Monday, June 20, 2016

ಸಜ್ಜಿಗೆ ರೊಟ್ಟಿ...ರವಾ ರೋಟಿ ಅಹಾ ಹಾ..!!!




ಇಂದಿನ ವೇಗದ ಆಹಾರ ಪದ್ದತಿಯಲ್ಲಿ ಪರಂಪರೆಯ ಆಹಾರ ಪದ್ದತಿಯೇ ಬದಲಾಗಿ ಹೋಗಿದೆ. ಇಡ್ಲಿ ದೋಸೆ ಕಡುಬು ಶಾವಿಗೆ ಪತ್ರೋಡೆ ಎಂಬುದು ನಮ್ಮ ಬಾಲ್ಯದ ಮುಂಜಾನೆ ಉಪಾಹಾರದ ಸಾಮಾನ್ಯ ತಿಂಡಿಗಳಾಗಿತ್ತು. ಆದರೆ ಅದನ್ನೆಲ್ಲ ತಯಾರಿಸಬೇಕೆಂದರೆ ಮೊದಲ ದಿನ ಬೆಳಗ್ಗೆಯೇ ಯೋಜನೆಯನ್ನು ಸಿದ್ದಪಡಿಸಬೇಕು.
 ಈಗಿನ ವೇಗದ ಯುಗದಲ್ಲಿ ಅದಕ್ಕೆಲ್ಲ ಸಹನೆ ವ್ಯವಧಾನ ಇದ್ದರೂ ಸಮಯ ವೆಲ್ಲಿದೆ ಹೇಳಿ?  ರುಚಿಯಾಗುತ್ತದೆ ಎಂದು ತಿಳೀದರೂ ಮಾಡಲಾಗದ ಅಸಹಾಯಕತೆ ಒಂದೆಡೆಯಾದರೆ ಅದರ ಬಗ್ಗೆ ಸಂಪೂರ್ಣ ತಿಳುವಳಿಕೆಯೂ ಬೇಕಲ್ಲವೇ?  ಹಾಗಾಗಿ ಇಂದು ಏನಿದ್ದರೂ ಕ್ಷಿಪ್ರ ತಿಂಡಿ ತಿನಿಸುಗಳು ಜನಪ್ರಿಯವಾಗುವುದು ಮಾತ್ರವಲ್ಲ ಅನಿವಾರ್ಯವಾಗುತ್ತದೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಯೋಚನೆ ಇಲ್ಲದೆ ಆಭ್ಯಾಸ ಇಲ್ಲದೆ ಎಲ್ಲರು ಮಾಡಬಹುದಾದ ತಿಂಡಿ ಎಂದರೆ ಉಪ್ಪಿಟ್ಟು. ಅಡಿಗೆ ಕಲಿಕೆ ಆರಂಭವಾಗುವುದೇ ಈ ಉಪ್ಪಿಟ್ಟು ತಯಾರಿಕೆಯಿಂದ. ಮಾತ್ರವಲ್ಲ  ಪ್ರಪ್ರಥಮ ಮಾಡಿದ ಉಪ್ಪಿಟ್ಟಿಗೆ ಉಪ್ಪು ಹಾಕುವುದಕ್ಕೆ ಮರೆಯುವುದೂ ಅಷ್ಟೇ ಸಾಮಾನ್ಯ.  ಹಾಗಾಗಿ ಇಂದಿನ ಕಾಲಮಾನಕ್ಕೆ ಹೊಂದಿಕೊಳ್ಳುವ ಒಂದು ರುಚಿಕರ ತಿಂಡಿಯನ್ನು ಇಲ್ಲಿ ತೋರಿಸುವ ಪ್ರಯತ್ನವಿದು.


ಸಜ್ಜಿಗೆ ರೊಟ್ಟಿ, ಇದು ಹಲವರ ಮನೆಯಲ್ಲಿ ರುಚಿಕರವಾಗಿ ತಯಾರಿಸುತ್ತಿರಬಹುದು. ಆದರೂ ನಾನು ತಿಳಿದ ಮಟ್ಟಿಗೆ ಇನ್ನೂ ಬಹಳಷ್ಟು ಪ್ರದೇಶದಲ್ಲಿ ಇದರ ಪರಿಚಯವೇ ಇಲ್ಲ. ಇದು ನೌಕರಿಗೆ ಹೋಗುವ  ಯುವಕ ಯುವತಿಯರು ಮಾತ್ರವೇ ವಾಸಿಸುವ ಮನೆಗಗಳಲ್ಲಿ ಸಿದ್ದಪಡಿಸುವುದಕ್ಕೆ ಅತ್ಯಂತ ಸೂಕ್ತ. ಇದಕ್ಕೆ ಮಿಕ್ಸಿಯ ಅವಶ್ಯಕಗೆ ಇರುವುದಿಲ್ಲ. ಮಾಡಬೇಕಿದ್ದರೂ ಅಷ್ಟೆ ಕೇವಲ ಕೆಲವು ನಿಮಿಷಗಳು ಸಾಕು. ರುಚಿಕರ ರೊಟ್ಟಿಯ ತುಂಡು ನಮ್ಮ ಬಾಯಿಯಲ್ಲಿರುತ್ತದೆ.  ರವೆರೊಟ್ಟಿಗೆ ಬೇಕಾಗುವ ಸಾಮಾಗ್ರಿಗಳು. ರವೆ, ಬನ್ಸಿ ರವೆ ಯಾ ಖಂಡ್ವ ಸಜ್ಜಿಗೆ ಇದಕ್ಕೆ ಅತ್ಯುತ್ತಮ ಮತ್ತು ಗರಿ ಗರಿಯಾಗಿ ರುಚಿಯಾಗಿರುತ್ತದೆ. ಇದು ಇಲ್ಲವಾದರೆ ಚಿರೋಟಿ ಅಥವಾ ಇನ್ನಿತರ ರವೆಯಾದರೂ ಆಗಬಹುದು. ಇದು ಉಪ್ಪಿಟ್ಟಿನಂತೆ. ಉಪ್ಪಿಟ್ಟಿಗೆ ನಾವು ಏನೆಲ್ಲ ಹಾಕುತ್ತೇವೆಯೋ  ಒಗ್ಗರಣೆ ಹೊರತಾಗಿ ಅದನ್ನು ಇಲ್ಲಿ ಹಿಟ್ಟಾಗಿ ಉಪಯೋಗಿಸುವುದು. ಹಾಗಾಗಿ ....ಒಂದಷ್ಟು ರವೆ, ಅದಕ್ಕೆ ಸ್ವಲ್ಪ ಈರುಳ್ಳಿ,  ಹಸಿ ಮೆಣಸು,  ಶುಂಠಿ ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು  ಇದಿಷ್ಟು ಪ್ರಧಾನ ಮತ್ತು ತೀರ ಅಗತ್ಯ. ಮತ್ತೆ ಜತೆಯಲ್ಲಿ ತುರಿದ ಕ್ಯಾರೆಟ್, ಚಿಕ್ಕದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು, ಮತ್ತು ಟೊಮೆಟೊ ಸ್ವಲ್ಪ ಅರಶಿನ ಪುಡಿ ಎಲ್ಲವನ್ನು ಹಾಕಿ ತಣ್ಣಗಿನ ನೀರು ಹಾಕಿ ಕಲಸಿ ಇಟ್ಟುಕೊಳ್ಳಿ. ಸ್ವಲ್ಪ ಹೊತ್ತಿನಲ್ಲೇ ರವೆ ನೀರಿನೊಂದಿಗೆ ಹಿಗ್ಗಿಕೊಂಡು ಮಿಶ್ರವಾಗುತ್ತದೆ. ಇದನ್ನು ದೋಸೆ ಕಾವಲಿ ಬಿಸಿ ಮಾಡಿ ಬರಿ ಕೈಯಿಂದ ಕಾವಲಿ ಮೇಲೆ ಸಾರಿಸಬಹುದು. ಹೀಗೆ ಮಾಡುವುದಕ್ಕೆ ಸ್ವಲ್ಪ ಅಭ್ಯಾಸ ಬೇಕು.
ಅದಿಲ್ಲವಾದರೆ ಸೌಟಿನಿಂದ ದಪ್ಪ ದೋಸೆ ಎರೆದಂತೆ ಕಾವಲಿಯಲ್ಲಿ ಎರೆಯಬಹುದು.  ಸಣ್ಣ ಉರಿಯಲ್ಲಿ ಸ್ವಲ್ಪ ನಿಧಾನವಾಗಿ ಕಾಯಿಸಿ ತಟ್ಟೆಗೆ ಹಾಕಿದರೆ ಅತ್ಯಂತ ರುಚಿಕರವಾದ ಸಜ್ಜಿಗೆ ರೊಟ್ಟಿ ಎಂಬ ನಮ್ಮೂರಿನ ಜನಪ್ರಿಯ ಖಾದ್ಯ ನಿಮ್ಮ ತಟ್ಟೆಯಲ್ಲಿರುತ್ತದೆ.  ತಿಂದು ನೋಡಿ. 


Saturday, June 11, 2016

ಹಾಗಲ ಸೊಪ್ಪಿನ ಸೊಲಮೀರಿಯಾ ಬೆಂದಿ


            “ಕಂಚಲ ಇತ್ತಿಂಡ ಎಂಚಲ ಉಣೊಲಿ”   ಕಂಚಲ ಎಂದರೆ ಹಾಗಲ ಅದು ಇದ್ದರೆ ಹೇಗೂ ಊಟಮಾಡಬಹುದು್. ಇದು ತುಳು ಗಾದೆ ಮಾತು. ಅದರ ಒಂದು ರೂಪವೇ ಈ ಲೇಖನ.
ಮನೆಯ ಮೆಟ್ಟೆಲ ತನಕವೂ ರಸ್ತೆ ಹಾಸಿ ಮಲಗಿಕೊಂಡರೆ  ಮತ್ತೆ ಅಂಗಳಕ್ಕೆಲ್ಲಿದೆ ಜಾಗ? ಅಂಗಳ ವಿಲ್ಲದಾಗ ನಗರದಲ್ಲಿ ಮನೆಯ ತಾರಸಿಯೇ ಅಂಗಳವಾಗಿ ಬದಲಾಗಿಬಿಡುತ್ತದೆ. ಕಾಲ ಬುಡದಲ್ಲಿರಬೇಕಾದದ್ದು ತಲೆಯ ಮೇಲೆ. ಆದರೂ ನಗರವಲ್ಲವೇ? ಬದುಕು ಅನಿವಾರ್ಯವಾದಾಗ ಮತ್ತೆಕೆಲವು ಅನಿವಾರ್ಯವಾಗಿ ಪರಿಣಮಿಸುತ್ತದೆ.  ಹಾಗಾಗಿ ನಮ್ಮ ಮನೆಯ ತಾರಸಿ ಮೆಲೆ ಒಂದು ಪುಟ್ಟ ಕೈತೋಟವಿದೆ. ಅಲ್ಲಿ ಒಂದಿಷ್ಟು ಹಸಿರು ಕಂಗೊಳಿಸುವಾಗ ಮನಸ್ಸಿಗೆ ಒಂದಷ್ಟು ಆನಂದ. ಕೆಲವು ಹೂವಿನ ಗಿಡ ಬಳ್ಳಿಗಳಾದರೆ ಇನ್ನು ಕೆಲವು ತರಕಾರಿ ಗಿಡಬಳ್ಳಿಗಳು. ಹೂವಿನ ಬಳ್ಳಿ ಹೂ ಬಿಟ್ಟಾಗ ಮನೆಯ ತಲೆಯ ಮೇಲೆ ಹೂ ಅಲಂಖಾರ ಮಾಡಿದರೆ ಈ ಹಸಿರಬಳ್ಳಿಗಳು ತೋರಣವಾಗಿಬಿಡುತ್ತವೆ.
ಹೀಗೆ ಬೆಳೆದ ಸಸ್ಯಗಳ ನಡುವೆ ಒಂದು ಬಳ್ಳಿಯಿದೆ ಹಾಗಲಕಾಯಿ ಬಳ್ಳಿ. ಆಗಲೋ ಈಗಲೋ ಆಗುವ ಒಂದು ಮಿಡಿ ಹಾಗಲದ ಆಶೆಗಾಗಿ ಅಲ್ಲವಾದರೂ ಬಳ್ಳಿ ಬೆಳೆದು ನಿಂತಿದೆ. ಪ್ರತಿಯೋಬ್ಬನೂ ಒಂದಷ್ಟು ಹಸಿರನ್ನು ಬೆಳೆಸಬೇಕು. ಆ ಮೂಲಕ ತಾನು ಸೇವಿಸುವ ಆಮ್ಲಜನಕದ ಋಣವನ್ನು ಪ್ರಕೃತಿಗೆ ಸಲ್ಲಿಸಿದ ಹಾಗಾಗುತ್ತದೆ.  ಹಾಗೆ ಒಂದಷ್ಟು ಹಸಿರ ಕಾಣುವ ಆಶೆಯಾದರೆ ಹಾಗಲದ ಬಳ್ಳಿ ಬೆಳೆಯುವುದಕ್ಕೆ ಮತ್ತೊಂದು ಮುಖ್ಯ ಕಾರಣವಿದೆ.  ಅದುವೇ ಇಲ್ಲಿನ ವಿಶೇಷ.
ಸಾಮಾನ್ಯವಾಗಿ ಹಾಗಲಕಾಯಿಯನ್ನು ಅರೋಗ್ಯದ ದೃಷ್ಟಿಯಿಂದ ಬಹಳ ಜನ ಉಪಯೋಗಿಸುತ್ತಾರೆ. ಮಾತ್ರವಲ್ಲ ಇದರ ರುಚಿ ಸ್ವಾದಕ್ಕೊಸ್ಕರವೂ ಇದನ್ನು ಇಷ್ಟ ಪಡುವವರು ಬಹಳಷ್ಟು ಮಂದಿ. ಇದರ ಕಹಿಯಿಂದ ಬಹಳಷ್ಟು ಜನ ಇದನ್ನು ಇಷ್ಟ ಪಡದವರೂ ಇದ್ದಾರೆ. ಆದರೆ ಸೋಜಿಗವೆಂದರೆ ತರಕಾರಿಗಳಲ್ಲಿ ಅತ್ಯಂತ ಪೌಷ್ಟಿಕ ಮತ್ತು ಆರೋಗ್ಯದಾಯಕ ತರಕಾರಿ ಎಂದರೆ ಅದು ಹಾಗಲಕಾಯಿ.  ಪ್ರಕೃತಿಯೇ ಹಾಗೆ ತೀರ ಬೇಕಾದದ್ದನ್ನು ಬಹಳ ತ್ರಾಸದಾಯಕವಾಗಿ ಮಾಡಿ ಅದರ ಮಹತ್ವವನ್ನು ಹೆಚ್ಚಿಸುತ್ತದೆ. ಅದಕ್ಕೆ ಉದಾಹರಣೆ ಹಾಗಲಕಾಯಿ.  ಇಲ್ಲಿ ಈಗ ನಾನು ಹೇಳುವುದು ಹಾಗಲ ಕಾಯಿ ಉಪಯೋಗವಲ್ಲ. ಬದಲಾಗಿ ಹಾಗಲದ ಸೊಪ್ಪಿನ ಉಂದು ಸ್ವಾದಿಷ್ಟ ಅಡುಗೆಯನ್ನು.
ಹಾಗಲ ಕಾಯಿ ಸೊಪ್ಪಿನ ಬೆಂದಿ ಅಂದರೆ ಸಾಂಬಾರ್, ಅಥವಾ ಹುಳಿ ಹೀಗೆ ಏನಾದರೂ ಕರೆಯಿರಿ. ಆದರೆ ವಾಡಿಕೆಯಂತೆ ನಮ್ಮಲ್ಲಿ ಇದನ್ನು ಕರೆಯುವುದು ಸೋಲ ಮೀರಿ ಬೆಂದಿ.  ಸೋಲ ಅಂದರೆ ಕೆತ್ತೆ ಹುಳಿ, ಮೀರಿ ಎಂದರೆ ಮೆಣಸು. ಹುಳಿ ಮೆಣಸು ಏಕಪ್ರಕಾರವಾಗಿ ಉಪಯೋಗಿಸಿ ಮಾಡುವಂತಹ ಒಂದು ವಿಭವವಿದು. ಮಳೆಗಾಲ ಇದಕ್ಕೆ ಅತ್ಯಂತ ಸೂಕ್ತ.

ಇದಕ್ಕೆ ಬೇಕಾಗುವ ಸಾಮಾಗ್ರಿಗಳು, ಒಂದು ಬೊಗಸೆ ತುಂಬ ಹಾಗಲಕಾಯಿ ಸೊಪ್ಪುಇದು ಹೆಚ್ಚಾದರೂ ಪರವಾಗಿಲ್ಲ. ಒಂದು ವರೆ ಹಿಡಿಯಷ್ಟು ಮೆಣಸು, ಸ್ವಲ್ಪ ಕರಿಮೆಣಸು ಒಂದು ಮುಷ್ಠಿ ಕೆತ್ತೆ ಹುಳಿ, ಬೆಲ್ಲ , ಸ್ವಲ್ಪ ಬೆಲ್ಲ, ಅರಶಿನ ಎರಡು ಮುಷ್ಠಿ ತುರಿದ ತೆಂಗಿನಕಾಯಿ, ಬೆಳ್ಳುಳ್ಳಿ ಒಗ್ಗರಣೆಗೆ ಎಣ್ಣೆ ಸಾಸಿವೆ ಮತ್ತು ರುಚಿಗೆ ಒಂದಷ್ಟು ಉಪ್ಪು.
ಮೊದಲು ಹಾಗಲ ಕಾಯಿ ಸೊಪ್ಪುನ್ನು ಹೆಚ್ಚಿ ಒಂದು ಪಾತ್ರೆಗೆ ಹಾಕಿ ಅದಕ್ಕೆ ಮೇಲೆ ಹೇಳಿದ ಮೆಣಸು ಸ್ವಲ್ಪ ಕರಿಮೆಣಸು ಹುಳಿ ಅರಶಿನ ನುಣ್ಣಗೆ ಅರೆದು ಸೇರಿಸಿ ಬಿಸಿ ಮಾಡಬೇಕು. ಅದಕ್ಕೆ ಬೆಲ್ಲ ಉಪ್ಪು ಹಾಕಿ ಹದಿನೈದು ನಿಮಿಷ ಬೇಯಿಸಬೇಕು. ಸೊಪ್ಪು ಚೆನ್ನಾಗಿ ಉಪ್ಪು ಹುಳಿ ಖಾರವನ್ನು ಹೀರಿಕೊಳ್ಳುತ್ತದೆ. ಆನಂತರ ಅದಕ್ಕೆ ತೆಂಗಿನಕಾಯಿಯನ್ನು ನುಣ್ಣಗೆ ಅರೆದು ಸೇರಿಸಿ ಮತ್ತಷ್ಟು ಹೊತ್ತು ಚೆನ್ನಾಗಿ ಕುದಿಸಬೇಕು. ಆನಂತರ ಸಾಸಿವೆ ಒಗ್ಗರಣೆ ಹಾಕಿ ಅದಕ್ಕೆ ಬೆಳ್ಳುಳ್ಳಿಯನ್ನು( ಬೇಕಾದರೆ)  ಹಾಕಿ ಕರಿದು ಇಲ್ಲಿ ಸೇರಿಸಿದರೆ ರುಚಿಯಾದ ಸೋಲ ಮೀರಿ ಬೆಂದಿ ಸಿದ್ದ.



ಇದನ್ನು ಒಂದು ಸಲ ಮಾಡಿದರೆ ತಿಂಗಳುಗಳಷ್ಟು ಕಾಲ ಉಪಯೋಗಿಸಬಹುದು. ಪ್ರತೀ ದಿನವೂ ಇದನ್ನು ಬಿಸಿ ಮಾಡಿದಂತೆ ಇದರ ರುಚಿ ವೃದ್ದಿಸುತ್ತಾ ಹೋಗುವುದು. ಒಂದು ವಾರ ಕಳೆದ ನಂತರ ಇದು ಪದೇ ಪದೇ ಬಿಸಿಯಾಗುತ್ತಾ ಹಾಗಲ ಕಾಯಿ ಕಹಿ ಹೋಗಿರುತ್ತದೆ. ತಟ್ಟೆಯ ಬದಿಯಲ್ಲಿ ಒಂದಷ್ಟು  ಬಡಿಸಿಕೊಂಡು ಕೊಬ್ಬರಿ ಎಣ್ಣೆಯೊಂದಿಗೆ ನಂಜಿಕೊಳ್ಳುತ್ತಾ ಬಿಸಿ ಬಸಿ ಅನ್ನವನ್ನು ಊಟ ಮಾಡುತ್ತಿದ್ದರೆ ಸ್ವರ್ಗಕ್ಕೆ ಮೂರು ಗೇಣು ಸ್ವಾಮಿ.  ಕರಾಡ ಬ್ರಾಹ್ಮಣರ ವಿಶಿಷ್ಟ ಆಹಾರಗಳಲ್ಲಿ ಇದೂ ಒಂದು. ಬೆಳ್ಳುಳ್ಳಿ ಇಲ್ಲದೆಯೂ ಇದನ್ನು ಬಳಸಬಹುದು.

ನಮ್ಮ ಬಾಲ್ಯದಲ್ಲಿ ನಮ್ಮ ದೊಡ್ಡಮ್ಮ (ತಾಯಿಯ ಅಮ್ಮ) ಇದನ್ನು ಬಹಳ ರುಚಿಯಾಗಿ ಮಾಡಿ ಇಡುತ್ತಿದ್ದರು.  ಮನೆಯಲ್ಲಿ ಯಾವುದಾದರು ಬಾಣಂತನವಿದ್ದರೆ ಅದರ ಆರೈಕೆಯಲ್ಲಿ ಈ ಸೋಲ ಮೀರಿ ಬೆಂದಿ ಕೂಡ ಒಂದು ಪ್ರಧಾನ ಅಂಗ. ಬಾಣಂತಿಯರಿಗೆ ಇದನ್ನು ಆಹಾರದ ಜತೆ ತಪ್ಪದೆ ಕೊಡುತ್ತಿದ್ದರು. ಬಹಳ ಉಷ್ಣ ಆಹಾರವಾದುದರಿಂದ ಎಷ್ಟು ರುಚಿಯಾದರೂ ದಿನದಲ್ಲಿ ಸ್ವಲ್ಪವೇ ನಂಜಿಕೊಂಡು ಸೇವಿಸುವುದು ಹೆಚ್ಚು ಸೂಕ್ತ. ಈಗ ಮಳೆಗಾಲ ಆರಂಭವಾಗಿದೆ,  ನಿಮ್ಮ ಮನೆಯಲ್ಲಿ ಹಾಗಲ ಬಳ್ಳಿ ಇದ್ದರೆ ಒಂದು ಸಲ ಪ್ರಯೋಗ ಮಾಡಿ,