ಯೋಗೇನ ಚಿತ್ತಸ್ಯ ಪದೇನ ವಾಚಾಂ
ಮಲಂ ಶರೀರಸ್ಯ ವೈದ್ಯಕೇನ
ಯೋಪಾಕರೋತ್ತಂ ಪ್ರವರಂ ಮುನೀನಾಂ
ಪತಂಜಲೀಂ ಪ್ರಾಂಜಲೀಂ ರಾನತೋಸ್ಮಿ
"ಯೋಗದ ಮೂಲಕ ಚಿತ್ತ ಅಂದರೆ ಮನಸ್ಸಿನ ಕಶ್ಮಲವನ್ನೂ (ಮಲ),ವ್ಯಾಕರಣದ ಮೂಲಕ ಮಾತಿನ ದೋಷವನ್ನೂ ವೈದ್ಯಶಾಸ್ತ್ರದ ಮೂಲಕ ದೇಹದ ಕಲ್ಮಶ ಅಂದರೆ ರೋಗವನ್ನು ಕಳೆದಂತಹ ಮುನಿವರೇಣ್ಯನಾದ ಪತಂಜಲಿಗೆ ಪ್ರಾಂಜಲ ಮನಸ್ಸಿನಿಂದ ಕೈಜೋಡಿಸಿ ವಂದಿಸುತ್ತೇನೆ ಎಂಬುದು ಈ ಸ್ತುತಿ ಶ್ಲೋಕದ ಸಾರ. "
ಭೂಮಿಯಲ್ಲಿ ನಾಸ್ತಿಕತೆ ಹೆಚ್ಚಾಗಿ ವೇದಗಳ ಬಗ್ಗೆ ನಿರಾಸಕ್ತಿ ತಳೆದಾಗ ಹರಿ ಹರರು ಋಷಿಗಳ ಮನವಿಯಂತೆ ಪರಿಹಾರ ಕಂಡುಕೊಳ್ಳುವುದಕ್ಕೆ ಯೋಚಿಸುತ್ತಾರೆ. ಅದರಂತೆ ಹರಿಯು ಮನುಷ್ಯರಿಗೆ ವೇದಾಧಾರವಾದ ಉಪಾಸನ ಕಾಂಡ ಮತ್ತು ಯೋಗ ಕಾಂಡದ ಉಪದೇಶವನ್ನು ಮಾಡುವುದಕ್ಕೆ ಸಂಕರ್ಷಣ ರೂಪವನ್ನು ಕಳಿಸುತ್ತಾನೆ. ಋಷಿಯೊಬ್ಬನು ದೇಹಕ್ಕೂ ಮನಸ್ಸಿಗೂ ಬಂದಿರತಕ್ಕಂತಹ ರೋಗದ ಪರಿಹಾರಕ್ಕಾಗಿ ಮನಸ್ಸಿನ ಮತ್ತು ದೇಹದ ದೃಢತೆಗಾಗಿ ಮಹಾವಿಷ್ಣುವಿನ ಕುರಿತು ತಪಸ್ಸು ಮಾಡುತ್ತಿದ್ದ. ಈ ಬದುಕಿನಲ್ಲಿ ಮನಸ್ಸು ಮತ್ತು ದೇಹದ ಆರೋಗ್ಯ ಲಭಿಸುವುದಕ್ಕಾಗಿ. ಮಹಾ ವಿಷ್ಣು ಆದಿಶೇಷನಿಗೆ ಅ ಮುನಿಗೆ ವರವನ್ನು ಕೊಟ್ಟು ಯೋಗಪ್ರದಾನ ಮಾಡುವಂತೆ ಹೇಳಿದ್ದಾನೆ. ಆ ಮುನಿ ಸಂಧ್ಯಾವಂದನೆಯಲ್ಲಿ ಸೂರ್ಯನಿಗೆ ಅರ್ಘ್ಯವನ್ನು ಬಿಡುತ್ತಿದ್ದಾಗ ಬಿಳಿಯದಾದ ಒಂದು ಕುಂಡಲವೊಂದು ಬೊಗಸೆಯಲ್ಲಿ ಬೀಳುತ್ತದೆ. ಅದು ಬೆಳೆದು ಬೆಳೆದು ಆದಿಶೇಷನಾಗಿ ಪ್ರತ್ಯಕ್ಷವಾಗುತ್ತದೆ. ಆದಿಶೇಷನು ಆ ಮುನಿಯಲ್ಲಿ ಆವಾಹನೆಗೊಂಡು ಅವನಿಗೆ ಯೋಗದ ಉಪದೇಶವನ್ನು ಮಾಡಿದ. ಬೊಗಸೆಯಲ್ಲಿ ಬಿದ್ದಕಾರಣ ಪತಃ ಅಂದರೆ ಬೀಳುವುದು, ಅಂಜಲಿ ಎಂದರೆ ಅರ್ಘ್ಯ. ಹೀಗೆ ಆ ಮುನಿಗೆ ಮುಂದೆ ಪತಂಜಲಿ ಎಂದು ಹೆಸರಾಯಿತು. ಆತ ಮುಂದೆ ಯೋಗ ಕಾಂಡದ ಉಪದೇಶವನ್ನು ಮಾಡಿದ.
ಯೋಗಾಭ್ಯಾಸದ ಮೊದಲು ಧ್ಯಾನದ ಆರಂಭದಲ್ಲಿ ಪತಂಜಲಿ ಮಹರ್ಷಿಯನ್ನು ಸ್ಮರಿಸಿ ಆ ಮಹಾಮುನಿಗೆ ಕೃತಜ್ಞತೆಯನ್ನು ಅರ್ಪಿಸುತ್ತೇವೆ. ಆದರೆ ಇದರ ಅರ್ಥ ಹೇಗಿದೆಯೋ ಆ ಬಗೆಯಲ್ಲಿ ಯೋಗಾಭ್ಯಾಸ ಇರಬೇಕು. ಆದರೆ ಇಂದು ಅದು ಇಲ್ಲದೇ ಹೋಗಿದೆ. ಯೋಗಾಭ್ಯಾಸದ ಅರ್ಥವೇ ತಿಳಿಯದೇ ಇಂದು ಅನುಸರಿಸಲಾಗುತ್ತದೆ. ಯೋಗವೆಂದರೆ ರೋಗವಿಲ್ಲದೆ ಇರುವ ಸ್ಥಿತಿ. ಆದರೆ ದೇಹದ ರೋಗಮಾತ್ರ ಗಮನದಲ್ಲಿರಿಸಿ ಯೋಗಾಭ್ಯಾಸವನ್ನು ಭಯದಿಂದ ಮಾಡುವುದನ್ನು ಕಾಣಬಹುದು.
ಯಾರಾದರೂ ಯೋಗಾಭ್ಯಾಸ ಮಾಡುತ್ತೇನೆ ಎಂದಾಗ ಹಲವರಲ್ಲಿ ನಾನು ಅವರ ಜೀವನ ಶೈಲಿಯನ್ನು ಕುತೂಹಲಕ್ಕೆ ಕೇಳುವುದುಂಟು. ಕೆಲವು ಸಲ ತುಂಬ ಉಪಯುಕ್ತ ಮಾಹಿತಿಯೂ ಸಿಗುವುದುಂಟು. ಅದರ ನಿರೀಕ್ಷೆಯಲ್ಲೇ ಕೇಳಿದರೂ ಬಹಳಷ್ಟು ಸಲ ಅದು ನಿರಾಶೆಯೇ ಆಗಿರುತ್ತದೆ. ಯೋಗಾಭ್ಯಾಸದಲ್ಲಿ ಯಮ ನಿಯಮ ಎಂಬುದು ಮೊದಲಿಗೆ ಬರುತ್ತದೆ. ಆನಂತರ ಉಳಿದೆಲ್ಲವೂ ಬರುತ್ತದೆ. ಹೆಚ್ಚಿನವರಿಗೆ ಅದನ್ನು ಕಲಿಸುವ ಬೋಧಕ ಗುರುಗಳಿಗೂ ಇದರ ಅರಿವಿಲ್ಲದಿರುವುದು ಕೆಲವೊಮ್ಮೆ ನೋವನ್ನು ತರುತ್ತದೆ. ಈಗಂತು ಅದಕ್ಕೆ ಪರೀಕ್ಷೆ ತೇರ್ಗಡೆಯಾಗಿ ಅಂಗೀಕಾರದ ಸರ್ಟಿಫಿಕೇಟ್ ಸಿಕ್ಕಿದರೆ ಗುರು ಅಂತ ಕರೆಸಿಕೊಳ್ಳುವ ಅವಕಾಶವೂ ಇರುತ್ತದೆ. ಒಂದೆರಡು ವರ್ಷ ಯೋಗಾಭ್ಯಾಸ ಮಾಡಿ ಯೋಗ ಗುರು ಅಂತ ಹೇಳಿಕೊಳ್ಳುವವರು ಬಹಳಷ್ಟು ಮಂದಿ ಇದ್ದಾರೆ. ಆದರೆ ಅದರ ಅಂತರಂಗದ ಭಾವವೇ ತಿಳಿಯದೇ ತಾವು ತಪ್ಪು ಹಾದಿಯನ್ನು ತುಳಿಯುವುದಲ್ಲ ಒಂದಷ್ಟು ಜನಗಳನ್ನು ಅದೇ ಹಾದಿಗೆ ಸೆಳೆಯುವುದು ಅತ್ಯಂತ ದುರಂತ ಎನ್ನಬೇಕು.
ಗಾಳಿಯಾಡದ ಕೋಣೆಯಲ್ಲಿ ದೀಪವು ಸ್ಥಿರವಾಗಿರುವಂತೆ, ಮನಸ್ಸು ಇಂದ್ರಿಯಗಳ ಪ್ರಚೋದನೆಗೆ ಶೂನ್ಯ ಪ್ರತಿಕ್ರಿಯೆ ನೀಡಿದಲ್ಲಿ ದೀಪದಂತೆ ಸ್ಥಿರವಾಗಿರುತ್ತದೆ. ಯೋಗದಲ್ಲಿಇದು ಸಾಧ್ಯವಾಗುತ್ತದೆ. ಯೋಗವೆಂದರೆ ನಮ್ಮ ಕರ್ಮದಲ್ಲಿ ಕುಶಲತೆಯನ್ನು ತರುತ್ತದೆ. ಅತಿ ಆಶೆಯಿಂದ ಭಕ್ಷಿಸುವುದು ಯೋಗವಲ್ಲ. ಅತಿಯಾಗಿ ನಿದ್ರಿಸುವುದು, ಅಥವಾ ಅತಿಯಾಗಿ ಸುಖ ಅನುಭವಿಸುವುದು ಯೋಗವಲ್ಲ. ಯೋಗವೆಂದರೆ ನಮ್ಮ ಎಲ್ಲ ಕೆಲಸಗಳಲ್ಲಿ ಸಮನ್ವಯವನ್ನು ಸಾಧಿಸಿ ಜೀವಿಸುವ ಕ್ರಮವಾಗಿರುತ್ತದೆ. ಯಜ್ಞ ಅಥವಾ ಯಾಗದಲ್ಲಿ ಎಲ್ಲವನ್ನು ನಮ್ಮದಲ್ಲ ಎಂದು ಅರ್ಪಿಸಿ ಕಳೆಯುವಂತೆ, ಯೋಗದಲ್ಲಿ ನಮ್ಮದೇ ಆದ ಮನಸ್ಸಿನ ಗುಣಗಳು, ಕಾಮ ಕ್ರೋಧ ಇತ್ಯಾದಿಗಳನ್ನು ಆಹುತಿಕೊಡುವುದಾಗಿದೆ.
ಮನುಷ್ಯನ ಜೀವನದ ಉತ್ಕರ್ಷಕ್ಕೆ ನಿಯಮ ಎಂಬುದು ಅತ್ಯವಶ್ಯ. ನಿಯಮವನ್ನು ಆಚರಿಸಿದಾಗ ಅದು ಶಿಸ್ತುಬದ್ದ ಕ್ರಮವಾಗುತ್ತದೆ. ಆದರೆ ಮನಸ್ಸಿನೊಳಗೆ ಪ್ರತಿಷ್ಠೆ ಬೆಳೆದಾಗ, ಪ್ರತಿಷ್ಠಿತ ಮನೋಭಾವ ನಿಯಮವನ್ನು ಮನ್ನಿಸುವುದಿಲ್ಲ. ಹಲವರಿಗೆ ನಿಯಮದೊಳಗೆ ಇರುವುದು ಒಂದು ಶಿಕ್ಷೆಯಂತೆ ಭಾಸವಾಗುತ್ತದೆ. ಏಕ ಮುಖ ಸಂಚಾರದ ರಸ್ತೆ ಇದ್ದಾಗ ಆ ನಿಯಮವನ್ನು ಮುರಿಯುವುದರಲ್ಲೇ ಆಸಕ್ತಿ ಇರುತ್ತದೆ. ಅಥವಾ ನಿಯಮದ ಬಗ್ಗೆ ಗೌರವ ಇಲ್ಲದೇ ಅದನ್ನು ಪಾಲಿಸುವುದಿಲ್ಲ. ಸರದಿ ಸಾಲಿನಲ್ಲಿ ನಿಂತಾಗ ಎಲ್ಲರಿಂದಲು ಮುಂದೆ ವಿಶೇಷವಾಗಿ ಪ್ರತಿಷ್ಠಿತ ವ್ಯಕ್ತಿಯಾಗುವ ಹಂಬಲ. ಯೋಗಾಭ್ಯಾಸದಲ್ಲೂ ಅದೇ ರೀತಿ ಯೋಗದ ನಿಯಮದ ಬಗ್ಗೆ ಗೌರವ ಇರುವುದಿಲ್ಲ. ಇದೊಂದು ಬಗೆಯಲ್ಲಿ ಮಾಂಸಾಹಾರದ ಸೇವನೆಯಲ್ಲಿ ತುಂಡು ಬೇಡ ರಸ ಆದೀತು ಎನ್ನುವಂತೆ. ಯೋಗ ಬೇಕು ನಿಯಮ ಬೇಡ.
ಪ್ರಾಣ ವಾಯು ಜನನದಿಂದ ದೇಹಾಂತದ ತನಕವೂ ಮನುಷ್ಯ ದೇಹದಲ್ಲಿ ಸಕ್ರಿಯವಾಗುತ್ತದೆ. ಪ್ರಾಣವಾಯು ಮನುಷ್ಯನ ಜೀವದ ಅಸ್ತಿತ್ವದ ಸಂಕೇತ. ಯೋಗಾಭ್ಯಾಸದಲ್ಲಿ ಪಂಚ ಪ್ರಾಣಗಳನ್ನು ಅಂದರೆ ವಾಯುವಿನ ಐದು ರೂಪಗಳು, ಪಾನ, ಅಪಾನ ವ್ಯಾನ ಉದಾನ ಸಮಾನ ಸಕ್ರಿಯಗೊಳಿಸುವುದು ಪ್ರತಿಯೊಂದು ಕ್ರಿಯೆಯ ಭಾಗವಾಗಿರುತ್ತದೆ. ಯಾವುದೇ ಆಸನ ಮಾಡುವಾಗ ಉಸಿರಾಟದ ಕ್ರಿಯೆ ಎಂಬುದು ಅತೀ ಮುಖ್ಯ. ಇದನ್ನು ತಿಳಿಯದೇ ಹಲವರು ಯೋಗಾಭ್ಯಾಸ ಮಾಡುತ್ತಿದ್ದಾರೆ. ಇದು ದೀರ್ಘಕಾಲದಲ್ಲಿ ದುಷ್ಪರಿಣಾಮವನ್ನು ಬೀರುತ್ತದೆ. ಇದರ ಅರಿವಿಲ್ಲದೆ ಯೋಗಾಭ್ಯಾಸವನ್ನು ನಿಯಮದ ನಿಬಂಧನೆ ಇಲ್ಲದೇ ಆಚರಿಸುವುದನ್ನು ಕಾಣಬಹುದು. ಉಸಿರಾಟವೆಂಬುದು ಪ್ರಾಣಿಗಳ ಜೀವಾಳ. ಅದರ ಬಗ್ಗೆ ಅಲಕ್ಷ್ಯ ಸಲ್ಲದು. ಹುಟ್ಟಿದಂದಿನಿಂದ ಉಸಿರಾಡುವ ಉಸಿರಾಟದ ಬಗ್ಗೆ ಗಮನ ಇರುವುದಿಲ್ಲ. ಎರಡು ಹೊಳ್ಳೆಗಳಿವೆ ಅದರ ಮೂಲಕ ಗಾಳಿ ಒಳಗೆ ಬರುತ್ತದೆ ಹೊರಗೆ ಹೋಗುತ್ತದೆ. ಇದಿಷ್ಟೇ ಅಲ್ಲ. ನಾವು ವಯಸ್ಸನ್ನು ದಿನದ ಬದಲಾಗಿ ಉಸಿರಾಟದಿಂದ ಅಳೆಯುವಂತಾಗಬೇಕು. ಮನುಷ್ಯನಿಗೆ ಹುಟ್ಟುವಾಗ ಭಗವಂತ ಇಷ್ಟು ಉಸಿರು ಅಂತ ಠೇವಣಿ ಮಾಡಿ ಕಳುಹಿಸಿಬಿಡುತ್ತಾನೆ. ಯಾರು ಆ ಉಸಿರನ್ನು ಬೇಗನೇ ಮುಗಿಸುತ್ತಾರೋ ಅವರಿಗೆ ಬೇಗ ಸಾವು ನಿಶ್ಚಿತ. ಹಾಗಾಗಿ ದೀರ್ಘ ಉಸಿರಾಟ ಉಸಿರಾಟದ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ , ಮಾತ್ರವಲ್ಲ ಆಯುಷ್ಯವನ್ನು ದೀರ್ಘಗೊಳಿಸುತ್ತದೆ.
ಯೋಗಾಭ್ಯಾಸದಲ್ಲಿ ಪ್ರಾಥಿಮಿಕವಾಗಿ ಕಲಿಯುವ ಆಸನಗಳು ಅತ್ಯಂತ ಪರಿಣಾಮಕಾರಿಯಾಗಿದ್ದರೂ ಅದನ್ನು ನಿರ್ಲಕ್ಷಿಸಿ ತಮಗೆ ತೋಚಿದಂತೆ ಯೋಗಾಭ್ಯಾಸವನ್ನು ಮಾಡುವುದು ಅತ್ಯಂತ ಅಪಾಯಕಾರಿ. ಅಂತರ್ಜಾಲದಲ್ಲಿ ನೋಡಿ ಯೋಗಾಭ್ಯಾಸ ಮಾಡುವುದು ಈಗ ಹೆಚ್ಚಾಗಿ ಕಂಡುಬರುತ್ತದೆ. ಸುಲಭದ ಪರಿಣಾಮಕಾರಿ ಆಸನಗಳನ್ನು ಬಿಟ್ಟು ಯಾವುದೋ ಭ್ರಮೆಗೆ ಒಳಗಾಗಿ ಕಷ್ಟಕರ ಆಸನಗಳತ್ತ ಆಕರ್ಷಿತರಾಗುತ್ತಾರೆ. ಯಾವುದೇ ಆಸನಗಳನ್ನು ಮಾಡುತ್ತಿದ್ದರೂ ಅದಕ್ಕೊಂದು ನಿಯಮವಿದೆ. ಆಸನಗಳ ಅನುಕ್ರಮವಿದೆ. ಮೊದಲಿಗೆ ಯಾವ ಆಸನ ಮಾಡಬೇಕು ಒಂದರನಂತರ ಇನ್ನೊಂದು ಹೀಗೆ. ಉದಾಹರಣೆಗೆ..ಮೊದಲಿಗೆ ನಿಂತುಕೊಂಡು ಮಾಡುವ ಆಸನಗಳು ನಂತರ ಕುಳಿತುಕೊಂಡು ಉಪವಿಷ್ಠರಾಗಿ, ಆನಂತರ ಪವಡಿಸಿ ಮಾಡುವ ಅಸನಗಳು. ಇದರಲ್ಲೂ ಮೊದಲಿಗೆ ಮಾಡುವ ಆಸನಗಳು ನಂತರ ಕ್ರಮವಾಗಿ ಮಾಡಬೇಕಾದ ಆಸನಗಳಿಗೆ ಒಂದು ನಿಯಮವಿದೆ. ಉದಾಹರಣೆಗೆ ಆರಂಭದಲ್ಲಿ ತಾಡಾಸನ, ಬಾಲಾಸನ ಮಾಡಿದರೆ ಕೊನೆಯಲ್ಲಿ ಪವನ ಮುಕ್ತಾಸನ ಮಾಡಬೇಕು. ಇದು ಹಿಂದು ಮುಂದಾದರೆ ದುಷ್ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಇದರನಡುವೆ ಉಸಿರಾಟದ ಕ್ರಮ. ಇದು ಅತ್ಯಂತ ಗಮನ ಹರಿಸಬೇಕಾದ ಅಂಶವಾಗಿರುತ್ತದೆ. ಆದರೆ ನಿಯಮದ ಬಗ್ಗೆ ಗಮನವಿಲ್ಲದೇ , ಏನೋ ಒಂದು ಆಚರಿಸುವುದು ಯೋಗ ನಿಯಮಗಳನ್ನು ಅಲಕ್ಷಿಸುವುದು ಕೆಟ್ಟ ಪರಿಣಾಮವನ್ನು ಬೀರುತ್ತವೆ. ಇದಕ್ಕೆ ಸರಿಯಾದ ಗುರುಗಳ ಸಲಹೆ ಮತ್ತು ತರಬೇತಿ ಪಡೆಯಬೇಕು.
ಸಾಮಾನ್ಯವಾಗಿ ಸುಲಭದ ಆಸನಗಳನ್ನು ಆರಂಭಿಸುತ್ತಾರೆ, ಒಂದೆರಡುವಾರದಲ್ಲೇ ಬೇರೆ ಕಠಿಣ ಆಸನಗಳತ್ತ ಮನಸ್ಸು ಮಾಡುತ್ತಾರೆ. ಇದು ಅಪಾಯಕಾರಿ. ಒಟ್ಟು ಎರಾ ಬಿರಿಯಾಗಿ ಆಸನಗಳನ್ನು ಮಾಡುತ್ತ ಯೋಗಾಭ್ಯಾಸ ಮಾಡಬಾರದು. ಸುಲಭದ ಆಸನಗಳು ಕೂಡ ಅಧಿಕ ಉತ್ತಮ ಪರಿಣಾಮವನ್ನು ಕೊಡುತ್ತವೆ. ಇದರ ಅರಿವು ಅತ್ಯಂತ ಅವಶ್ಯ. ಯಾರೋ ಯಾವುದೋ ಆಸನ ಮಾಡುತ್ತಾರೆ ಟಿವಿ ಹಾಗೂ ಇತರ ಮಾಧ್ಯಮಗಳಲ್ಲಿ ನೋಡಿ ಅದರಿಂದ ಪ್ರಚೋದನೆಗೊಂಡು ಅದರಂತೆ ಭ್ರಮಾಧೀನರಾಗಿ ಆಸನಗಳನ್ನು ಮಾಡುವುದು ಅತ್ಯಂತ ದುಷ್ಪರಿಣಾಮವನ್ನು ನೀಡುತ್ತದೆ.
ಯೋಗಾಭ್ಯಾಸವನ್ನು ನಿಯಮಬಿಟ್ಟು ಮಾಡಲೇ ಬಾರದು. ಪ್ರತಿಯೊಂದು ಆಸನವೂ ದೇಹದ ಮೇಲೆ ಸೂಕ್ಷ್ಮವಾದ ಪರಿಣಾಮವನ್ನು ಬೀರುತ್ತದೆ. ಯೋಗಾಭ್ಯಾಸ ಮಾಡುವಾಗ ಹಲವಾರು ಪ್ರಧಾನ ಮತ್ತು ಪೂರಕ ನಿಯಮಗಳಿವೆ. ವ್ಯಾಯಾಮ ಅಥವಾ ಆಸನಗಳನ್ನು ಮಾಡುವಾಗ ಮಾತನಾಡುವುದನ್ನು ಮಾಡಲೇಬಾರದು. ನಾವು ಮಾತನಾಡಿದಾಗ ಉಸಿರಾಟ ಮೂಗಿನ ಬದಲು ಬಾಯಿಂದ ಉಸಿರಾಡುವಂತಾಗುತ್ತದೆ. ವ್ಯಾಯಾಮ ಮಾತ್ರವಲ್ಲ, ವಾಕಿಂಗ್ ಮಾಡುವಾಗಲೂ ಜತೆಗಿದ್ದವರೊಂದಿಗೆ ಮಾತನಾಡುತ್ತ ವಾಕಿಂಗ್ ಮಾಡುವಾಗ ಅದು ಬಾಯಿಯಿಂದ ಉಸಿರಾಡುವುದರಿಂದ ಇದು ಹೃದಯದ ಮೇಲೆ ಶ್ವಾಸ ಕೋಶದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ.
ಯೋಗಾಭ್ಯಾಸದಲ್ಲಿ ಮುಖ್ಯವಾಗಿ ಪಾಲಿಸಬೇಕಾದ ನಿಯಮಗಳಿವೆ. ಯೋಗಾಭ್ಯಾಸಕ್ಕೆ ಮುಂಜಾನೆ ಅತ್ಯಂತ ಪ್ರಶಸ್ತಕಾಲ. ಯೋಗಾಭ್ಯಾಸದ ಮೊದಲು ಸ್ನಾನ ಮಾಡಿ ಶುಭ್ರ ದೇಹ ಮತ್ತು ಮನಸ್ಸಿನಿಂದ ಯೋಗಾಭ್ಯಾಸ ತೊಡಗಬೇಕು. ಅದರಲ್ಲೂ ತಣ್ಣೀರಿನ ಸ್ನಾನ ಅತ್ಯಂತ ಯೋಗ್ಯ. ಯೋಗವೇಂದರೆ ದೇಹ ಆತ್ಮ ಮತ್ತು ಮನಸ್ಸಿನ ಸಂಯೋಗವಾಗಿರುತ್ತದೆ. ಹಾಗಾಗಿ ಈ ಮೂರು ಅದಕ್ಕೆ ಸಿದ್ಧವಾಗಿರಬೇಕು. ಸ್ನಾನ ಮಾಡಿದಾಗ ನಮ್ಮ ದೇಹದಲ್ಲಿ ರಕ್ತಸಂಚಾರ ಸುಗಮವಾಗುವುದರಿಂದ ನರಗಳು ಕಾರ್ಯಪ್ರವೃತ್ತವಾಗುತ್ತವೆ. ಇದರಿಂದ ಯಾವುದೇ ಉತ್ತಮ ಕೆಲಸ ಮಾಡುವಾಗಲೂ ನಾವು ಸ್ನಾನ ಮಾಡಿ ತೊಡಗುವುದರಿಂದ ಯೋಗದಂತಹ ಬದುಕನ್ನು ನಿರ್ಮಿಸುವ ಕಾರ್ಯ ಸ್ನಾನದಿಂದಲೇ ತೊಡಗಬೇಕು. ಯಾವುದೇ ಕೆಲಸವಿದ್ದರೂ ಮುಂಜಾನೆ ಎದ್ದು ಮೊದಲಿಗೆ ಸ್ನಾನ ಮಾಡಿದಾಗ ಆದಿನದ ಶುಭಾರಂಭವಾಗುತ್ತದೆ. ಹೀಗೆ ಮಾಡಿದಾಗ ಬ್ರಾಹ್ಮೀ ಮುಹೂರ್ತದ ಸದ್ವಿನಿಯೋಗವಾಗುತ್ತದೆ. ಮುಂಜಾನೆಯ ಶಾಂತ ಪರಿಸರದ ಮೌನವನ್ನು ತಾವು ಮೌನವಾಗಿದ್ದುಕೊಂಡು ಅನುಭವಿಸಬೇಕು. ಸಾಮಾನ್ಯವಾಗಿ ಮುಂಜಾನೆ ಏಳುವುದು ಮುಖ್ಯವಲ್ಲ. ಎದ್ದ ನಂತರ ನಮ್ಮ ವರ್ತನೆ ಚಟುವಟಿಕೆ ಹೇಗಿರುತ್ತದೆ ಎಂಬುದು ಮುಖ್ಯ. ಮುಂಜಾನೆ ಏಳುವಾಗ ಉಳಿದವರು ನಿದ್ರಿಸುತ್ತಿದ್ದಾರೆ ಎಂಬ ಸ್ವಯಂ ಪ್ರಜ್ಞೆ ಇದ್ದರೆ ನಮಗೆ ಶಾಂತ ಮೌನವನ್ನು ಅನುಭವಿಸುವುದಕ್ಕೆ ಸಾಧ್ಯವಾಗುತ್ತದೆ. ಮನಸ್ಸಿನಲ್ಲಿ ಉದ್ವಿಗ್ನತೆ ಇದ್ದರೆ ಅದನ್ನು ದೂರ ಮಾಡುವುದಕ್ಕೆ ಸಾಧ್ಯವಾಗುತ್ತದೆ.
ಯೋಗಾಭ್ಯಾಸವನ್ನು ಖಾಲಿ ಹೊಟ್ಟೆಯಲ್ಲಿ ಮಾಡಬೇಕು. ಅದಕ್ಕೆ ಮುಂಜಾನೆ ಅತ್ಯಂತ ಸೂಕ್ತ. ಆಹಾರ ಸೇವಿಸಿದರೆ ಕನಿಷ್ಠವೆಂದರೂ ಆರು ಏಳು ಘಂಟೆಯ ನಂತರ ಮಾಡಬೇಕು. ಆಹಾರ ಸೇವಿಸಿ ಆಸನ ವ್ಯಾಯಾಮಗಳನ್ನು ಮಾಡಿದರೆ ಜೀರ್ಣಾಂಗದ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ಹಾಗಾಗಿ ಮಧ್ಯಾಹ್ನದ ನಂತರ ವ್ಯಾಯಾಮ ಅಥವಾ ವಾಕಿಂಗ್ ಮಾಡುವುದು ಅಷ್ಟು ಸೂಕ್ತವಲ್ಲ. ಇದು ದೀರ್ಘ ಕಾಲದಲ್ಲಿ ದೇಹದ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ಯೋಗವೆಂದರೆ ದೇಹವನ್ನು ದಂಡಿಸುವ ಕ್ರಿಯೆಯಲ್ಲ. ದೇಹದಂಡನೆ ಒಂದು ರೀತಿಯಲ್ಲಿ ಹಿಂಸೆಯನ್ನು ಪ್ರಚೋದಿಸುತ್ತದೆ. ದೇಹ ದಂಡನೆಯಲ್ಲ. ಸರಿಯಾದ ಕ್ರಮದಲ್ಲಿ ದೇಹದ ಪೋಷಣೆ ಯೋಗದಲ್ಲಿದೆ. ಕಠಿಣ ವ್ಯಾಯಾಮ ಮಾಡಿದರೆ ಹೆಚ್ಚು ಪರಿಣಾಮ ಎಂಬ ಭ್ರಮೆಯಿಂದ ಹೊರಬರಬೇಕು. ಕೇವಲ ಹನೈದು ಇಪ್ಪತ್ತು ನಿಮಿಷಗಳ ಸರಳ ಆಸನಗಳ ವ್ಯಾಯಾಮ ಸಾಕಾಗುತ್ತದೆ. ಇಪ್ಪತ್ತು ನಿಮಿಷಗಳ ಆಸನಗಳನ್ನು ಮಾಡಬೇಕು. ಮತ್ತು ಇದಕ್ಕೆ ಕ್ರಮಬದ್ದವಾದ ಉಸಿರಾಟ ಅತೀ ಅಗತ್ಯ. ಒಂದು ಆಸನದ ಭಂಗಿಯಲ್ಲಿ ಐದು ಬಾರಿಯಾದರೂ ದೀರ್ಘವಾದ ಉಸಿರಾಟ ಇರಬೇಕು. ಮತ್ತು ಈ ಉಸಿರಾಟದಲ್ಲಿ ಗಮನ ಹರಿಸಿ ದೇಹದ ಮೇಲಾಗುವ ಪರಿಣಾಮವನ್ನು ಅಗತ್ಯವಾಗಿ ಗಮನ ಹರಿಸಬೇಕು. ವ್ಯಾಯಾಮವಾದನಂತರ ಹತ್ತು ನಿಮಿಷ ಶವಾಸನ ಮಾಡಿ ವಿಶ್ರಾಂತಿಯನ್ನು ಪಡೆಯಬೇಕು. ಇದರಿಂದ ದೇಹದ ಎಲ್ಲಾ ಭಾಗಗಳಲ್ಲಿ ರಕ್ತ ಪರಿಚಲನೆ ಸಾಧ್ಯವಾಗುತ್ತದೆ. ವ್ಯಾಯಾಮದ ನಂತರ ಹದಿನೈದು ನಿಮಿಷ ಪ್ರಾಣಾಯಾಮವನ್ನು ಮಾಡಬೇಕು.
ಯೋಗಾಭ್ಯಾಸ ಮಾಡುವಾಗ ವಸ್ತ್ರ ಧಾರಣೆ ಅತ್ಯಂತ ಸರಳವಾಗಿರಬೇಕು. ದೇಹಕ್ಕೆ ಅಂಟಿಕೊಂಡು ಇರುವ ಬನಿಯನ್ ಅಂಗಿಯನ್ನು ಧರಿಸಬಾರದು. ಸಡಿಲವಾದ ವಸ್ತ್ರ ಧಾರಣೆಯಿಂದ ಯೋಗಾಭ್ಯಾಸ ಹೆಚ್ಚು ಸುಲಭವಾಗಿ ದೇಹದ ಬಾಗುವಿಕೆ ಅಥವಾ ದೇಹದ ಚಲನೆ ಸುಲಭ ಸಾಧ್ಯವಾಗುತ್ತದೆ. ಆಹಾರ ಕ್ರಮಗಳು ತುಂಬ ಸರಳವಾಗಿರಬೇಕು. ಊಟ ಅಹಾರಸೇವನೆಯಲ್ಲಿ ಸಮಯಪಾಲನೆ ಅತ್ಯಂತ ಅವಶ್ಯ. ಘನವಾದ ಆಹಾರ ಅಂದರೆ ಊಟ ಉಪಹಾರದ ನಂತರ ಹಣ್ಣು ಹಣ್ಣಿನ ರಸ ಸೇವಿಸಬಾರದು. ಇವುಗಳು ಬೇಗನೆ ಪಚನವಾಗುವ ಗುಣದಿಂದ ಇವುಗಳನ್ನು ಮೊದಲು ಸೇವಿಸಿದರೆ ಜೀರ್ಣ ಕ್ರಿಯೆಗೆ ಹೆಚ್ಚು ಸಹಕಾರಿಯಾಗಿರುತ್ತದೆ. ಊಟದ ನಂತರ ಹಣ್ಣು ಹಂಪಲು ಜ್ಯೂಸ್ ಪಾನೀಯ ಸೇವಿಸಿದರೆ ಜೀರ್ಣ ಕ್ರಿಯೆಯಲ್ಲಿ ಗಂಭೀರ ಪರಿಣಾಮ ಉಂಟಾಗಿ ಮಲಬದ್ದತೆಯಂತಹ ಸಮಸ್ಯೆ ಉಂಟಾಗುತ್ತದೆ. ಮಲ ಬದ್ದತೆಯ ಸಮಸ್ಯೆ ಇರುವವರು ಆಹಾರ ಸೇವನೆಯಲ್ಲಿ ಹೆಚ್ಚು ಎಚ್ಚರ ವಹಿಸಬೇಕು. ಊಟ ಆಹಾರ ಸೇವನೆಯನಂತರ ನೀರು ಚಹ ಕಾಫಿಯಂತಹ ಪಾನೀಯ ಸೇವನೆ ಸರ್ವಥಾ ಸಲ್ಲದು. ದೇಹದ ಎಲ್ಲ ಚಟುವಟಿಕೆಗಳಿಗೆ ಹೊಟ್ಟೆಯ ಪಚನ ಕ್ರಿಯೆಯು ಸಮರ್ಪಕವಾಗಿರಬೇಕಾಗಿರುವುದು ಅತ್ಯಂತ ಅವಶ್ಯ. ಇದು ಸರಿಯಿಲ್ಲದೇ ಇದ್ದರೆ ಬೊಜ್ಜು ಕರಗುವುಕೆ ಸಾಧ್ಯವಾಗದೇ ದೇಹದ ಭಾರ ಹೆಚ್ಚಾಗುವುದು ಸರ್ವೇ ಸಾಮಾನ್ಯ. ಸೂರ್ಯಾಸ್ತದ ನಂತರ ಅಧಿಕ ಆಹಾರಸೇವನೆಯನ್ನು ದೂರವಿರಿಸಬೇಕು. ರಾತ್ರಿ ಮಲಗುವ ಒಂದೆರಡು ಘಂಟೆಯ ಮೊದಲು ಆಹಾರ ಸೇವನೆ ಪೂರೈಸಿಕೊಳ್ಳಬೇಕು. ರಾತ್ರಿಯ ಆಹಾರದಲ್ಲಿ ತಾಮಸೀಗುಣದ ಆಹಾರವನ್ನು ವರ್ಜಿಸಬೇಕು. ಆಡಂಬರದ ಜೀವನ ಶೈಲಿಯಿಂದ ದೂರವಿದ್ದರೆ ಮನಸ್ಸಿನ ಅತೃಪ್ತಿ ಅಸಹನೆ ದೂರವಾಗುತ್ತದೆ. ಆದಷ್ಟು ನಮ್ಮ ಸ್ವಂತ ಕೆಲಸಗಳಿಗೆ ಪರಾವಲಂಬಿಗಳಾಗಿರಬಾರದು. ನಮ್ಮ ಕೆಲಸಗಳನ್ನು ಸ್ವಯಂ ನಾವೇ ಮಾಡುವ ಮನೋಭಾವ ರೂಪಿಸಿಕೊಳ್ಳಬೇಕು.
ಯೋಗಾಭ್ಯಾಸವೆಂದರೆ ಚಿತ್ತ ವೃತ್ತಿ ನಿರೋಧಃ., ಮನಸ್ಸನ್ನು ನಿಯಂತ್ರಿಸುವುದು. ಮನಸ್ಸಿನ ಎಲ್ಲಾ ಭಾವನೆ ಮತ್ತು ಚಿಂತನೆಗಳನ್ನು ನಿಯಂತ್ರಿಸುವುದು. ದಿನವಿಡೀ ಮಾಡುವ ಆಹಾರ ಸೇವನೆ ಶಿಸ್ತು ಬದ್ದವಾಗಿರಬೇಕು. ಯೋಗಾಭ್ಯಾಸವೆಂದರೆ ಕೇವಲ ಒಂದು ಘಂಟೆಯ ವಿವಿಧ ವ್ಯಾಯಾಮ ಪ್ರಾಣಾಯಾಮವಲ್ಲ. ದಿನದ ಇಪ್ಪತ್ತನಾಲ್ಕು ಘಂಟೆಯೂ ಯೋಗಾಭ್ಯಾಸ ನಿರಂತರವಾಗಿರುತ್ತದೆ. ದಿನವಿಡೀ ನಮ್ಮ ಚಟುವಟಿಕೆ ವ್ಯವಹಾರ ಮತ್ತು ಮನಸ್ಥಿತಿ ಇವುಗಳು ಮುಂಜಾನೆಯ ಯೋಗಾಭ್ಯಾಸದಲ್ಲಿ ಗಣನೀಯ ಪರಿಣಾಮವನ್ನು ಬೀರುತದೆ. ಹಾಗಾಗಿ ನಮ್ಮ ದೈನಂದಿನ ಜೀವನ ಕ್ರಮ ಅತ್ಯಂತ ಸೂಕ್ತವಾಗಿರಬೇಕು. ವ್ಯವಹಾರಗಳಲ್ಲಿ ಪ್ರಾಮಾಣಿಕತೆ ಇರಬೇಕು. ಮನಸ್ಸು ಶುದ್ಧವಾಗಿರಬೇಕು. ಒಂದು ಘಂಟೆಯ ಯೋಗಾಭ್ಯಾಸವು ದಿನದ ಎಲ್ಲ ಚಟುವಟಿಕೆಯನ್ನೂ ಜೀವನ ಕ್ರಮವನ್ನು ನಿಯಂತ್ರಿಸುತ್ತದೆ. ಹಾಗಿದ್ದಲ್ಲಿ ಮಾತ್ರವೇ ಯೋಗಾಭ್ಯಾಸ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಕೇವಲ ಅರೋಗ್ಯದ ದೃಷ್ಟಿಯಿಂದ ಯೋಗಾಭ್ಯಾಸವನ್ನು ಮಾಡಬಾರದು. ಆರೋಗ್ಯ ಎಂಬುದು ಯೋಗ ಜೀವನದ ಪ್ರಯಾಣದಲ್ಲಿ ಸಿಗುವ ಒಂದು ನಿಲ್ದಾಣವಾಗಿರುತ್ತದೆ. ಯೋಗ ಜೀವನದ ಗುರಿ ಬೇರೆಯೇ ಆಗಿರುತ್ತದೆ. ಆ ಗುರಿ ಯಾವುದು ಎಂದು ತಿಳಿಯುವುದೇ ಯೋಗ ಜೀವನದ ರಹಸ್ಯ. ಯೋಗಭ್ಯಾಸವೆಂದರೆ ಅದೊಂದು ಜೀವನ ಶೈಲಿ. ಅದು ಕಠಿಣವೂ ಅಲ್ಲ. ಸರಳವೂ ಅಲ್ಲ. ನಮ್ಮ ಮನೋಭಾವನೆ ಅದನ್ನು ನಿರ್ಧರಿಸುತ್ತದೆ.
ಪ್ರಕೃತಿಯ ದೇವತೆ ಸೂರ್ಯನಿಂದ ತೊಡಗಿ ಪ್ರಕೃತಿಯಲ್ಲಿ ಎಲ್ಲವೂ ಒಂದು ನಿಯಮದಲ್ಲಿ ಹೊಂದಿಕೊಂಡಿರುತ್ತವೆ. ಮುಂಜಾನೆ ಉದಯಿಸುವ ಸೂರ್ಯ ಅಸ್ತಮಿಸುವಲ್ಲಿವರೆಗೆ ಒಂದು ನಿಯಮದ ಸಂಬಂಧವಿರುತ್ತದೆ. ಗಿಡ ಬಳ್ಳಿ ಪ್ರಾಣಿ ಪಕ್ಷಿಗಳೆಲ್ಲವೂ ತನ್ನದೇ ಆದ ಪ್ರಕೃತಿಯಲ್ಲಿ ನಿಯಮದಲ್ಲೇ ಜೀವಿಸುತ್ತವೆ. ಮನುಷ್ಯನೂ ಇದೇ ಪ್ರಕೃತಿಯ ನಿಯಮಕ್ಕೆ ಹೊಂದಿಕೊಂಡಿರಬೇಕು. ಯೋಗಾಭ್ಯಾಸವೆಂದರೆ ಪ್ರಕೃತಿಯ ನಿಯಮದ ಜತೆಗೆ ಇರುವ ಜೀವನ ಶೈಲಿಯಾಗಿರುವುದರಿಂದ ಯೋಗಾಭ್ಯಾಸದಲ್ಲಿ ಯಮ ನಿಯಮವೆಂಬುದು ಖಡ್ದಾಯವಾಗಿ ಅನುಸರಿಸಬೇಕಾಗುತ್ತದೆ. ಯಮವೆಂದರೆ ಸಾರ್ವತ್ರಿಕವಾಗಿ ಅಂದರೆ ಸಾವರ್ಜನಿಕವಾಗಿ ಅನುಸರಿಸಬೇಕಾಗದ ನೈತಿಕ ಸೂತ್ರಗಳು. ಅಂದರೆ ಸಾರ್ವಜನಿಕರಿಗಾಗಿ ಅನುಸರಿಲೇ ಬೇಕಾದ ಸೂತ್ರಗಳು. ಅಹಿಂಸಾ ಸತ್ಯ ಆಸ್ತೇಯ ಬ್ರಹ್ಮಚರ್ಯ ಅಪರಿಗ್ರಹ. ಇನ್ನುನಿಯಮವೆಂದರೆ ನಾವು ನಮಗಾಗಿ ಖಾಸಗಿಯಾಗಿ ಅನುಸರಿಲೇಬೇಕಾದ ಸೂತ್ರಗಳು, ಶೌಚ, ಸಂತೋಷ ಅಂದರೆ ತೃಪ್ತಿ, ತಪಸ್ಸು ಸ್ವಾಧ್ಯಾಯ. ಇವುಗಳೆಲ್ಲ ಯೋಗಾಭ್ಯಾಸದಲ್ಲಿ ಆರಂಭದಲ್ಲೆ ಅನುಸರಿಲೇ ಬೇಕಾದವುಗಳಾಗಿರುತ್ತವೆ. ಒಂದರ್ಥದಲ್ಲಿ ಯೋಗಾಭ್ಯಾಸದಿಂದ ಯಮನನ್ನು ಒಂದು ನಿಯಮಕ್ಕೆ ಅಳವಡಿಸುವಂತೆ ಯಮನೂ ನಮ್ಮ ಬದುಕಿನಲ್ಲಿ ನಿಯಮಕ್ಕೆ ಅನುಸಾರವಾಗಿರುವಂತೆ ಎಲ್ಲವೂ ನಿಯಮ ಬದ್ದವಾಗಿರುತ್ತದೆ.

.jpg)









