Saturday, December 25, 2021

ಪ್ರತ್ಯೇಕತೆಯ ದಳ್ಳುರಿ

             ಅಮೇರಿಕದಲ್ಲಿ ಅಥವಾ ಲಂಡನ್ ನಲ್ಲಿ ಹೋಗಿ ನಾವು ವ್ಯಾಪಾರ ವಹಿವಾಟು ಮಾಡಬಹುದೇನೋ ಆದರೆ ಮಹಾರಾಷ್ಟ್ರಕ್ಕೆ ಹೋಗಿ ಕ್ಷೇಮವಾಗಿ ಭಯವಿಲ್ಲದೆ ಅಲ್ಲಿ ವ್ಯಾಪಾರ ಮಾಡಬಹುದೇ? ಇನ್ನು ಅನುಮಾನ.  ಮಹಾರಾಷ್ಟ್ರ ಭಾರತದಲ್ಲಿದೇಯೋ ನಾವು ಭಾರತೀಯರೋ ಎಂದು ಮುಟ್ಟಿ ಮುಟ್ಟಿ ನೋಡಬೇಕಾದ ದಿನಗಳು ಹತ್ತಿರವಾಗುತ್ತಿದೆ.  ಬೆಳ್ಳಂ ಬೆಳಿಗ್ಗೆ ಹೊತ್ತಿ ಉರಿಯುವ ಬೆಳಗಾವಿಯ ಸೀಮೆ ನೋಡಿದಾಗ ಅನಿಸುವುದಿದು. ಸದಾ ಕೆಂಡದಂತೆ ಆರದ ಬೆಂಕಿ ಇದು. ಎಂ ಇ ಎಸ್ ಪುಂಡಾಟಿಕೆ ಅಂತಲೇ ಮಾಧ್ಯಮದಲ್ಲಿ ಬರುತ್ತದೆ. ಅವರು ಕನ್ನಡ ಧ್ವಜವನ್ನು ಸುಟ್ಟು ಹಾಕುತ್ತಾರೆ, ಯಾವುದೋ ಪ್ರತಿಮೆಗೆ  ಮಸಿ ಬಳಿಯುತ್ತಾರೆ, ಕನ್ನಡ ಫಲಕಗಳನ್ನು ಒಡೆದು ಹಾಕುತ್ತಾರೆ, ಸಾರಿಗೆ ಬಸ್ಸಿಗೆ ಕಲ್ಲು ಎಸೆಯುತ್ತಾರೆ, ಅದಕ್ಕೆ ಪ್ರತಿಕಾರವಾಗಿ  ಕೂಗು ಏಳುತ್ತದೆ ಬೆಳಗಾವಿ ಗಡಿ ಮುಚ್ಚಿ ಬಿಡಿ. ಸಂಘಟನೆ ನಿಷೇಧ ಮಾಡಿ.  ಯಾಕೆ ಬೆಳಗಾವಿ ಗಡಿ ಪಾಕಿಸ್ತಾನದ ಗಡಿಯಂತಾಗುತ್ತದೆ. ದೂರದ ಪಾಕಿಸ್ತಾನದ ಗಡಿಯಾದರೂ ತೆರೆದಿಡಬಹುದು, ನಮ್ಮ ಬೆಳಗಾವಿ ಗಡಿ ಮುಚ್ಚಬೇಕು. ಅರೇ ನಾವು ಎಲ್ಲಿದ್ದೇವೆ ಭಾರತದಲ್ಲೇ? ಅನುಮಾನ ಹುಟ್ಟುವುದಿಲ್ಲವೇ? ನಮ್ಮಲ್ಲಿರುವುದು ಕಾರಕ್ಕೆ ಪ್ರತಿಕಾರ.  ಇದರ ಪರಿಣಾಮ ಏನೋ ಕಲ್ಪಿಸುವುದಕ್ಕೆ ಅಸಾಧ್ಯ. 

    ಯಾರೋ ಕಿಡಿಗೇಡಿಗಳು ಪುಂಡರು. ಧ್ವಜವನ್ನು ಸುಟ್ಟು ಹಾಕಿದ್ದಾರೆ, ರಾಯಣ್ಣ ಪ್ರತಿಮೆ ಧ್ವಂಸ ಮಾಡಿದ್ದಾರೆ,  ಸರಿ ಪ್ರತಿಯಾಗಿ ಇಲ್ಲಿ ಶಿವಾಜಿ ಪ್ರತಿಮೆ ಭಗ್ನವಾಗುತ್ತದೆ. ಯಾವುದು ಇವುಗಳೆಲ್ಲ. ನಮ್ಮದೇ ದೇಹದ ಅಂಗಗಳಲ್ಲವೇ?   ಒಡ ಹುಟ್ಟಿದ ದಾಯಾದಿಗಳು ಕೈ ಕೈ ಮಿಲಾಯಿಸಿದಾಗ ಹೆತ್ತ ಅಮ್ಮನನ್ನು ನೆನೆಯುವುದಿಲ್ಲ ನಾವು.  ಹೆಚ್ಚು ತಪ್ಪು ಯಾರದ್ದು ಅಂತ ವಿಮರ್ಶಿಸುವ ಹಂತಕ್ಕೆ ಬಂದು ಬಿಟ್ಟಿದ್ದೇವೆ. ಯಾಕೆ ನಮ್ಮಲ್ಲಿ ಸೌಹಾರ್ದತೆ ಇಲ್ಲ. ಮಾತೆತ್ತಿದರೆ ನಾವು ಭಾರತೀಯರು  ಒಂದು. ಆದರೆ ಭಾಷಾ ವಿಷಯಕ್ಕೆ ಬಂದಾಗ ಎಲ್ಲವು ಮರೆತು ಹೋಗುತ್ತದೆ. ಭಾಷೆ ಎಂದರೆ ಅಷ್ಟೊಂದು ಕಠಿಣ ಯಾಕಾಗುತ್ತದೆ? 

        ಇದೀಗ ಕೂಗು ಎಂ ಇ ಎಸ್ ಬ್ಯಾನ್ ಮಾಡಿ. ಹೌದು, ಸಮಾಜ ಘಾತುಕವಾದವುಗಳನ್ನು ಕಿತ್ತೊಗೆಯಬೇಕು. ಆದರೆ ಅದೊಂದೇ ಪರಿಹಾರವೇ? ಯಾವುದೋ ಸಂಘಟನೆಯನ್ನು ನಿಷೇಧಿಸಿದಾಗ ಕೇವಲ ಹೆಸರನ್ನಷ್ಟೇ ನಾವು ನಿಷೇಧಿಸುವುದು. ಅದರಲ್ಲಿರುವ ಮಂದಿ ಹಾಗೇ ಅದೇ ಮನೋಭಾವದಲ್ಲಿರುತ್ತಾರೆ. ನಾವು ಅಪರಾಧಿಯನ್ನು ನಾಶ ಮಾಡುತ್ತೇವೆ. ಅಪರಾಧವನ್ನಲ್ಲ. ನಿಜವಾಗಿ ಆಗಬೇಕಾಗಿರುವುದು ಏನು? ನಮ್ಮ ಮಕ್ಕಳು ತಪ್ಪು ಮಾಡುತ್ತಾರೆ, ಅವರನ್ನು ಏನು ಮಾಡುವುದಕ್ಕೆ ಪ್ರಯತ್ನಿಸುತ್ತೇವೆ? ಅವರ ಅಪರಾಧವನ್ನು ತಿದ್ದುವುದಕ್ಕೆ ಪ್ರಯತ್ನಿಸುತ್ತೇವೆ. ಕುಡುಕನಾದ ತಂದೆ ರಸ್ತೆಯ ಬದಿಗೆ ಬಿದ್ಧಿರುತ್ತಾನೆ. ಆತನ ದುರಭ್ಯಾಸ ಅಂತ ಹಾಗೆ ಬಿಟ್ಟು ಬಂದರೆ ಏನಾಗುತ್ತದೆ? ಹಾಗಾದರೆ ಇಲ್ಲಿ ಬದಲಾಗಬೇಕಾಗಿರುವುದು ಮನೋಭಾವ.  ಮನಸ್ಸು ಬದಲಾಗದೆ ಸೌಹಾರ್ದ ಮೂಡದೆ ಇದ್ದರೆ,  ಸಂಘಟನೆಯನ್ನು ನಿಷೇಧ ಮಾಡಿದಾಗ ಸಮಸ್ಯೆ ಪರಿಹಾರವೇ? ಖಂಡಿತಾ ಇಲ್ಲ. ಸಂಘಟನೆಯ ನಿಷೇಧದ ಪ್ರತಿಕಾರಕ್ಕೆ ಮತ್ತೆ ಇನ್ನೇನೋ ಪ್ರತಿಭಟನೆ ವ್ಯಕ್ತವಾಗುತ್ತದೆ.  ದ್ವೇಷ ವೈಷಮ್ಯ ಮತ್ತಷ್ಟು ಹೆಚ್ಚಾಗುತ್ತದೆ. ಶತ್ರುತ್ವದ ಕಿಡಿ ಯಾವಾಗ ಉರಿದು ಬೀಳುತ್ತದೋ ಎಂಬ ಆತಂಕ ಇದ್ದೇ ಇರುತ್ತದೆ. ನಿಷೇಧ ಮಾಡಿ ನಾವು ಚಪ್ಪಾಳೆ ತಟ್ಟಿ ಜಯಕಾರ ಹಾಕಬಹುದು. ಆದರೆ ಅದು ಶಾಶ್ವತ ಎಂದು ಭ್ರಮಿಸಿ ಖುಷಿ ಪಡುತ್ತೇವೆ.  ಒಂದು ಊರಲ್ಲಿ ಕಳ್ಳರು ಇಲ್ಲದೇ ಇದ್ದರೆ ಏನಾಗಬಹುದು. ಊರಿನ ಮನೆಗೆ ಬೀಗ ಬಾಗಿಲಿನ ಅವಶ್ಯಕತೆಯೇ ಇರುವುದಿಲ್ಲ. ಇಲ್ಲಿ ಮನುಷ್ಯರ ಕಳ್ಳತನದ ಮನೋಭಾವ ತಿದ್ದುವಂತಾಗಬೇಕು. ಕಳ್ಳನನ್ನು ಹಿಡಿದು ಹಾಕಿದರೆ ಮತ್ತೊಂದು ಕಳ್ಳತನಕ್ಕೆ ಪ್ರೇರೆಪಣೆ ಪಡೆಯುತ್ತಾನೆ. ಶಿಕ್ಷೆ ಅನುಭವಿಸಿ ಬದಲಾದ ಅಪರಾಧಿಗಳು ಎಷ್ಟಿರಬಹುದು? 

    ಸಂಘಟನೆಗಳು ನಿಯಮ ಬಾಹಿರವಾಗಿ ಸಮಾಜ ಘಾತುಕವಾದಾಗ, ಸಮಾಜದ ಐಕ್ಯತೆಗೆ ಭಂಗ ತರುವಾಗ ನಿಷೇಧ ಮಾಡಲೇಬೇಕು. ಆದರೆ ಒಂದು ಸಲ ಯೋಚಿಸುವ ಈ ದೇಶದಲ್ಲಿ ಅದೆಷ್ಟು ಭಯೋತ್ಪಾದಕ ಸಂಘಟನೆಯನ್ನು ನಿಷೇಧ ಮಾಡಿಲ್ಲ?  ಆದರೆ  ಭಯೋತ್ಪಾದನೆ ಮತ್ತಷ್ಟೂ ಕ್ರೂರವಾಗಿ ಕಾಡುತ್ತಾ ಇದೆ.  ನಾವು ಒಂದು ಸಲವೋ ಅಥವಾ ಶಾಶ್ವತವಾಗಿ ಜಯ ಗಳಿಸಬಹುದು ಎಂದಿಟ್ಟುಕೊಂಡರೂ   ನಾಶವಾದ ಸೌಹರ್ದತೆ ನೆನಪಾಗುವುದಿಲ್ಲ. ಹಗೆ ಮತ್ತಷ್ಟು ರೊಚ್ಚಿಗೇಳುತ್ತದೆ. 

    ಹೀಗೆಲ್ಲ ಯೋಚಿಸಿದರೆ ವಾಸ್ತವದಲ್ಲಿ ಕನ್ನಡ ವಿರೋಧಿಗಳಾಗಬಹುದು. ನೆಲ ಜಲ ಭಾಷೆ ಎಲ್ಲವೂ ಅಭಿಮಾನ ಗೌರವದ ವಿಷಯಗಳು. ಆದರೆ ಇದೆಲ್ಲ ಪರಸ್ಪರ ಬೆಸೆಯುವ ವಿಷಯಗಳಾಗಬೇಕು. ಯಾರೋ ವಿದೇಶಿಗ ಹುಟ್ಟಿಸಿದ ಆಂಗ್ಲವನ್ನು ದಿನಾ ಅಲ್ಲಿ ಇಲ್ಲಿ ಬಳಸುವ ನಮಗೆ ಭಾಷಾಪ್ರೇಮದ ಬಗ್ಗೆ ಯಾವ ನಿಲುವಿನಲ್ಲಿ ಇರಬೇಕು ಎನ್ನುವುದೇ ಅರಿವಾಗುವುದಿಲ್ಲ. ಹೇಳಿಕೇಳಿ ನಾನು ಕೇರಳದ ಕಾಸರಗೋಡಿನವನು. ನನ್ನೂರು ಕಾಸರಗೋಡು ಎಂದಾಕ್ಷಣ ಇಲ್ಲೆಲ್ಲ ಹೇಳುತ್ತಾರೆ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು. ನಾನು ಹೇಳುವುದುಂಟು, ಅದು ಭಾರತದೊಳಗೆ ಇದೆಯಲ್ಲ ಸದ್ಯ ಅಷ್ಟು ಸಮಾಧಾನ ಸಾಕು. ಮನೆಯಲ್ಲಿ ಎಲ್ಲರೂ ಅಚ್ಚುಕಟ್ಟಾಗಿ ಕನ್ನಡ ಮಾತನಾಡುತ್ತೇವೆ. ಕನ್ನಡದಲ್ಲಿ ವ್ಯವಹರಿಸುತ್ತೇವೆ. ಕನ್ನಡ ಕಥೆ ಕಾವ್ಯಗಳನ್ನು ಓದಿ ಆನಂದಿಸುತ್ತೇವೆ.  ಆದರೆ ಈಗ ಬೆಳಗಾವಿಯಲ್ಲಿ ಹಚ್ಚಿದ ಕಿಚ್ಚು ಅತ್ತ ಕಾಸರಗೋಡಿಗೂ ಹಬ್ಬಿದರೆ ಬಹುಶಃ ನಾವು ನಮ್ಮೂರಿನ ಬಾಗಿಲು ಮುಚ್ಚಿ ಬಿಡಬೇಕು. ನಮ್ಮ ಒಡಹುಟ್ಟಿದವರು ಹೆಚ್ಚೇಕೆ ನಮ್ಮ ಅಪ್ಪ ಅಮ್ಮನನ್ನೂ ಮುಂದೊಂದು ದಿನ ಮರೆಯಬೇಕಾದೀತು. ಬೆಳಗಾವಿ ಗಡಿಯ ಬಿಸಿಯಲ್ಲಿ ನಮ್ಮ ಕಾಸರಗೋಡಿನ ಕನ್ನಡಿಗರು  ಹಾಗೇಯೇ ಕರ್ನಾಟಕ ಕೇರಳದ ಗಡಿ  ಕಣ್ಣಿಗೆ ಕಾಣುವುದಿಲ್ಲ. ಭಾಷಾಭಿಮಾನದಲ್ಲೂ  ತಾರತಮ್ಯ.  ಅತ್ತ ಗೋವಾದಲ್ಲೂ ನಮ್ಮ ಒಡ ಹುಟ್ಟಿದವರಿದ್ದಾರೆ, ಸಂಬಂಧಿಗಳು ಮಿತ್ರರೂ ಇದ್ದಾರೆ ಅವರನ್ನೇಲ್ಲಾ ನಾವು ಮರೆಯಬೇಕೆ? ಮುಂಬಯಿ ಮಹಾನಗರವನ್ನು ಅವಲಂಬಿಸಿ  ನಮ್ಮ ಮಂಗಳೂರು ಕಾಸರಗೋಡು ಜನಗಳು ಜೀವನ ಕಟ್ಟಿಕೊಂಡವರಿದ್ದಾರೆ . ಇನ್ನೂ ಒಂದಷ್ಟು ಬದುಕು ಸಾಗಿಸುತ್ತಿದ್ದರೆ ಅದಕ್ಕೆ ಮುಂಬಯಿಯ  ದುಡಿಮೆಯೇ ಕಾರಣ. ಯೋಚಿಸಿ ಇದನ್ನೆಲ್ಲ ಕಳಚಿಕೊಂಡು ಬದುಕುವುದು ಸುಲಭ ಸಾಧ್ಯವೇ? ಊರಲ್ಲಿ ಒಂದು ಹೊತ್ತೂ ಗಂಜಿಗೂ ತತ್ವಾರವಾದಾಗ ದುಡಿವ ಕೈಗಳಿಗೆ ದುಡಿಮೆಯನ್ನು ಮುಂಬಯಿ ನಗರ ಕೊಟ್ಟಿದೆ.  ಪುಂಡರನ್ನು ತಿದ್ದುವುದು ಕಷ್ಟ. ಕ್ಷಮಿಸುವುದು ಸಾಧ್ಯವಿಲ್ಲ. ಹಾಗಾದರೆ ಈ ದುರಂತಗಳಿಗೆ ಪರಿಹಾರ ಹೇಗೆ. ಹೋರಾಟಕ್ಕೆ ಹೋರಾಟ. 

    ಬ್ರಿಟೀಷರು   ಭಾರತಕ್ಕೆ ಬಂದಾಗ ನಮ್ಮೊಳಗಿನ ದ್ವೇಷ ವೈಷಮ್ಯವನ್ನೇ ಉಪಯೋಗಿಸಿ ತಮ್ಮ ಸಾಮ್ರಾಜ್ಯವನ್ನು ಭಾರತದಲ್ಲಿ ವಿಸ್ತರಿಸಿಕೊಂಡರು. ನಮ್ಮೊಳಗಿನ ಗುಂಪುಗಾರಿಕೆಯ ದೌರ್ಬಲ್ಯ ಬಳಸಿಕೊಂಡರು.  ಅದೊಂದು ದುರಂತ ಇತಿಹಾಸ.  ಈ ಅನುಭವದಲ್ಲೂ ನಾವು ಪಾಠ ಕಲಿಯಬೇಕು.  ಈ ಎಲ್ಲ ಮಾತುಗಳು ಮಹಾರಾಷ್ಟ್ರವನ್ನು ಪುರಸ್ಕರಿಸುವುದೋ ಮತ್ತೊಂದೋ ಅಲ್ಲ.  ಮೊದಲು ಈ ಎಲ್ಲ ಸಮಸ್ಯೆಗಳಿಗೆ ಸೌಹಾರ್ದದ ಉತ್ತರ ಕಂಡುಕೊಳ್ಳಬೇಕು. ಬೆಳಗಾವಿ ಕರ್ನಾಟಕಕ್ಕೆ ಸೇರಬೇಕೋ ಮಹಾರಾಷ್ಟ್ರಕ್ಕೋ ಎಂಬುದನ್ನು ದೇಶದ ಉಚ್ಚ ನ್ಯಾಯಾಲಯವೂ ಸುಲಭದಲ್ಲಿ ತೀರ್ಮಾನಿಸುವುದಕ್ಕೆ ಸಾಧ್ಯವಾಗುವುದಿಲ್ಲ. 

    ಈ ಸಂಘರ್ಷದಲ್ಲಿ ನಾವು ಕಳೆದುಕೊಳ್ಳುವ ಅಮೂಲ್ಯ ವಿಷಯಗಳ ನೆನಪನ್ನಷ್ಟೇ ಹೇಳುವುದು. ಹೋರಾಟ ಬೇಕು. ನೆಲ ಜಲ ಭಾಷೆ ಎಲ್ಲವೂ ಅಭಿಮಾನಿಸುವಂತಹ ವಿಚಾರಗಳು. ಆದರೆ ಅದು ದ್ವೇಷ ವೈಷಮ್ಯವನ್ನು ಬೆಳೆಸಿ ಸೌಹಾರ್ದತೆಯನ್ನು ನಾಶ ಮಾಡಿದರೆ ಮಾನವೀಯತೆ ಎಂಬ ಪ್ರಶ್ನೆಗೆ ಉತ್ತರ ಎಲ್ಲಿ ಹುಡುಕಬೇಕು?   ಈ ಎಲ್ಲ ಸಮಸ್ಯೆಗಳನ್ನು ನಿಭಾಯಿಸುವ ಮಹಾ ಪುರುಷ ಇನ್ನೂ ಹುಟ್ಟದೇ ಇರುವುದು ನಮ್ಮ ದುರ್ದೈವ ಎನ್ನಬೇಕು.  ಈ ಸಂಘರ್ಷ ಕೊನೆಯಾಗಲಿ ಎಂದು ಭಗವಂತನಲ್ಲಿ ಮೊರೆಯಿಡುವುದಷ್ಟೇ ಉಳಿದಿದೆ. ಅಪರಾಧದ ನಾಶವಾಗಲಿ. ಅಪರಾಧಿಗಳು ಬದಲಾಗಲಿ. 


Friday, December 24, 2021

ಉಸಿರೇ ಶಾಂತ ಮನಸ್ಸಿನ ಪ್ರತಿನಿಧಿ

 ಈ ಭಾವಚಿತ್ರ ನೋಡಿ ಇಷ್ಟ ಸಲ್ಲಿಸದಿರಿ. ಇದು ಕೇವಲ ಸಾಂಕೇತಿಕ. 

’ನೆಗಡಿ’  ಮೂಗಿನ ಇರವನ್ನು ನೆನಪಿಸುವ ಒಂದು ಬಾಧೆ. ನೆಗಡಿ ಔಷಧಿ ತೆಗೆದುಕೊಂಡರೆ ಒಂದುವಾರ ಇರುತ್ತದೆ, ಇಲ್ಲದೇ ಇದ್ದರೆ ಏಳು ದಿನ ಬಾಧಿಸುತ್ತದೆ ಎಂಬ ಮಾತಿದೆ. ಇದು ಏಳು ದಿನ ಯಾಕೆ ಬಾಧಿಸುತ್ತದೆ ಎಂಬುದು ತೀರ ಸರಳ. ಆದರೆ ಯಾರೂ ಗಂಭೀರ ತೆಗೆದುಕೊಂಡಿಲ್ಲ. ಔಷಧಿ ಇಲ್ಲದೆಯೂ ನೆಗಡಿಯಿಂದ ಸಂರಕ್ಷಣೆ ಪಡೇಯಬಹುದು. ಅದಕ್ಕೆ ಸ್ವಲ್ಪ ಸಹನೆ ಮೈಗೂಡಿಸಿಕೊಳ್ಳಬೇಕು. 

ಸಹಜವಾಗಿ ಶೀತ ಅಥವಾ ನೆಗಡಿ ಬರುವುದು ನಮ್ಮ ದೇಹದ ಅನಾರೋಗ್ಯದ ಸೂಚನೆ. ಅದು ನೆಗಡಿಯ ಮೂಲಕವೇ ವ್ಯಕ್ತಪಡಿಸುವುದು. ಏನೋ ಒಂದು ಬಾಧೆ ದೇಹಕ್ಕೆ ಅಂಟಿಕೊಂಡಿರುತ್ತದೆ. ದೇಹ ಅದರೊಂದಿಗೆ ಹೋರಾಡುತ್ತದೆ. ನಮ್ಮ ಉಸಿರಾಟ ಏರು ಪೇರಾಗುತ್ತದೆ. ಉಸಿರಾಟ ತುಸುವಾದರೂ ಏರು ಪೇರಾದರೆ ಶರೀರಕ್ಕೆ ಸೇರುವ ಆಮ್ಲಜನಕದ ಕೊರತೆ ಉಂಟಾಗಿ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ. ನೆಗಡಿ ಆರಂಭವಾದಾಗ ನಮ್ಮ ಉಸಿರಾಟ ಮತ್ತಷ್ಟು ಅಸಹಜ ಸ್ಥಿತಿಗೆ ಹೋಗಿ ನಾವು ಉಸಿರಾಡುವುದೇ ಕಷ್ಟವಾಗುತ್ತದೆ. ಹೀಗಾಗಿ ಎರಡು ದಿನದಲ್ಲಿ ಶಮನವಾಗಬಹುದಾದ ಶೀತ ಒಂದು ವಾರಕ್ಕೆ ಹೋಗುತ್ತದೆ. ಇಂತಹ ಸ್ಥಿತಿಯಲ್ಲಿ ಸಹನೆಯಿಂದ ನಮ್ಮ ಬಲವಂತದಿಂದ  ಉಸಿರಾಟ ಸರಿಪಡಿಸಿಕೊಂಡರೆ ಶೀತ ಏಳು ದಿನ ಯಾಕೆ ಒಂದೇ ದಿನದಲ್ಲಿ ನೆಗಡಿ ಮಾಯವಾಗುತ್ತದೆ. ಅದು ಹೇಗೆ? 


ಶೀತ ಬರುವಾಗ ಅದರ ಸೂಚನೆ ಮೊದಲೇ ಅರಿವಾಗುತ್ತದೆ. ಗಂಟಲು ಕೆರೆತ ತಲೆನೋವು ಕಣ್ಣು ಕಿವಿ ನೋವು ಹೀಗೆ ಆರಂಭದಲ್ಲೇ ಸ್ವಲ್ಪ ಜಾಗ್ರತೆ ವಹಿಸಿದರೆ ಶೀತ ಒಂದೇ ದಿನದಲ್ಲಿ ನಿಯಂತ್ರಿಸುವುದಕ್ಕೆ ಸಾಧ್ಯವಾಗುತ್ತದೆ. ಅದೂ ಯಾವುದೇ ಔಷಧಿ ಇಲ್ಲದೆ!  ಶೀತ ಬಂದಾಗ ದಿನಕ್ಕೆ ಮೂರು ಹೊತ್ತು  ಯಾವುದೋ ಆಂಟಿ ಬಯೋಟಿಕ್ ತೆಗೆದುಕೊಳ್ಳುವುದರ ಬದಲಾಗಿ ಮೂರು ಹೋತ್ತು ಒಂದೆಡೆ ಶಾಂತವಾಗಿ ಕುಳಿತು ದೀರ್ಘ ಶ್ವಾಸವನ್ನು  ಸರಾಗವಾಗಿ ತೆಗೆದುಕೊಳ್ಳಬೇಕು. ಕಡಿಮೆ ಎಂದರೆ ಇಪ್ಪತ್ತೊಂದು ಸಲ ದೀರ್ಘವಾದ ಶ್ವಾಸ ತೆಗೆದುಕೊಂಡಾಗ ನಮ್ಮ ದೇಹಕ್ಕೆ ಹೆಚ್ಚು ಹೆಚ್ಚು ಆಮ್ಲಜನಕ ಒದಗಿ ಬರುತ್ತದೆ. ದೇಹ ಎದುರಿಸುವುದಕ್ಕೆ ಸಜ್ಜಾಗುತ್ತದೆ. ಬಂದ ರೋಗ ಏನಿದೆಯೋ ಅದು ದುರಾಗುತ್ತದೆ. ಆದಷ್ಟು ನಮ್ಮ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಬೇಕು. ಅನಾವಶ್ಯಕ ಉದ್ವೇಗ ಉದ್ರೇಕ ನಮ್ಮ ಉಸಿರಾಟದ ಮೇಲೆ ಸೂಕ್ಷ್ಮವಾಗಿ ಪ್ರಭಾವ ಬೀರುತ್ತದೆ.  ಉಸಿರಾಟ ಏರು ಪೇರಾದಾಗ ನಮ್ಮ ದೇಹ ಅದಕ್ಕೆ ಸ್ಪಂದಿಸುತ್ತದೆ.  ಶೀ ತ ಮತ್ತೂ ಮುಂದಕ್ಕೆ ಹೋದರೆ ಜ್ವರ ಖೆಮ್ಮುಇನ್ನಿತರ ಖಾಯಿಲೆಗಳು ಆರಂಭವಾಗುತ್ತದೆ


ಹಾಗಾಗಿ ಶೀತ ಬರುತ್ತದೆ ಎಂದು ಅರಿವಾದಾಗ,  ತಾಸಿಗೊಂದು ಸಲ ದೀರ್ಘ ಶ್ವಾಸ ತೆಗೆದುಕೊಳ್ಳಬೇಕು. ಇಲ್ಲವಾದರೆ ಮೂರು ಹೊತ್ತಾದರೂ ತೆಗೆದುಕೊಳ್ಳಬೇಕು. ಆದಷ್ಟು ಮನಸ್ಸನ್ನು ಶಾಂತವಾಗಿರಿಸಿ ಕೊಳ್ಳಬೇಕು. ಅಸಹನೆ ಉದ್ರೇಕ ಕಡಿಮೆ ಮಾಡಿಕೊಳ್ಳಬೇಕು. ಹೇಳಿಕೇಳಿ ಈಗ ಚಳಿಗಾಲ. ಸಹಜವಾಗಿ ನೆಗಡಿ ಬಂದೇ ಬರುತ್ತದೆ.ಓ ಇದೊಂದು ಶೀತ ಎಂದು ಗೊಣಗಿ ನಮ್ಮದೇ ಮೂಗನ್ನು ಶಪಿಸುತ್ತೇವೆ. ಎಲ್ಲಕ್ಕಿಂತ ಮಿಗಿಲಾಗಿ ನಿತ್ಯ ಪ್ರಾಣಾಯಾಮ ಮಾಡಿದಲ್ಲಿ ನೆಗಡಿ ಜ್ವರ ಎಂದರೆ ಏನು ಎಂಬುದೆ ಮರೆತು ಹೋಗುತ್ತದೆ. ಶಾಂತ ಮನಸ್ಸು ಎಲ್ಲ ಅಶಾಂತಿಯನ್ನು ದೂರ ಮಾಡುತ್ತದೆ. ಉಸಿರೇ ಶಾಂತ ಮನಸ್ಸಿನ ಪ್ರತಿನಿಧಿ. 


Monday, December 20, 2021

ಉಪ್ಪಳ ಬಾಯಾರ್ ಬಸ್ಸುಗಳು

 

ಉಪ್ಪಳದಿಂದ ಬಾಯಾರು ನಮ್ಮ ಊರು ಎಂದು ಅಭಿಮಾನದಿಂದ ಹೇಳುವುದಕ್ಕೆ ಹಲವು ಕಾರಣಗಳಿವೆ. ಅದರಲ್ಲಿ ಒಂದು ಇಲ್ಲಿನ ಖಾಸಗೀ ಬಸ್ಸುಗಳು. ಬಾಲ್ಯದಲ್ಲಿ ಉಪ್ಪಳದಿಂದ ಬಾಯಾರಿಗೆ ಕೇವಲ ನಾಲ್ಕು ಬಿಳಿ ಬಣ್ಣದ ಶಂಕರ್ ವಿಟ್ಠಲ್ ಬಸ್ಸುಗಳು ಸಂಚರಿಸುತ್ತಿದ್ದವು.  ಎಲ್ಲವೂ ಒಂದೇ ಬಾಗಿಲಿನ ಬಸ್ಸುಗಳು. ಕುರ್ಚಿಪಳ್ಳ ವಿಟ್ಲ ಪುತ್ತೂರು ಮಂಗಳೂರು ಒಂದು ಕಾಸರಗೋಡು. ಒಂದು ಬಸ್ಸು ತಪ್ಪಿಸಿಕೊಂಡರೆ ಮತ್ತೆ ಬಸ್ಸು ಬರುವುದಕ್ಕೆ ತಾಸುಗಟ್ಟಲೆ ಕಾಯಬೇಕಾದ ಪರಿಸ್ಥಿತಿ.  ಬಸ್ಸಲ್ಲಿ ಸಂಚರಿಸುವಾಗ  ಹೆಚ್ಚಾಗಿ ನಾವು ಡ್ರೈವರ್ ಪಕ್ಕದ ಉದ್ದ ಸೀಟಿನಲ್ಲೇ ಕುಳಿತುಕೊಳ್ಳುತ್ತಿದ್ದೆವು. ಇಲ್ಲಿ ಕುಳಿತರೆ  ಬಸ್ಸಿನ ಎದುರು ಆಚೆ ಈಚೆ ನೋಡುವುದಕ್ಕೆ ಮಾತ್ರವಲ್ಲದೇ ಡ್ರೈವರ್ ಬಸ್ಸು ಚಲಾಯಿಸುವುದನ್ನು ನೋಡುವುದಕ್ಕೆ ಸಾಧ್ಯವಾಗುತ್ತದೆ. ಜನ ಭರ್ತಿಯಾದರೆ ಒಂದೇ ಬಾಗಿಲು  ಅದು ಹಿಂದೆ ಇರುವುದರಿಂದ ಬಹಳ ಕಷ್ಟವಾಗುತ್ತಿತ್ತು. ಬಾಗಲಿ ಬಳಿ ಬರುವಾಗ ಕೆಲವೊಮ್ಮೆ ನಮ್ಮ ನಿಲ್ದಾಣ ಕಳೆದು ಮತ್ತೊಂದು ನಿಲ್ದಾಣಕ್ಕೆ ಬಸ್ಸು ಮುಟ್ಟಿಯಾಗುತ್ತಿತ್ತು.  ಶಂಕರ್ ವಿಟ್ಠಲ್ ಬಸ್ಸೆಂದರೆ  ಬಿಸ್ಕಿಟ್ ಡಬ್ಬಿಯ  ಬಣ್ಣದ  ಬಸ್ಸುಗಳು. ಆಗ ಕಾಯರ್ ಕಟ್ಟೆಯ ಶಾಲಾ ಪ್ರವಾಸಕ್ಕೆಂದು ಬಂದ ಬಣ್ಣ ಬಣ್ಣದ ಭಾರತ್ ಬಸ್ಸು ನೋಡಿ ಆಶ್ಚರ್ಯಗೊಂಡಿದ್ದೆವು.  ನಮ್ಮೂರ ರಸ್ತೆಯಲ್ಲಿ ಬಣ್ಣ ಬಣ್ಣದ ಬಸ್ ಯಾವಾಗ ಸಂಚರಿಸುತ್ತದೋ ಎಂದು  ನಿರೀಕ್ಷೆಯಲ್ಲಿದ್ದೆವು. ಸಹಜವಾಗಿ ಬಣ್ಣದ  ಬಸ್ಸುಗಳನ್ನು ನೋಡಬೇಕಿದ್ದರೆ ಉಪ್ಪಳಕ್ಕೆ ಬರಬೇಕಿತ್ತು. ಇಲ್ಲ ಮಂಗಳೂರಿಗೆ ಹೋಗಬೇಕಿತ್ತು. ಮಂಗಳೂರಿಗೆ ಹೋದರೆ ಎರಡು ಬಾಗಿಲಿನ ಅದ್ಭುತ ಬಣ್ಣ ಬಣ್ಣದ ಬಸ್ಸುಗನ್ನುಕಾಣಬಹುದಿತ್ತು.

 

ಪುತ್ತೂರು ಕುರ್ಚಿಪ್ಪಳ್ಳ (ಉಪ್ಪಳ) ನಡುವೆ ಓಡುತ್ತಿದ್ದ ಶಂಕರ್ ವಿಟ್ಠಲ್


ಶಂಕರ್ ವಿಟ್ಠಲ್ ಬಸ್ಸು  ಆಗ ಅದೊಂದು ಅದ್ಭುತ ಪ್ರಪಂಚ. ಪೀರ್ ಸಾಹೇಬರು, ಮಹಾಬಲ ಶೆಟ್ರು ಗೋಪಾಲಣ್ಣ, ಮಣಿಯಾಣಿ ಈ ಡ್ರೈವರ್ ಗಳು ಮಹಾ ಪುರುಷರಂತೆ ದೊಡ್ಡ ಹೀರೋ ನಂತೆ ಕಾಣುತ್ತಿದ್ದೆವು. ಸಾಮಾನ್ಯವಾಗಿ ಡ್ರೈವರ್ ಹೆಸರೇ ಬಸ್ಸಿಗೆ ಇರುತ್ತಿತ್ತು. ಈ ಡ್ರೈವರ್ ಗಳೋ ಬಹಳ ಸ್ನೇಹಪರರು. ಮಕ್ಕಳ ಬಗ್ಗೆ ಅಕ್ಕರೆ. ಅದರಲ್ಲೂ ಪೀರು ಸಾಹೇಬರು ಒರಟು ಮಾತನಾಡಿದರೂ ಬಹಳ ಸಜ್ಜನ ವ್ಯಕ್ತಿ. ನಾವು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರಬೇಕಾದರೆ ಬಸ್ಸು ಬರುವಾಗ ರಸ್ತೆಯ ಅಂಚಿನಲ್ಲಿದ್ದರೆ ಬಸ್ಸು ನಿಲ್ಲಿಸಿ ದೂರ ನಿಲ್ಲುವಂತೆ ಹೇಳುತ್ತಿದ್ದರು. ಈಗಿನ ಗಡಿಬಿಡಿಯ ಚಾಲಕರಿಗೆ ಇದಕ್ಕೆ ಪುರುಸೊತ್ತೆಲ್ಲಿದೆ. ಹಲವು ಸಲ ದೂರದ ವಿಟ್ಲ ಪುತ್ತೂರಲ್ಲಿ ಯಾರಿಗಾದರೂ ಏನಾದರೂ ಕೊಡಬೇಕಿದ್ದರೆ  ಅದನ್ನು ಕಟ್ಟಿ ಇವರಲ್ಲಿ ಕೊಟ್ಟರೆ ಸುರಕ್ಷಿತವಾಗಿ ಯಾರಿಗೆ ಸೇರಬೇಕೋ ಅವರಿಗೆ ಖರ್ಚಿಲ್ಲದೇ ಸೇರುತ್ತಿತ್ತು. ಈಗಲೂ ಅಲ್ಲೊಂದು ಇಲ್ಲೊಂದು ಈ ಬಗೆಯವರು ಇದ್ದಾರೆ.  ನನಗೆ ಈಗಲೂ ಉಪ್ಪಳ ಬಾಯಾರು ರಸ್ತೆಯ ತಿರುವುಗಳನ್ನು ನೋಡುವಾಗ ಗೋಪಾಲಣ್ಣ ಮಹಾಬಲ ಶೆಟ್ರು ಸಾಯಿಬರು ಬಸ್ಸು ತಿರುಗಿಸುತ್ತಿದ್ದದ್ದು ನೆನಪಿಗೆ ಬರುತ್ತದೆ. ಇವರೆಲ್ಲಾ ಒಂದೂ ಅವಗಢಕ್ಕೆ(ಆಕ್ಸಿಡೆಂಟ್) ಕಾರಣರಾದವರಲ್ಲ. ವಾಹನಗಳು ಕಡಿಮೆ ಇದ್ದರೂ ಇವರ ಚಾಲನೆಗೆ ಪ್ರಶಸ್ತಿ ಸಲ್ಲಬೇಕಿದೆ. ಪವರ್ ಸ್ಟೇರಿಂಗ್ ಇಲ್ಲದ ಆ ಹಳೆಯ ಬಸ್ಸುಗಳನ್ನು ಕಡಿದಾದ ತಿರುವು ರಸ್ತೆಯಲ್ಲಿ ಚಲಾಯಿಸುವುದು ಅಷ್ಟು ಸುಲಭವಲ್ಲ. ಬಾಲ್ಯದಲ್ಲಿ ಲಾರೀ ಮೂತಿಯ ಶಂಕರ್ ವಿಠಲ್ ಬಸ್ಸು ಸಂಚರಿಸುತ್ತಿದ್ದ ನೆನಪು ಈಗಲೂ ಇದೆ.

 

ಆಗಿನ ಕಾಲದಲ್ಲಿ ಬಸ್ಸುಗಳು ನಿಧಾನವಾಗಿ ಸಂಚರಿಸುತ್ತಿದ್ದವು ಬಸ್ ತುಂಬಿದ್ದರೆ ಉಪ್ಪಳದಿಂದ ಬಾಯಾರು ತಲಪುವುದಕ್ಕೆ ಒಂದು ತಾಸಿಗಿಂತಲೂ ಹೆಚ್ಚು ತೆಗೆದುಕೊಂಡ ಉದಾಹರಣೆಗಳು ಸಾಕಷ್ಟು ಇವೆ. ಆರು ಘಂಟೆಗೆ ಬರಬೇಕಾದ ಬಸ್ಸು ಏಳಾದರೂ ಬರುತ್ತಿರಲಿಲ್ಲ.  ನಮ್ಮ ಕಾಯರ್ ಕಟ್ಟೆಯ ಮಾಣಿಪ್ಪಾಡಿ ಗುಡ್ಡೆಯಲ್ಲಿ ನಿಂತರೆ ದೂರದ ಕನ್ಯಾನದಿಂದ ಬರುವ ಶಂಕರ್ ವಿಟ್ಟಲ್ ಬಸ್ಸು ಕಾಣುತ್ತಿತ್ತು. ಅಲ್ಲಿಂದ ಓಟ ಹಿಡಿದು ಚಪ್ಪಲಿ ಹೆಗಲಿಗೆ ಕಟ್ಟಿ ಪಂಚೆ ತಲೆಗೆ ಮುಂಡಾಸು ಸುತ್ತಿ ಬರೀ ಚಡ್ಡಿಯಲ್ಲೇ ಓಡುತ್ತಾ ಬಂದು   ಕಾಯರ್ ಕಟ್ಟೆಯಲ್ಲಿ ಬಸ್ಸು ಹತ್ತುವವರನ್ನು ಎಷ್ಟೋ ಸಲ ಕಂಡಿದ್ದೇನೆ. 

ಉಪ್ಪಳದಿಂದ ಬಾಯಾರು ವರೆಗೂ ಬಸ್ ಗೆ ಟಿಕೇಟ್ ಕೊಡುವುದಕ್ಕೆ ಅಲ್ಲಲ್ಲಿ ಏಜಂಟ್ ಗಳಿರುತ್ತಿದ್ದರು. ಉಪ್ಪಳದಲ್ಲಿ ಶೆಣೈಯವರು ಏಜಂಟ್ ಆಗಿದ್ದದ್ದು ಬಾಯಾರು ಪದವಿನಲ್ಲಿ ಗೋವಿಂದಣ್ಣ ಏಜಂಟ್ ಆಗಿದ್ದರು. ಪೈವಳಿಕೆ ಜೋಡುಕಲ್ಲು ಹೀಗೆ ಪ್ರತಿಯೊಂದು ಜಾಗದಲ್ಲೂ ಏಜಂಟ್ ಗಳು ಇರುತ್ತಿದ್ದರು.

 ಆಗ ತಿಂಗಳಿಗೊಮ್ಮೆಯೋ ವರ್ಷಕ್ಕೊಮ್ಮೆಯೋ ಬಸ್ಸಿನಲ್ಲಿ ದೂರದ ಮಂಗಳೂರಿಗೆ ಪಯಣಿಸುವುದೆಂದರೆ ಅದೆಷ್ಟು ಸಂಭ್ರಮ. ಸಂಜೆ ಹೋಗಬೇಕಿದ್ದರೆ ಬೆಳಗ್ಗೆಯೇ ಸ್ನಾನ ಮಾಡಿ ಪೌಡರ್  ಬಳಿದು ಕ್ರಾಪ್ ಮಾಡಿ  ಸಜ್ಜಾಗುತ್ತಿದ್ದೆವು.  ಆ ಸಂಭ್ರಮ ಈಗ  ಎಸಿ ಕಾರಲ್ಲಿ ಸಂಚರಿಸಿದರೂ ಸಿಗಲಾರದು. ಬಸ್ಸು ಹತ್ತಿ ಕಿಟಬಳಿಯಲ್ಲಿ ನಿಂತು ಹೊರಗೆ ಬೀಸುವ ಗಾಳಿಗೆ ಮುಖ ಒಡ್ಡಿ ಸಂಚರಿಸುತ್ತಿದ್ದರೆ ದಿಗ್ವಿಜಯದ ಅನುಭವ. ಮಳೆಬಂದರೆ ದಪ್ಪದ ಟರ್ಪಾಲು ಇಳಿಸಿದರೆ ಹೊರಗೆ ಕತ್ತಲೆಯೋ ಬೆಳಕೋ ಎಲ್ಲಿಗೆ ತಲುಪಿತೋ ಒಂದು ತಿಳಿಯುತ್ತಿರಲಿಲ್ಲ. ತೋರು ಬೆರಳಿಂದ ಟರ್ಪಾಲನ್ನು ತುಸು ಎತ್ತಿ ಇಣುಕುತ್ತಿದ್ದದ್ದು ಈಗಲೂ ನೆನಪಿಗೆ ಬರುತ್ತದೆ.

 ಹೆಚ್ಚಿನ ಎಲ್ಲ ಡ್ರೈವರ್ ಕಂಡಕ್ಟರ್ ಗಳಿಗೆ ನಮ್ಮ ಪರಿಚಯ ಇರುತ್ತಿತ್ತು. ಒಂದು ಸಲ ರಾತ್ರಿ ಕೊನೆಯ ಬಸ್ಸಿನಲ್ಲಿ ಉಪ್ಪಳದಿಂದ ಬಂದಾಗ ನಿದ್ರೆಗೆ ಜಾರಿದ್ದ ನಮ್ಮನ್ನು  ಪೈವಳಿಕೆ ತಲಪುವಾಗ ಕಂಡಕ್ಟರ್ ಎಬ್ಬಿಸಿ ಇಳಿಸಿದ್ದ ನೆನಪು ಮರೆಯುವುದಕ್ಕಿಲ್ಲ.  ಒಂದು ಸಲ ಶಂಕರ್ ವಿಟ್ಠಲ್ ಬಸ್ಸು ನಮ್ಮ ಮನೆಯಬಳಿಯೇ ಹಾಳಾಗಿ ಎರಡು ದಿನ ಇತ್ತು. ಆಗ ನಮ್ಮ ಮನೆಯಿಂದಲೇ ನೀರು ತಿಂಡಿ ತೆಗೆದುಕೊಂಡು ಕೊಟ್ಟದ್ದು ಒಂದು ಸಂಭ್ರಮ. ಕೆಟ್ಟು ನಿಂತ ಬಸ್ಸಿನಲ್ಲಿ ಕಣ್ಣು ಮುಚ್ಚಾಲೆ ಆಟ ಆಡಿದ್ದು...ಈಗ ಅಂತಹ ಗಮ್ಮತ್ತು ಯಾವ ಮಕ್ಕಳಿಗೆ ಸಿಗಬಹುದು?

  ಹಳ್ಳಿಯ ಬಸ್ಸುಗಳೆಂದರೆ ಗಡಿಯಾರದಂತೆ. ಜನಗಳು ಬೆಳಗಾಗುವುದನ್ನೂ ಹೊತ್ತು ಮಧ್ಯಾಹ್ನವಾಗುವುದನ್ನು ಬಸ್ಸು ಸಂಚಾರದಿಂದ ತಿಳಿಯುತ್ತಿದ್ದರು. ವಾಚ್ ಇಲ್ಲದೇ ಇದ್ದ ಜನಗಳಿಗೆ ಸಮಯ ತೋರಿಸಿಕೊಡುತ್ತಿದ್ದದ್ದು ಶಂಕರ್ ವಿಟ್ಠಲ್ ಬಸ್ಸುಗಳು.

 

ರಾತ್ರಿ ಉಪ್ಪಳದಿಂದ ಹೊರಡುವ ಬಸ್ಸಿನಲ್ಲಿ  ಡ್ರೈವರ್ ಕಂಡಕ್ಟರ್ ಗೆ ಹತ್ತಿರದ ಸತ್ಯನಾರಾಯಣ ಹೋಟೆಲಿನ ಹುಡುಗ ಊಟ ತಂದಿಡುತ್ತಿದ್ದ. ಈಗಿನ ಝೋಮೋಟೊ ಸ್ವೀಜಿ ಪಾರ್ಸೆಲ್ ಗಿಂತಲೂ  ಮೊದಲೇ ಉಪ್ಪಳದ ಸತ್ಯನಾರಾಯಣ ಹೋಟೆಲಿನವರು ಅಂದು ಪಾರ್ಸೆಲ್ ಮಾಡಿ ತೋರಿಸಿದ್ದರು. ಊಟವೂ ಚೆನ್ನಾಗಿ ಕಟ್ಟಿ ಕಳುಹಿಸಿಕೊಡುತ್ತಿದ್ದರು. 

ಮೂರು ನಾಲ್ಕು ಶಂಕರ್ ವಿಟ್ಠಲ್ ಬಸ್ಸು ಓಡುತ್ತಿದ್ದ ರಸ್ತೆಯಲ್ಲಿ ಬಣ್ಣ ಬಣ್ಣದ ಪೆರುವಡಿ ಮೋಟಾರ್ಸ್ ಎಂಬ ಬಸ್ಸು ಕನಿಯಾಲದಿಂದ ತಲಪಾಡಿಗೆ ಹೊಸದಾಗಿ ತನ್ನ ಓಡಾಟ ಆರಂಭಿಸಿತ್ತು. ಅದು ವರೆಗೆ ಮಂಗಳೂರಿಗೆ ಹೋಗುವಾಗ ಉಪ್ಪಳದಲ್ಲಿ ಇಳಿದು ತಲಪಾಡಿಗೆ ಬೇರೆ ಬಸ್ಸು ಹಿಡಿಯಬೇಕಿತ್ತು. ಹೀಗೆ ನಮ್ಮೂರಿಂದ ನೇರವಾಗಿ ತಲಪಾಡಿಗೆ ಬಸ್ಸು ಆರಂಭವಾಗಿದ್ದು ಬಾಲ್ಯದಲ್ಲಿ ಅದರಲ್ಲೆ ಸಂಚರಿಸುವುದೂ ಒಂದು ಸಂಭ್ರಮವಾಗಿತ್ತು. ಕ್ರಮೇಣ ಹಲವಾರು ಹೊಸ ಬಸ್ಸುಗಳು ಬಂದು, ತಾಸಿಗೊಂದು ಬಸ್ಸು ಇದ್ದ ರಸ್ತೆಯಲ್ಲಿ ಐದು ನಿಮಿಷಕ್ಕೊಂದು ಬಸ್ಸು ಸಂಚರಿಸಿ ಬಾಯಾರು ಉಪ್ಪಳ ರಸ್ತೆ ಒಂದು ನಗರ ಸಾರಿಗೆಯಂತೆ ಬದಲಾಗಿಬಿಟ್ಟಿತು.

 ಒಂದು ಕಾಲದಲ್ಲಿ ಜನರ ಜೀವನಾಡಿಯಾಗಿದ್ದ ಶಂಕರ್ ವಿಟ್ಠಲ್ ಬಸ್ಸುಗಳು ಕಾರಣಾಂತರದಿಂದ ಮಾಯವಾಗಿಬಿಟ್ಟಿತು. ರೂಟ್ ಸಹಿತ ಬಸ್ಸುಗಳನ್ನು ಬೇರೆಯವರಿಗೆ ಮಾರಾಟ ಮಾಡಲಾಯಿತು. ಬಸ್ಸುಗಳು ಎಷ್ಟೇ ಬಂದರೂ ಉಪ್ಪಳ ಬಾಯಾರು ಬಸ್ಸುಗಳು ತುಂಬಿದ ಪ್ರಯಾಣಿಕರಿಂದ ಸಂಚರಿಸುತ್ತಿತ್ತು.  ಕ್ರಮೇಣ ದೂರದ ಮಂಗಳೂರಿಗೂ ನೇರ ಬಸ್ಸು ಬಂತು. ತಿಂಗಳಿಗೊಮ್ಮೆ ಆಗುವ ಬಸ್ ಮುಷ್ಕರ, ಅದರೊಡನೆ ಹೋರಾಡುವ ಜನಸಾಮಾನ್ಯ ಅದೊಂದು ಕಾಲ ಎಂದಿದ್ದರೆ  ಕಾಲ ಬದಲಾದಂತೆ ಜನಜೀವನವೂ ಬದಲಾಗಿಬಿಟ್ಟಿತು. ಈಗ ಪ್ರತಿಮನೆಯಲ್ಲೂ ಒಂದೆರಡು ವಾಹನಗಳು ಬಂದಿವೆ. ಬಹಳಷ್ಟು ಮನೆ ಮುಂದೆ ಐಷಾರಾಮಿ ಕಾರುಗಳೂ ರಾರಾಜಿಸುತ್ತವೆ. ಜನಗಳಿಗೆ ಬಸ್ಸು ಅನಿವಾರ್ಯ ಎಂದೆನಿಸುವುದಿಲ್ಲ. ಏನಿದ್ದರು ನಮ್ಮ ಬಾಲ್ಯದ ಉಪ್ಪಳ ಬಾಯಾರು ಪಯಣ ಅದು ಮರೆಯುವುದಕ್ಕಿಲ್ಲ.

 

 

 

 

 


Monday, December 13, 2021

ಅಸ್ಪೃಶ್ಯತೆ ......

 

ಯಾವ ಸೀಟು ಖಾಲಿ ಇದೆ ಎಂದು ಬಸ್ ಹತ್ತಿದ ಕೂಡಲೇ ನೋಡುವುದಕ್ಕೆ ತೊಡಗುತ್ತೇವೆ. ಖಾಲಿ ಇದ್ದರೆ ಅಲ್ಲಿ ಬೇರೆ ಯಾರು ಕುಳಿತಿದ್ದಾರೆ ಎಂದು ಗಮನಿಸುತ್ತೇವೆ.ಅಲ್ಲಿ ಮೊದಲೇ ಕುಳಿತಿರುವ ವ್ಯಕ್ತಿ ಹೇಗಿದ್ದಾನೆ ಎಂದು ನೋಡುತ್ತೇವೆ. ನೋಡಿದಾಗ ಸ್ವಚ್ಛವಿಲ್ಲದ ಮೈಯೆಲ್ಲಾ ಕೊಳೆ ಇದ್ದುಕೊಂಡು ಮಲೀನ ವಸ್ತ್ರವೋ ಉಟ್ಟಿದ್ದರೆ, ಅಥವಾ ಮದ್ಯ ಸೇವಿಸಿ ವಾಸನೆ ಬರುತ್ತಿದ್ದರೆ, ಹೀಗೆ ನಮಗೆ ಅಸಹ್ಯವೆನಿಸುವ ಸ್ಥಿತಿಯಲ್ಲಿದ್ದರೆ ಆ ಸೀಟನ್ನು ಬಿಟ್ಟು ಮತ್ತೊಂದು ಸೀಟನ್ನು ಹಿಡಿಯುತ್ತೇವೆ. ಬೇರೆ ಯಾವ ಸೀಟು ಖಾಲಿ ಇಲ್ಲದೇ ಅದೊಂದೇ ಇದ್ದರೆ ಅನಿವಾರ್ಯ ಎನಿಸಿದರೆ ಕುಳಿತು ಬಿಡುತ್ತೇವೆ. ಅದೂ ಆ ಮಲೀನ ವ್ಯಕ್ತಿಯನ್ನು ಆದಷ್ಟು ಸ್ಪರ್ಶಿಸದೇ ಕುಳಿತು ಬಿಡುತ್ತೇವೆ. ಅದೂ ಸಾಧ್ಯವಾಗದಿದ್ದರೆ ಎದ್ದು ನಿಂತು ಬಿಡುತ್ತೇವೆ. ಯಾಕೆಂದರೆ ಇದು ವ್ಯಕ್ತಿಯ ಮೂಲಭೂತವಾದ ಸ್ವಾತಂತ್ರ್ಯ. ಹಲವು ಸಲ ಈ ಮೂಲಭೂತವಾದ ಸ್ವಾತಂತ್ರ್ಯ ಉಪಯೋಗಿಸುವುದೂ ಅಸ್ಪೃಶ್ಯತೆ ಎನಿಸಲ್ಪಟ್ಟರೆ ಹೇಗಿರಬಹುದು? ಈ ಚಿಂತನೆ ಮೇಲ್ನೋಟಕ್ಕೆ ಅಸ್ಪೃಶ್ಯತೆಯನ್ನು ಒಪ್ಪಿಕೊಳ್ಳುವಂತೆ ಅನಿಸಬಹುದು. 

ನಮಗೆ ಬೇಕಾದ ಆಹಾರ, ನಮಗೆ ಬೇಕಾದ ವ್ಯವಹಾರ , ನಮಗೆ ಬೇಕಾದ ಬಟ್ಟೆ ಬಂಗಾರ ಎಲ್ಲವನ್ನು ಬೇಕಾದಂತೆ ತೊಡುವ ಸ್ವಾತಂತ್ರ್ಯ ನಮಗಿದೆ. ಹಾಗೆ ನಮ್ಮನ್ನು ಯಾರು ಮುಟ್ಟಬಹುದು, ಯಾರು ಮುಟ್ಟಬಾರದು ಎಂಬ ನಿರ್ಧಾರವೂ ನಮ್ಮ ಮೂಲಭೂತ ಸ್ವಾತಂತ್ರ್ಯ. ನಮ್ಮ ಕೈ ಹಿಡಿದ ಹೆಂಡತಿಯಾದರೂ ಆಕೆಗೆ ಇಷ್ಟವಿಲ್ಲದೇ ಇದ್ದಾಗ ಮುಟ್ಟಿದರೆ ಸಿಡಿಮಿಡಿಗೊಳ್ಳುವುದಿಲ್ಲವೇ? ಇದು ವ್ಯಕ್ತಿ ಸ್ವಾತಂತ್ರ್ಯ. ಆದರೆ ಇಂದು ಅಸ್ಪೃಶ್ಯತೆ ಎಂಬ ವಾದ ಮೂಲಭೂತವಾದ ಸ್ವಾತಂತ್ರ್ಯದ ಪರಿಧಿಯನ್ನು ದಾಟುವಂತೆ ಭಾಸವಾಗುತ್ತದೆ. ನಮಗೆ ನಾವು ಸಸ್ಯಾಹಾರಿಗಳಾದರೆ ಅದೂ ಅಪಹಾಸ್ಯಕ್ಕೆ ಎರವಾಗುತ್ತದೆ. ಬಿಳಿ ಪಂಚೆ ಉಟ್ಟುಕೊಂಡು ಶಲ್ಯ ಹೊದ್ದುಕೊಂಡು ಮುಖಕ್ಕೆ ತಿಲಕವೋ ಭಸ್ಮವೋ ಬಳಿದುಕೊಂಡು ಬಂದರೆ ಅದೂ ಅಪಹಾಸ್ಯ ಮಾತ್ರವಲ್ಲ ನಿಯಮ ಬಾಹಿರವೂ ಆಗಿಬಿಡುತ್ತದೆ. ಯಾಕೆ ಇವುಗಳೆಲ್ಲ ಹಕ್ಕು ಬಾಧ್ಯತೆಯ ಉಲ್ಲಂಘನೆಯಾವುದಿಲ್ಲ? 

ನಮ್ಮ ಸಮ್ಮತಿ ಇಲ್ಲದೇ ನಮ್ಮನ್ನು ಸ್ಪರ್ಶಿಸುವ ಅಧಿಕಾರ ಒಬ್ಬನಿಗೂ ಇಲ್ಲ. ಜನಜಂಗುಳಿ ಇದ್ದಾಗ ನಾವು ನಮ್ಮನ್ನು ಸ್ಪರ್ಶಿಸಿದರೂ ಆಗಬಹುದು ಎಂದು ಒಪ್ಪಿಕೊಂಡು ಜನಜಂಗುಳಿಯೊಳಗೆ ನುಸುಳಬಹುದು. ಅದಿಲ್ಲದೇ ನನ್ನನ್ನು ಯಾರೂ ಮುಟ್ಟುವುದು ನನಗಿಷ್ಟವಿಲ್ಲ ಎಂದು ಏಕಾಂತದಲ್ಲಿ ಕುಳಿತರೆ ಅದು ಅಸ್ಪೃಶ್ಯತೆ ಎನಿಸಬಹುದೇ? ಹೀಗೆ ಜಿಜ್ಞಾಸೆ ಹುಟ್ಟಿಕೊಳ್ಳುತ್ತದೆ. ನನಗೆ ಎಂದಲ್ಲ ಹಲವರಿಗೂ ಅದೊಂದು ರೀತಿಯ ಸ್ವಭಾವ ಪ್ರಜ್ಞೆ ಇರುತ್ತದೆ. ಗಲೀಜು ಇದ್ದರೆ ನಮ್ಮವರೇ ಆದರೂ  ನಾವು ಮುಟ್ಟುವುದಕ್ಕೆ ಹಿಂಜರಿಯುತ್ತೇವೆ. ಮಕ್ಕಳೋ ಆತ್ಮೀಯರೋ ಇನ್ನಾರೋ ಆದರೆ  ಹೋಗಿ ಸ್ನಾನ ಮಾಡಿ ಬಾ ಅಂತ ಗದರುತ್ತೇವೆ. ಯಾಕೆ ಈ ಹೇಸಿಕೆ ಎಂಬ ಅನಿಸಿಕೆ ಅಪರಾಧವಾಗುತ್ತದೆ? 

ನಮ್ಮೂರಿನ ಹಳ್ಳಿಯ ದೇವಸ್ಥಾನಗಳಲ್ಲಿ ಅರ್ಚಕ ನದಿಯಲ್ಲೋ ಕೆರೆಯಲ್ಲೋ ಸ್ನಾನ ಮಾಡಿ,  ಅದೇ ಮತ್ತೆ ಯಾರೂ ತನ್ನನ್ನು ಮುಟ್ಟದಂತೆ ಶುದ್ಧಾಚಾರದಿಂದ ಗರ್ಭಗುಡಿಯೊಳಗೆ ಹೋಗುತ್ತಾನೆ. ಆಧುನಿಕ ಜಗತ್ತಿನಲ್ಲಿ, ಸಾರ್ವಜನಿಕ ನಿಯಮದಲ್ಲಿ ಇದೂ ಅಸ್ಪೃಶ್ಯತೆ ಎನಿಸಲ್ಪಡಬಹುದು. ಒಂದು ಗಮನಿಸಬೇಕು. ಇಲ್ಲಿ ಅರ್ಚಕ ತನ್ನ ಮನೆಯವರೇ  ಬಂದರೂ ಸಹ ದೂರ ನಿಲ್ಲುವಂತೆ ಹೇಳುತ್ತಾನೆ. ಇಲ್ಲಿ ಜಾತಿಯಿಂದಲೋ ಧರ್ಮದಿಂದಲೋ ದೂರ ಆಗದೇ ಇರಬಹುದು. ಆದರೂ ಬೇರೆ ಧರ್ಮದವನೋ ಅನ್ಯನೋ ಸ್ನಾನ ಮಾಡಿ ಶುಧ್ಧದಲ್ಲಿ ಬಂದರೆ ಮುಟ್ಟಬಹುದೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಇಲ್ಲೂ ಮೂಲಭೂತವಾದ ಸ್ವಾತಂತ್ರ್ಯ ಎಂಬುದಿದೆ. ನಾವು ಸಂಧ್ಯೆಗೋ ಧ್ಯಾನದಲ್ಲೂ ಕುಳಿತಿರಬೇಕಾದರೆ , ನಮ್ಮಲ್ಲಿ ಏಕಾಗ್ರತೆ ಮೂಡಬೇಕಾದರೆ ನಮ್ಮ ಪ್ರಭಾ ವಲಯ ಎಂಬುದೊಂದು ಇದೆ. ಅದರ ಒಳಗೆ ಇನ್ನೊಬ್ಬರು ಅತಿಕ್ರಮಿಸಬಾರದು. ಯೋಗಾಭ್ಯಾಸದಲ್ಲಿ ಈ ನಿಯಮ ಖಡ್ಡಾಯವಾಗಿ ಪಾಲಿಸಬೇಕು.  ಇಲ್ಲವಾದಲ್ಲಿ ಏಕಾಗ್ರತೆ  ಪರಿಪೂರ್ಣವಾಗಿ ಸಿದ್ಧಿಯಾಗುವುದಿಲ್ಲ. ಮನಸ್ಸು ಚಂಚಲವಾಗುತ್ತದೆ.    ಸೂಕ್ಷ್ಮವಾಗಿ ನಮ್ಮ ಏಕಾಗ್ರತೆಯನ್ನು ನಾವು ಕಳೆದುಕೊಳ್ಳುತ್ತೇವೆ ಎಂದಿದ್ದರೆ ಅದು ಭಗವಂತನಿಗೆ ಮಾಡಿದ ಅಪಚಾರವಾಗುತ್ತದೆ. ಯಾಕೆಂದರೆ ನಮ್ಮ ಭಾವದಲ್ಲಿ ಪರಮಾತ್ಮ ಎಂಬುದರಲ್ಲಿ  ಒಂದು ಪವಿತ್ರತೆ ಇರುತ್ತದೆ.  ಇದೆಲ್ಲ ಅಸ್ಪೃಶ್ಯತೆ ಎಂದು ಪರಿಗಣಿಸಿದರೆ ಮೂಲಭೂತವಾದ ಸ್ವಾತಂತ್ರ್ಯ ಎಂಬುದಕ್ಕೆ ಅರ್ಥ ಇರುವುದಿಲ್ಲ. 

ನನ್ನದೇ ಮನೆಯಲ್ಲಿ ಸ್ನಾನ ಮಾಡಿ ದೇವರ ಪೂಜೆಗೆ ಅಣಿಯಾಗುವಾಗ ಮನೆಯವರೇ  ಆದರೂ  ನನ್ನನ್ನು ಸ್ಪರ್ಶಿವುದನ್ನು ನಾನು ಬಯಸುವುದಿಲ್ಲ. ಏನೋ ಒಂದು ಮಲೀನವಾದ ಭಾವ ಮನಸ್ಸಿಗೆ ಬಂದು ಬಿಡುತ್ತದೆ. ಪ್ರತಿ ಪೂಜೆಯಲ್ಲಿ ಯಾವುದೇ ಕ್ರಿಯೆಯ ಆರಂಭದಲ್ಲಿ ಮತ್ತು ನಂತರ ಆಚಮನ ಎಂದು ಆಚರಿಸುತ್ತೇವೆ. ಪರಮಾತ್ಮನ ಸ್ಮರಣೆಯಲ್ಲಿ ಇದನ್ನು ಆಚರಿಸುವ ಉದ್ದೇಶವೆಂದರೆ, ನಮ್ಮನ್ನು ನಾವು ಪರಿಶುದ್ಧಗೊಳಿಸುವುದು. ಯಾವುದೇ ಪೂಜೆ ಆರಾಧನೆಯ ಆರಂಭವಾಗುವುದೇ ಆಚಮನ ಪ್ರಾಣಾಯಾಮದಿಂದ. ಯಾಕೆಂದರೆ ಮುಂದಿನ ಕ್ರಿಯೆಗೆ ನಮ್ಮನ್ನು ನಾವು ಶುಚಿಗೊಳಿಸುವುದು. ಸ್ನಾನಾದಿಗಳನ್ನು ಮಾಡಿ ಸ್ವಚ್ಛವಾಗಿದ್ದರೂ ಸಹ ಅಚಮನ ಪ್ರಾಣಾಯಾಮ ಮಾಡದೇ ಮತ್ತಿನ ಕ್ರಿಯೆ ಅಸಾಧುವಾಗುತ್ತದೆ. ಪರಮಾತ್ಮನೊಂದಿಗಿನ  ನಮ್ಮ ಸಂಬಂಧ ಅತ್ಯಂತ ಪವಿತ್ರವಾಗಿರಬೇಕಾರುತ್ತದೆ. ಇಲ್ಲಿಯ ಪಾವಿತ್ರ್ಯತೆ  ದೇಹದಿಂದಲೂ ಮನಸ್ಸಿನಿಂದಲೂ ಶುದ್ಧಿಯಾಗಿರಬೇಕೆಂಬುದೇ ಆಗಿರುತ್ತದೆ.  ವಾಸ್ತವದಲ್ಲಿ ಪರಮಾತ್ಮ ನಾಮ ಸ್ಮರಣೆಯಿಂದ ನಮ್ಮ ಜೀವಭಾವವನ್ನು ತೊರೆದು ಪರಿಶುದ್ದಾತ್ಮರಾಗಿ ಮೋಕ್ಷವನ್ನು ಸಾಧಿಸುವುದೇ ಮನುಷ್ಯನ ಜನನದ ಗುರಿಯಾಗಿರುತ್ತದೆ. ಹುಟ್ಟಿದ ಜೀವಿ ಪರಮಾತ್ಮನಲ್ಲಿ ಐಕ್ಯವಾಗಬೇಕಾದರೆ ಎಲ್ಲಾ ಪಾಪ ಕರ್ಮಂದಿದ ಮುಕ್ತರಾಗಿ ಶುಚಿಗೊಂಡು ಪಾವನರಾಗಿ ಪರಮಾತ್ಮನನ್ನು ಸೇರಬೇಕು. ಇದನ್ನೇ ಮೋಕ್ಷ ಎನ್ನುವುದು.   ಈ ಪರಿಶುದ್ಧೀ ಭಾವವೇ ನಮ್ಮನ್ನು ಕಲ್ಮಶವನ್ನು ಸ್ಪರ್ಶಿಸದಂತೆ ತಡೆಯುತ್ತದೆ. ನಾವು ಕಲ್ಮಶರಾಗುವುದೆಂದರೆ ಪಾಪವನ್ನು ಸುತ್ತಿಕೊಂಡಂತೆ.  ಇಲ್ಲೆಲ್ಲ ಇದು ಅಸ್ಪೃಶ್ಯತೆ ಎಂಬ ದೃಷ್ಟಿಯಿಂದ ಕಾಣಬಹುದೇ ಎಂಬ ಯೋಚನೆ ಸಹಜವಾಗಿ ಬರುತ್ತದೆ.

     ಅಸ್ಪೃಶ್ಯತೆ ಎಂಬುದು ಮೌಢ್ಯ ಕಂದಾಚಾರ ಎಂಬುದು ಸತ್ಯ. ಜಾತಿ ಧರ್ಮದಿಂದ ಇನ್ನೊಬ್ಬನನ್ನು ಅವಮಾನಿಸುವುದು ಮಹಾಪರಾಧ. ಜಾತಿ ಧರ್ಮ ಎಂಬುದು ಅದು ಪರಮಾತ್ಮನ ಕಡೆಗಿರುವ ಹಾದಿಗಳು ಎಂಬುದನ್ನು ತಿಳಿಯದಿರುವುದೇ ಮೌಢ್ಯವಾಗಿದೆ. ಜಾತಿ ನಿಂದನೆ ಪರೋಕ್ಷದಲ್ಲಿ ಪರಮಾತ್ಮ ನಿಂದನೆಯೇ ಆಗಿರುತ್ತದೆ. ಜಾತಿ ಧರ್ಮದ ಪರಮ ಗುರಿಯನ್ನು ತಿಳಿಯದೇ ಜಾತಿ ಭೇದ ಹುಟ್ಟಿಕೊಳ್ಳುತ್ತದೆ. ಜಾತಿ ಎಂಬುದು ಸರಿಯೆ,    ಅದು ಸರಿದರೆ ಮನುಷ್ಯ ಮಾತ್ರ ಉಳಿದುಕೊಳ್ಳುತ್ತಾನೆ. ಮಾವಿನ ಮರ ತನ್ನಲ್ಲಿ ಸೇಬು ಹಣ್ಣು ಏಕೆ ಆಗಲಿಲ್ಲ ಎಂದು ಚಿಂತಿಸುವುದಿಲ್ಲ. ಅಥವಾ ತನ್ನದೇ ಹಣ್ಣು ಶ್ರೇಷ್ಠ ಅಂತ ಹೇಳಿಕೊಳ್ಳುವುದಿಲ್ಲ. ಮನುಷ್ಯ ಮಾತ್ರ ಅದರ ಶ್ರೇಷ್ಠತೆಯನ್ನು ತನಗೆ ಬೇಕಾದಂತೆ ಗುರುತಿಸುತ್ತಾನೆ. ಜಾತಿ ಎಂಬುದು ಶ್ರೇಷ್ಠವಲ್ಲ. ಅದರಲ್ಲಿರುವ ತತ್ವ ಶ್ರೇಷ್ಠವಾಗಿರುತ್ತದೆ.  ಜಾತಿಯಿಂದ ಕೀಳಾಗಿ ಕಾಣುವುದು ವ್ಯಾಧಿ ಎನಿಸಿಕೊಳ್ಳುತ್ತದೆ. 

ಅಷ್ಟಾಂಗ ಯೋಗದಲ್ಲಿ ಶೌಚವೂ ಒಂದು ಪ್ರಧಾನ ನಿಯಮ. ಯೋಗವೆಂದರೆ ನಮ್ಮನ್ನು ನಾವು ಶುದ್ಧಿಗೊಳಿಸುವುದು. ನಮಗೆ ನಾವು ಪರಿಶುದ್ಧರಾಗಿರಬೇಕು. ಅದು ಕೇವಲ ದೇಹದಿಂದ ಮಾತ್ರ ಇದ್ದರೆ ಸಾಲದು. ನಮ್ಮ ಮನಸ್ಸೂ ಶುದ್ಧವಾಗಿರಬೇಕು. ಪರಿಶುದ್ಧವಾದ ಉಸಿರಿನಿಂದ ದೇಹವೂ ಶುದ್ಧವಾದರೆ, ಸಚ್ಚಿಂತನೆ, ಸದ್ಭಾವನೆ ಮುಂತಾದವುಗಳಿಂದ ಮನಸ್ಸು ಶುದ್ಧವಾಗುತ್ತದೆ. 

ಅಸ್ಪ್ರಶ್ಯತೆ, ಜತೆಯಲ್ಲಿ ತಿಂದುಂಡು ಮಲಗಿದರೆ ದೂರವಾಗುವುದಿಲ್ಲ. ಮನಸ್ಸು ಪ್ರಚೋದಿಸಲ್ಪಡಬೇಕು. ಆಗ ತಿಂದುಂಡು ಮಲಗುವುದು ಮುಖ್ಯವಾಗುವುದೇ ಇಲ್ಲ.  ಮನಸ್ಸು ಕಲ್ಮಶವಾಗಿದ್ದರೆ ಅಂತರ್ಜಾತಿಯ ವಿವಾಹದಿಂದಲೂ ಅಸ್ಪೃಶ್ಯತೆ ದೂರವಾಗುವುದಿಲ್ಲ.  ಹಿಂದೂ ಧರ್ಮದಲ್ಲಿ ವಿವಾಹ ಎಂಬುದು ಒಂದು ಸಂಸ್ಕಾರ ವಿಧಿ. ಸಂಸ್ಕಾರ ಎಂದರೆ ಪರಮಾತ್ಮನ ಬಳಿಗೆ ಹೋಗುವ ಹಾದಿ. ಆ ಹಾದಿಯಲ್ಲಿ ಸಹಧರ್ಮಿಣಿಯಾಗಿ ಬರುವವಳು ತಾನು ನಡೆಯುವ ಧರ್ಮವನ್ನು ಅರಿತು ಅದರಲ್ಲಿ ಜತೆಗೆ ಹೆಜ್ಜೆ ಇಡುವುದಕ್ಕೆ ಸಹಕರಿಸಬೇಕು 

ನಾವು ಸ್ವಚ್ಛವಾಗಿರುವ. ಆದರೆ ಮತ್ತೊಬ್ಬರ ಸ್ವಚ್ಛತೆಯನ್ನು ಅಳೆಯದೇ ಇರೋಣ. ನಮ್ಮಿಂದ ಯಾರಾದರೂ ಸ್ವಚ್ಛವಾಗಿದ್ದರೆ ಮತ್ಸರಿಸದೇ ಅವರ ಪಾಡಿಗೆ ಬಿಡೋಣ. ತಿನ್ನುವುದರಲ್ಲಿ ಉಣ್ಣುವುದರಲ್ಲಿ ತೊಡುವುದರಲ್ಲಿ ಅಥವಾ ಸ್ಪರ್ಶಿಸುವುದರಲ್ಲಿ ಮುಕ್ತವಾಗಿದ್ದರೆ ಅಸ್ಪೃಶ್ಯತೆ ದೂರವಾಗದು. ಮನಸ್ಸು ಸ್ವಚ್ಛವಾಗಿರಬೇಕು. ನಮ್ಮ ನಡೆ ನುಡಿಗಳು ಸ್ವಚ್ಛವಾಗಿ ಶುದ್ಧ ಸಂಸ್ಕಾರ ನೆಲೆ ನಿಲ್ಲಬೇಕು.