Wednesday, May 13, 2026

ಬ್ರಾಹ್ಮಣ

     ಬ್ರಹ್ಮಾಂಡ ಎಂಬ ಶಬ್ದವನ್ನು ಉಪಮೆಯಾಗಿ ಆಗಾಧ ಗಾತ್ರವನ್ನು ಕಲ್ಪಿಸುವುದಕ್ಕೆ ಉಪಯೋಗಿಸುತ್ತಾರೆ. ಬ್ರಹ್ಮಾಂಡ  ಗಾತ್ರ.  ಬ್ರಹ್ಮ ಎಂದರೆ ದೊಡ್ಡದು. ಅದು  ಎಂದಿಗೂ ಸಣ್ಣಗಾಗುವುದಕ್ಕೆ ಸಾಧ್ಯವಿಲ್ಲ. ಸಣ್ಣದಾದರೆ ಅದು ಬ್ರಹ್ಮವಾಗಿ ಉಳಿಯುವುದಿಲ್ಲ. ಬ್ರಹ್ಮದ ರೂಪವೇ ಬ್ರಾಹ್ಮಣ. ಆದರೆ ಇಂದು ಬ್ರಹ್ಮ ಅಥವಾ ಬ್ರಾಹ್ಮಣ ಚಿಕ್ಕದಾಗಿ ಬೆಳೆಯದಂತಹ ಅನಿವಾರ್ಯತೆಗೆ ತುತ್ತಾಗುತ್ತಾನೆ.  ಬ್ರಹ್ಮ ಇದರ ಅರ್ಥ ಏನೆಂಬುದರ ಬಗ್ಗೆ ಯೋಚಿಸುವುದಿಲ್ಲ ಯಾಕೆಂದರೆ ಅದನ್ನು ಅಳೆಯುವ ಸಾಮರ್ಥ್ಯ ಕಳೆದುಹೋಗಿರುವುದಕ್ಕೋ ಅಳೆದರೆ ತಾನು ಚಿಕ್ಕದಾಗುವ ಭಯವೋ ಅಂತೂ ಬ್ರಹ್ಮ ಸ್ವರೂಪವೇ ಸಮಸ್ಯೆ ಮಾತ್ರ ಬೃಹದಾಗಿ ತಲೆಯ ಮೇಲೆ ಕುಳಿತಂತೆ ಎಗರಾಡುವಂತಾಗಿದೆ.  ತಾವು ಸ್ವತಃ ಸಣ್ಣಗಾಗಿರುವುದಕ್ಕೋ ಏನೋ? ಬ್ರಾಹ್ಮಣ ಎಂಬ ಶಬ್ದವೇ ಬಹಿಷ್ಕರಿಸುವ ಮನಸ್ಸಾಗುತ್ತದೆ. 

ಬ್ರಾಹ್ಮಣ ಅದೊಂದು ವಿಶಿಷ್ಟ ಪದವಿ. ಬ್ರಹ್ಮ ತತ್ವ ಅರ್ಥವಾದರೆ ಮಾತ್ರ ಈ ಪದವಿಯ ಅರ್ಥವಾಗಬಹುದು. ಆದರೆ ನಮ್ಮಲ್ಲಿ ಅರ್ಥವಾಗದೇ ಇರುವುದನ್ನು ಅರ್ಥವಿಸುವ ಪ್ರಯತ್ನ ಕಷ್ಟಕರ, ಅದಕ್ಕೆ ಅದನ್ನು ಹುಳಿ ಫಲವನ್ನಾಗಿಸಿದರೆ ಅದರ ಸನಿಹದಿಂದ ದೂರವಾಗಬಹುದೆಂಬ ಭ್ರಮೆ ಆವರಿಸಿಬಿಡುತ್ತದೆ. ಕಾರಣ ಇಷ್ಟೇ ಅದರ ಸನಿಹ ಸುಳಿಯುವ ಅರ್ಹತೆಯೂ ಇಲ್ಲ. ಅದರಬಗ್ಗೆ ಮತ್ತಷ್ಟು ಭಯ ಆವರಿಸಿರುತ್ತದೆ.  ಯಾವುದೋ ಒಂದು ಪದವಿಯೋ ಅರ್ಹತೆಯೋ ಶ್ರೇಷ್ಠ ಎಂದು ಕಂಡರೆ ಒಂದೋ ಅದನ್ನುಕೈವಶ ಮಾಡಿಕೊಳ್ಳಬೇಕು. ಅದಕ್ಕೆ ಸಾಧನೆ ಬೇಕು. ಒಂದು ವೇಳೆ ಅದು ಸಾಧ್ಯವಾಗದೇ ಇರುವಾಗ ತಾನೇನೂ ಕಡಿಮೆಯಲ್ಲ ಎಂದು ತಿಳಿದುಕೊಳ್ಳುವುದು. ಇದು ಕೆಲವೊಮ್ಮೆ ಸ್ವಾಭಿಮಾನದ ಸಂಕೇತವಾದರೆ ಹಲವು ಸಲ ಇದು ಸಾಧ್ಯವಾಗದೇ ಮೈ ಪರಚಿಕೊಳ್ಳುವ ಕೀಳರಿಮೆಯಾಗಿ ಬದಲಾಗುವುದೇ ಅಧಿಕ. 

ಎಲ್ಲಾ ಜಾತಿ  ಬದಲಿಸಿ ಹೊಸ ಜಾತಿಗೆ ಬದಲಾಗಬಹುದು.‌ ಆದರೆ ಬ್ರಾಹ್ಮಣ ಯರೋ ಬಂದು ಬದಲಿಸಿ ಅಗುವುದಲ್ಲ.  ಸ್ವತಃ ಆಗುವುದು. ಅದಕ್ಕೆ ಇಚ್ಛಾ ಶಕ್ತಿ ಬೇಕು.  ಯಾರೋ ಬಂದು ಬ್ರಾಹ್ಮಣ ಮಾಡಿ ಬದಲಿಸಿದರೆ ಅದು ಹೊರಾವರಣದ ವೇಷಗಾರಿಕೆಯಷ್ಟೆ ಸಾಧ್ಯ.  ಯಾರೋ ಮಾಡುವುದಕ್ಕೆ ಅದು ಸಾಧ್ಯವಿಲ್ಲ. ‌ಒಂದು ವೇಳೆ ಮಾಡಿದರೂ ಅದು ಉಳಿಯಬೇಕೆಂದೇನೂ ಇಲ್ಲ. ಬ್ರಾಹ್ಮಣ ಆಗಬೇಕೆಂದಿದ್ದರೆ  ಬ್ರಾಹ್ಮಣನಿಗೆ  ಹೋಲಿಸುವುದಕ್ಕಿಂತ ನಾನು ಬ್ರಾಹ್ಮಣ ಅಂತ ತಿಳಿದುಕೊಳ್ಳಬೇಕು. ಮೊದಲಿಗೆ ತನ್ನಲ್ಲಿರುವ ಕೀಳರಿಮೆಯನ್ನು ಬಿಡಬೇಕು.   ಅದರೊಂದಿಗೆ ಹೋಲಿಸುವ ಕೀಳರಿಮೆ ಯಾಕೆ?  ಬ್ರಾಹ್ಮಣ ಎಂದು ತಿಳಿದು ಆ ಹಾದಿಯಲ್ಲಿ ಕಟ್ಟು ನಿಟ್ಟಾಗಿ ಬದುಕಿ‌ನೋಡಬೇಕು. ಯಾರೋ ಬಂದು ಬ್ರಾಹ್ಮಣ ಮಾಡುವುದಲ್ಲ. ಮಾಡಿದರೂ ಅದು ಬ್ರಾಹ್ಮಣ್ಯ ಆಗುವುದಿಲ್ಲ ಜಾತಿ.. ಅಂದರೆ ಹುಟ್ಟಿನಿಂದ ಬರುವದ್ದು.‌ಜಾತ ಅಂದರೆ ಹುಟ್ಟು, ಧರ್ಮ‌ಆನಂತರ ಅನುಸರಿಸಬೇಕು. ಹಾಗಾಗಿ ಜಾತದಿಂದ ಅಂದರೆ ಹುಟ್ಟಿನಿಂದ ಬಂದಿರುವುದರ ಬಗ್ಗೆ ಯೋಚಿಸದೆ ಆನಂತರ ಸಾಧಿಸಬಹುದಾದ ಧರ್ಮದ ಬಗ್ಗೆ ಯೋಚಿಸಬೇಕು. ಜಾತದಿಂದ ಇರುವುದು ಅದು ನಮ್ಮ ಕೈಯಲ್ಲಿ ಇರುವುದಿಲ್ಲ. ಅದನ್ನೇ ಭಗವಂತ ಎನ್ನುವುದು. 

ಬ್ರಾಹ್ಮಣರಿಗೂ ಬ್ರಾಹ್ಮಣ ಹಾದಿಯಲ್ಲಿ ಸಾಗುವುದು  ವರ್ತಮಾನದಲ್ಲಿ ಸುಲಭವಲ್ಲ. ಅದಕ್ಕೆ ಬದ್ದತೆ ಬೇಕು. ಒಂದು ದಿನವಾದರೂ ಇಂದ್ರನಾಗಬೇಕು, ಅರಸನಾಗಬೇಕು ಈಗಿನ ಕಾಲದಲ್ಲಿ ಒಂದು ದಿನವಾದರೂ ಪ್ರಧಾನಿಯಾಗಬೇಕು ಮಂತ್ರಿಯಾಗಬೇಕು ಎಂದು ಕನಸು ಕಾಣಬಹುದು. ಏನೋ ಅದೃಷ್ಟದಿಂದ ಒಂದು ದಿನ ಹಾಗಾಗಿ ಇರಲೂ ಬಹುದು. ಆದರೆ ಬ್ರಾಹ್ಮಣ ಎಂಬುದು ಹೇಗೋ ಬಯಸುವ ಒಂದು ದಿನದ ಪದವಿಯಲ್ಲ.  ಅದು ಅದೃಷ್ಟದ ಬಲದಿಂದ ಒಲಿಯುವ ಪದವಿಯೂ ಅಲ್ಲ. 

ಬ್ರಾಹ್ಮಣನಾಗುವುದಕ್ಕಿಂತಾ ಬ್ರಾಹ್ಮಣನಾಗಿರುವುದು ಕಷ್ಟ. ಅದಕ್ಕೆ ಪರಿಶ್ರಮ ಬೇಕು. ಬ್ರಹ್ಮ ಎಂದರೇನು ಎಂಬ ಅರಿವಿರಬೇಕು. ಬದುಕಿನ ಅಧ್ಯಯನ ಇರಬೇಕು.ಭೂಮಿಯ ಮೇಲೆ ಸುವಸ್ತು ಅಂತ ಯಾವುದಾದರೂ ಇದ್ದರೆ ಅದು ಬೇಗನೆ ಕೆಡುತ್ತದೆ. ಬ್ರಾಹ್ಮಣನಾಗುವುದಕ್ಕೆ ಒಂದೇ ಹಾದಿ ಇದ್ದರೆ , ಕೆಡುವುದಕ್ಕೆ ಹಲವಾರು ಅವಕಾಶಗಳಿರುತ್ತವೆ. ಅದರೆ ನಮ್ಮಲ್ಲಿ  ಕೆಡುವುದೇ ಶ್ರೇಷ್ಠವಾಗುವಾಗ ಬ್ರಾಹ್ಮಣ ಎಂಬುದೇ ಕೆಡುಕಾಗಿ ಕಂಡರೆ ಆಶ್ಚರ್ಯವಾಗುವುದಿಲ್ಲ. ಪಾವಿತ್ರ್ಯ ಎಂದು ಕಂಡು ಕೇಳದೆ ಅರಿವಿಲ್ಲದಿರುವಾಗ ಅಪವಿತ್ರದ ಅರಿವು ಉಂಟಾಗುವುದಿಲ್ಲ.   

ಬಾಲ್ಯದಲ್ಲಿ ಉಪನಯನ ಎನ್ನುವಾಗ ಮಕ್ಕಳಿಗೆ ತುಂಬ ಉತ್ಸಾಹ ಇರುತ್ತದೆ. ಮನೆಯಲ್ಲಿ ದೊಡ್ಡವರಂತೆ ಮಾಡಿದರೆ, ತಾನೂ ದೊಡ್ಡವನಾದೆ ಎಂದು ಬಾಲಕರು ಹೆಮ್ಮೆ ಪಟ್ಟುಕೊಳ್ಳುತ್ತಾರೆ. ಆದರೆ ಉಪನಯನ ಆದ ನಂತರ ಹೊತ್ತು ಹೊತ್ತಿಗೆ ಸ್ನಾನ ಮಾಡಬೇಕು. ಸಂಧ್ಯಾವಂದನೆ ಮಾಡಬೇಕು. ಅಟೋಟಗಳಿಗೂ ನಿಬಂಧನೆ ಇರುತ್ತದೆ. ಎಲ್ಲಕ್ಕಿಂತಲೂ ಬೆಳಗ್ಗೆ ಎದ್ದು ಸ್ನಾನ ಮಾಡಿ ಜಪಮಾಡುವ ನಿಬಂಧನೆಯಲ್ಲಿ ಮಕ್ಕಳಿಗೆ ಈ ಉಪನಯನವೇ ಬೇಡ ಅನ್ನಿಸಿಬಿಡುತ್ತದೆ. ಅದರಂತೆ ಬ್ರಾಹ್ಮಣ್ಯವೂ ಆ ಪದವಿಯನ್ನು ನಿರ್ವಹಿಸುವುದೇ ಕಠಿಣ. ಸಹಪಂಕ್ತಿ ಭೋಜನ ಮಾಡಿ  ಹೆಗಲಿಗೆ ಜತೆಯಾಗಿ ಓಡಾಡಿದರೆ, ಅಥವಾ  ಜನಿವಾರ ಧರಿಸಿದರೆ ಬ್ರಾಹ್ಮಣಗನಾಗಬಹುದು ಎಂಬ ಕಲ್ಪನೆ ಇರುತ್ತದೆ. ಆದರೆ ಬ್ರಾಹ್ಮಣನಾಗುವುದು ಅಷ್ಟು ಸರಳ ಸುಲಭವಾಗಿದ್ದರೆ ಆ ಸ್ಥಾನಕ್ಕೆ ಮಹತ್ವ ಇರುತ್ತಿರಲಿಲ್ಲ. ಜತೆಯಲ್ಲಿ ಊಟ ಮಾಡಿದರೆ ಒಂದು ಹೊತ್ತಿನ ಹಸಿವು ನೀಗಬಹುದು, ಆದರೆ ಮನುಷ್ಯ ಜನ್ಮದ ಹಸಿವಿನ ಅರ್ಥವೂ ಆಗುವುದಿಲ್ಲ. ಅದು ಪರಿಹರಿಸಲ್ಪಡುವುದೂ ಇಲ್ಲ. 

ದಿಗ್ಬಲಂ ಕ್ಷತ್ರಿಯ ಬಲಂ ಬ್ರಹ್ಮ ತೇಜೋ ಬಲಂ ಬಲಂ ಎಂದು ಕೊಂಡು ಕೌಶಿಕ ಬ್ರಹ್ಮ ಋಷಿ ವಿಶ್ವಾಮಿತ್ರನಾದ. ಕ್ಷತ್ರಿಯನಾದ ಕೌಶಿಕ ರಾತ್ರಿ ಬೆಳಗಾಗುವುದರಲ್ಲಿ ಬ್ರಾಹ್ಮಣನಾಗಲಿಲ್ಲ. ಆತನನ್ನು ಯಾರೂ ಬ್ರಾಹ್ಮಣನನ್ನಾಗಿ ಪರಿವರ್ತಿಸಿ ಮತಾಂತರ ಮಾಡಿಲ್ಲ. ಸ್ವತಃ ಪರಿಶ್ರಮದಿಂದ ತಪಃ ಶಕ್ತಿಯಿಂದ ಆತ ಮಹಾ ಬ್ರಾಹ್ಮಣನಾಗಿ  ವಿಶ್ವಾಮಿತ್ರನಾಗಿ  ಬದಲಾದ.  ಆದರೆ ಇಂದು ಬ್ರಾಹ್ಮಣನಾಗಬೇಕು, ಆದರೆ ತಪಸ್ಸು ಬೇಡ , ನಿಯಮ ನಿಷ್ಠೆಗಳು ಬೇಡಾ. ಖಡ್ಡಾಯ ಅನುಷ್ಠಾನ ಬೇಡ. ಆದರೆ ಬ್ರಾಹ್ಮಣನಾಗಬೇಕು. ಇದು ಸಿನಿಮಾ ನಾಟಕದಂತೆ ಕೇವಲ ವೇಶದಿಂದ ಬ್ರಾಹ್ಮಣನಾಗಬಹುದು. ವೇಶದಿಂದ ಬ್ರಾಹ್ಮಣನಾಗುವುದಕ್ಕೂ ಕೆಲವೊಮ್ಮೆ ಅರ್ಹತೆ ಇರಬೇಕಾಗುತ್ತದೆ. 

ಬ್ರಾಹ್ಮಣನಾಗುವುದೆಂದರೆ ಸ್ವತಃ ಬ್ರಹ್ಮನಾಗುವುದು. ಸ್ವತಃ ದೇವನಾಗುವುದು. ದೇವರು ಎಂದರೆ ದೇವಾಲಯದಲ್ಲಿ ಕೇವಲ ಮೂರ್ತಿಯಾಗಿ ಇರುವುದಲ್ಲ. ದೇವರು ಎಂದರೆ ಏನು ಎಂಬುದನ್ನು ಅರಿಯಬೇಕು. ಕಣ್ಣಿಗೆ ಕಾಣದಿರುವುದೇ ದೇವರು. ದೇವರನ್ನು ಯಾರೂ ತೋರಿಸುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ ದೇವರನ್ನು ಕಂಡವರು ಯಾರೂ ಇಲ್ಲ. ಕಾಣದೇ ಇರುವುದನ್ನು ತೋರಿಸುವುದಕ್ಕೆ ಹೇಗೆ ಸಾಧ್?  ಇದು ದೇವರು ಅಂತ ದೇವರನ್ನು ತೋರಿಸುವುದಕ್ಕೆ ಸಾಧ್ಯವಿಲ್ಲ. ಚರಾಚರ ವಸ್ತುಗಳಿಗಿಂತ ಅತೀತವಾಗಿರುವುದೇ ದೇವರು. ಮನುಷ್ಯ ತನ್ನ ಬುದ್ಧಿಗೆ ಸೀಮಿತವಾಗಿ ದೇವರನ್ನು ಕಲ್ಪಿಸಿಕೊಳ್ಳಬಹುದು. ಆದರೆ ದೇವರನ್ನು ಅರಿಯಬೇಕಾದರೆ ಜನ್ಮವೇ ಸಾಕಾಗುವುದಿಲ್ಲ.  ಹೊರಗೆಲ್ಲೂ ದೇವರು ಕಾಣದಿರುವಾಗ ಸ್ವತಃ ತನ್ನಲ್ಲಿರುವ ದೇವರನ್ನು ಕಂಡುಕೊಳ್ಳುವುದು. ಬ್ರಾಹ್ಮಣನೆಂದರೆ ಅದುವೆ ತನ್ನಲ್ಲೇ ದೇವರನ್ನು ಕಂಡುಕೊಳ್ಳುವುದು. ಬ್ರಾಹ್ಮಣನಿಗೆ ದೇವರನ್ನು ಅರ್ಚಿಸುವುದಕ್ಕೆ ದೇವಾಲಯ ಬೇಡ, ಮೂರ್ತಿಯ ಅವಶ್ಯಕತೆ ಇರುವುದಿಲ್ಲ. ಯಾವುದರಲ್ಲೂ ದೇವರನ್ನು ಆವಾಹಿಸುವುದಕ್ಕೆ ಸಾಧ್ಯವಿರುತ್ತದೆ. ಅರ್ಥ ಎಲ್ಲದರಲ್ಲೂ ದೇವರನ್ನು ಕಂಡು ಸ್ವತಃ ತನ್ನಲ್ಲೇ ದೇವರನ್ನು ಕಂಡು ತಾನೇ ದೇವರಾಗುವುದು. ಹಾಗಾಗಿಯೇ ಬ್ರಾಹ್ಮಣ ಎಂದರೆ ಭೂಸುರನಾಗುತ್ತಾನೆ.  ಅದು ವೃತನಿಷ್ಠನಾಗಿ ಕಠಿಣವಾದ ಸ್ಥಾನ. 

ಭೂಮಿಯ ಮೇಲೆ ತೆಂಗಿನಮರಮಾತ್ರ ಕಲ್ಪವೃಕ್ಷವಾಗುತ್ತದೆ. ಮಾವಿನ ಮರ ಕಲ್ಪವೃಕ್ಷವಾಗುವುದಿಲ್ಲ. ಅದನ್ನು ಕಲ್ಪವೃಕ್ಷ ಎಂದು ತನ್ನ ಅರಿವಿಗೆ ಸೀಮಿತವಾಗಿ ಕಲ್ಪವೃಕ್ಷ ಎಂಬಂತೆ ಭ್ರಮಿಸಬಹುದು. ಆದರೆ ತೆಂಗಿನಮರ ಕಲ್ಪವೃಕ್ಷವಾಗಿಯೇ ಉಳಿಯುತ್ತದೆ. 

No comments:

Post a Comment