Sunday, January 25, 2026

ಭಾವ ಒಂದೇ ಸಾಲದೆ?


ಅದೊಂದು ಪುಟ್ಟ ಮನೆ. ನಗರದ ಈಗಿನ ಮನೆ ಎಂದಮೇಲೆ ಕೇಳಬೇಕೆ. ಹಾಗೆ ಹೀಗೆ ಅಂತ ಒಂದು ಕಟ್ಟಡ ಇರುತ್ತದೆ. ಅದರಲ್ಲೇ ಹೊಂದಾಣಿಕೆಯ ಬದುಕು. ಅದೇ ಸ್ವರ್ಗ. ತೀರ ಬಡವನು ಕೂಡ ಘನ ಶ್ರೀಮಂತನಿಗಿಂತ ಕಡಿಮೆ ಇಲ್ಲದಂತೆ ಉಡುಪು ತೊಟ್ಟು ರಸ್ತೆಗೆ ಬಂದನೆಂದರೆ ...ಆತನ ಮನೆಯ ಬಗ್ಗೆ ಯಾರೂ ಯೋಚಿಸುವುದಿಲ್ಲ. ಇವನು ದೊಡ್ಡ ಧನಿಕನಿರಬೇಕು ಎಂದು ಭಾವಿಸುತ್ತಾರೆ. ಇಲ್ಲಿ ಎಲ್ಲವನ್ನು ಹೊರಾವರಣದಲ್ಲೇ ನಂಬಿಬಿಡುತ್ತಾರೆ.ಅದೇ ಸತ್ಯ.


ಮನೆ ಪುಟ್ಟದು. ಅಲ್ಲಿ ಪುಟ್ಟ ಸಂಸಾರ ಇರಬೇಕೆಂದೇನೂ ಇಲ್ಲ. ಅಪ್ಪ ಅಮ್ಮ ಅಜ್ಜ ಅಜ್ಜ ಮಕ್ಕಳು, ಅದಲ್ಲದೆ ಇನ್ನೂ ಕೆಲವರು ಇರಬಹುದು. ಮನೆ ಸಂಸಾರ ಎನ್ನುವಾಗ ಹಲವು ಸ್ನೇಹ ಕಲಹ ಎಲ್ಲವೂ ಸಮ್ಮಿಳಿತವಾಗಿರುತ್ತದೆ. ಅದೇ ಸಂಸಾರ. ಅದರಲ್ಲಿ ಕೆಲವೊಮ್ಮೆ ನಿಸ್ಸಾರ ವಿಚಾರಗಳೇ ಸ್ನೇಹಕ್ಕೂ ಕಲಹಕ್ಕೂ ಕಾರಣವಾಗಿರುತ್ತದೆ. ಇಲ್ಲಿಯೂ ಹಾಗೆ ಮನೆಯಲ್ಲೊಂದು ಚಪ್ಪಲಿ ಸ್ಟಾಂಡ್ ಇತ್ತು. ಕಲಹದ ನಿಸ್ಸಾರ ಕಾರಣಕ್ಕೆ  ಅದುವೇ ಕಾರಣವಾಗಿಬಿಟ್ಟಿತು. ವಿಷಯ ಇಷ್ಟೇ. ಸುಂದರವಾದ ಆ ಚಪ್ಪಲಿ ಸ್ಟಾಂಡ್ ಹೊಸದಾಗಿ ತಂದು ಇಡುವಾಗ ಅದರ ಸ್ಥಾನದ ಬಗ್ಗೆ ಒಂದು ಚರ್ಚೆ. ಮಗನಿಗೆ ಸೊಸೆಗೆ ಅದನ್ನು ಮನೆಯ ಬಾಗಿಲ ಎದುರೆ ಇಟ್ಟು ಬಿಡಬೇಕು. ಯಾಕೆಂದರೆ ಹೊರಗೆ ಹೋಗುವಾಗ ಬರುವಾಗ ಧರಿಸುವುದಕ್ಕೆ ಕಳಚಿ ಇಡುವುದಕ್ಕೆ ಅದು ಅನುಕೂಲವಾಗುತ್ತಿತ್ತು. ಆದರೆ ಮನೆಯಲ್ಲಿ ಹಿರಿಯರು ಇದಕ್ಕೆ ತದ್ವಿರುದ್ದ. ಚಪ್ಪಲಿ ಅದು ಋಣಾತ್ಮಕ ಅಂಶ. ಮನೆಯ ಬಾಗಿಲ ಎದುರು ಅದನ್ನು ಇರಿಸಬಾರದು. ಹಿರಿಯರು ಅದಕ್ಕೆ ಸರಿಯಾದ  ಕಾರಣಗಳನ್ನು ಕೊಡುತ್ತಾರೆ.  ಋಣಾತ್ಮಕ ಅಂಶಗಳು ಮನೆಯೊಳಗೆ ಬರುತ್ತವೆ. ಮನೆಯ ಒಳಗೆ ವಾಸಿಸುವವರ ಮನಸ್ಸು ಸದಾ ಗೊಂದಲ ಆಶಾಂತಿಯಿಂದ ಕೂಡಿರುತ್ತವೆ. ಮನೆಯಲ್ಲಿ ನಿಸ್ಸಾರ ವಿಚಾರಕ್ಕೂ ಸಂಘರ್ಷ ಕಲಹ ಏರ್ಪಡುತ್ತದೆ.  

ವಿಷಯ ಯೋಚಿಸಿದರೆ ಎರಡರಲ್ಲೂ ಸತ್ಯಾಂಶ ಇತ್ತು. ಎರಡನ್ನು ಹೌದು ಎಂದೇ ಸಮ್ಮತಿಸಬೇಕು. ಆದರೆ ಕಲಹದ ನಿಸ್ಸಾರ ಕಾರಣವು ಅಲ್ಲಿನವರ ಮನಸ್ಥಿತಿಯಿಂದ ಗಂಭೀರವಾಗುತ್ತದೆ. ಸುಂದರವಾದ ಬೆಲೆಬಾಳುವ ಚಪ್ಪಲಿ ಸ್ಟಾಂಡ್ ಈ ಕ್ಷುಲ್ಲಕ ಕಾರಣಕ್ಕೆ ಎಲ್ಲೋ ಇಡುವುದಕ್ಕೆ ಮಕ್ಕಳಿಗೆ ಸಮ್ಮತವಿಲ್ಲ. ಅದು ಬಾಗಿಲ ಮುಂದೆ ಇಡುವುದಕ್ಕೆ ಹಿರಿಯರಿಗೆ ಸಮ್ಮತವಿಲ್ಲ. ಇಡಬಾರದು ಎನ್ನುವುದಕ್ಕೆ ಕಾರಣ, ಅದು ಕಲಹಕ್ಕೆ ಕಾರಣವಾಗುತ್ತದೆ. ಇಲ್ಲೇನೋಡಿ ವಿಚಿತ್ರ ಇರುವುದು. ಇಡಬೇಕು ಇಡಬಾರದು ಎನ್ನುವುದೇ ಕಲಹಕ್ಕೆ ಕಾರಣವಾದರೆ ಅಲ್ಲಿ ಮನಸ್ಥಿತಿಯೇ  ಕಲಹಕ್ಕೆ ಕಾರಣ ಎಂದು ತಿಳಿಯುವುದಕ್ಕೆ ಅರಿವು ಇರಬೇಕು. ನಮ್ಮೊಳಗಿನ ಅಹಂ ದೂರವಿಡಬೇಕು. ಎಲ್ಲಿ ಅಹಂ ಇರುವುದೋ ಅಲ್ಲಿ ಮನಸ್ಸು ಶಾಂತವಾಗಿರುವುದಕ್ಕೆ ಸಾಧ್ಯವಿಲ್ಲ. ಅಹಂ ಎಂಬುದೇ ಮನಸ್ಸಿನಲ್ಲಿಋಣಾತ್ಮಕ ಧೋರಣೆಯನ್ನು ತುಂಬಿಸುವುದಕ್ಕೆ ಕಾರಣವಾಗುತ್ತದೆ. ಅಹಂ ಮನಸ್ಸಿನಲ್ಲಿ ಅತೃಪ್ತಿಯನ್ನು ತುಂಬಿಸುತ್ತದೆ. ನಮ್ಮ ಮನಸ್ಥಿತಿ ನಿರ್ಧಾರವಾಗುವುದೇ ಅಹಂ ನಿಂದ. ಇದು ದೂರವಾದರೆ ಗಂಭೀರವಾದ ಕಾರಣಗಳು ನಿಸ್ಸಾರವಾಗಿಬಿಡುತ್ತದೆ. ಕೊನೆಗೆ ಹಿರಿಯರು ಯೋಚಿಸಿದರು. ಇದೇ ಕಲಹಕ್ಕೆ ಕಾರಣವಾಗುವುದಾದರೆ, ಈ ಭಾವನೆಯಿಂದ ಗಳಿಸುವ ಲಾಭವಾದರೂ ಏನು ಎಂದು ಚಿಂತಿಸುತ್ತಾರೆ.  ಕೊನೆಗೆ ಚಪ್ಪಲಿ ಸ್ಟಾಂಡ್ ಮನೆಯ ಬಾಗಿಲ ಮುಂದೆಯೇ ಇಡಲಾಗುತ್ತದೆ. ಕಲಹಕ್ಕೆ ಕಾರಣವೇ ಮನಸ್ಸಿನ ಭಾವ ಎಂಬುದು ವಾಸ್ತವದ ಸತ್ಯ. 

No comments:

Post a Comment