Sunday, April 20, 2025

ಯಜ್ಞೋಪವೀತ ದರ್ಶನ

ಬಾಲ್ಯದಲ್ಲಿ ಪ್ರಾಥಮಿಕ ಶಾಲೆಗೆ ಹೋಗುತ್ತಿರಬೇಕಾದರೆ ಬ್ರಹ್ಮೋಪದೇಶವಾಯಿತು. ಅದು ವರೆಗೆ ನನಗೆ ಯಾವಾಗ ಉಪನಯನ ಅಂತ ಕೇಳುತ್ತಿದ್ದವನಿಗೆ ಒಂದು ದಿನ ಉಪನಯನವಾಯಿತು. ಬಡತನದಲ್ಲಿದ್ದವರಿಗೆ ಈ ಮದುವೆಯಾದರೂ ಸುಲಭದಲ್ಲಿ ಆಗಬಹುದು. ಅಲ್ಲಿ ಗಂಡು ಹೆಣ್ಣು ಮೆಚ್ಚಿದರೆ ಈ ಕಾಲದಲ್ಲಿ ಮದುವೆಯಾಗಿಬಿಡುತ್ತದೆ. ಆದರೆ ಉಪನಯನ ಎಂಬುದು ಅಷ್ಟು ಸುಲಭದಲ್ಲಿ ಸಾಧ್ಯವಾಗುವುದಿಲ್ಲ. ಕೇವಲ ಒಬ್ಬ ಪುಟ್ಟ ಬಾಲಕನಿಗೆ ಆಗುವ ಒಂದು ಪುಟ್ಟ ಕಾರ್ಯಕ್ರಮವಾದರೂ ಅದಕ್ಕೆ ಹಲವಾರು ನಿಬಂಧನೆಗಳು ಇರುತ್ತವೆ. ಯಾಕೆಂದರೆ ಬ್ರಹ್ಮೋಪದೇಶ ಆ ಮಗುವಿಗೆ ಸಿಗುವ ಶಿಕ್ಷಣಕ್ಕೆ ಅಂದೇ ನಾಂದಿ. ಯಾವುದೇ ವ್ಯಕ್ತಿಯಾದರು ಹುಟ್ಟಿದ ಕೂಡಲೇ ಮೊದಲು ಸಿಗುವ ವಸ್ತುವೆಂದರೆ ಶಿಕ್ಷಣ. ಬದುಕಿನ ಕ್ಷಣ ಕ್ಷಣವೂ ಸಿಗುವುದಕ್ಕೆ ಶಿಕ್ಷಣ ಅಂತ ಹೇಳಬಹುದು.  ಆಗ ತಾನೆ ಹುಟ್ಟಿದ ನವಜಾತ ಶಿಶುವಿಗೆ ಬಾಯಿಗೆ ತೊಟ್ಟು ಹಾಲು ಸಿಗಬೇಕಾದರೆ ಅತ್ತರೆ ಸಿಗುತ್ತದೆ ಎಂಬ ಜ್ಞಾನ ಒದಗಿ ಬರುವಲ್ಲಿಂದ ಶಿಕ್ಷಣ ತೊಡಗಿಬಿಡುತ್ತದೆ. ಆದರೆ ಬದುಕಿನಲ್ಲಿ ನಾನು ಯಾಕೆ ಹುಟ್ಟಿದೆ ಅಂತ ತಿಳಿಯುವ ಶಿಕ್ಷಣ ಒದಗಿ ಬರುವುದು ಉಪನಯನದಿಂದ. ಅದೊಂದು ಮರು ಜನ್ಮ. ಹಾಗಾಗಿ ಅದಕ್ಕೆ ಮೂಹೂರ್ತ ಸುಲಭದಲ್ಲಿ ಸಿಗುವುದಿಲ್ಲ. ಬೇಕಾದರೆ ಜ್ಯೋತಿಷಿಗಳಲ್ಲಿ ಒಂದು ಸಲ ವಿಚಾರಿಸಿ. ತಂದೆ ಮಗನ ಗ್ರಹ ಬಲ ಜತೆಗೆ ಒದಗಿಬರಬೇಕು. ಹಾಗಾಗಿ ಬಡತನದಲ್ಲಿ ಉಪಯನ ಆಗುತ್ತದೆ ಎಂದು ವಿಶ್ವಾಸ ಇಡುವ ಹಾಗಿಲ್ಲ. ಆದರೂ ದೈವಾನುಗ್ರಹದಿಂದ ಉಪನಯನ ಆಯಿತು.  ಹಿರಿಯರು ಸಂಧ್ಯಾವಂದನೆ ಮಾಡುವಾಗ ಮಂತ್ರ ಹೇಳುವಾಗ ಮಕ್ಕಳು ಕುತೂಹಲದಿಂದ ಆಶೆ ಗಣ್ಣಿನಿಂದ ನೋಡುತ್ತೇವೆ. ಯಾಕೆಂದರೆ ಉಪಯನಯನವಾಗದೇ ಮಂತ್ರ ಹೇಳುವುದಕ್ಕೆ ಅಧಿಕಾರವಿಲ್ಲ. ಮಗುವಿಗೆ ಮೊದಲು ಬ್ರಹ್ಮೋಪದೇಶವಾಗಿ ಗಾಯತ್ರಿ ಮಂತ್ರದ ಉಪದೇಶವಾಗಬೇಕು.  ಕಾಲ ಯಾವುದೆಂದು ಗೊತ್ತಿಲ್ಲ. ಆ ಕಾಲದಿಂದ ವಿಶ್ವಾಮಿತ್ರ ಋಷಿಯ ಕಂಡ ಮಂತ್ರ ಗಾಯತ್ರಿ ಮಂತ್ರ. ಅದು  ನಮ್ಮ ನಾಲಿಗೆಯಲ್ಲಿ ಕುಣಿಯಬೇಕಾದರೆ ಅದಕ್ಕೊಂದು ಇತಿಹಾಸವಿದೆ. ಇತಿಹಾಸಕ್ಕಿಂತಲೂ ಅದಕ್ಕೊಂದು ಸಂಪ್ರದಾಯವಿದೆ. ಪೂರ್ಣವಿರಾಮ ಇಲ್ಲದ ಒಂದು ಸಂಪ್ರದಾಯವದು. 

ಸಂಧ್ಯಾವಂದನೆ....ಹೇಳುವುದಕ್ಕೆ ಒಂದು ಆಕ್ಷೇಪ ಉಂಟು. ಹಿಂದುಗಳೂ ಮೂರ್ತಿ ಪೂಜಕರು. ಸಾವಿರಾರು ದೇವರು ಇದ್ದಾರೆ...ಹೀಗೆ ಅಪೂರ್ಣ ಜ್ಞಾನದ ಸಂಗತಿಗಳು. ನಿಜಕ್ಕಾದರೆ ಸಂಧ್ಯಾವಂದನೆಯಲ್ಲಿ ಯಾವುದೇ ಮೂರ್ತಿಯೂ ಇಲ್ಲ. ಯಾವುದೇ ಕ್ಷೇತ್ರವೂ ಇಲ್ಲ.  ಯಾವುದೇ ಪರಿಕರದ ಅಗತ್ಯವೂ ಇರುವುದಿಲ್ಲ. ಬ್ರಹ್ಮೋಪದೇಶದ ನಂತರ ಅದು ಅನಿವಾರ್ಯ ಕರ್ಮ. ಮೂರೆಳೆ ಜನಿವಾರದಿಂದ ಬಂಧಿತವಾಗುವ ಅನಿವಾರ್ಯ ಕರ್ಮ ಅದು ಅಂತ ಹಲವರಿಗೆ ತಿಳಿದಿಲ್ಲ. ಹೊರಗೆ ಎಲ್ಲೂ ಕಾಣಲಾಗದ ಭಾವ ರೂಪವಿಲ್ಲದ ಭಗವಂತನನ್ನು ಆ ಪರಮೇಶ್ವರನನ್ನು ತನ್ನಲ್ಲೇ ಕಾಣುವ ಒಂದು ಪವಿತ್ರ ಕರ್ಮ. ಪವಿತ್ರ ಎಂದರೆ ಅಲ್ಲಿ ಪರಿಶುದ್ಧಿ ಇರಬೇಕು. ಆದರೆ ಪರಿಶುದ್ದಿ ಪಾವಿತ್ರ್ಯ ಎಂದರೆ ಇಂದಿಗೂ ಅದು ನಿಗೂಢ ಸತ್ಯ. ಹಲವರಿಗೆ ಅದು ತಿಳಿದಿಲ್ಲ. 

ಯಾವುದೇ ಪೂಜೆ ಪುನಸ್ಕಾರ, ಕರ್ಮಗಳನ್ನು ಮಾಡುವಾಗ ಪದೇ ಪದೇ ಅಚಮನ ಮಾಡುತ್ತಾರೆ. ಯಾಕೆಂದರೆ ಎಲ್ಲ ಭವ ಬಂಧನದ ಕಲ್ಮಷಗಳನ್ನು ಒಂದಿಷ್ಟಾದರೂ ಕಳೆದುಕೊಳ್ಳುವ ಸಾಮಾನ್ಯ ಕ್ರಿಯೆ. ಅಚಮನ ಮಾಡಿ ಪ್ರಾಣಾಯಾಮ ಮಾಡುತ್ತೇವೆ. ಪ್ರಾಣಾಯಾಮ ಎಂದರೆ ಏನು?  ಅಧುನಿಕ ಯೋಗ ಶಿಕ್ಷಣ ಹೇಳುತ್ತದೆ. ಪೂರಕ ರೇಚಕ ಕುಂಭಕದಲ್ಲಿ ಉಸಿರಾಟದ ತಂತ್ರಗಾರಿಕೆ. ಆದರೆ ಇದಿಷ್ಟೇ ಅಲ್ಲ. ಸನಾತನ ಧರ್ಮ ತೋರಿಸಿಕೊಡುವ ಪರಮ ಸತ್ಯ ಬೇರೆ  ಇದೆ. ಯಾವುದೇ ಪಾರಾಮಾರ್ಥಿಕ ಅನುಭವವಾಗಬೇಕಾದರೆ ನಾವು ನಮ್ಮ ಪಂಚೇಂದ್ರಿಯಗಳ ಸಂವೇದನೆ, ಪ್ರಚೋದನೆಯಿಂದ ದೂರಾಗಬೇಕು. ಕಣ್ಣು ಕಾಣಬಾರದು, ಕಿವಿ ಮೂಗು ತಟಸ್ಥವಾಗಬೇಕು. ದೇಹದ ಅಂಗಾಂಗಳು ಸ್ಪರ್ಶಜ್ಞಾನವನ್ನು ಕಳೆಯಬೇಕು. ವಿಸರ್ಜನಾಂಗಗಳು ತನ್ನ ಚಟುವಟಿಕೆಯನ್ನು ಸ್ತಭ್ದ ಗೊಳಿಸಬೇಕು. ಅದೊಂದು ಸ್ಥಿತಪ್ರಜ್ಞ ಸ್ಥಿತಿ. ಅದನ್ನು ಸಾಧಿಸುವ ಪುಟ್ಟ ಕ್ರಿಯೆ ಪೂರಕ ರೇಚಕ ಕುಂಭಕದ ಒಂದು ಕ್ರಿಯೆ. ಕೇವಲ ಮೂಗು ಹಿಡಿದು ಗಾಯತ್ರೀ ಮಂತ್ರ ಸ್ಮರಣೆಯಲ್ಲಿ ಪ್ರಾಣಾಯಾಮವಾಗುವುದಿಲ್ಲ. ಸೂರ್ಯ ಭೇದನ ಕ್ರಿಯೆಯಿಂದ ತೊಡಗುವ ಪ್ರಾಣಾಯಾಮ,  ಕಣ್ಣನ್ನು ಮುಚ್ಚಿಸುತ್ತದೆ. ಉಸಿರಾಟವನ್ನು ಸ್ತಬ್ಧಗೊಳಿಸುತ್ತದೆ.   ನಮ್ಮ  ದೇಹದ ಸ್ಪರ್ಶವನ್ನು ನಿಯಂತ್ರಿಸುತ್ತದೆ. ಈ ಅದ್ಭುತ ಕ್ರಿಯೆ ಎಂದರೆ ಅದು ಪರಿಶುದ್ದಿಯ ಸಂಕೇತ. ತಾನು ಈ ಭವಬಂಧನಿಂದ ಕ್ಷಣ ಹೊತ್ತಾದರೂ ಬೇರಾಗಿ ಪವಿತ್ರ ನಾದೆ ಎಂದು ತಿಳಿಯುವ ಕ್ರಿಯೆ. ದೇಹ ಸ್ಪರ್ಶಜ್ಞಾನದಿಂದ ದೂರಾಗುವುದೆಂದರೆ ಬಾಹ್ಯ ಜಗತ್ತಿನ ಅಂದರೆ ಈ ಲೌಕಿಕ ಜಗತ್ತಿನ ಸ್ಪರ್ಶವನ್ನು ದೂರಾಗಿಸುವುದೆಂದು ಅರ್ಥ ,.ಅದನ್ನು ಅಸ್ಪೃಶ್ಯತೆ ಅಂತ ಕೆಟ್ಟದಾಗಿ ವ್ಯಾಖ್ಯಾನಿಸುತ್ತಾರೆ. ಸ್ಪರ್ಶ ಎಂಬುದು ಲೌಕಿಕ ಜಗತ್ತಿನ ಸೆಳೆತ. ಪಾರಾಮಾರ್ಥಿಕ ಚಿಂತನೆ ಎಂದರೆ ಈ ಸೆಳೆತದಿಂದ ದೂರಾಗುವುದು. ಆದರೆ ಮೂರ್ಖರಿಗೆ ಅದು ಅರ್ಥವಾಗುವುದಿಲ್ಲ. ಅವರಿಗೆ ಲೌಕಿಕ ಜಗತ್ತೇ ಶ್ರೇಷ್ಠ. ಪರಮಾತ್ಮನ ಸಾನ್ನಿಧ್ಯದ  ಮತ್ತದರ  ಪಾವಿತ್ರತೆ ತಿಳಿಯದ ಅಜ್ಞಾನದ ಮುಸುಕಿನೊಳಗೆ ಚಡಪಡಿಸುವವರು ಇವರು.  ಪರಿಶುದ್ಧಿಯ ಪರಿಪೂರ್ಣ ಪವಿತ್ರ ಅರ್ಥ ತಿಳಿದಿವರಿಗೆ ಮಾತ್ರ ಅಸ್ಪೃಶ್ಯತೆಯ ಅರಿವಾಗಬಹುದು. ಹಾಗಾಗಿ ಸಂಧ್ಯಾವಂದನೆಗೆ ಕೇವಲ ಸ್ನಾನ ಮಾಡಿ ಪರಿಶುದ್ದಿಯಾದರೆ ಸಾಲದು. ಪ್ರಾಣಾಯಾಮದಿಂದ ಅಂತರಂಗವೂ ಪರಿಶುದ್ಧಿಯಾಗಿ ಮನಸ್ಸು ದೇವರಲ್ಲಿ ಐಕ್ಯವಾಗಿ ತಾನೂ ಈಶ್ವರನೆಂಬ ಅದ್ವೈತ ಜ್ಞಾನ ಸಿದ್ಧಿಯಾಗಬೇಕು. ಆದರೆ ಪಾಮರರಿಗೆ ಇದನ್ನು ತಿಳಿಸಿ ಹೇಳುವ ವ್ಯವಧಾನ ಯಾರಿಗೂ ಇಲ್ಲ. ಕೇವಲ ಅಸ್ಪೃಶ್ಯತೆಯ ಜಪ. 

ಬದುಕಿನ ಪಾವಿತ್ರ್ಯತೆಯ ಅರಿವು ಮೂಡುವುದಕ್ಕೆ ಸಂಧ್ಯಾವಂದನೆ ತೊಡಗಿಕೊಳ್ಳುವುದೇ ಬ್ರಹ್ಮೋಪದೇಶದಿಂದ. ಬ್ರಹ್ಮ ಪರಬ್ರಹ್ಮದ ಅರಿವಿದ್ದವರಿಗೆ ಮಾತ್ರ ಅದರ ಸತ್ಯ ಅರಿವಾಗುತ್ತದೆ. ಹಾಗಾಗಿ ಬ್ರಹ್ಮೋಪದೇಶ ಅದು ಕೇವಲ ಜಾತಿಯಿಂದ ಬ್ರಾಹ್ಮಣರಿಗೆ ಮಾತ್ರ ಅನಿವಾರ್ಯವಲ್ಲ. ಮನುಷ್ಯನಾಗಿ ಹುಟ್ಟಿದವನಿಗೆ ಇಹ ಪರದ ಚಿಂತನೆ ಇರುವವನಿಗೆ ಅದು ಅನಿವಾರ್ಯ. ಇಲ್ಲಿ ಸಂಸ್ಕಾರ ವೆತ್ಯಾಸವಿರಬಹುದು. ಆದರೆ ಕ್ರಿಯೆಯಲ್ಲಿ ವೆತ್ಯಾಸ ವಿರುವುದಿಲ್ಲ. ವಿಪರ್ಯಾಸವೆಂದರೆ ಇದನ್ನು ಕೇವಲ ಬ್ರಾಹ್ಮಣರಿಗೆ ಮಾತ್ರ ಸೀಮಿತವಾಗಿಸಿ ಪ್ರತ್ಯೇಕಿಸುತ್ತಾರೆ.  ಹಾಗಾಗಿ ಬಾಲ್ಯದಲ್ಲಿ ಉಪನಯನವಾಗುತ್ತದೆ. ಶಾಲೆಗೆ ಹೋಗುವುದರಿಂದ ಬಾಹ್ಯ ಪ್ರಪಂಚದ ವ್ಯವಹಾರ ತೊಡಗಿಬಿಡುತ್ತದೆ. ಅದುವರೆಗೆ ಹಾಗೇ ಬರುತ್ತಿದ್ದವನಿಗೆ ಕೆಲವೊಂದು ಶಿಸ್ತು ಕ್ರಮಗಳು ಒದಗಿಬರುತ್ತದೆ. ಎಲ್ಲದಕ್ಕೂ ಮೊದಲು ಎದೆಗೆ ಒತ್ತಿಕೊಂಡು ದೇಹವನ್ನು ಆವರಿಸಿ ಒಂದು ಯಜ್ಞೋಪವೀತದ ಬಂಧನವಿರುತ್ತದೆ. ನಮ್ಮ ಅಜ್ಜ ಹೇಳುತ್ತಿದ್ದರು, ಏನು ಮಾಡುವುದಿದ್ದರೂ ಒಂದು ಸಲ ಜನಿವಾರ ಮುಟ್ಟಿ ನೋಡು. ಅವರು ಹೇಳುತ್ತಿರಬೇಕಾದರೆ ಆಗ ಅದರ ಗಂಭೀರತೆ ಅರಿವಾಗಲಿಲ್ಲ. ಆದರೆ ಬದುಕು ಸವೆಸಿದಂತೆ ಈ ಜನಿವಾರ ಅದೆಂತಹ ಪರಮಾತ್ಮ ಸಾನ್ನಿಧ್ಯವನ್ನು ಒದಗಿಸುತ್ತದೆ ಎಂದರೆ ಅದನ್ನು ಧರಿಸಿ ಅದರ ಪಾವಿತ್ರ್ಯತೆಯನ್ನು ತಿಳಿವಾಗ ಅರಿವಾಗುತ್ತದೆ. ಇಲ್ಲಿ ಪಾವಿತ್ರ್ಯತೆಯನ್ನು ತಿಳಿವಾಗ ಎಂದು ಪದೇ ಪದೇ ಉಲ್ಲೇಖಿಸಬೇಕು. ಯಾಕೆಂದರೆ ಹಲವರಿಗೆ ಅದು ಕೇವಲ ಅಲಂಕಾರಿಕ ವಸ್ತುವಾಗುತ್ತದೆ. ಹಾಗಾಗಿ ಅವರು ಮನೆಯ ಮೊಳೆಗೆ ಜನಿವಾರವನ್ನು ನೇತು ಹಾಕಿ ಎಲ್ಲ ಕರ್ಮಗಳಿಂದಲೂ ಅಜ್ಞಾನ ಸ್ವಾತಂತ್ರ್ಯವನ್ನು  ಪಡೆಯುತ್ತಾರೆ !.

ಉಪನಯನವಾಗಿ ಹಣೆಗೆ ತಿಲಕ ನಾಮ ಇಟ್ಟು ಶಾಲೆಗೆ ಹೋದರೆ ಸಹಪಾಠಿಗಳಿಂದ ಲೇವಡಿ ಗೇಲಿ ಆರಂಭವಾಗಿಬಿಡುತ್ತದೆ. ಆಗಿನಿಂದಲೇ ಒಂದು ಅವಮಾನ ಎಂಬ ಭಾವನೆ ಮೊಳೆತರೂ ಅಂತರಂಗದ ಭಾವನೆ ದೃಢವಾಗಿರುತ್ತದೆ. ನಾವೇ ಹಲವು ಸಲ ಮನೆಯಿಂದ ಹೊರಡಬೇಕಿದ್ದರೆ ತಿಲಕ ನಾಮ ಎಲ್ಲವನ್ನು ಉಜ್ಜಿ ತೊಡೆದು ಹೊರಗೆ ಕಾಲಿಡುತ್ತಿದ್ದೆವು. ಹೊರಗಿನ ಪ್ರಪಂಚಕ್ಕೆ ನಾನು ಬ್ರಹ್ಮೋಪದೇಶ ಪಡೆದವನು ಎಂದು ತೋರಿಸಿಕೊಳ್ಳುವುದಕ್ಕೂ ಒಂದು ಹಿಂಜರಿಕೆ. ಬ್ರಹ್ಮೋಪದೇಶದಲ್ಲಿ ಯಾವುದೇ ಅನ್ಯಧರ್ಮವನ್ನು ಅನ್ಯ ಸಂಸ್ಕಾರವನ್ನು ಕೀಳಾಗಿ ಕಾಣು ಎಂದು ಹೇಳುವುದಿಲ್ಲ. ನಿನ್ನ ಧರ್ಮವನ್ನು ಒಪ್ಪಿಕೊಳ್ಳದವನ್ನು ಹಿಂಸಿಸು, ತುಚ್ಚವಾಗಿ ಕಾಣು ಎಂದು ಉಪದೇಶಿಸುವುದಿಲ್ಲ. ಕೇವಲ ನಿನ್ನ ಶ್ರೇಯೋಭಿವೃದ್ಧಿಗೆ ಇದನ್ನು ಅನುಸರಿಸು ಅಂತ ಉಪದೇಶಿಸುತ್ತಾರೆ. ಹಾಗಾಗಿ ಸಂಧ್ಯಾವಂದನೆ ತೊಡಗುವಾಗ ಮಮೋಪಾತ್ತ ದುರಿತಕ್ಷಯದ್ವಾರ ಅಂತ ಸಂಕಲ್ಪಿಸುತ್ತಾರೆ. ಮಮೋಪಾತ್ತ ದುರಿತದ ಕ್ಷಯ...ಅದು ಕೇವಲ ವೈಯಕ್ತಿಕ ನೆಲೆಗಟ್ಟಿಗೆ ಮಾತ್ರ ಸೀಮಿತ. ಇದೆಲ್ಲ ಹೊರಗಿನ ಜಗತ್ತಿಗೆ ಅರಿವಾಗುವುದಿಲ್ಲ. ಅರಿವಾಗಬೇಕಾದರೆ ಸರಿಯಾದ ಅಧ್ಯಯನ ಬೇಕು. ಇಂದು ವಿಮರ್ಶೆಗಳು ಪ್ರತಿಕ್ರಿಯೆಗಳು ಅಧ್ಯಯನ ವಿಲ್ಲದ ಮೂರ್ಖ ಪ್ರವಚನಗಳಾಗಿರುತ್ತವೆ. 

  ವಿದ್ಯಾರ್ಥಿ ಜೀವನದಲ್ಲೇ ಈ ಕೀಳರಿಮೆಯಿಂದ ಬೆಳೆಯುವಾಗ ಸಂವಿಧಾನ ಬದ್ಧವಾದ ಹಕ್ಕು ಸ್ವಾತಂತ್ರ್ಯದಿಂದ ನಾವು ವಂಚಿತರಾಗುತ್ತೇವೆ ಎಂಬ ಅರಿವಿರುವುದಿಲ್ಲ.  ಜನಿವಾರದ ಭಾರ ಭಾವನಾತ್ಮಕವಾಗಿ ಬ್ರಹ್ಮೋಪದೇಶ ಪಡೆದವನ ಮೇಲಿರುತ್ತದೆ. ಆದರೆನಾವು ಜನಿವಾರ ಹಾಕಿದರೆ ಅದರ ಭಾರ ಮತ್ತೊಬ್ಬರ ಹೆಗಲ ಮೇಲಿರುತ್ತದೆ. ವಿಚಿತ್ರ. ಮಂಗಳೂರಲ್ಲಿ ಪ್ರಾಥಮಿಕ ಶಾಲೆಗೆ ಹೋಗುವಾಗ ಒಂದು ಘಟನೆ, ಅದರ ವಿವರ ಸರಿಯಾಗಿ ಜ್ಞಾಪಕವಿಲ್ಲ.  ಒಬ್ಬ ಬ್ರಾಹ್ಮಣ ಹುಡುಗ ಉಪನಯನದ ನಂತರ ಶಾಲೆಗೆ ಬರುತ್ತಾನೆ. ಉಳಿದ ಮಕ್ಕಳು ಆತನ ಜನಿವಾರ ಹಿಡಿದೆಳೆದು ತಮಾಷೆ ನೋಡುತ್ತಾರೆ.  ಹೀಗೆ ಮಾಡಿ ಎಲ್ಲರೂ ಪುಕ್ಕಟೆ ಮನರಂಜನೆ ಅನುಭವಿಸುತ್ತಾರೆ. ಹುಡುಗ ಮಾತ್ರ ಅವಮಾನದಿಂದ ಕುಗ್ಗಿಬಿಡುತ್ತಾನೆ. ಮರುದಿನ ಜನಿವಾರ ಕಾಣಂತೆ ಇಡುತ್ತಾನೋ ಇಲ್ಲ ಕಳಚಿ ಮನೆಯಲ್ಲಿ ಬಿಟ್ಟು ಬಂದನೋ ಗೊತ್ತಿಲ್ಲ. ಆನಂತರ ಇದು ನಡೆಯಲಿಲ್ಲ. ಅದೇ ರೀತಿ ಒಬ್ಬನ ಟೊಪ್ಪಿ ತೆಗೆದು ಆಟವಾಡುತ್ತಾರೆ. ಅದೊಂದು ಧರ್ಮ ಬೇರೆಯೇ ಉಂಟು ಅಂತ. ಅಗ ನನಗೆ ಅರಿವಿಲ್ಲ. ಮರುದಿನ ಆ ಹುಡುಗನ ಮನೆಯಿಂದ ವಿಚಾರಿಸುವುದಕ್ಕೆ ಕೆಲವು ಮಂದಿ ಬರುತ್ತಾರೆ. ವೆತ್ಯಾಸ ಇಷ್ಟೆ. ವಿಚಾರಿಸುವುದಕ್ಕೆ ಬಂದುದಕ್ಕೆ ಆಕ್ಷೇಪವಲ್ಲ. ಆದರೆ ಇಲ್ಲಿ ಇಂತಹ ಖಾಸಗಿ ವಿಚಾರಗಳು ನಗೆ ಪಾಟಲಿಗೆ ಈಡಾಗುವುದು ನಿಜಕ್ಕೂ ಬೇಸರ ತರಿಸುತ್ತದೆ.  ಹಲವರ ಜೀವನದಲ್ಲೂ ಇದೇ ಬಗೆಯ ಘಟನೆಗಳು ನಡೆದಿರುತ್ತವೆ. ಹೆಚ್ಚಿನವರು ಇದು ಸಾಮಾನ್ಯ ಅಂತ ಹೇಳದೇ ಉಳಿಯುತ್ತಾರೆ. ವಿಚಿತ್ರವೆಂದರೆ ಇದು ಗಂಭೀರ ಅಂತ ಅನ್ನಿಸುವಾಗ ...ಕಾಲ ಮಿಂಚಿ ಹೋಗಿರುತ್ತದೆ. ಸ್ವಾತಂತ್ರ್ಯ ಅಂದರೆ ಏನು ಅಂತ ಯೋಚಿಸುವಂತಾಗುತ್ತದೆ. ಕಾನೂನು ನಿಯಮಗಳು ಎಲ್ಲವೂ ಸಮಾನವಾಗಿರಬೇಕು. ಇಲ್ಲವಾದರೆ ಅದು ನಾಗರೀಕ ಜೀವನದಕ್ಕು  ಜನೋಪಯೋಗಿಯಾಗುವುದಕ್ಕೆ ಸಾಧ್ಯವಿಲ್ಲ. 

ನಾನು ಒಂದು ಸಲ ಒಬ್ಬ ಹಿರಿಯರಲ್ಲಿ ಹೇಳಿದೆ, ಎಲ್ಲರೂ ಸೇರಿ ಸಂಧ್ಯಾವಂದನೆಯ ಅಭಿಯಾನವನ್ನು ಮಾಡಬೇಕು. ಹಲವರು ಹಲವು ಕಾರಣಗಳಿಂದ ಇದರಿಂದ ವಿಮುಖರಾಗಿರುತ್ತಾರೆ. ಅಥವಾ ಪುನಃ ತೊಡಗಿಸುವುದಕ್ಕೆ ಏನೋ ಹಿಂಜರಿಕೆ. ಮಂತ್ರಗಳು ಕಲಿತಿರುವುದಿಲ್ಲ. ಇಂತಹವರಿಗೆ ಪ್ರೇರಕವಾಗುವಂತೆ ಒಂದು ಅಭಿಯಾನ ಮಾಡಿ ಇದರ ಶಿಕ್ಷಣವನ್ನು ಒದಗಿಸಬೇಕು. ಎಲ್ಲರಿಗೂ ಇದರ ಮಹತ್ವವನ್ನು ಗಂಭೀರತೆಯನ್ನು ತಿಳಿಸಬೇಕು. ವಿಪರ್ಯಾಸವೆಂದರೆ ಇದಕ್ಕೆ ಯಾರೂ ಸ್ಪಂದಿಸಲಿಲ್ಲ. ನಮಗೆ ಗೌರವ ಸಿಗಬೇಕು. ನಮ್ಮ ಚಿಂತನೆಗಳಿಗೆ ನಮ್ಮ ಭಾವನೆಗಳಿಗೆ ಮನ್ನಣೆ ಸಿಗಬೇಕು ಅಂತ ಪ್ರತಿಯೊಬ್ಬರೂ  ಆಶಿಸುತ್ತಾರೆ. ಅದಕ್ಕೆ ಪ್ರತಿಯಾಗಿ ನಮ್ಮ ನಡವಳಿಕೆಗಳೂ ಅದಕ್ಕೆ ಅನುಗುಣವಾಗಿರಬೇಕು. ನಮ್ಮ ಧಾರ್ಮಿಕ ವಿಚಾರಗಳಿ ಮೊದಲು ನಾವು ಗೌರವ ಕೊಡಬೇಕು. ಸಂಧ್ಯಾವಂದನೆ , ಅನುಷ್ಠಾನ ನಿಯಮಗಳನ್ನು ನಾವು ಮೊದಲು ಗೌರವದಿಂದ ಅನುಸರಿಸಬೇಕು. ಮತ್ತೊಬ್ಬರು ಅದನ್ನು ಭಯದಿಂದ ಗೌರವದಿಂದ ಕಾಣುವಂತೆ ನಮ್ಮ ವರ್ತನೆ ಇರಬೇಕು. ಇದಕ್ಕೆ ವ್ಯತಿರಿಕ್ತವಾಗಿ ನಾವು ಇರುವಾಗ ಸಹಜವಾಗಿ ನಗೆ ಪಾಟಲಿಗೆ ನಾವು ಅಥವಾ ಇನ್ಯಾರೋ ಈಡಾಗಿ ಬಿಡುತ್ತಾರೆ. ಎಲ್ಲರಿಗೂ ಅವರವರ ಹಾದಿ ಆಯ್ಕೆ ಮಾಡುವ ಸ್ವಾತಂತ್ರ್ಯವಿರುತ್ತದೆ. ಒಬ್ಬರ ಸ್ವೇಚ್ಛಾಚಾರದಿಂದ ಅದರ ಗಂಭೀರತೆ ನಷ್ಟವಾಗಿ ಅದರ ಪರಿಣಾಮ ಇನ್ಯಾರದೋ ಮೇಲೆ ಆಗುವುದು ವಿಡಂಬನೆ. ಒಂದು ಮನೆಯಲ್ಲಿ ನಾನೇ ನೋಡಿದ್ದೇನೆ, ಜನಿವಾರ  ಗೋಡೆಗೆ ನೇತು ಹಾಕಿರುತ್ತದೆ. ಬೇಕಾಗುವಾಗ ಧರಿಸುವ ಉಡುಗೆಯಂತೆ. ಹೇಳಿಕೇಳಿ ಇದು ಯಜ್ಞೋಪವೀತ..ಅಂದರೆ ಉಪವಸ್ತ್ರ. ಅಕ್ಷರಶಃ ಇದು ವಿಪರೀತಾರ್ಥದಲ್ಲಿ ಬಳಕೆಯಾಗುತ್ತದೆ. ಇನ್ನು ಸಂಧ್ಯಾವಂದನೆ ಮಾಡುವಾಗಲಂತೂ ಮೊಬೈಲ್ ಹತ್ತಿರವೇ ಇರುತ್ತದೆ. ಇಲ್ಲ ಅದು ಕಾಟಾಚಾರಕ್ಕೆಂಬಂತೆ ಮಾಡುತ್ತಾರೆ. ಯಾರೊಂದಿಗೊ ಮಾತನಾಡುತ್ತಾ ಇನ್ನೇನೋ ಕೆಲಸ ಜತೆಯಲ್ಲಿ ಮಾಡುತ್ತಾ ಸಂಧ್ಯಾವಂದನೆ ಮಾಡುವುದರಲ್ಲಿ ಭಗವಂತನ ಮೇಲೆ ಗಮನ ಹೇಗೆ ಸಾಧ್ಯ. ಕೇವಲ ಒಂದು ಹತ್ತು ನಿಮಿಷ ಕೂಡಾ ಅದಕ್ಕೆ ಸಂಪೂರ್ಣವಾಗಿ ವಿನಿಯೋಗಿಸುವ ಮನಸ್ಸು ಇಲ್ಲವಾದರೆ ಅದನ್ನು ಆಚರಿಸಿ ಆ ದೇವರಿಗೆ ಸವಾಲೊಡ್ಡುವ ಅವಶ್ಯಕತೆ ಇದೆಯೇ ಅಂತ ಅನ್ನಿಸುತ್ತದೆ.  ಒಂದು ಕಾಲದಲ್ಲಿ ನಾನೂ ಇದನ್ನು ಅವಗಣನೆ ಮಾಡಿದ್ದೆ. ಆದರೆ ಜೀವನ ಶಿಕ್ಷಣ ಅನುಭವ ಎಂಬುದು ಪಾಠ ಕಲಿಸುವಾಗ ನಾವು ಏನೂ ಅಲ್ಲ ಎಂಬ ಶೂನ್ಯತೆಯ ಅರಿವಾಗುವಾಗ ಇವುಗಳ ಆದ್ಯತೆ ಅರಿವಾಗುತ್ತದೆ. 

ಈಗ ನಿಯಮಿತವಾಗಿ ಸಂಧ್ಯಾಕಾಲಾದಲ್ಲಿ ಈ ಸಂಧ್ಯಾವಂದನೆ ಮಾಡುತ್ತೇನೆ. ಅದು ಮನೆ ಬಿಟ್ಟು ಹೊರಗೆ ಹೋದಾಗಲೂ..ಆ ಸಮಯವನ್ನುಆದಷ್ಟು ಪ್ರಯತ್ನ ಪೂರ್ವಕ ಅದಕ್ಕೆ ವಿನಿಯೋಗ ಮಡುತ್ತೇನೆ. ಪ್ರಯಾಣದಲ್ಲಿ ಆ ಸಮಯ ಬಂದರೆ ಒಂದಷ್ಟು ಸುಮ್ಮನೆ ಕುಳಿತು ಧ್ಯಾನವನ್ನಾದರೂ ಮಾಡಿ ಬಿಡುತ್ತೇನೆ. ಹಲವು ಕಡೆ ಮದುವೆಯಂತಹ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿ ಕಷ್ಟಪಟ್ಟು ಸಂಧ್ಯಾವಂದನೆಗೆ ಕುಳಿತು ಬಿಡುತ್ತೇನೆ. ವಿಚಿತ್ರವೆಂದರೆ ಅಲ್ಲೂ ಕೆಲವರು ಅದೂ ಬ್ರಾಹ್ಮಣರೂ ವಿಚಿತ್ರವಾಗಿ ನೋಡುತ್ತಾರೆ.  ತಾವು ಮಾಡಲಾಗದ ಹತಾಶೆಯೋ ಅಲ್ಲ ನನ್ನದು ಢಂಭಾಚಾರವಾಗಿ ಕಾಣುವುದೋ ಗೊತ್ತಿಲ್ಲ ಅಂತೂ ಹಲವು ಸಲ ನನಗೇ ಹೀಗೆ ಅಂತ ಅನ್ನಿಸಿದ್ದಿದೆ. ಎಲ್ಲರಂತೆ ನಾನೂ ಮಾಡದೇ ಇರಬಹುದಲ್ಲ ಅಂತ ಅನ್ನಿಸಿದರೂ ಸಮಯ ಬಂದಾಗ ಉಳಿದವರಿಗಾಗಿ ನನ್ನದನ್ನು ನಾನೇಕೆ ಕಳೆದುಕೊಳ್ಳಬೇಕು. ಅಷ್ಟಾಗಿ ಇದು ಯಾರಿಗೂ ತೊಂದರೆ ಕೊಡುವ ಕಾರ್ಯವಲ್ಲ.  


ಇನ್ನು ನಮ್ಮ ಧಾರ್ಮಿಕ ವಿಧಿ ವಿಧಾನಗಳು ದೇಶ ಪ್ರದೇಶಕ್ಕೆ ಹೊಂದಿಕೊಂಡು ವಿಭಿನ್ನವಾಗಿರುತ್ತವೆ. ಹಿರಿಯರಿಂದ ಬಂದ ಸಂಸ್ಕಾರ ಯವುದಾದರೂ ಅದನ್ನು ಗೌರವದಿಂದ ಕಾಣುವ ಮನೋಭಾವ ನಮ್ಮಲ್ಲಿರಬೇಕು. ನಮ್ಮ ಬ್ರಾಹ್ಮಣರಲ್ಲೇ ತನ್ನದು ಮಾತ್ರ ಶ್ರೇಷ್ಠ ಎನ್ನುವ ಭಾವನೆ ಹಲವು ಕಡೆಯಲ್ಲಿ ಪ್ರಕಟವಾಗುತ್ತದೆ. ಒಂದು ಕಾರ್ಯಕ್ರಮದಲ್ಲಿ ಊಟಕ್ಕೆ ಕುಳಿತಾಗ ಅಲ್ಲಿ ದಕ್ಷಿಣ ಕನ್ನಡದವರು ನಾವಿಬ್ಬರೇ ಇದ್ದೆವು. ಹಸ್ತೋದಕ ತೆಗೆಯುವ ಕ್ರಮಕ್ಕೆ ಒಬ್ಬ ಪುರೋಹಿತರು ಕೊಂಕು ನುಡಿದರು. ಆಗ ನಾನು ತೀವೃವಾಗಿ ಸಮಾಧಾನದಿಂದ ಆಕ್ಷೇಪ  ವ್ಯಕ್ತಪಡಿಸಿದ್ದೆ. ವಿಧಿ ವಿಧಾನಗಳು ಹಿರಿಯರಿಂದ ಸಿಗುವ ಸಂಸ್ಕಾರಗಳು ವಿಭಿನ್ನವಾಗಿದ್ದರೂ ಅದು ತೆಗಳುವ ಸಾಧನವಲ್ಲ. ತನ್ನದು ಮಾತ್ರ ಶ್ರೇಷ್ಠ ಅಂತ ಯಾರು ತಿಳಿದಿರುತ್ತಾನೋ ಆತನಿಗೆ ಅಧ್ಯಯನಲ್ಲಿ ಅಧ್ಯಯನದ ಕೊರತೆ ಇರುತ್ತದೆ. ನಮ್ಮ ಹಿರಿಯರಿಂದ ಬಂದ ಸಂಸ್ಕಾರವನ್ನು ನಾವು ಅನುಸರಿಸಬೇಕು. ವಿಶ್ವಾಮಿತ್ರನ ಕಾಲದಿಂದ ಅದು ನಮ್ಮ ಪಿತೃಗಳ ತನಕ ಬಂದಿದೆ ಎಂದರೆ ಅದು ಸತ್ವಹೀನವಾಗುವುದಕ್ಕೆ ಸಾಧ್ಯವಿಲ್ಲ. ವೇದ ಅಂದರೆ ನಿಯಮ. ನಮ್ಮ ಬದುಕನ್ನು ರೂಪಿಸುವ ನಿಯಮ. ನಾವು ಹೀಗೆ ನಡೆಯಬೇಕು ಎಂದು ನಿರ್ದೇಶಿಸುವ ನಿಮಯಗಳು. ಇದರ ಅರ್ಥ ತಿಳಿಯದೇ ನಮ್ಮಲ್ಲೇ ನಾವು ಮತ್ತೊಬ್ಬರನ್ನು ಹೀನಾಯವಾಗಿ ಕಂಡರೆ ಉಳಿದವರಿಂದ ಗೌರವ ಸಿಗಬೇಕು ಎನ್ನುವ ಹಕ್ಕೇ ಉಳಿಯುವುದಿಲ್ಲ. ಜಾತಿ ಯಾವುದಾದರೇನು ಧರ್ಮ ಯಾವುದಾದರೇನು ಗಂಗೆ ಹರಿಯುವಲ್ಲೇ ಯಮುನೆಯೂ ಹರಿಯುತ್ತಾಳೆ.  ಪ್ರಕೃತಿ ತೋರಿಸುವ ಪಾಠವಿದು. 


ಯಾವುದೋ ಹುಡುಗನ ಜನಿವಾರ ಕಿತ್ತೆಸೆದಿದ್ದಾರೆ. ನಾವು ಅದರ ಬಗ್ಗೆ ಪ್ರತಿಭಟಿಸುತ್ತೇವೆ. ನಿಜಕ್ಕೂ ಇದೊಂದು ವಿಷಾದನೀಯ ಘಟನೆ. ಇಲ್ಲಿ ಏನಾದರೂ ಯಾರೂ ರಸ್ತೆಗೆ ನುಗ್ಗುವುದಿಲ್ಲ. ಕಲ್ಲು ಎಸೆಯುವುದಿಲ್ಲ. ವಾಹನ ಉರಿಸುವುದಿಲ್ಲ. ಹಾಗಾಗಿ ಇಂತಹ ಘಟನೆಗಳು ಲೋಕ ಮುಖದಲ್ಲಿ ಗಂಭೀರವಾಗುವುದಿಲ್ಲ. ಬದಲಾಗಿ ಅಪಸ್ವರವೇ ಮೂಡುತ್ತದೆ. ಈ ಪವಿತ್ರತೆ, ಪರಿಶುದ್ದಿ ಮೋಕ್ಷ ಇದೆಲ್ಲ ಚಲಾವಣೆಯಾಗದ ವಿಷಯಗಳು. ಸ್ವತಹ ನಮಗೇ ಅದರ ಅರ್ಥ ತಿಳಿಯದೇ ಇದ್ದರೆ ಆಗುವ ಅವಗಣನೆಗೆ ಪರೋಕ್ಷವಾಗಿ ನಾವೇ ಕಾರಣೀಭೂತರಾಗಿಬಿಡುತ್ತೇವೆ. ಹಲವು ಸಲ ಸಾರ್ವಜನಿಕವಾಗಿ ನಾನು ಬ್ರಾಹ್ಮಣ ಎಂದ ಕೂಡಲೆ ಹಲವರ ವಕ್ರ ನೋಟದ ಅನುಭವ ನನಗೂ ಆಗಿದೆ. ಬ್ರಹ್ಮ ಎಂಬುದು ಎಂದಿಗೂ ಸಣ್ಣದಾಗುವ ವಸ್ತುವಲ್ಲ. ಹಾಗಾಗಿ ಅದನ್ನು ಪಾಲಿಸುವವನು ಎಂದಿಗೂ ಸಣ್ಣದಾಗುವುದಿಲ್ಲ. ಲೋಕ ಕಾಣಬಹುದು, ಆದರೆ ಎಲ್ಲರೂ ನಂಬುವ ಭಗವಂತನಿಗೆ ಅರಿವಿಲ್ಲದೆ ಇರುವುದಕ್ಕೆ ಸಾಧ್ಯವಿಲ್ಲ. ಈ ವಿಶ್ವಾಸದಲ್ಲೇ ನಮ್ಮ ನಡೆ ಇರಬೇಕು. 



 

Sunday, April 13, 2025

ಶಿರಸ್ತ್ರಾಣ ಖಡ್ಡಾಯ


            ಮಲಯಾಳಂ ಚಲನ ಚಿತ್ರ ನಟ ನಿರ್ದೇಶಕ ಮಾತ್ರವಲ್ಲ ಚಿತ್ರಕಥೆಯನ್ನೂ ಬರೆಯುವ ಪ್ರತಿಭಾವಂತ ಶ್ರೀನಿವಾಸ್ ಇವರು  ತೀಕ್ಷ್ಣವಾದ ಪ್ರತಿಕ್ರಿಯೆಗಳನ್ನು ಹಲವು ಸಲ ನೀಡುತ್ತಾರೆ. ಇವರ ಸಿನಿಮಾಗಳಲ್ಲಿ  ಇಂತಹ ಸನ್ನಿವೇಶ ಸಂಭಾಷಣೆಗಳಲ್ಲಿ ಅದೇ ವೈಶಿಷ್ಟ್ಯವಾಗಿದೆ. ಹೀಗೆ ಕಾರ್ಯಕ್ರಮ ಒಂದರಲ್ಲಿ ಹೆಲ್ಮೆಟ್ ಖಡ್ಡಾಯದ ಬಗ್ಗೆ ಒಂದು ವಿಡಂಬನೆಯನ್ನು ಹೇಳುತ್ತಾರೆ. ನಮ್ಮ ಆಹಾರ ಜೀವನ ಎಲ್ಲವು ಎಷ್ಟು ಕಲುಷಿತವಾಗಿದೆ ಎಂದರೆ ಇಂದು ಕಲುಷಿತವಲ್ಲದೇ ಇದ್ದದ್ದು ಯಾವುದೂ ಸಿಗುವುದಿಲ್ಲ.  ಸಿಗುವ ತರಕಾರಿ ಎಲ್ಲಿಂದಲೋ ಬರುತ್ತದೆ, ಯಾವುದೋ ವಿಷಕಾರಿ ರಾಸಾಯನಿಕವನ್ನು ಹೊಂದಿದ್ದರೆ, ಇನ್ನು ಅಮೃತ ಎಂದು ಸಿಗುವ ಹಾಲು ಅದು ಮೂಲ ಸ್ವರೂಪದಲ್ಲಿ ಹಳ್ಳಿಯಲ್ಲೂ ಸಿಗುವುದಿಲ್ಲ. ಹೆಚ್ಚಿನವರಿಗೆ ತಿಳಿದಿಲ್ಲ. ಚಳಿಗಾಲದ ನಂತರ ಹಾಲು ಮೊಸರಿನ ಬೇಡಿಕೆ ಹೆಚ್ಚು ಇರುತ್ತದೆ. ಆದರೆ ಆಗ ಹಾಲು ಉತ್ಪಾದನೆ ಬಹಳ ಕಡಿಮೆ ಇರುತ್ತದೆ.  ಮಳೆಗಾಲದಲ್ಲಿ ಹಾಲಿನ ಉತ್ಪಾದನೆ ಅಧಿಕವಾಗಿದ್ದರೆ ಬೇಡಿಕೆ ಬಹಳ ಕಡಿಮೆ ಇರುತ್ತದೆ. ಹಾಗಾಗಿ ಮಳೆಗಾಲದಲ್ಲಿ ಉಳಿದ ಹಾಲನ್ನು ಸಂಸ್ಕರಿಸಿ ಪುಡಿ ಮಾಡಿ ಸಂಗ್ರಹಿಸುತ್ತಾರೆ, ನಂತರ ಅದನ್ನು ಬೇಸಗೆಯಲ್ಲಿ ಬೇಡಿಕೆ ಅಧಿಕವಾಗಿದ್ದಾಗ ಅದನ್ನು ದ್ರವೀಕರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ. ಹೀಗಾಗಿ ಪ್ರತಿ ಹಂತದಲ್ಲೂ ಅದಕ್ಕೆ ಹಲವಾರು ರಾಸಾಯನಿಕಗಳು ಸೇರಲೇ ಬೇಕಾಗುತ್ತದೆ. ಆದರೆ ಇದನ್ನೆಲ್ಲ ಪರಿಸ್ಥಿತಿಗೆ ಹೊಂದಿಕೊಂಡು ನಾವು ಒಪ್ಪಿಕೊಳ್ಳಲೇ ಬೇಕು. ಬೇಸಗೆಯಲ್ಲಿ ಸಿಗುವ ಹಾಲು ಯಾವುದೋ ಕಾಲದಲ್ಲಿ ಜಾನುವಾರು ನಿಂದ ಸಿಕ್ಕಿದ ಹಾಲಾಗಿರುತ್ತದೆ. ಇದು ಹಲವು ಸಲ ವಿಷಕಾರಿಯಾಗಿರುವುದು ವಿಪರ್ಯಾಸ. ಇನ್ನು ತಿನ್ನುವ ತರಕಾರಿ ಮತ್ತು ಈಗ ಮಾರುಕಟ್ಟೆಯಲ್ಲಿ ಸಿಗುವ ಆಹಾರದ ಕಥೆ ಹೇಳುವುದೇ ಬೇಡ. ಈಗ ಮನೆಯಲ್ಲಿ ದಿನ ನಿತ್ಯ ಸೇವಿಸುವ ಅನಿವಾರ್ಯ  ಆಹಾರವನ್ನು ಕೂಡ ಸ್ವಂತ ತಯಾರಿಸುವುದಿಲ್ಲ. ಅದನ್ನು ಹೊರಗಿನಿಂದ ತರಿಸುತ್ತಾರೆ. ಅದು ಎಲ್ಲೋ ಹೇಗೋ ತಯಾರಿಸಿ ನಮ್ಮ ಕೈಗೆ ಬಂದು ಬೀಳುತ್ತದೆ. ನಮ್ಮ ಸೌಕರ್ಯಕ್ಕೆ ನಾವು ಅದರ ಪರಿಶುದ್ದತೆಯ ಬಗ್ಗೆ ವಿಶ್ವಾಸವನ್ನಷ್ಟೇ ಇಡಬೇಕು. ಆದರೆ ಅದು ಅದಕ್ಕೆ ಅನುಗುಣವಾಗಿರುವುದಿಲ್ಲ.   ಶ್ರೀನಿವಾಸ್ ಹೇಳುತ್ತಾರೆ ದಾರಿ ಬದಿಯಲ್ಲಿ ಸಿಗುವ ಆಹಾರ ಹಣ್ಣು ಹಂಪಲು ತರಕಾರಿ ನಂತರ ಈ ಅರೋಗ್ಯ ಪೂರ್ಣ ಅಂತ ಸೇವಿಸುವ ಹಾಲು ಪ್ರತೀಕ್ಷಣವೂ ಜೀವಕ್ಕೆ ಅಪಾಯಕಾರಿಯಾಗಿರುವಾಗ....ಇದನ್ನೆಲ್ಲ ತಿಂದು ಶಿರಸ್ತ್ರಾಣ ಅಥವಾ ಹೆಲ್ಮೆಟ್ ಒಂದು ತಲೆಗೆ ಹಾಕಿಕೊಂಡು ವಾಹನದಲ್ಲಿ ಸುರಕ್ಷಿತರಂತೆ ಹೋಗುತ್ತೇವೆ. ತಿನ್ನುವ ಆಹಾರದಲ್ಲಿ ಇಲ್ಲದ ಭದ್ರತೆ....ಈ ಹೆಲ್ಮೆಟ್ ನಿಂದ ಸಿಗಬಹುದೇ..ವಿಪರ್ಯಾಸವೆಂದರೆ ಅದಕ್ಕೂ ಖಡ್ಢಾಯದ ನಿಯಮವಿದೆ. ಇದು ಯಾಕಾಗಿ? 

ಸುರಕ್ಷತೆಯ ದೃಷ್ಟಿಯಿಂದ ನಿಯಮ ಖಡ್ಡಾಯವಾಗಿ ಇರಲೇಬೇಕು. ಅದು ಅನಿವಾರ್ಯ. ಆದರೆ ಈ ಆಹಾರ ಹಾಲು  ಹಣ್ಣು ತರಕಾರಿ ಹೊಗಲಿ ಉಚಿತವಾಗಿ ಇರುವ ಗಾಳಿ ಇವುಗಳಿಗೆ ಇಲ್ಲದ ಸುರಕ್ಷತೆ ಕೇವಲ ತಲೆಗೆ ಮಾತ್ರ ಇರುವುದು ವಿಡಂಬನೆ ಎಂದನಿಸುತ್ತದೆ.  ಹೆಲ್ಮೆಟ್ ನಿಂದ ತಲೆ ಉಳಿದರೂ...ಈ ಕಲುಷಿತ ಆಹಾರ ಗಾಳಿಯನ್ನು ಸೇವಿಸಿ ಮನುಶ್ಯ ಎಷ್ಟು ಸಮಯ ಕ್ಷೇಮದಿಂದ ಬದುಕುಳಿದಾನು? ಆದರೂ ಅದಕ್ಕೊಂದು ಖಡ್ಡಾಯ ನಿಮಮ ನಮ್ಮನ್ನು ಅಣಕಿಸುತ್ತದೆ. 

ಪ್ಲಾಸ್ಟಿಕ ವಾತವರಣಕ್ಕೆ ಹಾನಿಕರ. ಪ್ಲಾಸ್ಟಿಕ್ ಚೀಲಗಳನ್ನು ಬಳಸುವುದು ನಿಷೇಧಿಸಲಾಗಿದೆ. ಆದರೂ ಬಳಕೆ ಎಲ್ಲಿ ಕಡಿಮೆಯಾಗಿದೆ. ನಿಯಮಾನುಸಾರ ಅದನ್ನು ಹಿಡಿದು ಕೊಂಡು ಹೋಗುವ  ಬಡಪಾಯಿಂದ ದಂಡ ವಸೂಲಿ ಮಾಡಬಹುದು. ಇನ್ನಿತರ ಶಿಕ್ಷೆ ವಿಧಿಸಬಹುದು. ಯಾಕೆಂದರೆ ಆತ ಸುಲಭದಲ್ಲಿ ಸಿಗುತ್ತಾನೆ. ಆದರೆ ಇದುವರೆಗೆ ಪ್ಲಾಸ್ಟಿಕ್ ಚೀಲ ಉತ್ಪಾದನೆ ಎಲ್ಲಾಗುತ್ತದೆ ಎಂದು ಪತ್ತೆ ಹಚ್ಚುವುದಕ್ಕೆ ಸಾಧ್ಯವಾಗಿಲ್ಲ. ಸಾಧ್ಯವಾದರೂ ಅದಕ್ಕೆ ಶಿಕ್ಷೆ ಅನ್ವಯವಾಗುವುದೇ ಇಲ್ಲ. ನಿಜಕ್ಕಾದರೆ ಉತ್ಪಾದನೆಯನ್ನು ತಡೆ ಹಿಡಿದರೆ ಬಳಕೆ ತನ್ನಿಂತಾನಾಗಿ ನಿಯಂತ್ರಿಸಲ್ಪಡುತ್ತದೆ. ಆದರೆ ಅದಕ್ಕೆ ಯಾವ ಪ್ರತಿಭಂಧಕವೂ ಇರದೇ ಎಲ್ಲಾ ನಿಯಮಗಳು ನಿಜ ಜೀವನವನ್ನು ಆಧ್ವಾನ ಮಾಡುವುದಕ್ಕಷ್ಟೇ ಸೀಮಿತವಾಗಿದೆ. 

ಸಾರ್ವಜನಿಕವಾಗಿ ಧೂಮ ಪಾನ ಮಾಡಬಾರದು ಎಂಬ ನಿಯಮವಿದೆ. ಈ ಬೆಂಗಳೂರು ಏಕೆ ಸಣ್ಣ ನಗರದಲ್ಲೂ ಇದು ಕೇವಲ ನಿಯಮವಾಗಿ ಮಾತ್ರ ಉಳಿದಿದೆ. ಸಾರ್ವಜನಿಕವಾಗಿ ಉಚಿತವಾಗಿ ಸಿಗುವ ಈ ಧೂಮವನ್ನು ಸೇವಿಸಿ ನಾವು ಸುರಕ್ಷಿತರಂತೆ ಹೆಲ್ಮೆಟ್ ಧರಿಸಿ ಅಭಿನಯಿಸುತ್ತೇವೆ. ವಿಚಿತ್ರ ಎನಿಸುವುದಿಲ್ಲವೆ. ಹಾಗಾಗಿ ಶ್ರೀನಿವಾಸ್ ಹೇಳಿದ್ದು ಹೆಲ್ಮೇಟ್ ಖಡ್ದಾಯ ಒಂದು ವಿಡಂಬನೆ. ದೊಡ್ಡ ಪ್ರಹಸನ.  ತ್ರಾಣವಿಲ್ಲದೇ ಇದ್ದರೂ ಶಿರಸ್ತ್ರಾಣ ಬೇಕು. 

Thursday, April 10, 2025

ಧರ್ಮ ಜಾಗೃತಿ

             ನಮ್ಮ ಹಿರಿಯರು ಒಂದು ಕಥೆ ಹೇಳುತ್ತಿದ್ದರು. ಒಂದಾನೊಂದು ಊರಿನಲ್ಲಿ  ಒಬ್ಬ ಸೌದೆಗಾಗಿ  ಕಾಡಿಗೆ ಹೋದನಂತೆ. ಹಾಗೆ ಸೌದೆಯ ಮರ ಕಡಿಯಬೇಕಾದರೆ ಅದರಲ್ಲಿ ಒಬ್ಬ ರಾಕ್ಷಸ ಇದ್ದನು. ಆತ ಇವನನ್ನು ತಿನ್ನುವುದಕ್ಕೆ ಬಂದನು. ಈತ ಹೆದರಿ ಓಡುವುದಕ್ಕೆ ತೊಡಗಿದ. ರಕ್ಕಸ ಹಿಂಬಾಲಿಸಿ ಅಟ್ಟಿಸಿಕೊಂಡು ಬಂದ. ಆ ರಕ್ಕಸನಿಗೊಂದು ಏಕ ಮಾತ್ರ ಸದ್ಗುಣವಿತ್ತು. ಎಲ್ಲಿ ಗಂಟೆಯ ನಾದ ಕಿವಿಗೆ ಕೇಳಿಸುತ್ತದೋ ಅಲ್ಲಿ ಭಗವಂತನ ನೆನಪಾಗಿ ಸುಮ್ಮನೇ ನಿಂತು ಬಿಡುವುದು. ಹಾಗೆ ಅಟ್ಟಿಸಿ ಕೊಂಡು ಬರುವಾಗ ಒಂದು ಗುಡಿಯ ಬಳಿಯಲ್ಲೇ ಹಾದು ಹೋಗುವಾಗ ಮನುಷ್ಯನ ಕೈ ಅಲ್ಲಿ ನೇತು ಹಾಕಿದ್ದ ಗಂಟೆಗೆ ತಗಲುತ್ತದೆ. ಗಂಟೆಯ ಠಣ್ ಸದ್ದಿಗೆ ರಕ್ಕಸ ಸ್ತಬ್ಧನಾಗಿ ನಿಂತು ಬಿಡುತ್ತಾನೆ. ಈ ಅವಕಾಶ ಉಪಯೋಗಿಸಿ ಮನುಷ್ಯ ತಪ್ಪಿಸಿ ಓಡುತ್ತಾನೆ. ಗಂಟೆಯ ಸದ್ದು ನಿಂತೊಡನೆ ರಕ್ಕಸ ಪುನಃ ಹಿಂಬಾಲಿಸುತ್ತಾನೆ. ಮನುಷ್ಯ ಒಂದು ಉಪಾಯ ಮಾಡುತ್ತಾನೆ. ಗುಡಿಯ ಗಂಟೆ ಕೈಯಲ್ಲಿ ತೆಗೆದುಕೊಂಡು ರಕ್ಕಸ ಹತ್ತಿರ ಬರುತ್ತಿದ್ದಂತೆ ಗಂಟೆ ಬಾರಿಸುತ್ತಿದ್ದ. ರಕ್ಕಸ ಸುಮ್ಮನೇ ನಿಂತು ಬಿಡುತ್ತಿದ್ದ. ಹಾಗೆ ಮಾಡುತ್ತಾ  ಮನುಷ್ಯ ಊರಿನೊಳಗೆ ಬಂದು ಮನೆಯನ್ನು ಸೇರುತ್ತಾನೆ. ರಕ್ಕಸನಿಂದ ಮನುಷ್ಯ ಹೀಗೆ ಪಾರಾಗಿಬಿಡುತ್ತಾನೆ.  ರಕ್ಕಸನಲ್ಲಿ ಎಲ್ಲವೂ ಕೆಟ್ಟಗುಣಗಳಿತ್ತು. ಆದರೆ ಒಂದು, ಆತನಲ್ಲಿದ್ದ ದೈವ ಭಯ ಮನುಷ್ಯನಿಗೆ ರಕ್ಷಣೆಯನ್ನು ಒದಗಿಸಿತ್ತು. 

ಇದೇ ಬಗೆಯ ಭೀಮ ಪುರುಷಾಮೃಗದ ಕಥೆ ಮಹಾಭಾರತಲ್ಲಿ ರಾಜಸೂಯ ಸಂದರ್ಭದಲ್ಲಿ ಬರುತ್ತದೆ. ನಮ್ಮೂರಲ್ಲಿ ಇದನ್ನೇ ಯಕ್ಷಗಾನದಲ್ಲಿ ಆಡುತ್ತಾರೆ.  ಭೀಮ ಪುರುಷಾಮೃಗವನ್ನು ಕರೆತರುವುದಕ್ಕೆ ಹೋಗುತ್ತಾನೆ. ದಾರಿಯಲ್ಲಿಆತನಿಗೆ ಹನುಮಂತ ಸಿಗುತ್ತಾನೆ.ಆತ ಹನುಮಂತ ಎಂದು ತಿಳಿದಿರುವುದಿಲ್ಲ.   ಆತನ ಬಾಲ ಈತನ ಹಾದಿಗೆ ಅಡ್ಡವಾಗಿರುತ್ತದೆ. ಅದನ್ನು ದಾಟುವುದು ಸರಿಯಲ್ಲ ಎಂದು ತಿಳಿದು ಬಾಲವನ್ನು ಎತ್ತಿಡುವಂತೆ ಹನುಮನಿಗೆ ಹೇಳುತ್ತಾನೆ. ಕೃಷಾಕಾಯನಾಗಿ ವೃದ್ದಾಪ್ಯದಲ್ಲಿದ್ದ ಹನುಮ ನನ್ನಿಂದ ಬಾಲ ಎತ್ತುವುದಕ್ಕೂ ತ್ರಾಣವಿಲ್ಲ ನೀನೇ ಎತ್ತಿಟ್ಟು ಆಕಡೆಗೆ ಹೋಗು ಎನ್ನುತ್ತಾನೆ. ಭೀಮನಿಗೆ ಬಾಲ ಎತ್ತುವುದಕ್ಕಾಗದೆ ಬಸವಳಿಯುತ್ತಾನೆ. ನಂತರ ಭೀಮ ವಾಯು ಪುತ್ರ ಎಂದು ತಿಳಿದ ಮೇಲೆ ಹನುಮ ಆತನನ್ನು ಸಹೋದರ ಭಾವದಿಂದ ಕಂಡು ತನ್ನ ಬಾಲದ ಮೂರು ರೂಮಗಳನ್ನು ಕಿತ್ತು ಕೊಡುತ್ತಾನೆ. ಶಿವ ಸಂಭೂತನಾದ ಹನುಮನ ಬಾಲದ ರೋಮ ಎಲ್ಲೆಲ್ಲಿ ಹಾಕುವುದೋ ಅಲ್ಲಿ ಶಿವಲಿಂಗ ಉದ್ಭವವಾಗುತ್ತದೆ ಎಂದು ಹೇಳುತ್ತಾನೆ. ಪುರುಷಾಮೃಗದ ಬಳಿಗೆ ಹೋದಾಗ ಪುರುಷಾಮೃಗ ಭೀಮನನ್ನು ಅಟ್ಟಿಸಿಕೊಂಡು ಬರುತ್ತದೆ. ಭೀಮ ಓಡುತ್ತಾ ಒಂದೊಂದೇ  ಕಡೆಯಲ್ಲಿ ಹನುಮನ ಬಾಲದ ರೋಮವನ್ನು ಹಾಕುತ್ತಾನೆ. ಅಲ್ಲಿ ಲಿಂಗ ಉದ್ಭವವಾಗುತ್ತದೆ. ಆಗ ಪುರುಷಾ ಮೃಗ ಆಲಿಂಗಕ್ಕೆ ಪೂಜೆ ಮಾಡಿ ಮತ್ತೆ ಮುಂದುವರೆಯಬೇಕು. ಆಗ ಭೀಮನಿಗೆ ಮತ್ತಷ್ಟು ಮುಂದೆ ಓಡುವುದಕ್ಕೆ ಅವಕಾಶ ಸಿಗುತ್ತದೆ.  ಹೀಗೆ ಪ್ರತಿಯೊಂದು ಕಡೆಯಲ್ಲು ಭೀಮ ಪುರುಷಾಮೃಗದ ಕೈಗೆ ಸಿಗುತ್ತದೆ ಎನ್ನುವಾಗ ಈ ರೋಮವನ್ನು ಹಾಕಿಕೊಂಡು ಪುರುಷಾಮೃಗವನ್ನು ಕರೆದುಕೊಂಡು ಬರುತ್ತಾನೆ. 

ಈ ಕಥೆಯ ಸಾರಾಂಶ ಇಷ್ಟೇ...ಎಲ್ಲಿ ದೈವ ಭಕ್ತಿ ಇರುತ್ತದೋ ಅಲ್ಲಿ ನಿರ್ಭಯವಾಗಿ ನಿರಾತಂಕವಾಗಿ ಇರಬಹುದು.  ಯಾವುದೇ ಧರ್ಮ ಇರಬಹುದು ಅಲ್ಲಿ ದೈವ ಭಕ್ತಿ ಇದ್ದರೆ ಆ ಧರ್ಮವನ್ನು ನಿಂದಿಸುವುದು ಸರಿಯಲ್ಲ. ಧರ್ಮ ನಿಂದನೆ ಎಂದರೆ ಅದು ದೈವನಿಂದನೆಯಾಗುತ್ತದೆ. ಮನುಷ್ಯ ಮೇಲೆ ನೋಡಿ ಉಗುಳಿದಂತೆ ಅದು ಪರೋಕ್ಷವಾಗಿ ನಮ್ಮ ಮೂಲಕ್ಕೆ ಬಂದು ಬಿಡುತ್ತದೆ. ನಾವು ಭಯ ಆತಂಕ ಪಡಬೇಕಾಗಿರುವುದು ಯಾವುದೋ ಧರ್ಮಾಚರಣೆಗೆ ಅಲ್ಲ. ಆತ ಹಿಂದುವೊ ಮುಸ್ಲಿಂ ಕ್ರಿಶ್ಚನ್ ಅಥವಾ ಇನ್ನವುದೋ ಧರ್ಮವಾಗಿರಬಹುದು...ಅಲ್ಲಿ ಒಂದು ದೈವ ಭಕ್ತಿ ಇದ್ದೇ ಇರಬೇಕು. ನಾವು ಭಯ ಪಡಬೇಕಾಗಿರುವುದು...ಎಲ್ಲಿ ದೈವ ಭಯ ಇಲ್ಲವೋ ಎಲ್ಲಿ ಭಕ್ತಿ ಇಲ್ಲವೋ ಅಥವಾ ದೈವದ ಅಸ್ತಿತ್ವವನ್ನು ನಂಬದೇ ಇರುವಲ್ಲಿ ನಾವು ಭಯ ಪಡಬೇಕು. ದೈವ ಭಯ ಇದ್ದಲ್ಲಿ ಕೊನೇ ಪಕ್ಷ ಆ ದೈವ ಭಕ್ತಿಯಾದರೂ ನಮ್ಮನ್ನು ಕಾಪಾಡುತ್ತದೆ.  

ಹಿರಣ್ಯ ಕಶಿಪು  ಎಂಬ ದಾನವನಿದ್ದ.  ಪ್ರಹ್ಲಾದನ ಅಪ್ಪ . ನಾನೇ ದೇವರುಎಂದು ಕೊಂಡು ಈತ ದೌರ್ಜನ್ಯದಿಂದ ಮೆರೆಯುತ್ತಿದ್ದ.  ಪ್ರಹ್ಲಾದನಿಗೆ ಹರಿಯನ್ನು ನಂಬಬೇಡ ಅಂದರೆ ದೇವರನ್ನು ನಂಬ ಬೇಡ ಎಂದು ಹೇಳುತ್ತಿದ್ದ.  ಇಂತಹ ಹಿರಣ್ಯ ಕಶಿಪು ಸಂತಾನಗಳಿಗೆ ನಾವು ಆತಂಕ ಪಡಬೇಕು.  ಎಷ್ಟೋ ಧಾರ್ಮಿಕ ಕಾರ್ಯಕ್ರಮಗಳು ಆಗುತ್ತವೆ. ಉತ್ಸವಾಚರಣೆಗಳಲ್ಲಿ ಇಂದು ಸಭಾಕಾರ್ಯಕ್ರಮವೇ ಹೆಚ್ಚು ಪ್ರಧಾನವಾಗಿರುತ್ತವೆ.  ಧರ್ಮ ಜಾಗೃತಿ ಈ ಕಾರ್ಯಕ್ರಮಗಳ ಉದ್ದೇಶ. ಅದರಲ್ಲೇನು ತಪ್ಪಿಲ್ಲ. ಆದರೆ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಮತ್ತೊಂದು ಧರ್ಮವನ್ನು ನಿಂದಿಸುವ ಮಟ್ಟಕ್ಕೆ ಹೋಗಬಾರದು. ನಮ್ಮ ಧರ್ಮದ ಬಗ್ಗೆ ಹೇಳಬಹುದು. ನಮ್ಮ ಧರ್ಮದ ಹಾದಿಯನ್ನು ತೋರಿಸಬಹುದು...ಆದರೆ ಮತ್ತೊಂದು ಹಾದಿಯನ್ನು ನಿಂದಿಸುವುದು ಸರಿಯಲ್ಲ. ಧರ್ಮ ಧರ್ಮದ ನಡುವೆ ಹೋಲಿಕೆ ಇಂದಿನ ಕ್ಷೋಭೆಗೆ ಬಹು ಮುಖ್ಯ ಕಾರಣ. ಏನಿಲ್ಲ ಎಂದಿದ್ದರೂ ಅಲ್ಲೊಂದು ದೈವನಂಬಿಕೆ ಇದೆ ಎಂದು ತಿಳಿಯಬೇಕು. ದೇವರು ಎಲ್ಲಿದ್ದರೂ ದೇವರೆ. ಅದು ರೂಪವಿದ್ದೋ ರೂಪವಿಲ್ಲದೆಯೋ ಅಸ್ತಿತ್ವದಲ್ಲಿ ಇದೆ ಎಂದು ತಿಳಿವಲ್ಲಿ ಧರ್ಮದ ಅಸ್ತಿತ್ವ ಇರುತ್ತದೆ.  ನಾವು ಅಕ್ಕಿ ಅಂತ ಕರೆಯುವುದನ್ನು ಇನ್ನೊಬ್ಬರು ಏನೋ ಒಂದು ಕರೆದರೆ ಅದು ಅಕ್ಕಿಅಲ್ಲದೇ ಆಗುವುದಿಲ್ಲ. ಹಾಗಾಗಿಯೇ ಭಗವಂತನಿಗೆ ಸಹಸ್ರ ನಾಮಗಳಿರುತ್ತವೆ. 

ಧಾರ್ಮಿಕ ಆಚರಣೆಗಳ ಸಭೆಗಳಲ್ಲಿ ಧಾರ್ಮಿಕ ಆಚರಣೆಯ ಅರಿವನ್ನು ಮೂಡಿಸಬೇಕು. ಹಿಂದೆ ನಮ್ಮೂರ ದೇವಸ್ಥಾನದಲ್ಲಿ ಸಹಸ್ರ ಚಂಡಿಕಾ ಯಾಗ ನಡೆಯಿತು. ಆ ಸಂದರ್ಭದಲ್ಲಿ ಕ್ರಮದಂತೆ ಧಾರ್ಮಿಕ ಸಭೆ ನಡೆಯಿತು. ಅಲ್ಲಿ ಆಶೀರ್ವಚನ ನೀಡಿದ ಪೂಜ್ಯ ಶ್ರೀ ಶೃಂಗೇರಿ  ಜಗದ್ಗುರುಗಳು ಚಂಡಿಕಾ ಯಾಗದ ವಿಧಿ ವಿಧಾನಗಳನ್ನು ಅದರ ಮಹತ್ವವನ್ನು ದುರ್ಗಾ ಚಂಡಿಕೆ ಈ  ಅವತಾರದ ಕಾರಣಗಳನ್ನು ಸಪ್ತಶತಿ ಪಾರಾಯಣದ ಮಹತ್ವವನ್ನು ಸವಿಸ್ತಾರವಾಗಿ ಹೇಳಿದರು. ಅವರು  ಇದನ್ನು ಕೇಳಿದ ನಂತರ ಚಂಡಿಕಾಯಾಗದ ಪೂರ್ಣಾಹುತಿಯನ್ನು ಕಾಣುವಾಗ ಅದನ್ನು ಕಾಣುವ ದೃಷ್ಟಿಕೋನವೇ ಬದಲಾಗಿಬಿಟ್ಟಿತು. ಅವರು ಯಾವುದೇ ವ್ಯಕ್ತಿಯನ್ನು ದೂಷಿಸಲಿಲ್ಲ. ಯಾವುದೇ ಧರ್ಮವನ್ನು ನಿಂದಿಸಲಿಲ್ಲ. ನಿಂದಿಸುವುದು ಬಿಡಿ ವಿಮರ್ಶಿಸಲೂ ಇಲ್ಲ.  ಜಗದ್ಗುರು ಅನ್ನಿಸುವುದೇ ಇಂತಹ ಗುಣಗಳಿಂದ. ಇದು ಧಾರ್ಮಿಕ ಸಭೆಯ ಮಹತ್ವ. ಆಸ್ತಿಕನಾಗುವುದು ಮುಖ್ಯವಲ್ಲ. ಆದರ ಅರ್ಥವನ್ನು ತಿಳಿಯುವುದು ಮುಖ್ಯ ನಮ್ಮ ಧರ್ಮದ ಶ್ರೇಷ್ಠತೆಯನ್ನು ಹೇಳಬೇಕಾದರೆ ನಮ್ಮ ಧರ್ಮವನ್ನು ಅದರ ತತ್ವಗಳನ್ನು ಅಧ್ಯಯನ ಮಾಡಿ ತಿಳಿದುಕೊಳ್ಳಬೇಕು. ಅಧ್ಯಯನ ಸಾಧ್ಯವಾಗದಿದ್ದರೆ ಇಂಥ ಧಾರ್ಮಿಕ ಪ್ರವಚನಗಳು ಪ್ರೇರಕವಾಗಿರಬೇಕು. ಅದಲ್ಲದೇ ಯಾವುದೋ ಪರ ಧರ್ಮದ ಬಗ್ಗೆ ಹೇಳಬೇಕಾದರೆ ನಾವು ಪರಧರ್ಮವನ್ನು ಅಧ್ಯಯನ ಮಾಡಬೇಕು. ಇಲ್ಲಿ ನಮ್ಮ ಧರ್ಮದ ಅಧ್ಯಯನವೇ ಸಾಧ್ಯವಾಗುವುದಿಲ್ಲ ಎಂದಾಗ ಮತ್ತೊಂದು ಧರ್ಮದ ಬಗ್ಗೆ ಗಮನ ಹರಿಸಿ ಅದನ್ನು ವಿಮರಿಸುವ ಅವಶ್ಯಕತೆಯಾದರೂ ಯಾಕೆ ಬೇಕು. ಇಂದಿನ ಹಲವು ಸಮಸ್ಯೆಗಳು ಹುಟ್ಟಿಕೊಳ್ಳುವುದೇ ಇಲ್ಲಿಂದ. ಧರ್ಮ ಧರ್ಮದ ನಡುವೆ ವ್ಯಕ್ತಿಯ ವ್ಯಕ್ತಿಯ ನಡುವೆ ತುಲನೆ ಮಾಡುವುದು ಇದು ಆರೋಗ್ಯಕರ ಚಿಂತನೆ ಎನಿಸುವುದಿಲ್ಲ.  ಧರ್ಮದ ಅರಿವನ್ನುಮೂಡಿಸುವಲ್ಲಿ ಧಾರ್ಮಿಕ ಸಭೆಯ ಮಹತ್ವ ಬಹಳ ಇರುತ್ತದೆ. ದೇವರಿಲ್ಲ ಎನ್ನುವ ಚಿಂತನೆಯನ್ನು ದೂರವಿಟ್ಟು ದೇವರಿದ್ದಾನೆ ಎಂದು ನಂಬಿ ವಿಶ್ವಾಸದಲ್ಲಿ ನಡೆಯುವವನ್ನು ಗೌರವಿಸುವ. ಕೊನೇ ಪಕ್ಷ ಎಲ್ಲೋ ಒಂದು ಕಡೆ ಅವನಲ್ಲಿರುವ ದೇವರಿದ್ದಾನೆ ಎಂಬ ಭಾವ ಹುಲ್ಲುಕಡ್ಡಿಯಷ್ಟಾದರೂ ನಮಗೆ ರಕ್ಷಣೆಯನ್ನು ನೀಡಬಹುದು. 

ಈ ಚಿಂತನೆಗಳು ಎಷ್ಟು ಸೂಕ್ತವೋ ತಿಳಿಯದು. ಆದರೆ ಸನಾತನ  ಹಿಂದೂ ಧರ್ಮ ಎಲ್ಲ ಧರ್ಮಗಳ ಸಾರವನ್ನೂ ಒಳಗೊಂಡಿದೆ. ಹಾಗಾಗಿ ಇದೊಂದು ಹಿರಿಯಣ್ಣನಂತೆ. ಇದ

Thursday, April 3, 2025

ಮಧೂರು ಬ್ರಹ್ಮ ಕಲಶ

  ಪುರಾಣದಲ್ಲಿ ವಿಶ್ವಾಮಿತ್ರ ಮೊದಲಿಗೆ ಹಲವು ವಿಧದಲ್ಲಿ ವಸಿಷ್ಠರನ್ನು ಸೋಲಿಸುವುದಕ್ಕೆ ಪ್ರಯತ್ನಿಸುತ್ತಾನೆ. ದೈಹಿಕವಾಗಿ ಮಾನಸಿಕವಾಗಿ ಅತನೊಂದಿಗೆ ಹೋರಾಡುತ್ತಾನೆ. ಆದರೆ ಆತನನ್ನು ಸೋಲಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಪ್ರತಿಯೊಂದು ಹೋರಾಟದಲ್ಲೂ ಆತನಿಗೆ ಅಪಜಯವಾಗುತ್ತದೆ. ಅದು ಕೇವಲ ಅಪಜಯವಲ್ಲ. ಆತ ನಂಬಿದ ತತ್ವಗಳ ಸೋಲು. ವಸಿಷ್ಠ ಹೋರಾಡದೇ ಗೆಲ್ಲುತ್ತಾ ಹೋಗುತ್ತಾನೆ. ಆತ ಎಲ್ಲಿಯೂ ಸ್ಪರ್ಧೆಗೂ ನಿಲ್ಲುವುದಿಲ್ಲ, ಹೋರಾಟಕ್ಕೂ ಬರುವುದಿಲ್ಲ. ಆತನ ಬ್ರಹ್ಮ ವರ್ಚಸ್ಸು ಆತನನ್ನು ಗೆಲ್ಲಿಸಿಬಿಡುತ್ತದೆ. ಆ ಗೆಲುವನ್ನೂ ಆತ ಗೆಲುವು ಎಂದು ತಿಳಿಯುವುದಿಲ್ಲ. ಹೋರಾಟವೇ ಇಲ್ಲ ಎಂದು ತಿಳಿದವನಿಗೆ ಸೋಲು ಹೇಗೆ ಇಲ್ಲವೋ ಹಾಗೆ  ಗೆಲುವು ಎಂಬುದು ಇರುವುದಿಲ್ಲ. ಬ್ರಹ್ಮ ವರ್ಚಸ್ಸು ಎಂದರೆ ಅದು. ಬ್ರಹ್ಮ ಎಂದರೆ ಅತ್ಯಂತ ದೊಡ್ಡದು. ಅದಕ್ಕಿಂತ ಮಿಗಿಲು ಇನ್ನೊಂದು ಇಲ್ಲ. ಹಾಗೆ ವರ್ಚಸ್ಸು..ಅದು ಬ್ರಹ್ಮ ವರ್ಚಸ್ಸು ಅದಕ್ಕಿಂತ ಮಿಗಿಲು ಮತ್ತೊಂದು ಇರುವುದಕ್ಕೆ ಸಾಧ್ಯವಿಲ್ಲ.   ಅದರಲ್ಲಿ ವಿಶ್ವಾಸ ಇದ್ದವನಿಗೆ ಹೋರಾಟದ ಅವಶ್ಯಕತೆಯೇ ಇರುವುದಿಲ್ಲ. ಈ ಬ್ರಹ್ಮ ವರ್ಚಸ್ಸು ಒಲ್ಲಿದು ಬರುವುದು ಕೇವಲ ಭಗವಂತನ ಅನುಗ್ರಹದಿಂದ. ಬ್ರಾಹ್ಮಣ ಅಂತ ಹೇಳುವುದು ವ್ಯಕ್ತಿಗಲ್ಲ. ಆ ಅನುಗ್ರಹ ಲಭ್ಯವಾಗುವುದು ಭಗವಂತನ ಮೇಲಿನ ವಿಶ್ವಾಸದಿಂದ. ಇದು ನಮ್ಮ ಸನಾತನ ಧರ್ಮದ ನಂಬಿಕೆ. 


ನಾನು ಊರಿಗೆ ಹೋದರೆ ಎರಡು ಕ್ಷೇತ್ರಗಳಿಗೆ ಪದೇ ಪದೇ ಭೇಟಿ ಕೊಡುತ್ತೇನೆ. ಒಂದು ಮಧೂರು ಮದನಂತೇಶ್ವರ ಕ್ಷೇತ್ರ, ಇನ್ನೊಂದು ಆವಳ ದುರ್ಗಾಪರಮೇಶ್ವರಿ ಕ್ಷೇತ್ರ.  ಮತ್ತೆ ಕೆಲವೊಮ್ಮೆ ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರ. ದೇವಾಲಯಕ್ಕೆ ಹೋಗುವುದಾದರೆ ಹೆಚ್ಚು ಜನಸಂದಣಿ ಇಲ್ಲದ ದೇವಾಲಯಕ್ಕೆ ಹೋಗುವುದನ್ನು ಹೆಚ್ಚು ಬಯಸುತ್ತೇನೆ. ಗಂಟೆಗಟ್ಟಲೆ ದರ್ಶನಕ್ಕೆ, ಭೋಜನ ಪ್ರಸಾದಕ್ಕೆ    ಸರದಿಯಲ್ಲಿ ನಿಲ್ಲುವುದೆಂದರೆ ಯಾಕೋ ಹಿತ ಎನಿಸುವುದಿಲ್ಲ. ಆಧ್ವಾನ ಒತ್ತಡ ಇದೆಲ್ಲ ಮನಸ್ಸಿನ ಶಾಂತಿಯನ್ನು ಪರೀಕ್ಷಿಸಿ ಬಿಡುತ್ತವೆ. ಈಗೀಗಲಂತೂ ನಾನು ದೇವಾಲಯಕ್ಕೆ ಹೋಗುವುದನ್ನು ಬಿಟ್ಟಿದ್ದೇನೆ ಎನ್ನಬಹುದು. ನಿತ್ಯ ಕರ್ಮದಲ್ಲಿ , ಮತ್ತು ಧ್ಯಾನದಲ್ಲಿ  ಹೆಚ್ಚು ವಿಶ್ವಾಸ ಮತ್ತು ಆಸಕ್ತನಾಗಿ ನಿತ್ಯ ಮನೆಯಲ್ಲೇ ಆ ಅವ್ಯಕ್ತ ಸ್ವರೂಪ ದರ್ಶನ ಮಾಡುವುದರಲ್ಲೆ ಧನ್ಯತೆಯನ್ನೂ ಸಂತೋಷವನ್ನು ಕಾಣುತ್ತೇನೆ. ಹಾಗಂತ ಎಲ್ಲಾ ದೇವಾಲಯದ ಬಗ್ಗೆ ಅಲ್ಲಿಗೆ ಹೋಗುವವರ  ಬಗ್ಗೆ ಗೌರವದಿಂದ ಕಾಣುತ್ತೇನೆ. ಬ್ರಹ್ಮಾ ಶಿರಃ ವಿಷ್ಣುರ್ ಹೃದಯಂ ರುದ್ರೋಲಲಾಟಂ ಅಂತ ಹೇಳುವಾಗ ಭಗವಂತನ ಸ್ಥಾನ ನನ್ನಲ್ಲೇ ಇದೆ ಎನ್ನುವ ಅತೀವ ನಂಬಿಕೆ ನನಗೆ. ಇವುಗಳಿಗೆ ಪ್ರಥಮ ಆದ್ಯತೆ. ನಂತರ ಎಲ್ಲವೂ ದ್ವೀತಿಯ. ಬೇಕು ಎಂದನಿಸಿದರೆ ಹೋಗಿ ನೋಡುವುದು. 

ಮಧೂರು ಮತ್ತು ದುರ್ಗಾ ಪರಮೇಶ್ವರಿ ಕ್ಷೇತ್ರಗಳು ಕೇವಲ ಭಕ್ತಿಗೆ ಸೀಮಿತವಾಗಿ ಮಾತ್ರವಲ್ಲ, ಬಾಲ್ಯದ ಒಡನಾಟದ ಆ ಭಾವನಾತ್ಮಕ ಸಂಬಂಧಗಳು ಹೆಚ್ಚು ಈ ಕ್ಷೇತ್ರಕ್ಕೆ ಸಂಬಂಧಿಸಿ ಬೆಸೆದುಬಿಟ್ಟಿದೆ. ಮಧೂರು ಬಾಲ್ಯದಿಂದಲೇ ಭೇಟಿಕೊಡುವ ಪವಿತ್ರ ಸ್ಥಳ. ಆವಳ. ನನ್ನದೇ ಸ್ವಂತ ಮನೆ ಎಂಬಂತಹ ಬಾವನೆಯಾದರೆ ಕಟೀಲು, ನನಗೆ ಬ್ರಹ್ಮೋಪದೇಶ ಕಲ್ಪಿಸಿದ ಕ್ಷೇತ್ರ. ಈಗಿಗ ಇದು ಬಿಟ್ಟು ಬೇರೆ ಕಡೆಗೆ ನಿಯಮಿತ ಭೇಟಿ ಇಲ್ಲ. 

ಶ್ರೀ ಮಧೂರು ಮದನಂತೇಶ್ವರ ಕ್ಷೇತ್ರ ಈಗ ನವೀಕರಣಗೊಂಡು ಬ್ರಹ್ಮ ಕಲಶೋತ್ಸವದ ಸಂಭ್ರದಲ್ಲಿ ಕಂಗೊಳಿಸುತ್ತದೆ. ಹೋಗಿ ಭೇಟಿ ಕೊಡಬೇಕು ಎಂಬ ತೀವ್ರ ತುಡಿತವಿದ್ದರೂ ಕೆಲಸದ ಒತ್ತಡ ಮತ್ತಿನ್ನೇನೋ ಕೆಲವು ಕಾರಣಗಳಿಂದ ಹೋಗಲು ಸಾಧ್ಯವಾಗದೇ ಮಹಾಗಣಪತಿಗೆ ಇಲ್ಲಿಂದಲೇ ಪ್ರಣಾಮವನ್ನು ಸಲ್ಲಿಸುತ್ತೇನೆ. 

ದೇವಾಲಯ ಭೇಟಿ ಎಂದರೆ ಆಲಿ ಯಾವ ಸ್ವಾರ್ಥವೂ ಪ್ರತಿಷ್ಠೆಯೂ  ಇರಬಾರದು ಎಂಬ ಭಾವನೆ ನನ್ನದು. ದೇವರಲ್ಲಿ ಬೇಡಿಕೊಳ್ಳುವುದು ಏನಿದೆ? ಎಲ್ಲವೂ ಆತನಿಗೆ ತಿಳಿದಿರುವಾಗ ಆತನಲ್ಲಿ ಪ್ರಾರ್ಥಿಸುವುದಕ್ಕೂ ಒಂದು ಹಿಂಜರಿಕೆ, ನನ್ನ ಭಕ್ತಿಯ ಮೇಲೆ ಅವಿಶ್ವಾಸ ಮೂಡಿದಂತೆ ಭಾಸವಾಗುತ್ತದೆ. ದೇವರಲ್ಲಿ ಬೇಡುವುದೆಂದರೆ ಆತನ ಸ್ವಾಂತ್ರವನ್ನು ಕಸಿದಂತೆ.   ನಮ್ಮ ಹಂಗಿನಲ್ಲಿ ಸಿಲುಕಿಸಿದಂತೆ. ಆತನ ಅನುಗ್ರಹದ ಮೇಲೆ ಅವಿಶ್ವಾಸ ತಳೆದೆಂತೆ. ನಾವು  ಭಗವಂತನನ್ನು ಸರ್ವತಂತ್ರ ಸ್ವತಂತ್ರ ಎಂದು ಹೇಳುವಾಗ ಆತನನ್ನು ಸ್ವತಂತ್ರವಾಗಿ ಇರುವುದಕ್ಕೆ ಬಿಡುವುದಲ್ಲ ಆತ ಸ್ವತಂತ್ರ ಎಂದು ನಾವು ತಿಳಿಯಬೇಕು.   ಹಾಗಾಗಿ ಕೇವಲ ಶಾಂತ ಚಿತ್ತದಿಂದ ನಿರ್ಲಿಪ್ತ ಮನಸ್ಸಿನಿಂದ ಇರುವುದಕ್ಕೆ ಬಯಸುತ್ತೇನೆ. ಅಲ್ಲಿನ ಅಸೌಕರ್ಯ ಏನೇನೊ ತೊಂದರೆಗಳು ಇವೆಲ್ಲ ಪಾಲಿನ ಪಂಚಾಮೃತಗಳಾಗಿ ಸ್ವೀಕಾರ ಮಾಡಿಬಿಡುತ್ತೇನೆ. ದೇವರಲ್ಲಿ ಸ್ಪರ್ಧಿಸುವ ಮನೋಭಾವ ಸರಿಯಲ್ಲ. 

ಮಧೂರು ಕ್ಷೇತ್ರದ ನಿಮಿಷ ನಿಮಿಷದ ವರ್ತಮಾನಗಳು ಸಾಮಾಜಿಕ ಜಾಲತಾಣದಲ್ಲಿ ಹರಿದು ಬರುತ್ತವೆ. ಅದೆಲ್ಲವೂ ಒಂದು ಸಂಭ್ರಮವನ್ನು ಬಿಂಬಿಸಿದರೆ..ಅಲ್ಲಿ ಹುಟ್ಟಿದ ಕೆಲವು ವಿವಾದಗಳು ವಿದ್ಯಮಾನಗಳು ನಾವಿನ್ನೂ ಭಗವಂತನ ವಿಶ್ವಾಸದಲ್ಲಿ ಕೊರತೆಯನ್ನು ಅನುಭವಿಸುತ್ತೇವೆ ಎಂದು ತೋರಿಸುತ್ತದೆ. ಸಭಾ ಕಾರ್ಯಕ್ರಮಗಳು ಹಲವು ಸಲ ರಾಜಕೀಯ ಸಭೆಯಂತೆ ಭಾಸವಾಗುತ್ತದೆ. ಮುಖ್ಯವಾಗಿ ಇಂತಹ ಸನ್ನಿವೇಶಗಳು ಸನಾತನ ಧರ್ಮದ ಆಧ್ಯಾತ್ಮಿಕ ತತ್ವವವನ್ನು ಸಾರಬೇಕು. ಅಲ್ಲಿ ಅವುಗಳಿಗೆ ಹೆಚ್ಚು ಪ್ರಾಶಸ್ತ್ಯ ಲಭ್ಯವಾಗಬೇಕು. ಹತ್ತು ಹಲವು ಸಮಸ್ಯೆಗಳು ಬರುತ್ತವೆ. ಎಲ್ಲವೂ ಭಗವಂತನಿಗೆ ಸಮರ್ಪಿಸಿ ಬಿಡಬೇಕು. ಇಲ್ಲಿ ಪ್ರತಿಷ್ಠೆಗೆ ಅವಕಾಶ ಇರಬಾರದು. ಎಲ್ಲಿ ಅಹಂ ಇರುತ್ತದೋ ಅಲ್ಲಿ ಭಗವಂತನ ಅಸ್ತಿತ್ವ ಇರುವುದಿಲ್ಲ. ಎಲ್ಲ ಕಾರ್ಯದಲ್ಲೂ ಎಡರು ತೊಡರುಗಳು ಸಾಮಾನ್ಯ. ಅಷ್ಟಿದ್ದರೂ ಇಷ್ಟಾಗಿದೆಯಲ್ಲ ಅದು ಭಗವಂತನ ಕೃಪೆ ಎನ್ನುವ ಭಾವ ಇದ್ದರೆ  ಇನ್ನೊಬ್ಬರ ತಪ್ಪುಗಳ ಕಡೆಗೆ ಬೊಟ್ಟು ಮಾಡುವ ಅವಕಾಶ ಇರುವುದಿಲ್ಲ. 

ಯಾವುದೋ ಅನುದಾನ ಕೇಂದ್ರದಿಂದ ಬಂದಿಲ್ಲ ಎಂಬುದು ಹಲವು ವಿವಾದಗಳಿಗೆ ಭಿನ್ನಾಭಿಪ್ರಾಯಗಳಿಗೆ ಕಾರಣವಾಯಿತು. ಯಾವುದೇ ಆದರೂ ಅದಕ್ಕೆ ಮೋದಿ ಕಾರಣ ಎನ್ನುವ ಹಾಗೆ ಚಿತ್ರಿಸುವಾಗ ಕ್ಷುಲ್ಲಕ ಚಿಂತನೆ ಅನ್ನಿಸುತ್ತದೆ. ಇಷ್ಟೇಲ್ಲಾ ವಿವಾದವಾದರೂ ಅದು ಮೋದಿಯ ಅರಿವಿನಲ್ಲಿ ಇದೆಯೋ ಇಲ್ಲವೋ ಆ ಮಹಾಗಣಪತಿಗೆ ಗೊತ್ತು. ಆದರೂ ನಾವು ಹಳಿಯುವುದು  ವಿಚಿತ್ರ.  ಅನುದಾನ ಯಾಕೆ ಬರಲಿಲ್ಲ ಎಂಬುದಕ್ಕೆ ಯಾರನ್ನೋ ಹೇಳಿಕೊಂಡು ಅದನ್ನೇ ಪ್ರದರ್ಶನಕ್ಕಿಟ್ಟರೆ ಅದು ನಮ್ಮ ಕೊಂಕುತನವನ್ನು ತೋರಿಸುತ್ತದೆ. ಭಿನ್ನಾಭಿಪ್ರಾಯ ಯಾರಿಗಿರುವುದಿಲ್ಲ? ಸಪ್ತಪದಿ ತುಳಿದು ಅಗ್ನಿಸಾಕ್ಷಿಯಾಗಿ ಮದುವೆಯಾದ ಗಂಡಹೆಂಡತಿಯರ ನಡುವೆ ಇರುತ್ತದೆ. ಬದುಕಿನಲ್ಲಿ ಒಂದೇ ಒಂದು ಸಲವಾದರೂ ಜಗಳವಾಡದ ಗಂಡಹೆಂಡತಿ ಇರಬಹುದೇ? ಹಾಗಂತ ಅದನ್ನು ಪ್ರದರ್ಶನಕ್ಕಿಟ್ಟರೆ ಅದು ನಮ್ಮದೇ ಸೋಲಾಗಿಬಿಡುತ್ತದೆ. ಭಗವಂತನ ಎದುರು ಎಲ್ಲರೂ ಸಮಾನರಾಗುವಾಗ ಕೇವಲ ಗೆಲುವಿಗೆ ಮಾತ್ರ ಪಾಲುದಾರರಲ್ಲ ಅಲ್ಲಿನ ಸೋಲಿಗೂ ನಾವೇ ಕಾರಣರಾಗಬೇಕು. 

ಒಂದು ದೇವಸ್ಥಾನಕ್ಕೆ ಹೋಗುವಾಗ ಅಲ್ಲಿ ಅದು ಸರಿಇಲ್ಲ ಇದು ಸರಿ ಇಲ್ಲ, ಊಟಕ್ಕೆ ಜಾಗ ಇಲ್ಲ..ಪ್ರಸಾದ ಸಿಕ್ಕಿಲ್ಲ.ದರ್ಶನ ಸಿಗಲಿಲ್ಲ...ಹೀಗೆ ಎಲ್ಲ ಇಲ್ಲಗಳಿಗೆ ಕಾರಣ ನಮ್ಮ ಸೋಲು ಅಥವಾ ನಮ್ಮ ಪ್ರಾಪ್ತಿಯೇ ಹೊರತು ಅದಕ್ಕೆ ಕ್ಷೇತ್ರವಾಗಲೀ ವ್ಯಕ್ತಿಯಾಗಲಿ  ನಿಮಿತ್ತವಾಗುವುದಿಲ್ಲ. ದೇವರ ಸಾನ್ನಿಧ್ಯ ಎಂದರೆ ಹಾಗೆ. ಹೆಣ್ಣು ನಾಯಿಗೆ ಹಲವು ಮರಿಗಳಿರುತ್ತವೆ. ಅದರಲ್ಲಿ ಕೆಲವು ಮರಿಗಳಿಗೆ ಮೊಲೆ ಹಾಲು ಸಿಗುತ್ತದೆ. ಕೆಲವುದಕ್ಕೆ ಸಿಗುವುದಿಲ್ಲ ಸಿಗದೇ ಇದ್ದದ್ದು ಮತ್ತೊಂದನ್ನು ತುಳಿದು ಹೇಗಾದರೂ ಗಿಟ್ಟಿಸುವುದಕ್ಕೆ ನೋಡುತ್ತದೆ. ಅದು ಜ್ಞಾನವಿಲ್ಲದೇ ಇರುವ ಬದುಕಿನ ಹೋರಾಟ. ಇದು ಅರ್ಥ ಮಾಡಿಕೊಂಡಾಗ ಭಗವಂತನ ಅನುಗ್ರದ ವ್ಯಾಪ್ತಿ ಅರಿವಾಗುತ್ತದೆ. ಸಿಕ್ಕಿಲ್ಲ ಇಷ್ಟೇ ಅಂತ ತೃಪ್ತ ನಾಗಬೇಕು. ಅದು ದೈವಿಕ್ಷೇತ್ರದಲ್ಲಿ ಅನಿವಾರ್ಯ. ಈ ಮನೋಭಾವ ಇಲ್ಲದೇ ಇದ್ದರೆ ಯಾವ ಕ್ಷೇತ್ರಕ್ಕೆ ಹೋದರೂ ಶಾಂತಿ ನೆಮ್ಮದಿ ಸಿಗುವುದಕ್ಕೆ ಸಾಧ್ಯವಿಲ್ಲ. 

ನಮ್ಮಲ್ಲಿರುವ ಸಂಕುಚಿತ ಮನೋಭಾವ ದೂರವಾಗಬೇಕು. ಮನಸ್ಸಿನಲ್ಲಿ ಕೊಂಕು ಮೊದಲು ಕೊಂದು ಬಿಡಬೇಕು. ಎಲ್ಲಿವರೆಗೆ ಮನಸ್ಸಿನಲ್ಲಿ ಈ ನ್ಯೂನ್ಯತೆ ಇರುತ್ತದೋ ಅದು ಉಳಿದವರನ್ನು ಹಿಂಸಿಸುವುದಲ್ಲ ನಮ್ಮನ್ನೇ ಹಿಂಸಿಸುತ್ತದೆ.  ಊಗ್ರನರಸಿಂಹ ಅಥವಾ ಮಹಾಕಾಳಿಯ ರೂಪ ಉಗ್ರ ಇರಬಹುದು. ಆದರೆ ಉಗ್ರ ನರಸಿಂಹನನ್ನು ಹರಿಯಾಗಿ ಕಾಣುವ ಮನೋಭಾವ ಇರುವಾಗ ಆ ಉಗ್ರತೆ  ಅನುಭವಕ್ಕೆ ಬರುವುದಿಲ್ಲ. ನರಸಿಂಗಹನನ್ನು ನೋಡುವ ನಮ್ಮ ಮನೋಭಾವ ಬದಲಾಗಬೇಕು. ಭಗವಂತನಲ್ಲಿರುವ ವಿಶ್ವಾಸದ ಮೇಲೆ ಅಚಲವಾಗಿ ವಿಶ್ವಾಸ ಇರಬೇಕು. ಗುರಿಯನ್ನು ಗುರು ತೋರಿಸುತ್ತಾನೆ. ಮತ್ತು ಅದರ ಹಾದಿಯನ್ನು ತೋರಿಸುತ್ತಾನೆ. ಗುರಿ ಮತ್ತು ದಾರಿ ಎರಡು ಶುದ್ದವಾಗಿರಬೇಕು. ಕಸ ಮಲ ತುಂಬಿದ ಹಾದಿಯಲ್ಲಿ ತುಳಿದು ಗುರಿಯನ್ನು ಸಾಧಿಸಬಹುದು ಆದರೆ ನಾವು ತುಳಿದು ಬಂದ ಹಾದಿ ನಮ್ಮ ದೇಹವನ್ನೂ ಮನಸ್ಸನ್ನೂ ಕೆಡಿಸಿರುತ್ತದೆ.  ಮೊದಲು ನಾವು ಒಂದಾಗಬೇಕು. ಭಗವಂತನ ಸಾನ್ನಿಧ್ಯದಲ್ಲಾದರೂ ನಮ್ಮ ಭಿನ್ನಾಭಿಪ್ರಾಯಗಳು ನಾಶವಾಗಬೇಕು. ಅಲ್ಲಿ ನಮ್ಮದು ನನ್ನದು ಎಂಬ ಯಾವ ಭಾವವೂ ಮುಖ್ಯವಲ್ಲ. ಕೇವಲ ಭಗವಂತನ ಮೇಲಿನ ವಿಶ್ವಾಸ ಮಾತ್ರ ಮುಖ್ಯವಾಗಬೇಕು. 

ಮಹನೀಯರೊಬ್ಬರ ಭಾಷಣ ಕೇಳಿದೆ. ಹಲವು ಅಭಿಪ್ರಾಯಗಳನ್ನು ಬಹಳ ಚೆನ್ನಾಗಿ ಹೇಳಿದರು. ಆದರೆ ದೇವರ ಮೂರ್ತಿಗೆ ಬೆಳಕು ಹಾಕಬೇಕು. ಅಲ್ಲಿ ಪ್ರಕಾಶಮಾನವಾದ ದೀಪ ಬೆಳಗಿಸಬೇಕು. ಆ ಮೂರ್ತಿ ಸರಿಯಾಗಿ ಕಾಣಬೇಕು ಎಂದು ಹೇಳಿದರು. ಅವರ ಅಭಿಪ್ರಾಯ ತಪ್ಪಲ್ಲ. ಅದರ ಬಗ್ಗೆ ಗೌರವ ಇದೆ. ಆದರೆ ದೇವರು ಎಂದರೆ ವ್ಯಕ್ತ ಅವ್ಯಕ್ತ ಸ್ವರೂಪ. ಆತ ಕಂಡರೂ ಕಾಣದಿದ್ದರೂ ಅದನ್ನು ಕಾಣುವ ಸಾಮಾರ್ಥ್ಯ ನಮಗಿರಬೇಕು. ದೇವರ ಸ್ವರೂಪವನ್ನು ನೋಡಿ ಬರುವ ಭಕ್ತಿ ಕೇವಲ ತಾತ್ಕಾಲಿಕ. ಒಂದೇ ವಿಧದ ಮೂರ್ತಿಯನ್ನು ದಿನಾ ನೋಡುವಾಗ ಬದಲಾವಣೆಯನ್ನುಎಲ್ಲದರಲ್ಲೂ ಬಯಸುವ ನಮಗೆ ಕೊನೆಗೆ ಅದರಲ್ಲೂ ಬದಲಾವಣೆ ಬೇಕಾಗಬಹುದು. ದೇವರು ಅಸ್ಪಷ್ಟವಾಗಿ ಕಾಣಬೇಕು. ಬದುಕಿನಾದ್ಯಂತ ಅದು ಹೇಗಿರುತ್ತದೆ ಎಂಬ ಕುತೂಹಲವೇ ಶಾಶ್ವತವಾಗಿರಬೇಕು. ಕತ್ತಲೆಯಲ್ಲು ಬೆಳಕಿನಲ್ಲೂ ಭಗವಂತನನ್ನು ಕಾಣುವ ಮನಸ್ಸು ನಮ್ಮಲ್ಲಿರಬೇಕು. ಹಾಗಿರುವಾಗ ಕತ್ತಲೆ ಬೆಳಕಿನ ಪ್ರಶ್ನೆ ಇರುವುದಿಲ್ಲ. ದೇವರ ರೂಪ ಪ್ರಧಾನವಾಗುವುದಿಲ್ಲ. ಆತನನ್ನು ಕಾಣುವ ಭಾವವೇ ಪ್ರಧಾನ. ಮಂಗಳೂರಲ್ಲಿ ಒಂದು ಗುಳಿಗನ ದೇವಸ್ಥಾನಕ್ಕೆ ಹೋಗಿದ್ದೆ. ಅಲ್ಲಿನ ಗುಳಿಗನ ಕಲ್ಲು ಬಹುತೇಕ ನೆಲದಲ್ಲಿ ಹುದುಗಿತ್ತು. ಕಲ್ಲಿನ ಒಂದಿಷ್ಟು ತುದಿ ಮಾತ್ರ ಮೇಲೆ ಬಂದು ಕಣ್ಣಿಗೆ ಕಾಣುತ್ತಿತ್ತು. ಎಲ್ಲರೂ ಅಷ್ಟಕ್ಕೇ ಬಂದು ಭಕ್ತಿ ಗೌರವದಿಂದ ನಮಸ್ಕರಿಸುತ್ತಿದ್ದರು. ಅಲ್ಲಿ ರೂಪ ಮುಖ್ಯವಾಗುವುದಿಲ್ಲ. ಕೇವಲ ಭಾವಮಾತ್ರ ಮುಖ್ಯವಾಗುತ್ತದೆ. ದೇವರನ್ನು ನೋಡಿದವನಿಲ್ಲ. ಆದರೆ ಆ ದೇವರ ಅನುಭವವಾದವರು  ಇಲ್ಲದೇ ಇರುವುದಿಲ್ಲ. ದೇವರು ಇಲ್ಲ ಎಂದು ಹೇಳುವವನಿಗೂ ಅದು ಅನುಭವಾಗುತ್ತದೆ. ಅದು ಅನುಭವಾಗದೇ ಇದ್ದರೆ ಆತ ದೇವರನ್ನು ನಂಬುದಿಲ್ಲ ಅಂತ ಹೇಳುವುದಕ್ಕೂ ಸಾಧ್ಯವಿಲ್ಲ. ದೇವರು ಅಂತ ದೇವರು ಹೇಳುವುದಿಲ್ಲ . ಅದನ್ನೂ ನಾವೇ ಹೇಳಬೇಕು. 

ಮಧೂರು ಕ್ಷೇತ್ರದ ಬ್ರಹ್ಮ ಕಲಶದ ದೃಶ್ಯಾವಳಿಗಳನ್ನು ನೋಡುವಾಗ ಮನಸ್ಸು ಪುಳಕಿತವಾಗುತ್ತದೆ. ಆ ಸಂಭ್ರಮ ನಮ್ಮದಾಗಬೇಕು ಅಂತ ಮನಸ್ಸು ಬಯಸುತ್ತದೆ. ಆಲ್ಲಿ ಸನ್ನಿಧಿಯಲ್ಲಿ ಅದನ್ನು ಅನುಭವಿಸಿದವರ ಭಾಗ್ಯವನ್ನು ನೆನೆದು ಕೃತಾರ್ಥರಾಗಿ ಈ ಮಹಾ ಕಾರ್ಯಕ್ಕೆ ದುಡಿದ ಎಲ್ಲರಿಗೂ ಭಕ್ತಿ ಪೂರ್ವಕ ಪ್ರಣಾಮಗಳು. ಮುಂದೆಯೂ ಇಂತಹ ಮಾಹಾಕಾರ್ಯಗಳು ನೆರವೇರಲಿ. ಅದನ್ನು ಅನುಭವಿಸುವ ಭಾಗ್ಯ ನಮ್ಮದಾಗಲಿ. 

ಶ್ರೀ ಮಹಾಗಣಪತಯೇ ನಮೋ ನಮಃ

Saturday, March 22, 2025

ಪಾಜಕ ಬ್ರಹ್ಮ

                 ನಳ ದಮಯಂತಿಯ ಕಥೆ ಕೇಳಿರಬಹುದು. ಯಕ್ಷಗಾನ ನೋಡುವ  ಕರಾವಳಿಯವರಲ್ಲಿ ಕೇಳಿದರೆ ನಳ ದಮಯಂತಿಯ ಕಥೆಯನ್ನು ಸ್ವಾರಸ್ಯವಾಗಿ ಹೇಳಬಲ್ಲರು. ಮೊನ್ನೆ ಮನೆಯಲ್ಲಿ ತಮ್ಮನ ಮಗಳಿಗೆ ಈ ಕಥೆಯನ್ನು ಸಂಕ್ಷಿಪ್ತವಾಗಿ ಹೇಳಿದೆ. ನಳ ಮಹಾರಾಜ ಎಲ್ಲವನ್ನು ಕಳೆದುಕೊಂಡು ಕಾಡಿಗೆ ಸೇರಿದ್ದು. ಕೊನೆಯಲ್ಲಿ ಉಟ್ಟ ಬಟ್ಟೆಯನ್ನು ಕಳೆದು ಹೆಂಡತಿಯ ಸೀರೆ ಸೆರಗಿನ ತುಂಡನ್ನು ಹರಿದು ಉಟ್ಟುಕೊಂಡು ಆಕೆಯನ್ನು ಬಿಟ್ಟು ಹೋದದ್ದು. ಕಾರ್ಕೋಟಕ ಸರ್ಪದಿಂದ ತನ್ನ ಸುಂದರ ರೂಪ ಕಳೆದುಕೊಂಡು ವಿರೂಪನಾಗಿ ಬದಲಾದ ಕಥೆ ಹೇಳುತ್ತಾ ನಳ ಮಹಾರಾಜನ ವಿಶೇಷತೆಯನ್ನು ಹೇಳಿದೆ. ಆತ ಒಬ್ಬ ಅದ್ಭುತ ಪಾಕ ಪ್ರವೀಣ. ಅದಕ್ಕೆ ಉದಾಹರಣೆಯಾಗಿ ಅರಸ ಋತುಪರ್ಣನ ಒಡನಾಟದ ಕಥೆಯನ್ನು ಹೇಳಿದೆ . ಈ ಕಥೆಯನ್ನು ಹೇಳುವುದಕ್ಕೆ ಉದ್ದೇಶ ಒಂದೇ ಪಾಜಕ ಕಲೆಯ ಮಹತ್ವದ ಬಗ್ಗೆ ತಿಳಿಸಿ ಹೇಳುವುದು. 

ನಳ ಮಹಾರಾಜ ಸುಂದರ ರೂಪವನ್ನು ಕಳೆದುಕೊಂಡು ಭಿಕಾರಿಯಂತೆ ಋತು ಪರ್ಣ ಮಹಾರಾಜನ ಸಭೆಯನ್ನು ಪ್ರವೇಶ ಮಾಡುತ್ತಾನೆ. ನಳ ಚಕ್ರವರ್ತಿಯ ಸಾಮಂತ ದೊರೆ ಮಾತ್ರವಲ್ಲ ಸ್ನೇಹಿತ ಋತುಪರ್ಣ. ನಳಮಹಾರಜ ಚಕ್ರವರ್ತಿಯ ವರ್ಚಸ್ಸು ಹೇಗಿತ್ತೆಂದರೆ,  ನಳ ಚಕ್ರವರ್ತಿ  ಋತು ಪರ್ಣನ ಸಭಾ ಪ್ರೇಶ ಮಾಡುವಾಗ ಅಚಾನಕ್ಕಾಗಿ ಯಾವುದೋ ಪ್ರೇರಣೆಯಂತೆ ಕುಳಿತ ಸಿಂಹಾಸನದಿಂದ ಎದ್ದು ಬಿಡುತ್ತಾನೆ. ನಳ ಚಕ್ರವರ್ತಿಯ ವರ್ಚಸ್ಸು ಆತನನ್ನು ಎಬ್ಬಿಸಿಬಿಡುತ್ತದೆ. ತಾನು ಯಾಕೆ ಎದ್ದು ಬಿಟ್ಟೆ ಎಂದು ಆತನಿಗೇ ಆಸ್ಚರ್ಯವಾದರೂ ಅದರ ಕಾರಣ ಆತನಿಗೆ ಆಗ ಅರಿವಿಗೆ ಬರುವುದಿಲ್ಲ. ಬಂದ ನಳಮಹಾರಾಜ ಬಾಹುಕನಾಗಿ ಪರಿಚಯಿಸಿ ಆತ ನಳ ಮಹಾರಾಜನಲ್ಲಿ ಕೆಲಸಕ್ಕಿದ್ದವನು, ನಳ ರಾಜ ಭ್ರಷ್ಟನಾದ ನಂತರ ಅಲ್ಲಿ ಆಶ್ರಯವಿಲ್ಲದೆ ಇಲ್ಲಿ ಆಶ್ರಯವನ್ನು ಯಾಚಿಸಿ ಬರುತ್ತಾನೆ. ನಳ ಮಹಾರಾಜನ ಜತೆಗಿನ ಸ್ನೇಹದ ಕಾರಣಕ್ಕೆ ಬಾಹುಕನನ್ನು ಆತ ಕೆಲಸಕ್ಕೆ ಸೇರಿಸಿಕೊಳ್ಳುತ್ತಾನೆ. ದಿನಗಳು ಕಳೆದ ಮೇಲೆ ಒಂದು ದಿನ ಋತು ಪರ್ಣ ಕಾಡಿಗೆ ಬೇಟೆಗೆ ಹೋದಾಗ ರಾಜ ಪರಿವಾರದಿಂದ ದೂರಾಗಿ ಕಾಡಿನಲ್ಲಿ ಏಕಾಂಗಿಯಾದರೂ ಬಾಹುಕ ಆತನ ಜತೆಗಿರುತ್ತಾನೆ. ಕಾಡಿನಲ್ಲಿ ರಾಜನಿಗೆ ವಿಪರೀತ ಹಸಿವಾಗುತ್ತದೆ. ಅಂತಹ ಜಾಗದಲ್ಲಿ ನೀರು ಬೆಂಕಿ ಇಲ್ಲದೆ ಬಾಹುಕ ಆತನಿಗೆ ಉಪಚಾರ ಮಾಡಿ ರುಚಿಯಾದ ಭೋಜನವನ್ನು ಮಾಡಿ ಆತನಿಗೆ ಉಣ ಬಡಿಸುತ್ತಾನೆ. ಅದುವರೆಗೆ ಅರಮನೆಯ ಊಟ ಮಾಡಿದವನಿಗೆ ಈ ಬಾಹುಕನ ಕೈಯ ಅಡುಗೆಯ ಅದ್ಭುತ ರುಚಿ ಆಶ್ಚರ್ಯವನ್ನು ತರುತ್ತದೆ. ಆನಂತರ ಆತನ ಮುಖ್ಯ ಆಡುಗೆಯವನಾಗಿ ಬಾಹುಕನನ್ನು ನೇಮಿಸಿ ಬಿಡುತ್ತಾನೆ. 

ನಳ ಮಹಾರಾಜ ಚಕ್ರವರ್ತಿಯಾದರೂ ಅತ ಒಬ್ಬ ಅದ್ಭುತ ಪಾಕ ತಜ್ಞನಾಗಿರುತ್ತಾನೆ. ಅತನಿಗಿದ್ದ ಹಲವು ವಿಶಿಷ್ಟಗುಳಲ್ಲಿ ಈ ಪಾಜಕ ವಿದ್ಯೆಯೂ ಒಂದು. ಚಕ್ರವರ್ತಿಯಾದರೂ ಅಡುಗೆಯ ಮಹತ್ವ ಆತನಿಗೆ ಅರಿವಿದೆ. ಅದರಂತೆ ಋತುಪರ್ಣ ಮಹಾರಾಜನಲ್ಲಿ ಬಂದನಂತರವೂ ಅದೇ ಗುಣಗಳಿಂದ ಆತ ಋತು ಪರ್ಣನ ಆದರವನ್ನು ಗಳಿಸುತ್ತಾನೆ. ಋತು ಪರ್ಣ ವ್ಯಕ್ತಿಗಿಂತಲೂ ಆತನ ವಿಶಿಷ್ಟಗುಣಗಳಿಗೆ ಮಾರು ಹೋಗುತ್ತಾನೆ. ವಿಕಟ ಕುರೂಪಿಯಾದ ಬಾಹುಕ ಕೇವಲ ತನ್ನ ಅಡುಗೆಯ ಕಲೆಯಿಂದ ಮಹಾರಾಜನ ಒಲವು ಗಳಿಸುವುದೆಂದರೆ ಪಾಜಕ ಕಲೆಯ ಮಹತ್ವ ಅರಿವಾಗುತ್ತದೆ. ಮುಂದುವರೆಸಿ ಹೇಳಿದೆ ಪಾಜಕ ಅಥವಾ ಅಡುಗೆ ಮಾಡುವುದು ಸಾಮಾನ್ಯವಾಗಿ ಕೀಳರಿಮೆಯ ಭಾವ ಬರುತ್ತದೆ. ಗಂಡಸು ಅಡುಗೆ ಮನೆ ಪ್ರವೇಶಿಸುವುದನ್ನೇ ಕೆಲವರು ನಿಷೇಧಿಸುತ್ತಾರೆ. ಮನೆಯಲ್ಲಿ ಹೆಂಗಸು ಅಡುಗೆ ಮಾಡಬೇಕು ಎಂಬ ಅಲಿಖಿತ ನಿಯಮ ಸಾರ್ವತ್ರಿಕವಾಗಿದೆ. ಯಾರೋ ಒಬ್ಬ ಗಂಡಸು ಅಡುಗೆ ಮಾಡುತ್ತಾನೆ ಎಂದರೆ ಏನೋ ಒಂದು ವಿಚಿತ್ರವನ್ನು ಕಂಡಂತೆ ಮಾಡುವುದನ್ನು ನೋಡುತ್ತೇವೆ. ಯಾಕೆ ಇವರಿಗೆ ನಳ ಮಹಾರಾಜನ ವೈಯಕ್ತಿಕ ಯೋಗ್ಯತೆಯ ಅರಿವಾಗುವುದಿಲ್ಲ ಎಂದು ಅಚ್ಚರಿಯಾಗುತ್ತದೆ. ಅಡುಗೆ ಅಥವಾ ಪಾಜಕ ಕಾರ್ಯ ಎಂಬುದು ಒಂದು ಅದ್ಭುತ ಕಲೆಯಾಗುವುದಕ್ಕೆ ಅದರಲ್ಲಿ ಹಲವು ಗುಣಗಳಿವೆ. ಬ್ರಹ್ಮ ಹೇಗೆ ಜೀವಿಗಳನ್ನು ಸೃಷ್ಟಿ ಮಾಡುತ್ತಾನೋ ಹಾಗೇ ಅಡುಗೆಯಲ್ಲಿ ಹಲವು ವಿಭವಗಳನ್ನು ಪದಾರ್ಥಗಳನ್ನು ಸೃಷ್ಟಿಮಾಡುವ ಅಡುಗೆಯವನು ಒಬ್ಬ ಪಾಜಕ ಬ್ರಹ್ಮನಾಗುತ್ತಾನೆ. 

ಬದುಕಿನಲ್ಲಿ ಬಡತನ ಕೊಡುವ ಶಿಕ್ಷಣ ಮತ್ತು ಅನುಭವ ಅತ್ಯಂತ ದೊಡ್ಡದು. ಬದುಕಿನಲ್ಲಿ ಬಡತನ ಹಲವು ಶಿಕ್ಷಣವನ್ನು ಕಲಿಸಿಕೊಡುತ್ತದೆ. ಕೆಲವರಿಗೆ ಒಳ್ಳೆಯ ವಿದ್ಯೆಯನ್ನು ಕಲಿಸಿದರೆ, ಇನ್ನು ಕೆಲವರಿಗೆ ಅದು ಕಳ್ಳತನ ದರೋಡೆ ವಂಚನೆಯಂತಹ ವಿದ್ಯೆಯನ್ನು ಕಲಿಸಿಕೊಡುತ್ತದೆ.  ಕಾರಣ ಬಡತನ ಮೊದಲ ಲಕ್ಷಣ ಹಸಿವು.  ಎಲ್ಲಾ ಅನುಭವದ ಮೂಲ ಈ ಹಸಿವು. ಅಲ್ಲಿಂದ ತೊಡಗುವ ಬವಣೆಯ ಅನುಭವ ಪಾಠವನ್ನು ಕಲಿಸುತ್ತಾ ಹೋಗುತ್ತದೆ. ಯಾವ ವಿಶ್ವವಿದ್ಯಾಲಯದಲ್ಲೂ ಸಿಗದ ಅನುಭವ ಅದೊಂದು ಬದುಕಿನ ಶಿಕ್ಷಣವಾಗುತ್ತದೆ. ಹುಟ್ಟುವ ಮಗುವಿಗೆ ಯಾವುದೇ ಪ್ರಾಣಿ ಪಕ್ಷಿಗಳ ಮರಿಗಳಿಗೆ ಹಸಿವಿನ ಅನುಭವ ಇಲ್ಲದೇ ಇದ್ದರೆ ಬಾಯಿಗೆ ಕೈ ಎಲ್ಲಿದೆ ಎಂಬ ಅರಿವೇ ಇರುತ್ತಿರಲಿಲ್ಲ. 

ಇದೇ ಹಸಿವು ನನಗೆ  ಬಾಲ್ಯದಲ್ಲಿ  ಕಲಿಸಿದ ಪಾಠವೆಂದರೆ ಪಾಜಕ...ಅಂದರೆ ಅಡುಗೆ. ಇದೊಂದು ಮಾನ್ಯತೆ ಇಲ್ಲದ ಅದ್ಭುತ ಕಲೆ. ಆದರೆ ನಾನು ಮಾತ್ರ ಇದನ್ನು ಅತ್ಯಂತ ಗೌರವದಿಂದ ಕಾಣುತ್ತೇನೆ. ಯಾಕೆಂದರೆ ಅದು ಕೊಡುವ ತೃಪ್ತಿ ಬೇರೆ ಯಾವುದೂ ಒದಗಿಸುವುದಿಲ್ಲ. ಬ್ರಹ್ಮನ ಕೈಯಲ್ಲಿ ಜೀವರಾಶಿಗಳು ಸೃಷ್ಟಿಯಾದಂತೆ ಇಲ್ಲಿ ಹಸಿವು ನೀಗುವ ಆಹಾರ ಸೃಷ್ಟಿಯಾಗುತ್ತದೆ. ಒಂದು ಮುಷ್ಟಿಯೊಳಗಿನ ವಸ್ತು ತಿನ್ನುವ ಯೋಗ್ಯತೆಯನ್ನು ಗಳಿಸಿಕೊಂಡರೆ ಅದು ಹಸಿವನ್ನು ನೀಗಿಸುವುದು ಮಾತ್ರವಲ್ಲ ಮನಸ್ಸನ್ನು ತೃಪ್ತಿಪಡಿಸುತ್ತದೆ. 

ಬಾಲ್ಯದಲ್ಲಿ ಸಾಯಂಕಾಲ ಶಾಲೆಗೆ ಹೋಗಿ ಬರುವಾಗ ಅಥವಾ ಅಂಗಡಿ ಸಂತೆಗೆ ಹೋಗಿ ಬರುವಾಗ ವಿಪರೀತ ಹಸಿವಾಗಿರುತ್ತದೆ. ಅದು ಮಳೆಗಾಲದಲ್ಲಾದರೆ ಕೇಳುವುದು ಬೇಡ. ಅದರಲ್ಲೂ ನಮ್ಮೂರಿನ ಅಂದರೆ ಕರಾವಳಿ ಪ್ರದೇಶದ ಹಸಿವು ಅದು ಅನಿಭವಿಸಿಯೇ ತಿಳಿಯಬೇಕು. ಮಲೆನಾಡು ಬಯಲು ಸೀಮೆ ಅದರಲ್ಲು ಬೆಂಗಳೂರಿನವರಿಗೆ ಈ ಅನುಭವ ಸಿಗುವುದಕ್ಕೆ ಸಾಧ್ಯವಿಲ್ಲ. ತೋಟ ಗುಡ್ಡೆಯಲ್ಲಿ ಕೆಲಸ ಮಾಡುವ ಶ್ರಮಜೀವಿಗಳಿಗಂತೂ ಉಪ್ಪಿಟ್ಟಿನಂತಹ ತಿಂಡಿಗಳು ಹೊಟ್ಟೆ ತುಂಬಿಸುವುದಿಲ್ಲ. ಹೊಟ್ಟೆ ಗಟ್ತಿಯಾಗಬೇಕಾದರೆ..ಅವರಿಗೆ ಕುಚ್ಚಿಲಕ್ಕಿ ಗಂಜಿಯೇ ಆಗಬೇಕು. ಇದನ್ನು ಮೂರು ಹೊತ್ತು ಉಂಡು ಹೊಟ್ಟೆ ತಂಪಾಗಿಸುವವರಿದ್ದಾರೆ. ಅದು ಕರಾವಳಿ ಹಸಿವಿನ ಪ್ರಭಾವ. ಬೆಳಗ್ಗೆ ಎಷ್ಟು ತಿಂದರೂ ಮಧ್ಯಾಹ್ನ ಸೂರ್ಯ ನಡು ನೆತ್ತಿಗೆ ಬಂದ ಅನುಭವಾಗುವುದು ಹೊಟ್ಟೆಯ ಹಸಿವಿನಿಂದ. ಹೊಟ್ಟೆ ಹಸಿವಾದಾಗ ಮೇಲೆ ನೋಡುತ್ತಾನೆ. ಮಧ್ಯಾಹ್ನ ಹೊಟ್ಟೆತುಂಬ ಉಂಡರೂ ಸಾಯಂಕಾಲ ಆಗಬೇಕಾದರೆ ಪುನಃ ಹಸಿವು...ಬೇರೆ ಎಲ್ಲೂ ಆನುಭವಕ್ಕೆ ಬಾರದ ಹಸಿವು ನಮ್ಮ ಕರಾವಳಿಯಲ್ಲಿ ಆಗಿಬಿಡುತ್ತದೆ. ಹಾಗೇ ಸಾಯಂಕಾಲ ಮನೆಗೆ ಬರಬೇಕಾದರೆ ವಿಪರೀತ ಹಸಿವು. ತಿನ್ನುವುದಾದರೂ ಏನನ್ನು? ಮನೆಯಲ್ಲಿ ಅಮ್ಮನೇ ದುಡಿಯುವುದರಿಂದ ಅಮ್ಮನಿಗೆ  ಏನಾದರೂ ಮಾಡಿ ಹಾಕಲು ಸಮಯವಿರುವುದಿಲ್ಲ. ಆದರೆ ನಮ್ಮ ಹಸಿವು ಸುಮ್ಮನಿರಬೇಕಲ್ಲ. ಆಗ ನಾನೇ ಆಡುಗೆ ಕೋಣೆಗೆ ಹೋಗಿ ನನಗೆ ಬೇಕಾದ ತಿಂಡಿ ಮಾಡುವ ಸಾಹಸಕ್ಕೆ ಬಾಲ್ಯದಲ್ಲಿ ಅಂದರೆ ಕೇವಲ ಹತ್ತು ಹನ್ನೆರಡರ ಹರಯದಲ್ಲಿ ಕೈ ಹಾಕುತ್ತಿದ್ದೆ. ಮನೆಯಲ್ಲಿ ಮಾಡುವುದಕ್ಕಾದರೂ ಎನಾದರೂ ಇರಬೇಕಲ್ಲ.ಮೆಣಸು ಇದ್ದರೆ ಸಾಸಿವೆ ಇಲ್ಲ. ಎಲ್ಲ ಇದ್ದರೆ ತೆಂಗಿನ ಕಾಯಿ ಇಲ್ಲ. ತರಕಾರಿಯಂತೂ ದುಡ್ದು ಕೊಟ್ಟು ತರುವುದೇ  ಇಲ್ಲ. ಮನೆಯಲ್ಲಿನ ಉಪ್ಪು ಮೆಣಸಿನಲ್ಲೇ ಊಟ. ಹಾಗಿರುವಾಗ ಮಕ್ಕಳು ನಾವು ಮಾಡುವುದಾದರೂ ಏನು?

ಸಾಯಂಕಾಲ ಹೊರಗೆ ಜೋರು ಮಳೆ...ಹೊರಗೆ ಕಾಲಿಡುವಂತೆ ಇಲ್ಲ. ಮನೆಯೊಳಗೆ ಬೆಚ್ಚಗೆ ಏನಾದರೂ ತಿನ್ನಬೇಕು. ಅಕ್ಕಿ ಮೆಣಸು ಬಿಟ್ಟರೆ ಏನೂ ಇರುವುದಿಲ್ಲ. ಆಗ ಅಕ್ಕಿ ಉಪ್ಪಿಟ್ಟು ಮಾಡುತ್ತಿದ್ದೆ.ನಮ್ಮ ಪಾಲಿಗೆ ಅದೊಂದು ಅದ್ಭುತ ತಿಂಡಿ.   ಅನ್ನ ಮಾಡಿದರೆ ಅದಕ್ಕೆ ಜತೆಯಲ್ಲಿ ಏನಾದರೂ ಬೇಕಲ್ಲ. ಅದಕ್ಕೆ ಅಕ್ಕಿ ಉಪ್ಪಿಟ್ಟು. ಪಾತ್ರೆಗೆ ಒಗ್ಗರಣೆ ಹಾಕಿ ಅದಕ್ಕೆ ನೀರು ಹಾಕಿ ಅಕ್ಕಿ ತೊಳೆದು ಹಾಕಿ ಹುಳಿ ಬೆಲ್ಲ ಚೆನ್ನಾಗಿ ಹಾಕಿ ಬಿಟ್ಟರೆ ಕೆಲವು ಹೊತ್ತಿನಲ್ಲೇ ಅಕ್ಕಿ ಉಪ್ಪಿಟ್ಟು ಸಿದ್ಧವಾಗುತ್ತದೆ. ಸಾಂಬಾರು ಬೇಡ ಪಲ್ಯ ಬೇಡ ...ಬಿಸಿ ಬಿಸಿ ಉಪ್ಪಿಟ್ಟು ಆ ಮಳೆಗೆ ತಿನ್ನುವುದೆಂದರೆ ಅದೊಂದು ಬಗೆಯ ಬ್ರಹ್ಮಾನಂದ. ಹೀಗೆ ಹಸಿವು ಎಂಬುದು ಮೊದಲ ಪಾಠವನ್ನು ಕಲಿಸಿಕೊಡುತ್ತದೆ. ಬಾಲ್ಯದ ನೆನಪಿಗೆ ಈಗಲೂ ಇದನ್ನು ಮಾಡಿ ತಿನ್ನುವುದುಂಟು. ಖಾರ ಹುಳಿ ಬೆಲ್ಲ ಸಮವಾಗಿ ಹಾಕಿ ಮಾಡಿದರೆ...ಇದೊಂದು ಅದ್ಭುತ ಬಗೆಯ ಹಸಿವನ್ನು ಸಂಹರಿಸುವ ತಿಂಡಿ. ತರಕಾರಿ ತೆಂಗಿನಕಾಯಿ ಬೇಳೆ ಯಾವುದರ ಅವಶ್ಯಕತೆಯೂ ಇಲ್ಲ. 

ಬಾಲ್ಯದಲ್ಲಿ ಹೀಗೆ ಹಲವು ಬಗೆಯ ತಿಂಡಿಗಳನ್ನು ಮಿತ ಸೌಕರ್ಯದಲ್ಲೇ ಮಾಡಿ ಅಭ್ಯಾಸವಾಗಿ ಹೋಗಿದೆ. ಮನೆಯಲ್ಲಿ ಯಾರು ಇರಲಿ ಇಲ್ಲದಿರಲಿ ನಮ್ಮ ಹೊಟ್ಟೆಯ ಜವಾಬ್ದಾರಿ ಇನ್ನೊಬ್ಬರಿಗೆ ವಹಿಸುವ ಅವಶ್ಯಕತೆಯೇ ಒದಗಿ ಬರುವುದಿಲ್ಲ. ಯಾರಿಗೋ ಮಾಡಿ ಬಡಿಸುವುದಕ್ಕಿಂತ ಮೊದಲಿಗೆ ನಮ್ಮ ಹೊಟ್ಟೆಗೆ ಬೇಕಾದ್ದನ್ನಾದರೂ ಮಾಡಿ ತಿನ್ನುವ ಯೋಗ್ಯತೆಯನ್ನು ಗಳಿಸಬೇಕು. ಅದಕ್ಕೆ ಇನ್ನೊಬ್ಬರನ್ನುಆಶ್ರಯಿಸುವ ಅನಿವಾರ್ಯತೆ ಒದಗಿ ಬರಬಾರದು. ಬಾಲ್ಯದಲಿ ರೂಢಿಸಿಕೊಂಡ ಈ ಸ್ವಾವಲಂಬೀ ಗುಣ ಸ್ವಾಭಿಮಾನವನ್ನು ಹುಟ್ಟಿಸಿದೆ. ಈಗಲೂ ಹಾಗೆ ಯಾರೋ ಮಾಡಿ ಹಾಕುತ್ತಾರೆ ಎಂದು ಅಡುಗೆ ಮನೆ ಬಾಗಿಲು ನೋಡುವ ಸಂದರ್ಭ ಬರುವುದಿಲ್ಲ. 

ಅಡುಗೆ ಎಂಬುದು ಅಂತಹ ಕಲಿಯಲಾಗದ ಬ್ರಹ್ಮ ವಿದ್ಯೆ ಏನೂ ಅಲ್ಲ. ಇಲ್ಲಿ ಬೇಕಾಗಿರುವುದು ಶ್ರದ್ದೆ ಮತ್ತು ಆಸಕ್ತಿ.  ಜೀವನದಲ್ಲಿ ನಾಲ್ಕು ಅಂಶಗಳನ್ನು ಶ್ರದ್ದೆ ಆಸಕ್ತಿ ಗೌರವದಿಂದ ಮಾಡಬೇಕು. ಒಂದು ಸಂಧ್ಯಾವಂದನೆ ಅಥವ ದೈವ ಪ್ರಾರ್ಥನೆ, ಇನ್ನೊಂದು ಪಿತೃಗಳ ಅಪರ ಕ್ರಿಯೆ, ಮತ್ತೊಂದು ಹೆತ್ತ ಅಪ್ಪ ಅಮ್ಮ ಆರೈಕೆ...ಕೊನೆಯಲ್ಲಿ ಅಡುಗೆ ಕೆಲಸ. ಇವುಗಳನ್ನು ಕಾಟಾಚಾರಕ್ಕೆ ಮಾಡಿದರೆ ನಾವು ಬದುಕುವ ಬದುಕಿಗೆ ಗೌರವ ಇರುವುದಿಲ್ಲ. ಅಡುಗೆಯನ್ನು ನಾನು ಎಂದಿಗೂ ಕಾಟಾಚಾರಕ್ಕೆ ಮಾಡಿದ್ದೇ ಇಲ್ಲ ಎನ್ನಬೇಕು. ಒಂದು ಉಪ್ಪಿಟ್ಟು ಮಾಡುವುದಿದ್ದರೂ ಅದಕ್ಕೆ ಹಾಕಬೇಕಾದ ಒಂದು ಬೇಳೆಯೋ ಕರಿಬೇವೋ ಇಲ್ಲ ಎಂದಾದರೆ ಅದನ್ನು ಹೋಗಿ ತಂದು ಮಾಡುತ್ತೇನೆ. ಅದು ನಾನು ಆ ಕೆಲಸಕ್ಕೆ ಕೊಡುವ ಗೌರವ. ಅದಿಲ್ಲ ಹೇಗೋ ಸುಧಾರಿಸಿಬಿಡೋಣ ಅಂತ ಮಾಡುವ ಸಂಭವ ತುಂಬಾ ಕಡಿಮೆ. ಅಚ್ಚುಕಟ್ಟಾಗಿ ರುಚಿಯಾಗಿ ಮಾಡಬೇಕು. ತಿನ್ನುವುದು ಸ್ವಲ್ಪವೇ ಆಗಲಿ ಅದನ್ನುಶುಚಿಯಾಗಿ ರುಚಿಯಾಗಿ ತಿನ್ನಬೇಕು ಎನ್ನುವ ತತ್ವ ನನ್ನದು. ಉದರಾಗ್ನಿಯನ್ನು ತೃಪ್ತಿಪಡಿಸದವನಿಗೆ ಬದುಕು ಹಕ್ಕೇ ಇರುವುದಿಲ್ಲ. 

ಕೇವಲ ರುಚಿಯಾಗಿ ಮಾಡಿ ತಿನ್ನುವುದಕ್ಕೆ ಅಡುಗೆ ಕೆಲಸ ಸೀಮಿತವಲ್ಲ. ಅಡುಗೆ ಮನೆಯನ್ನು ಸ್ವಚ್ಚವಾಗಿ ಇಟ್ಟುಕೊಂಡು ವೇಗವಾಗಿ ಒತ್ತಡ ರಹಿತವಾಗಿ ಮಾಡುವ ಕೌಶಲ ಇದ್ದರೆ ಮಾತ್ರ ಅದು ನಿಜವಾದ ಪಾಜಕ ಕಲೆಯಾಗುತ್ತದೆ.ಹಲವು ಮನೆಗಳಲ್ಲಿ ನೋಡಿದ್ದೇನೆ ...ಅಡುಗೆ ಮನೆ ಎಂದರೆ ಬೇಕಾ ಬಿಟ್ಟಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತದೆ. ಬೆಲ್ಲದ ಅಕ್ಕಿಯ ಡಬ್ಬದ ಮುಚ್ಚಳ ಒಂದೆಡೆ ಇದ್ದರೆ ಡಬ್ಬ ಇನ್ನೊಂದು ಕಡೆ ಇರುತ್ತದೆ. ಇನ್ನು ತರಕಾರಿ ತ್ಯಾಜ್ಯ ಈರುಳ್ಳಿ ಸಿಪ್ಪೆ ಎಲ್ಲೆಂದರಲ್ಲಿ ಬಿದ್ದು ರಾಶಿಯಾಗಿರುತ್ತದೆ. ನಾನು ಮಾಡುವುದಿದ್ದರೆ...ಇವುಗಳನ್ನೆಲ್ಲ ಅಡುಗೆ  ಮಾಡುತ್ತಿದ್ದಂತೆ ಎಸೆದು ಸ್ವಚ್ಚ ವಾಗಿರಿಸುತ್ತೇನೆ. ಒಲ್ಲೆಯಲ್ಲಿಟ್ಟ ಉಪ್ಪಿಟ್ಟು ಅಥವಾ ಎನಾದರೂ ಆಹಾರ ಸಿದ್ದವಾಗುವಾಗ ಅಡುಗೇ ಕೊಣೆಯು ಒಪ್ಪ ಓರಣವಾಗಿರಬೇಕು. ತೆಗೆದ ವಸ್ತುಗಳು ಪಾತ್ರೆಗಳು ಯಥಾ ಸ್ಥಾನದಲ್ಲಿರಬೇಕು. ಅಡುಗೆ ಮನೆಯಲ್ಲಿ ಅದುವರೆಗೆ ಕೆಲಸ ಮಾಡಿದ ಕುರುಹು ಉಳಿಯಬಾರದು...ಏನು ತಿಂಡಿ ಮಾಡಿದ್ದೇನೆ ಅಂತ ಒಲೆಯ ಪಾತ್ರೆಯ ಮುಚ್ಚಳ ತೆರೆದು ನೋಡಿದರೆ ಮಾತ್ರ ಅರಿವಿಗೆ ಬರುವಂತೆ ಇರಬೇಕು. ಇದು ಉತ್ತಮ ಅಡುಗೆಯವನ ಲಕ್ಷಣ. ಇಷ್ಟೆಲ್ಲಾ ಸಾಧ್ಯವಾಗದಿದ್ದರೆ, ಅದರ ಬಗ್ಗೆ ಒಂದಷ್ಟು ಕಾಳಾಜಿಯಂತೂ ಇರಲೇಬೇಕು. ಅದು ಆ ಕೆಲಸಕ್ಕೆ ಕೊಡುವ ವೃತ್ತಿ ಗೌರವ. 

ಹಲವು ಮನೆಗಳಲ್ಲಿ ನೋಡಿದ್ದೇನೆ, ಅಮ್ಮ ನೋ ಹೆಂಡತಿಯೋ ಏನೋ ಮಾಡಿಕೊಂಡಿರುತ್ತಾರೆ. ಕೆಲವರಿಗೆ ಅದರ ಬಗ್ಗೆ ಗೌರವ ಇರುವುದಿಲ್ಲ. ಒಂದು ಹತ್ತು ನಿಮಿಷ ಕಾಯುವ ತಾಳ್ಮೆಯೇ ಇರುವುದಿಲ್ಲ. ಬಂದ ಕೂಡಲೇ ಅವಸರ ಮಾಡಿಬಿಡುತ್ತಾರೆ. ಆದುಗೆ ಆಯ್ತಾ ಏನು ಅಡುಗೆ ಅಂತ ಕೇಳುವ ವ್ಯವಧಾನವೂ ಇರುವುದಿಲ್ಲ. ನನಗೆ ಬಡಿಸು ಅಂತ  ಹೇಳುವಾಗ ಒಂದು ಉತ್ತಮ ಕೆಲಸಕ್ಕೆ ಇವರು ಅಗೌರವವನ್ನು ತೋರಿಸುತ್ತಾರೆ.  ಒಂದು ವೇಳೆ ಆಗಿಲ್ಲ ಎಂದಿದ್ದರೆ  ಕಾಯುವುದಕ್ಕಿಂತ  ಅಲ್ಲಿದ್ದದ್ದನ್ನು ತಿಂದು ಹೋಗಿ ಬಿಡುತ್ತಾರೆ. ಪಾಪ ಅಡುಗೆ ಮನೆಯನ್ನೇ ಪ್ರಪಂಚವಾಗಿಸಿ ತನ್ನ ಹಸಿವನ್ನು ಮರೆತು ಆಹಾರವನ್ನು ತಯಾರಿಸುವವರ ಕೆಲಸಕ್ಕೆ ಒಂದಿಷ್ಟೂ ಗೌರವ ಇಲ್ಲದ ವರ್ತನೆ ಅದು. ತಾನು ತಿನ್ನುವುದಕ್ಕಿಂತಲೂ ಎಲ್ಲರೂ ತಿನ್ನುವುದರಲ್ಲಿ ಸಿಗುವ ತೃಪ್ತಿ ಬಹಳ ದೊಡ್ಡದು. ಮನೆಯ ಒಬ್ಬನೇ ಒಬ್ಬ ತಿನ್ನದೇ ಹೋದರೂ ಮಾಡುವವನಿಗೆ ತಳಮಳವಾಗುತ್ತದೆ. ಇದು ಅರಿವಾಗಬೇಕಾದರೆ ಅಡುಗೆ ಮನೆಯಲ್ಲಿ ಜವಾಬ್ದಾರಿ ತೆಗೆದುಕೊಂಡು ಮಾಡುವ ಶ್ರಮವನ್ನು ತೆಗೆದುಕೊಳ್ಳಬೇಕು. ನಮಗೆ ಎಷ್ಟು ಒತ್ತಡವಿದ್ದರೂ ಅವರ ಮೇಲೆ ಹೇರದೆ ಸಹಕರಿಸಬೇಕು. ಸಾಧ್ಯವಾದರೆ ಒಂದಷ್ಟು ಕೈ ಸಹಾಯಕ್ಕೆ ನೆರವಾಗಬೇಕು. ಸುಮ್ಮನೇ ಅವರ ಜತೆ ಕುಳಿತರೂ ಸಾಕು ಅವರಿಗೆ ಮಾಡುವ ಕೆಲಸದಲ್ಲಿ ಪ್ರೋತ್ಸಾಹ ಸಿಕ್ಕಿದಂತಾಗುತ್ತದೆ. ಯಾರೋ ಒಬ್ಬಳು.. ಅಡುಗೆ ಮನೆಯಲ್ಲಿ ತನ್ನ ಪಾಡಿಗೆ ತಾನು ಮಾಡುತ್ತಾಳೆ ಹೊತ್ತಾಗುವಾಗ ಹೋಗಿ ಆಯ್ತಾ ಅಂತ ಕೇಳಿದರೆ ಸಾಕು ಎಂಬಂತಿರಬಾರದು. ಇದು ಅಡುಗೆ ಕೆಲಸಕ್ಕೆ ಅಡುಗೆ ಮಾಡುವವರಿಗೆ ಕೊಡುವ ಗೌರವ. ಯಾಕೆಂದರೆ ಒಂದು ಮುಷ್ಟಿ ಅನ್ನವಾದರೂ ಅದು ದೇಹಕ್ಕೆ ಕೊಡುವ ಚೈತನ್ಯಕ್ಕೆ ಮೌಲ್ಯ ಕಟ್ಟುವುದಕ್ಕೆ ಸಾಧ್ಯವಿಲ್ಲ. ಉದರಾಗ್ನಿಯನ್ನು ಯಾರಾದರೂ ತಣಿಸುತ್ತಾನೆ ಎಂದಿದ್ದರೆ ಅದಕ್ಕಿಂತ ಪೂಜ್ಯವಾದ ಪವಿತ್ರವಾದ ಕೆಲಸ ಬೇರೆ ಯಾವುದಿದೆ?

ಸಾಮಾನ್ಯವಾಗಿ ಅಡುಗೆ ಕೆಲಸವನ್ನು ಕಡೆ ಗಣಿಸುವುದು ಹೆಚ್ಚು.  ಎಲ್ಲೂ ಸಲ್ಲದವನು ಅಡುಗೆ ಕೆಲಸಕ್ಕೆ ಸೀಮಿತ ಕೆಲವೊಂದು ಕಡೆ ಇದಕ್ಕೆ ಗೌರವ ಕೊಟ್ಟರೂ ಹಲವು ಕಡೆ ಅಡುಗೆಯವರನ್ನು ತಾತ್ಸಾರದಿಂದ ಕಾಣುವುದೇ ಹೆಚ್ಚು. ಬ್ರಾಹ್ಮಣರಲ್ಲಿ ಅಡುಗೆಯವನು ಎಂದಾಕ್ಷಣ  ಸಂಧ್ಯಾವಂದನೆ ಜಪಾನುಷ್ಠಾನ ಇಲ್ಲದವನು. ವೇದ ಮಂತ್ರ ವಿದ್ಯೆ ಕಲಿಯದವನು ಅಡುಗೆ ಕೆಲಸಕ್ಕೆ ಲಾಯಕ್ ಎನ್ನುವ ಪ್ರತೀತಿ ಇದೆ. ಅದೂ ಕೆಲವು ಪುರೋಹಿತರಂತೂ ಇವರನ್ನು ತಾತ್ಸಾರದಲ್ಲಿಯೇ  ಕಾಣುತ್ತಾರೆ. ಇನ್ನು ನಿವೃತ್ತಿ ಹೊಂದಿದ  ಕೈಲಾಗದ ಅಡುಗೆಯವರು ಶ್ರಾಧ್ದದ ಬ್ರಾಹ್ಮಣರಾಗುವುದಕ್ಕೆ ಅರ್ಹರಾಗಿಬಿಡುತ್ತಾರೆ. ನಿಜವಾಗಿ ಅರ್ಚಕ ವೃತ್ತಿಯಷ್ಟೇ ಗೌರವ ಪಾಜಕ ವೃತ್ತಿಗೂ ಇದೆ. .   ಅಡುಗೆ ಕೆಲಸಕ್ಕೆ ಇರುವ ಮಹತ್ವ ಗೌರವ ಹಲವರಿಗೆ ತಿಳಿದಿದ್ದರೂ ಅದನ್ನು ಅಸಡ್ಡೆಯಿಂದ ಕಾಣುತ್ತಾರೆ. ಸಮಾರಂಭದಲ್ಲಿ ಮಧ್ಯಾಹ್ನದ ವರೆಗೆ ಅದರ ಕಡೆಗೆ ಗಮನ ಹೋಗುವುದಿಲ್ಲ. ಅಡುಗೆ ಮನೆಗೆ ಹೋಗುವವರಂತೂ ಇರುವ್ದೇ ಇಲ್ಲ. ಮಧ್ಯಾಹ್ನ ಊಟದ ಹೊತ್ತಿನಲ್ಲಿ ಹಸಿವಾಗುವಾಗ ಅಡುಗೆಯ ಮನೆ ಕಡೆ ಗಮನ ಹೋಗುತ್ತದೆ. ಅದುವರೆಗೆ ಅಲ್ಲಿಗೆ ಸುಳಿಯದವರು, ಅಡುಗೆ ಆಯ್ತಾ ಅಂತ ಅಲ್ಲಿಗೆ ಗಮನ ಹರಿಸುವಾಗ ಅಡುಗೆಯ ಮಹತ್ವ ಅರಿವಾಗಬೇಕು. ತಿನ್ನುವಂತೆ ಆಹಾರ ತಯಾರಿಸಿ ಅದರಲ್ಲಿ ಎಲ್ಲರ ಮೆಚ್ಚುಗೆ ಗಳಿಸುವುದೆಂದರೆ ಅದು ಸುಲಭದ ಕೆಲಸವಲ್ಲ.  ಉತ್ತಮ ಅಚ್ಚುಕಟ್ಟಾದ ಅಡುಗೆ ಮಾಡುವುದೆಂದರೆ ಅದೊಂದು ದೈವದತ್ತ ಪ್ರತಿಭೆ. 

ನಮ್ಮಜ್ಜ ಪುರೋಹಿತರಾದರೂ ಉತ್ತಮ ಅಡುಗೆಯವರಾಗಿದ್ದರು. ಹಲವು ಕಾರ್ಯಕ್ರಮಗಳಲ್ಲಿ ಅಡುಗೆ ಕೆಲಸ ವಹಿಸಿ ಯಶಸ್ವಿಯಾಗಿ ನಡೆಸಿಕೊಟ್ಟದ್ದನ್ನು ನಾನು ನೋಡಿದ್ದೇನೆ. ನನ್ನ ಸೋದರ ಮಾವಂದಿರು ಉತ್ತಮ ಅಡುಗೆಯವರಾಗಿದ್ದರು. ಹೀಗಾಗಿ ಬಾಲ್ಯದಲ್ಲಿ ಅಡುಗೆ ಕೆಲಸದಲ್ಲಿ ನಮಗೂ ಸಾಕಷ್ಟು ಆಸಕ್ತಿ ಬೆಳೆಯುವುದಕ್ಕೆ ಇದೇ ಕಾರಣವಾಗಿತ್ತು. ನಮ್ಮಲ್ಲಿ ಹಲವು ಪುರೋಹಿತರು ಉತ್ತಮ ಅಡುಗೆ ಕೆಲಸವನ್ನು ಮಾಡಬಲ್ಲ ಪ್ರತಿಭಾವಂತರು. 

ಭಾರತೀಯ ಪರಂಪರೆಯಲ್ಲಿ ಅದು ಯಾವ ಧರ್ಮವಾದರೂ ಆಹಾರದ ಉಪಚಾರ ಅತ್ಯಂತ ಮಹತ್ವವನ್ನು ಪಡೆದಿದೆ. ಮಾತಿಗೆ ಬ್ರಾಹ್ಮಣೋ ಭೋಜನ ಪ್ರಿಯ ಅಂತ ಗೇಲಿ ಮಾಡಿದರೂ ಉಳಿದ ಜಾತಿಗಳಲ್ಲಿಯೂ ಊಟ ಉಪಚಾರ ಏನು ಸರಳವಾಗಿ ಏನು ಇರುವುದಿಲ್ಲ. ಅದಕ್ಕಾಗಿಯೆ ಹೆಚ್ಚಿನ ವ್ಯಯ ಮಾಡುತ್ತಾರೆ.  ಅಡುಗೆ ಕೆಲಸದಲ್ಲಿ ಅಡುಗೆ ವ್ಯವಸ್ಥೆಗಳಲ್ಲಿ ಸಾಕಷ್ಟು ಅವಿಷ್ಕಾರವಾಗಿದೆ. ಅದೊಂದು ಲಾಭಕರ ಉದ್ದಿಮೆಯಾಗಿ ಬೆಳೆದಿದೆ. ಇದು ಸಾರ್ವಜನಿಕವಾಗಿಯಾದರೆ, ಮನೆಯಲ್ಲಿ ಆಡುಗೆ ಕೆಲಸಕ್ಕೆ ಒಳ್ಳೆಯ ಗೌರವವನ್ನು ಕೊಡಬೇಕು. ಯಾರಾದರು ಅಡುಗೆ ಮಾಡಿ ನಿಮ್ಮ ಹೊಟ್ಟೆ ತುಂಬಿಸುವುದಿದ್ದರೆ ಅವರನ್ನು ದೇವರಂತೆ ಕಾಣಬೇಕು. ನಿಮಗಾಗಿ ಅವರು ಬೇಯಿಸಿ ಬಿಸಿ ಕೊಡುತ್ತಾರೆ ಎಂದರೆ ಅವರಿಗಾಗಿ ಬೇರೆ ಏನು ಕೊಡುವುದು ಬೇಡ. ಒಂದಷ್ಟು ಗೌರವ ಪ್ರೀತಿಯನ್ನು ಕೊಡಿ. ಅವರ ನಿಸ್ವಾರ್ಥ ಕಾರ್ಯಕ್ಕೆ ಒಂದಷ್ಟು ಮೌಲ್ಯವನ್ನು ಕೊಟ್ಟು ನೋಡಿ. ಅದು ನಂತರದ ಹೊತ್ತಿಗೆ ಆಹಾರ ಮಾಡುವಾಗ ಒಳ್ಳೆಯ ಉತ್ತೇಜನವನ್ನು ಒದಗಿಸುತ್ತದೆ. ಮುಂದೆಯೂ ನಿಮ್ಮ ಹೊಟ್ಟೆ ತಂಪಾಗುತ್ತದೆ. 

ಭೋಜನ ಎಂದರೆ ಯಜ್ಞದಂತೆ. ಉದರಾಗ್ನಿಗೆ ಹವಿಸ್ಸನ್ನು ಸಲ್ಲಿಸುವುದೆಂದರೆ ಅದು ಪೂಜನೀಯ ಕಾರ್ಯ. ಅದನ್ನು ನಿರ್ಲಕ್ಷಿಸುವುದೆಂದರೆ ಯಜ್ಞನಾರಾಯಣನಿಗೆ ಅಪಚಾರ ಮಾಡಿದಂತೆ. ಯಾರನ್ನಾದರೂ ಧನ ಕನಕಗಳನ್ನು ಕೊಟ್ಟು ತೃಪ್ತಿ ಪಡಿಸುವುದಕ್ಕೆ ಸಾಧ್ಯವಿಲ್ಲ. ಆದರೆ ಹೊಟ್ಟೆ ತುಂಬ ಆಹಾರ ಕೊಟ್ಟರೆ ಹೊಟ್ಟೆ ತುಂಬುವಾಗ ಆತ ಸಾಕು ಸಾಕು ಎಂದು ಹೇಳುತ್ತಾನೆ. ಬೇರೆ ಏನನ್ನು ಕೊಡುವಾಗಲೂ ಸಾಕು ಸಾಕು ಎನ್ನದವನ್ನು ಊಟಕ್ಕೆ ಕುಳಿತರೆ ಸಾಕು ಸಾಕು ಎಂದು ಹೇಳಲೇ ಬೇಕು. ಹಾಗಾಗಿ ಊಟದಲ್ಲಿ ಸುಲಭದಲ್ಲಿ ಕೊಡುವ ತೃಪ್ತಿ ಅದು ಬೇರೆ ಯಾವುದರಲ್ಲೂ ಸಿಗುವುದಿಲ್ಲ. ಯಾವುದೇ ಅಹಾರ ಮಾಡಿ ಕೊಟ್ಟಾಗ ಮಾಡಿದವರಿಗೆ ಮನಸಾರೆ ಅಭಿನಂದಿಸಿ...ಅದು ಭಗವಂತನಿಗೆ ಸಲ್ಲಿಸುವ ಗೌರವವಾಗುತ್ತದೆ. 

Saturday, March 15, 2025

ಪರಮ ಗುರು

ನನ್ನಜ್ಜನ ಬಗ್ಗೆ ಹಿಂದೆ ಒಂದು ಪುಟ್ಟ ಲೇಖನ ಬರೆದಿದ್ದೆ. ಅದರ ಮುಂದಿನ ಭಾಗವಿದು. ನನ್ನಜ್ಜ ಯಾವುದೇ ಆದರ್ಶದ ತತ್ವಗಳನ್ನು ಹಿಂಬಾಲಿಸುತ್ತಿರಲಿಲ್ಲ. ಅವರ ಕಾಲದಲ್ಲಿ ಅದೊಂದು ಅನುಸರಿಸುವ ಪದ್ಧತಿಯೂ  ಇರಲಿಲ್ಲ. ಇದ್ದರೂ ಅದರ ಬಗ್ಗೆ ಅಜ್ಜ ಗಂಭೀರವಾಗಿ ಚಿಂತಿಸಲೂ ಇಲ್ಲ. ಆದರ್ಶವೆಂಬುದು ಪ್ರದರ್ಶಿಸುವುದಕ್ಕಿರುವುದಲ್ಲ. ತಮಗೆ ಅರಿವಿಲ್ಲದೇ ಇದ್ದರು ಕೆಲವೊಂದು ಆದರ್ಶಗಳು ತನ್ನಿಂತಾನೆ ಬದುಕಲ್ಲಿದ್ದುಬಿಡುತ್ತವೆ.  ಕೋಗಿಲೆಗೆ ತನ್ನ ಧ್ವನಿ ಇಂಪಾಗಿದೆ ಎಂಬ ಅರಿವಿದೆಯೋ ಇಲ್ಲವೋ ...ಆದರೆ ಅದು ಹಾಡುತ್ತದೆ. ಯಾರಾದರೂ ಕೇಳುತ್ತಾರೆ ಎಂದು ಅದು ಹಾಡುವುದಿಲ್ಲ. ಹಾಡುವುದು ಅದರ ಸಹಜ ಗುಣ.  ಆದರೆ ನಾವದನ್ನು ಆಸ್ವಾದಿಸಿ ಆನಂದಸುತ್ತೇವೆ. ಕೋಗಿಲೆಗೆ ಅದರ ಧ್ವನಿಯ ಬಗ್ಗೆ ಅರಿವಿಲ್ಲದಂತೆ ಅಜ್ಜನ ಆದರ್ಶಗಳು ಅವರಿಗೆ ಅರಿವಿರಲಿಲ್ಲ. ಆಗ ಅದರ ವೈಶಿಷ್ಟ್ಯದ ಬಗ್ಗೆ ನಮಗೂ ಅರಿವಿರಲಿಲ್ಲ. 

ಭಜನೆ ಎಂದರೆ ಅಜ್ಜನಿಗೆ ಇಷ್ಟವಾದ ಒಂದು ಹವ್ಯಾಸ. ಹಲವಾರು   ಭಜನೆಗಳನ್ನು  ಹೇಳುವುದು, ಕಲಿಸಿ ಕೊಡುವುದನ್ನು ಮಾಡುತ್ತಿದ್ದರು. ಕನ್ನಡ ಸಂಸ್ಕೃತ ಭಜನೆಗಳು ಬಹಳ ಸುಂದರವಾಗಿ ಅಜ್ಜ ಹೇಳಿಕೊಡುತ್ತಿದ್ದರುಭಜನೆ ಎಂದರೆ ಅಜ್ಜನಿಗೆ ಇಷ್ಟವಾದ ಒಂದು ಹವ್ಯಾಸ. ಹಲವಾರು   ಭಜನೆಗಳನ್ನು  ಹೇಳುವುದು, ಕಲಿಸಿ ಕೊಡುವುದನ್ನು ಮಾಡುತ್ತಿದ್ದರು. ಕನ್ನಡ ಸಂಸ್ಕೃತ ಭಜನೆಗಳು ಬಹಳ ಸುಂದರವಾಗಿ ಅಜ್ಜ ಹೇಳಿಕೊಡುತ್ತಿದ್ದರು. 


ಹಲವು ವರ್ಷಗಳ ಹಿಂದೆ  ನಮ್ಮ ಮಾವನ ಮನೆ ಮಂಗಳೂರಿನಲ್ಲಿದ್ದ ಸಮಯ.    ಮಂಗಳೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂಟಿಕಾನದಿಂದ ಕೂಳೂರು ಕಡೆಗೆ ಹೋಗುವಾಗ  ಡಿ ಮಾರ್ಟ್ ಕಳೆದ ಕೂಡಲೇ ಒಂದು ಕಿರಿದಾದ ರಸ್ತೆ ಬಲಭಾಗದಲ್ಲಿ  ಕೆಳಗಿಳಿಯುತ್ತದೆ. ಅಲ್ಲಿಂದ ಒಂದಷ್ಟು  ಮುಂದೆ ಹೋಗಿ ಗುಡ್ಡ ಹತ್ತಿದರೆ ಅಲ್ಲಿ ಮಾವನ ಮನೆ ಇತ್ತು.   .  ಸಾಮನ್ಯಕ್ಕೆ ಈಗ  ಡಿ ಮಾರ್ಟ್ ಇರುವ ಜಾಗದಲ್ಲೇ,  ಆಗ ಒಂದು ಐದಾರು ಮನೆಗಳು ಇದ್ದ ಹರಿಜನರ ಕೇರಿ ಇತ್ತು.  ಡೋಲು ವಾದ್ಯ ನುಡಿಸುವುದು, ಮನೆಯಲ್ಲೇ ಸುಣ್ಣದ ಕುಲುಮೆ ಹೀಗೆ ಅವರ ಜೀವನ ಸಾಗುತ್ತಿತ್ತು.  ಚಿಪ್ಪು ಸುಣ್ಣ ಸುಡುವ ವಾಸನೆ ಸುತ್ತ ಮುತ್ತಲೆಲ್ಲ ಇರುತ್ತಿತ್ತು. ಸುಣ್ಣದ ಕುಲುಮೆಗೆ ಇದ್ದಿಲ  ಮಸಿ (ಕೆಂಡ) ಅಗತ್ಯವಿರುತ್ತಿತ್ತು. ಅದಕ್ಕಾಗಿ ಅವರು ನಮ್ಮಲ್ಲಿಗೆ ಬರುತ್ತಿದ್ದರು. ನಮ್ಮಲ್ಲಿ ಚಕ್ಕುಲಿವ್ಯಾಪಾರ ಇದ್ದುದರಿಂದ ಕಟ್ಟಿಗೆ ಉರಿಸಿದ ಇದ್ದಿಲು ಸಾಕಷ್ಟು ಸಂಗ್ರಹವಾಗುತ್ತಿತ್ತು. ಈ ಹರಿಜನರ ಕೇರಿಯಲ್ಲಿ  ಅವರೊಂದು ಪುಟ್ಟ ಭಜನಾ ಮಂದಿರ ಕಟ್ಟಿದ್ದರು. ಅಗಾಗ ಅಲ್ಲಿ ಅವರೆಲ್ಲ ಸೇರಿ ಅಗಾಗ ಭಜನಾ ಕಾರ್ಯಕ್ರಮ ನಡೆಸುತ್ತಿದ್ದರು. ಇದ್ದಿಲು ಕೊಂಡೊಯ್ಯಲು ನಮ್ಮಲ್ಲಿಗೆ ಬರುತ್ತಿದ್ದವರಲ್ಲಿ ಅಜ್ಜ ಅವರ ಮಕ್ಕಳನ್ನು ಕಳುಹಿಸಿಕೊಡುವಂತೆ ಕೇಳಿಕೊಳ್ಳುತ್ತಿದ್ದರು.  ಅಜ್ಜ ಆ ಕೇರಿಯ ಮಕ್ಕಳಿಗೆ ಕೆಲವು ದಿನ ಭಜನೆ ಹೇಳಿಕೊಡುತ್ತಿದ್ದರು. ಆಗ ಅದೊಂದು ಗಂಭೀರವಾಗಿ ಕಾಣಲಿಲ್ಲ. ಆದರೆ ಈಗ ಬ್ರಾಹ್ಮಣ. ಅಸ್ಪೃಶ್ಯತೆ ಅಂತ ವಿವಾದಗಳ ನಡುವೆ ನಿಂತು ಯೋಚಿಸುವಾಗ ಆಶ್ಚರ್ಯ ಎನಿಸುತ್ತದೆ. ಅಜ್ಜನ ಚಿಂತನೆಗಳಿಗೆ ಇದು ಒಂದು ಉದಾಹರಣೆಯಾಗಬಹುದು. 

ಅಜ್ಜ ವೇದಮೂರ್ತಿಗಳು. ಅವರು ಸ್ಪುಟವಾಗಿ ಮಂತ್ರಹೇಳುವಾಗ ಅದು ಸರಸ್ವತಿ ಬ್ರಹ್ಮ ಸ್ವರೂಪ ಸಾಕ್ಷಾತ್ಕಾರ ಎನಿಸುತ್ತಿತ್ತು. ಮಂತ್ರ ಉಚ್ಚಾರ ಬಹಳ ಶ್ರಮದಾಯಕ ಅಂತ ಅವರು ಹೇಳುತ್ತಿದ್ದರು. ಅದನ್ನು ನಾಭೀ ಸ್ವರದಲ್ಲೇ ಉಚ್ಚರಿಸಬೇಕು. ಅದರ ಸ್ವರಭಾರ ಏರಿಳಿತ ತಪ್ಪು ಉಚ್ಚರಿಸಿದರೆ ಅಜ್ಜ ಎಲ್ಲಿದ್ದರೂ ಗದರುತ್ತಿದ್ದರು.‌ಅಲ್ಪ ಪ್ರಾಣ ಮಹಾ ಪ್ರಾಣಗಳು ಸ್ಫುಟವಾಗಿ ಉಚ್ಚರಿಸಬೇಕು.  ವೇದ ಮಂತ್ರೋಚ್ಚಾರ ಸ್ಪಷ್ಟವಾಗಿರಬೇಕು. ಸ್ವರ ಭಾರದಲ್ಲಿ, ಉಚ್ಚಾರದಲ್ಲಿ ನಿಖರತೆ ಸ್ಪಷ್ಟತೆ ಇರಬೇಕು. ಉಚ್ಚಾರದಲ್ಲಿ ಒಂದಕ್ಷರ ತಪ್ಪಾದರೆ ಅದು ಅಪಭ್ರಂಶವಾಗಿಬಿಡುತ್ತದೆ. ಹಾಗಾಗಿ ವೇದ ಮಂತ್ರ ಉಚ್ಚರಿಸುವಾಗ ಎಚ್ಚರಿಕೆ ಮಾತ್ರ ಸಾಲದು, ಅದಕ್ಕೆ ಗುರುವಿನ ಉಪದೇಶ ಅತೀ ಮುಖ್ಯವಾಗುತ್ತದೆ. ಸೂಕ್ಷ್ಮವಾದ ತಪ್ಪಾದರೂ ಅದು ದೊಡ್ಡ ಪ್ರಮಾದವಾಗಿಬಿಡುತ್ತದೆ. ಹೀಗೆ ಸುಮ್ಮನೇ ಆಡುವ ಮಾತಿನಲ್ಲೂ ಅಕ್ಷರ ಉಚ್ಚಾರ ತಪ್ಪಾದರೆ ಅಜ್ಜ ಎಚ್ಚರಿಸುತ್ತಿದ್ದರು. ಅಜ್ಜನಲ್ಲಿ ಮಂತ್ರ ಅಭ್ಯಾಸ ಮಾಡುವಾಗ ಒಂದು ಯಾವುದೋ ಒಂದು ಮಂತ್ರದ  ಒಂದಕ್ಷರ ತಪ್ಪು ತಪ್ಪಾಗಿ ಉಚ್ಚರಿಸಿದರೆ ಅದನ್ನು ಸರಿ ಪಡಿಸದೆ ಮುಂದಿನ ಅಕ್ಷರ ಕಲಿಸುತ್ತಿರಲಿಲ್ಲ. ಒಂದಕ್ಷರ ಸರಿಯಾಗಿ ಉಚ್ಚರಿಸುವ ತನಕ ಬಿಡುತ್ತಿರಲಿಲ್ಲ. ಹೀಗೆ ಒಂದಕ್ಷರ ಸರಿಯಾಗಿ ಉಚ್ಚರಿಸಲು ಸಾಧ್ಯವಾಗದೇ ಇದ್ದಾಗ ಇಡೀ ದಿನ ಅದೇ ಪಾಠ ಉಚ್ಚರಿಸಿದ ನೆನಪು ಈಗಲು ಇದೆ. ಹೀಗೆ ಅಜ್ಜನಿ ಉಚ್ಚಾರ ಶುದ್ಧಿಯಲ್ಲಿ ಹೆಚ್ಚು ಆಗ್ರಹ ನಿಷ್ಠೆ ಇರುತ್ತಿತ್ತು. ಹಾಗಾಗಿಯೇ ಇಂದಿಗೂ ನನಗೆ ಉಚ್ಚಾರ ಶುದ್ದಿಯಲ್ಲಿ ಹೆಚ್ಚು ಗಮನ. ಒಂದಕ್ಷರವೂ ತಪ್ಪಾಗದೇ ಉಚ್ಚರಿಸುವುದಕ್ಕೆ ಸಾಧ್ಯವಾದರೆ ಅದು ನನ್ನಜ್ಜನ ಆಶೀರ್ವಾದ.  ಒಂದಕ್ಷರದ ಪಾಠಕ್ಕೆ ಇಡೀ ದಿನ ತೆಗೆದು ಕೊಂಡಾಗ ಅವರು ಶ್ರೀ ಶಂಕರಾಚಾರ್ಯ ಗುರುಗಳ ಭಜಗೋವಿಂದಂ ಕಥೆಯನ್ನು ಹೇಳುತ್ತಿದ್ದರು. ನಹಿ ನಹಿ ರಕ್ಷತಿ ಡುಕೃಞ್ ಕರಣೆಯ ಉದಾಹರಣೆ ಕೊಟ್ಟು ಉಚ್ಚರಿಸುವುದು ಸಾಧ್ಯವಾಗದೇ ಇದ್ದರೆ ಅದನ್ನು ಬಿಟ್ಟು ಬಿಡಬೇಕು. ಹೊರತು ತಪ್ಪು ಉಚ್ಚಾರ ಖಂಡಿತಾ ಸಲ್ಲದು. ಅದು ಆ ವಿದ್ಯೆಗೆ ಮಾಡುವ ಅವಮಾನ. ನಮ್ಮ ನಾಲಿಗೆಯ ಮೇಲಿನ ಸರಸ್ವತಿಗೆ ಮಾಡುವ ಅವಮಾನವಾಗುತ್ತದೆ.   ಶ್ಲೋಕ ಮಂತ್ರಗಳನ್ನು ಯಾರೂ ಹೇಳಬಹುದು...ಅದರೆ ಅದು ಗುರು ಉಪದೇಶ ಇಲ್ಲದೇ ಪಠಿಸಿದರೆ ಅದು ಅಪೂರ್ಣವಾಗುತ್ತದೆ ಮಾತ್ರವಲ್ಲ ದೊಡ್ಡ ಪ್ರಮಾದವಾಗಿಬಿಡುತ್ತದೆ. ಸಿಗಬೇಕಾದ ಫಲ ಸಿಗುವುದಿಲ್ಲ. ಅಜ್ಜ ಯಾವ ಮಂತ್ರ ಹೇಳಿಕೊಡುತ್ತಿದ್ದರು ಮೊದಲು ಅಕ್ಷರಾಭ್ಯಾಸದಿಂದಲೇ ತೊಡಗಿಸುತ್ತಿದ್ದರು. 

ಅಜ್ಜನಿಗೆ  ಅಕ್ಷರ ಉಚ್ಚಾರ ಶುದ್ದಿಯಲ್ಲಿ  ಇರುವ ಬದ್ದತೆಯಿಂದಲೋ ಏನೋ ಆ ಕೇರಿಯ ಭಜನಾ ಮಂದಿರದ ಹತ್ತಿರ ಹೋಗುವಾಗ, ಅಲ್ಲಿಯ ಭಜನೆಯಲ್ಲಿ   ಅಕ್ಷರ ತಪ್ಪಾದ ಉಚ್ಚಾರ  ಕೇಳುತ್ತಿದ್ದುದರಿಂದಲೋ  ಏನೋ..ಅಲ್ಲಿನ ಒಂದೆರಡು ಹುಡುಗರನ್ನು ಕರೆಸಿ ಅವರಿಗೆ ಭಜನೆ ಹೇಳಿಕೊಡುತ್ತಿದ್ದರು.  ಅದನ್ನು ಆ ಹುಡುಗರು ಎಷ್ಟು ಉಳಿಸಿದರೋ ಗೊತ್ತಿಲ್ಲ, ಆದರೆ ಅಜ್ಜನಲ್ಲಿದ್ದ ನಿಷ್ಠೆ ಅದು  ಸರಸ್ವತೀ ದತ್ತ ಎನಬೇಕು. ಆಗ ಹಲವು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ನಂತರ ಯಾರಿಂದಲೋ ಕಲಿಯುವ ಎಂದುಕೊಂಡರು ಅಜ್ಜನ ಉಚ್ಚಾರ ಸ್ಪಷ್ಟತೆ ಮತ್ತೆ ಸಿಗುವ ಭರವಸೆ ಇರಲಿಲ್ಲ. ನನ್ನಜ್ಜನಲ್ಲೂ ಹಲವು ದೌರ್ಬಲ್ಯಗಳು ಇದ್ದವು. ಹಾಗಾಗಿ ಅಜ್ಜನಲ್ಲಿ ಪರಿಪೂರ್ಣವಾದ ಮಂತ್ರ ಪಾಠವನ್ನು ಮಾಡಲಾಗದ ಖೇದ ನನಗೆ ಈಗಲೂ ಇದೆ.  ಶಿಷ್ಯನಾದವನು ಗುರುವಿನ ದೌರ್ಬಲ್ಯವನ್ನು ಕಾಣಬಾರದು. ಗುರುವಿನ ಯಾವ ಕೊರತೆ ಇದ್ದರೂ ಅದನ್ನು ಶಿರಸಾವಹಿಸಿ ತನ್ಮಯತೆಯಿಂದ ಸ್ವೀಕರಿಸುವವನೇ ನಿಜವಾದ ಶಿಷ್ಯ. ಹಾಗಿದ್ದಲ್ಲಿ ಮಾತ್ರವೇ ಗುರುವಿನ ಸಂಪೂರ್ಣ ಆಶೀರ್ವಾದ ಶಿಷ್ಯನಾದವನಿಗೆ ಲಭ್ಯವಾಗಬಹುದು.  ಎಲ್ಲಿ ದೌರ್ಬಲ್ಯಗಳು ಒಪ್ಪಿ ಅಂಗೀಕರಿಸಲ್ಪಡುವುದೋ ಅಲ್ಲಿ ಗೌರವ ಪ್ರೀತಿ ಇದೆ ಎಂದರ್ಥ. 

ಗುರು ದ್ರೋಣರಿಗೆ ಅರ್ಜುನ ಪಟ್ಟ ಶಿಷ್ಯನಾಗಿದ್ದ. ದ್ರೋಣರು  ಕೇವಲ ಧನುರ್ವಿದ್ಯೆಯನ್ನು ಭೋಧಿಸಿದ್ದಲ್ಲ...ಒಬ್ಬ ಶಿಷ್ಯನಾದವನು ಹೇಗಿರಬೇಕು ಎಂದು ಕೂಡ ಕಲಿಸಿದ್ದರು. ಅಥವಾ ಅರ್ಜುನನಿಗೆ ಆ ನಿಷ್ಠೆ ಗುರುವಿನಲ್ಲೂ ಇತ್ತು. ಹಾಗಿರುವ ಕಾರಣ ಪಾರ್ಥ ಏವ ಧನುರ್ಧರನಾದ ಮಾತ್ರವಲ್ಲ, ಶಿವನಿಂದ ಪಾಶು ಪತವನ್ನು ಪಡೆಯುವ ಯೋಗ್ಯತೆಯನ್ನು ಗಳಿಸಿಕೊಂಡ. ಈ ಎಲ್ಲ ಕಾರಣದಿಂದ ಒಬ್ಬ ಶಿಷ್ಯನಾದವನು ಹೇಗಿರಬೇಕು ಎಂದು ತಿಳಿದುಕೊಂಡು ಪರಮ ಶಿಷ್ಯನಾಗಿದ್ದುದರಿಂದ, ಶ್ರೀಕೃಷ್ಣನಿಂದ ಗೀತೋಪದೇಶವನ್ನು ಗಳಿಸುವ ಅವಕಾಶವನ್ನು ಅರ್ಹತೆಯನ್ನು ಗಳಿಸಿದ. ಅರ್ಜುನನಲ್ಲಿನ ಪರಮ ಶಿಷ್ಯತ್ವ ಶ್ರೀಕೃಷ್ಣ ಗುರುತಿಸಿಯೇ ಆತನಿಗೆ ಯಾರಿಗೂ ಸಿಗದ ಗೀತೆಯ ಸಾರವನ್ನು ಬೋಧಿಸಿದ. 

ಇಂದಿಗೂ ನನಗೆ ಪರಮ ಗುರು ಎಂದಾಗ...ಮೊದಲು ನೆನಪಿಗೆ ಬರುವುದು ಅಜ್ಜನ ಸ್ವರೂಪ. ಈ ಕಾರಣದಿಂದ...ಸಂಧ್ಯಾವಂದನೆಯ ಗುರು ಅಭಿವಾದನವನ್ನು ಮಾಡುವಾಗ ಅಜ್ಜನ ಅಶೀರ್ವಾದ ಸ್ಮರಣೆಗ ಬರುತ್ತದೆ. ಆ ಗುರು ಸ್ಥಾನ ಬದುಕಿನ  ದಿಕ್ಸೂಚಿಯಾಗಿ ಸದಾ ಪ್ರೇರಕ ಶಕ್ತಿಯಾಗಿ ಪ್ರಚೋದಿಸುತ್ತದೆ. 


Sunday, February 23, 2025

ಮಹಾಕುಂಭದ ಪರೀಕ್ಷೆ

        ನಂಬಿಕೆ ವಿಶ್ವಾಸ ಎಂದು  ಬರುವಾಗ ನನಗೆ ನೆನಪಿಗೆ ಬರುವುದು "ಅದಾಮಿಂದೆ ಮಗನ್ ಅಬು " ಎಂಬ ಹಳೆಯ ಮಲಯಾಳಂ ಚಲನ ಚಿತ್ರ. ಇದರ ಬಗ್ಗೆ ಹಿಂದೆ ಕಾಶಿ ಯಾತ್ರೆಯ ಕುರಿತ ಲೇಖನದಲ್ಲಿ ಒಂದು ಸಲ ಬರೆದಿದ್ದೆ.  ಈಗಲೂ ಅದೇ ಬಗೆಯ ವಿಷಯ ಹೇಳುವುದಕ್ಕೆ ಇದು ಬಿಟ್ಟರೆ ನನಗೆ ಬೇರೆ ಯಾವ ಸೂಕ್ತ ಉದಾಹರಣೆಯೂ ನೆನಪಿಗೆ ಬರುವುದಿಲ್ಲ. ಇದರಲ್ಲಿ  ಕಥಾನಾಯಕ ಪತ್ನಿ ಸಹಿತ ಹಜ್ ಗೆ ಹೋಗುವ ಸಿದ್ದತೆಯ  ಕಥಾವಸ್ತು. ಅದಾಂನ ಮಗ ಅಬುವಾಗಿ  ಹಿರಿಯ ನಟ ಸಲೀಂ ಕುಮಾರ್ ಮನೋಜ್ಞವಾಗಿ ಅಭಿನಯಿಸಿದ ಚಲನಚಿತ್ರವಿದು. ಸಂಪ್ರದಾಯಸ್ಥ ಮುಸಲ್ಮಾನನಾಗಿ ಹಜ್ ಗೆ ಹೋಗುವುದಕ್ಕೆ ಆತ ಎಲ್ಲ ಸನ್ನಾಹವನ್ನೂ ಮಾಡುತ್ತಾನೆ. ಹೋಗುವ ಮೊದಲು ನಿಯಮದಂತೆ, ಪರಿಶುದ್ದನಾಗಬೇಕು. ಯಾರಿಗೂ ವಂಚನೆ ಮಾಡದೆ, ಇರುವ ಋಣ ಎಲ್ಲವನ್ನು ಸಂದಾಯ ಮಾಡಬೇಕು. ಯಾರಲ್ಲೇ ಆಗಲಿ ದ್ವೇಷ ಮನಸ್ತಾಪ ಇದ್ದರೆ ಅದನ್ನು ಪರಿಹರಿಸಿಕೊಳ್ಳಬೇಕು.  ಶುದ್ದ ಮನಸ್ಸಿನಿಂದ ಶುದ್ದ ಅಂತಃಕರಣದಲ್ಲಿ ಹಜ್ ಯಾತ್ರೆ ಮಾಡಬೇಕು.  ಚಲನ ಚಿತ್ರದ ಪ್ರತಿಯೊಂದು ಸನ್ನಿವೇಶವೂ ಈ ತತ್ವವನ್ನು ತೋರಿಸುತ್ತಾ ಸಾಗುತ್ತದೆ. ಎಲ್ಲಕ್ಕಿಂತ ಮೊದಲಾಗಿ ಭಗವಂತನ ಮೇಲೆ, ತನ್ನ ಧರ್ಮದ ಮೇಲೆ ಆತನಿಗಿರುವ ವಿಶ್ವಾಸ ನಂಬಿಕೆ ತುಂಬಾ ಗಾಢವಾಗಿರುತ್ತದೆ. ಭಗವಂತ ಮತ್ತು ಆತನ ಬಳಿಗೆ ಹೋಗುವ ಹಾದಿ ಪರಿಶುದ್ದತೆ ಇದೆಲ್ಲವನ್ನು ನೋಡಿದರೆ  ಮನುಷ್ಯ ಕೇವಲ ಸ್ನಾನ ಮಾಡಿ ದೇಹ ಶುದ್ದಿ ಹೊಂದಿದರೆ ಸಾಲದು, ತನ್ನ ಮನಸ್ಸು, ಬದುಕಿನ ಹಾದಿ ಎಲ್ಲವೂ  ಪರಿಶುದ್ದವಾಗಬೇಕು.  ಇದೇ ರೀತಿ  ಎಲ್ಲಾ ಪಾಪ ದುರಿತಗಳಿಂದ ಪರಿಶುದ್ಧನಾಗುವುದು  ಎಂದರ್ಥ. ಎಲ್ಲ ಧರ್ಮದಲ್ಲಿರುವ ತತ್ವ ಇದೇ. ಅದರ ಮೇಲೆ ಇರಬೇಕಾದ ನಂಬಿಕೆಯೂ ಅದೇಆಗಿರುತ್ತದೆ.  ಮನುಷ್ಯ ತನ್ನ ನಂಬಿಕೆಯ ವಿಷಯ ಬರುವಾಗ ಎಂದೂ ಆತ್ಮವಂಚನೆ ಮಾಡಲಾರ. ಮಾಡಿದರೆ ಆತನ ನಂಬಿಕೆ ಕಲುಷಿತವಾಗಿಬಿಡುತ್ತದೆ.  ಆತ ಬಡತನದಲ್ಲೂ  ಬಹಳ ಕಷ್ಟ ಪಟ್ಟು, ಜತೆಯಲ್ಲಿ ಯಾರೂ ಇಲ್ಲದೇ ಇದ್ದರೂ ಇದ್ದ ಮನೆ ವಸ್ತು ಎಲ್ಲವನ್ನು ಬಿಟ್ಟು ಹಜ್ ಗೆ ಹೋಗುವಾಗ ಮರಳಿ ಬರುವ ನಿರೀಕ್ಷೆ ಇರುವುದಿಲ್ಲ. ಆದರೂ ಹೋಗಬೇಕು ಎನ್ನುವ ಹಂಬಲ ಅದಕ್ಕಾಗಿ ಇರುವ ಪ್ರಯತ್ನ ಕೇವಲ ಆತನ ನಂಬಿಕೆ ವಿಶ್ವಾಸ. ಎಲ್ಲ ಧರ್ಮದ ನೆಲೆಗಟ್ಟು ಇರುವುದು ವಿಶ್ವಾಸದಲ್ಲಿ. ಅದನ್ನುಮೌಢ್ಯ ಎಂದು ವಿಶ್ವಾಸ ಬೆಲೆ ತಿಳಿಯದವರು ಹೇಳುತ್ತಾರೆ. 

ಸಾವಿರ ಸಂಖ್ಯೆಯ ಜನ ಎನ್ನುವಾಗ ನಮಗೆ ಗಾಬರಿಯಾಗುತ್ತದೆ. ಆದರೆ ಪ್ರಯಾಗ್ ರಾಜ್ ನ  ಮಹಾಕುಂಭದಲ್ಲಿ ಕೋಟಿ ಕೋಟಿ ಸಂಖ್ಯೆಯಲ್ಲಿ ಕೇವಲ ಗಂಗೆಯ ನೀರು ಸೋಕಿಸಿಕೊಳ್ಲುವುದಕ್ಕೆ ಬರುವುದೆಂದರೆ ವಿಶ್ವ ನಿಬ್ಬೆರಗಾಗುತ್ತದೆ. ಇದೊಂದು ಜಗತ್ತಿನ ಅದ್ಭುತ ಎನ್ನಬೇಕು. ಇಷ್ಟಾದರೂ ಗಂಗೆ ತನ್ನ ಮಡಿಲಲ್ಲಿ ಎಲ್ಲರನ್ನು ಸೇರಿಸಿ ಪಾವನವಾಗಿಸುತ್ತಾಳೆ. ಮನುಷ್ಯನ ನಂಬಿಕೆ ಎಂದರೆ ಅದೊಂದುಉತ್ಕಟ ಭಾವದ ಸಂಕೇತ. 

ಇತ್ತೀಚೆಗೆ ದೇಶೀಯ ಉತ್ಸವವಾಗಿ ಆಚರಿಸಿದ ಮಹಾ ಕುಂಭ ಮೇಳ, ಮನುಷ್ಯನ ಈ ನಂಬಿಕೆಗಳಿಗೆ ಸಾಕ್ಷ್ಯವಾಗಿ ಕಣ್ಣ ಮುಂದೆ ನಿಂತರೂ ವಿವಾದಗಳು ಈ ನಂಬಿಕೆಗಳಿಗೆ ಸವಾಲಾಗಿ ನಿಂತು ಬಿಡುತ್ತದೆ. ಮನುಷ್ಯ ಮಾತ್ರ ಸಹಜವಾಗಿ ಈ ವಿವಾದಗಳ ಬಗ್ಗೆ ಪರಿವೆ ಇಲ್ಲದೆ ತನ್ನ ನಂಬಿಗೆ ವಿಶ್ವಾಸದ ಮೇಲೆ ಗಾಢವಾಗಿ ವರ್ತಿಸುತ್ತಾನೆ. ಪರಿಶುದ್ದನಾಗುವುದು ಮನುಷ್ಯ ಜನ್ಮದ ಮೂಲ ತತ್ವ. ಮಹಾ ಕುಂಭದಲ್ಲಿ ಮುಳುಗೆದ್ದವರಿಗೆ ಬೇರೆ ಯಾವ ಧ್ಯೇಯವೂ ಇದ್ದಂತಿಲ್ಲ. ಯಾವುದೋ ಇರಾದೆಯಿಂದ, ಸಂಕಲ್ಪದಿಂದ ಮನುಷ್ಯ ದೇವರ ಎದುರು ಹಲವು ಹರಿಕೆಗಳನ್ನು ಹೊರುತ್ತಾನೆ. ತನ್ನ ಹಲವಾರು ಹಂಬಲಗಳಿಗೆ ದೈವಾನುಗ್ರಹ ಒದಗಿ ಬರಲಿ ಎಂದು ಆಶಿಸುತ್ತಾನೆ. ಅದು ವ್ಯಾಪಾರ ವ್ಯವಹಾರದ ಅಭಿವೃದ್ಧಿಯಾಗಲಿ , ಮಕ್ಕಳ ಉಜ್ವಲ ಭವಿಷ್ಯತ್ ಗೆ ಆಗಲಿ , ಅಥವಾ ಎದುರಾದ ಕಷ್ಟ ನಷ್ಟ ಪರಿಹರಿಸುವುದಕ್ಕೆ ಹರಕೆ ಹೊತ್ತು ದೇವರಿಗೆ ಮೊರೆ ಹೋಗುತ್ತಾನೆ. ದೇವರು ಪರಿಹರಿಸುತ್ತಾನೋ ಇಲ್ಲವೋ ಆದರೆ ತನ್ನ ನಂಬಿಕೆಯ ಮೇಲೆ ಅಚಲ ವಿಶ್ವಾಸ. ಕಷ್ಟ ಪರಿಹಾರವಾಗದೇ ಇದ್ದರೂ ತನ್ನ ಕರ್ಮವನ್ನು ನೆನೆಯುತ್ತಾನೆ ಹೊರತು ತನ್ನ ನಂಬಿಕೆಯ ದೇವರನ್ನು ದೂರುವುದಿಲ್ಲ. ಈ ಮಹಾಕುಂಭದಲ್ಲಿ ಮಿಂದೆದ್ದ ಕೋಟಿ ಕೋಟಿ ಮಂದಿಗಳಲ್ಲಿ ಕೇಳಿದರೆ ಇಂತಹ ಯಾವ ಉದ್ದೇಶಗಳೂ ಇರುವುದಿಲ್ಲ. ಕೇವಲ ಕೇವಲ ತನ್ನ ಪಾಪ ಪರಿಹಾರಕ್ಕೆ ಗಂಗೆಯ ಮಡಿಲಿಗೆ ತಲೆ ಕೊಡುತ್ತಾನೆ. ಇದನ್ನು ವಿವಾದಕ್ಕೆ ಎಳೆಯುವವರಿಗೆ ಇಂತಹ ಪವಿತ್ರ ವಿಚಾರಗಳು ಅದರ ಗಂಭೀರತೆ ಅರ್ಥವಾಗುವುದಿಲ್ಲ. ಯಾರಾದರೂ ನನಗೆ ಘನ ಸಂಪತ್ತು ಐಶ್ವರ್ಯ ಒದಗಿಬರಲಿ ಎಂದು ಗಂಗೆಯಲ್ಲಿ ಮುಳುಗುವುದಿಲ್ಲ. ಮುಳುಗಿ ಪವಿತ್ರನಾಗುವುದು ಮಾತ್ರ ಆತನ ಧ್ಯೇಯ. ಅದು ಆದಾಂಮಿಂದೆ ಮಗ ಅಬುವಿನ ನಂಬಿಕೆಗಿಂತ ಏನೂ ಭಿನ್ನವಾಗಿ ಇಲ್ಲ. 


ನಂಬಿಕೆಗಳು ವಿಶ್ವಾಸಗಳು ಅದರಲ್ಲೂ ಸನಾತನ ಹಿಂದೂ ಸಂಸ್ಕೃತಿ ಮೌಢ್ಯವಾಗಿ ಹಲವರಿಗೆ ಕಾಣುತ್ತದೆ. ಅದನ್ನು ಮೌಢ್ಯ ಎಂದು ಹೇಳುವುದರಲ್ಲೂ ಸ್ವಾರ್ಥವಿರುತ್ತದೆ. ಈ ಸ್ವಾರ್ಥದ ಅರಿವಿದ್ದೇ ಮನುಷ್ಯ ಕೋಟಿ ಸಂಖ್ಯೆಯಲ್ಲಿ ಮುಳುಗೇಳುತ್ತಿರುವುದು. ಒಂದು ಕೊಳಚೆ ಹೊಂಡದಲ್ಲಿ ಚಿನ್ನದ ತುಂಡು ಒಂದು ಬಿದ್ದಿರುತ್ತದೆ. ಆ ಚಿನ್ನ ಕೈವಶ ಮಾಡಿಕೊಳ್ಳುವುದಕ್ಕೆ ಕೊಳಚೆ ನೀರಾದರೂ ಅದನ್ನು ಲೆಕ್ಕಿಸದೆ ಹೊಂಡಕ್ಕೆ ಇಳಿದುಬಿಡುತ್ತಾನೆ. ಆ ನೀರು ಕೊಳಚೆ ಅಂತ ಆಕ್ಷಣಕ್ಕೆ ಅನಿಸುವುದಿಲ್ಲ. ಯಾರೋ ಒಬ್ಬ ಕೊಳಚೆ ಹೊಂಡಕ್ಕೆ ಬಿದ್ದು ಬಿಡುತ್ತಾನೆ. ಬಿದ್ದವನ ಜೀವದ ಮೌಲ್ಯವನ್ನು ಗ್ರಹಿಸಿ ಕೊಳಚೆಯನ್ನು ಲೆಕ್ಕಿಸದೆ ಹೊಂಡಕ್ಕೆ ಇಳಿದು ಬಿಡುತ್ತಾರೆ. ಇಲ್ಲಿನ ಕೊಳಕು ಗಮನಾರ್ಹವೆನಿಸುವುದಿಲ್ಲ.  ಗಂಗೆಯ ನೀರು ಕಲ್ಮಷ ಅಂತ ಹೇಳಿದರೆ ಅದನ್ನು ಕೇಳಿಸಿಕೊಳ್ಳುವ ವ್ಯವಧಾನ ಇರುವುದಿಲ್ಲ. ಚಿನ್ನಕ್ಕಿಂತಲೂ ಜೀವಕ್ಕಿಂತಲೂ ಮಿಗಿಲಾದ ಒಂದು ಭಾವನೆ ಆ ಗಂಗೆಯಲ್ಲಿ ಅಡಕವಾಗಿರುತ್ತದೆ. ಒಂದು ಮುಳುಗಿನ ಜಲಸ್ಪರ್ಷದಲ್ಲಿ ಆ ಮಹತ್ವವಿರುತ್ತದೆ. ಆದರೆ ಇದನ್ನು ಲೇವಡಿ ಮಾಡುವ ಒಂದೇ ಉದ್ದೇಶದಲ್ಲಿ ಇನ್ನಿಲ್ಲದ ವಿವಾದ ಸೃಷ್ಟಿ ಮಾಡುತ್ತಾರೆ. ಗಂಗೆಯ ನೀರು ಸ್ನಾನಕ್ಕೆ ಯೋಗ್ಯವಲ್ಲ ಎಂದು ಹೇಳುವವರಿಗೆ ಈ ಗಂಗೆಯಲ್ಲಿ ಸಿಗುವ ಪರಿಶುದ್ದತೆಯ ಅರಿವು ಇರುವುದಿಲ್ಲ. ದೇಹ ಶುದ್ದಿಗಾಗಿ ಮನುಷ್ಯ ಇಲ್ಲಿ ಮುಳುಗುವುದಿಲ್ಲ. ಇಲ್ಲಿ ಆತ್ಮ ಶುದ್ಧಿ ಮಾತ್ರ ಮುಖ್ಯವಾಗುತ್ತದೆ. ಆದರೆ ಲೌಕಿಕ ಚಿಂತನೆಯ ಮೂರ್ಖ ಮನಸ್ಸುಗಳಿಗೆ ಇಲ್ಲಿ ಸಿಗುವ ಪರಿಶುದ್ದಿಯ ಜ್ಞಾನವಿರುವುದಿಲ್ಲ. ಈ ಘಳಿಗೆಯಲ್ಲಿ ಶುದ್ದವಾದ ದೇಹ....ಮತ್ತೊಂದು ಘಳಿಗೆಯಲ್ಲಿ ಮಲಿನವಾಗಬಹುದು. ಆದರೆ ಪೂರ್ಣ ಜನ್ಮವೇ ಪಾವನವಾಗಿ ಪರಿಶುದ್ದವಾಗುವ ನಂಬಿಕೆಯಲ್ಲಿ ಕ್ಷುಲ್ಲಕ ದೇಹ ಶುದ್ದಿ ಮುಖ್ಯವಾಗುವುದಿಲ್ಲ. ಆದರೆ   ಗಂಗೆಯಲ್ಲಿ ಮಿಂದರೆ ಹೊಟ್ಟೆತುಂಬುತ್ತಾ ಎಂದು ಕೇಳುವ ಅದರ ಬಗ್ಗೆ ಅಪಸ್ವರ ಎತ್ತುವ ಮೂರ್ಖರಿಗೆ ಈ ಪಾವಿತ್ರ್ಯತೆ ಅರ್ಥವಾಗುವುದಿಲ್ಲ. ಕೇವಲ ಲೌಕಿಕ ಚಿಂತನೆ. ದೇಹದ ಹಸಿವಿನ ಬಗ್ಗೆ ಮಾತ್ರ ಯೋಚಿಸುವವನಿಗೆ ಅದರಿಂದಾಚೆಗಿನ ಜಗತ್ತಿನ ಹಸಿವು ಕಣ್ಣಿಗೆ ಕಾಣುವುದಿಲ್ಲ.  ಮೋಕ್ಷದ ಅರ್ಥ ತಿಳಿಯದವನು ಹಸಿವಿನ ಹಿಂದೆ ಹೋಗುತ್ತಾನೆ.  ಮನುಷ್ಯನಿಗೆ ಕೇವಲ ಹಸಿವು ಮಾತ್ರ ಮುಖ್ಯವಾಗುವುದಾದರೆ ಉಳಿದವುಗಳ ಹಿಂದೆ ಹೋಗುವ ಉದ್ದೇಶವಾದರೂ ಏನು? 

ಯಾವುದೇ ಯಶಸ್ಸಿನ ಹಿಂದೆ ಒಂದು ಪರೀಕ್ಷೆ ಇರುತ್ತದೆ. ನಮ್ಮನ್ನು ಪರೀಕ್ಷಿಸದೇ ಪರೀಕ್ಷೆಗೆ ಒಡ್ಡದೆ ಸಿಗುವ ಯಾವುದೇ ಯಶಸ್ಸು ಅದು ನಮ್ಮ ಅರ್ಹತೆಯನ್ನು ಹೇಳುವುದಿಲ್ಲ. ಅದರಲ್ಲಿ ಆತ್ಮಾನಂದವೂ ಲಭಿಸುವುದಿಲ್ಲ. ಆದರೆ ಒಂದು ಯಶಸ್ಸು ನಮ್ಮನ್ನು ಪರೀಕ್ಷೆಗೊಡ್ಡಿ ನಮ್ಮನ್ನು ಅರೆದು ಅರೆದು ಕೊನೆಯಲ್ಲಿ ಒದಗಿ ಬರುವ ಯಶಸ್ಸುಅದು ಸಂತೋಷಕ್ಕೆ ಕಾರಣವಾಗುವುದು ಮಾತ್ರವಲ್ಲ ಆತ್ಮ ತೃಪ್ತಿಯನ್ನು ಒದಗಿಸುತ್ತದೆ. ನಾವದಕ್ಕೆ ಅರ್ಹರು ಎಂದಾಗುವಾಗ ಅದು ಅಭಿಮಾನಕ್ಕೆ ಕಾರಣವಾಗುತ್ತದೆ. ಹೀಗಿರುವಾಗ ಭಗವಂತನ ಪದವಿ ಎಂಬುದು ಸುಮ್ಮನೇ ಒದಗಿ ಬಂದರೆ ಅದು ಕ್ಷುಲ್ಲಕ ಪದವಿಯಾಗಬಹುದು. ಅದಕ್ಕೆ ಯಾವ ಮೌಲ್ಯವೂ ಇಲ್ಲದಾಗಬಹುದು. ಒಂದು ರೀತಿಯಲ್ಲಿ ಗಂಗೆಯಲ್ಲಿ ಸ್ನಾನ ಮಾಡಿದರೆ ಬಡತನ ನೀಗುತ್ತಾ?  ಅಥವಾ ಹೊಟ್ಟೆಯ ಹಸಿವು ಶಮನವಾಗುತ್ತದಾ?   ಎಂದು ಕೇಳಿದಂತೆ. ಅದಕ್ಕೆ ಅರ್ಥವೇ ಇರುವುದಿಲ್ಲ. ಹಾಗಾಗಿಯೇ ಭಗವಂತನ ಬಳಿಗೆ ಹೋಗುವಾಗ ಅಲ್ಲಿ ಹಸಿವು ಎಂಬುದನ್ನು ಮನುಷ್ಯ ಮೊದಲು ಪಣಕ್ಕೆ ಒಡ್ಡಿ ಬಿಡುತ್ತಾನೆ. ಗಾಂಧೀಜಿಯ ಸ್ವಾತಂತ್ರ್ಯ ಹೋರಾಟದ ಕಥೆಯಲ್ಲೂ ಇದೇ ಹಸಿವಿನ ತಂತ್ರವಿದೆ. ಒಂದು ಯಶಸ್ಸಿನ ಹಿಂದೆ ಒಮ್ದು ಹಸಿವು ಇದ್ದೇ ಇರಬೇಕು. ಹಸಿವಿನ ರೂಪ ವೆತ್ಯಸ್ತವಾಗಿರಬಹುದು. ಆದರೆ ಹಸಿವು....ಅದೊಂದು ಬದುಕಿನ  ಪರೀಕ್ಷೆ. 

ಮಹಾ ಕುಂಭ ಆರಂಭವಾದಂದಿನಿಂದ ಒಂದಲ್ಲ ಒಂದು ಅನರೀಕ್ಷಿತ ಘಟನೆಗಳು ನಡೆದವು. ಕೆಲವು ಅವಘಡಗಳು ನಡೆದವು. ಪ್ರತಿಯೊಂದು ಘಟನೆಯಲ್ಲೂ ಒಂದು ಪರೀಕ್ಷೆಯ ರಹಸ್ಯವಿತ್ತು. ಈ ಪರೀಕ್ಷೆಯ ಸೋಲು ಕೂಡ ಒಂದು ಅರ್ಹತೆ. ಅಲ್ಲೊಂದು ಪ್ರಾಮಾಣಿಕತೆಯ ಪದವಿ ಇರುತ್ತದೆ. ಆದರೆ ಪರೀಕ್ಷೆ ಅದು ಎದುರಿಸುವುದಕ್ಕೆ ಇರುವ ಒಂದು ಅವಕಾಶ. ಹಾಗಾಗಿ ಅಲ್ಲಿ ಸಾವಿನ ವರದಿ ಸಾವಿರ ಸಂಖ್ಯೆಯಲ್ಲಿ ಬಂದರೂ ಸಾವಿರದ ಮಂದಿ ಯಾರೂ ಇಲ್ಲ, ಸಾವೇ ಒಂದು ಪದವಿ ಎಂಬಂತೆ ಗಂಗೆಯ ಬಳಿಗೆ ತೆರಳಿದರು. ಸಾವು ಭಯವನ್ನು ಹುಟ್ಟಿಸಲಿಲ್ಲ.  ಆ ಸಾವು  ಜೀವನ ಪರೀಕ್ಷೆಯಲ್ಲಿ ಹಿಂಜರಿಯುವಂತೆ ಮಾಡಲಿಲ್ಲ.  ಒಂದು ಅರ್ಥದಲ್ಲಿ ಸಾವು ಒಂದು ಪರೀಕ್ಷೆಯಾಗಿ ಬದಲಾಗಿ ಹೋದದ್ದು ಸನಾತನ ಧರ್ಮದ ಹಾದಿಯಲ್ಲಿದ್ದ ಬಹಳ ದೊಡ್ಡ ರಹಸ್ಯವಾಗಿ ರುಜುವಾತಾಯಿತು. ಸಾವನ್ನೂ ಸ್ವೀಕರಿಸುವ ಮನಸ್ಥಿತಿಯಲ್ಲಿ ಕೇವಲ ಹಸಿವಿನ ಚಿಂತೆ ಎಲ್ಲಿರುತ್ತದೆ. ಇದನ್ನು ತಿಳಿಯದವರು ಮೂರ್ಖತನದಿಂದ ಹೇಳಬಹುದು ಗಂಗೆಯಲ್ಲಿ ಮಿಂದರೆ ಬಡತನ ಹೋಗುತ್ತದಾ? ಹಸಿವು ನೀಗುತ್ತದಾ ಎಂದು. ಈ ಮರ್ತ್ಯ ಲೋಕದಲ್ಲಿ ಹಸಿವು ಎಂಬುದು ಅನಿವಾರ್ಯ. ಎಲ್ಲದಕ್ಕೂ ಅದೇ ಕಾರಣ. ಆದರೆ ಅದನ್ನು ಮೆಟ್ಟಿನಿಂತವನು . ಜೀವನ ಪರೀಕ್ಷೆಯನ್ನು ಗೆಲ್ಲುತ್ತಾನೆ. ಭಗವಂತನಿಗೆ ಪ್ರಿಯನಾಗುತ್ತಾನೆ. ಅದು ಪ್ರತೀ ಮನುಷ್ಯ ಜೀವಕ್ಕೆ ಪರಮ ಗುರಿಯಾಗಿರುತ್ತದೆ. 

ಪ್ರತಿಯೊಂದು ಕೆಲಸದಲ್ಲು ವಿಘ್ನಗಳು ಇದ್ದೇ ಇರುತ್ತವೆ. ಅದು ಒದಗಿ ಬರುವುದು ಒಂದು ರೀತಿಯಲ್ಲಿ ನಮಗೆ ಪರೀಕ್ಷೆಯಾಗಿರುತ್ತದೆ. ಅಲ್ಲಿ ಅವ್ಯವಸ್ಥೆ ಇರುತ್ತದೆ. ಸೌಕರ್ಯದ ಕೊರತೆ ಇರುತ್ತದೆ. ಕೆಲವು ತೊಂದರೆಗಳು ಇರಬಹುದು. ಮನೆಗೆ ಒಂದು ಹತ್ತು ಜನ ಅತಿಥಿಗಳು ಬಂದರೆ ಅವರಿಗೆ ಒಪ್ಪತ್ತಿನ ಊಟ ಹಾಕುವಾಗ ನಮಗೆ ಹಲವು ಸಂಕಷ್ಟಗಳು ಎದುರಾಗುತ್ತವೆ. ಇನ್ನು ಕೋಟಿ ಕೋಟಿ ಸಂಖ್ಯೆಯ ಜನಗಳು ಬರುವಾಗ ಅದೊಂದು ದೊಡ್ಡ ಪರೀಕ್ಷೆಯಾದರೆ ಅದು ನಿರೀಕ್ಷತ ಎಂದು ತಿಳಿದು ಕೊಳ್ಳುವುದರಲ್ಲಿ ಯಶಸ್ಸಿನ ರಹಸ್ಯವಿರುತ್ತದೆ. 

ಪ್ರತಿಯೊಂದು ಕೆಲಸದಲ್ಲು ವಿಘ್ನಗಳು ಇದ್ದೇ ಇರುತ್ತವೆ. ಅದು ಒದಗಿ ಬರುವುದು ಒಂದು ರೀತಿಯಲ್ಲಿ ನಮಗೆ ಪರೀಕ್ಷೆಯಾಗಿರುತ್ತದೆ. ಅಲ್ಲಿ ಅವ್ಯವಸ್ಥೆ ಇರುತ್ತದೆ. ಸೌಕರ್ಯದ ಕೊರತೆ ಇರುತ್ತದೆ. ಕೆಲವು ತೊಂದರೆಗಳು ಇರಬಹುದು. ಮನೆಗೆ ಒಂದು ಹತ್ತು ಜನ ಅತಿಥಿಗಳು ಬಂದರೆ ಅವರಿಗೆ ಒಪ್ಪತ್ತಿನ ಊಟ ಹಾಕುವಾಗ ನಮಗೆ ಹಲವು ಸಂಕಷ್ಟಗಳು ಎದುರಾಗುತ್ತವೆ. ಇನ್ನು ಕೋಟಿ ಕೋಟಿ ಸಂಖ್ಯೆಯ ಜನಗಳು ಬರುವಾಗ ಅದೊಂದು ದೊಡ್ಡ ಪರೀಕ್ಷೆಯಾದರೆ ಅದು ನಿರೀಕ್ಷತ ಎಂದು ತಿಳಿದು ಕೊಳ್ಳುವುದರಲ್ಲಿ ಯಶಸ್ಸಿನ ರಹಸ್ಯವಿರುತ್ತದೆ.