Saturday, April 18, 2026

ತತ್ವಮಸಿ ಸ್ವಾಮಿಯೇ ಶರಣಂ ಅಯ್ಯಪ್ಪ

ತತ್ವಮಸಿ ಎಂಬುದು  ಉಪನಿಷತ್ ನಲ್ಲಿ ಬರುವ ವಾಕ್ಯ.  ಇದು  ಭಗವದ್ಗೀತೆಯಲ್ಲಿಯೂ  ಹೇಳಿರುವ ಒಂದು ಮಾತು. ಭಗವಂತ ಸ್ವರೂಪವನ್ನು ಎಲ್ಲವೂ ನೀನೆ ಎಂದು ತಿಳಿಯುವುದೇ ತತ್ವಮಸಿ. ಶಬರಿಮಲೆ ದರ್ಶನ ಮಾಡಿದರೆ ಅಲ್ಲಿ ಸನ್ನಿಧಾನದ ತುತ್ತ ತುದಿಯಲ್ಲಿ ಬರೆದಿರುವುದನ್ನು ಕಾಣಬಹುದು. ಅಲ್ಲಿಗೆ ಯಾತ್ರಾರ್ಥಿಗಳಾಗಿ ಭಕ್ತಿ ವಿಶ್ವಾಸದಿಂದ ಹೋದವರಿಗೆ ಈ ತತ್ವ ಮಸಿಯ ತಾತ್ಪರ್ಯ ಎಷ್ಟು ಅರ್ಥವಾಗುತ್ತದೋ ಗೊತ್ತಿಲ್ಲ, ಆದರೆ ಅವರು ನಡೆದು ಕೊಂಡು ಬಂದ ದಾರಿ, ಇಟ್ಟ ಹೆಜ್ಜೆ ಅದರ ಹಿಂದಿರುವ ವಿಶ್ವಾಸ ಈ ತತ್ವಮಸಿಯನ್ನೇ ಹೇಳುತ್ತದೆ. ಭಗವಂತ ಎಲ್ಲವೂ ನೀನೆ. ನೀನಲ್ಲದೆ ಬೇರೆ ಏನೂ ಇಲ್ಲ.  ಒಂದೆರಡು ಅಕ್ಷರಗಳ ಎಂತಹ ಭಾವನಾತ್ಮಕ ವಾಕ್ಯ?  ನಾನು ಮೊನ್ನೆ ಶಬರಿ ಮಲೆಗೆ ಹೋಗಿ ಇರುಮುಡಿಯ ಮರೆಯಲ್ಲಿ ನೋಡಿದೆ ಅದೇ ತತ್ವ ಮಸಿ. ಅದುವರೆಗೆ ಬಂದ ಹಾದಿಯ ಆಯಾಸ ಉದ್ದೇಶ ಎಲ್ಲವೂ ಫಲಪ್ರದವಾಗುವುದು ಯಾಕೆ ಎಂಬುದು ಈ ಒಂದು ಶಬ್ದದಿಂದ ಅರ್ಥವಾಗಿಬಿಡುತ್ತದೆ. ನನ್ನ ಆತ್ಮವೇ ನೀನು ಅಂದರೆ ಭಗವಂತ, ಬ್ರಹ್ಮ ಆಗಿರುವೆ ಎಂಬುದು ಸಾರಾಂಶ. ಇಲ್ಲಿ ಸರ್ವಸ್ವ ಎಂದರೆ ತುಂಬ ಸರಳ.


ಕೆಲವೆಲ್ಲ ತತ್ವಗಳು ನಮಗೆ ಅರ್ಥವಾಗುವಷ್ಟು ಜ್ಞಾನಿಗಳಾಗಿರುವುದಿಲ್ಲ. ಆದರೆ ನಮ್ಮ ಕೃತಿ ಅದೇ ಆಗಿರುತ್ತದೆ. ಹಲವು ಸಲ ಹರಿಯುವ ನದಿಗೆ  ತಾನು ಎಲ್ಲಿಗೆ ಸಂಚರಿಸುತ್ತೇನೆ, ನನ್ನ ಗಮನ ಯಾವುದು? ಎಂದು ತಿಳಿದಿರುತ್ತದೋ ಇಲ್ಲವೋ, ಆದರೂ ಅದು ಸಮುದ್ರದ ಕಡೆಗೆ ಹರಿಯುವಂತೆ, ನಮ್ಮ   ಪಯಣವೂ ನಮಗೆ ತಿಳಿಯದೆ  ಒಂದು ಗುರಿಯತ್ತ ಸರಿಯುತ್ತಲೇ ಇರುತ್ತದೆ. ನಮ್ಮ ಸನಾತನ ಧರ್ಮದ ತಳಹದಿಯೇ ಇದು.  ಹುಟ್ಟಿದ ಕೂಡಲೇ ನನ್ನ ಉಸಿರು ಅಂತ ಉಸಿರಾಡಿ, ನನ್ನ ಹಸಿವು..ಎಂದು ಅತ್ತು ಕರೆದಾಗ ಎದೆ ಹಾಲು ಕೊಟ್ಟ ಅಮ್ಮನನ್ನು ನನ್ನ ಅಮ್ಮ ಎಂದು ಒಪ್ಪಿಕೊಳ್ಳುವ ವಿಶ್ವಾಸ ಬೆಳೆದು ಬರುತ್ತಾ ಈ ನಾನು ನನ್ನದು ಎಂಬುದರ ವಿಸ್ತಾರ ದೊಡ್ಡದಾಗುತ್ತ ಹೋಗುತ್ತದೆ. ನನ್ನ ಅಮ್ಮ ನನ್ನ ಅಪ್ಪ, ನನ್ನ ಬಳಗ, ನನ್ನ ಮನೆ ನನ್ನ ಊರು ನನ್ನ ಸಂಪತ್ತು ಧನ ಕನಕ...ಎಲ್ಲವೂ ನನ್ನದು ಎಂಬ ವ್ಯಾಪ್ತಿಯಲ್ಲಿ ಬದುಕು ಹುದುಗಿ ಹೋಗುತ್ತದೆ. ಈ ನಾನು ನನ್ನದು ಎಂಬ ಭೂಮಿಯ ಮೇಲಿನ ಸಂಬಂಧದ ಪರಿಧಿ ಅರಿವಾಗುವಾಗ ಈ ತತ್ವ ಮಸಿಯ ಜ್ಞಾನ ಅರಿವಾಗುತ್ತದೆ. ಆನಂತರ ನಾನು ನನ್ನದು ಎಂಬುದು ಇರುವುದಿಲ್ಲ. ಶಬರಿಮಲೆಯ ಯಾತ್ರೆ ಈ ಜ್ಞಾನವನ್ನು ಕೃತಿಯ ಮೂಲಕ ಬೋಧಿಸುತ್ತದೆ. ಬಹುಶ ಜಗತ್ತಿನಲ್ಲಿ ಯಾವ ಧರ್ಮವೂ ಬೋಧಿಸಲಾಗದ ತತ್ವವನ್ನು ಇಷ್ಟು ಸುಲಭವಾಗಿ ಸರಳವಾಗಿ ತೀರಾ ಪಾಮರ ಅಜ್ಞಾನಿಗೂ ತಿಳಿಸುವಂತೆ  ಶಬರಿಮಲೆ ಯಾತರೆ ಮಾಡಿಬಿಡುತ್ತದೆ. ಅಲ್ಲಿ ದೇಹದ ಕಾಮನೆ ಇರುವುದಿಲ್ಲ. ಹಸಿವು ನೀರಡಿಕೆ ಮುಖ್ಯವಾಗುವುದಿಲ್ಲ. ನಿದ್ರೆಯಲ್ಲೂ ಎದೆ ಬಡಿದುಕೊಳ್ಳುತ್ತದೆ ಶರಣಂ ಅಯ್ಯಪ್ಪ. ಅಯ್ಯ ಎಂದರೆ, ಒಡೆಯ. ಅಪ್ಪ ಎಂದರೂ ಅದುವೇ ಎಲ್ಲವೂ ನೀನಾಗುವ ಈ ಅಯ್ಯಪ್ಪ ಶಬ್ದದ ಕಾಂತಿಯ ತುಡಿತ ಇರುತ್ತದಲ್ಲ ಆ ಧ್ವನಿ ಕೇವಲ ಬಾಯಿಯಿಂದ ಉದ್ಗರಿಸಲ್ಪಡುವುದಿಲ್ಲ. ಅದು ಹೃದಯದಿಂದ ಹೊರಬರುತ್ತದೆ. ಎಷ್ಟು ಸಲ ಹೇಳಿದರೂ...ಕಡಿಮೆಯಾಯಿತೆ ಎಂಬ ಭಾವ, ಒಂದು ಸಲ ಹೇಳುವ ನಿರ್ಧಾರವಿದ್ದರೆ ಅಲ್ಲಿ ಹಲವು ಬಾರಿಯ ಉದ್ಗಾರವಿರುತ್ತದೆ. ಶರಣಂ ಅಯ್ಯಪ್ಪ. ಇದನ್ನು ತಿಳಿಯಬೇಕಾದರೆ ಒಂದು ಸಲ ಮಾಲೆ ಹಾಕಿ ಇರುಮುಡಿ ಹೊತ್ತು ವೃತನಿಷ್ಠರಾಗಿ ಮಲೆ ಏರಿದರೆ ಸಾಕು ಬುದ್ದನಿಗೆ ಜ್ಞಾನೋದಯವಾದಂತೆ ಬದುಕಿನ ಜ್ಞಾನ ಅರಿವಾಗಿ ಜ್ಞಾನೋದಯವಾಗುತ್ತದೆ.  


ದೊಡ್ಡ ಗ್ರಂಥಗಳನ್ನು ವೇದ ಉಪನಿಷತ್ ಗಳನ್ನು ಓದಿಯೂ ಗಳಿಸಲಾಗದ ಜ್ಞಾನವನ್ನು ಕೃತಿಯಿಂದ ನಮ್ಮ ಕರ್ಮದಿಂದ ತಿಳಿಯ ಪಡಿಸುವುದೆ ಶಬರಿಮಲೆಯ ಯಾತ್ರೆಯ ಉದ್ದೇಶ. ಯಾವುದೇ ಜ್ಞಾನ ಇಲ್ಲದಿದ್ದರೂ ಇಲ್ಲಿ ಒದಗಿಬರುವ ಪಾರಮಾರ್ಥಿಕ ಅರಿವು ತುಂಬ ಸರಳವಾದರೂ ಬದುಕಿನ ಮರ್ಮವನ್ನು ಹೇಳಿಬಿಡುತ್ತದೆ. 

ಇಪ್ಪತ್ತು ವರುಷಗಳ ಹಿಂದೆ ಶಬರಿ ಮಲೆಗೆ ಹೋಗಿದ್ದೆ. ಆನಂತರ ಹಲವು ಸಲ ಹೋಗಬೇಕು ಎಂದುಕೊಂಡರು ಯಾಕೋ ಒದಗಿಬರುವುದಿಲ್ಲ. ಶಬರಿ ಮಲೆಗೆ ಹೋಗುವುದೆಂದರೆ ಹಾಗೆ ಅಲ್ಲಿ ನಿರ್ಧಾರ ಮಾತ್ರ ನಿಮ್ಮದಾಗಬಹುದು, ಆದರೆ ಆನಂತರ ಅದು ದೈವೇಚ್ಛೆಯಾಗಿಬಿಡುತ್ತದೆ. ಆತ ಕರೆದರೆ ಮಾತ್ರ ನಿಮಗೆ ಎಲ್ಲವೂ ಒದಗಿಬರುತ್ತದೆ. ಏನು ವಿಘ್ನ ಬಂದರು ನೀವು ಶಬರಿಮಲೆ ಮೆಟ್ಟಲು ಏರಬಹುದು. ಇಲ್ಲವಾದರೆ ಎಷ್ಟು ಪ್ರಯತ್ನಿಸಿದರೂ ಅದು ಸಾಧ್ಯವಾಗುವುದಿಲ್ಲ. ಶ್ರೀಮಂತಿಗೆ ದೇಹಬಲ ಧನಬಲ ಯಾವುದೂ ಮುಖ್ಯವಾಗುವುದಿಲ್ಲ. ನನಗೂ ಅದೇ ಬಗೆಯ ಅನುಭವ. ಹಲವರಲ್ಲಿ ಕೇಳಿದರೂ ಇದೇ ಅನುಭವ. 

ನನ ಪತ್ನಿ ವಿಪರೀತ ಕಾಲು ನೋವಿನಲ್ಲಿ


ಕಣ್ಣೀರು ಹಾಕುವಾಗ, ಹಲವು ಚಿಕಿತ್ಸೆಗಳನ್ನು ಮಾಡಿದೆ. ಚಿಕಿತ್ಸೆ ಮಾಡುವುದು ನಮ್ಮ ಕರ್ಮ. ಆದರೆ ಅದು ಅಂತಿಮ ಪರಿಹಾರವಲ್ಲ. ಅಲ್ಲಿ ದೈವಾನುಗ್ರವೂ ಇರಬೇಕಾಗುತ್ತದೆ. ಯಾವುದೂ ಇಲ್ಲ ಎಂದನಿಸುವಾಗ ನಾನು ಹೆಂಡತಿಯಲ್ಲಿ ಹೇಳಿದೆ, ಕಾಲು ನೋವು ಗುಣವಾದರೆ ನಿನ್ನನ್ನು ಕರೆದುಕೊಂಡು ಶಬರಿಮಲೆಗೆ ಹೋಗುತ್ತೇನೆ. ಆ ಪ್ರಚೋದನೆ ಎಲ್ಲಿಂದ ಬಂತೋ ಹೇಗೆ ಬಂತೋ ಗೊತ್ತಿಲ್ಲ. ಅಂತು ಮನದಾಳದಿಂದ ಹೇಳೀದೆ. ಆ ಸಂಕಲ್ಪ ಎಷ್ಟು ನೆರವೇರಿಸಬಲ್ಲೇ ಎಂಬುದೇ ನನಗೆ ತಿಳಿದಿಲ್ಲ. ನಾನೇನು ತಿಳಿದರೂ ಅದು ನನ್ನದಲ್ಲ. ಆ ಶಕ್ತಿ ಏನು ಹೇಳಿಸುತ್ತದೋ ಏನು ಮಾಡಿಸುತ್ತದೋ ಅದೇ ಅಂತಿಮ. ಕೊನೆಗೂ ನನ್ನ ಸಂಕಲ್ಪ ಭಗವಂತ ಇಡೇರಿಸಿಕೊಂಡು ಬಿಟ್ಟ.ಅಲ್ಲಿಗೆ ನನ್ನಲ್ಲಿ ಧನ್ಯತೆ ಇದೆ. 

ಮೊನ್ನೆ ವಿಷು ಸಂಕ್ರಮಣಕ್ಕೆ ಹೊರಡುವುದಕ್ಕೆ ತಿಂಗಳ ಮೊದಲೇ ನಿರ್ಧರಿಸಿ ಬೆಂಗಳೂರಿನ ಜಾಲಹಳ್ಳಿಯ ಅಯ್ಯಪ್ಪ ಟೂರ್ಸ್ ಎಂಡ್ ಟ್ರಾವೆಲ್ಸ್ ನ್ನು ಸಂಪರ್ಕಿಸಿದೆ. ಮಿತ್ರರಾರ ನಿಡುವಜೆ ಗೋಪಾಲಕೃಷ್ಣ ಭಟ್ ವಿವರವನ್ನು ನೀಡಿ ಸಹಕರಿಸಿದ್ದರು. ಮುಂಗಡ ಕೊಟ್ಟು ಆಸನವನ್ನು ಕಾದಿರಿಸಿದರೂ ಹೋಗುವ ತೀರ್ಮಾನ ನಮ್ಮದಲ್ಲ. ಅದು ಭಗವಂತನದ್ದು. ಅಲ್ಲಿಂದಲೇ ತತ್ವಮಸಿಯ ತತ್ವ ಮನದಟ್ಟಾಗಿಬಿಡುತ್ತದೆ.

ಮೊನ್ನೆ ಒಂದು ವೋಲ್ಬೋ ಬಸ್ ನಲ್ಲಿ
ನಲ್ವತ್ತಕ್ಕೂ ಅಧಿಕ ಜನ ಮಾಲೆ ಧರಿಸಿ ಇರುಮುಡಿ ಹೊತ್ತು ಬಂದಿದ್ದರು. ಹೆಚ್ಚಿನವರೆಲ್ಲರೂ ವಯೋ ವೃದ್ದರು. ಅದರಲ್ಲು ಮಹಿಳೆಯರೆ ಅಧಿಕ. ಒಬ್ಬೊಬ್ಬರದು ಒಂದೊಂದು ಕಥೆ. ಅಷ್ಟೂ ಜನರಿಗೂ ಒಳ್ಳೆಯ ವ್ಯವಸ್ಥೆಯನ್ನು ಟ್ರಾವೆಲ್ಸ್ ಸಂಸ್ಥೆ ಮಾಡಿತ್ತು. ಇರುಮುಡಿ ಕಟ್ಟುವಲ್ಲಿಂದ ತೊಡಗಿ ಯಾತ್ರ ನಡುವೆ ಊಟ ಆಹಾರ ಎಲ್ಲವೂ ಉತ್ತಮವಾಗಿತ್ತು. ಈ ಯಾತ್ರೆಯಲ್ಲಿ ಬಹಳ ಅನುಭವ ಇದ್ದ ಸಂಸ್ಥೆ ಇದು. ಎಲ್ಲಿ ಇಳಿಯಬೇಕು? ಎಲ್ಲಿ ಉಳಿಯಬೇಕು?  ಇದೆಲ್ಲದಕ್ಕೂ ಒಂದು ಖಚಿತವಾದ ಯೋಜನೆ ಇತ್ತು. ಸಾವಿರದ ಐನೂರು ಕಿಲೋ ಮೀಟರ್ ಮಾತ್ರವಲ್ಲ ಮೂರು ದಿನದ ದೀರ್ಘವಾದ ಯಾತ್ರೆ. ನಾವು ಮನೆಯ ಒಂದಿಬ್ಬರೂ ಹೋದರೂ ಯಾತ್ರೆಯಲ್ಲಿಅದು ಇದು ಅಂತ ಅಸೌಕರ್ಯ ಅಡಚಣೆಗಳು ಸಾಮಾನ್ಯ. ಇಷ್ಟು ಜನರನ್ನು ಕರೆದುಕೊಂಡು ಸಮರ್ಥರೀತಿಯ ವ್ಯವಸ್ಥೆ ಮಾಡುವುದು ಸುಲಭದ ವಿಷಯವಲ್ಲ. ಆದರೂ ಕೆಲವೆಲ್ಲ ಸಣ್ಣ ಪುಟ್ಟ ತೊಂದರೆಗಳೂ ಇದ್ದರೂ ಅದು ತೀರ ಕಡೆಗಣಿಸಲ್ಪಡುವ ವಿಚಾರಗಳು. ಒಳ್ಳೆಯ ಯಾತ್ರೆ ಒಳ್ಳೆಯ ದರ್ಶನ ಮಾಡಿದ ತೃಪ್ತಿಕೊನೆಗೂ ಲಭ್ಯವಾಗಿದೆ ಎಂಬುದು ಮುಖ್ಯ. 

ಇಲ್ಲಿಂದ ಹೊರಟು ಗುರುವಾಯೂರು, ಆನಂತರ ಚೋಟಾನಿಕ್ಕರ ದೇವಿ ಕ್ಷೇತ್ರ ನಂತರ ಏಟ್ಟುಮಾನ್ನೂರು ಶಿವ ಕ್ಷೇತ್ರ ಅಲ್ಲಿಂದ ನಿಲಕ್ಕಲ್ ಪಂಬ ಶಬರಿ ಮಲ. ಅಲ್ಲಿಂದ ಹಿಂತಿರುಗಿ, ತಮಿಳು ನಾಡಿನ ತ್ರಿಪುರ ಕುಂಡ್ರಮ್ ಸುಬ್ರಹ್ಮಣ್ಯ ಕ್ಷೇತ್ರ, ಮಧುರೆ ಮೀನಾಕ್ಷಿ ದೇವಾಲಯ, ಕೊನೆಗೆ ಪಳನಿ ದರ್ಶನ ಮುಗಿಸಿ ಬೆಂಗಳೂರಿಗೆ.ಇಷ್ಟು ದೀರ್ಘಯಾತ್ರೆ ಮೂರು ದಿನದಲ್ಲಿ ಮುಗಿಸಿದ್ದು ದೇಹಾಯಸಕ್ಕೆ ಬಹಳಷ್ಟು ಕಾರಣವಾಯಿತು. ಒಂದು ಕಡೆಯಲ್ಲಿ ಕೆಲವು ಘಂಟೆಯ ವಿಶ್ರಾಂತಿ ಬಿಟ್ಟರೆ ಮತ್ತೆಲ್ಲವು ಪ್ರಯಾಣದಲ್ಲೇ  ಕಳೆದು ಹೋಯಿತು. ಎಲ್ಲ ಕಡೆಯಲ್ಲೂ ಊಟ ಉಪಚಾರ ಚೆನ್ನಾಗಿ ವ್ಯವಸ್ಥೆ ಮಾಡಿದ್ದರು. ಮುಖ್ಯವಾಗಿ ಅಡುಗೆ ಅನಿಲ ಸಮಸ್ಯೆಯಿಂದ ಹಲವಾರು ಹೋಟೇಲ್ ಗಳು ಮುಚ್ಚಿದ್ದವು. ಹಾಗಿ ಬಹಳ ಪರಿಶ್ರಮ ಪಟ್ಟು ಅನ್ನಾಹಾರದ ವ್ಯವಸ್ಥೆ ಮಾಡಿದ್ದರು. ಅದು ಬಹಳ ಉತ್ತಮವಾಗಿತ್ತು. 

ಎಟ್ಟುಮಾನ್ನೂರು ಮಹಾದೇವ ಕ್ಷೇತ್ರದ ಪ್ರಶಾಂತತೆ ಬಹಳ ಇಷ್ಟವಾಯಿತು.  ಸಾಕಷ್ಟು ಜನಸಂಖ್ಯೆ ಇದ್ದರೂ ಸಾಯಂಕಾಲದ ಹೊತ್ತಿನ ಇಲ್ಲಿನ ವಾತಾವರಣ ಅದ್ಭುತವಾಗಿತ್ತು. ನಮ್ಮ ಕೇರಳ ಶೈಲಿಯಾ ಆರಾಧನ ಕ್ರಮದಂತೆ ಬಾಗಿಲು ಮುಚ್ಚಿ ಮಂಗಳಾರತಿಯಾಗುವಾಗ ಬಾಗಿಲು ತೆರೆದು ದೇವರ ದರ್ಶನವಾಗುವಾಗ ಒಂದು ಅದ್ಭುತ ಭಕ್ತಿಯ ಪ್ರಚೋದನೆಯಾಗುತ್ತದೆ. 

ಈ ಪ್ರಯಾಣದ ಮುಖ್ಯ ಉದ್ದೇಶವೆಂದರೆ ಶಬರಿಮಲೆ ಅರೋಹಣ. ತಲೆಯಲ್ಲಿ ಇರುಮುಡಿ ಕಟ್ಟಿಕೊಂಡು ಮುಂಜಾನೆ ಐದು ಘಂಟೆಗೆ ನಾನು ನನ್ನ ಪತ್ನಿ ಜತೆಯಲ್ಲಿ ನನ್ನ ಎರಡನೆ ಮಗ ಎಲ್ಲರೊಂದಿಗೆ ಮಲೆ ಹತ್ತುವುದಕ್ಕೆ ಆರಂಭಿಸಿದೆವು.  ಕೆಲವುಕಡೆ ಮೆಟ್ಟಲು ಕೆಲವು ಕಡೆ ಇಳಿಜಾರು ರಸ್ತೆ ತಲೆ ಎತ್ತಿ ನೋಡಲಾಗದಷ್ಟು ಎತ್ತರದ ಬೆಟ್ಟ  ಒಂದೊಂದೆ ಹೆಜ್ಜೆಇಡುತ್ತಾ ಆಗಾಗ ಏದುಸಿರಿನೊಂದಿಗೆ  ಶರಣಂ ಅಯ್ಯಪ್ಪ ಎಂದು ಶರಣು ಕರೆಯುತ್ತಾ ಹೋಗುತ್ತಿದ್ದರೆ ಆಯಾಸ ಎನಿಸಿದರೂ ಅದರಲ್ಲೊಂದು ಸುಖ. ಏಳು ಘಂಟೆಯಷ್ಟು ಹೊತ್ತಿಗೆ ಮೇಲೆ ತಲುಪಿ ಇರುಮುಡಿ ಭಕ್ತರಿಗೆ ಮೀಸಲಾದ ಸರದಿಯಲ್ಲಿ ಸುಮಾರು ಒಂದುವರೆ ತಾಸು ನಿಲ್ಲಬೇಕಾಯಿತು. ಎರಡು ದಿನ ರಾತ್ರಿ ಸರಿಯಾಗಿ ನಿದ್ರೆ ಇಲ್ಲದೆ ಕಳೆದಿರುವುದರಿಂದಲೂ ದೇಹ ಸುಸ್ತಾಗಿ ಈಗ ಈ ಬೆಟ್ಟ ಹತ್ತಿ ಬಹಳ ಆಯಾಸ ನಿದ್ರೆ ಬಂದರೂ ಅಯ್ಯಪ್ಪಸ್ವಾಮಿಯ ದರ್ಶನಕ್ಕೆ ಹಾತೊರೆಯುತ್ತಿತ್ತು. ಸರದಿಯಂತೆ ಬಂದು ನಾವು ಮೂರು ಜನ ಹದಿನೆಂಟು ಮೆಟ್ಟಲ ಬುಡದಲ್ಲಿ ನಿಂತೆವು. ನನ್ನಾಕೆಗಂತೂ ಕುತೂಹಲದ ಭಾವನಾತ್ಮಕ ಘಳಿಗೆ,  ಆಕೆಯ ಮುಖದಲ್ಲಿದ್ದ ಉದ್ವೇಗ ಎಲ್ಲವನ್ನೂ ಹೇಗೆ ನಿಗ್ರಹಿಸಬೇಕೋ ಎಂದು ತಿಳಿಯದಂತಾಗಿದ್ದಳು. ಆಕೆಯ ಮುಖದಲ್ಲಿ ಆ ಉದ್ವೇಗವನ್ನು ಕಂಡ ಭಾವನೆ ನನಗೆ. ಕಿಕ್ಕಿರಿದ ಜನ ಜಂಗುಳಿ. ಎಲ್ಲರಿಗೂ ಅವಸರ ಉದ್ವೇಗ. ನಾವು ಹೆಜ್ಜೆ ಇಡುವ ಆ ಮೆಟ್ಟಿಲಿಗೆ ನಮಸ್ಕರಿಸುವುದಕ್ಕೂ ಸಾಧ್ಯವಾಗದಷ್ಟು ಜನ ಜಂಗುಳಿ. ಆದರೂ ಪ್ರಯತ್ನ ಮಾಡಿ , ಮೆಟ್ಟಲನ್ನು ಕಣ್ಣಿಗೊತ್ತಿ ಒಂದೋಂದೇ ಮೆಟ್ಟಲನ್ನು ಹತ್ತುವುದಕ್ಕೆ ತೊಡಗಿದೆವು.  ನಾನು ಬೇಗನೆ ಮೆಟ್ಟಲನ್ನೇರಿ ಮೊದಲು ಮೇಲಕ್ಕೆ ಹೋಗಿ ಹಿಂದಿರುಗಿ ನೋಡಿದೆ. ಕೆಳಗಿನಿಂದ ನನ್ನಾಕೆ ಹಿಂದೆ ನನ್ನ ಮಗ ಏರಿಕೊಂಡು ಬರುವುದನ್ನು ನೋಡಿ ಹೃದಯ ಭಾರವಾಯಿತು. ಇಬ್ಬರನ್ನು ಕರೆ ತಂದ ನನಗೆ ಒಂದು ಧನ್ಯತಾ ಭಾವ. ನನ್ನಾಕೆಯಂತೂ ಏದುಸಿರು ಉದ್ವೇಗ ಭರಿತವಾಗಿ ಒಂದು ಕೈಯಲ್ಲಿ ಇರುಮುಡಿಯನ್ನು ಹಿಡಿದು ಇನ್ನೊಂದು ಕೈಯಲ್ಲಿ ಮೆಟ್ಟಲನ್ನು ಹಿಡಿದೆ ಏರಿ ಹತ್ತಿರ ಹತ್ತಿರ ಬರುತ್ತಿದ್ದರೆ ಅದನ್ನು ನೋಡುವಾಗ ಅದೊಂದು ಭಾವನೆ ವರ್ಣಿಸುವುದಕ್ಕೆ ಸಾಧ್ಯವಿಲ್ಲದಾಯಿತು. ಕೊನೆಯ ಮೆಟ್ಟಲು ಏರಿ ಹತ್ತಿರ ಬಂದು ನಿಂತಾಗ ಜಗತ್ತನ್ನೇ ಮೀರಿದ ಅನುಭವ.  ನಂತರ ದರ್ಶನದ ಸರದಿ...ಅದು ಒಂದಷ್ಟು ಹೊತ್ತು. ಇನ್ನೊಂದು ಉದ್ವೇಗದ ಆರಂಭ ಕೊನೆಗೂ ಆಕೆ ದರ್ಶನ ಮಾಡಿದಾಗ ಆಕೆಯ ಆನಂದ ಸಂತೃಪ್ತಿ ಕಾಣುವುದಕ್ಕೆ ಕಣ್ಣೆರಡು ಸಾಲದಾಯಿತು. ಆಕೆ ಅಯ್ಯಪ್ಪನ ದರ್ಶನ ಮಾಡುತ್ತಿದ್ದರೆ, ನನಗೆ ಅಯ್ಯಪ್ಪನ ಜತೆಗೆ ಈಕೆಯ ಮುಖವನ್ನೂ ನೋಡುವ ಒಂದು ಭಾಗ್ಯ ಅಂತ ತಿಳಿಯಬೇಕು. 

ಎಲ್ಲಾ ಯಾತ್ರೆಗಳಂತೆ ಇಲ್ಲಿ ಹೊಸ ಜನಗಳು ಪರಿಚಯ ಅನುಭವಗಳು ಇದ್ದವು. ಎಲ್ಲವನ್ನೂ ವಿವರಿಸುವುದು ಕಷ್ಟವಾದರೆ ಎರಡು ವಿಚಾರಗಳನ್ನು ಹೇಳುವ ಮನಸ್ಸಾಗುತ್ತದೆ.  ಒಂದಂತು ನನಗೆ ತುಂಬ ಮನಸ್ಸಿಗೆ ತಟ್ಟಿದ ಘಟನೆ. 

ನಮ್ಮ ಬಳಿಯಲ್ಲೇ ಒಬ್ಬರು ವೃದ್ದ ಮಹಿಳೆ ಕುಳಿತ್ತಿದ್ದರು. ಅಂಜಲಿ ಅಂತ ಹೆಸರು. ಮೂಲತಃ ತಮಿಳು ಭಾಷೆಯ ಮಹಿಳೆ.  ನೋಡಿದರೆ ಬಹಳ ಬಡತನದ ಮಹಿಳೆ ಅಂತ ಅನ್ನಿಸುತ್ತದೆ. ತುಂಬ ಒಳ್ಳೆಯ ಮನಸ್ಸಿನ ಹೆಣ್ಣು. ಜಾಲ ಹಳ್ಳಿ ಅಯ್ಯಪ್ಪ ದೇವಸ್ಥಾನದ ಬಳಿಯಲ್ಲೇ ಸಣ್ಣ ಇಡ್ಲಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುವ ವೃತ್ತಿ. ಅಣು ರೇಣು ತೃಣಕಾಷ್ಠ ಎಂಬಂತೆ ನರ ನರದಲ್ಲೂ ಅಯ್ಯಪ್ಪ ಎನ್ನುವ ಈಕೆ ಅಯ್ಯಪ್ಪನ ಪರಮ ಭಕ್ತೆ. ಎಲ್ಲರೂ ಸ್ವಾಮಿಯೇ ಶರಣಂ ಅಯ್ಯಪ್ಪ ಎಂದರೆ...ಈಕೆ ಓ ಸಾಮಿಯೇ ಶರಣಂ ಅಯ್ಯಪ್ಪ ಎನ್ನುವಾಗ ಆ ಮುಗ್ಧ ಕರೆಯ ಆಳ ಅಳಿಯುವುದಕ್ಕೆ ಸಾಧ್ಯವಾಗುವುದಿಲ್ಲ. ತುಂಬ ಕಷ್ಟದ ಬದುಕನ್ನು ನಡೆಸುವ ಮಹಿಳೆ ಅಂತ ನೋಡಿದ ತಕ್ಷಣ ಅರಿವಾಗುತ್ತದೆ. ಎಲ್ಲಕ್ಕಿಂತಲೂ ಇಷ್ಟವಾದ ಗುಣ ಎಂದರೆ, ಏನೆ ಬಂದರೂ ಅದನ್ನು ನಗುತ್ತಾ ಸ್ವೀಕರಿಸುವ ಈಕೆಯ ಮುಖಭಾವ  ಆ ಸಮಚಿತ್ತ ನಿಜಕ್ಕೂ ಆಶ್ಚರ್ಯವಾಗುತ್ತದೆ. ಸ್ಥಿತ ಪ್ರಜ್ಞತೆ ವಿದ್ಯೆಯಿಂದ ಶ್ರೀಮಂತಿಗೆಯಿಂದ ಬರುವುದಿಲ್ಲ. ಅದು ಬದುಕಿನ ಅನುಭವದಿಂದ ಬರುತ್ತದೆ. ಆ ಬಗೆಯ ಬದುಕನ್ನು ಸಾಗಿಸಿದವಳು. ಇಷ್ಟೆ ಆದರೆ ಏನು ಅಂತೀರ, ಅಲ್ಲಿಯೂ ಒಂದು ಮುಖ್ಯ ಘಟನೆ ಇದೆ. ನಾವೆಲ್ಲ ಮಲೆ ಏರಿ ದೇವರ ದರ್ಶನ ಮಾಡಿ ಇರುಮುಡಿಯನ್ನು ಅರ್ಪಿಸುವುದಕ್ಕೆ ದೇವಾಲಯದ ಪಕ್ಕದಲ್ಲೇ ಅನ್ನದಾನ ಭವನದಲ್ಲಿ ವ್ಯವಸ್ಥೆ ಮಾಡಿದ್ದರು. ಅಲ್ಲಿಯೇ ಒಂದಷ್ಟು ತಾತ್ಕಾಲಿಕ ವಿಶ್ರಾಂತಿಯೂ ಇದ್ದ ಕಾರಣ ಎಲ್ಲರೂ ಅಲ್ಲಿ ತಂಗಿದ್ದರು. ಎಲ್ಲ ಮುಗಿಸಿ ಮಲೆ ಇಳಿದು ಎಲ್ಲರೂ ಕೆಳಗೆ ಇಳಿದು  ಪಂಪ ಬಳಿಗೆ ಬಂದಾಗ ಈಕೆ ತನ್ನ ಬ್ಯಾಗ್ ನ್ನು ಅನ್ನದಾನ ಮಂಟಪದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಲ್ಲೇ ಮರೆತು ಬಂದಿದ್ದಳು. ಅದರಲ್ಲಿ ಆಕೆಯ ಮೊಬೈಲು ಒಂದಷ್ಟು ನಗದು ಹಣ ವಸ್ತ್ರ ಇನ್ನೂ ಏನೇನು ಇತ್ತೋ ಆಕೆಗೇ ಗೊತ್ತು. 


ಪಂಪೆಯಿಂದ ಸನ್ನಿದ್ಧಾನಕ್ಕೆ ಮಲೆ ಏರುವುದೆಂದರೆ ಅದೊಂದು ದೊಡ್ಡ ಸತ್ವ  ಪರೀಕ್ಷೆ. ಬರಿಗಾಲಲ್ಲಿ ಕಣ್ಣಿಗೆ ನಿಲುಕದ ಗಿರಿಪರ್ವತವನ್ನು ಹತ್ತಬೇಕು. ಸುಡುವ ಬಿಸಿಲಲ್ಲಿ ಬರಿಗಾಲಲ್ಲಿ ಸುಡುವ ನೆಲವನ್ನು ತುಳಿದು ಹತ್ತುವುದೆಂದರೆ ಬಹಳ ಕಠಿಣ. ಸುಮಾರು ನಾಲ್ಕು ಕಿಲೋ ಮೀಟರ್ ದೂರದ ಏರುವ ಹಾದಿ. ಇದಕ್ಕೆ ಕಡಿಮೆ ಎಂದರು ಎರಡು ಘಂಟೆ ತೆಗೆದುಕೊಳ್ಳುತ್ತದೆ.  ಈಗ ಅಲ್ಲಿ ಮೆಟ್ಟಲು ಇನ್ನಿತರ ಸೌಕರ್ಯ ಮಾಡಿದರೂ ಹತ್ತುವುದು ಅಷ್ಟು ಸುಲಭವಲ್ಲ. ಧನಿಕರು ಇದಕ್ಕೆ ಢೋಲಿಯನ್ನು ಮಾಡಿಕೊಂಡರೆ, ಎಲ್ಲರೂ ನಡೆದುಕೊಂಡು  ಹೋಗಿ ಸಾರ್ಥಕತೆಯನ್ನು ಕಾಣುತ್ತಾರೆ. ನಾವು ಐದು ಘಂಟೆಗೆ ಪಂಪೆಯಿಂದ ಏರುವುದಕ್ಕೆ ಆರಂಭಿಸಿದ್ದರಿಂದ ಬಿಸಿಲ ಶಾಖ ಇಲ್ಲದೇ ಇದ್ದರೂ ತುಂಬ ದೇಹಾಯಸವಾಗಿ ಕಾಲು ನೋವು ಎದೆನೋವು ಎಲ್ಲವೂ ಕಣಿಸಿಕೊಂಡಿತ್ತು. ಎಲ್ಲವೂ ಮುಗಿಸಿ ಕೆಳಗೆ ಬಂದಾಗ ಬ್ಯಾಗ್ ಮರೆತು ಬಂದಳೆಂದರೆ ಏನು ಮಾಡಬೇಕು?  ಆಕೆ ಧೃತಿ ಗೆಡಲ್ಲಿಲ್ಲ. ಪುನಃ ಮಲೆ ಹತ್ತಿ ಅನ್ನದಾನ ಮಂಟಪದ ವಿಶ್ರಾಂತಿ ಜಾಗಕ್ಕೆ ಹೋದಾಗ ಆಕೆಯ ಬ್ಯಾಗ್ ಸುರಕ್ಷಿತವಾಗಿ ಆಕೆ ಹೇಗೆ ಇಟ್ಟಿದ್ದಳೋ ಅದೇ ರೀತಿ ಒಂದಿಷ್ಟು ಅಲುಗಾಡದೆ ಹಾಗೆ ಉಳಿದಿತ್ತು. ಅದರಲ್ಲಿ ಮೊಬೈಲ್ ಹಣ ಎಲ್ಲವೂ ಇತ್ತು. ಎಲ್ಲರಿಗೂ ಆಕೆಯ ಮೇಲೆ ಒಂದು ಬಾರಿಗೆ ಸಿಟ್ಟು ಅನುಕಂಪ ಎಲ್ಲವೂ ಬಂದಿರಬಹುದು. ಆದರೆ ಏನು ಮಾಡುವುದಕ್ಕೆ ಸಾಧ್ಯ. ಆಕೆ ನಗುಮುಖವನ್ನೇ ತೋರಿಸುವುದಲ್ಲದೇ ಬೇರೆ ಯಾವ ದುಃಖವನ್ನೂ ನೋವನ್ನು ಪ್ರಕಟಿಸಲಿಲ್ಲ. ನನಗೆ ಅದು ಬಹಳ ಅಚ್ಚರಿಯಾಗಿ ಕಂಡಿತ್ತು. ನಾನಂತೂ ಇಂತಹ ಪರಿಸ್ಥಿತಿಯಲ್ಲಿ  ಪುನಃ ಹೋಗುವ ಧೈರ್ಯವನ್ನು ಮಾಡುತ್ತಿರಲಿಲ್ಲ. ಏನು ಮಾಡುತ್ತಿದ್ದೇನೋ ಗೊತ್ತಿಲ್ಲ. ಮತ್ತೊಂದು ವಿಚಿತ್ರವೆಂದರೆ ಸಾವಿರಾರು ಗಟ್ಟಲೆ ಜನ ಓಡಾಡುವ ಜಾಗ. ಅಲ್ಲಿದ್ದ ಬ್ಯಾಗ್ ಇಟ್ಟ ರೀತಿಯಲ್ಲೇ ಇರಬೇಕೆಂದರೆ, ಅದಕ್ಕೆ ಕಾರಣ ಯಾರು?  ಅಲ್ಲಿದ್ದ ಪೋಲೀಸ್ ಸೆಕ್ಯೂರಿಟಿಯಂತೂ ಖಂಡಿತ ಅಲ್ಲ. ಅದನ್ನು ಸುರಕ್ಷಿತವಾಗಿ ಕಾದುಕೊಂಡ ಆ ಶಕ್ತಿ ಯಾವುದು? ಬೇರೆ ಯಾವುದೂ ಅಲ್ಲ, ಎಲ್ಲರಲ್ಲೂ ಇದ್ದ  ಎಲ್ಲವೂ ನೀನೆ ಎಂಬ ಭಾವವೇ ಅಲ್ಲಿ ರಕ್ಷಣೆಗೆ ಬಂತು. ಮೋಸ ವಂಚನೆ ಎಲ್ಲವನ್ನೂ ಬಿಟ್ಟು ಪರಿಶುದ್ದ ಆತ್ಮವಾಗುವ ಪ್ರಯತ್ನೆವೇ ಅಲ್ಲಿ ರಕ್ಷಣೆ ನೀಡಿತ್ತು. ಒಂದು ಕ್ಷಣಕ್ಕೆ ಆಕೆಯ ಮರೆವಿಗೆ ಸಿಟ್ಟು ಬಂದರೂ ಈ ಘಟನೆಯನ್ನು ನಾನು ಕಂಡ ಬಗೆಯೇ ಬೇರೆ. ಆಕೆಯಿಂದ ಸುಮಾರು ನಾಲ್ಕು ಘಂಟೆಯಷ್ಟು ಪ್ರಯಾಣ ವಿಳಂಬವಾದರೂ ಆಕೆಯ ಸೊತ್ತು ಸುರಕ್ಷಿತವಾಗಿ ಆಕೆಗೆ ಸಿಕ್ಕಿದ್ದು ವಿಶೇಷ ಎನಿಸಿತ್ತು. 


ಯಾತ್ರೆಯುದ್ದಕ್ಕೂ ನಮಗೆ ಮಾರ್ಗದರ್ಶಕರಾಗಿ, ಎಲ್ಲ ಸಹಕಾರವನ್ನು ನೀಡುತ್ತಾ ಜತೆಗೆ ಇದ್ದವರು ಗುರುಸ್ವಾಮಿಗಳಾದ ನಾರಾಯಣ ಸ್ವಾಮಿಯವರು. ಬಹಳ ಶಾಂತ ಸ್ವಭಾವದ ವ್ಯಕ್ತಿ. ಅಯ್ಯಪ್ಪನ ಮೇಲಿನ ಭಕ್ತಿ ಅವರ ಕೃತಿಯಲ್ಲಿ ಕಂಡು ಬರುತ್ತಿತ್ತು. ಪ್ರತಿಯೊಬ್ಬರ ಸಮಸ್ಯೆಗೂ ತಮ್ಮಿಂದಾ ಪರಿಹಾರವನ್ನು ಒದಗಿಸಿ ತಮ್ಮ ಪ್ರಯತ್ನ ಮೀರಿ ಸಹನೆಯಿಂದ ವರ್ತಿಸುತ್ತಿದ್ದರು. ಅಲ್ಲಲ್ಲಿ ಉಪಯುಕ್ತ ಸಲಹೆಗಳನ್ನು ನೀಡುತ್ತಿದ್ದರು. ಎಲ್ಲಕ್ಕಿಂತ ನಾನು ಗಮನಿಸಿದ ಗುಣವೆಂದರೆ, ಊಟವಾಗಲಿ ಉಪಹಾರವಾಗಲೀ ಎಲ್ಲರು ಮುಗಿಸಿದ ನಂತರ ತಾವು ಉಣ್ಣುವುದಕ್ಕೆ ಕುಳಿತುಕೊಳ್ಳುತ್ತಿದ್ದರು. ಪ್ರತಿಯೊಬ್ಬರನ್ನೂ ಸಹನೆಯಿಂದ ಕಾಯುತ್ತಿದ್ದರು. ಪ್ರತಿಯೊಬ್ಬ ಯಾತ್ರಾರ್ಥಿಯ ಕೊನೆಯ ತುತ್ತು ಉಂಡ ಮೇಲೆ ಇವರು ಮೊದಲ ತುತ್ತು ಬಾಯಿಗೆ ಇಡುತ್ತಿದ್ದರು. ಈ ಬದ್ದತೆ ಅತ್ಯಂತ ಶ್ರೇಷ್ಠ ಎನಿಸಿತು. 


ಅಂತೂ ಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿದೆವು. ಮುಖ್ಯವಾಗಿ ನಾನು ದೂರದ ಯಾತ್ರೆ ದೊಡ್ಡ ದೊಡ್ಡ ದೇವಾಲಯಕ್ಕೆ ಹೋಗುವುದನ್ನು ಅಷ್ಟೊಂದು ಇಷ್ಟಪಡುವುದಿಲ್ಲ. ಕಾರಣ, ಸರಿಯಾದ ದರ್ಶನವಾಗುವುದಿಲ್ಲ. ಜನ ಜಂಗುಳಿ ಉದ್ದ ಸರದಿ ಇವುಗಳನ್ನೆಲ್ಲ ನಿಭಾಯಿಸುವುದು ತುಂಬ ಕಷ್ಟವಾಗುತ್ತದೆ. ಮುಕ್ತವಾಗಿ ಪ್ರಾರ್ಧನೆ ಸಾಧ್ಯವಾಗುವಿಲ್ಲ. ಪ್ರತಿಯೊಂದಕ್ಕೂ ಸರದಿ ನಿಲ್ಲುವ ಅನಿವಾರ್ಯತೆ ಇರುತ್ತದೆ. ಸ್ನಾನ ಸಂಧ್ಯಾದಿ ವಂದನೆಗಳು ಸಾಧ್ಯವಾಗುವುದಿಲ್ಲ. ಹಾಗಾಗಿ ಶಬರಿಮಲೆಗೆ ದೀಪಾವಳಿ ಸಮಯದಲ್ಲಿ ಅಂದರೆ ಕಾರ್ತಿಕ ಮಾಸದಲ್ಲಿ ಹೋಗಬೇಕೆಂದುಕೊಂಡಿದ್ದೆ. ಆದರೂ ಬೇಗ ಹೋಗಿ ಬರುವ ಅಂತ ನನ್ನಾಕೆಯ ಒತ್ತಾಸೆಯಿಂದ ವಿಷು ಸಂಕ್ರಮಣದ ಜನದಟ್ಟನೆಯ ಅರಿವಿದ್ದೂ ಇದೇ ಸಮಯದಲ್ಲಿ ಯಾತ್ರೆ ಮಾಡಿ ಬಂದೆವು. ನಿರೀಕ್ಷೆಯಷ್ಟು ಕಷ್ಟವಾಗಲಿಲ್ಲ. ಎಲ್ಲವೂ ಸುಗಮವಾಗಿ ನೆರವೇರಿತು. ದೇವರನ್ನು ಒಂದೆರಡು ಘಳಿಗೆ ನೋಡುವುದಕ್ಕೆ ಮಾತ್ರ ಸಾಧ್ಯವಾದರೂ ಅದೊಂದು ದೊಡ್ಡ ಸಂತೃಪ್ತಿಯನ್ನು ಒದಗಿಸಿದ ಕ್ಷಣವಾಗಿತ್ತು.  ನಿಜಕ್ಕೂ ಪರಮಾತ್ಮನನ್ನು ಹೃದಯದಲ್ಲಿ ದರ್ಶನ ಮಾಡುವ ನನ್ನ ಪ್ರವೃತ್ತಿಯಲ್ಲಿ ಈ ದೇವಾಲಯದ ಮೂರ್ತಿ ದರ್ಶನ ಕೇವಲ ಸಾಂಕೇತಿಕ. ಒಂದು ಭಕ್ತಿ ಗೌರವದ ಪ್ರತೀಕ.   ಇನ್ನು ದೇವರಲ್ಲಿ ನನಗೆ ಬೇಡುವುದಕ್ಕೇ ಏನೂ ಇರುವುದಿಲ್ಲ. ದೇವರ ಮುಂದೆ ನಿಂತಾಗ ಏನು ಬೇಡಬೇಕೆಂಬುದೇ ತಿಳಿಯುವುದಿಲ್ಲ. ಎಲ್ಲವನ್ನು ಒದಗಿಸಬಲ್ಲ ಪರಮಾತ್ಮನಲ್ಲಿ  ಬೇಡುವುದೇನುಂಟು. ನನಗೇನು ಬೇಕೋ ಅದು ಭಗವಂತನಿಗೆ ತಿಳಿದಿದೆ. ನಾನು ಅದು ಕೊಡು ಇದು ಕೊಡು ಎಂದು ಕೇಳಿದರೆ ಆ ಭಗವಂತನಲ್ಲಿ ನನಗೆ ವಿಶ್ವಾಸ ಇಲ್ಲವೇ ಎಂಬ ಅನುಮಾನ ಬಂದು ಬಿಡುತ್ತದೆ. ದೇವರಲ್ಲಿ ಇಂತಹದನ್ನು ಬೇಡುವುದೆಂದರೆ ಆ ದೇವರಲ್ಲಿ ಅವಿಶ್ವಾಸವನ್ನು ಪ್ರಕಟಿಸಿದ ಭಾವ ಉಂಟಾಗುತ್ತದೆ. ಹೇಗಿದ್ದರೂ ನನಗೆ ಕೊಡಬೇಕಾದ್ದನ್ನು ಭಗವಂತ ಕೊಡುತ್ತಾನೆ. ಅದು ಈಗಲೋ ಆಗಲೋ ತಡವಾಗಿಯಾದರೂ ಕೊಡದೆ ಇರಲಾರ. ಒಂದು ವೇಳೆ ಕೊಡಲಿಲ್ಲ ಎಂದಾದರೆ, ಆ ಭಗವಂತನಿಗೆ ಕೊಡುವುದಕ್ಕೆ ಮನಸ್ಸಿಲ್ಲದೇ ಇದ್ದದ್ದು ನನಗೆ ಬೇಡವೇ ಬೇಡ. ನನಗದರ ಅವಶ್ಯಕತೆಯೇ ಇಲ್ಲ. ಹೀಗೆ ಭಾವಿಸಿದಾಗ ಎಲ್ಲವನ್ನೂ ಪಡೆದ ಸಂತೃಪ್ತ ವ್ಯಕ್ತಿಯಾಗುತ್ತೇನೆ. ಇದಕ್ಕಿಂತ ಹೆಚ್ಚಿನದ್ದು ನನಗೇನು ಬೇಕು. ಆ ವಿಶ್ವಾಸ ಒಂದೇ ಸಾಕು. ಆಯ್ಯಪ್ಪ ದರ್ಶನವೂ ಹೀಗೆ. ಆಯ್ಯಪ್ಪನಿಗೆ ಈಯಪ್ಪನ ಮನಸ್ಸು ತಿಳಿದಿದೆ. ಅದನ್ನು ಒದಗಿಸುತ್ತಾನೆ. 


 




Saturday, April 4, 2026

ಹಾಸ್ಯಗಾನ

ಯಕ್ಷಗಾನ ಅಭಿಮಾನಿಯಾಗಿದ್ದರೆ , ಅಂತರ್ಜಾಲದಲ್ಲಿ ಒಂದೆರಡು ಯಕ್ಷಗಾನ ತುಣುಕುಗಳನ್ನು ನೋಡಿದರೆ ಮತ್ತೆ ಹಲವಾರು ಶಿಫಾರಸು, (recommendation) ವೀಡಿಯೋಗಳು ನಿಮ್ಮ ಆಸಕ್ತಿಯನ್ನು ಹೆಚ್ಚಿಸಿ  ಕಣ್ಸೆಳೆಯುವ ಪ್ರಯತ್ನ ಮಾಡುತ್ತದೆ. ಅವುಗಳನ್ನು ಅನುಮೋದಿಸಿ ನೋಡಿದಾಗ ಮತ್ತಷ್ಟು ಹೆಚ್ಚುತ್ತದೆ. ಇದು ಯೂಟ್ಯೂಬ್, ಫೇಸ್ ಬುಕ್ ಇನ್ಸ್ಟಾ ಗ್ರಾಂ ಗೂ ವಿಸ್ತರಿಸುತ್ತದೆ.  ಅಂತರ್ಜಾಲದ ಒಂದು ವಿಧದ ಸೇವೆಯ ರೀತಿ ಇದು. ಈ ಬಗೆಯಲ್ಲಿ ಬರುವ ಹಲವಾರು ಯಕ್ಷಗಾನಗಳ ಇತ್ತೀಚಿನ ಗುಣಗಳು ಒಂದೇ...ಅದು ಹಾಸ್ಯ ಪ್ರಧಾನ. ಯಕ್ಷಗಾನದಲ್ಲಿ ಎಲ್ಲಾ ರಂಗಗಳಿಗಿಂತಲೂ ವಿಭಿನ್ನ ಹಾಸ್ಯ ಇಲ್ಲಿರುವುದಂತೂ ಸತ್ಯ. ಆದರೆ ಯಕ್ಷಗಾನ ಎಂದೂ ಹಾಸ್ಯ ಪ್ರಧಾನವಾಗಿರಲಿಲ್ಲ. ಈಗ ಯಕ್ಷಗಾನಕ್ಕಿಂತಲೂ ಹಾಸ್ಯವೇ ಪ್ರಧಾನವಾಗಿ ಇನ್ನಿಲ್ಲದ ಕ್ರೀಡಾಂಗಣವಾಗಿ ಯಕ್ಷಗಾನ ಬದಲಾಗಿ ಹೋಗಿದೆ. ನಕ್ಕು ನಗಿಸುವ ಹಾಸ್ಯ, ಹೊಟ್ಟೆ ಹುಣ್ಣಾಗಿಸುವ ಹಾಸ್ಯ ಹೀಗಿ ತರಹೇವಾರಿ ತಲೆ ಬರಹದಲ್ಲಿ   ಹಲವಾರು ವೀಡಿಯೋಗಳು ಪ್ರಸಾರವಾಗುತ್ತವೆ. ಯಕ್ಷಗಾನ ಬಯಲಾಟದ ಒಂದು ಕರಪತ್ರ ನೋಡಿದೆ, ಪ್ರಸಂಗದ ಕೆಳಗೆ ಹಾಸ್ಯ ಪ್ರಧಾನ ಕಥಾನಕ ಅಂತ ಬರೆದಿತ್ತು. ಯಕ್ಷಗಾನಗಳಲ್ಲಿ ಹಾಸ್ಯವೇ ಪ್ರಧಾನವಾಗುವ ಆವಶ್ಯಕತೆ ಈಗ ಬಂದಿದೆ. ಕಾರಣ ಇಷ್ಟೆ ಯಕ್ಷಗಾನದಲ್ಲಿ ಆಕರ್ಷಣೆಯ ಕೊರತೆ.  ಹಾಗಾದರೆ ಯಕ್ಷಗಾನ ಎಂದರೆ ಹಾಸ್ಯ ಮಾತ್ರವೇ ಇರುವ ಜೋಕರ್ ಗಳ ಆಟವೇ? ಇಷ್ಟೇ ಅಲ್ಲ ದೇವೇಂದ್ರನಾಗಿ ನಕ್ಕು ನಗಿಸುವ ಹಾಸ್ಯ ಎಂಬ ತಲೆ ಬರಹ ಕಂಡರೆ ಗಂಭೀರವಾಗಿ ಯೋಚಿಸುವ ಅಂತ ಅನ್ನಿಸುವುದಿಲ್ಲವೇ? ಯಕ್ಷಗಾನದಲ್ಲಿ ದೇವೇಂದ್ರ ನಕ್ಕು ನಗಿಸುವ ಜೋಕರ್ ಆಗಿದ್ದು ಯಾವಾಗಿನಿಂದ? ಎಲ್ಲೊ ಅಲ್ಲೊಂದು ಇಲ್ಲೊಂದು ಗಂಭೀರ ಸಂಭಾಷಣೆಯಲ್ಲಿ ಹಾಸ್ಯದ ಚತುರ ಮಾತುಗಳಿದ್ದರೂ, ಎಲ್ಲೊ ಅಪರೂಪಕ್ಕೆ ಮೇಳದ ಹಾಸ್ಯಗಾರ ಇದನ್ನು ಮಾಡಿದರೂ,  ದೇವೇಂದ್ರ ಎಂದಿಗೂ ಹಾಸ್ಯಗಾರನಾಗಿರುವ  ಪಾತ್ರವಲ್ಲ.  


ಇಲ್ಲಿ ದೇವೇಂದ್ರನೂ ಹಾಸ್ಯ ರಾಮ ಕೃಷ್ಣನೂ ಹಾಸ್ಯ ಮುಂದೊಂದು ದಿನ ಸೀತೆ ದೇವಿಯಂತಹ ಪಾತ್ರಗಳೂ ಸಹ ಹಾಸ್ಯ ಪಾತ್ರಗಳಾಗಬಹುದು. ಮೊದಲೆಲ್ಲ ಒಂದು ಮೇಳದಲ್ಲಿ ಒಬ್ಬನೇ ಹಾಸ್ಯಗಾರನಿರುತ್ತಿದ್ದ. ಯಕ್ಷಗಾನದಲ್ಲಿ ಹಾಸ್ಯಗಾರನಿಗೆ ಒಂದು ಮಹತ್ವದ ಸ್ಥಾನವಿದೆ. ಅದು ಕಲಾವಿದನಾಗಿ ಮಾತ್ರ ಹೊರತು ಹಾಸ್ಯದಿಂದ ಅಲ್ಲ. ಒಂದು ಪ್ರಸಂಗ ನಿರ್ವಹಣೆಯಲ್ಲಿ ಹಾಸ್ಯಗಾರ ಮುಖ್ಯಪಾತ್ರಧಾರಿಗಿಂತಲೂ ಅತಿ ಮುಖ್ಯವಾಗಿಬಿಡುತ್ತಾನೆ.  ಹಾಸ್ಯಗಾರ ಕೇವಲ ಹಾಸ್ಯದ ಪಾತ್ರವಷ್ಟೇ ಅಲ್ಲ ಸಂದರ್ಭೋಚಿತವಾಗಿ ಬಣ್ಣದ ವೇಷದಿಂದ ಸ್ತ್ರೀ ವೇಷದ ವರೆಗೂ ನಿರ್ವಹಿಸಿ ಪ್ರಸಂಗವನ್ನು ಸಸೂತ್ರವಾಗಿ ನಡೆಸುವುದಕ್ಕೆ ಸಹಕಾರಿಯಾಗಿ ಇಡೀ ಪ್ರಸಂಗದ ಸೂತ್ರಧಾರಿಯಾಗುತ್ತಿದ್ದ. ಹಿಮ್ಮೆಳ ಮುಮ್ಮೇಳ ಎರಡರಲ್ಲೂ ಸಮಾನ ಸಾಮಾರ್ಥ್ಯವನ್ನು ಪಡೆದಿರುತ್ತಿದ್ದ.  ಅದಲ್ಲದೇ ಹಲವಾರು ಅಧಿಕೃತ ಅನಧಿಕೃತ ಜವಾಬ್ದಾರಿಗಳು ಹಾಸ್ಯಗಾರನೆಂಬ ವ್ಯಕ್ತಿಯ ಮೇಲೆ ಇರುತ್ತಿದ್ದವು. ಆದರೆ  ಈಗ ಒಂದು ಚಿಕ್ಕ ಮೇಳವೇ ಆದರೂ ಅದರಲ್ಲಿ ಎರಡು ಜನ ಹಾಸ್ಯಗಾರರಿತ್ತಾರೆ.  ಇವರು ಹಾಸ್ಯವನ್ನಲ್ಲದೇ ಬೇರೆ ಯಾವ ಜವಾಬ್ದಾರಿಯನ್ನು ನಿರ್ವಹಿಸುವುದು ಕಂಡು ಬರುವುದಿಲ್ಲ. ಯಾಕೆಂದರೆ ಈ ಜವಾಬ್ದಾರಿಗಳ ಅರಿವೇ ಇರುವುದಿಲ್ಲ. 

ನವರಸಗಳಲ್ಲಿ ಹಾಸ್ಯರಸ ಅತ್ಯಂತ ಮಹತ್ವ. ಎಲ್ಲರೂ ಒಂದಷ್ಟು ಹೊತ್ತು ನಗುವುದಕ್ಕೆ ಬಯಸುತ್ತಾರೆ. ನಿತ್ಯ ಜೀವನದ ದುಃಖ ಕಷ್ಟಗಳನ್ನು ಮರೆಯುವುದಕ್ಕೆ ಯತ್ನಿಸುತ್ತಾರೆ. ಹಾಗಂತ ಕೇವಲ ನಗುವೊಂದೇ ಸಾಕಾಗುವುದಿಲ್ಲ. ಮನಸ್ಸನ್ನು ಮುದಗೊಳಿಸುವುದು ಭಾವನೆಗಳು. ಅಲ್ಲಿ ಶೃಂಗಾರ ರೌದ್ರ ಕರುಣ ವೀರ ಎಲ್ಲದಕವು ಭಾವನೆಗಳ ಜೀವಕ್ಕೆ ಕಾರಣವಾಗುತ್ತದೆ. ಪ್ರೇಕ್ಷಕ ಕೇವಲ ಹಾಸ್ಯವನ್ನೇ ಬಯಸುತ್ತಾನೆ  ಎಂದರೆ ದೇವೇಂದ್ರನಿಂದಲೂ ಹಾಸ್ಯವನ್ನು ನಿರೀಕ್ಷಿಸುವ ಮಟ್ಟಿಗೆ ಯಕ್ಷಗಾನ ಬಂದು ನಿಂತಿದೆ ಎಂದರೆ ಯಾರನ್ನು ಕಾರಣಾವಾಗಿಸಬೇಕು? ಅದನ್ನು ನೀಡುವ ಕಲಾವಿದನೇ, ಅಲ್ಲ ಕೈತಟ್ಟಿ ನಗುವ ಪ್ರೇಕ್ಷಕನನ್ನೇ?  ಪ್ರೇಕ್ಷಕ ಬಯಸುತ್ತಾನೆ ಎಂದು ಯಕ್ಷಗಾನ ಮಾತ್ರ ಬದಲಾಗಿಲ್ಲ, ಹಾಸ್ಯದ ವಿಧಾನಗಳು ಬದಾಲಾಗಿಬಿಟ್ಟಿದೆ. ಹಾಸ್ಯ ಎಂದರೆ ಲೇವಡಿಯಾಗುವಷ್ಟರ ಮಟ್ಟಿಗೆ ಹಾಸ್ಯ ಬದಲಾಗಿದೆ. ನಗುವಿಗೂ ಒಂದು ಮೌಲ್ಯವಿದೆ. ಹಾಗಾಗಿ ಅದು ಮಿತವಾಗಿ ಬಳಸಲ್ಪಡಬೇಕು. ಹುಚ್ಚನೂ ನಗುತ್ತಾನೆ.  ಹುಚ್ಚನ್ನು ತೃಪ್ತಿ ಪಡಿಸುಮಟ್ಟಕ್ಕೆ ಅಥವ ಅದಕ್ಕೆ ಸೀಮಿತವಾಗಿ ಹಾಸ್ಯ ಬಳಕೆಯಾದರೆ ಹಾಸ್ಯಕ್ಕೆ ಮೌಲ್ಯ ಸಿಗಲಾರದು. ಹಿಂದೆ ಒಂದು ಸಲ ಕೆಲವು ಯಕ್ಷಗಾನ ಧ್ವನಿ ಸುರುಳಿಗಳು ಬಂದಿತ್ತು. ಕೀಳು ಹಾಸ್ಯವನ್ನೇ ಪ್ರಧಾನವಾಗಿಸಿದ ಯಕ್ಷಗಾನ ಸುರುಳಿಗಳು. ಆಗ ಇದನ್ನು ಆಕ್ಷೇಪಿಸಿದ್ದರು. ಈಗ ಕಾಲ ಬದಲಾಗಿದೆ ಸಂಪೂರ್ಣ ಯಕ್ಷಗಾನವೇ ಹಾಸ್ಯಮಯವಾಗುವ ಕಾಲ ಸನ್ನಿಹಿತವಾಗಿದೆ ಎನ್ನಬೇಕು. ಯಕ್ಷಗಾನ ಜೋಕರ್ ಗಳ ಆಟವಾಗಿ ಪ್ರೇಕ್ಷಕ ನಿರೀಕ್ಷಿಸುತ್ತಿದ್ದಾನೆ ಎಂದರೆ ಅತಿಶಯವಾಗಲಾರದು. 

Thursday, April 2, 2026

ಮಾವನೂರು ಬೆಟ್ಟದ ಮಲ್ಲೇಶ್ವರ ದೇವಸ್ಥಾನ

        ಇಲ್ಲಿ ಹಾಕಿರುವ ಚಿತ್ರಗಳು ಮಾವನೂರು ಬೆಟ್ಟದ ಮಲ್ಲೇಶ್ವರ ದೇವಸ್ಥಾನ. ಇದು ಬೆಂಗಳೂರಿನಿಂದ ಹಾಸನಕ್ಕೆ ಹೋಗುವಾಗ ಚೆನ್ನರಾಯ ಪಟ್ಟಣ ಕಳೆದ ಕೂಡಲೆ ಸಿಗುತ್ತದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಎಡಕ್ಕೆ ತಿರುಗಿದರೆ, ಸ್ವಲ್ಪದೂರ ಹಳ್ಳಿಯ ನಡುವಿನ ರಸ್ತೆ, ದೂರದಲ್ಲಿಸಾಲಾಗಿ ಪರ್ವತಗಳ ನಡುವೆ ಸುಜುಲೋನ್ ಕಂಪೆನಿಯ  ಗಾಳಿಯಂತ್ರ  ಸುತ್ತುವ ಮನೋಹರ ದೃಶ್ಯ ಕಾಣುತ್ತದೆ. ಈ ಗಾಳಿಯಂತ್ರದ ಬಳಿಯಲ್ಲೇ ಗುಡ್ಡದ ತುದಿಯಲ್ಲಿ ಈ ಮಾವನೂರು ಮಲ್ಲೇಶ್ವರ ದೇವಸ್ಥಾನ ಇದೆ. ತುದಿಗೆ ಹೋದರೆ ಸುತ್ತಮುತ್ತಲಿನ ನಯನ ಮನೋಹರ ದೃಶ್ಯ ಕಾಣುತ್ತದೆ. ಮುಂಜಾನೆ ಹೋದಾರೆ ಸೂರ್ಯೋದಯ ಸಾಯಂಕಾಲ ಹೋದರೆ ಸೂರ್ಯಾಸ್ತ ಸುಂದರವಾಗಿ ಕಾಣಬಹುದು.  ನಾವು ಎರಡು ಬಾರಿ ಈ ಜಾಗ ವೀಕ್ಷಣೆ ಮಾಡಿದ್ದೇವೆ. ಮೊದಲ ಬಾರಿಗೆ ಹೋದಾಗ ಇದೇನು ಅಷ್ಟು ಪ್ರಸಿದ್ಧಿಯನ್ನು ಪಡೆದಿರಲಿಲ್ಲ. ಹೊಸದಾಗಿ












ಸುಣ್ಣ ಬಣ್ಣದಿಂದ  ನವೀಕರಿಸಲಾಗಿತ್ತು. ಆಗ ಇಲ್ಲಿ ಯಾವ ಜನರ ಸಂಚಾರವಿಲ್ಲದೆ ನಿರಾಳವಾದ ಶಾಂತಿ ನೆಲೆಯಾಗಿತ್ತು. ಅದೊಂದು ಬಹಳ ಸುಂದರ ಅನುಭವ. ಅದಾಗಿ ಎರಡು ಮೂರು ವರ್ಷದ ನಂತರ, ಹಲವು ಸಲ ಅಲ್ಲಿಗೆ ಹೋಗಬೇಕೆಂದು ಬಯಸಿದರೂ ಸಮಯ ಸಿಕ್ಕಿರಲಿಲ್ಲ.  ಮೊನ್ನೆ ಈ ದೇವಾಲಯದ ಕೊಪ್ಪದಿಂದ ಹಿಂತಿರುಗುವಾಗ ಮೊದಲೇ ಸಮಯ ನೋಡಿ ಸರಿಯಾಗಿ ಸೂರ್ಯಾಸ್ತದ ಸಮಯಕ್ಕೆ ಬಂದು ತಲುಪಿದೆವು. ಸುಂದರ ದೃಶ್ಯ ಮನಸೂರೆಗೊಂಡಿತ್ತು. ಆದರೆ, ಅಲ್ಲಿ ಸಾಕಷ್ಟು ವಾಹನಗಳು ನಿಂತು ಒಂದಷ್ಟು ಮಂದಿ ಇದ್ದರು. 


ಕಳೆದ ಬಾರಿಯಂತೆ ಇಲ್ಲಿ ಪರಿಸರ ಶಾಂತವಾಗಿರಲಿಲ್ಲ. ಜನರ ಕಲರವ ಎಲ್ಲವನ್ನೂ ಕದಡಿತ್ತು. ಜೋರಾಗಿ ಕೇಕೆ ಮಾತುಗಳು ಆದರೆ ಪರವಾಗಿಲ್ಲವೇನೋ, ಕೆಲವರು ದೊಡ್ಡದಾಗಿ ಹಾಡು ಹಾಕಿ ವಿಚಿತ್ರವಾಗಿ ಕುಣಿಯುತ್ತಾ ರೀಲ್ಸ್ ಮಾಡುತ್ತಿದ್ದರು. ರೀಲ್ಸ್ ಮಾಡುವ ಹುಚ್ಚು ಸುಂದರ ದೇವಸ್ಥಾನಗಳನ್ನೂ ಬಿಡುವುದಿಲ್ಲ. ಅಲ್ಲಿಯ ಶಾಂತ ಪರಿಸರವನ್ನು ಆಸ್ವಾದಿಸುವುದಕ್ಕೆ ಏನೋ ಒಂದು ತೊಡಕು.  ಆ ಪರಿಸರಕ್ಕೆ ಹೊಂದಿಕೊಳ್ಳದ ಉಡುಗೆ ತೊಡುಗೆಗಳು ಯಾವ ಸುಂದರ ಪರಿಸರವನ್ನು ಬಿಡದ ಈ ಮಾನವ ಧಾಳಿ ನಿಜಕ್ಕೂ ಖೇದಕರ. ಸ್ವಲ್ಪ ಹೊತ್ತು ಅಲ್ಲಿದ್ದು ಮತ್ತೆ ಅಲ್ಲಿ ನಿಲ್ಲುವುದಕ್ಕೆ ಮನಸ್ಸಾಗಲಿಲ್ಲ. ಅನ್ಯ ಪ್ರಾರ್ಥನಾ ಮಂದಿರಗಳಲ್ಲಿ ಇಂತಹ ಚಟುವಟಿಕೆಗಳನ್ನು ಕಾಣುವುದಕ್ಕೆ ಸಾಧ್ಯವಿಲ್ಲ. ಆದರೆ ನಮ್ಮ ಕಾಲ ಬುಡಕ್ಕೆ ನಾವೇ ಕೆಸರು ಎಳೆದು ತರುತ್ತಿದ್ದೇವೆ. ಇದು ಶೋಚನೀಯ. ಪರಸ್ಥಳಗಳಿಗೆ ಹೋದಾಗ ಅಲ್ಲಿ ಫೋಟೋಗಳನ್ನು ತೊಂದರೆಯಾಗದಂತೆ ಸ್ಮರಣೆಗಾಗಿ ತೆಗೆದುಕೊಳ್ಳುವುದರಲ್ಲಿ ತಪ್ಪಿಲ್ಲ. ಆದರೆ ಅಲ್ಲಿನ ಪರಿಸರ ಶುದ್ಧಿಯನ್ನು ಗೌರವಿಸಬೇಕಾಗಿರುವುದು ನಮ್ಮ ಕರ್ತವ್ಯ. ಇಲ್ಲವಾದರೆ ನಮಗಾಗಿ ಇವುಗಳು ಇದ್ದಂತೆ ನಮ್ಮ ಮುಂದಿನ ಜನಾಂಗಕ್ಕೆ ಇವುಗಳು ಪರಿಶುದ್ದವಾಗಿ ಇರಲಾರದು. ರೀಲ್ಸ್ ಪುಂಡರಿಂದ ಇಂತಹ ಪರಿಸರವನ್ನು ರಕ್ಷಿಸುವುದು ಆದ್ಯ ಕರ್ತವ್ಯವಾಗಬೇಕಾಗಿದೆ. 


Saturday, March 14, 2026

ಕೊಲ್ಲಿಯುದ್ದದ ಒಂದು ದಿನ

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಇರಬೇಕು. ಇರಾಕ್ ಯುದ್ಧ ನಡೆದಿತ್ತು. ಇದು ಒಂದು ತಿಂಗಳಿಗಿಂತ ಹೆಚ್ಚು ನಡೆದ ಯುದ್ದ. ಆ ದಿನದ ಒಂದು ಅನುಭವ ಈಗಲೂ ನೆನಪಿದೆ.  ನಾವು ಕಾಸರಗೋಡು ಜಿಲ್ಲೆಯ ಪೈವಳಿಕೆಯಲ್ಲಿದ್ದ ಸಮಯ. ನಾನು ದೂರದ ಮಂಗಳೂರಿಗೆ ಹೋಗಬೇಕೆಂದಿದ್ದರೆ ನನ್ನ ಸ್ಕೂಟರ್ ನ್ನು ರಾಷ್ಟ್ರಿಯ ಹೆದ್ದಾರಿಯ ಉಪ್ಪಳದಲ್ಲಿ ಇಟ್ಟು ಅಲ್ಲಿಂದ ಬಸ್ಸಿನಲ್ಲಿ ಹೋಗುತ್ತಿದ್ದೆವು. ಉಪ್ಪಳದಿಂದ ಪೈವಳಿಕೆಗೆ ರಾತ್ರಿ ದಿನದ ಕೊನೆಯ ಬಸ್ಸು ಜನಪ್ರಿಯ ಒಂಭತ್ತು ಗಂಟೆಗೆ ಹೋದರೆ ಆನಂತರ ಪೈವಳಿಕೆಯ ಕಡೆಗೆ ಹೋಗಬೇಕೆಂದರೆ ಬಸ್ಸು ಇರುತ್ತಿರಲಿಲ್ಲ. ಒಂದೋ ಆಟೋ ಅದೂ ರಾತ್ರಿ ಬಂದರೆ ಅದೂ ದುಬಾರಿ ವೆಚ್ಚ. ಅದಲ್ಲದೇ ಇದ್ದರೆ ಹತ್ತು ಕಿಲೋ ಮೀಟರ್ ನಡೆದೇ ಹೋಗಬೇಕು. ಸುಮಾರು ಎರಡು ಘಂಟೆ ಅದೂ ತಡ ರಾತ್ರಿ ಯಾವುದೇ ಟಾರ್ಚ್ ಬೆಳಕು ಇಲ್ಲದೇ ನಡೆದು ಹೋಗಬೇಕಿತ್ತು. ಹೀಗಾಗಿ ಉಪ್ಪಳದಲ್ಲಿ ಕೆಲವರು ದ್ವಿಚಕ್ರವಾಹನ ಇಟ್ಟು ಮಂಗಳೂರಿಗೆ ಹೋಗುತ್ತಿದ್ದರು. ತಡ ರಾತ್ರಿಯ ತನಕವೂ ಉಪ್ಪಳದ ತನಕ ಬಸ್ಸು ಇರುತ್ತಿದ್ದುದರಿಂದ ನಿಶ್ಚಿಂತೆಯಿಂದ ಹೋಗಿ ಬರಬಹುದಿತ್ತು.  


ಆ ಕಾಲದಲ್ಲಿ ವಾಹನಕ್ಕೆ ಇಂಧನ ತುಂಬಿಸಬೇಕಾದರೆ ಈಗಿನಂತೆ ಪೆಟ್ರೋಲ್ ಬಂಕ್ ಇರಲಿಲ್ಲ. ದೂರದ ಕರ್ನಾಟಕ ಗಡಿ ಪ್ರದೇಶದ ತಲಪಾಡಿಗೆ ಹೋಗಬೇಕಿತ್ತು. ಹಲವು ಸಲ ಉಪ್ಪಳದಲ್ಲಿ ವಾಹನ ಇರಿಸುವ ಬದಲು ತಲಪಾಡಿಯ ಪೆಟ್ರೋಲ್ ಬಂಕ್ ನಲ್ಲಿ ವಾಹ ಇರಿಸಿ ಹಿಂದಿರುಗಿ ಬರುವಾಗ ವಾರಕ್ಕೆ ಆಗುವಷ್ಟು ಪೆಟ್ರೋಲ್ ತುಂಬಿಸಿ ಬರುತ್ತಿದ್ದೆವು. ಇಲ್ಲವಾದರೆ ಕಾಳಸಂತೆಯಲ್ಲಿ ಅಧಿಕ ಬೆಲೆಯ ಕಲಬೆರಕೆಯ  ಪೆಟ್ರೋಲ್ ಗತಿ. ಆ ದಿನಗಳೇ ಹಾಗಿದ್ದವು. ಈಗಿನ ತಲೆಮಾರಿಗೆ ಇದನ್ನು ಕಲ್ಪಿಸುವುದಕ್ಕೂ ಸಾಧ್ಯವಿಲ್ಲ. ಅದರಂತೆ ಆಗ ನಡೆದ ಇರಾಕ್ ಯುದ್ಧವನ್ನೂ ಕಲ್ಪಿಸಿಕೊಳ್ಳುವುದು ಕಷ್ಟದ ಮಾತು. ಆದರೂ ಇರಾಕ್ ಯುದ್ಧದಲ್ಲಿ ಇಲ್ಲಿ ಬಂದ ಕಷ್ಟಗಳು ಈಗಿನದಕ್ಕೆ ಹೋಲಿಸಿದರೆ ಬಹಳ ಕಡಿಮೆ ಎನ್ನಬೇಕು. ಮನೆಯಿಂದ ಹೊರಟವರು ಪುನಃ ಮನೆಗೆ ಬಂದು ಸೇರಿದ ಮೇಲೆಯೇ ಭರವಸೆ. ಪೆಟ್ರೋಲ್ ಆಭಾವದಿಂದ ಬಸ್ಸು ಲಾರಿಗಳು ದಾರಿ ಮಧ್ಯೆಯೇ ನಿಲ್ಲಿತ್ತಿದ್ದದ್ದು ಸಾಮಾನ್ಯ. ಪ್ರತಿ ಪೆಟ್ರೋಲ್ ಬಂಕ್ ಗಳಲ್ಲಿ ಮೈಲು ಗಟ್ಟಲೆ ವಾಹನಗಳ ಸರದಿ ಸಾಲು ನಿಂತಿರುತ್ತಿದ್ದವು. ಯಾವಾಗ ಪೆಟ್ರೋಲ್ ಡೀಸಲ್ ಸಿಗುತ್ತದೆ ಎಂಬ ಭರವಸೆಯೇ ಇರುತ್ತಿರಲಿಲ್ಲ. ಈಗಿನ ಸರಕಾರಕ್ಕೆ ದೂರುವವರು ಒಂದಿಷ್ಟು ಆದಿನಗಳನ್ನು ನೆನಪಿಸಿಕೊಂಡರೆ ಸಾಕು. ಈಗಲೂ ಸಮಸ್ಯೆಗಳು ಇವೆ. ಅದಕ್ಕೆ ಹಲವು ಕಾರಣಗಳು ಇರುತ್ತವೆ. ನಾವು ಅತಿಯಾಗಿ ಪೆಟ್ರೋಲ್ ಉತ್ಪನಗಳಿಗೆ ಅವಲಂಬಿಸಿರುವುದೇ ಕಾರಣ. ಆಗ ಹಳ್ಳಿಯ ಮನೆಗಳು ಈಗಿನಂತೆ ಅಡುಗೆ ಅನಿಲಕ್ಕೆ ಅವಲಂಬಿಸಿರಲಿಲ್ಲ. ಈಗ ಹಳ್ಳಿಯ ಮನೆಗಳು ಯಾಕೆ ದೇವಸ್ಥಾನಗಳೂ ಈ ವಾಯು ಪ್ರಭಾವಕ್ಕೆ ಒಳಗಾಗಿದೆ. 

ಗಲ್ಬ್ ಯುದ್ದದ ಸಮಯ ಆ ಒಂದು ದಿನ ಸಾಯಂಕಾಲ  ನನಗೆ ಅಗತ್ಯ ಕೆಲಸಕ್ಕಾಗಿ ಮಂಗಳೂರಿಗೆ ಹೋಗಬೇಕಿತ್ತು. ಗಲ್ಫ್ ಯುದ್ದದ ಕಾರಣ ಹಲವಾರು ಬಸ್ಸುಗಳು ತಮ್ಮ ಸಂಚಾರವನ್ನು ಸ್ಥಗಿತಗೊಳಿಸಿದ್ದವು.  ಸ್ಕೂಟರ್ ತೆಗೆದುಕೊಂಡು ಹೊರಟೆ.  ಸ್ಕೂಟರ್  ಉಪ್ಪಳದಲ್ಲಿಟ್ಟು ಮಂಗಳೂರಿಗೆ ಹೋಗಬೇಕೆಂದು ಕೊಂಡರೆ  ಪೆಟ್ರೋಲ್ ಅದಾಗಲೇ ರಿಸರ್ವ್ ಗೆ ಬಿತ್ತು.  ಇನ್ನು ತಲಪಾಡಿಯವರೆಗೆ ಹೋಗಿ ಅಲ್ಲಿ ಇಟ್ಟು ಬರುವಾಗ ಪೆಟ್ರೋಲ್ ಹಾಕಿಕೊಂಡು ಬಂದಾರಯಿತು ಎಂದುಕೊಂಡು ತಲಪಾಡಿಗೆ ಬಂದರೆ ಪಟೋಲ್ ಬಂಕ್ ನಲ್ಲಿ ಅದಾಗಲೇ ವಾಹನಗಳ ಸರದಿ ಇತ್ತು.  ಪೆಟ್ರೋಲ್ ಬಂಕ್ ನವ ನನಗೆ ಪರಿಚಯಸ್ಥ. ಆತ ಪೆಟ್ರೋಲ್ ಬರಬಹುದು ಎಂದು ಹೇಳಿದ. ಗಾಡಿಯ ಕೀ ಆತನಿಗೆ ಕೊಟ್ಟು ಪೆಟ್ರೋಲ್ ಬಂದರೆ ತುಂಬಿಸುವಂತೆ ಹೇಳಿ ಅಲ್ಲಿಂದ ಸಿಟಿ ಬಸ್ ಹತ್ತಿ ಮಂಗಳೂರಿಗೆ ಹೊರಟೆ. 

ಮಂಗಳೂರಿನಿಂದ ಕೆಲಸ ಮುಗಿಸಿ ಹಿಂತಿರುಗಿ ಬರುವಾಗ ತುಸು ತಡವೇ ಆಗಿತ್ತು. ರಾತ್ರಿಯ ಒಂಭತ್ತರ ಹತ್ತಿರ  ಬಸ್ಸು ತಲಪಾಡಿಯಲ್ಲಿ ನಿಂತಾಗ ನೋಡಿದರೆ ಪೆಟ್ರೋಲ್ ಬಂಕ್ ಮುಂದೆ ವಾಹನಗಳ ಸರದಿ ಹಾಗೇ ಇತ್ತು. ನಿರೀಕ್ಷೆಯಂತೆ ಪೆಟ್ರೋಲ್ ಬರಲಿಲ್ಲ. ಆದರೇನು ಮಾಡುವುದು. ಆಗಲೇ ರಾತ್ರಿ ಬಹಳ ಹೊತ್ತಾಗಿತ್ತು. ಇನ್ನು ಅಲ್ಲಿ ಕಾದುಕುಳಿತುಕೊಳ್ಳುವುದು ಅಸಾಧ್ಯದ ಮಾತು. ಕೈಯಲ್ಲಿ ಒಂದಿಷ್ಟು ಸಣ್ಣ ಪುಟ್ಟ ಸಾಮಾನುಗಳ ಲಗೇಜ್ ಇತ್ತು. ಏನಾದರಾಗಲೀ ಹೊರಟು ಬಿಡೋಣ ಹೋದಷ್ಟು ದೂರ ಹೋಗೋಣ ಎಂದುಕೊಂಡು ಗಾಡಿ ಸ್ಟಾರ್ಟ್ ಮಾಡಿ ಹೊರಟೆ. ಇಷ್ಟದೇವರನ್ನು ಮನಸಾರೆ ಸ್ಮರಿಸಿದೆ. ದೇವರೇ ಕ್ಷೇಮದಲ್ಲಿ ಮನೆಗೆ ಮುಟ್ಟಿಸು ಅಂತ ಬೇಡಿಕೊಂಡೆ. ದೈವಾನುಗ್ರಹ ಇದ್ದರೆ ಮನೆಗೆ ತಲುಪುತ್ತೇನೆ ಎಂದುಕೊಂಡೆ.  ಅನ್ಯಥಾ ಏನು ಮಾಡುವುದಕ್ಕೂ ನನಗೆ ಹೊಳೆಯಲಿಲ್ಲ. ಬೇರೆ ಎನು ಮಾಡುವ ಹಾಗೂ ಇರಲಿಲ್ಲ. ಒಂದೊಂದೇ ಕಿಲೋ ಮೀಟರ್ ದೂರ ಬಂದಷ್ಟು ಅಬ್ಭಾ ಎನ್ನುವ ಹಾಗಿತ್ತು. ಉಪ್ಪಳದ ತನಕ ಹೋದರೆ ಅಲ್ಲಿ ಗಾಡಿ ಇಟ್ಟು ಏನಾದರೂ ವ್ಯವಸ್ಥೆ ಮಾಡಬಹುದು ಎಂದುಕೊಂಡೆ ಉಪ್ಪಳದ ತನಕ ನಿರಾತಂಕವಾಗಿ ಬಂದಾಗ ಇನ್ನು ನಮ್ಮದೇ ಊರು ಹೋದಷ್ಟು ದೂರ ಹೋಗುವ ಖಾಲಿಯಾದರೆ ಯಾವುದಾದರು ಮನೆ ಮುಂದೆ ಗಾಡಿ ಇಟ್ಟು ಹೋದರಾಯಿತು ಎಂದು ಕೊಂಡು ಉಪ್ಪಳದಿಂದ ಪೈವಳಿಕೆ ಕಡೆ ಹೊರಟಿದ್ದೆ. ವಾಹನ ಸಂಚಾರ ತೀರ ವಿರಳವಾಗಿತ್ತು. ಗಲ್ಪ್ ಯುದ್ದ ಜನಜೀವನದ ಮೇಲೆ ಸಾಕಷ್ಟು ಪರಿಣಾಮ ಉಂಟು ಮಾಡಿತ್ತು. ಅಂಗಡಿ ಮುಂಗಟ್ಟುಗಳು ಬೇಗನೆ ಬಾಗಿಲು ಹಾಕಿದ್ದವು. ಉಪ್ಪಳದಿಂದ ಕೈಕಂಬ ..ಸೋಂಕಾಲ್ ಕುಬಣೂರು ಬೇಕೂರು ದಾಟುತ್ತಿದ್ದಂತೆ ಒಂದಷ್ಟು ಖುಷಿಯಾಯಿತು.. ಇನ್ನು ಆರೇಳು ಕಿಲೋ ಮೀಟರ್ ಪೈವಳಿಕೆ ತಲುಪಬಹುದು. ಬೇಕೂರು ಕನ್ನಟಿಪಾರ, ಜೋಡುಕಲ್ಲು ಕಳೆದು ಅಟ್ಟೇಗೋಳಿ ಚಡಾವ್ ಹತ್ತಿದ ನಂತರ ಅಬ್ಬ ಎನಿಸಿತು . ಇನ್ನು ಸ್ವಲ್ಪ ದೂರ ಅಷ್ಟೆ. ಅಟ್ಟೆಗೋಳಿ ದಾಟಿ ಬಾಯಿಕಟ್ಟೆ ದಾಟಿ ಮುಂದೆ ಬಂದರೆ ಮತ್ತೆ ನಮ್ಮೂರು ಪೈವಳಿಕೆ. ಅಲ್ಲಿಂದ ಒಂದೆರಡು ತಿರುವು ದಾಟಿದರೆ  ನಮ್ಮ ಮನೆ. ಪೈವಳಿಕೆ ಬಂದರೆ  ಅಲ್ಲಿ ಇನ್ನೂ ಅಲ್ಪ ಸ್ವಲ್ಪ ಜನ ಸಂಚಾರವಿತ್ತು. ಎಷ್ಟೆಂದರೂ ನಮ್ಮ ಪೈವಳಿಕೆ. ಅಲ್ಲಿ ತಡರಾತ್ರಿಯಾದರೂ ಯಾರಾದರೂ ಸುತ್ತಾಡಿಕೊಂಡಿರುತ್ತಾರೆ. ಗಂಟೆ ಹತ್ತು ಕಳೆದಿತ್ತು. ಅಲ್ಲಿ ತನಕ ಪೆಟ್ರೋಲ್ ಖಾಲಿಯಾಗದೇ ಇದ್ದದ್ದು ಆಶ್ಚರ್ಯ ತಂದಿತು. ಸ್ಕೂಟರ್ ನ ಮೈಲೇಜ್ ಬಗ್ಗೆ ಅಭಿಮಾನ ಉಂಟಾಯಿತು.  ಪೈವಳಿಕೆ ಬಜಾರ್ ಕಳೆದು ಗುಂಡದ ಪಾರೆ ತಿರುವು ದಾಟಿ ಒಂದಷ್ಟು ಮುಂದೆ ಬಂದರೆ ನಮ್ಮ ಮನೆ ಲಾಲ್ ಬಾಗ್. ಗುಂಡದ ಪಾರೆ ಎರು ಬಂದಾಗ ಗಾಡಿ ಸ್ತಭ್ದವಾಯಿತು. ಪೆಟ್ರೋಲ್ ಖಾಲಿಯಾಗಿತ್ತು. ಅದುವರೆಗೂ ನನ್ನನ್ನು ತಲುಪಿಸಿದ ಗಾಡಿ ಇನ್ನು ಸಾಧ್ಯವಿಲ್ಲ ಎಂದು ನಿಂತು ಬಿಟ್ಟಿತು. ಇನ್ನು ಒಂದಷ್ಟು ಇಳಿಜಾರು ರಸ್ತೆ. ಹಾಗಾಗಿ ಗಾಡಿ ಜೋರಾಗಿ ತಳ್ಳಿ ನ್ಯೂಟ್ರಲ್ ನಲ್ಲೇ ಮನೆಯ ಅಂಗಳ ತಲುಪಿ ದೊಡ್ಡ ನಿಟ್ಟು ಸಿರು ಬಿಟ್ಟೆ. 

ಈಗಿನ ಇರಾನ್ ಯುದ್ಧ ಆಗಿನ ಇರಾಕ್ ಯುದ್ದ....ಎರಡನ್ನೂ ತುಲನೆ ಮಾಡುವುದು ಸಾಧ್ಯವಿಲ್ಲ. ಆದರೆ ಆಗಿನಷ್ಟು ಕಷ್ಟ ಇನ್ನೂ ಎದುರಾಗಿಲ್ಲ. ಈಗ ಅಡುಗೆ ಅನಿಲಕ್ಕೆ ಸ್ವಲ್ಪ ಅದು ವಾಣಿಜ್ಯ ಬಳಕೆಗೆ ಸ್ವಲ್ಪ ಅವ್ಯವಸ್ಥೆ ಆಗಿದೆ. ಆದರೆ ಆ ದಿನಗಳ ಬವಣೆ ಇನ್ನು ಬಾರದಿರಲಿ ಎಂದು ಪ್ರಾರ್ಥನೆ.  ಆಗ ಯಾವ ಸರಕಾರ ಇತ್ತೋ ಈಗ ಯಾವ ಸರಕಾರ ಇದೆಯೋ ಯಾರು ಪ್ರಧಾನಿಯೋ ಇವುಗಳೆಲ್ಲ ಮುಖ್ಯವಾಗುವುದಿಲ್ಲ. ಯಾವುದಿದ್ದರು ಬರುವ ವಿಕಲ್ಪ ಪರಿಭವ ಕಷ್ಟಗಳು ಬೇರೆಯೇ ಆಗಿರುತ್ತದೆ. ಇವುಗಳು ಜಾಗತಿಕ ವಿಪತ್ತುಗಳು. ರಾಜಕೀಯ ತೆವಲಿಗಾಗಿ ನಾವು ಕೆಸರು ಎರಚಿಕೊಂಡು ನಮ್ಮ ಮನಸ್ಸನ್ನು ಮಲಿನ ಮಾಡುತ್ತಿದ್ದೇವೆ ಅಷ್ಟೆ. ಬಂದ ಕಷ್ಟವನ್ನು ಎದುರಿಸಿ ವಿಪತ್ತಿನಿಂದ ಪಾರಾಗುವ ಆತ್ಮಸ್ಥೈರ್ಯವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ನಾವು ಇಲ್ಲಿಕುಳಿತು ಯಾವುದೋ ರಾಷ್ಟ್ರದ ಪರವಾಗಿ ಚರ್ಚಿಸಬಹುದು. ಕೊನೆಗೆ ನಮಗೆ ನಮ್ಮ ಭಾರತವೇ ಬೇಕು. ಅದುವೇ ಶ್ರೇಷ್ಠ. ಎಲ್ಲದಕ್ಕಿಂತಲೂ ಗಲ್ಪ್ ನಿವಾಸಿಗಳನ್ನು  ನೋಡಿದರೆ ನಾವು ಭಾರತೀಯರು ಎಂಬ ಅಭಿಮಾನ ಮೂಡುತ್ತದೆ. ಇದು ಮುಖ್ಯ. 

  ಸ್ಕೂಟರ್ ನ ಮೈಲೇಜ್ ದೈವಾನುಗ್ರಹದ ಮೈಲೇಜ್ ಎಲ್ಲ ಸೇರಿ ಮನೆ ಸೇರಿದಾಗ ಏನೂ ತಿಂದಿಲ್ಲದಿರುವುದು ನೆನಪಾಗಿ ಹೊಟ್ಟೆ ಹಸಿವು ತಿಳಿಯಿತು. ಹೊಟ್ಟೆ ತುಂಬ ಊಟಮಾಡಿ ಮಲಗಿದವನಿಗೆ ...ದೂರದ ತಲಪಾಡಿಯ ಪೆಟ್ರೋಲ್ ಬಂಕ್ ದೃಶ್ಯ ಇನ್ನೂ ಕಣ್ಣ ಮುಂದೆ ಇದ್ದಂತೆ ಭಾಸವಾಯಿತು. 

Thursday, March 12, 2026

ಮನದ ಪಯಣ


“Every moment of worship is when your thoughts and mind turn toward God.” 

ವಿದ್ವಾಂಸರೊಬ್ಬರು ಪ್ರವಚನದಲ್ಲಿ ಹೇಳಿದ ಮಾತು ಇದು.   ನಮ್ಮ ಎಲ್ಲಾ ಚಲನವಲನಗಳಲ್ಲೂ ಭಗವಂತನ ಆರಾಧನೆ ಇದೆ. ಯಾವಾಗ ನಮ್ಮ ಮನಸ್ಸು ಭಗವಂತನ ಕುರಿತು ಚಿಂತಿಸುತ್ತದೋ ಆಗ ನಾವೇನು ಮಾಡಿದರೂ ಅದು ಭಗವಂತನ ಆರಾಧನೆಯಾಗುತ್ತದೆ. ಬೆಳಗ್ಗೆ ನಿದ್ದೆಯಿಂದ ಏಳುವಾಗ ಭಗವಂತನ ಸ್ಮರಣೆಯೊಂದು  ಮನಸ್ಸಿನ ಚಿಂತನೆಯನ್ನು ಭಗವಂತನ ಕಡೆಗೆ ಹರಿಸುತ್ತದೆ. ರಾತ್ರಿ ಮಲಗುವ ಮೊದಲು ಭಗವಂತನ ನಾಮಸ್ಮರಣೆ ಒಂದು ಸಾಕು ನಾವು ನಿದ್ರೆಯಲ್ಲೂ ಭಗವಂತನ ಆರಾಧನೆ ಮಾಡಿದಂತೆ. ಇದು ಜ್ಞಾನಿಗಳು ಹೇಳುವ ಮಾತು. 

ಕೈಯಲ್ಲಿ ಇರುವ ಆಹಾರ, ಕೈತುತ್ತು ಕೈಯಿಂದ ಬಾಯಿಗೆ ನಂತರ ಗಂಟಲಿಗೆ ಪ್ರವೇಶಿಸುವ ತನಕ ನಮ್ಮದು. ಆನಂತರ ಗಂಟಲು ಇಳಿದನಂತರ ಅದು ನಮ್ಮದಾಗಿರುವುದಿಲ್ಲ. ನಮ್ಮಲ್ಲಿ ಅಹಂ ಇರುವ ತನಕ ನಮ್ಮಲ್ಲಿ ಭಗವಂತನಿರುವುದಿಲ್ಲ.  ಎಲ್ಲಿ ನಮ್ಮ ಅಹಂಕಾರವನ್ನು ಕಳೆಯುತ್ತೇವೆಯೋ ಅಲ್ಲಿ ಭಗವಂತನ ಸಾಕ್ಷಾತ್ಕಾರವಿರುತ್ತದೆ.  ನಾನು ನಮಸ್ಕಾರ ಮಾಡುತ್ತೇನೆ ಎಂದರೂ ಅಲ್ಲಿ ಅಹಂ ಇರುತ್ತದೆ.  ನಮಸ್ಕಾರ ಎಂಬುದು ನಮ್ಮನ್ನು ಭಗವಂತನಲ್ಲಿಗೆ ಸೆಳೆಯುವ ಕ್ರಿಯೆ. ಅದು ಶರಣಾಗತಿಯ ಭಾವ. ಅಲ್ಲಿ ಅಹಂ ಇದ್ದರೆ ನಮಸ್ಕಾರ ಎಂಬುದು ಕೇವಲ ಚಮತ್ಕಾರವಾಗಿಬಿಡುತ್ತದೆ. ಚಮತ್ಕಾರ ಅದೃಷ್ಟವನ್ನು ಅವಲಂಬಿಸುವ ವಂಚನೆಯ ಹಾದಿ. ಆದರೆ ನಮಸ್ಕಾರ ಸಂಭಂಧಗಳನ್ನು ವೃದ್ಧಿಸುವ ಮೊದಲ ಮೆಟ್ಟಲು. ಭಗವಂತನ ಜತೆಗಿನ ಸಂಬಂಧ ಸೃಷ್ಟಿಯಾಗುವುದೇ ನಮಸ್ಕಾರದಿಂದ. 

ಭಗವಂತ ರೂಪ ರಹಿತ, ಗುಣರಹಿತ ಭಾವ ರಹಿತ. ಆತನಿಗೆ ಹಸಿವು ಬಾಯಾರಿಕೆಗಳಿಲ್ಲ. ಹಾಗಾದರೆ ಆತನಿಗೆ ನಾವು ಯಾಕೆ ನೈವೇದ್ಯ ಅರ್ಪಿಸಬೇಕು? ನಾವೇಕೆ ಬೇಡಿಕೊಳ್ಳಬೇಕು? ಸಕಲ ಆಗುಹೋಗುಗಳಿಗೆ ಆತನೇ ಕಾರಣೀಭೂತನಾಗುವಾಗ ಆತನ ಸಮ್ಮುಖದಲ್ಲಿನ ನಮ್ಮ ವರ್ತನೆ ಆತನಿಗಾಗಿ ಅಲ್ಲ. ಆತನ ಅನುಗ್ರಹಕ್ಕೆ ಅಂತ ನಮ್ಮ ಭಾವನೆಗಳ ಪ್ರಕಟಣೆ. ಹಸಿವು ನೀರಡಿಕೆ ಇಲ್ಲದ ದೇವರಿಗೆ ನಾವು ಎಲ್ಲವನ್ನೂ ಅರ್ಪಿಸುತ್ತೇವೆ. ಅದು ನಮ್ಮ ಮನಸ್ಸಿನ ಭಾವನೆಗೋಸ್ಕರ ನಾವು ಅರ್ಪಿಸುತ್ತೇವೆ ಹೊರತು ಅದು ಭಗವಂತನಿಗಾಗಿ ಅಲ್ಲ. ಭಗವಂತನಿಗೆ ಭಾವನೆಯೂ ಇಲ್ಲದ ಮೇಲೆ ಆತನ ತೃಪ್ತಿ ಎಲ್ಲಿದೆ. ಅಲ್ಲಿ ನಮ್ಮದೇ ಅತೃಪ್ತ ಮನಸ್ಸಿನ ಪರಿಹಾರವಿರುತ್ತದೆ. ಎಲ್ಲ ಭಾವನೆಗಳೂ ಭಗವಂತನ ಕಡೆಗೆ ಸರಿಯುತ್ತದೆ. ಅದೇ ಭಗವಂತನಿಗೆ ಸಲ್ಲುವ ಗೌರವ. 

ನಾವು ಯಾವುದೋ ದೇವರ ಚಿತ್ರದ ಮುಂದೆ ನಿಂತುಕೊಂಡು ಇಲ್ಲವೇ ದೇವರ ಮೂರ್ತಿಯ ಮುಂದೆ ನಿಂತುಕೊಂಡು ಪ್ರಾರ್ಥನೆ ಮಾಡಿದರೂ ಕಣ್ಣನ್ನು ಮುಚ್ಚಿದಾಗಲೇ ನಮಗೆ ಎದುರು ಇರುವ ಭಗವಂತನ ಪ್ರತೀಕದ ಜತೆಗೆ ಅನುಸಂಧಾನ , ಅಥವ ಸಂಭಂಧ ಸಾಧ್ಯವಾಗುತ್ತದೆ. ಭೌತಿಕವಾಗಿ ಭಗವಂತನ ಬಳಿಗೆ ನಾವು ಹೋಗುವುದಕ್ಕೆ ಸಾಧ್ಯವಿಲ್ಲ. ಮನಸ್ಸಿನಿಂದ ಮಾತ್ರವೇ  ಭಗವಂತನ ಬಳಿಗೆ ಹೋಗಬಹುದು. ಹಾಗಾಗಿ ಎದುರು ಇರುವ ಚಿತ್ರವು ಕೇವಲ ಭಗವಂತನ ಪ್ರತೀಕವಾಗುತ್ತದೆ ಹೊರತು ಬೌತಿಕವಾಗಿ ಭಗವಂತನಲ್ಲ. ಹಾಗಾಗಿ ಅದನ್ನು ಮೂರ್ತ ಸ್ವರೂಪ ಎನ್ನುವುದು. ಮೂರ್ತಿ ಎಂಬುದು ಕೇವಲ ನಮ್ಮ ಮನಸ್ಸಿನ ಪ್ರತೀಕ. ಮನಸ್ಸು ಭಗವಂತನಲ್ಲಿ ಐಕ್ಯವಾಗುವುದು ಅತೀ ಮುಖ್ಯ ಹೊರತು ಎದುರಿನ ಮೂರ್ತಿಯಲ್ಲ. ಮೂರ್ತಿ ಎಂದರೆ ಕನ್ನಡಿಯಂತೆ. ಕನ್ನಡಿ ಎದುರು ನಾವು ಯಾವುದನ್ನು ಇರಿಸುತ್ತೇವೋ ಅದರ ಪ್ರತಿಬಿಂಬ ಕನ್ನಡಿಯಲ್ಲಿ ಬರುತ್ತದೆ. 

ನಮ್ಮ ಪ್ರತಿಯೊಂದು ಚಲನೆಯೂ ಭಗವಂತನ ಕಡೆಗೆ ಆಗುವಾಗ ಅಲ್ಲಿ ನಮ್ಮ ಮನಸ್ಸಿನ ಭಾವನೆಗಳು ಮುಖ್ಯವಾಗುತ್ತದೆ. ಭಗವಂತನಿಗೆ ನಾವು ಎಷ್ಟು ಕೊಟ್ಟಿದ್ದೇವೆ,್? ಎನು ಕೊಟ್ಟಿದ್ದೇವೆ?  ಯಾರು ಕೊಟ್ಟಿದ್ದಾರೆ?  ಎಂಬುದು ಮುಖ್ಯವಲ್ಲ. ನಾವು ಹೇಗೆ ಕೊಟ್ಟಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಮನಸ್ಸಿನಿಂದ ನಾವು ತೊಟ್ಟು ನೀರನ್ನು ಅರ್ಪಿಸಿದರೂ ಅದು ಅರ್ಘ್ಯವಾಗುತ್ತದೆ. ಅರ್ಘ್ಯ ಎಂಬುದು ಅನಂತತೆಯ ಸಂಕೇತ. ಅದು ಮಿತಿಯೊಳಗೆ ಇರುವುದಿಲ್ಲ. ಅದಕ್ಕೆ ಗಾತ್ರವಿಲ್ಲ. ಅದಕ್ಕೆ ರೂಪವಿರುವುದಿಲ್ಲ. ಅಲ್ಲಿ ನಮ್ಮ ಮನಸ್ಸೇ ಮುಖ್ಯವಾಗುತ್ತದೆ. ಮನಸ್ಸಿನ ಭಾವನೆಯೇ ಮುಖ್ಯವಾಗುತದೆ. ದೇವರು ಎಲ್ಲರನ್ನೂ ಎಲ್ಲವನ್ನೂ ಸೃಷ್ಟಿ ಮಾಡುತ್ತಾನೆ. ಆದರೆ ಮನುಷ್ಯನನ್ನು ಸೃಷ್ಟಿ ಮಾಡುವಾಗ ಅಲ್ಲೊಂದು ಮನಸ್ಸನ್ನು ಇಡುತ್ತಾನೆ. ಮನಸ್ಸಿನ ತುಂಬ ಭಾವನೆಗಳನ್ನು ಬಿತ್ತುತ್ತಾನೆ. ಆ ಭಾವನೆಗಳ ಪ್ರತಿ ಚಿಗುರು ಶಾಖೆಗಳು ಭಗವಂತನ ಕಡೆಗೆ ಚಲಿಸಿದಾಗಲೇ ಭಗವಂತನಿಗೆ ಸಲ್ಲುವ ಗೌರವವಾಗುತ್ತದೆ.  ಇದು ಮನುಷ್ಯನ ಬದುಕಿನ ಪಯಣ. ಮನದ ಪಯಣ. 


Friday, February 27, 2026

ಪೃಚ್ಛಕ ಪಾರ್ಥ

 ಹಲವು ಸಲ  ಬರಹಗಳಿಗೆ ವಿಷಯ ಹೇಗೆ ಸಿಗುತ್ತದೆ ಎಂದು ಕೇಳಿದರೆ, ಅದು ಹೀಗೂ ಇರುತ್ತದೆ.  ಒಂದು ಸಲ ಭಗವದ್ಗೀತೆಯ ಪುಟಗಳನ್ನು ತಿರುವಿ ನೋಡಿದರೆ ಹಲವಾರು ಚಿಂತನೆಗಳು ಚಿಗುರೊಡೆಯುತ್ತದೆ. ಹಾಗೆ ಚಿಗುರಿದ ವಿಷಯಗಳು ಹಲವು. 



"ಕಥಂ ಭೀಷ್ಮ ಮಹಂ ಸಂಖ್ಯೇ ದ್ರೋಣಂ ಚ ಮಧುಸೂದನ |  ಇಷುಭಿಃ ಪ್ರತಿಯೋತ್ಸ್ಯಾಮಿ ಪೂಜಾರ್ಹ ವರಿಸೂದನ"

ಭಗದ್ಗೀತೆಯ ದ್ವೀತಿಯ ಅಧ್ಯಾಯದ ಸಾಂಖ್ಯಯೋಗದ ನಾಲ್ಕನೇ ಶ್ಲೋಕ. ಇದು ಅರ್ಜುನ ಶ್ರೀಕೃಷ್ಣನಲ್ಲಿ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸುವ ಮಾತು. ," ಎಲೈ ಮಧೂಸದನನೇ , ಶತ್ರುಗಳನ್ನು ನಾಶಗೋಳಿಸುವವನೇ ಪೂಜಾರ್ಹರಾಗಿರುವ ಭೀಷ್ಮ ದ್ರೋಣರನ್ನು ಕದನದಲ್ಲಿ ಬಾಣಗಳಿಂದ  ಹೇಗೆ ಹೊಡೆಯಲಿ?" 

ಭೀಷ್ಮ ದ್ರೋಣರಿಗಿಂತ ಅರ್ಜುನನಿಗೆ ಮಾನವೀಯ ಸಂಭಂದಗಳ ಅರಿವು ಮತ್ತು ಅದರಲ್ಲಿ ಗೌರವ ಇತ್ತು ಅಂತ ಮೇಲು ನೋಟಕ್ಕೆ ಅರ್ಜುನ ಹೇಳುವುದು ಸರಿ ಎಂದೆನಿಸುತ್ತದೆ, ಆದರೆ ಅರ್ಜುನನ ಚಿಂತನೆ ಅಸ್ಥಾನದ್ದು ಅಂತ ಶ್ರೀಕೃಷ್ಣ ಹೇಳುತ್ತಾನೆ. ಯಾಕೆ ಅರ್ಜುನನಿಗೆ ಮಾತ್ರ ವಿರೋಧಿ ಸ್ಥಾನದಲ್ಲಿ ಕುಳಿತ ಭೀಷ್ಮ ದ್ರೋಣ ಕೃಪರ ಮೇಲೆ ಅನುಕಂಪ ಮೂಡುತ್ತದೆ. ಅದೇ ಅನುಕಂಪ ಭೀಷ್ಮರಿಗಾಗಲೀ ದ್ರೋಣರಿಗಾಗಲೀ ಅರ್ಜುನನ ಮೇಲೆ ಅಥವಾ ಪಾಂಡವರ ಮೇಲೆ ಯಾಕೆ ಮೂಡುವುದಿಲ್ಲ? ಅವರಿಗೆ ಮಮಕಾರ ಇರಲಿಲ್ಲವೇ? ಅನುಕಂಪ ಇರಲಿಲ್ಲವೇ ? ಯಾವ ಕೊಡುಗೆಯೂ ಅಸ್ಥಾನದಲ್ಲಿ ಇರಕೂಡದು. ಇದರ ಅರಿವು ಅತೀ ಮುಖ್ಯ. ಭೀಷ್ಮ ದ್ರೋಣಾದಿಗಳಿಗೆ ಆ ಅರಿವಿನ ಜ್ಞಾನ ಇತ್ತು. ಅರ್ಜುನನ ಅನುಕಂಪ ಅಸ್ಥಾನದಲ್ಲಿತ್ತು. ಯುದ್ಧವೇ ನಿರ್ಣಯವಾಗಿ ಯುದ್ಧರಂಗಕ್ಕೆ ಬಂದ ಮೇಲೆ ಅಲ್ಲಿ ಯುದ್ದ ಮತ್ತು ವೀರೋಧಿ ಇವುಗಳಷ್ಟೇ ಮುಖ್ಯವಾಗುತ್ತದೆ. ಅರ್ಜುನ ಸಂಭಂಧಗಳನ್ನಷ್ಟೇ ನೋಡಿದ. ಆದರೆ ಕರ್ಮವನ್ನು ಮರೆತ.

ವಾಸ್ತವದ ಪ್ರಾಪಂಚಿಕ ವ್ಯವಹಾರದಲ್ಲೂ  ಹೀಗೆ, ನಮ್ಮ ಕರ್ತವ್ಯ ಪ್ರಜ್ಞೆ ಜಾಗೃತವಾಗಬೇಕು. ಪರಿಶುದ್ಧ ಹಾಲನ್ನು ಶುದ್ದವಾದ ಪಾತ್ರೆಯಲ್ಲೇ ತುಂಬಿಸಿಕೊಳ್ಳಬೇಕು. ಹಾಗಾದರೆ ಮಾತ್ರವೇ ಹಾಲು ಹಾಲಾಗಿ ಉಳಿಯುತ್ತದೆ ಇಲ್ಲವಾದರೆ ಅದು ಕೆಡುತ್ತದೆ. ಮೂರ್ಖರ ಗುಂಪಿನಲ್ಲಿ ವೇದಾಂತ ಬೋಧಿಸಿದರೆ ವೇದಾಂತವೇ ಕೆಡುಕಾಗಿ ಕಾಣಬಹುದು.ಹಾಗಾಗಿ ಅರ್ಜುನನ ಅನುಕಂಪ ಕರುಣೆ, ಗುರು ಹಿರಿಯರ ಮೇಲಿನ ಪ್ರೀತಿ ಗೌರವ  ಎಲ್ಲವೂ ಇಲ್ಲಿ ಅಪ್ರಸ್ತುತವಾಗುತ್ತದೆ. ಮಾತ್ರವಲ್ಲ ಅದು ನಿಷ್ಫಲವಾಗುತ್ತದೆ.  ಅಪ್ರಸ್ತುತವಾದ ಅರ್ಜುನನ ಸದ್ಭಾವನೆ ಏನಿದ್ದರೂ ಅದು ಆತನ ಪುರುಷತ್ವವನ್ನು ಹರಣಮಾಡಿ ಆತನಲ್ಲಿ ಷಂಡತನವನ್ನು ಪ್ರಚೋದಿಸುತ್ತದೆ. ಹಾಗಾಗಿ ಅಲ್ಲಿ ಶ್ರೀ ಕೃಷ್ಣ ಆತನ ಈ ಭಾವನಗೆಳನ್ನು ಲೇವಡಿಯಾಡುತ್ತಾನೆ.  

ಪ್ರೀತಿ ಪ್ರೇಮ ಮಮಕಾರ ಎಲ್ಲವೂ ವ್ಯಕ್ತಿ ಸನ್ನಿವೇಶ ಪರಿಸರ ನೋಡಿ ನಿರ್ಣಯಿಸಲ್ಪಡಬೇಕು. ಆಗ ಅವುಗಳಿಗೆ ಮೌಲ್ಯ ಗೌರವ ಒದಗಿಬರುತ್ತದೆ. ಇಲ್ಲವಾದರೆ ಅದರ ಅರ್ಥವೇ ಕೆಡಬಹುದು. ಪ್ರೇಮ ಕಾಮ ವಾಗಬಹುದು, ಮಮಕಾರ ಮೋಹವಾಗಬಹುದು. ಆಗ ಅಲ್ಲಿ ಕೆಡುಕುಗಳು ಗೋಚರಿಸುವುದಿಲ್ಲ. ಭೀಷ್ಮ ದ್ರೋಣರಿಗೆ ಅರ್ಜುನನ ಮೇಲೆ ಮೋಹವೂ ಮಮಕಾರವೂ ಇತ್ತು. ಆದರೆ ಅಲ್ಲಿ ಕಾಳಗದ  ಉದ್ದೇಶದಲ್ಲೇ ಬಂದವರಿಗೆ ಅದು ಅಪ್ರಸ್ತುತವಾಗಿ ಕಂಡಿತು.  

ನಮ್ಮ ಗೆಲುವನ್ನೇ ಬಯಸಿ , ನಮ್ಮ ಸುಖ ಸಂತೋಷವನ್ನು ಬಯಸುವವರ ಎದುರು ನಮ್ಮ ಸೋಲು, ನೋವನ್ನು ನಾವು ಬಹಿರಂಗ ಪಡಿಸುವುದನ್ನೂ ಬಯಸುವುದಿಲ್ಲ. ಸೋಲನ್ನು ದುಃಖವನ್ನು ತೋರಿಸದೇ ಎಲ್ಲವನ್ನು ಮರೆಮಾಚುತ್ತೇವೆ. ನಮ್ಮ ಕೊಡುಗೆಗಳನ್ನು ಮೊದಲು ನಾವು ಗೌರವಿಸಬೇಕು. ಅದು ಎಲ್ಲಿ ಹೇಗೆ ನೀಡಬೇಕು, ಹೇಗೆ ಒದಗಿಸಬೇಕು ಎಂಬುದರ ನಿರ್ಣಯ ನಮ್ಮದು. ಆದರೆ ಅದಕ್ಕೆ ಗೌರವ ನಾವು ಎಲ್ಲಿ ಹೇಗೆ ಒದಗಿಸುತ್ತೇವೆ ಎಂಬುದರಲ್ಲಿ ಸಿದ್ಧವಾಗುತ್ತದೆ.  ಭಗವಂತನೂ ಗೀತೆಯ ರಹಸ್ಯವನ್ನು ಬೋಧಿಸುವುದಕ್ಕೆ ಅರ್ಜುನನನ್ನೇ ಆರಿಸಿಕೊಂಡ. ಪರಮ ವೈಷ್ಟವ ಭಾಗವವತ ಭೀಷ್ಮನಿಗೆ ಬೋಧಿಸಲಿಲ್ಲ.

ದಾನವನ್ನು ಮಾಡುವುದು ಶ್ರೇಷ್ಠ. ಹಸಿದವನಿಗೆ ಆಹಾರ, ರೋಗಿಗೆ ಆರೈಕೆ, ಆರ್ತರಿಗೆ ಆಶ್ರಯ ಕೊಡುವುದು ಉತ್ತಮ. ಆದರೆ ಅದರ ಆಯ್ಕೆ ಇವುಗಳ ಗೌರವವನ್ನು ಹೆಚ್ಚಿಸುತ್ತದೆ. ಆರ್ಹತೆ ಇಲ್ಲದವರಿಗ ಶ್ರೇಷ್ಠವಾದುದನ್ನು ನೀಡಿದರೆ ಅದು ಶ್ರೇಷ್ಠವೆನಿಸುವುದಿಲ್ಲ. ಕಳ್ಳನಿಗೆ, ದುರ್ವ್ಯಸನಿಗೆ ಧನಸಹಾಯವನ್ನು ಮಾಡಿದಲ್ಲಿ ಅದು ವಿನಿಯೋಗವಾಗಬಹುದು ಆದರೆ ಅದು ಸದ್ವಿನಿಯೋಗವಾಗುವುದಿಲ್ಲ. ಸದ್  ಎಲ್ಲಿರುತ್ತದೆ ಅದು ಶ್ರೇಷ್ಠವಾಗಿರುತ್ತದೆ. ಎಲ್ಲಿ ಕತ್ತಲೆ ಇರುವುದೋ ಅಲ್ಲಿ ದೀಪ ಬೆಳಗಿಸಬೇಕು. ಆಗ ದೀಪದ ಬೆಳಕು ಸಾರ್ಥಕತೆಯನ್ನು ಪಡೆಯುತ್ತದೆ. ಬೆಳಕು ಇದ್ದಲ್ಲೇ ದೀಪ ಬೆಳಗಿದರೆ ಆ ದೀಪಕ್ಕೂ ಗೌರವವಿಲ್ಲ, ಬೆಳಕಿಗೂ ಮೌಲ್ಯ ಇರುವುದಿಲ್ಲ. ದಟ್ಟ ಕತ್ತಲೆಯಲ್ಲೇ ತುಂಬಿದ ಕೋಣೆಯಲ್ಲಿ ದೀಪ ಉರಿಸಿದರೂ ಹಲವು ಸಲ ಆ ಬೆಳಕು ಪರ್ಯಾಪ್ತವಾಗುವುದಿಲ್ಲ. ಆಗಲೂ ದೀಪಕ್ಕೂ ಬೆಳಕಿಗೂ ಗೌರವ ಸಿಗುವುದಿಲ್ಲ. ಹಾಗಿದ್ದಾಗ ಅಲ್ಲಿ ದೀಪ ಬೆಳಗಿಸುವುದು ಮೂರ್ಖತನವಾಗಬಹುದು. ನಿದ್ದೆ ಮಾಡಿದವರ ಎದುರು ದೀಪ ಉರಿಸಿದರೆ ನಿದ್ರಾಭಂಗವಾಗಬಹುದು. ದೀಪ ಉರಿಸುವುದಕ್ಕೆ ಕ್ಷೇತ್ರ ಸನ್ನಿವೇಶ ನೋಡಬೇಕು. ದೀಪ ಉರಿಸುವುದಷ್ಟೇ ಅಲ್ಲ. ಪ್ರಕಾಶದ ಸದ್ಬಳಕೆಯಾಗಬೇಕು. ಆಗ ಅದು ಮತ್ತಷ್ಟು ಪ್ರಕಾಶವಾಗುತ್ತದೆ. ಬಹುಶಃ ಅರ್ಜುನನಿಗಲ್ಲದೇ ಗೀತೋಪದೇಶವಾಗುತ್ತಿದ್ದರೆ ಅದು ಇಷ್ಟು ಅರ್ಥಪೂರ್ಣವಾಗುತ್ತಿರಲಿಲ್ಲವೇನೋ? ಭಗವಂತನ ಸಂಕಲ್ಪ ಇದು. ಶ್ರೀಕೃಷ್ಣನಂತಹ ಪ್ರವಾಚಕನು ಅರ್ಜುನನಂತಹ ಪೃಚ್ಛಕನೂ ಇರುವುದಕ್ಕೆ ಸಾಧ್ಯವಿಲ್ಲ. 


Saturday, February 21, 2026

ಇದು ಜೀವನ.

ಮೊನ್ನೆ ಒಬ್ಬರು ವ್ಯಕ್ತಿ ನನ್ನ ಬಳಿಗೆ ಬಂದಿದ್ದರು. ಅವರಿಗೆ ಮಾಂಸಾಹಾರಿ ಹೋಟೇಲ್ ಇದೆ. ಯಾವುದೋ  ಜಿ ಎಸ್ ಟಿ ಕೆಲಸಕ್ಕೆ ಬಂದಿದ್ದರು. ಅವರು ಹೇಳಿದ ಒಂದು ಮಾತು ನನಗೆ ಬಹಳ ಚಿಂತಿಸುವಂತೆ ಮಾಡಿತು. ಅವರು ಹೇಳಿದರು. ನಮಗೆ ಭಾಷೆ ಧರ್ಮ ಎಲ್ಲವೂ ಮುಖ್ಯವಾಗುತ್ತದೆ. ಆದರೆ ನಮ್ಮ ಜೀವನ ಮುಖ್ಯವಾಗುವುದಿಲ್ಲ. ಹಿಂದಿಯವರು ಅಥವಾ ಉತ್ತರ ಭಾರತದವರು ಅಂತ ಇಲ್ಲಿ ಹೀನಾಯವಾಗಿ ಕಾಣುತ್ತಾರೆ. ಭಾಷೆ ಬರುವುದಿಲ್ಲ. ಅಥವಾ ಕನ್ನಡ ಮಾತನಾಡುವುದಿಲ್ಲ ಎಂದು ಹಳಿಯುತ್ತಾರೆ.  ಆದರೆ ಬೆಂಗಳೂರಿನ ಅಷ್ಟೂ ಹೋಟೆಲ್ ಉಸಿರುರಾಡುತ್ತಿರುವುದು ಇವರಿಂದಾಗಿ. ಬೇರೆ ರಾಜ್ಯದಿಂದ ಉದ್ಯೋಗ ಅಥವಾ ವಿದ್ಯೆಗಾಗಿ ಇಲ್ಲಿ ಬಂದು ಪಿಜಿ ಬಾಡಿಗೆ ಮನೆ ಮಾಡಿ ನೆಲಸುತ್ತಾರೆ. ಅವರಿಗೆ ಈ ಹೋಟೆಲ್ ಗಳೇ ಆಹಾರಕ್ಕೆ ಆಧಾರ. ಅವರ ವ್ಯಾಪಾರವೇ ನಮಗೆ ಮುಖ್ಯವಾಗುತ್ತದೆ. ಇಲ್ಲಿನವರೂ ಹೋಟೆಲಿಗೆ ಬರುತ್ತಿದ್ದರೂ...ಉತ್ತರ ಅನ್ಯ ರಾಜ್ಯದವರ ವ್ಯಾಪಾರ ಬಹಳ ಮುಖ್ಯವಾಗುತ್ತದೆ. ಅದು ಬೆಂಗಳೂರಾದರೂ ಅಷ್ಟೆ ಮಂಗಳೂರಾದರೂ ಅಷ್ಟೇ. 

ಆ ವ್ಯಕ್ತಿ ಹೇಳಿದ್ದರಲ್ಲಿ ಬಹಳಷ್ಟು ನಿಜಾಂಶ ಅಂತ ತೋರಿತು. ಹೌದು, ಬೆಂಗಳೂರಲ್ಲಿ ಪಿಜಿಯಲ್ಲೋ ಬಾಡಿಗೆ ಮನೆಯಲ್ಲಿ ಕುಳಿತು ಸ್ವಂತ ಅಡುಗೆ ಮಾಡಲಾಗದವರಿಗೆ ಅಥವಾ ಇನ್ನಿತರ ಕಾರಣಗಳಿಗೆ ಅವರಿಗೆ ಹೋಟೇಲ್ ಗಳೇ ಆಶ್ರಯ. ಇದನ್ನು ಅಲ್ಲಗಳೆಯುವುದಕ್ಕೆ ಸಾಧ್ಯವಿಲ್ಲ. ಮಂಗಳೂರಿನಂತಹ ನಗರದಲ್ಲೂ ಅಷ್ಟೇ ಅನ್ಯ ರಾಜ್ಯದವರ ವ್ಯವಹಾರ ಸಾಕಷ್ಟು ಇದೆ. ಹಾಗಾಗಿ ಆತ ಹೇಳಿದ್ದು ನಮಗೆ ಭಾಷೆ ಮುಖ್ಯವಾಗುತ್ತದೆ ಜೀವನ ಮುಖ್ಯವಾಗುವುದಿಲ್ಲ. ವಾಸ್ತವದಲ್ಲಿ ಊರಿನ ಭಾಷೆ ಸಂಸ್ಕೃತಿ ನಿಜವಾಗಿಯೂ ಮುಖ್ಯವಾಗುತ್ತದೆ. ಅದರ ಜತೆ ಧರ್ಮವೂ ಮುಖ್ಯವಾಗುತ್ತದೆ. ಆದರೆ ಜೀವನ ಎಂಬುದು ವಾಸ್ತವದ ಸತ್ಯಕ್ಕೆ ಸಾಕ್ಷಿಯಾಗಿ ಹಾಗೇ ಉಳಿಯುತ್ತದೆ. ಧರ್ಮ ಭಾಷೆಯನ್ನು ದ್ವೇಷಿಸಬೇಕು ಎಂದೇನಲ್ಲ, ಆದರೆ ಇವೆರಡನ್ನು ಗೌರವಿಸಿ ಹೊಂದಿಕೊಳ್ಳುವ ಜೀವನ ಗೋಚರಿಸುವುದಿಲ್ಲ. 

ಈಗ ಭಾಷೆ ಧರ್ಮವನ್ನು ಹೇಳಿಕೊಂಡು ಆಗುವ ಗಲಭೆಗಳು ಸಮರಗಳು ನೋಡುವಾಗ ಮುಂದೆ ಜೀವನ ದುರ್ಭರವಾಗುವುದರಲ್ಲಿ ಯಾವ ಸಂದೇಹವೂ ಉಳಿದಿಲ್ಲ. ಹೊಟ್ಟೆಯ ಹಸಿವನ್ನೂ ಮರೆತು ಇದು ಮುಖ್ಯವಾಗುತ್ತದೆ. ಹಸಿವು ಹೋಗಲಿ ಹಲವು ನಂಬುವ ಭಗವಂತನೂ ಮರೆತು ಹೋಗಿಬಿಡುತ್ತಾನೆ. ಎರುತ್ತಿರು ಡಾಲರ್ ಬೆಲೆಯ ಬಗ್ಗೆ ಹೇಳುತ್ತೇವೆ. ಜಿಡಿಪಿಯ ಕುರಿತು ಚರ್ಚಿಸುತ್ತೇವೆ. ಏರುವ ಜೀವನಾವಶ್ಯಕ ವಸ್ತುಗಳ ಬೆಲೆಯನ್ನು ಹೇಳುತ್ತೇವೆ.  ಆದರೆ ಆದರೆ ಭಾಷೆ ಧರ್ಮಗಳ ಬಗ್ಗೆ ಹೋರಾಡುವಾಗ ಇವೆರಡೂ ಜ್ಞಾಪಕಕ್ಕೆ ಬರುವುದಿಲ್ಲ. ಇದು ವಾಸ್ತವ. ಧರ್ಮಕ್ಕಾಗಿ ಜೀವ ಕೊಡುತ್ತೇವೆ ಎಂದು ಹೇಳಬಹುದು. ಪ್ರಾಣಕ್ಕಿಂತ ಭಾಷೆಯೇ ಪ್ರಧಾನ ಹೇಳಬಹುದು. ಆದರೆ ಯೋಚಿಸಿ ಪ್ರಾಣ ಎಂಬುದು ಇಲ್ಲದಿದ್ದರೆ ಇವೆರಡೂ ಅನುಭವಕ್ಕೆ ಬರುವುದಿಲ್ಲ. ಮರಣಾನಂತರ ಏನು ಎಂಬುದು ಎಂದು ಉತ್ತರ ಇಲ್ಲದೇ ಇರುವಾಗ ತಿಳಿದಿರುವ ಈ ಸಾವಿನ ಮೊದಲಿನ ಜೀವನದ ಮೌಲ್ಯ ತಿಳಿದುಕೊಳ್ಳಬೇಕು.  ಭಾಷೆ ಧರ್ಮ ಈ ಎರಡರ ವೆತ್ಯಾಸಗಳನ್ನು ಬ್ರೀಟೀಷರು ತೋರಿಸಿಕೊಟ್ಟು ಅದನ್ನೇ ಕೊನೆಯ ತನಕ ಜೀವಂತ ವಿರಿಸಿ ನಮ್ಮನ್ನು ಆಳಿದರು. ಬ್ರೀಟೀಷರು ಹೋದರು....ಆದರೆ ಈ ವಿಷಬೀಜ ಇಲ್ಲೇ ಬಿಟ್ಟು ಹೋದರು. ಹಸಿವಿನ ಹೋರಾಟಕ್ಕಿಂತಲೂ ಭಾಷೆ ಧರ್ಮ ರಾಜಕೀಯದ ಹೋರಾಟವೇ ಅಧಿಕವಾಗುತ್ತದೆ. ಅದುವೇ ಜೀವನವಾಗಿ ಮುಖ್ಯವಾದ ಜೀವನವೇ ಮರೆತು ಹೋಗಿದೆ.  


ಈ ಚಿಂತನೆಗಳಲ್ಲಿ ಸರಿ ಎಂದು ಹೇಳದ ವಿಚಾರಗಳು ಬಹಳಷ್ಟು ಇರಬಹುದು. ಆದರೆ ಇರುವ ವಿಚಾರಗಳು ಮಾತ್ರ ಗಂಭೀರವಾಗಿ ಚಿಂತಿಸುವಂತೆ ಮಾಡುತ್ತದೆ