Thursday, March 31, 2022

ವಿಚ್ಛೇದನೆ ಒಂದು ಮೋಚನೆಯೇ?

            ಜಯನಗರಕ್ಕೆ ಹೋಗುವುದಕ್ಕೆ ಅಪ್ಪ ಮಗನನ್ನು ಜತೆಗೆ ಕರೆದ. ಮಗ ಕಾರು ರಸ್ತೆಗೆ ಇಳಿಸಿ ಮೊಬೈಲ್ ತೆಗೆದು ಗೂಗಲ್ ನಕ್ಷೆ ಹಾಕಿ ನೋಡಿದ. ಅಪ್ಪ ವಾಡಿಕೆಯಂತೆ ಹೇಳಿದ, ಜಯನಗರ ಏನು ನಮಗೆ ತಿಳಿಯದ ಜಾಗವೇ? ಎಲ್ಲಿ ವಾಹನ ದಟ್ಟನೆಯಾವುದು ಹತ್ತಿರ ? ಎಲ್ಲವು ತಿಳಿದಿರುವಾಗ ಈ ಮ್ಯಾಪ್ ಯಾಕೆ? ಆಗ ಮಗ ಹೇಳಿದ ಈಗ ಕಾಲ ಬದಲಾಗಿದೆ. ನಾವು ತಂತ್ರಜ್ಜಾನ ಉಪಯೋಗಿಸಬೇಕು. ನಿಮ್ಮ ಕಾಲದಲ್ಲಿದ್ದ ಹಾಗೆ ರಸ್ತೆ ಈಗ ಇಲ್ಲ.  ಹೀಗೆ ಅಪ್ಪನ ಮಾತು ಕೇಳದೆ ಗೂಗಲ್ ಅಮ್ಮನ ಮಾತಿಗೆ ಮಗ ಕಿವಿಯಗಲಿಸಿದ.

         ಸಹಜವಾಗಿ ಮನೆಯಿಂದ ಹೊರಗಡೆ ಹೋಗಬೇಕಿದ್ದರೆ, ಕೈಯಲ್ಲಿದ್ದ ಮೊಬೈಲ್ ನಲ್ಲಿ ಮ್ಯಾಪ್ ಹಾಕಿ ಮ್ಯಾಪ್ ರೂಟ್ ನೋಡುತ್ತೇವೆ. ಯಾವ ದಾರಿ ಹತ್ತಿರ, ಯಾವ ರಸ್ತೆಯಲ್ಲಿ ವಾಹನ ಸಂಚಾರ ಕಡಿಮೆ ಇದೆ ಹೀಗೆ ತಮಗೆ ಅನುಕೂಲಕರ ದಾರಿಯನ್ನು ನಮ್ಮ ಗಮ್ಯ ಸೇರುವುದಕ್ಕೆ ಹುಡುಕುತ್ತೇವೆ. ಭೂಮಿಯ ಯಾವುದೇ ಸ್ಥಳವನ್ನು ಸುಲಭದಲ್ಲಿ ಗುರುತಿಸಿ ದಾರಿ ತೋರಿಸಲು ಗೂಗಲ್ ಮ್ಯಾಪ್ ಇದೆ. ಆದರೆ ಬದುಕಿನ ಹಾದಿ ತೋರಿಸಲು ನಮ್ಮ ಅನುಭವದ ಜ್ಞಾನವೇ ಅತ್ಯವಶ್ಯ. ಈಗ ಅದನ್ನು ಮರೆತು ನಾವು ಬದುಕಿನ ಹಾದಿಯನ್ನು ಗುರುತಿಸುವಲ್ಲಿ ಎಡವುತ್ತೇವೆ. ಬದುಕಿನ ನಕ್ಷೆಯ ರೇಖೆಗಳು ನಮಗೆ ಕಾಣದಾಗಿವೆ.

    ನಮ್ಮ ಮನೆಯ ಬೀದಿಯಲ್ಲೇ  ಒಂದು ದೊಡ್ಡ ಸಂಸಾರವಿದೆ. ಕೆಲವು ವರ್ಷದ ಕೆಳಗೆ ಹೆಣ್ಣೊಬ್ಬಳು ಆ ಮನೆಯ ಮಗನನ್ನು ಮದುವೆಯಾಗಿ ಬರುತ್ತಾಳೆ. ಸರಿ ಸುಮಾರು ನನ್ನ ಮಗನ ವಯಸ್ಸು. ಬಹಳ ಸಿರಿವಂತ ಮನೆಯ ಹೆಣ್ಣು ಮಗಳಾದರು ಆಕೆ ನೋಡುವುದಕ್ಕೆ ಬಹಳ ಸಾಧು. ಮುಂಜಾನೆ ಆಕೆ ಮನೆ ಸ್ವಚ್ಛ ಮಾಡುವುದು, ಅದು ಇದು ಕೆಲಸ ಅಂತ ಓಡಾಡುವುದು ನಮ್ಮ ಮನೆಗೆ ಕಾಣುತ್ತಿತ್ತು. ಹಲವು ಸಲ ನಮ್ಮ ಮನೆಗೆ ನೋಡಿ ಕಿರುನಗು ಬೀರುತ್ತಿದ್ದಳು. ಎಲ್ಲೋ ಮೊಳಕೆಯೊಡೆದ ಬೀಜ ಇನ್ನೊಂದೆಡೆ ಬೆಳೆದು ಗಿಡವಾಗಿ ಬದುಕು ಕಂಡಂತೆ ಆಕೆ ಅದುವರೆಗೆ ತಾನು ಬೆಳೆದ ತಾಯಿ ಮನೆಯ ಮಡಿಲನ್ನು ಬಿಟ್ಟು ಇಲ್ಲಿ ಬಂದಿದ್ದಳು. ಹೆಣ್ಣೆಂದರೆ ಹಾಗೇ ಅಲ್ಲವೇ?  ಕಂಡು ಕೇಳರಿಯದ ಜಾಗದಲ್ಲಿ ತನ್ನ ಬದುಕನ್ನು ಕಾಣುವ ಕಲೆಯನ್ನು ಹೆಣ್ಣಿಗೆ ದೇವರು ಕರುಣಿಸಿದ್ದಾನೆ. ಸದಾ ಚುರುಕಾಗಿ ಇದ್ದ  ಸುಂದರ ಹೆಣ್ಣು ಮಗಳು ಕೆಲ ಸಮಯದಲ್ಲೇ ಮಗುವನ್ನು ಹೆತ್ತು ತಾಯಿಯಾದಳು.  ಪುಟ್ಟ ಮಗು ನಮ್ಮ ಮನೆ ಎದುರೇ ಬೆಳೆಯುತ್ತಿತ್ತು. ಸ್ವಲ್ಪ ಶ್ರೀಮಂತ ಸಂಸಾರ. ಸ್ವಂತ ವ್ಯಾಪಾರ, ದೊಡ್ಡ ಮನೆಯಲ್ಲಿ ಹಲವು ಬಾಡಿಗೆ ಮನೆಗಳೂ ಇದ್ದು ತಕ್ಕ ಮಟ್ಟಿಗೆ ಶ್ರೀಮಂತ ಕುಟುಂಬ. ಹೆಣ್ಣು ಸುಖವಾಗಿದ್ದಾಳೆ ಎಂದು ಅಂದುಕೊಂಡರೆ, ಕೆಲವು ಸಮಯದಿಂದ ಆಕೆ ಕಾಣುತ್ತಿಲ್ಲ. ನಗು ಮುಖದ ತರುಣಿಗೆ ಇದ್ದಕ್ಕಿದ್ದಂತೆ ಏನಾಯಿತು? ಇಷ್ಟೇ  ಹೆತ್ತ ಮಗುವನ್ನು ಬಿಟ್ಟು ದೂರ ಹೋದ ಆಕೆ ವಿಚ್ಛೇದನದ ಹಾದಿ ಹಿಡಿದದ್ದು ಆಘಾತಕರ ಸುದ್ದಿ.

ನನ್ನ ಪರಿಚಯಸ್ಥ ಮತ್ತೊಬ್ಬಳು ತರುಣಿ, ಉತ್ತಮ ವಿದ್ಯಾವಂತೆ, ಉದ್ಯೋಗದಲ್ಲಿದ್ದವಳು, ಪ್ರೇಮಿಸಿ ಮದುವೆಯಾದಳು. ಮದುವೆಗೆ ಸರಿಸುಮಾರು ಮೂವತ್ತು ಲಕ್ಷದಷ್ಟು ಖರ್ಚಾಯಿತು. ಅದಕ್ಕೂ ಕಾರಣಗಳು ಹಲವು. ಮದುವೆಯಾಗಿ ಒಂದು ವರ್ಷಕ್ಕೇ ವಿಚ್ಚೇದನವಾಯಿತು. ಮದುವೆಗೆ ಮಾಡಿದ ಸಾಲ ಇನ್ನೂ ಸಂದಾಯ ಮಾಡುವುದಕ್ಕೆ ಬಾಕಿ ಇದೆ. ಯಾವ ಸ್ಮರಣೆಗೆ ಆ ಸಾಲ ತೀರಿಸಬೇಕು?

     ಇದು ಹೆಣ್ಣುಗಳ ಕಥೆ ಮಾತ್ರವಲ್ಲ. ನನ್ನ ಬಳಗದಲ್ಲೇ ಹಲವಾರು ಹುಡುಗರು ಇದ್ದಾರೆ. ಯಾವುದೋ ಕಾರಣಕ್ಕೆ ಬದುಕಿನಲ್ಲಿ ಏಕಾಂಗಿಯಾದವರು. ಇದರಲ್ಲಿ ಕೇವಲ ಹೆಣ್ಣನ್ನು ಮಾತ್ರ ಶೋಷಿತೆ ಎನ್ನುವ ಹಾಗಿಲ್ಲ. ವಿಚ್ಛೇದನ ಬಹುಶಃ ಕಾನೂನಾಗಿ ಮನುಷ್ಯನ ಹಕ್ಕಾಗಿ ಬದಲಾಗುವಾಗ ಅದು ಕೇವಲ ಹೆಣ್ಣಿನ ದೃಷ್ಟಿಕೋನದಲ್ಲೇ ಇತ್ತು ಅಂತ ಅನ್ನಿಸುತ್ತದೆ. ಯಾಕೆಂದರೆ, ಜೀವನಾಂಶ ಹೆಣ್ಣು ಮಾತ್ರ ಪಡೆಯುವುದಕ್ಕೆ ಅರ್ಹಳು. ಆದರೆ ಈಗ ವಾಸ್ತವ ಇದಕ್ಕಿಂತ ಭಿನ್ನ. ಗಂಡೂ ಸಹ ದೌರ್ಜನ್ಯದ ಬಲಿ ಪಶು ವಾಗುತ್ತಾನೆ. ಸಮಸ್ಯೆಗಳೇನಿದ್ದರೂ ಅದು ವೈಯಕ್ತಿಕ. ಅವರವರ ಬದುಕು.

         ವಿಚ್ಚೇದನ ಅಥವಾ ಡೈವರ್ಸ್....ಬದುಕಿನ ಹಾದಿ ಎರಡಾಗುವುದು ಎಂದರೆ ನಮ್ಮ ಬದುಕಿನ ನಕ್ಷೆಯ ರೇಖೆಆ ಹಾದಿ ತಪ್ಪಿದ್ದನ್ನು ತೋರಿಸುತ್ತದೆ.  ವಿಚ್ಛೇದನ ಎಂದಕೂಡಲೇ ಹಲವರು , ಖಾಸಗೀತನ ಕತೆಗಳನ್ನು ತಿಳಿಯಲು ಕುತೂಹಲಿಗಳಾಗುತ್ತಾರೆ. ಅನುಕಂಪದ ಲೇಪನದಲ್ಲಿ ಕಥೆಯನ್ನು ಕೇಳುವ ಇವರಿಗೆ ಕಥೆಯನ್ನು ತಿಳಿದಕೂಡಲೇ ಅದನ್ನು ಮತ್ತೊಬ್ಬರಿಗೆ ತಿಳಿಸುವ ತವಕ ಹೆಚ್ಚುತ್ತದೆ.  ಇಷ್ಟಕ್ಕೇ ವಿಚ್ಛೇದನ ಎಂಬುದು ವರ್ಣ ರಂಜಿತ ಕಥೆಯಾಗಿ ಸಮಾಜ ಕಾಣುತ್ತದೆ. ಹೀಗೆ ಖಾಸಗೀತನ ಸಾರ್ವಜನಿಕವಾಗುವುದು ಒಂದು ರೀತಿಯ ಕ್ರೌರ್ಯ.  ಇದರಲ್ಲಿ ಅಂಗವಾಗುವ ನೋವು ಅದು ಅನುಭವಿಸಿದವರಿಗೆ ಅರಿವಾಗುತ್ತದೆ.

           ಚಿನ್ನದ ಸಂಕಲೆಯಾದರೂ ಅದರಲ್ಲಿ ಬಂಧಿಸಿದರೆ ಅದು ಬಂಧನವೇ ಆಗುತ್ತದೆ. ಮನುಷ್ಯನ ಜೀವನವನ್ನು ಆಧ್ಯಾತ್ಮ ದೃಷ್ಟಿಯಲ್ಲಿ ಕಂಡವರು ಸನಾತನಿಗಳು. ಹಾಗಂತ ಗೃಹಸ್ಥ ಜೀವನ ಎಂದರೆ ಅದು ಮೋಕ್ಷಕ್ಕಿರುವ ಸುಲಭ ಮಾರ್ಗ ಎಂದು ಭಗವಂತನೇ ಹೇಳಿರುತ್ತಾನೆ. ಆದರೆ ಅದೇ ಗೃಹಸ್ಥ ಜೀವನದ ಹಾದಿ ನಕ್ಷೆಯಿಲ್ಲದೆ ಚದುರಿ ಹೋಗುವುದು ನಾವು ಜೀವನವನ್ನು ಕಾಣುವ ದೃಷ್ಟಿಕೋನವೇ ಕಾರಣ. ನಮ್ಮ ಮನಸ್ಸಿಗಂಟಿರುವ ಅತೃಪ್ತ ಪಿಶಾಚತ್ವ ಪರಿಹರಿಸಲಾಗದೆ ಅಂಟಿಕೊಂಡಿರುತ್ತದೆ.

     ದೃಷ್ಟಿ ಮಂದವಾಗುವಾಗ ಎಲ್ಲವೂ ಅಸ್ಪಷ್ಟ. ದೃಷ್ಟಿ ನಿಚ್ಚಳವಾಗುವುದಕ್ಕೆ ಕಣ್ಣಿಗೆ ದೃಷ್ಟಿ ಚಕ್ರವನ್ನು ಇಟ್ಟು ನೋಡಿದರೆ ಬೇಕಾಗಿರುವುದು ನಿಚ್ಚಳವಾಗಿ ಕಂಡಂತೆ ಬೇಡದೇ ಇರುವವುಗಳೂ ಕಣ್ಣಿಗೆ ರಾಚುತ್ತವೆ. ದೃಷ್ಟಿ ನಿಚ್ಚಳವಾದಂತೆ ಬುದ್ದಿಯೂ ಹರಿತವಾಗಬೇಕು. ಮನಸ್ಸನ್ನು ಬುದ್ಧಿ ನಿಯಂತ್ರಿಸುತ್ತದೆ. ಹಾಗಾಗಿ ಬುದ್ಧಿ ಜ್ಞಾನದ ಸಂಕೇತ  ಮೊದಲು ಮದುವೆಯಾದಾಗ ದೀರ್ಘಸುಮಂಗಲೀ ಭವ ಎಂದು ಜೀವ ಉಳಿವಂತೆ ಹರಸಿದರೆ, ಇಂದು ಬೇರೆಯಾಗದೆ ಒಂದಾಗಿ ಬದುಕು ನಡೆಸಲಿ ಎಂದು ಹರಸಬೇಕಾಗುವ ಅನಿವಾರ್ಯಾತೆ ಇದೆ.  ಯಾಕೆಂದರೆ ಜೀವ ಬದುಕು ಉಳಿದರೂ ಒಂದಾಗಿ ಇರುತ್ತಾರೆ ಎಂಬುದರ ಭರವಸೆ ಇಲ್ಲ. ವಿವಾಹವಾಗಿ ಇಪ್ಪತ್ತೈದು ಐವತ್ತು ತುಂಬಿದಾಗ ಉತ್ಸವದಂತೆ ಆಚರಿಸುತ್ತೇವೆ. ಇಂದಿನ ಪರಿಸರದಲ್ಲಿ ಇದೊಂದು ವಿಜಯೋತ್ಸವದಂತೆ ಭಾಸವಾಗುತ್ತದೆ. ಮನುಷ್ಯನಿಗೆ ಬುದ್ದಿ ಜ್ಞಾನ ಹೆಚ್ಚಾದಷ್ಟೂ ಆಕಾಂಕ್ಷೆಗಳು ಬೆಳೆಯುತ್ತವೆ. ಆಯ್ಕೆಗಳೂ ವಿಶಾಲವಾಗುತ್ತವೆ. ಇಂದಿನ ಹಲವು ಸಮಸ್ಯೆಗಳು ಹುಟ್ಟಿಕೊಳ್ಳುವುದು ಇದೇ ಕಾರಣಕ್ಕೆ.  ನಮ್ಮ ಹಿರಿಯರ ಆಯ್ಕೆ ಸೀಮಿತವಾಗಿತ್ತು. ಹಾಗಾಗಿ ಒಂದೂ ವಿಚ್ಛೇದನಗಳು ಸಂಭವಿಸದ ಕುಟುಂಬಗಳು ಹಲವಿದ್ದವು. ಈಗ ಸ್ಥಿತಿ ಬದಲಾಗಿದೆ. ವಿಚ್ಛೇದನ ಇಲ್ಲದ ಕುಟುಂಬ ಹುಡುಕಿದರೂ ಸಿಗಲಾರದು. ನಮ್ಮ ಬದುಕಿನ ದೃಷ್ಟಿಕೋನ ಯಾಕೆ ಇಷ್ಟು ಸಂಕುಚಿತವಾಗುತ್ತದೆ.  ಕೊರೋನ ಚೀನದಲ್ಲಿ ಹುಟ್ಟಿದಾಗ ಚೀನದಲ್ಲಿ ಅಲ್ವಾ.ನಾವು ಕಾಣದೇ ಇರುವ ಜಾಗ. ಆದರೆ ಅದೇ ಕರೋನ ನಮ್ಮ ಮನೆಬಾಗಿಲಿಗೆ ಬಂದು ಕದ ತಟ್ಟುವಾಗ ವಾಸ್ತವಕ್ಕೆ ಇಳಿದು ಬಿಟ್ಟಿದ್ದೇವೆ. ಮೊದಲು ವಿಚ್ಛೇದನ ಎಲ್ಲೋ ಕಾದಂಬರಿ ಸಿನಿಮಾದಲ್ಲಿ ಕಾಣುತ್ತಿದ್ದೆವು. ಬರ ಬರುತ್ತಾ ಎಲ್ಲೊ ಇದ್ದದ್ದು ಪ್ರತಿಯೊಂದು ಕುಟುಂಬಕ್ಕೂ ಅದು ಅವಕಾಶವಾಗಿ ಹೋಯಿತು.

        ಮನೆಯಲ್ಲಿ ನಮ್ಮ ಹಿರಿಯರು  ಉಪಯೋಗಿಸಿದ ಕೊಡೆ ಪೆನ್ನು ಚಪ್ಪಲಿ ಹೀಗೆ ಅಭಿಮಾನದಿಂದ ಅವರ ಸ್ಮರಣೆಗೆ ತೆಗೆದಿರುಸುತ್ತೇವೆ. ಆದರೆ ವಿಚ್ಛೇದನ ಕೊಡುವಾಗ ಮಾನಸಿಕ ಸಂಬಂಧಗಳು ಭಾವಾನಾತ್ಮಕ ತುಡಿತಗಳು ಯಾವುದೂ ವಿಚ್ಛೇದನವನ್ನು ತಡೆಯುವುದಿಲ್ಲ. ಆ ಮಧುರ ನೆನಪುಗಳಿಗೆ ಯಾವ ಗೌರವವೂ ಇಲ್ಲದಂತೆ, ಹಳೆ ಉಡುಪು ಕಿತ್ತೆಸೆದಂತೆ ಬದಲಾಯಿಸಿ ಬಿಡುತ್ತೇವೆ. ನನ್ನ ಮಾವನಿಗೆ ಎರಡೇ ಅಂಗಿ ಇತ್ತು. ಅವರಿಗೆ ಎಂದೂ ಆಯ್ಕೆ ಕಷ್ಟವಾಗುತ್ತಿರಲಿಲ್ಲ. ಅದಲ್ಲದಿದ್ದರೆ ಇದು, ಇದಲ್ಲದಿದ್ದರೆ ಅದು. ನಾವು ಆಯ್ಕೆಯ ಪ್ರಪಂಚಕ್ಕೆ ತೆರೆದುಕೊಂಡಂತೆ ನಮ್ಮ ಭಾವನಾತ್ಮಕ ವಿಚಾರಗಳು ಮೌಲ್ಯವನ್ನು ಕಳೆದುಕೊಂಡಿವೆ. ಆಯ್ಕೆಗಳು ಹಲವಾರಾಗಿ ಬದುಕು ಅತಂತ್ರವಾಗಿದೆ.  ವಿಚ್ಛೇದನಅದು ಹಕ್ಕು ಆಗಿರಬಹುದು. ಅದರ ಆಯ್ಕೆ ಸ್ವಾತಂತ್ರ್ಯ ಆಗಿರಬಹುದು. ಅದುವೇ ಒಂದು ಅಸ್ತ್ರವಾಗಿ ಪರಿಹಾರವಾಗಬೇಕಿಲ್ಲ. ನಮ್ಮ ಹಿರಿಯರು ಏನೇ ಕಷ್ಟ ನಷ್ಟ ಹತಾಶೆಗಳಿದ್ದರೂ ಜತೆಯಲ್ಲೇ ಬದುಕಿದರು. ಬದುಕು ಎಂದರೆ ಅದರಿಂದ ಭಿನ್ನವಾಗಿ ಅವರೆಂದೂ ಕಂಡಿಲ್ಲ. ಆದರೆ ನಾವು ನಮ್ಮ ಮಕ್ಕಳಿಗೆ ವಿಚ್ಛೇದನವನ್ನೇ ತೋರಿಸುತ್ತಿದ್ದೇವೆ. ಅಯ್ಕೆಯ ಮುಖಗಳನ್ನು ತೋರಿಸುತ್ತೇವೆ. ಮಕ್ಕಳು ಹಾಗೆ ವಾಹನ ತೆಗೆದುಕೊಂಡಂತೆ ಮತ್ತದನ್ನು ಬದಲಿಸಿದಂತೆ ಗಂಡ ಅಥವಾ ಹೆಂಡತಿಯನ್ನೂ ಬದಲಿಸಿಕೊಳ್ಳುತ್ತಾರೆ. ವಾಹನಕ್ಕೆ ಸವಕಳಿಯ ಲಾಭ ನಷ್ಟವಿದ್ದಂತೆ, ಬದುಕಿನ ಲಾಭ ನಷ್ಟದ ಲೆಕ್ಕಾಚಾರ ಇರುತ್ತದೆ.

        ದೀಪ ಕತ್ತಲೆಯೊಂದಿಗೆ ಹೋರಾಡುತ್ತದೆ. ಹೀಗೆ ಅನಿಸುತ್ತದೆ. ಒಂದು ಸಲ ಕತ್ತಲೆ ದೀಪದಲ್ಲಿ ಕೇಳಿತಂತೆ, ನಿನಗೆ ನನ್ನನ್ನು ಕಂಡರೆ ದ್ವೇಷ ಉಂಟಾ? ದೀಪ ಹೇಳಿತಂತೆ, ನನಗೇಕೆ ದ್ವೇಷ. ನಾನು ಬಂದಾಗ ನೀನೇ ದೂರ ಹೋಗುತ್ತಿರುವೆ. ಅಷ್ಟಕ್ಕೂ ನೀನೆ ನನ್ನ ಸ್ನೇಹಿತ. ಯಾಕೆ ಗೊತ್ತಾ? ನೀನಿದ್ದರೆ ಮಾತ್ರ ನನಗೆ ಬೆಲೆ ಬರುತ್ತದೆ. ನಮ್ಮ ಬದುಕಿನಲ್ಲಿ ಹಲವು ಋಣಾತ್ಮಕ ವಿಚಾರಗಳು ನಮಗೆ ಹೋರಾಟವನ್ನೇ ತೋರಿಸಬಹುದು. ಆದರೆ ಅದನ್ನು ಸ್ವೀಕರಿಸುವ ರೀತಿ ದೀಪ ಕತ್ತಲೆಯೊಡನೆ ತೋರಿಸಿದಂತಿರಬೇಕು.

        ಸೂರ್ಯನೊಡನೆ ಒಬ್ಬ ಹೇಳಿದನಂತೆ, ನೀನು ಹೋದ ಕೂಡಲೇ ಕತ್ತಲೆ ಬರುತ್ತದೆ, ನೀನು ಯಾಕೆ ಹೋಗುತ್ತಿರುವೆ. ನಿಂತು ಬಿಡು. ಸೂರ್ಯ ಹೇಳಿದನಂತೆ, ಕತ್ತಲೆ  !! ಹಾಗಂದರೆ ಏನು? ಹಾಗೊಂದು ಜಗತ್ತಿನಲ್ಲಿ ಇದೆಯೆ? ತೋರಿಸು ನೋಡೋಣ. ವ್ಯಕ್ತಿ ಸೂರ್ಯನನ್ನು ಕತ್ತಲೆ ಇರುವಲ್ಲಿ ಕರೆದುಕೊಂಡು ಹೋದ. ಆದರೆ ಕತ್ತಲೆ ಎಲ್ಲಿದೆ? ಸೂರ್ಯ ಹೋದಲೆಲ್ಲ ಕತ್ತಲೆ ಇದ್ದರೆ ತಾನೆ? ಪ್ರಪಂಚದಲ್ಲಿ ಕತ್ತಲನ್ನು ಕಾಣದೇ ಇದ್ದವನು ಎಂದರೆ ಸೂರ್ಯ.  ಹೀಗೆ ನಮ್ಮ ವ್ಯಕ್ತಿತ್ವದಿಂದ ನಮ್ಮ ವರ್ತನೆಯಿಂದ ನಮಗೆದುರಾಗುವ ಸಮಸ್ಯೆಗಳನ್ನು ನಾವು ನೀವಾರಿಸಿಕೊಳ್ಳಬೇಕು.  ವಿಚ್ಛೇದನ ಪರಿಹಾರವಾಗಲಿ ಆದರೆ ಅದು ಅತೃಪ್ತ ಆತ್ಮದ ಪಿಶಾಚಿಯಾಗದಿರಲಿ.

 

 

Saturday, March 26, 2022

ಶೇಡಿಗುಡ್ಡ....ಮಂಗಳೂರು

    ಪುಟ್ಟ ಮಗು ಒಂದು ಮೊದಲಬಾರಿಗೆ ಮಾವನೊಂದಿಗೆ ಸೈಕಲ್ ಏರಿ ಕುಳಿತು ಸಂಭ್ರಮಿಸುತ್ತಿತ್ತು. ಒಂದೆಡೆ ಭಯ ಆದರೂ ಮಾವನಲ್ಲಿ ಒಂದು ವಿಶ್ವಾಸ. ಸೈಕಲ್ ಸೀಟಿನ ಮುಂಭಾದ ಸರಳಲ್ಲಿ ಒಂದು ಚಿಕ್ಕ ಬಟ್ಟೆ ತುಂಡು ಹಾಕಿ ಮಾವ ಅಲ್ಲಿ ಕೂರಿಸಿದ್ದರು. ಭಯದಿಂದ ಸೈಕಲ್ ಹ್ಯಾಂಡಲ್ ಹಿಡಿದು ಎದುರಲ್ಲಿ ತಿರುಗುವ ಚಕ್ರವನ್ನು ಹಿಂದೆ ಸರಿಯುವ ರಸ್ತೆಯನ್ನೂ ನೋಡುತ್ತ ಅವ್ಯಕ್ತವಾದ ಅನಂದವನ್ನು ಅನುಭವಿಸುತ್ತಿತ್ತು. ಕೆಲವೊಮ್ಮೆ ಭಯದಿಂದ ಹ್ಯಾಂಡಲ್ ಗಟ್ಟಿ ಹಿಡಿದಾಗ ಹ್ಯಾಂಡಲ್ ಗಟ್ಟಿ ಹಿಡಿಯಬೇಡ ಎಂದು ಮಾವ ನಯವಾಗಿ ಗದರುತ್ತಿದ್ದರು.







     ಸೈಕಲ್ ಕುಂಟಿಕಾನ ಬಿಜೈ ಲಾಲ್ ಬಾಗ್ ದಾಟಿ ಶೇಡಿಗುಡ್ಡಕ್ಕೆ ಬಂತು. ಅಲ್ಲಿ ಒಂದು ಕಡೆ ಸೈಕಲ್ ನಿಲ್ಲಿಸಿ ಮಗುವನ್ನು ಕೆಳಗಿಳಿಸಿ ರಸ್ತೆಯ ಮತ್ತೊಂದು ಬದಿ ಇರುವ ಅಂಗಡಿಗೆ ಮಗುವನ್ನು ಕೈ ಹಿಡಿದು ನಡೆಸಿಕೊಂಡು ರಸ್ತೆ ದಾಟಿದರು. ರಸ್ತೆ ದಾಟುವಾಗ ರಸ್ತೆಯ ನಡುವೆ ಇರುವ ವಿಭಾಜಕದ ಮೇಲೆ ಸ್ವಲ್ಪ ಹೊತ್ತು ನಿಂತು ಮತ್ತೊಂದು ಕಡೆಯಿಂದ ಬರುವ ವಾಹನ ಇಲ್ಲದಾಗುವ ತನಕವೂ ಕಾದು ರಸ್ತೆ ದಾಟಿದರು.  ಇದು ಸರಿ ಸುಮಾರು ಐವತ್ತು ವರ್ಷದ ಹಿಂದಿನ ಕಥೆ. ಮೊದಲು ಮಂಗಳೂರಿನಲ್ಲಿ ವಿಭಾಜಕ ಇದ್ದ ರಸ್ತೆ ಇದ್ದದ್ದು ಶೇಡಿಗುಡ್ಡೆಯಲ್ಲಿ ಮಾತ್ರ.  ಆ ಪುಟ್ಟ ಮಗು ನಾನೇ ಆಗಿದ್ದೆ. ಆಗ ಪಿ ವಿ ಎಸ್ ಬಹು ಅಂತಸ್ತಿನ ಕಟ್ಟಡವೂ ಇರಲಿಲ್ಲ. ಅಲ್ಲೊಂದು ಪುಟ್ಟ ಅಂಗಡಿ ಇದ್ದ ನೆನಪು. ಮೊನ್ನೆ ಮೊನ್ನೆ ಶೇಡಿಗುಡ್ಡದಲ್ಲಿ ಹೀಗೆ ಹೆಜ್ಜೆ ಹಾಕುತ್ತಾ ಹೋದ ಹಾಗೆ ಹಿಂದಿನ ದಿನ ನೆನಪಾಯಿತು. ನಾನು ಊರಿಗೆ ಹೋದಾಗಲೆಲ್ಲ ಹೀಗೆ ಮಂಗಳೂರಿನ ನಗರವನ್ನು ಕಾಲು ನಡಿಗೆಯಲ್ಲಿ ಸುತ್ತಾಡುವುದರಲ್ಲಿ ಏನೋ ಒಂದು ಸುಖವನ್ನು ಕಾಣುತ್ತೇನೆ. ಹಾಗೆ ಲಾಲ್ ಭಾಗ್ ನಿಂದ ಹಂಪನ ಕಟ್ಟೆಯವರೆಗೂ ನೆಡೆದುಕೊಂಡೇ ಹೋದೆ.  ಆ ರಸ್ತೆಯಲ್ಲಿ ಏದುಸಿರುಬಿಡುತ್ತಾ ಸೈಕಲ್ ತುಳಿಯುತ್ತಿದ್ದ ದಿನಗಳು ನೆನಪಾಗುತ್ತದೆ.

     ಮಂಗಳೂರು ನಗರದಲ್ಲಿ ಮೊದಲು ವಿಭಾಜಕದ ರಸ್ತೆ ಇದ್ದದ್ದು ಶೇಡಿಗುಡ್ಡದಲ್ಲಿ. ಒಂದು ಬದಿ ದೊಡ್ಡಗುಡ್ಡ ಇರುವುದರಿಂದಲೇ ಇದಕ್ಕೆ ಶೇಡಿ ಗುಡ್ಡ ಎಂದು ಹೆಸರು ಬಂದಿರಬೇಕು. ಎರಡು  ಬಸ್ ಕಂಪೆನಿಗಳ ಕೇಂದ್ರ ಇಲ್ಲೇ ಇತ್ತು. ಒಂದು ಸಿ. ಪಿ. ಸಿ ಬಸ್ಸ್ ಇನ್ನೊಂದು ಶ್ರೀ ಕೃಷ್ಣಾ ಮೋಟರ್ಸ್ ಎಂಬ ಸಂಸ್ಥೆಯ ಬಸ್ . ಲಾಲ್ ಭಾಗ್ ನಿಂದ ಶೇಡಿಗುಡ್ಡದವರೆಗೂ ತೀರ ಅಗಲ ಕಿರಿದಾದ ರಸ್ತೆ ಅಲ್ಲಿಗೆ ತಲುಪಿದಾಗ ಅಗಲವಾಗುತ್ತದೆ.

     ಶೇಡಿಗುಡ್ಡದ ಮತ್ತೊಂದು ತುದಿ ನವಭಾರತ ವೃತ್ತ. ನವಭಾರತ, ಈ ಹೆಸರು ಯಾಕೆ ಬಂತು ಎಂದು ಹಲವರಿಗೆ ತಿಳಿಯದಿರಬಹುದು. ಮೊದಲು ಮಂಗಳೂರಿನಿಂದ ಒಂದು ಪ್ರಸಿದ್ಧ ದಿನ ಪತ್ರಿಕೆ ಪ್ರಸಾರವಾಗುತ್ತಿತ್ತು. ಅದರೆ ಕಛೇರಿ ಇದ್ದದ್ದು ಇದೇ ವೃತ್ತದಲ್ಲಿ. ನವ ಭಾರತ ಪತ್ರಿಕೆ, ಆಗ ನಮ್ಮ ಶಾಲೆಯ ಹಲವು ಅಧ್ಯಾಪಕರ ಕಂಕುಳಲ್ಲಿ ರಾರಾಜಿಸುತ್ತಿದ್ದ ಪತ್ರಿಕೆ. ಆನಂತರ ಉದಯವಾಣಿ ಆರಂಭವಾಗಿ, ಅದರ ಮುದ್ರಣ ಸೌಂದರ್ಯಕ್ಕೆ ಅಥವಾ ಇನ್ನೇನೋ ಕಾರಣಕ್ಕೆ ಈ ಪತ್ರಿಕೆ ಜಾಹೀರಾತು ಇಲ್ಲದೆ ಮುಚ್ಚಲ್ಪಟ್ಟಿತು. ನನಗಿನ್ನೂ ನೆನಪಿನಲ್ಲಿದೆ ಜಾಹೀರಾತು ಇಲ್ಲದೇ ಒಂದೊಂದು ಪುಟ ಹಾಗೇ ಖಾಲಿಯಾಗಿ ಪ್ರಕಟವಾಗುತ್ತಿತ್ತು.  ಕ್ರಮೇಣ ಇಲ್ಲಿ ದೊಡ್ಡ ಸರ್ಕಲ್ ನಿರ್ಮಾಣವಾಯಿತು, ಅದರೊತ್ತಿಗೆ ರಾಂ ಭವನ್ ಕಾಂಪ್ಲೆಕ್ಸ್ ಎದ್ದು ನಿಂತಿತು.

     ಪಿ. ವಿ. ಎಸ್. ಬಿಲ್ಡಿಂಗ್, ನಮ್ಮ ಬಾಲ್ಯದಲ್ಲಿ ಇದು ಕಟ್ಟುವುದಕ್ಕೆ ಆರಂಭಿಸಿದ್ದರು. ಇದು ಬೆಳೆದು ಬೆಳೆದು ಹತ್ತು ಅಂತಸ್ತಾಗುವಾಗ, ಅಲ್ಲೇ ಬಸ್ಸಿನಲ್ಲಿ ಕುಳಿತು ಸಂಚರಿಸುವಾಗ ತಲೆ ಹೊರಗೆ ಹಾಕಿ ಕಟ್ಟಡದ ತುದಿಕಾಣದೇ  ಓಹ್ ಅಂತ ಉದ್ಗಾರ ತೆಗೆದು ಅಚ್ಚರಿ ಪಡುತ್ತಿದ್ದದ್ದು ನೆನಪಿದೆ. ಒಂದು ಸಲ ಕಟ್ಟಡ ದ ಬುಡದಲ್ಲಿ ನಿಂತು ತುದಿಗೆ ನೋಡಿ ಒಂದು ಸಲ ತುದಿಯ ವರೆಗೆ ಹತ್ತಬೇಕಿತ್ತು ಎಂಬ ಬಯಕೆ ಮೂಡಿದ್ದು ಸತ್ಯ. ಇದುವರೆಗೂ ಆ ಬಯಕೆ ಬಯಕೆಯಾಗಿಯೇ ಇದೆ. ಮಂಗಳೂರಿನ ಮೊದಲ ಅತ್ಯಂತ ದೊಡ್ಡ ಕಟ್ಟಡ ಈ ಪಿ ವಿ ಎಸ್ ಬಿಲ್ಡಿಂಗ್.  ಒಂದು ಬಾರಿ ಇಲ್ಲೇ  ಬೆಸೆಂಟ್ ಕಾಲೇಜ್ ನಿಂದ ಶೇಡಿಗುಡ್ಡ ಸೇರುವ ಜಾಗದಲ್ಲಿ ರಸ್ತೆ ಕುಸಿದಿತ್ತು. ಪತ್ರಿಕೆಯವರು ಅದರ ಫೋಟೋ ತೆಗೆಯುತ್ತಿದ್ದಾಗ ನಾನು ಅದೇ ಸಮಯದಲ್ಲಿ ಸೈಕಲ್ ನಲ್ಲಿ ಅಲ್ಲೇ ಸಂಚರಿಸುತ್ತಿದ್ದೆ. ಮರುದಿನ ಉದಯವಾಣಿ ಪತ್ರಿಕೆಯಲ್ಲಿ ಆ ಫೋಟೊ ಅಚ್ಚಾಗಿ ಅದರಲ್ಲಿ ನಾನು ಸೈಕಲ್ ಮೇಲೆ ಇದ್ದ ಚಿತ್ರ ಅಸ್ಪಷ್ಟವಾಗಿ ಬಂದಿತ್ತು.

     ಮೊದಲೆಲ್ಲ ಸಿಟಿ ಬಸ್ ಗಳು ಇಲ್ಲೇ ಎರಡು ಭಾಗದಲ್ಲೂ ಸಂಚರಿಸಿ ಹಂಪನಕಟ್ಟೆಗೆ ಹೋಗುತ್ತಿದ್ದವು. ನಗರ ಬೆಳೆಯುತ್ತಿದ್ದಂತೆ ಬದಲಾಗುತ್ತಾ ಬದಲಾಗುತ್ತ ಈಗ ಶೇಡಿಗುಡ್ಡವೂ ರೂಪವನ್ನು ಬದಲಾಯಿಸಿಕೊಂಡಿದೆ.  ಶೇಡಿಗುಡ್ಡ, ಮಂಗಳೂರಿನ ಹಲವು ಸ್ಥಳಗಳಂತೆ ಇಲ್ಲೂ ನನ್ನ ಬಾಲ್ಯದ ನೆನಪುಗಳು ಹಲವಾರಿದೆ. ಲಲಿತ ಕಲಾ ಸದನ ಹತ್ತಿರದಲ್ಲೇ ಇರುವುದರಿಂದ ಅಪ್ಪನ ಜತೆಗೆ ಅಲ್ಲಿಗೆ ಹೋಗುತ್ತಿದ್ದ ನೆನಪು ಅಸ್ಪಷ್ಟವಾಗಿ ಇದೆ. ಲಲಿತ ಕಲಾಸದನ ಅಂದು ಹಲವು ಶ್ರೇಷ್ಠ ಕಲಾವಿದರ ಚಟುವಟಿಕೆಯ ಕೇಂದ್ರವಾಗಿತ್ತು.  ಯಕ್ಷಗಾನದ ಹಿರಿಯ ಕಲಾವಿದ ಶ್ರೀ ಸೂರಿಕುಮೇರಿ ಗೋವಿಂದ ಭಟ್ಟರ ಭೇಟಿಯ ಸಮಯದಲ್ಲೂ ಇದನ್ನು ಹೇಳಿದ್ದರು. ಆಗ ಹಿರಿಯ ಸಂಗೀತ ಗುರುಗಳಾದ ರಾಜಣ್ಣಯ್ಯರ್ ( ನನ್ನ ಅಪ್ಪನ ಅಣ್ಣ ಅಂತ ಹಿರಿಯರು ಹೇಳುತ್ತಿದ್ದರು) ಗೋವಿಂದ ಭಟ್ಟರ ಗುರುಗಳಾಗಿದ್ದರು.

     ಮಧುರವಾದ ಹಲವು ನೆನಪುಗಳನ್ನು ತರುವ ಶೇಡಿಗುಡ್ಡದಲ್ಲೇ ಸಂಚರಿಸುವುದೆಂದರೆ ಹಲವು ನೆನಪುಗಳ ಪೆಟ್ಟಿಗೆ ಯ ಮುಚ್ಚಳವನ್ನು ತೆರೆದ ಅನುಭವವಾಗುತ್ತದೆ.

  

Thursday, March 24, 2022

ಭಗವದ್ಗೀತೆ ಒಂದು ಪಠ್ಯ ಪುಸ್ತಕ

 


"ಭಾವನೆಗಳಿಗೆ ಮೌಲ್ಯ ನಿರ್ಧಾರವಾಗುವುದಿಲ್ಲ. ಬದಲಾಗಿ ಅದು ನಿಯಂತ್ರಣಕ್ಕೆ ಒಳಪಡಬೇಕು"

 

ಅದೊಂದು ಕಾರ್ಯಕ್ರಮದಲ್ಲಿ ಮಧ್ಯಾಹ್ನ ಬ್ರಾಹ್ಮಣರೆಲ್ಲ.....ಹೆಚ್ಚಿನವರು ಸಂಭಂಧಿಗಳೇ ಊಟಕ್ಕೆ ಕುಳಿತಿದ್ದರು. ಯಥಾ ಪ್ರಕಾರ ಎಲ್ಲವೂ ಬಡಿಸಿಯಾದನಂತರ ಯಜಮಾನ ಊಟ ಅರಂಭಿಸುವುದಕ್ಕೆ ಭಿನ್ನವಿಸಿದರು. ಸರಿ ಎಲ್ಲರೂ ಹಸ್ತೋದಕ ತೆಗೆದುಕೊಳ್ಳುವುದಕ್ಕೆ ಕೈ ಯಲ್ಲಿ ನೀರು ತೆಗೆದುಕೊಂಡರು. ಭಗವಂತನನ್ನು ಪ್ರಾರ್ಥಿಸಿ ಚಿತ್ರಾವತಿಯನ್ನು ಇಟ್ಟು ಇನ್ನೇನು    ಊಟ ಆರಂಭಿಸಬೇಕು ಎನ್ನುವಾಗ ನನ್ನ ಪಕ್ಕದಲ್ಲಿ ಕುಳಿತವರನ್ನು ನೋಡಿ ಪುರೋಹಿತರೊಬ್ಬರು ಹೇಳಿದರು "ನೀವು  ಕನ್ನಡ ಜಿಲ್ಲೆಯವರಾ? ಕೈ ನೀರು ತೆಗೆದು ಚಿತ್ರಾವತಿ ಇಡಲಿಲ್ಲ. "  ದಕ್ಷಿಣ ಕನ್ನಡದವರನ್ನು ಹಾಗೇಕೆ ಪ್ರತ್ಯೇಕಿಸಿದರು ಎಂಬುದು ಆಶ್ಚರ್ಯವಾಗಿತ್ತು. ಅದರಲ್ಲಿ ಅದೊಂದು ರೀತಿಯ ಅಹಂ ಕಂಡಿತು. ನೋಡುವುದಕ್ಕೆ ವಯೋವೃದ್ಧರು. ಆದರೂ ಎಲ್ಲರೆದುರು ವರ್ತಿಸುವಾಗ ಕೆಲವೊಂದು ಸದಾಚಾರವನ್ನು ಪಾಲಿಸುವುದು ಉಚಿತ ಅಂತ ನನ್ನ ಅನಿಸಿಕೆ. ಹಿರಿಯರು ಅವರು ಹೇಳುವುದಕ್ಕೆ ಅವಕಾಶ ಇದ್ದರೂ ಸಾರಾ ಸಗಟಾಗಿ ಇನ್ನೊಬ್ಬರ ಅರ್ಹತೆಯನ್ನು ಕೀಳಾಗಿ ಕಾಣುವುದು ಸರಿಯಲ್ಲ. ನಾನು ಮೆತ್ತಗೆ ಹೇಳಿದೆ, ನಾನೂ ದಕ್ಷಿಣ ಕನ್ನಡದವನೇ. ನಾನು ಅದಾಗಲೇ ಚಿತ್ರಾವತಿಯನ್ನು ಇರಿಸಿ  ಅನ್ನಂ ಬ್ರಹ್ಮನನ್ನು ಪ್ರಾರ್ಥಿಸಿ  ಪ್ರಾಣ ಅಪಾನ ಮುಗಿಸಿ ಊಟ ಆರಂಭಿಸಿದ್ದೆ.  ಅಷ್ಟಕ್ಕೆ ಅವರು ಸುಮ್ಮನಾಗಲಿಲ್ಲ. " ನೀವು ಇಲ್ಲಿಯದನ್ನು ನೋಡಿ ಅನುಸರಿಸಿದ್ದಿರಬಹುದು. "  ದಕ್ಷಿಣ ಕನ್ನಡದವರು ಆಚಾರ ಹೀನರು ಎಂದು ಅವರು ತೋರಿಸಿದ್ದು ಅದೂ ಸಹ  ಸಾರ್ವಜನಿಕವಾಗಿ ನನಗೆ ತೀವ್ರ ಅಸಮಾಧಾನವನ್ನು ತಂದಿತ್ತು. ಹಾಗಂತ ನಾನು ಮಾತಿಗೆ ಮಾತು ಬೆಳಸಿ ಊಟದ ಎದುರು ಚರ್ಚಿಸುವುದು ಹಿತ ಅನ್ನಿಸಲಿಲ್ಲ.  ಅವರನ್ನು ಅವಮಾನಿಸಿದಂತೆ ಆದರೆ, ಹಿರಿಯರು ಪುರೋಹಿತರು , ಊಟ ಬಿಟ್ಟೆದ್ದರೆ ಅಂತ, ನಾನು ಹೇಳಿದೆ ನನಗೆ ಬಾಲ್ಯದಲ್ಲೇ ಉಪದೇಶವಾಗಿತ್ತು ಸ್ವಾಮಿ. ಒಂದೊಂದು ಕಡೆಯ ದೇಶಾಚಾರ ಒಂದೋಂದು ವಿಧ. ಅದನ್ನು ಹೋಲಿಸಿ ತಮ್ಮದು ಉತ್ಕೃಷ್ಟ ಅಂತ ಬಿಂಬಿಸುವುದು ಸರಿಯಲ್ಲ...( ನಾನು "ಸರಿಯಲ್ಲ"  ಎಂದು  ಒತ್ತಿ ಹೇಳಿದೆ. ನನ್ನ ಲೆಕ್ಕದಲ್ಲಿ ಸರಿಯಲ್ಲ ಎಂದರೆ ಮೂರ್ಖತನ ಎಂಬ ಸ್ವರವೇ ವ್ಯಕ್ತವಾಗಿತ್ತು. ) ಇದೊಂದು ಕೇವಲ ಘಟನೆ. ಇಲ್ಲಿ ಯಾವ ಅನ್ಯಧರ್ಮವೂ ಭೇದವನ್ನು ತೋರಿಸಿಲ್ಲ. ಆದರೂ ಇದೊಂದು ಭಿನ್ನತೆಯನ್ನು ತೋರಿಸಿತ್ತು. 

ಮನುಷ್ಯ ಅಚಾರ ವಿಚಾರದಲ್ಲಿ ಹೆಚ್ಚು ತಲೆಕೆಡಿಸಿ ಕೊಂಡು ತಮ್ಮ ಆಚಾರಕ್ಕೆ ಅಪಚಾರ ಎಸಗುತ್ತಾನೆ. ಆಚಾರ ಎಂಬುದು ಪ್ರದೇಶಕ್ಕೆ ಹೊಂದಿಕೊಂಡು ವಿಭಿನ್ನವಾಗಿರುವುದು ಹೊಸತೇನಲ್ಲ. ಅದರಲ್ಲಿ ಯಾವುದೂ ಹೆಚ್ಚು ಉತ್ಕೃಷ್ಟವೂ ಅಲ್ಲ. ಮತ್ತೊಂದು ಹೀನವೂ ಅಲ್ಲ. ಕರಾವಳಿಯಲ್ಲಿ ಕಲ್ಪವೃಕ್ಷ ಬೆಳೆದು ಕೊಡುವ ಫಲಕ್ಕೂ ಮಲೆನಾಡು ಬಯಲು ಸೀಮೆಯಲ್ಲಿ ಬೆಳೆಯುವ ಫಲಕ್ಕೂ ಗುಣದಲ್ಲಿ ಆಗಾಧ ವೆತ್ಯಾಸ ಇರುತ್ತದೆ. ಹಾಗಂತ ಅದು ತೆಂಗಿನ ಕಾಯಿ ಅಲ್ಲ ಎಂದನಿಸುವುದೇ? ಯಾವುದೋ ದೇಶದಲ್ಲಿ ಬ್ರಾಹ್ಮಣನಾಗಿ ಹುಟ್ಟಿದವನು ಬ್ರಾಹ್ಮಣನಲ್ಲದೇ ಇರುತ್ತಾನೆಯೇ? ಅಷ್ಟಕ್ಕೂ ಬ್ರಾಹ್ಮಣ ಎಂದರೆ ಅದೊಂದು ಧಾರ್ಮಿಕ ಜೀವನ ಶೈಲಿ. ಕೇವಲ ಬ್ರಾಹ್ಮಣ ವರ್ಗದಲ್ಲೇ ಈ ಬಗೆಯಲ್ಲಿ ತಮ್ಮ ಉತ್ಕೃಷ್ಟತೆಯನ್ನು ಗುರುತಿಸಿ ತಮ್ಮ ಬೆನ್ನನ್ನು ತಟ್ಟುತ್ತಾ ಇರುವುದಾದರೆ ಸಾರ್ವತ್ರಿಕ ಧರ್ಮದಲ್ಲಿರುವ ಭಿನ್ನತೆಯನ್ನು ನಾವು ಹೇಗೆ ಸ್ವೀಕರಿಸಬಹುದು. ಆಚಾರ ವಿಚಾರಗಳ ಮೂಲ ತಾತ್ಪರ್ಯ ಕಾಣುವಾಗ ಎಲ್ಲದರ ಉದ್ದೇಶ ಒಂದೇ.  ನಾವು ಇನ್ನೊಬ್ಬನ ಹಾದಿಯನ್ನು ನೋಡುತ್ತ ಹೆಜ್ಜೆ ಇರಿಸಿದರೆ ನಮ್ಮ ಹಾದಿಯಲ್ಲಿರುವ ಸೆಗಣಿಯನ್ನು ನೋಡದೇ ತುಳಿದು ಬಿಡುತ್ತೇವೆ. ಧರ್ಮ ಎಂದರೆ ಏನು ಎಂಬುದರ ಆಳ ತಿಳಿಯುವುದೇ ಜೀವನ ಆಯುಷ್ಯಮಾನದಲ್ಲಿ ಸಾಧ್ಯವಾಗುವುದಿಲ್ಲ. ಆದರೂ ಧರ್ಮ ಸೂಕ್ಷ್ಮ ಸ್ವಲ್ಪವಾದರೂ ಅರಿವಿದ್ದರೆ ನಾವು ಧರ್ಮಾನುಯಾಯಿ ಎನ್ನುವುದಕ್ಕೆ ಅರ್ಥವಿದ್ದೀತು. 

ನಾವು ಜಾತಿ ಧರ್ಮದ ಬಗ್ಗೆ ಯೋಚಿಸುವಷ್ಟು ಭಗವಂತನಾದ ಪರಮಾತ್ಮನ ಬಗ್ಗೆ ಯೋಚಿಸುವುದಿಲ್ಲ. ಇಲ್ಲಿಂದಲೇ ನಮ್ಮ ಸಮಸ್ಯೆಗಳು ಆರಂಭವಾಗುವುದು. ಇವುಗಳು ನಮ್ಮಲ್ಲಿ ಅಸಮಾನತೆಯನ್ನೇ ಪ್ರಚೋದಿಸುತ್ತವೆ. ಆಗ  ಪರಮಾತ್ಮನ ಭಾಷೆ ಅರ್ಥವಿಸುವುದಕ್ಕೆ ಕಠಿಣವೆನಿಸಿಬಿಡುತ್ತದೆ. ಭಗಂತನ ಭಾಷೆ ಅರ್ಥವಾದರೆ ಈ ಬಗೆಯ ಪ್ರತ್ಯೇಕತೆ, ತಾತ್ಸಾರ, ತಾನು ಉತ್ಕೃಷ್ಟ ಎಂಬ ಮನೋಭಾವ ಯಾವುದು ಇರುವುದಿಲ್ಲ. ಭಗವಂತ ಭಾಷೆ ಅರ್ಥವಿಸುವುದು ಕಷ್ಟ.  ಹಾಗಾಗಿ ಅದರ ಬಗ್ಗೆ ಯೋಚಿಸುವುದಕ್ಕಿಂತಲೂ ಜಾತಿ ಧರ್ಮದಲ್ಲೇ ಸುರಕ್ಷತೆಯನ್ನು ಕಾಣುತ್ತೇವೆ. 

ನಾವು  ಬಂಧುಗಳನ್ನು ಗುರುತಿಸುವುದಕ್ಕೆ ನಮಗೆ ಯಾವ ಮಾಧ್ಯಮಗಳೂ ಬೇಡ. ಅಪ್ಪ ಅಮ್ಮನನ್ನು ಕಲ್ಪಿಸುವುದಕ್ಕೆ ನಮಗೆ ಯಾವ ಮೂರ್ತಿಯ ಅವಶ್ಯಕತೆಯೂ ಇರುವುದಿಲ್ಲ. ಆದರೆ ಭಗವತಂತನನ್ನು ಕಾಣುವುದಕ್ಕೆ ನಮಗೆ ಮೂರ್ತಿಯೋ ಮತ್ತೋಂದೋ ಒಂದು ಮಾಧ್ಯಮದ ಅಗತ್ಯವಿರುತ್ತದೆ. ಯಾವುದರಲ್ಲೋ ನಾವು ದೇವರನ್ನು ಕಾಣುತ್ತೇವೆ.  ಈ ಮಾಧ್ಯಮಗಳು ನಮಗೆ ಊರುಗೋಲಂತೆ. ಮುಂದೆ ಹೋಗುವುದಕ್ಕೆ ಆಧಾರವಾಗುತ್ತದೆ.  ಪರಮಾತ್ಮನ ಭಾಷೆ ಅರ್ಥವಾದರೆ ಈ ಊರುಗೋಲನ್ನು ಬಿಟ್ಟು ನಾವು ಮುಂದಕ್ಕೆ  ಸ್ವತಂತ್ರವಾಗಿ ಹೋಗಬಹುದು. ಅದಕ್ಕೆ ಮೂರ್ತ ಸ್ವರೂಪವಾಗಿರುವುದೇ ಭಗವದ್ಗೀತೆ. ವಿಪರ್ಯಾಸವೆಂದರೆ ಇದು ಶ್ಲೋಕ ಉರು ಹೊಡೆಯುವುದಕ್ಕಷ್ಟೇ ಸೀಮಿತವಾಗಿ ಬಿಡುತ್ತದೆ. ಮಂತ್ರ ಶ್ಲೋಕ ಸ್ತುತಿ ಎಲ್ಲವೂ ಅಷ್ಟೇ ಮನಸ್ಸಿನ ಭಾಂಧವ್ಯವೇ ಇಲ್ಲದಂತೆ ನಾಲಿಗೆ ಅನಿಯಂತ್ರಿತವಾಗಿ ಉಚ್ಚರಿಸುತ್ತವೆ.

 

ಇದೀಗ ಭಗವದ್ಗೀತೆ ಮತ್ತೊಂದು ರೀತಿಯಲ್ಲಿ ಚರ್ಚೆಗೆ ವಿಷಯವಾಗಿದೆ. ಒಂದಲ್ಲ ಒಂದು ವಿವಾದಗಳೇ ನಮಗೆ ಆಪ್ಯಾಯಮಾನವಾದಂತೆ ಇದೂ ಒಂದು ವಿವಾದ. ಭಗವದ್ಗೀತೆಯ ಬಗ್ಗೆ ಎಲ್ಲರೂ ತಿಳಿಯಬೇಕು. ಅದು ಪರಮಾತ್ಮನ ಭಾಷೆ. ಇದಕ್ಕೆ ಯಾವುದೇ ಮನೋಭಾವದ ಬಂಧನವಿರಬಾರದು. ಭಗವದ್ಗೀತೆ ಪಠ್ಯದ ವಿಷಯವಾಗದೇ ಇದ್ದರೂ ಅದು ಒಂದು ಪಾಠ.  ಅದನ್ನು ಮರೆತರೆ ಅದು ಕೇವಲ ಅಧ್ಯಯನವಾಗಬಹುದು. ಮುಂದೆ ವೈದ್ಯನಾಗಬೇಕಾದವನು ಭಾಷೆಯನ್ನೋ ಭೂಮಿ ಶಾಸ್ತ್ರವನ್ನು ಅಧ್ಯಯನ ಮಾಡಿದಂತೆ ಆಗಬಹುದು. ಕೇವಲ ಬಾಯಿ ಪಾಠ. ಮನಸ್ಸಿನ ನಿಯಂತ್ರಣವಿಲ್ಲದ ಬಾಯಿ ಪಾಠ. ಶ್ಲೋಕ ಉರು ಹೊಡೆದರೆ ಅದು ಅಧ್ಯಯನವಾಗದು. 


ಭಗವದ್ಗೀತೆ ಅಧ್ಯಯನವಾಗಬೇಕು ಸತ್ಯ. ಹೇಗೆ? ನಲ್ವತ್ತು ವರ್ಷ ಕಳೆದು ಮಾನಸಿಕವಾಗಿ ಬಲಿಷ್ಠನಾದವನಿಗೇ ಭಗವದ್ಗೀತೆ ಕಬ್ಬಿಣದ ಕಡಲೆಯಂತೆ ಅರ್ಥವಾಗುವುದಿಲ್ಲ. ಯಾವುದೋ ಪ್ರವಚನಕಾರ ಬೇಕಾಗುತ್ತದೆ. ಇನ್ನು ಪ್ರವಚನಕಾರ ಅವನ ಯೋಚನೆಯಷ್ಟನ್ನೇ ವೈಭವೀಕರಿಸಿ ಹೇಳುತ್ತಾನೆ. ಹೀಗಿರುವಾಗ ಇನ್ನು ಶಾಲೆಯ ಮಕ್ಕಳಿಗೆ ಇದು ಕಬ್ಬಿಣದ ಕಡಲೆಯಾದರೆ ಆ ಅಧ್ಯಯನದಿಂದ ಯಾವ ಪ್ರಯೋಜನವಾದೀತು?  ಕೇವಲದ ಕಬ್ಬಿಣದ ಕಡಲೆ. ತರಗತಿಗೆ ಗೈರಾಗುವುದಕ್ಕೆ ಒಂದು ಪಾಠ, ಪರೀಕ್ಷೆಯಲ್ಲಿ ಅಂಕಗಳಿಸುವುದಕ್ಕೆ ಒಂದು ಪಾಠ ಇಷ್ಟಕ್ಕೆ ಸೀಮಿತ. ಅಥವ ಉರು ಹೊಡೆದರೆ ನಮ್ಮ ರಾಷ್ಟ್ರಗೀತೆಯಂತೆ ಅದರ ಅರ್ಥ ಎಷ್ಟು ಜನರಿಗೆ ತಿಳಿದಿದೆ? ಜನಗಣ ಮನ ಹಾಡುತ್ತೇವೆ , ಈ ಶ್ರೇಷ್ಠ ಗೀತೆಯ ಅರ್ಥ ಬಗ್ಗೆ ಗಮನ ಹರಿಸದ ನಾವು ಭಗವದ್ಗೀತೆಯತ್ತ ಗಮನ ಹರಿಸಿದ್ದೇವೆ. 

ಭಗವದ್ಗೀತೆಯ ಬಗ್ಗೆ ಅಧ್ಯಯನ, ನಿಜಕ್ಕು ಅದ್ಭುತ ಕಲ್ಪನೆ. ಬಾಲ್ಯದಲ್ಲಿ ನಮ್ಮ ಹಿರಿಯರು ಸಣ್ಣ ಒಂದು ನೋಟು ಬುಕ್ ನಂತಹ ಒಂದು ಭಗವದ್ಗೀತೆ ಪುಸ್ತಕವನ್ನು ಮಂಗಳೂರಿನ   ನಿತ್ಯಾನಂದ ಗ್ರಂಥಾಲಯದಿಂದ ತಂದಿದ್ದರು. ಆಗ ಅದರ ಮೊದಲ ಎರಡು ಪುಟವನ್ನು ಮಾತ್ರ ಓದುವುದಕ್ಕೆ ಸಾಧ್ಯವಾಗಿದ್ದು. ಆನಂತರ ಓದಲಿಲ್ಲ. ಕಾರಣ ಇಷ್ಟೆ,  ಅದು ನಮಗೆ ಅರ್ಥವಾಗುವ ಹಾಗಿಲ್ಲ. ಮನೆಯಲ್ಲೂ ಅದನ್ನು ಅರ್ಥವಿಸಿ ಹೇಳುವಷ್ಟು ಹಿರಿಯರಿಗೂ ತಿಳಿದಿರಬೇಕಲ್ಲ. ನಂತರ ಅದು ದೇವರ ಕೋಣೆಯ ಇತರ ಪುಸ್ತಕದ  ಜತೆಗೆ ಪೂಜಿಸಲ್ಪಡುತ್ತಿತ್ತು. ಇದರಲ್ಲಿನ  ಶ್ಲೋಕದ ಅರ್ಥ ಏನೋ ಓದಿಬಿಡಬಹುದು. ಆದರೆ  ಭಗವದ್ಗೀತೆ ಕೇವಲ ಅಷ್ಟೇ ಆದರೆ ಇಷ್ಟೇಲ್ಲಾ ಹೇಳಿಕೊಳ್ಳುವ ಅವಶ್ಯಕತೆಯೇ ಇರುವುದಿಲ್ಲ.  ಬಹುಶಃ ಬಹು ಪಾಲು ಪಾಮರೀ ವ್ಯಕ್ತಿಗೆ ಇದು ಅರ್ಥವಾಗುತ್ತಿದ್ದರೆ ಇಂದಿನ ಬಹು ಪಾಲು ಸಮಸ್ಯೆಗಳು ಹುಟ್ಟುತ್ತಲೇ ಇರಲಿಲ್ಲ. ಹಲವು ಸಲ ಇದರ ಅರ್ಥವನ್ನು ಹೇಳಿದರೆ, ಅರಗಿಸಿಕೊಳ್ಳುವ ಪ್ರಾಮಾಣಿಕತೆಯೂ ನಮ್ಮಲ್ಲಿರುವುದಿಲ್ಲ. ನಾವು ಅರೆ ನಾಸ್ತಿಕ ಎಂದಾಗಿಬಿಡುತ್ತೇವೆ. ತತ್ವಮಸೀ ತತ್ವವನ್ನು ಒಬ್ಬೂಬ್ಬರು ಒಂದೊಂದು ರೀತಿಯಲ್ಲಿ ಅರ್ಥವಿಸಿಬಿಡುತ್ತಾರೆ.  

ಎಲ್ಲವೂ ನಾನು ಎನ್ನುವ ಪರಮಾತ್ಮ , ಎಲ್ಲದರಲ್ಲೂ ನಾನಿದ್ದೇನೆ ಪರಮಾತ್ಮ ಒಬ್ಬನೇ ಎಂಬ ತತ್ವವನ್ನು ಸಾರುವ ಭಗವದ್ಗೀತೆಯ ಆಳ ವೈಶಾಲ್ಯತೆಯನ್ನು ಅರಿಯುವ ಪ್ರಯತ್ನವಾಗಬೇಕು. ಪ್ರಸ್ತುತ ಪರಿಸ್ಥಿತಿಗೆ ಅದು ಅತ್ಯಗತ್ಯ. ಮಂಗಳೂರು ಎಂಬ ಊರಿಗೆ ಹಲವು ಹೆಸರಿದೆ. ಒಂದೊಂದು ಭಾಷೆಯವರು ಒಂದೊಂದು ಜಾತಿಯವರು ಇದನ್ನು ವಿಭಿನ್ನವಾಗಿ ಕರೆಯುವ ಅತ್ಯಂತ ವಿಶಿಷ್ಟ ನಗರ. ಯಾವ ಹೆಸರಲ್ಲಿ ಕರೆದರೂ ಅದನ್ನು ಕೇಳಿದಾಗ ನಮ್ಮ ಸ್ಮೃತಿಯಲ್ಲಿ ಮೂಡುವುದು ಒಂದೇ ಅದೇ ಮಂಗಳೂರು. ಎಲ್ಲ ಭಾವಗಳೂ ಕೇಂದ್ರಿಕೃತವಾಗುವುದು ಒಂದರಲ್ಲೇ, ಹಾಗಿದ್ದರೂ ನಾವು ಧರ್ಮ ಜಾತಿಯ ಬಗ್ಗೆ ಹೆಚ್ಚು ಯೋಚಿಸುತ್ತ ಭಗವಂತನ ಬಗ್ಗೆ ಯೋಚಿಸುವುದನ್ನೇ ಮರೆತುಬಿಡುತ್ತೇವೆ.

 

ಇದೀಗ ಭಗವದ್ಗೀತೆ ಒಂದು ಶಿಕ್ಷಣ ವಸ್ತುವಾಗುತ್ತದೆ. ಅದು ಹಾಗಾಗದೀದ್ದರೂ ಅದರಿಂದ ಕಲಿಯುವಂತಹುದು ಬಹಳವಿದೆ. ಇದುವರೆಗೆ ವ್ಯವಹಾರಿಕ ಪ್ರಪಂಚದದ ಜೀವನವನ್ನೇ ಸರ್ವಸ್ವ ಎಂಬ ಭ್ರಮೆಯಲ್ಲಿ ಬದುಕಿದವರಿಗೆ ಇದು ಕೇವಲ ಪುಸ್ತಕವಾಗಿ ಸಾಧ್ಯವಿದ್ದರೆ ಒಂದು ಹೂವು ಇರಿಸಿ ಆರತಿ ಎತ್ತುವುದಕ್ಕಷ್ಟೇ ಸೀಮಿತವಾಗಿತ್ತು. ಇಲ್ಲ ಅದರ ಮೇಲೆ ಕೈ ಇಟ್ಟು ಪ್ರತಿಜ್ಞೆ ಮಾಡುವುದಕ್ಕೆ ಸೀಮಿತವಾಗಿತ್ತು. ಹೆಚ್ಚೆಂದರೆ ಈ ಪ್ರತಿಜ್ಞೆ ಮಾಡುವಾಗ ನಮ್ಮ ಮಕ್ಕಳ ನೆನಪೂ ನಮಗೆ ಆಗುತ್ತಿಲ್ಲ. ಮಕ್ಕಳ ತಲೆಯ ಮೇಲೆ ಕೈಯಿಟ್ಟು ಅಷ್ಟು ಸುಲಭದಲ್ಲಿ ನಾವು ಪ್ರತಿಜ್ಞೆ ಮಾಡಬಹುದೇ? ಇಲ್ಲ.  ಅಷ್ಟೊಂದು ಯಾಂತ್ರಿಕತೆಗೆ ಭಗವದ್ಗೀತೆ ಸಾಕ್ಷಿಯಾಗಿತ್ತು. 

ನಾನು ನನ್ನದು ಎಂಬ ವ್ಯಾಮೋಹ


, ಭಗವದ್ಗೀತೆಯನ್ನು ನೂರಾರು ಸಲ ಉರು ಹೊಡೆದು ಪಾರಾಯಣ ಮಾಡಿದರೂ ಹೋಗುವುದಿಲ್ಲ ಎಂದಾದರೆ ಅದರಿಂದ ಯಾವ ಫಲ ಸಿಗಬಹುದು? ಹಾಗಂತ ಸರ್ವಸಂಗ ಪರಿತ್ಯಾಗಿಯಾಗಿಬಿಡಬೇಕು ಎಂದಲ್ಲ. ಕೇವಲ ನಮ್ಮ ನಡುವಿನ ಅಸಮಾನತೆ ತಾನು ತನ್ನದು ಉತ್ಕೃಷ್ಟ ಎನ್ನುವ ಅಹಂಭಾವ ತೊರೆಯುವಲ್ಲಿ ಸಹಕಾರಿಯಾಗಬೇಕು. ಪರಮಾತ್ಮನ ಭಾಷೆಯ ಅಂತಸತ್ವ ಅರಿವಾಗಬೇಕು. ಭಗವದ್ಗೀತೆಯ ಸಾರ ಅರಿವಾಗಬೇಕು. ಆ ನಿಟ್ಟಿನಲ್ಲಿ ಭಗವದ್ಗಿತೆ ಪಠ್ಯವಾಗುವುದಾದರೆ ಭಗವದ್ಗೀತೆ ಒಂದೇ ಎಕೆ ಇನ್ನುಳಿದ ಗ್ರಂಥಗಳೂ ಸೇರಿಕೊಳ್ಳಲಿ. ಮನುಷ್ಯ ಸಾರ್ವತ್ರಿಕವಾಗಿ ಉತ್ಕೃಷ್ಟತೆಯತ್ತ, ಉನ್ನತಿಯತ್ತ ಸಾಗಬೇಕು. ಎಲ್ಲವೂ ಭಗವದರ್ಪಣ ಎನ್ನುವಾಗ ಇಲ್ಲಿ ಮೇಲು ಕೀಳು ಎಂಬ ಅಸಮಾನತೆ ಉಳಿಯುವುದಿಲ್ಲ. ಜಾತಿ ಧರ್ಮ ಎಲ್ಲವೂ ಸತ್ಯ. ಆದರೆ ಎಲ್ಲವೂ ಭಗವಂತನೆಡೆಗೆ ಸಾಗುವ ಹಾದಿಗಳು. ಪರಮಾತ್ಮ ಬೇರೆ ಎಲ್ಲೂ ಇಲ್ಲ. ಕಣ್ಣಿಗೆ ಕಾಣುವ ಪ್ರಕೃತಿಯಲ್ಲಿದ್ದಂತೆ, ಈ ಪ್ರಕೃತಿಯ ಅಂಗವಾಗಿರುವ ನಮ್ಮೊಳಗೂ ಇರುತ್ತಾನೆ. ನಮ್ಮೋಳಗೆ ಪರಮಾತ್ಮನನ್ನು ಇರಿಸಿ ನಾವು ಆತ್ಮದ ಭಾಷೆ ಅರ್ಥವಾಗದೇ ನಮಗೇ ನಾವು ಪರಕೀಯರಾಗಿಬಿಡುತ್ತೇವೆ. ಅಪರಿಚಿತ ಪ್ರದೇಶದಲ್ಲಿ ತಿಳಿಯದ ಭಾಷೆಯೊಳಗೆ ಸೇರಿಕೊಂಡಂತೆ, ನಾವು ಪರಮಾತ್ಮನಿಗೆ ಹೇಗೆ ಹತ್ತಿರವಾಗಬಲ್ಲೆವು. ಇದನ್ನು ಯೋಚಿಸಬೇಕು.
 

ಭಗವದ್ಗೀತೆ ಬರಬೇಕು. ನಮಗೆ ಸಿಗದ ಅವಕಾಶಗಳು ಮುಂದಿನ ಜನಾಂಗ ಸಿಗಬೇಕು. ಅದು ಸ್ವಾಗತಾರ್ಹ. ಆದರೂ ಅದರ ಶಿಕ್ಷಣ ಸಾಗುವ ದಿಶೆಯಲ್ಲಿ ಸಾಗಬೇಕು. ಕಬ್ಬಿಣದ ಕಡಲೆ ಬಾಯಿಯೊಳಗೆ ತುರುಕಿದಂತಾದರೆ ಅದು ಕೇವಲ ಪಾಠ ಎನಿಸಿಕೊಳ್ಳುವುದಕ್ಕೂ ಅರ್ಹತೆ ಇಲ್ಲದಂತಾಗುತ್ತದೆ. ಭಗವದ್ಗೀತೆಗೆ ಅರ್ಹತೆ ಇಲ್ಲದಂತೆ ಮಾಡುವ ಪ್ರವೃತ್ತಿ ನಮ್ಮದಾಗಕೂಡದು. ಭಗವದ್ಗೀತೆ ಕೇವಲ ಪಾರಾಯಣವಲ್ಲ ಅದು ಪಠಣವಾಗಬೇಕು. ಯಾವುದೋ ದೇವಾಲಯದ ಒಳಗಿರುವ ದೇವರು ಗರ್ಭಗುಡಿಯ ಬಾಗಿಲು ತೆರೆದರೆ ಕಣ್ಣಿಗೆ ಬೀಳಬಹುದು. ಆದರೆ ನಮ್ಮೊಳಗಿನ ದೇವರ ದರ್ಶನವಾಗಬೇಕಾದರೆ ಅದಕ್ಕೆ  ನಿರಂತರ ತಪಸ್ಸು ಬೇಕಾಗುತ್ತದೆ. ಪಾಮರನಿಗೆ ಅದು ಸಾಧ್ಯವಾಗುವುದಿಲ್ಲ. ನಮ್ಮೊಳಗಿನ ಪಾಮರತ್ವ ತೊಲಗಿ ಒಳಗಿರುವ ಪರಮಾತ್ಮ ದರ್ಶನವಾಗಬೇಕಾದರೆ ಭಗವದ್ಗೀತೆ ಒಂದು ಪಠ್ಯವಾಗಬೇಕು.

 

 

 

 

 

 

 

 

 

 

Thursday, March 3, 2022

ಹರ್ಷ ತಂದ ಮದುವೆ

 "ಭಾವನೆಗಳ ಭಾರವನ್ನು ಅಳೆಯುವ ತಕ್ಕಡಿ ಇನ್ನೂ ಬಂದಿಲ್ಲ.ಆದರೆ ಹೃದಯ ಅದರ ಭಾರವನ್ನು ಅಳೆಯಲು ಹವಣಿಸುತ್ತದೆ."


    ಅಡಿಕೆ ಸಣ್ಣದಿರುವಾಗ  ಕಿಶೆ ಒಳಗೆ ಇಟ್ಟುಕೊಳ್ಳಬಹುದು. ಅದು ಮೊಳೆತು ಮರವಾಗಿ ಬೆಳೆದರೆ ಕಿಸೆಯೊಳಗೆ ನಿಲ್ಲುವುದಿಲ್ಲ." ಇದು ನನ್ನ ಸೋದರಮಾವ ನನ್ನ ಬಗ್ಗೆ ಹೇಳುತ್ತಿದ್ದ ಮಾತು.  ತಂದೆ ದೂರಾದಮೇಲೆ, ತನ್ನ ಮಡಿಲಿಗೇರಿಸಿ  , ತನ್ನ ಎದೆಯನ್ನು ತೋರಿಸಿ  ನನಗೆ ಆ ಸ್ತಾನವನ್ನು ತೋರಿದವರು. ಮರ ಬೆಳೆದು ದೊಡ್ಡವಾಗುತ್ತದೆ, ಹೂವರಳಿ ಕಾಯಿಯಾಗುತ್ತದೆ. ಅ ಕಾಯಿಯನ್ನುತನ್ನದೇ ಎಂಬಂತೆ ಹಿಡಿದಿಟ್ಟು ಕೊಳ್ಳುತ್ತದೆ. ತಾನು ತೊನೆದಾಡಿದಂತೆ ಜತೆಯಲ್ಲಿ ಕಾಯಿಯನ್ನು ಹೊತ್ತು ತೊನೆದಾಡುತ್ತದೆ. ಒಂದು ಕಾಯಿ ಹಣ್ಣಾಗುತ್ತದೆ ತನ್ನ ತಾಯಿ ಸಂಬಂಧ ಕಳಚಿಕೊಂಡು ಬಿದ್ದು ಇನ್ನೆಲ್ಲೋ ಬೀಜ ಮರವಾಗಿ ಬೆಳೆಯುತ್ತದೆ. ಪ್ರಕೃತಿಯ ಚಕ್ರವಿದು. 

    ಚಂದ್ರಮಾವ ನನ್ನ ಸೋದರ ಮಾವ. ಸದಾ ಅಕ್ಕರೆಯಲ್ಲಿ ನನ್ನ ಕಂಡವರು. ರಾಜಕುಮಾರ, ನನ್ನ ಮಾವ ನನಗಿಟ್ಟ ಹೆಸರು.  ಮಗುವಾಗಿದ್ದಾಗ ನನ್ನ ಅಪ್ಪ ಯಾರು ಎಂದು ಕೇಳಿದರೆ ನಾನು ಪೆದ್ದು ಪೆದ್ದಾಗಿ ಚಂದಮಾಮ ತೊದಲುತ್ತಿದ್ದೆ. ಮಾವನೊಡನಿದ್ದ ಆತ್ಮೀಯತೆಯದು.  ಮಾವ ಉಂಡ ತಟ್ಟೆಯಲ್ಲಿ ತುತ್ತು ಅನ್ನ ತಿಂದ ನೆನಪು ಈಗಲೂ ಇದೆ. ತನ್ನ ತಟ್ಟೆಯಿಂದಲೇ ತುತ್ತು ಅನ್ನ ತಿನ್ನಿಸುತ್ತಿದ್ದ ನನ್ನ ಮಾವನ ಪ್ರೀತಿ ನೆನಪಾದಾಗಲೆಲ್ಲ ಹೃದಯ ತುಂಬಿ ಕಣ್ಣಾಲಿಗಳು ತೇವವಾಗುತ್ತದೆ. ಜಗತ್ತಿನಲ್ಲಿ ಅತ್ಯಂತ ಬಲಿಷ್ಠ ಸಂಭಂಧವೆಂದರೆ ಭಾವನಾತ್ಮಕ ಸಂಬಂಧ, ಏನು ಕಳಚಿದರೂ ಭಾವನೆಗಳು ಕಳಚಿಹೋಗುವುದಿಲ್ಲ. ಅದು ರಕ್ತಗತವಾಗಿ ಧಮನಿಯಿಂದ ಹೃದಯಕ್ಕೆ ಹರಿಯುತ್ತಾ ಇರುತ್ತದೆ. ಹೆಚ್ಚು ಕಮ್ಮಿ ಭಾವನಾತ್ಮಕವಾಗಿ ಮಾವನಗುಣಗಳನ್ನೇ ಅನುಕರಿಸುತ್ತಿದ್ದ ನನ್ನನ್ನು ಮಾವ ಹೇಳುತ್ತಿದ್ದರು ರಾಜಾ ಪ್ರತ್ಯಕ್ಷ ದೇವತಾ. ಸ್ವಂತ  ಮಕ್ಕಳಲ್ಲೂ ತೋರದ ವಿಶ್ವಾಸ ಸಲುಗೆಯನ್ನು ಕಂಡು ಬೆಳೆದವನು ನಾನು.  ಎದೆಯೆತ್ತರಕ್ಕೆ ಬೆಳೆದು  ಸ್ವತಂತ್ರವಾದ ಬದುಕು ನಾನು ಕಟ್ಟಿಕೊಂಡಾಗ ಮಾವನ ಕಿಶೆಯಿಂದ ಜಾರಿಹೋದ ಅಡಿಕೆಯಂತಾದೆ. ಮಾವನ ಮುಷ್ಠಿ ಸಾಲದಾಯಿತು.  ನಾನು ಬೆಳೆದಂತೆಲ್ಲಾ ಮಾವ ಅಭಿಮಾನಿಸುತ್ತಿದ್ದರು. ಆದರೂ ನಾನು ಬೇರೆಯೇ ಆದಾಗ ಭಾವನಾತ್ಮಕವಾಗಿ ಮಾವನೂ ನಲುಗಿರಬಹುದು. ಕಂಡಾಗಲೆಲ್ಲ ಕೈ ಹಿಡಿದರೆ, ಕಣ್ಣಿನಿಂದ ತೊಟ್ಟಿಕ್ಕಿದ ನೀರು ಕೈಯಲ್ಲಿ ಗತ ನೆನಪಿನ ಚಿತ್ತಾರವನ್ನು ಬಿಡಿಸುತ್ತಿತ್ತು. ಚಂದ ಮಾಮ ನನ್ನ ಪಾಲಿಗೆ ಬಾನ ಚಂದಿರನೇ ಆಗಿದ್ದ. ಈ ಮಾವನ ನೆನಪು ಮೊನ್ನೆ ಒತ್ತೊತ್ತಿ ಬಂತು. ಪ್ರತಿಯೋರ್ವ ತಂದೆಗೂ ಇದೇ ಭಾವನೆಗಳು ತುಂಬಿ ಬರಬಹುದು. 

    ನನ್ನ ಮಗ ಹರ್ಷ ಹೆಗಲಹತ್ತಿ ಆಟವಾಡುತ್ತಿದ್ದವನು ,  ಹೆಗಲನ್ನು ಒತ್ತರಿಸಿ ಬೆಳೆದು ನಿಂತು ಈಗ  ಮೆಚ್ಚಿದ ಹೆಣ್ಣಿನ ಹಾರಕ್ಕೆ ಕೊರಳೊಡ್ಡುವುದಕ್ಕೆ ಮಂಟಪದಲ್ಲಿ  ಅಂತರ್ಪಟದ ಹಿಂದೆ ನಿಂತುಕೊಂಡಿದ್ದ.  ಮೊನ್ನೆ ಮೊನ್ನೆ ಎಂಬಂತೆ ಕಳೆದ ಆತನ ಬಾಲ್ಯದ ನೆನಪಿನೊಂದಿಗೆ ನನ್ನ ಮಾವನೊಡನೆ ಕಳೆದ ಬಾಲ್ಯ ನೆನಪಾಯಿತು. ಈಗ ನನ್ನ ಜೇಬಿನಲ್ಲಿದ್ದ ಅಡಿಕೆ ಮರವಾಗಿ ಬೆಳೆದು ನಿಂತಿದೆ. ತಿಳಿಯದೇ ನಾವೆಲ್ಲ ಪ್ರಕೃತಿಯ ವೃತ್ತದ ಭಾಗವಾಗಿದ್ದೇವೆ. ಮನುಷ್ಯನ ಜೀವನ ಚಕ್ರವೂ ಅದೇ ರೀತಿ, ಹುಟ್ಟಿದಾಗ ಎದೆ ಮೆಲೆ ಹೆಜ್ಜೆ ಇಟ್ಟು ಪಾದದ ಬಲ ಪರೀಕ್ಷಿಸುವ ಮಗು ಬೆಳೆದು ದೊಡ್ಡದಾಗುತ್ತಿದ್ದಂತೆ ಮಡಿಲು ತೊರೆದು ನಿಂತುಕೊಂಡೆ ಎಂದು ಕೇ ಕೆ ಹಾಕಿ ನಗುತ್ತದೆ. ತೊದಲು ಮಾತಿಗೆ ಮುಗ್ದ ನಗುವಿಗೆ ಹೆತ್ತಕರುಳು ಕೂಡ ನಗುತ್ತದೆ. ಎಲ್ಲರ ಅನುಭವವೂ ಇದೇ ಆಗಿರಬಹುದು. ಆದರೂ ಹೊಸದು ಸಿಗುವ ಹಳೆಯದು ಕಳೆದುಕೊಂಡ ಅನುಭವ. 

ಮನುಷ್ಯ ಜೀವನದಲ್ಲಿ ಗೃಹಸ್ಥ ಜೀವನವೆಂಬುದು ಪರಮಾತ್ಮನಿಗೆ ಹತ್ತಿರವಾಗುವ ಹಂತ. ಕರ್ಮಾಂಗದಲ್ಲಿ ಕರ್ತೃತ್ವದ ಅವಕಾಶ ಒದಗಿಬರುತ್ತದೆ. ಗೃಹಸ್ಥನಾಗಿ ಹಲವು ಕರ್ಮಗಳಿಗೆ ಪವಿತ್ರಪಾಣಿಯಾಗುತ್ತಾನೆ. ಗೃಹಸ್ಥ ಜೀವನವೆಂದರೆ ಒಂದು ರೀತಿಯ ಅಗ್ನಿ ಪ್ರವೇಶದಂತೆ.  ಅಗ್ನಿ ಎಲ್ಲವನ್ನೂ ಪರಿಶುದ್ಧಗೊಳಿಸುತ್ತದೆ. ಸಂಸಾರದ ರಸಗಳೆಲ್ಲವೂ ಅಗ್ನಿ ಪರೀಕ್ಷೆಗಳಂತೆ ವ್ಯಕ್ತಿತ್ವವನ್ನು ಪಕ್ವಗೊಳಿಸುತ್ತಾ ಪರಮಾತ್ಮ ಸಾನ್ನಿಧ್ಯ  ಒದಗಿಬರುತ್ತದೆ. ಎದುರಾಗುವ ಸವಾಲುಗಳು ಅಗ್ನಿಯಂತೆ. ಅದರಲ್ಲಿ ಪರಿಪಕ್ವವಾಗಿ ಬದುಕನ್ನು ಸಾರ್ಥಕವಾಗಿಸಬೇಕು. ಅಗ್ನಿ ಸಾಕ್ಷಿ ಎನ್ನುವುದೇ ಹಾಗೆ. ನಮ್ಮ ಬದುಕು ಪ್ರಜ್ವಲಿಸಬೇಕಾದರೆ ನಮ್ಮ ದೇಹಾಗ್ನಿ ಸದಾ   ಜೀವಂತವಾಗಿರಬೇಕು.  ಕೈ ಮೇಲೆ ಕೈ ಇರಿಸಿ ಭಾಷೆ ಕೊಟ್ಟು ವಾಗ್ದಾನ ಮಾಡುವಾಗಲೂ ಕೈಯಲ್ಲಿರುವ ಅಗ್ನಿ ಸಾಕ್ಷಿಯಾಗುತ್ತದೆ.   ಇಲ್ಲೂ ನವ ವಧುವಿನ ಕೈ ಮೇಲೆ ಕೈ ಇರಿಸಿ ಧರ್ಮೇಚ ಅರ್ಥೇಚ ಎಂದು ತ್ರಿಕರಣ ಪೂರ್ವಕಾಗಿ ಹೇಳಿ  ಗೃಹಸ್ಥಾಶ್ರಮದೆಡೆಗೆ ಹರ್ಷನ ಹೆಜ್ಚೆ ನೋಡಿ ನಾನೂ ಹರ್ಷಿತನಾದೆ.  ಎದುರಿನ ಹೋಮಕುಂಡದ ಅಗ್ನಿಗೆ ಸಂಕೇತವಾಗಿ ಅಂಗೈ ಅಗ್ನಿಯ ಬಿಸಿ ನವ ವಧುವಿಗೆ ಧೈರ್ಯವನ್ನು ತುಂಬುವುದು ಆಕೆಯ ಮಂದಸ್ಮಿತವೇ ಸಾರಿ ಹೇಳುತ್ತಿತ್ತು.  

 ಅಂತರ್ಪಟ ಸರಿದಾಗ ಗಂಡು ಹೆಣ್ಣು ತಮ್ಮ ಕೈಯಲ್ಲಿರುವ ಜೀರಿಗೆ ಬೆಲ್ಲವನ್ನು ಪರಸ್ಪರ ಕೆನ್ನೆಗೆ ಹಚ್ಚಿಕೊಳ್ಳಬೇಕು. ಮಲೆನಾಡ ಸಂಪ್ರದಾಯ.  ಯಾರು  ಜೀರಿಗೆ ಬೆಲ್ಲ ಮೊದಲು ಹಚ್ಚುತ್ತಾರೋ ಅವರೇ ಮುಂದೆ ಎಲ್ಲದರಲ್ಲೂ ಗೆಲುವನ್ನು ಕಾಣುತ್ತಾರೆ ಎಂಬುದು ವಾಡಿಕೆಯಲ್ಲಿರುವ ಮಾತು. ನಾನು ಹರ್ಷನ ಕಿವಿಯಲ್ಲಿ ಹೇಳಿದೆ ಯಾರು ಮೊದಲು ಹಚ್ಚುತ್ತಾರೊ ಅವರ ಮಾತು ಹೆಚ್ಚು ನಡೆಯುತ್ತದೆ. ಆತ ಮೆಲುದನಿಯಲ್ಲೇ ಹೇಳಿದ ಅವಳೇ ಮೊದಲು ಹಚ್ಚಲಿ. ನಿಜವಾಗಿಯೂ  ಅದು ಶುದ್ದಾಂತಃಕರಣದ ಮಾತು .  ಸಂಸಾರದಲ್ಲಿ ಯಾರು ಸೋಲುತ್ತಾರೋ ಅವರೇ ಗೆಲ್ಲುತ್ತಾರೆ. ಕೌಟುಂಬಿಕ ಜೀವನದ ಸಿದ್ಧಾಂತ ಇದು. ಅದನ್ನು ನಾನು ಬಲವಾಗಿ ನಂಬಿದವ. ಇಲ್ಲಿ ಸೋಲು ಗೆಲುವು ನಿರ್ಣಯಿಸಲ್ಪಡುವುದಿಲ್ಲ. ಯಾರು ಸೋಲುತ್ತಾನೋ ಆತ ಗೆಲುವಿನ ನಗೆ ಬೀರುತ್ತಾನೆ. ಕೈ ಹಿಡಿವ ಹೆಣ್ಣಿನ ಗೆಲುವಲ್ಲೇ  ಮಗನ ಗೆಲುವು ಅದು ತನ್ನ ಸೋಲು ಅಲ್ಲ  ಎಂಬುದನ್ನು ಮಗ ಪ್ರತಿಪಾದಿಸಿ ಬಿಟ್ಟ. 

ಚೈತ್ರ ಸುಂದರ ಮುದ್ದಾದ ಹೆಣ್ಣು. ಮೊದಲು ಕಂಡಾಗ ಕಾಲಿಗೆರಗಿದವಳನ್ನು ತೆಲೇ ನೇವರಿಸಿ ಬರಸೆಳೆದಿದ್ದೆ. ನನ್ನ ಮಗ ಬಯಸಿದ ಹೆಣ್ಣು ಮಗಳು. ಈಕೆಯ ನಗುವಿನಲ್ಲಿ ನನ್ನ ಮಗನ ನಗುವಿದೆ.  ಮಾಂಗಲ್ಯ ಬಿಗಿದು ಧಾರೆ ಎರೆದು ಆಕೆ ಬಳಿಯಲ್ಲಿ ಕುಳಿತಾಗ ಒಂದು ಜವಾಬ್ದಾರಿ ಪೂರೈಸಿದ ಸಂತಸ. 

    ಮದುವೆ ಎಂಬುದು ಎಷ್ಟು ಸುಂದರ ಮತ್ತು ಸಂಭ್ರಮವೋ ಅದನ್ನು ನಿಭಾಯಿಸುವುದು ಅಷ್ಟೇ ಶ್ರಮದಾಯಕ. ಮಾನಸಿಕ ಒತ್ತಡ ಬೇಡವೆಂದರೂ ಅಮುಕಿಬಿಡುತ್ತದೆ. ಆದರೆ ಈ ಮದುವೆಯನ್ನು ಒತ್ತಡರಹಿತವಾಗಿ ಅನುಭವಿಸುವುದಕ್ಕೆ ನನ್ನ ಭಾವಂದಿರಾದ ಅರುಣ ಪ್ರಕಾಶ ಮತ್ತು ಮನೆಯವರ ಪರಿಶ್ರಮ ಮನ ಮುಟ್ಟುವ ಹಾಗಿತ್ತು. ಒಂದಿಷ್ಟು ಶ್ರಮವನ್ನೂ ನನ್ನ ಅನುಭವಕ್ಕೆ ಬಾರದಂತೆ ಎಲ್ಲ ಭಾರವನ್ನು ತಮ್ಮ ಹೆಗಲ ಮೇಲೆ ಹೊತ್ತು ನನಗೆ ಒಡಹುಟ್ಟಿದ ಸ್ನೇಹವನ್ನು ತೋರಿದವರು. ಮಾತೃ ಹೃದಯೀ ಅತ್ತೆಯವರೂ ಇಳಿ ವಯಸ್ಸಿನಲ್ಲಿ ನೀಡಿದ ದುಡಿಮೆ ಮರೆಯುವ ಹಾಗಿಲ್ಲ. ಎಲ್ಲದಕ್ಕೂ ಒಂದು ಕಾರಣವೆಂದರೆ  ಹರ್ಷ ಎಲ್ಲರ ಮಡಿಲಲ್ಲಿ ಬೆಳೆದ ಮಗು.  ಹರ್ಷನ ಪ್ರತಿ ಬೆಳವಣಿಗೆಯಲ್ಲೂ ಭಾಗಿಯಾದವರೂ ಮದುವೆಯಲ್ಲೂ ಸಂಭ್ರಮಿಸಿದರು.   ಭಾವಂದಿರ ಜತೆಗೆ ಶಶಿ ಪ್ರಮೀಳ ಭರತು ಮನೆ ಮಂದಿಯೆಲ್ಲರೂ ಇದು ನನ್ನದೇ ಮನೆ ಎಂಬ ಅನುಭವ ತುಂಬುವುದಕ್ಕೆ ಮನಸಾರೆ ಯತ್ನಿಸಿದವರು.  ಎಂದಿನಂತೆ ಮನಸ್ಸಿಗೆ ಧೈರ್ಯ ತುಂಬಿ ಜತೆಯಾಗಿ ದಾರಿ ತೋರಿದವರು ತಲಮಕ್ಕಿ ಮನೆಯ ಸುಬ್ಬಣ್ಣ. ಇನ್ನು ದುಡಿಮೆಯಲ್ಲೇ ಸುಖ ಕಾಣುವ ಬಾಲು ಮಾಮನ ಪರಿಶ್ರಮಕ್ಕೆ ಬೆಲೆ ಕಟ್ಟುವುದು ಸಾಧ್ಯವಿಲ್ಲದ ಮಾತು. ಮಿಕ್ಕುಳಿದ ಬಂಧುಗಳ ಯಥಾಶಕ್ತಿ ಪ್ರೋತ್ಸಾಹ ಹರ್ಷನ ಮದುವೆಗೆ ಹರಿದು ಬಂದದ್ದು ಹರ್ಷ ತಂದಿತು.  

    ಮದುವೆ ಎಂದರೆ ಅದೊಂದು ತಪಸ್ಸಿನ ಅನುಭವ ನೀಡುತ್ತದೆ. ಬಹಳಕಾಲದ ದೀರ್ಘ ತಪಸ್ಸು. ಈ ನಡುವೆ ಒಂಟಿಕಾಲಿನ ಪರೀಕ್ಷಗಳನ್ನ ಸದಾ ಎದುರಿಸಬೇಕಾಗುತ್ತದೆ. ಅದು ಎಲ್ಲರ ಅನುಭವ.  ತಪಸ್ಸು ಎಷ್ಟು ಕಠಿಣವಾದರೂ ದೈವ ಸಾಕ್ಷಾತ್ಕಾರವಾಗಬೇಕಾದರೆ ಅದನ್ನು ಆಚರಿಸಲೇ ಬೇಕು. ಅದರಂತೆ ಮದುವೆ. ತಪಸ್ಸು ಮಾಡಿ ಮಾಡಿ ಕೊನೆಗೊಂದು ಮೂಹೂರ್ತದಲ್ಲಿ ದೈವ ಸಾಕ್ಷಾತ್ಕಾರವಾದಂತೆ ಮದುವೆಯಾಗಿ ವಧುವರರು ಚಪ್ಪರದಲ್ಲಿ ನಿಂತಿರುತ್ತಾರೆ. ಹಾಗಾಗಿಯೇ ನವ ವಧುವರರನ್ನು ಭಗವಾನ್ ಸ್ವರೂಪ ಶ್ರೀ ಲಕ್ಷ್ಮೀನಾರಾಯಣನಿಗೆ ಹೋಲಿಸುವುದು. 

    ಈ ಮದುವೆಗೆ ಶಾಲಾ ದಿನದ  ಸಹಪಾಠಿಗಳು ಬೆಂಚು ಮಿತ್ರರೂ ಅತ್ಯಂತ ಪ್ರೀತಿಯಿಂದ ಆಗಮಿಸಿದ್ದು ಬಹಳ ಸಾರ್ಥಕವೆನಿಸಿತ್ತು. ಅಪರೂಪ ಎನ್ನಿಸುವಂತಹ ಮಿತ್ರರ ಆಗಮನ ಆಹ್ಲಾದಮಯವಾಗಿತ್ತು. ನನ್ನ ಕೈಯಲ್ಲೇ ಬೆಳೆದ ನನ್ನ ಮಾವನ ಮಕ್ಕಳ ಸಾನಿಧ್ಯ ನನ್ನ ಮತ್ತು ಮಾವನ ಹೃದಯದ ಸಂಭಂಧವನ್ನು ನೆನಪಿಗೆ ತಂದಿದೆ. ಇದಕ್ಕಿಂತ ಹೆಚ್ಚು ಏನು ಬೇಕು? ಹರ್ಷನ ಮದುವೆ ಹರ್ಷದಲ್ಲೇ ಕಳೆದು ಹರುಷವನ್ನೇ ತಂದಿತು. ಮದುವೆಗಿಂತಲೂ ನಂತರದ ಬದುಕು ಅತ್ಯಂತ ಮಹತ್ವ. ನವ ವಧುವರರ ಮುಂದಿನ ಬದುಕಿ ಶುಭ ಹಾರೈಕೆಗಳು ಶುಭಾಶಿರ್ವಾದಗಳನ್ನು ಹೊತ್ತು ತಂದ ಬಂಧು ಮಿತ್ರರಿಗೆ ಕೃತಜ್ಞತೆಗಳು.