Monday, October 28, 2019

ಧರ್ಮ ನಿಂದನೆಯಲ್ಲಿ ನಿಂದನೆಯೇ ಧರ್ಮ.....

           
ಬಾಲ್ಯದ ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ ನಡೆದ ಒಂದು ಘಟನೆ ನನಗೆ ಈಗಲೂ ಯೋಚಿಸುವಂತೆ ಮಾಡುತ್ತದೆ. ಬ್ರಾಹ್ಮಣ ಬಾಲಕನೊಬ್ಬ ಅದಾಗಲೇ ಬ್ರಹ್ಮೋಪದೇಶವಾಗಿ ಜನಿವಾರ ಧರಿಸಿ ಬರುತ್ತಿದ್ದ. ಆತನಿಗೆ ಉಪನಯನ ಆಗಿದೆ ಎಂದು ತಿಳಿದ ಕೆಲವು ಅನ್ಯರು ಆತನ ಅಂಗಿಯೊಳಗೆ ಕೈ ಹಾಗಿ ಜನಿವಾರ ಹಿಡಿದೆಳೆಯುತ್ತಿದ್ದರು. ಬಾಲಕ ಬಹಳಷ್ಟು ಇರಿಸು ಮುರುಸು ಅನುಭವಿಸುತ್ತಿದ್ದ. ಅದಾಗಿ ಶಾಲೆಯ ಮೈದಾನದಲ್ಲಿ ವಿರಾಮದ ವೇಳೆಯಲ್ಲಿ ಆಟವಾಡುತ್ತಿದ್ದಾಗ , ಅದು ಕಬ್ಬಡಿಯಾಟ. ಸಹಜವಾಗಿ ಎಲ್ಲ ಮಕ್ಕಳು ಒಟ್ಟಾಗಿ, ಅಲ್ಲಿ ಚೋಮ ದೂಮ ಕೃಷ್ಣ ಅದ್ದು ಮೂಸೆ ಅಬೂಬಕ್ಕರ್, ಜೋಸೆಫ್ ಎಲ್ಲಾ ಮಕ್ಕಳು ಜತೆಯಾಗಿ ಆಟವಾಡುತ್ತಿದ್ದರು. ಹಾಕಿದ ಉಡುಪು ಕೊಳೆಯಾಗಬಾರದು ಎಂದು ಕೆಲವರು ಅಂಗಿ ಕಳಚಿ ಹತ್ತಿರದ ಮರದ ಗೆಲ್ಲಿಗೆ ಸಿಕ್ಕಿಸಿ ಕಬ್ಬಡಿ ಆಟವಾಡುತ್ತಿದ್ದರೆ, ಈ ಬ್ರಾಹ್ಮಣ ಬಾಲಕನ ಜನಿವಾರ ಒಬ್ಬ ಬೇಕೆಂದೇ ಗೇಲಿ ಮಾಡಿ ತುಂಡರಿಸಿದ. ಬಾಲಕನಿಗೆ ಕಣ್ಣೀರು ಒತ್ತರಿಸಿ ಬಂತು.  ಆತ ಅಳುತ್ತಿದ್ದರೆ ಉಳಿದವರು ಗೇಲಿ ಮಾಡಿ ನಗುತ್ತಿದ್ದರು.  ಭೇದವಿಲ್ಲದೇ ಆಟವಾಡುತ್ತಿದ್ದ ಮಕ್ಕಳ ನಡುವೆ ಒಂದು ನೂಲು ದೊಡ್ಡ ಕಂದಕವನ್ನೇ ಉಂಟು ಮಾಡಿತ್ತು. ಇದನ್ನು ಕಣ್ಣಾರೆ ಕಂಡವನು ನಾನು. ಆದರೂ ಆ ಬಾಲಕನನ್ನು ಸಾಂತ್ವಾನ ಮಾಡುವ ಪ್ರಬುದ್ದತೆ ಆ ಬಾಲ ಮನಸ್ಸಿಗೆ ಹೊಳೆಯಲಿಲ್ಲ. ಬದಲಿಗೆ ನಮ್ಮ ಧರ್ಮಾಚರಣೆ ಬಗ್ಗೆ ಸಿಟ್ಟು ಬಂತು. ಬಾಲ್ಯದಲ್ಲಿ ಈ ಅಪೂರ್ಣತೆ ಸಹಜವೇ. ಮಾಸ್ಟರ ಒಂದೆರಡು ಏಟಿಗೆ ಆ ಪ್ರಕರಣ ಅಲ್ಲಿ ನಿಂತು ಹೋಯಿತು. ಆದರೆ ಆ ಘಟನೆ ಇಂದಿಗೂ ಮನಸ್ಸಿನಲ್ಲಿ ಅಚ್ಚಳಿಯದೆ ಹಾಗೇ ಉಳಿದಿದೆ.

            ಧರ್ಮ ....ಇಂದು ವ್ಯಕ್ತಿ ರೀತ್ಯಾ ವೈರುಧ್ಯವನ್ನೇ ಸೃಷ್ಟಿಸಿದ್ದು ಅಧಿಕ ಎನ್ನಬೇಕು. ಸಾಮರಸ್ಯ ಬೆಸೆದ ಉದಾಹರಣೆಗಳು ಕೇವಲ ಹುಬ್ಬೇರಿಸುವಂತೆ ಮಾಡುತ್ತಿದೆ ಎಂದರೆ ಮನುಷ್ಯ ಧರ್ಮದ ಹಾದಿಯನ್ನು ಎಷ್ಟು ವಕ್ರಗೊಳಿಸಿದ್ದಾನೆ ಎಂದು ಆಶ್ಚರ್ಯವಾಗುತ್ತದೆ.   ಮನುಷ್ಯ  ಧರ್ಮವನ್ನು ಅನುಸರಿಸುವುದಕ್ಕಿಂತಲೂ  ದುರ್ವ್ಯಾಖ್ಯಾನಗೊಳಿಸುವುದೇ ಅಧಿಕ. ಹತ್ತು ಹಲವು ಗುರು ಪೀಠಗಳೂ ಇದಕ್ಕೆ ಹೊರತಾಗಿಲ್ಲ ಎಂಬುದು ದುರ್ದೈವದ ಸಂಗತಿ.  ಇರಲಿ.  ಮಗುವಾಗಿರುವಾಗಲೇ ಅಪ್ಪ ಅಮ್ಮ ಹೆದರಿಸುತ್ತಾರೆ. ಅದು ಮಾಡಬೇಡ ದೇವರು ಶಾಪ ಕೊಡುತ್ತಾನೆ.  ಮಗುವಿನಲ್ಲಿ ದೇವರ ಬಗ್ಗೆ ಭಯ ಹುಟ್ಟಿಸುವುದು ಒಂದಾದರೆ ಭಯದಿಂದ ಭಕ್ತಿ ಹುಟ್ಟುತ್ತದೆ ಎಂಬುದು ಇನ್ನೊಂದು. ಎರಡೂ ಇಂದು ಧರ್ಮದ ಸ್ವರೂಪವನ್ನೇ ಬದಲಾಯಿಸಿವೆ. ಶಾಪ ಕೊಡುವವನು ದೇವರು ಹೇಗಾಗುತ್ತಾನೆ. ಸರಳವಾಗಿ  ಯೋಚಿಸುವ ಹೆತ್ತು ಸಾಕಿದ ಮಗುವಿಗೆ ಅಮ್ಮ ಶಪಿಸಿಯಾಳೆ? ಅಂತರಂಗದ ಪ್ರೀತಿ ಅದಕ್ಕೆ ಆಸ್ಪದ ನೀಡಬಹುದೇ? ಹೀಗೆ ದೇವರು ಧರ್ಮ ಬ್ರಾಹ್ಮಣ ದುರ್ವ್ಯಾಖ್ಯಾನದ ವಸ್ತುಗಳಾಗಿವೆ. ಬ್ರಹ್ಮ ಪದದ ಕಲ್ಪನೆಯನ್ನೆ ಹಾಳುಗೆಡವಿ ಅದು ಧರ್ಮ ಇದು ಧರ್ಮ ಅಂತ ವಿವಿಧ ಧರ್ಮಗಳನ್ನು ಅಂಧರಾಗಿ ಹಿಂಬಾಲಿಸುವಾಗ ಧರ್ಮದ ಮರ್ಮ ಏನು ಅಂತ ಹಲವು ಸಲ ಅರ್ಥವಾಗುವುದಿಲ್ಲ.

             ನೆನಪಿದೆ  ಅಂದು ಬಾಲ್ಯದಲ್ಲಿ ನನಗೂ ಕಟೀಲು ದೇವಿಯ ಸನ್ನಿಧಿಯಲ್ಲಿ ಬ್ರಹ್ಮೋಪದೇಶವಾಗಿತ್ತು. ಪ್ರತಿವರ್ಷ ಅಲ್ಲಿ ಸಾಮೂಹಿಕ ಬ್ರಹ್ಮೊಪದೇಶ ಉಚಿತವಾಗಿ ಮಾಡುತ್ತಿದ್ದರು. ಹಾಗಾಗಿ ತೀರ ಬಡತನಲ್ಲಿದ್ದ ನಾನು ಬ್ರಾಹ್ಮಣ ವಟುವಾದೆ. ಉಪದೇಶ ಮಾಡಿದ ಗುರುಗಳು( ಪುರೋಹಿತರು) ಹೇಳಿದ್ದರು  ದಂಡವನ್ನು ಕೈಯಿಂದ ಕೆಳಗಿಡಬೇಡ, ಉಚ್ಚಿಷ್ಟವನ್ನು ತಿನ್ನಬೇಡ, ಶೌಚಕ್ಕೆ ಹೋಗುವಾಗ ಆಚರಿಸಬೇಕಾದ ಕ್ರಮಗಳು ಹೀಗೆ ಹತ್ತು ಹಲವು ನಿಯಮಗಳು. ಅದರಲ್ಲಿ ಒಂದು ಭಸ್ಮಧಾರಣೆ. ಸಂಧ್ಯಾವಂದನೆಗೆ ತೊಡಗುವ ಮೊದಲು ಹಚ್ಚಿದ ಭಸ್ಮ ದೇಹಶುದ್ದಿಗೂ ಮನಸ್ಸಿನ ಶುದ್ದಿಗೂ ಕಾರಣವಾಗುತ್ತದೆ. ಆದರೆ ಸಂಧ್ಯಾವಂದನೆ ಅಂದು ಸಾಯಂಕಾಲ ನಾವು ವಾಡಿಕೆಯಂತೆ ಬೀದಿ ಬದಿಯ ಅಂಗಡಿಗೆ ಹೋದೆ. ನನ್ನ ಹಣೆಯಲ್ಲಿ ಭುಜದಲ್ಲಿದ್ದ ಭಸ್ಮ ನೋಡಿ ಸ್ವತಃ ಹಿಂದುವಾಗಿದ್ದ ಅಂಗಡಿಯವನೂ ತಮಾಷೆ ಮಾಡಿ ಗಹ ಗಹಿಸಿ ಉಳಿದವರೆಲ್ಲ ನಕ್ಕಿದ್ದು ಈಗಲೂ ನೆನಪಿದೆ.  .  ಆನಂತರ ಅಂಗಡಿಗೆ ಹೋಗಬೇಕಿದ್ದರೆ ಮೈ ಮೇಲಿನ ಭಸ್ಮ ಎಲ್ಲ ಉಜ್ಜಿ ಸ್ವಚ್ಚ ಮಾಡಿ ಹೋಗುತ್ತಿದ್ದೆ.  ಈಗಲೂ ಶಾಲೆಗೆ ಹೋಗುವ ಭಟ್ರುಗಳ ಮಕ್ಕಳಿಗೆ ಇದೊಂದು ಸಮಸ್ಯೆಯೇ. ಹಣೆಯ ಮೇಲಿನ ಭಸ್ಮವನ್ನು ಅಳಿಸಿ ಶಾಲೆಗೆ ಹೋಗುವ ಮಕ್ಕಳು ಬಹಳಷ್ಟು ಮಂದಿ ಇದ್ದಾರೆ.     ಈಗಿನ ಅಂಗ್ಲ ಮಾಧ್ಯಮ ಶಾಲೆಗಳಲ್ಲಿ ಇದಕ್ಕೆ ನಿಯಮ ಇದ್ದರೂ ಆಶ್ಚರ್ಯ ಪಡಬೇಕಿಲ್ಲ. ಭಸ್ಮ ಉಜ್ಜಿ ತೆಗೆದು ಶಾಲೆಗೆ ಬರಬೇಕು.

            ಈಗ ಯೋಚಿಸುತ್ತೇನೆ. ಇವುಗಳೆಲ್ಲ ಯಾಕೆ ಧರ್ಮ ಜಾತಿ ನಿಂದನೆಯಾಗುವುದಿಲ್ಲ?  ಜಾತಿ ಎಂದಾಕ್ಷಣ  ಕೇವಲ ಯಾವುದೋ ಒಂದು ಪಂಗಡ ಮಾತ್ರ ಯಾಕೆ ಗುರಿಯಾಗಬೇಕು? ಅರ್ಥವಾಗುವುದಿಲ್ಲ. ನಮ್ಮಲ್ಲಿ ತೇಗದ (ಸಾಗುವಾನಿ) ಮರವನ್ನು ಜಾತಿ ಮರ ಅಂತ ಹೇಳುತ್ತಾರೆ. ಹಾಗಾದರೆ ಉಳಿದ ಮರಗಳಿಗೆ ಜಾತಿಯೇ ಇಲ್ಲ. ಇಲ್ಲಿ ಜಾತಿ ಎಂಬುದು ಶ್ರೇಷ್ಠತೆಯ ಸಂಕೇತವಾಗುವಾಗ ಮನುಷ್ಯ ಆಚರಣೆಯಲ್ಲಿ ಜಾತಿ ಎಂದಾಕ್ಷಣ ಹೌ ಹಾರುವ ಸ್ಥಿತಿ ಬರುತ್ತದೆ. ಜಾತಿ ಯಾವುದು ಎಂದು ಕೇಳುವುದೇ ಜಾತಿ ನಿಂದನೆಯಾಗುತ್ತದೆ. ನಿಂದನೆಯ ಮುಖಗಳು ಅಚ್ಚರಿಯಾಗುತ್ತವೆ.

            ಮಂಗಳೂರಿನಲ್ಲಿ ನನ್ನ ಪ್ರಾಥಮಿಕ ಶಾಲಾ ವಿಧ್ಯಾಭ್ಯಾಸ ಒಂದಷ್ಟು ಸಮಯ ಇತ್ತು. ನಾಲ್ಕು ಐದು ಆರನೇ ತರಗತಿ ಅಲ್ಲಿಯೇ ಕಲಿತಿದ್ದೆ ಅದು ಎಪ್ಪತ್ತರ ದಶಕ. ಹಾಗೆ ಇರುತ್ತ ಶಾಲೆಯ ಆಟದ ಮೈದಾನದಲ್ಲಿ ನಡೆದ  ಒಂದು ಘಟನೆ ಇನ್ನೂ ನೆನಪಿದೆ. ಅಲ್ಲಿ ಮುಸಲ್ಮಾನ ಮಕ್ಕಳು ಬಹಳ ಅಂದರೆ ಬಹಳ ಕಡಿಮೆ ಸಂಖ್ಯೆಯಲ್ಲಿದ್ದರು, ಉಳಿದಂತೆ ಸಮಾನ ಸಂಖ್ಯೆಯಲ್ಲಿ ಹಿಂದು ಕ್ರಿಶ್ಛನ ಹುಡುಗರು ಕಲಿಯುತ್ತಿದ್ದರು. ಅದು ಚರ್ಚ್ ಆಢಳಿತಕ್ಕೆ ಒಳಪಟ್ಟ ಒಂದು ಶಾಲೆ. ಒಂದು ದಿನ ಸಂಜೆ, ಆಟವಾಡುತ್ತಿರಬೇಕಾದರೆ ನನ್ನದೇ ತರಗತಿಯ  ಒಬ್ಬ ಮುಸ್ಲಿಂ ಬಾಲಕ, ಆತ ನಿತ್ಯವೂ ಬಿಳಿ ಟೊಪಿ ಧರಿಸಿ ಬರುತ್ತಿದ್ದ.  ಕೆಲವು ಮಕ್ಕಳು ಆಟವಾಡುತ್ತಿದ್ದರೆ , ಉಳಿದ ಮಕ್ಕಳು ಆ ಟೋಪಿ ತಲೆಯಿಂದ ಹಾರಿಸಿ ಆತನನ್ನು ಗೇಲಿ ಮಾಡುತ್ತಿದ್ದರು.  ಕೊನೆಗೆ ಜಗಳವಾಗಿ ಏಕಾಂಗಿಯಾದ ಬಾಲಕನ ಮೇಲೆ ಹೊಡೆಯುವುದಕ್ಕೂ ತೊಡಗಿದರು. ಪಾಪ ಹುಡುಗ ಏಕಾಂಗಿ.  ನಂತರ ಹೆಡ್ ಟೀಚರ್ ಕರೆದು ನಾಗರ ಬೆತ್ತದಲ್ಲಿ ಬರೆ ಬರುವಂತೆ  ಆ ಮಕ್ಕಳಿಗೆ ಹೊಡೆದಿದ್ದರು. ಅದರಲ್ಲಿ ಒಬ್ಬಾತನ ಅಪ್ಪ ಮರುದಿವಸ ಶಾಲೆಗೆ ಇದನ್ನು ಕೇಳುವುದಕ್ಕಾಗಿ ಬಂದಿದ್ದ.!  ಈಗ ಯೋಚಿಸುತ್ತೇನೆ ಯಾಕೆ ಇವುಗಳೆಲ್ಲ ಧರ್ಮನಿಂದನೆ, ಜಾತಿ ನಿಂದನೆಯಾಗುವುದಿಲ್ಲ? ಯಾರನ್ನೆ ಒಬ್ಬನನ್ನು ನಿಂದಿಸುವುದೆಂದರೆ ಈ ಸ್ವತಂತ್ರ ಭಾರತಲ್ಲಿ ಆತನ ಸ್ವಾತಂತ್ರ್ಯ ಹರಣ ಮಾಡಿದಂತೆ.  ಸ್ವಾತಂತ್ರ್ಯ ಎಲ್ಲರೂ ಸಮಾನವಾಗಿ ಅನುಭವಿಸಬೇಕಾದ ಹಕ್ಕು. ಹಾಗಿದ್ದರೆ ಅದನ್ನು ಸ್ವಾತಂತ್ರ್ಯ ಎನ್ನಬೇಕು. ಗಾಳಿ ಬೆಳಕು ಪಂಚಭೂತಗಳನ್ನು  ಹಂಚಿ ತಿನ್ನುವ  ಮನುಷ್ಯ ಸ್ವಾತಂತ್ರ್ಯವನ್ನು ಹಂಚಿ ತಿನ್ನುವುದಿಲ್ಲ.

            ಬಾಲ್ಯದಲ್ಲಿ ಒಂದಷ್ಟು ದಿನ ನನ್ನ ಅಜ್ಜನಲ್ಲಿ ವೇದಾಧ್ಯಯನ ಮಾಡುತ್ತಿದ್ದೆ. ಆವಾಗಿನ ಒಂದು ಘಟನೆ, ಅಜ್ಜನೊಂದಿಗೆ ಒಂದು ಮನೆಗೆ ಪೌರೋಹಿತ್ಯಕ್ಕೆ ಹೋಗಿದ್ದೆ. ಯಾವುದೋ ಬ್ರಾಹ್ಮಣರಲ್ಲದವರ ಮನೆಯದು. ಅಜ್ಜನಲ್ಲಿ ಅಪಾರವಾದ ಗೌರವವನ್ನು ಇಡೀ ಕುಟುಂಬವೇ ಹೊಂದಿತ್ತು. ಹೋದಕೂಡಲೆ ಅಜ್ಜನ ಕಾಲಿಗೆ ಬಿದ್ದು ನಮಸ್ಕರಿಸಿದ್ದು ಆಗ ನಾನು ಅಚ್ಚರಿಯಿಂದ ನೋಡಿದ್ದು ಈಗಲೂ ನೆನಪಿನಲ್ಲಿದೆ. ಪೂಜೆಯ ಕ್ರಿಯಾಭಾಗವೆಲ್ಲ ಮುಗಿದು ವಿಪ್ರ ದಕ್ಷಿಣೆಯನ್ನು ತೆಗೆದುಕೊಳ್ಳುವ ಸಮಯ.  ಅಜ್ಜನ ಸಹ ಪುರೋಹಿತನಾದ ನಾನೂ ಸಹ ಅಜ್ಜನ ಜತೆಯಲ್ಲೇ ಕುಳಿತಿದ್ದೆ. ಮನೆಯವರೆಲ್ಲ ಒಬ್ಬೊಬ್ಬರಾಗಿ ಅಜ್ಜನ ಪಾದ ಮಾತ್ರವಲ್ಲ ನನ್ನ ಕಾಲೂ ಹಿಡಿದಾಗ ಬಾಲಕ ನಾನು ಮುಜುಗರಕ್ಕೆ ಒಳಗಾಗುತ್ತಿದ್ದೆ. ಆದರೂ ಅಜ್ಜ ಬಹಳಷ್ಟು ಸಲ ಹೇಳುತ್ತಿದ್ದರು. ಅಲ್ಲಿ ವಯಸ್ಸಲ್ಲ ಪ್ರಧಾನ, ನಮ್ಮ ಸ್ಥಾನವೇ ಮುಖ್ಯವಾಗುತ್ತದೆ. ವಾಮನ ಮೂರ್ತಿಯಾದರೂ ಸಹ ವಿಪ್ರಬಾಲಕನಿಗೆ ಮೂರು ಲೋಕದ ಪ್ರಭು ಮಹಾಬಲಿ ಅಡ್ಡಬಿದ್ದ ಕಥೆಯೇ ಇದೆಯಲ್ಲ?  ಹೀಗೆ ಅಜ್ಜನೊಟ್ಟಿಗೆ ನಮಸ್ಕಾರಗಳನ್ನು ಸ್ವೀಕರಿಸುವಾಗ ಅಲ್ಲಿ ಬಂದ ಒಬ್ಬ ಹುಡುಗನನ್ನು ನೋಡಿ ನಾನು ಹಿರಿ ಹಿರಿ ಹಿಗ್ಗಿದೆ. ಕಾರಣವಿಷ್ಟೆ, ಆತ ದಿನವೂ ನನಗೆ ಭಟ್ಟನ ಜುಟ್ಟು ಅಂತ ಗೇಲಿ ಮಾಡಿ ನಗುತ್ತಿದ್ದ.  ಇಂದು ಆತನೇ ನನ್ನ ಕಾಲಿಗೆ ಬೀಳುವಾಗ ಹೇಗಾಗಬೇಕು? ಬದನೆಯ ತೊಟ್ಟಿನ ಮುಳ್ಳು ಚುಚ್ಚಿರಬಹುದು.  ನಿಂದನೆ ಇದು ಕೇವಲ ಬಾಲ ಬುದ್ದಿಯಲ್ಲ. ಎಷ್ಟೋ ಸಲ ಬ್ರಾಹ್ಮಣ ಅಂತ ನಿಂದನೆ ಮಾಡಿದವರೂ ತಮ್ಮ ಮನೆಯ ಅಂಗಡಿ ಸಂಸ್ಥೆಯ ಪೂಜೆ ಕಾರ್ಯಗಳನ್ನು ಮಾಡಬೇಕಾದರೆ ನಮ್ಮ ಹತ್ತಿರವೇ ಬರುತ್ತಿದ್ದರು. ಅವಾಗ ಬ್ರಾಹ್ಮಣರನ್ನು ಹುಡುಕಿಕೊಂಡು ಹೋಗುವ ಪೂಜ್ಯಮನೋಭಾವ ಅದು ಹೇಗೆ ಹುಟ್ಟುತ್ತದೆ?  ಹೀಗಿದ್ದರೂ ಸಾರ್ವಜನಿಕವಾಗಿ ಅವರೆದುರೇ ನಾವು ಗೇಲಿಗೊಳಗಾಗುತ್ತಿದ್ದದ್ದು ಅಚ್ಚರಿಯ ವಿಷಯವಾಗಿ ಕಾಡಿತ್ತು.  ಮೇಲೂ ಕೀಳು ಎಂಬ ವಿಮರ್ಷೆಯಲ್ಲ. ಮನುಷ್ಯನ ದ್ವಂದ್ವ ನೀತಿ. ಬೇಕಾದಾಗ ಬೇಕಾದಂತೆ ಬದಲಾಗುವ ರೀತಿ. ಒಬ್ಬ ಕರ್ಮಿಷ್ಠನಾದ ಬ್ರಾಹ್ಮಣ, ನಿತ್ಯ ಜಪ ತಪ ನಿಯಮಗಳನ್ನು ಅನುಸರಿಸುವ ಬ್ರಾಹ್ಮಣ ಅತ್ಯಂತ ಪೂಜನೀಯ ಹೌದು. ಆತ ಅನುಸರಿಸುವ ನಿಯಮ ನಿಷ್ಠೆಗಳು ಅದು  ಕೇವಲ ಸ್ವಕಿಯ. ಬ್ರಹ್ಮ ಪದ ಸಾಧನೆಗೆ, ಪರಮಾತ್ಮನ ಅನುಗ್ರಹಕ್ಕೆ ಇರುವ ಉಪಾಸನೆಯಾದರೂ ಆತ ನಿಷ್ಠಾವಂತ ಬ್ರಾಹ್ಮಣ ಗೌರವಕ್ಕೆ ಅರ್ಹನಾದರೂ ಸಹ ಆತ ಅನುಭವಿಸುವ ನಿಂದನೆ ಕೆಲವೊಮ್ಮೆ ಅರಿವಿಗೆ ಬಂದರೂ ಹಲವು ಸಲ ಅರಿವಿಗೆ ಬರುವುದೇ ಇಲ್ಲ. ಇನ್ನೂ ಒಂದು ವಿಚಿತ್ರ ಹೀಗೆ  ತನ್ನ ಸ್ವ  ಪಾಪ ಕ್ಷಯಕ್ಕೆ   ಜಪಾನುಷ್ಠಾನವನ್ನು ನಿಷ್ಠೆಯಿಂದ ಅನುಸರಿಸುವ ಬ್ರಾಹ್ಮಣ ಸ್ವಜಾತಿಗಳಾದ  ಬ್ರಾಹ್ಮಣರಿಂದ ಲೇ ನಿಂದನೆಯನ್ನು ಅನುಭವಿಸುವುದು ಇನ್ನೂ ಒಂದು ವಿಪರ್ಯಾಸ ಎನ್ನಬೇಕು. ವಿಚಿತ್ರವೆಂದರೆ ನನ್ನ  ಅನುಭವದಲ್ಲಿ ಹಲವು ಸಲ ಬ್ರಾಹ್ಮಣ ನಿಂದನೆ ನಾನು ಕಂಡಿದ್ದರೆ ಅದು ಸ್ವಜಾತಿಗಳಲ್ಲೇ. ಇದು ನನ್ನ ಅನುಭವ. ಅರ್ಥಿಕವಾಗಿಯೋ ದೈಹಿಕವಾಗಿಯೋ ಆತ ಸಬಲನಾಗಿದ್ದರೆ ಈ ನಿಂದನೆ ನೇರವಾಗಿ ಇರುವುದಿಲ್ಲ. ಪರೋಕ್ಷವಾಗಿಯೂ ಇರುವುದಿಲ್ಲ.ದುರ್ಬಲನಾದವನನ್ನು ಸ್ವ ಜಾತಿಯೂ ತುಳಿಯುವುದನ್ನು ಕಂಡಿದ್ದೇನೆ.   ಹೀಗೆ ಧರ್ಮದ ಹಾದಿ ತಪ್ಪಿಸುವುದು ಯಾಕೆ ಧರ್ಮನಿಂದನೆಯಾಗುವುದಿಲ್ಲ?

            ಧರ್ಮ ಅಂದರೆ ಎನು? ಪರಮಾತ್ಮನ ಪರಮ ಪದಕ್ಕಿರುವ ಹಾದಿ. ಇದು ತಿಳಿಯಬೇಕಾದರೆ ಮೊದಲು ಪರಮಾತ್ಮ ಅಸ್ತಿತ್ವವನ್ನು ತಿಳಿಯಬೇಕು. ಜ್ಞಾನಿಗಳು ಅದನ್ನೇ ತತ್ಸ ವಿತುವರೇಣ್ಯಂ ಅಂತ ವ್ಯಾಖ್ಯಾನಿಸಿದ್ದಾರೆ. ಜಗತ್ತಿನಲ್ಲಿ ಯಾವುದು ಅತ್ಯಂತ ಶ್ರೇಷ್ಠವೋ ಅದಕ್ಕಿಂತ ಶ್ರೇಷ್ಠವಾದದ್ದು ಪವಿತ್ರವಾದದ್ದು ಈ ಸೃಷ್ಟಿಯಲ್ಲಿ ಯಾವುದು ಇಲ್ಲ. ಅದುವೇ ಪರಮ ಪದ. ಬ್ರಾಹ್ಮಣ ಅದನ್ನು ಬ್ರಹ್ಮ ಪದ ಅಂತ ತಿಳಿಯುತ್ತಾನೆ. ಅದೇ ಬ್ರಹ್ಮೋಪದೇಶ. ಆ ಹಾದಿಯಲ್ಲಿ ನಡೆಯುವುದು ಎಂದರೆ ಜಾತಿ ಧರ್ಮವಾಗುತ್ತದೆ. ಹೊರತು ಇಲ್ಲಿ ಯಾವುದು ಕನಿಷ್ಠವಲ್ಲ ಎಲ್ಲ ಹಾದಿಯ ಸ್ವರೂಪ ಮಾತ್ರ ಭಿನ್ನ. ಇಂದು ಧರ್ಮದ ನಡುವೆ ಭೇದವನ್ನು ಸೃಷ್ಟಿಸಿ, ನಮ್ಮ ಧರ್ಮವೇ ಶ್ರೇಷ್ಠ ಅಂತ ಉಪದೇಶ ಮಾಡುವುದು ಇನ್ನೊಂದು ಧರ್ಮದಿಂದ ವಿಮುಖನಾಗುವುದಕ್ಕೆ ಪ್ರಚೋದನೆ ಕೊಡುವುದೂ ಸಹ ಮೂರ್ಖತನವಾಗಿ ಧರ್ಮ ನಿಂದನೆಯಾಗುತ್ತದೆ. ಧರ್ಮದ ತಪ್ಪು ವ್ಯಾಖ್ಯಾನ. ಒಂದು ಜಾತಿ ಬಿಟ್ಟು ಇನ್ನೊಂದನ್ನು ಅನುಸರಿಸುವುದು ಮೂರ್ಖತನ. ಆತನಿಗೆ  ಪರಮಾತ್ಮ ಅಸ್ತಿತ್ವದಲ್ಲಿ ನಂಬಿಕೆ ಬರುವುದಿಲ್ಲ.  ನಾವು ಸಾಗುವ ರಸ್ತೆಯನ್ನು ನೋಡುವುದು ಬಿಟ್ಟು ವಿಭಾಜಕದ ಆ ಬದಿಯ ಇನ್ನೊಂದು ರಸ್ತೆ ನೋಡುತ್ತಾ ಹೋದರೆ ನಾವು ಸಾಗುವ ರಸ್ತೆಯ ಹೊಂಡ ಗುಂಡಿಗಳು ಕಾಣಲಾರದು. ಒಂದು ಧರ್ಮದ ಹಾದಿಯಲ್ಲಿ ನಡೆಯುವಾಗ ಮತ್ತೊಂದು ಧರ್ಮವನ್ನು ನೋಡಿ ಹೋಲಿಕೆ ಮಾಡಿ ಅವಹೇಳನ ಮಾಡುವುದು ಎಂದರೆ ತಮ್ಮ ಹಾದಿಯಲ್ಲಿ ಅಡೆ ತಡೆಗಳನ್ನು ತಂದು ಹಾಕಿದಂತೆ. ಓಟಗಾರ ಸ್ಪರ್ಧೆಯಲ್ಲಿ ಪಳಗಿದ ಓಟಗಾರ ತನ್ನ ಗುರಿಯನ್ನಷ್ಟೇ ನೋಡುತ್ತಾನೆ ಹೊರತು ಪಕ್ಕದ ಗೆರೆಯಾಚೆವನನ್ನು ನೋಡುವುದಿಲ್ಲ. ನೋಡಿದರೆ ಈತನ ಹಾದಿ ಗುರಿ ಎಲ್ಲವೂ ಕಠಿಣವಾಗುತ್ತದೆ.    ಧರ್ಮಾಚರಣೆಯ ಹಾದಿಯೂ ಹಾಗೆ. ಹಾಗಾಗಿ ಧರ್ಮನಿಂದನೆಯ ಮುಖಗಳಿವು. ಆದರೂ ಇಂದು ನಿಂದನೆಯನ್ನೇ ಧರ್ಮ ಅಂತ ಮಾಡುವುದನ್ನು ಕಾಣಬಹುದು.
           
            ಒಂದು ಸಲ ಹಲವು ಮಿತ್ರರು ನಾವೆಲ್ಲ ಶಬರಿಮಲೆಗೆ ಹೋಗಿದ್ದೆವು. ಎಲ್ಲರೂ ಬ್ರಾಹ್ಮಣ ಮಿತ್ರರು.   ಹತ್ತು ಮೂವತ್ತು ಮಂದಿ ತಂಡದಲ್ಲಿದ್ದೆವು.  ನಿಜಕ್ಕೂ ಒಂದು ಅಹ್ಲಾದಮಯ ಅನುಭವದ ತೀರ್ಥಯಾತ್ರೆ. ಮುಂಜಾನೆ ಪಂಪೆಯಲ್ಲಿ  ಮಿಂದು ನಾನು ಯಥಾ ಪ್ರಕಾರ ಸಂಧ್ಯಾವಂದನೆ ಮಾಡಿದ್ದೆ. ಸೂರ್ಯೋದಯಕ್ಕೆ ನದಿಯಲ್ಲಿ ನಿಂತು ಸೂರ್ಯಾರ್ಘ್ಯ ಬಿಡುವುದು ಒಂದು ಅಪರೂಪದ ದಿವ್ಯ ಅನುಭವ.  ಅಷ್ಟೂ ಮಂದಿ ಇದ್ದ ನಮ್ಮಲ್ಲಿ ಸಂಧ್ಯಾವಂದನೆ ಮಾಡಿದ್ದು ಮೂರೇ ಜನೆ. ಕೆಲವರು ಹೋದಲ್ಲಿಯೂ ಬೇಕಾ ಇದು ಎಂಬ ಭಾವನೆಯಲ್ಲಿದ್ದರೆ, ಉಳಿದವರಿಗೆ ತೋರಿಸುವುದಕ್ಕೆ ಇದು ಅಂತ ಭಾವಿಸಿರಲೂ ಬಹುದು. ಆದರೆ ಕರ್ಮವನ್ನು ಅನುಸರಣೆ ಮಾಡದ ವೃತ  ಮಾತ್ರ ಸತ್ಪಲವನ್ನು ಪೂರ್ಣವಾಗಿ ಒದಗಿಸುವುದಿಲ್ಲ.  ಶಬರಿಮಲೆಯಾತ್ರೆ ಒಂದು ವೃತ ಅಂತಲೇ ಆಚರಿಸಲ್ಪಡುತ್ತದೆ.  ಪರಮಾತ್ಮನ ಹಾದಿಯಲ್ಲಿ ಸಾಗುವಾಗ ವೃತ ಎಂಬುದು ಅದಕ್ಕೆ ಪೂರಕವಾಗಿರಬೇಕು. ಕರ್ಮವೇ ಪ್ರಧಾನವಾಗಬೇಕು. ಹೀಗೆ ಧರ್ಮದ ಹಾದಿಯನ್ನು ಅರ್ಥೈಸಿಕೊಳ್ಳದೇ ಇರುವುದೂ ಧರ್ಮನಿಂದನೆಯಾಗುತ್ತದೆ. ಧರ್ಮನಿಂದನೆಯಲ್ಲಿ ನಿಂದನೆಯೇ  ಧರ್ಮವಾಗುವುದು ಮನುಷ್ಯ ಮೌಢ್ಯದ ಸಂಕೇತ.

            ’ಧರ್ಮ ನಿಂದನೆ...’  ಒಬ್ಬ ಯಾವುದೇ ಒಂದು ಧರ್ಮದ ಅವಲಂಬಿಯಾಗಿರುವುದು ಆತನ ಹಕ್ಕು. ಪರಮಾತ್ಮ ನೀಡಿರುವ ಹಕ್ಕು ಅದನ್ನು ನಿಂದಿಸಿ ಆತನ ಹಕ್ಕನ್ನು ಕಸಿದುಕೊಳ್ಳುವುದು ನಿಜಕ್ಕೂ ನಿಯಮ ಉಲ್ಲಂಘನೆಯಾಗುತ್ತದೆ.  ಇದಕ್ಕೆ ಜಾತಿಭೇದವಿಲ್ಲ. ಇದು ಸಮತ್ವದ ಸಂಕೇತ.