Tuesday, August 11, 2026

ಗುರುದರ್ಶನ





 ಗುರುದರ್ಶನ


ಶ್ರೀ ಗುರುಭ್ಯೋನಮಃ

 ಶೃತಿ ಸ್ಮೃತಿ ಪುರಾಣಾನಾಂ ಆಲಯಂ ಕರುಣಾಲಯಂ  ನಮಾಮಿ ಭಗವತ್ಪಾದ ಶಂಕರಂ ಲೋಕ ಶಂಕರಂ 

ಗುರು ಎಂದರೆ ಸಕಲ ಪ್ರಚೋದನೆಗೂ ಪ್ರೇರಕ ಶಕ್ತಿ. ಸದ್ಬುದ್ದಿ ಸನ್ಮನಸ್ಸು ಸಚ್ಚಿಂತನೆ ಇರುವ ಜ್ಞಾನ ಜಾಗೃತವಾಗುವುದೇ,  ಮನುಷ್ಯನಲ್ಲಿ ಜಾಗೃತವಾಗಬೇಕಾದರೆ ಗುರುವಿನ ಅನುಗ್ರಹ ಅತ್ಯಂತ ಅವಶ್ಯ. ಗುರುವಿನ ಸಾನ್ನಿಧ್ಯ ಬದುಕಿನಲ್ಲಿ ನಿಯಮಿತವಾಗಿ ಒದಗಿದರೆ ಎಲ್ಲಾ ಸದ್ಗುಣಗಳು ಸುಪ್ತವಾಗಿ ಬಹಿರಂಗವಾಗಿಯೂ ಪ್ರಚೋದಕವಾಗಿರುತ್ತದೆ. ಈ ಬಾರಿಯ ಗುರುದರ್ಶನಕ್ಕೆ ನಮ್ಮ ಕರಾಡ ಸಮಾಜ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪ್ರಥಮ ಬಾರಿಗೆ ಭಾಗಿಯಾಗುವ ಪ್ರಚೋದನೆಯೂ ಅವಕಾಶವೂ ನನಗೆ ಒದಗಿ ಬಂದಿರುವುದಕ್ಕೆ ಭಗವಂತನಿಗೆ ಧನ್ಯವಾದ ಮೊದಲಿಗೆ ಅರ್ಪಿಸಬೇಕು. 


ಈ ವರ್ಷದ ಗುರುಗಳ ಚಾತುರ್ಮಾಸ್ಯದ ಸಂದರ್ಭದಲ್ಲಿ   ಗುರು ದರ್ಶನದ ಅಂಗವಾಗಿ ದಿನಾಂಕ ಮೊನ್ನೆ  ಆಗಸ್ಟ್ ಒಂಭತ್ತರಂದು ಸುಮಾರು ನಲ್ವತ್ತು ಮಂದಿ ಮುಂಜಾನೆ ಬೆಂಗಳೂರಿನಿಂದ ಪ್ರಯಾಣ ಆರಂಭಿಸಿದೆವು. ಮೊದಲೇ ನಿಗದಿಯಾದಂತೆ ಸುಖಾಸೀನ ಬಸ್ಸಿನಲ್ಲಿ ಹೊರಟೆವು. ಹಲವರು ತಿಂಡಿ ತಿನಿಸುಗಳನ್ನು ತೆಗೆದುಕೊಂಡು ಬಂದದ್ದ ವಿಶಿಷ್ಟವಾಗಿತ್ತು. ಅದಕ್ಕಾಗಿ ನಮ್ಮ ಮನೆಯಿಂದ ಕಡಲೇ ಬೇಳೆ ವಡೆ (ಚಟ್ಟಂಬಡೆ) ನಾವೂ ತಯಾರಿಸಿಕೊಂಡು ಹೋಗಿದ್ದೆವು.  ಮಧ್ಯಾಹ್ನದ ಊಟಕ್ಕಾಗಿ  ಶ್ರೀ ಶಂಕರ ಲಿಂಗ ಆಶ್ರಮ ಅರಸೀಕೆರೆಯಲ್ಲಿ ವ್ಯವಸ್ಥೆಗೊಳಿಸಲಾಗಿತ್ತು. ಉತ್ತಮವಾದ ಸ್ವಾದಿಷ್ಟವಾದ ಮಧ್ಯಾಹ್ನದ ಭೋಜನ ಉಂಡು ಸಾಯಂಕಾಲದ ಹೊತ್ತಿಗೆ ಶ್ರೀಂಗೇರಿ ಸನ್ನಿಧಾನವನ್ನು ತಲುಪಿದೆವು. ಬಯಲು ಸೀಮೆ ಕಳೆದು ಮಲೆನಾಡಿನ ಪ್ರವೇಶವಾದಂತೆ ಹನಿ ಹನಿ ಮಳೆ ಸ್ವಾಗತಮಾಡಿ ನಮ್ಮ ಹಾದಿಯನ್ನೂ ಮೈಮನವನ್ನು ಪರಿಶುದ್ದಗೊಳಿಸಿತು. ಇದೊಂದು ಶುಭಸಂಕೇತವಾಗಿ ಭಾಸವಾಯಿತು.  ನಮಗೆ ವಿಶ್ರಾಂತಿಗಾಗಿ ಶ್ರೀ ಭಾರತೀ ವಿಹಾರದಲ್ಲಿ ಉತ್ತಮವಾದ ಕೊಠಡಿಗಳನ್ನು ಕಾದಿರಿಸಲಾಗಿತ್ತು. ತುಂಬ ಅತ್ಯುತ್ತಮವಾದ ಗಾಳಿ ಬೆಳಕು ತುಂಬಿದ ಶುಭ್ರವಾದ ಕೊಠಡಿಗಳು ಸ್ನಾನಾದಿ ಕರ್ಮಗಳಿಗೆ ಅತ್ಯಂತ ಅನುಕೂಲಕರವಾಗಿತ್ತು. ಎಲ್ಲಿಯೂ ಅನನುಕೂಲದ ಸ್ಪರ್ಶವೂ ಒದಗದಂತೆ ಸುವ್ಯವಸ್ಥೆಗೊಳಿಸಲಾಗಿತ್ತು. ನಾನು ಸಾಯಂಕಾಲ ಸ್ನಾನ ಪೂರೈಸಿ ಸಂಧ್ಯಾವಂದನೆ ಮಾಡಿದೆ.  ರಾತ್ರಿ ಹನಿ ಹನಿ ಮಳೆಯಲ್ಲಿ ನೆನೆದು ಪಾವನರಾಗಿ ಶಾರದಾಂಬೆಯ ಕಣ್ತುಂಬ ದರ್ಶನ ಮಾಡಿದೆ. ದೇವಾಲಯದ ಪೌಳಿಯಲ್ಲಿ ಕುಳಿತು ಗಾಯತ್ರಿ ಜಪ ರುದ್ರಪಾರಾಯಣ ಮಾಡಿದೆ. ಮನಸ್ಸಿಗೆ ಮುದ ನೀಡುವ ಘಳಿಗೆಗಳು. 


ಅಂದು ಬೆಳಗ್ಗೆ ಮೂರುಘಂಟೆಗೆ ಎದ್ದಿದ್ದೆ. ಸ್ನಾನ ಸಂಧ್ಯಾ ಧ್ಯಾನ ಯೋಗಭ್ಯಾಸವನ್ನು ಪೂರೈಸಿ ಪ್ರಯಾಣಕ್ಕೆ ಸಜ್ಜಾಗಬೇಕಿತ್ತು. ಹಾಗಾಗಿ ರಾತ್ರಿ ಒಂಭತ್ತು ದಾಟುತ್ತಿದ್ದಂತೆ ಬಹಳ ಆಯಾಸವಾದಂತೆ, ಎಂದಿನಂತೆ ರಾತ್ರಿ ಬೇಗನೇ ನಿದ್ದೆಗೆ ಹೋಗುವ ನನಗೆ ಇರಲಾಗದೇ ಒಂಭತ್ತು ಘಂಟೆಗೆ ಮಲಗಿದೆ. ಹಲವರು ಶ್ರೀ  ಜಗದ್ಗುರುಗಳ ಚಂದ್ರಮೌಳೇಶ್ವರ ಪೂಚಾ ಕಾರ್ಯಕ್ರಮ ವೀಕ್ಷಿಸುವುದಕ್ಕೆ ತೆರಳಿದ್ದರು. ಮುಂಜಾನೆ ಮೂರುವರೆಗೆ ಎಚ್ಚರವಾಗಿತ್ತು. ಸಾಮಾನ್ಯವಾಗಿ ನಾನು ಎಲ್ಲಿ ಹೋಗಿ  ತಂಗುವುದಿದ್ದರೂ ನನ್ನ ನಿತ್ಯ ಕರ್ಮಗಳಾದ ಸಂಧ್ಯಾವಂದನೆ ಧ್ಯಾನ ಯೋಗಾಭ್ಯಾಸಗಳಿಗೆ ಅನುಕೂಲವಿದೆಯೋ ಎಂದು ನೋಡುತ್ತೇನೆ. ಅದರೆಂತೆ ಇಲ್ಲಿ ಒಂದು ಕಡೆ ಸೂಕ್ತವಾದ ಯಾರೂ ಓಡಾಡದ ಹಜಾರದ ಒಂದು ಮೂಲೆ ಸಿಕ್ಕಿತ್ತು.  ಅದು ಅತ್ಯಂತ ಸಂತೋಷವನ್ನು ನೀಡಿತ್ತು. ನಾಲ್ಕು ಘಂಟೆಗೆ ಇಡೀ ಭಾರತೀ ವಿಹಾರ ಸೌಧ ಮಾತ್ರವಲ್ಲ ಶೃಂಗೇರಿ ಪಟ್ಟಣವೇ ಸದ್ದಿಲ್ಲದೇ ಮೌನವನ್ನು ಆವರಿಸಿತ್ತು. ನನ್ನ ಏಕಾಂತ ಧ್ಯಾನಕ್ಕೆ ಇದು ಬಹಳ ಸಹಕಾರಿಯಾಗಿ ತನು ಮನ ಮರೆಯುವಂತೆ ಧ್ಯಾನದಲ್ಲಿ ತಲ್ಲೀನನಾದೆ. ನನ್ನ ಹಲವು ದಿನದ ಕನಸಾಗಿತ್ತು. ಶೃಂಗೇರಿಯ ಪ್ರಕೃತಿಯ ಮಡಿಲಲ್ಲಿ ಧ್ಯಾನ ಯೋಗ ಅಭ್ಯಾಸಗಳನ್ನು ಮಾಡಬೇಂದು ಬಯಸಿದ್ದೆ. ಆದರೆ ಹೋರಗೆ ಮಳೆ ಬರುತ್ತಿರುವುದರಿಂದ  ಒಳಗೆ ಅದನ್ನು ಮಾಡಬೇಕಾಯಿತು. ಆದರೂ ಮನಸ್ಸಿಗೆ ಒಂದು ತೃಪ್ತಿ. 


ಬೆಳಗ್ಗಿನ ತಂಪಾದ ವಾತಾವರಣದಲ್ಲಿ ಅನತಿ ದೂರದಲ್ಲಿದ್ದ ಶಂಕರ ಗಿರಿಗೆ ಭೇಟಿ ಕೊಡುವ ವ್ಯವಸ್ಥೆ ಮಾಡಲಾಗಿತ್ತು. ಎತ್ತರ ಶಂಕರ ಗಿರಿ ಇತ್ತೀಚೆಗಷ್ಟೇ ನಿರ್ಮಾಣವಾಗಿತ್ತು. ಸುಂದರವಾದ ಪರಿಸರ. ಎಲ್ಲಕ್ಕಿಂತಲೂ ಅದನ್ನು ನಿರ್ವಹಿಸಿದ ರೀತಿ ಅತ್ಯದ್ಭುತವಾಗಿತ್ತು. ಎಲ್ಲಿ ನೋಡಿದರೂ ಸ್ವಚ್ಛತೆ. ಎಲ್ಲಿ ಹೆಜ್ಜೆ ಊರಬೇಕಿದ್ದರೂ ಯೋಚಿಸುವಂತೆ ಮಾಡುತ್ತಿತ್ತು. ಮೂಲೆ ಮೂಲೆಯೂ ಕಸಕಡ್ಡಿಗಳು ಇರದಂತೆ ಸುರಿಯುವ ಆ ಮಳೆಗೂ ಎಲ್ಲ ಕಡೆ ಸ್ವಚ್ಛತೆಯನ್ನು ಕಾಪಾಡಿಕೊಂಡು ಬಂದದ್ದು ನಿಜಕ್ಕು ವಿಶಿಷ್ಟವಾಗಿತ್ತು.  

ಶ್ರೀ ಮಠದಲ್ಲೇ  ನಮಗೆಲ್ಲರಿಗೂ ಬೆಳಗಿನ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಉಪಹಾರ ಪೂರೈಸಿ ನಾನು ಮತ್ತು ಪತ್ನಿ ಹತ್ತಿರದಲ್ಲೇ ಇದ್ದ ಮಲ್ಲಿಕಾರ್ಜುನ ದೇವಾಲಯಕ್ಕೆ ಭೇಟಿಕೊಟ್ಟೆವು. ಮಳೆಯಲ್ಲೇ ನೆನೆದು ಬೆಟ್ಟದ ಮೆಟ್ಟಲುಗಳನ್ನು ಹತ್ತಿ ಪರಮೇಶ್ವರನ ಧರ್ಶನ ಮಾಡಿದೆವು. ನಾವು ಹೋದಾಗ ಸುಪ್ರಭಾತದ ಪೂಜೆ ಆಗುತ್ತಿತ್ತು. 

ಮಧ್ಯಾಹ್ನದ ಸಮಯಕ್ಕೆ . ಅದಾಗಲೇ ವಿವಿಧ ಊರುಗಳಿಂದ, ಬಾಯಾರು ಅಗಲ್ಪಾಡಿ ಪಡ್ರೆ ಉಡುಪಿ  ಶಿರಸಿ ಮುಂತಾದ ಭಾಗದಲ್ಲಿದ್ದ  ನಮ್ಮ ಸಮಾಜದ  ಬಾಂಧವರು ಬಂದಿದ್ದರು ಗುರುಗಳ ದರ್ಶನಕ್ಕೆ ನದಿಯ ಮತ್ತೊಂದು ದಡದಲ್ಲಿದ್ದ ಗುರುವಿನ ಆಶ್ರಮದ ಸಭಾಂಗಣದಲ್ಲಿ ಎಲ್ಲರೂ ಸೇರಿದೆವು. ಘನ ಗಂಭೀರವಾಗಿ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ವಿಧುಶೇಖರ ಭಾರತಿಯವರ ಘನ ಗಂಭೀರ ಆಗಮನವಾಯಿತು. ಈ ದರ್ಶನದ  ಸುಮೂಹೂರ್ತದಲ್ಲಿ ನಮ್ಮ ಕರಾಡ ಅಭ್ಯದಯ ಸಂಘ (ರಿ) ಅಗಲ್ಪಾಡಿ ಇದರ ಸುವರ್ಣ ಸಂಭ್ರಮದ ಆಮಂತ್ರಣ ಪತ್ರಿಕ ಬಿಡುಗಡೆಯನ್ನು  ಶ್ರೀಗುರುಗಳು ನೆರವೇರಿಸಿದರು.   ನಂತರ ಗುರುಗಳ ಆಶೀರ್ವಚನ ನುಡಿಗಳು.  " ಯಾವುದೇ ಮೂಲವಸ್ತುವಿಗೆ ಸಂಸ್ಕಾರ ಒದಗಿದಾಗ ಅದು ಪ್ರಜ್ವಲಿಸುತ್ತದೆ. ಒಂದು ಶಿಲೆಯಾದರೂ ಅದು ಮೂರ್ತಿಯಾಗಬಹುದು. ಭೂಮಿಯಲ್ಲಿದ್ದ ಮೂಲಭೂತವಾದ ವಸ್ತು ಸಂಸ್ಕಾರ ಒದಗಿದಾಗ ನಮಗೆ ಉಪಯೋಗವಾದ ವಸ್ತುವಾಗಿ ಬದಲಾಗುತ್ತದೆ. ಯಾವುದೇ ಒಂದು ಲೋಹ ಸಿಕ್ಕಿದಾಗ ಅದನ್ನು ಉಪಯೋಗ ಯುಕ್ತವಾಗುವಂತೆ ಮಾಡುವುದಕ್ಕೆ ಅದಕ್ಕೆ ಒಂದು ಪ್ರಕ್ರಿಯೆ ಕಾಲಗಳು ಇರುತ್ತವೆ. ನಮ್ಮ ಶಾಸ್ತ್ರಗಳು ಅದನ್ನು ತೋರಿಸುತ್ತವೆ. .  ಮನುಷ್ಯ ಹುಟ್ಟಿದಾಗ ಸಂಸ್ಕಾರ ಒದಗಿಬಂದರೆ ಆತ ಉತ್ತಮ ಮನುಷ್ಯನಾಗಿ ಸಮಾಜಕ್ಕೆ ಉತ್ತಮ ಕೊಡುಗೆಯಾಗುತ್ತಾನೆ. ಕಣ್ಣು ಕಾಣಬಹುದು ಆದರೆ ಎಲ್ಲವನ್ನು ಕಾಣುವುದಕ್ಕೆ ಸಾಧ್ಯವಿಲ್ಲ. ಅದರಂತೆ ಪಂಚೇಂದ್ರಿಯಗಳಿಂದ ಗ್ರಹಿಸಲಾಗದೇ ಇರುವುದನ್ನು ನಮ್ಮ ಶಾಸ್ತ್ರಗಳು ತಿಳಿಸಿಕೊಡುತ್ತವೆ." ಇದು ಗುರುಗಳ ಆಶೀರ್ವಚನದ ಸಾರವಾಗಿತ್ತು. ಅದ್ಭುತವಾದ ಗುರು ಸಂದೇಶ. 

ಗುರುಗಳ ಅಮೃತ ಹಸ್ತದಿಂದ ಅನುಗ್ರಹಿಸಿದ ಮಂತ್ರಾಕ್ಷತೆ ಪಡೆದು ದೇವರ ಪ್ರಸಾದ ನೈವೇದ್ಯ ಭೂಜನ ಪೂರೈಸಿದೆವು. ಅಲ್ಪ ಸಮಯದ ಅವಧಿಗೆ ನಮ್ಮ ಬಾಂಧವರ ಸಣ್ಣ ಸಭೆ  ಮಠದ ಆವರಣದಲ್ಲೇ ನಿಗದಿಯಾಗಿತ್ತು. ಅದರಂತೆ ಎಲ್ಲರೂ ಒಟ್ಟು ಸೇರಿ ಒಂದಷ್ಟು ಸಲಹ ಸೂಚನೆ ಪರಿಚಯಗಳನ್ನು ಪೂರೈಸಿಕೊಂಡೆವು. ಎಲ್ಲವೂ ಸೌಹಾರ್ದಾತೆಯ ಸಂಕೇತವಾಗಿತ್ತು. ಸಾಯಂಕಾಲವಾಗುತ್ತಿದ್ದಂತೆ ಎಲ್ಲರೂ ಪ್ರಯಾಣದ ಕೊನೆಯ ಹಂತವನ್ನು ತಲುಪಿ ಎಲ್ಲರಿಗೂ ವಿದಾಯ ಹೇಳಿದೆವು. 

ಪ್ರಯಾಣದಂತಹ ಕಾರ್ಯಕ್ರಮಗಳು ವ್ಯವಸ್ಥೆಗೊಳಿಸುವುದು ಅಷ್ಟು ಸುಲಭವಲ್ಲ. ಅದಕ್ಕೆ ಅನುಭವ ಹಲವಾರು ದಿನದ ಹಲವು ವ್ಯಕ್ತಿಗಳ ಪರಿಶ್ರಮ ಅತೀ ಅವಶ್ಯ. ಜತೆ ಎಲ್ಲರ ಸಹಕಾರ ಒದಗಿ ಬಂದರೆ ಪ್ರಯಾಣ ಸುಖಕರವಾಗಿರುತ್ತದೆ.  ಇದಕ್ಕೆ ಪೂರಕವಾಗಿ ನಮ್ಮ ಗುರು ದರ್ಶನದ ಕಾರ್ಯಕ್ರಮ ಸಾಂಗವಾಗಿ ಯಶಸ್ವಿಯಾಗಿ ನೆರವೇರಿತು. ಯಾವುದೇ ಕಾರ್ಯಕ್ಕು ಉದ್ದೇಶ ಶುದ್ದಿ ಸಂಕಲ್ಪ ಶುದ್ಧಿ ಅತೀ ಅವಶ್ಯ. ಇದು ಇದ್ದರೆ ಕಾರ್ಯಕ್ರಮ ಬಹುವಂಶ ಯಶಸ್ವಿಯಾಗುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿ ಪರಿಣಮಿಸಿತು.  ನಿಗದಿಯಾದ ಸಮಯ ಹೊಂದಿಸಿಕೊಳ್ಳುವಲ್ಲಿ ಸ್ವಲ್ಪ ಮಟ್ಟಿಗೆ ಕಾರಣಾಂತರದಿಂದ ವೆತ್ಯಾಸ ವಾಗಿದ್ದು ಬಿಟ್ಟರೆ ಕಾರ್ಯಕ್ರಮ ತುಂಬ ಯಶಸ್ವಿಯಾಗಿತ್ತು. ಸಾಮಾನ್ಯ ದೂರದ ಪ್ರಯಾಣದಲ್ಲಿ ಇದೆಲ್ಲ ಸಾಮಾನ್ಯ. ಪ್ರಯಾಣದಂತಹ ಕಾರ್ಯಕ್ರಮದಲ್ಲಿ ನಮ್ಮ ಉದ್ದೇಶವನ್ನು ನಾವು ಮೊದಲು ಗಮನಿಸಬೇಕು. ಅದರ ಪಾವಿತ್ರ್ಯತೆಯನ್ನು ಮೊದಲು ಕಾಪಾಡಿಕೊಳ್ಳಬೇಕು. ಅದರ ನಡುವೆ ಆತಂಕ ತೊಂದರೆಗಳು ಎದುರಾದರೆ ನಾವೆಲ್ಲ ಏಕ ಮನಸ್ಸಿನಿಂದ ಅದಕ್ಕೆ  ಎಲ್ಲರೂ ಸಹಕರಿಸಬೇಕು. ಸಣ್ಣ ಪುಟ್ಟ ಅಸೌಕರ್ಯ ತೊಂದರೆಗಳನ್ನು ನಮ್ಮ ಉದ್ದೇಶ ಗಮನದಲ್ಲಿರಿಸಿ ಸೌಹಾರ್ದವಾಗಿ ಅದನ್ನು ಸ್ವೀಕರಿಸಬೇಕು. ಅದಕ್ಕೆ ಸಹಕಾರ ಎಂದು ಹೇಳುವುದು. ಆದರೂ ಇಲ್ಲಿ ಅಂತಹ ಹೇಳಿಕೊಳ್ಳುವಂತಹ ಯಾವ ತೊಂದರೆ ಸೌಕರ್ಯ ಕೊರತೆಗಳು ಎದುರಾಗಲಿಲ್ಲ. ಎಲ್ಲವನ್ನು ಬಹಳ ಮುಂದಾಲೋಚನೆಯಿಂದ ವ್ಯವಸ್ಥೆಗೊಳಿಸಲಾಗಿತ್ತು. ಇದಕ್ಕಾಗಿ ಭಾರವಾಹಿಗಳಾದ ಶ್ರೀ ಉಪ್ಪಂಗಳ ನಾಗರಾಜ, ಪಾಂಡುರಂಗ ಗುರ್ಜರ್ ಮತ್ತು ಇತರರ ಯೋಗದಾನವನ್ನು ಕೃತಜ್ಞತೆಯಿಂದ ಸ್ಮರಿಸಬೇಕು. ಎಲ್ಲರಿಗೂ ಧನ್ಯವಾದಗಳು. ಮುಂದೆಯೂ ಇಂತಹ ಕಾರ್ಯಕ್ರಮಗಳು ಆಯೋಜನೆಗೊಂಡು ಅದರಲ್ಲಿ ಭಾಗವಹಿಸಿ ಯೋಗದಾನವನ್ನು ಒದಗಿಸುವ ಅವಕಾಶ ನನಗೂ ಒದಗಿ ಬರಲಿ ಎಂದು ಹಾರೈಸುತ್ತೇನೆ.  ಸಹಕರಿಸಿದ ಎಲ್ಲ ಬಾಂಧವ ಮಿತ್ರರಿಗೆ ಕೃತಜ್ಞತೆಗಳು. 

Saturday, August 8, 2026

ಬ್ರಹ್ಮ ಜ್ಞಾನ

ನಾನು ಬಾಲ್ಯದಲ್ಲಿರುವಾಗ ನಮ್ಮೂರಿನಲ್ಲಿ ಒಂದು ಆಜಾರ್ ಬ್ಯಾರಿಯ ಅಂಗಡಿಗೆ ಎನಾದರು ಸಾಮಾನು ತರಲು ಹೋಗುತ್ತಿದ್ದೆ. ಕೆಲವು ಸಲ ಹೋಗುವಾಗ ಅವರ ನಮಾಜ್ ಪ್ರಾರ್ಥನೆಯ ಸಮಯವಾಗಿರುತ್ತಿತ್ತು. ಹಲವು ಸಲ ಆತ ನಮಾಜ್ ಗೆ ಏಳುವಾಗ ನಾವು ಹೋದರೂ ಅವರು ಪ್ರಾರ್ಥನೆ ಮುಗಿಸಿ ಬರುತ್ತೇನೆ ಅಂತ ನಮ್ಮನ್ನು ಕಾಯುವಂತೆ ಹೇಳಿ ಹೋಗುತ್ತಿದ್ದರು. ಸಾಮಾನ್ಯವಾಗಿ ಆಗ ಹತ್ತು ಹದಿನೈದು ನಿಮಿಷವಾದರೂ ಕಾದು ಕುಳಿತುಕೊಳ್ಳಬೇಕಾಗುತ್ತಿತ್ತು.  ಬೇರೆ ಅಂಗಡಿ ಇಲ್ಲದೇ ಇದ್ದುದರಿಂದ ಅಥವಾ ಯಾವುದೋ ಅನಿವಾರ್ಯತೆಗೆ ನಾವು ಕಾದು ಕುಳಿತುಬಿಡುತ್ತಿದ್ದೆವು.  ಅದೆಷ್ಟು ಜನ ಇದ್ದರೂ ,  ಅವರು ಅಷ್ಟೇ ನಾವು ಕಾಯುತ್ತಿದ್ದೇವೆ ಎಂದು ಯಾವ ಅವಸರವೂ ಮಾಡದೆ ಸಾವಧಾನವಾಗಿ ತಮ್ಮ ನಿತ್ಯವಿಧಿಯನ್ನು ಪೂರೈಸಿ ಬರುತ್ತಿದ್ದರು. ಆವಾಗ ಎಷ್ಟೋ ಸಲ ನನಗಗನಿಸುತ್ತಿತ್ತು ನಾನೊಬ್ಬನೇ ಇದ್ದರೆ, ನನ್ನ ಒಬ್ಬನನ್ನು ಕಳುಹಿಸಬಹುದಿತ್ತಲ್ಲಾ ಎಂದು ಕೊಳ್ಳುತ್ತಿದ್ದೆ. ಯೋಚನೆ ಮಾಡಿದಾಗ ದೈವ ಪ್ರಾರ್ಥನೆ ನಿತ್ಯ ವಿಧಿಗಳಲ್ಲಿ ಅವರಿಗಿರುವ ಬದ್ದತೆ ಆಶ್ಚರ್ಯ ತರಿಸುತ್ತಿತ್ತು. ಅವರ ನಿಯಮಗಳು ಕಠಿಣ ಇರುತ್ತಿತ್ತು. ಇರಲಿ, ನಮ್ಮಲ್ಲಿ ಅಷ್ಟು ಕಠಿಣವಾದ ನಿಯಮಗಳು ಇಲ್ಲವೋ ಅಥವಾ ನಾವು ಪಾಲಿಸುವುದಿಲ್ಲವೋ ಅದು ತಿಳಿಯದು. ನಮ್ಮಲ್ಲೂ ಅದೇ ರೀತಿ ನಾವು ಪಾಲನೆ ಮಾಡಬೇಕು ಅಂತ ಅನ್ನಿಸುತ್ತದೆ.  ಯಾವುದೇ ವಿಧಿ ವಿಧಾನಗಳನ್ನು ಮತ್ತೊಂದಕ್ಕೆ ಹೋಲಿಸಿ ತುಲನೆ ಮಾಡುವುದು ಸರಿಯಲ್ಲ. ನಮ್ಮಲ್ಲೇ ಇದು ಹಲವು ರೀತಿಯಲ್ಲಿ ವೆತ್ಯಾಸವಿರುತ್ತದೆ. ನಿಯಮ ನಿಬಂಧನೆ ಇಲ್ಲ ಎಂದುಕೊಂಡರೂ. ನಾವು ಹೇಗೆ ಆಚರಿಸಿದರೂ ಅದು ಪರವಾಗಿಲ್ಲ ಎಂದು ತಿಳಿದು ಕೊಂಡು ಹೇಗಾದರೂ ಆಚರಿಸುವುದು ಒಂದು ರೀತಿಯ ಅಸಡ್ಡೆಯಾಗುತ್ತದೆ. ಯಾವುದೋ ಕಾಟಾಚಾರವಾಗಿಬಿಡುತ್ತದೆ, ಇದು ನನ್ನ ಭಾವನೆ.  ಹಲವು ಸಲ ಪರಿಹಾರ ಉಂಟು ಎಂದು ತಿಳಿದುಕೊಂಡು ಅಪರಾಧ ಮಾಡುವುದಕ್ಕೆ ಇದು ಪ್ರೇರಣೆಯಾದಂತೆ ಆಗಿಬಿಡುತ್ತದೆ. ಯಾವುದೇ ಪಾಪಕ್ಕೂ ಪರಿಹಾರವಿದೆ ಅಂತ ಒಂದು ಬಗೆಯ ಔದಾಸಿನ್ಯ. ಇಲ್ಲದೆ ಇದ್ದರೆ ನನ್ನಿಂದ ಇಷ್ಟೇ ಸಾಧ್ಯ. ಒಂದು ರೀತಿಯ ಉಡಾಫೆ. 

ಎಲ್ಲರಂತೆ ಮೊದಲೆಲ್ಲ ನಾನು ಅಷ್ಟೇ  ಈ ಆಚರಣೆ ಕರ್ಮಾನುಷ್ಠಾನದಲ್ಲಿ ಗಂಭೀರವಾಗಿರುತ್ತಿರಲಿಲ್ಲ.  ಹೇಗಾದರೂ ಒಂದು ಮಾಡಿದರೆ ಸಾಕು ಎಂಬ ಭಾವನೆ. ಆದರೆ ವ್ಯಕ್ತಿತ್ವ ಜೀವನದಲ್ಲಿ ಒಂದೇ ಬಗೆಯಲ್ಲಿ ಇರುವುದಿಲ್ಲ. ಮನುಷ್ಯ ಅನುಭವದಿಂದ ಬದಲಾಗುತ್ತಾ ಹೋಗುತ್ತಾನೆ. ನಾನು ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಯೋಗಾಭ್ಯಾಸ ಆರಂಭಿಸಿದೆ. ಅಂದಿನಿಂದ ಸಹಜವಾಗಿ ಜೀವನ ಕ್ರಮದಲ್ಲಿ ಅಮೂಲಾಗ್ರ ಬದಲಾವಣೆಯಾಗಿಬಿಟ್ಟಿತು. ನಾನು ಮನುಷ್ಯನಾಗಿ ಬದುಕಿದ್ದು ಆವಾಗಿಂದಲೇ ಅಂತ ಹಲವು ಸಲ ಅಂದುಕೊಳ್ಳುತ್ತೇನೆ. ಯೌವನ ಎಂಬುದು ಮನುಷ್ಯನ ಉಚ್ಛ್ರಾಯ ಸ್ಥಿತಿ , ಎಲ್ಲಾ ಬಗೆಯಿಂದಲು ಸುಖಾನುಭವದ ವಯಸ್ಸು. ಹಾಗಿದ್ದರೂ ಯೋಗಾಭ್ಯಸದ ನಂತರ ಸಮಗ್ರವಾದ ಗ್ರಹಸ್ಥಾನುಭವವೂ ಏನೂ ಅಲ್ಲ ಅಂತ ಯೋಗಾನುಭವ ತಿಳಿಸಿಬಿಟ್ಟಿತು. ಹೀಗೆ ಯೋಗಾಭ್ಯಸ ಮಾಡುವಾಗ ಯೋಗ ಗುರುಗಳು ಮಾರ್ಗ ದರ್ಶಕನಾದ ಮಿತ್ರನೂ ಯೋಗಾಭ್ಯಾಸಕ್ಕೆ ಸ್ನಾನಾದಿಗಳನ್ನು ಮುಗಿಸಿ ಮಾಡುವುದು ಅತ್ಯುತ್ತಮ ಅಂತ ಹೇಳಿದರು. ನನಗೊಂದು ಸ್ವಭಾವ ಎಂದರೆ ಯಾವುದೇ ಕೆಲಸ ಮಾಡಲಿ ಅದಕ್ಕೆ ಸಾಧ್ಯವಾದಷ್ಟು ಬದ್ದತೆಯನ್ನು ಕೊಡಬೇಕು. ಆರೋಗ್ಯದಿಂದಲೂ ಹಲವಾರು ಸಮಸ್ಯೆಗಳನ್ನು ಎದುರಿಸಿತ್ತಿದ್ದ ನನಗೆ ಯೋಗಾಭ್ಯಾಸಕ್ಕೆ ಏನೆಲ್ಲ ಬೇಕೋ ಅದನ್ನೆಲ್ಲ ಮಾಡುವ ಆಸಕ್ತಿ ಹುಟ್ಟಿಕೊಂಡಿತು. ಹಾಗಾಗಿ ಬೆಳಗ್ಗೆ ಸ್ನಾನ ಮಾಡಿ ಯೋಗಾಭ್ಯಾಸಕ್ಕೆ ಹೋಗುತ್ತಿದ್ದೆ. ಅದು ವರೆಗೆ ತಡವಾಗಿ ಏಳುತ್ತಿದ್ದ ನನಗೆ ಇದಕ್ಕಾಗಿ ಬೇಗ ಏಳುವ ಅನಿವಾರ್ಯತೆ ಬಂದು ಬಿಟ್ಟಿತು. ನಮಗೂ ಹಾಗೆ ಸ್ನಾನ ಮಾಡಿದ ನಂತರ, ಸಂಧ್ಯಾವಂದನೆ ಪೂಜೆ ಇವುಗಳನ್ನು ಮುಗಿಸಬೇಕು, ಹಾಗಾಗಿ ಆರುಘಂಟೆಯ ಯೋಗ ತರಗತಿಗೆ ಹೋಗಬೇಕಾದರೆ ಐದು ಘಂಟೆಯ ಮೊದಲೇ ಎದ್ದು ಬಿಡಬೇಕಾಗಿತ್ತು. ಈ ಒಂದು ನಿಬಂಧನೆ ನನ್ನ ಜೀವನದಲ್ಲಿ ಬಹಳ ದೊಡ್ಡ ಬದಲಾವಣೆಯನ್ನು ತಂದಿತು.  

ಐದು ಘಂಟೆಗೆ ಎದ್ದು ಸ್ನಾನ ಮಾಡಿ ಸಂಧ್ಯಾವಂದನೆಗೆ ತೊಡಗ ಬೇಕು ಎನ್ನುವಾಗ, ನಮ್ಮ ಮನೆಯ ಅನತಿ ದೂರದಲ್ಲಿದ್ದ ಮಸೀದಿಯಿಂದ ಬಾಂಗ್ ಕೇಳುತ್ತಿತ್ತು. ಇದೊಂದು ರೀತಿಯಲ್ಲಿ ನನಗೆ ಇದಕ್ಕಿಂತ ಮೊದಲು ನನ್ನ ಸಂಧ್ಯಾವಂದನೆ ಪ್ರಾರ್ಥನೆ ಮುಗಿಸಿಬಿಡಬೇಕು ಎಂಬ ತುಡಿತ ನನ್ನಲ್ಲಿ ಬೆಳೆದು ಬಿಟ್ಟಿತು. ಅವರೆಲ್ಲಾ ಎದ್ದು ಪ್ರಾರ್ಥನೆ ಮಾಡುತ್ತಾರೆ ಅವರಿಗಿಂತ ಒಂದಿಷ್ಟು ಮೊದಲು ನಾನು ತೊಡಗಬೇಕು ಎಂದು ಸಾಕಷ್ಟು ಮೊದಲೇ ಏಳುವ ಪ್ರಚೋದನೆಯಾಯಿತು. ಹಾಗಾಗಿ ಐದು ಘಂಟೆಗೆ ಎದ್ದು ಬಿಡುವವನು ಒಂದು ತಾಸು ಮೊದಲೇ ಎದ್ದು ಸಂಧ್ಯಾವಂದನೆಗೆ ತೊಡಗುತ್ತಿದ್ದೆ. ಇದೊಂದು ರೀತಿಯ ಸತ್ ಪ್ರಚೋದನೆ. ಮತ ಧರ್ಮ ಯಾವುದಾದರೇನು? ಭಗವಂತನ ಪ್ರಾರ್ಥನೆ ಅದು ಸಮಾನ. ಹೀಗೆ ಒಂದು ಸಲ ಸ್ನಾನ ಆಯಿತು ಎಂದರೆ ಅದೊಂದು ಶಿಸ್ತಿನ ಜೀವನದ ಮೊದಲ ಹೆಜ್ಜೆಯಾಗಿಬಿಡುತ್ತದೆ. ಯೋಗಾಭ್ಯಾಸ ಆರಂಭವಾದ ನಂತರ ಇಂದಿನವರೆಗೂ ಒಂದೇ ಒಂದು ದಿನ ನಾನು ತಡವಾಗಿ ಏಳಲಿಲ್ಲ ಎಂಬುದು ನನ್ನ ಪಾಲಿಗೆ ಗಮನಾರ್ಹವೆನಿಸುತ್ತದೆ. ಶಿಸ್ತು ಬದ್ದ ಜೀವನಕ್ಕೆ ಇದೊಂದು ಮೊದಲ ಮೆಟ್ಟಿಲಾಗಿಬಿಟ್ಟಿತು.  ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲೇ ಸೂರ್ಯಾರ್ಘ್ಯ ಜಪ ಪೂಜಾದಿಗಳ ನಿತ್ಯ ಕರ್ಮವನ್ನು ಪೂರೈಸುವ ಅದ್ಭುತ ಅನುಭವ ಮತ್ತು ಅವಕಾಶ ಇದರಿಂದ ಒದಗಿಬಂತು. 

ನಮ್ಮಲ್ಲೂ ನಿಯಮ ನಿಬಂಧನೆಗಳು ಇವೆ. ಆದರೆ ನಾವೇಕೆ ಅದರ ಬಗ್ಗೆ ಅಸಡ್ಡೆಯನ್ನು ತೋರಿಸುತ್ತಿದ್ದೇವೆ ಎಂಬುದೇ ಪ್ರಶ್ನೆ. ಸಂಧ್ಯಾವಂದನೆ ಎಂದರೆ, ಭಗವಂತನನ್ನು ಅರಿಯುವ ಜ್ಞಾನವನ್ನು ಕೊಡು ಅಂತ ಭಗವಂತನಲ್ಲೇ ಪ್ರಾರ್ಥಿಸುವ ಒಂದು ಪವಿತ್ರ ಕಾರ್ಯ. ಬ್ರಾಹ್ಮಣ ಎಂದರೆ ಜ್ಞಾನಿ ಎಂದು ಅರ್ಥ. ಯಾರು ಮುಂಜಾನೆ ಎದ್ದು  ಸಂಧ್ಯಾವಂದನೆ ಧ್ಯಾನದ ಮೂಲಕ ಬ್ರಹ್ಮ  ಜ್ಞಾನವನ್ನು ಪಡೆಯುತ್ತಾನೋ ಆತ ನಿಜವಾದ ಬ್ರಾಹ್ಮಣ. ಇದಕ್ಕಾಗಿ ನಮಗೆ ಕಠಿಣವಾದ ನಿಯಮ ನಿಬಂಧನೆಯ ಅವಶ್ಯಕತೆ ಬೇಕಾಗಿಲ್ಲ. ಜ್ಞಾನದ ಶ್ರಧ್ದೆ ಇದ್ದರೆ ಸಾಕು. ಆದರೆ ನಮಗದು ಬೇಡ. ಸಂಧ್ಯಾವಂದನೆ ಆಚರಿಸುವುದರಲ್ಲೇ ಔದಾಸಿನ್ಯ. ಇನ್ನು ಆಚರಿಸಿದರೂ ಅದು ಕಾಟಾಚಾರ. ಸಂಧ್ಯಾವಂದನೆ ಮಾಡಿದರೂ ಅದರ ನಡುವೆ ಯಾರಲ್ಲೋ ಮೊಬೈಲ್ ನಲ್ಲಿ ಮಾತನಾಡುವುದು,  ಮಂತ್ರ ಹೇಳುತ್ತಾ ಮಂತ್ರದಲ್ಲೇ ದೊಡ್ಡದಾಗಿ ಯಾರಿಗೋ ಗದರುವುದು ಛೇಡಿಸುವುದು, ನಡುವೆ ಎದ್ದು ಹೋಗುವುದು ಅವಸರವವಸರವಾಗಿ ಒಂದು ಮುಗಿಸಿ ಭಾರ ಇಳಿಸಿದರೆ ಸಾಕು ಎಂಬ ಪ್ರವೃತ್ತಿ. ದಿನದ ಸಾವಿರದ ನಾನ್ನೂರ ನಲ್ವತ್ತು ನಿಮಿಷದಲ್ಲಿ ಕೇವಲ   ಹದಿನೈದು ನಿಮಿಷವನ್ನೂ ಮೀಸಲಿಡಲಾಗದ ನಾವು ಬ್ರಾಹ್ಮಣ ಎಂದನಿಸಿಕೊಳ್ಳಲು ಯೋಗ್ಯರೆ ಅಂತ ಯೋಚಿಸಬೇಕು. ಒಂದು ರೀತಿಯಲ್ಲಿ ಬ್ರಾಹ್ಮಣ ವೇಷಕ್ಕೂ ಅರ್ಹರಲ್ಲದವರು ಅಂತ ಅನ್ನಿಸಿಬಿಡುತ್ತದೆ. ಸಂಧ್ಯಾವಂದನಾದಿ ಕಾರ್ಯಗಳು, ನಮ್ಮ ಪಾಪ ಮೋಕ್ಷಕ್ಕಾಗಿ ಆಚರಿಸಲೇ ಬೇಕಾದ ಕರ್ಮಗಳು.  ಮೊದಲು ನಮ್ಮಲ್ಲಿ ಪಾಪ ಪ್ರಜ್ಞೆ ಎಂಬುದು ಬೆಳೆಯಬೇಕು. ಹೀಗಿದ್ದಲ್ಲಿ ನಾವು ಮಾಡುವ ಕಾರ್ಯದಲ್ಲಿ ಶ್ರದ್ಧೆ ಭಕ್ತಿ ತಾನಾಗಿ ಪ್ರಚೋದನೆಯಾಗುತ್ತದೆ. ಸಂಧ್ಯಾವಂದನೆ ಎಂದರೆ ನಮ್ಮನ್ನು ನಾವು ಪರಿಶುದ್ದತೆಯತ್ತ ಕೊಂಡೊಯ್ಯುವುದು. ಆದರೆ ನಮ್ಮ ಮನಸ್ಸು ದೇಹ ನಮ್ಮ ಪರಿಸರ ಪರಿಶುದ್ದವಿಲ್ಲದೇ ಇದ್ದರೆ ಪರಿಶುದ್ದಿ ಎಂಬುದನ್ನು ಪಡೆಯುವುದಕ್ಕೆ ಸಾಧ್ಯವಿಲ್ಲ. ಕೆಸರಿನಲ್ಲಿ ಹುಟ್ಟಿದ ಕಮಲವಾದರೂ ಅರಳಿದನಂತರ ಸೂರ್ಯಾಭಿಮುಖವಾಗಿ ಪರಿಶುದ್ದಿಯಾಗುತ್ತದೆ. ಆದರೆ ನಾವು ಮಾತ್ರ ಕೆಸರಲ್ಲೇ ಇದ್ದು ಪರಮಾತ್ಮನಿಂದ ವಿಮುಖರಾಗಿಬಿಡುತ್ತೇವೆ. 

ನಾವು  ಶ್ರೀರಾಮನನ್ನು ನಂಬುತ್ತೇವೆ. ರಾಜ ಜಪವನ್ನು ಮಾಡುತ್ತೇವೆ. ಆದರೆ ಅದೇ ರಾಮನಲ್ಲಿ ಅನುಮಾನ ವ್ಯಕ್ತಪಡುತ್ತೇವೆ. ರಾಮ ಸೀತೆಯನ್ನು ಕಾಡಿಗೇಕೆ ಅಟ್ಟಿದ? ರಾಮ ಮರೆಯಲ್ಲಿದ್ದು ವಾಲಿಯನ್ನು ಏಕೆ ಸಂಹರಿಸಿದ? ರಾಮಾಯಣ ಅಧ್ಯಯನ ಮಾಡದೇ  ಹೀಗೆಲ್ಲ ಆತನ ವ್ಯಕ್ತಿತ್ವದ ಮೇಲೆ ರೇಖೆಯನ್ನು ಎಳೆದುಬಿಡುತ್ತೇವೆ.  ನಮಗೆ ಅದರಲ್ಲೂ ಹಿಂದುಗಳಿಗೆ ಈ ಅರೆನಾಸ್ತಿಕತೆಯೇ ಬಾಧಿಸುವುದು. ದೇವರನ್ನು ತಿಳಿಯುವುದಕ್ಕೆ ಪ್ರಯತ್ನಿಸುವುದಿಲ್ಲ. ಯಾವುದೋ ಒಂದನ್ನು ದೇವರು ಅಂತ ನಂಬಿಬಿಡುತ್ತೇವೆ. ಅಲ್ಲಿ ಸಾವಿರಾರು ಸಂಶಯಗಳು ಹುಟ್ಟಿಬಿಡುತ್ತವೆ. ಶ್ರೀಕೃಷ್ಣನೇ ಪಾಂಡವರಿಗೆ ಯುದ್ದ ಮಾಡುವಂತೆ ಹೇಳಿದ. ಇದು ಹಿಂಸೆಗೆ ಪ್ರಚೋದಿಸದಂತೆ ಭಾಸವಾಗುತ್ತದೆ. ಆದರೆ ಶ್ರೀಕೃಷ್ಣ ಜ್ಞಾನ ಧ್ವಂಸಿಗಳನ್ನು ಸಂಹರಿಸಿದ. ಯಾರು ಆತನನ್ನು ನಂಬುವವರನ್ನು ಆತ ಸಂಹರಿಸಿಲ್ಲ. ಯಾರು ಜ್ಞಾನವನ್ನು ದೂರ ಮಾಡಿದರೋ ಅವರ ಎದುರು ಯುದ್ದ ಸಾರಿದ. ಮತ್ತೂ ಮುಂದೆ ಯೋಚಿಸಿದರೆ ಆತ ಹಲವರನ್ನು ಸಂಹರಿಸಲಿಲ್ಲ. ಅವರಿಗೆ ಮೋಕ್ಷವನ್ನು ಬಿಡುಗಡೆಯನ್ನು ಕಲ್ಪಿಸಿದ. ಆದರೆ ದೇವರನ್ನು ಅರಿಯದವರು ಅರೆ ನಾಸ್ತಿಕರಾಗಿಬಿಡುತ್ತಾರೆ. ಬದುಕಿಗೆ ಇದು ಅಪಾಯ. 


Saturday, August 1, 2026

ಧಿಯೋಯೋನಃ ಪ್ರಚೋದಯಾತ್

 ಗಾಯತ್ರಿಮಂತ್ರದಲ್ಲಿ ಕೊನೆಯ ಶಬ್ದಗಳು ಧಿಯಃ ಯಃ ನಃ ಪ್ರಚೋದಯಾತ್. ಒಟ್ಟಿಗೆ ಧಿಯೋಯೋನಃ ಪ್ರಚೋದಯಾತ್. ಅಂದರೆ ನಮಗೆ ಜ್ಞಾನವನ್ನು ಕರುಣಿಸು. ಇದು ಗಾಯತ್ರಿ ಮಂತ್ರದ ಅದ್ಭುತ ಸಾಲುಗಳು.  ಮನುಷ್ಯ ದೇವರನ್ನು ಅರಿಯಬೇಕು.  ಆಗ ಅದರಲ್ಲಿ ಅರ್ಪಣಭಾವ ಬರುತ್ತದೆ. ಯಾರೋ ಹೇಳಿದರು ಅನುಸರಿಸಿದರು ಎಂದಲ್ಲ. ಅದನ್ನೇ ಧೀಮಹಿ ಎನ್ನುವುದು. ಧಿಯೋಯೋನಃ ಪ್ರಚೋದಯಾತ್ ಹೇಳುವಲ್ಲಿ ಒಬ್ಬನೇ ಆದರೂ ಆತ ನಮಗೆ ಎಂದು ಹೇಳುತ್ತಾನೆ. ನಮಗೆ ಒಳ್ಳೆ ಬುದ್ದಿಯನ್ನು ಕೊಡು ಎಂದು ಒಬ್ಬನೇ ಕುಳಿತು ಮನಸ್ಸಿನಲ್ಲಿ ಧ್ಯಾನ ಮಾಡುತ್ತಾನೆ.  ಇದು ಗಹನವಾದ ವಿಚಾರವನ್ನು ಹೇಳುತ್ತದೆ. ಬುದ್ದಿಯನ್ನು ಕೇವಲ ನಮಗಾಗಿ ಕೊಟ್ಟರೆ ಮತ್ತೊಬ್ಬನಿಗೆ ಬುದ್ದಿ ಇಲ್ಲದಾಗುತ್ತದೆ. ಪರೋಕ್ಷವಾಗಿ ಅದು ನಮಗೆ ಬಾಧಕವಾಗಬಹುದು. ಹಾಗಾಗಿ ಎಲ್ಲರಿಗೂ ಬುದ್ಧಿಯನ್ನು ಜ್ಞಾನವನ್ನು ಕೊಡು. ಹೊರತು ಸಂಪತ್ತನ್ನು ಕೇಳುವುದಿಲ್ಲ. ಬುದ್ಧಿಗಿರುವ ಮಹತ್ವ ಅದು. ನಾವು ಧನಿಕರಾಗುವಾಗ ನಮ್ಮ ಪಕ್ಕದಲ್ಲಿರುವವನೂ ಧನಿಕನಾಗಲಿ ಎಂದು ಬಯಸುವುದರಲ್ಲಿ ವಿಶ್ವ ಬಂಧುತ್ವವಿದೆ. 

ಬಹುಶಃ ಯಾವುದೇ ಧರ್ಮದಲ್ಲೂ ನನಗೆ ಕೊಡು ಅಂತ ಭಗವಂತನಲ್ಲಿ ಬೇಡುವುದಿರಬಹುದು ಗೊತ್ತಿಲ್ಲ. ನನಗೆ ವರಕೊಡು. ನನಗೆ ಒಳ್ಳೆಯದು ಮಾಡು. ನನ್ನನ್ನು ಉದ್ದರಿಸು ಹೀಗೆ ತನ್ನ ಪರಿಮಿತಿಯಲೇ ಬೇಡಿಕೆ ಇರುತ್ತದೆ.   ನಮಗೆ ಕೊಡು ಅಂತ ಕೇಳುವುದರಲ್ಲಿ ಸನಾತನ ಧರ್ಮದ ಸತ್ವ ಅಡಗಿದೆ ಎನ್ನಬೇಕು. ಹಾಗಾಗಿಯೇ ಭಾರತದ ಆಧ್ಯಾತ್ಮಿಕ ತತ್ವಗಳು ಇಂದು ಜಗತ್ತಿಗೆ ಗುರುಸ್ಥಾನವನ್ನು ಕಲ್ಪಿಸಿದೆ ಎನ್ನಬೇಕು. ನನಗೆ ಎನ್ನುವುದಕ್ಕಿಂತ ನಮಗೆ ಎನ್ನುವುದರಲ್ಲಿ ಸಮಷ್ಟಿಯ ತ್ಯಾಗ ಮನೋಭಾವ ಇದೆ. ಯೋಗ ತರಗತಿಯ ಆರಂಭದ ದಿನಗಳಲ್ಲಿ ನಮ್ಮ ಯೋಗ ಗುರು ತಾಡಪತ್ರಿಯವರು ಒಂದು ಮಾತು ಹೇಳಿದ್ದರು ಈಗಲೂ ನೆನಪಿದೆ. ನಿಮ್ಮ ನೆರೆ ಮನೆಯವನು ನಿಮ್ಮನ್ನು ದ್ವೇಷಿಸುತ್ತಿದ್ದರೆ, ಬೇರೆ ಏನು ಬೇಡ ಆತನನ್ನು ಯೋಗ ತರಗತಿಗೆ ಕರೆದು ಕೊಂಡು ಬನ್ನಿ. ಯೋಗಭ್ಯಾಸ ಮಾಡುವಂತೆ ಪ್ರೇರೇಪಿಸಿ. ನಿಮ್ಮ ಮೇಲಿನ ದ್ವೇಷವನ್ನು ಮಾತ್ರವಲ್ಲ ದ್ವೇಷ ಎಂಬ ವಸ್ತುವನ್ನೇ ಮರೆತು ಬಿಡುತ್ತಾನೆ. ಭಾರತಕ್ಕೆ ಸಮಷ್ಟಿಯ ಈ ನಮ್ಮ ಎನ್ನುವ ಭಾವನೆ ರಕ್ತಗತವಾಗಿರುವುದೇ ಈ ಸನಾತನ ಯೋಗ ಧರ್ಮದಿಂದ ಎನ್ನಬೇಕು. ವಿಶ್ವಕ್ಕೆ ಶಾಂತಿ ಮಂತ್ರವನ್ನು ತೋರಿಸಿಕೊಟ್ಟ ಭಾರತ. ಯಾರೋ ಒಬ್ಬ ಮಹನಿಯರು ಹೇಳಿದ್ದು, ಭಾ ಎಂದರೆ ಬೆಳಕು ರತಿ ಎಂದರೆ ಆಸಕ್ತಿ. ಬೆಳಕಿನಲ್ಲಿ ಆಸಕ್ತನಾಗಿ ಜಗತ್ತಿಗೆ ಜ್ಯೋತಿಯ ಬೆಳಕನ್ನು ತೋರಿಸಿದ ದೇಶವೇ ಭಾರತ. ಇದು ಭಾರತಕ್ಕೆ ಗುರುತ್ವ ವನ್ನು ಕಲ್ಪಿಸಿದೆ. ಗುರುತ್ವ ಎಂದರೆ ಗಮನ, ದರ್ಶನದ ಸ್ಥಾನ. ಇದು ಯಾವುದೋ ವ್ಯಕ್ತಿಗೆ ಸಂಭಂದಿಸಿ ಹೇಳಿದುದಲ್ಲ. ಇಲ್ಲಿ ಹುಟ್ಟಿದ ಮಹನೀಯರೆಲ್ಲ ಈ ಸ್ಥಾನಕ್ಕೆ ಗೌರವವನ್ನು ಕೊಡುವಲ್ಲಿ ಪ್ರಯತ್ನಿಸಿದ್ದಾರೆ. 

ವಿಶ್ವ ಗುರು ಎಂದು ಯಾವುದೋ ವ್ಯಕ್ತಿಯನ್ನು ಅಭಿಮಾನದಿಂದ ಕರೆಯಬಹುದು. ಆದರೆ ಆ ವ್ಯಕ್ತಿ ಎಂದಿಗೂ ಇದನ್ನು ಪ್ರತಿಪಾದಿಸಲಿಲ್ಲ.  ಯಾರದೋ ಅಭಿಮಾನ ಈಬಗೆಯಲ್ಲಿ ವ್ಯಕ್ತವಾಗುತ್ತದೆ.  ಅದು ಆ ಗುರುತ್ವವನ್ನು ಹೃಸ್ವ ಮಾಡಿ ಸಣ್ಣದಾಗಿಸುತ್ತದೆ. ವ್ಯಕ್ತಿಯೊಬ್ಬನಿಂದ ಸಮಷ್ಟಿಯಾಗುವುದಿಲ್ಲ. ನಾವು ನಮ್ಮದು ಎಂದಾಗಲೇ ಶಿಷ್ಯ ಗುರುವಿನ ಸಂಭಂಧ ಏರ್ಪಡುತ್ತದೆ. ಅದು ಭಾರತೀಯತೆ. ಗುಡ್ಡದಲ್ಲಿ ಯಾವುದೋ ಭಾಗದಲ್ಲಿ ಎರಡು ಹೆಗ್ಗಣ ಇದೆ ಎಂದು ಗುಡ್ಡವನ್ನೇ ಜರಿಯುವುದಲ್ಲ. ಇಂದು ಧರ್ಮದ ಅರಿವಿಲ್ಲದೇ ಅದನ್ನು ಜರಿಯುತ್ತಾರೆ. ತಮಗೆ ತಿಳಿಯಲಾಗದ ಹಪಹಪಿಕೆ, ಮತ್ತು ತಮ್ಮ ಅಸಮರ್ಥತೆಗೆ ಇಡೀ ಧರ್ಮವನ್ನು ದೂರುವುದು ಅಜ್ಞಾನದ ಸಂಕೇತ. ಹಾಗಾಗಿಯೇ ನಂಬುವ ನಮಗು ನಂಬದೇ ಇರುವ ಪಾಮರನಿಗೂ ಬುದ್ದಿ ಜ್ಞಾನವನ್ನು ಕರುಣಿಸು ಅಂತ ಧಿಯೋಯೋನಃ ಪ್ರಚೋದಯಾತ್ ಅಂತ ಬೇಡಿಕೊಳ್ಳುವುದು. ಹಾಗಾಗಿಯೇ ಹಿಂದು ಧರ್ಮ ವಿರೋಧಿಗಳನ್ನು ಹೊಟ್ಟೆಯಲ್ಲಿಟ್ಟು ಪೋಷಿಸಿದಂತೆ ಬೇರೆಯಾವ ಧರ್ಮವೂ ವಿರೋಧಿಗಳನ್ನುಇರಿಸಿಕೊಳ್ಳುವುದಿಲ್ಲ. ಯಾವುದೇ ಧರ್ಮವನ್ನು ಇಲ್ಲಿ ಕೀಳಾಗಿ ಕಾಣುವುದಿಲ್ಲ. ನಮ್ಮ ಧರ್ಮವೂ ಪರಧರ್ಮವೂ ಬೆಳೆಯಲಿ. ಭಗವಂತನನ್ನು ಆರಾಧಿಸುವ ಮತ್ತು ಆರಾಧಿಸದೇ ಇರುವ ಎಲ್ಲರೂ ಇಲ್ಲಿ ಸಮಾನರು. ಭಾರತ ಸಾರುವು ವಸುಧೈವ ಕುಟುಂಬಕಂ ತತ್ವವೇ ಇದು. 

Thursday, July 30, 2026

ವಿದ್ಯಾ ವಜನ !


ಗ್ರಾಮೀಣ  ಪ್ರದೇಶದಲ್ಲಿ ಒಂದು ದಿನ ಬ್ಯಾಂಕ್ ಲೆಕ್ಕ ಪರಿಶೋಧನೆ (Audit) ಗೆ ಹೋಗಿದ್ದೆ. ಅಲ್ಲಿ ಒಬ್ಬ ಗ್ರಾಹಕ ಬಹಳ ಧನಿಕ. ಆಗಾಗ  ಹತ್ತು ಬೆರಳಿಗೆ ವಜ್ರದ ಉಂಗುರ, ಕೊರಳಿಗೆ ಚಿನ್ನದ ನಾಯಿ ಸಂಕೊಲೆ ಧರಿಸಿ ಬರುತ್ತಿದ್ದ.  ಅತ್ಯಂತ ಪ್ರತಿಷ್ಠಿತ ವ್ಯಕ್ತಿ ಕಾಣಬೇಕು. ಬಿಳಿ ಬಿಳಿ ಖಾದಿ  ವಸ್ತ್ರ ತೊಟ್ಟವನು, ಮಲಯಾಳಂ ನಲ್ಲಿ ಹೇಳುವಂತೆ ವೆಳ್ಳಿ ಮೂಂಗ  ಅಂದರೆ ಬಿಳಿ ಗೂಬೆ, ಈತ ಒಂದು ರಾಜಕೀಯ ವ್ಯಕ್ತಿ. ಯಾವಾಗಲೂ ಒಂದಿಬ್ಬರು ಜತೆಗೆ ಇರುತ್ತಿದ್ದರು. ಅದಿನ ಆತ ಒಬ್ಬನೇ ಬಂದಿದ್ದ. ಆತನಿಗೆ ದೊಡ್ಡ ಮೊತ್ತದ ನಗದು ಹಣ ಬ್ಯಾಂಕ್ ನಿಂದ ತೆಗೆದುಕೊಳ್ಳುವುದಿತ್ತು. ಮ್ಯಾನೇಜರ್ ಗೆ ಮೊದಲೇ ಕರೆ ಮಾಡಿ ಹೇಳಿರ ಬೇಕು. ಬ್ಯಾಂಕ್ ನಲ್ಲಿ ದೊಡ್ಡ ಮೊತ್ತದ ಹಣ ಇಲ್ಲದೇ ಇದ್ದರೆ ದೊಡ್ಡ ಮೊತ್ತದ ಹಣ ತೆಗೆದುಕೊಳ್ಳುವಾಗ ಮೊದಲೇ ತಿಳಿಸಿರಬೇಕಾಗುತ್ತದೆ. ಹಲವು ಸಲ ಹತ್ತಿರದ ಶಾಖೆಯಿಂದ ಇವುಗಳನ್ನು ವ್ಯವಸ್ಥೆ ಮಾಡುತ್ತಾರೆ.  ಆದಿನ ಬಂದವನಿಗೆ ಚೆಕ್ ಬರೆಯಬೇಕಿತ್ತು. ಹಲವು ಸಲ ಇಂತಹ ವ್ಯಕ್ತಿಗಳಿಗೆ ಸಹಿ ಬಿಟ್ಟು ಇನ್ನೇನು ಬರೆಯುವುದಕ್ಕೆ ಬರುವುದಿಲ್ಲವೋ ಇಲ್ಲ, ಹಾಗೆ ಬರೆಯುವುದು ಪ್ರತಿಷ್ಠೆಗೆ ತೊಂದರೆಯೋ ಗೊತ್ತಿಲ್ಲ. ದೊಡ್ಡ ಮೊತ್ತದ ಚೆಕ್ ಬರೆಯಬೇಕಿತ್ತು. ಬ್ಯಾಂಕ್ ಸಿಬ್ಬಂದಿ ಬರೆಯಬಾರದು. ಮಾತ್ರವಲ್ಲ ಆದಿನ ಸಿಬ್ಬಂದಿಗಳ ಸಂಖ್ಯೆ ತೀವ್ರವಾಗಿ ಕಡಿಮೆ ಇತ್ತು. ಮ್ಯಾನೆಜರ್, ಒಬ್ಬರು ಗುಮಾಸ್ತ ಕ್ಯಾಶಿಯರ್ ಮತ್ತೆ ಜವಾನ ಬಿಟ್ಟರೆ ಯಾರೂ ಇರಲಿಲ್ಲ. ಹಾಗಾಗಿ ಇದ್ದ ಸಿಬ್ಬಂದಿಗಳಿಗೆ ತುರಿಸುವುದಕ್ಕೂ ಸಮಯ ಇಲ್ಲದ ಸ್ಥಿತಿ.  


ಸರಿ ನಾನು ಬ್ಯಾಂಕ್ ಕೌಂಟರ್ ಹತ್ತಿರವೇ ಕಂಪ್ಯೂಟರ್ ನಲ್ಲಿ ಏನೋ ಪರಿಶೋಧನೆಯಲ್ಲಿದ್ದೆ. ಆತ ನನ್ನಲ್ಲಿ ಬಂದು ಬರೆದು ಕೊಡುವಂತೆ ಕೇಳಿದ. ನನಗೂ ಮುಖ್ಯವಾಗಿ ಸಮಯ ಇರಲಿಲ್ಲ. ಬ್ಯಾಂಕ್ ಆಡಿಟ್ ಗೆ ಹೋದಾಗ ಈ ರೀತಿ ಹಲವರು ಕೇಳಿಕೊಂಡು ಬರುವುದುಂಟು. ನಮ್ಮಲ್ಲಿ ಎಷ್ಟು ವಿದ್ಯಾವಂತರಿಗೂ ಕೆಲವರಿಗೆ ಈ ಬಾಂಕ್ ಚಲನ್ ಅಥವಾ ಚೆಕ್ ತುಂಬಿಸುವುದಕ್ಕೆ ಬರುವುದಿಲ್ಲ.  ಚಲನ್ ಬರೆಯುವಾಗ ಹಲವಾರು ತಪ್ಪುಗಳು, ಕೆಲವೊಮ್ಮೆ ಒಂದರಡು ಚಲನ್ ವ್ಯರ್ಥವಾಗುವುದು ಸರ್ವೇ ಸಾಮಾನ್ಯ. ಇಂತಹ ಪ್ರಾಥಮಿಕ ಅರಿವಿಲ್ಲದಿರುವ ವಿದ್ಯಾವಂತರು ಇದ್ದಾರೆ. ಈಗೀಗ ಈ ಚಲನ್ ಬರೆಯುವ ವ್ಯವವಾರ ಕಡಿಮೆಯಾಗಿದೆ. ಹೋಗಲಿ,  ಬ್ಯಾಂಕ್ ಆಡಿಟ್ ಗೆ ಹೋದಾಗ ಹೀಗೆ ಕೇಳಿದರೆ ನಾನು ಬರೆದುಕೊಡುವುದಕ್ಕೆ ಒಪ್ಪುವುದಿಲ್ಲ. ನನ್ನ ಪ್ರಕಾರ ಅದು ನಮ್ಮ ವೃತ್ತಿಗೆ ಸರಿ ಹೊಂದುವುದಿಲ್ಲ. ಇಲ್ಲ ಸರ್ ನಾನು ಬರೆಯಬಾರದು ಎಂದು ನಾನು ನಯವಾಗಿ ತಿರಸ್ಕರಿಸಿದೆ, ನನಗೂ ಈ ರಾಜಕೀಯ  ಬಿಳಿ ಮರಿಗಳು ಅಷ್ಟಕ್ಕಷ್ಟೇ. ಕೊನೆಗೆ ಆತ ನನ್ನ ಪಕ್ಕವೇ ಕುಳಿತು ನನ್ನಲ್ಲಿ ಕೇಳಿ ಬರೆಯುವುದಕ್ಕೆ ತೊಡಗಿದ.   ಬೆಲೆ ಬಾಳುವ ಪೆನ್ನು ಇತ್ತು. ಆದರೆ ಆತನಿಗೆ ಬರೆಯುವಾಗ ಕೈ ಕಂಪಿಸುತ್ತಿತ್ತು. ಪೆನ್ನು ಯಾವ ಕಾರಣಕ್ಕೆ ಇಟ್ಟುಕೊಂಡಿದ್ದಾನೋ ಅಂತ ಅನಿಸಿತು. ಎರಡು ಕೋಟಿ ದೊಡ್ಡ ಮೊತ್ತದ ಹಣ ಪಡೆಯಬೇಕಿತ್ತು. ನಾನು ಹೇಳುತ್ತಾ ಹೋದೆ ದಿನಾಂಕ, ನಂತರ ಹಣ ಪಡೆಯುವಾತನ ಜಾಗದಲ್ಲಿ ಬರೆಯಬೇಕಾದನ್ನು ಹೇಳಿದೆ. ಎರಡು ಕೋಟಿ ಸಂಖ್ಯೆಯನ್ನು ಬರೆಯುವುದಕ್ಕೆ ಹೇಳಿದೆ. ಪುಣ್ಯಾತ್ಮನಿಗೆ ಕೋಟಿಯಲ್ಲಿ ಎಷ್ಟು ಸೊನ್ನೆ ಇದೆ ಅಂತ ಗೊತ್ತಿಲ್ಲ. ಎರಡು ಕೋಟಿಯ ಬದಲು ಇಪ್ಪತ್ತು ಲಕ್ಷ ಬರೆದಿದ್ದ! ಅಷ್ಟಾದ ಮೇಲೆ ಅಕ್ಷರದಲ್ಲಿ ಬರೆಯಬೇಕಾದರೂ ಒದ್ದಾಡಿದ. ಒಂದು ಚೆಕ್  ವ್ಯರ್ಥವಾಗಿ ಪುನಃ ಬರೆಯಬೇಕಾಯಿತು. ಕೊನೇಗೆ ಯಾರೂ ಓದಲಾಗದ ಸಹಿಯನ್ನು ಗೀಚುವುದಕ್ಕೆ ಅದು ಹೇಗೋ ಕಲಿತಿದ್ದ.  ತಮ್ಮಲ್ಲಿರುವ ಸಂಪತ್ತಿನ ಮೌಲ್ಯ ತಿಳಿಯದೇ ಇದ್ದರೆ ಆ ಸಂಪತ್ತಿಗೆ ಬೆಲೆಯೇ ಇಲ್ಲ. ನಾಯಿ ಕೊರಳಿಗೆ ಚಿನ್ನದ ಸಂಕಲೆ ಹಾಕಿ ಕಟ್ಟಿದರೂ ಅದಕ್ಕೆ ಅದು ಕೇವಲ ಸಂಕಲೆ. ಮತ್ತು ಕೇವಲ ಒಂದು ಬಂಧನ. 

ಇಂತಹ ವ್ಯಕ್ತಿಗಳಿಗೆ ಮೈತುಂಬ ಚಿನ್ನ ಇರುತ್ತದೆ. ಬೆಲೆ ಬಾಳುವ ಪೆನ್ನು ಮೊಬೈಲ್  ವಾಚು ಉಡುಪು ಚಪ್ಪಲಿ ಎಲ್ಲಾ ಇರುತ್ತದೆ. ಅದು ಭಾರವಾಗುವುದಿಲ್ಲ. ಅದರೆ ಇವರಿಗೆ ತಲೆಯಲ್ಲಿ ವಿದ್ಯೆಯ ವಜನ್ ಅಂದರೆ ಭಾರ ಇರುವುದಿಲ್ಲ. ಅಷ್ಟಾಗಿ ಈತ ರಾಜಕೀಯ ಗಣ್ಯವ್ಯಕ್ತಿ. ಬಹುಶಃ ಪಂಚಾಯತ್ ಸದಸ್ಯನೋ ಅಧ್ಯಕ್ಷನೋ ಏನೋ ಆಗಿರಬೇಕು. ಯಾರಿಗೆ ಗೊತ್ತು, ಮುಂದೆ ಈತ ಶಿಕ್ಷಣ ಮಂತ್ರಿಯೂ ಆಗಬಹುದು. ಇಲ್ಲ ಮುಖ್ಯಮಂತ್ರಿ ಅಥವಾ ಪ್ರಧಾನಿಯೂ ಆಗಬಹುದು. ನಮ್ಮ ಭಾರತವಲ್ಲವೇ?  ಇವರಿಗೆ ವಿದ್ಯೆಯ ಭಾರ ತಾಳಿಕೊಳ್ಳುವುದು ಕಷ್ಟವಾಗುತ್ತದೆ. ಕೊನೆ ಪಕ್ಷ ವಿದ್ಯೆಗೆ ಬೆಲೆಕೊಡುವ ಮನೋಭಾವವೂ ಇರುವುದಿಲ್ಲ. ವಿದ್ಯಾವಂತರನ್ನು ಕಂಡರೂ ಸಹಿಸುವುದಕ್ಕೆ ಕಷ್ಟವಾಗುತ್ತದೆ. ನಮ್ಮಲ್ಲಿರುವ ಸೊತ್ತಿನ  ಬೆಲೆ ನಮಗೆ ತಿಳಿಯದೇ ಇದ್ದರೆ ಆ ಸೊತ್ತು ಇದ್ದೇನು ಪ್ರಯೋಜನ. ಸುಂದರವಾದ ಹೆಣ್ಣು ಪತ್ನಿ ಇದ್ದರೂ ಧೂಮ ಪಾನ ಮದ್ಯಪಾನದ ವ್ಯಸನದಲ್ಲಿ ಸುಂದರ ಹೆಂಡತಿ ಕೂಡ ಕೇವಲ ಹೆಸರಿಗಷ್ಟೆ ಆಗಿ ಇದ್ದಂತೆ. 


Wednesday, July 22, 2026

ದ್ವೈತ ಅದ್ವೈತ





 

ದ್ವೈತ ಅದ್ವೈತ ಚರ್ಚೆ ಅಥವಾ ಸಂವಾವಾದರೆ ‌ನಮ್ಮಂತಹವರು ಒಂದಷ್ಟು ವಿಷಯ ಸಂಗ್ರಹ ಮಾಡಿಕೊಳ್ಳಬಹುದು. ಆದರೆ ಇದು ಚರ್ಚೆಯಲ್ಲ, ಸಂಘರ್ಷ.‌ಅಷ್ಟೇ ಅಲ್ಲ ಒಂದು ಯುದ್ದ. ಬಹುಶಃ ನಮ್ಮ ಧರ್ಮದ ದೇವತೆ ಮಹಾಭಾರತದ ಭೀಷ್ಮನಂತೆ ಕಣ್ಣೀರು ಸುರಿಸಬಹುದು. ಆದರೆ ಇದನ್ನು ಅರ್ಥಮಾಡುವ ಮತ್ತು ಕಾಣುವ ಮನಸ್ಸು ಮಾತ್ರ ಇಲ್ಲವೇ ಇಲ್ಲ.



ಹಿಂದೂ ಧರ್ಮದಲ್ಲಿ ಹಲವಾರು ಪಂಗಡಗಳು ವರ್ಣಗಳು ಇವೆ. ಹಲವು ಜನನ  ಸಂಸ್ಕಾರಗಳು ಇವೆ. ಹೊರನೋಟಕ್ಕೆ ಎಲ್ಲವೂ ವಿಭಿನ್ನ ವೈರುಧ್ಯ. ಆದರೆ ವಿವೇಚನೆ ಇದ್ದರೆ ಇದರ ಸಾರ ಗ್ರಹಿಸಿ ಅರ್ಥವಿಸುವುದಕ್ಕೆ ಸಾಧ್ಯ. ಹಿಂದೂ ಧರ್ಮ‌ ಅಂತ ಅಲ್ಲ,  ಎಲ್ಲಾ ಧರ್ಮಕ್ಕೂ ಇದು ಅನ್ವಯ, ಆದರೆ ಹಿಂದೂ ಧರ್ಮ‌ ಇದನ್ನು ಚೆನ್ನಾಗಿ ಅಳವಡಿಸಿಕೊಂಡಿದೆ.‌ ಆದರೆ ಇದನ್ನು ಅರ್ಥ ಮಾಡುವುದರಲ್ಲಿ ನಾವು ವಿಫಲಾರಾಗಿದ್ದೇವೆ. ಆದರ ಕಾರಣವೇ ಈ ಸಂಘರ್ಷ.  ನಾವು ತತ್ವವನ್ನು ಆಯುಷ್ಯ ಪೂರ್ಣ ಆಧ್ಯಯನ‌ಮಾಡುತ್ತೇವೆ. ಆದರೆ ನೀತಿಯನ್ನು ಒಂದಿಷ್ಟೂ ತಿಳಿಯುವುದಕ್ಕೆ ಹೋಗುವುದಿಲ್ಲ.  ತತ್ವಕ್ಕಿಂತಲೂ‌ ನೀತಿ ಬಹಳ ಸರಳವಾಗಿರುತ್ತದೆ. ನಾವು ಸಮಷ್ಟಿಯಲ್ಲಿ ಯೋಚಿಸುವುದರಲ್ಲಿ ಎಡವಿಬಿಡುತ್ತೇವೆ. 


ಧರ್ಮದ ಚಿಂತನೆಯನ್ನು ನಾವು ಅರ್ಥವಿಸುವುದರಲ್ಲಿ ಎಡವಿದ್ದೇವೆ. ಆದರೆ ನೀತಿಯನ್ನಾದರೂ ಮನುಷ್ಯನಾಗಿ ಅರಿಯಬೇಕು. ಧರ್ಮದ ನೀತಿ ಬಹಳ ಸರವಾಗಿರುತ್ತದೆ.  ದೊಡ್ಡದಾದ ಕಲ್ಲೊಂದನ್ನು ಅಥವಾ ದೇವರ ವಿಗ್ರಹವನ್ನು ಎತ್ತ ಬೇಕಿದ್ದರೆ ಒಂದೇ ಕೈಯಲ್ಲಿ ಸಾಧ್ಯವಾಗದೇ ಇರುವಾಗ ಮತ್ತೊಂದು ಕೈಯಿಂದ ಎತ್ತಿಬಿಡುತ್ತೇವೆ.  ಕಲ್ಲು ವಿಗ್ರಹ ಎತ್ತಬೇಕಿದ್ದರೆ ಎರಡೂ ಕೈ ಪರಸ್ಪರ ವಿರುದ್ದ ದಿಕ್ಕಿನಿಂದಲೇ ಕಲ್ಲಿನ ಹತ್ತಿರ ಬರಬೇಕು. ಎರಡು ಕೈಗಳು ವಿರುದ್ಧ ದಿಕ್ಕಿನಿಂದ ಹತ್ತಿರ ಬಂದು ಎತ್ತುವುದು ಒಂದೇ ಬಂಡೆಯನ್ನು, ಅದೇ ರೀತಿ ಹೆಬ್ಬೆರಳು ತೋರು ಬೆರಳು ಒಟ್ಟು ಎರಡೂ ಬೆರಳು ಒಟ್ಟು ಸೇರಿ ಒಂದೇ ವಸ್ತುವನ್ನು ಎತ್ತಿಬಿಡುತ್ತವೆ. ಅದೇ ರೀತಿ ಎರಡು ಧರ್ಮಗಳು ಅಥವಾ ಎರಡು ಪಂಗಡಗಳು ಒಟ್ಟು ವಿರುದ್ದ ದಿಕ್ಕಿನಿಂದ ಬಂದು ಒಂದೇ ಭಗವಂತನ್ನು ಸೇರಿಬಿಡುತ್ತದೆ. ವಿವಿಧ ಶಾಖೆಗಳ ಸಾರವಿದು. 


ಹಲವು ಶಾಖೆಗಳು, ಅದರಲ್ಲಿ ಒಂದು ಬ್ರಾಹ್ಮಣರು, ಅದಕ್ಕೂ ಮತ್ತೂ ಒಂದಷ್ಟು ಶಾಖೆಗಳು. ಎಲ್ಲಾ ಶಾಖೆಗಳು ಒಂದೇ ಗಾಯತ್ರಿಯನ್ನು ಪಠಿಸುವುದು. ದೇವರು ರೂಪ ಹಲವು ಮಂತ್ರಗಳು ಹಲವು. ಅದರೆ ಮೂಲ ಸ್ವರೂಪ ಒಂದೇ. ಬ್ರಾಹ್ಮಣರಲ್ಲೆ ಸ್ಮಾರ್ತರು ವೈಷ್ಣವರು..ಹೀಗೆ..ನಿಜಕ್ಕಾದರೆ ಇದರ ಅರ್ಥ ತಿಳಿದು ವ್ಯವಹರಿಸುವವರು ನಿಜವಾದ ಬ್ರಾಹ್ಮಣ. ಸ್ಮೃತಿ ಶಾಸ್ತ್ರದಲ್ಲಿ ಹೇಳಿದಂತೆ ಅನುಸರಿಸಿ ನಡೆಯುವವರೆಲ್ಲರೂ ಯಾವ ಬ್ರಾಹ್ಮಣ ಪಂಗಡವಾದರೂ ಅದು ಸ್ಮಾರ್ತ. ಆದರೆ ನಮಗೆ ಸಮಷ್ಠಿಯಲ್ಲಿ ಸ್ವೀಕರಿಸುವುದು ಕಷ್ಟವಾಗುತ್ತದೆ. ಹೇಗೆ ಬೇಕೋ ಹಾಗೆ ವಿಭಾಗಿಸಿಬಿಡುತ್ತೇವೆ. ಹೋಗಲಿ ವಿಭಾಗಿಸಿದರೂ ಭಾವದಲ್ಲಿ ಒಂದಾಗಿರಬೇಕು. ಎಲ್ಲವನ್ನೂ ಸೇರಿಸಿ ತುತ್ತು ತುತ್ತು ಉಂಡರೂ ಎಲ್ಲವೂ  ಒಂದೇ ಹೊಟ್ಟೆಗೆ ಸೇರುವಂತೆ. ಗಮ್ಯದಲ್ಲಿ ಎಲ್ಲವೂ ಒಂದಾಗಿಬಿಡುತ್ತವೆ. ಕರಗಿ ಸಾರ ದೇಹಕ್ಕೆ ಸೇರಿಬಿಡುತ್ತದೆ. ಯಾವ ಶಾಸ್ತ್ರದಲ್ಲಿ ಮದುವೆಯಾದರೂ ಗಂಡು ಹೆಣ್ಣು ಒಂದಾಗಿ ಸಂಸಾರವಾದಂತೆ ಈ ಸಾರ ಅರ್ಥವಿಸಿಕೊಳ್ಳಬೇಕು. 


ಹಿಂದೂ ಧರ್ಮದಲ್ಲಿ ಹಲವು ಜಾತಿ ಪಂಗಡಗಳಿರಬಹುದು. ಯೋಚಿಸಿ ನೋಡಬೇಕು. ಒಂದೇ ಜಾತಿಯಲ್ಲಾದರೂ ಏಕಮತದ ಸಾಮರಸ್ಯ ಇರಬೇಕು. ಆದರೆ ಒಂದು ಮಠದವರನ್ನು ಕಂಡರೆ ಮತ್ತೊಂದು ಮಠಕ್ಕೆ ಮತ್ಸರ. ದ್ವೈತವೋ ಅದ್ವೈತವೋ ಮೊದಲು ಅಂತರಂಗದಲ್ಲಿ ಒಂದಾಗಬೇಕು. ಅದಲ್ಲವಾದರೆ ಶಾಖೆ ಉಪಶಾಖೆಗಳು ಹುಟ್ಟಿಕೊಂಡರೂ ಮರಕ್ಕೆ ಅದು ಭಾರ. ಯಾರಿಗೋ ತೊಂದರೆ. ಕೊನೆಗೆ ಆ ಶಾಖೆಯನ್ನು ತುಂಡರಿಸಬೇಕು. ಇಲ್ಲವಾದರೆ ಮರಕ್ಕೆ ಉಳಿಗಾಲವಿಲ್ಲ. ಬಿರುಗಾಳಿಯ ಧಾಳಿಗೆ ಬುಡಸಹಿತ ಧರೆಗೆ ಮರ ಉರುಳಬಹುದು. 


ಒಂದು ಮನೆಯೊಳಗೆ ಅಥವಾ ಕುಟುಂಬದೊಳಗೆ ನಮಗೆ ಹತ್ತಿರದವರಲ್ಲಿ ಏನೋ ಒಂದು ದೌರ್ಬಲ್ಯ  ಕುಂದು ಕೊರತೆ ಇರಬಹುದು.  ಆದರೆ ಅದನ್ನು ನಾವು ಹೇಳದೇ ಇರಬಹುದು.  ಹೇಳಿಯೇ ತೀರುವ ಅನಿವಾರ್ಯತೆ ಇಲ್ಲ. ಆದರೂ ಅವರ ದೌರ್ಬಲ್ಯವನ್ನು ಆ ಕುಂದು ಕೊರತೆಯನ್ನು  ಹೇಳುವ ಉದ್ದೇಶ ಒಂದೇ ಸಂಘರ್ಷ. ನಮಗೆ  ಅವರಲ್ಲಿ ಸರಿ ಹೋಗುವುದಿಲ್ಲ ಎಂಬ ಭಾವನೆಯೇ ಅಧಿಕವಾಗಿರುತ್ತದೆ. ಮನಸ್ಸಿನಲ್ಲಿ ಹೀಗೆ ವೈಷಮ್ಯವಿದ್ದರೆ ಯಾವ ಸಮಷ್ಟಿಯ ಚಿಂತನೆಯೂ ಹತ್ತಿರ ಸುಳಿಯಲಾರದು. ಯರದೊ ತಪ್ಪು ದೌರ್ಬಲ್ಯಗಳನ್ನು ಅವರಿಗೆ ನೋವಾಗಬಹುದು ಎಂದು ತಿಳಿದೂ ಹೇಳುವುದರಿಂದ ಉದ್ದೇಶ ಒಂದೇ ಅವರಿಗೆ ನೋವು ಕೊಡಬೇಕು. ಪರೋಕ್ಷವಾಗಿ ದ್ವೇಷ  ವೈಷಮ್ಯ ಸಾಧನೆಯಾಗಬೇಕು. ಈ ಭಾವನೆಯಲ್ಲಿ ಎರಡು ಕೈಗಳು ವಿರುದ್ಧದಿಕ್ಕಿನಿಂದಲು ಒಂದಾಗದು. ಎತ್ತಬೇಕಾದ ಕಲ್ಲು ಅಲ್ಲೇ ಬಿದ್ದಿರುತ್ತದೆ.  ಯಾರೋ ಯಾವುದೋ ಕಾಲದಲ್ಲಿ ಹೇಳಿದರು ಅಥವ ಬರೆದರು ಎಂದುಕೊಂಡು ಪ್ರಸ್ತುತ ಅದನ್ನು ಹೇಳುವುದರಿಂದ ಏನಾದರೂ ಜೀವನಕ್ಕೆ ಲಾಭ ಇರಬೇಕಲ್ಲ. ಅದು ಹೇಳದೇ ಇದ್ದರೆ ಜೀವನ ಸಾಗದೇ ಉಳಿದುಕೊಂಡಿಲ್ಲ. ಆ ಕಾಲದಲ್ಲಿ ನಮ್ಮ ಅಸ್ತಿತ್ವವೇ ಇರುವುದಿಲ್ಲ ಎಂದಿರುವಾಗ ಏನಿದ್ದರು ತರ್ಕ ಊಹೆಗೆ ನಿರ್ಣಯ ಅವಲಂಬಿಸುತ್ತದೆ. ಯಾಕೆಂದರೆ ಆಗ ನಾವು ಬಿಟ್ಟು ನಮ್ಮ ಹಿರಿಯರಿಂದ ಹಿರಿಯರು ಜೀವಿಸಿರುವುದಿಲ್ಲ. ಹಾಗಿರುವಾಗ ಅದನ್ನು ಉಲ್ಲೇಖಿಸಿ ಆಗಬೇಕಾದದ್ದು ಒಂದೇ ಅಸಮಾಧಾನ ದ್ವೇಷ ಸಾಧನೆ.  ಹಲವು ಸಲ ಕಳೆದು ಹೋದ ಘಟನೆ ನಮಗೆ ಹಿತವಲ್ಲದೇ ಇರುವುದನ್ನು ನಾವು ಪ್ರಸ್ತುತ ಬದುಕಿನ ಕ್ಷೇಮಕ್ಕೋಸ್ಕರ ಮರೆಯುತ್ತೇವೆ.


ಪರಧರ್ಮವನ್ನು ನಿಂದಿಸುವುದು ಇಂದು ಮೊದಲಲ್ಲ. ಮೊದಲಿನಿಂದಲೂ ಅದು ಎಲ್ಲೋ ಒಂದು ಕಡೆ ನಿರಂತರವಾಗಿ ನಡೆಯುತ್ತಿತ್ತು. ಆಗ ಅದು ಸಾರ್ವಜನಿಕವಾಗಿ ಅರಿವಿಗೆ ಬರುತ್ತಿರಲಿಲ್ಲ. ಯಾರೋ ಒಬ್ಬ ಅರಸನೋ ಮಹನೀಯನೋ ಹೇಳಿದರೂ ಯಾರೋ ಅದನ್ನು ದಾಖಲೀಕರಣ ಮಾಡಿದ್ದರೆ ಕೆಲವರಿಗಾದರೂ ತಿಳಿದು ಬಿಡುತ್ತಿತ್ತು. ಈಗ ಹಾಗಿಲ್ಲ. ಕನಿಷ್ಠ ಒಬ್ಬ ಹುಲು ಮಾನವ ಹೇಳಿದರೂ ಅದು ಸಾರ್ವಜನಿಕ ಜಗತ್ತಿಗೆ ಪ್ರಕಟವಾಗುತ್ತದೆ. ನಾವು ಯಾರನ್ನೋ ವ್ಯಕ್ತಿಗತವಾಗಿ, ಇಲ್ಲ ಧರ್ಮ ಜಾತಿಯಿಂದಲೋ ನಿಂದನೆ ಮಾಡಿದರೆ ಈಗಿನ ಸಾಮಾಜಿಕ ಜಾಲತಾಣದಿಂದ ಮರುಕ್ಷಣವೇ ತಿಳಿದುಬಿಡುತ್ತದೆ. ಯಾವುದೊ ಮಠ ದೇವಾಲಯದ ಗೋಪುರದಲ್ಲಿ ಕುಳಿತು ಏನೋ ಹೇಳಿದ ಎಂದರೂ ಮೊದಲು ಅಲ್ಲೇ ಅದು ಕರಗಿ ಹೋಗುತ್ತಿತ್ತು. ಈಗ ಹಾಗಿಲ್ಲ ಜಾಲತಾಣದಿಂದ ಅದು ಹೊಸ ಚಿಗುರು ಹೊಡೆದು ಹೆಮ್ಮರವಾಗಿ ಬೆಳೆದು ಬಿಡುತ್ತದೆ. ಹಾಗಾಗ ಪರನಿಂದೆ ದೂಷಣೆ ಮಾಡುವಾಗ ಎಚ್ಚರವಿರಬೇಕು. ಇದರ ಅರಿದ್ದೂ ಮಾಡಿದರೂ ಅದರ ಉದ್ದೇಶ ಒಂದೇ ಪರರನ್ನು ನೋಯಿಸುವುದು. ಪರರನ್ನು ನೋಯಿಸಿ ಆ ಹಿಂಸೆಯ ತಳಹದಿಯಲ್ಲಿ ನಮ್ಮ ಧರ್ಮ ಜಾಗೃತವಾಗಬೇಕೆ? ಅದರ ಅನಿವಾರ್ಯ ಯಾವುದೇ ಧರ್ಮಕ್ಕಿಲ್ಲ. 

ಭಜಗೋವಿಂದಂ ಅಂತ ಸಾರಿದ ಶಂಕರ ಭಗವತ್ಪಾದರು ಹೇಳಿದ್ದು ಒಂದನ್ನೆ ಎಲ್ಲವನ್ನು ಬಿಡು ಗೋವಿಂದನನ್ನು ಭಜಿಸು. ಈ ಗೋವಿಂದ ನನಗು ನಿನಗೂ ಎಲ್ಲರಿಗೂ ಒಂದೆ. ಯಾವುದೇ ಧರ್ಮವನ್ನೂ ಕೀಳಾಗಿ ಕಾಣಬೇಡ.  ನಿನ್ನ ಧರ್ಮವನ್ನು ಅನುಸರಿಸು, ನಿನ್ನ ಕರ್ಮವನ್ನು ಮಾಡು. ಕರ್ತವ್ಯಭ್ರಷ್ಟನಾಗಬೇಡ. ಅಮೂಲ್ಯ ವಾದ ವೇದ ಮಂತ್ರಗಳು ಆಗಮ ಶಾಸ್ತ್ರಗಳು ನಮ್ಮ ಮುಂದೆ ಇದೆ. ಆದರೆ ಅದನ್ನು ಅರಿಯುವುದರಲ್ಲಿ ನಾವು ಸೋಲುತ್ತಿವೆ. ಒಂದು ವೇಳಿ ಅರಿತಿದ್ದರೆ ಈ ಸಂಘರ್ಷವೇ ಇರುತ್ತಿರಲಿಲ್ಲ.

ಕಾನೂನು ನಿಯಮಗಳು ಅನಿವಾರ್ಯವಾಗುವುದು ಜೀವನವೇ ದುರ್ಭರ ಎನಿಸಿದಾಗ. ಆದರೆ ನೀತಿ ಬದುಕಿನಲ್ಲಿ ಪ್ರತಿಕ್ಷಣವೂ ಅನಿವಾರ್ಯವಾಗುತ್ತದೆ. ಕಾನೂನು ನೀತಿ ಎರಡು ವಿಭಿನ್ನ. ನೀತಿ ಮನುಷ್ಯತ್ವದ ತಳಹದಿಯಲ್ಲಿ ನಿರ್ಣಯವಾಗುತ್ತದೆ. ಕಳ್ಳನಾದರೂ ಆತನ ವೃತ್ತಿಯನ್ನು ಕಾನೂನಿನಲ್ಲಿ ಅಪರಾಧ ಎಂದು ಪರಿಗಣಿಸಿದರೂ ನೀತಿಯಿಂದ ವಿವೇಚಿಸುವಾಗ ಆತ ನಿರಪರಾಧಿಯಾಗಬಹುದು. ಹೊಟ್ಟೆ ಪಾಡಿಗೆ ಮಾಡಿದ ಅಪರಾಧ ಕ್ಷಮಿಸಲ್ಪಡುತ್ತದೆ. ಜೀವ ರಕ್ಷಣೆಗೆ ಸುಳ್ಳು ಹೇಳಿದರೂ ನಿಂದಿಸಿದರೂ ನೀತಿಯಿಂದ ಅದು ಅಪರಾಧವಾಗುವುದಿಲ್ಲ. 

ಜೀವರಾಶಿಗಳಲ್ಲಿ ಮನುಷ್ಯನಿಗೆ ಮಾತ್ರ ಭಗವಂತ ಮನಸ್ಸನ್ನು ಕೊಟ್ಟಿರುತ್ತಾನೆ. ಹಾಗಾಗಿಯೇ ಆತ ಮನುಷ್ಯ ಎನಿಸಿಕೊಳ್ಳುತ್ತಾನೆ. ಆದರೆ ಮನುಷ್ಯ ಮನಸ್ಸನ್ನು ಮರೆತರೆ ಆತ ದಾನವನಾಗುತ್ತಾನೆ. ಮನಸ್ಸಿದ್ದವನಿಗೆ ಮಾತ್ರವೇ ಮಾನವೀಯ ಸಂಬಂಧಗಳ ಮೌಲ್ಯ ಅರಿವಾಗುತ್ತದೆ. ದೋಣಿ ಚಲಾಯಿಸುವ ಅಂಬಿಗನಲ್ಲಿ ವಿದ್ವಾಂಸ ತತ್ವ ಶಾಸ್ತ್ರ ಮೀಮಾಂಸೆಯನ್ನು ಕೇಳಿದಂತೆ ಕೊನೆಯಲ್ಲಿ ಅಂಬಿಗ ಕೇಳಿದ ಒಂದು ಪ್ರಶ್ನೆಗೆ ಉತ್ತರ ತಿಳಿಯದೇ ಇದ್ದರೆ, ಎಷ್ಟು ತತ್ವ ಶಾಸ್ತ್ರ ಓದಿದರೇನು ಈಜುವುದಕ್ಕೆ ಬಾರದೇ ಇದ್ದರೆ ಅಂಬಿಗ ಹೇಳುವಂತೆ ಎಲ್ಲವೂ ವ್ಯರ್ಥ. ಮಂತ್ರಾಧೀನಂತು ದೇವತ ಅಂತ ಇದ್ದರೂ ದೇವರು ಒಲಿಯುವುದು ಭಕ್ತಿಗೆ. ವಿದ್ಯಾವಂತ ಅನ್ನಿಸುವುದಕ್ಕಿಂತ ನೀತಿವಂತ ಅನ್ನಿಸುವುದರಲ್ಲಿ ಹೆಚ್ಚು ಶಕ್ತಿ ಇದೆ. 

ಎಲ್ಲಾ ಧರ್ಮಕ್ಕೂ ಇರುವುದು ಒಂದೇ ಗೀತೆ. ಅದು ಭಗವದ್ಗೀತೆ. ಜಾತಿ ಧರ್ಮಾನುಸಾರ ಭಗವದ್ಗೀತೆ  ಎಂದಿಗೂ ಇರುವುದಿಲ್ಲ. ಎಲ್ಲಾ ಧರ್ಮಕ್ಕೂ ಅದು ಅನಿವಾರ್ಯವಾಗಬಹುದು. ಹಾಗಾಗಿ ಪರಧರ್ಮ ನಿಂದನೆ ಯಾವ ಯತಿವರ್ಯರೂ ಹೇಳಲಿಲ್ಲ. ಇದರ ಅರಿವಿದ್ದೂ ಅವರು ನಿಂದಿಸುತ್ತಾರೆ ಎಂದರೆ ಅವರಿಗೆ ಸಹಿಷ್ಟುತೆ ಸೌಹಾರ್ದತೆಯ ಅವಶ್ಯಕತೆ ಇರುವುದಿಲ್ಲ್


Saturday, July 18, 2026

ನಮಗೇನು ಬೇಕಿದೆ?

         ನಮ್ಮಲ್ಲಿ ಜಗತ್ತಿಗೆ ಮಾದರಿಯಾಗುವ ಸಂವಿಧಾನ ಇದೆ. ಆದರೆ ಅದರ ಅರಿವು ಪಾಲನೆ ಅನುಷ್ಠಾನವಿಲ್ಲ. ಮೊನ್ನೆ ನಮ್ಮ‌ಮನೆಯಲ್ಲಿ ಮಗಳೊಂದಿಗೆ ಸ್ವಾರಸ್ಯಕರ ಚರ್ಚೆ ನಡೆಯಿತು, ಇಂದಿನ ಮಕ್ಕಳು ಹೇಳುವಂತೆ ಒಂದು ಪಾಟ್ ಕಾಷ್,.

        ನೀಟ್ ಪರೀಕ್ಷೆಯಲ್ಲಿ ನಡೆದ ಸೋರಿಕೆ ಮತ್ತು ಅದರ ನಂತರದ ದುರಂತಗಳನ್ನು ಪ್ರತಿಭಟಿಸಿ ಯಾರೋ ಒಬ್ಬರು ಉಪವಾಸಕ್ಕೆ ನಿಮ್ಮ ಬೆಂಬಲ ಉಂಟಾ. ನಿಮ್ಮ ಅಭಿಪ್ರಾಯ ಏನು ಅಂತ ಕೇಳಿದಳು. ಮೇಲು ಇದು ಬೆಂಬಲಿಸುವ ವಿ಼ಷಯ. ಹಲವಾರು ಮಕ್ಕಳ ಪ್ರಾಣಕ್ಕೆ ಎರವಾದ ಹಗರಣವಿದು. ಆದರೆ ನಮ್ಮ ಕಾನೂನು, ನಮ್ಮ ಪ್ರಜಾಪ್ರಭುತ್ವದ ಮುಖಗಳನ್ನು ಅರಿವಿದ್ದವನು ಒಂದೇ ಯೋಜನೆಯಲ್ಲಿ ಬೆಂಬಲಿಸುವುದು ಕಷ್ಟ. ಯಾಕೆಂದರೆ ಎಲ್ಲಾ ನಿಯಮ‌ ನಿಬಂಧನೆಗಳನ್ನು ತಮ್ಮ ಸ್ವಾರ್ಥಕ್ಕೆ ತಮ್ಮ ಮೂಗಿನ ನೇರಕ್ಕೆ ಉಪಯೋಗಿಸುವ ರಾಜಕೀಯ ಹುನ್ನಾರಗಳು ಇಂದು ಮೊದಲಲ್ಲ. ಇದರಲ್ಲಿ ಪ್ರಾಮಾಣಿಕತೆಯ ವಿಷಯದಲ್ಲಿ ವಿಶ್ವಾಸ ಕಳೆದು ಹೋಗಿದೆ. ಈ ಘಟನೆಯಲ್ಲಿ ಸತ್ಯವೋ ಸುಳ್ಳೋ ಅದರ ಬಗ್ಗೆ ಹೇಳುವುದಲ್ಲ. ಇದು ಸತ್ಯವೇ ಇರಬಹುದು ಎಂದು ತಿಳಿದರೂ ಯೋಚನೆಗಳು ಹಲವಾರು ಇರುತ್ತದೆ.

          ಸದರಿ ಸಚಿವರ  ರಾಜೀನಾಮೆ ಆಗ್ರಹಿಸಿ ಈ ಸತ್ಯಾಗ್ರಹ ನಡೆಯುತ್ತದೆ. ಆಗ್ರಹವೇನೋ ಸರಿ ಆದರೆ ಫಲಶ್ರುತಿ ಏನು ಅಂತ ಯೋಚಸಿದರೆ ನಮ್ಮ‌ ಪ್ರಜಾಪ್ರಭುತ್ವದ ಇತಿಹಾಸವನ್ನು ಅವಲೋಕಿಸಿದರೆ ನಂಬಿಕೆಯೇ ಹೊರಟು ಹೋಲುತ್ತದೆ. ಒಂದು ವೇಳೆ ನೈತಿಕ ಹೊಣೆ ಹೊತ್ತು ಸಚಿವರು ಪದತ್ಯಾಗ ಮಾಡಿದರೂ ಇನ್ನೊಬ್ನ ಬಂದರೂ ಇದು ಸರಿಯಾಗಬಹುದೇ? ಖಂಡಿತ ಇಲ್ಲ. ಹಾಗಾಗಿ ಇವುಗಳಲ್ಲಿ ರಾಜಕೀಯ ಧೋರಣೆ ಇಲ್ಲ ಎನ್ನುವುದಕ್ಕೆ ಸಾಧ್ಯವಿಲ್ಲ.  ಹಚ್ಚೇಕೆ ಈಗ ಉಪವಾಸ ಮಲಗಿದವರನ್ನ ಅಲ್ಲಿ ತಂದು ಕೂರಿಸಿದರೂ ವ್ಯವಸ್ಥೆ ಸರಿಯಾಗುವ ಭರವಸೆ ಇಲ್ಲ. ಹಾಗಾಗಿ ಹೇಳಬಹುದು  ಶ್ರೇಷ್ಠವಾದ ಕಾನೂನು ಇದೆ ಅನುಷ್ಠಾನ ಇಲ್ಲ. 

          ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳು ಕಳೆದವು. ನಾವು ಗಂಭೀರವಾದ ನಿಯಮ ಮಾಡಿದ್ದೇವೆ ಅದನ್ನು ಗೌರವಿಸುವುದನ್ನು ಅರಿತೇ ಇಲ್ಲ. ಇದುವರೆಗೆ ಆಳಿದವರು ತಂದಿಟ್ಟ ದುರಂತವಿದು. ದೇಶವನ್ನು ಕಾಡುವುದು, ಬಡತನವಲ್ಲ, ಜನ ಸಂಖ್ಯೆಯಲ್ಲ ಪ್ರಕೃತಿ ವಿಕೋಪವಲ್ಲ... ಕಾಡುವುದು ಭ್ರಷ್ಟಾಚಾರ. ಆಳಿದವರು ಇದನ್ನೇ ಕಲಿಸಿದ್ದು ಇದನ್ನೇ ತೋರಿಸಿದ್ದು .  ಒಂದು ಡಾಲರ್ ಒಂದು ರೂ ಇದ್ದದ್ದು ಐವತ್ತು ಆದಾಗ ಅರಿವಾಗಲೂ ಇಲ್ಲ.‌ಪ್ರತಿಭಟಿಸಲೂ ಇಲ್ಲ. ಕಾರಣ ಯಾರು? 

          ಒಂದು ಮಂತ್ರಿಯೋ ಶಾಸಕನೋ ರಾಜೀನಾಮೆ ಕೊಟ್ಟರೆ ವ್ಯವಸ್ಥೆ ಬದಲಾಗುವುದಿಲ್ಲ. ವ್ಯಕ್ತಿ‌ಮಾತ್ರ ಬದಲಾಗುತ್ತಾನೆ. ಕದ್ದು ನೋಡುವವರು ಇರುವ  ತನಕ ಕದಿಯುವವರು ಇರುತ್ತಾರೆ. ಕಾನೂನಿಗಿಂತಲೂ ನಮಗವಶ್ಯವಿರುವುದು ನೀತಿ. ಸಾಮಾಜಿಕ ಪ್ರಜ್ಞೆ. ಅದಿಲ್ಲವಾದರೆ ಯಾವುದೂ ಬದಲಾಗುವುದಿಲ್ಲ. ಎಷ್ಟು ಬಿಗಿಯಾದ ಕಾನೂನು ಇದ್ದರೇನು, ನಮಗೆ ಕಾನೂನಿಗಿಂತಲೂನ ನಮ್ಮ ಜಾತಿ ಧರ್ಮವೇ ಮುಖ್ಯವಾಗಿ ಹಿರಿದಾಗುತ್ತದೆ. ಮಾನವೀಯತೆ ಸಾಯುತ್ತದೆ. ಇಷ್ಟಾದರೂ ಇದು ಹಗರಣದ ಸಮರ್ಥನೆಯಲ್ಲ. ಯಾಕೆಂದರೆ ಹಗರಣ ನಮಗೇನು ಹೊಸತಲ್ಲ. ಅದುವೇ ಸಹಜ ಬದುಕಾಗಿದೆ.

Sunday, July 12, 2026

ಬಾನಲ್ಲೂ ನೀನೆ ಭುವಿಯಲ್ಲು... ನೀನೆ..

" ಬಾನಲ್ಲೂ ನೀನೆ ಭುವಿಯಲ್ಲು... ನೀನೆ"   ನಾವು ನಿದ್ದೆಗೆ ಜಾರುವ ಹೊತ್ತು ರಾತ್ರಿ ಹತ್ತು ಘಂಟೆಗೆ ನೀರವ ಮೌನದಲ್ಲಿ ಪಕ್ಕದ ಮನೆಯ ರೇಡಿಯೋದಿಂದ ಹಾಡು ಬರುವುದು ಕೇಳಿ ಬರುತ್ತಿದ್ದ ನಮ್ಮ ಬಾಲ್ಯದ ಕಾಲ.  ಸಿನಿಮಾ ಹಾಡು ಕೇಳಬೇಕೆಂದರೆ ಯಾರದೋ ಮನೆಗೆ ಹೋಗಿ ರೇಡಿಯೋ ಹಾಕಿಸಿ ಕೇಳಬೇಕಿತ್ತು. ಅವರೂ ಹಾಗೆ ರೇಡಿಯೋ ಬ್ಯಾಟರಿ ಖರ್ಚಾಗುತ್ತದೆ ಎಂದು ಅದನ್ನು ಒಂದಿಷ್ಟು ಸಣ್ಣ ಧ್ವನಿಯಲ್ಲೇ ಇಡುತ್ತಿದ್ದರು.  ತೀರಾ ಬಡತನದ ಒಂದು ಸಾಮಾನ್ಯ ಸಾಧನವಾದ ರೇಡಿಯೋ ಕೂಡ ನಮ್ಮಲ್ಲಿರಲಿಲ್ಲ.

    ಬಾಲ್ಯದಲ್ಲಿ ನಮ್ಮ ಮನೆಯಲ್ಲಿ ಮನರಂಜನೆ ವಸ್ತು ಯಾವುದೂ ಇರಲಿಲ್ಲ. ಊರಿಗೆಲ್ಲಾ ವಿದ್ಯುತ್ ಸಹ ಇರಲಿಲ್ಲ. ನಮ್ಮ ಪೈವಳಿಕೆ ಗ್ರಾಮದ ಮನೆಗಳಲ್ಲಿ  ವಿದ್ಯುತ್ ದೀಪ ಬೆಳಗಿದ್ದು 1980 ರ ಇಸವಿಯಲ್ಲಿ. ಅದುವರೆಗೆ ಸೀಮೆ ಎಣ್ಣೆಯ ದೀಪ ಲ್ಯಾಂಪ್ ಗಳು ಮಾತ್ರ. ಆನಂತರ ಒಂದಷ್ಟು ಧನಿಕರ ಮನೆಗೆ ವಿದ್ಯುತ್ ಸಂಪರ್ಕ ಬಂದರೂ ನಮ್ಮ ಬಾಡಿಗೆ ಮನೆಯಲ್ಲಿ ಸೀಮೆ ಎಣ್ಣೆ ದೀಪವೇ ಪ್ರಕಾಶ ಮೂಲ. ಇಂತಹ ಸ್ಥಿತಿಯಲ್ಲಿ ಮನರಂಜನ ಸಾಧನ ತರುವುದು ಉಪಯೋಗಿಸುವುದು ನಮ್ಮ ಕೈಗೆಟುವ ವಸ್ತುವಾಗಲಿಲ್ಲ.

ಆಗೆಲ್ಲ ಕೆಲವರು ಸಾಯಂಕಾಲ ಬಜಾರ್ ಗೆ ಬಂದವರು ರೇಡಿಯೋ ತರುತ್ತಿದ್ದರು. ಕೈಯಲ್ಲೊಂದು ರೇಡಿಯೋ ತಂದು ಜಂಭದಿಂದ ಅಂಗಡಿಯ ಜಗಲಿಯ ಬೆಂಚಿನ  ಮೇಲೆ ಕುಳಿತು ಬರ ಬರ ಸದ್ದಿನೊಂದಿಗೆ ಮಂಗಳೂರು ಭದ್ರಾವತಿ ಸಿಲೋನ್ ವಿವಿಧ ಭಾರತಿ ಸ್ಟೇಶನ್ ಹುಡುಕುತ್ತಿದ್ದರೆ, ನಾವು ಸುತ್ತ ನೆರೆದು ಆಸಕ್ತಿಯಿಂದ ನೋಡುತ್ತಿದ್ದೆವು. ಪುಟ್ಟ ಪೆಟ್ಟಿಗೆಯಿಂದ ಮಾತನಾಡಿದ ಹಾಡಿದ ಸದ್ದು ಬರುವುದು ಅಚ್ಚರಿಯ ವಿಷಯವಾಗಿತ್ತು. ಯಾರೋ ಎಲ್ಲೋ ರೇಡಿಯೋ ಹಾಕಿ ಹಾಡು ಕೇಳುತ್ತಿದ್ದರೆ, ನಮ್ಮ ಮನೆಯಲ್ಲೂ ಒಂದು ರೇಡಿಯೋ ಅದು ಕನಸಿನ ವೈಭವದ ವಿಷಯವಾಗಿತ್ತು. ಅಂತಹ ಕಾಲದಲ್ಲಿ ಎಲ್ಲೋ ಯಾರದೋ ಒಂದು ರೇಡಿಯೋದಲ್ಲಿ ಆಕಾಶವಾಣಿಯ ಚಿತ್ರಗೀತೆಯಲ್ಲಿ ಹಾಡು ಬರುತ್ತಿದ್ದರೆ ಅದರಲ್ಲಿ ಗಾಯಕರ ಹೆಸರು ಹೇಳುತ್ತಿದ್ದರೆ, ಅದರಲ್ಲಿ ಸಾಮಾನ್ಯವಾಗಿ ಬರುತ್ತಿದ್ದ ಹೆಸರು ಪಿ ಬಿ ಶ್ರೀನಿವಾಸ್,  ಘಂಟಸಾಲ,  ಎಸ್ ಜಾನಕಿ, ಎಸ್ ಪಿ ಬಾಲ ಸುಬ್ರಹ್ಮಣ್ಯಂ, ಜೇಸುದಾಸ್ ವಾಣಿಜಯರಾಮ್, ಪಿ ಸುಶೀಲ ಹೀಗೆ....  ಯಾವುದೇ ಹಾಡು ಹಾಕಿದರು ಹಾಡಿದವರು ಎ ಸ್ಪಿ ಬಾಲಸುಬ್ರಹ್ಮಣ್ಯಂ ಮತ್ತು ಎಸ್ ಜಾನಕಿ ಈ ಹೆಸರು ಪ್ರತೀ ಹಾಡಿನೊಂದಿಗೆ ಚಿರ ಪರಿಚಿತ. 

ಚಿತ್ರ ಬಯಲು ದಾರಿ ಹಾಡಿದವರು ಎಸ್ ಜಾನಕಿ...ರಾತ್ರಿಯ ನೀರವ  ಮೌನದಲ್ಲಿ ದೂರದ ರೇಡಿಯೋದಲ್ಲಿ  ಎಸ್ ಜಾನಕಿಯ ಮಧುರವಾದ ಸ್ವರ ಗಾಳಿಯಲ್ಲಿ ತೇಲಿಬರುತ್ತಿದ್ದರೆ ನಿಂತಲ್ಲೇ ನಿಂತು ಆ  ಹಾಡನ್ನು ಆಲಿಸುತ್ತಿದ್ದದ್ದು ಈಗಲೂ ನೆನಪಿದೆ. ಬಾಲ್ಯದ ಮುಗ್ದ ಮನಸ್ಸಿನ ದಿನಗಳಿಂದ ಎಸ್ ಜಾನಕಿ ಎಂಬ ಗಂಧರ್ವ ಗಾಯಕಿಯ ಮುಖ ಪರಿಚಯವಿಲ್ಲದೇ ಇದ್ದರೂ  ಆ ಧ್ವನಿಯ ಪರಿಚಯವಿತ್ತು. ಈಗಿನ ಟಿವಿ ಇಂಟರ್ನೆಟ್ ಯೂಟ್ಯೂಬ ದಿನಗಳಲ್ಲಿ ಆ ದಿನದ ಅನುಭವದ ಕಲ್ಪನೆ ಹೇಳಿದರೂ ಕಲ್ಪಿಸುವುದು ಸಾಧ್ಯವಿಲ್ಲ. ಅದೊಂದು ಕಾಲ. ಆ ಕಾಲದಿಂದ ಪರಿಚಯದ ಜಾನಕಮ್ಮನ ಧ್ವನಿ ಇನ್ನು ಕೇವಲ ಧ್ವನಿ ಮುದ್ರಣಕ್ಕೆ ಸೀಮಿತ. ಈ ಕೋಗಿಲೆ ಸಿನಿಮಾದಲ್ಲಿ ಹಾಡುವುದು ನಿಲ್ಲಿಸಿ ಅದೆಷ್ಟು ಕಾಲವಾಯಿತೋ ತಿಳಿಯದು. ಇಂದಿನ ಚಿತ್ರ ವಿಚಿತ್ರ ಸಂಗೀತದ ನಡುವೆ ಜಾನಕಮ್ಮನ ಧ್ವನಿ ಹಲವಾರು ಸಲ ನೆನಪಿಗೆ ಬಂದರೂ ಕಾಲಗತಿಯನ್ನು ತಳ್ಳುವುದು ಸಾಧ್ಯವಲ್ಲ. ಜಾನಕಮ್ಮನ ಹಾಡುಗಳೆಂದರೆ ಅದು ಆಗಿನ ಗಾಳಿಯಲ್ಲಿ ಕಂಪು ಬೆರೆತಂತೆ. ಅದೆಂದಿಗೂ ಮಾಸಿ ಹೋಗದ ಧ್ವನಿ. ಈಗಲೂ ಆ ಗಾಳಿಯಲ್ಲಿ ಆ   ಧ್ವನಿ ಎಲ್ಲಾದರೂ ಅವಿತಿದೆಯೋ ಅಂತ ಪಂಚೆಂದ್ರಿಯಗಳು ಅರಸುತ್ತಿದ್ದರೆ ಆಶ್ಚರ್ಯವಿಲ್ಲ. ಈಗಿನ ಟೀವಿ ಯೂಟ್ಯೂಬ್ ನಲ್ಲಿ ಮುಖತೋರಿಸಿ ಹಾಡುವ ಗಾಯಕರ ಪರಿಚಯ ಮುಂದಿನ ಘಳಿಗಯಲ್ಲಿ  ಮರೆತು ಹೋಗುತ್ತಿರುವಾಗ,  ಆಗ ಕೇವಲ ಧ್ವನಿಮಾತ್ರದಿಂದ  ಚಿರಪರಿಚಿತರಾದ ಜಾನಕಮ್ಮನ ಸ್ವರ ಈಗಲೂ ನೆನಪಿನಲ್ಲಿ ಉಳಿದರೆ ಆ ಧ್ವನಿಯ ಗಾಢ ನೆನಪು ಎಷ್ಟು ಎಂದು ತಿಳಿಯುವುದಕ್ಕೆ ಸಾಧ್ಯವಾಗುತ್ತದೆ. ಇತ್ತೀಚಿನ ದಿನದವರೆಗೂ ಜಾನಕಮ್ಮನ ಮುಖ ಪರಿಚಯ ಬಹಳಷ್ಟು ಮಂದಿಗೆ ತಿಳಿದಿಲ್ಲ. ಕೇವಲ ಧ್ವನಿಯಿಂದ ಮನೆ ಮನೆಯ ಮನ ಮನದ ಚಿರ ಪರಿತ ಹೆಸರಾದ ಜಾನಕಮ್ಮನ ಸ್ವರದ ಜಾದು ಇಂದು ಕಲ್ಪಿಸುವುದಕ್ಕೂ ಸಾಧ್ಯವಿಲ್ಲ.


ಈಗಿನ್ನು ಜಾನಕಮ್ಮ ಕೇವಲ ನೆನಪಿನ ಲೋಕಕ್ಕೆ ಸರಿದುಹೋದರೆ ಜಾನಕಮ್ಮನ ನೆನಪಿನಲ್ಲಿ ಮನಸ್ಸಿನ್ನೂ ಹಾಡುತ್ತಿದೆ ...ಬಾನಲ್ಲು ನೀನೆ ಭುವಿಯಲ್ಲೂ ನೀನೆ ಎಲ್ಲೆಲ್ಲೂ ನೀನೆ...