Monday, February 9, 2026

ಆ ಒಂದು ನೆನಪು


ಮೊನ್ನೆ  ಊರಿಗೆ ಹೋಗಿದ್ದಾಗ ಮಂಗಳೂರಿನ ನಗರ ಸಾರಿಗೆ (ಸಿಟಿ ಬಸ್ಸು) ಯಲ್ಲಿ ಹೋಗಬೇಕಾಗಿತ್ತು. ಮಂಗಳೂರಿಗೆ ಹೋದಾಗಲೆಲ್ಲ ಸಿಟಿ ಬಸ್ಸಿನಲ್ಲಿ ಸಂಚರಿಸುವುದನ್ನು ನಾನು ಸಾಕಷ್ಟು ಇಷ್ಟ ಪಡುತ್ತೇನೆ. ಯಾಕೆಂದರೆ ಬಾಲ್ಯದಿಂದ ನಡು ಯೌವನದ ತನಕವೂ ಇದ್ದ ನೆನಪುಗಳು ಯಾಕೋ ನಾನಿನ್ನೂ ಭೂಮಿಯಲ್ಲಿದ್ದೇನೆ ಎಂಬ ನೆನಪನ್ನು ತಂದುಕೊಡುತ್ತದೆ. ದುಂಬು ಪೋಲೆ ಎಂದು ಅವಸರಿಸುವ ಕಂಡಕ್ಟರ್. ಊರಿನ ಹೆಸರಿನ ಕಿರುಚಾಟ, ನೂಗು ನುಗ್ಗಲು ಒಂದಷ್ಟು ಬೆವರು ವಾಸನೆ ಎಲ್ಲವೂ ಒಂದು ರೀತಿಯ ಇಷ್ಟ ಪಡುವ ಸಂವೇದನೆಯಾಗಿ ನೆನಪುಗಳನ್ನು ಹೆಕ್ಕಿ ಹೆಕ್ಕಿ ತೆಗೆಯುತ್ತದೆ. ಮಧ್ಯವಯಸ್ಸು ಎಂದರೆ ಅಲ್ಲಿ ಹೊಸದಾಗಿ ಬರೆಯುವುದಕ್ಕೆ ಏನೂ ಇರುವುದಿಲ್ಲ. ಹಳೆಯದನ್ನು ಬರೆಯುತ್ತಾ ಮತ್ತೆ ಅಳಿಸುತ್ತಾ ಆ ನೆನಪಲ್ಲೇ ಕಳೆಯುವ ದಿನಗಳು. ಕೆಲವು ಮತ್ತೂ ಮತ್ತೂ ಕಾಡಿದರೆ, ಇನ್ನು ಕೆಲವು ಕೇವಲ ಕೆಲ ಹೊತ್ತಿನ ಕ್ಷಣಿಕ ನಗು ಮತ್ತು ಕಂಬನಿಗೆ ಸೀಮಿತವಾಗುತ್ತದೆ.  ಅಂದು ಕೂಡ ಸಿಟಿ ಬಸ್ಸಿನಲ್ಲಿ ಸಾಕಷ್ಟು ಜನಸಂದಣಿ ಇತ್ತು. ಹಂಪನಕಟ್ಟೆಯಲ್ಲಿ ಇಳಿಯುವುದಕ್ಕಿತ್ತು. ಬಸ್ಸು ಮಿಲಾಗ್ರಿಸ್ ನಲ್ಲಿ ನಿಂತ ತಕ್ಷಣ ಕೈಯಲ್ಲಿ ಹಿಡಿದ ಚಿಲ್ಲರೆ ದುಡ್ಡು ನಾನು ಇನ್ನೂ ಟಿಕೆಟ್ ತೆಗೆಯದೇ ಇರುವುದನ್ನು ನೆನಪಿಸಿತು.  ಕಂಡಕ್ಟರ್ ಗೆ ಕೊಡುವುದಕ್ಕಾಗಿ ಕೈಯಲ್ಲೇ ಹಿಡಿದುಕೊಂಡಿದ್ದೆ. ಆದರೆ ಕಂಡಕ್ಟರ್ ಹತ್ತಿರ ಬರಲೇ ಇಲ್ಲ. ಕೊನೆಗೆ ಇಳಿಯಲೇ ಬೇಕಾದಾಗ ಕಂಡಕ್ಟರ್ ಬಳಿ ಹೋಗಿ ಆತನ ಕೈಯಲ್ಲಿ ಚಿಲ್ಲರೆಯನ್ನು ಹಾಕಿದೆ. ಸುಮಾರು ದೂರದಿಂದಲೇ ಕಿಟಕಿ ಬದಿ ಕುಳಿತಿದ್ದ ನನ್ನನ್ನು ಗಮನಿಸಿದ್ದನೋ ಏನೋ ನಾನು ಆತನ ಬಳಿಗೆ ಹೋಗಿ ಪ್ರಾಮಾಣಿಕತೆಯಿಂದ ಚಿಲ್ಲರೆ ಹಣವನ್ನು ಹಾಕಿದಾಗ ಆತನ ಮುಖದಲ್ಲಿ ನಸು ನಗು ಮೂಡಿತು.  ಯಾಕೆಂದರೆ ಆ ಹಣ ಕೊಡುವುದಕ್ಕಾಗಿ ನಾನು ಒಂದಿಷ್ಟು ಕಷ್ಟ ಪಟ್ಟದ್ದು ಆತನಿಗೆ ಕಂಡಿತ್ತು. ನಾನು ಹಾಗೇ ಇಳಿದು ಹೋಗುತ್ತಿದ್ದರೆ ಆತನಿಗೆ ಗೊತ್ತಾಗುತ್ತಿರಲಿಲ್ಲ. ಆದರೂ ಚಿಲ್ಲರೆ ದುಡ್ಡಿಗಾಗಿ ನನಗೆ ವಂಚಿಸುವುದು ಸರಿಕಾಣಲಿಲ್ಲ. ಚಿಲ್ಲರೆ ದುಡ್ಡಾದರೂ ಪ್ರಾಮಾಣಿಕತೆಯ ಮೌಲ್ಯ ಕೇವಲ ಚಿಲ್ಲರೆ ಕಾಸಿನಿಂದ ಅಳೆಯುವುದಕ್ಕೆ ಸಾಧ್ಯವಿಲ್ಲ. 



ಈ ಘಟನೆಯ ಜತೆಗೆ ಹಿಂದಿನ ಬಾಲ್ಯದಲ್ಲಿ ನನ್ನ ಪ್ರಾಮಾಣಿಕತೆಗೆ ಘಾಸಿ ಮಾಡಿದ ಘಟನೆಯೊಂದು ನೆನಪಾಯಿತು. ಒಂದು ದಿನ ಬೆಳಗ್ಗೆ ಯಾವುದೋ ಸಾಮಾನು ಖರೀದಿಸುವುದಕ್ಕೆ ನಮ್ಮ ಪೈವಳಿಕೆ ನಗರದ  ಒಂದು ಅಂಗಡಿಗೆ ಹೋಗಿದ್ದೆ. ಅಂಗಡಿ ಅದೇ ತಾನೆ ತೆರೆಯುತ್ತಿದ್ದ. ಅಂಗಡಿಯವನು ಮರದ ಹಲಗೆಯ ಬಾಗಿಲು. ಒಂದೊಂದನ್ನೆ ಕಿತ್ತು ಒಂದು ಕಡೆಗೆ ಸೇರಿಸಿ ಇಡುತ್ತಿದ್ದ.  ಅದರ ನಡುವೆ  ನನಗೆ ಬೇಕಾದ ಸಾಮಾನು ಹೇಳಿದೆ. ಆತ ಅಂಗಡಿಯ ಒಳಗೆ ಹೋಗಿ ಹುಡುಕುತ್ತಿದ್ದ. ಸ್ವಲ್ಪ ಹೊತ್ತು ಹುಡುಕಾಡಿ ನಂತರ ಕೊಟ್ಟು ದುಡ್ಡು ಪಡೆದುಕೊಂಡ. ಸಾಮಾನು ಕೊಂಡು ನಮ್ಮ ಮನೆಗೆ ಬಂದೆ. ಅಲ್ಲಿಂದ ನಮ್ಮ ಮನೆಗೆ ನಡೆಉಕೊಂಡೆ ಬರಬೇಕು. ಅರ್ಧ ತಾಸು ತೆಗೆದುಕೊಂಡಿದ್ದೆ. ಮನೆಗೆ ಬಂದು ಸಾವರಿಸಿಕೊಳ್ಳುವಷ್ಟರಲ್ಲಿ ಸೈಕಲಿನಲ್ಲಿ ಅದೇ ಅಂಗಡಿಯವನು ಬಂದ. ಬಂದವನೇ ಆತನ ಅಂಗಡಿಯ ಗಲ್ಲಾ ಪೆಟ್ಟಿಗೆಯಿಂದ ಐವತ್ತು ರೂಪಾಯಿ ಕಾಣೆಯಾಗಿದೆ. ಅದನ್ನು ನಾನು ಕದ್ದಿದ್ದೇನೆ ಎಂದು ಹೇಳಿದ. ನನಗೆ ದಿಗಿಲಾಯಿತು. ಆಗ ಐವತ್ತು ರೂಪಾಯಿ ಅಂದರೆ ಈಗೀನ ಸಾವಿರ ರೂಪಾಯಿ ಮೌಲ್ಯವಾದರೂ ಆಗಬಹುದು. ನಮ್ಮಮಿತಿಯಲ್ಲಿ ಅದು ದೊಡ್ಡ ಮೊತ್ತ. ಹಾಗಾಗಿಯೇ ಆತ ಅಷ್ಟು ಗಡಿಬಿಡಿಯಲ್ಲಿ ಹುಡುಕಿ ಬಂದಿದ್ದ. 


ಐವತ್ತು ರೂಪಾಯಿ ನಾನು ಕದ್ದಿದ್ದೇನೆ ಎನ್ನುವುದಕ್ಕೆ ಮುಖ್ಯ ಕಾರಣ ನಮ್ಮ ಬಡತನ.  ಬಡತನವೇ ಕಳ್ಳತನಕ್ಕೆ ಮುಖ್ಯ ಕಾರಣ ಎಂಬುದು ಆತನ ವರ್ತನೆಯೇ ಹೇಳುತ್ತಿತ್ತು. ನಾನು ಕದ್ದಿಲ್ಲ ಎಂದು ಹೇಳಿದೆ. ಅದಾಗಲೇ ನನ್ನ ಕಣ್ಣಿಂದ ನೀರು ಸುರಿಯಲಾರಂಭಿಸಿತ್ತು. ನನಗೆ ಅರಿವಿಲ್ಲದೇ ಗದ್ಗದವಾಗಿತ್ತು. ಏನಿದ್ದರೂ ಯಾರಿಗೂ ವಂಚನೆ ಮಾಡಬಾರದು ಇದು ಅಮ್ಮ ಕಲಿಸಿಕೊಟ್ಟ ಮೊದಲ ಪಾಠ. ಅಮ್ಮ ಬಂದು ಕದಿಯಲಿಲ್ಲ ಅಂತ ಹೇಳಿದರು. ಆದರೆ ಅದನ್ನೆಲ್ಲ ಕೇಳುವುದಕ್ಕೆ ಆತ ಸಿದ್ಧನಿರಲಿಲ್ಲ. ನೆರೆಕರೆಯವರೆಲ್ಲ ನೋಡುತ್ತಿದ್ದರು. ಯಾರೂ ಪರವಾಗಿ ಮಾತನಾಡುವುದಕ್ಕೆ ಬರಲಿಲ್ಲ. ಅಥವಾ ಏನು ಎಂದು ವಿಚಾರಿಸುವುದಕ್ಕೂ ಬರಲಿಲ್ಲ. ನಾವು ಪರಿಪರಿಯಾಗಿ ಹೇಳಿದರೂ ಆತ ಕೇಳಲಿಲ್ಲ. ನಮ್ಮ ಮನೆಯ ಹತ್ತಿರವೇ ಇದ್ದ ಬೋಳಂಗಳದಲ್ಲಿ ಭೂತಸ್ಥಾನವಿತ್ತು. ಅಲ್ಲಿಗೆ ಹೋಗಿ ಪ್ರಮಾಣ ಮಾಡುವಂತೆ ಆತನೇ  ಹೇಳಿದ. ನನಗೆ ಭಯವಿರಲಿಲ್ಲ. ಕದ್ದರೆ ತಾನೆ ಭಯ. ಆದರೆ ಆತನ ಧರ್ಮದ ದೇವರು ಅದಲ್ಲ. ಆದರೂ ನನಗಿಂತ ಭೂತದ ಮೇಲೆ ಆತನಿಗೆ ನಂಬಿಕೆ ಇತ್ತೋ ಏನೋ. ನಾನು ಒಪ್ಪಿದ್ದನ್ನು ನೋಡಿ ಏನು ಅನಿಸಿತೋ ದೊಡ್ಡದಾಗಿ ಗೊಣಗಿಕೊಂಡು ಪುನಃ ಬರುವುದಾಗಿ ಹೇಳಿಕೊಂಡು ಸೈಕಲೇರಿ ಹಿಂತಿರುಗಿದ.  ಒಂದು ವೇಳೆ ಆತನ ಅಂಗಡಿಯ ಬಳಿಗೆ ಹೋಗಿದ್ದರೆ ಕಂಬಕ್ಕೆ ಕಟ್ಟಿ ಹಾಕುವುದಕ್ಕೂ ಹಿಂಜರಿಯುತ್ತಿರಲಿಲ್ಲ. ಯಾಕೆಂದರೆ ಸುತ್ತಮುತ್ತಲೂ ಎಲ್ಲ ಆತನ ಜನಗಳೆ.

ಮರುದಿನ ಅನಿವಾರ್ಯವಾಗಿ ಆತನ ಅಂಗಡಿಯ ಎದುರು ಹೋಗಬೇಕಾಗಿ ಬಂತು. ಅಲ್ಲೆ ಹೋಗುವುದಕ್ಕೆ ಭಯವಾಗುತ್ತಿತ್ತು. ಆಅರೂ ಅಳುಕುತ್ತಲೇ ಹೋದೆ. ನನ್ನನ್ನು ನೋಡಿದವನು ಬಳಿಗೆ ಕರೆದ. ಅಳುಕುತ್ತಲೇ ಹೋದೆ. ಆತ ಹೇಳಿದ ಆ ಹಣ ಸಿಕ್ಕಿತು. ಇಲ್ಲೆ ಕಸದ ಜತೆ ಬಿದ್ದಿತ್ತು. ಅಂಗಡಿ ಗುಡಿಸುವಾಗ ಸಿಕ್ಕಿತು ಅಂತ ಹೇಳಿದ. ಅವನು ಅಷ್ಟಾದರೂ ಹೇಳಿದನಲ್ಲಾ ಎಂಬುದಕ್ಕೆ ಕೃತಜ್ಛತೆ ಸಲ್ಲಿಸುವುದಷ್ಟೇ ನನಗೆ ಉಳಿದಿತ್ತು.  ಬೇರೆಯವರಾಗಿದ್ದರೆ ಆತ ಕೊಟ್ಟ ಮಾನಸಿಕ ಹಿಂಸೆ ಅಪವಾದಕ್ಕೆ ಜಗಳವಾಡಿ ಕಪಾಳ ಮೋಕ್ಷ ಮಾಡುತ್ತಿದ್ದರು. ನಾನು ಪುಟ್ಟಬಾಲಕ ಪೆಚ್ಚಾಗಿ ನೋಡುವುದಷಷ್ಟೇ ಉಳಿದಿತ್ತು. ಆತನಿಗೆ ದುಡ್ಡು ಸಿಕ್ಕಿದ್ದನ್ನು ಹೇಳದೇ ಇರಬಹುದಿತ್ತು. ಕೊನೆಗೆ ಅಷ್ಟಾದರೂ ಹೇಳಿ ನನ್ನನ್ನು ಅರೋಪ ಮುಕ್ತ ಮಾಡಿದನಲ್ಲ. ಆದರೆ ನನ್ನ ನೆರೆಯವರೆದುರು ತಲೆತಗ್ಗಿಸಿದ್ದಕ್ಕೆ ಪರಿಹಾರವಿರಲಿಲ್ಲ. ಈಗ ಆಂಗಡಿಯೂ ಇಲ್ಲ.  ಆ ವ್ಯಕ್ತಿಯೂ ಇಲ್ಲ. ಆ ಕಟ್ಟಡವೂ ಇಲ್ಲ. ಪೈವಳಿಕೆಯ ನಗರದ ರಸ್ತೆಯಲ್ಲಿ ಹೋಗುವಾಗ ಈ ಘಟನೆ ನೆನಪಾಗುತ್ತಿರುತ್ತದೆ. ಒಂದುವೇಳೆ ಆ ಹಣ ಕಸದ ಜತೆ ಸೇರಿ ಹಾಗೇ ಕಳೆದು ಹೋಗಿರುತ್ತಿದ್ದರೆ... ಆತನ ಎದುರು ನಾನು ಕಳ್ಳನೇ ಆಗಿ ಉಳಿಯುತ್ತಿದ್ದೆ. ದೇವರಿಗೆ ಅಷ್ಟಕ್ಕಾದರೂ ನಾನು ಕೃತಜ್ಞನಾಗಿರಬೇಕು. 

    ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡ ಕಳ್ಳನಿಗೂ ಆತ ಮಾಡದೇ ಇದ್ದ ಕಳ್ಳತನವನ್ನು ಆತನ ಮೇಲೆ ಆರೋಪಿಸಿದರೆ ಸಿಟ್ಟು ಬರುತ್ತದೆ. ಆದರೆ ಮಾಡದೇ ಇದ್ದ ಅಪರಾಧ ಆರೋಪಿಸಿದಾಗ ನೋವಾಗದೇ ಇರುವುದಕ್ಕೆ ಸಾಧ್ಯವಿಲ್ಲ. ಆದರೂ ಯಾವುದೋ ಒಂದು ಕಳ್ಳತನ ಅಥವಾ ಅಪರಾಧಗಳ ಆರೋಪಕ್ಕೆ ಕೊನೇ ಪಕ್ಷ ನಮ್ಮ ಜೀವನ ಪ್ರವೃತ್ತಿಯೂ ಕಾರಣವಾಗಬಾರದು. ಆರೋಪ ಬರುವುದು, ಅಥವಾ ಆರೋಪ ಸಾಬೀತಾಗುವುದು ನಮ್ಮ ಪ್ರವೃತ್ತಿಯನ್ನು ಅವಲಂಬಿಸಿರಬಾರದು. ಮತ್ತೆ ಇರುವುದು ನಮ್ಮ ಅದೃಷ್ಟ ಎಂದುಕೊಂಡಿರಬೇಕು.