Sunday, November 12, 2023

ನಂಬಿಕೆಗಳು ಸಂಸ್ಕೃತಿಯೂ

ಮೊನ್ನೆ ನವರಾತ್ರಿ ಸಮಯದಲ್ಲಿ ಊರಿಗೆ ಹೋಗಿದ್ದೆ. ನಮ್ಮೂರು ತಲುಪಿದಂತೆ ಅಲ್ಲಲ್ಲಿ ಸಾರ್ವಜನಿಕ ಶಾರದೋತ್ಸವ ನಡೆಯುತ್ತಿರುವುದನ್ನು ನೋಡಿದೆ. ಬಹುಶಃ ಸಾರ್ವಜನಿಕ ಶಾರದೋತ್ಸವ ಆಚರಿಸುವ ಪರಿಪಾಠವಿರುವುದು ನಾನು ಕಂಡ ಹಾಗೆ ನಮ್ಮೂರಲ್ಲಿ ಮಾತ್ರ. ಎಲ್ಲದಕ್ಕೂ ಮಹತ್ವ ಕೊಡುವಾಗ ಇಲ್ಲಿವಿದ್ಯೆ ಜ್ಞಾನಕ್ಕೂ ಮಹತ್ವ ಕೊಡುವ ಬಗೆ ಇದು.  ಅದು ಗಣೇಶೋತ್ಸವ ಆಗಿರಲಿ ಶಾರದೋತ್ಸವ ಆಗಿರಲಿ ಇಲ್ಲಾ ಸಾರ್ವಜನಿಕ ಸಾಮೂಹಿಕ ಸತ್ಯನಾರಾಯಣ ಪೂಜೆಯೇ ಆಗಲಿ ಇಲ್ಲಿ  ಉತ್ಸವದ ಆಚರಣೆಯ ವೈಶಿಷ್ಟ್ಯಗಳು ಹಲವು. ಹಲವು ಕಡೆಯಲ್ಲಿ ಅತ್ಯಂತ ಶಿಸ್ತುಬದ್ಧವಾಗಿರುತ್ತದೆ.   ಡಿ ಜೆ ಯಂತಹ ಪಾಶ್ಯಾತ್ಯ ಸಂಸ್ಕೃತಿಯ ಪ್ರಭಾವ ಇರುವುದಿಲ್ಲ. ಶಾಸ್ತ್ರೀಯ ಸಂಗೀತ ಭಜನೆ ಯಕ್ಷಗಾನದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಇದಕ್ಕೆ ಪ್ರತೀಕ. ಹಲವು ಕಡೆಯಲ್ಲಿ ಒಂದು ಕಾರ್ಯಕ್ರಮ ಹೇಗೆ ಸಂಸ್ಕೃತಿಯನ್ನು ಪ್ರತಿನಿಧಿಸಬೇಕೋ ಆ ರೀತಿಯಲ್ಲೇ ಇರುತ್ತದೆ. ಪೂಜೆ ಪುನಸ್ಕಾರಗಳು ಜನರಲ್ಲಿ ಭಕ್ತಿಯನ್ನು ಜಾಗೃತಗೊಳಿಸಬೇಕು. ನಿಸ್ವಾರ್ಥ ಪ್ರೀತಿಯ ಸಂದೇಶವನ್ನು ಸಾರಬೇಕು. ಮುಖ್ಯವಾಗಿ ಹಿನ್ನೆಲೆಯ ಭಾವ ಉದಾತ್ತವಾಗಿರಬೇಕು. ಪೂಜೆ ಪುನಸ್ಕಾರ ಉತ್ಸವಾದಿಗಳು ಭಕ್ತರನ್ನು ಮೆಚ್ಚಿಸುವ ಬದಲಾಗಿ ಪರಮಾತ್ಮನನ್ನು ಮೆಚ್ಚಿಸುವ ಉದ್ದೇಶದಲ್ಲಿರಬೇಕು. ಆದರೆ ಇಂದು ಸಾರ್ವಜಿನಿಕ ಆಚರಣೆಗಳು ಭಕ್ತಿ, ಶ್ರದ್ಧೆಯ ಉದ್ದೇಶದಿಂದ ಬಹಳ ದೂರದಲ್ಲಿರುತ್ತದೆ ಎಂಬುದು ಅಷ್ಟೇ ಸತ್ಯ. 

ಇತ್ತೀಚೆಗೆ ಗಣೇಶೋತ್ಸವದ ಬಗ್ಗೆ ಸ್ವಾಮೀಜಿಯೊಬ್ಬರು ಹೇಳಿದ ಮಾತು, ಅವರು ಯಾಕೆ ಹಾಗೆ ಹೇಳಿದರು? ಅದರ ತಪ್ಪು ಒಪ್ಪುಗಳು ಏನು ಎಂಬುದರ ಬಗ್ಗೆಯಲ್ಲ. ಅವರ ಚಿಂತನೆಯ ಬಗ್ಗೆ ಅದನ್ನು ವಿಮರ್ಶಿಸುವುದರ ಬಗ್ಗೆ ನನಗೆ ಆಸಕ್ತಿ ಇಲ್ಲ. ಆದರೆ ಇದೇ ಬಗೆಯ ಸಾಧ್ಯತೆಗಳು ದಟ್ಟವಾಗಿದೆ. ನಮ್ಮಲ್ಲಿ ಮೌಢ್ಯಕ್ಕೂ ಸಂಸ್ಕೃತಿಗೂ ಪರಿಧಿ ಅತ್ಯಂತ ಸೂಕ್ಷ್ಮವಾಗಿದೆ. ಒಂದು ಕಾಲದಲ್ಲಿ ಸತೀ ಪದ್ದತಿ ಎಂಬುದು ಸಂಸ್ಕೃತಿಯಾಗಿತ್ತು .  ಅದು ಮೌಢ್ಯ ಎಂದು ಅರಿತಾಗ ಅದು ಸಮಾಜದಿಂದ ದೂರವಾಗಬೇಕಾಯಿತು.  ನಾವು ಜೀವನದ ಮೌಲ್ಯಗಳನ್ನು ನಂಬಿಕೆಗಳನ್ನು ಈ ದೃಷ್ಟಿಕೋನದಿಂದಲೇ ಗಮನಿಸಬೇಕು. ಜಾತಕ ನೋಡಿ ಮದುವೆಯಾಗಬೇಕು ಸತ್ಯ. ವಿಪರ್ಯಾಸ ಎಂದರೆ ಜಾತಕ ಹೊಂದಿಕೆಯಾಗದೇ ಬ್ರಹ್ಮಚಾರಿಗಳಾಗಿ ಉಳಿದವರ ದೊಡ್ಡ ಪಟ್ಟಿಯೇ ಸಿಕ್ಕಿಬಿಡುತ್ತದೆ. ಹಾಗಂತ ಜಾತಕನೋಡುವುದು ತಪ್ಪು ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಆದರೆ ವಾಸ್ತವ ಎಂಬುದು ಇದೆಲ್ಲದಕ್ಕಿಂತ ಮೀರಿ ನಿಲ್ಲುತ್ತದೆ.  ಮುಖ್ಯವಾಗಿ ನಮ್ಮ ನಂಬಿಕೆಗಳು ಮೌಢ್ಯವನ್ನು ಆಶ್ರಯಿಸುವಂತಾಗಬಾರದು. ಸತ್ಯ ಧರ್ಮ ನ್ಯಾಯ ಪ್ರಾಮಾಣಿಕತೆಯನ್ನು ಬದಿಗಿಟ್ಟು ವ್ಯವಹರಿಸಿದಾಗ ಅದು ಮೌಢ್ಯವಾಗುತ್ತದೆ. ಕಳ್ಳನೋ ಕೊಲೆಗಾರನೋ ಅಪರಾಧವನ್ನು ಮಾಡುವುದಕ್ಕೆ ಹೊರಟಾಗ ದೇವರಿಗೆ ಹರಕೆ ಹಾಕಿ ಪ್ರಾರ್ಥನೆ ಮಾಡಿ ಹೋದರೆ ಮಾಡುವ ದುಷ್ಕೃತ್ಯ ಸಮ್ಮತವಾಗುವುದಿಲ್ಲ. ನಿಜವಾದ ಸತ್ಯ ಏನು ಎಂದು ಆತನಿಗೆ ತಿಳಿಯುವುದಿಲ್ಲ. ದೇವರ ಬಗ್ಗೆ ಆತನಿಗೆ ಮೌಢ್ಯವೇ ಆವರಿಸಿರುತ್ತದೆ. ನಮ್ಮ ಅನ್ಯಾಯ ಅಪ್ರಾಮಾಣಿಕತೆ ವಂಚನೆ ಅಪರಾಧಗಳಿಗೆ ದೇವರು ಅನುಗ್ರಹಿಸಬೇಕು ಎಂಬುದು ಮೌಢ್ಯವಲ್ಲದೇ ಬೇರೆನೂ ಅಲ್ಲ. ದೇವರಲ್ಲಿನ ದೈವತ್ವವನ್ನು ಗೇಲಿ ಮಾಡುವ ಪ್ರವೃತ್ತಿ ಇದು. ಇದು ಪರಿಶುದ್ದ ಭಕ್ತಿಯಲ್ಲ. ಯಾವುದೆ ಪಾಪ ಕರ್ಮಗಳಿಗೆ ಅಪರಾಧಗಳಿಗೆ ಕ್ಷಮೆ ಎಂಬುದು ಇರುವುದಿಲ್ಲ. ಆಗಿ ಹೋದ ಅಪರಾಧಕ್ಕೆ ಪಶ್ಚಾತ್ತಾಪ ಪರಿಹಾರ ಎಂಬುದು ಕೇವಲ ನಮ್ಮ ನಂಬಿಕೆ. ಆದರೆ ಸತ್ಯ ಅದಲ್ಲ. ಅಪರಾಧ ಆದ ನಂತರ ಅದು ಅಪರಾಧವೇ. ಅದು ಸತ್ಕಾರ್ಯವಾಗುವುದಕ್ಕೆ ಅದನ್ನು ನಾಶ ಮಾಡುವುದಕ್ಕೆ ಸಾಧ್ಯವಿಲ್ಲ. 

ಈಗ ಗಣೇಶ ಎಂದ ತಕ್ಷಣ ಅದು ದೇವರಲ್ಲದೇ ಆಗುವುದಿಲ್ಲ. ಅಥವಾ ದೇವರು ಎಂಬುವುದು ಗಣೇಶ  ಎನ್ನುವುದಕ್ಕೆ ಅಷ್ಟೇ ಸೀಮಿತವಾಗುವುದಿಲ್ಲ. ರಾಮ ಶಿವ ಸುಬ್ರಹ್ಮಣ್ಯ ಕೃಷ್ಣ ಹೆಚ್ಚೇಕೆ ಅಲ್ಲಾ ಅಥವಾ ಏಸು ಎಲ್ಲವೂ ಒಂದೇ ಎನ್ನುವ ತತ್ವದಲ್ಲಿ ಹೆಸರಿಗೆ ಮಹತ್ವವೇ ಇರುವುದಿಲ್ಲ. ಹಾಗಿರುವಾಗ ಗಣೇಶ ಎನ್ನುವುದು ದೇವರಲ್ಲ ಎನ್ನುವುದು ಹೇಗೆ ಸಾಧ್ಯ?  ಅಕ್ಕಿಯನ್ನು ಅನ್ಯ ಭಾಷೆಯಲ್ಲಿ  ಚಾವಲ್ ರೈಸ್ ಎನ್ನುವ ಹಾಗೆ ಗಣೇಶ. ಅದೊಂದು ಹೆಸರಿನ ರೂಪ. ದೇವರನ್ನು ನಂಬುವಾಗ ಅಲ್ಲಿ ಆಸ್ತಿಕ ನಾಸ್ತಿಕ ಎನ್ನುವುದಷ್ಟೇ ಮುಖ್ಯವಾಗುತ್ತದೆ. 

ಹಿಂದೂ ಸಂಸ್ಕೃತಿಯಲ್ಲಿ ದೇವರು ಆರಾಧನೆ ಎಂಬುದರ ವ್ಯಾಪ್ತಿ ಅದರ ರೂಪ ಬಹಳ ವಿಶಾಲವಾಗಿದೆ. ಅತ್ಯಂತ ಸರಳವಾಗಿಯೂ ಅತ್ಯಂತ ಆಡಂಬರದಲ್ಲಿಯೂ ಇಲ್ಲಿ ಆರಾಧನೆ ಇರುತ್ತದೆ.  ಇಲ್ಲಿ ಭಾವನೆಗಳಿಗೆ ಮಾತ್ರ ಮಹತ್ವ. ದೇವರ ಪೂಜೆ ಎಂಬುದರಲ್ಲಿ ಕ್ರಿಯೆಯೂ ವಿಭಿನ್ನವಾಗಿ ಇರುವಾಗ ಹೆಸರು ಎಂಬುದು ಗೌಣವಾಗಿರುತ್ತದೆ. ಹಲವು ಕಡೆ ದೇವರು ಎಂದು ಅರಿತಾಗ ಅಲ್ಲಿ ಒಳಗೆ ಯಾವ ದೇವರು ಎಂದು ಯೋಚಿಸುವುದಿಲ್ಲ. ಅದಕ್ಕೆ ನಮಸ್ಕರಿಸುವುದು ಮಾತ್ರ ಮಹತ್ವವಾಗಿರುತ್ತದೆ. ದೇವರ ರೂಪ ಭಾವ ಹೆಸರು ಎಲ್ಲವೂ ಮನುಷ್ಯ ಕಲ್ಪನೆಗೆ ಸೀಮಿತ. ಕಾಂತಾರ ಸಿನಿಮಾದಲ್ಲಿ ದೈವವನ್ನು ನೋಡುವಾಗ ಅದು ಕೇವಲ ದೈವ ಬೂತವಾಗಿ ಕಾಣುತ್ತದೆ ಹೊರತು ಅಲ್ಲಿ ಹೆಸರಿನ ಬಗ್ಗೆ ಯೋಚಿಸುವುದಿಲ್ಲ.  ಆದರೆ ದೇವರು ಹೆಸರಿಗೆ  ಅಷ್ಟಕ್ಕೇ ಸೀಮಿತವಾದರೆ ಅದು ದೇವರಾಗುವುದಿಲ್ಲ. ಕಲ್ಪನಾತೀತ ಭಾವನಾತೀತ ಎಂಬುದು ದೇವರು. ಹಾಗಿರುವಾಗ ಇಲ್ಲಿ ಹೆಸರು ಎಂಬುದು ಗೌಣವಾಗಿರುತ್ತದೆ. ಯಾವುದೂ ಇಲ್ಲದೆಯೂ ದೇವರನ್ನು ಪೂಜಿಸುವುದಕ್ಕೆ ಭಜಿಸುವುದಕ್ಕೆ ಅವಕಾಶ ನಮ್ಮ ಸಂಸ್ಕೃತಿಯಲ್ಲಿದೆ. ಕೇವಲ ಬೆರಳ ತುದಿಯಲ್ಲಿ ಹಿಡಿದ ಅಕ್ಷತೆಯನ್ನು ಸಮರ್ಪಿಸಿ ಸರ್ವ ಸಮರ್ಪಣಾ ಭಾವದಿಂದ ಆರಾಧಿಸಿ ತೃಪ್ತರಾಗುವ ಅವಕಾಶವಿದೆ. ಒಂದು ತುಳಸೀ ದಳ ಅರ್ಪಿಸಿ ಶ್ರೀಕೃಷ್ಣನನ್ನು ಒಲಿಸಿಕೊಂಡ ಕಥೆ ಪುರಾಣದಲ್ಲಿದೆ. ನಾವು ಹೊರಾವರಣದಲ್ಲಿ ಏನು ಮುಖ್ಯ ಎಂದು ತಿಳಿದಿರುತ್ತೇವೆಯೋ   ದೇವರಿಗೆ ಅದು ಯಾವುದೂ ಮುಖ್ಯವಲ್ಲ. ಅದು ನಮ್ಮ ಭಾವನೆಗಳಿ ಮಾತ್ರ ಅವಶ್ಯಕವಾಗಿರುತ್ತದೆ.  ನಾವು ಹೆಸರಿಲ್ಲದೇ ಕೇವಲ ಓಂ ಕಾರದಿಂದ ದೇವರನ್ನು ಕಾಣುವಾಗ ಯಾವ ದೇವರನ್ನೂ ಕಲ್ಪಿಸಬಹುದು. ಓಂಕಾರದಲ್ಲೇ ಎಲ್ಲವನ್ನು ಕಾಣುವಾಗ ಗಣೇಶ ಕೃಷ್ಣ ದುರ್ಗೆ ಎಲ್ಲವು ಒಂದೇ ಆಗಿ. ದೇವರು ಹೆಣ್ಣೂ ಅಗಬಹುದು ಗಂಡು ಅಗಬಹುದು. ಅದು ಕೇವಲ ಮಾನಸಿಕ ತೃಪ್ತಿ. 

ನಮ್ಮ ಪ್ರಾಚೀನ ಸಂಸ್ಕೃತಿಯನ್ನು ಗಮನಿಸಬೇಕು. ಋಷಿಗಳು ತಪಸ್ಸು ಮಾಡುವುದಕ್ಕೆ ಯಾಕೆ ಕಾಡನ್ನು ಆಯ್ಕೆ ಮಾಡುತ್ತಿದ್ದರು?  ಕೇವಲ ಅವರ ಏಕಾಗ್ರತೆಗಾಗಿ ಅಲ್ಲ. ಎಲ್ಲವನ್ನೂ ಬಿಟ್ಟು ಕೇವಲ ಮನಸ್ಸನ್ನು ಅರ್ಪಿಸುವುದಕ್ಕೆ ಕಾಡು ಪ್ರಶಸ್ತ. ಅವರ ತಪಸ್ಸಿನಿಂದ ಉಳಿದವರಿಗೆ ತೊಂದರೆಯಾಗುವುದಿಲ್ಲ. ಎಲ್ಲೋ ಒಂದು ಕಾಡಿನ ಭಾಗದಲ್ಲಿ ಅಲ್ಲಿರುವ ಪ್ರಾಣಿ ಪಕ್ಷಿ ಗಿಡ ಮರಗಳಿಗೂ ತೊಂದರೆಯಾಗದಂತೆ ಅವರು ತಪಸ್ಸು ಮಾಡುವ ಉದ್ದೇಶ ಸ್ಪಷ್ಟ ಯಾರಿಗೂ ತೊಂದರೆ ಕೊಡುವುದರಿಂದ ದೈವಾರಾಧನೆ ಸಾಧ್ಯವಾಗುವುದಿಲ್ಲ. ಯಾರಿಗೋ ತೊಂದರೆ ಕೊಟ್ಟು ಅವನ ಸಂಪತ್ತನ್ನು ಸೂರೆ ಮಾಡಿ ನಾವು ದೇವರನ್ನು ಪೂಜಿಸುತ್ತೇವೆ ಎಂದರೆ ಅದು ಮೌಢ್ಯದ ಭಕ್ತಿಯಾಗುತ್ತದೆ. ಸರ್ವೇಷಾಮ ಅವಿರೋಧೇನ ಎಂದು ಸಂಕಲ್ಪ ಮಾಡುವಾಗ ಪ್ರತಿಯೊಬ್ಬರ ಕ್ಷೇಮ ಸಮ್ಮತಿ ಅದಕ್ಕೆ ಸಂಪೂರ್ಣ ವಿನಿಯೋಗವಾಗಬೇಕು. ಅದಿಲ್ಲವಾದರೆ ಅದು ದೈವಾರಾಧನೆಯಾಗುವುದಿಲ್ಲ. 

ನಮ್ಮ ಮನಸ್ಸಿನ ಅಹಂಕಾರಗಳ ವಿಕಾರವನ್ನು ನಿಯಂತ್ರಿಸುವಾಗ  ಪರಿಪೂರ್ಣ ಪರಮಾತ್ಮ ಸ್ವರೂಪ ಅರಿವಿಗೆ ಬರುತ್ತದೆ. ಹಾಗಾಗಿ ಯಾರೋ ಒಬ್ಬರು ಗಣೇಶ ಕಾಲ್ಪನಿಕ ಎಂದು ಹೇಳುವಾಗ ಪರಮಾತ್ಮ ಸ್ವರೂಪ ಅರಿವಿದ್ದವನಿಗೆ ಏನೂ ಅನಿಸುವುದಿಲ್ಲ. ಯಾಕೆಂದರೆ ಅವನ ಮನಸ್ಸಿನಲ್ಲಿ ಗಣೇಶ ಎಂಬುದು ಕೇವಲ ಹೆಸರು ಮಾತ್ರ ಅದರಿಂದ ಆಚೆಗೆ ಪರಮಾತ್ಮ ಸ್ವರೂಪವಿದೆ. ಆತನಲ್ಲಿದ್ದ ಭಕ್ತಿ ಅದನ್ನು ತೋರಿಸುತ್ತಾ ಇರುತ್ತದೆ.  ದೇವರು ಪ್ರಸನ್ನನಾಗುವುದು, ಅಥವಾ ದೇವರು ದೇವರಾಗಿ ಉಳಿಯುವುದು ಭಕ್ತಿ  ಇದ್ದರೆ ಮಾತ್ರ. ಹಾಗಾಗಿ ಇಲ್ಲಿ ಎಲ್ಲದಕ್ಕೂ ಮೂಲವಾಗುವುದು ದೇವರನ್ನು ಏನು ಕರೆಯುವುದು ಎನ್ನುವುದಕ್ಕಿಂತಲೂ ಭಕ್ತಿಯೇ ಮುಖ್ಯವಾಗುತ್ತದೆ. ಭಕ್ತಿ ಇಲ್ಲದೇ ಇದ್ದರೆ ಉಳಿದವುಗಳಿಗೆ ಯಾವ ಪ್ರಾಶಸ್ತ್ಯವೂ ಇರುವುದಿಲ್ಲ. ಪುರಾಣದ ಬಗ್ಗೆ ಅರಿವಿಲ್ಲದವನಿಗೆ ಪುರಾಣದ ವ್ಯಕ್ತಿ ಪಾತ್ರಗಳು ಕೇವಲ ಹೆಸರಿಗಷ್ಟೇ ಸೀಮಿತವಾಗುತ್ತದೆ. ಹೆಸರು ಎಂಬುದು ಭಕ್ತಿಯ ಮುಂದು ಗೌಣವಾಗುತ್ತದೆ. 

ಗಣೇಶೋತ್ಸವವನ್ನು ಸಂಸ್ಕೃತಿಗೆ ತಳುಕು ಹಾಕಲಾಗುತ್ತದೆ. ಆದರೆ ಗಣೇಶೋತ್ಸವ ಹುಟ್ಟಿಕೊಂಡಿರುವುದು ಸಂಸ್ಕೃತಿಯಿಂದಲೇ ಹೊರತು ಅದುವೇ ಸಂಸ್ಕೃತಿಯಾಗುವುದಕ್ಕೆ ಸಾಧ್ಯವಿಲ್ಲ. ಅದಲ್ಲದೇ ಇದ್ದ ಸಂಸ್ಕೃತಿಗಳು ಬೇಕಾದಷ್ಟು ಇವೆ ಅದು ಎಷ್ಟು ಗೌರವಿಸಲ್ಪಟ್ಟಿದೆ ಎಂಬುದು ಮುಖ್ಯವಾಗುತ್ತದೆ. ಅದರಂತೆ ದೀಪಾವಳಿಗೆ ಪಟಾಕಿಯ ಆವಶ್ಯಕತೆ ಎಷ್ಟು ಎಂಬುದು ಕೂಡ ಪ್ರಶ್ನೆಯಾಗುತ್ತದೆ. ಅದನ್ನು ಬೇಡ ಎಂದರೆ ಸಂಸ್ಕೃತಿಗೆ ವಿರೋಧವಾಗುತ್ತದೆ ಎಂಬುದು ಸರಿಯಲ್ಲ. ದೀಪಾವಳಿಯಲ್ಲೇ ಇರುವ ಸಂಸ್ಕೃತಿ ನಮಗೆ ಬೇಡವಾಗಿ ಕೇವಲ ಪಟಾಕಿಯಷ್ಟೇ ದೀಪಾವಳಿಯಾದರೆ ಅದು ಸಂಸ್ಕೃತಿ ಹೇಗಾಗುತ್ತದೆ?  ನಮ್ಮ ರಸ್ತೆಯಲ್ಲಿ ಸುಮಾರು ಐವತ್ತು ಮನೆಗಳಿವೆ. ಅದರಲ್ಲಿ ಹೆಚ್ಚಿನ ಎಲ್ಲ ಮನೆಗಳು ಪಟಾಕಿ ಉರಿಸಿದರೆ, ಮನೆ ಎದುರು ದೀಪ ಹಚ್ಚಿಡುವ ಮನೆಗಳು ಒಂದೋ ಎರಡೋ  ಮನೆಗಳ ಮುಂದೆ ದೀಪ ಹಚ್ಚಿಡುತ್ತಾರೆ. ದೀಪಾವಳಿಯಲ್ಲಿ ಮುಖ್ಯವಾಗಿ ಹಚ್ಚಿಡಬೇಕಾದ ದೀಪಗಳು ಬೇಡ. ಪರಮಾತ್ಮನ ಭಜನೆ ಸ್ಮರಣೆಗಳು ಬೇಡ. ಇವುಗಳೆಲ್ಲ ಸಂಸ್ಕೃತಿಯ ಅಂಗಗಳು. ಅದು ಬೇಡದೆ ಕೇವಲ ಪಟಾಕಿ ಬೇಕು ಎನ್ನುವಾಗ ಅದರಿಂದಾಗುವ ದುಷ್ಪರಿಣಾಮದ ಬಗ್ಗೆ ಯೋಚಿಸುವುದಿಲ್ಲ. ಪಟಾಕಿ ಬೇಡವೇ ಬೇಡ ಎಂದುಕೊಂಡು ಮನೆಯೊಳಗೆ ಕುಳಿತ ಅಮಾಯಕನ ಕಣ್ಣು ತೆಗೆದ ಪಟಾಕಿ ಬೇಕು ಎಂದರೆ ಶೋಚನೀಯ ಎನ್ನಬೇಕು. ಪಟಾಕಿಯ ಬಗ್ಗೆ ಪುಂಗಿ ಊದುವಾಗ ಕಣ್ಣು ಕಾಣುವುದಿದ್ದರೆ ಒಂದು ಸಲ ಕಣ್ಣಿನ ಆಸ್ಪತ್ರೆಗಳಿಗೆ ಭೇಟಿ ಕೊಡಿ. ಪಟಾಕಿಯಿಂದ ಕಣ್ಣು ಕಳೆದ ಮನೆಯಯವರನ್ನು ನೋಡಬೇಕು.  ಗಣೇಶೋತ್ಸವದಲ್ಲು ಹೀಗೆ ಬೇಡದೇ ಇರುವ ಅಂಶಗಳು ಸಾಕಷ್ಟು ಇವೆ. ಹಣ ಸಂಗ್ರಹಿಸುವಾಗ ದರೋಡೆ ಮಾಡಿದಂತೆ ಕಿತ್ತುಕೊಳ್ಳುವುದನ್ನೂ ಕಾಣಬಹುದು. ಇನ್ನು ಅಲ್ಲಿ ಉತ್ಸವದ ಹೆಸರಲ್ಲಿ ಆಗುವ ಅಪಸವ್ಯಗಳನ್ನು ನೋಡುತ್ತಾ ಹೋದರೆ ಅದು ಬೇಡವೇ ಬೇಡ ಎಂಬಂತಹ ಸನ್ನಿವೇಶವನ್ನು ಕಾಣಬಹುದು. ದೇವರ ಯಾವುದೇ ಕ್ರಿಯೆಗಳು ಯಾರಿಗೂ ತೊಂದರೆ ಕೊಡದೇ ಆಚರಿಸಲ್ಪಡಬೇಕು. ಹಾಗಿದ್ದರೆ ಮಾತ್ರ ಅದು ದೇವರ ಪೂಜೆಯಾಗುತ್ತದೆ.  

ನಮ್ಮ ರಸ್ತೆಯಲ್ಲಿ ಈಬಾರಿ ಮೂರು ಸಲ ಗಣೇಶ ಇಟ್ಟು ಐದಾರು ದಿನ ಪೂಜೆ ಮಾಡಿದ್ದಾರೆ. ಇನ್ನು ಪೂಜೆಯ ಪವಿತ್ರತೆ ನೋಡಿದರೆ ಗಣೇಶ ಇಷ್ಟು ಅಗ್ಗವಾಗಿ ಹೋದನೇ ಎಂದನಿಸುತ್ತದೆ. ನಮ್ಮದು ಒಂದು ಕಡೆ ಮಾತ್ರ ತೆರೆದುಕೊಂಡ ಏಕ ಮುಖ ರಸ್ತೆ. ನಡುವಿನಲ್ಲಿ ಚಪ್ಪರ ಹಾಕಿ ರಸ್ತೆ ತಡೆ ಮಾಡಿ ಪೂಜೆ ಮಾಡುವಾಗ ಒಂದು ಬದಿಯ ಒಂದಷ್ಟು ಮನೆಮಂದಿಗಳು ಪಡುವ ಕಷ್ಟ ಬೇರೆಯೇ ಆಗಿರುತ್ತದೆ. ಮನೆಯ ಯಾರೋ ಒಬ್ಬನಿಗೆ ಹೃದಯಾ ಘಾತವೋ ಮತ್ತೊಂದೋ ಆಗಿ ತುರ್ತು ಚಿಕಿತ್ಸೆ ಬೇಕು ಎನ್ನುವಾಗ ಮನೆ ಬಾಗಿಲಿಗೆ ವಾಹನವೇ ಬಾರದಂತಹ ಸ್ಥಿತಿ ಬಂದರೆ ಗಣೇಶನೇ ಕಾಪಾಡುತ್ತಾನೆ ಎಂದು ಕುಳಿತರೆ ಅದು ಮೌಢ್ಯವಾಗುತ್ತದೆ. 

    ಹಲವು ಕಡೆಯಲ್ಲಿ ಗಣೇಶೋತ್ಸವ ಮಾಡಿ ಗಣೇಶನ ಮೌಲ್ಯವನ್ನು ನಾವು ಕಳೆಯುತ್ತಿದ್ದೇವೆ ಎಂದನಿಸುತ್ತದೆ. ಭಕ್ತಿ ಇದ್ದರೆ ಮಾತ್ರ ಸಾಲದು ಭಕ್ತಿಯ ಸ್ವರೂಪವೂ ಅತೀ ಮುಖ್ಯ.  ಗರ್ಭದ ಗುಡಿಯ ಒಳಗೆ ಸರ್ಪ ಬಂದು ಕುಳಿತರೆ ಜೀವ ಭಯವೇ ಪ್ರಧಾನವಾಗುತ್ತದೆ. ಅಲ್ಲಿ ಸಂಸ್ಕೃತಿಗೆ ಯಾವ ಬೆಲೆಯೂ ಇರುವುದಿಲ್ಲ. ಸಂಸ್ಕೃತಿ ಎಂಬುದು ಉತ್ತಮ ಜೀವನವನ್ನು ಬಿಂಬಿಸುತ್ತದೆ. ಸತ್ಯ ಪ್ರಾಮಾಣಿಕತೆ ಮತ್ತು ಪಾವಿತ್ರ್ಯತೆ ಇದು ಇಲ್ಲದೇ ಇದ್ದರೆ ಯಾವ ಸಂಸ್ಕೃತಿಯೂ ಗೌರವಿಸಲ್ಪಡುವುದಿಲ್ಲ.

Monday, November 6, 2023

ಹೊಟ್ಟೆ ತುಂಬಿದರೂ ಇಂಗದ ಹಸಿವು

  ಪ್ರತೀ ಸಲ ನನಗೆ ಊಟ ಮಾಡಿ ಏಳುವಾಗ ಬೇಡವೆಂದರೂ ನಮ್ಮ ನಾರಾಯಣ ಎಂಬ ವೃದ್ದರ ನೆನಪಾಗುತ್ತದೆ.   ಈ ವೃದ್ದ ಹಣ್ಣು ಹಣ್ಣು ಮುದುಕ ಅಲ್ಲದೇ ಇದ್ದರೂ ಒಂದಷ್ಟು  ಪ್ರಾಯ ಸಂದು ಹೋಗಿತ್ತು.  ಅವರ ಊಟ ನನಗೆ ಹಲವಾರು ಅರ್ಥಗರ್ಭಿತ ವಿಷಯಗಳು ಅಡಕವಾಗಿದ್ದಂತೆ ಭಾಸವಾಗುತ್ತದೆ. ಇಂದು ಈ ಊಟವೆಂಬ  ಕ್ರಿಯೆ ಅದರ ಉದ್ದೇಶ ಕೇವಲ ಹಸಿವನ್ನು ನೀಗಿಸುವುದಕ್ಕೆ ಎಂದು ಅನಿಸುವುದಿಲ್ಲ. 


ಹಿಂದೆ ಮಂಗಳೂರಲ್ಲಿರುವಾಗ ಈ ವಯೋ ವೃದ್ಧರು ಊಟಕ್ಕೆ ಕುಳಿತರೆ ಅವರ ತನ್ಮಯತೆ ನಮಗೆ ಅಚ್ಚರಿಯನ್ನು ತರುತ್ತಿತ್ತು. ಆ ತನ್ಮಯತೆ  ಊಟದ ಮೇಲಿನ ಅತ್ಯಾಗ್ರಹವಾಗಿರಲಿಲ್ಲ.  ಬದಲಿಗೆ ಹಸಿವೆಯನ್ನು ತಣಿಸುವ ಒಂದು ಪವಿತ್ರ ಕಾರ್ಯವಾಗಿತ್ತು. ನಾರಾಯಣ ಕೂದಲು ನೆರೆಗಟ್ಟಿದ ಕೃಶ ಶರೀರದ ವ್ಯಕ್ತಿಯಾಗಿದ್ದರು. ಅವರು ನಮ್ಮಲ್ಲಿ ಅನಧಿಕೃತವಾಗಿ ಕೆಲಸಕ್ಕಿದ್ದರು. ಅವರು ಇದ್ದಾರೆ ಎಂದರೆ ನಮಗೆ ಕೆಲವೆಲ್ಲ ಕೆಲಸದಿಂದ ಮುಕ್ತಿಯಾಗುತ್ತಿತ್ತು. ಅದು ಯಾವ ಕೆಲಸವಾದರೂ ಸಮಯದ ಮಿತಿ ಇಲ್ಲದೆ ಮಾಡುತ್ತಿದ್ದರು. ನೀಳಕಾಯದ ವ್ಯಕ್ತಿಯಾಗಿದ್ದರು. ಅವರಿಗೆ ಕೌಟುಂಬಿಕವಾಗಿ ಮಗಳು ಮಗ ಸೊಸೆ ಎಲ್ಲರೂ ಅನುಕೂಲ ಸ್ಥಿತಿಯಲ್ಲಿದ್ದರೂ ಅವರು ನಮ್ಮ ಮನೆಯಲ್ಲಿ ಕೆಲಸಕ್ಕಿದ್ದರು. ಕಾರಣ ಸ್ವಾಭಿಮಾನ ಒಂದೆಡೆಯಾದರೆ ಕೌಟುಂಬಿಕ ಅಸಮಾಧಾನ ಇನ್ನೊಂದು. ಒಂದು ರೀತಿಯಲ್ಲಿ ವಿರಕ್ತಿಯಾಗಿ ಸನ್ಯಾಸಿಯಂತೇ ಬದುಕುತ್ತಿದ್ದರು. ನಮ್ಮ ಮನೆಯಲ್ಲಿ ಅದೂ ಇದೂ ಚಾಕರಿ ಮಾಡುತ್ತಾ ತನ್ನ ಹಸಿವನ್ನು ನೀಗುವ ದುಡಿಮೆ ಅವರದ್ದು. ಹಾಗೆ ನೋಡಿದರೆ ಒಂದು ಕಾಲದಲ್ಲಿ ಬಹಳ ಅನುಕೂಲವಂತರಾಗಿ ತುಂಬು ಕುಟುಂಬದೊಂದಿಗೆ ಇದ್ದರು.  ಅದು ಎಪ್ಪತ್ತರ ದಶಕ,  ಮಂಗಳೂರಿನ ರಥಬೀದಿ  (ಕಾರ್ ಸ್ಟ್ರೀಟ್) ಯಲ್ಲಿ  ಸ್ವಂತವಾದ ಒಂದು ಉದ್ಯಮದಲ್ಲಿ  ಚಕ್ಕುಲಿ ಮುಂತಾದ ತಿಂಡಿ ವ್ಯಾಪಾರವನ್ನು ಮಾಡುತ್ತಿದ್ದರು. ನಮ್ಮ ಮಾವಂದಿರು ಅವರ ಕೆಳಗೆ ಕೆಲಸಕ್ಕಿದ್ದರು. ಅದೇನು ಸಂಭವಿಸಿತೋ ಸರಿಯಾಗಿ ಗೊತ್ತಿಲ್ಲ , ನಂತರ ಎಲ್ಲವನ್ನು ಕಳೆದುಕೊಂಡ ಸನ್ಯಾಸ ಸ್ಥಿತಿಗೆ ತಲುಪಿದರು. ಅತ್ತ ಮನೆಯವರಿಂದ ದೂರಾಗಿ ಒಂದು ರೀತಿಯ ಅನಾಥತ್ವ.

ನಾರಾಯಣ ಅವರ ಮತ್ತೊಂದು ಗುಣವೆಂದರೆ ಎಲ್ಲೂ ಶಾಶ್ವತವಾಗಿ ನಿಲ್ಲುವ ವ್ಯಕ್ತಿಯಲ್ಲ. ಸದಾ ತಿರುಗಾಡುತ್ತಾ ಇರುವವರು. ಅದು ಯಾರದೋ ಮನೆಗಲ್ಲ, ಬದಲಿಗೆ ಪ್ರಸಿದ್ದ ತೀರ್ಥ ಕ್ಷೇತ್ರ ಪರ್ಯಟನೆ. ಭಾರತದಲ್ಲಿ ಅವರು ಹೋಗದ ಪ್ರಸಿದ್ಧ ಕ್ಷೇತ್ರಗಳೇ ಇಲ್ಲ . ಒಂದು ಜೋಳಿಗೆಯಂತಹ ಚೀಲ ಅದರಲ್ಲಿ ಒಂದೆರಡು ಅತ್ಯಾವಶ್ಯ ಪಂಚೆ ಅಂಗಿ  ಅದೂ ಕಾವಿ ಬಣ್ಣದ ವಸ್ತ್ರ ಇಷ್ಟೇ ಇರುತ್ತಿತ್ತು. ಅಗೀಗ ಬೀಡಿ ಎಳೆಯುವುದು ಬಿಟ್ಟರೆ ಅವರಿಗೆ ಬೇರೆ ದುಶ್ಚಟಗಳಿರಲಿಲ್ಲ. ಬಹುಶಃ ಕೈಯಲ್ಲಿ ಕಾಸಿಲ್ಲದೆಯೂ ರೈಲಿನ ಸಾಮಾನ್ಯ ಭೋಗಿಯ ಪ್ರಯಾಣ ಮಾಡುತ್ತಿದ್ದರು ಎಂದು ನನಗೆ ಅನುಮಾನ.  ಅತ್ತ ಉತ್ತರ ಭಾರತದ ಬದರಿನಾಥ ಕೇದಾರನಾಥ ಹರಿದ್ವಾರ ವಾರಣಾಸಿ ಗಯಾ ಪ್ರಯಾಗ ಪಂಡರಾಪುರ ರಾಮೆಶ್ವರ ಅಯೋಧ್ಯೆ  ಹೀಗೆ ಸುತ್ತಾಡುತ್ತಿದ್ದ ಪರಮ ದೈವ ಭಕ್ತ. ಸದಾ ಪರಮಾತ್ಮನ ನಾಮ ಸ್ಮರಣೆಯಲ್ಲಿ ತನ್ನ ಹೆಸರನ್ನೆ ಉಚ್ಚರಿಸುತ್ತಿದ್ದರು. ಮುಂಜಾನೆ ನಾಲ್ಕುಗಂಟೆಗೆ ಎಚ್ಚರವಾದರೆ ಇವರು ನಾರಾಯಣ ನಾರಾಯಣ ಹರೇ ರಾಮ ಎನ್ನುವ ನಾಮೋಚ್ಚಾರಣೆ ಕೇಳುತ್ತಿತ್ತು.  ಪಂಡರಾಪುರದ ಪಾಂಡುರಂಗನ ಅನನ್ಯ ಭಕ್ತ. ಸಾಯಂಕಾಲ ಪುರಂದರದಾಸರ ಭಜನೆಯನ್ನು ಹೇಳುವುದಲ್ಲದೆ ವರ್ಷಕ್ಕೆ ಒಂದು  ಬಾರಿಯಾದರೂ ಪಂಡರಾಪುರ ಹೋಗಿ ಬರುತ್ತಿದ್ದರು. ಹಾಗೆ ಹೋಗಿ ಬಂದಾಗ ತಂದ ಪುಂಡರಿಕಾಕ್ಷನ ಶಿಲಾ ವಿಗ್ರಹ ತಂದು ನಮ್ಮ ಮನೆಯಲ್ಲಿಟ್ಟಿದ್ದರು.  ಅಂತಹ ದೈವ ಭಕ್ತನ  ಊಟ ಪ್ರತಿ ಬಾರಿಯೂ ನೆನಪಿಗೆ ಬರುವುದಕ್ಕೆ ಒಂದು ವಿಶೇಷತೆ ಇದೆ. 

ನಾರಾಯಣ ಅಜ್ಜ....ನಾವು ಅವರನ್ನು ಕರೆಯುತ್ತಿದ್ದ ಹೆಸರು, ಅವರು ಯಾವ ಜಾತಿಯೋ ಗೊತ್ತಿಲ್ಲ. ಅವರು ನಮ್ಮ ಮನೆಯ ಜಗಲಿಯ ಒಂದು ಮೂಲೆಯಲ್ಲಿ ಊಟಕ್ಕೆ ಕುಳಿತುಕೊಳ್ಳುತ್ತಿದ್ದರು.  ಅವರ ತನ್ಮಯತೆಯನ್ನು ನಾನು ಈಗ ನೆನಪಿಸಿಕೊಳ್ಳುತ್ತೇನೆ. ತಿನ್ನುವ ಪ್ರತಿಯೊಂದು ತುತ್ತೂ ಅವರಿಗೆ ಪರಮಾತ್ಮನ ಪ್ರಸಾದದಂತೆ ಭಾಸವಾಗುತ್ತಿತ್ತು. ಆ ಭಕ್ತಿ ಅವರ ಕಣ್ಣಿನ ನೋಟದಲ್ಲಿ ಮುಖದ ಭಾವನೆಯಲ್ಲಿ ವ್ಯಕ್ತವಾಗುತ್ತಿತ್ತು. ಊಟದ ಮೊದಲು ಕಣ್ಣು ಮುಚ್ಚಿ ದೇವರನ್ನು ಪ್ರಾರ್ಥಿಸುತ್ತಿದ್ದರು. ಆನಂತರ ಒಂದು ತುತ್ತು ಅಂಗಳದಲ್ಲಿ ಕಾಗೆಗೆ ಇಡುತ್ತಿದ್ದರು. ಆನಂತರ ಏನು ಬಳಸಿದರೂ ಅದನ್ನು ಹಸಿವಾಗಿ ಊಟಮಾಡುತ್ತಿದ್ದರು. ಇಷ್ಟೇ ಅದರೆ ಅದರಲ್ಲಿ ವಿಚಿತ್ರವಿಲ್ಲ, ಊಟದ ಕೊನೆಯಲ್ಲಿ ತಟ್ಟೆಗೆ ಒಂದಷ್ಟು ನೀರನ್ನು ಸುರಿದು ಆ ತಟ್ಟೆಯನ್ನುಚೆನ್ನಾಗಿ ತೊಳೆದು ಅದನ್ನು ಕುಡಿದು ಬಿಡುತ್ತಿದ್ದರು. ಆಗ ನಮಗೆ ಇದೊಂದು ಅತಿಯಾಶೆಯಂತೆ ಹಾಸ್ಯವಾಗಿ ಕಂಡಿತ್ತು.ಆದರೆ ಈಗ ಅದರ ಮೌಲ್ಯ ಅನುಭವಕ್ಕೆ ಬರುತ್ತದೆ.  ಒಂದಿಷ್ಟನ್ನೂ ವ್ಯರ್ಥ ಮಾಡದ  ಆಹಾರದ ಮೇಲಿನ ಅವರ ಭಕ್ತಿ ನಿಜಕ್ಕೂ ಶ್ರೇಷ್ಠ. 

ಊಟ ಎಂದರೆ ಈ ವಯೋವೃದ್ಧನ ನೆನಪಾಗುವುದು ಇದಕ್ಕೆ. ನಾವು ಕೊನೆಯಲ್ಲಿ ಎಂಜಲು  ಮಾಡಿ ಎಸೆಯುವುದನ್ನು ಅವರು ತನ್ಮಯತೆಯಲ್ಲಿ ಸೇವಿಸುತ್ತಿದ್ದರು. 

ಮಧ್ಯಾಹ್ನ ದೇವಸ್ಥಾನಕ್ಕೆ ಹೋದರೆ  ಹಲವು ಸಲ ದರ್ಶನಕ್ಕಿರುವ ಮಹತ್ವಕ್ಕಿಂತಲೂ ಭೋಜನ ಪ್ರಸಾದಕ್ಕೆ ಆದ್ಯತೆ ನಮಗರಿವಿಲ್ಲದೇ ಒದಗಿಬರುತ್ತದೆ. ಯಾವಾಗ ದರ್ಶನ ಆಗಿಬಿಡುತ್ತದೋ, ಯಾವಾಗ ಭೋಜನ ಶಾಲೆಗೆ ಹೋಗಿಬಿಡುತ್ತೇವೆ ಎಂಬ ತವಕ ಉಂಟಾಗುತ್ತದೆ. ಭೋಜನ ಕೇವಲ ದೇವಸ್ಥಾನದಲ್ಲಿ ಮಾತ್ರ ಆದ್ಯತೆಯನ್ನು ಕಾಣುವುದಲ್ಲ....ಅದು ಎಲ್ಲ ಸಮಾರಂಭಗಳಲ್ಲೂ ಅತಿಥಿ ಸತ್ಕಾರದ ಬಹಳ ಮುಖ್ಯ ಅಂಗ. ಭೋಜನ ಸತ್ಕಾರ ಅತ್ಯಂತ ಗೌರವಯುತ ಸತ್ಕಾರ. ಯಾವ ಸಮಾರಂಭದಲ್ಲೂ ಊಟಕ್ಕೆ ಕೊಡುವ ಪ್ರಾಮುಖ್ಯತೆ ಹೆಚ್ಚು. ಊಟದ ಹೊತ್ತು ಸನಿಹವಾಗುವಾಗ ಅವಸರ ಅಸಹನೆ ತನ್ನಿಂತಾನೆ ಹುಟ್ಟಿಕೊಳ್ಳುತ್ತದೆ.  

ಇತ್ತೀಚೆಗೆ  ಕ್ಷೇತ್ರವೊಂದಕ್ಕೆ ಹೋಗಿದ್ದೆ. ಮಧ್ಯಾಹ್ನ ಊಟದ ಹೊತ್ತು. ಊಟಕ್ಕೆ ಕುಳಿತಾಗ ನನ್ನೆದುರು ಪುರೋಹಿತರೊಬ್ಬರು ಕುಳಿತಿದ್ದರು. ಅವರ ಉಡುಗೆ ತೊಡುಗೆ ನೋಡುವಾಗ ಹಾಗೇ ಅನಿಸಿತ್ತು.  ಮೊದಲಿನಿಂದಲೂ ನಾನು ಅವರನ್ನು ಗಮನಿಸುತ್ತಿದ್ದೆ. ದೇವರ ದರ್ಶನದಿಂದ ತೊಡಗಿ ಅವರ ಅವಸರ ಪ್ರವೃತ್ತಿ. ಊಟಕ್ಕೆ ಕುಳಿತಾಗಲೂ ಮುಂದುವರೆದಿತ್ತು. ಕೊನೆಗೆ ಬಂದ ಅನ್ನಾಹಾರವನ್ನು ಅವಸರದಲ್ಲೇ  ಊಟ ಮಾಡಿದರು.  ಊಟದ ನಡುವೆ ಸಾಂಬಾರ್ ಬಂತು. ಬಡಿಸುವವರು ಅವಸರವಸರದಿಂದ ಬಡಿಸಿ ಮುಂದೆ ಹೋದರು. ಇವರು ಮುಂದೆ ಹೋದ ಅವರನ್ನು ಹಿಂದೆ ಕರೆದು ಸಾಂಬಾರ್ ನ ಹೋಳು ಬಡಿಸುವಂತೆ ಬೇಡಿ ಹಾಕಿಸಿಕೊಂಡರು. ಆದರೆ ಆರಂಭದಲ್ಲಿ ಇದ್ದ ಆತ್ಯಾಗ್ರಹ ಕೊನೆಯಲ್ಲಿ ಇರಲಿಲ್ಲ. ಬಡಿಸಿದ ಅಷ್ಟೂ ಹೋಳುಗಳು ಮಾತ್ರವಲ್ಲದೆ ಒಂದಷ್ಟು ಅನ್ನ ಪಲ್ಯ ಪಾಯಸ ಬಿಟ್ಟು  ಊಟಮುಗಿಸಿ ಎದ್ದರು. ಅವರ ವರ್ತನೆ ಬಹಳ ಅಸಹನೆಯನ್ನು ಉಂಟು ಮಾಡಿತು. ನಾನೆಂದೆ ಏನು ಸ್ವಾಮಿ ಕೇಳಿ ಹಾಕಿದ್ದನ್ನೂ ಬಿಟ್ಟು ಎದ್ದಿರಲ್ಲ. ಅವರು ಕೇವಲ ನಕ್ಕರು.  ಇಂತಹ ವ್ಯಕ್ತಿಗಳಿಗೆ ಏನು ಹೇಳಬೇಕು. ನಾನು ಅಷ್ಟು ಕೇಳಿದ್ದೇ ಹೆಚ್ಚು ಅನಿಸಿತು.  ವಯಸ್ಸಾಗಿ ಹೋದರೂ ತಮ್ಮ ತಮ್ಮ ಹೊಟ್ಟೆಯ ಸಾಮಾರ್ಥ್ಯ ಅರಿವಾಗುವುದಿಲ್ಲ. ಹಸಿವಿನ ಪ್ರಮಾಣ ಗೊತ್ತಾಗುವುದಿಲ್ಲ. ಇವರೆಲ್ಲ ಊಟಕ್ಕೆ ಕುಳಿತರೆ ಸಾಕು ಬೇಕು ಎನ್ನುವುದಕ್ಕೆ ಅರ್ಥವೇ ಇರುವುದಿಲ್ಲ. ಸಾಕು ಎಂದು ಹೇಳುವುದಕ್ಕು ಬೇಕು ಎಂದು ಬೇಡುವುದಕ್ಕೂ ಅರ್ಹತೆಯೇ ಇಲ್ಲ. 

ಸಾಮಾನ್ಯವಾಗಿ ಸಮಾರಂಭಗಳಲ್ಲಿ  ನಾನು ಊಟಕ್ಕೆ ಕುಳಿತಾಗ ಗಮನಿಸುತ್ತೇನೆ. ಊಟದ ಆರಂಭದಲ್ಲಿ ಹಲವು ಭಕ್ಷ್ಯ ಆಹಾರಗಳನ್ನು ಬಡಿಸಿ ಎಲೆಯನ್ನು ಅಲಂಕರಿಸುತ್ತಾರೆ. ಎಲೆಯ ಅಲಂಕಾರಕ್ಕೆಂದೇ ಹಲವಾರು ತಿಂಡಿಗಳನ್ನು ಮಾಡುತ್ತಾರೆ. ಊಟದ ಆರಂಭದಲ್ಲಿ ಇವುಗಳಿಗೆಲ್ಲ ಎಷ್ಟು ಆಸಕ್ತಿ ವಹಿಸುತ್ತೇವೋ ಊಟದ ನಂತರ ಇವುಗಳು ಅದಕ್ಕಿಂತ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾಗುತವೆ. ನಾವು ಊಟಮಾಡಿದ ಬಾಳೆ ಎಲೆಯಾದರೂ ನಾವು  ಊಟ ಮಾಡಿ ಕುಳಿತಲ್ಲಿಂದ ಎದ್ದನಂತರ ಅದು ಹೇಸಿಗೆ ಎನಿಸುತ್ತದೆ. ಊಟದ ಆರಂಭದಲ್ಲಿ ಇದ್ದ ಆಗ್ರಹ ಊಟವಾದನಂತರ ಇರುವುದಿಲ್ಲ.  ತಿನ್ನುವ ಆಹಾರದಲ್ಲಿ ನಿರ್ಲಕ್ಷ್ಯ. ಕುಳಿತ ನೂರು ಮಂದಿಯಲ್ಲಿ ಎಲೆಯಲ್ಲಿ ಒಂದಗುಳೂ ಇಲ್ಲದಂತೆ , ಯಾವ ತಿಂಡಿ ಪದಾರ್ಥಗಳನ್ನೂ ಉಳಿಸದೆ ಊಟಮಾಡುವವರು ಕೇವಲ ಐದಾರು ಮಂದಿ. ಪ್ರತಿಯೊಬ್ಬರ ಎಲೆಯಲ್ಲೂ ಒಂದಲ್ಲ ಒಂದು ಆಹಾರ ಉಳಿಸಿ ಏಳುವಾಗ ಹಸಿವು ಮರೆತು ಹೋಗಿರುತ್ತದೆ.  ದಾನೆ ದಾನೆಪೆ ಲಿಖಾಹೈ ಖಾನೆವಾಲಾ ಕಾ ನಾಮ್  ಎಂದು ಹೇಳುತ್ತಾರೆ. ಪ್ರತಿಯೊಂದು ಧಾನ್ಯದಲ್ಲೂ ಭಗವಂತ ತಿನ್ನುವವರ ಹೆಸರನ್ನು ಬರೆದಿರುತ್ತಾನೆ. ಆದರೆ ಭಗವಂತನ ಕಲ್ಪನೆಯನ್ನು ಹುಸಿ ಮಾಡುವ ನಮ್ಮ ಪ್ರವೃತ್ತಿ ಇದೆಯಲ್ಲ,  ಭಗವಂತನ ಮೇಲಿನ ನಂಬಿಕೆಯನ್ನು ಹುಸಿಗೊಳಿಸುತ್ತದೆ. 

ವರ್ಷ ಸಂದು ಇಷ್ಟು ದೊಡ್ಡವರಾಗುತ್ತೇವೆ. ನಮ್ಮ ಹೊಟ್ಟೆಯ ಪ್ರಮಾಣ ನಮಗೆ ಅರಿವಿಲ್ಲ ಎಂದರೆ ವಿಚಿತ್ರಎನಿಸುತ್ತದೆ. ಆಹಾರವಿಲ್ಲದೇ ಸಾಯುವುದಕ್ಕಿಂತಲೂ ತಿಂದು ಸಾಯುವವರು ಹೆಚ್ಚಂತೆ. ನಮ್ಮ ನಡುವೆ ಇಂದು ತಿನ್ನುವುದಕ್ಕೆ ಹಲವು ಅರ್ಥಗಳು ಇರುತ್ತವೆ. ಪ್ರಾಣಿಗಳು ಕೇವಲ ಹಸಿವಿಗಾಗಿ ತಿನ್ನುತ್ತವೆ. ನಮಗದರೆ ಪರಿವೆ ಇಲ್ಲ. ಚಪಲಕ್ಕಾಗಿ ಹೊಟ್ಟೆ ತುಂಬಿದರೂ ಇಳಿಸಿಕೊಳ್ಳುತ್ತೇವೆ. ಕೆಲವೊಮ್ಮೆ ಆಹಾರ ಉಳಿತದೆ ಎಂದು ಕಸದ ಬುಟ್ಟಿಗೆ ಎಸೆಯುವುದನ್ನು ತಿಂದು ತೇಗುತ್ತೇವೆ. ಅರ್ಥಾತ್ ಕಸದ ಬುಟ್ಟಿ ನಮ್ಮ ಹೊಟ್ಟೆ.  ಹಲವು ಸಲ ನಾಗರಿಕ ಜೀವನ ಶೈಲಿಯಲ್ಲಿ ಹಿರಿಮೆಗಾಗಿ ತಿನ್ನುತ್ತೇವೆ. ಯಾರೋ ಒತ್ತಾಯ ಮಾಡಿ ಬಡಿಸಿದರೂ ಎಂದು ಬೇಡದೇ ಇದ್ದರೂ ಯಾರಿಗಾಗಿಯೋ ತಿಂದುಬಿಡುತ್ತೇವೆ. ಯಾರೋ ತಿನ್ನಬೇಕಾದ ಆಹಾರ ಬೇಡದೇ ಇದ್ದರೂ ನಮ್ಮ ಹೊಟ್ಟೆ ಸೇರುತ್ತದೆ. ಭೂಮಿ ಮೇಲೆ ಉಚಿತವಾಗಿ ಗಾಳಿ ಇದೆ. ನಮಗೆ ಎದೆ ತುಂಬ ಉಸಿರಾಡಬೇಕು ಎಂದನಿಸುವುದಿಲ್ಲ. ಆದರೆ ಆಹಾರ ಯಾಕೆ ತಿನ್ನಬೇಕು ಎಂದು ಅರ್ಥವಿಲ್ಲದೆ ತಿಂದು ತೇಗಿಬಿಡುತ್ತೇವೆ. 

ನಾನಂತೂ ಊಟಕ್ಕೆ ಕುಳಿತರೆ ಒಂದಗುಳೂ ಉಳಿಯದೇ ಊಟಮಾಡುತ್ತೇನೆ.  ಊಟದಲ್ಲಿ ಕೈ ನೀರು ತೆಗೆಯುವಾಗ ಚಿತ್ರಾವತಿ ಇಟ್ಟ ಒಂದೆರಡು ಕಾಳು ಬಿಟ್ಟರೆ ನಾನು ಯಾವುದೇ ಆಹಾರವನ್ನು ಉಳಿಸುವುದಿಲ್ಲ. ಎಷ್ಟು ಬೇಕೋ ಅಷ್ಟನ್ನೇ ಹಾಕಿಸಿಕೊಳ್ಳುತ್ತೇನೆ.  ಊಟದಲ್ಲಿ ಒತ್ತಾಯದ ಮೇಲೆ ಒತ್ತಾಯ ಮಾಡಿ ಬಡಿಸುವುದನ್ನು ಕಂಡರೆ ನನಗೆ ಸಿಟ್ಟು ಬರುತ್ತದೆ. ಎಷ್ಟು ಆತ್ಮೀಯರಾದರೂ ನನಗೆ ಅದು ಅಸಹನೆಯನ್ನು ತರುತ್ತದೆ. ನನಗೆ ಬೇಕೋ ಯಾವುದೇ ಸಂಕೋಚವಿಲ್ಲದೆ ಕೇಳಿ ತಿನ್ನುತ್ತೇನೆ. ಆದರೆ ಹೊಟ್ಟೆ ತುಂಬಿದರೂ ಸ್ವಲ್ಪ ಸ್ವಲ್ಪ ಎಂದು ಒತ್ತಾಯ ಮಾಡಿದರೆ ಬಹಳ ಅಸಹನೆಯಾಗುತ್ತದೆ. ಹಲವುಕಡೆ ನಾನು ಎಲೆ ಸ್ವಚ್ಛ ಮಾಡಿ ಏಳುವಾಗ ನನಗೆ ಬಡಿಸಿದ್ದು ಸಾಕಾಗಲಿಲ್ಲವೋ ಏನೋ ಎಂದು ಅನುಮಾನಿಸಿ ಎಲೆ ಖಾಲಿಯಾದ ತಕ್ಷಣ ಒತ್ತಾಯ ಮಾಡಿ ಪುನಃ ಬಡಿಸುವುದಕ್ಕೆ ಬರುತ್ತಾರೆ. ಎಲ್ಲವನ್ನೂ ತಿಂದರೂ ಕಷ್ಟ. ಎಲೆಯಲ್ಲಿ ಒಂದಷ್ಟು ಉಳಿಸಿಯೇ ಹೋದರೆ ಅದು ತೃಪ್ತಿಯ ಸಂಕೇತವಾಗುತ್ತದೆ.  ವಾಸ್ತವದಲ್ಲಿ ಹಾಗಲ್ಲ ಎಲೆ ಸ್ವಚ್ಛ ಮಾಡಿ ಊಟ ಮಾಡಿದರೆ ಅವರು ರುಚಿಯಿಂದಲೂ ಹಸಿವಿನಿಂದಲೂ ತೃಪ್ತರಾಗಿದ್ದಾರೆ ಎಂದರ್ಥ.  ಆಹಾರ ತಿನ್ನಬೇಕು. ಅದು ಆರೋಗ್ಯದ ಸಂಕೇತ. ಆಹಾರ ಸೇವಿಸಲು ಸಾಧ್ಯವಾಗದೇ ಇದ್ದರೆ ಅದು ರೋಗ ಲಕ್ಷಣ. ಹಾಗಿದ್ದು ಬೇಡದೇ ಇರುವುದನ್ನು ತಿನ್ನುವುದು ರೋಗಿಯಾಗುವ ಲಕ್ಷಣ. ಯಾರೇ ಆಗಲಿ ಅತಿಯಾಗಿ ಒತ್ತಾಯ ಮಾಡಿ ಬಡಿಸುವುದು ನನಗೆ ಸರಿಬರುವುದಿಲ್ಲ. ಒಂದು ತಪ್ಪಿದರೆ ಎರಡು ಸಲ ಕೇಳಬಹುದು.   ಆದರೆ ಬೇಡದೇ ಇದ್ದರೂ ಹಿಡಿಯದ ಚೀಲದಲ್ಲಿ ಸಾಮಾನು ತುಂಬಿಸಿದಂತೆ ಆಹಾರ ಇಕ್ಕುವುದು ಭಗವಂತನನ್ನು ಅಗೌರವಿಸಿದಂತೆ. ಅನ್ನ ಎಂದರೆ ಬ್ರಹ್ಮ. ಅದನ್ನುಬೇಡ ಎಂದು ಎಲೆಯಲ್ಲಿ ಬಿಟ್ಟು ಏಳುವುದು ಭಗವಂತನನ್ನು ತಿರಸ್ಕರಿಸಿದಂತೆ. ಊಟದ ಕೊನೆಯಲ್ಲಿ ಶ್ಲೋಕ ಹೇಳಿ ಭಗವಂತನನ್ನು ಸ್ಮರಿಸಿ ಮಾದೇವ ಎನ್ನುವುದಕ್ಕೆ ಅರ್ಥವಿಲ್ಲ. 

ಊಟದಿಂದ ಏಳುವಾಗ ಎಲ್ಲರ ಎಲೆಯನ್ನು ಗಮನಿಸುತ್ತೇನೆ. ಎಲ್ಲವನ್ನು ತಿಂದು ಏಳುವವರು ಬಹಳ ಕಡಿಮೆ. ಊಟಕ್ಕೆ ಕುಳಿತುಕೊಳ್ಳುವಾಗ ಇರುವ ಆಗ್ರಹ ಊಟದ ಕೊನೆಯಲ್ಲಿ ಇರುವುದಿಲ್ಲ. ಯಾರೂ ತಿನ್ನದ ಎಂಜಲನ್ನು ಸೃಷ್ಟಿ ಮಾಡಿ ಆಹಾರದ ಮೌಲ್ಯವನ್ನು ಮರೆತವರನ್ನು ಕಾಣುತ್ತೇನೆ. ಹೊಟ್ಟೆ ತುಂಬಿದರೂ ಇಂಗದ ಹಸಿವನ್ನು ಕಾಣುತ್ತೇನೆ. ಎಲ್ಲೆಂದರಲ್ಲಿ ಚಪಲಕ್ಕೋ ಇನ್ನಾವುದೋ ಕಾರಣಕ್ಕೋ ತಿನ್ನುವವರನ್ನು ಕಾಣುತ್ತೇನೆ.    ಆಗ ನನಗೆ ನಾರಾಯಣ ಎಂಬ ವೃದ್ದನ ನೆನಪಾಗುತ್ತದೆ. ಒಂದಗುಳು ಅನ್ನಕ್ಕೆ ಆ ಮುದುಕ ಕೊಟ್ಟ ಮೌಲ್ಯ ನೆನಪಾಗುತ್ತದೆ. ತಟ್ಟೆ ತೊಳೆದು ಆ ನೀರನ್ನು ಕುಡಿದು ತೃಪ್ತಿಯಿಂದ ತೇಗುವ ಅವರ ಸಂತೃಪ್ತ ಮುಖ ಕಣ್ಣೆದುರು ಬರುತ್ತದೆ. 





Saturday, November 4, 2023

ನಮ್ಮ ಚಿನ್ನು ಇನ್ನಿಲ್ಲ.

         ನಮ್ಮ ಚಿನ್ನು ಇನ್ನಿಲ್ಲ.  ಸುಮಾರು ಹನ್ನೆರಡು ವರ್ಷಗಳ ಹಿಂದೆ ನಮ್ಮ ಮನೆಗೆ ಬಂದ ಪುಟ್ಟ ಅತಿಥಿ.. ಚಿನ್ನು ಎಂಬ ಲಾಬ್ರಡರ್ ಹೆಣ್ಣು ನಾಯಿ. ಆದರೆ ಅದು ಕೇವಲ ನಾಯಿಯಾಗಿ ಅಲ್ಲ ಮನೆಯ ಚಿನ್ನುವಾಗಿ ಬೆಳೆಯಿತು. ಅವಳ ಚಟುವಟಿಕೆಗಳು ನಮ್ಮ ಚಟುವಟಿಕೆಗಳಾಗಿ  ಅವಳು  ನಮ್ಮೊಂದಿಗೆ ಬೆಳೆದು ಬಂದಳು.  ಆ ಚಿನ್ನು ಇನ್ನು ನೆನಪು ಮಾತ್ರ ಎನ್ನುವಾಗ ನಾವು ಗದ್ಗದರಾಗುತ್ತಿದ್ದೇವೆ. ಕಣ್ಣು ತೇವವಾಗುತ್ತದೆ. ಛೇ....ಸಂದು ಹೋಯಿತೇ? ಇನ್ನು ಬರಲಾರದೇ? 

            






    ಚಿನ್ನು  ಪುಟ್ಟ ಲಾಬ್ರಡರ್ ಮರಿಯನ್ನು ವರ್ಷಗಳ ಹಿಂದೆ ಮಗ ತಂದಾಗ ನಾವು ತಂದೆ ತಾಯಿಯರು ಸಾಕಷ್ಟು ಅಸಮಾಧಾನವನ್ನು ವ್ಯಕ್ತಪಡಿಸಿದ್ದೆವು. ಈ ನಗರದ ಸಂದಿಗೊಂದಿಯ ಮೂವತ್ತು ಚದರದಲ್ಲಿ ಅದಕ್ಕೂ ಒಂದು ಎಡೆಬೇಕಲ್ಲ? ಆದರೇನು ಮಗ ನಿಶ್ಚೈಯಿಸಿದ್ದ. ಇದು ತನ್ನೊಂದಿಗೆ ಇರುವುದೆಂದು ಸಾರಿ ಹೇಳಿದ. ನಮ್ಮ ಅಸಮಾಧಾನ ಕೇವಲ ಎರಡು ದಿನಕ್ಕೆ ಸೀಮಿತವಾಯಿತು. ಚಿನ್ನು ಮುದ್ದಾಗಿ ಬೆಳೆಯತೊಡಗಿದಳು. ಮಗನನ್ನು ಪ್ರೀತಿಸುವುದಾದರೆ ಅದನ್ನು ನಾವು ಇಷ್ಟಪಡಲೇ ಬೇಕು. ಮನೆಗೆ ಬಂದ ಸೊಸೆಯನ್ನು ಹೆತ್ತವರು ಅಂಗೀಕರಿಸುವಂತೆ  ಅವಳೊಂದು ಕುಟುಂಬದ ಸದಸ್ಯವಾಗಿ ಬದುಕು ಆರಂಭಿಸಿ ಬಿಟ್ಟಿಳು. ಪ್ರೀತಿ ಎಂಬುದರ ಪ್ರಭಾವ ಹಾಗಿರುತ್ತದೆ. ಆದರೆ ಚಿನ್ನು ಕೇವಲ ಆ ಅನಿವಾರ್ಯತೆಗೆ ಸೀಮಿತವಾಗಿಲ್ಲ. ಅದು ನಮ್ಮ ಮನಸ್ಸನ್ನೂ ಗೆದ್ದು ಬಿಟ್ಟಿತು. ಅದಕ್ಕೆ ಪಾಲಿನಂತೆ ಒಬ್ಬೂಬ್ಬರೂ ಕೈತುತ್ತು ಕೊಡುವುದಕ್ಕಾರಂಭಿಸಿದೆವು ಎನ್ನುವುದಕ್ಕಿಂತ ಅದು ತನ್ನ ಹಕ್ಕನ್ನು ಪ್ರೀತಿಯಿಂದ ಚಲಾಯಿಸತೊಡಗಿತು. ದಿನಾ ವಾಕಿಂಗ್ ಹೋಗುವಾಗ ಸಂಗಾತಿಯಾಯಿತೋ ಇಲ್ಲ ಅದನ್ನು ಕರೆದುಕೊಂಡು ಹೋಗುವುದರಲ್ಲಿ ಸಿಗುವ ಆನಂದವೋ ಅಂತೂ ಮನೆ ಮಂದಿಯ ದಿನಚರಿಯ ಒಂದು ಅವಿಭಾಜ್ಯ  ಅಂಗ ಚಿನ್ನುವಾದಳು.  ಆರಂಭದಲ್ಲಿ ಮನೆಯ ಹೊರಗಿನ ಹಜಾರದಲ್ಲಿಅವಳನ್ನು ಕಟ್ಟಿಹಾಕುತ್ತಿದ್ದರೆ ನಂತರ   ಅದು ಬಂಧನವಾಗಬಹುದು ಎಂದುಕೊಂಡಾಗ ಮನೆಯ ಒಂದು ಮಹಡಿ ಅವಳದ್ದೇ ಸಾಮ್ರಾಜ್ಯವಾಯಿತು. ಸುಸ್ತಾಗಿ ಕುಳಿತಾಗ ಅದು ಬಂದು ಉಪಚರಿಸುವಂತೆ ಮೈ ಮೇಲೆ ಹತ್ತಿ ಮುದ್ದಿಡುವಳು. ಅವಳ ಬೆಚ್ಚಗಿನ ಮೈ....ಚಳಿಗೆ ಬಿಸಿಯನ್ನು ಒದಗಿಸುತ್ತಿತ್ತು. ಸದಾ ಮಗನ ಜತೆಯಲ್ಲಿರುತ್ತಿದ್ದವಳು ಒಂದರ್ಥದಲ್ಲಿ ಅದು ಹೇಗೆ ಪ್ರೀತಿಸಬೇಕು ಎಂಬುದನ್ನು ತೋರಿಸಿಕೊಟ್ಟಿಳು. 

            ಚಿನ್ನು ನಮ್ಮೊಂದಿಗೆ ಈಗ ಇಲ್ಲ ಎಂದರೆ ಅದೊಂದು ಶೂನ್ಯತೆಯ ಅನುಭವ. ಮನೆಯ ಸಂದಿಗೊಂದಿಗಳಲ್ಲಿ ಆಕೆ ಇನ್ನೂ ಮುದುರಿ ಮಲಗಿದಂತೆ ಅನುಭವಾಗುತ್ತದೆ. ಆಕೆಯ ಬಿಸಿಯುಸಿರು ಇನ್ನೂ ಮಾರ್ದನಿಸುತ್ತದೆ. ಆಕೆಯ ಪ್ರೀತಿ ಸಲುಗೆ ಅದೊಂದು ಮರೆಯಲಾಗದ ಬಂಧನವಾಗುತ್ತದೆ. ಆಕೆಯ ಬಾಯಿಯಲ್ಲಿ ಕೈ ಇಟ್ಟರೂ ಸುಮ್ಮನಿರುತ್ತಿದ್ದ ಆಕೆಯ ಪ್ರೀತಿ ಮಮಕಾರ....ನೀ ಎನೂ ಮಾಡು ನಾನು ನಿನ್ನೊಂದಿಗೆ ಇರುತ್ತೇನೆ ಎನ್ನುವ ಅರ್ಪಣಾ ಭಾವ ಎಲ್ಲ ತಿರಸ್ಕಾರವನ್ನು ತಿರಸ್ಕರಿಸಿ ದೂರಮಾಡುವಂತೆ ಪ್ರೇರೆಪಿಸಿಬಿಡುತ್ತಿತ್ತು. ಆಕೆ ಕೈ ಬಿಟ್ಟು ಹೊದಳು ಎಂದರೆ ಹೃದಯದ ಒಂದು ಭಾಗ ಕಳಚಿಕೊಂಡಂತೆ.  ಮರೆಯಲಾಗದ ಈ ನೆನಪುಗಳನ್ನು ಹೇಗೆ ಮರೆಯಲಿ? ಆಕೆ ನಮಗಾಗಿ ಇದ್ದಳೋ ನಾವು ಆಕೆಗಾಗಿ ಇದ್ದೆವೋ ಒಂದೂ ಅರ್ಥವಾಗುವುದಿಲ್ಲ. ಆಕೆಯಿಂದ ಏನು ಪಡೆದಿದ್ದೇವೋ ಅವೆಲ್ಲವೂ ಭಾವನೆಗಳ ವ್ಯಾಪಾರ. ಲಾಭವಿಲ್ಲದ ವ್ಯಾಪಾರ. ಇಲ್ಲಿ ಪ್ರೀತಿ ಭಾವನೆಗಳೇ ಸರಕುಗಳು. ಅದಕ್ಕೆ ಮೌಲ್ಯ ತೂಕ ಯಾವುದು ನಿರ್ಧರಿಸಲಾಗುವುದಿಲ್ಲ. 

            ನನ್ನ ದೊಡ್ಡ ಮಗ ಆಗಿನ್ನು ವ್ಯಾಸಂಗ ಮಾಡುತ್ತಿದ್ದ, ಆತನ ಅತೀವ ಆಸಕ್ತಿಯ ಮುಖಾಂತರ ಈ ಅತಿಥಿ ಮನೆಯ ಸದಸ್ಯನಾಯಿತು. ಅವನೂ ಅಷ್ಟೇ ನಮ್ಮ ಮನೆಯ ಮೂರನೆ ಮಹಡಿಯಲ್ಲಿ ಅವಳಿಗಾಗಿ ಜಾಗವನ್ನು ಮೀಸಲಿರಿಸಿ ಅಲ್ಲಿ ಆತನದ್ದೇ ಸಾಮ್ರಾಜ್ಯ. ಚಿನ್ನುವಿನ ಬೆಳವಣಿಗೆ ಪ್ರತೀ ಹಂತವೂ ಆತನಿಗೆ ಒಂದು ಅಧ್ಯಯನವಾಗಿತ್ತು. ಅದು ಯಾವಾಗ ಎದ್ದು ಬರ್ತದೆ, ಅದು ಹೇಗೆ ನಿದ್ರೆ ಮಾಡುತ್ತದೆ, ಯಾವುದನ್ನು ತಿನ್ನಬೇಕು, ಯಾವುದನ್ನು ತಿನ್ನಬಾರದು, ಅದರ ಬಯಕೆಗಳು ಯಾವಾಗ ಯಾವರೀತಿ ಇರುತ್ತದೆ ಹೀಗೆ  ಅದರ ವರ್ತನೆಯನ್ನೆಲ್ಲಾ ಗೂಗಲ್ ಮಾಡಿ ಅಂತರ್ಜಾಲದಲ್ಲಿ ಜಾಲಾಡಿ ಅದನ್ನು ಅಳವಡಿಸಿಕೊಳ್ಳುತ್ತಿದ್ದ. ಮೊದಲ ದಿನ ಮೂರನೆ ಮಹಡಿಗೆ ಹೋದಾಗ  ಪುಟ್ಟ ಮರಿ ಚಿನ್ನು ಎಲ್ಲಾ ಕಡೆ ಉಚ್ಚೆ ಹೊಯ್ದು ಎಲ್ಲ ಕಡೆ ಅದರದ್ದೆ ವಾಸನೆ. ಆಗ ನಾವು ಹತಾಶರಾಗಿದ್ದೆವು. ಊರಲ್ಲಿಯಾದರೆ ಇಂತಹ ವಿಷಯಗಳಿಗೆ ಸಾಕಷ್ಟು ಸೌಕರ್ಯ ಇರುತ್ತದೆ. ಆದರೆ ಇಲ್ಲಿ ಮೂವತ್ತು ಚದರದಲ್ಲಿ ಇದನ್ನು ಸುಧಾರಿಸುವುದೆಂತು? ನಮ್ಮಲ್ಲಿ ಹಲವರಿಗಂತು ಚಿನ್ನುವಿನ ಆವಶ್ಯಕತೆ ಇರಲಿಲ್ಲ. ಆದರೆ ಮಗನ ಇರಾದೆ ಬೇರೆಯದೇ ಆಗಿತ್ತು. ಚಿನ್ನು ಅವನ ಕೈಯಲ್ಲಿ ಪಳಗತೊಡಗಿದಳು. ಮುದ್ದಾದ ಆಕೆ ಬುದ್ದಿ ಕಲಿಯತೊಡಗಿದಳು. ಮೊದಲೇ ಲಾಬ್ರಡಾರ್ ತಳಿ ಅದು ಮನೆಯವರಿಗೆ ಬೇಗ ಹೊಂದಿಕೊಳ್ಳುತ್ತದೆ. ಅದರಲ್ಲೂ ಮಕ್ಕಳ ಮನಸ್ಸನ್ನು ಸೆಳೆಯುವುದು ಅದರ ರಕ್ತಗತ ಗುಣ.  ಅದಕ್ಕೆ ನಿಗದಿತ ಜಾಗದಲ್ಲಿ ಮೂತ್ರ ವಿಸರ್ಜನೆ ಮಾಡುವುದಕ್ಕೆ ಕಲಿಸಿದ. ಅಚ್ಚುಕಟ್ಟಾಗಿ ಊಟ ತಿಂಡಿಯನ್ನು ಒದಗಿಸಿದ. ಅದಕ್ಕಾಗಿ ರಾಯಲ್ ಚಿನ್ ಬಿಸ್ಕಟ್ ತರಿಸಿದ. ಹೀಗೆ ಅದರದ್ದೇ ಒಂದಷ್ಟು ವಸ್ತುಗಳು ಮನೆಯ ಅಂಗವಾಗಿ ಹೋದವು. 

            ಮಗನ ಭಾವನೆಯ ಮೌಲ್ಯಗಳನ್ನು ತೋರಿಸಿಕೊಟ್ಟವಳು ಚಿನ್ನು. ಆತನೊಂದಿಗಿನ ಅವಳ ಸಂಭಂಧದ ಆಳ ವಿಸ್ತಾರ ಕಲ್ಪಿಸುವುದಕ್ಕೆ ಸಾಧ್ಯವಿಲ್ಲ. ಮನೆಯ ರಸ್ತೆಯತುದಿಯಲ್ಲಿ ಆತನ ಬೈಕಿನ ಸದ್ದು ಕೇಳಿಸಿದರೆ ಮನೆಯ ಯಾವುದೋ ಮೂಲೆಯಲ್ಲಿದ್ದ ಇವಳ ಕಿವಿ ನಿಗುರಿ ಬಿಡುತ್ತಿತ್ತು. ಒಂದೇ ನೆಗೆತಕ್ಕೆ ಹೊರಬಂದು ಮೂರನೇ ಮಹಡಿಯಿಂದ ಕೆಳಗೆ ನೋಡಿ ಬೊಗಳತೊಡಗುತ್ತಿದ್ದಳು. ಆತ ಬರಬೇಕಾದರೆ ಆತನ ಭುಜದೆತ್ತರಕ್ಕೆ ಹಾರಿ ಆತನ ಮುಖವನ್ನೆಲ್ಲ ಮುದ್ದಿಸಿ ತೇವ ಮಾಡುತ್ತಿದ್ದಳು. ಆತ ಎಸೆದ ಚೆಂಡನ್ನು ಓಡಿ ಹೋಗಿ ಕಚ್ಚಿ ತಂದುಕೊಡುತ್ತಿದ್ದಳು. ಹಿಂದೆ ಅಲುಗಾಡುವ ಬಾಲ ಎಲ್ಲಿ ಕಳಚಿ ಬೀಳುವುದೋ ಎಂದನಿಸುತ್ತಿತ್ತು. 

                ಪ್ರಾಣಿಗಳಲ್ಲಿ ನಾಯಿ ಎಂಬುದು ಒಂದು ವಿಚಿತ್ರ ಸ್ವಭಾವದ ಪ್ರಾಣಿ. ಬಹುಶಃ ಭಾವನೆಗಳನ್ನು ಇದರಂತೆ ವ್ಯಕ್ತ ಪಡಿಸುವ ಪ್ರಾಣಿ ಬೇರೆ ಇಲ್ಲ. ನೋವು ನಲಿವು ಎಲ್ಲವನ್ನೂ ಬಹಿರಂಗ ಪಡಿಸುವ ನಾಯಿಗೆ ಮಾತು ಒಂದು ಬರುವುದಿಲ್ಲ....ಆದರೆ ಅದು ವ್ಯಕ್ತ ಪಡಿಸುವ ಭಾಷೆಗೆ ಮಾತಿನ ಅಗತ್ಯವೇ ಇರುವುದಿಲ್ಲ. ಕಣ್ಣು ಅಗಲಿಸಿ ಕಿವಿನಿಮಿರಿಸಿ ಬೇಕಾದಲ್ಲಿ ಬಾಲ ಅಲ್ಲಡಿಸಿ ಶರೀರವನ್ನು ಕುಣಿಸಿ...ಯಾವ ನಟ ಸಾರ್ವಭೌಮನಿಗೂ ಕಡಿಮೆ ಇಲ್ಲ ಜನ್ಮ ಜಾತ ಪ್ರತಿಭೆ. ಸ್ವಭಾವತಃ ನಾಯಿ ಅತ್ಯಂತ ಹೆದರಿಕೆಯ ಸ್ವಭಾವದ ಪ್ರಾಣಿ. ಪ್ರತೀಕ್ಷಣವೂ ಅದಕ್ಕೆ ಏನೋ ಆಗಿಬಿಡುತ್ತದೆ ಎಂಬ ಆತಂಕವಿರುತ್ತದೆ. ಹಾಗಾಗಿ ಹೊಸದು ಕಂಡಕೂಡಲೇ ಅದು ಜಾಗೃತವಾಗುತ್ತದೆ. ಬೊಗಳುತ್ತದೆ. ಆದರೆ ಅದು ತನ್ನದೂ ಎಂಬ ಭಾವನೆ ಬಂತೋ ಅದಕ್ಕಾಗಿ ಪ್ರಾಣ ಕೊಡಲೂ ಹಿಂಜರಿಯುವುದಿಲ್ಲ.  ಈ ಎಲ್ಲ ಸ್ವರೂಪಗಳು ಚಿನ್ನುವಿನಲ್ಲಿತ್ತು. ಈಕೆಯ ವಿಚಾರಗಳು ಹೇಳುವುದಕ್ಕೆ ತೊಡಗಿದರೆ ಸ್ವರ ಕಂಪಿಸುತ್ತದೆ. ಬೆರೆಯುವುದಕ್ಕೆ ತೊಡಗಿದರೆ ಕೈ ನಡುಗುತ್ತದೆ. ಭಾವನೆಗಳ ಮಹಾಪೂರ ಪುಟ್ಟ ಹೃದಯದಲ್ಲಿ ನಿಲ್ಲಲಾಗದೆ ಹೊರ ಚಿಮ್ಮುತ್ತದೆ. ಅದರಲ್ಲಿನ ಭಾವನೆಗಳನ್ನು ಹೆಕ್ಕಿ ತೆಗೆಯುವುದೇ ಒಂದು ಸಾಹಸ. 

            ವಾರಗಳ ಹಿಂದೆ ವಯೋ ಸಹಜವಾಗಿ ಆಕೆಯ ದೇಹ ಕೃಶವಾಗತೊಡಗಿದವು. ಮೊದಲಿನಂತೆ ಆಕೆ ಓಡಾಡುವುದನ್ನು ನಿಲ್ಲಿಸಿ ಬಹಳ ಸಮಯಗಳು ಕಳೆಯಿತು. ಹೆಚ್ಚಾಗಿ ಮಲಗಿಕೊಂಡೇ ಇರುತ್ತಿದ್ದಳು. ಮಗ ಬಿಟ್ಟರೆ ಪತ್ನಿ ಆಕೆ ಅತ್ಯಂತ ಹತ್ತಿರದ ಜೀವಗಳು. ಆಕೆಯಂತೂ ಅದರ ಚಾಕರಿಯಲ್ಲಿ ತನ್ನನ್ನೇ ತಾನು ತೇದುಕೊಂಡಳು. ಕೊನೆಯ ಉಸಿರಿನ ತನಕವೂ ಅದನ್ನು ಪ್ರೀತಿಯಿಂದ ಕಾಣಬೇಕು. ಸಾಧ್ಯವಾದಷ್ಟು ಉಪಚರಿಸಬೇಕು ಇದೊಂದೇ ನಿರ್ಧಾರ. ಒಂದು ತುತ್ತು ಆಹಾರ ತಿಂದರೂ ತೊಟ್ಟು ನೀರು ಕುಡಿದರೂ ತನ್ನ ದೇಹಕ್ಕೆ ಸೇರಿಬಿಟ್ಟಿತೋ ಎನ್ನುವ ತೃಪ್ತಿ ಅವಳದು. ದಿನಾ ಆಸ್ಪತ್ರೆಯ ಅಲೆದಾಟದಲ್ಲಿ ಬಸವಳಿದರೂ ಚಿನ್ನುಗಾಗಿ ಎಂಬ ಭಾವನೆ ದೃಢವಾಗಿರುತ್ತಿತ್ತು. ಅಲ್ಲಿ ದಣಿವೆಂಬುದು ಅರಿವಿಗೆ ಬರುತ್ತಿರಲಿಲ್ಲ. ಮೊನ್ನೆ ರಾತ್ರಿ ಹೋದಾಗಲೇ ವೈದ್ಯರು ಒಂದು ರಾತ್ರಿ ನಿಗಾವಹಿಸೋಣ ನಾಳೆ ಬೆಳಗ್ಗೆ ತೀರ್ಮಾನಿಸಿದರಾಯಿತು ಎಂದರು. 

            ನಿನ್ನೆ ವೈದ್ಯರು ಬೆಳಗ್ಗೆಯೇ ಹೇಳಿದ್ದರು ಇನ್ನು ಇದರ ಬಗ್ಗೆ ನಿರೀಕ್ಷೆ ಇಲ್ಲ.  ಯಾಕೆ ಅದಕ್ಕೆ ನರಕ ಯಾತನೆ , ಇಂಜಕ್ಷನ್ ಕೊಟ್ಟು ಮುಗಿಸಿ ಬಿಡೋಣ ಎಂದರು. ನಮಗಂತೂ ಹೃದಯವನ್ನೇ ಚುಚ್ಚಿದ ಅನುಭವ.  ಚುಚ್ಚಿ ಮುಗಿಸುವುದೆಂದರೆ ನಾವು ಚಿನ್ನುವನ್ನು ಬೇಡ ಎಂದಂತೇ ಅಲ್ಲವೇ? ಅದು ಹೇಗೆ ಸಾಧ್ಯ.  

            ಕೊನೆಗೆ ಸಮ್ಮತಿಸಬೇಕು. ಇನ್ನು ಆಕೆಗೆ ನರಕ ಯಾತನೆ ಯಾಕೆ. ಎಲ್ಲರೂ ನೀರು ಕುಡಿಸಿದೆವು. ಎಲ್ಲರೂ ಕೊಟ್ಟ ನೀರನ್ನು ಪ್ರಜ್ಞೆ ಇಲ್ಲದೇ ಇದ್ದರು ಆಕೆ ಕುಡಿದಳು.  ಅದು ವರೆಗೆ ಇದ್ದ ಮಗ ಮನೆಗೆ ಹೋಗಿದ್ದ. ನಾವೆಲ್ಲ ವೈದ್ಯರ ಬರುವುಕೆಯನ್ನು ಕಾಯುತ್ತಿದ್ದೆವು. ಚಿನ್ನು ಪ್ರಜ್ಞಾಹೀನಳಾಗಿ ಕೇವಲ ಏದುಸಿರುಬಿಡುತ್ತಾ ಮಲಗಿದ್ದಳು. ಮೊದಲಾದರೆ ನಾವು ಬಂದಾಗ ಏನಿಲ್ಲ ಎಂದರೂ ಬಾಲ ಅಲ್ಲಾಡಿಸಿಬಿಡುತ್ತಿದ್ದಳು. ಈಗ ಸಂವೇದನೆಯೇ ಇಲ್ಲ. ತಾಸು ಕಳೆದು ಮಗ ಹೆಂಡತಿ ಜತೆಗೆ ಬಂದ. ಆತ ಬಂದಾಗ ಹೊಸತೊಂದು ಚೆಂಡನ್ನು ಕೊನೆಯ ಕೊಡುಗೆಯಾಗಿ ಚಿನ್ನುವಿಗಾಗಿ ತಂದಿದ್ದ.  ಅದನ್ನು ಕೊಟ್ಟು ಮೈತಡವಿದ ಅದೊಮ್ಮೆ ಕಣ್ಣು ಬಿಟ್ಟಳು.  ಮಗನ ಜತೆಗಿನ ಬಾಂಧವ್ಯ ಅದನ್ನು ಎಚ್ಚರಿಸಿತ್ತು. ಆತ ನೀರು ಕುಡಿಸಿದ. ಕುಡಿದಳು. ಹಾಗೆ ಎತ್ತಿದ ಕೊರಳು ಬಾಗಿತು ಒಂದೆರಡು ನಿಡಿದಾದ ಉಸಿರು ಹೊರಹಾಕಿದಳು. ಕಣ್ಣು ಸುತ್ತಲೂ ತಿರುಗಿಸಿ ಕೊನೆಯ ಯಾತ್ರೆಯನ್ನು ಮುಗಿಸಿದಳು.   ಒಂದು ವಾರದ ನರಕ ಯಾತನೆ ಅನುಭವಿಸಿದಳು. ಆಸ್ಪತ್ರೆ ಬೆಡ್ ಮೇಲೆ ತನ್ನ ಉಸಿರನ್ನು ಚೆಲ್ಲಿ ಬಿಟ್ಟು ನಿಶ್ಚಲಳಾದಳು. ತಬ್ಬಿಕೊಂಡಾಗ ಬಿಸಿಯನ್ನು ಉಣಿಸುತ್ತಿದ್ದ ಆ ಮೈ ತಣ್ಣಗಾಯಿತು. ಚಿನ್ನು ಬಾರದ ಲೋಕಕ್ಕೆ ಸರಿದು ಹೋದಳು.  ಇನ್ನು ಚಿನ್ನು ನೆನಪು ಮಾತ್ರ ಎಂದುಕೊಂಡಾಗ ಹೃದಯ ಭಾರವಾಗುತ್ತದೆ. ಕಣ್ಣು ಮಂಜಾಗುತ್ತದೆ. ಆಕೆಯ ಪ್ರೀತಿ ಇನ್ನೆಲ್ಲಿ ಸಿಗಬಹುದು. ನಮಗೆಲ್ಲ ವಿದಾಯ ಹೇಳಿ ಸುಖವಾಗಿರಿ.....ನನ್ನನ್ನು ಅಗಾಗ ನೆನಪಿಸುತ್ತಾ ಇರಿ. ಮರೆಯಬೇಡಿ ಎಂದಂತೆ ಭಾಸವಾಗುತ್ತದೆ. ಆಕೆ ಕೊಟ್ಟ ಪ್ರೀತಿಗೆ ನಾವು ಅಷ್ಟಾದರೂ ಮಾಡಲೇಬೇಕು. ಚಿನ್ನು...ಮತ್ತೊಮ್ಮೆ ಹುಟ್ಟಿ ಬಂದರೆ.......ಈ ಹೃದಯಗಳಲ್ಲಿ ತುಂಬಿಕೊಳ್ಳುವುದಕ್ಕೆ  ಇನ್ನೂ ಜಾಗವಿದೆ. 





Sunday, October 29, 2023

ವೈದಿಕ ಭೋಜನ

  ಕಳೆದ ವಾರ ಜಯನಗರದಿಂದ ಮೆಟ್ರೋದಲ್ಲಿ ಬರುವಾಗ ಬಸವನಗುಡಿಯಿಂದ ಒಬ್ಬರು ವೃದ್ದರು ಹತ್ತಿದವರು ನನ್ನ ಬಳಿಯೇ ಕುಳಿತರು. ನೋಡಿದರೆ ಬ್ರಾಹ್ಮಣ ಎಂಬುದರಲ್ಲಿ ಅನುಮಾನವಿಲ್ಲ. ವೃದ್ಧರಾದರೂ ಶರೀರದಲ್ಲಿ ಬಹಳ ಕಾಠಿಣ್ಯ ವಿತ್ತು. ಒಂದು ರೀತಿಯ ದೃಢತೆ ಇತ್ತು. ಬಿಳಿ ಪಂಚೆ ಒಂದು ಶಲ್ಯ ಮುಸುಕಾದ ಒಂದು ಶರ್ಟು ಕೈಯಲ್ಲಿ ಒಂದು ಚಿಕ್ಕ ಚೀಲ ಇತ್ತು. ಬಳಿಯಲ್ಲಿ ಕುಳಿತ ನನ್ನಲ್ಲಿ ಮಾತನಾಡುವುದಕ್ಕೆ ತೊಡಗಿದರು. ಅದು ಪಿತೃ ಪಕ್ಷ, ಅದೇ ಕಾರ್ಯಕ್ರಮಕ್ಕೆ ಹೋಗಿ ಬರುತ್ತಿದ್ದರು. ಮೊದಲೆಲ್ಲ ಇಂತಹ ಕಾರ್ಯಕ್ರಮಕ್ಕೆ ಹೋದವರು ಒಂದು ರೀತಿಯ ತಾತ್ಸಾರವನ್ನು ಅನುಭವಿಸುವುದನ್ನು ಕಣ್ಣಾರೆ ಕಂಡಿದ್ದೇನೆ. ಮನೆಯ ಕತ್ತಲೆಯಲ್ಲಿ ಊಟ ಮಾಡಿ ಅಲ್ಲಿಂದಲೇ ಎಲ್ಲೋ ಕರಗಿ ಕಣ್ಮರೆಯಾಗುತ್ತಿದ್ದರು. ಒಂದು ರೀತಿಯಲ್ಲಿ ಮುಖ ತೋರಿಸುತ್ತಿರಲಿಲ್ಲ.  ಆದರೆ ಈಗ ಕಾಲ ಬದಲಾಗಿದೆ, ಅಂದರೆ ಗೌರವ ಸಿಗುತ್ತದೆ ಎಂದಲ್ಲ, ಹೀಗೆ ಹೋಗುವವರ ಸಂಖ್ಯೆ ಬಹಳಷ್ಟು ಲುಪ್ತವಾಗಿ ಇಲ್ಲವೇ ಇಲ್ಲ ಎನ್ನುವಂತಹ ಸ್ಥಿತಿ.  ಈಗ ಶಾಸ್ತ್ರಕ್ಕೆ ಏನೋ ಒಂದು ಪರಿಹಾರವನ್ನು ಕಂಡುಕೊಂಡು ಸೀಯಾಳ ಎಲೆ ವಸ್ತ್ರ ಇಟ್ಟು ಬ್ರಾಹ್ಮಣ ಆವಾಹನೆಯಾಗಿಬಿಡುತ್ತದೆ. 

  ನಮ್ಮ ಬಾಲ್ಯದಲ್ಲಿ ಯಾವುದಾದರೇನು ಹೊಟ್ಟೆ ತುಂಬ ಊಟ ಸಿಗುತ್ತದಲ್ಲಾ ಎಂದು ಮೈಲು ಗಟ್ಟಲೆ  ಇಂತಹ ಕಾರ್ಯಕ್ರಮಕ್ಕೆ ನಡೆದು ಹೋಗುತ್ತಿದ್ದದ್ದು ನೆನಪಾಗುತ್ತದೆ. ಅದೆಷ್ಟು ಸಲ ಗುಂಪೆ ಗುಡ್ಡೆ ಹತ್ತಿ ಇಳಿದಿದ್ದೇವೋ ಗೊತ್ತಿಲ್ಲ. ಬೆಳಗ್ಗೆ ಮನೆಯಲ್ಲಿ ಇದ್ದರೆ ಉಂಟು ಇಲ್ಲದಿದ್ದರೆ ಇಲ್ಲ ಎಂದು ಸಿಕ್ಕಿದ್ದು ತಿಂದು ನಡೆಯುವುದಕ್ಕೆ ತೊಡಗಿದರೆ ಮೈಲಿ ನಡೆದು ವೈದಿಕ ಕ್ರಿಯೆ ನಡೆಯುವಲ್ಲಿಗೆ ತಲಪುವಾಗ ಮಧ್ಯಾಹ್ನವಾಗುತ್ತಿತ್ತು. ನಾವು ಬಾಲಕರು. ಯಾರ ಪರಿಚಯವೂ ಇರುತ್ತಿರಲಿಲ್ಲ. ಸಮಯವಾದಾಗ ಎಲ್ಲರ ಜೊತೆ ಊಟಕ್ಕೆ ಕುಳಿತುಬಿಡುವುದು.  ಯಾರ  ಪರಿಚಯ ಇಲ್ಲದಿದ್ದರೆ ಏನು, ಹೊಟ್ಟೆ ತುಂಬ ಊಟದ ಪರಿಚಯವಂತೂ ಆಗಿಬಿಡುತ್ತಿತ್ತು. ಅದೂ ....ಸಾಕು ಸಾಕು ಎನ್ನುವಷ್ಟು ಊಟ. ಮತ್ತೆ ಕೈಯಲ್ಲಿ ಒಂದಷ್ಟು ಚಿಲ್ಲರೆ ನಾಣ್ಯಗಳು. ನಾವೆಲ್ಲಆ ಪ್ರಾಯದಲ್ಲಿ  ಕೈಯಲ್ಲಿ ನಮ್ಮದೇ ಆದ ಕಾಸು ಕಂಡವರೇ ಅಲ್ಲ. ಒಂದು ವೇಳೆ ಕೈಯಲ್ಲಿ ಹಣ ಇದ್ದರೆ ಅದು ಚಿಲ್ಲರೆ ಕಾಸಾದರೂ ಹಿರಿಯರ ತನಿಖೆ ಇರುತ್ತಿತ್ತು.  ಸರಕಾರ ಆದಾಯ ತೆರಿಗೆ ಪರೀಕ್ಷೆ ಮಾಡಿದ ಹಾಗೆ.  ಈ ಕಾಸು ಮನೆಗೆ ಬಂದು ಹಳೆಯ ಡಬ್ಬದಲ್ಲಿ ತೆಗೆದಿಟ್ಟು ದಿನಕ್ಕೆ ಹತ್ತು ಬಾರಿ ಎಣಿಕೆ ಮಾಡುತ್ತಿದ್ದೆವು. ಆದರೆ ಮೊದಲು ನಮಗೆ ಹೊಟ್ಟೆ ತುಂಬ ಆಹಾರವೇ ಪ್ರಧಾನವಾಗಿತ್ತು. ಆದರೂ ಎಡಕೈಗೆ ಸಿಗುವ ಚಿಕ್ಕಾಸು ನಾಣ್ಯ ಬಹಳ ಖುಷಿಯನ್ನುಕೊಡುತ್ತಿತ್ತು.  ಇತ್ತೀಚೆ ಯಾರದೋ ವೈದಿಕ ಕಾರ್ಯಕ್ರಮಕ್ಕೆ ಯಾವುದೋ ಕೈವಲ್ಯ ಧಾಮಕ್ಕೆ ಹೋಗಿದ್ದೆ. ಊಟ ಮಾಡಿ ಹೊರಗೆ ಬರುವಾಗ ಯಾರೋ ಒಬ್ಬರು ಹಲವರು  ಕೈ ಒಡ್ಡುತ್ತಿದ್ದರು. ಇಲ್ಲಿ ಊಟಕ್ಕಿಂತಲೂ ಕಾಸು ಪ್ರಧಾನವಾದಂತೆ ಅನಿಸಿತ್ತು. ಕ್ರಿಯಾ ಭಾಗದಲ್ಲಿ ಅಷ್ಟೋ ಇಷ್ಟೊ ದಾನ  ಸಿಕ್ಕಿದರೂ ಹೀಗೆ ಭಿಕ್ಷೆ ಬೇಡುವುದು ಕಾಣುವಾಗ ಭಿಕ್ಷೆ ದಾನವಾಗುವುದು ಹೇಗೆ ಎಂಬ ಯೋಚನೆ ಬರುತ್ತದೆ. 

ವೃದ್ದರಲ್ಲಿ ನನ್ನ ಅನುಭವ ಹೇಳಿದೆ. ಕಾಲ ಬದಲಾಗಿದೆ ಎನ್ನುವುದಕ್ಕಿಂತಲೂ ಮನುಷ್ಯ ಬದಲಾಗಿದ್ದಾನೆ ಎನ್ನುವುದು ಸರಿ. ಅವರು ಹೇಳಿದರು, ಬದಲಾಗಬೇಕು, ಎಲ್ಲವೂ ಅಂದರೆ ಎಲ್ಲವೂ  ಮೊತ್ತ ಬದಲಾಗಬೇಕು, ಯಾಕೆಂದರೆ ಈಗ ಉಳಿದಿರುವಂತಹುದು ಒಂದೂ ಇಲ್ಲ. ಎಲ್ಲವನ್ನು ನಾವು  ಕಳೆದುಕೊಂಡಾಗಿದೆ.  ಬದಲಾಗಬೇಕು ಎಂಬುದೇನೋ ಸತ್ಯ . ಆದರೆ ನಾವು ಹೇಗೆ ಬದಲಾಗಬೇಕು ಎಂಬುದೇ ಮರೆತು ಹೋಗಿದೆ. ಸ್ಮರಣೆಗೆ ಬರಲಾದಷ್ಟು ಬದಲಾಗಿ ಹೋಗಿದ್ದೇವೆ. ಮೊದಲು ಯಾವುದಾದರೇನು ಊಟ ಎಂದರೆ ಸಾಕು ಎಂದುಕೊಂಡಿದ್ದರೆ ಈಗ ಊಟದಲ್ಲೂ ಆಯ್ಕೆ ಮಾಡುತ್ತಿದ್ದೇವೆ. ವೈದಿಕವೋ ತೀರ ಹತ್ತಿರದ ಕುಟುಂಬದೊಳಗಿದ್ದರೆ ಮಾತ್ರ ಹೋಗುತ್ತಿದ್ದೇವೆ. ವಿಚಿತ್ರವೆಂದರೆ ಊಟದ ವೈವಿಧ್ಯತೆಯೋ ಹಸಿವಿನ ವೆತ್ಯಾಸವೋ ಅರಿವಾಗುವುದಿಲ್ಲ. 

Wednesday, October 4, 2023

ಭ್ರಮರಾಂಬಿಕೆಯ ಮಡಿಲಲ್ಲಿ ಭ್ರಮರವಾಗಿ

        ಬಹಳ ಸಮಯದಿಂದ ಬೆಂಗಳೂರಲ್ಲಿ ಕುಳಿತು ಯೋಚಿಸುತ್ತಿದ್ದೆ. ಊರಿಗೆ ಹೋದರೆ ಕಟೀಲು ಭ್ರಮರಾಂಬಿಕೆಯ ಸನ್ನಿಧಿಗೆ ಹೋಗಬೇಕು ಅಂತ. ಯಾಕೆಂದರೆ ಕಟೀಲು ದೇವಸ್ಥಾನದ ಜೊತೆಗಿರುವ ಭಾವನಾತ್ಮಕ ಸಂಬಂಧಗಳು ಹಲವಿದೆ. ಅದನ್ನೆಲ್ಲ ನೆನಪಿಸಿಕೊಳ್ಳಬೇಕು. ಆದರೆ ಪ್ರತಿ ಸಲ ಊರಿಗೆ ಹೋದಾಗ ಸಮಯ ಹೊಂದಾಣಿಕೆಯಾಗದೆ ಹೋಗುವ ಅವಕಾಶ ಸಾಧ್ಯವಾಗುತ್ತಿರಲಿಲ್ಲ.  ಆದರೆ ಈ ಸಲ ಎಲ್ಲ ಕೆಲಸದ ಜೊತೆಗೆ ಇದನ್ನೂ ಪ್ರಧಾನವಾಗಿಸಿ ಮಂಗಳೂರಿನಿಂದ ಕಟೀಲಿನ ಬಸ್ಸು ಹತ್ತಿದೆ. 

                                                     ಚಿತ್ರ ಕೃಪೆ: ವಿಕಿಪೀಡಿಯ

     ಬಸ್ಸು ನಗರದಾಟಿ ಕುಂಟಿಕಾನ ದೇರೇಬೈಲು ಚರ್ಚ್ ದಾಟುತ್ತಿದ್ದಂತೆ ಬಾಲ್ಯದ ನೆನಪುಗಳು ಒತ್ತೊತ್ತಿ ಬರುವುದಕ್ಕೆ ತೊಡಗಿತು. ದೇರೇಬೈಲಿನ ಸೋದರ  ಮಾವನ ಮನೆ ಎಂದರೆ ಅದು ನನ್ನ ಮನೆ ಎಂಬ ಪ್ರೀತಿ ಬಾಲ್ಯದಿಂದಲೇ ಬೆಳೆದು ಬಂದಿತ್ತು. ಇಲ್ಲಿರುವಾಗಲೇ ನನ್ನಮ್ಮ ನನ್ನನ್ನು ಹೆತ್ತದ್ದು. ಹೀಗೆ ದ್ವಾರಕೆ ನಂದಗೋಕುಲ ಇದ್ದಂತೆ ನನಗೆ ಪೈವಳಿಕೆ ಮತ್ತು ದೇರೇಬೈಲು.  ಎರಡು ಅವಿನಾಭಾವದ ಸಂಬಂಧಗಳು. 

        ದೇರೆಬೈಲಿನ ಗುಡ್ಡ ಇಳಿದು ಕೆಳಗೆ ಇಳಿದರೆ ಕೊಂಚಾಡಿ. ಚರ್ಚ್ ನಿಂದ ಒಂದು ತಿರುವು ಕೆಳಗೆ ಇಳಿಯುತ್ತಿದ್ದಂತೆ ಎರಡೂ ಕಡೆ ಚಾಚಿನಿಂತ ಗದ್ದೆ. ಸದಾ ಹಸಿರು ಪೈರನ್ನು ಹಾಸಿದ್ದು ಬೇಸಗೆಯಲ್ಲಿ ಬಯಲಾಟಗಳ ಮೈದಾನವಾಗುತ್ತಿದ್ದವು. ಒಂದು ಬದಿಗೆ ಮಾಂಕಾಳಿ ಸನ್ನಿಧಾನ ಅದರೊತ್ತಿಗೆ ಶ್ರೀ ರಾಮ ಭಜನಾಮಂದಿರ. ಕೊಂಚಾಡಿಯ ಗದ್ದೆಯ ಈ ತುದಿಯಲ್ಲಿ ನಿಂತರೆ ಅತ್ತ ಕೂಳೂರಿನ ತನಕ ಗೋಚರಿಸುತ್ತಿತ್ತು. ಗದ್ದೆಯ ನಡುವೆ ಸಾಲಾಗಿ ಬೆಳೆದು ನಿಂತ ತೆಂಗಿನ ಮರಗಳು. ಈ ಗದ್ದೆಗಳ ನಡುವೆ ಒಂದು ಕೆರೆ ಇತ್ತು. ಆ ಕೆರೆಯಲ್ಲಿ ಲಾಗ ಹಾಕುತ್ತಿದ್ದ ನೆನಪು, ಆದರೆ ಈಗ ಸಂಪೂರ್ಣ ಬದಲಾಗಿ ಹಲವಾರು ಬಡವಾಣೆಗಳು ನಗರ ಎಂಬ ಹೆಸರಿನೊಂದಿಗೆ ಕರೆಯಲ್ಪಡುತ್ತದೆ. ಕೊಂಚಾಡಿಯ ರಸ್ತೆಯ ಎರಡೂ ಬದಿಗೆ ಇದ್ದ ಮಾವು  ಹಲಸು ಗೋಳಿ ಮರಗಳು ಮರೆಯಾಗಿವೆ. 

        ಮೊದಲು ಮಂಗಳೂರಿನಿಂದ ಕಟೀಲಿಗೆ ಹನುಮಾನ್ ಅಥವಾ ಸಿಪಿಸಿ ಬಸ್ ಹತ್ತಿದರೆ ಸರಿ ಸುಮಾರು ಎರಡು ಘಂಟೆಯ ಪಯಣ.ಬಸ್ಸು ಕೂಡ ಕಿಕ್ಕಿರಿದು ತುಂಬಿರುತ್ತಿತ್ತು. ಪ್ರತಿ ಸ್ಥಳಗಳಲ್ಲಿ ಒಂದೈದು ನಿಮಿಷವಾದರೂ ಬಸ್ಸು ನಿಂತು ಬಿಡುತ್ತಿತ್ತು. ಸಾಮಾನ್ಯವಾಗಿ ಮಧ್ಯಾಹ್ನದ ನಂತರ ಬಸ್ಸು ಹತ್ತಿದರೆ ಮುಸ್ಸಂಜೆ ದಾಟಿ ಕಟೀಲು ತಲುಪುತ್ತಿದ್ದೆವು. ಅಲ್ಲಿ ಕಟೀಲಿನ ದೇವಾಲಯದ ಸುತ್ತ ಹರಿಯುವ ನದಿಯಲ್ಲಿ ಮುಳುಗಿ ಸ್ನಾನ ಮಾಡಿದ  ಆದಿನಗಳದ್ದೇ ಒಂದು ಸುಮಧುರ ನೆನಪು. ನದಿಯಲ್ಲಿ ಸ್ನಾನ ಮಾಡಿ ರಾತ್ರಿ ದೇವಾಲಯದ ಗೋಪುರದಲ್ಲಿ ಕುಳಿತು ಭಜನೆ ಪಾರಾಯಣ ಮಾಡಿದ ನೆನಪು ಇದೆ. 

        ನಿನ್ನೆ ಹಾಗೇ ಕಟೀಲು ಬಸ್ಸು ಹತ್ತಿದೆ ಕೇವಲ ನಲ್ವತ್ತು ನಿಮಿಷದಲ್ಲಿ ಕಟೀಲು ತಲುಪಿದಾಗ ಅಚ್ಚರಿಯಾಯಿತು. ಮೊದಲಿನ ಬಸ್ಸು ಪಯಣದ ಅನುಭವಕ್ಕೂ ಈಗಿನ ಅನುಭವಕ್ಕೂ ಅಜಗಜಾಂತರ . ಹಳೆಯ ಅನುಭವದ ನೆನಪಿಗೆ ಬಸ್ಸಿನ ಪ್ರಯಾಣದ ಪ್ರತೀ ಕ್ಷಣ ಸುತ್ತಲಿನ ಪರಿಸರವನ್ನು ನೋಡುತ್ತ ಸಾಗಿದೆ. ನಾಲ್ಕು ದಶಕಗಳ ಹಿಂದಿನ ರಸ್ತೆ ತಿರುವುಗಳು ಮರಗಿಡಗಳು ಎಲ್ಲವೂ ಬದಲಾಗಿ ಆ ನೆನಪುಗಳು ಮಾತ್ರ  ಬಹಳಷ್ಟು ಕಾಡಿತು.  ಮೊದಲಿಗಿಂತಲೂ ತೀರ ಭಿನ್ನವಾದ ಪರಿಸರ. ಕಟೀಲಿನ ದುರ್ಗಾ ಭವನ ಹೋಟೇಲಿನ ಜಾಗ ಈಗ ವಾಹನ ನಿಲುಗಡೆಗೆ ಎರವಾಗಿದೆ. ಶಾಲೆಯ ಮೈದಾನದ ಒಂದಷ್ಟು ಭಾಗವೂ ಮಾಯವಾಗಿದೆ. ದೇವಸ್ಥಾನದ ಹೊರಬಂದು ಮೆಟ್ಟಲು ಹತ್ತಿ ಶಾಲೆಯ ಜಗಲಿಯಲ್ಲಿ ಹಲವಾರು ಜನ ವಿಶ್ರಮಿಸುತ್ತಿದ್ದರು. ಹಲವು ಸಲ ನಾನೊಬ್ಬನೇ ಬಾಲ್ಯದಲ್ಲಿ ಕಟೀಲಿಗೆ ಹೋಗುತ್ತಿದ್ದೆ. ರಾತ್ರಿ ಅಲ್ಲಿ ಹರಿಯುವ ನದಿನೀರಲ್ಲಿ ಸ್ನಾನ ಮಾಡಿ, ದೇವರ ದರ್ಶನ ಪೂಜೆ ಮುಗಿಸಿ ಪ್ರಸಾದ ಉಂಡು ಈ ಶಾಲೆಯ ಜಗಲಿಯಲ್ಲಿ ಮಲಗಿ ರಾತ್ರೆಯನ್ನು ಕಳೆದು ಮರುದಿನ ಮುಂಜಾನೆ ಎದ್ದು ಸ್ನಾನ ಜಪ ಮುಗಿಸಿ ದೇವಾಲಯದ ಸುತ್ತ ಮುತ್ತ ಸುತ್ತಾಡುತ್ತಿದ್ದ ದಿನಗಳು ಮತ್ತೆ ಬರಲಾರದು.  ದೇವಸ್ಥಾನದ ಹೆಬ್ಬಾಗಿಲು ಕ್ರಮಿಸಿ ಒಳ ಪ್ರವೇಶಿಸುವಾಗ ಹೊಳೆಯನ್ನು ದಾಟುವುದಕ್ಕೆ ಎರಡು ಸೇತುವೆ. ಮೊದಲು ಈ ಸೇತುವೆ ನಡುವೆ ನಿಂತು ಕೆಳಗೆ ಭೋರ್ಗರೆದು ದುಮ್ಮಿಕ್ಕಿ ಹರಿಯುವ ನೀರಿನಲ್ಲಿ ಹಾರಿ ಹಾರಿ ಮೇಲೆ ಬರುತ್ತಿದ್ದ ಮೀನುಗಳನ್ನು ನೋಡುತ್ತಿದ್ದೆವು. 

        ದೇವಸ್ಥಾನದ ಒಳಾಂಗಣವನ್ನು ಪ್ರವೇಶಿಸಿದರೆ ಪ್ರಶಾಂತವಾದ ದೇವ ಸನ್ನಿಧಿ. ಹೊರಗೆ ನದಿ ಭೋರ್ಗರೆಯುವ ಶಬ್ದ  ಅದರೆ ಒಳಗೆ ಪ್ರಶಾಂತವಾದ ಘಂಟಾನಾದಾದದ ಕಲರವ ಎರಡನ್ನೂ ಜತೆಯಲ್ಲೇ ಅನುಭವಿಸುವ ಕಟೀಲಿನ ದುರ್ಗಾ ಪರಮೇಶ್ವರಿಯ ಪ್ರಸನ್ನ ಮುಖ ದರ್ಶನವಾದರೆ ಅದೊಂದು ವಿಸ್ಮಯ ಅನುಭವ. ದೇವಾಲಯ ಹಿಂಭಾಗದಲ್ಲಿ ಮೊದಲು ಪಂಜಕಜ್ಜಾಯ ಪ್ರಸಾದವನ್ನು ತಯಾರಿಸುತ್ತಿದ್ದರು. ಅದರ ಘಮ ಘಮ ಪರಿಮಳ ಚಿತೋಹಾರಿಯಾಗಿರುತ್ತಿತ್ತು. ಈಗ ಸಾಕಷ್ಟು ಬದಲಾಗಿದೆ. ದೇವಸ್ಥಾನದ ಒಳಗೋಪುರದ ಎಡಭಾಗದಲ್ಲಿ ಪುಟ್ಟ ಮೇಜು ಇಟ್ಟುಕೊಂಡು ನೆಲದಲ್ಲಿ ಕುಳಿತು ಪ್ರಸಾದ ರಶೀದಿಗಳನ್ನು ಕೊಡುತ್ತಿದ್ದರು. ಆನಂತರ ಅದು ದೊಡ್ಡದಾಗಿ ಹೊರಬಂದು ಈಗ ದೇವಸ್ಥಾನದ ರಸ್ತೆಯ ಬದಿಯಲ್ಲೇ ಇದನ್ನು ವ್ಯವಸ್ಥಿತವಾಗಿ ನಿರ್ಮಿಸಿದ್ದಾರೆ.  ಈಗ ಈ ಗೋಪುರದಲ್ಲಿ ಕುಳಿತುಕೊಳ್ಳುವುದಕ್ಕೂ ಅವಕಾಶವಿಲ್ಲ. ಕೊನೆ ಪಕ್ಷ ಇಲ್ಲಿ ಮಹಾಮಂಗಳಾರತಿ ತನಕು ಕುಳಿತುಕೊಳ್ಳುವ ಅವಕಾಶ ಭಕ್ತರಿಗೆ ಲಭ್ಯವಾಗಬೇಕು. ಗೋಪುರದಲ್ಲಿ ಕುಳಿತು ನಾಮಸ್ಮರಣೆ ಮಾಡುವ ಮಧುರವಾದ ಅವಕಾಶ ಇಲ್ಲವಾಗಬಾರದು.   ಇದೇ ಗೋಪುರದಲ್ಲಿ ಕುಳಿತು ಸಂಧ್ಯಾವಂದನೆ ಪಾರಾಯಣ ಮಾಡಿದ ದಿನಗಳು, ಇಲ್ಲೇ ಕುಳಿತು ಭೋಜನ ಪ್ರಸಾದ ಉಂಡ ನೆನಪುಗಳು ನಿನ್ನೆ ಮತ್ತೆ ಕಾಡಿತು. ಹಿರಿಯ ವೇದಮೂರ್ತಿ ಶ್ರೀ ಗೋಪಾಲ ಕೃಷ್ಣ ಅಸ್ರಣ್ಣರು ಕುಳಿತುಕೊಳ್ಳುತ್ತಿದ್ದ ಜಾಗ ಎಲ್ಲವೂ ಬಾಲ್ಯದ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತಿದ್ದವು.

        ದೇವಸ್ಥಾನದ ಒಳಾಂಗಣದಲ್ಲಿ ಸಾಕಷ್ಟು ಭಕ್ತರು ನೆರೆದಿದ್ದರು. ಈಗ ಕೆಲವರು ಭದ್ರತಾ ಸಿಬ್ಬಂದಿಗಳು ಭಕ್ತರಿಗೆ ಮಾರ್ಗ ದರ್ಶನ ಕೊಟ್ಟು ನಿಯಂತ್ರಿಸುತ್ತಿದ್ದರು.  ಮೊದಲಿನಂತೆ ಕುಳಿತುಕೊಳ್ಳುವುದಕ್ಕೆ ಸಾಧ್ಯವಾಗದೆ ಕೆಲವು ವೃದ್ದೆಯರೂ ಸಹ ಮಹಾಪೂಜೆಗೆ ನಿಲ್ಲಲಾಗದೆ ನಿಂತುಕೊಂಡಿದ್ದರು. ಅಂದಿನ ಕಾಲಕ್ಕೂ ಇಂದಿನ ಕಾಲಕ್ಕೂ ಬರುವ ಭಕ್ತರಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಅದರಲ್ಲೂ ಬಯಲು ಸೀಮೆ ಘಟ್ಟದ ಮೇಲಿನ ಭಕ್ತಗಣಗಳ ಸಂಖ್ಯೆ , ಪರ ಊರಿನವರ ಸಂಖ್ಯೆ ಕಟೀಲಿನ ಮಟ್ಟಿಗೆ ಬಹಳಷ್ಟು ಹೆಚ್ಚಾಗಿದೆ. ಮೊದಲು ಸುಬ್ರಹ್ಮಣ್ಯ ಧರ್ಮಸ್ಥಳ ಯಾತ್ರೆ ಮುಗಿಸಿ ಘಟ್ಟ ಹತ್ತುತ್ತಿದ್ದವರ  ಪಟ್ಟಿಯಲ್ಲಿಈಗ ಕಟೀಲು ಕೂಡ ಸೇರ್ಪಡೇಯಾಗಿದೆ. ಮಧ್ಯಾಹ್ನ ರಾತ್ರಿ ಎಲ್ಲಿ ಹೋದರೂ ಊಟ ಇದೆ ಎಂಬುದು ಹಲವರ ಸೌಕರ್ಯ. ಬೆಂಗಳೂರಲ್ಲಿ ಮೊನ್ನೆ ಮೊನ್ನೆ ನನ್ನ ಪರಿಚಿತರೊಬ್ಬರು ಕರಾವಳಿಯ ಯಾವ ದೇವಸ್ಥಾನಗಳಲ್ಲಿ ಊಟವಿದೆ ಎಂದು ಪಟ್ಟಿಮಾಡಿಕೊಂಡು ಹೋಗಿದ್ದರು. ಅದು ಯಾಕೆ ಎಂದು ಇಲ್ಲಿ ನೋಡಿದಾಗ ಅರಿವಾಯಿತು. ಮೊದಲು ಕಟೀಲಿನಲ್ಲಿ ಕೇವಲ ಇಲ್ಲಿನ ಸುತ್ತಮುತ್ತಲಿನವರು ಹೆಚ್ಚೆಂದರೆ ಉತ್ತರ ಕಾಸರಗೋಡಿನ ಕೆಲವರು ನಿಯಮಿತವಾಗಿ ಬರುತ್ತಿದ್ದರು. ಈಗ ಸುತ್ತಮುತ್ತಲಿನ ದೇವಸ್ಥಾನಗಳ ಆದಾಯ ವೃದ್ಧಿಗೆ ಇದೂ ಮುಖ್ಯ ಕಾರಣವಾಗಿದೆ. ನಿನ್ನೆ ಪೂಜೆ ಮುಗಿಸಿ ಗೋಪುರದ ಒಂದು ಬದಿ ನಿಂತುಕೊಂಡಿದ್ದೆ. ಆಗ ಇದೇ ಘಟ್ಟದ ಮೇಲಿನ ಒಬ್ಬರು ಬಂದು ಅವರ ಕೈಯಲ್ಲಿ ಗಂಧ ಪ್ರಸಾದ ಇತ್ತು. ಹಣೆಗೆ ಹಚ್ಚಿಕೊಂಡ ನಂತರ ಸಾಕಷ್ಟು ಉಳಿದಿತ್ತು. ಪುಣ್ಯಾತ್ಮ ಅದನ್ನು ಯಾವುದೇ ಕಂಬಕ್ಕೆ ಉಜ್ಜದೆ ನನ್ನ ಬಳಿಗೆ ಬಂದು ಕೇಳಿದ ಇದನ್ನು ಏನು ಮಾಡಬೇಕು? ಎಲ್ಲಿ ಎಸೆಯಬೇಕು? ಅವನಿಗೆ ಗಂಧಪ್ರಸಾದವೇ ವಿಚಿತ್ರವಾಗಿ ಕಂಡಿತ್ತು. ಯಾಕೆಂದರೆ ಹೂವಿನೊಂದಿಗೆ ಗಂಧಪ್ರಸಾದವನ್ನು ಕೊಂಡುವುದು ಕೇವಲ ದಕ್ಷಿಣ ಕನ್ನಡ ಹಾಗೂ ಕರಾವಳಿಯಲ್ಲಿ ಮಾತ್ರ. ಮಧೂರು ಉಳಿದಂತೆ ಕಾಸರಗೋಡಿನ ದೇವಸ್ಥಾನಗಳಲ್ಲೂ ಈ ಕ್ರಮವಿದೆ. ಆದರೆ ಉಳಿದಂತೆ ಘಟ್ಟದ ಮೇಲಿನ ದೇವಸ್ಥಾನಗಳಲ್ಲಿ ಇದು ಬಳಕೆಯಲ್ಲಿ ಇಲ್ಲ. ಹಾಗಾಗಿ ಆತನಿಗೆ ಇದು ವಿಚಿತ್ರವಾಗಿ ಕಂಡಿತು. ನಾನೆಂದೆ ಅಲ್ಲಿ ಅದಕ್ಕೆಂದು  ಕಾಗದದ ಚೂರುಗಳನ್ನು ಇಟ್ಟಿದ್ದಾರೆ ಕಟ್ಟಿಕೊಂಡು ಮನೆಗೆ ಹೋಗು ಸ್ನಾನ ಮಾಡಿ ಶುದ್ದ ನೀರು ಬೆರೆಸೆ ಮನೆಯ ಉಳಿದ ಮಂದಿಗಳಿಗೂ ಕೊಡಬಹುದು ಎಂದೆ. ಮತ್ತೂ ಎಚ್ಚರಿಸಿದೆ ಕಂಭಗಳಿಗೆ ಹಚ್ಚಬೇಡ. 

        ಕಟೀಲಿನ ಜತೆಗೆ ನನಗೆ ಅತ್ಯಂತ ಭಾವನಾತ್ಮ ಸಂಭಂಧ ಎಂದರೆ ಇಲ್ಲೇ ನನಗೆ ಬ್ರಹ್ಮೋಪದೇಶವಾಗಿತ್ತು. ಸುಮಾರು ನಲವತ್ತು ವರ್ಷಗಳ ಹಿಂದಿನ ನೆನಪು. ದೇವಾಲಯದ ಎದುರಿನ ಹೊರಾಂಗಣದಲ್ಲಿ ನದಿಯ ದಡದಲ್ಲಿ ಉಪನಯನ ಕರ್ಮಗಳಾಗಿತ್ತು. ಆಗ ಪ್ರತಿವರ್ಷವೂ ಸಾಮೂಹಿಕ ಬ್ರಹ್ಮೋಪದೇಶವಾಗುತ್ತಿತ್ತು.ಬೆಳಗ್ಗೆ ಹೋಗಿ ಒಂದು ಚೀಟು ಬರೆಸಿದರೆ ಉಪನಯಕ್ಕೆ ಬೇಕಾದ ವಸ್ತ್ರ ಹೋಮ ದ್ರವ್ಯ ಪುರೋಹಿತ ದಕ್ಷಿಣೆ ತನಕ ಎಲವನ್ನೂ ಒದಗಿಸಿಕೊಡುತ್ತಿದ್ದರು. ಆಗ ನನಗೆ ಒಂದು ಪಂಚೆ ಸಿಕ್ಕಿತ್ತು. ಬಹಳಷ್ಟು ಖುಷಿಯಾಗಿತ್ತು. ಸಾಮಾನ್ಯವಾಗಿ ಒಂದು ಚಡ್ಡಿ ತಪ್ಪಿದರೆ ಎರಡು ಎಂಬಂತೆ ಇದ್ದವನಿಗೆ ಈ ಪಂಚೆ ಉಟ್ಟುಕೊಳ್ಳುವುದಕ್ಕೆ ನಾಂದಿ ಹಾಡಿತ್ತು. ಅಂದಿನಿಂದ ದೊಡ್ಡವರಂತೆ ಪಂಚೆ ಉಟ್ಟು ತಿರುಗುವುದು ಬಹಳ ಹೆಮ್ಮೆ ಅನಿಸಿತ್ತು.  ನಂದಿನೀ ದಡದ ಮೇಲೆ ಸೋದರಮಾವನ ಮಡಿಲಲ್ಲಿ ಕುಳಿತು ಗುರು ಅಜ್ಜನ ಮುಖಾಂತರ ಉಪದೇಶವಾದ ಗಾಯತ್ರಿಮಂತ್ರ ನನ್ನ ಮಟ್ಟಿಗೆ ಭ್ರಮರಾಂಭಿಕೆಯ ಆಶೀರ್ವಾದ. ಈಗ ಪ್ರತಿಸಲ ಯಜ್ಞೋಪವೀತಕ್ಕೆ ಕೈ ಹಾಕುವಾಗ ಕಟೀಲಿನ ಅಮ್ಮ ನೆನಪಾಗುತ್ತಾಳೆ. ಮಾವನ ಮಡಿಲಲ್ಲಿ ಕುಳಿತ ಜಾಗದಲ್ಲಿ ಅದೇ ನೆನಪಿಗೋಸ್ಕರ ಒಂದಷ್ಟು ಹೊತ್ತು ಕುಳಿತೆ. ಆ ನೆನಪು ಮತ್ತೆ ಮತ್ತೆ ಬಂದು ಮೈ ಪುಳಕಗೊಂಡಿತು. ಇಂದಿಗೂ ಸಂಧ್ಯಾವಂದನೆ ಬಿಡದೆ ಅನುಷ್ಠಾನ ಗೊಳಿಸುವಾಗ ಕಟೀಲು ದುರ್ಗಾ ಪರವೇಶ್ವರಿಯ ಅನುಗ್ರಹವಾದಂತೆ ಭಾಸವಾಗುತ್ತದೆ. ಕಟೀಲಿನ ಸಾಮೂಹಿಕ ಬ್ರಹ್ಮೋಮದೇಶ ಎಂಬುದು ಇಲ್ಲದೇ ಇರುತ್ತಿದ್ದರೆ ನನಗೆ  ಬಡತನದ ಕಾರಣ ಉಪನಯನ ಎಂಬುದು ಆಗುತ್ತಲೇ ಇರುತ್ತಿರಲಿಲ್ಲವೇನೋ ಎಂದು ಅನ್ನಿಸುತ್ತದೆ. ಬಹಳಷ್ಟು ಮಕ್ಕಳಿಗೆ ನನ್ನ ಜತೆ ಬ್ರಹ್ಮೋಪದೇಶವಾಗಿತ್ತು. ಕೊನೆಯಲ್ಲಿ ಎಲ್ಲರೂ  ಶ್ರೀ ಗೋಪಾಲಕೃಷ್ಣ ಅಸ್ರಣ್ಣರ ಜತೆಯಲ್ಲಿ ನಿಂತು ಫೋಟೋ ತೆಗೆಸಿಕೊಂಡಿದ್ದೆವು. ಇದೇ ನೆನಪಿನಲ್ಲಿ  ಊಟವಾದರೂ ಬಹಳಷ್ಟು ಹೊತ್ತು ಕಟೀಲಿನಲ್ಲೇ ಉಳಿದೆ. ಸೇತುವೆ ನಡುವೆ ಬಂದು ನಿಂತು  ಹರಿಯುವ ನದಿಯನ್ನು ನೋಡುತ್ತಾ ಆ ಸದ್ದಿನಲ್ಲಿ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದೆ. ಕಟೀಲು ನನ್ನ ಪಾಲಿಗೆ ಕೇವಲ ದೇವಾಲಯವಲ್ಲ. ಬದುಕಿನ ಉತ್ಕರ್ಷಕ್ಕೆ, ಆಧ್ಯಾತ್ಮದ ಚಿಂತನೆಗೆ ನಾಂದಿ ಹಾಡಿದ ಪವಿತ್ರ ಕ್ಷೇತ್ರ. ಇಲ್ಲೇ ನನ್ನ ಬ್ರಹ್ಮ ಚರ್ಯ  ಆರಂಭವಾಯಿತು.    ಇಂದು ಎಲ್ಲವನ್ನು ಮರೆತು ಮುಂಜಾನೆ ಸೂರ್ಯನಿಗೆ ಅರ್ಘ್ಯ ಬಿಟ್ಟು ಪರಮಾತ್ಮನನ್ನು ಕಾಣುವುದಿದ್ದರೆ ಈ ಕ್ಷೇತ್ರದ ಅನುಗ್ರಹ ಮರೆಯುವಂತಹುದಲ್ಲ. ಆ ಒಂದು ಚೈತನ್ಯ ಬೆನ್ನ ಹಿಂದೆ ಸದಾ ಸತ್ಪ್ರೇರಣೆಯನ್ನು ಒದಗಿಸುತ್ತದೆ. 


ಓಂ ನಮೋ ಭ್ರಮರಾಂಬಿಕೆ. 



Wednesday, September 27, 2023

ಉಪವಾಸ ಶಾಂತಿ

ನಿನ್ನೆ ದಿನ ನಾನು ಸಂಪೂರ್ಣ ಉಪವಾಸವನ್ನು ಅನುಭವಿಸಿದೆ. ಇದೊಂದು ವಿಸ್ಮಯ ಅನುಭವ.  ಸಾಮಾನ್ಯವಗಿ ನಾನು ಮಧ್ಯಂತರ ಉಪವಾಸ (ntermittent fasting) ಕಳೆದ ಎರಡು ವರ್ಷದಿಂದ ಮಾಡುತ್ತಿದ್ದರೂ ಒಂದು ಪೂರ್ಣ ಪ್ರಮಾಣದ ಉಪವಾಸ ಮಾಡುವ ಆಸಕ್ತಿ ಉಂಟಾಯಿತು. ನೋಡಿಯೇ ಬಿಡೋಣ ಎಂದು ಕೊಂಡು, ಯಾವಾಗಲೂ ಸಾಯಂಕಾಲ ಐದು ಘಂಟೆಗೆ ಲಘು ಆಹಾರ ತಿಂದು ರಾತ್ರಿಯ ಊಟ ಮುಗಿಸುವ ನಾನು ಮೊನ್ನೆ ಸಾಯಂಕಾಲ ಆಹಾರ ಸೇವಿಸಿ ಆ ಘಳಿಗೆಯಿಂದ ಉಪವಾಸ ಆರಂಭಿಸಿದೆ. ರಾತ್ರಿ ಕಳೆದು ಬೆಳಗ್ಗೆ ಆದಾಗ ಯಾವಾಗಲೂ ಹೊಟ್ಟೆ ಖಾಲಿಯಾಗಿರುತ್ತದೆ. ಆದರೆ ನಿನ್ನೆ ಖಾಲಿಯ ಜತೆಗೆ ಇವತ್ತು ಉಪವಾಸ ಎನ್ನುವ ನಿರ್ಧಾರದಿಂದಲೇ ಹೊಸ ಅನುಭವ ಎದುರಾಯಿತು. ಎಂದಿನಂತೆ ಯೋಗಾಭ್ಯಾಸ ಉಳಿದೆಲ್ಲ ನಿತ್ಯಕಾರ್ಯಗಳು ಇದ್ದರೂ ಬೆಳಗ್ಗಿನ ಉಪಾಹಾರ ಸೇವಿಸದೇ ಇರುವುದು ಬೆಳಗ್ಗಿನ ಒಂದು ಘಂಟೆ ಮುಕ್ತವಾಗಿ ಒದಗಿತು. ಆಹಾರ ಸೇವಿಸುವುದಿಲ್ಲ ಎಂಬ ಯೋಚನೆ ಮೊದಲು ಮನಸ್ಸಿನಿಂದ ಹೊರ ಹಾಕಿದೆ. ಪದೇ ಪದೇ ಆಹಾರ ಸೇವಿಸಲಿಲ್ಲ ಎಂಬ ಯೋಚನೆ ಇದ್ದರೆ ಹಸಿವಿನ ಬಗ್ಗೆ ಹೆಚ್ಚು ಗಮನ ಹೋಗುತ್ತದೆ. ಅದು ಇನ್ನೂ ಪರೀಕ್ಷೆಗೆ ಒಡ್ಡುತ್ತದೆ. ಹಾಗಾಗಿ ದೈನಂದಿನ ಇತರ ಕಾರ್ಯಗಳಲ್ಲಿ ಗಮನ ಹರಿಸಿದೆ. ಒಂದು ಘಂಟೆ ಕುಳಿತು ಓದಿದೆ. ನಂತರ ಕಛೇರಿ ಕೆಲಸಗಳು, ಹೆಚ್ಚಿನ ಕೆಲಸ ನಾನು ಮನೆಯಿಂದಲೇ ಮಾಡುವ ಕಾರಣ ಬಾಕಿ ಉಳಿದ, ಮಾಡಬೇಕಾದ ಎಲ್ಲಾ ಕೆಲಸಗಳ ಪಟ್ಟಿ ಮಾಡಿ ಅದನ್ನು ಮುಗಿಸುವತ್ತ ಗಮನ ಹರಿಸಿದೆ. ಅಲ್ಲಿಂದ ತಿನ್ನುವ ಯೋಚನೆ ಹಸಿವಿನ ಯೋಚನೆ ದೂರವಾಯಿತು. ಕೇವಲ ನೀರು ಮಾತ್ರ ಆಹಾರವಾಗಿ ಪದೇ ಪದೇ ನೀರು ಕುಡಿಯುತ್ತಾ ದೇಹ ಕ್ಷೀಣವನ್ನು ದೂರ ಮಾಡಿದೆ. 

ಹಸಿವು ಮನುಷ್ಯನ ದೈಹಿಕ ಚಟುವಟಿಕೆಯಲ್ಲಿ ಅತೀ ಮುಖ್ಯ. ಬಹುಶಃ ಇವತ್ತು ಪ್ರಪಂಚದ ಚಟುವಟಿಕೆಗಳಿಗೆ ಮುಖ್ಯ ಕಾರಣ ಈ ಹಸಿವು. ಅದೊಂದು ಬಾಧೆ ಎಂದು ಪರಿಗಣಿಸಿದರೆ ಅದಕ್ಕೆ ಬೇರೆ ಔಷಧಿ ಇಲ್ಲ. ಕೇವಲ ಆಹಾರ.   ಮನುಷ್ಯನಿಗೆ ಹಸಿವು ಮತ್ತು ವಿಸರ್ಜನೆ ಇವೆರಡೂ ಆರೋಗ್ಯದ ಸಂಕೇತವಾಗಿದೆ. ರೋಗ ಇಲ್ಲದೇ ಇರುವುದೇ ಆರೋಗ್ಯ.  ಅನ್ನಂ ಬ್ರಹ್ಮಾ ರಸೋ ವಿಷ್ಣು ಹೇಳಿದಂತೆ ಅನ್ನ ಎಂಬುದು ಬ್ರಹ್ಮ ರೂಪವಾಗಿ ಬೃಹದಾಕಾರವಾಗುತ್ತದೆ. ನಾವೆಷ್ಟು ಭಾಗ್ಯವಂತರು?  ಅನ್ನದಲ್ಲೂ ಬ್ರಹ್ಮನನ್ನು ಕಾಣುವ ನಮ್ಮ ಸಂಸ್ಕಾರ ಅತ್ಯಂತ ಶ್ರೇಷ್ಠ.  ಆಹಾರದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ ಹೀಗೆ ತ್ರಿಮೂರ್ತಿಗಳು ಆವಾಹನೆಯಾಗಿರುತ್ತಾರೆ. ತ್ರಿಮೂರ್ತಿಗಳನ್ನು ದೇಹದಲ್ಲಿ ಐಕ್ಯಮಾಡುವುದಾದರೆ ದೇಹ ಶುದ್ದಿ ಜತೆಯಲ್ಲಿ ಹೃದಯ ಶುದ್ದಿಯಾಗಬೇಕು. ಹೀಗಾಗಿ ಒಂದಷ್ಟು ಉಪವಾಸ ವಿಧಿಗಳು ಎಲ್ಲಾ ಧರ್ಮಗಳಲ್ಲೂ ಇದೆ. ಒಂದು ರೀತಿಯಲ್ಲಿ ಉಪವಾಸ ಎಂದರೆ ನಾವು ಇದ್ದ ಹಾಗೆ ಇರದೇ ಬೇರೊಂದು ರೀತಿಯಲ್ಲಿರುವುದು. ಇದು ಮತ್ತೊಂದು ಜನ್ಮ ಎತ್ತಿದಂತೆ. ದೇಹ ಎಲ್ಲ ಬರಿದಾಗಿ ಅಲ್ಲಿ ತ್ರಿಮೂರ್ತಿ ದರ್ಶನವಾಗುವುದು ಹೀಗೆ ಪವಿತ್ರವಾದ ಭಾವನೆಗಳು ಒಂದಾದರೆ ದೇಹದ ಆರೋಗ್ಯಕ್ಕೆ ಸಂಭಂದಿಸಿ ಇನ್ನೂ ಏನೋನೋ  ಗುಣಗಳು ಲಭ್ಯವಾಗುತ್ತವೆ. 

ಮಧ್ಯಾಹ್ನದ ತನಕ ಒಂದಷ್ಟು ಹಸಿವು ಬಾಧೆಕೊಟ್ಟಿತು ನಿಜ. ಆದರೆ ನೋಡೋಣ ಎಂಬ ಕುತೂಹಲವೂ ಇದೆ. ಬಡತನದಲ್ಲಿ ಅನಿವಾರ್ಯವಾಗಿ ಅನುಭವಿಸಿದ ಹಸಿವಿನ ನೆನಪು ಹೇಗೂ ಇದೆ. ಎನೂ ಇಲ್ಲದಾಗ ಅನುಭವಿಸುವ ಹಸಿವಿಗೂ ಎಲ್ಲವೂ ಒದಗಿ ಬಂದರೂ ಅದನ್ನು ದೂರವಿಡುವ ಅನುಭವ ಒಂದು ಸುಖಾನುಭವವನ್ನು ಒದಗಿಸುತ್ತದೆ.  ಗಂಡ ಹೆಂಡತಿ ಪರಸ್ಪರ ಜಗಳಾಡಿ  ಊಟ ಬಿಟ್ಟು ಕುಳಿತುಕೊಳ್ಳುವುದು ಸಾಮಾನ್ಯ. ಯಾವುದೋ ಸಾಧನೆಗೆ ಗಾಂಧೀ ಮಾರ್ಗದಂತೆ ಉಪವಾಸ ಸತ್ಯಾಗ್ರಹ ಮಾಡುವುದನ್ನೂ ಕಾಣಬಹುದು. ಉಪವಾಸವೂ ಒಂದು ಸತ್ಯದ ಆಗ್ರಹವಾಗುತ್ತದೆ. ಅಲ್ಲೆಲ್ಲಾ ಮನಸ್ಸಿನಲ್ಲಿ ಒಂದು ಬಗೆಯ ಅತೃಪ್ತಿ ಅಸಹನೆ ರೋಷಾಗ್ನಿ ಇರುತ್ತದೆ.  ಯಾರದೋ ಮೇಲಿನ ಸಿಟ್ಟಿನಲ್ಲಿ ನಮ್ಮನ್ನು ನಾವೇ ಶಿಕ್ಷಿಸಿಕೊಳ್ಳುವುದು ಮನಸ್ಸಿನ ತೃಪ್ತಿ ಎಂದು ಕಂಡು ಕೊಂಡರೂ ಅದು ಮನಸ್ಸಿನ ಸ್ಥಿಮಿತವನ್ನು ನಾಶಮಾಡುತ್ತದೆ. 

        ಇದು ಮನಸ್ಸಿನಲ್ಲಿ ತುಮುಲವನ್ನು ಹೆಚ್ಚಿಸಿ ಮನಸ್ಸಿನ ಶಾಂತಿಯನ್ನು ಕದಡಿ ಬಿಡುತ್ತದೆ. ಪರಿಣಾಮ ದೇಹದ ಆರೋಗ್ಯವೂ ಬಿಗಡಾಯಿಸಬಹುದು. ಅದೇ ಉಪವಾಸ ನಿರ್ಮಲ ಮನಸ್ಸಿನಿಂದ ಆಚರಿಸಿದಾಗ ಒದಗಿ ಬರುವ ಶಾಂತಿ ಇದೆಯಲ್ಲ ಅದು ನಿನ್ನೆಯ ದಿನದ ಅನುಭವಗಳಲ್ಲಿ ಅತ್ಯಂತ ವಿಶಿಷ್ಟವಾಗಿ ಕಂಡಿತು. ಇಡೀ ದಿನ ನಾನು ಒಂದು ವಿಸ್ಮಯಕರವಾದ ಶಾಂತಿಯನ್ನು ಅನುಭವಿಸಿದೆ. ನಿಜಕ್ಕೂ ಅದೊಂದು ಶ್ರೇಷ್ಠ ಅನುಭವ. ದೈವಾರಾಧನೆಯಲ್ಲಿ ಉಪವಾಸ ಯಾಕಿರಬೇಕು ಎಂಬುದಕ್ಕೆ ಇದು ನಿದರ್ಶನ. ಮನಸ್ಸು ಶಾಂತವಾಗಿರುತ್ತದೆ. ಮಾಡುವ ಕೆಲಸದಲ್ಲಿ ಹೆಚ್ಚು ಗಮನ ಹರಿಯುತ್ತದೆ, ಏಕಾಗ್ರತೆ ಆಸಕ್ತಿ ಎರಡೂ ಮಾಡುವ ಕೆಲಸದಲ್ಲಿ ವಿಶಿಷ್ಟ ಫಲಗಳನ್ನು ಒದಗಿಸುತ್ತದೆ. ಇಡೀ ದಿನ ನಾನು ಅನುಭವಿಸಿದ ಈ ಶಾಂತಿ ಮತ್ತೊಮ್ಮೆ ನನಗೆ ಉಪವಾಸವನ್ನು ಆಚರಿಸುವ ಪ್ರೇರಣೆಯನ್ನು ಒದಗಿಸಿದೆ. 

ಉಪವಾಸ ಹಲವು ರೀತಿಯಲ್ಲಿದೆ. ದಿನ ಇಪ್ಪತ್ತನಾಲ್ಕು ಘಂಟೆಗಳಲ್ಲಿ ಕಡಿಮೆ ಅವಧಿಯಲ್ಲಿ ಆಹಾರ ಸೇವಿಸಿ ಉಳಿದ ಅಧಿಕ ಸಮಯದಲ್ಲಿ ಉಪವಾಸ ಇರುವ ಆರೋಗ್ಯ ಪದ್ಧತಿ ಆಚರಣೆಯಲ್ಲಿದೆ. ಅದೇ ಯೋಗಾಭ್ಯಾಸದ ನಿಯಮದಲ್ಲಿ ಇದು ಸಹಜವಾಗಿ ಆಚರಿಸಲ್ಪಡುತ್ತದೆ. ರಾತ್ರಿ ಸೂರ್ಯಾಸ್ತದ ಮೊದಲು ಆಹಾರ ಸೇವಿಸಿ ಮರುದಿನ ಉಪಾಹಾರದ ತನಕ ಸುಮಾರು ಹದಿನಾರು ಘಂಟೆ ಉಪವಾಸ ಇರುವ ಮಧ್ಯಂತರ ಉಪವಾಸದ ಕ್ರಮ ಒಂದು ರೀತಿ. ಇನ್ನು ಪೂಜಾವಿಧಾನಗಳಲ್ಲಿ ಕಟ್ಟುನಿಟ್ಟಿನ ಉಪವಾಸ ಇದ್ದುಕೊಂಡು ಒಂದು ಬಗೆಯಾದರೆ, ಕೇವಲ ಅನ್ನಾಹಾರವನ್ನು ದೂರವಿಟ್ಟು ಫಲಾಹಾರವನ್ನು ಸೇವಿಸುವ ಒಂದು ಕ್ರಮ ಇನ್ನೊಂದು ಬಗೆ. ಆದರೆ ಆಹಾರ ಸೇವಿಸದೇ ಕೇವಲ ನೀರನ್ನು ಮಾತ್ರ ಸೇವಿಸುವುದು ಬಹಳ ಕಠಿಣ ಉಪವಾಸ ಕ್ರಮ. ಇನ್ನು ಮುಸ್ಲಿಂ ರಲ್ಲಿ ರಂಜಾನ್ ಮಾಸದಲ್ಲಿ ಹಗಲೂ ನೀರನ್ನೂ ಸೇವಿಸದೆ ಉಪವಾಸ ಆಚರಿಸುವ ಕ್ರಮವೂ ಇದೆ. ಹೀಗೆ ಉಪವಾಸದ ಬಗೆಗಳು ಅದರ ಅನುಷ್ಠಾನಗಳು ಬೇರೆ ಬೇರೆ ಬೇರೆಯಾಗಿರುತ್ತದೆ. 

ಹೌದು ಮನುಷ್ಯ ಸದಾ ಅಹಾರವನ್ನು ಹಿಂಸಿಸಿ ತನ್ನ ಹಸಿವನ್ನು ನೀಗಿಸಿಕೊಳ್ಳುತ್ತಾನೆ. ಹಾಗಾಗಿ ಒಂದಷ್ಟು ಸಮಯ ಈ ಹಿಂಸೆಯಿಂದ ದೂರವಿದ್ದರೆ ಅದೊಂದು ವಿಶಿಷ್ಟ ಶಾಂತಿ ಲಭ್ಯವಾಗುತ್ತದೆ. ಅದೇ ಧ್ಯಾನದಲ್ಲಿ ನಾನು ಹಸಿವನ್ನು ದೂರ ಮಾಡಿದೆ. ಕೇವಲ ನೀರನ್ನು ಮಾತ್ರ ಸೇವಿಸಿದೆ. ಅದೂ ನಿನ್ನೆಯ ದಿನ ಸುಮಾರು ಎಳು ಲೀಟರ್ ಗಿಂತಲೂ ಅಧಿಕ  ನೀರು ಸೇವಿಸುವ ಪ್ರೇರಣೆಯಾಗಿ ಹೋದದ್ದು ನನಗೆ ವಿಚಿತ್ರ ಅನುಭವ.  ಬರೀ ನೀರನ್ನೇ ಸೇವಿಸಿ ದಿನ ಕಳೆಯಬಹುದು ಎಂಬ ಅನುಭವವೂ ಸಾಧ್ಯವಾಯಿತು. 

ನಿಯಮಿತವಾಗಿ ಉಪವಾಸ ಆಚರಿಸಬೇಕು. ಆದರೆ ಅದಕ್ಕೆ ದೇಹದ ಕ್ಷಮತೆ ಕೂಡ ಅನಿವಾರ್ಯ. ನಿಯಮಿತವಾಗಿ ಔಷಧಗಳನ್ನು ಸೇವಿಸುವವರಿಗೆ ಇದು ಸಾಧ್ಯವಾಗುವುದಿಲ್ಲ. ವಾಯು ಸಮಸ್ಯೆ ಇರುವವರು ನೀರನ್ನು ಸೇವಿಸುವಾಗ ಆದಷ್ಟು ಬಿಸಿ ನೀರನ್ನು ಸೇವಿಸಿದರೆ ಉತ್ತಮ. ಮೊನ್ನೆ ಐದು ಘಂಟೆಗೆ ಆರಂಭವಾದ ಉಪವಾಸ ಇಂದು ಬೆಳಗ್ಗೆ ಎಂಟು ಘಂಟೆಗೆ ಕಷಾಯ ಕುಡಿಯುವುದರೊಂದಿಗೆ ಮುಕ್ತಾಯಗೊಳಿಸಿದೆ. ಹೀಗೆ ಉಪವಾಸ ಒಂದು ದಿವ್ಯ ಅನುಭವ ಒದಗಿಸಿದ್ದು ಸುಳ್ಳಲ್ಲ. ಇದರ ನಡುವೆ ತೀರಾ ಖಾಲಿ ಹೊಟ್ಟೆಯಲ್ಲಿ  ಮುಂಜಾನೆಯ  ಯೋಗಾಭ್ಯಾಸ ಹೇಗಿರಬಹುದು ಎಂದು ತೀವ್ರವಾದ ಕುತೂಹಲವಿತ್ತು. ಕುತೂಹಲದಂತೆ ಅದೂ ಒಂದು ವಿಚಿತ್ರ ಅನುಭವವನ್ನು ಒದಗಿಸಿಕೊಟ್ಟಿದೆ. ಈ ಹೊಸ ಅನುಭವ ಹೊಸ ಉಪವಾಸಕ್ಕೆ ನಾಂದಿ ಹಾಡಿದೆ. 






Tuesday, September 26, 2023

ಸನಾತನ ಸಲ್ಲದು ಸಣ್ಣತನ

ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಂ

ಧರ್ಮ-ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ॥


ಭೂಮಿಯ ಮೇಲೆ ಗಾಳಿ ಇಲ್ಲದೇ ಇದ್ದರೆ ಏನಾಗಬಹುದು? ಹೀಗೆ ಒಂದು ಪುಟ್ಟ ಮಗುವಿನಲ್ಲಿ ಕೇಳಿದರೆ ಅದರೆ ಉತ್ತರ "ಚಿಪ್ಸ್ ಪ್ಯಾಕೆಟ್ ನಲ್ಲಿ ಗಾಳಿಯೇ ಇರುತ್ತಿರಲಿಲ್ಲ"  ಎಂದು ಹೇಳಬಹುದು.  ಸಮಸ್ಯೆಯನ್ನು ಆ ಮಗು ಕಾಣುವ ರೀತಿಯದು. 

ತಾತ್ವಿಕ ವಿಚಾರಗಳ  ಮಂಡನೆಯಲ್ಲಿ ಮೇಲೆ ಹೇಳುವ  ಒಂದು ಶ್ಲೋಕ ಸಾಮಾನ್ಯವಾಗಿರುತ್ತದೆ. ಒಂದಷ್ಟು ಸಂಸ್ಕೃತ ಪದಗಳು ಸೇರಿಕೊಂಡರೆ ತಾತ್ವಿಕ ವಿಚಾರಗಳು ಗಂಭೀರವಾಗಿಬಿಡುತ್ತವೆ. ಅದು ಸಂಸ್ಕೃತದ ಶಕ್ತಿ . ಇಷ್ಟಿದ್ದರೂ ಸಂಸ್ಕೃತ ಎಂದೊಡನೆ ಒಂದು ಮಡಿವಂತಿಗೆ, ಹಳದಿ ದೃಷ್ಟಿ ಇದ್ದೇ ಇರುತ್ತದೆ. ಮೇಲೆ ಹೇಳಿದ ಭಗವದ್ಗೀತೆಯಲ್ಲಿ ಭಗವಂತ ಉಲ್ಲೇಖಿಸುವ ಧರ್ಮ ಯಾವುದು? ಹಾಗೆ ವಿಶ್ಲೇಷಣೆ ಮಾಡುತ್ತಿದ್ದರೆ, ಸಮಗ್ರ ಭಗವದ್ಗೀತೆಗೆ ಹಲವಾರು ಅರ್ಥಗಳು ಹುಟ್ಟಿಕೊಳ್ಳುತ್ತವೆ. ನೋಡುವ ದೃಷ್ಟಿಕೋನದಲ್ಲಿ ನಮ್ಮ ದೃಷ್ಟಿ ಸಾಮಾರ್ಥ್ಯ ಎಷ್ಟಿದೆಯೋ ಅದನ್ನು ಅವಲಂಬಿಸಿ ಅದು ವಿಶಾಲವಾಗುತ್ತಾ ಹೋಗುತ್ತದೆ. ಹಾಗೆ ಕಾಣಿಸಿಕೊಳ್ಳದೇ ಇದ್ದರೆ ಅದು ಭಗವದ್ಗೀತೆ ಎಂದಾಗುವುದಾದರೂ ಹೇಗೆ? ಆದರೂ ಧರ್ಮ ಎಂದು ಭಗವಂತ ಯಾವುದನ್ನು ಹೇಳಿರಬಹುದು. ಸಾಮಾನ್ಯ ತರ್ಕಕ್ಕೆ ಒಡ್ಡಿಕೊಳ್ಳುತ್ತಾ ಹೋದರೆ ಮಹಾಭಾರತದಲ್ಲಿ ಭಗವಂತನ ಅವತಾರ ಯಾವ ಧರ್ಮ ಉದ್ದರಿಸುವುದಕ್ಕೆ ಆಗಿರಬಹುದು? ಮಹಾ ಭಾರತದಲ್ಲಿ ಯಾವ ಧರ್ಮ ನಿರ್ದಿಷ್ಟವಾಗಿ ಸ್ಥಾಪನೆಯಾಯಿತು?  ಆ ಧರ್ಮ ನಾವು ಈಗ ಯಾವುದನ್ನು ಧರ್ಮ ಎಂದು ಕಾಣುತ್ತೇವೆಯೋ ಆ ಧರ್ಮ ಖಂಡಿತ ಆಗಿರಲಿಕ್ಕಿಲ್ಲ. ಮಹಾಭಾರತದಲ್ಲಿ ಭಗವಂತ ಉದ್ದರಿಸಿದ ಧರ್ಮ ಯಾವುದು? ಬ್ರಾಹ್ಮಣ ಧರ್ಮವೇ? ಕ್ಷಾತ್ರ ಧರ್ಮವೇ? ಅಥವಾ ಇನ್ನಿತರ ವರ್ಣರೂಪದ ಧರ್ಮಗಳೇ? ಯಾವ ಬ್ರಾಹ್ಮಣನನ್ನೂ ಭಗವಂತ ನಿರ್ದಿಷ್ಟವಾಗಿ ಉದ್ದರಿಸಲಿಲ್ಲ. ಒಂದು ವೇಳೆ ಭಗವಂತ ಬ್ರಾಹ್ಮಣಧರ್ಮವನ್ನು ಉದ್ದರಿಸುತ್ತೇನೆ ಎಂದಿದ್ದರೆ  ಈಗಿನ ವಿರೋಧಿ ಮನಸ್ಸುಗಳ ಪ್ರತಿಕ್ರಿಯೆಗಳು ಹೇಗಿರುತ್ತಿದ್ದವು?  ಅದರೂ ನಾವು ಒಂದು ಪೂರ್ವಾಗ್ರಹದ ಧರ್ಮದ ದೃಷ್ಟಿಕೋನದದಿಂದಲೇ ಭಗವದ್ಗೀತೆಯನ್ನು ಕಾಣುವಾಗ ಈ ಉತ್ತರ ಕೊಡಲಾಗದ ಪ್ರಶ್ನೆಗಳು ಎದುರಾಗುತ್ತವೆ. 

ಭಗವಂತ ಹೇಳಿದ ಧರ್ಮ ಯಾವುದು? ಅಥವ ಧರ್ಮ ಎಂಬುದರ ಅರ್ಥವೇನು? ಅದನ್ನು ಯೋಚಿಸದೇ ನಾವು ಧರ್ಮವನ್ನು ಯಾವ ದೃಷ್ಟಿಕೋನದಿಂದ ಕಾಣುತ್ತೇವೆಯೋ ಅದೇ ದೃಷ್ಟಿಯಲ್ಲಿ ನಂಬಿಬಿಡುತ್ತೇವೆ. ಮುಖ್ಯವಾಗಿ ನಮ್ಮ ಕಣ್ಣಿಗೆ ಬಣ್ಣದ ಪರೆಯನ್ನು ಹಿಡಿದು ಅದೇ ಬಣ್ಣದ ಬೆಳಕಿನಲ್ಲಿ ಧರ್ಮವನ್ನು ಕಂಡು ಅದೇ ಬಣ್ಣ ಎಂದು ಹೇಳುವ ಒಂದು ಬಗೆಯ ಪಾಮರ ಸ್ವಭಾವವನ್ನು ಪ್ರದರ್ಶಿಸುತ್ತೇವೆ.  ಭೂಮಿ ಮೇಲೆ ಗಾಳಿ ಎಂಬುದು ಇಲ್ಲದಿದ್ದರೆ ಏನಾಗಬಹುದು ಎಂದು ಈಗಿನ ಮಗುವಿನಲ್ಲಿ ಕೇಳಿದರೆ ಆ ಮಗು ಉತರಿಸುತ್ತದೆ, " ಗಾಳಿ ಇಲ್ಲದೇ ಇದ್ದರೆ ಚಿಪ್ಸ್ ಪ್ಯಾಕೆಟ್ ನಲ್ಲಿ ಗಾಳಿಯೇ ಇರುತ್ತಿರಲಿಲ್ಲ"  ಬಹಳ ವಿಡಂಬನೆಯಾಗಿರಬಹುದು ಈ ಉತ್ತರ. ಆ ಮಗುವಿನ ಅರಿವಿನ ಪ್ರಪಂಚದ ವಿಸ್ತಾರ ಅದು. ಹಾಗೆಂದು ಭೂಮಿಯ ಮೇಲಿನ ಗಾಳಿಯ ಅಸ್ತಿತ್ವದ ಬಗೆಗಿನ ಜ್ಞಾನ ಶೂನ್ಯವಾಗುವುದಿಲ್ಲ. ಆ ಮಗುವಿನ ದೃಷ್ಟಿ ಕೋನ ದೃಷ್ಟಿ ಸಾಮಾರ್ಥ್ಯ ಅಷ್ಟಕ್ಕೆ ಸೀಮಿತ. ಹಾಗಾಗಿ ಈಗ ಧರ್ಮ ಎಂಬುದು ಅನರ್ಥವನ್ನು ಕಲ್ಪಿಸಿಕೊಂಡಲ್ಲಿ ಧರ್ಮದ ಸ್ಥಾನ ಭ್ರಷ್ಟವಾಗುವುದಿಲ್ಲ, ಬದಲಿಗೆ ಮನುಷ್ಯನ ಬುದ್ಧಿ ಭ್ರಷ್ಟವಾಗುತ್ತದೆ. 

ಬೀಜ ಮೊಳಕೆಯೊಡೆಯುತ್ತದೆ, ಗಿಡವಾಗುತ್ತದೆ,ಮರವಾಗುತ್ತದೆ, ಹೂ ಅರಳುತ್ತದೆ, ಕಾಯಿ ಹಣ್ಣಾಗುತ್ತದೆ. ಇದು ಪ್ರಕೃತಿ ಧರ್ಮ.  ಈ ಜೀವರಾಶಿಗಳು ಚರಾಚರವಸ್ತುಗಳು ಸಹಜವಾದ ಒಂದು ಧರ್ಮದ ಅಸ್ತಿತ್ವವನ್ನು ಹೊಂದಿದೆ. ಆ ಆವರಣದ ಒಳಗೆ ಇರುವುದೇ ಜಗತ್ತು. ಈ ಸಹಜ ಧರ್ಮಗಳನ್ನು ಮೀರುವುದೇ ಧರ್ಮಗ್ಲಾನಿ ಎನಿಸಲ್ಪಡುತ್ತದೆ. ಪುರಾಣದಲ್ಲಿ ಶ್ರೀಕೃಷ್ಣ ಕಾಳಿಂಗ ಮರ್ದನ ಮಾಡುವ ಕಥೆ ಇದೆ. ಕಾಳಿಂಗ ಮರ್ದನ ಆತ ಮಾಡಿದ್ದಾನೆ ಎಂದರೆ ಇದ್ದ ಎಲ್ಲ ಸರ್ಪಗಳನ್ನು ಕೊಂದು ನಾಶ ಮಾಡಬೇಕೆಂದು ಅರ್ಥವಲ್ಲ. ಉಳಿದ ಜೀವಸಂಕುಲಗಳನ್ನು ಭಗವಂತ ಹೇಗೆ ಕಾಣುತ್ತಾನೋ  ಅದನ್ನೆ ಸರ್ಪದಲ್ಲು ಕಾಣುತ್ತಾನೆ. ಹಾಗಾದರೆ ಕಾಳಿಂಗ ಮರ್ದನ ಯಾಕಾಯಿತು? ಇದರ ಆಳವನ್ನು ತಿಳಿದರೆ ಧರ್ಮಾಧರ್ಮದ ಅರಿವು ಸಾಧ್ಯವಾಗುತ್ತದೆ. ಅಧರ್ಮ ಎಷ್ಟು ಆಳದಲ್ಲಿದ್ದರೂ ಭಗವಂತ ಅದರ ಅಸ್ತಿತ್ವವನ್ನು ಬಯಸುವುದಿಲ್ಲ. ಹಾಗಾಗಿ ಆಳದಲ್ಲಿದ್ದ ಸರ್ಪದ ಮರ್ದನವಾಗುತ್ತದೆ. 

ಧರ್ಮ ಎಂದರೆ ಏನು? ಸಕಲ ಜೀವರ ರಾಶಿಗಳಲ್ಲಿ ಶ್ರೇಷ್ಠ ಮನುಷ್ಯ. ಆತ ನಗುತ್ತಾನೆ, ಅಳುತ್ತಾನೆ, ಮಾತನಾಡುತ್ತಾನೆ. ಹೀಗೆ ಉಳಿದೆಲ್ಲ ಪ್ರಾಣಿಗಳಿಗಿಂತ ಭಿನ್ನವಾಗಿದ್ದಾನೆ. ಅದು ಧರ್ಮ.  ನಾಯಿ ನಿಕೃಷ್ಟವಾಗಿ ಹೇಳಿದರೂ, ಒಂದು ಬೀದಿ ನಾಯಿಕೂಡ ವ್ಯಕ್ತ ಪಡಿಸುವ ಭಾವನೆಯನ್ನು ಬೇರೆ ಪ್ರಾಣಿಗಳು ವ್ಯಕ್ತ ಪಡಿಸುವುದಿಲ್ಲ. ಸಂತಸವಾಗುವಾಗ ಬಾಲ ಅಲ್ಲಾಡಿಸುತ್ತದೆ. ಅದು ಅನುಭವಿಸುವ ಭಾವನೆಗಳನ್ನು ತನ್ನ ಕಣ್ಣು ಕಿವಿಯಿಂದ ಅದು ವ್ಯಕ್ತ ಪಡಿಸುವ ರೀತಿ ಬೇರೆ ಪ್ರಾಣಿಗಳಿಗೆ ಇರುವುದಿಲ್ಲ. ಹುಲಿ ಸಿಂಹ ಎಂದಾದರೂ ನಗುವುದನ್ನು ನೋಡುವುದಕ್ಕೆ ಸಾಧ್ಯವೇ? ಎಂತಹ ರುಚಿಕರ ಮಾಂಸಾಹರ ಸಿಕ್ಕರೂ ಅವುಗಳು ವ್ಯಗ್ರತೆಯಿಂದಲೇ ನೋಡುತ್ತದೆ. ಅದಕ್ಕೆ ಸಂತೋಷವಾದರೂ ಮುಖ ವ್ಯಗ್ರವಾಗಿಯೇ ಇರುತ್ತದೆ. ಅದು ಅದರ ಸಹಜ ಧರ್ಮ. ಒಂದು ವೇಳೆ ಅದು ನಗುವುದಕ್ಕೆ ತೊಡಗಿದರೆ ವಿಚಿತ್ರ ಎನಿಸಬಹುದು.   ಇದನ್ನೇ ಪ್ರಕೃತಿ ಧರ್ಮ ಎನ್ನುವುದು. ಈ ಪ್ರಕೃತಿ ಸಾರುವ ಧರ್ಮಕ್ಕೆ ಗ್ಲಾನಿಯಾಗುವಾಗ ಮೇಲೆ ಹೇಳಿದಂತೆ ಸಂಭವಾಮಿ ಯುಗೇ ಯುಗೇ ಎಂದಾಗುತ್ತದೆ. ನಾವು ಇವತ್ತು ಹುಲಿ ಸಿಂಹಗಳನ್ನು ನಗಿಸುವುದಕ್ಕೆ ಪ್ರಯತ್ನಿಸುತ್ತೇವೆ. ಪ್ರಕೃತಿಯ ಧರ್ಮಗಳನ್ನು ಮೀರಿ ಬದುಕುತ್ತೇವೆ. ಇಂತಹ ಜೀವನ ಕ್ರಮದಲ್ಲಿ ಸನಾತನ ಎಂಬುದು ರೋಗಗ್ರಸ್ಥವಾಗಿ ಕಾಣುತ್ತದೆ. ಅದು ಸನಾತನದ ದೋಷವಲ್ಲ. 

ಈ ಪ್ರಪಂಚದ ಉಗಮ ಅಸ್ತಿತ್ವ ಯಾವಾಗಿನಿಂದ ಆರಂಭವಾಯಿತು. ಈ ಭೂಮಿ ಈ ಬಾಹ್ಯಾಕಾಶ ಈ ಸೂರ್ಯನಂತೆ ಮತ್ತೊಂದು ಸೂರ್ಯ ಇದೆಯೋ ಇಲ್ಲವೋ ಎಂಬಷ್ಟರ ಮಟ್ಟಿಗೆ ತೆರೆದುಕೊಂಡ ಆ ಜ್ಞಾನದ ಹರಿವಿನ ಮೂಲದಲ್ಲೇ ಇದೆ ಸನಾತನ. ಅದು ಈಗ ತಿಳಿಯುವಂತೆ ಒಂದು ಧರ್ಮಕ್ಕೆ ಸೀಮಿತವಾಗಿ ಉಳಿದಿದೆ ಎಂದನಿಸುವುದಿಲ್ಲ. ಉಳಿದೆಲ್ಲ ಧರ್ಮಗಳಿಗೆ ಉಗಮದ ಕಲ್ಪನೆ ಇರಬಹುದು. ಆದರೆ ಈ ಸನಾತನ  ಇನ್ನೂ ನಿಗೂಢವಾಗಿರುವುದೇ ಅದರ ವೈಶಿಷ್ಟ್ಯ.  ಆ ಸನಾತನವನ್ನು ನಮ್ಮ ಅಳತೆಗೋಲಲ್ಲಿ ಅಳೆಯುವ ಪ್ರಯತ್ನ ಅದು ಮೂರ್ಖತನವಾಗುತ್ತದೆ.  ಜೇಸುದಾಸ್, ಬಾಲ ಮುರಳಿ ಕೃಷ್ಣ ಭೀಮಸೇನ ಜೋಷಿ ಹೀಗೆ ಸಂಗೀತರತ್ನಗಳ ಬಗ್ಗೆ ಹೇಳುವಾಗ ಅವರು "ಗಾಯಕ"  ಎಂದಷ್ಟೇ ಹೇಳಿದರೆ ಅದು ನಾವು ಕಂಡ ಅಳತೆ ಗೋಲಾಗುತ್ತದೆ. ಹೊರತು ನಿಜವಾದ ಮಾನದಂಡವಾಗುವುದಿಲ್ಲ. ಹಾಡುವವರೆಲ್ಲ ಗಾಯಕರು. ಆದರೆ ಈ ಪ್ರತಿಭೆಗಳು ಅಷ್ಟಕ್ಕೇ ಸೀಮಿತವಲ್ಲ. ಯಾವುದು ಹೇಗೆ ಹಾಡಿದರೂ ಆತ ಗಾಯಕ. ಹಾಗಿದ್ದರೆ ಇವರ ಸಾಧನೆ ಪ್ರತಿಭೆಗೆ  ಕೇವಲ ಗಾಯಕ ಎಂದರೆ ಸಾಕೇ?   ಸನಾತನ ಅರಿವು ಇರುವುದೇ ಇಂತಹ ಜ್ಞಾನದಲ್ಲಿ. ಅದನ್ನು ಅರಿಯಬೇಕಾದರೆ ಅದರ ಆಳವನ್ನು ಇಳಿಯಬೇಕು. 

ಭೋರ್ಗರೆಯುವ ಸಾಗರದ ಬದಿಯಲ್ಲಿ  ನಿಂತು ನೋಡಿದರೆ ಕೇವಲ ಕೆಲವು ಅಲೆಗಳನ್ನಷ್ಟೇ ನಾವು ಕಾಣಬಹುದು.  ದೂರದಿಂದ ಕಂಡವರು ಹೇಳಬಹುದು ಸಮುದ್ರ ಅದು . ಇಳಿಯಬೇಡ? ನಾಶವಾಗುತ್ತಿ. ಸಮುದ್ರ ಅದು ಮರಣ ಸದೃಶ.  ಹೀಗೆ ಭಯ ಹುಟ್ಟಿಸುವವರು ಇರಬಹುದು. ಆದರೆ ಸಾಧಕ ಸಾಗರದ ಆಳವನ್ನು ಅರಿಯುವ ಪ್ರಯತ್ನ ಮಾಡುತ್ತಾನೆ. ಆಳದ ಮುತ್ತು ರತ್ನಗಳನ್ನು ಗುರುತಿಸುತ್ತಾನೆ. ಸಾಗರ ಗರ್ಭದ ಪ್ರಪಂಚವನ್ನು ಕಾಣುತ್ತಾನೆ. ಮೇಲೆ ನಿಂತವನು ಅದು ಮರಣ ಸದೃಶ ಎಂದು ಹೇಳಿ ತನ್ನ ರೋಗ ಗ್ರಸ್ಥ ಮನಸ್ಸನ್ನು ಅಲ್ಲಿ ಆರೋಪಿಸುತ್ತಾನೆ.  ಸನಾತನ ಎಂದರೆ ಅದು ಸಾಗರದಂತೆ. ಅಳತೆ ಕಣ್ಣಿಗೆ ಕಾಣಬಹುದು. ಆದರೆ ಅದು ಸತ್ಯವಾಗುವುದಿಲ್ಲ. ಅದು ಅಂತಿಮವಾಗುವುದಿಲ್ಲ. ಇನ್ನೂ ಇದೆ ಭಾವವನ್ನು ಕೆರಳಿಸುತ್ತ ಪ್ರಚೋದಿಸುತ್ತಾ ಸಾಗುತ್ತದೆ. ಇದರ ಬಗ್ಗೆ ತಿಳಿಯದವರು ಅದನ್ನು ಢೆಂಗ್ಯೂ ಕೊರೋನಕ್ಕೆ ಹೋಲಿಸುತ್ತಾರೆ. ಆದರೆ ಸನಾತನ ತೋರಿಸಿಕೊಡುತ್ತದೆ ಈ ಸಾಂಕ್ರಾಮಿಕಗಳು ಕೇವಲ ದೇಹವನ್ನು ಬಾಧಿಸುತ್ತದೆ, ಅದಕ್ಕೆ ಮಿಕ್ಕಿದ ಭವರೋಗಗಳು ಇದೆ. ಆ ಭವರ ರೋಗವನ್ನು ಕಳೆಯುವ ಮಂತ್ರ ಇದ್ದರೆ ಅದು ಸನಾತನದಲ್ಲಿ.ಅಲ್ಲಿ ಕೇವಲ ಈ ಮಾರಕ ರೋಗಗಳಿಗೆ ಸೀಮಿತವಲ್ಲ. ಅದಕ್ಕೂ ಮಿಕ್ಕಿದ ಭವರೋಗದ ಅರಿವಾಗುವಾಗ ಸನಾತನ ಎಂಬುದು ರೋಗಗ್ರಸ್ಥ ಎಂದನಿಸುವುದಿಲ್ಲ. ದೇಹದ ಮೇಲೆ ಪ್ರೀತಿ ಇದ್ದವನಿಗೆ ಹಸಿವು ಎಂಬುದು ಬ್ರಹ್ಮಾಂಡ ಸಮಸ್ಯೆಯಾಗುತ್ತದೆ. ಆದರೆ ಅದನ್ನು ಮೀರಿದವನಿಗೆ ಹೊಟ್ಟೆಯ ಹಸಿವು ಹಸಿವಾಗಿ ಕಾಣುವುದಿಲ್ಲ. ಅದು ಪರೀಕ್ಷೆಯಾಗಿ ಕಾಣುತ್ತದೆ. ಕೇವಲ ಲೌಕಿಕ ಜ್ಞಾನದ ಪರಿಧಿಯಲ್ಲಿ ಹೊರಳಾಡುವವನು ಈ ಹಸಿವು ಮುಕ್ತವಾಗಬೇಕು ಎಂದು ಕನವರಿಸುತ್ತಾನೆ. ಇದೆಲ್ಲವನ್ನು ಮೀರಿದ ಹಸಿವು ಇದೆ ಎಂದು ತೋರಿಸುವುದೇ ಸನಾತನ. ಜಗತ್ತು ಇಂದು ಈ ಸನಾತನದ ಹಿಂದೆ ಓಡಿ ಬರುತ್ತದೆ. ಹಿಂದೂ ಸಂಸ್ಕೃತಿ ಇದನ್ನೇ  ಜಗತ್ತಿಗೆ ತೋರಿಸಿ ಕೊಡುತ್ತಿರುವುದು.  ಇದನ್ನು ರೋಗ ಗ್ರಸ್ಥ ಎಂದರೆ ಅದು ಕಾಣುವ ದೃಷ್ಟಿ ರೋಗಿಷ್ಠವಾಗಿರುತ್ತದೆ. 

ಕೇವಲ ಸನಾತನ ಎಂಬ ಶಬ್ದದ ಅರ್ಥ  ವಿವರಿಸಿದರೆ ಅದು ಅಷ್ಟಕ್ಕೇ ಸೀಮಿತವಾಗುವುದಿಲ್ಲ. ಸನಾತನ ಅದು ಮತ್ತೂ ವಿಶಾಲವಾಗಿದೆ. ಅದು ಎಷ್ಟು ಕಾಣಲು ಸಾಧ್ಯವಾಯಿತೋ ಅದು ನಮ್ಮ ದೃಷ್ಟಿಯ ಪರಿಧಿ. ಆದರೆ ಸನಾತನ ಅದು ಇನ್ನೂ ವಿಶಾಲವಾಗಿದೆ. ಸನಾತನದಲ್ಲಿ  ಜಾತಿ ಭೇದ, ಅಸ್ಪೃಶ್ಯತೆ ಕಂದಾಚಾರ ಮೂಢನಂಬಿಕೆ ಇಷ್ಟನ್ನು ಮಾತ್ರ ಕಾಣುವುದು ಅದು ಸಣ್ಣಮನಸ್ಸು. ಸನಾತನ ತೋರಿಸುವ ಆಧ್ಯಾತ್ಮ ಜಗತ್ತನ್ನು ಕಾಣಬೇಕಾದರೆ ಅದಕ್ಕೆ ನಿರಂತರ ಸಾಧನೆ ಅವಶ್ಯ. ಅದನ್ನು ಕಾಣುವುದಕ್ಕೆ ಕೈಲಾಗದವರು ಆಡುವ ಮಾತು ಅಲ್ಲಿ ಮೌಢ್ಯವಿದೆ, ವರ್ಣ ಭೇದವಿದೆ. ಆದರೆ ಆಧ್ಯಾತ್ಮದ ಹಾದಿಯಲ್ಲಿ ನಡೆದು ಹೋಗಬೇಕು ಆಗ ಅರಿವಿಗೆ ಬರುತ್ತದೆ ಅಲ್ಲಿ ಯಾವುದೇ ಧರ್ಮವಿಲ್ಲ. ಬ್ರಾಹ್ಮಣ, ಶೂದ್ರ ಈ ವೈಪರೀತ್ಯಗಳಿಲ್ಲ. ಪ್ರಪಂಚವೇ ಇಂದು ಈ ಆಧ್ಯಾತ್ಮಿಕ ಜ್ಞಾನಕ್ಕೆ ಬೆರಗಾಗಿ ಹೋಗಿದೆ. ಇಲ್ಲವಾದರೆ ಇಲ್ಲಿಯ ಯೋಗ ಧ್ಯಾನ ಈ ಜೀವನ ಯಾಕೆ ಜಗತ್ತು ಅಂಗೀಕರಿಸುತ್ತದೆ? ಪುರಾಣದ ಋಷಿಗಳ ತಪ್ಪಸ್ಸು ಗಮನಿಸಿದರೆ ಅರಿವಾಗುತ್ತದೆ. ಅವರು ಯಾಕಾಗಿ ತಪಸ್ಸು ಮಾಡುತ್ತಾರೆ? ಅದರ ಘನ ಉದ್ದೇಶ ಏನು? ಯಾವ ಮೂರ್ತಿಯನ್ನು ಇಟ್ಟು ಪೂಜೆ ಮಾಡುತ್ತಾರೆ? ಇದಕ್ಕೆಲ್ಲ ಉತ್ತರ ಕಾಣುತ್ತಾ ಹೋದರೆ ಈ ಜ್ಞಾನದ ಅರಿವಿನ ವಿಸ್ತಾರ ತಿಳಿಯುವುದಕ್ಕೆ ಸಾಧ್ಯವಾಗುತ್ತದೆ. ಒಬ್ಬ ಋಷಿ ಅಥವಾ ಸನ್ಯಾಸಿ ತನಗಾಗಿ ಏನನ್ನು ಕೇಳುವುದಿಲ್ಲ. ಯಾಕೆಂದರೆ ಲೌಕಿಕವಾದ ಯಾವ ವಸ್ತು ಅವನು ಬಯಸಿದರೂ ಆತ ಸನ್ಯಾಸಿಯಾಗಲಾರ. ಯಾವುದೇ ಧರ್ಮಕ್ಕೆ ಸೀಮಿತವಾದರೂ ಆತ ಸನ್ಯಾಸಿಯಾಗಲಾರ. ಕೇವಲ ಕೃಪಣನಾಗುತ್ತಾನೆ. ಸನ್ಯಾಸಿ ಎಂಬ ಪದವಿಯ ಅರ್ಹತೆಯದು. ಕ್ಷತ್ರಿಯನಾಗಿ  ಬ್ರಹ್ಮ ತೇಜಸ್ಸನ್ನು ಗಳಿಸಿದ  ವಿಶ್ವಾಮಿತ್ರ, ನಿಕೃಷ್ಟನಾದರೂ  ರಾಮನಾಮದ ಹಿಂದೆ ಹೋದ ವಾಲ್ಮೀಕಿ...ಇಲ್ಲೆಲ್ಲೂ ವರ್ಣ ಭೇದದ ಸೋಂಕಿಲ್ಲ.  ಅವರೆಲ್ಲ  ಕಂಡ ಆಧ್ಯಾತ್ಮಿಕ ಲೋಕ ಎಂಬುದು ಕೇವಲ ಕಥೆಯಲ್ಲ. 

ಹಿಂದೂ ಅಂದರೆ ಮೂರ್ತಿ ಪೂಜೆ, ಅಸಂಖ್ಯ ದೇವರುಗಳು ರಾಮ ಕೃಷ್ಣ ಈಶ್ವರ ಗಣಪತಿ....ಮೂಢನಂಬಿಕೆಗಳು. ಆದರೆ ಇದಕ್ಕೆಲ್ಲ ಮೂಲವಾದ ಧ್ಯಾನ ಅಥವಾ ತಪಸ್ಸಿನಲ್ಲಿ ಯಾವ ಮೂರ್ತಿಯನ್ನು ಪೂಜಿಸುವುದಿಲ್ಲ. ಯಾವ ದೇವರನ್ನೂ ಆರಾಧಿಸುವುದಿಲ್ಲ. ಕೇವಲ ಅಂತರಂಗದಲ್ಲಿರುವ ಪರಮಾತ್ಮ ದರ್ಶನ. ಈ ಪರಮಾತ್ಮ ಎಂಬ ಕಲ್ಪನೆಯನ್ನು ಕೊಟ್ಟದ್ದೇ ಸನಾತನ ಧರ್ಮ. ಮೂರ್ತಿ ಎಂಬುದು ಕೇವಲ ಸಂಕೇತ. ಅದರಾಚೆಗಿರುವ ಭಾವನೆಗೆ ಮಿತಿ ಇರುವುದಿಲ್ಲ. ಇಲ್ಲಿ ಕೇವಲ ಮೂರ್ತಿಯಲ್ಲಿ ಮಾತ್ರ ದೇವರನ್ನು ಕಾಣುವುದಿಲ್ಲ. ಗಿಡ ಮರ ಪ್ರಾಣಿ ನದಿ ಸಮುದ್ರ ಭೂಮಿ ಹೀಗೆ ಪ್ರಕೃತಿಯನ್ನೇ ದೇವರಾಗಿ ಕಾಣುವ ಭಾವನೆ ಇದೆ. ಬೇರೆ ಯಾವ ಧರ್ಮದಲ್ಲಿ ಈ ಭಾವನೆ ಇರುವುದಕ್ಕೆ ಸಾಧ್ಯ.? ಹೀಗೆ ಅಂತರಂಗದ ದೈವಸ್ವರೂಪವನ್ನು ತೋರಿಸಿಕೊಟ್ಟದ್ದೇ ಸನಾತನ ಧರ್ಮ. ಅದು ಪರಮಾತ್ಮ ಹೇಳುವ ಪ್ರಕೃತಿ ಧರ್ಮ. ಅದು ಒಂದು ಜಾತಿಯಲ್ಲ. ನಿರ್ಧಿಷ್ಟವಾಗಿ ಹೇಳಿ ಅಷ್ಟಕ್ಕೆ ಸೀಮಿತವಾಗಿಸುವ ವಿಷಯವೂ ಇದಲ್ಲ. ಇದರ ಬಗ್ಗೆ ತಿಳಿಯಬೇಕಾದರೆ ಅದರಲ್ಲಿ ಇಳಿದು ನೋಡಬೇಕು. ಇಲ್ಲವಾದರೆ ಸಮುದ್ರದ ಬದಿಯಲ್ಲಿ ನಿಂತು ಕೊಂಡು ಅದನ್ನು ಅಳತೆ ಮಾಡಿದಂತೆ, ಅದು ಮೂರ್ಖತನವಾಗುತ್ತದೆ. 

ಹಿಂದೆ ಮುಂದೆ ನೋಡದೆ ಬ್ರಾಹ್ಮಣ್ಯವನ್ನು ಜರಿಯುವುದನ್ನು ಕಾಣುತ್ತೇವೆ. ವಾಸ್ತವದಲ್ಲಿ ಬ್ರಹ್ಮ ಎಂದರೆ ಏನು? ಅದು ಅರ್ಥವಿಲ್ಲದ ಪದವಲ್ಲ. ಆ ಅರ್ಥಕ್ಕಿರುವ ವಿಶಾಲತೆ ತಿಳಿದರೆ ಬ್ರಾಹ್ಮಣ್ಯದ ಪವಿತ್ರತೆ ಅರಿವಾಗುತ್ತದೆ. ಯಾವುದು ಜಗತ್ತಿನಲ್ಲಿ ಅತ್ಯಂತ ದೊಡ್ಡದು ಅದೇ ಬ್ರಹ್ಮ. ಹಾಗಾಗಿ ಜಗತ್ತನ್ನು ಬ್ರಹ್ಮಾಂಡಕ್ಕೆ ಹೋಲಿಸುವುದು. ಅದೇ ಮುಂದು ವರೆದು ಬ್ರಾಹ್ಮಣನಾದವನು ಮುಂಜಾನೆ ಎದ್ದು ಸಂಧ್ಯಾ ಕರ್ಮವನ್ನು ಆಚರಿಸುತ್ತಾನೆ. ಇಲ್ಲಿ ಯಾವ ಮೂರ್ತಿಯೂ ಇಲ್ಲ. ಯಾವ ಸಂಕಲ್ಪವೂ ಇರುವುದಿಲ್ಲ. ಕೇವಲ ತನ್ನ ಪಾಪಕ್ಷಯ, ದುರಿತ ಪರಿಹಾರಕ್ಕೆ ಆತ ಆಚರಿಸುವ ಕರ್ಮ. ಪಾಪ ಏನು?  ದುರಿತ ಏನು? ಅದು ಮನುಷ್ಯನ ಹುಟ್ಟಿನಲ್ಲೇ ಇರುತ್ತದೆ. ಈ ಜ್ಞಾನ ಲಭ್ಯವಾಗಬೇಕಾದರೆ ಅದರ ಆಳಕ್ಕೆ ಇಳಿಯಬೇಕು. ಅದು ತಿಳಿಯದೇ ಸನಾತನ ಎಂಬುದುನ್ನು ತುಚ್ಛವಾಗಿ ಕಂಡರೆ ಅದು ಸನಾತನ ಧರ್ಮದ ರೂಪವೂ ಅಲ್ಲ, ವಿಸ್ತಾರವೂ ಅಲ್ಲ. ಸನಾತನ ಧರ್ಮ ಯಾವ ಜಾತಿಭೇದ ವರ್ಣಭೇದವನ್ನು ಬೋಧಿಸುವುದಿಲ್ಲ. ಅವುಗಳೆಲ್ಲವೂ ನಂತರ ಅದರ ಮೇಲೆ ಬಳಿದ ಬಣ್ಣಗಳು. ಹಿಂದೂ ಧರ್ಮ ಇದೆಲ್ಲವನ್ನು ಕಳೆದುಕೊಂಡು ಕಾಲ ಕಾಲಕ್ಕೆ ಬದಲಾಗುತ್ತಾ ಪ್ರಕೃತಿ ಧರ್ಮಕ್ಕೆ ಸ್ಪಂದಿಸುತ್ತಾ ಎಲ್ಲ ಧರ್ಮಗಳನ್ನು ತನ್ನಲ್ಲಿ ಸೇರಿಸುತ್ತಾ ಬಂದಿದೆ. ಜಗತ್ತಿನ ಬೇರೆ ಯಾವ ಧರ್ಮವೂ ಬದಲಾಗದಂತೆ ಇದು ಬದಲಾಗಿದೆ. ಯಾಕೆಂದರೆ ಇದರ ಮೂಲದಲ್ಲಿ ಯಾವುದು ಇದೆಯೋ ಅದು ಬಣ್ಣ ಕಳಚಿ ಮತ್ತೆ ಮುನ್ನೆಲೆಗೆ ಬಂದಿದೆ. ಜಗತ್ತಿನಲ್ಲಿ ಬೇರೆ ಯಾವ ಧರ್ಮವೂ ತೋರಿಸದೇ ಇರುವ ನಾಗಾರೀಕತೆಯೆನ್ನು ಹಿಂದು ಧರ್ಮ ತೋರಿಸುತ್ತದೆ.  ಅದಕ್ಕೆ ನಿದರ್ಶನವೇ ಯೋಗ ಜೀವನ ಮತ್ತು  ಅಧ್ಯಾತ್ಮ ಲೋಕ ದರ್ಶನ. 

ಕೊನೆಯಲ್ಲಿ ಧರ್ಮೋ ರಕ್ಷತಿ ಎನ್ನುವ ಹಾಗೆ ಸನಾತನದ ವಾದ ಬರುವಾಗ, ಅದರ ಬಗ್ಗೆ ಏನು ಪ್ರತಿಕ್ರಿಯೇ ಕೊಡದೇ ಇರುವುದರಲ್ಲೇ ಅದಕ್ಕೆ ಉತ್ತರವಿರುತ್ತದೆ. ಯಾಕೆಂದರೆ ಅದು ಯಾರಿಂದಲೂ ನಾಶವಾಗುವುದಿಲ್ಲ. ಸರೋವರ ಸುಂದರವಾಗಿದೆ ಅದರ ಒಳಗೆ ಇಳಿದು ನೋಡಿ ಅನುಭವಿಸುವವರು ಕಡಿಮೆ. ಸನಾತನ ಸುಂದರವಾಗಿದೆ , ಅದನ್ನು ತಿಳಿಯಬೇಕಾದರೆ ಅದರ ಆಳಕ್ಕೆ ಇಳಿಯಬೇಕು. ಸನಾತನದ ರಕ್ಷಣೆ ಯಾರೂ ಮಾಡಬೇಕಾದ ಅವಶ್ಯಕತೆ ಇಲ್ಲ. ಅದು ಅಂದಿನಿಂದ ಇಂದಿನವರೆಗೂ ತನ್ನನ್ನು ತಾನು ರಕ್ಷಿಸುತ್ತಾ ಬಂದಿದೆ. ಅದು ಈವರೆಗೆ ಉಳಿದಿರುವುದೇ ಇದಕ್ಕೆ ನಿದರ್ಶನ.  ನಾವು ಯಾವುದೇ ಮತವನ್ನು ಮತಾಂತರ ಮಾಡಿ ಅಂಗೀಕರಿಸಬಹುದು, ಆದರೆ ಅಂತರಾತ್ಮ ಅದನ್ನು ಬದಲಿಸುವುದಕ್ಕೆ ಸಾಧ್ಯವಿಲ್ಲ. ಅದೆಂದು ಬದಲಾಗುವುದೂ ಇಲ್ಲ. ಬಹಿರಂಗದಲ್ಲಿ ಯಾವುದನ್ನೋ ಹೇಳಬಹುದು, ಆದರೆ ಅಂತರಂಗದಲ್ಲಿ ಅದು ಶಿವನೋ ರಾಮನೋ ಅದೇ ಮೂಲ ಸ್ವರೂಪದಲ್ಲಿರುತ್ತದೆ.  


ಮಂಗಲಂ ಭಗವಾನ್ ವಿಷ್ಣು ಮಂಗಲಂ ಮಧು ಸೂದನ 

ಮಂಗಲಂ ದೇವಕೀ ಪುತ್ರೋ ಮಂಗಲಂ ಗರುಡ ಧ್ವಜ

ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರ

ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಿಗಚ್ಚತಿ.

ಪ್ರತಿ ಬಿಂದು ನೀರು ಸಾಗರದ ಕಡೆಗೆ ಸಂಚರಿಸುವಂತೆ ಯಾವ ದೇವರನ್ನು ನಮಸ್ಕರಿಸಿದರೂ ಅದು ಸೇರುವುದು ಒಂದೇ ಪರಮಾತ್ಮನಲ್ಲಿಗೆ.