ಗುರುದರ್ಶನ
ಶ್ರೀ ಗುರುಭ್ಯೋನಮಃ
ಶೃತಿ ಸ್ಮೃತಿ ಪುರಾಣಾನಾಂ ಆಲಯಂ ಕರುಣಾಲಯಂ ನಮಾಮಿ ಭಗವತ್ಪಾದ ಶಂಕರಂ ಲೋಕ ಶಂಕರಂ
ಗುರು ಎಂದರೆ ಸಕಲ ಪ್ರಚೋದನೆಗೂ ಪ್ರೇರಕ ಶಕ್ತಿ. ಸದ್ಬುದ್ದಿ ಸನ್ಮನಸ್ಸು ಸಚ್ಚಿಂತನೆ ಇರುವ ಜ್ಞಾನ ಜಾಗೃತವಾಗುವುದೇ, ಮನುಷ್ಯನಲ್ಲಿ ಜಾಗೃತವಾಗಬೇಕಾದರೆ ಗುರುವಿನ ಅನುಗ್ರಹ ಅತ್ಯಂತ ಅವಶ್ಯ. ಗುರುವಿನ ಸಾನ್ನಿಧ್ಯ ಬದುಕಿನಲ್ಲಿ ನಿಯಮಿತವಾಗಿ ಒದಗಿದರೆ ಎಲ್ಲಾ ಸದ್ಗುಣಗಳು ಸುಪ್ತವಾಗಿ ಬಹಿರಂಗವಾಗಿಯೂ ಪ್ರಚೋದಕವಾಗಿರುತ್ತದೆ. ಈ ಬಾರಿಯ ಗುರುದರ್ಶನಕ್ಕೆ ನಮ್ಮ ಕರಾಡ ಸಮಾಜ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪ್ರಥಮ ಬಾರಿಗೆ ಭಾಗಿಯಾಗುವ ಪ್ರಚೋದನೆಯೂ ಅವಕಾಶವೂ ನನಗೆ ಒದಗಿ ಬಂದಿರುವುದಕ್ಕೆ ಭಗವಂತನಿಗೆ ಧನ್ಯವಾದ ಮೊದಲಿಗೆ ಅರ್ಪಿಸಬೇಕು.
ಈ ವರ್ಷದ ಗುರುಗಳ ಚಾತುರ್ಮಾಸ್ಯದ ಸಂದರ್ಭದಲ್ಲಿ ಗುರು ದರ್ಶನದ ಅಂಗವಾಗಿ ದಿನಾಂಕ ಮೊನ್ನೆ ಆಗಸ್ಟ್ ಒಂಭತ್ತರಂದು ಸುಮಾರು ನಲ್ವತ್ತು ಮಂದಿ ಮುಂಜಾನೆ ಬೆಂಗಳೂರಿನಿಂದ ಪ್ರಯಾಣ ಆರಂಭಿಸಿದೆವು. ಮೊದಲೇ ನಿಗದಿಯಾದಂತೆ ಸುಖಾಸೀನ ಬಸ್ಸಿನಲ್ಲಿ ಹೊರಟೆವು. ಹಲವರು ತಿಂಡಿ ತಿನಿಸುಗಳನ್ನು ತೆಗೆದುಕೊಂಡು ಬಂದದ್ದ ವಿಶಿಷ್ಟವಾಗಿತ್ತು. ಅದಕ್ಕಾಗಿ ನಮ್ಮ ಮನೆಯಿಂದ ಕಡಲೇ ಬೇಳೆ ವಡೆ (ಚಟ್ಟಂಬಡೆ) ನಾವೂ ತಯಾರಿಸಿಕೊಂಡು ಹೋಗಿದ್ದೆವು. ಮಧ್ಯಾಹ್ನದ ಊಟಕ್ಕಾಗಿ ಶ್ರೀ ಶಂಕರ ಲಿಂಗ ಆಶ್ರಮ ಅರಸೀಕೆರೆಯಲ್ಲಿ ವ್ಯವಸ್ಥೆಗೊಳಿಸಲಾಗಿತ್ತು. ಉತ್ತಮವಾದ ಸ್ವಾದಿಷ್ಟವಾದ ಮಧ್ಯಾಹ್ನದ ಭೋಜನ ಉಂಡು ಸಾಯಂಕಾಲದ ಹೊತ್ತಿಗೆ ಶ್ರೀಂಗೇರಿ ಸನ್ನಿಧಾನವನ್ನು ತಲುಪಿದೆವು. ಬಯಲು ಸೀಮೆ ಕಳೆದು ಮಲೆನಾಡಿನ ಪ್ರವೇಶವಾದಂತೆ ಹನಿ ಹನಿ ಮಳೆ ಸ್ವಾಗತಮಾಡಿ ನಮ್ಮ ಹಾದಿಯನ್ನೂ ಮೈಮನವನ್ನು ಪರಿಶುದ್ದಗೊಳಿಸಿತು. ಇದೊಂದು ಶುಭಸಂಕೇತವಾಗಿ ಭಾಸವಾಯಿತು. ನಮಗೆ ವಿಶ್ರಾಂತಿಗಾಗಿ ಶ್ರೀ ಭಾರತೀ ವಿಹಾರದಲ್ಲಿ ಉತ್ತಮವಾದ ಕೊಠಡಿಗಳನ್ನು ಕಾದಿರಿಸಲಾಗಿತ್ತು. ತುಂಬ ಅತ್ಯುತ್ತಮವಾದ ಗಾಳಿ ಬೆಳಕು ತುಂಬಿದ ಶುಭ್ರವಾದ ಕೊಠಡಿಗಳು ಸ್ನಾನಾದಿ ಕರ್ಮಗಳಿಗೆ ಅತ್ಯಂತ ಅನುಕೂಲಕರವಾಗಿತ್ತು. ಎಲ್ಲಿಯೂ ಅನನುಕೂಲದ ಸ್ಪರ್ಶವೂ ಒದಗದಂತೆ ಸುವ್ಯವಸ್ಥೆಗೊಳಿಸಲಾಗಿತ್ತು. ನಾನು ಸಾಯಂಕಾಲ ಸ್ನಾನ ಪೂರೈಸಿ ಸಂಧ್ಯಾವಂದನೆ ಮಾಡಿದೆ. ರಾತ್ರಿ ಹನಿ ಹನಿ ಮಳೆಯಲ್ಲಿ ನೆನೆದು ಪಾವನರಾಗಿ ಶಾರದಾಂಬೆಯ ಕಣ್ತುಂಬ ದರ್ಶನ ಮಾಡಿದೆ. ದೇವಾಲಯದ ಪೌಳಿಯಲ್ಲಿ ಕುಳಿತು ಗಾಯತ್ರಿ ಜಪ ರುದ್ರಪಾರಾಯಣ ಮಾಡಿದೆ. ಮನಸ್ಸಿಗೆ ಮುದ ನೀಡುವ ಘಳಿಗೆಗಳು.
ಅಂದು ಬೆಳಗ್ಗೆ ಮೂರುಘಂಟೆಗೆ ಎದ್ದಿದ್ದೆ. ಸ್ನಾನ ಸಂಧ್ಯಾ ಧ್ಯಾನ ಯೋಗಭ್ಯಾಸವನ್ನು ಪೂರೈಸಿ ಪ್ರಯಾಣಕ್ಕೆ ಸಜ್ಜಾಗಬೇಕಿತ್ತು. ಹಾಗಾಗಿ ರಾತ್ರಿ ಒಂಭತ್ತು ದಾಟುತ್ತಿದ್ದಂತೆ ಬಹಳ ಆಯಾಸವಾದಂತೆ, ಎಂದಿನಂತೆ ರಾತ್ರಿ ಬೇಗನೇ ನಿದ್ದೆಗೆ ಹೋಗುವ ನನಗೆ ಇರಲಾಗದೇ ಒಂಭತ್ತು ಘಂಟೆಗೆ ಮಲಗಿದೆ. ಹಲವರು ಶ್ರೀ ಜಗದ್ಗುರುಗಳ ಚಂದ್ರಮೌಳೇಶ್ವರ ಪೂಚಾ ಕಾರ್ಯಕ್ರಮ ವೀಕ್ಷಿಸುವುದಕ್ಕೆ ತೆರಳಿದ್ದರು. ಮುಂಜಾನೆ ಮೂರುವರೆಗೆ ಎಚ್ಚರವಾಗಿತ್ತು. ಸಾಮಾನ್ಯವಾಗಿ ನಾನು ಎಲ್ಲಿ ಹೋಗಿ ತಂಗುವುದಿದ್ದರೂ ನನ್ನ ನಿತ್ಯ ಕರ್ಮಗಳಾದ ಸಂಧ್ಯಾವಂದನೆ ಧ್ಯಾನ ಯೋಗಾಭ್ಯಾಸಗಳಿಗೆ ಅನುಕೂಲವಿದೆಯೋ ಎಂದು ನೋಡುತ್ತೇನೆ. ಅದರೆಂತೆ ಇಲ್ಲಿ ಒಂದು ಕಡೆ ಸೂಕ್ತವಾದ ಯಾರೂ ಓಡಾಡದ ಹಜಾರದ ಒಂದು ಮೂಲೆ ಸಿಕ್ಕಿತ್ತು. ಅದು ಅತ್ಯಂತ ಸಂತೋಷವನ್ನು ನೀಡಿತ್ತು. ನಾಲ್ಕು ಘಂಟೆಗೆ ಇಡೀ ಭಾರತೀ ವಿಹಾರ ಸೌಧ ಮಾತ್ರವಲ್ಲ ಶೃಂಗೇರಿ ಪಟ್ಟಣವೇ ಸದ್ದಿಲ್ಲದೇ ಮೌನವನ್ನು ಆವರಿಸಿತ್ತು. ನನ್ನ ಏಕಾಂತ ಧ್ಯಾನಕ್ಕೆ ಇದು ಬಹಳ ಸಹಕಾರಿಯಾಗಿ ತನು ಮನ ಮರೆಯುವಂತೆ ಧ್ಯಾನದಲ್ಲಿ ತಲ್ಲೀನನಾದೆ. ನನ್ನ ಹಲವು ದಿನದ ಕನಸಾಗಿತ್ತು. ಶೃಂಗೇರಿಯ ಪ್ರಕೃತಿಯ ಮಡಿಲಲ್ಲಿ ಧ್ಯಾನ ಯೋಗ ಅಭ್ಯಾಸಗಳನ್ನು ಮಾಡಬೇಂದು ಬಯಸಿದ್ದೆ. ಆದರೆ ಹೋರಗೆ ಮಳೆ ಬರುತ್ತಿರುವುದರಿಂದ ಒಳಗೆ ಅದನ್ನು ಮಾಡಬೇಕಾಯಿತು. ಆದರೂ ಮನಸ್ಸಿಗೆ ಒಂದು ತೃಪ್ತಿ.
ಬೆಳಗ್ಗಿನ ತಂಪಾದ ವಾತಾವರಣದಲ್ಲಿ ಅನತಿ ದೂರದಲ್ಲಿದ್ದ ಶಂಕರ ಗಿರಿಗೆ ಭೇಟಿ ಕೊಡುವ ವ್ಯವಸ್ಥೆ ಮಾಡಲಾಗಿತ್ತು. ಎತ್ತರ ಶಂಕರ ಗಿರಿ ಇತ್ತೀಚೆಗಷ್ಟೇ ನಿರ್ಮಾಣವಾಗಿತ್ತು. ಸುಂದರವಾದ ಪರಿಸರ. ಎಲ್ಲಕ್ಕಿಂತಲೂ ಅದನ್ನು ನಿರ್ವಹಿಸಿದ ರೀತಿ ಅತ್ಯದ್ಭುತವಾಗಿತ್ತು. ಎಲ್ಲಿ ನೋಡಿದರೂ ಸ್ವಚ್ಛತೆ. ಎಲ್ಲಿ ಹೆಜ್ಜೆ ಊರಬೇಕಿದ್ದರೂ ಯೋಚಿಸುವಂತೆ ಮಾಡುತ್ತಿತ್ತು. ಮೂಲೆ ಮೂಲೆಯೂ ಕಸಕಡ್ಡಿಗಳು ಇರದಂತೆ ಸುರಿಯುವ ಆ ಮಳೆಗೂ ಎಲ್ಲ ಕಡೆ ಸ್ವಚ್ಛತೆಯನ್ನು ಕಾಪಾಡಿಕೊಂಡು ಬಂದದ್ದು ನಿಜಕ್ಕು ವಿಶಿಷ್ಟವಾಗಿತ್ತು.
ಶ್ರೀ ಮಠದಲ್ಲೇ ನಮಗೆಲ್ಲರಿಗೂ ಬೆಳಗಿನ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಉಪಹಾರ ಪೂರೈಸಿ ನಾನು ಮತ್ತು ಪತ್ನಿ ಹತ್ತಿರದಲ್ಲೇ ಇದ್ದ ಮಲ್ಲಿಕಾರ್ಜುನ ದೇವಾಲಯಕ್ಕೆ ಭೇಟಿಕೊಟ್ಟೆವು. ಮಳೆಯಲ್ಲೇ ನೆನೆದು ಬೆಟ್ಟದ ಮೆಟ್ಟಲುಗಳನ್ನು ಹತ್ತಿ ಪರಮೇಶ್ವರನ ಧರ್ಶನ ಮಾಡಿದೆವು. ನಾವು ಹೋದಾಗ ಸುಪ್ರಭಾತದ ಪೂಜೆ ಆಗುತ್ತಿತ್ತು.
ಮಧ್ಯಾಹ್ನದ ಸಮಯಕ್ಕೆ . ಅದಾಗಲೇ ವಿವಿಧ ಊರುಗಳಿಂದ, ಬಾಯಾರು ಅಗಲ್ಪಾಡಿ ಪಡ್ರೆ ಉಡುಪಿ ಶಿರಸಿ ಮುಂತಾದ ಭಾಗದಲ್ಲಿದ್ದ ನಮ್ಮ ಸಮಾಜದ ಬಾಂಧವರು ಬಂದಿದ್ದರು ಗುರುಗಳ ದರ್ಶನಕ್ಕೆ ನದಿಯ ಮತ್ತೊಂದು ದಡದಲ್ಲಿದ್ದ ಗುರುವಿನ ಆಶ್ರಮದ ಸಭಾಂಗಣದಲ್ಲಿ ಎಲ್ಲರೂ ಸೇರಿದೆವು. ಘನ ಗಂಭೀರವಾಗಿ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ವಿಧುಶೇಖರ ಭಾರತಿಯವರ ಘನ ಗಂಭೀರ ಆಗಮನವಾಯಿತು. ಈ ದರ್ಶನದ ಸುಮೂಹೂರ್ತದಲ್ಲಿ ನಮ್ಮ ಕರಾಡ ಅಭ್ಯದಯ ಸಂಘ (ರಿ) ಅಗಲ್ಪಾಡಿ ಇದರ ಸುವರ್ಣ ಸಂಭ್ರಮದ ಆಮಂತ್ರಣ ಪತ್ರಿಕ ಬಿಡುಗಡೆಯನ್ನು ಶ್ರೀಗುರುಗಳು ನೆರವೇರಿಸಿದರು. ನಂತರ ಗುರುಗಳ ಆಶೀರ್ವಚನ ನುಡಿಗಳು. " ಯಾವುದೇ ಮೂಲವಸ್ತುವಿಗೆ ಸಂಸ್ಕಾರ ಒದಗಿದಾಗ ಅದು ಪ್ರಜ್ವಲಿಸುತ್ತದೆ. ಒಂದು ಶಿಲೆಯಾದರೂ ಅದು ಮೂರ್ತಿಯಾಗಬಹುದು. ಭೂಮಿಯಲ್ಲಿದ್ದ ಮೂಲಭೂತವಾದ ವಸ್ತು ಸಂಸ್ಕಾರ ಒದಗಿದಾಗ ನಮಗೆ ಉಪಯೋಗವಾದ ವಸ್ತುವಾಗಿ ಬದಲಾಗುತ್ತದೆ. ಯಾವುದೇ ಒಂದು ಲೋಹ ಸಿಕ್ಕಿದಾಗ ಅದನ್ನು ಉಪಯೋಗ ಯುಕ್ತವಾಗುವಂತೆ ಮಾಡುವುದಕ್ಕೆ ಅದಕ್ಕೆ ಒಂದು ಪ್ರಕ್ರಿಯೆ ಕಾಲಗಳು ಇರುತ್ತವೆ. ನಮ್ಮ ಶಾಸ್ತ್ರಗಳು ಅದನ್ನು ತೋರಿಸುತ್ತವೆ. . ಮನುಷ್ಯ ಹುಟ್ಟಿದಾಗ ಸಂಸ್ಕಾರ ಒದಗಿಬಂದರೆ ಆತ ಉತ್ತಮ ಮನುಷ್ಯನಾಗಿ ಸಮಾಜಕ್ಕೆ ಉತ್ತಮ ಕೊಡುಗೆಯಾಗುತ್ತಾನೆ. ಕಣ್ಣು ಕಾಣಬಹುದು ಆದರೆ ಎಲ್ಲವನ್ನು ಕಾಣುವುದಕ್ಕೆ ಸಾಧ್ಯವಿಲ್ಲ. ಅದರಂತೆ ಪಂಚೇಂದ್ರಿಯಗಳಿಂದ ಗ್ರಹಿಸಲಾಗದೇ ಇರುವುದನ್ನು ನಮ್ಮ ಶಾಸ್ತ್ರಗಳು ತಿಳಿಸಿಕೊಡುತ್ತವೆ." ಇದು ಗುರುಗಳ ಆಶೀರ್ವಚನದ ಸಾರವಾಗಿತ್ತು. ಅದ್ಭುತವಾದ ಗುರು ಸಂದೇಶ.
ಗುರುಗಳ ಅಮೃತ ಹಸ್ತದಿಂದ ಅನುಗ್ರಹಿಸಿದ ಮಂತ್ರಾಕ್ಷತೆ ಪಡೆದು ದೇವರ ಪ್ರಸಾದ ನೈವೇದ್ಯ ಭೂಜನ ಪೂರೈಸಿದೆವು. ಅಲ್ಪ ಸಮಯದ ಅವಧಿಗೆ ನಮ್ಮ ಬಾಂಧವರ ಸಣ್ಣ ಸಭೆ ಮಠದ ಆವರಣದಲ್ಲೇ ನಿಗದಿಯಾಗಿತ್ತು. ಅದರಂತೆ ಎಲ್ಲರೂ ಒಟ್ಟು ಸೇರಿ ಒಂದಷ್ಟು ಸಲಹ ಸೂಚನೆ ಪರಿಚಯಗಳನ್ನು ಪೂರೈಸಿಕೊಂಡೆವು. ಎಲ್ಲವೂ ಸೌಹಾರ್ದಾತೆಯ ಸಂಕೇತವಾಗಿತ್ತು. ಸಾಯಂಕಾಲವಾಗುತ್ತಿದ್ದಂತೆ ಎಲ್ಲರೂ ಪ್ರಯಾಣದ ಕೊನೆಯ ಹಂತವನ್ನು ತಲುಪಿ ಎಲ್ಲರಿಗೂ ವಿದಾಯ ಹೇಳಿದೆವು.
ಪ್ರಯಾಣದಂತಹ ಕಾರ್ಯಕ್ರಮಗಳು ವ್ಯವಸ್ಥೆಗೊಳಿಸುವುದು ಅಷ್ಟು ಸುಲಭವಲ್ಲ. ಅದಕ್ಕೆ ಅನುಭವ ಹಲವಾರು ದಿನದ ಹಲವು ವ್ಯಕ್ತಿಗಳ ಪರಿಶ್ರಮ ಅತೀ ಅವಶ್ಯ. ಜತೆ ಎಲ್ಲರ ಸಹಕಾರ ಒದಗಿ ಬಂದರೆ ಪ್ರಯಾಣ ಸುಖಕರವಾಗಿರುತ್ತದೆ. ಇದಕ್ಕೆ ಪೂರಕವಾಗಿ ನಮ್ಮ ಗುರು ದರ್ಶನದ ಕಾರ್ಯಕ್ರಮ ಸಾಂಗವಾಗಿ ಯಶಸ್ವಿಯಾಗಿ ನೆರವೇರಿತು. ಯಾವುದೇ ಕಾರ್ಯಕ್ಕು ಉದ್ದೇಶ ಶುದ್ದಿ ಸಂಕಲ್ಪ ಶುದ್ಧಿ ಅತೀ ಅವಶ್ಯ. ಇದು ಇದ್ದರೆ ಕಾರ್ಯಕ್ರಮ ಬಹುವಂಶ ಯಶಸ್ವಿಯಾಗುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿ ಪರಿಣಮಿಸಿತು. ನಿಗದಿಯಾದ ಸಮಯ ಹೊಂದಿಸಿಕೊಳ್ಳುವಲ್ಲಿ ಸ್ವಲ್ಪ ಮಟ್ಟಿಗೆ ಕಾರಣಾಂತರದಿಂದ ವೆತ್ಯಾಸ ವಾಗಿದ್ದು ಬಿಟ್ಟರೆ ಕಾರ್ಯಕ್ರಮ ತುಂಬ ಯಶಸ್ವಿಯಾಗಿತ್ತು. ಸಾಮಾನ್ಯ ದೂರದ ಪ್ರಯಾಣದಲ್ಲಿ ಇದೆಲ್ಲ ಸಾಮಾನ್ಯ. ಪ್ರಯಾಣದಂತಹ ಕಾರ್ಯಕ್ರಮದಲ್ಲಿ ನಮ್ಮ ಉದ್ದೇಶವನ್ನು ನಾವು ಮೊದಲು ಗಮನಿಸಬೇಕು. ಅದರ ಪಾವಿತ್ರ್ಯತೆಯನ್ನು ಮೊದಲು ಕಾಪಾಡಿಕೊಳ್ಳಬೇಕು. ಅದರ ನಡುವೆ ಆತಂಕ ತೊಂದರೆಗಳು ಎದುರಾದರೆ ನಾವೆಲ್ಲ ಏಕ ಮನಸ್ಸಿನಿಂದ ಅದಕ್ಕೆ ಎಲ್ಲರೂ ಸಹಕರಿಸಬೇಕು. ಸಣ್ಣ ಪುಟ್ಟ ಅಸೌಕರ್ಯ ತೊಂದರೆಗಳನ್ನು ನಮ್ಮ ಉದ್ದೇಶ ಗಮನದಲ್ಲಿರಿಸಿ ಸೌಹಾರ್ದವಾಗಿ ಅದನ್ನು ಸ್ವೀಕರಿಸಬೇಕು. ಅದಕ್ಕೆ ಸಹಕಾರ ಎಂದು ಹೇಳುವುದು. ಆದರೂ ಇಲ್ಲಿ ಅಂತಹ ಹೇಳಿಕೊಳ್ಳುವಂತಹ ಯಾವ ತೊಂದರೆ ಸೌಕರ್ಯ ಕೊರತೆಗಳು ಎದುರಾಗಲಿಲ್ಲ. ಎಲ್ಲವನ್ನು ಬಹಳ ಮುಂದಾಲೋಚನೆಯಿಂದ ವ್ಯವಸ್ಥೆಗೊಳಿಸಲಾಗಿತ್ತು. ಇದಕ್ಕಾಗಿ ಭಾರವಾಹಿಗಳಾದ ಶ್ರೀ ಉಪ್ಪಂಗಳ ನಾಗರಾಜ, ಪಾಂಡುರಂಗ ಗುರ್ಜರ್ ಮತ್ತು ಇತರರ ಯೋಗದಾನವನ್ನು ಕೃತಜ್ಞತೆಯಿಂದ ಸ್ಮರಿಸಬೇಕು. ಎಲ್ಲರಿಗೂ ಧನ್ಯವಾದಗಳು. ಮುಂದೆಯೂ ಇಂತಹ ಕಾರ್ಯಕ್ರಮಗಳು ಆಯೋಜನೆಗೊಂಡು ಅದರಲ್ಲಿ ಭಾಗವಹಿಸಿ ಯೋಗದಾನವನ್ನು ಒದಗಿಸುವ ಅವಕಾಶ ನನಗೂ ಒದಗಿ ಬರಲಿ ಎಂದು ಹಾರೈಸುತ್ತೇನೆ. ಸಹಕರಿಸಿದ ಎಲ್ಲ ಬಾಂಧವ ಮಿತ್ರರಿಗೆ ಕೃತಜ್ಞತೆಗಳು.






