Sunday, February 23, 2025

ಮಹಾಕುಂಭದ ಪರೀಕ್ಷೆ

        ನಂಬಿಕೆ ವಿಶ್ವಾಸ ಎಂದು  ಬರುವಾಗ ನನಗೆ ನೆನಪಿಗೆ ಬರುವುದು "ಅದಾಮಿಂದೆ ಮಗನ್ ಅಬು " ಎಂಬ ಹಳೆಯ ಮಲಯಾಳಂ ಚಲನ ಚಿತ್ರ. ಇದರ ಬಗ್ಗೆ ಹಿಂದೆ ಕಾಶಿ ಯಾತ್ರೆಯ ಕುರಿತ ಲೇಖನದಲ್ಲಿ ಒಂದು ಸಲ ಬರೆದಿದ್ದೆ.  ಈಗಲೂ ಅದೇ ಬಗೆಯ ವಿಷಯ ಹೇಳುವುದಕ್ಕೆ ಇದು ಬಿಟ್ಟರೆ ನನಗೆ ಬೇರೆ ಯಾವ ಸೂಕ್ತ ಉದಾಹರಣೆಯೂ ನೆನಪಿಗೆ ಬರುವುದಿಲ್ಲ. ಇದರಲ್ಲಿ  ಕಥಾನಾಯಕ ಪತ್ನಿ ಸಹಿತ ಹಜ್ ಗೆ ಹೋಗುವ ಸಿದ್ದತೆಯ  ಕಥಾವಸ್ತು. ಅದಾಂನ ಮಗ ಅಬುವಾಗಿ  ಹಿರಿಯ ನಟ ಸಲೀಂ ಕುಮಾರ್ ಮನೋಜ್ಞವಾಗಿ ಅಭಿನಯಿಸಿದ ಚಲನಚಿತ್ರವಿದು. ಸಂಪ್ರದಾಯಸ್ಥ ಮುಸಲ್ಮಾನನಾಗಿ ಹಜ್ ಗೆ ಹೋಗುವುದಕ್ಕೆ ಆತ ಎಲ್ಲ ಸನ್ನಾಹವನ್ನೂ ಮಾಡುತ್ತಾನೆ. ಹೋಗುವ ಮೊದಲು ನಿಯಮದಂತೆ, ಪರಿಶುದ್ದನಾಗಬೇಕು. ಯಾರಿಗೂ ವಂಚನೆ ಮಾಡದೆ, ಇರುವ ಋಣ ಎಲ್ಲವನ್ನು ಸಂದಾಯ ಮಾಡಬೇಕು. ಯಾರಲ್ಲೇ ಆಗಲಿ ದ್ವೇಷ ಮನಸ್ತಾಪ ಇದ್ದರೆ ಅದನ್ನು ಪರಿಹರಿಸಿಕೊಳ್ಳಬೇಕು.  ಶುದ್ದ ಮನಸ್ಸಿನಿಂದ ಶುದ್ದ ಅಂತಃಕರಣದಲ್ಲಿ ಹಜ್ ಯಾತ್ರೆ ಮಾಡಬೇಕು.  ಚಲನ ಚಿತ್ರದ ಪ್ರತಿಯೊಂದು ಸನ್ನಿವೇಶವೂ ಈ ತತ್ವವನ್ನು ತೋರಿಸುತ್ತಾ ಸಾಗುತ್ತದೆ. ಎಲ್ಲಕ್ಕಿಂತ ಮೊದಲಾಗಿ ಭಗವಂತನ ಮೇಲೆ, ತನ್ನ ಧರ್ಮದ ಮೇಲೆ ಆತನಿಗಿರುವ ವಿಶ್ವಾಸ ನಂಬಿಕೆ ತುಂಬಾ ಗಾಢವಾಗಿರುತ್ತದೆ. ಭಗವಂತ ಮತ್ತು ಆತನ ಬಳಿಗೆ ಹೋಗುವ ಹಾದಿ ಪರಿಶುದ್ದತೆ ಇದೆಲ್ಲವನ್ನು ನೋಡಿದರೆ  ಮನುಷ್ಯ ಕೇವಲ ಸ್ನಾನ ಮಾಡಿ ದೇಹ ಶುದ್ದಿ ಹೊಂದಿದರೆ ಸಾಲದು, ತನ್ನ ಮನಸ್ಸು, ಬದುಕಿನ ಹಾದಿ ಎಲ್ಲವೂ  ಪರಿಶುದ್ದವಾಗಬೇಕು.  ಇದೇ ರೀತಿ  ಎಲ್ಲಾ ಪಾಪ ದುರಿತಗಳಿಂದ ಪರಿಶುದ್ಧನಾಗುವುದು  ಎಂದರ್ಥ. ಎಲ್ಲ ಧರ್ಮದಲ್ಲಿರುವ ತತ್ವ ಇದೇ. ಅದರ ಮೇಲೆ ಇರಬೇಕಾದ ನಂಬಿಕೆಯೂ ಅದೇಆಗಿರುತ್ತದೆ.  ಮನುಷ್ಯ ತನ್ನ ನಂಬಿಕೆಯ ವಿಷಯ ಬರುವಾಗ ಎಂದೂ ಆತ್ಮವಂಚನೆ ಮಾಡಲಾರ. ಮಾಡಿದರೆ ಆತನ ನಂಬಿಕೆ ಕಲುಷಿತವಾಗಿಬಿಡುತ್ತದೆ.  ಆತ ಬಡತನದಲ್ಲೂ  ಬಹಳ ಕಷ್ಟ ಪಟ್ಟು, ಜತೆಯಲ್ಲಿ ಯಾರೂ ಇಲ್ಲದೇ ಇದ್ದರೂ ಇದ್ದ ಮನೆ ವಸ್ತು ಎಲ್ಲವನ್ನು ಬಿಟ್ಟು ಹಜ್ ಗೆ ಹೋಗುವಾಗ ಮರಳಿ ಬರುವ ನಿರೀಕ್ಷೆ ಇರುವುದಿಲ್ಲ. ಆದರೂ ಹೋಗಬೇಕು ಎನ್ನುವ ಹಂಬಲ ಅದಕ್ಕಾಗಿ ಇರುವ ಪ್ರಯತ್ನ ಕೇವಲ ಆತನ ನಂಬಿಕೆ ವಿಶ್ವಾಸ. ಎಲ್ಲ ಧರ್ಮದ ನೆಲೆಗಟ್ಟು ಇರುವುದು ವಿಶ್ವಾಸದಲ್ಲಿ. ಅದನ್ನುಮೌಢ್ಯ ಎಂದು ವಿಶ್ವಾಸ ಬೆಲೆ ತಿಳಿಯದವರು ಹೇಳುತ್ತಾರೆ. 

ಸಾವಿರ ಸಂಖ್ಯೆಯ ಜನ ಎನ್ನುವಾಗ ನಮಗೆ ಗಾಬರಿಯಾಗುತ್ತದೆ. ಆದರೆ ಪ್ರಯಾಗ್ ರಾಜ್ ನ  ಮಹಾಕುಂಭದಲ್ಲಿ ಕೋಟಿ ಕೋಟಿ ಸಂಖ್ಯೆಯಲ್ಲಿ ಕೇವಲ ಗಂಗೆಯ ನೀರು ಸೋಕಿಸಿಕೊಳ್ಲುವುದಕ್ಕೆ ಬರುವುದೆಂದರೆ ವಿಶ್ವ ನಿಬ್ಬೆರಗಾಗುತ್ತದೆ. ಇದೊಂದು ಜಗತ್ತಿನ ಅದ್ಭುತ ಎನ್ನಬೇಕು. ಇಷ್ಟಾದರೂ ಗಂಗೆ ತನ್ನ ಮಡಿಲಲ್ಲಿ ಎಲ್ಲರನ್ನು ಸೇರಿಸಿ ಪಾವನವಾಗಿಸುತ್ತಾಳೆ. ಮನುಷ್ಯನ ನಂಬಿಕೆ ಎಂದರೆ ಅದೊಂದುಉತ್ಕಟ ಭಾವದ ಸಂಕೇತ. 

ಇತ್ತೀಚೆಗೆ ದೇಶೀಯ ಉತ್ಸವವಾಗಿ ಆಚರಿಸಿದ ಮಹಾ ಕುಂಭ ಮೇಳ, ಮನುಷ್ಯನ ಈ ನಂಬಿಕೆಗಳಿಗೆ ಸಾಕ್ಷ್ಯವಾಗಿ ಕಣ್ಣ ಮುಂದೆ ನಿಂತರೂ ವಿವಾದಗಳು ಈ ನಂಬಿಕೆಗಳಿಗೆ ಸವಾಲಾಗಿ ನಿಂತು ಬಿಡುತ್ತದೆ. ಮನುಷ್ಯ ಮಾತ್ರ ಸಹಜವಾಗಿ ಈ ವಿವಾದಗಳ ಬಗ್ಗೆ ಪರಿವೆ ಇಲ್ಲದೆ ತನ್ನ ನಂಬಿಗೆ ವಿಶ್ವಾಸದ ಮೇಲೆ ಗಾಢವಾಗಿ ವರ್ತಿಸುತ್ತಾನೆ. ಪರಿಶುದ್ದನಾಗುವುದು ಮನುಷ್ಯ ಜನ್ಮದ ಮೂಲ ತತ್ವ. ಮಹಾ ಕುಂಭದಲ್ಲಿ ಮುಳುಗೆದ್ದವರಿಗೆ ಬೇರೆ ಯಾವ ಧ್ಯೇಯವೂ ಇದ್ದಂತಿಲ್ಲ. ಯಾವುದೋ ಇರಾದೆಯಿಂದ, ಸಂಕಲ್ಪದಿಂದ ಮನುಷ್ಯ ದೇವರ ಎದುರು ಹಲವು ಹರಿಕೆಗಳನ್ನು ಹೊರುತ್ತಾನೆ. ತನ್ನ ಹಲವಾರು ಹಂಬಲಗಳಿಗೆ ದೈವಾನುಗ್ರಹ ಒದಗಿ ಬರಲಿ ಎಂದು ಆಶಿಸುತ್ತಾನೆ. ಅದು ವ್ಯಾಪಾರ ವ್ಯವಹಾರದ ಅಭಿವೃದ್ಧಿಯಾಗಲಿ , ಮಕ್ಕಳ ಉಜ್ವಲ ಭವಿಷ್ಯತ್ ಗೆ ಆಗಲಿ , ಅಥವಾ ಎದುರಾದ ಕಷ್ಟ ನಷ್ಟ ಪರಿಹರಿಸುವುದಕ್ಕೆ ಹರಕೆ ಹೊತ್ತು ದೇವರಿಗೆ ಮೊರೆ ಹೋಗುತ್ತಾನೆ. ದೇವರು ಪರಿಹರಿಸುತ್ತಾನೋ ಇಲ್ಲವೋ ಆದರೆ ತನ್ನ ನಂಬಿಕೆಯ ಮೇಲೆ ಅಚಲ ವಿಶ್ವಾಸ. ಕಷ್ಟ ಪರಿಹಾರವಾಗದೇ ಇದ್ದರೂ ತನ್ನ ಕರ್ಮವನ್ನು ನೆನೆಯುತ್ತಾನೆ ಹೊರತು ತನ್ನ ನಂಬಿಕೆಯ ದೇವರನ್ನು ದೂರುವುದಿಲ್ಲ. ಈ ಮಹಾಕುಂಭದಲ್ಲಿ ಮಿಂದೆದ್ದ ಕೋಟಿ ಕೋಟಿ ಮಂದಿಗಳಲ್ಲಿ ಕೇಳಿದರೆ ಇಂತಹ ಯಾವ ಉದ್ದೇಶಗಳೂ ಇರುವುದಿಲ್ಲ. ಕೇವಲ ಕೇವಲ ತನ್ನ ಪಾಪ ಪರಿಹಾರಕ್ಕೆ ಗಂಗೆಯ ಮಡಿಲಿಗೆ ತಲೆ ಕೊಡುತ್ತಾನೆ. ಇದನ್ನು ವಿವಾದಕ್ಕೆ ಎಳೆಯುವವರಿಗೆ ಇಂತಹ ಪವಿತ್ರ ವಿಚಾರಗಳು ಅದರ ಗಂಭೀರತೆ ಅರ್ಥವಾಗುವುದಿಲ್ಲ. ಯಾರಾದರೂ ನನಗೆ ಘನ ಸಂಪತ್ತು ಐಶ್ವರ್ಯ ಒದಗಿಬರಲಿ ಎಂದು ಗಂಗೆಯಲ್ಲಿ ಮುಳುಗುವುದಿಲ್ಲ. ಮುಳುಗಿ ಪವಿತ್ರನಾಗುವುದು ಮಾತ್ರ ಆತನ ಧ್ಯೇಯ. ಅದು ಆದಾಂಮಿಂದೆ ಮಗ ಅಬುವಿನ ನಂಬಿಕೆಗಿಂತ ಏನೂ ಭಿನ್ನವಾಗಿ ಇಲ್ಲ. 


ನಂಬಿಕೆಗಳು ವಿಶ್ವಾಸಗಳು ಅದರಲ್ಲೂ ಸನಾತನ ಹಿಂದೂ ಸಂಸ್ಕೃತಿ ಮೌಢ್ಯವಾಗಿ ಹಲವರಿಗೆ ಕಾಣುತ್ತದೆ. ಅದನ್ನು ಮೌಢ್ಯ ಎಂದು ಹೇಳುವುದರಲ್ಲೂ ಸ್ವಾರ್ಥವಿರುತ್ತದೆ. ಈ ಸ್ವಾರ್ಥದ ಅರಿವಿದ್ದೇ ಮನುಷ್ಯ ಕೋಟಿ ಸಂಖ್ಯೆಯಲ್ಲಿ ಮುಳುಗೇಳುತ್ತಿರುವುದು. ಒಂದು ಕೊಳಚೆ ಹೊಂಡದಲ್ಲಿ ಚಿನ್ನದ ತುಂಡು ಒಂದು ಬಿದ್ದಿರುತ್ತದೆ. ಆ ಚಿನ್ನ ಕೈವಶ ಮಾಡಿಕೊಳ್ಳುವುದಕ್ಕೆ ಕೊಳಚೆ ನೀರಾದರೂ ಅದನ್ನು ಲೆಕ್ಕಿಸದೆ ಹೊಂಡಕ್ಕೆ ಇಳಿದುಬಿಡುತ್ತಾನೆ. ಆ ನೀರು ಕೊಳಚೆ ಅಂತ ಆಕ್ಷಣಕ್ಕೆ ಅನಿಸುವುದಿಲ್ಲ. ಯಾರೋ ಒಬ್ಬ ಕೊಳಚೆ ಹೊಂಡಕ್ಕೆ ಬಿದ್ದು ಬಿಡುತ್ತಾನೆ. ಬಿದ್ದವನ ಜೀವದ ಮೌಲ್ಯವನ್ನು ಗ್ರಹಿಸಿ ಕೊಳಚೆಯನ್ನು ಲೆಕ್ಕಿಸದೆ ಹೊಂಡಕ್ಕೆ ಇಳಿದು ಬಿಡುತ್ತಾರೆ. ಇಲ್ಲಿನ ಕೊಳಕು ಗಮನಾರ್ಹವೆನಿಸುವುದಿಲ್ಲ.  ಗಂಗೆಯ ನೀರು ಕಲ್ಮಷ ಅಂತ ಹೇಳಿದರೆ ಅದನ್ನು ಕೇಳಿಸಿಕೊಳ್ಳುವ ವ್ಯವಧಾನ ಇರುವುದಿಲ್ಲ. ಚಿನ್ನಕ್ಕಿಂತಲೂ ಜೀವಕ್ಕಿಂತಲೂ ಮಿಗಿಲಾದ ಒಂದು ಭಾವನೆ ಆ ಗಂಗೆಯಲ್ಲಿ ಅಡಕವಾಗಿರುತ್ತದೆ. ಒಂದು ಮುಳುಗಿನ ಜಲಸ್ಪರ್ಷದಲ್ಲಿ ಆ ಮಹತ್ವವಿರುತ್ತದೆ. ಆದರೆ ಇದನ್ನು ಲೇವಡಿ ಮಾಡುವ ಒಂದೇ ಉದ್ದೇಶದಲ್ಲಿ ಇನ್ನಿಲ್ಲದ ವಿವಾದ ಸೃಷ್ಟಿ ಮಾಡುತ್ತಾರೆ. ಗಂಗೆಯ ನೀರು ಸ್ನಾನಕ್ಕೆ ಯೋಗ್ಯವಲ್ಲ ಎಂದು ಹೇಳುವವರಿಗೆ ಈ ಗಂಗೆಯಲ್ಲಿ ಸಿಗುವ ಪರಿಶುದ್ದತೆಯ ಅರಿವು ಇರುವುದಿಲ್ಲ. ದೇಹ ಶುದ್ದಿಗಾಗಿ ಮನುಷ್ಯ ಇಲ್ಲಿ ಮುಳುಗುವುದಿಲ್ಲ. ಇಲ್ಲಿ ಆತ್ಮ ಶುದ್ಧಿ ಮಾತ್ರ ಮುಖ್ಯವಾಗುತ್ತದೆ. ಆದರೆ ಲೌಕಿಕ ಚಿಂತನೆಯ ಮೂರ್ಖ ಮನಸ್ಸುಗಳಿಗೆ ಇಲ್ಲಿ ಸಿಗುವ ಪರಿಶುದ್ದಿಯ ಜ್ಞಾನವಿರುವುದಿಲ್ಲ. ಈ ಘಳಿಗೆಯಲ್ಲಿ ಶುದ್ದವಾದ ದೇಹ....ಮತ್ತೊಂದು ಘಳಿಗೆಯಲ್ಲಿ ಮಲಿನವಾಗಬಹುದು. ಆದರೆ ಪೂರ್ಣ ಜನ್ಮವೇ ಪಾವನವಾಗಿ ಪರಿಶುದ್ದವಾಗುವ ನಂಬಿಕೆಯಲ್ಲಿ ಕ್ಷುಲ್ಲಕ ದೇಹ ಶುದ್ದಿ ಮುಖ್ಯವಾಗುವುದಿಲ್ಲ. ಆದರೆ   ಗಂಗೆಯಲ್ಲಿ ಮಿಂದರೆ ಹೊಟ್ಟೆತುಂಬುತ್ತಾ ಎಂದು ಕೇಳುವ ಅದರ ಬಗ್ಗೆ ಅಪಸ್ವರ ಎತ್ತುವ ಮೂರ್ಖರಿಗೆ ಈ ಪಾವಿತ್ರ್ಯತೆ ಅರ್ಥವಾಗುವುದಿಲ್ಲ. ಕೇವಲ ಲೌಕಿಕ ಚಿಂತನೆ. ದೇಹದ ಹಸಿವಿನ ಬಗ್ಗೆ ಮಾತ್ರ ಯೋಚಿಸುವವನಿಗೆ ಅದರಿಂದಾಚೆಗಿನ ಜಗತ್ತಿನ ಹಸಿವು ಕಣ್ಣಿಗೆ ಕಾಣುವುದಿಲ್ಲ.  ಮೋಕ್ಷದ ಅರ್ಥ ತಿಳಿಯದವನು ಹಸಿವಿನ ಹಿಂದೆ ಹೋಗುತ್ತಾನೆ.  ಮನುಷ್ಯನಿಗೆ ಕೇವಲ ಹಸಿವು ಮಾತ್ರ ಮುಖ್ಯವಾಗುವುದಾದರೆ ಉಳಿದವುಗಳ ಹಿಂದೆ ಹೋಗುವ ಉದ್ದೇಶವಾದರೂ ಏನು? 

ಯಾವುದೇ ಯಶಸ್ಸಿನ ಹಿಂದೆ ಒಂದು ಪರೀಕ್ಷೆ ಇರುತ್ತದೆ. ನಮ್ಮನ್ನು ಪರೀಕ್ಷಿಸದೇ ಪರೀಕ್ಷೆಗೆ ಒಡ್ಡದೆ ಸಿಗುವ ಯಾವುದೇ ಯಶಸ್ಸು ಅದು ನಮ್ಮ ಅರ್ಹತೆಯನ್ನು ಹೇಳುವುದಿಲ್ಲ. ಅದರಲ್ಲಿ ಆತ್ಮಾನಂದವೂ ಲಭಿಸುವುದಿಲ್ಲ. ಆದರೆ ಒಂದು ಯಶಸ್ಸು ನಮ್ಮನ್ನು ಪರೀಕ್ಷೆಗೊಡ್ಡಿ ನಮ್ಮನ್ನು ಅರೆದು ಅರೆದು ಕೊನೆಯಲ್ಲಿ ಒದಗಿ ಬರುವ ಯಶಸ್ಸುಅದು ಸಂತೋಷಕ್ಕೆ ಕಾರಣವಾಗುವುದು ಮಾತ್ರವಲ್ಲ ಆತ್ಮ ತೃಪ್ತಿಯನ್ನು ಒದಗಿಸುತ್ತದೆ. ನಾವದಕ್ಕೆ ಅರ್ಹರು ಎಂದಾಗುವಾಗ ಅದು ಅಭಿಮಾನಕ್ಕೆ ಕಾರಣವಾಗುತ್ತದೆ. ಹೀಗಿರುವಾಗ ಭಗವಂತನ ಪದವಿ ಎಂಬುದು ಸುಮ್ಮನೇ ಒದಗಿ ಬಂದರೆ ಅದು ಕ್ಷುಲ್ಲಕ ಪದವಿಯಾಗಬಹುದು. ಅದಕ್ಕೆ ಯಾವ ಮೌಲ್ಯವೂ ಇಲ್ಲದಾಗಬಹುದು. ಒಂದು ರೀತಿಯಲ್ಲಿ ಗಂಗೆಯಲ್ಲಿ ಸ್ನಾನ ಮಾಡಿದರೆ ಬಡತನ ನೀಗುತ್ತಾ?  ಅಥವಾ ಹೊಟ್ಟೆಯ ಹಸಿವು ಶಮನವಾಗುತ್ತದಾ?   ಎಂದು ಕೇಳಿದಂತೆ. ಅದಕ್ಕೆ ಅರ್ಥವೇ ಇರುವುದಿಲ್ಲ. ಹಾಗಾಗಿಯೇ ಭಗವಂತನ ಬಳಿಗೆ ಹೋಗುವಾಗ ಅಲ್ಲಿ ಹಸಿವು ಎಂಬುದನ್ನು ಮನುಷ್ಯ ಮೊದಲು ಪಣಕ್ಕೆ ಒಡ್ಡಿ ಬಿಡುತ್ತಾನೆ. ಗಾಂಧೀಜಿಯ ಸ್ವಾತಂತ್ರ್ಯ ಹೋರಾಟದ ಕಥೆಯಲ್ಲೂ ಇದೇ ಹಸಿವಿನ ತಂತ್ರವಿದೆ. ಒಂದು ಯಶಸ್ಸಿನ ಹಿಂದೆ ಒಮ್ದು ಹಸಿವು ಇದ್ದೇ ಇರಬೇಕು. ಹಸಿವಿನ ರೂಪ ವೆತ್ಯಸ್ತವಾಗಿರಬಹುದು. ಆದರೆ ಹಸಿವು....ಅದೊಂದು ಬದುಕಿನ  ಪರೀಕ್ಷೆ. 

ಮಹಾ ಕುಂಭ ಆರಂಭವಾದಂದಿನಿಂದ ಒಂದಲ್ಲ ಒಂದು ಅನರೀಕ್ಷಿತ ಘಟನೆಗಳು ನಡೆದವು. ಕೆಲವು ಅವಘಡಗಳು ನಡೆದವು. ಪ್ರತಿಯೊಂದು ಘಟನೆಯಲ್ಲೂ ಒಂದು ಪರೀಕ್ಷೆಯ ರಹಸ್ಯವಿತ್ತು. ಈ ಪರೀಕ್ಷೆಯ ಸೋಲು ಕೂಡ ಒಂದು ಅರ್ಹತೆ. ಅಲ್ಲೊಂದು ಪ್ರಾಮಾಣಿಕತೆಯ ಪದವಿ ಇರುತ್ತದೆ. ಆದರೆ ಪರೀಕ್ಷೆ ಅದು ಎದುರಿಸುವುದಕ್ಕೆ ಇರುವ ಒಂದು ಅವಕಾಶ. ಹಾಗಾಗಿ ಅಲ್ಲಿ ಸಾವಿನ ವರದಿ ಸಾವಿರ ಸಂಖ್ಯೆಯಲ್ಲಿ ಬಂದರೂ ಸಾವಿರದ ಮಂದಿ ಯಾರೂ ಇಲ್ಲ, ಸಾವೇ ಒಂದು ಪದವಿ ಎಂಬಂತೆ ಗಂಗೆಯ ಬಳಿಗೆ ತೆರಳಿದರು. ಸಾವು ಭಯವನ್ನು ಹುಟ್ಟಿಸಲಿಲ್ಲ.  ಆ ಸಾವು  ಜೀವನ ಪರೀಕ್ಷೆಯಲ್ಲಿ ಹಿಂಜರಿಯುವಂತೆ ಮಾಡಲಿಲ್ಲ.  ಒಂದು ಅರ್ಥದಲ್ಲಿ ಸಾವು ಒಂದು ಪರೀಕ್ಷೆಯಾಗಿ ಬದಲಾಗಿ ಹೋದದ್ದು ಸನಾತನ ಧರ್ಮದ ಹಾದಿಯಲ್ಲಿದ್ದ ಬಹಳ ದೊಡ್ಡ ರಹಸ್ಯವಾಗಿ ರುಜುವಾತಾಯಿತು. ಸಾವನ್ನೂ ಸ್ವೀಕರಿಸುವ ಮನಸ್ಥಿತಿಯಲ್ಲಿ ಕೇವಲ ಹಸಿವಿನ ಚಿಂತೆ ಎಲ್ಲಿರುತ್ತದೆ. ಇದನ್ನು ತಿಳಿಯದವರು ಮೂರ್ಖತನದಿಂದ ಹೇಳಬಹುದು ಗಂಗೆಯಲ್ಲಿ ಮಿಂದರೆ ಬಡತನ ಹೋಗುತ್ತದಾ? ಹಸಿವು ನೀಗುತ್ತದಾ ಎಂದು. ಈ ಮರ್ತ್ಯ ಲೋಕದಲ್ಲಿ ಹಸಿವು ಎಂಬುದು ಅನಿವಾರ್ಯ. ಎಲ್ಲದಕ್ಕೂ ಅದೇ ಕಾರಣ. ಆದರೆ ಅದನ್ನು ಮೆಟ್ಟಿನಿಂತವನು . ಜೀವನ ಪರೀಕ್ಷೆಯನ್ನು ಗೆಲ್ಲುತ್ತಾನೆ. ಭಗವಂತನಿಗೆ ಪ್ರಿಯನಾಗುತ್ತಾನೆ. ಅದು ಪ್ರತೀ ಮನುಷ್ಯ ಜೀವಕ್ಕೆ ಪರಮ ಗುರಿಯಾಗಿರುತ್ತದೆ. 

ಪ್ರತಿಯೊಂದು ಕೆಲಸದಲ್ಲು ವಿಘ್ನಗಳು ಇದ್ದೇ ಇರುತ್ತವೆ. ಅದು ಒದಗಿ ಬರುವುದು ಒಂದು ರೀತಿಯಲ್ಲಿ ನಮಗೆ ಪರೀಕ್ಷೆಯಾಗಿರುತ್ತದೆ. ಅಲ್ಲಿ ಅವ್ಯವಸ್ಥೆ ಇರುತ್ತದೆ. ಸೌಕರ್ಯದ ಕೊರತೆ ಇರುತ್ತದೆ. ಕೆಲವು ತೊಂದರೆಗಳು ಇರಬಹುದು. ಮನೆಗೆ ಒಂದು ಹತ್ತು ಜನ ಅತಿಥಿಗಳು ಬಂದರೆ ಅವರಿಗೆ ಒಪ್ಪತ್ತಿನ ಊಟ ಹಾಕುವಾಗ ನಮಗೆ ಹಲವು ಸಂಕಷ್ಟಗಳು ಎದುರಾಗುತ್ತವೆ. ಇನ್ನು ಕೋಟಿ ಕೋಟಿ ಸಂಖ್ಯೆಯ ಜನಗಳು ಬರುವಾಗ ಅದೊಂದು ದೊಡ್ಡ ಪರೀಕ್ಷೆಯಾದರೆ ಅದು ನಿರೀಕ್ಷತ ಎಂದು ತಿಳಿದು ಕೊಳ್ಳುವುದರಲ್ಲಿ ಯಶಸ್ಸಿನ ರಹಸ್ಯವಿರುತ್ತದೆ. 

ಪ್ರತಿಯೊಂದು ಕೆಲಸದಲ್ಲು ವಿಘ್ನಗಳು ಇದ್ದೇ ಇರುತ್ತವೆ. ಅದು ಒದಗಿ ಬರುವುದು ಒಂದು ರೀತಿಯಲ್ಲಿ ನಮಗೆ ಪರೀಕ್ಷೆಯಾಗಿರುತ್ತದೆ. ಅಲ್ಲಿ ಅವ್ಯವಸ್ಥೆ ಇರುತ್ತದೆ. ಸೌಕರ್ಯದ ಕೊರತೆ ಇರುತ್ತದೆ. ಕೆಲವು ತೊಂದರೆಗಳು ಇರಬಹುದು. ಮನೆಗೆ ಒಂದು ಹತ್ತು ಜನ ಅತಿಥಿಗಳು ಬಂದರೆ ಅವರಿಗೆ ಒಪ್ಪತ್ತಿನ ಊಟ ಹಾಕುವಾಗ ನಮಗೆ ಹಲವು ಸಂಕಷ್ಟಗಳು ಎದುರಾಗುತ್ತವೆ. ಇನ್ನು ಕೋಟಿ ಕೋಟಿ ಸಂಖ್ಯೆಯ ಜನಗಳು ಬರುವಾಗ ಅದೊಂದು ದೊಡ್ಡ ಪರೀಕ್ಷೆಯಾದರೆ ಅದು ನಿರೀಕ್ಷತ ಎಂದು ತಿಳಿದು ಕೊಳ್ಳುವುದರಲ್ಲಿ ಯಶಸ್ಸಿನ ರಹಸ್ಯವಿರುತ್ತದೆ. 


Friday, February 14, 2025

ಪುರೋಹಿತ

             ಮನೆಯೋದರಲ್ಲಿ ಗಣಹೋಮ‌ಮುಗಿಸಿ ಅಂದು ನಾನು ನನ್ನ ಅಜ್ಜನ ಜತೆ ಚೇವಾರಿನ ಗುಡ್ಡಡ ಮೇಲೆ ನಡೆದುಕೊಂಡು ಬರುತ್ತಿದ್ದೆವು. ಅಲ್ಲಿ ಸಿಕ್ಕಿದ ಅಕ್ಕಿ ತೆಂಗಿನ ಕಾಯಿ ಚೀಲ  ನನ್ನ ಹೆಗಲಲ್ಲಿತ್ತು.  ಆಗ ನನ್ನ ಬಾಲ್ಯದ ಹತ್ತರ ಹರಯ.  ಅಜ್ಜನ ಬಳಿ ವೇದ ಮಂತ್ರ ಕಲಿಯುತ್ತಿದ್ದೆ.  ಹಾಗೇ ನಡೆದುಕೊಂಡು ಬರುತ್ತಿದ್ದಾಗ ಒಬ್ಬಾತ ಅಜ್ಜನನ್ನು ಕಂಡು ಓಡೋಡಿ ಬಂದ.   ಆತ ಬರುತ್ತಿದ್ದವನನ್ನು ನೋಡಿ ಅಜ್ಜ ಗೊಣಗಿಕೊಂಡರು, "ಇವನಿಗೆ ನನ್ನನ್ನು ಕಾಣುವಾಗ ಸತ್ಯನಾರಾಯಣ ಪೂಜೆ ನೆನಪಾಗುತ್ತದೆ."  ಈ ಮೊದಲು ಅಜ್ಜನನ್ನು ಹಲವು ಸಲ ಅಲ್ಲಿ ಇಲ್ಲಿ ನೋಡಿದ್ದ.  ಆಗೆಲ್ಲ ಸತ್ಯನಾರಾಯಣ ಪೂಜೆಯ ಬಗ್ಗೆ ಹೇಳುತ್ತಿದ್ದ.     ಆತ ತೋಟ ಗದ್ದೆಯಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದವನು. ಅಜ್ಜನ ಬಳಿಗೆ ಬಂದವನೇ, " ಅಣ್ಣೆರೆ"  ಅಂತ   ನಮಸ್ಕರಿಸಿದ. 

    ಹಲವು ಸಲ ಅಜ್ಜನನ್ನು ನೋಡಿದ್ದ. ಆತನಿಗೆ ಮನೆಯಲ್ಲಿ ಒಂದು ಸತ್ಯನಾರಾಯಣ ಪೂಜೆ ಮಾಡಬೇಕಿತ್ತು. ಅದಕ್ಕಾಗಿ ಈಗ ಪುನಃ ಅಜ್ಜನನ್ನು ನೋಡುತ್ತಿದ್ದಂತೆ ಹತ್ತಿರ ಬಂದು ಹೇಳಿದ್ದು ಇಷ್ಟೆ. ಆತ ಹಲವರಲ್ಲಿ ಸತ್ಯನಾರಾಯಣ ಪೂಜೆ ಮಾಡುವ ಬಗ್ಗೆ ಕೇಳಿಕೊಂಡಿದ್ದ. ಆದರೆ ಎಲ್ಲರೂ ಅಷ್ಟು ಖರ್ಚಾಗ್ತದೆ, ಹಲವಾರು ಪೂಜೆ ಸಾಮಾಗ್ರಿಗಳನ್ನು ಹೇಳಿ ಜಾರಿಕೊಳ್ಳುತ್ತಿದ್ದರು. ಆತ ಒಬ್ಬ ಕೂಲಿಯಾಳು, ಆತನ ಮನೆಯ ಪರಿಸ್ಥಿತಿ ನೋಡಿದರೆ ಆತ ಆ ಖರ್ಚುಗಳನ್ನು ನಿಭಾಯಿಸುವುದಕ್ಕೆ ಸಮರ್ಥನಲ್ಲ. ಅಜ್ಜನಲ್ಲಿ ಆತ ಅದನ್ನೇ ಹೇಳಿದ್ದ. ತಾನು ಬಡವ. ತನಗೆ ಪೂಜೆ ಮಾಡಲೇಬೇಕು. ಆತನ ಮನೆಯಲ್ಲಿ ಏನಾದರೂ ಒಂದು ದೈವ ಕಾರ್ಯ ಮಾಡಬೇಕು.  ಅದೇಕೋ ತನ್ನ ಕಷ್ಟಗಳಿಗೆ ಆತ ಕಂಡುಕೊಂಡ ದಾರಿಯದು. ಹಲವು ಕಡೆ ಸತ್ಯನಾರಾಯಣ ಪೂಜೆ ಮಾಡುವಾಗ ಅದರ ಕಥೆ ಕೇಳಿ ಅದು ಆತನಿಗೆ ಪೂಜೆ ಮಾಡಬೇಕೆನ್ನುವ ಬಯಕೆಯನ್ನು ಸೃಷ್ಟಿ ಮಾಡಿತ್ತು. ಹೇಗಾದರೂ ಪೂಜೆ ಮಾಡಿದರೆ ತನ್ನ ಬಡತನದ ಹಲವು ಸಮಸ್ಯೆಗಳು ಪರಿಹಾರವಾಗಬಹುದು ಎಂಬುದು ಆತನ ದೃಢವಾದ ನಂಬಿಕೆ. ಆದರೆ ಹೇಗೆ? ಪೂಜೆಯ ಸಾಮಾಗ್ರಿ, ಭಟ್ಟರಿಗೆ ಕೊಡಬೇಕಾದ ಸಂಭಾವನೆ ಹೀಗೆ ಬಹಳ ದೊಡ್ಡ ಮೊತ್ತದ ಹಣ ಆತನ ಬಳಿ ಇರಲಿಲ್ಲ. ಹಲವು ಸಲ ಬೇಡಿಕೊಂಡ ನಂತರ, 

        ಅಜ್ಜ ಕೆಲವು ತೀರಾ ಅಗತ್ಯದ ವಸ್ತುಗಳ ಪಟ್ಟಿ ಆತನಿಗೆ ಕೊಟ್ಟು ಹೇಳಿದರು "ನಾಳೆ ರಾತ್ರಿಗೆ  ನಿನ್ನ ಮನೆಗೆ ಬರುತ್ತೇನೆ. ಆ ಸಾಮಾನು ಎಲ್ಲ ತಂದಿಡು. ನಾಳೆ ಪೂಜೆ  ಮಾಡುವ. ಬೆಳಗಿನಿಂದ ಉಪವಾಸ ಇರಬೇಕು. ಮನೆಯವರು ಎಲ್ಲ ಸ್ನಾನ ಎಲ್ಲ ಮಾಡಿ ಕುಳಿತುಕೊಳ್ಳಿ ಬರುತ್ತೇನೆ"  ಆತ ಸಂತೋಷದಿಂದ ತೆರಳಿದ. 

     ಅಜ್ಜನಿಗೆ ಆತ ಮಾಡುತ್ತಾನೆ ಎಂಬ ವಿಶ್ವಾಸ ಆದರೂ ಇರಲಿಲ್ಲ. ಕಂಡದ್ದಕ್ಕೆ ಒಂದು ಪರಿಹಾರ ಅಂತ ಹೇಳಿದ್ದರು. ಆದರೂ ಮರುದಿನ ಸಾಯಂಕಾಲವಾಗುತ್ತಿದ್ದಂತೆ  ಅಜ್ಜ ನನ್ನನ್ನು ಕರೆದುಕೊಂಡು ಸ್ವಲ್ಪ ಬೇಗನೆ ಹೊರಟರು. ಆತನ  ಮನೆಗೆ ಅಂಗಳಕ್ಕೆ ಕಾಲಿಡುತ್ತಿದ್ದಂತೆ ಅಜ್ಜನಿಗೆ ಆಶ್ಚರ್ಯವಾಯಿತು. ಅಂಗಳವೆಲ್ಲ ಸೆಗಣಿ ಸಾರಿಸಿ ಸ್ವಚ್ಛ ಮಾಡಿ ಇಡಲಾಗಿತ್ತು. ಮನೆ ಮಂದಿಯೆಲ್ಲ ಸ್ನಾನ ಮಾಡಿದ್ದರು. ಅಕ್ಕ ಪಕ್ಕದ ಕೆಲವು ಮನೆಯವರು ಸೇರಿದ್ದರು. ಅಜ್ಜನನ್ನು ಕಾಣುತ್ತಿದ್ದಂತೆ ಸಂತೋಷದಿಂದ ಗೌರವದಿಂದ ಹತ್ತಿರ ಬಂದು ನಿಂತ. ತಂದಿಟ್ಟ ಎಲ್ಲ ಸಾಮಾನು ತೋರಿಸಿದ. ಅಜ್ಜನಿಗೂ ಸಂತೋಷವಾಯಿತು.  ಮನೆಯ ಜಗಲಿಯ ಒಂದು ತುದಿಯಲ್ಲಿ ಪೂಜೆಗೆ ಸಿದ್ಧತೆ ಮಾಡಬೇಕಿತ್ತು. ನನ್ನಲ್ಲಿ ಕೆಲವು ಸಾಮಾನುಗಳನ್ನು ಎತ್ತಿಡುವಂತೆ ಹೇಳಿದರು. ಹತ್ತಿರದ ಬಾವಿಯಿಂದ ನೀರು ತರುವುದಕ್ಕೆ ಹೇಳಿದರು. ಜಗಲಿಯ ತುದಿಯಲ್ಲಿ ಪೂಜೆಗೆ ಮಂಡಲ ಬಿಡಿಸಿ ಎಲ್ಲವನ್ನು ಅಣಿಗೊಳಿಸುತ್ತಿದ್ದರು. ನಾನು ನನಗೆ ತಿಳಿದಂತೆ ಅಜ್ಜನಿಗೆ ಸಹಾಯ ಮಾಡುತ್ತಿದ್ದೆ. ಅಲ್ಲೇ ಒಂದು ಕಡೆ ಮೂರು ಕಲ್ಲು ಇಟ್ಟು ತತ್ಕಾಲದ ಒಲೆ ಹಾಕುವಂತೆ ಮನೆಯವರಿಗೆ ಹೇಳಿದರು. ಅಲ್ಲಿ ಸತ್ಯನಾರಾಯಣ ಪೂಜೆಯ ಸಪಾದ ಭಕ್ಷ್ಯ ಮಾಡಬೇಕಿತ್ತು. ಗೋಧಿ ಹಿಟ್ಟು ತುಪ್ಪ ಸಕ್ಕರೆ ಹಾಲು ಬಾಳೆ ಹಣ್ಣು ಎಲ್ಲ ಸಿದ್ದಗೊಳಿಸುತ್ತಿದ್ದಂತೆ ಅಜ್ಜ ಬೆಂಕಿ ಉರಿಸಿ ಭಕ್ಷ್ಯವನ್ನು ತಯಾರಿಸುತ್ತಿದ್ದಂತೆ ಸುತ್ತಲೂ ಘಂ ಎಂಬ ಪರಿಮಳ...ನಿಜಕ್ಕೂ ಶುಭಕಾರ್ಯದ ವಾತಾವರಣ ನಿರ್ಮಾಣವಾಯಿತು. 

    ಅಜ್ಜನ ವೃತ್ತಿ ಪರತೆಯಲ್ಲಿ ಎರಡು ಮಾತಿಲ್ಲ. ಪುಟ್ಟ ಬಾಲಕ ನನ್ನ ಸಹಾಯ ಬಿಟ್ಟರೆ ಅವರಿಗೆ ಬೇರೆ ಪರಿಚಾರಕರು ಬೇಕಿರಲಿಲ್ಲ. ಮಾತ್ರವಲ್ಲದೆ ಯಾವ ಪೂಜಾ ವಿಧಿಗಳನ್ನೆ ಮಾಡಲಿ ಅವರು ವೇದ ಮಂತ್ರಗಳನ್ನು ಪುಸ್ತಕ ನೋಡಿ ಹೇಳಿದ್ದನ್ನು ನಾನು ನೋಡಲಿಲ್ಲ. ಎಲ್ಲವೂ ನಾಲಿಗೆ ತುದಿಯಲ್ಲಿ. ಸರಸ್ವತಿ ನಾಲಿಗೆಯ ಮೇಲೆ ಕುಣಿದಂತೆ. ಅದ್ಭುತ ಸ್ಮರಣ ಶಕ್ತಿ.  ಸಂಪೂರ್ಣ  ಋಗ್ವೇದ ಇವರ ನಾಲಿಗೆಯ ತುದಿಯಲ್ಲಿತ್ತು. 

           ಸುಮಾರು ರಾತ್ರಿಯ ತನಕವು ಪೂಜಾವಿಧಿ ನಡೆಯಿತು. ಅಜ್ಜ ಸತ್ಯನಾರಾಯಣ ಕಥೆ ಹೇಳುತ್ತಿದ್ದಂತೆ ಮನೆ ಮಂದಿಯ ಜತೆಗೆ ಬಂದವರೆಲ್ಲ ತಮ್ಮ ಕೆಲಸವನ್ನು ಬಿಟ್ಟು ಕಥೆ ಕೇಳುವುದಕ್ಕೆ ಶ್ರಧ್ದೆಯಿಂದ ಕುಳಿತರು. ಕೆಲವು ಕಡೆ ಈ ಶ್ರದ್ದೆ ಕಂಡುಬರುವುದಿಲ್ಲ. ಅರ್ಚಕರು ಬಿಟ್ಟರೆ ಉಳಿದವರೆಲ್ಲ ತಮ್ಮ ಕೆಲಸದಲ್ಲಿ ಮಗ್ನರಾಗಿರುತ್ತಾರೆ. ಅದೊಂದು ಯಾಂತ್ರಿಕ ವಿಧಿಯಾಗಿರುತ್ತದೆ. ಇಲ್ಲಿ ಮನೆ ಮಂದಿಯ ಶ್ರದ್ದೆ ನೋಡಿ ಅಜ್ಜನಿಗೂ ಉತ್ಸಾಹ. 

    ತಡರಾತ್ರಿ ಮಂಗಳಾರತಿ ಮುಗಿಸಿ ಪೂಜೆ ಸಮಾಪ್ತಿಯಾಯಿತು. ಎಲ್ಲರಿಗೂ ಪ್ರಸಾದ ವಿತರಣೆಯಾಗಿ ಅಜ್ಜ ಪೂಜೆ ಮುಗಿಸಿ ಎದ್ದರು. ಆತ ಭಕ್ತಿಯಿಂದ ತನ್ನಲ್ಲಿದ್ದ ಒಂದಷ್ಟು ಚಿಲ್ಲರೆ ದುಡ್ಡನ್ನು ತಟ್ಟೆಯಲ್ಲಿ ಎಲೆ ಅಡಿಕೆಯ ಜತೆಗೆ ಇಟ್ಟು ಅಜ್ಜನ ಕಾಲಿಗೆರಗಿದ. ಅಜ್ಜ ಆ ತಟ್ಟೆಯಿಂದ ಕೇವಲ ಒಂದು ನಾಣ್ಯ ತೆಗೆದಿರಿಸಿ ಉಳಿದದ್ದನ್ನು ಎಲ್ಲವನ್ನು ಅಲ್ಲೆ ಬಿಟ್ಟು ಆತನಿಗೆ ಆಶೀರ್ವಾದ ಮಾಡಿ ನನ್ನನ್ನು ಕರೆದುಕೊಂಡು ಹೊರಟರು.  ಕೊಟ್ಟ ದಕ್ಷಿಣೆಯನ್ನು ಬಿಟ್ಟು ಬಂದ ಅಜ್ಜನ ಆದರ್ಶ ಅದೊಂದು ಮಾದರೀ ವ್ಯಕ್ತಿತ್ವ. ಆಗ ಅದರ ಗಂಭೀರತೆ ಅರಿವಾಗದಿದ್ದರೂ ಅಜ್ಜ ಹಾಗೇಕೆ ಮಾಡಿದರು ಎಂದು ಯೋಚಿಸಿದರೆ ಅದರ ಮಹತ್ವ ಈಗ ಅರಿವಾಗುತ್ತದೆ. ವೈದ್ಯನಾದವನ ವೃತ್ತಿ ಪರತೆ ಇರುವುದು ಆತನ ವೈದ್ಯೋ ನಾರಾಯಣೋ ಹರಿಃ ಎಂಬುದರ ಅರ್ಥ ತಿಳಿದು ನಡೆದುಕೊಳ್ಳುವಾಗ. ಹಾಗೇಯೆ ಪುರೋಹಿತನಾಗುವುದು ಅನುಷ್ಠಾನದಲ್ಲಿ. ಇಂದಿನ ವ್ಯಾವಹಾರಿಕ ಪ್ರಪಂಚದಲ್ಲಿ ಇದನ್ನು ಕಾಣುವುದು ಅಪರೂಪ. ಅಜ್ಜ ಆಡಂಬರದ ಪುರೋಹಿತರಾಗಿರಲಿಲ್ಲ. ಸದಾ ಸರಳ ಉಡುಗೆಯಲ್ಲಿರುತ್ತಿದ್ದರು. ಒಂದರ್ಥದಲ್ಲಿ ಬೈರಾಗಿಯಂತೆ.  ಇಂದು ಪುರೋಹಿತರೆಂದರೆ ಮಂತ್ರಕ್ಕಿಂತ ಉಗುಳೇ ಹೆಚ್ಚು ಎಂಬಂತೆ  ಪಟ್ಪಿಯಂಚಿನ ಪಂಚೆ ಶಲ್ಯ ವೇಷತೊಟ್ಟಂತೆ ಆಡಂಬರದಿಂದ ಕೂಡಿರುತ್ತದೆ.  ಈ ನಡುವೆ ಕೆಲವರು ಸರಳವಾಗಿ ಅದರ ಮಹತ್ವ ತಿಳಿದುಕೊಂಡು ನಡೆಯುವವರಿದ್ದರೂ ಅದು ಗೌರವವನ್ನು ಮಹತ್ವವನ್ನೂ ಗಳಿಸುವುದಿಲ್ಲ.         

    ಬದುಕು ಆದರ್ಶವಾಗಿರಬೇಕು ಹೊರತು ಪ್ರದರ್ಶನದ ವಸ್ತುವಾಗಬಾರದು.  ಹಾಗಾದರೆ ಅದು ಸ್ವಾರ್ಥವಾಗುತ್ತದೆ.  ಇಂದು ಪ್ರದರ್ಶನದಿಂದ  ಮುಖ್ಯವಾಗಿ ಆಚರಣೆ ಶೂನ್ಯ ವಾಗುತ್ತದೆ. ಸತ್ಸಂಕಲ್ಪ ಇಲ್ಲ ವಾಗುತದೆ. 


        ಪುರು ಅಂದರೆ ದೇಹ ಅಂತಲೂ ಅರ್ಥವಿದೆ, ದೇಹಕ್ಕೆ ಹಿತ ಸದ್ಗತಿಯನ್ನು ಕೊಡುವವನೇ ಪುರೋಹಿತ. ಮೂಲ ತತ್ವ ಆಶಯಗಳು ಮರೆಯಾಗುತ್ತವೆ.ಪರಿಶುದ್ಧವಾಗಬೇಕಾದ ಹಾದಿಯೇ ಕಲ್ಮಶವಾದರೆ ಉದ್ದೇಶ ಶುದ್ಧವಾಗಲು ಸಾಧ್ಯವಿಲ್ಲ. ದೇಹದ ಹಿತ ಸಹಜವಾಗಿ ಅದು ನಮ್ಮ ಮನೋಭಾವಕ್ಕೆ ಹೊಂದಿಕೊಂಡಿರುತ್ತದೆ. ಆದರೆ ದೇಹದ ಹಿತ ಏನು ಎಂಬುದನ್ನು ತೋರಿಸಿಕೊಟ್ಟು ಅದನ್ನು ವಿಧಿಸುವವನೇ ಪುರೋಹಿತ. 

Saturday, February 1, 2025

ಸಂಸ್ಕಾರ ಶುದ್ಧಿ

            ಮೊನ್ನೆ ಒಬ್ಬರು ನಿಮ್ಮ ಹಾಗೇ ನಾನೂ ಮುಂಜಾನೆ ನಾಲ್ಕರ ಹೊತ್ತಿಗೆ ನಿದ್ದೆ ಬಿಟ್ಟು ಎದ್ದು ಬಿಡುತ್ತೇನೆ ಎಂದರು. ನನ್ನ ಹಾಗೆ ಎಂದು ಹೇಳುವುದಕ್ಕೆ ಇಲ್ಲಿ ಅರ್ಥವಿಲ್ಲ. ಅಥವಾ ನನ್ನನ್ನು ನೋಡಿ ಸ್ಫೂರ್ತಿಯಾಗಿದೆ ಎಂದುಕೊಳ್ಳುವಷ್ಟು ಬೆನ್ನು ತಟ್ಟಿಕೊಳ್ಳುವ ಮನೋಭಾವ ನನಗೂ ಇರುವುದಿಲ್ಲ. ಅಥವಾ ಇನ್ನೊಬ್ಬರಿಗೆ ಸ್ಫೂರ್ತಿಯಾಗಲಿ ಎಂಬ ಬಯಕೆ ನನಗೂ ಇರುವುದಿಲ್ಲ. ಮುಂಜಾನೆ ನಾನು ಮಾತ್ರ ಎದ್ದುಬಿಡುತ್ತೇನೆ ಎಂದಿದ್ದರೆ ನನ್ನ ಹಲವು ಸಮಸ್ಯೆಗಳು ಪರಿಹಾರವಾಗಿಬಿಡುತ್ತಿತ್ತು. ನನ್ನಂತೆ ನಮ್ಮ ಮೆಯಲ್ಲಿ ಉಳಿದವರೂ ಏಳುವುದರಿಂದ ಮುಂಜಾನೆಯ ಏಕಾಂತ ಅನುಭವಕ್ಕೆ  ಹಲವುಸಲ ಭಂಗವಾಗುತ್ತದೆ. ಹಾಗಾಗಿ ಎಲ್ಲರೂ ಎದ್ದೇಳಬೇಕೆಂದು ಹೇಳುವುದರಲ್ಲಿ ನಾನು ಒಂದಷ್ಟು ಅಸೌಕರ್ಯವನ್ನು ಅನುಭವಿಸುತ್ತೇನೆ. ಯಾರೂ ಎದ್ದೇಳದೆ ಇರಲಿ ಎಂದೇ ಪ್ರತಿದಿನ ಬಯಸುತ್ತೇನೆ. ಅದಕ್ಕೆ ಹಲವು ಕಾರಣವಿದೆ. ಮುಂಜಾನೆ ಏಳುವುದು ಮುಖ್ಯವಲ್ಲ. ಎದ್ದ ನಂತರದ ಜಾಗೃತ ಸ್ಥಿತಿ ಅದು ಹೇಗಿರುತ್ತದೆ ಎಂಬುದು ಮುಖ್ಯ.

       ನಾವು ಎಚ್ಚರದಿಂದ ಇರುವಾಗ ಇನ್ನಷ್ಟು ಎಚ್ಚರಿಕೆಯನ್ನು ಪಾಲಿಸಬೇಕು. ಮುಂಜಾನೆ ಏಳುವಾಗ ಮೊದಲು ಉಳಿದವರು ನಿದ್ರಿಸುತ್ತಿದ್ದಾರೆ ಎಂಬ ಪ್ರಜ್ಞೆ ಜಾಗೃತವಾಗಿರಬೇಕು. ನಮ್ಮಿಂದ ಅವರಿಗೆ ನಿದ್ರಾಭಂಗವಾಗದಂತೆ ಆದಷ್ಟು ನಿಶಬ್ದ ಪಾಲಿಸಬೇಕು. ಈ ನಿಶಬ್ದತೆ ಮುಂಜಾನೆಯ ಶಾಂತ ಮೌನವನ್ನು ಅನುಭವಿಸುವುದಕ್ಕೆ ಪ್ರಚೋದನೆಯಾಗುತ್ತದೆ. ಈ ಮೌನಕ್ಕೆ ನಮ್ಮ ಉಸಿರಿನಿಂದಲೂ ದೇಣಿಗೆ ಸಲ್ಲಿಸಬೇಕು. ಅಂದರೆ ಉಸಿರನ್ನೂ ನಿಶ್ಯಬ್ದವಾಗಿ ಬಿಡಬೇಕು. ಪರಿಸರದಲ್ಲಿ ಸಹಜವಾಗಿ ಆಗುವ ಶಬ್ದಗಳು, ಹಕ್ಕಿ ಕೂಗುವುದಾಗಲಿ, ನಾಯಿ ಬೊಗಳುವುದಾಗಲೀ ಶಾಂತ ಪರಿಸರಕ್ಕೆ ಭಂಗವನ್ನು ತರುವುದಿಲ್ಲ. ಬದಲಿಗೆ ಮನುಷ್ಯ ನಿರ್ಮಿತ ಶಬ್ದಗಳು ನೀರವ ಮೌನವನ್ನು ಕದಡಿಬಿಡುತ್ತವೆ. ನಾವು ಹೆಜ್ಜೆ ಇಡುವಾಗ, ವಸ್ತುಗಳನ್ನು  ಎತ್ತಿಡುವಾಗ ಕದವನ್ನು ಮುಚ್ಚಿದಾಗ ಎಷ್ಟು ಸಾಧ್ಯವೋ ಅಷ್ಟು ನಿಶ್ಯಬ್ದತೆ ಪಾಲಿಸಬೇಕು. ಮುಂಜಾನೆಯ ನಮ್ಮ ವರ್ತನೆ ನಮ್ಮ ಮನಸ್ಥಿತಿಯನ್ನು ಹೇಳುತ್ತದೆ. ನಮ್ಮ ಮನಸ್ಸಿನಲ್ಲಿರುವ ಉದ್ವಿಗ್ನತೆ ಸೂಕ್ಷ್ಮವಾಗಿ ನಮ್ಮ ವರ್ತನೆಯನ್ನು ತೋರಿಸುತ್ತದೆ. ಆಗ ಸುತ್ತಲಿನ ಮೌನವನ್ನು ಅನುಭವಿಸುವ ಮನಸ್ಥಿತಿ ಇಲ್ಲವಾಗಿ ಮನಸ್ಸು ಮತ್ತಷ್ಟು ಉದ್ವಿಗ್ನವಾಗುತ್ತದೆ. 

ನಿದ್ದೆಯಲ್ಲಿರುವವರನ್ನು ಧ್ಯಾನದಲ್ಲಿ ನಿರತರಾದವರನ್ನು ಎಚ್ಚರಿಸಬಾರದು, ಅಥವಾ ಅವರ ಆ ಸ್ಥಿತಿಗೆ ಭಂಗವನ್ನು ತರಬಾರದು. ಇದನ್ನು ಮಹಾ ಪಾಪ ಎಂದು ಪರಿಗಣಿಸಲಾಗುತ್ತದೆ. ಆದರೆ ವಿಚಿತ್ರವೆಂದರೆ ನಾವು ನಿದ್ರಿಸುವಾಗ ಉಳಿದವರು ಮೌನವನ್ನು ಪಾಲಿಸಬೇಕು ಎಂದು ತಿಳಿದಿರುತ್ತೇವೆ. ಪರರಿಗೆ ಹಾನಿಯನ್ನು ಎಸಗುವುದು, ದ್ರವ್ಯಾಹಾನಿಯಾಗಿರಬಹುದು, ಮಾನಸಿಕ ಕ್ಷೋಭೆಯಾಗಿರಬಹುದು ಅದು ಶುದ್ದ ಸಂಸ್ಕಾರಕ್ಕೆ ವಿರುದ್ದವಾಗಿರುತ್ತದೆ. ಪರರಿಗೆ ಹಾನಿಯಾದರೂ ಅದು ಪರೋಕ್ಷವಾಗಿ ನಮ್ಮ ಮನಸ್ಥಿತಿಗೂ ಪ್ರಭಾವ ಬೀರುತ್ತದೆ. ಸಂಸ್ಕಾರವೆಂದರೆ ಮನುಷ್ಯನ ಬದುಕಿನ ರೀತಿ. 

ವಿದ್ಯೆ ಸಂಸ್ಕಾರವನ್ನು ಕೊಡುತ್ತದೆ. ಸಂಸ್ಕಾರವನ್ನು ಕೊಡದ ವಿದ್ಯೆ,  ವಿದ್ಯೆಯೇ ಅಲ್ಲ. ಸಂಸ್ಕಾರವೆಂದರೆ ಅದರ ಮೊದಲ ಸಾಲು, ಪರಹಿತ ಅಥವಾ ಪರರಿಗೆ ತೊಂದರೆಯನ್ನು ಮಾಡದೇ ಇರುವುದು. ಪರಪೀಡೆ ಇರುವ ಯಾವುದೇ ಪ್ರವೃತ್ತಿಯಾದರೂ ಅದು ಶುದ್ದ ಸಂಸ್ಕಾರವಲ್ಲ. ಅಲ್ಲಿ ವಿದ್ಯೆಗೆ ಸ್ಥಾನವಿರುವುದಿಲ್ಲ. ವಿದ್ಯೆ ಅಂದರೆ ಅದು ಬದುಕಿಗೆ ಕೊಡುವ ಸೂಚನೆ. ಬದುಕು ಹೇಗಿರಬೇಕು ಎಂಬುದನ್ನು ವಿದ್ಯೆ ತೋರಿಸಿಕೊಡುತ್ತದೆ. ಇದಿಲ್ಲದೆ ವಿದ್ಯೆಗೆ ಸ್ಥಾನವೇ ಇರುವುದಿಲ್ಲ.  ಪರಹಿತವನ್ನು ಚಿಂತಿಸುವವನಿಗೆ ಮಾತ್ರ ಸ್ವಹಿತವನ್ನು ಚಿಂತಿಸುವ ಅವಕಾಶವಿರುತ್ತದೆ. ಸಂಸ್ಕಾರ ಶೂನ್ಯನಿಗೆ ವಿದ್ಯೆಯ ಅವಶ್ಯಕತೆ ಇರುವುದಿಲ್ಲ. ಅಥವಾ ಆತ ವಿದ್ಯಾವಂತನಾಗಿರುವುದಿಲ್ಲ. ಶುದ್ದ ಸಂಸ್ಕಾರ ಉತ್ತಮ ಮನಸ್ಥಿತಿಯನ್ನು ನಿರ್ಮಿಸುತ್ತದೆ

Wednesday, January 22, 2025

ಮಂದಗಮನೆ ನೇತ್ರಾವತಿಯ ಮಡಿಲಲ್ಲಿ


ಪಡುವಣ ಬೆಟ್ಟದ ಬುಡದಲಿ ಹುಟ್ಟಿ,

ಕುದುರೆಮುಖದ ಬಂಡೆಯ ತಲೆ ಮೆಟ್ಟಿ,

ಹಾರುತ, ಬೀಳುತ, ಕುಣಿಯುತ, ಮಣಿಯುತ

ಹರಿವಳು ನದಿ ನೇತ್ರಾವತಿಯು;

ಸಮುದ್ರರಾಜನ ಪ್ರಿಯಸತಿಯು

ಇದು ಬಾಲ್ಯದಲ್ಲಿ ಉರು ಹೊಡೆದು ಬಾಯಿಪಾಠ ಒಪ್ಪಿಸಿದ ಕವನ. ಇದು ಸರಿಯಾಗಿ ನೆನಪಿಲ್ಲ. ಇದರ ಕವಿ ಮಹಾಶಯರು ಯಾರು ಅಂತ ಗೊತ್ತಿಲ್ಲ. ಆದರೆ ನಿನ್ನೆ ಈ ಹಾಡು ಪದೇ ಪದೇ ಗುನು ಗುನಿಸುವಂತೆ ನೇತ್ರಾವತಿಯ ತಟದಲ್ಲಿ ಕಳೆದ ಘಳಿಗೆ ಮಾಡಿತು.


        ನನ್ನ ಬಾಲ್ಯದಲ್ಲಿ ಅಂದರೆ ಸುಮಾರು ಎಪ್ಪತ್ತರ ದಶಕದಲ್ಲಿ, ನನ್ನ ಐದರ ವಯಸ್ಸಿನಲ್ಲಿ ಮಂಗಳೂರಿನಿಂದ ಕಾಸರಗೋಡಿಗೆ ಅಂದರೆ ಪೈವಳಿಕೆಗೆ ಆಗಾಗ ಪ್ರಯಾಣಿಸುತ್ತಿದ್ದ ನೆನಪು ಈಗಲೂ ಇದೆ. ಕೆಲವು ಸಲ ಮಬ್ಬು ಕೆಂಪಾದ ಉಗಿ ಬಂಡಿಯಲ್ಲಿ ಇನ್ನು ಕೆಲವೊಮ್ಮೆ ಬಸ್ಸಿನಲ್ಲಿ ಪಯಣಿಸುತ್ತಿದ್ದ ದಿನಗಳು., ಮಂಗಳೂರು ನಗರ ದಾಟುತ್ತಿದ್ದಂತೆ ಆಗ ಸಿಗುತ್ತಿದ್ದುದ್ದು ನೇತ್ರಾವತಿ ಸೇತುವೆ. ನಾವೆಲ್ಲ ಉಳ್ಳಾಲ ಸಂಕ ಅಂತ ಕರೆಯುತ್ತಿದ್ದೆವು. ಈ ಸೇತುವೆ ಮೇಲೆ ಹೋಗುವಾಗ ಕಾಣುವ ವಿಹಂಗಮ ದೃಶ್ಯ , ಆ ಜಲರಾಶಿ ಕಂಡು ಬೆರಗಾಗುತ್ತಿದ್ದೆನು. ಈಗಲೂ ಆ ನದಿ ತುಂಬಿ ತುಂಬಿ ಹರಿಯುತ್ತದೆ. ತುಂಬಿ ಹರಿದ ನೇತ್ರಾವತಿ ಅರಬ್ಬಿ ಸಮುದ್ರಕ್ಕೆ ಸೇರುವ ಅಳಿವೆ ಬಾಗಿಲಲ್ಲಿ, ಅಲ್ಲಿ ತನಕ ಕಡಲಿನ ಕರೆಗೆ ಅತುರ ಆತುರವಾಗಿ ಹರಿದು ಬಂದ ನೇತ್ರಾವತಿ,  ಕಡಲು ಎದುರಾಗುತ್ತಿದ್ದಂತೆ ನಿಧಾನವಾಗಿ ಮಂದಗಮನೆಯಂತೆ ಸಂಚರಿಸುತ್ತಾ , ಅದು ವರೆಗೆ ಓಡೋಡಿ ಬಂದ ದಣಿವನ್ನು ಪರಿಹರಿಸುತ್ತಿದ್ದಾಳೋ ಎಂಬ ಭಾವನೆಯಲ್ಲಿ ನಿಧಾನವಾಗಿ ವಿರಮಿಸುತ್ತಾ ಸಂಚರಿಸಿ ಕಡಲ ತಡಿಯಲ್ಲಿ ನಾಚಿ ಲಜ್ಜೆಯಿಂದ ನಿಂತಂತೆ, ಗಂಭೀರವಾದ ಕಡಲು ತನ್ನ ಕಬಂಧ ಬಾಹುಗಳಂತಿದ್ದ ಅಲೆಯಿಂದ ಕರೆದು ಬಾಚಿ ತಬ್ಬಿಕೊಳ್ಳುವಂತೆ ಕಾಣುತ್ತಿದೆ.

  ಬಾಲ್ಯದಲ್ಲಿ ಸೇತುವೆ ಮೇಲೆ ಎತ್ತರದಲ್ಲಿ ಸಂಚರಿಸುತ್ತಾ, ಬಸ್ಸಿನ ಕಿಟಿಕಿ ಬಳಿಯಲ್ಲಿ ಕುಳಿತು ಆಳದಲ್ಲಿ ತುಂಬಿ ಹರಿಯುತ್ತಿದ್ದ ನೇತ್ರಾವತಿಯನ್ನು ಕಂಡು ಒಂದು ಸಲ ಅಲ್ಲಿಗೆ ಇಳಿದು ಬಿಡಬೇಕು ಎಂದು ಬಯಸಿದ ದಿನಗಳೆಷ್ಟೋ?  ನೇತ್ರಾವತಿ ಬಾಲ್ಯದ ಕಣ್ಣಿಗೆ ಅದ್ಭುತ ರಮ್ಯವಾಗಿ ಕಂಡರೆ ಅದು ಅತಿಶಯವಲ್ಲ. ಮೇಲಾಗಿ ಅದು ರಮಣೀಯ ತಾಣ. ಎಡಕ್ಕೆ ಪೂರ್ವವಾದರೆ  ಬಲಕ್ಕೆ  ಪಡುಗಡಲು.  ನಡುವೆ ತೆರೆದು ನಿಂತ ಜಲರಾಶಿ. ನೇತ್ರಾವತಿ.  ಪಂಜೆ ಕಯ್ಯಾರರರಿಗೆ ಸ್ಪೂರ್ತಿಯಾದ ನೇತ್ರಾವತಿ.  ಮಂಗಳೂರಿನಿಂದ ಕಾಸರಗೋಡಿಗೆ ಪಯಣಿಸುವಾಗ ಹಲವು ನದಿಗಳು ಸಿಗುತ್ತವೆ. ಆ ನದಿಗಳ ಸೇತುವೆ ಮೇಲೆ ಹಚ್ಚ ಹಸಿರಿನ ನಡುವೆ ಪಯಣಿಸುವುದೆಂದರೆ ಅದೊಂದು ಸುಂದರ ಅನುಭವ. ಆಗ ಉದ್ದದ ಸಂಕ (ಸೇತುವೆ ) ಯಾವುದು ಎಂದರೆ ಅದು ಉಳ್ಳಾಲ ಸಂಕ ಎಂದು ಅಭಿಮಾನದಿಂದ ಹೇಳುತ್ತಿದ್ದ ಮುಗ್ದ ಮನಸ್ಸಿಗೆ ನೇತ್ರಾವತಿ ಒಂದು ವಿಧವಾದರೆ ಈಗಲೂ ನೇತ್ರಾವತಿ ಅದ್ಭುತ ಅಭಿಮಾನದ ಸಂಗತಿ. ಎಕ್ಕೂರು ಗುಡ್ಡದ ನಡುವಿನಿಂದ ವೇಗವಾಗಿ ಸಾಗುವ 42 43 ನಂಬರಿನ ಸಿಟಿ ಬಸ್ಸು ಎತ್ತರದಲ್ಲಿ ಹಸುರು ಗದ್ದೆಯ ಮೇಲೆ ಸಾಗಿ ಕುಪ್ಪಳಿಸಿ ಸೇತುವೆ ಮೇಲೆ ಏರಿದಾಗ ಆ ನದಿಯನ್ನು ಕಂಡು ಬೆರಾಗಾಗುತ್ತಿದ್ದೆ. ಕಡಿಮೆ ಎಂದರು ಒಂದೆರಡು ನಿಮಿಷದ ಈ ದೃಶ್ಯವನ್ನು ತಪ್ಪದೆ ಮರೆಯದೆ ನೋಡುತ್ತಿದ್ದೆ. ಮಳೆಗಾಲದಲ್ಲಿ,  ಬಸ್ಸಿನ ಕಿಟಿಗೆ ಇಳಿಬಿಟ್ಟ ಒದ್ದೆ ಟರ್ಪಾಲನ್ನು  ಕೈಗಳಿಂದ ತುಸು ಎತ್ತಿ ಬೀಳುತ್ತಿದ್ದ ಮಳೆ ನೀರನ್ನೂ ಲೆಕ್ಕಿಸದೇ ನೇತ್ರಾವತಿಯನ್ನು ಕಾಣುವುದು ಸೋಜಿಗದ ವಿಷಯ. 

ಬಾಲ್ಯದಿಂದ ಇಂದಿನವರೆಗೂ ನೇತ್ರಾವತಿ ಎಂದರೆ ಅದು ಅದ್ಭುತ ರಮ್ಯ ತಾಣ. ಬಹಳ ಹಿಂದೆ ಕನ್ನಡ ಸಿನಿಮಾ ಹಾಡು ’ನೀರ ಬಿಟ್ಟು ನೆಲದ ಮೇಲೆ ಬಂಡಿ ಓಡದು.’ ಹಾಡು ಕೇಳುವಾಗ ಮನಸ್ಸಿನ ಕಲ್ಪನೆಯಲ್ಲಿ ಬರುತ್ತಿದ್ದದ್ದು ನೇತ್ರಾವತಿ ನದಿಯ ತಟ. ವಿಚಿತ್ರವೆಂದರೆ ಸಿನಿಮಾ ನೋಡಿದಾಗ ಅದೇ ದೃಶ್ಯ ಸಿನಿಮಾದಲ್ಲೂ ಇತ್ತು. ವಿಷ್ಣುವರ್ಧನ ಆರತಿ ಅಭಿನಯದ ನೀರಬಿಟ್ಟು ನೆಲದ ಮೇಲೆ ಬಂಡಿ ಓಡದು....ಹಾಡು ಇಲ್ಲೇ ಚಿತ್ರೀಕರಣವಾಗಿತ್ತು. ಇಷ್ಟು ವರ್ಷ...ಅದರ ಮೇಲೆ ಸಂಚರಿಸುತ್ತಿದ್ದರೂ ಒಂದು ದಿನವೂ ಅದರ ತಟಕ್ಕೆ ಇಳಿಯುವ ಅವಕಾಶ ಒದಗಿ ಬರಲಿಲ್ಲ. ಬಾಲ್ಯದ ಕನಸು ಅದೇಕೋ ಕನಸಾಗಿಯೇ ಉಳಿದಿತ್ತು. ಇತ್ತೀಚೆಗೆ ಮಿತ್ರ ಜಯಶಂಕರ ಅಲ್ಲಿಯೇ ಬಳಿಯಲ್ಲಿ ಮನೆ ಮಾಡಿದಾಗ ಬಾಲ್ಯದ ಕನಸು ಮತ್ತೊಮ್ಮೆ ಚಿಗುರಿತು. ಹಾಗೆ ನಿನ್ನೆ ಮುಂಜಾನೆ ನದಿಯ ತಟಕ್ಕೆ ನಾವೆಲ್ಲ ಹೋದೆವು. ಅದಾಗಲೇ ಸೂರ್ಯೋದಯದ ಸಮಯ.  ದೂರದ ಮೂಡಣ ದಿಕ್ಕಿನಿಂದ ಕಣ್ಣಳತೆಗೆ ಕಾಣುವಂತೆ ನದಿಯ ತುದಿಯಲ್ಲಿ ಬಳ್ಳಿಯಲ್ಲಿ ಹಣ್ಣು ಹುಟ್ಟಿದಂತೆ ಕೆಂಪಾದ ಸೂರ್ಯ ನಿಧಾನವಾಗಿ ಮೇಲೇಳುತ್ತಾ ಎದುರಿಗೆ ಹೊಂಬಣ್ಣದ ವರ್ಣದ ಓಕುಳಿಯನ್ನು ಚೆಲ್ಲಿ ಮೇಲೇಳುತ್ತಿದ್ದರೆ ಮೌನವಾದ ವಾತಾವರಣದಲ್ಲಿ ಮಧುರವಾದ ಕಲರವ.  ಮೊದಲದಿನ ಕದ್ದು ಮುಚ್ಚಿ ಪಡುವಣದಲ್ಲಿ ಮುಳುಗಿದ ಸೂರ್ಯ ಇದೀಗ ನಾನಿಲ್ಲಿದ್ದೇನೆ ಎನ್ನುತ್ತಾ ನೇತ್ರಾವತಿಯಲ್ಲಿ ಮಿಂದು ಏಳುತ್ತಿದ್ದ.  ಇದನ್ನು ನೋಡಿ ಕೈ ಸುಮ್ಮನುಳಿಯಬಹುದೇ? ಪುಟ್ಟ ಮೊಬೈಲಿನಲ್ಲಿ ಆ ದೊಡ್ಡ ದೃಶ್ಯವನ್ನು ದೊಡ್ಡ ಹಣ್ಣನ್ನು ಗಿಣಿ ಸಿಕ್ಕಿದಷ್ಟು ಕಚ್ಚಿ ತಿನ್ನುವಂತೆ ಆ ದೃಶ್ಯವನ್ನು ಸಿಕ್ಕಿದಷ್ಟು ಸೆರೆ ಹಿಡಿಯತೊಡಗಿತು. ನಿಜಕ್ಕು ಬದುಕಿನಲ್ಲಿ ಒಂದು ಸ್ಮರಣೀಯ ಘಳಿಗೆ.  ಹುಟ್ಟಿ ಅರ್ಧ ಆಯುಷ್ಯ ಸವೆದರೂ ಬಾಲ್ಯದಲ್ಲಿ ಕನಸು ಕಂಡ ನದಿಯ ತಟಕ್ಕೆ ಬಂದು ಅದರಲ್ಲೂ ಈ ಸೂರ್ಯೋದಯವನ್ನು ಸವಿಯುವುದೆಂದರೆ ಪ್ರಕೃತಿಯ ಆರಾಧನೆಯ ಅವಕಾಶಕ್ಕೆ ಧನ್ಯನಾದೆ ಎಂದಿತು ಮನಸ್ಸು. 


Sunday, January 12, 2025

ಜ್ವಾಲಾನಲದ ಉರಿ (ಒಂದು ಕಥೆ)

                   ಆಕೆ ವಿಲಾಸಿನಿ.  ದೂರ ದಿಗಂತದಿಂದ ಬರುವ ಒಂದೊಂದೇ ಅಲೆಗಳನ್ನು ನೆಟ್ಟ ನೋಟದಿಂದ ನೋಡುತ್ತಾ ಹಾಗೆ ಕಡಲತಡಿಯ ಮರಳದಂಡೆಯಲ್ಲಿ ಕುಳಿತೇ ಇದ್ದಳು. ಬದುಕನ್ನು ಮಹಾಶಯನೊಬ್ಬ ಸಾಗರಕ್ಕೆ ಹೋಲಿಸಿದ್ದಾನೆ. ಬಹುಶಃ ಈ ಅಲೆಗಳನ್ನು ನೋಡಿಯೇ ಇರಬೇಕು. ಬದುಕಿನ ಏರು ಪೇರು ಅಲ್ಲೊಲ ಕಲ್ಲೋಲಅಲ್ಲೊಮ್ಮೆ ಇಲ್ಲೊಮ್ಮೆ ಶಾಂತ, ಎಲ್ಲವೂ ಅಸ್ಥಿರ. ಹೀಗೆ ಎಂದು ವಿಶ್ವಾಸದಿಂದ ಮನಸ್ಸನ್ನು ಸ್ಥಿರವಾಗಿಸುವುದಕ್ಕೆ ಸಾಧ್ಯವಿಲ್ಲದಂತೆ  ಈ ಕಡಲ ಅಲೆಗಳು ಸಾಕ್ಷಿಯಾಗಿಬಿಡುತ್ತವೆ. ಸಮಸ್ಯೆ ಸಂಕಷ್ಟಗಳು ಕಡಲ ಅಲೆಗಳಂತೆ. ನೋಡಬಾರದೇ ದೂರದಲ್ಲಿ ಚಿಕ್ಕದಾಗಿ ಹುಟ್ಟಿಕೊಳ್ಳುವ ಒಂದು ಸಣ್ಣ ಕಂಪನಕ್ಕೆ ಹೆದರಿ ನೀರು ಅಲೆಯಾಗಿ ಎದ್ದು ಬರುತ್ತದೆ. ಚಿಕ್ಕದಾಗಿದೆ ಎಂದುಕೊಂಡರೆ ಅದು ಎಲ್ಲವನ್ನು ಹೊತ್ತುಕೊಂಡು ಬೃಹದಾಕಾರವಾಗಿ ಬಂದು ದಡಕ್ಕೆ ಅಪ್ಪಳಿಸಿಬಿಡುತ್ತದೆ. ಏನು ಅಬ್ಬರ.? ಏದುಸಿರು ಬಿಡುತ್ತಾ ಇನ್ನು ತಾಳಲಾರೆ ಎಂದು ಅಬ್ಬರದಿಂದ ಬರುವಾಗ ಪ್ರಸವ ವೇದನೆಯಂತೆ, ಈ ಕಂಪನವನ್ನು ಎಲ್ಲಿ ಅಡಗಿಸಿಬಿಡಲಿ ಎಂದುಕೊಳ್ಳುತ್ತಾ ದಡದತ್ತ ಧಾವಂತದಿಂದ ಓಡಿ ಬಂದು ಒಮ್ಮೆಲೇ ಉಸಿರುಚೆಲ್ಲಿ ಅಬ್ಬಾ ಎಂದು  ಮತ್ತೆ ಶಾಂತವಾಗಿಬಿಡುತ್ತದೆ. ಅದುವರೆಗೆ ಇದ್ದ ಎಲ್ಲ ಉದ್ವೇಗವು ನಾಶವಾಗಿ ಸಾಕಪ್ಪ ಎನ್ನಿಸುವಂತೆ ಹೊರೆ ಇಳಿಸಿ ವಿಶ್ರಮಿಸಿದರೆ , ಅದರ ಹಿಂದೆ ಮತ್ತೊಂದು ಏದುಸಿರು. ಇದು ನಿಲ್ಲದ ಚಕ್ರದಂತೆ.  ಬದುಕಿನಲ್ಲಿ ಸಮಸ್ಯೆಗಳು ಇದೇ ರೀತಿ. ಸಣ್ಣದಾಗಿ ಹುಟ್ಟಿ ಮತ್ತೆ ಬೃಹದಾಕಾರವಾಗಿ ಬೆಳೆದು ಉಲ್ಭಣಿಸಿ ಪರಿಹಾರವೇ ಇಲ್ಲವೇನೋ ಎಂಬಂತೆ ಕೊನೆಗೆ ಸಮಸ್ಯೆ ಪರಿಹರಿಸಿಕೊಂಡೋ ಅಥವಾ ಪರಿಹರಿಸದೇ ಸಮಸ್ಯೆಯೇ ಅಪ್ಯಾಯಮಾನವಾಗಿ ಮತ್ತೆ ಶಾಂತವಾದ ಅನುಭವ. ಯಾವುದೂ ಶಾಶ್ವತವಲ್ಲದ ಸ್ಥಾಯಿ ಎನಿಸದ ವಾಸ್ತವ. ಮುಂದಿನ ಅಲೆಗಳನ್ನು ನೋಡಿ ಹಿಂದಿನ ಅಲೆ ಪಾಠ ಕಲಿಯುವುದಿಲ್ಲ. ಅದೂ ಎದ್ದು ಬಿದ್ದು ಓಡಿ ಬರುತ್ತದೆ.

          ಕಡಲ ಅಲೆಗಳಂತೆ ನಮ್ಮ ಹೆಜ್ಜೆಗಳು. ಮುಂದಿಟ್ಟ ಪಾದವನ್ನು ಹಿಂದಿದ್ದ ಪಾದ ಕಾಣುವುದಿಲ್ಲ. ಮುಂದಿಟ್ಟ ಹೆಚ್ಜೆ ಜಾರಿ ಸಮತೋಲನ ತಪ್ಪಿದರೆ ಹಿಂದಿನದ್ದೂ ಮುಗ್ಗರಿಸಿ ಬಿಡುತ್ತದೆ.  ಆದರೂ ಮುಂದಿನದ್ದು ಮುಂದೆ ಉಂಟಲ್ಲಾ ಎಂದು ತಾನೂ ಮುಂದೆ ಬಂದು ಬಿಡುತ್ತದೆ. ಅಷ್ಟರಲ್ಲಿ ಜಾರಿಯೋ ಮುಗ್ಗರಿಸಿಯೋ ನಂತರ ಸಾವರಿಸಿ ಬದುಕಂತೂ ಮುಂದೆ ಹೋಗಲೇ ಬೇಕು.

          ಇನ್ನೇನು ಬೆಳಕು ಕಡಿಮೆಯಾಗುತ್ತಾ ಬಂತು. ಅದುವರೆಗೆ ಅಲ್ಲಿ ಇಲ್ಲಿ ಕಲರವ ಎಬ್ಬಿಸುತ್ತಿದ್ದ ಮಕ್ಕಳೂ ವೃದ್ದರು ಒಬ್ಬೊಬ್ಬರಾಗಿ ಎದ್ದು ಹೋದರೆ. ದೂರದಲ್ಲಿ ಒಂದಷ್ಟು ಮರೆಯಾಗುವಂತೆ  ಗಂಡು ಹೆಣ್ಣು ಜತೆಯೊಂದು ಇನ್ನೂ ಕುಳಿತಿತ್ತು. ಎಲ್ಲರೂ ಹೋಗಿಬಿಟ್ಟರಲ್ಲಾ ಎಂದು ಅವರು ನಿರಾಳರಾಗಿರಬೇಕು. ಮಾತ್ರವಲ್ಲ ಸೂರ್ಯನು ಇನ್ನು ನೋಡಲಾರೆ ಎಂದು ಕಣ್ಣು ಮುಚ್ಚುವಂತೆ ದೂರದಲ್ಲಿ ಮುಳುಗುತ್ತಿದ್ದ. ಅವರು ಇನ್ನೂ ಕುಳಿತೇ ಇದ್ದರು. ಅವರು ಏನು ಮಾಡಬಹುದು? ಆಕೆಯಲ್ಲಿ ಯಾವ ಕುತೂಹಲವು ಉಳಿದಿಲ್ಲ. ಯಾಕೆಂದರೆ ಆಕೆಗೂ ಈ ತೆರೆಮರೆಯ ಪ್ರಣಯದ ಅನುಭವವಾಗಿತ್ತು. ಇದೇ ಕಡಲ ತಡಿಯಲ್ಲಿ ಅದೆಷ್ಟು ಸಂಜೆಗಳನ್ನು ಕಳೆದಿಲ್ಲ?ಹುಣ್ಣಿಮೆಯ ಬೆಳದಿಂಗಳನ್ನು ಕಡಲ ಅಬ್ಭರವನ್ನೂ ಕಂಡಿಲ್ಲ?   ಎಲ್ಲವೂ ಹೀಗೆ ಎಂದು ತಿಳಿಯುವಾಗ ಬದುಕು ಇದೇ ಕಡಲಿನಂತೆ ಅಲ್ಲೋಲ ಕಲ್ಲೋಲ ವಾಗಿತ್ತು.

          ಮುಂದೇನು? ಮನಸ್ಸು ನಿರಾಳವಾಗಲಿ ಎಂದು ಇಲ್ಲಿ ಬಂದು ಕುಳಿತಿದ್ದಳು. ಆದರೆ ನಿರಾಳತೆ ಎಲ್ಲಿಅದೂ ನಿತ್ಯ ಪ್ರಕ್ಷುಬ್ದವಾಗುವ ಕಡಲಿನ ಮುಂದೆ.  ಹಾಗೇ ಕತ್ತಲಾವರಿಸುತ್ತಿದ್ದಂತೆ ಕಾರಿನ ಚಾಲಕ ಹತ್ತಿರ ಬಂದು ಸಣ್ಣದಾಗಿ ಖೆಮ್ಮಿದ. ಇನ್ನು ಮನೆಯಕಡೆ ಹೋಗಬೇಕು. ಹಾಗೇ ಎದ್ದು ಕಡಲ ತಡಿಯಿಂದ ದೂರದಲ್ಲಿರುವ ರಸ್ತೆಯಲ್ಲಿ ಕಾರು ನಿಲ್ಲಿಸಿದ ಕಡೆಗೆ ಹೆಜ್ಜೆ ಹಾಕಿದಳು. ನಾಳೆ ನ್ಯಾಯಾಲಯಕ್ಕೆ ಹೋಗಬೇಕು. ಅದೇ ಕುಟುಂಬ ನ್ಯಾಯಾಲಯ. ಮೂವತ್ತು ವರ್ಷಗಳ ಹಿಂದೆ ಅದೇ ನ್ಯಾಯಾಲಯದ ಮೆಟ್ಟಲು ಹತ್ತಿದ್ದಳು. ಇಂದು ಮತ್ತದೇ ಮಟ್ಟಲು ತುಳಿಯಬೇಕು. ವೆತ್ಯಾಸ ಇಷ್ಟೇ, ಅಂದು ಈಕೆ ದೂರು ಕೊಟ್ಟಿದ್ದರೆ....ಇಂದು ಈಕೆ ಎದುರು ಕಕ್ಷಿಯಾಗಿ ಅರ್ಥಾತ್ ಅಪರಾಧಿಣಿಯಂತೆ ಹೋಗಿ ನಿಲ್ಲಬೇಕು. ಮರೆತು ಬಿಡಬೇಕು ಎಂಬಂಥಹ ಆ ದಿನಗಳುಆ ಘಟನೆಗಳು ತಾನು ಮರೆಯಲಿಲ್ಲ ಎಂಬುದಕ್ಕೆ ಸಾಕ್ಷಿ ಎಂಬಂತೆ ಆ ಕಥೆಗಳು ಮತ್ತೆ ನೆನಪಾಗತೊಡಗಿದೆ. ಅದೂ ಒಂದೂ ಘಟನೆಯನ್ನು ಬಿಡದೆ. ಗೆಲುವು ಸೋಲು ಅದು ನಿರ್ಣಯವಾಗುವುದು ಅದು ನಡೆದ ಕ್ಷಣದಲ್ಲಿ ಅಲ್ಲ, ತಾವೆಷ್ಟು ಗೆದ್ದಿದ್ದೇವೆ, ತಾವೆಷ್ಟು ಸೋತಿದ್ದೇವೆ ಎಂದು ಅರಿವಾಗುವಾಗ ಕಾಲ ಬಹಳಷ್ಟು ಸರಿದು ಹೋಗುತ್ತವೆ. ಗೆಲುವಿನ ನಗೆಯಲ್ಲೂ ಸೋಲು ಇರುತ್ತದೆ ಎಂಬುದು ಗೆಲ್ಲುವಾಗ ಅರಿವಿಗೆ ಬರುವುದಿಲ್ಲ.

          ಸರಿ ಸುಮಾರು ಕಾಲು ಶತಮಾನದ ಹಿಂದೆ ಅಂದರೆ ಮೂವತ್ತು ವರ್ಷಗಳು ಕಳೆಯಿತು, ಕುಟುಂಬ ನ್ಯಾಯಾಲಯದ ಜಗಲಿಯ ಮೂಲೆಯಲ್ಲಿ ಕುಳಿತುಕೊಳ್ಳುತ್ತಿದ್ದ ದಿನಗಳು ಈಗಲೂ ಮರೆಯದೆ ಕಾಡುತ್ತಿದೆ. ಎಲ್ಲವನ್ನು ಮರೆತು ಬಿಡಬೇಕು ಅಂತ ಬಗೆದರೂ ಅದನ್ನು ಮರೆಯುವುದು ಸಾಧ್ಯವಾಗಲಿಲ್ಲ. ಈಗ ಅದೇ ದಿನಗಳು ಮರುಕಳಿಸಿದಂತೆ ಆ ದಿನಗಳು ಮತ್ತೆ ಬಂದು ಕಳೆದು ಹೋದ  ಕಾಲ ಮತ್ತೆ ಬಂದು ಕೆಣಕುತ್ತಿದೆ.

          ಮೂವತ್ತು ವರ್ಷಗಳ ಹಿಂದೆ ವಿಲಾಸಿನಿ ಹದಿ ಹರಯದ ಹಲವು ಕನಸುಗಳನ್ನು ಕಟ್ಟಿಕೊಂಡ ತರುಣಿಯಾಗಿದ್ದಳು. ವಯೋ ಸಹಜ ಎಂಬಂತೆ ತನ್ನ ಇಷ್ಟವನ್ನು ಮಾತ್ರ ಯೋಚಿಸುತ್ತಾ ಅದನ್ನೇ ಸ್ವರ್ಗ ಸುಖವೆಂಬ ಕಲ್ಪನೆಯಲ್ಲಿ ಆ ಕನಸುಗಳನ್ನು ಕಟ್ಟಿಕೊಂಡಿದ್ದಳು. ಕನಸುಗಳು ಇಷ್ಟಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತವೆ ಎಂದು ಅರಿವಿಲ್ಲ. ಆದರೂ ತಮ್ಮ ಇಷ್ಟಗಳು ತಮ್ಮ ಆಸ್ತಿ ಎಂಬಂತೆ ವರ್ತಿಸುತ್ತಾರೆ. ಮದುವೆ ಮೊದಲು ಪರಸ್ಪರ ಇಷ್ಟಗಳನ್ನು ಹೊಂದಿಸಿ ನೋಡುವುದರಲ್ಲೇ  ಆಯ್ಕೆ ಅವಲಂಬಿಸಿರುತ್ತದೆ. ಗಂಡು ಹೆಣ್ಣು ಪರಸ್ಪರ ಆಶೆಗಳು ಇಷ್ಟಗಳು  ಹೊಂದಾಣಿಕೆಯಾಗಿ ಸಮಾನ ಅಭಿರುಚಿ ಇದ್ದರೆ  ಆ ಬದುಕು ಸ್ವರ್ಗ ಎಂದು ತಿಳಿದಿರುತ್ತಾರೆ. ಬದುಕು ಹೊಂದಿಕೊಂಡು ಹೋಗಬಹುದು, ತಮ್ಮದೇ ಇಷ್ಟದ ಸಂಗಾತಿ ಸಿಕ್ಕಿದರೆ ಅದೇ ಭಾಗ್ಯ ಎಂದು ತಿಳಿದುಬಿಡುತ್ತಾರೆ.  ಸಮಯ ಕಳೆದಂತೆ ಆಶೆಗಳು ಇಷ್ಟಗಳು ಎಲ್ಲವೂ ಹಾಗೇ ಉಳಿದರೂ ಪರಿಸ್ಥಿತಿ ಮಾತ್ರ ಬದಲಾಗಿರುತ್ತದೆ. ಕ್ರಮೇಣ ಅವುಗಳೂ ಬದಲಾಗಿ ಬಿಡುತ್ತದೆ. ಒಂದು ಕಾಲದ ನಮ್ಮ ಬಯಕೆಗಳು ಹೀಗೂ ಇತ್ತಾ ಎಂಬಷ್ಟರ ಮಟ್ಟಿಗೆ ಮನೋಭಾವ ಬದಲಾಗುವಾಗ ಇಲ್ಲಿ ಸಮಾನ ಅಭಿರುಚಿಗೆ ಪ್ರಾಶಸ್ತ್ಯ ಎಲ್ಲಿರುತ್ತದೆ? ಹುಟ್ಟಿದ ಶಿಶುವಿಗೆ ಬಾಲ್ಯದಲ್ಲಿದ್ದ ಅಭಿರುಚಿ ಯೌವನದಲ್ಲಿರುವುದಿಲ್ಲ. ಅಭಿರುಚಿ ಇಷ್ಟಗಳು ಒಂದೇ ಆಗಿದ್ದರೆ ಸಾಲದು, ಮನಸ್ಸುಗಳು ಒಂದಾಗಬೇಕು. ವಿಭಿನ್ನ ಅಭಿರುಚಿಗಳೂ ಜತೆಯಾಗುತ್ತವೆ, ಮುಕ್ತ ಮನೋಭಾವದಿಂದ ಅವುಗಳು ಗೌರವಿಸಲ್ಪಟ್ಟಾಗ. ಅಭಿರುಚಿ ಒಂದೇ ಆಗಿದ್ದರೇನೆಂತೆ ಮನಸ್ಸು ಮನಸ್ಸಿನ ನಡುವೆ ಕಂದಕವಿದ್ದರೆ ಆ  ಅಭಿರುಚಿಗಳು ಎಂದಿಗೂ ಸೇತುವೆಯಾಗಲಾರದು.

          ಇದೇ ಸಮಾನ ಅಭಿರುಚಿಯ ಚಿಂತನೆಯಲ್ಲಿ ಆಕೆಗೆ ಒಬ್ಬ ಯುವಕ ಇಷ್ಟವಾದ. ಆತನಿಗೂ ಹಾಗೆ. ಇಬ್ಬರೂ ಪ್ರೇಮಿಸಿದರು. ಎಲ್ಲ ಅಭಿರುಚಿಯನ್ನು ನೋಡಿ ಪ್ರೇಮ ಹುಟ್ಟಿಕೊಂಡರೂ ವಾಸ್ತವದಲ್ಲಿ ಪ್ರೇಮಕ್ಕೆ ಕಣ್ಣಿರುವುದಿಲ್ಲ!  ಕಣ್ಣಿದ್ದರೂ ಅದರ ದೃಷ್ಟಿ ಮಂಕಾಗಿರುತ್ತದೆ.  ತೀರ ಅನಿವಾರ್ಯಗಳು ಆ ಕಣ್ಣಿಗೆ ಕಾಣಿಸುವುದಿಲ್ಲ.  ಒಂದೆರಡು ವರ್ಷ ಅದೇ ಪ್ರೇಮದಲ್ಲಿ ಇರುವಾಗ ಮನೆಯಲ್ಲಿ ಆಕೆಯ ಮದುವೆ ತೀರ್ಮಾನಿಸಲ್ಪಟ್ಟಿತು. ಈಕೆಯೂ ಮನೆಯಲ್ಲಿ ತನ್ನ ಪ್ರೇಮವನ್ನು ಭಿನ್ನವಿಸುವ ಧೈರ್ಯವನ್ನು ತೋರಲಿಲ್ಲ. ಒಂದೆರಡು ವರ್ಷಗಳ ಹಿತವಾದ ಅನುಭವಗಳು ಅಷ್ಟೇ ಸಾಕು ಎಂಬ ತೀರ್ಮಾನಕ್ಕೆ ಬಂದಳೋಇಲ್ಲ ಮನೆಯವರನ್ನು ಎದುರು ಹಾಕಿಕೊಳ್ಳುವ ಧರ್ಯವನ್ನು ತೋರದಾದಳೋಅಂತೂ ಹಿರಿಯರು ತೋರಿಸಿದ ಗಂಡನ್ನು ಒಪ್ಪಿಕೊಂಡಳು. ಪ್ರೇಮ ಇನ್ನು ನೆನಪಿನಲ್ಲೂ ಇರಬಾರದು ಎಂದು ತೀರ್ಮಾನಿಸಿಕೊಂಡರೂ....ಆ ಪ್ರೇಮ ಸುಪ್ತವಾಗಿತ್ತು ಎಂದು ತಿಳಿಯುವುದಕ್ಕೆ ಸಮಯ ಬಹಳ ಬೇಕಾಯಿತು.

          ಆಕೆಯನ್ನು ಮದುವೆಯಾದ ಆತ ವೃತ್ತಿಯಲ್ಲಿ  ವಕೀಲ.  ಅಭಿಚಿತ್ ವಿನಯ ಮೂರ್ತಿ ಎಂಬ ಆಕರ್ಷಕವಾದ ಉದ್ದ ಹೆಸರು. ಆತ ಆಗಷ್ಟೆ ಕಾನೂನು ಪದವಿ ಮುಗಿಸಿ ಯಾರ ಜತೆಯಲ್ಲೋ ವಕೀಲಿ ವೃತ್ತಿಯನ್ನು ನಡೆಸುತ್ತಿದ್ದ.  ಆತನೇ ಹೇಳುವಂತೆ ಬಹಳ ಕಷ್ಟ ಪಟ್ಟು ಮುಂದೆ ಬಂದಿದ್ದ. ಬಡತನದಲ್ಲೇ ಈತನನ್ನು ಬೆಳೆಸಿದ ಅಪ್ಪ ಅಮ್ಮ ಸಹೋದರ ಹೀಗೆ ಮಿತವಾದ ಕುಟುಂಬ. ಮದುವೆ ಕಳೆದು ಒಂದೆರಡು ದಿನಗಳು ಅದೇ ಗಲಾಟೆಯಲ್ಲಿ ಕಳೆದು ಹೋಯಿತು. ಮತ್ತೆ ದಿನಚರಿ ಆರಂಭವಾಗಿ ನಿಜ ಜೀವನ ಆರಂಭವಾಗುವಾಗ ಈಕೆಗೆ ಮರೆತು ಬಿಡಬೇಕು ಎಂದಿದ್ದ ಆ  ಹಳೆಯ ಪ್ರೇಮ  ತನ್ನಲ್ಲಿನ್ನೂ ಸುಪ್ತವಾಗಿದೆ ಎಂದು ಅರಿವಿಗೆ ಬಂದದ್ದು.  ಪ್ರತಿಯೊಂದರಲ್ಲೂ ತನ್ನ ಅಭಿರುಚಿಯ ಹೊಂದಾಣಿಕೆಯನ್ನು ತನ್ನ ಗಂಡನಲ್ಲಿ ಹುಡುಕಿದಳು. ಆ ಅಭಿರುಚಿಯ ಹುಡುಕಾಟದಲ್ಲಿ ಆತನ ಮನಸ್ಸನ್ನು ಅರಿಯುವ ಗೊಡವೆಗೆ ಹೋಗಲಿಲ್ಲ. ಮಾತ್ರವಲ್ಲ ಅದು ಆಕೆಗೆ ಬೇಕಾಗೂ ಇರಲಿಲ್ಲ. ಅನಿವಾರ್ಯತೆಗೆ ಈತನೊಡನೆ ಬದುಕಬೇಕಲ್ಲಾ  ಎಂಬ ಒಂದೇ ಚಿಂತೆ ಗಾಢವಾಗುತ್ತಿತ್ತು. ಗಂಡನಿಗೆ ತಿನ್ನಲಾಗದ ತುತ್ತನ್ನು ಬಲವಾಗಿ ಬಾಯಿಗೆ ತುರುಕಿದಂತೆ ಆಕೆಯ ವರ್ತನೆ. ಆತನಿಗೆ ಮೊದಲಿಗೆ ಅದು ಅರಿವಿಗೆ ಬರಲಿಲ್ಲ. ಆದರೆ ಕ್ರಮೇಣ ಆತನಿಗೆ ರುಚಿಯಿಲ್ಲದ ತಿನಿಸು ಬಲವಂತದಲ್ಲಿ ಗಂಟಲಲ್ಲಿ ಇಳಿಸಿದ ಅನುಭವವಾಗತೊಡಗಿತು.  ಸಹಜವಾಗಿ ಇಳಿಯದ ತುತ್ತು ಕೈಯಲ್ಲೇ ಉಳಿಯಿತು. ಆತನ ಕೌಟುಂಬಿಕ ಸ್ಥಿತಿ ಆ ಸುಖದ ಒಂದು ಮುಖವನ್ನು ಕಾಣದಂತೆ ಮಾಡಿತ್ತು. ಕಷ್ಟದಲ್ಲಿ ಕೌಟುಂಬಿಕ ನೆಲೆಯನ್ನು ಕಟ್ಟಿ ಅದರ ನೆರಳಲ್ಲೇ ಅನಾಥತ್ವವನ್ನು ಕಳೆಯುವವರಿಗೆ ಕಟ್ಟಿಕೊಂಡ ಬದುಕಿನ ಬಗ್ಗೆ ಅಗಾಧವಾದ ಅಭಿಮಾನವಿರುತ್ತದೆ. ಆತ್ಮಾಭಿಮಾನ, ತಾತ್ವಿಕ ಚಿಂತನೆಗಳು, ಬಡತನದ ಜತೆಯಲ್ಲೇ ಹುಟ್ಟಿಕೊಳ್ಳುತ್ತವೆ.  ಅಂತಹ ಸನ್ನಿವೇಶದಲ್ಲಿ ಕಟ್ಟಿಕೊಂಡ ಕೌಟುಂಬಿಕ ಸೌಧವನ್ನು ಕುಸಿಯದಂತೆ ನೋಡಿಕೊಳ್ಳುವುದೇ ಅವರ ಪರಮ ಧ್ಯೇಯವಾಗಿರುತ್ತದೆ. ಹಾಗಾಗಿ ಉಳಿದ ಬಯಕೆಗಳು ಕ್ಷುಲ್ಲಕವಾಗಿ ಕಂಡು  ಅದರ ಬಗ್ಗೆ ಯೋಚಿಸುವುದಕ್ಕಿಂತ ಕಟ್ಟಿದ  ಬದುಕಿನ ಬಗ್ಗೆ ಯೋಚಿಸಿದ. ಆದರೆ ಎಲ್ಲವೂ ವ್ಯವಸ್ಥಿತವಾಗಿ ಮುಂದುವರೆಯುವುದಿದ್ದರೆ ಅದು ಬದುಕಾಗಿ ಉಳಿಯುವುದಿಲ್ಲ.  ಶಿಸ್ತು ಬದ್ದ ಜೀವನಕ್ಕೆ ಪ್ರತಿಕೂಲ ಪರಿಸ್ಥಿತಿಗಳು ಹೆಚ್ಚು ಒದಗಿಬರುತ್ತವೆ. ನಿಯಮಗಳು ಯಾವಾಗಲೂ ಸವಾಲುಗಳನ್ನು ಎದುರಿಸುತ್ತವೆ. ಇದೆಲ್ಲ ಆಕೆ ಗಮನಿಸಿದರೂ ಆಕೆಗೆ ತನ್ನ ಮಹತ್ವಾಕಾಂಕ್ಷೆಯ ಸೌಧ ಕುಸಿದದ್ದು ಹತಾಶೆಯನ್ನು ಸೃಷ್ಟಿಸಿತ್ತು.

          ವಿನಯ ಮೂರ್ತಿಯದ್ದು ಪುಟ್ಟ ಸಂಸಾರ. ತಂದೆ ತಾಯಿ ತಂಗಿ ಹೀಗೆ ಪುಟ್ಟ ಬಳಗ. ಆದರೂ ಆಕೆಗೆ ಅದು ಉಸಿರನ್ನು ಬಿಗಿಹಿಡಿವಂತೆ ಮಾಡಿತ್ತು. ವಿನಯ ಮೂರ್ತಿಯದ್ದು ಉಲ್ಲೇಖಿಸಬಲ್ಲ ಕೆಟ್ಟ ಗುಣ ಒಂದೂ ಇರಲಿಲ್ಲ. ನಗುತ್ತಾ ಸಂಸಾರದಲ್ಲಿ ಬೆರೆಯುತ್ತಿದ್ದ. ಸಹನೆ ಸದ್ಗುಣ ಸನ್ಮನಸ್ಸು ಸಹೃದಯತೆ ಎಲ್ಲವೂ ಇದ್ದರೂ ಆಕೆ ಮಾತ್ರ  ಶಿಲುಬೆಯನ್ನು ಕಂಡ ಪ್ರೇತಾತ್ಮದಂತೆ ಸದಾ ತುಮುಲವನ್ನು ಅನುಭವಿಸುತ್ತಿದ್ದಳು. ಸನ್ಮನಸ್ಸು ಸದ್ಗುಣ ಸತ್ವಹೀನವಾಗಿ ಪ್ರತಿಕೂಲವೆಂಬಂತೆ ಭಾಸವಾದಾಗ ಆ ಒಂದು ದಿನ ಎಲ್ಲವನ್ನೂ ಕಳಚಿ ಮನೆಯಿಂದ ಹೊರ ನಡೆದಳು. ಇಷ್ಟೆಲ್ಲ ನಿರಾಶೆಗಳ ನಡುವೆ ಆಕೆ ತವರಿಗೆ ಬಂದಿದ್ದಳು. ಹೊರಡುವಾಗ ಅತ್ತೆ ಮಾವನ ಪಾದ ಮುಟ್ಟಿ ನಮಸ್ಕರಿಸಿದಳು. ಕೊನೆಯಲ್ಲಿ ಈತನ ಕಾಲೂ ಹಿಡಿದಾಗ ಅಭಿಜಿತ್ ವಿನಯ ಮೂರ್ತಿ ಭಾವುಕನಾದ. ಹೊರಟು ನಿಂತ ಅವಳ ಮೇಲೆ ಹಲವು ನಿರೀಕ್ಷೆಗಳು ಹುಟ್ಟಿಕೊಂಡವು. ದೂರದ ತವರಿಗೆ ಹೋಗುವುದಕ್ಕೆಈತನ ಕಾರಲ್ಲಿ ಕರೆದುಕೊಂಡು ರೈಲು ನಿಲ್ದಾಣಕ್ಕೆ ತಂದು ಬಿಟ್ಟು ರೈಲು ಹತ್ತಿಸಿ ಬೀಳ್ಕೊಟ್ಟ. ಯಾಕೋ ರೈಲು ಹೊರಟಾಗ ಅತ ನೋಡಿದ ನೋಟ ಇಂದಿಗೂ ಮರೆಯುವುದಕ್ಕಿಲ್ಲ. ಮನಸ್ಸಿನ ನಿರೀಕ್ಷೆಗಳು ಕಣ್ಣಲ್ಲಿ ವ್ಯಕ್ತವಾಗುತ್ತಿತ್ತು.  ಆದರೆ ಆಕೆ ಹಿಂದಿರುಗಿ ಬರುವುದಿಲ್ಲ ಎಂಬುದು ಕೇವಲ ಆಕೆಯ ನಿರ್ಧಾರವಾಗಿತ್ತು. ಮತ್ತದು ಯಾರಿಗೂ ತಿಳಿದಿರಲಿಲ್ಲ.  ಯಾರಲ್ಲಿ ಏನೂ ಹೇಳಲಿಲ್ಲ. ತವರು ಮನೆಯಲ್ಲಿ ಕೆಲವು ದಿನ ಕಳೆದಳು ಅಷ್ಟೆ. ನಿತ್ಯ ನೋಡುತ್ತಿದ್ದ ಅಮ್ಮನಿಗೆ ತಿಳಿಯದೇ ಇರುವುದಿಲ್ಲ. ಕೊನೆಗೊಮ್ಮೆ ಹೇಳಿದಳು ತಾನಿನ್ನು ಗಂಡನ ಮನೆಗೆ ಹೋಗುವುದಿಲ್ಲ.

          ದಿನ ಕಳೆದು ವಾರವಾಯಿತು, ಆಕೆಗೆ ಇನ್ನು ಆತನ ಬಳಿಗೆ ಹೋಗಬೇಕು ಎಂದನಿಸಲಿಲ್ಲ.  ಪ್ರತಿಕ್ಷಣವೂ ವಂಚಿಸುತ್ತಾ ವಂಚಕಿಯಾಗಿ ಬದುಕಬೇಕು. ಅದಕ್ಕೆ ಹಿಡಿವ ಹಾದಿ ವಂಚನೆಯ ಹಾದಿ.   ಈತನೇ ಕೊನೆಗೊಮ್ಮೆ ಕರೆ ಮಾಡಿದ. ಒಂದೆರಡು ಪ್ರಯತ್ನದ ನಂತರ ಆಕೆ ಮಾತನಾಡಿದಳು, ಅದೂ ಹಕ್ಕಿ ಕಾಳು ಹೆಕ್ಕಿದಂತೆ...ಒಂದೆರಡು ಮಾತು. ಮಾತಾದರೂ ಯಾಕೆ ಬೇಕು? ಯಾರಿಗಾಗಿಯೋ ಮಾತನಾಡುವ ಮಾತು ಅದು ಹೃದಯದ ಮಾತು ಆಗಲು ಸಾಧ್ಯವಿಲ್ಲ.  ಮನೆಯಲ್ಲಿ ಸದಾ ಒತ್ತಡ. ಆಕೆ ಯಾಕೆ ಗಂಡನಿಂದ ದೂರಾದಳು ಎಂಬ ಪ್ರಶ್ನೆಗಳು. ಕೊನೆಗೊಮ್ಮೆ, ಇಷ್ಟವಿಲ್ಲ ಎಂದು ಬಿಟ್ಟಳು.   ಹೆತ್ತವರಿಗೆ ಸಮಸ್ಯೆಯಾದಾಗ ಹಲವರದ್ದು ಹತ್ತು ಚಿಂತನೆಗಳು. ಈಕೆಯದ್ದು ತಪ್ಪಿರಲಾರದು ಎಂದು ಊಹೆ ಕಲ್ಪನೆಯಲ್ಲೇ ಈಕೆಗೆ ಇನ್ನೇನು ಗತಿಆಗ ಆಕೆಯ ಸಂಭಂಧಿಯೊಬ್ಬನಿಗೆ ಹೊಳೆದ ಉಪಾಯ.  ಹೇಗಿದ್ದರೂ  ಕೈಯಲ್ಲಿದ್ದ ಎಣ್ಣೆಯ ಪಾತ್ರೆ ಜಾರಿ ನೆಲದಲ್ಲಿ ಬಿದ್ದು ಚೆಲ್ಲಿದಾಗ ಕೈಗೆ ಸಿಕ್ಕಷ್ಟು ಬಾಚಿಕೊಂಡು ಅದೇ ಲಾಭ ಎನ್ನುವಂತೆ,    ಒಬ್ಬನೆಂದ ಕೇಸ್ ಹಾಕಿದರೆ ಒಂದಷ್ಟು ಪರಿಹಾರ ಲಾಭ ಮಾಡಿಕೊಳ್ಳಬಹುದು. ಆಕೆಗಂತೂ ಅಲ್ಲಿಗೆ ಹೋಗದೇ ಉಳಿಯಬೇಕು ಅಷ್ಟಾದರೆ ಸಾಕು ಎಂಬ ಒಂದೇ ಯೋಚನೆ.  ಆದರೆ ಕಾನೂನು ಎಂಬುದು ಮಹಿಳೆಯ ಪರವಾಗಿಯೇ ಇರುವುದು ಆತನ ಅನುಭವ. ಅದೇ ರೀತಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದರು.  

          ನಮಗೆ ಎಲ್ಲವೂ ಅವರೇ ಆಗಬೇಕೆಂದು ಬಯಸುತ್ತೇವೆ. ಆದರೆ ಅದರಲ್ಲಿ ಕೆಲವಾದರೂ ಆದರೆ ಸಾಕು ಅನ್ನಿಸುವುದು ಸಾಂತ್ವಾನವಾಗಬಹುದು, ಆದರೆ ಎಲ್ಲವೂ ಎಂಬುದರಲ್ಲಿ ಏನೂ ಅಲ್ಲದಾಗವುದು ಹತಾಶೆಗೆ ಕಾರಣವಾಗುತ್ತದೆ. ಆಕೆಯ ಪಾಲಿಗೆ ಅದೇ ಆಗಿ ಹೋಯಿತು. ಕೆಲವು ಸಹ ಆಗದೇ ಬದುಕು ಇಷ್ಟೆಯೇ ಎಂದು ಹತಾಶೆಗೆ ಮೂಲವಾಗಿತ್ತು.  ಆಕೆಯ ಹತಾಶೆಗೆ ಆತ ಯಾವರೀತಿಯಲ್ಲೂ ಕಾರಣನಲ್ಲ. ಆದರೆ ಆತನೆ ಕಾರಣನಾಗಿ ಕಾಣುವುದು ದುರ್ದೈವ. ಈಕೆಯ ಮನಸ್ಸಿನ ಅತೃಪ್ತಿಗೆ ಆತ ಕಾರಣ ಹೇಗಾಗುತ್ತಾನೆ? ಆದರೆ ಹೊರಜಗತ್ತಿಗೆ ಆತನೇ ಕಾರಣೀಭೂತನಾಗುವುದು ವಿಪರ್ಯಾಸ. ಪರಿಣಾಮ ಅದೊಂದು ದಿನ ಆಕೆಯ ಊರಿನ ಪೋಲೀಸ್ ಠಾಣೆಯಿಂದ ಕರೆ ಬಂತು. ವಿಚಾರಣೆಗೆ ಬರುವಂತೆ ಕರೆ ಮಾಡಿದ್ದರು. ಯಾಕೋ ಅದು ವರೆಗೂ ಬಿಗಿಯಾಗಿ ಹಿಡಿದುಕೊಂಡ ಹಗ್ಗ ತುಂಡಾದ ಅನುಭವ.  ಸ್ವತಃ ವಕೀಲನಾದ ಆತನಿಗೆ ಗೊತ್ತು, ವಿಚಾರಣೆ ಎಂದರೆ ಅದು ವಶಕ್ಕೆ ಪಡೆದಂತೆ. ಇಂತಹ ಸಮಯದಲ್ಲಿ ಸಹೋದ್ಯೋಗಿ ಸಹಾಯಕ್ಕೆ ಬಂದ. ಆತನ ಸ್ನೇಹಿತ ಅದೇ ಊರಲ್ಲಿದ್ದ. ಆತನನ್ನು ಕರೆದುಕೊಂಡು ಠಾಣೆಗೆ ಹಾಜರಾದರೆ, ಪೋಲಿಸ್ ಇನ್ಸ್ ಪೆಕ್ಟರ್..." ಎನ್ರಿ ವಕೀಲ್ ಸಾಹೆಬರೆ, ನಿಮಗೂ ವಕೀಲರು ಬೇಕಾ? "  ಅಂತ ವ್ಯಂಗವಾಡಿದ. ಮಿತ್ರ ಯಾರಿಂದಲೋ ಕರೆ ಮಾಡಿಸಿ ಅಂತೂ ಎರೆಸ್ಟ್ ಒಂದು ಆಗಲಿಲ್ಲ ಎಂಬುದಷ್ಟೇ ಸಮಾಧಾನ. ಇನ್ಸ್ ಪೆಕ್ಟರ್ ದೊಡ್ಡ ಉದಾರ ತೋರಿದಂತೆ, "ನಮ್ಮದೇನು ಆಕ್ಷೇಪ ಇಲ್ಲ, ಹಿರಾಸ್ಮೆಂಟ್ ಡೌರಿ ಕೇಸ್...ಇನ್ನೂ ಕೇಸ್ ಬುಕ್ ಮಾಡಿಲ್ಲ. ನೀವೇ ರಾಜಿ ಮಾಡಿಕೊಂಡು ಹೋಗಿ, ಒಟ್ಟಿನಲ್ಲಿ ಚೆನ್ನಾಗಿರಬೇಕು. " ಆತನ ಉದಾರತೆಗೆ ಕಾರಣ ಅದೇನು ರಹಸ್ಯವಲ್ಲ. ಚೆನ್ನಾಗಿರುವುದು ಎಂದರೇನು? ಒಬ್ಬನ ಬದುಕು ಹೊತ್ತಿ ಉರಿಯುವಾಗ ಮತ್ತೊಬ್ಬ ಅದರಲ್ಲಿ ಚಳಿಕಾಯಿಸಿದಂತೆ ಎಂದರೆ ಚೆನ್ನಾಗಿರುವುದು. ಅನುಭವಿಸುವವನಿಗೆ ಚೆನ್ನಾಗಿರಬೇಕು ಎನ್ನುವುದು ಉಪದೇಶವಾದರೂ ಅದರ ಅವಕಾಶ ಇರುವುದು ನೋಡುವವನಿಗೆ. ಆತ ಚೆನ್ನಾಗಿರುತ್ತಾನೆ.

          ಮರುದಿನ ಆತ ಸ್ಥಳೀಯ ನ್ಯಾಯಾಲಯದಲ್ಲಿ ಜಾಮೀನು ಪಡೆದುಕೊಂಡ. ಒಂದು ಪತ್ರದ ಸುರಕ್ಷತೆ. ಆದರೆ ಬದುಕು ಮಾತ್ರ ಅಸುರಕ್ಷಿತ ಅಂತ ಆತನಿಗೆ ಅನ್ನಿಸಿತು. ಕಾನೂನಿನ ಕಣ್ಣಿನಲ್ಲಿ ಆತನೂ ಒಬ್ಬ ಅರೆ ಅಪರಾಧಿ. ಹಲವರು ರಾಜಿ ಮಾಡಿಕೊಳ್ಳುವುದಕ್ಕೆ ಸಲಹೆ ಕೊಟ್ಟರು ರಾಜಿ ಮಾಡಿಕೊಳ್ಳುವುದು ಅಂದರೇ ಯಾವುದರ ಜತೆಗೆ? ಆತನನ್ನು ಬೇಡ ಎಂದು ಹೋದ ಆಕೆಯ ಜತೆಗೆ? ಇಲ್ಲ ಬುದ್ಧಿತಿಳಿದಾಗಿನಿಂದ ಬದುಕಿನಲ್ಲಿ ಅಳವಡಿಸಿಕೊಂಡ ತತ್ವಗಳ ಜತೆಗೆ? ಯಾವುದರ ಜತೆಗೆ ಹೊಂದಾಣಿಕೆ ಮಾಡಿಕೊಳ್ಳಬೇಕು? ಆಕೆಯ ಮನೆಯಿಂದ ಚಿಕ್ಕಾಸು ಬೇಡ ಎಂದ ತನ್ನ ಆತ್ಮಾಭಿಮಾನದ ಮೇಲೆ ಆತನಿಗೆ ಅತಿಯಾದ ಗೌರವವಿದೆ. ಅದುವರೆಗೆ ಯಾರ ಹಂಗೂ ಇಲ್ಲದೆ ಆತನನ್ನು ಅಪ್ಪ ಸಾಕಿದ್ದ. ವಿದ್ಯೆ ಸಂಸ್ಕಾರ ಒದಗಿಸಿದ್ದ. ಪರಿಶ್ರಮದಿಂದ ಈತನು ಉತ್ತಮ ಎನ್ನುವ ಸ್ಥಿತಿಗೆ ಏರಿದ್ದ. ಈಗ....ರಾಜಿ ಮಾಡಿಕೊಂಡರೆ ಅಪ್ಪನ ಪರಿಶ್ರಮದ ಪೋಷಣೆಗೆ ಗೌರವ ದೊರಕಿದಂತಾಯಿತೆ? ಆತನ ಆತ್ಮ ಸಾಕ್ಷಿಗೆ ಗೌರವ ದೊರಕಬಹುದೇ? ರಾಜಿ ಮಾಡಿಕೊಂಡರೂ ಮುಂದಿನ ಬದುಕಿನ ದಾರಿ ಹೇಗಿರಬಹುದುಆತನ ಮೇಲೆ ವಿಶ್ವಾಸವಿಲ್ಲದೇ ಆತನನ್ನು ತೊರೆದು  ತೆರಳಿದ ಆಕೆಗೆ ಈ ಒಂದು ರಾಜಿಯಿಂದ ವಿಶ್ವಾಸ ಮೂಡಬಹುದೇ? ಇಷ್ಟೆಲ್ಲ ಪ್ರಾಮಾಣಿಕವಾಗಿ ಸಿಗಬಹುದು ಎಂದಾದರೆ ಆತ್ಮಾಭಿಮಾನ ಬದಿಗಿಟ್ಟು ರಾಜಿ ಎಂಬ ಮುಸುಕನ್ನು ಬದುಕಿಗೆ ಎಳೆಯಬಹುದೋ ಏನೋ? ಆದರೆ ಅದು ಕೇವಲ ಬದುಕಿಗೆ ಮುಸುಕಾಗಬಹುದು. ಆ ಮುಸುಕಿನ ಒಳಗೆ ಅವಿತಿಟ್ಟಿರುವ ವಾಸ್ತವದ ಸತ್ಯ ಎಂದಿಗೂ ಬಹಿರಂಗವಾಗದು. ಅದು ಅಂತರಂಗದಲ್ಲಿ ಕುದಿಯುತ್ತಲೇ ಇರಬಹುದು. ರಾಜಿಯಿಂದ ನ್ಯಾಯಕ್ಕೆ ನ್ಯಾಯ ಒದಗಬಹುದೇ? ಒಂದು ವೇಳೆ ಸಿಕ್ಕರೂ  ಆ ನ್ಯಾಯದ ರೂಪ ಏನಿರಬಹುದು

          ವರದಕ್ಷಿಣೆ ಮೊಕದ್ದಮೆ ಮಾತ್ರವಲ್ಲ. ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿದಾಗ...ವರದಕ್ಷಿಣೆ ಮೊಕದ್ದಮೆ ಕೇವಲ ನೆವನ. ಬೇರೆಯಾಗುವ ಉದ್ದೇಶವಿದ್ದರೆ ಮೊದಲೇ ಬೇರೆಯಾಗಬಹುದಿತ್ತು. ಇಷ್ಟಕ್ಕೂ ಮದುವೆಯಾಗುವ ಅವಶ್ಯಕತೆಯಾದರೂ ಏನು ಎಂದು ಯಾರೂ ಕೇಳಲಿಲ್ಲ.

          ಕಾನೂನಿನಂತೆ ಅವರೊಳಗೆ ಹಲವು ಸಲ ಸಮಾಲೊಚನೆಗೆಳು ನಡೆದುವು. ಹಲವರು ಸಲಹೆ ಸೂಚನೆ ಕೊಟ್ಟರು. ಆದರೇನು ಆಕೆ ಎಂದೋ ನಿರ್ಧರಿಸಿದಂತೆ ಆ ನಿರ್ಧಾರ ಅಚಲವಾಗಿತ್ತು. ಒಂದು ಬಾರಿ ಆತ ಮುಖತಃ ಕೇಳಿದ

 "ನೀನು ಮತ್ತೆ ಬಾ ನಾನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ನನ್ನಲ್ಲಿರುವ ಕೊರತೆ ಏನಿದೆ ಹೇಳು. ಸರಿ ಪಡಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತೇನೆ. ಡೈವರ್ಸ್ ಗೆ ನನ್ನ ಒಪ್ಪಿಗೆ ಇಲ್ಲ"

  ಇಷ್ಟು ವಿನಯ ಪೂರ್ವಕ ಮನವಿಗೆ ಆಕೆ ಸಮ್ಮತಿಸುವಂತೆ ಇದ್ದರೆ ಆಕೆ ಬಿಟ್ಟು ಹೋಗುತ್ತಿರಲಿಲ್ಲ. ಆದರೆ ಅತ ಆತ್ಮ ತೃಪ್ತಿಗೆ ಕೇಳಿಕೊಂಡಿದ್ದ.

ಆಕೆಯದ್ದು ಒಂದೇ ಉತ್ತರ...." ನನ್ನನ್ನು ಬಿಟ್ಟು ಬಿಡಿ. ನಾನು ಬರುವುದಿಲ್ಲ" ಯಾವ ಪ್ರಶ್ನೆ ಹೇಗೆ ಕೇಳಿದರೂ ಈ ಉತ್ತರ ಬಿಟ್ಟು ಬೇರೆ ಯಾವ ಮಾತುಗಳು ಇಲ್ಲ.  ಈ ಹೆಣ್ಣುಗಳು ಕೊಡುವ ಉತ್ತರ ಸಾಮಾನ್ಯವಾಗಿ ಹೀಗೆ ಇರುತ್ತದೆ. ತಾವು ತಪ್ಪು ಮಾಡುತ್ತಿದ್ದೇವೆ. ತಮ್ಮ ನಿಲುವು ತಮ್ಮ ನಡೆಯಲ್ಲಿ ನ್ಯಾಯವಿಲ್ಲ ಎಂದು ಹತಾಶರಾಗಿ ಹೋದಾಗ ಅವರಲ್ಲಿ ಬೇರೆ ಮಾತು ಇರುವುದಿಲ್ಲ. ಬಿಟ್ಟು ಬಿಡಿ ನಾನು ಬರುವುದಿಲ್ಲ ಎಂದು ಬಿಟ್ಟರೆ ಬೇರೆ ಒಂದಕ್ಷರವೂ ಮಾತನಾಡದ ಮೊಂಡುತನ. ಯಾಕೆ ಹೀಗೆ ಮಾತನಾಡುತ್ತಿರುವೆ ಎಂದು ಮಾಡುವುದು ಸರಿಯಾ ಎಂದು ಕೇಳಿದರೂ,  "ಆಕೆಯ ಉತ್ತರ ಬಿಟ್ಟು ಬಿಡಿ ನಾನು ಬರುವುದಿಲ್ಲ" ,ಮುದ್ರಿಸಿಟ್ಟ ಮಾತುಗಳು.  ಆತ ಬಗೆ ಬಗೆಯಲ್ಲಿ ಕೇಳಿಕೊಂಡ, " ಮದುವೆ ಮೊದಲೆ  ನಿನಗೆ ಹೇಳಬಹುದಿತ್ತಲ್ಲ. ಈಗ ನನ್ನ ಬದುಕಿಗೆ ಹೀಗೆ ಅನ್ಯಾಯ ಮಾಡುವುದು ಸರಿಯಾ? ನನ್ನ ಅಪ್ಪ ಅಮ್ಮ ನಿನ್ನ ಅಪ್ಪ ಅಮ್ಮನನ್ನು ಯೋಚಿಸು . ಹೀಗೆ ಮಾಡುವುದು ಸರಿಯಾ?"  ಆಗಲೂ ಉತ್ತರ ಅದೇ "ಬಿಟ್ಟು ಬಿಡಿ ಬರುವುದಿಲ್ಲ."  ಆತನಲ್ಲಿ ಬೇರೆ ಮಾತಿಗೂ ಆಕೆಗೆ ಮನಸ್ಸಿಲ್ಲ ಎಂದಾದರೆ ಆಕೆ ಮತ್ತೆ ಬಂದು ಆತನಿಗೆ ಯಾವ ಬದುಕನ್ನು ಒದಗಿಸಿಯಾಳು?

          ಹಲವರು ಹಲವು ಹೇಳಿದರು. ಹೇಳುವುದಕ್ಕೇನು? ಅವೆಲ್ಲ ಕೇವಲ ಸಲಹೆಗಳು. ಪ್ರವಾಹದಲ್ಲಿ ಮುಳುಗೇಳುವವನಿಗೆ ದಡದಲ್ಲಿ ನಿಂತ ಮಂದಿ ಕೊಡುವ ಸಲಹೆಗಳಂತೆ. ಪ್ರವಾಹದ ಸುಳಿಯ ಸೆಳೆತ, ಜೀವ ಭಯಪ್ರವಾಹದಲ್ಲಿ ಸಿಕ್ಕಿಕೊಂಡವನಿಗೆ ಮಾತ್ರ ಅರಿವಾಗುತ್ತದೆ. ಯಾರ ಮಾತಿಗೂ ಒಪ್ಪಿಕೊಳ್ಳಲಿಲ್ಲ. ರಾಜಿ ಎಂದರೆ ಅದು ಒಂದು ಕಡೆಯ ಸೋಲು ಹೊರತು ಅಲ್ಲಿ ಗೆಲುವು ಇರುವುದಿಲ್ಲ. ತೊರೆದು ಹೋದವಳು ಬರಬೇಕು. ಆತನ ಕೊರತೆಯನ್ನುಲೋಕದ ಮುಂದೆ ತೆರೆದಿಟ್ಟವಳ ಎದುರು ರಾಜಿ ಎಂದು ಕೈಯೊಡ್ದಿದರೆ ಆಕೆ ಬರೆದ ಕೊರತೆ ಅಳಿಸಿ ಹೋಗುವುದಿಲ್ಲ. ಅದನ್ನು ಇಟ್ಟುಕೊಂಡು ಮತ್ತೆ ಅವಳ ಜತೆಗೆ ಬದುಕು ಹೇಗೆ ಸಾಗಬಲ್ಲುದಆಕೆ ಬರಲಿ. ಆಕೆ ಬರೆದ ಕೊರತೆ ಆಕೆಯಿಂದಲೇ ತುಂಬಿಬರಲಿ. ಆತನ ನಿಲುವದು ಸ್ಪಷ್ಟ. ಬೇಡ ಎಂದವಳು ಅವಳು. ಈಗ ಬೇಕು ಎನ್ನಬೇಕಾದವಳು ಅವಳು.  ನಮ್ಮ ಬೇಡಿಕೆಗಳು ನಮ್ಮ ಅವಶ್ಯಕತೆಗಳು ನಾವು ಕಿತ್ತು ಪಡೆಯುವ ಹಂತಕ್ಕೆ ಹೋಗುವುದು ಆತನಿಗೆ ಇಷ್ಟವಿಲ್ಲದ ವಿಷಯ. ಕಿತ್ತು ಪಡೆದಾಗ ಅಲ್ಲೊಂದು ಅಸಹನೆ ಇದ್ದೆ ಇರುತ್ತದೆ. ಅದನ್ನು ಅನುಭವಿಸುವಲ್ಲಿ ಅದೊಮ್ದು ಅಸೌಕರ್ಯ ಅನುಭವಕ್ಕೆ ಬರುತ್ತದೆ. ಆದರೆ ಪರಿಪೂರ್ಣ ಸಮ್ಮತಿಯಲ್ಲಿ ಬರುವ ಅವಕಾಶಗಳುಒದಗಿ ಬಂದು ತೀರುವ ಬಯಕೆಗಳು ಆತ್ಮ ತೃಪ್ತಿಯನ್ನು ಒದಗಿಸುತ್ತವೆ. ಇದೀಗ ಆಕೆಗೆ ಮನಸ್ಸಿಲ್ಲ. ಆಕೆಯನ್ನು ಬಲವಂತವಾಗಿ ತರುವಲ್ಲಿ ಯಾವ ತೃಪ್ತಿ ಸಿಗಬಹುದು? ಹಾಗಾಗಿ ಆತ ಅಕೆಯೊಂದಿಗಿನ ಬದುಕನ್ನು ತಿರಸ್ಕರಿಸಿದರೂ ಮನದಾಳದಲ್ಲಿ ಆಕೆ ಪೂರ್ಣ ಸಮ್ಮತಿಯಿಂದ ಬರಬಹುದೇ ಎಂಬ ನಿರೀಕ್ಷೆಯಲ್ಲಿದ್ದ.

          ಕಡಿದು ಹೋದ ಮನಸ್ಸು ಮತ್ತೆ ಒಂದಾಗಲಿಲ್ಲ. ಅವರ ನಡುವೆ ಹಲವು ಸಮಾಲೋಚನೆಗಳು ಆಗಿ ಹೋದವು. ಯಾರದೋ ತೃಪ್ತಿಗಾಗಿ ನಡೆದ ಸಮಾಲೋಚನೆಗಳು. ಬರುತ್ತಾಳೆ ಎಂಬ ವಿಶ್ವಾಸ ಆತನಿಗೂ ಇಲ್ಲ. ಹೋಗಲೇ ಬೇಕು ಎಂಬ ಬದ್ದತೆ ಆಕೆಗೂ ಇಲ್ಲ. ಆಕೆಗೆ ಮತ್ತೊಂದು ಬದುಕು ಕಟ್ಟಿಕೊಳ್ಳುವ ತುಡಿತ. ಈತನಿಗೆ ಕುಸಿದು ಹೋದ ಬದುಕಿನ ಸೌಧವನ್ನು ಕಟ್ಟಲಾಗದ ಅಸಹಾಯಕತೆ.

          ಒಂದು ದಿನ ತಡೆಯದೆ ತನ್ನ ಒಡಲ ಉರಿ ಅಧಿಕವಾದಾಗ ಒಂದು ಪತ್ರ ಬರೆಯುತ್ತಾನೆ. 

" ನೀನು ಬರುವುದಿಲ್ಲ ಎಂದು ಅರಿವಿದೆ.  ತವರಿಗೆ ಹೋಗಿಬರುತ್ತೇನೆ ಎಂದು ಹೇಳಿ ಹೋದ ಅಮಾಯಕತನ ನಾನು ಮರೆಯುವುದಿಲ್ಲ.   ನಾನು ನನ್ನ ಆತ್ಮವಂಚನೆ ಬಿಟ್ಟು ವ್ಯವಹರಿಸುವುದಿಲ್ಲ. ಪ್ರಾಮಾಣಿಕವಾಗಿ ವ್ಯವಹರಿಸಿದ್ದೇನೆ. ನನ್ನನ್ನು ಮದುವೆಯಾಗುವುದರಲ್ಲಿ ಇಷ್ಟವಿಲ್ಲದೇ ಇದ್ದರೆ ಮದುವೆಯಾಗುವ ಮೊದಲೇ ನೀನು ಬೇರೆ ಯಾಗಬಹುದಿತ್ತು. ನಿನ್ನ ಬದುಕಿಗೆ ನೀನೆ ಅನ್ಯಾಯ ಮಾಡಿಕೊಂಡದ್ದು ಮಾತ್ರವಲ್ಲ, ನನ್ನ ಬದುಕನ್ನೂ ಬೆಂಕಿಗೆ ಹಾಕಿಬಿಟ್ಟೆ. ನೀನು ಅದಾರನ್ನೋ ಮದುವೆಯಾಗಿ ಎಷ್ಟು ಸುಖವಾಗಿರುವೆಯೋ ತಿಳಿಯದು. ಆದರೆ ಈ ನನ್ನ ಬದುಕನ್ನು ಹಾಳು ಗೆಡವಿದ ಈ ನನ್ನ ಜ್ವಾಲಾನಲದ ಉರಿಗೆ ನಿನ್ನ ಬದುಕು ತತ್ತರಿಸುತ್ತದೆ. ನೆನಪಿರಲಿ. ಇದು ನಿನ್ನನ್ನು ಬಾಧಿಸದೆ ಬಿಡುವುದಿಲ್ಲ. "

                ಕಡಲ ತಡಿಯಲ್ಲಿ ಕುಳಿತು ಆಕೆ ಯೋಚಿಸಿದ್ದು ಇದನ್ನೇ, ಆತನ ಜ್ವಾಲಾನಲದ ಉರಿಯ ಬಿಸಿ ಹೀಗೆ ಸುಡಬಹುದೇ? ಆಕೆಯಲ್ಲಿ ಉತ್ತರವಿಲ್ಲ. ಪಶ್ಚಾತ್ತಾಪ ಪಟ್ಟರೂ ಅದು ಪರಿಹಾರವಾಗುವುದಿಲ್ಲ. ಅಂದು ಹಾಗೆ ಆಗಿ ಹೋಯಿತು. ಅದಕ್ಕೆ ಕಾರಣರಾದವರು ಇಂದು ಯಾರೂ ಬದುಕಿಲ್ಲ. ಅದಕ್ಕೆ ಸಾಕ್ಷಿಯಾಗಿ ಈಗ ಆಕೆ ಮಾತ್ರವೇ ಇದ್ದಾಳೆ. ಅದೂ ಏಕಾಂಗಿಯಾಗಿ.

           ಆತನಿಂದ ವಿಚ್ಚೇದನವಾಗಿ ಮೊದಲು ಬಯಸಿದವನ ಬಳಿಗೆ ಹೋಗಿ ಮದುವೆಯಾಗಿ ಹೊಸ ಬದುಕು ಕಟ್ಟಿಕೊಂಡಳು. ಆ ದಿನಗಳಲ್ಲಿ ಇದುವೇ ಗೆಲುವು ಸಾಧಿಸಿದಂತೆ ಅನ್ನಿಸಿತ್ತು.  ಹೊಸದಾದ ಬದುಕಿನಲ್ಲಿ ಮಗ ಹುಟ್ಟಿ ಪುಟ್ಟ ಸಂಸಾರ ಸುಖದಲ್ಲಿ ಹಳೆಯದನ್ನು  ಮರೆತರೂ ಈಗ  ಹಳೆಯ ಉರಿ ಮತ್ತೆ ಜ್ವಾಲೆಯನ್ನು ಕಕ್ಕತೊಡಗಿದೆ. ಕೈ ಹಿಡಿದ ಪ್ರೇಮಿ ಅನಾರೋಗ್ಯ ಬಾಧಿಸಿ ನಡು ಬದುಕಿನಲ್ಲೇ ಏಕಾಂಗಿಯಾಗಿ ಬಿಟ್ಟು ಹೋಗಿದ್ದ. ಇದ್ದ ಒಬ್ಬ  ಮಗನನ್ನು ಅಕ್ಕರೆಯಿಂದ ಬೆಳೆಸಿದ್ದಳು. ಆತನಿಗೆ ವಿವಾಹವಾಗಿ ಒಂದು ವರ್ಷ ಕಳೆಯಿತಷ್ಟೇ...ಮದುವೆಯಾಗಿ ಬಂದ ಹುಡುಗಿ ಬಿಟ್ಟು ಹೋಗಿ ಈಗ ವಿಚ್ಚೇದಕ್ಕೆ ಅರ್ಜಿ ಹಾಕಿದ್ದಳು. ಎಲ್ಲವು ಸರಿಯಿದೆ ಎಂಬ ಭ್ರಮೆಯಲ್ಲಿ ಬದುಕಿದವಳಿಗೆ ಈಗ ನಡೆಯುವ ವಾಸ್ತವದ ಘಟನೆಗಳಿಗೆ ಕಾರಣ ಹುಡುಕುವ ಅನಿವಾರ್ಯತೆ ಕಾಣಲಿಲ್ಲ. ನಾಳೆ ಕುಟುಂಬ ನ್ಯಾಯಯಾಲಯದ ಮೆಟ್ಟಲು ಹತ್ತಬೇಕು. ಅಂದಿನ ಪ್ರಶ್ನೆಗಳಿಗೆ ಈಗ ಉತ್ತರ ಕಂಡುಕೊಳ್ಳುವ ಅನಿವಾರ್ಯತೆ ಎದುರಾಗಿ ಹೋಗಿದೆ.

          ಮರುದಿನ ಬೆಳಗ್ಗೆ ಎದ್ದು ಮಗನೊಂದಿಗೆ ಕೋರ್ಟ್ ಮೆಟ್ಟಲೇರಿದಳು. ನ್ಯಾಯಲಯ ಕಲಾಪ ಆರಂಭವಾಗುವುದಕ್ಕೆ ಇನ್ನೂ ಸಮಯವಿತ್ತು. ಹೊರಗೆ ಬೆಂಚಿನಲ್ಲಿ ಕುಳಿತಿದ್ದಳು.  ಹಳೆಯ ಕಥೆಯ ದೃಶ್ಯಗಳು ಮರು ಸೃಷ್ಟಿಯಾದಂತೆ ಭಾಸವಾಯಿತು. ಹಳೆಯ ಕಥೆಗಳಿಗೆ ಕೇವಲ ಅವಳೊಬ್ಬಳೇ ಸಾಕ್ಷಿಯಾಗಿದ್ದಳು.  ಚಡಪಡಿಕೆ ನಿಟ್ಟುಸಿರು ...ಅದನ್ನು ಯಾರಿಗೂ ವ್ಯಕ್ತ ಪಡಿಸುವಂತಿಲ್ಲ. ಮಗನ ಕುರಿತು ಯೋಚಿಸಬೇಕೆ? ತನ್ನ ಅಂತರಂಗದ ಪ್ರಶ್ನೆಗಳಿಗೆ ಉತ್ತರಿಸಬೇಕೆ? ಒಂದೂ ತಿಳಿಯದ ಚಡಪಡಿಕೆ.  ಹೀಗೆ ಚಡಪಡಿಸಿ ಯಾವುದೋ ಯೋಚನೆಯಲ್ಲಿದ್ದವಳಿಗೆ ಮಗ ಬಂದು ಎಚ್ಚರಿಸಿದ. ಒಳಗೆ ಕಟಕಟೆಯತ್ತ ಬರುವಂತೆ ಆಕೆಯ ವಕೀಲರು ಕರೆದರು. ನಿಧಾನವಾಗಿ ಹೆಜ್ಜೆ ಇಟ್ಟು ಕಟಕಟೆ ಹತ್ತಿ ನ್ಯಾಯಾಧೀಶರಿಗೆ ನಮಸ್ಕರಿವುದಕ್ಕೆ ತಲೆ ಎತ್ತಿ ನೋಡುತ್ತಾಳೆ ಗಾಬರಿಯಾಗಿ ಕುಸಿದು ಬೀಳುವ ಅನುಭವವಾಗುತ್ತದೆ. ಕಟೆಕಟೆಯನ್ನು ಗಟ್ಟಿಯಾಗಿ ಹಿಡಿದು ಕೊಳ್ಳುತ್ತಾಳೆ. ನ್ಯಾಯಾಧೀಶರ ಮುಖ ನೋಡಿದರೆ ಮತ್ತದೇ ಮುಖ ಅದು ಬೇರೆ ಯಾರೂ ಅಲ್ಲ, ಬಾಗಿಲಲ್ಲಿದ್ದ ನಾಮ ಫಲಕದಲ್ಲಿ ಹೆಸರು ಆಗ ತಾನೆ ಓದಿದ್ದಳು.. ಎ ವಿ ಮೂರ್ತಿ...! ಅದು ಬೇರೆ ಯಾರೂ ಅಲ್ಲ, .  ಅಭಿಚಿತ್ ವಿನಯ ಮೂರ್ತಿ . ಮತ್ತದೇ ಪಾತ್ರ ಈಬಗೆಯಲ್ಲಿ ಮುಂದೆ ಬಂದು ನಿಲ್ಲುತ್ತದೆ ಎಂದು ನಿರೀಕ್ಷೆ ಇರಲಿಲ್ಲ. ತಾನು ಯಾರಲ್ಲಿ ನ್ಯಾಯ ಕೇಳಬೇಕಾಗಿರುವುದು? ಅಂದು ವಕೀಲನಾದವನು ಇಂದು...ಈ ಮಟ್ಟಕ್ಕೆ ಏರಿ ತನಗೆ ಈ ಬಗೆಯಲ್ಲಿ ಸವಾಲಾಗಿ ಬಿಡುತ್ತಾನೆ ಎಂದು ಆಕೆ ನಿರೀಕ್ಷಿಸಿರಲಿಲ್ಲ. ಆತನ ದೃಷ್ಟಿಯನ್ನು ಎದುರಿಸುವ ಬಲವನ್ನುಆತ್ಮ ಸ್ಥೈರ್ಯವನ್ನು ಎಲ್ಲಿಂದ ತರಲಿ ಎಂದು ಆಕೆ ಯೋಚಿಸುತ್ತಾಳೆ.  ಯೋಚಿಸುವುದು ಹೇಗೆ ಸಾಧ್ಯ? ಆಕೆ ಕಲ್ಲಾಗಿ ಹೋಗಿದ್ದಾಳೆ. ಮೊದಲೊಮ್ಮೆ ಮನಸ್ಸು ಕಲ್ಲಾಗಿದ್ದರೆ ಈಗ ಸಂಪೂರ್ಣ ದೇಹವೇ ಕಲ್ಲಾಗಿ ನಿಂತು ಕೊಂಡಿದ್ದಾಳೆ.  ಕಲ್ಲಾಗದೇ ಇದ್ದರೆ ಆಕೆ ಕುಸಿದು ಬೀಳುತ್ತಿದ್ದಳೋ ಏನೋ...ಆದರೆ ಆಕೆ ಅಕ್ಷರಶಃ ಕಲ್ಲಾಗಿ ಹೋಗಿದ್ದಾಳೆ.

                ಒಂದು ಕಾಲದಲ್ಲಿ ಸ್ವತಃ ತನಗೆ ಕಾನೂನಿನಲ್ಲಿ ಸಿಗದ ನ್ಯಾಯಕ್ಕೆ ಇಂದು ಆತನೇ ನ್ಯಾಯಾಧೀಶ. ಇದೊಂದು ವಿಪರ್ಯಾಸ.

          [ಮುಂದೆ? ನಿರ್ಣಯ ಹೇಗೂ ಇರಬಹುದು? ಆದರೆ ಸತ್ಯ ನ್ಯಾಯ ನೀತಿ ಎಂದಿಗೂ ಗೆಲುವನ್ನು ಕಾಣಬೇಕು ಎಂಬುದು ತತ್ವ. ವಿನಯ ಮೂರ್ತಿ ಆತ್ಮ ವಂಚನೆ ಇಲ್ಲದೆ  ಸತ್ಯ ನ್ಯಾಯಕ್ಕಾಗಿ ಸ್ಪಂದಿಸುವವನು. ತತ್ವ ಸಿಧ್ದಾಂತಗಳ ವಿಶ್ವಾಸಿ. ಸತ್ಯ ನ್ಯಾಯದ ಹಿಂದೆ ಪ್ರಾಮಾಣಿಕತೆಯಲ್ಲಿ ಹೋದವನಿಗೆ ಮೊದಲು ಸತ್ಯ ನ್ಯಾಯವೇ  ಕಾಣಿಸುತ್ತದೆ.   ಇದು ಆಕೆಯ ಅರಿವು ಮಾತ್ರವಲ್ಲ, ಆಕೆಯ ಅನುಭವ. ಹಾಗಾಗಿ ಆತನೆದುರು ಅಂಗಲಾಚಬಹುದು. ಉನ್ನತ ತತ್ವಾದರ್ಶಗಳು ಸಮಾಜದಲ್ಲಿ ದೌರ್ಬಲ್ಯವಾಗುವುದು ಇಂತಹ ಸನ್ನಿವೇಶದಲ್ಲಿ. ಅದು ಆಕೆಗೆ ಮತ್ತೊಮ್ಮೆ ಗೆಲುವನ್ನು ಕರುಣಿಸಬಹುದು. ಆದರೆ ಆತನ ಪಾಲಿಗೆ ನಂಬಿದ ಅದೇ  ತತ್ವ ಕರುಣಿಸಿದ ಸೋಲನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಅದಕ್ಕೊಂದು ಗೆಲುವು ಬೇಕು. ವಿನಯ ಮೂರ್ತಿಯ ತತ್ವಗಳು ಈ ವಾಸ್ತವದ ಸತ್ಯದಲ್ಲಿ ಗೆಲ್ಲಬಹುದೇ? ನಿರ್ಣಯಿಸುವುದು ಕಠಿಣ. ಒಂದು ಗೂಡಿಸುವ ವಿವಾಹಕ್ಕೆ ಅವಕಾಶವಿದ್ದಂತೆ, ವಿಚ್ಚೇದನಕ್ಕೂ ಹೆಚ್ಚು ಅವಕಾಶವಿರುತ್ತದೆ. ಇದು ನಮ್ಮ ಸಮಾಜ. ಒಳ್ಳೆಯವರಿಗೂ ಕೆಟ್ಟವರಿಗೂ ಹುಟ್ಟು ಮತ್ತು ಸಾವಿನಲ್ಲಿ ಮಾತ್ರ ಸಮಾನತೆ ಇರುತ್ತದೆ. ನಡುವೆ  ಇರುವ  ಸತ್ಯ ನ್ಯಾಯ ನೀತಿ ಎಲ್ಲವೂ ಅವಕಾಶಗಳಾಗಿಬಿಡುತ್ತವೆ.  ಸತ್ಯ ಪ್ರಾಮಾಣಿಕತೆಯ ಸಿದ್ದಾಂತಗಳು ಗೆಲ್ಲಬೇಕು. ಅದು ಅದರ ಅವಕಾಶ. ]

  

Monday, December 30, 2024

ಬಾಲ್ಯದ ಕಲ್ಲಂಗಡಿಹಣ್ಣು

ಹಸಿವು ಎಂದಾಕ್ಷಣ ನನಗೆ ಮೊದಲು ನೆನಪಾಗುವುದು ನನ್ನ ಬಾಲ್ಯ.  ಮನೆಯಲ್ಲಿ ತಿನ್ನುವ ಮತ್ತು ಗಂಜಿ ಉಪ್ಪು ಮೆಣಸು ಬಿಟ್ಟರೆ ಬೇರೆ ಆಹಾರ ಸಿಗುವುದೇ ಅಪರೂಪ. ಯಾರದೋ ಮನೆಯ ಪೂಜೆ ಶ್ರಾದ್ಧ ಇವುಗಳಷ್ಟೆ ಕರುಳಿನ ಸಾಮಾರ್ಥ್ಯವನ್ನು ಅಳೆಯುವ ಅವಕಾಶವನ್ನು ಒದಗಿಸುತ್ತಿದ್ದವು . ಅಂತಹ ಸಮಯದಲ್ಲಿ ಅಂಗಡಿಯ ತಿಂಡಿಗಳಂತೂ ಎಂದೋ ಕನಸಿನಲ್ಲಿ ಸಿಗುವ ವಿಶೇಷವಾಗಿತ್ತು. ಅಂತಹ ಒಂದು ದಿನ. ನನಗಾಗ ಎಳೆಂಟು ವರ್ಷದ ವಯಸ್ಸಾಗಿರಬಹುದು. ಒಂದು ದಿನ ಯಾವುದೋ ಕೆಲಸಕ್ಕೆ ನನ್ನನ್ನು ಬಾಯಾರು ಪದವಿಗೆ ಅಮ್ಮ ಕಳುಹಿಸಿದ್ದರು. ಆಗ ಕಾಯರ್ ಕಟ್ಟೆಯಿಂದ ಬಾಯಾರು ಪದವಿಗೆ ಹೋಗುವ ಶಂಕರ್ ವಿಠಲ್ ನ ಕಟ್ ಸರ್ವಿಸಿಗೆ ಹೋದರೆ ಪುನಹ ಅದೇ ಬಸ್ಸಿನಲ್ಲಿ ವಾಪಾಸಾಗಬೇಕು. ಕಾಯರ್ ಕಟ್ಟೆಯಿಂದ ಪದವಿಗೆ ಹತ್ತು ಪೈಸೆಯ ಅರ್ಧ ಟಿಕೇಟ್. ಅರ್ಧ ಟಿಕೇಟ್ ಆದರೂ ಕಂಡಕ್ಟರ್ ಕೊಡುವ ಚೀಟಿ ಅರ್ಧ ತುಂಡಾಗಿರಾದೆ ಇಡೀ ಚೀಟಿಯನ್ನೇ ಕಂಡಕ್ಟರ್ ಕೈಗೆ ಇಡುವಾಗ ಇದು ಅರ್ಧ ಟಿಕೇಟ್ ಹೇಗಾಗುತ್ತದೆ ಎಂದು ಅಚ್ಚರಿಯಾಗುತ್ತಿತ್ತು. ಆನಂತರ ಅದರಲ್ಲಿ ಅರ್ಧ ಸೀಟ್ ಅಂತ ಬರೆಯುತ್ತಿದ್ದದ್ದದ್ದು ಗೊತ್ತಿರಲಿಲ್ಲ. ಆಗ ಟಿಕೇಟಿಗೆ  ಕೈಗೆ ಇಪ್ಪತ್ತು ಪೈಸೆಯನ್ನಷ್ಟೇ ಕೊಟ್ಟು ಕಳುಹಿಸುವುದು ವಾಡಿಕೆ. ಬೇರೆ ಏನು ಬೇಕಿದ್ದರೂ ಕೊಂಡುಕೊಳ್ಳುವುದಕ್ಕೆ ಅವಕಾಶವಿಲ್ಲ. 

ಆಗ ಬಾಯಾರು ಪದವಿನಲ್ಲಿ   ಗೋವಿಂದಣ್ಣ  ಶಂಕರ್ ವಿಟ್ಟಲ್ ಟಿಕೆಟ್ ಏಜಂಟ್ ಆಗಿದ್ದರು. ಒಂದು ಪುಟ್ಟ ಗೂಡಂಗಡಿ ಇಟ್ಟುಕೊಂಡು ಬಸ್ ಪ್ರಯಾಣಿಕರಿಗೆ ಟಿಕೇಟ್ ಹರಿದು ಕೊಡುತ್ತಿದ್ದರು. ಅಂದು ಬಸ್ ಬಿಡುವುದಕ್ಕೆ ಇನ್ನೂ ಸಮಯವಿತ್ತು. ಅಲ್ಲೇ ಕಾದು ಕುಳಿತಿದ್ದೆ. ಅಂಗಡಿಯಲ್ಲಿ ಆಗ ತಾನೆ ತಂದ ಕಲ್ಲಂಗಡಿ ಹಣ್ಣನ್ನು ತುಂಡುಗಳನ್ನಾಗಿ ಮಾಡಿ ಅಲ್ಲಿ ಇಡುತ್ತಿದ್ದರು. ಕಲ್ಲಂಗಡಿ ಹಣ್ಣು....ಅದುವರೆಗೆ ನಾನು ಕಂಡವನಲ್ಲ. ಒಳಗೆ ಕೆಂಪಗಿರುವ ಈ ಕುಂಬಳಕಾಯಿಯಂತಹ ಹಣ್ಣು ನಿಜಕ್ಕೂ ನನಗೆ ಆಶ್ಚರ್ಯದ ವಸ್ತುವಾಗಿತ್ತು. ಆದರೆ ಅದನ್ನು ತಿನ್ನುವ ಬಗೆ ಹೇಗೆ?  ಒಂದು ತುಂಡು ಕಲ್ಲಂಗಡಿಗೆ ಹತ್ತು ಪೈಸೆ.  ಬಸ್ ಟಿಕೇ ಟ್ ಗೆ ಕೊಟ್ಟ  ಕೈಯಲ್ಲಿರುವ ಹತ್ತು ಪೈಸೆಯನ್ನು ಕೊಟ್ಟು ಕೊಂಡುಕೊಂಡರೆ ಮತ್ತೆ ಮನೆಗೆ ನಡೆದೇ ಹೋಗಬೇಕು. 

ಅಂಗಡಿಗೆ ಬಂದವರೆಲ್ಲ ಕಲ್ಲಂಗಡಿ ಹಣ್ಣಿನ ತುಂಡು ಕೈಯಲ್ಲಿ ಹಿಡಿದು ನೀರು ಸುರಿಸಿ ತಿನ್ನುವಾಗ ನನ್ನ ಬಾಯಲ್ಲಿಯೂ ನೀರು ಸುರಿಯುವುದಕ್ಕಾರಂಭಿಸಿತು. ಆದರೆ ನೀರು ಸುರಿಸುವುದಷ್ಟೇ  ನನ್ನ ಪಾ
ಲಿಗೆ. ಹಾಗೆ ಆಶೆಯಿಂದ ಪುಟ್ಟ ಬಾಲಕ ಬಿಟ್ಟ ಕಣ್ಣಿನಿಂದ ನೋಡುತ್ತಿದ್ದೆ. ಹಾಗೆ ನೋಡಬಾರದು ಎನ್ನು ಸಭ್ಯತೆ ಅರಿವಿರಲಿಲ್ಲ. ಆದರೆ ಮನಸ್ಸಿನ ಆಶೆ ಹತ್ತಿಕ್ಕುವುದಕ್ಕೆ ಸಾಧ್ಯವೆ? 

ಕೊನೆಗೊಮ್ಮೆ ಯಾರೋ ಒಬ್ಬರು ಹಣ್ಣು ಕೊಳ್ಳುವುದಕ್ಕೆ ಬಂದಾಗ ನಾನು ನಿಂತು ನೋಡುತ್ತಿರುವುದು ಗೋವಿಂದಣ್ಣನ ಗಮನಕ್ಕೆ ಬಂತು. ಕಲ್ಲಂಗಡಿಯಿಂದ ಪುಟ್ಟ ತುಂಡೊಂದನ್ನು ಮಾಡಿ ಕರೆದು ನನ್ನ ಕೈಗೆ ಇಟ್ಟರು. ಪುಟ್ಟ ಚಿಕ್ಕ ಹಣ್ಣಿನ ಚೂರಾದರೂ ನನ್ನ ಪಾಲಿಗೆ ಅದೊಂದು ನಿಧಿಯಾಗಿತ್ತು. ಕೈಯನ್ನು ಹಾಕಿಕೊಂಡ ಚಿಂದಿ ಅಂಗಿ ಚಡ್ಡಿಗೆ ಉಜ್ಜಿ ಕಲ್ಲಂಗಡಿಯನ್ನು ಕೈಯಲ್ಲಿ ಹಿಡಿದು ಬಾಯಿಗಿಟ್ಟಾಗ ಸ್ವರ್ಗವೇ ಕೈಗೆ ಸಿಕ್ಕಿದ ಅನುಭವ.  ಅಂದು ನಾನು ಮೊದಲಾಗಿ ಕಲ್ಲಂಗಡಿಯ ರುಚಿಯನ್ನು ನೋಡಿದೆ. ಆ ನಂತರ ಅದೆಷ್ಟೋ ಕಲ್ಲಂಗಡಿಯನ್ನು ತಿಂದಿರಬಹುದು. ಈಗ ರಸ್ತೆಯ ಬದಿಯಲ್ಲಿ ರಾಶಿ ಹಾಕಿ ಮಾರುವ ಕೆಂಪು ಕೆಂಪು  ಕಲ್ಲಂಗಡಿ ಹಣ್ಣನ್ನು ನೋಡಿರಬಹುದು. ಆದರೆ ಅಂದಿನ ಕಲ್ಲಂಗಡಿ ಹಣ್ಣಿನ ರುಚಿ ಮತ್ತೆಂದೂ ಸಿಕ್ಕಿರಲಿಲ್ಲ. ಬಾಲ್ಯದ ಆ ಕಲ್ಲಂಗಡಿ ಚೂರು ಮತ್ತೆ ಗೋವಿಂದಣ್ಣ ಎಂದು ಮರೆಯುವುದಕ್ಕಿಲ್ಲ. ಆ ರುಚಿ ಮತ್ತೆಂದೂ ಸಿಗುವುದಕ್ಕಿಲ್ಲ. ಈಗ ಪ್ರತಿ ಬಾರಿ ಕಲ್ಲಂಗಡಿ ರುಚಿ ನೋಡುವಾಗ ಬಾಲ್ಯದ ಆ ರುಚಿಯನ್ನು ಸ್ಮರಿಸಿಕೊಳ್ಳುತ್ತೇನೆ. ಆ ಹಸಿವಿನ ದಿನಗಳು ನೆನಪಾಗುತ್ತದೆ. ಅತೃಪ್ತಿಯಲ್ಲಿಯೂ ಸಿಗುವ ಸುಖ ಹಲವು ಸಲ ವಿಶಿಷ್ಟವಾಗಿರುತ್ತದೆ. ಮನುಷ್ಯನಿಗೆ ಹಸಿವಿನ ರುಚಿಯ ಅರಿವಿರಬೇಕು. ಮತ್ತು ಆ ಹಸಿವು ಇಂಗುವ ವಿಶ್ವಾಸ ಇಲ್ಲದೇ ಅದೇ ನಿರೀಕ್ಷೆಯಲ್ಲಿರಬೇಕು. ಆಗ ಸಿಗುವ ಜೀವನಾನುಭವ ಎಲ್ಲ ಪಾಠವನ್ನು ಕಲಿಸಿಬಿಡುತ್ತದೆ. ಶಾಲೆಯಲ್ಲಿ ಕಲಿತ ಉರು ಹೊಡೆದ ಪಾಠಗಳಾದರೂ ಮರೆತು ಹೋಗಿರಬಹುದು. ಆದರೆ  ಬಾಲ್ಯದ ಹಸಿವಿನಿಂದ ನಾನು ಕಲಿತ ಪಾಠಗಳು ಎಂದಿಗೂ ಮರೆಲಾರವು. 


Sunday, December 29, 2024

ಅನ್ನ ಬ್ರಹ್ಮ ಮುನಿದಾಗ.....

                 ತಲೆ ಬರಹ ವಿಚಿತ್ರವಾಗಿದೆ. ಆದರೆ ಮೊನ್ನೆ ಬೆಳಗ್ಗೆ ಆದ ದುರ್ಘಟನೆ ಯೋಚಿಸುವಾಗ ಹೀಗೆ ಅನಿಸುತ್ತದೆ. ನಮ್ಮ ತೀರ ಪಕ್ಕದ ಮನೆ ಅಂದರೆ ನಮ್ಮ ಮನೆಗೂ ಆ ಮನೆಗೂ ಇರುವ ಅಂತರ ಒಂದು ಗೋಡೆ ಮಾತ್ರ. ನಮ್ಮ ಮನೆಯಿಂದ ಎರಡು ಅಡಿಯ ಬಡಿಗೆ ಹಾಕಿದರೆ ಆ ಮನೆಯ ಒಳಗೆ ತೂರಿಬಿಡುತ್ತದೆ. ಬೆಂಗಳೂರಲ್ಲಿ ಇದು ವಿಶೇಷವಲ್ಲ. ಆ ಮನೆಯಲ್ಲಿ ಇದ್ದಕ್ಕಿದ್ದಂತೆ  ದೊಡ್ಡ ಸದ್ದು ಎದೆ ಬಿರಿಯುವಂತೆ ಕೇಳಿಸಿತು. ಅದೊಂದು ಸ್ಫೋಟವೋ ಏನೋ ಅಂತ ತಿಳಿಯುವುದಕ್ಕೆ ಕೆಲವು ಘಳಿಗೆಗಳೇ ಬೇಕಾಯಿತು. ಎರಡು ಬದಿಯಲ್ಲಿದ್ದ ಗಾಜಿನ ಕಿಟಿಕಿಗಳು ಸಿಡಿದು ಗಾಜುಗಳ ಚೂರುಗಳು ಛಿದ್ರ ಛಿದ್ರವಾಗಿ ರಸ್ತೆಗೆ ಪಕ್ಕದ ಮನೆಗೆ ಮಳೆಯಂತೆ ಬಿದ್ದು ಬಿಟ್ಟಿತು. ಏನಾಯಿತು ಅಂತ ಯೋಚಿಸುವ ಮೊದಲೇ ಆ ಮನೆಯಿಂದ ಹೆಣ್ಣಿನ ಆಕ್ರಂದನ ಎದೆ ಬಿರಿಯುವಂತೆ ಕೇಳಿಸಿತು. ನಮ್ಮ ಮನೆಯಲ್ಲಿ ಏನಾದರೂ ಆಯಿತಾ ಅಂತ ನಾವು ಆತಂಕಗೊಂಡೆವು. ನಮ್ಮದು ಮೂರು ಮಹಡಿಯ ಮನೆ. ಮೊದಲ ಮಹಡಿಯಲ್ಲಿ ಅಡುಗೇ ಕೋಣೆ. ನಾವೆಲ್ಲ ಎರಡನೇ ಮೂರನೆ ಮಹಡಿಯಲ್ಲಿದ್ದರೆ ಬೆಳಗ್ಗೆ ತಾಯಿ ಅಡುಗೆ ಮನೆಯಲ್ಲಿರುತ್ತಾರೆ. ತಾಯಿಗೆ ಏನಾದರೂ ಆಯಿತಾ ಅಂತ ನನಗೆ ಗಾಬರಿ. ಆದರೆ ಆಕ್ರಂದನ ಕೇಳಿಸಿದ್ದು ಪಕ್ಕದ ಮನೆಯಿಂದ ಅಂತ ಅರಿವಾಗಿ ಹೊರಗೆ ಬಂದು ಪಕ್ಕದ ಮನೆ ನೋಡಿದರೆ ದೊಡ್ಡ ಬಾಂಬ್ ವಿಸ್ಪೋಟಿಸಿದ ಹಾಗೆ ಕಿಟಿಕಿ ಬಾಗಿಲು ಹಾರಿ ಹೋಗಿತ್ತು. ಅಬ್ಬಾ ಅದೇನು ಸದ್ದು. ಇನ್ನೂ ಎರಡು ದಿನ ಕಳೆದರೂ ಆ ಸದ್ದಿನ ಧ್ವನಿ ಮಾರ್ದನಿಸುತ್ತದೆ. 




                ರಸ್ತೆಯ ಎಲ್ಲಾ ಮನೆಯವರು ಹೊರಗೆ ಬಂದು ನಮ್ಮ ಮನೆಯತ್ತ ನೋಡಿ ಏನಾಯಿತು ಅಂತ ಕೇಳಿದರೆ ಇನ್ನು ಕೆಲವರು ಮನೆಯ ಕೆಳಗೆ ಬಂದು ಮೇಲಕ್ಕೆ ನೋಡುತ್ತಾರೆ. ನಮ್ಮ ಪಕ್ಕದ ಮನೆಯೂ ಎರಡು ಮಹಡಿಯ ಮನೆ. ಎರಡನೇ ಮಹಡಿಯಲ್ಲಿ ಸ್ಫೋಟ ಸಂಭವಿಸಿ ಆನಾಹುತ ನಡೆದು ಹೋಗಿದೆ. ನಾನು ಬಗ್ಗಿ ಆ ಮನೆಯ ಕಿಟಿಕಿ ಒಳಗೆ ನೋಡಿದೆ. ಎಲ್ಲರೂ ಗ್ಯಾಸ್ ಸಿಲಿಂಡರ್ ಸ್ಪೋಟವಾಗಿದೆ ಅಂತ ತಿಳಿದಿದ್ದರು. ಬಗ್ಗಿ ನೋಡುವುದಕ್ಕೂ ಭಯ. ಕೆಳಗೆ ಮನೆಯ ಮೆಟ್ಟಿಲಲ್ಲೆ ಗೇಟ್ ಬಿಗ ಹಾಕಿದ ಕಾರಣ ಯಾರೂ ಮೇಲೆ ಹೋಗುವಂತಿರಲಿಲ್ಲ. ನಾನು ಬಗ್ಗಿ ನೋಡಿದಾಗ ಅಲ್ಲಿನ ಅಡುಗೆ ಕೋಣೆಯಲ್ಲಿ ಗ್ಯಾಸ್ ಸ್ಟೌ ಉರಿಯುತ್ತಾ ಇದ್ದ ಕಾರಣ ಅದು ಗ್ಯಾಸ್ ಸಿಲಿಂಡರ್ ಅಲ್ಲಾ ಅಂತ ಖಾತರಿಯಾಯಿತು. 

            ಮನೆಯೊಳಗಿನ ದೃಶ್ಯ ನೋಡಿದಾಗ  ಕುಕ್ಕರ್ ಮುನಿದರೆ ಹೇಗಿರುತ್ತದೆ ಎಂದು ಅರಿವಿಗೆ ಬಂತು. ಚೆಲ್ಲಾಪಿಲ್ಲಿಯಾಗಿ ಬಿದ್ದ ಮನೆಯ ವಸ್ತುಗಳು ಬಾಗಿಲೊಂದು ಮುರಿದು ಕಿತ್ತು ಮುರಿದು ಬಿದ್ದಿತ್ತು. ವಸ್ತುಗಳೆಲ್ಲಾ ಚೆಲ್ಲಾ ಪಿಲ್ಲಿಯಾಗಿತ್ತು. ಗಾಜಿನ ಚೂರು ಎಲ್ಲೆಂದರಲ್ಲಿ ಬಿದ್ದಿತ್ತು. ಅಚ್ಚರಿ ಎಂದರೆ ಅಡಿಗೆ ಕೋಣೆಯಲ್ಲಿದ್ದ ಮಹಿಳೆಗೆ ಗಾಯ ವಾಗಿದ್ದು ಬಿಟ್ಟರೆ ಅಲ್ಲಿದ್ದ ಪುಟ್ಟಮಗುವಿಗೆ ಮತ್ತು ಉಳಿದವರಿಗೆ  ಯಾವ ಗಾಯವೂ ಆಗಿರಲಿಲ್ಲ. 



              
 
ಎಲ್ಲರಿಗೂ ಕುಕ್ಕರ್ ಯಾಕೆ ಸ್ಫೋಟಗೊಂಡಿತು ಎಂಬುದು ಅಚ್ಚರಿಯಾಗಿತ್ತು. ಪ್ರತಿಯೊಂದು ಮನೆಯಲ್ಲೂ ಅತ್ಯಾವಶ್ಯಕ ಸಾಧನವೆಂದರೆ ಅದು ಕುಕ್ಕರ್. ಮನೆಯಾಗಿಯ ಬಿಸಿಯುಸಿರಿನ ಸ್ಪಂದನವೆಂದರೆ ಕುಕ್ಕರ್. ಅದು ಈ ಬಗೆಯಲ್ಲಿ ಮುನಿದರೆ ಮಾಡುವುದೇನು. ನಮ್ಮ ಮನೆಯಲ್ಲಿ ಕುಕ್ಕರ್ ಅಷ್ಟೊಂದು ಬಳಸುವುದಿಲ್ಲ. ತೀರ ಅನಿವಾರ್ಯವೆಂದಾದರೆ ಕೆಲವೊಮ್ಮೆ ಕಾಳುಗಳನ್ನು ಬೇಯಿಸುವುದಕ್ಕೆ, ಕುಚ್ಚಿಲಕ್ಕಿ ಗಂಜಿ ಮಾಡುವುದಕ್ಕೆ  ಉಪಯೋಗಿಸುವುದುಂಟು. ಉಳಿದಂತೆ ಎ ಎಂ ಸಿ ಕುಕ್ ವೆರ್  ಪಾತ್ರಗಳು ಹೆಚ್ಚು ಸುರಕ್ಷಿತವಾಗಿರುವುದರಿಂದ ಅದನ್ನೇ ಹೆಚ್ಚು ಉಪಯೋಗಿಸುತ್ತೇವೆ. ಆದರೂ ಅಗೊಮ್ಮೆ ಈಗೊಮ್ಮೆ  ಕುಕ್ಕರ್ ಉಪಯೋಗಿಸುವ ನಮಗೂ ಆತಂಕವಾಗಿದ್ದು ಸುಳ್ಳಲ್ಲ. ಆದರೆ ಅಲ್ಲಿ ಕುಕ್ಕರ್ ಸಿಡಿದ ಪರಿಣಾಮ ನಮ್ಮಮ್ಮ ಇದ್ದಾ ಎರಡು ಕುಕ್ಕರ್ , ಅದೂ ಇತ್ತೀಚೆಗೆ ಕೊಂಡು ತಂದ ಕುಕ್ಕರನ್ನು ತೆಗೆದು ಮೇಲೆ ಹಾಕಿಬಿಟ್ಟರು. ಈಗ ಎಲ್ಲವನ್ನು ಕುಕ್ ವೇರ್ ನಲ್ಲಿ ಮಾಡುತ್ತಿದ್ದೇವೆ. ಕುಕ್ ವೇರ್ ನಲ್ಲಿ ಮಾಡಿದ ಅಡುಗೆ ಅದ್ಭುತ ರುಚಿಯಿಂದ ಕೂಡಿರುತ್ತವೆ. 

            ಕುಕ್ಕರ್ ಗೆ ಸೇಪ್ಟಿ ವಾಲ್ವ್ ಇದ್ದರೂ ಅದು ಹೇಗೆ ಸಿಡಿಯಿತು ಎಂದು ಅಚ್ಚರಿಯಾಗಿತ್ತು. ಹಾಗಾದರೆ ಅದರ ಅವಶ್ಯಕತೆಯಾದರೂ ಏನು? ಕುಕ್ಕರ್ ನಲ್ಲಿ ನೀರು ಕಡಿಮೆಯಾದಾಗ ಹಲವು ಸಲ ವಾಲ್ವ್ ತೆರೆದು ಅನಾಹುತ ತಪ್ಪಿದರೂ ಅದನ್ನು ಪೂರ್ಣವಾಗಿ ನಂಬುವ ಹಾಗಿಲ್ಲ. ಕುಕ್ಕರ್ ನ  ವೈಟ್ ಅಂದರೆ ಅದರ ವಿಸಿಲ್ ಅದರಲ್ಲಿಆಹಾರ ಪದಾರ್ಥದ ಜಿಡ್ದು ಹಿಡಿದು ಅದರ ಮೇಲೆ ಕೆಳಗಿನ ತಡೆಯಾದಾಗ ಕುಕ್ಕರ್ ಒಳಗೆ ಒತ್ತಡ ಹೆಚ್ಚಾಗಿ ಅದು ಸಿಡಿಯುತ್ತದೆ. ಇಲ್ಲೂಅದೇ ಆಗಿ ಹೋದ ಪ್ರಮಾದ. ಕುಕ್ಕರ್ ಉಪಯೋಗಿಸುವಾಗ ಇದರ ಬಗ್ಗೆ ಹೆಚ್ಚು ಎಚ್ಚರ ವಹಿಸಬೇಕು. ಕುಕ್ಕರ್ ಸ್ವಚ್ಛವಾಗಿರಿಸಬೇಕು. ಅದರ ವೈಟ್ ಒಳಗಡೆ ಜಿಡ್ಡು ಅಥವಾ ಆಹಾರ ಪದಾರ್ಥದ ತುಣುಕು ಇರದಂತೆ ನೋಡಿಕೊಳ್ಳಬೇಕು. ಅದು ಒಲೆ ಮೇಲೆ ಇರಿಸುವ ಮೊದಲು ವಿಸಿಲ್ ಚಲನೆ ಸಲೀಸಾಗಿದೆಯೇ ಎಂದು ಪರೀಕ್ಷಿಸಬೇಕು. ಇಷ್ಟೆಲ್ಲಾ ಎಚ್ಚರ ವಹಿಸಿದರೆ ತಕ್ಕ ಮಟ್ಟಿಗೆ ಕುಕ್ಕರ್ ಉಪಯೋಗ ತೊಂದರೆ ಎಲ್ಲ ಎಂದುಕೊಳ್ಳಬಹುದು. 

            ಎಷ್ಟೇ ಎಚ್ಚರ ವಹಿಸಿದರೂ ಹಲವು ಸಲ ಅಪಾಯ ತಪ್ಪಿದ್ದಲ್ಲ. ಮಾತ್ರವಲ್ಲ ಕುಕ್ಕರ್ ನಲ್ಲಿ ಬೇಯಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ. ಕುಕ್ಕರ್ ನಲ್ಲಿ ಬೇಯಿಸಿದ ಆಹಾರದಲ್ಲಿ ಪೌಷ್ಟಿಕಾಂಶ ನಾಶವಾಗುತ್ತದೆ. ಮಾತ್ರವಲ್ಲ ಆಹಾರ ಜೀರ್ಣವಾಗುವುದಿಲ್ಲ. ಇದರಿಂದ ಅಜೀರ್ಣ ಮಲಬದ್ದತೆ ಮುಂತಾದ ಸಮಸ್ಯೆಗಳು ಸಾಮಾನ್ಯವಾಗಿರುತ್ತದೆ. ಕೊಲೆಸ್ಟರಾಲ್ ಸಮಸ್ಯೆ ಕುಕ್ಕರ್ ನಲ್ಲಿ ಬೇಯಿಸಿದ ಆಹಾರ ಸೇವನೆಯಿಂದ ಅಧಿಕವಾಗುತ್ತದೆ. ಹಾಗಾಗಿ ಕುಕ್ಕರ್ ನ್ನು ಆದಷ್ಟು ಉಪಯೋಗಿಸದೇ ಇರುವುದು ಉತ್ತಮ. ಕುಕ್ಕರ್ ನ ಆಹಾರ ಆರೋಗ್ಯಕ್ಕೆ ಹಾನಿಕರ. ಜತೆಯಲ್ಲಿ ಜೀವಕ್ಕೂ ಹಾನಿಕರ.