Thursday, September 25, 2025

ನಮ್ಮದಲ್ಲ

ಇತ್ತೀಚೆಗೆ ಬಿಡುಗಡೆಯಾದ ಸಂಶಯಂ ಎನ್ನುವ ಮಲಯಾಳಂ ಸಿನಿಮಾ ನೋಡಿದೆ. ಮಾರ್ಮಿಕ ಕಥಾ ಹಂದರ ಭಾವಾನಾತ್ಮಕ ಸಂಭಂಧಗಳ ಸರಳ ಸುಂದರ ಕಥೆಯ ಚಲನ ಚಿತ್ರವಿದು. ಹೊಸದಾಗಿ ಮದುವೆಯಾದ ನಾಯಕ ನಾಯಕಿಗೆ ಬಹಳ ಕಾಲ ಮಕ್ಕಳಾಗದೇ ಕೊನೆಗೆ ಆಕೆ ಗರ್ಭವತಿಯಾಗಿ ಮಗುವನ್ನು ಪಡೆಯುತ್ತಾಳೆ. ಎರಡು ವರ್ಷ ಕಳೆದ ನಂತರ ಆಕೆಗೆ ಆ  ಮಗು ತನ್ನದಲ್ಲ ಎಂಬ ಸಂಶಯ ಬರುತ್ತದೆ. ಆಕೆ ಪ್ರಸವಿಸಿದ ಅದೇ ಅಸ್ಪತ್ರೆಯಲ್ಲಿ ಆ ಸಮಯ ಐದಾರು ಮಕ್ಕಳ ಜನನವಾಗಿರುತ್ತದೆ. ಹಾಗಾಗಿ ಅಲ್ಲಿ ಅದಲು ಬದಲಾಗಿರುವ ಸಾಧ್ಯತೆ ಇರುತ್ತದೆ.  ಅಲ್ಲಿಂದ ಆ ಮಗುವಿನ ಅಪ್ಪ ಅಮ್ಮ ಯಾರು? ಎಂಬ ಹುಡುಕಾಟ.  ಕೊನೆಯಲ್ಲಿ ಆಕೆ ಹೆತ್ತ ಮಗುವಿನ ಪತ್ತೆಯಾಗುತ್ತದೆ. ನ್ಯಾಯಾಲಯದಲ್ಲಿ ಮೊಕದ್ದಮೆಯೂ ದಾಖಲಾಗುತ್ತದೆ.  ಡಿ ಎನ್ ಎ ಪರೀಕ್ಷೆ ಮಾಡಿದಾಗ ಈಕೆಯ ಸಂಶಯ ನಿಜವಾಗಿ ನಿಜವಾದ ಮಗುವನ್ನು ಪಡೆಯುವಂತೆ ನ್ಯಾಯಲಯ ತೀರ್ಪುಕೊಡುತ್ತದೆ. ಅಲ್ಲಿಂದಲೇ ನಿಜವಾದ ಸಮಸ್ಯೆ ಎದುರಾಗುವುದು. ಆ  ಮಗುವನ್ನು ಬದಲಾಯಿಸುವುದು ಹೇಗೆ? ಅದರ ಮತ್ತೊಂದು ಅಪ್ಪ ಅಮ್ಮ ಅದನ್ನು ಕೊಡುವುದಕ್ಕೆ ಸಿದ್ದರಿರುವುದಿಲ್ಲ. ಮೇಲಾಗಿ ಅವರು ಮುಸ್ಲಿಂ ...ಹೀಗೆಲ್ಲ ಸಮಸ್ಯೆಗಳಿದ್ದರೂ ನ್ಯಾಯಾಲಯದ ತೀರ್ಪು ಗೌರವಿಸಲೇ ಬೇಕು. ಮಗುವನ್ನು ಬದಲಾಯಿಸುವಾಗ ...ತಾಯಂದಿರೇನೋ ಬದಲಿಸಿಕೊಳ್ಳಬಹುದು. ಆದರೆ ಆ ಮಗುವಿಗೆ ಇದರ ಅರಿವು ಇರಬಹುದೇ? ಅದಾಗಲೇ ತನ್ನ ಅಮ್ಮ ಇದೇ ಅಂತ ಭಾವನಾತ್ಮಕವಾಗಿ ಆ ಮಗು ತಿಳಿಯದೇ ಸಂಬಂಧ ಬೆಳೆಸಿರುತ್ತದೆ. ಅದಕ್ಕೆ ನ್ಯಾಯಾಲಯವಾಗಲಿ ಈ ಅಮ್ಮಂದಿರ ಭಾವನೆಯಾಗಲೀ ಪರಿವೆ ಇರುವುದಿಲ್ಲ. ಇಲ್ಲಿ ಮಗುವಿನ ಮಾನಸಿಕ ನೆಲೆಗೆ ಗೌರವ ಎಲ್ಲಿಂದ ಬರಬೇಕು? ತನ್ನದಲ್ಲದ ಅಮ್ಮನನ್ನು ಅಮ್ಮನೇ ಅಂತ ಅದು ಮಾನಸಿಕವಾಗಿ ಒಪ್ಪಿಕೊಂಡಿರುತ್ತದೆ. ದೈಹಿಕ ಸಂಬಂಧಗಳಿಗಿಂತಲೂ ಮಾನಸಿಕ ಸಂಭಧಗಳು ಭಾವನೆಗಳಿಗೆ ಹೆಚ್ಚು ಮೌಲ್ಯ. ಆದರೆ ಅದು ನಾನು ಹೆತ್ತ ಮಗುವಲ್ಲ ಯಾರೋ ಹೆತ್ತ ಮಗು ಎಂದು ಮನಸ್ಸಿಗೆ ಭಾವನೆ ಬಂದಾಗ ಮಗುವನ್ನು ಒಪ್ಪಿಕೊಂಡು ಆ ಮಗುವಿನಂತೆ ಸಂಭಂಧ ಬೆಸೆಯುವುದಕ್ಕೆ ಅಮ್ಮನಿಗೆ ಸಾಧ್ಯವಾಗುವುದಿಲ್ಲ. 

ವಾಸ್ತವದ ಸ್ಥಿತಿ ಮತ್ತು ಸತ್ಯ ಹೇಗೆ ಇರಲಿ ಮನಸ್ಸಿಗೆ ಹೀಗೆ ಎಂಬ ಭಾವನೆ ಬಂದು ಬಿಟ್ಟರೆ ಅಲ್ಲಿ ದೇಹ ಸಹಕರಿಸುವುದಿಲ್ಲ. ಅದು ನನ್ನದಲ್ಲ ಈ ಭಾವನೆ ಒಂದೇ ಸಾಕಾಗುತ್ತದೆ. ಅದು ಅಮ್ಮನಿಗಾದರೂ ಮಗುವಿಗಾದರೂ ಅಷ್ಟೇ. 

ಮೊದಲು ಊರ ಮನೆಯಲ್ಲಿ ನಾಯಿಯನ್ನು ಸಾಕುತ್ತಿದ್ದೆವು. ನಾಯಿಗೆ ಊಟ ಹಾಕುವುದಕ್ಕೆ ಒಂದು ಹಳೆಯ ತಟ್ಟೆ ಇರುತ್ತಿತ್ತು. ಆ ತಟ್ಟೆ ಎಷ್ಟೇ ಶುಚಿಯಾಗಿರಲಿ, ಅದನ್ನು ಕಾಲಿಂದ ತಳ್ಳಿ ಅದಕ್ಕೆ ಅನ್ನ ಆಹಾರ ಹಾಕುತ್ತಿದ್ದೆವು. ಇಲ್ಲಿ ಆ ಪಾತ್ರೆ ನಾಯಿ ಉಂಡ ಪಾತ್ರೆ ಎಂಬುದಷ್ಟೇ ಮುಖ್ಯವಾಗುತ್ತಿತ್ತು. ಅದು ಮನುಷ್ಯರು ಕೈಯಿಂದ ಮುಟ್ಟುವಂತಹುದಲ್ಲ. ಮನಸ್ಸಿನ ಭಾವನೆ ಅದೊಂದು ವಿಚಿತ್ರ ಕಲ್ಪನೆ. ನಮ್ಮದು ಅಥವಾ ನಮ್ಮದಲ್ಲ ಈ ಭಾವನೆಗಳ ವೆತ್ಯಾಸದಲ್ಲಿ ನಮ್ಮ ಪ್ರವೃತ್ತಿ ಇರುತ್ತದೆ.  

ಕೆಲವೊಮ್ಮೆ ಯಾವುದೇ ಕಾರ್ಯ ಕೆಲಸಗಳು ಇದೇ ಬಗೆಯಲ್ಲಿ ವರ್ಗೀಕರಿಸಲ್ಪಡುತ್ತದೆ. ಅದು ಸತ್ಕಾರ್ಯ ಅಥವ ದುಷ್ಕಾರ್ಯ, ಇಲ್ಲಿ ಕಾರ್ಯ ಮುಖ್ಯವಾಗುವುದಿಲ್ಲ. ಅದು ಮಾಡುವ ವ್ಯಕ್ತಿ ಅಥವಾ ಸನ್ನಿವೇಶ ಮುಖ್ಯವಾಗುತ್ತದೆ. ಒಂದು ಒಳ್ಳೆಯ ಸತ್ಕಾರ್ಯ...ನಮಗೆ ಆಗದೇ ಇದ್ದವರು ಮಾಡಿದಾಗ ಅದನ್ನು ಒಪ್ಪಿಕೊಳ್ಳುವುದಕ್ಕೆ ಮನಸ್ಸು ಸಿದ್ದರಿರುವುದಿಲ್ಲ. ಅದೇ ಬಗೆಯಲ್ಲಿ ಯಾವುದೇ ಕೆಟ್ಟ ಕೆಲಸವನ್ನು ನಮ್ಮ ಇಷ್ಟವಿದ್ದವರು ಮಾಡುವಾಗ ಅದನ್ನು ಕೆಟ್ಟದ್ದು ಎಂದು ಹೇಳುವುದರಲ್ಲಿ ಆತ್ಮವಂಚನೆ ಎದುರಾಗುತ್ತದೆ. ಅದು ಕೆಲಸದ ಮೇಲಿನ ಭಾವವಲ್ಲ. ಕೇವಲ ಮನುಷ್ಯ ಸಂಬಂಧದ ಮೇಲಿನ ಭಾವ.  ಕಾರ್ಯ ಒಂದೇ ಇರುತ್ತದೆ, ಮಾಡುವ ವ್ಯಕ್ತಿ ಬೇರೆ ಬೇರೆಯಾಗಿರುತ್ತದೆ. 

ಅಷ್ಟಾಂಗ ಯೋಗದಲ್ಲಿ ಒಂದು ನಿಯಮವಿದೆ ಅಹಿಂಸೆ. ಅಂದರೆ ಹಿಂಸೆಯನ್ನು ಮಾಡದೇ ಇರುವುದು. ಇಲ್ಲಿ ಹಿಂಸೆ ಎಂಬುದು ಮನಸ್ಸಿನ ಹಿಂಸಾತ್ಮಕ ಮನೋಭಾವವನ್ನು ಹೊಂದಿದೆ. ಅಹಿಂಸೆ ಎನ್ನುವುದು ಮಾಂಸಾಹಾರಿಯಾಗುವುದರಲ್ಲಿ ಇಲ್ಲ. ಮೇಲ್ನೋಟಕ್ಕೆ ನೋಡುವಾಗ ಸಸ್ಯಹಾರಿಯಾಗುವುದರಲ್ಲಿ ಅಹಿಂಸಾ ಗುಣವಿರುತ್ತದೆ. ಆದರೆ ವಾಸ್ತವದಲ್ಲಿ ಮಾಂಸಾಹಾರಿಯಾಗಿದ್ದರೂ ಅಹಿಂಸಾ ಗುಣವನ್ನು ಅಳವಡಿಸಿಕೊಳ್ಳಬಹುದು. ಹಿಂಸೆ ಅದು ಮನಸ್ಸಿನ ಭಾವದಲ್ಲಿರುತ್ತದೆ ಹೊರತು ಕೃತ್ಯದಲ್ಲಿ ಇರುವುದಿಲ್ಲ. ಯಾರಿಗೂ ಮನಸ್ಸಿನಿಂದಲೂ ಹಿಂಸಾತ್ಮಕ ಚಿಂತನೆಯಿಂದ ನೋವಾಗದಂತೆ ವರ್ತಿಸುವುದು ಅಹಿಂಸಾ ಗುಣವಾಗಿರುತ್ತದೆ. ಹಿಂಸೆ ಎಂಬುದು ಪ್ರವೃತ್ತಿಗಿಂತಲೂ ಮನೋಭಾವದಿಂದ ಕೂಡಿರುತ್ತದೆ. ಹಿತೈಷಿಗಳು  ಪ್ರೀತಿಯಿಂದ ಕೆಟ್ಟದಾಗಿ ಗದರಿದರೂ ಅದು ಬೈಗುಳವಾಗುವುದಿಲ್ಲ. ಅಥವಾ ದ್ವೇಷದಿಂದ ಶತ್ರುಗಳು ವ್ಯಂಗ್ಯವಾಗಿ ಹೊಗಳಿದರೂ ಅದು ಸ್ತುತಿಯಾಗುವುದಿಲ್ಲ.  ಮನೋಭಾವ ಎಂಬುದು ಪ್ರವೃತ್ತಿಗೆ ಪೂರಕವಾಗಿರುವುದಿಲ್ಲ. ಅದು ವ್ಯಕ್ತಿರಿಕ್ತವಾಗಿರುತ್ತದೆ. 

ಯಾವುದೋ ಒಂದು ಹಾಡು ಯಾರಿಗೋ ಇಷ್ಟವಾಗುತ್ತದೆ ಎನ್ನುವ ಕಾರಣಕ್ಕೆ ಮೊತ್ತೊಬ್ಬರಿಗೆ ಇಷ್ಟವಾಗುವುದಿಲ್ಲ. ಹಾಡಿನ ಭಾವಾರ್ಥವಾಗಲಿ, ಹಾಡಿನ ಸಂದೇಶವಾಗಲಿ, ಹಾಡಿನ ರಾಗ ತಾಳವಾಗಲೀ ಕಾರಣವಾಗದೇ ಯಾರೋ ಇಷ್ಟ ಪಟ್ಟಿದ್ದಾರೆ ಎನ್ನುವುದಕ್ಕೆ ಅದನ್ನು ಹಾಡುವುದಕ್ಕೆ ಕೇಳುವುದಕ್ಕೆ ಬಯಸುವುದಿಲ್ಲ. ಕೇವಲ ಮನಸ್ಸಿನ ಭಾವ ಮಾತ್ರ. ಯಾವುದೋ ಹಾಡು ಯಾರೋ ದ್ವೇಷಿಸಿದ ಮಾತ್ರಕ್ಕೆ ಅದು ಕೆಟ್ಟ ಹಾಡಾಗುವುದಿಲ್ಲ.  ನಮ್ಮ ಮೆಚ್ಚಿನ ನಟ ಕೆಟ್ಟ ಸಿನಿಮಾದಲ್ಲಿ ನಟಿಸಿದರೂ ಅದು ಕೆಲವು ಸಲ ಇಷ್ಟವಾಗುತ್ತದೆ. ಅಭಿಮಾನದಲ್ಲಿ ಕೆಟ್ಟದ್ದು ಎಂಬುದು ಮುಚ್ಚಿ ಹೋಗುತ್ತದೆ.  ಹೆತ್ತ ತಾಯಿಗೆ ಹೆಗ್ಗಣ ಮುದ್ದು ಎಂದಾಗುವುದು ಇದೇ ಭಾವದಲ್ಲಿ. ಯಾವುದೋ ಒಂದು ನಮಗೆ ಇಷ್ಟವಾಗುತ್ತದೆ. ಮತ್ತೊಬ್ಬರಿಗೆ ಇಷ್ಟವಾಗಲಿಲ್ಲ ಎನ್ನುವುದಕ್ಕೆ ನಮ್ಮ ಇಷ್ಟವೆಂಬುದು ಮೌಲ್ಯರಹಿತವಾಗುವುದಿಲ್ಲ. ಮತ್ತೊಬ್ಬರ ಮನಸ್ಸನ್ನಷ್ಟೇ ಪರಿಗಣಿಸಿ ನಮ್ಮ ಇಷ್ಟವನ್ನು ನಾವು ಗೌರವಿಸಿಬಿಡುವುದರಲ್ಲಿ ಆತ್ಮ ತೃಪ್ತಿ ಇರುತ್ತದೆ. ನಲ್ಲ ಪ್ರೀತಿಯಿಂದ ಕೊಟ್ಟ ಒಂದು ಸಣ್ಣ ಹೂವು ಅವ್ಯಕ್ತವಾದ ಪರಿಮಳವನ್ನು ಬೀರಿದಂತೆ ಇಲ್ಲಿ ಪ್ರೀತಿ ಮಾತ್ರ ಗೌರವಿಸಲ್ಪಡುತ್ತದೆ. ಪ್ರೀತಿ ಎಂಬ ಭಾವ ಮಾತ್ರ ಪ್ರೇಮಿಯದಾಗಿರುತ್ತದೆ. 


Saturday, September 20, 2025

ದಾದಾ ಫಾಲ್ಕೆ ಮೋಹನ್ ಲಾಲ್

ಭರತಂ‌ , ವಾನ ಪ್ರಸ್ಥಂ  ಎಂಬ ಮಲಯಾಳಂ ಸಿನಿಮಾ ನೋಡಿದವರಿಗೆ ಮೋಹನ್ ಲಾಲ್ ಎಂಬ ದೈತ್ಯ ಪ್ರತಿಭೆಯ ಅರಿವಾಗಬಹುದು. ಈ  ಎರಡೂ ಸಿನಿಮಾಗಳಲ್ಲಿನ ಶ್ರೇಷ್ಠ ಅಭಿನಯಕ್ಕಾಗಿ  ಪಡೆದ  ಮೋಹನ್ ಲಾಲ್ ಎರಡೂಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ಅಪರೂಪದ ನಟ. ಇವೆರಡೂ ಸಿನಿಮಾಗಳು ಕೇವಲ‌ ಪ್ರತಿಭಾ ನಿದರ್ಶನ ಎನ್ನಬೇಕು.‌ಪಟ್ಟಿ ಮಾಡುತ್ತಾ ಹೋದರೆ ಯಾವುದು ಉತ್ತಮ‌ ಎಂಬ ಆಯ್ಕೆ ಸುಲಭ ಸಾಧ್ಯವಲ್ಲ. 

       ಕಿರೀಟಂ, ಚೆಂಗೋಲ್, ಕಿಲುಕ್ಕಂ  ವಂದನಂ ದಶರಥಂ, ಸದಯಂ, ಪವಿತ್ರಂ, ಪಿಂಗಾಮಿ, ಸನ್ಮನಸ್ಸುಳ್ಳವರ್ಕು ಸಮಾಧಾನಂ, ನಾಡೋಡಿಕ್ಕಾಟು, ಕಳಿಪ್ಪಾಟಂ, ಮಿಥುನಂ, ಚಂದ್ರಲೇಖ, ತನ್ಮಾತ್ರ ಹೀಗೆ ಹೇಳುತ್ತಾ ಹೋದರೆ ಅದಕ್ಕೆ  ಅಂತ್ಯವಿಲ್ಲ ಎಂದನಿಸುತ್ತದೆ. ಎಲ್ಲವೂ ಅತ್ಯುತ್ತಮ‌ ನಟನೆಗೆ ಸಾಕ್ಷಿಯಾದ ಚಿತ್ರಗಳು. ದಶಕಗಳ ಹಿಂದೆ ಇವುಗಳನ್ನು ನೋಡಿ ವಾರಗಳ ಕಾಲ‌ ಅದರ ನಶಾವಲಯಲ್ಲಿ ಹುದುಗಿ ಹೋದದ್ದು ಇನ್ನೂ ನೆನಪಲ್ಲಿದೆ. ಅಭಿನಯವೆಂದರೆ ಅದು ಮಾದರಿಯಾಗಬಲ್ಲ ನಟನಾ ಕೌಶಲವನ್ನು  ಹೊಂದಿದ ಪ್ರತಿಭಾವಂತ ಈ‌ ನಟನೆಗೆ ಮಾರು ಹೋಗದವರಿಲ್ಲ.  ಸರ್ವಾಂಗವೂ ಅಭಿನಯಕ್ಕೆ ಅರ್ಪಿಸಿಕೊಂಡ ಅದ್ಭುತ ನಟನಾಶೈಲಿಗೆ ಸಹಜವಾಗಿ ಚಲನಚಿತ್ರದ ಅತ್ಯುನ್ನತ ದಾದಾ ಸಾಹೆಬ್ ಪ್ರಶಸ್ತಿ ಒಲಿದು ಬಂದಿದೆ. ಈತನ ಪ್ರತಿಭೆಗೆ ಎಂದೋ ಇದು ಸಿಗಬೇಕಿತ್ತು, ಈಗ ಸಿಕ್ಕಿದೆ. ನಿಜಕ್ಕೂ ಲಾಲೇಟ್ಟ ಇದಕ್ಕೆ ಅರ್ಹ‌ ವ್ಯಕ್ತಿ ಎ‌ನ್ನುವುದಕ್ಕೆ ಎರಡು ಮಾತಿಲ್ಲ. 

       ಮಲಯಾಳಂ‌ ಚಿತ್ರರಂಗ ಎಂದರೆ‌ ಪ್ರತಿಭಾ ಸಂಪತ್ತಿನ  ಗಡಣವೇ  ತುಂಬಿದ ಕ್ಷೇತ್ರ. ಇಲ್ಲಿ ನೈಜ ಅಭಿನಯಕ್ಕೆ ಕಠಿಣ ಸ್ಪರ್ಧೆ ಸದಾ ಎದುರಾಗುತ್ತಿದೆ.‌ ಅಂತಹ ಕ್ಷೇತ್ರದಲ್ಲಿ ತನ್ನ ಪ್ರತಿಭೆಗೆ ಹಸರಾದ ಸಂಪೂರ್ಣ ನಟ ಮೋಹನ್ ಲಾಲ್ ಎಂಬುದರಲ್ಲಿ ಎರಡು ಮಾತಿಲ್ಲ. 

       ಎಲ್ಲಾ ಚಿತ್ರರಂಗಗಳೂ ಇಂದು ಸಂಕ್ರಮಣ ಸ್ಥಿತಿಯನ್ನು ಎದುರಿಸುತ್ತದೆ.‌ಇಂದು ಇರುವ ಸ್ಥಿತಿ ನಾಳೆ ಇಲ್ಲ. ಥಿಯೇಟರ್ ಗಳಿಗೆ ಜನ‌ಬರುತ್ತಿಲ್ಲ. ಮನೆಯಲ್ಲೇ ಕುಳಿತು ಅಚ್ಚ ಹೊಸ ಮತ್ತು ತೀರಾ ಹಳೆಯ ನೋಡಬಲ್ಲ ಅವಕಾಶ. ಬೆರಳೆಣಿಕೆಯಲ್ಲಿ ಹೊರ ಬರುವ ಸಿನಿಮಾಗಳು ಹೀಗೆ ಇಂದು ಸಿನಿಮಾ ಎಂದರೆ ಮೊದಲಿನ ಆಕರ್ಷಣೆಯನ್ನು ಕಳೆದುಕೊಂಡಿದೆ. ಅದರಲ್ಲೂ ವರ್ಷಕ್ಕೆ ಹಲವು ಸಿನಿಮಾಗಳನ್ನು ಕೊಡುತ್ತಿದ್ದ ಸೂಪರ್ ಸ್ಟಾರ್ ನಟರು, ಲೀಡ್ ರೋಲ್ ಗಳಿಗಷ್ಟೇ   ಸೀಮಿತವಾಗಿರುವುದರಿಂದ    ಇಂದು ಮೂಲೆ ಸೇರಿ ಹೆಸರಿಗಷ್ಟೇ ಸ್ಟಾರ್ ಅಗಿದ್ದಾರೆ. ಹೆಸರಾಂತ ನಟರ ಹೊಸ ಸಿನಿ‌ಮ ಬಿಡುಗಡೆಯಾಗಿ ಜಮಾನವೇ ಕಳೆದುಹೋಗಿದೆ. ಇಂತಹ ಪರಿಸ್ಥತಿಯಲ್ಲೂ ಮೋಹನ್ ಲಾಲ್ ಹೊಸ ಸಿನಿಮಾಗಳು ಬಿಡಗಡೆಯಾಗಿ ದುಡ್ಡು ಬಾಚುತ್ತಿವೆ ಎಂದರೆ ಮೋಹನ್ ಲಾಲ್ ವರ್ಚಸ್ಸು ಇನ್ನೂ ಹಸಿರಾಗಿರುವುದಕ್ಕೆ, ಎಂತಹಾ ಪಾತ್ರವನ್ನೂ ಲೀಲಾಜಾಲವಾಗಿ ಮಾಡಬಲ್ಲ ಆತನ ಪ್ರತಿಭೆಯೇ ಸಾಕ್ಷಿ.  ಎಂದಿನಂತೆ ಈ ವರ್ಷವೂ ಆತನ ಸಿನಿಮಾಗಳು ಹಿಟ್ ಆಗುತ್ತಿವೆ ಎಂದರೆ... ದಾದಾ ಸಾಹೇಬ್ ಗರಿ ಎಲ್ಲೋ ಅಕಾಶದಲ್ಲಿ ವಿಹರಿಸುತ್ತಾ ಈಗ ಮೋಹನ್ ಲಾಲ್ ತಲೆಯಲ್ಲಿ ಬಂದು ಕುಳಿತಿದೆ. 


         ಒಬ್ಬ ನಟ ಪರಿ ಪೂರ್ಣ ಎಂದಾಗಬೇಕಾದರೆ ಕೇವಲ ಸ್ಟಾರ್ ಗಿರಿ ಸಾಲದು. ಹುಚ್ಚು ಅಭಿಮಾನ ಸಾಲದು. ಯಾವುದೇ ಪಾತ್ರ, ಅದು ಕಥಾನಯಕ ಅಥವಾ ಖಳ ಪಾತ್ರವೇ ಅಗಲಿ   ಇಮೇಜ್ ತೊರೆದು  ಲೀಡ್  ರೋಲ್ ಗೆ ಅಡರದೆ ಪಾತ್ರೋಚಿತ ನಟನೆ ಮಾಡಬಲ್ಲವನಾಗಿರಬೇಕು.‌ಹಾಗಾಗಿಯೇ ಈ ಪರಿಪಕ್ವ ನಟನ ಸಿನಿಮಾ ಎಂದರೆ ಈಗಲು ಜನಾಕರ್ಷಣೆಯನ್ನು ಗಳಿಸಿದ ಇಂತಹ ನಟನಿಗೆ ಈಗ ಪಾಲ್ಕೆ ಗರಿ ಒಲಿದು ಬಂದಿರುವುದು ಕೇವಲ ಅದೃಷ್ಟವೋ ವಶೀಲಿ ಬಾಜಿಯೋ ಖಂಡಿತಾ ಅಲ್ಲ. ಇದು ದೈವದತ್ತ ಪ್ರತಿಭೆಗೆ ಒಲಿದ ಪುರಸ್ಕಾರ.‌ಇದು ಇನ್ನೂ ಹುದುಗಿರುವ ಪ್ರತಿಭೆಗೆ ಪ್ರೇರಣೆಯಾಗಲಿ ಎಂಬುದಷ್ಟೇ ಈ ಸಹಜ ನಟನ ಸಹಜಾಭಿಮಾನಿಗಳ ಆಶಯ.





Saturday, September 6, 2025

ಧರ್ಮ‌ಪರಿಷ್ಕಾರ

    ಹಿಂದೂ ಧರ್ಮದಲ್ಲಿ ಯಾರೂ ಗಂಭೀರವಾಗಿ ಯೋಚಿಸದ ಒಂದು ಗುಣವಿದೆ. ಅದು ಸಂಪೂರ್ಣ ಗ್ರಾಹ್ಯ ಸ್ವಭಾವ ಎಂದರೆ, ಪರಧರ್ಮವನ್ನು ಗ್ರಹಿಸುವ ಮತ್ತು ಗೌರವಿಸುವ ಗುಣ. ಹಾಗಾಗಿ ಇದು ಸಹಸ್ರ ಶತಮಾನಕ್ಕಿಂತ ಹಳೆಯದಾದ ತತ್ವಗಳನ್ನು ಉಳಿಸಿಕೊಂಡು ಸತತವಾಗಿ ಪರಿಷ್ಕಾರಕ್ಕೆ ಒಳಗಾಗಿದೆ. ಹಲವು ಸಲ ಈ ಪರಿಷ್ಕಾರಗುಣ ಈ ಧರ್ಮವನ್ನು ತಾತ್ಸಾರದಿಂದ ಕಾಣುವಂತೆ ಮಾಡಿದೆ. ಅದು ಸಹಜ ಹಲವು ಸಲ ನಮ್ಮ ಸದ್ಗುಣ ಸನ್ಮನಸ್ಸೂ ತಾತ್ಸರಾಗಳಿಗೆ ತುತ್ತಾಗಿ ಅವಗಣಿಸಲ್ಪಡುವುದು ಸಹಜವಾಗಿದೆ.ಅದರಂತೆ ನಮ್ಮ ಮೂರ್ಖ ರಾಜಕಾರಿಣಿಗಳ ಹಲವು ಚಿಂತಕರ ಪ್ರವೃತ್ತಿಯೂ ಇದೇ ಬಗೆಯಲ್ಲಿರುತ್ತದೆ. ಅವರಿಗೆ ಗ್ರಾಹ್ಯ ಗುಣಗಳ ಅರಿವೇ ಇಲ್ಲ.

       ಎಲ್ಲಿ ಧರ್ಮಗಳು ಪರಸ್ಪರ ಸಮಾನವಾಗಿ...ಈ ಸಮಾನವಾಗಿ ಎಂಬುದನ್ನು ಒತ್ತಿ ಹೇಳಬೇಕಿದೆ, ಅದು ಸಮಾನವಾಗಿ ಗೌರವಿಸಲ್ಪಡುವುದೋ ಅಲ್ಲಿ ಧರ್ಮಗಳ‌ ತತ್ವ ಜೀವಂತವಾಗಿ ಆನಷ್ಠಾನದಲ್ಲಿರುರುತ್ತದೆ.. ಆದರೆ ಮೂರ್ಖರಿಗೆ ಇದು ಅರ್ಥವಾಗುವುದಿಲ್ಲ. ಹಾಗಾಗಿ ತಿದ್ದುಪಡಿ ಸಮಾನತೆ ಎಲ್ಲವನ್ನೂ ಹಿಂದೂ ಧರ್ಮದಲ್ಲಿ ಅರೋಪಿಸಿಬಿಡುತ್ತಾರೆ. ಇವರ ಬಗೆಯಲ್ಲಿ ಹಿಂದೂ ಧರ್ಮ‌ಮಾತ್ರ ಬದಲಾಗಿ ಪರಿಷ್ಕರಿಸಬೇಕಾದ ಗುಣಗಳನ್ನು ಹೊಂದಿದೆ.ಆದರೆ ಪ್ರತಿಯೊಂದು ಧರ್ಮದಲ್ಲೂ ಧನಾತ್ಮಕ ಋಣಾತ್ಮಕ ಗುಣಗಳಿವೆ. ಅದನ್ನು ಒಪ್ಪಿಕೊಳ್ಳುವ ಪ್ರಾಮಣಿಕತೆ ಇರಬೇಕು ಅಷ್ಟೇ. ಆದರೆ ಧಾರ್ಮಿಕ ನಿರಪೇಕ್ಷತೆಗೆ ಪಕ್ಷಪಾತ ಶಾಪವಾಗಿ ಪರಿಣಮಿಸುವಾ ಹಿಂದೂ ಧರ್ಮ ಗುರಿಯಾಗುತ್ತದೆ.

         ಪರಧರ್ಮವನ್ನು ಗೌರವಿಸುವಾಗ ನಮ್ಮ ದರ್ಮದ ಶ್ರೇಷ್ಠ ತೆಯನ್ನು ಬಿಂಬಿಸಬೇಕು ಎನ್ನವ ಸಾಮನ್ಯ ಜ್ಞಾನವೂ ಇಲ್ಲದೇ ಹಿಂದೂ ಧರ್ಮವನ್ನು ಅವಗಣಿಸುವ ಈ ಭ್ರಷ್ಟ ಜಾತ್ಯಾತೀತ ತತ್ವದ ಢಾಂಭಿಕತನವನ್ನು ಅರಿಯಬೇಕು. ಅನ್ಯ ಧರ್ಮದ ಆಚರಣೆಯಲ್ಲಿ ನಮ್ಮ ಧರ್ಮವನ್ನು ಒತ್ತೆ ಇಡುವಾಗ ಅನ್ಯ ಧರ್ಮವನ್ನು ಇಲ್ಲೂ ಒತ್ತೆ ಇರಿಸಿಕೊಳ್ಳಬಹುದಾದ ಸಮಾನ ಸೌಹಾರ್ದತೆಯನ್ನು ಅಳವಡಿಸುವುದು ಧಾರ್ಮಿಕ ಅವಕಾಶವಾಗಬೇಕು. ಆದರೆ ಪರಮ ಸ್ವಾರ್ಥದ ಪಕ್ಷಪಾತದಲ್ಲಿ ಇದನ್ನೆಲ್ಲ‌ ಚಿಂತಿಸುವ ಮನೋಭಾವದ ಕೊರತೆಯಾಗಿದೆ. ಇದನ್ನು ಪರಮ‌ ಮೂರ್ಖತನ ಎನ್ನಬೇಕು. ಬಲವಂತದಿಂದ ಕುಂಕುಮ‌ ತಿಲಕ ಇರಿಸಿದರೂ ಬಲವಂತದಿಂದ ಟೋಪಿ ಧರಿಸಿದರೂ ಅದು ಧಾರ್ಮಿಕ ಆಷರಣೆಯಾಗುವುದಿಲ್ಲ. ಕೇವಲ ಆಷಾಢಭೂತಿತನದ ಮೂರ್ಖತನವಾಗುತ್ತದೆ