Friday, February 27, 2026

ಪೃಚ್ಛಕ ಪಾರ್ಥ

 ಹಲವು ಸಲ  ಬರಹಗಳಿಗೆ ವಿಷಯ ಹೇಗೆ ಸಿಗುತ್ತದೆ ಎಂದು ಕೇಳಿದರೆ, ಅದು ಹೀಗೂ ಇರುತ್ತದೆ.  ಒಂದು ಸಲ ಭಗವದ್ಗೀತೆಯ ಪುಟಗಳನ್ನು ತಿರುವಿ ನೋಡಿದರೆ ಹಲವಾರು ಚಿಂತನೆಗಳು ಚಿಗುರೊಡೆಯುತ್ತದೆ. ಹಾಗೆ ಚಿಗುರಿದ ವಿಷಯಗಳು ಹಲವು. 



"ಕಥಂ ಭೀಷ್ಮ ಮಹಂ ಸಂಖ್ಯೇ ದ್ರೋಣಂ ಚ ಮಧುಸೂದನ |  ಇಷುಭಿಃ ಪ್ರತಿಯೋತ್ಸ್ಯಾಮಿ ಪೂಜಾರ್ಹ ವರಿಸೂದನ"

ಭಗದ್ಗೀತೆಯ ದ್ವೀತಿಯ ಅಧ್ಯಾಯದ ಸಾಂಖ್ಯಯೋಗದ ನಾಲ್ಕನೇ ಶ್ಲೋಕ. ಇದು ಅರ್ಜುನ ಶ್ರೀಕೃಷ್ಣನಲ್ಲಿ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸುವ ಮಾತು. ," ಎಲೈ ಮಧೂಸದನನೇ , ಶತ್ರುಗಳನ್ನು ನಾಶಗೋಳಿಸುವವನೇ ಪೂಜಾರ್ಹರಾಗಿರುವ ಭೀಷ್ಮ ದ್ರೋಣರನ್ನು ಕದನದಲ್ಲಿ ಬಾಣಗಳಿಂದ  ಹೇಗೆ ಹೊಡೆಯಲಿ?" 

ಭೀಷ್ಮ ದ್ರೋಣರಿಗಿಂತ ಅರ್ಜುನನಿಗೆ ಮಾನವೀಯ ಸಂಭಂದಗಳ ಅರಿವು ಮತ್ತು ಅದರಲ್ಲಿ ಗೌರವ ಇತ್ತು ಅಂತ ಮೇಲು ನೋಟಕ್ಕೆ ಅರ್ಜುನ ಹೇಳುವುದು ಸರಿ ಎಂದೆನಿಸುತ್ತದೆ, ಆದರೆ ಅರ್ಜುನನ ಚಿಂತನೆ ಅಸ್ಥಾನದ್ದು ಅಂತ ಶ್ರೀಕೃಷ್ಣ ಹೇಳುತ್ತಾನೆ. ಯಾಕೆ ಅರ್ಜುನನಿಗೆ ಮಾತ್ರ ವಿರೋಧಿ ಸ್ಥಾನದಲ್ಲಿ ಕುಳಿತ ಭೀಷ್ಮ ದ್ರೋಣ ಕೃಪರ ಮೇಲೆ ಅನುಕಂಪ ಮೂಡುತ್ತದೆ. ಅದೇ ಅನುಕಂಪ ಭೀಷ್ಮರಿಗಾಗಲೀ ದ್ರೋಣರಿಗಾಗಲೀ ಅರ್ಜುನನ ಮೇಲೆ ಅಥವಾ ಪಾಂಡವರ ಮೇಲೆ ಯಾಕೆ ಮೂಡುವುದಿಲ್ಲ? ಅವರಿಗೆ ಮಮಕಾರ ಇರಲಿಲ್ಲವೇ? ಅನುಕಂಪ ಇರಲಿಲ್ಲವೇ ? ಯಾವ ಕೊಡುಗೆಯೂ ಅಸ್ಥಾನದಲ್ಲಿ ಇರಕೂಡದು. ಇದರ ಅರಿವು ಅತೀ ಮುಖ್ಯ. ಭೀಷ್ಮ ದ್ರೋಣಾದಿಗಳಿಗೆ ಆ ಅರಿವಿನ ಜ್ಞಾನ ಇತ್ತು. ಅರ್ಜುನನ ಅನುಕಂಪ ಅಸ್ಥಾನದಲ್ಲಿತ್ತು. ಯುದ್ಧವೇ ನಿರ್ಣಯವಾಗಿ ಯುದ್ಧರಂಗಕ್ಕೆ ಬಂದ ಮೇಲೆ ಅಲ್ಲಿ ಯುದ್ದ ಮತ್ತು ವೀರೋಧಿ ಇವುಗಳಷ್ಟೇ ಮುಖ್ಯವಾಗುತ್ತದೆ. ಅರ್ಜುನ ಸಂಭಂಧಗಳನ್ನಷ್ಟೇ ನೋಡಿದ. ಆದರೆ ಕರ್ಮವನ್ನು ಮರೆತ.

ವಾಸ್ತವದ ಪ್ರಾಪಂಚಿಕ ವ್ಯವಹಾರದಲ್ಲೂ  ಹೀಗೆ, ನಮ್ಮ ಕರ್ತವ್ಯ ಪ್ರಜ್ಞೆ ಜಾಗೃತವಾಗಬೇಕು. ಪರಿಶುದ್ಧ ಹಾಲನ್ನು ಶುದ್ದವಾದ ಪಾತ್ರೆಯಲ್ಲೇ ತುಂಬಿಸಿಕೊಳ್ಳಬೇಕು. ಹಾಗಾದರೆ ಮಾತ್ರವೇ ಹಾಲು ಹಾಲಾಗಿ ಉಳಿಯುತ್ತದೆ ಇಲ್ಲವಾದರೆ ಅದು ಕೆಡುತ್ತದೆ. ಮೂರ್ಖರ ಗುಂಪಿನಲ್ಲಿ ವೇದಾಂತ ಬೋಧಿಸಿದರೆ ವೇದಾಂತವೇ ಕೆಡುಕಾಗಿ ಕಾಣಬಹುದು.ಹಾಗಾಗಿ ಅರ್ಜುನನ ಅನುಕಂಪ ಕರುಣೆ, ಗುರು ಹಿರಿಯರ ಮೇಲಿನ ಪ್ರೀತಿ ಗೌರವ  ಎಲ್ಲವೂ ಇಲ್ಲಿ ಅಪ್ರಸ್ತುತವಾಗುತ್ತದೆ. ಮಾತ್ರವಲ್ಲ ಅದು ನಿಷ್ಫಲವಾಗುತ್ತದೆ.  ಅಪ್ರಸ್ತುತವಾದ ಅರ್ಜುನನ ಸದ್ಭಾವನೆ ಏನಿದ್ದರೂ ಅದು ಆತನ ಪುರುಷತ್ವವನ್ನು ಹರಣಮಾಡಿ ಆತನಲ್ಲಿ ಷಂಡತನವನ್ನು ಪ್ರಚೋದಿಸುತ್ತದೆ. ಹಾಗಾಗಿ ಅಲ್ಲಿ ಶ್ರೀ ಕೃಷ್ಣ ಆತನ ಈ ಭಾವನಗೆಳನ್ನು ಲೇವಡಿಯಾಡುತ್ತಾನೆ.  

ಪ್ರೀತಿ ಪ್ರೇಮ ಮಮಕಾರ ಎಲ್ಲವೂ ವ್ಯಕ್ತಿ ಸನ್ನಿವೇಶ ಪರಿಸರ ನೋಡಿ ನಿರ್ಣಯಿಸಲ್ಪಡಬೇಕು. ಆಗ ಅವುಗಳಿಗೆ ಮೌಲ್ಯ ಗೌರವ ಒದಗಿಬರುತ್ತದೆ. ಇಲ್ಲವಾದರೆ ಅದರ ಅರ್ಥವೇ ಕೆಡಬಹುದು. ಪ್ರೇಮ ಕಾಮ ವಾಗಬಹುದು, ಮಮಕಾರ ಮೋಹವಾಗಬಹುದು. ಆಗ ಅಲ್ಲಿ ಕೆಡುಕುಗಳು ಗೋಚರಿಸುವುದಿಲ್ಲ. ಭೀಷ್ಮ ದ್ರೋಣರಿಗೆ ಅರ್ಜುನನ ಮೇಲೆ ಮೋಹವೂ ಮಮಕಾರವೂ ಇತ್ತು. ಆದರೆ ಅಲ್ಲಿ ಕಾಳಗದ  ಉದ್ದೇಶದಲ್ಲೇ ಬಂದವರಿಗೆ ಅದು ಅಪ್ರಸ್ತುತವಾಗಿ ಕಂಡಿತು.  

ನಮ್ಮ ಗೆಲುವನ್ನೇ ಬಯಸಿ , ನಮ್ಮ ಸುಖ ಸಂತೋಷವನ್ನು ಬಯಸುವವರ ಎದುರು ನಮ್ಮ ಸೋಲು, ನೋವನ್ನು ನಾವು ಬಹಿರಂಗ ಪಡಿಸುವುದನ್ನೂ ಬಯಸುವುದಿಲ್ಲ. ಸೋಲನ್ನು ದುಃಖವನ್ನು ತೋರಿಸದೇ ಎಲ್ಲವನ್ನು ಮರೆಮಾಚುತ್ತೇವೆ. ನಮ್ಮ ಕೊಡುಗೆಗಳನ್ನು ಮೊದಲು ನಾವು ಗೌರವಿಸಬೇಕು. ಅದು ಎಲ್ಲಿ ಹೇಗೆ ನೀಡಬೇಕು, ಹೇಗೆ ಒದಗಿಸಬೇಕು ಎಂಬುದರ ನಿರ್ಣಯ ನಮ್ಮದು. ಆದರೆ ಅದಕ್ಕೆ ಗೌರವ ನಾವು ಎಲ್ಲಿ ಹೇಗೆ ಒದಗಿಸುತ್ತೇವೆ ಎಂಬುದರಲ್ಲಿ ಸಿದ್ಧವಾಗುತ್ತದೆ.  ಭಗವಂತನೂ ಗೀತೆಯ ರಹಸ್ಯವನ್ನು ಬೋಧಿಸುವುದಕ್ಕೆ ಅರ್ಜುನನನ್ನೇ ಆರಿಸಿಕೊಂಡ. ಪರಮ ವೈಷ್ಟವ ಭಾಗವವತ ಭೀಷ್ಮನಿಗೆ ಬೋಧಿಸಲಿಲ್ಲ.

ದಾನವನ್ನು ಮಾಡುವುದು ಶ್ರೇಷ್ಠ. ಹಸಿದವನಿಗೆ ಆಹಾರ, ರೋಗಿಗೆ ಆರೈಕೆ, ಆರ್ತರಿಗೆ ಆಶ್ರಯ ಕೊಡುವುದು ಉತ್ತಮ. ಆದರೆ ಅದರ ಆಯ್ಕೆ ಇವುಗಳ ಗೌರವವನ್ನು ಹೆಚ್ಚಿಸುತ್ತದೆ. ಆರ್ಹತೆ ಇಲ್ಲದವರಿಗ ಶ್ರೇಷ್ಠವಾದುದನ್ನು ನೀಡಿದರೆ ಅದು ಶ್ರೇಷ್ಠವೆನಿಸುವುದಿಲ್ಲ. ಕಳ್ಳನಿಗೆ, ದುರ್ವ್ಯಸನಿಗೆ ಧನಸಹಾಯವನ್ನು ಮಾಡಿದಲ್ಲಿ ಅದು ವಿನಿಯೋಗವಾಗಬಹುದು ಆದರೆ ಅದು ಸದ್ವಿನಿಯೋಗವಾಗುವುದಿಲ್ಲ. ಸದ್  ಎಲ್ಲಿರುತ್ತದೆ ಅದು ಶ್ರೇಷ್ಠವಾಗಿರುತ್ತದೆ. ಎಲ್ಲಿ ಕತ್ತಲೆ ಇರುವುದೋ ಅಲ್ಲಿ ದೀಪ ಬೆಳಗಿಸಬೇಕು. ಆಗ ದೀಪದ ಬೆಳಕು ಸಾರ್ಥಕತೆಯನ್ನು ಪಡೆಯುತ್ತದೆ. ಬೆಳಕು ಇದ್ದಲ್ಲೇ ದೀಪ ಬೆಳಗಿದರೆ ಆ ದೀಪಕ್ಕೂ ಗೌರವವಿಲ್ಲ, ಬೆಳಕಿಗೂ ಮೌಲ್ಯ ಇರುವುದಿಲ್ಲ. ದಟ್ಟ ಕತ್ತಲೆಯಲ್ಲೇ ತುಂಬಿದ ಕೋಣೆಯಲ್ಲಿ ದೀಪ ಉರಿಸಿದರೂ ಹಲವು ಸಲ ಆ ಬೆಳಕು ಪರ್ಯಾಪ್ತವಾಗುವುದಿಲ್ಲ. ಆಗಲೂ ದೀಪಕ್ಕೂ ಬೆಳಕಿಗೂ ಗೌರವ ಸಿಗುವುದಿಲ್ಲ. ಹಾಗಿದ್ದಾಗ ಅಲ್ಲಿ ದೀಪ ಬೆಳಗಿಸುವುದು ಮೂರ್ಖತನವಾಗಬಹುದು. ನಿದ್ದೆ ಮಾಡಿದವರ ಎದುರು ದೀಪ ಉರಿಸಿದರೆ ನಿದ್ರಾಭಂಗವಾಗಬಹುದು. ದೀಪ ಉರಿಸುವುದಕ್ಕೆ ಕ್ಷೇತ್ರ ಸನ್ನಿವೇಶ ನೋಡಬೇಕು. ದೀಪ ಉರಿಸುವುದಷ್ಟೇ ಅಲ್ಲ. ಪ್ರಕಾಶದ ಸದ್ಬಳಕೆಯಾಗಬೇಕು. ಆಗ ಅದು ಮತ್ತಷ್ಟು ಪ್ರಕಾಶವಾಗುತ್ತದೆ. ಬಹುಶಃ ಅರ್ಜುನನಿಗಲ್ಲದೇ ಗೀತೋಪದೇಶವಾಗುತ್ತಿದ್ದರೆ ಅದು ಇಷ್ಟು ಅರ್ಥಪೂರ್ಣವಾಗುತ್ತಿರಲಿಲ್ಲವೇನೋ? ಭಗವಂತನ ಸಂಕಲ್ಪ ಇದು. ಶ್ರೀಕೃಷ್ಣನಂತಹ ಪ್ರವಾಚಕನು ಅರ್ಜುನನಂತಹ ಪೃಚ್ಛಕನೂ ಇರುವುದಕ್ಕೆ ಸಾಧ್ಯವಿಲ್ಲ. 


Saturday, February 21, 2026

ಇದು ಜೀವನ.

ಮೊನ್ನೆ ಒಬ್ಬರು ವ್ಯಕ್ತಿ ನನ್ನ ಬಳಿಗೆ ಬಂದಿದ್ದರು. ಅವರಿಗೆ ಮಾಂಸಾಹಾರಿ ಹೋಟೇಲ್ ಇದೆ. ಯಾವುದೋ  ಜಿ ಎಸ್ ಟಿ ಕೆಲಸಕ್ಕೆ ಬಂದಿದ್ದರು. ಅವರು ಹೇಳಿದ ಒಂದು ಮಾತು ನನಗೆ ಬಹಳ ಚಿಂತಿಸುವಂತೆ ಮಾಡಿತು. ಅವರು ಹೇಳಿದರು. ನಮಗೆ ಭಾಷೆ ಧರ್ಮ ಎಲ್ಲವೂ ಮುಖ್ಯವಾಗುತ್ತದೆ. ಆದರೆ ನಮ್ಮ ಜೀವನ ಮುಖ್ಯವಾಗುವುದಿಲ್ಲ. ಹಿಂದಿಯವರು ಅಥವಾ ಉತ್ತರ ಭಾರತದವರು ಅಂತ ಇಲ್ಲಿ ಹೀನಾಯವಾಗಿ ಕಾಣುತ್ತಾರೆ. ಭಾಷೆ ಬರುವುದಿಲ್ಲ. ಅಥವಾ ಕನ್ನಡ ಮಾತನಾಡುವುದಿಲ್ಲ ಎಂದು ಹಳಿಯುತ್ತಾರೆ.  ಆದರೆ ಬೆಂಗಳೂರಿನ ಅಷ್ಟೂ ಹೋಟೆಲ್ ಉಸಿರುರಾಡುತ್ತಿರುವುದು ಇವರಿಂದಾಗಿ. ಬೇರೆ ರಾಜ್ಯದಿಂದ ಉದ್ಯೋಗ ಅಥವಾ ವಿದ್ಯೆಗಾಗಿ ಇಲ್ಲಿ ಬಂದು ಪಿಜಿ ಬಾಡಿಗೆ ಮನೆ ಮಾಡಿ ನೆಲಸುತ್ತಾರೆ. ಅವರಿಗೆ ಈ ಹೋಟೆಲ್ ಗಳೇ ಆಹಾರಕ್ಕೆ ಆಧಾರ. ಅವರ ವ್ಯಾಪಾರವೇ ನಮಗೆ ಮುಖ್ಯವಾಗುತ್ತದೆ. ಇಲ್ಲಿನವರೂ ಹೋಟೆಲಿಗೆ ಬರುತ್ತಿದ್ದರೂ...ಉತ್ತರ ಅನ್ಯ ರಾಜ್ಯದವರ ವ್ಯಾಪಾರ ಬಹಳ ಮುಖ್ಯವಾಗುತ್ತದೆ. ಅದು ಬೆಂಗಳೂರಾದರೂ ಅಷ್ಟೆ ಮಂಗಳೂರಾದರೂ ಅಷ್ಟೇ. 

ಆ ವ್ಯಕ್ತಿ ಹೇಳಿದ್ದರಲ್ಲಿ ಬಹಳಷ್ಟು ನಿಜಾಂಶ ಅಂತ ತೋರಿತು. ಹೌದು, ಬೆಂಗಳೂರಲ್ಲಿ ಪಿಜಿಯಲ್ಲೋ ಬಾಡಿಗೆ ಮನೆಯಲ್ಲಿ ಕುಳಿತು ಸ್ವಂತ ಅಡುಗೆ ಮಾಡಲಾಗದವರಿಗೆ ಅಥವಾ ಇನ್ನಿತರ ಕಾರಣಗಳಿಗೆ ಅವರಿಗೆ ಹೋಟೇಲ್ ಗಳೇ ಆಶ್ರಯ. ಇದನ್ನು ಅಲ್ಲಗಳೆಯುವುದಕ್ಕೆ ಸಾಧ್ಯವಿಲ್ಲ. ಮಂಗಳೂರಿನಂತಹ ನಗರದಲ್ಲೂ ಅಷ್ಟೇ ಅನ್ಯ ರಾಜ್ಯದವರ ವ್ಯವಹಾರ ಸಾಕಷ್ಟು ಇದೆ. ಹಾಗಾಗಿ ಆತ ಹೇಳಿದ್ದು ನಮಗೆ ಭಾಷೆ ಮುಖ್ಯವಾಗುತ್ತದೆ ಜೀವನ ಮುಖ್ಯವಾಗುವುದಿಲ್ಲ. ವಾಸ್ತವದಲ್ಲಿ ಊರಿನ ಭಾಷೆ ಸಂಸ್ಕೃತಿ ನಿಜವಾಗಿಯೂ ಮುಖ್ಯವಾಗುತ್ತದೆ. ಅದರ ಜತೆ ಧರ್ಮವೂ ಮುಖ್ಯವಾಗುತ್ತದೆ. ಆದರೆ ಜೀವನ ಎಂಬುದು ವಾಸ್ತವದ ಸತ್ಯಕ್ಕೆ ಸಾಕ್ಷಿಯಾಗಿ ಹಾಗೇ ಉಳಿಯುತ್ತದೆ. ಧರ್ಮ ಭಾಷೆಯನ್ನು ದ್ವೇಷಿಸಬೇಕು ಎಂದೇನಲ್ಲ, ಆದರೆ ಇವೆರಡನ್ನು ಗೌರವಿಸಿ ಹೊಂದಿಕೊಳ್ಳುವ ಜೀವನ ಗೋಚರಿಸುವುದಿಲ್ಲ. 

ಈಗ ಭಾಷೆ ಧರ್ಮವನ್ನು ಹೇಳಿಕೊಂಡು ಆಗುವ ಗಲಭೆಗಳು ಸಮರಗಳು ನೋಡುವಾಗ ಮುಂದೆ ಜೀವನ ದುರ್ಭರವಾಗುವುದರಲ್ಲಿ ಯಾವ ಸಂದೇಹವೂ ಉಳಿದಿಲ್ಲ. ಹೊಟ್ಟೆಯ ಹಸಿವನ್ನೂ ಮರೆತು ಇದು ಮುಖ್ಯವಾಗುತ್ತದೆ. ಹಸಿವು ಹೋಗಲಿ ಹಲವು ನಂಬುವ ಭಗವಂತನೂ ಮರೆತು ಹೋಗಿಬಿಡುತ್ತಾನೆ. ಎರುತ್ತಿರು ಡಾಲರ್ ಬೆಲೆಯ ಬಗ್ಗೆ ಹೇಳುತ್ತೇವೆ. ಜಿಡಿಪಿಯ ಕುರಿತು ಚರ್ಚಿಸುತ್ತೇವೆ. ಏರುವ ಜೀವನಾವಶ್ಯಕ ವಸ್ತುಗಳ ಬೆಲೆಯನ್ನು ಹೇಳುತ್ತೇವೆ.  ಆದರೆ ಆದರೆ ಭಾಷೆ ಧರ್ಮಗಳ ಬಗ್ಗೆ ಹೋರಾಡುವಾಗ ಇವೆರಡೂ ಜ್ಞಾಪಕಕ್ಕೆ ಬರುವುದಿಲ್ಲ. ಇದು ವಾಸ್ತವ. ಧರ್ಮಕ್ಕಾಗಿ ಜೀವ ಕೊಡುತ್ತೇವೆ ಎಂದು ಹೇಳಬಹುದು. ಪ್ರಾಣಕ್ಕಿಂತ ಭಾಷೆಯೇ ಪ್ರಧಾನ ಹೇಳಬಹುದು. ಆದರೆ ಯೋಚಿಸಿ ಪ್ರಾಣ ಎಂಬುದು ಇಲ್ಲದಿದ್ದರೆ ಇವೆರಡೂ ಅನುಭವಕ್ಕೆ ಬರುವುದಿಲ್ಲ. ಮರಣಾನಂತರ ಏನು ಎಂಬುದು ಎಂದು ಉತ್ತರ ಇಲ್ಲದೇ ಇರುವಾಗ ತಿಳಿದಿರುವ ಈ ಸಾವಿನ ಮೊದಲಿನ ಜೀವನದ ಮೌಲ್ಯ ತಿಳಿದುಕೊಳ್ಳಬೇಕು.  ಭಾಷೆ ಧರ್ಮ ಈ ಎರಡರ ವೆತ್ಯಾಸಗಳನ್ನು ಬ್ರೀಟೀಷರು ತೋರಿಸಿಕೊಟ್ಟು ಅದನ್ನೇ ಕೊನೆಯ ತನಕ ಜೀವಂತ ವಿರಿಸಿ ನಮ್ಮನ್ನು ಆಳಿದರು. ಬ್ರೀಟೀಷರು ಹೋದರು....ಆದರೆ ಈ ವಿಷಬೀಜ ಇಲ್ಲೇ ಬಿಟ್ಟು ಹೋದರು. ಹಸಿವಿನ ಹೋರಾಟಕ್ಕಿಂತಲೂ ಭಾಷೆ ಧರ್ಮ ರಾಜಕೀಯದ ಹೋರಾಟವೇ ಅಧಿಕವಾಗುತ್ತದೆ. ಅದುವೇ ಜೀವನವಾಗಿ ಮುಖ್ಯವಾದ ಜೀವನವೇ ಮರೆತು ಹೋಗಿದೆ.  


ಈ ಚಿಂತನೆಗಳಲ್ಲಿ ಸರಿ ಎಂದು ಹೇಳದ ವಿಚಾರಗಳು ಬಹಳಷ್ಟು ಇರಬಹುದು. ಆದರೆ ಇರುವ ವಿಚಾರಗಳು ಮಾತ್ರ ಗಂಭೀರವಾಗಿ ಚಿಂತಿಸುವಂತೆ ಮಾಡುತ್ತದೆ

Friday, February 13, 2026

ಮತ್ತೆಂದೂ ಬರದ ಬಾಲ್ಯ

ಮತ್ತೊಮ್ಮೆ ಅನ್ನಿಸುತ್ತಿದೆ ಬಾಲಕನಾಗಲೇ....

ಬತ್ತಿ ಹೋಗದ ಆ ಕನಸುಗಳು

ಚಿಗುರೊಡೆಯುತ್ತಿರುವ ಆ ನೂರಾರು ಆಶೆಗಳು

ಬಾಲಕನಾಗಲು ಹವಣಿಸುತ್ತಿರುವ ಈ ದಿನಗಳು....

ಮತ್ತೊಮ್ಮೆ ಬಾಲ್ಯವನ್ನು ನೆನಪಿಸುತ್ತಿದೆ. 


ಒಸರು ಕೆಸರೆನ್ನದೇ ನೀರಾಟದ ದಿನಗಳು, 

ಬಿಸಿಲು ಮಳೆ ಎನ್ನದೆ ಅಲೆದ ಬೀದಿ ಗುಡ್ಡಗಳು

ನಾಳೆ ಎಂಬ ಸುಂದರ ದಿನಗಳ ನಿರೀಕ್ಷೆ

ಬದುಕಿನ ಪ್ರತಿಹಂತದ ಪರೀಕ್ಷೆ

ಮತ್ತೊಮ್ಮೆ ಅನ್ನಿಸುತ್ತಿದೆ ಬಾಲಕನಾಗಲೇ


ಬಾಲ್ಯದ ಕನಸು ಕಾಣುವುದದೆಷ್ಟು ಸುಲಭ

ನನಸಾಗದ ಭಯವಿಲ್ಲ ನಿರಾಶೆಯ ಮಡುವಿಲ್ಲ

ಇಂದಲ್ಲ ನಾಳೆ ಎಂಬ ನಿರೀಕ್ಷೆಯ ಭರವಸೆಗಳು

ಮತ್ತೊಮ್ಮೆ ಅನಿಸುತ್ತಿದೆ ಬಾಲಕನಾಗಲೇ


ತನ್ನ ಓಟದಲ್ಲಿ ಕಾಣುವ ವಾಹನಗಳ ಓಟ

ಆಟಿಕೆಯ ಲೋಕದ ಕಲ್ಪನೆಯ ಆಟ

ಮರೆತು ಹೋಗದು ಬಾಲ್ಯದಲಿ ಕಲಿತ ಪಾಠ

ಮತ್ತೊಮ್ಮೆ ಅನಿಸುತ್ತಿದೆ ಬಾಲಕನಾಗಲೇ


Monday, February 9, 2026

ಆ ಒಂದು ನೆನಪು


ಮೊನ್ನೆ  ಊರಿಗೆ ಹೋಗಿದ್ದಾಗ ಮಂಗಳೂರಿನ ನಗರ ಸಾರಿಗೆ (ಸಿಟಿ ಬಸ್ಸು) ಯಲ್ಲಿ ಹೋಗಬೇಕಾಗಿತ್ತು. ಮಂಗಳೂರಿಗೆ ಹೋದಾಗಲೆಲ್ಲ ಸಿಟಿ ಬಸ್ಸಿನಲ್ಲಿ ಸಂಚರಿಸುವುದನ್ನು ನಾನು ಸಾಕಷ್ಟು ಇಷ್ಟ ಪಡುತ್ತೇನೆ. ಯಾಕೆಂದರೆ ಬಾಲ್ಯದಿಂದ ನಡು ಯೌವನದ ತನಕವೂ ಇದ್ದ ನೆನಪುಗಳು ಯಾಕೋ ನಾನಿನ್ನೂ ಭೂಮಿಯಲ್ಲಿದ್ದೇನೆ ಎಂಬ ನೆನಪನ್ನು ತಂದುಕೊಡುತ್ತದೆ. ದುಂಬು ಪೋಲೆ ಎಂದು ಅವಸರಿಸುವ ಕಂಡಕ್ಟರ್. ಊರಿನ ಹೆಸರಿನ ಕಿರುಚಾಟ, ನೂಗು ನುಗ್ಗಲು ಒಂದಷ್ಟು ಬೆವರು ವಾಸನೆ ಎಲ್ಲವೂ ಒಂದು ರೀತಿಯ ಇಷ್ಟ ಪಡುವ ಸಂವೇದನೆಯಾಗಿ ನೆನಪುಗಳನ್ನು ಹೆಕ್ಕಿ ಹೆಕ್ಕಿ ತೆಗೆಯುತ್ತದೆ. ಮಧ್ಯವಯಸ್ಸು ಎಂದರೆ ಅಲ್ಲಿ ಹೊಸದಾಗಿ ಬರೆಯುವುದಕ್ಕೆ ಏನೂ ಇರುವುದಿಲ್ಲ. ಹಳೆಯದನ್ನು ಬರೆಯುತ್ತಾ ಮತ್ತೆ ಅಳಿಸುತ್ತಾ ಆ ನೆನಪಲ್ಲೇ ಕಳೆಯುವ ದಿನಗಳು. ಕೆಲವು ಮತ್ತೂ ಮತ್ತೂ ಕಾಡಿದರೆ, ಇನ್ನು ಕೆಲವು ಕೇವಲ ಕೆಲ ಹೊತ್ತಿನ ಕ್ಷಣಿಕ ನಗು ಮತ್ತು ಕಂಬನಿಗೆ ಸೀಮಿತವಾಗುತ್ತದೆ.  ಅಂದು ಕೂಡ ಸಿಟಿ ಬಸ್ಸಿನಲ್ಲಿ ಸಾಕಷ್ಟು ಜನಸಂದಣಿ ಇತ್ತು. ಹಂಪನಕಟ್ಟೆಯಲ್ಲಿ ಇಳಿಯುವುದಕ್ಕಿತ್ತು. ಬಸ್ಸು ಮಿಲಾಗ್ರಿಸ್ ನಲ್ಲಿ ನಿಂತ ತಕ್ಷಣ ಕೈಯಲ್ಲಿ ಹಿಡಿದ ಚಿಲ್ಲರೆ ದುಡ್ಡು ನಾನು ಇನ್ನೂ ಟಿಕೆಟ್ ತೆಗೆಯದೇ ಇರುವುದನ್ನು ನೆನಪಿಸಿತು.  ಕಂಡಕ್ಟರ್ ಗೆ ಕೊಡುವುದಕ್ಕಾಗಿ ಕೈಯಲ್ಲೇ ಹಿಡಿದುಕೊಂಡಿದ್ದೆ. ಆದರೆ ಕಂಡಕ್ಟರ್ ಹತ್ತಿರ ಬರಲೇ ಇಲ್ಲ. ಕೊನೆಗೆ ಇಳಿಯಲೇ ಬೇಕಾದಾಗ ಕಂಡಕ್ಟರ್ ಬಳಿ ಹೋಗಿ ಆತನ ಕೈಯಲ್ಲಿ ಚಿಲ್ಲರೆಯನ್ನು ಹಾಕಿದೆ. ಸುಮಾರು ದೂರದಿಂದಲೇ ಕಿಟಕಿ ಬದಿ ಕುಳಿತಿದ್ದ ನನ್ನನ್ನು ಗಮನಿಸಿದ್ದನೋ ಏನೋ ನಾನು ಆತನ ಬಳಿಗೆ ಹೋಗಿ ಪ್ರಾಮಾಣಿಕತೆಯಿಂದ ಚಿಲ್ಲರೆ ಹಣವನ್ನು ಹಾಕಿದಾಗ ಆತನ ಮುಖದಲ್ಲಿ ನಸು ನಗು ಮೂಡಿತು.  ಯಾಕೆಂದರೆ ಆ ಹಣ ಕೊಡುವುದಕ್ಕಾಗಿ ನಾನು ಒಂದಿಷ್ಟು ಕಷ್ಟ ಪಟ್ಟದ್ದು ಆತನಿಗೆ ಕಂಡಿತ್ತು. ನಾನು ಹಾಗೇ ಇಳಿದು ಹೋಗುತ್ತಿದ್ದರೆ ಆತನಿಗೆ ಗೊತ್ತಾಗುತ್ತಿರಲಿಲ್ಲ. ಆದರೂ ಚಿಲ್ಲರೆ ದುಡ್ಡಿಗಾಗಿ ನನಗೆ ವಂಚಿಸುವುದು ಸರಿಕಾಣಲಿಲ್ಲ. ಚಿಲ್ಲರೆ ದುಡ್ಡಾದರೂ ಪ್ರಾಮಾಣಿಕತೆಯ ಮೌಲ್ಯ ಕೇವಲ ಚಿಲ್ಲರೆ ಕಾಸಿನಿಂದ ಅಳೆಯುವುದಕ್ಕೆ ಸಾಧ್ಯವಿಲ್ಲ. 



ಈ ಘಟನೆಯ ಜತೆಗೆ ಹಿಂದಿನ ಬಾಲ್ಯದಲ್ಲಿ ನನ್ನ ಪ್ರಾಮಾಣಿಕತೆಗೆ ಘಾಸಿ ಮಾಡಿದ ಘಟನೆಯೊಂದು ನೆನಪಾಯಿತು. ಒಂದು ದಿನ ಬೆಳಗ್ಗೆ ಯಾವುದೋ ಸಾಮಾನು ಖರೀದಿಸುವುದಕ್ಕೆ ನಮ್ಮ ಪೈವಳಿಕೆ ನಗರದ  ಒಂದು ಅಂಗಡಿಗೆ ಹೋಗಿದ್ದೆ. ಅಂಗಡಿ ಅದೇ ತಾನೆ ತೆರೆಯುತ್ತಿದ್ದ. ಅಂಗಡಿಯವನು ಮರದ ಹಲಗೆಯ ಬಾಗಿಲು. ಒಂದೊಂದನ್ನೆ ಕಿತ್ತು ಒಂದು ಕಡೆಗೆ ಸೇರಿಸಿ ಇಡುತ್ತಿದ್ದ.  ಅದರ ನಡುವೆ  ನನಗೆ ಬೇಕಾದ ಸಾಮಾನು ಹೇಳಿದೆ. ಆತ ಅಂಗಡಿಯ ಒಳಗೆ ಹೋಗಿ ಹುಡುಕುತ್ತಿದ್ದ. ಸ್ವಲ್ಪ ಹೊತ್ತು ಹುಡುಕಾಡಿ ನಂತರ ಕೊಟ್ಟು ದುಡ್ಡು ಪಡೆದುಕೊಂಡ. ಸಾಮಾನು ಕೊಂಡು ನಮ್ಮ ಮನೆಗೆ ಬಂದೆ. ಅಲ್ಲಿಂದ ನಮ್ಮ ಮನೆಗೆ ನಡೆಉಕೊಂಡೆ ಬರಬೇಕು. ಅರ್ಧ ತಾಸು ತೆಗೆದುಕೊಂಡಿದ್ದೆ. ಮನೆಗೆ ಬಂದು ಸಾವರಿಸಿಕೊಳ್ಳುವಷ್ಟರಲ್ಲಿ ಸೈಕಲಿನಲ್ಲಿ ಅದೇ ಅಂಗಡಿಯವನು ಬಂದ. ಬಂದವನೇ ಆತನ ಅಂಗಡಿಯ ಗಲ್ಲಾ ಪೆಟ್ಟಿಗೆಯಿಂದ ಐವತ್ತು ರೂಪಾಯಿ ಕಾಣೆಯಾಗಿದೆ. ಅದನ್ನು ನಾನು ಕದ್ದಿದ್ದೇನೆ ಎಂದು ಹೇಳಿದ. ನನಗೆ ದಿಗಿಲಾಯಿತು. ಆಗ ಐವತ್ತು ರೂಪಾಯಿ ಅಂದರೆ ಈಗೀನ ಸಾವಿರ ರೂಪಾಯಿ ಮೌಲ್ಯವಾದರೂ ಆಗಬಹುದು. ನಮ್ಮಮಿತಿಯಲ್ಲಿ ಅದು ದೊಡ್ಡ ಮೊತ್ತ. ಹಾಗಾಗಿಯೇ ಆತ ಅಷ್ಟು ಗಡಿಬಿಡಿಯಲ್ಲಿ ಹುಡುಕಿ ಬಂದಿದ್ದ. 


ಐವತ್ತು ರೂಪಾಯಿ ನಾನು ಕದ್ದಿದ್ದೇನೆ ಎನ್ನುವುದಕ್ಕೆ ಮುಖ್ಯ ಕಾರಣ ನಮ್ಮ ಬಡತನ.  ಬಡತನವೇ ಕಳ್ಳತನಕ್ಕೆ ಮುಖ್ಯ ಕಾರಣ ಎಂಬುದು ಆತನ ವರ್ತನೆಯೇ ಹೇಳುತ್ತಿತ್ತು. ನಾನು ಕದ್ದಿಲ್ಲ ಎಂದು ಹೇಳಿದೆ. ಅದಾಗಲೇ ನನ್ನ ಕಣ್ಣಿಂದ ನೀರು ಸುರಿಯಲಾರಂಭಿಸಿತ್ತು. ನನಗೆ ಅರಿವಿಲ್ಲದೇ ಗದ್ಗದವಾಗಿತ್ತು. ಏನಿದ್ದರೂ ಯಾರಿಗೂ ವಂಚನೆ ಮಾಡಬಾರದು ಇದು ಅಮ್ಮ ಕಲಿಸಿಕೊಟ್ಟ ಮೊದಲ ಪಾಠ. ಅಮ್ಮ ಬಂದು ಕದಿಯಲಿಲ್ಲ ಅಂತ ಹೇಳಿದರು. ಆದರೆ ಅದನ್ನೆಲ್ಲ ಕೇಳುವುದಕ್ಕೆ ಆತ ಸಿದ್ಧನಿರಲಿಲ್ಲ. ನೆರೆಕರೆಯವರೆಲ್ಲ ನೋಡುತ್ತಿದ್ದರು. ಯಾರೂ ಪರವಾಗಿ ಮಾತನಾಡುವುದಕ್ಕೆ ಬರಲಿಲ್ಲ. ಅಥವಾ ಏನು ಎಂದು ವಿಚಾರಿಸುವುದಕ್ಕೂ ಬರಲಿಲ್ಲ. ನಾವು ಪರಿಪರಿಯಾಗಿ ಹೇಳಿದರೂ ಆತ ಕೇಳಲಿಲ್ಲ. ನಮ್ಮ ಮನೆಯ ಹತ್ತಿರವೇ ಇದ್ದ ಬೋಳಂಗಳದಲ್ಲಿ ಭೂತಸ್ಥಾನವಿತ್ತು. ಅಲ್ಲಿಗೆ ಹೋಗಿ ಪ್ರಮಾಣ ಮಾಡುವಂತೆ ಆತನೇ  ಹೇಳಿದ. ನನಗೆ ಭಯವಿರಲಿಲ್ಲ. ಕದ್ದರೆ ತಾನೆ ಭಯ. ಆದರೆ ಆತನ ಧರ್ಮದ ದೇವರು ಅದಲ್ಲ. ಆದರೂ ನನಗಿಂತ ಭೂತದ ಮೇಲೆ ಆತನಿಗೆ ನಂಬಿಕೆ ಇತ್ತೋ ಏನೋ. ನಾನು ಒಪ್ಪಿದ್ದನ್ನು ನೋಡಿ ಏನು ಅನಿಸಿತೋ ದೊಡ್ಡದಾಗಿ ಗೊಣಗಿಕೊಂಡು ಪುನಃ ಬರುವುದಾಗಿ ಹೇಳಿಕೊಂಡು ಸೈಕಲೇರಿ ಹಿಂತಿರುಗಿದ.  ಒಂದು ವೇಳೆ ಆತನ ಅಂಗಡಿಯ ಬಳಿಗೆ ಹೋಗಿದ್ದರೆ ಕಂಬಕ್ಕೆ ಕಟ್ಟಿ ಹಾಕುವುದಕ್ಕೂ ಹಿಂಜರಿಯುತ್ತಿರಲಿಲ್ಲ. ಯಾಕೆಂದರೆ ಸುತ್ತಮುತ್ತಲೂ ಎಲ್ಲ ಆತನ ಜನಗಳೆ.

ಮರುದಿನ ಅನಿವಾರ್ಯವಾಗಿ ಆತನ ಅಂಗಡಿಯ ಎದುರು ಹೋಗಬೇಕಾಗಿ ಬಂತು. ಅಲ್ಲೆ ಹೋಗುವುದಕ್ಕೆ ಭಯವಾಗುತ್ತಿತ್ತು. ಆಅರೂ ಅಳುಕುತ್ತಲೇ ಹೋದೆ. ನನ್ನನ್ನು ನೋಡಿದವನು ಬಳಿಗೆ ಕರೆದ. ಅಳುಕುತ್ತಲೇ ಹೋದೆ. ಆತ ಹೇಳಿದ ಆ ಹಣ ಸಿಕ್ಕಿತು. ಇಲ್ಲೆ ಕಸದ ಜತೆ ಬಿದ್ದಿತ್ತು. ಅಂಗಡಿ ಗುಡಿಸುವಾಗ ಸಿಕ್ಕಿತು ಅಂತ ಹೇಳಿದ. ಅವನು ಅಷ್ಟಾದರೂ ಹೇಳಿದನಲ್ಲಾ ಎಂಬುದಕ್ಕೆ ಕೃತಜ್ಛತೆ ಸಲ್ಲಿಸುವುದಷ್ಟೇ ನನಗೆ ಉಳಿದಿತ್ತು.  ಬೇರೆಯವರಾಗಿದ್ದರೆ ಆತ ಕೊಟ್ಟ ಮಾನಸಿಕ ಹಿಂಸೆ ಅಪವಾದಕ್ಕೆ ಜಗಳವಾಡಿ ಕಪಾಳ ಮೋಕ್ಷ ಮಾಡುತ್ತಿದ್ದರು. ನಾನು ಪುಟ್ಟಬಾಲಕ ಪೆಚ್ಚಾಗಿ ನೋಡುವುದಷಷ್ಟೇ ಉಳಿದಿತ್ತು. ಆತನಿಗೆ ದುಡ್ಡು ಸಿಕ್ಕಿದ್ದನ್ನು ಹೇಳದೇ ಇರಬಹುದಿತ್ತು. ಕೊನೆಗೆ ಅಷ್ಟಾದರೂ ಹೇಳಿ ನನ್ನನ್ನು ಅರೋಪ ಮುಕ್ತ ಮಾಡಿದನಲ್ಲ. ಆದರೆ ನನ್ನ ನೆರೆಯವರೆದುರು ತಲೆತಗ್ಗಿಸಿದ್ದಕ್ಕೆ ಪರಿಹಾರವಿರಲಿಲ್ಲ. ಈಗ ಆಂಗಡಿಯೂ ಇಲ್ಲ.  ಆ ವ್ಯಕ್ತಿಯೂ ಇಲ್ಲ. ಆ ಕಟ್ಟಡವೂ ಇಲ್ಲ. ಪೈವಳಿಕೆಯ ನಗರದ ರಸ್ತೆಯಲ್ಲಿ ಹೋಗುವಾಗ ಈ ಘಟನೆ ನೆನಪಾಗುತ್ತಿರುತ್ತದೆ. ಒಂದುವೇಳೆ ಆ ಹಣ ಕಸದ ಜತೆ ಸೇರಿ ಹಾಗೇ ಕಳೆದು ಹೋಗಿರುತ್ತಿದ್ದರೆ... ಆತನ ಎದುರು ನಾನು ಕಳ್ಳನೇ ಆಗಿ ಉಳಿಯುತ್ತಿದ್ದೆ. ದೇವರಿಗೆ ಅಷ್ಟಕ್ಕಾದರೂ ನಾನು ಕೃತಜ್ಞನಾಗಿರಬೇಕು. 

    ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡ ಕಳ್ಳನಿಗೂ ಆತ ಮಾಡದೇ ಇದ್ದ ಕಳ್ಳತನವನ್ನು ಆತನ ಮೇಲೆ ಆರೋಪಿಸಿದರೆ ಸಿಟ್ಟು ಬರುತ್ತದೆ. ಆದರೆ ಮಾಡದೇ ಇದ್ದ ಅಪರಾಧ ಆರೋಪಿಸಿದಾಗ ನೋವಾಗದೇ ಇರುವುದಕ್ಕೆ ಸಾಧ್ಯವಿಲ್ಲ. ಆದರೂ ಯಾವುದೋ ಒಂದು ಕಳ್ಳತನ ಅಥವಾ ಅಪರಾಧಗಳ ಆರೋಪಕ್ಕೆ ಕೊನೇ ಪಕ್ಷ ನಮ್ಮ ಜೀವನ ಪ್ರವೃತ್ತಿಯೂ ಕಾರಣವಾಗಬಾರದು. ಆರೋಪ ಬರುವುದು, ಅಥವಾ ಆರೋಪ ಸಾಬೀತಾಗುವುದು ನಮ್ಮ ಪ್ರವೃತ್ತಿಯನ್ನು ಅವಲಂಬಿಸಿರಬಾರದು. ಮತ್ತೆ ಇರುವುದು ನಮ್ಮ ಅದೃಷ್ಟ ಎಂದುಕೊಂಡಿರಬೇಕು.