ಹಲವು ಸಲ ಬರಹಗಳಿಗೆ ವಿಷಯ ಹೇಗೆ ಸಿಗುತ್ತದೆ ಎಂದು ಕೇಳಿದರೆ, ಅದು ಹೀಗೂ ಇರುತ್ತದೆ. ಒಂದು ಸಲ ಭಗವದ್ಗೀತೆಯ ಪುಟಗಳನ್ನು ತಿರುವಿ ನೋಡಿದರೆ ಹಲವಾರು ಚಿಂತನೆಗಳು ಚಿಗುರೊಡೆಯುತ್ತದೆ. ಹಾಗೆ ಚಿಗುರಿದ ವಿಷಯಗಳು ಹಲವು.
"ಕಥಂ ಭೀಷ್ಮ ಮಹಂ ಸಂಖ್ಯೇ ದ್ರೋಣಂ ಚ ಮಧುಸೂದನ | ಇಷುಭಿಃ ಪ್ರತಿಯೋತ್ಸ್ಯಾಮಿ ಪೂಜಾರ್ಹ ವರಿಸೂದನ"
ಭಗದ್ಗೀತೆಯ ದ್ವೀತಿಯ ಅಧ್ಯಾಯದ ಸಾಂಖ್ಯಯೋಗದ ನಾಲ್ಕನೇ ಶ್ಲೋಕ. ಇದು ಅರ್ಜುನ ಶ್ರೀಕೃಷ್ಣನಲ್ಲಿ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸುವ ಮಾತು. ," ಎಲೈ ಮಧೂಸದನನೇ , ಶತ್ರುಗಳನ್ನು ನಾಶಗೋಳಿಸುವವನೇ ಪೂಜಾರ್ಹರಾಗಿರುವ ಭೀಷ್ಮ ದ್ರೋಣರನ್ನು ಕದನದಲ್ಲಿ ಬಾಣಗಳಿಂದ ಹೇಗೆ ಹೊಡೆಯಲಿ?"
ಭೀಷ್ಮ ದ್ರೋಣರಿಗಿಂತ ಅರ್ಜುನನಿಗೆ ಮಾನವೀಯ ಸಂಭಂದಗಳ ಅರಿವು ಮತ್ತು ಅದರಲ್ಲಿ ಗೌರವ ಇತ್ತು ಅಂತ ಮೇಲು ನೋಟಕ್ಕೆ ಅರ್ಜುನ ಹೇಳುವುದು ಸರಿ ಎಂದೆನಿಸುತ್ತದೆ, ಆದರೆ ಅರ್ಜುನನ ಚಿಂತನೆ ಅಸ್ಥಾನದ್ದು ಅಂತ ಶ್ರೀಕೃಷ್ಣ ಹೇಳುತ್ತಾನೆ. ಯಾಕೆ ಅರ್ಜುನನಿಗೆ ಮಾತ್ರ ವಿರೋಧಿ ಸ್ಥಾನದಲ್ಲಿ ಕುಳಿತ ಭೀಷ್ಮ ದ್ರೋಣ ಕೃಪರ ಮೇಲೆ ಅನುಕಂಪ ಮೂಡುತ್ತದೆ. ಅದೇ ಅನುಕಂಪ ಭೀಷ್ಮರಿಗಾಗಲೀ ದ್ರೋಣರಿಗಾಗಲೀ ಅರ್ಜುನನ ಮೇಲೆ ಅಥವಾ ಪಾಂಡವರ ಮೇಲೆ ಯಾಕೆ ಮೂಡುವುದಿಲ್ಲ? ಅವರಿಗೆ ಮಮಕಾರ ಇರಲಿಲ್ಲವೇ? ಅನುಕಂಪ ಇರಲಿಲ್ಲವೇ ? ಯಾವ ಕೊಡುಗೆಯೂ ಅಸ್ಥಾನದಲ್ಲಿ ಇರಕೂಡದು. ಇದರ ಅರಿವು ಅತೀ ಮುಖ್ಯ. ಭೀಷ್ಮ ದ್ರೋಣಾದಿಗಳಿಗೆ ಆ ಅರಿವಿನ ಜ್ಞಾನ ಇತ್ತು. ಅರ್ಜುನನ ಅನುಕಂಪ ಅಸ್ಥಾನದಲ್ಲಿತ್ತು. ಯುದ್ಧವೇ ನಿರ್ಣಯವಾಗಿ ಯುದ್ಧರಂಗಕ್ಕೆ ಬಂದ ಮೇಲೆ ಅಲ್ಲಿ ಯುದ್ದ ಮತ್ತು ವೀರೋಧಿ ಇವುಗಳಷ್ಟೇ ಮುಖ್ಯವಾಗುತ್ತದೆ. ಅರ್ಜುನ ಸಂಭಂಧಗಳನ್ನಷ್ಟೇ ನೋಡಿದ. ಆದರೆ ಕರ್ಮವನ್ನು ಮರೆತ.
ವಾಸ್ತವದ ಪ್ರಾಪಂಚಿಕ ವ್ಯವಹಾರದಲ್ಲೂ ಹೀಗೆ, ನಮ್ಮ ಕರ್ತವ್ಯ ಪ್ರಜ್ಞೆ ಜಾಗೃತವಾಗಬೇಕು. ಪರಿಶುದ್ಧ ಹಾಲನ್ನು ಶುದ್ದವಾದ ಪಾತ್ರೆಯಲ್ಲೇ ತುಂಬಿಸಿಕೊಳ್ಳಬೇಕು. ಹಾಗಾದರೆ ಮಾತ್ರವೇ ಹಾಲು ಹಾಲಾಗಿ ಉಳಿಯುತ್ತದೆ ಇಲ್ಲವಾದರೆ ಅದು ಕೆಡುತ್ತದೆ. ಮೂರ್ಖರ ಗುಂಪಿನಲ್ಲಿ ವೇದಾಂತ ಬೋಧಿಸಿದರೆ ವೇದಾಂತವೇ ಕೆಡುಕಾಗಿ ಕಾಣಬಹುದು.ಹಾಗಾಗಿ ಅರ್ಜುನನ ಅನುಕಂಪ ಕರುಣೆ, ಗುರು ಹಿರಿಯರ ಮೇಲಿನ ಪ್ರೀತಿ ಗೌರವ ಎಲ್ಲವೂ ಇಲ್ಲಿ ಅಪ್ರಸ್ತುತವಾಗುತ್ತದೆ. ಮಾತ್ರವಲ್ಲ ಅದು ನಿಷ್ಫಲವಾಗುತ್ತದೆ. ಅಪ್ರಸ್ತುತವಾದ ಅರ್ಜುನನ ಸದ್ಭಾವನೆ ಏನಿದ್ದರೂ ಅದು ಆತನ ಪುರುಷತ್ವವನ್ನು ಹರಣಮಾಡಿ ಆತನಲ್ಲಿ ಷಂಡತನವನ್ನು ಪ್ರಚೋದಿಸುತ್ತದೆ. ಹಾಗಾಗಿ ಅಲ್ಲಿ ಶ್ರೀ ಕೃಷ್ಣ ಆತನ ಈ ಭಾವನಗೆಳನ್ನು ಲೇವಡಿಯಾಡುತ್ತಾನೆ.
ಪ್ರೀತಿ ಪ್ರೇಮ ಮಮಕಾರ ಎಲ್ಲವೂ ವ್ಯಕ್ತಿ ಸನ್ನಿವೇಶ ಪರಿಸರ ನೋಡಿ ನಿರ್ಣಯಿಸಲ್ಪಡಬೇಕು. ಆಗ ಅವುಗಳಿಗೆ ಮೌಲ್ಯ ಗೌರವ ಒದಗಿಬರುತ್ತದೆ. ಇಲ್ಲವಾದರೆ ಅದರ ಅರ್ಥವೇ ಕೆಡಬಹುದು. ಪ್ರೇಮ ಕಾಮ ವಾಗಬಹುದು, ಮಮಕಾರ ಮೋಹವಾಗಬಹುದು. ಆಗ ಅಲ್ಲಿ ಕೆಡುಕುಗಳು ಗೋಚರಿಸುವುದಿಲ್ಲ. ಭೀಷ್ಮ ದ್ರೋಣರಿಗೆ ಅರ್ಜುನನ ಮೇಲೆ ಮೋಹವೂ ಮಮಕಾರವೂ ಇತ್ತು. ಆದರೆ ಅಲ್ಲಿ ಕಾಳಗದ ಉದ್ದೇಶದಲ್ಲೇ ಬಂದವರಿಗೆ ಅದು ಅಪ್ರಸ್ತುತವಾಗಿ ಕಂಡಿತು.
ನಮ್ಮ ಗೆಲುವನ್ನೇ ಬಯಸಿ , ನಮ್ಮ ಸುಖ ಸಂತೋಷವನ್ನು ಬಯಸುವವರ ಎದುರು ನಮ್ಮ ಸೋಲು, ನೋವನ್ನು ನಾವು ಬಹಿರಂಗ ಪಡಿಸುವುದನ್ನೂ ಬಯಸುವುದಿಲ್ಲ. ಸೋಲನ್ನು ದುಃಖವನ್ನು ತೋರಿಸದೇ ಎಲ್ಲವನ್ನು ಮರೆಮಾಚುತ್ತೇವೆ. ನಮ್ಮ ಕೊಡುಗೆಗಳನ್ನು ಮೊದಲು ನಾವು ಗೌರವಿಸಬೇಕು. ಅದು ಎಲ್ಲಿ ಹೇಗೆ ನೀಡಬೇಕು, ಹೇಗೆ ಒದಗಿಸಬೇಕು ಎಂಬುದರ ನಿರ್ಣಯ ನಮ್ಮದು. ಆದರೆ ಅದಕ್ಕೆ ಗೌರವ ನಾವು ಎಲ್ಲಿ ಹೇಗೆ ಒದಗಿಸುತ್ತೇವೆ ಎಂಬುದರಲ್ಲಿ ಸಿದ್ಧವಾಗುತ್ತದೆ. ಭಗವಂತನೂ ಗೀತೆಯ ರಹಸ್ಯವನ್ನು ಬೋಧಿಸುವುದಕ್ಕೆ ಅರ್ಜುನನನ್ನೇ ಆರಿಸಿಕೊಂಡ. ಪರಮ ವೈಷ್ಟವ ಭಾಗವವತ ಭೀಷ್ಮನಿಗೆ ಬೋಧಿಸಲಿಲ್ಲ.
ದಾನವನ್ನು ಮಾಡುವುದು ಶ್ರೇಷ್ಠ. ಹಸಿದವನಿಗೆ ಆಹಾರ, ರೋಗಿಗೆ ಆರೈಕೆ, ಆರ್ತರಿಗೆ ಆಶ್ರಯ ಕೊಡುವುದು ಉತ್ತಮ. ಆದರೆ ಅದರ ಆಯ್ಕೆ ಇವುಗಳ ಗೌರವವನ್ನು ಹೆಚ್ಚಿಸುತ್ತದೆ. ಆರ್ಹತೆ ಇಲ್ಲದವರಿಗ ಶ್ರೇಷ್ಠವಾದುದನ್ನು ನೀಡಿದರೆ ಅದು ಶ್ರೇಷ್ಠವೆನಿಸುವುದಿಲ್ಲ. ಕಳ್ಳನಿಗೆ, ದುರ್ವ್ಯಸನಿಗೆ ಧನಸಹಾಯವನ್ನು ಮಾಡಿದಲ್ಲಿ ಅದು ವಿನಿಯೋಗವಾಗಬಹುದು ಆದರೆ ಅದು ಸದ್ವಿನಿಯೋಗವಾಗುವುದಿಲ್ಲ. ಸದ್ ಎಲ್ಲಿರುತ್ತದೆ ಅದು ಶ್ರೇಷ್ಠವಾಗಿರುತ್ತದೆ. ಎಲ್ಲಿ ಕತ್ತಲೆ ಇರುವುದೋ ಅಲ್ಲಿ ದೀಪ ಬೆಳಗಿಸಬೇಕು. ಆಗ ದೀಪದ ಬೆಳಕು ಸಾರ್ಥಕತೆಯನ್ನು ಪಡೆಯುತ್ತದೆ. ಬೆಳಕು ಇದ್ದಲ್ಲೇ ದೀಪ ಬೆಳಗಿದರೆ ಆ ದೀಪಕ್ಕೂ ಗೌರವವಿಲ್ಲ, ಬೆಳಕಿಗೂ ಮೌಲ್ಯ ಇರುವುದಿಲ್ಲ. ದಟ್ಟ ಕತ್ತಲೆಯಲ್ಲೇ ತುಂಬಿದ ಕೋಣೆಯಲ್ಲಿ ದೀಪ ಉರಿಸಿದರೂ ಹಲವು ಸಲ ಆ ಬೆಳಕು ಪರ್ಯಾಪ್ತವಾಗುವುದಿಲ್ಲ. ಆಗಲೂ ದೀಪಕ್ಕೂ ಬೆಳಕಿಗೂ ಗೌರವ ಸಿಗುವುದಿಲ್ಲ. ಹಾಗಿದ್ದಾಗ ಅಲ್ಲಿ ದೀಪ ಬೆಳಗಿಸುವುದು ಮೂರ್ಖತನವಾಗಬಹುದು. ನಿದ್ದೆ ಮಾಡಿದವರ ಎದುರು ದೀಪ ಉರಿಸಿದರೆ ನಿದ್ರಾಭಂಗವಾಗಬಹುದು. ದೀಪ ಉರಿಸುವುದಕ್ಕೆ ಕ್ಷೇತ್ರ ಸನ್ನಿವೇಶ ನೋಡಬೇಕು. ದೀಪ ಉರಿಸುವುದಷ್ಟೇ ಅಲ್ಲ. ಪ್ರಕಾಶದ ಸದ್ಬಳಕೆಯಾಗಬೇಕು. ಆಗ ಅದು ಮತ್ತಷ್ಟು ಪ್ರಕಾಶವಾಗುತ್ತದೆ. ಬಹುಶಃ ಅರ್ಜುನನಿಗಲ್ಲದೇ ಗೀತೋಪದೇಶವಾಗುತ್ತಿದ್ದರೆ ಅದು ಇಷ್ಟು ಅರ್ಥಪೂರ್ಣವಾಗುತ್ತಿರಲಿಲ್ಲವೇನೋ? ಭಗವಂತನ ಸಂಕಲ್ಪ ಇದು. ಶ್ರೀಕೃಷ್ಣನಂತಹ ಪ್ರವಾಚಕನು ಅರ್ಜುನನಂತಹ ಪೃಚ್ಛಕನೂ ಇರುವುದಕ್ಕೆ ಸಾಧ್ಯವಿಲ್ಲ.



