Saturday, May 27, 2017

ಹರಸು ಎನ್ನುವ ಬದಲು ಕ್ಷಮಿಸು ಎನ್ನಲೇ?


ಮಧ್ಯಾಹ್ನದ ಊಟ ಮಾಡಿ ತುಸು ಸುಧಾರಿಸಿಕೊಂಡು  ಮೊದಲೇ ಸಿದ್ದ ಪಡಿಸಿದ ಬ್ಯಾಗ್ ನ್ನು ಅಂಗಳದಲ್ಲಿರಿಸಿದೆ. ಅದು ಹೊರಡುವ ಸೂಚನೆ. ನಂತರ  ಒಳಗೆ ಹೋಗಿ ಎಲ್ಲರಿಗೂ ಒಂದು ಸಲ ವಿದಾಯ ಹೇಳುತ್ತೇನೆ.  ಬಂದು ಹೋದ ನಡುವಿನ ಘಳಿಗೆ ಸಂದುದೇ ಅರಿವಿಲ್ಲ.  ಬದುಕೇ ಹಾಗೆ,   ಕಾಲವದು ನಿಂತು ಬಿಡುತ್ತದೆ ಎಂಬ ಭ್ರಮೆಯಲ್ಲೇ ಬದುಕನ್ನು ಕಳೆದಿರುತ್ತೇವೆ. ಆದರೆ ಸ್ವಾಧೀನವಿಲ್ಲದ ಕಾಲ ನಮಗೆ ಭ್ರಮೆಯನ್ನು ಹುಟ್ಟಿಸುತ್ತಾ ನಮ್ಮ ಕೈ ನುಸುಳಿ ಸರಿದು ಹೋಗಿರುತ್ತದೆ.

 ಮನೆ ಮಂದಿಯಲ್ಲಿ ಕೆಲವರು ಅಂಗಳಕ್ಕೆ ಬಂದರೆ ಇನ್ನು ಕೆಲವರು ಕಿಟಿಕಿಯಿಂದ ಇಣುಕಿ ಕಣ್ಣಲ್ಲೇ ಕೈ ಆಡಿಸಿಬಿಡುತ್ತಾರೆ. ಎಲ್ಲರೀಗೂ ವಿದಾಯ ಹೇಳಿದ ಮೇಲೆ  ತಕ್ಕಡಿಯ  ಎರಡೂ ಬದಿಯ ತಟ್ಟೆಯಲ್ಲಿ ಹೃದಯಗಳನ್ನು ಇಟ್ಟು ತೂಗಿದಂತೆ ಒಂದು ಸಲ ಅವರ ಹೃದಯ ಭಾರವಾದರೆ ಇನ್ನೊಮ್ಮೆ ನಮ್ಮ ಹೃದಯದತ್ತ ಭಾರ ವಾಲುತ್ತದೆ. ಇನ್ನೇನು ಚಪ್ಪಲಿ ಧರಿಸಿ ಹೊರಡಬೇಕೆನ್ನುವಾಗ ಮುಖ್ಯ ಕೆಲಸವೊಂದು ನೆನಪಾಗುತ್ತದೆ. ಅಲ್ಲೇ ಕಣ್ಣು ತೇವ ಮಾಡಿಕೊಂಡು ಇಲ್ಲದ ನಗುವನ್ನು ತಂದು ಕೊಂಡು ಇದ್ದ ಹಿರಿಯ ಜೀವವೊಂದು,    ಹಾಗೆ ಹೇಳಿದರೆ ಸಾಲದು ಅದನ್ನು ಚೇತನ ಎಂದೇ ಹೇಳಬೇಕು  ಮೌನವಾಗಿ ನಿಂತಿರುತ್ತದೆ. 

ಸಾಮಾನ್ಯವಾಗಿ ಹಿರಿಯರಲ್ಲಿ ಗೌರವವಾದರ ಇದ್ದರೂ ಕಾಲಿಗೆರಗುವುದು ದೈವೀ ಭಾವವನ್ನು ಕಂಡಾಗ ಮಾತ್ರ.  ಹಾಗೆ ನಮಸ್ಕರಿಸುವ ಪ್ರಚೋದನೆಯನ್ನು ತರುವ ವ್ಯಕ್ತಿಗಳು ಬದುಕಿನಲ್ಲಿ ನಿತ್ಯ ಚೇತನರಾಗಿಬಿಡುತ್ತಾರೆ. ಎಲ್ಲರ ಬದುಕಿನಲ್ಲೂ ತಿಳಿದೋ ತಿಳಿಯದೆಯೋ ಈ ಬಂಧನ ಬೆಸೆದಿರುತ್ತದೆ. ಹಲವರ ಜೀವನದಲ್ಲಿ ಇಂತಹಾ ವ್ಯಕ್ತಿಗಳ ದರ್ಶನವಾಗುತ್ತದೆ. ಕೆಲವು ವ್ಯಕ್ತಿಗಳು ಗೌರವಾದರಕ್ಕೆ ಕಾರಣಾಗುತ್ತಾರೆ. ಆದರೆ ಈ ಗೌರವಾದರಗಳಲ್ಲೂ ಕೆಲವು ಕೇವಲ ಕರನಮನಕ್ಕೆ ಮಾತ್ರ ಸೀಮಿತವಾದರೆ ಕೆಲವರು ಅದ್ವಿತೀಯವಾದ ಭಾವ ಪ್ರಚೋದನೆಯನ್ನು ಮೂಡಿಸುತ್ತಾರೆ. ಅವರ ಪಾದನಮನಕ್ಕೆ ಶರೀರ ಸಹಜವಾಗಿ ಬಾಗಿಬಿಡುತ್ತದೆ.

ಇಪ್ಪತ್ತು ಇಪ್ಪತ್ತೈದು ವರ್ಷಗಳ ಹಿಂದೆ ನಮ್ಮದು ಬಡತನವಲ್ಲದೇ ಇದ್ದರೂ ಸಿರಿವಂತಿಗೆ ಮಾತ್ರ ಇರಲಿಲ್ಲ. ನಾಳೆಯದು ಹೇಗೆ ಎನ್ನುವುದಕ್ಕೆ ಕೈ ತೋಳುಗಳಲ್ಲಿ ಉಕ್ಕುತ್ತಿದ್ದ ಶಕ್ತಿಯೇ ಉತ್ತರ ಹೇಳುತ್ತಿದ್ದರೆ ಆತ್ಮ ಸ್ತೈರ್ಯ ಅದಕ್ಕೆ ಬೆಂಬಲವನ್ನು ಕೊಡುತ್ತಿತ್ತು.  ರಕ್ತ ಬಿಸಿ ಏರುತ್ತಿದ್ದ ದಿನಗಳವು.

ಹಲವರು ಹೇಳುವುದುಂಟು “ಯಾರು ಬಂದರೇನು ಹೋದರೇನು ನಮ್ಮ ಹೊಟ್ಟೆಗೆ ನಾವೇ ದುಡಿಯಬೇಕು.”  ದುಡಿಯುವುದು,  ಅದೂ ಸಹ ತನ್ನ ಹೊಟ್ಟೆಗಾಗಿ  ಮನುಷ್ಯನಿಗೆ ಇಷ್ಟವಿರುವುದೇ ಇಲ್ಲ. ಯಾರದೋ ದುಡಿಮೆ ಅನುಭವಿಸುವ ಹಂಬಲ.  ಆದರೆ ಆಗಿನ ಅಂತಹ ಬಡತನ ಕಲಿಸಿದ ಪಾಠ ಒಂದೇ ಅದು ದುಡಿಯಬೇಕು. ಅದೂ ಸಹ ಪ್ರಾಮಾಣಿಕವಾಗಿ. ಪ್ರಾಮಾಣಿಕ ದುಡಿಮೆಯ ಫಲದಲ್ಲಿ ಮಾನಸಿಕವಾಗಿ ನಾವೇ ಪೂರ್ಣ ಹಕ್ಕುದಾರರಾಗಿರುತ್ತೇವೆ.  ಇಲ್ಲವಾದರೆ ಮನಸ್ಸಿನ ಯಾವುದೋ ಮೂಲೆಯಲ್ಲಿ ಮುಳ್ಳೊಂದು ಚುಚ್ಚಿದ ಅನುಭವ. ತಿಂದರೂ ತೇಗಿದರೂ ಪೂರ್ಣವಾಗಿ ಅನುಭವಿಸಿದ ತೃಪ್ತಿ ಸಿಗುವುದಿಲ್ಲ. ಯಾರದೋ ಹೊಸತಾದ ಉಡುಗೆ ತೊಡುಗೆಯನ್ನು ಧರಿಸಿ ಮೆರೆದ ಹಾಗೆ. ಬಿಡಿಗಾಸಿನ ದುಡಿಮೆಗೂ ನಮ್ಮಲ್ಲಿ ಅಭಿಮಾನವಿರುತ್ತದೆ.

ಇಂತಹ ಮಧ್ಯಮ ಬಡತನದಲ್ಲಿ ಈ ಹಿರಿಯ ಜೀವದ ಪ್ರವೇಶವಾಗುತ್ತದೆ. ಅದಾವ ಅನುಬಂಧವೋ ಎನ್ನುಂತೆ ಬೆಳೆಯುತ್ತದೆ. ಕೈ ಹಿಡಿದು ಮುಂದೇ ಕರೆದೊಯ್ದರೆ ಹಿಂದೆ ಹೋಗುವುದಕ್ಕೆ ಅದೇನೋ ಅಳುಕು. ಹಿಂಜರಿತ.   ಆದರೂ ಮುಂದೆ ಮುಂದೆ  ನಡೆಸಿದ ಆ ವ್ಯಕ್ತಿಯ  ಹುಮ್ಮಸ್ಸು ಅದನ್ನು  ಮರೆಯುವುದಕ್ಕೆ ಉಂಟೆ?  ಜೀವನದಲ್ಲಿ ಆತ್ಮವಿಶ್ವಾಸ ಮೂಡುವುದು ಇಂತಹ ವಿಷಯಗಳಿಂದಲೇ.  ಸಾಮಾನ್ಯಾವಾಗಿ ಮದುವೆಯಾಗುವ ಹೆಣ್ಣಾಗಲೀ ಹೆಣ್ಣಿನ ಹೆತ್ತ ತಾಯಿ ತಂದೆಯಾಗಲೀ ಗಂಡಿನ ಆರ್ಥಿಕ ಮಟ್ಟವನ್ನು ಮೊದಲು ನೋಡುತ್ತಾರೆ. ಯಾಕೆಂದರೆ ಮೊದಲು ಕಣ್ಣಿಗೆ ಕಾಣುವ ಸತ್ಯವದು. ಆನಂತರವೆ ಮಾನಸಿಕ ನೆಲಗಟ್ಟು ಸ್ವಭಾವ ಇತ್ಯಾದಿಗಳು ಗಮನಕ್ಕೆ ಬರುವುದು. ಹಲವು ಸಲ ಮೊದಲಿನದ್ದು ಅಂದರೆ ಆರ್ಥಿಕ ಮಟ್ಟ,  ಅದು ಬಿಟ್ಟುಳಿದವುಗಳೆಲ್ಲ ಗೌಣವಾಗಿಬಿಡುತ್ತವೆ. ಗಂಡಿನ ಗುಣ ನಡತೆ ಅರಿವಿಗೆ ಬರಬೇಕಾದರೆ ತುಸುವಾದರೂ ಬೆರೆಯುವ ಅವಶ್ಯಕತೆ ಇರುತ್ತದೆ. ನನ್ನ ವಿಚಾರದಲ್ಲಿ ಮೊದಲಿನದ್ದು ಇಲ್ಲ ಎರಡನೆಯದ್ದರ ಪರಿಯಚಯ ಆಗುವುದಕ್ಕೆ ಸಾಧ್ಯವೇ ಇಲ್ಲ. ಆದರೂ ಆದರೂ ನನ್ನ ಕೈ ಹಿಡಿದು ಎಳೆದೊಯ್ದರು. ಅದೆಂತಹ ಹಿಡಿತ ? ಭದ್ರವಾದ ಬಿಗಿ ಹಿಡಿತ. ಇಂದಿಗೂ ಅದರಿಂದ ಬಿಡಿಸಿಕೊಳ್ಳುವುದಕ್ಕೆ ಮನಸ್ಸು ಒಪ್ಪುವುದಿಲ್ಲ. ಅಂತಹ ಆತ್ಮೀಯ ಸ್ಪರ್ಶ. ಇದನ್ನೇ ದೈವಾನುಗ್ರಹ ಎನ್ನಬಹುದೇ?

ಆರಂಭದಲ್ಲಿ ಒಂದು ಸಲ ಹೇಳಿದ್ದೆ ನನ್ನ ಮನೆ ಚಿಕ್ಕದು  ಜಾಗವಿಲ್ಲ. ಕರೆಂಟಿಲ್ಲ. ನೀರಿಲ್ಲ. ಹಲವು ಇಲ್ಲಗಳು ಮನೆಯಲ್ಲಿ ಸರದಿಯಲ್ಲಿ ಬಂದಿತ್ತು. ಆಗ ಅವರೆಂದ ಮಾತು ಈಗಲೂ ನೆನಪಿದೆ “ ರಾಜ, ನೀವು ಯಾವುದು ಕೊಡದೇ ಇದ್ದರೂ ಅಡ್ಡಿ ಇಲ್ಲ. ಕಣ್ಣೀರು ಒಂದು ಕೊಡದೇ ಇದ್ದರೆ ಸಾಕು. ತಿಳಿ ಗಂಜಿಯಲ್ಲಿ ಮಿಕ್ಕೆಲ್ಲವನ್ನೂ ಪಡೆಯಬಹುದು. “  ಎಂತಹ ಸರಳವಾದ ವೇದಾಂತ ಅಂತ ಅನ್ನಿಸಿತು.  ಇಂದಿಗೂ ನನ್ನಾಕೆಯ ಕಣ್ಣು ತೇವವಾದಾಗ ಈ ವೇದಾಂತ ನೆನಪಾಗುತ್ತದೆ. ಆಕೆಯ ಮುಖ ನನ್ನ ಬೊಗಸೆಯೊಳಗೆ ಬರುತ್ತದೆ. ಗಂಡ ಹೆಂಡತಿಯನ್ನು ನೋಡುವುದಕ್ಕೆ, ಹೆಂಡತಿ ಗಂಡನನ್ನು ಗಮನಿಸುವುದಕ್ಕೆ ಈ ಗಮನಿಸು ಎಂದು ಹೇಳುವುದಕ್ಕೆ ಬಹಳ ಅರ್ಥವಿದೆ. ಅದಕ್ಕೆ ಯಾವ ಸಿ. ಸಿ. ಕ್ಯಾಮೆರಾದ ಅವಶ್ಯಕತೆಯಿಲ್ಲ. ಇಂತಹ ಭಾವಾನಾತ್ಮ ವಿಶ್ವಾಸ ಇದ್ದರೆ ಸಾಕು. ಒಳಗಣ್ಣಿನ ಸಿ ಸಿ ಯಿಂದ ಯಾವ ಮನುಷ್ಯನೂ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ.

ಇಷ್ಟೆಲ್ಲ ಹೇಳುವಾಗ ಈಗ ಚಿತ್ರಣ ಸ್ವಲ್ಪ ಸ್ಪಷ್ಟವಾದ ಹಾಗೆ ಕಾಣಬಹುದು. ಹೌದು ಇದು ನನ್ನ ಗ್ರಹಸ್ಥಾಶ್ರಮ ಪ್ರವೇಶದ ಕಥೆ. ಹೇಳುವುದಕ್ಕೆ ಬಹಳಷ್ಟಿದೆ. ಆದರೆ ಅದನ್ನು ಸ್ವಲ್ಪವಾಗಿ ಹಂಚಿದಾಗಲೇ ರುಚಿ ಹೆಚ್ಚು.

ಹೋಗಿ ಕಾಲಿಗೆ ನಮಸ್ಕರಿಸುತ್ತೇನೆ. ಹಿರಿಯರ ಆಶೀರ್ವಾದದಿಂದ ನಮಗೆ ಶುಭವಾಗಲಿ ಎಂದು ಬಯಸುವುದರಲ್ಲಿ  ಒಂದು ಸ್ವಾರ್ಥ ಅಡಗಿರುತ್ತದೆ. ಹಾಗಾಗಿ ಮನಸ್ಸು ಹೇಳುತ್ತದೆ. ” ತಿಳಿದೋ ತಿಳಿಯದೆಯೋ ಈ ಹಿರಿಯ ಮನಸ್ಸಿಗೆ ನೋವು ಕೊಟ್ಟಿರಬಹುದು. ಕಣ್ಣೀರು ಹಾಕಿಸಿರಬಹುದು. ಪ್ರಾಯಶ್ಛಿತವಾಗಿ ಪರಿಮಾರ್ಜನೆಗೆ ಇದಕ್ಕಿಂತ ಬೇರೆ ದಾರಿ ಸಿಗುವುದಿಲ್ಲ.”  ಹಾಗಾಗಿ ಬಾಗಿ ಕಾಲಿಗೆ ನಮಸ್ಕರಿಸುತ್ತೆನೆ. ಆದರೂ ಹರಸುತ್ತಾರೆ “ಖುಷಿಯಲ್ಲೇ ಇರಿಯಪ್ಪಾ”.   ಅಲ್ಲಿಗೆ ಒಂದೆರಡು ದಿನದ ಸುಖವಾಸದ ಅವಧಿ ಮುಗಿದಂತೆ. ಮತ್ತೆ ನಿಧಾನವಾಗಿ ಹೆಜ್ಜೆ ರಸ್ತೆಯತ್ತ ಸರಿಯುತ್ತದೆ. ಕೈಯಲ್ಲಿರುವ ಬ್ಯಾಗ್ ಬರುವಾಗ ಇದ್ದುದಕ್ಕಿಂತಲೂ ಹೆಚ್ಚು ಭಾರಾವಾಯ್ತೆಂದು ಅನಿಸುತ್ತದೆ. ಆದರೆ ಹಗುರವಾಗುವ ಹೃದಯಕ್ಕೆ ಆ ಭಾರ ಲೆಕ್ಕವೇ ಅಲ್ಲ.



Tuesday, May 23, 2017

ಉಸಿರೊಳಗಿನ ಜೀವನ


ಒಂದು ಸಲ ಮಾರುಕಟ್ಟೆಯಲ್ಲಿ ತರಕಾರಿ ಕೊಳ್ಳಲು ಹೋಗಿದ್ದೆ. ಅಲ್ಲೊಬ್ಬಳು ಧಡೂತಿ ಹೆಂಗಸು ಹೊರಲಾಗದ ತನ್ನ ಮೈಭಾರವನ್ನು ಹೊತ್ತುಕೊಂಡು ಈರುಳ್ಳಿ ಕೊಳ್ಳುವುದಕ್ಕಾಗಿ ಬಂದಿದ್ದಳು.  ಅಂಗಡಿಯವನು ಈರುಳ್ಳಿ ಆಯುವುದಕ್ಕೆ ಅವಕಾಶ ಕೊಡದೆ ತಾನೇ ತುಂಬಿಸಿ ತೂಗುತ್ತಿದ್ದರೆ,  ಈಕೆ ಆತನಲ್ಲಿ ಚೌಕಾಶಿ ಮಾಡಿ ಆಯ್ದುಕೊಳ್ಳುತ್ತಿದ್ದಳು. ಇವರಿಬ್ಬರ ಹಗ್ಗಜಗ್ಗಾಟ ಬಹಳ ಹೊತ್ತು ನಡೆಯಿತು. ಇದನ್ನು ಗಮನಿಸುತ್ತಿದ್ದ ನನಗೆ ಮಹಿಳೆಯ ಧಡೂತಿ ದೇಹ ನೋಡಿ ಅನಿಸಿತು. ನಾವು ಎಲ್ಲ ಕಡೆಯಲ್ಲೂ ಉತ್ತಮವಾದುದನ್ನು ಆಯ್ಕೆ ಮಾಡುವುದಕ್ಕಾಗಿ ಹೆಣಗಾಡುತ್ತೇವೆ. ಆದರೆ ಜೀವನದ ಆರೋಗ್ಯವನ್ನು ಆಯ್ಕೆ ಮಾಡುವಾಗ ಉತ್ತಮವಾದುದುದನ್ನು ತಿರಸ್ಕರಿಸುತ್ತೇವೆ.
ಪ್ರಪಂಚದಲ್ಲಿ ಶೇಕಡ ನೂರರಷ್ಟು ಪೂರ್ಣ ಆರೋಗ್ಯವಂತರು ಯಾರೂ ಇಲ್ಲ. ಒಂದೋ ಎರಡೋ ಅಪವಾದವಿದ್ದರೆ ಅದು ತೀರ ವಿರಳ . ಅಂದರೆ ಒಂದಲ್ಲ ಒಂದು ವಿಧದಲ್ಲಿ ರೋಗ ಬಾಧೆಗೆ ಪ್ರತಿಯೊಬ್ಬರೂ ಒಳಗಾಗಿದ್ದಾರೆ ಎನ್ನಬಹುದು. ಹೀಗಿದ್ದರೂ ಇಂದು ಆರೋಗ್ಯ ಪ್ರಜ್ಜೆ ಕೇವಲ ಶೇಕಡ ಹತ್ತರಷ್ಟು ಜನರಲ್ಲೂ ಇಲ್ಲ ಎಂಬುದು ವಿಪರ್ಯಾಸ. ಇಲ್ಲಿ ಆರೋಗ್ಯದ ಬಗ್ಗೆ ನಮಗಿರುವ ಕಾಳಜೆ ಪ್ರಶ್ನಾರ್ಹವಾಗುತ್ತದೆ.
ದುಡ್ಡುಕೊಟ್ಟು  ತರಕಾರಿಯನ್ನು ಕೊಳ್ಳುವಾಗ ಕಷ್ಟವಾದರೂ ಉತ್ತಮವಾದದ್ದೇ ಆಯ್ಕೆ ಮಾಡುವ ತುಡಿತ ನಮ್ಮಲ್ಲಿರುತ್ತದೆ. ಶ್ರಮವಹಿಸಿ ನಮ್ಮ ಹಣವನ್ನು ಖರ್ಚುಮಾಡುವಾಗ  ಹಿಂದೆ ಮುಂದೆ ಬಹಳಷ್ಟು ಯೋಚಿಸುತ್ತೇವೆ.   ಆದರೆ ಎಷ್ಟು ದುಡ್ದುಕೊಟ್ಟರೂ ಸಿಗದ ಆರೋಗ್ಯದ ಆಯ್ಕೆಯಲ್ಲಿ ಮಾತ್ರ ನಾವು ಔದಾಸಿನ್ಯವನ್ನು ತೋರುತ್ತೇವೆ. ಆರೋಗ್ಯವೇ ಭಾಗ್ಯ ಸಾಮಾನ್ಯವೆಂಬಂತೆ  ಹೇಳಿ ಸುಮ್ಮನಾಗುತ್ತೇವೆ. ಆದರೆ ಆರೋಗ್ಯ ಭಾಗ್ಯವಾಗುವುದು ನಮ್ಮ ಜೀವನ ಶೈಲಿಯಿಂದ ಎಂಬುದು ಸರಳವಾದ ತತ್ವ. ಮನೆಯೊಳಗಿನ ಪಾಮೋರಿನ್ ಡಾಬರ್ ಮನ್ ಅಥವಾ ಲಾಬ್ರಡೋರ್ ನಾಯಿಯನ್ನು ಮುತ್ತಿಕ್ಕಿದಂತೆ ರಸ್ತೆಬದಿಯ ಬೀದಿ ನಾಯಿಯನ್ನು ಮುತ್ತಿಕ್ಕುವುದಕ್ಕೆ ಸಾಧ್ಯವಾಗುವುದಿಲ್ಲ. ಇದಕ್ಕೆ ಕಾರಣ ಆ ನಾಯಿಗಳ  ಜೀವನ ಶೈಲಿ. ಹಾಗಾದರೆ ನಾವು ಆಯ್ಕೆ ಮಾಡುವ ಜೀವನ ಶೈಲಿ ಉತ್ತಮವಾಗಿರಬೇಡವೇ?  
ದೇಹದ ಆರೋಗ್ಯ ಕೆಟ್ಟು ನಾವು ನಮ್ಮ ಮನಸ್ಸಿನ  ಮತ್ತು  ದೇಹದ ನಿಯಂತ್ರಣವನ್ನು ಕಳೆದುಕೊಳ್ಳುವಾಗ ವೈದ್ಯರೋ ಅಲ್ಲ  ಮತ್ತೊಬ್ಬರು ಅದರಲ್ಲಿ ನಿಯಂತ್ರಣ ಸಾಧಿಸುತ್ತಾರೆ ಎಂದರೆ ಇದೊಂದು ರೀತಿಯಲ್ಲಿ ನಾವು ಗುಲಾಮರಾದಂತೆ.  ವಿಚಿತ್ರವೆಂದರೆ ಎಲ್ಲದರಲ್ಲೂ ಸ್ವಾಭಿಮಾನ ತೋರುವಾಗ ಆರೋಗ್ಯದ ವಿಚಾರದಲ್ಲಿ ತಿಳಿಯದೇ ವೈದ್ಯರ  ಗುಲಾಮರಾಗಿಬಿಡುತ್ತೇವೆ.
ನಮ್ಮ ಬೀದಿಯ ಹುಡುಗನೊಬ್ಬ ಅಂಗಡಿಯೊಂದರಲ್ಲಿ ಸಿಗರೇಟು ಸೇದುವುದನ್ನು ನೋಡಿ ಬಹಳ ಮರುಕ ಹುಟ್ಟಿತು. ಹೆಚ್ಚು ಕಡಿಮೆ ನನ್ನ ಮಗನ ಪ್ರಾಯದ ಹುಡುಗನ ಭವಿಷ್ಯಕ್ಕೆ ಸಿಗರೇಟಿನ ಹೊಗೆ ಈಗಲೇ ಆವರಿಸಿ ಕಪ್ಪಾದಂತೆ ಭಾಸವಾಯಿತು. ಇಷ್ಟು ಸಣ್ಣ ಪ್ರಾಯದಲ್ಲೇ ಸಿಗರೇಟು ಕೈಯಲ್ಲಿ ಹಿಡಿದು ಲೋಕವನ್ನೇ ಗೆದ್ದ ಭಂಗಿಯಲ್ಲಿ ನಿಂತಿದ್ದ. ಬಹುಶಃ  ಆತನ ಉನ್ಮಾದ ಲಾಲಸೆ ಈಗ ಈಡೇರಬಹುದು. ಧೂಮ ಲಹರಿಯಲ್ಲಿ ಜಗತ್ತಿನ ಎಲ್ಲ ಸುಖಗಳೂ ಮಿಥ್ಯವಾಗಿ ಕಾಣಬಹುದು. ಆದರೆ, ಪಶ್ಚಾತ್ತಾಪದಿಂದ ಪರಿತಪಿಸಿದರೂ ಪರಿಹಾರವಾಗದ ದುರಂತ ಕಣ್ಣ ಮುಂದೆ ದಟ್ಟವಾಗಿ ನಿಂತಿರುತ್ತದೆ. ಮಧ್ಯವಯಸ್ಸು ದಾಟಿದ ಕೂಡಲೇ ದೇಹ ಸಾಮಾರ್ಥ್ಯ ಕುಗ್ಗುತ್ತದೆ. ತಮ್ಮ ಪ್ರಾಥಮಿಕ ಅವಶ್ಯಕತೆಗಳಿಗೂ ಪರಾವಲಂಬಿಯಾಗಬೇಕಾದಾಗ  ಅನಾರೋಗ್ಯವೂ ಕಾಡತೊಡಗುತ್ತದೆ. ಹೋಗಲಿ ಖೆಮ್ಮು ಅಸ್ತಮಾ ಕಿಡ್ನಿ ಬಾಧೆ ಕೇವಲ ರೋಗಿಯೊಬ್ಬನನ್ನು ಬಾಧಿಸುವುದಲ್ಲ. ಮನೆಯ ಇತರರು ಅದಕ್ಕೆ ತಲೆಕೊಡಬೇಕಾಗಿ ಬರುತ್ತದೆ. ರಾತ್ರಿ ಪೂರ್ತಿ ಕಫ ಕಟ್ಟಿ ಖೆಮ್ಮುತ್ತಿದ್ದರೆ ಆತನಂತೂ ನಿದ್ದೆ ಮಾಡುವುದಿಲ್ಲ. ಮನೆಯಲ್ಲಿ ಉಳಿದವರೂ ಅನಾವಶ್ಯಕ ನಿದ್ದೆಗೆಡುವ ಅನಿವಾರ್ಯತೆ ಒದಗಿಬಿಡುತ್ತದೆ. ಕ್ಷಣಿಕ ಉನ್ಮಾದ ಬಯಕೆ ಎಲ್ಲವ್ನೂ ಮೀರಿ ಭೂತದಂತೆ ನಿಂತುಬಿಡುತ್ತದೆ.
ಆರೋಗ್ಯ ಬೇಕು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಹಲವರು ಅದನ್ನು ಅದೃಷ್ಟದ ಕೈಗೆ ಕೊಟ್ಟು  ತಾವು ನಿರಪರಾಧಿ ಮನೋಭಾವ ತಾಳುತ್ತಾರೆ. ಇನ್ನು ಕೆಲವರು ಜೀವನ ಇರುವುದೇ ಅನುಭವಿಸುವುದಕ್ಕೆ ಎಂದು ತಿಳಿಯುತ್ತಾರೆ. ಆದರೆ ಆ ಅನುಭವ ಮಾತ್ರ ಕಠೋರವಾಗುವುದು ಉಡಿಯಲ್ಲಿ ಗೆಂಡ ಕಟ್ಟಿಕೊಂಡಂತೆ ಪರಿಣಾಮ ತಿಳಿಯುವಾಗ. ಅದಾಗಲೇ ಬದುಕು ಆಹುತಿಯಾಗಿರುತ್ತದೆ. ಬಹುಶಃ  ಬದುಕಿನಲ್ಲಿ ಅತ್ಯಂತ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾಗುವುದೆಂದರೆ ಅದು ಆರೋಗ್ಯ.
ಆರೋಗ್ಯ ಬದುಕಿನ ವಿಧಾನಗಳು ಇಂದು ಹಲವಾರು ಇದೆ.  ಅದರಲ್ಲಿ ಸರಳವಾಗಿ ಸಾಮಾನ್ಯವಾಗಿ ಆಚರಣೆಯಲ್ಲಿರುವುದು ಮುಂಜಾನೆಯ ನಡಿಗೆ.  ಏನೂ ಮಾಡದೇ ಇರುವಾಗ ಇಷ್ಟನ್ನಾದರೂ ಮಾಡಲೇ ಬೇಕು. ಆದರೆ ಇದು ಪರ್ಯಾಪ್ತವೂ ಅಲ್ಲ. ವಿಚಿತ್ರವೆಂದರೆ ಬದುಕಿನಲ್ಲಿ ಉತ್ತಮವನ್ನೇ ಆಯ್ಕೆ ಮಾಡುವವರು ಆರೋಗ್ಯದ ವಿಚಾರದಲ್ಲಿ ಮಾತ್ರ ಇಷ್ಟನ್ನೇ ಆಯ್ಕೆ ಮಾಡಿಬಿಡುತ್ತಾರೆ.
            ಹದಿನೈದು ನಿಮಿಷದ ಪ್ರಾಣಾಯಾಮದಲ್ಲಿ ನಿವಾರಣೆಯಾಗುವ ಅನಾರೋಗ್ಯದ ಸಮಸ್ಯೆಗಳು, ನಿತ್ಯ ಬದುಕಿನ ಸಮಸ್ಯಗಳು ಇವುಗಳನ್ನು ಪಟ್ಟಿ ಮಾಡುತ್ತಾ ಹೋದಲ್ಲಿ ಗಾಬರಿಯಾಗಬಹುದು. ಆದರೂ ಬಹಳಷ್ಟು ಮಂದಿ ಪ್ರಾಣಾಯಾಮದ ವಿಷಯ ಹೇಳುತ್ತಿದ್ದಂತೆ ನಮಗೆ ಹೇಳಿದ್ದಲ್ಲ ಎಂದು ಪಲಾಯನ ಮಾಡಿಬಿಡುತ್ತಾರೆ. ಸರಳವಾಗಿ ಯಾರೂ ಆಚರಿಸಬಹುದಾದ ಅತ್ಯಂತ ಸುಲಭ ಪ್ರಕ್ರಿಯೆಗಿಂತ ಬೇರೆ ದೇಹದ ಸರ್ಕಸ್ ಇಷ್ಟವಾಗುವುದೇಕೋ ಅರ್ಥವಾಗುವುದಿಲ್ಲ.
            ಉಸಿರು...ಮನುಷ್ಯನ ಜೀವ ಅಸ್ತಿತ್ವದ ಸಂಕೇತ. ಯಾವುದೇ ಪ್ರಾಣಿಯಾಗಲೀ ಮನುಷ್ಯನಾಗಲೀ ಜೀವವಿದೆ ಎಂದು ತಿಳಿಯುವುದು ಉಸಿರಾಟದಿಂದ. ಹುಟ್ಟಿನಿಂದ ಜೀವ ಸಂಕೇತವಾಗಿರುವ ಉಸಿರಾಟ ಕ್ರಮಬದ್ಧವಾಗಿದ್ದರೆ ಉಳಿದವುಗಳು ಸರಿಯಾಗಿರುತ್ತವೆ. ವಾಕಿಂಗ್ ಮಾಡಿ, ವ್ಯಾಯಾಮ ಮಾಡಿ ಇನ್ನೇನೋ ಮಾಡಿದರೂ,  ಸರಾಗವಾದ ಉಸಿರಾಟ ಇಲ್ಲದಿದ್ದರೆ ಅದಾವುದೂ ನಿರೀಕ್ಷಿತ ಫಲ ಕೊಡುವುದಿಲ್ಲ. ಉಸಿರಾಟ ಸರಾಗವಾಗಬೇಕಾದರೆ ಪ್ರಣಾಯಾಮ ಅನಿವಾರ್ಯ. ಪ್ರಾಣಾಯಾಮದಿಂದಷ್ಟೇ ಉಸಿರಾಟ ಲಯಬದ್ಧವಾಗುತ್ತದೆ. ವೈದ್ಯರ ಬಳಿಗೆ ಹೋದಾಗ ಅಲ್ಲಿ ಮೊದಲು ಪರೀಕ್ಷೆಗೆ ಒಳಗಾಗುವುದು ನಮ್ಮ ಉಸಿರಾಟ.  ಅವರು ಮೊದಲು ನೋಡುವುದು ಎದೆ ಬಡಿತ ನಾಡಿ ಮಿಡಿತ.  ಉಸಿರಾಟ ಸಮರ್ಪಕವಿಲ್ಲವಾದರೆ ಇವುಗಳ ತಾಳತಪ್ಪುತ್ತದೆ. ಆರೋಗ್ಯವೂ ಲಯವನ್ನು ಕಳೆದು ಕೊಳ್ಳುತ್ತದೆ. ಬದುಕೂ ತಾಳ ಲಯವಿಲ್ಲದ ಸಂಗೀತದಂತೆ ಅತಂತ್ರವಾಗುತ್ತದೆ.

            ಮಹಾತ್ಮರಾದವರು ತಮಗಾಗಿ ತಾವು ಬದುಕುವುದಿಲ್ಲ. ಪರರಿಗಾಗಿ ತಮ್ಮ ಬದುಕನ್ನು ಮೀಸಲಿಟ್ಟು ನಿಸ್ವಾರ್ಥದಿಂದ ಪರರಿಗಾಗಿ ಬದುಕುತ್ತಾರೆ. ಆದರೆ ಆರೋಗ್ಯದ ವಿಷಯಕ್ಕೆ ಬಂದಾಗ ನಾವು ನಮಗಾಗಿ ಬದುಕಬೇಕು. ಯೋಗಾಭ್ಯಾಸದಲ್ಲಿ ನಮ್ಮ ಬಗ್ಗೆ ನಾವು ಸ್ವಾರ್ಥಪರರಾಗಬೇಕು. ನಮಗಾಗಿ ಕಿಂಚಿತ್ ಸಮಯವನ್ನು ಮೀಸಲಿಟ್ಟು ನಾವು ಸ್ವಾರ್ಥಿಗಳಾಗಬೇಕು. ಹಾಗಿದ್ದಲ್ಲಿ ಉಳಿದ ನಿಸ್ವಾರ್ಥದ ಬದುಕು ಅರ್ಥಪೂರ್ಣವಾಗುವುದಕ್ಕೆ ಸಾಧ್ಯವಾಗುತ್ತದೆ. ಇಲ್ಲವಾದರೆ ನಮ್ಮ ಬದುಕು ಪರಾವಲಂಬಿಯಾಗುತ್ತದೆ. ಅನಿವಾರ್ಯವಾಗಿ ಬದುಕಿನಲ್ಲಿ ಸಂಪೂರ್ಣವಾಗಿ ಸ್ವಾರ್ಥಿಗಳಾಗಬೇಕಾಗುತ್ತದೆ.