Saturday, August 10, 2019

ಶಿಥಿಲ ಸಂಸ್ಕಾರ


ಮನಸ್ಸಿಗೆ ಬಹಳಷ್ಟು ವೇದನೆಯನ್ನೂ ಆತಂಕವನ್ನೂ ತರುವ ವಿಚಾರವಿದು. ಮನುಷ್ಯನಾಗಿ ಹುಟ್ಟಿದ ಮೇಲೆ ಅವನ ಬದುಕು ಆಯಾಮ ಗೊಳ್ಳುವುದು ಶುದ್ದವಾದ ಸಂಸ್ಕಾರದಿಂದ. ಸಂಸ್ಕಾರವೆಂಬುದು ಒಬ್ಬ ಮನುಷ್ಯನ ಜೀವನವನ್ನು ಗುರುತಿಸಿಕೊಡುತ್ತದೆ. ಅದಕ್ಕೆ ಜಾತಿ ಜಾತಿ ಎಂಬ ಭೇದವಿಲ್ಲ. ಪ್ರತಿಯೊಂದರಲ್ಲೂ ಒಂದು ವಿಧಿವತ್ತಾದ ಸಂಸ್ಕಾರವಿರುತ್ತದೆ. ಅದರಲ್ಲಿ ಮೇಲು ಕೀಳು ಎಂಬುದಿಲ್ಲ. ಪ್ರತಿಯೊಂದರ ಗಮ್ಯವೂ ಭಗವದ್ಗೀತೆಯಲ್ಲಿ ಹೇಳಿದಂತೆ ಎಲ್ಲವೂ ಭಗವಂತನತ್ತ ಸೆಳೆಯಲ್ಪಡುವ ಸಂಸ್ಕಾರಗಳೇ ಆಗಿರುತ್ತವೆ . ಹಾಗಾಗಿ ಸಂಸ್ಕಾರ  ಮನುಷ್ಯನ  ಜೀವನದ ಆಯಾಮವನ್ನು ತೋರಿಸುತ್ತದೆ. ಮನುಷ್ಯ ಯಾವ ಬದುಕನ್ನೇ ನಡೆಸಿದರೂ ಸಂಸ್ಕಾರವೆಂಬುದು ಅವನನ್ನು ಜನ್ಮ ಪರ್ಯಂತ ಹಿಂಬಾಲಿಸುತ್ತದೆ. ಸಣ್ಣ ಮಗುವಾದರೂ ತುತ್ತು ಹಿಡಿದ ಕೈ ಬಾಯಿಗೆ ಹೋದಂತೆ, ಸಂಸ್ಕಾರ ಬಿಟ್ಟು ಬಿಡದ ನೆರಳಿನಂತೆ ಮನುಷ್ಯನನ್ನು ಹಿಂಬಾಲಿಸುತ್ತದೆ. ಇಲ್ಲಿ ಕಥೆ ಇರುವುದು ಸಂಸ್ಕಾರದ ಬುಡವೇ ಶಿಥಿಲವಾದ ಅನುಭವದಲ್ಲಿ.

ಒಂದೆರಡು ತಿಂಗಳ ಹಿಂದೆ ನಮ್ಮೂರ ಹಳ್ಳಿಯೊಂದರ ದೇವಸ್ಥಾನಕ್ಕೆ ಹೋಗಿದ್ದೆ. ಹಳ್ಳಿಯ ದೇವಸ್ಥಾನ ಎಂದರೆ ಕೇಳಬೇಕೆ? ಹಸಿರಾದ ಕಂಗಿನ ತೋಟದ ನಡುವೆ ಇತ್ತು ಈ ದೇವಸ್ಥಾನ.  ನೀರವ ಮೌನ. ಮನಸ್ಸನ್ನು ಅಹ್ಲಾದಗೊಳಿಸುವ ಶಾಂತ ಪರಿಸರ.  ಸುತ್ತಲೂ ಹಸಿರು. ಪರಿ ಶುದ್ದವಾದ ಗಾಳಿ ನೀರು.  ಅದರ ಜತೆಯಲ್ಲಿ ಜೋರಾಗಿ ಸುರಿಯುತ್ತಿದ್ದ ಮಳೆ. ಮಳೆಯ ಸದ್ದು, ತೋಟದಿಂದ ಬರುವ ಹಕ್ಕಿಗಳ ಜೀರುಂಡೆಯ ಸದ್ದು. ದೇವಸ್ಥಾನ ನಿಜಕ್ಕೂ ದೇವ ಸಾನ್ನಿಧ್ಯವನ್ನು ಸಾರುತ್ತಿತ್ತು. ವಿಶೇಷವಾದ ಯಾವ ಪೂಜೆಗಳು ಇಲ್ಲದ ನಿತ್ಯದ ದಿನಚರಿಗೆ ಸೀಮಿತವಾದ  ದಿನವಾದುದರಿಂದಲೂ ಜನ ಸಂಚಾರ ತೀರ ವಿರಳ.  ವಿರಳ ಮಾತ್ರವಲ್ಲ ಯಾರೂ ಇಲ್ಲ.

ವಿಶಾಲವಾದ ಅಂಗಣ ದಾಟಿ ದೇವಾಲಯದ ಒಳಗಿನ ಪ್ರಾಂಗಣಕ್ಕೆ ಹೊಕ್ಕೆ. ಯಾರೊಬ್ಬರೂ ಇಲ್ಲ. ಗರ್ಭಗುಡಿಯ ಬಾಗಿಲು ತೆರೆದು ಒಳಗೆ ಬೆಳಗುತ್ತಿದ್ದ ದೀಪ ದೂರಕ್ಕೂ ಗೋಚರಿಸುತ್ತಿತ್ತು. ನಿತ್ಯದ ದಿನವಾದುದರಿಂದ ವಿಶೇಷವಾದ ಯಾವ ಪೂಜೆ ಪುನಸ್ಕಾರಗಳೂ ಇಲ್ಲವಾಗಿ ಕೇವಲ ನಿತ್ಯ ನಿಯತಿಯಂತೆ ನಡೆಯುವ ಪೂಜೆ ಮಾತ್ರವಾಗಿದ್ದುದರಿಂದ ಯಾರೂ ಇರುವುದಿಲ್ಲ ಎಂದು ಅರಿವಿತ್ತು. ಏನೇ ಆಗಲಿ  ಒಬ್ಬರಾದರೂ ಒಳಗಡೆ ಅರ್ಚಕರು ಇರುತ್ತಾರೆ, ಹಾಗೆ ಕೈಕಾಲು ಮುಖ ತೊಳೆದು ದೇವರ ಎದುರಿನ ಗೋಪುರದಂಚಿನಲ್ಲಿ ಕುಳಿತು ಕಣ್ಣು ಮುಚ್ಚಿ ಜಪ ಮಾಡುತ್ತಿದ್ದೆ.ಯಾವುದೇ ದೇವಾಲಯಕ್ಕೆ ಹೋದರೂ ಒಂದಷ್ಟು ಹೊತ್ತುಇದಕ್ಕೇ ಮೀಸಲಿರಿಸಿಕೊಂಡಿದ್ದೇನೆ.  ಒಳಗಿಂದ ತಟ್ಟೆ ಹರಿವಾಣ ಪಾತ್ರೆಗಳ ಸದ್ದು ಕೇಳುತ್ತಿತ್ತು.  ಅರ್ಚಕರು ಒಬ್ಬರಾದರೂ ಇರಲೇಬೇಕಲ್ಲ? ಬಹುಶಃ ನನ್ನಂತೇ ಅವರೂ ಸಹ ಏಕಾಂಗಿ ಸುಖವನ್ನು ಅನುಭವಿಸುತ್ತಿರಬೇಕು. ಯಾಕೆಂದರೆ ಅವರಿಗೆ ನಾನು ಬಂದುದು ಬಹಳ ಹೊತ್ತು ಅರಿವಿಗೆ ಬರಲೇ ಇಲ್ಲ.!!!

ಸುಮಾರು ಹೊತ್ತಿನ ತರುವಾಯ ಅವರು ಹೊರಗೆ ಇಣುಕಿದಾಗ ನನ್ನನ್ನು ಕಂಡರು.  ಆವಾಗ ಆಶ್ಚರ್ಯವಾದದ್ದು ಮಾತ್ರ ನನಗೆ. ನನ್ನನ್ನು ಕಂಡು ಉದ್ಗಾರ ತೆಗೀತಾರೆ ಅಂದೊಕೊಂಡಿದ್ದರೆ ಅವರು ಸಹಜವಾಗಿಯೇ ಮಾತಿಗಾರಂಭಿಸಿದರು. ಬಹುಶಃ ಇದಲ್ಲಿ ಸಹಜವೋ ಏನೊ?

ಅಲ್ಪ ಸ್ವಲ್ಪ ಪರಿಚಿತರಾದುದರಿಂದ,  ಉಭಯ ಕುಶಲ ವಿಚಾರಿಸುವ ಮೊದಲೇ ಅವರ ಪ್ರಶ್ನೆ ಸ್ವಲ್ಪ ಅಸ್ವಾಭಾವಿಕವಾಗಿ ಕಂಡಿತು.

“ ಏನು ಬಂದದ್ದು?”

ನಾನು ಒಂದಷ್ಟು ತಡಬಡಾಯಿಸಿದೆ.  ಏನೆಂದು ಉತ್ತರಿಸುವುದು? ದೇವಸ್ಥಾನಕ್ಕೆ ಹೋಗುವ ಉದ್ದೇಶವಾದರು ಏನು? ಪರಮಾತ್ಮ ಭಕ್ತಿ ಉಪಾಸನೆಗೆ. ಬೇರೆ ಉದ್ದೇಶವೇನಿರುತ್ತದೆ? ದರ್ಶನ ನಮಸ್ಕಾರ ಅದೆಲ್ಲ ಆಗಿ ಸಿಕ್ಕಿದರೆ ಪ್ರಸಾದ. ಇದಲ್ಲದೇ ಬೇರೆ ಏನಿರಬಹುದು?  ವ್ಯಾವಹಾರಿಕವಾಗಿ ಯೋಚಿಸಿದರೆ ಅವರ ಪ್ರಶ್ನೆಗೂ ಒಂದು ಅರ್ಥವನ್ನು ಕಲ್ಪಿಸಬಹುದು.  ಈಗೀಗ ದೇವಸ್ಥಾನಕ್ಕೆ ಹೋಗುವ ಉದ್ದೇಶಗಳಲ್ಲಿ ಈ ಉದ್ದೆಶಗಳು ಯಾವುದೂ ಇರುವುದಿಲ್ಲ. ದೇವಸ್ಥಾನಕ್ಕೆ ಹೋದದ್ದಕ್ಕೆ ಪ್ರದಕ್ಷಿಣೆ ಬರುದು ನಮಸ್ಕಾರ ಹಾಕುದು ಕಾಣಿಕೆ ಹಾಕುವುದು...ಹೀಗೆ ಕೇವಲ ಯಾಂತ್ರಿಕ ಕಿಯೆಗಳು.    ಹೋದದ್ದಕ್ಕೆ ಭಕ್ತಿ ಪ್ರಕಟವಾಗುತ್ತದೊ ತೋರಿಕೆಯಾಗುತ್ತದೋ ಹೇಳುವುದು ಕಷ್ಟ. ಭಕ್ತಿಗಿಂತಲೂ ದೇವರ ಭಯವೇ ಹೆಚ್ಚಾಗಿರುತ್ತದೆ.  ಎಲ್ಲಾದರೂ ದೇವರು ಮುನಿದರೆ ಎಂಬ  ಆತಂಕ.  ಹೀಗಾಗಿ ಭಕ್ತಿ ಕೂಡ ಒಂದು ಅಭಿನಯ.

ಈ ದೇವರ ವಿಷಯ ಬರುವಾಗ   ’ ಭಯ ಭಕ್ತಿ’  ಅಂತ ಯಾಕೆ ಸೇರಿಸಿದರೋ ಗೊತ್ತಾಗುವುದಿಲ್ಲ. ಭಕ್ತಿ ಮಾರ್ಮಿಕವಾಗುವುದಕ್ಕೆ ಭಯ ಸೇರಿಕೊಂಡಿತು ಅಂತ ಅಂದುಕೊಳ್ಳುತ್ತೇನೆ. ಆದರೆ ಭಯ ಇದ್ದಲ್ಲಿ ಭಕ್ತಿ ಎಂಬುದು ಅಭಿನಯವಾಗುವ ಪ್ರಮೇಯವೇ ಹೆಚ್ಚು. ಇದೆಲ್ಲವೂ ತಮ್ಮ ಸ್ವಕೀಯವಾದ ವ್ಯವಹಾರದ ಸಂಕೇತವಾಗಿರಬೇಕಾದದ್ದು ಇನ್ನೊಬ್ಬರ ತೋರಿಕೆಗೆ  ಪ್ರಕಟಗೊಳ್ಳುವುದನ್ನೇ ಕಾಣಬಹುದು. ನಮಸ್ಕಾರ ಮಾಡದಿದ್ದರೆ, ಪ್ರದಕ್ಷಿಣೆ ಬಾರದಿದ್ದರೆ, ಕಾಣಿಕೆ ಹಾಕದಿದ್ದರೆ ಕಂಡವರು ಏನು ಅಂದುಕೊಳ್ಳುತ್ತಾರೋ ಎಂಬ ಆತಂಕ. ಹಾಗಾಗಿ ಸುತ್ತಲೂ ಕಾಣುವವರಿಗೆ ದೇವಕಾರ್ಯಗಳು ಪ್ರಕಟಗೊಳ್ಳುತ್ತದೆ. ತಾವು ಮಾಡುವ ಸೇವೆಗಳು ಘಂಟಾಘೋಷವಾಗಿ ಪ್ರಕಟಗೊಳ್ಳಬೇಕು ಎಂದೇ ಭಾವಿಸುತ್ತಾ,  ದೊಡ್ಡ ದೊಡ್ಡ ಸೇವಾಕಾರ್ಯಗಳನ್ನು ಮಾಡುವುದನ್ನು ಕಾಣಬಹುದು. ಯಾರಾದರೂ ನೋಡುತ್ತಾರೆ ಗಮನಿಸುತ್ತಾರೆ ಎಂದಾಕ್ಷಣ ದೇವರಿಗೆ ಬರುವ ಸುತ್ತು  ನಮಸ್ಕಾರಗಳ ಸಂಖ್ಯೆ ಹೆಚ್ಚಾಗುತ್ತದೆ. ನಮಸ್ಕಾರ ದೇವರಿಗೆ ಹಾಕುವುದೋ ಬಂದವರಿಗೆ ಹಾಕುವುದೋ ಅದರ ಉದ್ದೇಶವೇನೋ ಎಲ್ಲವೂ ಹಾಸ್ಯಾಸ್ಪದವಾಗುತ್ತದೆ.

ಹೀಗೆಲ್ಲ ಯೋಚನೆ ಮಾಡುವಾಗ ಅರ್ಚಕರು ಏನು ಬಂದದ್ದು ಎಂಬ ಪ್ರಶ್ನೆಗೆ ಹಲವು ಅರ್ಥಗಳು ಬರಬಹುದು.
ಏನು ಬಂದದ್ದು? ಎಂಬ ಪ್ರಶ್ನೆಗೆ ನನ್ನ ಕಳವಳ ಅವರಿಗೆ ಅರ್ಥವಾಗಿರಬೇಕು. ಅವರು ನಂತರ ಹೇಳಿದರು.

ಕೇಳದೇ ನಿರ್ವಾಹ ಇಲ್ಲ. ಇಲ್ಲಿಇರುವುದು ನಾನೊಬ್ಬ. ಮತ್ತೆ ಆ ಹರಕೆ ಉಂಟು ಈ ಹರಕೆ ಉಂಟು ಅಂತ ಹೇಳಿದರೆ ನಾನು ಪೂಜೆಗೆ ಕುಳಿತಾಗುತ್ತದೆ.  ಏನು ಮಾಡುವುದು? ಅದಕ್ಕೆ ಬಂದ ಕೂಡಲೇ ಕೇಳಿಬಿಡುವುದು.

ಹೌದಲ್ಲವೇ?  ಹರಕೆ ಸಂದಾಯವೂ ಕೇವಲ ಹರಕೆ ಯಾಗಬಾರದಲ್ಲ.?

ಅರ್ಚರ್ಕರು ನಂತರ ಸ್ನೇಹದಿಂದ ಸೌಜನ್ಯದಿಂದಲೇ ಮಾತನಾಡಿದರು. ನಾನು ಯಾವಾಗಲಾದರೊಮ್ಮೆ ಅಪರೂಪಕ್ಕೆ ಬರುವವನು. ಕುಶಲ ಸಮಾಚಾರ ವಿಚಾರಿಸಿ ನಂತರ,  ಹಲವು ವಿಷಯಗಳನ್ನು ಹೇಳುತ್ತಾ,  ತೊಂದರೆಗಳನ್ನೂ ಸಮಸ್ಯೆಗಳನ್ನೂ ಹೇಳುತ್ತಾ ಹೋದರು. ಅವರು ಹೇಳಿದ ಹಲವು ವಿಚಾರಗಳು  ಹಲವು ಯೋಚನೆಗಳಿಗೆ ಗ್ರಾಸವಾದವು.

ಒಬ್ಬ ಪುರೋಹಿತ ಒಂದು ದೇವಾಲಯದ ಪೂಜೆಗೆ ನಿಯಮಿಸಲ್ಪಟ್ಟರೆ ನಂತರ ಆತನ ಸ್ವಾತಂತ್ರ್ಯ ಹರಣವಾದಂತೆ. ವಾಡಿಕೆಯಲ್ಲಿ ಹೇಳುವುದುಂಟು ಕರು ಹಾಕಿದ ದನ ಮನೆಯಲ್ಲಿದ್ದಂತೆ. ಎಲ್ಲಿ ಹೋದರೂ ಹಾಲು ಕರೆಯುವ ಹೊತ್ತಿಗೆ ಬರಲೇಬೇಕು. ದೇವ ಪೂಜೆಯೂ ಹಾಗೆ. ಬೆಳಗ್ಗೆ ಮಧ್ಯಾಹ್ನ ರಾತ್ರೆ. ಮುಂಜಾನೆಯದ್ದು ಮುಗಿಸುವಾಗ ಮಧ್ಯಾಹ್ನದ ಪೂಜೆಗೆ ಸಿದ್ದತೆ. ಮಧ್ಯೆ ತುಸು ಬಿಡುವಿದ್ದರೂ ದೇವಸ್ಥಾನ ಬಿಟ್ಟು ಯಾವ ಕೆಲಸವೂ ಹಚ್ಚಿಕೊಳ್ಳುವಂತಿಲ್ಲ. ಈ ಬಂಧು ಬಳಗ ದೂರದ ಪಯಣ ಕನಸೇ ಸರಿ. ಮದುವೆಯಾಗಿ ಸಂಸಾರಿಯಾದವನಿಗೆ ಹೆಂಡತಿಯನ್ನು ಕರೆದುಕೊಂಡು ಎಲ್ಲಾದರೂ, ನೆಂಟರಿಷ್ಟರ ಮನೆಗೆ ಹೋಗಬೇಕಿದ್ದರೆ, ಅನಿವಾರ್ಯ ಕೆಲಸ ಕಾರ್ಯಗಳಿಗೆ ಹೋಗುವುದಿದ್ದರೆ  ದೇವಾಲಯದಲ್ಲಿ ಬದಲೀ ವ್ಯವಸ್ಥೆ ಯಾಗಬೇಕು. ಆದರೆ ಈಗ ಬದಲಿ ವ್ಯವಸ್ಥೆಗೆ ಅದೂ ಹಳ್ಳಿಗಳ ದೇವಸ್ಥಾನದಲ್ಲಿ ಬ್ರಾಹ್ಮಣರೇ  ಸಿಗುವುದಿಲ್ಲ. ಇದ್ದರೂ ಯಾವುದೋ ನೆವ ಹೇಳಿ ತಪ್ಪಿಸಿಕೊಂಡು ಬಿಡುತ್ತಾರೆ. ದೇವರು ಭಕ್ತಿ ಇದು ವ್ಯಾವಹಾರಿಕ ಜೀವನದ ಲೆಕ್ಕಾಚಾರಕ್ಕೇ ಸಿಕ್ಕಿಬೀಳುವುದಿಲ್ಲ.

ಸಾಮಾನ್ಯವಾಗಿ ಭಕ್ತರು ಹೆಚ್ಚಿರುವ ದೊಡ್ಡ ಕ್ಷೇತ್ರಗಳಲ್ಲಿ ಈ ಸಮಸ್ಯೆಕಾಡುವುದಿಲ್ಲ. ಆದರೆ ತೀರ ಹಳ್ಳಿಗಳಲ್ಲಿ,  ನಿಯಮದಂತೆ ದೇವಾಲಯದ ನಿತ್ಯದ  ಪೂಜೆ ಹೇಗಿದ್ದರೂ ನಿಲ್ಲಿಸುವಂತಿಲ್ಲ. ಮಾನಸಿಕವಾಗಿ ಒಂದು ಭಯ ಅರ್ಚಕನಾದವನಿಗೆ ಇದ್ದೇ ಇರುತ್ತದೆ. ಆದರೆ ಹಳ್ಳಿಗಳಲ್ಲಿ ಬದಲೀ ವ್ಯವಸ್ಥೆ ಇಲ್ಲದೆ ಹಲವು ಬ್ರಾಹ್ಮಣರು ಇಂದು ಅನಧಿಕೃತ ಸೆರೆವಾಸವನ್ನು ಅನುಭವಿಸುತ್ತಾರೆ ಇದು ಸತ್ಯ. ಇನ್ನೂ ಸೂತಕದಂತಹ ವಿಚಾರ ಬಂದರೆ ದೇವಸ್ಥಾನ ಪುರೋಹಿತರೇ ಸಂಬಂಧಿಕರಿಗೆ ಹೇಳಿಬಿಡುತ್ತಾರೆ....ನಮಗೆ ಸೂತಕವಿದ್ದರೆ ತಿಳಿಸಲೇ ಬೇಡಿ ಅಂತ. ಸೂತಕ ತಿಳಿದ ನಂತರ ದೇವಸ್ಥಾನದ ಒಳ ಹೊಕ್ಕುವ ಹಾಗಿಲ್ಲ. ತಿಳಿಯದೇ ಇದ್ದರೆ ತಿಳಿದಿಲ್ಲ ಎಂದು ಸುಮ್ಮನಾಗಬಹುದು. ಇದೊಂದು ಅಪರ ಶಾಸ್ತ್ರ. ಇನ್ನೂ ಖಾರವಾಗಿ ಹೇಳಬೇಕೆಂದರೆ ಕಣ್ಣು ಮುಚ್ಚಿ ವಿಸರ್ಜಿಸಿದ ಹಾಗೆ. ಊರೆಲ್ಲ ಕಂಡರೂ ತನಗೆ ಕಾಣಲಿಲ್ಲ ಎಂಬ ನ್ಯಾಯ.  ಆದರೂ ಇದು ಆಚರೆಣೆಯಲ್ಲಿ ಇರುವುದು ಸುಳ್ಳಲ್ಲ.  ಹಾಗಾಗಿ ತೀರ ಹತ್ತಿರದ ಬಂಧುಗಳ ಸೂತಕ ಮಾತ್ರ ಆಚರಣೆಯಲ್ಲಿರುತ್ತದೆ. ಇದಕ್ಕೆ ಕಾರಣ ದೇವಸ್ಥಾನದ ಪೂಜೆ ಒಂದು ದಿನಕ್ಕಾದರೂ,  ತಾತ್ಕಾಲಿಕ ಭಟ್ಟರನ್ನು ಹುಡುಕುವುದು ಬಹಳ ಕಷ್ಟದ ಕೆಲಸ. ಮಾತ್ರವಲ್ಲ ಸಾಧ್ಯವೇ ಇಲ್ಲದಂತಹ ಕೆಲಸ.

ದೇವಸ್ಥಾನದ ಪೂಜೆ ಪುಣ್ಯದ ಕೆಲಸವೇನೋ ಹೌದು, ಆದರೆ ಅದು ಕೊರಳಿಗೆ ಉರುಳಾಗಿಯೂ ಸುತ್ತಿಕೊಳ್ಳುತ್ತದೆ ಎಂಬುದಕ್ಕೆ ಹಲವು ದೇವಸ್ಥಾನಕ್ಕೆ ಭೇಟಿಕೊಟ್ಟು ಅಲ್ಲಿಯ ಸಮಸ್ಯೆಯನ್ನು ಅರಿತುಕೊಂಡರೆ ಅರಿವಿಗೆ ಬರುತ್ತದೆ.  ಅನಿವಾರ್ಯ ಕರ್ಮ ಎಂಬಂತೆ ಆಚರಿಸಲ್ಪಡುತ್ತದೆ. ಇದರಿಂದ ಮಾನಸಿಕ ನೆಲೆಯೂ ಸ್ಥಿರತೆಯಲ್ಲಿರುವುದಿಲ್ಲ. ಪೂಜೆಯಂತಹ ದೇವ ಕಾರ್ಯಗಳು ನಿಶ್ಚಲ ಮನಸ್ಸಿನಿಂದ ಶಾಂತ ರೀತಿಯಲ್ಲಿ ಆಚರಿಸಬೇಕಾಗಿದೆ. ಆದರೆ ಅದು ಸಾಧ್ಯವಾಗುವುದಿಲ್ಲ. ಯಾಕೆಂದರೆ ಪ್ರತೀಕ್ಷಣವೂ ಮನಸ್ಸು ಉದ್ವಿಗ್ನತೆಯನ್ನು ಅನುಭವಿಸುತ್ತಿರುತ್ತದೆ.  ಬ್ರಾಹ್ಮಣನಾಗಿ ಹುಟ್ಟಿದ್ದಕ್ಕೆ ಅಂತ ವಿಕಲ್ಪ ತೃಪ್ತಿಯನ್ನೂ ಅನುಭವಿಸುತ್ತಾರೆ.

ಯೋಚನೆ ಮಾಡೋಣ ಯಾವುದೇ ವೃತ್ತಿಯಲ್ಲಾದರು ರಜೆ ಅರ್ಜಿ ಎಸೆದು ಹೋಗಿಬಿಡಬಹುದು. ಇಲ್ಲ ಬದಲೀ ವ್ಯವಸ್ಥೆ ಮಾಡಬಹುದು. ಸ್ವಂತ ವ್ಯವಹಾರವಾದರೆ ಒಂದೆರಡು ದಿನಕ್ಕೆ ರಜೆ ಸಾರಬಹುದು. ಆದರೆ ದೇವ ಪೂಜೆ ಹಾಗಲ್ಲ.  ಈ ಸಮಸ್ಯೆಗಳ ಅರಿವಿದ್ದವರು ಕಣ್ಣಿಗೆ ಕಂಡರೂ ದೂರ ಹೋಗಿಬಿಡುತ್ತಾರೆ.  ಕಟ್ಟಿ ಹಾಕಿದಂತಹ ಯಾವುದೇ ವೃತ್ತಿಯಲ್ಲೂ ಮನುಷ್ಯ ನೆಮ್ಮದಿಯಿಂದ ಬದುಕಲಾರ. ಅದು ದೇವಾಲಯದ ಪೂಜೆಯಾದರೂ ಸರಿ. ಅಸಹನೆ ಬಂದೇ ಬಿಡುತ್ತದೆ.

ಹಾಗಾಗಿ ಕೆಲವರು ಸ್ವಂತ  ನಿಯಮವನ್ನು ರೂಢಿಗೆ ತರುತ್ತಾರೆ. ಇಷ್ಟು ಹೊತ್ತಿಗೆ ಪೂಜೆ ದರ್ಶನ. ಸೇವೆ ಆನಂತರ ಯಾವುದೇ ಸೇವೆ ಹರಕೆ ಪೂಜೆಗೆ ಅವಕಾಶ ಇರುವುದಿಲ್ಲ.  ಇಲ್ಲಿಯೂ ಪಾಪ ಅರ್ಚಕರು ಅದನ್ನೇ ರೂಢಿಗೆ ತಂದಿದ್ದರು. ಇದು ನನಗೆ ಸ್ವಲ್ಪ ಅಸ್ವಾಭಾವಿಕವಾಗಿ ಅನುಭವವಾದದ್ದು ನನ್ನ ಅರಿವಿನ ಕೊರತೆ ಇರಬೇಕು.
ನಾನು ಹೋದ ಈ ದೇವಸ್ಥಾನದ ಅರ್ಚಕರು ಇದನ್ನೇ ಹೇಳಿದರು. ಹಾಗಾಗಿಯೇ ಬಂದಕೂಡಲೇ ಕೇಳಿಬಿಡುತ್ತಾರೆ  ಏನು ಬಂದದ್ದು.? ಒಂದಿಷ್ಟು ಒರಟು ಅಂತ ಕಂಡರೂ ಬೇರೆ ನಿರ್ವಾಹವಿಲ್ಲ. ಇಷ್ಟಾದರೂ ಬಂದವರು ಸ್ವತಃ ಬ್ರಾಹ್ಮಣರಾಗಿ ಸ್ವಲ್ಪ ಅಸಮಾಧಾನ ಮಾತನಾಡುವುದಿರುತ್ತದೆ. ತಮ್ಮನ್ನು ತಾವು ಪ್ರತಿಷ್ಥಿತರು ಅಂತ ತೋರಿಸಿಕೊಳ್ಳುವ ಚಪಲ.  ನಿಮ್ಮ ತಂದೆಯವರ ಕಾಲದಲ್ಲಿ ಹೀಗಿಲ್ಲ. ಯಾವಾಗ ಬಂದರೂ ಪೂಜೆ ಪ್ರಸಾದ ಎಲ್ಲ ಸಿಗುತ್ತಿತ್ತು. ಈಗ ಮಕ್ಕಳ ಕಾಲಕ್ಕಾಗುವಾಗ ಹೀಗೆ. ಎಲ್ಲದಕ್ಕೂ ಸಮಯ.. ದೇವರಿಗೂ ರೂಲ್ಸು.  ಹೀಗೆ ಆಕ್ಷೇಪ ಎತ್ತುವ ಅವರ ಮಕ್ಕಳಿಗೆ ಈ ನ್ಯಾಯ ಯಾವುದೂ ಅನ್ವಯವಾಗುವುದಿಲ್ಲ. ಅಪ್ಪ ಮಾಡಿದ್ದನ್ನೇ ಮಗ ಎಲ್ಲಿ ಮಾಡುತ್ತಾನೆ? ಬಡ ಅರ್ಚಕನ ಮಗನ ಮೇಲೆ ನಿಯಮವನ್ನು ಹೇರುವುದಕ್ಕೆ  ಯಾವಾಗಲಾದರೊಮ್ಮೆ ದೇವಸ್ಥಾನಕ್ಕೆ ಭೇಟಿಕೊಡುವವನು ಶ್ರಮಿಸುತ್ತಾನೆ. ಹಲವು  ಸಲ ಹೀಗೆ ಅಸಮಾಧಾನ  ತೋರುವವರು ದೇವಸ್ಥಾನದ ಹೊರ ಗೇಟಿನಲ್ಲಿ ನಮಸ್ಕಾರ ಮಾಡಿ ಅಲ್ಲಿಂದಲೇ ಹೋಗಿ ಜಾಣ್ಮೆಯನ್ನು ಪ್ರದರ್ಶಿಸುತ್ತಾರೆ. ಆಗ ಒಳಗಿನ ದೇವರು ಇಷ್ಟಕ್ಕೇ ಸಾಕು ಎಂದು ತಿಳಿದುಕೊಳ್ಳುವುದರಲ್ಲಿ ಯಾವ ಭಕ್ತಿ ಇದೇಯೋ ಅರ್ಥವಾಗುವುದಿಲ್ಲ.

ದೇವಸ್ಥಾನದ ವಿಶೇಷ ಉತ್ಸವಾದಿ ದಿನಗಳಲ್ಲಿ ಹಲವು ಕಡೆ ನಿತ್ಯದ ಅರ್ಚಕನಿಗೆ ಮನ್ನಣೆಯೇ ಇರುವುದಿಲ್ಲ. ಉತ್ಸವ ಮೂರ್ತಿಯಂತೆ ಉತ್ಸವ ಅರ್ಚಕರೂ ಇರುತ್ತಾರೆ.

ಎರಡು  ಹೊತ್ತು ನೈವೇದ್ಯ..(ಅನ್ನ) ಇರುವ  ದೇವಸ್ಥಾನಗಳಲ್ಲಂತೂ ಇನ್ನೂ ಕಠಿಣ. ನಿತ್ಯದಲ್ಲಿ ಯಾರಾದರೊಬ್ಬ ಭಕ್ತ ಬಂದರೂ  ಅವರಿಗೆ ಊಟದ ವ್ಯವಸ್ಥೆ ಮಾಡಲೇಬೇಕು. ಈ ಎಲ್ಲ ಕಾರಣದಿಂದ ಹೋಗುವ ಭಕ್ತರಿಗೆ ಅನ್ನಿಸಿಬಿಡುತ್ತದೆ ಯಾಕಾದರೂ ಬಂದೆವೋ ಎಂದು. ಇದು ನನ್ನ ಸ್ವಂತ ಅನುಭವ. ಬದುಕಿನ ನಿತ್ಯ ಜಂಜಾಟವನ್ನು ಒಂದಿಷ್ಟು ಪಕ್ಕಕ್ಕಿಟ್ಟು ನೆಮ್ಮದಿ ಅನುಭವಿಸೋಣ ಎಂದು ದೇವರ ಬಳಿ ಬಂದರೆ ಇಲ್ಲೂ ಸಮಸ್ಯೆಗಳು ಬೇರೊಂದು ರೀತಿಯಲ್ಲಿ ಸುತ್ತಿಕೊಳ್ಳುತ್ತದೆ. ಹಾಗಾಗಿ ದೇವಸ್ಥಾನದ ಬ್ರಾಹ್ಮಣರ ವಿಚಾರಕ್ಕೆ ಬಂದರೆ ಅವರ ತಲೆಗೆ ಅವರದೇ ಕೈ. ಬಡ ಬ್ರಾಹ್ಮಣನಿಗೆ ಕೇವಲ ಬಡತನ ಮಾತ್ರ ಸಮಸ್ಯೆಯಾಗಿಲ್ಲ ಎಂದು ದೇವಸ್ಥಾನಗಳಿಗೆ ಭೇಟಿ ಕೊಡುವಾಗ ಮನವರಿಕೆಯಾಗುತ್ತದೆ.

ಈ ಸಮಸ್ಯೆಗೆ ಪರಿಹಾರವಿಲ್ಲವೇ?  ಬೇರೊಂದು ರೀತಿಯಲ್ಲಿ ಯೋಚಿಸುವಾಗ ನನಗೆ ಅನಿಸಿದ ಕೆಲವು ಅಂಶಗಳು.

ವಾಸ್ತವದಲ್ಲಿ ಇಂತಹ ಸಮಸ್ಯೆಗಳಿಗೆ ಸುಲಭವಾದ ಪರಿಹಾರ ಸಾಧ್ಯವಿದೆ. ಆದರೆ ಅದನ್ನು ಕಂಡುಕೊಳ್ಳುವ ಪ್ರಯತ್ನ ಯಾರು ಮಾಡಬೇಕೋ ಅವರು ಮಾಡುವುದಿಲ್ಲ. ಇಂದು ಪ್ರತಿಯೊಂದು ಜಾತಿ ಪಂಗಡಗಳಿಗೂ ತಮ್ಮದೇ ಆದ ’ಸಮಾಜ ’ ಅಂತ ಇರುತ್ತದೆ. ಅದು ಬ್ರಾಹ್ಮಣ ಶೂದ್ರ ಅಂತ ಭೇದವಿಲ್ಲ. ಹೆಚ್ಚಿನ ಎಲ್ಲಾ ಜಾತಿಯವವರೂ ತಮ್ಮದೇ ಒಂದು ಸಮಾಜ ಅಥವಾ ಸಂಘವನ್ನು ಕಟ್ಟಿರುತ್ತಾರೆ.  ತಮ್ಮ ಪಂಗಡಗಳ ಸಮಸ್ಯೆಗಳನ್ನು ಸ್ವತಃ ಪರಿಹರಿಸಿಕೊಳ್ಳುವುದಕ್ಕೆ ಅದೊಂದು ವೇದಿಕೆ.  ಅದೇ ರೀತಿ ಬ್ರಾಹ್ಮಣರಲ್ಲೂ ಬ್ರಾಹ್ಮಣ ಸಮಾಜವಿದೆ. ಆದರೆ ಯಾರೋಬ್ಬರೂ ಈ ಮೂಲಭೂತವಾದ ಸಮಸ್ಯೆಗಳಿಗೆ ಆದ್ಯತೆ ಕೊಡದಿರುವುದು ಆಶ್ಚರ್ಯವನ್ನು ತರುತ್ತದೆ. ಹಾಗಾದರೆ ಈ ಬ್ರಾಹ್ಮಣ ಸಮಾಜ ಇರುವುದು ಯಾವ ಕಾರ್ಯಕ್ಕೆ?

ಒಂದು ಹಳ್ಳಿಯ ದೇವಸ್ಥಾನವೆಂದರೆ ಶುದ್ದ ಸಂಸ್ಕಾರ ರೂಪುಗೊಳ್ಳುವುದೇ ಇಲ್ಲಿಂದ. ಅದೇ ಸಂಸ್ಕಾರ ಜೀವನ ಪರ್ಯಂತ ನಮ್ಮೊಂದಿಗೆ ಇರುತ್ತದೆ. ಆ ಸಂಸ್ಕಾರವನ್ನು ಉಳಿಸುವ ಕೆಲಸವನ್ನು ’ಸಮಾಜ ಅಥವಾ ಸಂಘ’  ಮಾಡಬೇಕಾಗಿದೆ. ದೇವಸ್ಥಾನ ಪೂಜೆ ಪುನಸ್ಕಾರಗಳು ಅಲ್ಲಿನ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಶ್ರಮಿಸಬೇಕಾಗಿದೆ. ಆದರೆ ವಾಸ್ತವದಲ್ಲಿ ಸಮಾಜಗಳು ಹೇಗಿರುತ್ತವೆ ಎಂದರೆ ಅದ್ದೂರಿ ಶ್ರೀಮಂತಿಕೆಯ ಸ್ವಪ್ರತಿಷ್ಠೆಯ ’ಕ್ಲಬ್ಬು’  ಗಳಂತೆ ಇರುತ್ತವೆ. ಇಂಹ ಮೂಲ ಭೂತ ಸಮಸ್ಯೆಗಳು ಕಣ್ಣಿಗೆ ಕಾಣಿಸುವುದಿಲ್ಲ. ಯಾವುದೋ ಒಂದು ದೇವಸ್ಥಾನದಲ್ಲಿ ಒಬ್ಬ ಭಟ್ಟ , ನಮ್ಮದೇ ಸಮಾಜದವನಾದರು ಎಲ್ಲಿಗೂ ಹೋಗದೆ ಅನಧಿಕೃತ ಖೈದಿಯಾಗಿದ್ದಾನೆ ಎಂದು ಗಮನಿಸುವುದಕ್ಕೆ ಹೋಗುವುದಿಲ್ಲ. ಅದೇ ಸಮಾಜದ ಗಣ್ಯವ್ಯಕ್ತಿಗಳು ಹೇಗಿರುತ್ತಾರೆ, ತನ್ನ ಮಗ ಒಳ್ಳೆ ಕಲಿತು ನಗರದಲ್ಲಿ ಒಳ್ಳೆ ಮನೆ ಪ್ಲಾಟ್ ಎಲ್ಲ ಮಾಡಿಕೊಂಡು ಆರಾಮವಾಗಿರಲಿ ಎಂದು ಬಯಸುತ್ತಾರೆ ವಿನಃ ಅರ್ಚಕನ ಮಗ ಅರ್ಚಕನೇ ಆಗಿರಲಿ ಮತ್ತವನು ಎಲ್ಲಾ ಹಕ್ಕುಗಳಿಂದ ದೂರವಿದ್ದರೂ ಅವರಿಗೆ ಚಿಂತೆ ಇರುವುದಿಲ್ಲ.  ಬ್ರಾಹ್ಮಣ ಅರ್ಚಕನಾಗುವುದು ಪೂರ್ವ ಜನ್ಮ ಸುಕೃತದ ಫಲ ಎಂದುಕೊಳ್ಳುವುದು ದೂರದ ಮಾತು. ಆತನಿಗೆ ವಿವಾಹಕ್ಕೇ ಹೆಣ್ಣೇ ಸಿಗುವುದಿಲ್ಲ.

ಈಗಿನ ಹಲವು ಸಮಾಜದ ಚಟುವಟಿಕೆಗೆಳು ವಿಚಿತ್ರವಾಗಿರುತ್ತವೆ. ವರ್ಷಕ್ಕೊಮ್ಮೆ ಸರಕಾರಿ ಸಂಘಸಂಸ್ಥೆಯ ಕಾನೂನಿನಂತೆ  ಒಂದು ಸಲ ಮಹಾ ಸಭೆ ಸೇರುತ್ತಾರೆ. ಏನೇನೋ ಕಾರ್ಯಕ್ರಮಗಳು ಇರುತ್ತವೆ. ಲಕ್ಷ ಸಾವಿರ ಖರ್ಚು ಮಾಡಿ ಮಧ್ಯಾಹ್ನ ಭೂರಿ ಭೋಜನ. ಯಾಕೆ ಇದನ್ನೆಲ್ಲ ಸರಳವಾಗಿ ಆಚರಿಸುವುದಕ್ಕೆ ಸಾಧ್ಯವಿಲ್ಲವೇ? ವರ್ಷಕ್ಕೊಮ್ಮೆ ಸೇರಿ ಹೊಟ್ಟೇ ಬಿರಿವಂತೆ ತಿಂದು ಅಪಾನವಾಯು ಬಿಡುವುದಕ್ಕಷ್ಟೇ  ಚಟುವಟಿಕೆ ಸೀಮಿತವೇ.  ಬ್ರಾಹ್ಮಣೊ ಭೋಜನ ಪ್ರಿಯ ಎಂಬುದನ್ನು ಸಾರ್ಥಕ ಪಡಿಸುವ ಇಂತಹ ಆಡಂಬರದ ಆಚರಣೆಗಳು ನಿಲ್ಲಬೇಕು. ಅಲ್ಲದೇ ಯಾವುದೋ ಸಾಂಸ್ಕೃತಿಕ ಕಾರ್ಯಕ್ರಮ ,  ಕಬಡಿ ವಾಲಿಬಾಲ್ ಕ್ರಿಕೇಟ್ ಆಡಿದ್ದರಲ್ಲಿ ಯಾವ ಬ್ರಾಹ್ಮಣ ಸಂಸ್ಕಾರ ಉದ್ದಾರವಾಗುತ್ತದೆ? ಯುವಜನರನ್ನು ಈ ಕ್ಲಬ್ಬು ಗಳಿ ಆಕರ್ಷಿಸುವುದಕ್ಕೆ ಈ ಕ್ರೀಡೆಗಳು ಅಂತ ಕಾರಣವಿರುತ್ತದೆ. ಈ ಅಕರ್ಷಣೆಯಿಂದ ಬಂದ ಬಂದ ಯುವಕರಿಗೆ ಸಿಗುವ ದರ್ಶನವಾದರೂ ಏನು?  ಸ್ವ ಪ್ರತಿಷ್ಥೆಯ ಒಳ ರಾಜಕೀಯಗಳು.   ಕ್ರೀಡಾ ಸಾಂಸ್ಕೃತಿಕ ಚಟುವಟಿಗೆಗಳಿಗೆಂದೇ ಹಲವ ಸಂಘ ಸಂಸ್ಥೆಗಳಿವೆ.ಆದುದರಿಂದ ಭ್ರಾಹ್ಮಣ್ಯದ ಮೂಲಭೂತ ಅಗತ್ಯಗಳನ್ನು ಚಿಂತಿಸುವಲ್ಲಿ ಸಮಾಜವೇ ಮುಂದೆ ಬರಬೇಕು.  ಸಮಾಜ ಸಂಸ್ಥೆಗಳು ಇಂತಹ ಹಳ್ಳಿಯ ದೇವಸ್ಥಾನಗಳ ಅಳಿವು ಉಳಿವಿನ ಸಮಸ್ಯೆ ಬಗೆಹರಿಸುವತ್ತ ಗಮನ ಹರಿಸಬೇಕು. ದೇವಸ್ಥಾನದ ಪೂಜೆಗೆ ಬದಲೀ ಅರ್ಚಕರನ್ನು ನಿಯಮಿಸಬೇಕು. ಕೇವಲ ನಗರದ ಬ್ರಾಹ್ಮಣನಾಗಿ ಶಾಲು ಹೆಗಲಿಗೆ ಸುತ್ತಿಕೊಳ್ಳುವಲ್ಲಿಗೇ ಸಮಾಜದ ಚಟುವಟಿಕೆ ಕ್ರಿಯಾಕ್ಷೇತ್ರ ಸೀಮಿತವಾಗ ಕೂಡದು.  ಒಂದು ಸಮಾಜ ಒಕ್ಕೂಟವಾಗಿ ಮನಸ್ಸು ಮಾಡಿದರೆ ಇಂತಹ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುವುದಕ್ಕೆ ಸಾಧ್ಯವಿದೆ. ಅರ್ಚಕ ಪುರೋಹಿತ ವರ್ಗ ಮುಖ್ಯವಾಹಿನಿಯಿಂದ ಪ್ರತ್ಯೇಕವಾಗಿ ನಿಲ್ಲುವ ಹಂತದಲ್ಲಿ ಸಮಾಜ ಜಾಗರೂಕವಾಗಿರಬೇಕು.

ಇಂದು ಸಮಾಜವೆಂದರೆ ಕೇವಲ ವ್ಯಯಕ್ತಿಕ ಪ್ರತಿಷ್ಠೆಯ ಪ್ರದರ್ಶನದ ವೇದಿಕೆಯಾಗಿದೆ. ( ಎಲ್ಲವೂ ಅಲ್ಲ ) ಗುಂಪುಗಾರಿಕೆ, ರಾಜಕೀಯ ಮತ್ಸರ ಹೀಗೆ ಸ್ವಾರ್ಥ ಸಾಧನೆಯನ್ನೇ ಇಲ್ಲಿ ಕಾಣಬಹುದು. ಸಾರ್ವಜನಿಕ ಜೀವನ,  ಇಂತಹ ಸಂಘ   ಸಂಸ್ಥೆಯ ಚಟುವಟಿಕೆಗಳ ಮುಖ್ಯ ಉದ್ದೇಶ, ನಮ್ಮ ದೈನಂದಿನ ಬದುಕಿನ ಸಮಸ್ಯೆ ಜಂಜಡಗಳಿಂದ ದೂರಾಗಿ ಅಲ್ಲೊಂದಿಷ್ಟು ನೆಮ್ಮದಿಯನ್ನು ಕಾಣುವ ಹಾಗಿರಬೇಕು. ಆದರೆ ಅಲ್ಲೂ ಇದೇ ಆದರೆ ಮತ್ತೆ ಸಾರ್ವಜನಿಕ ಸೇವಾ ಜೀವನದ ಆವಶ್ಯಕತೆಯಾದರೂ ಏನು? ವ್ಯಾವಹಾರಿಕ ಜೀವನದಲ್ಲಿ ಜಗಳ ದ್ವೇಷ ಎಲ್ಲವನ್ನು ಕಾರಣಾಂತರಗಳಿಂದ ಒಪ್ಪಿ ಜೀವನ ಮಾಡುವ ಅನಿವಾರ್ಯತೆ ಇದೆ. ಆದರೆ ಸಮಾದಲ್ಲೂ ಹೋಗಿ ಅದನ್ನೇ ಮಾಡುವುದಾದರೆ ಮನುಷ್ಯ ಹುಟ್ಟಿರುವುದು ಕೇವಲ ಸಮಸ್ಯೆಯನ್ನು ಅನುಭವಿಸುವ ಪರಮೋದ್ದೇಶವೇ?

ಇಂದು ಸಮಾಜ ಸಾರ್ವಜನಿಕವಾಗಿ ಆಚರಿಸುವ ಕಾರ್ಯಕ್ರಮಗಳಿಗಷ್ಟೇ ಮನಸ್ಸು ಮಾಡುತ್ತದೆ. ಬ್ರಾಹ್ಮಣ ಎಂಬ ತತ್ವಕ್ಕೆ ಬದ್ಧವಾಗಿ ಯಾವ ಕಾರ್ಯ ಪ್ರವೃತ್ತಿಯೂ ಇರುವುದಿಲ್ಲ. ಎಷ್ಟು ಜನ ಮನೆಯಲ್ಲಿ ಸಂಧ್ಯಾವಂದನೆ ಮಾಡುತ್ತಾರೆ ? ಎಷ್ಟು ಜನ ತಮ್ಮ ಪಿತೃಗಳ ಶ್ರಾದ್ಧ ಮಾಡುತ್ತಾರೆ? ಆ ಸಮೀಕ್ಷೆ ನಡೆಸಿದರೆ ಗಾಬರಿ ಹುಟ್ಟಿಸುವ ಉತ್ತರಗಳು ಸಿಗುತ್ತವೆ. ಯಾಕೆಂದರೆ ಇವುಗಳೆಲ್ಲ ತೀರಾ ಖಾಸಗಿಯಾಗಿ ಆಚರಿಸುವ ಕಾರ್ಯಕಗಳು. ಇದನ್ನು ಯಾರೂ ನೋಡುವುದಿಲ್ಲ. ಅದೇ ಹತ್ತು ಜನ ಕಾಣುವ ಪ್ರದರ್ಶನ ಪೂಜೆ ಪುನಸ್ಕಾರಗಳನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಬ್ರಾಹ್ಮಣ ಬ್ರಹ್ಮೋಪದೇಶ ಅಂತ ಯಜ್ಞೋಪವಿತ ಸುತ್ತಿದರೆ ಸಾಕೆ? ಬ್ರಾಹ್ಮಣ ಶಬ್ದದ ಅರ್ಥವನ್ನೂ ಅರಿಯುವ ಪ್ರಯತ್ನ ಮಾಡಬೇಕು. ಸ್ವಂತ ಪಿತೃಗಳ ಶ್ರಾದ್ದಮಾಡಿ ತರ್ಪಣ ಬಿಡದವರೂ ಉಪಾಕರ್ಮದಂತಹ ಕಾರ್ಯಗಳಲ್ಲಿ ಶಾಲು ಹೊದೆದು ಮುಂಚೂಣಿಯಲ್ಲಿ ಮಿಂಚುತ್ತಾರೆ. ಯಾಕೆ? ಇದನ್ನು ನೋಡುವುದಕ್ಕೆ ಹಲವರು ಇರುತ್ತಾರೆ. ಕತ್ತಲೆಯಲ್ಲಿ ಬಿಡುವ ಪಿತೃ ತರ್ಪಣ ಯಾರು ನೋಡುತ್ತಾರೆ?  ಕಾಟಾಚಾರದ ಆಚರಣೆಗಳು ಕೇವಲ ಇನ್ನೊಬ್ಬರಿಗೆ ಪ್ರದರ್ಶನ ವಿಚಾರವನ್ನು ಮಾತ್ರ ಆಧರಿಸುತ್ತದೆ.  ’ನಮೋ ಬ್ರಹ್ಮಣೇ ಪ್ರಜಾಪತಿ...’ ಅಂತ ಮಂತ್ರ ಹೇಳಿ ಆ ಬ್ರಹ್ಮ ಪದದತ್ತ ದೃಷ್ಟಿ ಹರಿಸುವಾಗ ಅಲ್ಲಿಗೆ ಸಂಚರಿಸುವ ಮಾರ್ಗವೂ ಮುಖ್ಯವಾಗಿರುತ್ತದೆ. ಕಾಟಾಚಾರದ ಆಚರಣೆ ಈ ಪದವಿಯನ್ನು ಒದಗಿಸುವುದಿಲ್ಲ. ಹಲವು ಸಲ ಕಾಟಾಚಾರಕ್ಕೆ ಮಾಡುವ ಜಪ ತಪಗಳು ಹೇಗಿರುತ್ತವೆ ಎಂದರೆ ಪರಮಾತ್ಮನೇ ಸ್ವತಃ   ಬಂದು ಇವರ ಕಾಲು ಹಿಡಿದು ಬೇಡುತ್ತಿರಬೇಕು ಅಂತ ಅನ್ನಿಸುತ್ತದೆ.  ಅಷ್ಟು ಅಸಡ್ಡೆ.   ಸಮಾಜ ಈ ವಿಚಾರಗಳಲ್ಲಿ ಜಾಗೃತಿಯನ್ನು ಉಂಟು ಮಾಡಿ ಬ್ರಾಹ್ಮಣ ಸಂಸ್ಕಾರದ ಮೂಲಭೂತ ತತ್ವವನ್ನು ಉಳಿಸುವಲ್ಲಿ ಶ್ರಮಿಸಬೇಕು. ಅದ್ದೂರಿ ಭೋಜನ ಮಾಡದೇ ಇದ್ದರೂ ತೊಂದರೆ ಇಲ್ಲ. ಈಗ ಒಪ್ಪೊತ್ತಿನ ಊಟ ಇಲ್ಲದ ಬಡ ಬ್ರಾಹ್ಮಣರ ಸಂಖ್ಯೆ ಬಹಳ ಕಡಿಮೆ ಇದೆ.  ಬ್ರಾಹ್ಮಣ ಭೋಜನ ಪ್ರಿಯ ಅಂತ ಹೇಳುವಷ್ಟೂ ಆರೋಗ್ಯ ನೆಟ್ಟಗಿರುವುದಿಲ್ಲ.

ಸಮಾಜ, ಕೇವಲ ಸಮಾಜಮುಖಿಯಾಗಿ ಚಿಂತಿಸಿದರೆ ಸಾಲದು. ಸಂಸ್ಕಾರ ಮುಖಿಯಾಗಿಯೂ ಚಿಂತಿಸಬೇಕು..    ಹಾಗಿದ್ದಲ್ಲಿ ಮೂಲಭೂತವಾದ ಸಮಸ್ಯೆಗಳಿಗೆ ಪರಿಹಾರ ಸಾಧ್ಯವಾಗುತ್ತದೆ. ಪರಸ್ಪರ ಸೌಹಾರ್ದ ಬದುಕೂ ಸಾಧ್ಯವಾಗುತ್ತದೆ. ಶುದ್ದ ಸಂಸ್ಕಾರಗಳು ಶಿಥಿಲವಾದರೆ ಸಮಾಜವು ಶಿಥಿಲವಾದಂತೆ ಹೆಸರು ಪ್ರತಿಷ್ಥೆ ಇವುಗಳಿಂದ ಸಮಾಜ ಹೊರತಾಗಿ ಚಿಂತಿಸಬೇಕಾಗಿದೆ.