“Every moment of worship is when your thoughts and mind turn toward God.”
ವಿದ್ವಾಂಸರೊಬ್ಬರು ಪ್ರವಚನದಲ್ಲಿ ಹೇಳಿದ ಮಾತು ಇದು. ನಮ್ಮ ಎಲ್ಲಾ ಚಲನವಲನಗಳಲ್ಲೂ ಭಗವಂತನ ಆರಾಧನೆ ಇದೆ. ಯಾವಾಗ ನಮ್ಮ ಮನಸ್ಸು ಭಗವಂತನ ಕುರಿತು ಚಿಂತಿಸುತ್ತದೋ ಆಗ ನಾವೇನು ಮಾಡಿದರೂ ಅದು ಭಗವಂತನ ಆರಾಧನೆಯಾಗುತ್ತದೆ. ಬೆಳಗ್ಗೆ ನಿದ್ದೆಯಿಂದ ಏಳುವಾಗ ಭಗವಂತನ ಸ್ಮರಣೆಯೊಂದು ಮನಸ್ಸಿನ ಚಿಂತನೆಯನ್ನು ಭಗವಂತನ ಕಡೆಗೆ ಹರಿಸುತ್ತದೆ. ರಾತ್ರಿ ಮಲಗುವ ಮೊದಲು ಭಗವಂತನ ನಾಮಸ್ಮರಣೆ ಒಂದು ಸಾಕು ನಾವು ನಿದ್ರೆಯಲ್ಲೂ ಭಗವಂತನ ಆರಾಧನೆ ಮಾಡಿದಂತೆ. ಇದು ಜ್ಞಾನಿಗಳು ಹೇಳುವ ಮಾತು.
ಕೈಯಲ್ಲಿ ಇರುವ ಆಹಾರ, ಕೈತುತ್ತು ಕೈಯಿಂದ ಬಾಯಿಗೆ ನಂತರ ಗಂಟಲಿಗೆ ಪ್ರವೇಶಿಸುವ ತನಕ ನಮ್ಮದು. ಆನಂತರ ಗಂಟಲು ಇಳಿದನಂತರ ಅದು ನಮ್ಮದಾಗಿರುವುದಿಲ್ಲ. ನಮ್ಮಲ್ಲಿ ಅಹಂ ಇರುವ ತನಕ ನಮ್ಮಲ್ಲಿ ಭಗವಂತನಿರುವುದಿಲ್ಲ. ಎಲ್ಲಿ ನಮ್ಮ ಅಹಂಕಾರವನ್ನು ಕಳೆಯುತ್ತೇವೆಯೋ ಅಲ್ಲಿ ಭಗವಂತನ ಸಾಕ್ಷಾತ್ಕಾರವಿರುತ್ತದೆ. ನಾನು ನಮಸ್ಕಾರ ಮಾಡುತ್ತೇನೆ ಎಂದರೂ ಅಲ್ಲಿ ಅಹಂ ಇರುತ್ತದೆ. ನಮಸ್ಕಾರ ಎಂಬುದು ನಮ್ಮನ್ನು ಭಗವಂತನಲ್ಲಿಗೆ ಸೆಳೆಯುವ ಕ್ರಿಯೆ. ಅದು ಶರಣಾಗತಿಯ ಭಾವ. ಅಲ್ಲಿ ಅಹಂ ಇದ್ದರೆ ನಮಸ್ಕಾರ ಎಂಬುದು ಕೇವಲ ಚಮತ್ಕಾರವಾಗಿಬಿಡುತ್ತದೆ. ಚಮತ್ಕಾರ ಅದೃಷ್ಟವನ್ನು ಅವಲಂಬಿಸುವ ವಂಚನೆಯ ಹಾದಿ. ಆದರೆ ನಮಸ್ಕಾರ ಸಂಭಂಧಗಳನ್ನು ವೃದ್ಧಿಸುವ ಮೊದಲ ಮೆಟ್ಟಲು. ಭಗವಂತನ ಜತೆಗಿನ ಸಂಬಂಧ ಸೃಷ್ಟಿಯಾಗುವುದೇ ನಮಸ್ಕಾರದಿಂದ.
ಭಗವಂತ ರೂಪ ರಹಿತ, ಗುಣರಹಿತ ಭಾವ ರಹಿತ. ಆತನಿಗೆ ಹಸಿವು ಬಾಯಾರಿಕೆಗಳಿಲ್ಲ. ಹಾಗಾದರೆ ಆತನಿಗೆ ನಾವು ಯಾಕೆ ನೈವೇದ್ಯ ಅರ್ಪಿಸಬೇಕು? ನಾವೇಕೆ ಬೇಡಿಕೊಳ್ಳಬೇಕು? ಸಕಲ ಆಗುಹೋಗುಗಳಿಗೆ ಆತನೇ ಕಾರಣೀಭೂತನಾಗುವಾಗ ಆತನ ಸಮ್ಮುಖದಲ್ಲಿನ ನಮ್ಮ ವರ್ತನೆ ಆತನಿಗಾಗಿ ಅಲ್ಲ. ಆತನ ಅನುಗ್ರಹಕ್ಕೆ ಅಂತ ನಮ್ಮ ಭಾವನೆಗಳ ಪ್ರಕಟಣೆ. ಹಸಿವು ನೀರಡಿಕೆ ಇಲ್ಲದ ದೇವರಿಗೆ ನಾವು ಎಲ್ಲವನ್ನೂ ಅರ್ಪಿಸುತ್ತೇವೆ. ಅದು ನಮ್ಮ ಮನಸ್ಸಿನ ಭಾವನೆಗೋಸ್ಕರ ನಾವು ಅರ್ಪಿಸುತ್ತೇವೆ ಹೊರತು ಅದು ಭಗವಂತನಿಗಾಗಿ ಅಲ್ಲ. ಭಗವಂತನಿಗೆ ಭಾವನೆಯೂ ಇಲ್ಲದ ಮೇಲೆ ಆತನ ತೃಪ್ತಿ ಎಲ್ಲಿದೆ. ಅಲ್ಲಿ ನಮ್ಮದೇ ಅತೃಪ್ತ ಮನಸ್ಸಿನ ಪರಿಹಾರವಿರುತ್ತದೆ. ಎಲ್ಲ ಭಾವನೆಗಳೂ ಭಗವಂತನ ಕಡೆಗೆ ಸರಿಯುತ್ತದೆ. ಅದೇ ಭಗವಂತನಿಗೆ ಸಲ್ಲುವ ಗೌರವ.
ನಾವು ಯಾವುದೋ ದೇವರ ಚಿತ್ರದ ಮುಂದೆ ನಿಂತುಕೊಂಡು ಇಲ್ಲವೇ ದೇವರ ಮೂರ್ತಿಯ ಮುಂದೆ ನಿಂತುಕೊಂಡು ಪ್ರಾರ್ಥನೆ ಮಾಡಿದರೂ ಕಣ್ಣನ್ನು ಮುಚ್ಚಿದಾಗಲೇ ನಮಗೆ ಎದುರು ಇರುವ ಭಗವಂತನ ಪ್ರತೀಕದ ಜತೆಗೆ ಅನುಸಂಧಾನ , ಅಥವ ಸಂಭಂಧ ಸಾಧ್ಯವಾಗುತ್ತದೆ. ಭೌತಿಕವಾಗಿ ಭಗವಂತನ ಬಳಿಗೆ ನಾವು ಹೋಗುವುದಕ್ಕೆ ಸಾಧ್ಯವಿಲ್ಲ. ಮನಸ್ಸಿನಿಂದ ಮಾತ್ರವೇ ಭಗವಂತನ ಬಳಿಗೆ ಹೋಗಬಹುದು. ಹಾಗಾಗಿ ಎದುರು ಇರುವ ಚಿತ್ರವು ಕೇವಲ ಭಗವಂತನ ಪ್ರತೀಕವಾಗುತ್ತದೆ ಹೊರತು ಬೌತಿಕವಾಗಿ ಭಗವಂತನಲ್ಲ. ಹಾಗಾಗಿ ಅದನ್ನು ಮೂರ್ತ ಸ್ವರೂಪ ಎನ್ನುವುದು. ಮೂರ್ತಿ ಎಂಬುದು ಕೇವಲ ನಮ್ಮ ಮನಸ್ಸಿನ ಪ್ರತೀಕ. ಮನಸ್ಸು ಭಗವಂತನಲ್ಲಿ ಐಕ್ಯವಾಗುವುದು ಅತೀ ಮುಖ್ಯ ಹೊರತು ಎದುರಿನ ಮೂರ್ತಿಯಲ್ಲ. ಮೂರ್ತಿ ಎಂದರೆ ಕನ್ನಡಿಯಂತೆ. ಕನ್ನಡಿ ಎದುರು ನಾವು ಯಾವುದನ್ನು ಇರಿಸುತ್ತೇವೋ ಅದರ ಪ್ರತಿಬಿಂಬ ಕನ್ನಡಿಯಲ್ಲಿ ಬರುತ್ತದೆ.
ನಮ್ಮ ಪ್ರತಿಯೊಂದು ಚಲನೆಯೂ ಭಗವಂತನ ಕಡೆಗೆ ಆಗುವಾಗ ಅಲ್ಲಿ ನಮ್ಮ ಮನಸ್ಸಿನ ಭಾವನೆಗಳು ಮುಖ್ಯವಾಗುತ್ತದೆ. ಭಗವಂತನಿಗೆ ನಾವು ಎಷ್ಟು ಕೊಟ್ಟಿದ್ದೇವೆ,್? ಎನು ಕೊಟ್ಟಿದ್ದೇವೆ? ಯಾರು ಕೊಟ್ಟಿದ್ದಾರೆ? ಎಂಬುದು ಮುಖ್ಯವಲ್ಲ. ನಾವು ಹೇಗೆ ಕೊಟ್ಟಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಮನಸ್ಸಿನಿಂದ ನಾವು ತೊಟ್ಟು ನೀರನ್ನು ಅರ್ಪಿಸಿದರೂ ಅದು ಅರ್ಘ್ಯವಾಗುತ್ತದೆ. ಅರ್ಘ್ಯ ಎಂಬುದು ಅನಂತತೆಯ ಸಂಕೇತ. ಅದು ಮಿತಿಯೊಳಗೆ ಇರುವುದಿಲ್ಲ. ಅದಕ್ಕೆ ಗಾತ್ರವಿಲ್ಲ. ಅದಕ್ಕೆ ರೂಪವಿರುವುದಿಲ್ಲ. ಅಲ್ಲಿ ನಮ್ಮ ಮನಸ್ಸೇ ಮುಖ್ಯವಾಗುತ್ತದೆ. ಮನಸ್ಸಿನ ಭಾವನೆಯೇ ಮುಖ್ಯವಾಗುತದೆ. ದೇವರು ಎಲ್ಲರನ್ನೂ ಎಲ್ಲವನ್ನೂ ಸೃಷ್ಟಿ ಮಾಡುತ್ತಾನೆ. ಆದರೆ ಮನುಷ್ಯನನ್ನು ಸೃಷ್ಟಿ ಮಾಡುವಾಗ ಅಲ್ಲೊಂದು ಮನಸ್ಸನ್ನು ಇಡುತ್ತಾನೆ. ಮನಸ್ಸಿನ ತುಂಬ ಭಾವನೆಗಳನ್ನು ಬಿತ್ತುತ್ತಾನೆ. ಆ ಭಾವನೆಗಳ ಪ್ರತಿ ಚಿಗುರು ಶಾಖೆಗಳು ಭಗವಂತನ ಕಡೆಗೆ ಚಲಿಸಿದಾಗಲೇ ಭಗವಂತನಿಗೆ ಸಲ್ಲುವ ಗೌರವವಾಗುತ್ತದೆ. ಇದು ಮನುಷ್ಯನ ಬದುಕಿನ ಪಯಣ. ಮನದ ಪಯಣ.


