ನಾನು ಬಾಲ್ಯದಲ್ಲಿರುವಾಗ ನಮ್ಮೂರಿನಲ್ಲಿ ಒಂದು ಆಜಾರ್ ಬ್ಯಾರಿಯ ಅಂಗಡಿಗೆ ಎನಾದರು ಸಾಮಾನು ತರಲು ಹೋಗುತ್ತಿದ್ದೆ. ಕೆಲವು ಸಲ ಹೋಗುವಾಗ ಅವರ ನಮಾಜ್ ಪ್ರಾರ್ಥನೆಯ ಸಮಯವಾಗಿರುತ್ತಿತ್ತು. ಹಲವು ಸಲ ಆತ ನಮಾಜ್ ಗೆ ಏಳುವಾಗ ನಾವು ಹೋದರೂ ಅವರು ಪ್ರಾರ್ಥನೆ ಮುಗಿಸಿ ಬರುತ್ತೇನೆ ಅಂತ ನಮ್ಮನ್ನು ಕಾಯುವಂತೆ ಹೇಳಿ ಹೋಗುತ್ತಿದ್ದರು. ಸಾಮಾನ್ಯವಾಗಿ ಆಗ ಹತ್ತು ಹದಿನೈದು ನಿಮಿಷವಾದರೂ ಕಾದು ಕುಳಿತುಕೊಳ್ಳಬೇಕಾಗುತ್ತಿತ್ತು. ಬೇರೆ ಅಂಗಡಿ ಇಲ್ಲದೇ ಇದ್ದುದರಿಂದ ಅಥವಾ ಯಾವುದೋ ಅನಿವಾರ್ಯತೆಗೆ ನಾವು ಕಾದು ಕುಳಿತುಬಿಡುತ್ತಿದ್ದೆವು. ಅದೆಷ್ಟು ಜನ ಇದ್ದರೂ , ಅವರು ಅಷ್ಟೇ ನಾವು ಕಾಯುತ್ತಿದ್ದೇವೆ ಎಂದು ಯಾವ ಅವಸರವೂ ಮಾಡದೆ ಸಾವಧಾನವಾಗಿ ತಮ್ಮ ನಿತ್ಯವಿಧಿಯನ್ನು ಪೂರೈಸಿ ಬರುತ್ತಿದ್ದರು. ಆವಾಗ ಎಷ್ಟೋ ಸಲ ನನಗಗನಿಸುತ್ತಿತ್ತು ನಾನೊಬ್ಬನೇ ಇದ್ದರೆ, ನನ್ನ ಒಬ್ಬನನ್ನು ಕಳುಹಿಸಬಹುದಿತ್ತಲ್ಲಾ ಎಂದು ಕೊಳ್ಳುತ್ತಿದ್ದೆ. ಯೋಚನೆ ಮಾಡಿದಾಗ ದೈವ ಪ್ರಾರ್ಥನೆ ನಿತ್ಯ ವಿಧಿಗಳಲ್ಲಿ ಅವರಿಗಿರುವ ಬದ್ದತೆ ಆಶ್ಚರ್ಯ ತರಿಸುತ್ತಿತ್ತು. ಅವರ ನಿಯಮಗಳು ಕಠಿಣ ಇರುತ್ತಿತ್ತು. ಇರಲಿ, ನಮ್ಮಲ್ಲಿ ಅಷ್ಟು ಕಠಿಣವಾದ ನಿಯಮಗಳು ಇಲ್ಲವೋ ಅಥವಾ ನಾವು ಪಾಲಿಸುವುದಿಲ್ಲವೋ ಅದು ತಿಳಿಯದು. ನಮ್ಮಲ್ಲೂ ಅದೇ ರೀತಿ ನಾವು ಪಾಲನೆ ಮಾಡಬೇಕು ಅಂತ ಅನ್ನಿಸುತ್ತದೆ. ಯಾವುದೇ ವಿಧಿ ವಿಧಾನಗಳನ್ನು ಮತ್ತೊಂದಕ್ಕೆ ಹೋಲಿಸಿ ತುಲನೆ ಮಾಡುವುದು ಸರಿಯಲ್ಲ. ನಮ್ಮಲ್ಲೇ ಇದು ಹಲವು ರೀತಿಯಲ್ಲಿ ವೆತ್ಯಾಸವಿರುತ್ತದೆ. ನಿಯಮ ನಿಬಂಧನೆ ಇಲ್ಲ ಎಂದುಕೊಂಡರೂ. ನಾವು ಹೇಗೆ ಆಚರಿಸಿದರೂ ಅದು ಪರವಾಗಿಲ್ಲ ಎಂದು ತಿಳಿದು ಕೊಂಡು ಹೇಗಾದರೂ ಆಚರಿಸುವುದು ಒಂದು ರೀತಿಯ ಅಸಡ್ಡೆಯಾಗುತ್ತದೆ. ಯಾವುದೋ ಕಾಟಾಚಾರವಾಗಿಬಿಡುತ್ತದೆ, ಇದು ನನ್ನ ಭಾವನೆ. ಹಲವು ಸಲ ಪರಿಹಾರ ಉಂಟು ಎಂದು ತಿಳಿದುಕೊಂಡು ಅಪರಾಧ ಮಾಡುವುದಕ್ಕೆ ಇದು ಪ್ರೇರಣೆಯಾದಂತೆ ಆಗಿಬಿಡುತ್ತದೆ. ಯಾವುದೇ ಪಾಪಕ್ಕೂ ಪರಿಹಾರವಿದೆ ಅಂತ ಒಂದು ಬಗೆಯ ಔದಾಸಿನ್ಯ. ಇಲ್ಲದೆ ಇದ್ದರೆ ನನ್ನಿಂದ ಇಷ್ಟೇ ಸಾಧ್ಯ. ಒಂದು ರೀತಿಯ ಉಡಾಫೆ.
ಎಲ್ಲರಂತೆ ಮೊದಲೆಲ್ಲ ನಾನು ಅಷ್ಟೇ ಈ ಆಚರಣೆ ಕರ್ಮಾನುಷ್ಠಾನದಲ್ಲಿ ಗಂಭೀರವಾಗಿರುತ್ತಿರಲಿಲ್ಲ. ಹೇಗಾದರೂ ಒಂದು ಮಾಡಿದರೆ ಸಾಕು ಎಂಬ ಭಾವನೆ. ಆದರೆ ವ್ಯಕ್ತಿತ್ವ ಜೀವನದಲ್ಲಿ ಒಂದೇ ಬಗೆಯಲ್ಲಿ ಇರುವುದಿಲ್ಲ. ಮನುಷ್ಯ ಅನುಭವದಿಂದ ಬದಲಾಗುತ್ತಾ ಹೋಗುತ್ತಾನೆ. ನಾನು ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಯೋಗಾಭ್ಯಾಸ ಆರಂಭಿಸಿದೆ. ಅಂದಿನಿಂದ ಸಹಜವಾಗಿ ಜೀವನ ಕ್ರಮದಲ್ಲಿ ಅಮೂಲಾಗ್ರ ಬದಲಾವಣೆಯಾಗಿಬಿಟ್ಟಿತು. ನಾನು ಮನುಷ್ಯನಾಗಿ ಬದುಕಿದ್ದು ಆವಾಗಿಂದಲೇ ಅಂತ ಹಲವು ಸಲ ಅಂದುಕೊಳ್ಳುತ್ತೇನೆ. ಯೌವನ ಎಂಬುದು ಮನುಷ್ಯನ ಉಚ್ಛ್ರಾಯ ಸ್ಥಿತಿ , ಎಲ್ಲಾ ಬಗೆಯಿಂದಲು ಸುಖಾನುಭವದ ವಯಸ್ಸು. ಹಾಗಿದ್ದರೂ ಯೋಗಾಭ್ಯಸದ ನಂತರ ಸಮಗ್ರವಾದ ಗ್ರಹಸ್ಥಾನುಭವವೂ ಏನೂ ಅಲ್ಲ ಅಂತ ಯೋಗಾನುಭವ ತಿಳಿಸಿಬಿಟ್ಟಿತು. ಹೀಗೆ ಯೋಗಾಭ್ಯಸ ಮಾಡುವಾಗ ಯೋಗ ಗುರುಗಳು ಮಾರ್ಗ ದರ್ಶಕನಾದ ಮಿತ್ರನೂ ಯೋಗಾಭ್ಯಾಸಕ್ಕೆ ಸ್ನಾನಾದಿಗಳನ್ನು ಮುಗಿಸಿ ಮಾಡುವುದು ಅತ್ಯುತ್ತಮ ಅಂತ ಹೇಳಿದರು. ನನಗೊಂದು ಸ್ವಭಾವ ಎಂದರೆ ಯಾವುದೇ ಕೆಲಸ ಮಾಡಲಿ ಅದಕ್ಕೆ ಸಾಧ್ಯವಾದಷ್ಟು ಬದ್ದತೆಯನ್ನು ಕೊಡಬೇಕು. ಆರೋಗ್ಯದಿಂದಲೂ ಹಲವಾರು ಸಮಸ್ಯೆಗಳನ್ನು ಎದುರಿಸಿತ್ತಿದ್ದ ನನಗೆ ಯೋಗಾಭ್ಯಾಸಕ್ಕೆ ಏನೆಲ್ಲ ಬೇಕೋ ಅದನ್ನೆಲ್ಲ ಮಾಡುವ ಆಸಕ್ತಿ ಹುಟ್ಟಿಕೊಂಡಿತು. ಹಾಗಾಗಿ ಬೆಳಗ್ಗೆ ಸ್ನಾನ ಮಾಡಿ ಯೋಗಾಭ್ಯಾಸಕ್ಕೆ ಹೋಗುತ್ತಿದ್ದೆ. ಅದು ವರೆಗೆ ತಡವಾಗಿ ಏಳುತ್ತಿದ್ದ ನನಗೆ ಇದಕ್ಕಾಗಿ ಬೇಗ ಏಳುವ ಅನಿವಾರ್ಯತೆ ಬಂದು ಬಿಟ್ಟಿತು. ನಮಗೂ ಹಾಗೆ ಸ್ನಾನ ಮಾಡಿದ ನಂತರ, ಸಂಧ್ಯಾವಂದನೆ ಪೂಜೆ ಇವುಗಳನ್ನು ಮುಗಿಸಬೇಕು, ಹಾಗಾಗಿ ಆರುಘಂಟೆಯ ಯೋಗ ತರಗತಿಗೆ ಹೋಗಬೇಕಾದರೆ ಐದು ಘಂಟೆಯ ಮೊದಲೇ ಎದ್ದು ಬಿಡಬೇಕಾಗಿತ್ತು. ಈ ಒಂದು ನಿಬಂಧನೆ ನನ್ನ ಜೀವನದಲ್ಲಿ ಬಹಳ ದೊಡ್ಡ ಬದಲಾವಣೆಯನ್ನು ತಂದಿತು.
ಐದು ಘಂಟೆಗೆ ಎದ್ದು ಸ್ನಾನ ಮಾಡಿ ಸಂಧ್ಯಾವಂದನೆಗೆ ತೊಡಗ ಬೇಕು ಎನ್ನುವಾಗ, ನಮ್ಮ ಮನೆಯ ಅನತಿ ದೂರದಲ್ಲಿದ್ದ ಮಸೀದಿಯಿಂದ ಬಾಂಗ್ ಕೇಳುತ್ತಿತ್ತು. ಇದೊಂದು ರೀತಿಯಲ್ಲಿ ನನಗೆ ಇದಕ್ಕಿಂತ ಮೊದಲು ನನ್ನ ಸಂಧ್ಯಾವಂದನೆ ಪ್ರಾರ್ಥನೆ ಮುಗಿಸಿಬಿಡಬೇಕು ಎಂಬ ತುಡಿತ ನನ್ನಲ್ಲಿ ಬೆಳೆದು ಬಿಟ್ಟಿತು. ಅವರೆಲ್ಲಾ ಎದ್ದು ಪ್ರಾರ್ಥನೆ ಮಾಡುತ್ತಾರೆ ಅವರಿಗಿಂತ ಒಂದಿಷ್ಟು ಮೊದಲು ನಾನು ತೊಡಗಬೇಕು ಎಂದು ಸಾಕಷ್ಟು ಮೊದಲೇ ಏಳುವ ಪ್ರಚೋದನೆಯಾಯಿತು. ಹಾಗಾಗಿ ಐದು ಘಂಟೆಗೆ ಎದ್ದು ಬಿಡುವವನು ಒಂದು ತಾಸು ಮೊದಲೇ ಎದ್ದು ಸಂಧ್ಯಾವಂದನೆಗೆ ತೊಡಗುತ್ತಿದ್ದೆ. ಇದೊಂದು ರೀತಿಯ ಸತ್ ಪ್ರಚೋದನೆ. ಮತ ಧರ್ಮ ಯಾವುದಾದರೇನು? ಭಗವಂತನ ಪ್ರಾರ್ಥನೆ ಅದು ಸಮಾನ. ಹೀಗೆ ಒಂದು ಸಲ ಸ್ನಾನ ಆಯಿತು ಎಂದರೆ ಅದೊಂದು ಶಿಸ್ತಿನ ಜೀವನದ ಮೊದಲ ಹೆಜ್ಜೆಯಾಗಿಬಿಡುತ್ತದೆ. ಯೋಗಾಭ್ಯಾಸ ಆರಂಭವಾದ ನಂತರ ಇಂದಿನವರೆಗೂ ಒಂದೇ ಒಂದು ದಿನ ನಾನು ತಡವಾಗಿ ಏಳಲಿಲ್ಲ ಎಂಬುದು ನನ್ನ ಪಾಲಿಗೆ ಗಮನಾರ್ಹವೆನಿಸುತ್ತದೆ. ಶಿಸ್ತು ಬದ್ದ ಜೀವನಕ್ಕೆ ಇದೊಂದು ಮೊದಲ ಮೆಟ್ಟಿಲಾಗಿಬಿಟ್ಟಿತು. ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲೇ ಸೂರ್ಯಾರ್ಘ್ಯ ಜಪ ಪೂಜಾದಿಗಳ ನಿತ್ಯ ಕರ್ಮವನ್ನು ಪೂರೈಸುವ ಅದ್ಭುತ ಅನುಭವ ಮತ್ತು ಅವಕಾಶ ಇದರಿಂದ ಒದಗಿಬಂತು.
ನಮ್ಮಲ್ಲೂ ನಿಯಮ ನಿಬಂಧನೆಗಳು ಇವೆ. ಆದರೆ ನಾವೇಕೆ ಅದರ ಬಗ್ಗೆ ಅಸಡ್ಡೆಯನ್ನು ತೋರಿಸುತ್ತಿದ್ದೇವೆ ಎಂಬುದೇ ಪ್ರಶ್ನೆ. ಸಂಧ್ಯಾವಂದನೆ ಎಂದರೆ, ಭಗವಂತನನ್ನು ಅರಿಯುವ ಜ್ಞಾನವನ್ನು ಕೊಡು ಅಂತ ಭಗವಂತನಲ್ಲೇ ಪ್ರಾರ್ಥಿಸುವ ಒಂದು ಪವಿತ್ರ ಕಾರ್ಯ. ಬ್ರಾಹ್ಮಣ ಎಂದರೆ ಜ್ಞಾನಿ ಎಂದು ಅರ್ಥ. ಯಾರು ಮುಂಜಾನೆ ಎದ್ದು ಸಂಧ್ಯಾವಂದನೆ ಧ್ಯಾನದ ಮೂಲಕ ಬ್ರಹ್ಮ ಜ್ಞಾನವನ್ನು ಪಡೆಯುತ್ತಾನೋ ಆತ ನಿಜವಾದ ಬ್ರಾಹ್ಮಣ. ಇದಕ್ಕಾಗಿ ನಮಗೆ ಕಠಿಣವಾದ ನಿಯಮ ನಿಬಂಧನೆಯ ಅವಶ್ಯಕತೆ ಬೇಕಾಗಿಲ್ಲ. ಜ್ಞಾನದ ಶ್ರಧ್ದೆ ಇದ್ದರೆ ಸಾಕು. ಆದರೆ ನಮಗದು ಬೇಡ. ಸಂಧ್ಯಾವಂದನೆ ಆಚರಿಸುವುದರಲ್ಲೇ ಔದಾಸಿನ್ಯ. ಇನ್ನು ಆಚರಿಸಿದರೂ ಅದು ಕಾಟಾಚಾರ. ಸಂಧ್ಯಾವಂದನೆ ಮಾಡಿದರೂ ಅದರ ನಡುವೆ ಯಾರಲ್ಲೋ ಮೊಬೈಲ್ ನಲ್ಲಿ ಮಾತನಾಡುವುದು, ಮಂತ್ರ ಹೇಳುತ್ತಾ ಮಂತ್ರದಲ್ಲೇ ದೊಡ್ಡದಾಗಿ ಯಾರಿಗೋ ಗದರುವುದು ಛೇಡಿಸುವುದು, ನಡುವೆ ಎದ್ದು ಹೋಗುವುದು ಅವಸರವವಸರವಾಗಿ ಒಂದು ಮುಗಿಸಿ ಭಾರ ಇಳಿಸಿದರೆ ಸಾಕು ಎಂಬ ಪ್ರವೃತ್ತಿ. ದಿನದ ಸಾವಿರದ ನಾನ್ನೂರ ನಲ್ವತ್ತು ನಿಮಿಷದಲ್ಲಿ ಕೇವಲ ಹದಿನೈದು ನಿಮಿಷವನ್ನೂ ಮೀಸಲಿಡಲಾಗದ ನಾವು ಬ್ರಾಹ್ಮಣ ಎಂದನಿಸಿಕೊಳ್ಳಲು ಯೋಗ್ಯರೆ ಅಂತ ಯೋಚಿಸಬೇಕು. ಒಂದು ರೀತಿಯಲ್ಲಿ ಬ್ರಾಹ್ಮಣ ವೇಷಕ್ಕೂ ಅರ್ಹರಲ್ಲದವರು ಅಂತ ಅನ್ನಿಸಿಬಿಡುತ್ತದೆ. ಸಂಧ್ಯಾವಂದನಾದಿ ಕಾರ್ಯಗಳು, ನಮ್ಮ ಪಾಪ ಮೋಕ್ಷಕ್ಕಾಗಿ ಆಚರಿಸಲೇ ಬೇಕಾದ ಕರ್ಮಗಳು. ಮೊದಲು ನಮ್ಮಲ್ಲಿ ಪಾಪ ಪ್ರಜ್ಞೆ ಎಂಬುದು ಬೆಳೆಯಬೇಕು. ಹೀಗಿದ್ದಲ್ಲಿ ನಾವು ಮಾಡುವ ಕಾರ್ಯದಲ್ಲಿ ಶ್ರದ್ಧೆ ಭಕ್ತಿ ತಾನಾಗಿ ಪ್ರಚೋದನೆಯಾಗುತ್ತದೆ. ಸಂಧ್ಯಾವಂದನೆ ಎಂದರೆ ನಮ್ಮನ್ನು ನಾವು ಪರಿಶುದ್ದತೆಯತ್ತ ಕೊಂಡೊಯ್ಯುವುದು. ಆದರೆ ನಮ್ಮ ಮನಸ್ಸು ದೇಹ ನಮ್ಮ ಪರಿಸರ ಪರಿಶುದ್ದವಿಲ್ಲದೇ ಇದ್ದರೆ ಪರಿಶುದ್ದಿ ಎಂಬುದನ್ನು ಪಡೆಯುವುದಕ್ಕೆ ಸಾಧ್ಯವಿಲ್ಲ. ಕೆಸರಿನಲ್ಲಿ ಹುಟ್ಟಿದ ಕಮಲವಾದರೂ ಅರಳಿದನಂತರ ಸೂರ್ಯಾಭಿಮುಖವಾಗಿ ಪರಿಶುದ್ದಿಯಾಗುತ್ತದೆ. ಆದರೆ ನಾವು ಮಾತ್ರ ಕೆಸರಲ್ಲೇ ಇದ್ದು ಪರಮಾತ್ಮನಿಂದ ವಿಮುಖರಾಗಿಬಿಡುತ್ತೇವೆ.
ನಾವು ಶ್ರೀರಾಮನನ್ನು ನಂಬುತ್ತೇವೆ. ರಾಜ ಜಪವನ್ನು ಮಾಡುತ್ತೇವೆ. ಆದರೆ ಅದೇ ರಾಮನಲ್ಲಿ ಅನುಮಾನ ವ್ಯಕ್ತಪಡುತ್ತೇವೆ. ರಾಮ ಸೀತೆಯನ್ನು ಕಾಡಿಗೇಕೆ ಅಟ್ಟಿದ? ರಾಮ ಮರೆಯಲ್ಲಿದ್ದು ವಾಲಿಯನ್ನು ಏಕೆ ಸಂಹರಿಸಿದ? ರಾಮಾಯಣ ಅಧ್ಯಯನ ಮಾಡದೇ ಹೀಗೆಲ್ಲ ಆತನ ವ್ಯಕ್ತಿತ್ವದ ಮೇಲೆ ರೇಖೆಯನ್ನು ಎಳೆದುಬಿಡುತ್ತೇವೆ. ನಮಗೆ ಅದರಲ್ಲೂ ಹಿಂದುಗಳಿಗೆ ಈ ಅರೆನಾಸ್ತಿಕತೆಯೇ ಬಾಧಿಸುವುದು. ದೇವರನ್ನು ತಿಳಿಯುವುದಕ್ಕೆ ಪ್ರಯತ್ನಿಸುವುದಿಲ್ಲ. ಯಾವುದೋ ಒಂದನ್ನು ದೇವರು ಅಂತ ನಂಬಿಬಿಡುತ್ತೇವೆ. ಅಲ್ಲಿ ಸಾವಿರಾರು ಸಂಶಯಗಳು ಹುಟ್ಟಿಬಿಡುತ್ತವೆ. ಶ್ರೀಕೃಷ್ಣನೇ ಪಾಂಡವರಿಗೆ ಯುದ್ದ ಮಾಡುವಂತೆ ಹೇಳಿದ. ಇದು ಹಿಂಸೆಗೆ ಪ್ರಚೋದಿಸದಂತೆ ಭಾಸವಾಗುತ್ತದೆ. ಆದರೆ ಶ್ರೀಕೃಷ್ಣ ಜ್ಞಾನ ಧ್ವಂಸಿಗಳನ್ನು ಸಂಹರಿಸಿದ. ಯಾರು ಆತನನ್ನು ನಂಬುವವರನ್ನು ಆತ ಸಂಹರಿಸಿಲ್ಲ. ಯಾರು ಜ್ಞಾನವನ್ನು ದೂರ ಮಾಡಿದರೋ ಅವರ ಎದುರು ಯುದ್ದ ಸಾರಿದ. ಮತ್ತೂ ಮುಂದೆ ಯೋಚಿಸಿದರೆ ಆತ ಹಲವರನ್ನು ಸಂಹರಿಸಲಿಲ್ಲ. ಅವರಿಗೆ ಮೋಕ್ಷವನ್ನು ಬಿಡುಗಡೆಯನ್ನು ಕಲ್ಪಿಸಿದ. ಆದರೆ ದೇವರನ್ನು ಅರಿಯದವರು ಅರೆ ನಾಸ್ತಿಕರಾಗಿಬಿಡುತ್ತಾರೆ. ಬದುಕಿಗೆ ಇದು ಅಪಾಯ.




