Thursday, April 25, 2024

ಬ್ರಹ್ಮ ಶಾಪ

         ಮೊನ್ನೆ ಬೆಂಗಳೂರಿನ ವಿಧಾನ ಸೌಧದ ಬಳಿಯ ಎಂ ಎಸ್ ಕಟ್ಟಡ ಸಂಕೀರ್ಣಕ್ಕೆ ಯಾವುದೋ ಕೆಲಸದ ನಿಮಿತ್ತ ಹೋಗಿದ್ದೆ. ದೊಡ್ಡ ದೊಡ್ಡ ಅಧಿಕಾರಿಗಳ ಸರಕಾರೀ ಇಲಾಖೆಗಳು ಇರುವ ಕರ್ನಾಟಕ ಸರಕಾರದ ಕಟ್ಟಡವಲ್ಲವೇ? ಯಾವಾಗ ನೋಡಿದರೂ ಜನ ಸಂದಣಿ. ಹಾಗೆ ಲಿಫ್ಟ್ ನಲ್ಲಿ ಹೋಗುವಾಗ ವಯಸಾದ ವ್ಯಕ್ತಿ ಸಿಕ್ಕಿದರು. ಬಹಳ ಸಾಧು ಸ್ವಭಾವದಂತೆ ಕಂಡರು. ನಾನು ಹೋಗುವ ಕಛೇರಿ ಯಾವ ಮಹಡಿಯಲ್ಲಿದೆ ಎಂದು ತಿಳಿದಿರಲಿಲ್ಲ. ಅವರೊಬ್ಬರೇ ಇರುವುದರಿಂದ ಅವರಲ್ಲಿ ಕೇಳಿದೆ.  ಅವರು ಈ ಮಹಡಿಯಲ್ಲಿ ಪಕ್ಕದ ಕಟ್ಟಡದ ನಾಲ್ಕನೇ ಮಹಡಿಯಲ್ಲಿದೆ. ಇಲ್ಲಿಂದ ಒಳಗಿನಿಂದಲೇ ಹೋಗುವುದಕ್ಕೆ ಸಾಧ್ಯವಿದೆ ಅಂತ ಲಿಫ್ಟ್ ಇಳಿದ ನಂತರ ಜತೆಗೆ ಬಂದು ತೋರಿಸಿಕೊಟ್ಟರು. ಆ ಕಟ್ಟಡ ನನಗೆ ಎನೂ ಹೊಸತಲ್ಲ. ಹತ್ತು ಹಲವು ಸಲ ಹೋಗಿದ್ದರೂ ಕೆಲವು ಕಛೇರಿಗಳು ಹುಡುಕುವುದರಲ್ಲೇ ಸುಸ್ತಾಗಿ ಬಿಡುತ್ತದೆ. ಕೆಳ ಅಂತಸ್ತಿನಲ್ಲಿ ಕಣ್ಣು ಕಾಣದವರೊಬ್ಬರು ಕುಳಿತಿರುತ್ತಾರೆ. ಅವರಲ್ಲಿ ಕಛೇರಿ ಹೆಸರು ಹೇಳಿದರೆ ಅದು ಯಾವ ಮಹಡಿಯಲ್ಲಿ ಎಷ್ಟನೇ ನಂಬರ್ ಅಂತ ಹೇಳಿಬಿಡುತ್ತಾರೆ. ನಾವು ಕಣ್ಣು ಕಾಣುವವರಿಗಿಂತಲೂ ಕಣ್ಣು ಕಾಣದವರು ಉತ್ತಮ ಅಂತ ಹಲವು ಸಲ ಅಂದುಕೊಂಡಿದ್ದೆ. ಆದಿನ ಅಲ್ಲಿ ಯಾರೂ ಇರಲಿಲ್ಲ. ಹಾಗಾಗಿ ಕಛೇರಿ ಹುಡುಕುವುದು ಕಷ್ಟವಾಗಿತ್ತು. 

        ನನ್ನ ಕೆಲಸ ಮುಗಿಸಿ ಕಛೇರಿಯಿಂದ ಹೊರಬರುವಾಗ ಅದೇ ವ್ಯಕ್ತಿ ಸಿಕ್ಕಿದರು. ನಗುತ್ತಾ ಸಿಕ್ಕಿತಾ ಕೆಲಸ ಆಯಿತ ಅಂತ ಕುಶಲ ವಿಚಾರಿಸಿದರು. ವಾಸ್ತವದಲ್ಲಿ ಬೆಂಗಳೂರಲ್ಲಿ ಹೀಗೆ ಕೇಳುವುದು ಬಹಳ ಅಪರೂಪ. ತಾವಾಯಿತು ತಮ್ಮ ಪಾಡಾಯಿತು ಅಂತ ಇರುವವರೆ ಹೆಚ್ಚು. ಪಕ್ಕದ ಮನೆಯಲ್ಲಿ  ಯಾರಿದ್ದಾರೆ? ಅಲ್ಲಿ ಏನಾಗುತ್ತಿದೆ? ಎಂದು ಈ ಮನೆಯಲ್ಲಿದ್ದವನಿಗೆ ತಿಳಿದಿರುವುದಿಲ್ಲ ಮಾತ್ರವಲ್ಲ, ಆತನಿಗೆ ಅದರ ಅವಶ್ಯಕತೆಯೇ ಇರುವುದಿಲ್ಲ. ಹಾಗಿರುವಾಗ ಈ ವ್ಯಕ್ತಿ ಬಂದು ವಿಚಾರಿಸುತ್ತಾರೆ ಎಂದರೆ ಬೆಂಗಳೂರಿನವರು ಆಗಿರಲಾರದು ಎಂದು ನನಗನಿಸಿತು. ಅವರು ನನ್ನ ಜತೆಯಲ್ಲೇ ಒಂದಷ್ಟು ದೂರ ಬಂದರು. ನಾನು ಬಂದ ಕೆಲಸದ ಬಗ್ಗೆ ವಿಚಾರಿಸಿದರು. ಹೀಗೆ ಲೋಕಾಭಿರಾಮ ಮಾತನಾಡುತ್ತಾ ಅವರ ಬಗ್ಗೆ ಕೇಳಿದೆ. ಅವರು ಭದ್ರಾವತಿಯಿಂದ ಬಂದಿದ್ದರು. ಅವರ ನಿವೃತ್ತಿ ವೇತನ (ಪೆನ್ಶನ್) ದ ಏನೋ ಸಮಸ್ಯೆ ಇತ್ತು. ನಾನು ನಿಮ್ಮ ಕೆಲಸ ಆಯಿತಾ ಎಂದು ಸಹಜವಾಗಿ ಕೇಳಿದೆ.  ಆಗ ಅವರು ಅವರ ಚರಿತ್ರೆಯನ್ನೇ ಬಿಚ್ಚಿಟ್ಟರು. 

        ಅವರು ಲೋಕೋಪಯೋಗಿ ಇಲಾಖೆಯಲ್ಲಿ ಗುಮಾಸ್ತರಾಗಿದ್ದರು. ಇದೇ ಬೆಂಗಳೂರಲ್ಲಿ ಒಂದಷ್ಟು ಸಮಯ ವೃತ್ತಿ ಮಾಡಿದ್ದರು. ಆದರೆ ಅವರಿಗೆ ಸಿಗಬೇಕಾದ ಪೆನ್ಶನ್ ಹಲವು ಕಾರಣಗಳಿಂದ ತಡೆ ಹಿಡಿಯಲ್ಪಟ್ಟಿತ್ತು. ಹಲವಾರು ಸಲ ಬೆಂಗಳೂರಿಗೆ ಬಂದರೂ ಪ್ರಯೋಜವಾಗಲಿಲ್ಲ. ಈ ವಯಸ್ಸಿನಲ್ಲಿ ದೂರದ ಊರಿನಿಂದ ಬಂದು ಹೋಗುವುದು ಬಹಳ ಕಷ್ಟವಾಗಿತ್ತು. ಇಷ್ಟೆಲ್ಲ ಮಾತನಾಡಿದ ಮೇಲೆ ಹೇಳಿದರು..".ನಾನು ಬ್ರಾಹ್ಮಣ. ವೃತ್ತಿಯಲ್ಲಿರುವಾಗಲೇ ಪ್ರಮೋಷನ್ ಇನ್ಕ್ರಿಮೆಂಟ್ ಸಿಬಗೇಕಾದದ್ದು ಸಿಗಲಿಲ್ಲ. ನನ್ನಿಂದ  ನಂತರ ಸೇರಿದವರು ಮೇಲೆ ಮೇಲೆ ಹೋಗಿ ಆಫೀಸರ್ ಕೂಡ ಆದರೂ ನಾನು ಮಾತ್ರ ಗುಮಾಸ್ತನಾಗಿಯೇ ಇದ್ದೆ.  ಈಗಲು ಅಷ್ಟೇ...ಪೆನ್ಷನ್ ಗೋಸ್ಕರ ಅಲೆಯುವಂತಹ ಸ್ಥಿತಿ. ಹೇಳಿಕೊಳ್ಳುವಂತಹ ಕಾರಣ ಯಾವುದೂ ಇಲ್ಲ. ಆದರೂ ಅನ್ಯಾಯ ಆಗುತ್ತಾ ಇದೆ. ಬ್ರಾಹ್ಮಣ್ಯ ಒಂದು ಶಾಪ ಅಂತ ಅನ್ನಿಸಿ ತುಂಬ ಕಾಲ ಆಯಿತು." 

        ನಾನು ಬ್ರಾಹ್ಮಣ ಅಂತ ನನ್ನ ಮುಖನೋಡಿಯೇ ಅವರು ಇದನ್ನು ಹೇಳಿದರು. ಅವರ ಕೊನೆಯ ಮಾತು ನನಗೇನೂ ಹೊಸತಲ್ಲ. ಹಲವು ಕಡೆ ಇದೇ ರೀತಿಯ ಮಾತುಗಳನ್ನು ಕೇಳುತ್ತಿದ್ದೇನೆ. ಅದು ವಿಶೇಷವೇನೂ ಅಲ್ಲ. ನನ್ನ ಮಗಳು ಮೊನ್ನೆ ಮೊನ್ನೆ ಕಾಲೇಜು ಸೇರಬೇಕಾದಾಗ ಇದೇ ಮಾತನ್ನು ಹೇಳಿದ್ದಳು.  ಶೇಕಡಾ ತೊಂಭತ್ತು ಅಂಕಗಳನ್ನು ಪಡೆದು ತೇರ್ಗಡೆಯಾದ ಅವಳು ಕಾಲೇಜ್ ಸೇರಬೇಕಾದರೆ, ಶೇಕಡಾ ನಲ್ವತ್ತು ಅಂಕ ಪಡೆದ ಆಕೆಯ ಸಹಪಾಠಿ ಸುಲಭದಲ್ಲೆ ಯಾವುದೇ ವೆಚ್ಚ ಇಲ್ಲದೇ ಕಾಲೇಜಿಗೆ ಸೇರಿದ್ದಳು. ಹಾಗಾಗಿ ಬ್ರಾಹ್ಮಣ ಎಂಬುದರ ಅರ್ಥ ಬೇರೆಯೇ ಆಗಿ ಹೋಗಿದೆ.   

        ಅವರಲ್ಲಿ ಕೇಳಿದೆ ಊಟ ಆಯಿತ ಅಂತ ವಿಚಾರಿಸಿದೆ. ಇಲ್ಲ ಇನ್ನು ಮಾಡಬೇಕು. ಬ್ರಾಹ್ಮಣರಲ್ವ...ಬನ್ನಿ ಮನೆಗೆ ಊಟ ಮಾಡೋಣ ಅಂತ ಕರೆದೆ. ಅವರು ನಯವಾಗಿ ನಿರಾಕರಿಸಿದರು.  ಅವರು  ಮತ್ತೆ ಮುಂದುವರೆದು ಹೇಳಿದರು, " ಕೆಲಸದಲ್ಲಿರುವವರೆಗೆ ಸಂಬಳ ಒಂದು ಬರುತ್ತದೆ, ಅದರಿಂದ ಜೀವನ ಒಂದು ಆಯಿತು ಎನ್ನುವುದು ಬಿಟ್ಟರೆ ಯಾವ ನೆಮ್ಮದಿಯೂ ಸಿಗಲಿಲ್ಲ. ಈಗ ಕೆಲಸ ಬಿಟ್ಟಮೇಲೂ ಅದೇ ಅವಸ್ಥೆ. ಬ್ರಾಹ್ಮಣ್ಯ ಒಂದು ಶಾಪ"

        ನಾನು ಇನ್ನೂ ಮುಂದೆ ಹೋಗಿ ಹೇಳಿದೆ, "ಬ್ರಹ್ಮ ಎಂಬುದರ ಅರ್ಥ ತಿಳಿಯದೇ ಇರುವಲ್ಲಿ ಬ್ರಾಹ್ಮಣನಾಗಿರುವುದೇ ಅಪರಾಧ."  ಮದ್ಯ ವ್ಯಸನಿಗಳ ನಡುವೆ ಮದ್ಯ ಮುಟ್ಟದವನು ಇದ್ದರೆ ಹೇಗೆ, ಹಾಗೆ. ಬಹಳ ವಿಶಾಲವಾದ ಅರ್ಥದಲ್ಲಿ ನಾನು ಹೇಳಿದ್ದೆ. ಆದರೆ ಅವರು ಅದನ್ನು ಹೇಗೆ ಸ್ವೀಕರಿಸಿಕೊಂಡರೋ ನನಗೆ ತಿಳಿಯದು. ಯಾಕೆಂದರೆ ಇಂತಹ ಗಹನ ಅರ್ಥದ ಮಾತುಗಳು ಎಲ್ಲರಿಗೂ ಅರ್ಥವಾಗುವುದಿಲ್ಲ. ಯಾಕೆಂದರೆ ಬ್ರಹ್ಮ ಶಬ್ದ ಅನರ್ಥವಾಗಿ ಯಾವುದೋ ಬಗೆಯಲ್ಲಿ ಸೀಮಿತ ವಾಗಿ ಹೋಗಿದೆ. ಬ್ರಾಹ್ಮಣರ ನಡುವೆ ಕೂಡ ನಾನು ಹೇಳಿದ ಮಾತು ಅನ್ವಯವಾಗುತ್ತದೆ ಎಂದು ಅವರಿಗೆ ಅರಿವಾಯಿತೊ ಇಲ್ಲವೋ ಗೊತ್ತಿಲ್ಲ. ನಮ್ಮಲ್ಲಿ ಒಂದು ಪ್ರವೃತ್ತಿ ಇದೆ, ಗಹನವಾದ ವಿಚಾರ ಪರೋಕ್ಷವಾಗಿ ಹೇಳೀದರೆ ನಮಗಲ್ಲ ಎಂದು ತಿಳಿಯುವ ಜಾಣರಿದ್ದಾರೆ.   ಬ್ರಹ್ಮ ಇದರ ಗಂಭೀರತೆ ಅರಿವಾಗಬೇಕಾದರೆ ಅದಷ್ಟು ಸುಲಭ ಸಾಧ್ಯವಲ್ಲ. ಬ್ರಾಹ್ಮಣ ಒಂದು ಶುದ್ದ ಸಂಸ್ಕಾರ ಎಂದು ತಿಳಿಯುವಾಗ  ಜೀವನವೇ ಕಳೆದು ಹೋಗಿರುತ್ತದೆ. ಈ ನಡುವೇ ನಾವು ಅದನ್ನು ತೀರ ಲೌಕಿಕವಾಗಿ ಅರ್ಥ ಮಾಡಿಕೊಳ್ಳುತ್ತಿದ್ದೇವೆ. ಪರಸ್ಪರ ಸಂಘರ್ಷಕ್ಕೆ ಇಳಿದು ಬಿಡುತ್ತೇವೆ. ಮುಂದೆ ಹೋಗುವ ಭರದಲ್ಲಿ ನಾವು ಏನನ್ನು ಹಿಂದಕ್ಕೆ ಹಾಕುತ್ತಿದ್ದೇವೆ ಎಂದು ಅರಿವಿರುವುದಿಲ್ಲ. ಬ್ರಾಹ್ಮಣ್ಯ ಆಗ ಒಂದು ಶಾಪವಾಗಿ ಕಾಣುತ್ತದೆ. 



Tuesday, April 16, 2024

ಭಾಷೆ ಒಂದು ಸಂಸ್ಕಾರ

"ಭಾಷೆ ಉಳಿಯಬೇಕು. ಅದರೆ ಅದು ಹೇಗೆ ಉಳಿಯಬೇಕು?"

ಪ್ರತಿ ಬಾರಿ ಏನಾದರೊಂದು ವಿಚಾರವನ್ನು ಪ್ರಸ್ತಾಪಿಸಿ ಚರ್ಚೆಮಾಡಿ ಅಭಿಪ್ರಾಯ ಕೇಳುವುದು ನನ್ನ ಮಗಳ ಒಂದು ಹವ್ಯಾಸ. ಆಕೆಗೆ ಅನುಭವಕ್ಕೆ ಬರುವ ವಿಚಾರ ವೈವಿಧ್ಯಗಳು ತಂದು ನನ್ನಲ್ಲಿ ವಿನಿಮಯ ಮಾಡುತ್ತಿರುತ್ತಾಳೆ.   ಹಲವು ಸಲ ಗಂಭೀರ ವಿಚಾರಗಳು ನಮ್ಮೊಳಗೆ ಚರ್ಚೆಯಾಗುತ್ತವೆ. ಈ ಬಾರಿ ಆಕೆಯ ಕಾಲೇಜಲ್ಲಿ ನಡೆದ ಒಂದು ಘಟನೆಯ ಬಗ್ಗೆ ಚರ್ಚೆ. ಯಾರೋ ಒಬ್ಬರು ಹಿಂದಿ ಭಾಷೆಯವರು ಬಂದಿದ್ದರು. ಅವರು ಬಂದು ಮೂರು ವರ್ಷವಾದರೂ ಕನ್ನಡ ಭಾಷೆಯಲ್ಲಿ ಮಾತನಾಡುತ್ತಿರಲಿಲ್ಲ. ಆಗ ಒಬ್ಬಾಕೆ ಅವರಲ್ಲಿ ಕೇಳಿದಳಂತೆ ಕನ್ನಡ ರಾಜ್ಯದಲ್ಲಿ ಕನ್ನಡಕ್ಕೆ ಆದ್ಯತೆ. ಯಾಕೆ ಕನ್ನಡ ಕಲಿತಿಲ್ಲ? ಕರ್ನಾಟಕದಲ್ಲಿದ್ದರೆ ಕನ್ನಡ ಕಲಿಯಬೇಕು? ಇಲ್ಲಿ ಬಂದು ಹಿಂದಿ ಮಾತನಾಡುವ ಬದಲು ಕನ್ನಡವನ್ನು ಕಲಿತು ಮಾತನಾಡಬೇಕು. ಈಬಾರಿ ಇದರ ಬಗ್ಗೆ ನನ್ನಲ್ಲಿ ಅಭಿಪ್ರಾಯ ಕೇಳಿದಳು. ನನಗೂ ಇದರಲ್ಲಿ ತಪ್ಪೇನು ಕಾಣಲಿಲ್ಲ.  ಆದರೆ ಚಿಂತನೆ ಯಾವಾಗಲೂ ಸೀಮಿತವಾಗಿರಬಾರದು. ಚಿಂತನೆಯ ದೃಷ್ಟಿ ವಿಶಾಲವಾಗಿರಬೇಕು. ಇದು ನನ್ನ ಅಭಿಮತ. ಪ್ರತಿಬಾರಿಯು ಹಲವು ವಿಚಾರಗಳಲ್ಲಿ ವಿಷದವಾಗಿ ನನ್ನೊಡ ಪಾಟ್ ಕ್ಯಾಶ್ ಮಾಡುವ ಮಗಳಿಗೆ ನಾನು ಏನು ಹೇಳಬಲ್ಲೆ ಎಂಬ ಕುತೂಹಲವಿತ್ತು. ಆ ಹುಡುಗಿ ಹೇಳಿದ ಮಾತು  ಬಹಳ ನ್ಯಾಯವಾದ ಮಾತು. ಕನ್ನಡನಾಡಲ್ಲಿ ಕನ್ನಡವನ್ನು ಕಲಿತು ಮಾತನಾಡಬೇಕು. ಅದು ನಾಡಿಗೆ ಭೂಮಿಯ ಸಂಸ್ಕೃತಿಗೆ ಸಲ್ಲಿಸುವ ಗೌರವ.  ಚಿಂತನೆಯನ್ನು ಮತ್ತಷ್ಟು ವಿಶಾಲಗೊಳಿಸಿದರೆ, ನಾನು ಅದನ್ನೇ ಆಕೆಯಲ್ಲಿ ಹೇಳಿದೆ. ಭಾಷೆ ಉಳಿಯಬೇಕು. ಅದರೆ ಅದು ಹೇಗೆ ಉಳಿಯಬೇಕು ಯಾವ ಬಗೆಯಲ್ಲಿರಬೇಕು? ಎನ್ನುವುದು ಅಷ್ಟೇ ಮುಖ್ಯವಾಗುತ್ತದೆ.

  ಹಿಂದಿಯವರು ಒಂದುವೇಳೆ ಕನ್ನಡ ಕಲಿಯುವ ಮನಸ್ಸು ಮಾಡಿದರೆ ಅವರು ಕಾಣುವ ಕನ್ನಡ ಹೇಗಿರಬೇಕು ಎನ್ನುವುದು ಅಷ್ಟೇ ಪ್ರಾಮುಖ್ಯತೆಯನ್ನು ಕೊಡುತ್ತದೆ.  ಆಕೆಯ ಆವೇಶ ಭರಿತವಾದ ಗಂಭೀರವಾದಕ್ಕೆ ಎಲ್ಲರೂ ಚಪ್ಪಾಳೆ ಹೊಡೆಯುತ್ತಾರೆ. ಆದರೆ ಉಳಿದಂತೆ  ಭಾಷೆಯ ಬಗ್ಗೆ ಚಿಂತಿಸುವವರು ಕಡಿಮೆ.  ವಾಸ್ತವದ ಸ್ಥಿತಿ ಹೇಗಿರುತ್ತದೆ ಎಂದರೆ ಒಂದುವೇಳೆ ಆಕೆಯಲ್ಲೇ ಕೇಳಿದರೆ,  ಕನ್ನಡದ ಸಾಹಿತಿಗಳ ಹೆಸರು, ಕವಿಗಳ ಹೆಸರು. ಹೋಗಲಿ ಕನ್ನಡದ ಅಕ್ಷರಮಾಲೆಯನ್ನಾದರೂ ಹೇಳುವಷ್ಟು ಜ್ಞಾನ ಇರಬಹುದೇ? ನಂಬುವುದು ಕಷ್ಟ. ಸಾಹಿತಿ ಕವಿಗಳ ಹೆಸರಿಗಿಂತ ಅವರು ಬರೆದ ಪುಸ್ತಕಗಳಿಗಿಂತ ಸಿನಿಮಾ ನಟ ನಟಿಯರ ಬಗ್ಗೆ ಅವರ ಸಿನಿಮಾಗಳ ಬಗ್ಗೆ ತಿಳಿದಿರುತ್ತದೆ. ಬಾಯಾರಿದಾಗ ನೀರು ಕುಡಿಯಬೇಕು ಹೌದು. ನಾವು ಕುಡಿಯುವ ನೀರು ಪರಿಶುದ್ದವಾಗಿರಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. 

ಭಾಷೆ ಎಂಬುದು ಪರಸ್ಪರ ಸಂವಹನಕ್ಕೆ ಇರುವ ಒಂದು ಮಾಧ್ಯಮ. ಮನುಷ್ಯ ಮನುಷ್ಯನದ್ದು ಜೀವ ಜೀವಗಳ ಸಂಸ್ಕಾರ ಅರಿವಿಗೆ ಬರುವುದೇ ಭಾಷೆಗಳಿಂದ. ಅದು ಯಾವ ಭಾಷೆಯೂ ಇರಬಹುದು. ಒಂದು ಶುದ್ದ    ಸಂಸ್ಕಾರ ಒಂದು ಭಾಷೆಯಿಂದ ವ್ಯಕ್ತವಾಗುವಾಗ ಸಂಸ್ಕಾರಕ್ಕೆ ವ್ಯಕ್ತವಾಗುವ ಗೌರವ ಭಾಷೆಗೂ ವ್ಯಕ್ತವಾಗುತ್ತದೆ. ಅದರಂತೆ ಕೆಟ್ಟ ಸಂಸ್ಕಾರಕ್ಕೆ ಭಾಷೆ ಮಾಧ್ಯಮವಾಗುವಾಗ ಅಲ್ಲಿ ಭಾಷೆಗೂ ಸಲ್ಲುವ ಮಾನದಂಡ ಅದೇ ಆಗಿರುತ್ತದೆ. ಒಬ್ಬ ಪ್ರವಚನಕಾರ ಉದಾತ್ತ ತತ್ವಗಳನ್ನು ಭಾಷೆಯ ಮೂಲಕ ಪ್ರವಚಿಸುವಾಗ ಭಾಷೆಗೌರವಿಸುವಂತೆ, ಒಬ್ಬ ಮದ್ಯವ್ಯಸನಿ ಕುಡುಕ ಅದೇ ಭಾಷೆಯಲ್ಲಿ ಆವಾಚ್ಯತೆಯನ್ನು ಪ್ರದರ್ಶಿಸುತ್ತಾನೆ ಎಂದಾದರೆ ಭಾಷೆ ಯಾವ ಮಟ್ಟಕ್ಕೆ ಇಳಿದು ಬಿಡುತ್ತದೆ ಎಂದು ಅರಿವಾಗುತ್ತದೆ.  ಇದು ಒಂದಾದರೆ ಭಾಷೆ ಕೇವಲ ಮಾತುಗಳ ಶಕ್ತಿ, ಅಂದರೆ ವಾಕ್ ಸಾಮಾರ್ಥ್ಯವನ್ನು ಅನುಸರಿಸುತ್ತದೆ. ಹೀಗಿರುವಾಗ ಒಬ್ಬ ಮೂಗನಿಗೆ ಯಾವ ಭಾಷೆಯ ಬಾಂಧವ್ಯ ಒದಗಿ ಬರುತ್ತದೆ? ಆತನ ಸಂವಹನ ಸಲ್ಲಿಸುವ ಮಾತುಗಳು ಯಾವ ಭಾಷೆಯಲ್ಲಾದರೂ ಅದು ಒಂದೇ ಆಗಿರುತ್ತದೆ. ಕನ್ನಡವನ್ನು ಅರ್ಥವಿಸುವಂತೆ, ಅದನ್ನು ಹಿಂದಿಯವನೂ ಅರ್ಥವಿಸಿಕೊಳ್ಳಬಲ್ಲ. ಹಕ್ಕಿಯ ಕಲರವಕ್ಕೆ ಪ್ರಕೃತಿಯ ಸಂವೇದನೆಗಳಿಗೆ  ಯಾವ ಭಾಷೆಯ ಸೀಮೆಯೂ ಇರುವುದಿಲ್ಲ. ಕರ್ನಾಟಕದಲ್ಲಿ ಕೋಗಿಲೆ ಕೂಗಿದಂತೆ ಅಲ್ಲಿ ದೂರದ ಉತ್ತರದಲ್ಲೂ ಕೋಗಿಲೆ ಕೂಗಿಬಿಡುತ್ತದೆ. ಪ್ರಕೃತಿಯ ಸ್ಪಂದನೆಯೂ ಅದೇ ಬಗೆಯಲ್ಲಿರುತ್ತದೆ. ಕೂಗುವ ಕೋಗಿಲೆಗೆ, ಕೈ ಭುಜ ಕುಣಿಸುವ ಮೂಗನಿಗೆ ಇಲ್ಲದ ಭಾಷಾಭೇದ ನಾಲಿಗೆಯಲ್ಲಿ ವಾಕ್ ಶಕ್ತಿಯನ್ನು ಹೊಂದಿರುವವನಿಗೆ ಇರುತ್ತದೆ. ಮಾತನಾಡಬಲ್ಲವನು ಸಾಮರಸ್ಯ ಬಲ್ಲವನಲ್ಲ. 

ಯಾವುದೇ ವಸ್ತುವಿನ ಅಥವಾ ಜೀವಗಳ ಅಸ್ತಿತ್ವ ಇರುವುದು ಅದರ ಬಳಕೆಯಲ್ಲಿ ಮನುಷ್ಯನಾದರೂ ಜೀವದಲ್ಲಿರುವುದಕ್ಕಿಂತಲೂ ತಾನು ಹೇಗಿದ್ದೇ ಎಂಬುದರಲ್ಲಿ ಅಸ್ತಿತ್ವವನ್ನು ಕಾಣುತ್ತಾನೆ. ಹಾಡುವ ಸಂಗೀತ ಒಂದೇ ಆದರೂ ಬೀದಿ ಬದಿಯ ಭಿಕ್ಷುಕನ ಹಾಡಿಗೂ ವೇದಿಕೆಯ ಮೇಲಿನ ಗಾಯಕನ ಗಾಯನಕ್ಕೂ ಅಸ್ತಿತ್ವದಲ್ಲಿ ವೆತ್ಯಾಸವಿರುತ್ತದೆ.  ಭಾಷೆಯೂ ಹಾಗೆ ಅದರ ಉಪಯೋಗದಲ್ಲಿ ಅದರ ಅಸ್ತಿತ್ವ ಇರುತ್ತದೆ. ಲೋಟದಲ್ಲಿ ಹಾಲು ತುಂಬಿಸಿದರೂ ಮದ್ಯ ತುಂಬಿದರೂ ಕೆಲಸ ಒಂದೇ. ತುಂಬಿಸುವುದು. ಅದರಂತೆ ಭಾಷೆ. ಅದು ಪರಿಶುದ್ದವಾಗುವುದು ಅದರ ಬಳಕೆಯಲ್ಲಿ.  ಕನ್ನಡ ಎಷ್ಟು ಪರಿಶುದ್ದವಾಗಿ ಉಳಿದೆ ಎಂಬುದನ್ನು ಆತ್ಮಾವಲೋಕನ ಮಾಡಬೇಕು. ಬೆಂಗಳೂರಿನ ಹಾದಿ ಹೋಕನಲ್ಲಿ ಒಂದು ಸಲ ವಿಳಾಸ ವಿಚಾರಿಸಿ, ಆತ ಹೇಳುವ ವಿಳಾಸ, ಸ್ಟ್ರೈ ಟ್ ಹೋಗಿ, ಡೆಡ್ ಎಂಡಲ್ಲಿ ರೈಟ್ ತೆಗೆಯಿರಿ, ಹೀಗೆ ಕನ್ನಡವೇ ಇಲ್ಲದ ಕನ್ನಡ ಭಾಷೆಯ ಅನುಭವವಾಗುತ್ತದೆ. ಉಪಯೋಗಿಸುವ ಭಾಷೆಯಲ್ಲಿ ಅಲ್ಲೊಂದು ಇಲ್ಲೊಂದು ಕನ್ನಡವಿದ್ದರೆ ಅದು ಕನ್ನಡದ ಜೀವಂತಿಗೆಯ ಲಕ್ಷಣ ಎಂದು ತಿಳಿಯಬೇಕು. ನಮಗರಿವ ಇಂಗ್ಲೀಷ್  ಸಾಹೇಬನ ಭಾಷೆ ನಮಗೆ ಸುಲಭವಾಗಿ ಇಷ್ಟವಾಗುತ್ತದೆ. ಇಲ್ಲಿ ಇಂಗ್ಲೀಷ್ ಮಾತನಾಡಿದರೆ ತಪ್ಪಲ್ಲ. ಬದಲಿಗೆ ಹಿಂದಿಯೋ ತಮಿಳೋ ಮಲಯಾಳವೋ ಅಪ್ಪಟ ಭಾರತೀಯ ಭಾಷೆ  ಮಾತನಾಡಿದರೆ ಅಲ್ಲಿ ಭಾಷಾಭಿಮಾನದ ಪಾಠ ಎದುರಾಗುತ್ತದೆ.  ಇಂಗ್ಲೀಷ್ ಬೇಕಾಗುವವನಿಗೆ ನಮ್ಮದೆ ಹಿಂದಿ ತಮಿಳು ಯಾಕೆ ಬೇಡವಾಗುತ್ತದೆ? ನಿಜವಾಗಿಯೂ ನಮ್ಮಲ್ಲಿ ಆತ್ಮಾಭಿಮಾನ ಜಾಗೃತವಾಗಬೇಕಾಗಿರುವುದು ನಮ್ಮ ಸಾಹೋದರ್ಯದಲ್ಲಿ. ನಮ್ಮ ಒಡ ಹುಟ್ಟಿದವನ ಮಾತು ನಾವು ಕೇಳಲಾರೆವು. ಆತನನ್ನು ನಮ್ಮವ ಎಂದು ತಿಳಿಯಲಾರೆವು,  ಬದಲಿಗೆ ಯಾರೋ ಬೀದಿ ಹೋಕ, ತೃತಿಯ ಪ್ರಜೆ ನಮ್ಮ ಬಂಧುವಾಗುತ್ತಾನೆ. 

ಕನ್ನಡ ಭಾಷೆಯ ಪ್ರತಿನಿಧಿಗಳು ಎಂದು ಸ್ವತಃ ಕರೆಸಲ್ಪಡುವ ಸಿನಿಮಾ ನಟ ನಟಿಯರು ಆಗಾಗ ತಮ್ಮ ಅಸ್ತಿತ್ವ ಪ್ರದರ್ಶನಕ್ಕೆ ಮಾಧ್ಯಮಗಳ ಎದುರು ಬಂದು ಬಿಡುತ್ತಾರೆ. ತಮ್ಮ ಸಿನಿಮಾಗಳಲ್ಲಿ ಉದ್ದುದ್ದ ಭಾಷಾಭಿಮಾನವನ್ನು ತೋರಿಸುವ  ಇವರು ಅಭಿಮಾನಿಗಳ ಕರತಾಡನ ಗಿಟ್ಟಿಸುತ್ತಾರೆ. ಕರತಾಡನದೋಂದಿಗೆ ಅವರ ಸಿನಿಮಾಗಳೂ ಓಡುತ್ತವೆ, ಒಂದಷ್ಟು ಸಂಪಾದನೆಯೂ ಆಗಿಬಿಡುತ್ತದೆ. ಅದೇ ನಟ ನಟಿಯರು ಹೀಗೆ ಮಾಧ್ಯಮಗಳ ಎದುರು ಬಂದು ಮಾತನಾಡುವಾಗ ಅಲ್ಲಿ ಕನ್ನಡಕ್ಕಿಂತ ಹೆಚ್ಚು  ಆಂಗ್ಲ ಭಾಷೆ ಬಳಕೆಯಾಗುತ್ತದೆ. ಯಾಕೆಂದರೆ ಅವರಿಗೆ ಬರುವ ಕನ್ನಡ ಅಷ್ಟೇ. ಸಿನಿಮಾದಲ್ಲಿ ಅವರಿಗೆ ಸಹಾಯಕ್ಕೆ ಬರುವ ನಿರ್ದೇಶಕ, ಸಂಭಾಷಣೆ ಬರಹಗಾರ ಇಲ್ಲಿ ಸಹಾಯಕ್ಕೆ ಬರುವುದಿಲ್ಲ. ಹಾಗಾಗಿ ಸಿನಿಮಾದಲ್ಲಿ ವ್ಯಕ್ತವಾಗುವ ಭಾಷಾಭಿಮಾನದ ಕಾರಣ ವ್ಯಕ್ತವಾಗುತ್ತದೆ.  ಇತ್ತೀಚೆಗೆ ಹೋರಾಟಗಾರರೊಬ್ಬರು ಅನ್ಯ ಭಾಷೆಯವರಿಗೆ ಬೈಯುವ ಮಾತುಗಳನ್ನು ಕೇಳುವಾಗ ನಿಜಕ್ಕೂ ಆತಂಕವಾಗಿದ್ದು ಇದೂ ನಮ್ಮ ಕನ್ನಡ ಭಾಷೆಯಲ್ಲಿದೆಯಾ ...ಇದ್ದರೂ ಅದು ಹೀಗೂ ಬಹಿರಂಗ ಪ್ರದರ್ಶನಕ್ಕೆ ಬಂದು ವೀರಾವೇಶಕ್ಕೆ ಪ್ರತೀಕವಾಗಬೇಕಾ? ಹೋರಾಟ ಅತ್ಯವಶ್ಯ ಆದರೆ ಆ ಮೂಲಕ ಹೊರಗೆ ದರ್ಶಿಸಲ್ಪಡುವ ಸಂಸ್ಕಾರ ಭಾಷೆಯ ಗೌರವವನ್ನು ಹೇಗೆ ಅವನತಿಗೆ ತಳ್ಳಿಬಿಡುತ್ತದೆ ಎಂದು  ಯೋಚಿಸುವುದಿಲ್ಲ. ಕನ್ನಡ ಉಳಿಯಬೇಕು ನಿಜ. ಆದರೆ ಮುಂದಿನ ತಲೆಮಾರಿಗೆ ನಾವು ಎಂತಹ ಕನ್ನಡ ಭಾಷೆಯನ್ನು ಉಳಿಸಿಬಿಡುತ್ತೇವೆ ಎಂದರೆ ದಿಗಿಲಾಗಿಬಿಡುತ್ತದೆ. 

ಇದು ಕೇವಲ ಕನ್ನಡಕ್ಕೆ ಸೀಮಿತವಾಗಿಲ್ಲ. ಪ್ರತಿಯೊಂದು ಭಾಷೆಗೂ ಇದು ಅನ್ವಯವಾಗಬಹುದು. 


Sunday, March 31, 2024

ಶಾಲೆಯ ಸಜ್ಜಿಗೆಯ ನೆನಪು

  ಅಂದು ಪುಟ್ಟ ಬಾಲಕ ಪೈವಳಿಕೆ ಶಾಲೆಯ ಎರಡನೇ ತರಗತಿಯಲ್ಲಿ ಕಲಿಯುತ್ತಿದ್ದೆ. ಆದಿನ ಬಹಳ ಖುಷಿಯಲ್ಲಿ ಶಾಲೆಗೆ ಹೊರಟಿದ್ದೆ.  ಹೆಗಲಿಗೆ ನೇತಾಡಿಸಿದ ಬಟ್ಟೆ ಚೀಲದಲ್ಲಿದ್ದ ಸ್ಲೇಟು ಪುಸ್ತಕದ ನಡುವೆ ಇಟ್ಟಿದ್ದ ಸಣ್ಣ ಅಲ್ಯುಮಿನಿಯಂ ತಟ್ಟೆಯನ್ನು ಆಗಾಗ ತಡವಿ ನೋಡಿಕೊಳ್ಳುತ್ತಿದ್ದೆ.  . ಕಪ್ಪು ಕಪ್ಪಾದ ತಟ್ಟೆ. ಮನೆಯಲ್ಲಿ ಅದನ್ನು ಅಷ್ಟಾಗಿ ಉಪಯೋಗಿಸುತ್ತಿರಲಿಲ್ಲ.  ಆತಟ್ಟೆಯನ್ನು ಮನೆಯಿಂದ ಯಾರಿಗೂ ತಿಳಿಯದಂತೆ ಎತ್ತಿಟ್ಟಿದ್ದೆ.  ಆಗ ನನ್ನಂತೆ ಕೆಲವರು ನಮ್ಮ ಮನೆಯಿಂದ ಒಟ್ಟಿಗೇ ಹೋಗುತ್ತಿದ್ದೆವು. ಎಲ್ಲರೂ ನನ್ನಿಂದ ಹಿರಿಯರು. ತಟ್ಟೆಯ ವಿಚಾರ ತಿಳಿದರೆ ಖಂಡಿತ ಬೈಯುತ್ತಾರೆ.  

ಆದಿನ ಹನ್ನೊಂದುಘಂಟೆಯಾಗುವುದನ್ನೇ ಕಾಯುತ್ತಿತ್ತು ಮನಸ್ಸು. ಹನ್ನೊಂದು ಎರಡನೇ ಘಂಟೆ ಬಾರಿಸಿದ ಪೀಯೊನ್ ನಮ್ಮ ತರಗತಿಗೆ ಬಂದು ಸಜ್ಜಿಗೆ ತಿನ್ನಲು ಬನ್ನಿ ಎಂದು ಕರೆದ.  ಮಕ್ಕಳು ಎಲ್ಲರೂ ತಂದಿದ್ದ ತಟ್ಟೆಯನ್ನು ಎತ್ತಿಕೊಂಡು ಹೊರಟರು. ನಾನೂ ಹೊರಟೆ. ಎರಡು ದಿನ ನನಗೆ ಸಜ್ಜಿಗೆ ಸಿಗಲಿಲ್ಲ. ಕಾರಣ ತಟ್ಟೆ ಇಲ್ಲ. ಅದುವರೆಗೆ ಯಾವುದೋ ಕಾಗದದ ತುಂಡು ತೆಗೆದುಕೊಂಡು ಅದರಲ್ಲೇ ಹಾಕಿಸಿ ತಿನ್ನುತ್ತಿದ್ದೆವು. ಮೊನ್ನೆ ಪೇಪರ್ ಗೆ ಸಜ್ಜಿಗೆ ಬಡಿಸುವುದಿಲ್ಲ ಎಂದು ಹೇಳಿದ ನಂತರ, ತಿನ್ನದೇ ಹಾಗೇ ವಾಪಾಸು ಬಂದಿದ್ದೆ. ಅಂದಿನ ಹಸಿವಿಗೆ ಉತ್ತರವಿರಲೇ ಇಲ್ಲ. ಆದಿನದ ಸಂಭ್ರಮ ಸಜ್ಜಿಗೆ ತಿನ್ನುವುದರಲ್ಲಿತ್ತು. ಎಲ್ಲರ ಜತೆಗೆ ತಾನೂ ತಿನ್ನಬಹುದು ಎನ್ನುವ ಬಯಕೆ ಈಡೇರಿತ್ತು. ಮನೆಯಿಂದ ಕದ್ದು ತಂದಿದ್ದ ತಟ್ಟೆಯಲ್ಲಿ ಸಜ್ಜಿಗೆ ಹಾಕಿ ತಿಂದಾಗ ಜಗತ್ತನ್ನೇ ಗೆದ್ದ ಅನುಭವ ಆ ಪುಟ್ಟ ಮನಸ್ಸಿಗೆ ಆಗಿತ್ತು. ಶಾಲೆಯಲ್ಲಿ ಮಾಡುತ್ತಿದ್ದ ಸಜ್ಜಿಗೆ ತಿನ್ನುವುದಕ್ಕೆ ಮನೆಯಲ್ಲಿ ಬಿಡುತ್ತಿರಲಿಲ್ಲ. ಆದರೆ ನನ್ನ ಹಸಿವಿಗೆ ಉತ್ತರವಾಗಿ ಆ ಸಜ್ಜಿಗೆ ಇರುತ್ತಿತ್ತು. ಆದಿನ ಆ ತಟ್ಟೆಯನ್ನು ಶಾಲೆಯಲ್ಲೇ ಬಿಟ್ಟಿದ್ದೆ. ತರಗತಿಯ ಅಂಚಿಗೆ ಎರಡು ದೊಡ್ಡ ಕಪಾಟು ಇತ್ತು. ಅದರ ಅಡಿಗೆ ತಟ್ಟೆಯನ್ನು ಇಟ್ಟಿದ್ದೆ. ಮನೆಗೆ ಕೊಂಡು ಹೋದರೆ ಪುನಃ ತರುವ ಭರವಸೆ ಇರಲಿಲ್ಲ.   ಸಾಯಂಕಾಲ ಮನೆಗೆ ಹೋದಾಗ ಅಮ್ಮನಲ್ಲಿ ತಟ್ಟೆಯನ್ನು ಎತ್ತಿಕೊಂಡು ಹೋದ ವಿಷಯ ಹೇಳಿದೆ. ಪುಟ್ಟ ಬಾಲಕ ನನಗೆ ಮುಚ್ಚಿಡುವುದಕ್ಕೆ ಬರಲಿಲ್ಲ. ಅಮ್ಮ ಯಾಕೋ ಬೈಯಲಿಲ್ಲ. ಬೈಗುಳದ ನಿರೀಕ್ಷೆಯಲ್ಲಿದ್ದೆ. ಆದರೆ ಅಮ್ಮ ಕೇಳಿದರು ಸಜ್ಜಿಗೆ ತಿಂದಿಯಾ ಅಂತ?  ಮನೆಯಲ್ಲಿ ಆಕೆಗೆ ಮಾತ್ರ  ನನ್ನ ಹಸಿವಿನ ಅರಿವಿತ್ತು. ಹೆತ್ತಮ್ಮ ಅಲ್ಲವೇ? ಏನೂ ಬೈಯಲಿಲ್ಲ.

  ಪೈವಳಿಕೆ ನಗರದ ಪ್ರಾಥಮಿಕ ಶಾಲೆ ಮತ್ತು ಬಾಯಾರು ಸಮೀಪ  ಇದ್ದ ಗಾಳಿಯಡ್ಕದ ಶಾಲೆಯ ಬಳಿಯಲ್ಲೆ ಹಲವು ಸಲ ನಾನು ಹೋಗುತ್ತಿರುತ್ತೇನೆ. ಒಂದು ಕಾಲದಲ್ಲಿ, ಒಂದರಿಂದ ಎರಡನೆ ತರಗತಿಗೆ ಹೋದ ಪೈವಳಿಕೆ ಶಾಲಾ ದಿನದ ನೆನಪು ಹಾಗು ಗಾಳಿಯಡ್ಕ ಶಾಲೆಯ ಮೂರನೆಯ ತರಗತಿಯ ದಿನಗಳು ನೆನಪಾಗುತ್ತವೆ. ಸುಮಾರು ಎಪ್ಪತರ ದಶಕದ ಆರಂಭದ  ದಿನಗಳು ಅವು. ಪೈವಳಿಕೆ ಚಿಕ್ಕ ಹಳ್ಳಿಯಾದರೆ, ಗಾಳಿಯಡ್ಕದ ಶಾಲೆ ಜನ ವಸತಿಯೇ ಇಲ್ಲದ ಗುಡ್ಡದ ಬಯಲಿನಲ್ಲಿ ಇತ್ತು. ಈಗ ಅಲ್ಲಿ ಹಲವು ಜನವಸತಿಗಳಾಗಿ ಹೊಸ ಊರು ಸೃಷ್ಟಿಯಾಗಿದೆ. ಬಾಲ್ಯದಲ್ಲಿ ಅಲ್ಲಿ ಹಗಲಿನಲ್ಲಿ ಸುತ್ತಾಡುವುದಕ್ಕೂ ಭಯ ಪಡಬೇಕಿತ್ತು. ಈಗ ಇಲ್ಲೆಲ್ಲ ಸಂಚರಿಸುವಾಗ ಬಾಲ್ಯದ ಶಾಲಾ ದಿನಗಳು ನೆನಪಾಗುತ್ತವೆ ಎಂಬುದು ಹೌದಾದರೂ ಅಲ್ಲಿಯೂ ನನಗೆ ನೆನಪಿಗೆ ಬರುವುದು, ಈ ಶಾಲೆಯಲ್ಲಿ ಕಲಿತ ವರ್ಣಮಾಲೆಯ ಅಕ್ಷರಗಳಲ್ಲ. ಉರು ಹೊಡೆದ ಮಗ್ಗಿಯಲ್ಲ. ಅಥವಾ ಬಾಲ್ಯದಲ್ಲಿ ಆಡಿದ ಆಟಗಳಲ್ಲ. ಬದಲಿಗೆ ನೆನಪಿಗೆ ಬರುವುದು ಈ ಶಾಲೆಯಲ್ಲಿ ಮಾಡಿ ಬಡಿಸುತ್ತಿದ್ದ’ ಸಜ್ಜಿಗೆ’. ಒಂದು ಬದುಕಿನ ಪುಟಗಳಲ್ಲಿ ಅಳಿಸದ ನೆನಪುಗಳನ್ನು ಉಳಿಸಬೇಕಿದ್ದರೆ ಅದರ ಭಾವನಾತ್ಮಕ ನಂಟು ಅದಾವ ಬಗೆಯದಿರಬಹುದು? 

   ಸರಕಾರ ಶಾಲಾ ಮಕ್ಕಳಿಗೆ ಉಚಿತವಾಗಿ ಒದಗಿಸುತ್ತಿದ್ದ ಒಂದು ಬಗೆಯ ಸಜ್ಜಿಗೆ. ಸಜ್ಜಿಗೆ ಎಂದರೆ ಬನ್ಸಿರವೆ ಅಥವಾ ಖಂಡ್ವ ರವೆಯ ಉಪ್ಪಿಟ್ಟು ಖಾರಾ ಬಾತ್ ಅಲ್ಲ.  ಗೋಧಿಯನ್ನು ತರಿದು ಮಾಡಿದಂತೆ ಅನಿಸಿದರೂ ಅದು ಯಾವುದೋ ಒಂದು ಬಗೆಯ ಸಜ್ಜಿಗೆ. ಗೋಧಿಯ ಸಿಪ್ಪೆಗಳು ಒಂದಷ್ಟು ಇನ್ನಿತರ ಧಾನ್ಯಗಳ ಪುಡಿಯೂ ಇತ್ತು ಎಂದು ನನ್ನ ನೆನಪು.  ಆ ಕಾಲದಲ್ಲಿ ಅಮೇರಿಕದಿಂದ ಉಚಿತವಾಗಿ ಗೋಧಿ ಬರುತ್ತಿತ್ತು. ಅದನ್ನೇ ಸಜ್ಜಿಗೆ ಮಾಡಿ ಸರಕಾರ ಕೊಡುತ್ತಿತ್ತು ಎಂದು ಹೇಳುವುದನ್ನು ಕೇಳಿದ್ದೆ.  ಈ ಸಜ್ಜಿಗೆಗೆ ಉಪ್ಪು ಬಿಟ್ಟರೆ ಬೇರೆ ಎನೂ ಇರುತ್ತಿರಲಿಲ್ಲ. ಆದರೂ ಅದರ ಆಕರ್ಷಣೆ ಬಿಡದ ಮೋಹವಾಗಿತ್ತು.   ಈ ಸಜ್ಜಿಗೆ ನೆನಪಿಗೆ ಬರುವುದಕ್ಕೆ ಹಲವಾರು ಭಾವನಾತ್ಮಕ ಕಾರಣಗಳಿವೆ. ಮುಖ್ಯವಾಗಿ ಪೈವಳಿಕೆ ಶಾಲೆಯಲ್ಲಿ ನಾವು ಕದ್ದು ಮುಚ್ಚಿ ಮನೆಯವರಿಗೆ ತಿಳಿಯದಂತೆ ಸಜ್ಜಿಗೆ ತಿನ್ನುತ್ತಿದ್ದೆವು. ಶಾಲೆಯಲ್ಲಿ ಸಿಗುತ್ತಿದ್ದ ಈ ಸಜ್ಜಿಗೆ ತಿಂದರೆ ಸಹಜವಾಗಿ ಸಂಪ್ರದಾಯ ಬದ್ದರಾದ ನಮ್ಮ ಮನೆಯಲ್ಲಿ ಬೈಯುತ್ತಿದ್ದರು. ಸರಕಾರಿ ಸಜ್ಜಿಗೆ, ಅಲ್ಲಿ ಯಾರೋ ಮಾಡುತ್ತಾರೆ, ಅದರಲ್ಲಿ ಹುಳ ಎಲ್ಲ ಇರುತ್ತದೆ ಹೀಗೆ ನಮ್ಮನ್ನು ಹೆದರಿಸುತ್ತಿದ್ದರು. ಆದರೂ ನಾವು ಬೆಳಗ್ಗೆ ಶಾಲೆಗೆ ಹೋಗುವಾಗ ತಿನ್ನುವುದಿಲ್ಲ ಎಂದು ಯೋಚಿಸಿದರೂ ಸಜ್ಜಿಗೆ ಮಾಡಿ ಎಲ್ಲರನ್ನು ಕರೆಯುತ್ತಿರಬೇಕಾದರೆ ಸಹಪಾಠಿಗಳ ಜತೆಗೆ ಓಡಿ ಕುಳಿತು ಬಿಡುತ್ತಿದ್ದೆವು. ಮುಖ್ಯ ಕಾರಣ ಆಗ ಬಾಧಿಸುತ್ತಿದ್ದ ಹಸಿವು. ಹಸಿವು ಎಲ್ಲವನ್ನು ಮಾಡಿಸಿಬಿಡುತ್ತದೆ. ಅದೊಂದು ಶಾಲೆ ಕಲಿಸಿದ ಪಾಠ. 

ಹಸಿವು ಎಂದರೆ ಬಾಲ್ಯದ  ಆ ಹಸಿವಿಗೆ ಅದೊಂದು ಪ್ರಖರತೆ ಇತ್ತು. ಏನು ತಿಂದರೂ ಇಂಗದ ಹಸಿವು. ಬೆಳಗ್ಗೆ ಒಂದಷ್ಟು ತಿಳಿಗಂಜಿಯನ್ನು ತಿಂದು ಅದನ್ನೇ ಬುತ್ತಿ ಪಾತ್ರೆಗೆ ತುಂಬಿಸಿ ತಂದರೆ ಅದಕ್ಕಿಂತ ಈ ಸಜ್ಜಿಗೆಯ ಆಕರ್ಷಣೆ ಸಹಜವಾಗಿ ಅಧಿಕವಾಗಿತ್ತು. ಬಿಸಿ ಬಿಸಿ ಸಜ್ಜಿಗೆಯ ಪರಿಮಳವೇ ಅದ್ಭುತವಾಗಿತ್ತು. ಈಗ ಎಲ್ಲಬಗೆಯ ಪದಾರ್ಥಗಳನ್ನು ಹಾಕಿದ ಉಪ್ಪಿಟ್ಟಿನ ರುಚಿ ಆ ಸಜ್ಜಿಗೆ ಸಮಾನವಲ್ಲ ಅಂತ ಅನ್ನಿಸುತ್ತದೆ. ಬೆಳಗ್ಗೆ ಶಾಲೆ ಆರಂಭವಾಗುತ್ತಿದ್ದಂತೆ ಶಾಲೆಯ ಪಿಯೊನ್ ಅದರ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದರು. ಎಲ್ಲಾ ತರಗತಿಯಿಂದ ಹಿರಿಯ ವಿದ್ಯಾರ್ಥಿಗಳನ್ನು ಸಹಾಯಕ್ಕೆ ಕರೆದು ಕೊಂಡು ಹೋಗಿ ಸಜ್ಜಿಗೆ ಪಾಕ ಸಿದ್ದ ಮಾಡಿಸುತ್ತಿದ್ದರು.  ಹನ್ನೊಂದು ಘಂಟೆಯಾಗುತ್ತಿದ್ದಂತೆ ಒಂದೊಂದೇ ಕ್ಲಾಸಿನಿಂದ ಮಕ್ಕಳನ್ನು ಕರೆದು ಸಜ್ಜಿಗೆ ಬಡಿಸುತ್ತಿದ್ದರು.  ಅವರ ಕರೆಗೆ ಮಕ್ಕಳು ಕಾದಿರುತ್ತಿದ್ದರು. ಸಜ್ಜಿಗೆ ತಿನ್ನುವುದಕ್ಕೆ ತಟ್ಟೆ ಮನೆಯಿಂದ ತರಬೇಕಿತ್ತು. ತಟ್ಟೆ ಇಲ್ಲದೆ  ನಾವು ಕೆಲವರು ಕಾಗದದ ಚೂರಲ್ಲೂ ಹಾಕಿಸಿ ತಿನ್ನುತ್ತಿದ್ದೆವು.  ಒಂದು ಬಾರಿ ಕಾಗದದಲ್ಲಿ ಸಜ್ಜಿಗೆ ಕೊಡುವುದಿಲ್ಲ ಎಂದಾಗ ನಾನು ಮನೆಯಿಂದ ಹಳೆಯ ಅಲ್ಯುಮಿನಿಯಂ ತಟ್ಟೆಯೊಂದನ್ನು ಯಾರಿಗೂ ತಿಳಿಯದಂತೆ ತೆಗೆದುಕೊಂಡು ಹೋಗಿದ್ದೆ. ಸಜ್ಜಿಗೆಯ ಆಕರ್ಷಣೆ, ಹಸಿವಿನ ಒತ್ತಡ ಇದಕ್ಕೆ ಪ್ರೇರೆಪಣೆ. 

ಹಸಿವಿನ ಅರೆ ಹೊಟ್ಟೆಗೆ ಏನು ಸಿಕ್ಕಿದರೂ ಗಬ ಗಬ ತಿನ್ನುವ ತುಡಿತ. ಸಜ್ಜಿಗೆ ಯಾರು ಮಾಡಿದರೇ ಏನು? ಅಥವ ಅದರಲ್ಲಿ ಏನಿದ್ದರೆ ಏನು? ಮನೆಯವರಿಗೆ ತಿಳಿಯದಂತೆ ಅದನ್ನು ತಿನ್ನುವುದರಲ್ಲೇ ಒಂದು ಆತ್ಮ ತೃಪ್ತಿ. ಜಗಲಿಯಲ್ಲಿ ಕುಳಿತು ತಟ್ಟೆ ಇಟ್ಟು ಎಲ್ಲರ ಜತೆಗೆ ಕುಳಿತು ತಿಂದು ಏಳುವಾಗ ಹಸಿವನ್ನು ಜಯಿಸಿದ ಆ ತೃಪ್ತಿ ಈಗ ಯಾವ ಭೋಜನ ಸವಿದರೂ ಸಿಗುತ್ತಿಲ್ಲ. ಶಾಲಾ ಜೀವನದ ಬಳಿಕ ಒಂದು ಬಾರಿ ಪೈವಳಿಕೆ ಶಾಲೆಗೆ ಹೋಗಿದ್ದೆ. ಆಗ ಸಜ್ಜಿಗೆ ಮಾಡುತ್ತಿದ್ದ ಜಾಗ, ನಾವು ತಿನ್ನಲು ಕುಳಿತುಕೊಳ್ಳುತ್ತಿದ್ದ ಜಗಲಿಯಲ್ಲಿ ಓಡಾಡಿದ್ದೆ. ಆ ಸಜ್ಜಿಗೆಯ ರುಚಿಯ ಸವಿನೆನಪು ಅದು ಎಂದಿಗೂ ಮಾಸದು. ಒಂದೆರಡು ಬಾರಿ ಮನೆಗೆ ಗೋಧಿಯನ್ನು ತಂದು ಪುಡಿಮಾಡಿ ಅದೇ ರೀತಿ ಸಜ್ಜಿಗೆ ಮಾಡಲು ನೋಡಿದ್ದೆ. ಆದರೆ ಆ ರುಚಿ ಮಾತ್ರ ಅನುಭವಿಸುವುದಕ್ಕೆ ಸಾಧ್ಯವಾಗಲಿಲ್ಲ. ಈಗಲೂ ಶಾಲೆಯ ಬಳಿಗೆ ಹೋದಾಗ ಸಜ್ಜಿಗೆಯ ನೆನಪಾಗುತ್ತದೆ. ಆ ಕಾಲದಲ್ಲಿ ಅನ್ನ ತಿನ್ನುವವರು ಭಾಗ್ಯವಂತರು. ನಮಗೋ ಒಂದು ಹೊತ್ತಿಗೆ ಅನ್ನ ಸಿಗುತ್ತಿತ್ತು. ಉಳಿದಂತೆ ಗೋಧಿಯ ದೋಸೆ, ಒಣ   ಮರಗೆಣಸನ್ನು ನೆನಸಿ ಅದರಿಂದ ತಯಾರಿಸಿದ ರೊಟ್ಟಿ ಪಲ್ಯ...ಹೀಗಿರುವಾಗ ಶಾಲೆಯ ಉಪ್ಪಿಟ್ಟು ಬಿಡುವುದಕ್ಕೆ ಮಕ್ಕಳಿಗೆ ನಮಗೆ ಮನಸ್ಸಾದರೂ ಹೇಗೆ ಬರಬೇಕು.

ನಮಗೆ ಬೇಕಾದದ್ದು ಬಯಸಿದ್ದೆಲ್ಲವನ್ನೂ ಕೈವಶ ಮಾಡುವ ಈ ಸಮಯದಲ್ಲಿ ಯಾವುದು ಸಿಕ್ಕರೂ ಅಂದು ಹಸಿವಿಗೆ ಎರವಾಗಿ ಒದಗಿ ಬರುತ್ತಿದ್ದ ಈ ಸಜ್ಜಿಗೆಗೆ ಸರಿಮಿಗಿಲು ಎನಿಸುವುದಿಲ್ಲ. ಅದರಲ್ಲೂ ಕಾಗದದ ಚೂರಿನಲ್ಲಿ ಸಜ್ಜಿಗೆ ಹಾಕಿಸಿ ತಿನ್ನುತ್ತಿದ್ದ ಆ    ದಿನಗಳು, ಆ ಸವಿನೆನಪನ್ನು ಮತ್ತೊಮ್ಮೆ ಅನುಭವಿಸುವುದಕ್ಕೆ ಆದರೂ ಒದಗಿ ಬರಬಾರದೇ ಅಂತ ಅನ್ನಿಸುವುದುಂಟು. 



Friday, March 29, 2024

ಅತಿಥಿ ಸತ್ಕಾರ

        ಒಂದು ಬಾರಿ ಉತ್ತರ ಭಾರತದ ಯಾರಾದರು ಒಬ್ಬರ ಮನೆಯ ಕಾರ್ಯಕ್ರಮಕ್ಕೆ ಹೋಗಿ ನೋಡಿ, ಅಲ್ಲಿ ನಮಗಾಗಿ ಅನ್ನ ಸಾಂಬಾರ್ ಮಾಡುವುದಿಲ್ಲ. ಬದಲಿಗೆ ಪೂರಿ ಕಚೋರಿ ರೋಟಿಯಷ್ಟನ್ನೇ ತಂದಿಡುತ್ತಾರೆ. ಸಾಂಬಾರ್ ಬದಲಿಗೆ ಸಬ್ಜಿ ಕರಿಗಳಷ್ಟೇ ಇರುತ್ತವೆ. ಆದರೆ ನಮ್ಮಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಅವರೆಲ್ಲ ಒಬ್ಬಿಬ್ಬರು ಇದ್ದರೆ ಸಾಕು ಎಲ್ಲರಿಗೂ ಪೂರಿ ಪಲಾವ್ ತಿನ್ನಿಸಿಬಿಡುತ್ತೇವೆ. ಇದು ಅತಿಥಿ ಸತ್ಕಾರದ ಉತ್ತಮ ಗುಣವಿರಬಹುದು. ಆದರೆ ನಮ್ಮ ಪರಂಪರೆಯ ಭೋಜನ ಖಾದ್ಯಗಳು ನಮ್ಮ ನಡುವೇ ಇದ್ದು ಬಿಡುತ್ತದೆ. ನಮ್ಮ ಮಕ್ಕಳಿಗೇ ಅದು ಬೇಡವಾಗುತ್ತದೆ. 

ಈಗಿನ್ನು ಸಮಾರಂಭಗಳ ಸಮಯ. ಮದುವೆ ಮುಂಜಿ ಹೀಗೆ ಶುಭಕಾರ್ಯಗಳ ಸರದಿ. ಜತೆಗೆ ಅನಿರೀಕ್ಷಿತ ಎರಗುವ ಅಪರಕಾರ್ಯಗಳು. ಮತ್ತೆ ಎಂದಿನಂತೆ ವರ್ಷಾವಧಿ ಶ್ರಾಧ್ದ ಮುಂತಾದ ಅಪರ ಕಾರ್ಯಗಳು. ಹೆಚ್ಚಿನ ಕಾರ್ಯಕ್ರಮಗಳು ನಿರೀಕ್ಷಿತ. ಆಮಂತ್ರಣದ ಖಾತರಿ ಇದ್ದೇ ಇರುತ್ತದೆ. ಹೀಗಾಗಿ ಮೊದಲೇ ಸಿದ್ಧತೆಗಳು ಇದ್ದರೂ ಹೋಗುವುದಕ್ಕೆ ಬಹಳ ಕಷ್ಟ ಪಡಲೇ ಬೇಕಾದ ಅನಿವಾರ್ಯತೆ ಇದ್ದರೂ ,  ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆ ಪ್ರತಿ ಕಾರ್ಯಕ್ರಮಕ್ಕೂ ಹಾಜರಾಗಲೇ ಬೇಕು ಎನ್ನುವ ಕಾಳಜಿಯಲ್ಲಿ ಹಾಜರಾಗುತ್ತಾರೆ.  ಇನ್ನು ಒಂದೆರಡು ಘಳಿಗೆಯಾದರೂ ಒಂದು ಸಲ ಮುಖ ತೋರಿಸಿ ಹಾಜರಾಗುವ ಹರಕೆಯನ್ನು ಸಲ್ಲಿಸುವವರು ಅಧಿಕ.ಹಲವು ಸಲ ಹಲವು ಕಾರ್ಯಕ್ರಮಗಳಿಗೆ ಒಂದೇ ದಿನ ಹಾಜರಾಗುವ ಇಕ್ಕಟ್ಟಿನ ಪರಿಸ್ಥಿತಿ. ಇದೆಲ್ಲದರ ನಡುವೆ ಕಾರ್ಯಕ್ರಮ ಹೋಗುವುದೆಂದರೆ ಈಗ ಯಾಂತ್ರಿಕತೆಯಾಗಿ ಬದಲಾಗಿದೆ. ಊಟದ ಒಂದೆರಡು ಘಳಿಗೆ ಮೊದಲು ಹೋಗಿ  ಸೌಖ್ಯವಾ?  ಆರಾಮಾನ? ಅಂತ ಕುಶಲ ಸಮಾಚಾರ ವಿಚಾರಿಸುವಷ್ಟು ಹೊತ್ತಿಗೆ ಊಟಕ್ಕೆ ಸಮಯವಾಗುತ್ತದೆ. ಇನ್ನು  ಊಟದ ಹರಕೆಯಾದ ಕೂಡಲೇ ಇನ್ನು ಕಾಣುವ ಅಂತ ಕಲ್ಯಾಣ ಮಂಟಪದವರು ಖಾಲಿ  ಮಾಡಿಸುವ ಮೊದಲೆ ಜಾಗ ಖಾಲಿ ಮಾಡಿ ಬಿಡುತ್ತೇವೆ. ಇಂದು ಕಾರ್ಯಕ್ರಮಗಳಲ್ಲಿ ಸಂಭ್ರಮ ಮರೆಯಾಗಿ ಯಾಂತ್ರಿಕತೆ ಹೆಚ್ಚು ಎದ್ದು ಕಾಣುತ್ತದೆ. ಈ ನಡುವೆ ಬಂದವರ ಬಗ್ಗೆ ವಿಚಾರಿಸುವ,  ಜತೆಗೆ ಯಾರು ಬರಲಿಲ್ಲ ಎಂದು ಗಮನಿಸುವ ಕೊಂಕುತನವೂ ಇಣುಕಿಬಿಡುತ್ತದೆ. ನಾವು ಹೋಗಿದ್ದೇವೆ ಅವರು ಬರಲಿಲ್ಲ ಎಂಬ ಲೆಕ್ಕಾಚಾರ ಕೂಡ ಆರಂಭವಾಗುತ್ತದೆ. ಕಾರ್ಯಕ್ರಮದ ಯಾಂತ್ರಿಕತೆ ಸರಿಯೋ ತಪ್ಪೋ ಅಂತೂ ನಮ್ಮ ಜೀವನ ಶೈಲಿಗಳಿಗೆ ಮತ್ತು ಮನೋಭಾವಕ್ಕೆ ಇದು ಅನಿವಾರ್ಯವಾಗಿದೆ.  ಕೊಡುವ ಕೊಳ್ಳುವ ತೂಕದ ಲೆಕ್ಕಾಚಾರದಲ್ಲಿ ನಮ್ಮ ಬಾಂಧವ್ಯ ಸ್ನೇಹ ಸಲುಗೆಗಳು ಕೇವಲ ಪ್ರಹಸನವಾಗಿಬಿಡುತ್ತದೆ. 

ತಮ್ಮ ತಮ್ಮ ಮನೆಯ ಕುಟುಂಬದ ಕಾರ್ಯಕ್ರಮದ ಬಗ್ಗೆ ಪ್ರತಿಯೊಬ್ಬರಿಗೂ ಅಭಿಮಾನ ನಿರೀಕ್ಷೆಗಳು ಇದ್ದೇ ಇರುತ್ತದೆ. ಸಾಕಷ್ಟು ಯೋಜನೆ ಮಾಡಿ ತಮ್ಮ ಕಾರ್ಯಕ್ರಮಗಳನ್ನು ಹೀಗೆಯೇ ಮಾಡಬೇಕು ಎನ್ನುವ ಕನಸನ್ನು ಕಟ್ಟಿಕೊಂಡಿರುತ್ತಾರೆ. ಬಂಧುಗಳನ್ನು ಹಿತೈಷಿಗಳನ್ನು ಮಿತ್ರರನ್ನು  ಸಾಕಷ್ಟು ಜ್ಞಾಪಿಸಿ  ಆಮಂತ್ರಣ ಕೊಡುತ್ತಾರೆ. ಬಂದವರನ್ನು ಮಾತನಾಡಿಸಿ ಉಪಚಾರ ಮಾಡಿ ಕಳುಹಿಸುವ ತನಕವೂ ಕಾರ್ಯಕ್ರಮದ ಒತ್ತಡ ಮುಗಿಯುವುದಿಲ್ಲ. ಅತಿಥಿ ಸತ್ಕಾರ ಎಂಬುದು ಯಾವುದೇ ಕಾರ್ಯಕ್ರಮದ ಅತಿ ಮುಖ್ಯ ಅಂಗವಾಗುತ್ತದೆ. ಪೂಜೆ ಪುನಸ್ಕಾರ, ವೈದಿಕ ಕ್ರಿಯಾಭಾಗಗಳು ಹರಕೆ ಸಲ್ಲಿಸುವ ಯಾಂತ್ರಿಕ ಕ್ರಿಯೆಯಾಗಿ ಬದಲಾದರೂ, ಅತಿಥಿ ಸತ್ಕಾರ ಹರಕೆ ಸಲ್ಲಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಯಾಕೆಂದರೆ ಇದೊಂದು ಪ್ರತಿಷ್ಠೆಯ ಪ್ರಶ್ನೆಯಾಗಿರುತ್ತದೆ. ಹಾಗಾಗಿ ಸತ್ಕಾರದ ಹಲವು ಮುಖಗಳನ್ನು ಕಾಣಬಹುದು. ಹಲವು ಸಲ ಪುರೋಹಿತರು ಗಂಟಲು ಶೋಷಣೆ ಮಾಡುವುದಷ್ಟೇ ಉಳಿದು, ಕರ್ತೃ ಅಥವಾ ಯಜಮಾನ ಅತಿಥಿಗಳ ನಡುವೆ ಇರಬೇಕಾದ ಅನಿವಾರ್ಯತೆ ಇರುತ್ತದೆ. 

ಅತಿಥಿ ಸತ್ಕಾರದಲ್ಲಿ ಅತಿ ಮುಖ್ಯ ಅಂಶವೆಂದರೆ ಭೋಜನ ಸತ್ಕಾರ. ಈಗೀಗ ಇದೊಂದು ಹೊಸ ಹೊಸ ಅವಿಷ್ಕಾರ ಪ್ರಯೋಗಗಳಿಗೆ ತುತ್ತಾಗುತ್ತಲೇ ಇದೆ. ಭೋಜನ ಆಹಾರ ಕ್ರಮ ಎಂಬುದು ದೇಶಾಚರದ ಜತೆಗೆ ಅದರಲ್ಲಿ ಒಂದು ಸಂಸ್ಕಾರ ಇರುತ್ತದೆ. ಇವತ್ತು ಈ ಸಂಸ್ಕಾರಗಳನ್ನುನಾವು ಮರೆಯುತ್ತಿದ್ದೆವೆ. ಮೊದಲೆಲ್ಲ ಹಳ್ಳಿಯ ಮನೆಗಳ ಕಾರ್ಯಕ್ರಮಗಳೆಂದರೆ ಒಂದು ಸಂಭ್ರವಿರುತ್ತಿತ್ತು. ಈಗ ಈ ಅವಿಷ್ಕಾರ ಪ್ರಯೋಗಗಳ ನಡುವೆ ಈ ಸಹಜವಾದ ಸಂಭ್ರಮ ಮರೆಯಾಗುತ್ತಿವೆ. ಅದಕ್ಕೆ ಹಲವಾರು ಕಾರಣಗಳಿವೆ ಅದು ಬೇರೆ. ಹಳ್ಳಿ ಹಳಿಯಲ್ಲಿಯೂ ಈಗ ಕಾರ್ಯಕ್ರಮಗಳು ಮನೆಯಂಗಳದಲ್ಲಿ ನಡೆಯುತ್ತಿಲ್ಲ.ಒಂದು ತಿಂಗಳ ಮೊದಲೇ ಕಾರ್ಯಕ್ರಮಕ್ಕೆ ಸಿದ್ದತೆ ಮಾಡುವಾಗ, ಮನೆಯಂಗಳವನ್ನು ಸಮತಟ್ಟು ಮಾಡಿ ಅಡಿಕೆ ಮರದ ಕಂಬ ನೆಟ್ಟು ಮಡಲು ಹಾಕಿ ಚಪ್ಪರ ಹಾಕುವಲ್ಲಿಂದ ತೊಡಗುವ ಸಂಭ್ರಮ ಮರೆಯಾಗಿದೆ.  ಮೊದಲೇ ಹಾಕುವ ಚಪ್ಪರದಲ್ಲಿ ಮನೆಯವರೆಲ್ಲ ಒಮ್ದೇ ಕಡೆ ಸೇರಿ ಅಲ್ಲೆ ಊಟ ಅಲ್ಲೆ ಜತೆಯಾಗಿ  ನಿದ್ರೆ ಅದೊಂದು ವಿಶಿಷ್ಟ ಸಂಭ್ರಮಗಳು ಇಂದಿನ ಜನಾಂಗಕ್ಕೆ ಅರಿವೆ ಇಲ್ಲ.  ಈಗಿನ ಮಕ್ಕಳಲ್ಲಿ ಹೇಳಿದರೆ ’ಹೌದಾ’  ಎಂದು ಉದ್ಗಾರ ತೆಗೆಯುತ್ತಾರೆ.  ಕಾರ್ಯಕ್ರಮದ ಮುನ್ನಾದಿನ ಪೆಂಡಾಲ್ ನವರು ಬಂದು ಶಾಮಿಯಾನ ಎಳೆದು ಬಿಗಿದರೆ ಚಪ್ಪರ ಸಿದ್ಧವಾಗಿಬಿಡುತ್ತದೆ. ಮರುದಿನ ಕಾರ್ಯಕ್ರಮದ ಗಡಿಬಿಡಿಯಲ್ಲಿ ಸಂಭ್ರಮಕ್ಕೆ ಸಮಯವೇ ಇರುವುದಿಲ್ಲ. 

  ಇಷ್ಟೆಲ್ಲ ಒಂದು ಬದಲಾವಣೆಯಾದರೆ ಆಹಾರ ಸತ್ಕಾರದ ರೂಪವೇ ಬದಲಾಗಿ ಹೋಗಿದೆ. ನಮ್ಮ ಸಾಂಪ್ರದಾಯಿಕ ಆಹಾರಗಳಾದ, ಅನ್ನ ಸಾರು ಪಲ್ಯ ಪಾಯಸಗಳು ನಾಮ್ಕೇ ವಾಸ್ತೆಯಾಗಿರುವುದು ಮಾತ್ರವಲ್ಲ ಹಲವು ಕಡೆ ಅದು ಮಾಯವಾಗಿದೆ. ಇಂದಿನ ಜನಾಂಗಕ್ಕೆ ಬಾಳೆ ಎಲೆಯಲ್ಲಿ ಪಾಯಸ ತಿನ್ನುವುದಕ್ಕೆ ಬರುವುದಿಲ್ಲ. ಅನ್ನ ಸಾಂಬಾರ್ ನ ಬದಲಾಗಿ ಇಂದು ಪಲಾವ್, ಪೂರಿ ಪರೋಟಗಳು  ರೋಟಿ ಇತರ ಉತ್ತರ ಭಾರತದ ತಿಂಡಿಗಳನ್ನು ಕಾಣಬಹುದು.  ಕುಳಿತು ತ್ ಇದಕ್ಕೆ ಕಾರಣ ಮೊದಲೆಲ್ಲ ನಮ್ಮೂರವರೇ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದರು. ಈಗ ಹಾಗಲ್ಲ ಉತ್ತರ ಭಾರತದವರು ಕೆಲವು ಮಂದಿಯಾದರೂ ಅವರಿಗೋಸ್ಕರ ಪೂರಿ ಪರೋಟಗಳನ್ನು ಮಾಡಿ ಅದನ್ನು ಉಳಿದವರಿಗೂ ಬಲವಂತದಿಂದ ತಿನ್ನಿಸುವುದನ್ನು ಕಾಣಬಹುದು. ಅಂದವಾಗಿ ಸಾವಕಾಶವಾಗಿ ಕುಳಿತು ಊಟ ಮಾಡುವ ಕ್ರಮ ಬದಲಾಗಿ ಒಂದು ಕೈಯಲ್ಲಿ ತಟ್ಟೆ ಇನ್ನೊಂದು ಕೈಯಲ್ಲಿ ಮೊಬೈಲ್ ಹಿಡಿದು ಸರ್ಕಸ್ ಮಾಡಿಕೊಂಡು ತಿನ್ನುವ ಪರಿಪಾಠ ಹೆಚ್ಚಾಗಿದೆ. ಇಂಥವರಿಗೆ ನೂರಾರು ಬಗೆಯ ಭಕ್ಷ್ಯ ತಿನಿಸುಗಳು. ಆಶ್ಚರ್ಯವಾಗುತ್ತದೆ.  ಈ ರೀತಿಯಲ್ಲಿ ನಮ್ಮದಲ್ಲದ ಸಂಸ್ಕಾರ, ಯಾವುದೋ ಊರಿನ ಆಹಾರ ಪದಾರ್ಥಗಳ ಬಳಕೆ ನಮ್ಮಲ್ಲಿ ಮಾತ್ರವೇ ಎಂದನಿಸುತ್ತದೆ. ಹಲವು ಸಲ ನಾನು ಗೋವ ಮುಂತಾದ ಕಡೆಗೆ ಹಲವು ಕಾರ್ಯಕ್ರಮಗಳಿಗೆ ಹೋಗಿದ್ದೇನೆ. ನಾವು ದಕ್ಷಿಣ ಭಾರತದವರು ಅಂತ ಅಲ್ಲೇನು ನಮಗೆ ಪ್ರತ್ಯೆಕ ಅನ್ನ ಸಾಂಬಾರು ಮಾಡುವುದಿಲ್ಲ. ಅಲ್ಲಿನವರು ಏನು ವಾಡಿಕೆಯಲ್ಲಿ ತಿನ್ನುತ್ತಾರೋ ಅದನ್ನೆ ನಮಗೂ ಕೊಡುತ್ತಾರೆ. ಅಲ್ಲಿ ಕೊಡುವ ಸೂಪನ್ನು ಸಾರು ಅಂತ ತಿಂದು ತೃಪ್ತಿ ಪಟ್ಟುಕೊಂಡದ್ದೂ ಇದೆ. 

ಯಾವುದೋ ಊರಿನಿಂದ ಯಾರೋ ಬರುತ್ತಾರೆ, ಅತಿಥಿ ಸತ್ಕಾರದಲ್ಲಿ ಅವರಿಗೆ ಬೇಕಾದಂತೆ ಮಾಡಿ ಅವರನ್ನು ತೃಪ್ತಿಪಡಿಸಬೇಕು ಹೌದು, ಆದರೆ  ನಮ್ಮ ಆಹಾರ ಕ್ರಮಗಳನ್ನು ಸಂಪ್ರದಾಯಗಳನ್ನು ನಾವು ಅವರಂತೆ ಯಾಕೆ ತೋರಿಸುವುದಿಲ್ಲ?  ಎಲ್ಲದರಲ್ಲೂ ಅನುಕರಣೆ ಮಾಡಿ ನಮ್ಮತನವನ್ನು ನಾವೇಕೆ ದೂರ ಮಾಡಬೇಕು.? ಅದರಲ್ಲೂ ನಮ್ಮ ಬ್ರಾಹ್ಮಣರ ಊಟದದ ಅಪಸವ್ಯಗಳು ಬೇರೆ, ನಮ್ಮಲ್ಲಿ ಈರುಳ್ಳಿ ಬೆಳ್ಳುಳ್ಳಿ ಉಪಯೋಗಿಸುವುದಿಲ್ಲ.  ಹಾಗಾಗಿ ಅದೇ ಮುಖ್ಯವಾಗಿರುವ ಪಲಾವ್ ಮತ್ತು ಇತರ ಉತ್ತರದ ಕರಿಗಳು ಅದಿಲ್ಲದೇ ಮಾಡುವಾಗ ಇದನ್ನು ಯಾಕಾದರೂ ತಿನ್ನಬೇಕು ಎಂದು ಅನ್ನಿಸಿದರೆ ಅದು ದೌರ್ಭಾಗ್ಯ ಎನ್ನಬೇಕು. ಇಷ್ಟಾದರೂ ನಮ್ಮನ್ನು ನಾವು ಮೆಚ್ಚಿಕೊಳ್ಳಬೇಕು. ಇವುಗಳ ನಡುವೆಯು ಉತ್ತರ ಭಾರತದ ಶೈಲಿಯನ್ನು ನಾಚುವಂತೆ ನಮ್ಮದೇ ಸಂಪ್ರದಾಯಗಳನ್ನು ಪಾಲಿಸುವವರು ಅನೇಕರಿದ್ದಾರೆ. ಏನಿದ್ದರು ಬಂದ ಅತಿಥಿಗಳಿಗೆ ಅವರಿಗೆ ಬೇಕಾದ ಉತ್ತಮ ಆಹಾರ ಉಪಚಾರಗಳನ್ನು ಒದಗಿಸಿ ಅವರನ್ನು ತೃಪ್ತಿ ಪಡಿಸಬೇಕು, ಇದು ಉತ್ತಮ ಆತಿಥೇಯದ ಕರ್ತವ್ಯ. ನಮ್ಮಲ್ಲಿ ಬಂದು ಅವರು ಹಸಿದು ಹೋಗಬಾರದು ಎನ್ನುವುದು ನಿಜ. ಆದರೆ ನಮ್ಮದಲ್ಲದ ಅಹಾರಕ್ರಮಗಳನ್ನು ಪುರಸ್ಕರಿಸುವಾಗ ನಮ್ಮದೇ ಆದ ಆಹಾರ ಕ್ರಮಗಳಿಗೆ ತಿರಸ್ಕಾರ ಸಲ್ಲದು. ಅದನ್ನು ನಾವು ಗೌರವಿಸದೇ ಇದ್ದರೆ....ಮತ್ತೆ ಉತ್ತರದವರ ಅಭಿರುಚಿಗಳು ಮಾತ್ರವೇ ಉಳಿದುಕೊಳ್ಳಬಹುದು. 

        ಆದರು ನಮ್ಮಲ್ಲಿ ಉತ್ತಮ ರೀತಿಯ ಭೋಜನವನ್ನು ಉತ್ತಮ ಉಪಚಾರವನ್ನು ನೀಡಿ ಗೌರವಿಸುವವರು ಇದ್ದಾರೆ. ಅವರೆಲ್ಲ ಅನುಕರಣೀಯರು ಎಂಬುದರಲ್ಲಿ ಎರಡು ಮಾತಿಲ್ಲ. 


Friday, March 22, 2024

ಸುಪ್ರಜಾ ರಾಮ

                    ನಮ್ಮತಪ್ಪುಗಳನ್ನು, ನಮ್ಮ ಜವಾಬ್ದಾರಿಗಳನ್ನು ಮತ್ತೊಬ್ಬರ ಮೇಲೆ ನಾವು ನಮಗರಿಯದೇ ಹೊರಿಸಿಬಿಡುತ್ತೇವೆ. "ಕೌಸಲ್ಯಾ ಸುಪ್ರಜಾರಾಮ ಪೂರ್ವಾ ಸಂಧ್ಯಾ ಪ್ರವರ್ತತೆ. ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಂ"  ಈ ಶ್ಲೋಕದ ಅಂತರಾರ್ಥ  ಹಲವು ಇರಬಹುದು. ಆದರೂ ಕೌಸಲ್ಯಾ ಸುಪ್ರಜಾ ರಾಮ.... ಯೋಚಿಸಿ ರಾಮ ಅರಸನಾಗಿ ರಾಮ ರಾಜ್ಯದ ಒಡೆಯನಾಗಿ ಇರುವಾಗ ಅತನನ್ನು ಸುಪ್ರಜಾ ರಾಮ ಅಂತ ಕೊಂಡಾಡುವುದು ಅಲ್ಲೊಂದು ನಮ್ಮ ಜವಾಬ್ದಾರಿಯ ಉಲ್ಲೇಖವೂ ಸೂಕ್ಷ್ಮವಾಗಿ ಇದೆ. ಸುಪ್ರಜಾ ರಾಮ ಎನ್ನುವಾಗ ಅಲ್ಲಿ ರಾಮ ನೊಬ್ಬನೇ ಮಹಾ ಪುರುಷ ಅಲ್ಲ ಪ್ರಜೆಗಳೂ ಸುಪ್ರಜೆಗಳಾಗಿರುತ್ತಾರೆ. ರಾಮ ರಾಜ್ಯದಲ್ಲಿದ್ದ ಪ್ರಜೆಗಳೂ ಸುಪ್ರಜೆಗಳಾಗಿರುವಾಗ ಪರೋಕ್ಷವಾಗಿ ನಮಗೆ ರವಾನೆಯಾಗುವ ಸಂದೇಶವಾದರೂ ಏನು? ರಾಮನೊಬ್ಬ ಆದರ್ಶ ಪುರುಷನಾಗಿದ್ದ, ಜತೆಯಲ್ಲಿ ಪ್ರಜೆಗಳೂ ಸುಪ್ರಜೆಗಳಾಗಿದ್ದರು. ಅಂದರೆ ಈಗ ನಾವು ರಾಮ ರಾಜ್ಯ ಅಂತ ಬಯಸುತ್ತೇವೆ. ಅದೊಂದು ಆದರ್ಶ ರಾಜ್ಯ ಅಂತ ಯೋಚಿಸುತ್ತೇವೆ. ಆದರೆ ಅಲ್ಲಿ ನಾವು ಸುಪ್ರಜೆಗಳಾಗಿರುವ ಬಗ್ಗೆ ಯೋಚಿಸುವುದಿಲ್ಲ. ಕೇವಲ ಅರಸನೊಬ್ಬ ರಾಮನಂತೆ ಇದ್ದರೆ ಸಾಕು ಎಂದು ನಮ್ಮ ಚಿಂತನೆ ಸಂಕುಚಿತವಾಗಿಬಿಡುತ್ತದೆ. ಪ್ರಜೆಗಳು ಸುಪ್ರಜೆಗಳಾಗಿರುವಾಗ ರಾಜ್ಯವೂ ರಾಮ ರಾಜ್ಯವಾಗುತ್ತದೆ ಎಂಬುದು ಇಲ್ಲಿ ಪರೋಕ್ಷ ಸಂದೇಶ. 

                    ನಾವೊಬ್ಬರು ಉತ್ತಮರು ಮಿಕ್ಕವರೆಲ್ಲ ನಮ್ಮಷ್ಟು ಉತ್ತಮರಲ್ಲ. ನಾವು ಚಿಂತಿಸುವ ರೀತಿ ಇದು.   ನಮ್ಮ ದೌರ್ಬಲ್ಯಗಳನ್ನು ನಮ್ಮ ತಪ್ಪುಗಳನ್ನು ನಾವು ಆತ್ಮ ವಿಮರ್ಶೆ ಮಾಡುವ ಬದಲಾಗಿ ನಮ್ಮ ಎಲ್ಲ ಋಣಾತ್ಮಕ ವಿಷಯಗಳನ್ನು ಮತ್ತೊಬ್ಬರ ಮೇಲೆ ಹೊರಿಸಿ ನಾವು ಜವಾಬ್ದಾರಿಯಿಂದ ದೂರ ನಿಂತು ಬಿಡುತ್ತೇವೆ. ಕೇವಲ ರಾಮ ರಾಜ್ಯದ ಕಲ್ಪನೆಯಲ್ಲಿ ಆ ಕನಸಿನಲ್ಲಿ ನಾವು ಸುಪ್ರಜೆಗಳಾಗಬೇಕಾದ ಅನಿವಾರ್ಯತೆಯನ್ನು ಬದಿಗೆ ಸರಿಸಿ ರಾಮ ರಾಜ್ಯದ ಚಿಂತನೆಯನ್ನು ಮಾಡುವಾಗ ನಮ್ಮ ಜವಾಬ್ದಾರಿಗಳು ನಮಗೆ ಅರಿವಿಗೆ ಬರುವುದಿಲ್ಲ. ಸುಪ್ರಜೆಗಳ ಒಡೆಯ ರಾಮನನ್ನು ಎಚ್ಚರಿಸುವಾಗ  ಪೂರ್ವಾ ಸಂಧ್ಯಾ ಪ್ರವರ್ತತೆ ಎಂದು ಎಬ್ಬಿಸುವಾಗ, ಅಲ್ಲಿ ಸಂಧ್ಯೆ ಅಂದರೆ ಕತ್ತಲು ಮತ್ತು ಬೆಳಕಿನ ನಡುವಿನ ಸಮಯದಿಂದ ಮೊದಲಿನ ಕಾಲ ಪ್ರವರ್ತಿಸುವಾಗ ನಾವು ನಮ್ಮ ಕರ್ತವ್ಯವಾದ ನಿತ್ಯ ಆಹ್ನಿಕಗಳನ್ನು ಪೂರೈಸಿಕೊಳ್ಳಬೇಕು. ಆದರೆ ನಾವು ನಮ್ಮ ಕರ್ತ್ಯವ್ಯವನ್ನು ಮರೆತು ಯಾವುದೋ ಕಾಲದಲ್ಲಿ ಎದ್ದು ಉತ್ತಿಷ್ಠ ನರಶಾರ್ದೂಲ ಎಂದು ಪರಮಾತ್ಮನ ಮೇಲೆ ಜವಾಬ್ದಾರಿಯನ್ನು ಹೇರಿ ಆತನನ್ನು ಎಚ್ಚರಿಸುವ ಪ್ರಯತ್ನ ಮಾಡುತ್ತೇವೆ. ಇಲ್ಲಿ ಪರಮಾತ್ಮನ ಎಚ್ಚರಕ್ಕಿಂತಲೂ ಮೊದಲು ನಮ್ಮದಾದ ಜವಾಬ್ದಾರಿಗಳನ್ನು ನಾವು ಮರೆಯುತ್ತಿದ್ದೇವೆ. 

                    ನಮ್ಮ ತಪ್ಪುಗಳು ನಮ್ಮ ಜವಾಬ್ದಾರಿಗಳು ಯಾವಾಗ ನಮಗೆ ಅರಿವಾಗುವುದಿಲ್ಲವೋ ಮತ್ತೊಬ್ಬರ ತಪ್ಪು ಜವಾಬ್ದಾರಿಗಳು ನಮಗೆ ಹೇಗೆ ಅರಿವಾಗಬೇಕು. ಹತ್ತಿರ ಇದ್ದ ಹೊಂಡ ಕಾಣದೇ ಇದ್ದರೆ ದೂರ ಇರುವ ಹೊಂಡ ಕಂಡರೂ ಫಲವೇನು. ಆ ಹೊಂಡದ ಬಳಿಗೆ ತಲುಪುವ ಮೊದಲು ಹತ್ತಿರದ ಹೊಂಡದಲ್ಲಿ ಬಿದ್ದು ಹೊರಳಾಡುತ್ತೇವೆ.  

Sunday, March 3, 2024

ಭಾರವಾಗುವ ಮತ್ಸರ



ಅತ್ಯಂತ ಭಾರವಾದ ಸರ ಯಾವುದು? ಹೀಗೊಂದು ಪ್ರಶ್ನೆಗೆ ಯಕ್ಷಗಾನದ ವಿದೂಷಕ, ಶ್ರೀ ನಯನ ಕುಮಾರ್ ಒಂದು ಕಡೆಯಲ್ಲಿ ಹೇಳಿದ್ದ ನೆನಪು, ಭಾರವಾದ ಸರ ಎಂದರೆ ಅದು ಗಂಗಸರ. ಅಂದರೆ ಸಾರಾಯಿ. ನಮ್ಮ ಊರ ಭಾಷೆಯಲ್ಲಿ ಸಾರಾಯಿ ಅಂದರೆ ಗಂಗಸರ ಹಾಕಿದರೆ ಅತ್ಯಂತ ಭಾರವಾಗಿರುತ್ತದೆ ಅಂತ ಬೇರೆ ಹೇಳಬೇಕಾಗಿಲ್ಲ. ಇದು ವಿಡಂಬನೆ ಅಥವಾ ಹಾಸ್ಯಕ್ಕೆ ಪರಿಗಣಿಸಿದರೂ ಅದರಲ್ಲಿ ಚಿಂತನೆಗಳಿವೆ. ಭಾರವಾದ ವಸ್ತು ನಮ್ಮ ತಲೆಯಲ್ಲಿ ತುಂಬಿದಾಗ ನಾವು ಆ ಭಾರವನ್ನು ಮಾತ್ರವೇ ಯೋಚಿಸುತ್ತೇವೆ. ಬೇರೆ ಯೋಚನೆ ಬರುವುದಿಲ್ಲ. ಅಥವಾ ಯಾವ ಯೋಚನೆಗಳಾದರೂ ಅದರಿಂದ ಪ್ರೇರೇಪಿಸಲ್ಪಡುತ್ತವೆ. ಒಂದು ಸಲ ಈ ಭಾರ ಇಳಿಸಿದರೆ ಸಾಕಪ್ಪ ಎಂದು ಅನಿಸಿದರೂ  ಮನುಷ್ಯ ಭಾರವನ್ನು ತನ್ನ ಮೇಲೆ ಎಳೆದುಕೊಳ್ಳುವ ಪ್ರವೃತ್ತಿಯೇ ಅಧಿಕ.  

ಹಾಸ್ಯಗಾರರು ಯಾವ ದೃಷ್ಟಿಕೋನದಲ್ಲಿ ಹೇಳಿದರೂ ಅದು ವಾಸ್ತವಕ್ಕೆ ಹತ್ತಿರವಾಗಿರುತ್ತದೆ. ಆದರೂ ನನ್ನ ಅನಿಸಿಕೆಯಂತೆ, ಅತ್ಯಂತ ಭಾರವಾದ ಸರ ಎಂದರೆ ಅದು ’ಮತ್ಸರ’  ಈ ಸರ ಧರಿಸಿರುವಷ್ಟು ಸಮಯ ನಮ್ಮ ಮನಸ್ಸು ಬೇರೆಯದನ್ನು ಯೋಚಿಸುವುದಿಲ್ಲ. ಮತ್ಸರ ಅಂದರೆ ನಮ್ಮ ಭಾಷೆಯಲ್ಲಿ ಮುಂದೆ ಹೋಗಲಾಗದೇ ಇದ್ದ ಸ್ಥಿತಿ. ಅದು ಇದ್ದಲ್ಲೇ ಇರುತ್ತದೆ. ಹಾಗಾಗಿ ಇದು ಇದ್ದಷ್ಟು ಹೊತ್ತು ನಮ್ಮ ಚಿಂತನೆಗಳು ಮುಂದೆ ಹೋಗುವುದಿಲ್ಲ. ಅದಕ್ಕೆ ಹೊಂದಿಕೊಂಡು ನಾವು ನಿಂತಲ್ಲೇ ನಿಂತುಬಿಡುತ್ತೇವೆ. ಮತ್ಸರ ಯಾವ ಮನಸ್ಸಿನಲ್ಲಿದೆಯೋ ಆ ಮನಸ್ಸು ಬೇರೆಯದನ್ನು ಚಿಂತಿಸುವುದಿಲ್ಲ. ಸವತಿ ಮಾತ್ಸರ್ಯವಾಗಬಹುದು, ಭಾತೃ ಮಾತ್ಸರ್ಯವಾಗಬಹುದು ಯಾವಾಗ ಮನಸ್ಸನ್ನು ಅವರಿಸಿಬಿಡುತ್ತದೆಯೋ ಅಲ್ಲಿ ಅನ್ಯರ ಬಗ್ಗೆ ಸಚ್ಚಿಂತನೆಗಳು ಹುಟ್ಟಿಕೊಳ್ಳುವುದಿಲ್ಲ. ಯಾರು ಏನು ಮಾಡಿದರೂ ಅದರಲ್ಲಿ ಕೆಡುಕನ್ನೇ ಹುಡುಕುವ ಕೊಂಕು ತನಕ್ಕೆ ಅದು ಪ್ರಚೋದನೆ ಕೊಡುತ್ತದೆ.  ಮನೆಗೆ ಬಂದಾಗ ಬಾಗಿಲು ಮುಚ್ಚಿದ್ದರೆ , ಮತ್ಸರದ ಮನಸ್ಸು ಯೋಚಿಸುತ್ತದೆ ಯಾಕೆ ಬಾಗಿಲು ಮುಚ್ಚಿದ್ದಾರೆ? ಸರಿ ಬಂದರು ಎಂದು ಬಾಗಿಲು ತೆರೆದರೆ, ಯಾಕೆ ಬಾಗಿಲು ತೆರೆದರು? ಹೀಗೆ ದ್ವಂದ್ವಮಯ ಚಿಂತನೆ ಮತ್ಸರ ಎಂಬ ಭಾರದಿಂದ ಪ್ರಚೋದಿಸಲ್ಪಡುತ್ತದೆ. 

ನಮ್ಮ ಸುತ್ತ ಮುತ್ತ ಕೆಟ್ಟವರು ಇರುತ್ತಾರೆ, ಒಳ್ಳೆಯವರೂ ಇರುತ್ತಾರೆ.  ಯಾವಾಗಲೂ ಎಲ್ಲವೂ ಒಳ್ಳೆಯದೇ ಎಂದು ನಿರೀಕ್ಷಿಸುವುದೂ ತಪ್ಪು. ಕೆಟ್ಟದ್ದು ಅಂತ  ಅದನ್ನು ಚಿಂತಿಸಿಕೊಳ್ಳುತ್ತಾ ಇರುವುದು ತಪ್ಪು. ಕೆಟ್ಟದ್ದನ್ನು ದೂರವಿಡುತ್ತ ಒಳ್ಳೆಯದರ ಬಗ್ಗೆ ಯೋಚಿಸುತ್ತಾ ಇದ್ದರೆ ಮನಸ್ಸು ಮತ್ತಷ್ಟು ವಿಶಾಲಾವಾಗುತ್ತದೆ. ಯೋಚನೆಗೆಳು ಹಗುರವಾಗುತ್ತದೆ. ಇಕ್ಕಟ್ಟಾದ ಕಣಿವೆಯಲ್ಲಿ ರಭಸವಾಗಿ ಹರಿದನೀರು, ವಿಶಾಲವಾದ ಬಯಲಿಗಿಳಿದಂತೆ ತನ್ನ ರಭಸವನ್ನು ಕಡಿಮೆ ಮಾಡಿಕೊಳ್ಳುತ್ತದೆ. ಅದರಂತೆ ನಮ್ಮ ಯೋಚನೆಗಳು, ಮನಸ್ಸಿನ ವಿಶಾಲತೆ ಕಡಿಮೆಯಾದಂತೆ ಚಿಂತನೆಗಳ ಒತ್ತಡ ಅಧಿಕವಾಗುತ್ತಾ ಹೋಗುತ್ತದೆ. ಮತ್ಸರ ತುಂಬಿದ ಮನಸ್ಸು ಸಂಕುಚಿತವಾಗುತ್ತಾ ಮನಸ್ಸಿನ ಒತ್ತಡ ಹೆಚ್ಚಿಸುತ್ತ ಹೋಗುತ್ತದೆ. ಒಂದು  ಸಲ ಮತ್ಸರದ ಭಾವವನ್ನು  ದೂರವಿಟ್ಟು ಚಿಂತಿಸಿದಾಗ ಮತ್ಸರದ ಭಾರ ಅರಿವಾಗುತ್ತದೆ. ನಮ್ಮೊಳಗಿನ ಮತ್ಸರ ಮೇಲ್ನೋಟಕ್ಕೆ ಹೊರಗಿನವರಿಗೆ ತೊಂದರೆ ಕೊಟ್ಟರೂ ಅದರಿಂದ ಹೆಚ್ಚಿನ ತೊಂದರೆ ಅನುಭವಿಸುವುದು ನಾವುಗಳೇ ಆಗಿರುತ್ತೇವೆ. ಮತ್ಸರವೆಂದರೆ ಅದು ರೋಗವಿದ್ದಂತೆ, ಈ ರೋಗ ಬಾಧೆ ಇರುವಷ್ಟು ದಿನ ಮನಸ್ಸು ಮುಂದಕ್ಕೆ ಯೋಚಿಸುವುದಿಲ್ಲ. ಮಾತ್ರವಲ್ಲ ನಮ್ಮ ಬೆಳವಣಿಗೆಯೂ ಸಾಧ್ಯವಾಗುವುದಿಲ್ಲ. 

Saturday, February 24, 2024

ಚಾಂದ್ರಾಯಣ

     ಮೂವತ್ತು ದಿವಸಗಳ ಚಾಂದ್ರಾಯಣ ವೃತ ಯಶಸ್ವಿಯಾಗಿ ಆಚರಿಸಿ ಇಂದಿಗೆ ಅಂದರೆ ಶನಿವಾರದ ಪೌರ್ಣಮಿಯ ದಿನ ಸಮಾಪ್ತಿಗೊಳಿಸಿದೆ. ಇದು ಕೇವಲ ವೃತವಲ್ಲ, ಬದುಕಿನ ಮಹತ್ವದ ಪಾಠವಾಗಿ ಪರಿಣಮಿಸಿದ್ದು ಒಂದು ರೋಚಕ ಅನುಭವ. ನಾನು ಮತ್ತು ಜತೆಗೆ ಮಗಳು ಮಹಿಮನು ಭಾಗಿಯಾಗಿ ವೃತಾಚರಣೆಯನ್ನು ಯಶಸ್ವಿಯಾಗಿ ಪೂರೈಸಿದ್ದು ಒಂದು ವೈಶಿಷ್ಟ್ಯ. 

ತಮ್ಮ ಹಿರಿಮೆ ಗರಿಮೆ ಗೌರವದ ತೂಕ ಹೆಚ್ಚಬಹುದು, ಅದಕ್ಕಾಗಿ ಪ್ರತಿಯೊಬ್ಬರೂ ಆಸಕ್ತರಾಗಿರುತ್ತಾರೆ. ಆದರೆ ಅದರಂತೆ ಬೆಳೆಯುವ ದೇಹದ ತೂಕದ ಬಗ್ಗೆ ಗಮನ ಕೊಡುವವರು ಕೆಲವರು ಮಾತ್ರ. ಹೀಗೆ ಸುಮ್ಮನೆ ರಸ್ತೆಯಲ್ಲಿ ಓಡಾಡುವಾಗ ಎಲ್ಲೆಂದರೆಲ್ಲಿ ಕೆಲವರು ತಂದು ಕರಪತ್ರ ಇಲ್ಲ ತಮ್ಮ ಗುರುತಿನ ಚೀಟಿ ತೋರಿಸಿ ತೂಕ ಕಡಿಮೆ ಮಾಡುವ ಬಗ್ಗೆ ಸಲಹೆ ಕೊಟ್ಟು ತೂಕ ಕಡಿಮೆ ಅಗುವುದಕ್ಕೆ ಪರಿಹಾರವನ್ನು ಸೂಚಿಸುತ್ತಾರೆ.  ಸ್ಥೂಲ ಕಾಯದವರು ಇವರಿಗೆ ಗಿರಾಕಿಗಳು. ಒಂದು ಕಾಲದಲ್ಲಿ ನಾನೂ ಇವರ ದೃಷ್ಟಿ ಆಹಾರವಾಗಿದ್ದು ನೆನಪಿದೆ.  ಕ್ರಮೇಣ ಯೋಗಾಭ್ಯಾಸದಲ್ಲಿ ತೊಡಗಿದಾಗ ಇಂತಹ ವ್ಯಕ್ತಿಗಳು ನನ್ನನ್ನು ಗಮನಿಸುವುದು ಬಹುತೇಕ ಕಡಿಮೆಯಾಯಿತು. ದೇಹದ ತೂಕ ಸಾಕಷ್ಟು ಕಡಿಮೆಯಾಗಿದ್ದರೂ  ಸಹ ಚಾಂದ್ರಾಯಣ ವೃತ ಮಾಡಬೇಕೆಂದು ನಿಶ್ಚಯಿಸಿದೆ. 

ಹಸಿವು ಒಂದು ಜೀವಿಯ ಆರೊಗ್ಯದ ಲಕ್ಷಣ. ನಮ್ಮ ಪ್ರತಿಯೊಂದು ಕ್ರಿಯೆಗಳಿಗೂ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಹಸಿವೇ ಕಾರಣವಾಗಿರುತ್ತದೆ. ಈ ಹಸಿವಿನ ಮಹತ್ವದ ಪೂರ್ಣ ಅರಿವು ಈ ಚಂದ್ರಾಯಣದ ಅವಧಿಯಲ್ಲಾಯಿತು.  ಬಾಲ್ಯದಲ್ಲಿ ಕಳೆಯುತ್ತಿದ್ದಹ ಹಸಿವಿನ  ದಿನಗಳು ಸಹ ಸ್ಮರಣೆಗೆ ಬಂತು. ಓಂದೊಂದು ತುತ್ತೂ ಮಹತ್ವವಾಯಿತು. ಒಂದು ಮುಷ್ಠಿ ಅನ್ನ ತಟ್ಟೆಯಲ್ಲಿ ಹಾಕಿ ಅಷ್ಟನ್ನೇ ಉಂಡು ಹಸಿವು ನೀಗಿಸಬೇಕು ಎನ್ನುವಾಗ ತಟ್ಟೆಯಲ್ಲಿದ್ದ ಒಂದು ಅಗುಳು ಅನ್ನವೂ ಬಹಳ ಮಹತ್ವ  ಎನಿಸಿತು. ಸಮಾರಂಭದಲ್ಲಿ ತಿನ್ನದೇ ಉಳಿದು ಎಸೆಯುವ ಆಹಾರ ನೆನಪಾಗುತ್ತಿತ್ತು. ಇದುವರೆಗೆ ಹೊಟ್ಟೆ ತುಂಬಿದರೂ ಮತ್ತೂ ತಿನ್ನುತ್ತಿದ್ದ ಅನ್ನಾಹಾರ ಇನ್ನಾರದೋ ಹೊಟ್ಟೆ ಸೇರಬೇಕಾದ ಆಹಾರವನ್ನು ಕಿತ್ತು ತಿಂದಂತೆ ಭಾಸವಾಯಿತು. ಚಾಂದ್ರಾಯಣ ಕೇವಲ ದೇಹ ಭಾರವನ್ನು ತಗ್ಗಿಸಿ ಆರೋಗ್ಯವನ್ನು ಕೊಡುವುದಕ್ಕೆ ಮಾತ್ರ ಸೀಮಿತವಾಗದೇ ಬದುಕಿನ ಮಹತ್ವದ ಪಾಠಗಳನ್ನು ಹೇಳಿಕೊಟ್ಟಿತು. ನಿಜಕ್ಕೂ ಹಸಿವು ಎಂದರೆ ಅದೆಷ್ಟು ಕಠಿಣ. ದಿನದ ಮೂರು ಹೊತ್ತು ಆಹಾರ ಏನೂ ಇಲ್ಲದೇ ಹಸಿವನ್ನೇ ಆಹಾರವಾಗಿಸಿಕೊಂಡವರೆಷ್ಟೋ? ಅದೇ ಹಸಿವನ್ನು ರೂಢಿ ಮಾಡಿಕೊಂಡವರೆಷ್ಟೋ , ಚಾಂದ್ರಾಯಣದಲ್ಲಿ ಹಸಿವೂ ಒಂದು ರೂಢಿಯಾಗಿ ಹೋದದ್ದು ಸತ್ಯ. ಈ ವೃತದ ಅವಧಿ ಕಳೆದ ಮೇಲೆ ನಾನು ಉಂಡು ತೇಗಬಲ್ಲೇನೆ ಎಂದು ಹಲವು ಸಲ ಅನುಮಾನವಾದದ್ದು ಸಹಜ. ಅದೆಂತಹ ಹಸಿವಿನ ಅನುಭವ. ಶೌಚಕ್ಕೆ  ಹೋದರೆ ವಿಸರ್ಜಿಸುವುದಕ್ಕೆ ಹೊಟ್ಟೆಯಲ್ಲೇನೂ ಇರಲಿಲ್ಲ. ಆದರೂ  ಅದೇನೋ ಸಂತೃಪ್ತಿ ಈ ಚಾಂದ್ರಾಯಣ ಕಲ್ಪಿಸಿದ್ದು ಸುಳ್ಳಲ್ಲ. 

ಚಾಂದ್ರಾಯಣ ಅದು ಕೇವಲ ವೃತವಲ್ಲ. ಬದುಕಿನಲ್ಲಿ ಕಲಿಯಬೇಕಾದ ಪಾಠ ಇದರಲ್ಲಿ ಹಲವಿದೆ.  ಹಾಗಾಗಿಯೆ ಪ್ರತಿಯೊಂದು  

ಚಾಂದ್ರಾಯಣ  ಎಂದರೆ ಚಂದ್ರನ ಕ್ಷಯ ಮತ್ತು ವೃದ್ಧಿಗೆ ನಮ್ಮ ದೇಹವನ್ನು ಸ್ಪಂದಿಸುವಂತೆ ನಮ್ಮ ದಿನಚರಿಯನ್ನು ಅದಕ್ಕೆ ಹೊಂದಿಸಿಕೊಳ್ಳುವ ವೃತವಾಗಿದೆ. ಕೃಷ್ಣ ಪಕ್ಷದ ಪಾಡ್ಯದಿಂದ ಅಮಾವಾಸ್ಯೆಯ ಹದಿನೈದು ದಿವಸ ಚಂದ್ರನ ಗಾತ್ರ ಕಡಿಮೆಯಾದಂತೆ ನಾವು ತಿನ್ನುವ ಆಹಾರದಲ್ಲಿ ಕಡಿಮೆ ಮಾಡುತ್ತಾ ಕೊನೆಗೆ ಅಮಾಸ್ಯೆಯಂದು ಪೂರ್ಣ ಉಪವಾಸ ಮಾಡಿ ಆನಂತರದ ಶುಕ್ಲ ಪಕ್ಷದ ಚಂದ್ರ ವೃದ್ಧಿಯಾದಂತೆ ಆಹಾರವನ್ನು ಹೆಚ್ಚಿಸುತ್ತಾ ಬಂದು ಪೌರ್ಣಮಿಯ ವರೆಗಿನ ಹದಿನೈದು ದಿವಸ ಮುಗಿದಾಗ ಚಾಂದ್ರಾಯಣ ವೃತವೂ ಸಂಪನ್ನವಾಗುತ್ತದೆ. ನೋಡುವುದಕ್ಕೆ  ಏನೋ ಬಹಳ ಸರಳವಾಗಿದೆ, ಆದರೆ ಮನಸ್ಸಿನ ನಿಯಂತ್ರಣ ಕಠಿಣವಾಗಿರಬೇಕು. ಒಂದಿಷ್ಟು ವಿಚಲಿತರಾದರೂ ವೃತ ಭಂಗವಾಗಿ ಫಲಶ್ರುತಿಯ ಮೇಲೆ ಪರಿಣಾಮ ಬೀರುತ್ತದೆ. ಉಪವಾಸ ಎಂಬುದು ಒಂದು ಆರೋಗ್ಯ  ವಿಧಾನವೂ ಹೌದು. ತಿಂಗಳಲ್ಲಿ ಒಂದು ದಿನ ಸಂಪೂರ್ಣ ಉಪವಾಸ ಆಚರಿಸುವುದು ಆರೋಗ್ಯದ ದೃಷ್ಟಿಯಲ್ಲಿ ಉತ್ತಮ. ಇದರಲ್ಲಿ ಉಪವಾಸ ಸಂಪೂರ್ಣ ಆಚರಿಸಿದರೂ ಮೂವತ್ತು ದಿವಸದ ನಿಯಮಿತ ಆಹಾರ ಸೇವನೆ ಮತ್ತು ಹೊಂದಿಕೊಂಡು ಯೋಗಾಭ್ಯಾಸ ದೇಹದ ಆರೋಗ್ಯದ ಮೇಲೆ ಗಣನೀಯ ಪರಿಣಾಮ ಬೀರುತ್ತದೆ. ಮತ್ತು ದೇಹದ ತೂಕ ಬಹಳಷ್ಟು ಕಡಿಮೆ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಕೇವಲ ದೇಹದ ತೂಕ ಮಾತ್ರವಲ್ಲ ಚಾಂದ್ರಾಯಣ ಉಪಯೋಗ ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿ ಬಹಳಷ್ಟು ಸತ್ಪರಿಣಾಮವನ್ನು ಉಂಟುಮಾಡಿ ಮನುಷ್ಯ ಜೀವನದ ಮಹತ್ವದ ಅರಿವಾಗುತ್ತದೆ. 

ಹಲವು ಧರ್ಮಗಳಲ್ಲಿ ಹಲವು ವಿಧದ ಉಪವಾಸದ ಆಚರಣೆ ಪವಿತ್ರವಾಗಿ ಆಚರಿಸಲ್ಪಡುತ್ತದೆ. ರಂಜಾನ್ ಮಾಸದಲ್ಲಿ ಮುಸ್ಲಿಂ ಆಚರಿಸುವ ಉಪವಾಸ ಒಂದು ವಿಧವಾದರೆ, ಚಾಂದ್ರಾಯಣವೂ ಒಂದು ತಿಂಗಳ ಒಂದು ಉಪವಾಸದ ವೃತ. ರಂಜಾನ್ ದಿನಗಳಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಅಖಂಡ ಸಂಪೂರ್ಣ ಉಪವಾಸ ಒಂದು ತೊಟ್ಟು ನೀರನ್ನೂ ಕುಡಿಯದೆ ಕಠಿಣ ಉಪವಾಸ ಮಾಡಿ ರಾತ್ರಿ ಆಹಾರ ಸೇವಿಸುತ್ತಾರೆ. ಆದರೆ ಇದರಲ್ಲಿ ಚಂದ್ರನಿಗೆ ಹೊಂದಿಕೊಂಡು ನಮ್ಮ ಆಹಾರ ಪದ್ಧತಿ ಇರುತ್ತದೆ. ನನ್ನಿಂದ ಈ ವೃತ ಆಚರಿಸಬಹುದೇ ಎಂಬ ಆತಂಕ ಇತ್ತು. ಆದರೆ ವೃತದ ಮಾರ್ಗ ದರ್ಶಕರಾಗಿ ಯೋಗ ಚಿಕಿತ್ಸಾ ಪರಿಣತ, ಡಾ.. ಹೃಷಿಕೇಷ್ ಪೆರ್ನಡ್ಕ ಧೈರ್ಯ ತುಂಬಿ ವೃತ ಆಚರಿಸುವಂತೆ ಪ್ರಚೋದಿಸಿದರು. ಅವರ ನಿರ್ದೇಶನದಂತೆ ಪುಷ್ಯ ಮಾಸದ ಕೃಷ್ಣ ಪಕ್ಷದ ಪಾಡ್ಯದಂದು ನನ್ನ ಉಪವಾಸ ಕ್ರಮ ಆರಂಭಿಸಿದೆ. ದಿನ ನಿತ್ಯದಂತೆ ನಾವೆಷ್ಟು ಯಾವ ಬಗೆಯ ಆಹಾರ ಸೇವಿಸುತ್ತೇವೆ ಎಂಬುದನ್ನು ಹೊಂದಿಕೊಂಡು ಇಲ್ಲಿ ಆಹಾರದ ಕ್ರಮ ನಿರ್ಣಯಿಸಲ್ಪಡುತ್ತದೆ. ನಾವು ಎರಡು ಪ್ಲೇಟ್ ಅನ್ನ ಸಾಂಬಾರ್, ಪಲ್ಯ ಇತ್ಯಾದಿ ಸೇವಿಸುತ್ತಿದ್ದರೆ ಅದರಲ್ಲಿ ಇರುವ ಕ್ಯಾಲೊರಿ ಲೆಕ್ಕ ಹಾಕಿ ದಿನ ಅದನ್ನು ಕಡಿಮೆ ಮಾಡುತ್ತಾ ಸಾಗುವುದೇ ಚಾಂದ್ರಾಯಣ. ಮೊದಲ ದಿನ ಎರಡು ಪ್ಲೇಟ್ ಅನ್ನ ಇದ್ದದ್ದು ಮರುದಿನ ಕಾಲು ಪ್ಲೇಟ್ ಕಡಿಮೆ ಮಾಡಿ ನಂತರದ ದಿನಗಳಲ್ಲಿ ಕಡಿಮೆ ಮಾಡುತ್ತಾ ಸಾಗುವಾಗ  ಆರಂಭದಲ್ಲಿ ನಿರ್ಧಾರ ಅಲುಗಾಡ ತೊಡಗುತ್ತದೆ. ಐದಾರು ದಿನ ಕಳೆಯ ಬೇಕಿದ್ದರೆ ಹಸಿವು ತಡೆದುಕೊಳ್ಳುವುದು ಅಭ್ಯಾಸವಾದರೂ., ಇಲ್ಲಿ ವಿಲಾಸೀ ಆಹಾರಗಳು, ಹೆಚ್ಚು ಖಾರ ಸಿಹಿ ಮತ್ತು ಎಣ್ಣೆಯ ತಿಂಡಿಗಳನ್ನು ಸಂಪೂರ್ಣ ನಿಷೇಧಿಸಲಾಗುತ್ತದೆ. ಕಾಫಿ ಚಹ ಸೇವನೆಯನ್ನೂ ಕಡಿಮೆ ಮಾಡಲಾಗುತ್ತದೆ. ಎಣ್ಣೆ ತಿಂಡಿ ಹೊರಗಿನ ಸಿದ್ಧ ಪಡಿಸಿದ ಆಹಾರಗಳು, ಬಿಸ್ಕಿಟ್ ಬ್ರೆಡ್ ಎಣ್ಣೆ ತಿಂಡಿ, ಸಿಹಿ ತಿಂಡಿಗಳನ್ನು ಸಂಪೂರ್ಣ ನಿರ್ಬಂಧಿಸಲಾಗುತ್ತದೆ. ಕೇವಲ ಸಾತ್ವಿಕ ಆಹಾರ ಅದೂ ಅತ್ಯಂತ ಮಿತಿಯಲ್ಲಿರುತ್ತದೆ. ಬಿಡು ಹೊತ್ತಲ್ಲಿ ಒಂದಷ್ಟು ಹಸಿ ತರಕಾರಿ ಒಂದಷ್ಟು ಹಸಿವನ್ನು ತಡೆದುಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ. ನಮಗರಿವಿಲ್ಲದೇ ನಮ್ಮ ಮನಸ್ಸು ನಮ್ಮ ನಿಯಂತ್ರಣಕ್ಕೆ ಒಳಗಾಗುತ್ತದೆ. ಚಾಂದ್ರಾಯಣದ ಅವಧಿಯಲ್ಲಿ ಎಣ್ಣೆ ತಿಂಡಿ ತಿನ್ನುವ ಹಾಗಿಲ್ಲ. ಸಿಹಿ ತಿನಿಸು ಕೂಡ ನಿಷಿದ್ಧ. ಹಾಗಾಗಿ ಮಗಳಿಗೆ ಇದ್ದ ಜಂಕ್ ಪುಡ್ ಸೇವನೆಯ ದುರಭ್ಯಾಸ ಬಹಳಷ್ಟು ದೂರವಾಯಿತು. ಈ ಒಂದು ತಿಂಗಳಲ್ಲಿ ಅದರಿಂದ ದೂರವೇ ಉಳಿದದ್ದು ಒಂದು ಮಹತ್ವದ ಸಾಧನೆ ಎನ್ನಬೇಕು. 


ಡಾ’ ಹೃಷಿಕೇಷ್  ಮೊದಲೇ ನಿಯಗಳ ಬಗ್ಗೆ ಹೇಳಿದ್ದರು. ಮಿತ ಆಹಾರ, ಬೆಳಗ್ಗೆ ಒಂದಷ್ಟು ನೀರು ಸೇವನೆ, ಸ್ನಾನ  ನಂತರ ಯೋಗಭ್ಯಾಸ ಇದು ಖಡ್ಡಾಯ. ರಾತ್ರಿ ಬೇಗ ಆಹಾರ ಸೇವಿಸಿ ಬೇಗನೇ ನಿದ್ರಿಸಬೇಕು. ಹೊರಗಿನ ಆಹಾರವನ್ನು ಸಂಪೂರ್ಣ ದೂರ ಮಾಡಬೇಕು. ಕಾಫಿ ಚಹ ಹಾಲು  ಸೇವನೆ  ನಿಲ್ಲಿಸುವಂತೆ ಹೇಳುತ್ತಾರೆ. ಆದರೂ ಆಭ್ಯಾಸ ಇದ್ದವರಿಗೆ ಅದನ್ನು ಸೂಕ್ಷ್ಮವಾಗಿ ಕಡಿಮೆ ಮಾಡಲಾಗುತ್ತದೆ. ಪಥ್ಯ ಎಂದರೆ ದೇಹಕ್ಕೆ ಹೊಂದಿಕೊಳ್ಳುವ ಆಹಾರ ಕ್ರಮ. ದೇಹಕ್ಕೆ ಬೇಡದೇ ಇದ್ದದ್ದು, ಮನಸ್ಸಿಗೆ ಬೇಕು ಎಂದು ಕಂಡರೂ ಸೇವಿಸುವ ಹಾಗಿಲ್ಲ. ಮರುದಿನ ಊಟ ಉಪಹಾರದ ವಿವರಗಳನ್ನು ಮೊದಲ ದಿನವೇ ಕೊಡಬೇಕು. ಮರುದಿನ ಅವರು ತೆಗೆದುಕೊಳ್ಳಬೇಕಾದ ಆಹಾರವನ್ನು ಅದರ ಪರಿಮಾಣವನ್ನು ತಿಳಿಸುತ್ತಾರೆ. ಅದರ ಪ್ರಕಾರ ಸೇವಿಸಿದರೆ ಮುಗಿಯಿತು. ಆದರೆ ಹಸಿವು ಚಪಲಗಳನ್ನು ನಿಯಂತ್ರಿಸುವುದು ತುಂಬ ಕಷ್ಟವಾದರೂ ಮನಸ್ಸು ಅದಕ್ಕೆ ಹೊಂದಿಕೊಳ್ಳಲಾರಂಭಿಸುತ್ತದೆ. ಮೊದಲ ಒಂದೆರಡು ದಿನ ನನಗೆ ಹೆಚ್ಚು ವೆತ್ಯಾಸ ತಿಳಿಯದೇ ಇದ್ದರೂ ಐದಾರು ದಿನ ಕಳೆದಾಗ ಬಹಳ ಕಷ್ಟವಾದದ್ದು ಸತ್ಯ. ಮೊದಲೇ ಯೋಗ ಕ್ರಮದಲ್ಲಿ ಅದೇ ನಿಯಮದಲ್ಲಿ ನನ್ನ ಆಹಾರದ ಕ್ರಮ ಇದ್ದರೂ ಸಹ ನನಗೆ ಒಂದಷ್ಟು ಕಷ್ಟವಾಯಿತು. ಆದರೆ ಕ್ರಮೇಣ ಮನಸ್ಸು ಅದ್ಭುತವಾಗಿ ಹೊಂದಿಕೊಂಡು ಬಿಟ್ಟಿತು. 

ಭಾರವಾದ ದೇಹ ಗಣನೀಯವಾಗಿ ಹಗುರವಾಗುತ್ತದೆ. ಜತೆಗೆ ಆರೋಗ್ಯವೂ ಹದಗೆಡುವುದಿಲ್ಲ. ಮುಖದ

ಚಾಂದ್ರಾಯಣದ ಮೊದಲ ದಿನ
ಚಾಂದ್ರಾಯಣದ ಕೊನೆಯ ದಿನ



ಲ್ಲಿ ಪ್ರಸನ್ನತೆ  ಸದಾ ಇರುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ನಮ್ಮಲ್ಲಿರುವ ದುಶ್ಚಟಗಳು ದೂರವಾಗುತ್ತದೆ. ಕಾಫಿ ಚಹದಂತಹ ವಿಲಾಸೀ ಆಹಾರ ಸೇವನೆ ದೂರವಾಗುತ್ತದೆ. ಮುಂಜಾನೆ ಏಳುವುದು, ಸ್ನಾನ ಮಾಡಿ ಯೋಗಾಭ್ಯಾಸ ಮಾಡುವುದು, ಮಿತವಾದ ಆಹಾರ ಸೇವನೆ, ಒಟ್ಟಿನಲ್ಲಿ  ಉತ್ತಮ ಶಿಸ್ತಿನ ಜೀವನ ಶೈಲಿ ರೂಢಿಸಿಕೊಳ್ಳುವುದಕ್ಕೆ ಸಹಾಯಕವಾಗುತ್ತದೆ. ಚಾಂದ್ರಾಯಣ ಒಂದು ಅದ್ಭುತ ವೃತ. 

ಚಾಂದ್ರಾಯಣ ಬಹಳ ಕಠಿಣ ಎಂಬ ಕಲ್ಪನೆ ಇತ್ತು. ಆದರೆ ಅದನ್ನು ಸರಳವಾಗಿ ಆಚರಿಸುವಂತೆ ಉತ್ತಮ ಮಾರ್ಗ ದರ್ಶನ ನೀಡಿದವರು ಡಾ. ಹೃಷಿಕೇಶರು ಒಂದು ಉತ್ತಮ ಜೀವನ ದರ್ಶನಕ್ಕೆ ಕಾರಣರಾದರು. ದಿನವೂ ಒಂದು ಹೊಸ ಅನುಭವದಿಂದ ಚಾಂದ್ರಾಯಣವನ್ನು ಮುಗಿಸಿದ ತೃಪ್ತಿ ಇದೆ. ಕೇವಲ ಒಂದು ತಿಂಗಳಲ್ಲಿ ಏಳು ಕೆಜಿಗಿಂತಲೂ ಅಧಿಕ ದೇಹದ ತೂಕ ಇಳಿಸಿಕೊಂಡಿದ್ದೇನೆ.  ಇದನ್ನು ಯಾರೂ ಆಚರಿಸಬಹುದು. ಸರಳವಾದ ಮಾರ್ಗದರ್ಶನದಿಂದ ಸುಲಭವಾಗಿ ಇದನ್ನು ಆಚರಿಸಬಹುದು. ಚಾಂದ್ರಾಯಣ ಆಚರಿಸಬೇಕಿದ್ದರೆ ಉತ್ತಮ ಸಲಹೆಗಾಗಿ ಡಾಕ್ಟರ್ ಹೃಷಿಕೇಶ್ ಅವರ ಸಂಪರ್ಕ ವಿವರಗಳನ್ನು ಕೊಟ್ಟಿರುತ್ತೇನೆ. ಕಠಿಣವೆನಿಸಿದ ಚಾಂದ್ರಾಯಣವನ್ನು ಸುಲಭ ಸಾಧ್ಯವಾಗಿ ಮಾಡಿದ್ದ ಹೃಷಿಕೇಶ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.

ಡಾಕ್ಟರ್ ಹೃಷಿಕೇಶ ಅವರ Mobile  : 91138 93928 ವಿಳಾಸ : No. 894, 3rd Floor, 10th A East Cross Rd, RBI Layout, 7th Phase, J. P. Nagar, Bengaluru, Karnataka 560078. ಇನ್ನಿತರ ವಿವರಗಳ ಲಿಂಕ್   https://g.co/kgs/Uq5wRF 



Sunday, February 4, 2024

ಬ್ರಂಹಾಂಡ ಹಸಿವು

         ಅಂದು ನನ್ನ ಉಪಯನಯನ.  ಶೈಶವ ಅವಸ್ಥೆಯಿಂದ  ಬಾಲ್ಯಾವಸ್ಥೆಗೆ ಬರುವಾಗ ಇನ್ನೇನು ಪ್ರೌಢನಾಗುವ ಮೊದಲು ನನ್ನ ಮಾವ ಅಮ್ಮ ಸೇರಿ ನನಗೆ ಬ್ರಹ್ಮೋಪದೇಶ ಮಾಡುವುದಕ್ಕೆ ಸಂಕಲ್ಪ ಮಾಡಿದರು.  ಅದು ವರೆಗೆ ಚಂಚಲವಾಗಿದ್ದ ಬದುಕು, ನಿದ್ದೆಗೂ ಆಹಾರ ಆಟ ಪಾಠಗಳಿಗೆ ನಿಯಮವಿಲ್ಲದ ಒಂದು ಅವಸ್ಥೆ. ಆದರೂ ಬ್ರಹ್ಮೋಪದೇಶ ಎನ್ನುವಾಗ ಒಂದು ರೋಮಾಂಚನ. ಮನೆಯಲ್ಲಿ ನಮ್ಮಜ್ಜ  ಕಲಿಸಿ ಹೇಳುತ್ತಿದ್ದ ವೇದ ಮಂತ್ರಗಳನ್ನು ಉಪಯನಯನವಾಗದೆ ಹೇಳುವ ಅವಕಾಶವಿಲ್ಲ. ಉಳಿದವರು ಮಂತ್ರ ಹೇಳುತ್ತಿದ್ದರೆ ಅದನ್ನು ಕಿವಿಯಾರೆ ಕೇಳಿ ಬಹಳಷ್ಟು ಬಾಯಿಗೆ ಬಂದರೂ ಸಹ ಅದನ್ನು ಉಚ್ಚರಿಸುವುದಕ್ಕೆ ಉಪದೇಶ ಅಗತ್ಯ ಎಂದು ಹೇಳುತ್ತಿದ್ದರು. ಮಂತ್ರೋಚ್ಚಾರಕ್ಕೆ ಬ್ರಹ್ಮೊಪದೇಶವಾಗಿರಬೇಕು.  ಯಾಕೆಂದರೆ ಬಾಲ್ಯದಲ್ಲಿ ನಾಲಿಗೆ ಉಚ್ಚಾರ ಸಮರ್ಪಕವಾಗಿರುವುದಿಲ್ಲ. ಮಗು ಬೆಳೆದು ಪ್ರೌಢಾವಸ್ಥೆಗೆ ಬರಬೇಕು. ಇಂದ್ರಿಯ ಜ್ಞಾನದ ಬಗ್ಗೆ ಅರಿವಾಗಬೇಕು. ಮಂತ್ರೋಚ್ಚಾರದ ಸ್ವರಭಾರದಲ್ಲಿ, ಅಕ್ಷರಗಲ ಉಚ್ಚಾರದಲ್ಲಿ ಸ್ಪಷ್ಟತೆ ಇರಬೇಕು. ತಪ್ಪು ತಪ್ಪು ಉಚ್ಚಾರಗಳು ಪ್ರಮಾದವನ್ನು ಉಂಟು ಮಾಡುತ್ತದೆ. ಮಂತ್ರಗಳು ಬಹಳ ಸೂಕ್ಷ್ಮವಾದ ಉಚ್ಚಾರದಿಂದ ಕೂಡಿರುತ್ತದೆ.  ಬಾಲ್ಯದಲ್ಲಿ  ಉಪದೇಶ ಎಂದರೆ ಏನು ಎಂದು  ಬಾಲ್ಯಾವಸ್ಥೆಯಲ್ಲಿ ಅರಿವಾಗಲಿಲ್ಲ. ಆದರೆ ಉಪನಯನ ಎಂದರೆ ಮತ್ತೆ ಮಂತ್ರವೂ ಉಳಿದವರಂತೆ ಹೇಳಬಹುದು. ಸ್ನಾನ ಮಾಡಿ ಆಕಾಶ ನೋಡಿ ಜಪಕ್ಕೆ ಕುಳಿತುಕೊಳ್ಳಬಹುದು ಹೀಗೆ, ಬಾಲ್ಯದಲ್ಲಿ ಪ್ರತಿಯೊಬ್ಬರಿಗೂ ಅದೊಂದು ರೀತಿಯಲ್ಲಿ ದೊಡ್ಡವನಾಗುವ ಚಪಲ. ಮತ್ತು ದೊಡ್ಡವನಾದೆ ಎಂದು ತೋರಿಸಿಕೊಡುವ ತವಕ. 

ತಂದೆ ಇಲ್ಲದೇ ಇದ್ದುದರಿಂದ ಹಿರಿಯ ಸೋದರ ಮಾವನೇ ಆ ಸ್ಥಾನವನ್ನು ಅಂಗೀಕರಿಸಿದರು. ಮೊದಲಿಗೆ ಪವಿತ್ರವನ್ನು ತೊಡಿಸಿ ಕೈಗೆ ದಂಡವನ್ನು ಸೊಂಟಕ್ಕೆ ಮುಂಜಿಯನ್ನು ಬಂಧಿಸಿ ಬಾಲ್ಯದಿಂದ ಪ್ರೌಢಾವಸ್ಥೆಯ ಬಾಗಿಲನ್ನು ತೆರೆದು ತೋರಿಸಿದರು. ಅಮ್ಮನ ಕೈತುತ್ತು ಮಾವನ ಮಡಿಲಲ್ಲಿ ಕುಳಿತು ಅದುವರೆಗೆ ಕೇಳಿರದ ಗಾಯತ್ರಿ ಮಂತ್ರದ ಉಪದೇಶ ಪಡೆದಾಗ ಎಳೆಯ ಮನಸ್ಸಿಗೆ ಅದರ ಗಂಭೀರತೆ ಅರಿವಾಗುವುದಿಲ್ಲ.  ಬ್ರಹ್ಮ ಎಂದರೆ ಅದು ಎಂದು ತೋರಿಸಿಕೊಡುವಾಗ,  ಬ್ರಹ್ಮ ಎಂದರೆ ಬದುಕಿನ  ಅದು ಗುರಿ ಎಂದು ಭೋಧಿಸುವ ಜ್ಞಾನದ ಅರಿವೂ ಆಗುವುದಿಲ್ಲ. . ಆದರೆ ಬದುಕಿನ ದಾರಿಯನ್ನು ಕ್ರಮಿಸಿದಂತೆ ನಾವು ನಮಗರಿವಿಲ್ಲದೇ ಅದೇ ಗುರಿಯತ್ತ ಸಾಗುತ್ತಿದ್ದೇವೆ ಎಂಬ ಜ್ಞಾನೋದಯವಾಗುತ್ತದೆ. ಈ ಬ್ರಹ್ಮ ಜ್ಞಾನ ಎಂಬುದು ಬದುಕಿನ ಪರಮಾರ್ಥ....ಅದರ ಸೂಕ್ಷ್ಮ ಮೆಟ್ಟಲೇ ಈ ಬ್ರಹ್ಮೋಪದೇಶ. ಉಪನಯನದ ಬಾಲ್ಯ ಜೀವನದಲ್ಲಿ ಈ ಜ್ಞಾನದ ಗಂಭೀರತೆ ಅರಿವಾಗುವುದಿಲ್ಲ.  ಕ್ರಮೇಣ ಲೌಕಿಕ ಜೀವನಾನುಭವದಲ್ಲಿ ಇದು ಅನುಭವಕ್ಕೆ ಬರುತ್ತದೆ. ಗಿಡದಲ್ಲಿ ಹುಟ್ಟುವ ಹಣ್ನಿನೊಳಗಿರುವ ಬೀಜ ಹಣ್ಣಿನ ತೇವದಲ್ಲಿದ್ದರೂ ಮೊಳಕೆ ಬರುವುದಿಲ್ಲ. ಅದು ಸುರ್ಯನ ಶಾಖದಲ್ಲಿ ಬೆಂದು ಶುಷ್ಕವಾಗಿ ಆನಂತರ ನೀರಿನ  ಸಂಪರ್ಕದಲ್ಲಿ ಅದು ಮೊಳಕೆಯೊಡೆಯುತ್ತದೆ. ಬೀಜ ಶುಷ್ಕವಾದಂತೆ ನಮ್ಮ ಬಾಲ್ಯ. ಜಾನದ ಮೊಳಕೆಯೊಡೆಯಬೇಕಾದರೆ ಗುರುವಿನಿಂದ ಅಮೃತಧಾರೆಯಾಗಬೇಕು. ಬಾಲ್ಯ ಎಂದರೆ ಒಣಗಿದ ಬೀಜದಂತೆ. ಆಂತರ್ಯದಲ್ಲಿ ಸತ್ವವಿರುತ್ತದೆ. ಅದು ಹೊರಬರಲು ಅವಕಾಶ ಮತ್ತು ಬಾಹ್ಯ ಪ್ರಯತ್ನ ಇರಬೇಕಾಗುತ್ತದೆ. ಗುರುವಾದವನು ಇದನ್ನು ಒದಗಿಸುತ್ತಾನೆ. 

ಹಸಿವು ಜೀವಭಾವದ ಅಸ್ತಿತ್ವದ ಸಂಕೇತ. ಹಸಿವು ಇಲ್ಲದೇ ಇದ್ದರೆ ಆ ಜೀವಕ್ಕೆ ಅರ್ಥವೂ ಇರುವುದಿಲ್ಲ. ಹಸಿವನ್ನು ನೀಗದ ಧರ್ಮ ಧರ್ಮವೇ ಅಲ್ಲ ಅಂತ ಯಾರೋ ಹೇಳಿದ್ದರು. ಹಸಿವನ್ನು ನೀಗುವುದು ಬದುಕಿನ ಪರಮಾರ್ಥ.  ಹಾಗಂತ ಅವರು ಹೊಟ್ಟೆಯ ಹಸಿವಿನ ಬಗ್ಗೆ ಮಾತ್ರವೇ ಹೇಳಿದ್ದರು.ಲೌಕಿಕ ಜೀವನದ ಹಸಿವನ್ನು ಪರಿಹರಿಸುವುದರಲ್ಲೆ ಲೋಕ ಧರ್ಮವಿದೆ.  ಆದರೆ ಭಾರತೀಯ ಸಂಸ್ಕೃತಿ ಕೇವಲ ಹೊಟ್ಟೆಯ ಹಸಿವಿಗೆ ಸೀಮಿತವಾಗಿರುವುದಿಲ್ಲ.  ಹಸಿವು ಬಗೆ ಬಗೆಯ ರೂಪದಲ್ಲಿರಬಹುದು. ಮನಸ್ಸಿನ ಹುಟ್ಟುವ ವಿಕಾರಗಳಿಗೆ ಅನುಸರಿಸಿ ಅದು ವಿವಿಧ ರೂಪಗಳನ್ನು ತಾಳುತ್ತದೆ. ಕಾಮನೆಗಳ ಹಸಿವು, ಧೈಹಿಕ ಮಾನಸಿಕ ಹಸಿವು....ಮನುಷ್ಯ ಆಯಾಯ ಸಂದರ್ಭಗಳಲ್ಲಿ ಅದುವೇ ಪರ್ಮಾರ್ಥ ಎಂದು ತಿಳಿದುಕೊಳ್ಳುತ್ತಾನೆ. ಆದರೆ ಜ್ಞಾನದ ಆಶಯವಿದ್ದಾಗ ಅಲ್ಲಿ ಹಸಿವು ನಿಜವಾದ ಅರ್ಥವನ್ನು ಕಂಡುಕೊಳ್ಳುತ್ತದೆ. ಈ ಹಸಿವೇ ಒಂದು ಜ್ಞಾನ. ಈ ಜ್ಞಾನ ಎಂದರೆ ಯಾವುದು? ನಡು ರಾತ್ರಿಯಲ್ಲಿ ಸಿಧ್ಧಾರ್ಥನಿಗೆ ಉಂಟಾದ ಹಸಿವದು ಬುದ್ಧನಾಗುವ ತನಕ ಸೆಳೆದೊಯ್ಯಿತು. ಕೊನೆಗೆ ಜ್ಞಾನೋದಯವಾಗಿ ಹಸಿವು ದೂರವಾದಾಗ ಆತ ಗೌತಮ ಬುದ್ಧನಾದ. ಜ್ಞಾನದ ಹಸಿವು ಪ್ರಚೋದನೆಗೊಂಡಾಗ ಅಲ್ಲಿ ಬೇರೆ ಯಾವ ಹಸಿವಿಗೂ ಸ್ಥಾನವಿರುವುದಿಲ್ಲ. ನಮ್ಮ ಹಿಂದೂ ಸನಾತನ ಧರ್ಮದ ಮೂಲವೇ ಈ ಜ್ಞಾನದ ಹಸಿವು. 

ಹುಟ್ಟುವುದು ಯಾಕೆ? ನಂತರ ಜೀವನ ಬಾಲ್ಯ ಯೌವನ ವೃದ್ಧಾಪ್ಯವನ್ನು ಅನುಭವಿಸುವುದೇಕೆ? ಅದರನಡುವೆ ಬಾಲ್ಯ ಗೃಹಸ್ಥ ಹೀಗೆ ಹಲವು ಸ್ತರಗಳು ಯಾಕೆ? ಈ ಎಲ್ಲ ಪ್ರಶ್ನೆಗಳಿಗೆ ಹಿಂದಿನಿಂದಲೂ ಅನ್ವೇಷಣೆಗೆ ತೊಡಗಿದಾಗ ಇದು ಜ್ಞಾನದ ಹಸಿವಿನ ಲಕ್ಷಣ.  ಆಧ್ಯಾತ್ಮಿಕವಾದ ಚಿಂತನೆಯಲ್ಲಿರುವ ಹಸಿವು ಉಳಿದ ಎಲ್ಲಾ ಹಸಿವನ್ನೂ ಮರೆಸಿಬಿಡುತ್ತದೆ. ನಮ್ಮ ತಂದೆಯ ತನಕ ಬಂದಿರುವ ಒಂದು ಸಂಸ್ಕಾರ ನಮ್ಮಿಂದ ಮತ್ತೆ ಮುಂದುವರೆಯಬೇಕು. ತಂದೆಯಾದವನು ಅದನ್ನು ಮಗನಿಗೆ ಉಪದೇಶಿಸುತ್ತಾನೆ. ಮಗ ಅದನ್ನು ಶಿರಸಾವಹಿಸಿ ಮತ್ತೆ ಮುಂದುವರೆಸುತ್ತಾನೆ. ಸಹಸ್ರಾರು ವರ್ಷಗಳಿಂದ ಈ ನಂಬಿಕೆಯ ತಳಹದಿಯಲ್ಲಿ ಈ ಸಂಸ್ಕಾರ ಬೆಳೆದು ಬಂದಿದೆ. 

ಭೂಮಿಯ ಪ್ರತೀ ಚರಾಚರ ವಸ್ತುಗಳೂ ನಮ್ಮ ಮನಸ್ಸಿನಲ್ಲಿ ದೈವತ್ವವನ್ನು ಪ್ರತಿನಿಧಿಸುತ್ತವೆ. ಸಸ್ಯ ಪ್ರಾಣಿ ನೀರು ಕಾಡು  ಬಂಡೆ ಪರ್ವತ  ಹೀಗೆ ಪ್ರತಿಯೊಂದರಲ್ಲೂ ನಾವು ಕಾಣುವ ದೈವತ್ವ ದೇವರ ವ್ಯಾಪಕತೆಯನ್ನು ತೋರಿಸುತ್ತದೆ. ಇದರ ಮೂಲವೇ ಜ್ಞಾನ. ನಮ್ಮ ಸಂಸ್ಕಾರಗಳು ಪ್ರಕೃತಿಯ ಭಾವನೆಯೊಂದಿಗೆ ಬೆರೆತಿರುತ್ತದೆ. ಸೂರ್ಯನನ್ನು ಪ್ರತಿನಿಧಿಯಾಗಿಸಿ ಪ್ರಕೃತಿಯನ್ನು ಕಾಣುವ ಈ ಸಂಸ್ಕೃತಿ ಪ್ರಕೃತಿಧರ್ಮವನ್ನು ಅಂಗೀಕರಿಸಿ ಅದರೊಂದಿಗೇ ಬೆಳೆಯುತ್ತದೆ. ನಮಗೆ ಯಾವುದೂ ಮುಖ್ಯವಲ್ಲ. ಎಲ್ಲವನ್ನು ಸಾಂಕೇತಿಕವಾಗಿ ಬಳಸುವ ಸಂಸ್ಕೃತಿ. ಒಂದು ತೆಂಗಿನ ಕಾಯಿಯಲ್ಲಿ ದೇವರನ್ನು ಆವಾಹಿಸಿ ಜಗತ್ ವ್ಯಾಪಕನಾದ ಭಗವಂತನನ್ನು ಕಾಣುತ್ತೇವೆ. ರೂಪವಿಲ್ಲದ ಭಾವವಿಲ್ಲದ ನಿರ್ಗುಣ ನಿರಾಮಯನಾದ ಭಗವಂತನಿಗೆ ನಮ್ಮ ಚಿಂತನೆಗೆ ಸೀಮಿತವಾಗಿಸಿ ನಾವು ಭಗವಂತನ್ನು ಕಾಣುವಾಗ ಅಲ್ಲೊಂದು ಪ್ರಕೃತಿ ಧರ್ಮವಿರುತ್ತದೆ. ಬ್ರಹ್ಮೋಪದೇಶ ಈ ಎಲ್ಲದರ ಮೊದಲ ಮೆಟ್ಟಿಲಾಗಿರುತ್ತದೆ. ಬ್ರಹ್ಮ ಎಂದರೆ ಏನು ಎಂಬ ಅನ್ವೇಷಣೆ ಇಲ್ಲಿಂದ ಆರಂಭವಾಗುತ್ತದೆ. ಜ್ಞಾನದ ಹಸಿವಿಗೆ ಉತ್ತೇಜಕವಾದ ಈ ಬ್ರಹ್ಮೋಪದೇಶ ಬ್ರಹ್ಮಾಂಡದ ಹಸಿವನ್ನು ಪ್ರಚೋದಿಸುತ್ತದೆ. 


Friday, January 26, 2024

ತ್ರಿಪುರ ಯೋಗ ಥೆರಪಿ

ಕೆಲವು ದಿನಗಳ ಹಿಂದೆ ಭಾರತವು ವಿಶ್ವವೇ ಬೆರಗಾಗುವಂತೆ ಮಾಡಿದ ಚಂದ್ರಯಾನ ನೆನಪಿರಬಹುದು. ಭೂಮಿಯಿಂದ ಚಂದ್ರನ ಕಕ್ಷೆಗೆ ಜಿಗಿದ ಭಾರತ ಗುರಿ,  ಇಷ್ಟರವರೆಗೆ ಕೈಗೆಟುಕದೆ ಓಡಾಡುತ್ತಿದ್ದ ಚಂದ್ರನೊಡನೆ ಸಂಬಂಧ ಬೆಳೆಸಿಕೊಂಡು ಬಿಟ್ಟಿತು. ಅದು ಬಾಹ್ಯಾಕಾಶದ ಚಂದ್ರಯಾನವಾದರೆ,  ಯೋಗ ಜೀವನದಲ್ಲಿ ಒಂದು "ಚಂದ್ರಾಯಣ"ವಿದೆ. ಇಷ್ಟರವೆರೆಗೆ ಅದು ಎಲ್ಲೋ ಓದಿದ್ದು, ಮತ್ತು ಯಾರೋ ಒಂದಷ್ಟು ಹೇಳಿದ್ದು ಬಿಟ್ಟರೆ ಅದು ನನಗೆ ಸಾಧ್ಯವಿಲ್ಲ ಎಂಬ ನಿರ್ಧಾರದಲ್ಲಿ ನಾನಿದ್ದೆ. ಆದರೆ ಅದು ಸಾಧ್ಯವಾಗುವಂತೆ ನಿರೀಕ್ಷೆಯನ್ನು ಹುಟ್ಟಿಸಿದವರು ತ್ರಿಪುರ ಯೋಗ ಥೆರಪಿಯ ಶಿಕ್ಷಣ ತಜ್ಞ ಡಾ. ಶ್ರೀ ಹೃಷಿಕೆಶ ಪೆರ್ನಡ್ಕ. 

"ಚಂದ್ರಾಯಣ" ಅದೊಂದು ಆಹಾರ ಪದ್ದತಿ. ಜತೆಗೆ ಒಂದು ಜೀವನ ಶೈಲಿಯೂ. ಮಿತವಾದ ಆಹಾರ. ಶಿಸ್ತುಬದ್ಧ ಜೀವನ ಶೈಲಿ. ಒಂದು ಹುಣ್ಣಿಮೆಯಿಂದ ಇನ್ನೊಂದು ಹುಣ್ಣಿಮೆಯ ತನಕದ ಪಯಣ. ನಡುವೆ ಒಂದು ಅಮಾವಾಸ್ಯೆ. ಇದರ ನಡುವೆ ಅದಕ್ಕೆ ಹೊಂದಿಕೊಂಡು ಆಹಾರ ಉಪವಾಸ ಪದ್ಧತಿ. ಮೊದಲು ಉಪವಾಸದ ಅವಧಿಯನ್ನು ಹೆಚ್ಚಿಸುತ್ತಾ ಸಾಗಿ ಅಮಾವಾಸ್ಯೆದಿನ ಪೂರ್ಣ ಉಪವಾಸಕ್ಕೆ ಬಂದು ಆನಂತರ ಯಥಾ ಪ್ರಕಾರ ಪೂರ್ವ ಸ್ಥಿತಿಗೆ ಬರುವ ಒಂದು ಪಯಣ. ಇದರ ನಿಯಮಗಳನ್ನು ವಿವರಿಸುವಷ್ಟು ತಿಳುವಳಿಕೆ ನನಗಿಲ್ಲ. ಆದರೆ ಅದನ್ನು ಆಚರಿಸಿ ನೋಡಬೇಕೆಂಬ ಕುತೂಹಲ ಬಹಳ ಸಮಯದಿಂದ ಇತ್ತು. ಇದೀಗ ಅದನ್ನು ಆಚರಿಸುವ ಒಂದು ಸಂಕಲ್ಪ ಹೃಷಿಕೇಶ್ ಅವರ ಒಡನಾಟದಲ್ಲಿ ದೊರಕಿತು. 

ಕಳೆದ ದಿನ ನಮ್ಮೂರಿನವರೇ ಆದ ಡಾಕ್ಟರ್ ಶ್ರೀ ಹೃಷಿಕೇಶ ಪೆರ್ನಡ್ಕ ಇವರ ತ್ರಿಪುರ ಯೋಗ ಥೆರಪಿ ಕೇಂದ್ರಕ್ಕೆ ಭೇಟಿ ಕೊಟ್ಟಿದ್ದೆ. ಹಲವು ದಿನಗಳಿಂದ ಹೋಗಬೇಕೆಂದು ಬಗೆದು ಮೊನ್ನೆ ಪ್ರಯತ್ನ ಪಟ್ಟು ಒಂದಷ್ಟು ಸಮಯ ಮಾಡಿ ಭೇಟಿಕೊಟ್ಟೆ. ಅದಕ್ಕೆ ಮುಖ್ಯಕಾರಣ ಯೋಗದ ಬಗ್ಗೆ ಇವರಲ್ಲಿ ಹಲವು ಸಲ ಚರ್ಚಿಸಿದ್ದೆ. ಸಾಕಷ್ಟು ಮಾಹಿತಿಗಳನ್ನು ಪಡೆದಿದ್ದ. ಹೃಷಿಕೇಶ ಅವರು ಮೂಲತಃ ಮಂಗಳೂರಿನ ಬಂಟ್ವಾಳದ ಕನ್ಯಾನದವರು. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಯೋಗ ವಿಷಯಗಳಲ್ಲಿ ಪಿ ಹೆಚ್ ಪದವಿ ಪಡೆದು ಡಾಕ್ಟರ್ ಆದವರು. ಕೆಲವು ಕಾಲ ಉಪನ್ಯಾಸಕರಾಗಿ ವೃತ್ತಿ ಮಾಡಿದವರು ಮೊನ್ನೆ ಮೊನ್ನೆ ಕೋರೋನ ಕಾಲ ಬರುವ ತನಕವೂ ಸಿಂಗಾಪುರದಲ್ಲಿ ಯೋಗ ತರಬೇತಿ ಚಿಕಿತ್ಸೆ  ವೃತ್ತಿ ಮಾಡುತ್ತಿದ್ದವರು ಈಗ ಬೆಂಗಳೂರಿನ ಜೆ ಪಿ ನಗರದಲ್ಲಿ ಯೋಗ ಥೆರಪಿ ಆರಂಭಿಸಿದ್ದಾರೆ. ನಾನು ಭೇಟಿಕೊಟ್ಟಾಗ ಚಾಂದ್ರಯಾನ ವೃತದ ಬಗ್ಗೆ ಆಸಕ್ತರಾಗಿದ್ದವರು ಅದರ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಿದರು. ಸಣ್ಣ ಹರಯದಲ್ಲೇ ಯೋಗ ಥೆರಪಿಯಲ್ಲಿ ಡಾಕ್ಟರೇಟ್ ಪಡೆದ ಇವರಿಗೆ ಪ್ರಶಸ್ತಿ ಪುರಸ್ಕಾರವೂ ಸಂದಿದೆ. 





ಯಾವುದೋ ಅನಿರೀಕ್ಷಿತ ಸಂದರ್ಭದಲ್ಲಿ ನನ್ನ ಅವರ ಭೇಟಿಯಾಯಿತು. ಭೇಟಿಯಾದ ನಂತರ ಇವರು ಯೋಗದ ಬಗ್ಗೆ ಡಾಕ್ಟರೇಟ್ ಪಡೆದಿದ್ದಾರೆ ಎಂದು ತಿಳಿದನಂತರ ನನ್ನ ಅವರ ಸ್ನೇಹ ಅತ್ಮೀಯತೆ ಬೆಳೆದು ಬಂತು. ಆನಂತರ ನನ್ನ ಹಲವಾರು ಸಮಸ್ಯೆಗಳಿಗೆ ಇವರಿಂದ ಪರಿಹಾರವನ್ನು ಪಡೆದುಕೊಂಡಿದ್ದೇನೆ.  ಯೋಗಭ್ಯಾಸ ಎಂಬುದು ಆಧುನಿಕ ಜಗತ್ತಿನಲ್ಲಿ ಹೆಚ್ಚು ಆವಶ್ಯಕ ಅಂತ ಕಾಣುವಾಗ ಹಲವು ಕಡೆ ಇದರ ದುರುಪಯೋಗವೂ ಆಗುತ್ತಿದೆ. ಗಲ್ಲಿ ಗಲ್ಲಿಗಳಲ್ಲಿ ಯೋಗ ತರಗತಿಗಳು ಇದೆ. ಆದರೆ ಗುಣಮಟ್ಟ ಬಹಳ ಕಡಿಮೆಯಾಗಿದೆ. ಹೆಚ್ಚಿನ ಕಡೆ ಇದೊಂದು ಉದ್ಯೋಗದ ರೀತಿಯಲ್ಲಿ ಒಂದು ದಂಧೆಯಾಗಿ ಬೆಳೆದುಬಿಟ್ಟಿದೆ. ಸರಿಯಾಗಿ ಅಧ್ಯಯನ ಮಾಡದೇ ಕೇವಲ ಕೆಲವು ತಿಂಗಳ ತರಬೇತಿ ಪಡೆದು ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಒಂದು ಸರ್ಟಿಫಿಕೇಟ್ ಪಡೆದು ಬಿಡುತ್ತಾರೆ. ತಾವು ಎಲ್ಲವನ್ನು ಕಲಿತು ಬಿಟ್ಟಿದ್ದೇವೆ ಎಂಬ ಪರವಾನಿಗೆ ಪಡೆದಂತೆ ತರಗತಿಯನ್ನು ಆರಂಭಿಸುತ್ತಾರೆ. ಹಲವರಿಗೆ ಸರಿಯಾಗಿ ನೆಟ್ಟಗೆ ಸಮರ್ಪಕ ಪದ್ಮಾಸನ ಹಾಕುವುದಕ್ಕು ಸಾಧ್ಯವಾಗದೇ ಇರುವುದನ್ನು ಕಂಡಿದ್ದೇನೆ. ಯಾಕೆಂದರೆ ನೇರ ಕುಳಿತುಕೊಳ್ಳಬೇಕೆಂದರೆ ಬೆನ್ನು ಹುರಿ ಗಟ್ಟಿಯಾಗಬೇಕು. ಇದು ಬಹಳಷ್ಟು ಸಮಯ ತೆಗೆದುಕೊಳ್ಳುತ್ತದೆ.   ನಾವು ಸ್ವಪ್ರಯತ್ನದಿಂದ ನೇರ ಕುಳಿತುಕೊಳ್ಳುವುದಕ್ಕೂ ಸಹಜವಾಗಿ ಕುಳಿತುಕೊಳ್ಳೂವುದಕ್ಕೂ ವೆತ್ಯಾಸವಿದೆ. ಮೊದಲಿನದ್ದು ಶಿಕ್ಷೆಯ ಒತ್ತಡವಾದರೆ, ಇನ್ನೊಂದು ನಿರಾಳತೆಯ ಸಹಜ ಸ್ಥಿತಿ. ಇಂತಹ ಸೂಕ್ಷ್ಮ ವಿಷಯಗಲನ್ನು ತಿಳಿಯದೇ ಒಟ್ಟು ಯೋಗ ಶಿಕ್ಷಕರಾಗಿ ಅಧಿಕೃತ ತರಗತಿಯನ್ನು ನಡೆಸುತ್ತಾರೆ. ಪರೀಕ್ಷೆಯಲ್ಲಿ ನೂರು ಅಂಕದಲ್ಲಿ ನಲ್ವತ್ತು ಅಂಕ ಪಡೆದರೂ ತೇರ್ಗಡೆಯಾಗಿ ಶಿಕ್ಷಕರಾಗುತ್ತಾರೆ. ಆದರೆ ಅರುವತ್ತು ಅಂಕಗಳು ಇವರಿಗೆ ತಿಳಿದಿರುವುದಿಲ್ಲ. ಅದು ಹೆಚ್ಚು ಅಪಾಯಕಾರಿ. ಯೋಗಾಭ್ಯಾಸದಲ್ಲಿ ಸರಿಯಾಗಿ ಮಾಡುವುದೇ ಪ್ರಧಾನ. ತಪ್ಪುಗಳನ್ನು ಎಷ್ಟು ಕಡಿಮೆ ಮಾಡಿತೋ ಅದೇ ಲಾಭ. ತಪ್ಪುಗಳನ್ನು ಮಾಡಬಹುದು, ಆದರೆ ಮಾಡಬೇಕಾದ ಸರಿ ಒಂದಾದರೂ ಅದನ್ನು ಸರಿಯಾಗಿ ಮಾಡಬೇಕು.  ಈ ಸೂಕ್ಷ್ಮಗಳನ್ನು ಅರಿತಿರಬೇಕು. ಇಲ್ಲವಾದರೆ, ಕಲಿಸುವ ವಿದ್ಯೆ ಅಮೃತವಾಗದೇ ವಿಷವೇ ಅಧಿಕವಾಗಿಬಿಡುತ್ತದೆ. ಅದಕ್ಕೆ ನಿರಂತರ ಅಧ್ಯಯನ ಬೇಕು. ಯೋಗಾಭ್ಯಾಸದಲ್ಲಿ ಎಂಟು ಹತ್ತು ವರ್ಷ ಸಾಧನೆ ಮಾಡಿದವರಿಗೆ ಮಾತ್ರ ಶಿಕ್ಷಕನಾಗುವ ಅರ್ಹತೆ ಸಿಗಬಹುದು.    ಅದರೆ ಈ ಇನ್ಸ್ಟಂಟ್ ಯುಗದಲ್ಲಿ ಅದಕ್ಕೆಲ್ಲ ಸಮಯ ಎಲ್ಲಿದೆ? ಕಡಿಮೆ ಕೆಲಸ ಕ್ಷಿಪ್ರ ಫಲಾನುಭವ. ಇಂತಹ ಸಮಯದಲ್ಲಿ ಸ್ವತಃ ಡಾಕ್ಟರ್ ಆಗಿರುವ ಹೃಷಿಕೇಶ್ ಅವರ  ಕೆಲಸ ಗಮನಾರ್ಹವಾಗುತ್ತದೆ. ಇವರು ತಿಳಿಸಿಕೊಡುವ ಸರಳ ವಿಧಾನಗಳು, ಅದರಲ್ಲಿರುವ ಸೂಕ್ಷ್ಮ ವಿಚಾರಗಳು ಅತ್ಯಂತ ಅಮೂಲ್ಯ ಎನಿಸುತ್ತವೆ.  ಯೋಗಾಭ್ಯಾಸ ಎಂಬುದು ಕೇವಲ ವ್ಯಾಯಾಮವಾಗಿ, ಕೇವಲ ಆರೋಗ್ಯದ ದೃಷ್ಟಿಕೋನದಲ್ಲೇ ಕಾಣುತ್ತಾರೆ. ಅದರಂತೆ ಅದನ್ನು ಅನುಸರಿಸುತ್ತಾರೆ. ಇಂತಹ ಸಮಯದಲ್ಲಿ ಇದರ ಸೂಕ್ಷ್ಮ ವಿಷಯಗಳ ಬಗ್ಗೆ ಗಮನ ಹರಿಸುವುದಿಲ್ಲ. ಒಂದು ಯಂತ್ರದಂತೆ ಯೋಗಾಭ್ಯಾಸ ಮಾಡುವುದು ಬಹಳ ಅಪಾಯಕಾರಿ. 



ನಮ್ಮೂರಿನವರೇ ಆದ, ಯುವಕ ಡಾಕ್ಟರ್ ಶ್ರೀ  ಹೃಷಿಕೇಶ್ ಪೆರ್ನಡ್ಕ ಇವರು ಯೋಗ ಚಿಕಿತ್ಸೆಯಲ್ಲಿ ನಿರತರಾದವರು. ಕೋವಿಡ್ ಗಿಂತಲು ಮೊದಲು ಸಿಂಗಾಪುರದಲ್ಲಿ ವೃತ್ತಿಯಲ್ಲಿದ್ದವರು ಆನಂತರ ಭಾರತಕ್ಕೆ ಬಂದು ಈಗ ಬೆಂಗಳೂರಲ್ಲಿ ಯೋಗಕೇಂದ್ರವನ್ನು ನಡೆಸುತ್ತಿದ್ದಾರೆ.  ಯೋಗದ ಬಗ್ಗೆ ಸಾಕಷ್ಟು ತಿಳುವಳಿಕೆ ಪಡೆದವರು ಅದರಲ್ಲೇ ತಮ್ಮ ಶಿಕ್ಷಣವನ್ನು ಪಡೆದು ಈಗ ವೈದ್ಯರಾಗಿ ತ್ರಿಪುರ ಯೋಗ ಥೆರಪಿಯನ್ನು ಕೊಡುತ್ತಿದ್ದಾರೆ. ಯಕ್ಷಗಾನದ ವಿಷಯದಲ್ಲಿ ಪರಿಚಯಗೊಂಡ ಇವರ ಸಂಪರ್ಕ ಇವರು ಯೋಗ ವೈದ್ಯರಾದ ಕಾರಣ ಸ್ನೇಹ ಮತ್ತಷ್ಟು ಬಲವಾಯಿತು. ನನಗೆ ಯೋಗದ ಬಗೆಗಿನ ಸಂಶಯ ತಿಳುವಳಿಕೆಗಳ ಅವಶ್ಯಕತೆಯಾದರೆ, ದೈಹಿಕವಾಗಿ ಏನಾದರೂ ಸಮಸ್ಯೆಯಾದರೆ ಇವರಿಗೆ ಕರೆ ಮಾಡಿ ಪರಿಹಾರ ಕೇಳುತ್ತೇನೆ. ಅತ್ಯಂತ ಸರಳವಾದ ಪರಿಣಾಮಕಾರಿ ಪರಿಹಾರಗಳನ್ನು ಒದಗಿಸುವುದು ಇವರ ವಿಶೇಷತೆ.  ಯೋಗದ ವಿಚಾರ ಬಂದಾಗ ಅತ್ಯಂತ ಉತ್ಸಾಹದಲ್ಲಿ ಇವರ ಮಾತುಗಳನ್ನು ವಿಚಾರಗಳನ್ನು ಕೇಳುವುದೆಂದರೆ ನನಗೆ ಬಹಳ ಸಂತೋಷವಾಗುತ್ತದೆ. ಅದ್ಭುತವಾದ ಜ್ಞಾನ ಇವರಲ್ಲಿದೆ. ಹಲವು ಗಹನ ವಿಚಾರಗಳಿಗೆ ಖಚಿತವಾದ ಅಭಿಪ್ರಾಯಗಳನ್ನು ಮಂಡಿಸುತ್ತಾರೆ. 

ಸುಮಾರು ಎರಡು ವರ್ಷದ ಹಿಂದೆ ನನ್ನ ಅವರ ಪರಿಚಯವಾಯಿತು.  ಅವರೇ ನನ್ನ ಬಳಿಗೆ ಬಂದಿದ್ದರು. ಆನಂತರ ಅವರ ಯೋಗ ಕೇಂದ್ರಕ್ಕೆ ಭೇಟಿ ಕೊಡಬೇಕೆಂದು ಹಲವು ಸಲ ಯೋಚಿಸಿದ್ದೆ. ಸಮಯ ಸಿಕ್ಕಿರಲಿಲ್ಲ.  ಏನಾದರೂ ಸಮಸ್ಯೆಯಾದಾಗ ವಿಡೀಯೋ ಕರೆ ಮಾಡಿ ಪರಿಹಾರ ಕೇಳುತ್ತಿದ್ದೆ. ಆದರೆ ಮೊನ್ನೆ ಸಮಯ ಹೊಂದಿಸಿಕೊಂಡು ಅವರ ತ್ರಿಪುರ ಯೋಗ ಥೆರಪಿಗೆ ಪತ್ನಿ  ಸಹಿತ ಭೇಟಿಕೊಟ್ಟೆ.  ತುಂಬ ಸರಳವಾಗಿ ಸುಂದರವಾಗಿ ತಮ್ಮ ಕಾರ್ಯ ಕ್ಷೇತ್ರವನ್ನು ಸಜ್ಜುಗೊಳಿಸಿದ್ದರು. ನನ್ನ ಪತ್ನಿಯ ಆರೋಗ್ಯದ ಸಮಸ್ಯೆಗೆ ಕೆಲವೆಲ್ಲ ಸರಳ ಪರಿಹಾರವನ್ನು ಯೋಗದ ಕ್ರಮಗಳನ್ನು ತುಂಬಾ ಚೆನ್ನಾಗಿ ಹೇಳಿದರು.  ಸದಾ ಯೋಗಾಭ್ಯಾಸ ಮತ್ತು ಅದರ ಚಿಕಿತ್ಸಾಕ್ರಮಗಳ ಬಗ್ಗೆ ಚಿಂತಿಸುವ ಇವರ ಕೇಂದ್ರಕ್ಕೆ ಭೇಟಿ ಕೊಟ್ಟದ್ದು ಬಹಳ ಸಂತೋಷವನ್ನು ತಂದಿದೆ.  ಇವರ ಜ್ಞಾನದ ಉಪಯೋಗ ಅವಶ್ಯವಿದ್ದವರಿಗೆ  ಲಭಿಸಿದರೆ ಅದು ಬಹಳ ಪ್ರಯೋಜನವಾಗುತ್ತದೆ. 

ತ್ರಿಪುರ ಯೋಗ ಥೆರಪಿ ಕೇಂದ್ರ ಬೆಂಗಳೂರಿನ ಜೆ ಪಿ ನಗರದಲ್ಲಿದೆ. ಯೆಲಚೇನ ಹಳ್ಳಿ ಮೇಟ್ರೋ ನಿಲ್ದಾಣದಿಂದ ಒಂದೆರಡು ಕಿಲೋ ಮೀಟರ್ ದೂರ ಇದೆ. ಆಸಕ್ತರು ಇದರ ಉಪಯೋಗವನ್ನು ಪಡೆದುಕೊಳ್ಳಬಹುದು. ಇವರ ಮೊಬೈಲ್ ಮತ್ತು ಈ ಮೇಲ್ ವಿಳಾಸ  ಈ ಲೇಖನದ ಕೊನೆಯಲ್ಲಿದೆ. 

ಡಾಕ್ಟರ್ ಹೃಷಿಕೇಶ ಅವರ ಮೊಬಲಿ : 91138 93928 ವಿಳಾಸ : No. 894, 3rd Floor, 10th A East Cross Rd, RBI Layout, 7th Phase, J. P. Nagar, Bengaluru, Karnataka 560078. ಇನ್ನಿತರ ವಿವರಗಳ ಲಿಂಕ್   https://g.co/kgs/Uq5wRF 


Wednesday, January 17, 2024

ಕಂಪನ ..


ರಾಜಕಾರಿಣಿಯೊಬ್ಬರ ಕಂಪನ ....ಈಗಿನವರ ಭಾಷೆಯಲ್ಲಿ ವೈಬ್  ಅಂದರೆ  ವೈಬ್ರೇಶನ್ ....ಇದರ ಬಗ್ಗೆ ಯಾಕೋ ಒಂದೆರಡು ಅನಿಸಿಕೆ ಹೇಳಬೇಕೆಂದೆನಿಸಿದೆ. ಕಾರಣ ರಾಜಕೀಯ ನಾಯಕರೊಬ್ಬರು ಹೇಳಿದ ಮಾತು ಇದರ ಬಗ್ಗೆ ಹೇಳುವ ಪ್ರಚೋದನೆಯನ್ನು ನೀಡಿದ್ದಂತು ಸತ್ಯ. ನಾಯಕರ ಮಾತಿನ ಬಗ್ಗೆ ವಿಮರ್ಷೆಯಾಗಲೀ ಟೀಕೆ ಲೇವಡಿಯಾಗಲೀ ಒಂದೂ ಇಲ್ಲ.  ಅದರ ಸರಿ ತಪ್ಪನ್ನು ಹೇಳುವಷ್ಟು ತಿಳುವಳಿಕೆ ನನಗಿಲ್ಲ. ಮತ್ತೆ ಸುಮ್ಮನೆ ವಿವಾದಗಳಿಗೆ ಪುಷ್ಟಿಕೊಡುವುದಕ್ಕಿಂತ ನನ್ನ ಒಂದೆರಡು ಅನಿಸಿಕೆಗಳಿಗಷ್ಟೇ ಸೀಮಿತ. 

ನಾಯಕರಿಗೆ ಅಯೋಧ್ಯೆಗೆ ಹೋದಾಗ ಟೆಂಟ್ ನಲ್ಲಿರುವ ರಾಮನ ಗೊಂಬೆಯನ್ನು ನೋಡಿ ಅದು ಯಃಕಶ್ಚಿತ್ ಗೊಂಬೆಯಾಗಿ ಕಂಡು ಯಾವುದೇ ಕಂಪನ ಉಂಟಾಗಲಿಲ್ಲ. ಯಾಕೆ ಕಂಪನ ಉಂಟಾಗಲಿಲ್ಲ. ಅದು ಅವರ ವೈಯಕ್ತಿಕ ಅಭಿಪ್ರಾಯ . ಅದನ್ನು ಮುಕ್ತ ಮನಸ್ಸಿನಿಂದ ಗೌರವಿಸುವ. ಪ್ರಜಾಪ್ರಭುತ್ವದ ಸಂಕೇತವದು. ಈ ಕಂಪನ ಎಂಬುದು ಅದೊಂದು ಮನಸ್ಸಿನ ಪ್ರೇರಕ ಶಕ್ತಿ. ಮನಸ್ಸಿನ ಅಂತರಂಗದ ಭಾವನೆ. ಅದು ಕನಸಿನ ಸುಪ್ತಾವಸ್ಥೆಯಲ್ಲೂ ಜಾಗೃತವಾಗಿರುತ್ತದೆ. ನಿದ್ರೆಯಲ್ಲಿರುವಾಗ ಹೆತ್ತ ತಾಯಿ ಬಂದು ಮೈದಡಿವಿದಾಗ ಉಂಟಾಗುವಂತೆ, ಅದೊಂದು ವೈಬ್.  ಹಾಗಂತ ಬೇರೊಬ್ಬರ ತಾಯಿ ಬಂದು ಮೈದಡಿವಿದರೆ ಅಲ್ಲಿ ಆ ಕಂಪನ ಉಂಟಾಗುವುದಕ್ಕೆ ಸಾಧ್ಯವಿಲ್ಲ. 

ಶ್ರೀರಾಮನನ್ನು ಕಾಣುವಾಗ ತ್ರೇತಾಯುಗದಲ್ಲೂ ಕಂಪನ ಉಂಟಾಗದವರು ಇದ್ದರು.  ರಾವಣ, ವಾಲಿ, ಕಬಂಧ ಹೀಗೆ ಪಟ್ಟಿ ಬೆಳೆಯುತ್ತಲೇ ಇದೆ. ಆದರೂ ಕೊನೆಯ ಕ್ಷಣದಲ್ಲಿ ರಾವಣನಿಗೂ ವಾಲಿಗೂ ಕಂಪನ ಉಂಟಾಗಿತ್ತು ಶ್ರೀರಾಮನನ್ನು ಕಾಣುವಾಗ. ಅದಕ್ಕಾಗಿ ಅವರು ಜನ್ಮಾಂತರದಿಂದ ಕಾದು ಕುಳಿತಿದ್ದರು. ರಾವಣ ಹಲವು ಜನ್ಮ ವೆತ್ತಿ ಕೊನೆ ಕ್ಷಣದಲ್ಲಿ ಶ್ರೀರಾಮನಲ್ಲಿ  ಸಾಕ್ಷಾತ್ ಶ್ರೀಮನ್ನಾರಾಯಣನ್ನು ಕಂಡು ತನಗೆ ಇದುವೆ ಸಾಕ್ಷಾತ್ಕಾರ ರೂಪವೆಂದುಕೊಂಡು ಮೋಕ್ಷಪದಕ್ಕೆ ಏರಿದ.  ರಾವಣ ದುಷ್ಟನಾದರೂ ಕೊನೆಯ ಕ್ಷಣದಲ್ಲೂ ರಾಮ ದರ್ಶನದಲ್ಲಿ ಮೋಕ್ಷವನ್ನು ಕಂಡ. ಅದು ಆತನಿಗಾದ ಕಂಪನ. ಅದು ಅವನ ಭಾವನೆ. ರಾವಣನಿಗೆ ಮೊದಲು  ಉಂಟಾಗದೇ ಇದ್ದ ಕಂಪನ ಹಲವರಿಗೂ ಉಂಟಾಗದೇ ಇರಬಹುದು. ಅದು ಮನಸ್ಸಿನ ಸ್ವಭಾವ.  ಅದೇ ರಾಮಾಯಣದಲ್ಲಿ ಅಹಲ್ಯ, ಶಬರಿಯಂತಹ ವ್ಯಕ್ತಿತ್ವಗಳು ರಾಮ ದರ್ಶನಕ್ಕಾಗಿ ಕಾದು ಕಾದು ಕೊನೆಗೆ ಒಂದು ದಿನ ರಾಮನನ್ನು ಕಂಡು ಆ ಕಂಪನವನ್ನು ಅನುಭವಿಸಿದ್ದಿದೆ. ಹತ್ತು ತಲೆ ಇದ್ದು ವಿದ್ಯೆಯಿಂದ ಹಿಡಿದು ಎಲ್ಲವೂ ಇದ್ದ ರಾಣನಿಗೆ ಉಂಟಾಗದೇ ಇದ್ದ ಕಂಪನ ಎನೇನೂ ಇಲ್ಲದ ಅಹಲ್ಯ ಶಬರಿಯಲ್ಲಿ ಉಂಟಾಯಿತು. ಅದಕ್ಕೆ ಅರ್ಹತೆಯಲ್ಲಿ ಯೋಗವಿರಬೇಕು. ಯೋಗ್ಯತೆ ಇರಬೇಕು.

ರಾಮಾಯಣದ ಒಂದು ಕಥೆಯಾದರೆ ಇತಿಹಾಸದ ಪುಟ ತೆಗೆದು ನೋಡಿದರೆ ಅಯೋಧ್ಯೆಗೆ ಧಾಳಿ ಇಟ್ಟವರಿಗೂ ಈ ಕಂಪನ ಉಂಟಾಗಲೇ ಇಲ್ಲ.  ಒಂದು ವೇಳೆ ಕಂಪನ ಉಂಟಾಗಿದ್ದರೆ....ಈ ಕರಾಳ ಇತಿಹಾಸಗಳು ಬರೆಯಲ್ಪಡುತ್ತಿರಲಿಲ್ಲ ಎಂಬುದು ಸತ್ಯ.   ಹಾಗೆ ಕಂಪನ ಉಂಟಾಗಬೇಕಿದ್ದರೆ ಅದಕ್ಕೆ ತಕ್ಕಂತಹ ಮನೋಭಾವ ಇರಬೇಕು. ಇರದಿದ್ದರೆ......ಆದಕೆ ಯಾರೂ ಕಾರಣರಲ್ಲ. ಆದರೆ ಅಲ್ಲೇ ಉಳಿದವರಿಗೆ ಸಿಗುವ ಕಂಪನಗಳನ್ನು ಲೇವಡಿ ಮಾಡುವುದು ಆಕ್ಷೇಪಿಸುವುದು ತಪ್ಪು. 

ಕಂಪನ ಉಂಟಾಗಬೇಕಿದ್ದರೆ, ಆಡಂಬರದ ಅವಶ್ಯಕತೆ ಇಲ್ಲ. ಪಂಚತಾರಾ ಹೋಟೇಲುಗಳನ್ನು ನಾಚಿಸುವಂತಹ ದೇವಾಲಯದ ಆವಶ್ಯಕತೆ ಇಲ್ಲ. ಸಣ್ಣ ಗುಡಿಯಾದರೂ ಅಲ್ಲಿ ಕಂಪನ ಪಡೆಯುವವರಿದ್ದಾರೆ. ನಮ್ಮ ಊರಿಗೆ ಅಂದರೆ ಕರಾವಳಿ ಭಾಗಕ್ಕೆ ಹೋದರೆ ದೇವಾಲಯ ಬಿಡಿ, ಗುಳಿಗನ ಕಲ್ಲು ಇರುತ್ತದೆ. ಅಲ್ಲಿ ಗುಡಿಯೂ ಇರುವುದಿಲ್ಲ, ಏನೂ ಇರುವುದಿಲ್ಲ. ಕೇವಲ ಒಂದು ಕಲ್ಲು ಮಾತ್ರಾ ಇರುತ್ತದೆ. ಆದರೆ ಮನುಷ್ಯನ ಭಾವನೆಗಳಿಗೆ ಪರಿಧಿ ಇಲ್ಲ. ಅಲ್ಲಿ ಆ ಕಲ್ಲಿನ ಬುಡಕ್ಕೆ ಹೋದಾಗ ಕಂಪನ ಮಾತ್ರವಲ್ಲ ಭಯ ಪಡುವವರೂ ಇದ್ದಾರೆ. ಅದು ತಪ್ಪು ಅಂತ ಹೇಳುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಅಯೋಧ್ಯೆಯ ಡೇರೆಯಲ್ಲಿದ್ದ  ರಾಮನ ಮೂರ್ತಿ ಕಂಪನ ತರಿಸಿದದೇ ಇದ್ದರೆ ಅದಕ್ಕೆ ಆ ಮೂರ್ತಿಯನ್ನು ಹೊಣೆ ಮಾಡುವುದು ಅಜ್ಞಾನ ಎನ್ನಬೇಕಷ್ಟೆ.  

ಹಳೆಯ ಕಾಲದ ಹಳ್ಳಿಯ ಮನೆಗಳಿಗೆ ಹೋದರೆ, ನಮ್ಮ ಅಜ್ಜನೋ ಮುತ್ತಜ್ಜನೋ ನಿತ್ಯ ಕುಳಿತುಕೊಳ್ಳುವ ಸ್ಥಳವಿರುತ್ತದೆ. ಮನೆಯ ಚಾವಡಿಯಲ್ಲಿ ಒಂದು ಇಸೀಚೇರ್ ಹಾಕಿ ಕಾಲು ಮೇಲೆ ಹಾಕಿ ಅವರು ಕುಳಿತುಕೊಳ್ಳುತ್ತಿದ್ದರು. ಅವರ ಮರಣಾನಂತರ ಆ ಆರಾಮಾಸನದ ಬಳಿಗೆ ಹೋಗುವಾಗ ಮನೆಯವರಿಗೆ ಕಂಪನ ಉಂಟಾಗಬಹುದು. ಅದು ಅವರ ಮನಸ್ಸಿನ ಅಂತರಂಗದ ಪ್ರೇರಣೆ. ಬದುಕು ನಡೆದು ಬಂದ ಅನುಭವ. 

ಇಪ್ಪತ್ತು ವರ್ಷದ ಹಿಂದೆ ಮಲ್ಲೇಶ್ವರಂ ನ ಯೋಗ ಕೇಂದ್ರಕ್ಕೆ ಯೋಗಾಭ್ಯಾಸ ಕಲಿಯಲು ನಿತ್ಯ ಮುಂಜಾನೆ ಹೋಗುತ್ತಿದ್ದೆ. ಯೋಗಾಭ್ಯಾಸದ ಮಧುರ ಅನುಭವವನ್ನು ಪಡೆದಿದ್ದೆ.   ಇತ್ತೀಚೆಗೆ  ಇಪ್ಪತ್ತು ವರ್ಷ  ಕಳೆದನಂತರ ಮೊನ್ನೆ ಯಾವುದೋ ಕಾರಣಕ್ಕೆ ಅಲ್ಲಿ ಹೋದಾಗ ಅದೇ  ಮಧುರ ಅನುಭವದ ಸ್ಮರಣೆಯಲ್ಲಿ ಆ ಕಂಪನವನ್ನು ಅನುಭವಿಸಿದ್ದೆ. ಯಾಕೆಂದರೆ ಅದು ಯೋಗಾಭ್ಯಾಸದ ಅನುಭವ.  ನನಗಾದ ಅನುಭವ ಉಳಿದವರಿಗೆ ಆಗುವ ಭರವಸೆ ಇರುವುದಿಲ್ಲ. ಅದು ಭಾವನಾತ್ಮಕ ಸಂಭಂಧದಗಳು. ಅದು ಅನುಭವದಿಂದಲೇ ಬರಬೇಕು. 

ಇಷ್ಟೆಲ್ಲ ಯಾಕೆ ಹೇಳಬೇಕಾಯಿತೆಂದರೆ, ಅಯೋಧ್ಯೆಗೆ ನಾನೂ ಹೋದವನು, ನಾನು ಹೋದಾಗ ಅಯೋಧ್ಯೆಯಲ್ಲಿ ಎಲ್ಲವೂ ಅಪೂರ್ಣ ಸ್ಥಿತಿಯಲ್ಲಿತ್ತು. ಆದರೆ ಆ ಮಣ್ಣಿನಲ್ಲಿ ಆ ವಾತಾವರಣದಲ್ಲಿ ರಾಮನ ಅಸ್ತಿತ್ವವನ್ನು ಕಂಡವನು ನಾನು. ಶ್ರೀ ರಾಮ ಓಡಾಡಿದ ನೆಲವದು. ಆ ಭಾವ ಬಂದಕೂಡಲೇ ದೇಹದಲ್ಲಿ ಅವ್ಯಕ್ತವಾದ ಒಂದು ಕಂಪನ ಉಂಟಾಗುತ್ತದೆ. ಅದು ರಾಮನ ಮೇಲಿನ ವಿಶ್ವಾಸದ ಸಂಕೇತ. ರಾಮ ಕೇವಲ ಒಂದು ದೇವರಾಗಿ ಅಲ್ಲ ಅದೊಂದು ದಿವ್ಯ ಚೇತನವಾಗಿ ಸದಾ ಕಂಪನವನ್ನು ಒದಗಿಸುವ ಶಕ್ತಿ. ದೂರದ ಅಯೋಧ್ಯೆ ಎಲ್ಲಿ ಬಂತು, ಅಯೋಧ್ಯೆಯನ್ನು ನೆನಸಿ ಇಲ್ಲಿ ದೇಹ ಕಂಪಿಸುತ್ತದೆ. 

ಈಗ ಈ ನಾಯಕರ ಮಾತು ಅದಕ್ಕೆ ಯಾವುದೋ ಕಾರಣವಿರಬಹುದು. ವೈಬ್ರೇಶನ್  ಪ್ರತಿಯೊಬ್ಬರಿಗೂ ಪ್ರತ್ಯೇಕವಿರುತ್ತದೆ.  ಚುನಾವಣೆಯಲ್ಲಿ ಗೆಲ್ಲದೇ ಇದ್ದರೆ ಒಂದು ಕಂಪನ, ಗೆದ್ದು ಮಂತ್ರಿಯಾಗದೇ ಇದ್ದರೆ ಇನ್ನೊಂದು ಕಂಪನ, ಮತ್ತೊಬ್ಬರ ಹೀಯಾಳಿಕೆಯಲ್ಲಿ ಸಿಗುವ ಆತ್ಮಾನಂದದ ಕಂಪನ ಅನುಭವಿಸುವ ರಾಜಕಾರಿಣಿಗಳ ಮಾತುಗಳಿಗೆ ನಮ್ಮ ನಡುವೆ ಯಾವ ಮೌಲ್ಯವೂ ಇರುವುದಿಲ್ಲ. ನಮಗೆ ಕಂಪಿಸುತ್ತಿರುವುದಕ್ಕೆ ನಾವು ಆತ್ಮಾನಂದವನ್ನು ಪಡೆಯೋಣ, ಈ ಕಂಪನ ಉಂಟಾಗದೇ ಇದ್ದವರ ಬಗ್ಗೆ ಕಂಪನ ಬೇಡ....ಕೇವಲ ಒಂದು ಅನುಕಂಪ ಸಾಕು. ತಪ್ಪು ಒಪ್ಪಿನ ವಿಮರ್ಶೆಯ ಅವಶ್ಯಕತೆ ಇಲ್ಲ. ಅವರವರ ಭಾವ ಅದು ಅವರಿಗೇ ಬಿಟ್ಟದ್ದು.  ನಮ್ಮ ದೃಷ್ಟಿಕೋನದಲ್ಲಿ ರಾಮ ಕಾಣುತ್ತಾನೆ ಈ ವಿಶ್ವಾಸ ನಮ್ಮಲ್ಲಿದ್ದರೆ ಸಾಕು. 



Monday, January 15, 2024

ಪ್ರಾಣಮಯ ಶ್ರೀರಾಮ


ಲೋಕಾಭಿರಾಮಂ ರಣರಂಗ ಧೀರಂ ರಾಜೀವ ನೇತ್ರಂ ರಘುವಂಶ ನಾಥಂ

ಕಾರುಣ್ಯ ರೂಪಂ ಕರುಣಾಕರಂತಂ  ಶ್ರೀರಾಮ ಚಂದ್ರಂ ಶರಣಂ ಪ್ರಪದ್ಯೆ


ಕಳೆದವರ್ಷ ಹೆಚ್ಚು ಕಡಿಮೆ ಇದೇ ಹೇಮಂತ ಋತುವಿನ ಸಮಯದಲ್ಲಿ  ನಾವು ಅಯೋಧ್ಯೆಗೆ ಭೇಟಿ ನೀಡಿದ್ದ ಆ ಭಾವನಾತ್ಮಕ ಘಳಿಗೆಗಳ ನೆನಪುಗಳು ಈಗ ಮರುಕಳಿಸುತ್ತಿವೆ. ಮೊನ್ನೆ ಶ್ರೀರಾಮ ಪ್ರಸಾದ ರೂಪದ ಮಂತ್ರಾಕ್ಷತೆ ಕೈ ಸೇರಿದಾಗ ನಿಜಕ್ಕೂ ನಾನು ಭಾವುಕನಾದೆ. ಆ ಮಧುರ ನೆನಪುಗಳು ಸ್ಮರಣೆಗೆ ಬಂದು ಒಂದರೆ ಘಳಿಗೆ ರಾಮನಲ್ಲದೇ ಬೇರೆ ಏನೂ ಯೋಚಿಸದಂತೆ ಹೃದಯ ಶ್ರೀರಾಮ ಮಯವಾಗಿಬಿಟ್ಟಿತು. ಆಯೋಧ್ಯೆಗೆ ಮತ್ತೊಮ್ಮೆ ಹೋಗಬೇಕೆಂಬ ತುಡಿತ ಹುಟ್ಟಿಕೊಂಡಿತು. ಅದು ಎಂದು ಸಫಲವಾಗುವುದೋ ಆ ರಾಮನೇ ಬಲ್ಲ. 

ಅಯೋಧ್ಯೆ....ಅರ್ಥದಲ್ಲಿ ಅದು ಯೋಧನಿಲ್ಲದ ಊರು. ಅಲ್ಲಿ ರಾಮನೊಬ್ಬನೇ ಯೋಧ ಹೀಗೆ ಅವರವರ ಭಾವಕ್ಕೆ ಅಯೋಧ್ಯೆ ಕಂಡವರಿದ್ದಾರೆ. ಯೋಧನಿಲ್ಲದ ಊರಿನಲ್ಲಿ ಹೋರಾಟದ ಫಲರೂಪವಾಗಿಯೇ ರಾಮ ಮಂದಿರ ನಿರ್ಮಾಣವಾಗುವುದು ಅದೊಂದು ವಿಪರ್ಯಾಸ. ಬಹುಶಃ ಈ ಹೋರಾಟವೆಂಬುದು ರಾಮ ತೋರಿಸಿಕೊಟ್ಟ ಹಾದಿಯಂತೆ ಭಾಸವಾಗುತ್ತದೆ. ಆಯೋಧ್ಯೆಯಲ್ಲಿ ನಾವು ಕಾಲಿಟ್ಟ ಘಳಿಗೆ ಇನ್ನೂ ನೆನಪಿದೆ. ಸೂರ್ಯ ಅಯೋಧ್ಯೆಯ ಮೇಲ್ಮೈಯನ್ನು ಸವರಿ ಪಡುವಣದಲ್ಲಿ ವಿಶ್ರಮಿಸುವುದಕ್ಕೆ ತೆರಳುತ್ತಿದ್ದ. ಅದೊಂದು ಸುಂದರ ಘಳಿಗೆ. ಹಿತವದ ತಣ್ಣನೆಯಗಾಳಿ ಮೈಗೆ ಸವರಿದಂತೆ ರಾಮನ ತಣ್ಣನೆಯ ಮೂರ್ತಿ ಮೈಗೆ ಬಂದು ತಬ್ಬಿಕೊಂಡಂತೆ ಭಾಸವಾಯಿತು. ಈಗ ಆ ಮಧುರ ನೆನಪು ಮೈ ಮನ ಅರಳುವಂತೆ ಮಾಡಿತು.  ಅಯೋಧ್ಯೆಯಲ್ಲಿ ನಾವು ಉಳಿದುಕೊಂಡ ಸ್ಥಳ  ನಗರದ ಮಧ್ಯೆ ಹಳ್ಳಿಯಂತೆಯೇ  ಇತ್ತು. ಹಳೆಯದಾದ ಒಂದು ಕಟ್ಟಡ...ಅಲ್ಲಲ್ಲಿ ಕೆಲವು ಮರಗಳು ಅದರ ಬುಡದಲ್ಲಿ ಕಟ್ಟೆಗಳು ಹಳ್ಳಿಯ ಸೊಗಡಿನ ಓಡಾಡುವ ಜನಗಳು , ಎಲ್ಲಕ್ಕಿಂತಲೂ ಮಿಗಿಲಾಗಿ ಆವರಿಸಿಕೊಂಡ ದಿವ್ಯ ಮೌನ. ಅದರ ನಡುವೆ ಹಕ್ಕಿಗಳ ಕಲರವ ಅದರ ಜತೆಗೆ ನಮ್ಮೆಲ್ಲರ ಮಾತು ನಗುವಿನ ಸಡಗರ.  ಇಲ್ಲ ಈ ಅಯೋಧ್ಯೆಯ ಘಳಿಗೆಗಳನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಆ ಗಂಭೀರ ಮೌನದಲ್ಲಿ ಶ್ರೀರಾಮನ ಆಗಮನದ ಸ್ವಾಗತ ಗಾನವಿರಬಹುದೇ?  ಈಗ ಆ ಗಾನದ ಫಲಶ್ರುತಿಯಾದಂತೆ ರಾಮನ ಪ್ರಾಣ ಪ್ರತಿಷ್ಠೆ ಆಗುತ್ತಿದೆ. ಈ ವರ್ತಮಾನ  ಅದೊಂದು ದಿವ್ಯ ಘಳಿಗೆಯಾಗಬಹುದು. 

ನಾವಲ್ಲಿದ್ದ ಕೆಲವೇ  ಕ್ಷಣಗಳಲ್ಲಿ ಮಂದಿರದ ಸುತ್ತ ಮುತ್ತಲೆಲ್ಲ ಓಡಾಡಿ ರೋಮಾಂಚನ ಪಡೆದಿದ್ದೇವೆ. ಆಗಿನ್ನು ಸುತ್ತಮುತ್ತಲಿನ ಕಟ್ಟಡಗಳು ಭಗ್ನಾವಶೇಷಗಳಾಗಿ ನವೀಕರಣಕ್ಕೆ ಸಜ್ಜಾಗುತ್ತಿದ್ದವು.  ಮುಂಜಾನೆಯ ಸರಯೂ ನದಿಯ ದೃಶ್ಯವಂತೂ ಭಾವನೆಗಳ ಪೂರವನ್ನೆ ಶರೀರದಾದ್ಯಂತ ಅಭಿಷೇಕವನ್ನು ಮಾಡಿತ್ತು. ಇಲ್ಲೇ... ಇಲ್ಲೇ ಇದೇ ಹರಿಯುವ ಸರಯೂ ನದಿಯಲ್ಲಿ ರಾಮ ತನ್ನ ದೇಹದ ಮಾಲಿನ್ಯವನ್ನು ಕಳೆದಿರಬಹುದು. ಆ ಮಾಲಿನ್ಯವನ್ನು ಕಳೆದ ರಾಮನ ದೇಹ ಶುದ್ದವಾದರೆ, ಆ ಮಾಲಿನ್ಯವನ್ನು ತೊಳೆದ ಸರಯೂ ಪಾವನ ರೂಪ ಪಡೆದಿರಬಹುದು.  ಸರಯೂ ನೀನೆಷ್ಟು ಧನ್ಯೆ? ನಿನ್ನ ಮಡಿಲಲ್ಲಿ ಕುಳಿತ ನಾನೆಷ್ಟು ಧನ್ಯ?  ಆ ಸರಯೂ ಅಯೋಧ್ಯೆಯ ಪುಣ್ಯ ಭೂಮಿಯನ್ನು ತಬ್ಬಿಕೊಂಡಿದ್ದರ ಕಾರಣವಿರಬಹುದು ನದಿ ಬಿಟ್ಟು ಬಿಡಲಾಗದಂತೆ ಮಂದವಾಗಿ ಹರಿಯುತ್ತಿತ್ತು.  ಸರಯೂ ತೋಳಲ್ಲಿ ಸೆರೆಯಾದ ಅಯೋಧ್ಯೆ ಅದೆಷ್ಟು ಸುಂದರ?  ರಾಮನ ಅಸ್ತಿತ್ವವನ್ನು ತನ್ನ ತೋಳಿನಲ್ಲಿ ಬಂಧಿಸಿ ಇಂದು  ಆ ಸಂದೇಶವನ್ನು ನಮಗೆ ಈಗ ರವಾನಿಸುತ್ತದೆ. 



ಅ ಅಯೋಧ್ಯೆಯ ಮಣ್ಣಿನಕಣಗಳಲ್ಲಿ ಹೆಜ್ಜೆ ಇಡುವಾಗ ರಾಮ ಹನುಮನ ನೆನೆಯದಿರೆ ಆ ಭಾವನೆಗಳಿಗೆ ಅರ್ಥವೇ ಒದಗಲಾರದು. ಹನುಮಾನ್ ಗುಡಿ ಅಯೋಧ್ಯೆಯ ರಕ್ಷಣೆಯ ಹೊಣೆಯನ್ನು ತ್ರೇತಾಯುಗದಲ್ಲೇ ಹೊತ್ತುಕೊಂಡಿತ್ತು. ಅದರ ಪ್ರತೀಕವೆಂಬಂತೆ ಈ ಶತಮಾನದಲ್ಲಿ ನಡೆದ ಹೋರಾಟದ ಫಲಶ್ರುತಿಯೆಂಬಂತೆ ಈಗ ಶ್ರೀ ರಾಮನ ಪ್ರಾಣ  ಫಲರೂಪ ಪಡೆಯುತ್ತಿದೆ.  ಶ್ರೀರಾಮ ಎಂಬುದು ಕೇವಲ ಅಯೋಧ್ಯೆಗೆ ಮಾತ್ರ ಸೀಮಿತವಲ್ಲ. ಆದರೂ ಅಯೋಧ್ಯೆ ಎಂಬ ಹೆಸರು ಅಲ್ಲಿಗೆ ಭೇಟಿಗೆ ಕೊಟ್ಟಾಗಿನಿಂದ ರೋಮಾಂಚನ ಉಂಟುಮಾಡಿ ಪ್ರಚೋದನೆಗೊಳಿಸುತ್ತದೆ. ರಾಮ ಎಲ್ಲೆಲ್ಲೂ ಇರುವ ಸರ್ವಾಂತರ್ಯಾಮಿ ವ್ಯಕ್ತಿತ್ವ.  ವಾಲ್ಮೀಕಿಯಲ್ಲಿ ಆ ಮರ ಈ ಮರ ಎನ್ನುವ  ಬೀಜಾಕ್ಷರಗಳಿಂದ ರಾಮಮಂತ್ರ, ಹಾಗೆಯೇ     ರಾಮಾಯಣಕ್ಕೆ ಕಾರಣ ಎನ್ನುವ ಎರಡು ವ್ಯಕ್ತಿಗಳು, ಒಂದು ಮಂಥರೆ, ಇನ್ನೊಂದು ರಾವಣ.  ರಾವಣನಲ್ಲಿ ಇರುವ ’ರಾ ’ ಮಂಥರೆಯಲ್ಲೂ ಇರುವ ’ಮ’ ಎಲ್ಲೆಲ್ಲೂ ರಾಮನ ಅಸ್ತಿತ್ವವನ್ನೇ ಹೇಳುತ್ತದೆ. ದುಷ್ಟ ಮನೋವೃತ್ತಿಯಲ್ಲೂ ರಾಮನಿದ್ದರೂ ಅದರಿಂದಲೂ ರಾಮನ ವ್ಯಕ್ತಿತ್ವ ಪುಟಗೊಂಡಿದ್ದು ರಾಮನೆಂಬುದು  ಚೈತನ್ಯವಾಗುವ ಕಥೆ.  ರಾಮ ಅಯೋಧ್ಯೆಯಲ್ಲೇ ಇರಲಿ ಅದರೆ ಅದು ದೇಹದ ಹೃದಯದಂತೇ  ಇಡೀ ದೇಶಕ್ಕೆ ಹೃದಯವಾಗಿರುತ್ತದೆ. ಇದು ಶುದ್ದ ಭಾವನೆಯ ಪ್ರತೀಕ. ಮನೆಯಲ್ಲಿ ಎಲ್ಲೆಡೆ ದೇವರಿದ್ದರೂ ದೇವರ ಕೋಣೆಯೊಂದು ಯಾಕೆ ಬೇಕು? ದೇವಾಲಯದ ಪ್ರತೀ ಅಂಚಿನಲ್ಲೂ ದೇವರ ಅಸ್ತಿತ್ವ ಇರುವಾಗ ಗರ್ಭಗುಡಿ ಏಕೆ? ಇದು ಕೇವಲ ಭಾವನೆಯ ಪ್ರತೀಕ. ಮನುಷ್ಯ ಹುಟ್ಟುವಾಗ ಹುಟ್ಟಿಕೊಳ್ಳುವ ಭಾವನೆ ಅವನೊಂದಿಗೇ ಸಮಾಧಿಯಾಗಿ ಇಲ್ಲವಾಗುತ್ತದೆ. ಆದರೂ ಮನುಷ್ಯನ ಅಸ್ತಿತ್ವ ಇರುವುದು ಈ ಭಾವನೆಗಳಲ್ಲಿ. 

ಕಾಶಿಯಲ್ಲಿ ಎಲ್ಲಿ ಅಗೆದರೂ ಸಿಗುವುದು ಗಂಗೆಯ ನೀರು. ಸಾರ್ವಜನಿಕ ಕೊಳವೆಯಲ್ಲೂ ಹರಿಯುವುದು ಗಂಗೆಯ ನೀರು, ಹಾಗಿದ್ದರೂ ಗಂಗೆಯಲ್ಲೇ ಹೋಗಿ ಮುಳುಗುವುದು ಯಾಕೆ? ಮನುಷ್ಯ ಭಾವನೆಯೊಂದಿಗೆ ಬದುಕು ಸವೆಸುವುದು. ಹಸಿವಿದ್ದರೂ ಶಮನವಾದರೂ ಭಾವನೆಗಳು ಜತೆಗೇ ಇರುತ್ತವೆ.  ಗಂಗೆ ಕಾಶಿಯಲ್ಲಿ ಹರಿದರೂ ಅಂತರಗಂಗೆಯಾಗಿ ದೇಶವ್ಯಾಪಿಸುವಂತೆ, ರಾಮ ಅಯೋಧ್ಯೆಯಲ್ಲಿದ್ದರೂ ದೇಶವ್ಯಾಪಿ ಮಾತ್ರವಲ್ಲ ಸರ್ವ ಜೀವವ್ಯಾಪಿಯಾಗುತ್ತಾನೆ. ದೇಹದಲ್ಲಿ ಎಲ್ಲಿ ವ್ಯಾಧಿಯಾದರೂ ಔಷಧಿ ಕೊಡುವುದು ಹೊಟ್ಟೆಗೆ. ಹಾಗೆ ಅಯೋಧ್ಯೆ ಎಂಬುದು ಎಲ್ಲವೂ ಆಗಿಬಿಡುತ್ತದೆ.  ಶಶಾಂಕನಾಗಿರುವ ಚಂದ್ರ ರಾಮನ ಜತೆಯಾಗಿ ಶ್ರೀ ರಾಮಚಂದ್ರನಾಗಿ ತನ್ನ ಕಳಂಕವನ್ನು ಕಳೆದು ಶುಭ್ರವಾದಂತೆ ರಾಮನಾಮ ವ್ಯಾಪಕವಾಗಿ ನಾವೂ ಪರಿಪೂರ್ಣ ಶುದ್ದಿಯಿಂದ ಪವಿತ್ರರಾಗುತ್ತೇವೆ. 

        ಭಗವಂತ ಅವತಾರ ರೂಪಿಯಾಗಿ ಮನುಷ್ಯನಾಗುತ್ತಾನೆ. ಹೆತ್ತ ಅಪ್ಪ ತಾನು ಸ್ನಾನ ಧ್ಯಾನ ಮಾಡಿ ಮಗನಿಗೆ ಪ್ರೇರಕವಾದಂತೆ ರಾಮ ತನ್ನ ನಡೆಯಿಂದ ಪರಿಪೂರ್ಣ ಮನುಷ್ಯನಾಗಿ ರಾಜಾ ರಾಮನಾಗಿ, ಪುರುಷೋತ್ತಮನಾ ಆದರ್ಶ ರೂಪ. ಈ ಆದರ್ಶಗಳು ಸರ್ವ ಪ್ರೇರಕ ಶಕ್ತಿಯಾಗಿ ರಾಮನ ಆದರ್ಶ ಸರ್ವತ್ರವಾಗಲಿ. 


ಜೈ ಶ್ರೀರಾಮ








Saturday, January 13, 2024

ವ್ಯರ್ಥ ನಿರೀಕ್ಷೆ

"ಗಾಜಿನ ಲೋಟ ಅಥವಾ ಪಿಂಗಾಣಿ ತಟ್ಟೆಯನ್ನು ತಿಕ್ಕಿ ತಿಕ್ಕಿ ತೊಳೆದು ಲಕ ಲಕ ಹೊಳೆಯುವಂತೆ ಮಾಡಿ ಅದನ್ನು ಕಣ್ತುಂಬ ಖುಷಿಯಲ್ಲಿ ನೋಡಿ , ಅದರ ಜಾಗದಲ್ಲಿ ಇಡುವಾಗ ಕೈಜಾರಿ ಬಿದ್ದು ಒಡೆದರೆ ಬಹಳ ದುಃಖವಾಗಿಬಿಡುತ್ತದೆ. ಛೇ ತೊಳೆಯುವ ಮೊದಲೇ ಬಿದ್ದಿದ್ದರೆ....ತೊಳೆಯುವ ಕೆಲಸವಾದರೂ ಉಳಿಯುತ್ತಿತ್ತು. ಎಲ್ಲ ಸಾಮಾಗ್ರಿಗಳನ್ನು ತಂದು ಬಹಳ ನಿರೀಕ್ಷೆಯನ್ನಿಟ್ಟು ಒಂದು ಖಾದ್ಯವನ್ನು ಶ್ರಮವಹಿಸಿ ಮಾಡಿ , ಅದನ್ನು ಆಘ್ರಾಣಿಸುವ ಸುಖಾನುಭವದಲ್ಲಿ ಅದರ ಪಾತ್ರೆ ಕೆಳಗೆ ಬಿದ್ದು ಬಿಟ್ಟರೆ ಬಹಳ ನಿರಾಶೆಯಾಗುತ್ತದೆ. ಪಟ್ಟ ಪರಿಶ್ರಮದ ವ್ಯರ್ಥ ವಾಗುವ ನೋವು ಒಂದು ಕಡೆ ಆಶೆಗೆ ತಣ್ಣೀರು ಎರಚಿದ ನೋವು ಬೇರೆ. "

ಮೊನ್ನೆ ಒಬ್ಬ ಸ್ನೇಹಿತ ಸಿಕ್ಕಿದ. ಯಾವಾಗಲೂ ಬಹಳ ಲವಲವಿಕೆಯಲ್ಲಿ ಕಂಡು ಬರುವ ಈತ ಬಹಳ ಖಿನ್ನತೆಯಲ್ಲಿದ್ದಂತೆ ಭಾಸವಾಯಿತು. ಸದಾ ಸಿಗುವಾಗ ಅದೂ ಇದು ಅಂತ ಮಾತನಾಡುತ್ತೇವೆ. ರಾಜಕೀಯ, ಸಾಮಾಜಿಕ ಹೀಗೆ ಹಲವು ವಿಷಯಗಳನ್ನು ಚರ್ಚಿಸುತ್ತಾ ಇರುವ ಈತನ ಖಿನ್ನತೆ ವಿಚಿತ್ರವಾಗಿ ಕಂಡಿತು. ನಾನು ಕೇಳಿದೆ       

"ಯಾಕೆ ಯಾವಾಗಲು ಇದ್ದಂತೆ ಇಲ್ಲ?  "

ತುಸು ಹೊತ್ತು ಸುಮ್ಮನೇ ಇದ್ದ, ಮತ್ತೆ ಗಳ ಗಳ ಅಳುವುದಕ್ಕೆ ಶುರು ಮಾಡಿದ, ನನಗೆ ಇರಿಸು ಮುರುಸಾಯಿತು.  ಆತ ಹೇಳಿದ, 

"ನನಗೆ ಒಬ್ಬಳೇ ಮಗಳು ಗೊತ್ತಲ್ವ? ಕಳೆದ ಕೆಲವು ದಿನಗಳಿಂದ ಅವಳ ಮದುವೆ ಮಾತುಕತೆಗೆ ಓಡಾಡುತ್ತಾ ಇದ್ದೇನೆ. ಹಲವಾರು ಸಂಬಂಧಗಳನ್ನು ನೋಡಿದೆ. ಕೊನೆಗೆ ಒಬ್ಬರು ಒಳ್ಳೆ ಮನೆಯವರು ಸಿಕ್ಕಿದರು. ಇನ್ನೇನು ಎಲ್ಲ ಮಾತುಕತೆ ಆರಂಭಿಸಿ ಕೆಲಸ ಶುರು ಮಾಡುವ ಹೊತ್ತಿಗೆ , ಮಗಳು ಮದುವೆಗೆ ಒಪ್ಪುವುದಿಲ್ಲ. ಆಕೆಗೆ ಯಾರ ಜತೆಗೋ ಪ್ರೇಮವಿದೆ. ಅವನನ್ನೆ ಮದುವೆ ಆಗಬೇಕು ಅಂತ ಹೇಳುತ್ತಿದ್ದಾಳೆ. ಅವಳ ಇಷ್ಟ ಅಲ್ವ ಮಾಡಿಕೊಳ್ಳಲಿ ಆದರೆ ನನ್ನ ಅವಸ್ಥೆ ಹೇಗಾಗಬೇಕು. ಆಕೆಗೆ ಅಮ್ಮನಿಂದಲೂ ನಾನೇ ಹತ್ತಿರ. ಅಪ್ಪ ಅಪ್ಪ ಅಂತ ಯಾವಾಗಲು ಹೆಗಲಿಗೆ ಬೀಳುತ್ತಾಳೆ. ಆಕೆಗಾಗಿ ಕೇಳಿದ್ದನ್ನೇಲ್ಲಾ ಮಾಡಿದೆ.  ಇಂಜಿನಿಯರ್  ಕಲಿಸಿದೆ.  ಒಳ್ಳೆ ಕೆಲಸ ಸಿಕ್ಕಿತು. ಈಗ ನೋಡಿದರೆ ನನ್ನ ಕನಸು ಭಾವನೆಗೆಗಳಿಗೆ ಯಾವ ಬೆಲೆಯೂ ಇಲ್ಲ. ಈಗ ಬಂದ ಸಂಬಂಧದವರ  ಉಳಿದವರ ಮುಖ ಹೇಗೆ ನೋಡುವುದು?  "

ಮಕ್ಕಳು ಸಂಸಾರ ಎಂದ ಮೇಲೆ ಇದೆಲ್ಲ ಸಾಮಾನ್ಯ.  ಮಕ್ಕಳ ಬಗ್ಗೆ ಹಲವು ಕನಸುಗಳನ್ನು ಬಯಕೆಗಳನ್ನು ಕಟ್ಟಿಕೊಳ್ಳುವುದು ಸಹಜ. ನಮ್ಮ ಮಕ್ಕಳಲ್ಲಿ ಇಡುವ ನಿರೀಕ್ಷೆ ಹುಸಿಯಾಗುವಾಗ ಜಿಗುಪ್ಸೆ ಆವರಿಸಿಬಿಡುತ್ತದೆ. ನಮ್ಮದೇ ಮಕ್ಕಳಾದರೂ ನಾವು ಅವರ ಬಗ್ಗೆ ಯಾವ ನಿರ್ಧಾರವನ್ನೂ ತೆಗೆದುಕೊಳ್ಳುವುದು ಸೂಕ್ತವಲ್ಲ. ಬದಲಿಗೆ  ಸೂಕ್ತ ನಿರ್ಧಾವನ್ನು  ಅವರೆ ತೆಗೆದುಕೊಳ್ಳುವಂತೆ ಅವರನ್ನು ಪ್ರೇರೇಪಿಸಬೇಕು. ಅವರ ಬಗೆಗಿನ ನಿರ್ಧಾರ ನಾವೇ ತೆಗೆದುಕೊಂಡರೆ ನಿರ್ಧಾರಗಳಲ್ಲಿ ಅವರು ಸ್ವಾವಾಲಂಬಿಗಳಾಗುವುದು ಯಾವಾಗ?  ಅವರ ಪರವಾಗಿ ನಾವು ನಮ್ಮ ರೀತಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಂಡರೆ ಅವರ ಹಕ್ಕುಗಳನ್ನು ಕಸಿದುಕೊಂಡಂತೆ. ಇನ್ನು ನ್ಯಾಯಾಲಯ ದಾವೆ ಕಾನೂನು ಯಾವುದನ್ನು ನೋಡಿದರು ಅಲ್ಲಿ ಕಾನೂನು ಮಾತ್ರವೇ ಇರುತ್ತದೆ. ನೀತಿ ಎಂಬುದು ಇರುವುದಕ್ಕೆ ಸಾಧ್ಯವಿಲ್ಲ. ಮಕ್ಕಳು ಹೆತ್ತವರ ಆಶಯದಂತೆ ನಡೆಯಬೇಕಾಗಿರುವುದು ಹೌದು, ಆದರೆ ಅವರ ಆಶಯಗಳು ಅದೇ ರೂಪದಲ್ಲಿ ಬೆಳೆದು ಬರುವಂತೆ ಮಕ್ಕಳ ಮನೋಭಾವವನ್ನು ರೂಪಿಸಬೇಕು.  ಇದೇ ಮಾತುಗಳಲ್ಲಿ ಆತನಿಗೆ ಸಾಂತ್ವಾನ ಹೇಳಿದೆ. ಆಗ ಆತ ಹೇಳಿದ,

"ಹುಟ್ಟಿನಿಂದ ಅವಳ ಎಲ್ಲಾ ಆಶೆಗಳನ್ನು ತೀರಿಸಿದವನು ನಾನು. ಹೆತ್ತಮ್ಮನಿಗಿಂತಲೂ ಆಕೆ ತನ್ನ ಆಶೆಗಳನ್ನು ನನ್ನಲ್ಲೇ ಹೇಳಿ ಪರಿಹರಿಸಿಕೊಳ್ಳುತ್ತಿದ್ದಳು. ಈಗ ಬದುಕಿನ ಮಹತ್ವದ ನಿರ್ಧಾರದಲ್ಲಿ ಅಕೆಗೆ ನಾನು ಬೇಡವಾದೆ. ದುಃಖವಾಗುವುದಿಲ್ಲವಾ? ಆಕೆಯ ಪ್ರೇಮ ಎರಡು ವರ್ಷದಿಂದ ಇದೆ. ಈ ಮೊದಲು ಒಂದು ದಿನ ಅದರ ಬಗ್ಗೆ ಹೇಳಿರುತ್ತಿದ್ದರೆ, ನಾನು ಬಹುಶಃ ಅವಳ ಆಶೆಗಳನ್ನು ಮೊದಲಿನಂತೆ ನೆರವೇರಿಸಿಬಿಡುತ್ತಿದ್ದೆ. "

ಅವನ ಅಳಲು ಪ್ರಾಮಾಣಿಕ. ಅದರಲ್ಲಿ ತಪ್ಪೇನಿದೆ.  ಎಲ್ಲವನ್ನು ಸಲುಗೆಯಿಂದ ಪ್ರೀತಿಯಿಂದ ಹೇಳಬಲ್ಲ ಆಕೆ ....ತನ್ನ ಪ್ರೇಮವನ್ನೂ ಪ್ರಾಮಾಣಿಕವಾಗಿ ತಂದೆಯಲ್ಲಿ ಹೇಳಬಹುದಿತ್ತು. ಆದರೆ ಅದನ್ನೂ ಸಹ ಹೇಳುವಷ್ಟು ಅವರ ನಡುವಿನ ಸಂಭಂಧಕ್ಕೆ ಆ ಬಲವೇ ಇರಲಿಲ್ಲ.  ಅದೇನು ನಿಯತಿಯೋ ಗೊತ್ತಿಲ್ಲ. ಹೆಣ್ಣು ಮಕ್ಕಳಿಗೆ ಅಪ್ಪ ಎಂದರೆ ಇಷ್ಟವಾಗುತ್ತಾನೆ. ಪ್ರೀತಿ ಸಲುಗೆ ಎಲ್ಲವೂ ಹೆತ್ತ ಅಮ್ಮನಿಗಿಂತಲೂ ಅಧಿಕವಾಗುತ್ತದೆ.  ಬಹುಶಃ ಅಪ್ಪನಂತೆ ನಾನಾಗಲಾರೆ ಎಂಬ ಹತಾಶೆಯೋ ಏನೋ ಹಲವು ಹೆಣ್ಣು ಮಕ್ಕಳಿಗೆ ಅಪ್ಪ ಎಂದರೆ ಅದು ಎಲ್ಲದಕ್ಕೂ ಇರುವ ಅಂತಿಮ ನಿರೀಕ್ಷೆ. ಆದರೆ ಬದುಕಿನ ನಿರ್ಣಾಯಕ ಹಂತದಲ್ಲಿ ಅಪ್ಪ ಪ್ರೀತಿಯ ತೂಕ ಎಲ್ಲೋ ಕಳೆದ ಅನುಭವವಾಗುತ್ತದೆ. ಅಪ್ಪ ಅಮ್ಮನ ಪ್ರೀತಿ ಮಕ್ಕಳು ಕೊಡಬೇಕಾದ ಪ್ರತ್ಯುಪಹಾರ ಒಂದೇ ಅದು ಪ್ರಾಮಾಣಿಕತೆ.  ಮಕ್ಕಳು ಹೆತ್ತವರಲ್ಲಿ ಗೌರವ ಪ್ರೀತಿ ತೋರಿಸುವುದಕ್ಕಿಂತಲು ಅವರಲ್ಲಿ ಪ್ರಾಮಾಣಿಕವಾಗಿ ಇರಬೇಕಾಗಿರುವುದು ಅವಶ್ಯ. ಪ್ರೀತಿ ಗೌರವ ಹುಟ್ಟಿನಿಂದ ಸಹಜವಾಗಿ ಬರಬಹುದು. ಆದರೆ ವಿಶ್ವಾಸ ಪ್ರಾಮಾಣಿಕತೆ ಒದಗಿ ಬಂದಾಗಲೇ ಆ ಪ್ರೀತಿ ಸಂಭಂಧಗಳಿಗೆ ಮೌಲ್ಯ ಒದಗಿ ಬರುತ್ತದೆ. ತನ್ನ ಮಕ್ಕಳು ಏನೂ ಬಚ್ಚಿಡಲಾರರು ಎಂಬ ಅದಮ್ಯ ವಿಶ್ವಾಸ ಹೆತ್ತವರಲ್ಲಿ ಇರುತ್ತದೆ. ಅದಕ್ಕೆ ಘಾತಿಯೊದಗಿದಾಗ  ಜಗತ್ತಿನ ಯಾವ ನೋವು ಅದಕ್ಕೆ ಸರಿಸಮನಾಗಿ ಇರುವುದಿಲ್ಲ. 


Tuesday, January 9, 2024

ಉಡುಗೊರೆ, ಆದರೂ ಬೇಡ

ಇತ್ತೀಚೆಗೆ ಒಬ್ಬರ ಮದುವೆ ಆಮಂತ್ರಣ ಸಿಕ್ಕಿತ್ತು. ಆ ಒಂದು ಆಮಂತ್ರಣದ ಪತ್ರಿಕೆ ಅಚ್ಚು ಹೊಡೆಯುವುದಕ್ಕೆ ಏನಿಲ್ಲವೆಂದರೂ ಇನ್ನೂರು ರೂಪಾಯಿ ಖರ್ಚಾಗಿರಬಹುದು. ಅರಮನೆ ಮೈದಾನದಲ್ಲಿ ಆ ವಿವಾಹ ಕಾರ್ಯಕ್ರಮ ಆಯೋಜಿಸಿದ್ದರು.  ಪತ್ರಿಕೆಯ ಕೊನೆಯಲ್ಲಿ ವಿಶೇಷವಾಗಿ ಬರೆಯಲಾಗಿತ್ತು. ಇದು ನನಗೆ ವಿಚಿತ್ರವಾಗಿ ಕಂಡಿತ್ತು. ಆಮಂತ್ರಿತರು ಯಾರೂ ಹೂವಿನ ಬೊಕ್ಕೆ ತರಬಾರದು ಎಂದು ಉಲ್ಲೇಖಿಸಿದ್ದರು. ಹೂವಿನ ಬೊಕ್ಕೆ ಒಂದು ಘಳಿಗೆ ಕಳೆದರೆ ಅದರ ಮೌಲ್ಯವನ್ನು ಕಳೆದುಕೊಳ್ಳುತ್ತದೆ.  ಕೊಡುವಾಗ ಇದ್ದ ಮೌಲ್ಯ ಪಡೆದಾಗ ಇರುವುದಿಲ್ಲ. ಅದನ್ನು ಮೂಲೆಗೆ ಎಸೆದು ಬಿಡುವ ಈ ಉಡುಗೊರೆ ಕೊಡುವ ಅವಶ್ಯಕತೆಯಾದರೂ ಏನು ಎಂದು ಹಲವು ಸಲ ಯೋಚಿಸಿದ್ದಿದೆ. 

ಉಡುಗೊರೆ ಯಾರಿಗೆ ಇಷ್ಟವಿಲ್ಲ ಹೇಳಿ?  ಉಡುಗೊರೆ ಕೈಗೆ ಇಟ್ಟಾಗ ಎಷ್ಟು ಸಂಕೋಚದ ಮನಸ್ಸಾದರೂ ಮೊದಲಿಗೆ  ನಿರಾಕರಿಸುತ್ತಾ ನಂತರ ಮುಖ ಅರಳಿಬಿಡುತ್ತದೆ.  ಮೊನ್ನೆ ಮನೆಯಾಕೆ ತುಂಬಿದ ಒಂದೆರಡು ಬ್ಯಾಗ್ ತಂದಿಟ್ಟಳು. ಅದರಲ್ಲಿ ತುಂಬಾ ಉಡುಗೊರೆ ರೂಪದಲ್ಲಿ ಬಂದ ಬಟ್ಟೆಗಳಾಗಿತ್ತು. ಇಷ್ಟು ಉಡುಗೊರೆ ಮುಖ ಅರಳದೇ ಇರಬಹುದಾ? ಆದರೆ ಹಾಗೆ ಸಂಪಿಗೆಯ ಮೊಗ್ಗಿನಂತಿದ್ದ ಮುಖ ಒಮ್ಮಿಂದೊಮ್ಮೆಲೇ  ಕೆರೆಯ ತಾವರೆಯಾಗಿ ಅರಳುವುದಿಲ್ಲ.  ಅದು ಹೆಸರಿಗೆ ಶಾಸ್ತ್ರಕ್ಕೆ  ಸಿಕ್ಕ ಉಡುಗೊರೆ. 

ಬಗೆ ಬಗೆಯ ಬಟ್ಟೆಗಳು ಆ ಬ್ಯಾಗ್ ತುಂಬಾ ಇದ್ದವು. ಸೀರೆ ಪಂಚೆ ಶಲ್ಯ ಒಂದಷ್ಟು ರವಕೆ ಕಣಗಳು.  ಅಷ್ಟೊಂದು ಸೀರೆಗಳು ಇದ್ದರೂ ಒಂದು ಮದುವೆಯೋ ಮತ್ತೊಂದೋ ಬಂದಾಗ ಅದಕ್ಕೆ ಹೋಗುವುದಕ್ಕೆ ಅಂತ ಒಂದು ಬಟ್ಟೆ ಬೇಕು ಅಂತ ಮಲ್ಲೇಶ್ವರಂಗೆ ಹೋಗುವುದು ತಪ್ಪುವುದಿಲ್ಲ. ಸಿಕ್ಕಿದ ಸೀರೆ ಪಂಚೆಗಳೇ ಹಾಗೆ. ಒಂದು ಪಂಚೆ ತೆಗೆದು ನೋಡಿದೆ. ಅದು ಅತ್ತ ಪಂಚೆಯಷ್ಟು ದೊಡ್ಡ ಇಲ್ಲ. ಲುಂಗಿಯಂತೆ ಉಡುವುದಕ್ಕೂ ಸಾಧ್ಯವಿಲ್ಲ. ಈಗೀಗ ಪ್ರತೀ ಮನೆಯಲ್ಲೂ ಇಂತಹ ಹಲವು ಬ್ಯಾಗ್ ಗಳು ಇರಬಹುದು. ಯಾಕೆಂದರೆ ಬೇಡದೇ ಇದ್ದ ಉಡುಗೊರೆ ಕೊಡುವುದು ವಾಡಿಕೆಯಾಗಿದೆ.  ನಮ್ಮಜ್ಜನಿಗೆ ಪೌರೋಹಿತ್ಯಕ್ಕೆ  ಹೋಗುವಾಗ   ಬೈರಾಸುಗಳು ದಾನವಾಗಿ  ಸಿಗುತ್ತಿದ್ದವು. ಅಜ್ಜ ಅದನ್ನು ತೋರಿಸಿ ಹೇಳುತ್ತಿದ್ದರು, ಇದನ್ನು ಸೊಂಟದ ಸುತ್ತ ಉಡುವುದಕ್ಕೆ ಇದು ಉದ್ದ ಇಲ್ಲ. ಹಾಗಂತ ಲಂಗೋಟಿಯಾಗಿ ಉಡುವುದಕ್ಕೆ ಇದು ದೊಡ್ಡ ಆಯಿತು.  ಒಂದು ಬಾರಿ ಯಾರೋ ಒಬ್ಬರು ದನವನ್ನು ದಾನ ಕೊಟ್ಟಿದ್ದರು. ಅದು ಯಾಕೆ ಕೊಟ್ಟಿದ್ದಾರೆ ಎಂದು ಅದರ ಹತ್ತಿರ ಹೋಗುವಾಗ ಅರಿವಾಗುತ್ತಿತ್ತು. ಹಾಯುವುದಕ್ಕೆ ಒದೆಯುವುದಕ್ಕೆ ಮಾತ್ರ ಕಲಿತಿದ್ದ ಪಶು ಹಾಲು ಕೊಡುವುದು ಹಾಗಿರಲಿ, ಅದಕ್ಕೆ ತಿನ್ನುವುದಕ್ಕೆ ಹುಲ್ಲು ಹಿಂಡಿ ಒದಗಿಸುವುದೇ ದೊಡ್ಡ ಸಮಸ್ಯೆಯಾಗಿಬಿಡುತ್ತಿತ್ತು.  ಆದರೂ ಪಶುವಲ್ಲವಾ? ಅದನ್ನು ಸಾಕುವುದೇ ಪುಣ್ಯದ ಕೆಲಸ.  ಹೀಗೆ ಉಪಯೋಗಕ್ಕೆ ಬಾರದ  ವಸ್ತುಗಳು ಹೀಗೆ ದಾನವಾಗಿ ಕೊಡುವುದಕ್ಕೆ ಯೋಗ್ಯವಾಗಿರುತ್ತವೆ. ಬ್ಯಾಗ್ ತುಂಬಾ ಇದ್ದ ಸೀರೆಗಳ ಕಥೆಯೂ ಇದುವೆ. ಅದು ಉಡುವುದಕ್ಕೂ  ಸಾಧ್ಯವಿಲ್ಲ ಮಲಗಿದಾಗ ಹಾಸಿ ಹೊದಿಯುವುದಕ್ಕೂ ಸಾಧ್ಯವಿಲ್ಲ.  ಗೋವದಲ್ಲಿ ಈ ತರ ಸಿಕ್ಕಿದ ಸೀರೆ ಪಂಚೆಗಳನ್ನು ಒಂದರ ಮೇಲೆ ಒಂದು ಇಟ್ಟು ಹೊಲಿದು ಚಳಿಗೆ ಹೊದಿಕೆಯಂತೆ ಉಪಯೋಗಿಸುವುದನ್ನು ನೋಡಿದ್ದೇನೆ. 

ಒಂದು ಸಲ ಯಾರೋ ಕೊಟ್ಟಿದ್ದ ಶರ್ಟ್ ಪೀಸ್ ನೋಡುವುದಕ್ಕೆ ಚೆನ್ನಾಗಿ ಇದೆ ಎಂದು ಟೈಲರ್ ಗೆ ಹೊಲಿಯುವುದಕ್ಕೆ ಕೊಟ್ಟಿದ್ದೆ. ಆತ ಕೈಯಲ್ಲಿ ಹಿಡಿದು ಹೇಳಿದ ಸಾರ್ ಇದು ಗಿಫ್ಟ್ ಸಿಕ್ಕಿದ್ದಾ ? ಹೊಲಿಯುವುದಕ್ಕೆ ಮಜೂರಿ ಅದರಿಂದ ಹೆಚ್ಚಾಗುತ್ತದೆ, ಏನು ಮಾಡಬೇಕು ಎಂದು ಕೇಳಿದಾಗ ಒಂದಷ್ಟು ಇರಿಸು ಮುರಿಸಾಯಿತು. ಪುಣ್ಯ ಅದನ್ನು ಯಾರು ಕೊಟ್ಟದ್ದು ಎಂದು ನೆನಪಿರಲಿಲ್ಲ. ಹೀಗೆ ನೆನಪಾಗದ ವಸ್ತುವನ್ನು ತಮ್ಮ ನೆನಪು ಮರೆಸುವಂತೆ ಯಾರೋ ಕೊಟ್ಟುಬಿಟ್ಟಿದ್ದರು. 

ಸಾಮಾನ್ಯವಾಗಿ ನಾವು ಅತ್ಮೀಯರಿಗೆ ಶುಭ ಸಂದರ್ಭದಲ್ಲಿ ಏನಾದರೂ ಕೊಡಬೇಕು ಎನ್ನುವಾಗ ಅವರಿಗೆ ಏನು ಅತ್ಯಂತ ಉಪಯೋಗಕ್ಕೆ ಬರಬಹುದು ಎಂಬುದನ್ನು ಯೋಚಿಸುತ್ತೇವೆ. ಅವರ ಮನೆಯಲ್ಲಿ ಏನು ಇಲ್ಲ ಎಂಬುದನ್ನು ಲೆಕ್ಕ ಹಾಕುತ್ತೇವೆ. ನಾವು ಕೊಟ್ಟ ವಸ್ತುವನ್ನು ಉಪಯೋಗಿಸುವಾಗ ನಮ್ಮ ನೆನಪನ್ನು ತರಿಸುವುದಕ್ಕೆ ಪ್ರಯತ್ನಿಸುತ್ತೇವೆ. ಆದರೆ ಇಲ್ಲಿ ಬ್ಯಾಗ್ ತುಂಬ ಇದ್ದ ಉಡುಗೊರೆ ಯಾರ ನೆನಪನ್ನೂ ತರಿಸುವುದಿಲ್ಲ. ಇದೊಂದು ಹರಿವ ನೀರಿನ ಹಾಗೆ. ಯಾವುದೋ ಅನಾಥಾಶ್ರಮಕ್ಕೂ ಕೊಡುವುದಕ್ಕೆ ಯೋಗ್ಯವಿಲ್ಲದವುಗಳು. ಹಾಗಂತ ಕಳಪೆಯಾದವುಗಳನ್ನು ಅನಾಥರಿಗೆ ಕೊಡಬೇಕೆಂದಲ್ಲ. ಏನೂ ಇಲ್ಲದವರೂ ನಿರಾಕರಿಸುವ ಈ ಉಡುಗೊರೆಗಳು ಸಿಕ್ಕರೆ ಮುಖ ಅರಳುವುದಕ್ಕೆ ಸಾಧ್ಯವೆ?  ಇಂದು ನಮಗೆ ಯಾರೋ ಕೊಟ್ಟಿದ್ದಾರೆ, ನಾಳೆ ನಾವು ಇದನ್ನು ಯಾರಿಗೋ ದಾಟಿಸಿಬಿಡುತ್ತೇವೆ. ಹೋದದ್ದಕ್ಕೆ ಏನಾದರೂ ಕೊಡಬೇಕಲ್ಲ. ಹಾಗೆ ಆಕಡೆಯಿಂದ  ಈಕಡೆಗೆ ಈ ಕಡೆಯಿಂದ ಪುಟ್ ಬಾಲಿನಂತೆ ತಳ್ಳುವ ವಸ್ತುಗಳು.  ಕೊಡುವವರಿಗೂ ಗೊತ್ತಿದೆ ಇದು ಉಪಯೋಗ ಶೂನ್ಯ. ತೆಗೆದುಕೊಳ್ಳುವವರಿಗೂ ಗೊತ್ತಿದೆ ಇದು ಏನಕ್ಕೂ ಬರುವುದಿಲ್ಲ ಎಂದು. ಹೀಗೆ ನಮಗೆ ಉಚಿತವಾಗಿ ಸಿಕ್ಕದ್ದನ್ನು ಯಾರಿಗೋ ದಾಟಿಸುತ್ತೇವೆ. ಹಲವು ಸಲ ಹರಿದ ನೋಟನ್ನು ತಿಳಿಯದಂತೆ ಯಾರಿಗೋ ಅಂಟಿಸಿದಂತೆ ಬಾಸವಾಗುತ್ತದೆ. ವಿಪರ್ಯಾಸವೆಂದರೆ ಒಂದು ಸಲ ಹೀಗೆ ಕೊಟ್ಟದ್ದು ಒಂದೆರಡು ತಿಂಗಳು ಕಳೆದನಂತರ ಇನ್ನಾರದೋ ಕೈಯಿಂದ ನಮ್ಮ ಕೈಗೆ ಪುನಃ ಸಿಗುವ ಸಂಭವವು ಇದೆ. 

ನನಗೆ ಉಡುಗೊರೆ ಕೊಡುವುದರಲ್ಲೂ ಪಡೆಯುವುದರಲ್ಲೂ ಆಸಕ್ತಿಇಲ್ಲ. ಈ ಉಡುಗೊರೆಯದ್ದು ಒಂದು ದೊಡ್ಡ ಕಥೆ,  ಪಡೆದರೆ ಸಾಲದು ಅದನ್ನು ಬರೆದಿಟ್ಟು  ನೆನಪಿಸಿಕೊಂಡು  ಪುನಹ ಅದನ್ನು ಕೊಡಬೇಕು. ಹಾಗೇ  ಯಾವುದೇ ಮದುವೆ ಉಪನಯನಕ್ಕೆ ಹೋದರೂ ಮನಸಾರೆ ಶುಭ ಹಾರೈಸುತ್ತೇನೆ. ಸಂತಸದಿಂದ ಅವರಿಗೆ ಶುಭ ಹಾರೈಸಿ ಪರಮಾತ್ಮನಲ್ಲಿ ಶುಭವಾಗಲಿ ಎಂದು ಬೇಡಿಕೊಳ್ಳುತ್ತೇನೆ.  ಯಾರೊ ನೋಡುವುದಕ್ಕೆ ಇನ್ನಾರನ್ನೋ ತೃಪ್ತಿ ಪಡಿಸುವುದಕ್ಕೆ ಹಲವು ಸಲ  ಪ್ರದರ್ಶನ ಉಡುಗೊರೆ ಬಳಕೆಯಾಗುತ್ತದೆ. ಒಂದು ರೀತಿಯ ಢಾಂಬಿಕತನವಿದು. 

ಈಗೀಗ ಉಡುಗೊರೆಗಳು ಹೀಗೆ ಅರ್ಥ ಹೀನವಾಗುತ್ತವೆ. ಅವುಗಳನ್ನು ಹೊತ್ತು ತರುವುದು ಮತ್ತು ಅದೇ ರೀತಿ ಹೊತ್ತುಕೊಂಡು ಹೋಗಿ ಇನ್ನೊಬ್ಬರಿಗೆ ಒಪ್ಪಿಸುವುದು. ಈ ಯಾಂತ್ರಿಕತೆ ಯಾವ ಪುರುಷಾರ್ಥಕ್ಕೆ?  ಕೊಡುವುದಕ್ಕೆ ಮನಸ್ಸಿಲ್ಲದೆ ಕೊಡುವ ಉಡುಗೊರೆ ಕೊಡುವ ಉದ್ದೇಶವಾದರೂ ಏನು? ಅದು ಕೊಡದೇ ಇರುವುದೇ ವಾಸಿ. ಕೊನೆ ಪಕ್ಷ ಅದನ್ನು ಹಿಡಿದುಕೊಳ್ಳುವ ಶ್ರಮವಾದರೂ ತಪ್ಪುತ್ತದೆ. 

ಉಡುಗೊರೆಗಳು ಅದಕ್ಕಿರುವ ಮೌಲ್ಯಕ್ಕಿಂತಲೂ ಅದರ ಹಿಂದಿನ ಭಾವನೆಗಳು ಮೌಲ್ಯಯುತವಾಗುತ್ತವೆ. ಅದರ ಹಿಂದೆ ಇರುವ ಪ್ರೀತಿ ಸ್ನೇಹ ಅದಕ್ಕಿರುವ ಮೌಲ್ಯದಲ್ಲಿ ಕೊಡುವ ಉಡುಗೊರೆ ಕೇವಲ ಸಾಂಕೇತಿಕವಾಗುತ್ತವೆ. ಆದರೆ ಈಗಿಗ ಕೊಡುವ ಅಥವಾ ಪಡೆಯುವ ಉಡುಗೊರೆಗಳಿಗೆ ಸ್ನೇಹ ಪ್ರೀತಿಯ ಮೌಲ್ಯ ಇರುವುದಿಲ್ಲ.  ಗುಲಾಬಿ ಮೊಗ್ಗನ್ನು ಕೈಯಲ್ಲಿ ಹಿಡಿದಾಗ ಅದು ಪಸರಿಸುವ ಪ್ರೇಮದ ಗಂಧ ದಿವ್ಯವಾಗಿರುತ್ತದೆ. ಆದರೆ ಕೊಡುವ ಮನಸ್ಸಿನಲ್ಲೂ ಪಡೆಯುವ ಮನಸ್ಸಿನಲ್ಲೂ ಪ್ರೀತಿ ಎಂಬುದು ತುಂಬಿರಬೇಕು. ಇಲ್ಲವಾದರೆ ಅದು ಕೇವಲ ಹೂವಾಗಿಬಿಡುತ್ತದೆ.