ಶ್ರಾವಣ ಕಳೆದು ಮಳೆ ವಿರಳವಾಗಿ ತುಂತುರು ಮಳೆಯ ಶರದೃತುವಿನ ಕಾಲ. ಒಂದು ರೀತಿಯಲ್ಲಿ ಬಿಡದ ಮಳೆಯಿಂದ ಮುಕ್ತರಾಗಿ ಒಂದಷ್ಟು ಉಲ್ಲಸಿತರಾಗಿ ಹಿತವಾದ ವಾತಾವರಣವನ್ನು ಅನುಭವಿಸುವ ಋತುಮಾನ. ಋತುಸ್ನಾತೆಯಾದ ಪ್ರಕೃತಿ ಮಾತೆ ಅವಧಿ ಮುಗಿದು ಸ್ನಾನ ಮಾಡಿ ಶುಭ್ರವಾಗಿ ತಲೆಗೂದಲಿನಿಂದ ತೊಟ್ಟು ತೊಟ್ಟು ಹನಿಯನ್ನು ಸುರಿಸುತ್ತಾ ಬರುವಂತೆ ಮಳೆ ಅಗಲೋ ಈಗಲೋ ಸುರಿಯುವ ಮಳೆ ಮನಸ್ಸಿಗೆ ಕೊಡುವ ಉತ್ಸಾಹದ ದಿನಗಳು. ಹದಿಹರೆಯದ ಮನಸುಗಳಾದರೆ ಈ ಶರದೃತು ಹೊಸ ಕನಸಿನ ಚಿಗುರನ್ನು ಹುಟ್ಟಿಸಿಬಿಡುತ್ತವೆ. ಅದು ಎಂಭತ್ತರ ದಶಕದ ಕೊನೆಯ ವರ್ಷಗಳು. ಅದು ಹದಿಹರಯದ ಹಸಿ ಯೌವನಿಕೆಯ ಕಾಲ. ಬದುಕನ್ನು ಸಿಹಿಯಾಗಿ ಚೂರು ಚುರು ತುಣುಕಾಗಿ ಅನುಭವಿಸುವ ಹಪ ಹಪಿಕೆ ಇದ್ದರೆ ಅದು ಹದಿ ಹರಯದ ಸಹಜ ಬಯಕೆ.
ಹದಿಹರಯದಲ್ಲಿ ಬಡತನವಿದ್ದರೆ ಕೇವಲ ಬಾಳಸಂಗಾತಿಯ ಕನಸು ಮಾತ್ರ ಇರುವುದಿಲ್ಲ. ಭವಿಷ್ಯತ್ತಿನ ಭದ್ರತೆ ಒಂದಷ್ಟು ಧನ ಸಂಪತ್ತಿನ ಕನಸೂ ಜತೆಯಲ್ಲಿರುತ್ತದೆ. ವೈದ್ಯ ಹೃದಯದ ಬಡಿತವನ್ನು ಅಳೆದರೆ ಸಂಗಾತಿ ಹೃದಯದ ವಿಸ್ತಾರವನ್ನು ಅಳೆಯುತ್ತಾಳೆ. ಕೇವಲ ಹೃದಯದ ವೈಶಾಲ್ಯತೆ ಬದುಕಿಗೆ ಸಾಕಾಗುವುದಿಲ್ಲ. ಈ ಪ್ರಜ್ಞೆ ಬದುಕಿನ ತಲೆಯ ಮೇಲಿರು ಭಾರವನ್ನು ಹೆಚ್ಚಿಸುತ್ತದೆ. ತಲೆಯ ಭಾರ, ಹೃದಯದ ಭಾವನೆ ಕಾಣುವ ಕನಸು ನಡುವಿನ ಈ ದಿನಗಳಲ್ಲಿ ಆಕೆ ಮನೆಗೆ ಬರುತ್ತಾಳೆ ಎಂಬ ಪತ್ರ ಮನೆಗೆ ಬಂದಾಗ ಕನಸು ವಾಸ್ತವದ ನನಸಿನ ಕಡೆಗೆ ಮುಖ ಮಾಡಿತ್ತು. ಕೆಲವು ದಿನಗಳ ಹಿಂದೆ ಆಕೆಯ ಮುಖಾಮುಖಿ ಭೇಟಿಯಾಗಿತ್ತು. ಆಕೆಯ ಮನೆಯನ್ನು ಮನೆ ಮಂದಿಯನ್ನು ನೋಡಿ ಛೇ ಇವುಗಳನ್ನು ತೊರೆದು ಆಕೆ ಬಂದಾಳೆ ಎಂಬ ಸಂದೇಹ ಬಾಧಿಸಿತ್ತು. ಇದೆಲ್ಲ ತೊರೆಯಬೇಕಾದರೆ ಇದಕ್ಕಿಂತ ಅಧಿಕವಾಗಿರುವದ್ದು ಬಂದು ಸೇರುವಲ್ಲಿರಬೇಕು. ಇಲ್ಲದಿದ್ದರೆ ಅದನ್ನು ಒದಗಿಸಿ ಕೊಡಬೇಕು. ಆಗ ಬಂದ ಯೋಚನೆ, ವಾಸ್ತವವನ್ನು ತೋರಿಸಬೇಕು. ಅದನ್ನು ನೋಡಿಯೂ ಆಕೆ ಬಂದರೆ ಆಕೆಯ ಮನೆಯಲ್ಲಿರುವುದಕ್ಕಿಂತಲೂ ಹೆಚ್ಚಿಗೆ ಇಲ್ಲಿರುತ್ತದೆ ಎಂಬ ವಿಶ್ವಾಸ ಮೂಡುತ್ತದೆ. ಆನಂತರ ಇಲ್ಲಿ ಎನುಂಟು ಏನಿಲ್ಲ ಎನ್ನುವುದಕ್ಕಿಂತಲೂ ಇದ್ದುದನ್ನು ಅನುಭವಿಸುವುದಕ್ಕೆ ಮನಸ್ಸು ಸಿದ್ಧವಾಗಿರುತ್ತದೆ.
ಹೀಗಿದ್ದರೂ ತನ್ನ ಮನೆಯಲ್ಲಿ ಎನಿದೆ ಎನ್ನುವುದಕ್ಕಿಂತಲೂ ಎನಿಲ್ಲ ಎಂಬ ಕೊರತೆಯ ಅನ್ವೇಷಣೆಯಲ್ಲಿ ಮನಸ್ಸು ಅವಲೋಕಿಸುತ್ತದೆ. ಕೆಲವೊಮ್ಮೆ ಅದನ್ನು ಮರೆಮಾಚಲು ಪ್ರಯತ್ನಿಸುತ್ತದೆ. ಆದರೆ ಇಲ್ಲಿ ಹಾಗಿಲ್ಲ, ಮನೆ ಹೇಗಿದೆಯೋ ಹಾಗೇ ನೋಡಲಿ. ಬಂದು ಸೇರಬೇಕಾದ ಮನೆಗೆ ಯಾವುದೋ ಭ್ರಮೆಯಲ್ಲಿ ಬಂದು ಸೇರುವುದು ಬೇಡ ಎಂಬ ಪ್ರಾಮಾಣಿಕತೆ ಇಲ್ಲಿರುತ್ತದೆ. ಹಾಗಾಗಿಯೇ ವಿಶೇಷ ಸನ್ನಾಹವೇನೂ ಇರಲಿಲ್ಲ. ಒಂದಷ್ಟು ಸ್ವಚ್ಛತೆ ಬಿಟ್ಟರೆ ಮನೆ ಅದೇ ಗುಡಿಸಲಿನಂತೆ ವಿಶೇಷ ಸೌಲಭ್ಯಗಳು ಇಲ್ಲದಂತೆ. ಹೌದು ಆಕೆ ಬಂದು ಸೇರಬೇಕು. ಅದು ಮನೆಗಿಂತಲೂ ಮನಸ್ಸಿಗೆ ಬಂದು ಸೇರಬೇಕು. ಮನೆ ನಾಳೆ ಬದಲಾಗಬಹುದು. ಆದರೆ ಮನಸ್ಸು ಅದು ಬದಲಾಗುವುದಿಲ್ಲ. ಕನಸಿನ ಸೌಧಕ್ಕಿಂತಲೂ ಮನಸ್ಸಿನ ಸೌಧ ಗಟ್ಟಿಯಾಗಿರುತ್ತದೆ. ಆಗ ಒಂದು ಅತ್ಮ ವಿಶ್ವಾಸ ಜಾಗೃತವಾಗುತ್ತದೆ. ಆಕೆಗೆ ಎಲ್ಲವನ್ನೂ ಮಿರಿದ ಪ್ರೀತಿಯನ್ನು ಪ್ರಾಮಾಣಿಕವಾಗಿ ಕೊಡಬೇಕು. ಎಲ್ಲಕ್ಕಿಂತಲೂ ಸುಲಭವಾಗಿ ಕೊಡಬಹುದಾದ ಸಾಧನವಿದ್ದರೆ ಅದು ಪ್ರೀತಿ ಮಾತ್ರ.
ಈಗಿನಂತೆ ಆಗ ಮೌಬೈಲ್ ಇಲ್ಲ. ದೂರವಾಣಿಯಂತೂ ಹತ್ತಿರವಿಲ್ಲ. ಮುಖ್ಯ ಸಂವಹನವೆಂದರೆ ಭಾರತೀಯ ಅಂಚೆ ಮತ್ತು ಟೆಲಿಗ್ರಾಫ ಕಛೇರಿ. ಒಂದು ಪತ್ರ ಬರೆದರೆ ತಲುಪುವುದಕ್ಕೆ ಏನಿಲ್ಲವೆಂದರೂ ಐದು ಆರು ದಿನ ಬೇಕು. ಈಗ ವಿಷಯಗಳು ಬಿಸಿ ಆರುವ ಮೊದಲೇ ಸೇರುವಲ್ಲಿ ರವಾನೆಯಾಗುತ್ತದೆ. ಆಗ ಅದರೆ ಬಿಸಿ ಆರಿಹೋಗಿ ನಂತರ ಅಲ್ಲಿ ಕೈ ಸೇರಿದಾಗ ಬಿಸಿ ಏರುವುದಿದ್ದರೂ ಸಂಗತಿ ಒಂದು ಕಡೆಗೆ ಹಳೆಯದಾಗಿಬಿಡುತ್ತದೆ. ಹಲವು ಸಲ ಏನು ಬರೆದಿದ್ದೇನೆ ಎಂಬುದೂ ಕೂಡ ಮರೆತು ಹೋಗಿರುವ ಸಂಭವವಿದೆ. ಹಾಗಿರುವಾಗ ಆಕೆ ಬರುತ್ತಾಳೆ ಎಂಬ ಪತ್ರ ಕೈ ಸೇರಿದಾಗ ಆಕೆ ಬರುವ ತನಕ ಅದರ ಬಿಸಿ ಆರಲೇ ಇಲ್ಲ. ಆ ಭಾವನೆಗಳು ಅದರ ಬಿಸಿ ಆರುವುದಕ್ಕೆ ಬಿಡಲಿಲ್ಲ. ದಿನ ಘಳಿಗೆಯ ಅಂತರ ಕಡಿಮೆಯಾಗುವುದನ್ನೇ ಮನಸ್ಸು ಲೆಕ್ಕ ಹಾಕುತ್ತಾ ಕಳೆಯುವುದೆಂದರೆ ಅದೊಂದು ಮಧುರವಾದ ಅನುಭವ.
ಅಂತೂ ಆ ದಿನ ಆ ಘಳಿಗೆ ಬಂತು. ಮಧ್ಯಾಹ್ನ. ಸೂರ್ಯ ನೆತ್ತಿಗೆ ಏರಿ ಬಿಸಿಯಾಗುವ ಸಮಯ. ಹೃದಯ ಬಡಿತ ಏರಿ ಶರೀರ ಬಿಸಿಯಾದರೂ ಆ ಬಿಸಿಯಲ್ಲಿ ಒಂದು ಹಿತವಾದ ಅನುಭವ. ಮಧ್ಯಾಹ್ನದ ಬಸ್ಸು...ಆ ಬಸ್ಸಿನಲ್ಲೇ ಆಕೆ ಬರುವ ನಿರೀಕ್ಷೆ ಇರುವ ಕಾರಣ ಬಸ್ಸಿನ ಹಾರನ್ ದೂರದಿಂದಲೇ ಕೇಳಿಸುತ್ತದೆ. ಅದೊಂದು ಸೂಚನೆಯಘಂಟಾನಾದಂತೆ, ಆ ಧ್ವನಿ ಈ ಕಿವಿ ಕೇಳಿದಂತೆ ಆ ಕಿವಿಯೂ ಅದೇ ಹೊತ್ತಲ್ಲಿ ಕೇಳಿರುತ್ತದೆ ಎಂಬ ಭಾವನೆಯೇ ರೋಮಾಂಚನವನ್ನು ಉಂಟು ಮಾಡುತ್ತದೆ. ಆಕೆ ಯಾವ ಯೋಚನೆಯಲ್ಲಿರಬಹುದು? ಮನೆಯ ಬಗ್ಗೆ ಇರಬಹುದೇ? ಇಲ್ಲ ಮನದ ಬಗ್ಗೆ ಇರಬಹುದೇ? ಮನಸ್ಸನ್ನು ಒಂದಷ್ಟು ಮೊದಲೇ ಅರಿತಿರುವುದರಿಂದ ಮನೆಯ ಬಗ್ಗೆ ಪರಿಸರದ ಬಗ್ಗೆ ಒಂದಷ್ಟು ಭಾವನೆಗಳು ಇರಬಹುದು.
ಅಚ್ಚ ಬಿಳಿಸೀರೆಯಲ್ಲಿ ನಸು ಕಂದು ಹೂವನ್ನು ಚಿತ್ರಿಸಿದ ಸೀರೆಯಲ್ಲಿ ಅಪ್ಪ ಅಮ್ಮನ ಜತೆ ತೆಳು ಬಳುಕಿದ ಶರೀರದಲ್ಲಿ ಆಕೆ ಇಳಿದು ಬರುತ್ತಿದ್ದರೆ ಆಕೆಯ ಹೆಜ್ಜೆ ಎದೆಯ ಮೇಲಿಟ್ಟಂತಾಗಿ ಹೃದಯ ಭಾರವಾದ ಅನುಭವ. ಮೊದಲೊಮ್ಮೆ ಅಕೆಯ ಭೇಟಿಯಾಗಿರುವುದರಿಂದ ಮೊದಲ ಭೇಟಿಯ ರೋಮಾಂಚನ ಇಲ್ಲದಿದ್ದರೂ ದೇಹದ ಕಂಪನ ಒಂದಿಷ್ಟು ಅಧಿಕವಾಗಿತ್ತು. ಅದಾಗಲೇ ಔಪಚಾರದ ಮಾತುಗಳು ಕ್ರಿಯೆಗಳು ನಡೆದು, ಅಕೆ ಮನೆಯನ್ನೇಲ್ಲಾ ಸುತ್ತಾಡಿ ನೋಡಿದಳು. ಏನು ಅನ್ನಿಸಿತೋ ಏನೋ ಅಂದುಕೊಂಡು ಮನಸೋ ಇಚ್ಛೆ ಮಾತನಾಡಬೇಕು ಅನ್ನಿಸಿತ್ತು, ಆದರೆ ಅದಕ್ಕೆ ತತ್ಕ್ಷಣಕ್ಕೆ ಅವಕಾಶ ಇರಲಿಲ್ಲ. ಬಂದ ಅತಿಥಿಗಳ ಊಟ ಉಪಚಾರ ಮುಗಿಸಿ ಕೊನೆಯಲ್ಲಿ ಆಕೆ ಎಂದಳು ಒಂದಿಷ್ಟು ಖಾಸಗಿಯಾಗಿ ಮಾತನಾಡಬೇಕು. ಆಕೆಯ ಧೈರ್ಯ ತನಗಿಲ್ಲದೇ ಹೋಯಿತಲ್ಲ ಎಂದನಿಸಿದರೂ ಸಂತೋಷದಿಂದ ಮನೆಯ ಹೊರಗೆ ಒಂದಷ್ಟು ದೂರದಲ್ಲಿ ಒಂದು ಬಂಡೆಯ ಮೇಲೆ ಎದುರು ಬದಿರಾಗಿ ಕುಳಿತು ಮಾತನಾಡಿದಾಗ ಆಕೆಗೆ ಮನೆ ಪರಿಸರ ಎಲ್ಲವೂ ಇಷ್ಟವಾಗಿರಬೇಕು. ಆಡುವುದಕ್ಕೆ ಹಲವಿದ್ದರೂ ಒಂದೂ ಮಾತೂ ಹೊರಡಲಿಲ್ಲ. ಇಷ್ಟವಾಯಿತಾ ಎಂದ ಒಂದು ಪ್ರಶ್ನೆ ಬಿಟ್ಟರೆ ಆಕೆ ಮತ್ತೇನೂ ಕೇಳಿದ ನೆನಪಿಲ್ಲ. ಆಕೆಯ ಅಮ್ಮ ಮೊದಲೇ ಹೇಳೀದ್ದರು, ತಿಳಿಗಂಜಿಯಾದರೂ ಪರವಾಗಿಲ್ಲ...ಆದರೆ ಆಕೆಯ ನೆಮ್ಮದಿ ಅತಿ ಮುಖ್ಯ. ಇದು ಅತಿಯಾದ ಆತ್ಮ ವಿಶ್ವಾಸ ತುಂಬಿದ ಮಾತುಗಳಾಗಿದ್ದವು. ಆಗಲೇ ಮನಸ್ಸು ದೃಢವಾಗಿ ನಿರ್ಧರಿಸಿತು, ಏನೇ ಆದರು ಆಕೆಗೆ ಕಣ್ಣೀರು ಬರುವಂತೆ ಮಾಡುವುದಿಲ್ಲ.ಜೀವನದಲ್ಲಿ ನಿರ್ಧಾರ ಮಾತ್ರ ನಮ್ಮದಾಗಿರುತ್ತದೆ. ಆದರೆ ನಿಯತಿ ಅಂದರೆ ನಡೆಯುವುದು ನಮ್ಮ ವಶವಿರುವುದಿಲ್ಲ. ನಗುವಿನಂತೆ ದುಃಖವೂ ಇರುತ್ತದೆ. ಅದು ನಿಜವಾದ ಜೀವನ. ಕಣ್ಣೀರು ಇದ್ದರೂ ಇರಬಹುದು...ಇಲ್ಲ ಶ್ರೀರಾಮ ಪಿತೃವಾಕ್ಯ ಪರಿಪಾಲಿಸಿದಂತೆ ನನಗಾಗಿ ಕಣ್ಣೀರು ಮಿಡಿಯದೇ ಸುರಿಸದೇ ಇರಬಹುದು. ನನ್ನ ನಿರ್ಧಾರ ಹುಸಿಯಾಗಬಾರದಲ್ಲ. ಸದಾ ನಗುವಿನಲ್ಲೇ ಇರುವ ಆಕೆಯನ್ನು ಊಹಿಸುವುದು ಕಷ್ಟ.
ಸಾಯಂಕಾಲದ ತನಕ ಹತ್ತು ಹಲವು ಮಾತುಗಳಾದವು. ಕೊನೆಯಲ್ಲಿ ಸಮುದ್ರ ನೋಡಬೇಕು ಅನ್ನಿಸಿತು. ಮಲೆನಾಡ ಹೆಣ್ಣಿಗೆ ಅಲ್ಲಿನ ನದಿ ಕೆರೆ ಬಾವಿ ಬಿಟ್ಟರೆ ಬೇರೆ ಜಲರಾಶಿಯ ಪರಿಚಯವಿಲ್ಲ. ಹೊರ ಹೋಗುವುದಕ್ಕೆ ಉಡುಪು ಬದಲಿಸಿ ಹೊರಡುವಾಗ ಆಕೆ ಹತ್ತಿರ ಬಂದಳು, ಕಸೂತಿಯಲ್ಲಿ ಅಲಂಕರಿಸಿದ ಕರವಸ್ತ್ರವನ್ನು ಕೈಯಲ್ಲಿಟ್ಟಳು. ಮೆಲ್ಲಗೆ ಕಿವಿಯಲ್ಲಿ ಪಿಸುಗುಟ್ಟಿದಳು...ನೆನಪಿಗೆ ಇರಲಿ. ಮರೆಯದ ಮನಸ್ಸಿಗೆ ನೆನಪಿನ ರಾಶಿಯನ್ನೇ ತುಂಬಿದಾಕೆ ಆ ರಾಶಿಯನ್ನು ಮುಚ್ಚಿಕೊಳ್ಳುವುದಕ್ಕೋ ಎನೋ ಪುಟ್ಟ ಕರವಸ್ತ್ರವನ್ನು ಕೈಯಲ್ಲಿರಿಸಿದಳು. ಹಾಗೇ ಅದನ್ನು ಮುಖದ ಬಳಿಗೆ ತಂದರೆ ಚಾರ್ಲಿ ಸೆಂಟ್ ನ ಮಧುರವಾದ ಪರಿಮಳ. ಅದೆಂತಹ ಮಧುರ ಗಂಧ. ಕೋಣೆಯನ್ನೆಲ್ಲಾ ಆವರಿಸಿತ್ತು. ಮತ್ತೂ ಮತ್ತೂಮುಖದ ಬಳಿಗೆ ತಂದೆ. ಎಲ್ಲಿ ಗಂಧ ಕರಗಿ ಆವಿಯಾಗುವುದೋ ಎಂದು ಕೊಂಡು ಪುಟ್ಟ ಪೆಟ್ಟಿಗೆಯಲ್ಲಿ ಕರವಸ್ತ್ರವನ್ನು ಮುಚ್ಚಿಟ್ಟುಬಿಟ್ಟೆ.
ಎಲ್ಲರೂ ಸಮುದ್ರಕಿನಾರೆಗೆ ತೆರಳಿದೆವು. ಒಂದು ತಾಸು ಸಾಗರದಂಚಿನ ಅಲೆಗಳ ಭೋರ್ಗರೆತ ಕಿವಿಗೆ ಅಪ್ಪಳಿಸಿದರೂ ಆಕೆಯ ಕಿಲ ಕಿಲ ನಗು ಕಿವಿಯಲ್ಲಿ ಅದು ಹೇಗೋ ಎಲ್ಲವನ್ನೂ ಮೀರಿಸಿ ಕೇಳಿಸುತ್ತಿತ್ತು. ನಂತರ ಎಲ್ಲರನ್ನೂ ಬೀಳ್ಕೊಟ್ಟು ಕತ್ತಲಾಗುತ್ತಿದ್ದಂತೆ ಮನೆಗೆ ಬಂದನಂತರ ಮತ್ತದೇ ಕರವಸ್ತ್ರದ ಪೆಟ್ಟಿಗೆಯನ್ನು ತೆರೆದು ನೋಡುವುದನ್ನು ತೆಡೆ ಹಿಡಿಯಲಾಗಲಿಲ್ಲ. ತೆರೆದು ನೋಡಿದೆ. ಮತ್ತದೆ ಚಾರ್ಲಿಯ ಹನಿ ಸುಗಂದ....... ಇಂದಿಗೂ ಆ ಚಾರ್ಲಿಯ ಹನಿ ಸುಗಂಧದ ಪರಿಮಳವನ್ನು ಮರೆಯುವುದಕ್ಕಿಲ್ಲ. ಒಂದು ಮಾತ್ರ ಸತ್ಯ ಬದುಕಿನಾದ್ಯಂತ ಹರಡಿದ ಮಧುರ ಸುಗಂಧಕ್ಕೆ ಆ ಚಾರ್ಲಿಯ ಸುಗಂಧವೇ ತರುಲತೆಯ ಚಿಗುರಾಗಿ ಉಳಿದುಬಿಟ್ಟಿತು.

No comments:
Post a Comment