Saturday, January 31, 2026

ಅಜ್ಞಾನದ ಅರಿವು

ಬ್ಯಾಂಕ್ ಲೆಕ್ಕ ಪರಿಶೋಧನೆಗೆ ಹೋಗಿರುವಾಗ ಅಲ್ಲಿ ಚಹ ಕಾಫಿ ತರಿಸಿದ್ದರು. ನನಗೆ ಬಹಳ ಒತ್ತಾಯ ಮಾಡಿ ಕೊಟ್ಟರು. ನಾನು ಈ ರೀತಿಯ ಪಾನೀಯ ಸೇವನೆಯ ಅಭ್ಯಾಸವನ್ನು ಬಿಟ್ಟು ದಶಕಗಳೇ ಕಳೆದಿದೆ. ನಾನು ಬೇಡ ಎಂದು ನಿರಾಕರಿಸಿದೆ. ಕೆಲವರಿಗೆ ಅದೊಂದು ರೀತಿಯ ಮನೋಭಾವ. ನನಗೆ ಅಭ್ಯಾಸ ಇಲ್ಲ ಎಂದರೂ ಬಿಡದೆ ಮತ್ತೂ ಒತ್ತಾಯ ಮಾಡಿದರು. ಅವಶ್ಯಕ ಇಲ್ಲದೇ ಇರುವುದನ್ನು ಸೇವಿಸುವುದಕ್ಕೆ ಒಂದೋ ಅದರ ಬಗ್ಗೆ ತೀವ್ರವಾದ ಆಶೆ ಹುಟ್ಟಬೇಕು. ಇಲ್ಲ ಅದು ತೀರ ಅನಿವಾರ್ಯ ಎನಿಸಬೇಕು. ಇದೆರಡೂ ಇಲ್ಲದಿದ್ದರೆ ಯಾರದೋ ಒತ್ತಾಯಕ್ಕೆ ಅದನ್ನು ಒಪ್ಪಿಕೊಳ್ಳುವುದು ನನಗೆ ಸರಿ ಎನಿಸುವುದಿಲ್ಲ. ನಾನು ಮತ್ತೂ ನಿರಾಕರಿಸಿದೆ. ಅದರಲ್ಲೂ ಕಾಫಿ ಚಹ ಸೇವನೆ ಬಿಟ್ಟನಂತರ ನಾನು ಅನುಭವಿಸಿದ ನಿರಾಳತೆ ಅದು ನನಗೆ ಮಾತ್ರ ಅರಿವಿದೆ. ಅದನ್ನು ಹೇಳಿದೆ . ಆದರೆ ಅವರು ಮತ್ತೂ ಉಡಾಫೆಯಿಂದ ಒಂದು ಸಲ ತೆಗೆದುಕೊಂಡರೆ ಏನಾಗುತ್ತೇ ಅಂತ ಹೇಳಿದರು. ಒಂದು ಸಲ ಆದರೇನು? ಆಸಕ್ತಿ ಇಲ್ಲದೇ ಇದ್ದರೆ ಅದನ್ನು ಕುಡಿಯುವುದರಲ್ಲಿ ಅರ್ಥವಿಲ್ಲ. ನಾನು ಮತ್ತೂ ನಿರಾಕರಿಸಿದಾಗ ಅವರು ಮತ್ತೂ ಹೇಳಿದರು ಎಲ್ಲರೂ ಕುಡಿಯುತ್ತಾರೆ . ಇದು ಕುಡಿದದ್ದರಲ್ಲಿ ಏನು ? ನಾನು ಕಾಫಿ ಚಹ ಸೇವನೆಯ ದುಷ್ಪರಿಣಾಮವನ್ನು ಹೇಳುವುದಕ್ಕೆ ಅನಿವಾರ್ಯನಾದೆ. ಹಾಗೆ ಚರ್ಚೆ ನಡೆದು ಕೊನೆಯಲ್ಲಿ ಒಂದು ಸಲ ಅವರೆಂದರು...ಏನು ಸಾರ್, ಈಗ ಇದೆಲ್ಲ ಸಾಮಾನ್ಯ. ಬ್ರಾಹ್ಮಣರು ಮಾಂಸ ತಿನ್ನುವುದಿಲ್ಲ ಅಂತ ಇದ್ದರೂ ಹಲವರು ತಿನ್ನುವರಲ್ಲ  ಎನಾಯಿತು? ಕೆಲವರಿಗೆ ತಿನ್ನುವುದಿಲ್ಲ, ಅಭ್ಯಾಸವಿಲ್ಲ ಎಂದು ಇದ್ದರೆ ಅದನ್ನು ಕೆಲವರಿಗೆ ತಿನ್ನಿಸುವ ಹಟ. ತಿಳಿಸದೇ ಅದನ್ನು ಹೇಗಾದರೂ ಮಾಡಿ ತಿಳಿಯದಂತೆ ತಿನ್ನಿಸುವ ಚಪಲ.

ಹಲವು ಸಲ ಮೂಗು ಕತ್ತರಿಸಿಕೊಂಡವನ ಕಥೆಯೊಂದು ನೆನಪಾಗುತ್ತದೆ. ಮೂಗು ಕತ್ತರಿಸಿಕೊಂಡವನು ತನಗೆ ಸ್ವರ್ಗ ಕಾಣಿಸುತ್ತದೆ ಎಂದು ಹೇಳಿ ಸಿಕ್ಕ ಸಿಕ್ಕವರಲ್ಲಿ ಮೂಗು ಕತ್ತರಿಸಿಕೊಳ್ಳುವುದಕ್ಕೆ ಹೇಳಿದ. ನಂತರ ತನ್ನಂತೆ ಸ್ವರ್ಗ ಕಾಣಿಸುತ್ತದೆ ಎಂದು ಹೇಳುವುದಕ್ಕೆ ಹೇಳುತ್ತಿದ್ದನಂತೆ. ಅದೇ ರೀತಿ ಪ್ರತಿಯೊಬ್ಬರೂ ಮೂಗು ಕತ್ತರಿಸಿಕೊಂಡು ತನ್ನಂತೆ ಆಗಲಿ ಎಂದು ಅವನ ಉದ್ದೇಶ. ನಶೆಯಲ್ಲಿದ್ದವರಿಗೆ ಉಳಿದವರೂ ನಶೆಗೆ ಒಳಗಾಗಲಿ ಎಂಬ ಹಂಬಲವಿರುತ್ತದೆ. 

ಅದೇನು ಮನೋಭಾವ ಅಂತ ತಿಳಿಯದು. ಬ್ರಾಹ್ಮಣರು ನಿಷಿದ್ಧ ಎನ್ನುವುದನ್ನು ಮಾಡುತ್ತಾರೆ ಎನ್ನುವಾಗ ಅದು ಗಂಭೀರ ಸುದ್ದಿ ಎನ್ನಿಸುವುದು ಮತ್ತದು ಕುಹಕಕ್ಕೆ ಎರೆಯಾಗುವುದು ದೌರ್ಭಾಗ್ಯ. ಗಾಂಧಿವಾದಿಗಳು ಮದ್ಯ ಮಾಂಸ ಸೇವಿಸಿದರೆ ಅದು ಕುಹಕವಾಗುವುದಿಲ್ಲ, ಆದರೆ ಬ್ರಾಹ್ಮಣರಿಗೆ ಮಾತ್ರ ಯಾರೋ ಮಾಡಿದಾಕ್ಷಣ ಅದು ಸಂಪೂರ್ಣ ವರ್ಗವನ್ನೇ ಆಕ್ಷೇಪಿಸುವುದು ತಾತ್ಸಾರವಾಗುತ್ತದೆ.  ಎಲ್ಲೊ ಕೇಳಿದ ನೆನಪು ಮಹಾತ್ಮಾ ಗಾಂಧೀಜಿ ಮದ್ಯ ಮಾಂಸ ಈ ಎರಡರ ಕಡು ವಿರೋಧಿಯಾಗಿದ್ದರು. ಅವರ ಹೆಸರನ್ನು ನಿತ್ಯ  ಪಠಿಸುವವರು, ತಾವು ಗಾಂಧೀವಾದಿಗಳು ಎಂದು ತಮ್ಮನ್ನು ಗುರುತಿಸುವವರಿಗೆ ಮದ್ಯ ಮಾಂಸ ಸೇವನೆ ಗಾಂಧೀಜಿ ವಿರೋಧಿಸುತ್ತಿದ್ದರು ಎನ್ನುವುದು ಗಂಭೀರವಾಗುವುದಿಲ್ಲ. ಜಾತ್ಯಾತೀತ ರಾಜಕಾರಣದಲ್ಲಿ, ಮತದಾನಗಳಲ್ಲಿ ಜಾತಿಯೇ ಮುಖ್ಯವಾಗುವಾಗ ಅದು ಜಾತಿಭೇದ ಎಂದೆನಿಸುವುದಿಲ್ಲ. ಜಾತಿಯವನು ಹೇಗೂ ಇರಲಿ, ಅಪರಿಚಿತನಾದರೂ ಆತ ತಮ್ಮವ ಎಂದೆನಿಸುತ್ತಾನೆ. ಇಲ್ಲೆಲ್ಲ ಜಾತಿ ಎಂಬುದು ಅರ್ಹತೆಯಾದರೆ ಬ್ರಾಹ್ಮಣ ಎನ್ನುವಾಗ ಮಾತ್ರ ಜಾತಿಯ ಭೂತ ಎದುರು ಬರುತ್ತದೆ. ಅಷ್ಟಕ್ಕೂ ಬ್ರಾಹ್ಮಣ ಎಂಬುದು ಕೇವಲ ಶಬ್ದಾರ್ಥದ ಒಂದು ಪದವಿ. ಬ್ರಹ್ಮನನ್ನು ಅರಿತವನು ಬ್ರಾಹ್ಮಣನಾಗುತ್ತಾನೆ. ಹಾಗಂಟ ಬ್ರಾಹ್ಮಣ ಎಂದು ಕರೆಯುವಾಗಲೂ ಇದು ಗೌಣವಾಗಿಬಿಡುವುದು ವಿಪರ್ಯಾಸ. 

ಗಾಂಧೀಜಿ ಅಜೀವನಾದ್ಯಂತ ರಾಮ ಭಕ್ತರಾಗಿದ್ದರು. ರಾಮಾಯಣದಿಂದ ಪ್ರೇರಿತರಾಗಿ ಆ ತತ್ವಗಳನ್ನು ಸಾಕಷ್ಟು ಅಳವಡಿಸಿಕೊಂಡಿದ್ದರು. ಅದರೆ ಆಕ್ಷೇಪಿಸುವವರಿಗೆ ರಾಮಾಯಣ ಅಥವಾ ಶ್ರೀರಾಮ ಮಾತ್ರ ಆಕ್ಷೇಪಕ್ಕೆ ಕಾರಣನಾಗುತ್ತಾನೆ ಹೊರತು ಗಾಂಧೀಜಿ ಅಲ್ಲ. ವ್ಯಾಧ ಅನಾಗರಿಕನೊಬ್ಬ ವಾಲ್ಮೀಕಿಯಾಗಿ ಮಹಾ ಋಷಿಯಾಗಿ ಬದಲಾದ.  ಕ್ಷತ್ರಿಯನಾದ ಕೌಶಿಕ ಸಾಧನೆಯಿಂದ ಬ್ರಾಹ್ಮಣನಾಗಿ  ಬ್ರಹ್ಮಋಷಿಯಾದ. ಯಾರೂ ಹುಟ್ಟಿನಿಂದ ಶ್ರೇಷ್ಠರಾಗಿಲ್ಲ. ಆನಂತರ ಕರ್ಮದಿಂದ ಶ್ರೇಷ್ಠರಾಗಿ ಬದಲಾಗಿ ಹೋದರು. ಹುಟ್ಟಿನಿಂದ ಒದಗಿಬರುವುದು ಜಾತಿ. ಆನಂತರ ಬರಿಸುವುದು ವರ್ಣ. ವರ್ಣ ಎಂದರೆ ಬರಿಸುವುದು ಎಂದರ್ಥ. ಮಲಯಾಳಂ ಭಾಷೆಯಲ್ಲೂ ವರಣಂ ಎಂದರೆ ಬಾ. ಕರೆಸಿಕೊಳ್ಳುವುದು. ಹುಟ್ಟಿನಿಂದ ಇದ್ದ ಜಾತಿ ನಂತರ ವರ್ಣದಿಂದ ಬದಲಾದರೂ ವರ್ಣದ ನಿಜವಾದ ಬಣ್ಣ ತಿಳಿಯದೇ ಪೂರ್ವಜರನ್ನು ಶಪಿಸಿ ಬಿಡುವುದು ಮನುಷ್ಯ ಹುಟ್ಟುವ ಮೊದಲು ಗರ್ಭದ ಕತ್ತಲೆಯಲ್ಲಿದ್ದರೆ ಆನಂತರವೂ ಆ ಅಂಧಕಾರದಿಂದ ಹೊರಗೆ ಬಂದಿರುವುದಿಲ್ಲ.  ವ್ಯಾಧ್ಯ ವಾಲ್ಮೀಕಿ ಮಹರ್ಷಿಯಾದ, ಆತ ಮತ್ತೆ ಹತಾಶೆಯಿಂದ ಜಿಗುಪ್ಸೆಯಿಂದ ಪುನಃ ವ್ಯಾಧನಾಗಿ ಬದಲಾದನೇ ? ಇಲ್ಲ. ಅದೇ ರೀತಿ ಕೌಶಿಕ..ವಿಶ್ವಾಮಿತ್ರ ಮಹಾ ಬ್ರಾಹ್ಮಣನಾಗಿ ಬದಲಾದ, ಬ್ರಹ್ಮ ತೇಜೋ ಬಲಂ ಎಂದು ಬದಲಾದವನು ಅದೂ ಏನೂ ಅಲ್ಲ...ವರ್ಣ ಭೇದ ಅಂತ ಜಿಗುಪ್ಸೆಯಿಂದ ಪುನಃ ಕೌಶಿಕನಾಗಿ ರಾಜನಾಗಿ ಬದಲಾಗಿಲ್ಲ. ಅಂದರೆ ಬದಲಾಗಿ ಸಿದ್ಧಿಸಿದ ಪದವಿ ಅತ್ಯಂತ ಶ್ರೇಷ್ಠ. ವಿಪರ್ಯಾಸವೆಂದರೆ ಈಗ ಈ ಪದವಿಯೇ      ಅವಹೇಳನಕ್ಕೆ ಒಳಗಾಗುತ್ತದೆ. ಬ್ರಾಹ್ಮಣನಾಗಿರುವುದೇ ಅನಿಷ್ಟ ದುರ್ದೈವ. 

ತಮಗೆ ಸಿದ್ದಿಸಲಾಗದೇ ಇರುವುದರಲ್ಲಿ ಏನೋ ಒಂದು ಕೊರತೆಯನ್ನು ಕಾಣುವ ಒಂದು ಮಾತ್ಸರ್ಯವಿದೆ. ತಮ್ಮ ಅಸಮರ್ಥತೆಯನ್ನು ಅಸಾಧ್ಯ ವೃತ್ತಿಯ ಮೇಲೆ ಆರೋಪಿಸುವುದು. ಇದೊಂದು ಅಸಹಾಯಕತೆ. ಬ್ರಾಹ್ಮಣನಾಗಿ ಇರುವುದು ಕಷ್ಟ. ಬದುಕುವುದು ಕಷ್ಟ. ಅದಕ್ಕೆ ಅದನ್ನೇ ತಿರಸ್ಕರಿಸಿ ಅದರ ಘನತೆಯನ್ನೇ ಕಳೆದರೆ ತಾವು ಶ್ರೇಷ್ಠರಾಗುವ ಮನೋಭಾವ. ಎಂದೋ ಯಾರೋ ಅಜ್ಞಾನಿಗಳು ತಮ್ಮ ಸ್ವಾರ್ಥಕ್ಕೆ ಈ ಪದವಿಯನ್ನು ದುರ್ವಿನಿಯೋಗ ಮಾಡಿದ್ದರೆ ಇಂದು ಸಮೂಹವೇ ಅದನ್ನು ಮಾಡುತ್ತಿದೆ ಎಂದು ಕಾಣುವುದು ಒಂದು ರೀತಿಯ ಅಸಹಾಯಕತೆ. ಯಾರೋ ಕೆಲವರು ಭಯೋದ್ಪಾದಕರಾದರೆ ಇಡೀ ಸಮೂಹವನ್ನು ದೂಷಿಸುವುದು ತಪ್ಪು. ಅದೇ ರೀತಿ ಯಾರೋ ಎಸಗಿದ ಕೆಲಸಕ್ಕೆ  ಎಲ್ಲಾ  ಬ್ರಾಹ್ಮಣನನ್ನು ಹಳಿಯುವುದು ತಪ್ಪು ಎಂದು ಅನಿಸಬೇಕು. ಗಾಂಧೀಜಿಯ ಒಂದೆರಡು ಚಿಂತನೆಗಳು ನಮಗೆ ಸ್ವೀಕೃತ ಅಲ್ಲದೇ ಇರಬಹುದು. ಹಾಗೆಂದು ಗಾಂಧೀಜಿಯ ಹೋರಾಟ ತತ್ವಗಳು ಎಲ್ಲವನ್ನು ದೂಷಿಸುವುದು ಸರಿಯಲ್ಲ.  ಬ್ರಾಹ್ಮಣ ತತ್ವ ಅರಿವಾದರೆ ಬ್ರಹ್ಮ ಪದವಿಯ ಆ ತೇಜೋ ಬಲದ ಅರಿವಾಗಬಹುದು. ಜ್ಞಾನವನ್ನು ಅರಿಯುವ ಸಾಮಾರ್ಥ್ಯ ಇಲ್ಲದೇ ಇರಬಹುದು. ಆದರೆ ಅಜ್ಞಾನವನ್ನು ದೂರಮಾಡುವ ಅರಿವಾದರೂ ಇರಬೇಕು. 



 

Sunday, January 25, 2026

ಭಾವ ಒಂದೇ ಸಾಲದೆ?


ಅದೊಂದು ಪುಟ್ಟ ಮನೆ. ನಗರದ ಈಗಿನ ಮನೆ ಎಂದಮೇಲೆ ಕೇಳಬೇಕೆ. ಹಾಗೆ ಹೀಗೆ ಅಂತ ಒಂದು ಕಟ್ಟಡ ಇರುತ್ತದೆ. ಅದರಲ್ಲೇ ಹೊಂದಾಣಿಕೆಯ ಬದುಕು. ಅದೇ ಸ್ವರ್ಗ. ತೀರ ಬಡವನು ಕೂಡ ಘನ ಶ್ರೀಮಂತನಿಗಿಂತ ಕಡಿಮೆ ಇಲ್ಲದಂತೆ ಉಡುಪು ತೊಟ್ಟು ರಸ್ತೆಗೆ ಬಂದನೆಂದರೆ ...ಆತನ ಮನೆಯ ಬಗ್ಗೆ ಯಾರೂ ಯೋಚಿಸುವುದಿಲ್ಲ. ಇವನು ದೊಡ್ಡ ಧನಿಕನಿರಬೇಕು ಎಂದು ಭಾವಿಸುತ್ತಾರೆ. ಇಲ್ಲಿ ಎಲ್ಲವನ್ನು ಹೊರಾವರಣದಲ್ಲೇ ನಂಬಿಬಿಡುತ್ತಾರೆ.ಅದೇ ಸತ್ಯ.


ಮನೆ ಪುಟ್ಟದು. ಅಲ್ಲಿ ಪುಟ್ಟ ಸಂಸಾರ ಇರಬೇಕೆಂದೇನೂ ಇಲ್ಲ. ಅಪ್ಪ ಅಮ್ಮ ಅಜ್ಜ ಅಜ್ಜ ಮಕ್ಕಳು, ಅದಲ್ಲದೆ ಇನ್ನೂ ಕೆಲವರು ಇರಬಹುದು. ಮನೆ ಸಂಸಾರ ಎನ್ನುವಾಗ ಹಲವು ಸ್ನೇಹ ಕಲಹ ಎಲ್ಲವೂ ಸಮ್ಮಿಳಿತವಾಗಿರುತ್ತದೆ. ಅದೇ ಸಂಸಾರ. ಅದರಲ್ಲಿ ಕೆಲವೊಮ್ಮೆ ನಿಸ್ಸಾರ ವಿಚಾರಗಳೇ ಸ್ನೇಹಕ್ಕೂ ಕಲಹಕ್ಕೂ ಕಾರಣವಾಗಿರುತ್ತದೆ. ಇಲ್ಲಿಯೂ ಹಾಗೆ ಮನೆಯಲ್ಲೊಂದು ಚಪ್ಪಲಿ ಸ್ಟಾಂಡ್ ಇತ್ತು. ಕಲಹದ ನಿಸ್ಸಾರ ಕಾರಣಕ್ಕೆ  ಅದುವೇ ಕಾರಣವಾಗಿಬಿಟ್ಟಿತು. ವಿಷಯ ಇಷ್ಟೇ. ಸುಂದರವಾದ ಆ ಚಪ್ಪಲಿ ಸ್ಟಾಂಡ್ ಹೊಸದಾಗಿ ತಂದು ಇಡುವಾಗ ಅದರ ಸ್ಥಾನದ ಬಗ್ಗೆ ಒಂದು ಚರ್ಚೆ. ಮಗನಿಗೆ ಸೊಸೆಗೆ ಅದನ್ನು ಮನೆಯ ಬಾಗಿಲ ಎದುರೆ ಇಟ್ಟು ಬಿಡಬೇಕು. ಯಾಕೆಂದರೆ ಹೊರಗೆ ಹೋಗುವಾಗ ಬರುವಾಗ ಧರಿಸುವುದಕ್ಕೆ ಕಳಚಿ ಇಡುವುದಕ್ಕೆ ಅದು ಅನುಕೂಲವಾಗುತ್ತಿತ್ತು. ಆದರೆ ಮನೆಯಲ್ಲಿ ಹಿರಿಯರು ಇದಕ್ಕೆ ತದ್ವಿರುದ್ದ. ಚಪ್ಪಲಿ ಅದು ಋಣಾತ್ಮಕ ಅಂಶ. ಮನೆಯ ಬಾಗಿಲ ಎದುರು ಅದನ್ನು ಇರಿಸಬಾರದು. ಹಿರಿಯರು ಅದಕ್ಕೆ ಸರಿಯಾದ  ಕಾರಣಗಳನ್ನು ಕೊಡುತ್ತಾರೆ.  ಋಣಾತ್ಮಕ ಅಂಶಗಳು ಮನೆಯೊಳಗೆ ಬರುತ್ತವೆ. ಮನೆಯ ಒಳಗೆ ವಾಸಿಸುವವರ ಮನಸ್ಸು ಸದಾ ಗೊಂದಲ ಆಶಾಂತಿಯಿಂದ ಕೂಡಿರುತ್ತವೆ. ಮನೆಯಲ್ಲಿ ನಿಸ್ಸಾರ ವಿಚಾರಕ್ಕೂ ಸಂಘರ್ಷ ಕಲಹ ಏರ್ಪಡುತ್ತದೆ.  

ವಿಷಯ ಯೋಚಿಸಿದರೆ ಎರಡರಲ್ಲೂ ಸತ್ಯಾಂಶ ಇತ್ತು. ಎರಡನ್ನು ಹೌದು ಎಂದೇ ಸಮ್ಮತಿಸಬೇಕು. ಆದರೆ ಕಲಹದ ನಿಸ್ಸಾರ ಕಾರಣವು ಅಲ್ಲಿನವರ ಮನಸ್ಥಿತಿಯಿಂದ ಗಂಭೀರವಾಗುತ್ತದೆ. ಸುಂದರವಾದ ಬೆಲೆಬಾಳುವ ಚಪ್ಪಲಿ ಸ್ಟಾಂಡ್ ಈ ಕ್ಷುಲ್ಲಕ ಕಾರಣಕ್ಕೆ ಎಲ್ಲೋ ಇಡುವುದಕ್ಕೆ ಮಕ್ಕಳಿಗೆ ಸಮ್ಮತವಿಲ್ಲ. ಅದು ಬಾಗಿಲ ಮುಂದೆ ಇಡುವುದಕ್ಕೆ ಹಿರಿಯರಿಗೆ ಸಮ್ಮತವಿಲ್ಲ. ಇಡಬಾರದು ಎನ್ನುವುದಕ್ಕೆ ಕಾರಣ, ಅದು ಕಲಹಕ್ಕೆ ಕಾರಣವಾಗುತ್ತದೆ. ಇಲ್ಲೇನೋಡಿ ವಿಚಿತ್ರ ಇರುವುದು. ಇಡಬೇಕು ಇಡಬಾರದು ಎನ್ನುವುದೇ ಕಲಹಕ್ಕೆ ಕಾರಣವಾದರೆ ಅಲ್ಲಿ ಮನಸ್ಥಿತಿಯೇ  ಕಲಹಕ್ಕೆ ಕಾರಣ ಎಂದು ತಿಳಿಯುವುದಕ್ಕೆ ಅರಿವು ಇರಬೇಕು. ನಮ್ಮೊಳಗಿನ ಅಹಂ ದೂರವಿಡಬೇಕು. ಎಲ್ಲಿ ಅಹಂ ಇರುವುದೋ ಅಲ್ಲಿ ಮನಸ್ಸು ಶಾಂತವಾಗಿರುವುದಕ್ಕೆ ಸಾಧ್ಯವಿಲ್ಲ. ಅಹಂ ಎಂಬುದೇ ಮನಸ್ಸಿನಲ್ಲಿಋಣಾತ್ಮಕ ಧೋರಣೆಯನ್ನು ತುಂಬಿಸುವುದಕ್ಕೆ ಕಾರಣವಾಗುತ್ತದೆ. ಅಹಂ ಮನಸ್ಸಿನಲ್ಲಿ ಅತೃಪ್ತಿಯನ್ನು ತುಂಬಿಸುತ್ತದೆ. ನಮ್ಮ ಮನಸ್ಥಿತಿ ನಿರ್ಧಾರವಾಗುವುದೇ ಅಹಂ ನಿಂದ. ಇದು ದೂರವಾದರೆ ಗಂಭೀರವಾದ ಕಾರಣಗಳು ನಿಸ್ಸಾರವಾಗಿಬಿಡುತ್ತದೆ. ಕೊನೆಗೆ ಹಿರಿಯರು ಯೋಚಿಸಿದರು. ಇದೇ ಕಲಹಕ್ಕೆ ಕಾರಣವಾಗುವುದಾದರೆ, ಈ ಭಾವನೆಯಿಂದ ಗಳಿಸುವ ಲಾಭವಾದರೂ ಏನು ಎಂದು ಚಿಂತಿಸುತ್ತಾರೆ.  ಕೊನೆಗೆ ಚಪ್ಪಲಿ ಸ್ಟಾಂಡ್ ಮನೆಯ ಬಾಗಿಲ ಮುಂದೆಯೇ ಇಡಲಾಗುತ್ತದೆ. ಕಲಹಕ್ಕೆ ಕಾರಣವೇ ಮನಸ್ಸಿನ ಭಾವ ಎಂಬುದು ವಾಸ್ತವದ ಸತ್ಯ. 

ಭಾನುವಾರದ ಪ್ರಹಸನ

ವಾರಾಂತ್ಯ ಎಂಬುದು ಪುರುಷರಿಗೆ ಒಂದು ಸತ್ವ ಪರೀಕ್ಷೆಯಂತೆ. ನಿಜವಾಗಿ ಭಾನುವಾರ ಎಂಬುದು ವಾರದ ಆರಂಭವಾದರೂ, ಶನಿವಾರದ ಜತೆಗೆ ಇದೂ ವಾಡಿಕೆಯಲ್ಲಿ ವಾರಾಂತ್ಯವಾಗುವುದುಂಟು. ವಾರವಿಡೀ ಕೆಲಸದ ಕಛೇರಿ ವ್ಯಾಪಾರ ಮತ್ತೀತರ ಒತ್ತಡದಲ್ಲೇ ಕಳೆಯುವವರಿಗೆ ವಾರಾಂತ್ಯ ಆರಂಭ ಹಲವು ಸಲ ಸತ್ವ ಪರೀಕ್ಷೆಯಾಗಿಬಿಡುತ್ತದೆ. 


ಭಾನುವಾರದ ಒಂದು ದಿನ. ಬೆಳಗ್ಗೆ ಎಂದಿನಂತೆ ಬೇಗ ಏಳುವ ಅನಿವಾರ್ಯ, ಉಳಿದ ದಿನ ಬೇಗನೇ ಎಳುವ ಅಭ್ಯಾಸದಲ್ಲಿ ಭಾನುವಾರವೂ ಐದುಘಂಟೆಗೆ ಎಚ್ಚರವಾಗಿ ನಿತ್ಯದ ಅಭ್ಯಾಸದಂತೆ ಆ ಹೊತ್ತಗೆ ಜಲಬಾಧೆ  ತಡೆಯದೆ ಶೌಚಕ್ಕೆ ಹೋಗಿ ಅದನ್ನು ತೀರಿಸಿ ಇಷ್ಟು ಬೇಗ ಏನು ಮಾಡುವುದು ಎಂದು ಕೊಂಡು ಮತ್ತೆ ಪುಣಾ ಮಲಗುದು. ಚಕಿತರಾಗಬೇಡಿ, ಕೆಲವರ ಕನ್ನಡ ಹೀಗೆ. ಪುನಃ ಎಂಬುದು ಪುಣಾ ಆಗಿ ಬಿಡುತ್ತದೆ. ಅದು ತುಳುವಿನ ಪುಣ  ಅಂದರೆ ಹೆಣ. ಪುಣ ಮಲಗುವುದಲ್ಲದೇ ಮತ್ತೇ ಎನಾಗಬೇಕು ಎಂಬುದು ಒಂದು ಪ್ರಶ್ನೆ. ಐದುಗಂಟೆಗೆ ಎದ್ದು ಪುನಃ ಮಲಗಿ ಹೆಣದಂತೆ ಆಗಲು ಇಚ್ಛೆಇಲ್ಲದೆ ಹಾಸಿಗೆಯಲ್ಲೇ ಆಕಡೆ ಈಕಡೆ ಮಗ್ಗುಲು ಬದಲಾಯಿಸಿಕೊಂಡು ಅಂತೂ ತುಸು ಹೊತ್ತಿನಲ್ಲಿ ಸಾಕಪ್ಪಾಅಂತ ಎದ್ದುಬಿಡುವುದು.  ಹೆಂಗಸರಾದರೋ...ಭಾನುವಾರ ಸಿಕ್ಕಿದ್ದೇ ಒಂದು ಅವಕಾಶ ಎಂದು ಕೊಂಡು...ಭಾನುವಾರ ಬೆಳಗಿನ ತಿಂಡಿಯ ಗಡಿಬಿಡಿ ಇಲ್ಲ ಎಂದು ಕೊಂಡು ಬಾರದ ನಿದ್ದೆಯನ್ನು ಬರಿಸಿ  ಆರಾಮವಾಗಿ ಎಂಟು ಘಂಟೆಯ ತನಕ ಮುಸುಕಿನ ಒಳಗೆ ಅವಿತುಕೊಂಡು ಬಿಡುತ್ತಾರೆ. ಹಲವು ಸಲ ಶನಿವಾರ ತಡ ರಾತ್ರಿ ತಿಂದ ಗೋಬೀ ಮಂಚೂರಿ ಕಬಾಬ್ ರೋಟಿ ಕರಿಯ ಬೆಳ್ಳಳ್ಳಿ ಘಮಲು ಬೆಳಗೆ ಹುಳಿತೇಗಿನ ಜತೆಗೆ ವಾಪಾಸು ಬಂದು ಶೌಚಾಲಯದ ವಿಶ್ರಾಂತಿ ಸಮಯವನ್ನು ದೀರ್ಘಗೊಳಿಸುತ್ತದೆ. ಈಗಂತೂ ಅಲ್ಲಿಗೂ ಮೊಬೈಲು ತೆಗೆದುಕೊಂಡು ಹೋಗಿ ವಾಟ್ಸಾಪ್ ಗ್ರೂಪ್ ಗಳಲ್ಲಿ ಹರಿದು ಹಂಚಿ ಹೋದ ಪೋಟೋ ವಿಡಿಯೋಗಳನ್ನು ನೋಡಿ, ನೋಡದೇ ಉತ್ತರಿಸದೇ ಹೋದ ಸಂದೇಶಗಳಿಗೆ ಪ್ರತಿಕ್ರಿಯಿಸುವ ಕೆಲಸದ ನಡುವೆ ಶೌಚ ಆಗಿದೆಯೋ ಇಲ್ಲವೋ ಎಂಬ ಅರಿವೇ ಇರುವುದಿಲ್ಲ. ಮತ್ತೂ ಬಾರದ ಬಸ್ಸಿಗೆ ನಿಲ್ದಾಣದಲ್ಲಿ ಕಾದಂತೆ ಬಹಳ ಹೊತ್ತು ಕಳೆದ ನಂತರ ಛೇ ಇನ್ನು ಬರುವುದಿಲ್ಲ ಅಂತ ಎದ್ದು ಹೊರಗೆ ಬರುವುದು ಭಾನುವಾರದ ಸಾಮಾನ್ಯ ಬೆಳಗಿನ ಕ್ರಿಯಾಭಾಗವಾಗಿರುತ್ತದೆ. 

ಆ ಭಾನುವಾರವೂ ಹಾಗೇ ಬೆಳಗ್ಗೆ ಹಾಗೋ ಹೀಗೋ ಉಪಾಹಾರ,  ಹಲವು ಸಲ ಮೊದಲ ದಿನ , ರಾತ್ರಿಗೆ ಮನೆಯಲ್ಲಿ ಯಾರೂ ಉಟ ಮಾಡದ ಕಾರಣ ಅನ್ನ ಉಳಿದಿರುತ್ತದೆ. ಹಾಗಾಗಿ ಚಿತ್ರಾನ ಉಪ್ಪಿಟ್ಟು ಖಾಯಂ ತಿಂಡಿಯಾಗಿರುತ್ತದೆ. ಅದನ್ನು ಹನ್ನೊಂದುಘಂಟೆಗೆ ಹೇಗೋ ನುಂಗಿ ಬೆಳಗಿನ ಹರಕೆ ತಡವಾಗಿ ಸಂದಾಯವಾಗುತ್ತದೆ. ನಂತರ ಮಧ್ಯಾಹ್ನದ ತನಕ, ವಾರದಲ್ಲಿ ಬಿಟ್ಟು ಉಳಿದ ಕೆಲಸಗಳು , ಹೆಚ್ಚಿನ ಸಮಯ, ಹಳೆಯ ಬಟ್ಟೆ ಹುಡುಕಿ ಸ್ವಛ್ಚ ಮಾಡುವುದು, ತೀರಾ ಮೂಲೆಯಲ್ಲಿ ಸಜ್ಜದಲ್ಲಿದ್ದ ಕಸ , ಗುಜರಿಗಳನ್ನು ವಿಲೇ ವಾರಿ ಮಾಡುವುದು ಇದೇ ಆಗಿ ಬಿಡುವುದುಂಟು. ಅಥವಾ ಏನೂ ಕೆಲಸ ಮಾಡದೇ ಮೊಬೈಲ್ ರೀಲ್ಸ್ ನೋಡುತ್ತಾ ಕಾಲ ಕಳೆವಾಗ ಹಂಡತಿಯ ಕಿರಿ ಕಿರಿ, ಈ ಪ್ರಾಣಿ ಒಂದು ಸುಮ್ಮನೇ ಕುಳಿತಿರುವ ಭಾವದಲ್ಲಿ ಅವರ ವಕ್ರದೃಷ್ಟಿಗೆ ಎರವಾಗಿ ಕುಳಿತಿರಲಾಗದೇ ಏನೋ ಒಂದು ಮಾಡುವುದುಂಟು. ಹಾಗೂ ಹೀಗೂ ಮಧ್ಯಾಹ್ನ ಊಟ ...ಬೆಳಗಿನ ಉಪಾಹಾರ ತಡವಾಗಿ ಆಗಿರುವುದರಿಂದ...ಹಸಿವಿಲ್ಲದೇ ಇದ್ದರೂ ಊಟಮಾಡಿ ಇಂದು ಭಾನುವಾರ ಎಂಬ ಭಾವದಲ್ಲಿ ಹಾಗೇ ಸೋಫಾದಲ್ಲಿ ಒಂದು ಕುಳಿತು ಮತ್ತೆ ಪುನಃ ಮೊಬೈಲ್ ರೀಲ್ಸ್ ತೀಡಿ ತೀಡಿ ನೋಡುತ್ತಾ ಇರುವುದು. ದ್ರೌಪದಿಯ ಸೀರೆಗಾದರೂ ಒಂದು ತುದಿಯಂಚು ಸಿಗಬಹುದು. ಆದರೆ ಈ ರೀಲ್ಸಗಳಿಗೆ ಅಂತ್ಯವೆಂಬುದೇ ಇಲ್ಲ. ಒಂದರ ನಂತರ ಒಂದು ...ನೋಡಿ ನೋಡಿ ಕಣ್ಣೆ ಸುಸ್ತಾಗಿ ತಲೆತುಂಬ ಬೇರೇ ಎನೂ ಇಲ್ಲದೇ ಈ ರೀಲ್ಸ್ ಗಳೇ ತುಂಬಿಬಿಡುತ್ತವೆ. 

ಸಾಯಂಕಾಲ ಏನು?  ಮತ್ತದೇ ಎನು ಮಾಡುವುದು. ಮೊಬೈಲ್ಸ್ ರೀಲ್ ನೋಡಿ ನೋಡಿ ಸಾಕಾಗಿರುತ್ತದೆ. ಮಾಡುವುದಕ್ಕೆ ಏನೂ ಇರುವುದಿಲ್ಲ ಸಮಯ ಕಳೆಯಬೇಕಲ್ಲ. ಇನ್ನು ನಿದ್ದೆ ಮಾಡಿದರೆ ರಾತ್ರೆಯ ಬಾರದ ನಿದ್ದೆ ಹಟ ಹಿಡಿದರೆ ಅಂತ ಭಯವಾಗುತ್ತದೆ. ಹಾಗೂ ಹೀಗೂ ಹೊತ್ತು ಸರಿದಾಗ ಹೆಂಡತಿ ಹಾಗೇ ಮಲ್ಲೆಶ್ವರಂ ಬಜಾರ್ ಗೆ ಹೋಗಿ ಬರೋಣ ಅಂತ ಮಕ್ಕಳ ಜತೆ ಹೊರಡುತ್ತಾಳೆ. ಅದು ಪ್ರತಿ ಭಾನುವಾರದ ಅಭ್ಯಾಸ. ಮೊದೆಲೆಲ್ಲ ಊರಲ್ಲಿ ಬಳೆ ಸರ ಕೊಳ್ಳಲು  ವರ್ಷದ ಯಾವುದೋ  ಜಾತ್ರೆ ಸಂತೆಗಾಗಿ ಕಾದುಕುಳಿತಿರುತ್ತಿದ್ದರು. ಈಗ ಹಾಗಿಲ್ಲ. ಮನೆಯಿಂದ ಬೀದಿಗೆ ಇಳಿದರೆ ...ಮಲೆಶ್ವರಂ ಎಂಟನೇ ಅಡ್ಡರಸ್ತೆಗಳಂತೆ ಬೇಕಾದಷ್ಟು ರಸ್ತೆಗಳು ಇರುತ್ತವೆ. ಅಂಗಡಿಯೋ ಬೀದಿ ಬದಿಯ ಅಂಗಡಿಯೋ ವೆತ್ಯಾಸವೇ ಇಲ್ಲದಂತೆ ಅದೂ ಇದೂ ಹರಡಿ ಹೆಂಗಳೆಯರ ಚಿತ್ತ ಸೆಳೆಯುವುದಕ್ಕೆ ಹಲವು ಅವಕಾಶಗಳು ತೆರೆದಿರುತ್ತವೆ.  ಸಾಯಂಕಾಲವಾದೊಡನೆ ಮನೆಯಲ್ಲಿ ಕುಳಿತು ಏನು ಮಾಡುವುದು ಸುಮ್ಮನೇ ಹಂಡತಿಯ ಜತೆಗೆ ಒಂದಷ್ಟು ಹೊತ್ತು ಕಳೆದ ಹಾಗಾಗುತ್ತದೆ ಎಂದು ಕೊಂಡು ಹೊರಟು ಬಿಡುವುದು. ಅಂಗಡಿಯಿಂದ ತರುವುದಕ್ಕೆ ಏನೂ ಇರುವುದಿಲ್ಲ. ಸುಮ್ಮನೇ ತಿರುಗುವುದು...ಅಷ್ಟೇ . ತಿರುಗಿ ನೊಡುವುದಕ್ಕೇನು ಟಿಕೆಟ್ ಕೊಡಬೇಕಾಗಿಲ್ಲವಲ್ಲ. ಮಾಲ್ ಸುತ್ತಾಡಿ ಮೆಲೆ ಕೆಳಗೆ ಹತ್ತಿ ಇಳಿಯುವುದು ಪರಿಸರ ಎಲ್ಲ ನೋಡಿಕೊಂಡು ಬಂದು ಬಿಡುವುದು ಅಂತ ಹೆಂಡತಿ ಮಕ್ಕಳ ಜತೆಗೆ ಬೈಕ್ ಅಥವಾ ಕಾರು ತೆಗೆದುಕೊಂಡು ಹೊರಟು ಬಿಡುವುದು.  ಒಂದಿಷ್ಟು ಪೆಟ್ರೋಲ್ ಖರ್ಚು ಮಾತ್ರ ಅಂತ ನಿರೀಕ್ಷೆ ಇರುತ್ತದೆ. ಹೆಂಡತಿ ಹೋಗುವಾಗ ಜತೆಯಲ್ಲೇ ಹೋಗುವುದು. ಏನಾದರೂ ಅವರೇ ಕೊಂಡುಕೊಳ್ಳುತ್ತಾರೆ ಅಂತ ಸುಮ್ಮನೇ ಹೊರಟು ಬಿಡುತ್ತಾರೆ. 

ಭಾನುವಾರ ಬಂದರೆ ರಸ್ತೆ ಮಾಲ್ ಅದಕ್ಕಾಗಿಯೇ ಪೂರ್ವ ಸಿದ್ಧತೆ ನಡೆಸಿರುತ್ತಾರೆ. ಎಂದಿನಂತೆ ಹೆಂಡತಿ ಮಕ್ಕಳು ಎಲ್ಲ ಸೇರಿ  ಮೊದಲ ಅಂಗಡಿಯಿಂದ ತೊಡಗಿ ಪ್ರತಿ ಅಂಗಡಿಯ ಒಳಗೆ ಹೊಕ್ಕಿ ಒಂದು ಸುತ್ತು ಇಣುಕಿ ಕೊಳ್ಳುವುದಕ್ಕೆ ಏನೂ ಇಲ್ಲದಿದ್ದರೂ ಅಲ್ಲಿ ತೂಗಿ ಹಾಕಿರುವುದನ್ನು ಹಿಂದೆ ಮುಂದೆ ತಿರುಗಿಸಿ ನೋಡಿ ಹಾಗೇ ಹೊರಬರುವುದು.  ಜತೆಯಲ್ಲಿ  ಹೋದ ಗಂಡನಿಗೂ ಇದೇ ಕೆಲಸ. ಹಾಗೇ ಅಂಗಡಿ ಅಂಗಡಿ ಸುತ್ತಾಡುವುದು. ಹೆಂಡತಿ ಅಂಗಡಿ ಒಳಗೆ ಹೋದರೆ ಗಂಡು ಹೊರಗೆ ಹಾಗೇ ಹೊರಗೆ ನಿಂತು ರಸ್ತೆಯಲ್ಲಿ ಹೋಗಿಬರುವವರನ್ನು ನಿಂತು ನೋಡುವುದಲ್ಲದೇ ಬೇರೇನೂ ಕೆಲಸ ಇರುವುದಿಲ್ಲ. ಕೆಲವೊಮ್ಮೆ ಚಿಕ್ಕ ಮಕ್ಕಳು ಇದ್ದರೆ ಹೊರಗೆ ನಿಂತು ಅವರನ್ನು ಸಂಭಾಳಿಸಿ ನಿಯಂತ್ರಿಸುವುದೇ ಹರ ಸಾಹಸವಾಗಿಬಿಡುತ್ತದೆ. ಈ ಅಂಗಡಿಗಳೂ ಹಾಗೆ ನಮ್ಮ ಅಂದಿನ ನಮ್ಮ ಹಳ್ಳಿಯ ಅಂಗಡಿಯ ಹಾಗೆ ಅಲ್ಲ. ಎಷ್ಟು ಹೊತ್ತಾದರೂ ನಿಂತೇ ಇರಬೇಕು. ಕುಳಿತುಕೊಳ್ಳುವುದಕ್ಕೆ ಎಡೆಯಿಲ್ಲ. ಹಳ್ಳಿಯ ಅಂಗಡಿಗಳಲ್ಲಾದರೆ ಮೊದಲು ಒಂದೆರಡು ಬೆಂಚು ಇಡುತ್ತಿದ್ದರು. ಹೀಗೆ ಬರುವವರಿಗೆ ಕುಳಿತುಕೊಳ್ಳೂವುದಕ್ಕೆ ಒಂದಿಷ್ಟು ಹರಟೆ ಹೊಡೆದು ಊರ ಸುದ್ದಿ ಹಂಚುವುದಕ್ಕೆ ಈ ಬೆಂಚು ಬಹಳ ಸಹಕಾರಿಯಾಗುತ್ತಿತ್ತು. ಬಸ್ ಬರುವುದಕ್ಕೆ ತಂಗುದಾಣದಲ್ಲಿ ಕಾದುಕುಳಿತುಕೊಳ್ಳುವುದಕ್ಕಿಂತ ಈ ಅಂಗಡಿ ಬೆಂಚ್ ನಲ್ಲಿ ಕುಳಿತು ಅಂಗಡಿಯವನೊಂದಿಗೆ ಊರಸುದ್ದಿ ಮಾತನಾಡುತ್ತಾ ಅದರ ನಡುವೆ ಒಂದಷ್ಟು ಚಿಲ್ಲರೆ  ವ್ಯಾಪಾರ ಬಸ್ಸು ಬರುವುದನ್ನೆ ಮರೆತು ಬಿಡುತ್ತಿದ್ದರು.   ಇಲ್ಲಿ ಹಾಗಿಲ್ಲ ಎಷ್ಟು ಹೊತ್ತಾದರು ನಿಂತೇ ಇರಬೇಕು. ಕೊಳ್ಳುವುದಕ್ಕೆ ಏನು ಇಲ್ಲದಿದ್ದರೂ,  ನಿಂತು ನಿಂತು ಕಾಲು ನೋಯುವಾಗ  ಅಲ್ಲಿ ಇಲ್ಲಿ ಇಣುಕಿ ನೋಡಿ , ಕೊನೆಗೆ ಏನೂ ಬೇಡ ಅಂತ ಸುಮ್ಮನೇ ನಿಂತು ಅಂಗಡಿಯೊಳಗೆ ಹೊಕ್ಕ ಮನೆಯವರನ್ನು ಯಾವಾಗ ಬರುತ್ತಾರೋ ಅಂತ ಕಾದು ಕುಳಿತು ನೋಡುವುದಲ್ಲದೇ ಬೇರೇನೂ ಕೆಲಸವಿರುವುದಿಲ್ಲ. 

ಹಲವಾರು ಅಂಗಡಿ ಹತ್ತಿ ಇಳಿದು ಕತ್ತಲೆ ಆವರಿಸುವಾಗ , ಇನ್ನು ಹೋಗುವ ಅಂತ ಹೊರಡುವಾಗ ಅಂಗಡಿಯಿಂದ ಏನು ಕೊಂಡುಕೊಂಡದ್ದು ಎಂದು ನೋಡಿದರೆ ಕೆಲವು ರಬ್ಬರ್ ಬ್ಯಾಂಡ್, ಕ್ಲಿಪ್ಪು ಇಷ್ಟೇ ಹತ್ತೈವತ್ತು ರೂಪಾಯಿಯ ವಸ್ತುಗಳು.  ಕೊನೆಗೆ ಇಷ್ಟು ಹೊತ್ತು ನಿಂತು ಸುಸ್ತಾಗಿರುತ್ತದೆ. ಹೆಂಡತಿ ಮಕ್ಕಳು ಗಂಡಿನ ಮುಖ ನೋಡಿ ಪಾಪ ಸುಮ್ಮನೇ ಇದ್ದಾರೆ . ಏನಾದರೂ ತಿನ್ನುವ ಮನಸ್ಸಾಗುತ್ತದೆ. ಇಷ್ಟು ಹೊತ್ತು ಹೆಂಡತಿಯೇ ಖರ್ಚು ಮಾಡಿರುತ್ತಾಳೆ ಇನ್ನೂ ಆಕೆಯೇ ದುಡ್ಡು ಕೊಡಬಹುದು ಅಂತ ಯಾವುದೋ ಬೇಲ್ ಚಾಟ್ಸ್ ಅಂಗಡಿ ಮುಂದೆ ಬರುತ್ತಾರೆ. ಅದು ಇದು ಅಂತ ಆರ್ಡರ್ ಮಾಡಿ ನಿಂತುಕೊಂಡೊ ಅಲ್ಲಿದ್ದ ಸ್ಟೂಲ್ ಮೇಲೆ ಕುಳಿತು ತಿನ್ನುವುದಾಗುತ್ತದೆ. ಇಷ್ಟಾದರೂ ಸಿಕ್ಕಿತಲ್ಲಾ ಅಂತ ಗಂಡನಿಗೆ ಆಗುವ ಸಂತೋಷ ಕೇವಲ ಕ್ಷಣಿಕ. ಅದುವರೆಗೆ ಪ್ರತಿ ಅಂಗಡಿಯಲ್ಲೂ ತನ್ನ ವ್ಯಾನಿಟಿ ಬ್ಯಾಗಿನಿಂದಲೇ ದುಡ್ಡು ಕೊಡುತ್ತಿದ್ದಾಕೆ ಈಗ  ಎಲ್ಲೋ ನೋಡುತ್ತಿದ್ದ ಗಂಡನ  ಹತ್ತಿರ ಬಂದು , ಮೊಬೈಲ್ ನೋಡಿ ಫೋನ್ ಪೇ ತೆಗೆದು ನೋಡಿ ಪಿನ್ ಹಾಕಿ ಅಂತ ಹೇಳುತ್ತಾಳೆ. ಫೋನ್ ಪೇ ತೆಗೆದು ನೋಡಿದರೆ ಅಂಗಡಿಯವನಿಗೆ ಕೊಡಬೇಕಾದ ನಾನೂರು ಐನೂರಕ್ಕೆ ಅಲ್ಲಿ ಪಿನ್ ರಿಕ್ವೆಸ್ಟ್ ಬಂದಿರುತ್ತದೆ. ಅರಳಿದ ಮುಖ ಸಣ್ಣದು ಮಾಡಿ ಪಿನ್ ಒತ್ತಿ ಬಡಪಾಯಿ ಪೋಸು ಕೊಟ್ಟು ಮನೆ ಕಡೆ ಹೊರಟು ಬಿಡುತ್ತಾರೆ. ಅಷ್ಟೆಲ್ಲ ಅಂಗಡಿ ಸುತ್ತಿದರೂ ಆಕೆಗೆ ಒಂದು ಹತ್ತು ಐವತ್ತು ಖರ್ಚಾಗಿರುತ್ತದೆ.  ಆದರೆ ಗಂಡಿನ ಪೋನ್ ಪೇಯಲ್ಲಿ ಐನೂರು ಕಳೆದಾಗಿರುತ್ತದೆ. 

ಹೀಗೆ ಒಂದು ಭಾನುವಾರದ ಸಹಜ ಪ್ರಹಸನ ಕಳೆದಿರುತ್ತದೆ. 

Saturday, January 17, 2026

ಕೇರಳ ಕರ್ನಾಟಕ




ನಮ್ಮ ಪೈವಳಿಕೆಯಿಂದ ನಮ್ಮ ಪಂಚಾಯತ್ ಒಳಗಿನ ಇನ್ನೊಂದು ಕುಗ್ರಾಮವಾಗಿದ್ದ ಚೇವಾರಿಗೆ ಹೋಗಬೇಕಿದ್ದರೆ ಮೊದಲು ಉಪ್ಪಳ ಸುತ್ತಿ ಬಂದ್ಯೋಟು ಕಯ್ಯಾರು ಕೊಂಕಣ ಸುತ್ತಿ ಮೈಲಾರ  ಅಂತ ಹೇಳಿದ ಹಾಗೆ ಹೋಗಬೇಕಿತ್ತು. ಮೊದಲು ಮಣ್ಣಿನ ಕಚ್ಚಾ ರಸ್ತೆ ಇತ್ತು. ರಸ್ತೆ ಹೆಸರಿಗೆ ಮಾತ್ರ .  ಎಲ್ಲೋ ಒಂದೆರಡು ಮರ ತುಂಬಿದ ಟಿಂಬರ್ ಅಥವಾ ಕಲ್ಲು ತುಂಬಿದ ಲಾರಿ ಕಷ್ಟದಲ್ಲಿ ಹೋಗುವುದು ಬಿಟ್ಟರೆ ಒಂದು ವಾಹನವೂ ಹೋಗುತ್ತಿರಲಿಲ್ಲ. ರಸ್ತೆಗೂ ಅಕ್ಕ ಪಕ್ಕ ಇದ್ದ ಗುಡ್ಡಕ್ಕೂ ವೆತ್ಯಾಸವಿಲ್ಲದ ರಸ್ತೆ. ಹೊಂಡಗುಂಡಿಯಿಂದ ನಡೇದಾಡುವುದಕ್ಕೂ ಕಷ್ಟವಿತ್ತು. ಮಳೆಗಾಲದಲ್ಲಿ ಕಟ್ಟದ ಮನೆ ಎಂಬಲ್ಲಿದ್ದ ಹೊಳೆ ತುಂಬಿ ಹರಿದರೆ ಅಲ್ಲಿನ ತೋಟದವರು ಹಾಕಿದ ಅಡಕೆ ಮರದ ಸೇತುವೆ ನೀರಿಗೆ ಕೊಚ್ಚಿಕೊಂಡು ಹೋಗದೇ ಇದ್ದಲ್ಲಿ ಮಾತ್ರ ಆಕಡೆ ಈ ಕಡೆ ಸಂಪರ್ಕ ಇತ್ತು. ಇಲ್ಲದೆ ಇದ್ದರೆ ಅದೂ ಇಲ್ಲ. ದಿವಸಕ್ಕೆ ಒಮ್ಮೆ ಸುತ್ತಾಗಿ ಉಪ್ಪಳದಿಂದ ಹೋಗಿ ಬರುತ್ತಿದ್ದ ಶಂಕರ್ ವಿಟ್ಠಲ್ ಬಸ್ಸೆ ಗತಿ. 


ಮೊನ್ನೆ ಊರಿಗೆ ಹೋದಾಗ ಈ ರಸ್ತೆಯಲ್ಲಿ ಒಂದು ಸಲ ಸಂಚರಿಸುವ ಕೆಲಸ ಇತ್ತು. ರಸ್ತೆ ನೋಡುವಾಗ ಬಹಳ ಸಂತೋಷವಾಯಿತು. ಚೇವಾರಿನಂತಹ ಒಂದು ಹಳ್ಳಿಯಲ್ಲಿ ಸಂಚರಿಸುವ ರಸ್ತೆ ಹೇಗಿದೆ ನೋಡಿ. ದುಃಖದ ಸಂಗತಿ ಎಂದರೆ ಊರಲ್ಲಿ ಹೀಗೆ ಬದಲಾವಣೆಯದಾಗ ನಾವು ಈ ಊರಿನವರಾಗಿ ನೆಲೆಸಿಲ್ಲ. ಈಗ ರಸ್ತೆಯಲ್ಲಿ ಘಂಟೆಗೊಂದು ಬಸ್ಸು ಸಂಚರಿಸುತ್ತದೆ. ಕೇವಲ ಕೆಲವು ನಿಮಿಷಗಳಲ್ಲಿ ಪೈವಳಿಕೆಯಿಂದ ಚೇವಾರು ಹೋಗುವುದಕ್ಕೆ ಸಾಧ್ಯವಾಗುತ್ತದೆ. ಇಲ್ಲಿಂತ ಅಲ್ಲ ನಮ್ಮೂರಿನ ಸುತ್ತ ಮುತ್ತಲಿನ ರಸ್ತೆಗಳು ಇದೇ ರೀತಿ ಬದಲಾಗಿದೆ. ವಿಪರ್ಯಾಸವೆಂದರೆ ಇಲ್ಲಿಂದ ಕೆಲವೇ ದೂರದ ಕರ್ನಾಟಕದ ಗಡಿ ದಾಟಿದ ಕೂಡಲೇ ರಸ್ತೆ ಹೇಗಿರುತ್ತದೆ ಎಂದರೆ ನಮ್ಮ ವಾಹನದ ಗತಿಯೇ ಬದಲಾಗುತ್ತದೆ. ವಾಹನದ ಶಬ್ದ ಎಲ್ಲವೂ ಬದಲಾಗಿಬಿಡುತ್ತದೆ. ವಾಹನದೊಳಗೆ ನಿದ್ದೆ ಮಾಡಿದ್ದರೆ ಕಣ್ಣು ತೆರೆಯದೆ...ಕರ್ನಾಟಕ ಬಂತು ಅಂತ ಹೇಳುವುದಕ್ಕೆ ಸಾಧ್ಯವಾಗುತ್ತದೆ. 

ಈಗ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕಾ ಬೇಡವಾ..ಮಲಯಾಳ ಹೇರಿಕೆ ಹೀಗೆಲ್ಲ ವರದಿಗಳು ಕೇಳಿಬರುತ್ತದೆ. ಸಮಸ್ಯೆಗಳು ಇಲ್ಲ ಎಂಬುದಲ್ಲ. ಸಮಸ್ಯೆ ಎಲ್ಲಿ ಹೋದರೂ ಇದ್ದೇ ಇರುತ್ತದೆ. ವಿಧ ಮಾತ್ರ ವೆತ್ಯಾಸ. ಯಾವುದೋ ಒಂದು ಸಮಸ್ಯೆ ಜೀವವನ್ನು ಕಾಡುವಷ್ಟು  ಇರುತ್ತದೆ.  ಕೆಲವೊಮ್ಮೆ ಅನಿಸುತ್ತದೆ ಯಾವ ಸಾರ್ಥಕತೆಗೆ ಕಾಸರಗೋಡು ಕರ್ನಾಟಕಕ್ಕೆ ಬರಬೇಕು. ಕಯ್ಯಾರದ ಅಜ್ಜ ಅಂತ್ಯ ಕಾಲದವರೆಗೂ ಕನಸು ಕಂಡರು ಹಾಡಿದರು, ಹೋರಾಡಿದರು ಯಾಕೋ ಆಗಲಿಲ್ಲ. ಈಗ ಅನ್ನಿಸುತ್ತದೆ ಎಲ್ಲೇ ಇರಲಿ ಭಾರತದಲ್ಲಿ ಇದೆಯಲ್ಲಾ ಅಂತ. ಕೆಲವರು ಹೇಳುವುದುಂಟು ಭಾರತದ ಒಳಗೆ ಸಂಚರಿಸುವುದಕ್ಕೆ ಇನ್ನು ಪಾಸ್ ಪೋರ್ಟ್ ಅಗತ್ಯ ಬೀಳಬಹುದು. ಹಾಗೆ ವಾತಾವರಣ ಬದಲಾಗುತ್ತದೆ ಎಂದು. ಸತ್ಯ ಹೇಳಬೇಕೆಂದರೆ ನನಗೆ ಕರ್ನಾಟಕವಾಗಲಿ ಕೇರಳವಾಗಲೀ ಎರಡೂ ನನ್ನದು ಎಂಬ ಅಭಿಮಾನವಿದೆ. ಕೇವಲ ಆಡುವ ಭಾಷೆಯ ವೆತ್ಯಾಸ. ಆದರೆ ಭಾವನೆಗಳು ವೆತ್ಯಾಸವಿಲ್ಲ. ಎರಡೂ ರಾಜ್ಯವೂ ನನಗೆ ಅನ್ನ ಕೊಟ್ಟಿದೆ . ದುಡಿಮೆ ವಿದ್ಯೆ ಜ್ಞಾನ ಕೊಟ್ಟಿದೆ. ಹಾಗಾಗಿ ಎಲ್ಲೇ ಇದ್ದರು ಭಾರತದೊಳಗೆ ಇದ್ದರೆ ಸಾಕು. ಭಗವಂತ ಕೊಟ್ಟ ಭೂಮಿ ನಾವು ಎಲ್ಲಿದ್ದೇವೆ ಎಂಬುದಕ್ಕಿಂತಲೂ ಹೇಗೆ ಇದ್ದೇವೆ ಎಂಬುದು ಮುಖ್ಯ. ಆ ಭಗವಂತ ಕೊಟ್ಟದ್ದು ಎಂದ ಮೇಲೆ ಇದೆಲ್ಲ ಅವನ ಪ್ರಸಾದ ಅಲ್ಲವೆ. 

ನಿತ್ಯ ದೇವರ ಪ್ರಾರ್ಥನೆ ಮಾಡುವಾಗ ಒಂದು  ಬೇಡಿಕೊಳ್ಳುತ್ತೇವೆ, "ಪೃಥ್ವಿತ್ವಯಾ ಧೃತಾ ಲೋಕಾ ದೇವಿತ್ವಂ ವಿಷ್ಣುನಾಧೃತ ತ್ವಂಚಧಾರ ಯಮಾಂ ದೇವಿ ಪವಿತ್ರಂ ಕುರುಚಾಸನಂ"  ನಾವು ಈ ಭೂಮಿಯ ಮೇಲೆ ನಿಂತುಕೊಂಡು ಭೂಮಿ ನಮ್ಮನ್ನು ಹೊತ್ತುಕೊಂಡಿದೆ. ಆ ಭೂಮಿಯನ್ನು ಭಗವಂತ ಆಧರಿಸಿದ್ದಾನೆ. ನಮಗೆ ಆ ಭಗವಂತನನ್ನು ಪ್ರಾರ್ಥಿಸಲು ಒಂದುಷ್ಟು ಜಾಗ ಕರುಣಿಸು. ಎಂಬ ಪ್ರಾರ್ಥನೆ. ಎಲ್ಲಿದ್ದರೂ ಅದು ಭಗವಂತನ ಪ್ರಾರ್ಥನೆ. 

Wednesday, January 14, 2026

ಸಂಸ್ಕೃತ ಮತ್ತು ಮನುವಾದ

ಎಡ್ವಿನ್  ಜೆರೋ  ಎಂಬ ಅಮೇರಿಕದ  ಓರ್ವ ಸಂಸ್ಕೃತ ವಿದ್ವಾಂಸ. ಚಿಕಾಗೋ ವಿಶ್ವವಿದ್ಯಾಲಯದ ಪ್ರೋಫೆಸರ್ ಒಂದು ಸಲ ಭಾರತಕ್ಕೆ ಬಂದಾಗ ಸಂಸ್ಕೃತದಲ್ಲಿ ಪ್ರವಚನ ಮಾಡುತ್ತಾರೆ.  ಆಶ್ಚರ್ಯವಾಗಬಹುದು,  ಅಮೇರಿಕದ ವ್ಯಕ್ತಿ ನಮ್ಮ ಸಂಸ್ಕೃತ ಭಾಷೆಯಲ್ಲಿ ಪ್ರವಚನ ಮಾಡುತ್ತಾರೆ ಎಂದರೆ ನಾವು ಅಭಿಮಾನ ಪಟ್ಟುಕೊಳ್ಳಬೇಕು. ಅವರು ಎದ್ದು ನಿಂತಾಗ ಅದ್ಭುತ ಕರತಾಡನ. ಯಾಕೆಂದರೆ ಒಬ್ಬ ವಿದೇಶಿ ಪ್ರಜೆಗೆ ಸಂಸ್ಕೃತದಲ್ಲಿ ಇರುವ ಆಸಕ್ತಿ.   ಎಡ್ವಿನ್ ಜೆರೋ   ಉಡುಪಿಗೆ ಬಂದಾಗ ಮಠಾಧೀಶರು ಅವರ ಸಂಸ್ಕೃತ ಭಾಷಣ ಕೇಳಿಸುವ ಆಸಕ್ತಿ ತೋರಿದರು. ಸಾವಿರಾರು ಜನರು ಸೇರಿದ,  ಬಹುಶಃ ಪರ್ಯಾಯ ಕಾರ್ಯಕ್ರಮ ಇರಬೇಕು, ಅಲ್ಲಿ  ಅವರ ಸಂಸ್ಕೃತ ಭಾಷಣ. ವಿಚಿತ್ರವೆಂದರೆ ಆ ಸಂಸ್ಕೃತ  ಭಾಷಣ  ಸೇರಿದ ಭಾರತೀಯರಿಗೆ ಅರ್ಥವಾಗಬೇಕಲ್ಲ? ವಿದ್ವಾಂಸ ಶ್ರೀ ಬನ್ನಂಜೆ ಗೋವಿಂದಾಚಾರ್ಯರು  ಅದನ್ನು ಭಾಷಾಂತರ ಮಾಡುವುದಕ್ಕೆ  ಬರಬೇಕಾಯಿತು. ಆಧ್ಯಾತ್ಮ ಚಿಂತಕ  ಶ್ರೀ ಬನ್ನಂಜೆ ಗೋವಿಂದಾಚಾರ್ಯರವರು ತಮ್ಮ ಪ್ರವಚನ ಒಂದರಲ್ಲಿ ಹೇಳಿದ ಘಟನೆ ಇದು.  ನಮ್ಮದೇ ದೇಶದ ಪುರಾತನ ಭಾಷೆ, ವಿದೇಶಿಯನೊಬ್ಬ ಹೇಳಿದಾಗ ಅದು ನಮಗೆ  ಅರ್ಥವಾಗಬೇಕಾದರೆ  ಅದನ್ನು ಅನುವಾದಿಸುವ ಅನಿವಾರ್ಯತೆ ಒದಗಿತು. ಕಾರಣ ಸಂಸ್ಕೃತ ಎಂದರೆ ನಮಗೆ ಅರ್ಥವಾಗದೇ ಇರುವ ಭಾಷೆಯಾಗಿದೆ.  


ನನ್ನ ಬದುಕಿನಲ್ಲಿ ಕಳೆದು ಹೋದ ದೊಡ್ಡ ನಷ್ಟ  ಯಾವುದು ಅಂತ ನನ್ನಲ್ಲಿ ಕೇಳಿದರೆ,  ಬಾಲ್ಯದಲ್ಲಿ ಸಂಸ್ಕೃತ ಕಲಿಯುವ ಅವಕಾಶ ಮನೆಯಲ್ಲಿ ಅಥವಾ ಶಾಲೆಯಲ್ಲಿ ಇದ್ದರೂ ಅದನ್ನು ಕಲಿಯಲಾಗದೇ ಹೋದದ್ದು ನನ್ನ ಪಾಲಿಗೆ ದೊಡ್ಡ ನಷ್ಟ ಅಂತ ಈಗ ಅನಿಸುತ್ತದೆ. ಈಗೀಗ ಅದರ ಬಗ್ಗೆ ಹೆಚ್ಚು ಹೆಚ್ಚು ಆಸಕ್ತಿ ಉಂಟಾದರೂ ಅದನ್ನು ಪೂರೈಸುವುದಕ್ಕೆ ಅವಕಾಶ ಮತ್ತು ಮನೋಬಲ ಇಲ್ಲ.  ಸಂಸ್ಕೃತ ಅಂದರೆ ಈಗ ಅರ್ಥವಾಗದೇ ಇರುವುದು ಎಂದು ಪರ್ಯಾಯವಾಗಿ ಹೇಳಬಲ್ಲ ಅವಕಾಶ ಮಾತ್ರ ಇರುತ್ತದೆ. ನಮಗೆ ಅರ್ಥವಾಗಬೇಕಾದದ್ದು ಕಷ್ಟ ಪಟ್ಟು ಶ್ರಮ ವಹಿಸಿ ಅರ್ಥವಿಸಿಕೊಳ್ಳಬೇಕು ಎಂದು ಪರೋಕ್ಷವಾಗಿ ಸಾರಿದಂತೆ ಸಂಸ್ಕೃತ ಭಾಷೆ ನನಗೆ ಭಾಸವಾಗುತ್ತದೆ. ಯಾಕೆಂದರೆ  ಇದು ಕೇವಲ ಭಾಷೆಗೆ ಮಾತ್ರ ಸಂಭಂಧಿಸಿ ಹೇಳುವುದಲ್ಲ, ಭಾರತೀಯ ಸಂಸ್ಕೃತಿಯ ಎಲ್ಲಾ ಅಮೂಲ್ಯ ಅಂಶಗಳು ಜ್ಞಾನ ರೂಪವಾಗಿ ಸಂಸ್ಕೃತದಲ್ಲಿ ಅಡಗಿದೆ. ಹಾಗಾಗಿ ಈ ಜ್ಞಾನ ಲಭ್ಯವಾಗಬೇಕಾದರೆ ನಾವು ಕಷ್ಟ ಪಡಬೇಕು. ಇಚ್ಛಾಶಕ್ತಿ ತೋರಬೇಕು. ಈ ಪ್ರಯತ್ನ ಇಚ್ಛಾಶಕ್ತಿ ಇಲ್ಲದೇ ಇರುವುದರಿಂದ ಇಂದು ಹಲವು ಬುದ್ದಿ ಜೀವಿಗಳು ಹಲುಬುವಂತಾಗಿರುವುದು ನಮ್ಮ ಸನಾತನ ಧರ್ಮದ ದುರ್ದೈವ ಅಂತ ತಿಳಿಯಬೇಕು.   ಬಹುಶಃ ಭಾರತೀಯರು ತಮಗೆ ಅರ್ಥವಾಗದೇ ಇರುವುದನ್ನು ಏನೋ ಇದೆ ಅಂತ ನಂಬಿಬಿಡುತ್ತೇವೆ. ಸುಮ್ಮನೆ ಅಪಾಯ ಯಾಕೆ? ಯಾವುದೋ ನಂಬಿಕೆಯ ಮೇಲೆ ಪುನಃ ನಮ್ಮ ನಂಬಿಕೆಯ ಮಹಡಿಗಳನ್ನು ಕಟ್ಟುತ್ತೇವೆ.  ನಿಜವಾಗಿ ಸಂಸ್ಕೃತ ಎಲ್ಲರಿಗೂ ಅನಿವಾರ್ಯವಾಗಿ ಅರ್ಥವಾಗಬೇಕಾದ  ಭಾಷೆ. ಒಂದು ವೇಳೆ ಅದು ಎಲ್ಲರಿಗೂ ಅರ್ಥವಾಗುತ್ತಿದ್ದರೆ ಇಂದು ಸನಾತನ ಧರ್ಮ ಎದುರಿಸುವ ಹಲವಾರು ಸಮಸ್ಯೆಗಳು ಉದ್ಭವಿಸುತ್ತಿರಲೇ ಇಲ್ಲ ಅಂತ ಅನಿಸುತ್ತದೆ. 

ನಮಗೆ ತಿಳಿಯದೇ ಇರುವುದರ ಮೇಲೆ ವ್ಯಾಖ್ಯಾನ ಮಾಡುವುದನ್ನು ಮೂರ್ಖತನ ಎನ್ನಬೇಕು. ಆ ಮೂರ್ಖತನಕ್ಕೆ ನಮ್ಮ ನಂಬಿಕೆಗಳು ಇಂದು ಬಲಿಯಾಗುತ್ತವೆ. ನಂಬಿಕೆ ಎಂದರೆ ವಿಶ್ವಾಸ. ಇಂದು ಅದೇ ವಿಶ್ವಾಸವನ್ನು ಕಳೆದುಕೊಳ್ಳಬೇಕು ಎನ್ನುವಂತಹ ಸ್ಥಿತಿ ಎದುರಾಗುತ್ತದೆ. ಯಾವುದೇ ಸಂಭಂಧಗಳ ಅಡಿಪಾಯ ಇರುವುದು ವಿಶ್ವಾಸದಲ್ಲಿ ಗಂಡ ಹೆಂಡತಿ ಇನ್ನಿತರ ಸಾಂಸಾರಿಕ, ಸಾಮಾಜಿಕ ಸಂಬಂಧಗಳು ನೆಲೆ ನಿಲ್ಲುವುದು ಈ ವಿಶ್ವಾಸದಲ್ಲಿ. ಆ ವಿಶ್ವಾಸ ಮೂಡುವುದು ಪರಸ್ಪರ ಅರಿವಿನಲ್ಲಿ ಈ ಅರಿವು ಇಲ್ಲದೇ ಕೆಲವೊಮ್ಮೆ ಏನೋ ತಿಳಿದುಕೊಂಡು ನಾವು ಪರಸ್ಪರ ವೈರವನ್ನು ಕಟ್ಟಿಕೊಳ್ಳುತ್ತೇವೆ. ಮಿತ್ರ ಮಿತ್ರರ ನಡುವೆ ಗಂಡ ಹೆಂಡಿರ ನಡುವೆ ಹೀಗೆ ಎಲ್ಲಾ ಸಂಭಂದಗಳ ನಡುವೆ ಈ ಅರಿವಿನ ಕೊರತೆ ನಂಬಿಕೆ ಸಂಭಂಧಗಳ ಮೇಲೆ ಘಾಸಿ ಮಾಡುತ್ತವೆ. ಅದೇ ಬಗೆಯಲ್ಲಿ ಇಂದು ನಮ್ಮ ಧರ್ಮದ ಅರಿವಿಲ್ಲದೇ ಧರ್ಮವನ್ನು ದ್ವೇಷಿಸುವ ಹಂತಕ್ಕೆ ಬರುತ್ತದೆ. ಧರ್ಮ ಮಾತ್ರವಲ್ಲ, ಅದಕ್ಕೆ ಸಂಬಂಧಿಸಿದ ಎಲ್ಲವೂ ಪ್ರಶ್ನಾರ್ಹವಾಗಿಬಿಡುತ್ತದೆ. ಅದರಲ್ಲಿ ಒಂದು ಭಗವದ್ಗೀತೆ. 

ಭಗವದ್ಗೀತೆ ಎಂದಾಕ್ಷಣ ಮನುವಾದ ಎಂದು ನಿಂದಿಸುವ ಮನೋಭಾವ ನಿಜಕ್ಕೂ ಮೂರ್ಖತನ.  ಭಗವದ್ಗೀತೆ ಸರಳವಾಗಿ ಇದರ ಅರ್ಥ ನೋಡಿದರೆ ಭಗವಂತನ ಮಾತುಗಳು. ಅದು ಯಾವ ಧರ್ಮದಲ್ಲೂ ಇದ್ದೇ ಇರುವ ವಿಷಯ. ಅದು ಕೇವಲ ಒಂದು ಧರ್ಮಕ್ಕೆ ಸೀಮಿತವಲ್ಲ.  ಅದನ್ನು ಒಂದು ಧರ್ಮದಲ್ಲಿ ಹೇಳಿದೆ ಎನ್ನುವುದು ಅದರ ವಿರೋಧಕ್ಕೆ ಕಾರಣವಾಗುವುದು ಸರಿಯಲ್ಲ.  ಅದನ್ನು ವಿರೋಧಿಸುವವಲ್ಲಿ  ಮನುವಾದದ ಅರಿವೂ ಇಲ್ಲ. ಭಗವದ್ಗೀತೆ ಅಂದರೆ ಏನು ಅಂತ ಗೊತ್ತಿರುವುದೂ ಇಲ್ಲ. ಭಗವದ್ಗೀತೆ  ಪಠ್ಯದಲ್ಲಿ ಸೇರಿಸ ಬೇಕೇ ? ಅಂತ ಹಲವು ಚರ್ಚೆಯಾಗುತ್ತದೆ.  ಇದರ ಪರವಾಗಿ ವಿರೋಧವಾಗಿ ಚರ್ಚೆ ಇದ್ದೇ ಇರುತ್ತದೆ. ಆದರೆ ಭಗವದ್ಗೀತೆ ಪಠ್ಯದಲ್ಲಿ ಸೇರಬೇಕೆ ಎನ್ನುವುದಕ್ಕಿಂತ ಅದು ಮನೆಯಲ್ಲಿ ಮೊದಲು  ಸೇರಬೇಕು ಎನ್ನುವುದು ಸೂಕ್ತ. ಯಾಕೆಂದರೆ ಭಗವದ್ಗೀತೆ ಬೇಕು..ಆದರೆ ಅದನ್ನು ತೆರೆದು ಓದಿದವರು ಎಷ್ಟು ಜನ? ಓದಿ ಉರು ಹೊಡೆದು ಬಾಯಿ ಪಾಠ ಒಪ್ಪಿಸುವುದಕ್ಕಷ್ಟೇ ಸೀಮಿತವಾದರೆ ಭಗವದ್ಬೀತೆಯ ತತ್ವಗಳ ಪರಿಣಾಮವೇನು? ಭಗವದ್ಗೀತೆಯಲ್ಲಿ ಹೀಗೆ ಇದೆ ಅಂತ ಯಾರೋ ಹೇಳಿದ್ದನ್ನು ನಂಬುವುದಿದ್ದರೆ ಅದು ಭಗವದ್ಗೀತೆಗೆ ಒಪ್ಪಿಸುವ ಗೌರವವಾಗುವುದಿಲ್ಲ. ಅದು  ಪ್ರಾಮಾಣಿಕತೆಯ ಅರ್ಥವನ್ನು ಕಲ್ಪಿಸುವುದಿಲ್ಲ. ಭಗವದ್ಗೀತೆ ಶಾಲೆಯ ಪಠ್ಯದಲ್ಲಿ ಬಳಕೆಗೆ ಬರುವುದಕ್ಕಿಂತ ಮನೆ ಮನೆಯಲ್ಲಿ ಮನ ಮನದಲ್ಲಿ ಬಂದರೆ ಶಾಲೆಯಲ್ಲಿ ಅದರ ಅವಶ್ಯಕತೆಯೇ ಇರುವುದಿಲ್ಲ. ಹಿಂದುಗಳ ಧರ್ಮ ಗ್ರಂಥ ಎನ್ನಿಸುವ  ಭಗವದ್ಗೀತೆ ಬಹು ಸಂಖ್ಯೆಯ ಹಿಂದುಗಳಿಗೆ (ನನ್ನನ್ನೂ ಸೇರಿಸಿ)  ಅದರ ಆಳ ಅರ್ಥವೇ ತಿಳಿದಿಲ್ಲ.  ವಿಪರ್ಯಾಸವೆಂದರೆ ಇಂದು ಭಾರತೀಯರಿಗಿಂತ ವಿದೇಶಿಯರು ಹಚ್ಚು ಅರ್ಥವಿಸಿದ್ದಾರೆ. 

ಮನುವನ್ನು ವಿರೋಧಿಸುವಾಗ "ಮನಸ್ಸು"  ಎಂದು ಹೇಳುವಲ್ಲಿ  ಮನು ಇದ್ದಾನೆ ಎಂಬುದನ್ನು ಮರೆಯುತ್ತಾರೆ.. ಮನಸ್ಸು ಇದ್ದವನು, ಅಂದರೆ ಮನುಷ್ಯ. ಮನಸ್ಸು ಮತ್ತು ಚಿಂತಿಸುವ ಶಕ್ತಿ ಇರುವುದು ಕೇವಲ ಮನುಷ್ಯನಿಗೆ ಮಾತ್ರ. ಪ್ರಾಣಿಗಳಿಗೆ ಇದು ಇರುವುದಿಲ್ಲ. ಮನುಷ್ಯ ಎಂದು ಉದ್ಗರಿಸುವುದರಲ್ಲೇ ಮನುವಾದವಿದೆ.  ಮನುಷ್ಯ ಎಂದು ಕರೆಯಲ್ಪಡುವುದರಲ್ಲೇ ಮನು ಇರಬೇಕಾದರೆ ಮನು ವಿರೋಧದಲ್ಲಿ ಒಂದು ಪೂರ್ವಾಗ್ರಹ ಇದೆ ಎಂಬುದು ಸ್ಪಷ್ಟ.  ಇದು ಕೇವಲ ಭಾರತೀಯರಿಗೆ ಮಾತ್ರ ಸೀಮಿತವಲ್ಲ. ಆಂಗ್ಲ ಭಾಷೆಯಲ್ಲಿ ಹೇಳುವ ಮ್ಯಾನ್ ಎಂಬುದು ಕೂಡ ಮನು ಶಬ್ದದ ರೂಪಾಂತರ. ಹೀಗೆ ಹತ್ತು ಹಲವು ಉದಾಹರಣೆಗಳು ಸಿಗುತ್ತವೆ. ಈ ಜಗತ್ತಿನ ಮೂಲ ರೂಪ ಇರುವುದೇ ಸನಾತನ ಧರ್ಮದಲ್ಲಿ.  ಮನುವನ್ನು ವಿರೋಧಿಸುವವರು ಮನುಷ್ಯರಾಗಿ ಇರುವುದಕ್ಕೆ ಸಾಧ್ಯವಿಲ್ಲ. ಬೇರೆ ಇನ್ನೇನೋ ಆಗಬೇಕು. ಮನುಷ್ಯನ ಜೀವನದ ಪ್ರತಿ ಹಂತದಲ್ಲೂ ಮನುವಾದದ ತತ್ವವಿದೆ. ಆದರೆ ಇದನ್ನು ತಿಳಿಯದೇ ಮನುವಾದ ಅಂತ ವಿರೋಧಿಸುತ್ತಾರೆ. ಹೆತ್ತವರನ್ನು ಅಪ್ಪ ಅಮ್ಮ ಎನ್ನುವಂತೆ ಮನುಷ್ಯನೊಳಗೆ ಮನು ಬೆಸೆದುಕೊಂಡಿದೆ.  ಭಾನುವಾರವನ್ನು ಸಂಡೆ ಎನ್ನುವುದಕ್ಕೂ ಸೋಮವಾರವನ್ನು ಮಂಡೇ ಎನ್ನುವಾಗ ಭಾನುವಾರ ಸೋಮವಾರದಲ್ಲಿ ಮನುವಾದ ಇದೆ ಎಂಬುದನ್ನು ಮರೆಯುತ್ತಾರೆ. 

ಮನುವಾದವನ್ನು ಎಂದರೆ ಮೌಢ್ಯ.   ಸರಿಯಾಗಿ ತಿಳಿಯದೆ ಅಧ್ಯಯನ ಮಾಡದವರು ಹೇಳುತ್ತಾರೆ. ಮೌಢ್ಯ ಎಂದರೆ ಯಾವುದನ್ನು ತಿಳಿಯದೇ ಅನುಸರಿಸಿ ಆಚರಿಸುತ್ತೇವೋ ಅದು ಮೌಢ್ಯವಾಗುತ್ತದೆ. ಸಂಸ್ಕೃತದಲ್ಲಿ ಏನು ಹೇಳಿದರೂ ಅದು ಮನುವಾದವಾಗುತ್ತದೆ, ಕೇಸರೀಕರಣವಾಗುತ್ತದೆ , ಮೌಢ್ಯವಾಗುತ್ತದೆ. ಸಂಸ್ಕೃತವನ್ನು ಕೇವಲ ಭಾಷೆಯಾಗಿ ನೋಡುತ್ತೇವೋ ಒಂದು ಧರ್ಮವಾಗಿ ಪರಿಗಣಿಸುತ್ತೇವೋ ಅರಿವಿಲ್ಲ. ಸಂಸ್ಕೃತ ಕೇವಲ ಭಾಷೆಯಲ್ಲ. ಅದರ ವೈಶಿಷ್ಟ್ಯಗಳು ಹಲವು. ಸ್ವಂತ ಲಿಪಿ ಇಲ್ಲದೇ ಇದ್ದರೂ ಹಲವು ಭಾಷೆಗಳಿಗೆ ಮೂಲಾಧಾರ ಸಂಸ್ಕೃತ ಭಾಷೆ. ಯಾಕೆಂದರೆ ಸಂಸ್ಕೃತ ಒದಗಿಸುವ ಜ್ಞಾನ. ಅದನ್ನು ನಮ್ಮ ಭಾಷೆಯ ಮೂಲಕ ಅರಿಯಬೇಕು. ವೇದ ಮಂತ್ರಗಳನ್ನು ಅಧ್ಯಯನ ಮಾಡಬೇಕಾದರೆ ನಮ್ಮ ಭಾಷೆಯಲ್ಲೇ ಬರೆದು ಅಧ್ಯಯನ ಮಾಡಬೇಕಿದೆ. 

ಮನು ಎಂದಿಗೂ ಜಾತಿ ಅಥವಾ ಧರ್ಮಭೇದವನ್ನು ಹೇಳಲಿಲ್ಲ. ಮತ್ತೊಂದು ಧರ್ಮವನ್ನು ದಮನ ಅಥವಾ ನಾಶ ಮಾಡಿ ನಿನ್ನ ಧರ್ಮವನ್ನು ಉಳಿಸು ಎಂದು ಹೇಳಲಿಲ್ಲ. ಮನು ಪರಮಾತ್ಮನ ಬಗ್ಗೆ ಹೇಳಿರುತ್ತಾನೆ. ನಮ್ಮ ಹುಟ್ಟು ಸಾವಿನ ಕಾರಣವನ್ನು ವಿಶ್ಲೇಷಿಸಿ ಬೋಧಿಸಿರುತ್ತಾನೆ. ಪರಮಾತ್ಮನ ಬಳಿಗೆ ಸಾಗುವ ಈ ಜೀವನದ ಮುಖಗಳನ್ನು ತೋರಿಸಿರುತ್ತಾನೆ. ಲೌಕಿಕ ಜೀವನದ ಮಿಥ್ಯೆಗಳನ್ನು ಅದರ ಪರಿಣಾಮಗಳನ್ನು ಹೇಳಿರುತ್ತಾನೆ. ಆದರೆ ಲೌಕಿಕ ಜೀವನವೇ ಪರಮ ಸತ್ಯ ಎಂದು ತಿಳಿದು ಅದರಲ್ಲೇ ನರಳುವವರಿಗೆ ಈ ಸತ್ಯದ ಅರಿವಾಗುವುದಿಲ್ಲ. ಹಾಗಾಗಿ ಮನುವಾದ ಸನಾತನ ಧರ್ಮದ ಅರಿವನ್ನು ಪಡೆಯುವುದಕ್ಕೆ ಶ್ರಮವನ್ನೂ ಪಡೆಯುವುದಿಲ್ಲ. ಮನು ಪರಮಾತ್ಮನ ಬಳಿಗೆ ಸಾಗುವ ಆಧ್ಯಾತ್ಮಿಕ ದಾರಿಯ ಬಗ್ಗೆ ಚಿಂತಿಸುತ್ತಾನೆ. ಅಲ್ಲಿ ತಾತ್ಕಾಲಿಕವಾದ ಈ ದೇಹ ಮುಖ್ಯವಾಗುವುದಿಲ್ಲ. ದೇಹದ ಹಸಿವು ಕಾಮನೆಗಳು ಮುಖ್ಯವಾಗುವುದಿಲ್ಲ. ಆದರೆ ಲೌಕಿಕ ಜೀವನದ ಅಜ್ಞಾನದಲ್ಲೆ ಮುಳುಗಿರುವವರಿಗೆ ದೇಹ ಹಸಿವು ಕಾಮನೆಗಳೇ ಮುಖ್ಯವಾಗಿ ಅದರ ಪರಿಹಾರವೇ ಜೀವನ ಎಂದು ತಿಳಿದು ಬಿಡುತ್ತಾರೆ. ಇಲ್ಲಿ ಆಧ್ಯಾತ್ಮಿಕದ ಮೌಲ್ಯ ಎಂಬುದು ಕಬ್ಬಿಣದ ಕಡಲೆಯಾಗುತ್ತದೆ. ಹಾಗಾಗಿ ನಮಗೆ ತಿಳಿಯದೇ ಇರುವುದು ಮೌಢ್ಯವಾಗಿಬಿಡುತ್ತದೆ. 

ನಮ್ಮಲ್ಲಿ ಅದ್ಭುತವಾದ ಸಕಲ ಜ್ಞಾನವೂ ಇದೆ. ಆದರೆ ಅದು ನಮಗೆ ತಿಳಿಯದ ಸಂಸ್ಕೃತ ಭಾಷೆಯಲ್ಲಿ ಅಡಕವಾಗಿದೆ. ಅದೇ ಸಂಸ್ಕೃತ ಭಾಷೆಗೆ ಸ್ವಂತ ಲಿಪಿ ಇಲ್ಲ. ಉಳಿದ ಭಾಷೆಯ ಮೂಲಕವೇ ಇಲ್ಲಿ ಪ್ರವೇಶ ಮಾಡಬೇಕು. ಲಿಪಿ ಜ್ಞಾನಕ್ಕೆ ಕೇವಲ ಪೂರಕವೇ ಹೊರತು ಅದು ಅನಿವಾರ್ಯವಲ್ಲ. ಹಾಗಾಗಿ ವೇದ ಮಂತ್ರಗಳು ಮೌಖಿಕವಾಗಿ ಉಪದೇಶಿಸಲ್ಪಡುತ್ತಿತ್ತು. ಅಲ್ಲಿ ಲಿಪಿಯ ಅವಶ್ಯಕತೆಯೇ ಇರಲಿಲ್ಲ. ಕ್ರಮೇಣ ಅದಕ್ಕೆ ಲಿಪಿ ಬಳಕೆಯಾಗಿ ಉಳಿದ ಭಾಷೆಯಲ್ಲೂ ಪ್ರಕಟಗೊಂಡಿತು. ಮನುಷ್ಯ ಹುಟ್ಟುವಾಗ ಮೊದಲು ಭಾಷೆಯನ್ನು ಕಲಿಯುತ್ತಾನೆ. ಆಗ ಲಿಪಿಯ ಅವಶ್ಯಕತೆಯೇ ಇರುವುದಿಲ್ಲ. ಹೆತ್ತಮ್ಮ ಬಾಯ್ದೆರೆಯಾಗಿಯೆ ಮಾತಿನಿಂದ ಮಗುವಿಗೆ ಭಾಷೆಯನ್ನು ಕಲಿಸುತ್ತಾಳೆ. ಅದರಂತೆ ಸಂಸ್ಕೃತ ಎಂಬುದು ಲಿಪಿ ಇಲ್ಲದೆ ಮಾತೃ ಸ್ವರೂಪದ ಭಾಷೆಯಾಗುತ್ತದೆ. ಇಂತಹ ಸಂಸ್ಕೃತ ಭಾಷೆ ತನ್ನ ಗರ್ಭದಲ್ಲಿ ಈ ಜಗತ್ತಿನ ಆದಿ ಅಂತ್ಯದ ಜ್ಞಾನವನ್ನು ಹುದುಗಿಸಿಕೊಂಡಿದೆ. 

ಪ್ರಾಚೀನ ಕಾಲದಲ್ಲಿ ವೇದ ಉಪನಿಷತ್ತುಗಳೊಂದಿಗೆ ಅದರ ಸಾರವನ್ನು ಅರ್ಥವನ್ನೂ ಬೋಧಿಸಲಾಗುತ್ತಿತ್ತು. ಮಾತ್ರವಲ್ಲ ಸಂಸ್ಕೃತ ಸಾಮಾನ್ಯ ಭಾಷೆಯಾಗಿ ಬಳಕೆಯಲ್ಲಿತ್ತು. ಹಾಗಾಗಿ ಏನು ಉಲ್ಲೇಖಿಸಲ್ಪಡುತ್ತಿದೆಯೋ ಅದು ಎಲ್ಲರಿಗೂ ಮನನವಾಗುತ್ತಿತ್ತು. ಕ್ರಮೇಣ ಅನ್ಯ ಭಾಷೆಯ ಬಳಕೆಯಿಂದ ಮೂಲ ಆದರ ಸಾರವನ್ನು ತಿಳಿಯುವ ಅನಿವಾರ್ಯತೆ ದೂರವಾಗಿ ಸಂಸ್ಕೃತ ಎಂಬುದು ಯಾರೂ ಸ್ಪರ್ಶಿಸದ ಭಾಷೆಯಾಗಿ ಅಮೂಲ್ಯ ಜ್ಞಾನ ಸಂಪತ್ತು ರಹಸ್ಯವಾಗಿ ಅವಿತು ಹೋಯಿತು. 

ಸಂಸ್ಕೃತದಲ್ಲಿ  ಏನು ಹೇಳಿದರೂ ಅದು ಪರಮಾತ್ಮನ ಕುರಿತಾದ ಭಾವನೆಯನ್ನು ತರುತ್ತದೆ.  ಸಂಸ್ಕೃತ ಎಂದರೆ ಅದು ದೇವಭಾಷೆ.  ಮನುಷ್ಯರಾಗಿ ದೇವರನ್ನು ಅರಿಯಬೇಕು. ಹಾಗಾಗಿ ಇದು  ಸಂಸ್ಕೃತ ಜನ ಸಾಮಾನ್ಯರಿಗೂ ಅರಿವಾಗುವ ಭಾಷೆಯಾಗಬೇಕಿದೆ. ವೇದ ಮಂತ್ರಗಳು ಏನು ಹೇಳುತ್ತವೆಯೋ ಅದು ಪ್ರತಿಯೊಬ್ಬರಿಗೂ ತಿಳಿಯಬೇಕಿದೆ. ಹಾಗಿದ್ದಲ್ಲಿ ಈ ಮನುವಾದವನ್ನು ತಿರಸ್ಕರಿಸುವ ಮಂದ ಬುದ್ದಿ ದೂರವಾಗಬಹುದು. ವೇದ ಮಂತ್ರಗಳು ಕೇವಲ ಉರು ಹೊಡೆದು ಪಾಠ ಒಪ್ಪಿಸುವ ಬದಲಿಗೆ ಅದರ ಅರಿವನ್ನು ಅಲ್ಲಿರುವ ಜ್ಞಾನವನ್ನೂ ತಿಳಿಸಬೇಕಿದೆ. ನಮಗೆ ಅರ್ಥವಾಗದ ಭಾಷೆಯಲ್ಲಿ ದೇವರ ಮುಂದೆ ನಿಂತು ಏನೋ ಹೇಳುತ್ತೇವೆ. ನಾವು ಏನು ಹೇಳುತ್ತೇವೆ ಏನು ಮಾಡುತ್ತೇವೆ ಎಂಬುದೇ  ನಮಗೇ ಅರಿವಿರುವುದಿಲ್ಲ. ನಾವು ಏನು ಹೇಳುತ್ತೇವೆ ಎಂದು ನಮಗೆ ಅರಿವಿಲ್ಲದಿರುವಾಗ ಭಗವಂತನನ್ನು ಅರಿಯುವುದೆಲ್ಲಿಂದ ಬಂತು. ಹಾಗಾಗಿ ಅರಿಯದೇ ಮಾಡುವ ಕ್ರಿಯೆಗಳು ಕೇವಲ ಮೌಢ್ಯವಾಗಿಬಿಟ್ಟಿತು. 

ನಾನು ನನ್ನಿಂದ ಎಂಬುದು ಮನುಷ್ಯನಲ್ಲಿರುವ ಅಹಂ ಅಂದರೆ ಅಹಂಕಾರವಾಗಿರುತ್ತದೆ. ಅಹಂ ಎಂಬ ಭಾವನೆಯಲ್ಲಿ ಏನು ಮಾಡಿದರೂ ಅದು ಮೂರ್ಖತನವಾಗುತ್ತದೆ.  ನನ್ನ ದೇವರು ನನ್ನ ದೇವಾಲಯ ನನ್ನದು ...ಎನ್ನುವಲ್ಲಿ ಅಹಂ ಇದೆ. ಈ ಅಹಂಕಾರವನ್ನು ತೊರೆಯಬೇಕು. ಆಗ ಸಂಸ್ಕೃತ ಮತ್ತು ಅದರಲ್ಲಿ ಜ್ಞಾನದ ಅರಿವಾಗುತ್ತದೆ. ಮನುವಾದ ಎಂದು ಅವಹೇಳನ ಮಾಡುವಲ್ಲಿ ಅಹಂಕಾರವಿದೆ. ಈ ಪೂರ್ವಾಗ್ರಹವನ್ನು ಬಿಟ್ಟು ಯೋಚಿಸಿದಲ್ಲಿ ಮನುವಾದದ ನಿಜವಾದ ಅರ್ಥ ಅರಿವಾಗಬಹುದು. 





Wednesday, December 31, 2025

ಕಳೆದು ಹೋದ ದಿನ

ಎರಡು ವರ್ಷದ ಹಿಂದೆ ಗೋವಾದಲ್ಲಿರುವ  ನನ್ನ ಹತ್ತಿರದ ಸಹೋದರ ಸಂಬಂಧಿಯೊಬ್ಬರು ಅವರ ಸಹೋದರ  ಮೃತ ಪಟ್ಟ ವಾರ್ತೆ ಕರೆ ಮಾಡಿ ಹೇಳೀದರು. ಜತೆಗೆ ಆ ಸಹೋದರ ಬಹಳ ದುಃಖದಲ್ಲಿ ವಿಷಾದ ಭರಿತರಾಗಿ ಒಂದು ಸಂದೇಶ ಕಳುಹಿಸಿದರು. ನಾವು ಆತನನ್ನು ಕಳೆದುಕೊಂಡೆವು. (we lost him). ಎಂದೆಂದೂ ಭರಿಸಲಾಗದ ನಷ್ಟದ ದುಃಖ ಅವರ ಸಂದೇಶದಲ್ಲಿ ವ್ಯಕ್ತವಾದಾಗ ನನಗೂ ಕಣ್ಣಂಚು ಒದ್ದೆಯಾದ ಅನುಭವವಾಯಿತು. ಬಹುಶಃ ಪೂರ್ಣಾಯುಷ್ಯದ ಜೀವನ ಕಳೆದು ಮೃತ ಪಟ್ಟಿದ್ದರೆ ಹೀಗೆ ಹೇಳುತ್ತಿರಲಿಲ್ಲವೇನೋ.  

ತಮ್ಮ ವಯಸ್ಸಿಗಿಂತಲೂ ಕೆಳಗಿನವರು ಅಥವಾ ನಮ್ಮ ಸಮವಯಸ್ಕರು ಇನ್ನಿಲ್ಲ ಎನ್ನುವಾಗ ನಾವೂ ಅಧೀರರಾಗಿಬಿಡುತ್ತೇವೆ. ಯಾಕೆ ಹೀಗೆ ಅಂತ ಕಾರಣ ಹುಡುಕುತ್ತೇವೆ. ಹಲವು ಸಲ ಇದು ಸ್ವಯಂಕೃತ ಅಪರಾಧ ಎನ್ನುವಾಗ ಪರಿತಪಿಸುತ್ತೇವೆ. ಈಗತ್ತಿನಲ್ಲಿ ಗಳಿಸುವುದಕ್ಕೆ ಏನು ಇರುವುದಿಲ್ಲ. ಎಲ್ಲವನ್ನು ಕಳೆದುಕೊಳ್ಳುವುದೇ ಜಗತ್ತಿನ ನಿಯಮ. ಆದರೂ ಅವಾಸ್ತವಿಕವಾಗಿ ಕಳೆದುಕೊಳ್ಳುವಾಗ ನಮ್ಮಲ್ಲಿ ಅಪರಾಧಿ ಭಾವ ಮೂಡುವುದು ಸಹಜ. ನಾವು  ಆತನನ್ನು ಕಳೆದುಕೊಂಡೆವು ಅಂತ ಸಹೋದರ ಹೇಳುವಾಗ ಆತನ ನಷ್ಟಕ್ಕೆ ಕೇವಲ ಜಗತ್ತಿನ ನಿಯಮ ಕಾರಣವಾಗುವುದಿಲ್ಲ. ಕಾರಣ ಇಷ್ಟೆ, ಮೃತ ವ್ಯಕ್ತಿ ನಾಲ್ಕು ದಶಕದ ಬದುಕನ್ನೂ ಕಳೆಯುವ ಮೊದಲೆ ಬದುಕನ್ನು ಕಳೆಯುವುದಕ್ಕೆ ಆತನ ಮದ್ಯವ್ಯಸನವೇ ಕಾರಣ. ಕರೆ ಮಾಡಿದಾಗ ನಿನ್ನೆ ಅತನನ್ನ ಕಳೆದುಕೊಂಡೆವು ಅಂತ ದುಃಖದಲ್ಲಿ ಹೇಳುವಾಗ ನಾನು ಹೇಳಿದೆ ಸತ್ಯ ಅದಲ್ಲ.. ಆತನನ್ನು ಕೆಲವು ವರ್ಷಗಳ ಹಿಂದೆ ಕಳೆದುಕೊಂಡಾಗಿದೆ. ಈಗ ಅದು ಕೇವಲ ವಾಸ್ತವಿಕ ಸತ್ಯವಾಗಿದೆ. ಯಾಕೆಂದರೆ ಮದ್ಯ ಸೇವನೆ ಅತನನ್ನು ಎಂದೋ ಮಾನಸಿಕವಾಗಿ ನಮ್ಮಿಂದ ದೂರ ಮಾಡಿತ್ತು. 

ಒಂದು ಕುಟುಂಬದಲ್ಲಿ ಒಬ್ಬ ಮದ್ಯ ವ್ಯಸನಿ ಇದ್ದರೆ ಆತ ಇದ್ದರೂ ಇಲ್ಲದಂತೆ. ಹಿಂದೆ ಒಂದು ಸಲ ಮದುವೆ ಕಾರ್ಯಕ್ರಮಕ್ಕೆ ಗೋವಕ್ಕೆ ಹೋಗಿದ್ದೆ. ಆ ಮದುವೆಯ ಮದುಮಗಳು ನಮ್ಮೂರಿನವಳು. ಸಹಜವಾಗಿ ಆಕೆಯ ಕೆಲವು ಸಂಭಂಧಿಗಳು ಜತೆಗೆ ವಾಹನದಲ್ಲಿ ಬಂದಿದ್ದರು. ವಿಚಿತ್ರವೆಂದರೆ ಮದುವೆ ಎಂಬುದು ಅವರಿಗೆ ಗೋವಕ್ಕೆ ಹೋಗುವುದಕ್ಕೆ ಒಂದು ಕಾರಣವಾಗಿತ್ತು. ಏನನ್ನು ಕಾಣಬೇಕಿತ್ತೋ ಅದನ್ನು ಕಾಣದೇ ಇನ್ನೆನೋ ಒಂದರ ಭ್ರಮೆಯಲ್ಲಿ ಮುಳುಗಿಬಿಡುವುದು ಗೋವದ ಆಕರ್ಷಣೆ ಇರಬೇಕೇನೋ.  ಗೋವದ ಸೀಮೆ ಪ್ರವೇಶಿಸಿದ ನಂತರ ಅವರಲ್ಲಿ ಹಲವರು ಗೋವೆಯ ಪ್ರವೇಶದ ಉದ್ದೇಶವನ್ನು ಬಿಚ್ಚಿಟ್ಟರು. ಹೋದದ್ದು ವಿವಾಹ ಕಾರ್ಯಕ್ರಮಕ್ಕೆ,  ಆದರೆ ಗೋವಾದ ಮದ್ಯದ ಪ್ರಭಾವದಿಂದ ವಿವಾಹ ಕಾರ್ಯಕ್ರಮದ ಒಂದು ಘಳಿಗೆಯಲ್ಲೂ   ಅವರ ಅಸ್ತಿತ್ವ ಇರಲಿಲ್ಲ. ಹಗಲು ರಾತ್ರಿ ನಿಶೆ ಏರಿಸಿ ಮುಖ ತೋರಿಸುವ ಯೋಗ್ಯತೆಯಿಂದ ವಂಚಿಸಲ್ಪಟ್ಟು ಕಾರ್ಯಕ್ರಮದಿಂದ ಸೇರಿದ ಬಂಧು ಬಳಗದಿಂದ ಅವರು ದೂರವೇ ಉಳಿದರು. ಮದ್ಯ ಎಂಬುದು ಹತ್ತಿರವಾದಾಗ ಲೋಕ ಅವರಿಂದ ದೂರವಾಗಿಬಿಟ್ಟಿತು.  ಮದ್ಯ ವ್ಯಸನ ಎಲ್ಲವನ್ನೂ ದುಃಖವನ್ನು ಮರೆಸುವುದಕ್ಕೆ, ಸುಖದ ಉತ್ತುಂಗದ ಶಿಖರಕ್ಕೆ ಒಯ್ಯುವುದಕ್ಕೆ ಕಾರಣವಾಗುತ್ತದೆ. ಆದರೆ ನಶೆ ಮಾನಸಿಕವಾಗಿ ಇಹವನ್ನು ಮರೆಸಿ ದೂರ ಮಾಡುವಾಗ ನಮ್ಮವರಿಂದ ದೂರಾಗುತ್ತೇವೆ ಎಂಬುದನ್ನೂ ಮರೆಸಿಬಿಡುತ್ತದೆ. 

ಒಂದು ಮನೆಯಲ್ಲಿ ಒಬ್ಬ ಮದ್ಯವ್ಯಸನಿ ಇದ್ದರೆ, ಆತ ಯಾವ ಸುಖವನ್ನು ಅನುಭವಿಸುತ್ತಾನೋ ತಿಳಿಯದು, ಆದರೆ ಆತನ ಸಂಸಾರ ಮಾತ್ರ ಹಲವು ಸುಖಗಳಿಂದ ದೂರಾಗುತ್ತದೆ. ಎಂದೂ ಕೌಟುಂಬಿಕವಾಗಿ ದೂರಾಗಿ ಪ್ರತ್ಯೇಕವಾಗುವಾಗ ಕುಟುಂಬ ಎಲ್ಲವನ್ನೂ ಕಳೆದುಕೊಂಡು ಬಿಡುತ್ತದೆ. ಸಂಸಾರದಲ್ಲಿ ಎಲ್ಲರೂ ಹತ್ತಿರವಾದರೂ ಈತ ಮಾತ್ರ ಎಲ್ಲರಿಂದಲೂ ದೂರಾಗಿ ಉಳಿದುಬಿಡುತ್ತಾನೆ. ಎಂದಿಗೂ ಸಂಸಾರದ ಅಂಗವಾಗಿ ಆತ ಉಳಿದುಬಿಡುವುದಿಲ್ಲ. ಎಲ್ಲ ಇದ್ದಂತೆ ಇದ್ದರೂ ಎಲ್ಲದರಿಂದಲೂ ಕಳೆದು ಬಿಡುವ ಈ ಮದ್ಯ ಎಲ್ಲವನ್ನು ಕಸಿದುಕೊಳ್ಳುತ್ತದೆ.   ವಿವಾಹ ಇತ್ಯಾದಿ ಸುಖ ಸಂಭ್ರಮದಲ್ಲಿ  ಕುಟುಂಬ ಇದ್ದರೆ ಮದ್ಯ ವ್ಯಸನ ಎಲ್ಲರಿಂದಲೂ ಆತನನ್ನು ಪ್ರತ್ಯೇಕಿಸುತ್ತದೆ. ಇದ್ದರೂ ಇರದಂತೆ ಮದ್ಯ ಎಲ್ಲವನ್ನೂ ಕಳೆದುಕೊಳ್ಳುವಂತೆ ಮಾಡಿಬಿಡುತ್ತದೆ. 

ಇದೀಗ ಹೊಸ ವರ್ಷದ ಸಂಭ್ರಮ. ಎಲ್ಲಾ ದಿನಗಳಂತೆ ಇದೂ ಒಂದು ಕತ್ತಲು ಬೆಳಕಿನ ದಿನ. ಹಳೆಯದಿನಗಳ ಜತೆ ಮತ್ತೊಂದನ್ನು ಸೇರಿಸಿ ಕಳೆವಾಗ ಎಲ್ಲವನ್ನೂ ಕಳೆದು ಬಿಡುವ ಸಂಭ್ರಮದಲ್ಲಿ ಜಗತ್ತನ್ನೂ ಕಳೆದುಕೊಳ್ಳುವ ಆತುರ. ಎಲ್ಲವನ್ನು ಕಳೆದುಕೊಳ್ಳುವುದೇ ಬದುಕು ಎನ್ನುವಾಗ ಎಲ್ಲವನ್ನು ಕಳೆದುಕೊಳ್ಳುವ ನಡುವೆ ಯಾವುದನ್ನೋ ಗಳಿಸುವ ಉನ್ಮಾದ ಸ್ಥಿತಿಯಲ್ಲಿ ಈ ವರ್ಷಾಂತ್ಯದ ಇರುಳು ಕಳೆದು ಬಿಡುತ್ತದೆ. ನಮ್ಮನ್ನು ಆಳುವ ಸರಕಾರಕ್ಕೂ ಇದೊಂದು ಆತುರ. ಹನಿ ಹನಿ ಮದ್ಯದಲ್ಲೂ ಸರಕಾರ ಜೀವ ಹನಿಯನ್ನು ಹುಡುಕುತ್ತದೆ. ಉನ್ಮಾದ ಅವಸ್ಥೆಯಲ್ಲಿ ಎಲ್ಲವನ್ನು ಕಳೆದುಬಿಡಲಿ ಎಂದು ಬಯಸುತ್ತದೆ. ಎಷ್ಟು ವಿಚಿತ್ರ. ಕೈ ಹಿಡಿವ ಕೈಗಳೇ ಮದ್ಯದ ಪ್ರವಾಹದಲ್ಲಿ ಕೈಬಿಟ್ಟು ಕೇಕೆ ಹಾಕಿದಂತೆ. ಮದ್ಯ ಎಲ್ಲವನ್ನು ಎಲ್ಲವನ್ನು ಕಳೆದುಬಿಡುತ್ತದೆ. 


ಹೊಸ ವರುಷ ಕಳೆದುದನ್ನು ಮತ್ತೆ ಕೊಡಲಿ  ಎಂಬ ಆಶಯ. ಇದಕ್ಕೆ  ಮದ್ಯ ಎರವಾಗದಿರಲಿ. 



  

Friday, December 19, 2025

ವಿಡಂಬನೆಯ ಚಕ್ರವರ್ತಿ...ಶ್ರೀನಿವಾಸನ್

"ಎಡಾ ವಿಜಯ..." ಎಂಬ ಕರೆಗೆ ಧ್ವನಿಗೂಡಿಸುವ ನಾಡೋಡಿಕ್ಕಾಟ್ಟು ಎಂಬ ಸಿನಿಮಾದ ವಿಜಯನ ಪಾತ್ರ ನೋಡಿ ಆನಂದಿಸದ ಕೇರಳಿಗನಿರಲಾರನು. ಒಂದು ಅದ್ಭುತ ಸಿನಿಮಾದ ಮುಖ್ಯ ಜೀವಾಳ ಎಂದರೆ ಆ ಬುದ್ದಿವಂತ ವ್ಯಕ್ತಿ ನಟ , ನಿರ್ದೇಶಕ, ಚಿತ್ರಕಥೆಗಾರ ಶ್ರೀನಿವಾಸನ್. ನಾಡೋಕ್ಕಾಟ್ಟು ಎಂಬ ಸಿನಿಮಾ ಹಲವು ಭಾಷೆಗಳಿಗೆ ತರ್ಜುಮೆಯಾದ ಸಿನಿಮಾದ ಚಿತ್ರಕಥೆ ಅಂದರೆ ಸ್ಕ್ರಿಪ್ಟ್ ನ ಬರದ ಶ್ರೀನಿವಾಸ್ ಇನ್ನಿಲ್ಲ ಎಂಬ ವಾರ್ತೆ ಕೇಳುವಾಗ ಈತನ ಹಲವು ಸಿನಿಮಾಗಳು ಕಣ್ಣಮುಂದೆ ತೇಲಿಬಂತು. 

ನಾಡೋಡಿಕ್ಕಾಟು ಅದರ ದ್ವಿತೀಯ ಭಾಗ ಪಟ್ಟಣ ಪ್ರವೇಶಂ ನಂತರ ಅಕ್ಕರೆ ಅಕ್ಕರೆ...ಈ ಎಲ್ಲಾ ಸಿನಿಮಾ ನೋಡಿದವರು ಶ್ರೀನಿವಾಸನ್ ನಿರ್ವಹಿಸಿದ ವಿಜಯ ಪಾತ್ರವನ್ನುಮರೆಯುವುದಕ್ಕೆ ಸಾಧ್ಯವಿಲ್ಲ.  ನೋಡುವುದಕ್ಕೆ ಸಿನಿಮಾ ನಟನಿಗೆ ಇರಬೇಕಾದ ಸೌಂದರ್ಯವಾಗಲೀ ಗ್ಲಾಮರ್ ಆಗಲಿ ಇಲ್ಲದ ಸುಮ್ಮನೇ ಕಂಡರೆ ಪೆದ್ದು ಪೆದ್ದು ಎಂಬಂತೆ ಕಾಣುವ ಒಬ್ಬ ವ್ಯಕ್ತಿ ಮಲಯಾಳ ಚಿತ್ರರಂಗದ ಬುದ್ಧಿವಂತ ವ್ಯಕ್ತಿ ಎಂದು ಕರೆಸಿಕೊಳ್ಳುತ್ತನೆ ಎಂದರೆ ಈತನ ಅದ್ಭುತ ಪ್ರತಿಭೆಯ ಅರಿವಾಗಬಹುದು. ಮಲಯಾಳಂ ನ ಸಹಜವಾದ ನವಿರು ಹಾಸ್ಯಕ್ಕೆ ಹೊಸ ಆಯಾಮವನ್ನು ಒದಗಿಸಿದ ವ್ಯಕ್ತಿ ಶ್ರೀನಿವಾಸನ್. ಈತನ ಹಾಸ್ಯ ಸಂಭಾಷಣೆ ಎಂದರೆ ಅದು ವಿಡಂಬನಾತ್ಮಕವಾಗಿ, ಮನಸ್ಸನ್ನು ಹೊಕ್ಕು ಕರುಳನ್ನೇ ಇರಿದುಬಿಡುತ್ತದೆ. ಅಂತಹ ಹರಿತ ಮೊನಚು ಹಾಸ್ಯಕ್ಕೆ ಈತನ ಪಾತ್ರಗಳು ಪ್ರಸಿದ್ಧಿಯನ್ನು ಪಡೆದಿತ್ತು. ಸಹಜವಾಗಿ ಮಾತನಾಡುವಾಗಲೂ ಈತರ ವಿಡಂಬನೆಗಳಿಂದ  ವಿಶಿಷ್ಟ ಮಾತುಗಾರಿಕೆಗೆ ಶ್ರೀನಿವಾಸ್ ಹೆಸರುವಾಸಿ. ಎಂಭತ್ತರ ದಶಕಗಳಲ್ಲಿ  ಮಲಯಾಳಂ ಸಿನಿಮಾಕ್ಕೆ ಹೊಸ ಆಕರ್ಷಣೆಯನ್ನು ಈತನ ಸಿನಿಮಾಗಳು ಒದಗಿಸಿಕೊಟ್ಟಿತ್ತು. ಮಲಯಾಳಂ ಸಿನಿಮಾ ರಂಗದ ಒಬ್ಬ ಜೀನಿಯಸ್ ವ್ಯಕ್ತಿ ಎಂದರೆ ತಪ್ಪಾಗಲಾರದು. 

ಮಲಯಾಳಂ ಸಿನಿಮಾಗಳೆಂದರೆ ಅಲ್ಲಿ ಮೊದಲು ಪ್ರಾಮುಖ್ಯತೆ ಪಡೆಯುವುದು ಕಥೆ ಮತ್ತು ಚಿತ್ರಕಥೆ. ಅಲ್ಲಿನ ಸಿನಿಮಾಗಳ ನಿಜವಾದ ಕಥಾನಾಯಕ ಎಂದರೆ ಆ ಸಿನಿಮಾದ ಕಥಾವಸ್ತು. ಆನಂತರ ಯಾವುದೇ ಮುಲಾಜಿಲ್ಲದೆ ಆ ಕಥೆಯ ಪಾತ್ರಗಳಿಗೆ ಅತ್ಯಂತ ಸೂಕ್ತ ನಟನಟಿಯರ ಆಯ್ಕೆ. ಅದೇ ಮಲಯಾಳಂ ಸಿನಿಮಾದ ಯಶಸ್ಸಿನಗುಟ್ಟು. ಉಳಿದೆಲ್ಲ ಕಡೆ ನಟನ ದಿನ ಅವಕಾಶಗಳು ಮೊದಲು ನಿರ್ಣಯಿಸಲ್ಪಟ್ಟರೆ ಮತ್ತೆ ಅದಕ್ಕೆ ಹೊಂದಿಕೊಂಡು ಕಥೆ ರಚಿಸುವ ಮತ್ತು ಅದನ್ನು ಆಗಾಗ ಅವರ ಮರ್ಜಿಗೆ ಅನುಸರಿಸಿ ಬದಲಾಯಿಸುವ ವಾಡಿಕೆ ಇದ್ದರೆ ಮಲಯಾಳಂ ನಲ್ಲಿ ಅದರ ಕಥೆಯೇ ಮೊದಲು ಜೀವಾಳವಾಗುತ್ತದೆ. ಈ ಕಥೆ ಚಿತ್ರಕಥೆಗೆ ಹೆಸರಾದವರು ಎಂ ಟಿ ವಾಸುದೇವ ನಾಯರ್ ಅಂತೆ ಶ್ರೀನಿವಾಸನ್ ನಂತರ ಇವರಂತಹ ಹಲವು ಪ್ರತಿಭೆಗಳು ಮಲಯಾಳಂ ಸಿನಿಮಾರಂಗದ ಅದ್ಭುತ ಸೊತ್ತುಗಳು. 

ಶ್ರೀನಿವಾಸನ್ ಸಿನಿಮಾಗಳು ಮತ್ತು ಕಥಾ ಪಾತ್ರಗಳು ನಮ್ಮ ಜನಜೀವನಕ್ಕೆ ಹಿಡಿದ ಕನ್ನಡಿಯಂತೆ ಇರುತ್ತಿದ್ದವು. ಒಂದು ಸಿನಿಮಾ ನೋಡಿ ಹೊರಬಂದರೆ ಆ ಸಿನಿಮಾದ ಕಥಾ ಪಾತ್ರಗಳನ್ನು ನಮ್ಮ ಸುತ್ತ ಮುತ್ತಲು ಧಾರಾಳವಾಗಿ ಕಂಡು ಬಂದು ನೋಡಿದ ಸಿನಿಮಾ ಕೇವಲ ಸಿನಿಮಾವಾಗಿ ಭಾಸವಾಗದೇ ಅದು ನಿಮ್ಮ ಜೀವನದ ಅಂಗವಾಗಿ ಜೀವನವೇ ಎಂಬಂತೆ ಭಾಸವಾಗುತ್ತಿದ್ದವು. ಭ್ರಾಮಕ ಜಗತ್ತಿನ ನೈಜ ಕಥಾಪಾತ್ರಗಳು ನೈಜತೆಗೆ ಹತ್ತಿರವಾಗಿರುತ್ತಿದ್ದವು. 

ಶ್ರೀನಿವಾಸನ್ ಹಲವು ಸಿನಿಮಾಗಳು ನಮ್ಮ ನನಪಿನ ಪರದೆಯಲ್ಲಿ ಅಚ್ಚಳಿಯದ ಪ್ರಭಾವವನ್ನು  ಉಂಟು ಮಾಡಿ ಶಾಶ್ವತವಾಗಿ ನೆಲೆನಿಲ್ಲುತ್ತವೆ. ಅದರ ಛಾಯೆಯ ನೆರಳು ಎಂದಿಗೂ ಮಾಸುವುದಕ್ಕೆ ಸಾಧ್ಯವಿಲ್ಲ. ನಾಡೋಡಿಕ್ಕಾಟು, ಸಂದೇಶಂ, ಕಥ ಪರಯುಂಬೋಳ್, ಮಯಯತ್ತು ಮುಂಬೆ, ಅಯಾಳ್ ಕಥ ಎಳುದುಗೆಯಾಣ, ಪೊನ್ಮುಟ್ಟ ಯಿಡುನ್ನ ತಾರಾವು, ವಿದ್ಯಾರಂಭಂ, ತಳಯಾಣ ಮಂತ್ರಂ. ಚಿಂತಾವಿಷ್ಟಮಾಯ ಶ್ಯಾಮಲ, ವಡಕ್ಕು ನೋಕ್ಕು ಯಂತ್ರಂ, ಞಾನ್ ಪ್ರಕಾಶನ್, ಟಿ ಪಿ ಬಾಲಗೋಲನ್ ಎಂ ಎ, ಗಾಂಧಿನಗರ್ ಸೆಕೆಂಡ್ ಸ್ಟ್ರೀಟ್, ಸನ್ಮನಸ್ಸುಳ್ಳವರ್ಕ್ ಸಮಾಧಾನಂ, ಭಾಗ್ಯವಾನ್,  ಓಡರುದಮ್ಮಾವ,  ಅರಂ + ಅರಂ+ ಕಿನ್ನಾರಂ, ಮುಕುಂದೇಟ್ಟಾಅ ಸುಮಿತ್ರ ವಿಳಿಕ್ಕುನ್ನು, ತೇನ್ ಮಾವಿನ್ ಕೊಂಬತ್ತ್ , ಚಂದ್ರಲೇಖ, ಚಿಂತಾವಿಷ್ಟಮಾಯ ಶ್ಯಾಮಲ,  ಮುಂತಾದ ಸಿನಿಮಾಗಳನ್ನು ಇಂದಿಗೂ ಮಲಯಾಳಿ ಪ್ರೇಕ್ಷಕ ಮರೆಯುವುದಕ್ಕೆ ಸಾಧ್ಯವಿಲ್ಲ.  ಖ್ಯಾತ ನಟ ಮೋಹನ್ ಲಾಲ್ ಜತೆಗಾರಿಕೆಯಲ್ಲಿ ಹಲವು ಮರೆಯಲಾಗದ ಸಿನಿಮಾಗಳು ಬಂದಿವೆ. ಇವರಿಬ್ಬರ ಜತೆಗಾರಿಕೆ ಸಿನಿಮಾಗಳಿ ಹೊಸ ಮೆರುಗನ್ನು ತಂದುಕೊಡುತ್ತಿದ್ದವು. 

ವಿಡಂಬನಾತ್ಮಕ ನವಿರು ಹಾಸ್ಯಕ್ಕೆ ಶ್ರೀನಿವಾಸನ್ ಹೆಸರುವಾಸಿ. ಸಿನಿಮಾ ನೋಡಿದಾಗ ಪಕ್ಕನೆ ನಗು ಬರದೇ ಇದ್ದರೂ ಮತ್ತೆ ಮತ್ತೆ ಚಿಂತಿಸಿ ನಗುವ ಹಾಸ್ಯಗಳು. ಮಲಯಾಳಂ ಖ್ಯಾತ ನಿರ್ದೇಶಕ ಸತ್ಯನ್ ಅಂತಿಕಾಡ್ ಜತೆಗಾರಿಕೆಯಲ್ಲಿ ಹಲವು ಉತ್ತಮ ಸಿನಿಮಾಗಳು ಬಂದಿವೆ. ಅದರಂತೆ ಪ್ರಿಯದರ್ಶನ್ ಜತೆಯಲ್ಲಿ ಹಲವಾರು ಸಿನಿಮಾಗಳು ಜನಪ್ರಿಯವಾಗಿವೆ. 

ಒಂದು ರೀತಿಯಲ್ಲಿ ಮಲಯಾಳಂ ಮಾತ್ರವಲ್ಲ ಭಾರತೀಯ ಚಿತ್ರರಂಗದ ವಿಶಿಷ್ಟವ್ಯಕ್ತಿ ಶ್ರೀನಿವಾಸನ್ ಎಂದರೆ ತಪ್ಪಲ್ಲ. ಇನ್ನು ಬಿಟ್ಟು ಹೋದ ಸಿನಿಮಾಗಳಷ್ಟೇ ಸೀಮಿತವಾಗಿ ಶ್ರೀನಿವಾಸನ್ ನೆನಪುಗಳನ್ನು ಒದಗಿಸಿ ನಮ್ಮಿಂದ ಮರೆಯಾಗಿದ್ದಾರೆ. ಅಗಲಿದ ಆತ್ಮಕ್ಕೆ ಚಿರಶಾಂತಿಯನ್ನು ಭಗವಂತ ಕರುಣಿಸಲಿ.