ಮೊನ್ನೆ ಶಬರಿಮಲೆಯಾತ್ರೆಯಲ್ಲಿ ಮುಂಜಾನೆ ಸೂರ್ಯೋದಯದ ಮೊದಲು ಕತ್ತಲೆಯಲ್ಲೇ ನಾವು ಮಲೆ ಏರುವುದಕ್ಕೆ ಶುರುಮಾಡಿದೆವು. ಹೆಚ್ಚು ಜನಸಂದಣಿ ಇರದಿದ್ದರೂ ಹಲವಾರು ಜನ ಮಲೆ ಏರುವವರು ಇದ್ದರು. ಕೆಳಗಿನಿಂದ ಮೇಲೆ ಸನ್ನಿಧಾನದವರೆಗೂ ಇದ್ದ ಧ್ವನಿ ವರ್ಧಕದಲ್ಲಿ ಖ್ಯಾತ ಗಾಯಗ ಜೇಸುದಾಸ್ ಅವರ ಭಕ್ತಿ ಗೀತೆ ಇಂಪಾಗಿ ಕೇಳಿಬುರುತ್ತಿದ್ದರೆ, ಮಲೆ ಏರುವುದಕ್ಕೆ ಭಕ್ತಿ ಪ್ರೇರಕ ಶಕ್ತಿಯಂತೆ ಪ್ರಚೋದನೆಯಾಗುತ್ತಿತ್ತು. ಬರಿಗಾಲಲ್ಲಿ ಕಲ್ಲಿನ ರಸ್ತೆಯನ್ನು, ಮೆಟ್ಟಲನ್ನು ಏರುವಾಗ ಪಾದಗಳು ನೋಯುತ್ತಿದ್ದರೂ ಅದೊಂದು ಭಕ್ತಿಯ ಭಾವ ಎಲ್ಲವನ್ನು ಮರೆಸುವಂತೆ ಮಾಡುತ್ತಿತ್ತು. ಎಲ್ಲರೂ ಏರುತ್ತಿದ್ದರೆ ಅಲ್ಲೊಂದು ಇಲ್ಲೊಂದು ಅಯ್ಯಪ್ಪ ಶರಣು ಕೂಗು ಕೇಳಿಸುತ್ತಿದ್ದದ್ದು ಬಿಟ್ಟರೆ ಏದುಸಿರೇ ಅಧಿಕ ಕೇಳಿ ಬರುತ್ತಿತ್ತು. ಮುಂಜಾನೆಯ ತಣ್ಣನೆಗಾಳಿಯನ್ನು ಭೇದಿಸಿ ಮೈಯಿಂದ ಬೆವರು ಸುರಿಯುತ್ತಿತ್ತು.
ಅಪ್ಪಾಚಿ ಮೇಡು ಹತ್ತಿರ ಇರಬೇಕು ನಾನು ಒಂದರ ಹಿಂದೆ ಒಂದು ಹೆಜ್ಜೆಯನ್ನು ವೇಗವಾಗಿ ಎತ್ತಿಡುತ್ತಾ ಒಂದಷ್ಟು ದೂರ ಬೇಗ ಏರಿ ಹೋಗಿ ಹಿಂದಿರುಗಿ ನೋಡಿದರೆ ನನ್ನಾಕೆ ಮತ್ತು ಮಗ ತುಂಬ ಹಿಂದುಳಿದಿದ್ದರು. ಸುಸ್ತಾದ ನನ್ನಾಕೆ ಮೆಟ್ಟಲ ಬದಿಯಲ್ಲಿದ್ದ ಕಟ್ಟೆಯಲ್ಲಿ ಸುಸ್ತಾಗಿ ಕುಳಿತಿದ್ದಳು. ಯಾರೋ ಒಬ್ಬರು ಆಕೆಗೆ ಬೀಸಣಿಕೆಯಿಂದ ಗಾಳಿ ಹಾಕುತ್ತಿದ್ದರು. ಒಂದು ಕ್ಷಣ ನೋಡಿದರೆ ಗಾಬರಿಯಾಗಬೇಕು. ಆದರೆ ಹಾಗಲ್ಲ. ಹಾಗೆ ಸುಸ್ತಾಗಿ ಯಾರಾದರೂ ಕುಳಿತರೆ ಕೆಲವರು ಬಂದು ಗಾಳಿ ಹಾಕುತ್ತಾರೆ. ಇದೊಂದು ಬಗೆಯ ವಿಶಿಷ್ಟ ಸೇವೆ. ಶಬರಿ ಮಲೆ ಯಾತ್ರೆ ಎಂದರೆ ಹೀಗೆ ಅಲ್ಲಿ ಎಲ್ಲವೂ ಭಗವಂತನ ಸೇವೆಯಾಗುತ್ತದೆ. ಭಗವಂತನೆಂದರೆ ಭಕ್ತರ ದಾಸ. ದಾಸರ ದಾಸ ಭಗವಂತ ಎಂಬ ಮಾತು ಇದೆ. ಅದಕ್ಕೆ ಪ್ರತೀಕ ಎಂಬಂತೆ ಇಲ್ಲಿ ಭಕ್ತರ ಸೇವೆ ಮಾಡುವುದನ್ನು ಕಾಣಬಹುದು. ಹತ್ತುವ ಇಳಿಯುವ ಭಕ್ತರ ಸೇವೆ ಮಾಡುವುದು ಕೂಡ ಅಯ್ಯಪ್ಪ ಸ್ವಾಮಿಯ ಸೇವೆಯಾಗುತ್ತದೆ. ಅದರ ಮೂಲಕ ಭಗವಂತನ ಅನುಗ್ರಹ ನಿರೀಕ್ಷೆ ಇರುತ್ತದೆ.
ಒಂದೆರಡು ಕಡೆ ಕುಡಿಯುವ ನೀರಿನ ಜತೆಗೆ ಬಿಸ್ಕತ್ ಇಟ್ಟಿದ್ದರು. ನೀವು ಎಷ್ಟಾದರೂ ಬಿಸ್ಕತ್ತ ತೆಗೆದುಕೊಂಡು ನೀರು ಕುಡಿಯಬಹುದು. ಇದು ಸಂಪೂರ್ಣ ಉಚಿತ, ಇದೊಂದು ಬಗೆ ಭಕ್ತರ ಸೇವಯ ಮುಖೇನ ದೇವರ ಸೇವೆ. ಬಿಸ್ಕ್ತತ್ತು ಹಾಕಿಟ್ಟ ಪಾತ್ರೆ ಘಳಿಗೆಯಲ್ಲಿ ಖಾಲಿಯಾಗುತ್ತಿತ್ತು ಹಾಗೆ ಅದಕ್ಕೆ ಬಿಸ್ಕತ್ತು ಸುರಿಯುತ್ತಿದ್ದರು. ನಿಜಕ್ಕೂ ಇದೊಂದು ಆಶ್ಚರ್ಯವನ್ನು ಉಂಟು ಮಾಡಿತ್ತು. ಹೀಗೆ ಶಬರಿ ಮಲೆ ಯಾತ್ರೆ ಎಂಬುದು ಹಲವು ಮರೆಯದ ಅನುಭವಗಳನ್ನು ಕಟ್ಟಿಕೊಡುತ್ತಿತ್ತು. ಒಂದು ಸಲ ಹೋಗಿ ಬರೋಣವೆಂದಿದ್ದ ನನ್ನಾಕೆ ಈಗ ಪುನಃ ಯಾವಾಗ ಹೋಗೊಣ ಎಂದು ಕೇಳುತ್ತಾಳೆ. ಶಬರಿಮಲೆ ಯಾತ್ರೆ ಎಂಬುದು ಬದುಕಿನಲ್ಲಿ ಅನುಭವಿಸಿ ಪಡೆಯಲೇಬೇಕಾದ ಒಂದು ಅನುಭವ.
ಯಾತ್ರೆಯುದ್ದಕ್ಕೂ ಅದು ಕೇವಲ ಅಯ್ಯಪ್ಪನ ದರ್ಶನದ ಏಕೈಕ ಉದ್ದೇಶವಾಗಿ ಕಾಣುತ್ತದೆ. ಪಂಪದಿಂದ ಮೇಲೆ ಸನ್ನಿಧಾನದ ವರೆಗೂ ಹಲವು ಬಗೆಯ ಭಕ್ತರನ್ನು ಕಾಣ ಬಹುದು. ಅಂಗ ವಿಕಲರೂ ಅಶಕ್ತರು ಒಂದೆಡೆಯಾದರೆ ಪುಟ್ಟ ಮಕ್ಕಳನ್ನೂ ತಮ್ಮ ಇರುಮುಡಿಯೊಂದಿಗೆ ಅವರ ಇರುಮುಡಿಯನ್ನು ಹೊತ್ತುಕೊಳ್ಳುವುದು ಮಾತ್ರವಲ್ಲ ಮಗುವನ್ನೂ ಹೆಗಲಲ್ಲಿ ಹೊತ್ತುಕೊಂಡು ತಮ್ಮ ಮಗುವಿಗೆ ಅಯ್ಯಪ್ಪನ ದರ್ಶನ ಮಾಡಿಸುವ ಉದ್ದೇಶದಲ್ಲಿ ಅವರು ಮಲೆಯ ಒಂದೊಂದೆ ಹೆಜ್ಜೆಗಳನ್ನು ಇಡುವುದನ್ನು ಕಾಣುವಾಗ ಇದು ಕೇವಲ ದೇವರ ದರ್ಶನವಲ್ಲ, ಬದುಕಿನ ಸರ್ವಾಂಗ ದರ್ಶನದಂತೆ ಭಾಸವಾಗುತ್ತದೆ. ಪಂಪೆಯ ನದೀ ತೀರದಲ್ಲಿ ಹಲವಾರು ಜನ ಸಿಕ್ಕ ಸಿಕ್ಕಲ್ಲಿ ನಿದ್ರಿಸುತ್ತಿದ್ದರು. ಕಪ್ಪು ಅಥವಾ ಕಾವಿಲುಂಗಿ ಧರಿಸಿ ಯಾವ ಆಡಂಬರವೂ ಇಲ್ಲದೆ ಎಲ್ಲೆಂದರಲ್ಲಿ ಬಿದ್ದಿರುತ್ತಿದ್ದರು. ತೀರ ಬಡವರು ಎಂದು ತಿಳೀದರೆ ತಪ್ಪಾದೀತು. ಯಾಕೆಂದರೆ ಅದರಲ್ಲಿ ಕೋಟ್ಯಾಧಿಪತಿ ಶ್ರೀಮಂತನೂ ಇರಬಹುದು. ತೀರ ಬಡವನೂ ಇರಬಹುದು. ಧನಿಕ ಶ್ರೀಮಂತ ಎಂಬ ಭೇದವಿಲ್ಲ.ಅಲ್ಲಿ ನಿದ್ರೆ ಹಸಿವಿಗೆ ಪ್ರಾಧಾನ್ಯತೆ ಇಲ್ಲ. ಕೇವಲ ಒಂದೇ ಗುರಿ ಅದು ಅಯ್ಯಪ್ಪ ದರ್ಶನ. ಹಾಗಾಗಿ ಶಬರಿ ಮಲೆ ಹೋಗುವಾಗ ನಿಮಗೆ ಅಲ್ಲಿ ಹಲವು ಅಸೌಕರ್ಯಗಳು ಕಾಣಬಹುದು. ಸ್ನಾನ ನಿದ್ರೆ ಆಹಾರಕ್ಕೆ ಸರಿಯಾದ ವ್ಯವಸ್ಥೆ ಇಲ್ಲದಂತೆ ಇರಬಹುದು. ಬರಿಗಾಲಲ್ಲಿ ನಡೆಯಬಹುದು. ಎಂತಹ ಶ್ರೀಮಂತನೂ ಮನೆಯಲ್ಲಿ ಹವಾನಿಯಂತ್ರಿತ ಕೊಠಡಿಯಲ್ಲಿ ಮಲಗಿದರೂ ಇಲ್ಲಿ ಬಂದು ಬೀದಿಯಲ್ಲಿ ಮಲಗಿಬಿಡುತ್ತಾನೆ. ಕಾರಣ ಅಲ್ಲಿರುವ ಬಯಕೆ ಒಂದೇ ಅಯ್ಯಪ್ಪ ದರ್ಶನ. ಬೇರೆ ಯಾವ ಕ್ಷೇತ್ರದಲ್ಲೂ ಇದನ್ನು ಕಾಣುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಮನಸ್ಸಿನ ಭಾವ ಒಂದೇ ಎಲ್ಲವೂ ನೀನೆ. ಒಂ ತತ್ವಮಸಿ. ಸಾವಿರ ಗ್ರಂಥವನ್ನು ಅಧ್ಯಯನ ಮಾಡಿದರೂ ಸಿಗದ ಜ್ಞಾನ ಅದರ ತತ್ವ ಕೇವಲ ಒಂದು ಶಬರಿಮಲೆ ಯಾತ್ರೆಯಲ್ಲಿ ಸಿದ್ದಿಸಿಬಿಡುತ್ತದೆ. ಅಧ್ಯಾತ್ಮಿಕ ತತ್ವ ಎಂಬುದು ಸನಾತನ ಧರ್ಮದ ತತ್ವ. ಮನುಷ್ಯನ ಬದುಕಿನ ಗುರಿ ಏನು ಎಂಬುದನ್ನು ತೋರಿಸಿಕೊಡುತ್ತದೆ. ನಮ್ಮ ವಶವಿಲ್ಲದ ಅದೊಂದು ಶಕ್ತಿ ನಮ್ಮನ್ನು ನಿಯಂತ್ರಿಸುತ್ತದೆ. ಈ ಜ್ಞಾನವನ್ನು ಹೆಜ್ಜೆ ಹೆಜ್ಜೆಗೂ ಒದಗಿಸುತ್ತದೆ. ಹಿಂದೂ ಧರ್ಮ ಸನಾತನ ಧರ್ಮ ಎಂದು ಹೀಗಳೆಯುವ ಬುದ್ಧಿಜೀವಿಗಳಿರಬಹುದು. ಒಂದು ಬಾರಿ ಮಾಲೆ ಧರಿಸಿ ವೃತ ಹಿಡಿದು ಯಾತ್ರೆ ಮಾಡಿ ಅಯ್ಯಪ್ಪ ದರ್ಶನ ಮಾಡಬೇಕು. ಆಗ ಈ ತತ್ವದ ಅರಿವಾಗುತ್ತದೆ.
