Sunday, July 12, 2026

ಬಾನಲ್ಲೂ ನೀನೆ ಭುವಿಯಲ್ಲು... ನೀನೆ..

" ಬಾನಲ್ಲೂ ನೀನೆ ಭುವಿಯಲ್ಲು... ನೀನೆ"   ನಾವು ನಿದ್ದೆಗೆ ಜಾರುವ ಹೊತ್ತು ರಾತ್ರಿ ಹತ್ತು ಘಂಟೆಗೆ ನೀರವ ಮೌನದಲ್ಲಿ ಪಕ್ಕದ ಮನೆಯ ರೇಡಿಯೋದಿಂದ ಹಾಡು ಬರುವುದು ಕೇಳಿ ಬರುತ್ತಿದ್ದ ನಮ್ಮ ಬಾಲ್ಯದ ಕಾಲ.  ಸಿನಿಮಾ ಹಾಡು ಕೇಳಬೇಕೆಂದರೆ ಯಾರದೋ ಮನೆಗೆ ಹೋಗಿ ರೇಡಿಯೋ ಹಾಕಿಸಿ ಕೇಳಬೇಕಿತ್ತು. ಅವರೂ ಹಾಗೆ ರೇಡಿಯೋ ಬ್ಯಾಟರಿ ಖರ್ಚಾಗುತ್ತದೆ ಎಂದು ಅದನ್ನು ಒಂದಿಷ್ಟು ಸಣ್ಣ ಧ್ವನಿಯಲ್ಲೇ ಇಡುತ್ತಿದ್ದರು.  ತೀರಾ ಬಡತನದ ಒಂದು ಸಾಮಾನ್ಯ ಸಾಧನವಾದ ರೇಡಿಯೋ ಕೂಡ ನಮ್ಮಲ್ಲಿರಲಿಲ್ಲ.

    ಬಾಲ್ಯದಲ್ಲಿ ನಮ್ಮ ಮನೆಯಲ್ಲಿ ಮನರಂಜನೆ ವಸ್ತು ಯಾವುದೂ ಇರಲಿಲ್ಲ. ಊರಿಗೆಲ್ಲಾ ವಿದ್ಯುತ್ ಸಹ ಇರಲಿಲ್ಲ. ನಮ್ಮ ಪೈವಳಿಕೆ ಗ್ರಾಮದ ಮನೆಗಳಲ್ಲಿ  ವಿದ್ಯುತ್ ದೀಪ ಬೆಳಗಿದ್ದು 1980 ರ ಇಸವಿಯಲ್ಲಿ. ಅದುವರೆಗೆ ಸೀಮೆ ಎಣ್ಣೆಯ ದೀಪ ಲ್ಯಾಂಪ್ ಗಳು ಮಾತ್ರ. ಆನಂತರ ಒಂದಷ್ಟು ಧನಿಕರ ಮನೆಗೆ ವಿದ್ಯುತ್ ಸಂಪರ್ಕ ಬಂದರೂ ನಮ್ಮ ಬಾಡಿಗೆ ಮನೆಯಲ್ಲಿ ಸೀಮೆ ಎಣ್ಣೆ ದೀಪವೇ ಪ್ರಕಾಶ ಮೂಲ. ಇಂತಹ ಸ್ಥಿತಿಯಲ್ಲಿ ಮನರಂಜನ ಸಾಧನ ತರುವುದು ಉಪಯೋಗಿಸುವುದು ನಮ್ಮ ಕೈಗೆಟುವ ವಸ್ತುವಾಗಲಿಲ್ಲ.

ಆಗೆಲ್ಲ ಕೆಲವರು ಸಾಯಂಕಾಲ ಬಜಾರ್ ಗೆ ಬಂದವರು ರೇಡಿಯೋ ತರುತ್ತಿದ್ದರು. ಕೈಯಲ್ಲೊಂದು ರೇಡಿಯೋ ತಂದು ಜಂಭದಿಂದ ಅಂಗಡಿಯ ಜಗಲಿಯ ಬೆಂಚಿನ  ಮೇಲೆ ಕುಳಿತು ಬರ ಬರ ಸದ್ದಿನೊಂದಿಗೆ ಮಂಗಳೂರು ಭದ್ರಾವತಿ ಸಿಲೋನ್ ವಿವಿಧ ಭಾರತಿ ಸ್ಟೇಶನ್ ಹುಡುಕುತ್ತಿದ್ದರೆ, ನಾವು ಸುತ್ತ ನೆರೆದು ಆಸಕ್ತಿಯಿಂದ ನೋಡುತ್ತಿದ್ದೆವು. ಪುಟ್ಟ ಪೆಟ್ಟಿಗೆಯಿಂದ ಮಾತನಾಡಿದ ಹಾಡಿದ ಸದ್ದು ಬರುವುದು ಅಚ್ಚರಿಯ ವಿಷಯವಾಗಿತ್ತು. ಯಾರೋ ಎಲ್ಲೋ ರೇಡಿಯೋ ಹಾಕಿ ಹಾಡು ಕೇಳುತ್ತಿದ್ದರೆ, ನಮ್ಮ ಮನೆಯಲ್ಲೂ ಒಂದು ರೇಡಿಯೋ ಅದು ಕನಸಿನ ವೈಭವದ ವಿಷಯವಾಗಿತ್ತು. ಅಂತಹ ಕಾಲದಲ್ಲಿ ಎಲ್ಲೋ ಯಾರದೋ ಒಂದು ರೇಡಿಯೋದಲ್ಲಿ ಆಕಾಶವಾಣಿಯ ಚಿತ್ರಗೀತೆಯಲ್ಲಿ ಹಾಡು ಬರುತ್ತಿದ್ದರೆ ಅದರಲ್ಲಿ ಗಾಯಕರ ಹೆಸರು ಹೇಳುತ್ತಿದ್ದರೆ, ಅದರಲ್ಲಿ ಸಾಮಾನ್ಯವಾಗಿ ಬರುತ್ತಿದ್ದ ಹೆಸರು ಪಿ ಬಿ ಶ್ರೀನಿವಾಸ್,  ಘಂಟಸಾಲ,  ಎಸ್ ಜಾನಕಿ, ಎಸ್ ಪಿ ಬಾಲ ಸುಬ್ರಹ್ಮಣ್ಯಂ, ಜೇಸುದಾಸ್ ವಾಣಿಜಯರಾಮ್, ಪಿ ಸುಶೀಲ ಹೀಗೆ....  ಯಾವುದೇ ಹಾಡು ಹಾಕಿದರು ಹಾಡಿದವರು ಎ ಸ್ಪಿ ಬಾಲಸುಬ್ರಹ್ಮಣ್ಯಂ ಮತ್ತು ಎಸ್ ಜಾನಕಿ ಈ ಹೆಸರು ಪ್ರತೀ ಹಾಡಿನೊಂದಿಗೆ ಚಿರ ಪರಿಚಿತ. 

ಚಿತ್ರ ಬಯಲು ದಾರಿ ಹಾಡಿದವರು ಎಸ್ ಜಾನಕಿ...ರಾತ್ರಿಯ ನೀರವ  ಮೌನದಲ್ಲಿ ದೂರದ ರೇಡಿಯೋದಲ್ಲಿ  ಎಸ್ ಜಾನಕಿಯ ಮಧುರವಾದ ಸ್ವರ ಗಾಳಿಯಲ್ಲಿ ತೇಲಿಬರುತ್ತಿದ್ದರೆ ನಿಂತಲ್ಲೇ ನಿಂತು ಆ  ಹಾಡನ್ನು ಆಲಿಸುತ್ತಿದ್ದದ್ದು ಈಗಲೂ ನೆನಪಿದೆ. ಬಾಲ್ಯದ ಮುಗ್ದ ಮನಸ್ಸಿನ ದಿನಗಳಿಂದ ಎಸ್ ಜಾನಕಿ ಎಂಬ ಗಂಧರ್ವ ಗಾಯಕಿಯ ಮುಖ ಪರಿಚಯವಿಲ್ಲದೇ ಇದ್ದರೂ  ಆ ಧ್ವನಿಯ ಪರಿಚಯವಿತ್ತು. ಈಗಿನ ಟಿವಿ ಇಂಟರ್ನೆಟ್ ಯೂಟ್ಯೂಬ ದಿನಗಳಲ್ಲಿ ಆ ದಿನದ ಅನುಭವದ ಕಲ್ಪನೆ ಹೇಳಿದರೂ ಕಲ್ಪಿಸುವುದು ಸಾಧ್ಯವಿಲ್ಲ. ಅದೊಂದು ಕಾಲ. ಆ ಕಾಲದಿಂದ ಪರಿಚಯದ ಜಾನಕಮ್ಮನ ಧ್ವನಿ ಇನ್ನು ಕೇವಲ ಧ್ವನಿ ಮುದ್ರಣಕ್ಕೆ ಸೀಮಿತ. ಈ ಕೋಗಿಲೆ ಸಿನಿಮಾದಲ್ಲಿ ಹಾಡುವುದು ನಿಲ್ಲಿಸಿ ಅದೆಷ್ಟು ಕಾಲವಾಯಿತೋ ತಿಳಿಯದು. ಇಂದಿನ ಚಿತ್ರ ವಿಚಿತ್ರ ಸಂಗೀತದ ನಡುವೆ ಜಾನಕಮ್ಮನ ಧ್ವನಿ ಹಲವಾರು ಸಲ ನೆನಪಿಗೆ ಬಂದರೂ ಕಾಲಗತಿಯನ್ನು ತಳ್ಳುವುದು ಸಾಧ್ಯವಲ್ಲ. ಜಾನಕಮ್ಮನ ಹಾಡುಗಳೆಂದರೆ ಅದು ಆಗಿನ ಗಾಳಿಯಲ್ಲಿ ಕಂಪು ಬೆರೆತಂತೆ. ಅದೆಂದಿಗೂ ಮಾಸಿ ಹೋಗದ ಧ್ವನಿ. ಈಗಲೂ ಆ ಗಾಳಿಯಲ್ಲಿ ಆ   ಧ್ವನಿ ಎಲ್ಲಾದರೂ ಅವಿತಿದೆಯೋ ಅಂತ ಪಂಚೆಂದ್ರಿಯಗಳು ಅರಸುತ್ತಿದ್ದರೆ ಆಶ್ಚರ್ಯವಿಲ್ಲ. ಈಗಿನ ಟೀವಿ ಯೂಟ್ಯೂಬ್ ನಲ್ಲಿ ಮುಖತೋರಿಸಿ ಹಾಡುವ ಗಾಯಕರ ಪರಿಚಯ ಮುಂದಿನ ಘಳಿಗಯಲ್ಲಿ  ಮರೆತು ಹೋಗುತ್ತಿರುವಾಗ,  ಆಗ ಕೇವಲ ಧ್ವನಿಮಾತ್ರದಿಂದ  ಚಿರಪರಿಚಿತರಾದ ಜಾನಕಮ್ಮನ ಸ್ವರ ಈಗಲೂ ನೆನಪಿನಲ್ಲಿ ಉಳಿದರೆ ಆ ಧ್ವನಿಯ ಗಾಢ ನೆನಪು ಎಷ್ಟು ಎಂದು ತಿಳಿಯುವುದಕ್ಕೆ ಸಾಧ್ಯವಾಗುತ್ತದೆ. ಇತ್ತೀಚಿನ ದಿನದವರೆಗೂ ಜಾನಕಮ್ಮನ ಮುಖ ಪರಿಚಯ ಬಹಳಷ್ಟು ಮಂದಿಗೆ ತಿಳಿದಿಲ್ಲ. ಕೇವಲ ಧ್ವನಿಯಿಂದ ಮನೆ ಮನೆಯ ಮನ ಮನದ ಚಿರ ಪರಿತ ಹೆಸರಾದ ಜಾನಕಮ್ಮನ ಸ್ವರದ ಜಾದು ಇಂದು ಕಲ್ಪಿಸುವುದಕ್ಕೂ ಸಾಧ್ಯವಿಲ್ಲ.


ಈಗಿನ್ನು ಜಾನಕಮ್ಮ ಕೇವಲ ನೆನಪಿನ ಲೋಕಕ್ಕೆ ಸರಿದುಹೋದರೆ ಜಾನಕಮ್ಮನ ನೆನಪಿನಲ್ಲಿ ಮನಸ್ಸಿನ್ನೂ ಹಾಡುತ್ತಿದೆ ...ಬಾನಲ್ಲು ನೀನೆ ಭುವಿಯಲ್ಲೂ ನೀನೆ ಎಲ್ಲೆಲ್ಲೂ ನೀನೆ...



Saturday, July 4, 2026

ಮಿತ್ರನ ಮೈತ್ರಿ

ಸ್ನೇಹ ಸಂಬಂಧಗಳು ಬದುಕಿನ ಅರ್ಥವನ್ನು ಕಲ್ಪಿಸುತ್ತದೆ. ಅದು ರಕ್ತ ಸಂಬಂಧಕ್ಕಿಂತ ಮಿಗಿಲಾಗಿದ್ದರೆ ಅದಕ್ಕೆ ಒಂದು ವೈಶಿಷ್ಟ್ಯವಿರುತ್ತದೆ. ಅಲ್ಲಿ ಯಾವುದೇ ಪರಿಮಿತಿ ಇಲ್ಲದೆ  ಬೆಸೆದುಕೊಂಡಿದ್ದರೆ ಅದರ ಗಾಢವಾದ ಸಂವೇದನೆಯನ್ನು ಅನುಭವಿಸಿಯೇ ತಿಳಿಯಬೇಕು. ನಿನ್ನೆ ಅಂದರೆ ದಿನಾಂಕ 03-07-2026 ರಂದು ನಮ್ಮೂರಿನ ಮಿತ್ರ , ಸದ್ಯ ಮಂಗಳೂರಲ್ಲಿ ವಾಸವಾಗಿರುವ ಜಯಶಂಕರ್ ನ ಮಗಳು ಮೈತ್ರಿಯ ವಿವಾಹ ಸಮಾರಂಭದಲ್ಲಿ ಭಾಗವಹಿಸುವ ಅವಕಾಶ ಒದಗಿಬಂತು. ನನ್ನ ಮತ್ತು ಜಯಣ್ಣನ ಸ್ನೇಹ ಸರಿಸುಮಾರು ಕಾಲು ಶತಮಾನಕ್ಕಿಂತಲೂ ಮಿಕ್ಕಿದ ಸ್ನೇಹ ಸಂಬಂಧ. ಶಾಲಾದಿನಗಳಲ್ಲಿ ಅಕ್ಕಪಕ್ಕ ಕುಳಿತು ಎರಡಕ್ಷರಗಳನ್ನು ಒಂದಾಗಿ ಕಲಿತವರು. 



ಜಯಣ್ಣ  ನಮ್ಮ ಕುಟುಂಬ ಮಿತ್ರ ಎಂದರೂ ಸರಿಯೇ. ನಾನೂ ಹಾಗೇ ಆತನ ಮನೆಯ ಒಂದು ಅಂಗವಾಗಿ ಸ್ನೇಹ ಬೆಸೆದುಕೊಂಡು ಬಿಟ್ಟಿದೆ. ನಮ್ಮ  ಮನೆಯವರಲ್ಲೂತೀರ ಹೇಳಲಾಗದ ಭಾವನೆಗಳನ್ನು ವೈಯಕ್ತಿ ವಿಷಯಗಳನ್ನು ಮಿತ್ರರಲ್ಲಿ ಹಂಚಿಕೊಂಡು ಬಿಡುತ್ತೇವೆ.  ಸಂಬಂಧಿಕರ ಮನೆಗೆ ಹೋಗುವುದಕ್ಕಿಂತಲೂ  ಮಿತ್ರರ ಮನೆಗೆ ಹೋಗುವುದರಲ್ಲಿ ಔಪಚಾರಿಕತೆಯ ನಿಬಂಧನೆ ಇರುವುದಿಲ್ಲ. ಒಂದು ಸಂಬಂಧಿಗಳ ಮನೆಗೆ ನಡು ರಾತ್ರಿ ಹೋಗುವುದಿದ್ದರೆ. ನೀವು ಹೋಗುವ ಮೊದಲು ಅಲ್ಲವೇ ಹೋದಕೂಡಲೇ  ರಾತ್ರಿಯೇ ಹೋದ ಕಾರಣಗಳನ್ನು ಚರಿತ್ರೆಯನ್ನೂ ವಿವರಿಸಬೇಕಾಗುತ್ತದೆ. ಅಥವಾ ಅಲ್ಲೋಂದು ಪರಿಮಿತಿ ಇರುತ್ತದೆ. ಆದರೆ ಆತ್ಮೀಯ ಮಿತ್ರನಿಗೆ ತಮ್ಮ ಪ್ರತಿಯೊಂದು ಚಲನವಲನ ಅರಿವಿರುತ್ತದೆ. ಅರಿವಿಲ್ಲದೇ ಇದ್ದರೂ ಅದನ್ನು ಹೆಚ್ಚು ವಿವರಿಸುವ ಅವಶ್ಯಕತೆ ಒದಗಿಬರುವುದಿಲ್ಲ. ಆಹಾರ ಉಪಚಾರಗಳಲ್ಲಿ ಯಾವ ಒಣ ಪ್ರತಿಷ್ಠೆಯಾಗಲೀ ನಿಬಂಧನೆಗಳ ಪರಿಮಿತಿ ಬಂಧನವಾಗಲೀ ಇರುವುದಿಲ್ಲ.  ಬಂದವರಿಗೆ ಬಲವಂತವಾಗಿ ತಿನ್ನಿಸಿಯೇ ಬಿಡಬೇಕು ಎನ್ನುವ ಕಡು ಆತಿಥ್ಯ ಇರುವುದಿಲ್ಲ. ಹೋದವನಿಗೂ ಬೇಡದೇ ಇದ್ದರೂ ತಿನ್ನಲೇ ಬೇಕೆಂಬ ದಾಕ್ಷಿಣ್ಯ ಇರುವುದಿಲ್ಲ. ಹಲವು ಸಲ ಬೇಡದೇ ಇದ್ದರೂ ತಿನ್ನಬೇಕಾಗುತ್ತದೆ. ಬೇಡದೇ ಇದ್ದರೂ ಒತ್ತಾಯದಲ್ಲಿ ತಿನ್ನಿಸಬೇಕಾಗುತ್ತದೆ. ನನ್ನದು ಇದೆಲ್ಲದಕ್ಕೂ ತದ್ವಿರುದ್ದ ಸ್ವಭಾವ. ಬೇಡದೇ ಇದ್ದರೆ ಒತ್ತಾಯಕ್ಕೆ ತಿನ್ನುವ ತಿನ್ನಿಸುವ ಉಪಚಾರ ನನಗೆ ಆಗುವುದಿಲ್ಲ. ಹಲವು ಕಡೆ ತಿನ್ನುವುದು ತಿನ್ನಿಸುವುದು ಇಲ್ಲದಿದ್ದರೆ ಬೇಜಾರು ಮಾಡಿಕೊಳ್ಳುತ್ತಾರೆ ಎಂಬ ಆತಂಕ. ಆದರೆ ಮಿತ್ರನ ಆತಿಥ್ಯವೆಂದರೆ  ಅದೊಂದು ಸ್ವಚ್ಛಂದ ಪ್ರವೃತ್ತಿ ಅಲ್ಲಿರುತ್ತದೆ. ನನ್ನ ಮತ್ತು ಜಯಣ್ಣನ ಮಿತ್ರತ್ವದಲ್ಲಿ ಯಾವ ಪರಿಮಿತಿಯೂ ಇರುವುದಿಲ್ಲ. ಏಷ್ಟೋ ಸಲ ಮಧ್ಯರಾತ್ರಿ ಮಂಗಳೂರಿನ ಹತ್ತಿರ ಬರುವಾಗ ಕರೆ ಮಾಡಿ ಹೋದದ್ದಿದೆ. ಮಂಗಳೂರಿಗೆ ಹೋದಾಗಲೇಲ್ಲ ಭೂಸ್ಪರ್ಶವಾಗುವ ಮೊದಲೆ ಜಯಣ್ಣ ನಾನಿರುವಲ್ಲಿಗೆ ಬರುತ್ತಾನೆ ಅದೊಂದು ಬಗೆಯ ಸ್ನೇಹಾದರೆ ವಿವರಿಸುವುದು ಕಷ್ಟ. 


ಜಯಣ್ಣನ ಒಬ್ಬಳೇ ಮಗಳು ಮೈತ್ರಿಯ ವಿವಾಹ ನಿನ್ನೆ ನೆರವೇರಿತು. ಬಹುಶಃ ಜಯಣ್ಣ ಮಿತ್ರತ್ವದ ಮೈತ್ರಿ ಸ್ವಭಾವ ರೂಪವೇ ಮೈತ್ರಿ. ಅಂಬೆಗಾಲಿಕ್ಕುವ ಪುಟ್ಟಶಿಶುವಿನಿಂದ ತೊಡಗಿ ಹೆಗಲೆತ್ತರಕ್ಕೆ ಬೆಳೆಯುವ ತನಕವೂ ಕಣ್ಡೆದುರೇ ಬೆಳೆದು ನಿಂತ ಮೈತ್ರಿಯ ಮದುವೆಗೆ ಮಿತ್ರನಾಗಿ ಕರೆಯದೇ ಇದ್ದರೂ ಹೋಗುವ ಬಂಧನವಿತ್ತು. ಜಯಣ್ಣದಂಪತಿಗಳು, ಮಗಳು ಮೈತ್ರಿ ಎಲ್ಲರೂ ನಮ್ಮ ಮನೆಯವರ ಮೈತ್ರಿ ವರ್ತುಲದ ಬಿಗಿ ಬಂಧನದಲ್ಲಿ ಬೆಸೆದುಕೊಂಡಿದ್ದವರು. ನಮ್ಮ ಎರಡು ಕುಟುಂಬಗಳ ನಡುವೆ ಮರೆಯಲಾಗದ ಹಲವಾರು ರಸನಿಮಿಷಗಳ ಘಳಿಗೆಗಳು ಸ್ವಯಂ (ಸೆಲ್ಫಿ) ಚಿತ್ರಗಳು ಸಾಕಷ್ಟು ಇವೆ.   ಪರಸ್ಪರ ಸಹಾಯಗಳಿಗೆ ಧನ್ಯವಾದದ ಅವಶ್ಯಕತೆಯಿಲ್ಲದ ಗಾಢವಾದ ಆತ್ಮಿಯತೆ ಇಲ್ಲಿದೆ.  ಹಾಗಾಗಿ ಮೈತ್ರಿಯ ವಿವಾಹ ಎಂದಕೂಡಲೇ ನಮ್ಮ ಮನೆಯವರೆಲ್ಲರೂ ಮದುವೆಗೆ ಹಾಜರಾದೆವು. ಮಂಗಳೂರಿನ ಜಿಟಿ ಜಿಟಿ ಮಳೆಯ ತಂಪಾದ ವಾತಾವರಣದಲ್ಲಿ ನಡೆದ ವಿವಾಹ ಮಹೋತ್ಸವ, ಜತೆಗೆ ಪುಷ್ಕಳವಾದ ರುಚಿಯಾದ ಭೋಜನ , ಮಿತ್ರನ ಆದರ ಆತಿಥ್ಯ  ಮರೆಯುವುದಕ್ಕಿಲ್ಲ. ವಿವಾಹ ಕಾರ್ಯಕ್ರಮ ಎಂದರೆ ಇಲ್ಲಿ ಉದ್ವೇಗ, ಒತ್ತಡ ಎಲ್ಲವೂ ಇರುತ್ತದೆ. ತುಂಬಿದ ಜನರನ್ನು ಸಂಪರ್ಕಿಸಿ ಕುಶಲ ವಿಚಾರಿಸಿ ಸತ್ಕರಿಸುವುದು ಸುಲಭದ ಕೆಲಸವಲ್ಲ. ಅಷ್ಟೊಂದು ಗಡಿಬಿಡಿಯಲ್ಲೂ ದೂರದಿಂದ ನಮ್ಮನ್ನು ನೋಡಿದ ಜಯಣ್ಣ ಕೈ ಬೀಸಿ ಅದೇ ಸ್ನೇಹ ಸಲುಗೆಯಿಂದ ಮಾತನಾಡಿಸಿದಾಗ ಬಹಳ ಸಂತಸವಾಯಿತು. ಪ್ರತಿಯೊಬ್ಬರ ಬಳಿಗೆ ಬಂದು ಮಿತ್ರ ದಂಪತಿ ವಿಚಾರಿಸಿ ಸತ್ಕರಿಸಿದಾಗ ಜಯಣ್ಣನ ಗೆಲುವಿನ ನಗೆ ನೋಡುವುದಕ್ಕೆ ಬಹಳ ಹಿತವೆನೆಸಿತ್ತು. ಮುದ್ದಿನ ಮಗಳ ಭವಿಷ್ಯವನ್ನು ಕಟ್ಟಿದ ಗೆಲುವಿನ ನಗೆಯದು. 

ಕೆಲಸದ ಒತ್ತಡದಲ್ಲಿ ಅಲ್ಪ ಸಮಯದ ಅವಧಿಗೆ ಮಾತ್ರವೇ ಕಾರ್ಯಕ್ರಮದ ಭಾಗವಾಗಲು ಸಾಧ್ಯವಾಯಿತು. ಸಾಲಂಕೃತ ವಧೂವರರನ್ನು ಆಶೀರ್ವದಿಸಿ ಮಗಳು ಮೈತ್ರಿಯನ್ನು ಎದೆಗಾನಿಸಿ ಹರಸಿದಾಗ ನನಗರಿವಿಲ್ಲದೇ ಎದೆ ಭಾರವಾಗಿ ಕಣ್ತುಂಬಿ ಬಂತು. ಮೈತ್ರಿ ನಿಶಾಂತ ಹೊಸಬಾಳಿಗೆ ಹೆಜ್ಜೆ ಇರಿಸಿದ  ನವ ದಂಪತಿಗಳು ಸುಖವಾಗಿ ಬಾಳಿ ಬದುಕಲಿ ಮನದಾಳದ ಆಶೀರ್ವಾದಗಳು. 


Friday, June 26, 2026

ಯೋಗದಿನ

 


ಇತ್ತೀಚೆಗೆ ಯೋಗದಿನದಲ್ಲಿ ಹಲವರ ಯೋಗಾಭ್ಯಾಸ ನೋಡಿ ಒಂದೆರಡು ಅನಿಸಿಕೆಗಳು ಹೇಳಬೇಕೆಂದೆನಿಸಿತು. ಯೋಗ ದಿನ ಮೂರ್ಖದಿನವಾಗುವಂತೆ ಆಚರಿಸುವುದನ್ನು ನೋಡಿದಾಗ ವಿಷಾದವಾಗುತ್ತದೆ. ಒಂದು ದಿನ ಸಮವಸ್ತ್ರ ಹಾಕಿ ದೊಡ್ಡ ಬ್ಯಾನರ್ ಕಟ್ಟಿ ಯೋಗಾಭ್ಯಾಸ ಮಾಡುವುದರಲ್ಲಿ ಯಾವ ಪ್ರಯೋಜನವೂ ಇಲ್ಲ. ಒಂದು ದಿನಕ್ಕೆ ಸೀಮಿತವಾಗುವ ಯೋಗಭ್ಯಾಸ ನಿಜಕ್ಕೂ ಅದಕ್ಕೆ ಮಾಡುವ ಅವಮಾನವಾಗುತ್ತದೆ. 

ಯೋಗ, ಅಂತ ಹೇಳಿದ ಕೂಡಲೇ ಕೆಲವು ಆಸನ, ಮತ್ತೆ ಪ್ರಾಣಾಯಾಮ ಅಂತ ತಿಳಿದು ಅದೇ ಭ್ರಮೆಯಲ್ಲಿ ಇದ್ದು ಬಿಡುತ್ತಾರೆ. ಹಲವರು ಇದನ್ನು ಪ್ರದರ್ಶನದ ವಸ್ತುವಾಗಿ ಮಾಡಿ‌ಬಿಡುತ್ತಾರೆ. ಇನ್ನು ಕೆಲವರಿಗೆ ಇದು ಸಮಯ ಸಿಕ್ಕಾಗ ಮಾಡುವ ಕೆಲಸವಾಗಿದೆ. ಆರಂಭದ ದಿನಗಳಲ್ಲಿ ಇದು ಇಷ್ಟೇ ಅಂತ ಅನಿಸಿದರೂ, ಅಷ್ಟಕ್ಕೇ ಸೀಮಿತಗೊಳಿಸಬಾರದು. ಆದರೆ ಇಂದಿನ‌ ಫ್ಯಾಷನ್ ಯುಗದಲ್ಲಿ‌ ಅದಕ್ಕೇ ಸೀಮಿತ ವಾಗಿಸುವುದು ಮೂರ್ಖತನ ಎನ್ನಬೇಕು. 

ಯೋಗ ಮುಖ್ಯವಾಗಿ ಯಾವುದೇ ಧರ್ಮಕ್ಕೆ ಸೀಮಿತವಾಗುವ ಧಾರ್ಮಿಕ ಆಚರಣೆಯಲ್ಲ. ಆದರೆ ಸನಾತನ ಧರ್ಮ‌, ಅಂದರೆ ಅತ್ಯಂತ ಹಳೆಯ ಮನುಷ್ಯ ಜೀವನ ಧರ್ಮ‌ ಇದನ್ನೇ ಅಳವಡಿಸಿಕೊಂಡಿತ್ತು. ಇಂದು ಹಲವು ರೀತಿಯಲ್ಲಿ ಇದನ್ನು ಧಾರ್ಮಿಕ ಕ್ರಿಯೆಗೆ ಸೀಮಿತ ಗೊಳಿಸಿದ್ದೂ ಒಂದು ಬಗೆಯಲ್ಲಿ ವಿಷಾದನೀಯ ಎನ್ನಬೇಕು. ಅದು ಹಾಗೆ ಒಂದು ಧರ್ಮಕ್ಕೆ ಸೀಮಿತವಾಗುವುದಕ್ಕೆ ಕಾರಣ ಇಲ್ಲದಿಲ್ಲ. ಬಾಲ್ಯದಲ್ಲೇ ನಮಗೆ ನಮ್ಮ ಕರ್ತವ್ಯಗಳನ್ನು ಇದೇ ಬಗೆಯಲ್ಲಿ ಖಡ್ಡಾಯಗೊಳಿಸುತ್ತಾರೆ. ಅನ್ನ ಎಂಬದನ್ನು ದೇವರಾಗಿಸಿ ಅದರ ಮೌಲ್ಯವನ್ನು ಗೌರವವನ್ನು ತೋರಿಸುವ ಯತ್ನ ಮಾಡುತ್ತಾರೆ. ಅದೇ ಮುಂದೆ ಧಾರ್ಮಿಕವಾಗುತ್ತದೆ. ಇದೇ ಬಗೆಯಲ್ಲಿ ನಮಗೆ ಹಲವು‌ ಮೌಲ್ಯಗಳ ಪಾಠವಾಗುತ್ತದೆ.  ಅದೇ ಜೀವನ ಧರ್ಮವಾಗುತ್ತದೆ. 

   ಯೋಗ ಎಂದೋ ಒಂದು ದಿನದ ಆಚರಣೆಯಲ್ಲ. ಹಾಗೆ ಮಾಡಿದರೆ ಅದು ಜೀವನವನ್ನು ಅರ್ಥಮಾಡಿಕೊಳ್ಳದ ಅಜ್ಜಾನವಾಗುತ್ತದೆ. ಅಹಾರ ವಿಸರ್ಜನಾದಿಗಳು ಹೇಗೆ ಅನಿವಾರ್ಯವೋ, ಹೊತ್ತು ಹೊತ್ತಿಗೆ ಹೇಗೆ ಊಟವನ್ಮು ಮಾಡುತ್ತೀರೋ ಅದೆ ಬಗೆಯಲ್ಲಿ ಇದು ಜತೆಯಲ್ಲಿರಬೇಕು ಯಾರನ್ನೋ‌ ಮೆಚ್ಚಿಸುವುದಕ್ಕೆ ಯಾರದೋ ಮೇಲಿನ ಅಭಿಮಾನ ದರ್ಶನಕ್ಕೆ ಯೋಗಾಭ್ಯಾಸವಲ್ಲ.  ಅದೊಂದು ಜೀವನ ವಿಧಾನ. ತೆಳ್ಳಗಾಗುವುದಕ್ಕೋ, ದಪ್ಪಗಾಗುವುದಕ್ಕೋ ಅಯುರಾರೋಗ್ಯಕ್ಕೋ ಇದು ಉದ್ದೇಶವಾಗಬಾರದು. ಹಾಗಾದರೆ ಇದರ ಮೂಲ ಉದ್ದೇಶಕ್ಕೆ ಅನ್ಯಾಯವಾಗುತ್ತದೆ. ಜೀವನದ ಪ್ರತಿಯೊಂಕ್ಕೂ ಯೋಗಾಭ್ಯಾಸ ಕಣ್ಣಾಗಬೇಕು.‌ಆಗಲೇ ಜೀವ ಮತ್ತು ಆತ್ಮದ ಸಂಯೋಗವಾಗುತ್ತದೆ.

ಪ್ರತಿ ವರ್ಷವೂ ಯೋಗದಿನ ಆಚರಿಸಲ್ಪಡುತ್ತದೆ.  ನೂರಾರು ಜನ ಸೇರಿ,  ವಿಶೇಷ ಸಮವಸ್ತ್ರ ಧರಿಸಿ,  ಒಂದಷ್ಟು ಕಸರತ್ತು ಮಾಡಿ ನಾವೂ ಆರೋಗ್ಯವಂತರಾದೇವು, ಯೋಗಪಟುಗಳಾಗಿದ್ದೇವೆ ಎಂಬ ಭ್ರಮೆ ಆವರಿಸುತ್ತದೆ.  ಹೆತ್ತವರ ದಿನದಂದು ಅಪ್ಪ ಅಮ್ಮನ ನೆನಪಾದಂತೆ ಯೋಗದಿನ ಯೋಗದ ಆಚರಣೆಯಾಗುತ್ತದೆ. ಮತ್ತೆ ಮುಂದಿನ ವರ್ಷದ ತನಕವೂ ಅದರ ಜ್ಞಾಪಕವೇ ಇರುವುದಿಲ್ಲ. 

ನಿಯಮಬದ್ದವಾದ ಜೀವನಕ್ರಮವೇ ಯೋಗ. ಕಸರತ್ತು ವ್ಯಾಯಾಮ ಮಾಡುವುದಕ್ಕಿಂತಲೂ ಅಲ್ಲಿ ನಿಯಮವನ್ನು ಅನುಸರಿಸುವುದು ಪ್ರಧಾನವಾಗಿಬಿಡುತ್ತದೆ. ಚಿತ್ತವೃತ್ತಿಯಿಂದ ದೂರವಿದ್ದು ಒಂದು ಜೀವನ ಕ್ರಮವನ್ನು ಅನುಸರಿಸಬೇಕು. ಮನಸ್ಸು ನಿಯಂತ್ರಣದಲ್ಲಿರಬೇಕು. ಯೋಗದ ದಿನವೇ ಮನಸ್ಸು ನಿಯಂತ್ರಣವನ್ನು ಮೀರುತ್ತದೆ. ಏನೇನೋ ಚಿತ್ತವಿಕಾರಗಳು ಆವರಿಸಿದ್ದರೆ ಅದು ಯೋಗಾಭ್ಯಾಸವಾಗುವುದಕ್ಕೆ ಸಾಧ್ಯವಿಲ್ಲ. 

ಯೋಗಾಸನ ಅಂದರೆ ಕೆಲವೊಂದು ಭ್ರಮೆಯಿಂದ ಮೊದಲು ಹೊರಗೆ ಬರಬೇಕು. ಕೃತಿಗಿಂತಲೂ  ಶಿಸ್ತು ನಿಯಮ ಪಾಲನೆ ಇಲ್ಲಿ ಅತೀ ಮುಖ್ಯ.  ಕಷ್ಟದ ಆಸನ ಮಾತ್ರ ಯೋಗಾಸನವಲ್ಲ. ಅತ್ಯಂತ ಸರಳವಾದ ಲಘುವಾದ ಆಸನಗಳು ಹಲವು ಸಲ ಹೆಚ್ಚು ಪ್ರಯೋಜನಕಾರಿಯಾಗಿ ಪರಿಣಾಮವನ್ನು ನೀಡುತ್ತದೆ. ಮನಸ್ಸಿಗೆ ನಿರಾಳತೆಯನ್ನು ಒದಗಿಸುತ್ತದೆ.  ಆದರೆ ಕಷ್ಟದ ಆಸನಗಳಿಗೆ ಎಲ್ಲರೂ ಹೆಚ್ಚು ಆಕರ್ಷಿತರಾಗುತ್ತಾರೆ.  ಯಾವುದೋ ಕಷ್ಟದ ಆಸನ ಮಾಡುವಾಗ ಮನಸ್ಸು ಒತ್ತಡವನ್ನು ಅನುಭವಿಸುತ್ತದೆ. ಅದು ಸಾಧ್ಯವಾಗದೇ ಇದ್ದಾಗ ಹತಾಶೆಗೊಳಗಾಗುತ್ತದೆ. ಹಾಗಾಗಿ ಸರಳವಾದ ಲಘು ಆಸನಗಳನ್ನು ನಿತ್ಯ ಮಾಡಬೇಕು.  ಇದರಲ್ಲಿ ಪರಿಣಾಮದ ಜತೆಗೆ ಮಾನಸಿಕ ನೆಮ್ಮದಿ ಇರುತ್ತದೆ. ತುಂಬ ಆಸನ ಮಾಡಿದರೆ ಹೆಚ್ಚು ಪರಿಣಾಮ ಎಂಬ ಭ್ರಮೆ ಸರಿಯಲ್ಲ. ಹತ್ತು ಹದಿನೈದು ನಿಮಿಷ ಆಸನಗಳನ್ನು ಮಾಡಿದರೆ ಧಾರಾಳವಾಗುತ್ತದೆ. ಯೋಗಾಭ್ಯಾಸ ಎಂಬುದು ಶಿಕ್ಷೆಯಲ್ಲ. ಅದು ಒಂದು ಭದ್ರವಾದ ರಕ್ಷೆ. ನಿಯಮ ಮೀರಿ ತಿಳಿಯದೇ ಇದನ್ನು ಮಾಡಿದರೆ ಇದು ಶಿಕ್ಷೆಯಾಗಿ ಪರಿಣಮಿಸುತ್ತದೆ. ಅಂತರ್ಜಾಲವನ್ನು ನೋಡಿ, ಯಾರೋ ಮಾಡಿದ್ದನ್ನು ನೋಡಿ ಯೋಗಾಭ್ಯಾಸ ಮಾಡುವುದು ದೊಡ್ಡ ತಪ್ಪು. ಯಾಕೆಂದರೆ ಪ್ರತಿಯೊಬ್ಬರ ದೇಹ ಪ್ರಕೃತಿ ವೆತ್ಯಸ್ತವಾಗಿರುತ್ತದೆ. ಪ್ರತೀ ದೇಹದ ಆವಶ್ಯಕತೆಗಳೂ ಬೇರೆ ಬೇರೆಯಾಗಿರುತ್ತದೆ. ಇದನ್ನು ತಿಳಿಯದೆ ಮಾಡುವುದು ದೊಡ್ಡ ಮೂರ್ಖತನವಾಗಬಹುದು. ಭುಜಂಗಾಸನ, ಬಾಲಾಸನ ವಜ್ರಾಸನ ಹೀಗೆ ಸರಳವಾದ ಆಸನಗಳನ್ನು ಬಿಡದೆ ಮಾಡಬೇಕು. ಇವುಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. 

ಯೋಗಾಭ್ಯಾಸ ಕೇವಲ ಒಂದೆರಡು ಘಂಟೆಯ ಕ್ರಿಯೆಯಲ್ಲ. ದಿನದ ಇಪ್ಪತ್ತನಾಲ್ಕು ಘಂಟೆಯೂ ಅದರ ಆಚರಣೆಯಾಗಬೇಕು. ಆಸನ ಪ್ರಾಣಾಯಾಮಕ್ಕಿಂತಲು ಯೋಗದ ನಿಯಮಗಳು ಅತೀ ಮುಖ್ಯ . ಯಮ ನಿಯಮ ಆಚರಿಸಿದ ನಂತರೆವೇ ಆಸನ ಪ್ರಾಣಾಯಾಮ. ನಮ್ಮ ದೈನಂದಿನ ಚಟುವಟಿಕೆಗಳು  ಸೇವಿಸುವ ಆಹಾರ ಕ್ರಮಗಳು ಇವುಗಳು ಯೋಗಾಭ್ಯಾಸಕ್ಕೆ ಪೂರಕವಾದ ಸಂಬಂಧ ಹೊಂದಿರಬೇಕು. ಮುಖ್ಯವಾಗಿ ನಾವು ಭ್ರಮೆಯಿಂದ ಹೊರಬರಬೇಕು. ಇತ್ತೀಚೆಗೆ ಯೋಗದಿನದ ಕೆಲವರ ಯೋಗಾಭ್ಯಾಸವನ್ನು ನೋಡಿದಾಗ ಇದು ಪರಮ ಮೂರ್ಖತನ ಅಂತ ಅನ್ನಿಸುತ್ತದೆ. ಮುಖ್ಯವಾಗಿ ನಾವು ಸರಳವಾಗಿರಬೇಕು. ಆಧುನಿಕ ಐಷಾರಾಮ ಜೀವನದಿಂದ ಆದಷ್ಟು ದೂರವಿರಬೇಕು. ಉಡುಗೆ ತೊಡುಗೆ ಎಲ್ಲವೂ ಸರಳವಾಗಿದ್ದಷ್ಟು ಅದು ಜೀವನಕ್ಕೆ ಹತ್ತಿರವಾಗಿ ಮನಸ್ಸಿಗೆ ನಿರಾಳತೆಯನ್ನು ಒದಗಿಸುತ್ತದೆ. 



Thursday, June 4, 2026

ಪರಿಶುದ್ದ

   

ನಮ್ಮಲ್ಲಿರುವ ಕೆಟ್ಟ ದೌರ್ಬಲ್ಯಗಳನ್ನು ದೂರ ಮಾಡುವುದೇ ಪರಿಶುದ್ದಿ

      ಮುಂಜಾನೆ ನಾಲ್ಕು ಘಂಟೆಗೆ ಎದ್ದು ಸ್ನಾನ ಮಾಡಿ ಮಡಿ ಉಟ್ಟು ಪೂಜೆಗೆ ಹೂವಿಗಾಗಿ ಮನೆಯ ಕಂಪೌಡ್ ಗೋಡೆಯ ಪಕ್ಕ ಇರುವ ಹೂವಿನ ಗಿಡದ ಬಳಿಗೆ ನಿತ್ಯದಂತೆ ಬರುತ್ತೇನೆ. ನಮ್ಮ ಬೀದಿ ಹಲವಾರು ಮನೆ ಇರುವ ಒಂದು ಬೀದಿ. ಇದು ಹಗಲಲ್ಲಿ ಸಾಕಷ್ಟು ಚಟುವಟಿಕೆಯಿಂದ ಇರುವ ಬೀದಿ. ಶಾಲೆಗೆ ಹೋಗುವ ಮಕ್ಕಳು ಶಾಲೆ ಮುಗಿಸಿ ಬಂದು ಆಟ ಆಡುತ್ತಾರೆ, ಇನ್ನು ತಳ್ಳುಗಾಡಿಯಲ್ಲಿ ತರಕಾರಿ ಮುಂತಾದವನ್ನು ತಂದು ವ್ಯಾಪಾರ ಮಾಡುವವರು ಓಡಾಡುತ್ತಾರೆ. ಕೆಲಸ ಕಛೇರಿಗೆ ಹೋಗುವವರು ಬರುವವರು, ಅವರ ವಾಹನಗಳ ಸಂಚಾರ ಬೀದಿ ಹಗಲಿಡೀ ಸದ್ದು ಮಾಡುತ್ತಿದ್ದರೆ, ಮುಂಜಾನೆ ಮಲಗಿ ನಿಶ್ಯಬ್ದವಾಗಿ ವಿಶ್ರಾಂತಿ ಮಾಡುತ್ತದೆ. ಯಾರೋಬ್ಬರೂ ಇಲ್ಲದೇ ಇದ್ದರೂ ಕೆಲವೊಮ್ಮೆ ಕೆಲವರು ಓಡಾಡಿ ಬೀದಿಯ ವಿಶ್ರಾಂತಿಯನ್ನು ಕೆಡಿಸುತ್ತಾರೆ. ನಾನು ಮುಂಜಾನೆ ಮಡಿ ಉಟ್ಟು ಹೂ ಕೊಯ್ಯುವುದಕ್ಕೆ ಬುಟ್ಟಿ ಹಿಡಿದು ಬಂದರೆ ಒಂದು ಬಾರಿ ಬೀದಿಯ ಆ ತುದಿಯಿಂದ ಈ ತುದಿಯವರೆಗೂ ನೋಡುತ್ತೇನೆ. ಈಗ ವಿಶ್ರಾಂತಿಯ ಬೀದಿ ಸುಂದರವಾಗಿ ಕಾಣುತ್ತದೆ. ಆ ನಿಶ್ಯಬ್ದ ಶಾಂತ ಪರಿಸರ ಮನಸ್ಸಿಗೆ ಒಂದು ಆಹ್ಲಾದತೆಯನ್ನು ಒದಗಿಸುತ್ತದೆ.  ನಾನು ದೇವರ ಶ್ಲೋಕವನ್ನು ಹೇಳುತ್ತಾ ಹೂವನ್ನು ಕೀಳುತ್ತಿದ್ದರೆ ಆ ಮೌನದಲ್ಲಿ ನಾನು ಮತ್ತು ಆರಧಿಸುವ ಭಗವಂತ ಮಾತ್ರವೇ ಅಂತ ಭಾವನೆ ಬಂದು ಬಿಡುತ್ತದೆ. 

ಬೀದಿ ಶಾಂತವಾದಿದ್ದರೂ ನಮ್ಮ ಮನೆಯ ಪಕ್ಕದ ಮನೆಯಲ್ಲಿ ಕೆಲವೊಮ್ಮೆ ಗದ್ದಲ ಕೇಳಿಸುತ್ತಿರುತ್ತದೆ. ಅ ಮನೆಯಲ್ಲಿ ವಾಸಿಸುವಾತ ಕೆಲವು ಸಲ ಮದ್ಯ ಸೇವಿಸಿ ಬರುವುದೇ ಬೆಳಗಿನ ಜಾವ. ನಾನು ಎದ್ದೇಳುವ ಹೊತ್ತಿಗೆ ತೂರಾಡುತ್ತಾ ದ್ವಿಚಕ್ರವಾಹನದಲ್ಲಿ ಬರುತ್ತಾನೆ. ಆ ಹೊತ್ತಿಗೆ ಮದ್ಯಪಾನ ಪರೀಕ್ಷಿಸುವ ಪೋಲೀಸರು ಯಾರೂ ಇರುವುದಿಲ್ಲ ಅಂತ ಕಾಣುತ್ತದೆ. ಅಥವಾ ಎಲ್ಲಾದರೂ ಕುಡಿದು ಎಲ್ಲೊ ಉಳಿದು ರಾತ್ರಿ ಬರಲಾಗದೇ ಹೀಗೆ ಮುಂಜಾನೆ ಎದ್ದು ಬರುತ್ತಾನೆ. ಬಂದವನು ಮಲಗಿದ್ದ ಮನೆಯಾಕೆಯನ್ನು ಬಾಗಿಲು ಜೋರಾಗಿ ಬಡಿದೇ ಎಬ್ಬಿಸುತ್ತಾನೆ. ಬಾಯಿ ತೆಗೆದರೆ ಸಾಕು ಅವಾಚ್ಯ ಶಬ್ದಗಳ ಬೈಗುಳ ಅದೂ  ಆ ಮುಂಜಾನೆ ಕೇಳಿಸುತ್ತದೆ. ಭಗವಂತನ ಸ್ಮರಣೆಯಲ್ಲಿರಬೇಕಾದ ಹೊತ್ತಿನಲ್ಲಿ ಹೀಗೆ ಅಮಲೇರಿಸಿ ಕೆಟ್ಟದಾಗಿ ಬೈಯುತ್ತಿರುವುದನ್ನು ಕಂಡರೆ ಹಲವು ಸಲ ಮನಸ್ಸು ಮರುಗುತ್ತದೆ. ಮನೆಯೊಳಗೆ ಹೋದವನೇ  ದೊಡ್ಡದಾಗಿ ಸೌಂಡ್ ಬಾಕ್ಸ್ ನಲ್ಲಿ ಸಿನಿಮಾ ಹಾಡುಗಳನ್ನು ಹಾಕುತ್ತಾನೆ. ಇಷ್ಟೂ ಕೆಟ್ಟ ಹಾಡುಗಳು ಇವೆಯೇ ಅಂತ ಅನ್ನಿಸುತ್ತದೆ. ಅದನ್ನು ರಚಿಸಿದವರ ಬಗ್ಗೆ ತಾತ್ಸಾರ ಉಂಟಾಗುತ್ತದೆ ಹಲವು ಸಲ ಇಂತಹ ಸಂದರ್ಭಗಳಲ್ಲಿ ಹಾಡುಗಳು ಕೆಟ್ಟದು ಅಂತ ಅನ್ನಿಸುತ್ತದೆ .  ಇನ್ನು ಯಾರಾದರೂ ಎದ್ದು ನಿದ್ದೆಯ ಮಂಪರಿನಲ್ಲಿ ಹೊರಗೆ ಬಂದು ಸದ್ದು ಕಡಿಮೆ ಮಾಡುವಂತೆ ಹೇಳಿದರೆ ಮುಗಿದು ಹೋಯಿತು. ಬೈಗುಳಗಳ ಸುರಿಮಳೆಯಲ್ಲಿ ಅವರ ವಂಶ ಉದ್ದಾರವಾಗುವಂತೆ ಮಾಡಿಬಿಡುತ್ತಾನೆ. ಬಾಯಿ ತೆಗೆದರ ಅವ್ವನ್ ಅಂತ ಶುರು ಮಾಡುವ ಇವನಿಂದ ಹೆತ್ತ ಅಮ್ಮನಿಗೆ ಕೆಟ್ಟ ಬೈಗುಳಗಳನ್ನು ತಿನ್ನಿಸುವುದೇಕೆ ಅಂತ ಕೆಲವರು ಅಂಜಿ ಸುಮ್ಮನಿರುತ್ತಾರೆ. ಮನೆಯ ಫ್ಯಾನ್ ಜೋರಾಗಿ ಹಾಕಿ ಬಾಗಿಲು ಮುಚ್ಚಿ ಶಬ್ದಕೇಳಿಸದಂತೆ ಪ್ರಯತ್ನಿಸುತ್ತಾರೆ. ಆತನಿಗೆ ಯಾರ ಭಯವೂ ಇಲ್ಲ. ಅವನ ಅನಾಗರೀಕತೆಗೆ ಆತನಿಗೆ ಭಯ ಪಡುವ ಅಗತ್ಯವೂ ಇರುವುದಿಲ್ಲ. ಕೆಸರಿಗೆ ಕಲ್ಲು ಎಸೆಯುವ ಪ್ರಯತ್ನ ಯಾರೂ ಮಾಡದೇ ಆತ ಸ್ಚಚ್ಛಂದವಾಗಿ ಇದ್ದುಬಿಡುತ್ತಾನೆ. 

ಇಂದೂ ಸಹ ಎಂದಿನಂತೆ ಮುಂಜಾನೆ ಮನೆ ಎದುರು ಬಂದೆ. ಬೀದಿಯ ತುದಿಯಿಂದ ಪಕ್ಕದ ಮನೆಯಾತ ಬೈಕ್ ನಲ್ಲಿ ಬರುತ್ತಿದ್ದ. ಆ ರಾತ್ರಿಯೂ ದೊಡ್ಡದಾಗಿ ಹಾರ್ನ್ ಮಾಡುತ್ತಾ ಬಂದು ಮನೆ ಎದುರು ನಿಲ್ಲಿಸಿದ. ಮೊಬೈಲ್ ನಲ್ಲಿ ಯಾರೊಂದಿಗೋ ಅರಚಿ ಮಾತನಾಡುತ್ತಿದ್ದ. ಮಾತನಾಡುತ್ತಿದ್ದುದಕ್ಕಿಂತಲೂ ಜಗಳವಾಡುತ್ತಿದ್ದ. ಆ ಕೆಟ್ಟ ಭಾಷೆ ಆ ಮುಂಜಾನೆ ಕೇಳುವುದೇ  ಒಂದು ದುರ್ದೈವ. ಬೈಕ್ ಸ್ಟಾಂಡ್ ಹಾಕಿ ನಿಲ್ಲಿಸಿದ. ಹೀಗೆ ಹೇಳುವುದಕ್ಕಿಂತ ಬೈಕ್ ತಾನಾಗಿಯೇ ಸಾವರಿಸಿ ನಿಂತುಕೊಂಡಿತು ಎಂದರೆ ಸೂಕ್ತ. ಹಾಗೇ ನಿಂತವನು ಮೊಬೈಲ್ ಸಂಭಾಷಣೆಯಲ್ಲಿ ತಲ್ಲೀನನಾದರೂ ನನ್ನೆಡೆಗೆ ನೋಡುತ್ತಿದ್ದ. ನಾನು ಆತನ ಕಡೆಗೆ ಗಮನ ಹರಿಸುವುದನ್ನು ಬಿಟ್ಟು ನನ್ನ ಕೆಲಸದಲ್ಲಿ ನಿರತನಾದೆ. ಸಾಮಾನ್ಯವಾಗಿ ನಾನು ಆತನಲ್ಲಿ ಮಾತನಾಡುವುದಕ್ಕೆ ಹೋಗುತ್ತಿರಲಿಲ್ಲ. ಏನಿದ್ದರೂ ಪರಿಚಯದ ಕಿರುನಗುವಿಗೆ ಸೀಮಿತ. ಯಾಕೆಂದರೆ ಇಂತಹ ವ್ಯಕ್ತಿಗಳಿಂದ ದೂರವಿರುವುದು ನಮ್ಮ ಸ್ವಾಸ್ಥ್ಯಕ್ಕೆ ಉಚಿತ.  ಅಪ್ಪಿ ತಪ್ಪಿ ಒಂದೆರಡು ಹೆಚ್ಚು ಮಾತನಾಡಿದರೂ ಆತನ ಸಂಸ್ಕಾರ ಹೀನ ಮಾತುಗಳನ್ನು ಅರಗಿಸಿಕೊಳ್ಳುವ ಧೈರ್ಯ ನನ್ನಲ್ಲಿ ಇಲ್ಲ.   ನಾನು ಶ್ಳೋಕ ಪಠಣದಲ್ಲಿ ತಲ್ಲೀನನಾದೆ.

ಇನ್ನೇನು ಹೂ ಕೀಳುವುದು ಮುಗಿಸಿ ಮನೆಯೊಳಗೆ ಹೋಗಬೇಕು ಎನ್ನುವಾಗ ಆತ ಮೊಬೈಲ್ ಜಗಳವನ್ನು ನಿಲ್ಲಿಸಿ ನನ್ನ ಬಳಿಗೆ ಬಂದು ಶಿರ ಸೊಂಟ ಬಗ್ಗಿಸಿ ನಮಸ್ಕರಿಸಿ, "ನಮಸ್ಕಾರ"  ಎಂದ.  ನಾನು ಗಾಬರಿಯಾದೆ. ಇದನ್ನು ನಿರೀಕ್ಷಿಸಿರಲಿಲ್ಲ. ನಾನು ಮತ್ತೂ ದೂರ ಸರಿದು ನಮಸ್ಕಾರ ಎಂದು ಮನೆಯೊಳಗೆ ಕಾಲಿಡುವುದಕ್ಕೆ ಮುಂದಾದೆ. ಆತ ಹೇಳಿದ " ನೀವೆ ಪುಣ್ಯವಂತರು ಸಾರ್, ಬೆಳ್ಳಂ ಬೆಳಗ್ಗೆ ಎದ್ದು ಸ್ನಾನ ಮಾಡಿ ಪೂಜೆ ಮಾಡ್ತೀರಾ. ನಾನು ನೋಡಿ ಜಗಳ ಮಾಡ್ತಾ ಇದ್ದೇನೆ".  ನಾನು ಹೇಳಿದೆ, " ನೀನೂ ಭಗವಂತನ ನಾಮ ಸ್ಮರಣೆ ಮಾಡು ಸಾಕು. ಬದಲಾಗ್ತಿಯಾ. ಪೂಜೆ ಏನೂ ಖಡ್ದಾಯ ಅಲ್ಲ. ಭಕ್ತಿ ಶ್ರದ್ದೆ ಮುಖ್ಯ" ನಾನು ಹೆಚ್ಚಿಗೆ ಉಪದೇಶ ಕೊಡುವ ಕೆಲಸಕ್ಕೆ ಕೈ ಹಾಕುವುದಿಲ್ಲ. ಯಾಕೆಂದರೆ ಅದೆಲ್ಲ ವ್ಯರ್ಥ. ನಾವು ಶ್ರೇಷ್ಠರು ಅಂತ ತೋರಿಸಿಕೊಡುವುದಕ್ಕೆ ಹಲವು ಸಲ ಈ ಉಪದೇಶಗಳು ಬಳಕೆಯಾಗುತ್ತವೆ. ಉಪದೇಶ ಪಡೆದವನೂ ಬದಲಾಗಲ್ಲ, ಕೊಟ್ಟವನೂ ಅತ್ಯುತ್ತಮನೇನೂ ಅಲ್ಲ.  ಇದು ವಾಸ್ತವ. 

ಆತ ನಗುತ್ತ ಹೇಳಿದ, " ಇಲ್ಲ ಸಾರ್, ನಮಗೆ ಅದಕ್ಕೆ ಮನಸ್ಸು ಬರಲ್ಲ ಸಮಯವೂ ಸಿಗೋದಿಲ್ಲ. ನಾವು ಇರೋದೆ ಹೀಗೆ.  ಏನು ಮಾಡೋದು ಹೇಳಿ" ನನಗೆ ನಗು ಬಂತು. ಹೌದು ಹೀಗೆ ಮಾಡುವವರು ಇರೋದೇ ಹೀಗೆ. ಕೆಟ್ಟದ್ದು ಅಂತ ಗೊತ್ತಿದ್ದರೂ ಅದನ್ನೇ ಮಾಡುತ್ತಾರೆ. ;ಮತ್ತದನ್ನೇ ದೊಡ್ಡ ಮನಸ್ಸಿನಿಂದ ಅಂತ ಒಪ್ಪಿಕೊಳ್ಳುತ್ತಾರೆ. ಅದೊಂದು ರೀತಿ ಕರುಣೆ ಹುಟ್ಟಿಸಿ ದುರಂತ ನಾಯಕನಾಗುವ ಮನೋಭಾವ. ಸಿನಿಮಾದಲ್ಲಿ ಸಂಭಾಷಣೆಗಳು ಇರುತ್ತವೆ. " ನಾನೆಷ್ಟು ಕೆಟ್ಟವಾಂತ ಗೊತ್ತಿಲ್ಲ. ತಲೆ ಕೆಟ್ಟರೆ ನಾನು ಏನೂ ಮಾಡುತ್ತೇನೆ. ಸುಮ್ಮನೇ ಕೆಣಕಬೇಡ" ಕೆಟ್ಟದ್ದೂ ಅಂತ ಗೊತ್ತಿದ್ದರೂ ಅದನ್ನು ಮಾಡುವುದಕ್ಕೆ ಯಾರು ಕಾರಣ? ವಂಚನೆ ಮಾಡಿ ವಿಶಾಲ  ಮನಸ್ಸಿನಿಂದ ಅದನ್ನು ಒಪ್ಪಿಕೊಳ್ಳುವುದು ಒಂದು ರೀತಿ ಉಳಿದವರನ್ನೂ ವಂಚಿಸಿದಂತೆ. ಕೆಟ್ಟದ್ದು ಮಾಡುವವರಿಗೆ ಗೊತ್ತಿರುತ್ತದೆ ನಾನು ಕೆಟ್ಟದ್ದನ್ನೇ ಮಾಡುತ್ತೇನೆ ಎಂದು. ಕಳ್ಳನಿಗೆ  ಕದಿಯುವುದು ತಪ್ಪು ಅಂತ ಗೊತ್ತಿರುತ್ತದೆ. ಅದಕ್ಕೆ ಅವನು ಕದಿಯುವಾಗ ಯಾರೂ ಇಲ್ಲದಾಗ ಕದ್ದು,  ಯಾರೂ ನೋಡದಂತೆ ಎಚ್ಚರ ವಹಿಸುತ್ತಾನೆ. ಅದರಂತೆ ಇದು. ಗೊತ್ತಿದ್ದು ಕೆಟ್ಟದ್ದು ಮಾಡುವುದಿದ್ದರೆ ಅದು ಕ್ಷಮಾರ್ಹವಾಗುವುದಿಲ್ಲ. ಆದರೂ ಅದನ್ನು ಒಪ್ಪಿಕೊಂಡು ಒಂದು ರೀತಿಯಲ್ಲಿ ಕಥಾನಾಯಕನಾಗುವ ಹಂಬಲ. 

ನಾನು ಆತನಿಗೆ ಹೇಳಿದೆ ಮನುಷ್ಯ ಒಳ್ಳೆಯವನಾಗಬೇಕಿದ್ದರೆ, ಪೂಜೆ ಹೋಮ ಹವನ ಮಾಡಲೇ ಬೇಕೆಂದೇನೂ ಇಲ್ಲ. ಅದು ವಿಧಾನ ಅಷ್ಟೇ. ವಾಲ್ಮೀಕಿ ಕೇವಲ ರಾಮ ನಾಮ ಹೇಳಿ ಮಹಾ ಋಷಿಯಾದ. ನೀನು ಅಷ್ಟೇ ಭಗವಂತನ ನಾಮ ಸ್ಮರಣೆ ಮಾಡು. ಬದಲಾಗುವ ಪ್ರಯತ್ನ ತನ್ನಿಂತಾನಾಗಿ ಪ್ರಚೋದನೆಯಾಗುತ್ತದೆ. ಅದರೆ ಅದು ಕಳ್ಳ ಕದಿಯುವುದಕ್ಕೆ ಹೋಗುವಾಗ ದೇವರ ಪ್ರಾರ್ಥನೆ ಮಾಡಿದಂತೆ ಆಗಬಾರದು ಅಷ್ಟೇ.  ಹೋಮ ಹವನ ಪೂಜೆ ಮಾಡಿದವರೆಲ್ಲರೂ ಒಳ್ಳೆಯವರು ಆಗುವುದಕ್ಕೆ ಸಾಧ್ಯವಿಲ್ಲ. ರಾಕ್ಷಸರೂ ತಪಸ್ಸು ಮಾಡಿಯೇ ಕೆಟ್ಟವರಾಗುತ್ತಿದ್ದರು. ಅದು ಅಹಂಕಾರದಿಂದ. ಮೊದಲು ನಮ್ಮೊಳಗಿರುವ ಅಹಂ ಎಂಬುದನ್ನು ಬಿಡಬೇಕು. ಅಹಂ ಎಂಬುದು ಕೆಟ್ಟದನ್ನೇ ಪ್ರಚೋದಿಸುತ್ತದೆ. ಮೊದಲು ಸನ್ಮನಸ್ಸು ಇರಬೇಕು. ಮತ್ತೆ ಸದ್ಭಾವನೆ ಇರಬೇಕು. ಮಾಡುವ ಕಾರ್ಯದಲ್ಲಿ ಉದ್ದೇಶ ಶುದ್ಧಿ ಇರಬೇಕು. ಆಗ ಕೆಟ್ಟ ಯೋಚನೆ ನಿನ್ನ ಬಳಿಗೆ ಬರುವುದಕ್ಕೂ ಹಿಂಜರಿಯುತ್ತದೆ. ನೀನು ಬಳಿಗೆ ಬರುವುದಕ್ಕೆ ಅಂಜಿದಂತೆ. ನಾನು ನಿನ್ನ ಸಂಪರ್ಕಕ್ಕೆ ಬಂದರೆ ನಾನು ಕೆಡಬಹುದು. ನನ್ನ ಪರಿಶುದ್ದಕ್ಕೆ ನಾನು ಎಲ್ಲದರಿಂದ ದೂರವಾಗಿ ಉಳಿದಂತೆ ನೀನು ಎಲ್ಲದರಿಂದ ದೂರಾಗಿ ನಿಲ್ಲು. ಪುಣ್ಯವಂತ ನಾಗುವುದಕ್ಕೆ ಬೇರೆ ಅರ್ಹತೆ ಬೇಡ. ಕೆಸರಲ್ಲಿ ಹುಟ್ಟಿದ ಕಮಲವೂ ಕೆಸರಿನಿಂದ ಹೊರಬರುವುದಕ್ಕೆ ಪ್ರಯತ್ನಿಸುತ್ತದೆ. ಆಗ ಅದಕ್ಕೆ ಸೂರ್ಯನ ದರ್ಶನವಾಗುತ್ತದೆ. ಪರಿಶುದ್ಧನಾಗುವುದೆಂದರೆ ಅದು ಭಗವಂತನ ಸಮೀಪಕ್ಕೆ ಹೋಗುವುದು ಎಂದು ಅರ್ಥ. ಹೊರತು ಅದು ಎಲ್ಲರಿಂದ ಪ್ರತ್ಯೇಕವಾಗುವುದಲ್ಲ. 


Saturday, May 23, 2026

ಚಾರ್ಲಿಯ ಹನಿ ಸುಗಂಧ

ಶ್ರಾವಣ ಕಳೆದು ಮಳೆ ವಿರಳವಾಗಿ  ತುಂತುರು ಮಳೆಯ ಶರದೃತುವಿನ ಕಾಲ. ಒಂದು ರೀತಿಯಲ್ಲಿ ಬಿಡದ ಮಳೆಯಿಂದ ಮುಕ್ತರಾಗಿ ಒಂದಷ್ಟು ಉಲ್ಲಸಿತರಾಗಿ ಹಿತವಾದ ವಾತಾವರಣವನ್ನು ಅನುಭವಿಸುವ ಋತುಮಾನ. ಋತುಸ್ನಾತೆಯಾದ ಪ್ರಕೃತಿ ಮಾತೆ ಅವಧಿ ಮುಗಿದು ಸ್ನಾನ ಮಾಡಿ ಶುಭ್ರವಾಗಿ ತಲೆಗೂದಲಿನಿಂದ ತೊಟ್ಟು ತೊಟ್ಟು ಹನಿಯನ್ನು ಸುರಿಸುತ್ತಾ ಬರುವಂತೆ ಮಳೆ ಅಗಲೋ ಈಗಲೋ ಸುರಿಯುವ ಮಳೆ  ಮನಸ್ಸಿಗೆ ಕೊಡುವ ಉತ್ಸಾಹದ ದಿನಗಳು.  ಹದಿಹರೆಯದ ಮನಸುಗಳಾದರೆ ಈ ಶರದೃತು  ಹೊಸ ಕನಸಿನ ಚಿಗುರನ್ನು ಹುಟ್ಟಿಸಿಬಿಡುತ್ತವೆ. ಅದು ಎಂಭತ್ತರ ದಶಕದ ಕೊನೆಯ ವರ್ಷಗಳು. ಅದು ಹದಿಹರಯದ ಹಸಿ ಯೌವನಿಕೆಯ ಕಾಲ. ಬದುಕನ್ನು ಸಿಹಿಯಾಗಿ ಚೂರು ಚುರು ತುಣುಕಾಗಿ ಅನುಭವಿಸುವ ಹಪ ಹಪಿಕೆ ಇದ್ದರೆ ಅದು ಹದಿ ಹರಯದ ಸಹಜ ಬಯಕೆ. 


ಹದಿಹರಯದಲ್ಲಿ ಬಡತನವಿದ್ದರೆ ಕೇವಲ ಬಾಳಸಂಗಾತಿಯ ಕನಸು ಮಾತ್ರ ಇರುವುದಿಲ್ಲ. ಭವಿಷ್ಯತ್ತಿನ ಭದ್ರತೆ ಒಂದಷ್ಟು ಧನ ಸಂಪತ್ತಿನ ಕನಸೂ ಜತೆಯಲ್ಲಿರುತ್ತದೆ. ವೈದ್ಯ ಹೃದಯದ ಬಡಿತವನ್ನು ಅಳೆದರೆ ಸಂಗಾತಿ ಹೃದಯದ ವಿಸ್ತಾರವನ್ನು ಅಳೆಯುತ್ತಾಳೆ. ಕೇವಲ ಹೃದಯದ ವೈಶಾಲ್ಯತೆ ಬದುಕಿಗೆ ಸಾಕಾಗುವುದಿಲ್ಲ.   ಈ ಪ್ರಜ್ಞೆ ಬದುಕಿನ ತಲೆಯ ಮೇಲಿರು ಭಾರವನ್ನು ಹೆಚ್ಚಿಸುತ್ತದೆ.  ತಲೆಯ  ಭಾರ, ಹೃದಯದ ಭಾವನೆ ಕಾಣುವ ಕನಸು ನಡುವಿನ ಈ ದಿನಗಳಲ್ಲಿ ಆಕೆ ಮನೆಗೆ ಬರುತ್ತಾಳೆ ಎಂಬ ಪತ್ರ ಮನೆಗೆ ಬಂದಾಗ ಕನಸು ವಾಸ್ತವದ ನನಸಿನ ಕಡೆಗೆ ಮುಖ ಮಾಡಿತ್ತು. ಕೆಲವು ದಿನಗಳ ಹಿಂದೆ ಆಕೆಯ ಮುಖಾಮುಖಿ ಭೇಟಿಯಾಗಿತ್ತು. ಆಕೆಯ ಮನೆಯನ್ನು ಮನೆ ಮಂದಿಯನ್ನು ನೋಡಿ ಛೇ ಇವುಗಳನ್ನು ತೊರೆದು ಆಕೆ ಬಂದಾಳೆ ಎಂಬ ಸಂದೇಹ ಬಾಧಿಸಿತ್ತು. ಇದೆಲ್ಲ ತೊರೆಯಬೇಕಾದರೆ ಇದಕ್ಕಿಂತ ಅಧಿಕವಾಗಿರುವದ್ದು ಬಂದು ಸೇರುವಲ್ಲಿರಬೇಕು.  ಇಲ್ಲದಿದ್ದರೆ ಅದನ್ನು ಒದಗಿಸಿ ಕೊಡಬೇಕು. ಆಗ ಬಂದ ಯೋಚನೆ, ವಾಸ್ತವವನ್ನು ತೋರಿಸಬೇಕು. ಅದನ್ನು ನೋಡಿಯೂ ಆಕೆ ಬಂದರೆ ಆಕೆಯ ಮನೆಯಲ್ಲಿರುವುದಕ್ಕಿಂತಲೂ ಹೆಚ್ಚಿಗೆ ಇಲ್ಲಿರುತ್ತದೆ ಎಂಬ ವಿಶ್ವಾಸ ಮೂಡುತ್ತದೆ. ಆನಂತರ ಇಲ್ಲಿ ಎನುಂಟು ಏನಿಲ್ಲ ಎನ್ನುವುದಕ್ಕಿಂತಲೂ ಇದ್ದುದನ್ನು ಅನುಭವಿಸುವುದಕ್ಕೆ ಮನಸ್ಸು ಸಿದ್ಧವಾಗಿರುತ್ತದೆ. 

  ಹೀಗಿದ್ದರೂ ತನ್ನ ಮನೆಯಲ್ಲಿ ಎನಿದೆ ಎನ್ನುವುದಕ್ಕಿಂತಲೂ ಎನಿಲ್ಲ ಎಂಬ ಕೊರತೆಯ ಅನ್ವೇಷಣೆಯಲ್ಲಿ ಮನಸ್ಸು ಅವಲೋಕಿಸುತ್ತದೆ. ಕೆಲವೊಮ್ಮೆ ಅದನ್ನು ಮರೆಮಾಚಲು ಪ್ರಯತ್ನಿಸುತ್ತದೆ. ಆದರೆ ಇಲ್ಲಿ ಹಾಗಿಲ್ಲ, ಮನೆ ಹೇಗಿದೆಯೋ ಹಾಗೇ ನೋಡಲಿ. ಬಂದು ಸೇರಬೇಕಾದ ಮನೆಗೆ ಯಾವುದೋ ಭ್ರಮೆಯಲ್ಲಿ ಬಂದು ಸೇರುವುದು ಬೇಡ ಎಂಬ ಪ್ರಾಮಾಣಿಕತೆ ಇಲ್ಲಿರುತ್ತದೆ. ಹಾಗಾಗಿಯೇ ವಿಶೇಷ ಸನ್ನಾಹವೇನೂ ಇರಲಿಲ್ಲ. ಒಂದಷ್ಟು ಸ್ವಚ್ಛತೆ ಬಿಟ್ಟರೆ ಮನೆ ಅದೇ ಗುಡಿಸಲಿನಂತೆ ವಿಶೇಷ ಸೌಲಭ್ಯಗಳು ಇಲ್ಲದಂತೆ.  ಹೌದು ಆಕೆ ಬಂದು ಸೇರಬೇಕು. ಅದು ಮನೆಗಿಂತಲೂ ಮನಸ್ಸಿಗೆ ಬಂದು ಸೇರಬೇಕು. ಮನೆ ನಾಳೆ ಬದಲಾಗಬಹುದು. ಆದರೆ ಮನಸ್ಸು ಅದು ಬದಲಾಗುವುದಿಲ್ಲ. ಕನಸಿನ ಸೌಧಕ್ಕಿಂತಲೂ ಮನಸ್ಸಿನ ಸೌಧ ಗಟ್ಟಿಯಾಗಿರುತ್ತದೆ. ಆಗ ಒಂದು ಅತ್ಮ ವಿಶ್ವಾಸ ಜಾಗೃತವಾಗುತ್ತದೆ. ಆಕೆಗೆ ಎಲ್ಲವನ್ನೂ ಮಿರಿದ ಪ್ರೀತಿಯನ್ನು ಪ್ರಾಮಾಣಿಕವಾಗಿ ಕೊಡಬೇಕು. ಎಲ್ಲಕ್ಕಿಂತಲೂ ಸುಲಭವಾಗಿ ಕೊಡಬಹುದಾದ ಸಾಧನವಿದ್ದರೆ ಅದು ಪ್ರೀತಿ ಮಾತ್ರ. 

ಈಗಿನಂತೆ ಆಗ ಮೌಬೈಲ್ ಇಲ್ಲ. ದೂರವಾಣಿಯಂತೂ ಹತ್ತಿರವಿಲ್ಲ. ಮುಖ್ಯ ಸಂವಹನವೆಂದರೆ ಭಾರತೀಯ ಅಂಚೆ ಮತ್ತು ಟೆಲಿಗ್ರಾಫ ಕಛೇರಿ. ಒಂದು ಪತ್ರ ಬರೆದರೆ ತಲುಪುವುದಕ್ಕೆ ಏನಿಲ್ಲವೆಂದರೂ ಐದು ಆರು ದಿನ ಬೇಕು. ಈಗ ವಿಷಯಗಳು ಬಿಸಿ  ಆರುವ ಮೊದಲೇ ಸೇರುವಲ್ಲಿ ರವಾನೆಯಾಗುತ್ತದೆ. ಆಗ ಅದರೆ ಬಿಸಿ ಆರಿಹೋಗಿ ನಂತರ ಅಲ್ಲಿ ಕೈ ಸೇರಿದಾಗ ಬಿಸಿ ಏರುವುದಿದ್ದರೂ ಸಂಗತಿ ಒಂದು ಕಡೆಗೆ ಹಳೆಯದಾಗಿಬಿಡುತ್ತದೆ. ಹಲವು ಸಲ ಏನು ಬರೆದಿದ್ದೇನೆ ಎಂಬುದೂ ಕೂಡ ಮರೆತು ಹೋಗಿರುವ ಸಂಭವವಿದೆ.  ಹಾಗಿರುವಾಗ ಆಕೆ ಬರುತ್ತಾಳೆ ಎಂಬ ಪತ್ರ ಕೈ ಸೇರಿದಾಗ ಆಕೆ ಬರುವ ತನಕ ಅದರ ಬಿಸಿ ಆರಲೇ ಇಲ್ಲ. ಆ ಭಾವನೆಗಳು ಅದರ ಬಿಸಿ ಆರುವುದಕ್ಕೆ ಬಿಡಲಿಲ್ಲ. ದಿನ ಘಳಿಗೆಯ ಅಂತರ ಕಡಿಮೆಯಾಗುವುದನ್ನೇ ಮನಸ್ಸು ಲೆಕ್ಕ ಹಾಕುತ್ತಾ ಕಳೆಯುವುದೆಂದರೆ ಅದೊಂದು ಮಧುರವಾದ ಅನುಭವ. 

ಅಂತೂ ಆ ದಿನ ಆ ಘಳಿಗೆ ಬಂತು. ಮಧ್ಯಾಹ್ನ. ಸೂರ್ಯ ನೆತ್ತಿಗೆ ಏರಿ ಬಿಸಿಯಾಗುವ ಸಮಯ. ಹೃದಯ ಬಡಿತ ಏರಿ ಶರೀರ ಬಿಸಿಯಾದರೂ ಆ ಬಿಸಿಯಲ್ಲಿ ಒಂದು ಹಿತವಾದ ಅನುಭವ. ಮಧ್ಯಾಹ್ನದ ಬಸ್ಸು...ಆ ಬಸ್ಸಿನಲ್ಲೇ ಆಕೆ ಬರುವ ನಿರೀಕ್ಷೆ ಇರುವ ಕಾರಣ ಬಸ್ಸಿನ ಹಾರನ್ ದೂರದಿಂದಲೇ ಕೇಳಿಸುತ್ತದೆ. ಅದೊಂದು ಸೂಚನೆಯಘಂಟಾನಾದಂತೆ, ಆ ಧ್ವನಿ ಈ ಕಿವಿ ಕೇಳಿದಂತೆ ಆ ಕಿವಿಯೂ ಅದೇ ಹೊತ್ತಲ್ಲಿ ಕೇಳಿರುತ್ತದೆ ಎಂಬ ಭಾವನೆಯೇ ರೋಮಾಂಚನವನ್ನು ಉಂಟು ಮಾಡುತ್ತದೆ. ಆಕೆ ಯಾವ ಯೋಚನೆಯಲ್ಲಿರಬಹುದು? ಮನೆಯ ಬಗ್ಗೆ ಇರಬಹುದೇ? ಇಲ್ಲ ಮನದ ಬಗ್ಗೆ ಇರಬಹುದೇ? ಮನಸ್ಸನ್ನು ಒಂದಷ್ಟು ಮೊದಲೇ ಅರಿತಿರುವುದರಿಂದ ಮನೆಯ ಬಗ್ಗೆ ಪರಿಸರದ ಬಗ್ಗೆ ಒಂದಷ್ಟು ಭಾವನೆಗಳು ಇರಬಹುದು. 

ಅಚ್ಚ ಬಿಳಿಸೀರೆಯಲ್ಲಿ ನಸು ಕಂದು ಹೂವನ್ನು ಚಿತ್ರಿಸಿದ ಸೀರೆಯಲ್ಲಿ ಅಪ್ಪ ಅಮ್ಮನ ಜತೆ ತೆಳು ಬಳುಕಿದ ಶರೀರದಲ್ಲಿ  ಆಕೆ ಇಳಿದು ಬರುತ್ತಿದ್ದರೆ ಆಕೆಯ ಹೆಜ್ಜೆ ಎದೆಯ ಮೇಲಿಟ್ಟಂತಾಗಿ ಹೃದಯ ಭಾರವಾದ ಅನುಭವ.  ಮೊದಲೊಮ್ಮೆ ಅಕೆಯ ಭೇಟಿಯಾಗಿರುವುದರಿಂದ ಮೊದಲ ಭೇಟಿಯ ರೋಮಾಂಚನ ಇಲ್ಲದಿದ್ದರೂ ದೇಹದ ಕಂಪನ ಒಂದಿಷ್ಟು ಅಧಿಕವಾಗಿತ್ತು.  ಅದಾಗಲೇ ಔಪಚಾರದ ಮಾತುಗಳು ಕ್ರಿಯೆಗಳು ನಡೆದು, ಅಕೆ ಮನೆಯನ್ನೇಲ್ಲಾ ಸುತ್ತಾಡಿ ನೋಡಿದಳು. ಏನು ಅನ್ನಿಸಿತೋ ಏನೋ ಅಂದುಕೊಂಡು ಮನಸೋ ಇಚ್ಛೆ ಮಾತನಾಡಬೇಕು ಅನ್ನಿಸಿತ್ತು, ಆದರೆ ಅದಕ್ಕೆ ತತ್ಕ್ಷಣಕ್ಕೆ ಅವಕಾಶ ಇರಲಿಲ್ಲ. ಬಂದ ಅತಿಥಿಗಳ ಊಟ ಉಪಚಾರ ಮುಗಿಸಿ  ಕೊನೆಯಲ್ಲಿ ಆಕೆ ಎಂದಳು ಒಂದಿಷ್ಟು ಖಾಸಗಿಯಾಗಿ  ಮಾತನಾಡಬೇಕು. ಆಕೆಯ ಧೈರ್ಯ ತನಗಿಲ್ಲದೇ ಹೋಯಿತಲ್ಲ ಎಂದನಿಸಿದರೂ ಸಂತೋಷದಿಂದ ಮನೆಯ ಹೊರಗೆ ಒಂದಷ್ಟು ದೂರದಲ್ಲಿ ಒಂದು ಬಂಡೆಯ ಮೇಲೆ ಎದುರು ಬದಿರಾಗಿ ಕುಳಿತು ಮಾತನಾಡಿದಾಗ ಆಕೆಗೆ ಮನೆ ಪರಿಸರ ಎಲ್ಲವೂ ಇಷ್ಟವಾಗಿರಬೇಕು. ಆಡುವುದಕ್ಕೆ ಹಲವಿದ್ದರೂ  ಒಂದೂ ಮಾತೂ ಹೊರಡಲಿಲ್ಲ. ಇಷ್ಟವಾಯಿತಾ ಎಂದ ಒಂದು ಪ್ರಶ್ನೆ ಬಿಟ್ಟರೆ ಆಕೆ ಮತ್ತೇನೂ ಕೇಳಿದ ನೆನಪಿಲ್ಲ.  ಆಕೆಯ ಅಮ್ಮ ಮೊದಲೇ ಹೇಳೀದ್ದರು, ತಿಳಿಗಂಜಿಯಾದರೂ ಪರವಾಗಿಲ್ಲ...ಆದರೆ ಆಕೆಯ ನೆಮ್ಮದಿ ಅತಿ ಮುಖ್ಯ. ಇದು ಅತಿಯಾದ ಆತ್ಮ ವಿಶ್ವಾಸ ತುಂಬಿದ ಮಾತುಗಳಾಗಿದ್ದವು.  ಆಗಲೇ ಮನಸ್ಸು ದೃಢವಾಗಿ ನಿರ್ಧರಿಸಿತು, ಏನೇ ಆದರು ಆಕೆಗೆ ಕಣ್ಣೀರು ಬರುವಂತೆ ಮಾಡುವುದಿಲ್ಲ.ಜೀವನದಲ್ಲಿ ನಿರ್ಧಾರ ಮಾತ್ರ ನಮ್ಮದಾಗಿರುತ್ತದೆ. ಆದರೆ ನಿಯತಿ ಅಂದರೆ ನಡೆಯುವುದು ನಮ್ಮ ವಶವಿರುವುದಿಲ್ಲ. ನಗುವಿನಂತೆ ದುಃಖವೂ ಇರುತ್ತದೆ. ಅದು ನಿಜವಾದ ಜೀವನ.  ಕಣ್ಣೀರು ಇದ್ದರೂ ಇರಬಹುದು...ಇಲ್ಲ  ಶ್ರೀರಾಮ ಪಿತೃವಾಕ್ಯ ಪರಿಪಾಲಿಸಿದಂತೆ ನನಗಾಗಿ ಕಣ್ಣೀರು ಮಿಡಿಯದೇ ಸುರಿಸದೇ ಇರಬಹುದು.  ನನ್ನ ನಿರ್ಧಾರ ಹುಸಿಯಾಗಬಾರದಲ್ಲ.  ಸದಾ ನಗುವಿನಲ್ಲೇ ಇರುವ ಆಕೆಯನ್ನು ಊಹಿಸುವುದು ಕಷ್ಟ.

ಸಾಯಂಕಾಲದ ತನಕ ಹತ್ತು ಹಲವು ಮಾತುಗಳಾದವು. ಕೊನೆಯಲ್ಲಿ ಸಮುದ್ರ ನೋಡಬೇಕು ಅನ್ನಿಸಿತು. ಮಲೆನಾಡ ಹೆಣ್ಣಿಗೆ ಅಲ್ಲಿನ  ನದಿ  ಕೆರೆ ಬಾವಿ ಬಿಟ್ಟರೆ ಬೇರೆ ಜಲರಾಶಿಯ ಪರಿಚಯವಿಲ್ಲ. ಹೊರ ಹೋಗುವುದಕ್ಕೆ ಉಡುಪು ಬದಲಿಸಿ ಹೊರಡುವಾಗ ಆಕೆ ಹತ್ತಿರ ಬಂದಳು,  ಕಸೂತಿಯಲ್ಲಿ ಅಲಂಕರಿಸಿದ ಕರವಸ್ತ್ರವನ್ನು ಕೈಯಲ್ಲಿಟ್ಟಳು. ಮೆಲ್ಲಗೆ ಕಿವಿಯಲ್ಲಿ ಪಿಸುಗುಟ್ಟಿದಳು...ನೆನಪಿಗೆ ಇರಲಿ. ಮರೆಯದ ಮನಸ್ಸಿಗೆ  ನೆನಪಿನ ರಾಶಿಯನ್ನೇ ತುಂಬಿದಾಕೆ ಆ ರಾಶಿಯನ್ನು ಮುಚ್ಚಿಕೊಳ್ಳುವುದಕ್ಕೋ ಎನೋ ಪುಟ್ಟ ಕರವಸ್ತ್ರವನ್ನು ಕೈಯಲ್ಲಿರಿಸಿದಳು. ಹಾಗೇ ಅದನ್ನು ಮುಖದ ಬಳಿಗೆ ತಂದರೆ ಚಾರ್ಲಿ ಸೆಂಟ್ ನ ಮಧುರವಾದ ಪರಿಮಳ. ಅದೆಂತಹ ಮಧುರ ಗಂಧ. ಕೋಣೆಯನ್ನೆಲ್ಲಾ ಆವರಿಸಿತ್ತು. ಮತ್ತೂ ಮತ್ತೂಮುಖದ ಬಳಿಗೆ ತಂದೆ. ಎಲ್ಲಿ ಗಂಧ ಕರಗಿ ಆವಿಯಾಗುವುದೋ ಎಂದು ಕೊಂಡು ಪುಟ್ಟ ಪೆಟ್ಟಿಗೆಯಲ್ಲಿ ಕರವಸ್ತ್ರವನ್ನು ಮುಚ್ಚಿಟ್ಟುಬಿಟ್ಟೆ. 

ಎಲ್ಲರೂ ಸಮುದ್ರಕಿನಾರೆಗೆ ತೆರಳಿದೆವು. ಒಂದು ತಾಸು ಸಾಗರದಂಚಿನ ಅಲೆಗಳ ಭೋರ್ಗರೆತ ಕಿವಿಗೆ ಅಪ್ಪಳಿಸಿದರೂ ಆಕೆಯ ಕಿಲ ಕಿಲ ನಗು ಕಿವಿಯಲ್ಲಿ ಅದು ಹೇಗೋ ಎಲ್ಲವನ್ನೂ ಮೀರಿಸಿ ಕೇಳಿಸುತ್ತಿತ್ತು. ನಂತರ ಎಲ್ಲರನ್ನೂ ಬೀಳ್ಕೊಟ್ಟು ಕತ್ತಲಾಗುತ್ತಿದ್ದಂತೆ ಮನೆಗೆ ಬಂದನಂತರ ಮತ್ತದೇ ಕರವಸ್ತ್ರದ ಪೆಟ್ಟಿಗೆಯನ್ನು ತೆರೆದು ನೋಡುವುದನ್ನು ತೆಡೆ ಹಿಡಿಯಲಾಗಲಿಲ್ಲ.  ತೆರೆದು ನೋಡಿದೆ. ಮತ್ತದೆ ಚಾರ್ಲಿಯ ಹನಿ ಸುಗಂದ....... ಇಂದಿಗೂ ಆ ಚಾರ್ಲಿಯ ಹನಿ ಸುಗಂಧದ ಪರಿಮಳವನ್ನು ಮರೆಯುವುದಕ್ಕಿಲ್ಲ.   ಒಂದು ಮಾತ್ರ ಸತ್ಯ ಬದುಕಿನಾದ್ಯಂತ ಹರಡಿದ ಮಧುರ ಸುಗಂಧಕ್ಕೆ ಆ ಚಾರ್ಲಿಯ ಸುಗಂಧವೇ ತರುಲತೆಯ ಚಿಗುರಾಗಿ ಉಳಿದುಬಿಟ್ಟಿತು. 





Wednesday, May 13, 2026

ಬ್ರಾಹ್ಮಣ

     ಬ್ರಹ್ಮಾಂಡ ಎಂಬ ಶಬ್ದವನ್ನು ಉಪಮೆಯಾಗಿ ಆಗಾಧ ಗಾತ್ರವನ್ನು ಕಲ್ಪಿಸುವುದಕ್ಕೆ ಉಪಯೋಗಿಸುತ್ತಾರೆ. ಬ್ರಹ್ಮಾಂಡ  ಗಾತ್ರ.  ಬ್ರಹ್ಮ ಎಂದರೆ ದೊಡ್ಡದು. ಅದು  ಎಂದಿಗೂ ಸಣ್ಣಗಾಗುವುದಕ್ಕೆ ಸಾಧ್ಯವಿಲ್ಲ. ಸಣ್ಣದಾದರೆ ಅದು ಬ್ರಹ್ಮವಾಗಿ ಉಳಿಯುವುದಿಲ್ಲ. ಬ್ರಹ್ಮದ ರೂಪವೇ ಬ್ರಾಹ್ಮಣ. ಆದರೆ ಇಂದು ಬ್ರಹ್ಮ ಅಥವಾ ಬ್ರಾಹ್ಮಣ ಚಿಕ್ಕದಾಗಿ ಬೆಳೆಯದಂತಹ ಅನಿವಾರ್ಯತೆಗೆ ತುತ್ತಾಗುತ್ತಾನೆ.  ಬ್ರಹ್ಮ ಇದರ ಅರ್ಥ ಏನೆಂಬುದರ ಬಗ್ಗೆ ಯೋಚಿಸುವುದಿಲ್ಲ ಯಾಕೆಂದರೆ ಅದನ್ನು ಅಳೆಯುವ ಸಾಮರ್ಥ್ಯ ಕಳೆದುಹೋಗಿರುವುದಕ್ಕೋ ಅಳೆದರೆ ತಾನು ಚಿಕ್ಕದಾಗುವ ಭಯವೋ ಅಂತೂ ಬ್ರಹ್ಮ ಸ್ವರೂಪವೇ ಸಮಸ್ಯೆ ಮಾತ್ರ ಬೃಹದಾಗಿ ತಲೆಯ ಮೇಲೆ ಕುಳಿತಂತೆ ಎಗರಾಡುವಂತಾಗಿದೆ.  ತಾವು ಸ್ವತಃ ಸಣ್ಣಗಾಗಿರುವುದಕ್ಕೋ ಏನೋ? ಬ್ರಾಹ್ಮಣ ಎಂಬ ಶಬ್ದವೇ ಬಹಿಷ್ಕರಿಸುವ ಮನಸ್ಸಾಗುತ್ತದೆ. 

ಬ್ರಾಹ್ಮಣ ಅದೊಂದು ವಿಶಿಷ್ಟ ಪದವಿ. ಬ್ರಹ್ಮ ತತ್ವ ಅರ್ಥವಾದರೆ ಮಾತ್ರ ಈ ಪದವಿಯ ಅರ್ಥವಾಗಬಹುದು. ಆದರೆ ನಮ್ಮಲ್ಲಿ ಅರ್ಥವಾಗದೇ ಇರುವುದನ್ನು ಅರ್ಥವಿಸುವ ಪ್ರಯತ್ನ ಕಷ್ಟಕರ, ಅದಕ್ಕೆ ಅದನ್ನು ಹುಳಿ ಫಲವನ್ನಾಗಿಸಿದರೆ ಅದರ ಸನಿಹದಿಂದ ದೂರವಾಗಬಹುದೆಂಬ ಭ್ರಮೆ ಆವರಿಸಿಬಿಡುತ್ತದೆ. ಕಾರಣ ಇಷ್ಟೇ ಅದರ ಸನಿಹ ಸುಳಿಯುವ ಅರ್ಹತೆಯೂ ಇಲ್ಲ. ಅದರಬಗ್ಗೆ ಮತ್ತಷ್ಟು ಭಯ ಆವರಿಸಿರುತ್ತದೆ.  ಯಾವುದೋ ಒಂದು ಪದವಿಯೋ ಅರ್ಹತೆಯೋ ಶ್ರೇಷ್ಠ ಎಂದು ಕಂಡರೆ ಒಂದೋ ಅದನ್ನುಕೈವಶ ಮಾಡಿಕೊಳ್ಳಬೇಕು. ಅದಕ್ಕೆ ಸಾಧನೆ ಬೇಕು. ಒಂದು ವೇಳೆ ಅದು ಸಾಧ್ಯವಾಗದೇ ಇರುವಾಗ ತಾನೇನೂ ಕಡಿಮೆಯಲ್ಲ ಎಂದು ತಿಳಿದುಕೊಳ್ಳುವುದು. ಇದು ಕೆಲವೊಮ್ಮೆ ಸ್ವಾಭಿಮಾನದ ಸಂಕೇತವಾದರೆ ಹಲವು ಸಲ ಇದು ಸಾಧ್ಯವಾಗದೇ ಮೈ ಪರಚಿಕೊಳ್ಳುವ ಕೀಳರಿಮೆಯಾಗಿ ಬದಲಾಗುವುದೇ ಅಧಿಕ. 

ಎಲ್ಲಾ ಜಾತಿ  ಬದಲಿಸಿ ಹೊಸ ಜಾತಿಗೆ ಬದಲಾಗಬಹುದು.‌ ಆದರೆ ಬ್ರಾಹ್ಮಣ ಯರೋ ಬಂದು ಬದಲಿಸಿ ಅಗುವುದಲ್ಲ.  ಸ್ವತಃ ಆಗುವುದು. ಅದಕ್ಕೆ ಇಚ್ಛಾ ಶಕ್ತಿ ಬೇಕು.  ಯಾರೋ ಬಂದು ಬ್ರಾಹ್ಮಣ ಮಾಡಿ ಬದಲಿಸಿದರೆ ಅದು ಹೊರಾವರಣದ ವೇಷಗಾರಿಕೆಯಷ್ಟೆ ಸಾಧ್ಯ.  ಯಾರೋ ಮಾಡುವುದಕ್ಕೆ ಅದು ಸಾಧ್ಯವಿಲ್ಲ. ‌ಒಂದು ವೇಳೆ ಮಾಡಿದರೂ ಅದು ಉಳಿಯಬೇಕೆಂದೇನೂ ಇಲ್ಲ. ಬ್ರಾಹ್ಮಣ ಆಗಬೇಕೆಂದಿದ್ದರೆ  ಬ್ರಾಹ್ಮಣನಿಗೆ  ಹೋಲಿಸುವುದಕ್ಕಿಂತ ನಾನು ಬ್ರಾಹ್ಮಣ ಅಂತ ತಿಳಿದುಕೊಳ್ಳಬೇಕು. ಮೊದಲಿಗೆ ತನ್ನಲ್ಲಿರುವ ಕೀಳರಿಮೆಯನ್ನು ಬಿಡಬೇಕು.   ಅದರೊಂದಿಗೆ ಹೋಲಿಸುವ ಕೀಳರಿಮೆ ಯಾಕೆ?  ಬ್ರಾಹ್ಮಣ ಎಂದು ತಿಳಿದು ಆ ಹಾದಿಯಲ್ಲಿ ಕಟ್ಟು ನಿಟ್ಟಾಗಿ ಬದುಕಿ‌ನೋಡಬೇಕು. ಯಾರೋ ಬಂದು ಬ್ರಾಹ್ಮಣ ಮಾಡುವುದಲ್ಲ. ಮಾಡಿದರೂ ಅದು ಬ್ರಾಹ್ಮಣ್ಯ ಆಗುವುದಿಲ್ಲ ಜಾತಿ.. ಅಂದರೆ ಹುಟ್ಟಿನಿಂದ ಬರುವದ್ದು.‌ಜಾತ ಅಂದರೆ ಹುಟ್ಟು, ಧರ್ಮ‌ಆನಂತರ ಅನುಸರಿಸಬೇಕು. ಹಾಗಾಗಿ ಜಾತದಿಂದ ಅಂದರೆ ಹುಟ್ಟಿನಿಂದ ಬಂದಿರುವುದರ ಬಗ್ಗೆ ಯೋಚಿಸದೆ ಆನಂತರ ಸಾಧಿಸಬಹುದಾದ ಧರ್ಮದ ಬಗ್ಗೆ ಯೋಚಿಸಬೇಕು. ಜಾತದಿಂದ ಇರುವುದು ಅದು ನಮ್ಮ ಕೈಯಲ್ಲಿ ಇರುವುದಿಲ್ಲ. ಅದನ್ನೇ ಭಗವಂತ ಎನ್ನುವುದು. 

ಬ್ರಾಹ್ಮಣರಿಗೂ ಬ್ರಾಹ್ಮಣ ಹಾದಿಯಲ್ಲಿ ಸಾಗುವುದು  ವರ್ತಮಾನದಲ್ಲಿ ಸುಲಭವಲ್ಲ. ಅದಕ್ಕೆ ಬದ್ದತೆ ಬೇಕು. ಒಂದು ದಿನವಾದರೂ ಇಂದ್ರನಾಗಬೇಕು, ಅರಸನಾಗಬೇಕು ಈಗಿನ ಕಾಲದಲ್ಲಿ ಒಂದು ದಿನವಾದರೂ ಪ್ರಧಾನಿಯಾಗಬೇಕು ಮಂತ್ರಿಯಾಗಬೇಕು ಎಂದು ಕನಸು ಕಾಣಬಹುದು. ಏನೋ ಅದೃಷ್ಟದಿಂದ ಒಂದು ದಿನ ಹಾಗಾಗಿ ಇರಲೂ ಬಹುದು. ಆದರೆ ಬ್ರಾಹ್ಮಣ ಎಂಬುದು ಹೇಗೋ ಬಯಸುವ ಒಂದು ದಿನದ ಪದವಿಯಲ್ಲ.  ಅದು ಅದೃಷ್ಟದ ಬಲದಿಂದ ಒಲಿಯುವ ಪದವಿಯೂ ಅಲ್ಲ. 

ಬ್ರಾಹ್ಮಣನಾಗುವುದಕ್ಕಿಂತಾ ಬ್ರಾಹ್ಮಣನಾಗಿರುವುದು ಕಷ್ಟ. ಅದಕ್ಕೆ ಪರಿಶ್ರಮ ಬೇಕು. ಬ್ರಹ್ಮ ಎಂದರೇನು ಎಂಬ ಅರಿವಿರಬೇಕು. ಬದುಕಿನ ಅಧ್ಯಯನ ಇರಬೇಕು.ಭೂಮಿಯ ಮೇಲೆ ಸುವಸ್ತು ಅಂತ ಯಾವುದಾದರೂ ಇದ್ದರೆ ಅದು ಬೇಗನೆ ಕೆಡುತ್ತದೆ. ಬ್ರಾಹ್ಮಣನಾಗುವುದಕ್ಕೆ ಒಂದೇ ಹಾದಿ ಇದ್ದರೆ , ಕೆಡುವುದಕ್ಕೆ ಹಲವಾರು ಅವಕಾಶಗಳಿರುತ್ತವೆ. ಅದರೆ ನಮ್ಮಲ್ಲಿ  ಕೆಡುವುದೇ ಶ್ರೇಷ್ಠವಾಗುವಾಗ ಬ್ರಾಹ್ಮಣ ಎಂಬುದೇ ಕೆಡುಕಾಗಿ ಕಂಡರೆ ಆಶ್ಚರ್ಯವಾಗುವುದಿಲ್ಲ. ಪಾವಿತ್ರ್ಯ ಎಂದು ಕಂಡು ಕೇಳದೆ ಅರಿವಿಲ್ಲದಿರುವಾಗ ಅಪವಿತ್ರದ ಅರಿವು ಉಂಟಾಗುವುದಿಲ್ಲ.   

ಬಾಲ್ಯದಲ್ಲಿ ಉಪನಯನ ಎನ್ನುವಾಗ ಮಕ್ಕಳಿಗೆ ತುಂಬ ಉತ್ಸಾಹ ಇರುತ್ತದೆ. ಮನೆಯಲ್ಲಿ ದೊಡ್ಡವರಂತೆ ಮಾಡಿದರೆ, ತಾನೂ ದೊಡ್ಡವನಾದೆ ಎಂದು ಬಾಲಕರು ಹೆಮ್ಮೆ ಪಟ್ಟುಕೊಳ್ಳುತ್ತಾರೆ. ಆದರೆ ಉಪನಯನ ಆದ ನಂತರ ಹೊತ್ತು ಹೊತ್ತಿಗೆ ಸ್ನಾನ ಮಾಡಬೇಕು. ಸಂಧ್ಯಾವಂದನೆ ಮಾಡಬೇಕು. ಅಟೋಟಗಳಿಗೂ ನಿಬಂಧನೆ ಇರುತ್ತದೆ. ಎಲ್ಲಕ್ಕಿಂತಲೂ ಬೆಳಗ್ಗೆ ಎದ್ದು ಸ್ನಾನ ಮಾಡಿ ಜಪಮಾಡುವ ನಿಬಂಧನೆಯಲ್ಲಿ ಮಕ್ಕಳಿಗೆ ಈ ಉಪನಯನವೇ ಬೇಡ ಅನ್ನಿಸಿಬಿಡುತ್ತದೆ. ಅದರಂತೆ ಬ್ರಾಹ್ಮಣ್ಯವೂ ಆ ಪದವಿಯನ್ನು ನಿರ್ವಹಿಸುವುದೇ ಕಠಿಣ. ಸಹಪಂಕ್ತಿ ಭೋಜನ ಮಾಡಿ  ಹೆಗಲಿಗೆ ಜತೆಯಾಗಿ ಓಡಾಡಿದರೆ, ಅಥವಾ  ಜನಿವಾರ ಧರಿಸಿದರೆ ಬ್ರಾಹ್ಮಣಗನಾಗಬಹುದು ಎಂಬ ಕಲ್ಪನೆ ಇರುತ್ತದೆ. ಆದರೆ ಬ್ರಾಹ್ಮಣನಾಗುವುದು ಅಷ್ಟು ಸರಳ ಸುಲಭವಾಗಿದ್ದರೆ ಆ ಸ್ಥಾನಕ್ಕೆ ಮಹತ್ವ ಇರುತ್ತಿರಲಿಲ್ಲ. ಜತೆಯಲ್ಲಿ ಊಟ ಮಾಡಿದರೆ ಒಂದು ಹೊತ್ತಿನ ಹಸಿವು ನೀಗಬಹುದು, ಆದರೆ ಮನುಷ್ಯ ಜನ್ಮದ ಹಸಿವಿನ ಅರ್ಥವೂ ಆಗುವುದಿಲ್ಲ. ಅದು ಪರಿಹರಿಸಲ್ಪಡುವುದೂ ಇಲ್ಲ. 

ದಿಗ್ಬಲಂ ಕ್ಷತ್ರಿಯ ಬಲಂ ಬ್ರಹ್ಮ ತೇಜೋ ಬಲಂ ಬಲಂ ಎಂದು ಕೊಂಡು ಕೌಶಿಕ ಬ್ರಹ್ಮ ಋಷಿ ವಿಶ್ವಾಮಿತ್ರನಾದ. ಕ್ಷತ್ರಿಯನಾದ ಕೌಶಿಕ ರಾತ್ರಿ ಬೆಳಗಾಗುವುದರಲ್ಲಿ ಬ್ರಾಹ್ಮಣನಾಗಲಿಲ್ಲ. ಆತನನ್ನು ಯಾರೂ ಬ್ರಾಹ್ಮಣನನ್ನಾಗಿ ಪರಿವರ್ತಿಸಿ ಮತಾಂತರ ಮಾಡಿಲ್ಲ. ಸ್ವತಃ ಪರಿಶ್ರಮದಿಂದ ತಪಃ ಶಕ್ತಿಯಿಂದ ಆತ ಮಹಾ ಬ್ರಾಹ್ಮಣನಾಗಿ  ವಿಶ್ವಾಮಿತ್ರನಾಗಿ  ಬದಲಾದ.  ಆದರೆ ಇಂದು ಬ್ರಾಹ್ಮಣನಾಗಬೇಕು, ಆದರೆ ತಪಸ್ಸು ಬೇಡ , ನಿಯಮ ನಿಷ್ಠೆಗಳು ಬೇಡಾ. ಖಡ್ಡಾಯ ಅನುಷ್ಠಾನ ಬೇಡ. ಆದರೆ ಬ್ರಾಹ್ಮಣನಾಗಬೇಕು. ಇದು ಸಿನಿಮಾ ನಾಟಕದಂತೆ ಕೇವಲ ವೇಶದಿಂದ ಬ್ರಾಹ್ಮಣನಾಗಬಹುದು. ವೇಶದಿಂದ ಬ್ರಾಹ್ಮಣನಾಗುವುದಕ್ಕೂ ಕೆಲವೊಮ್ಮೆ ಅರ್ಹತೆ ಇರಬೇಕಾಗುತ್ತದೆ. 

ಬ್ರಾಹ್ಮಣನಾಗುವುದೆಂದರೆ ಸ್ವತಃ ಬ್ರಹ್ಮನಾಗುವುದು. ಸ್ವತಃ ದೇವನಾಗುವುದು. ದೇವರು ಎಂದರೆ ದೇವಾಲಯದಲ್ಲಿ ಕೇವಲ ಮೂರ್ತಿಯಾಗಿ ಇರುವುದಲ್ಲ. ದೇವರು ಎಂದರೆ ಏನು ಎಂಬುದನ್ನು ಅರಿಯಬೇಕು. ಕಣ್ಣಿಗೆ ಕಾಣದಿರುವುದೇ ದೇವರು. ದೇವರನ್ನು ಯಾರೂ ತೋರಿಸುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ ದೇವರನ್ನು ಕಂಡವರು ಯಾರೂ ಇಲ್ಲ. ಕಾಣದೇ ಇರುವುದನ್ನು ತೋರಿಸುವುದಕ್ಕೆ ಹೇಗೆ ಸಾಧ್?  ಇದು ದೇವರು ಅಂತ ದೇವರನ್ನು ತೋರಿಸುವುದಕ್ಕೆ ಸಾಧ್ಯವಿಲ್ಲ. ಚರಾಚರ ವಸ್ತುಗಳಿಗಿಂತ ಅತೀತವಾಗಿರುವುದೇ ದೇವರು. ಮನುಷ್ಯ ತನ್ನ ಬುದ್ಧಿಗೆ ಸೀಮಿತವಾಗಿ ದೇವರನ್ನು ಕಲ್ಪಿಸಿಕೊಳ್ಳಬಹುದು. ಆದರೆ ದೇವರನ್ನು ಅರಿಯಬೇಕಾದರೆ ಜನ್ಮವೇ ಸಾಕಾಗುವುದಿಲ್ಲ.  ಹೊರಗೆಲ್ಲೂ ದೇವರು ಕಾಣದಿರುವಾಗ ಸ್ವತಃ ತನ್ನಲ್ಲಿರುವ ದೇವರನ್ನು ಕಂಡುಕೊಳ್ಳುವುದು. ಬ್ರಾಹ್ಮಣನೆಂದರೆ ಅದುವೆ ತನ್ನಲ್ಲೇ ದೇವರನ್ನು ಕಂಡುಕೊಳ್ಳುವುದು. ಬ್ರಾಹ್ಮಣನಿಗೆ ದೇವರನ್ನು ಅರ್ಚಿಸುವುದಕ್ಕೆ ದೇವಾಲಯ ಬೇಡ, ಮೂರ್ತಿಯ ಅವಶ್ಯಕತೆ ಇರುವುದಿಲ್ಲ. ಯಾವುದರಲ್ಲೂ ದೇವರನ್ನು ಆವಾಹಿಸುವುದಕ್ಕೆ ಸಾಧ್ಯವಿರುತ್ತದೆ. ಅರ್ಥ ಎಲ್ಲದರಲ್ಲೂ ದೇವರನ್ನು ಕಂಡು ಸ್ವತಃ ತನ್ನಲ್ಲೇ ದೇವರನ್ನು ಕಂಡು ತಾನೇ ದೇವರಾಗುವುದು. ಹಾಗಾಗಿಯೇ ಬ್ರಾಹ್ಮಣ ಎಂದರೆ ಭೂಸುರನಾಗುತ್ತಾನೆ.  ಅದು ವೃತನಿಷ್ಠನಾಗಿ ಕಠಿಣವಾದ ಸ್ಥಾನ. 

ಭೂಮಿಯ ಮೇಲೆ ತೆಂಗಿನಮರಮಾತ್ರ ಕಲ್ಪವೃಕ್ಷವಾಗುತ್ತದೆ. ಮಾವಿನ ಮರ ಕಲ್ಪವೃಕ್ಷವಾಗುವುದಿಲ್ಲ. ಅದನ್ನು ಕಲ್ಪವೃಕ್ಷ ಎಂದು ತನ್ನ ಅರಿವಿಗೆ ಸೀಮಿತವಾಗಿ ಕಲ್ಪವೃಕ್ಷ ಎಂಬಂತೆ ಭ್ರಮಿಸಬಹುದು. ಆದರೆ ತೆಂಗಿನಮರ ಕಲ್ಪವೃಕ್ಷವಾಗಿಯೇ ಉಳಿಯುತ್ತದೆ. 

Sunday, May 3, 2026

ಭಕ್ತರ ಸೇವೆ



ಮೊನ್ನೆ ಶಬರಿಮಲೆಯಾತ್ರೆಯಲ್ಲಿ ಮುಂಜಾನೆ ಸೂರ್ಯೋದಯದ ಮೊದಲು ಕತ್ತಲೆಯಲ್ಲೇ   ನಾವು ಮಲೆ ಏರುವುದಕ್ಕೆ ಶುರುಮಾಡಿದೆವು. ಹೆಚ್ಚು ಜನಸಂದಣಿ ಇರದಿದ್ದರೂ ಹಲವಾರು ಜನ ಮಲೆ ಏರುವವರು ಇದ್ದರು. ಕೆಳಗಿನಿಂದ ಮೇಲೆ ಸನ್ನಿಧಾನದವರೆಗೂ ಇದ್ದ ಧ್ವನಿ ವರ್ಧಕದಲ್ಲಿ ಖ್ಯಾತ ಗಾಯಗ ಜೇಸುದಾಸ್ ಅವರ ಭಕ್ತಿ ಗೀತೆ ಇಂಪಾಗಿ ಕೇಳಿಬುರುತ್ತಿದ್ದರೆ, ಮಲೆ ಏರುವುದಕ್ಕೆ ಭಕ್ತಿ ಪ್ರೇರಕ ಶಕ್ತಿಯಂತೆ ಪ್ರಚೋದನೆಯಾಗುತ್ತಿತ್ತು. ಬರಿಗಾಲಲ್ಲಿ ಕಲ್ಲಿನ ರಸ್ತೆಯನ್ನು, ಮೆಟ್ಟಲನ್ನು ಏರುವಾಗ ಪಾದಗಳು ನೋಯುತ್ತಿದ್ದರೂ ಅದೊಂದು ಭಕ್ತಿಯ ಭಾವ ಎಲ್ಲವನ್ನು ಮರೆಸುವಂತೆ ಮಾಡುತ್ತಿತ್ತು. ಎಲ್ಲರೂ ಏರುತ್ತಿದ್ದರೆ ಅಲ್ಲೊಂದು ಇಲ್ಲೊಂದು ಅಯ್ಯಪ್ಪ ಶರಣು ಕೂಗು ಕೇಳಿಸುತ್ತಿದ್ದದ್ದು ಬಿಟ್ಟರೆ ಏದುಸಿರೇ ಅಧಿಕ ಕೇಳಿ ಬರುತ್ತಿತ್ತು. ಮುಂಜಾನೆಯ ತಣ್ಣನೆಗಾಳಿಯನ್ನು ಭೇದಿಸಿ ಮೈಯಿಂದ ಬೆವರು ಸುರಿಯುತ್ತಿತ್ತು. 

ಅಪ್ಪಾಚಿ ಮೇಡು ಹತ್ತಿರ ಇರಬೇಕು  ನಾನು ಒಂದರ ಹಿಂದೆ ಒಂದು ಹೆಜ್ಜೆಯನ್ನು ವೇಗವಾಗಿ ಎತ್ತಿಡುತ್ತಾ ಒಂದಷ್ಟು ದೂರ ಬೇಗ ಏರಿ ಹೋಗಿ ಹಿಂದಿರುಗಿ ನೋಡಿದರೆ ನನ್ನಾಕೆ ಮತ್ತು ಮಗ ತುಂಬ ಹಿಂದುಳಿದಿದ್ದರು. ಸುಸ್ತಾದ ನನ್ನಾಕೆ ಮೆಟ್ಟಲ ಬದಿಯಲ್ಲಿದ್ದ ಕಟ್ಟೆಯಲ್ಲಿ ಸುಸ್ತಾಗಿ ಕುಳಿತಿದ್ದಳು. ಯಾರೋ ಒಬ್ಬರು ಆಕೆಗೆ ಬೀಸಣಿಕೆಯಿಂದ ಗಾಳಿ ಹಾಕುತ್ತಿದ್ದರು. ಒಂದು ಕ್ಷಣ ನೋಡಿದರೆ ಗಾಬರಿಯಾಗಬೇಕು. ಆದರೆ ಹಾಗಲ್ಲ. ಹಾಗೆ ಸುಸ್ತಾಗಿ ಯಾರಾದರೂ ಕುಳಿತರೆ ಕೆಲವರು ಬಂದು  ಗಾಳಿ ಹಾಕುತ್ತಾರೆ. ಇದೊಂದು ಬಗೆಯ ವಿಶಿಷ್ಟ ಸೇವೆ. ಶಬರಿ ಮಲೆ ಯಾತ್ರೆ ಎಂದರೆ ಹೀಗೆ ಅಲ್ಲಿ ಎಲ್ಲವೂ ಭಗವಂತನ ಸೇವೆಯಾಗುತ್ತದೆ. ಭಗವಂತನೆಂದರೆ ಭಕ್ತರ ದಾಸ. ದಾಸರ ದಾಸ ಭಗವಂತ ಎಂಬ ಮಾತು ಇದೆ. ಅದಕ್ಕೆ ಪ್ರತೀಕ ಎಂಬಂತೆ ಇಲ್ಲಿ ಭಕ್ತರ ಸೇವೆ ಮಾಡುವುದನ್ನು ಕಾಣಬಹುದು. ಹತ್ತುವ ಇಳಿಯುವ ಭಕ್ತರ ಸೇವೆ ಮಾಡುವುದು ಕೂಡ ಅಯ್ಯಪ್ಪ ಸ್ವಾಮಿಯ ಸೇವೆಯಾಗುತ್ತದೆ. ಅದರ ಮೂಲಕ ಭಗವಂತನ ಅನುಗ್ರಹ ನಿರೀಕ್ಷೆ ಇರುತ್ತದೆ. 

ಒಂದೆರಡು ಕಡೆ ಕುಡಿಯುವ ನೀರಿನ ಜತೆಗೆ ಬಿಸ್ಕತ್ ಇಟ್ಟಿದ್ದರು. ನೀವು ಎಷ್ಟಾದರೂ ಬಿಸ್ಕತ್ತ ತೆಗೆದುಕೊಂಡು ನೀರು ಕುಡಿಯಬಹುದು. ಇದು ಸಂಪೂರ್ಣ ಉಚಿತ, ಇದೊಂದು ಬಗೆ ಭಕ್ತರ ಸೇವಯ ಮುಖೇನ ದೇವರ ಸೇವೆ. ಬಿಸ್ಕ್ತತ್ತು ಹಾಕಿಟ್ಟ ಪಾತ್ರೆ ಘಳಿಗೆಯಲ್ಲಿ ಖಾಲಿಯಾಗುತ್ತಿತ್ತು ಹಾಗೆ ಅದಕ್ಕೆ ಬಿಸ್ಕತ್ತು ಸುರಿಯುತ್ತಿದ್ದರು. ನಿಜಕ್ಕೂ ಇದೊಂದು ಆಶ್ಚರ್ಯವನ್ನು ಉಂಟು ಮಾಡಿತ್ತು. ಹೀಗೆ ಶಬರಿ ಮಲೆ ಯಾತ್ರೆ ಎಂಬುದು ಹಲವು ಮರೆಯದ ಅನುಭವಗಳನ್ನು ಕಟ್ಟಿಕೊಡುತ್ತಿತ್ತು. ಒಂದು ಸಲ ಹೋಗಿ ಬರೋಣವೆಂದಿದ್ದ ನನ್ನಾಕೆ ಈಗ ಪುನಃ ಯಾವಾಗ ಹೋಗೊಣ ಎಂದು ಕೇಳುತ್ತಾಳೆ. ಶಬರಿಮಲೆ ಯಾತ್ರೆ ಎಂಬುದು ಬದುಕಿನಲ್ಲಿ  ಅನುಭವಿಸಿ ಪಡೆಯಲೇಬೇಕಾದ ಒಂದು ಅನುಭವ. 

ಯಾತ್ರೆಯುದ್ದಕ್ಕೂ ಅದು ಕೇವಲ ಅಯ್ಯಪ್ಪನ ದರ್ಶನದ ಏಕೈಕ ಉದ್ದೇಶವಾಗಿ ಕಾಣುತ್ತದೆ. ಪಂಪದಿಂದ ಮೇಲೆ ಸನ್ನಿಧಾನದ ವರೆಗೂ ಹಲವು ಬಗೆಯ ಭಕ್ತರನ್ನು ಕಾಣ ಬಹುದು. ಅಂಗ ವಿಕಲರೂ ಅಶಕ್ತರು ಒಂದೆಡೆಯಾದರೆ ಪುಟ್ಟ ಮಕ್ಕಳನ್ನೂ ತಮ್ಮ ಇರುಮುಡಿಯೊಂದಿಗೆ ಅವರ ಇರುಮುಡಿಯನ್ನು ಹೊತ್ತುಕೊಳ್ಳುವುದು ಮಾತ್ರವಲ್ಲ ಮಗುವನ್ನೂ ಹೆಗಲಲ್ಲಿ ಹೊತ್ತುಕೊಂಡು ತಮ್ಮ ಮಗುವಿಗೆ ಅಯ್ಯಪ್ಪನ ದರ್ಶನ ಮಾಡಿಸುವ ಉದ್ದೇಶದಲ್ಲಿ ಅವರು ಮಲೆಯ ಒಂದೊಂದೆ ಹೆಜ್ಜೆಗಳನ್ನು ಇಡುವುದನ್ನು ಕಾಣುವಾಗ ಇದು ಕೇವಲ ದೇವರ ದರ್ಶನವಲ್ಲ, ಬದುಕಿನ ಸರ್ವಾಂಗ ದರ್ಶನದಂತೆ ಭಾಸವಾಗುತ್ತದೆ. ಪಂಪೆಯ ನದೀ ತೀರದಲ್ಲಿ ಹಲವಾರು ಜನ ಸಿಕ್ಕ ಸಿಕ್ಕಲ್ಲಿ ನಿದ್ರಿಸುತ್ತಿದ್ದರು. ಕಪ್ಪು ಅಥವಾ ಕಾವಿಲುಂಗಿ ಧರಿಸಿ ಯಾವ ಆಡಂಬರವೂ ಇಲ್ಲದೆ ಎಲ್ಲೆಂದರಲ್ಲಿ ಬಿದ್ದಿರುತ್ತಿದ್ದರು. ತೀರ ಬಡವರು ಎಂದು ತಿಳೀದರೆ ತಪ್ಪಾದೀತು. ಯಾಕೆಂದರೆ ಅದರಲ್ಲಿ ಕೋಟ್ಯಾಧಿಪತಿ ಶ್ರೀಮಂತನೂ ಇರಬಹುದು. ತೀರ ಬಡವನೂ ಇರಬಹುದು. ಧನಿಕ ಶ್ರೀಮಂತ ಎಂಬ ಭೇದವಿಲ್ಲ.ಅಲ್ಲಿ ನಿದ್ರೆ ಹಸಿವಿಗೆ ಪ್ರಾಧಾನ್ಯತೆ ಇಲ್ಲ. ಕೇವಲ ಒಂದೇ ಗುರಿ ಅದು ಅಯ್ಯಪ್ಪ ದರ್ಶನ. ಹಾಗಾಗಿ ಶಬರಿ ಮಲೆ ಹೋಗುವಾಗ ನಿಮಗೆ ಅಲ್ಲಿ ಹಲವು ಅಸೌಕರ್ಯಗಳು ಕಾಣಬಹುದು. ಸ್ನಾನ ನಿದ್ರೆ ಆಹಾರಕ್ಕೆ ಸರಿಯಾದ ವ್ಯವಸ್ಥೆ ಇಲ್ಲದಂತೆ ಇರಬಹುದು. ಬರಿಗಾಲಲ್ಲಿ ನಡೆಯಬಹುದು.  ಎಂತಹ ಶ್ರೀಮಂತನೂ ಮನೆಯಲ್ಲಿ ಹವಾನಿಯಂತ್ರಿತ ಕೊಠಡಿಯಲ್ಲಿ ಮಲಗಿದರೂ ಇಲ್ಲಿ ಬಂದು ಬೀದಿಯಲ್ಲಿ ಮಲಗಿಬಿಡುತ್ತಾನೆ. ಕಾರಣ ಅಲ್ಲಿರುವ ಬಯಕೆ ಒಂದೇ ಅಯ್ಯಪ್ಪ ದರ್ಶನ. ಬೇರೆ ಯಾವ ಕ್ಷೇತ್ರದಲ್ಲೂ ಇದನ್ನು ಕಾಣುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಮನಸ್ಸಿನ ಭಾವ ಒಂದೇ ಎಲ್ಲವೂ ನೀನೆ. ಒಂ ತತ್ವಮಸಿ.  ಸಾವಿರ ಗ್ರಂಥವನ್ನು ಅಧ್ಯಯನ ಮಾಡಿದರೂ ಸಿಗದ ಜ್ಞಾನ ಅದರ ತತ್ವ ಕೇವಲ ಒಂದು ಶಬರಿಮಲೆ ಯಾತ್ರೆಯಲ್ಲಿ ಸಿದ್ದಿಸಿಬಿಡುತ್ತದೆ. ಅಧ್ಯಾತ್ಮಿಕ ತತ್ವ ಎಂಬುದು ಸನಾತನ ಧರ್ಮದ ತತ್ವ. ಮನುಷ್ಯನ ಬದುಕಿನ ಗುರಿ ಏನು ಎಂಬುದನ್ನು ತೋರಿಸಿಕೊಡುತ್ತದೆ. ನಮ್ಮ ವಶವಿಲ್ಲದ ಅದೊಂದು ಶಕ್ತಿ ನಮ್ಮನ್ನು ನಿಯಂತ್ರಿಸುತ್ತದೆ. ಈ ಜ್ಞಾನವನ್ನು ಹೆಜ್ಜೆ ಹೆಜ್ಜೆಗೂ ಒದಗಿಸುತ್ತದೆ. ಹಿಂದೂ ಧರ್ಮ ಸನಾತನ ಧರ್ಮ ಎಂದು ಹೀಗಳೆಯುವ ಬುದ್ಧಿಜೀವಿಗಳಿರಬಹುದು. ಒಂದು ಬಾರಿ ಮಾಲೆ ಧರಿಸಿ ವೃತ ಹಿಡಿದು ಯಾತ್ರೆ ಮಾಡಿ ಅಯ್ಯಪ್ಪ ದರ್ಶನ ಮಾಡಬೇಕು. ಆಗ ಈ ತತ್ವದ ಅರಿವಾಗುತ್ತದೆ.