Monday, October 6, 2025

ಅಮ್ಮನ ಮಡಿಲೂ, ರಾಮನ ನವಿಲೂ,

 



ಅಮ್ಮ....ಮಕಾರದ ರೂಪಾಂತರದ ಎರಡಕ್ಷರದ ಶಬ್ದ. ಓಂಕಾರದ ಅಂತ್ಯದ ಮಕಾರಕ್ಕೂ ಅಮ್ಮದ ಮಕಾರಕ್ಕೂ ಪರಬ್ರಹ್ಮ ಸ್ವರೂಪದ ಸಾಮ್ಯತೆ ಇದೆ.  ಎರಡರಲ್ಲೂ ಎಲ್ಲಾ ಜೀವಜಾಲಕ್ಕೂ ಒಂದು ದಿವ್ಯವಾದ ಸಂಬಂಧವಿದೆ. ಈ ಸಂಬಂಧವಿಲ್ಲದ ಜೀವಿಗಳು ಭೂಮಿಯಲ್ಲಿ ಇರುವುದು ಸಾಧ್ಯವಿಲ್ಲ. ಅಮ್ಮನಂತಹ ಸ್ಥಾನ ಎಲ್ಲ ಜೀವಜಾಲದ ಮೂಲ ಪ್ರೇರಣೆ. ಇದನ್ನೇ ಮಾತೃ ಸಂಭಂಧ. ಇದುವೇ ಮೂಲ ಸಂಬಂಧ.  ಯಾವ ಜೀವದಲ್ಲಿ  ನೋಡಿದರೂ ಅಲ್ಲೊಂದು ಪ್ರೀತಿ ಪ್ರೇಮಕ್ಕಿಂತ ಅತೀತವಾಗಿ ಭಾವನಾತ್ಮಕ ಸಂಬಂಧವಿದೆ. ಅಮ್ಮನ ಶಿಕ್ಷೆ ರಕ್ಷೆಗೆ ಸಮನಾದ ಒಂದು ಭಾವಕ್ಕೆ ಆ ಕ್ರಿಯೆಗೆ ಸಮ ತೂಗಿಸಬಲ್ಲ   ಭಾವನೆ ಮತ್ತೊಂದು ಇರುವುದಕ್ಕೆ ಸಾಧ್ಯವಿಲ್ಲ.  ಹೆತ್ತ ಅಮ್ಮ ಮುದ್ದಿಸಿದಷ್ಟೇ ಸಲೀಸಾಗಿ ಹೊಡೆದು ಶಿಕ್ಷಿಸಬಲ್ಲಳು.  ಶಿಕ್ಷೆಕೊಟ್ಟರೂ ಅಲ್ಲಿ ದ್ವೇಷವಿಲ್ಲ. ಆ ಶಿಕ್ಷೆಯ ಮತ್ತೊಂದು ಪಕ್ಕದಲ್ಲಿ ರಕ್ಷೆಯೂ ಇರುತ್ತದೆ.   ಅಂ ಎನ್ನುವ ಅಂಕಾರವೇ ಆ ರೀತಿಯಲ್ಲಿರುತ್ತದೆ. ಅದನ್ನೆ ಮಮಕಾರ ಎನ್ನುವುದು. ಬಹುಶಃ ಯವುದೇ ಪ್ರಾಣಿಯೂ ಈ ಮಮಕಾರದ ಪರಿಧಿಯಿಂದ ಆಚೆಗೆ ಇರುವುದಕ್ಕೆ ಸಾಧ್ಯವಿಲ್ಲ. ಮಮ ಎಂದರೆ ನನ್ನದು ಎಂದರ್ಥ. ಹಾಗಾಗಿ ಅಮ್ಮನ ಪ್ರೀತಿಗೆ ಮತ್ತೂಂದು ಅನ್ವರ್ಥವೇ ಮಮಕಾರ. ಅಲ್ಲಿ ಇರುವ ನನ್ನದು ಎಂಬ ಪರಿಪೂರ್ಣ ಭಾವನೆ, ಆಕೆಯಲ್ಲಿರುವ ನನ್ನ ಕಂದ ನನ್ನ ದೇಹದ ಭಾಗ ಎಂಬ ಭಾವ ಬೇರೆ ಎಲ್ಲೂ ಕಾಣುವುದಕ್ಕೆ ಸಾಧ್ಯವಿಲ್ಲ. ಮನುಷ್ಯ ಬದುಕು ಕಟ್ಟಿಕೊಳ್ಳುವುದು ಈ ಮಮಕಾರವೆಂಬ ಸ್ವಾರ್ಥವಲ್ಲದ ನನ್ನದು ಎಂಬ ಭಾವನೆಯ ನೆರಳಲ್ಲಿ. ಬಹುಶಃ ಅಮ್ಮನ ಈ ’ನನ್ನದು’  ಎಂಬ ಭಾವನೆಯ ಪ್ರೇರಣೆ ಇಲ್ಲ ಎಂದು ಇರುತ್ತಿದ್ದರೆ ಈ ಜೀವಜಾಲದ ಪೋಷಣೆ ರಕ್ಷಣೆ ಸಾಧ್ಯವಿರುತಿರಲಿಲ್ಲ. ಅದು ಅಮ್ಮನ ನಿಸ್ವಾರ್ಥದ ಮಮಕಾರ. ಅಮ್ಮನ ಅಕ್ಕರೆಯ ಪ್ರೀತಿಯಲ್ಲಿ ಯಾವ ಸ್ವಾರ್ಥವೂ ಇರುವುದಿಲ್ಲ. ಸ್ವಾರ್ಥವಿದ್ದರೆ ಅದು ಅಮ್ಮನ ಪ್ರೀತಿ ಎಂದೆನಿಸುವುದೇ  ಇಲ್ಲ. ಜಗತ್ತಿನಲ್ಲಿ ಎಲ್ಲಾ ಪ್ರೀತಿಯಲ್ಲಿ ಸೂಕ್ಷ್ಮವಾಗಿಯಾದರೂ ಒಂದು ಸ್ವಾರ್ಥ ವಿರುತ್ತದೆ. ಆದರೆ ಅಮ್ಮನ ಪ್ರೀತಿಯಲ್ಲಿ...ಮಮಕಾರ ಬಿಟ್ಟು ಬೇರೆ ಸ್ವಾರ್ಥವಿರುವುದಕ್ಕೆ ಸಾಧ್ಯವಿಲ್ಲ. ಕಾರಣ.. ಇಷ್ಟೆ ತನ್ನ ದೇಹದ ಭಾಗದ ನೇರ ಸಂಭಂಧ ಅಮ್ಮನಿಗೆ  ಆ ಮಗುವಿನೊಂದಿಗೆ ಇರುತ್ತದೆ. 


        ವರ್ಷ ಋತುವಿನ ಬಿಡದ ಮಳೆ ಕಳೆದು ಶರದೃತುವಿಗೆ ನವರಾತ್ರಿಯ ಸಂಭ್ರಮ ಸ್ವಾಗತಿಸುವಾಗ ಅಬ್ಬ ಮಳೆಯಿಂದ ಬಿಡುಗಡೆಯಾದ ಅನುಭವ. ಪ್ರತೀ ಸಲವೂ ನವರಾತ್ರಿ ಬರುವಾಗ ಹಲವು ನಿರೀಕ್ಷೆಯ ಜತೆಗೆ ಊರಿಗೆ ಹೋಗುವ ಸಿದ್ದತೆಯೊಂದು ಇರುತ್ತದೆ. ಮೊದಲಿನಿಂದಲೂ ಮಳೆಕಳೆದು ಚಳಿಗಾಲಕ್ಕೆ ಸನಿಹವಾಗುವಾಗ ಈ  ನವರಾತ್ರಿಯನ್ನು ಹೊತ್ತು ಬರುವ ಈ ಶರದೃತು  ಎಂದರೆ ಒಂದು ಸಂಭ್ರಮ. ಹನಿ ಹನಿ ಮಂಜಿನಲ್ಲಿನ ಈ ಹಬ್ಬ ಅಂದಿಗೂ ಇಂದಿಗೂ ಅದೇ ಸೌಂದರ್ಯ.  ನಮ್ಮೂರಲ್ಲಿ ಉಳಿದೆಲ್ಲ ಹಬ್ಬಗಳು ಮನೆಯಲ್ಲಿ ಆಚರಿಸಿದರೆ...ನವರಾತ್ರಿಗೆ ಯಾವ ದೇವಸ್ಥಾನಕ್ಕೆ ಹೋಗುವುದು ಎಂದು ಯೋಚಿಸುತ್ತೇವೆ. ಯಾಕೆಂದರೆ ಎಲ್ಲಾ ಹಬ್ಬಗಳು ಒಂದೆರಡು ದಿನ ಇದ್ದರೆ ಈ ನವರಾತ್ರಿ ಒಂದು ಪಕ್ಷದಷ್ಟೂ ವಿಸ್ತರಿಸಿ ಪಾಡ್ಯದಿಂದ ಅರಳುವ ಚಂದ್ರನ ಜತೆಗೆ ಮನಸ್ಸೂ ಅರಳುತ್ತಾ ಸಾಗುತ್ತದೆ. ಒಂದು ರೀತಿಯಲ್ಲಿ ಮನಸ್ಸು ಮಳೆಯಲ್ಲಿ ತೊಯ್ದು ಶುದ್ದವಾದಂತೆ ಶುದ್ದ ಮನಸ್ಸಿನಲ್ಲಿ ದೈವ ಸಾನ್ನಿಧ್ಯ ನೆರವೇರುತ್ತದೆ.  ದೈವತ್ವದ ಈ  ಅನುಭವವಾಗಬೇಕಾದರೆ ಆ ಅವಧಿಯಲ್ಲಿ ಒಂದಾದರೂ ಕ್ಷೇತ್ರದರ್ಶನ ಮಾಡಬೇಕು ಎಂಬುದು ಹಲವರ ಹಂಬಲ. ಇಲ್ಲಿ  ಪ್ರತಿಯೊಬ್ಬರೂ ಪರಸ್ಪರ ಭೇಟಿಯಾಗುವಾಗ   ಈ ಸಲ ನವರಾತ್ರಿಗೆ ಎಲ್ಲಿಗೆ ಎಂದು ಕೇಳುವುದು ಸಹಜ.   ಆದರೆ ನನ್ನಲ್ಲಿ ಕೇಳುವಾಗ ಪ್ರಶ್ನೆಯೊಂದಿಗೆ ಉತ್ತರವೂ ಸಿದ್ಧವಾಗಿರುತ್ತದೆ. ಈ ಸಲ ನವರಾತ್ರಿಗೆ ಆವಳ ಮಠಕ್ಕೆ ಹೋಗುವುದಿಲ್ಲವಾ? ಉತ್ತರದ ಜತೆಗೆ ಪ್ರಶ್ನೆ ಬರುವುದು ಹೀಗೆ. ಯಾಕೆಂದರೆ ಈ ಮಠದ ಜತೆಗೆ ಇರುವ ಅವಿನಾಭಾವ ಸಂಬಂಧ ಎಂದರೆ ಅತಿಶಯವಲ್ಲ. 

ಆವಳ ಮಠ...ನಮ್ಮೂರಿನ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ.  ನಮ್ಮೂರಿನಲ್ಲಿ ಹಲವು ದುರ್ಗಾ ಪರಮೇಶ್ವರಿ ದೇವಾಲಯಗಳಂತೆ ಇದು ಒಂದು. ಆದರೆ ನನಗೆ ಇದೆಲ್ಲಕ್ಕಿಂತ ಮಿಗಿಲಾದ ಸಂಭಂಧವೆಂದರೆ ಇದು ಬಾಲ್ಯದ ಹಲವು ನೆನಪುಗಳೊಂದಿಗೆ ಬೆಸುದುಕೊಂಡ ಪವಿತ್ರ ಕ್ಷೇತ್ರ. ಇಲ್ಲಿ ಭಕ್ತಿಯೊಂದಿಗೆ ಆ ನೆನಪುಗಳು ಮರುಕಳಿಸುವಾಗ ಹೃದಯ ಭಾರವಾಗುತ್ತದೆ. ಮತ್ತೆ ತರಲಾಗದ ನೆನಪುಗಳು ಅದು ಕೇವಲ ವೈಯಕ್ತಿಕ ಅನುಭವಕ್ಕೆ ಸೀಮಿತವಾಗುತ್ತದೆ. ಹೆಚ್ಚಾಗಿ ನನಗೆ ಜನಸಂದಣಿಯ ದೇವಸ್ಥಾನಗಳು ಭಕ್ತಿಯನ್ನು ಪ್ರಚೋದಿಸುವುದಿಲ್ಲ. ಅಲ್ಲಿ ಹೋದಾಗ ಭಕ್ತಿಯ ಜತೆಗೆ ಭಾವನೆಗಳು ಹಂಚಿ ಚದುರಿ ಹೋಗಿಬಿಟ್ಟು ಮನಸ್ಸು  ಖಾಲಿಯಾಗಿ ಕೇವಲ ಯಾಂತ್ರಿಕವಾಗುತ್ತದೆ. ಭಾವನೆಗಳು ಇಲ್ಲದಿದ್ದರೆ ನಂತರದ ಕ್ರಿಯೆಗಳು ಯಾಂತ್ರಿಕ. ಈ ಯಾಂತ್ರಿಕತೆಯಿಂದ ದೂರಾಗಿ ಸಹಜ ಅನುಭವವನ್ನು ತುಂಬಿಕೊಡುವ ಕ್ಷೇತ್ರವೆಂದರೆ ಅದು ಬಾಲ್ಯದಿಂದ ಬೆಸೆದುಕೊಂಡ ಆವಳ ದುರ್ಗಾಪರಮೇಶ್ವರಿ ದೇವಸ್ಥಾನ. ಇಲ್ಲಿನ ಪರಿಸರದ ಪ್ರತಿಯೊಂದು ಭಾಗದಲ್ಲೂ ಹಲವು ನೆನಪುಗಳಿವೆ.

ಮೊನ್ನೆ ಮೊನ್ನೆ ಕಳೆದ ನವರಾತ್ರಿಯ ಕೊನೆಯ ಎರಡು ದಿನ ಅಲ್ಲಿಯೇ ಕಳೆಯುವ ಅವಕಾಶ ಒದಗಿಬಂತು. ಮೊದಲು ಬಹುತೇಕ ಕೇವಲ ಎಣ್ಣೇ ದೀಪದ ಬೆಳಕಿನಲ್ಲೇ ಕಳೆದು ಹೋಗುತ್ತಿದ್ದ ನವರಾತ್ರಿ ಈಗ ದೇವಸ್ಥಾನ ಮೂಲೆ ಮೂಲೆಯಲ್ಲೂ ವಿದ್ಯುದ್ದೀಪ ಝಗಮಗಿಸುತ್ತದೆ. ವಿಶಾಲವಾದ ದೇವಸ್ಥಾನದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಬೇಕಾದರೆ ಪುಟ್ಟ ಕೈ ದೀಪವನ್ನು ಹಿಡಿದು ಕೊಂಡು ಹೋಗುತ್ತಿದ್ದೆವು. ಹಲವು ಸಲ ಒಬ್ಬರೇ ಸುತ್ತಾಡುವುದಕ್ಕೆ ಭಯವಾಗುವಷ್ಟು ಕತ್ತಲೆ ಆವರಿಸಿರುತ್ತಿತ್ತು. ರಾತ್ರಿ ದೀಪದ ಬೆಳಕಿನಲ್ಲಿ ತರಕಾರಿ ಹೆಚ್ಚುವುದು ದೇವರ ಪ್ರಸಾದ ಸಿದ್ದ ಪಡಿಸುವ ಅನುಭವ ಈಗ ಊಹಿಸುವುದಕ್ಕೂ ಸಾಧ್ಯವಿಲ್ಲ.  ನನಗೆ ಇನ್ನೂ ನೆನಪಿದೆ ದೇವಸ್ಥಾನ ಸುತ್ತಲೂ ಗೋಡೆಗೆ ಅಂಟಿಸಿದ ಕಲ್ಲಿನ ದೀಪಕ್ಕೆ ಎಣ್ಣೆ ಬತ್ತಿ ಹಾಕಿ ಉರಿಸುತ್ತಿದ್ದೆವು. ಈಗ ಆಜಾಗದಲ್ಲಿ ವಿದ್ಯುತ್ ದೀಪ ಬೆಳಗುತ್ತದೆ.  

ಬಾಲ್ಯದಲ್ಲಿ ಎರಡು ವರ್ಷ ಇಲ್ಲಿ ದೇವರ ಸೇವೆ ಮಾಡಿದ್ದೆ. ಆಗ ದೇವಸ್ಥಾನದಲ್ಲಿ ಅಧುನಿಕ ಸೌಕರ್ಯ ಒಂದೂ ಇರಲಿಲ್ಲ. ಹೊರ ಜಗತ್ತಿಗೆ ಯಾವ ಸಂಪರ್ಕವೂ ಇಲ್ಲದ ಪ್ರದೇಶವಾಗಿತ್ತು ಮೈಲಿ . ದೂರದ ಬಾಯಾರು ಪದವಿನಲ್ಲಿ  ಬಸ್ಸು ಇಳಿದು ಅರ್ಧ ತಾಸು ನಡೆದುಕೊಂಡು  ದೇವಸ್ಥಾನಕ್ಕೆ ಬರಬೇಕಿತ್ತು. ಗುಡ್ಡ ತೋಟ ಗದ್ದೆ ದಾಟಿ ಹಸಿರಿನ ನಡುವೆ ಬರುವ ಒಂದು ಅನುಭವ ವಿಶೇಷವಾಗಿತ್ತು. ಆಗ ವಾಹನಗಳನ್ನು ಕಾಣುವುದಕ್ಕಲ್ಲ ಕೇವಲ  ಸದ್ದು ಕೇಳಬೇಕಾದರೆ ಅರ್ಧ ತಾಸು ನಡೆದು ಹೋಗಬೇಕಿತ್ತು. ಹೀಗಾಗಿ ಯಾವ ಸದ್ದು ಗದ್ದಲವಿಲ್ಲದ ಪರಿಸರವಾಗಿ ಒಂದು ರೀತಿಯ ಶಾಂತ ಪ್ರದೇಶವಾಗಿತ್ತು. ಈಗ ದೇವಸ್ಥಾನದ ಅಂಗಳದವರೆಗೂ ವಾಹನ ಬರುತ್ತದೆ. ಒಂದೂ ವಾಹನ ಕಾಣದ ಕಾಲ ಒಂದಾದರೆ, ಈಗ ನವರಾತ್ರಿಯಲ್ಲಿ  ಆಯುಧ ಪೂಜೆಗೆ ವಾಹನ ಸಾಲುಗಟ್ಟಿ ನಿಂತಿರುತ್ತದೆ.


ಬಾಲ್ಯದಲ್ಲಿ ಮನೆಯಿಂದ ದೂರವಾಗಿ ಒಂದೆರಡು ವರ್ಷ ಹಗಲು ರಾತ್ರಿ ಇಲ್ಲೇ ಕಳೆದಿದ್ದೆ. ದೇವರ ನೈವೇದ್ಯ ಬಿಟ್ಟರೆ ಬೇರೆ ಏನೂ ಇರುತ್ತಿರಲಿಲ್ಲ.ಆಗ ಪೂಜೆಗೆ ಇರುತ್ತಿದ್ದ ಗೋಪಣ್ಣನ ಜತೆ ಮೂರು ಹೊತ್ತು ಸ್ನಾನ ಮಾಡಿ ದೇವರ ಸೇವೆ ಮಾಡುತ್ತಿದ್ದೆ. ಮೂರು ಹೊತ್ತು ಗುಂಪೆ ಪರ್ವತದ ತಡಿಯಿಂದ ಹರಿದು ಬರುವ ತಣ್ಣೀರಿಗೆ ತಲೆಕೊಟ್ಟು ಸ್ನಾನ ಮಾಡುತ್ತಿದ್ದೆ .  ಈಗಲೂ ನಾನು ನಿತ್ಯ ತಣ್ಣೀರ ಸ್ನಾನ ಮಡುತ್ತಿದ್ದರೆ ಅದಕ್ಕೆ ಕಾರಣ ನಿತ್ಯವೂ ಇಲ್ಲಿ ಸ್ನಾನ ಮಡುತ್ತಿದ್ದ ತೀರ್ಥ ಸ್ನಾನವೇ ಕಾರಣ. 


  ಪ್ರತಿ ನಿತ್ಯ   ನೈವೇದ್ಯಕ್ಕೆ ಸಿದ್ದ ಪಡಿಸುವುದು, ಪಂಚಕಜ್ಜಾಯಕ್ಕೆ ನೆರವಾಗುವುದು, ಅನ್ನ ನೈವೇದ್ಯಕ್ಕೆ ಬೆಂಕಿ ಹಾಕಿ ಅದನ್ನು ಅಣಿಗೊಳಿಸುವುದು, ದೇವರ ಪೂಜೆಗೆ ಹೂವು ಮತ್ತೀತರ ವಸ್ತುಗಳನ್ನು ಅಣಿಗೊಳಿಸುವುದು...ಹೀಗೆ ಆ ವಯಸ್ಸಿನಲ್ಲಿ ಸಾಧ್ಯವಾಗುವ ಕೆಲಸಗಳನ್ನು ಮಾಡುತ್ತಿದ್ದೆ. ಈಗ ಅಲ್ಲಿಗೆ ಹೋದಾಗ ಅಲ್ಲಿ ಕೇವಲ ಲಂಗೋಟಿ ತುಂಡು ಬೈರಾಸಿನಲ್ಲಿ  ಓಡಾಡಿದ ಆ ದಿನಗಳು ನೆನಪಾಗಿಬಿಡುತ್ತವೆ. ರಾತ್ರಿ ಎಷ್ಟೋ ಸಲ ನಾನು ಒಬ್ಬನೇ ಆ ದೇವಸ್ಥಾನದಲ್ಲಿ ಮಲಗಿದ್ದೆ. ಈಗ ಅದನ್ನು ಕಲ್ಪಿಸುವುದೂ ಕಷ್ಟವಾಗುತ್ತದೆ. ಯಾವ ಜನಸಂಚಾರವೂ ಇಲ್ಲದ ಆ ಕಾಲದಲ್ಲಿ ಅಲ್ಲಿ ಹಗಲು ಕಳೆಯುವುದೂ ಒಂದು ವಿಚಿತ್ರ ಅನುಭವ. ಮಧ್ಯಾಹ್ನದ ಪೂಜೆ ಮುಗಿಸಿ ಊಟಕ್ಕೆ ಚಟ್ನಿಯೋ ಸಾರು ಪಲ್ಯ ಸಿದ್ದ ಪಡಿಸಿ ಊಟ ಮಾಡುತ್ತಿದ್ದೆವು. ಆಗ ಭೀಮ ಗಾತ್ರದ ರುಬ್ಬುವ ಕಲ್ಲಿನಲ್ಲಿ ತೆಂಗಿನ ಕಾಯಿ ಅರೆದು ಅಡಿಗೆ ಮಾಡಿದ ಅನುಭವ,  ಈಗ ನನ್ನ ಹೊಟ್ಟೆಗೆ ಬೇಕಾದದ್ದನ್ನು ಮಾಡಿ ತಿನ್ನುವ ಸ್ವಾವಲಂಬೀ ಗುಣವನ್ನು ಬೆಳೆಸುವುದಕ್ಕೆ ಆಗಿನ ಆ  ಶಿಕ್ಷಣ ಕಾರಣವಾಗಿದೆ. ಈಗಲೂ ನನ್ನ ಹಸಿವಿಗೆ ನಾನೇ ಬೇಯಿಸಿ ತಿನ್ನುವ ಪ್ರವೃತ್ತಿ ಇದೆ. ಇದನ್ನು ಒದಗಿಸಿದ್ದು ಬಾಲ್ಯದ ನನ್ನ ಈ ದೇವಸ್ಥಾನದ ಜೀವನ. ಆಗ ಪೂಜೆಗಿದ್ದ ಗೋಪಣ್ಣ ಪ್ರೀತಿಯಿಂದ ಹೇಳಿ,  ಕೆಲವೊಮ್ಮೆ ಗದರಿ ಬೇಕಾದ ರೀತಿಯಲ್ಲಿ ನನ್ನಿಂದ ಕೆಲಸವನ್ನು ಮಾಡಿಸಿ ಒಂದು ರೀತಿಯಲ್ಲಿ ಆ ದೇವರಿಗೆ ನನ್ನಿಂದ ಒಂದಷ್ಟು ಸೇವೆ ಲಭ್ಯವಾಗುವ ಹಾಗೆ ಮಾಡಿದ್ದರು. ಈಗ ಅವರಿಲ್ಲ. ಆದರೆ ಅಲ್ಲಿಗೆ ಹೋದಾಗ ಆ ನೆನಪೆಲ್ಲ ಮರುಕಳಿಸುತ್ತದೆ. ದೇವಸ್ಥಾನ ಗೋಪುರದಲ್ಲಿ ಉಂಡದ್ದು ನಿದ್ದೆ ಮಾಡಿದ್ದು ಆಟ ಆಡಿದ್ದು ಕನಸು ಕಂಡದ್ದು  ಆ ದಿನಗಳನ್ನು ಎಂದಿಗೂ ಮರೆಯುವುದಕ್ಕೆ ಸಾಧ್ಯವಿಲ್ಲ. 


ಬೆಳಗ್ಗೆ ನಿದ್ದೆ ಬಿಟ್ಟು ಎದ್ದ ಕೂಡಲೇ ಸ್ನಾನ ಮಾಡಿ ದೇವಸ್ಥಾನದ ಒಳಗೆ ಹೋಗಿ ರುದ್ರ ಮಂತ್ರ ಪಠಿಸುವುದು, ನನ್ನಿಂದ ಆದ ಚಾಕರಿಯನ್ನು ಮಾಡುವುದು ಹೀಗೆ ಹಗಲು ಇರುಳೆನ್ನದೆ ಕಳೆದ ದಿನಗಳು ಇಂದು ದೇವರ ಭಕ್ತಿಯಲ್ಲದ ಇನ್ನೊಂದು ಬಾಂಧವ್ಯವನ್ನು ಸ್ಮರಣೆಗೆ ತರುತ್ತದೆ. ಮಧ್ಯಾಹ್ನದ ವಿಪರೀತ ಕಾಡುವ ಹಸಿವಿನಲ್ಲಿ ಅಲ್ಲಿ ಬಡಿಸಿದ  ನೈವೇದ್ಯ ಜತೆಗೆ ಚಟ್ನಿ ತಂಬುಳಿ ಸಾರಿನ ಸರಳವಾದ ಊಟ ಅದರ ರುಚಿ ಇನ್ನೂ ಮಾಸಿಲ್ಲ. ಈಗಲೂ ಹಸಿವಾಗುವಾಗ ಮಠದ ಊಟದ ರುಚಿ ನೆನಪಿಗೆ ಬಂದು ಅದಕ್ಕೆ ಸರಿಸಾಟಿಯಾದ ಆಹಾರ ಮತ್ತೊಂದು ಇಲ್ಲ ಎಂಬ ಭಾವನೆ ಬರುತ್ತದೆ. ಮಠದ ಬಾಲ್ಯದ ಜೀವನದ ನೆನಪಿಗಾಗಿ ಈಗಲೂ ಬಾಳೆಕಾಯಿ ಪಲ್ಯ,  ಚಟ್ನಿ ತಂಬುಳಿ ಮಾಡಿ ಊಟ ಮಾಡುತ್ತೇನೆ.  ಮೊದಲು ಮಠದಲ್ಲಿ ಒಂದು ತರಕಾರಿಯನ್ನೂ ಆಂಗಡಿಯಿಂದ ತರುತ್ತಿದ್ದ ಸಂಭವ ಇರುತ್ತಿರಲಿಲ್ಲ. ಮಧ್ಯಾಹ್ನದ ಹೊತ್ತಿಗೆ ತೋಟಕ್ಕೆ ಹೋಗಿ ಅಲ್ಲಿದ್ದ ಬಾಳೆಕಾಯಿ ಅಥವ ಸೊಪ್ಪು ತರಕಾರಿ ತಂದು ಅಡುಗೆ ಮಾಡಿ ಊಟ ಮಾಡುತ್ತಿದ್ದೆವು. ಆಲುಗಡ್ಡೆ ಟೊಮೆಟೊ ಕಂಡ ನೆನಪೇ ಇರುತ್ತಿರಲಿಲ್ಲ. ಈಗ ನವರಾತ್ರಿ ಇದಿಲ್ಲದೆ ಅಡುಗೆಯೇ ಇಲ್ಲ ಎಂಬಂತಹ ಬದಲಾವಣೆ ಆಗಿ ಹೋಗಿದೆ. ನಿಜಕ್ಕೂ ಆಗಿನ ದೇವಸ್ಥಾನದ ಆ ಊಟ ಅಮೃತ ಸದೃಶ.  ಯಾವ ಕಲ್ಮಶವೂ ಇಲ್ಲದ ಪರಿಶುದ್ದ ಆಹಾರ. 


ದೇವಾಲಯ ಈಗ ಆಧುನಿಕತೆಯ ಸ್ಪರ್ಶದಲ್ಲಿ ನಳನಳಿಸುತ್ತದೆ. ಮೊದಲು ಇದ್ದ ಸೆಗಣಿ ಸಾರಿಸಿದ ನೆಲ ಮಣ್ಣಿನ ವಾಸನೆ ಈಗ ಇಲ್ಲ. ಎಲ್ಲೆಂದರಲ್ಲಿ ನಳ್ಳಿ ತಿರುಗಿಸಿದರೆ ನೀರು , ಅಧುನಿಕ ಅಡುಗೆ ಪಾತ್ರೆ ಸಜ್ಜೀಕರಣ ಇವುಗಳ ನಡುವೆ ಹಳೆಯ ನೈವೇದ್ಯದ ಘಂ ಎನ್ನುವ ಸುವಾಸನೆ ಕಳೆದು ಹೋಗಿದೆ. ಆದರೆ ಆ ನೆನಪುಗಳು ಇನ್ನೂ ಹಸಿರಾಗಿಇದೆ. ಇಂದಿನ ತಲೆಮಾರಿಗೆ ಅದನ್ನು ವರ್ಣಿಸಿದರೂ ಅರ್ಥವಾಗದ ಆನುಭವಗಳ ಮಾರ್ದವತೆ ಕೇವಲ ಕಥೆಯ ಸನ್ನಿವೇಶಗಳಂತೆ ಭಾಸವಾಗಬಹುದು. 


ಪ್ರತೀ ಸಲ ನವರಾತ್ರಿ ಬರುವಾಗ ಇಲ್ಲಿ ಒಂದೆರಡು ದಿನವಾದರೂ ಇದ್ದು ದೇವರ ಸೇವೆಯ ಜತೆಗೆ ಹಿಂದಿನ ನೆನಪುಗಳಿಗೆ ಒಂದಷ್ಟು ತೀರ್ಥ ಸಿಂಪಡಿಸಿ ಅದನ್ನು ಹಸಿರಾಗಿ ಇರುವಂತೆ ಮಾಡುವ ನಿರೀಕ್ಷೆ ಇರುತ್ತದೆ.  ಆದರೆ ಅದು ಸಾಧ್ಯವಾಗುವುದಿಲ್ಲ. ಆದರೂ ಈ ಬಾರಿ ಎರಡು ದಿನ ದೇವರ ಸೇವೆಯಲ್ಲಿ ಕಳೆದೆ.  ಮರುಭೂಮಿಯ ಓಯಸಿಸ್ ನ  ನೀರಹನಿಯ ಅನುಭವಗಳಂತೆ ಒಂದಷ್ಟು ಹಳೆಯ ನೆನಪುಗಳು ಹಾದು ಹೋಯಿತು. ಅಮ್ಮನ ಎದೆಹಾಲಿನ ನೆನಪು ಬದುಕಿನಾದ್ಯಂತೆ ಇರುವಂತೆ  ಈ ಅಮ್ಮನ ಮಡಿಲಿನ ನೆನಪುಗಳು ಎದೆಹಾಲಿನ ಮಾರ್ದವತೆಯನ್ನು ಒದಗಿಸಿದವು. 


ಎರಡು ದಿನ ಸಮೀಪ ಸಂಬಂಧಿ ಶ್ರೀ ಲಕ್ಷ್ಮೀನಾರಾಯಣ ಭಟ್ಟರ ಮನೆಯಲ್ಲಿ ಉಳಿದುಕೊಂಡಿದ್ದೆ. ಮನೆಯ ಹತ್ತಿರವೇ ನಾಗಬನ ಇದ್ದು ಒಂದು ರೀತಿಯಲ್ಲಿ ಅರಣ್ಯದ ವಾತಾವರಣ ಕಲ್ಪಿಸಿತ್ತು. ನಾನು ಉಳಿದುಕೊಳ್ಳುವ ಜಾಗದಲ್ಲಿ ಮುಂಜಾನೆಯ ಶಾಂತ ಪರಿಸರದದ ಮೌನವನ್ನು ಅನುಭವಿಸುವುದಕ್ಕೆ ಬಯಸುವವನು. ಅದಕ್ಕೆ ಇಲ್ಲಿ ಮುಕ್ತ ಅವಕಾಶವಿತ್ತು. ಮುಂಜಾನೆ ನಾಲ್ಕು ಘಂಟೆಗೆ ಎದ್ದು ಸಂಧ್ಯಾವಂದನೆಗೆ ಕುಳಿತಾಗ ಆ ಮೌನವೇ ಭಗವಂತನ ರೂಪದಲ್ಲಿ ಪ್ರತ್ಯಕ್ಷವಾದಂತೆ ಭಾಸವಾಯಿತು. ಭಗವಂತನಿಗೆ ರೂಪವಿಲ್ಲ ಭಾವವಿಲ್ಲ, ಗುಣವಿಲ್ಲ...ಆದರೆ ಇಲ್ಲಿ ಸುತ್ತಲ ಪರಿಸರದ ಮೌನವೇ ದೈವದ ಅರಿವನ್ನು ಒದಗಿಸಿ ಭಗವಂತನ ಅಸ್ತಿತ್ವವನ್ನು ಹೃದಯಕ್ಕೆ ರವಾನಿಸಿತ್ತು.  ನಾನು ಎಲ್ಲೇ ಉಳಿದುಕೊಂಡರೂ ಮುಂಜಾನೆ ಯೋಗಾಭ್ಯಾಸಕ್ಕೆ ಅನುಕೂಲವನ್ನು ಮೊದಲು ಬಯಸುತ್ತೇನೆ. ಮನೆಯ ಮೇಲೆ ಅದಕ್ಕೆ ಮುಕ್ತವಾದ ವಾತಾವರಣ , ನಿಜಕ್ಕೂ ನಾನು  ಆ ಮನೆಯವರಿಗೆ ಕೃತಜ್ಞತೆಯನ್ನು ಸಲ್ಲಿಸಬೇಕು. ನನಗೆ ಮುಕ್ತವಾಗಿ ಸರ್ವಸ್ವತಂತ್ರವಾಗಿ ಇರುವುದಕ್ಕೆ, ನನ್ನದೇ ಮನೆ ಎನ್ನುವ ಭಾವನೆ ಬರುವುದಕ್ಕೆ ಸಹೃದಯದ ಸೌಕರ್ಯವನ್ನು ಒದಗಿಸಿದ್ದರು. 


ಮನೆಯಲ್ಲಿ ನಿತ್ಯ ಕರ್ಮದ ರೂಪದಲ್ಲಿ ಮಾಡುವ ದೇವರ ಪೂಜೆ ಪುನಸ್ಕಾರಗಳು ಸಂಧ್ಯಾವಂದನೆ ನಿತ್ಯ ವಿಧಿಗಳು ನಿತ್ಯದ ಬದುಕಿಗೆ ಚೈತನ್ಯವನ್ನು ಒದಗಿಸಿದರೆ, ಹೀಗೆ ಅಲಭ್ಯವಾದ ಅವಕಾಶಗಳು ಸಿಕ್ಕಿ ಒಂದು ದೇವಸ್ಥಾನದಲ್ಲಿ ಉಳಿದುಕೊಂಡು ಅಲ್ಲಿಯವನಾಗಿ ಇರುವುದು ವರ್ಷದಾದ್ಯಂತೆ ಚೈತನ್ಯವನ್ನು ಒದಗಿಸುತ್ತವೆ. ಯಾವುದೇ ಮಾನಸಿಕ ಒತ್ತಡವಿಲ್ಲದೆ ಸರ್ವವೂ ದೇವರ ಕ್ರಿಯೆಯಲ್ಲಿ ದೇವರಿಗೆ ಸಮರ್ಪಿಸುವುದು ನಿಷ್ಕಾಮ ಕರ್ಮಕ್ಕೆ ಪ್ರೇರಣೆಯಾಗುತ್ತದೆ. ದೈವಕಾರ್ಯದಲ್ಲಿ ಯಾವ ವೃತ್ತಿಯನ್ನಾಗಲಿ ಭೇದವಿಲ್ಲದೆ ಶುದ್ದ ವೈರಾಗ್ಯದಿಂದ ಮಾಡುವಾಗ ಅಲ್ಲೊಂದು ಆತ್ಮ ತೃಪ್ತಿ ಇರುತ್ತದೆ. ಆವಳದ ಈ ದೇವಸ್ಥಾನದಲ್ಲಿ ಎರಡು ದಿನ  ಅದನ್ನು ಯಥೇಚ್ಛವಾಗಿ ಅನುಭವಿಸಿದೆ. ಎರಡು ದಿನ ಅಮ್ಮನ ಮಡಿಲಲ್ಲಿ ರಾಮನ ಅಳಿಲಾದ ಧನ್ಯತೆಯನ್ನು ಹೊತ್ತು ವಿದಾಯವನ್ನು ಹೇಳಿ ಅಲ್ಲಿನ ಅರ್ಚಕರು ನನಗಾಗಿ ಹೃದಯ ತುಂಬಿ ಪ್ರಾರ್ಥಿಸುವಾಗ ಒಂದು ಘಳಿಗೆ ನನಗೆ ಧನ್ಯತೆಯಲ್ಲಿ ಮಾತು ಹೊರಡದೆ ಹೃದಯ ಭಾರವಾಯಿತು. ಇನ್ನೂ ಮುಂದಕ್ಕೆ ಇದಕ್ಕಿಂತಲ್ಲೂ ಹೆಚ್ಚು ಸೇವೆಯನ್ನು ಒದಗಿಸುವ ಚೈತನ್ಯ ಲಭ್ಯವಾಗಲಿ ಎಂಬ ಮನದಾಶೆ ಮನದಾಳದಲ್ಲಿ ಸ್ಥಿರವಾಗಿ ಬೇರುಬಿಟ್ಟಿತು.