Thursday, December 28, 2023

ಕಿತ್ತು ಬಂದ ನೆನಪಿನ ಬೇರುಗಳು

        ಮಂಗಳೂರಿನ ಕೆಪಿಟಿಯ ತುದಿಯಿಂದ ಕೂಳೂರು ಪಣಂಬೂರು ಕಡೆಗೆ ಹೋಗು ರಾಷ್ಟ್ರೀಯ ಚತುಷ್ಪಥ ಹೆದ್ದಾರಿಯ ಪಕ್ಕದಲ್ಲೇ ದೇರೇಬೈಲುನ ನೆಕ್ಕಿಲಗುಡ್ಡೆ ಇದೆ. ಕುಂಟಿಕಾನ ಮೇಲು ಸೇತುವೆ ದಾಟಿ ಸ್ವಲ್ಪ ದೂರ ಹೋಗಬೇಕಾದರೆ ಬಲ ಬದಿಗೆ ಒಂದು ಸಪೂರ ರಸ್ತೆ ಇಳಿಯುತ್ತದೆ. ಅದೇ ನೆಕ್ಕಿಲಗುಡ್ಡೆಗೆ ಹೋಗುವ ದಾರಿ. ಆ ದಾರಿಯಲ್ಲಿ ಮುಂದೆ ಸಾಗಿದರೆ ಇರುವ ಸ್ಥಳಗಳ ಚಿತ್ರಗಳು ಇವು.  ಈ ಚಿತ್ರಗಳು ನನ್ನ ಪಾಲಿಗೆ ಸಾವಿರ ನೆನಪನ್ನು ಪುಂಖಾನು ಪುಂಖವಾಗಿ ತರುತ್ತವೆ. ಎಲ್ಲವೂ ಹೃದಯ ಸ್ಪರ್ಶಿ. ಕಳೆದ ಬಾಲ್ಯದ ಚಿನಕುರುಳಿ ದಿನಗಳು ನೆನಪಿಗೆ ಬಂದಾಗ ಹೃದಯ ಭಾರವಾಗಿ  ಕಣ್ಣಂಚಿನಲ್ಲಿ ತೇವ ಬೇಡದೇ ಇದ್ದರು ಒಸರಿಬಿಡುತ್ತದೆ. ಚಿತ್ರದಲ್ಲಿ ಒಂದು ಮರ ಬುಡ ಮಗುಚಿ ಕೇವಲ ಅಸ್ಥಿಪಂಜರವಾಗಿ ಬಿದ್ದದ್ದು ಕಾಣಬಹುದು. ಇದನ್ನು ಕಾಣುವಾಗ ಕರುಳು ಕಿತ್ತು ಬಂದ ಅನುಭವವಾಗುತ್ತದೆ. ಇದೊಂದು ದೊಡ್ಡ ಗೋಳಿ ಮರ. ಅದರ ತುದಿಯನ್ನು ನಾನು ನೋಡಿಲ್ಲ. ಆದರೆ ಈಗ ಅದರ ಬುಡವನ್ನು ಕಾಣುತ್ತೇನೆ. ಒಂದು ಗೋಲಿಯಾಕಾರದ ಹಣ್ಣಿನ ಚಿಕ್ಕ ಬೀಜದಿಂದ ಹುಟ್ಟಿದ ಈ ಮರ ನಾನು ಕಳೆದ ಇತಿಹಾಸವನ್ನೇ ಬಿಚ್ಚಿ ತೋರಿಸುತ್ತದೆ. ಬಹುಶಃ ನಾನು ಹುಟ್ಟುವ ಮೊದಲೇ ಇದರಲ್ಲಿ ಕಾಣುವ ತಾಯಿ ಬೇರು ಹುಟ್ಟಿರಬಹುದು. ಈಗ ಇದು ಜೀವ ಸೆಲೆ ಇಲ್ಲದೇ ನಿಶ್ಚಲವಾಗಿದೆ.  ಇದು ಇತ್ತೀಚೆಗಿನ ಚಿತ್ರ. ಗೂಗಲ್ ನಕ್ಷೆಯಲ್ಲಿ ಬಂದ ಉಪಗ್ರಹದ ಚಿತ್ರ.  ಯಾಕೋ ನನ್ನ ಬಾಲ್ಯದಲ್ಲಿ  ಓಡಾಡಿದ ಸ್ಥಳಗಳನ್ನು ಗೂಗಲ್ ನಕ್ಷೆಯಲ್ಲಿ ತಡಕಾಡುವಾಗ ಸಿಕ್ಕಿದ ಈ ಚಿತ್ರ ಹಲವು ನೆನಪುಗಳನ್ನು  ಮರದ ಬೇರು ಕಿತ್ತು ಬಂದಂತೆ ಕಿತ್ತು ತೋರಿಸಿತು.   







ಮಂಗಳೂರಿನ ದೇರೇಬೈಲು  ಗ್ರಾಮದ ನೆಕ್ಕಿಲ ಗುಡ್ಡೆ ಎಂಬ ಸ್ಥಳ ಇದು. ಹೆಸರೇ ಹೇಳುವಂತೆ ಆ ದಿನ ಇದು ದೊಡ್ಡ ಗುಡ್ಡೆಯೇ ಆಗಿತ್ತು. ಗುಡ್ಡೆಯ ತುದಿಯಲ್ಲಿ ನಮ್ಮ ಮನೆ. ಮನೆಯ ಹಿಂಬದಿಯಲ್ಲಿ ದೊಡ್ಡ ಮೈದಾನ. ಅದರ ಒಂದು ಅಂಚಿನಲ್ಲಿ ಈ ಗೋಳಿಮರ. ಆಗ ವಿಶಾಲಾವಾಗಿ ಬೆಳೆದಿತ್ತು. ಇದರಂತೆ ಅಲ್ಲಿ ಇನ್ನೂ ಎರಡು ಮೂರು ಗೋಳಿ ಮರ ಇತ್ತು. ಮೈದಾನದಲ್ಲಿ ಊರಿನ ಮಕ್ಕಳು ಬಂದು ಕ್ರಿಕೆಟ್, ವಾಲಿಬಾಲ್ ಆಟವಾಡುತ್ತಿದ್ದರು. ಎಲ್ಲಾ ದಿನವೂ ಸಾಯಂಕಾಲ ಮಕ್ಕಳ ಗದ್ದಲ ಸರ್ವೇ ಸಾಮಾನ್ಯ. ಅದೇ ಜಾಗದಲ್ಲಿ ಈಗ ಕಟ್ಟಡ ಸಮುಚ್ಚಯ ಬೆಳೆದು ನಿಂತದ್ದನ್ನು ಕಾಣಬಹುದು. ಇದರ ಒಂದು ತುದಿಗೆ ಕಾಣುವ ಕಟ್ಟಡದ ಬಳಿಯಲ್ಲೇ ನಮ್ಮ ಮನೆ ಇತ್ತು. ನನ್ನ ಬಹಳಷ್ಟು ಬಾಲ್ಯ ಮಾತ್ರವಲ್ಲ ಶೈಶವದ ದಿನಗಳೂ ಇಲ್ಲೇ ಕಳೆದಿದ್ದವು. ಹಾಗಾಗಿ ನೆಕ್ಕಿಲಗುಡ್ಡೆ ಎಂದರೆ  ನನ್ನ ಪಾಲಿಗೆ ಅದೊಂದು ನೆನಪಿನ ಗುಡ್ಡೆಯೇ ಆಗಿಹೋಗಿದೆ. 

ಮೈದಾನ ಅಂಚಿನಲ್ಲಿರುವ ಈ ಗೋಳಿ ಮರ ಬಾಲ್ಯದಲ್ಲಿ ನಮ್ಮ ಹಲವು ಆಟಗಳಿಗೆ ಸಾಕ್ಷಿಯಾಗಿದೆ. ಮೇಲಿನಿಂದ ಇಳಿದು ಬಿಟ್ಟ ಅದರ ಬಿಳಲುಗಳಲ್ಲಿ ನಾವು ಉಯಾಲೆಯಾಡಿದ್ದು ಮರೆಯುವುದಕ್ಕೆ ಹೇಗೆ ಸಾಧ್ಯ. ಹೆಣ್ಣು ನಾಯಿಯ ಕೆಚ್ಚಲಿಗೆ ಮರಿಗಳು ನೇತಾಡಿದಂತೆ, ಮರ ನಮಗೆ ತಾಯಿಯಂತೆ ಅದರೆ ತೋಳಿಗೆ ನಾವು ನೇತಾಡಿ ಉಂಡ ಸಂತೋಷಗಳು ಮರ ಸತ್ತು ಬಿದ್ದರೂ ನೆನಪುಗಳು ಜೀವಂತವಾಗಿದೆ. ಈ ಮರ ಬಸ್ಸು ಬಂಡಿ ಬಿಡುವ ಆಟವಾಡಿದಾಗ ಬಸ್ಸು  ನಿಲ್ದಾಣವಾಗಿದೆ, ಮನೆಯ ಆಟವಾಡುವಾಗ ಈ ಮರದ ಬುಡ ಮನೆಯಾಗಿದೆ. ಕಳ್ಳ ಪೋಲೀಸ್ ಆಟವಾಡುವಾಗ ಈ ಮರ ದೊಡ್ಡ ಕಾಡಿನಂತೆ ಉಪಯೋಗಿಸಿದ್ದೇವೆ.  ಮರದ ಬುಡದಲ್ಲಿ ಮಣ್ಣು ಸೊಪ್ಪು ಗುಡ್ಡೆ ರಾಶಿ ಹಾಕಿ ತಕ್ಕಡಿ ಕಟ್ಟಿ ಅಂಗಡಿಯ ಆಟವಾಡಿದ್ದೇವೆ.  ಮರದ ಬುಡದಲ್ಲಿ ಹಲವು ಬಗೆಯ ಆಟವಾಡಿದ್ದೇವೆಆಟದ ಮೈದಾನದಲ್ಲಿ ಆಟವಾಡಿ ದಣಿದಾಗ ಈ ಮರದ ನೆರಳಲ್ಲಿ ಹರಟೆ ಹೊಡೆದು ಕುಳಿತಿದ್ದೇವೆ. , ಆಲ್ಲಿ ಗೋಳಿಮರದ ಅಡಿಗೆ ಹೋಗಿ ಆಟವಾಡಬಾರದ ಎಂದು ಮನೆಯಲ್ಲಿ ತಂಟೆ ಜಗಳ ಮಾಡಿದಾಗ ಹಿರಿಯರು ಬೈಯ್ಯುತ್ತಿದ್ದರು. ಈ ಗೋಳಿಮರ ಎಂಬುದು ಆ ರೂಪದಲ್ಲಿ ಒಂದು ವಿಮೋಚನೆಯ ಸ್ಥಳವಾಗಿತ್ತು. .ನಮ್ಮ ಎಲ್ಲ ತಂಟೆ ಜಗಳವನ್ನೂ ಖುಷಿಯನ್ನೂ  ಸಹಿಸಿಕೊಂಡ ಈ ಮರ ಈಗ ಬದುಕುವುದಕ್ಕೆ ಸಾಧ್ಯವಿಲ್ಲದೇ ಧರಾಶಾಯಿಯಾಗಿದೆ.  ಪ್ರಪಂಚದಲ್ಲಿ ಆರಂಭವಾಗುವುದು ಅಂತ್ಯಕಾಣಲೇ ಬೇಕು. ಆದರಂತೆ ಮರವೂ ಅದಕ್ಕೆ ಎರವಾಗಿದೆ. ಆದರೆ ಆ ನೆನಪುಗಳನ್ನು ಕಿತ್ತು ಹಾಕಿ ಅದಕ್ಕೆ ಅಂತ್ಯವೇ ಇಲ್ಲದಂತೆ ಮಾಡಿದೆ. 

ಈ ಚಿತ್ರಗಳಲ್ಲಿ ಒಂದು ಮೂರು ರಸ್ತೆ ಕೂಡುವ ಚಿತ್ರವಿದೆ .  ಹತ್ತಿರದ ಉರ್ವಸ್ಟೋರ್ ಪೇಟೆಗೆ ಇದೇ ದಾರಿಯಲ್ಲಿ ಹೋಗಬೇಕು. ಅಲ್ಲಿಂದ ಕೂಗಳತೆ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ ಇದೆ. ಈಗ ಅದು ಚತುಷ್ಪಥವಾಗಿದೆ.    ನೆಕ್ಕಿಲ ಗುಡ್ಡೆಯ ಬುಡದಲ್ಲೇ ಇರುವ ಜಾಗವಿದು.  ಇದರ ಬುಡದಲ್ಲೆ ಒಂದು ನೀರಿನ  ನಳ್ಳಿ ಇತ್ತು. ನಗರ ಬೆಳೆಯುತ್ತಿದ್ದಂತೆ ಈ ಜಾಗದಲ್ಲಿ ನಳ್ಳಿ ಸಂಪರ್ಕ ಬಂದಿತ್ತು.  ಪೇಟೆಯಿಂದ ಬರುವಾಗ ಅಲ್ಲಿ ನೆರಳಲ್ಲಿ ಕುಳಿತು ಒಂದಷ್ಟು ನಳ್ಳಿ ನೀರು ಕುಡಿದು ದಣಿವಾರಿಸಿಕೊಳ್ಳುವ ಜಾಗವದು. ಅಲ್ಲೆ ಮೇಲೆ ಒಂದು ದೊಡ್ಡ ಬಾವಿ ಇತ್ತು. ಸದಾಕಾಲ ಅದರಲ್ಲಿ ನೀರಿದ್ದು ಸುತ್ತಮುತ್ತಲಿನವರು ಅಲ್ಲಿಗೆ ನೀರಿಗೆ ಬರುತ್ತಿದ್ದರು. ಈಗ ಅದೂ ಮುಚ್ಚಿ ಹೋಗಿರಬಹುದು. 

ನೆಕ್ಕಿಲ ಗುಡ್ಡೆ ಮೊದಲಿನ ಗುರುತೇ ಇಲ್ಲದಂತೆ ಬದಲಾಗಿ ಹೋಗಿದೆ. ನಾವುದ್ದಾಗ ಸೊಗಸಾದ ತೆಂಗಿನ ತೋಟವಿತ್ತು. ಹಲವಾರು ಕೃಷಿ ವ್ಯವಸಾಯದಿಂದ ಗುಡ್ಡೆ ಹಚ್ಚ ಹಸುರಾಗಿತ್ತು. ಈಗ ಇಲ್ಲಿ ಹಲವು ಅಂತಸ್ತುಗಳ ಬೃಹತ್ ಕಟ್ಟಡಗಳು ತಲೆ ಎತ್ತಿವೆ. ಗುಡ್ಡೆ ಹೋಗಿ ನಗರವಾಗಿ ಹೆಸರು ಕೂಡ ಬದಲಾಗಿ ಹೋಗಿದೆ.  ಬಹುಶಃ ಅಂದಿದ್ದ ಮನುಷ್ಯರೂ ಹೊಸಜನಾಂಗಕ್ಕೆ ಜಾಗ ಖಾಲಿ ಮಾಡಿಕೊಟ್ಟಿರಬಹುದು.  ಹಲವರು ಇಲ್ಲಿಂದ ಹೋಗಿರಬಹುದು. ಆದರೆ ಆ ನೆನಪುಗಳು ಇಲ್ಲೇ ಹುದುಗಿರುತ್ತವೆ. ಅದು ಈ ಮರದ ಬೇರಿನಂತೆ ಹಲವು ಸಲ ಕಿತ್ತು ಬರುತ್ತವೆ. ಒಣಗಿ ಹೋದ ಊರ ನಡುವೆ ನೆನಪುಗಳು ಹಚ್ಚ ಹಸುರಾಗಿ ಜೀವಂತವಾಗಿರುತ್ತವೆ. 


Monday, December 25, 2023

ಸ್ವಾಮಿಯೇ ಶರಣಂ

    ಚೆನ್ನಪ್ಪ (ಇದು ಕೇವಲ ಸಾಂಕೇತಿಕ ಹೆಸರು)  ಬೀದಿಯ ತುದಿಯಲ್ಲಿರುವ ಮನೆಯಲ್ಲಿ ವಾಸ. ಸಾಯಂಕಾಲ ಸೂರ್ಯಾಸ್ತವಾಗುವಾಗಲೇ ಈತ ರಂಗೇರಿಸಿಕೊಳ್ಳುತ್ತಾನೆ. ಹಾಗೆ ನೋಡಿದರೆ ಹಲವು ಸಲ ಮುಂಜಾನೆ ಐದು ಘಂಟೆಗೆ  ವೈನ್ ಶಾಪ್ ಎದುರಲ್ಲಿ ನಿಂತಿರುತ್ತಿದ್ದ. ಇವನಂತೆ ಹಲವರು ಬೆಳಗ್ಗಿನ ಜಾವ ತಮ್ಮ ದೌರ್ಬಲ್ಯಕ್ಕೆ ಪರಿಹಾರವನ್ನು ಅದೇ ಹೊತ್ತಿನಲ್ಲಿ ಅಲ್ಲಿಯೇ ಕಾಣುತ್ತಾರೆ. ಚೆನ್ನಪ್ಪ ಸಾಯಂಕಾಲ ಮನೆಯ ಎದುರು ಮೆಟ್ಟಲಲ್ಲಿ ಕುಳಿತು  ಗೊಣಗುತ್ತಾ ಹಲವು ಸಲ ಕಿರುಚಾಡುತ್ತಾ ಇರುತ್ತಾನೆ. ರಸ್ತೆಯಲ್ಲಿ ನಡೆದಾಡುವವರು ಸುಮ್ಮನೇ ಈತನನ್ನು ಒಂದು ಸಲ ನೋಡಿದರೆ ಸಾಕು ಕೆಟ್ಟ ಬೈಗುಳಗಳನ್ನು ಕೇಳಬೇಕಾಗುತ್ತದೆ. ಹಾಗೆ ನೋಡಿದವರು ಅಲ್ಲಿ ಹೋಗಿ ತಾಸು ಕಳೆದರೂ ಈತನ ಬೈಗುಳ ನಿಂತಿರುವುದಿಲ್ಲ. ಇಂತಹ ಚೆನ್ನಪ್ಪ ಎರಡು ದಿನದಿಂದ  ಮನೆಯ ಮುಂದೆ ಕಾಣುತ್ತಿಲ್ಲ. ಮೊದಲ ದಿನ ಎಲ್ಲಾದರೂ ಕುಡಿದು ಬಿದ್ದಿರಬಹುದು ಎಂದುಕೊಂಡೆ. ಆದರೆ ಎರಡು ದಿನ ನಂತರ ಬೆಲಗ್ಗೆ ನೋಡುತ್ತೇನೆ  ಮೈಮೇಲೆ ಭಸ್ಮ ಬಳಿದುಕೊಂಡು ಕಪ್ಪು ವಸ್ತ್ರ ಧರಿಸಿ ಕಂಡುಬರುತ್ತಾನೆ. ದಿನದ ಬಹುಪಾಲು ಸಮಯ ನಶೆಯಲ್ಲೇ ಇರುವ ಚೆನ್ನಪ್ಪ ಈಗ ಮಾಲಾಧಾರಿಯಾಗಿ ಗುಮ್ಮನೇ ಕುಳಿತಿದ್ದ. ಎರಡು ದಿನ ಅದಾಗಲೇ ಮದ್ಯವಿಲ್ಲದೆ ಕಳೆದಿದ್ದ. ಅಯ್ಯಪ್ಪನ ಮಹಿಮೆ ಈ ಮಟ್ಟಿಗಂತೂ ಅಪಾರ ಎಂದು ಒಪ್ಪಿಕೊಳ್ಳಲೇ ಬೇಕು. 

ಚಿತ್ರ ಕೃಪೆ ಅಂತರ್ಜಾಲದಿಂದ

ಚೆನ್ನಪ್ಪನದ್ದು ಪುಟ್ಟ ಸಂಸಾರ. ಗೂಡಿನಂತೆ ಇರುವ ಮನೆಯಲ್ಲಿ ವಾಸ. ಹೈಸ್ಕೂಲಿಗೆ ಹೋಗುವ ಹೆಣ್ಣು ಮಗಳೊಬ್ಬಳಿದ್ದಾಳೆ. ಯಾವುದೋ ಕೆಲಸಕ್ಕೆ ನಮ್ಮಲ್ಲಿಗೆ ಬಂದವಳಲ್ಲಿ ಒಂದು ದಿನ ಆಕೆಯ ಅಪ್ಪನ ಬಗ್ಗೆ ಕೇಳಿದ್ದೆ,  ಕುಡಿಯದೇ ಇದ್ದರೆ ಅಪ್ಪ ಒಳ್ಳೆಯವರು ಅಂತ ಆಕೆಯೇ ಹೇಳಿದ್ದಳು. ಏನು ಮಾಡುವ ಕುಡಿತ ಒಂದು ಇಲ್ಲದೇ ಇದ್ದರೆ ಅಪ್ಪ ಚಿನ್ನದಂತಹ ಮನುಷ್ಯ.  ಕುಡಿತಕ್ಕಾಗಿ ಒಳ್ಳೆಯತನವನ್ನು ಬಲಿಕೊಡುವ ಚೆನ್ನಪ್ಪನಂತಹ ವ್ಯಕ್ತಿಗಳು ನಮ್ಮ ಸುತ್ತ ಮುತ್ತ ಬಹಳಷ್ಟು ಮಂದಿ ಇದ್ದಾರೆ. ಅಂತಹ ಚೆನ್ನಪ್ಪ ಈಗ ಹೊಸ ಅವತಾರದಲ್ಲಿ ಕಂಡಿದ್ದಾನೆ. ಕಳೆದೆರಡು ದಿನ ಆತನ ಮನೆಯಲ್ಲಿ ಒಂದಷ್ಟು ಶಾಂತಿ ನೆಲಸಿದೆ. ದೈವ ಭಕ್ತಿ ಯಾವ ಪ್ರಚೋದನೆಯನ್ನು ಒದಗಿಸಿಬಿಡುತ್ತದೆ ಎಂದು ಅಚ್ಚರಿಯಾಗುತ್ತದೆ. 

ಈಗಿಗ ನಮ್ಮ ಸುತ್ತ ಮುತ್ತ ಬೆಳಗ್ಗೆ ಸಾಯಂಕಾಲ ಶರಣಮಯ್ಯಪ್ಪ ಎನ್ನುತ್ತಾ ಶರಣು ಕರೆಯುವುದು ಸರ್ವೇ ಸಾಮಾನ್ಯ. ಸಾಯಂಕಾಲ ಮೈಕ್ ಕಟ್ಟಿ ದೊಡ್ಡದಾಗಿ ಭಜನೆ ಮಾಡುವುದನ್ನು ಕಾಣಬಹುದು. ವಿಪರ್ಯಾಸ ಎಂದರೆ ಮಲೆಗೆ ಹೋಗಿ ಬಂದು ಮಾಲೆ ಕಳಚಿದ ಒಡನೆ ಅದುವರೆಗೆ ಇದ್ದ ಪರಮಾತ್ಮ ಎಲ್ಲಿ ಮಾಯವಾಗಿಬಿಡುತ್ತಾನೆ ಎಂದು ಅಚ್ಚರಿಯಾಗುತ್ತದೆ. ಮಾಲೆ ಧರಿಸಿ ಒಂದೆರಡು ದಿನಕ್ಕೆ ಸೀಮಿತವಾಗುವ ದೈವ ಭಕ್ತಿ ಮತ್ತೆ ಮಾಯವಾಗಿ ಯಥಾಪ್ರಕಾರ ತಾಮಸಗುಣ ತಾಂಡವವಾಗುತ್ತದೆ. ಶರಣಮಯ್ಯಪ್ಪಾ ಎಂದು ಪರಮ ಭಕ್ತಿಯಿಂದ ಶರಣು ಕರೆಯುವುದನ್ನು ಕಾಣುವಾಗ ಮನುಷ್ಯ ಬದಲಾಗಿ ಬಿಟ್ಟ ಎಂಬ ಭ್ರಮೆ ಹುಟ್ಟಿಸುತ್ತದೆ.  ಅದು ಕೇವಲ ಕ್ಷಣಿಕವಾಗಿಬಿಡುವಾಗ ಈ ಭಕ್ತಿಯಿಂದ ಏನು ಪ್ರಯೋಜನ  ಎಂದು ಚಿಂತಿಸುವಂತಾಗುತ್ತದೆ.  ಚೆನ್ನಪ್ಪ ಈಗ ಮಾಲೆ ಹಾಕಿದ್ದಾನೆ. ಕಪ್ಪು ವಸ್ತ್ರ ಧರಿಸಿದ್ದಾನೆ. ಕೆಲವು ದಿನ ಅಷ್ಟೆ ನಂತರ ಯಥಾ ಪ್ರಕಾರ ಆ ಜಗಲಿಯಲ್ಲಿ ಮತ್ತೆ ಬೈಗುಳದ  ಕಿರುಚುವಿಕೆ  ಕೇಳಿಸುತ್ತದೆ. 

ನಮ್ಮಲ್ಲಿ ಒಳ್ಳೆಯ ತನ ಎಂಬುದು ಕೇವಲ ಕೆಲವು ಘಳಿಗೆಗಳಿಗೆ ಸೀಮಿತವಾದರೆ ಸಾಕೇ? ನಮ್ಮ ಸದ್ವರ್ತನೆಗೂ ನಾವು ಅವಧಿಯನ್ನು ಮೀಸಲಿರಿಸುತ್ತೇವೆ ಎಂದರೆ ನಾವು ಕೆಟ್ಟವರಾಗಿ ಉಳಿದು ಅದೇ ನಮ್ಮ ಸಹಜಗುಣವಾಗಿ ಅದುವೇ  ಅಂತರಂಗದ ಬಯಕೆಯಾಗಿರ ಬೇಕು. ಒಳ್ಳೆಯವರಾಗುವ ಅವಕಾಶವಿದ್ದರೂ ನಾವು ಕೆಟ್ಟವರಾಗಿಯೇ ಇರುವುದನ್ನು ಬಯಸುತ್ತೇವೆ ಎಂದರೆ ಅದು ದುರ್ದೈವ.   ಇಲ್ಲವಾದರೆ ಅದಕ್ಕೆ ಅವಧಿಯಾದರು ಯಾಕೆ ಬೇಕು? ಸೂರ್ಯ ಉದಿಸಿ ಅಸ್ತಮಿಸುವಂತೆ ನಮ್ಮ ವ್ಯಕ್ತಿತ್ವವೂ ಉದಿಸಿ ಅಸ್ತಮಿಸುವ ಸ್ವಭಾವಕ್ಕೆ ಒಳಗಾಗುತ್ತದೆ. 

ನಮ್ಮ ಮನೆಯ ಸುತ್ತ ಮುತ್ತ ಈ ಚಳಿಗಾಲದ ಅವಧಿಯಲ್ಲಿ ಹಲವರು ಮಾಲೆ ಹಾಕಿ ವೃತ ನಿಷ್ಠರಾಗುತ್ತಾರೆ. ಬೆಳಗ್ಗೆ ಸಾಯಂಕಾಲ ದೇವರ ಭಜನೆ ಶರಣು ಕರೆಯುವುದು ಕೇಳುತ್ತಿರುತ್ತದೆ. ಅಬ್ಬಾ ಇಷ್ಟಾದರೂ ಸತ್ಕರ್ಮ ಮಾಡುವ ಪ್ರೇರಣೆ ಬರುತ್ತದಲ್ಲ ಎಂದು ಸಹಜವಾಗಿ ಅಂದುಕೊಳ್ಳಬೇಕು. ಅದೂ ಶಬರಿ ಮಲೆಯ ಆ ಜನಸಂದಣಿ ಕಾಣುವಾಗ  ಕೇವಲ ಕೆಲವು ಘಳಿಗೆಗಳ ಸುಖಕ್ಕೆ ಮನುಷ್ಯ ಇಷ್ಟೊಂದು ಹಾತೊರೆಯುತ್ತಾನಲ್ಲಾ ಅದೊಂದು ವಿಚಿತ್ರ. ನಾನಂತೂ ಆ ಜನ ಸಂದಣಿಯಿಂದ ಆದಷ್ಟೂ ದೂರವಿದ್ದು ಏಕಾಂತದಲ್ಲೇ ಪರಮಾತ್ಮನ ಅನುಭವವನ್ನು ಅನುಭವಿಸುವುದರಲ್ಲಿ ಆಸಕ್ತ. ಹಾಗಾಗಿ ಇದೆಲ್ಲ ವಿಚಿತ್ರವಾಗಿ ಕಾಣುತ್ತೇನೆ. ಜಾತಿ ಧರ್ಮ  ಧನಿಕ ಬಡವ ಎಲ್ಲ ಭಾವವನ್ನು ಬದಿಗಿಟ್ಟು ಕೇವಲ ತತ್ವಮಸೀ ಎಂಬ ಧ್ಯೇಯದಲ್ಲಿ ಕೆಲವು ದಿನಗಳ ಮಟ್ಟಿಗೆ ಎಲ್ಲ ಲೌಕಿಕ ಚಿಂತೆಯಿಂದ ದೂರವಿದ್ದು ವೃತ ನಿಷ್ಠರಾಗುವುದು ಎಂದರೆ ಮನುಷ್ಯನ ಅಂತರಂಗದಲ್ಲಿ ಸತ್ ಎಂಬುದು ಬರಿದಾಗಲಿಲ್ಲ ಎಂಬುದರ ಸಂಕೇತ. ಆದರೆ ಇದು ಕೇವಲ ಒಂದಿಷ್ಟು ಅವಧಿಗೆ ಸೀಮಿತವಾಗುವಾಗ ಹೀಗಿದ್ದರೆ ಸಾಕೇ ಎಂಬ ಯೋಚನೆಯೂ ಬಂದು ಬಿಡುತ್ತದೆ. 

ಶಬರಿ ಮಲೆಯ ವೃತದ ಅವಧಿಯಲ್ಲಿ ಪ್ರತಿ ನಿತ್ಯ ಅಲ್ಲಲ್ಲಿ ಸ್ವಾಮಿಯ ಶರಣು ಕರೆಯುವುದನ್ನು ಕೇಳುತ್ತೇವೆ. ಮುಂಜಾನೆ ಸ್ನಾನ ಮಾಡುವುದು ಒಂದೆಡೆಯಾದರೆ ಸಾಯಂಕಾಲ ಭಜನೆ ಪೂಜೆಯಲ್ಲಿ ವ್ಯಸ್ತರಾಗುವುದು ಇನ್ನೊಂದೆಡೆ. ಆದರೆ ಇವುಗಳೆಲ್ಲ ಕೆಲವು ದಿನಗಳಿಗಷ್ಟೇ ಸೀಮಿತ. ಮತ್ತೆ ಯಥಾಪ್ರಕಾರ ದೈವಿ ಭಾವ ಮಾಯವಾಗಿ ತಾಮಸೀ ಭಾವ ನೆಲೆಯಾಗುತ್ತದೆ.  ಈಗ ಕಾಣುವ ಶಿಸ್ತು ಆ ಸಂಸ್ಕಾರದ ನೆನಪು ಇಲ್ಲದಂತೆ ಮನುಷ್ಯ ಪಾತ್ರ ಬದಲಿಸಿ ಬಿಡುತ್ತಾನೆ. ಜೀವನ ಎಂಬುದು ನಾಟಕ ಎಂದು ಹೇಳುತ್ತಾರೆ. ಇದರಲ್ಲಿ ನಾಟಕ ಯಾವುದು ಎಂದು ಪ್ರಶ್ನೆ ಮೂಡುತ್ತದೆ. 

ದಿನಚರಿ ಎಂಬುದು ಮನುಷ್ಯನ ಸಂಸ್ಕಾರದ ಪ್ರತಿಬಿಂಬ. ಸತ್ ಸಂಸ್ಕಾರ ರೂಪುಗೊಳ್ಳುವುದು ಉತ್ತಮ ದಿನಚರಿಯಿಂದ. ಅಲ್ಲಿ ನಾವು  ಉತ್ತಮವಾದ ಕರ್ಮಗಳನ್ನುಎಷ್ಟು  ಅನುಷ್ಠಾನ ಮಾಡುತ್ತೇವೆಯೋ ಅದುವೆ ನಮ್ಮಲ್ಲಿ ಶಾಶ್ವತವಾಗಿ ನೆಲೆಯಾಗುತ್ತದೆ. ಕೆಲವು ದಿನಕ್ಕೆ ಮಾತ್ರ ಸೀಮಿತವಾಗುವ ಭಜನೆ ಪರಮಾತ್ಮನ ಆರಾಧನೆ ನಂತರ ಅದು ಇಲ್ಲ ಎಂದರೆ ಹರಿದ ತಂತಿಯ ಶ್ರುತಿಯಾಗುತ್ತದೆ. ಯಾವಾಗಲೋ ಒಂದು ದಿನ ಆಡಂಬರದಿಂದ ಅದ್ಧೂರಿಯಿಂದ ಆಚರಿಸುವ ಸತ್ಯನಾರಾಯಣ ವೃತಕ್ಕಿಂತ, ನಿತ್ಯ ಒಂದು ದೀಪ ಹಚ್ಚಿ ನಮೋ ನಾರಾಯಣ ಎನ್ನುವುದರಲ್ಲಿ ಹೆಚ್ಚು ಪ್ರಭಾವವಿದೆ. ಹೆಚ್ಚು ಶಕ್ತಿಯಿದೆ. ನಿತ್ಯವೂ ಪರಮಾತ್ಮನ  ಬಳಿಯಲ್ಲೇ ಇರುವ ಅವಕಾಶವಿರುತ್ತದೆ. ಪರಮಾತ್ಮನ ಪ್ರಭಾವಲಯದಿಂದ ಅದು ದೂರಕ್ಕೆ ಒಯ್ಯುವುದಕ್ಕೆ ಬಿಡುವುದಿಲ್ಲ.  ಆಡಂಬರದ ಆರಾಧನೆಯಲ್ಲಿ ಕೇವಲ ಅಡಂಬರದತ್ತ ಗಮನವನ್ನು ಹರಿಯುತ್ತದೆ. ಪರಮಾತ್ಮ ದೂರವೇ ಉಳಿದು ಬಿಡುತ್ತಾನೆ. ಸರಳವಾಗಿದ್ದಷ್ಟೂ ಪರಮಾತ್ಮನ ಮೇಲೆ ಗಮನ ಗಾಢವಾಗುತ್ತದೆ. ನಿಂತ ನೀರು ಕಲ್ಮಷವನ್ನೇ ತುಂಬಿಕೊಂಡಿದ್ದರೆ ಹರಿವ ನೀರು ಸದಾ ಶುದ್ದವಾಗಿರುತ್ತದೆ. ಈ ಹರಿಯುವುದಿಕೆ ಎಂಬುದು ಚೈತನ್ಯದ ಸಂಕೇತ. 

ಶಬರಿಮಲೆಗೆ ಹೋಗಿ ಬಂದು ವೃತ ಸಮಾಪ್ತಿ ಮಾಡಿ ಮಾಲೆ ಕಳಚಿದರೂ ಆ ಜೀವನ ಶೈಲಿಯಿಂದ ಹೊರ ಬಾರದ ಎಷ್ಟೋ ವ್ಯಕ್ತಿಗಳಿದ್ದಾರೆ. ಅವರು ಆ ಜೀವನದ ಮೌಲ್ಯವನ್ನು ಅರ್ಥಮಾಡಿಕೊಂಡಿರುತ್ತಾರೆ. ಆದರೆ ವೃತ ಎಂಬುದು ಹರಕೆ ಸಲ್ಲಿಸುವುದಕ್ಕೆ ಸೀಮಿತವಾಗುವಾಗ ಉತ್ತಮವಾದ ಅಂಶಗಳನ್ನು ನಾವು ಬದಿಗಿಟ್ಟು ಅದಕ್ಕೆ ತುಕ್ಕು ಹಿಡಿಸಿದಂತೆ, ಮತ್ತೆ ಅದು ಸವಕಲಾಗಿಯೆ ಇರುತ್ತದೆ. ವಾಸ್ತವದಲ್ಲಿ ಉತ್ತಮ ಕಾರ್ಯಗಳು ಅಷ್ಟಾದರೂ ನೆರವೇರುತ್ತದಲ್ಲಾ ಎಂಬ ಅಲ್ಪ ತೃಪ್ತಿಯಲ್ಲೇ  ಉಳಿದು ಬಿಡುತ್ತದೆ. ಆದರೆ ಆಡಂಬರ ಎಂಬುದು ಅಷ್ಟಾದರೂ ಎಂಬ ಪರಿಧಿಯಲ್ಲಿ ನಿಲ್ಲುವುದಿಲ್ಲ. ಅದಕ್ಕೆ ಪರಿಶ್ರಮ ಹೆಚ್ಚು ವಿನಿಯೋಗಿಸಲ್ಪಡುತ್ತದೆ. 

ಕೆಲವು ದಿನ ಕಳೆದು ನೋಡಿದರೆ ಚೆನ್ನಪ್ಪ ಮತ್ತೆ ನಶೆಯ ತೀರ್ಥಕ್ಕೆ ಶರಣಾಗುತ್ತಾನೆ, ವೃತದಲ್ಲಿ ಸೇವಿಸಿದ ತೀರ್ಥ ಮರೆತೇ ಹೋಗಿರುತ್ತದೆ. ಹಲವರು ಶಬರಿ ಮಲೆಗೆ ಹೋಗಿ ಬರುವಾಗ ಮಾಹೆ ಯಲ್ಲಿ ಒಂದು ಘಳಿಗೆ ವಿರಮಿಸಿದಂತೆ ಭಕ್ತಿ ಎಂಬುದು ಬೇಕಾದಾಗ ಚಲಾಯಿಸುವ ಯಂತ್ರದಂತೆ, ಅದು ಯಾಂತ್ರಿಕವಾಗಿಯೇ ಇರುತ್ತದೆ. ಅದು ಸಹಜವಾಗಿ ಹೃದಯಕ್ಕೆ ಹತ್ತಿರವಾಗುವುದಿಲ್ಲ. ಅಪ್ಪ ಹೊಸ ಉಡುಗೆಯನ್ನು ತಂದು ಕೊಟ್ಟಂತೆ ಭಗವಂತ ನಮಗ ಒಳ್ಳೆಯದಾಗುವ ಅವಕಾಶವನ್ನು ಕೊಡುತ್ತಾನೆ, ಆದರೆ ನಾವು ಅಪ್ಪ ಕೊಟ್ಟ ಅಂಗಿಯನ್ನು ವಿಶೇಷ ದಿನಕ್ಕೆ ತೆಗೆದು ಮೀಸಲಿರಿಸಿದಂತೆ...ಈ ಒಳ್ಳೆಯದಾಗುವ ಅವಕಾಶವನ್ನೂ ಮೀಸಲಿರಿಸಿಬಿಡುತ್ತೇವೆ. ನಿತ್ಯ ಮತ್ತೆ ಹರಿದ ಅಂಗಿಯನ್ನು ತೊಟ್ಟುಕೊಳ್ಳುತ್ತೇವೆ. ನಮಗೆ ಅದೇ ಸಹಜವಾಗಿ ಸೌಕರ್ಯವನ್ನು ಒದಗಿಸಿಬಿಡುತ್ತದೆ.  


Saturday, December 23, 2023

ವೈಕುಂಠ ದರ್ಶನ

         ಇಂದು ವೈಕುಂಠ ಏಕಾದಶಿ,  ಯಾವುದೋ ವಿಳಾಸ ಹುಡುಕುತ್ತಾ ಬೆಂಗಳೂರಿನ ಒಂದು ಕಡೆಯಲ್ಲಿ ರಸ್ತೆಯಲ್ಲಿ ಸುತ್ತಡುತ್ತಿರುವಾಗ ಒಂದು ದೇವಸ್ಥಾನ ಸಿಕ್ಕಿತು. ದೇವಾಲಯದ ಸುತ್ತ ಬಹಳಷ್ಟು ಜನಸಂದಣಿ ಇತ್ತು. ಕಾಲು ದಾರಿಯುದ್ದಕ್ಕೂ ಬಹಳ ದೂರದ ತನಕವು  ಸರದಿ ಸಾಲಿನಲ್ಲಿ ಜನಗಳು ನಿಂತಿದ್ದರು. ದೇವಸ್ಥಾನ ಹತ್ತಿರ ಬರುತ್ತಿದ್ದಂತೆ ಅಲ್ಲಿ ಇನ್ನೊಂದು ಫಲಕವಿತ್ತು. ಅದರಲ್ಲಿ ವಿಶೇಷ ಪ್ರವೇಶ...ನೂರು ರೂಪಾಯಿ ಅಂತ ಬರೆದಿತ್ತು. ಎಲ್ಲೋ ತಿರುಪತಿಯಂತಹ ದೇವಸ್ಥಾನಗಳಲ್ಲಿ ನೋಡಿದ್ದೆ, ಅದು ಇಲ್ಲಿಯೂ ಇರುವುದು ಕಂಡು ಅಚ್ಚರಿಯಾಯಿತು. ಅಷ್ಟು ಮಾತ್ರವಲ್ಲ, ಒಳಗೆ ಕಾಣಿಕೆ ಹಾಕುತ್ತಿದ್ದಂತೆ ಮೈಕ್ ನಲ್ಲಿ ಇಂಥವರಿಂದ ಇಷ್ಟು ಹಣ ಅಂತ ಪ್ರಕಟಣೆ ಕೇಳಿಬರುತ್ತಿತ್ತು.  ಭಗವಂತನ ಬಳಿಯಲ್ಲಿ ದೇವರ ಮಹಿಮೆಗಿಂತಲೂ ಕಾಂಚಾಣದ ಮಹಿಮೆ ದೊಡ್ಡದಾಯಿತೆ ಎಂದು ಕೊಂಡೆ. ದೇವಾಲಯದ ಹಣ ಸಂಗ್ರಹದ ಬಗ್ಗೆ ಅದನ್ನು ಸಲ್ಲಿಸುವ ಬಗ್ಗೆ ಆಕ್ಷೇಪವೇನೂ ಅಲ್ಲ, ಅವುಗಳೆಲ್ಲ ಅವರವರ ಖಾಸಗೀತನ ವಿಚಾರಗಳು. ನೂರು ರೂಪಾಯಿ ಸಲ್ಲಿಸಿದರೂ ಅದನ್ನು ಮೈಕ್ ನಲ್ಲಿ ಕೊಟ್ಟವರ ಹೆಸರಿನ  ಜತೆಗೆ ಕೂಗಿ ಹೇಳುತ್ತಿದ್ದರು.  ಅದನ್ನು ಕೇಳುವಾಗ ಕಡಿಮೆ ಕಾಣಿಕೆ ಹಾಕಿದವನಿಗೆ ಏನು ಅನ್ನಿಸಬಹುದು?  ಇಲ್ಲೂ  ಧನಿಕ ಬಡವ ಎಂಬ ಅಸಮಾನತೆ ದೇವಸ್ಥಾನದಲ್ಲಿದೆ.  ಅದು ಸರಿಯೋ ತಪ್ಪೋ ವಿಷಯವಲ್ಲ. ದೇವಸ್ಥಾನದ ಪ್ರವೇಶದಲ್ಲಿ ಜಾತಿಯ ಅಸಮಾನತೆ, ಎಲ್ಲರಿಗೂ ಸಮಾನವಾಗಿ ಪ್ರವೇಶ ಸಿಗಬೇಕು ಎಂಬ ಕೂಗು ಹೋರಾಟ ದಿನವೂ ಕಾಣುತ್ತೇವೆ. ಆದರೆ ಈ ಅಸಮಾನತೆಯ ಬಗ್ಗೆ ಹೋರಾಟ ಯಾಕಿಲ್ಲ ಎಂಬುದು ಯೋಚಿಸುವಂತಾಗುತ್ತದೆ. ಧರ್ಮ ಜಾತಿಯ ಬಗ್ಗೆ ಹೋರಾಡುವ ಹುಮ್ಮಸ್ಸು ಈ ಅಸಮಾನತೆಯಲ್ಲಿ ವ್ಯಕ್ತವಾಗುವುದಿಲ್ಲ.   ದೇವರ ಎದುರು ಎಲ್ಲರೂ ಸಮಾನರು. ಈ ತತ್ವದ ಬಗ್ಗೆ   ಚಿಂತನೆ ಹರಿಸಬೇಕು.  ಹಲವು ದೇವಸ್ಥಾನಗಳಲ್ಲಿ ವಿ ಐ ಪಿ ಗಳು ಬರುವಾಗ ಜನಸಾಮಾನ್ಯ ಸರದಿಯಲ್ಲೇ ಬಾಕಿಯಾಗಿಬಿಡುತ್ತಾನೆ. ಹಾಗೆ ಬಂದು ಹೀಗೆ ಹೋಗುವ ವಿ ಐ ಪಿಗಳನ್ನು ನೋಡುವಾಗ ಕೇವಲ ನಿಟ್ಟುಸಿರಿನ ಹಕ್ಕು ಮಾತ್ರ ಜನಸಾಮಾನ್ಯನಿಗೆ ಇರುತ್ತದೆ. 


ಈಗೀಗ ದೇವಸ್ಥಾನಕ್ಕೆ ಹೋಗುವ ಆಸಕ್ತಿ ನನ್ನಲ್ಲಿ ಕಡಿಮೆಯಾಗಿದೆ. ಅದಕ್ಕೆ ಕಾರಣಗಳು ವಿಶ್ಲೇಷಿಸುತ್ತಾ ಹೋದರೆ ಸಾಕಷ್ಟು ಸಿಗುತ್ತದೆ. ಹಾಗಾಗಿ ಏನಿದ್ದರೂ ಮನೆಯಲ್ಲೇ ಜಪ ತಪ ಧ್ಯಾನ ಇಷ್ಟಕ್ಕೇ ಸೀಮಿತವಾಗಿ ದೇವರನ್ನು ನಿತ್ಯ ಕಾಣುತ್ತೇನೆ.  ಇಲ್ಲಿ ಸಿಗುವ ಶಾಂತಿ ಅತ್ಯಂತ ಶ್ರೇಷ್ಠ ಎಂಬುದು ನನ್ನ ಭಾವನೆ.  ದೇವಸ್ಥಾನಕ್ಕೆ ಹೋದರೆ ಮನಃ ಶಾಂತಿಗಿಂತ ಮನಸ್ಸಿನ ನೆಮ್ಮದಿಯೇ ಹಲವು ಸಲ ಕಳೆದು ಹೋಗುತ್ತದೆ. ದೇವಸ್ಥಾನಕ್ಕೆ ಹೋದರೂ ಹೆಚ್ಚು ಜನಸಂದಣಿಯಿಲ್ಲದ  ಬಹಳ ಶಾಂತ ಪರಿಸರದ ದೇವಸ್ಥಾನಕ್ಕೆ ಹೋಗುವುದಕ್ಕೆ ಆದ್ಯತೆ ಕೊಡುತ್ತೇನೆ. ಊಟ ಪ್ರಸಾದ ಇದಾವುದರ ಬಗ್ಗೆಯೂ ನಿರೀಕ್ಷೆ ಇರುವುದಿಲ್ಲ. ಕೇವಲ ಶಾಂತ ಸ್ವರೂಪದ ಭಕ್ತಿ ಮಾತ್ರ.  ಹಲವು ಸಲ ಊರಿನ ದೇವಸ್ಥಾನದ ಭೇಟಿಯಲ್ಲಿ ಭಕ್ತಿಗಿಂತಲೂ  ಭಾವನಾತ್ಮಕ ಸಂಬಂಧಗಳೇ ನನಗೆ ಪ್ರಧಾನವಾಗುತ್ತವೆ. ಬಾಲ್ಯದಿಂದಲೂ ಸಂಬಂಧವಿರಿಸಿಕೊಂಡ ಕೆಲವೇ ಕೆಲವು ದೇವಸ್ಥಾನಗಳ ದರ್ಶನದಲ್ಲಿ ಭಕ್ತಿಗಿಂತಲು ಭಾವನೆಗಳೇ ಹತ್ತಿರವಾಗುತ್ತದೆ. ಹೀಗೆ  ಹಲವು ದೇವಸ್ಥಾನಗಳಿಗೆ ಹೋದರೂ ಕಾಣಿಕೆ ಹಾಕುವುದು ತೀರ ಅಪರೂಪ. ಯಾಕೆಂದರೆ ಕಾಣಿಕೆ ತಟ್ಟೆಗೆ ಹಾಕುವುದೋ ಇಲ್ಲ ಹುಂಡಿಗೆ ಹಾಕುವುದೋ ಎಂಬ ದ್ವಂದ್ವದಲ್ಲಿ ದೇವಸ್ಥಾನದಿಂದ ಹೊರಬಂದಾಗಿರುತ್ತದೆ. ನನಗೆ ಯಾವುದೇ ಕಾರ್ಯದಲ್ಲಿ ದ್ವಂದ್ವ ಕಾಡುತ್ತಿದ್ದರೆ ...ನಾನು ಆ ಕಾರ್ಯವನ್ನು ಮಾಡದೇ ಸುಮ್ಮನಿದ್ದು ಬಿಡುತ್ತೇನೆ. ನನಗೆ  ದ್ವಂದ್ವದ ತುಮುಲದಿಂದ ಹೊರಬರುವ ಸುಲಭ ದಾರಿ ಇದು. ದೇವಸ್ಥಾನಕ್ಕೆ ಹೋದದ್ದಕ್ಕೆ  ಏನಾದರೂ ಸೇವೆ ಮಾಡಬೇಕು. ಇಲ್ಲಿ ನಿಶ್ಚಿತ ಉದ್ದೇಶ ಏನೂ ಇರುವುದಿಲ್ಲ. ದೈವಾನುಗ್ರಹಕ್ಕೆ ಒಂದಿಷ್ಟಾದರೂ ನಿಷ್ಠೆ ಸಲ್ಲಿಕೆಯಾಗಬೇಕಲ್ಲ? ಹಾಗೆ ಸೇವಾದರದ ಪಟ್ಟಿ ನೋಡಿ ಒಂದು ವಿಶೇಷ ಸೇವೆಯ ರಶೀದಿಯನ್ನೇ ಪಡೆಯುತ್ತೇನೆ. ಈಗ ಕಟೀಲಿಗೆ ಹೋದರೆ ಹೂಪೂಜೆ, ಮಧೂರಿಗೆ ಹೋದರೆ ಉದಯಾಸ್ತಮಾನ ಹೀಗೆ ವಿಶೇಷ ಸೇವೆಗಳ ರಶೀದಿ ಪಡೆದು ಅಲ್ಲಿ ಸಂಕಲ್ಪ ಮಾಡುವಾಗ ಅರ್ಚಕರು ಕೇಳುತ್ತಾರೆ , ಏನು ಪ್ರಾರ್ಥನೆ?  ಆಗ ಏನೂ ಅಂತ ಪ್ರಾರ್ಥನೆ ಮಾಡಲಿ? ದೇವರಲ್ಲಿ ಬೇಡಿಕೆ ಸಲ್ಲಿಸುವುದಕ್ಕೆ ದೊಡ್ಡ ಪಟ್ಟಿಯೇ ಇರುತ್ತದೆ.  ಆ ಪಟ್ಟಿ ಬಹಳ ಕಾಲದಿಂದಲೂ ಹಾಗೆ ಇದೆ.  ಅದಕ್ಕೆ ಹಲವಾರು ಸಲ ಹರಕೆ ಸಲ್ಲಿಸಿಯಾಗಿರುತ್ತದೆ.  ಆದರೆ ಬಹಳಷ್ಟು ಬೇಡಿಕೆಗಳು ಈಡೇರದೆ ಹಾಗೇ ಉಳಿದುಕೊಂಡಿದೆ. ಯಾಕೋ ಆ ಬಗ್ಗೆ ದೈವಾನುಗ್ರಹದ ಕೊರತೆಯನ್ನು ಒಪ್ಪಿಕೊಂಡು ನಮ್ಮ ಕರ್ಮ ನಾವು ಮಾಡಬೇಕು ಎಂಬ ಭಾವದಲ್ಲಿ ಸಲ್ಲಿಸಿ ಪ್ರಸಾದ ಪಡೆಯುತ್ತೇನೆ.  ಹರಕೆಯ ಪಟ್ಟಿ ದೊಡ್ಡದಿದ್ದರೂ  ಅವೆಲ್ಲವನ್ನು ಒಂದೇ  ಸಲಕ್ಕೆ ಹೇಳುವುದಕ್ಕೆ ಸಾಧ್ಯವಿಲ್ಲ. ಕೊನೆಗೆ ಯಾವುದು ನೆನಪಾಗುತ್ತದೆ ಅದನ್ನು ಸಲ್ಲಿಸಿಬಿಡುತ್ತೇನೆ. ಈಗೀಗ ಪಟ್ಟಿಯ ಹಲವು ಬೇಡಿಕೆಗಳು ಮರೆತು ಹೋಗಿವೆ. ದೈವಾನುಗ್ರಹ ಇದ್ದರೆ ದೇವರು ಅದನ್ನು ಈಡೇರಿಸುತ್ತಾನೆ  ಎಂಬ ನಂಬಿಕೆ ಹಾಗೆ ಉಳಿದುಕೊಂಡಿದೆ.  ಈಗ ಹರಕೆ ಬೇಡಿಕೆಯ ಬಗ್ಗೆ ಚಿಂತಿಸುವುದನ್ನು ಬಿಟ್ಟು ಬಿಟ್ಟಿದ್ದೇನೆ. ಪ್ರಾಮಾಣಿಕವಾದ ಭಕ್ತಿಯಷ್ಟೆ ಆಧಾರವಾಗುತ್ತದೆ. ದಿನವು ಧ್ಯಾನದಲ್ಲಿ ವೈಕುಂಠ ದರ್ಶನವಾಗುವಾಗ....ಸಿದ್ದ ಪಡಿಸಿದ ಅನ್ನ ಆಹಾರ ಮನೆಗೆ  ಬಂದಂತೆ ಕೇವಲ ಭಕ್ತಿಯ ವಿನಿಯೋಗದಿಂದ ದೇವರು ಸದಾ ಮನಸ್ಸಿಗೆ ಹತ್ತಿರವಾಗಿರುತ್ತಾನೆ. ಇದಕ್ಕಿಂತ ಹೆಚ್ಚಿನ ಯಾವ ಬೇಡಿಕೆಯೂ  ನಿರೀಕ್ಷೆಯು ಇರುವುದಿಲ್ಲ. 

Sunday, December 17, 2023

ದೇವರು ಒಂದು ಸಮಸ್ಯೆ

 

"ದೇವರು ಎಂಬುದು ನಮ್ಮ ಅಹಂಕಾರವನ್ನು ದೂರ ಮಾಡುವುದಕ್ಕಿರುವ ಸಾಧನ. "

ಹಿಂದೆ ನಮ್ಮಜ್ಜನಲ್ಲಿ‌  ಅವರ ಜತೆ ಪೌರೋಹಿತ್ಯ ದ ಜೊತೆಯಲ್ಲಿ ಇರುವಾಗ ಒಂದು ಪ್ರಶ್ನೆ ಕೇಳಿದ್ದೆ. ಯಾವುದೇ ಪೂಜೆ ಹವನ ಸತ್ಕಾರ್ಯದಲ್ಲಿ  ಮೊದಲು ಗಣಪತಿ ಪೂಜೆ ಮಾಡುವುದು ಸಂಪ್ರದಾಯ. ತೆಂಗಿನ ಕಾಯಿ ಅಕ್ಕಿ ಇಟ್ಟು ಗಣಪತಿ ಅವಾಹನೆ ಮಾಡಿ  ಗಣಪತಿ ಪೂಜೆ ಮಾಡುವುದು ಶಾಸ್ತ್ರ ವಿಧಿ. ಗಣಪತಿ ಪೂಜೆಯಲ್ಲಿ ಮೂರ್ತಿ ಪ್ರತಿಷ್ಠೆ ಯಾಕಿಲ್ಲ? ಶಾಸ್ತ್ರೀಯವಾದ ಉತ್ತರ ಏನೋ, ಅದರೆ ಅವರು ಒಂದು ಸರಳವಾದ ಉತ್ತರ ಹೇಳಿದರು. ದೇವರು ಯಾವುದೇ ಆದರೂ ಅದು ವಿಸರ್ಜನೆಯಾಗಬೇಕು. ಅದರ ಆವಾಹನೆ ಅವಧಿ ಸೀಮಿತವಾಗಿರುತ್ತದೆ. ಅದರಿಂದ ಆಚೆಗೆ ಅದರ ಪ್ರಭಾವ ಶಕ್ತಿಯನ್ನು ತಡೆದುಕೊಳ್ಳುವ ಶಕ್ತಿ ಮನುಷ್ಯ‌ಮಾತ್ರರಿಗೆ ಸಾಧ್ಯವಿಲ್ಲ. ‌ಅದೊಂದು ಸಮಸ್ಯೆಯಾಗಿ ಪೀಡಿಸುತ್ತದೆ. 

ಅಜ್ಜನ ಉತ್ತರಕ್ಕೆ ವಿವರಣೆ ಕೊಡುವ ಅಥವಾ ಅದನ್ನು ಚರ್ಚಿಸುವ ತಿಳುವಳಿಕೆ ನನಗಿಲ್ಲ. ಆ ವಯಸ್ಸಿನಲ್ಲಿ ಅದನ್ನು ಅರ್ಥವಿಸುವ ಸಾಮಾರ್ಥ್ಯವೂ ಇಲ್ಲ. ಆದರೆ ದೇವರೂ ಒಂದು ಸಮಸ್ಯೆಯಾಗಿ ಬಿಡುತ್ತದೆ ಎಂಬುದು ಹಲವು ಅರ್ಥ ಆಯಾಮಗಳಿಗೆ ಎಡೆ ಮಾಡಿಕೊಡುತ್ತದೆ. ಯಾವುದೇ ವಿಷಯ ನಮಗೆ ಅದರ ಅರಿವಿಲ್ಲದೆ ಇದ್ದರೆ ಅದು ಪ್ರಶ್ನೆಯಾಗಿ ಸಮಸ್ಯೆಯಾಗಿಬಿಡುತ್ತದೆ.  ಸಮಸ್ಯೆಯನ್ನು  ಪರಿಹರಿಸಿಕೊಳ್ಳುವುದು ಸಹಜವಾಗಿ ಬದುಕಿನ ಗುರಿಯಾಗಿಬಿಡುತ್ತದೆ. ಹಲವು ಸಮಸ್ಯೆಗಳು ಪರಿಹರಿಸಿಕೊಂಡರೂ ಕೆಲವು ಸಮಸ್ಯೆ ಸಮಸ್ಯೆಯಾಗಿಯೇ ಉಳಿದುಬಿಡುತವೆ. ಅದರಲ್ಲಿರುವ ಒಂದು ಸಮಸ್ಯೆಯೇ ದೇವರು ಎಂದು ಅಜ್ಜ ಹೇಳಿದುದರಲ್ಲಿ ಅತಿಶಯ ಏನೂ ಇರುವುದಿಲ್ಲ. ಯಾಕೆಂದರೆ ದೇವರು ಇದೊಂದು ಅರ್ಥಮಾಡಿಕೊಳ್ಳಲಾಗದ ಸಮಸ್ಯೆ.  ಬದುಕಿನುದ್ದಕ್ಕೂ ಇದರ ಬಗ್ಗೆ ಯೋಚಿಸಿದಷ್ಟೂ ಇದನ್ನು ಅರ್ಥವಿಸುವುದರಲ್ಲಿ ಎಡವಿಬೀಳುತ್ತೇವೆ. ಯಾವುದು ದೇವರು? ಕಣ್ಣಿಗೆ ಕಾಣದ ರೂಪವಿಲ್ಲದ ಭಾವವಿಲ್ಲದ ಗುಣಾವಗುಣಗಳಿಗೆ ಅತೀತವಾದ ಯಾವುದೂ ಅಲ್ಲದ ಯಾವುದೋ ಒಂದು ಆಗಿರುವ ಈ ವಿಸ್ಮಯ ವಸ್ತು ಎಲ್ಲೋ ಇದೆ ಎಂಬ ಅನುಭವದಲ್ಲಿ ಅದೊಂದು ಅರಿಯಲಾಗದ ಸಮಸ್ಯೆಯಾಗಿ ಬಿಡುತ್ತದೆ. ಯಾರದೋ ಒಂದು ವಸ್ತುವನ್ನು ಮನೆಯಲ್ಲಿಯೋ ಬಗಲಲ್ಲಿಯೋ ಇಟ್ಟುಕೊಂಡು ನಮ್ಮೊಂದಿಗೆ ಅವರೇ ಇದ್ದಾರೆ ಎಂದುಕೊಂಡು ತೃಪ್ತಿ ಪಡುವಂತೆ, ದೇವರನ್ನು ಯಾವುದೋ ರೂಪದಲ್ಲಿ ಕಂಡುಕೊಂಡು ಸಮಸ್ಯೆಯನ್ನು ಪರಿಹರಿಸುವ ತೃಪ್ತಿಯೊಂದಿಗೆ ಇದ್ದರೂ ಅಂತರಾತ್ಮ ಹೇಳುತ್ತದೆ. ಅದಲ್ಲ ಇನ್ನೊಂದು ಇದೆ ಮತ್ತೆ ಸಮಸ್ಯೆಯಾಗಿಯೇ ಉಳಿದು ಬಿಡುತ್ತದೆ. ಹಾಗಾಗಿ ಅಜ್ಜ ಹೇಳಿದ ಸರಳ ಉತ್ತರದಲ್ಲಿ ಅಗಾಧವಾದ ಅರ್ಥವನ್ನು ಅರ್ಥವಿಸಿಕೊಂಡಿದ್ದೇನೆ.  

ಜೀವನದಲ್ಲಿ ನಾವು ಬಹಳಷ್ಟನ್ನು ಗಳಿಸುತ್ತೇವೆ. ಸಂಪತ್ತು ಬಂಧುಗಳು ಸ್ನೇಹಿತರು ಶತ್ರುಗಳು...ಆದರೆ ಇದಾವುದನ್ನೂ ನಾವು ಉಳಿಸಿಕೊಳ್ಳುವುದಿಲ್ಲ. ಇದೆಲ್ಲವನ್ನು ಕಳೆದುಕೊಳ್ಳುತ್ತೇವೆ. ನಾವು ನಾವಾಗಿಯೇ ಉಳಿದುಬಿಡುತ್ತೇವೆ.  ಗಳಿಕೆ ಎಂದರೆ ಅದೊಂದು ಸಮಸ್ಯೆ.  ಸಮಸ್ಯೆಯನ್ನು ಕಳೆದುಕೊಳ್ಳಬೇಕು. ಬದುಕಿನ ತತ್ವ ಎಂದರೆ ಕಳೆದುಕೊಳ್ಳುವುದು. ಕಳೆದು ಕಳೆದು ಕ್ಷಯವನ್ನು ಅನುಭವಿಸುತ್ತಾ ಮೋಕ್ಷಗಮ್ಯವಾಗುದರಲ್ಲಿರುವ ತತ್ವವೆಂದರೆ ಅದು ಕಳೆದುಕೊಳ್ಳುವುದು. ಲೌಕಿಕ ಚಿಂತನೆಯಲ್ಲಿ ಎಲ್ಲವನ್ನೂ ಗಳಿಸುವತ್ತ ಗಮನಹರಿಸಿದರೆ ಗಳಿಸುತ್ತಾ ಗಳಿಸುತ್ತಾ  ಒಂದನ್ನು ಕೂಡಿಟ್ಟರೆ ಅದರಲ್ಲಿ ಮತ್ತೊಂದು ನಮಗರಿವಿಲ್ಲದೇ ನಾವು ಕಳೆದುಕೊಂಡುಬಿಡುತ್ತೇವೆ. ಗಳಿಸಿದ್ದನ್ನು ಕೂಡಿಡಬೇಕಿದ್ದರೆ ಮತ್ತೊಂದು ಕಳೆದುಕೊಳ್ಳಲೇಬೇಕು. ನಮಗೆ ಕೂಡಿಡಲು ಸೀಮಿತವಾದ ಜಾಗಮಾತ್ರ ಇರುತ್ತದೆ.  ಕ್ಷಯ ಎಂಬುದು ಬದುಕಿನ ಸಾರ್ವತ್ರಿಕ ತತ್ವ. ಎಲ್ಲವನ್ನು ಕಳೆದ ಮೇಲೆ ಸಿಗುವ ಒಂದು ಬಗೆಯ ಗಳಿಕೆ ಅದು ನಿರ್ದಿಷ್ಟವಾಗಿ ಅರಿವಿಲ್ಲದೇ ಇದ್ದರೂ ಎನೋ ಒಂದು ಗಳಿಸುತ್ತೇವೆ ಎಂಬ ನಂಬಿಕೆಯೇ ಬದುಕಿನ ಚೈತನ್ಯವಾಗಿರುತ್ತದೆ. ವರ್ತಮಾನದ ಒಂದೊಂದು ಘಳಿಗೆಗಳನ್ನು ಭೂತಕ್ಕೆ  ಸಲ್ಲಿಸಿ ಭವಿಷ್ಯದ ಅಂಗವನ್ನು ಗಳಿಸುತ್ತಾ ಸಾಗುವಾಗ ನಾವು ಕಳೆಯುವುದರ ಅರಿವೂ ಇರುವುದಿಲ್ಲ,  ಗಳಿಸಿದ ಅರಿವೂ ಇರುವುದಿಲ್ಲ ಮಾತ್ರವಲ್ಲ ವರ್ತಮಾನ ನಮ್ಮ ಕೈಯಲ್ಲಿಯೂ ಉಳಿಯುವುದಿಲ್ಲ. 

ದೇವೆರು ಎಂದರೆ ಕಣ್ಣಿಗೆ ಇಡುವ ಕನ್ನಡಕದಂತೆ. ಕಣ್ಣಿನ ಎದುರೇ ಇದ್ದರೂ ಅದು ಇಲ್ಲದ ಭ್ರಮೆಯನ್ನು ಸೃಷ್ಟಿಸುತ್ತದೆ. ಗಾಜಿನ ಬಣ್ಣ ಬದಲಾದಂತೆ ಕಾಣುವ ದೃಷ್ಟಿಯೂ ಬದಲಾಗುತ್ತದೆ. ನಮ್ಮಲ್ಲೇ ಇದ್ದರೂ ನಮ್ಮಲ್ಲಿ ಇಲ್ಲದ ಭ್ರಮೆಯನ್ನು ಸೃಷ್ಟಿಸುತ್ತದೆ.  ಮನಸ್ಸಿನಲ್ಲಿದ್ದ ದೇವರನ್ನು ನಾವು ಅರಿಯಬೇಕಾದರೆ ಎಲ್ಲವನ್ನೂ ಕಳೆದುಕೊಳ್ಳಬೇಕು. 

ಮೊದಲು ಋಷಿಗಳು ತಪಸ್ಸಿಗೆ ಕಾಡಿಗೆ ಹೋಗುತ್ತಿದ್ದರು. ಯಾಗ ಯಜ್ಞ ಪೂಜೆ ಹವನದಲ್ಲಿ ಕಾಣಿಸದ ದೇವರನ್ನು ಕಾಣುವುದಕ್ಕೆ ಕಾಡಿನಲ್ಲಿ ಹೋಗಿ ಏಕಾಂತದ ತಪಸ್ಸಿಗೆ ಕುಳಿತು ಬಿಡುತ್ತಿದ್ದರು. ಯಾಗ ಯಜ್ಞದಲ್ಲಿ ಸಿಗದ ಏಕಾಗ್ರತೆ ಕಾಡಿನ ಏಕಾಂತದಲ್ಲಿ ಸಿಗುತ್ತದೆ. ಯಾವ ನೈವೇದ್ಯ ಪೂಜೆ ಇಲ್ಲದೆ ಕೇವಲ ತಪಸ್ಸಿನಿಂದ ದೇವರನ್ನು ಕಾಣುತ್ತಾರೆ. ದೇವರು ಬಾಹ್ಯವಾದ ಯಾವ ಆಡಂಬರದಲ್ಲು ಇರುವುದಿಲ್ಲ, ಕೇವಲ ಅಂತರಂಗದ ಭಾವದಲ್ಲಿ ಆತನ ಅಸ್ತಿತ್ವ ಇರುತ್ತದೆ. ಪೂಜೆ ಪುನಸ್ಕಾರಗಳಲ್ಲಿ ಸಿಗದ ಏಕಾಗ್ರತೆ ಸುಮ್ಮನೆ ಕುಳಿತು ನಾಮಸ್ಮರಣೆ ಧ್ಯಾನದಿಂದ ದೇವರನ್ನು ಕಾಣುವುದಕ್ಕೆ ಸಾಧ್ಯವಿದೆ. ಇದರ ಅರ್ಥ ಪೂಜೆ ಪುನಸ್ಕಾರಗಳು ಅವಶ್ಯಕತೆ ಇಲ್ಲ ಎಂದಲ್ಲ, ಅವೆಲ್ಲ ಸಾಗುವ ಹಾದಿಯ ಪೂರಕ ಮಾಧ್ಯಮಗಳು ಅಷ್ಟೆ. ಬುಡದಲ್ಲಿ ವಿಸ್ತಾರವಾಗಿ ಹಬ್ಬಿದ ಮರ ಬೆಳೆದು ಬೆಳೆದು ತುದಿಯಲ್ಲಿ ಸಪುರವಾದಂತೆ ಕೊನೆಯಲ್ಲಿ ಉಳಿಯುವುದು ಒಂದೇ ತಪಸ್ಸು ಮಾತ್ರ.  ಪರೋಕ್ಷವಾಗಿ ಆಡಂಬರ ಇದ್ದಲ್ಲಿ ದೇವರ ಅಸ್ತಿತ್ವ ಇರುವುದಕ್ಕಿಂತಲೂ ಸರಳವಾಗಿ ಇರುವಲ್ಲಿ ದೇವರ ಅಸ್ತಿತ್ವ ಗಾಢವಾಗಿ ಅನುಭವಕ್ಕೆ ಬರುತ್ತದೆ. ಬದುಕಿನ ಸಂಧ್ಯೆಯ ರುಗ್ಣಾವಸ್ಥೆಯಲ್ಲಿ ಮಲಗಿದಾಗ ಎಲ್ಲವನ್ನು ಕಳೆದುಕೊಂಡು ಕೇವಲ ಪರಮಾತ್ಮ ಸಾನ್ನಿಧ್ಯ ಮಾತ್ರ ಉಳಿಸಿಕೊಂಡಿರುತ್ತೇವೆ. 

ಬಹಿರಂಗವಾಗಿ ನಾವು ನಾರಾಯಣ ಶಂಕರ ಗಣಪತಿ ದುರ್ಗೆ ಹೀಗೆ ನಮಗೆ ತೋಚಿದಂತೆ, ನಮ್ಮ ಭಾವದಲ್ಲಿ ಸೀಮಿತವಾಗಿ ಪರಮಾತ್ಮನ ನಾಮಸ್ಮರಣೆ ಉಚ್ಚರಿಸುತ್ತೇವೆ. ಬಹಿರಂಗದಲ್ಲಿ ವಿವಿಧ ಭಾವವಿದ್ದರೂ ಅಂತರಂಗದಲ್ಲಿ ಒಂದೇ ಭಾವ, ನಾವು ಯಾರನ್ನು ಶಂಕರ ಎನ್ನುತ್ತೇವೆಯೋ ನಾರಾಯಣ ಎನ್ನುವಾಗಲು ಅದೇ ಭಾವವನ್ನೇ ಕೂಗುತ್ತೇವೆ. ಬಹಿರಂಗದಲ್ಲಿ ವೆತ್ಯಾಸ ಇದ್ದರೂ ಅಂತರಂಗದಲ್ಲಿ ಅವೆಲ್ಲವೂ ಒಂದೇ ಆಗಿರುತ್ತದೆ. ಆದರೆ ಇವೆಲ್ಲವನ್ನು ಸ್ಮರಿಸುವಾಗ ಸಿಗದ ಏಕಾಗ್ರತೆ ಕೇವಲ ಓಂ ಕಾರದ ಉಚ್ಚಾರದಲ್ಲಿ ಸಿಗುತ್ತದೆ ಎಂದರೆ ದೇವರು ಸರಳವಾದ ಕ್ರಿಯೆಗೆ ಸ್ಪಂದಿಸುತ್ತಾನೆ.   ಆಡಂಬರ ಅಧಿಕವಾದಂತೆ ಏಕಾಗ್ರತೆ ಕುಂಠಿತಗೊಳ್ಳುತ್ತದೆ. ಇದು ನನ್ನ ಅನುಭವ.  ಸರಳತೆಯಲ್ಲಿ  ದೇವರು  ತನ್ನ ಅಸ್ತಿತ್ವವನ್ನು ತೋರಿಸಿಬಿಡುತ್ತಾನೆ. ಅವನು ಕಾಣುತ್ತಾನೆ ಎನ್ನುವುದಕ್ಕಿಂತ ನಮ್ಮ ಭಾವ ಸೂಕ್ಷ್ಮವಾದಷ್ಟೂ ಪ್ರಖರವಾಗುತ್ತದೆ. 

ಯಾವುದೆ ವಸ್ತು ಅಥವ ವ್ಯಕ್ತಿಯ ಬಗೆಗಿನ ಅರಿವು ಅದರಲ್ಲಿ ವಿಶ್ವಾಸವನ್ನು ಹೆಚ್ಚಿಸುತ್ತದೆ. ಒಬ್ಬರನ್ನು ಸಂಪೂರ್ಣ ಅರಿತಿದ್ದರೆ ಅವರ ಮೇಲಿನ ಪ್ರೀತಿ ಮತ್ತು ವಿಶ್ವಾಸವನ್ನು ಗಾಢವಾಗಿಸುತ್ತದೆ. ಅದೇ ರೀತಿ ಜ್ಞಾನ ಭಕ್ತಿಯ ದೃಢತೆಯನ್ನು ಹೆಚ್ಚಿಸುತ್ತದೆ.  ಅರಿವಿನಿಂದ ಅಥವಾ ಜ್ಞಾನದಿಂದ ಬರುವ  ಭಕ್ತಿ  ಶಾಶ್ವತವಾಗಿರುತ್ತದೆ. ಇನ್ನಿತರ ಪ್ರಭಾವದಿಂದ ಪ್ರಚೋದಿಸಲ್ಪಡುವ ಭಕ್ತಿ ತಾತ್ಕಾಲಿಕವಾಗಿರುತ್ತದೆ. ಹಾಗಾಗಿ ದೇವರು ಎಂಬ ಸಂಪೂರ್ಣ ಜ್ಞಾನ ಪರಮಾತ್ಮನ ಮೇಲಿನ ಭಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲಿ ಭಕ್ತಿ ಹೆಚ್ಚು ಸುರಕ್ಷಿತವಾಗಿರುತ್ತದೆ. ಮನಸ್ಸು ವಿಚಲಿತವಾಗುವುದಿಲ್ಲ. 

ಮನಸ್ಸು ಸ್ವಚ್ಛವಾಗಿದ್ದಷ್ಟು ಏಕಾಗ್ರತೆ ಸುಲಭವಾಗುತ್ತದೆ. ದೈವಾನುಭವಕ್ಕೆ ಈ ಏಕಾಗ್ರತೆ ಅತ್ಯವಶ್ಯ. ಮನಸ್ಸು ಸ್ವಚ್ಛವಾಗಿರಬೇಕು.  ಮನಸ್ಸಿನ ಸ್ವಚ್ಛತೆ ಅದು ನಮ್ಮ ಸ್ವ ಪ್ರಯತ್ನದಲ್ಲೇ ಇರುತ್ತದೆ. ಒಂದು ಮಾರ್ಜಕ ಅಥವಾ ಸಾಬೂನು ಮಲೀನವಾಗಿದ್ದರೆ ಸ್ವಚ್ಛಮಾಡುವುದಕ್ಕೆ ಇನ್ನೊಂದು ಸಾಬೂನಿನ ಅವಶ್ಯಕತೆ ಬೇಕಾಗುವುದಿಲ್ಲ. ನೀರಲ್ಲಿ ಕರಗುತ್ತಾ ಕರಗುತ್ತಾ ಸಾಬೂನು ತಾನೆ ಸ್ವಚ್ಛವಾಗುತ್ತದೆ. ಹಾಗೆ ಮನಸ್ಸು ಪರಮಾತ್ಮನ ಧ್ಯಾನದಲ್ಲಿ ಮನಸ್ಸು ಸ್ವಯಂ ಸ್ವಚ್ಛವಾಗುತ್ತದೆ.  ಧ್ಯಾನದಲ್ಲಿ ಎಲ್ಲವೂ ನಷ್ಟವಾಗುತ್ತದೆ. ಪರಿಸರ,  ಅಸ್ತಿತ್ವ , ನಮ್ಮದು ಎನಿಸಿಕೊಳ್ಳುವ ಪ್ರತಿಯೊಂದೂ ನಷ್ಟವಾಗುತ್ತದೆ. ಮುಖ್ಯವಾಗಿ ನಾನು ಎಂಬ ಅಹಂ ಕಳೆದುಹೋಗುತ್ತದೆ.  ಇಲ್ಲಿ ನಷ್ಟವಾಗುವಾಗ ಧ್ಯಾನದಲ್ಲಿ ಸಿಗುವ ಲಾಭ ಇದೆಲ್ಲವನ್ನು ಮೀರಿಸಿಬಿಡುತ್ತದೆ. ಹಾಗಾಗಿ ದೇವರು ಎಂದರೆ ಅದು ನಮ್ಮ ಅಹಂ ನ್ನು ಕಳೆಯುವ ಒಂದು ಸಾಧನ. ಜಗತ್ತಿನಲ್ಲಿ ಎಲ್ಲವೂ ನಮ್ಮದಾಗಿರಬಹುದು. ಅಥವಾ ನಮ್ಮ ಅಹಂಕಾರದಲ್ಲಿ ಎಲ್ಲವೂ ನಮ್ಮದು ಎಂದು ಕೊಳ್ಳಬಹುದು. ಆದರೆ ನಮ್ಮದಲ್ಲದ ಒಂದು ಒಂದು ಭಾವವೇ ದೇವರು. ದೇವರು ಎಂದರೆ ನಮ್ಮ ಅಹಂಕಾರವನ್ನು ದೂರ ಮಾಡುವ ವಸ್ತು.  ಇಲ್ಲಿ ನಾನು  ನನ್ನದು ಏನು ಅಲ್ಲ. ನನ್ನದಲ್ಲದ ಒಂದು ವಿಷಯವೇ ದೇವರು ಎಂಬ ಭಾವ ಬರುತ್ತದೆ.  ಕಾಮ ಕ್ರೋಧ ಮದ ಮೋಹ ಲೋಭ ಮತ್ಸರ ಎಂಬ ಷಡ್ವೈರಗಳು  ಬಾಧಿಸುವಾಗ  ಪರಮಾತ್ಮನ ನೆನಪೂ ದೂರವಾಗುತ್ತದೆ.  ಈ ಅಹಂಕಾರದಿಂದ ದೂರವಾಗಬೇಕು.     ಅಂತಿಮವಾಗಿ ನನ್ನದಲ್ಲದ ದೇವರೂ ಅದು ನನ್ನದು ಎಂದು ಪ್ರಚೋದನೆಯಾದರೆ ನಮ್ಮೊಳಗಿನ ಪರಮಾತ್ಮನ ಅಸ್ತಿತ್ವ ಅರಿವಿಗೆ ಬರುತ್ತದೆ. ನಾನು ಬೇರೆಯಲ್ಲ ದೇವರು ಬೇರೆಯಲ್ಲ ಎಂಬ ಅದ್ವೈತ ಭಾವ  ಪ್ರಚೋದನೆಗೊಳ್ಳುವಾಗ ಮನಸ್ಸಿನ ಅಹಂಕಾರ ದೂರವಾಗಿರುತ್ತದೆ.  

ನಮ್ಮೊಳಗಿನ ದೇವರ ಅಸ್ತಿತ್ವದ ಅರಿವಾದಾಗ ಬಾಹ್ಯವಾಗಿರುವ ಎಲ್ಲವೂ ನಾಶವಾಗುತ್ತದೆ. ಆಗ ಅಜ್ಜ ಹೇಳಿದಂತೆ ದೇವರನ್ನು ವಿಸರ್ಜಿಸಬೇಕು.  ಇಲ್ಲಿ ಎಲ್ಲವನ್ನು ಗಳಿಸುತ್ತೇವೆ. ಎಷ್ಟು ಗಳಿಸಿದರೇನು ಕಳೆದುಕೊಳ್ಳದ ಒಂದನ್ನೂ ನಾವು ಗಳಿಸುವುದಿಲ್ಲ.  ಒಂದನ್ನೂ  ನಮ್ಮಲ್ಲಿ ಉಳಿಸಿಕೊಳ್ಳಲಾಗದ ಅಸಮರ್ಥ ಸ್ಥಿತಿಯೂ ಇರುತ್ತದೆ. ಎಲ್ಲವನ್ನು ಕಳೆದುಕೊಳ್ಳುವಾಗ ನಮ್ಮಲ್ಲಿರುವುದೇನು ಎಂದು ಯೋಚಿಸಿದರೆ ಅದೊಂದೇ,  ಅದು ಪರಮಾತ್ಮ.  

Saturday, December 9, 2023

ಬಲ್ಲಿರೇನಯ್ಯ ಅಡುಗೆ ಮನೆಗೆ ಯಾರೆಂದುಕೊಳ್ಳಬಹುದು?

        ಮೊನ್ನೆ  ನನ್ನಲ್ಲಿ ಮಗಳು ಒಂದು ಪ್ರಶ್ನೆ ಕೇಳಿದಳು.  ಅವಳು ಅಂತ ಅಲ್ಲ ಹಲವರು ಕೇಳುತ್ತಾರೆ. ಲೇಖನಕ್ಕೆ ವಿಷಯಗಳು ಹೇಗೆ ಸಿಗುತ್ತವೆ? ಸರಳವಾದ ಉತ್ತರ ಚಿಂತನೆಯಿಂದ. ಮೊನ್ನೆ ಮಗಳು ಒಂದು ವಿಷಯ ಕೊಟ್ಟು ಬಿಟ್ಟಳು. ನಿಮ್ಮ ಅಡುಗೆ ಹವ್ಯಾಸದ ಬಗ್ಗೆ ಒಂದು ಲೇಖನ ಬರೆಯಿರಿ ನೋಡೋಣ.  ವಾಸ್ತವದಲ್ಲಿ ಯಾರೋ ಕೊಟ್ಟ ವಿಷಯಕ್ಕೆ ಶೀರ್ಷಿಕೆಗೆ ನಾನು ಲೇಖನ ಬರೆಯುವುದಿಲ್ಲ. ಇದೊಂದು ಕೇವಲ ಹವ್ಯಾಸಕ್ಕಷ್ಟೇ ಸೀಮಿತ. ಇಲ್ಲಿ ಸ್ಪರ್ಧಾತ್ಮಕ ಅಥವಾ ಇನ್ನಿತರ ಹೆಸರು ಹಣ ಬರುವ ಸ್ವಾರ್ಥ ಕಿಂಚಿತ್ತೂ ಇಲ್ಲ. ಹಾಗಾಗಿ ಈಗಲೂ ನಾನು ಬರೆಯುತ್ತಾ ಇದ್ದೇನೆ. ಒಂದು ಲೇಖನ ಬರೆದು ಹಂಚುವಾಗ ಅದೊಂದು ಅವ್ಯಕ್ತ ಅನುಭವ. ಒಂದು ನಿರಾಳ ಮನಸ್ಥಿತಿ. ಯಾರು ಓದಲಿ ಬಿಡಲಿ ಇಷ್ಟ ಪಡಲಿ.....ಅದು ನದಿಯಲ್ಲಿ ನೀರು ಹರಿದಂತೆ ಗಾಳಿ ಬೀಸಿದಂತೆ.  ಮಗಳು ಹೇಳಿದಂತೆ ಅಡುಗೆಯ ಕುರಿತು ಒಂದಷ್ಟು ಅನಿಸಿಕೆ.


ಆಡುಗೆ ಎಂಬುದನ್ನು ಕಲೆ ಎನ್ನುವುದಕ್ಕೂ ಬರುತ್ತದೆ, ಅನಿವಾರ್ಯ ಕೆಲಸ ಎನ್ನುವುದಕ್ಕು ಸಾಧ್ಯವಿದೆ. ಅದನ್ನು ಕಲೆ ಎಂದು ಪರಿಗಣಿಸಿದರೆ ಉಳಿದ ಕಲೆಗಳಂತೆ  ಅದು ಪ್ರಚಾರಕ್ಕೆ  ಸಿಗುವ ಕಲೆಯಲ್ಲ. ಅಡುಗೆ ಮಾಡುವುದು ಎಲ್ಲರಿಗೂ ಇಷ್ಟವಿರುವುದಿಲ್ಲ. ಆದರೆ  ಅದನ್ನು ಇಷ್ಟಪಡದವರು ಬದುಕುವುದಕ್ಕೆ ಅರ್ಹತೆಯನ್ನು ಕಳೆದುಕೊಂಡು ಬಿಡುತ್ತಾರೆ. ಕೆಲವರಿಗೆ ಮಾಡುವುದು ಇಷ್ಟವಿರಬಹುದು. ಕೆಲವರಿಗೆ ತಿನ್ನುವುದು ಇಷ್ಟವಿರಬಹುದು. ನಮ್ಮಮ್ಮನ ಹಾಗಿದ್ದವರಿಗೆ ಮಾಡುವುದೇ ಇಷ್ಟ ಹೊರತು ತಿನ್ನುವುದಲ್ಲ. ಎಲ್ಲವನ್ನು ಮಾಡುತ್ತಾರೆ ಅವರು ಮಾತ್ರ ಒಂದಷ್ಟು ಗಂಜಿ ಉಂಡು ತೃಪ್ತಿ ಪಡುತ್ತಾರೆ. ಪಾತ್ರೆಯ ತಳದಲ್ಲಿರುವುದನ್ನು ಕೆರೆಸಿ ತಿನ್ನುವುದರಲ್ಲೇ ತೃಪ್ತಿ. ಇಂತಹವರು ಎಲ್ಲಾ ಮನೆಯಲ್ಲೂ ಇರುತ್ತಾರೆ. ಇನ್ನು ಬಿಸಿ ಮಾಡಿ ಇಡಬೇಕಲ್ಲಾ ಎಂದು ಪಾತ್ರೆಯಲ್ಲಿ ಉಳಿದದ್ದನ್ನು ತಟ್ಟೆಗೆ ಹಾಕಿ ಬೇಡದೇ ಇದ್ದರೂ ತಿಂದು ಬಿಡುತ್ತಾರೆ.  ಅಡುಗೆ ಮನೆಯ ಶಾಸ್ತ್ರಗಳು ರಹಸ್ಯಗಳು ಹಲವು ಸಲ ಬಹಿರಂಗವಾಗುವುದೇ ಇಲ್ಲ. ಅದೊಂದು ವಿಶ್ವವಿದ್ಯಾನಿಲಯ ಇದ್ದಂತೆ. ಹಸಿವಾದರೂ ಅಡುಗೆ ಮನೆ, ರೋಗ ಬಂದರೂ ಅಡುಗೇ ಮನೆ. 

ನನಗೂ ಅಡುಗೆ ಒಂದು ಹವ್ಯಾಸ. ಹಲವರು ಮೂಗು ಮುರಿಯುತ್ತಾರೆ ಇದು ನನ್ನ ಅನುಭವ. ಗಂಡಸಾಗಿ ಅಡುಗೆ ಮಾಡುವುದಾ? ಅದು ಯಾವ ನಿಯಮವೋ ಗೊತ್ತಿಲ್ಲ. ಗಂಡು ಅಡುಗೆ ಮಾಡುವುದು ಜಗತ್ತಿನ ಅತ್ಯಾಶ್ಚರ್ಯದ ವಸ್ತುವಾಗಿ ಬಿಡುತ್ತದೆ. ನನ್ನ ಪ್ರಕಾರ ಕೊನೆ ಪಕ್ಷ ಅವರವರು ತಿನ್ನುವುದನ್ನಾದರೂ ರುಚಿಕಟ್ಟಾಗಿ ಮಾಡಿ ತಿನ್ನುವ ರೂಢಿ ಇರಬೇಕು. ತನ್ನ ಹೊಟ್ಟೆಗೆ  ತಿನ್ನುವುದಕ್ಕೂ ಯಾರನ್ನು ಅವಲಂಬಿಸಿರಬಾರದು. ಅದು ಇಂದಿನ ಜೀವನ ಶೈಲಿಯಲ್ಲಿಅತ್ಯಂತ  ಅರೋಗ್ಯದ ಲಕ್ಷಣ. ಹಲವರು ತಮಗಾಗಿ ಮಾಡಿ ತಿನ್ನುವುದಿದ್ದರೂ ಅದು ಕಾಟಾಚಾರಕ್ಕೆ , ಏನೋ ಒಂದು ಬೇಯಿಸಿ ತಿಂದರಾಯಿತು ಎಂಬ ಭಾವನೆ. 

ಹೆಣ್ಣು ನೋಡುವಾಗ ಕೇಳುವುದುಂಟು, ಅಡುಗೆ ಬರುತ್ತದಾ? ನಿಜಕ್ಕೂ ಹಾಸ್ಯಾಸ್ಪದ ವಿಡಂಬನೆಯ ಪ್ರಶ್ನೆಇದು. ಹಸು ಹಾಲು ಕೊಡುತ್ತದಾ ಎಂದು ಪ್ರಶ್ನೆ ಮಾಡಿದ ಹಾಗೆ. ಹಾಲು ಕೊಡದೇ ಇದ್ದರೆ ಅದು ಹಸು ಹೇಗಾಗುತ್ತದೆ? ತಾಯಿ ಮೊಲೆ ಉಣ್ಣಿಸದೇ ಇದ್ದರೆ ಆಕೆ ತಾಯಿ ಹೇಗಾದಾಳು?  ನದಿಯಲ್ಲಿ ನೀರು ಹರಿಯದೆ ಇದ್ದರೆ ಅದು ನದಿಯಾಗುವುದಿಲ್ಲ ಬಯಲಾಗುತ್ತದೆ.  ಹಾಗೆ ಅಡುಗೆ ಬರುತ್ತದಾ ಎಂದು ಕೇಳಿದಾಗ ಈಗಿನ ಹೆಣ್ಣು ಮಕ್ಕಳು ಹೇಳುವುದುಂಟು, ಅದು ಬರುತ್ತದೆ...ಜೋರಾಗಿಯೇ ಹೇಳಿಬಿಡುತ್ತಾರೆ.  ಬೇಕಿದ್ದರೆ ಅದು ಉದ್ದ ಪಟ್ಟಿ, ಮಸಾಲೆ ದೋಸೆ, ಉಪ್ಪಿಟ್ಟು ಅವಲಕ್ಕಿ, ಇನ್ನು ಸಿಹಿತಿಂಡಿ, ಮಾಂಸಾಹಾರ, ಉತ್ತರ ಭಾರತ ದಕ್ಷಿಣ ಭಾರತದ ತಿನಿಸುಗಳು.....ಪಟ್ಟಿಯಲ್ಲಿರುತ್ತವೆ. ಅದನ್ನೂ ನಾಚಿಕೆಯಿಲ್ಲದೆ ದೊಡ್ಡದಾಗಿ ಹೇಳಿಬಿಡುತ್ತಾರೆ.   ಯಾಕೆಂದರೆ ಗಂಡಿಗಿಂತಲೂ ಹೆಚ್ಚು ಲೋಕವನ್ನು ಕಂಡಿರುತ್ತಾರೆ. ಸರಿ ಮದುವೆ ಆದ ಮೇಲೆ  ಮಸಾಲೆ ದೋಸೆ ಬೇಕು ಎಂದು ಹೇಳಿದರೆ, ಮೊಬೈಲ್ ತೆಗೆದು ಜೊಮೋಟೊ ಸ್ವಿಗ್ಗಿ ಯಲ್ಲಿ ಆರ್ಡರ್ ಮಾಡುತ್ತಾರೆ. ಹೌದು ಮಸಾಲೆ ದೋಸೆ ಬರುತ್ತದೆ, ಮನೆ ಬಾಗಿಲಿಗೇ ಬರುತ್ತದೆ !

ಅಡುಗೆ ಎಂಬುದು ಮನ್ನಣೆ ಅಂಗೀಕಾರವಿಲ್ಲದ ಇಲ್ಲದ ಒಂದು ಕಲೆ.  ಬಂದ ನೆಂಟರು ತಿಂದು ತೇಗಿದರೂ ಅದನ್ನು ಯಾರು ಮಾಡಿದ್ದಾರೆ ಎಂಬುದೆ ಹಲವುಸಲ ಹೊರಗೆ ಬರುವುದಿಲ್ಲ. ಯಾರೋ ಮಾಡಿರುತ್ತಾರೆ ಇವರು ಪಟ್ಟಾಗಿ ತಿಂದು ಬಿಡುತ್ತಾರೆ.  ಮಲಯಾಳಂ ನಲ್ಲಿ ಒಂದು ಸಿನಿಮಾ ಬಂದಿತ್ತು. ಸಾಲ್ಟ್ ಎಂಡ್ ಪೆಪ್ಪರ್, ಉಪ್ಪು ಮತ್ತು ಕರಿಮೆಣಸು. ಅಡುಗೆಯೇ ಈ ಸಿನಿಮಾದ ಮುಖ್ಯ ವಸ್ತು. ಹೆಣ್ಣು ನೋಡುವುದಕ್ಕೆ ಹೋದವನು ಅಲ್ಲಿ ಅಡುಗೆ ಮಾಡುತ್ತಿದ್ದ ಅಡುಗೆ ಭಟ್ಟನನ್ನು ತನ್ನ ಜತೆ ಕರೆದುಕೊಂಡು ಬರುತ್ತಾನೆ. ಹಾಗಾಗಿ ಹೆಣ್ಣಿನ ಸ್ಥಾನ ಏನು?   ಅವಳ ಮಹತ್ವ ಏನು ಎಂದು ಪರೋಕ್ಷವಾಗಿ ಹೇಳಿದಂತೆ. ಹೆಣ್ಣು ಅಡುಗೆ ಮನೆಗೆ ಸೀಮಿತವಲ್ಲದೇ ಇದ್ದರೂ ಆಕೆ ಬದುಕಿನಲ್ಲಿ ಅನ್ನಪೂರ್ಣೆಯಾಗುವ ಆವಶ್ಯಕತೆ ಒಂದು ಅನಿವಾರ್ಯತೆಯಾಗಿದೆ. 

ಎಲ್ಲವನ್ನು ಹೆಣ್ಣಿನ ತಲೆ ಮೇಲೆ ಹಾಕುವುದಕ್ಕಿಂತಲೂ ಅವರವರ ಹೊಟ್ಟೆ ತುಂಬಿಸುವುದನ್ನು ಹೆಣ್ಣು ಗಂಡು ಭೇದವಿಲ್ಲದೇ ಅರಿಯಬೇಕು. ಅಡುಗೆ ನನಗೆ ಬಾಲ್ಯದಿಂದ ಹಲವು ಕಾರಣದಿಂದ ಅಂಟಿಕೊಂಡ ಕೆಲಸ. ಮೊದಲು ಯಾವುದೋ ಅನಿವಾರ್ಯತೆಯಿಂದ ಕೈ ಸುಟ್ಟುಕೊಂಡು ಮಾಡಿದರೆ ವೆತ್ಯಾಸ ಇಷ್ಟೇ,  ಈಗ ಅದೊಂದು ಹವ್ಯಾಸವಾಗಿ ಬೆಳೆದು ಬಂದಿದೆ.  ಯಾರಿಗೋ ಬೇಕಾಗಿ ಮಾಡುವುದಲ್ಲ. ಅದು ಸ್ವಯಂ ತೃಪ್ತಿಗೆ ಮಾಡುವಂತಹ ಕಾರ್ಯ. 

ಅಡುಗೆ ಅದು ಯಾವುದೇ ಆಗಿರಲಿ ಒತ್ತಡ ರಹಿತವಾಗಿ ಮಾಡಬೇಕು ಇದು ನನ್ನ ಪ್ರತಿಪಾದನೆ. ಅಡುಗೆ ಯಾವುದೇ ಆಗಿರಲಿ ವೇಗವಾಗಿ ಮಾಡಿಬಿಡುವ ಧಾವಂತ ನನ್ನದು. ಬೆಳಗ್ಗೆ ಎಂಟೂ ವರೆಗೆ ಉಪಹಾರವಾದರೆ, ಎಂಟುಗಂಟೆಗೆ ಹೊರಡುತ್ತೇನೆ. ಮೊದಲೇ ಮನಸ್ಸಿನಲ್ಲಿ ಇದು ಹೀಗೆ ಹೀಗೆ ಎಂಬ ಯೋಜನೆ ಸಿದ್ದವಾಗುತ್ತದೆ.  ಉದಾಹರಣೆಗೆ,  ಉಪ್ಪಿಟ್ಟು ಮಾಡುವುದಿದ್ದರೆ ಮೊದಲು ಬಾಣಲೆ ಬಿಸಿಗಿಟ್ಟು ಬಿಡುತ್ತೇನೆ. ಅದರಲ್ಲಿ ರವೆ ಹುರಿಯುತ್ತಿದ್ದರೆ, ಅದನ್ನು ಹುರಿಯುವ   ಜತೆಯಲ್ಲೇ ಅದಕ್ಕೆ ಹಾಕಬೇಕಾದ ನೀರು ಬಿಸಿಯಾಗಿರುತ್ತದೆ, ಬೇಕಾದ ಈರುಳ್ಳಿ ಮೆಣಸು ತರಕಾರಿ ಹೆಚ್ಚಿಯಾಗಿರುತ್ತದೆ. ಇದರಲ್ಲೂ ಯಾವುದು ಮೊದಲು ಹೆಚ್ಚಬೇಕು ಯಾವುದು ನಂತರ ಹೆಚ್ಚಿಕೊಳ್ಳಬೇಕು ಎಂಬ ಯೋಜನೆ ಮೊದಲೇ ಇರಬೇಕು.  ಇಷ್ಟಾದರೆ ಮತ್ತೆ ಐದೇ ನಿಮಿಷ ಉಪ್ಪಿಟ್ಟು ಸಿದ್ದ. ಹೀಗೆ ಪ್ರತಿಯೊಂದು ಕೆಲಸಕ್ಕೂ ಒಂದು ಯೋಜನೆ ಇರುತ್ತದೆ. ಹಾಗಾಗಿ ಒತ್ತಡವಿಲ್ಲದೇ ಅಡುಗೆ ಸಿದ್ಧವಾಗುತ್ತದೆ. ಮಧ್ಯಾಹ್ನ ಹನ್ನೆರಡು ವರೆಗೆ ಹಸಿವಾಗುವುದಕ್ಕೆ ಆರಂಭವಾಗುತ್ತದೆ, ನಂತರ ಇಂತಹದ್ದು ತಿನ್ನಬೇಕು ಎಂಬ ಬಯಕೆ ಹುಟ್ಟುತ್ತದೆ. ಸರಿ ಒಂದು ಘಂಟೆಗೆ ಹೊರಡುತ್ತೇನೆ. ಒಂದು ವರೆಗೆ ಅದಷ್ಟು ಸಿದ್ದವಾಗಿ ಊಟಕ್ಕೆ ಕುಳಿತು ಬಿಡುತ್ತೇನೆ. ಅದು ಅನ್ನ ಸಾಂಬಾರ್ ಆಗಿರಬಹುದು, ಪಲಾವ್ ಬಿಸಿ ಬೇಳೆ ಬಾತ್ ಯಾವುದೇ ಆಗಿರಲಿ...ಅದಕ್ಕೊಂದು ಯೋಜನೆ ಮೊದಲೇ ಸಿದ್ಧವಾಗುತ್ತದೆ. ಅಡುಗೆ ಕೆಲಸದಲ್ಲಿ ಯಾವುದು ಮೊದಲು ಮಾಡಬೇಕು ಅದನ್ನು ಮೊದಲು ಯೋಚನೆ ಮಾಡಬೇಕು. ಆಗ ಒತ್ತಡ ರಹಿತವಾಗಿ ಮಾಡುವುದಕ್ಕೆ ಸಾಧ್ಯವಾಗುತ್ತದೆ.  ಯೋಜನಾ ಬದ್ಧವಾಗಿ ಅಡುಗೆ ಮಾಡುವುದಿದ್ದರೆ ಅಲ್ಲಿ ಒತ್ತಡ ಇರುವುದೇ ಇಲ್ಲ.

ಮಾಡಿದ ಅಡುಗೆ ರುಚಿಯಾಗಿರಬೇಕು, ಎಲ್ಲರಿಂದ ಮೆಚ್ಚುಗೆ ಪಡೆಯಬೇಕು, ಈ ಮನೋಭಾವ ಅಡುಗೆ ಮಾಡುವವರಲ್ಲಿ ಸಹಜವಾಗಿರುತ್ತದೆ. ಇನ್ನು ಕೆಲವರಲ್ಲಿ ತಮ್ಮ ಮನೆಯ ಅದರಲ್ಲೂ ತಾವು ಮಾಡಿದ ಅಡುಗೆ ಮಾತ್ರ ಚೆನ್ನಾಗಿ ಇರುತ್ತದೆ ಎಂಬ ಅಹಂಭಾವವೂ ಇರುತ್ತದೆ.  ಹಲವು ಕಡೆಯಲ್ಲಿ ಮನೆಗೆ ಅತಿಥಿಗಳಾಗಿ ಹೋದಾಗ ಅಲ್ಲಿ ಮೊದಲು ಅವರು ಕೇಳುವುದು ಯಾವ ಅಡುಗೆ ಇಷ್ಟ. ಯಾವ ತಿಂಡಿ ಇಷ್ಟ. ಬಂದ ಅತಿಥಿಯ ಇಷ್ಟಾನಿಷ್ಟಗಳನ್ನು ನೋಡಿ ಅದರಂತೆ ಮಾಡಿ ಅತಿಥಿಯನ್ನು ತೃಪ್ತಿ ಪಡಿಸುವುದು ಮಾತ್ರವಲ್ಲ ಅತಿಥಿಯಿಂದ ಹೊಗಳಿಕೆ ಪಡೆಯುವ ಬಯಕೆ ಇರುತ್ತದೆ. ಬಂದ ಅತಿಥಿ ಹಲವು ಸಲ ದಾಕ್ಷಿಣ್ಯಕ್ಕೆ ಒಳ್ಳೆದಾಗಿದೆ ಎಂದರೂ ಅದನ್ನು ಹೆಗ್ಗಳಿಕೆಯಾಗಿ ಪರಿಗಣಿಸುವವರೂ ಇರುತ್ತಾರೆ. ಅದರೆ ನಾನು ನನಗೆ ಎನು ಇಷ್ಟ ಇದೆಯೋ ಅದನ್ನೇ ರುಚಿಯಾಗಿ ಮಾಡುವುದನ್ನು ಬಯಸುತ್ತೇನೆ. ಬಂದವರಿಗೆ ಇಷ್ಟವಾದ ವಿಭವಗಳು ಹಲವಾರು ಮಾಡುವುದಿದ್ದರೂ ಅದರಲ್ಲಿ ಯಾವುದಾದರೂ  ಒಂದು ತಿಂಡಿ ನನ್ನ ಇಷ್ಟದ್ದಾಗಿರುತ್ತದೆ. ಮತ್ತು ಅದನ್ನು ಬಂದವರು ರುಚಿಯಾಗಿದೆ ಎಂದು ಹೇಳಿ ಇಷ್ಟ ಪಟ್ಟರೆ ಬಹಳ ಸಂತಸವಾಗುತ್ತದೆ. ಅತಿಥಿಯರಿಗೆ ಅವರ ಇಷ್ಟವಾದ ತಿನಿಸು ಮಾಡಿ ಹಾಕಿ ಶಹಭಾಸ್ ಗಿರಿಯನ್ನು ಪಡೆಯುವುದು ದೊಡ್ಡದಲ್ಲ, ತಮಗಿಷ್ಟವಾದದ್ದನ್ನು ಮಾಡಿ ಹಾಕಿ ಅದು ಅವರಿಗೆ ಇಷ್ಟವಾಗುವಂತೆ ಮಾಡುವುದರಲ್ಲಿ ಅಡುಗೆಯವನ ಯಶಸ್ಸು ಇರುತ್ತದೆ. ಅದೊಂದು ದೊಡ್ಡ ಅಂಗೀಕಾರ.  ಎಲ್ಲರಿಗೂ ಇಷ್ಟವಾಗಿರುವುದನ್ನು ಮಾಡಿ ಮೆಚ್ಚುಗೆಯನ್ನು ಗಳಿಸುವುದು ದೊಡ್ಡದಲ್ಲ. ತಮಗೆ ಬೇಕಾದದ್ದನ್ನು ಮಾಡಿ ಮೆಚ್ಚುಗೆ ಗಳಿಸುವುದು ನಿಜವಾದ ಅಡುಗೆಯ ಚಾಕಚಕ್ಯತೆಯಾಗಿರುತ್ತದೆ. 

    ಅಡುಗೆ ಮಾಡುವುದಿದ್ದರು....ಇಂದು ತಿಂದ ಅಡುಗೆ ಕೊನೆ ಪಕ್ಷ ಒಂದು ವಾರದವರೆಗೆ ಪುನಃ ತಯಾರಿಸುವುದಿಲ್ಲ.  ಪದೇ ಪದೇ ಮಾಡಿದ್ದನ್ನೆ ಮಾಡುವುದು ಮತ್ತು ಅದನ್ನೇ ತಿನ್ನುವುದು ನನಗೆ ಇಷ್ಟವಿರುವುದಿಲ್ಲ. ದಿನವೂ ಒಂದು ವೈಶಿಷ್ಟ್ಯತೆ ಇರಬೇಕು. ಅದು ಹಸಿವನ್ನು ಕೆರಳಿಸುತ್ತದೆ. ಊಟ ತಿಂಡಿ ತಿನ್ನುವುದರಲ್ಲಿ ಅದು ಆಸಕ್ತಿಯನ್ನು ಉತ್ಸಾಹವನ್ನು ಹೆಚ್ಚಿಸುತ್ತದೆ. ಹಾಗಾಗಿ ಅಡುಗೆ ಎಂಬುದು ನನಗೆಂದೂ ಸಮಸ್ಯೆಯಾದದ್ದಿಲ್ಲ. ಇಂದು ಏನು ಮಾಡುವುದಪ್ಪ...? ಎಂದು ನನಗೆ ಬೇಸರವಾಗುವುದಿಲ್ಲ.  ಪ್ರತಿ ದಿನವೂ ಒಂದಾದರೂ ಹೊಸತನ್ನು ಮಾಡುವ ಸೃಜನ ಶೀಲತೆ ನನ್ನಲ್ಲಿದೆ. ಅದೇ ನನಗೆ ಅಡುಗೆಯಲ್ಲಿ ಉತ್ಸಾಹವನ್ನು ತುಂಬಿಸುತ್ತದೆ. ಅಡುಗೆ ಅದೊಂದು ಕೆಲಸ ಎಂದು ತಿಳಿಯಬಾರದು. ಅದೊಂದು ಹಸಿವಿನಂತೆ ಸಹಜ ಕ್ರಿಯೆ. ಒಂದು ರೀತಿಯಲ್ಲಿ ಪ್ರಕೃತಿಯ ಧರ್ಮ. 

    "ದ ಗ್ರೇಟ್ ಇಂಡಿಯನ್ ಕಿಚನ್" ಎಂಬ ಮಲಯಾಳಂ ಸಿನಿಮಾ ...ಅಡುಗೆ ಕೋಣೆಯ ಕೆಲಸವನ್ನು ಸವಿಸ್ತಾರವಾಗಿ ತೋರಿಸುತ್ತದೆ.  ಅಡುಗೆ ಯಾರೂ ಮಾಡಬಹುದು. ಆದರೆ ಅಡುಗೆ ಕೋಣೆಯನ್ನು ಅಚ್ಚುಕಟ್ಟಾಗಿ ಇರಿಸುವುದು ಅತೀ ಮುಖ್ಯ. ಅಡುಗೆ ಮಾಡಿ ತಿಂಡಿ ತಿನಸು ತಯಾರಿಯಾದಂತೆ ಜತೆಗೆ ಕಸವೂ ಸೃಷ್ಟಿಯಾಗುತ್ತದೆ. ಅಡುಗೆ ಕೋಣೆಯಲ್ಲಿ ಅದು ಎಲ್ಲೆಂದರಲ್ಲಿ ಬಿದ್ದುಕೊಂಡಿದ್ದರೆ ಅದು ಮನಸ್ಸಿಗೆ ಬಹಳ ಕಿರಿಕಿರಿಯನ್ನು ಉಂಟು ಮಾಡುತ್ತದೆ. ಕೆಲಸದ ಶ್ರಮವನ್ನು ಆಯಾಸವನ್ನು ಹೆಚ್ಚಿಸುತ್ತದೆ. ನಾನು ಅಡುಗೆ ಮಾಡುವುದಿದ್ದರೆ ಇದರ ಬಗ್ಗೆ ಮೊದಲು ಗಮನ ಹರಿಸುತ್ತೇನೆ. ಯಾವುದು ಎಲ್ಲಿಡಬೇಕೋ ಕೆಲಸವಾದ ಕೂಡಲೇ ಅಲ್ಲಿಟ್ಟು ಬಿಡುತ್ತೇನೆ. ಚಾಕೂ ಪಾತ್ರೆ ಇತ್ಯಾದಿ. ತರಕಾರಿ ಹೆಚ್ಚಿದ ಕೂಡಲೆ ಅದರ ಸಿಪ್ಪೆ ಮತ್ತೀತರ ಎಸೆಯುವುದನ್ನು ಆಗಲೇ ಕಸದ ಬುಟ್ಟಿಗೆ ಎಸೆದು ಬಿಡುತ್ತೇನೆ. ಅಡುಗೆ ಆಗುವ ತನಕ ಅದನ್ನು ಉಳಿಸುವುದಿಲ್ಲ. ಆಡುಗೆ ಸಿದ್ಧವಾದ ಕೂಡಲೇ ಅಡುಗೆ ಮನೆಯೂ ಜತೆಯಲ್ಲೇ ಸ್ವಚ್ಛವಾಗಿ ಬಿಡಬೇಕು. ನನ್ನ ಪ್ರಯತ್ನ ಅದರಲ್ಲಿರುತ್ತದೆ. ಹಲವು ಸಲ ನಾನು ಏನು ಮಾಡಿದ್ದೇನೆ ಎಂದು ತಿಳಿಯಬೇಕಾದರೆ ಪಾತ್ರೆಯ ಮುಚ್ಚಳ ತೆಗೆದು ನೋಡಬೇಕು. ಆ ರೀತಿಯಲ್ಲಿ ಸ್ವಚ್ಛವಾಗಿರುತ್ತದೆ. ಸ್ವಚ್ಛವಾದ ಅಚ್ಚುಕಟ್ಟಾದ ಅಡುಗೆ ಮನೆ ಉತ್ತಮ ಅಡುಗೆಯ ಸಂಕೇತ. 

ಶಿಸ್ತುಬದ್ಧವಾಗಿ ಮಾಡಿದಾಗ ಅಡುಗೆ ಒಂದು ಕಲೆಯಾಗುತ್ತದೆ. ಅದೆಂದೂ ಪರಿಶ್ರಮದ ಕೆಲಸವಾಗುವುದಿಲ್ಲ. ಶಿಲ್ಪಿ ಶಿಲೆಯೆನ್ನು ಕೆತ್ತಿ ಪರಿಪೂರ್ಣ ಗೊಳಿಸಿ ಒಂದು ನಿಟ್ಟುಸಿರುಬಿಟ್ಟಂತೆ, ಅಡುಗೆ ಮಾಡಿ ಮುಗಿಸಿದಾಗ ಸಿಗುವ ತೃಪ್ತಿ ಯಾವ ಕಲಾವಿದನಿಗೂ ಕಡಿಮೆ ಇಲ್ಲ. ಅದೊಂದು ವಿಶಿಷ್ಟ ಅನುಭವ. 


Monday, December 4, 2023

ಪ್ರಜ್ಞಾಹೀನ


                ಮೊನ್ನೆ  ಕೆಲವು ಘಟನೆಗಳು ಸಾಮಾನ್ಯ ಎಂಬಂತೆ ನಡೆದು ಹೋಯಿತು. ಆದಿನ ಸಾಯಂಕಾಲ‌ ಮನೆಯವರನ್ನು ಮಂಗಳೂರು ರೈಲು ಹತ್ತಿಸಲು ಮೆಜೆಸ್ಟಿಕ್ ರೈಲು ನಿಲ್ದಾಣಕ್ಕೆ ಹೋಗಿದ್ದೆ. ರೈಲು ಇನ್ನೂ ಬಂದಿರಲಿಲ್ಲ. ಹಾಗೆ ಅಲ್ಲಿದ್ದ ಆಸನಗಳಲ್ಲಿ ಕುಳಿತುಕೊಂಡೆವು. ಮೆಜೆಸ್ಟಿಕ್ ರೈಲು ನಿಲ್ದಾಣ ಮೊದಲಿನಂತಲ್ಲ. ಬಹಳ ಸ್ವಚ್ಛ ವಾಗಿತ್ತು. ಹೆಚ್ಚೆಂದರೆ ನಮ್ಮ ಮನೆಗಿಂತಲೂ ಸ್ವಚ್ಛವಾಗಿತ್ತು ಆದರೂ. ಕಸ ಗುಡಿಸುವಾಕೆ ಕಸಗುಡಿಸುತ್ತಾ ಬಂದಳು. ಆಗ ಅಲ್ಲೇ ಕಂಬದ ಸಂದಿಯಲ್ಲಿ ಯಾರೋ ಕಾಫಿ ಕುಡಿದು ಲೋಟವನ್ನು ಮುದ್ದೆ ಮಾಡಿ ಸಿಕ್ಕಿಸಿ ಇಟ್ಟಿದ್ದು ಗಮನಿಸಿದೆ. ಗುಡಿಸುವಾಕೆ ಅದನ್ನು ಕಷ್ಟಪಟ್ಟು ತೆಗೆದು ಸ್ವಚ್ಛ ಮಾಡಿ ತೆಗೆದಕೊಂಡು ಹೋದಳು. ಆಕೆ ಅತ್ತ ಹೋದ ಮೇಲೆ ಒಂದಿಬ್ಬರು ಅಲ್ಲಿ ಕುಳಿತವರು ಚಿಪ್ಸ್ ತಿನ್ನುತ್ತಾ ಖಾಲಿ ಕವರ್ ಅಲ್ಲೇ ಎಸೆದರು. ಕಂಬಕ್ಕೆ ಒಂದರಂತೆ‌ ಕಸದ ಬುಟ್ಟಿ ಇಟ್ಟಿದ್ದರೂ ಎಲ್ಲೆಂದರಲ್ಲಿ ಕಸ ಎಸೆದ ವರ್ತನೆ ಅಸಹ್ಯವಾಗಿ ಕಂಡಿತು. ಆಗತಾನೆ ಕಸ ಗುಡಿಸಿ ಹೋದರೂ ಅದರ ಬಗ್ಗೆ ಗೌರವ ಇಲ್ಲದ ಅನಾಗರಿಕರು. ನಾವು ಸಮಸ್ಯೆಗಳನ್ನು ಸೃಷ್ಟಿ ಮಾಡುವ ಸಂಖ್ಯೆ ಹೆಚ್ಚಿರುತ್ತಾರೆ. ಅದರೆ ಪರಿಹರಿಸಿಕೊಳ್ಳುವರು...ಕೇವಲ ಕೆಲವು ಜನಗಳು.

ಆನಂತರ  ರೈಲು ಹೊರಡುವಾಗ ಹೋಗುವವರಿಗೆ ವಿದಾಯ ಹೇಳಿ ನಾನೂ ಹೊರಟೆ. ರೈಲು ನಿಧಾನವಾಗಿ ಹೊರಟಿತು. ಹಾಗೆ ಪ್ಲಾಟ್ ಫಾರಂ ನಲ್ಲಿ ಹೊರಟ ರೈಲಿನ ಜೊತೆ ಹೆಜ್ಜೆ ಹಾಕುತ್ತಾ ಮುಂದೆ ಬರುತ್ತಿದ್ದೆ. ಒಬ್ಬಾತ ಏನೋ ಖರೀದುಸುವುದಕ್ಕೆ ರೈಲಿನಿಂದ‌ ಇಳಿದವನು ರೈಲು ಹೊರಟಿರುವುದನ್ನು ನೋಡಿ ಗಾಬರಿಯಿಂದ ಓಡಿದೆ. ಆದರೆ ರೈಲು ಅಷ್ಟೊತ್ತಿಗೆ ವೇಗ ಪಡೆದಾಗಿತ್ತು. ರೈಲಿನ‌  ಹಿಂದಿನ ಭೋಗಿಯಲ್ಲಿ ಲೈಟ್ ಹಿಡಿದು ಸಿಗ್ನಲ್ ಕೊಡುವಾತನಲ್ಲಿ ಬೊಬ್ಬಿಟ್ಟು ಗೋಗರೆದ, ರೈಲು ಮುಂದೆ ನಿಲ್ಲಬಹುದು ಎಂದುಕೊಂಡು ಹಿಂದೆ ಪ್ಲಾಟ್ ಫಾರಂ ತುದಿಯ ತನಕವೂ ಓಡಿದ, ರೈಲು ಆತನನ್ನು ಅಣಕಿಸುವಂತೆ ಮುಂದೆ ಮುಂದೆ ಹೋಗಿ ಮತ್ತೂ ವೇಗ ಪಡೆಯಿತು. ಆತನ ಮನೆ ಮಂದಿ ರೈಲಿನಲ್ಲಿ ಈತ ಇಲ್ಲಿ ಏಕಾಂಗಿ. ಆತ ಕೆಲವು ಘಳಿಗೆಗೆ ಸ್ವಯಂ ಪ್ರಜ್ಞೆ ಕಳೆದದ್ದು ಗಂಭೀರ ಸಮಸ್ಯೆಗೆ ಕಾರಣವಾಯಿತು. 


ರೈಲು ನಿಲ್ದಾಣದಿಂದ ಹೊರಟು ಸಿಟಿ ಬಸ್ಸು ನಿಲ್ದಾಣಕ್ಕೆ ಬಂದೆ. ಮಲ್ಲೇಶ್ವರಂ ಕಡೆ ಹೋಗುವ ಬಸ್ಸು ಇನ್ನೂ ಬಂದಿರಲಿಲ್ಲ. ಬಹಳಷ್ಟು ಮಂದಿ ಕಾಯುತ್ತಿದ್ದರು.  ಸುಮಾರು ಹದಿನೈದು ನಿಮಿಷ ಕಾಯಬೇಕಾಯಿತು. ಹದಿನೈದು ನಿಮಿಷದ ದೀರ್ಘ ಅವಧಿಯಾದುದರಿಂದ ಕೊನೆಗ ಸಾಕಷ್ಟು ಜನ ಜಂಗುಳಿಯಾಯಿತು. ಸರಕಾರಿ ಬಸ್ಸುಗಳೆಂದರೆ ಈಗಿನ ಮಳೆಯಂತೆ. ಅದರಲ್ಲೂ ಬೆಂಗಳೂರಿನ  ಬಿ ಎಂ ಟಿ ಸಿ ...ಯಾವಾಗ ಬರುತ್ತದೆ ಎಂದು ಊಹಿಸುವುದು ಕಷ್ಟ. ಇನ್ನು ಬಂದರೂ ಎರಡು ಮೂರು ಒಟ್ಟಿಗೆ ಬರುತ್ತವೆ. ನಾವು ಯಾಕಾಗಿ ಓಡುತ್ತೇವೆ ಎಂಬ ಪ್ರಜ್ಞೆ ಅದನ್ನು ಓಡಿಸುವವರಿಗೆ ಇರುವುದಿಲ್ಲ. ಹಾಗಾಗಿ ಕೊನೆ ಎರಡು ಬಸ್ಸು ಒಟ್ಟಿಗೆ ಬಂತು. ನಾನು ಹಿಂದಿನ ಬಸ್ಸಲ್ಲಿ ಹೋಗಿ ಮೊದಲು ಕುಳಿತೆ. ಹಾಗೆ ಹೊರಗೆ ನೋಡುತ್ತೇನೆ. ಎದುರಿನ ಬಸ್ಸು ಬಿಟ್ಟು ಸಾಕಷ್ಟು ಜನ ಈ ಬಸ್ಸಿಗೆ ಮುತ್ತಿಕೊಂಡರು. ಅಷ್ಟು ಹೊತ್ತಿನ ಕಾಯುವಿಕೆ ಹಲವರ ಸಹನೆಯನ್ನು ಕೆಡಿಸಿತ್ತು. ಅಷ್ಟೂ ಜನ ಹತ್ತುವಾಗ ಒಬ್ಬ ಗುಂಪಿನಿಂದ ಆಚೆಗೆ ಸರಿದು ಹೋದ. ಈ ಬಸ್ಸು ಜನರಿಂದ ತುಂಬಿ ಬಸ್ಸು ಗಡಿಬಿಡಿಯಿಂದ ಆಗಲೇ ಹೊರಟಿತು. ಇನ್ನೇನು ಬಸ್ಸು ಸ್ವಲ್ಪ ಮಂದೆ ಚಲಿಸಿರಬಹುದು.  ಒಬ್ಬ ಪಿಕ್ ಪಾಕೆಟ್ ಆಯಿತು ಎಂದು ಕಿರುಚಿದ, ಉಳಿದವರೆಲ್ಲರೂ ಮನೆಯೊಳಗೆ ಹಾವು ಎಂದು ಒಬ್ಬ ಕಿರುಚುವಾಗ ಉಳಿದವರು ಹೆದರಿ ಕುಪ್ಪಳಿಸುವಂತೆ.....ಎಲ್ಲರೂ ಕಳ್ಲ ಅಲ್ಲೇ ಇದ್ದಾನೆ ಎಂಬಂತೆ ತಮ್ಮ ಜೇಬು ಮುಟ್ಟಿ ನೋಡಿದರು. ಕಿರುಚಿದವ ಜೋರು ಅಳತೊಡಗಿದ. ಪಾಪ ಆತನ ಪರ್ಸ್ ಯಾರೋ ಎಗರಿಸಿದ್ದರು.  ಆತನ ಕಿರುಚಾಟಕ್ಕೆ  ಬಸ್ಸು ನಿಂತಿತು. ಆತ ಇಳಿದು ಹೋದ.  ಆಗ ಒಬ್ಬಾತ ಯಾಕೆ ಗುಂಪಿನಿಂದ ದೂರ ಸರಿದು ಹೊದ ಅಂತ ತಿಳಿಯಿತು. ಛೇ ಬಹಳ ನಿರಾಶೆಯಾಯಿತು. ಒಬ್ಬ ಕಳ್ಳ ನನ್ನ ಕಣ್ಣೆದುರೇ ಸರಿದು ಹೋದ. ಪಾಪ ಬಡಪಾಯಿಯೊಬ್ಬ ಪ್ರಜ್ಞೆ ಕಳೆದುಕೊಂಡ, ಅದು ಆತನ ಬದುಕಿನ ಮರೆಯಲಾಗದ ಘಟನೆಗೆ ಕಾರಣವಾಯಿತು. 

Saturday, December 2, 2023

ಸ್ವಾಭಿಮಾನ

        ಬೀರೂರಿನಿಂದ  ಶಿವಮೊಗ್ಗಕ್ಕೆ ಹೋಗುವ ಕರ್ನಾಟಕ ಸಾರಿಗೆ  ಬಸ್ಸಿನಲ್ಲಿ ಮುಂದಿನ ಭಾಗದಲ್ಲಿ ಕುಳಿತಿದ್ದೆ. ಪಕ್ಕದ ಸೀಟಿನಲ್ಲಿ ಅರುವತ್ತರ ವೃದ್ಧೆಯೊಬ್ಬಳು ಬಂದು ಕುಳಿತಳು. ಜತೆಗೆ ಪುಟ್ಟ ಹುಡುಗನೊಬ್ಬ ಇದ್ದ. ಕಂಡಕ್ಟರ್ ಟಿಕೇಟ್ ಗಾಗಿ ಹತ್ತಿರ ಬಂದ. ವೃದ್ದೆ ತರೀಕೆರೆ ಅಂತ ಹೇಳಿ ಕೈಯಲ್ಲಿದ್ದ ನೋಟೊಂದನ್ನು  ಕೊಟ್ಟಳು. ಆತ ಆಧಾರ್ "ವೋಟರ್ ಇಲ್ವೇನಮ್ಮ?" ಎಂದು ಗೊಣಗುತ್ತಾ ಹಣ ಪಡೆದು ಟಿಕೇಟ್ ಕೊಟ್ಟ. ನಾನು ಆಕೆಯಲ್ಲಿ ಕೇಳಿದೆ " ಅದೇನು ಇಲ್ಲ ಆಧಾರ್ ಇದ್ರೆ ಫ್ರೀಯಾಗಿ ಹೋಗಬಹುದಿತ್ತಲ್ವ?" 


    " ಹೌದು, ಆದರೆ ನನಗೆ ಫ್ರೀ  ಬೇಡ. ವಯಸ್ಸು ಇಷ್ಟಾಯಿತು. ಇದುವರೆಗೆ ನನಗೆ ಬೇಕಾದ್ದನ್ನು ದುಡಿದು ಮಾಡ್ತಾ ಇದ್ದೇನೆ. ಒಂದು ಬಸ್ಸಿನ ದುಡ್ಡೂ ಕೊಡುವಷ್ಟೂ ದುಡಿದು ಸಂಪಾದಿಸುವದಕ್ಕೆ ಸಾಧ್ಯವಿಲ್ಲದೇ ಇದ್ದರೆ ಈ ಜನ್ಮ ಏನಕ್ಕೆ ಬೇಕು? ಇಷ್ಟು ವರ್ಷ ದುಡ್ದುಕೊಡದೇ ಹೋಗಿಲ್ಲ ಈಗ ಯಾಕೆ ಹೋಗಬೇಕು? ಉಚಿತ ಎಲ್ಲವೂ ಸಿಗಬಹುದು ಆದರೆ,  ಒಂದು ತುತ್ತು ಅನ್ನ ಅದನ್ನು ಸ್ವಂತ ದುಡಿಮೆಯಿಂದ ತಿನ್ನುವುದಕ್ಕೆ ಸಾಧ್ಯವಿಲ್ಲದೇ ಇದ್ದರೆ ಈ ಮನುಷ್ಯ ಜನ್ಮ ಯಾಕೆ ಬೇಕು?   "

        ಆಕೆ ಹೇಳಿದ್ದನ್ನು ಕೇಳಿ ಗಾಬರಿಯಾಗುವ ಸರದಿ ನನ್ನದು.  ಸ್ವಂತ ದುಡಿಮೆಯ ರುಚಿ ಅದನ್ನು ಅನುಭವಿಸುವ ಆಕೆಯ ಸ್ವಾಭಿಮಾನ ಇಷ್ಟುವರ್ಷ ಅದನ್ನೇ ಪಾಲಿಸಿಕೊಂಡು ಬಂದ ನಿಷ್ಠೆ ಈಗ ಯಾವುದೋ ಕಾರಣಕ್ಕೆ ಉಚಿತವಾಗಿ ಸಿಗುತ್ತದೆ ಎಂದು ಅದನ್ನು ಅನುಭವಿಸುವುದಕ್ಕೆ ಅಕೆಯ   ಈ ಅಭಿಮಾನ ಅಡ್ಡಬಂತು. ಸರಳವಾಗಿ ಆಕೆ ಹೇಳಿದ್ದಳು. ನಮಗೆ ಬೇಕಾಗಿರುವುದನ್ನು ನಾವು ದುಡಿದು ಸಂಪಾದಿಸಬೇಕು. ಅದು ಸಾಧ್ಯವಿಲ್ಲದೇ ಇದ್ದರೆ ಅದೊಂದು ಜೀವನವಲ್ಲ. ದುಡಿಯುವುದಕ್ಕೆ ಆರಂಭಿಸುವಾಗ ನನ್ನದೇ ಒಂದು ಐದು ರೂಪಾಯಿ ನೋಟು ನನ್ನ ಕೈಗೆ ಸಿಕ್ಕಿದಾಗ ಆಗ ನಾನು ಅನುಭವಿಸಿದ ಸಂತೋಷ ನೆನಪಾಯಿತು. ನನ್ನದಲ್ಲದ ವಸ್ತುವನ್ನು ನಮಗೆ ಅನುಭವಿಸುವ ಹಕ್ಕು ನಮಗಿಲ್ಲ.  ಭಿಕ್ಷುಕನಿಗೆ ಅನುಕಂಪದಿಂದ ಕೊಡುವ ಭಿಕ್ಷೆಯೂ ಆತನನ್ನು ಸಾಲಗಾರನನ್ನಾಗಿ ಮಾಡುತ್ತದೆ. ಆತ ತೀರಿಸಲಿ ಬಿಡಲಿ...ಆತ ಅದರಿಂದ ಋಣ ಮುಕ್ತನಾಗುವುದಕ್ಕೆ ಸಾಧ್ಯವಿಲ್ಲ. ಉಚಿತವಾಗಿ ಎಲ್ಲವೂ ಸಿಗಬಹುದು, ಆದರೆ ಸ್ವಾಭಿಮಾನ ಅದು ಉಚಿತವಾಗಿ ಸಿಗುವುದಕ್ಕೆ ಸಾಧ್ಯವಿಲ್ಲ. ಇಂದು ಎಲ್ಲವೂ ಉಚಿತವಾಗಿ ಸಿಗಬಹುದು. ಅದನ್ನು ಅನುಭವಿಸುತ್ತಾ ಇರುವಾಗ ಮುಂದೊಂದು ದಿನ ಅದು ಸಿಗದಂತಹ ಪರಿಸ್ಥಿತಿ ಬರಬಹುದು. ಯಾಕೆಂದರೆ ಅದಕ್ಕೂ ಒಂದು ಪರಿಮಿತಿ ಇರುತ್ತದೆ. ಆಗ ಅದು ಸಿಗದೇ ಇದ್ದಾಗ ಕದಿಯುವುದಕ್ಕೆ ಕಸಿಯುವುದಕ್ಕೆ ತೊಡಗಬಹುದು. ಯಾಕೆಂದರೆ ದುಡಿಮೆಯನ್ನೇ ಮರೆತಿರುವಾಗ ಮತ್ತೆ ಪಡೆಯುವ ಬಗೆ ಹೇಗೆ? 

        ಮೊನ್ನೆ ಯಾರೋ ಒಬ್ಬರು ಹೇಳಿದರು.  ಮಹಿಳೆಯರ ಉಚಿತ ಪ್ರಯಾಣದ ಬಗ್ಗೆ ಆಕ್ಷೇಪಿಸಿದರೆ ಅದು ಸ್ತ್ರೀಯರಿಗೆ ಅವಮಾನ ಮಾಡಿದಂತೆ.  ಮಾನ ಎಂಬುದು ಕೇವಲ ಸ್ತ್ರೀಯರಿಗೆ ಸೀಮಿತವಾಗಿರುತ್ತದೆ ಎಂಬುದನ್ನು ಸುಸಂಸ್ಕೃತ ಸಮಾಜ ಒಪ್ಪುವುದಿಲ್ಲ. ಸ್ತ್ರೀಯಾಗಲೀ ಪುರುಷನಾಗಲೀ ಮಾನ ಅದು ಸಮಾನವಾಗಿರುತ್ತದೆ. ಯಾರು ಹೆಚ್ಚೂ ಅಲ್ಲ ಕಡಿಮೆಯೂ ಅಲ್ಲ. ಅದು ಅವರವರು ಉಳಿಸಿಕೊಂಡು ಅವರಿಗೆ ಅವರೇ ಮೌಲ್ಯವನ್ನು ತರುವಂತೆ. ಹೆಣ್ಣು ಪ್ರಕೃತಿ ಸಹಜ ಅಬಲೆಯಾಗಿರಬಹುದು, ಆದರೆ ಆಕೆ ಬುದ್ಧಿವಂತೆಯಾಗಿರುತ್ತಾಳೆ. ಅದು ಅನಿವಾರ್ಯ. 

ಅತೀ ಕೆಟ್ಟದ್ದನ್ನು ಸಹ  ಉಚಿತವಾಗಿ ಕೊಡಿ....ಅದಕ್ಕೆ ಹಾತೊರೆಯುತ್ತಾರೆ. ಒಳ್ಳೆ ಮೌಲ್ಯಯುತವಾದದ್ದನ್ನು ಯಾರೂ ಬಯಸುವುದಿಲ್ಲ