ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತ: ।
ಪ್ರಾಣಾಪಾನಸಮಾಯುಕ್ತ: ಪಚಾಮ್ಯನ್ನಂ ಚತುರ್ವಿಧಮ್
ಇದು ಬ್ರಾಹ್ಮಣನಾದವನು ಭೋಜನ ಪೂರ್ವದಲ್ಲಿ ಪರಮಾತ್ಮನ ಸ್ಮರಣೆಯೊಂದಿಗೆ ಪಠಿಸುವ ಮಂತ್ರ. ಇದರಲ್ಲಿ ಬರುವ ವೈಶ್ವಾನರ ಎಂದರೆ ಅಗ್ನಿ. ನಾವು ತಿನ್ನುವ ಆಹಾರ ಅದು ನಮ್ಮ ದೇಹದ ಆಹಾರವಾದರೂ ಅದು ಪರೋಕ್ಷವಾಗಿ ಸಲ್ಲುವುದು ವೈಶ್ವಾನರ ಎಂಬ ಅಗ್ನಿಗೆ. ಹಾಗಾಗಿ ಭೋಜನ ಅಥವಾ ಸೇವಿಸುವ ಆಹಾರ ಅದು ಬ್ರಾಹ್ಮಣನಾದವನಿಗೆ ಯಜ್ಞಕ್ಕೆ ಸಮನಾಗಿರುತ್ತದೆ. ಇದು ಸಾಮಾನ್ಯ ತತ್ವ. ಈ ಅರ್ಥ ತಿಳಿದು ಊಟ ಮಾಡಿದಾಗ ಅದರಲ್ಲಿ ಹೆಚ್ಚು ತಾದಾತ್ಮ್ಯ ಲಭ್ಯವಾಗುತ್ತದೆ. ಹಾಗಾಗಿಯೇ ಬ್ರಾಹ್ಮಣನಾದವನಿಗೆ ಊಟ ಎಂಬುದು ಕೇವಲ ಆಹಾರ ಸೇವಿಸುವುದಾಗಿರುವುದಲ್ಲ. ಹಸಿವಿಗೆ ಆಹಾರ ಸೇವಿಸುವುದು. ಹಸಿವು ಎಂದರೆ ಅದು ವೈಶ್ವಾನರ ಹೇಳುವ ಅಥವಾ ರವಾನಿಸುವ ಸಂದೇಶವಾಗಿರುತ್ತದೆ. ಹೀಗಾಗಿ ಹಸಿವಾದಾಗ ಮಾತ್ರವೇ ಆಹಾರ ಸೇವಿಸುವುದು ಆಗ್ನಿಯ ಆಜ್ಞೆಯನ್ನು ನೆರವೇರಿಸಿದಂತೆ. ಇಲ್ಲವಾದರೆ ಅದು ಚಪಲಕ್ಕೆ ತಿಂದಂತೆ. ಚಪಲ ಎಂಬುದು ಋಣಾತ್ಮಕವಾಗಿ ಅದು ತಾಮಸೀಗುಣವಾಗಿರುತ್ತಾ ಅಸುರರ ಬೇಡಿಕೆಯಾಗುತ್ತದೆ. ಅದು ದೇಹದಲ್ಲಿ ದುಷ್ಪರಿಣಾಮವನ್ನು ಬೀರುತ್ತದೆ.
ಯಾವ ಆಹಾರವು ಪ್ರೋಕ್ಷಣೆಗೆ ಅರ್ಹವೋ ಅದು ಬ್ರಾಹ್ಮಣನಾದವನು ಸೇವಿಸುವುದಕ್ಕೆ ಅರ್ಹವಾಗಿರುತ್ತದೆ. ಹಾಗಾಗಿ ಕೇವಲ ಸಸ್ಯಾಹಾರ ಅದರಲ್ಲೂ ತಮಸ್ಸಿನಿಂದ ರಹಿತವಾದ ಆಹಾರಮಾತ್ರವೇ ಬ್ರಾಹ್ಮಣನಿಗೆ ಯೋಗ್ಯವಾಗಿರುತ್ತದೆ. ಈರುಳ್ಳಿಯಂತಹ ಆಹಾರವು ಭೋಜನವೆಂಬ ಯಜ್ಞಕ್ಕೆ ಹವಿಸ್ಸು ಆಗಿ ಸ್ವೀಕಾರಾರ್ಹವಲ್ಲ. ಯಾವುದೇ ಜೀವದಲ್ಲಿ ಪ್ರಾಣವಾಯು ಅವಾಹನೆಯಾದಾಗ ಅಗ್ನಿಯ ಸಾನ್ನಿಧ್ಯವು ಒದಗುತ್ತದೆ. ಅಗ್ನಿಯ ಅಸ್ತಿತ್ವ ಎಂಬುದು ಜೀವದ ಸಂಕೇತವಾಗಿರುತ್ತದೆ. ಈ ಅಗ್ನಿ ಯಾವಾಗ ಈ ದೇಹವನ್ನು ಬಿಡುತ್ತದೋ ಆಗ ಜೀವವಿಲ್ಲದೇ ದೇಹವು ಜಡವಾಗಿರುತ್ತದೆ. ಈ ಅಗ್ನಿಗೆ ಒದಗಿಸುವ ಆಹಾರವು ಅದು ಯಜ್ಞಕ್ಕೆ ಸಮನಾಗಿರುತ್ತದೆ. ಈ ಭಾವ ಮನಸ್ಸಿನಲ್ಲಿದ್ದಾಗ ನಾವು ತಿನ್ನುವ ಪ್ರತಿಯೊಂದು ಆಹಾರವೂ ನಮಗೆ ಪರಮಾತ್ಮನ ಸ್ಮರಣೆಯನ್ನು ಪ್ರಚೋದಿಸುತ್ತದೆ.
ಸಸ್ಯಾಹಾರ ಮತ್ತು ಮಾಂಸಾಹಾರ ಇವೆರಡೂ ಈಗ ಚರ್ಚಿತ ವಿಷಯಗಳು. ಮಾಂಸಾಹಾರ ಸೇವಿಸುವಾಗ ಅಥವಾ ಅದನ್ನು ಸಿದ್ದಪಡಿಸುವಲ್ಲಿ ಮನುಷ್ಯನಿಗೆ ಒಂದಿಷ್ಟು ಮನಸ್ಸಿನಲ್ಲಿ ಹಿಂಸಾ ಪ್ರವೃತ್ತಿ ಇರಲೇ ಬೇಕು. ಇದು ತಾಮಸೀ ಗುಣವಿದ್ದು ದೈವದ ಅಸ್ತಿತ್ವವನ್ನು ದೂರೀಕರಿಸುತ್ತದೆ. ಹಿಂಸೆ ಎಂಬುದು ರಾಕ್ಷಸ ಸ್ವರೂಪ.
ಹುಟ್ಟಿದ ಪ್ರತಿಯೊಂದು ಪ್ರಾಣಿ ಸಸ್ಯಗಳಿಗೂ ಆಹಾರ ಎಂಬುದು ಅತ್ಯವಶ್ಯ. ಬುದ್ಧಿ ಮತ್ತು ಚಿಂತನಾಶಕ್ತಿ ಇರುವುದು ಮನುಷ್ಯನಿಗೆ ಮಾತ್ರ. ಬ್ರಾಹ್ಮಣನಾದವನಿಗೆ ಒದಗುವ ಸಂಸ್ಕಾರವು ಪರಮಾತ್ಮನ ಅರಿವನ್ನು ಒದಗಿಸುತ್ತದೆ. ಬ್ರಾಹ್ಮಣನಾದವನಿಗೆ ಆಹಾರ ಸೇವನೆ ಎಂಬುದು ಕೇವಲ ಹಸಿವನ್ನು ನೀಗಿಸುವ ಕ್ರಿಯೆಯಲ್ಲ. ಅದು ಯಜ್ಞದಂತೆ . ಯಜ್ಞ ಎಂಬುದು ಒಂದು ದೈವ ಕ್ರಿಯೆ. ಹಾಗಾಗಿ ಭೋಜನ ಆರಂಭಕ್ಕೂ ಮುನ್ನ ಹಸ್ತೋದಕ ಅತ್ಯಂತ ಅವಶ್ಯ. ಹಸ್ತೋದಕ ಕೇವಲ ಶಾಸ್ತ್ರವಲ್ಲ. ಹಸಿವಿನ ಹೊಟ್ಟೆಗೆ ಒಂದಿಷ್ಟು ತುಟುಕು ನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದಲೂ ಉತ್ತಮ. ಒಂದು ಪರಿಷೇಚನದಿಂದ ಪರಿಸರ ಶುದ್ದಿಯಾದರೆ, ಒಂದು ಅಪೋಶನದಿಂದ ಮೈ ಮನ ಶುದ್ದಿಯಾಗುತ್ತದೆ. ಸೇವಿಸುವಲ್ಲಿ ದೈವೀ ಭಾವ ಬಂದಾಗ ಅನ್ನವೆಂಬು ಬ್ರಹ್ಮಸ್ವರೂಪವಾಗುತ್ತದೆ. ಹಸಿದವನಿಗೆ ಆಹಾರ ಪರಬ್ರಹ್ಮವಾಗಿ ಗೋಚರಿಸಿದರೆ ಅದರ ಬಗ್ಗೆ ಹೆಚ್ಚು ಗೌರವ ಆರಾಧನಾ ಭಾವ ಪ್ರಚೋದಿಸಲ್ಪಡುತ್ತದೆ. ವೇದಗಳಲ್ಲಿ ಹೇಳಲ್ಪಟ್ಟ ಪತ್ನಿಯ ಗುಣಗಳಲ್ಲಿ ಭೋಜ್ಯೇಷು ಮಾತಾ ಎಂಬುದು ಮಾತೃಸ್ವರೂಪವಾಗುವಾಗ ಭೋಜನ ಯಜ್ಞವಾಗುತ್ತದೆ. ಯಜ್ಞ ಹವನಗಳಲ್ಲಿ ಮನೆಯ ಒಡತಿಯೇ ಅಗ್ನಿ ಪ್ರತಿಷ್ಠೆಗೆ ವೈಶ್ವಾನರ ಸ್ವರೂಪ ಅಗ್ನಿಯನ್ನು ಒದಗಿಸಬೇಕು. ಭೋಜ್ಯೆಷು ಮಾತಾದ ಮಾತೃ ಸ್ವರೂಪ ಇದು. ಭೋಜನ ಎಂಬುದು ಒಂದರ್ಥದಲ್ಲಿ ಅಗ್ನಿಯನ್ನು ಸಾಕ್ಷಾತ್ಕರಿಸುವ ಅಗ್ನಿಕ್ರಿಯೆಯೇ ಆಗಿರುತ್ತದೆ. ತಿಂದ ಆಹಾರ ಜೀರ್ಣವಾಗಬೇಕಾದರೆ ಒಳಗಿನ ವೈಶ್ವಾನರನ ಅನುಗ್ರಹ ಅತ್ಯಂತ ಅವಶ್ಯ.
ಎಲ್ಲರ ಉದರದಲ್ಲಿ ಮಾತ್ರವಲ್ಲ ದೇಹದಲ್ಲೂ ವೈಶ್ವಾನರ ಸ್ವರೂಪವಿರುತ್ತದೆ. ಹಾಗಾಗಿ ಯಾರೇ ಹಸಿದವನು ಮನೆಬಾಗಿಲಿಗೆ ಬಂದಾಗ ಆತನ ಹಸಿವನ್ನು ಆತನಿಗೆ ಆಹಾರವನ್ನು ನೀಡುವುದು ವೈಶ್ವಾನರನನಿಗೆ ಹವಿಸ್ಸನ್ನು ಅರ್ಪಿಸಿದಂತೆ. ಅನ್ನ ದಾನವೆಂಬುದು ಶ್ರೇಷ್ಠದಾನ ಎಂಬುದಾಗಿ ಪರಿಗಣಿಸಲ್ಪಡುತ್ತದೆ. ಯಾವ ಆಶೆಗಳಿಗೂ ಮಿತಿ ಎಂಬುದಿಲ್ಲ. ಧನ ಕನಕ ಭೂಮಿ ಸುಖ ಎಲ್ಲವನ್ನೂ ಮತ್ತೂ ಬೇಕು ಮತ್ತೂ ಬೇಕು ಎನ್ನುವಲ್ಲಿ ಮನುಷ ಸದಾ ಅತೃಪ್ತ. ಗಳಿಸಿದಷ್ಟು ಪ್ರಾಪ್ತಿಸಿದಷ್ಟೂ ಮತ್ತೂ ಬೇಕು ಎನ್ನುವ ಹಂಬಲ. ಆದರೆ ಒಬ್ಬ ಮನುಷ್ಯನಿಗೆ ಹೊಟ್ಟೆತುಂಬ ಆಹಾರ ಕೊಟ್ಟು ಆತನ ಉದರಾಗ್ನಿಯನ್ನು ತೃಪ್ತಿಪಡಿಸಿದಾಗ ಆತ ಇನ್ನು ಸಾಕು ಅಂತ ತೃಪ್ತಿಯಿಂದ ಹೇಳಿಬಿಡುತ್ತಾನೆ. ಹೊಟ್ಟೆ ತುಂಬಿದಲ್ಲಿ ಇನ್ನೂ ಬೇಕು ಎಂಬ ಅತಿಯಾಶೆ ಇರುವುದಿಲ್ಲ. ಹಾಗಾಗಿ ಒಬ್ಬನ್ನು ಯಾವುದುಕೊಟ್ಟೂ ತೃಪ್ತಿ ಪಡಿಸುವುದು ಆಸಾಧ್ಯವಾದರೆ ಆತನಿಗೆ ಊಟ ಕೊಟ್ಟು ತೃಪ್ತಿ ಪಡಿಸಬಹುದು. ನಮ್ಮ ಹುಟ್ಟು ಸಾವಿನ ನಡುವೆ ಚೇತನ ಸ್ವರೂಪವಾಗಿ ಆಹಾರವಿರುತ್ತದೆ. ಜನರು ಎಂದರೆ ಜನನ ಮರಣಕ್ಕೆ ಒಳಗಾದವರು. ಇದರ ನಡುವಿನ ಬದುಕು ಎಂದರೆ ಅದು ಯಜ್ಞ ಹವನದಂತೆ, ವೈಶ್ವಾನರ ಉಪಾಸನೆ.
ಮನುಷ್ಯನ ಜೀವನ ಎಂದರೆ ಅದೊಂದು ಯಜ್ಞದಂತೆ. ಹುಟ್ಟಿದನಂತರ ಪ್ರತಿಯೊಂದನ್ನೂ ಭಗವಂತನಿಗೆ ಸಮರ್ಪಿಸುತ್ತಾ ಜೀವನ ಸಾಗಿಸುವುದರಲ್ಲಿ ಒಂದು ಯಜ್ಞತತ್ವವಿದೆ. ಯಜ್ಞ ಎಂದರೆ ಒಂದು ವರ್ತುಲದಂತೆ. ಹುಟ್ಟು ಸಾವು ಮತ್ತೆ ಹುಟ್ಟು. ಪ್ರಕೃತಿಗೆ ಹಳೆಯದನ್ನು ಕೊಟ್ಟು ಹೊಸದನ್ನು ಪಡೆದಂತೆ ನದಿಯ ನೀರು ಕಡಲಿಗೆ ಸೇರಿ ಆವಿಯಾಗಿ ಆಕಾಶ ಸೇರಿ ಮತ್ತೆ ಮಳೆ ಹನಿಯಾದಂತೆ. ಇದು ಪ್ರಕೃತಿಯ ಯಜ್ಞ. ಒಂದು ಕಾಳು ಭೂಮಿಯೋಳಗೆ ಅವಿತು ಮೊಳಕೆ ಒಡೆದು ಹೊರಬರುತ್ತದೆ. ಮತ್ತೆ ಗಿಡವಾಗಿ ಮರವಾಗುತ್ತದೆ. ಹೂವು ಹಣ್ಣಾಗುತ್ತದೆ. ಪುನಃ ಬೀಜ ಭೂಮಿಯನ್ನು ಸೇರುವುದರಲ್ಲಿ ಒಂದು ಯಜ್ಞ ತತ್ವವಿದೆ. ಜೀವನ ಎಂದರೆ ಯಜ್ಞದಂತೆ. ಯಜ್ಞವನ್ನು ಮಾಡುವವನು ಯಜಮಾನ ಎನಿಸಿಕೊಳ್ಳುತ್ತಾನೆ. ನಮ್ಮ ನಮ್ಮ ಬದುಕಿಗೆ ನಾವೇ ಯಜಮಾನರು. ಯಜ್ಞ ಎನ್ನುವುದಕ್ಕೆ ಹಲವು ವ್ಯಾಖ್ಯಾನಗಳು ವೇದಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಅದು ಯಾವ ಜಾತಿ ಧರ್ಮಕ್ಕೂ ಸೀಮಿತವಲ್ಲ. ಹುಟ್ಟಿದ ಪ್ರತಿಯೊಂದು ಪ್ರಾಣಿ ಪಕ್ಷಿ ಸಸ್ಯಾದಿಗಳಿಗೆ ಹಸಿವು ಎಂಬುದು ಇರುತ್ತದೆ. ಇಲ್ಲಿ ಆಹಾರ ಸೇವಿಸುವುದು ಒಂದು ಆಧ್ಯಾತ್ಮಿಕ ಚಿಂತನೆಯಾಗುತ್ತದೆ.
ಯಜ್ಛವೆಂದರೆ ಒಂದು ವೈಶ್ವಾನರ ಆರಾಧನೆ. ಇದಕ್ಕೆ ಶರೀರವೇ ವೇದಿಕೆ. ಉದರವೇ ಅಗ್ನಿಕುಂಡ. ಎಲ್ಲಿ ಅಗ್ನಿ ಪುರುಷ ಇರುತ್ತಾನೋ ಅದು ಅಗ್ನಿವೇದಿಕೆ ಎಂದು ಕರೆಯಲ್ಪಡುತ್ತದೆ. ಹಾಗಾಗಿ ನಾವು ಎಲ್ಲಿಗೆ ಹೋದರೂ ಈ ಯಜ್ಞ ಕ್ರಿಯೆಯಿಂದ ಅತೀತರಾಗುವುದಕ್ಕೆ ಸಾಧ್ಯವಿಲ್ಲ. ಇದೊಂದು ಪ್ರತೀ ಕ್ಷಣವೂ ಮಾಡುವ ತ್ಯಾಗದಂತೆ. ಶರೀರಕ್ಕೆ ಸೇರಿದ ಆಹಾರ ಪುನಃ ತರುವುದಕ್ಕೆ ಸಾಧ್ಯವಿಲ್ಲ. ಅದು ಕರಗಿ ಮತ್ತೆ ಭೂಮಿಯನ್ನು ಸೇರುತ್ತದೆ. ಇಲ್ಲಿ ಒಂದು ವರ್ತುಲದಲ್ಲಿ ಯಜ್ಞ ತತ್ವ ನಿರ್ಮಾಣವಾಗುತ್ತದೆ. ಈ ವರ್ತುಲದಲ್ಲಿ ಆಹಾರ ಚೈತನ್ಯ ಸ್ವರೂಪವಾಗಿ ದೇಹವನ್ನು ವ್ಯಾಪಿಸುತ್ತದೆ.
ಭೋಜನವೆಂಬುದು ಅಗ್ನಿಕ್ರಿಯೆಯಾಗಿ ಪೂಜನಿಯವಾಗುವಾಗ ಅದರ ಬಗ್ಗೆ ಅಷ್ಟೇ ಗೌರವ ಪೂರ್ಣವಾಗಿ ವ್ಯವಹರಿಸಿದರೆ ಆ ಅನ್ನಾಹಾರಕ್ಕೆ ಗೌರವವನ್ನು ಸಲ್ಲಿಸಿದಂತೆ. ಇಂದು ಊಟ ಎಂಬುದು ಕೇವಲ ಯಾಂತ್ರಿಕ ಕ್ರಿಯೆಯಾಗಿದೆ. ಹಸ್ತೋದಕ ತೆಗೆದುಕೊಳ್ಳದೇ ಎಲ್ಲೋ ಹೇಗೋ ಕುಳಿತು ಊಟ ಮಾಡುವುದನ್ನು ಕಾಣಬಹುದು. ಊಟದ ಸಮಯದಲ್ಲಿ ನಡುವೆ ಎದ್ದು ಹೋಗುವುದು. ಮಾತನಾಡುವುದು ಅದಕ್ಕೆ ಅಗೌರವವನ್ನು ಸಲ್ಲಿಸಿದಂತೆ ಆರಾಮ ಆಸನಗಳಲ್ಲಿ ಅಕ್ಷರಶಃ ಮಲಗಿದಂತೆ ಕುಳಿತು ಊಟ ಅಥವಾ ಆಹಾರ ಸೇವಿಸುವುದು ಅಗ್ನಿಯ ಮೇಲೆ ದೌರ್ಜನ್ಯ ಎಸಗಿದಂತೆ. ತಿಂದ ತಟ್ಟೆಯಲ್ಲಿ ಅಥವಾ ಎಲೆಯಲ್ಲಿ ಆಹಾರವನ್ನು ಉಳಿಸುವುದು ಅಗ್ನಿಯನ್ನು ತಿರಸ್ಕರಿಸಿದಂತೆ. ಇಂದು ಹಲವು ಕಾರ್ಯಕ್ರಮಗಳಿಗೆ ಹೋದಾಗ. ಊಟಕ್ಕೆ ಕುಳಿತ ನೂರು ಜನರಲ್ಲಿ ತೊಂಭತ್ತು ಜನರೂ ಆಹಾರವನ್ನು ಬಿಟ್ಟು ಏಳುತ್ತಾರೆ. ಏಷ್ಟು ವಯಸ್ಸಾದರೂ ತಮ್ಮ ಹೊಟ್ಟೆಗೆ ಎಷ್ಟು ಬೇಕು ಎಂದು ತಿಳಿಯದವರು ಇವರು. ಯಜ್ಞವೆಂಬ ಪ್ರಜ್ಞೆ ಇಲ್ಲದೆ ಅಜ್ಞಾನದಿಂದ ಅಗ್ನಿಗೆ ಸವಾಲು ಎಸೆದಂತೆ ಊಟ ಮಾಡುವುದನ್ನು ನೋಡಬಹುದು. ನಾವು ತಿನ್ನುವ ಆಹಾರಕ್ಕೆ ಗೌರವಕೊಡಬೇಕು. ನಮ್ಮಲ್ಲಿ ಹಸಿವು ಎಂಬ ಪ್ರಕ್ತಿಯೆಗೆ ಮೂಲ ಕಾರಣ ನಮ್ಮೊಳಗಿನ ವೈಶ್ವಾನರ. ಆತನ ಆಗ್ರಹಕ್ಕೆ ತುತ್ತಾದರೆ ತಿಂದ ಅನ್ನವೂ ಪಚನವಾಗದೆ ಇರಬಹುದು. ಯಾವುದೇ ಕಾರ್ಯಕ್ರಮದಲ್ಲಿ ಭೋಜನವೆಂಬುದು ಅತ್ಯಂತ ಮಹತ್ವದ ಅಂಗ. ಅದಕ್ಕೊಂದು ಉತ್ತಮ ಸ್ಥಾನವಿದೆ. ಆದರೆ ಇದರ ಅರಿವಿಲ್ಲದೇ ಇದನ್ನು ಅಗೌರವದಿಂದ ಕಾಣುತ್ತೇವೆ. ಒಂದಷ್ಟು ಹೊತ್ತು ಅದಕ್ಕೆ ಗೌರವದಿಂದ ವಿನಿಯೋಗಿಸಿ ಉದರದ ವೈಶ್ವಾನರನನ್ನು ತೃಪ್ತಿಗೊಳಿಸುವಲ್ಲಿ ಜೀವನದ ಸಾರ್ಥಕತೆ ಇದೆ.
ಅಗ್ನಿ ಎಂದರೆ ಸೂರ್ಯನ ಪ್ರತಿರೂಪದಂತೆ. ಗಾಯತ್ರಿ ಮಂತ್ರದ ಜ್ಯೋತಿಸ್ವರೂಪದಂತೆ. ಈ ಅಗ್ನಿ ಸ್ವರೂಫ ಕಣ್ಣಿಗೆ ಕಾಣುವ ಮಾತ್ರವಲ್ಲ ದೇಹದ ಅನುಭವ. ಇದು ನಿತ್ಯ ಕಾಣುವ ಅನುಭವಿಸುವ ಅನುಗ್ರಹಿಸುವ ಭಗವನ್ ಸ್ವರೂಪ.






