Thursday, July 29, 2010

ಕರ್ಕಶ ತ್ರಿಚಕ್ರಿಗಳು

ಆಟೋಗಳು ಬಣ್ಣ ಬದಲಿಸಿ ಹೊಸ ರೂಪದಲ್ಲಿ ಬಂದಾಗ ಹೊಸ ಬದಲಾವಣೆ ಬಂತೆ? ಎಲ್ಲೆಲ್ಲಿ ಬದಲಾವಣೆಯಾಯಿತೋ ಅದರೆ ಬೆಂಗಳೂರಿನಲ್ಲಿ ಬದಲಾವಣೆಗೆ ಯಾವ ಮಹತ್ವವೂ ಇಲ್ಲದಾಗಿ ಹೋಯಿತು. ಕೇವಲ ಆಟೋ ಮಾಲಿಕರ ಜೇಬಿಗೆ ಕತ್ತರಿಯಾಯಿತು ಪರ್ಯಾಯವಾಗಿ ಕೆಲವು ದಿಶೆಯಲ್ಲಿ ಪ್ರಯಾಣಿಕರ ಜೇಬು ಕತ್ತರಿ ಪ್ರಯೋಗಕ್ಕೆ ಒಳಗಾಯಿತು.
ಊರಿನಿಂದ ಮುಂಜಾನೆ ಬಂದು ನವರಂಗ್ ನಲ್ಲಿ ಬಸ್ಸು ಇಳಿವಾಗ ಆಟೋದವರು ಸ್ವಾಗತಿಸುವ ಪರಿ ಕಂಡಾಗ ಮೊದಲು ನನಗೆ ಅಬ್ಬ ಏನು ಕಾಳಜಿ ಇವರಿಗೆ ಎಂದು ಅನ್ನಿಸಿಬಿಡುತ್ತಿತ್ತು. ನಮ್ಮ ಲಗ್ಗೇಜು ಯಾವ ಆಟೋದಲ್ಲಿ ಇದೆಯಪ್ಪಾ ಅಂತಾ ಗಾಬರಿಯಾಗುತ್ತಿತ್ತು. ಮೊದಲೇ ಊರಲ್ಲಿ ಹೆದರಿಸಿ ಬೆಂಗಳೂರಿನ ಬಸ್ಸು ಹತ್ತಿಸಿ ಬಿಡುವ ಸಂಬಂಧಿಕರು ಏನೇ ಆದರೂ ಬ್ಯಾಗ್ ಕೈ ಬಿಡಬೇಡ ಜಾಗ್ರತೆ.. ಹೆಂಡತಿ ಕೈ ಬಿಟ್ಟರೂ ಪರವಾಗಿಲ್ಲ. ಬ್ಯಾಗ್ ಕೈ ಮಾತ್ರ ಭದ್ರ....ಕೊನೆಗೆ ಅದೂ ಕಷ್ಟ ಕೇವಲ ಕೈ ಮಾತ್ರ ನಮ್ಮ ಕೈಗೆ ನೇತಾಡಿಕೊಂಡು ಇರುತ್ತದೆ ಬ್ಯಾಗ್ ಕಳ್ಳರ ಪಾಲಾಗಿರುತ್ತದೆ. ಹೀಗೆ ಹೆದರಿ ಹೆದರಿ ಬ್ಯಾಗ್ ಭದ್ರವಾಗಿ ಹಿಡಿದು ಬಸ್ ಕ್ಲೀನರ್ ನಿಂದ ತಳ್ಳಿಸಿಕೊಂಡು ನವರಂಗ ಸಿಗ್ನಲ್ ಬಳಿ ಇಳಿದೆವೋ.. ಗಾಬರಿಯ ಮೇಲೆ ಗಾಬರಿ. ಆಟೋ ಡ್ರೈವರ್ ಗಳು ಮುಗಿಬಿದ್ದು ನಮ್ಮ ಬ್ಯಾಗ್ ಎತ್ತಿ ಆಟೋದಲ್ಲಿ ಇಟ್ಟು ಬಿಡುತ್ತಾರೆ. ಅತ್ತ ಇತ್ತ ಎತ್ತಲೂ ಆಟೋಗಳು ಮುತ್ತಿಕೊಂಡು ತಬ್ಬಿಬ್ಬಾಗುವ ಸ್ಥಿತಿ. ಬಸ್ಸಿನಲ್ಲಿ ಅರ್ಧ ನಿದ್ದೆಯಾಗಿ ಎದ್ದು ಇಲ್ಲಿ ಇಳೀವಾಗ ಹೊಸಬರಾದರೆ ಗಾಬರಿ ಇನ್ನು ಹೆಚ್ಚು. ಬಸ್ ನಿಂದ ಇಳಿವಲ್ಲಿಗೆ ಬರುತ್ತೇನೆ ಅಂದ ಪರಿಚಿತರನ್ನು ಹುಡುಕುವ ತವಕ.. ಮಧ್ಯೆ ಈ ಆಟೋದವರ ಶೀಘ್ರ ಉಪಚಾರ.. ಒಂದು ಸಲ ವೃದ್ಧರೋರ್ವರು ಬಸ್ ಇಳಿದ ಕೂಡಲೆ ಎರಗಿದ ಆಟೋದವನಿಗೆ ಹೇಳಿದರು ತಡೀರಿ ಸ್ವಾಮಿ ನಾನು ಯಾವ ದಿಕ್ಕಿನಲ್ಲಿ ಇದ್ದೇನೆ ಅಂತ ಗೊತ್ತಾಗ್ಲಿ .. ಅ ಮೇಲೆ ನೋಡುವ. ಬೆಂಗಳೂರಲ್ಲಿ ತಿಳಿಯದ ದಿಕ್ಕಿನ ಜಾಡು ಹಿಡಿವ ಯತ್ನ ಅವರದ್ದು.


ಇದೆಲ್ಲ ಮಾಮೂಲಾದರೂ ಒಂದು ವಿಚಿತ್ರ...ಟೆರೆ .ಟೆರೆ..ಟ್ರ್...ಎಂದು ಗಂಟಲು ಬಿರಿವ ಸದ್ದು ಮಾಡಿಕೊಂಡು ಶರವೇಗದಲ್ಲಿ ಸಾಗುವುದನ್ನು ಕಂಡಾಗ ಅದರಲ್ಲೂ ನಮ್ಮೂರಿನವರು ಗಾಬರಿಯಾಗುವುದು ಸಹಜ. ಬೆಂಗಳೂರಿಗೆ ಬಂದ ಆರಂಭದಲ್ಲಿ  ಈ ಕರ್ಕಶ ಸದ್ದು ಕೇಳಿದಾಗ, ಈ ವಾಹನದ ಸೈಲೆನ್ಸರ್ ಕೆಟ್ಟಿರಬೇಕು ಎಂದು. ಕ್ರಮೇಣ ತಿಳಿದದ್ದು ಇದು ಉದ್ದೇಶಪೂರ್ವಕವಾಗಿ ಪಿಕಪ್ ಮತ್ತು ವೇಗಕ್ಕಾಗಿ ಬದಲಾಯಿಸುತ್ತಾರೆ ಎಂದು. ಊರಲ್ಲಿ ಸಾಕುನಾಯಿಗಳ ಬಾಲ ಕತ್ತರಿಸಿದಂತೆ..


ಊರಲ್ಲಿ ಹತ್ತಿರ ಸದ್ದು ಮಾಡದೆ ಬಂದು ನಿಲ್ಲುವ ರಿಕ್ಷಾಗಳು ಹಾರನ್ ಮಾಡಿದಾಗಲೇ ಅರಿವಾಗುವುದು. ರಿಕ್ಷ ಬಳಿಯಲ್ಲೇ ಇದೆ ಎಂದು. ಒಂದು ಬಾರಿ ಇಲ್ಲಿನ ಒಬ್ಬ ಆಟೋ ಚಾಲಕನಲ್ಲಿ ಕೇಳಿದೆ ಆಟೋ ಹೀಗೆ ಸವುಂಡು ಮಾಡ್ತಾ ಪಾಸ್ಟಾಗಿ  ಹೋದ್ರೆ ಡಿಸ್ಟರ್ಬ್ ಆಗಲ್ವೆ.? ಮುಕ್ಕಾಲುವಾಸಿ ಇಂಗ್ಲೀಷು ಇದ್ದ ಕನ್ನಡವೇ ಇವರಿಗೆ ಸರಿಯಾಗಿ ಅರ್ಥವಾಗುವ ಭಾಷೆ.
ಇಲ್ಲಾ ಸಾ..ಇದು ನನ್ ಕಿವಿಗೆ ಕೇಳ್ಸಲ್ಲ. ಹಿಂದೆ ಬರೋರಿಗೆ ತಾನೆ? ಎಂತಹ ಉತ್ತರ...!!


ಈಗ ಬಣ್ಣದೊಂದಿಗೆ ಆಟೋದರವೂ ಬದಲಾಗಿದೆ. ಆದರೆ ಸವುಂಡು ಮಾತ್ರ ಅದೇ ಕರ್ಕಶ. ಜತೆಗೆ  ಎಫ್. ಎಂ. ನ ಕರ್ಕಶವೂ ಸೇರಿಕೊಂಡಿತೊ ಪ್ರಯಾಣಿಕರಿಗೆ ಇನ್ನೇನು ಬೇಕು.  ಸೀಟು ಹರಿದಿರಲಿ, ಮಳೆ ಬಂದರೆ ರಸ್ತೆಯಲ್ಲಿ ನಡೆದು ಹೋದಷ್ಟೇ ನೆನೆದು ತೊಪ್ಪೆ ಯಾದರೂ , ಮೀಟರ್ ನಲ್ಲಿ ಬರೋ ಸಂಖ್ಯೆ ಓದಲು ಅವನೇ ಸಹಾಯ ಮಾಡಬೇಕಾಗಿ ಬಂದರು .. ಈ ಟೆರೆ ಟೆರೆ ಶಬ್ಡ ಅದರ ಜತೆಗೆ ಹಿಂಸೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಕೇವಲ ದ್ವಿಚಕ್ರ ವಾಹನದ ಹೋಗೆ ತಪಾಸಣೇ ದಾಖಲೆಗೆ ಕಣ್ಣು ಹಾಕುವ ಪೋಲೀಸರಿಗೆ ಇದನ್ನು ನಿಯಂತ್ರಿಸುವ ಬುದ್ದಿಯಾಕೆ ಬರುವುದಿಲ್ಲವೋ ದೇವರೇಬಲ್ಲ. ಯಾವುದೇ ಸಾರಿಗೆ ಅಧಿಕಾರಿಯಾಗಲಿ  ಮಂತ್ರಿಯಾಗಲಿ ಗಮನಕ್ಕೇ ಬರದ ಈ ಧ್ವನಿಯಿಂದ ಬೆಂಗಳೂರು ಮುಕ್ತವಾಗಬಲ್ಲುದೆ? ಹೀಗೆ ಬೆಂಗಳೂರಿನ ಜನಸಾಮಾನ್ಯ ಗಮನಿಸದೇ ತಾಳಿಕೊಳ್ಳುವ ಹಲವು ಭೂತಗಳಿವೆ. ಮುಂದೊಂದು ದಿನ ಅದರ ಬಗ್ಗೆ ಹೇಳುವ. 

Thursday, January 28, 2010

ಯೋಗಾನುಭವ



ಅನಿಯಂತ್ರಿತ ಆಹಾರ, ಅನಿಯಮಿತ ಜೀವನ ಶೈಲಿ, ದೈಹಿಕ ಆರೋಗ್ಯದ ಕೊರತೆ ಇದರಿಂದಾಗುವ , ಮಾನಸಿಕ ದುಮ್ಮಾನ ಇವೆಲ್ಲವುಗಳು ಕಾಡಿದಾಗ ಬದುಕೇ ಕೆಲವೊಂದು ಸಲ ಹತಾಷೆಗೊಳಗಾಗುವುದು ಸಹಜ.ಮನುಷ್ಯ ಮಾತ್ರವಲ್ಲ ಪ್ರಾಣಿ ಸಹಜ ಜೀವನಕ್ಕೆ , ಆಹಾರ, ನಿದ್ರಾ ಮೈಥುನ ಚಟುವಟಿಕೆಗಳು ಎಷ್ಟು ಆವಷ್ಯಕವೋ ಅಷ್ಟೇ ಅದನ್ನು ನಿಯಮಿತವಾಗಿ ತನ್ನ ನಿಯಂತ್ರಣದಲ್ಲಿರುವುದು ಅಷ್ಟೇ ಅವಶ್ಯಕ. ಮನುಷ್ಯ ಜೀವನಕ್ಕೆ ಇದು ಹೆಚ್ಚು ಅತ್ಯಾವಶ್ಯಕ. ಇದನ್ನು ಹಲವರು ಗುರುತಿಸಿ ಬದುಕಿದ ಜೇವನದ ಸಮಯವನ್ನು ಸಾರ್ಥಕ ಮಾಡಿಸಿಕೊಳ್ಳುತ್ತಾರೆ. ನಿಯಮಿತ ಜೀವನ ಶೈಲಿಗೆ ಸನಾತರು ನೀಡಿದ ಬಳುವಳಿಯೇ ಈ ಯೋಗ. ತನ್ನ ದೇಹದ ಅಂತರಂಗದ ಭಾಷೆಯನ್ನು ಅರ್ಥೈಸಿಕೊಳ್ಳುವುದೇ ಯೋಗ ಅಂತ ನನ್ನ ಭಾವನೆ.


ಬಹುಶಃ ನನ್ನ ಬದುಕಿನಲ್ಲಿ ಇದನ್ನು ಅಳವಡಿಸಿಕೊಂಡಮೇಲೆ ಬದುಕು ಹೆಚ್ಚು ಅರ್ಥ ಪೂರ್ಣವಾದ ಅನುಭವ. ಮೊದಲಿಂದಲೂ ಯೋಗ ಧ್ಯಾನ ಏಕಾಗ್ರತೆ ಇದರ ಬಗ್ಗೆ ಹೆಚ್ಚಿನ ಅರಿವು ಇಲ್ಲದ ನನಗೆ ಕೆಲವು ಸಮಯಗಳಿಂದ ಈಚೆಗೆ ನನ್ನ ದೂರದ ( ಪ್ರಾದೇಶಿಕವಾಗಿ ಮಾತ್ರ ಮಾನಸಿಕವಾಗಿ ತೀರ ಹತ್ತಿರ) ಸ್ನೇಹಿತರ ಸಲಹೆ ಮತ್ತು ಒತ್ತಾಯ ನನ್ನನ್ನು ಯೋಗ ಶಿಕ್ಷಣಕ್ಕೆ ತೊಡಗುವಂತೆ ಮಾಡಿತು.ಅಷ್ಟು ಮಾತ್ರವಲ್ಲ ನನ್ನಲ್ಲಿ ಯೋಗದ ಬಗೆಗಿನ ಜಿಜ್ಞಾಸೆಯನ್ನು ಹುಟ್ಟು ಹಾಕಿದ ಮಹಾನ್ ವ್ಯಕ್ತಿಯೊಬ್ಬರು ಹಿರಿಯ ಯಕ್ಷಗಾನ ಕಲಾವಿದ ಶ್ರೀ ಸೂರಿಕುಮೆರಿ ಗೋವಿಂದ ಭಟ್ಟರು. ಅವರೊಂದಿಗೆ ಕಳೆದ ಕೆಲವು ಗಂಟೆಗಳಲ್ಲಿ ಯೋಗದ ಬಗ್ಗೆ ಸಂಕ್ಷೇಪವಾಗಿ ಮತ್ತು ಅಷ್ಟೇ ಸ್ಥೂಲವಾಗಿ ಮನವರಿಕೆ ಮಾಡಿದ್ದರು. ಅವರ ಜೀವನ ಕ್ರಮ ನಡವಳಿಕೆ ಎಲ್ಲವೂ ಅದಕ್ಕೆ ನಿದರ್ಶನವಾದದ್ದು ನನಗೆ ವೇದ್ಯವಾಗಿಬಿಟ್ಟಿತು. ಮೊದಲು ಇದರ ಬಗ್ಗೆ ಏನೇನೂ ಅರಿವಿಲ್ಲ. ಜಿಮ್, ಜಾಗಿಂಗ್, ವಾಕಿಂಗ್, ಹೀಗೆ ಅಧುನಿಕ ದೈಹಿಕ ದಂಡನೆ ಹಾಗು ಕಸರತ್ತಿನ ಬಗ್ಗೆ ಅಲ್ಪಸ್ವಲ್ಪ ಅರಿವು ಇತ್ತು. ಕೆಲವು ಸಮಯ ಜಿಮ್ ವ್ಯಾಯಾಮ ಶಾಲೆಗೆ ಸೇರಿ ಏದುಸಿರು ಬಿಟ್ಟಿದ್ದೆ, ಬೆವರು ಹರಿಸಿದ್ದೆ. ಆದರೆ ತೀರ ದೈಹಿಕ ದಂಡನೆ ಸಾಧ್ಯವಾಗದೆ ಅದರಲ್ಲಿ ವಿಫಲನೂ ಆಗಿದ್ದೆ. ನನ್ನ ದೈಹಿಕ ವ್ಯಾಯಾಮ ಕೇವಲ ಮುಂಜಾವಿನ ವಾಕಿಂಗ್ ಎಂಬಲ್ಲಿಗೆ ಸೀಮಿತವಾಗಿತ್ತು. ತಕ್ಕ ಮಟ್ಟಿಗೆ ಅದು ಉಲ್ಲಾಸದಾಯಕವಾಗಿದ್ದರು ಏನೋ ಒಂದು ಅಪೂರ್ಣ ಪ್ರಜ್ಞೆ ಮನಸ್ಸಿಗೆ ಕಾಡುತ್ತಿದ್ದುದು ಸುಳ್ಳಲ್ಲ. ನನ್ನ ವಿದೇಶಿ ಸ್ನೇಹಿತ, ವ್ಯಕ್ತಿ ಗತವಾಗಿ ಅಥವಾ ಮೌಖಿಕವಾಗಿ ನಾವು ಇನ್ನೂ ಅಪರಿಚಿತರೇ. ನನ್ನ ಇಂಟರ್ನೆಟ್ ಸ್ನೇಹಿತರಾದ ಹರೀಶ್ ರವರ ತೀವ್ರ ಒತ್ತಾಯ ಹಾಗು ಕೇಳಿಕೆ ಮೇರೆಗೆ ಯೋಗ ತರಗತಿಗೆ ಸೇರುವ ತೀರ್ಮಾನಕ್ಕೆ ಬಂದೆ.


ಹೀಗೆ ಮಲ್ಲೇಶ್ವರಂ ನಲ್ಲಿರುವ ಪ್ರಕೃತಿ ಜೀವನ ಕೇಂದ್ರ ಯೋಗ ಶಾಲೆಗೆ ಒಂದು ಮುಂಜಾನೆ ಹೋದೆ. ಸಾಕ್ಷಾತ್ ಯೋಗ ಗುರುಗಳಾದ ಶ್ರೀ ತಾಡಪತ್ರಿಯವರು ಅಲ್ಲಿಯ ಯೋಗದ ಶಾಲೆಯ ಗುರುಗಳು. ಎಲ್ಲರಂತೆ ನಾನು ಬೆಡ್ ಶೀಟ್ ಹಾಕಿ ವಿಶಾಲವಾದ ಮಂದಿರವೊಂದರಲ್ಲಿ ಕುಳಿತು ಯೋಗ ತರಬೇತಿಗೆ ತೊಡಗಿಕೊಂಡ ಮೊದಲ ದಿನ ಒಂದು ವಿಧದ ಕುತೂಹಲ ಇದ್ದದ್ದು ಸುಳ್ಳಲ್ಲ. ಕೇವಲ ಸರಳ ವ್ಯಾಯಾಮದಿಂದ ದೈಹಿಕ ಆರೋಗ್ಯವನ್ನು ಕಾಪಾಡುವುದು ಸಾಧ್ಯವೇ ಎಂಬ ಕುತೂಹಲ ಇಂದು ಅನುಭವವೇ ತಣಿಸಿದೆ.


ಮೊದಲ ದಿನ ಗುರೂಜಿ (ಎಲ್ಲರೂ ಗೌರವ ಪೂರ್ಣವಾಗಿ ಕರೆಯುವ ರೀತಿ ) ಚುಟುಕಾಗಿ ಯೋಗ ಧ್ಯಾನದ ಬಗ್ಗೆ ಸಂಕ್ಷೇಪವಾಗಿ ಪ್ರಸ್ತಾವನೆಯನ್ನು ಮಂಡಿಸಿದರು. ಉತ್ತಮ ಜೀವನಕ್ಕೆ ಯೋಗಾಭ್ಯಾಸ ಎಷ್ಟು ಸಹಕಾರಿ ನಿಯಮಿತವಾದ ಶಿಸ್ತುಬದ್ದ ಜೀವನ ಶೈಲಿಯಿಂದಾಗುವ ಲಾಭಗಳೇನು. ದಿನದ ಹಲವು ಚಟುವಟಿಕೆಗೆ ನಾವು ಹೇಗೆ ನಮ್ಮ ಸಮಯವನ್ನು ಮೀಸಲಿಡುತ್ತೆವೋ ಅದರಂತೆ ದಿನದ ಒಂದು ತಾಸು ಸೂರ್ಯೋದಯದ ಸಮೀಮಪದ ಅವಧಿಯನ್ನು ಮೀಸಲಿಟ್ಟರೆ ಆ ಜೀವನದ ಶೈಲಿಯನ್ನು ಅನುಭವಿಸಿ ತಿಳಿಯಬೇಕು. ಸರಳವಾದ ಜೀವನ, ಸರಳವಾದ ಆಹಾರದಿಂದ ಕೂಡಿದ ನಮ್ಮ ಜೀವನ ಶೈಲಿಯನ್ನು ನಾವು ರೂಢಿಸಿಕೊಳ್ಳಬೇಕು. ನಿರಾತಂಕವಾದ ಬದುಕು ನಮ್ಮದಾಗುತ್ತದೆ. ಪುರಾತನ ಸನ್ಯಾಸಿ ಜೇವನದಲ್ಲಿ ರೂಢಿಸಿಕೊಂಡ ಈ ಯೋಗ ಎಂಬುದು ಈಗಿನ ಈ ಅಧುನಿಕ ಯುಗದಲ್ಲೂ ಹೇಗೆ ಅರ್ಥ ಪೂರ್ಣವಾಗಿದೆ ಎಂಬುದನ್ನು ತುಂಬಾ ಸರಳವಾಗಿ ಹೇಳಿದರು. ಆದರೂ, ನನಗೆ ತುಂಬಾ ಅಪ್ಯಾಯಮಾನವಾದ ಅವರ ಒಂದು ಮಾತು ಇಂದಿಗೂ ನೆನಪಿದೆ. " ನಿಮ್ಮ ನೆರೆಯ ಅಥವಾ ದೂರದ ಯಾವುದೇ ವೈರಿಯನ್ನು ಮೊದಲು ಯೋಗ ತರಗತಿಗೆ ಸೇರುವಂತೆ ಪ್ರೇರೇಪಿಸಿ. ಆತ ನಂತರ ನಿಮ್ಮ ವೈರಿಯಾಗಿ ಉಳಿಯದೆ ವೈಷಮ್ಯವನ್ನು ದೂರಿಕರಿಸಿ ನಿಮಗೆ ಹತ್ತಿರದವನಾಗಿ ಬಿಡುವನು. " ನಿಜವಾಗಿಯೂ ಎಂತಹ ಅರ್ಥ ಪೂರ್ಣ ಮಾತು. ವಿಶ್ವಶಾಂತಿಯ ಮೂಲ ಸೆಲೆ ಇರುವುದೇ ಈ ತತ್ವದಲ್ಲಿ ಅಲ್ಲವೇ?ಇಂತಹ ವೈಷಮ್ಯ ಮಾತ್ಸರ್ಯ ರಹಿತ ಜೀವನ ಒಂದು ಸಲ ಕಲ್ಪಿಸಿದರೆ ಸಾಕು ಆ ಲೋಕವನ್ನು ಗ್ರಹಿಸಿಯೇ ರೋಮಾಂಚಗೊಳ್ಳದೇ ? ಯೋಗಾಭ್ಯಾಸದ ಮೂಲ ತಿರುಳೇ ಅದು ನಮ್ಮ ಜೀವನ ಶೈಲಿಯನ್ನೇ ಬದಲಿಸಿ ವ್ಯಕ್ತಿತ್ವ ವಿಕಸನಕ್ಕೆ ಇದರಿಂದ ಮಿಕ್ಕಿದ ವಿಧಾನವೇ ಇರದು ಎಂದೆನಿಸುತ್ತದೆ.

ಮೊದಲದಿನ ಕೆಲವು ಯೋಗಾಸನ, ಸೂರ್ಯನಮಸ್ಕಾರ ಪ್ರಾಣಾಯಾಮದ ಪಾಠವಾಯಿತು." ಸಹನಾವವತು ಸಹನೌಭುನಕ್ತು ಸಹವೀರ್ಯಂಕರವಾವಹೈ ತೇಜಸ್ವಿನಾವಧೀತಮಸ್ತು ಮಾವಿದ್ವಿಷಾವಹೈ..ಓಂ ಶಾಂತಿ: ಶಾಂತಿ: ಶಾಂತಿ: " ಎಂಬ ಭೋಜನ ವಿಧಿಯ ಶಾಂತಿ ಮಂತ್ರ ಯೋಗ ಗುರುಗಳ ಕಂಠದಿಂದ ಹೊರಬಿದ್ದು ಎಲ್ಲ ಕಂಠದಿಂದಲೂ ಮರು ಝೆ೦ಕರಿಸಿದಾಗ ಆರಂಭವಾದ ಹೊಸ ಅನುಭವ ಇಂದಿಗೂ ಅದೇ, ನಿತ್ಯವೂ ಅದೇ ಹೊಸತನವನ್ನು ಉಳಿಸಿದೆ ಎಂದರೆ ಈ ಸನಾತನ ಎಷ್ಟು ಭದ್ರವಾಗಿದೆ ಅಲ್ಲವೇ.?

ನನಗಂತೂ ಈ ಅನುಭವ ತುಂಬಾ ವಿಚಿತ್ರ ಸಂವೇದನೆಯನ್ನು ಮನಸ್ಸಿನಲ್ಲಿ ಮೂಡಿಸಿಬಿಟ್ಟಿತು ಎಷ್ಟು ಸರಳ..!!!ಹೀಗೂ ಸಾಧ್ಯವೇ...?!!!

ಯೋಗದಲ್ಲಿ ಪ್ರಾಣಾಯಾಮ ಎನ್ನುವುದು ಪ್ರಮುಖ ಅಂಗ. ಬಹುಶ ಪ್ರತಿಯೊಂದು ಉಸಿರಾಟದ ಜೀವಕ್ಕೆ ಇದು ತೀರ ಅವಶ್ಯಕ. ಮನುಷ್ಯನ ಧಾವಂತದ ವೇಗದ ಬದುಕಿಗೆ ಸಾವಧಾನದ ಮನೋಬಲವನ್ನು ತುಂಬುವ ವಿಧಾನ ಇದರ ಮೂಲ ಸೆಲೆ. ಜಿಮ್ ಆಟೋಟ ಅಥವಾ ಬೆಳಗಿನ ಜಾಗಿಂಗ್ ಎಲ್ಲದರಲ್ಲಿಯೂ ವೇಗದ ಎದುಸಿರೆ ಪ್ರಾಧಾನ್ಯ. ಆದರೆ ಇಲ್ಲಿ ಅದು ತದ್ವಿರುದ್ದ. ನಿಧಾನವಾದ ಅಷ್ಟೇ ಕರಾರುವಕ್ಕಾದ , ದೀರ್ಘ ಉಸಿರಾಟದ ಪ್ರಕ್ರಿಯೆ ಇಲ್ಲಿಯದು. ನಿರಾಳವಾದ ಅಷ್ಟೇ ನಿರಾತಂಕವಾದ ಉಸಿರಾಟ ವಿಧಾನ ಈಪ್ರಾಣಾಯಾಮದ ಮೂಲ ವಿಧಾನ. ಹಲವು ವಿಧದ ಪ್ರಾಣಾಯಾಮ ಅವುಗಳ ವಿಧಾನ ಅವುಗಳನ್ನು ಮಾಡುವುದರಿಂದಾಗುವ ಮಾನಸಿಕ ಹಾಗು ದೈಹಿಕ ಪರಿಣಾಮಗಳು ಮಾಡಿಯೇ ಅನುಭವಿಸಿ ನೋಡಬೇಕು,

ಯೋಗಾಭ್ಯಾಸದ ರೀತಿ ವಿಧಾನಗಳನ್ನು ಹೇಳುವುದು ನನ್ನ ಅರಿವಿಗೆ ಜ್ಞಾನಕ್ಕೆ ಮೀರಿದ ಕ್ರಿಯೆ. ಆದರೆ ಇದನ್ನು ಅಳವಡಿಸಿಕೊಂಡ ಮೇಲೆ ನನ್ನ ಜೀವನ ಶೈಲಿಯೇ ನನಗೆ ಬದಲಾಗಿಬಿಟ್ಟದ್ದು ನನಗಿನ್ನೂ ಸೋಜಿಗದ ವಿಷವೇ ಆಗಿದೆ. ಯೋಗ ತರಗತಿಗೆ ಹೋಗಿ ಒಂದೆರಡು ವಾರದಲ್ಲೇ ಅದರ ಪ್ರಭಾವ ನಿಧಾನವಾಗಿ ಆಗತೊಡಗಿತು. ಸರಿಯಾದ ಜೀರ್ಣ ಕ್ರಿಯೆ ಹಾಗು ಮಿತವಾದ ಹಸಿವು ಇದರಿಂದ ಎಂತಹ ಛಳಿಯ ವಾತಾವರಣದಲ್ಲೂ ಆಗಾಗ ನೀರು ಸೇವಿಸುವಂತೆ ಪ್ರೇರೇಪಣೆ. ಮತ್ತೂ ಮತ್ತು ನೀರು ಕುಡಿಯುತ್ತ ಎಲ್ಲವೂ ನಿಯಂತ್ರಣಕ್ಕೆ ಬಂದ ಭಾವನೆ. ಮೊದಲು ಒಂದರಿಂದ ಒಂದೂ ವರೆ ಲೀಟರ್ ನೀರು ಸೇವಿಸುತ್ತಿದ್ದ ನನಗೆ ದಿನಾ ಐದು ಲೀಟರ್ಗಿಂತಲೂ ಅಧಿಕ ನೀರು ಸೇವಿಸುವಂತೆ ಆದದ್ದು ಕಂಡೆ ಉತ್ಸಾಹ ಅಧಿಕವಾಗತೊಡಗಿತು. ಹಸಿವು ದೈಹಿಕ ಶ್ರಮ ಎಲ್ಲವೂ ಒಂದು ನಿಯಂತ್ರಣದಲ್ಲಿದ್ದ ಭಾವನೆ . ಊದ್ವೆಗ ರಹಿತ ಮನಸ್ಸಿನಿಂದ ದಿನವಿಡೀ ಅಂತರಿಕ ಉತ್ಸಾಹ, ನಿತ್ಯವೂ ದೇಹವನ್ನು ಬಾಧಿಸುತ್ತಿದ್ದ ಕೆಲವು ಶಮನವಾಗದ ರೋಗಗಳು ತಿಲ್ಯದೆ ಮಂಗ ಮಾಯವಾದಾಗ ಆಶರ್ಯವಾಗುತ್ತದೆ. ಯೋಗದ ಹಲವು ವಿಧಾನ , ಹಾಗು ಅವನ್ನು ಕಲಿಯಲು ಹಲವು ವಿಧಾನಗಳಿದ್ದರೂ ಕೆಲವು ತಿಂಗಳು ಗುರು ಮುಖೇನ ಕಲಿತರೆ ಅತ್ಯುತ್ತಮ. ಸರಿಯಾದ ಕ್ರಮದ ಯೋಗ ಅಧಿಕ ಹಾಗು ಪರಿಪೂರ್ಣ ಪರಿಣಾಮವನ್ನು ಕೊಡಬಲ್ಲುದು.

ನಿತ್ಯ ಯೋಗಾಭ್ಯಾಸದಿಂದ ಬದಲಾಗುವ ಜೀವನ ಶೈಲಿ ಆಹಾರ ಶೈಲಿ ಸ್ವತಹ ಅನುಭವಿಸಿದ್ದೇನೆ. ನಗರದಲ್ಲಿ ಅಥವಾ ನವೀನ ಜೀವನ ರೀತಿಯ ಕ್ರಮದಂತೆ ಸಾಯಂಕಾಲದ ಡಿನ್ನರು ಪಾರ್ಟಿಗಳಲ್ಲಿ ಮತ್ತೆ ಉತ್ಸಾಹ ಮೂಡುವುದಿಲ್ಲ. ಅನಗತ್ಯ ಆಹಾರ ತಿನ್ನುವ ಬಯಕೆಯಾಗುವುದಿಲ್ಲ. ಅತ್ಯಲ್ಪ ಆಹಾರದಿಂದ ತುಂಬುವ ಹೊಟ್ಟೆ ಆರೋಗ್ಯದ ಮೂಲ ಲಕ್ಷಣವನ್ನು ಹೇಳತೊಡಗುತ್ತದೆ. ಕೇವಲ ನಿಯಂತ್ರಣ ಭರಿತ ಉಸಿರಾಟದ ಪ್ರಕ್ರಿಯೆಗೆ ದೇಹ ಸ್ಪಂದಿಸುವುದು ನೋಡುವಾಗ ಈ ಜೀವನ ಕ್ರಮಕ್ಕೆ ಮನಸ್ಸು ಸಮಾಧಾನದ ನಿಟ್ಟುಸಿರು ಬಿಡುತ್ತದೆ.

ಎಲ್ಲಕ್ಕಿಂತಲೂ ವಿಶೇಷವಾಗಿ ನಮ್ಮಲ್ಲಿರುವ ದುಶ್ಚಟಗಳು, ದುರ್ವ್ಯಸನಗಳು ನಮ್ಮಿಂದ ಸದ್ದಿಲ್ಲದೇ ದೂರವಾಗಿಬಿದುತ್ತವೆ . ಇದು ಕೇವಲ ಧೂಮಪಾನ ಇನ್ನಿತರ ದುಶ್ಚಟಗಳನ್ನು ಮಾತ್ರವಲ್ಲದೆ ಮನಸ್ಸಿನ ನೆಮ್ಮದಿಯನ್ನು ಹದಗೆಡಿಸುವ ದುಶ್ಚಟಗಳನ್ನು ಬಳಿಗೆ ಸುಳಿಯದಂತೆ ಮಾಡಿಬಿಡುತ್ತವೆ.

ನಿತ್ಯವೂ ಮುಂಜಾನೆಯನ್ನು ಎದಿರು ನೋಡುವ ನನ್ನ ಮನಸ್ಸು ಉದಯಕಾಲದ ಆ ಮಧುರ ಸುಖಾನುಭಾವಕ್ಕೆ ಕಾದಿರುತ್ತದೆ. ನಿದ್ದೆಯನ್ನು ಗೆದ್ದ ತನು ಮನ, ಮುಂಜಾನೆಯ ನೀರವ ಮೌನದೊಂದಿಗೆ ಶ್ರುತಿಯನ್ನು ಸೇರಿಸಿ ಯೋಗ ದೀಕ್ಷೆಗೆ ಸನ್ನದ್ದವಾಗುತ್ತದೆ. ದಿನದಾರಂಭಕ್ಕೆ ಪ್ರಕೃತಿ ಕಾದಿರುವಾಗ ಆ ಏಕಾಂತದ ಪ್ರಶಾಂತ ವಾತಾವರಣದಲ್ಲಿ ಜಮಖಾನವನ್ನು ಹಾಸಿ ಪದ್ಮಾಸನದಲ್ಲಿ ಕುಳಿತು, ಕಣ್ಣು ಮುಚ್ಚಿ ಏಕಾಗ್ರತೆಗೆ ಮನಸ್ಸು ಹೊರಳಿದನಂತರ ಓಂಕಾರದೊಂದಿಗೆ ತನು ಮನ ಸುತ್ತಲಿನ ಇರವನ್ನು ಮರೆಸುತ್ತದೆ. ನಿಡಿದಾದ ಹಾಗು ನಿಧಾನವಾದ ಉಸಿರು ಉಪಕ್ರಮಿಸುವುದರೊಂದಿಗೆ ಮನಸ್ಸು ನಿದ್ಧಾನವಾಗಿ ಯೋಗ ವೆಂಬ ಅದ್ಭುತ ಲೋಕಕ್ಕೆ ಹೊಕ್ಕು ಬಿಡುತ್ತದೆ. ನಾಸಿಕದ ತುದಿಯಿಂದ
ಒಳಬಂದ ಚೈನ್ಯವಾಯು ಹೃದಯದಾಳಕ್ಕೆ ನುಗ್ಗಿ ಅಲ್ಲಿಂದ ದಿವ್ಯ ಚೇತನವನ್ನು ಶರೀರಾದ್ಯಂತ ಹರಡಿಸುತ್ತದೆ. ಪ್ರತಿ ನರಗಳಲ್ಲಿ ಹರಿಯುವ ರಕ್ತಸಂಚಾರದ ಸಂವೇದನೆಯ ಅರಿವಾಗುತ್ತಿದ್ದಂತೆ ಸ್ವರ್ಗ ಸುಖದ ಅದ್ಭುತ ಅನುಭವಕ್ಕೆ ಶರೀರ ಸಾಕ್ಷಿಯಾಗಿಬಿಡುತ್ತದೆ.ಪ್ರಾಣಾಯಾಮದ ಹಲವು ವಿಧಗಳನ್ನು ನಿರಾಳವಾಗಿ ನಿಧಾನವಾಗಿ ಮಾಡಿ ಶವಾಸನಕ್ಕೆ ಜಾರಿದಾಗ ಶರೀರಾದ್ಯಂತ ಅವ್ಯಕ್ತ ಸಂಚಲನೆಯ ಆರಂಭ. ಯಾವುದೊ ಲೋಕಕ್ಕೆ ಜಾರಿದ ಅನುಭವ. ಆರಂಭದಲ್ಲಿ ನಿದ್ರೆ ಬಂದು ಕಿರಿ ಕಿರಿ ಅನುಭವಿಸಿದ್ದರೂ , ಕ್ರಮೇಣ ಸಹಜ ಪ್ರಕ್ರಿಯೆ ಅಭ್ಯಾಸವಾಗಿದೆ. ಅಪಾದ ಮಸ್ತಕವಾಗಿ ದೇಹದ ಪ್ರತಿಯೊಂದು ಅಂಗವನ್ನು ಸ್ವತಂತ್ರವಾಗಿಸಿ ನಿಶ್ಚಲವಾದ ಭಂಗಿಯಲ್ಲಿ ನಿರಾಳ ಹಾಗು ನಿರಾತಂಕವಾಗಿ ಶವದಂತೆ ಮಲಗಿದಾಗ ಉಸಿರಾಟ ಒಂದು ಬಿಟ್ಟು ಮತ್ತೆಲ್ಲವೂ ಸ್ತಬ್ಧತೆಯನ್ನು ಸಾರುತ್ತವೆ. ಶರೀರ ಎಂಬುದು ಎಷ್ಟು ಶುಷ್ಕ ಎಂಬ ಅರಿವಾಗುತ್ತದೆ. ನಾನು ಎಲ್ಲವನ್ನು ಮರೆಸುವಂತೆ ಮಾಡುವ ಈ ಕ್ಷಣ ಸ್ವರಗ ಸುಖದ ಚರಮ ಲಕ್ಷ್ಯವನ್ನು ಭೇದಿಸಿದ ಅನುಭವಾಗಿ ನಿಧಾನವಾಗಿ ಸಹಜ ಲೋಕಕ್ಕೆ ಬಂದು ಬಿಡುವಾಗ ಸುಪ್ರಭಾತದ ಮೂಲಕ ಹೊಸ ಲೋಕ ತೆರೆದು ದಿನದಾರಂಭದಿಂದ ಮನಸ್ಸು ಪುಳಕಗೊಳ್ಳುತ್ತದೆ. .

ನಿತ್ಯ ಯೋಗ ಕರ್ಮದಿಂದ ಉಂಟಾಗುವ ಸಂವೇದನೆ ದಿನವಿಡೀ ತನು ಮನವನ್ನು ಶುಭ ಚಿಂತನೆ , ಪ್ರಚೋದನೆಗೆ ಎಡೆ ಮಾಡಿ ಕೆಳೆಯುವ ಪ್ರತಿಕ್ಷಣವನ್ನು ಅರ್ಥ ಪೂರ್ಣವಾಗಿ ಮಾಡುವಲ್ಲಿ ಅದ್ಭುತ ಸಹಕಾರವನ್ನು ನೀಡಿದರೆ ಬದುಕೆಂಬುದು ಎಷ್ಟು ನಿರಾಳವಲ್ಲವೇ.?


Saturday, April 25, 2009

ಜಗತ್ತು ತೀರ ಚಿಕ್ಕದಾಗುತ್ತಿದೆಯೇ

ಮೊನ್ನೆ ಹೀಗೆ ಅಂತರ್ಜಾಲದ ಆರ್ಕುಟ್ ಜಾಲದಲ್ಲಿ ವಿಹರಿಸುತ್ತಿರುವಾಗ ಒಬ್ಬ ಗೆಳೆಯನ ಪರಿಚಯವಾಯಿತು. ನಿತ್ಯ ನಿಗದಿತ ಸಮಯದಲ್ಲಿ ನಮ್ಮ ಭೇಟಿ ಮುಂದುವರಿಯಿತು ಸ್ನೇಹವು ಹವ್ಯಾಸವಾದಾಗ ಇಂತಹ ಚಟುವಟಿಕೆ ಕೆಲವೊಮ್ಮೆ ಮನಸ್ಸಿಗೆ ಮುದನೀಡುತ್ತದೆ. ಮಾತನಾಡಲು ಯಾವುದೇ ಪರಿಧಿಯಾಗಲಿ ಇಲ್ಲ. ಹೀಗೆ ಸ್ನೇಹ ಸೇತು ಬಲಿಯುವ ಮೊದಲು "ಕೇಳಿದೆ ಈಗ ಎಲ್ಲಿದ್ದಿ ಮಾರಾಯ? " ಅವಾಗ ರಾತ್ರಿ ೯ ತಾಸು ಆಗಿರಬಹುದು.. ಆತ ಹೇಳಿದ " ಕ್ಯಾಲಿಪೋರ್ನಿಯದಲ್ಲಿದ್ದೇನೆ " ಅಂತ. ಅದೇ ಇಂತಹ ಉತ್ತರಗಳು ಈವಾಗ ಸಾಮಾನ್ಯವಾಗಿಬಿಟ್ಟಿದೆ. ಜಗತ್ತಿನ ಯಾವುದೇ ತಾಣದಿಂದ ಕ್ಷಣ ಮಾತ್ರದಲ್ಲಿ ಪುಕ್ಕಟೆಯಾದ ಸಂಪರ್ಕ ತಾಣಗಳು ಈಗ ಬೇಕಾದಷ್ಟಿವೆ. ಆವಾಗ ಅನ್ನಿಸಿ ಬಿಡುತ್ತದೆ ಜಗತ್ತು ತೀರ ಚಿಕ್ಕದಾಗುತ್ತಿದೆಯೇ?

ಮೊದಲು ಇಂಥಹ ಸಂಪರ್ಕಗಳು ತೀರ ದುರ್ಲಭವಾಗಿದ್ದವು. ಊರಿಗೆ ಒಂದೇ ಫೋನ್ ಇರುವುದು. ಅದುವೇ ಹಲವರಿಗೆ PP Number ಆಗಿ ಉಪಯೋಗಕ್ಕೆ ಬರುತ್ತಿದ್ದವು. ಕರೆ ಮಾಡುವವರು ಮೊದಲಾಗಿ ಸೂಚನೆ ಕೊಟ್ಟೋ ಅಥವಾ ಪೂರ್ವ ನಿಗದಿಯಂತೆ ಈ ಒಂದು ಫೋನ್ ಮುಖಾಂತರವೇ ಸಂಪರ್ಕಿಸುತ್ತಿದ್ದುದು. ಕರೆ ಮಾಡುವವರ ಕರೆಗಾಗಿ ಫೋನ್ ಮಾಲಕರಿಗೆ ಕರೆ ಕರೆ ಯಾದರೂ ಪರವಾಗಿಲ್ಲ ತಾಸುಗಟ್ಟಲೆ ಕಾದು ಕುಳಿತು ಬೇಕಾದವರನ್ನು ಸಂಪರ್ಕಿಸಿ ಹೋಗುತ್ತಿದ್ದರು. ನಾನು ಹೀಗೆ ಹಲವು ಬಾರಿ ಕಾದು ಕುಳಿತದ್ದು ಇನ್ನು ನೆನಪಿದೆ. ಅಷ್ಟು ದುಬಾರಿ ಹಾಗು ವಿಲಾಸಿಯಾದ ಸಂಪರ್ಕ ಇಂದು ಇಷ್ಟು ಸುಲಭವಾಗಿದೆ. ಬೇಕಾದ ಕ್ಷಣದಲ್ಲಿ ಜಗತ್ತಿನ ಯಾವುದೇ ಮೂಲೆಯಲ್ಲಿರಲಿ ಸಂಪರ್ಕಿಸಬಹುದಾದ ಇಂದಿನ ತಾಂತ್ರಿಕತೆ ಜಗತ್ತನ್ನು ಮುಷ್ಟಿಯೊಳಗೆ ಇರುವಂತೆ ಮಾಡಿದೆ. ಜಗತ್ತು ಮಾತ್ರವೇ ಚಿಕ್ಕದಾಗಿರುವುದು? ಯೋಚಿಸಿ..

ಅಂತರಜಾಲದಲ್ಲಿ ಪರಿಚಯವಾದವರು ಹೀಗೆ ಸ್ವ ಪರಿಚಯ ಹೇಳುತ್ತಾ ಕೊನೆಗೆ ನೀವು ಈಗ ಎಲ್ಲಿದ್ದೀರಾ ಎಂದು ಕೇಳುವಾಗ ಗಾಬರಿಯಾಗುತ್ತದೆ.. ಕೆನಡಾ ಅಥವಾ ಅಮೇರಿಕ ವಿಶ್ವದ ಇನ್ನಿತರ ಯಾವುದೊ ತಮಗೆ ತಿಳಿಯದ ಲೋಕವನ್ನು ಹೇಳಿ ಸಾವಿರಾರು ಮೈಲಿ ದೂರ ಇರುವುದನ್ನು ಜಂಭದಿಂದಲೋ ನೋವಿನಿಂದಲೋ ಹೇಳುವುದನ್ನೇ ಕೇಳಬಹುದು. ಇದು ಇಂದಿನ ತಾಂತ್ರಿಕತೆ ಜಗತ್ತಿನ ವೈಶಾಲ್ಯವನ್ನು ಕಡಿಮೆ ಮಾಡಿದ್ದನ್ನು ತೋರಿಸುತ್ತದೆ.

ಇಷ್ಟೇಯೇ.. ಇಂದು ಹಳ್ಳಿ ಜೀವನ ಆ ಮುಗ್ಧತನ ಎಲ್ಲ ಕಡಿಮೆಯಾಗುತ್ತಾ ಜತೆಗೆ ಹೃದಯ ವೈಶಾಲ್ಯವೂ ಕಡಿಮೆಯಾಗುದನ್ನು ಕಾಣಬಹುದು. ಮಾತಾ ಪಿತೃಗಳ ಸಂಬಂಧ ಮಕ್ಕಳೊಂದಿಗೆ ಸಂಕುಚಿತಗೊಳ್ಳುತ್ತಿದೆ. ಮೊದಲು ಕಣ್ಣೆದುರೇ ತಮ್ಮ ಮಕ್ಕಳ ಎಲ್ಲ ಚಟುವಟಿಕೆಯನ್ನು ಕಾಣುವ ಅವಕಾಶ ಇರುವಾಗ ಈಗ ಪ್ರೈಮರಿ ಶಾಲಾ ಹಂತದಲ್ಲೇ ಮಕ್ಕಳು ತಂದೆ ತಾಯಿಂದ ದೂರವಾಗಿ ಜೀವನ ಪರ್ಯಂತ ಅವರದ್ದೇ ಆದ ಪರಿಧಿಯಲ್ಲಿ ಬೆಳೆಯುವುದನ್ನು ಕಾಣಬಹುದು. ಮನೆಯೊಳಗಿನ ಕೌಟುಂಬಿಕ ಸಂಭಂಧಗಳು ಸಂಕೀರ್ಣವಾಗುತ್ತ ಸಾಗಿ ಕೇವಲ ಸಂಬಂಧಗಳು ಹೇಳಿ ತೋರಿಸುವುದಕ್ಕೆ ಮಾತ್ರ ಸೀಮಿತವಾಗಿದೆ. ಇದು ಜಗತ್ತಿನ ಸಂಕುಚಿತವನ್ನು ಸಾರುತ್ತಿದೆಯೇ?ಇದು ದೈಹಿಕ ಅಥವಾ ರಕ್ತ ಸಂಭಂಧವಾಗಿರಬಹುದು, ಆದರೆ ಮಾನಸಿಕ ಸಂಬಂಧಗಳೂ ಕೂಡ ಸಂಕುಚಿತತೆಯನ್ನೇ ಸಾರುವಾಗ ಜಗತ್ತು ತೀರ ಚಿಕ್ಕದಾಗುತ್ತಿದೆಯೇ ಭ್ರಮಿಸಬಹುದೇ?

ಒಂದು ಗಂಡು ಮಗುವನ್ನು ಹೆತ್ತು ತಮ್ಮ ಸಮಸ್ತ ಕನಸಿನ ಸಾಕಾರ ಮೂರ್ತಿಯೋ ಎಂಬಂತೆ ಮುದ್ದಾಗಿ ಪ್ರೀತಿಯಿಂದ ಸಾಕಿ ಬೆಳೆಸುವ ಮಾತಾಪಿತ್ರ್ ಗಳು ಅವುಗಳ ಲಾಲನೆ ಪಾಲನೆ ಬೆಳವಣಿಗೆಯಲ್ಲಿ ಸುಖ ಸಂತೋಷವನ್ನು ಕಾಣುತ್ತ ಮನೆಯ ಬಹುಮುಖ್ಯ ಅಂಗ ಎಂಬಂತೆ ಜೋಪಾನದಿಂದ ನೋಡಿಕೊಳ್ಳುತ್ತಾರೆ. ಮಗು ಬೆಳೆದು ದೊಡ್ಡ ಆಗುತ್ತದೆ ತಾಯಿಯ ಕನಸನ್ನು ಸಾಕಾರಗೊಳಿಸುವನೋ ಎಂಬ ಭ್ರಮೆಯನ್ನು ಮೂಡಿಸುವಂತೆ ಅವನ ಪ್ರಕೃತಿ ಗೋಚರಿಸಿ ಮತ್ತು ಹಿರಿಯರಿಗೆ ಅಭಿಮಾನ ಪೂರ್ವಕನಾಗಿ ಬೆಳೆಯುತ್ತಾ.. ಅದು ಒಂದು ಹಂತಕ್ಕೆ ಮುಟ್ಟುತ್ತದೆ.. ಒಂದೋ ಆತನಿಗೆ ಬೆಂಗಳೂರು ಅಥವಾ ಮುಂಬಯಿಯಂತಹ ನಗರದಲ್ಲಿ ಉದ್ಯೋಗ ದೊರಕುತ್ತದೆ. ಪ್ರತಿ ತಿಂಗಳೋ ಅಥವಾ ನಿಗದಿತ ಸಮಯದಲ್ಲೋ ಆತನ ಆಗಮನ ಊರಿಗೆ ಆಗುತ್ತದೆ. ಮನೆಯ ಸಮಸ್ತ ಕಾರ್ಯದಲ್ಲೂ ಮುತುವರ್ಜಿ ಕಾಣುತ್ತದೆ. ಇಂಥ ಸಕಲಗುಣ ಸಂಪನ್ನನಿಗೆ ಒಂದು ಮದುವೆ ಆಗದಿದ್ದರೆ ಹೇಗೆ? ಸಮಸ್ತವೂ ಜಾಲಾಡಿ , ಇದರಲ್ಲಿ ತಂದೆಯಾದವನಂತು ತನ್ನ ಮದುವೆಗೂ ಇಷ್ಟು ಆಯ್ಕೆ ಎಂಬ ಗೊಂದಲದಲ್ಲಿ ಸಿಗದೇ ಇದ್ದರು ಮಗನ ಮದುವೆ, ಮುದ್ದಾಗಿ ಸಾಕಿದ್ದೇವೆ ಒಳ್ಳೆ ನೌಕರಿಯಲ್ಲಿದ್ದಾನೆ ಮನೆಗೆ ಬೇಕಾದ ಹಾಗೆ ಇದ್ದ ಚಿನ್ನದಂತ ಹುಡುಗನಿಗೆ ಸಾಮನ್ಯ ಹುಡುಗಿ ಸಾಕೇ ಎಂಬಲ್ಲಿವರೆಗೆ ಚಿಂತಿಸಿ ಒಂದು ಹುಡುಗಿಯೊಂದಿಗೆ ಮದುವೆಯೂ ಆಗಿಬಿಡುತ್ತದೆ.

ಮೊದಲು ಅವನಿಗಾಗಿ ಒಂದು ಕೋಣೆ ಮತ್ತಿತರ ಕೆಲವು ವಸ್ತುಗಳು ಮೀಸಲಾಗಿರುತ್ತವೆ. ಹೆತ್ತವರು ಅದರಲ್ಲಿ ಅವನನ್ನೇ ಕಂಡು ಪ್ರೀತಿಯಿಂದ ಜೋಪಾನ ಮಾಡಿ ಇಡುತ್ತಾರೆ. ನಿತ್ಯ ಶುಭ್ರಗೊಳಿಸಿ ಒಪ್ಪ ಓರಣವಾಗಿ ನೋಡಿಕೊಳ್ಳುತ್ತಾರೆ. ಯಾವುದೊ ಒಂದು ವಸ್ತು ವರ್ಷದಲ್ಲಿ ಕೇವಲ ಮೂರು ಸಲ ಉಪಯೋಗವಾದರೂ ಅವನಿಗೋಸ್ಕರ ಪ್ರತಿ ದಿನ ಎದಿರು ನೋಡುವಂತೆ ಇರುತ್ತದೆ.ಅದೆಲ್ಲ ಮೊದಲಿನಂತೆ ಇದ್ದರೂ ಮದುವೆಯಾಯಿತೋ ಅಲ್ಲಿಂದ ಚಿತ್ರಣವೇ ಬದಲಾಗಿ ಬಿಡುತ್ತದೆ. ಮೊದಲೇ ನೆಂಟನ ಹಾಗೆ ಇದ್ದ ಮಗ, ಅದರ ತೀರ ಮೂರ್ತ ಸ್ವರೂಪವಾಗಿಬಿಡುತ್ತಾನೆ.ಮೊದಲು ನಗರದಿಂದ ಊರಿಗೆ ಹೋಗುವಾಗ ನೇರವಾಗಿ ತನ್ನ ಮನೆಗೆ ಹೋಗುತ್ತಿದ್ದವ ಅಲ್ಲಿಂದ ದೂರವಾದರು ಪರವಾಗಿಲ್ಲ ಹೆಂಡತಿಯೊಂದಿಗೆ ಮಾವನ ಮನೆಗೆ ಹೋಗಿ ಅಲ್ಲಿ ತಂಗಿದ್ದು, ಅವನ ಸರ್ವ ವಸ್ತುಗಳು ಮಾವನ ಮನೆಯಲ್ಲೇ ಶಾಶ್ವತ ಜಾಗವನ್ನು ನಿಗದಿಗೊಳಿಸುವಂತೆ ಮಾಡುತ್ತದೆ. ಆನಂತರ ತನ್ನ ಮನೆಗೆ ತಾಯಿಯಿದ್ದಲ್ಲಿಗೆ ಬರುತ್ತಾನೆ.ಅದೂ ವಿಧೇಯ ಮಗನಂತೆ. ಮಹಾ ತಾಯಿಯದರೋ ಅದೇ ದೊಡ್ಡ ಸೌಭಾಗ್ಯವೆಂಬಂತೆ ಮಗನನ್ನು ಪ್ರೀತಿಯಿಂದ ಕಾಣುತ್ತಲೇ. ಇತ್ತ ಮಗನ ಮನಸ್ಸು ಮಾವನ ಮನೆಯನ್ನೇ ಶಾಶ್ವತ ಎಂಬಂತೆ ತಿಳಿದುಕೊಂಡಿರುವ ವಿಷಯ ತಾಯಿಗೆ ನಗಣ್ಯವಾಗಿಬಿಡುತ್ತದೆ. ಮಗ ಬಂದಿದ್ದ ಎಂಬುದೇ ಪ್ರಾಮುಖ್ಯವಾಗಿಬಿಡುತ್ತದೆ. ಇಂತಹ ಮಹಾ ಮನಸ್ಕ ತಾಯಿಯನ್ನು ನೋಡುವ ಅಥವಾ ಮಾತನಾಡುವ ಆವಶ್ಯಕತೆ ತನ್ನ ಪತ್ನಿಗೆ ಉಂಟು ಮಾಡುವಲ್ಲಿ ಮಗ ತೀರ ವಿಫಲನಾಗಿಬಿಡುತ್ತಾನೆ. ಅವನ ಮಟ್ಟಿಗೆ ಜಗತ್ತು ಚಿಕ್ಕದಾಗಿಬಿಡುವ ಸಂಗತಿ ಅವನಿಗೆ ಗಮನಕ್ಕೆ ಬರುವುದಿಲ್ಲ. ತನ್ನ ಬಾಳಸಂಗತಿಯನ್ನು ಹೆತ್ತು ಸಲಹಿ ಕೊಟ್ಟ ಮಹಾ ತಾಯಿಯನ್ನು ನೋಡುವ ಮನಸ್ಸು ಸ್ವತಹ ಆ ಹೆಣ್ಣಿಗೆ ಬಂದರೆ ಜಗತ್ತಿನ ವೈಶಾಲ್ಯ ಅವಳ ಅರಿವಿಗೆ ಬರುತ್ತದೆ. ಆದರೆ ಅಂತಹ ಮನಸ್ಸು ಹೊಂದದೆ ಇರುವುದು ಯಾವುದರ ಸಂಕೇತ?ಯಾವುದೇ ತಾಯಿ ತಂದೆಯರು ಮಕ್ಕಳಿಂದ ಏನೂ ಬಯಸುವುದಿಲ್ಲ. ಕೇವಲ ಅವರ ಸುಖ ಸಂತೋಷವನ್ನೇ ಕಾಣುತ್ತಾರೆ. ಮಕ್ಕಳ ಮನಸ್ಸು ಒಂದಿಷ್ಟು ನೊಂದುಕೊಂಡರು ಅದರ ಪರಿಹಾರಕ್ಕೆ ತುಡಿಯುತ್ತದೆ. ಸೀರೆ , ಚಿನ್ನ ಅಥವಾ ಇನ್ನಿತರ ಯಾವುದೇ ವಸ್ತುಗಳನ್ನು ತಾಯಿಯಾದವಳು ಬಯಸುವುದಿಲ್ಲ. ಮಗನನ್ನು ಹಸನ್ಮುಖಿಯಾಗಿ ನೋಡುವುದೇ ಆಕೆಯ ಪರಮ ಧ್ಯೇಯವಾಗಿಬಿಡುತ್ತದೆ. ಇದು ಅರ್ಥೈಸುವ ಮನೋಭಾವ ಮಕ್ಕಳಿಗೆ ಇರುವುದೇ ಇಲ್ಲ. ಜಗತ್ತು ಚಿಕ್ಕದಾದರೂ ಮನಸ್ಸು ಚಿಕ್ಕದಾಗುವಾಗ ಹೃದಯ ವೈಶಾಲ್ಯ ಕುಗ್ಗಿದಾಗ ತಾಯಿ ತಂದೆಯರು ಗೌಣವಾಗಿಬಿಡುತ್ತಾರೆ .ಸ್ನೇಹ ಸಂಬಂಧಗಳು ನಮ್ಮ ವರ್ತನೆಯ ಸಂಕೇತ. ಪರರ ಮನಸ್ಸಿನಲ್ಲಿ ತಮ್ಮನ್ನು ಆವಾಹಿಸಿ ನೋಡಿದಾಗ ಮಾತ್ರ ಮುಕ್ತ ಸ್ನೇಹದ ಸಿಂಚನ ಅನುಭವಿಸಲು ಸಾಧ್ಯ. ಇಂದಿನ ಯಾಂತ್ರಿಕ ಬದುಕಿನಲ್ಲಿ ಈ ಸ್ನೇಹ ಸಲುಗೆ ಎಂಬುದು ಒಂದು ಪ್ರದರ್ಶನದ ಭಾವನೆಯಗುತ್ತಿದೆ. ಕೈಹಿಡಿದ ಹೆಣ್ಣು ಇದನ್ನು ತುಸುವಾದರೂ ಗಂಡನ ತಾಯಿಬಗ್ಗೆ ಯೋಚಿಸಿ ಒಂದು ಘಳಿಗೆ ತಾಯಿಯ ಕ್ಷೇಮವನ್ನು ತಿಳಿಯಲು ಸ್ಪಂದಿಸಿದರೆ ಸಾಕು ನಿಜವಾದ ಸ್ವರ್ಗ ಸುಖ ಅನುಭವಿಸಲು ಸಾಧ್ಯ.ಇದು ಏಕ ಪಕ್ಷಿಯವಾದ ಪ್ರಸ್ತಾವನೆ ಯಲ್ಲ ಹಲವು ಅಪವಾದಗಳು ಇರಬಹುದು ಆದರೆ ಅದು ತುಂಬಾ ಕ್ಷೀಣ. ಬಹುಶಃ ಅದು ಜಗತ್ತಿನ ಗಾತ್ರ ಚಿಕ್ಕದಾದ ಲಕ್ಷಣ.

ಹೆಣ್ಣು ಹೆತ್ತ ತಾಯಿ ತಂದೆಯರು ಇದರ ಬಗ್ಗೆ ಆಸಕ್ತಿ ವಹಿಸಿ ತಾವು ಹೆತ್ತ ಮಕ್ಕಳಿಗೆ ಅರುಹಬೇಕು. ಅದು ಅರುಹಿ ಕೇಳದಿದ್ದರೆ ಅದು ಯಾವುದರ ತಪ್ಪು.ಮಾವನ ಮನೆ ಕ್ಷಣಿಕವಾದರೂ ತನ್ನದೆಂಬ ಅಭಿಮಾನ ಅಲ್ಲಿ ಹಿರಿದಾಗುತ್ತದೆ. ಅತ್ತೆ ಮಾವನ ಮನ ಗೆಲ್ಲುವುದಕ್ಕೆ ಯೋಚಿಸುವ ಮಗನ ಮನಸ್ಸು ನಿಸ್ವಾರ್ಥಿ ತಾಯಿ ತಂದೆಯ ಮನಸ್ಸುಗೆಲ್ಲುವ ಯೋಚನೆಯನ್ನೇ ಮಾಡುವುದಿಲ್ಲ. ಇಂದಿನ ತಾಂತ್ರಿಕತೆಯಲ್ಲಿ ಜಗತ್ತಿನ ಯಾವ ಮೂಲೆಯೂ ಕೈಗೆ ಎಟುಕುವಂತೆ ಇದ್ದರು, ತಮ್ಮದೆಂಬ ಮನಸ್ಸಿನ ಮೂಲೆ ಕೈಗೆ ಸಿಗದೇ ದೂರವಾಗುವುದು ಎಂತಹ ದುರಂತ. ಹೃದಯ ವೈಶಾಲ್ಯತೆ ಮೆರೆದು ಜತೆಗೆ ಬಾಳುವವರ ಮನಸ್ಸು ಗೆಲ್ಲುವುದು ಕೇವಲ ಶ್ರೀಮಂತಿಕೆಯ ಕೊಡುಗೆಯಿಂದಲ್ಲ, ತಮ್ಮ ಮನ್ನಸ್ಸಿನ ವೈಶಾಲ್ಯದ ವ್ಯವಹಾರದಿಂದ. ಮನಸ್ಸನ್ನು ಗೆಲ್ಲುವುದಕ್ಕೆ ಬಳುವಳಿಯ ಕೊಡುಗೆಗಿಂತಲೂ ಮಾನಸಿಕ ಕೊಡುಗೆಯೇ ಮುಖ್ಯ. ಒಂದು ಯಂತ್ರದ ಯಾವುದೊ ದೋಷಕ್ಕೆ ಯಾವುದೊ ಸ್ಕ್ರೂ ಬೋಲ್ಟ್ ಗಟ್ಟಿ ಮಾಡುವಾಗ ಅವಶ್ಯ ಇದ್ದ ಭಾಗವನ್ನೇ ಗಟ್ಟಿ ಮಾಡುವುದು ಬಿಟ್ಟು ಇನ್ನಾವುದೋ ಭಾಗಕ್ಕೆ ಮನ ಮಾಡುವುದು ಎಸ್ಟೊಂದು ಗೊಂದಲವನ್ನು ಉಂಟು ಮಾಡುತ್ತದೆ.

ಸಹಜವಾದ ಸರಳ ಬದುಕು ಇಂದಿನ ಈ ಜಗತ್ತಿನಲ್ಲಿ ವಿರಳವಾಗಿ ಮನಸ್ಸು ಮನಸ್ಸನ್ನು ದೂರ ಮಾಡುತ್ತಿದೆ. ಜಗತ್ತು ತೀರ ಚಿಕ್ಕದಾದರೂ ಮನಸ್ಸಿನ ನಡುವಿನ ಅಂತರ ಬೆಳೆಯುತ್ತಾ ಹೋಗುತ್ತಿದೆ.

Friday, April 17, 2009

ನಾನೆಂಬ ವ್ಯಕ್ತಿ


ವ್ಯಕ್ತಿಯೊಬ್ಬನು ಸಮಾಜಕ್ಕೆ ಹೊರೆಯಾದರೆ ಹೇಗೆ? ತನ್ನ ಪರಿಸರ ತನ್ನವರು ತನ್ನಂತೆ ಇರುವವರು ಹೀಗೆ ವಿಭಿನ್ನರೊಳಗೆ ಜೀವಿಸುವಾಗ ಹೊಂದಾಣಿಕೆ ಮಾಡಿಕೊಂಡರೆ ಹೊರೆಯಾಗಲಾರ. ಪರರಿಗೆ ಉಪಕಾರ ಮಾಡಲು ಸಾಮರ್ಥ್ಯವೋ ಮನಸ್ಸೋ ಸ್ವಭಾವವೋ ಇರದು . ಆದರೆ ತೊಂದರೆ ಕೊಡದೆ ಬದುಕಬಹುದಲ್ಲವೇ. ಆತ್ಮ ಮನ್ನಸ್ಸು ಗ್ರಹಿಕೆ ಪ್ರತಿಯೊಬ್ಬನಲ್ಲೂ ಇರುತ್ತದೆ. ತಾನು ನಿರಾಳವಾಗಿ ಬದುಕಬೇಕೆಂದೇ ಎಲ್ಲರ ಬಯಕೆ. ಆದರೆ ಅದು ಸಾಧ್ಯವಾಗುವುದು ತುಂಬ ಕಷ್ಟ. ಪರಹಿತ ವಲ್ಲದಿದ್ದರೂ ಪರ ಅಹಿತವಾಗದೆ ಇದ್ದರೆ ಅ ಮಟ್ಟಿಗೆ ನಿರಾಳವಾಗಿರಬಹುದಲ್ಲವೇ?

ಒಂದು ರಸ್ತೆಯಲ್ಲಿ ಗಮಿಸುವಾಗ ಹಲವರು ನಮ್ಮಂತೆ ಗಮಿಸುವವರು ಇರುತ್ತಾರೆ . ಒಂದು ಹೆಜ್ಜೆ ಒಂದು ಜಾಗದಲ್ಲಿ ಇರಿಸಿದಾಗ ಯೋಚಿಸಿ ಒಂದು ಕ್ಷಣಕ್ಕೆ ಅ ಜಾಗದ ಒಡೆಯ ನೀವು.. ಮರುಕ್ಷಣ ನಿಮ್ಮ ಹಿಂದೆ ಬರುವಾತ ಯಾರೋ ಒಬ್ಬ ಅಪರಿಚಿತ ಅದನ್ನು ಆಕ್ರಮಿಸಿ ಅವನದ್ದಾದ ಒಂದು ಕ್ಷಣ ಅವನಿಗೆ ಸಿಗಬಹುದು. ಹೀಗೆ ಯೋಚಿಸಿದರೆ ಈ ಭೂಮಿ ಮೇಲಿನ ಜೀವನ ಕೂಡ ಅದೇ ಅಲ್ಲವೇ.? ಆಕ್ರಮಣ ಪಲಾಯನ..ನಿಜಕ್ಕೂ ನಗು ಬರುತ್ತಿಲ್ಲವೇ. ಇಂದು ನೀವು ಉಳಕೊಂಡ ನಡೆದಾಡಿದ ಸ್ಥಳ.. ಮುಂದೊಂದು ಸಮಯ ಯಾರದ್ದೋ ಆಗಿರುತ್ತದೆ. ಅದುಯಾರೋ ಆಗಿರಬಹುದು. ಬಸ್ಸಿನಲ್ಲಿ ಪ್ರಯಾಣಿಸುವ ಸಮಯ ಬಂದಾಗ. ಬಸ್ಸಿಗೆ ಕಾದು ಸುಸ್ತಾದಾಗ ಒಂದು ಬಸ್ಸು ಬಂದರೆ ಸಾಕು ಬಸ್ಸು ಬಂದಮೇಲೆ ಹತ್ತಿದರೆ ಸಾಕು ನಂತರ ನಿಲ್ಲಿಕ್ಕೆ ಜಾಗ ಸಿಕ್ಕಿದರೆ ಸಾಕು ಅನಂತರ ಒಂದು ಆಸನ ಅದು ಅರ್ಧವಾದರೂ ಪರವಾಗಿಲ್ಲ ಸಿಕ್ಕಿದ್ರೆ ಸಾಕು ಆಮೇಲೆ... ಸಿಕ್ಕಿದ ಆಸನದಲ್ಲಿ ಕಿಟಿಕಿ ಭಾಗ ಸಿಕ್ಕಿದರೆ ಸಾಕು ಮರುಕ್ಷಣ ಅ ಜಾಗದಲ್ಲಿ ನಾವು ಇರೋದಿಲ್ಲ ಹೀಗಿದ್ದರೂ ಏನು ವ್ಯಾಮೋಹ.? ಇನ್ನೊಬ್ಬನನ್ನು ತಳ್ಳಿ ಬಿಟ್ಟು ಸ್ಥಳವನ್ನು ಆಕ್ರಮಿಸುವ ನಮ್ಮ ಮನಸ್ಸು ಒಂದು ಸಲ ನೋಡಿ.. ಹೇಗಿದೆ? ಇದೆಲ್ಲ ಸಹಜ ಅನಿವಾರ್ಯತೆಗಳು ಅದರೂ ಯೋಚಿಸುವಾಗ ತುಂಬ ಕ್ಷುಲ್ಲಕವಾಗಿ ಕಾಣುತ್ತದೆ.

ಸಾರ್ವಜನಿಕವಾಗಿ ಉಪಯೋಗಿಸುವ ವಸ್ತುಗಳು ಉಧಾಹರಣೆ ರಸ್ತೆಯಲ್ಲಿ ನನೋಬ್ಬ್ಬ ಹೋದರೆ ಸಾಕು .. ಸಕಲೇಶ್ ಪುರ ಘಾಟ್ ರಸ್ತೆಯಲ್ಲಿ ಒಂದು ಸಲ ಕಾರಿನಲ್ಲಿ ಹೋದಾಗ ಘಾಟ್ ಬ್ಲಾಕ್.. ಯಾವುದೊ ಕಾರಣಕ್ಕೆ.. ನಾವು ಏನು ಗ್ರಹಿಸಬಹುದು ಹೇಳಿ.. ನಮ್ಮ ಒಂದು ಕಾರು ಹೋಗುವಸ್ತು ಜಾಗ ಸಿಕ್ಕಿದ್ದರೆ ..ಹೀಗೆ.. ಪ್ರತಿ ಘಟನೆಯಲ್ಲಿ ಯೋಚಿಸುವ ಶಕ್ತಿ ಬೇಕು. ಹಿಂದೆ ಇರುವವನು ಇದ್ದೆ ರಸ್ತೆಯಲ್ಲಿ ಬರಬೇಕು.. ಅವನು ತೀರ ಅಗತ್ಯಗಳನ್ನು ಹೊಂದಿರುತ್ತಾನೆ. ..

ಹೀಗೆ ಪರರಿಗೆ ಉಪಕಾರ ಮಾಡದಿದ್ದರೂ ಪರವಾಗಿಲ್ಲ ತೊಂದರೆ ಯಂತೂ ಮಾಡದೇ ಬದುಕಬಹುದಲ್ಲವೇ. ಪರರಿಗೆ ಚಿಂತೆ ಕೊಡದವನು ನಿಶ್ಚಿಂತ. ಏನೆ ಅದರೂ ಸ್ವ ಲಾಭ ಮಾತ್ರ ಚಿಂತಿಸುವವನು ಇದು ಎಷ್ಟು ಸಮಯ ಸಾಗಬಹುದು ಎಂಬ ಚಿಂತೆಯಲ್ಲೇ ಮುಳುಗಿರುತ್ತಾನೆ.

ನೋವಿನ ಚೀಲಗಳು......

ನೋವು ಎಂಬ ಶಬ್ದವೇ ಅಪ್ಯಾಯಮಾನವಾದದ್ದು ಎಂದೆ ನನ್ನ ಅನಿಸಿಕೆ. ಸುಖ ಸಂತೋಷ ಇಲ್ಲದಿದ್ದ ವ್ಯಕ್ತಿ ಸಿಗಬಹುದು ಆದರೆ ನೋವಿಲ್ಲದ ವ್ಯಕ್ತಿ ಬಹುಶ: ಸಿಗಲಾರ. ಸ್ನೇಹಿತರ ನೋವು ಹಂಚಿಕೊಳ್ಳುವುದೇ ಒಂದು ಹಿತವಾದ ಅನುಭವ. ಒಬ್ಬ ಸ್ನೇಹಿತ ತಮ್ಮಲ್ಲಿ ನೋವು ತೋಡಿಕೊಂಡರೆ ನಾವೇ ಏನೋ ಮಹಾನ್ ವ್ಯಕ್ತಿ ಅದ ಅನುಭವ ಅಲ್ಲವೇ? ಮಾತ್ರವಲ್ಲ ಅದರಿಂದಲೇ ಸ್ನೇಹ ಸಂಬಂಧ ಬಲಗೊಳ್ಳುವುದು. ಹೀಗೆ ನೋವು ಎಂಬ ಭಾವನೆಗೆ ಹಾಗು ಪರರು ನೀಡಿದ ನೋವಿಗೆ ಹೃದಯದಲ್ಲಿ ತುಸುವಾದರೂ ಮೀಸಲಿಡುವ ಜಾಗವೇ ನೋವಿನ ಚೀಲಗಳು ಎಂದು ಹೇಳಬಹುದೇನೋ.

ಒಂದು ಹೊಸ ವ್ಯಕ್ತಿ ಪರಿಚಯವಾದಾಗ ಪರಿಚಯ ಸ್ನೇಹಕ್ಕೆ ತಿರುಗಿದಾಗ ಸ್ನೇಹದ ಜತೆಗೆ ನೋವಿನ ಚೀಲ ತುಂಬಿಕೊಳ್ಳಲು ಶುರುವಾಗಿಬಿಡುತ್ತದೆ. ಈ ನೋವಿನ ಚೀಲ ಎಷ್ಟು ದೊಡ್ಡದಿದೆಯೋ ಅಥವಾ ಗಾತ್ರವನ್ನು ಎಷ್ಟು ಹಿಗ್ಗಿಸಬಹುದೋ ಅಷ್ಟು ನಿಮ್ಮ ಸ್ನೇಹ ವಲಯ ವಿಕಸನ ಗೊಳ್ಳುತ್ತದೆ. ಸಾಂಸಾರಿಕವಾಗಿಯು ಅಸ್ಟೆ. ಜೀವನದಲ್ಲಿ ಪ್ರತಿಶತ ಸುಖವೇ ತುಂಬಿರಲು ಸಾಧ್ಯವೇ?ತಮ್ಮ ಆಪ್ತರಿಗೊಸ್ಕರ ನೋವು ಸಹಿಸಿಕೊಳ್ಳುವುದು ಒಂದು ಹಿತವಾದ ಅನುಭವ. ತಾಯಿಗೆ ತನ್ನ ಮಗುವಿನ ಜತೆಗಿನ ಸಂಬಂಧದ ತಳಹದಿಯೇ ನೋವು. ಎಂಥ ಹಿತಕರ ನೋವನ್ನು ಅನುಭವಿಸಿ ತನ್ನದ್ದಾದ ಮಗುವಿನ ಜನ್ಮಕ್ಕೆ ಕಾರಣಳಾಗುತ್ತಾಳೆ. ಜಗತ್ತಿನ ಆಗು ಹೋಗುಗಳಲ್ಲಿ ಇಂಥಹ ನೋವುಗಳು ಪ್ರಧಾನ ಪತ್ರವಹಿಸುತ್ತವೆಯಲ್ಲವೇ?ಉದರದಲ್ಲಿ ಭ್ರೂಣ ಬೆಳೆದಂತೆ ನೋವಿನ ಚೀಲದಲ್ಲಿ ನೋವಿನ ಪದರ ಕೂಡ ಬೆಳೆಯುತ್ತಾ ಹೋಗುತ್ತದೆ. ಹುಟ್ಟಿದ ಮಗುವಿನಿಂದ ಮುಂದೆ ನೋವೋ ಸುಖವೋ ದೇವರೇ ಬಲ್ಲ.. ಅದರೂ ಈ ನೋವನ್ನು ಎಷ್ಟು ಹಿತವಾಗಿ ಅನುಭವಿಸುತ್ತಾಳೆ. ಈ ಹೆಣ್ಣಿನ ಸ್ಥಾನ ನೋವಿನಲ್ಲಿ ವಿಶೇಷ ಮಹತ್ವ ಪಡೆದಿದೆ. ಹುಟ್ಟಿದ ಮನೆಯಲ್ಲಿ ತಿಳುವಳಿಕೆ ಬರುವವರೆಗೆ ತನ್ನದೇ ಮನೆ ಎಂಬ ಬಾಂಧವ್ಯದ ಸಂವೇದನೆ ಅನುಭವಿಸುತ್ತಾ ಬೆಳೆಯುತ್ತಾಳೆ. ಬೆಳೆಯುತ್ತಿದ್ದಂತೆ ಪರಿಸರ ಪರಿಸ್ಥಿತಿಗೆ ಬದಲಿಸಿಕೊಂಡು ಇನ್ನೊಂದು ಮನೆಯ ಅವಿಭಾಜ್ಯ ಅಂಗವಾಗಿ ಬಿಡುತ್ತಲೇ.. ಅವಳ ಅಂತರಂಗದ ನೋವಿನ ಚೀಲ ಅವಾಗಲೇ ತುಂಬಿ ಕೊಳ್ಳಲು ಶುರುವಾಗಿಬಿಡುತ್ತದೆ. ಗಂಡು ಜೀವಕ್ಕೆ ಈ ನೋವಿನ ಅನುಭವ ತುಂಬ ವಿರಳ. ಇನ್ನೊಂದು ಮನೆಯಲ್ಲಿ ನೋವೋ ನಲಿವೋ ಬೆಳದು ಬರುತ್ತಾಳೆ ತನ್ನ ಇನಿಯನ ನೋವಿಗೆ ಸ್ಪಂದನೆ ತೋರಿಸುವಳೋ ಇಲ್ಲವೊ, ಒಡನಾಡಿಯ ನೋವಿನಲ್ಲಿ ಭಾಗಿಯಾಗುವಳೋ ಇಲ್ಲವೊ ಆದರೆ ತನ್ನ ಸ್ವಂತ ನೋವಿನ ಚೀಲವನ್ನು ತುಂಬಿಸಿಕೊಳ್ಳುತ್ತಾ ಇನ್ನೊಂದು ಪರಿಸರದ ಅಂಗವಾಗಿಬಿಡುತ್ತಾಳೆ.
ಹೆತ್ತ ಮಗು ದೊಡ್ಡದಾಗಿ..ಗಂಡಾದರೆ ಒಂದು ವಿಧ ಹೆಣ್ಣಾದರೆ ಒಂದು ವಿಧ ಎಲ್ಲೊ ಅವಳ ನೋವಿನ ಚೀಲ ಖಾಲಿ ಅಂಥ ಅನಿಸೋದೇ ಇಲ್ಲ. ಹೆತ್ತ ಕರುಳ ಕುಡಿಯ ನೋವಿಂದ ತನ್ನ ಚೀಲವನ್ನು ಭರ್ತಿಗೊಳಿಸಿ ತನ್ನ ನೋವನ್ನು ತನ್ನಲ್ಲೇ ಐಕ್ಯಗೊಳಿಸಿಬಿಡುತ್ತಾಳೆ.

ನಮಗೆ ಏನಿದ್ದರೂ, ವಿಪುಲ ಸಂಪತ್ತಿನ ಅನುಭೋಗಿಗಳಾಗಿ ಜೀವನ ಸವೆಸುತ್ತಿದ್ದರೂ ತಮ್ಮ ಆಂತರ್ಯದ ನೋವು ಹಂಚಿಕೊಳ್ಳಲು ಯಾರು ಸಿಗದಿದ್ದರೆ ಎಲ್ಲವೂ ಗೌಣವಾಗಿಬಿಡುತ್ತದೆ. ಹಂಚಿಕೊಳ್ಳಲಾಗದ ಈ ನೋವಿಂದ ವಿಲಿವಿಲಿ ಒದ್ದಾಡುವ ಮನಸ್ಸಿನ ತುಮುಲ ಏನಿದ್ದರೂ ತುಂಬಿಕೊಂಡ ನೋವಿನ ಚೀಲದ ಸಂವೇದನೆಯಾಗಿಬಿಡುತ್ತದೆ. ನೋವಿನ ಚೀಲದ ಗಾತ್ರ ದೊಡ್ದದಾದಷ್ಟು ವ್ಯಕ್ತಿ ತ್ಯಾಗಮಯಿ ಆಗಿಬಿಡುತ್ತಾನೆ.ಮಹಾನ್ ಚಿಂತಕರ ಚಿಂತನೆಯಲ್ಲಿ ಈ ನೋವಿನ ಚೀಲ ಪ್ರಧಾನ ಪಾತ್ರವಹಿಸಿದೆ.

ತನ್ನ ಒಡನಾಡಿಗಳಿಂದ ನೋವು, ತಾನು ಜನ್ಮ ಕೊಟ್ಟವರಿಂದ ನೋವು, ಸ್ನೇಹಿತರಿಂದ ನೋವು ಹೀಗೆ ನೋವಿನ ಈ ಚೀಲ ಸದಾ ಕ್ರಿಯಾ ಶೀಲವಾಗಿರುತ್ತದೆ.

ನಮ್ಮ ಸಂಸ್ಕೃತಿಯ ರಾಯಭಾರಿಗಳು...





ಇತ್ತೀಚಿಗೆ ಓರ್ವರ ಮನೆಗೆ ಹೋಗಿದ್ದೆ... ಅವರು ಒಂದು ಮಟ್ಟಿಗೆ ಆತ್ಮೀಯರು ಆಗಿದ್ದರು. ಮಾತುಗರ ನಾನು ಹೀಗಾಗಿ ಕೆಲವೊಂದು ಸಲ ಸಹಜವಾಗಿ ಇಂಥವರು ನನಗೆ ಗಂಟು ಬೀಳುವುದುಂಟು. ನಾನು ಯಾಕೆ ಹೀಗೆ ಹೇಳಿದೆನೆಂದು ಮುಂದೆ ನಿಮಗೆ ಒಂದು ಮಟ್ಟಿಗೆ ಊಹಿಸಲೂ ಬಹುದು. ತೀರ ಅತ್ಮಿಯರಲ್ಲದಿದ್ದರೂ ನಮ್ಮಲ್ಲಿ ಸಲುಗೆಗೆ ಕೊರತೆಯಿಲ್ಲ. ಮತ್ತೆ ನನ್ನ ಸ್ವಭಾವವೂ ಅವರಿಗೆ ಇಷ್ಟವೋ ಏನೋ , ಮನೆಗೆ ನಾನು ಹೋದಾಗ ಸರಿ ಸುಮಾರು ರಾತ್ರಿ ೯ ಆಗಿರಬೇಕು. ಮೊದಲೇ ರಸಿಕ ಸ್ವಭಾವದವರು.. ಸಲುಗೆಯಿಂದಲೇ ನನಗೆ ಒಳಗೆ ಕರೆದು ಸೋಫಾ ತೋರಿಸಿದರು. ಯಾವುದೊ ಟಿವಿ ಕಾರ್ಯಕ್ರಮ ನೋಡುತ್ತಿದ್ದರು...

ವಾಚಾಳಿಯಾದ ನನಿಗೂ ಅವರಿಗೂ ಮಾತು ಶುರುವಾಯಿತು.. ಅಗೋಳ ಪರ್ಯಂತ ವಿಚಾರಗಳಿಗೆ ಕೊರತೆ ಎಂಬುದು ಇದೆಯೇ.? ಅದೂ ರಸಿಕರಾಗಿದ್ದಲ್ಲಿ. ಆ ವಿಚಾರ ಇರಲಿ ಜನಪ್ರಿಯ ವಾಹಿನಿಯೊಂದರ ಜನಪ್ರಿಯ ಕಾರ್ಯಕ್ರಮ ನೋಡುತ್ತಿದ್ದ ಇವನ ಟಿವಿ ನೋಡುವ ಪ್ರವೃತ್ತಿ ಯಾಕೋ ವಿಚಿತ್ರ ಅನಿಸಿತು..!!! ಅದು ಕನ್ನಡದ ಜನಪ್ರಿಯ ವಾಹಿನಿ ಸಂಗೀತಕ್ಕಾಗಿ ಹುಟ್ಟಿಕೊಂಡ ಚಾನಲ್ ಅದರ ಹಾಡಿನ ಕಾರ್ಯಕ್ರಮ ಬರ್ತಾ ಇತ್ತು.. ಯಾವುದೊ ಚಿತ್ರ ಗೀತೆ.. ( ಇವರಿಗೆ ಸಂಗೀತ ಕಲೆ ಭಾಷಾಭಿಮಾನ ಇರುವುದು ಚಲನ ಚಿತ್ರದಲ್ಲಿ ಮಾತ್ರ.!!!! ಹಾಗಾಗಿ ಸಂಗೀತ ಸೇವೆ ಎಂದು ಚಿತ್ರ ಗೀತೆ ಪ್ರಸಾರ ಮಾಡ್ತಾರೆ.!!) ಬರ್ತಾ ಇತ್ತು.. ಈ ಪುಣ್ಯಾತ್ಮ ಚಿತ್ರ ಗೀತೆ ಹಾಕಿ ! ಗೀತೆ ಶುರುವಾದ ತತ್ಕ್ಷಣ ಬದಲಾಯಿಸುತ್ತಿದ್ದ.. ಉದ್ಘೋಷಕಿ ಬಂದು ಪ್ರೆಕ್ಷಕರಲ್ಲ್ಲಫೋನ್ ಮೂಲಕ ಅದೂ ಇದೂ ಹರಟುತ್ತ ಇದ್ದ ಹಾಗೆ ಪುನ ಅದೇ ಚಾನಲ್ ಇಡುತ್ತಿದ್ದ..!!! ಮಾಮೂಲಿನಂತೆ ಜಾಹಿರಾತು ಹಾಡು ಬರುತ್ತಿದ್ದ ಹಾಗೆ ಚಾನಲ್ ಬದಲಾವಣೆ..ನನಗೆ ಸೋಜಿಗವಾಯಿತು ಕೆ .. ಯಾಕೆ ಹೀಗೆ. ನಿಜಕ್ಕೂ ಆಶ್ಚರ್ಯ.. ಯಾಕಪ್ಪ ಹೀಗೆ..? ಹೆಚ್ಚಾಗಿ ಸಿನಿಮ ಹಾಡು ನೋಡುವುದಕ್ಕಾಗಿಯೇ ಕುಳಿತು ಇನ್ನಿತರ ದೃಶ್ಯಗಳು ಬಂದಾಗ ಚಾನಲ್ ಬದಲಾಯಿಸುವುದನ್ನು ನೋಡಿದ್ದೇನೆ .. ಇದು ವಿಚಿತ್ರ ಕಂಡಿತುಕೇಳಿಬಿಟ್ಟೆ .. ಯಾಕೆ ಹೀಗೆ.
ಅವನೆಂದ ಉತ್ತರ ಕೇಳಿ ತುಸು ಯೋಚಿಸುವಂತಾಯಿತು. ಹೇಳಿದ ವಿಚಾರ ಇಷ್ಟೇ. ಅ ಕಾರ್ಯಕ್ರಮದ ನಿರೂಪಕಿ, ವೀಕ್ಷಕರೊಂದಿಗೆ ದೂರವಾಣಿಯಲ್ಲಿ ಹರಟುವ ಆಕೆ. ಬಿಗಿಯಾದ ಟೀ ಶರ್ಟು ಹಾಕಿ ತನ್ನ ಸಂಪತ್ತೆಲ್ಲವನ್ನೂ ಧಾರೆ ಎರೆದು.. ದೂರ ವಾಣಿಯಲ್ಲಿ ಹರಟುವುದನ್ನು ಪುಣ್ಯಾತ್ಮ ಬಿಟ್ಟ ಕಣ್ಣಿಂದ ನೋಡುತಿದ್ದ.. !!!! ಮತ್ತೂ ಹೇಳಿದ ಈ ಚಾನಲ್ ಗಳ ಇಂಥ ಕಾರ್ಯಕ್ರಮದಲ್ಲಿ ಇದನ್ನು ನೋಡುವುದೇ ಒಂದು ಖುಷಿ.. ಹೇಗಿದೆ? ಅವನು ಹೇಳಿದ್ದು ತುಸು ನನಗೂ ನಿಜ ಅನ್ನಿಸಿತು ನೋಡಿ ಆತ ನೋಡುತ್ತಿದ್ದ
ಅವಳ ಮೈ ಬಿಗಿಯಾದ ಉಡುಗೆ ನೋಡಿ ಎಷ್ಟು ಜನ ಪ್ರೇಕ್ಷಕರು ರಸಿಕರಾಗಬಹುದು? ಇದು ನಮ್ಮ ನಮ್ಮ ಸಂಸ್ಕೃತಿ. ಅರ್ಧ ಗಂಟೆ ಅವಧಿಯಲ್ಲಿ ಆ ಕಾರ್ಯಕ್ರಮ ಮುಗಿಯಿತು... ಪುನಃ ಇನ್ನೊಂದು ಅದೇ ಬಗೆಯ ಇನ್ನೊಂದು ಕಾರ್ಯಕ್ರಮ ಈಗ ನಿರೂಪಕಿ ಬೇರೆ.. ನಿರೂಪಕಿಯನ್ನು ಮಾತ್ರ ನೋಡುವಂತ ಕಾರ್ಯಕ್ರಮ ... ಹಾಗಿತ್ತು ಅವಳ ಉಡುಗೆ.. ಅಲ್ಲ ಡ್ರೆಸ್..






ಇವು ಎರಡೂ ಕಾರ್ಯಕ್ರಮಗಳು ಒಂದರ ಹಿಂದೆ ಒಂದು ಪ್ರಸಾರವದವುಗಳು.ನೋಡಿದಾಗ ನಮ್ಮ ಸಂಸ್ಕೃತಿಯಸಂಸ್ಕೃತಿಯನ್ನು ಬಿಂಬಿಸುವಂತಹ ಕಾರ್ಯಕ್ರಮಗಳೇ ಅಲ್ಲವೇ ನಮ್ಮ ಸಂಸ್ಕೃತಿಯ ರಾಯಭಾರಿಗಳು ಮಾಡುವುದು? ಹಾಗಿದ್ದರೆ ಇದೆ ನಮ್ಮ ಸಂಸ್ಕೃತಿಯೆಂದು ನಾವು ತೃಪ್ತಿಪಡಬೇಕು.
ರಾಯಭಾರಿಗಳಾದ ಇವರುಗಳ ಬೌದ್ದಿಕ ದಿವಾಳಿತನಕ್ಕೆ ಏನು ಹೇಳಲಿ... ಚಲನ ಚಿತ್ರ ಗೀತೆಯ ಮೂಲಕ ಸಂಗೀತ ಕಲಾಸೇವೆಯನ್ನು ಮಾಡುವ ಮಹಾನ್ ಕಲಾ ಪೋಷಕರ ಕಲಾಸೇವೆ ಈ ಮಟ್ಟಕ್ಕೆ ಇಳಿಯಿತೇ.. ಇದರಲ್ಲಿ ದುಡ್ಡಿನ ವಾಸನೆ ಅಲ್ಲದೆ ಬೇರೆ ಏನಾದರೂ ಕಾಣಬಹುದೇ?ಇಂತಿಂತಹ ಹೊತ್ತಿನಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳಿಗೆ ಹೀಗೆ ಉಡುಗೆ ತೊಡುಗೆ ಗಳಿರಬೇಕು ಎಂಬ ಅನಧಿಕೃತ ನಿಯಮವನ್ನು ಅಳವಡಿಸಿಕೊಂಡ ಹಾಗೆ ಈ ಕಾರ್ಯಕ್ರಮಗಳಿರುತ್ತವೆ. ಇಂತಹ ಆಕರ್ಷಣೆ ಆ ಕಾರ್ಯಕ್ರಮಗಳಿಗಿರಬೇಕು, ಅದನ್ನು ಪ್ರಪಂಚದ ೮ ನೇ ಅದ್ಭುತ ನೋಡುತ್ತೆವೋ ಎಂಬ ಭಾವದಲ್ಲಿ ನೋಡುವ ಪ್ರೇಕ್ಷಕರು.ಇನ್ನು ಈ ನಿರೂಪಕಿಯರ ಭಾಷಾಪ್ರೇಮವೋ, ಅತ್ಯದ್ಭುತ. ಕನ್ನಡದ ನಿತ್ಯ ಶ್ರಾದ್ದ ಮಾಡುವ ಇದಕ್ಕೆ ಅಂತ್ಯ ಇಲ್ಲವೇ.. ಮಾತುಕತೆ ಶುರು ಆಗೋದೇ.. " ನೀವು ಯಾವ ಫಿಲ್ಮ್ ನೋಡ್ತೀರ? ಮನೆಯಲ್ಲಿ ಯಾವ

Language use ಮಾಡ್ತಿರ.. ಮಮ್ಮಿ ಏನ್ ಮಾಡ್ತಾರೆ ಡಾಡಿ ಎಲ್ಲಿ ವರ್ಕ್ ಮಾಡ್ತಾರೆ.? " ಅಪ್ಪಿತಪ್ಪಿ ಕೆಲವೊಮ್ಮೆ ತಮ್ಮ ಭಾಷಾಜ್ಞಾನ ಪ್ರದರ್ಶನ ಮಾಡುವ ಇವರು ಕನ್ನಡ ಪ್ರೇಮಕ್ಕಾಗಿ ಅದ್ಬುತ ಪದ ಪ್ರಯೋಗ ಮಾಡುತ್ತಾರೆ.. ಅವಾಗ ಪ್ರಾಣಾಕ್ಷರಗಳ ಪ್ರಾಣವೇ ಹೋಗಿರುತ್ತದೆ.. ಇದು ಹೆಚ್ಚಿನ ಎಲ್ಲ ಕನ್ನಡ ವಾಹಿನಿಗಳಲ್ಲಿ ಕಂಡುಬರುವ ಸಣ್ಣದಾಗಿ ಕಾಣುವ ದೊಡ್ಡ ಸಮಸ್ಯೆ.ಮನರಂಜನೆ ಹೆಸರಲ್ಲಿ ಮಾಡುವುದೇನನ್ನು? ನಮ್ಮ ಸಂಸ್ಕೃತಿಯ ಬಗ್ಗೆ ತೀರ ಕೀಳಾಗಿ ವ್ಯವಹರಿಸುವ ಇವರಿಗೆ ಭಾಷಾ ಪ್ರೇಮವಾಗಲಿ.. ಅದು ಏನೆಂದು ತಿಳಿದಿದಿಯೇ?

ಶ್ರೀ ಬಿ ವಿ ಕಾರಂತರು ಯಕ್ಷಗಾನ ಸರಣಿಯನ್ನು ಟಿವಿ ಮಾದ್ಯಮದಲ್ಲಿ ತಂದರು. ರಾಜ್ಯ ನೆಲದ ಸಂಸ್ಕೃತಿಯನ್ನು ಬಿಂಬಿಸುವ ಕನ್ನಡ ಭಾಷಾಶುದ್ದಿಯಾಗಲಿ, ಪುರಾಣಿಕ ಪ್ರಜ್ಞೆಯಾಗಲಿ, ನಮ್ಮ ಸಂಸ್ಕೃತಿಯ ಜೀವಾಳ ಏನು ಅದನ್ನು ನಿರೂಪಿಸುವ ಇ ಯಕ್ಷಗಾನ ಸರಣಿ ಪೂರ್ಣವಾಗಿ ಪ್ರಸಾರವಾಗಲಿಲ್ಲ.. ಕಾರಂತರು ಕಂಬನಿ ತುಂಬಿ ತೀವ್ರ ವಿಷಾದದಿಂದ ಇದನ್ನು ನಿಲ್ಲಿಸಿದ ಕಾರಣವೇನು? ಜಾಹಿರಾತು ಪ್ರಾಯೋಜಕರ ಕೊರತೆ.. ಆದರೆ ಇಂಥ ಒಂದು ಸಂಸ್ಕೃತಿಯ ಅವಹೇಳನಕ್ಕೆ ಇವರಿಗೆ ಪ್ರಾಯೋಜಕರ ಕೊರತೆ ಇಲ್ಲವಾಗಿದ್ದು ಕಾಲದ ಮಹಿಮೆ ಅಲ್ಲದೆ ಮತ್ತೇನು? ಇಲ್ಲವಾದರೆ ಕಾರ್ಯಕ್ರಮ ನಿರೂಪಕಿಯರ ಈ ಬಗೆಯ ಪ್ರದರ್ಶನಕ್ಕೆ ಕಾರಣವಾದರೂ ಏನು? ತಡ ರಾತ್ರಿ ವರೆಗೂ ಪ್ರಸಾರವಾಗುವ ಇಂಥ ಕಾರ್ಯಕ್ರಮಗಳಿಗೆ ಹೀಗೆ ಇರಬೇಕೆ? ಸತ್ವ ಹೀನ ಕಾರ್ಯಕ್ರಮವನ್ನು ಜನಪ್ರಿಯಗೊಳಿಸಿ ಇಂಥ ಟಿವಿ ವಾಹಿನಿಗಳು ಹಣ ಮಾಡುವ ದಂಧೆಗೆ ಏನು ಹೇಳಬಹುದು. ತುಸು ಗಮನಿಸಿ ಇಲ್ಲಿರುವರ ಎಲ್ಲ ಫೋಟೋಗಳಲ್ಲಿ ನೋಡಿದಾಗ ಈ ನಿರೂಪಕಿಯರ ಬಗ್ಗೆ ಒಳ್ಳೆ ಭಾವನೆ ಮನಸ್ಸಿನಲ್ಲಿ ಹುಟ್ಟಬಹುದೇ? ಮನಸಿನ ಚಿಂತನೆಗೆ ಗ್ರಾಸವನ್ನು ಒದಗಿಸಬಲ್ಲ ಕಾರ್ಯಕ್ರಮಗಳು ಇವರಿಗೆ ಬೇಡ.. ಪ್ರೇಕ್ಷಕರನ್ನು ಅವರ ಮನಸನ್ನು ಭಾವನೆಗಳನ್ನು ಹುಚ್ಚೆಬ್ಬಿಸಿ ಜೇಬು ತುಂಬಿಸಿಕೊಳ್ಳುವ ಇವರಿಗೆ ಬುದ್ದಿ ಬರುವುದು ಯಾವಾಗ?

ಕನ್ನಡದ ಗಂಡು ಕಲೆ ಎಂದು ಕರೆಸಲ್ಪಡುವ ಯಕ್ಷಗಾನದಂತಹ ಶ್ರೀಮಂತ ಕಲೆಗೆ ಇಂದು ಯಾವ ಸ್ಥಿತಿ ಬಂದೊದಗಿದೆ. ಯಕ್ಷಗಾನ ಅಡಿಸುವವನು ದುಡ್ಡು ಮಾಡುವ ಉದ್ದೇಶದಿಂದ ಅಡಿಸುತ್ತಾನೆ ಎಂದು ಹೇಳುವ ಕಾಲ ಎಂದೋ ಕಳೆದು ಹೋಯಿತು.. ಏನೋ ಹುಚ್ಚು ಎಂದು ಹೇಳುವ ಕಾಲ ಈಗಯಕ್ಷಗಾನ ಇದ್ದರೆ ಕಲಾವಿದರೇ ಪ್ರೇಕ್ಷಕರಾಗಿ ಉಳಿವಂಥಹ ಸಂದಿಗ್ದ ಸ್ಥಿತಿಯಲ್ಲಿ ಯಕ್ಷಗಾನವಿದೆ. ಭರತನಾಟ್ಯ ಶಾಸ್ತ್ರೀಯ ಸಂಗೀತ ಇವರಿಗೆ ಬೇಡ. ಚಡ್ಡಿ ಹಾಕಿ ಮೈ ಕುಲುಕಿಸುವ ಕಾರ್ಯಕ್ರಮಗಳೇ ಬೇಕು.. ಅದಕ್ಕಾಗಿ ತಮ್ಮ ಕಂದಮ್ಮಗಳನ್ನು ಎಷ್ಟು ಖರ್ಚು ಮಾಡಿಯಾದರೂ ತರಬೇತಿ ಕೊಡಿಸುತ್ತಾರೆ. ಅದಕ್ಕಾಗಿ ರಿಯಾಲಿಟಿ ಶೋ ಎಂಬ ಅನರ್ಥ ಪರಂಪರೆ ಬೇರೆ.. ಸಂಗೀತ ಎಂದರೆ..ಅದು ಚಲನ ಚಿತ್ರ ಗೀತೆ ಮಾತ್ರ ..ಭಾಷಾಭಿಮಾನ ಇರುವುದು ಕನ್ನಡ ಚಲನ ಚಿತ್ರ ನೋಡಿದರೆ ಮಾತ್ರ ಎಂಬ ಹಾಗಿದೆ.ನಮ್ಮ ಸಾಂಸ್ಕೃತಿಕ ದೀವಾಳಿತನದ ದ್ಯೋತಕವೇ ಈಗಿನ ಟಿವಿ ಚಾನಲ್ ಗಳು ? ಅಲ್ಲ ರಾಯಭಾರಿಗಳೇ?

ವೀರ ಯೋಧ


ಆಸರೆಯ ಬೇಡಿ ವೀರ ಯೋಧನಲ್ಲಿ
ಕೈಸೆರೆ ನೀಗೆಂದ ಪಶುವಿನಲ್ಲಿ
ನಾನಿಹೆನು ಕಂಕಣಬದ್ದನಾಗಿ
ದೀಕ್ಷೆಯಿದು ಎನ್ನ ಪ್ರಾಣವು ನಿನ್ನ ರಕ್ಷೆಗಾಗಿ
ಅಭಯ ನೀಡಿಹನು ಈ ಜೀವ ಮುಡಿಪಿನ್ನು
ವೀರ ಕುವರನ ವಚನವ ನೋಡು ನೀನು
ಕಣ್ಣಲ್ಲಿ ಕಣ್ಣಾಗಿ ಮಣ್ಣಲ್ಲಿ ಮಣ್ಣಾಗಿ
ಸಾರ್ಥಕವು ಈ ಬದುಕು ನಿನ್ನ ಸೇವೆಯಲ್ಲಿ..
ಮನದೊಡಲ ಭಾವನೆಗೆ ಪಶುವು ವಶವಾಗಿ
ತನ್ನೊಡಲ ಕಂಬನಿಯ ನೀಡಿ ಹರಸಿತು
ಮತ್ತೊಮ್ಮೆ ಜನಿಸಯ್ಯ ವೀರ ಕುವರ
ಧನ್ಯವಾಗಲಿ ಬದುಕು ನಿನ್ನ ರಕ್ಷೆಯಲ್ಲಿ