೊರಗಿನವರಿಗೆ ತೊಂದರೆ ಕೊಟ್ಟರೂ ಅದರಿಂದ ಹೆಚ್ಚಿನ ತೊಂದರೆ ಅನುಭವಿಸುವುದು ನಾವುಗಳೇ ಆಗಿರುತ್ತೇವೆ. ಮತ್ಸರವೆಂದರೆ ಅದು ರೋಗವಿದ್ದಂತೆ, ಈ ರೋಗ ಬಾಧೆ ಇರುವಷ್ಟು ದಿನ ಮನಸ್ಸು ಮುಂದಕ್ಕೆ ಯೋಚಿಸುವುದಿಲ್ಲ. ಮಾತ್ರವಲ್ಲ ನಮ್ಮ ಬೆಳವಣಿಗೆಯೂ ಸಾಧ್ಯವಾಗುವುದಿಲ್ಲ. 

Saturday, February 24, 2024

ಚಾಂದ್ರಾಯಣ

     ಮೂವತ್ತು ದಿವಸಗಳ ಚಾಂದ್ರಾಯಣ ವೃತ ಯಶಸ್ವಿಯಾಗಿ ಆಚರಿಸಿ ಇಂದಿಗೆ ಅಂದರೆ ಶನಿವಾರದ ಪೌರ್ಣಮಿಯ ದಿನ ಸಮಾಪ್ತಿಗೊಳಿಸಿದೆ. ಇದು ಕೇವಲ ವೃತವಲ್ಲ, ಬದುಕಿನ ಮಹತ್ವದ ಪಾಠವಾಗಿ ಪರಿಣಮಿಸಿದ್ದು ಒಂದು ರೋಚಕ ಅನುಭವ. ನಾನು ಮತ್ತು ಜತೆಗೆ ಮಗಳು ಮಹಿಮನು ಭಾಗಿಯಾಗಿ ವೃತಾಚರಣೆಯನ್ನು ಯಶಸ್ವಿಯಾಗಿ ಪೂರೈಸಿದ್ದು ಒಂದು ವೈಶಿಷ್ಟ್ಯ. 

ತಮ್ಮ ಹಿರಿಮೆ ಗರಿಮೆ ಗೌರವದ ತೂಕ ಹೆಚ್ಚಬಹುದು, ಅದಕ್ಕಾಗಿ ಪ್ರತಿಯೊಬ್ಬರೂ ಆಸಕ್ತರಾಗಿರುತ್ತಾರೆ. ಆದರೆ ಅದರಂತೆ ಬೆಳೆಯುವ ದೇಹದ ತೂಕದ ಬಗ್ಗೆ ಗಮನ ಕೊಡುವವರು ಕೆಲವರು ಮಾತ್ರ. ಹೀಗೆ ಸುಮ್ಮನೆ ರಸ್ತೆಯಲ್ಲಿ ಓಡಾಡುವಾಗ ಎಲ್ಲೆಂದರೆಲ್ಲಿ ಕೆಲವರು ತಂದು ಕರಪತ್ರ ಇಲ್ಲ ತಮ್ಮ ಗುರುತಿನ ಚೀಟಿ ತೋರಿಸಿ ತೂಕ ಕಡಿಮೆ ಮಾಡುವ ಬಗ್ಗೆ ಸಲಹೆ ಕೊಟ್ಟು ತೂಕ ಕಡಿಮೆ ಅಗುವುದಕ್ಕೆ ಪರಿಹಾರವನ್ನು ಸೂಚಿಸುತ್ತಾರೆ.  ಸ್ಥೂಲ ಕಾಯದವರು ಇವರಿಗೆ ಗಿರಾಕಿಗಳು. ಒಂದು ಕಾಲದಲ್ಲಿ ನಾನೂ ಇವರ ದೃಷ್ಟಿ ಆಹಾರವಾಗಿದ್ದು ನೆನಪಿದೆ.  ಕ್ರಮೇಣ ಯೋಗಾಭ್ಯಾಸದಲ್ಲಿ ತೊಡಗಿದಾಗ ಇಂತಹ ವ್ಯಕ್ತಿಗಳು ನನ್ನನ್ನು ಗಮನಿಸುವುದು ಬಹುತೇಕ ಕಡಿಮೆಯಾಯಿತು. ದೇಹದ ತೂಕ ಸಾಕಷ್ಟು ಕಡಿಮೆಯಾಗಿದ್ದರೂ  ಸಹ ಚಾಂದ್ರಾಯಣ ವೃತ ಮಾಡಬೇಕೆಂದು ನಿಶ್ಚಯಿಸಿದೆ. 

ಹಸಿವು ಒಂದು ಜೀವಿಯ ಆರೊಗ್ಯದ ಲಕ್ಷಣ. ನಮ್ಮ ಪ್ರತಿಯೊಂದು ಕ್ರಿಯೆಗಳಿಗೂ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಹಸಿವೇ ಕಾರಣವಾಗಿರುತ್ತದೆ. ಈ ಹಸಿವಿನ ಮಹತ್ವದ ಪೂರ್ಣ ಅರಿವು ಈ ಚಂದ್ರಾಯಣದ ಅವಧಿಯಲ್ಲಾಯಿತು.  ಬಾಲ್ಯದಲ್ಲಿ ಕಳೆಯುತ್ತಿದ್ದಹ ಹಸಿವಿನ  ದಿನಗಳು ಸಹ ಸ್ಮರಣೆಗೆ ಬಂತು. ಓಂದೊಂದು ತುತ್ತೂ ಮಹತ್ವವಾಯಿತು. ಒಂದು ಮುಷ್ಠಿ ಅನ್ನ ತಟ್ಟೆಯಲ್ಲಿ ಹಾಕಿ ಅಷ್ಟನ್ನೇ ಉಂಡು ಹಸಿವು ನೀಗಿಸಬೇಕು ಎನ್ನುವಾಗ ತಟ್ಟೆಯಲ್ಲಿದ್ದ ಒಂದು ಅಗುಳು ಅನ್ನವೂ ಬಹಳ ಮಹತ್ವ  ಎನಿಸಿತು. ಸಮಾರಂಭದಲ್ಲಿ ತಿನ್ನದೇ ಉಳಿದು ಎಸೆಯುವ ಆಹಾರ ನೆನಪಾಗುತ್ತಿತ್ತು. ಇದುವರೆಗೆ ಹೊಟ್ಟೆ ತುಂಬಿದರೂ ಮತ್ತೂ ತಿನ್ನುತ್ತಿದ್ದ ಅನ್ನಾಹಾರ ಇನ್ನಾರದೋ ಹೊಟ್ಟೆ ಸೇರಬೇಕಾದ ಆಹಾರವನ್ನು ಕಿತ್ತು ತಿಂದಂತೆ ಭಾಸವಾಯಿತು. ಚಾಂದ್ರಾಯಣ ಕೇವಲ ದೇಹ ಭಾರವನ್ನು ತಗ್ಗಿಸಿ ಆರೋಗ್ಯವನ್ನು ಕೊಡುವುದಕ್ಕೆ ಮಾತ್ರ ಸೀಮಿತವಾಗದೇ ಬದುಕಿನ ಮಹತ್ವದ ಪಾಠಗಳನ್ನು ಹೇಳಿಕೊಟ್ಟಿತು. ನಿಜಕ್ಕೂ ಹಸಿವು ಎಂದರೆ ಅದೆಷ್ಟು ಕಠಿಣ. ದಿನದ ಮೂರು ಹೊತ್ತು ಆಹಾರ ಏನೂ ಇಲ್ಲದೇ ಹಸಿವನ್ನೇ ಆಹಾರವಾಗಿಸಿಕೊಂಡವರೆಷ್ಟೋ? ಅದೇ ಹಸಿವನ್ನು ರೂಢಿ ಮಾಡಿಕೊಂಡವರೆಷ್ಟೋ , ಚಾಂದ್ರಾಯಣದಲ್ಲಿ ಹಸಿವೂ ಒಂದು ರೂಢಿಯಾಗಿ ಹೋದದ್ದು ಸತ್ಯ. ಈ ವೃತದ ಅವಧಿ ಕಳೆದ ಮೇಲೆ ನಾನು ಉಂಡು ತೇಗಬಲ್ಲೇನೆ ಎಂದು ಹಲವು ಸಲ ಅನುಮಾನವಾದದ್ದು ಸಹಜ. ಅದೆಂತಹ ಹಸಿವಿನ ಅನುಭವ. ಶೌಚಕ್ಕೆ  ಹೋದರೆ ವಿಸರ್ಜಿಸುವುದಕ್ಕೆ ಹೊಟ್ಟೆಯಲ್ಲೇನೂ ಇರಲಿಲ್ಲ. ಆದರೂ  ಅದೇನೋ ಸಂತೃಪ್ತಿ ಈ ಚಾಂದ್ರಾಯಣ ಕಲ್ಪಿಸಿದ್ದು ಸುಳ್ಳಲ್ಲ. 

ಚಾಂದ್ರಾಯಣ ಅದು ಕೇವಲ ವೃತವಲ್ಲ. ಬದುಕಿನಲ್ಲಿ ಕಲಿಯಬೇಕಾದ ಪಾಠ ಇದರಲ್ಲಿ ಹಲವಿದೆ.  ಹಾಗಾಗಿಯೆ ಪ್ರತಿಯೊಂದು  

ಚಾಂದ್ರಾಯಣ  ಎಂದರೆ ಚಂದ್ರನ ಕ್ಷಯ ಮತ್ತು ವೃದ್ಧಿಗೆ ನಮ್ಮ ದೇಹವನ್ನು ಸ್ಪಂದಿಸುವಂತೆ ನಮ್ಮ ದಿನಚರಿಯನ್ನು ಅದಕ್ಕೆ ಹೊಂದಿಸಿಕೊಳ್ಳುವ ವೃತವಾಗಿದೆ. ಕೃಷ್ಣ ಪಕ್ಷದ ಪಾಡ್ಯದಿಂದ ಅಮಾವಾಸ್ಯೆಯ ಹದಿನೈದು ದಿವಸ ಚಂದ್ರನ ಗಾತ್ರ ಕಡಿಮೆಯಾದಂತೆ ನಾವು ತಿನ್ನುವ ಆಹಾರದಲ್ಲಿ ಕಡಿಮೆ ಮಾಡುತ್ತಾ ಕೊನೆಗೆ ಅಮಾಸ್ಯೆಯಂದು ಪೂರ್ಣ ಉಪವಾಸ ಮಾಡಿ ಆನಂತರದ ಶುಕ್ಲ ಪಕ್ಷದ ಚಂದ್ರ ವೃದ್ಧಿಯಾದಂತೆ ಆಹಾರವನ್ನು ಹೆಚ್ಚಿಸುತ್ತಾ ಬಂದು ಪೌರ್ಣಮಿಯ ವರೆಗಿನ ಹದಿನೈದು ದಿವಸ ಮುಗಿದಾಗ ಚಾಂದ್ರಾಯಣ ವೃತವೂ ಸಂಪನ್ನವಾಗುತ್ತದೆ. ನೋಡುವುದಕ್ಕೆ  ಏನೋ ಬಹಳ ಸರಳವಾಗಿದೆ, ಆದರೆ ಮನಸ್ಸಿನ ನಿಯಂತ್ರಣ ಕಠಿಣವಾಗಿರಬೇಕು. ಒಂದಿಷ್ಟು ವಿಚಲಿತರಾದರೂ ವೃತ ಭಂಗವಾಗಿ ಫಲಶ್ರುತಿಯ ಮೇಲೆ ಪರಿಣಾಮ ಬೀರುತ್ತದೆ. ಉಪವಾಸ ಎಂಬುದು ಒಂದು ಆರೋಗ್ಯ  ವಿಧಾನವೂ ಹೌದು. ತಿಂಗಳಲ್ಲಿ ಒಂದು ದಿನ ಸಂಪೂರ್ಣ ಉಪವಾಸ ಆಚರಿಸುವುದು ಆರೋಗ್ಯದ ದೃಷ್ಟಿಯಲ್ಲಿ ಉತ್ತಮ. ಇದರಲ್ಲಿ ಉಪವಾಸ ಸಂಪೂರ್ಣ ಆಚರಿಸಿದರೂ ಮೂವತ್ತು ದಿವಸದ ನಿಯಮಿತ ಆಹಾರ ಸೇವನೆ ಮತ್ತು ಹೊಂದಿಕೊಂಡು ಯೋಗಾಭ್ಯಾಸ ದೇಹದ ಆರೋಗ್ಯದ ಮೇಲೆ ಗಣನೀಯ ಪರಿಣಾಮ ಬೀರುತ್ತದೆ. ಮತ್ತು ದೇಹದ ತೂಕ ಬಹಳಷ್ಟು ಕಡಿಮೆ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಕೇವಲ ದೇಹದ ತೂಕ ಮಾತ್ರವಲ್ಲ ಚಾಂದ್ರಾಯಣ ಉಪಯೋಗ ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿ ಬಹಳಷ್ಟು ಸತ್ಪರಿಣಾಮವನ್ನು ಉಂಟುಮಾಡಿ ಮನುಷ್ಯ ಜೀವನದ ಮಹತ್ವದ ಅರಿವಾಗುತ್ತದೆ. 

ಹಲವು ಧರ್ಮಗಳಲ್ಲಿ ಹಲವು ವಿಧದ ಉಪವಾಸದ ಆಚರಣೆ ಪವಿತ್ರವಾಗಿ ಆಚರಿಸಲ್ಪಡುತ್ತದೆ. ರಂಜಾನ್ ಮಾಸದಲ್ಲಿ ಮುಸ್ಲಿಂ ಆಚರಿಸುವ ಉಪವಾಸ ಒಂದು ವಿಧವಾದರೆ, ಚಾಂದ್ರಾಯಣವೂ ಒಂದು ತಿಂಗಳ ಒಂದು ಉಪವಾಸದ ವೃತ. ರಂಜಾನ್ ದಿನಗಳಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಅಖಂಡ ಸಂಪೂರ್ಣ ಉಪವಾಸ ಒಂದು ತೊಟ್ಟು ನೀರನ್ನೂ ಕುಡಿಯದೆ ಕಠಿಣ ಉಪವಾಸ ಮಾಡಿ ರಾತ್ರಿ ಆಹಾರ ಸೇವಿಸುತ್ತಾರೆ. ಆದರೆ ಇದರಲ್ಲಿ ಚಂದ್ರನಿಗೆ ಹೊಂದಿಕೊಂಡು ನಮ್ಮ ಆಹಾರ ಪದ್ಧತಿ ಇರುತ್ತದೆ. ನನ್ನಿಂದ ಈ ವೃತ ಆಚರಿಸಬಹುದೇ ಎಂಬ ಆತಂಕ ಇತ್ತು. ಆದರೆ ವೃತದ ಮಾರ್ಗ ದರ್ಶಕರಾಗಿ ಯೋಗ ಚಿಕಿತ್ಸಾ ಪರಿಣತ, ಡಾ.. ಹೃಷಿಕೇಷ್ ಪೆರ್ನಡ್ಕ ಧೈರ್ಯ ತುಂಬಿ ವೃತ ಆಚರಿಸುವಂತೆ ಪ್ರಚೋದಿಸಿದರು. ಅವರ ನಿರ್ದೇಶನದಂತೆ ಪುಷ್ಯ ಮಾಸದ ಕೃಷ್ಣ ಪಕ್ಷದ ಪಾಡ್ಯದಂದು ನನ್ನ ಉಪವಾಸ ಕ್ರಮ ಆರಂಭಿಸಿದೆ. ದಿನ ನಿತ್ಯದಂತೆ ನಾವೆಷ್ಟು ಯಾವ ಬಗೆಯ ಆಹಾರ ಸೇವಿಸುತ್ತೇವೆ ಎಂಬುದನ್ನು ಹೊಂದಿಕೊಂಡು ಇಲ್ಲಿ ಆಹಾರದ ಕ್ರಮ ನಿರ್ಣಯಿಸಲ್ಪಡುತ್ತದೆ. ನಾವು ಎರಡು ಪ್ಲೇಟ್ ಅನ್ನ ಸಾಂಬಾರ್, ಪಲ್ಯ ಇತ್ಯಾದಿ ಸೇವಿಸುತ್ತಿದ್ದರೆ ಅದರಲ್ಲಿ ಇರುವ ಕ್ಯಾಲೊರಿ ಲೆಕ್ಕ ಹಾಕಿ ದಿನ ಅದನ್ನು ಕಡಿಮೆ ಮಾಡುತ್ತಾ ಸಾಗುವುದೇ ಚಾಂದ್ರಾಯಣ. ಮೊದಲ ದಿನ ಎರಡು ಪ್ಲೇಟ್ ಅನ್ನ ಇದ್ದದ್ದು ಮರುದಿನ ಕಾಲು ಪ್ಲೇಟ್ ಕಡಿಮೆ ಮಾಡಿ ನಂತರದ ದಿನಗಳಲ್ಲಿ ಕಡಿಮೆ ಮಾಡುತ್ತಾ ಸಾಗುವಾಗ  ಆರಂಭದಲ್ಲಿ ನಿರ್ಧಾರ ಅಲುಗಾಡ ತೊಡಗುತ್ತದೆ. ಐದಾರು ದಿನ ಕಳೆಯ ಬೇಕಿದ್ದರೆ ಹಸಿವು ತಡೆದುಕೊಳ್ಳುವುದು ಅಭ್ಯಾಸವಾದರೂ., ಇಲ್ಲಿ ವಿಲಾಸೀ ಆಹಾರಗಳು, ಹೆಚ್ಚು ಖಾರ ಸಿಹಿ ಮತ್ತು ಎಣ್ಣೆಯ ತಿಂಡಿಗಳನ್ನು ಸಂಪೂರ್ಣ ನಿಷೇಧಿಸಲಾಗುತ್ತದೆ. ಕಾಫಿ ಚಹ ಸೇವನೆಯನ್ನೂ ಕಡಿಮೆ ಮಾಡಲಾಗುತ್ತದೆ. ಎಣ್ಣೆ ತಿಂಡಿ ಹೊರಗಿನ ಸಿದ್ಧ ಪಡಿಸಿದ ಆಹಾರಗಳು, ಬಿಸ್ಕಿಟ್ ಬ್ರೆಡ್ ಎಣ್ಣೆ ತಿಂಡಿ, ಸಿಹಿ ತಿಂಡಿಗಳನ್ನು ಸಂಪೂರ್ಣ ನಿರ್ಬಂಧಿಸಲಾಗುತ್ತದೆ. ಕೇವಲ ಸಾತ್ವಿಕ ಆಹಾರ ಅದೂ ಅತ್ಯಂತ ಮಿತಿಯಲ್ಲಿರುತ್ತದೆ. ಬಿಡು ಹೊತ್ತಲ್ಲಿ ಒಂದಷ್ಟು ಹಸಿ ತರಕಾರಿ ಒಂದಷ್ಟು ಹಸಿವನ್ನು ತಡೆದುಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ. ನಮಗರಿವಿಲ್ಲದೇ ನಮ್ಮ ಮನಸ್ಸು ನಮ್ಮ ನಿಯಂತ್ರಣಕ್ಕೆ ಒಳಗಾಗುತ್ತದೆ. ಚಾಂದ್ರಾಯಣದ ಅವಧಿಯಲ್ಲಿ ಎಣ್ಣೆ ತಿಂಡಿ ತಿನ್ನುವ ಹಾಗಿಲ್ಲ. ಸಿಹಿ ತಿನಿಸು ಕೂಡ ನಿಷಿದ್ಧ. ಹಾಗಾಗಿ ಮಗಳಿಗೆ ಇದ್ದ ಜಂಕ್ ಪುಡ್ ಸೇವನೆಯ ದುರಭ್ಯಾಸ ಬಹಳಷ್ಟು ದೂರವಾಯಿತು. ಈ ಒಂದು ತಿಂಗಳಲ್ಲಿ ಅದರಿಂದ ದೂರವೇ ಉಳಿದದ್ದು ಒಂದು ಮಹತ್ವದ ಸಾಧನೆ ಎನ್ನಬೇಕು. 


ಡಾ’ ಹೃಷಿಕೇಷ್  ಮೊದಲೇ ನಿಯಗಳ ಬಗ್ಗೆ ಹೇಳಿದ್ದರು. ಮಿತ ಆಹಾರ, ಬೆಳಗ್ಗೆ ಒಂದಷ್ಟು ನೀರು ಸೇವನೆ, ಸ್ನಾನ  ನಂತರ ಯೋಗಭ್ಯಾಸ ಇದು ಖಡ್ಡಾಯ. ರಾತ್ರಿ ಬೇಗ ಆಹಾರ ಸೇವಿಸಿ ಬೇಗನೇ ನಿದ್ರಿಸಬೇಕು. ಹೊರಗಿನ ಆಹಾರವನ್ನು ಸಂಪೂರ್ಣ ದೂರ ಮಾಡಬೇಕು. ಕಾಫಿ ಚಹ ಹಾಲು  ಸೇವನೆ  ನಿಲ್ಲಿಸುವಂತೆ ಹೇಳುತ್ತಾರೆ. ಆದರೂ ಆಭ್ಯಾಸ ಇದ್ದವರಿಗೆ ಅದನ್ನು ಸೂಕ್ಷ್ಮವಾಗಿ ಕಡಿಮೆ ಮಾಡಲಾಗುತ್ತದೆ. ಪಥ್ಯ ಎಂದರೆ ದೇಹಕ್ಕೆ ಹೊಂದಿಕೊಳ್ಳುವ ಆಹಾರ ಕ್ರಮ. ದೇಹಕ್ಕೆ ಬೇಡದೇ ಇದ್ದದ್ದು, ಮನಸ್ಸಿಗೆ ಬೇಕು ಎಂದು ಕಂಡರೂ ಸೇವಿಸುವ ಹಾಗಿಲ್ಲ. ಮರುದಿನ ಊಟ ಉಪಹಾರದ ವಿವರಗಳನ್ನು ಮೊದಲ ದಿನವೇ ಕೊಡಬೇಕು. ಮರುದಿನ ಅವರು ತೆಗೆದುಕೊಳ್ಳಬೇಕಾದ ಆಹಾರವನ್ನು ಅದರ ಪರಿಮಾಣವನ್ನು ತಿಳಿಸುತ್ತಾರೆ. ಅದರ ಪ್ರಕಾರ ಸೇವಿಸಿದರೆ ಮುಗಿಯಿತು. ಆದರೆ ಹಸಿವು ಚಪಲಗಳನ್ನು ನಿಯಂತ್ರಿಸುವುದು ತುಂಬ ಕಷ್ಟವಾದರೂ ಮನಸ್ಸು ಅದಕ್ಕೆ ಹೊಂದಿಕೊಳ್ಳಲಾರಂಭಿಸುತ್ತದೆ. ಮೊದಲ ಒಂದೆರಡು ದಿನ ನನಗೆ ಹೆಚ್ಚು ವೆತ್ಯಾಸ ತಿಳಿಯದೇ ಇದ್ದರೂ ಐದಾರು ದಿನ ಕಳೆದಾಗ ಬಹಳ ಕಷ್ಟವಾದದ್ದು ಸತ್ಯ. ಮೊದಲೇ ಯೋಗ ಕ್ರಮದಲ್ಲಿ ಅದೇ ನಿಯಮದಲ್ಲಿ ನನ್ನ ಆಹಾರದ ಕ್ರಮ ಇದ್ದರೂ ಸಹ ನನಗೆ ಒಂದಷ್ಟು ಕಷ್ಟವಾಯಿತು. ಆದರೆ ಕ್ರಮೇಣ ಮನಸ್ಸು ಅದ್ಭುತವಾಗಿ ಹೊಂದಿಕೊಂಡು ಬಿಟ್ಟಿತು. 

ಭಾರವಾದ ದೇಹ ಗಣನೀಯವಾಗಿ ಹಗುರವಾಗುತ್ತದೆ. ಜತೆಗೆ ಆರೋಗ್ಯವೂ ಹದಗೆಡುವುದಿಲ್ಲ. ಮುಖದ

ಚಾಂದ್ರಾಯಣದ ಮೊದಲ ದಿನ
ಚಾಂದ್ರಾಯಣದ ಕೊನೆಯ ದಿನ



ಲ್ಲಿ ಪ್ರಸನ್ನತೆ  ಸದಾ ಇರುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ನಮ್ಮಲ್ಲಿರುವ ದುಶ್ಚಟಗಳು ದೂರವಾಗುತ್ತದೆ. ಕಾಫಿ ಚಹದಂತಹ ವಿಲಾಸೀ ಆಹಾರ ಸೇವನೆ ದೂರವಾಗುತ್ತದೆ. ಮುಂಜಾನೆ ಏಳುವುದು, ಸ್ನಾನ ಮಾಡಿ ಯೋಗಾಭ್ಯಾಸ ಮಾಡುವುದು, ಮಿತವಾದ ಆಹಾರ ಸೇವನೆ, ಒಟ್ಟಿನಲ್ಲಿ  ಉತ್ತಮ ಶಿಸ್ತಿನ ಜೀವನ ಶೈಲಿ ರೂಢಿಸಿಕೊಳ್ಳುವುದಕ್ಕೆ ಸಹಾಯಕವಾಗುತ್ತದೆ. ಚಾಂದ್ರಾಯಣ ಒಂದು ಅದ್ಭುತ ವೃತ. 

ಚಾಂದ್ರಾಯಣ ಬಹಳ ಕಠಿಣ ಎಂಬ ಕಲ್ಪನೆ ಇತ್ತು. ಆದರೆ ಅದನ್ನು ಸರಳವಾಗಿ ಆಚರಿಸುವಂತೆ ಉತ್ತಮ ಮಾರ್ಗ ದರ್ಶನ ನೀಡಿದವರು ಡಾ. ಹೃಷಿಕೇಶರು ಒಂದು ಉತ್ತಮ ಜೀವನ ದರ್ಶನಕ್ಕೆ ಕಾರಣರಾದರು. ದಿನವೂ ಒಂದು ಹೊಸ ಅನುಭವದಿಂದ ಚಾಂದ್ರಾಯಣವನ್ನು ಮುಗಿಸಿದ ತೃಪ್ತಿ ಇದೆ. ಕೇವಲ ಒಂದು ತಿಂಗಳಲ್ಲಿ ಏಳು ಕೆಜಿಗಿಂತಲೂ ಅಧಿಕ ದೇಹದ ತೂಕ ಇಳಿಸಿಕೊಂಡಿದ್ದೇನೆ.  ಇದನ್ನು ಯಾರೂ ಆಚರಿಸಬಹುದು. ಸರಳವಾದ ಮಾರ್ಗದರ್ಶನದಿಂದ ಸುಲಭವಾಗಿ ಇದನ್ನು ಆಚರಿಸಬಹುದು. ಚಾಂದ್ರಾಯಣ ಆಚರಿಸಬೇಕಿದ್ದರೆ ಉತ್ತಮ ಸಲಹೆಗಾಗಿ ಡಾಕ್ಟರ್ ಹೃಷಿಕೇಶ್ ಅವರ ಸಂಪರ್ಕ ವಿವರಗಳನ್ನು ಕೊಟ್ಟಿರುತ್ತೇನೆ. ಕಠಿಣವೆನಿಸಿದ ಚಾಂದ್ರಾಯಣವನ್ನು ಸುಲಭ ಸಾಧ್ಯವಾಗಿ ಮಾಡಿದ್ದ ಹೃಷಿಕೇಶ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.

ಡಾಕ್ಟರ್ ಹೃಷಿಕೇಶ ಅವರ Mobile  : 91138 93928 ವಿಳಾಸ : No. 894, 3rd Floor, 10th A East Cross Rd, RBI Layout, 7th Phase, J. P. Nagar, Bengaluru, Karnataka 560078. ಇನ್ನಿತರ ವಿವರಗಳ ಲಿಂಕ್   https://g.co/kgs/Uq5wRF 



Sunday, February 4, 2024

ಬ್ರಂಹಾಂಡ ಹಸಿವು

         ಅಂದು ನನ್ನ ಉಪಯನಯನ.  ಶೈಶವ ಅವಸ್ಥೆಯಿಂದ  ಬಾಲ್ಯಾವಸ್ಥೆಗೆ ಬರುವಾಗ ಇನ್ನೇನು ಪ್ರೌಢನಾಗುವ ಮೊದಲು ನನ್ನ ಮಾವ ಅಮ್ಮ ಸೇರಿ ನನಗೆ ಬ್ರಹ್ಮೋಪದೇಶ ಮಾಡುವುದಕ್ಕೆ ಸಂಕಲ್ಪ ಮಾಡಿದರು.  ಅದು ವರೆಗೆ ಚಂಚಲವಾಗಿದ್ದ ಬದುಕು, ನಿದ್ದೆಗೂ ಆಹಾರ ಆಟ ಪಾಠಗಳಿಗೆ ನಿಯಮವಿಲ್ಲದ ಒಂದು ಅವಸ್ಥೆ. ಆದರೂ ಬ್ರಹ್ಮೋಪದೇಶ ಎನ್ನುವಾಗ ಒಂದು ರೋಮಾಂಚನ. ಮನೆಯಲ್ಲಿ ನಮ್ಮಜ್ಜ  ಕಲಿಸಿ ಹೇಳುತ್ತಿದ್ದ ವೇದ ಮಂತ್ರಗಳನ್ನು ಉಪಯನಯನವಾಗದೆ ಹೇಳುವ ಅವಕಾಶವಿಲ್ಲ. ಉಳಿದವರು ಮಂತ್ರ ಹೇಳುತ್ತಿದ್ದರೆ ಅದನ್ನು ಕಿವಿಯಾರೆ ಕೇಳಿ ಬಹಳಷ್ಟು ಬಾಯಿಗೆ ಬಂದರೂ ಸಹ ಅದನ್ನು ಉಚ್ಚರಿಸುವುದಕ್ಕೆ ಉಪದೇಶ ಅಗತ್ಯ ಎಂದು ಹೇಳುತ್ತಿದ್ದರು. ಮಂತ್ರೋಚ್ಚಾರಕ್ಕೆ ಬ್ರಹ್ಮೊಪದೇಶವಾಗಿರಬೇಕು.  ಯಾಕೆಂದರೆ ಬಾಲ್ಯದಲ್ಲಿ ನಾಲಿಗೆ ಉಚ್ಚಾರ ಸಮರ್ಪಕವಾಗಿರುವುದಿಲ್ಲ. ಮಗು ಬೆಳೆದು ಪ್ರೌಢಾವಸ್ಥೆಗೆ ಬರಬೇಕು. ಇಂದ್ರಿಯ ಜ್ಞಾನದ ಬಗ್ಗೆ ಅರಿವಾಗಬೇಕು. ಮಂತ್ರೋಚ್ಚಾರದ ಸ್ವರಭಾರದಲ್ಲಿ, ಅಕ್ಷರಗಲ ಉಚ್ಚಾರದಲ್ಲಿ ಸ್ಪಷ್ಟತೆ ಇರಬೇಕು. ತಪ್ಪು ತಪ್ಪು ಉಚ್ಚಾರಗಳು ಪ್ರಮಾದವನ್ನು ಉಂಟು ಮಾಡುತ್ತದೆ. ಮಂತ್ರಗಳು ಬಹಳ ಸೂಕ್ಷ್ಮವಾದ ಉಚ್ಚಾರದಿಂದ ಕೂಡಿರುತ್ತದೆ.  ಬಾಲ್ಯದಲ್ಲಿ  ಉಪದೇಶ ಎಂದರೆ ಏನು ಎಂದು  ಬಾಲ್ಯಾವಸ್ಥೆಯಲ್ಲಿ ಅರಿವಾಗಲಿಲ್ಲ. ಆದರೆ ಉಪನಯನ ಎಂದರೆ ಮತ್ತೆ ಮಂತ್ರವೂ ಉಳಿದವರಂತೆ ಹೇಳಬಹುದು. ಸ್ನಾನ ಮಾಡಿ ಆಕಾಶ ನೋಡಿ ಜಪಕ್ಕೆ ಕುಳಿತುಕೊಳ್ಳಬಹುದು ಹೀಗೆ, ಬಾಲ್ಯದಲ್ಲಿ ಪ್ರತಿಯೊಬ್ಬರಿಗೂ ಅದೊಂದು ರೀತಿಯಲ್ಲಿ ದೊಡ್ಡವನಾಗುವ ಚಪಲ. ಮತ್ತು ದೊಡ್ಡವನಾದೆ ಎಂದು ತೋರಿಸಿಕೊಡುವ ತವಕ. 

ತಂದೆ ಇಲ್ಲದೇ ಇದ್ದುದರಿಂದ ಹಿರಿಯ ಸೋದರ ಮಾವನೇ ಆ ಸ್ಥಾನವನ್ನು ಅಂಗೀಕರಿಸಿದರು. ಮೊದಲಿಗೆ ಪವಿತ್ರವನ್ನು ತೊಡಿಸಿ ಕೈಗೆ ದಂಡವನ್ನು ಸೊಂಟಕ್ಕೆ ಮುಂಜಿಯನ್ನು ಬಂಧಿಸಿ ಬಾಲ್ಯದಿಂದ ಪ್ರೌಢಾವಸ್ಥೆಯ ಬಾಗಿಲನ್ನು ತೆರೆದು ತೋರಿಸಿದರು. ಅಮ್ಮನ ಕೈತುತ್ತು ಮಾವನ ಮಡಿಲಲ್ಲಿ ಕುಳಿತು ಅದುವರೆಗೆ ಕೇಳಿರದ ಗಾಯತ್ರಿ ಮಂತ್ರದ ಉಪದೇಶ ಪಡೆದಾಗ ಎಳೆಯ ಮನಸ್ಸಿಗೆ ಅದರ ಗಂಭೀರತೆ ಅರಿವಾಗುವುದಿಲ್ಲ.  ಬ್ರಹ್ಮ ಎಂದರೆ ಅದು ಎಂದು ತೋರಿಸಿಕೊಡುವಾಗ,  ಬ್ರಹ್ಮ ಎಂದರೆ ಬದುಕಿನ  ಅದು ಗುರಿ ಎಂದು ಭೋಧಿಸುವ ಜ್ಞಾನದ ಅರಿವೂ ಆಗುವುದಿಲ್ಲ. . ಆದರೆ ಬದುಕಿನ ದಾರಿಯನ್ನು ಕ್ರಮಿಸಿದಂತೆ ನಾವು ನಮಗರಿವಿಲ್ಲದೇ ಅದೇ ಗುರಿಯತ್ತ ಸಾಗುತ್ತಿದ್ದೇವೆ ಎಂಬ ಜ್ಞಾನೋದಯವಾಗುತ್ತದೆ. ಈ ಬ್ರಹ್ಮ ಜ್ಞಾನ ಎಂಬುದು ಬದುಕಿನ ಪರಮಾರ್ಥ....ಅದರ ಸೂಕ್ಷ್ಮ ಮೆಟ್ಟಲೇ ಈ ಬ್ರಹ್ಮೋಪದೇಶ. ಉಪನಯನದ ಬಾಲ್ಯ ಜೀವನದಲ್ಲಿ ಈ ಜ್ಞಾನದ ಗಂಭೀರತೆ ಅರಿವಾಗುವುದಿಲ್ಲ.  ಕ್ರಮೇಣ ಲೌಕಿಕ ಜೀವನಾನುಭವದಲ್ಲಿ ಇದು ಅನುಭವಕ್ಕೆ ಬರುತ್ತದೆ. ಗಿಡದಲ್ಲಿ ಹುಟ್ಟುವ ಹಣ್ನಿನೊಳಗಿರುವ ಬೀಜ ಹಣ್ಣಿನ ತೇವದಲ್ಲಿದ್ದರೂ ಮೊಳಕೆ ಬರುವುದಿಲ್ಲ. ಅದು ಸುರ್ಯನ ಶಾಖದಲ್ಲಿ ಬೆಂದು ಶುಷ್ಕವಾಗಿ ಆನಂತರ ನೀರಿನ  ಸಂಪರ್ಕದಲ್ಲಿ ಅದು ಮೊಳಕೆಯೊಡೆಯುತ್ತದೆ. ಬೀಜ ಶುಷ್ಕವಾದಂತೆ ನಮ್ಮ ಬಾಲ್ಯ. ಜಾನದ ಮೊಳಕೆಯೊಡೆಯಬೇಕಾದರೆ ಗುರುವಿನಿಂದ ಅಮೃತಧಾರೆಯಾಗಬೇಕು. ಬಾಲ್ಯ ಎಂದರೆ ಒಣಗಿದ ಬೀಜದಂತೆ. ಆಂತರ್ಯದಲ್ಲಿ ಸತ್ವವಿರುತ್ತದೆ. ಅದು ಹೊರಬರಲು ಅವಕಾಶ ಮತ್ತು ಬಾಹ್ಯ ಪ್ರಯತ್ನ ಇರಬೇಕಾಗುತ್ತದೆ. ಗುರುವಾದವನು ಇದನ್ನು ಒದಗಿಸುತ್ತಾನೆ. 

ಹಸಿವು ಜೀವಭಾವದ ಅಸ್ತಿತ್ವದ ಸಂಕೇತ. ಹಸಿವು ಇಲ್ಲದೇ ಇದ್ದರೆ ಆ ಜೀವಕ್ಕೆ ಅರ್ಥವೂ ಇರುವುದಿಲ್ಲ. ಹಸಿವನ್ನು ನೀಗದ ಧರ್ಮ ಧರ್ಮವೇ ಅಲ್ಲ ಅಂತ ಯಾರೋ ಹೇಳಿದ್ದರು. ಹಸಿವನ್ನು ನೀಗುವುದು ಬದುಕಿನ ಪರಮಾರ್ಥ.  ಹಾಗಂತ ಅವರು ಹೊಟ್ಟೆಯ ಹಸಿವಿನ ಬಗ್ಗೆ ಮಾತ್ರವೇ ಹೇಳಿದ್ದರು.ಲೌಕಿಕ ಜೀವನದ ಹಸಿವನ್ನು ಪರಿಹರಿಸುವುದರಲ್ಲೆ ಲೋಕ ಧರ್ಮವಿದೆ.  ಆದರೆ ಭಾರತೀಯ ಸಂಸ್ಕೃತಿ ಕೇವಲ ಹೊಟ್ಟೆಯ ಹಸಿವಿಗೆ ಸೀಮಿತವಾಗಿರುವುದಿಲ್ಲ.  ಹಸಿವು ಬಗೆ ಬಗೆಯ ರೂಪದಲ್ಲಿರಬಹುದು. ಮನಸ್ಸಿನ ಹುಟ್ಟುವ ವಿಕಾರಗಳಿಗೆ ಅನುಸರಿಸಿ ಅದು ವಿವಿಧ ರೂಪಗಳನ್ನು ತಾಳುತ್ತದೆ. ಕಾಮನೆಗಳ ಹಸಿವು, ಧೈಹಿಕ ಮಾನಸಿಕ ಹಸಿವು....ಮನುಷ್ಯ ಆಯಾಯ ಸಂದರ್ಭಗಳಲ್ಲಿ ಅದುವೇ ಪರ್ಮಾರ್ಥ ಎಂದು ತಿಳಿದುಕೊಳ್ಳುತ್ತಾನೆ. ಆದರೆ ಜ್ಞಾನದ ಆಶಯವಿದ್ದಾಗ ಅಲ್ಲಿ ಹಸಿವು ನಿಜವಾದ ಅರ್ಥವನ್ನು ಕಂಡುಕೊಳ್ಳುತ್ತದೆ. ಈ ಹಸಿವೇ ಒಂದು ಜ್ಞಾನ. ಈ ಜ್ಞಾನ ಎಂದರೆ ಯಾವುದು? ನಡು ರಾತ್ರಿಯಲ್ಲಿ ಸಿಧ್ಧಾರ್ಥನಿಗೆ ಉಂಟಾದ ಹಸಿವದು ಬುದ್ಧನಾಗುವ ತನಕ ಸೆಳೆದೊಯ್ಯಿತು. ಕೊನೆಗೆ ಜ್ಞಾನೋದಯವಾಗಿ ಹಸಿವು ದೂರವಾದಾಗ ಆತ ಗೌತಮ ಬುದ್ಧನಾದ. ಜ್ಞಾನದ ಹಸಿವು ಪ್ರಚೋದನೆಗೊಂಡಾಗ ಅಲ್ಲಿ ಬೇರೆ ಯಾವ ಹಸಿವಿಗೂ ಸ್ಥಾನವಿರುವುದಿಲ್ಲ. ನಮ್ಮ ಹಿಂದೂ ಸನಾತನ ಧರ್ಮದ ಮೂಲವೇ ಈ ಜ್ಞಾನದ ಹಸಿವು. 

ಹುಟ್ಟುವುದು ಯಾಕೆ? ನಂತರ ಜೀವನ ಬಾಲ್ಯ ಯೌವನ ವೃದ್ಧಾಪ್ಯವನ್ನು ಅನುಭವಿಸುವುದೇಕೆ? ಅದರನಡುವೆ ಬಾಲ್ಯ ಗೃಹಸ್ಥ ಹೀಗೆ ಹಲವು ಸ್ತರಗಳು ಯಾಕೆ? ಈ ಎಲ್ಲ ಪ್ರಶ್ನೆಗಳಿಗೆ ಹಿಂದಿನಿಂದಲೂ ಅನ್ವೇಷಣೆಗೆ ತೊಡಗಿದಾಗ ಇದು ಜ್ಞಾನದ ಹಸಿವಿನ ಲಕ್ಷಣ.  ಆಧ್ಯಾತ್ಮಿಕವಾದ ಚಿಂತನೆಯಲ್ಲಿರುವ ಹಸಿವು ಉಳಿದ ಎಲ್ಲಾ ಹಸಿವನ್ನೂ ಮರೆಸಿಬಿಡುತ್ತದೆ. ನಮ್ಮ ತಂದೆಯ ತನಕ ಬಂದಿರುವ ಒಂದು ಸಂಸ್ಕಾರ ನಮ್ಮಿಂದ ಮತ್ತೆ ಮುಂದುವರೆಯಬೇಕು. ತಂದೆಯಾದವನು ಅದನ್ನು ಮಗನಿಗೆ ಉಪದೇಶಿಸುತ್ತಾನೆ. ಮಗ ಅದನ್ನು ಶಿರಸಾವಹಿಸಿ ಮತ್ತೆ ಮುಂದುವರೆಸುತ್ತಾನೆ. ಸಹಸ್ರಾರು ವರ್ಷಗಳಿಂದ ಈ ನಂಬಿಕೆಯ ತಳಹದಿಯಲ್ಲಿ ಈ ಸಂಸ್ಕಾರ ಬೆಳೆದು ಬಂದಿದೆ. 

ಭೂಮಿಯ ಪ್ರತೀ ಚರಾಚರ ವಸ್ತುಗಳೂ ನಮ್ಮ ಮನಸ್ಸಿನಲ್ಲಿ ದೈವತ್ವವನ್ನು ಪ್ರತಿನಿಧಿಸುತ್ತವೆ. ಸಸ್ಯ ಪ್ರಾಣಿ ನೀರು ಕಾಡು  ಬಂಡೆ ಪರ್ವತ  ಹೀಗೆ ಪ್ರತಿಯೊಂದರಲ್ಲೂ ನಾವು ಕಾಣುವ ದೈವತ್ವ ದೇವರ ವ್ಯಾಪಕತೆಯನ್ನು ತೋರಿಸುತ್ತದೆ. ಇದರ ಮೂಲವೇ ಜ್ಞಾನ. ನಮ್ಮ ಸಂಸ್ಕಾರಗಳು ಪ್ರಕೃತಿಯ ಭಾವನೆಯೊಂದಿಗೆ ಬೆರೆತಿರುತ್ತದೆ. ಸೂರ್ಯನನ್ನು ಪ್ರತಿನಿಧಿಯಾಗಿಸಿ ಪ್ರಕೃತಿಯನ್ನು ಕಾಣುವ ಈ ಸಂಸ್ಕೃತಿ ಪ್ರಕೃತಿಧರ್ಮವನ್ನು ಅಂಗೀಕರಿಸಿ ಅದರೊಂದಿಗೇ ಬೆಳೆಯುತ್ತದೆ. ನಮಗೆ ಯಾವುದೂ ಮುಖ್ಯವಲ್ಲ. ಎಲ್ಲವನ್ನು ಸಾಂಕೇತಿಕವಾಗಿ ಬಳಸುವ ಸಂಸ್ಕೃತಿ. ಒಂದು ತೆಂಗಿನ ಕಾಯಿಯಲ್ಲಿ ದೇವರನ್ನು ಆವಾಹಿಸಿ ಜಗತ್ ವ್ಯಾಪಕನಾದ ಭಗವಂತನನ್ನು ಕಾಣುತ್ತೇವೆ. ರೂಪವಿಲ್ಲದ ಭಾವವಿಲ್ಲದ ನಿರ್ಗುಣ ನಿರಾಮಯನಾದ ಭಗವಂತನಿಗೆ ನಮ್ಮ ಚಿಂತನೆಗೆ ಸೀಮಿತವಾಗಿಸಿ ನಾವು ಭಗವಂತನ್ನು ಕಾಣುವಾಗ ಅಲ್ಲೊಂದು ಪ್ರಕೃತಿ ಧರ್ಮವಿರುತ್ತದೆ. ಬ್ರಹ್ಮೋಪದೇಶ ಈ ಎಲ್ಲದರ ಮೊದಲ ಮೆಟ್ಟಿಲಾಗಿರುತ್ತದೆ. ಬ್ರಹ್ಮ ಎಂದರೆ ಏನು ಎಂಬ ಅನ್ವೇಷಣೆ ಇಲ್ಲಿಂದ ಆರಂಭವಾಗುತ್ತದೆ. ಜ್ಞಾನದ ಹಸಿವಿಗೆ ಉತ್ತೇಜಕವಾದ ಈ ಬ್ರಹ್ಮೋಪದೇಶ ಬ್ರಹ್ಮಾಂಡದ ಹಸಿವನ್ನು ಪ್ರಚೋದಿಸುತ್ತದೆ.