Monday, August 24, 2026

ಯಜ್ಞೋಪವೀತಧಾರಣೆ


        



ಊರಲ್ಲಿ ನನ್ನ ಮಿತ್ರರೊಬ್ಬರು ಇದ್ದರು. ನಾವೆಲ್ಲ ಎಲ್ಲಾದರೂ ಪ್ರವಾಸ ಹೋದರೆ ಇವರು ಜನಿವಾರ ಮನೆಯಲ್ಲಿ ಬಿಟ್ಟು ಬರುತ್ತಿದ್ದರು. ಕಾರಣ ಇಷ್ಟೆ ಹೊರಗೆ ಯಾವುದಕ್ಕೂ ನಿಬಂಧನೆ ನಿಯಂತ್ರಣ ಇರುತ್ತಿರಲಿಲ್ಲ. ಏನೂ ತಿನ್ನಬಹುದು. ಹೇಗೂ ಇರಬಹುದು.  ವೃತ್ತಿಯಲ್ಲಿ ಚಾಲಕರಾಗಿದ್ದ ಇವರು ಈ ರೀತಿಯ ಜೀವನ ಶೈಲಿ ಅಳವಡಿಸಿಕೊಂಡಿರುವುದರಲ್ಲಿ ತಪ್ಪಾಗಲೀ ವಿಶೇಷವಾಗಲೀ  ಏನೂ ಅನ್ನಿಸಲಿಲ್ಲ. ಯಾಕೆಂದರೆ ಬಹಳಷ್ಟು ಸಮಯ ಮನೆಯಿಂದ ಹೊರಗೇ ಇರಬೇಕಾದ ವೃತ್ತಿ ಇದು. ಎಲ್ಲಿ ಯಾವ ಬಗೆಯಲ್ಲಿ ಪರಿಸ್ಥಿತಿ ಇರುತ್ತದೆ ಎಂಬುದು ನಿರೀಕ್ಷಿಸುವುದು ಬಹಳ ಕಷ್ಟ. ಕೆಲವು ಕಡೆ ಸ್ನಾನ ಶೌಚಕ್ಕೂ ವ್ಯವಸ್ಥೆ ಇರುವುದಿಲ್ಲ. ಇದ್ದರೂ ನಿತ್ಯ ಅನುಷ್ಠಾನ ಮಾಡುವುದಕ್ಕೆ ಪೂರಕವಾಗಿರುವುದಿಲ್ಲ. ಇನ್ನು ಜತೆಯಲ್ಲಿರುವ ಒಡನಾಡಿಗಳೂ ಅಷ್ಟೇ. ಹೀಗಿರುವಾಗ ಎಲ್ಲದಕ್ಕೂ ಸಮಯ ಒದಗಿಬರದೇ ಕ್ರಮೇಣ ಅದರ ಬಗ್ಗೆ  ಅಸಡ್ಡೆ ಬೆಳೆಯುವುದು ಸಾಮಾನ್ಯ. ಈಗ ಇದೇ ಸ್ನೇಹಿತರು ಸಂಧ್ಯಾವಂದನೆ ಮಾಡುತ್ತಾ ನಿತ್ಯ ಯೋಗಾಭ್ಯಾಸವನ್ನೂ ಮಾಡುತ್ತಾರೆ. ಜೀವನದಲ್ಲಿ ಎದುರಾಗುವ ಅನುಭವಗಳು ಇದಕ್ಕೆ ಕಾರಣ. ತಪ್ಪುಗಳು ದುರ್ವ್ಯಸನ ಇದೆಲ್ಲ ಸರ್ವೇಸಾಮಾನ್ಯ....ಆದರೆ ಅದರಿಂದ ಹೊರಗೆ ಬರುವುದು ನಿಜಕ್ಕೂ ಒಂದು ದೊಡ್ಡ ತಪಸ್ಸಿನಂತೆ. ತಪ...ಎಂದರೆ ಬೆಂಕಿ, ಆ ತಪಸ್ಸಿನಲ್ಲಿ ಬೆಂದು ಪರಿಶುದ್ದವಾಗಿ ಹೊರಬಂದಂತೆ. 

ಅದೇ ಸ್ನೇಹಿತರ ಮನೆಗೆ ಒಂದು ಸಲ ಹೋಗಿದ್ದೆ. ಹೀಗೆ ಮನೆಯವರೊಂದಿಗೆ  ಮಾತನಾಡುತ್ತ  ಅಲ್ಲಿ  ಸಾಯಂಕಾಲವಾಗುತ್ತಿದ್ದಂತೆ  ನನಗೆ ಸ್ನಾನ ಮಾಡಿ ಜಪ ಮಾಡುವ ಸಮಯವಾಯಿತು. ನಾನು ಅದನ್ನು ಹೇಳಿಕೊಂಡಾಗ ಅವರ ತಾಯಿಗೆ ಬಹಳ ಸಂತೋಷವಾಯಿತು. ನನಗೆ ಸ್ನಾನಕ್ಕೆ ವ್ಯವಸ್ಥೆ ಮಾಡಿ ಉಡುವುದಕ್ಕೆ ವಸ್ತ್ರ ಕೊಟ್ಟರು. ಸ್ನಾನ ಮಾಡಿ ಬಂದಾಗ ಜಪ ಮಾಡಬೇಕಾದ ನನಗೆ ಬೇಕಾಗಿ  ನೆಲ ಗುಡಿಸಿ ಸಾರಿಸಿ ಸ್ವಚ್ಛ ಗೊಳಿಸಿದ್ದರು. ನಂತರ ಹೇಳಿದರು ನಮ್ಮಲ್ಲಿ ಯಾರೂ ಮಾಡುವವರಿಲ್ಲ. ನೀವು ಮಾಡಿದರೆ ಈ ಮನೆಯೇ ಪಾವನ ಅದಂತೆ.  ಸಂಧ್ಯಾವಂದನೆಯ ಮಹತ್ವ ಆಕೆಗೆ ಅರಿವಿತ್ತು. ಆ ತಾಯಿಗೆ ಇದ್ದ ಗೌರವ ಕಂಡು ನಿಜಕ್ಕೂ ಸಂತೋಷವಾಯಿತು.  ಜನಿವಾರ ಎಂಬುದು ನಿತ್ಯ ಕರ್ಮದ ಪರಿಧಿ ಎಳೆದಂತೆ. ಅದರ ಒಳಗೆ ಎಲ್ಲಾ ಭಾವನೆಗಳು ರೂಪುಗೊಳ್ಳಬೇಕು. ಉತ್ತಮ ತಂದೆ ತಾಯಿ ಇದ್ದರೂ ಉತ್ತಮ ಸಂಸ್ಕಾರ ಬರುವ ನಿರೀಕ್ಷೆ ಇಲ್ಲ. ಯಾಕೆಂದರೆ ಈಗಿನ ಪರಿಸರ ಜೀವನ ಕ್ರಮ ಬದಲಾಗಿದೆ. ಮಗು ಶಾಲೆಗೆ ಹೋಗುವುದಕ್ಕೆ ತೊಡಗಿದಾಗ, ಸಾಕಷ್ಟು ವಿದ್ಯಾಭ್ಯಾಸದ ಒತ್ತಡವಿರುತ್ತದೆ. ಶಾಲೆಯಲ್ಲಿನ ಓದು  ಬರಹಕ್ಕಿಂತಲೂ ಶಾಲೆ ಬಿಟ್ಟಮೇಲಿನ ಶಿಕ್ಷಣ ಅಧಿಕವಾಗಿರುತ್ತದೆ. ಮನೆಕೆಲಸ ಅಭ್ಯಾಸ ಜತೆಗೆ ಈಗ ಟ್ಯೂಷನ್ ಇವುಗಳ ನಡುವೆ ಸಂಧ್ಯಾವಂದನೆಗೆ ಸಮಯವೇ ಸಿಗುವುದಿಲ್ಲ.  ಬೆಳಗ್ಗೆ ಮುಂಜಾನೆ ಐದು ಘಂಟೆಗೆ ಕೆಲವು ಕಡೆ ಟ್ಯೂಷನ್ ಆರಂಭವಾಗುತ್ತದೆ. ಎಂಟು ಗಂಟೆಯ ತನಕ ಟ್ಯೂಷನ್ ಮುಗಿಸಿ ಮನೆಗೆ ಬಂದು ಸ್ನಾನ ಮಾಡಿ ಉಪಹಾರ ಸೇವಿಸಿ ಶಾಲೆಗೆ ಹೋಗಬೇಕು. ಈ ನಡುವೆ ಸಂಧ್ಯಾವಂದನೆ ಎಂದರೆ ಅದು ದೊಡ್ಡ ಶಿಕ್ಷೆಯಾಗುತ್ತದೆ.  ಒಂದು ದಿನ ಅಲ್ವ...ಅಂತ ಬಿಟ್ಟ ನಿತ್ಯ ಕರ್ಮ ಕ್ರಮೇಣ ಬದುಕಿನಿಂದಲೇ ಮಾಯವಾಗಿಬಿಡುತ್ತದೆ. 

  ಜನಿವಾರ ಕಳಚುವ ವಸ್ತ್ರವಾಗಿ.. ಹೊರಗಿನ ವಸ್ತ್ರ ಉಡುವಾಗ ಇದನ್ನು ಕಳಚಿ ಇಡುವುದು. ವಿಚಿತ್ರ ಎನಿಸುತ್ತದೆ. ಬೇಕಾದಾಗ ಧರಿಸುವ ಆಭರಣದಂತೆ. ಕೆಲವರು ಬ್ರಾಹ್ಮಣರ ಕಾರ್ಯಕ್ರಮಕ್ಕೆ ಹೋಗುವಾಗ ಮಾತ್ರ ಅದನ್ನು ಧರಿಸುತ್ತಾ ಒಂದು ರೀತಿಯ ಪಾತ್ರಧಾರಿಯಾಗಿಬಿಡುತ್ತಾರೆ. ಅದೆಲ್ಲ ತೀರ ವೈಯಕ್ತಿಕ ಅನ್ನಿಸಿದರೂ ಶ್ರದ್ಧೆಯಿಂದ ನಿಯಮ ಪಾಲಿಸಿ ಗೌರವದಿಂದ ಕಾಣುವವರಿಗೆ ಇದು ಆತಂಕದ ವಿಷಯವಾಗುತ್ತದೆ.  ಯಜ್ಞೋಪವೀತ ಎಂಬುದು ಶರೀರದಿಂದ ಅದನ್ನು ತೆಗೆಯಬೇಕಾದರೆ ಹೊಸದನ್ನು ಹಾಕಿದ ನಂತರವೇ ಅದನ್ನು ವಿಸರ್ಜಿಸಬೇಕು. ಇಂದು ಹಲವರು ಇದರ ಬಗ್ಗೆ ಗಂಭೀರವಾಗಿರುವುದಿಲ್ಲ. ಅದಕ್ಕೆ ಹಲವಾರು ಕಾರಣಗಳಿರಬಹುದು. ಆದರೆ  ಯಜ್ಞೋಪವಿತ ಧಾರಣೆ....ಇದೊಂದು ಧಾರಣೆ  ಅಂದರೆ, ಅಷ್ಟಾಂಗ ಯೋಗದಲ್ಲಿ ಹೇಳುವಂತೆ ಧಾರಣಾ ಶಕ್ತಿ ಅದು ಏಕಾಗ್ರತೆ. ಅದುವರೆಗೆ ಚಂಚಲವಾಗಿದ್ದ ಬದುಕು ಇಲ್ಲಿಂದ ಒಂದು ಗುರಿಯತ್ತ ಚಿತ್ತ ಹರಿಸುವುದಕ್ಕೆ ತೊಡಗಬೇಕು. ವಿಚಲಿತವಾಗಿದ್ದ ಬದುಕು ಒಂದು ಗುರಿಯತ್ತ ಸಾಗಬೇಕು. ಹಾಗಾಗಿಯೆ ಬ್ರಹ್ಮೋಪದೇಶ,  ಯಜ್ಞೋಪವಿತ ಧಾರಣೆ ಎಂಬುದು ಬದುಕಿನಲ್ಲಿ ಉಪನಯನ ಅಂದರೆ ಮತ್ತೊಂದು ಜನ್ಮವಾಗಿ ದ್ವಿಜತ್ವ ಆರಂಭವಾಗುತ್ತದೆ. ತಾಯಿಯ ಮಡಿಲಿನಿಂದ ಹೊರಬರುವಾಗ  ಹೆಗಲಲ್ಲಿರುವ ಜನಿವಾರ ಅದಕ್ಕೆ ಪ್ರಚೋದನೆಯನ್ನು ಕೊಡುತ್ತಾ ಜೀವನದ ಆಹಾರ, ವಸ್ತ್ರ ವ್ಯಸನಾದಿಗಳಲ್ಲಿ ಎಚ್ಚರಿಕೆಯನ್ನು ಕೊಡುತ್ತಾ ಇರುತ್ತದೆ.  ಉಪವೀತ ಎಂದರೆ ಉಪವಸ್ತ್ರ. ಅದು ಸದಾ ಜತೆಯಲ್ಲಿರಬೇಕು.  ಆದರೆ ನಮ್ಮ ಪರಿಸರ ಹೇಗಾಗಿದೆ ಎಂದರೆ ಈ ಅನುಷ್ಠಾನ ನಿಯಮಗಳನ್ನು ಪಾಲಿಸುವವನಿಗೆ ಪ್ರತಿಕ್ಷಣವೂ ಸವಾಲನ್ನು ಎದುರಿಸುವಂತೆ ಇರುತ್ತದೆ. ಅದಕ್ಕೆ ಪೂರಕವಾದ ವಾತಾವರಣ ಲಭ್ಯವಾಗುವುದೇ ಇಲ್ಲ. ಒಂದು ಮದುವೆ ಮನೆಯಲ್ಲಿ ಉಳಿದುಕೊಳ್ಳುವುದಿದ್ದರೂ ಸಂಧ್ಯಾವಂದನೆ ಪೂರೈಸಬೇಕಾದರೆ ಪಕ್ಕದಲ್ಲಿ ಇರುವ ಬಂಧುಗಳ ಮನೆಗೆ ಹೋಗಬೇಕಾದ ಪರಿಸ್ಥಿತಿ ಇದೆ. ಮದುವೆ ಮನೆಯಲ್ಲೂ ಅದಕ್ಕೆ ವ್ಯವಸ್ಥೆ ಇರುವುದಿಲ್ಲ.  ನಾವೇ ಇದರ ಬಗ್ಗೆ ಗಂಭೀರವಾಗಿಲ್ಲ ಎಂದರೆ ಉಳಿದ ಧರ್ಮದಿಂದ  ಇದಕ್ಕೆ ಗೌರವವನ್ನು ನಿರೀಕ್ಷಿಸುವುದು ಮೂರ್ಖತನ.  ಎರಡೂ ಹೊತ್ತು ಸಂಧ್ಯೆ ಮಾಡಬೇಕಾದರೆ , ನೀವು ಪುರೋಹಿತರೋ ಅಂತ ಕೇಳಿದವರೂ ಇದ್ದಾರೆ. 
 
ಜನಿವಾರ ಮೂರು ಎಳೆ ಕೇವಲ ದಾರವಲ್ಲ. ಅದು ನಮ್ಮಲ್ಲಿ ಇಛ್ಚಾ ಕ್ರಿಯಾ ಜ್ಞಾನ ಇವುಗಳಿಗೆ ಪ್ರಚೋದೆನೆಯನ್ನು ಒದಗಿಸುತ್ತದೆ. ಬ್ರಾಹ್ಮಣನಿಗೆ ವಾಕ್ ಚಿತ್ತ ದೇಹ    ಈ ತ್ರಿಕರಣಗಳ ಶುದ್ಧಿಗೆ ಕಾರಣವಾಗುತ್ತದೆ. ಜನಿವಾರಕ್ಕೆ ಮೊದಲು ನಮ್ಮ ಗೌರವ ಶ್ರದ್ದೆಯನ್ನು ಸಲ್ಲಿಸಬೇಕು. ಆನಂತರ ಉಳಿದವರಿಂದ ಅದನ್ನು ನಿರೀಕ್ಷಿಸಬಹುದು. ನಾವೇ ಅದರ ಬಗ್ಗೆ ಗಂಭೀರವಲ್ಲದಿದ್ದರೆ ಹೊರಗಿನ ಪ್ರಪಂಚ ಅದನ್ನು ಗೌರವಿಸಬೇಕು ಎಂದು ನಿರೀಕ್ಷಿಸುವುದಕ್ಕೆ ಸಾಧ್ಯವೇ?  ಸಂಭ್ರಮದಿಂದ ವರ್ಷಕ್ಕೊಮ್ಮೆ ತರ್ಪಣ ಬಿಟ್ಟು  ಉಪಾಕರ್ಮ ಆಚರಿಸುತ್ತೇವೆ.  ಬ್ರಾಹ್ಮಣ್ಯ ಆವೇಶಗೊಂಡವರಂತೆ ವರ್ತಿಸುತ್ತೇವೆ. ಉಪಾಕರ್ಮ ಎಂದರೆ ಕರ್ಮದ ಬಳಿಗೆ ಸೆಳೆಯುವ ಕ್ರಿಯೆಯಾಗಬೇಕು. ಆದರೆ ನಿಜ ಜೀವನಕ್ಕೆ ಬಂದಾಗ ಜನಿವಾರ ಕೇವಲ ಧರಿಸುವ ತೆಗೆದಿಡುವ ಅಲಂಕಾರದ  ದಾರವಾಗುತ್ತದೆ. ಜನಿವಾರವೂ ಭಾರವಾಗುತ್ತದೆ. ಉಪಾಕರ್ಮವಾಗಲಿ ಇತರ ಸಂಸ್ಕಾರವಾಗಲೀ ಅದು ಉತ್ತಮ ಬದುಕಿಗೆ ಪ್ರಚೋದನೆಗಳು. ಅದರ ಅನುಷ್ಠಾನದಲ್ಲಿ ಇಹಪರದ ಚಿಂತನೆ ಇರುತ್ತದೆ. ಬ್ರಾಹ್ಮಣನಾಗಿ ಬದುಕುವುದು  ಪ್ರಸ್ತುತ  ಸವಾಲಾಗುವಾಗ ನಮಗೆ ಇವುಗಳೆಲ್ಲ   ಪ್ರಚೋದನೆಯಾಗಬೇಕು.  ಬಾಲ್ಯದಲ್ಲಿ ಉಪನಯನದ ನಂತರ ಅಥವಾ ಶಾಲೆಗೆ ಹೋಗುವಾಗ ನಾಮ ಅಳಿಸಿ ಹೋಗುತ್ತಿದ್ದೆವು. ಹೊರಗಿನ ಪ್ರಪಂಚದಲ್ಲಿ ಧರಿಸುವುದು ಒಂದು ಅಪಹಾಸ್ಯಕ್ಕೆ ಕಾರಣವಾಗುತ್ತದೆ. ಎಲ್ಲರೂ ಅವರವರ ಧರ್ಮವನ್ನು ಯಾವುದೇ ಹಿಂಜರಿಕೆ ಇಲ್ಲದೇ ಅನುಸರಿಸುವಾಗ ನಮಗೆ ಅದರೆ ಬಗ್ಗೆ ಹಿಂಜರಿಕೆ ಏಕಿರಬೇಕು. ಇದಕ್ಕೆ ಮೊದಲ ಗೌರವ ನಮ್ಮಿಂದಲೇ ಸಲ್ಲುವುದರಲ್ಲಿ ನಮ್ಮ ಆತ್ಜಾಭಿಮಾನ ವ್ಯಕ್ತವಾಗುತ್ತದೆ. 

Friday, August 21, 2026

ಜ್ಞಾನ ಪರವಶ



        ಮಹಾಭಾರತದಲ್ಲಿ ಏಕಲವ್ಯ ಪ್ರಸಂಗ ಬರುತ್ತದೆ. ದ್ರೋಣರಿಂದ ತಿರಸ್ಕೃತನಾದ ಒಬ್ಬ ಬೇಡ ಅವರದೇ ಮೂರ್ತಿ ಇಟ್ಟು ಅದರ ಪ್ರೇರಣೆಯಲ್ಲಿ ಧನುರ್ವೇದ ಅಭ್ಯಾಸ ಮಾಡುತ್ತಾನೆ.  ಒಂದು ಸಲ ಬೇಟೆಯಾಡುತ್ತ ಬಂದ ಅರ್ಜುನನ ನಾಯಿಯ ಬೊಗಳುವಿಕೆಯ ಧ್ವನಿಕೇಳಿ ಶಬ್ದವೇಧಿ ಯಿಂದ ನಾಯಿಯ ಬಾಯಿಗೆ ಬಾಣ ಪ್ರಯೋಗ ಮಾಡುತ್ತಾನೆ. ಇದನ್ನು ಕಂಡ ಅರ್ಜುನ ಆತನನ್ನು ಕಂಡಾಗ ದ್ರೋಣರ ಮೂರ್ತಿಯನ್ನು ಇಟ್ಟುಆತ ಬಿಲ್ಲುವಿದ್ಯೆ ಕಲಿತಿರುವುದು ಗಮನಕ್ಕೆ ಬರುತ್ತದೆ. ಕೊನೆಯಲ್ಲಿ ಇದು ದ್ರೋಣರ ಗಮನಕ್ಕೆ ಬಂದು ಅರ್ಜುನನಿಗಿಂತ ಬೇರೆ ಬಿಲ್ಲುಗಾರ ಇರಬಾರದು ಎಂಬ ಕಾರಣಕ್ಕೆ ದ್ರೋಣಾಚಾರ್ಯರು ಏಕಲವ್ಯನ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಪಡೆಯುತ್ತಾರೆ.  ದ್ರೋಣರು ಹೀಗೆ ಮಾಡುವುದಕ್ಕೆ ಹಲವು ಕಾರಣಗಳಿರಬಹುದು. ಹಸ್ತಿನಾವತಿಯ ಋಣ ಇರಬಹುದು. ಅರ್ಜುನನ ಮೇಲಿನ ವಾತ್ಸಲ್ಯ ಇರಬಹುದು. ಏನೇ ಇದ್ದರೂ ಈ ಪ್ರಸಂಗ ಹಲವು ಚಿಂತನೆಗಳಿಗೆ ಎಡೆ ಮಾಡಿಕೊಡುತ್ತದೆ. ಈ ಅಂಗುಷ್ಠ ಹರಣ ದ್ರೋಣರನ್ನು ಖಳನಂತೆ ಚಿತ್ರಿಸುತ್ತದೆ.  ಈಗ ಅದನ್ನು ದಲಿತ ಸಂಘರ್ಷದವರೆಗೂ ತೆಗೆದುಕೊಂಡು ಹೋಗುತ್ತಾರೆ. ಯಾವುದನ್ನೂ ಆಕ್ಷೇಪಿಸುವುದು ಕಷ್ಟವಾಗಬಹುದು. ಯಾವುದು ಸತ್ಯ ಯಾವುದು ವಾಸ್ತವ ಇದನ್ನು ತಿಳಿಯುವುದು ಹಲವು ಸಲ ಕಷ್ಟವಾಗುತ್ತದೆ. ಆದರೆ ಪುರಾಣದಲ್ಲಿ ಬರುವ ಘಟನೆಗಳಿಗೆ ಹೀಗೆ ಅಂತ ನಿರ್ದಿಷ್ಟವಾಗಿ ವ್ಯಾಖ್ಯಾನಿಸುವುದು ತಪ್ಪಾಗುತ್ತದೆ. 

  ಒಂದು  ಕ್ಷುಲ್ಲಕ ಪ್ರಾಣಿ ನಾಯಿಗೆ ಶಬ್ದವೇಧಿಯಂತಹ ಮಹಾಸ್ತ್ರವನ್ನು ಪ್ರಯೋಗಿಸಿದ ಏಕಲವ್ಯನ ಕೈಗೆ ಭೀಕರ ಮಾರಕಾಸ್ತ್ರಗಳು ಒಲಿದರೆ ಅದರ ಪರಿಣಾಮ ಏನಾಗಬಹುದು? ಅದು ದೊಡ್ಡ ಅನಾಹುತಕ್ಕೆ ಎಡೆಮಾಡಿಕೊಡಬಹುದು.   ಅರ್ಹನಲ್ಲದವನಿಗೆ ಶ್ರೀಮಂತಿಗೆ ಬಂದಂತೆ ಅದು ದುಷ್ಪರಿಣಾಮಕ್ಕೆ ಎಡೆಮಾಡಿಕೊಡುತ್ತದೆ. ಹಾಗಾಗಿ ದ್ರೋಣರು ಅರ್ಹನಲ್ಲದವನು ಇಂತಹ ಮಹಾಸ್ತ್ರಗಳನ್ನು ಪ್ರಯೋಗಿಸುವುದಕ್ಕೆ ಶಕ್ತನಾಗಬಾರದು ಎಂಬ ಕಾರಣಕ್ಕೂ ಈ ಹೆಬ್ಬೆರಳನ್ನು ದಕ್ಷಿಣೆಯಾಗಿ ಪಡೆಯುತ್ತಾನೆ. ಇಲ್ಲಿ ಜಾತಿ ಧರ್ಮ ಎಂಬಕಾರಣಕ್ಕಿಂತಲೂ ಈ ಕಾರಣವೇ ಮುಖ್ಯವಾಗುತ್ತದೆ. ಯಾವುದೇ ಒಂದು ಅಸ್ತ್ರ ಸಿದ್ದಿಸುವಾಗ ಅದನ್ನು ಪ್ರಯೋಗಿಸಿದವನಿಗೆ ಅದನ್ನು  ಉಪಸಂಹರಿಸುವ  ವಿದ್ಯೆಯೂ ತಿಳಿದಿರಬೇಕಾಗುತ್ತದೆ. ಅದಲ್ಲದೇ ಹೋದರೆ ಶತ್ರು ಸಂಹಾರವನ್ನು ಮಾಡುವ ಜತೆಗೆ ಬಾಣ ಬಿಟ್ಟವನನ್ನೇ ಅದು ಆಹುತಿ ತೆಗೆದುಕೊಳ್ಳಬಹುದು. ಅಶ್ವತ್ಥಾಮ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದಾಗ ಇದು ಅನುಭವಕ್ಕೆ ಬರುತ್ತದೆ.  ಪಕ್ಕದ ಮನೆಗೆ ಬೆಂಕಿ ಹಚ್ಚುವಾಗ ಆ ಬೆಂಕಿ ತನ್ನ ಮನೆಗೂ ಹಬ್ಬಿದರೆ ಏನಾಗಬಹುದು ಎಂಬ ಚಿಂತಿಸುವಲ್ಲಿ ಆತ ಸಮರ್ಥನಿರಬೇಕು. ಒಂದು ಮಗುವಿನ ಕೈಗೆ ಹರಿತವಾದ ಚಾಕು ಅಥವಾ ಕತ್ತಿ ಸಿಕ್ಕಿದರೆ ಏನಾಗಬಹುದು? ವಿದ್ಯಾವಂತನೆನೆಸಿಕೊಳ್ಳುವುದು ಮುಖ್ಯವಾಗುವುದಿಲ್ಲ. ಆ ವಿದ್ಯೆ ಹೇಗೆ ಸದ್ವಿನಿಯೋಗವಾಗುತ್ತದೆ ಎಂಬುದು ಮುಖ್ಯ. 

ಐನ್ ಸ್ಟೀನ್ ಕಂಡು ಹಿಡಿದ ಸೂತ್ರ ಪರಮಾಣು ಬಾಂಬಿನ ತನಕವೂ ತಲುಪಿದಲ್ಲಿ ಈ ತತ್ವವೇ ಅಡಗಿದೆ. ಇಂದು ಅದು ಭಯೋತ್ಪಾದನೆಗೂ ಕಾರಣವಾಗಿ ಜಗತ್ತನ್ನೇ ಕಾಡುತ್ತಿದೆ ಎಂದರೆ ಒಂದು ವಿದ್ಯೆ ಎಷ್ಟು ಅಮೂಲ್ಯವೋ ಅಷ್ಟೇ ಅನರ್ಹ ರ  ಕೈವಶವಾದಾಗ  ಅಪಾಯಕಾರಿಯಾಗಿ ಪರಿಣಮಿಸುತ್ತದೆ. ವಿದ್ಯೆ ಎಂಬುದು ಅರ್ಹತೆಗೆ ಪ್ರದಾನವಾಗಬೇಕು.  ಅನ್ವೇಷಣೆ ದುರಂತಕ್ಕೆ ಕಾರಣವಾದರೆ ಅದು ಹಲವು ಸಲ್ಪ ಪಶ್ಚಾತ್ತಾಪಕ್ಕೂ ಅರ್ಹವಾಗದ ದುರಂತವನ್ನು ತಂದಿಡುತ್ತದೆ. 

ಸಾಮಾನ್ಯವಾಗಿ ಪೂಜಾವಿಧಾನಗಳಲ್ಲಿ ಮಂತ್ರೋಚ್ಚಾರಕ್ಕೆ ಹೀಗೆ ನಿಯಮಗಳಿವೆ. ಮಂತ್ರಗಳು ಅದು ಕೇವಲ ಅಕ್ಷರ ಶಬ್ದಪುಂಜಗಳಲ್ಲ. ಇಂದು ಗಾಯತ್ರಿ ಮಂತ್ರ ಮೊಬೈಲ್ ಗಳ ಘಂಟೆಯಾಗಿ ಮೊಳಗುತ್ತದೆ. ಗಾಯತ್ರಿ ಮಂತ್ರ ಬಹಿರಂಗವಾಗಿ ಉಚ್ಚರಿಸಬಾರದು ಎಂಬ ನಿಯಮವಿದೆ. ಅದನ್ನು ಉಚ್ಚರಿಸುವುದಕ್ಕೆ ಗುರುಗಳ ಬೋಧನೆ, ಬ್ರಹ್ಮೋಪದೇಶದ ಆವಶ್ಯಕತೆಯೂ ಇದೆ. ಯಾವುದೇ ವಸ್ತುವು ಬೀದಿ ಬದಿಯ ಸಂತೆಯ ಸರಕಾದರೆ ಅದಕ್ಕೆ ಮೌಲ್ಯವೂ ಒದಗಿಬರುವುದಿಲ್ಲ. ಚಿನ್ನದಂಗಡಿಯೊಂದರಲ್ಲಿ ಅಭರಣವನ್ನು ಖರೀದಿಸಿದಾಗ ಅಂಗಡಿಯೊಂದರಲ್ಲಿ ಅದರ ಬೆಲೆಯನ್ನು ತೆತ್ತ ಮೇಲೆಯೂ ಆ ಅಭರಣವನ್ನು ದೇವರ ಮುಂದಿಟ್ಟು ನಮಸ್ಕರಿಸಿ ಗ್ರಾಹಕರಿಗೆ ಕೊಡುವುದನ್ನು ನೋಡಿದ್ದೇನೆ. ಅದು ಆಭರಣದ ಮೌಲ್ಯ ಮಾತ್ರವಲ್ಲ, ಅದಕ್ಕೆ ಸಲ್ಲುವ ಗೌರವ. ಬೀದಿ ಬದಿಯ ಮಾರಾಟದ ಸರಕು ತರಕಾರಿಗೂ ಹವಾನಿಯಂತ್ತಿತ ಕಪಾಟಿನ ಚಪ್ಪಲಿಗೂ ಇರುವ ವೆತ್ಯಾಸವಿದು.  ಮನುಷ್ಯನ ಆಧ್ಯಾತ್ಮಿಕ ಹಾದಿಯಲ್ಲಿ ಪರಿಶುದ್ದಿಗೆ ಕಾರಣವಾಗಬಲ್ಲ ಗಾಯತ್ರೀ ಮಂತ್ರ ಢಾಂಭಿಕ ಭಕ್ತಿಗೆ ಎರವಾಗುವುದರಲ್ಲಿ ಅದರ ಬಗೆಗಿನ ಅಜ್ಞಾನವನ್ನು ತೋರಿಸುತ್ತದೆ. ಗಾಯತ್ರೀ ಮಂತ್ರ ಪಠಣಕ್ಕೂ ಅನುಷ್ಠಾನಗಳಿಗೂ ಗೌರವಾನ್ವಿತ ನಿಯಮ ನಿಬಂಧನೆಗಳಿವೆ. ನಿಯಮ ನಿಬಂಧನೆಗಳನ್ನು ಪಾಲಿಸುವುದರಲ್ಲಿ ಅಸಡ್ಡೆಯಿರುವಾಗ  ಕೇವಲ ಮಂತ್ರದ ಬಗೆಗಿನ ಗೌರವ ಭಕ್ತಿ ಪರಿಪೂರ್ಣವಾಗುವುದಿಲ್ಲ. ಉದ್ದೇಶ ಸಂಕಲ್ಪ ಸಿದ್ಧಿಯಾಗುವುದಿಲ್ಲ. 

ಒಂದು ಮುಂಜಾನೆ ಐದು ಘಂಟೆಗೆ ನಮ್ಮ ಬೀದಿಯ ಅಂಚಿನಲ್ಲಿದ್ದ ಮಾಂಸದ ಅಂಗಡಿಯಲ್ಲಿ ಜನಗಳ ಸರದಿ ಸಾಲು ನಿಂತಿತ್ತು. ವಾರಾಂತ್ಯದ ದಿನಗಳಲ್ಲಿ ಹಲವು ಕಡೆ ಸರ್ವೇ ಸಾಮಾನ್ಯ. ಅಲ್ಲಿ ಸರದಿನಿಂತ ವ್ಯಕ್ತಿಯೊಬ್ಬನ ಮೊಬೈಲ್ ನಲ್ಲಿ ಗಾಯತ್ರಿ ಮಂತ್ರ ರಿಂಗ್ ಟೋನ್ ಆಗಿ ಕೇಳಿಸುತ್ತಿತ್ತು. ಆ ಮಂತ್ರಕ್ಕೂ ಪರಿಸರಕ್ಕೂ ಒಂದಿಷ್ಟೂ ಹೊಂದಾಣಿಕೆಯಿಲ್ಲ. ಅಪಾತ್ರದಲ್ಲಿ ಅಮೂಲ್ಯ ವಸ್ತು ಸಿಕ್ಕಿದರೆ ಹೇಗೆ ಅದು ದುರ್ಬಳಕೆಯಾಗಿ ಅಪಮೌಲ್ಯ ವಾಗುತ್ತದೆ ಎಂಬುದಕ್ಕೆ ಇದು ಸೂಕ್ತ ಉದಾಹರಣೆ. ಇದರಿಂದ ಯಾವ ಫಲಶ್ರುತಿಯೂ ಸಾಧ್ಯವಾಗುವುದಿಲ್ಲ. ಮಂತ್ರ ಪಠನಕ್ಕೆ ಅದರದ್ದೇ ಆದ ನಿಯಮಗಳು ಇರುತ್ತವೆ. ಇದು ಶಿಸ್ತು ಮತ್ತು ಪಾವಿತ್ರ್ಯತೆಯನ್ನು ಕಾಪಾಡುತ್ತವೆ. ನಾವು ಶೌಚಾಲಯದಲ್ಲಿ ಹೇಗೆ ಆಹಾರ ಸೇವಿಸುವುದಕ್ಕೆ ಒಪ್ಪಿಕೊಳ್ಳುವುದಿಲ್ಲವೋ ಅದೇ ರೀತಿ ಇದು. ಆದರೆ ಅಜ್ಞಾನಿಗಳಿಗೆ ಇದು ವೇದ್ಯವಾಗುವುದಿಲ್ಲ. ಕೇವಲ ಢಾಂಬಿಕ ಭಕ್ತಿ. ಜ್ಞಾನವನ್ನು ಪ್ರಚೋದಿಸಬೇಕಾದ ಆ ಮಂತ್ರವನ್ನು ಹೋದಲ್ಲಿ ಬಂದಲ್ಲಿ ಸರ್ವವ್ಯಾಪಿಯಾಗಿ ಕೇಳಿದರೂ ಒಂದಿಷ್ಟು ಜ್ಞಾನ ಲಭ್ಯವಾಗಲಿಲ್ಲ ಎಂದರೆ ಅದು ವಿಪರ್ಯಾಸವಲ್ಲದೇ ಮತ್ತೇನೂ ಅಲ್ಲ. 

  ನಮ್ಮ ಸನಾತನ ಧರ್ಮದ ವೇದ ಮಂತ್ರಗಳು ಬಹಳಷ್ಟು ಇಂದಿಗೂ ಅರ್ಥವಾಗದ ರಹಸ್ಯವನ್ನು ಹೊಂದಿವೆ. ಹಾಗಾಗಿ    ಅದಕ್ಕೊಂದು ಪರಿಧಿ ಶಿಸ್ತು ನಮಗೆ ತಿಳಿಯದೇ ಆಚರಣೆಗೆ ಬಂದಿವೆ. ಇಂದು ಅದನ್ನು ಸಾರಾ ಸಗಟಾಗಿ ಅಜ್ಛಾನದಿಂದ ಬದಿಗಿರಿಸಿ ಈ ಮಂತ್ರಗಳ ಮೌಲ್ಯವನ್ನು ಅಪಮೌಲ್ಯೀ ಕರಿಸುತ್ತಿದ್ದೇವೆ. ಮಂತ್ರದೊಂದಿಗೆ ಭಗವಂತನಲ್ಲಿ  ಪ್ರಾರ್ಥಿಸುತ್ತೇವೆ. ಆದರೆ ನಾವೇನು ಪ್ರಾರ್ಥಿಸುತ್ತಿದ್ದೇವೆ ಮತ್ತು ನಮ್ಮ ಮನಸ್ಸಿನ ಕಾಮನೆಗೆ ಅದು ಸೂಕ್ತವೇ ಎಂದು ಅರ್ಥವಾಗದ ಕ್ರಿಯೆಯಾಗುತ್ತದೆ. ನಿಜಕ್ಕಾದರೆ ಗಾಯತ್ರೀ ಮಂತ್ರದ ತಾತ್ಪರ್ಯ ತಿಳಿದರೆ ಅದನ್ನು ಮನಸ್ಸಿನಲ್ಲೇ ಉಚ್ಚರಿಸುವ ಪ್ರಚೋದನೆಯಾಗುತ್ತದೆ. ಅದು ಬಹಿರಂಗವಾಗಿ ಹೇಳದ ಭಗವಂತನ ಜತೆಗಿನ ಆತ್ಮೀ ಯ ಸಂಭಂದವನ್ನು ಸಾರುವ ಪ್ರಾರ್ಥನೆಯಾಗುತ್ತದೆ.  ಅದನ್ನೆಲ್ಲ ತಿಳಿಯುವ ವ್ಯವಧಾನವೂ ಇಲ್ಲ. ಬುದ್ಧಿಯೂ ಇಲ್ಲ. 

ಇಂದು ಪ್ರತಿಯೊಂದರಲ್ಲೂ ವ್ಯಕ್ತವಾಗುವ  ವಾಮ ಚಿಂತನೆ ಎಂಬುದು ಸತ್ಯದ ಮೌಲ್ಯವನ್ನು ಚಿಂತಿಸುವುದಿಲ್ಲ.  ಬ್ರಾಹ್ಮಣನಾಗಿರುವುದೆಂದರೆ ಪರಿಶ್ರಮದ ಕೆಲಸ. ಹಾಗಾಗಿಯೇ  ಅದಕ್ಕೆ ಸದಾ ಅಪವಾದ ಅಪಹಾಸ್ಯಗಳು ಎದುರಾಗುತ್ತವೆ. ಈ ಪರಿಶ್ರಮದ ನಡುವೆಯೂ ಆತ ಬಿಡದೇ ಅದರಲ್ಲೇ ಜೀವಿಸುತ್ತಾನೆ ಎಂದರೆ, ಅದು ಅಲೌಕಿಕ ಚಿಂತನೆ ಮತ್ತು ಜೀವನದ ನಿರೀಕ್ಷೆ. ಆದರೆ ಲೌಕಿಕವನ್ನೆ ಪರಮ ಸತ್ಯ ಎಂದು ತಿಳಿದವರಿಗೆ ಬ್ರಾಹ್ಮಣ ಎಂಬುದು ಅಪಹಾಸ್ಯದ ವಸ್ತುವಾಗುತ್ತದೆ. ಬ್ರಾಹ್ಮಣನಾಗಿ ಸಂಯಮದಿಂದ ಜೀವಿಸುವುದು  ಸಾಮಾನ್ಯ ಮನುಷ್ಯನಿಗೆ ಕಷ್ಟಕರ. ಆದರೆ ಬ್ರಾಹ್ಮಣನಾದವನು ಈ ಜವಾಬ್ದಾರಿಯ ಅರಿವಲ್ಲಿ ಜೀವನ ನಿರ್ವಹಿಸುವುದು ಆತನ ಕರ್ತವ್ಯ. ಬ್ರಹ್ಜಜ್ಞಾನ ವಶವಾಗಬೇಕಿದ್ದರೂ ಅದಕ್ಕೆ ಅವಕಾಶ ಮಾತ್ರವಲ್ಲ ಅರ್ಹತೆಯೂ ಇರಬೇಕು. ಅದು ಸುಲಭದಲ್ಲಿ ಲಭ್ಯವಾಗುವಂತಹುದಲ್ಲ. ಅದಕ್ಕೆ ಸತ್ಸಂಕಲ್ಪ, ಸದುದ್ದೇಶ ಸನ್ಮನಸ್ಸು ಇಂತಹ ಪರಿಶುದ್ದಿಯ ವಸ್ತುಗಳು ಪ್ರಚೋದನೆಯಾಗಬೇಕು. ಜ್ಞಾನ ಪರವಶವಾಗುವುದು ಎಂಬುದು ಇದೆ . ಆದರೆ ಜ್ಞಾನ ಎಂಬುದು ವಶವಿಲ್ಲದೆ ...ಪರರ ವಶವಾಗಿದೆ. 



Friday, August 14, 2026

ಅಹಂ ವೈಶ್ವಾನರೋ ಭೂತ್ವಾ

 ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತ: ।

ಪ್ರಾಣಾಪಾನಸಮಾಯುಕ್ತ: ಪಚಾಮ್ಯನ್ನಂ ಚತುರ್ವಿಧಮ್



ಇದು ಬ್ರಾಹ್ಮಣನಾದವನು ಭೋಜನ ಪೂರ್ವದಲ್ಲಿ ಪರಮಾತ್ಮನ ಸ್ಮರಣೆಯೊಂದಿಗೆ ಪಠಿಸುವ ಮಂತ್ರ. ಇದರಲ್ಲಿ ಬರುವ ವೈಶ್ವಾನರ ಎಂದರೆ ಅಗ್ನಿ. ನಾವು ತಿನ್ನುವ ಆಹಾರ ಅದು ನಮ್ಮ ದೇಹದ ಆಹಾರವಾದರೂ ಅದು ಪರೋಕ್ಷವಾಗಿ ಸಲ್ಲುವುದು ವೈಶ್ವಾನರ ಎಂಬ ಅಗ್ನಿಗೆ. ಹಾಗಾಗಿ ಭೋಜನ ಅಥವಾ ಸೇವಿಸುವ ಆಹಾರ ಅದು ಬ್ರಾಹ್ಮಣನಾದವನಿಗೆ ಯಜ್ಞಕ್ಕೆ ಸಮನಾಗಿರುತ್ತದೆ. ಇದು ಸಾಮಾನ್ಯ ತತ್ವ. ಈ ಅರ್ಥ ತಿಳಿದು ಊಟ ಮಾಡಿದಾಗ ಅದರಲ್ಲಿ ಹೆಚ್ಚು ತಾದಾತ್ಮ್ಯ ಲಭ್ಯವಾಗುತ್ತದೆ. ಹಾಗಾಗಿಯೇ ಬ್ರಾಹ್ಮಣನಾದವನಿಗೆ ಊಟ ಎಂಬುದು ಕೇವಲ ಆಹಾರ ಸೇವಿಸುವುದಾಗಿರುವುದಲ್ಲ. ಹಸಿವಿಗೆ ಆಹಾರ ಸೇವಿಸುವುದು. ಹಸಿವು ಎಂದರೆ ಅದು ವೈಶ್ವಾನರ ಹೇಳುವ ಅಥವಾ ರವಾನಿಸುವ ಸಂದೇಶವಾಗಿರುತ್ತದೆ.  ಹೀಗಾಗಿ ಹಸಿವಾದಾಗ ಮಾತ್ರವೇ ಆಹಾರ ಸೇವಿಸುವುದು ಆಗ್ನಿಯ ಆಜ್ಞೆಯನ್ನು ನೆರವೇರಿಸಿದಂತೆ. ಇಲ್ಲವಾದರೆ ಅದು ಚಪಲಕ್ಕೆ ತಿಂದಂತೆ. ಚಪಲ ಎಂಬುದು ಋಣಾತ್ಮಕವಾಗಿ ಅದು ತಾಮಸೀಗುಣವಾಗಿರುತ್ತಾ  ಅಸುರರ ಬೇಡಿಕೆಯಾಗುತ್ತದೆ. ಅದು ದೇಹದಲ್ಲಿ ದುಷ್ಪರಿಣಾಮವನ್ನು ಬೀರುತ್ತದೆ. 

ಯಾವ ಆಹಾರವು ಪ್ರೋಕ್ಷಣೆಗೆ ಅರ್ಹವೋ ಅದು ಬ್ರಾಹ್ಮಣನಾದವನು ಸೇವಿಸುವುದಕ್ಕೆ ಅರ್ಹವಾಗಿರುತ್ತದೆ. ಹಾಗಾಗಿ ಕೇವಲ ಸಸ್ಯಾಹಾರ ಅದರಲ್ಲೂ ತಮಸ್ಸಿನಿಂದ ರಹಿತವಾದ ಆಹಾರಮಾತ್ರವೇ ಬ್ರಾಹ್ಮಣನಿಗೆ ಯೋಗ್ಯವಾಗಿರುತ್ತದೆ.   ಈರುಳ್ಳಿಯಂತಹ ಆಹಾರವು ಭೋಜನವೆಂಬ ಯಜ್ಞಕ್ಕೆ ಹವಿಸ್ಸು ಆಗಿ ಸ್ವೀಕಾರಾರ್ಹವಲ್ಲ. ಯಾವುದೇ ಜೀವದಲ್ಲಿ ಪ್ರಾಣವಾಯು ಅವಾಹನೆಯಾದಾಗ ಅಗ್ನಿಯ ಸಾನ್ನಿಧ್ಯವು ಒದಗುತ್ತದೆ. ಅಗ್ನಿಯ ಅಸ್ತಿತ್ವ ಎಂಬುದು ಜೀವದ ಸಂಕೇತವಾಗಿರುತ್ತದೆ. ಈ ಅಗ್ನಿ ಯಾವಾಗ ಈ ದೇಹವನ್ನು ಬಿಡುತ್ತದೋ ಆಗ ಜೀವವಿಲ್ಲದೇ ದೇಹವು ಜಡವಾಗಿರುತ್ತದೆ. ಈ ಅಗ್ನಿಗೆ ಒದಗಿಸುವ ಆಹಾರವು ಅದು ಯಜ್ಞಕ್ಕೆ ಸಮನಾಗಿರುತ್ತದೆ. ಈ ಭಾವ ಮನಸ್ಸಿನಲ್ಲಿದ್ದಾಗ ನಾವು ತಿನ್ನುವ ಪ್ರತಿಯೊಂದು ಆಹಾರವೂ ನಮಗೆ ಪರಮಾತ್ಮನ ಸ್ಮರಣೆಯನ್ನು ಪ್ರಚೋದಿಸುತ್ತದೆ. 

ಸಸ್ಯಾಹಾರ ಮತ್ತು ಮಾಂಸಾಹಾರ ಇವೆರಡೂ ಈಗ ಚರ್ಚಿತ ವಿಷಯಗಳು.  ಮಾಂಸಾಹಾರ ಸೇವಿಸುವಾಗ ಅಥವಾ ಅದನ್ನು ಸಿದ್ದಪಡಿಸುವಲ್ಲಿ ಮನುಷ್ಯನಿಗೆ ಒಂದಿಷ್ಟು ಮನಸ್ಸಿನಲ್ಲಿ ಹಿಂಸಾ ಪ್ರವೃತ್ತಿ ಇರಲೇ ಬೇಕು. ಇದು ತಾಮಸೀ ಗುಣವಿದ್ದು ದೈವದ ಅಸ್ತಿತ್ವವನ್ನು ದೂರೀಕರಿಸುತ್ತದೆ. ಹಿಂಸೆ ಎಂಬುದು ರಾಕ್ಷಸ ಸ್ವರೂಪ. 

ಹುಟ್ಟಿದ ಪ್ರತಿಯೊಂದು ಪ್ರಾಣಿ ಸಸ್ಯಗಳಿಗೂ ಆಹಾರ ಎಂಬುದು ಅತ್ಯವಶ್ಯ. ಬುದ್ಧಿ ಮತ್ತು ಚಿಂತನಾಶಕ್ತಿ ಇರುವುದು ಮನುಷ್ಯನಿಗೆ ಮಾತ್ರ. ಬ್ರಾಹ್ಮಣನಾದವನಿಗೆ ಒದಗುವ ಸಂಸ್ಕಾರವು  ಪರಮಾತ್ಮನ ಅರಿವನ್ನು ಒದಗಿಸುತ್ತದೆ. ಬ್ರಾಹ್ಮಣನಾದವನಿಗೆ ಆಹಾರ ಸೇವನೆ ಎಂಬುದು ಕೇವಲ ಹಸಿವನ್ನು ನೀಗಿಸುವ ಕ್ರಿಯೆಯಲ್ಲ. ಅದು ಯಜ್ಞದಂತೆ . ಯಜ್ಞ ಎಂಬುದು ಒಂದು ದೈವ ಕ್ರಿಯೆ. ಹಾಗಾಗಿ ಭೋಜನ ಆರಂಭಕ್ಕೂ ಮುನ್ನ ಹಸ್ತೋದಕ  ಅತ್ಯಂತ ಅವಶ್ಯ. ಹಸ್ತೋದಕ ಕೇವಲ ಶಾಸ್ತ್ರವಲ್ಲ. ಹಸಿವಿನ ಹೊಟ್ಟೆಗೆ ಒಂದಿಷ್ಟು ತುಟುಕು ನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದಲೂ ಉತ್ತಮ. ಒಂದು ಪರಿಷೇಚನದಿಂದ ಪರಿಸರ ಶುದ್ದಿಯಾದರೆ, ಒಂದು ಅಪೋಶನದಿಂದ ಮೈ ಮನ ಶುದ್ದಿಯಾಗುತ್ತದೆ. ಸೇವಿಸುವಲ್ಲಿ ದೈವೀ ಭಾವ ಬಂದಾಗ ಅನ್ನವೆಂಬು ಬ್ರಹ್ಮಸ್ವರೂಪವಾಗುತ್ತದೆ. ಹಸಿದವನಿಗೆ ಆಹಾರ ಪರಬ್ರಹ್ಮವಾಗಿ ಗೋಚರಿಸಿದರೆ ಅದರ ಬಗ್ಗೆ ಹೆಚ್ಚು ಗೌರವ ಆರಾಧನಾ ಭಾವ ಪ್ರಚೋದಿಸಲ್ಪಡುತ್ತದೆ. ವೇದಗಳಲ್ಲಿ ಹೇಳಲ್ಪಟ್ಟ ಪತ್ನಿಯ ಗುಣಗಳಲ್ಲಿ ಭೋಜ್ಯೇಷು ಮಾತಾ ಎಂಬುದು ಮಾತೃಸ್ವರೂಪವಾಗುವಾಗ ಭೋಜನ ಯಜ್ಞವಾಗುತ್ತದೆ. ಯಜ್ಞ ಹವನಗಳಲ್ಲಿ  ಮನೆಯ ಒಡತಿಯೇ ಅಗ್ನಿ ಪ್ರತಿಷ್ಠೆಗೆ ವೈಶ್ವಾನರ ಸ್ವರೂಪ  ಅಗ್ನಿಯನ್ನು ಒದಗಿಸಬೇಕು. ಭೋಜ್ಯೆಷು ಮಾತಾದ ಮಾತೃ ಸ್ವರೂಪ ಇದು.  ಭೋಜನ ಎಂಬುದು ಒಂದರ್ಥದಲ್ಲಿ ಅಗ್ನಿಯನ್ನು ಸಾಕ್ಷಾತ್ಕರಿಸುವ ಅಗ್ನಿಕ್ರಿಯೆಯೇ ಆಗಿರುತ್ತದೆ. ತಿಂದ ಆಹಾರ ಜೀರ್ಣವಾಗಬೇಕಾದರೆ ಒಳಗಿನ ವೈಶ್ವಾನರನ ಅನುಗ್ರಹ ಅತ್ಯಂತ ಅವಶ್ಯ. 

ಎಲ್ಲರ ಉದರದಲ್ಲಿ ಮಾತ್ರವಲ್ಲ ದೇಹದಲ್ಲೂ ವೈಶ್ವಾನರ ಸ್ವರೂಪವಿರುತ್ತದೆ.  ಹಾಗಾಗಿ ಯಾರೇ  ಹಸಿದವನು ಮನೆಬಾಗಿಲಿಗೆ ಬಂದಾಗ ಆತನ ಹಸಿವನ್ನು ಆತನಿಗೆ ಆಹಾರವನ್ನು ನೀಡುವುದು ವೈಶ್ವಾನರನನಿಗೆ ಹವಿಸ್ಸನ್ನು ಅರ್ಪಿಸಿದಂತೆ.  ಅನ್ನ ದಾನವೆಂಬುದು ಶ್ರೇಷ್ಠದಾನ ಎಂಬುದಾಗಿ ಪರಿಗಣಿಸಲ್ಪಡುತ್ತದೆ. ಯಾವ ಆಶೆಗಳಿಗೂ ಮಿತಿ ಎಂಬುದಿಲ್ಲ. ಧನ ಕನಕ ಭೂಮಿ ಸುಖ ಎಲ್ಲವನ್ನೂ  ಮತ್ತೂ ಬೇಕು ಮತ್ತೂ ಬೇಕು ಎನ್ನುವಲ್ಲಿ ಮನುಷ ಸದಾ ಅತೃಪ್ತ. ಗಳಿಸಿದಷ್ಟು ಪ್ರಾಪ್ತಿಸಿದಷ್ಟೂ ಮತ್ತೂ ಬೇಕು ಎನ್ನುವ ಹಂಬಲ. ಆದರೆ ಒಬ್ಬ ಮನುಷ್ಯನಿಗೆ ಹೊಟ್ಟೆತುಂಬ ಆಹಾರ ಕೊಟ್ಟು ಆತನ ಉದರಾಗ್ನಿಯನ್ನು ತೃಪ್ತಿಪಡಿಸಿದಾಗ ಆತ ಇನ್ನು ಸಾಕು ಅಂತ ತೃಪ್ತಿಯಿಂದ ಹೇಳಿಬಿಡುತ್ತಾನೆ.  ಹೊಟ್ಟೆ ತುಂಬಿದಲ್ಲಿ ಇನ್ನೂ ಬೇಕು ಎಂಬ ಅತಿಯಾಶೆ ಇರುವುದಿಲ್ಲ.  ಹಾಗಾಗಿ ಒಬ್ಬನ್ನು ಯಾವುದುಕೊಟ್ಟೂ ತೃಪ್ತಿ ಪಡಿಸುವುದು ಆಸಾಧ್ಯವಾದರೆ ಆತನಿಗೆ  ಊಟ ಕೊಟ್ಟು ತೃಪ್ತಿ ಪಡಿಸಬಹುದು. ನಮ್ಮ ಹುಟ್ಟು ಸಾವಿನ ನಡುವೆ ಚೇತನ ಸ್ವರೂಪವಾಗಿ ಆಹಾರವಿರುತ್ತದೆ. ಜನರು ಎಂದರೆ ಜನನ ಮರಣಕ್ಕೆ ಒಳಗಾದವರು. ಇದರ ನಡುವಿನ ಬದುಕು ಎಂದರೆ ಅದು ಯಜ್ಞ ಹವನದಂತೆ, ವೈಶ್ವಾನರ ಉಪಾಸನೆ.

ಮನುಷ್ಯನ ಜೀವನ ಎಂದರೆ ಅದೊಂದು ಯಜ್ಞದಂತೆ. ಹುಟ್ಟಿದನಂತರ ಪ್ರತಿಯೊಂದನ್ನೂ ಭಗವಂತನಿಗೆ ಸಮರ್ಪಿಸುತ್ತಾ ಜೀವನ ಸಾಗಿಸುವುದರಲ್ಲಿ ಒಂದು ಯಜ್ಞತತ್ವವಿದೆ. ಯಜ್ಞ ಎಂದರೆ ಒಂದು ವರ್ತುಲದಂತೆ. ಹುಟ್ಟು ಸಾವು ಮತ್ತೆ ಹುಟ್ಟು. ಪ್ರಕೃತಿಗೆ ಹಳೆಯದನ್ನು ಕೊಟ್ಟು ಹೊಸದನ್ನು ಪಡೆದಂತೆ ನದಿಯ ನೀರು ಕಡಲಿಗೆ ಸೇರಿ ಆವಿಯಾಗಿ ಆಕಾಶ ಸೇರಿ ಮತ್ತೆ ಮಳೆ ಹನಿಯಾದಂತೆ. ಇದು ಪ್ರಕೃತಿಯ ಯಜ್ಞ. ಒಂದು ಕಾಳು ಭೂಮಿಯೋಳಗೆ ಅವಿತು ಮೊಳಕೆ ಒಡೆದು ಹೊರಬರುತ್ತದೆ. ಮತ್ತೆ ಗಿಡವಾಗಿ ಮರವಾಗುತ್ತದೆ. ಹೂವು ಹಣ್ಣಾಗುತ್ತದೆ. ಪುನಃ ಬೀಜ ಭೂಮಿಯನ್ನು ಸೇರುವುದರಲ್ಲಿ ಒಂದು ಯಜ್ಞ ತತ್ವವಿದೆ.  ಜೀವನ ಎಂದರೆ ಯಜ್ಞದಂತೆ. ಯಜ್ಞವನ್ನು ಮಾಡುವವನು ಯಜಮಾನ ಎನಿಸಿಕೊಳ್ಳುತ್ತಾನೆ. ನಮ್ಮ ನಮ್ಮ ಬದುಕಿಗೆ ನಾವೇ ಯಜಮಾನರು. ಯಜ್ಞ ಎನ್ನುವುದಕ್ಕೆ ಹಲವು ವ್ಯಾಖ್ಯಾನಗಳು ವೇದಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಅದು ಯಾವ ಜಾತಿ ಧರ್ಮಕ್ಕೂ ಸೀಮಿತವಲ್ಲ. ಹುಟ್ಟಿದ ಪ್ರತಿಯೊಂದು ಪ್ರಾಣಿ ಪಕ್ಷಿ ಸಸ್ಯಾದಿಗಳಿಗೆ ಹಸಿವು ಎಂಬುದು ಇರುತ್ತದೆ. ಇಲ್ಲಿ  ಆಹಾರ ಸೇವಿಸುವುದು ಒಂದು ಆಧ್ಯಾತ್ಮಿಕ ಚಿಂತನೆಯಾಗುತ್ತದೆ. 

ಯಜ್ಛವೆಂದರೆ ಒಂದು ವೈಶ್ವಾನರ ಆರಾಧನೆ. ಇದಕ್ಕೆ ಶರೀರವೇ ವೇದಿಕೆ. ಉದರವೇ ಅಗ್ನಿಕುಂಡ. ಎಲ್ಲಿ ಅಗ್ನಿ ಪುರುಷ ಇರುತ್ತಾನೋ ಅದು ಅಗ್ನಿವೇದಿಕೆ ಎಂದು ಕರೆಯಲ್ಪಡುತ್ತದೆ. ಹಾಗಾಗಿ ನಾವು ಎಲ್ಲಿಗೆ ಹೋದರೂ ಈ ಯಜ್ಞ ಕ್ರಿಯೆಯಿಂದ ಅತೀತರಾಗುವುದಕ್ಕೆ ಸಾಧ್ಯವಿಲ್ಲ. ಇದೊಂದು ಪ್ರತೀ ಕ್ಷಣವೂ ಮಾಡುವ ತ್ಯಾಗದಂತೆ.   ಶರೀರಕ್ಕೆ ಸೇರಿದ ಆಹಾರ ಪುನಃ  ತರುವುದಕ್ಕೆ ಸಾಧ್ಯವಿಲ್ಲ. ಅದು ಕರಗಿ ಮತ್ತೆ ಭೂಮಿಯನ್ನು ಸೇರುತ್ತದೆ. ಇಲ್ಲಿ ಒಂದು ವರ್ತುಲದಲ್ಲಿ  ಯಜ್ಞ ತತ್ವ ನಿರ್ಮಾಣವಾಗುತ್ತದೆ. ಈ ವರ್ತುಲದಲ್ಲಿ   ಆಹಾರ ಚೈತನ್ಯ ಸ್ವರೂಪವಾಗಿ ದೇಹವನ್ನು ವ್ಯಾಪಿಸುತ್ತದೆ. 


ಭೋಜನವೆಂಬುದು ಅಗ್ನಿಕ್ರಿಯೆಯಾಗಿ ಪೂಜನಿಯವಾಗುವಾಗ ಅದರ ಬಗ್ಗೆ ಅಷ್ಟೇ ಗೌರವ ಪೂರ್ಣವಾಗಿ ವ್ಯವಹರಿಸಿದರೆ ಆ ಅನ್ನಾಹಾರಕ್ಕೆ ಗೌರವವನ್ನು ಸಲ್ಲಿಸಿದಂತೆ. ಇಂದು ಊಟ ಎಂಬುದು ಕೇವಲ ಯಾಂತ್ರಿಕ ಕ್ರಿಯೆಯಾಗಿದೆ.    ವಿಧಿಯುಕ್ತ ಹಸ್ತೋದಕ ತಿಳಿದವರೇ  ಕಡಿಮೆ.  ಹಸ್ತೋದಕ ತೆಗೆದರೂ ಮಂತ್ರ ತಿಳಿಯದೇ ಸುಮ್ಮನೇ ಹಸ್ತೋದಕ ಹಿಡಿದು ಆಪೋಶನ ಮಾಡುತ್ತಾರೆ. ಮಂತ್ರವೂ ತಿಳಿದಿರುವುದಿಲ್ಲ. ಇದು ಕೇವಲ ಅಭಿನಯವಾಗುತ್ತದೆ.  ಮಂತ್ರದೊಂದಿಗೆ ಪ್ರತಿನಿತ್ಯ   ಹಸ್ತೋದಕ ತೆಗೆದುಕೊಳ್ಳದೇ ಎಲ್ಲೋ ಹೇಗೋ ಕುಳಿತು ಊಟ ಮಾಡುವುದನ್ನು ಕಾಣಬಹುದು. ಮನೆಯಲ್ಲಾದರೂ ಸಾವಧಾನವಾಗಿ ಊಟಮಾಡುವ ವ್ಯವಧಾನ ಇಲ್ಲವಾಗಿದೆ.  ನಮಗೆ ದೇವಾಲಯಕ್ಕೆ ಹೋದಾಗ ಬ್ರಾಹ್ಮಣ ಪಂಕ್ತಿ ಹುಡುಕುತ್ತೇವೆ. ಆದರೆ ಹಸ್ತೋದಕದ ಬಗ್ಗೆ ದಿವ್ಯ ನಿರ್ಲಕ್ಷ್ಯ . ಹೇಗಾದರೂ ಸಲ್ಲುತ್ತದೆ ಎಂಬ ಭಾವ. ಮಾತ್ರವಲ್ಲ  ಊಟದ ಸಮಯದಲ್ಲಿ ನಡುವೆ ಎದ್ದು ಹೋಗುವುದು. ಮಾತನಾಡುವುದು ಅದಕ್ಕೆ ಅಗೌರವವನ್ನು ಸಲ್ಲಿಸಿದಂತೆ ಆರಾಮ ಆಸನಗಳಲ್ಲಿ ಅಕ್ಷರಶಃ ಮಲಗಿದಂತೆ ಕುಳಿತು ಊಟ ಅಥವಾ ಆಹಾರ ಸೇವಿಸುವುದು ಅಗ್ನಿಯ ಮೇಲೆ ದೌರ್ಜನ್ಯ ಎಸಗಿದಂತೆ. ತಿಂದ ತಟ್ಟೆಯಲ್ಲಿ ಅಥವಾ ಎಲೆಯಲ್ಲಿ ಆಹಾರವನ್ನು ಉಳಿಸುವುದು ಅಗ್ನಿಯನ್ನು ತಿರಸ್ಕರಿಸಿದಂತೆ. ಇಂದು ಹಲವು ಕಾರ್ಯಕ್ರಮಗಳಿಗೆ ಹೋದಾಗ. ಊಟಕ್ಕೆ ಕುಳಿತ ನೂರು ಜನರಲ್ಲಿ ತೊಂಭತ್ತು ಜನರೂ ಆಹಾರವನ್ನು ಬಿಟ್ಟು ಏಳುತ್ತಾರೆ. ಎಷ್ಟು ವಯಸ್ಸಾದರೂ ತಮ್ಮ ಹೊಟ್ಟೆಗೆ ಎಷ್ಟು ಬೇಕು ಎಂದು ತಿಳಿಯದವರು ಇವರು.  ಯಥೇಚ್ಚ ಹಾಕಿಸಿಕೊಂಡು ನಂತರ ಎಲೆಯಲ್ಲೇ ಬಿಟ್ಟೇಳುವುದು ಭೋಜನದ ಮೇಲಿನ ತಿರಸ್ಕಾರ ಮಾತ್ರವಲ್ಲ, ಯಜ್ಞಸ್ವರೂಪವನ್ನು ತಿರಸ್ಕರಿಸಿದಂತೆ.     ಯಜ್ಞವೆಂಬ ಪ್ರಜ್ಞೆ ಇಲ್ಲದೆ ಅಜ್ಞಾನದಿಂದ ಅಗ್ನಿಗೆ ಸವಾಲು ಎಸೆದಂತೆ ಊಟ ಮಾಡುವುದನ್ನು ನೋಡಬಹುದು. ನಾವು ತಿನ್ನುವ ಆಹಾರಕ್ಕೆ ಗೌರವಕೊಡಬೇಕು.  ಇನ್ನು ನಮ್ಮಲ್ಲಿ ದೇವಾಲಯದಲ್ಲೂ ಸಾವಧಾನವಾಗಿ ಕುಳಿತು ಊಟಮಾಡುವ ಪ್ರವೃತ್ತಿ ಕಡಿಮೆಯಾಗಿದೆ. ಅದಕ್ಕೆ ಜನ ಸಂಖ್ಯೆ, ಸಮಯದ ಕೊರತೆ ಹೀಗೆ ಹಲವು ಕಾರಣಗಳಿರಬಹುದು. ಆದರೆ ನಮ್ಮ ಕರ್ಮದ ಗಂಭೀರತೆಯ ಅರಿವಿಲ್ಲ. ನೆಲದಲ್ಲಿ ಕುಳಿತು ಊಟಮಾಡುವ ಆರೋಗ್ಯವೂ ಉಳಿದಿರುವುದಿಲ್ಲ.  ನಮ್ಮಲ್ಲಿ ಹಸಿವು ಎಂಬ ಪ್ರಕ್ತಿಯೆಗೆ ಮೂಲ ಕಾರಣ ನಮ್ಮೊಳಗಿನ ವೈಶ್ವಾನರ. ಆತನ ಆಗ್ರಹಕ್ಕೆ ತುತ್ತಾದರೆ ತಿಂದ ಅನ್ನವೂ ಪಚನವಾಗದೆ ಇರಬಹುದು. ಇನ್ನು ಹಸಿವಿಗೆ ಆಹಾರವಿಲ್ಲದೇ ಇರುವವರು ಒಂದೆಡೆಯಾದರೆ ತಿನ್ನುವ ಆಹಾರದ ಬಗ್ಗೆ ಗೌರವ ಭಕ್ತಿ ಇಲ್ಲದಿರುವುದು ಇನ್ನೊಂದೆಡೆ. ಉಣ್ಣುವುದು ನಾವೇ ಆದರೂ ಅದು ಉದರಾಗ್ನಿ ದೇವತೆಗೆ ಅರ್ಪಿಸುವ ನೈವೇದ್ಯ. ಪಚನಕ್ರಿಯೆಯಲ್ಲಿ ಸಿಗುವ ಚೈತನ್ಯವೇ ಪ್ರಸಾದ.   ಯಾವುದೇ ಕಾರ್ಯಕ್ರಮದಲ್ಲಿ ಭೋಜನವೆಂಬುದು ಅತ್ಯಂತ ಮಹತ್ವದ ಅಂಗ. ಅದಕ್ಕೊಂದು ಉತ್ತಮ ಸ್ಥಾನವಿದೆ. ಆದರೆ ಇದರ ಅರಿವಿಲ್ಲದೇ ಇದನ್ನು ಅಗೌರವದಿಂದ ಕಾಣುತ್ತೇವೆ. ಒಂದಷ್ಟು ಹೊತ್ತು ಅದಕ್ಕೆ ಗೌರವದಿಂದ ವಿನಿಯೋಗಿಸಿ ಉದರದ ವೈಶ್ವಾನರನನ್ನು ತೃಪ್ತಿಗೊಳಿಸುವಲ್ಲಿ ಜೀವನದ ಸಾರ್ಥಕತೆ ಇದೆ. 


ಗೌರವದಿಂದ ವಿನಿಯೋಗಿಸಿ ಉದರದ ವೈಶ್ವಾನರನನ್ನು ತೃಪ್ತಿಗೊಳಿಸುವಲ್ಲಿ ಜೀವನದ ಸಾರ್ಥಕತೆ ಇದೆ. 

ಅಗ್ನಿ ಎಂದರೆ ಸೂರ್ಯನ ಪ್ರತಿರೂಪದಂತೆ. ಗಾಯತ್ರಿ ಮಂತ್ರದ ಜ್ಯೋತಿಸ್ವರೂಪದಂತೆ. ಈ ಅಗ್ನಿ ಸ್ವರೂಫ  ಕಣ್ಣಿಗೆ ಕಾಣುವ ಮಾತ್ರವಲ್ಲ ದೇಹದ ಅನುಭವ. ಇದು ನಿತ್ಯ ಕಾಣುವ ಅನುಭವಿಸುವ ಅನುಗ್ರಹಿಸುವ ಭಗವನ್ ಸ್ವರೂಪ. 


Tuesday, August 11, 2026

ಗುರುದರ್ಶನ





 ಗುರುದರ್ಶನ


ಶ್ರೀ ಗುರುಭ್ಯೋನಮಃ

 ಶೃತಿ ಸ್ಮೃತಿ ಪುರಾಣಾನಾಂ ಆಲಯಂ ಕರುಣಾಲಯಂ  ನಮಾಮಿ ಭಗವತ್ಪಾದ ಶಂಕರಂ ಲೋಕ ಶಂಕರಂ 

ಗುರು ಎಂದರೆ ಸಕಲ ಪ್ರಚೋದನೆಗೂ ಪ್ರೇರಕ ಶಕ್ತಿ. ಸದ್ಬುದ್ದಿ ಸನ್ಮನಸ್ಸು ಸಚ್ಚಿಂತನೆ ಇರುವ ಜ್ಞಾನ ಜಾಗೃತವಾಗುವುದೇ,  ಮನುಷ್ಯನಲ್ಲಿ ಜಾಗೃತವಾಗಬೇಕಾದರೆ ಗುರುವಿನ ಅನುಗ್ರಹ ಅತ್ಯಂತ ಅವಶ್ಯ. ಗುರುವಿನ ಸಾನ್ನಿಧ್ಯ ಬದುಕಿನಲ್ಲಿ ನಿಯಮಿತವಾಗಿ ಒದಗಿದರೆ ಎಲ್ಲಾ ಸದ್ಗುಣಗಳು ಸುಪ್ತವಾಗಿ ಬಹಿರಂಗವಾಗಿಯೂ ಪ್ರಚೋದಕವಾಗಿರುತ್ತದೆ. ಈ ಬಾರಿಯ ಗುರುದರ್ಶನಕ್ಕೆ ನಮ್ಮ ಕರಾಡ ಸಮಾಜ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪ್ರಥಮ ಬಾರಿಗೆ ಭಾಗಿಯಾಗುವ ಪ್ರಚೋದನೆಯೂ ಅವಕಾಶವೂ ನನಗೆ ಒದಗಿ ಬಂದಿರುವುದಕ್ಕೆ ಭಗವಂತನಿಗೆ ಧನ್ಯವಾದ ಮೊದಲಿಗೆ ಅರ್ಪಿಸಬೇಕು. 


ಈ ವರ್ಷದ ಗುರುಗಳ ಚಾತುರ್ಮಾಸ್ಯದ ಸಂದರ್ಭದಲ್ಲಿ   ಗುರು ದರ್ಶನದ ಅಂಗವಾಗಿ ದಿನಾಂಕ ಮೊನ್ನೆ  ಆಗಸ್ಟ್ ಒಂಭತ್ತರಂದು ಸುಮಾರು ನಲ್ವತ್ತು ಮಂದಿ ಮುಂಜಾನೆ ಬೆಂಗಳೂರಿನಿಂದ ಪ್ರಯಾಣ ಆರಂಭಿಸಿದೆವು. ಮೊದಲೇ ನಿಗದಿಯಾದಂತೆ ಸುಖಾಸೀನ ಬಸ್ಸಿನಲ್ಲಿ ಹೊರಟೆವು. ಹಲವರು ತಿಂಡಿ ತಿನಿಸುಗಳನ್ನು ತೆಗೆದುಕೊಂಡು ಬಂದದ್ದ ವಿಶಿಷ್ಟವಾಗಿತ್ತು. ಅದಕ್ಕಾಗಿ ನಮ್ಮ ಮನೆಯಿಂದ ಕಡಲೇ ಬೇಳೆ ವಡೆ (ಚಟ್ಟಂಬಡೆ) ನಾವೂ ತಯಾರಿಸಿಕೊಂಡು ಹೋಗಿದ್ದೆವು.  ಮಧ್ಯಾಹ್ನದ ಊಟಕ್ಕಾಗಿ  ಶ್ರೀ ಶಂಕರ ಲಿಂಗ ಆಶ್ರಮ ಅರಸೀಕೆರೆಯಲ್ಲಿ ವ್ಯವಸ್ಥೆಗೊಳಿಸಲಾಗಿತ್ತು. ಉತ್ತಮವಾದ ಸ್ವಾದಿಷ್ಟವಾದ ಮಧ್ಯಾಹ್ನದ ಭೋಜನ ಉಂಡು ಸಾಯಂಕಾಲದ ಹೊತ್ತಿಗೆ ಶ್ರೀಂಗೇರಿ ಸನ್ನಿಧಾನವನ್ನು ತಲುಪಿದೆವು. ಬಯಲು ಸೀಮೆ ಕಳೆದು ಮಲೆನಾಡಿನ ಪ್ರವೇಶವಾದಂತೆ ಹನಿ ಹನಿ ಮಳೆ ಸ್ವಾಗತಮಾಡಿ ನಮ್ಮ ಹಾದಿಯನ್ನೂ ಮೈಮನವನ್ನು ಪರಿಶುದ್ದಗೊಳಿಸಿತು. ಇದೊಂದು ಶುಭಸಂಕೇತವಾಗಿ ಭಾಸವಾಯಿತು.  ನಮಗೆ ವಿಶ್ರಾಂತಿಗಾಗಿ ಶ್ರೀ ಭಾರತೀ ವಿಹಾರದಲ್ಲಿ ಉತ್ತಮವಾದ ಕೊಠಡಿಗಳನ್ನು ಕಾದಿರಿಸಲಾಗಿತ್ತು. ತುಂಬ ಅತ್ಯುತ್ತಮವಾದ ಗಾಳಿ ಬೆಳಕು ತುಂಬಿದ ಶುಭ್ರವಾದ ಕೊಠಡಿಗಳು ಸ್ನಾನಾದಿ ಕರ್ಮಗಳಿಗೆ ಅತ್ಯಂತ ಅನುಕೂಲಕರವಾಗಿತ್ತು. ಎಲ್ಲಿಯೂ ಅನನುಕೂಲದ ಸ್ಪರ್ಶವೂ ಒದಗದಂತೆ ಸುವ್ಯವಸ್ಥೆಗೊಳಿಸಲಾಗಿತ್ತು. ನಾನು ಸಾಯಂಕಾಲ ಸ್ನಾನ ಪೂರೈಸಿ ಸಂಧ್ಯಾವಂದನೆ ಮಾಡಿದೆ.  ರಾತ್ರಿ ಹನಿ ಹನಿ ಮಳೆಯಲ್ಲಿ ನೆನೆದು ಪಾವನರಾಗಿ ಶಾರದಾಂಬೆಯ ಕಣ್ತುಂಬ ದರ್ಶನ ಮಾಡಿದೆ. ದೇವಾಲಯದ ಪೌಳಿಯಲ್ಲಿ ಕುಳಿತು ಗಾಯತ್ರಿ ಜಪ ರುದ್ರಪಾರಾಯಣ ಮಾಡಿದೆ. ಮನಸ್ಸಿಗೆ ಮುದ ನೀಡುವ ಘಳಿಗೆಗಳು. 


ಅಂದು ಬೆಳಗ್ಗೆ ಮೂರುಘಂಟೆಗೆ ಎದ್ದಿದ್ದೆ. ಸ್ನಾನ ಸಂಧ್ಯಾ ಧ್ಯಾನ ಯೋಗಭ್ಯಾಸವನ್ನು ಪೂರೈಸಿ ಪ್ರಯಾಣಕ್ಕೆ ಸಜ್ಜಾಗಬೇಕಿತ್ತು. ಹಾಗಾಗಿ ರಾತ್ರಿ ಒಂಭತ್ತು ದಾಟುತ್ತಿದ್ದಂತೆ ಬಹಳ ಆಯಾಸವಾದಂತೆ, ಎಂದಿನಂತೆ ರಾತ್ರಿ ಬೇಗನೇ ನಿದ್ದೆಗೆ ಹೋಗುವ ನನಗೆ ಇರಲಾಗದೇ ಒಂಭತ್ತು ಘಂಟೆಗೆ ಮಲಗಿದೆ. ಹಲವರು ಶ್ರೀ  ಜಗದ್ಗುರುಗಳ ಚಂದ್ರಮೌಳೇಶ್ವರ ಪೂಚಾ ಕಾರ್ಯಕ್ರಮ ವೀಕ್ಷಿಸುವುದಕ್ಕೆ ತೆರಳಿದ್ದರು. ಮುಂಜಾನೆ ಮೂರುವರೆಗೆ ಎಚ್ಚರವಾಗಿತ್ತು. ಸಾಮಾನ್ಯವಾಗಿ ನಾನು ಎಲ್ಲಿ ಹೋಗಿ  ತಂಗುವುದಿದ್ದರೂ ನನ್ನ ನಿತ್ಯ ಕರ್ಮಗಳಾದ ಸಂಧ್ಯಾವಂದನೆ ಧ್ಯಾನ ಯೋಗಾಭ್ಯಾಸಗಳಿಗೆ ಅನುಕೂಲವಿದೆಯೋ ಎಂದು ನೋಡುತ್ತೇನೆ. ಅದರೆಂತೆ ಇಲ್ಲಿ ಒಂದು ಕಡೆ ಸೂಕ್ತವಾದ ಯಾರೂ ಓಡಾಡದ ಹಜಾರದ ಒಂದು ಮೂಲೆ ಸಿಕ್ಕಿತ್ತು.  ಅದು ಅತ್ಯಂತ ಸಂತೋಷವನ್ನು ನೀಡಿತ್ತು. ನಾಲ್ಕು ಘಂಟೆಗೆ ಇಡೀ ಭಾರತೀ ವಿಹಾರ ಸೌಧ ಮಾತ್ರವಲ್ಲ ಶೃಂಗೇರಿ ಪಟ್ಟಣವೇ ಸದ್ದಿಲ್ಲದೇ ಮೌನವನ್ನು ಆವರಿಸಿತ್ತು. ನನ್ನ ಏಕಾಂತ ಧ್ಯಾನಕ್ಕೆ ಇದು ಬಹಳ ಸಹಕಾರಿಯಾಗಿ ತನು ಮನ ಮರೆಯುವಂತೆ ಧ್ಯಾನದಲ್ಲಿ ತಲ್ಲೀನನಾದೆ. ನನ್ನ ಹಲವು ದಿನದ ಕನಸಾಗಿತ್ತು. ಶೃಂಗೇರಿಯ ಪ್ರಕೃತಿಯ ಮಡಿಲಲ್ಲಿ ಧ್ಯಾನ ಯೋಗ ಅಭ್ಯಾಸಗಳನ್ನು ಮಾಡಬೇಂದು ಬಯಸಿದ್ದೆ. ಆದರೆ ಹೋರಗೆ ಮಳೆ ಬರುತ್ತಿರುವುದರಿಂದ  ಒಳಗೆ ಅದನ್ನು ಮಾಡಬೇಕಾಯಿತು. ಆದರೂ ಮನಸ್ಸಿಗೆ ಒಂದು ತೃಪ್ತಿ. 


ಬೆಳಗ್ಗಿನ ತಂಪಾದ ವಾತಾವರಣದಲ್ಲಿ ಅನತಿ ದೂರದಲ್ಲಿದ್ದ ಶಂಕರ ಗಿರಿಗೆ ಭೇಟಿ ಕೊಡುವ ವ್ಯವಸ್ಥೆ ಮಾಡಲಾಗಿತ್ತು. ಎತ್ತರ ಶಂಕರ ಗಿರಿ ಇತ್ತೀಚೆಗಷ್ಟೇ ನಿರ್ಮಾಣವಾಗಿತ್ತು. ಸುಂದರವಾದ ಪರಿಸರ. ಎಲ್ಲಕ್ಕಿಂತಲೂ ಅದನ್ನು ನಿರ್ವಹಿಸಿದ ರೀತಿ ಅತ್ಯದ್ಭುತವಾಗಿತ್ತು. ಎಲ್ಲಿ ನೋಡಿದರೂ ಸ್ವಚ್ಛತೆ. ಎಲ್ಲಿ ಹೆಜ್ಜೆ ಊರಬೇಕಿದ್ದರೂ ಯೋಚಿಸುವಂತೆ ಮಾಡುತ್ತಿತ್ತು. ಮೂಲೆ ಮೂಲೆಯೂ ಕಸಕಡ್ಡಿಗಳು ಇರದಂತೆ ಸುರಿಯುವ ಆ ಮಳೆಗೂ ಎಲ್ಲ ಕಡೆ ಸ್ವಚ್ಛತೆಯನ್ನು ಕಾಪಾಡಿಕೊಂಡು ಬಂದದ್ದು ನಿಜಕ್ಕು ವಿಶಿಷ್ಟವಾಗಿತ್ತು.  

ಶ್ರೀ ಮಠದಲ್ಲೇ  ನಮಗೆಲ್ಲರಿಗೂ ಬೆಳಗಿನ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಉಪಹಾರ ಪೂರೈಸಿ ನಾನು ಮತ್ತು ಪತ್ನಿ ಹತ್ತಿರದಲ್ಲೇ ಇದ್ದ ಮಲ್ಲಿಕಾರ್ಜುನ ದೇವಾಲಯಕ್ಕೆ ಭೇಟಿಕೊಟ್ಟೆವು. ಮಳೆಯಲ್ಲೇ ನೆನೆದು ಬೆಟ್ಟದ ಮೆಟ್ಟಲುಗಳನ್ನು ಹತ್ತಿ ಪರಮೇಶ್ವರನ ಧರ್ಶನ ಮಾಡಿದೆವು. ನಾವು ಹೋದಾಗ ಸುಪ್ರಭಾತದ ಪೂಜೆ ಆಗುತ್ತಿತ್ತು. 

ಮಧ್ಯಾಹ್ನದ ಸಮಯಕ್ಕೆ . ಅದಾಗಲೇ ವಿವಿಧ ಊರುಗಳಿಂದ, ಬಾಯಾರು ಅಗಲ್ಪಾಡಿ ಪಡ್ರೆ ಉಡುಪಿ  ಶಿರಸಿ ಮುಂತಾದ ಭಾಗದಲ್ಲಿದ್ದ  ನಮ್ಮ ಸಮಾಜದ  ಬಾಂಧವರು ಬಂದಿದ್ದರು ಗುರುಗಳ ದರ್ಶನಕ್ಕೆ ನದಿಯ ಮತ್ತೊಂದು ದಡದಲ್ಲಿದ್ದ ಗುರುವಿನ ಆಶ್ರಮದ ಸಭಾಂಗಣದಲ್ಲಿ ಎಲ್ಲರೂ ಸೇರಿದೆವು. ಘನ ಗಂಭೀರವಾಗಿ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ವಿಧುಶೇಖರ ಭಾರತಿಯವರ ಘನ ಗಂಭೀರ ಆಗಮನವಾಯಿತು. ಈ ದರ್ಶನದ  ಸುಮೂಹೂರ್ತದಲ್ಲಿ ನಮ್ಮ ಕರಾಡ ಅಭ್ಯದಯ ಸಂಘ (ರಿ) ಅಗಲ್ಪಾಡಿ ಇದರ ಸುವರ್ಣ ಸಂಭ್ರಮದ ಆಮಂತ್ರಣ ಪತ್ರಿಕ ಬಿಡುಗಡೆಯನ್ನು  ಶ್ರೀಗುರುಗಳು ನೆರವೇರಿಸಿದರು.   ನಂತರ ಗುರುಗಳ ಆಶೀರ್ವಚನ ನುಡಿಗಳು.  " ಯಾವುದೇ ಮೂಲವಸ್ತುವಿಗೆ ಸಂಸ್ಕಾರ ಒದಗಿದಾಗ ಅದು ಪ್ರಜ್ವಲಿಸುತ್ತದೆ. ಒಂದು ಶಿಲೆಯಾದರೂ ಅದು ಮೂರ್ತಿಯಾಗಬಹುದು. ಭೂಮಿಯಲ್ಲಿದ್ದ ಮೂಲಭೂತವಾದ ವಸ್ತು ಸಂಸ್ಕಾರ ಒದಗಿದಾಗ ನಮಗೆ ಉಪಯೋಗವಾದ ವಸ್ತುವಾಗಿ ಬದಲಾಗುತ್ತದೆ. ಯಾವುದೇ ಒಂದು ಲೋಹ ಸಿಕ್ಕಿದಾಗ ಅದನ್ನು ಉಪಯೋಗ ಯುಕ್ತವಾಗುವಂತೆ ಮಾಡುವುದಕ್ಕೆ ಅದಕ್ಕೆ ಒಂದು ಪ್ರಕ್ರಿಯೆ ಕಾಲಗಳು ಇರುತ್ತವೆ. ನಮ್ಮ ಶಾಸ್ತ್ರಗಳು ಅದನ್ನು ತೋರಿಸುತ್ತವೆ. .  ಮನುಷ್ಯ ಹುಟ್ಟಿದಾಗ ಸಂಸ್ಕಾರ ಒದಗಿಬಂದರೆ ಆತ ಉತ್ತಮ ಮನುಷ್ಯನಾಗಿ ಸಮಾಜಕ್ಕೆ ಉತ್ತಮ ಕೊಡುಗೆಯಾಗುತ್ತಾನೆ. ಕಣ್ಣು ಕಾಣಬಹುದು ಆದರೆ ಎಲ್ಲವನ್ನು ಕಾಣುವುದಕ್ಕೆ ಸಾಧ್ಯವಿಲ್ಲ. ಅದರಂತೆ ಪಂಚೇಂದ್ರಿಯಗಳಿಂದ ಗ್ರಹಿಸಲಾಗದೇ ಇರುವುದನ್ನು ನಮ್ಮ ಶಾಸ್ತ್ರಗಳು ತಿಳಿಸಿಕೊಡುತ್ತವೆ." ಇದು ಗುರುಗಳ ಆಶೀರ್ವಚನದ ಸಾರವಾಗಿತ್ತು. ಅದ್ಭುತವಾದ ಗುರು ಸಂದೇಶ. 

ಗುರುಗಳ ಅಮೃತ ಹಸ್ತದಿಂದ ಅನುಗ್ರಹಿಸಿದ ಮಂತ್ರಾಕ್ಷತೆ ಪಡೆದು ದೇವರ ಪ್ರಸಾದ ನೈವೇದ್ಯ ಭೂಜನ ಪೂರೈಸಿದೆವು. ಅಲ್ಪ ಸಮಯದ ಅವಧಿಗೆ ನಮ್ಮ ಬಾಂಧವರ ಸಣ್ಣ ಸಭೆ  ಮಠದ ಆವರಣದಲ್ಲೇ ನಿಗದಿಯಾಗಿತ್ತು. ಅದರಂತೆ ಎಲ್ಲರೂ ಒಟ್ಟು ಸೇರಿ ಒಂದಷ್ಟು ಸಲಹ ಸೂಚನೆ ಪರಿಚಯಗಳನ್ನು ಪೂರೈಸಿಕೊಂಡೆವು. ಎಲ್ಲವೂ ಸೌಹಾರ್ದಾತೆಯ ಸಂಕೇತವಾಗಿತ್ತು. ಸಾಯಂಕಾಲವಾಗುತ್ತಿದ್ದಂತೆ ಎಲ್ಲರೂ ಪ್ರಯಾಣದ ಕೊನೆಯ ಹಂತವನ್ನು ತಲುಪಿ ಎಲ್ಲರಿಗೂ ವಿದಾಯ ಹೇಳಿದೆವು. 

ಪ್ರಯಾಣದಂತಹ ಕಾರ್ಯಕ್ರಮಗಳು ವ್ಯವಸ್ಥೆಗೊಳಿಸುವುದು ಅಷ್ಟು ಸುಲಭವಲ್ಲ. ಅದಕ್ಕೆ ಅನುಭವ ಹಲವಾರು ದಿನದ ಹಲವು ವ್ಯಕ್ತಿಗಳ ಪರಿಶ್ರಮ ಅತೀ ಅವಶ್ಯ. ಜತೆ ಎಲ್ಲರ ಸಹಕಾರ ಒದಗಿ ಬಂದರೆ ಪ್ರಯಾಣ ಸುಖಕರವಾಗಿರುತ್ತದೆ.  ಇದಕ್ಕೆ ಪೂರಕವಾಗಿ ನಮ್ಮ ಗುರು ದರ್ಶನದ ಕಾರ್ಯಕ್ರಮ ಸಾಂಗವಾಗಿ ಯಶಸ್ವಿಯಾಗಿ ನೆರವೇರಿತು. ಯಾವುದೇ ಕಾರ್ಯಕ್ಕು ಉದ್ದೇಶ ಶುದ್ದಿ ಸಂಕಲ್ಪ ಶುದ್ಧಿ ಅತೀ ಅವಶ್ಯ. ಇದು ಇದ್ದರೆ ಕಾರ್ಯಕ್ರಮ ಬಹುವಂಶ ಯಶಸ್ವಿಯಾಗುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿ ಪರಿಣಮಿಸಿತು.  ನಿಗದಿಯಾದ ಸಮಯ ಹೊಂದಿಸಿಕೊಳ್ಳುವಲ್ಲಿ ಸ್ವಲ್ಪ ಮಟ್ಟಿಗೆ ಕಾರಣಾಂತರದಿಂದ ವೆತ್ಯಾಸ ವಾಗಿದ್ದು ಬಿಟ್ಟರೆ ಕಾರ್ಯಕ್ರಮ ತುಂಬ ಯಶಸ್ವಿಯಾಗಿತ್ತು. ಸಾಮಾನ್ಯ ದೂರದ ಪ್ರಯಾಣದಲ್ಲಿ ಇದೆಲ್ಲ ಸಾಮಾನ್ಯ. ಪ್ರಯಾಣದಂತಹ ಕಾರ್ಯಕ್ರಮದಲ್ಲಿ ನಮ್ಮ ಉದ್ದೇಶವನ್ನು ನಾವು ಮೊದಲು ಗಮನಿಸಬೇಕು. ಅದರ ಪಾವಿತ್ರ್ಯತೆಯನ್ನು ಮೊದಲು ಕಾಪಾಡಿಕೊಳ್ಳಬೇಕು. ಅದರ ನಡುವೆ ಆತಂಕ ತೊಂದರೆಗಳು ಎದುರಾದರೆ ನಾವೆಲ್ಲ ಏಕ ಮನಸ್ಸಿನಿಂದ ಅದಕ್ಕೆ  ಎಲ್ಲರೂ ಸಹಕರಿಸಬೇಕು. ಸಣ್ಣ ಪುಟ್ಟ ಅಸೌಕರ್ಯ ತೊಂದರೆಗಳನ್ನು ನಮ್ಮ ಉದ್ದೇಶ ಗಮನದಲ್ಲಿರಿಸಿ ಸೌಹಾರ್ದವಾಗಿ ಅದನ್ನು ಸ್ವೀಕರಿಸಬೇಕು. ಅದಕ್ಕೆ ಸಹಕಾರ ಎಂದು ಹೇಳುವುದು. ಆದರೂ ಇಲ್ಲಿ ಅಂತಹ ಹೇಳಿಕೊಳ್ಳುವಂತಹ ಯಾವ ತೊಂದರೆ ಸೌಕರ್ಯ ಕೊರತೆಗಳು ಎದುರಾಗಲಿಲ್ಲ. ಎಲ್ಲವನ್ನು ಬಹಳ ಮುಂದಾಲೋಚನೆಯಿಂದ ವ್ಯವಸ್ಥೆಗೊಳಿಸಲಾಗಿತ್ತು. ಇದಕ್ಕಾಗಿ ಭಾರವಾಹಿಗಳಾದ ಶ್ರೀ ಉಪ್ಪಂಗಳ ನಾಗರಾಜ, ಪಾಂಡುರಂಗ ಗುರ್ಜರ್ ಮತ್ತು ಇತರರ ಯೋಗದಾನವನ್ನು ಕೃತಜ್ಞತೆಯಿಂದ ಸ್ಮರಿಸಬೇಕು. ಎಲ್ಲರಿಗೂ ಧನ್ಯವಾದಗಳು. ಮುಂದೆಯೂ ಇಂತಹ ಕಾರ್ಯಕ್ರಮಗಳು ಆಯೋಜನೆಗೊಂಡು ಅದರಲ್ಲಿ ಭಾಗವಹಿಸಿ ಯೋಗದಾನವನ್ನು ಒದಗಿಸುವ ಅವಕಾಶ ನನಗೂ ಒದಗಿ ಬರಲಿ ಎಂದು ಹಾರೈಸುತ್ತೇನೆ.  ಸಹಕರಿಸಿದ ಎಲ್ಲ ಬಾಂಧವ ಮಿತ್ರರಿಗೆ ಕೃತಜ್ಞತೆಗಳು. 

Saturday, August 8, 2026

ಬ್ರಹ್ಮ ಜ್ಞಾನ

ನಾನು ಬಾಲ್ಯದಲ್ಲಿರುವಾಗ ನಮ್ಮೂರಿನಲ್ಲಿ ಒಂದು ಆಜಾರ್ ಬ್ಯಾರಿಯ ಅಂಗಡಿಗೆ ಎನಾದರು ಸಾಮಾನು ತರಲು ಹೋಗುತ್ತಿದ್ದೆ. ಕೆಲವು ಸಲ ಹೋಗುವಾಗ ಅವರ ನಮಾಜ್ ಪ್ರಾರ್ಥನೆಯ ಸಮಯವಾಗಿರುತ್ತಿತ್ತು. ಹಲವು ಸಲ ಆತ ನಮಾಜ್ ಗೆ ಏಳುವಾಗ ನಾವು ಹೋದರೂ ಅವರು ಪ್ರಾರ್ಥನೆ ಮುಗಿಸಿ ಬರುತ್ತೇನೆ ಅಂತ ನಮ್ಮನ್ನು ಕಾಯುವಂತೆ ಹೇಳಿ ಹೋಗುತ್ತಿದ್ದರು. ಸಾಮಾನ್ಯವಾಗಿ ಆಗ ಹತ್ತು ಹದಿನೈದು ನಿಮಿಷವಾದರೂ ಕಾದು ಕುಳಿತುಕೊಳ್ಳಬೇಕಾಗುತ್ತಿತ್ತು.  ಬೇರೆ ಅಂಗಡಿ ಇಲ್ಲದೇ ಇದ್ದುದರಿಂದ ಅಥವಾ ಯಾವುದೋ ಅನಿವಾರ್ಯತೆಗೆ ನಾವು ಕಾದು ಕುಳಿತುಬಿಡುತ್ತಿದ್ದೆವು.  ಅದೆಷ್ಟು ಜನ ಇದ್ದರೂ ,  ಅವರು ಅಷ್ಟೇ ನಾವು ಕಾಯುತ್ತಿದ್ದೇವೆ ಎಂದು ಯಾವ ಅವಸರವೂ ಮಾಡದೆ ಸಾವಧಾನವಾಗಿ ತಮ್ಮ ನಿತ್ಯವಿಧಿಯನ್ನು ಪೂರೈಸಿ ಬರುತ್ತಿದ್ದರು. ಆವಾಗ ಎಷ್ಟೋ ಸಲ ನನಗಗನಿಸುತ್ತಿತ್ತು ನಾನೊಬ್ಬನೇ ಇದ್ದರೆ, ನನ್ನ ಒಬ್ಬನನ್ನು ಕಳುಹಿಸಬಹುದಿತ್ತಲ್ಲಾ ಎಂದು ಕೊಳ್ಳುತ್ತಿದ್ದೆ. ಯೋಚನೆ ಮಾಡಿದಾಗ ದೈವ ಪ್ರಾರ್ಥನೆ ನಿತ್ಯ ವಿಧಿಗಳಲ್ಲಿ ಅವರಿಗಿರುವ ಬದ್ದತೆ ಆಶ್ಚರ್ಯ ತರಿಸುತ್ತಿತ್ತು. ಅವರ ನಿಯಮಗಳು ಕಠಿಣ ಇರುತ್ತಿತ್ತು. ಇರಲಿ, ನಮ್ಮಲ್ಲಿ ಅಷ್ಟು ಕಠಿಣವಾದ ನಿಯಮಗಳು ಇಲ್ಲವೋ ಅಥವಾ ನಾವು ಪಾಲಿಸುವುದಿಲ್ಲವೋ ಅದು ತಿಳಿಯದು. ನಮ್ಮಲ್ಲೂ ಅದೇ ರೀತಿ ನಾವು ಪಾಲನೆ ಮಾಡಬೇಕು ಅಂತ ಅನ್ನಿಸುತ್ತದೆ.  ಯಾವುದೇ ವಿಧಿ ವಿಧಾನಗಳನ್ನು ಮತ್ತೊಂದಕ್ಕೆ ಹೋಲಿಸಿ ತುಲನೆ ಮಾಡುವುದು ಸರಿಯಲ್ಲ. ನಮ್ಮಲ್ಲೇ ಇದು ಹಲವು ರೀತಿಯಲ್ಲಿ ವೆತ್ಯಾಸವಿರುತ್ತದೆ. ನಿಯಮ ನಿಬಂಧನೆ ಇಲ್ಲ ಎಂದುಕೊಂಡರೂ. ನಾವು ಹೇಗೆ ಆಚರಿಸಿದರೂ ಅದು ಪರವಾಗಿಲ್ಲ ಎಂದು ತಿಳಿದು ಕೊಂಡು ಹೇಗಾದರೂ ಆಚರಿಸುವುದು ಒಂದು ರೀತಿಯ ಅಸಡ್ಡೆಯಾಗುತ್ತದೆ. ಯಾವುದೋ ಕಾಟಾಚಾರವಾಗಿಬಿಡುತ್ತದೆ, ಇದು ನನ್ನ ಭಾವನೆ.  ಹಲವು ಸಲ ಪರಿಹಾರ ಉಂಟು ಎಂದು ತಿಳಿದುಕೊಂಡು ಅಪರಾಧ ಮಾಡುವುದಕ್ಕೆ ಇದು ಪ್ರೇರಣೆಯಾದಂತೆ ಆಗಿಬಿಡುತ್ತದೆ. ಯಾವುದೇ ಪಾಪಕ್ಕೂ ಪರಿಹಾರವಿದೆ ಅಂತ ಒಂದು ಬಗೆಯ ಔದಾಸಿನ್ಯ. ಇಲ್ಲದೆ ಇದ್ದರೆ ನನ್ನಿಂದ ಇಷ್ಟೇ ಸಾಧ್ಯ. ಒಂದು ರೀತಿಯ ಉಡಾಫೆ. 

ಎಲ್ಲರಂತೆ ಮೊದಲೆಲ್ಲ ನಾನು ಅಷ್ಟೇ  ಈ ಆಚರಣೆ ಕರ್ಮಾನುಷ್ಠಾನದಲ್ಲಿ ಗಂಭೀರವಾಗಿರುತ್ತಿರಲಿಲ್ಲ.  ಹೇಗಾದರೂ ಒಂದು ಮಾಡಿದರೆ ಸಾಕು ಎಂಬ ಭಾವನೆ. ಆದರೆ ವ್ಯಕ್ತಿತ್ವ ಜೀವನದಲ್ಲಿ ಒಂದೇ ಬಗೆಯಲ್ಲಿ ಇರುವುದಿಲ್ಲ. ಮನುಷ್ಯ ಅನುಭವದಿಂದ ಬದಲಾಗುತ್ತಾ ಹೋಗುತ್ತಾನೆ. ನಾನು ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಯೋಗಾಭ್ಯಾಸ ಆರಂಭಿಸಿದೆ. ಅಂದಿನಿಂದ ಸಹಜವಾಗಿ ಜೀವನ ಕ್ರಮದಲ್ಲಿ ಅಮೂಲಾಗ್ರ ಬದಲಾವಣೆಯಾಗಿಬಿಟ್ಟಿತು. ನಾನು ಮನುಷ್ಯನಾಗಿ ಬದುಕಿದ್ದು ಆವಾಗಿಂದಲೇ ಅಂತ ಹಲವು ಸಲ ಅಂದುಕೊಳ್ಳುತ್ತೇನೆ. ಯೌವನ ಎಂಬುದು ಮನುಷ್ಯನ ಉಚ್ಛ್ರಾಯ ಸ್ಥಿತಿ , ಎಲ್ಲಾ ಬಗೆಯಿಂದಲು ಸುಖಾನುಭವದ ವಯಸ್ಸು. ಹಾಗಿದ್ದರೂ ಯೋಗಾಭ್ಯಸದ ನಂತರ ಸಮಗ್ರವಾದ ಗ್ರಹಸ್ಥಾನುಭವವೂ ಏನೂ ಅಲ್ಲ ಅಂತ ಯೋಗಾನುಭವ ತಿಳಿಸಿಬಿಟ್ಟಿತು. ಹೀಗೆ ಯೋಗಾಭ್ಯಸ ಮಾಡುವಾಗ ಯೋಗ ಗುರುಗಳು ಮಾರ್ಗ ದರ್ಶಕನಾದ ಮಿತ್ರನೂ ಯೋಗಾಭ್ಯಾಸಕ್ಕೆ ಸ್ನಾನಾದಿಗಳನ್ನು ಮುಗಿಸಿ ಮಾಡುವುದು ಅತ್ಯುತ್ತಮ ಅಂತ ಹೇಳಿದರು. ನನಗೊಂದು ಸ್ವಭಾವ ಎಂದರೆ ಯಾವುದೇ ಕೆಲಸ ಮಾಡಲಿ ಅದಕ್ಕೆ ಸಾಧ್ಯವಾದಷ್ಟು ಬದ್ದತೆಯನ್ನು ಕೊಡಬೇಕು. ಆರೋಗ್ಯದಿಂದಲೂ ಹಲವಾರು ಸಮಸ್ಯೆಗಳನ್ನು ಎದುರಿಸಿತ್ತಿದ್ದ ನನಗೆ ಯೋಗಾಭ್ಯಾಸಕ್ಕೆ ಏನೆಲ್ಲ ಬೇಕೋ ಅದನ್ನೆಲ್ಲ ಮಾಡುವ ಆಸಕ್ತಿ ಹುಟ್ಟಿಕೊಂಡಿತು. ಹಾಗಾಗಿ ಬೆಳಗ್ಗೆ ಸ್ನಾನ ಮಾಡಿ ಯೋಗಾಭ್ಯಾಸಕ್ಕೆ ಹೋಗುತ್ತಿದ್ದೆ. ಅದು ವರೆಗೆ ತಡವಾಗಿ ಏಳುತ್ತಿದ್ದ ನನಗೆ ಇದಕ್ಕಾಗಿ ಬೇಗ ಏಳುವ ಅನಿವಾರ್ಯತೆ ಬಂದು ಬಿಟ್ಟಿತು. ನಮಗೂ ಹಾಗೆ ಸ್ನಾನ ಮಾಡಿದ ನಂತರ, ಸಂಧ್ಯಾವಂದನೆ ಪೂಜೆ ಇವುಗಳನ್ನು ಮುಗಿಸಬೇಕು, ಹಾಗಾಗಿ ಆರುಘಂಟೆಯ ಯೋಗ ತರಗತಿಗೆ ಹೋಗಬೇಕಾದರೆ ಐದು ಘಂಟೆಯ ಮೊದಲೇ ಎದ್ದು ಬಿಡಬೇಕಾಗಿತ್ತು. ಈ ಒಂದು ನಿಬಂಧನೆ ನನ್ನ ಜೀವನದಲ್ಲಿ ಬಹಳ ದೊಡ್ಡ ಬದಲಾವಣೆಯನ್ನು ತಂದಿತು.  

ಐದು ಘಂಟೆಗೆ ಎದ್ದು ಸ್ನಾನ ಮಾಡಿ ಸಂಧ್ಯಾವಂದನೆಗೆ ತೊಡಗ ಬೇಕು ಎನ್ನುವಾಗ, ನಮ್ಮ ಮನೆಯ ಅನತಿ ದೂರದಲ್ಲಿದ್ದ ಮಸೀದಿಯಿಂದ ಬಾಂಗ್ ಕೇಳುತ್ತಿತ್ತು. ಇದೊಂದು ರೀತಿಯಲ್ಲಿ ನನಗೆ ಇದಕ್ಕಿಂತ ಮೊದಲು ನನ್ನ ಸಂಧ್ಯಾವಂದನೆ ಪ್ರಾರ್ಥನೆ ಮುಗಿಸಿಬಿಡಬೇಕು ಎಂಬ ತುಡಿತ ನನ್ನಲ್ಲಿ ಬೆಳೆದು ಬಿಟ್ಟಿತು. ಅವರೆಲ್ಲಾ ಎದ್ದು ಪ್ರಾರ್ಥನೆ ಮಾಡುತ್ತಾರೆ ಅವರಿಗಿಂತ ಒಂದಿಷ್ಟು ಮೊದಲು ನಾನು ತೊಡಗಬೇಕು ಎಂದು ಸಾಕಷ್ಟು ಮೊದಲೇ ಏಳುವ ಪ್ರಚೋದನೆಯಾಯಿತು. ಹಾಗಾಗಿ ಐದು ಘಂಟೆಗೆ ಎದ್ದು ಬಿಡುವವನು ಒಂದು ತಾಸು ಮೊದಲೇ ಎದ್ದು ಸಂಧ್ಯಾವಂದನೆಗೆ ತೊಡಗುತ್ತಿದ್ದೆ. ಇದೊಂದು ರೀತಿಯ ಸತ್ ಪ್ರಚೋದನೆ. ಮತ ಧರ್ಮ ಯಾವುದಾದರೇನು? ಭಗವಂತನ ಪ್ರಾರ್ಥನೆ ಅದು ಸಮಾನ. ಹೀಗೆ ಒಂದು ಸಲ ಸ್ನಾನ ಆಯಿತು ಎಂದರೆ ಅದೊಂದು ಶಿಸ್ತಿನ ಜೀವನದ ಮೊದಲ ಹೆಜ್ಜೆಯಾಗಿಬಿಡುತ್ತದೆ. ಯೋಗಾಭ್ಯಾಸ ಆರಂಭವಾದ ನಂತರ ಇಂದಿನವರೆಗೂ ಒಂದೇ ಒಂದು ದಿನ ನಾನು ತಡವಾಗಿ ಏಳಲಿಲ್ಲ ಎಂಬುದು ನನ್ನ ಪಾಲಿಗೆ ಗಮನಾರ್ಹವೆನಿಸುತ್ತದೆ. ಶಿಸ್ತು ಬದ್ದ ಜೀವನಕ್ಕೆ ಇದೊಂದು ಮೊದಲ ಮೆಟ್ಟಿಲಾಗಿಬಿಟ್ಟಿತು.  ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲೇ ಸೂರ್ಯಾರ್ಘ್ಯ ಜಪ ಪೂಜಾದಿಗಳ ನಿತ್ಯ ಕರ್ಮವನ್ನು ಪೂರೈಸುವ ಅದ್ಭುತ ಅನುಭವ ಮತ್ತು ಅವಕಾಶ ಇದರಿಂದ ಒದಗಿಬಂತು. 

ನಮ್ಮಲ್ಲೂ ನಿಯಮ ನಿಬಂಧನೆಗಳು ಇವೆ. ಆದರೆ ನಾವೇಕೆ ಅದರ ಬಗ್ಗೆ ಅಸಡ್ಡೆಯನ್ನು ತೋರಿಸುತ್ತಿದ್ದೇವೆ ಎಂಬುದೇ ಪ್ರಶ್ನೆ. ಸಂಧ್ಯಾವಂದನೆ ಎಂದರೆ, ಭಗವಂತನನ್ನು ಅರಿಯುವ ಜ್ಞಾನವನ್ನು ಕೊಡು ಅಂತ ಭಗವಂತನಲ್ಲೇ ಪ್ರಾರ್ಥಿಸುವ ಒಂದು ಪವಿತ್ರ ಕಾರ್ಯ. ಬ್ರಾಹ್ಮಣ ಎಂದರೆ ಜ್ಞಾನಿ ಎಂದು ಅರ್ಥ. ಯಾರು ಮುಂಜಾನೆ ಎದ್ದು  ಸಂಧ್ಯಾವಂದನೆ ಧ್ಯಾನದ ಮೂಲಕ ಬ್ರಹ್ಮ  ಜ್ಞಾನವನ್ನು ಪಡೆಯುತ್ತಾನೋ ಆತ ನಿಜವಾದ ಬ್ರಾಹ್ಮಣ. ಇದಕ್ಕಾಗಿ ನಮಗೆ ಕಠಿಣವಾದ ನಿಯಮ ನಿಬಂಧನೆಯ ಅವಶ್ಯಕತೆ ಬೇಕಾಗಿಲ್ಲ. ಜ್ಞಾನದ ಶ್ರಧ್ದೆ ಇದ್ದರೆ ಸಾಕು. ಆದರೆ ನಮಗದು ಬೇಡ. ಸಂಧ್ಯಾವಂದನೆ ಆಚರಿಸುವುದರಲ್ಲೇ ಔದಾಸಿನ್ಯ. ಇನ್ನು ಆಚರಿಸಿದರೂ ಅದು ಕಾಟಾಚಾರ. ಸಂಧ್ಯಾವಂದನೆ ಮಾಡಿದರೂ ಅದರ ನಡುವೆ ಯಾರಲ್ಲೋ ಮೊಬೈಲ್ ನಲ್ಲಿ ಮಾತನಾಡುವುದು,  ಮಂತ್ರ ಹೇಳುತ್ತಾ ಮಂತ್ರದಲ್ಲೇ ದೊಡ್ಡದಾಗಿ ಯಾರಿಗೋ ಗದರುವುದು ಛೇಡಿಸುವುದು, ನಡುವೆ ಎದ್ದು ಹೋಗುವುದು ಅವಸರವವಸರವಾಗಿ ಒಂದು ಮುಗಿಸಿ ಭಾರ ಇಳಿಸಿದರೆ ಸಾಕು ಎಂಬ ಪ್ರವೃತ್ತಿ. ದಿನದ ಸಾವಿರದ ನಾನ್ನೂರ ನಲ್ವತ್ತು ನಿಮಿಷದಲ್ಲಿ ಕೇವಲ   ಹದಿನೈದು ನಿಮಿಷವನ್ನೂ ಮೀಸಲಿಡಲಾಗದ ನಾವು ಬ್ರಾಹ್ಮಣ ಎಂದನಿಸಿಕೊಳ್ಳಲು ಯೋಗ್ಯರೆ ಅಂತ ಯೋಚಿಸಬೇಕು. ಒಂದು ರೀತಿಯಲ್ಲಿ ಬ್ರಾಹ್ಮಣ ವೇಷಕ್ಕೂ ಅರ್ಹರಲ್ಲದವರು ಅಂತ ಅನ್ನಿಸಿಬಿಡುತ್ತದೆ. ಸಂಧ್ಯಾವಂದನಾದಿ ಕಾರ್ಯಗಳು, ನಮ್ಮ ಪಾಪ ಮೋಕ್ಷಕ್ಕಾಗಿ ಆಚರಿಸಲೇ ಬೇಕಾದ ಕರ್ಮಗಳು.  ಮೊದಲು ನಮ್ಮಲ್ಲಿ ಪಾಪ ಪ್ರಜ್ಞೆ ಎಂಬುದು ಬೆಳೆಯಬೇಕು. ಹೀಗಿದ್ದಲ್ಲಿ ನಾವು ಮಾಡುವ ಕಾರ್ಯದಲ್ಲಿ ಶ್ರದ್ಧೆ ಭಕ್ತಿ ತಾನಾಗಿ ಪ್ರಚೋದನೆಯಾಗುತ್ತದೆ. ಸಂಧ್ಯಾವಂದನೆ ಎಂದರೆ ನಮ್ಮನ್ನು ನಾವು ಪರಿಶುದ್ದತೆಯತ್ತ ಕೊಂಡೊಯ್ಯುವುದು. ಆದರೆ ನಮ್ಮ ಮನಸ್ಸು ದೇಹ ನಮ್ಮ ಪರಿಸರ ಪರಿಶುದ್ದವಿಲ್ಲದೇ ಇದ್ದರೆ ಪರಿಶುದ್ದಿ ಎಂಬುದನ್ನು ಪಡೆಯುವುದಕ್ಕೆ ಸಾಧ್ಯವಿಲ್ಲ. ಕೆಸರಿನಲ್ಲಿ ಹುಟ್ಟಿದ ಕಮಲವಾದರೂ ಅರಳಿದನಂತರ ಸೂರ್ಯಾಭಿಮುಖವಾಗಿ ಪರಿಶುದ್ದಿಯಾಗುತ್ತದೆ. ಆದರೆ ನಾವು ಮಾತ್ರ ಕೆಸರಲ್ಲೇ ಇದ್ದು ಪರಮಾತ್ಮನಿಂದ ವಿಮುಖರಾಗಿಬಿಡುತ್ತೇವೆ. 

ನಾವು  ಶ್ರೀರಾಮನನ್ನು ನಂಬುತ್ತೇವೆ. ರಾಜ ಜಪವನ್ನು ಮಾಡುತ್ತೇವೆ. ಆದರೆ ಅದೇ ರಾಮನಲ್ಲಿ ಅನುಮಾನ ವ್ಯಕ್ತಪಡುತ್ತೇವೆ. ರಾಮ ಸೀತೆಯನ್ನು ಕಾಡಿಗೇಕೆ ಅಟ್ಟಿದ? ರಾಮ ಮರೆಯಲ್ಲಿದ್ದು ವಾಲಿಯನ್ನು ಏಕೆ ಸಂಹರಿಸಿದ? ರಾಮಾಯಣ ಅಧ್ಯಯನ ಮಾಡದೇ  ಹೀಗೆಲ್ಲ ಆತನ ವ್ಯಕ್ತಿತ್ವದ ಮೇಲೆ ರೇಖೆಯನ್ನು ಎಳೆದುಬಿಡುತ್ತೇವೆ.  ನಮಗೆ ಅದರಲ್ಲೂ ಹಿಂದುಗಳಿಗೆ ಈ ಅರೆನಾಸ್ತಿಕತೆಯೇ ಬಾಧಿಸುವುದು. ದೇವರನ್ನು ತಿಳಿಯುವುದಕ್ಕೆ ಪ್ರಯತ್ನಿಸುವುದಿಲ್ಲ. ಯಾವುದೋ ಒಂದನ್ನು ದೇವರು ಅಂತ ನಂಬಿಬಿಡುತ್ತೇವೆ. ಅಲ್ಲಿ ಸಾವಿರಾರು ಸಂಶಯಗಳು ಹುಟ್ಟಿಬಿಡುತ್ತವೆ. ಶ್ರೀಕೃಷ್ಣನೇ ಪಾಂಡವರಿಗೆ ಯುದ್ದ ಮಾಡುವಂತೆ ಹೇಳಿದ. ಇದು ಹಿಂಸೆಗೆ ಪ್ರಚೋದಿಸದಂತೆ ಭಾಸವಾಗುತ್ತದೆ. ಆದರೆ ಶ್ರೀಕೃಷ್ಣ ಜ್ಞಾನ ಧ್ವಂಸಿಗಳನ್ನು ಸಂಹರಿಸಿದ. ಯಾರು ಆತನನ್ನು ನಂಬುವವರನ್ನು ಆತ ಸಂಹರಿಸಿಲ್ಲ. ಯಾರು ಜ್ಞಾನವನ್ನು ದೂರ ಮಾಡಿದರೋ ಅವರ ಎದುರು ಯುದ್ದ ಸಾರಿದ. ಮತ್ತೂ ಮುಂದೆ ಯೋಚಿಸಿದರೆ ಆತ ಹಲವರನ್ನು ಸಂಹರಿಸಲಿಲ್ಲ. ಅವರಿಗೆ ಮೋಕ್ಷವನ್ನು ಬಿಡುಗಡೆಯನ್ನು ಕಲ್ಪಿಸಿದ. ಆದರೆ ದೇವರನ್ನು ಅರಿಯದವರು ಅರೆ ನಾಸ್ತಿಕರಾಗಿಬಿಡುತ್ತಾರೆ. ಬದುಕಿಗೆ ಇದು ಅಪಾಯ. 


Saturday, August 1, 2026

ಧಿಯೋಯೋನಃ ಪ್ರಚೋದಯಾತ್

 ಗಾಯತ್ರಿಮಂತ್ರದಲ್ಲಿ ಕೊನೆಯ ಶಬ್ದಗಳು ಧಿಯಃ ಯಃ ನಃ ಪ್ರಚೋದಯಾತ್. ಒಟ್ಟಿಗೆ ಧಿಯೋಯೋನಃ ಪ್ರಚೋದಯಾತ್. ಅಂದರೆ ನಮಗೆ ಜ್ಞಾನವನ್ನು ಕರುಣಿಸು. ಇದು ಗಾಯತ್ರಿ ಮಂತ್ರದ ಅದ್ಭುತ ಸಾಲುಗಳು.  ಮನುಷ್ಯ ದೇವರನ್ನು ಅರಿಯಬೇಕು.  ಆಗ ಅದರಲ್ಲಿ ಅರ್ಪಣಭಾವ ಬರುತ್ತದೆ. ಯಾರೋ ಹೇಳಿದರು ಅನುಸರಿಸಿದರು ಎಂದಲ್ಲ. ಅದನ್ನೇ ಧೀಮಹಿ ಎನ್ನುವುದು. ಧಿಯೋಯೋನಃ ಪ್ರಚೋದಯಾತ್ ಹೇಳುವಲ್ಲಿ ಒಬ್ಬನೇ ಆದರೂ ಆತ ನಮಗೆ ಎಂದು ಹೇಳುತ್ತಾನೆ. ನಮಗೆ ಒಳ್ಳೆ ಬುದ್ದಿಯನ್ನು ಕೊಡು ಎಂದು ಒಬ್ಬನೇ ಕುಳಿತು ಮನಸ್ಸಿನಲ್ಲಿ ಧ್ಯಾನ ಮಾಡುತ್ತಾನೆ.  ಇದು ಗಹನವಾದ ವಿಚಾರವನ್ನು ಹೇಳುತ್ತದೆ. ಬುದ್ದಿಯನ್ನು ಕೇವಲ ನಮಗಾಗಿ ಕೊಟ್ಟರೆ ಮತ್ತೊಬ್ಬನಿಗೆ ಬುದ್ದಿ ಇಲ್ಲದಾಗುತ್ತದೆ. ಪರೋಕ್ಷವಾಗಿ ಅದು ನಮಗೆ ಬಾಧಕವಾಗಬಹುದು. ಹಾಗಾಗಿ ಎಲ್ಲರಿಗೂ ಬುದ್ಧಿಯನ್ನು ಜ್ಞಾನವನ್ನು ಕೊಡು. ಹೊರತು ಸಂಪತ್ತನ್ನು ಕೇಳುವುದಿಲ್ಲ. ಬುದ್ಧಿಗಿರುವ ಮಹತ್ವ ಅದು. ನಾವು ಧನಿಕರಾಗುವಾಗ ನಮ್ಮ ಪಕ್ಕದಲ್ಲಿರುವವನೂ ಧನಿಕನಾಗಲಿ ಎಂದು ಬಯಸುವುದರಲ್ಲಿ ವಿಶ್ವ ಬಂಧುತ್ವವಿದೆ. 

ಬಹುಶಃ ಯಾವುದೇ ಧರ್ಮದಲ್ಲೂ ನನಗೆ ಕೊಡು ಅಂತ ಭಗವಂತನಲ್ಲಿ ಬೇಡುವುದಿರಬಹುದು ಗೊತ್ತಿಲ್ಲ. ನನಗೆ ವರಕೊಡು. ನನಗೆ ಒಳ್ಳೆಯದು ಮಾಡು. ನನ್ನನ್ನು ಉದ್ದರಿಸು ಹೀಗೆ ತನ್ನ ಪರಿಮಿತಿಯಲೇ ಬೇಡಿಕೆ ಇರುತ್ತದೆ.   ನಮಗೆ ಕೊಡು ಅಂತ ಕೇಳುವುದರಲ್ಲಿ ಸನಾತನ ಧರ್ಮದ ಸತ್ವ ಅಡಗಿದೆ ಎನ್ನಬೇಕು. ಹಾಗಾಗಿಯೇ ಭಾರತದ ಆಧ್ಯಾತ್ಮಿಕ ತತ್ವಗಳು ಇಂದು ಜಗತ್ತಿಗೆ ಗುರುಸ್ಥಾನವನ್ನು ಕಲ್ಪಿಸಿದೆ ಎನ್ನಬೇಕು. ನನಗೆ ಎನ್ನುವುದಕ್ಕಿಂತ ನಮಗೆ ಎನ್ನುವುದರಲ್ಲಿ ಸಮಷ್ಟಿಯ ತ್ಯಾಗ ಮನೋಭಾವ ಇದೆ. ಯೋಗ ತರಗತಿಯ ಆರಂಭದ ದಿನಗಳಲ್ಲಿ ನಮ್ಮ ಯೋಗ ಗುರು ತಾಡಪತ್ರಿಯವರು ಒಂದು ಮಾತು ಹೇಳಿದ್ದರು ಈಗಲೂ ನೆನಪಿದೆ. ನಿಮ್ಮ ನೆರೆ ಮನೆಯವನು ನಿಮ್ಮನ್ನು ದ್ವೇಷಿಸುತ್ತಿದ್ದರೆ, ಬೇರೆ ಏನು ಬೇಡ ಆತನನ್ನು ಯೋಗ ತರಗತಿಗೆ ಕರೆದು ಕೊಂಡು ಬನ್ನಿ. ಯೋಗಭ್ಯಾಸ ಮಾಡುವಂತೆ ಪ್ರೇರೇಪಿಸಿ. ನಿಮ್ಮ ಮೇಲಿನ ದ್ವೇಷವನ್ನು ಮಾತ್ರವಲ್ಲ ದ್ವೇಷ ಎಂಬ ವಸ್ತುವನ್ನೇ ಮರೆತು ಬಿಡುತ್ತಾನೆ. ಭಾರತಕ್ಕೆ ಸಮಷ್ಟಿಯ ಈ ನಮ್ಮ ಎನ್ನುವ ಭಾವನೆ ರಕ್ತಗತವಾಗಿರುವುದೇ ಈ ಸನಾತನ ಯೋಗ ಧರ್ಮದಿಂದ ಎನ್ನಬೇಕು. ವಿಶ್ವಕ್ಕೆ ಶಾಂತಿ ಮಂತ್ರವನ್ನು ತೋರಿಸಿಕೊಟ್ಟ ಭಾರತ. ಯಾರೋ ಒಬ್ಬ ಮಹನಿಯರು ಹೇಳಿದ್ದು, ಭಾ ಎಂದರೆ ಬೆಳಕು ರತಿ ಎಂದರೆ ಆಸಕ್ತಿ. ಬೆಳಕಿನಲ್ಲಿ ಆಸಕ್ತನಾಗಿ ಜಗತ್ತಿಗೆ ಜ್ಯೋತಿಯ ಬೆಳಕನ್ನು ತೋರಿಸಿದ ದೇಶವೇ ಭಾರತ. ಇದು ಭಾರತಕ್ಕೆ ಗುರುತ್ವ ವನ್ನು ಕಲ್ಪಿಸಿದೆ. ಗುರುತ್ವ ಎಂದರೆ ಗಮನ, ದರ್ಶನದ ಸ್ಥಾನ. ಇದು ಯಾವುದೋ ವ್ಯಕ್ತಿಗೆ ಸಂಭಂದಿಸಿ ಹೇಳಿದುದಲ್ಲ. ಇಲ್ಲಿ ಹುಟ್ಟಿದ ಮಹನೀಯರೆಲ್ಲ ಈ ಸ್ಥಾನಕ್ಕೆ ಗೌರವವನ್ನು ಕೊಡುವಲ್ಲಿ ಪ್ರಯತ್ನಿಸಿದ್ದಾರೆ. 

ವಿಶ್ವ ಗುರು ಎಂದು ಯಾವುದೋ ವ್ಯಕ್ತಿಯನ್ನು ಅಭಿಮಾನದಿಂದ ಕರೆಯಬಹುದು. ಆದರೆ ಆ ವ್ಯಕ್ತಿ ಎಂದಿಗೂ ಇದನ್ನು ಪ್ರತಿಪಾದಿಸಲಿಲ್ಲ.  ಯಾರದೋ ಅಭಿಮಾನ ಈಬಗೆಯಲ್ಲಿ ವ್ಯಕ್ತವಾಗುತ್ತದೆ.  ಅದು ಆ ಗುರುತ್ವವನ್ನು ಹೃಸ್ವ ಮಾಡಿ ಸಣ್ಣದಾಗಿಸುತ್ತದೆ. ವ್ಯಕ್ತಿಯೊಬ್ಬನಿಂದ ಸಮಷ್ಟಿಯಾಗುವುದಿಲ್ಲ. ನಾವು ನಮ್ಮದು ಎಂದಾಗಲೇ ಶಿಷ್ಯ ಗುರುವಿನ ಸಂಭಂಧ ಏರ್ಪಡುತ್ತದೆ. ಅದು ಭಾರತೀಯತೆ. ಗುಡ್ಡದಲ್ಲಿ ಯಾವುದೋ ಭಾಗದಲ್ಲಿ ಎರಡು ಹೆಗ್ಗಣ ಇದೆ ಎಂದು ಗುಡ್ಡವನ್ನೇ ಜರಿಯುವುದಲ್ಲ. ಇಂದು ಧರ್ಮದ ಅರಿವಿಲ್ಲದೇ ಅದನ್ನು ಜರಿಯುತ್ತಾರೆ. ತಮಗೆ ತಿಳಿಯಲಾಗದ ಹಪಹಪಿಕೆ, ಮತ್ತು ತಮ್ಮ ಅಸಮರ್ಥತೆಗೆ ಇಡೀ ಧರ್ಮವನ್ನು ದೂರುವುದು ಅಜ್ಞಾನದ ಸಂಕೇತ. ಹಾಗಾಗಿಯೇ ನಂಬುವ ನಮಗು ನಂಬದೇ ಇರುವ ಪಾಮರನಿಗೂ ಬುದ್ದಿ ಜ್ಞಾನವನ್ನು ಕರುಣಿಸು ಅಂತ ಧಿಯೋಯೋನಃ ಪ್ರಚೋದಯಾತ್ ಅಂತ ಬೇಡಿಕೊಳ್ಳುವುದು. ಹಾಗಾಗಿಯೇ ಹಿಂದು ಧರ್ಮ ವಿರೋಧಿಗಳನ್ನು ಹೊಟ್ಟೆಯಲ್ಲಿಟ್ಟು ಪೋಷಿಸಿದಂತೆ ಬೇರೆಯಾವ ಧರ್ಮವೂ ವಿರೋಧಿಗಳನ್ನುಇರಿಸಿಕೊಳ್ಳುವುದಿಲ್ಲ. ಯಾವುದೇ ಧರ್ಮವನ್ನು ಇಲ್ಲಿ ಕೀಳಾಗಿ ಕಾಣುವುದಿಲ್ಲ. ನಮ್ಮ ಧರ್ಮವೂ ಪರಧರ್ಮವೂ ಬೆಳೆಯಲಿ. ಭಗವಂತನನ್ನು ಆರಾಧಿಸುವ ಮತ್ತು ಆರಾಧಿಸದೇ ಇರುವ ಎಲ್ಲರೂ ಇಲ್ಲಿ ಸಮಾನರು. ಭಾರತ ಸಾರುವು ವಸುಧೈವ ಕುಟುಂಬಕಂ ತತ್ವವೇ ಇದು. 

Thursday, July 30, 2026

ವಿದ್ಯಾ ವಜನ !


ಗ್ರಾಮೀಣ  ಪ್ರದೇಶದಲ್ಲಿ ಒಂದು ದಿನ ಬ್ಯಾಂಕ್ ಲೆಕ್ಕ ಪರಿಶೋಧನೆ (Audit) ಗೆ ಹೋಗಿದ್ದೆ. ಅಲ್ಲಿ ಒಬ್ಬ ಗ್ರಾಹಕ ಬಹಳ ಧನಿಕ. ಆಗಾಗ  ಹತ್ತು ಬೆರಳಿಗೆ ವಜ್ರದ ಉಂಗುರ, ಕೊರಳಿಗೆ ಚಿನ್ನದ ನಾಯಿ ಸಂಕೊಲೆ ಧರಿಸಿ ಬರುತ್ತಿದ್ದ.  ಅತ್ಯಂತ ಪ್ರತಿಷ್ಠಿತ ವ್ಯಕ್ತಿ ಕಾಣಬೇಕು. ಬಿಳಿ ಬಿಳಿ ಖಾದಿ  ವಸ್ತ್ರ ತೊಟ್ಟವನು, ಮಲಯಾಳಂ ನಲ್ಲಿ ಹೇಳುವಂತೆ ವೆಳ್ಳಿ ಮೂಂಗ  ಅಂದರೆ ಬಿಳಿ ಗೂಬೆ, ಈತ ಒಂದು ರಾಜಕೀಯ ವ್ಯಕ್ತಿ. ಯಾವಾಗಲೂ ಒಂದಿಬ್ಬರು ಜತೆಗೆ ಇರುತ್ತಿದ್ದರು. ಅದಿನ ಆತ ಒಬ್ಬನೇ ಬಂದಿದ್ದ. ಆತನಿಗೆ ದೊಡ್ಡ ಮೊತ್ತದ ನಗದು ಹಣ ಬ್ಯಾಂಕ್ ನಿಂದ ತೆಗೆದುಕೊಳ್ಳುವುದಿತ್ತು. ಮ್ಯಾನೇಜರ್ ಗೆ ಮೊದಲೇ ಕರೆ ಮಾಡಿ ಹೇಳಿರ ಬೇಕು. ಬ್ಯಾಂಕ್ ನಲ್ಲಿ ದೊಡ್ಡ ಮೊತ್ತದ ಹಣ ಇಲ್ಲದೇ ಇದ್ದರೆ ದೊಡ್ಡ ಮೊತ್ತದ ಹಣ ತೆಗೆದುಕೊಳ್ಳುವಾಗ ಮೊದಲೇ ತಿಳಿಸಿರಬೇಕಾಗುತ್ತದೆ. ಹಲವು ಸಲ ಹತ್ತಿರದ ಶಾಖೆಯಿಂದ ಇವುಗಳನ್ನು ವ್ಯವಸ್ಥೆ ಮಾಡುತ್ತಾರೆ.  ಆದಿನ ಬಂದವನಿಗೆ ಚೆಕ್ ಬರೆಯಬೇಕಿತ್ತು. ಹಲವು ಸಲ ಇಂತಹ ವ್ಯಕ್ತಿಗಳಿಗೆ ಸಹಿ ಬಿಟ್ಟು ಇನ್ನೇನು ಬರೆಯುವುದಕ್ಕೆ ಬರುವುದಿಲ್ಲವೋ ಇಲ್ಲ, ಹಾಗೆ ಬರೆಯುವುದು ಪ್ರತಿಷ್ಠೆಗೆ ತೊಂದರೆಯೋ ಗೊತ್ತಿಲ್ಲ. ದೊಡ್ಡ ಮೊತ್ತದ ಚೆಕ್ ಬರೆಯಬೇಕಿತ್ತು. ಬ್ಯಾಂಕ್ ಸಿಬ್ಬಂದಿ ಬರೆಯಬಾರದು. ಮಾತ್ರವಲ್ಲ ಆದಿನ ಸಿಬ್ಬಂದಿಗಳ ಸಂಖ್ಯೆ ತೀವ್ರವಾಗಿ ಕಡಿಮೆ ಇತ್ತು. ಮ್ಯಾನೆಜರ್, ಒಬ್ಬರು ಗುಮಾಸ್ತ ಕ್ಯಾಶಿಯರ್ ಮತ್ತೆ ಜವಾನ ಬಿಟ್ಟರೆ ಯಾರೂ ಇರಲಿಲ್ಲ. ಹಾಗಾಗಿ ಇದ್ದ ಸಿಬ್ಬಂದಿಗಳಿಗೆ ತುರಿಸುವುದಕ್ಕೂ ಸಮಯ ಇಲ್ಲದ ಸ್ಥಿತಿ.  


ಸರಿ ನಾನು ಬ್ಯಾಂಕ್ ಕೌಂಟರ್ ಹತ್ತಿರವೇ ಕಂಪ್ಯೂಟರ್ ನಲ್ಲಿ ಏನೋ ಪರಿಶೋಧನೆಯಲ್ಲಿದ್ದೆ. ಆತ ನನ್ನಲ್ಲಿ ಬಂದು ಬರೆದು ಕೊಡುವಂತೆ ಕೇಳಿದ. ನನಗೂ ಮುಖ್ಯವಾಗಿ ಸಮಯ ಇರಲಿಲ್ಲ. ಬ್ಯಾಂಕ್ ಆಡಿಟ್ ಗೆ ಹೋದಾಗ ಈ ರೀತಿ ಹಲವರು ಕೇಳಿಕೊಂಡು ಬರುವುದುಂಟು. ನಮ್ಮಲ್ಲಿ ಎಷ್ಟು ವಿದ್ಯಾವಂತರಿಗೂ ಕೆಲವರಿಗೆ ಈ ಬಾಂಕ್ ಚಲನ್ ಅಥವಾ ಚೆಕ್ ತುಂಬಿಸುವುದಕ್ಕೆ ಬರುವುದಿಲ್ಲ.  ಚಲನ್ ಬರೆಯುವಾಗ ಹಲವಾರು ತಪ್ಪುಗಳು, ಕೆಲವೊಮ್ಮೆ ಒಂದರಡು ಚಲನ್ ವ್ಯರ್ಥವಾಗುವುದು ಸರ್ವೇ ಸಾಮಾನ್ಯ. ಇಂತಹ ಪ್ರಾಥಮಿಕ ಅರಿವಿಲ್ಲದಿರುವ ವಿದ್ಯಾವಂತರು ಇದ್ದಾರೆ. ಈಗೀಗ ಈ ಚಲನ್ ಬರೆಯುವ ವ್ಯವವಾರ ಕಡಿಮೆಯಾಗಿದೆ. ಹೋಗಲಿ,  ಬ್ಯಾಂಕ್ ಆಡಿಟ್ ಗೆ ಹೋದಾಗ ಹೀಗೆ ಕೇಳಿದರೆ ನಾನು ಬರೆದುಕೊಡುವುದಕ್ಕೆ ಒಪ್ಪುವುದಿಲ್ಲ. ನನ್ನ ಪ್ರಕಾರ ಅದು ನಮ್ಮ ವೃತ್ತಿಗೆ ಸರಿ ಹೊಂದುವುದಿಲ್ಲ. ಇಲ್ಲ ಸರ್ ನಾನು ಬರೆಯಬಾರದು ಎಂದು ನಾನು ನಯವಾಗಿ ತಿರಸ್ಕರಿಸಿದೆ, ನನಗೂ ಈ ರಾಜಕೀಯ  ಬಿಳಿ ಮರಿಗಳು ಅಷ್ಟಕ್ಕಷ್ಟೇ. ಕೊನೆಗೆ ಆತ ನನ್ನ ಪಕ್ಕವೇ ಕುಳಿತು ನನ್ನಲ್ಲಿ ಕೇಳಿ ಬರೆಯುವುದಕ್ಕೆ ತೊಡಗಿದ.   ಬೆಲೆ ಬಾಳುವ ಪೆನ್ನು ಇತ್ತು. ಆದರೆ ಆತನಿಗೆ ಬರೆಯುವಾಗ ಕೈ ಕಂಪಿಸುತ್ತಿತ್ತು. ಪೆನ್ನು ಯಾವ ಕಾರಣಕ್ಕೆ ಇಟ್ಟುಕೊಂಡಿದ್ದಾನೋ ಅಂತ ಅನಿಸಿತು. ಎರಡು ಕೋಟಿ ದೊಡ್ಡ ಮೊತ್ತದ ಹಣ ಪಡೆಯಬೇಕಿತ್ತು. ನಾನು ಹೇಳುತ್ತಾ ಹೋದೆ ದಿನಾಂಕ, ನಂತರ ಹಣ ಪಡೆಯುವಾತನ ಜಾಗದಲ್ಲಿ ಬರೆಯಬೇಕಾದನ್ನು ಹೇಳಿದೆ. ಎರಡು ಕೋಟಿ ಸಂಖ್ಯೆಯನ್ನು ಬರೆಯುವುದಕ್ಕೆ ಹೇಳಿದೆ. ಪುಣ್ಯಾತ್ಮನಿಗೆ ಕೋಟಿಯಲ್ಲಿ ಎಷ್ಟು ಸೊನ್ನೆ ಇದೆ ಅಂತ ಗೊತ್ತಿಲ್ಲ. ಎರಡು ಕೋಟಿಯ ಬದಲು ಇಪ್ಪತ್ತು ಲಕ್ಷ ಬರೆದಿದ್ದ! ಅಷ್ಟಾದ ಮೇಲೆ ಅಕ್ಷರದಲ್ಲಿ ಬರೆಯಬೇಕಾದರೂ ಒದ್ದಾಡಿದ. ಒಂದು ಚೆಕ್  ವ್ಯರ್ಥವಾಗಿ ಪುನಃ ಬರೆಯಬೇಕಾಯಿತು. ಕೊನೇಗೆ ಯಾರೂ ಓದಲಾಗದ ಸಹಿಯನ್ನು ಗೀಚುವುದಕ್ಕೆ ಅದು ಹೇಗೋ ಕಲಿತಿದ್ದ.  ತಮ್ಮಲ್ಲಿರುವ ಸಂಪತ್ತಿನ ಮೌಲ್ಯ ತಿಳಿಯದೇ ಇದ್ದರೆ ಆ ಸಂಪತ್ತಿಗೆ ಬೆಲೆಯೇ ಇಲ್ಲ. ನಾಯಿ ಕೊರಳಿಗೆ ಚಿನ್ನದ ಸಂಕಲೆ ಹಾಕಿ ಕಟ್ಟಿದರೂ ಅದಕ್ಕೆ ಅದು ಕೇವಲ ಸಂಕಲೆ. ಮತ್ತು ಕೇವಲ ಒಂದು ಬಂಧನ. 

ಇಂತಹ ವ್ಯಕ್ತಿಗಳಿಗೆ ಮೈತುಂಬ ಚಿನ್ನ ಇರುತ್ತದೆ. ಬೆಲೆ ಬಾಳುವ ಪೆನ್ನು ಮೊಬೈಲ್  ವಾಚು ಉಡುಪು ಚಪ್ಪಲಿ ಎಲ್ಲಾ ಇರುತ್ತದೆ. ಅದು ಭಾರವಾಗುವುದಿಲ್ಲ. ಅದರೆ ಇವರಿಗೆ ತಲೆಯಲ್ಲಿ ವಿದ್ಯೆಯ ವಜನ್ ಅಂದರೆ ಭಾರ ಇರುವುದಿಲ್ಲ. ಅಷ್ಟಾಗಿ ಈತ ರಾಜಕೀಯ ಗಣ್ಯವ್ಯಕ್ತಿ. ಬಹುಶಃ ಪಂಚಾಯತ್ ಸದಸ್ಯನೋ ಅಧ್ಯಕ್ಷನೋ ಏನೋ ಆಗಿರಬೇಕು. ಯಾರಿಗೆ ಗೊತ್ತು, ಮುಂದೆ ಈತ ಶಿಕ್ಷಣ ಮಂತ್ರಿಯೂ ಆಗಬಹುದು. ಇಲ್ಲ ಮುಖ್ಯಮಂತ್ರಿ ಅಥವಾ ಪ್ರಧಾನಿಯೂ ಆಗಬಹುದು. ನಮ್ಮ ಭಾರತವಲ್ಲವೇ?  ಇವರಿಗೆ ವಿದ್ಯೆಯ ಭಾರ ತಾಳಿಕೊಳ್ಳುವುದು ಕಷ್ಟವಾಗುತ್ತದೆ. ಕೊನೆ ಪಕ್ಷ ವಿದ್ಯೆಗೆ ಬೆಲೆಕೊಡುವ ಮನೋಭಾವವೂ ಇರುವುದಿಲ್ಲ. ವಿದ್ಯಾವಂತರನ್ನು ಕಂಡರೂ ಸಹಿಸುವುದಕ್ಕೆ ಕಷ್ಟವಾಗುತ್ತದೆ. ನಮ್ಮಲ್ಲಿರುವ ಸೊತ್ತಿನ  ಬೆಲೆ ನಮಗೆ ತಿಳಿಯದೇ ಇದ್ದರೆ ಆ ಸೊತ್ತು ಇದ್ದೇನು ಪ್ರಯೋಜನ. ಸುಂದರವಾದ ಹೆಣ್ಣು ಪತ್ನಿ ಇದ್ದರೂ ಧೂಮ ಪಾನ ಮದ್ಯಪಾನದ ವ್ಯಸನದಲ್ಲಿ ಸುಂದರ ಹೆಂಡತಿ ಕೂಡ ಕೇವಲ ಹೆಸರಿಗಷ್ಟೆ ಆಗಿ ಇದ್ದಂತೆ.