Wednesday, July 22, 2026

ದ್ವೈತ ಅದ್ವೈತ





 

ದ್ವೈತ ಅದ್ವೈತ ಚರ್ಚೆ ಅಥವಾ ಸಂವಾವಾದರೆ ‌ನಮ್ಮಂತಹವರು ಒಂದಷ್ಟು ವಿಷಯ ಸಂಗ್ರಹ ಮಾಡಿಕೊಳ್ಳಬಹುದು. ಆದರೆ ಇದು ಚರ್ಚೆಯಲ್ಲ, ಸಂಘರ್ಷ.‌ಅಷ್ಟೇ ಅಲ್ಲ ಒಂದು ಯುದ್ದ. ಬಹುಶಃ ನಮ್ಮ ಧರ್ಮದ ದೇವತೆ ಮಹಾಭಾರತದ ಭೀಷ್ಮನಂತೆ ಕಣ್ಣೀರು ಸುರಿಸಬಹುದು. ಆದರೆ ಇದನ್ನು ಅರ್ಥಮಾಡುವ ಮತ್ತು ಕಾಣುವ ಮನಸ್ಸು ಮಾತ್ರ ಇಲ್ಲವೇ ಇಲ್ಲ.



ಹಿಂದೂ ಧರ್ಮದಲ್ಲಿ ಹಲವಾರು ಪಂಗಡಗಳು ವರ್ಣಗಳು ಇವೆ. ಹಲವು ಜನನ  ಸಂಸ್ಕಾರಗಳು ಇವೆ. ಹೊರನೋಟಕ್ಕೆ ಎಲ್ಲವೂ ವಿಭಿನ್ನ ವೈರುಧ್ಯ. ಆದರೆ ವಿವೇಚನೆ ಇದ್ದರೆ ಇದರ ಸಾರ ಗ್ರಹಿಸಿ ಅರ್ಥವಿಸುವುದಕ್ಕೆ ಸಾಧ್ಯ. ಹಿಂದೂ ಧರ್ಮ‌ ಅಂತ ಅಲ್ಲ,  ಎಲ್ಲಾ ಧರ್ಮಕ್ಕೂ ಇದು ಅನ್ವಯ, ಆದರೆ ಹಿಂದೂ ಧರ್ಮ‌ ಇದನ್ನು ಚೆನ್ನಾಗಿ ಅಳವಡಿಸಿಕೊಂಡಿದೆ.‌ ಆದರೆ ಇದನ್ನು ಅರ್ಥ ಮಾಡುವುದರಲ್ಲಿ ನಾವು ವಿಫಲಾರಾಗಿದ್ದೇವೆ. ಆದರ ಕಾರಣವೇ ಈ ಸಂಘರ್ಷ.  ನಾವು ತತ್ವವನ್ನು ಆಯುಷ್ಯ ಪೂರ್ಣ ಆಧ್ಯಯನ‌ಮಾಡುತ್ತೇವೆ. ಆದರೆ ನೀತಿಯನ್ನು ಒಂದಿಷ್ಟೂ ತಿಳಿಯುವುದಕ್ಕೆ ಹೋಗುವುದಿಲ್ಲ.  ತತ್ವಕ್ಕಿಂತಲೂ‌ ನೀತಿ ಬಹಳ ಸರಳವಾಗಿರುತ್ತದೆ. ನಾವು ಸಮಷ್ಟಿಯಲ್ಲಿ ಯೋಚಿಸುವುದರಲ್ಲಿ ಎಡವಿಬಿಡುತ್ತೇವೆ. 


ಧರ್ಮದ ಚಿಂತನೆಯನ್ನು ನಾವು ಅರ್ಥವಿಸುವುದರಲ್ಲಿ ಎಡವಿದ್ದೇವೆ. ಆದರೆ ನೀತಿಯನ್ನಾದರೂ ಮನುಷ್ಯನಾಗಿ ಅರಿಯಬೇಕು. ಧರ್ಮದ ನೀತಿ ಬಹಳ ಸರವಾಗಿರುತ್ತದೆ.  ದೊಡ್ಡದಾದ ಕಲ್ಲೊಂದನ್ನು ಅಥವಾ ದೇವರ ವಿಗ್ರಹವನ್ನು ಎತ್ತ ಬೇಕಿದ್ದರೆ ಒಂದೇ ಕೈಯಲ್ಲಿ ಸಾಧ್ಯವಾಗದೇ ಇರುವಾಗ ಮತ್ತೊಂದು ಕೈಯಿಂದ ಎತ್ತಿಬಿಡುತ್ತೇವೆ.  ಕಲ್ಲು ವಿಗ್ರಹ ಎತ್ತಬೇಕಿದ್ದರೆ ಎರಡೂ ಕೈ ಪರಸ್ಪರ ವಿರುದ್ದ ದಿಕ್ಕಿನಿಂದಲೇ ಕಲ್ಲಿನ ಹತ್ತಿರ ಬರಬೇಕು. ಎರಡು ಕೈಗಳು ವಿರುದ್ಧ ದಿಕ್ಕಿನಿಂದ ಹತ್ತಿರ ಬಂದು ಎತ್ತುವುದು ಒಂದೇ ಬಂಡೆಯನ್ನು, ಅದೇ ರೀತಿ ಹೆಬ್ಬೆರಳು ತೋರು ಬೆರಳು ಒಟ್ಟು ಎರಡೂ ಬೆರಳು ಒಟ್ಟು ಸೇರಿ ಒಂದೇ ವಸ್ತುವನ್ನು ಎತ್ತಿಬಿಡುತ್ತವೆ. ಅದೇ ರೀತಿ ಎರಡು ಧರ್ಮಗಳು ಅಥವಾ ಎರಡು ಪಂಗಡಗಳು ಒಟ್ಟು ವಿರುದ್ದ ದಿಕ್ಕಿನಿಂದ ಬಂದು ಒಂದೇ ಭಗವಂತನ್ನು ಸೇರಿಬಿಡುತ್ತದೆ. ವಿವಿಧ ಶಾಖೆಗಳ ಸಾರವಿದು. 


ಹಲವು ಶಾಖೆಗಳು, ಅದರಲ್ಲಿ ಒಂದು ಬ್ರಾಹ್ಮಣರು, ಅದಕ್ಕೂ ಮತ್ತೂ ಒಂದಷ್ಟು ಶಾಖೆಗಳು. ಎಲ್ಲಾ ಶಾಖೆಗಳು ಒಂದೇ ಗಾಯತ್ರಿಯನ್ನು ಪಠಿಸುವುದು. ದೇವರು ರೂಪ ಹಲವು ಮಂತ್ರಗಳು ಹಲವು. ಅದರೆ ಮೂಲ ಸ್ವರೂಪ ಒಂದೇ. ಬ್ರಾಹ್ಮಣರಲ್ಲೆ ಸ್ಮಾರ್ತರು ವೈಷ್ಣವರು..ಹೀಗೆ..ನಿಜಕ್ಕಾದರೆ ಇದರ ಅರ್ಥ ತಿಳಿದು ವ್ಯವಹರಿಸುವವರು ನಿಜವಾದ ಬ್ರಾಹ್ಮಣ. ಸ್ಮೃತಿ ಶಾಸ್ತ್ರದಲ್ಲಿ ಹೇಳಿದಂತೆ ಅನುಸರಿಸಿ ನಡೆಯುವವರೆಲ್ಲರೂ ಯಾವ ಬ್ರಾಹ್ಮಣ ಪಂಗಡವಾದರೂ ಅದು ಸ್ಮಾರ್ತ. ಆದರೆ ನಮಗೆ ಸಮಷ್ಠಿಯಲ್ಲಿ ಸ್ವೀಕರಿಸುವುದು ಕಷ್ಟವಾಗುತ್ತದೆ. ಹೇಗೆ ಬೇಕೋ ಹಾಗೆ ವಿಭಾಗಿಸಿಬಿಡುತ್ತೇವೆ. ಹೋಗಲಿ ವಿಭಾಗಿಸಿದರೂ ಭಾವದಲ್ಲಿ ಒಂದಾಗಿರಬೇಕು. ಎಲ್ಲವನ್ನೂ ಸೇರಿಸಿ ತುತ್ತು ತುತ್ತು ಉಂಡರೂ ಎಲ್ಲವೂ  ಒಂದೇ ಹೊಟ್ಟೆಗೆ ಸೇರುವಂತೆ. ಗಮ್ಯದಲ್ಲಿ ಎಲ್ಲವೂ ಒಂದಾಗಿಬಿಡುತ್ತವೆ. ಕರಗಿ ಸಾರ ದೇಹಕ್ಕೆ ಸೇರಿಬಿಡುತ್ತದೆ. ಯಾವ ಶಾಸ್ತ್ರದಲ್ಲಿ ಮದುವೆಯಾದರೂ ಗಂಡು ಹೆಣ್ಣು ಒಂದಾಗಿ ಸಂಸಾರವಾದಂತೆ ಈ ಸಾರ ಅರ್ಥವಿಸಿಕೊಳ್ಳಬೇಕು. 


ಹಿಂದೂ ಧರ್ಮದಲ್ಲಿ ಹಲವು ಜಾತಿ ಪಂಗಡಗಳಿರಬಹುದು. ಯೋಚಿಸಿ ನೋಡಬೇಕು. ಒಂದೇ ಜಾತಿಯಲ್ಲಾದರೂ ಏಕಮತದ ಸಾಮರಸ್ಯ ಇರಬೇಕು. ಆದರೆ ಒಂದು ಮಠದವರನ್ನು ಕಂಡರೆ ಮತ್ತೊಂದು ಮಠಕ್ಕೆ ಮತ್ಸರ. ದ್ವೈತವೋ ಅದ್ವೈತವೋ ಮೊದಲು ಅಂತರಂಗದಲ್ಲಿ ಒಂದಾಗಬೇಕು. ಅದಲ್ಲವಾದರೆ ಶಾಖೆ ಉಪಶಾಖೆಗಳು ಹುಟ್ಟಿಕೊಂಡರೂ ಮರಕ್ಕೆ ಅದು ಭಾರ. ಯಾರಿಗೋ ತೊಂದರೆ. ಕೊನೆಗೆ ಆ ಶಾಖೆಯನ್ನು ತುಂಡರಿಸಬೇಕು. ಇಲ್ಲವಾದರೆ ಮರಕ್ಕೆ ಉಳಿಗಾಲವಿಲ್ಲ. ಬಿರುಗಾಳಿಯ ಧಾಳಿಗೆ ಬುಡಸಹಿತ ಧರೆಗೆ ಮರ ಉರುಳಬಹುದು. 


ಒಂದು ಮನೆಯೊಳಗೆ ಅಥವಾ ಕುಟುಂಬದೊಳಗೆ ನಮಗೆ ಹತ್ತಿರದವರಲ್ಲಿ ಏನೋ ಒಂದು ದೌರ್ಬಲ್ಯ  ಕುಂದು ಕೊರತೆ ಇರಬಹುದು.  ಆದರೆ ಅದನ್ನು ನಾವು ಹೇಳದೇ ಇರಬಹುದು.  ಹೇಳಿಯೇ ತೀರುವ ಅನಿವಾರ್ಯತೆ ಇಲ್ಲ. ಆದರೂ ಅವರ ದೌರ್ಬಲ್ಯವನ್ನು ಆ ಕುಂದು ಕೊರತೆಯನ್ನು  ಹೇಳುವ ಉದ್ದೇಶ ಒಂದೇ ಸಂಘರ್ಷ. ನಮಗೆ  ಅವರಲ್ಲಿ ಸರಿ ಹೋಗುವುದಿಲ್ಲ ಎಂಬ ಭಾವನೆಯೇ ಅಧಿಕವಾಗಿರುತ್ತದೆ. ಮನಸ್ಸಿನಲ್ಲಿ ಹೀಗೆ ವೈಷಮ್ಯವಿದ್ದರೆ ಯಾವ ಸಮಷ್ಟಿಯ ಚಿಂತನೆಯೂ ಹತ್ತಿರ ಸುಳಿಯಲಾರದು. ಯರದೊ ತಪ್ಪು ದೌರ್ಬಲ್ಯಗಳನ್ನು ಅವರಿಗೆ ನೋವಾಗಬಹುದು ಎಂದು ತಿಳಿದೂ ಹೇಳುವುದರಿಂದ ಉದ್ದೇಶ ಒಂದೇ ಅವರಿಗೆ ನೋವು ಕೊಡಬೇಕು. ಪರೋಕ್ಷವಾಗಿ ದ್ವೇಷ  ವೈಷಮ್ಯ ಸಾಧನೆಯಾಗಬೇಕು. ಈ ಭಾವನೆಯಲ್ಲಿ ಎರಡು ಕೈಗಳು ವಿರುದ್ಧದಿಕ್ಕಿನಿಂದಲು ಒಂದಾಗದು. ಎತ್ತಬೇಕಾದ ಕಲ್ಲು ಅಲ್ಲೇ ಬಿದ್ದಿರುತ್ತದೆ.  ಯಾರೋ ಯಾವುದೋ ಕಾಲದಲ್ಲಿ ಹೇಳಿದರು ಅಥವ ಬರೆದರು ಎಂದುಕೊಂಡು ಪ್ರಸ್ತುತ ಅದನ್ನು ಹೇಳುವುದರಿಂದ ಏನಾದರೂ ಜೀವನಕ್ಕೆ ಲಾಭ ಇರಬೇಕಲ್ಲ. ಅದು ಹೇಳದೇ ಇದ್ದರೆ ಜೀವನ ಸಾಗದೇ ಉಳಿದುಕೊಂಡಿಲ್ಲ. ಆ ಕಾಲದಲ್ಲಿ ನಮ್ಮ ಅಸ್ತಿತ್ವವೇ ಇರುವುದಿಲ್ಲ ಎಂದಿರುವಾಗ ಏನಿದ್ದರು ತರ್ಕ ಊಹೆಗೆ ನಿರ್ಣಯ ಅವಲಂಬಿಸುತ್ತದೆ. ಯಾಕೆಂದರೆ ಆಗ ನಾವು ಬಿಟ್ಟು ನಮ್ಮ ಹಿರಿಯರಿಂದ ಹಿರಿಯರು ಜೀವಿಸಿರುವುದಿಲ್ಲ. ಹಾಗಿರುವಾಗ ಅದನ್ನು ಉಲ್ಲೇಖಿಸಿ ಆಗಬೇಕಾದದ್ದು ಒಂದೇ ಅಸಮಾಧಾನ ದ್ವೇಷ ಸಾಧನೆ.  ಹಲವು ಸಲ ಕಳೆದು ಹೋದ ಘಟನೆ ನಮಗೆ ಹಿತವಲ್ಲದೇ ಇರುವುದನ್ನು ನಾವು ಪ್ರಸ್ತುತ ಬದುಕಿನ ಕ್ಷೇಮಕ್ಕೋಸ್ಕರ ಮರೆಯುತ್ತೇವೆ.


ಪರಧರ್ಮವನ್ನು ನಿಂದಿಸುವುದು ಇಂದು ಮೊದಲಲ್ಲ. ಮೊದಲಿನಿಂದಲೂ ಅದು ಎಲ್ಲೋ ಒಂದು ಕಡೆ ನಿರಂತರವಾಗಿ ನಡೆಯುತ್ತಿತ್ತು. ಆಗ ಅದು ಸಾರ್ವಜನಿಕವಾಗಿ ಅರಿವಿಗೆ ಬರುತ್ತಿರಲಿಲ್ಲ. ಯಾರೋ ಒಬ್ಬ ಅರಸನೋ ಮಹನೀಯನೋ ಹೇಳಿದರೂ ಯಾರೋ ಅದನ್ನು ದಾಖಲೀಕರಣ ಮಾಡಿದ್ದರೆ ಕೆಲವರಿಗಾದರೂ ತಿಳಿದು ಬಿಡುತ್ತಿತ್ತು. ಈಗ ಹಾಗಿಲ್ಲ. ಕನಿಷ್ಠ ಒಬ್ಬ ಹುಲು ಮಾನವ ಹೇಳಿದರೂ ಅದು ಸಾರ್ವಜನಿಕ ಜಗತ್ತಿಗೆ ಪ್ರಕಟವಾಗುತ್ತದೆ. ನಾವು ಯಾರನ್ನೋ ವ್ಯಕ್ತಿಗತವಾಗಿ, ಇಲ್ಲ ಧರ್ಮ ಜಾತಿಯಿಂದಲೋ ನಿಂದನೆ ಮಾಡಿದರೆ ಈಗಿನ ಸಾಮಾಜಿಕ ಜಾಲತಾಣದಿಂದ ಮರುಕ್ಷಣವೇ ತಿಳಿದುಬಿಡುತ್ತದೆ. ಯಾವುದೊ ಮಠ ದೇವಾಲಯದ ಗೋಪುರದಲ್ಲಿ ಕುಳಿತು ಏನೋ ಹೇಳಿದ ಎಂದರೂ ಮೊದಲು ಅಲ್ಲೇ ಅದು ಕರಗಿ ಹೋಗುತ್ತಿತ್ತು. ಈಗ ಹಾಗಿಲ್ಲ ಜಾಲತಾಣದಿಂದ ಅದು ಹೊಸ ಚಿಗುರು ಹೊಡೆದು ಹೆಮ್ಮರವಾಗಿ ಬೆಳೆದು ಬಿಡುತ್ತದೆ. ಹಾಗಾಗ ಪರನಿಂದೆ ದೂಷಣೆ ಮಾಡುವಾಗ ಎಚ್ಚರವಿರಬೇಕು. ಇದರ ಅರಿದ್ದೂ ಮಾಡಿದರೂ ಅದರ ಉದ್ದೇಶ ಒಂದೇ ಪರರನ್ನು ನೋಯಿಸುವುದು. ಪರರನ್ನು ನೋಯಿಸಿ ಆ ಹಿಂಸೆಯ ತಳಹದಿಯಲ್ಲಿ ನಮ್ಮ ಧರ್ಮ ಜಾಗೃತವಾಗಬೇಕೆ? ಅದರ ಅನಿವಾರ್ಯ ಯಾವುದೇ ಧರ್ಮಕ್ಕಿಲ್ಲ. 

ಭಜಗೋವಿಂದಂ ಅಂತ ಸಾರಿದ ಶಂಕರ ಭಗವತ್ಪಾದರು ಹೇಳಿದ್ದು ಒಂದನ್ನೆ ಎಲ್ಲವನ್ನು ಬಿಡು ಗೋವಿಂದನನ್ನು ಭಜಿಸು. ಈ ಗೋವಿಂದ ನನಗು ನಿನಗೂ ಎಲ್ಲರಿಗೂ ಒಂದೆ. ಯಾವುದೇ ಧರ್ಮವನ್ನೂ ಕೀಳಾಗಿ ಕಾಣಬೇಡ.  ನಿನ್ನ ಧರ್ಮವನ್ನು ಅನುಸರಿಸು, ನಿನ್ನ ಕರ್ಮವನ್ನು ಮಾಡು. ಕರ್ತವ್ಯಭ್ರಷ್ಟನಾಗಬೇಡ. ಅಮೂಲ್ಯ ವಾದ ವೇದ ಮಂತ್ರಗಳು ಆಗಮ ಶಾಸ್ತ್ರಗಳು ನಮ್ಮ ಮುಂದೆ ಇದೆ. ಆದರೆ ಅದನ್ನು ಅರಿಯುವುದರಲ್ಲಿ ನಾವು ಸೋಲುತ್ತಿವೆ. ಒಂದು ವೇಳಿ ಅರಿತಿದ್ದರೆ ಈ ಸಂಘರ್ಷವೇ ಇರುತ್ತಿರಲಿಲ್ಲ.

ಕಾನೂನು ನಿಯಮಗಳು ಅನಿವಾರ್ಯವಾಗುವುದು ಜೀವನವೇ ದುರ್ಭರ ಎನಿಸಿದಾಗ. ಆದರೆ ನೀತಿ ಬದುಕಿನಲ್ಲಿ ಪ್ರತಿಕ್ಷಣವೂ ಅನಿವಾರ್ಯವಾಗುತ್ತದೆ. ಕಾನೂನು ನೀತಿ ಎರಡು ವಿಭಿನ್ನ. ನೀತಿ ಮನುಷ್ಯತ್ವದ ತಳಹದಿಯಲ್ಲಿ ನಿರ್ಣಯವಾಗುತ್ತದೆ. ಕಳ್ಳನಾದರೂ ಆತನ ವೃತ್ತಿಯನ್ನು ಕಾನೂನಿನಲ್ಲಿ ಅಪರಾಧ ಎಂದು ಪರಿಗಣಿಸಿದರೂ ನೀತಿಯಿಂದ ವಿವೇಚಿಸುವಾಗ ಆತ ನಿರಪರಾಧಿಯಾಗಬಹುದು. ಹೊಟ್ಟೆ ಪಾಡಿಗೆ ಮಾಡಿದ ಅಪರಾಧ ಕ್ಷಮಿಸಲ್ಪಡುತ್ತದೆ. ಜೀವ ರಕ್ಷಣೆಗೆ ಸುಳ್ಳು ಹೇಳಿದರೂ ನಿಂದಿಸಿದರೂ ನೀತಿಯಿಂದ ಅದು ಅಪರಾಧವಾಗುವುದಿಲ್ಲ. 

ಜೀವರಾಶಿಗಳಲ್ಲಿ ಮನುಷ್ಯನಿಗೆ ಮಾತ್ರ ಭಗವಂತ ಮನಸ್ಸನ್ನು ಕೊಟ್ಟಿರುತ್ತಾನೆ. ಹಾಗಾಗಿಯೇ ಆತ ಮನುಷ್ಯ ಎನಿಸಿಕೊಳ್ಳುತ್ತಾನೆ. ಆದರೆ ಮನುಷ್ಯ ಮನಸ್ಸನ್ನು ಮರೆತರೆ ಆತ ದಾನವನಾಗುತ್ತಾನೆ. ಮನಸ್ಸಿದ್ದವನಿಗೆ ಮಾತ್ರವೇ ಮಾನವೀಯ ಸಂಬಂಧಗಳ ಮೌಲ್ಯ ಅರಿವಾಗುತ್ತದೆ. ದೋಣಿ ಚಲಾಯಿಸುವ ಅಂಬಿಗನಲ್ಲಿ ವಿದ್ವಾಂಸ ತತ್ವ ಶಾಸ್ತ್ರ ಮೀಮಾಂಸೆಯನ್ನು ಕೇಳಿದಂತೆ ಕೊನೆಯಲ್ಲಿ ಅಂಬಿಗ ಕೇಳಿದ ಒಂದು ಪ್ರಶ್ನೆಗೆ ಉತ್ತರ ತಿಳಿಯದೇ ಇದ್ದರೆ, ಎಷ್ಟು ತತ್ವ ಶಾಸ್ತ್ರ ಓದಿದರೇನು ಈಜುವುದಕ್ಕೆ ಬಾರದೇ ಇದ್ದರೆ ಅಂಬಿಗ ಹೇಳುವಂತೆ ಎಲ್ಲವೂ ವ್ಯರ್ಥ. ಮಂತ್ರಾಧೀನಂತು ದೇವತ ಅಂತ ಇದ್ದರೂ ದೇವರು ಒಲಿಯುವುದು ಭಕ್ತಿಗೆ. ವಿದ್ಯಾವಂತ ಅನ್ನಿಸುವುದಕ್ಕಿಂತ ನೀತಿವಂತ ಅನ್ನಿಸುವುದರಲ್ಲಿ ಹೆಚ್ಚು ಶಕ್ತಿ ಇದೆ. 

ಎಲ್ಲಾ ಧರ್ಮಕ್ಕೂ ಇರುವುದು ಒಂದೇ ಗೀತೆ. ಅದು ಭಗವದ್ಗೀತೆ. ಜಾತಿ ಧರ್ಮಾನುಸಾರ ಭಗವದ್ಗೀತೆ  ಎಂದಿಗೂ ಇರುವುದಿಲ್ಲ. ಎಲ್ಲಾ ಧರ್ಮಕ್ಕೂ ಅದು ಅನಿವಾರ್ಯವಾಗಬಹುದು. ಹಾಗಾಗಿ ಪರಧರ್ಮ ನಿಂದನೆ ಯಾವ ಯತಿವರ್ಯರೂ ಹೇಳಲಿಲ್ಲ. ಇದರ ಅರಿವಿದ್ದೂ ಅವರು ನಿಂದಿಸುತ್ತಾರೆ ಎಂದರೆ ಅವರಿಗೆ ಸಹಿಷ್ಟುತೆ ಸೌಹಾರ್ದತೆಯ ಅವಶ್ಯಕತೆ ಇರುವುದಿಲ್ಲ್


Saturday, July 18, 2026

ನಮಗೇನು ಬೇಕಿದೆ?

         ನಮ್ಮಲ್ಲಿ ಜಗತ್ತಿಗೆ ಮಾದರಿಯಾಗುವ ಸಂವಿಧಾನ ಇದೆ. ಆದರೆ ಅದರ ಅರಿವು ಪಾಲನೆ ಅನುಷ್ಠಾನವಿಲ್ಲ. ಮೊನ್ನೆ ನಮ್ಮ‌ಮನೆಯಲ್ಲಿ ಮಗಳೊಂದಿಗೆ ಸ್ವಾರಸ್ಯಕರ ಚರ್ಚೆ ನಡೆಯಿತು, ಇಂದಿನ ಮಕ್ಕಳು ಹೇಳುವಂತೆ ಒಂದು ಪಾಟ್ ಕಾಷ್,.

        ನೀಟ್ ಪರೀಕ್ಷೆಯಲ್ಲಿ ನಡೆದ ಸೋರಿಕೆ ಮತ್ತು ಅದರ ನಂತರದ ದುರಂತಗಳನ್ನು ಪ್ರತಿಭಟಿಸಿ ಯಾರೋ ಒಬ್ಬರು ಉಪವಾಸಕ್ಕೆ ನಿಮ್ಮ ಬೆಂಬಲ ಉಂಟಾ. ನಿಮ್ಮ ಅಭಿಪ್ರಾಯ ಏನು ಅಂತ ಕೇಳಿದಳು. ಮೇಲು ಇದು ಬೆಂಬಲಿಸುವ ವಿ಼ಷಯ. ಹಲವಾರು ಮಕ್ಕಳ ಪ್ರಾಣಕ್ಕೆ ಎರವಾದ ಹಗರಣವಿದು. ಆದರೆ ನಮ್ಮ ಕಾನೂನು, ನಮ್ಮ ಪ್ರಜಾಪ್ರಭುತ್ವದ ಮುಖಗಳನ್ನು ಅರಿವಿದ್ದವನು ಒಂದೇ ಯೋಜನೆಯಲ್ಲಿ ಬೆಂಬಲಿಸುವುದು ಕಷ್ಟ. ಯಾಕೆಂದರೆ ಎಲ್ಲಾ ನಿಯಮ‌ ನಿಬಂಧನೆಗಳನ್ನು ತಮ್ಮ ಸ್ವಾರ್ಥಕ್ಕೆ ತಮ್ಮ ಮೂಗಿನ ನೇರಕ್ಕೆ ಉಪಯೋಗಿಸುವ ರಾಜಕೀಯ ಹುನ್ನಾರಗಳು ಇಂದು ಮೊದಲಲ್ಲ. ಇದರಲ್ಲಿ ಪ್ರಾಮಾಣಿಕತೆಯ ವಿಷಯದಲ್ಲಿ ವಿಶ್ವಾಸ ಕಳೆದು ಹೋಗಿದೆ. ಈ ಘಟನೆಯಲ್ಲಿ ಸತ್ಯವೋ ಸುಳ್ಳೋ ಅದರ ಬಗ್ಗೆ ಹೇಳುವುದಲ್ಲ. ಇದು ಸತ್ಯವೇ ಇರಬಹುದು ಎಂದು ತಿಳಿದರೂ ಯೋಚನೆಗಳು ಹಲವಾರು ಇರುತ್ತದೆ.

          ಸದರಿ ಸಚಿವರ  ರಾಜೀನಾಮೆ ಆಗ್ರಹಿಸಿ ಈ ಸತ್ಯಾಗ್ರಹ ನಡೆಯುತ್ತದೆ. ಆಗ್ರಹವೇನೋ ಸರಿ ಆದರೆ ಫಲಶ್ರುತಿ ಏನು ಅಂತ ಯೋಚಸಿದರೆ ನಮ್ಮ‌ ಪ್ರಜಾಪ್ರಭುತ್ವದ ಇತಿಹಾಸವನ್ನು ಅವಲೋಕಿಸಿದರೆ ನಂಬಿಕೆಯೇ ಹೊರಟು ಹೋಲುತ್ತದೆ. ಒಂದು ವೇಳೆ ನೈತಿಕ ಹೊಣೆ ಹೊತ್ತು ಸಚಿವರು ಪದತ್ಯಾಗ ಮಾಡಿದರೂ ಇನ್ನೊಬ್ನ ಬಂದರೂ ಇದು ಸರಿಯಾಗಬಹುದೇ? ಖಂಡಿತ ಇಲ್ಲ. ಹಾಗಾಗಿ ಇವುಗಳಲ್ಲಿ ರಾಜಕೀಯ ಧೋರಣೆ ಇಲ್ಲ ಎನ್ನುವುದಕ್ಕೆ ಸಾಧ್ಯವಿಲ್ಲ.  ಹಚ್ಚೇಕೆ ಈಗ ಉಪವಾಸ ಮಲಗಿದವರನ್ನ ಅಲ್ಲಿ ತಂದು ಕೂರಿಸಿದರೂ ವ್ಯವಸ್ಥೆ ಸರಿಯಾಗುವ ಭರವಸೆ ಇಲ್ಲ. ಹಾಗಾಗಿ ಹೇಳಬಹುದು  ಶ್ರೇಷ್ಠವಾದ ಕಾನೂನು ಇದೆ ಅನುಷ್ಠಾನ ಇಲ್ಲ. 

          ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳು ಕಳೆದವು. ನಾವು ಗಂಭೀರವಾದ ನಿಯಮ ಮಾಡಿದ್ದೇವೆ ಅದನ್ನು ಗೌರವಿಸುವುದನ್ನು ಅರಿತೇ ಇಲ್ಲ. ಇದುವರೆಗೆ ಆಳಿದವರು ತಂದಿಟ್ಟ ದುರಂತವಿದು. ದೇಶವನ್ನು ಕಾಡುವುದು, ಬಡತನವಲ್ಲ, ಜನ ಸಂಖ್ಯೆಯಲ್ಲ ಪ್ರಕೃತಿ ವಿಕೋಪವಲ್ಲ... ಕಾಡುವುದು ಭ್ರಷ್ಟಾಚಾರ. ಆಳಿದವರು ಇದನ್ನೇ ಕಲಿಸಿದ್ದು ಇದನ್ನೇ ತೋರಿಸಿದ್ದು .  ಒಂದು ಡಾಲರ್ ಒಂದು ರೂ ಇದ್ದದ್ದು ಐವತ್ತು ಆದಾಗ ಅರಿವಾಗಲೂ ಇಲ್ಲ.‌ಪ್ರತಿಭಟಿಸಲೂ ಇಲ್ಲ. ಕಾರಣ ಯಾರು? 

          ಒಂದು ಮಂತ್ರಿಯೋ ಶಾಸಕನೋ ರಾಜೀನಾಮೆ ಕೊಟ್ಟರೆ ವ್ಯವಸ್ಥೆ ಬದಲಾಗುವುದಿಲ್ಲ. ವ್ಯಕ್ತಿ‌ಮಾತ್ರ ಬದಲಾಗುತ್ತಾನೆ. ಕದ್ದು ನೋಡುವವರು ಇರುವ  ತನಕ ಕದಿಯುವವರು ಇರುತ್ತಾರೆ. ಕಾನೂನಿಗಿಂತಲೂ ನಮಗವಶ್ಯವಿರುವುದು ನೀತಿ. ಸಾಮಾಜಿಕ ಪ್ರಜ್ಞೆ. ಅದಿಲ್ಲವಾದರೆ ಯಾವುದೂ ಬದಲಾಗುವುದಿಲ್ಲ. ಎಷ್ಟು ಬಿಗಿಯಾದ ಕಾನೂನು ಇದ್ದರೇನು, ನಮಗೆ ಕಾನೂನಿಗಿಂತಲೂನ ನಮ್ಮ ಜಾತಿ ಧರ್ಮವೇ ಮುಖ್ಯವಾಗಿ ಹಿರಿದಾಗುತ್ತದೆ. ಮಾನವೀಯತೆ ಸಾಯುತ್ತದೆ. ಇಷ್ಟಾದರೂ ಇದು ಹಗರಣದ ಸಮರ್ಥನೆಯಲ್ಲ. ಯಾಕೆಂದರೆ ಹಗರಣ ನಮಗೇನು ಹೊಸತಲ್ಲ. ಅದುವೇ ಸಹಜ ಬದುಕಾಗಿದೆ.

Sunday, July 12, 2026

ಬಾನಲ್ಲೂ ನೀನೆ ಭುವಿಯಲ್ಲು... ನೀನೆ..

" ಬಾನಲ್ಲೂ ನೀನೆ ಭುವಿಯಲ್ಲು... ನೀನೆ"   ನಾವು ನಿದ್ದೆಗೆ ಜಾರುವ ಹೊತ್ತು ರಾತ್ರಿ ಹತ್ತು ಘಂಟೆಗೆ ನೀರವ ಮೌನದಲ್ಲಿ ಪಕ್ಕದ ಮನೆಯ ರೇಡಿಯೋದಿಂದ ಹಾಡು ಬರುವುದು ಕೇಳಿ ಬರುತ್ತಿದ್ದ ನಮ್ಮ ಬಾಲ್ಯದ ಕಾಲ.  ಸಿನಿಮಾ ಹಾಡು ಕೇಳಬೇಕೆಂದರೆ ಯಾರದೋ ಮನೆಗೆ ಹೋಗಿ ರೇಡಿಯೋ ಹಾಕಿಸಿ ಕೇಳಬೇಕಿತ್ತು. ಅವರೂ ಹಾಗೆ ರೇಡಿಯೋ ಬ್ಯಾಟರಿ ಖರ್ಚಾಗುತ್ತದೆ ಎಂದು ಅದನ್ನು ಒಂದಿಷ್ಟು ಸಣ್ಣ ಧ್ವನಿಯಲ್ಲೇ ಇಡುತ್ತಿದ್ದರು.  ತೀರಾ ಬಡತನದ ಒಂದು ಸಾಮಾನ್ಯ ಸಾಧನವಾದ ರೇಡಿಯೋ ಕೂಡ ನಮ್ಮಲ್ಲಿರಲಿಲ್ಲ.

    ಬಾಲ್ಯದಲ್ಲಿ ನಮ್ಮ ಮನೆಯಲ್ಲಿ ಮನರಂಜನೆ ವಸ್ತು ಯಾವುದೂ ಇರಲಿಲ್ಲ. ಊರಿಗೆಲ್ಲಾ ವಿದ್ಯುತ್ ಸಹ ಇರಲಿಲ್ಲ. ನಮ್ಮ ಪೈವಳಿಕೆ ಗ್ರಾಮದ ಮನೆಗಳಲ್ಲಿ  ವಿದ್ಯುತ್ ದೀಪ ಬೆಳಗಿದ್ದು 1980 ರ ಇಸವಿಯಲ್ಲಿ. ಅದುವರೆಗೆ ಸೀಮೆ ಎಣ್ಣೆಯ ದೀಪ ಲ್ಯಾಂಪ್ ಗಳು ಮಾತ್ರ. ಆನಂತರ ಒಂದಷ್ಟು ಧನಿಕರ ಮನೆಗೆ ವಿದ್ಯುತ್ ಸಂಪರ್ಕ ಬಂದರೂ ನಮ್ಮ ಬಾಡಿಗೆ ಮನೆಯಲ್ಲಿ ಸೀಮೆ ಎಣ್ಣೆ ದೀಪವೇ ಪ್ರಕಾಶ ಮೂಲ. ಇಂತಹ ಸ್ಥಿತಿಯಲ್ಲಿ ಮನರಂಜನ ಸಾಧನ ತರುವುದು ಉಪಯೋಗಿಸುವುದು ನಮ್ಮ ಕೈಗೆಟುವ ವಸ್ತುವಾಗಲಿಲ್ಲ.

ಆಗೆಲ್ಲ ಕೆಲವರು ಸಾಯಂಕಾಲ ಬಜಾರ್ ಗೆ ಬಂದವರು ರೇಡಿಯೋ ತರುತ್ತಿದ್ದರು. ಕೈಯಲ್ಲೊಂದು ರೇಡಿಯೋ ತಂದು ಜಂಭದಿಂದ ಅಂಗಡಿಯ ಜಗಲಿಯ ಬೆಂಚಿನ  ಮೇಲೆ ಕುಳಿತು ಬರ ಬರ ಸದ್ದಿನೊಂದಿಗೆ ಮಂಗಳೂರು ಭದ್ರಾವತಿ ಸಿಲೋನ್ ವಿವಿಧ ಭಾರತಿ ಸ್ಟೇಶನ್ ಹುಡುಕುತ್ತಿದ್ದರೆ, ನಾವು ಸುತ್ತ ನೆರೆದು ಆಸಕ್ತಿಯಿಂದ ನೋಡುತ್ತಿದ್ದೆವು. ಪುಟ್ಟ ಪೆಟ್ಟಿಗೆಯಿಂದ ಮಾತನಾಡಿದ ಹಾಡಿದ ಸದ್ದು ಬರುವುದು ಅಚ್ಚರಿಯ ವಿಷಯವಾಗಿತ್ತು. ಯಾರೋ ಎಲ್ಲೋ ರೇಡಿಯೋ ಹಾಕಿ ಹಾಡು ಕೇಳುತ್ತಿದ್ದರೆ, ನಮ್ಮ ಮನೆಯಲ್ಲೂ ಒಂದು ರೇಡಿಯೋ ಅದು ಕನಸಿನ ವೈಭವದ ವಿಷಯವಾಗಿತ್ತು. ಅಂತಹ ಕಾಲದಲ್ಲಿ ಎಲ್ಲೋ ಯಾರದೋ ಒಂದು ರೇಡಿಯೋದಲ್ಲಿ ಆಕಾಶವಾಣಿಯ ಚಿತ್ರಗೀತೆಯಲ್ಲಿ ಹಾಡು ಬರುತ್ತಿದ್ದರೆ ಅದರಲ್ಲಿ ಗಾಯಕರ ಹೆಸರು ಹೇಳುತ್ತಿದ್ದರೆ, ಅದರಲ್ಲಿ ಸಾಮಾನ್ಯವಾಗಿ ಬರುತ್ತಿದ್ದ ಹೆಸರು ಪಿ ಬಿ ಶ್ರೀನಿವಾಸ್,  ಘಂಟಸಾಲ,  ಎಸ್ ಜಾನಕಿ, ಎಸ್ ಪಿ ಬಾಲ ಸುಬ್ರಹ್ಮಣ್ಯಂ, ಜೇಸುದಾಸ್ ವಾಣಿಜಯರಾಮ್, ಪಿ ಸುಶೀಲ ಹೀಗೆ....  ಯಾವುದೇ ಹಾಡು ಹಾಕಿದರು ಹಾಡಿದವರು ಎ ಸ್ಪಿ ಬಾಲಸುಬ್ರಹ್ಮಣ್ಯಂ ಮತ್ತು ಎಸ್ ಜಾನಕಿ ಈ ಹೆಸರು ಪ್ರತೀ ಹಾಡಿನೊಂದಿಗೆ ಚಿರ ಪರಿಚಿತ. 

ಚಿತ್ರ ಬಯಲು ದಾರಿ ಹಾಡಿದವರು ಎಸ್ ಜಾನಕಿ...ರಾತ್ರಿಯ ನೀರವ  ಮೌನದಲ್ಲಿ ದೂರದ ರೇಡಿಯೋದಲ್ಲಿ  ಎಸ್ ಜಾನಕಿಯ ಮಧುರವಾದ ಸ್ವರ ಗಾಳಿಯಲ್ಲಿ ತೇಲಿಬರುತ್ತಿದ್ದರೆ ನಿಂತಲ್ಲೇ ನಿಂತು ಆ  ಹಾಡನ್ನು ಆಲಿಸುತ್ತಿದ್ದದ್ದು ಈಗಲೂ ನೆನಪಿದೆ. ಬಾಲ್ಯದ ಮುಗ್ದ ಮನಸ್ಸಿನ ದಿನಗಳಿಂದ ಎಸ್ ಜಾನಕಿ ಎಂಬ ಗಂಧರ್ವ ಗಾಯಕಿಯ ಮುಖ ಪರಿಚಯವಿಲ್ಲದೇ ಇದ್ದರೂ  ಆ ಧ್ವನಿಯ ಪರಿಚಯವಿತ್ತು. ಈಗಿನ ಟಿವಿ ಇಂಟರ್ನೆಟ್ ಯೂಟ್ಯೂಬ ದಿನಗಳಲ್ಲಿ ಆ ದಿನದ ಅನುಭವದ ಕಲ್ಪನೆ ಹೇಳಿದರೂ ಕಲ್ಪಿಸುವುದು ಸಾಧ್ಯವಿಲ್ಲ. ಅದೊಂದು ಕಾಲ. ಆ ಕಾಲದಿಂದ ಪರಿಚಯದ ಜಾನಕಮ್ಮನ ಧ್ವನಿ ಇನ್ನು ಕೇವಲ ಧ್ವನಿ ಮುದ್ರಣಕ್ಕೆ ಸೀಮಿತ. ಈ ಕೋಗಿಲೆ ಸಿನಿಮಾದಲ್ಲಿ ಹಾಡುವುದು ನಿಲ್ಲಿಸಿ ಅದೆಷ್ಟು ಕಾಲವಾಯಿತೋ ತಿಳಿಯದು. ಇಂದಿನ ಚಿತ್ರ ವಿಚಿತ್ರ ಸಂಗೀತದ ನಡುವೆ ಜಾನಕಮ್ಮನ ಧ್ವನಿ ಹಲವಾರು ಸಲ ನೆನಪಿಗೆ ಬಂದರೂ ಕಾಲಗತಿಯನ್ನು ತಳ್ಳುವುದು ಸಾಧ್ಯವಲ್ಲ. ಜಾನಕಮ್ಮನ ಹಾಡುಗಳೆಂದರೆ ಅದು ಆಗಿನ ಗಾಳಿಯಲ್ಲಿ ಕಂಪು ಬೆರೆತಂತೆ. ಅದೆಂದಿಗೂ ಮಾಸಿ ಹೋಗದ ಧ್ವನಿ. ಈಗಲೂ ಆ ಗಾಳಿಯಲ್ಲಿ ಆ   ಧ್ವನಿ ಎಲ್ಲಾದರೂ ಅವಿತಿದೆಯೋ ಅಂತ ಪಂಚೆಂದ್ರಿಯಗಳು ಅರಸುತ್ತಿದ್ದರೆ ಆಶ್ಚರ್ಯವಿಲ್ಲ. ಈಗಿನ ಟೀವಿ ಯೂಟ್ಯೂಬ್ ನಲ್ಲಿ ಮುಖತೋರಿಸಿ ಹಾಡುವ ಗಾಯಕರ ಪರಿಚಯ ಮುಂದಿನ ಘಳಿಗಯಲ್ಲಿ  ಮರೆತು ಹೋಗುತ್ತಿರುವಾಗ,  ಆಗ ಕೇವಲ ಧ್ವನಿಮಾತ್ರದಿಂದ  ಚಿರಪರಿಚಿತರಾದ ಜಾನಕಮ್ಮನ ಸ್ವರ ಈಗಲೂ ನೆನಪಿನಲ್ಲಿ ಉಳಿದರೆ ಆ ಧ್ವನಿಯ ಗಾಢ ನೆನಪು ಎಷ್ಟು ಎಂದು ತಿಳಿಯುವುದಕ್ಕೆ ಸಾಧ್ಯವಾಗುತ್ತದೆ. ಇತ್ತೀಚಿನ ದಿನದವರೆಗೂ ಜಾನಕಮ್ಮನ ಮುಖ ಪರಿಚಯ ಬಹಳಷ್ಟು ಮಂದಿಗೆ ತಿಳಿದಿಲ್ಲ. ಕೇವಲ ಧ್ವನಿಯಿಂದ ಮನೆ ಮನೆಯ ಮನ ಮನದ ಚಿರ ಪರಿತ ಹೆಸರಾದ ಜಾನಕಮ್ಮನ ಸ್ವರದ ಜಾದು ಇಂದು ಕಲ್ಪಿಸುವುದಕ್ಕೂ ಸಾಧ್ಯವಿಲ್ಲ.


ಈಗಿನ್ನು ಜಾನಕಮ್ಮ ಕೇವಲ ನೆನಪಿನ ಲೋಕಕ್ಕೆ ಸರಿದುಹೋದರೆ ಜಾನಕಮ್ಮನ ನೆನಪಿನಲ್ಲಿ ಮನಸ್ಸಿನ್ನೂ ಹಾಡುತ್ತಿದೆ ...ಬಾನಲ್ಲು ನೀನೆ ಭುವಿಯಲ್ಲೂ ನೀನೆ ಎಲ್ಲೆಲ್ಲೂ ನೀನೆ...



Saturday, July 4, 2026

ಮಿತ್ರನ ಮೈತ್ರಿ

ಸ್ನೇಹ ಸಂಬಂಧಗಳು ಬದುಕಿನ ಅರ್ಥವನ್ನು ಕಲ್ಪಿಸುತ್ತದೆ. ಅದು ರಕ್ತ ಸಂಬಂಧಕ್ಕಿಂತ ಮಿಗಿಲಾಗಿದ್ದರೆ ಅದಕ್ಕೆ ಒಂದು ವೈಶಿಷ್ಟ್ಯವಿರುತ್ತದೆ. ಅಲ್ಲಿ ಯಾವುದೇ ಪರಿಮಿತಿ ಇಲ್ಲದೆ  ಬೆಸೆದುಕೊಂಡಿದ್ದರೆ ಅದರ ಗಾಢವಾದ ಸಂವೇದನೆಯನ್ನು ಅನುಭವಿಸಿಯೇ ತಿಳಿಯಬೇಕು. ನಿನ್ನೆ ಅಂದರೆ ದಿನಾಂಕ 03-07-2026 ರಂದು ನಮ್ಮೂರಿನ ಮಿತ್ರ , ಸದ್ಯ ಮಂಗಳೂರಲ್ಲಿ ವಾಸವಾಗಿರುವ ಜಯಶಂಕರ್ ನ ಮಗಳು ಮೈತ್ರಿಯ ವಿವಾಹ ಸಮಾರಂಭದಲ್ಲಿ ಭಾಗವಹಿಸುವ ಅವಕಾಶ ಒದಗಿಬಂತು. ನನ್ನ ಮತ್ತು ಜಯಣ್ಣನ ಸ್ನೇಹ ಸರಿಸುಮಾರು ಕಾಲು ಶತಮಾನಕ್ಕಿಂತಲೂ ಮಿಕ್ಕಿದ ಸ್ನೇಹ ಸಂಬಂಧ. ಶಾಲಾದಿನಗಳಲ್ಲಿ ಅಕ್ಕಪಕ್ಕ ಕುಳಿತು ಎರಡಕ್ಷರಗಳನ್ನು ಒಂದಾಗಿ ಕಲಿತವರು. 



ಜಯಣ್ಣ  ನಮ್ಮ ಕುಟುಂಬ ಮಿತ್ರ ಎಂದರೂ ಸರಿಯೇ. ನಾನೂ ಹಾಗೇ ಆತನ ಮನೆಯ ಒಂದು ಅಂಗವಾಗಿ ಸ್ನೇಹ ಬೆಸೆದುಕೊಂಡು ಬಿಟ್ಟಿದೆ. ನಮ್ಮ  ಮನೆಯವರಲ್ಲೂತೀರ ಹೇಳಲಾಗದ ಭಾವನೆಗಳನ್ನು ವೈಯಕ್ತಿ ವಿಷಯಗಳನ್ನು ಮಿತ್ರರಲ್ಲಿ ಹಂಚಿಕೊಂಡು ಬಿಡುತ್ತೇವೆ.  ಸಂಬಂಧಿಕರ ಮನೆಗೆ ಹೋಗುವುದಕ್ಕಿಂತಲೂ  ಮಿತ್ರರ ಮನೆಗೆ ಹೋಗುವುದರಲ್ಲಿ ಔಪಚಾರಿಕತೆಯ ನಿಬಂಧನೆ ಇರುವುದಿಲ್ಲ. ಒಂದು ಸಂಬಂಧಿಗಳ ಮನೆಗೆ ನಡು ರಾತ್ರಿ ಹೋಗುವುದಿದ್ದರೆ. ನೀವು ಹೋಗುವ ಮೊದಲು ಅಲ್ಲವೇ ಹೋದಕೂಡಲೇ  ರಾತ್ರಿಯೇ ಹೋದ ಕಾರಣಗಳನ್ನು ಚರಿತ್ರೆಯನ್ನೂ ವಿವರಿಸಬೇಕಾಗುತ್ತದೆ. ಅಥವಾ ಅಲ್ಲೋಂದು ಪರಿಮಿತಿ ಇರುತ್ತದೆ. ಆದರೆ ಆತ್ಮೀಯ ಮಿತ್ರನಿಗೆ ತಮ್ಮ ಪ್ರತಿಯೊಂದು ಚಲನವಲನ ಅರಿವಿರುತ್ತದೆ. ಅರಿವಿಲ್ಲದೇ ಇದ್ದರೂ ಅದನ್ನು ಹೆಚ್ಚು ವಿವರಿಸುವ ಅವಶ್ಯಕತೆ ಒದಗಿಬರುವುದಿಲ್ಲ. ಆಹಾರ ಉಪಚಾರಗಳಲ್ಲಿ ಯಾವ ಒಣ ಪ್ರತಿಷ್ಠೆಯಾಗಲೀ ನಿಬಂಧನೆಗಳ ಪರಿಮಿತಿ ಬಂಧನವಾಗಲೀ ಇರುವುದಿಲ್ಲ.  ಬಂದವರಿಗೆ ಬಲವಂತವಾಗಿ ತಿನ್ನಿಸಿಯೇ ಬಿಡಬೇಕು ಎನ್ನುವ ಕಡು ಆತಿಥ್ಯ ಇರುವುದಿಲ್ಲ. ಹೋದವನಿಗೂ ಬೇಡದೇ ಇದ್ದರೂ ತಿನ್ನಲೇ ಬೇಕೆಂಬ ದಾಕ್ಷಿಣ್ಯ ಇರುವುದಿಲ್ಲ. ಹಲವು ಸಲ ಬೇಡದೇ ಇದ್ದರೂ ತಿನ್ನಬೇಕಾಗುತ್ತದೆ. ಬೇಡದೇ ಇದ್ದರೂ ಒತ್ತಾಯದಲ್ಲಿ ತಿನ್ನಿಸಬೇಕಾಗುತ್ತದೆ. ನನ್ನದು ಇದೆಲ್ಲದಕ್ಕೂ ತದ್ವಿರುದ್ದ ಸ್ವಭಾವ. ಬೇಡದೇ ಇದ್ದರೆ ಒತ್ತಾಯಕ್ಕೆ ತಿನ್ನುವ ತಿನ್ನಿಸುವ ಉಪಚಾರ ನನಗೆ ಆಗುವುದಿಲ್ಲ. ಹಲವು ಕಡೆ ತಿನ್ನುವುದು ತಿನ್ನಿಸುವುದು ಇಲ್ಲದಿದ್ದರೆ ಬೇಜಾರು ಮಾಡಿಕೊಳ್ಳುತ್ತಾರೆ ಎಂಬ ಆತಂಕ. ಆದರೆ ಮಿತ್ರನ ಆತಿಥ್ಯವೆಂದರೆ  ಅದೊಂದು ಸ್ವಚ್ಛಂದ ಪ್ರವೃತ್ತಿ ಅಲ್ಲಿರುತ್ತದೆ. ನನ್ನ ಮತ್ತು ಜಯಣ್ಣನ ಮಿತ್ರತ್ವದಲ್ಲಿ ಯಾವ ಪರಿಮಿತಿಯೂ ಇರುವುದಿಲ್ಲ. ಏಷ್ಟೋ ಸಲ ಮಧ್ಯರಾತ್ರಿ ಮಂಗಳೂರಿನ ಹತ್ತಿರ ಬರುವಾಗ ಕರೆ ಮಾಡಿ ಹೋದದ್ದಿದೆ. ಮಂಗಳೂರಿಗೆ ಹೋದಾಗಲೇಲ್ಲ ಭೂಸ್ಪರ್ಶವಾಗುವ ಮೊದಲೆ ಜಯಣ್ಣ ನಾನಿರುವಲ್ಲಿಗೆ ಬರುತ್ತಾನೆ ಅದೊಂದು ಬಗೆಯ ಸ್ನೇಹಾದರೆ ವಿವರಿಸುವುದು ಕಷ್ಟ. 


ಜಯಣ್ಣನ ಒಬ್ಬಳೇ ಮಗಳು ಮೈತ್ರಿಯ ವಿವಾಹ ನಿನ್ನೆ ನೆರವೇರಿತು. ಬಹುಶಃ ಜಯಣ್ಣ ಮಿತ್ರತ್ವದ ಮೈತ್ರಿ ಸ್ವಭಾವ ರೂಪವೇ ಮೈತ್ರಿ. ಅಂಬೆಗಾಲಿಕ್ಕುವ ಪುಟ್ಟಶಿಶುವಿನಿಂದ ತೊಡಗಿ ಹೆಗಲೆತ್ತರಕ್ಕೆ ಬೆಳೆಯುವ ತನಕವೂ ಕಣ್ಡೆದುರೇ ಬೆಳೆದು ನಿಂತ ಮೈತ್ರಿಯ ಮದುವೆಗೆ ಮಿತ್ರನಾಗಿ ಕರೆಯದೇ ಇದ್ದರೂ ಹೋಗುವ ಬಂಧನವಿತ್ತು. ಜಯಣ್ಣದಂಪತಿಗಳು, ಮಗಳು ಮೈತ್ರಿ ಎಲ್ಲರೂ ನಮ್ಮ ಮನೆಯವರ ಮೈತ್ರಿ ವರ್ತುಲದ ಬಿಗಿ ಬಂಧನದಲ್ಲಿ ಬೆಸೆದುಕೊಂಡಿದ್ದವರು. ನಮ್ಮ ಎರಡು ಕುಟುಂಬಗಳ ನಡುವೆ ಮರೆಯಲಾಗದ ಹಲವಾರು ರಸನಿಮಿಷಗಳ ಘಳಿಗೆಗಳು ಸ್ವಯಂ (ಸೆಲ್ಫಿ) ಚಿತ್ರಗಳು ಸಾಕಷ್ಟು ಇವೆ.   ಪರಸ್ಪರ ಸಹಾಯಗಳಿಗೆ ಧನ್ಯವಾದದ ಅವಶ್ಯಕತೆಯಿಲ್ಲದ ಗಾಢವಾದ ಆತ್ಮಿಯತೆ ಇಲ್ಲಿದೆ.  ಹಾಗಾಗಿ ಮೈತ್ರಿಯ ವಿವಾಹ ಎಂದಕೂಡಲೇ ನಮ್ಮ ಮನೆಯವರೆಲ್ಲರೂ ಮದುವೆಗೆ ಹಾಜರಾದೆವು. ಮಂಗಳೂರಿನ ಜಿಟಿ ಜಿಟಿ ಮಳೆಯ ತಂಪಾದ ವಾತಾವರಣದಲ್ಲಿ ನಡೆದ ವಿವಾಹ ಮಹೋತ್ಸವ, ಜತೆಗೆ ಪುಷ್ಕಳವಾದ ರುಚಿಯಾದ ಭೋಜನ , ಮಿತ್ರನ ಆದರ ಆತಿಥ್ಯ  ಮರೆಯುವುದಕ್ಕಿಲ್ಲ. ವಿವಾಹ ಕಾರ್ಯಕ್ರಮ ಎಂದರೆ ಇಲ್ಲಿ ಉದ್ವೇಗ, ಒತ್ತಡ ಎಲ್ಲವೂ ಇರುತ್ತದೆ. ತುಂಬಿದ ಜನರನ್ನು ಸಂಪರ್ಕಿಸಿ ಕುಶಲ ವಿಚಾರಿಸಿ ಸತ್ಕರಿಸುವುದು ಸುಲಭದ ಕೆಲಸವಲ್ಲ. ಅಷ್ಟೊಂದು ಗಡಿಬಿಡಿಯಲ್ಲೂ ದೂರದಿಂದ ನಮ್ಮನ್ನು ನೋಡಿದ ಜಯಣ್ಣ ಕೈ ಬೀಸಿ ಅದೇ ಸ್ನೇಹ ಸಲುಗೆಯಿಂದ ಮಾತನಾಡಿಸಿದಾಗ ಬಹಳ ಸಂತಸವಾಯಿತು. ಪ್ರತಿಯೊಬ್ಬರ ಬಳಿಗೆ ಬಂದು ಮಿತ್ರ ದಂಪತಿ ವಿಚಾರಿಸಿ ಸತ್ಕರಿಸಿದಾಗ ಜಯಣ್ಣನ ಗೆಲುವಿನ ನಗೆ ನೋಡುವುದಕ್ಕೆ ಬಹಳ ಹಿತವೆನೆಸಿತ್ತು. ಮುದ್ದಿನ ಮಗಳ ಭವಿಷ್ಯವನ್ನು ಕಟ್ಟಿದ ಗೆಲುವಿನ ನಗೆಯದು. 

ಕೆಲಸದ ಒತ್ತಡದಲ್ಲಿ ಅಲ್ಪ ಸಮಯದ ಅವಧಿಗೆ ಮಾತ್ರವೇ ಕಾರ್ಯಕ್ರಮದ ಭಾಗವಾಗಲು ಸಾಧ್ಯವಾಯಿತು. ಸಾಲಂಕೃತ ವಧೂವರರನ್ನು ಆಶೀರ್ವದಿಸಿ ಮಗಳು ಮೈತ್ರಿಯನ್ನು ಎದೆಗಾನಿಸಿ ಹರಸಿದಾಗ ನನಗರಿವಿಲ್ಲದೇ ಎದೆ ಭಾರವಾಗಿ ಕಣ್ತುಂಬಿ ಬಂತು. ಮೈತ್ರಿ ನಿಶಾಂತ ಹೊಸಬಾಳಿಗೆ ಹೆಜ್ಜೆ ಇರಿಸಿದ  ನವ ದಂಪತಿಗಳು ಸುಖವಾಗಿ ಬಾಳಿ ಬದುಕಲಿ ಮನದಾಳದ ಆಶೀರ್ವಾದಗಳು. 


Friday, June 26, 2026

ಯೋಗದಿನ

 


ಇತ್ತೀಚೆಗೆ ಯೋಗದಿನದಲ್ಲಿ ಹಲವರ ಯೋಗಾಭ್ಯಾಸ ನೋಡಿ ಒಂದೆರಡು ಅನಿಸಿಕೆಗಳು ಹೇಳಬೇಕೆಂದೆನಿಸಿತು. ಯೋಗ ದಿನ ಮೂರ್ಖದಿನವಾಗುವಂತೆ ಆಚರಿಸುವುದನ್ನು ನೋಡಿದಾಗ ವಿಷಾದವಾಗುತ್ತದೆ. ಒಂದು ದಿನ ಸಮವಸ್ತ್ರ ಹಾಕಿ ದೊಡ್ಡ ಬ್ಯಾನರ್ ಕಟ್ಟಿ ಯೋಗಾಭ್ಯಾಸ ಮಾಡುವುದರಲ್ಲಿ ಯಾವ ಪ್ರಯೋಜನವೂ ಇಲ್ಲ. ಒಂದು ದಿನಕ್ಕೆ ಸೀಮಿತವಾಗುವ ಯೋಗಭ್ಯಾಸ ನಿಜಕ್ಕೂ ಅದಕ್ಕೆ ಮಾಡುವ ಅವಮಾನವಾಗುತ್ತದೆ. 

ಯೋಗ, ಅಂತ ಹೇಳಿದ ಕೂಡಲೇ ಕೆಲವು ಆಸನ, ಮತ್ತೆ ಪ್ರಾಣಾಯಾಮ ಅಂತ ತಿಳಿದು ಅದೇ ಭ್ರಮೆಯಲ್ಲಿ ಇದ್ದು ಬಿಡುತ್ತಾರೆ. ಹಲವರು ಇದನ್ನು ಪ್ರದರ್ಶನದ ವಸ್ತುವಾಗಿ ಮಾಡಿ‌ಬಿಡುತ್ತಾರೆ. ಇನ್ನು ಕೆಲವರಿಗೆ ಇದು ಸಮಯ ಸಿಕ್ಕಾಗ ಮಾಡುವ ಕೆಲಸವಾಗಿದೆ. ಆರಂಭದ ದಿನಗಳಲ್ಲಿ ಇದು ಇಷ್ಟೇ ಅಂತ ಅನಿಸಿದರೂ, ಅಷ್ಟಕ್ಕೇ ಸೀಮಿತಗೊಳಿಸಬಾರದು. ಆದರೆ ಇಂದಿನ‌ ಫ್ಯಾಷನ್ ಯುಗದಲ್ಲಿ‌ ಅದಕ್ಕೇ ಸೀಮಿತ ವಾಗಿಸುವುದು ಮೂರ್ಖತನ ಎನ್ನಬೇಕು. 

ಯೋಗ ಮುಖ್ಯವಾಗಿ ಯಾವುದೇ ಧರ್ಮಕ್ಕೆ ಸೀಮಿತವಾಗುವ ಧಾರ್ಮಿಕ ಆಚರಣೆಯಲ್ಲ. ಆದರೆ ಸನಾತನ ಧರ್ಮ‌, ಅಂದರೆ ಅತ್ಯಂತ ಹಳೆಯ ಮನುಷ್ಯ ಜೀವನ ಧರ್ಮ‌ ಇದನ್ನೇ ಅಳವಡಿಸಿಕೊಂಡಿತ್ತು. ಇಂದು ಹಲವು ರೀತಿಯಲ್ಲಿ ಇದನ್ನು ಧಾರ್ಮಿಕ ಕ್ರಿಯೆಗೆ ಸೀಮಿತ ಗೊಳಿಸಿದ್ದೂ ಒಂದು ಬಗೆಯಲ್ಲಿ ವಿಷಾದನೀಯ ಎನ್ನಬೇಕು. ಅದು ಹಾಗೆ ಒಂದು ಧರ್ಮಕ್ಕೆ ಸೀಮಿತವಾಗುವುದಕ್ಕೆ ಕಾರಣ ಇಲ್ಲದಿಲ್ಲ. ಬಾಲ್ಯದಲ್ಲೇ ನಮಗೆ ನಮ್ಮ ಕರ್ತವ್ಯಗಳನ್ನು ಇದೇ ಬಗೆಯಲ್ಲಿ ಖಡ್ಡಾಯಗೊಳಿಸುತ್ತಾರೆ. ಅನ್ನ ಎಂಬದನ್ನು ದೇವರಾಗಿಸಿ ಅದರ ಮೌಲ್ಯವನ್ನು ಗೌರವವನ್ನು ತೋರಿಸುವ ಯತ್ನ ಮಾಡುತ್ತಾರೆ. ಅದೇ ಮುಂದೆ ಧಾರ್ಮಿಕವಾಗುತ್ತದೆ. ಇದೇ ಬಗೆಯಲ್ಲಿ ನಮಗೆ ಹಲವು‌ ಮೌಲ್ಯಗಳ ಪಾಠವಾಗುತ್ತದೆ.  ಅದೇ ಜೀವನ ಧರ್ಮವಾಗುತ್ತದೆ. 

   ಯೋಗ ಎಂದೋ ಒಂದು ದಿನದ ಆಚರಣೆಯಲ್ಲ. ಹಾಗೆ ಮಾಡಿದರೆ ಅದು ಜೀವನವನ್ನು ಅರ್ಥಮಾಡಿಕೊಳ್ಳದ ಅಜ್ಜಾನವಾಗುತ್ತದೆ. ಅಹಾರ ವಿಸರ್ಜನಾದಿಗಳು ಹೇಗೆ ಅನಿವಾರ್ಯವೋ, ಹೊತ್ತು ಹೊತ್ತಿಗೆ ಹೇಗೆ ಊಟವನ್ಮು ಮಾಡುತ್ತೀರೋ ಅದೆ ಬಗೆಯಲ್ಲಿ ಇದು ಜತೆಯಲ್ಲಿರಬೇಕು ಯಾರನ್ನೋ‌ ಮೆಚ್ಚಿಸುವುದಕ್ಕೆ ಯಾರದೋ ಮೇಲಿನ ಅಭಿಮಾನ ದರ್ಶನಕ್ಕೆ ಯೋಗಾಭ್ಯಾಸವಲ್ಲ.  ಅದೊಂದು ಜೀವನ ವಿಧಾನ. ತೆಳ್ಳಗಾಗುವುದಕ್ಕೋ, ದಪ್ಪಗಾಗುವುದಕ್ಕೋ ಅಯುರಾರೋಗ್ಯಕ್ಕೋ ಇದು ಉದ್ದೇಶವಾಗಬಾರದು. ಹಾಗಾದರೆ ಇದರ ಮೂಲ ಉದ್ದೇಶಕ್ಕೆ ಅನ್ಯಾಯವಾಗುತ್ತದೆ. ಜೀವನದ ಪ್ರತಿಯೊಂಕ್ಕೂ ಯೋಗಾಭ್ಯಾಸ ಕಣ್ಣಾಗಬೇಕು.‌ಆಗಲೇ ಜೀವ ಮತ್ತು ಆತ್ಮದ ಸಂಯೋಗವಾಗುತ್ತದೆ.

ಪ್ರತಿ ವರ್ಷವೂ ಯೋಗದಿನ ಆಚರಿಸಲ್ಪಡುತ್ತದೆ.  ನೂರಾರು ಜನ ಸೇರಿ,  ವಿಶೇಷ ಸಮವಸ್ತ್ರ ಧರಿಸಿ,  ಒಂದಷ್ಟು ಕಸರತ್ತು ಮಾಡಿ ನಾವೂ ಆರೋಗ್ಯವಂತರಾದೇವು, ಯೋಗಪಟುಗಳಾಗಿದ್ದೇವೆ ಎಂಬ ಭ್ರಮೆ ಆವರಿಸುತ್ತದೆ.  ಹೆತ್ತವರ ದಿನದಂದು ಅಪ್ಪ ಅಮ್ಮನ ನೆನಪಾದಂತೆ ಯೋಗದಿನ ಯೋಗದ ಆಚರಣೆಯಾಗುತ್ತದೆ. ಮತ್ತೆ ಮುಂದಿನ ವರ್ಷದ ತನಕವೂ ಅದರ ಜ್ಞಾಪಕವೇ ಇರುವುದಿಲ್ಲ. 

ನಿಯಮಬದ್ದವಾದ ಜೀವನಕ್ರಮವೇ ಯೋಗ. ಕಸರತ್ತು ವ್ಯಾಯಾಮ ಮಾಡುವುದಕ್ಕಿಂತಲೂ ಅಲ್ಲಿ ನಿಯಮವನ್ನು ಅನುಸರಿಸುವುದು ಪ್ರಧಾನವಾಗಿಬಿಡುತ್ತದೆ. ಚಿತ್ತವೃತ್ತಿಯಿಂದ ದೂರವಿದ್ದು ಒಂದು ಜೀವನ ಕ್ರಮವನ್ನು ಅನುಸರಿಸಬೇಕು. ಮನಸ್ಸು ನಿಯಂತ್ರಣದಲ್ಲಿರಬೇಕು. ಯೋಗದ ದಿನವೇ ಮನಸ್ಸು ನಿಯಂತ್ರಣವನ್ನು ಮೀರುತ್ತದೆ. ಏನೇನೋ ಚಿತ್ತವಿಕಾರಗಳು ಆವರಿಸಿದ್ದರೆ ಅದು ಯೋಗಾಭ್ಯಾಸವಾಗುವುದಕ್ಕೆ ಸಾಧ್ಯವಿಲ್ಲ. 

ಯೋಗಾಸನ ಅಂದರೆ ಕೆಲವೊಂದು ಭ್ರಮೆಯಿಂದ ಮೊದಲು ಹೊರಗೆ ಬರಬೇಕು. ಕೃತಿಗಿಂತಲೂ  ಶಿಸ್ತು ನಿಯಮ ಪಾಲನೆ ಇಲ್ಲಿ ಅತೀ ಮುಖ್ಯ.  ಕಷ್ಟದ ಆಸನ ಮಾತ್ರ ಯೋಗಾಸನವಲ್ಲ. ಅತ್ಯಂತ ಸರಳವಾದ ಲಘುವಾದ ಆಸನಗಳು ಹಲವು ಸಲ ಹೆಚ್ಚು ಪ್ರಯೋಜನಕಾರಿಯಾಗಿ ಪರಿಣಾಮವನ್ನು ನೀಡುತ್ತದೆ. ಮನಸ್ಸಿಗೆ ನಿರಾಳತೆಯನ್ನು ಒದಗಿಸುತ್ತದೆ.  ಆದರೆ ಕಷ್ಟದ ಆಸನಗಳಿಗೆ ಎಲ್ಲರೂ ಹೆಚ್ಚು ಆಕರ್ಷಿತರಾಗುತ್ತಾರೆ.  ಯಾವುದೋ ಕಷ್ಟದ ಆಸನ ಮಾಡುವಾಗ ಮನಸ್ಸು ಒತ್ತಡವನ್ನು ಅನುಭವಿಸುತ್ತದೆ. ಅದು ಸಾಧ್ಯವಾಗದೇ ಇದ್ದಾಗ ಹತಾಶೆಗೊಳಗಾಗುತ್ತದೆ. ಹಾಗಾಗಿ ಸರಳವಾದ ಲಘು ಆಸನಗಳನ್ನು ನಿತ್ಯ ಮಾಡಬೇಕು.  ಇದರಲ್ಲಿ ಪರಿಣಾಮದ ಜತೆಗೆ ಮಾನಸಿಕ ನೆಮ್ಮದಿ ಇರುತ್ತದೆ. ತುಂಬ ಆಸನ ಮಾಡಿದರೆ ಹೆಚ್ಚು ಪರಿಣಾಮ ಎಂಬ ಭ್ರಮೆ ಸರಿಯಲ್ಲ. ಹತ್ತು ಹದಿನೈದು ನಿಮಿಷ ಆಸನಗಳನ್ನು ಮಾಡಿದರೆ ಧಾರಾಳವಾಗುತ್ತದೆ. ಯೋಗಾಭ್ಯಾಸ ಎಂಬುದು ಶಿಕ್ಷೆಯಲ್ಲ. ಅದು ಒಂದು ಭದ್ರವಾದ ರಕ್ಷೆ. ನಿಯಮ ಮೀರಿ ತಿಳಿಯದೇ ಇದನ್ನು ಮಾಡಿದರೆ ಇದು ಶಿಕ್ಷೆಯಾಗಿ ಪರಿಣಮಿಸುತ್ತದೆ. ಅಂತರ್ಜಾಲವನ್ನು ನೋಡಿ, ಯಾರೋ ಮಾಡಿದ್ದನ್ನು ನೋಡಿ ಯೋಗಾಭ್ಯಾಸ ಮಾಡುವುದು ದೊಡ್ಡ ತಪ್ಪು. ಯಾಕೆಂದರೆ ಪ್ರತಿಯೊಬ್ಬರ ದೇಹ ಪ್ರಕೃತಿ ವೆತ್ಯಸ್ತವಾಗಿರುತ್ತದೆ. ಪ್ರತೀ ದೇಹದ ಆವಶ್ಯಕತೆಗಳೂ ಬೇರೆ ಬೇರೆಯಾಗಿರುತ್ತದೆ. ಇದನ್ನು ತಿಳಿಯದೆ ಮಾಡುವುದು ದೊಡ್ಡ ಮೂರ್ಖತನವಾಗಬಹುದು. ಭುಜಂಗಾಸನ, ಬಾಲಾಸನ ವಜ್ರಾಸನ ಹೀಗೆ ಸರಳವಾದ ಆಸನಗಳನ್ನು ಬಿಡದೆ ಮಾಡಬೇಕು. ಇವುಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. 

ಯೋಗಾಭ್ಯಾಸ ಕೇವಲ ಒಂದೆರಡು ಘಂಟೆಯ ಕ್ರಿಯೆಯಲ್ಲ. ದಿನದ ಇಪ್ಪತ್ತನಾಲ್ಕು ಘಂಟೆಯೂ ಅದರ ಆಚರಣೆಯಾಗಬೇಕು. ಆಸನ ಪ್ರಾಣಾಯಾಮಕ್ಕಿಂತಲು ಯೋಗದ ನಿಯಮಗಳು ಅತೀ ಮುಖ್ಯ . ಯಮ ನಿಯಮ ಆಚರಿಸಿದ ನಂತರೆವೇ ಆಸನ ಪ್ರಾಣಾಯಾಮ. ನಮ್ಮ ದೈನಂದಿನ ಚಟುವಟಿಕೆಗಳು  ಸೇವಿಸುವ ಆಹಾರ ಕ್ರಮಗಳು ಇವುಗಳು ಯೋಗಾಭ್ಯಾಸಕ್ಕೆ ಪೂರಕವಾದ ಸಂಬಂಧ ಹೊಂದಿರಬೇಕು. ಮುಖ್ಯವಾಗಿ ನಾವು ಭ್ರಮೆಯಿಂದ ಹೊರಬರಬೇಕು. ಇತ್ತೀಚೆಗೆ ಯೋಗದಿನದ ಕೆಲವರ ಯೋಗಾಭ್ಯಾಸವನ್ನು ನೋಡಿದಾಗ ಇದು ಪರಮ ಮೂರ್ಖತನ ಅಂತ ಅನ್ನಿಸುತ್ತದೆ. ಮುಖ್ಯವಾಗಿ ನಾವು ಸರಳವಾಗಿರಬೇಕು. ಆಧುನಿಕ ಐಷಾರಾಮ ಜೀವನದಿಂದ ಆದಷ್ಟು ದೂರವಿರಬೇಕು. ಉಡುಗೆ ತೊಡುಗೆ ಎಲ್ಲವೂ ಸರಳವಾಗಿದ್ದಷ್ಟು ಅದು ಜೀವನಕ್ಕೆ ಹತ್ತಿರವಾಗಿ ಮನಸ್ಸಿಗೆ ನಿರಾಳತೆಯನ್ನು ಒದಗಿಸುತ್ತದೆ. 



Thursday, June 4, 2026

ಪರಿಶುದ್ದ

   

ನಮ್ಮಲ್ಲಿರುವ ಕೆಟ್ಟ ದೌರ್ಬಲ್ಯಗಳನ್ನು ದೂರ ಮಾಡುವುದೇ ಪರಿಶುದ್ದಿ

      ಮುಂಜಾನೆ ನಾಲ್ಕು ಘಂಟೆಗೆ ಎದ್ದು ಸ್ನಾನ ಮಾಡಿ ಮಡಿ ಉಟ್ಟು ಪೂಜೆಗೆ ಹೂವಿಗಾಗಿ ಮನೆಯ ಕಂಪೌಡ್ ಗೋಡೆಯ ಪಕ್ಕ ಇರುವ ಹೂವಿನ ಗಿಡದ ಬಳಿಗೆ ನಿತ್ಯದಂತೆ ಬರುತ್ತೇನೆ. ನಮ್ಮ ಬೀದಿ ಹಲವಾರು ಮನೆ ಇರುವ ಒಂದು ಬೀದಿ. ಇದು ಹಗಲಲ್ಲಿ ಸಾಕಷ್ಟು ಚಟುವಟಿಕೆಯಿಂದ ಇರುವ ಬೀದಿ. ಶಾಲೆಗೆ ಹೋಗುವ ಮಕ್ಕಳು ಶಾಲೆ ಮುಗಿಸಿ ಬಂದು ಆಟ ಆಡುತ್ತಾರೆ, ಇನ್ನು ತಳ್ಳುಗಾಡಿಯಲ್ಲಿ ತರಕಾರಿ ಮುಂತಾದವನ್ನು ತಂದು ವ್ಯಾಪಾರ ಮಾಡುವವರು ಓಡಾಡುತ್ತಾರೆ. ಕೆಲಸ ಕಛೇರಿಗೆ ಹೋಗುವವರು ಬರುವವರು, ಅವರ ವಾಹನಗಳ ಸಂಚಾರ ಬೀದಿ ಹಗಲಿಡೀ ಸದ್ದು ಮಾಡುತ್ತಿದ್ದರೆ, ಮುಂಜಾನೆ ಮಲಗಿ ನಿಶ್ಯಬ್ದವಾಗಿ ವಿಶ್ರಾಂತಿ ಮಾಡುತ್ತದೆ. ಯಾರೋಬ್ಬರೂ ಇಲ್ಲದೇ ಇದ್ದರೂ ಕೆಲವೊಮ್ಮೆ ಕೆಲವರು ಓಡಾಡಿ ಬೀದಿಯ ವಿಶ್ರಾಂತಿಯನ್ನು ಕೆಡಿಸುತ್ತಾರೆ. ನಾನು ಮುಂಜಾನೆ ಮಡಿ ಉಟ್ಟು ಹೂ ಕೊಯ್ಯುವುದಕ್ಕೆ ಬುಟ್ಟಿ ಹಿಡಿದು ಬಂದರೆ ಒಂದು ಬಾರಿ ಬೀದಿಯ ಆ ತುದಿಯಿಂದ ಈ ತುದಿಯವರೆಗೂ ನೋಡುತ್ತೇನೆ. ಈಗ ವಿಶ್ರಾಂತಿಯ ಬೀದಿ ಸುಂದರವಾಗಿ ಕಾಣುತ್ತದೆ. ಆ ನಿಶ್ಯಬ್ದ ಶಾಂತ ಪರಿಸರ ಮನಸ್ಸಿಗೆ ಒಂದು ಆಹ್ಲಾದತೆಯನ್ನು ಒದಗಿಸುತ್ತದೆ.  ನಾನು ದೇವರ ಶ್ಲೋಕವನ್ನು ಹೇಳುತ್ತಾ ಹೂವನ್ನು ಕೀಳುತ್ತಿದ್ದರೆ ಆ ಮೌನದಲ್ಲಿ ನಾನು ಮತ್ತು ಆರಧಿಸುವ ಭಗವಂತ ಮಾತ್ರವೇ ಅಂತ ಭಾವನೆ ಬಂದು ಬಿಡುತ್ತದೆ. 

ಬೀದಿ ಶಾಂತವಾದಿದ್ದರೂ ನಮ್ಮ ಮನೆಯ ಪಕ್ಕದ ಮನೆಯಲ್ಲಿ ಕೆಲವೊಮ್ಮೆ ಗದ್ದಲ ಕೇಳಿಸುತ್ತಿರುತ್ತದೆ. ಅ ಮನೆಯಲ್ಲಿ ವಾಸಿಸುವಾತ ಕೆಲವು ಸಲ ಮದ್ಯ ಸೇವಿಸಿ ಬರುವುದೇ ಬೆಳಗಿನ ಜಾವ. ನಾನು ಎದ್ದೇಳುವ ಹೊತ್ತಿಗೆ ತೂರಾಡುತ್ತಾ ದ್ವಿಚಕ್ರವಾಹನದಲ್ಲಿ ಬರುತ್ತಾನೆ. ಆ ಹೊತ್ತಿಗೆ ಮದ್ಯಪಾನ ಪರೀಕ್ಷಿಸುವ ಪೋಲೀಸರು ಯಾರೂ ಇರುವುದಿಲ್ಲ ಅಂತ ಕಾಣುತ್ತದೆ. ಅಥವಾ ಎಲ್ಲಾದರೂ ಕುಡಿದು ಎಲ್ಲೊ ಉಳಿದು ರಾತ್ರಿ ಬರಲಾಗದೇ ಹೀಗೆ ಮುಂಜಾನೆ ಎದ್ದು ಬರುತ್ತಾನೆ. ಬಂದವನು ಮಲಗಿದ್ದ ಮನೆಯಾಕೆಯನ್ನು ಬಾಗಿಲು ಜೋರಾಗಿ ಬಡಿದೇ ಎಬ್ಬಿಸುತ್ತಾನೆ. ಬಾಯಿ ತೆಗೆದರೆ ಸಾಕು ಅವಾಚ್ಯ ಶಬ್ದಗಳ ಬೈಗುಳ ಅದೂ  ಆ ಮುಂಜಾನೆ ಕೇಳಿಸುತ್ತದೆ. ಭಗವಂತನ ಸ್ಮರಣೆಯಲ್ಲಿರಬೇಕಾದ ಹೊತ್ತಿನಲ್ಲಿ ಹೀಗೆ ಅಮಲೇರಿಸಿ ಕೆಟ್ಟದಾಗಿ ಬೈಯುತ್ತಿರುವುದನ್ನು ಕಂಡರೆ ಹಲವು ಸಲ ಮನಸ್ಸು ಮರುಗುತ್ತದೆ. ಮನೆಯೊಳಗೆ ಹೋದವನೇ  ದೊಡ್ಡದಾಗಿ ಸೌಂಡ್ ಬಾಕ್ಸ್ ನಲ್ಲಿ ಸಿನಿಮಾ ಹಾಡುಗಳನ್ನು ಹಾಕುತ್ತಾನೆ. ಇಷ್ಟೂ ಕೆಟ್ಟ ಹಾಡುಗಳು ಇವೆಯೇ ಅಂತ ಅನ್ನಿಸುತ್ತದೆ. ಅದನ್ನು ರಚಿಸಿದವರ ಬಗ್ಗೆ ತಾತ್ಸಾರ ಉಂಟಾಗುತ್ತದೆ ಹಲವು ಸಲ ಇಂತಹ ಸಂದರ್ಭಗಳಲ್ಲಿ ಹಾಡುಗಳು ಕೆಟ್ಟದು ಅಂತ ಅನ್ನಿಸುತ್ತದೆ .  ಇನ್ನು ಯಾರಾದರೂ ಎದ್ದು ನಿದ್ದೆಯ ಮಂಪರಿನಲ್ಲಿ ಹೊರಗೆ ಬಂದು ಸದ್ದು ಕಡಿಮೆ ಮಾಡುವಂತೆ ಹೇಳಿದರೆ ಮುಗಿದು ಹೋಯಿತು. ಬೈಗುಳಗಳ ಸುರಿಮಳೆಯಲ್ಲಿ ಅವರ ವಂಶ ಉದ್ದಾರವಾಗುವಂತೆ ಮಾಡಿಬಿಡುತ್ತಾನೆ. ಬಾಯಿ ತೆಗೆದರ ಅವ್ವನ್ ಅಂತ ಶುರು ಮಾಡುವ ಇವನಿಂದ ಹೆತ್ತ ಅಮ್ಮನಿಗೆ ಕೆಟ್ಟ ಬೈಗುಳಗಳನ್ನು ತಿನ್ನಿಸುವುದೇಕೆ ಅಂತ ಕೆಲವರು ಅಂಜಿ ಸುಮ್ಮನಿರುತ್ತಾರೆ. ಮನೆಯ ಫ್ಯಾನ್ ಜೋರಾಗಿ ಹಾಕಿ ಬಾಗಿಲು ಮುಚ್ಚಿ ಶಬ್ದಕೇಳಿಸದಂತೆ ಪ್ರಯತ್ನಿಸುತ್ತಾರೆ. ಆತನಿಗೆ ಯಾರ ಭಯವೂ ಇಲ್ಲ. ಅವನ ಅನಾಗರೀಕತೆಗೆ ಆತನಿಗೆ ಭಯ ಪಡುವ ಅಗತ್ಯವೂ ಇರುವುದಿಲ್ಲ. ಕೆಸರಿಗೆ ಕಲ್ಲು ಎಸೆಯುವ ಪ್ರಯತ್ನ ಯಾರೂ ಮಾಡದೇ ಆತ ಸ್ಚಚ್ಛಂದವಾಗಿ ಇದ್ದುಬಿಡುತ್ತಾನೆ. 

ಇಂದೂ ಸಹ ಎಂದಿನಂತೆ ಮುಂಜಾನೆ ಮನೆ ಎದುರು ಬಂದೆ. ಬೀದಿಯ ತುದಿಯಿಂದ ಪಕ್ಕದ ಮನೆಯಾತ ಬೈಕ್ ನಲ್ಲಿ ಬರುತ್ತಿದ್ದ. ಆ ರಾತ್ರಿಯೂ ದೊಡ್ಡದಾಗಿ ಹಾರ್ನ್ ಮಾಡುತ್ತಾ ಬಂದು ಮನೆ ಎದುರು ನಿಲ್ಲಿಸಿದ. ಮೊಬೈಲ್ ನಲ್ಲಿ ಯಾರೊಂದಿಗೋ ಅರಚಿ ಮಾತನಾಡುತ್ತಿದ್ದ. ಮಾತನಾಡುತ್ತಿದ್ದುದಕ್ಕಿಂತಲೂ ಜಗಳವಾಡುತ್ತಿದ್ದ. ಆ ಕೆಟ್ಟ ಭಾಷೆ ಆ ಮುಂಜಾನೆ ಕೇಳುವುದೇ  ಒಂದು ದುರ್ದೈವ. ಬೈಕ್ ಸ್ಟಾಂಡ್ ಹಾಕಿ ನಿಲ್ಲಿಸಿದ. ಹೀಗೆ ಹೇಳುವುದಕ್ಕಿಂತ ಬೈಕ್ ತಾನಾಗಿಯೇ ಸಾವರಿಸಿ ನಿಂತುಕೊಂಡಿತು ಎಂದರೆ ಸೂಕ್ತ. ಹಾಗೇ ನಿಂತವನು ಮೊಬೈಲ್ ಸಂಭಾಷಣೆಯಲ್ಲಿ ತಲ್ಲೀನನಾದರೂ ನನ್ನೆಡೆಗೆ ನೋಡುತ್ತಿದ್ದ. ನಾನು ಆತನ ಕಡೆಗೆ ಗಮನ ಹರಿಸುವುದನ್ನು ಬಿಟ್ಟು ನನ್ನ ಕೆಲಸದಲ್ಲಿ ನಿರತನಾದೆ. ಸಾಮಾನ್ಯವಾಗಿ ನಾನು ಆತನಲ್ಲಿ ಮಾತನಾಡುವುದಕ್ಕೆ ಹೋಗುತ್ತಿರಲಿಲ್ಲ. ಏನಿದ್ದರೂ ಪರಿಚಯದ ಕಿರುನಗುವಿಗೆ ಸೀಮಿತ. ಯಾಕೆಂದರೆ ಇಂತಹ ವ್ಯಕ್ತಿಗಳಿಂದ ದೂರವಿರುವುದು ನಮ್ಮ ಸ್ವಾಸ್ಥ್ಯಕ್ಕೆ ಉಚಿತ.  ಅಪ್ಪಿ ತಪ್ಪಿ ಒಂದೆರಡು ಹೆಚ್ಚು ಮಾತನಾಡಿದರೂ ಆತನ ಸಂಸ್ಕಾರ ಹೀನ ಮಾತುಗಳನ್ನು ಅರಗಿಸಿಕೊಳ್ಳುವ ಧೈರ್ಯ ನನ್ನಲ್ಲಿ ಇಲ್ಲ.   ನಾನು ಶ್ಳೋಕ ಪಠಣದಲ್ಲಿ ತಲ್ಲೀನನಾದೆ.

ಇನ್ನೇನು ಹೂ ಕೀಳುವುದು ಮುಗಿಸಿ ಮನೆಯೊಳಗೆ ಹೋಗಬೇಕು ಎನ್ನುವಾಗ ಆತ ಮೊಬೈಲ್ ಜಗಳವನ್ನು ನಿಲ್ಲಿಸಿ ನನ್ನ ಬಳಿಗೆ ಬಂದು ಶಿರ ಸೊಂಟ ಬಗ್ಗಿಸಿ ನಮಸ್ಕರಿಸಿ, "ನಮಸ್ಕಾರ"  ಎಂದ.  ನಾನು ಗಾಬರಿಯಾದೆ. ಇದನ್ನು ನಿರೀಕ್ಷಿಸಿರಲಿಲ್ಲ. ನಾನು ಮತ್ತೂ ದೂರ ಸರಿದು ನಮಸ್ಕಾರ ಎಂದು ಮನೆಯೊಳಗೆ ಕಾಲಿಡುವುದಕ್ಕೆ ಮುಂದಾದೆ. ಆತ ಹೇಳಿದ " ನೀವೆ ಪುಣ್ಯವಂತರು ಸಾರ್, ಬೆಳ್ಳಂ ಬೆಳಗ್ಗೆ ಎದ್ದು ಸ್ನಾನ ಮಾಡಿ ಪೂಜೆ ಮಾಡ್ತೀರಾ. ನಾನು ನೋಡಿ ಜಗಳ ಮಾಡ್ತಾ ಇದ್ದೇನೆ".  ನಾನು ಹೇಳಿದೆ, " ನೀನೂ ಭಗವಂತನ ನಾಮ ಸ್ಮರಣೆ ಮಾಡು ಸಾಕು. ಬದಲಾಗ್ತಿಯಾ. ಪೂಜೆ ಏನೂ ಖಡ್ದಾಯ ಅಲ್ಲ. ಭಕ್ತಿ ಶ್ರದ್ದೆ ಮುಖ್ಯ" ನಾನು ಹೆಚ್ಚಿಗೆ ಉಪದೇಶ ಕೊಡುವ ಕೆಲಸಕ್ಕೆ ಕೈ ಹಾಕುವುದಿಲ್ಲ. ಯಾಕೆಂದರೆ ಅದೆಲ್ಲ ವ್ಯರ್ಥ. ನಾವು ಶ್ರೇಷ್ಠರು ಅಂತ ತೋರಿಸಿಕೊಡುವುದಕ್ಕೆ ಹಲವು ಸಲ ಈ ಉಪದೇಶಗಳು ಬಳಕೆಯಾಗುತ್ತವೆ. ಉಪದೇಶ ಪಡೆದವನೂ ಬದಲಾಗಲ್ಲ, ಕೊಟ್ಟವನೂ ಅತ್ಯುತ್ತಮನೇನೂ ಅಲ್ಲ.  ಇದು ವಾಸ್ತವ. 

ಆತ ನಗುತ್ತ ಹೇಳಿದ, " ಇಲ್ಲ ಸಾರ್, ನಮಗೆ ಅದಕ್ಕೆ ಮನಸ್ಸು ಬರಲ್ಲ ಸಮಯವೂ ಸಿಗೋದಿಲ್ಲ. ನಾವು ಇರೋದೆ ಹೀಗೆ.  ಏನು ಮಾಡೋದು ಹೇಳಿ" ನನಗೆ ನಗು ಬಂತು. ಹೌದು ಹೀಗೆ ಮಾಡುವವರು ಇರೋದೇ ಹೀಗೆ. ಕೆಟ್ಟದ್ದು ಅಂತ ಗೊತ್ತಿದ್ದರೂ ಅದನ್ನೇ ಮಾಡುತ್ತಾರೆ. ;ಮತ್ತದನ್ನೇ ದೊಡ್ಡ ಮನಸ್ಸಿನಿಂದ ಅಂತ ಒಪ್ಪಿಕೊಳ್ಳುತ್ತಾರೆ. ಅದೊಂದು ರೀತಿ ಕರುಣೆ ಹುಟ್ಟಿಸಿ ದುರಂತ ನಾಯಕನಾಗುವ ಮನೋಭಾವ. ಸಿನಿಮಾದಲ್ಲಿ ಸಂಭಾಷಣೆಗಳು ಇರುತ್ತವೆ. " ನಾನೆಷ್ಟು ಕೆಟ್ಟವಾಂತ ಗೊತ್ತಿಲ್ಲ. ತಲೆ ಕೆಟ್ಟರೆ ನಾನು ಏನೂ ಮಾಡುತ್ತೇನೆ. ಸುಮ್ಮನೇ ಕೆಣಕಬೇಡ" ಕೆಟ್ಟದ್ದೂ ಅಂತ ಗೊತ್ತಿದ್ದರೂ ಅದನ್ನು ಮಾಡುವುದಕ್ಕೆ ಯಾರು ಕಾರಣ? ವಂಚನೆ ಮಾಡಿ ವಿಶಾಲ  ಮನಸ್ಸಿನಿಂದ ಅದನ್ನು ಒಪ್ಪಿಕೊಳ್ಳುವುದು ಒಂದು ರೀತಿ ಉಳಿದವರನ್ನೂ ವಂಚಿಸಿದಂತೆ. ಕೆಟ್ಟದ್ದು ಮಾಡುವವರಿಗೆ ಗೊತ್ತಿರುತ್ತದೆ ನಾನು ಕೆಟ್ಟದ್ದನ್ನೇ ಮಾಡುತ್ತೇನೆ ಎಂದು. ಕಳ್ಳನಿಗೆ  ಕದಿಯುವುದು ತಪ್ಪು ಅಂತ ಗೊತ್ತಿರುತ್ತದೆ. ಅದಕ್ಕೆ ಅವನು ಕದಿಯುವಾಗ ಯಾರೂ ಇಲ್ಲದಾಗ ಕದ್ದು,  ಯಾರೂ ನೋಡದಂತೆ ಎಚ್ಚರ ವಹಿಸುತ್ತಾನೆ. ಅದರಂತೆ ಇದು. ಗೊತ್ತಿದ್ದು ಕೆಟ್ಟದ್ದು ಮಾಡುವುದಿದ್ದರೆ ಅದು ಕ್ಷಮಾರ್ಹವಾಗುವುದಿಲ್ಲ. ಆದರೂ ಅದನ್ನು ಒಪ್ಪಿಕೊಂಡು ಒಂದು ರೀತಿಯಲ್ಲಿ ಕಥಾನಾಯಕನಾಗುವ ಹಂಬಲ. 

ನಾನು ಆತನಿಗೆ ಹೇಳಿದೆ ಮನುಷ್ಯ ಒಳ್ಳೆಯವನಾಗಬೇಕಿದ್ದರೆ, ಪೂಜೆ ಹೋಮ ಹವನ ಮಾಡಲೇ ಬೇಕೆಂದೇನೂ ಇಲ್ಲ. ಅದು ವಿಧಾನ ಅಷ್ಟೇ. ವಾಲ್ಮೀಕಿ ಕೇವಲ ರಾಮ ನಾಮ ಹೇಳಿ ಮಹಾ ಋಷಿಯಾದ. ನೀನು ಅಷ್ಟೇ ಭಗವಂತನ ನಾಮ ಸ್ಮರಣೆ ಮಾಡು. ಬದಲಾಗುವ ಪ್ರಯತ್ನ ತನ್ನಿಂತಾನಾಗಿ ಪ್ರಚೋದನೆಯಾಗುತ್ತದೆ. ಅದರೆ ಅದು ಕಳ್ಳ ಕದಿಯುವುದಕ್ಕೆ ಹೋಗುವಾಗ ದೇವರ ಪ್ರಾರ್ಥನೆ ಮಾಡಿದಂತೆ ಆಗಬಾರದು ಅಷ್ಟೇ.  ಹೋಮ ಹವನ ಪೂಜೆ ಮಾಡಿದವರೆಲ್ಲರೂ ಒಳ್ಳೆಯವರು ಆಗುವುದಕ್ಕೆ ಸಾಧ್ಯವಿಲ್ಲ. ರಾಕ್ಷಸರೂ ತಪಸ್ಸು ಮಾಡಿಯೇ ಕೆಟ್ಟವರಾಗುತ್ತಿದ್ದರು. ಅದು ಅಹಂಕಾರದಿಂದ. ಮೊದಲು ನಮ್ಮೊಳಗಿರುವ ಅಹಂ ಎಂಬುದನ್ನು ಬಿಡಬೇಕು. ಅಹಂ ಎಂಬುದು ಕೆಟ್ಟದನ್ನೇ ಪ್ರಚೋದಿಸುತ್ತದೆ. ಮೊದಲು ಸನ್ಮನಸ್ಸು ಇರಬೇಕು. ಮತ್ತೆ ಸದ್ಭಾವನೆ ಇರಬೇಕು. ಮಾಡುವ ಕಾರ್ಯದಲ್ಲಿ ಉದ್ದೇಶ ಶುದ್ಧಿ ಇರಬೇಕು. ಆಗ ಕೆಟ್ಟ ಯೋಚನೆ ನಿನ್ನ ಬಳಿಗೆ ಬರುವುದಕ್ಕೂ ಹಿಂಜರಿಯುತ್ತದೆ. ನೀನು ಬಳಿಗೆ ಬರುವುದಕ್ಕೆ ಅಂಜಿದಂತೆ. ನಾನು ನಿನ್ನ ಸಂಪರ್ಕಕ್ಕೆ ಬಂದರೆ ನಾನು ಕೆಡಬಹುದು. ನನ್ನ ಪರಿಶುದ್ದಕ್ಕೆ ನಾನು ಎಲ್ಲದರಿಂದ ದೂರವಾಗಿ ಉಳಿದಂತೆ ನೀನು ಎಲ್ಲದರಿಂದ ದೂರಾಗಿ ನಿಲ್ಲು. ಪುಣ್ಯವಂತ ನಾಗುವುದಕ್ಕೆ ಬೇರೆ ಅರ್ಹತೆ ಬೇಡ. ಕೆಸರಲ್ಲಿ ಹುಟ್ಟಿದ ಕಮಲವೂ ಕೆಸರಿನಿಂದ ಹೊರಬರುವುದಕ್ಕೆ ಪ್ರಯತ್ನಿಸುತ್ತದೆ. ಆಗ ಅದಕ್ಕೆ ಸೂರ್ಯನ ದರ್ಶನವಾಗುತ್ತದೆ. ಪರಿಶುದ್ಧನಾಗುವುದೆಂದರೆ ಅದು ಭಗವಂತನ ಸಮೀಪಕ್ಕೆ ಹೋಗುವುದು ಎಂದು ಅರ್ಥ. ಹೊರತು ಅದು ಎಲ್ಲರಿಂದ ಪ್ರತ್ಯೇಕವಾಗುವುದಲ್ಲ. 


Saturday, May 23, 2026

ಚಾರ್ಲಿಯ ಹನಿ ಸುಗಂಧ

ಶ್ರಾವಣ ಕಳೆದು ಮಳೆ ವಿರಳವಾಗಿ  ತುಂತುರು ಮಳೆಯ ಶರದೃತುವಿನ ಕಾಲ. ಒಂದು ರೀತಿಯಲ್ಲಿ ಬಿಡದ ಮಳೆಯಿಂದ ಮುಕ್ತರಾಗಿ ಒಂದಷ್ಟು ಉಲ್ಲಸಿತರಾಗಿ ಹಿತವಾದ ವಾತಾವರಣವನ್ನು ಅನುಭವಿಸುವ ಋತುಮಾನ. ಋತುಸ್ನಾತೆಯಾದ ಪ್ರಕೃತಿ ಮಾತೆ ಅವಧಿ ಮುಗಿದು ಸ್ನಾನ ಮಾಡಿ ಶುಭ್ರವಾಗಿ ತಲೆಗೂದಲಿನಿಂದ ತೊಟ್ಟು ತೊಟ್ಟು ಹನಿಯನ್ನು ಸುರಿಸುತ್ತಾ ಬರುವಂತೆ ಮಳೆ ಅಗಲೋ ಈಗಲೋ ಸುರಿಯುವ ಮಳೆ  ಮನಸ್ಸಿಗೆ ಕೊಡುವ ಉತ್ಸಾಹದ ದಿನಗಳು.  ಹದಿಹರೆಯದ ಮನಸುಗಳಾದರೆ ಈ ಶರದೃತು  ಹೊಸ ಕನಸಿನ ಚಿಗುರನ್ನು ಹುಟ್ಟಿಸಿಬಿಡುತ್ತವೆ. ಅದು ಎಂಭತ್ತರ ದಶಕದ ಕೊನೆಯ ವರ್ಷಗಳು. ಅದು ಹದಿಹರಯದ ಹಸಿ ಯೌವನಿಕೆಯ ಕಾಲ. ಬದುಕನ್ನು ಸಿಹಿಯಾಗಿ ಚೂರು ಚುರು ತುಣುಕಾಗಿ ಅನುಭವಿಸುವ ಹಪ ಹಪಿಕೆ ಇದ್ದರೆ ಅದು ಹದಿ ಹರಯದ ಸಹಜ ಬಯಕೆ. 


ಹದಿಹರಯದಲ್ಲಿ ಬಡತನವಿದ್ದರೆ ಕೇವಲ ಬಾಳಸಂಗಾತಿಯ ಕನಸು ಮಾತ್ರ ಇರುವುದಿಲ್ಲ. ಭವಿಷ್ಯತ್ತಿನ ಭದ್ರತೆ ಒಂದಷ್ಟು ಧನ ಸಂಪತ್ತಿನ ಕನಸೂ ಜತೆಯಲ್ಲಿರುತ್ತದೆ. ವೈದ್ಯ ಹೃದಯದ ಬಡಿತವನ್ನು ಅಳೆದರೆ ಸಂಗಾತಿ ಹೃದಯದ ವಿಸ್ತಾರವನ್ನು ಅಳೆಯುತ್ತಾಳೆ. ಕೇವಲ ಹೃದಯದ ವೈಶಾಲ್ಯತೆ ಬದುಕಿಗೆ ಸಾಕಾಗುವುದಿಲ್ಲ.   ಈ ಪ್ರಜ್ಞೆ ಬದುಕಿನ ತಲೆಯ ಮೇಲಿರು ಭಾರವನ್ನು ಹೆಚ್ಚಿಸುತ್ತದೆ.  ತಲೆಯ  ಭಾರ, ಹೃದಯದ ಭಾವನೆ ಕಾಣುವ ಕನಸು ನಡುವಿನ ಈ ದಿನಗಳಲ್ಲಿ ಆಕೆ ಮನೆಗೆ ಬರುತ್ತಾಳೆ ಎಂಬ ಪತ್ರ ಮನೆಗೆ ಬಂದಾಗ ಕನಸು ವಾಸ್ತವದ ನನಸಿನ ಕಡೆಗೆ ಮುಖ ಮಾಡಿತ್ತು. ಕೆಲವು ದಿನಗಳ ಹಿಂದೆ ಆಕೆಯ ಮುಖಾಮುಖಿ ಭೇಟಿಯಾಗಿತ್ತು. ಆಕೆಯ ಮನೆಯನ್ನು ಮನೆ ಮಂದಿಯನ್ನು ನೋಡಿ ಛೇ ಇವುಗಳನ್ನು ತೊರೆದು ಆಕೆ ಬಂದಾಳೆ ಎಂಬ ಸಂದೇಹ ಬಾಧಿಸಿತ್ತು. ಇದೆಲ್ಲ ತೊರೆಯಬೇಕಾದರೆ ಇದಕ್ಕಿಂತ ಅಧಿಕವಾಗಿರುವದ್ದು ಬಂದು ಸೇರುವಲ್ಲಿರಬೇಕು.  ಇಲ್ಲದಿದ್ದರೆ ಅದನ್ನು ಒದಗಿಸಿ ಕೊಡಬೇಕು. ಆಗ ಬಂದ ಯೋಚನೆ, ವಾಸ್ತವವನ್ನು ತೋರಿಸಬೇಕು. ಅದನ್ನು ನೋಡಿಯೂ ಆಕೆ ಬಂದರೆ ಆಕೆಯ ಮನೆಯಲ್ಲಿರುವುದಕ್ಕಿಂತಲೂ ಹೆಚ್ಚಿಗೆ ಇಲ್ಲಿರುತ್ತದೆ ಎಂಬ ವಿಶ್ವಾಸ ಮೂಡುತ್ತದೆ. ಆನಂತರ ಇಲ್ಲಿ ಎನುಂಟು ಏನಿಲ್ಲ ಎನ್ನುವುದಕ್ಕಿಂತಲೂ ಇದ್ದುದನ್ನು ಅನುಭವಿಸುವುದಕ್ಕೆ ಮನಸ್ಸು ಸಿದ್ಧವಾಗಿರುತ್ತದೆ. 

  ಹೀಗಿದ್ದರೂ ತನ್ನ ಮನೆಯಲ್ಲಿ ಎನಿದೆ ಎನ್ನುವುದಕ್ಕಿಂತಲೂ ಎನಿಲ್ಲ ಎಂಬ ಕೊರತೆಯ ಅನ್ವೇಷಣೆಯಲ್ಲಿ ಮನಸ್ಸು ಅವಲೋಕಿಸುತ್ತದೆ. ಕೆಲವೊಮ್ಮೆ ಅದನ್ನು ಮರೆಮಾಚಲು ಪ್ರಯತ್ನಿಸುತ್ತದೆ. ಆದರೆ ಇಲ್ಲಿ ಹಾಗಿಲ್ಲ, ಮನೆ ಹೇಗಿದೆಯೋ ಹಾಗೇ ನೋಡಲಿ. ಬಂದು ಸೇರಬೇಕಾದ ಮನೆಗೆ ಯಾವುದೋ ಭ್ರಮೆಯಲ್ಲಿ ಬಂದು ಸೇರುವುದು ಬೇಡ ಎಂಬ ಪ್ರಾಮಾಣಿಕತೆ ಇಲ್ಲಿರುತ್ತದೆ. ಹಾಗಾಗಿಯೇ ವಿಶೇಷ ಸನ್ನಾಹವೇನೂ ಇರಲಿಲ್ಲ. ಒಂದಷ್ಟು ಸ್ವಚ್ಛತೆ ಬಿಟ್ಟರೆ ಮನೆ ಅದೇ ಗುಡಿಸಲಿನಂತೆ ವಿಶೇಷ ಸೌಲಭ್ಯಗಳು ಇಲ್ಲದಂತೆ.  ಹೌದು ಆಕೆ ಬಂದು ಸೇರಬೇಕು. ಅದು ಮನೆಗಿಂತಲೂ ಮನಸ್ಸಿಗೆ ಬಂದು ಸೇರಬೇಕು. ಮನೆ ನಾಳೆ ಬದಲಾಗಬಹುದು. ಆದರೆ ಮನಸ್ಸು ಅದು ಬದಲಾಗುವುದಿಲ್ಲ. ಕನಸಿನ ಸೌಧಕ್ಕಿಂತಲೂ ಮನಸ್ಸಿನ ಸೌಧ ಗಟ್ಟಿಯಾಗಿರುತ್ತದೆ. ಆಗ ಒಂದು ಅತ್ಮ ವಿಶ್ವಾಸ ಜಾಗೃತವಾಗುತ್ತದೆ. ಆಕೆಗೆ ಎಲ್ಲವನ್ನೂ ಮಿರಿದ ಪ್ರೀತಿಯನ್ನು ಪ್ರಾಮಾಣಿಕವಾಗಿ ಕೊಡಬೇಕು. ಎಲ್ಲಕ್ಕಿಂತಲೂ ಸುಲಭವಾಗಿ ಕೊಡಬಹುದಾದ ಸಾಧನವಿದ್ದರೆ ಅದು ಪ್ರೀತಿ ಮಾತ್ರ. 

ಈಗಿನಂತೆ ಆಗ ಮೌಬೈಲ್ ಇಲ್ಲ. ದೂರವಾಣಿಯಂತೂ ಹತ್ತಿರವಿಲ್ಲ. ಮುಖ್ಯ ಸಂವಹನವೆಂದರೆ ಭಾರತೀಯ ಅಂಚೆ ಮತ್ತು ಟೆಲಿಗ್ರಾಫ ಕಛೇರಿ. ಒಂದು ಪತ್ರ ಬರೆದರೆ ತಲುಪುವುದಕ್ಕೆ ಏನಿಲ್ಲವೆಂದರೂ ಐದು ಆರು ದಿನ ಬೇಕು. ಈಗ ವಿಷಯಗಳು ಬಿಸಿ  ಆರುವ ಮೊದಲೇ ಸೇರುವಲ್ಲಿ ರವಾನೆಯಾಗುತ್ತದೆ. ಆಗ ಅದರೆ ಬಿಸಿ ಆರಿಹೋಗಿ ನಂತರ ಅಲ್ಲಿ ಕೈ ಸೇರಿದಾಗ ಬಿಸಿ ಏರುವುದಿದ್ದರೂ ಸಂಗತಿ ಒಂದು ಕಡೆಗೆ ಹಳೆಯದಾಗಿಬಿಡುತ್ತದೆ. ಹಲವು ಸಲ ಏನು ಬರೆದಿದ್ದೇನೆ ಎಂಬುದೂ ಕೂಡ ಮರೆತು ಹೋಗಿರುವ ಸಂಭವವಿದೆ.  ಹಾಗಿರುವಾಗ ಆಕೆ ಬರುತ್ತಾಳೆ ಎಂಬ ಪತ್ರ ಕೈ ಸೇರಿದಾಗ ಆಕೆ ಬರುವ ತನಕ ಅದರ ಬಿಸಿ ಆರಲೇ ಇಲ್ಲ. ಆ ಭಾವನೆಗಳು ಅದರ ಬಿಸಿ ಆರುವುದಕ್ಕೆ ಬಿಡಲಿಲ್ಲ. ದಿನ ಘಳಿಗೆಯ ಅಂತರ ಕಡಿಮೆಯಾಗುವುದನ್ನೇ ಮನಸ್ಸು ಲೆಕ್ಕ ಹಾಕುತ್ತಾ ಕಳೆಯುವುದೆಂದರೆ ಅದೊಂದು ಮಧುರವಾದ ಅನುಭವ. 

ಅಂತೂ ಆ ದಿನ ಆ ಘಳಿಗೆ ಬಂತು. ಮಧ್ಯಾಹ್ನ. ಸೂರ್ಯ ನೆತ್ತಿಗೆ ಏರಿ ಬಿಸಿಯಾಗುವ ಸಮಯ. ಹೃದಯ ಬಡಿತ ಏರಿ ಶರೀರ ಬಿಸಿಯಾದರೂ ಆ ಬಿಸಿಯಲ್ಲಿ ಒಂದು ಹಿತವಾದ ಅನುಭವ. ಮಧ್ಯಾಹ್ನದ ಬಸ್ಸು...ಆ ಬಸ್ಸಿನಲ್ಲೇ ಆಕೆ ಬರುವ ನಿರೀಕ್ಷೆ ಇರುವ ಕಾರಣ ಬಸ್ಸಿನ ಹಾರನ್ ದೂರದಿಂದಲೇ ಕೇಳಿಸುತ್ತದೆ. ಅದೊಂದು ಸೂಚನೆಯಘಂಟಾನಾದಂತೆ, ಆ ಧ್ವನಿ ಈ ಕಿವಿ ಕೇಳಿದಂತೆ ಆ ಕಿವಿಯೂ ಅದೇ ಹೊತ್ತಲ್ಲಿ ಕೇಳಿರುತ್ತದೆ ಎಂಬ ಭಾವನೆಯೇ ರೋಮಾಂಚನವನ್ನು ಉಂಟು ಮಾಡುತ್ತದೆ. ಆಕೆ ಯಾವ ಯೋಚನೆಯಲ್ಲಿರಬಹುದು? ಮನೆಯ ಬಗ್ಗೆ ಇರಬಹುದೇ? ಇಲ್ಲ ಮನದ ಬಗ್ಗೆ ಇರಬಹುದೇ? ಮನಸ್ಸನ್ನು ಒಂದಷ್ಟು ಮೊದಲೇ ಅರಿತಿರುವುದರಿಂದ ಮನೆಯ ಬಗ್ಗೆ ಪರಿಸರದ ಬಗ್ಗೆ ಒಂದಷ್ಟು ಭಾವನೆಗಳು ಇರಬಹುದು. 

ಅಚ್ಚ ಬಿಳಿಸೀರೆಯಲ್ಲಿ ನಸು ಕಂದು ಹೂವನ್ನು ಚಿತ್ರಿಸಿದ ಸೀರೆಯಲ್ಲಿ ಅಪ್ಪ ಅಮ್ಮನ ಜತೆ ತೆಳು ಬಳುಕಿದ ಶರೀರದಲ್ಲಿ  ಆಕೆ ಇಳಿದು ಬರುತ್ತಿದ್ದರೆ ಆಕೆಯ ಹೆಜ್ಜೆ ಎದೆಯ ಮೇಲಿಟ್ಟಂತಾಗಿ ಹೃದಯ ಭಾರವಾದ ಅನುಭವ.  ಮೊದಲೊಮ್ಮೆ ಅಕೆಯ ಭೇಟಿಯಾಗಿರುವುದರಿಂದ ಮೊದಲ ಭೇಟಿಯ ರೋಮಾಂಚನ ಇಲ್ಲದಿದ್ದರೂ ದೇಹದ ಕಂಪನ ಒಂದಿಷ್ಟು ಅಧಿಕವಾಗಿತ್ತು.  ಅದಾಗಲೇ ಔಪಚಾರದ ಮಾತುಗಳು ಕ್ರಿಯೆಗಳು ನಡೆದು, ಅಕೆ ಮನೆಯನ್ನೇಲ್ಲಾ ಸುತ್ತಾಡಿ ನೋಡಿದಳು. ಏನು ಅನ್ನಿಸಿತೋ ಏನೋ ಅಂದುಕೊಂಡು ಮನಸೋ ಇಚ್ಛೆ ಮಾತನಾಡಬೇಕು ಅನ್ನಿಸಿತ್ತು, ಆದರೆ ಅದಕ್ಕೆ ತತ್ಕ್ಷಣಕ್ಕೆ ಅವಕಾಶ ಇರಲಿಲ್ಲ. ಬಂದ ಅತಿಥಿಗಳ ಊಟ ಉಪಚಾರ ಮುಗಿಸಿ  ಕೊನೆಯಲ್ಲಿ ಆಕೆ ಎಂದಳು ಒಂದಿಷ್ಟು ಖಾಸಗಿಯಾಗಿ  ಮಾತನಾಡಬೇಕು. ಆಕೆಯ ಧೈರ್ಯ ತನಗಿಲ್ಲದೇ ಹೋಯಿತಲ್ಲ ಎಂದನಿಸಿದರೂ ಸಂತೋಷದಿಂದ ಮನೆಯ ಹೊರಗೆ ಒಂದಷ್ಟು ದೂರದಲ್ಲಿ ಒಂದು ಬಂಡೆಯ ಮೇಲೆ ಎದುರು ಬದಿರಾಗಿ ಕುಳಿತು ಮಾತನಾಡಿದಾಗ ಆಕೆಗೆ ಮನೆ ಪರಿಸರ ಎಲ್ಲವೂ ಇಷ್ಟವಾಗಿರಬೇಕು. ಆಡುವುದಕ್ಕೆ ಹಲವಿದ್ದರೂ  ಒಂದೂ ಮಾತೂ ಹೊರಡಲಿಲ್ಲ. ಇಷ್ಟವಾಯಿತಾ ಎಂದ ಒಂದು ಪ್ರಶ್ನೆ ಬಿಟ್ಟರೆ ಆಕೆ ಮತ್ತೇನೂ ಕೇಳಿದ ನೆನಪಿಲ್ಲ.  ಆಕೆಯ ಅಮ್ಮ ಮೊದಲೇ ಹೇಳೀದ್ದರು, ತಿಳಿಗಂಜಿಯಾದರೂ ಪರವಾಗಿಲ್ಲ...ಆದರೆ ಆಕೆಯ ನೆಮ್ಮದಿ ಅತಿ ಮುಖ್ಯ. ಇದು ಅತಿಯಾದ ಆತ್ಮ ವಿಶ್ವಾಸ ತುಂಬಿದ ಮಾತುಗಳಾಗಿದ್ದವು.  ಆಗಲೇ ಮನಸ್ಸು ದೃಢವಾಗಿ ನಿರ್ಧರಿಸಿತು, ಏನೇ ಆದರು ಆಕೆಗೆ ಕಣ್ಣೀರು ಬರುವಂತೆ ಮಾಡುವುದಿಲ್ಲ.ಜೀವನದಲ್ಲಿ ನಿರ್ಧಾರ ಮಾತ್ರ ನಮ್ಮದಾಗಿರುತ್ತದೆ. ಆದರೆ ನಿಯತಿ ಅಂದರೆ ನಡೆಯುವುದು ನಮ್ಮ ವಶವಿರುವುದಿಲ್ಲ. ನಗುವಿನಂತೆ ದುಃಖವೂ ಇರುತ್ತದೆ. ಅದು ನಿಜವಾದ ಜೀವನ.  ಕಣ್ಣೀರು ಇದ್ದರೂ ಇರಬಹುದು...ಇಲ್ಲ  ಶ್ರೀರಾಮ ಪಿತೃವಾಕ್ಯ ಪರಿಪಾಲಿಸಿದಂತೆ ನನಗಾಗಿ ಕಣ್ಣೀರು ಮಿಡಿಯದೇ ಸುರಿಸದೇ ಇರಬಹುದು.  ನನ್ನ ನಿರ್ಧಾರ ಹುಸಿಯಾಗಬಾರದಲ್ಲ.  ಸದಾ ನಗುವಿನಲ್ಲೇ ಇರುವ ಆಕೆಯನ್ನು ಊಹಿಸುವುದು ಕಷ್ಟ.

ಸಾಯಂಕಾಲದ ತನಕ ಹತ್ತು ಹಲವು ಮಾತುಗಳಾದವು. ಕೊನೆಯಲ್ಲಿ ಸಮುದ್ರ ನೋಡಬೇಕು ಅನ್ನಿಸಿತು. ಮಲೆನಾಡ ಹೆಣ್ಣಿಗೆ ಅಲ್ಲಿನ  ನದಿ  ಕೆರೆ ಬಾವಿ ಬಿಟ್ಟರೆ ಬೇರೆ ಜಲರಾಶಿಯ ಪರಿಚಯವಿಲ್ಲ. ಹೊರ ಹೋಗುವುದಕ್ಕೆ ಉಡುಪು ಬದಲಿಸಿ ಹೊರಡುವಾಗ ಆಕೆ ಹತ್ತಿರ ಬಂದಳು,  ಕಸೂತಿಯಲ್ಲಿ ಅಲಂಕರಿಸಿದ ಕರವಸ್ತ್ರವನ್ನು ಕೈಯಲ್ಲಿಟ್ಟಳು. ಮೆಲ್ಲಗೆ ಕಿವಿಯಲ್ಲಿ ಪಿಸುಗುಟ್ಟಿದಳು...ನೆನಪಿಗೆ ಇರಲಿ. ಮರೆಯದ ಮನಸ್ಸಿಗೆ  ನೆನಪಿನ ರಾಶಿಯನ್ನೇ ತುಂಬಿದಾಕೆ ಆ ರಾಶಿಯನ್ನು ಮುಚ್ಚಿಕೊಳ್ಳುವುದಕ್ಕೋ ಎನೋ ಪುಟ್ಟ ಕರವಸ್ತ್ರವನ್ನು ಕೈಯಲ್ಲಿರಿಸಿದಳು. ಹಾಗೇ ಅದನ್ನು ಮುಖದ ಬಳಿಗೆ ತಂದರೆ ಚಾರ್ಲಿ ಸೆಂಟ್ ನ ಮಧುರವಾದ ಪರಿಮಳ. ಅದೆಂತಹ ಮಧುರ ಗಂಧ. ಕೋಣೆಯನ್ನೆಲ್ಲಾ ಆವರಿಸಿತ್ತು. ಮತ್ತೂ ಮತ್ತೂಮುಖದ ಬಳಿಗೆ ತಂದೆ. ಎಲ್ಲಿ ಗಂಧ ಕರಗಿ ಆವಿಯಾಗುವುದೋ ಎಂದು ಕೊಂಡು ಪುಟ್ಟ ಪೆಟ್ಟಿಗೆಯಲ್ಲಿ ಕರವಸ್ತ್ರವನ್ನು ಮುಚ್ಚಿಟ್ಟುಬಿಟ್ಟೆ. 

ಎಲ್ಲರೂ ಸಮುದ್ರಕಿನಾರೆಗೆ ತೆರಳಿದೆವು. ಒಂದು ತಾಸು ಸಾಗರದಂಚಿನ ಅಲೆಗಳ ಭೋರ್ಗರೆತ ಕಿವಿಗೆ ಅಪ್ಪಳಿಸಿದರೂ ಆಕೆಯ ಕಿಲ ಕಿಲ ನಗು ಕಿವಿಯಲ್ಲಿ ಅದು ಹೇಗೋ ಎಲ್ಲವನ್ನೂ ಮೀರಿಸಿ ಕೇಳಿಸುತ್ತಿತ್ತು. ನಂತರ ಎಲ್ಲರನ್ನೂ ಬೀಳ್ಕೊಟ್ಟು ಕತ್ತಲಾಗುತ್ತಿದ್ದಂತೆ ಮನೆಗೆ ಬಂದನಂತರ ಮತ್ತದೇ ಕರವಸ್ತ್ರದ ಪೆಟ್ಟಿಗೆಯನ್ನು ತೆರೆದು ನೋಡುವುದನ್ನು ತೆಡೆ ಹಿಡಿಯಲಾಗಲಿಲ್ಲ.  ತೆರೆದು ನೋಡಿದೆ. ಮತ್ತದೆ ಚಾರ್ಲಿಯ ಹನಿ ಸುಗಂದ....... ಇಂದಿಗೂ ಆ ಚಾರ್ಲಿಯ ಹನಿ ಸುಗಂಧದ ಪರಿಮಳವನ್ನು ಮರೆಯುವುದಕ್ಕಿಲ್ಲ.   ಒಂದು ಮಾತ್ರ ಸತ್ಯ ಬದುಕಿನಾದ್ಯಂತ ಹರಡಿದ ಮಧುರ ಸುಗಂಧಕ್ಕೆ ಆ ಚಾರ್ಲಿಯ ಸುಗಂಧವೇ ತರುಲತೆಯ ಚಿಗುರಾಗಿ ಉಳಿದುಬಿಟ್ಟಿತು.