Friday, February 27, 2026

ಪೃಚ್ಛಕ ಪಾರ್ಥ

 ಹಲವು ಸಲ  ಬರಹಗಳಿಗೆ ವಿಷಯ ಹೇಗೆ ಸಿಗುತ್ತದೆ ಎಂದು ಕೇಳಿದರೆ, ಅದು ಹೀಗೂ ಇರುತ್ತದೆ.  ಒಂದು ಸಲ ಭಗವದ್ಗೀತೆಯ ಪುಟಗಳನ್ನು ತಿರುವಿ ನೋಡಿದರೆ ಹಲವಾರು ಚಿಂತನೆಗಳು ಚಿಗುರೊಡೆಯುತ್ತದೆ. ಹಾಗೆ ಚಿಗುರಿದ ವಿಷಯಗಳು ಹಲವು. 



"ಕಥಂ ಭೀಷ್ಮ ಮಹಂ ಸಂಖ್ಯೇ ದ್ರೋಣಂ ಚ ಮಧುಸೂದನ |  ಇಷುಭಿಃ ಪ್ರತಿಯೋತ್ಸ್ಯಾಮಿ ಪೂಜಾರ್ಹ ವರಿಸೂದನ"

ಭಗದ್ಗೀತೆಯ ದ್ವೀತಿಯ ಅಧ್ಯಾಯದ ಸಾಂಖ್ಯಯೋಗದ ನಾಲ್ಕನೇ ಶ್ಲೋಕ. ಇದು ಅರ್ಜುನ ಶ್ರೀಕೃಷ್ಣನಲ್ಲಿ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸುವ ಮಾತು. ," ಎಲೈ ಮಧೂಸದನನೇ , ಶತ್ರುಗಳನ್ನು ನಾಶಗೋಳಿಸುವವನೇ ಪೂಜಾರ್ಹರಾಗಿರುವ ಭೀಷ್ಮ ದ್ರೋಣರನ್ನು ಕದನದಲ್ಲಿ ಬಾಣಗಳಿಂದ  ಹೇಗೆ ಹೊಡೆಯಲಿ?" 

ಭೀಷ್ಮ ದ್ರೋಣರಿಗಿಂತ ಅರ್ಜುನನಿಗೆ ಮಾನವೀಯ ಸಂಭಂದಗಳ ಅರಿವು ಮತ್ತು ಅದರಲ್ಲಿ ಗೌರವ ಇತ್ತು ಅಂತ ಮೇಲು ನೋಟಕ್ಕೆ ಅರ್ಜುನ ಹೇಳುವುದು ಸರಿ ಎಂದೆನಿಸುತ್ತದೆ, ಆದರೆ ಅರ್ಜುನನ ಚಿಂತನೆ ಅಸ್ಥಾನದ್ದು ಅಂತ ಶ್ರೀಕೃಷ್ಣ ಹೇಳುತ್ತಾನೆ. ಯಾಕೆ ಅರ್ಜುನನಿಗೆ ಮಾತ್ರ ವಿರೋಧಿ ಸ್ಥಾನದಲ್ಲಿ ಕುಳಿತ ಭೀಷ್ಮ ದ್ರೋಣ ಕೃಪರ ಮೇಲೆ ಅನುಕಂಪ ಮೂಡುತ್ತದೆ. ಅದೇ ಅನುಕಂಪ ಭೀಷ್ಮರಿಗಾಗಲೀ ದ್ರೋಣರಿಗಾಗಲೀ ಅರ್ಜುನನ ಮೇಲೆ ಅಥವಾ ಪಾಂಡವರ ಮೇಲೆ ಯಾಕೆ ಮೂಡುವುದಿಲ್ಲ? ಅವರಿಗೆ ಮಮಕಾರ ಇರಲಿಲ್ಲವೇ? ಅನುಕಂಪ ಇರಲಿಲ್ಲವೇ ? ಯಾವ ಕೊಡುಗೆಯೂ ಅಸ್ಥಾನದಲ್ಲಿ ಇರಕೂಡದು. ಇದರ ಅರಿವು ಅತೀ ಮುಖ್ಯ. ಭೀಷ್ಮ ದ್ರೋಣಾದಿಗಳಿಗೆ ಆ ಅರಿವಿನ ಜ್ಞಾನ ಇತ್ತು. ಅರ್ಜುನನ ಅನುಕಂಪ ಅಸ್ಥಾನದಲ್ಲಿತ್ತು. ಯುದ್ಧವೇ ನಿರ್ಣಯವಾಗಿ ಯುದ್ಧರಂಗಕ್ಕೆ ಬಂದ ಮೇಲೆ ಅಲ್ಲಿ ಯುದ್ದ ಮತ್ತು ವೀರೋಧಿ ಇವುಗಳಷ್ಟೇ ಮುಖ್ಯವಾಗುತ್ತದೆ. ಅರ್ಜುನ ಸಂಭಂಧಗಳನ್ನಷ್ಟೇ ನೋಡಿದ. ಆದರೆ ಕರ್ಮವನ್ನು ಮರೆತ.

ವಾಸ್ತವದ ಪ್ರಾಪಂಚಿಕ ವ್ಯವಹಾರದಲ್ಲೂ  ಹೀಗೆ, ನಮ್ಮ ಕರ್ತವ್ಯ ಪ್ರಜ್ಞೆ ಜಾಗೃತವಾಗಬೇಕು. ಪರಿಶುದ್ಧ ಹಾಲನ್ನು ಶುದ್ದವಾದ ಪಾತ್ರೆಯಲ್ಲೇ ತುಂಬಿಸಿಕೊಳ್ಳಬೇಕು. ಹಾಗಾದರೆ ಮಾತ್ರವೇ ಹಾಲು ಹಾಲಾಗಿ ಉಳಿಯುತ್ತದೆ ಇಲ್ಲವಾದರೆ ಅದು ಕೆಡುತ್ತದೆ. ಮೂರ್ಖರ ಗುಂಪಿನಲ್ಲಿ ವೇದಾಂತ ಬೋಧಿಸಿದರೆ ವೇದಾಂತವೇ ಕೆಡುಕಾಗಿ ಕಾಣಬಹುದು.ಹಾಗಾಗಿ ಅರ್ಜುನನ ಅನುಕಂಪ ಕರುಣೆ, ಗುರು ಹಿರಿಯರ ಮೇಲಿನ ಪ್ರೀತಿ ಗೌರವ  ಎಲ್ಲವೂ ಇಲ್ಲಿ ಅಪ್ರಸ್ತುತವಾಗುತ್ತದೆ. ಮಾತ್ರವಲ್ಲ ಅದು ನಿಷ್ಫಲವಾಗುತ್ತದೆ.  ಅಪ್ರಸ್ತುತವಾದ ಅರ್ಜುನನ ಸದ್ಭಾವನೆ ಏನಿದ್ದರೂ ಅದು ಆತನ ಪುರುಷತ್ವವನ್ನು ಹರಣಮಾಡಿ ಆತನಲ್ಲಿ ಷಂಡತನವನ್ನು ಪ್ರಚೋದಿಸುತ್ತದೆ. ಹಾಗಾಗಿ ಅಲ್ಲಿ ಶ್ರೀ ಕೃಷ್ಣ ಆತನ ಈ ಭಾವನಗೆಳನ್ನು ಲೇವಡಿಯಾಡುತ್ತಾನೆ.  

ಪ್ರೀತಿ ಪ್ರೇಮ ಮಮಕಾರ ಎಲ್ಲವೂ ವ್ಯಕ್ತಿ ಸನ್ನಿವೇಶ ಪರಿಸರ ನೋಡಿ ನಿರ್ಣಯಿಸಲ್ಪಡಬೇಕು. ಆಗ ಅವುಗಳಿಗೆ ಮೌಲ್ಯ ಗೌರವ ಒದಗಿಬರುತ್ತದೆ. ಇಲ್ಲವಾದರೆ ಅದರ ಅರ್ಥವೇ ಕೆಡಬಹುದು. ಪ್ರೇಮ ಕಾಮ ವಾಗಬಹುದು, ಮಮಕಾರ ಮೋಹವಾಗಬಹುದು. ಆಗ ಅಲ್ಲಿ ಕೆಡುಕುಗಳು ಗೋಚರಿಸುವುದಿಲ್ಲ. ಭೀಷ್ಮ ದ್ರೋಣರಿಗೆ ಅರ್ಜುನನ ಮೇಲೆ ಮೋಹವೂ ಮಮಕಾರವೂ ಇತ್ತು. ಆದರೆ ಅಲ್ಲಿ ಕಾಳಗದ  ಉದ್ದೇಶದಲ್ಲೇ ಬಂದವರಿಗೆ ಅದು ಅಪ್ರಸ್ತುತವಾಗಿ ಕಂಡಿತು.  

ನಮ್ಮ ಗೆಲುವನ್ನೇ ಬಯಸಿ , ನಮ್ಮ ಸುಖ ಸಂತೋಷವನ್ನು ಬಯಸುವವರ ಎದುರು ನಮ್ಮ ಸೋಲು, ನೋವನ್ನು ನಾವು ಬಹಿರಂಗ ಪಡಿಸುವುದನ್ನೂ ಬಯಸುವುದಿಲ್ಲ. ಸೋಲನ್ನು ದುಃಖವನ್ನು ತೋರಿಸದೇ ಎಲ್ಲವನ್ನು ಮರೆಮಾಚುತ್ತೇವೆ. ನಮ್ಮ ಕೊಡುಗೆಗಳನ್ನು ಮೊದಲು ನಾವು ಗೌರವಿಸಬೇಕು. ಅದು ಎಲ್ಲಿ ಹೇಗೆ ನೀಡಬೇಕು, ಹೇಗೆ ಒದಗಿಸಬೇಕು ಎಂಬುದರ ನಿರ್ಣಯ ನಮ್ಮದು. ಆದರೆ ಅದಕ್ಕೆ ಗೌರವ ನಾವು ಎಲ್ಲಿ ಹೇಗೆ ಒದಗಿಸುತ್ತೇವೆ ಎಂಬುದರಲ್ಲಿ ಸಿದ್ಧವಾಗುತ್ತದೆ.  ಭಗವಂತನೂ ಗೀತೆಯ ರಹಸ್ಯವನ್ನು ಬೋಧಿಸುವುದಕ್ಕೆ ಅರ್ಜುನನನ್ನೇ ಆರಿಸಿಕೊಂಡ. ಪರಮ ವೈಷ್ಟವ ಭಾಗವವತ ಭೀಷ್ಮನಿಗೆ ಬೋಧಿಸಲಿಲ್ಲ.

ದಾನವನ್ನು ಮಾಡುವುದು ಶ್ರೇಷ್ಠ. ಹಸಿದವನಿಗೆ ಆಹಾರ, ರೋಗಿಗೆ ಆರೈಕೆ, ಆರ್ತರಿಗೆ ಆಶ್ರಯ ಕೊಡುವುದು ಉತ್ತಮ. ಆದರೆ ಅದರ ಆಯ್ಕೆ ಇವುಗಳ ಗೌರವವನ್ನು ಹೆಚ್ಚಿಸುತ್ತದೆ. ಆರ್ಹತೆ ಇಲ್ಲದವರಿಗ ಶ್ರೇಷ್ಠವಾದುದನ್ನು ನೀಡಿದರೆ ಅದು ಶ್ರೇಷ್ಠವೆನಿಸುವುದಿಲ್ಲ. ಕಳ್ಳನಿಗೆ, ದುರ್ವ್ಯಸನಿಗೆ ಧನಸಹಾಯವನ್ನು ಮಾಡಿದಲ್ಲಿ ಅದು ವಿನಿಯೋಗವಾಗಬಹುದು ಆದರೆ ಅದು ಸದ್ವಿನಿಯೋಗವಾಗುವುದಿಲ್ಲ. ಸದ್  ಎಲ್ಲಿರುತ್ತದೆ ಅದು ಶ್ರೇಷ್ಠವಾಗಿರುತ್ತದೆ. ಎಲ್ಲಿ ಕತ್ತಲೆ ಇರುವುದೋ ಅಲ್ಲಿ ದೀಪ ಬೆಳಗಿಸಬೇಕು. ಆಗ ದೀಪದ ಬೆಳಕು ಸಾರ್ಥಕತೆಯನ್ನು ಪಡೆಯುತ್ತದೆ. ಬೆಳಕು ಇದ್ದಲ್ಲೇ ದೀಪ ಬೆಳಗಿದರೆ ಆ ದೀಪಕ್ಕೂ ಗೌರವವಿಲ್ಲ, ಬೆಳಕಿಗೂ ಮೌಲ್ಯ ಇರುವುದಿಲ್ಲ. ದಟ್ಟ ಕತ್ತಲೆಯಲ್ಲೇ ತುಂಬಿದ ಕೋಣೆಯಲ್ಲಿ ದೀಪ ಉರಿಸಿದರೂ ಹಲವು ಸಲ ಆ ಬೆಳಕು ಪರ್ಯಾಪ್ತವಾಗುವುದಿಲ್ಲ. ಆಗಲೂ ದೀಪಕ್ಕೂ ಬೆಳಕಿಗೂ ಗೌರವ ಸಿಗುವುದಿಲ್ಲ. ಹಾಗಿದ್ದಾಗ ಅಲ್ಲಿ ದೀಪ ಬೆಳಗಿಸುವುದು ಮೂರ್ಖತನವಾಗಬಹುದು. ನಿದ್ದೆ ಮಾಡಿದವರ ಎದುರು ದೀಪ ಉರಿಸಿದರೆ ನಿದ್ರಾಭಂಗವಾಗಬಹುದು. ದೀಪ ಉರಿಸುವುದಕ್ಕೆ ಕ್ಷೇತ್ರ ಸನ್ನಿವೇಶ ನೋಡಬೇಕು. ದೀಪ ಉರಿಸುವುದಷ್ಟೇ ಅಲ್ಲ. ಪ್ರಕಾಶದ ಸದ್ಬಳಕೆಯಾಗಬೇಕು. ಆಗ ಅದು ಮತ್ತಷ್ಟು ಪ್ರಕಾಶವಾಗುತ್ತದೆ. ಬಹುಶಃ ಅರ್ಜುನನಿಗಲ್ಲದೇ ಗೀತೋಪದೇಶವಾಗುತ್ತಿದ್ದರೆ ಅದು ಇಷ್ಟು ಅರ್ಥಪೂರ್ಣವಾಗುತ್ತಿರಲಿಲ್ಲವೇನೋ? ಭಗವಂತನ ಸಂಕಲ್ಪ ಇದು. ಶ್ರೀಕೃಷ್ಣನಂತಹ ಪ್ರವಾಚಕನು ಅರ್ಜುನನಂತಹ ಪೃಚ್ಛಕನೂ ಇರುವುದಕ್ಕೆ ಸಾಧ್ಯವಿಲ್ಲ. 


Saturday, February 21, 2026

ಇದು ಜೀವನ.

ಮೊನ್ನೆ ಒಬ್ಬರು ವ್ಯಕ್ತಿ ನನ್ನ ಬಳಿಗೆ ಬಂದಿದ್ದರು. ಅವರಿಗೆ ಮಾಂಸಾಹಾರಿ ಹೋಟೇಲ್ ಇದೆ. ಯಾವುದೋ  ಜಿ ಎಸ್ ಟಿ ಕೆಲಸಕ್ಕೆ ಬಂದಿದ್ದರು. ಅವರು ಹೇಳಿದ ಒಂದು ಮಾತು ನನಗೆ ಬಹಳ ಚಿಂತಿಸುವಂತೆ ಮಾಡಿತು. ಅವರು ಹೇಳಿದರು. ನಮಗೆ ಭಾಷೆ ಧರ್ಮ ಎಲ್ಲವೂ ಮುಖ್ಯವಾಗುತ್ತದೆ. ಆದರೆ ನಮ್ಮ ಜೀವನ ಮುಖ್ಯವಾಗುವುದಿಲ್ಲ. ಹಿಂದಿಯವರು ಅಥವಾ ಉತ್ತರ ಭಾರತದವರು ಅಂತ ಇಲ್ಲಿ ಹೀನಾಯವಾಗಿ ಕಾಣುತ್ತಾರೆ. ಭಾಷೆ ಬರುವುದಿಲ್ಲ. ಅಥವಾ ಕನ್ನಡ ಮಾತನಾಡುವುದಿಲ್ಲ ಎಂದು ಹಳಿಯುತ್ತಾರೆ.  ಆದರೆ ಬೆಂಗಳೂರಿನ ಅಷ್ಟೂ ಹೋಟೆಲ್ ಉಸಿರುರಾಡುತ್ತಿರುವುದು ಇವರಿಂದಾಗಿ. ಬೇರೆ ರಾಜ್ಯದಿಂದ ಉದ್ಯೋಗ ಅಥವಾ ವಿದ್ಯೆಗಾಗಿ ಇಲ್ಲಿ ಬಂದು ಪಿಜಿ ಬಾಡಿಗೆ ಮನೆ ಮಾಡಿ ನೆಲಸುತ್ತಾರೆ. ಅವರಿಗೆ ಈ ಹೋಟೆಲ್ ಗಳೇ ಆಹಾರಕ್ಕೆ ಆಧಾರ. ಅವರ ವ್ಯಾಪಾರವೇ ನಮಗೆ ಮುಖ್ಯವಾಗುತ್ತದೆ. ಇಲ್ಲಿನವರೂ ಹೋಟೆಲಿಗೆ ಬರುತ್ತಿದ್ದರೂ...ಉತ್ತರ ಅನ್ಯ ರಾಜ್ಯದವರ ವ್ಯಾಪಾರ ಬಹಳ ಮುಖ್ಯವಾಗುತ್ತದೆ. ಅದು ಬೆಂಗಳೂರಾದರೂ ಅಷ್ಟೆ ಮಂಗಳೂರಾದರೂ ಅಷ್ಟೇ. 

ಆ ವ್ಯಕ್ತಿ ಹೇಳಿದ್ದರಲ್ಲಿ ಬಹಳಷ್ಟು ನಿಜಾಂಶ ಅಂತ ತೋರಿತು. ಹೌದು, ಬೆಂಗಳೂರಲ್ಲಿ ಪಿಜಿಯಲ್ಲೋ ಬಾಡಿಗೆ ಮನೆಯಲ್ಲಿ ಕುಳಿತು ಸ್ವಂತ ಅಡುಗೆ ಮಾಡಲಾಗದವರಿಗೆ ಅಥವಾ ಇನ್ನಿತರ ಕಾರಣಗಳಿಗೆ ಅವರಿಗೆ ಹೋಟೇಲ್ ಗಳೇ ಆಶ್ರಯ. ಇದನ್ನು ಅಲ್ಲಗಳೆಯುವುದಕ್ಕೆ ಸಾಧ್ಯವಿಲ್ಲ. ಮಂಗಳೂರಿನಂತಹ ನಗರದಲ್ಲೂ ಅಷ್ಟೇ ಅನ್ಯ ರಾಜ್ಯದವರ ವ್ಯವಹಾರ ಸಾಕಷ್ಟು ಇದೆ. ಹಾಗಾಗಿ ಆತ ಹೇಳಿದ್ದು ನಮಗೆ ಭಾಷೆ ಮುಖ್ಯವಾಗುತ್ತದೆ ಜೀವನ ಮುಖ್ಯವಾಗುವುದಿಲ್ಲ. ವಾಸ್ತವದಲ್ಲಿ ಊರಿನ ಭಾಷೆ ಸಂಸ್ಕೃತಿ ನಿಜವಾಗಿಯೂ ಮುಖ್ಯವಾಗುತ್ತದೆ. ಅದರ ಜತೆ ಧರ್ಮವೂ ಮುಖ್ಯವಾಗುತ್ತದೆ. ಆದರೆ ಜೀವನ ಎಂಬುದು ವಾಸ್ತವದ ಸತ್ಯಕ್ಕೆ ಸಾಕ್ಷಿಯಾಗಿ ಹಾಗೇ ಉಳಿಯುತ್ತದೆ. ಧರ್ಮ ಭಾಷೆಯನ್ನು ದ್ವೇಷಿಸಬೇಕು ಎಂದೇನಲ್ಲ, ಆದರೆ ಇವೆರಡನ್ನು ಗೌರವಿಸಿ ಹೊಂದಿಕೊಳ್ಳುವ ಜೀವನ ಗೋಚರಿಸುವುದಿಲ್ಲ. 

ಈಗ ಭಾಷೆ ಧರ್ಮವನ್ನು ಹೇಳಿಕೊಂಡು ಆಗುವ ಗಲಭೆಗಳು ಸಮರಗಳು ನೋಡುವಾಗ ಮುಂದೆ ಜೀವನ ದುರ್ಭರವಾಗುವುದರಲ್ಲಿ ಯಾವ ಸಂದೇಹವೂ ಉಳಿದಿಲ್ಲ. ಹೊಟ್ಟೆಯ ಹಸಿವನ್ನೂ ಮರೆತು ಇದು ಮುಖ್ಯವಾಗುತ್ತದೆ. ಹಸಿವು ಹೋಗಲಿ ಹಲವು ನಂಬುವ ಭಗವಂತನೂ ಮರೆತು ಹೋಗಿಬಿಡುತ್ತಾನೆ. ಎರುತ್ತಿರು ಡಾಲರ್ ಬೆಲೆಯ ಬಗ್ಗೆ ಹೇಳುತ್ತೇವೆ. ಜಿಡಿಪಿಯ ಕುರಿತು ಚರ್ಚಿಸುತ್ತೇವೆ. ಏರುವ ಜೀವನಾವಶ್ಯಕ ವಸ್ತುಗಳ ಬೆಲೆಯನ್ನು ಹೇಳುತ್ತೇವೆ.  ಆದರೆ ಆದರೆ ಭಾಷೆ ಧರ್ಮಗಳ ಬಗ್ಗೆ ಹೋರಾಡುವಾಗ ಇವೆರಡೂ ಜ್ಞಾಪಕಕ್ಕೆ ಬರುವುದಿಲ್ಲ. ಇದು ವಾಸ್ತವ. ಧರ್ಮಕ್ಕಾಗಿ ಜೀವ ಕೊಡುತ್ತೇವೆ ಎಂದು ಹೇಳಬಹುದು. ಪ್ರಾಣಕ್ಕಿಂತ ಭಾಷೆಯೇ ಪ್ರಧಾನ ಹೇಳಬಹುದು. ಆದರೆ ಯೋಚಿಸಿ ಪ್ರಾಣ ಎಂಬುದು ಇಲ್ಲದಿದ್ದರೆ ಇವೆರಡೂ ಅನುಭವಕ್ಕೆ ಬರುವುದಿಲ್ಲ. ಮರಣಾನಂತರ ಏನು ಎಂಬುದು ಎಂದು ಉತ್ತರ ಇಲ್ಲದೇ ಇರುವಾಗ ತಿಳಿದಿರುವ ಈ ಸಾವಿನ ಮೊದಲಿನ ಜೀವನದ ಮೌಲ್ಯ ತಿಳಿದುಕೊಳ್ಳಬೇಕು.  ಭಾಷೆ ಧರ್ಮ ಈ ಎರಡರ ವೆತ್ಯಾಸಗಳನ್ನು ಬ್ರೀಟೀಷರು ತೋರಿಸಿಕೊಟ್ಟು ಅದನ್ನೇ ಕೊನೆಯ ತನಕ ಜೀವಂತ ವಿರಿಸಿ ನಮ್ಮನ್ನು ಆಳಿದರು. ಬ್ರೀಟೀಷರು ಹೋದರು....ಆದರೆ ಈ ವಿಷಬೀಜ ಇಲ್ಲೇ ಬಿಟ್ಟು ಹೋದರು. ಹಸಿವಿನ ಹೋರಾಟಕ್ಕಿಂತಲೂ ಭಾಷೆ ಧರ್ಮ ರಾಜಕೀಯದ ಹೋರಾಟವೇ ಅಧಿಕವಾಗುತ್ತದೆ. ಅದುವೇ ಜೀವನವಾಗಿ ಮುಖ್ಯವಾದ ಜೀವನವೇ ಮರೆತು ಹೋಗಿದೆ.  


ಈ ಚಿಂತನೆಗಳಲ್ಲಿ ಸರಿ ಎಂದು ಹೇಳದ ವಿಚಾರಗಳು ಬಹಳಷ್ಟು ಇರಬಹುದು. ಆದರೆ ಇರುವ ವಿಚಾರಗಳು ಮಾತ್ರ ಗಂಭೀರವಾಗಿ ಚಿಂತಿಸುವಂತೆ ಮಾಡುತ್ತದೆ

Friday, February 13, 2026

ಮತ್ತೆಂದೂ ಬರದ ಬಾಲ್ಯ

ಮತ್ತೊಮ್ಮೆ ಅನ್ನಿಸುತ್ತಿದೆ ಬಾಲಕನಾಗಲೇ....

ಬತ್ತಿ ಹೋಗದ ಆ ಕನಸುಗಳು

ಚಿಗುರೊಡೆಯುತ್ತಿರುವ ಆ ನೂರಾರು ಆಶೆಗಳು

ಬಾಲಕನಾಗಲು ಹವಣಿಸುತ್ತಿರುವ ಈ ದಿನಗಳು....

ಮತ್ತೊಮ್ಮೆ ಬಾಲ್ಯವನ್ನು ನೆನಪಿಸುತ್ತಿದೆ. 


ಒಸರು ಕೆಸರೆನ್ನದೇ ನೀರಾಟದ ದಿನಗಳು, 

ಬಿಸಿಲು ಮಳೆ ಎನ್ನದೆ ಅಲೆದ ಬೀದಿ ಗುಡ್ಡಗಳು

ನಾಳೆ ಎಂಬ ಸುಂದರ ದಿನಗಳ ನಿರೀಕ್ಷೆ

ಬದುಕಿನ ಪ್ರತಿಹಂತದ ಪರೀಕ್ಷೆ

ಮತ್ತೊಮ್ಮೆ ಅನ್ನಿಸುತ್ತಿದೆ ಬಾಲಕನಾಗಲೇ


ಬಾಲ್ಯದ ಕನಸು ಕಾಣುವುದದೆಷ್ಟು ಸುಲಭ

ನನಸಾಗದ ಭಯವಿಲ್ಲ ನಿರಾಶೆಯ ಮಡುವಿಲ್ಲ

ಇಂದಲ್ಲ ನಾಳೆ ಎಂಬ ನಿರೀಕ್ಷೆಯ ಭರವಸೆಗಳು

ಮತ್ತೊಮ್ಮೆ ಅನಿಸುತ್ತಿದೆ ಬಾಲಕನಾಗಲೇ


ತನ್ನ ಓಟದಲ್ಲಿ ಕಾಣುವ ವಾಹನಗಳ ಓಟ

ಆಟಿಕೆಯ ಲೋಕದ ಕಲ್ಪನೆಯ ಆಟ

ಮರೆತು ಹೋಗದು ಬಾಲ್ಯದಲಿ ಕಲಿತ ಪಾಠ

ಮತ್ತೊಮ್ಮೆ ಅನಿಸುತ್ತಿದೆ ಬಾಲಕನಾಗಲೇ


Monday, February 9, 2026

ಆ ಒಂದು ನೆನಪು


ಮೊನ್ನೆ  ಊರಿಗೆ ಹೋಗಿದ್ದಾಗ ಮಂಗಳೂರಿನ ನಗರ ಸಾರಿಗೆ (ಸಿಟಿ ಬಸ್ಸು) ಯಲ್ಲಿ ಹೋಗಬೇಕಾಗಿತ್ತು. ಮಂಗಳೂರಿಗೆ ಹೋದಾಗಲೆಲ್ಲ ಸಿಟಿ ಬಸ್ಸಿನಲ್ಲಿ ಸಂಚರಿಸುವುದನ್ನು ನಾನು ಸಾಕಷ್ಟು ಇಷ್ಟ ಪಡುತ್ತೇನೆ. ಯಾಕೆಂದರೆ ಬಾಲ್ಯದಿಂದ ನಡು ಯೌವನದ ತನಕವೂ ಇದ್ದ ನೆನಪುಗಳು ಯಾಕೋ ನಾನಿನ್ನೂ ಭೂಮಿಯಲ್ಲಿದ್ದೇನೆ ಎಂಬ ನೆನಪನ್ನು ತಂದುಕೊಡುತ್ತದೆ. ದುಂಬು ಪೋಲೆ ಎಂದು ಅವಸರಿಸುವ ಕಂಡಕ್ಟರ್. ಊರಿನ ಹೆಸರಿನ ಕಿರುಚಾಟ, ನೂಗು ನುಗ್ಗಲು ಒಂದಷ್ಟು ಬೆವರು ವಾಸನೆ ಎಲ್ಲವೂ ಒಂದು ರೀತಿಯ ಇಷ್ಟ ಪಡುವ ಸಂವೇದನೆಯಾಗಿ ನೆನಪುಗಳನ್ನು ಹೆಕ್ಕಿ ಹೆಕ್ಕಿ ತೆಗೆಯುತ್ತದೆ. ಮಧ್ಯವಯಸ್ಸು ಎಂದರೆ ಅಲ್ಲಿ ಹೊಸದಾಗಿ ಬರೆಯುವುದಕ್ಕೆ ಏನೂ ಇರುವುದಿಲ್ಲ. ಹಳೆಯದನ್ನು ಬರೆಯುತ್ತಾ ಮತ್ತೆ ಅಳಿಸುತ್ತಾ ಆ ನೆನಪಲ್ಲೇ ಕಳೆಯುವ ದಿನಗಳು. ಕೆಲವು ಮತ್ತೂ ಮತ್ತೂ ಕಾಡಿದರೆ, ಇನ್ನು ಕೆಲವು ಕೇವಲ ಕೆಲ ಹೊತ್ತಿನ ಕ್ಷಣಿಕ ನಗು ಮತ್ತು ಕಂಬನಿಗೆ ಸೀಮಿತವಾಗುತ್ತದೆ.  ಅಂದು ಕೂಡ ಸಿಟಿ ಬಸ್ಸಿನಲ್ಲಿ ಸಾಕಷ್ಟು ಜನಸಂದಣಿ ಇತ್ತು. ಹಂಪನಕಟ್ಟೆಯಲ್ಲಿ ಇಳಿಯುವುದಕ್ಕಿತ್ತು. ಬಸ್ಸು ಮಿಲಾಗ್ರಿಸ್ ನಲ್ಲಿ ನಿಂತ ತಕ್ಷಣ ಕೈಯಲ್ಲಿ ಹಿಡಿದ ಚಿಲ್ಲರೆ ದುಡ್ಡು ನಾನು ಇನ್ನೂ ಟಿಕೆಟ್ ತೆಗೆಯದೇ ಇರುವುದನ್ನು ನೆನಪಿಸಿತು.  ಕಂಡಕ್ಟರ್ ಗೆ ಕೊಡುವುದಕ್ಕಾಗಿ ಕೈಯಲ್ಲೇ ಹಿಡಿದುಕೊಂಡಿದ್ದೆ. ಆದರೆ ಕಂಡಕ್ಟರ್ ಹತ್ತಿರ ಬರಲೇ ಇಲ್ಲ. ಕೊನೆಗೆ ಇಳಿಯಲೇ ಬೇಕಾದಾಗ ಕಂಡಕ್ಟರ್ ಬಳಿ ಹೋಗಿ ಆತನ ಕೈಯಲ್ಲಿ ಚಿಲ್ಲರೆಯನ್ನು ಹಾಕಿದೆ. ಸುಮಾರು ದೂರದಿಂದಲೇ ಕಿಟಕಿ ಬದಿ ಕುಳಿತಿದ್ದ ನನ್ನನ್ನು ಗಮನಿಸಿದ್ದನೋ ಏನೋ ನಾನು ಆತನ ಬಳಿಗೆ ಹೋಗಿ ಪ್ರಾಮಾಣಿಕತೆಯಿಂದ ಚಿಲ್ಲರೆ ಹಣವನ್ನು ಹಾಕಿದಾಗ ಆತನ ಮುಖದಲ್ಲಿ ನಸು ನಗು ಮೂಡಿತು.  ಯಾಕೆಂದರೆ ಆ ಹಣ ಕೊಡುವುದಕ್ಕಾಗಿ ನಾನು ಒಂದಿಷ್ಟು ಕಷ್ಟ ಪಟ್ಟದ್ದು ಆತನಿಗೆ ಕಂಡಿತ್ತು. ನಾನು ಹಾಗೇ ಇಳಿದು ಹೋಗುತ್ತಿದ್ದರೆ ಆತನಿಗೆ ಗೊತ್ತಾಗುತ್ತಿರಲಿಲ್ಲ. ಆದರೂ ಚಿಲ್ಲರೆ ದುಡ್ಡಿಗಾಗಿ ನನಗೆ ವಂಚಿಸುವುದು ಸರಿಕಾಣಲಿಲ್ಲ. ಚಿಲ್ಲರೆ ದುಡ್ಡಾದರೂ ಪ್ರಾಮಾಣಿಕತೆಯ ಮೌಲ್ಯ ಕೇವಲ ಚಿಲ್ಲರೆ ಕಾಸಿನಿಂದ ಅಳೆಯುವುದಕ್ಕೆ ಸಾಧ್ಯವಿಲ್ಲ. 



ಈ ಘಟನೆಯ ಜತೆಗೆ ಹಿಂದಿನ ಬಾಲ್ಯದಲ್ಲಿ ನನ್ನ ಪ್ರಾಮಾಣಿಕತೆಗೆ ಘಾಸಿ ಮಾಡಿದ ಘಟನೆಯೊಂದು ನೆನಪಾಯಿತು. ಒಂದು ದಿನ ಬೆಳಗ್ಗೆ ಯಾವುದೋ ಸಾಮಾನು ಖರೀದಿಸುವುದಕ್ಕೆ ನಮ್ಮ ಪೈವಳಿಕೆ ನಗರದ  ಒಂದು ಅಂಗಡಿಗೆ ಹೋಗಿದ್ದೆ. ಅಂಗಡಿ ಅದೇ ತಾನೆ ತೆರೆಯುತ್ತಿದ್ದ. ಅಂಗಡಿಯವನು ಮರದ ಹಲಗೆಯ ಬಾಗಿಲು. ಒಂದೊಂದನ್ನೆ ಕಿತ್ತು ಒಂದು ಕಡೆಗೆ ಸೇರಿಸಿ ಇಡುತ್ತಿದ್ದ.  ಅದರ ನಡುವೆ  ನನಗೆ ಬೇಕಾದ ಸಾಮಾನು ಹೇಳಿದೆ. ಆತ ಅಂಗಡಿಯ ಒಳಗೆ ಹೋಗಿ ಹುಡುಕುತ್ತಿದ್ದ. ಸ್ವಲ್ಪ ಹೊತ್ತು ಹುಡುಕಾಡಿ ನಂತರ ಕೊಟ್ಟು ದುಡ್ಡು ಪಡೆದುಕೊಂಡ. ಸಾಮಾನು ಕೊಂಡು ನಮ್ಮ ಮನೆಗೆ ಬಂದೆ. ಅಲ್ಲಿಂದ ನಮ್ಮ ಮನೆಗೆ ನಡೆಉಕೊಂಡೆ ಬರಬೇಕು. ಅರ್ಧ ತಾಸು ತೆಗೆದುಕೊಂಡಿದ್ದೆ. ಮನೆಗೆ ಬಂದು ಸಾವರಿಸಿಕೊಳ್ಳುವಷ್ಟರಲ್ಲಿ ಸೈಕಲಿನಲ್ಲಿ ಅದೇ ಅಂಗಡಿಯವನು ಬಂದ. ಬಂದವನೇ ಆತನ ಅಂಗಡಿಯ ಗಲ್ಲಾ ಪೆಟ್ಟಿಗೆಯಿಂದ ಐವತ್ತು ರೂಪಾಯಿ ಕಾಣೆಯಾಗಿದೆ. ಅದನ್ನು ನಾನು ಕದ್ದಿದ್ದೇನೆ ಎಂದು ಹೇಳಿದ. ನನಗೆ ದಿಗಿಲಾಯಿತು. ಆಗ ಐವತ್ತು ರೂಪಾಯಿ ಅಂದರೆ ಈಗೀನ ಸಾವಿರ ರೂಪಾಯಿ ಮೌಲ್ಯವಾದರೂ ಆಗಬಹುದು. ನಮ್ಮಮಿತಿಯಲ್ಲಿ ಅದು ದೊಡ್ಡ ಮೊತ್ತ. ಹಾಗಾಗಿಯೇ ಆತ ಅಷ್ಟು ಗಡಿಬಿಡಿಯಲ್ಲಿ ಹುಡುಕಿ ಬಂದಿದ್ದ. 


ಐವತ್ತು ರೂಪಾಯಿ ನಾನು ಕದ್ದಿದ್ದೇನೆ ಎನ್ನುವುದಕ್ಕೆ ಮುಖ್ಯ ಕಾರಣ ನಮ್ಮ ಬಡತನ.  ಬಡತನವೇ ಕಳ್ಳತನಕ್ಕೆ ಮುಖ್ಯ ಕಾರಣ ಎಂಬುದು ಆತನ ವರ್ತನೆಯೇ ಹೇಳುತ್ತಿತ್ತು. ನಾನು ಕದ್ದಿಲ್ಲ ಎಂದು ಹೇಳಿದೆ. ಅದಾಗಲೇ ನನ್ನ ಕಣ್ಣಿಂದ ನೀರು ಸುರಿಯಲಾರಂಭಿಸಿತ್ತು. ನನಗೆ ಅರಿವಿಲ್ಲದೇ ಗದ್ಗದವಾಗಿತ್ತು. ಏನಿದ್ದರೂ ಯಾರಿಗೂ ವಂಚನೆ ಮಾಡಬಾರದು ಇದು ಅಮ್ಮ ಕಲಿಸಿಕೊಟ್ಟ ಮೊದಲ ಪಾಠ. ಅಮ್ಮ ಬಂದು ಕದಿಯಲಿಲ್ಲ ಅಂತ ಹೇಳಿದರು. ಆದರೆ ಅದನ್ನೆಲ್ಲ ಕೇಳುವುದಕ್ಕೆ ಆತ ಸಿದ್ಧನಿರಲಿಲ್ಲ. ನೆರೆಕರೆಯವರೆಲ್ಲ ನೋಡುತ್ತಿದ್ದರು. ಯಾರೂ ಪರವಾಗಿ ಮಾತನಾಡುವುದಕ್ಕೆ ಬರಲಿಲ್ಲ. ಅಥವಾ ಏನು ಎಂದು ವಿಚಾರಿಸುವುದಕ್ಕೂ ಬರಲಿಲ್ಲ. ನಾವು ಪರಿಪರಿಯಾಗಿ ಹೇಳಿದರೂ ಆತ ಕೇಳಲಿಲ್ಲ. ನಮ್ಮ ಮನೆಯ ಹತ್ತಿರವೇ ಇದ್ದ ಬೋಳಂಗಳದಲ್ಲಿ ಭೂತಸ್ಥಾನವಿತ್ತು. ಅಲ್ಲಿಗೆ ಹೋಗಿ ಪ್ರಮಾಣ ಮಾಡುವಂತೆ ಆತನೇ  ಹೇಳಿದ. ನನಗೆ ಭಯವಿರಲಿಲ್ಲ. ಕದ್ದರೆ ತಾನೆ ಭಯ. ಆದರೆ ಆತನ ಧರ್ಮದ ದೇವರು ಅದಲ್ಲ. ಆದರೂ ನನಗಿಂತ ಭೂತದ ಮೇಲೆ ಆತನಿಗೆ ನಂಬಿಕೆ ಇತ್ತೋ ಏನೋ. ನಾನು ಒಪ್ಪಿದ್ದನ್ನು ನೋಡಿ ಏನು ಅನಿಸಿತೋ ದೊಡ್ಡದಾಗಿ ಗೊಣಗಿಕೊಂಡು ಪುನಃ ಬರುವುದಾಗಿ ಹೇಳಿಕೊಂಡು ಸೈಕಲೇರಿ ಹಿಂತಿರುಗಿದ.  ಒಂದು ವೇಳೆ ಆತನ ಅಂಗಡಿಯ ಬಳಿಗೆ ಹೋಗಿದ್ದರೆ ಕಂಬಕ್ಕೆ ಕಟ್ಟಿ ಹಾಕುವುದಕ್ಕೂ ಹಿಂಜರಿಯುತ್ತಿರಲಿಲ್ಲ. ಯಾಕೆಂದರೆ ಸುತ್ತಮುತ್ತಲೂ ಎಲ್ಲ ಆತನ ಜನಗಳೆ.

ಮರುದಿನ ಅನಿವಾರ್ಯವಾಗಿ ಆತನ ಅಂಗಡಿಯ ಎದುರು ಹೋಗಬೇಕಾಗಿ ಬಂತು. ಅಲ್ಲೆ ಹೋಗುವುದಕ್ಕೆ ಭಯವಾಗುತ್ತಿತ್ತು. ಆಅರೂ ಅಳುಕುತ್ತಲೇ ಹೋದೆ. ನನ್ನನ್ನು ನೋಡಿದವನು ಬಳಿಗೆ ಕರೆದ. ಅಳುಕುತ್ತಲೇ ಹೋದೆ. ಆತ ಹೇಳಿದ ಆ ಹಣ ಸಿಕ್ಕಿತು. ಇಲ್ಲೆ ಕಸದ ಜತೆ ಬಿದ್ದಿತ್ತು. ಅಂಗಡಿ ಗುಡಿಸುವಾಗ ಸಿಕ್ಕಿತು ಅಂತ ಹೇಳಿದ. ಅವನು ಅಷ್ಟಾದರೂ ಹೇಳಿದನಲ್ಲಾ ಎಂಬುದಕ್ಕೆ ಕೃತಜ್ಛತೆ ಸಲ್ಲಿಸುವುದಷ್ಟೇ ನನಗೆ ಉಳಿದಿತ್ತು.  ಬೇರೆಯವರಾಗಿದ್ದರೆ ಆತ ಕೊಟ್ಟ ಮಾನಸಿಕ ಹಿಂಸೆ ಅಪವಾದಕ್ಕೆ ಜಗಳವಾಡಿ ಕಪಾಳ ಮೋಕ್ಷ ಮಾಡುತ್ತಿದ್ದರು. ನಾನು ಪುಟ್ಟಬಾಲಕ ಪೆಚ್ಚಾಗಿ ನೋಡುವುದಷಷ್ಟೇ ಉಳಿದಿತ್ತು. ಆತನಿಗೆ ದುಡ್ಡು ಸಿಕ್ಕಿದ್ದನ್ನು ಹೇಳದೇ ಇರಬಹುದಿತ್ತು. ಕೊನೆಗೆ ಅಷ್ಟಾದರೂ ಹೇಳಿ ನನ್ನನ್ನು ಅರೋಪ ಮುಕ್ತ ಮಾಡಿದನಲ್ಲ. ಆದರೆ ನನ್ನ ನೆರೆಯವರೆದುರು ತಲೆತಗ್ಗಿಸಿದ್ದಕ್ಕೆ ಪರಿಹಾರವಿರಲಿಲ್ಲ. ಈಗ ಆಂಗಡಿಯೂ ಇಲ್ಲ.  ಆ ವ್ಯಕ್ತಿಯೂ ಇಲ್ಲ. ಆ ಕಟ್ಟಡವೂ ಇಲ್ಲ. ಪೈವಳಿಕೆಯ ನಗರದ ರಸ್ತೆಯಲ್ಲಿ ಹೋಗುವಾಗ ಈ ಘಟನೆ ನೆನಪಾಗುತ್ತಿರುತ್ತದೆ. ಒಂದುವೇಳೆ ಆ ಹಣ ಕಸದ ಜತೆ ಸೇರಿ ಹಾಗೇ ಕಳೆದು ಹೋಗಿರುತ್ತಿದ್ದರೆ... ಆತನ ಎದುರು ನಾನು ಕಳ್ಳನೇ ಆಗಿ ಉಳಿಯುತ್ತಿದ್ದೆ. ದೇವರಿಗೆ ಅಷ್ಟಕ್ಕಾದರೂ ನಾನು ಕೃತಜ್ಞನಾಗಿರಬೇಕು. 

    ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡ ಕಳ್ಳನಿಗೂ ಆತ ಮಾಡದೇ ಇದ್ದ ಕಳ್ಳತನವನ್ನು ಆತನ ಮೇಲೆ ಆರೋಪಿಸಿದರೆ ಸಿಟ್ಟು ಬರುತ್ತದೆ. ಆದರೆ ಮಾಡದೇ ಇದ್ದ ಅಪರಾಧ ಆರೋಪಿಸಿದಾಗ ನೋವಾಗದೇ ಇರುವುದಕ್ಕೆ ಸಾಧ್ಯವಿಲ್ಲ. ಆದರೂ ಯಾವುದೋ ಒಂದು ಕಳ್ಳತನ ಅಥವಾ ಅಪರಾಧಗಳ ಆರೋಪಕ್ಕೆ ಕೊನೇ ಪಕ್ಷ ನಮ್ಮ ಜೀವನ ಪ್ರವೃತ್ತಿಯೂ ಕಾರಣವಾಗಬಾರದು. ಆರೋಪ ಬರುವುದು, ಅಥವಾ ಆರೋಪ ಸಾಬೀತಾಗುವುದು ನಮ್ಮ ಪ್ರವೃತ್ತಿಯನ್ನು ಅವಲಂಬಿಸಿರಬಾರದು. ಮತ್ತೆ ಇರುವುದು ನಮ್ಮ ಅದೃಷ್ಟ ಎಂದುಕೊಂಡಿರಬೇಕು.



Saturday, January 31, 2026

ಅಜ್ಞಾನದ ಅರಿವು

ಬ್ಯಾಂಕ್ ಲೆಕ್ಕ ಪರಿಶೋಧನೆಗೆ ಹೋಗಿರುವಾಗ ಅಲ್ಲಿ ಚಹ ಕಾಫಿ ತರಿಸಿದ್ದರು. ನನಗೆ ಬಹಳ ಒತ್ತಾಯ ಮಾಡಿ ಕೊಟ್ಟರು. ನಾನು ಈ ರೀತಿಯ ಪಾನೀಯ ಸೇವನೆಯ ಅಭ್ಯಾಸವನ್ನು ಬಿಟ್ಟು ದಶಕಗಳೇ ಕಳೆದಿದೆ. ನಾನು ಬೇಡ ಎಂದು ನಿರಾಕರಿಸಿದೆ. ಕೆಲವರಿಗೆ ಅದೊಂದು ರೀತಿಯ ಮನೋಭಾವ. ನನಗೆ ಅಭ್ಯಾಸ ಇಲ್ಲ ಎಂದರೂ ಬಿಡದೆ ಮತ್ತೂ ಒತ್ತಾಯ ಮಾಡಿದರು. ಅವಶ್ಯಕ ಇಲ್ಲದೇ ಇರುವುದನ್ನು ಸೇವಿಸುವುದಕ್ಕೆ ಒಂದೋ ಅದರ ಬಗ್ಗೆ ತೀವ್ರವಾದ ಆಶೆ ಹುಟ್ಟಬೇಕು. ಇಲ್ಲ ಅದು ತೀರ ಅನಿವಾರ್ಯ ಎನಿಸಬೇಕು. ಇದೆರಡೂ ಇಲ್ಲದಿದ್ದರೆ ಯಾರದೋ ಒತ್ತಾಯಕ್ಕೆ ಅದನ್ನು ಒಪ್ಪಿಕೊಳ್ಳುವುದು ನನಗೆ ಸರಿ ಎನಿಸುವುದಿಲ್ಲ. ನಾನು ಮತ್ತೂ ನಿರಾಕರಿಸಿದೆ. ಅದರಲ್ಲೂ ಕಾಫಿ ಚಹ ಸೇವನೆ ಬಿಟ್ಟನಂತರ ನಾನು ಅನುಭವಿಸಿದ ನಿರಾಳತೆ ಅದು ನನಗೆ ಮಾತ್ರ ಅರಿವಿದೆ. ಅದನ್ನು ಹೇಳಿದೆ . ಆದರೆ ಅವರು ಮತ್ತೂ ಉಡಾಫೆಯಿಂದ ಒಂದು ಸಲ ತೆಗೆದುಕೊಂಡರೆ ಏನಾಗುತ್ತೇ ಅಂತ ಹೇಳಿದರು. ಒಂದು ಸಲ ಆದರೇನು? ಆಸಕ್ತಿ ಇಲ್ಲದೇ ಇದ್ದರೆ ಅದನ್ನು ಕುಡಿಯುವುದರಲ್ಲಿ ಅರ್ಥವಿಲ್ಲ. ನಾನು ಮತ್ತೂ ನಿರಾಕರಿಸಿದಾಗ ಅವರು ಮತ್ತೂ ಹೇಳಿದರು ಎಲ್ಲರೂ ಕುಡಿಯುತ್ತಾರೆ . ಇದು ಕುಡಿದದ್ದರಲ್ಲಿ ಏನು ? ನಾನು ಕಾಫಿ ಚಹ ಸೇವನೆಯ ದುಷ್ಪರಿಣಾಮವನ್ನು ಹೇಳುವುದಕ್ಕೆ ಅನಿವಾರ್ಯನಾದೆ. ಹಾಗೆ ಚರ್ಚೆ ನಡೆದು ಕೊನೆಯಲ್ಲಿ ಒಂದು ಸಲ ಅವರೆಂದರು...ಏನು ಸಾರ್, ಈಗ ಇದೆಲ್ಲ ಸಾಮಾನ್ಯ. ಬ್ರಾಹ್ಮಣರು ಮಾಂಸ ತಿನ್ನುವುದಿಲ್ಲ ಅಂತ ಇದ್ದರೂ ಹಲವರು ತಿನ್ನುವರಲ್ಲ  ಎನಾಯಿತು? ಕೆಲವರಿಗೆ ತಿನ್ನುವುದಿಲ್ಲ, ಅಭ್ಯಾಸವಿಲ್ಲ ಎಂದು ಇದ್ದರೆ ಅದನ್ನು ಕೆಲವರಿಗೆ ತಿನ್ನಿಸುವ ಹಟ. ತಿಳಿಸದೇ ಅದನ್ನು ಹೇಗಾದರೂ ಮಾಡಿ ತಿಳಿಯದಂತೆ ತಿನ್ನಿಸುವ ಚಪಲ.

ಹಲವು ಸಲ ಮೂಗು ಕತ್ತರಿಸಿಕೊಂಡವನ ಕಥೆಯೊಂದು ನೆನಪಾಗುತ್ತದೆ. ಮೂಗು ಕತ್ತರಿಸಿಕೊಂಡವನು ತನಗೆ ಸ್ವರ್ಗ ಕಾಣಿಸುತ್ತದೆ ಎಂದು ಹೇಳಿ ಸಿಕ್ಕ ಸಿಕ್ಕವರಲ್ಲಿ ಮೂಗು ಕತ್ತರಿಸಿಕೊಳ್ಳುವುದಕ್ಕೆ ಹೇಳಿದ. ನಂತರ ತನ್ನಂತೆ ಸ್ವರ್ಗ ಕಾಣಿಸುತ್ತದೆ ಎಂದು ಹೇಳುವುದಕ್ಕೆ ಹೇಳುತ್ತಿದ್ದನಂತೆ. ಅದೇ ರೀತಿ ಪ್ರತಿಯೊಬ್ಬರೂ ಮೂಗು ಕತ್ತರಿಸಿಕೊಂಡು ತನ್ನಂತೆ ಆಗಲಿ ಎಂದು ಅವನ ಉದ್ದೇಶ. ನಶೆಯಲ್ಲಿದ್ದವರಿಗೆ ಉಳಿದವರೂ ನಶೆಗೆ ಒಳಗಾಗಲಿ ಎಂಬ ಹಂಬಲವಿರುತ್ತದೆ. 

ಅದೇನು ಮನೋಭಾವ ಅಂತ ತಿಳಿಯದು. ಬ್ರಾಹ್ಮಣರು ನಿಷಿದ್ಧ ಎನ್ನುವುದನ್ನು ಮಾಡುತ್ತಾರೆ ಎನ್ನುವಾಗ ಅದು ಗಂಭೀರ ಸುದ್ದಿ ಎನ್ನಿಸುವುದು ಮತ್ತದು ಕುಹಕಕ್ಕೆ ಎರೆಯಾಗುವುದು ದೌರ್ಭಾಗ್ಯ. ಗಾಂಧಿವಾದಿಗಳು ಮದ್ಯ ಮಾಂಸ ಸೇವಿಸಿದರೆ ಅದು ಕುಹಕವಾಗುವುದಿಲ್ಲ, ಆದರೆ ಬ್ರಾಹ್ಮಣರಿಗೆ ಮಾತ್ರ ಯಾರೋ ಮಾಡಿದಾಕ್ಷಣ ಅದು ಸಂಪೂರ್ಣ ವರ್ಗವನ್ನೇ ಆಕ್ಷೇಪಿಸುವುದು ತಾತ್ಸಾರವಾಗುತ್ತದೆ.  ಎಲ್ಲೊ ಕೇಳಿದ ನೆನಪು ಮಹಾತ್ಮಾ ಗಾಂಧೀಜಿ ಮದ್ಯ ಮಾಂಸ ಈ ಎರಡರ ಕಡು ವಿರೋಧಿಯಾಗಿದ್ದರು. ಅವರ ಹೆಸರನ್ನು ನಿತ್ಯ  ಪಠಿಸುವವರು, ತಾವು ಗಾಂಧೀವಾದಿಗಳು ಎಂದು ತಮ್ಮನ್ನು ಗುರುತಿಸುವವರಿಗೆ ಮದ್ಯ ಮಾಂಸ ಸೇವನೆ ಗಾಂಧೀಜಿ ವಿರೋಧಿಸುತ್ತಿದ್ದರು ಎನ್ನುವುದು ಗಂಭೀರವಾಗುವುದಿಲ್ಲ. ಜಾತ್ಯಾತೀತ ರಾಜಕಾರಣದಲ್ಲಿ, ಮತದಾನಗಳಲ್ಲಿ ಜಾತಿಯೇ ಮುಖ್ಯವಾಗುವಾಗ ಅದು ಜಾತಿಭೇದ ಎಂದೆನಿಸುವುದಿಲ್ಲ. ಜಾತಿಯವನು ಹೇಗೂ ಇರಲಿ, ಅಪರಿಚಿತನಾದರೂ ಆತ ತಮ್ಮವ ಎಂದೆನಿಸುತ್ತಾನೆ. ಇಲ್ಲೆಲ್ಲ ಜಾತಿ ಎಂಬುದು ಅರ್ಹತೆಯಾದರೆ ಬ್ರಾಹ್ಮಣ ಎನ್ನುವಾಗ ಮಾತ್ರ ಜಾತಿಯ ಭೂತ ಎದುರು ಬರುತ್ತದೆ. ಅಷ್ಟಕ್ಕೂ ಬ್ರಾಹ್ಮಣ ಎಂಬುದು ಕೇವಲ ಶಬ್ದಾರ್ಥದ ಒಂದು ಪದವಿ. ಬ್ರಹ್ಮನನ್ನು ಅರಿತವನು ಬ್ರಾಹ್ಮಣನಾಗುತ್ತಾನೆ. ಹಾಗಂಟ ಬ್ರಾಹ್ಮಣ ಎಂದು ಕರೆಯುವಾಗಲೂ ಇದು ಗೌಣವಾಗಿಬಿಡುವುದು ವಿಪರ್ಯಾಸ. 

ಗಾಂಧೀಜಿ ಅಜೀವನಾದ್ಯಂತ ರಾಮ ಭಕ್ತರಾಗಿದ್ದರು. ರಾಮಾಯಣದಿಂದ ಪ್ರೇರಿತರಾಗಿ ಆ ತತ್ವಗಳನ್ನು ಸಾಕಷ್ಟು ಅಳವಡಿಸಿಕೊಂಡಿದ್ದರು. ಅದರೆ ಆಕ್ಷೇಪಿಸುವವರಿಗೆ ರಾಮಾಯಣ ಅಥವಾ ಶ್ರೀರಾಮ ಮಾತ್ರ ಆಕ್ಷೇಪಕ್ಕೆ ಕಾರಣನಾಗುತ್ತಾನೆ ಹೊರತು ಗಾಂಧೀಜಿ ಅಲ್ಲ. ವ್ಯಾಧ ಅನಾಗರಿಕನೊಬ್ಬ ವಾಲ್ಮೀಕಿಯಾಗಿ ಮಹಾ ಋಷಿಯಾಗಿ ಬದಲಾದ.  ಕ್ಷತ್ರಿಯನಾದ ಕೌಶಿಕ ಸಾಧನೆಯಿಂದ ಬ್ರಾಹ್ಮಣನಾಗಿ  ಬ್ರಹ್ಮಋಷಿಯಾದ. ಯಾರೂ ಹುಟ್ಟಿನಿಂದ ಶ್ರೇಷ್ಠರಾಗಿಲ್ಲ. ಆನಂತರ ಕರ್ಮದಿಂದ ಶ್ರೇಷ್ಠರಾಗಿ ಬದಲಾಗಿ ಹೋದರು. ಹುಟ್ಟಿನಿಂದ ಒದಗಿಬರುವುದು ಜಾತಿ. ಆನಂತರ ಬರಿಸುವುದು ವರ್ಣ. ವರ್ಣ ಎಂದರೆ ಬರಿಸುವುದು ಎಂದರ್ಥ. ಮಲಯಾಳಂ ಭಾಷೆಯಲ್ಲೂ ವರಣಂ ಎಂದರೆ ಬಾ. ಕರೆಸಿಕೊಳ್ಳುವುದು. ಹುಟ್ಟಿನಿಂದ ಇದ್ದ ಜಾತಿ ನಂತರ ವರ್ಣದಿಂದ ಬದಲಾದರೂ ವರ್ಣದ ನಿಜವಾದ ಬಣ್ಣ ತಿಳಿಯದೇ ಪೂರ್ವಜರನ್ನು ಶಪಿಸಿ ಬಿಡುವುದು ಮನುಷ್ಯ ಹುಟ್ಟುವ ಮೊದಲು ಗರ್ಭದ ಕತ್ತಲೆಯಲ್ಲಿದ್ದರೆ ಆನಂತರವೂ ಆ ಅಂಧಕಾರದಿಂದ ಹೊರಗೆ ಬಂದಿರುವುದಿಲ್ಲ.  ವ್ಯಾಧ್ಯ ವಾಲ್ಮೀಕಿ ಮಹರ್ಷಿಯಾದ, ಆತ ಮತ್ತೆ ಹತಾಶೆಯಿಂದ ಜಿಗುಪ್ಸೆಯಿಂದ ಪುನಃ ವ್ಯಾಧನಾಗಿ ಬದಲಾದನೇ ? ಇಲ್ಲ. ಅದೇ ರೀತಿ ಕೌಶಿಕ..ವಿಶ್ವಾಮಿತ್ರ ಮಹಾ ಬ್ರಾಹ್ಮಣನಾಗಿ ಬದಲಾದ, ಬ್ರಹ್ಮ ತೇಜೋ ಬಲಂ ಎಂದು ಬದಲಾದವನು ಅದೂ ಏನೂ ಅಲ್ಲ...ವರ್ಣ ಭೇದ ಅಂತ ಜಿಗುಪ್ಸೆಯಿಂದ ಪುನಃ ಕೌಶಿಕನಾಗಿ ರಾಜನಾಗಿ ಬದಲಾಗಿಲ್ಲ. ಅಂದರೆ ಬದಲಾಗಿ ಸಿದ್ಧಿಸಿದ ಪದವಿ ಅತ್ಯಂತ ಶ್ರೇಷ್ಠ. ವಿಪರ್ಯಾಸವೆಂದರೆ ಈಗ ಈ ಪದವಿಯೇ      ಅವಹೇಳನಕ್ಕೆ ಒಳಗಾಗುತ್ತದೆ. ಬ್ರಾಹ್ಮಣನಾಗಿರುವುದೇ ಅನಿಷ್ಟ ದುರ್ದೈವ. 

ತಮಗೆ ಸಿದ್ದಿಸಲಾಗದೇ ಇರುವುದರಲ್ಲಿ ಏನೋ ಒಂದು ಕೊರತೆಯನ್ನು ಕಾಣುವ ಒಂದು ಮಾತ್ಸರ್ಯವಿದೆ. ತಮ್ಮ ಅಸಮರ್ಥತೆಯನ್ನು ಅಸಾಧ್ಯ ವೃತ್ತಿಯ ಮೇಲೆ ಆರೋಪಿಸುವುದು. ಇದೊಂದು ಅಸಹಾಯಕತೆ. ಬ್ರಾಹ್ಮಣನಾಗಿ ಇರುವುದು ಕಷ್ಟ. ಬದುಕುವುದು ಕಷ್ಟ. ಅದಕ್ಕೆ ಅದನ್ನೇ ತಿರಸ್ಕರಿಸಿ ಅದರ ಘನತೆಯನ್ನೇ ಕಳೆದರೆ ತಾವು ಶ್ರೇಷ್ಠರಾಗುವ ಮನೋಭಾವ. ಎಂದೋ ಯಾರೋ ಅಜ್ಞಾನಿಗಳು ತಮ್ಮ ಸ್ವಾರ್ಥಕ್ಕೆ ಈ ಪದವಿಯನ್ನು ದುರ್ವಿನಿಯೋಗ ಮಾಡಿದ್ದರೆ ಇಂದು ಸಮೂಹವೇ ಅದನ್ನು ಮಾಡುತ್ತಿದೆ ಎಂದು ಕಾಣುವುದು ಒಂದು ರೀತಿಯ ಅಸಹಾಯಕತೆ. ಯಾರೋ ಕೆಲವರು ಭಯೋದ್ಪಾದಕರಾದರೆ ಇಡೀ ಸಮೂಹವನ್ನು ದೂಷಿಸುವುದು ತಪ್ಪು. ಅದೇ ರೀತಿ ಯಾರೋ ಎಸಗಿದ ಕೆಲಸಕ್ಕೆ  ಎಲ್ಲಾ  ಬ್ರಾಹ್ಮಣನನ್ನು ಹಳಿಯುವುದು ತಪ್ಪು ಎಂದು ಅನಿಸಬೇಕು. ಗಾಂಧೀಜಿಯ ಒಂದೆರಡು ಚಿಂತನೆಗಳು ನಮಗೆ ಸ್ವೀಕೃತ ಅಲ್ಲದೇ ಇರಬಹುದು. ಹಾಗೆಂದು ಗಾಂಧೀಜಿಯ ಹೋರಾಟ ತತ್ವಗಳು ಎಲ್ಲವನ್ನು ದೂಷಿಸುವುದು ಸರಿಯಲ್ಲ.  ಬ್ರಾಹ್ಮಣ ತತ್ವ ಅರಿವಾದರೆ ಬ್ರಹ್ಮ ಪದವಿಯ ಆ ತೇಜೋ ಬಲದ ಅರಿವಾಗಬಹುದು. ಜ್ಞಾನವನ್ನು ಅರಿಯುವ ಸಾಮಾರ್ಥ್ಯ ಇಲ್ಲದೇ ಇರಬಹುದು. ಆದರೆ ಅಜ್ಞಾನವನ್ನು ದೂರಮಾಡುವ ಅರಿವಾದರೂ ಇರಬೇಕು. 



 

Sunday, January 25, 2026

ಭಾವ ಒಂದೇ ಸಾಲದೆ?


ಅದೊಂದು ಪುಟ್ಟ ಮನೆ. ನಗರದ ಈಗಿನ ಮನೆ ಎಂದಮೇಲೆ ಕೇಳಬೇಕೆ. ಹಾಗೆ ಹೀಗೆ ಅಂತ ಒಂದು ಕಟ್ಟಡ ಇರುತ್ತದೆ. ಅದರಲ್ಲೇ ಹೊಂದಾಣಿಕೆಯ ಬದುಕು. ಅದೇ ಸ್ವರ್ಗ. ತೀರ ಬಡವನು ಕೂಡ ಘನ ಶ್ರೀಮಂತನಿಗಿಂತ ಕಡಿಮೆ ಇಲ್ಲದಂತೆ ಉಡುಪು ತೊಟ್ಟು ರಸ್ತೆಗೆ ಬಂದನೆಂದರೆ ...ಆತನ ಮನೆಯ ಬಗ್ಗೆ ಯಾರೂ ಯೋಚಿಸುವುದಿಲ್ಲ. ಇವನು ದೊಡ್ಡ ಧನಿಕನಿರಬೇಕು ಎಂದು ಭಾವಿಸುತ್ತಾರೆ. ಇಲ್ಲಿ ಎಲ್ಲವನ್ನು ಹೊರಾವರಣದಲ್ಲೇ ನಂಬಿಬಿಡುತ್ತಾರೆ.ಅದೇ ಸತ್ಯ.


ಮನೆ ಪುಟ್ಟದು. ಅಲ್ಲಿ ಪುಟ್ಟ ಸಂಸಾರ ಇರಬೇಕೆಂದೇನೂ ಇಲ್ಲ. ಅಪ್ಪ ಅಮ್ಮ ಅಜ್ಜ ಅಜ್ಜ ಮಕ್ಕಳು, ಅದಲ್ಲದೆ ಇನ್ನೂ ಕೆಲವರು ಇರಬಹುದು. ಮನೆ ಸಂಸಾರ ಎನ್ನುವಾಗ ಹಲವು ಸ್ನೇಹ ಕಲಹ ಎಲ್ಲವೂ ಸಮ್ಮಿಳಿತವಾಗಿರುತ್ತದೆ. ಅದೇ ಸಂಸಾರ. ಅದರಲ್ಲಿ ಕೆಲವೊಮ್ಮೆ ನಿಸ್ಸಾರ ವಿಚಾರಗಳೇ ಸ್ನೇಹಕ್ಕೂ ಕಲಹಕ್ಕೂ ಕಾರಣವಾಗಿರುತ್ತದೆ. ಇಲ್ಲಿಯೂ ಹಾಗೆ ಮನೆಯಲ್ಲೊಂದು ಚಪ್ಪಲಿ ಸ್ಟಾಂಡ್ ಇತ್ತು. ಕಲಹದ ನಿಸ್ಸಾರ ಕಾರಣಕ್ಕೆ  ಅದುವೇ ಕಾರಣವಾಗಿಬಿಟ್ಟಿತು. ವಿಷಯ ಇಷ್ಟೇ. ಸುಂದರವಾದ ಆ ಚಪ್ಪಲಿ ಸ್ಟಾಂಡ್ ಹೊಸದಾಗಿ ತಂದು ಇಡುವಾಗ ಅದರ ಸ್ಥಾನದ ಬಗ್ಗೆ ಒಂದು ಚರ್ಚೆ. ಮಗನಿಗೆ ಸೊಸೆಗೆ ಅದನ್ನು ಮನೆಯ ಬಾಗಿಲ ಎದುರೆ ಇಟ್ಟು ಬಿಡಬೇಕು. ಯಾಕೆಂದರೆ ಹೊರಗೆ ಹೋಗುವಾಗ ಬರುವಾಗ ಧರಿಸುವುದಕ್ಕೆ ಕಳಚಿ ಇಡುವುದಕ್ಕೆ ಅದು ಅನುಕೂಲವಾಗುತ್ತಿತ್ತು. ಆದರೆ ಮನೆಯಲ್ಲಿ ಹಿರಿಯರು ಇದಕ್ಕೆ ತದ್ವಿರುದ್ದ. ಚಪ್ಪಲಿ ಅದು ಋಣಾತ್ಮಕ ಅಂಶ. ಮನೆಯ ಬಾಗಿಲ ಎದುರು ಅದನ್ನು ಇರಿಸಬಾರದು. ಹಿರಿಯರು ಅದಕ್ಕೆ ಸರಿಯಾದ  ಕಾರಣಗಳನ್ನು ಕೊಡುತ್ತಾರೆ.  ಋಣಾತ್ಮಕ ಅಂಶಗಳು ಮನೆಯೊಳಗೆ ಬರುತ್ತವೆ. ಮನೆಯ ಒಳಗೆ ವಾಸಿಸುವವರ ಮನಸ್ಸು ಸದಾ ಗೊಂದಲ ಆಶಾಂತಿಯಿಂದ ಕೂಡಿರುತ್ತವೆ. ಮನೆಯಲ್ಲಿ ನಿಸ್ಸಾರ ವಿಚಾರಕ್ಕೂ ಸಂಘರ್ಷ ಕಲಹ ಏರ್ಪಡುತ್ತದೆ.  

ವಿಷಯ ಯೋಚಿಸಿದರೆ ಎರಡರಲ್ಲೂ ಸತ್ಯಾಂಶ ಇತ್ತು. ಎರಡನ್ನು ಹೌದು ಎಂದೇ ಸಮ್ಮತಿಸಬೇಕು. ಆದರೆ ಕಲಹದ ನಿಸ್ಸಾರ ಕಾರಣವು ಅಲ್ಲಿನವರ ಮನಸ್ಥಿತಿಯಿಂದ ಗಂಭೀರವಾಗುತ್ತದೆ. ಸುಂದರವಾದ ಬೆಲೆಬಾಳುವ ಚಪ್ಪಲಿ ಸ್ಟಾಂಡ್ ಈ ಕ್ಷುಲ್ಲಕ ಕಾರಣಕ್ಕೆ ಎಲ್ಲೋ ಇಡುವುದಕ್ಕೆ ಮಕ್ಕಳಿಗೆ ಸಮ್ಮತವಿಲ್ಲ. ಅದು ಬಾಗಿಲ ಮುಂದೆ ಇಡುವುದಕ್ಕೆ ಹಿರಿಯರಿಗೆ ಸಮ್ಮತವಿಲ್ಲ. ಇಡಬಾರದು ಎನ್ನುವುದಕ್ಕೆ ಕಾರಣ, ಅದು ಕಲಹಕ್ಕೆ ಕಾರಣವಾಗುತ್ತದೆ. ಇಲ್ಲೇನೋಡಿ ವಿಚಿತ್ರ ಇರುವುದು. ಇಡಬೇಕು ಇಡಬಾರದು ಎನ್ನುವುದೇ ಕಲಹಕ್ಕೆ ಕಾರಣವಾದರೆ ಅಲ್ಲಿ ಮನಸ್ಥಿತಿಯೇ  ಕಲಹಕ್ಕೆ ಕಾರಣ ಎಂದು ತಿಳಿಯುವುದಕ್ಕೆ ಅರಿವು ಇರಬೇಕು. ನಮ್ಮೊಳಗಿನ ಅಹಂ ದೂರವಿಡಬೇಕು. ಎಲ್ಲಿ ಅಹಂ ಇರುವುದೋ ಅಲ್ಲಿ ಮನಸ್ಸು ಶಾಂತವಾಗಿರುವುದಕ್ಕೆ ಸಾಧ್ಯವಿಲ್ಲ. ಅಹಂ ಎಂಬುದೇ ಮನಸ್ಸಿನಲ್ಲಿಋಣಾತ್ಮಕ ಧೋರಣೆಯನ್ನು ತುಂಬಿಸುವುದಕ್ಕೆ ಕಾರಣವಾಗುತ್ತದೆ. ಅಹಂ ಮನಸ್ಸಿನಲ್ಲಿ ಅತೃಪ್ತಿಯನ್ನು ತುಂಬಿಸುತ್ತದೆ. ನಮ್ಮ ಮನಸ್ಥಿತಿ ನಿರ್ಧಾರವಾಗುವುದೇ ಅಹಂ ನಿಂದ. ಇದು ದೂರವಾದರೆ ಗಂಭೀರವಾದ ಕಾರಣಗಳು ನಿಸ್ಸಾರವಾಗಿಬಿಡುತ್ತದೆ. ಕೊನೆಗೆ ಹಿರಿಯರು ಯೋಚಿಸಿದರು. ಇದೇ ಕಲಹಕ್ಕೆ ಕಾರಣವಾಗುವುದಾದರೆ, ಈ ಭಾವನೆಯಿಂದ ಗಳಿಸುವ ಲಾಭವಾದರೂ ಏನು ಎಂದು ಚಿಂತಿಸುತ್ತಾರೆ.  ಕೊನೆಗೆ ಚಪ್ಪಲಿ ಸ್ಟಾಂಡ್ ಮನೆಯ ಬಾಗಿಲ ಮುಂದೆಯೇ ಇಡಲಾಗುತ್ತದೆ. ಕಲಹಕ್ಕೆ ಕಾರಣವೇ ಮನಸ್ಸಿನ ಭಾವ ಎಂಬುದು ವಾಸ್ತವದ ಸತ್ಯ. 

ಭಾನುವಾರದ ಪ್ರಹಸನ

ವಾರಾಂತ್ಯ ಎಂಬುದು ಪುರುಷರಿಗೆ ಒಂದು ಸತ್ವ ಪರೀಕ್ಷೆಯಂತೆ. ನಿಜವಾಗಿ ಭಾನುವಾರ ಎಂಬುದು ವಾರದ ಆರಂಭವಾದರೂ, ಶನಿವಾರದ ಜತೆಗೆ ಇದೂ ವಾಡಿಕೆಯಲ್ಲಿ ವಾರಾಂತ್ಯವಾಗುವುದುಂಟು. ವಾರವಿಡೀ ಕೆಲಸದ ಕಛೇರಿ ವ್ಯಾಪಾರ ಮತ್ತೀತರ ಒತ್ತಡದಲ್ಲೇ ಕಳೆಯುವವರಿಗೆ ವಾರಾಂತ್ಯ ಆರಂಭ ಹಲವು ಸಲ ಸತ್ವ ಪರೀಕ್ಷೆಯಾಗಿಬಿಡುತ್ತದೆ. 


ಭಾನುವಾರದ ಒಂದು ದಿನ. ಬೆಳಗ್ಗೆ ಎಂದಿನಂತೆ ಬೇಗ ಏಳುವ ಅನಿವಾರ್ಯ, ಉಳಿದ ದಿನ ಬೇಗನೇ ಎಳುವ ಅಭ್ಯಾಸದಲ್ಲಿ ಭಾನುವಾರವೂ ಐದುಘಂಟೆಗೆ ಎಚ್ಚರವಾಗಿ ನಿತ್ಯದ ಅಭ್ಯಾಸದಂತೆ ಆ ಹೊತ್ತಗೆ ಜಲಬಾಧೆ  ತಡೆಯದೆ ಶೌಚಕ್ಕೆ ಹೋಗಿ ಅದನ್ನು ತೀರಿಸಿ ಇಷ್ಟು ಬೇಗ ಏನು ಮಾಡುವುದು ಎಂದು ಕೊಂಡು ಮತ್ತೆ ಪುಣಾ ಮಲಗುದು. ಚಕಿತರಾಗಬೇಡಿ, ಕೆಲವರ ಕನ್ನಡ ಹೀಗೆ. ಪುನಃ ಎಂಬುದು ಪುಣಾ ಆಗಿ ಬಿಡುತ್ತದೆ. ಅದು ತುಳುವಿನ ಪುಣ  ಅಂದರೆ ಹೆಣ. ಪುಣ ಮಲಗುವುದಲ್ಲದೇ ಮತ್ತೇ ಎನಾಗಬೇಕು ಎಂಬುದು ಒಂದು ಪ್ರಶ್ನೆ. ಐದುಗಂಟೆಗೆ ಎದ್ದು ಪುನಃ ಮಲಗಿ ಹೆಣದಂತೆ ಆಗಲು ಇಚ್ಛೆಇಲ್ಲದೆ ಹಾಸಿಗೆಯಲ್ಲೇ ಆಕಡೆ ಈಕಡೆ ಮಗ್ಗುಲು ಬದಲಾಯಿಸಿಕೊಂಡು ಅಂತೂ ತುಸು ಹೊತ್ತಿನಲ್ಲಿ ಸಾಕಪ್ಪಾಅಂತ ಎದ್ದುಬಿಡುವುದು.  ಹೆಂಗಸರಾದರೋ...ಭಾನುವಾರ ಸಿಕ್ಕಿದ್ದೇ ಒಂದು ಅವಕಾಶ ಎಂದು ಕೊಂಡು...ಭಾನುವಾರ ಬೆಳಗಿನ ತಿಂಡಿಯ ಗಡಿಬಿಡಿ ಇಲ್ಲ ಎಂದು ಕೊಂಡು ಬಾರದ ನಿದ್ದೆಯನ್ನು ಬರಿಸಿ  ಆರಾಮವಾಗಿ ಎಂಟು ಘಂಟೆಯ ತನಕ ಮುಸುಕಿನ ಒಳಗೆ ಅವಿತುಕೊಂಡು ಬಿಡುತ್ತಾರೆ. ಹಲವು ಸಲ ಶನಿವಾರ ತಡ ರಾತ್ರಿ ತಿಂದ ಗೋಬೀ ಮಂಚೂರಿ ಕಬಾಬ್ ರೋಟಿ ಕರಿಯ ಬೆಳ್ಳಳ್ಳಿ ಘಮಲು ಬೆಳಗೆ ಹುಳಿತೇಗಿನ ಜತೆಗೆ ವಾಪಾಸು ಬಂದು ಶೌಚಾಲಯದ ವಿಶ್ರಾಂತಿ ಸಮಯವನ್ನು ದೀರ್ಘಗೊಳಿಸುತ್ತದೆ. ಈಗಂತೂ ಅಲ್ಲಿಗೂ ಮೊಬೈಲು ತೆಗೆದುಕೊಂಡು ಹೋಗಿ ವಾಟ್ಸಾಪ್ ಗ್ರೂಪ್ ಗಳಲ್ಲಿ ಹರಿದು ಹಂಚಿ ಹೋದ ಪೋಟೋ ವಿಡಿಯೋಗಳನ್ನು ನೋಡಿ, ನೋಡದೇ ಉತ್ತರಿಸದೇ ಹೋದ ಸಂದೇಶಗಳಿಗೆ ಪ್ರತಿಕ್ರಿಯಿಸುವ ಕೆಲಸದ ನಡುವೆ ಶೌಚ ಆಗಿದೆಯೋ ಇಲ್ಲವೋ ಎಂಬ ಅರಿವೇ ಇರುವುದಿಲ್ಲ. ಮತ್ತೂ ಬಾರದ ಬಸ್ಸಿಗೆ ನಿಲ್ದಾಣದಲ್ಲಿ ಕಾದಂತೆ ಬಹಳ ಹೊತ್ತು ಕಳೆದ ನಂತರ ಛೇ ಇನ್ನು ಬರುವುದಿಲ್ಲ ಅಂತ ಎದ್ದು ಹೊರಗೆ ಬರುವುದು ಭಾನುವಾರದ ಸಾಮಾನ್ಯ ಬೆಳಗಿನ ಕ್ರಿಯಾಭಾಗವಾಗಿರುತ್ತದೆ. 

ಆ ಭಾನುವಾರವೂ ಹಾಗೇ ಬೆಳಗ್ಗೆ ಹಾಗೋ ಹೀಗೋ ಉಪಾಹಾರ,  ಹಲವು ಸಲ ಮೊದಲ ದಿನ , ರಾತ್ರಿಗೆ ಮನೆಯಲ್ಲಿ ಯಾರೂ ಉಟ ಮಾಡದ ಕಾರಣ ಅನ್ನ ಉಳಿದಿರುತ್ತದೆ. ಹಾಗಾಗಿ ಚಿತ್ರಾನ ಉಪ್ಪಿಟ್ಟು ಖಾಯಂ ತಿಂಡಿಯಾಗಿರುತ್ತದೆ. ಅದನ್ನು ಹನ್ನೊಂದುಘಂಟೆಗೆ ಹೇಗೋ ನುಂಗಿ ಬೆಳಗಿನ ಹರಕೆ ತಡವಾಗಿ ಸಂದಾಯವಾಗುತ್ತದೆ. ನಂತರ ಮಧ್ಯಾಹ್ನದ ತನಕ, ವಾರದಲ್ಲಿ ಬಿಟ್ಟು ಉಳಿದ ಕೆಲಸಗಳು , ಹೆಚ್ಚಿನ ಸಮಯ, ಹಳೆಯ ಬಟ್ಟೆ ಹುಡುಕಿ ಸ್ವಛ್ಚ ಮಾಡುವುದು, ತೀರಾ ಮೂಲೆಯಲ್ಲಿ ಸಜ್ಜದಲ್ಲಿದ್ದ ಕಸ , ಗುಜರಿಗಳನ್ನು ವಿಲೇ ವಾರಿ ಮಾಡುವುದು ಇದೇ ಆಗಿ ಬಿಡುವುದುಂಟು. ಅಥವಾ ಏನೂ ಕೆಲಸ ಮಾಡದೇ ಮೊಬೈಲ್ ರೀಲ್ಸ್ ನೋಡುತ್ತಾ ಕಾಲ ಕಳೆವಾಗ ಹಂಡತಿಯ ಕಿರಿ ಕಿರಿ, ಈ ಪ್ರಾಣಿ ಒಂದು ಸುಮ್ಮನೇ ಕುಳಿತಿರುವ ಭಾವದಲ್ಲಿ ಅವರ ವಕ್ರದೃಷ್ಟಿಗೆ ಎರವಾಗಿ ಕುಳಿತಿರಲಾಗದೇ ಏನೋ ಒಂದು ಮಾಡುವುದುಂಟು. ಹಾಗೂ ಹೀಗೂ ಮಧ್ಯಾಹ್ನ ಊಟ ...ಬೆಳಗಿನ ಉಪಾಹಾರ ತಡವಾಗಿ ಆಗಿರುವುದರಿಂದ...ಹಸಿವಿಲ್ಲದೇ ಇದ್ದರೂ ಊಟಮಾಡಿ ಇಂದು ಭಾನುವಾರ ಎಂಬ ಭಾವದಲ್ಲಿ ಹಾಗೇ ಸೋಫಾದಲ್ಲಿ ಒಂದು ಕುಳಿತು ಮತ್ತೆ ಪುನಃ ಮೊಬೈಲ್ ರೀಲ್ಸ್ ತೀಡಿ ತೀಡಿ ನೋಡುತ್ತಾ ಇರುವುದು. ದ್ರೌಪದಿಯ ಸೀರೆಗಾದರೂ ಒಂದು ತುದಿಯಂಚು ಸಿಗಬಹುದು. ಆದರೆ ಈ ರೀಲ್ಸಗಳಿಗೆ ಅಂತ್ಯವೆಂಬುದೇ ಇಲ್ಲ. ಒಂದರ ನಂತರ ಒಂದು ...ನೋಡಿ ನೋಡಿ ಕಣ್ಣೆ ಸುಸ್ತಾಗಿ ತಲೆತುಂಬ ಬೇರೇ ಎನೂ ಇಲ್ಲದೇ ಈ ರೀಲ್ಸ್ ಗಳೇ ತುಂಬಿಬಿಡುತ್ತವೆ. 

ಸಾಯಂಕಾಲ ಏನು?  ಮತ್ತದೇ ಎನು ಮಾಡುವುದು. ಮೊಬೈಲ್ಸ್ ರೀಲ್ ನೋಡಿ ನೋಡಿ ಸಾಕಾಗಿರುತ್ತದೆ. ಮಾಡುವುದಕ್ಕೆ ಏನೂ ಇರುವುದಿಲ್ಲ ಸಮಯ ಕಳೆಯಬೇಕಲ್ಲ. ಇನ್ನು ನಿದ್ದೆ ಮಾಡಿದರೆ ರಾತ್ರೆಯ ಬಾರದ ನಿದ್ದೆ ಹಟ ಹಿಡಿದರೆ ಅಂತ ಭಯವಾಗುತ್ತದೆ. ಹಾಗೂ ಹೀಗೂ ಹೊತ್ತು ಸರಿದಾಗ ಹೆಂಡತಿ ಹಾಗೇ ಮಲ್ಲೆಶ್ವರಂ ಬಜಾರ್ ಗೆ ಹೋಗಿ ಬರೋಣ ಅಂತ ಮಕ್ಕಳ ಜತೆ ಹೊರಡುತ್ತಾಳೆ. ಅದು ಪ್ರತಿ ಭಾನುವಾರದ ಅಭ್ಯಾಸ. ಮೊದೆಲೆಲ್ಲ ಊರಲ್ಲಿ ಬಳೆ ಸರ ಕೊಳ್ಳಲು  ವರ್ಷದ ಯಾವುದೋ  ಜಾತ್ರೆ ಸಂತೆಗಾಗಿ ಕಾದುಕುಳಿತಿರುತ್ತಿದ್ದರು. ಈಗ ಹಾಗಿಲ್ಲ. ಮನೆಯಿಂದ ಬೀದಿಗೆ ಇಳಿದರೆ ...ಮಲೆಶ್ವರಂ ಎಂಟನೇ ಅಡ್ಡರಸ್ತೆಗಳಂತೆ ಬೇಕಾದಷ್ಟು ರಸ್ತೆಗಳು ಇರುತ್ತವೆ. ಅಂಗಡಿಯೋ ಬೀದಿ ಬದಿಯ ಅಂಗಡಿಯೋ ವೆತ್ಯಾಸವೇ ಇಲ್ಲದಂತೆ ಅದೂ ಇದೂ ಹರಡಿ ಹೆಂಗಳೆಯರ ಚಿತ್ತ ಸೆಳೆಯುವುದಕ್ಕೆ ಹಲವು ಅವಕಾಶಗಳು ತೆರೆದಿರುತ್ತವೆ.  ಸಾಯಂಕಾಲವಾದೊಡನೆ ಮನೆಯಲ್ಲಿ ಕುಳಿತು ಏನು ಮಾಡುವುದು ಸುಮ್ಮನೇ ಹಂಡತಿಯ ಜತೆಗೆ ಒಂದಷ್ಟು ಹೊತ್ತು ಕಳೆದ ಹಾಗಾಗುತ್ತದೆ ಎಂದು ಕೊಂಡು ಹೊರಟು ಬಿಡುವುದು. ಅಂಗಡಿಯಿಂದ ತರುವುದಕ್ಕೆ ಏನೂ ಇರುವುದಿಲ್ಲ. ಸುಮ್ಮನೇ ತಿರುಗುವುದು...ಅಷ್ಟೇ . ತಿರುಗಿ ನೊಡುವುದಕ್ಕೇನು ಟಿಕೆಟ್ ಕೊಡಬೇಕಾಗಿಲ್ಲವಲ್ಲ. ಮಾಲ್ ಸುತ್ತಾಡಿ ಮೆಲೆ ಕೆಳಗೆ ಹತ್ತಿ ಇಳಿಯುವುದು ಪರಿಸರ ಎಲ್ಲ ನೋಡಿಕೊಂಡು ಬಂದು ಬಿಡುವುದು ಅಂತ ಹೆಂಡತಿ ಮಕ್ಕಳ ಜತೆಗೆ ಬೈಕ್ ಅಥವಾ ಕಾರು ತೆಗೆದುಕೊಂಡು ಹೊರಟು ಬಿಡುವುದು.  ಒಂದಿಷ್ಟು ಪೆಟ್ರೋಲ್ ಖರ್ಚು ಮಾತ್ರ ಅಂತ ನಿರೀಕ್ಷೆ ಇರುತ್ತದೆ. ಹೆಂಡತಿ ಹೋಗುವಾಗ ಜತೆಯಲ್ಲೇ ಹೋಗುವುದು. ಏನಾದರೂ ಅವರೇ ಕೊಂಡುಕೊಳ್ಳುತ್ತಾರೆ ಅಂತ ಸುಮ್ಮನೇ ಹೊರಟು ಬಿಡುತ್ತಾರೆ. 

ಭಾನುವಾರ ಬಂದರೆ ರಸ್ತೆ ಮಾಲ್ ಅದಕ್ಕಾಗಿಯೇ ಪೂರ್ವ ಸಿದ್ಧತೆ ನಡೆಸಿರುತ್ತಾರೆ. ಎಂದಿನಂತೆ ಹೆಂಡತಿ ಮಕ್ಕಳು ಎಲ್ಲ ಸೇರಿ  ಮೊದಲ ಅಂಗಡಿಯಿಂದ ತೊಡಗಿ ಪ್ರತಿ ಅಂಗಡಿಯ ಒಳಗೆ ಹೊಕ್ಕಿ ಒಂದು ಸುತ್ತು ಇಣುಕಿ ಕೊಳ್ಳುವುದಕ್ಕೆ ಏನೂ ಇಲ್ಲದಿದ್ದರೂ ಅಲ್ಲಿ ತೂಗಿ ಹಾಕಿರುವುದನ್ನು ಹಿಂದೆ ಮುಂದೆ ತಿರುಗಿಸಿ ನೋಡಿ ಹಾಗೇ ಹೊರಬರುವುದು.  ಜತೆಯಲ್ಲಿ  ಹೋದ ಗಂಡನಿಗೂ ಇದೇ ಕೆಲಸ. ಹಾಗೇ ಅಂಗಡಿ ಅಂಗಡಿ ಸುತ್ತಾಡುವುದು. ಹೆಂಡತಿ ಅಂಗಡಿ ಒಳಗೆ ಹೋದರೆ ಗಂಡು ಹೊರಗೆ ಹಾಗೇ ಹೊರಗೆ ನಿಂತು ರಸ್ತೆಯಲ್ಲಿ ಹೋಗಿಬರುವವರನ್ನು ನಿಂತು ನೋಡುವುದಲ್ಲದೇ ಬೇರೇನೂ ಕೆಲಸ ಇರುವುದಿಲ್ಲ. ಕೆಲವೊಮ್ಮೆ ಚಿಕ್ಕ ಮಕ್ಕಳು ಇದ್ದರೆ ಹೊರಗೆ ನಿಂತು ಅವರನ್ನು ಸಂಭಾಳಿಸಿ ನಿಯಂತ್ರಿಸುವುದೇ ಹರ ಸಾಹಸವಾಗಿಬಿಡುತ್ತದೆ. ಈ ಅಂಗಡಿಗಳೂ ಹಾಗೆ ನಮ್ಮ ಅಂದಿನ ನಮ್ಮ ಹಳ್ಳಿಯ ಅಂಗಡಿಯ ಹಾಗೆ ಅಲ್ಲ. ಎಷ್ಟು ಹೊತ್ತಾದರೂ ನಿಂತೇ ಇರಬೇಕು. ಕುಳಿತುಕೊಳ್ಳುವುದಕ್ಕೆ ಎಡೆಯಿಲ್ಲ. ಹಳ್ಳಿಯ ಅಂಗಡಿಗಳಲ್ಲಾದರೆ ಮೊದಲು ಒಂದೆರಡು ಬೆಂಚು ಇಡುತ್ತಿದ್ದರು. ಹೀಗೆ ಬರುವವರಿಗೆ ಕುಳಿತುಕೊಳ್ಳೂವುದಕ್ಕೆ ಒಂದಿಷ್ಟು ಹರಟೆ ಹೊಡೆದು ಊರ ಸುದ್ದಿ ಹಂಚುವುದಕ್ಕೆ ಈ ಬೆಂಚು ಬಹಳ ಸಹಕಾರಿಯಾಗುತ್ತಿತ್ತು. ಬಸ್ ಬರುವುದಕ್ಕೆ ತಂಗುದಾಣದಲ್ಲಿ ಕಾದುಕುಳಿತುಕೊಳ್ಳುವುದಕ್ಕಿಂತ ಈ ಅಂಗಡಿ ಬೆಂಚ್ ನಲ್ಲಿ ಕುಳಿತು ಅಂಗಡಿಯವನೊಂದಿಗೆ ಊರಸುದ್ದಿ ಮಾತನಾಡುತ್ತಾ ಅದರ ನಡುವೆ ಒಂದಷ್ಟು ಚಿಲ್ಲರೆ  ವ್ಯಾಪಾರ ಬಸ್ಸು ಬರುವುದನ್ನೆ ಮರೆತು ಬಿಡುತ್ತಿದ್ದರು.   ಇಲ್ಲಿ ಹಾಗಿಲ್ಲ ಎಷ್ಟು ಹೊತ್ತಾದರು ನಿಂತೇ ಇರಬೇಕು. ಕೊಳ್ಳುವುದಕ್ಕೆ ಏನು ಇಲ್ಲದಿದ್ದರೂ,  ನಿಂತು ನಿಂತು ಕಾಲು ನೋಯುವಾಗ  ಅಲ್ಲಿ ಇಲ್ಲಿ ಇಣುಕಿ ನೋಡಿ , ಕೊನೆಗೆ ಏನೂ ಬೇಡ ಅಂತ ಸುಮ್ಮನೇ ನಿಂತು ಅಂಗಡಿಯೊಳಗೆ ಹೊಕ್ಕ ಮನೆಯವರನ್ನು ಯಾವಾಗ ಬರುತ್ತಾರೋ ಅಂತ ಕಾದು ಕುಳಿತು ನೋಡುವುದಲ್ಲದೇ ಬೇರೇನೂ ಕೆಲಸವಿರುವುದಿಲ್ಲ. 

ಹಲವಾರು ಅಂಗಡಿ ಹತ್ತಿ ಇಳಿದು ಕತ್ತಲೆ ಆವರಿಸುವಾಗ , ಇನ್ನು ಹೋಗುವ ಅಂತ ಹೊರಡುವಾಗ ಅಂಗಡಿಯಿಂದ ಏನು ಕೊಂಡುಕೊಂಡದ್ದು ಎಂದು ನೋಡಿದರೆ ಕೆಲವು ರಬ್ಬರ್ ಬ್ಯಾಂಡ್, ಕ್ಲಿಪ್ಪು ಇಷ್ಟೇ ಹತ್ತೈವತ್ತು ರೂಪಾಯಿಯ ವಸ್ತುಗಳು.  ಕೊನೆಗೆ ಇಷ್ಟು ಹೊತ್ತು ನಿಂತು ಸುಸ್ತಾಗಿರುತ್ತದೆ. ಹೆಂಡತಿ ಮಕ್ಕಳು ಗಂಡಿನ ಮುಖ ನೋಡಿ ಪಾಪ ಸುಮ್ಮನೇ ಇದ್ದಾರೆ . ಏನಾದರೂ ತಿನ್ನುವ ಮನಸ್ಸಾಗುತ್ತದೆ. ಇಷ್ಟು ಹೊತ್ತು ಹೆಂಡತಿಯೇ ಖರ್ಚು ಮಾಡಿರುತ್ತಾಳೆ ಇನ್ನೂ ಆಕೆಯೇ ದುಡ್ಡು ಕೊಡಬಹುದು ಅಂತ ಯಾವುದೋ ಬೇಲ್ ಚಾಟ್ಸ್ ಅಂಗಡಿ ಮುಂದೆ ಬರುತ್ತಾರೆ. ಅದು ಇದು ಅಂತ ಆರ್ಡರ್ ಮಾಡಿ ನಿಂತುಕೊಂಡೊ ಅಲ್ಲಿದ್ದ ಸ್ಟೂಲ್ ಮೇಲೆ ಕುಳಿತು ತಿನ್ನುವುದಾಗುತ್ತದೆ. ಇಷ್ಟಾದರೂ ಸಿಕ್ಕಿತಲ್ಲಾ ಅಂತ ಗಂಡನಿಗೆ ಆಗುವ ಸಂತೋಷ ಕೇವಲ ಕ್ಷಣಿಕ. ಅದುವರೆಗೆ ಪ್ರತಿ ಅಂಗಡಿಯಲ್ಲೂ ತನ್ನ ವ್ಯಾನಿಟಿ ಬ್ಯಾಗಿನಿಂದಲೇ ದುಡ್ಡು ಕೊಡುತ್ತಿದ್ದಾಕೆ ಈಗ  ಎಲ್ಲೋ ನೋಡುತ್ತಿದ್ದ ಗಂಡನ  ಹತ್ತಿರ ಬಂದು , ಮೊಬೈಲ್ ನೋಡಿ ಫೋನ್ ಪೇ ತೆಗೆದು ನೋಡಿ ಪಿನ್ ಹಾಕಿ ಅಂತ ಹೇಳುತ್ತಾಳೆ. ಫೋನ್ ಪೇ ತೆಗೆದು ನೋಡಿದರೆ ಅಂಗಡಿಯವನಿಗೆ ಕೊಡಬೇಕಾದ ನಾನೂರು ಐನೂರಕ್ಕೆ ಅಲ್ಲಿ ಪಿನ್ ರಿಕ್ವೆಸ್ಟ್ ಬಂದಿರುತ್ತದೆ. ಅರಳಿದ ಮುಖ ಸಣ್ಣದು ಮಾಡಿ ಪಿನ್ ಒತ್ತಿ ಬಡಪಾಯಿ ಪೋಸು ಕೊಟ್ಟು ಮನೆ ಕಡೆ ಹೊರಟು ಬಿಡುತ್ತಾರೆ. ಅಷ್ಟೆಲ್ಲ ಅಂಗಡಿ ಸುತ್ತಿದರೂ ಆಕೆಗೆ ಒಂದು ಹತ್ತು ಐವತ್ತು ಖರ್ಚಾಗಿರುತ್ತದೆ.  ಆದರೆ ಗಂಡಿನ ಪೋನ್ ಪೇಯಲ್ಲಿ ಐನೂರು ಕಳೆದಾಗಿರುತ್ತದೆ. 

ಹೀಗೆ ಒಂದು ಭಾನುವಾರದ ಸಹಜ ಪ್ರಹಸನ ಕಳೆದಿರುತ್ತದೆ.