ಬ್ಯಾಂಕ್ ಲೆಕ್ಕ ಪರಿಶೋಧನೆಗೆ ಹೋಗಿರುವಾಗ ಅಲ್ಲಿ ಚಹ ಕಾಫಿ ತರಿಸಿದ್ದರು. ನನಗೆ ಬಹಳ ಒತ್ತಾಯ ಮಾಡಿ ಕೊಟ್ಟರು. ನಾನು ಈ ರೀತಿಯ ಪಾನೀಯ ಸೇವನೆಯ ಅಭ್ಯಾಸವನ್ನು ಬಿಟ್ಟು ದಶಕಗಳೇ ಕಳೆದಿದೆ. ನಾನು ಬೇಡ ಎಂದು ನಿರಾಕರಿಸಿದೆ. ಕೆಲವರಿಗೆ ಅದೊಂದು ರೀತಿಯ ಮನೋಭಾವ. ನನಗೆ ಅಭ್ಯಾಸ ಇಲ್ಲ ಎಂದರೂ ಬಿಡದೆ ಮತ್ತೂ ಒತ್ತಾಯ ಮಾಡಿದರು. ಅವಶ್ಯಕ ಇಲ್ಲದೇ ಇರುವುದನ್ನು ಸೇವಿಸುವುದಕ್ಕೆ ಒಂದೋ ಅದರ ಬಗ್ಗೆ ತೀವ್ರವಾದ ಆಶೆ ಹುಟ್ಟಬೇಕು. ಇಲ್ಲ ಅದು ತೀರ ಅನಿವಾರ್ಯ ಎನಿಸಬೇಕು. ಇದೆರಡೂ ಇಲ್ಲದಿದ್ದರೆ ಯಾರದೋ ಒತ್ತಾಯಕ್ಕೆ ಅದನ್ನು ಒಪ್ಪಿಕೊಳ್ಳುವುದು ನನಗೆ ಸರಿ ಎನಿಸುವುದಿಲ್ಲ. ನಾನು ಮತ್ತೂ ನಿರಾಕರಿಸಿದೆ. ಅದರಲ್ಲೂ ಕಾಫಿ ಚಹ ಸೇವನೆ ಬಿಟ್ಟನಂತರ ನಾನು ಅನುಭವಿಸಿದ ನಿರಾಳತೆ ಅದು ನನಗೆ ಮಾತ್ರ ಅರಿವಿದೆ. ಅದನ್ನು ಹೇಳಿದೆ . ಆದರೆ ಅವರು ಮತ್ತೂ ಉಡಾಫೆಯಿಂದ ಒಂದು ಸಲ ತೆಗೆದುಕೊಂಡರೆ ಏನಾಗುತ್ತೇ ಅಂತ ಹೇಳಿದರು. ಒಂದು ಸಲ ಆದರೇನು? ಆಸಕ್ತಿ ಇಲ್ಲದೇ ಇದ್ದರೆ ಅದನ್ನು ಕುಡಿಯುವುದರಲ್ಲಿ ಅರ್ಥವಿಲ್ಲ. ನಾನು ಮತ್ತೂ ನಿರಾಕರಿಸಿದಾಗ ಅವರು ಮತ್ತೂ ಹೇಳಿದರು ಎಲ್ಲರೂ ಕುಡಿಯುತ್ತಾರೆ . ಇದು ಕುಡಿದದ್ದರಲ್ಲಿ ಏನು ? ನಾನು ಕಾಫಿ ಚಹ ಸೇವನೆಯ ದುಷ್ಪರಿಣಾಮವನ್ನು ಹೇಳುವುದಕ್ಕೆ ಅನಿವಾರ್ಯನಾದೆ. ಹಾಗೆ ಚರ್ಚೆ ನಡೆದು ಕೊನೆಯಲ್ಲಿ ಒಂದು ಸಲ ಅವರೆಂದರು...ಏನು ಸಾರ್, ಈಗ ಇದೆಲ್ಲ ಸಾಮಾನ್ಯ. ಬ್ರಾಹ್ಮಣರು ಮಾಂಸ ತಿನ್ನುವುದಿಲ್ಲ ಅಂತ ಇದ್ದರೂ ಹಲವರು ತಿನ್ನುವರಲ್ಲ ಎನಾಯಿತು? ಕೆಲವರಿಗೆ ತಿನ್ನುವುದಿಲ್ಲ, ಅಭ್ಯಾಸವಿಲ್ಲ ಎಂದು ಇದ್ದರೆ ಅದನ್ನು ಕೆಲವರಿಗೆ ತಿನ್ನಿಸುವ ಹಟ. ತಿಳಿಸದೇ ಅದನ್ನು ಹೇಗಾದರೂ ಮಾಡಿ ತಿಳಿಯದಂತೆ ತಿನ್ನಿಸುವ ಚಪಲ.
ಹಲವು ಸಲ ಮೂಗು ಕತ್ತರಿಸಿಕೊಂಡವನ ಕಥೆಯೊಂದು ನೆನಪಾಗುತ್ತದೆ. ಮೂಗು ಕತ್ತರಿಸಿಕೊಂಡವನು ತನಗೆ ಸ್ವರ್ಗ ಕಾಣಿಸುತ್ತದೆ ಎಂದು ಹೇಳಿ ಸಿಕ್ಕ ಸಿಕ್ಕವರಲ್ಲಿ ಮೂಗು ಕತ್ತರಿಸಿಕೊಳ್ಳುವುದಕ್ಕೆ ಹೇಳಿದ. ನಂತರ ತನ್ನಂತೆ ಸ್ವರ್ಗ ಕಾಣಿಸುತ್ತದೆ ಎಂದು ಹೇಳುವುದಕ್ಕೆ ಹೇಳುತ್ತಿದ್ದನಂತೆ. ಅದೇ ರೀತಿ ಪ್ರತಿಯೊಬ್ಬರೂ ಮೂಗು ಕತ್ತರಿಸಿಕೊಂಡು ತನ್ನಂತೆ ಆಗಲಿ ಎಂದು ಅವನ ಉದ್ದೇಶ. ನಶೆಯಲ್ಲಿದ್ದವರಿಗೆ ಉಳಿದವರೂ ನಶೆಗೆ ಒಳಗಾಗಲಿ ಎಂಬ ಹಂಬಲವಿರುತ್ತದೆ.
ಅದೇನು ಮನೋಭಾವ ಅಂತ ತಿಳಿಯದು. ಬ್ರಾಹ್ಮಣರು ನಿಷಿದ್ಧ ಎನ್ನುವುದನ್ನು ಮಾಡುತ್ತಾರೆ ಎನ್ನುವಾಗ ಅದು ಗಂಭೀರ ಸುದ್ದಿ ಎನ್ನಿಸುವುದು ಮತ್ತದು ಕುಹಕಕ್ಕೆ ಎರೆಯಾಗುವುದು ದೌರ್ಭಾಗ್ಯ. ಗಾಂಧಿವಾದಿಗಳು ಮದ್ಯ ಮಾಂಸ ಸೇವಿಸಿದರೆ ಅದು ಕುಹಕವಾಗುವುದಿಲ್ಲ, ಆದರೆ ಬ್ರಾಹ್ಮಣರಿಗೆ ಮಾತ್ರ ಯಾರೋ ಮಾಡಿದಾಕ್ಷಣ ಅದು ಸಂಪೂರ್ಣ ವರ್ಗವನ್ನೇ ಆಕ್ಷೇಪಿಸುವುದು ತಾತ್ಸಾರವಾಗುತ್ತದೆ. ಎಲ್ಲೊ ಕೇಳಿದ ನೆನಪು ಮಹಾತ್ಮಾ ಗಾಂಧೀಜಿ ಮದ್ಯ ಮಾಂಸ ಈ ಎರಡರ ಕಡು ವಿರೋಧಿಯಾಗಿದ್ದರು. ಅವರ ಹೆಸರನ್ನು ನಿತ್ಯ ಪಠಿಸುವವರು, ತಾವು ಗಾಂಧೀವಾದಿಗಳು ಎಂದು ತಮ್ಮನ್ನು ಗುರುತಿಸುವವರಿಗೆ ಮದ್ಯ ಮಾಂಸ ಸೇವನೆ ಗಾಂಧೀಜಿ ವಿರೋಧಿಸುತ್ತಿದ್ದರು ಎನ್ನುವುದು ಗಂಭೀರವಾಗುವುದಿಲ್ಲ. ಜಾತ್ಯಾತೀತ ರಾಜಕಾರಣದಲ್ಲಿ, ಮತದಾನಗಳಲ್ಲಿ ಜಾತಿಯೇ ಮುಖ್ಯವಾಗುವಾಗ ಅದು ಜಾತಿಭೇದ ಎಂದೆನಿಸುವುದಿಲ್ಲ. ಜಾತಿಯವನು ಹೇಗೂ ಇರಲಿ, ಅಪರಿಚಿತನಾದರೂ ಆತ ತಮ್ಮವ ಎಂದೆನಿಸುತ್ತಾನೆ. ಇಲ್ಲೆಲ್ಲ ಜಾತಿ ಎಂಬುದು ಅರ್ಹತೆಯಾದರೆ ಬ್ರಾಹ್ಮಣ ಎನ್ನುವಾಗ ಮಾತ್ರ ಜಾತಿಯ ಭೂತ ಎದುರು ಬರುತ್ತದೆ. ಅಷ್ಟಕ್ಕೂ ಬ್ರಾಹ್ಮಣ ಎಂಬುದು ಕೇವಲ ಶಬ್ದಾರ್ಥದ ಒಂದು ಪದವಿ. ಬ್ರಹ್ಮನನ್ನು ಅರಿತವನು ಬ್ರಾಹ್ಮಣನಾಗುತ್ತಾನೆ. ಹಾಗಂಟ ಬ್ರಾಹ್ಮಣ ಎಂದು ಕರೆಯುವಾಗಲೂ ಇದು ಗೌಣವಾಗಿಬಿಡುವುದು ವಿಪರ್ಯಾಸ.
ಗಾಂಧೀಜಿ ಅಜೀವನಾದ್ಯಂತ ರಾಮ ಭಕ್ತರಾಗಿದ್ದರು. ರಾಮಾಯಣದಿಂದ ಪ್ರೇರಿತರಾಗಿ ಆ ತತ್ವಗಳನ್ನು ಸಾಕಷ್ಟು ಅಳವಡಿಸಿಕೊಂಡಿದ್ದರು. ಅದರೆ ಆಕ್ಷೇಪಿಸುವವರಿಗೆ ರಾಮಾಯಣ ಅಥವಾ ಶ್ರೀರಾಮ ಮಾತ್ರ ಆಕ್ಷೇಪಕ್ಕೆ ಕಾರಣನಾಗುತ್ತಾನೆ ಹೊರತು ಗಾಂಧೀಜಿ ಅಲ್ಲ. ವ್ಯಾಧ ಅನಾಗರಿಕನೊಬ್ಬ ವಾಲ್ಮೀಕಿಯಾಗಿ ಮಹಾ ಋಷಿಯಾಗಿ ಬದಲಾದ. ಕ್ಷತ್ರಿಯನಾದ ಕೌಶಿಕ ಸಾಧನೆಯಿಂದ ಬ್ರಾಹ್ಮಣನಾಗಿ ಬ್ರಹ್ಮಋಷಿಯಾದ. ಯಾರೂ ಹುಟ್ಟಿನಿಂದ ಶ್ರೇಷ್ಠರಾಗಿಲ್ಲ. ಆನಂತರ ಕರ್ಮದಿಂದ ಶ್ರೇಷ್ಠರಾಗಿ ಬದಲಾಗಿ ಹೋದರು. ಹುಟ್ಟಿನಿಂದ ಒದಗಿಬರುವುದು ಜಾತಿ. ಆನಂತರ ಬರಿಸುವುದು ವರ್ಣ. ವರ್ಣ ಎಂದರೆ ಬರಿಸುವುದು ಎಂದರ್ಥ. ಮಲಯಾಳಂ ಭಾಷೆಯಲ್ಲೂ ವರಣಂ ಎಂದರೆ ಬಾ. ಕರೆಸಿಕೊಳ್ಳುವುದು. ಹುಟ್ಟಿನಿಂದ ಇದ್ದ ಜಾತಿ ನಂತರ ವರ್ಣದಿಂದ ಬದಲಾದರೂ ವರ್ಣದ ನಿಜವಾದ ಬಣ್ಣ ತಿಳಿಯದೇ ಪೂರ್ವಜರನ್ನು ಶಪಿಸಿ ಬಿಡುವುದು ಮನುಷ್ಯ ಹುಟ್ಟುವ ಮೊದಲು ಗರ್ಭದ ಕತ್ತಲೆಯಲ್ಲಿದ್ದರೆ ಆನಂತರವೂ ಆ ಅಂಧಕಾರದಿಂದ ಹೊರಗೆ ಬಂದಿರುವುದಿಲ್ಲ. ವ್ಯಾಧ್ಯ ವಾಲ್ಮೀಕಿ ಮಹರ್ಷಿಯಾದ, ಆತ ಮತ್ತೆ ಹತಾಶೆಯಿಂದ ಜಿಗುಪ್ಸೆಯಿಂದ ಪುನಃ ವ್ಯಾಧನಾಗಿ ಬದಲಾದನೇ ? ಇಲ್ಲ. ಅದೇ ರೀತಿ ಕೌಶಿಕ..ವಿಶ್ವಾಮಿತ್ರ ಮಹಾ ಬ್ರಾಹ್ಮಣನಾಗಿ ಬದಲಾದ, ಬ್ರಹ್ಮ ತೇಜೋ ಬಲಂ ಎಂದು ಬದಲಾದವನು ಅದೂ ಏನೂ ಅಲ್ಲ...ವರ್ಣ ಭೇದ ಅಂತ ಜಿಗುಪ್ಸೆಯಿಂದ ಪುನಃ ಕೌಶಿಕನಾಗಿ ರಾಜನಾಗಿ ಬದಲಾಗಿಲ್ಲ. ಅಂದರೆ ಬದಲಾಗಿ ಸಿದ್ಧಿಸಿದ ಪದವಿ ಅತ್ಯಂತ ಶ್ರೇಷ್ಠ. ವಿಪರ್ಯಾಸವೆಂದರೆ ಈಗ ಈ ಪದವಿಯೇ ಅವಹೇಳನಕ್ಕೆ ಒಳಗಾಗುತ್ತದೆ. ಬ್ರಾಹ್ಮಣನಾಗಿರುವುದೇ ಅನಿಷ್ಟ ದುರ್ದೈವ.
ತಮಗೆ ಸಿದ್ದಿಸಲಾಗದೇ ಇರುವುದರಲ್ಲಿ ಏನೋ ಒಂದು ಕೊರತೆಯನ್ನು ಕಾಣುವ ಒಂದು ಮಾತ್ಸರ್ಯವಿದೆ. ತಮ್ಮ ಅಸಮರ್ಥತೆಯನ್ನು ಅಸಾಧ್ಯ ವೃತ್ತಿಯ ಮೇಲೆ ಆರೋಪಿಸುವುದು. ಇದೊಂದು ಅಸಹಾಯಕತೆ. ಬ್ರಾಹ್ಮಣನಾಗಿ ಇರುವುದು ಕಷ್ಟ. ಬದುಕುವುದು ಕಷ್ಟ. ಅದಕ್ಕೆ ಅದನ್ನೇ ತಿರಸ್ಕರಿಸಿ ಅದರ ಘನತೆಯನ್ನೇ ಕಳೆದರೆ ತಾವು ಶ್ರೇಷ್ಠರಾಗುವ ಮನೋಭಾವ. ಎಂದೋ ಯಾರೋ ಅಜ್ಞಾನಿಗಳು ತಮ್ಮ ಸ್ವಾರ್ಥಕ್ಕೆ ಈ ಪದವಿಯನ್ನು ದುರ್ವಿನಿಯೋಗ ಮಾಡಿದ್ದರೆ ಇಂದು ಸಮೂಹವೇ ಅದನ್ನು ಮಾಡುತ್ತಿದೆ ಎಂದು ಕಾಣುವುದು ಒಂದು ರೀತಿಯ ಅಸಹಾಯಕತೆ. ಯಾರೋ ಕೆಲವರು ಭಯೋದ್ಪಾದಕರಾದರೆ ಇಡೀ ಸಮೂಹವನ್ನು ದೂಷಿಸುವುದು ತಪ್ಪು. ಅದೇ ರೀತಿ ಯಾರೋ ಎಸಗಿದ ಕೆಲಸಕ್ಕೆ ಎಲ್ಲಾ ಬ್ರಾಹ್ಮಣನನ್ನು ಹಳಿಯುವುದು ತಪ್ಪು ಎಂದು ಅನಿಸಬೇಕು. ಗಾಂಧೀಜಿಯ ಒಂದೆರಡು ಚಿಂತನೆಗಳು ನಮಗೆ ಸ್ವೀಕೃತ ಅಲ್ಲದೇ ಇರಬಹುದು. ಹಾಗೆಂದು ಗಾಂಧೀಜಿಯ ಹೋರಾಟ ತತ್ವಗಳು ಎಲ್ಲವನ್ನು ದೂಷಿಸುವುದು ಸರಿಯಲ್ಲ. ಬ್ರಾಹ್ಮಣ ತತ್ವ ಅರಿವಾದರೆ ಬ್ರಹ್ಮ ಪದವಿಯ ಆ ತೇಜೋ ಬಲದ ಅರಿವಾಗಬಹುದು. ಜ್ಞಾನವನ್ನು ಅರಿಯುವ ಸಾಮಾರ್ಥ್ಯ ಇಲ್ಲದೇ ಇರಬಹುದು. ಆದರೆ ಅಜ್ಞಾನವನ್ನು ದೂರಮಾಡುವ ಅರಿವಾದರೂ ಇರಬೇಕು.






