Saturday, April 18, 2026

ತತ್ವಮಸಿ ಸ್ವಾಮಿಯೇ ಶರಣಂ ಅಯ್ಯಪ್ಪ

ತತ್ವಮಸಿ ಎಂಬುದು  ಉಪನಿಷತ್ ನಲ್ಲಿ ಬರುವ ವಾಕ್ಯ.  ಇದು  ಭಗವದ್ಗೀತೆಯಲ್ಲಿಯೂ  ಹೇಳಿರುವ ಒಂದು ಮಾತು. ಭಗವಂತ ಸ್ವರೂಪವನ್ನು ಎಲ್ಲವೂ ನೀನೆ ಎಂದು ತಿಳಿಯುವುದೇ ತತ್ವಮಸಿ. ಶಬರಿಮಲೆ ದರ್ಶನ ಮಾಡಿದರೆ ಅಲ್ಲಿ ಸನ್ನಿಧಾನದ ತುತ್ತ ತುದಿಯಲ್ಲಿ ಬರೆದಿರುವುದನ್ನು ಕಾಣಬಹುದು. ಅಲ್ಲಿಗೆ ಯಾತ್ರಾರ್ಥಿಗಳಾಗಿ ಭಕ್ತಿ ವಿಶ್ವಾಸದಿಂದ ಹೋದವರಿಗೆ ಈ ತತ್ವ ಮಸಿಯ ತಾತ್ಪರ್ಯ ಎಷ್ಟು ಅರ್ಥವಾಗುತ್ತದೋ ಗೊತ್ತಿಲ್ಲ, ಆದರೆ ಅವರು ನಡೆದು ಕೊಂಡು ಬಂದ ದಾರಿ, ಇಟ್ಟ ಹೆಜ್ಜೆ ಅದರ ಹಿಂದಿರುವ ವಿಶ್ವಾಸ ಈ ತತ್ವಮಸಿಯನ್ನೇ ಹೇಳುತ್ತದೆ. ಭಗವಂತ ಎಲ್ಲವೂ ನೀನೆ. ನೀನಲ್ಲದೆ ಬೇರೆ ಏನೂ ಇಲ್ಲ.  ಒಂದೆರಡು ಅಕ್ಷರಗಳ ಎಂತಹ ಭಾವನಾತ್ಮಕ ವಾಕ್ಯ?  ನಾನು ಮೊನ್ನೆ ಶಬರಿ ಮಲೆಗೆ ಹೋಗಿ ಇರುಮುಡಿಯ ಮರೆಯಲ್ಲಿ ನೋಡಿದೆ ಅದೇ ತತ್ವ ಮಸಿ. ಅದುವರೆಗೆ ಬಂದ ಹಾದಿಯ ಆಯಾಸ ಉದ್ದೇಶ ಎಲ್ಲವೂ ಫಲಪ್ರದವಾಗುವುದು ಯಾಕೆ ಎಂಬುದು ಈ ಒಂದು ಶಬ್ದದಿಂದ ಅರ್ಥವಾಗಿಬಿಡುತ್ತದೆ. ನನ್ನ ಆತ್ಮವೇ ನೀನು ಅಂದರೆ ಭಗವಂತ, ಬ್ರಹ್ಮ ಆಗಿರುವೆ ಎಂಬುದು ಸಾರಾಂಶ. ಇಲ್ಲಿ ಸರ್ವಸ್ವ ಎಂದರೆ ತುಂಬ ಸರಳ.


ಕೆಲವೆಲ್ಲ ತತ್ವಗಳು ನಮಗೆ ಅರ್ಥವಾಗುವಷ್ಟು ಜ್ಞಾನಿಗಳಾಗಿರುವುದಿಲ್ಲ. ಆದರೆ ನಮ್ಮ ಕೃತಿ ಅದೇ ಆಗಿರುತ್ತದೆ. ಹಲವು ಸಲ ಹರಿಯುವ ನದಿಗೆ  ತಾನು ಎಲ್ಲಿಗೆ ಸಂಚರಿಸುತ್ತೇನೆ, ನನ್ನ ಗಮನ ಯಾವುದು? ಎಂದು ತಿಳಿದಿರುತ್ತದೋ ಇಲ್ಲವೋ, ಆದರೂ ಅದು ಸಮುದ್ರದ ಕಡೆಗೆ ಹರಿಯುವಂತೆ, ನಮ್ಮ   ಪಯಣವೂ ನಮಗೆ ತಿಳಿಯದೆ  ಒಂದು ಗುರಿಯತ್ತ ಸರಿಯುತ್ತಲೇ ಇರುತ್ತದೆ. ನಮ್ಮ ಸನಾತನ ಧರ್ಮದ ತಳಹದಿಯೇ ಇದು.  ಹುಟ್ಟಿದ ಕೂಡಲೇ ನನ್ನ ಉಸಿರು ಅಂತ ಉಸಿರಾಡಿ, ನನ್ನ ಹಸಿವು..ಎಂದು ಅತ್ತು ಕರೆದಾಗ ಎದೆ ಹಾಲು ಕೊಟ್ಟ ಅಮ್ಮನನ್ನು ನನ್ನ ಅಮ್ಮ ಎಂದು ಒಪ್ಪಿಕೊಳ್ಳುವ ವಿಶ್ವಾಸ ಬೆಳೆದು ಬರುತ್ತಾ ಈ ನಾನು ನನ್ನದು ಎಂಬುದರ ವಿಸ್ತಾರ ದೊಡ್ಡದಾಗುತ್ತ ಹೋಗುತ್ತದೆ. ನನ್ನ ಅಮ್ಮ ನನ್ನ ಅಪ್ಪ, ನನ್ನ ಬಳಗ, ನನ್ನ ಮನೆ ನನ್ನ ಊರು ನನ್ನ ಸಂಪತ್ತು ಧನ ಕನಕ...ಎಲ್ಲವೂ ನನ್ನದು ಎಂಬ ವ್ಯಾಪ್ತಿಯಲ್ಲಿ ಬದುಕು ಹುದುಗಿ ಹೋಗುತ್ತದೆ. ಈ ನಾನು ನನ್ನದು ಎಂಬ ಭೂಮಿಯ ಮೇಲಿನ ಸಂಬಂಧದ ಪರಿಧಿ ಅರಿವಾಗುವಾಗ ಈ ತತ್ವ ಮಸಿಯ ಜ್ಞಾನ ಅರಿವಾಗುತ್ತದೆ. ಆನಂತರ ನಾನು ನನ್ನದು ಎಂಬುದು ಇರುವುದಿಲ್ಲ. ಶಬರಿಮಲೆಯ ಯಾತ್ರೆ ಈ ಜ್ಞಾನವನ್ನು ಕೃತಿಯ ಮೂಲಕ ಬೋಧಿಸುತ್ತದೆ. ಬಹುಶ ಜಗತ್ತಿನಲ್ಲಿ ಯಾವ ಧರ್ಮವೂ ಬೋಧಿಸಲಾಗದ ತತ್ವವನ್ನು ಇಷ್ಟು ಸುಲಭವಾಗಿ ಸರಳವಾಗಿ ತೀರಾ ಪಾಮರ ಅಜ್ಞಾನಿಗೂ ತಿಳಿಸುವಂತೆ  ಶಬರಿಮಲೆ ಯಾತರೆ ಮಾಡಿಬಿಡುತ್ತದೆ. ಅಲ್ಲಿ ದೇಹದ ಕಾಮನೆ ಇರುವುದಿಲ್ಲ. ಹಸಿವು ನೀರಡಿಕೆ ಮುಖ್ಯವಾಗುವುದಿಲ್ಲ. ನಿದ್ರೆಯಲ್ಲೂ ಎದೆ ಬಡಿದುಕೊಳ್ಳುತ್ತದೆ ಶರಣಂ ಅಯ್ಯಪ್ಪ. ಅಯ್ಯ ಎಂದರೆ, ಒಡೆಯ. ಅಪ್ಪ ಎಂದರೂ ಅದುವೇ ಎಲ್ಲವೂ ನೀನಾಗುವ ಈ ಅಯ್ಯಪ್ಪ ಶಬ್ದದ ಕಾಂತಿಯ ತುಡಿತ ಇರುತ್ತದಲ್ಲ ಆ ಧ್ವನಿ ಕೇವಲ ಬಾಯಿಯಿಂದ ಉದ್ಗರಿಸಲ್ಪಡುವುದಿಲ್ಲ. ಅದು ಹೃದಯದಿಂದ ಹೊರಬರುತ್ತದೆ. ಎಷ್ಟು ಸಲ ಹೇಳಿದರೂ...ಕಡಿಮೆಯಾಯಿತೆ ಎಂಬ ಭಾವ, ಒಂದು ಸಲ ಹೇಳುವ ನಿರ್ಧಾರವಿದ್ದರೆ ಅಲ್ಲಿ ಹಲವು ಬಾರಿಯ ಉದ್ಗಾರವಿರುತ್ತದೆ. ಶರಣಂ ಅಯ್ಯಪ್ಪ. ಇದನ್ನು ತಿಳಿಯಬೇಕಾದರೆ ಒಂದು ಸಲ ಮಾಲೆ ಹಾಕಿ ಇರುಮುಡಿ ಹೊತ್ತು ವೃತನಿಷ್ಠರಾಗಿ ಮಲೆ ಏರಿದರೆ ಸಾಕು ಬುದ್ದನಿಗೆ ಜ್ಞಾನೋದಯವಾದಂತೆ ಬದುಕಿನ ಜ್ಞಾನ ಅರಿವಾಗಿ ಜ್ಞಾನೋದಯವಾಗುತ್ತದೆ.  


ದೊಡ್ಡ ಗ್ರಂಥಗಳನ್ನು ವೇದ ಉಪನಿಷತ್ ಗಳನ್ನು ಓದಿಯೂ ಗಳಿಸಲಾಗದ ಜ್ಞಾನವನ್ನು ಕೃತಿಯಿಂದ ನಮ್ಮ ಕರ್ಮದಿಂದ ತಿಳಿಯ ಪಡಿಸುವುದೆ ಶಬರಿಮಲೆಯ ಯಾತ್ರೆಯ ಉದ್ದೇಶ. ಯಾವುದೇ ಜ್ಞಾನ ಇಲ್ಲದಿದ್ದರೂ ಇಲ್ಲಿ ಒದಗಿಬರುವ ಪಾರಮಾರ್ಥಿಕ ಅರಿವು ತುಂಬ ಸರಳವಾದರೂ ಬದುಕಿನ ಮರ್ಮವನ್ನು ಹೇಳಿಬಿಡುತ್ತದೆ. 

ಇಪ್ಪತ್ತು ವರುಷಗಳ ಹಿಂದೆ ಶಬರಿ ಮಲೆಗೆ ಹೋಗಿದ್ದೆ. ಆನಂತರ ಹಲವು ಸಲ ಹೋಗಬೇಕು ಎಂದುಕೊಂಡರು ಯಾಕೋ ಒದಗಿಬರುವುದಿಲ್ಲ. ಶಬರಿ ಮಲೆಗೆ ಹೋಗುವುದೆಂದರೆ ಹಾಗೆ ಅಲ್ಲಿ ನಿರ್ಧಾರ ಮಾತ್ರ ನಿಮ್ಮದಾಗಬಹುದು, ಆದರೆ ಆನಂತರ ಅದು ದೈವೇಚ್ಛೆಯಾಗಿಬಿಡುತ್ತದೆ. ಆತ ಕರೆದರೆ ಮಾತ್ರ ನಿಮಗೆ ಎಲ್ಲವೂ ಒದಗಿಬರುತ್ತದೆ. ಏನು ವಿಘ್ನ ಬಂದರು ನೀವು ಶಬರಿಮಲೆ ಮೆಟ್ಟಲು ಏರಬಹುದು. ಇಲ್ಲವಾದರೆ ಎಷ್ಟು ಪ್ರಯತ್ನಿಸಿದರೂ ಅದು ಸಾಧ್ಯವಾಗುವುದಿಲ್ಲ. ಶ್ರೀಮಂತಿಗೆ ದೇಹಬಲ ಧನಬಲ ಯಾವುದೂ ಮುಖ್ಯವಾಗುವುದಿಲ್ಲ. ನನಗೂ ಅದೇ ಬಗೆಯ ಅನುಭವ. ಹಲವರಲ್ಲಿ ಕೇಳಿದರೂ ಇದೇ ಅನುಭವ. 

ನನ ಪತ್ನಿ ವಿಪರೀತ ಕಾಲು ನೋವಿನಲ್ಲಿ


ಕಣ್ಣೀರು ಹಾಕುವಾಗ, ಹಲವು ಚಿಕಿತ್ಸೆಗಳನ್ನು ಮಾಡಿದೆ. ಚಿಕಿತ್ಸೆ ಮಾಡುವುದು ನಮ್ಮ ಕರ್ಮ. ಆದರೆ ಅದು ಅಂತಿಮ ಪರಿಹಾರವಲ್ಲ. ಅಲ್ಲಿ ದೈವಾನುಗ್ರವೂ ಇರಬೇಕಾಗುತ್ತದೆ. ಯಾವುದೂ ಇಲ್ಲ ಎಂದನಿಸುವಾಗ ನಾನು ಹೆಂಡತಿಯಲ್ಲಿ ಹೇಳಿದೆ, ಕಾಲು ನೋವು ಗುಣವಾದರೆ ನಿನ್ನನ್ನು ಕರೆದುಕೊಂಡು ಶಬರಿಮಲೆಗೆ ಹೋಗುತ್ತೇನೆ. ಆ ಪ್ರಚೋದನೆ ಎಲ್ಲಿಂದ ಬಂತೋ ಹೇಗೆ ಬಂತೋ ಗೊತ್ತಿಲ್ಲ. ಅಂತು ಮನದಾಳದಿಂದ ಹೇಳೀದೆ. ಆ ಸಂಕಲ್ಪ ಎಷ್ಟು ನೆರವೇರಿಸಬಲ್ಲೇ ಎಂಬುದೇ ನನಗೆ ತಿಳಿದಿಲ್ಲ. ನಾನೇನು ತಿಳಿದರೂ ಅದು ನನ್ನದಲ್ಲ. ಆ ಶಕ್ತಿ ಏನು ಹೇಳಿಸುತ್ತದೋ ಏನು ಮಾಡಿಸುತ್ತದೋ ಅದೇ ಅಂತಿಮ. ಕೊನೆಗೂ ನನ್ನ ಸಂಕಲ್ಪ ಭಗವಂತ ಇಡೇರಿಸಿಕೊಂಡು ಬಿಟ್ಟ.ಅಲ್ಲಿಗೆ ನನ್ನಲ್ಲಿ ಧನ್ಯತೆ ಇದೆ. 

ಮೊನ್ನೆ ವಿಷು ಸಂಕ್ರಮಣಕ್ಕೆ ಹೊರಡುವುದಕ್ಕೆ ತಿಂಗಳ ಮೊದಲೇ ನಿರ್ಧರಿಸಿ ಬೆಂಗಳೂರಿನ ಜಾಲಹಳ್ಳಿಯ ಅಯ್ಯಪ್ಪ ಟೂರ್ಸ್ ಎಂಡ್ ಟ್ರಾವೆಲ್ಸ್ ನ್ನು ಸಂಪರ್ಕಿಸಿದೆ. ಮಿತ್ರರಾರ ನಿಡುವಜೆ ಗೋಪಾಲಕೃಷ್ಣ ಭಟ್ ವಿವರವನ್ನು ನೀಡಿ ಸಹಕರಿಸಿದ್ದರು. ಮುಂಗಡ ಕೊಟ್ಟು ಆಸನವನ್ನು ಕಾದಿರಿಸಿದರೂ ಹೋಗುವ ತೀರ್ಮಾನ ನಮ್ಮದಲ್ಲ. ಅದು ಭಗವಂತನದ್ದು. ಅಲ್ಲಿಂದಲೇ ತತ್ವಮಸಿಯ ತತ್ವ ಮನದಟ್ಟಾಗಿಬಿಡುತ್ತದೆ.

ಮೊನ್ನೆ ಒಂದು ವೋಲ್ಬೋ ಬಸ್ ನಲ್ಲಿ
ನಲ್ವತ್ತಕ್ಕೂ ಅಧಿಕ ಜನ ಮಾಲೆ ಧರಿಸಿ ಇರುಮುಡಿ ಹೊತ್ತು ಬಂದಿದ್ದರು. ಹೆಚ್ಚಿನವರೆಲ್ಲರೂ ವಯೋ ವೃದ್ದರು. ಅದರಲ್ಲು ಮಹಿಳೆಯರೆ ಅಧಿಕ. ಒಬ್ಬೊಬ್ಬರದು ಒಂದೊಂದು ಕಥೆ. ಅಷ್ಟೂ ಜನರಿಗೂ ಒಳ್ಳೆಯ ವ್ಯವಸ್ಥೆಯನ್ನು ಟ್ರಾವೆಲ್ಸ್ ಸಂಸ್ಥೆ ಮಾಡಿತ್ತು. ಇರುಮುಡಿ ಕಟ್ಟುವಲ್ಲಿಂದ ತೊಡಗಿ ಯಾತ್ರ ನಡುವೆ ಊಟ ಆಹಾರ ಎಲ್ಲವೂ ಉತ್ತಮವಾಗಿತ್ತು. ಈ ಯಾತ್ರೆಯಲ್ಲಿ ಬಹಳ ಅನುಭವ ಇದ್ದ ಸಂಸ್ಥೆ ಇದು. ಎಲ್ಲಿ ಇಳಿಯಬೇಕು? ಎಲ್ಲಿ ಉಳಿಯಬೇಕು?  ಇದೆಲ್ಲದಕ್ಕೂ ಒಂದು ಖಚಿತವಾದ ಯೋಜನೆ ಇತ್ತು. ಸಾವಿರದ ಐನೂರು ಕಿಲೋ ಮೀಟರ್ ಮಾತ್ರವಲ್ಲ ಮೂರು ದಿನದ ದೀರ್ಘವಾದ ಯಾತ್ರೆ. ನಾವು ಮನೆಯ ಒಂದಿಬ್ಬರೂ ಹೋದರೂ ಯಾತ್ರೆಯಲ್ಲಿಅದು ಇದು ಅಂತ ಅಸೌಕರ್ಯ ಅಡಚಣೆಗಳು ಸಾಮಾನ್ಯ. ಇಷ್ಟು ಜನರನ್ನು ಕರೆದುಕೊಂಡು ಸಮರ್ಥರೀತಿಯ ವ್ಯವಸ್ಥೆ ಮಾಡುವುದು ಸುಲಭದ ವಿಷಯವಲ್ಲ. ಆದರೂ ಕೆಲವೆಲ್ಲ ಸಣ್ಣ ಪುಟ್ಟ ತೊಂದರೆಗಳೂ ಇದ್ದರೂ ಅದು ತೀರ ಕಡೆಗಣಿಸಲ್ಪಡುವ ವಿಚಾರಗಳು. ಒಳ್ಳೆಯ ಯಾತ್ರೆ ಒಳ್ಳೆಯ ದರ್ಶನ ಮಾಡಿದ ತೃಪ್ತಿಕೊನೆಗೂ ಲಭ್ಯವಾಗಿದೆ ಎಂಬುದು ಮುಖ್ಯ. 

ಇಲ್ಲಿಂದ ಹೊರಟು ಗುರುವಾಯೂರು, ಆನಂತರ ಚೋಟಾನಿಕ್ಕರ ದೇವಿ ಕ್ಷೇತ್ರ ನಂತರ ಏಟ್ಟುಮಾನ್ನೂರು ಶಿವ ಕ್ಷೇತ್ರ ಅಲ್ಲಿಂದ ನಿಲಕ್ಕಲ್ ಪಂಬ ಶಬರಿ ಮಲ. ಅಲ್ಲಿಂದ ಹಿಂತಿರುಗಿ, ತಮಿಳು ನಾಡಿನ ತ್ರಿಪುರ ಕುಂಡ್ರಮ್ ಸುಬ್ರಹ್ಮಣ್ಯ ಕ್ಷೇತ್ರ, ಮಧುರೆ ಮೀನಾಕ್ಷಿ ದೇವಾಲಯ, ಕೊನೆಗೆ ಪಳನಿ ದರ್ಶನ ಮುಗಿಸಿ ಬೆಂಗಳೂರಿಗೆ.ಇಷ್ಟು ದೀರ್ಘಯಾತ್ರೆ ಮೂರು ದಿನದಲ್ಲಿ ಮುಗಿಸಿದ್ದು ದೇಹಾಯಸಕ್ಕೆ ಬಹಳಷ್ಟು ಕಾರಣವಾಯಿತು. ಒಂದು ಕಡೆಯಲ್ಲಿ ಕೆಲವು ಘಂಟೆಯ ವಿಶ್ರಾಂತಿ ಬಿಟ್ಟರೆ ಮತ್ತೆಲ್ಲವು ಪ್ರಯಾಣದಲ್ಲೇ  ಕಳೆದು ಹೋಯಿತು. ಎಲ್ಲ ಕಡೆಯಲ್ಲೂ ಊಟ ಉಪಚಾರ ಚೆನ್ನಾಗಿ ವ್ಯವಸ್ಥೆ ಮಾಡಿದ್ದರು. ಮುಖ್ಯವಾಗಿ ಅಡುಗೆ ಅನಿಲ ಸಮಸ್ಯೆಯಿಂದ ಹಲವಾರು ಹೋಟೇಲ್ ಗಳು ಮುಚ್ಚಿದ್ದವು. ಹಾಗಿ ಬಹಳ ಪರಿಶ್ರಮ ಪಟ್ಟು ಅನ್ನಾಹಾರದ ವ್ಯವಸ್ಥೆ ಮಾಡಿದ್ದರು. ಅದು ಬಹಳ ಉತ್ತಮವಾಗಿತ್ತು. 

ಎಟ್ಟುಮಾನ್ನೂರು ಮಹಾದೇವ ಕ್ಷೇತ್ರದ ಪ್ರಶಾಂತತೆ ಬಹಳ ಇಷ್ಟವಾಯಿತು.  ಸಾಕಷ್ಟು ಜನಸಂಖ್ಯೆ ಇದ್ದರೂ ಸಾಯಂಕಾಲದ ಹೊತ್ತಿನ ಇಲ್ಲಿನ ವಾತಾವರಣ ಅದ್ಭುತವಾಗಿತ್ತು. ನಮ್ಮ ಕೇರಳ ಶೈಲಿಯಾ ಆರಾಧನ ಕ್ರಮದಂತೆ ಬಾಗಿಲು ಮುಚ್ಚಿ ಮಂಗಳಾರತಿಯಾಗುವಾಗ ಬಾಗಿಲು ತೆರೆದು ದೇವರ ದರ್ಶನವಾಗುವಾಗ ಒಂದು ಅದ್ಭುತ ಭಕ್ತಿಯ ಪ್ರಚೋದನೆಯಾಗುತ್ತದೆ. 

ಈ ಪ್ರಯಾಣದ ಮುಖ್ಯ ಉದ್ದೇಶವೆಂದರೆ ಶಬರಿಮಲೆ ಅರೋಹಣ. ತಲೆಯಲ್ಲಿ ಇರುಮುಡಿ ಕಟ್ಟಿಕೊಂಡು ಮುಂಜಾನೆ ಐದು ಘಂಟೆಗೆ ನಾನು ನನ್ನ ಪತ್ನಿ ಜತೆಯಲ್ಲಿ ನನ್ನ ಎರಡನೆ ಮಗ ಎಲ್ಲರೊಂದಿಗೆ ಮಲೆ ಹತ್ತುವುದಕ್ಕೆ ಆರಂಭಿಸಿದೆವು.  ಕೆಲವುಕಡೆ ಮೆಟ್ಟಲು ಕೆಲವು ಕಡೆ ಇಳಿಜಾರು ರಸ್ತೆ ತಲೆ ಎತ್ತಿ ನೋಡಲಾಗದಷ್ಟು ಎತ್ತರದ ಬೆಟ್ಟ  ಒಂದೊಂದೆ ಹೆಜ್ಜೆಇಡುತ್ತಾ ಆಗಾಗ ಏದುಸಿರಿನೊಂದಿಗೆ  ಶರಣಂ ಅಯ್ಯಪ್ಪ ಎಂದು ಶರಣು ಕರೆಯುತ್ತಾ ಹೋಗುತ್ತಿದ್ದರೆ ಆಯಾಸ ಎನಿಸಿದರೂ ಅದರಲ್ಲೊಂದು ಸುಖ. ಏಳು ಘಂಟೆಯಷ್ಟು ಹೊತ್ತಿಗೆ ಮೇಲೆ ತಲುಪಿ ಇರುಮುಡಿ ಭಕ್ತರಿಗೆ ಮೀಸಲಾದ ಸರದಿಯಲ್ಲಿ ಸುಮಾರು ಒಂದುವರೆ ತಾಸು ನಿಲ್ಲಬೇಕಾಯಿತು. ಎರಡು ದಿನ ರಾತ್ರಿ ಸರಿಯಾಗಿ ನಿದ್ರೆ ಇಲ್ಲದೆ ಕಳೆದಿರುವುದರಿಂದಲೂ ದೇಹ ಸುಸ್ತಾಗಿ ಈಗ ಈ ಬೆಟ್ಟ ಹತ್ತಿ ಬಹಳ ಆಯಾಸ ನಿದ್ರೆ ಬಂದರೂ ಅಯ್ಯಪ್ಪಸ್ವಾಮಿಯ ದರ್ಶನಕ್ಕೆ ಹಾತೊರೆಯುತ್ತಿತ್ತು. ಸರದಿಯಂತೆ ಬಂದು ನಾವು ಮೂರು ಜನ ಹದಿನೆಂಟು ಮೆಟ್ಟಲ ಬುಡದಲ್ಲಿ ನಿಂತೆವು. ನನ್ನಾಕೆಗಂತೂ ಕುತೂಹಲದ ಭಾವನಾತ್ಮಕ ಘಳಿಗೆ,  ಆಕೆಯ ಮುಖದಲ್ಲಿದ್ದ ಉದ್ವೇಗ ಎಲ್ಲವನ್ನೂ ಹೇಗೆ ನಿಗ್ರಹಿಸಬೇಕೋ ಎಂದು ತಿಳಿಯದಂತಾಗಿದ್ದಳು. ಆಕೆಯ ಮುಖದಲ್ಲಿ ಆ ಉದ್ವೇಗವನ್ನು ಕಂಡ ಭಾವನೆ ನನಗೆ. ಕಿಕ್ಕಿರಿದ ಜನ ಜಂಗುಳಿ. ಎಲ್ಲರಿಗೂ ಅವಸರ ಉದ್ವೇಗ. ನಾವು ಹೆಜ್ಜೆ ಇಡುವ ಆ ಮೆಟ್ಟಿಲಿಗೆ ನಮಸ್ಕರಿಸುವುದಕ್ಕೂ ಸಾಧ್ಯವಾಗದಷ್ಟು ಜನ ಜಂಗುಳಿ. ಆದರೂ ಪ್ರಯತ್ನ ಮಾಡಿ , ಮೆಟ್ಟಲನ್ನು ಕಣ್ಣಿಗೊತ್ತಿ ಒಂದೋಂದೇ ಮೆಟ್ಟಲನ್ನು ಹತ್ತುವುದಕ್ಕೆ ತೊಡಗಿದೆವು.  ನಾನು ಬೇಗನೆ ಮೆಟ್ಟಲನ್ನೇರಿ ಮೊದಲು ಮೇಲಕ್ಕೆ ಹೋಗಿ ಹಿಂದಿರುಗಿ ನೋಡಿದೆ. ಕೆಳಗಿನಿಂದ ನನ್ನಾಕೆ ಹಿಂದೆ ನನ್ನ ಮಗ ಏರಿಕೊಂಡು ಬರುವುದನ್ನು ನೋಡಿ ಹೃದಯ ಭಾರವಾಯಿತು. ಇಬ್ಬರನ್ನು ಕರೆ ತಂದ ನನಗೆ ಒಂದು ಧನ್ಯತಾ ಭಾವ. ನನ್ನಾಕೆಯಂತೂ ಏದುಸಿರು ಉದ್ವೇಗ ಭರಿತವಾಗಿ ಒಂದು ಕೈಯಲ್ಲಿ ಇರುಮುಡಿಯನ್ನು ಹಿಡಿದು ಇನ್ನೊಂದು ಕೈಯಲ್ಲಿ ಮೆಟ್ಟಲನ್ನು ಹಿಡಿದೆ ಏರಿ ಹತ್ತಿರ ಹತ್ತಿರ ಬರುತ್ತಿದ್ದರೆ ಅದನ್ನು ನೋಡುವಾಗ ಅದೊಂದು ಭಾವನೆ ವರ್ಣಿಸುವುದಕ್ಕೆ ಸಾಧ್ಯವಿಲ್ಲದಾಯಿತು. ಕೊನೆಯ ಮೆಟ್ಟಲು ಏರಿ ಹತ್ತಿರ ಬಂದು ನಿಂತಾಗ ಜಗತ್ತನ್ನೇ ಮೀರಿದ ಅನುಭವ.  ನಂತರ ದರ್ಶನದ ಸರದಿ...ಅದು ಒಂದಷ್ಟು ಹೊತ್ತು. ಇನ್ನೊಂದು ಉದ್ವೇಗದ ಆರಂಭ ಕೊನೆಗೂ ಆಕೆ ದರ್ಶನ ಮಾಡಿದಾಗ ಆಕೆಯ ಆನಂದ ಸಂತೃಪ್ತಿ ಕಾಣುವುದಕ್ಕೆ ಕಣ್ಣೆರಡು ಸಾಲದಾಯಿತು. ಆಕೆ ಅಯ್ಯಪ್ಪನ ದರ್ಶನ ಮಾಡುತ್ತಿದ್ದರೆ, ನನಗೆ ಅಯ್ಯಪ್ಪನ ಜತೆಗೆ ಈಕೆಯ ಮುಖವನ್ನೂ ನೋಡುವ ಒಂದು ಭಾಗ್ಯ ಅಂತ ತಿಳಿಯಬೇಕು. 

ಎಲ್ಲಾ ಯಾತ್ರೆಗಳಂತೆ ಇಲ್ಲಿ ಹೊಸ ಜನಗಳು ಪರಿಚಯ ಅನುಭವಗಳು ಇದ್ದವು. ಎಲ್ಲವನ್ನೂ ವಿವರಿಸುವುದು ಕಷ್ಟವಾದರೆ ಎರಡು ವಿಚಾರಗಳನ್ನು ಹೇಳುವ ಮನಸ್ಸಾಗುತ್ತದೆ.  ಒಂದಂತು ನನಗೆ ತುಂಬ ಮನಸ್ಸಿಗೆ ತಟ್ಟಿದ ಘಟನೆ. 

ನಮ್ಮ ಬಳಿಯಲ್ಲೇ ಒಬ್ಬರು ವೃದ್ದ ಮಹಿಳೆ ಕುಳಿತ್ತಿದ್ದರು. ಅಂಜಲಿ ಅಂತ ಹೆಸರು. ಮೂಲತಃ ತಮಿಳು ಭಾಷೆಯ ಮಹಿಳೆ.  ನೋಡಿದರೆ ಬಹಳ ಬಡತನದ ಮಹಿಳೆ ಅಂತ ಅನ್ನಿಸುತ್ತದೆ. ತುಂಬ ಒಳ್ಳೆಯ ಮನಸ್ಸಿನ ಹೆಣ್ಣು. ಜಾಲ ಹಳ್ಳಿ ಅಯ್ಯಪ್ಪ ದೇವಸ್ಥಾನದ ಬಳಿಯಲ್ಲೇ ಸಣ್ಣ ಇಡ್ಲಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುವ ವೃತ್ತಿ. ಅಣು ರೇಣು ತೃಣಕಾಷ್ಠ ಎಂಬಂತೆ ನರ ನರದಲ್ಲೂ ಅಯ್ಯಪ್ಪ ಎನ್ನುವ ಈಕೆ ಅಯ್ಯಪ್ಪನ ಪರಮ ಭಕ್ತೆ. ಎಲ್ಲರೂ ಸ್ವಾಮಿಯೇ ಶರಣಂ ಅಯ್ಯಪ್ಪ ಎಂದರೆ...ಈಕೆ ಓ ಸಾಮಿಯೇ ಶರಣಂ ಅಯ್ಯಪ್ಪ ಎನ್ನುವಾಗ ಆ ಮುಗ್ಧ ಕರೆಯ ಆಳ ಅಳಿಯುವುದಕ್ಕೆ ಸಾಧ್ಯವಾಗುವುದಿಲ್ಲ. ತುಂಬ ಕಷ್ಟದ ಬದುಕನ್ನು ನಡೆಸುವ ಮಹಿಳೆ ಅಂತ ನೋಡಿದ ತಕ್ಷಣ ಅರಿವಾಗುತ್ತದೆ. ಎಲ್ಲಕ್ಕಿಂತಲೂ ಇಷ್ಟವಾದ ಗುಣ ಎಂದರೆ, ಏನೆ ಬಂದರೂ ಅದನ್ನು ನಗುತ್ತಾ ಸ್ವೀಕರಿಸುವ ಈಕೆಯ ಮುಖಭಾವ  ಆ ಸಮಚಿತ್ತ ನಿಜಕ್ಕೂ ಆಶ್ಚರ್ಯವಾಗುತ್ತದೆ. ಸ್ಥಿತ ಪ್ರಜ್ಞತೆ ವಿದ್ಯೆಯಿಂದ ಶ್ರೀಮಂತಿಗೆಯಿಂದ ಬರುವುದಿಲ್ಲ. ಅದು ಬದುಕಿನ ಅನುಭವದಿಂದ ಬರುತ್ತದೆ. ಆ ಬಗೆಯ ಬದುಕನ್ನು ಸಾಗಿಸಿದವಳು. ಇಷ್ಟೆ ಆದರೆ ಏನು ಅಂತೀರ, ಅಲ್ಲಿಯೂ ಒಂದು ಮುಖ್ಯ ಘಟನೆ ಇದೆ. ನಾವೆಲ್ಲ ಮಲೆ ಏರಿ ದೇವರ ದರ್ಶನ ಮಾಡಿ ಇರುಮುಡಿಯನ್ನು ಅರ್ಪಿಸುವುದಕ್ಕೆ ದೇವಾಲಯದ ಪಕ್ಕದಲ್ಲೇ ಅನ್ನದಾನ ಭವನದಲ್ಲಿ ವ್ಯವಸ್ಥೆ ಮಾಡಿದ್ದರು. ಅಲ್ಲಿಯೇ ಒಂದಷ್ಟು ತಾತ್ಕಾಲಿಕ ವಿಶ್ರಾಂತಿಯೂ ಇದ್ದ ಕಾರಣ ಎಲ್ಲರೂ ಅಲ್ಲಿ ತಂಗಿದ್ದರು. ಎಲ್ಲ ಮುಗಿಸಿ ಮಲೆ ಇಳಿದು ಎಲ್ಲರೂ ಕೆಳಗೆ ಇಳಿದು  ಪಂಪ ಬಳಿಗೆ ಬಂದಾಗ ಈಕೆ ತನ್ನ ಬ್ಯಾಗ್ ನ್ನು ಅನ್ನದಾನ ಮಂಟಪದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಲ್ಲೇ ಮರೆತು ಬಂದಿದ್ದಳು. ಅದರಲ್ಲಿ ಆಕೆಯ ಮೊಬೈಲು ಒಂದಷ್ಟು ನಗದು ಹಣ ವಸ್ತ್ರ ಇನ್ನೂ ಏನೇನು ಇತ್ತೋ ಆಕೆಗೇ ಗೊತ್ತು. 


ಪಂಪೆಯಿಂದ ಸನ್ನಿದ್ಧಾನಕ್ಕೆ ಮಲೆ ಏರುವುದೆಂದರೆ ಅದೊಂದು ದೊಡ್ಡ ಸತ್ವ  ಪರೀಕ್ಷೆ. ಬರಿಗಾಲಲ್ಲಿ ಕಣ್ಣಿಗೆ ನಿಲುಕದ ಗಿರಿಪರ್ವತವನ್ನು ಹತ್ತಬೇಕು. ಸುಡುವ ಬಿಸಿಲಲ್ಲಿ ಬರಿಗಾಲಲ್ಲಿ ಸುಡುವ ನೆಲವನ್ನು ತುಳಿದು ಹತ್ತುವುದೆಂದರೆ ಬಹಳ ಕಠಿಣ. ಸುಮಾರು ನಾಲ್ಕು ಕಿಲೋ ಮೀಟರ್ ದೂರದ ಏರುವ ಹಾದಿ. ಇದಕ್ಕೆ ಕಡಿಮೆ ಎಂದರು ಎರಡು ಘಂಟೆ ತೆಗೆದುಕೊಳ್ಳುತ್ತದೆ.  ಈಗ ಅಲ್ಲಿ ಮೆಟ್ಟಲು ಇನ್ನಿತರ ಸೌಕರ್ಯ ಮಾಡಿದರೂ ಹತ್ತುವುದು ಅಷ್ಟು ಸುಲಭವಲ್ಲ. ಧನಿಕರು ಇದಕ್ಕೆ ಢೋಲಿಯನ್ನು ಮಾಡಿಕೊಂಡರೆ, ಎಲ್ಲರೂ ನಡೆದುಕೊಂಡು  ಹೋಗಿ ಸಾರ್ಥಕತೆಯನ್ನು ಕಾಣುತ್ತಾರೆ. ನಾವು ಐದು ಘಂಟೆಗೆ ಪಂಪೆಯಿಂದ ಏರುವುದಕ್ಕೆ ಆರಂಭಿಸಿದ್ದರಿಂದ ಬಿಸಿಲ ಶಾಖ ಇಲ್ಲದೇ ಇದ್ದರೂ ತುಂಬ ದೇಹಾಯಸವಾಗಿ ಕಾಲು ನೋವು ಎದೆನೋವು ಎಲ್ಲವೂ ಕಣಿಸಿಕೊಂಡಿತ್ತು. ಎಲ್ಲವೂ ಮುಗಿಸಿ ಕೆಳಗೆ ಬಂದಾಗ ಬ್ಯಾಗ್ ಮರೆತು ಬಂದಳೆಂದರೆ ಏನು ಮಾಡಬೇಕು?  ಆಕೆ ಧೃತಿ ಗೆಡಲ್ಲಿಲ್ಲ. ಪುನಃ ಮಲೆ ಹತ್ತಿ ಅನ್ನದಾನ ಮಂಟಪದ ವಿಶ್ರಾಂತಿ ಜಾಗಕ್ಕೆ ಹೋದಾಗ ಆಕೆಯ ಬ್ಯಾಗ್ ಸುರಕ್ಷಿತವಾಗಿ ಆಕೆ ಹೇಗೆ ಇಟ್ಟಿದ್ದಳೋ ಅದೇ ರೀತಿ ಒಂದಿಷ್ಟು ಅಲುಗಾಡದೆ ಹಾಗೆ ಉಳಿದಿತ್ತು. ಅದರಲ್ಲಿ ಮೊಬೈಲ್ ಹಣ ಎಲ್ಲವೂ ಇತ್ತು. ಎಲ್ಲರಿಗೂ ಆಕೆಯ ಮೇಲೆ ಒಂದು ಬಾರಿಗೆ ಸಿಟ್ಟು ಅನುಕಂಪ ಎಲ್ಲವೂ ಬಂದಿರಬಹುದು. ಆದರೆ ಏನು ಮಾಡುವುದಕ್ಕೆ ಸಾಧ್ಯ. ಆಕೆ ನಗುಮುಖವನ್ನೇ ತೋರಿಸುವುದಲ್ಲದೇ ಬೇರೆ ಯಾವ ದುಃಖವನ್ನೂ ನೋವನ್ನು ಪ್ರಕಟಿಸಲಿಲ್ಲ. ನನಗೆ ಅದು ಬಹಳ ಅಚ್ಚರಿಯಾಗಿ ಕಂಡಿತ್ತು. ನಾನಂತೂ ಇಂತಹ ಪರಿಸ್ಥಿತಿಯಲ್ಲಿ  ಪುನಃ ಹೋಗುವ ಧೈರ್ಯವನ್ನು ಮಾಡುತ್ತಿರಲಿಲ್ಲ. ಏನು ಮಾಡುತ್ತಿದ್ದೇನೋ ಗೊತ್ತಿಲ್ಲ. ಮತ್ತೊಂದು ವಿಚಿತ್ರವೆಂದರೆ ಸಾವಿರಾರು ಗಟ್ಟಲೆ ಜನ ಓಡಾಡುವ ಜಾಗ. ಅಲ್ಲಿದ್ದ ಬ್ಯಾಗ್ ಇಟ್ಟ ರೀತಿಯಲ್ಲೇ ಇರಬೇಕೆಂದರೆ, ಅದಕ್ಕೆ ಕಾರಣ ಯಾರು?  ಅಲ್ಲಿದ್ದ ಪೋಲೀಸ್ ಸೆಕ್ಯೂರಿಟಿಯಂತೂ ಖಂಡಿತ ಅಲ್ಲ. ಅದನ್ನು ಸುರಕ್ಷಿತವಾಗಿ ಕಾದುಕೊಂಡ ಆ ಶಕ್ತಿ ಯಾವುದು? ಬೇರೆ ಯಾವುದೂ ಅಲ್ಲ, ಎಲ್ಲರಲ್ಲೂ ಇದ್ದ  ಎಲ್ಲವೂ ನೀನೆ ಎಂಬ ಭಾವವೇ ಅಲ್ಲಿ ರಕ್ಷಣೆಗೆ ಬಂತು. ಮೋಸ ವಂಚನೆ ಎಲ್ಲವನ್ನೂ ಬಿಟ್ಟು ಪರಿಶುದ್ದ ಆತ್ಮವಾಗುವ ಪ್ರಯತ್ನೆವೇ ಅಲ್ಲಿ ರಕ್ಷಣೆ ನೀಡಿತ್ತು. ಒಂದು ಕ್ಷಣಕ್ಕೆ ಆಕೆಯ ಮರೆವಿಗೆ ಸಿಟ್ಟು ಬಂದರೂ ಈ ಘಟನೆಯನ್ನು ನಾನು ಕಂಡ ಬಗೆಯೇ ಬೇರೆ. ಆಕೆಯಿಂದ ಸುಮಾರು ನಾಲ್ಕು ಘಂಟೆಯಷ್ಟು ಪ್ರಯಾಣ ವಿಳಂಬವಾದರೂ ಆಕೆಯ ಸೊತ್ತು ಸುರಕ್ಷಿತವಾಗಿ ಆಕೆಗೆ ಸಿಕ್ಕಿದ್ದು ವಿಶೇಷ ಎನಿಸಿತ್ತು. 


ಯಾತ್ರೆಯುದ್ದಕ್ಕೂ ನಮಗೆ ಮಾರ್ಗದರ್ಶಕರಾಗಿ, ಎಲ್ಲ ಸಹಕಾರವನ್ನು ನೀಡುತ್ತಾ ಜತೆಗೆ ಇದ್ದವರು ಗುರುಸ್ವಾಮಿಗಳಾದ ನಾರಾಯಣ ಸ್ವಾಮಿಯವರು. ಬಹಳ ಶಾಂತ ಸ್ವಭಾವದ ವ್ಯಕ್ತಿ. ಅಯ್ಯಪ್ಪನ ಮೇಲಿನ ಭಕ್ತಿ ಅವರ ಕೃತಿಯಲ್ಲಿ ಕಂಡು ಬರುತ್ತಿತ್ತು. ಪ್ರತಿಯೊಬ್ಬರ ಸಮಸ್ಯೆಗೂ ತಮ್ಮಿಂದಾ ಪರಿಹಾರವನ್ನು ಒದಗಿಸಿ ತಮ್ಮ ಪ್ರಯತ್ನ ಮೀರಿ ಸಹನೆಯಿಂದ ವರ್ತಿಸುತ್ತಿದ್ದರು. ಅಲ್ಲಲ್ಲಿ ಉಪಯುಕ್ತ ಸಲಹೆಗಳನ್ನು ನೀಡುತ್ತಿದ್ದರು. ಎಲ್ಲಕ್ಕಿಂತ ನಾನು ಗಮನಿಸಿದ ಗುಣವೆಂದರೆ, ಊಟವಾಗಲಿ ಉಪಹಾರವಾಗಲೀ ಎಲ್ಲರು ಮುಗಿಸಿದ ನಂತರ ತಾವು ಉಣ್ಣುವುದಕ್ಕೆ ಕುಳಿತುಕೊಳ್ಳುತ್ತಿದ್ದರು. ಪ್ರತಿಯೊಬ್ಬರನ್ನೂ ಸಹನೆಯಿಂದ ಕಾಯುತ್ತಿದ್ದರು. ಪ್ರತಿಯೊಬ್ಬ ಯಾತ್ರಾರ್ಥಿಯ ಕೊನೆಯ ತುತ್ತು ಉಂಡ ಮೇಲೆ ಇವರು ಮೊದಲ ತುತ್ತು ಬಾಯಿಗೆ ಇಡುತ್ತಿದ್ದರು. ಈ ಬದ್ದತೆ ಅತ್ಯಂತ ಶ್ರೇಷ್ಠ ಎನಿಸಿತು. 


ಅಂತೂ ಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿದೆವು. ಮುಖ್ಯವಾಗಿ ನಾನು ದೂರದ ಯಾತ್ರೆ ದೊಡ್ಡ ದೊಡ್ಡ ದೇವಾಲಯಕ್ಕೆ ಹೋಗುವುದನ್ನು ಅಷ್ಟೊಂದು ಇಷ್ಟಪಡುವುದಿಲ್ಲ. ಕಾರಣ, ಸರಿಯಾದ ದರ್ಶನವಾಗುವುದಿಲ್ಲ. ಜನ ಜಂಗುಳಿ ಉದ್ದ ಸರದಿ ಇವುಗಳನ್ನೆಲ್ಲ ನಿಭಾಯಿಸುವುದು ತುಂಬ ಕಷ್ಟವಾಗುತ್ತದೆ. ಮುಕ್ತವಾಗಿ ಪ್ರಾರ್ಧನೆ ಸಾಧ್ಯವಾಗುವಿಲ್ಲ. ಪ್ರತಿಯೊಂದಕ್ಕೂ ಸರದಿ ನಿಲ್ಲುವ ಅನಿವಾರ್ಯತೆ ಇರುತ್ತದೆ. ಸ್ನಾನ ಸಂಧ್ಯಾದಿ ವಂದನೆಗಳು ಸಾಧ್ಯವಾಗುವುದಿಲ್ಲ. ಹಾಗಾಗಿ ಶಬರಿಮಲೆಗೆ ದೀಪಾವಳಿ ಸಮಯದಲ್ಲಿ ಅಂದರೆ ಕಾರ್ತಿಕ ಮಾಸದಲ್ಲಿ ಹೋಗಬೇಕೆಂದುಕೊಂಡಿದ್ದೆ. ಆದರೂ ಬೇಗ ಹೋಗಿ ಬರುವ ಅಂತ ನನ್ನಾಕೆಯ ಒತ್ತಾಸೆಯಿಂದ ವಿಷು ಸಂಕ್ರಮಣದ ಜನದಟ್ಟನೆಯ ಅರಿವಿದ್ದೂ ಇದೇ ಸಮಯದಲ್ಲಿ ಯಾತ್ರೆ ಮಾಡಿ ಬಂದೆವು. ನಿರೀಕ್ಷೆಯಷ್ಟು ಕಷ್ಟವಾಗಲಿಲ್ಲ. ಎಲ್ಲವೂ ಸುಗಮವಾಗಿ ನೆರವೇರಿತು. ದೇವರನ್ನು ಒಂದೆರಡು ಘಳಿಗೆ ನೋಡುವುದಕ್ಕೆ ಮಾತ್ರ ಸಾಧ್ಯವಾದರೂ ಅದೊಂದು ದೊಡ್ಡ ಸಂತೃಪ್ತಿಯನ್ನು ಒದಗಿಸಿದ ಕ್ಷಣವಾಗಿತ್ತು.  ನಿಜಕ್ಕೂ ಪರಮಾತ್ಮನನ್ನು ಹೃದಯದಲ್ಲಿ ದರ್ಶನ ಮಾಡುವ ನನ್ನ ಪ್ರವೃತ್ತಿಯಲ್ಲಿ ಈ ದೇವಾಲಯದ ಮೂರ್ತಿ ದರ್ಶನ ಕೇವಲ ಸಾಂಕೇತಿಕ. ಒಂದು ಭಕ್ತಿ ಗೌರವದ ಪ್ರತೀಕ.   ಇನ್ನು ದೇವರಲ್ಲಿ ನನಗೆ ಬೇಡುವುದಕ್ಕೇ ಏನೂ ಇರುವುದಿಲ್ಲ. ದೇವರ ಮುಂದೆ ನಿಂತಾಗ ಏನು ಬೇಡಬೇಕೆಂಬುದೇ ತಿಳಿಯುವುದಿಲ್ಲ. ಎಲ್ಲವನ್ನು ಒದಗಿಸಬಲ್ಲ ಪರಮಾತ್ಮನಲ್ಲಿ  ಬೇಡುವುದೇನುಂಟು. ನನಗೇನು ಬೇಕೋ ಅದು ಭಗವಂತನಿಗೆ ತಿಳಿದಿದೆ. ನಾನು ಅದು ಕೊಡು ಇದು ಕೊಡು ಎಂದು ಕೇಳಿದರೆ ಆ ಭಗವಂತನಲ್ಲಿ ನನಗೆ ವಿಶ್ವಾಸ ಇಲ್ಲವೇ ಎಂಬ ಅನುಮಾನ ಬಂದು ಬಿಡುತ್ತದೆ. ದೇವರಲ್ಲಿ ಇಂತಹದನ್ನು ಬೇಡುವುದೆಂದರೆ ಆ ದೇವರಲ್ಲಿ ಅವಿಶ್ವಾಸವನ್ನು ಪ್ರಕಟಿಸಿದ ಭಾವ ಉಂಟಾಗುತ್ತದೆ. ಹೇಗಿದ್ದರೂ ನನಗೆ ಕೊಡಬೇಕಾದ್ದನ್ನು ಭಗವಂತ ಕೊಡುತ್ತಾನೆ. ಅದು ಈಗಲೋ ಆಗಲೋ ತಡವಾಗಿಯಾದರೂ ಕೊಡದೆ ಇರಲಾರ. ಒಂದು ವೇಳೆ ಕೊಡಲಿಲ್ಲ ಎಂದಾದರೆ, ಆ ಭಗವಂತನಿಗೆ ಕೊಡುವುದಕ್ಕೆ ಮನಸ್ಸಿಲ್ಲದೇ ಇದ್ದದ್ದು ನನಗೆ ಬೇಡವೇ ಬೇಡ. ನನಗದರ ಅವಶ್ಯಕತೆಯೇ ಇಲ್ಲ. ಹೀಗೆ ಭಾವಿಸಿದಾಗ ಎಲ್ಲವನ್ನೂ ಪಡೆದ ಸಂತೃಪ್ತ ವ್ಯಕ್ತಿಯಾಗುತ್ತೇನೆ. ಇದಕ್ಕಿಂತ ಹೆಚ್ಚಿನದ್ದು ನನಗೇನು ಬೇಕು. ಆ ವಿಶ್ವಾಸ ಒಂದೇ ಸಾಕು. ಆಯ್ಯಪ್ಪ ದರ್ಶನವೂ ಹೀಗೆ. ಆಯ್ಯಪ್ಪನಿಗೆ ಈಯಪ್ಪನ ಮನಸ್ಸು ತಿಳಿದಿದೆ. ಅದನ್ನು ಒದಗಿಸುತ್ತಾನೆ. 


 




No comments:

Post a Comment