Sunday, November 2, 2025

ದೇವರು ಎಂಬ ವಿಶ್ವಾಸ



 " ದೇವರು ಧರ್ಮವನ್ನು ಏನೆಂದು ತಿಳಿಯದೇ ಅದಕ್ಕೆ ಹೋರಾಡುತ್ತೇವೆ. "


ಮೊನ್ನೆ ನಮ್ಮ ಗ್ರಾಹಕರೊಬ್ಬರನ್ನು, ನಮ್ಮ ವೃತ್ತಿ ರೀತಿಯಲ್ಲಿ ಹೇಳುವುದಾದರೆ ನಮ್ಮ ಕ್ಲೈಂಟ್ (client) , ತಿಂಗಳ ಜಿ ಎಸ್ ಟಿ ಪಾವತಿಸುವಂತೆ ಕರೆ ಮಾಡಿದೆ. ಪ್ರತೀ ತಿಂಗಳು ನಾನು ಹೇಳುವ ಮೊದಲೇ ಕೃತ್ಯ ನಿಷ್ಠೆಯಿಂದ ಪಾವತಿಸುತ್ತಿದ್ದರು. ಮಾತ್ರವಲ್ಲ ಅವರು ಅನ್ಯ ಧರ್ಮಿಯರು.   ಹಿಂದುವಲ್ಲದವರನ್ನು ಅನ್ಯಧರ್ಮಿಯರು ಅಂತ ನನ್ನ ವೈಯಕ್ತಿಕ ನೆಲೆಯಲ್ಲಿ ಕರೆಯಬೇಕು. ಆದರೆ ವಾಡಿಕೆಯಲ್ಲಿ ಹಾಗಿಲ್ಲ ಎಂಬುದು ಮತ್ತೊಂದು ಸಂಗತಿ.  ನಮ್ಮ ಹತ್ತಿಪ್ಪತ್ತು ವರ್ಷಗಳ ವ್ಯಾವಹಾರಿಕ ಸಂಭಂಧ. ಬಹುಶಃ ನಾನು ಬೆಂಗಳೂರಿಗೆ ಬಂದಂದಿನಿಂದ ಇವರು ನನ್ನ ಗ್ರಾಹಕರು. ನನ್ನಿಂದ ಹಲವಾರು ಸರಕಾರಿ ಸಂಬಂಧೀ ಕೆಲಸಗಳನ್ನು ಮಾಡಿಸುತ್ತಾರೆ. ಹಾಗಾಗಿ ಅವರ ಜಿಎಸ್ ಟಿ ಕೆಲಸವನ್ನು ನಾನೇ ಮಾಡುತ್ತಿದ್ದೇನೆ.   ಒಳ್ಳೆಯ ವ್ಯಕ್ತಿ. ಹಾಗಾಗಿಯೇ ಈ ದೀರ್ಘಕಾಲೀನ ವ್ಯವಹಾರ ಮುಂದುವರೆದಿದೆ. ಅವರೇ ಹೇಳುವಂತೆ ನನ್ನ ಮೇಲೆ ಅವರಿಗೆ ಅಪರಿಮಿತ ವಿಶ್ವಾಸವಿದೆ. ನನಗೆ ಕೊಡುವ ಸೇವಾ ಶುಲ್ಕದಲ್ಲಿ ಯಾವುದೇ ಚರ್ಚೆ ತಕರಾರು ಇಲ್ಲದೇ ಪಾವತಿಸುತ್ತಿದ್ದಾರೆ.   ಅವರದೊಂದು ಮಾಂಸಾಹಾರಿ ಹೋಟೆಲು.  ಮೊನ್ನೆ  ಕರೆ ಮಾಡಿದಾಗ ಹೇಳಿದರು, " ಸರ್,  ಹಬ್ಬಗಳ ಸರಣಿ...ಸಹಜವಾಗಿ ನಮಗೆ ವ್ಯಾಪಾರ ಬಹಳ ಕಡಿಮೆ ಇದೆ. ಅದನ್ನು ಹೇಗಾದರೂ ನಿಭಾಯಿಸಬಹುದು, ಆದರೆ ಈ ದೇಣಿಗೆಯ  ಹಾವಳಿ ತುಂಬಾ ಇದೆ ಸರ್, ಗಲ್ಲಿ ಗಲ್ಲಿಯಲ್ಲಿ ಗಣೇಶ ಕೂರಿಸುತ್ತಾರೆ, ದಸರ ದೀಪಾವಳಿ ಅಂತ ಮಾಡುತ್ತಾರೆ. ಬಂದು ಹಣ ಕೇಳುತ್ತಾರೆ. ನನ್ನ ಧರ್ಮ ಬೇರೆ, ಆದರೂ ನನಗೆ ಕೊಡಬಾರದು ಅಂತೇನಿಲ್ಲ. ದೇವರು ಹೇಗಿದ್ದರೂ ಅದು ದೇವರ ಕೆಲಸ ಅಂತ ಕೊಡಬಹುದು. ಆದರೆ, ಅವರು ಐದು ಸಾವಿರ ಹತ್ತು ಸಾವಿರ ಅಂತ ಕೇಳಿದರೆ ನಾನು ಹೇಗೆ ಕೊಡುವುದು.? ಮೊದಲೇ ವ್ಯಾಪಾರ ಕಡಿಮೆ. ನನ್ನ ಸಾಮಾರ್ಥ್ಯಕ್ಕೆ ಅನುಸಾರವಾಗಿ ಅಷ್ಟೋ ಇಷ್ಟೋ ಕೊಟ್ಟರೆ ಹೋಗಲಿ ಅನ್ನಬಹುದು ಆದರೆ ಇಷ್ಟೇ ಕೊಡಬೇಕು ಅಂತ ದೌರ್ಜನ್ಯ ಮಾಡಿದರೆ ಹೇಗೆ? ನೋಡಿ ಜಿಎಸ್ ಟಿ ಕಟ್ಟೋದಕ್ಕೆ ನಾನು ಸಾಲ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಇದೆ. " 

ಗಣೇಶ ಹಬ್ಬಕ್ಕೂ ಇಮಾಂ ಸಾಬಿಗೂ ಎತ್ತಣಿಂದ ಸಂಬಂಧ ಅಂತ ಹಳೆಯ ಮಾತು ಇದೆ. ಇದು ಅದೇ ತರಹ. ನಾವು ಧರ್ಮದಿಂದ ದೂಷಿಸಬಹುದು. ಆದರೆ ನಮ್ಮ ಧರ್ಮಾಚರಣೆಗೆ ಅನ್ಯ ಧರ್ಮೀಯರಿಂದ ದೇಣಿಗೆ ಸಂಗ್ರಹಿಸುವುದು ತಪ್ಪು.  ಹೋಗಲಿ ಕೇಳಿದರೂ..ಇಷ್ಟೇ ಕೊಡಬೇಕು ಎಂದು ದಬ್ಬಾಳಿಕೆ ಮಾಡುವುದು ಎಷ್ಟು ಸರಿಯಲ್ಲ.  ದೈವ ವಿಶ್ವಾಸ  ನಂಬಿಕೆ ಎಂಬುದು ತೀರ ವೈಯಕ್ತಿಕ ವಿಚಾರ. ಒಬ್ಬನನ್ನು ಅವನ ವೈಯಕ್ತಿಕ ವಿಚಾರವನ್ನು ಹೇಳಿ ಅವನನ್ನು ಅಪರಾಧಿಯನ್ನಾಗಿಯೋ ಅಥವಾ ದೂರೀಕರಿಸುವುದು ಸರಿಯಲ್ಲ. ಇದು ನನ್ನ ಅಭಿಮತ. ವ್ಯಕ್ತಿಗತ ವಿಚಾರಗಳು ಸ್ವಭಾವಗಳು ಪರ ಪೀಡನೆಯಾಗದೇ ಇದ್ದರೆ ಅವರನ್ನು ದೂರ ಮಾಡುವುದರಲ್ಲಿ ಅರ್ಥವಿಲ್ಲ. ವೈಯಕ್ತಿಕ ವಿಚಾರ ಭಿನ್ನತೆ ಹಲವು ಇರುತ್ತದೆ. ಒಂದು ಮರ ಹಣ್ಣೇ ಕೊಡುವುದಿಲ್ಲ ಎಂದು ಅದನ್ನು ಕಡಿಯುವುದು ಸರಿಯೇ? ಏನು ಮಾಡೋಣ ಇದು ಪ್ರಕೃತಿ. ನಾವೂ ಅದರ ಅಂಗ. ಒಬ್ಬ ಕಳ್ಲನೋ ಕಾಮುಕನೋ ಅದು ಆತನ ವ್ಯಕ್ತಿಗತವಾಗಿದ್ದರೂ ಅದು ಪರಪೀಡನೆಯಾಗುತ್ತದೆ. ಅಂಥವರನ್ನು ದೂರ ಮಾಡಬೇಕು ಸರಿ.  ಅದರೆ ಒಬ್ಬ ವೈಯಕ್ತಿಕವಾಗಿ ಹಲವು ದೌರ್ಬಲ್ಯಗಳನ್ನು ಅನುಭವಿಸಬಹುದು. ಆತನ ವಿಶ್ವಾಸಗಳು ನಂಬಿಕೆಗಳು ನಡವಳಿಕೆಗಳು ಬೇರೆಯೇ ಇರಬಹುದು. ಅದನ್ನು ಆಕ್ಷೇಪಿಸುವುದು ಸರಿಯಲ್ಲ.  ವೈಚಾರಿಕ ಭಿನ್ನತೇ ದ್ವೇಷಕ್ಕೆ ಕಾರಣವಾಗಬಾರದು. ದೇವರು ಧರ್ಮ ಏನೆಂದು ತಿಳಿಯದೇ ಅದಕ್ಕಾಗಿ ಹೋರಾಡುತ್ತಾರೆ.  ಆ ಅಜ್ಞಾನವೇ ದ್ವೇಷಕ್ಕೆ ಕಾರಣವಾಗುತ್ತದೆ.  ದೇವರನ್ನು ನಂಬಿದಷ್ಟು ಅದು ಏನೆಂಬುದನ್ನು ನಂಬುವುದಿಲ್ಲ. ದೇವರಿಗಿಂತಲೂ ನಮ್ಮ ಅಹಂಭಾವವೇ ಮುಖ್ಯವಾಗುತ್ತದೆ ಹೊರತು ದೇವರು ಧರ್ಮ ಮುಖ್ಯವಾಗುವುದಿಲ್ಲ. ಅಹಂಕಾರವನ್ನು ತ್ಯಜಿಸಿದಲ್ಲಿ ಮಾತ್ರವೇ ಭಗವಂತನನ್ನು ತಿಳಿಯುವುದಕ್ಕೆ ಸಾಧ್ಯವಾಗುತ್ತದೆ. ಭಗವದ್ಗೀತೆಯ ತತ್ವಮಸಿ ಎಂಬ ತತ್ವ ಅದು. ನಮ್ಮಲ್ಲಿರುವ ಉದಾತ್ತ ತತ್ವಗಳು  ಗ್ರಂಥದಿಂದ ಹೊರಗೆ ಬರುವುದಿಲ್ಲ.

ಇತ್ತೀಚೆಗೆ ನಮ್ಮ ಬೀದಿಯಲ್ಲಿ ಗಣೇಶನನ್ನು ಕೂರಿಸುವುದಕ್ಕೆ ದೇಣಿಗೆ ಸಂಗ್ರಹಕ್ಕೆ ಹುಡುಗರು ಬಂದಿದ್ದರು. ನಾನು ಹೇಳಿದೆ,  ಹೀಗೆ ರಸ್ತೆಯಲ್ಲಿ ದೇವರನ್ನು ಕೂರಿಸುವುದರಲ್ಲಿ ನನಗೆ ನಂಬಿಕೆ ಇಲ್ಲ. ನನ್ನನ್ನು ವಿಚಿತ್ರವಾಗಿ ನೋಡಿದರು. ಒಬ್ಬ ದೈವ ದ್ವೇಷಿಯಂತೆ ಕಂಡಿತು. ಧರ್ಮ ವಿರೋಧಿ ಅನ್ನಿಸಿದರೂ ಅನ್ನಿಸಿರಬಹುದು. ಮನೆಯಲ್ಲಿ ಎರಡು ಹೊತ್ತು ನೂರೆಂಟು ಗಾಯತ್ರೀ ಜಪ ಮಾಡುವವನು ನಾನು ಅದು ಅವರಿಗೆಲ್ಲಿ ಆರಿವಾಗಬೇಕು? ಅವರವರ ಚಿಂತನೆಯ ರೀತಿಯಲ್ಲಿ ನಂಬಿದರೆ ಮಾತ್ರ ಅವರು ದೈವ ಭಕ್ತರು ಎನಿಸಿಕೊಳ್ಳುತ್ತಾರೆ.  ಇಲ್ಲಿ ದೇವರನ್ನು ನಂಬುವುದು ಎಂದರೆ ಅದು ಪ್ರದರ್ಶನಕ್ಕೆ ಯೋಗ್ಯವಾಗಿರಬೇಕು. ಯಾರದರೂ ನಮ್ಮನ್ನು ಗಮನಿಸುತ್ತಾರೆ ಎಂದಿದ್ದರೆ, ನಮ್ಮದು ಒಂದೆರಡು ನಮಸ್ಕಾರ ಪ್ರದಕ್ಷಿಣೆ ಹೆಚ್ಚಿರುತ್ತದೆ. ನಮ್ಮ ದಾನ ಧರ್ಮಗಳು ದೊಡ್ಡದಾಗಿರುತ್ತದೆ. ಯಾರೋ ನೊಡುತ್ತಾರೆ ಎಂದು ನಾವು ನಮಸ್ಕಾರ ಮಾಡಿದರೆ, ಆ ನಮಸ್ಕಾರದ ಪುಣ್ಯ ಫಲ ಯಾರಿಗೆ ಸಲ್ಲಬೇಕು?  ಮಾಡುವವನಿಗೋ ನೋಡುವವನಿಗೋ? ಈ ಸೂಕ್ಷ್ಮ ಅರ್ಥವಾಗಬೇಕಾದರೆ ತಲೆಯಲ್ಲಿ ಬುದ್ದಿಯ ವಾಸವಿರಬೇಕು. 

ದೇವರ ಬಗ್ಗೆ ಹೇಳಿದರೆ ದೇವರು ಶಾಪ ಕೊಟ್ಟುಬಿಡುತ್ತಾನೆ ಎಂದು ಭಯ ಹುಟ್ಟಿಸಿಬಿಡುತ್ತಾರೆ. ಭಯದಿಂದ ದೇವರ ಭಕ್ತಿ ಪ್ರಚೋದನೆಗೊಂಡರೆ ಅದು ಭಕ್ತಿ ಹೇಗಾಗುತ್ತದೆ. ಭಯ ಎಂಬುದು ತಾತ್ಕಾಲಿಕ.  ಭಯ ಕರಗಿದಾಗ ನಂಬಿಕೆಯೂ ಕಳೆದು ಹೋಗಬಹುದು. ನಾವು ಯಾವುದೋ ಭ್ರಮೆಗೊಳಗಾಗಿ ಯಾವುದನ್ನೂ ಮಾಡಬರದು. ಭ್ರಮೆ ಕರಗಿದಾಗ ಆ ಕಾರ್ಯದ ಮಹತ್ವವೂ ಹೋಗಿಬಿಡುತ್ತದೆ.  ಉದಾಹರಣೆಗೆ ನಾಳೆ ರೋಗಬರುತ್ತದೆ ಸಾಯುತ್ತೇನೆ ಅಂತ ಭ್ರಮೆಯಲ್ಲಿ ಯೋಗಾಭ್ಯಾಸ ಮಾಡಬಾರದು.  ಯೋಗಾಭ್ಯಾಸ ಅದು ಭ್ರಮಾತ್ಮಕ ಕ್ರಿಯೆಯಲ್ಲ. ಅದು ದೇಹದ ಹಸಿವನ್ನು ನೀಗಿಸುವಂತೆ ಜೀವನದ ಸಹಜ ಕ್ರಿಯೆಯಾಗಬೇಕು. ಹಾಗಾಗಿ ಅದನ್ನು ಸಹಜಯೋಗ ಎನ್ನುವುದು. ಬದುಕಿನ ಪ್ರತಿಯೊಂದು ಕರ್ಮವೂ ಭ್ರಮೆಯಿಂದ ಮಾಡಬಾರದು. 

ದೇವರು ಎಂಬುದು ಒಂದು ದಿವ್ಯ ಅನುಭವ. ಆ ದೇವರು ಎಲ್ಲೂ ಕಾಣುವುದಿಲ್ಲ. ನಾವು ಕಾಣಬೇಕು. ವಿವೇಕಾನಂದರು ಹೇಳಿದ್ದಾರೆ, ದೇವರು ಎಲ್ಲೂ ವ್ಯಕ್ತವಾಗುವುದಿಲ್ಲ. ನಾವು ಈ ಪ್ರಕೃತಿಯನ್ನು ಸೇವಿಸುವುದರಲ್ಲಿ ಎಲ್ಲರ ಸೇವೆ ಮಾಡುವುದರಲ್ಲಿ ಭಗವಂತನಿದ್ದಾನೆ. ಪ್ರತಿಯೊಬ್ಬರಲ್ಲು ಆತ್ಮ ರೂಪದಲ್ಲಿ ದೇವರು ಇರುತ್ತಾನೆ. ಆತನ ಸೇವೆ ಮಾಡುವುದೆಂದರೆ ದೇವರ ಸೇವೆ ಮಾಡಿದಂತೆ. ಇಂತಹ ಉದಾತ್ತ ತತ್ವಗಳನ್ನು ಪ್ರತಿಪಾದಿಸುವ ನಮ್ಮ ಧರ್ಮದಲ್ಲಿ ಹೀಗೆ ನಮ್ಮ ಆಚರಣೆಗೆ ಪರಧರ್ಮೀಯರನ್ನು ಪೀಡಿಸುವುದೆಂದರೆ ಅದು ಅಕ್ಷಮ್ಯ.  ಅಹಂ ಬ್ರಹ್ಮಾಸ್ಮಿ ಅಂತ ಶಂಕರಾಚಾರ್ಯರು ಬೋಧಿಸಿದರೂ ಎಲ್ಲರಲ್ಲು ಬಹ್ಮನ ಅಸ್ತಿತ್ವವನ್ನು ಕಾಣದೇ ಶಂಕರಾಚಾರ್ಯರನ್ನು ಗುರು ಅಂತ ಪೂಜಿಸುವುದರಲ್ಲಿ ಅರ್ಥವಿಲ್ಲ. ನಮ್ಮಲ್ಲೋಂದು ಭಾವವಿದೆ, ಯಾರಿಗೋ ವಂಚನೆ ಮಾಡಿದ್ದು, ಅಥವಾ ಕಸಿದು ಕಿತ್ತು ಪಡೆದ ಅಪರಾಧಗಳ  ಪ್ರಾಯಶ್ಚಿತ್ತ ಅದನ್ನು ದೇವರಿಗೆ ಅರ್ಪಿಸಿವುದರಲ್ಲಿದೆ. ಹೇಗೋ ಅನ್ಯಾಯದಿಂದ ಸಂಪತ್ತನ್ನು ಸಂಪಾದಿಸಿ ದೇವರ ಹುಂಡಿಗೆ ಹಾಕಿದರೆ ನಾವು ಪಾಪದಿಂದ ಮುಕ್ತರಾಗುತ್ತೇವೆ. ಆದರೆ ದೇವರಿಗೆ ಅರ್ಪಿಸುವುದು ಪವಿತ್ರವಾಗಿರಬೇಕಾದರೆ ಅದು ಯಾರನ್ನೂ ಹಿಂಸಿಸದೆ, ಸತ್ಯ ನ್ಯಾಯದಿಂದ ಸಂಪಾದಿಸಿರಬೇಕು. ಈ ಪರಿಜ್ಜಾನ ಮೂಡುವ ತನಕ ಎಷ್ಟು ದೊಡ್ಡ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿದರೂ ಮೂರ್ತಿಯ ಗಾತ್ರದಷ್ಟೇ ನಮ್ಮ ಪಾಪವೂ ಬೆಳೆಯಬಹುದೇ ಹೊರತು ಪುಣ್ಯ ಸಂಚಯನ ಸಾಧ್ಯವಿಲ್ಲ. 


Thursday, October 16, 2025

ನಮಗೊಂದೇ ಭಾಷೆ

  ಸಂಸ್ಕೃತ ಭಾಷೆ ಬ್ರಾಹ್ಮಣ ಭಾಷೆ ಅಂತ ಒಂದು ಯಾರೋ ಪುಣ್ಯಾತ್ಮನೊಬ್ಬ ಬರೆದಿರುವುದನ್ನು ಓದಿದೆ. ಬಹುಶಃ ವೈದಿಕ ಪೂಜಾವಿಧಾನಗಳಲ್ಲಿ ಇದರ ಬಳಕೆ ಹೆಚ್ಚು ಇರುವುದರಿಂದ ಮತ್ತು ಯಾರಿಗೂ ಸುಲಭದಲ್ಲೇ ಅರ್ಥವಾಗದೇ ಇರುವುದರಿಂದ ಒಂದು ರೀತಿಯ ಮತ್ಸರದಲ್ಲಿ ಹೀಗೆ ಅಪಾದಿಸುವುದುಂಟು. ಏನಿದ್ದರೂ ಬ್ರಾಹ್ಮಣರನ್ನು ದೂಷಿಸಿದರೆ ಯಾವ ಪರಿಣಾಮವೂ ಇರುವುದಿಲ್ಲ ಎಂಬ ನಿರ್ಭಯತ್ವದ ಭಾವ ಇದೆ.  ಕನ್ನಡದ ಬಗ್ಗೆ ಅಭಿಮಾನದಲ್ಲಿ ಹೀಗೆ ಹೇಳಿದರೆ ಆ ಅಭಿಮಾನ ತಪ್ಪು ಎನ್ನುವ ಹಾಗಿಲ್ಲ. ಆದರೆ ವಿವೇಚನೆಯಿಂದ ಕಂಡರೆ ಇದರ ಮಿಥ್ಯಾಂಶ ಅರಿವಿಗೆ ಬರುತ್ತದೆ. ಕನ್ನಡ ಶಬ್ದ ಕೋಶದಲ್ಲಿ ಅಥವಾ ನಾವು ಆಡುವ ಕನ್ನಡ ಭಾಷೆಯಲ್ಲಿ  ಸಂಸ್ಕೃತ ಶಬ್ದಗಳನ್ನು ತೆಗೆದು ಹಾಕಿದರೆ ಅಲ್ಲಿ ಎಷ್ಟು ಕನ್ನಡ ಶಬ್ದಗಳು ಉಳಿಯಬಹುದು ಅಂತ ನೋಡಿದರೆ ಕೆಲವೇ ಕೆಲವು ಉಳಿಯಬಹುದು. ಇದು ಕನ್ನಡ ಸಂಸ್ಕೃತ ವಿದ್ವಾಂಸರಒಬ್ಬರು ಹೇಳಿದ ಮಾತು. ಹಾಗಿದ್ದರೆ ಕೇವಲ ಸಂಸ್ಕೃತದ ದ್ವೇಷ ಮಾತ್ರ ಇಲ್ಲಿ ಕಾಣಬಹುದು. ನಮ್ಮ ಭಾಷೆ ಉಳಿಯಬೇಕಾದರೆ ಮತ್ತೊಂದು ಭಾಷೆಯನ್ನು ನಾಶ ಮಾಡಿ ಉಳಿಸಬಹುದು ಎಂದು ತಿಳಿದರೆ ಅದು ಮೂರ್ಖತನವಾದೀತು. ಭಾಷೆ ಉಳಿಯಬೇಕಿದ್ದರೆ ಅದನ್ನು ಪರಿಶುದ್ದವಾದ ಉಪಯೋಗದಲ್ಲಿ ಉಳಿಸುವ ಪ್ರಯತ್ನ ಮಾಡಬೇಕು. ತಮಿಳು ನಾಡಿನಲ್ಲಿ ಹಿಂದಿ ಭಾಷೆ ನಿಷೇಧ ಮಾಡುವ ಸಮಾಚಾರ ಕೇಳಿಬಂತು. ಇದು ಕೂಡ ಇದೇ ಮಾದರಿಯಾಗಿರುತ್ತದೆ. ಯಾರೋ ಭಾಷೆಯನ್ನು ಮಾತನಾಡುವ ವ್ಯಕ್ತಿಗಳು ಮಾಡಿದ್ದಕ್ಕೆ ಭಾಷೆಯನ್ನು ದ್ವೇಷಿಸುವುದಾದರೆ ಸ್ವತಃ ತಮಿಳು ಕೂಡ ದ್ವೇಷಕ್ಕೆ ಕಾರಣವಾಗಬಹುದು. 

ಬಳಕೆಯಲ್ಲಿ ಭಾಷೆ ಉಳಿಯಬೇಕು. ಆದರೆ ಇದೇ ಮಾತನ್ನು ಬೆಂಗಳೂರಿನ ಕನ್ನಡಕ್ಕೆ ಹೋಲಿಸಿದರೆ ವಿಚಿತ್ರವೆನಿಸುತ್ತದೆ. ಇಲ್ಲಿಯ ಭಾಷೆಯ ಬಳಕೆ ಹೇಗಿರುತ್ತದೆ ಎಂದರೆ " ನನಗೆ ಮನೆಯಲ್ಲಿ ಕುಕ್ಕಿಂಗ್ ಗೆ ಸಾಮಾನು ಮುಗಿದಿತ್ತು, ಹಾಗೆ ಬ್ಯಾಗ್ ಹಿಡಿದು ಮಾರ್ಕೆಟ್ ಗೆ ಹೋದೆ. ವೆಜಿಟೇಬಲ್ ಪರ್ಚೇಸ್ ಮಾಡಿದೆ. ಗ್ರೋಸರಿ ಪರ್ಚೇಸ್ ಮಾಡಿದೆ." ಹೀಗೆ ಇರುತ್ತದೆ. ಕೇವಲ ಕ್ರಿಯಾ ಪದಕ್ಕೆ ಮಾತ್ರ ಕನ್ನಡ ಸೀಮಿತವಾಗುತ್ತದೆ. ದಿನಸಿ ತರಕಾರಿ ಕೊಂಡುಕೊಂಡೆ ಅಂತ ಹೇಳದೆ ಆಡಿದ ಮಾತಿನಲ್ಲಿ ಕನ್ನಡವಲ್ಲದ ಯಾವೂದೋ  ಪಿರಂಗಿ ಭಾಷೆ ಉಪಯೋಗಿಸುವುದಕ್ಕೆ ಸಾಧ್ಯವಿದ್ದರೆ, ನಮ್ಮ ಭಾರತದದ ಹಿಂದಿ ಯಾಕೆ ಬೇಡವಾಗುತ್ತದೆ?  ಅಲ್ಲಿನ ವ್ಯಕ್ತಿಗಳು ಕಾರಣವೆ?  ಹಾಗೆ ವ್ಯಕ್ತಿಗಳನ್ನು ದ್ವೇಷಿಸುವುದಿದ್ದರೆ ಹಿಂದಿ ಮಾತನಾಡುವ ಮಂದಿಗಿಂತಲೂ ,  ಮೂರು ಶತಮಾನ ನಮ್ಮ ಸ್ವಾತಂತ್ರ್ಯವನ್ನು ಕಸಿದು ಗು್ಲಾಮರನ್ನಾಗಿ ಮಾಡಿದ ಇಂಗ್ಲೀಷರನ್ನು  ದ್ವೇಷಿಸುವುದರಲ್ಲಿ ಹೆಚ್ಚು ಅರ್ಥವಿದೆ.  ಇನ್ನು ಸಂಸ್ಕೃತದ ದ್ವೇಷವೂ ಅದೇ ರೀತಿ. ಯಾವುದೋ ಕಾಲದಲ್ಲಿ ಹೇಗೋ ಇತ್ತು ಎನ್ನುವುದಕ್ಕೆ ಈಗಿನ ಬ್ರಾಹ್ಮಣರನ್ನು ದ್ವೇಷಿಸಬೇಕು ಎನ್ನುವ ಕಾರಣದಿಂದ  ಸಂಸ್ಕೃತವೂ...ದ್ವೇಷಕ್ಕೆ ಕಾರಣವಾಗುತ್ತದೆ. ಹಾಗೆ ನೋಡಿದರೆ... ಬುದ್ದ ಮತ್ತು ಜೈನರು ಸಂಸ್ಕೃತವನ್ನು ಹೆಚ್ಚು ಬಳಕೆ ಮಾಡಿರುತ್ತಾರೆ. ಹಾಗಾಗಿ ಜೈನರನ್ನು ಬುದ್ದರನ್ನು ದ್ವೇಷಿಸಿದರೆ ನಮ್ಮ ದೇಶವನ್ನು ನಾವು ಅಭಿಮಾನ ಪ್ರೀತಿಯಿಂದ ಕಂಡಂತಾಗುವುದಿಲ್ಲ.  

ನಿಜಕ್ಕಾದರೆ ಭಾಷೆಯನ್ನು ದ್ವೇಷಿಸುವುದಲ್ಲ. ಯಾವುದೋ ಭಾಷೆ ಉಪಯೋಗ ಶೂನ್ಯವಾಗಬೇಕಾದರೆ ಮೊದಲು ನಮ್ಮ ಭಾಷೆಯನ್ನು ಪರಿಶುದ್ದಿಗೊಳಿಸಬೇಕು. ಅದನ್ನೇ ಶುಭ್ರವಾಗಿ ಬಳಸಬೇಕು. ನಮ್ಮಲ್ಲಿರುವ ಕೆಟ್ಟಗುಣವನ್ನು ಕಳೆಯಬೇಕಾದರೆ ಉಳಿದ ವ್ಯಕ್ತಿಗಳನ್ನು ನಾವು ದ್ವೇಷಿಸಿ ದೂರ ಮಾಡುವುದರಲ್ಲಿ ನಮ್ಮ ಕೆಟ್ಟಗುಣ ಬದಲಾಗಲು ಸಾಧ್ಯವಿಲ್ಲ. ನಾನು ಬ್ಯಾಗ್ ಹಿಡಿದುಕೊಂಡು ಶಾಪಿಂಗ್ ಗೆ ಹೋದೆ ಅಂತ ಹೇಳುವಾಗ ಶುದ್ಧವಾದ ಕನ್ನಡಕ್ಕೆ ಯಾವ ನ್ಯಾಯ ಸಲ್ಲುತ್ತದೆ.? 

ಇತ್ತೀಚೆಗೆ ನನ್ನ ಮಗನ ಸಹಪಾಠಿಯೊಬ್ಬ ನನ್ನ ಲೇಖನಗಳನ್ನು ಓದಿ , ಆತ ಅಭಿಪ್ರಾಯ ಹೇಳಿದ. " ಸಾರ್, ನಿಮ್ಮ ಲೇಖನ ಚೆನ್ನಾಗಿದೆ. ಆದರೆ ಆ ಶಬ್ದಗಳು ನಿಮಗೆ ಎಲ್ಲಿ ಸಿಗ್ಗುತ್ತದೆ ? ಅರ್ಥ ಮಾಡಿಕೊಳ್ಳುವುದು ತುಂಬ ಕಷ್ಟ ವಾಗುತ್ತದೆ. " ನಾನೇನು ಕನ್ನಡ ವಿದ್ವಾಂಸನೇನೂ ಅಲ್ಲ. ನನಗೆ ತಿಳಿದ ಸೀಮಿತ ಜ್ಞಾನದಲ್ಲೇ ಬರೆದ ಕನ್ನಡವನ್ನು ಅರ್ಥವಿಸುವುದಕ್ಕೆ ಕಷ್ಟವಾಗುತ್ತದೆ ಎಂದಾದರೆ ಕನ್ನಡ ಕನ್ನಡವಾಗಿ ಉಳಿದಿದೆ ಎನ್ನುವುದಕ್ಕೆ ಯಾವ ಆಧಾರವಿದೆ? ನಮ್ಮ ಭಾಷೆ ಉಳಿಯಬೇಕು. ಅದು ಇನ್ನೊಂದು ಭಾಷೆಯ ನಾಶದಲ್ಲಿ ನಮ್ಮ ಭಾಷೆ ಉಸಿರಾಡಬಾರದು. ಅಥವಾ ಉಳಿದ ಭಾಷೆ ನಿರ್ನಾಮವಾದರೆ ನಮ್ಮ ಭಾಷೆ ಉಳಿಯುತ್ತದೆ ಎಂದು ಭಾವಿಸಿದರೆ ಅದು ಅರಣ್ಯದ ನ್ಯಾಯವಾಗುತ್ತದೆ. ಒಂದು ಗಿಡ ಬೆಳೆಯಬೇಕಾದರೆ ಸುತ್ತಮುತ್ತಲಿನ ಹಲವು ಗಿಡವನ್ನು ನಾಶ ಮಾಡಬೇಕು.  ಇದು ಕಾಡಿನ ನ್ಯಾಯ.  ಬೀದಿಯಲ್ಲಿದ್ದ ಎರಡು ಅಂಗಡಿಯಲ್ಲಿ ,ಮತ್ತೊಂದು  ಅಂಗಡಿ ಮುಚ್ಚಿದರೆ ತನ್ನ ಅಂಗಡಿಗೆ ಹೆಚ್ಚು ವ್ಯಾಪಾರವಾಗುತ್ತದೆ ಎಂದು ಬಯಸಿದರೆ ಅದು ಸಾಧುವಾಗಲಾರದು. ಬದಲಿಗೆ ನಮ್ಮ ಅಂಗಡಿಯಲ್ಲಿ ಜನೋಪಯೋಗಿಯಾಗುವಂತೆ ಪ್ರಾಮಾಣಿಕವಾಗಿ ವ್ಯಾಪಾರ ಮಾಡಬೇಕು. ಹೊರತು ಮತ್ತೊಂದು ಅಂಗಡಿ ಮುಚ್ಚಿಸುವುದಲ್ಲ. ಮತ್ತೊಬ್ಬನನ್ನು ಅರೆ ಹೊಟ್ಟೆ ಮಾಡಿ ನಾವು ಹೊಟ್ಟೆ ತುಂಬಿಸಿಕೊಂಡರೆ ಅದು ನ್ಯಾಯವಾಗುವುದಿಲ್ಲ. ಜಗಳ ಮಾಡಿ ಪರಸ್ಪರ ಬೈದಾಡಿಕೊಂಡು ಗೆಲ್ಲುವುದಕ್ಕೆ ಹೊರಟೆರೆ ಆ ಬೈಗುಳಗಳಲ್ಲಿ ಕೆಟ್ಟಭಾಷೆಯೇ ಬಳಕೆಯಾಗುತ್ತದೆ. ಅದು ಸುಸಂಸ್ಕೃತ ಭಾಷೆಯಾಗುವುದಿಲ್ಲ. 


ಈ ದ್ವೇಷ ಎಂಬುದು ಕೇವಲ ಭಾಷೆಗೆ ಮಾತ್ರ ಸೀಮಿತವಾಗಿಲ್ಲ. ನಾವು ಬೆಳೆಯುವುದಕ್ಕೆ ಪ್ರಕೃತಿಯನ್ನು ನಾಶ ಮಾಡುತ್ತೇವೆ. ನಮ್ಮ ಧರ್ಮ ಉಳಿಸುವುದಕ್ಕೆ ಮತ್ತೊಂದು ಧರ್ಮವನ್ನು ದ್ವೇಷಿಸಿ ನಾಶ ಮಾಡುತ್ತೇವೆ. ಇತ್ತೀಚೆಗೆ ಒಬ್ಬರು ಮುಸ್ಲಿಂ ವ್ಯಕ್ತಿ ನನ್ನ ಬಳಿಗೆ ಬಂದಿದ್ದರು. ಅವರ ತೆರಿಗೆಗೆ ಮತ್ತು ಸರಕಾರಿ ಕೆಲಸಕ್ಕೆ ಸಂಭಂಧಿಸಿದ ಹಲವು ಕೆಲಸಗಳನ್ನು ನಾನೇ ಮಾಡಿಕೊಡುತ್ತೇನೆ. ನನ್ನ ಮೇಲೆ ಅದು ಯಾಕೋ ಅವರಿಗೆ ಅತೀವ ವಿಶ್ವಾಸ. ಒಂದು ಸಲ ಬಂದವರು ಹೇಳಿದರು, "ದೇವರನ್ನು ಭಕ್ತಿಯಿಂದ ನಂಬುವವರು ಮೋಸ ಮಾಡುವುದಿಲ್ಲ.  ನಿಮ್ಮಲ್ಲಿ ನನಗೆ ತುಂಬ ವಿಶ್ವಾಸ  ಇದೆ. " ಅವರು ದೇವರು ಅಂತ ಹೇಳಿದ ದೇವರು ಅದು ಒಬ್ಬನೇ.  ಅವರ ದೇವರು  ನನ್ನ ದೇವರು ಎಂಬ ಭೇದವಿಲ್ಲ.  ಇಲ್ಲಿ ನಂಬಿಕೆಯ ವಿಧ ಮಾತ್ರ ವೆತ್ಯಾಸ. ಮತ್ತೊಂದು ಧರ್ಮವನ್ನು ನಾಶ ಮಾಡಿ ನಮ್ಮ ಧರ್ಮವನ್ನು ಉಳಿಸುತ್ತೇವೆ ಎಂದು ತಿಳಿದರೆ ಅಲ್ಲಿ ದ್ವೇಷ ಮಾತ್ರ ಇರುತ್ತದೆ. ಎಲ್ಲಿ ದ್ವೇಷದ ಕಲ್ಮಶ ವಿರುತ್ತದೋ ಅಲ್ಲಿ ಪರಿಶುದ್ದತೆ ಇರುವುದಕ್ಕೆ ಸಾಧ್ಯವಿಲ್ಲ. ದೇವರ ಅಸ್ತಿತ್ವವೂ ಇರುವುದಿಲ್ಲ.  


ಪ್ರಾಣಿಗಳಲ್ಲಿ ಮನುಷ್ಯನಿಗೆ ಇರುವ ಮುಖ್ಯ ಪ್ರತ್ಯೇಕ ವೈಶಿಷ್ಟ್ಯವೆಂದರೆ ಮಾತಾಡುವ ಅರ್ಹತೆ. ಅದಕ್ಕೆ ಮುಖ್ಯ ಉಪಾಧಿ ಎಂದರೆ ಅದು ಭಾಷೆ. ಈ ಭಾಷೆ ದ್ವೇಷಕ್ಕೆ ಕಾರಣವಾಗುವುದಾದರೆ, ಆ ಅರ್ಹತೆಯನ್ನು ಕಲ್ಪಿಸಿದ ಭಗವಂತನ ಕಾರುಣ್ಯವನ್ನು ದೂಷಿಸಿದಂತೆ. ಈ ಅರ್ಹತೆಗೆ ನಾವು ಯೋಗ್ಯರಾಗಿರುವುದಿಲ್ಲ. ಮನುಷ್ಯನ ಜೀವನದ ಮೂಲ ಭೂತ ಆಧಾರವಾಗಿ ಭಗವಂತನನ್ನು ಕಾಣುವ ಓಂ ಕಾರ ಭಾಷೆ ಯಾವುದು? ಹೋಗಲಿ ಭಾಷಾಭಿಮಾನದ ಅತಿರೇಕದಲ್ಲಿ , ಗಣೇಶನನ್ನು ಕೂರಿಸಿ ಹೇಳುವ  "ಗಣಪತಿ ಬಪ್ಪ ಮೋರೆಯಾ "  ದ ಭಾಷೆ ಯಾವುದು?  ಇವುಗಳೆಲ್ಲ ನಮ್ಮ ದ್ವಂದ್ವ ನಿಲುವಿನ ಅಪಸವ್ಯಗಳು. ಸಸ್ಯಾಹಾರಿ ಮಾಂಸ ಬೇಡ ರಸ ಮತ್ರ ಆದೀತು ಅಂತ ಹೇಳುವ ನ್ಯಾಯ. ಯಾವುದೋ ಭಾಷೆಯ ಬಗ್ಗೆ ದ್ವೇಷದಲ್ಲಿ ವಿಮರ್ಶಿಸುವಾಗ ಮೊದಲು ನಮ್ಮ ಮಾತುಗಳನ್ನು ನಾವು ಪರಿಶುದ್ದಿಗೊಳಿಸಬೇಕು. ಇಷ್ಟಕ್ಕೂ ನಮಗೆ ಕೇವಲ ಮಾತನಾಡುವ ಅರ್ಹತೆ ಇದೆ, ಆದರೆ ಇದನ್ನು ಕಳೆದುಕೊಂಡ ಮೂಗನಿಗೆ ಯಾವ ಭಾಷೆ ...ಆತ ಕನ್ನಡದಲ್ಲೂ , ಅತ್ತ ತಮಿಳುನಾಡಿನಲ್ಲೂ ಆತನ ಭಾಷೆ ಒಂದೇ ಆಗಿರುತ್ತದೆ. ಮನಸ್ಸಿನಲ್ಲಿ ಕನ್ನಡವೋ ತಮಿಳೋ ಇರಬಹುದು..ಆದರೆ ಅದು ವ್ಯಕ್ತವಾಗುವುದು ಅರ್ಥವಾಗುವುದು ಎದುರು ಕೇಳುವವನ ಭಾಷೆಯನ್ನು ಅನುಸರಿಸಿರುತ್ತದೆ. ಅಲ್ಲಿ ಭಾಷಾಭೇದವೇ ಇರುವುದಿಲ್ಲ. ಭಾಷೆಯಿಂದ ನಾವು ವಿಶಾಲವಾಗಬೇಕು. ನಮ್ಮ ಜ್ಞಾನ ವೃದ್ದಿಗೆ ಅದು ಉಪಯೋಗಿಸಲ್ಪಡಬೇಕು. ಇಲ್ಲವಾದರೆ ನಾವು ನಮ್ಮ ಭಾಷೆಯಲ್ಲಿರುವುದನ್ನು ಮಾತ್ರವೇ ತಿಳಿಯುವುದಕ್ಕೆ ಸಾಧ್ಯವಾಗುತ್ತದೆ. ಒಂದು ರೀತಿಯ ಬಾವಿಯೊಳಗಿನ ಮಂಡೂಕದ ಬದು. ನಮ್ಮ ಮಂಗಳೂರಿಗೆ ಹೋದರೆ ಇದನ್ನು ತಿಳಿಯುವುದಕ್ಕೆ ಸಾಧ್ಯವಾಗುತ್ತದೆ. ಹಲವು ಭಾಷೆಗೆ ಸಹಕಾರಿಯಾಗಿ ಇಲ್ಲಿ ತುಳು ಭಾಷೆ ನೆಲದ ಭಾಷೆ. ಅದರಲ್ಲಿ ಕನ್ನಡವೂ ಇದೆ ಹಿಂದಿ ಕೊಂಕಣಿ ಇಂಗ್ಲೀಷ್ ಎಲ್ಲ ಇದ್ದರೂ ತುಳು ತನ್ನ ಸ್ವಂತಿಕೆಯನ್ನು ಬಿಟ್ಟಿಲ್ಲ. ಅದನ್ನೇ ಮಾತನಾಡಬೇಕು ಎಂದು ಅಲ್ಲಿ ದೌರ್ಜನ್ಯ ಮಾಡುವುದಿಲ್ಲ. ಜನ ನಮ್ಮದೇ ಭಾಷೆ ಅಂತ ಅಭಿಮಾನದಲ್ಲೇ ಮಾತನಾಡುತ್ತಾರೆ. ಅದು ತಿಳಿಯದವರಲ್ಲಿ ಹೃದಯದ ಆತ್ಮೀಯತೆ ಇರುವುದಿಲ್ಲ.  ಅಲ್ಲಿಯ ಸ್ನೇಹ ಆದರ ಬೇಕಾದರೆ ಯಾವುದೇ ಬಲವಂತ ವಿಲ್ಲದೇ ಆ ಭಾಷೆಯನ್ನು ಕಲಿತು ಅಲ್ಲಿನವರಾಗಿದ್ದರೆ ನಿಮಗೆ ಅರಿಯದೆ ಅಲ್ಲಿನವರ ಹೃದಯದಲ್ಲಿ ಸ್ಥಾನ ಪಡೆಯಬಹುದು. ಹೀಗೆ ಭಾಷೆ ಎಂಬುದು ಸ್ನೇಹಕ್ಕೆ ಕಾರಣವಾಗಬೇಕು.  ಎಷ್ಟು ಭಾಷೆ ಇದ್ದರೂ ನಮಗೊಂದೇ ಭಾಷೆ ಇರಬೇಕು. ಅದು ಮನುಷ್ಯತ್ವದಿಂದ ಕೂಡಿರಬೇಕು. 

                           


Monday, October 6, 2025

ಅಮ್ಮನ ಮಡಿಲೂ, ರಾಮನ ಅಳಿಲೂ,

 



ಅಮ್ಮ....ಮಕಾರದ ರೂಪಾಂತರದ ಎರಡಕ್ಷರದ ಶಬ್ದ. ಓಂಕಾರದ ಅಂತ್ಯದ ಮಕಾರಕ್ಕೂ ಅಮ್ಮದ ಮಕಾರಕ್ಕೂ ಪರಬ್ರಹ್ಮ ಸ್ವರೂಪದ ಸಾಮ್ಯತೆ ಇದೆ.  ಎರಡರಲ್ಲೂ ಎಲ್ಲಾ ಜೀವಜಾಲಕ್ಕೂ ಒಂದು ದಿವ್ಯವಾದ ಸಂಬಂಧವಿದೆ. ಈ ಸಂಬಂಧವಿಲ್ಲದ ಜೀವಿಗಳು ಭೂಮಿಯಲ್ಲಿ ಇರುವುದು ಸಾಧ್ಯವಿಲ್ಲ. ಅಮ್ಮನಂತಹ ಸ್ಥಾನ ಎಲ್ಲ ಜೀವಜಾಲದ ಮೂಲ ಪ್ರೇರಣೆ. ಇದನ್ನೇ ಮಾತೃ ಸಂಭಂಧ. ಇದುವೇ ಮೂಲ ಸಂಬಂಧ.  ಯಾವ ಜೀವದಲ್ಲಿ  ನೋಡಿದರೂ ಅಲ್ಲೊಂದು ಪ್ರೀತಿ ಪ್ರೇಮಕ್ಕಿಂತ ಅತೀತವಾಗಿ ಭಾವನಾತ್ಮಕ ಸಂಬಂಧವಿದೆ. ಅಮ್ಮನ ಶಿಕ್ಷೆ ರಕ್ಷೆಗೆ ಸಮನಾದ ಒಂದು ಭಾವಕ್ಕೆ ಆ ಕ್ರಿಯೆಗೆ ಸಮ ತೂಗಿಸಬಲ್ಲ   ಭಾವನೆ ಮತ್ತೊಂದು ಇರುವುದಕ್ಕೆ ಸಾಧ್ಯವಿಲ್ಲ.  ಹೆತ್ತ ಅಮ್ಮ ಮುದ್ದಿಸಿದಷ್ಟೇ ಸಲೀಸಾಗಿ ಹೊಡೆದು ಶಿಕ್ಷಿಸಬಲ್ಲಳು.  ಶಿಕ್ಷೆಕೊಟ್ಟರೂ ಅಲ್ಲಿ ದ್ವೇಷವಿಲ್ಲ. ಆ ಶಿಕ್ಷೆಯ ಮತ್ತೊಂದು ಪಕ್ಕದಲ್ಲಿ ರಕ್ಷೆಯೂ ಇರುತ್ತದೆ.   ಅಂ ಎನ್ನುವ ಅಂಕಾರವೇ ಆ ರೀತಿಯಲ್ಲಿರುತ್ತದೆ. ಅದನ್ನೆ ಮಮಕಾರ ಎನ್ನುವುದು. ಬಹುಶಃ ಯವುದೇ ಪ್ರಾಣಿಯೂ ಈ ಮಮಕಾರದ ಪರಿಧಿಯಿಂದ ಆಚೆಗೆ ಇರುವುದಕ್ಕೆ ಸಾಧ್ಯವಿಲ್ಲ. ಮಮ ಎಂದರೆ ನನ್ನದು ಎಂದರ್ಥ. ಹಾಗಾಗಿ ಅಮ್ಮನ ಪ್ರೀತಿಗೆ ಮತ್ತೂಂದು ಅನ್ವರ್ಥವೇ ಮಮಕಾರ. ಅಲ್ಲಿ ಇರುವ ನನ್ನದು ಎಂಬ ಪರಿಪೂರ್ಣ ಭಾವನೆ, ಆಕೆಯಲ್ಲಿರುವ ನನ್ನ ಕಂದ ನನ್ನ ದೇಹದ ಭಾಗ ಎಂಬ ಭಾವ ಬೇರೆ ಎಲ್ಲೂ ಕಾಣುವುದಕ್ಕೆ ಸಾಧ್ಯವಿಲ್ಲ. ಮನುಷ್ಯ ಬದುಕು ಕಟ್ಟಿಕೊಳ್ಳುವುದು ಈ ಮಮಕಾರವೆಂಬ ಸ್ವಾರ್ಥವಲ್ಲದ ನನ್ನದು ಎಂಬ ಭಾವನೆಯ ನೆರಳಲ್ಲಿ. ಬಹುಶಃ ಅಮ್ಮನ ಈ ’ನನ್ನದು’  ಎಂಬ ಭಾವನೆಯ ಪ್ರೇರಣೆ ಇಲ್ಲ ಎಂದು ಇರುತ್ತಿದ್ದರೆ ಈ ಜೀವಜಾಲದ ಪೋಷಣೆ ರಕ್ಷಣೆ ಸಾಧ್ಯವಿರುತಿರಲಿಲ್ಲ. ಅದು ಅಮ್ಮನ ನಿಸ್ವಾರ್ಥದ ಮಮಕಾರ. ಅಮ್ಮನ ಅಕ್ಕರೆಯ ಪ್ರೀತಿಯಲ್ಲಿ ಯಾವ ಸ್ವಾರ್ಥವೂ ಇರುವುದಿಲ್ಲ. ಸ್ವಾರ್ಥವಿದ್ದರೆ ಅದು ಅಮ್ಮನ ಪ್ರೀತಿ ಎಂದೆನಿಸುವುದೇ  ಇಲ್ಲ. ಜಗತ್ತಿನಲ್ಲಿ ಎಲ್ಲಾ ಪ್ರೀತಿಯಲ್ಲಿ ಸೂಕ್ಷ್ಮವಾಗಿಯಾದರೂ ಒಂದು ಸ್ವಾರ್ಥ ವಿರುತ್ತದೆ. ಆದರೆ ಅಮ್ಮನ ಪ್ರೀತಿಯಲ್ಲಿ...ಮಮಕಾರ ಬಿಟ್ಟು ಬೇರೆ ಸ್ವಾರ್ಥವಿರುವುದಕ್ಕೆ ಸಾಧ್ಯವಿಲ್ಲ. ಕಾರಣ.. ಇಷ್ಟೆ ತನ್ನ ದೇಹದ ಭಾಗದ ನೇರ ಸಂಭಂಧ ಅಮ್ಮನಿಗೆ  ಆ ಮಗುವಿನೊಂದಿಗೆ ಇರುತ್ತದೆ. 


        ವರ್ಷ ಋತುವಿನ ಬಿಡದ ಮಳೆ ಕಳೆದು ಶರದೃತುವಿಗೆ ನವರಾತ್ರಿಯ ಸಂಭ್ರಮ ಸ್ವಾಗತಿಸುವಾಗ ಅಬ್ಬ ಮಳೆಯಿಂದ ಬಿಡುಗಡೆಯಾದ ಅನುಭವ. ಪ್ರತೀ ಸಲವೂ ನವರಾತ್ರಿ ಬರುವಾಗ ಹಲವು ನಿರೀಕ್ಷೆಯ ಜತೆಗೆ ಊರಿಗೆ ಹೋಗುವ ಸಿದ್ದತೆಯೊಂದು ಇರುತ್ತದೆ. ಮೊದಲಿನಿಂದಲೂ ಮಳೆಕಳೆದು ಚಳಿಗಾಲಕ್ಕೆ ಸನಿಹವಾಗುವಾಗ ಈ  ನವರಾತ್ರಿಯನ್ನು ಹೊತ್ತು ಬರುವ ಈ ಶರದೃತು  ಎಂದರೆ ಒಂದು ಸಂಭ್ರಮ. ಹನಿ ಹನಿ ಮಂಜಿನಲ್ಲಿನ ಈ ಹಬ್ಬ ಅಂದಿಗೂ ಇಂದಿಗೂ ಅದೇ ಸೌಂದರ್ಯ.  ನಮ್ಮೂರಲ್ಲಿ ಉಳಿದೆಲ್ಲ ಹಬ್ಬಗಳು ಮನೆಯಲ್ಲಿ ಆಚರಿಸಿದರೆ...ನವರಾತ್ರಿಗೆ ಯಾವ ದೇವಸ್ಥಾನಕ್ಕೆ ಹೋಗುವುದು ಎಂದು ಯೋಚಿಸುತ್ತೇವೆ. ಯಾಕೆಂದರೆ ಎಲ್ಲಾ ಹಬ್ಬಗಳು ಒಂದೆರಡು ದಿನ ಇದ್ದರೆ ಈ ನವರಾತ್ರಿ ಒಂದು ಪಕ್ಷದಷ್ಟೂ ವಿಸ್ತರಿಸಿ ಪಾಡ್ಯದಿಂದ ಅರಳುವ ಚಂದ್ರನ ಜತೆಗೆ ಮನಸ್ಸೂ ಅರಳುತ್ತಾ ಸಾಗುತ್ತದೆ. ಒಂದು ರೀತಿಯಲ್ಲಿ ಮನಸ್ಸು ಮಳೆಯಲ್ಲಿ ತೊಯ್ದು ಶುದ್ದವಾದಂತೆ ಶುದ್ದ ಮನಸ್ಸಿನಲ್ಲಿ ದೈವ ಸಾನ್ನಿಧ್ಯ ನೆರವೇರುತ್ತದೆ.  ದೈವತ್ವದ ಈ  ಅನುಭವವಾಗಬೇಕಾದರೆ ಆ ಅವಧಿಯಲ್ಲಿ ಒಂದಾದರೂ ಕ್ಷೇತ್ರದರ್ಶನ ಮಾಡಬೇಕು ಎಂಬುದು ಹಲವರ ಹಂಬಲ. ಇಲ್ಲಿ  ಪ್ರತಿಯೊಬ್ಬರೂ ಪರಸ್ಪರ ಭೇಟಿಯಾಗುವಾಗ   ಈ ಸಲ ನವರಾತ್ರಿಗೆ ಎಲ್ಲಿಗೆ ಎಂದು ಕೇಳುವುದು ಸಹಜ.   ಆದರೆ ನನ್ನಲ್ಲಿ ಕೇಳುವಾಗ ಪ್ರಶ್ನೆಯೊಂದಿಗೆ ಉತ್ತರವೂ ಸಿದ್ಧವಾಗಿರುತ್ತದೆ. ಈ ಸಲ ನವರಾತ್ರಿಗೆ ಆವಳ ಮಠಕ್ಕೆ ಹೋಗುವುದಿಲ್ಲವಾ? ಉತ್ತರದ ಜತೆಗೆ ಪ್ರಶ್ನೆ ಬರುವುದು ಹೀಗೆ. ಯಾಕೆಂದರೆ ಈ ಮಠದ ಜತೆಗೆ ಇರುವ ಅವಿನಾಭಾವ ಸಂಬಂಧ ಎಂದರೆ ಅತಿಶಯವಲ್ಲ. 

ಆವಳ ಮಠ...ನಮ್ಮೂರಿನ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ.  ನಮ್ಮೂರಿನಲ್ಲಿ ಹಲವು ದುರ್ಗಾ ಪರಮೇಶ್ವರಿ ದೇವಾಲಯಗಳಂತೆ ಇದು ಒಂದು. ಆದರೆ ನನಗೆ ಇದೆಲ್ಲಕ್ಕಿಂತ ಮಿಗಿಲಾದ ಸಂಭಂಧವೆಂದರೆ ಇದು ಬಾಲ್ಯದ ಹಲವು ನೆನಪುಗಳೊಂದಿಗೆ ಬೆಸುದುಕೊಂಡ ಪವಿತ್ರ ಕ್ಷೇತ್ರ. ಇಲ್ಲಿ ಭಕ್ತಿಯೊಂದಿಗೆ ಆ ನೆನಪುಗಳು ಮರುಕಳಿಸುವಾಗ ಹೃದಯ ಭಾರವಾಗುತ್ತದೆ. ಮತ್ತೆ ತರಲಾಗದ ನೆನಪುಗಳು ಅದು ಕೇವಲ ವೈಯಕ್ತಿಕ ಅನುಭವಕ್ಕೆ ಸೀಮಿತವಾಗುತ್ತದೆ. ಹೆಚ್ಚಾಗಿ ನನಗೆ ಜನಸಂದಣಿಯ ದೇವಸ್ಥಾನಗಳು ಭಕ್ತಿಯನ್ನು ಪ್ರಚೋದಿಸುವುದಿಲ್ಲ. ಅಲ್ಲಿ ಹೋದಾಗ ಭಕ್ತಿಯ ಜತೆಗೆ ಭಾವನೆಗಳು ಹಂಚಿ ಚದುರಿ ಹೋಗಿಬಿಟ್ಟು ಮನಸ್ಸು  ಖಾಲಿಯಾಗಿ ಕೇವಲ ಯಾಂತ್ರಿಕವಾಗುತ್ತದೆ. ಭಾವನೆಗಳು ಇಲ್ಲದಿದ್ದರೆ ನಂತರದ ಕ್ರಿಯೆಗಳು ಯಾಂತ್ರಿಕ. ಈ ಯಾಂತ್ರಿಕತೆಯಿಂದ ದೂರಾಗಿ ಸಹಜ ಅನುಭವವನ್ನು ತುಂಬಿಕೊಡುವ ಕ್ಷೇತ್ರವೆಂದರೆ ಅದು ಬಾಲ್ಯದಿಂದ ಬೆಸೆದುಕೊಂಡ ಆವಳ ದುರ್ಗಾಪರಮೇಶ್ವರಿ ದೇವಸ್ಥಾನ. ಇಲ್ಲಿನ ಪರಿಸರದ ಪ್ರತಿಯೊಂದು ಭಾಗದಲ್ಲೂ ಹಲವು ನೆನಪುಗಳಿವೆ.

ಮೊನ್ನೆ ಮೊನ್ನೆ ಕಳೆದ ನವರಾತ್ರಿಯ ಕೊನೆಯ ಎರಡು ದಿನ ಅಲ್ಲಿಯೇ ಕಳೆಯುವ ಅವಕಾಶ ಒದಗಿಬಂತು. ಮೊದಲು ಬಹುತೇಕ ಕೇವಲ ಎಣ್ಣೇ ದೀಪದ ಬೆಳಕಿನಲ್ಲೇ ಕಳೆದು ಹೋಗುತ್ತಿದ್ದ ನವರಾತ್ರಿ ಈಗ ದೇವಸ್ಥಾನ ಮೂಲೆ ಮೂಲೆಯಲ್ಲೂ ವಿದ್ಯುದ್ದೀಪ ಝಗಮಗಿಸುತ್ತದೆ. ವಿಶಾಲವಾದ ದೇವಸ್ಥಾನದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಬೇಕಾದರೆ ಪುಟ್ಟ ಕೈ ದೀಪವನ್ನು ಹಿಡಿದು ಕೊಂಡು ಹೋಗುತ್ತಿದ್ದೆವು. ಹಲವು ಸಲ ಒಬ್ಬರೇ ಸುತ್ತಾಡುವುದಕ್ಕೆ ಭಯವಾಗುವಷ್ಟು ಕತ್ತಲೆ ಆವರಿಸಿರುತ್ತಿತ್ತು. ರಾತ್ರಿ ದೀಪದ ಬೆಳಕಿನಲ್ಲಿ ತರಕಾರಿ ಹೆಚ್ಚುವುದು ದೇವರ ಪ್ರಸಾದ ಸಿದ್ದ ಪಡಿಸುವ ಅನುಭವ ಈಗ ಊಹಿಸುವುದಕ್ಕೂ ಸಾಧ್ಯವಿಲ್ಲ.  ನನಗೆ ಇನ್ನೂ ನೆನಪಿದೆ ದೇವಸ್ಥಾನ ಸುತ್ತಲೂ ಗೋಡೆಗೆ ಅಂಟಿಸಿದ ಕಲ್ಲಿನ ದೀಪಕ್ಕೆ ಎಣ್ಣೆ ಬತ್ತಿ ಹಾಕಿ ಉರಿಸುತ್ತಿದ್ದೆವು. ಈಗ ಆಜಾಗದಲ್ಲಿ ವಿದ್ಯುತ್ ದೀಪ ಬೆಳಗುತ್ತದೆ.  

ಬಾಲ್ಯದಲ್ಲಿ ಎರಡು ವರ್ಷ ಇಲ್ಲಿ ದೇವರ ಸೇವೆ ಮಾಡಿದ್ದೆ. ಆಗ ದೇವಸ್ಥಾನದಲ್ಲಿ ಅಧುನಿಕ ಸೌಕರ್ಯ ಒಂದೂ ಇರಲಿಲ್ಲ. ಹೊರ ಜಗತ್ತಿಗೆ ಯಾವ ಸಂಪರ್ಕವೂ ಇಲ್ಲದ ಪ್ರದೇಶವಾಗಿತ್ತು ಮೈಲಿ . ದೂರದ ಬಾಯಾರು ಪದವಿನಲ್ಲಿ  ಬಸ್ಸು ಇಳಿದು ಅರ್ಧ ತಾಸು ನಡೆದುಕೊಂಡು  ದೇವಸ್ಥಾನಕ್ಕೆ ಬರಬೇಕಿತ್ತು. ಗುಡ್ಡ ತೋಟ ಗದ್ದೆ ದಾಟಿ ಹಸಿರಿನ ನಡುವೆ ಬರುವ ಒಂದು ಅನುಭವ ವಿಶೇಷವಾಗಿತ್ತು. ಆಗ ವಾಹನಗಳನ್ನು ಕಾಣುವುದಕ್ಕಲ್ಲ ಕೇವಲ  ಸದ್ದು ಕೇಳಬೇಕಾದರೆ ಅರ್ಧ ತಾಸು ನಡೆದು ಹೋಗಬೇಕಿತ್ತು. ಹೀಗಾಗಿ ಯಾವ ಸದ್ದು ಗದ್ದಲವಿಲ್ಲದ ಪರಿಸರವಾಗಿ ಒಂದು ರೀತಿಯ ಶಾಂತ ಪ್ರದೇಶವಾಗಿತ್ತು. ಈಗ ದೇವಸ್ಥಾನದ ಅಂಗಳದವರೆಗೂ ವಾಹನ ಬರುತ್ತದೆ. ಒಂದೂ ವಾಹನ ಕಾಣದ ಕಾಲ ಒಂದಾದರೆ, ಈಗ ನವರಾತ್ರಿಯಲ್ಲಿ  ಆಯುಧ ಪೂಜೆಗೆ ವಾಹನ ಸಾಲುಗಟ್ಟಿ ನಿಂತಿರುತ್ತದೆ.


ಬಾಲ್ಯದಲ್ಲಿ ಮನೆಯಿಂದ ದೂರವಾಗಿ ಒಂದೆರಡು ವರ್ಷ ಹಗಲು ರಾತ್ರಿ ಇಲ್ಲೇ ಕಳೆದಿದ್ದೆ. ದೇವರ ನೈವೇದ್ಯ ಬಿಟ್ಟರೆ ಬೇರೆ ಏನೂ ಇರುತ್ತಿರಲಿಲ್ಲ.ಆಗ ಪೂಜೆಗೆ ಇರುತ್ತಿದ್ದ ಗೋಪಣ್ಣನ ಜತೆ ಮೂರು ಹೊತ್ತು ಸ್ನಾನ ಮಾಡಿ ದೇವರ ಸೇವೆ ಮಾಡುತ್ತಿದ್ದೆ. ಮೂರು ಹೊತ್ತು ಗುಂಪೆ ಪರ್ವತದ ತಡಿಯಿಂದ ಹರಿದು ಬರುವ ತಣ್ಣೀರಿಗೆ ತಲೆಕೊಟ್ಟು ಸ್ನಾನ ಮಾಡುತ್ತಿದ್ದೆ .  ಈಗಲೂ ನಾನು ನಿತ್ಯ ತಣ್ಣೀರ ಸ್ನಾನ ಮಡುತ್ತಿದ್ದರೆ ಅದಕ್ಕೆ ಕಾರಣ ನಿತ್ಯವೂ ಇಲ್ಲಿ ಸ್ನಾನ ಮಡುತ್ತಿದ್ದ ತೀರ್ಥ ಸ್ನಾನವೇ ಕಾರಣ. 


  ಪ್ರತಿ ನಿತ್ಯ   ನೈವೇದ್ಯಕ್ಕೆ ಸಿದ್ದ ಪಡಿಸುವುದು, ಪಂಚಕಜ್ಜಾಯಕ್ಕೆ ನೆರವಾಗುವುದು, ಅನ್ನ ನೈವೇದ್ಯಕ್ಕೆ ಬೆಂಕಿ ಹಾಕಿ ಅದನ್ನು ಅಣಿಗೊಳಿಸುವುದು, ದೇವರ ಪೂಜೆಗೆ ಹೂವು ಮತ್ತೀತರ ವಸ್ತುಗಳನ್ನು ಅಣಿಗೊಳಿಸುವುದು...ಹೀಗೆ ಆ ವಯಸ್ಸಿನಲ್ಲಿ ಸಾಧ್ಯವಾಗುವ ಕೆಲಸಗಳನ್ನು ಮಾಡುತ್ತಿದ್ದೆ. ಈಗ ಅಲ್ಲಿಗೆ ಹೋದಾಗ ಅಲ್ಲಿ ಕೇವಲ ಲಂಗೋಟಿ ತುಂಡು ಬೈರಾಸಿನಲ್ಲಿ  ಓಡಾಡಿದ ಆ ದಿನಗಳು ನೆನಪಾಗಿಬಿಡುತ್ತವೆ. ರಾತ್ರಿ ಎಷ್ಟೋ ಸಲ ನಾನು ಒಬ್ಬನೇ ಆ ದೇವಸ್ಥಾನದಲ್ಲಿ ಮಲಗಿದ್ದೆ. ಈಗ ಅದನ್ನು ಕಲ್ಪಿಸುವುದೂ ಕಷ್ಟವಾಗುತ್ತದೆ. ಯಾವ ಜನಸಂಚಾರವೂ ಇಲ್ಲದ ಆ ಕಾಲದಲ್ಲಿ ಅಲ್ಲಿ ಹಗಲು ಕಳೆಯುವುದೂ ಒಂದು ವಿಚಿತ್ರ ಅನುಭವ. ಮಧ್ಯಾಹ್ನದ ಪೂಜೆ ಮುಗಿಸಿ ಊಟಕ್ಕೆ ಚಟ್ನಿಯೋ ಸಾರು ಪಲ್ಯ ಸಿದ್ದ ಪಡಿಸಿ ಊಟ ಮಾಡುತ್ತಿದ್ದೆವು. ಆಗ ಭೀಮ ಗಾತ್ರದ ರುಬ್ಬುವ ಕಲ್ಲಿನಲ್ಲಿ ತೆಂಗಿನ ಕಾಯಿ ಅರೆದು ಅಡಿಗೆ ಮಾಡಿದ ಅನುಭವ,  ಈಗ ನನ್ನ ಹೊಟ್ಟೆಗೆ ಬೇಕಾದದ್ದನ್ನು ಮಾಡಿ ತಿನ್ನುವ ಸ್ವಾವಲಂಬೀ ಗುಣವನ್ನು ಬೆಳೆಸುವುದಕ್ಕೆ ಆಗಿನ ಆ  ಶಿಕ್ಷಣ ಕಾರಣವಾಗಿದೆ. ಈಗಲೂ ನನ್ನ ಹಸಿವಿಗೆ ನಾನೇ ಬೇಯಿಸಿ ತಿನ್ನುವ ಪ್ರವೃತ್ತಿ ಇದೆ. ಇದನ್ನು ಒದಗಿಸಿದ್ದು ಬಾಲ್ಯದ ನನ್ನ ಈ ದೇವಸ್ಥಾನದ ಜೀವನ. ಆಗ ಪೂಜೆಗಿದ್ದ ಗೋಪಣ್ಣ ಪ್ರೀತಿಯಿಂದ ಹೇಳಿ,  ಕೆಲವೊಮ್ಮೆ ಗದರಿ ಬೇಕಾದ ರೀತಿಯಲ್ಲಿ ನನ್ನಿಂದ ಕೆಲಸವನ್ನು ಮಾಡಿಸಿ ಒಂದು ರೀತಿಯಲ್ಲಿ ಆ ದೇವರಿಗೆ ನನ್ನಿಂದ ಒಂದಷ್ಟು ಸೇವೆ ಲಭ್ಯವಾಗುವ ಹಾಗೆ ಮಾಡಿದ್ದರು. ಈಗ ಅವರಿಲ್ಲ. ಆದರೆ ಅಲ್ಲಿಗೆ ಹೋದಾಗ ಆ ನೆನಪೆಲ್ಲ ಮರುಕಳಿಸುತ್ತದೆ. ದೇವಸ್ಥಾನ ಗೋಪುರದಲ್ಲಿ ಉಂಡದ್ದು ನಿದ್ದೆ ಮಾಡಿದ್ದು ಆಟ ಆಡಿದ್ದು ಕನಸು ಕಂಡದ್ದು  ಆ ದಿನಗಳನ್ನು ಎಂದಿಗೂ ಮರೆಯುವುದಕ್ಕೆ ಸಾಧ್ಯವಿಲ್ಲ. 


ಬೆಳಗ್ಗೆ ನಿದ್ದೆ ಬಿಟ್ಟು ಎದ್ದ ಕೂಡಲೇ ಸ್ನಾನ ಮಾಡಿ ದೇವಸ್ಥಾನದ ಒಳಗೆ ಹೋಗಿ ರುದ್ರ ಮಂತ್ರ ಪಠಿಸುವುದು, ನನ್ನಿಂದ ಆದ ಚಾಕರಿಯನ್ನು ಮಾಡುವುದು ಹೀಗೆ ಹಗಲು ಇರುಳೆನ್ನದೆ ಕಳೆದ ದಿನಗಳು ಇಂದು ದೇವರ ಭಕ್ತಿಯಲ್ಲದ ಇನ್ನೊಂದು ಬಾಂಧವ್ಯವನ್ನು ಸ್ಮರಣೆಗೆ ತರುತ್ತದೆ. ಮಧ್ಯಾಹ್ನದ ವಿಪರೀತ ಕಾಡುವ ಹಸಿವಿನಲ್ಲಿ ಅಲ್ಲಿ ಬಡಿಸಿದ  ನೈವೇದ್ಯ ಜತೆಗೆ ಚಟ್ನಿ ತಂಬುಳಿ ಸಾರಿನ ಸರಳವಾದ ಊಟ ಅದರ ರುಚಿ ಇನ್ನೂ ಮಾಸಿಲ್ಲ. ಈಗಲೂ ಹಸಿವಾಗುವಾಗ ಮಠದ ಊಟದ ರುಚಿ ನೆನಪಿಗೆ ಬಂದು ಅದಕ್ಕೆ ಸರಿಸಾಟಿಯಾದ ಆಹಾರ ಮತ್ತೊಂದು ಇಲ್ಲ ಎಂಬ ಭಾವನೆ ಬರುತ್ತದೆ. ಮಠದ ಬಾಲ್ಯದ ಜೀವನದ ನೆನಪಿಗಾಗಿ ಈಗಲೂ ಬಾಳೆಕಾಯಿ ಪಲ್ಯ,  ಚಟ್ನಿ ತಂಬುಳಿ ಮಾಡಿ ಊಟ ಮಾಡುತ್ತೇನೆ.  ಮೊದಲು ಮಠದಲ್ಲಿ ಒಂದು ತರಕಾರಿಯನ್ನೂ ಆಂಗಡಿಯಿಂದ ತರುತ್ತಿದ್ದ ಸಂಭವ ಇರುತ್ತಿರಲಿಲ್ಲ. ಮಧ್ಯಾಹ್ನದ ಹೊತ್ತಿಗೆ ತೋಟಕ್ಕೆ ಹೋಗಿ ಅಲ್ಲಿದ್ದ ಬಾಳೆಕಾಯಿ ಅಥವ ಸೊಪ್ಪು ತರಕಾರಿ ತಂದು ಅಡುಗೆ ಮಾಡಿ ಊಟ ಮಾಡುತ್ತಿದ್ದೆವು. ಆಲುಗಡ್ಡೆ ಟೊಮೆಟೊ ಕಂಡ ನೆನಪೇ ಇರುತ್ತಿರಲಿಲ್ಲ. ಈಗ ನವರಾತ್ರಿ ಇದಿಲ್ಲದೆ ಅಡುಗೆಯೇ ಇಲ್ಲ ಎಂಬಂತಹ ಬದಲಾವಣೆ ಆಗಿ ಹೋಗಿದೆ. ನಿಜಕ್ಕೂ ಆಗಿನ ದೇವಸ್ಥಾನದ ಆ ಊಟ ಅಮೃತ ಸದೃಶ.  ಯಾವ ಕಲ್ಮಶವೂ ಇಲ್ಲದ ಪರಿಶುದ್ದ ಆಹಾರ. 


ದೇವಾಲಯ ಈಗ ಆಧುನಿಕತೆಯ ಸ್ಪರ್ಶದಲ್ಲಿ ನಳನಳಿಸುತ್ತದೆ. ಮೊದಲು ಇದ್ದ ಸೆಗಣಿ ಸಾರಿಸಿದ ನೆಲ ಮಣ್ಣಿನ ವಾಸನೆ ಈಗ ಇಲ್ಲ. ಎಲ್ಲೆಂದರಲ್ಲಿ ನಳ್ಳಿ ತಿರುಗಿಸಿದರೆ ನೀರು , ಅಧುನಿಕ ಅಡುಗೆ ಪಾತ್ರೆ ಸಜ್ಜೀಕರಣ ಇವುಗಳ ನಡುವೆ ಹಳೆಯ ನೈವೇದ್ಯದ ಘಂ ಎನ್ನುವ ಸುವಾಸನೆ ಕಳೆದು ಹೋಗಿದೆ. ಆದರೆ ಆ ನೆನಪುಗಳು ಇನ್ನೂ ಹಸಿರಾಗಿಇದೆ. ಇಂದಿನ ತಲೆಮಾರಿಗೆ ಅದನ್ನು ವರ್ಣಿಸಿದರೂ ಅರ್ಥವಾಗದ ಆನುಭವಗಳ ಮಾರ್ದವತೆ ಕೇವಲ ಕಥೆಯ ಸನ್ನಿವೇಶಗಳಂತೆ ಭಾಸವಾಗಬಹುದು. 


ಪ್ರತೀ ಸಲ ನವರಾತ್ರಿ ಬರುವಾಗ ಇಲ್ಲಿ ಒಂದೆರಡು ದಿನವಾದರೂ ಇದ್ದು ದೇವರ ಸೇವೆಯ ಜತೆಗೆ ಹಿಂದಿನ ನೆನಪುಗಳಿಗೆ ಒಂದಷ್ಟು ತೀರ್ಥ ಸಿಂಪಡಿಸಿ ಅದನ್ನು ಹಸಿರಾಗಿ ಇರುವಂತೆ ಮಾಡುವ ನಿರೀಕ್ಷೆ ಇರುತ್ತದೆ.  ಆದರೆ ಅದು ಸಾಧ್ಯವಾಗುವುದಿಲ್ಲ. ಆದರೂ ಈ ಬಾರಿ ಎರಡು ದಿನ ದೇವರ ಸೇವೆಯಲ್ಲಿ ಕಳೆದೆ.  ಮರುಭೂಮಿಯ ಓಯಸಿಸ್ ನ  ನೀರಹನಿಯ ಅನುಭವಗಳಂತೆ ಒಂದಷ್ಟು ಹಳೆಯ ನೆನಪುಗಳು ಹಾದು ಹೋಯಿತು. ಅಮ್ಮನ ಎದೆಹಾಲಿನ ನೆನಪು ಬದುಕಿನಾದ್ಯಂತೆ ಇರುವಂತೆ  ಈ ಅಮ್ಮನ ಮಡಿಲಿನ ನೆನಪುಗಳು ಎದೆಹಾಲಿನ ಮಾರ್ದವತೆಯನ್ನು ಒದಗಿಸಿದವು. 


ಎರಡು ದಿನ ಸಮೀಪ ಸಂಬಂಧಿ ಶ್ರೀ ಲಕ್ಷ್ಮೀನಾರಾಯಣ ಭಟ್ಟರ ಮನೆಯಲ್ಲಿ ಉಳಿದುಕೊಂಡಿದ್ದೆ. ಮನೆಯ ಹತ್ತಿರವೇ ನಾಗಬನ ಇದ್ದು ಒಂದು ರೀತಿಯಲ್ಲಿ ಅರಣ್ಯದ ವಾತಾವರಣ ಕಲ್ಪಿಸಿತ್ತು. ನಾನು ಉಳಿದುಕೊಳ್ಳುವ ಜಾಗದಲ್ಲಿ ಮುಂಜಾನೆಯ ಶಾಂತ ಪರಿಸರದದ ಮೌನವನ್ನು ಅನುಭವಿಸುವುದಕ್ಕೆ ಬಯಸುವವನು. ಅದಕ್ಕೆ ಇಲ್ಲಿ ಮುಕ್ತ ಅವಕಾಶವಿತ್ತು. ಮುಂಜಾನೆ ನಾಲ್ಕು ಘಂಟೆಗೆ ಎದ್ದು ಸಂಧ್ಯಾವಂದನೆಗೆ ಕುಳಿತಾಗ ಆ ಮೌನವೇ ಭಗವಂತನ ರೂಪದಲ್ಲಿ ಪ್ರತ್ಯಕ್ಷವಾದಂತೆ ಭಾಸವಾಯಿತು. ಭಗವಂತನಿಗೆ ರೂಪವಿಲ್ಲ ಭಾವವಿಲ್ಲ, ಗುಣವಿಲ್ಲ...ಆದರೆ ಇಲ್ಲಿ ಸುತ್ತಲ ಪರಿಸರದ ಮೌನವೇ ದೈವದ ಅರಿವನ್ನು ಒದಗಿಸಿ ಭಗವಂತನ ಅಸ್ತಿತ್ವವನ್ನು ಹೃದಯಕ್ಕೆ ರವಾನಿಸಿತ್ತು.  ನಾನು ಎಲ್ಲೇ ಉಳಿದುಕೊಂಡರೂ ಮುಂಜಾನೆ ಯೋಗಾಭ್ಯಾಸಕ್ಕೆ ಅನುಕೂಲವನ್ನು ಮೊದಲು ಬಯಸುತ್ತೇನೆ. ಮನೆಯ ಮೇಲೆ ಅದಕ್ಕೆ ಮುಕ್ತವಾದ ವಾತಾವರಣ , ನಿಜಕ್ಕೂ ನಾನು  ಆ ಮನೆಯವರಿಗೆ ಕೃತಜ್ಞತೆಯನ್ನು ಸಲ್ಲಿಸಬೇಕು. ನನಗೆ ಮುಕ್ತವಾಗಿ ಸರ್ವಸ್ವತಂತ್ರವಾಗಿ ಇರುವುದಕ್ಕೆ, ನನ್ನದೇ ಮನೆ ಎನ್ನುವ ಭಾವನೆ ಬರುವುದಕ್ಕೆ ಸಹೃದಯದ ಸೌಕರ್ಯವನ್ನು ಒದಗಿಸಿದ್ದರು. 


ಮನೆಯಲ್ಲಿ ನಿತ್ಯ ಕರ್ಮದ ರೂಪದಲ್ಲಿ ಮಾಡುವ ದೇವರ ಪೂಜೆ ಪುನಸ್ಕಾರಗಳು ಸಂಧ್ಯಾವಂದನೆ ನಿತ್ಯ ವಿಧಿಗಳು ನಿತ್ಯದ ಬದುಕಿಗೆ ಚೈತನ್ಯವನ್ನು ಒದಗಿಸಿದರೆ, ಹೀಗೆ ಅಲಭ್ಯವಾದ ಅವಕಾಶಗಳು ಸಿಕ್ಕಿ ಒಂದು ದೇವಸ್ಥಾನದಲ್ಲಿ ಉಳಿದುಕೊಂಡು ಅಲ್ಲಿಯವನಾಗಿ ಇರುವುದು ವರ್ಷದಾದ್ಯಂತೆ ಚೈತನ್ಯವನ್ನು ಒದಗಿಸುತ್ತವೆ. ಯಾವುದೇ ಮಾನಸಿಕ ಒತ್ತಡವಿಲ್ಲದೆ ಸರ್ವವೂ ದೇವರ ಕ್ರಿಯೆಯಲ್ಲಿ ದೇವರಿಗೆ ಸಮರ್ಪಿಸುವುದು ನಿಷ್ಕಾಮ ಕರ್ಮಕ್ಕೆ ಪ್ರೇರಣೆಯಾಗುತ್ತದೆ. ದೈವಕಾರ್ಯದಲ್ಲಿ ಯಾವ ವೃತ್ತಿಯನ್ನಾಗಲಿ ಭೇದವಿಲ್ಲದೆ ಶುದ್ದ ವೈರಾಗ್ಯದಿಂದ ಮಾಡುವಾಗ ಅಲ್ಲೊಂದು ಆತ್ಮ ತೃಪ್ತಿ ಇರುತ್ತದೆ. ಆವಳದ ಈ ದೇವಸ್ಥಾನದಲ್ಲಿ ಎರಡು ದಿನ  ಅದನ್ನು ಯಥೇಚ್ಛವಾಗಿ ಅನುಭವಿಸಿದೆ. ಎರಡು ದಿನ ಅಮ್ಮನ ಮಡಿಲಲ್ಲಿ ರಾಮನ ಅಳಿಲಾದ ಧನ್ಯತೆಯನ್ನು ಹೊತ್ತು ವಿದಾಯವನ್ನು ಹೇಳಿ ಅಲ್ಲಿನ ಅರ್ಚಕರು ನನಗಾಗಿ ಹೃದಯ ತುಂಬಿ ಪ್ರಾರ್ಥಿಸುವಾಗ ಒಂದು ಘಳಿಗೆ ನನಗೆ ಧನ್ಯತೆಯಲ್ಲಿ ಮಾತು ಹೊರಡದೆ ಹೃದಯ ಭಾರವಾಯಿತು. ಇನ್ನೂ ಮುಂದಕ್ಕೆ ಇದಕ್ಕಿಂತಲ್ಲೂ ಹೆಚ್ಚು ಸೇವೆಯನ್ನು ಒದಗಿಸುವ ಚೈತನ್ಯ ಲಭ್ಯವಾಗಲಿ ಎಂಬ ಮನದಾಶೆ ಮನದಾಳದಲ್ಲಿ ಸ್ಥಿರವಾಗಿ ಬೇರುಬಿಟ್ಟಿತು. 






Thursday, September 25, 2025

ನಮ್ಮದಲ್ಲ

ಇತ್ತೀಚೆಗೆ ಬಿಡುಗಡೆಯಾದ ಸಂಶಯಂ ಎನ್ನುವ ಮಲಯಾಳಂ ಸಿನಿಮಾ ನೋಡಿದೆ. ಮಾರ್ಮಿಕ ಕಥಾ ಹಂದರ ಭಾವಾನಾತ್ಮಕ ಸಂಭಂಧಗಳ ಸರಳ ಸುಂದರ ಕಥೆಯ ಚಲನ ಚಿತ್ರವಿದು. ಹೊಸದಾಗಿ ಮದುವೆಯಾದ ನಾಯಕ ನಾಯಕಿಗೆ ಬಹಳ ಕಾಲ ಮಕ್ಕಳಾಗದೇ ಕೊನೆಗೆ ಆಕೆ ಗರ್ಭವತಿಯಾಗಿ ಮಗುವನ್ನು ಪಡೆಯುತ್ತಾಳೆ. ಎರಡು ವರ್ಷ ಕಳೆದ ನಂತರ ಆಕೆಗೆ ಆ  ಮಗು ತನ್ನದಲ್ಲ ಎಂಬ ಸಂಶಯ ಬರುತ್ತದೆ. ಆಕೆ ಪ್ರಸವಿಸಿದ ಅದೇ ಅಸ್ಪತ್ರೆಯಲ್ಲಿ ಆ ಸಮಯ ಐದಾರು ಮಕ್ಕಳ ಜನನವಾಗಿರುತ್ತದೆ. ಹಾಗಾಗಿ ಅಲ್ಲಿ ಅದಲು ಬದಲಾಗಿರುವ ಸಾಧ್ಯತೆ ಇರುತ್ತದೆ.  ಅಲ್ಲಿಂದ ಆ ಮಗುವಿನ ಅಪ್ಪ ಅಮ್ಮ ಯಾರು? ಎಂಬ ಹುಡುಕಾಟ.  ಕೊನೆಯಲ್ಲಿ ಆಕೆ ಹೆತ್ತ ಮಗುವಿನ ಪತ್ತೆಯಾಗುತ್ತದೆ. ನ್ಯಾಯಾಲಯದಲ್ಲಿ ಮೊಕದ್ದಮೆಯೂ ದಾಖಲಾಗುತ್ತದೆ.  ಡಿ ಎನ್ ಎ ಪರೀಕ್ಷೆ ಮಾಡಿದಾಗ ಈಕೆಯ ಸಂಶಯ ನಿಜವಾಗಿ ನಿಜವಾದ ಮಗುವನ್ನು ಪಡೆಯುವಂತೆ ನ್ಯಾಯಲಯ ತೀರ್ಪುಕೊಡುತ್ತದೆ. ಅಲ್ಲಿಂದಲೇ ನಿಜವಾದ ಸಮಸ್ಯೆ ಎದುರಾಗುವುದು. ಆ  ಮಗುವನ್ನು ಬದಲಾಯಿಸುವುದು ಹೇಗೆ? ಅದರ ಮತ್ತೊಂದು ಅಪ್ಪ ಅಮ್ಮ ಅದನ್ನು ಕೊಡುವುದಕ್ಕೆ ಸಿದ್ದರಿರುವುದಿಲ್ಲ. ಮೇಲಾಗಿ ಅವರು ಮುಸ್ಲಿಂ ...ಹೀಗೆಲ್ಲ ಸಮಸ್ಯೆಗಳಿದ್ದರೂ ನ್ಯಾಯಾಲಯದ ತೀರ್ಪು ಗೌರವಿಸಲೇ ಬೇಕು. ಮಗುವನ್ನು ಬದಲಾಯಿಸುವಾಗ ...ತಾಯಂದಿರೇನೋ ಬದಲಿಸಿಕೊಳ್ಳಬಹುದು. ಆದರೆ ಆ ಮಗುವಿಗೆ ಇದರ ಅರಿವು ಇರಬಹುದೇ? ಅದಾಗಲೇ ತನ್ನ ಅಮ್ಮ ಇದೇ ಅಂತ ಭಾವನಾತ್ಮಕವಾಗಿ ಆ ಮಗು ತಿಳಿಯದೇ ಸಂಬಂಧ ಬೆಳೆಸಿರುತ್ತದೆ. ಅದಕ್ಕೆ ನ್ಯಾಯಾಲಯವಾಗಲಿ ಈ ಅಮ್ಮಂದಿರ ಭಾವನೆಯಾಗಲೀ ಪರಿವೆ ಇರುವುದಿಲ್ಲ. ಇಲ್ಲಿ ಮಗುವಿನ ಮಾನಸಿಕ ನೆಲೆಗೆ ಗೌರವ ಎಲ್ಲಿಂದ ಬರಬೇಕು? ತನ್ನದಲ್ಲದ ಅಮ್ಮನನ್ನು ಅಮ್ಮನೇ ಅಂತ ಅದು ಮಾನಸಿಕವಾಗಿ ಒಪ್ಪಿಕೊಂಡಿರುತ್ತದೆ. ದೈಹಿಕ ಸಂಬಂಧಗಳಿಗಿಂತಲೂ ಮಾನಸಿಕ ಸಂಭಧಗಳು ಭಾವನೆಗಳಿಗೆ ಹೆಚ್ಚು ಮೌಲ್ಯ. ಆದರೆ ಅದು ನಾನು ಹೆತ್ತ ಮಗುವಲ್ಲ ಯಾರೋ ಹೆತ್ತ ಮಗು ಎಂದು ಮನಸ್ಸಿಗೆ ಭಾವನೆ ಬಂದಾಗ ಮಗುವನ್ನು ಒಪ್ಪಿಕೊಂಡು ಆ ಮಗುವಿನಂತೆ ಸಂಭಂಧ ಬೆಸೆಯುವುದಕ್ಕೆ ಅಮ್ಮನಿಗೆ ಸಾಧ್ಯವಾಗುವುದಿಲ್ಲ. 

ವಾಸ್ತವದ ಸ್ಥಿತಿ ಮತ್ತು ಸತ್ಯ ಹೇಗೆ ಇರಲಿ ಮನಸ್ಸಿಗೆ ಹೀಗೆ ಎಂಬ ಭಾವನೆ ಬಂದು ಬಿಟ್ಟರೆ ಅಲ್ಲಿ ದೇಹ ಸಹಕರಿಸುವುದಿಲ್ಲ. ಅದು ನನ್ನದಲ್ಲ ಈ ಭಾವನೆ ಒಂದೇ ಸಾಕಾಗುತ್ತದೆ. ಅದು ಅಮ್ಮನಿಗಾದರೂ ಮಗುವಿಗಾದರೂ ಅಷ್ಟೇ. 

ಮೊದಲು ಊರ ಮನೆಯಲ್ಲಿ ನಾಯಿಯನ್ನು ಸಾಕುತ್ತಿದ್ದೆವು. ನಾಯಿಗೆ ಊಟ ಹಾಕುವುದಕ್ಕೆ ಒಂದು ಹಳೆಯ ತಟ್ಟೆ ಇರುತ್ತಿತ್ತು. ಆ ತಟ್ಟೆ ಎಷ್ಟೇ ಶುಚಿಯಾಗಿರಲಿ, ಅದನ್ನು ಕಾಲಿಂದ ತಳ್ಳಿ ಅದಕ್ಕೆ ಅನ್ನ ಆಹಾರ ಹಾಕುತ್ತಿದ್ದೆವು. ಇಲ್ಲಿ ಆ ಪಾತ್ರೆ ನಾಯಿ ಉಂಡ ಪಾತ್ರೆ ಎಂಬುದಷ್ಟೇ ಮುಖ್ಯವಾಗುತ್ತಿತ್ತು. ಅದು ಮನುಷ್ಯರು ಕೈಯಿಂದ ಮುಟ್ಟುವಂತಹುದಲ್ಲ. ಮನಸ್ಸಿನ ಭಾವನೆ ಅದೊಂದು ವಿಚಿತ್ರ ಕಲ್ಪನೆ. ನಮ್ಮದು ಅಥವಾ ನಮ್ಮದಲ್ಲ ಈ ಭಾವನೆಗಳ ವೆತ್ಯಾಸದಲ್ಲಿ ನಮ್ಮ ಪ್ರವೃತ್ತಿ ಇರುತ್ತದೆ.  

ಕೆಲವೊಮ್ಮೆ ಯಾವುದೇ ಕಾರ್ಯ ಕೆಲಸಗಳು ಇದೇ ಬಗೆಯಲ್ಲಿ ವರ್ಗೀಕರಿಸಲ್ಪಡುತ್ತದೆ. ಅದು ಸತ್ಕಾರ್ಯ ಅಥವ ದುಷ್ಕಾರ್ಯ, ಇಲ್ಲಿ ಕಾರ್ಯ ಮುಖ್ಯವಾಗುವುದಿಲ್ಲ. ಅದು ಮಾಡುವ ವ್ಯಕ್ತಿ ಅಥವಾ ಸನ್ನಿವೇಶ ಮುಖ್ಯವಾಗುತ್ತದೆ. ಒಂದು ಒಳ್ಳೆಯ ಸತ್ಕಾರ್ಯ...ನಮಗೆ ಆಗದೇ ಇದ್ದವರು ಮಾಡಿದಾಗ ಅದನ್ನು ಒಪ್ಪಿಕೊಳ್ಳುವುದಕ್ಕೆ ಮನಸ್ಸು ಸಿದ್ದರಿರುವುದಿಲ್ಲ. ಅದೇ ಬಗೆಯಲ್ಲಿ ಯಾವುದೇ ಕೆಟ್ಟ ಕೆಲಸವನ್ನು ನಮ್ಮ ಇಷ್ಟವಿದ್ದವರು ಮಾಡುವಾಗ ಅದನ್ನು ಕೆಟ್ಟದ್ದು ಎಂದು ಹೇಳುವುದರಲ್ಲಿ ಆತ್ಮವಂಚನೆ ಎದುರಾಗುತ್ತದೆ. ಅದು ಕೆಲಸದ ಮೇಲಿನ ಭಾವವಲ್ಲ. ಕೇವಲ ಮನುಷ್ಯ ಸಂಬಂಧದ ಮೇಲಿನ ಭಾವ.  ಕಾರ್ಯ ಒಂದೇ ಇರುತ್ತದೆ, ಮಾಡುವ ವ್ಯಕ್ತಿ ಬೇರೆ ಬೇರೆಯಾಗಿರುತ್ತದೆ. 

ಅಷ್ಟಾಂಗ ಯೋಗದಲ್ಲಿ ಒಂದು ನಿಯಮವಿದೆ ಅಹಿಂಸೆ. ಅಂದರೆ ಹಿಂಸೆಯನ್ನು ಮಾಡದೇ ಇರುವುದು. ಇಲ್ಲಿ ಹಿಂಸೆ ಎಂಬುದು ಮನಸ್ಸಿನ ಹಿಂಸಾತ್ಮಕ ಮನೋಭಾವವನ್ನು ಹೊಂದಿದೆ. ಅಹಿಂಸೆ ಎನ್ನುವುದು ಮಾಂಸಾಹಾರಿಯಾಗುವುದರಲ್ಲಿ ಇಲ್ಲ. ಮೇಲ್ನೋಟಕ್ಕೆ ನೋಡುವಾಗ ಸಸ್ಯಹಾರಿಯಾಗುವುದರಲ್ಲಿ ಅಹಿಂಸಾ ಗುಣವಿರುತ್ತದೆ. ಆದರೆ ವಾಸ್ತವದಲ್ಲಿ ಮಾಂಸಾಹಾರಿಯಾಗಿದ್ದರೂ ಅಹಿಂಸಾ ಗುಣವನ್ನು ಅಳವಡಿಸಿಕೊಳ್ಳಬಹುದು. ಹಿಂಸೆ ಅದು ಮನಸ್ಸಿನ ಭಾವದಲ್ಲಿರುತ್ತದೆ ಹೊರತು ಕೃತ್ಯದಲ್ಲಿ ಇರುವುದಿಲ್ಲ. ಯಾರಿಗೂ ಮನಸ್ಸಿನಿಂದಲೂ ಹಿಂಸಾತ್ಮಕ ಚಿಂತನೆಯಿಂದ ನೋವಾಗದಂತೆ ವರ್ತಿಸುವುದು ಅಹಿಂಸಾ ಗುಣವಾಗಿರುತ್ತದೆ. ಹಿಂಸೆ ಎಂಬುದು ಪ್ರವೃತ್ತಿಗಿಂತಲೂ ಮನೋಭಾವದಿಂದ ಕೂಡಿರುತ್ತದೆ. ಹಿತೈಷಿಗಳು  ಪ್ರೀತಿಯಿಂದ ಕೆಟ್ಟದಾಗಿ ಗದರಿದರೂ ಅದು ಬೈಗುಳವಾಗುವುದಿಲ್ಲ. ಅಥವಾ ದ್ವೇಷದಿಂದ ಶತ್ರುಗಳು ವ್ಯಂಗ್ಯವಾಗಿ ಹೊಗಳಿದರೂ ಅದು ಸ್ತುತಿಯಾಗುವುದಿಲ್ಲ.  ಮನೋಭಾವ ಎಂಬುದು ಪ್ರವೃತ್ತಿಗೆ ಪೂರಕವಾಗಿರುವುದಿಲ್ಲ. ಅದು ವ್ಯಕ್ತಿರಿಕ್ತವಾಗಿರುತ್ತದೆ. 

ಯಾವುದೋ ಒಂದು ಹಾಡು ಯಾರಿಗೋ ಇಷ್ಟವಾಗುತ್ತದೆ ಎನ್ನುವ ಕಾರಣಕ್ಕೆ ಮೊತ್ತೊಬ್ಬರಿಗೆ ಇಷ್ಟವಾಗುವುದಿಲ್ಲ. ಹಾಡಿನ ಭಾವಾರ್ಥವಾಗಲಿ, ಹಾಡಿನ ಸಂದೇಶವಾಗಲಿ, ಹಾಡಿನ ರಾಗ ತಾಳವಾಗಲೀ ಕಾರಣವಾಗದೇ ಯಾರೋ ಇಷ್ಟ ಪಟ್ಟಿದ್ದಾರೆ ಎನ್ನುವುದಕ್ಕೆ ಅದನ್ನು ಹಾಡುವುದಕ್ಕೆ ಕೇಳುವುದಕ್ಕೆ ಬಯಸುವುದಿಲ್ಲ. ಕೇವಲ ಮನಸ್ಸಿನ ಭಾವ ಮಾತ್ರ. ಯಾವುದೋ ಹಾಡು ಯಾರೋ ದ್ವೇಷಿಸಿದ ಮಾತ್ರಕ್ಕೆ ಅದು ಕೆಟ್ಟ ಹಾಡಾಗುವುದಿಲ್ಲ.  ನಮ್ಮ ಮೆಚ್ಚಿನ ನಟ ಕೆಟ್ಟ ಸಿನಿಮಾದಲ್ಲಿ ನಟಿಸಿದರೂ ಅದು ಕೆಲವು ಸಲ ಇಷ್ಟವಾಗುತ್ತದೆ. ಅಭಿಮಾನದಲ್ಲಿ ಕೆಟ್ಟದ್ದು ಎಂಬುದು ಮುಚ್ಚಿ ಹೋಗುತ್ತದೆ.  ಹೆತ್ತ ತಾಯಿಗೆ ಹೆಗ್ಗಣ ಮುದ್ದು ಎಂದಾಗುವುದು ಇದೇ ಭಾವದಲ್ಲಿ. ಯಾವುದೋ ಒಂದು ನಮಗೆ ಇಷ್ಟವಾಗುತ್ತದೆ. ಮತ್ತೊಬ್ಬರಿಗೆ ಇಷ್ಟವಾಗಲಿಲ್ಲ ಎನ್ನುವುದಕ್ಕೆ ನಮ್ಮ ಇಷ್ಟವೆಂಬುದು ಮೌಲ್ಯರಹಿತವಾಗುವುದಿಲ್ಲ. ಮತ್ತೊಬ್ಬರ ಮನಸ್ಸನ್ನಷ್ಟೇ ಪರಿಗಣಿಸಿ ನಮ್ಮ ಇಷ್ಟವನ್ನು ನಾವು ಗೌರವಿಸಿಬಿಡುವುದರಲ್ಲಿ ಆತ್ಮ ತೃಪ್ತಿ ಇರುತ್ತದೆ. ನಲ್ಲ ಪ್ರೀತಿಯಿಂದ ಕೊಟ್ಟ ಒಂದು ಸಣ್ಣ ಹೂವು ಅವ್ಯಕ್ತವಾದ ಪರಿಮಳವನ್ನು ಬೀರಿದಂತೆ ಇಲ್ಲಿ ಪ್ರೀತಿ ಮಾತ್ರ ಗೌರವಿಸಲ್ಪಡುತ್ತದೆ. ಪ್ರೀತಿ ಎಂಬ ಭಾವ ಮಾತ್ರ ಪ್ರೇಮಿಯದಾಗಿರುತ್ತದೆ. 


Saturday, September 20, 2025

ದಾದಾ ಫಾಲ್ಕೆ ಮೋಹನ್ ಲಾಲ್

ಭರತಂ‌ , ವಾನ ಪ್ರಸ್ಥಂ  ಎಂಬ ಮಲಯಾಳಂ ಸಿನಿಮಾ ನೋಡಿದವರಿಗೆ ಮೋಹನ್ ಲಾಲ್ ಎಂಬ ದೈತ್ಯ ಪ್ರತಿಭೆಯ ಅರಿವಾಗಬಹುದು. ಈ  ಎರಡೂ ಸಿನಿಮಾಗಳಲ್ಲಿನ ಶ್ರೇಷ್ಠ ಅಭಿನಯಕ್ಕಾಗಿ  ಪಡೆದ  ಮೋಹನ್ ಲಾಲ್ ಎರಡೂಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ಅಪರೂಪದ ನಟ. ಇವೆರಡೂ ಸಿನಿಮಾಗಳು ಕೇವಲ‌ ಪ್ರತಿಭಾ ನಿದರ್ಶನ ಎನ್ನಬೇಕು.‌ಪಟ್ಟಿ ಮಾಡುತ್ತಾ ಹೋದರೆ ಯಾವುದು ಉತ್ತಮ‌ ಎಂಬ ಆಯ್ಕೆ ಸುಲಭ ಸಾಧ್ಯವಲ್ಲ. 

       ಕಿರೀಟಂ, ಚೆಂಗೋಲ್, ಕಿಲುಕ್ಕಂ  ವಂದನಂ ದಶರಥಂ, ಸದಯಂ, ಪವಿತ್ರಂ, ಪಿಂಗಾಮಿ, ಸನ್ಮನಸ್ಸುಳ್ಳವರ್ಕು ಸಮಾಧಾನಂ, ನಾಡೋಡಿಕ್ಕಾಟು, ಕಳಿಪ್ಪಾಟಂ, ಮಿಥುನಂ, ಚಂದ್ರಲೇಖ, ತನ್ಮಾತ್ರ ಹೀಗೆ ಹೇಳುತ್ತಾ ಹೋದರೆ ಅದಕ್ಕೆ  ಅಂತ್ಯವಿಲ್ಲ ಎಂದನಿಸುತ್ತದೆ. ಎಲ್ಲವೂ ಅತ್ಯುತ್ತಮ‌ ನಟನೆಗೆ ಸಾಕ್ಷಿಯಾದ ಚಿತ್ರಗಳು. ದಶಕಗಳ ಹಿಂದೆ ಇವುಗಳನ್ನು ನೋಡಿ ವಾರಗಳ ಕಾಲ‌ ಅದರ ನಶಾವಲಯಲ್ಲಿ ಹುದುಗಿ ಹೋದದ್ದು ಇನ್ನೂ ನೆನಪಲ್ಲಿದೆ. ಅಭಿನಯವೆಂದರೆ ಅದು ಮಾದರಿಯಾಗಬಲ್ಲ ನಟನಾ ಕೌಶಲವನ್ನು  ಹೊಂದಿದ ಪ್ರತಿಭಾವಂತ ಈ‌ ನಟನೆಗೆ ಮಾರು ಹೋಗದವರಿಲ್ಲ.  ಸರ್ವಾಂಗವೂ ಅಭಿನಯಕ್ಕೆ ಅರ್ಪಿಸಿಕೊಂಡ ಅದ್ಭುತ ನಟನಾಶೈಲಿಗೆ ಸಹಜವಾಗಿ ಚಲನಚಿತ್ರದ ಅತ್ಯುನ್ನತ ದಾದಾ ಸಾಹೆಬ್ ಪ್ರಶಸ್ತಿ ಒಲಿದು ಬಂದಿದೆ. ಈತನ ಪ್ರತಿಭೆಗೆ ಎಂದೋ ಇದು ಸಿಗಬೇಕಿತ್ತು, ಈಗ ಸಿಕ್ಕಿದೆ. ನಿಜಕ್ಕೂ ಲಾಲೇಟ್ಟ ಇದಕ್ಕೆ ಅರ್ಹ‌ ವ್ಯಕ್ತಿ ಎ‌ನ್ನುವುದಕ್ಕೆ ಎರಡು ಮಾತಿಲ್ಲ. 

       ಮಲಯಾಳಂ‌ ಚಿತ್ರರಂಗ ಎಂದರೆ‌ ಪ್ರತಿಭಾ ಸಂಪತ್ತಿನ  ಗಡಣವೇ  ತುಂಬಿದ ಕ್ಷೇತ್ರ. ಇಲ್ಲಿ ನೈಜ ಅಭಿನಯಕ್ಕೆ ಕಠಿಣ ಸ್ಪರ್ಧೆ ಸದಾ ಎದುರಾಗುತ್ತಿದೆ.‌ ಅಂತಹ ಕ್ಷೇತ್ರದಲ್ಲಿ ತನ್ನ ಪ್ರತಿಭೆಗೆ ಹಸರಾದ ಸಂಪೂರ್ಣ ನಟ ಮೋಹನ್ ಲಾಲ್ ಎಂಬುದರಲ್ಲಿ ಎರಡು ಮಾತಿಲ್ಲ. 

       ಎಲ್ಲಾ ಚಿತ್ರರಂಗಗಳೂ ಇಂದು ಸಂಕ್ರಮಣ ಸ್ಥಿತಿಯನ್ನು ಎದುರಿಸುತ್ತದೆ.‌ಇಂದು ಇರುವ ಸ್ಥಿತಿ ನಾಳೆ ಇಲ್ಲ. ಥಿಯೇಟರ್ ಗಳಿಗೆ ಜನ‌ಬರುತ್ತಿಲ್ಲ. ಮನೆಯಲ್ಲೇ ಕುಳಿತು ಅಚ್ಚ ಹೊಸ ಮತ್ತು ತೀರಾ ಹಳೆಯ ನೋಡಬಲ್ಲ ಅವಕಾಶ. ಬೆರಳೆಣಿಕೆಯಲ್ಲಿ ಹೊರ ಬರುವ ಸಿನಿಮಾಗಳು ಹೀಗೆ ಇಂದು ಸಿನಿಮಾ ಎಂದರೆ ಮೊದಲಿನ ಆಕರ್ಷಣೆಯನ್ನು ಕಳೆದುಕೊಂಡಿದೆ. ಅದರಲ್ಲೂ ವರ್ಷಕ್ಕೆ ಹಲವು ಸಿನಿಮಾಗಳನ್ನು ಕೊಡುತ್ತಿದ್ದ ಸೂಪರ್ ಸ್ಟಾರ್ ನಟರು, ಲೀಡ್ ರೋಲ್ ಗಳಿಗಷ್ಟೇ   ಸೀಮಿತವಾಗಿರುವುದರಿಂದ    ಇಂದು ಮೂಲೆ ಸೇರಿ ಹೆಸರಿಗಷ್ಟೇ ಸ್ಟಾರ್ ಅಗಿದ್ದಾರೆ. ಹೆಸರಾಂತ ನಟರ ಹೊಸ ಸಿನಿ‌ಮ ಬಿಡುಗಡೆಯಾಗಿ ಜಮಾನವೇ ಕಳೆದುಹೋಗಿದೆ. ಇಂತಹ ಪರಿಸ್ಥತಿಯಲ್ಲೂ ಮೋಹನ್ ಲಾಲ್ ಹೊಸ ಸಿನಿಮಾಗಳು ಬಿಡಗಡೆಯಾಗಿ ದುಡ್ಡು ಬಾಚುತ್ತಿವೆ ಎಂದರೆ ಮೋಹನ್ ಲಾಲ್ ವರ್ಚಸ್ಸು ಇನ್ನೂ ಹಸಿರಾಗಿರುವುದಕ್ಕೆ, ಎಂತಹಾ ಪಾತ್ರವನ್ನೂ ಲೀಲಾಜಾಲವಾಗಿ ಮಾಡಬಲ್ಲ ಆತನ ಪ್ರತಿಭೆಯೇ ಸಾಕ್ಷಿ.  ಎಂದಿನಂತೆ ಈ ವರ್ಷವೂ ಆತನ ಸಿನಿಮಾಗಳು ಹಿಟ್ ಆಗುತ್ತಿವೆ ಎಂದರೆ... ದಾದಾ ಸಾಹೇಬ್ ಗರಿ ಎಲ್ಲೋ ಅಕಾಶದಲ್ಲಿ ವಿಹರಿಸುತ್ತಾ ಈಗ ಮೋಹನ್ ಲಾಲ್ ತಲೆಯಲ್ಲಿ ಬಂದು ಕುಳಿತಿದೆ. 


         ಒಬ್ಬ ನಟ ಪರಿ ಪೂರ್ಣ ಎಂದಾಗಬೇಕಾದರೆ ಕೇವಲ ಸ್ಟಾರ್ ಗಿರಿ ಸಾಲದು. ಹುಚ್ಚು ಅಭಿಮಾನ ಸಾಲದು. ಯಾವುದೇ ಪಾತ್ರ, ಅದು ಕಥಾನಯಕ ಅಥವಾ ಖಳ ಪಾತ್ರವೇ ಅಗಲಿ   ಇಮೇಜ್ ತೊರೆದು  ಲೀಡ್  ರೋಲ್ ಗೆ ಅಡರದೆ ಪಾತ್ರೋಚಿತ ನಟನೆ ಮಾಡಬಲ್ಲವನಾಗಿರಬೇಕು.‌ಹಾಗಾಗಿಯೇ ಈ ಪರಿಪಕ್ವ ನಟನ ಸಿನಿಮಾ ಎಂದರೆ ಈಗಲು ಜನಾಕರ್ಷಣೆಯನ್ನು ಗಳಿಸಿದ ಇಂತಹ ನಟನಿಗೆ ಈಗ ಪಾಲ್ಕೆ ಗರಿ ಒಲಿದು ಬಂದಿರುವುದು ಕೇವಲ ಅದೃಷ್ಟವೋ ವಶೀಲಿ ಬಾಜಿಯೋ ಖಂಡಿತಾ ಅಲ್ಲ. ಇದು ದೈವದತ್ತ ಪ್ರತಿಭೆಗೆ ಒಲಿದ ಪುರಸ್ಕಾರ.‌ಇದು ಇನ್ನೂ ಹುದುಗಿರುವ ಪ್ರತಿಭೆಗೆ ಪ್ರೇರಣೆಯಾಗಲಿ ಎಂಬುದಷ್ಟೇ ಈ ಸಹಜ ನಟನ ಸಹಜಾಭಿಮಾನಿಗಳ ಆಶಯ.





Saturday, September 6, 2025

ಧರ್ಮ‌ಪರಿಷ್ಕಾರ

    ಹಿಂದೂ ಧರ್ಮದಲ್ಲಿ ಯಾರೂ ಗಂಭೀರವಾಗಿ ಯೋಚಿಸದ ಒಂದು ಗುಣವಿದೆ. ಅದು ಸಂಪೂರ್ಣ ಗ್ರಾಹ್ಯ ಸ್ವಭಾವ ಎಂದರೆ, ಪರಧರ್ಮವನ್ನು ಗ್ರಹಿಸುವ ಮತ್ತು ಗೌರವಿಸುವ ಗುಣ. ಹಾಗಾಗಿ ಇದು ಸಹಸ್ರ ಶತಮಾನಕ್ಕಿಂತ ಹಳೆಯದಾದ ತತ್ವಗಳನ್ನು ಉಳಿಸಿಕೊಂಡು ಸತತವಾಗಿ ಪರಿಷ್ಕಾರಕ್ಕೆ ಒಳಗಾಗಿದೆ. ಹಲವು ಸಲ ಈ ಪರಿಷ್ಕಾರಗುಣ ಈ ಧರ್ಮವನ್ನು ತಾತ್ಸಾರದಿಂದ ಕಾಣುವಂತೆ ಮಾಡಿದೆ. ಅದು ಸಹಜ ಹಲವು ಸಲ ನಮ್ಮ ಸದ್ಗುಣ ಸನ್ಮನಸ್ಸೂ ತಾತ್ಸರಾಗಳಿಗೆ ತುತ್ತಾಗಿ ಅವಗಣಿಸಲ್ಪಡುವುದು ಸಹಜವಾಗಿದೆ.ಅದರಂತೆ ನಮ್ಮ ಮೂರ್ಖ ರಾಜಕಾರಿಣಿಗಳ ಹಲವು ಚಿಂತಕರ ಪ್ರವೃತ್ತಿಯೂ ಇದೇ ಬಗೆಯಲ್ಲಿರುತ್ತದೆ. ಅವರಿಗೆ ಗ್ರಾಹ್ಯ ಗುಣಗಳ ಅರಿವೇ ಇಲ್ಲ.

       ಎಲ್ಲಿ ಧರ್ಮಗಳು ಪರಸ್ಪರ ಸಮಾನವಾಗಿ...ಈ ಸಮಾನವಾಗಿ ಎಂಬುದನ್ನು ಒತ್ತಿ ಹೇಳಬೇಕಿದೆ, ಅದು ಸಮಾನವಾಗಿ ಗೌರವಿಸಲ್ಪಡುವುದೋ ಅಲ್ಲಿ ಧರ್ಮಗಳ‌ ತತ್ವ ಜೀವಂತವಾಗಿ ಆನಷ್ಠಾನದಲ್ಲಿರುರುತ್ತದೆ.. ಆದರೆ ಮೂರ್ಖರಿಗೆ ಇದು ಅರ್ಥವಾಗುವುದಿಲ್ಲ. ಹಾಗಾಗಿ ತಿದ್ದುಪಡಿ ಸಮಾನತೆ ಎಲ್ಲವನ್ನೂ ಹಿಂದೂ ಧರ್ಮದಲ್ಲಿ ಅರೋಪಿಸಿಬಿಡುತ್ತಾರೆ. ಇವರ ಬಗೆಯಲ್ಲಿ ಹಿಂದೂ ಧರ್ಮ‌ಮಾತ್ರ ಬದಲಾಗಿ ಪರಿಷ್ಕರಿಸಬೇಕಾದ ಗುಣಗಳನ್ನು ಹೊಂದಿದೆ.ಆದರೆ ಪ್ರತಿಯೊಂದು ಧರ್ಮದಲ್ಲೂ ಧನಾತ್ಮಕ ಋಣಾತ್ಮಕ ಗುಣಗಳಿವೆ. ಅದನ್ನು ಒಪ್ಪಿಕೊಳ್ಳುವ ಪ್ರಾಮಣಿಕತೆ ಇರಬೇಕು ಅಷ್ಟೇ. ಆದರೆ ಧಾರ್ಮಿಕ ನಿರಪೇಕ್ಷತೆಗೆ ಪಕ್ಷಪಾತ ಶಾಪವಾಗಿ ಪರಿಣಮಿಸುವಾ ಹಿಂದೂ ಧರ್ಮ ಗುರಿಯಾಗುತ್ತದೆ.

         ಪರಧರ್ಮವನ್ನು ಗೌರವಿಸುವಾಗ ನಮ್ಮ ದರ್ಮದ ಶ್ರೇಷ್ಠ ತೆಯನ್ನು ಬಿಂಬಿಸಬೇಕು ಎನ್ನವ ಸಾಮನ್ಯ ಜ್ಞಾನವೂ ಇಲ್ಲದೇ ಹಿಂದೂ ಧರ್ಮವನ್ನು ಅವಗಣಿಸುವ ಈ ಭ್ರಷ್ಟ ಜಾತ್ಯಾತೀತ ತತ್ವದ ಢಾಂಭಿಕತನವನ್ನು ಅರಿಯಬೇಕು. ಅನ್ಯ ಧರ್ಮದ ಆಚರಣೆಯಲ್ಲಿ ನಮ್ಮ ಧರ್ಮವನ್ನು ಒತ್ತೆ ಇಡುವಾಗ ಅನ್ಯ ಧರ್ಮವನ್ನು ಇಲ್ಲೂ ಒತ್ತೆ ಇರಿಸಿಕೊಳ್ಳಬಹುದಾದ ಸಮಾನ ಸೌಹಾರ್ದತೆಯನ್ನು ಅಳವಡಿಸುವುದು ಧಾರ್ಮಿಕ ಅವಕಾಶವಾಗಬೇಕು. ಆದರೆ ಪರಮ ಸ್ವಾರ್ಥದ ಪಕ್ಷಪಾತದಲ್ಲಿ ಇದನ್ನೆಲ್ಲ‌ ಚಿಂತಿಸುವ ಮನೋಭಾವದ ಕೊರತೆಯಾಗಿದೆ. ಇದನ್ನು ಪರಮ‌ ಮೂರ್ಖತನ ಎನ್ನಬೇಕು. ಬಲವಂತದಿಂದ ಕುಂಕುಮ‌ ತಿಲಕ ಇರಿಸಿದರೂ ಬಲವಂತದಿಂದ ಟೋಪಿ ಧರಿಸಿದರೂ ಅದು ಧಾರ್ಮಿಕ ಆಷರಣೆಯಾಗುವುದಿಲ್ಲ. ಕೇವಲ ಆಷಾಢಭೂತಿತನದ ಮೂರ್ಖತನವಾಗುತ್ತದೆ

Tuesday, August 26, 2025

ದೈವಾಗಮನ....


. ಯಾವುದೇ ಹಬ್ಬ ಹರಿದಿನ ಬರಲಿ ನಮ್ಮ ಮನೆಯ ರಸ್ತೆಯಲ್ಲಿ ಮೊದಲ ದಿನವೇ  ಒಂದು ಸಡಗರ ಆರಂಭವಾಗುತ್ತದೆ. ಅದೇನು ನಮ್ಮ ರಸ್ತೆಗೆ ಮಾತ್ರ ಸೀಮಿತವಲ್ಲ. ಎಲ್ಲ ಕಡೆಯೂ ಇರುತ್ತದೆ. ರಾತ್ರಿಯಾಗುತ್ತಿದ್ದಂತೆ ಮನೆಯ ಎದುರು ಗುಡಿಸಿ ನೀರು ಹಾಕಿ ಸ್ವಚ್ಛ ಮಾಡುತ್ತಾರೆ. ಮತ್ತೆ ರಂಗೋಲಿ ಹಾಕುತ್ತಾರೆ. ಇದು ಹಬ್ಬ ಹರಿದಿನ ಅಂತ ಅಲ್ಲ ಹಲವು ಸಲ ದಿನ ನಿತ್ಯವೂ ಇದೂ ಕೆಲವು ಕಡೆ ಇರುತ್ತದೆ. ವಿಚಿತ್ರವೆಂದರೆ ಮೊದಲ ದಿನ ರಾತ್ರಿ ಈ ಕೆಲಸ ಮಾಡುವುದು ಒಂದು ಅಪಭ್ರಂಶ ಎಂಬಂತೆ ನನಗೆ ಭಾಸವಾಗುತ್ತದೆ. ಸಂಪ್ರದಾಯದ ಪ್ರಕಾರ ರಾತ್ರಿ ಪೊರಕೆ ಉಪಯೋಗಿಸುವ ಹಾಗಿಲ್ಲ. ಆದರೂ ನಗರದ ಜೀವನ ಕ್ರಮದಲ್ಲಿ ಕೆಲವನ್ನು ಪಾಲಿಸುವುದು ಸಾಧ್ಯವಾಗುವುದಿಲ್ಲ ಎನೋ ಸತ್ಯ. ಆದರೆ ಅದರ ಬಗ್ಗೆ ಗಮನ ಹರಿಸಿ ಒಂದಿಷ್ಟು ಪ್ರಯತ್ನ ಮಾಡಬಹುದು. ಹೋಗಲಿ ರಾತ್ರಿ ರಂಗೋಲಿ ಹಾಕುವುದು ಮಾತ್ರ ವಿಚಿತ್ರ ಎನಿಸುತ್ತದೆ.  ಇದು ಬೆಂಗಳೂರಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯ. ಹಲವು ಸಲ ಇದನ್ನು ಕಾಣುವಾಗ ಯಾವ ಉದ್ದೇಶಕ್ಕೆ ರಂಗೋಲಿ ಹಾಕುತ್ತಾರೆ ಎಂದು ಆಶ್ಚರ್ಯವಾಗುತ್ತದೆ. 

ನಮ್ಮ ಸಂಪ್ರದಾಯ ಪರಂಪರೆಯಲ್ಲಿ ಬಳಕೆಯಲ್ಲಿ ಬರುವ ಹಲವು ಪವಿತ್ರ ಕಾರ್ಯಗಳಿಗೆ ಅಂತರಾರ್ಥ ಇರುತ್ತದೆ.  ಮಾಡುವ ಕಾರ್ಯ ಹೊರ ನೋಟಕ್ಕೆ ಒಂದು ಕಂಡರೆ ಅದರ ಒಳನೋಟ ಬೇರೆಯೇ ಇರುತ್ತದೆ. ಅದನ್ನು ಮನಗಂಡು ನಾವು ಅದನ್ನು ಗೌರವಿಸಿ ನಡೆದು ಕೊಂಡರೆ ನಾವು ಮಾಡುವ ಆಚರಿಸುವ ಕಾರ್ಯಗಳಿಗೆ ಅರ್ಥ ಒದಗಿಬರುತ್ತದೆ. ಸಂಪ್ರದಾಯವನ್ನು ಮೀರಿ ಯಾವುದನ್ನು ಮಾಡಿದರೂ ಯಾರೇನೂ ಪ್ರಶ್ನಿಸುವುದಕ್ಕಿಲ್ಲ. ಮಾಡುವ ಸ್ವಾತಂತ್ರ್ಯ ಇದ್ದೇ ಇರುತ್ತದೆ. ಶೌಚಾಲಯದಲ್ಲಿ ಕುಳಿತು ಊಟವನ್ನೂ ಮಾಡಬಹುದು. ಮಾಡುವವರ ಸ್ವಾತಂತ್ರ್ಯ ಅಷ್ಟೇ. 

ರಂಗೋಲಿ ಹಾಕುವ ಕ್ರಮ ಎಂದರೆ ಮುಂಜಾನೆ ಸೂರ್ಯ ಉದಿಸುವ ಮೊದಲು ಹಾಕಬೇಕು.  ಸೂರ್ಯೋದಯದಲ್ಲಿ ಭಗವಂತನ ಆಗಮಿಸುತ್ತಾನೆ. ಸೂರ್ಯ ಕಿರಣಗಳೊಂದಿಗೆ ಸುಂದರವಾದ ರಂಗೋಲಿ ಹಾಕಿದರೆ ಅದು ಮುಂಜಾನೆ ಆಗಮಿಸುವ ಸಂಚರಿಸುವ  ಭಗವಂತನಿಗೆ ಅಥವಾ ಒಳ್ಳೆಯ ಶಕ್ತಿಗೆ, ಧನಾತ್ಮಕ ಚಿಂತನೆಗಳಿಗೆ ಸ್ವಾಗತ ಕೋರಿದಂತೆ. ಆದರೆ ರಾತ್ರಿ ರಂಗೋಲಿ ಹಾಕಿದರೆ..ರಾತ್ರಿ  ಋಣಾತ್ಮಕ ಪ್ರತೀಕವಾದ ಬೂತ ಪ್ರೇತ ದೆವ್ವ ಎಂಬ ಅಸುರೀಭಾವಗಳು ಸಂಚರಿಸುವುದನ್ನು ಸ್ವಾಗತಿಸಿದಂತೆ. ಭಗವಂತನ ಬದಲು ಪ್ರೇತ ಪಿಶಾಚಿಗಳನ್ನು ಮನೆಯೊಳಗೆ ಆಹ್ವಾನಿಸಿದಂತಾಗುತ್ತದೆ. ಆದರೆ ಇದನ್ನೆ ತಾಳ್ಮೆಯಿಂದ ಅರ್ಥವಿಸುವ ಗೋಜಿಗೆ ಹೋಗುವುದಿಲ್ಲ. ಒಟ್ಟು ಆಚರಿಸಬೇಕು. ಮೊದಲ ರಾತ್ರಿಯೇ ಹಾಕುವುದರಿಂದ ಮುಂಜಾನೆ ಬೇಗನೆ ಏಳುವ ಅವಶ್ಯಕತೆ ಇರುವುದಿಲ್ಲ. ಇಷ್ಟಕ್ಕೂ ನಾವು ರಂಗೋಲಿ ಹಾಕುವ ಉದ್ದೇಶವಾದರೂ ಏನು ಎಂಬುದು ತಿಳಿದಿರಬೇಕು.  ಹೀಗಾಗಿಯೇ ನಾವೇಷ್ಟು ಉತ್ಕೃಷ್ಟ ಕೆಲಸಗಳನ್ನು ಮಾಡಿದರೂ ಅಸುರೀ ಭಾವ ತಾಂಡವವಾಡುತ್ತದೆ. ನಮ್ಮ ಮನಸ್ಸು ಸದಾ ಅಶಾಂತಿಯಿಂದ ತುಂಬಿರುತ್ತದೆ ಮನೆ ಮನಗಳಲ್ಲಿ ಶಾಂತಿ ಸಮಾಧಾನ ಎಂಬುದು ಗಗನ ಕುಸುಮವಾಗುತ್ತದೆ. ನಾವು ನಾಗರೀಕರಾಗುವುದು ಎಂದರೆ ಪರಂಪರೆಯಲ್ಲಿ ಬಂದ ವಿಶಿಷ್ಟ ಶ್ರೇಷ್ಠ ಪದ್ದತಿಗಳನ್ನು ವಿರೋಧಿಸುವುದೇ ಆಗಿರುತ್ತದೆ. ಅದನ್ನು ವಿರೋಧಿಸಿ ನಡೆದುಕೊಂಡರೆ ನಾವು ನಾಗರೀಕರಾಗಿದ್ದೇವೆ ಎಂದು ಅರ್ಥವಿಸಬೇಕು.