Sunday, February 27, 2022

ಜ್ಞಾನವೇ ದೇವರು....!!!

  ಒಂದೆರಡು ವರ್ಷಗಳ ಈಚೆಗೆ ಒಂದು ಸಾಯಂಕಾಲ ನನ್ನ ಅಮ್ಮನಿಗೆ ರಕ್ತದೊತ್ತಡ ಕಡಿಮೆಯಾಗಿ ತೀವ್ರವಾಗಿ ಅಸ್ವಸ್ಥರಾದರು. ರಾತ್ರಿ ಅವರನ್ನು ಮನೆಯ ಹತ್ತಿರವೇ ಇದ್ದ ಒಂದು ಡೈಯಾಗ್ನಾಸ್ಟಿಕ್ ಕೇಂದ್ರಕ್ಕೆ ಕರೆದು ಕೊಂಡು ಹೋದೆ. ಅಲ್ಲಿ ಹೃದ್ರೋಗ ತಜ್ಞ ವೈದ್ಯರು ಬಂದು ಪರೀಕ್ಷಿಸಿ ಸಲಹೆ ಕೊಡುತ್ತಿದ್ದರು. ಸಾಮಾನ್ಯವಾಗಿ ಮನೆಯ ಹತ್ತಿರವೇ ಇರುವುದರಿಂದ ಎಲ್ಲ ಸಂದರ್ಭದಲ್ಲೂ ಅಮ್ಮನನ್ನು ಅಲ್ಲಿಗೆ ಕರೆದೊಯ್ಯುವುದು.  ಆ ವೈದ್ಯರು ಸ್ವಲ್ಪ ಗಣ್ಯ ವೈದ್ಯರು. ಆಗಾಗ ಹಲವಾರು ಟಿ ವಿ ಚಾನಲ್ ಗಳ ಚರ್ಚೆಯಲ್ಲಿ ಮುಖತೋರಿಸುತ್ತಾರೆ. ಅವರ ಹೆಸರಾಗಲೀ ಡೈಯಾಗ್ನಿಸ್ಟಿಕ್ ಹೆಸರಾಗಲೀ ಹಾಕುವ ಉದ್ದೇಶ ನನಗಿಲ್ಲ. ಸರಿ ವೈದ್ಯರು ಅಮ್ಮನನ್ನು ಪ್ರಾಥಮಿಕ ಪರೀಕ್ಷೆ ಮಾಡಿದರು. ಇ ಸಿ ಜಿ ಪರೀಕ್ಷೆ ಮಾಡಿ ಆದಷ್ಟು ಬೇಗ ತುಸು ದೂರದ ದೊಡ್ಡ ಆಸ್ಪತ್ರೆಗೆ ಸೇರಿಸುವುದಕ್ಕೆ ಹೇಳಿದರು.  ತಾನು ಬರೆದುಕೊಡುತ್ತೇನೆ. ಅಲ್ಲಿ ಬೇಗನೆ ಆಡ್ಮಿಟ್ ಮಾಡಿ ಒಳ್ಳೆ ಟ್ರೀಟ್ ಮೆಂಟ್ ಕೊಡುತ್ತಾರೆ. ತಾನೂ ಬರುತ್ತೇನೆ.  ಹತ್ತು  ಹದಿನೈದು ಸಾವಿರ ಬೇಕಾದೀತು. (ಆಸ್ಪತ್ರೆಯ ಹೆಸರೂ ಸಹ ಅಗತ್ಯವಿಲ್ಲ )   ಸ್ಥಿತಿ ಅಷ್ಟೊಂದು ಗಂಭೀರವೇ? ನನಗೂ ಗಾಬರಿಯಾಯಿತು.  ಇಂತಹ ಸಂದರ್ಭದಲ್ಲಿ ನಾನು ಅಕ್ಕನಿಗೆ ಕರೆ ಮಾಡುವುದು ಸ್ವಾಭಾವಿಕ. ಆಕೆ ಯಶವಂತಪುರದ  ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಸೂಪರ್ ವೈಸರ್. ಆಕೆ ಕೂಡಲೇ ಅಲ್ಲಿಗೆ ಕರೆತರುವಂತೆ ಹೇಳಿದಳು. ಆಗಲೇ ಕತ್ತಲೆಯಾಗಿತ್ತು. ಇತ್ತ ಈ ವೈದ್ಯರು ಅವಸರ ಪಡಿಸುತ್ತಿದ್ದರು. 



ನಾನು ಮತ್ತೆ ಯೋಚಿಸಲಿಲ್ಲ. ಅಮ್ಮನನ್ನು ಕರೆದುಕೊಂಡು ಕೊಲಂಬಿಯಾ ಆಸ್ಪತ್ರೆಗೆ  ಹೋದೆ. ಅಲ್ಲಿ ನಾನೂರು ರೂಪಾಯಿ ಚೀಟಿ ಮಾಡಿಸಿ  ಅಕ್ಕ ಮತ್ತು ಅವಳ ಸಹವರ್ತಿಗಳು ಕೂಡಲೇ ತುರ್ತು ಚಿಕಿತ್ಸೆಯ ಹಾಸಿಗೆಯಲ್ಲಿ ಅಮ್ಮನಿಗೆ ಡ್ರಿಪ್ಸ್ ಕೊಟ್ಟರು.  ಅಲ್ಲಿಯ ಡ್ಯೂಟಿ ಡಾಕ್ಟರ್ ಪರೀಕ್ಷಿಸಿದರು. ಒಂದೆರಡು ತಾಸು. ಅಷ್ಟೇ  ಆನಂತರ ಕೆಲವು ಮಾತ್ರೆ ಬರೆದುಕೊಟ್ಟು ಅಮ್ಮನನ್ನು ಕಳುಹಿಸಿ ಕೊಟ್ಟರು. ಅಕ್ಕ ಮತ್ತು ಸಹೋದ್ಯೋಗಿಗಳಿಗೆ ಮನಸಾರೆ ಧನ್ಯವಾದ ಹೇಳಿದೆ. ಆಗ ಅಲ್ಲಿನ ವೈದ್ಯರು ಹೇಳಿದರು, ಬೀಪಿ ಕಡಿಮೆಯಾಗಿತ್ತು. ಆತಂಕವೇನೂ ಇಲ್ಲ. ಅಮ್ಮನ ಆರೋಗ್ಯ ಸ್ಥಿರವಾಗಿದೆ. ಸ್ವಲ ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ಕೊಟ್ಟರು.  

ಆನಂತರ ಮೊದಲ ವೈದ್ಯರು ಎಷ್ಟು ಖ್ಯಾತರಾಗಿದ್ದರೂ, ಅವರ ಹೆಸರಿನೊಂದಿಗೆ ಹಲವಾರು ಡಿಗ್ರಿಯ ಅಕ್ಷರಗಳು ಸೇರಿಕೊಂಡಿದ್ದರೂ ನಾನು ಅವರಲ್ಲಿಗೆ ಹೋಗಲಿಲ್ಲ. ವೈದ್ಯೋ ನಾರಾಯಣೋ ಹರಿ ಅಂತ ಅವರೇ ಟಿ ವಿ ಯ ಚರ್ಚೆಯಲ್ಲಿ ಗೊಳ ಗೊಳಿಸಿದ್ದನ್ನು ಕೇಳಿದ್ದೇನೆ. ಯಾವ ನಾರಾಯಣನೋ ಅಂತ ಅನುಮಾನ. ಹಾಗಾದರೆ ಆ ವೈದ್ಯರು ಹಾಗೇಕೆ ಮಾಡಿದರು? ವಿಷಯ ಸ್ಪಷ್ಟ.  ಅಸ್ಪೆತ್ರೆಯ ಬಿಲ್ಲಿನ ಮೊತ್ತದಲ್ಲಿ ಕನಿಷ್ಠವೆಂದರೂ ಮೂರುನಾಲ್ಕು ಸಾವಿರ ಇವರ ಜೇಬಿಗೆ ಸಂದಾಯವಾಗುತ್ತದೆ.  ಏನೋ ದೊಡ್ಡ ಉಪಕಾರ ಮಾಡಿದ ಆಪತ್ಭಾಂಧವರಂತೆ ತೋರಿಸಿಕೊಟ್ಟರು. ವಾಸ್ತವದಲ್ಲಿ   ಇದೆಲ್ಲ ಈಗ ಸರ್ವೇ ಸಾಮಾನ್ಯ. ಒಬ್ಬ ಎಂ ಬಿ ಬಿ ಎಸ್ ಮಾಡಿ ಸಣ್ಣ ಕ್ಲೀನಿಕ್ ತೆರೆದರೆ ಸಾಕು. ಹಲವಾರು ಆಸ್ಪತ್ರೆಗಳ ಲಿಂಕ್ ಇರುತ್ತದೆ. ಯಾರು ಬಂದರೂ  ಪ್ರಾಥಿಮಿಕ ಪರೀಕ್ಷೆ ಮುಗಿಸಿ ಅಲ್ಲಿಗೆ ರವಾನಿಸಿ ಬಿಡುತ್ತಾರೆ. ಅಲ್ಲಿಂದಲೂ ಒಂದಷ್ಟು ಕಮೀಷನ್ ನಂತರ ಕನ್ಸಲ್ಟೇಶನ್ ಅವರಿಗೆ ಸಲ್ಲುವ ದುಡ್ಡು ಆಸ್ಪತ್ರೆ ಬಿಲ್ ನಲ್ಲಿ ಸೇರಿರುತ್ತದೆ. ನಿತ್ಯ ಬರುವವರೂ ಬಂಧುಗಳು ಯಾರೇ ಇದ್ದರು ಇವರಿಗೆ ಸಲ್ಲಬೇಕಾದ ಹರಕೆ ಸಂದಾಯವಾಗಲೇ ಬೇಕು. ಇನ್ನು ಪರಿಚಯ ಸ್ನೇಹ ಹಣದ ಮುಂದೆ ಯಾವುದೂ ಅಲ್ಲ. ಚಿನ್ನದ ಕೆಲಸದವರಿಗೆ ಅಡ್ಡ ಹೇಳುವುದುಂಟು ಯಾರ ಚಿನ್ನವನ್ನೂ ಬಿಡುವುದಿಲ್ಲ ಎಂದು. ನಿಜಕ್ಕಾದರೆ ಅಲ್ಲಿಯಾದರೂ ಒಂದಿಷ್ಟು ಪ್ರಾಮಾಣಿಕತೆ ಇರಬಹುದು, ಆದರೆ ನಮ್ಮ ಜೀವಕ್ಕೆ ಸಂಬಂಧಿಸಿದಂತ ವೈದ್ಯಕೀಯ ಕ್ಷೇತ್ರದಲ್ಲಿ ಇವನ್ನೆಲ್ಲ ನಿರೀಕ್ಷೆ ಮಾಡುವುದು ಹಾಸ್ಯಾಸ್ಪದ. 

ಬಹುಶಃ ಉಕ್ರೈನ್ ರಷ್ಯಾ ಯುದ್ಧ ಸಂಭವಿಸದೇ ಇರುತ್ತಿದ್ದರೆ ಹತ್ತರೊಟ್ಟಿಗೆ ಹನ್ನೊಂದು ಎಂಬಂತಿದ್ದ ಈ ಘಟನೆ ಮರೆತು ಹೋಗುತ್ತಿತ್ತು. ಆದರೆ ಉಕ್ರೈನ್ ನಿಂದ ವಾಪಾಸಾಗುವ ಬಹುತೇಕ ಮಂದಿಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳನ್ನು ಕಂಡು ಈ ಘಟನೆ ನೆನಪಾಯಿತು. ಇಲ್ಲಿ ಭಾರತದ ಶಿಕ್ಷಣ ಬಿಟ್ಟು ಅದೂ ವಿಶ್ವಗುರು ಎಂದು ಬೆನ್ನು ತಟ್ಟಿಕೊಳ್ಳುವ ಭಾರತವನ್ನು ಬಿಟ್ಟು  ಇವರೆಲ್ಲ ನಮಗೆ ಹೆಸರೂ ಪರಿಚಿತವಲ್ಲದ ಉಕ್ರೈನ್ ಗೆ ಯಾಕೆ ಹೋಗುತ್ತಾರೆ ಎಂಬುದು  ಪ್ರಶ್ನಾರ್ಥಕ ವಿಷಯ.  ನನ್ನ ವೈದ್ಯ ಮಿತ್ರರೊಬ್ಬರಲ್ಲಿ ಕೇಳಿದೆ. ಅವರು ಹೇಳಿದರು ಇಲ್ಲಿ ಒಂದು ಸಾಮಾನ್ಯ ವೈದ್ಯ ಪದವಿ ಮುಗಿಸಬೇಕೆಂದಿದ್ದರೆ ಕಡಿಮೆ ಎಂದರೂ ಮೂವತ್ತು ಲಕ್ಷ ಬೇಕು. ಅಲ್ಲಿ ಐದಾರು ಲಕ್ಷದಲ್ಲಿ ಸಾಧ್ಯವಾಗುತ್ತದೆ.  ಹಾಗಾಗಿ ಹೆತ್ತವರನ್ನು ಮನೆಯನ್ನು ಬಿಟ್ಟು ಭೂಮಿಯ ಯಾವುದೋ ಒಂದು ಭಾಗಕ್ಕೆ ಅಧ್ಯಯನಕ್ಕೆ ಹೋಗುತ್ತಾರೆ. ಅವರ ಬಗ್ಗೆ ನಿಜಕ್ಕೂ ಸಹಾನುಭೂತಿ ಇದೆ. ವಿದ್ಯೆ ಜ್ಞಾನ ಎಂಬುದು ತಪಸ್ಸು ಎಂಬುದು ಸತ್ಯ. ಆದರೆ ಅದು ಈ ರೂಪದಲ್ಲಿ ಪರೀಕ್ಷೆಗೆ ಒಳಗಾಗುವುದು ವಿಪರ್ಯಾಸ. 

ಒಂದು ಡಾಕ್ಟರ್ ಆಗುವುದಕ್ಕೆ ಅಷ್ಟು ಸಾವಿರ ಖರ್ಚು ಮಾಡಿದ ಮೇಲೆ, ಲೋಕೋದ್ಧಾರದ ಮಾತು ಅರ್ಥ ಹೀನ ಬೊಗಳೆಯಾಗುತ್ತದೆ. ಮೊದಲು ಪಟ್ಟ ಪರಿಶ್ರಮಕ್ಕೆ ಫಲ ಸಿಗಬೇಕು. ಕೇವಲ ಡಾಕ್ಟರ್ ಎನಿಸಿಕೊಳ್ಳೂವುದಕ್ಕೆ ಮೂವತ್ತು ಸಾವಿರ ಖರ್ಚು ಮಾಡಿದಮೇಲೆ ಇನ್ನು ದೊಡ್ಡ ಸರ್ಜನ್ ಆಗುವುದಕ್ಕೆ ಎಷ್ಟು ಖರ್ಚಾಗಬೇಡ. ಈಗ ಈ ವೈದ್ಯರು ನಿಗದಿತ ಆಸ್ಪತ್ರೆಗೆ ಸೇರಿಸುವುದಕ್ಕೆ , ಇಂತಹುದೇ ಮಾತ್ರೆ  ಔಷಧಿ ತೆಗೆದುಕೊಳ್ಳ ಬೇಕು ಎನ್ನುವುದರ ಸತ್ಯ ತಿಳಿಯಬಹುದು. ಒಂದೊಂದು ಮಾತ್ರೆ ನುಂಗುವಾಗಲೂ ವೈದ್ಯರಿಗೆ ಸಲ್ಲಬೇಕಾದದ್ದು ಸದ್ದಿಲ್ಲದೆ ಸಂದು ಹೋಗುತ್ತದೆ. ವ್ಯವಸ್ಥೆಯೇ ಹೀಗೆ. 

ಶಿಕ್ಷಣ ಮಾನವ ಮೂಲ ಭೂತ ಹಕ್ಕುಗಳಲ್ಲಿ ಒಂದು. ಯಾವುದೇ ಸರಕಾರವಾದರೂ ಪ್ರಭುಗಳಾದರೂ ಅದಕ್ಕೆ ಮುಕ್ತ ಅವಕಾಶವನ್ನು ಒದಗಿಸಿಕೊಡಬೇಕು. ಇನ್ನು ವಿಶ್ವಗುರು ಎಂಬಲ್ಲಿಗೆ ಲಗ್ಗೆ ಇಡುವುದಕ್ಕೆ ಹಾತೊರೆಯುವ ನಮ್ಮ ಸ್ಥತಿ ಹೇಗಿರಬೇಕು ಯೋಚಿಸಿ. ವಿಶ್ವಗುರು ಎಂಬುದು ಪದವಿ ಮಾತ್ರ. ಶಿಕ್ಷಣ ಮಾತ್ರ ವಿದೇಶದಲ್ಲಿ. ಕೋವಿಡ್ ಬಂದನಂತರ ತೀವ್ರವಾಗಿ ಘಾಸಿಗೆ ಒಳಗಾದದ್ದು ನಮ್ಮ ಶಿಕ್ಷಣ ಕ್ಷೇತ್ರ. ಮನೆಯ ಯಾವುದೋ ಮೂಲೆಯಲ್ಲಿ ಮೊಬೈಲ್ ಲಾಪ್ ಟಾಪ್ ಹಿಡಿದು ಒದ್ದಾಡುವ ನಮ್ಮ ಮಕ್ಕಳನ್ನು ನೋಡುವಾಗ ಮರುಕ ಹುಟ್ಟುತ್ತದೆ. ಯಾವ ಮೊಬೈಲ್ ನಲ್ಲಿ ಇಂಟರ್ನೆಟ್ ಉಳಿದಿದೆ ಎಂದು ಲೆಕ್ಕಾಚಾರದಲ್ಲೇ ಓದಬೇಕು. ಒಂದು ಸಲ ಅಮ್ಮನ ಮೊಬೈಲ್, ಇನ್ನೊಂದು ಸಲ ಅಣ್ಣನ ಮೊಬೈಲ್ ಹೀಗೆ ಬದಲಾಗುತ್ತದೆ ಇಂದಿನ ಶಿಕ್ಷಣ. ಆದರೂ ಅದು ಹೇಗೊ ಶಾಲೆ ಆರಂಭವಾಯಿತು ಎನ್ನುವಾಗ ದೆವ್ವ ಮತ್ತೊಂದು ಭಾಗದಲ್ಲಿ ವಕ್ಕರಿಸಿತು. ಕೇಸರಿ ಹಿಜಾಬ್ ಗಲಾಟೆ. ಒಟ್ಟಾರೆ ಶಿಕ್ಷಣ ಕ್ಷೇತ್ರಕ್ಕೆ ಒಂದು ಗ್ರಹಚಾರ ಬಡಿದಿದೆ.  ಇಷ್ಟೆಲ್ಲಾ ಪರಿಶ್ರಮ ಪಟ್ಟು ಪದವಿ ಪಡೆದ ಮೇಲೆ ಏನು? ವ್ಯಾಪಾರ ಕ್ಕೆ ಇಳಿಯಲೇ ಬೇಕು. ಇಲ್ಲವಾದರೆ ಅಪ್ಪ ಮಾಡಿಟ್ಟ ಸಾಲ ಮುಗಿಯುವುದಿಲ್ಲ. 

    ದೊಡ್ಡ ದೊಡ್ಡ ಸಂಸ್ಥೆಗಳು ದೊಡ್ಡ ವಿದ್ಯಾದಾನ ಲೋಕ ಸೇವೆ ಎಂದು ಕೊಂಡು ಶಾಲಾ ಕಾಲೇಜು  ವೈದ್ಯಕೀಯ ಕಾಲೇಜ್  ಹೀಗೆ ತೆರೆದಿಡುತ್ತವೆ. ಹೇಳುವುದಕ್ಕೆ ಸೇವೆ. ಆದರೆ ಇವೆಲ್ಲ ಹಗಲು ದರೋಡೆಗಳು. ಬೀದಿ ಬದಿಯ ವ್ಯಾಪಾರಕ್ಕೂ ಇದಕ್ಕೂ ಏನೂ ವೆತ್ಯಾಸವಿಲ್ಲ. ಹಲವು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ನಮ್ಮ ಮಂತ್ರಿಗಳು ಮಾಜಿ ಮಂತ್ರಿಗಳು ಶಾಸಕರು ಹೀಗೆ ಜನ ಸೇವೆ  ಲೇಬಲ್ ಅಂಟಿಸಿಕೊಂಡವರೇ ಆಗಿರುತ್ತಾರೆ.  ವಿಶ್ವ ಗುರು  ಎಂಬ ಭಾರತದ ಶಿಕ್ಷಣದ ಅವಸ್ಥೆ ಇದು. ಹಾಗಾಗಿ ಎಲ್ಲರೂ ವಿದೇಶಕ್ಕೆ ಹಾರುತ್ತಾರೆ. ಮೊದಲು ವಿದೇಶದಲ್ಲಿ ಶಿಕ್ಷಣ ಎಂದರೆ ದೊಡ್ಡ ಶ್ರೀಮಂತಿಕೆಯ ಹೆಗ್ಗಳಿಕೆಯ ಲಕ್ಷಣವಾಗಿತ್ತು. ಈಗ ಅಲ್ಲಿ ಓದುವವರು ಏನೂ ದುಡ್ಡಿಲ್ಲದವರು ಬಡವರು ಎಂಬಂತಾಗಿರುವುದು, ವಿಶ್ವಗುರುವಿನ ಕಪಾಳಕ್ಕೆ ಬಾರಿಸಿದಂತೆ ಅನಿಸುತ್ತದೆ. ಯೋಚಿಸಿ ಮುಂದೊಂದು ದಿನ ಬಾಲವಾಡಿ ಎಲ್ ಕೆ ಜಿ, ಯುಕೆಜಿ ಗೂ ವಿದೇಶಕ್ಕೆ ಕಳುಹಿಸುವ ದಿನ ಬರಬಹುದು. 


ಮಾತು ಮಾತಿಗೆ ಶಿಕ್ಷಣ ಕ್ರಮವನ್ನು ಬದಲಿಸುತ್ತೇವೆ ಎಂದು ಹೇಳಿಕೊಳ್ಳಬಹುದು. ಆದರೆ ವಿಶ್ವ ಗುರು ಎನ್ನಿಸುವಂತಹ ನಮ್ಮಲ್ಲಿ ಶಿಕ್ಷಣ ಸುಲಭದಲ್ಲಿ ಸಿಗುವ ಹಾಗೆ ವಾತಾವರಣ ಸೃಷ್ಟಿಯಾಗಬೇಕು. ಮದುವೆಯಾಗಿ ಮಗುವಾದಾಗ ಈಗ ಸಂಭ್ರಮಿಸುವ ದಿನಗಳು ಕಳೆದು ಹೋಗಿದೆ. ಈ ಮಗುವಿಗೆ ಎಲ್ಲಿ ಶಿಕ್ಷಣ ಕೊಡುವುದು ಎಂದು ಯೋಚಿಸಬೇಕಿದೆ. 

    ಪಾಠ ಶಿಕ್ಷಣ ಬದಲಿಸುವುದಕ್ಕಿಂತಲೂ  ಈ ಕಲುಷಿತ ವಾತಾವರಣದಿಂದ ಶಿಕ್ಷಣದ ರಕ್ಷಣೆಯಾಗಬೇಕು. ಉತ್ತಮ ಶಿಕ್ಷಣ ಉತ್ತಮ ರೀತಿಯಲ್ಲಿ ದೊರೆಯುವಂತಾಗಬೇಕು.  ಕೊನೆ ಪಕ್ಷ ವಿಶ್ವಗುರು ಎನ್ನಿಸಿಕೊಳ್ಳುವುದಕ್ಕೆ ಇಷ್ಟು ಬೇಕು ಎಂಬ ಅರಿವಾದರೂ ಮೂಡಿದರೆ ಅದೇ ದೊಡ್ಡದು.  ಜ್ಞಾನವೇ ದೇವರು ಎಂದು ದೇವರಿಗೆ ಹೋಲಿಸುತ್ತೇವೆ. ದೇವರು ಕೊಟ್ಟರೂ ಪೂಜಾರಿ ಬಿಡ ಎಂಬ ಗಾದೆಯಂತೆ ಶಿಕ್ಷಣ ಸುಲಭದಲ್ಲಿ ಸಿಕ್ಕರೂ ಈ ವ್ಯವಸ್ಥೆ ಅದಕ್ಕೆ ಆಸ್ಪದಕೊಡುವುದಿಲ್ಲ.  ಇನ್ನು ಜ್ಞಾನವೇ ದೇವರು ಎಂದು ಕಾಣದ ದೇವರನ್ನು ಸೇರಿಸಿ ನಾವು ಪಾವನ ಪವಿತ್ರರಾಗಿಬಿಡಬೇಕು. ಇದೀಗ ಹಲವು ವಿದ್ಯಾರ್ಥಿಗಳು ಬಂದಿದ್ದಾರೆ. ಇನ್ನು ಅವರ ಮುಂದಿನ ಶಿಕ್ಷಣ ಹೇಗೋ ದೇವರೇ ಬಲ್ಲ. ಈ ಜಗದ್ಗುರು ಸ್ಥಾನದಲ್ಲಿ ಅದು ಪರಿಪೂರ್ಣವಾಗಬಹುದೇ ಕಾಲವೇ ಹೇಳಬೇಕು.





Monday, February 21, 2022

ಧರ್ಮ ಸೂಕ್ಷ್ಮ

         ಬಹಳ ಹಿಂದೆ ನಾವು ಊರಲ್ಲಿದ್ದಾಗ, ನಾವಿನ್ನೂ ಚಿಕ್ಕವರು ನಮ್ಮ ಮನೆಗೆ ಒಂದು ಹಸುವನ್ನು ತಂದೆವು. ಆ ಹಸುವನ್ನು ತಂದವನು ಒಬ್ಬ ಮಧ್ಯವರ್ತಿ , ಆತ ಹಿಂದುವಲ್ಲ. ಅದೇ ವ್ಯಾಪಾರ ಮಾಡಿಕೊಂಡವನು. ಆ ಹಸು ಮಾರಾಟಮಾಡಿದವನೂ ಹಿಂದುವಲ್ಲ. ನಮ್ಮ ಮನೆಗೆ ಬಂದ ಹಸು ನಮ್ಮದೇ ಬಂಧುವಾಗಿ ಮನೆಯ ಅಂಗವೆಂಬಂತೆ ಬೆಳೆಯಿತು. ಹಸು ವಾಗಿದ್ದ ಕಾರಣ ಅದು ಸಸ್ಯಹಾರಿಯೇ ಆಗಿತ್ತು. ಅನುಮಾನವಿಲ್ಲ. ಮೊದಲಿನ ಮನೆಯಲ್ಲೂ ಇದು ಹುಲ್ಲು ಹಿಂಡಿ ತಿಂದು ಕಲಗಚ್ಚು ಕುಡಿದು ಹಾಲು ಕೊಡುತ್ತಿತ್ತು. ನಮ್ಮಲ್ಲೂ ನಾವು ಅದೇ ರೀತಿ ಹಾಲು ಕರೆದು ಕುಡಿದೆವು. ಈಗ ಈ ಸಂಭವವನ್ನು ನೆನಪಿಸಿದಾಗ ಒಂದು ಧರ್ಮ ಸೂಕ್ಷ್ಮದ ಅರಿವಾಗುತ್ತದೆ. ಧರ್ಮ ಎಂದರೆ ಅದು ಹಸುವಿನ ಹಾಲಿನಂತೆ. ಅದಕ್ಕೆ ಮತೀಯ ಭಾವವೇ ಇಲ್ಲ. ನಿಜಕ್ಕೂ ಹಾಲಿನ ಧರ್ಮ ಏನು? ಧರ್ಮ ಎಂದರೆ ಮತ್ತೊಮ್ಮೆ ಹೇಳಬೇಕಿಲ್ಲ. ಅದು ಸ್ವಭಾವ. ನಾವು ಜಾತಿಯ ಲೇಪ ಕೊಟ್ಟು ಅದನ್ನು ವಿರೂಪ ಗೊಳಿಸಿದ್ದೇವೆ. 

            ನನ್ನ ಬಾಲ್ಯದಲ್ಲಿ ಉಪನಯನವಾದಕೂಡಲೇ ಶಾಲೆಗೆ ಹೋಗುವುದಕ್ಕೆ ನಮ್ಮಜ್ಜ ಒಪ್ಪಿರಲಿಲ್ಲ. ಶಾಲೆಗೆ ಹೋಗುವುದು ಅವರಿಗೆ ಇಷ್ಟವಿರಲಿಲ್ಲ. ಬದಲಾಗಿ ವೇದ ಪಾಠ ಹೇಳಿಸಿಕೊಳ್ಳಬೇಕು. ಚಡ್ಡಿ ಅಂಗಿ ಹಾಕಿ ಶಾಲೆಗೆ ಹೋಗುವುದು ಎಂದರೆ ಬ್ರಾಹ್ಮಣರಿಗೆ ಹೇಳಿಸಿದ್ದಲ್ಲ.  ಸದಾ ಪಂಚೆ ಶಲ್ಯದಲ್ಲಿರಬೇಕು.  ಅದೆಷ್ಟು ವಾಸ್ತವಕ್ಕೆ ಹತ್ತಿರವೋ ಅದು ಯೋಚಿಸುವ ವಿಷಯವಾದರೂ ನಂತರ ನಾವು ಶಾಲೆಗೆ ಹೋಗಬೇಕಾದರೆ ಅಂಗಿ ಚಡ್ಡಿ ಹಾಕಿ ಹೋಗಲೇಬೇಕಿತ್ತು. ಶಾಲಾ ವಿದ್ಯಾಭ್ಯಾಸ ಬೇಕಿದ್ದರೆ ನಾವು ಅದೇ ರೀತಿ ಅನುಸರಿಸುವುದು ಸಾಮಾಜಿಕ ನಿಯಮ. ಇನ್ನು ಶಾಲೆಗೆ ಹೋದಾಗ, ಅಲ್ಲಿ ಮಧ್ಯಾಹ್ನ ಉಪ್ಪಿಟ್ಟು ಸಜ್ಜಿಗೆ ಇರುತ್ತಿತ್ತು.  ಹಿರಿಯ ಮಕ್ಕಳೇ ತಯಾರಿಸುತ್ತಿದ್ದರು.  .  ಅದು ಇಂಥವರೇ ಆಗಬೇಕೆಂದೇನೂ ಇಲ್ಲ. ಅದನ್ನು ತಿನ್ನದಂತೆ ಮನೆಯಲ್ಲಿ ಗದರಿಸಿ ಹೇಳುತ್ತಿದ್ದರು.  ಮನೆಯಲ್ಲಿ ಅರೆಹೊಟ್ಟೆ ಇರುತ್ತಿದ್ದ ನಮಗೆ ಹಲವು ಸಲ ಬುತ್ತಿ ಕಟ್ಟಿಕೊಂಡು ಬರುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ. ಆಗ ಶಾಲೆಯ ಉಪ್ಪಿಟ್ಟು ತಿನ್ನದೇ ಇರುವುದಕ್ಕೆ ಮನಸ್ಸು ಕೇಳುತ್ತಿರಲಿಲ್ಲ. ಕದ್ದು ಮುಚ್ಚಿ ನಾವು ತಿನ್ನುತ್ತಿದ್ದೆವು. ಜಾತಿ ಸಂಪ್ರದಾಯ ಎಲ್ಲವನ್ನೂ ಬದಿಗಿಟ್ಟು ಎಲ್ಲ ಮಕ್ಕಳ ಜತೆ ಸೇರಿ ಯಾರೋ ಮಾಡಿ ಬಳಸಿದ್ದನ್ನು ತಿನ್ನಬೇಕಿತ್ತು.  ವಿದ್ಯೆ ಆಹಾರ ಬೇಕಿದ್ದರೆ ನಾವೂ ಕೆಲವನ್ನು ಕಳೆದು ಕೂಡಿಸಿಕೊಳ್ಳಬೇಕು. 

        ಇನ್ನು ನಮ್ಮ ಮನೆಯ ಬಳಿಯಲ್ಲೇ ಮೈದಾನದಲ್ಲಿ ಊರ ಹಲವು ಮಕ್ಕಳು ಸಾಯಂಕಾಲ ಬಂದು ಆಟವಾಡುತ್ತಿದ್ದರು. ಊರ ಮಕ್ಕಳು ಎಂದರೆ ಎಲ್ಲ ವರ್ಗದವರೂ ಇದ್ದರು. ಹಾಗಾಗಿ ಮನೆಯ ಹಿರಿಯರು ಸಂಪ್ರಾದಾಯದಂತೆ ಆ ಮಕ್ಕಳೊಂದಿಗೆ ಆಡುವುದಕ್ಕೆ ಬಿಡುತ್ತಿರಲಿಲ್ಲ. ಆಟವಲ್ಲವೇ? ನಾವು ಕದ್ದು ಮುಚ್ಚಿ ಹೋಗುತ್ತಿದ್ದೆವು. ಆಟ ಬೇಕಾದರೆ ನಾವು ಕದ್ದು ಮುಚ್ಚಿ ಹೋಗುವುದು ಅನಿವಾರ್ಯ. ಆಟ ಬೇಕಾದರೆ ನಮ್ಮ ಕೆಲವೊಂದು ಖಾಸಗೀತನವನ್ನು ಮನೆಯಲ್ಲೇ ಬಿಟ್ಟು ಹೋಗಬೇಕು. ಅಲ್ಲಿ ಎಲ್ಲರೂ ಒಂದೇ. ಸೋಲು ಗೆಲುವು ನಗು ಜಗಳ ಎಲ್ಲದಕ್ಕೂ ಸಮಾನ ಸ್ಥಾನ. ಈಗ ಯೋಚಿಸುವಾಗ ಇದೂ ಒಂದು ಧರ್ಮ ಸೂಕ್ಷ್ಮದಂತೆ ಭಾಸವಾಗುತ್ತದೆ. ಕೆಲವನ್ನು ಕೈವಶ ಮಾಡಲು ಕೆಲವು ಬೆರಳ ಸಂದಿಯಿಂದ ಕಳಚಿ ಕೆಳಗೆ ಬೀಳುತ್ತದೆ. 

            ಹೈಸ್ಕೂಲು ವಿದ್ಯಾಭ್ಯಾಸ ಮಾಡುವಾಗ ಹೊಸದಾಗಿ ಸಮವಸ್ತ್ರ ನಿಯಮ ಜಾರಿಗೆ ಬಂತು.   ಅದುವರೆಗೆ ಎಲ್ಲಾದಿನ  ಯಾವುದೇ ಉಡುಗೆಯಲ್ಲಿ ಬರುವುದಕ್ಕೆ ಅವಕಾಶ ಇರುತ್ತಿತ್ತು. ಆನಂತರ  ವಾರದಲ್ಲಿ ಎರಡು ದಿನ ಶಾಲಾ ಸಮ ವಸ್ತ್ರ ಖಡ್ಡಾಯವಾಗಿ ಧರಿಸುವ ನಿಯಮ ಪಾಲಿಸಲೇ ಬೇಕಿತ್ತು. ನಾವು ದೊಡ್ಡವರಾಗಿದ್ಧುದರಿಂದ ಚಡ್ಡಿ ಹಾಕುವುದು ಸಹ್ಯವೆನಿಸದೇ ಹೆಚ್ಚಾಗಿ ಪಂಚೆ ಉಟ್ಟುಕೊಂಡೇ ಶಾಲೆಗೆ ಬರುತ್ತಿದ್ದೆವು. ನನ್ನಂತೆ ಹಲವು ಹುಡುಗರೂ ಪಂಚೆಯಲ್ಲಿ ಬರುತ್ತಿದ್ದರು. ನನಗೊ ಪಂಚೆಯಾದರೆ , ಟೈಲರ್ ಗೆ ಕೊಡುವ ದುಡ್ಡೂ ಉಳಿಕೆಯಾಗುತ್ತಿತ್ತು, ಮಾತ್ರವಲ್ಲ ಸಾಯಂಕಾಲ ಶಾಲೆ ಮುಗಿಸಿ ಪಂಚೆ ತೊಳೆದು ಹಾಕಿದರೆ ಮರುದಿನ ಪುನಃ ಶಾಲೆಗೆ ಹೋಗುವಾಗ ಒಣಗಿ ಉಡುವುದಕ್ಕೆ ಸಾಧ್ಯವಾಗುತ್ತಿತ್ತು. ಹೊಸದಾಗಿ ಸಮವಸ್ತ್ರದ ನಿಯಮ ಬಂದ ಮೇಲೆ, ಪ್ಯಾಂಟ್ ಹೊಲಿಸುವುದು ಅನಿವಾರ್ಯವಾಗಿಬಿಟ್ಟಿತು. ಹಾಗೆ ಜೀವನದಲ್ಲಿ ಮೊದಲ ಬಾರಿಗೆ ಪ್ಯಾಂಟ್ ಧರಿಸಿದೆ. ವಿದ್ಯೆ ಬೇಕು ಎಂದಾದರೆ ನಿಯಮ ಪಾಲಿಸುವುದು ಅನಿವಾರ್ಯ. ನಾನು ಸಂಪ್ರದಾಯ ಹಾಗೇ ಹೀಗೆ ಹಲುಬಿದರೆ ಶಾಲೆಗೆ ಹೋಗುವ ಅವಕಾಶವೇ ಇರುತ್ತಿರಲಿಲ್ಲ. ಈಗಲೂ ಕೇರಳದಲ್ಲಿ ಶಿಕ್ಷಣದ ಇಂತಹ ನಿಯಮಗಳು ಕಡ್ಡಾಯವಾಗಿರುವುದು ನಿಜಕ್ಕೂ ವಿಶಿಷ್ಟವಾಗಿದೆ. ಸಮ ಶಿಕ್ಷಣ ಸಮ ಬಾಳ್ವೆ. ಉಳಿದ ಸಾಮಾಜಿಕ ಜೀವನ ಹೇಗೆ ಇರಲಿ ಸರಕಾರಿ ಶಾಲೆ ಎಂದಾಗುವಾಗ ಧಾರ್ಮಿಕ ನಿಯಮಗಳು ಮನೆಯಲ್ಲೇ ಬಿಟ್ಟು ಬರಬೇಕು.  ಹೀಗಿದ್ದರೂ ಉಳಿದಂತೆ ನಿಯಮಗಳು ಎಷ್ಟು ಬಳಕೆಯಾಗುತ್ತವೆ ಎಂಬುದು ಬೇರೆ ವಿಚಾರ. ವಾರದಲ್ಲಿ ಎಲ್ಲಾ ದಿನ ಹತ್ತು ಘಂಟೆ ಶಾಲೆ ಆರಂಭವಾಗಿ ಮಧ್ಯಾಹ್ನ ಒಂದು ಘಂಟೆ ಯಿಂದ ಎರಡು ಘಂಟೆವರೆಗೆ ಭೋಜನ ವಿರಾಮ ನಂತರ ಶಾಲೆ ನಾಲ್ಕು ಗಂಟೆಗೆ ಬಿಟ್ಟರೆ ಶುಕ್ರವಾರ ಒಂಭತ್ತುವರೆಗೆ ಆರಂಭವಾಗಿ ಮಧ್ಯಾಹ್ನ ಹನ್ನೆರಡು ವರೆಯಿಂದ ಎರಡುವರೆ ತನಕವೂ ದೀರ್ಘವಾದ ವಿರಾಮ ಇರುತ್ತಿತ್ತು. ಸಾಯಂಕಲ ಮತ್ತೆ ಅರ್ಧ ಘಂಟೆ ತಡವಾಗಿ ಶಾಲೆ ಬಿಡುತ್ತಿತ್ತು. ಒಂದು ಧಾರ್ಮಿಕ ಆಚರಣೆಗೆ ಅವಕಾಶ ಕೊಡುವಂತೆ ಈ ನಿಯಮವೂ ಇರುತ್ತಿದ್ದದ್ದು ವಿಪರ್ಯಾಸ. 

        ವೃತ್ತಿ ಮತ್ತು ಶಿಕ್ಷಣ ನಮ್ಮ ಜೀವನದ ಅನಿವಾರ್ಯ ಅಂಗಗಳು. ಉತ್ತಮವಾದ ಜೀವನದ ಆಧಾರ ಸ್ತಂಭಗಳು. ಇವುಗಳು ಸಿಗಬೇಕಾದರೆ ಕೆಲವೊಂದನ್ನು ಕೂಡಿಸಿ ಕೆಲವೊಂದನ್ನು ಕಳೆದುಕೊಂಡು ಪಡೆಯಬೇಕು. ಅದುವೇ ಜೀವನ. ಇಂದು ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕೋ ಅದನ್ನು ಬಿಟ್ಟು ಇನ್ನಾವುದರ ಹಿಂದೆ ಹೋಗಿ ಜೀವನದಲ್ಲಿ ಬಹಳಷ್ಟನ್ನು ಕಳೆದುಕೊಳ್ಳುತ್ತಿದ್ದೇವೆ. ಇಂದು ಕಳೆದ ದಿನ ಮುಂದೆ ಮತ್ತೆಂದೂ ಸಿಗಲಾರದು. ಸರಿಪಡಿಸಲಾಗದ ತಪ್ಪನ್ನು ಮಾಡುತ್ತಾ ಮುಂದೆ ಸಾಗುವುದು ಜೀವನದಲ್ಲಿ ತುಂಬದ ನಷ್ಟಕ್ಕೆ ಕಾರಣವಾಗುತ್ತದೆ. 

        ಈಗ ಹುಟ್ಟಿಕೊಂಡ ವಿವಾದ ಅದು ನಮ್ಮನ್ನು ಎಲ್ಲಿ ತಂದು ನಿಲ್ಲಿಸುತ್ತದೋ ಕಲ್ಪಿಸುವುದೂ ಕಷ್ಟ. ಕೇವಲ ಧಾರ್ಮಿಕ ವಿಚಾರಕ್ಕೆ ಹತಾಶರಾಗಿ ಸಾಮಾಜಿಕ ಜೀವನದ ಸೌಂದರ್ಯವನ್ನೇ ನಾಶ ಮಾಡುತ್ತಿದ್ದೇವೆ.  ಇನ್ನು ತತ್ವ ಸಿದ್ದಾಂತಗಳು ಎಲ್ಲವೂ ಬೋಗಸ್. ತಮ್ಮ ತಮ್ಮ ಸ್ವಾರ್ಥಕ್ಕೆ ಉಪಯೋಗಿಸಲ್ಪಡುವ ವಸ್ತುಗಳು. ಧಾರ್ಮಿಕ ಆಚರಣೆ ಬೇಕೋ ಬೇಡವೊ ಅದೆಷ್ಟು ಅನಿವಾರ್ಯವೋ ಚಿಂತಿಸಬೇಕಾದವಿಚಾರ. ಮನೆಯ ಅಂಗಳದೊಳಗೆ ಇರಬೇಕಾಗಿರುವುದನ್ನು ಬೀದಿಗೆ ತಂದು ಕೈ ಕೈ ಮಿಲಾಯಿಸುವುದು ಯಾವ ತತ್ವ ಸಿಧ್ಧಾಂತಕ್ಕೂ ಯೋಜ್ಯವಲ್ಲ. ಬುರ್ಖವೋ ಹಿಜಾಬ್  ಯಾವುದೇ ಇರಲಿ, ಇಂದು ಅದು ಹಿಂದು ಧರ್ಮಾಚರಣೆಯಲ್ಲಿರುತ್ತಿದ್ದರೆ, ಯೋಚಿಸಿ, ಸ್ತ್ರೀ ಸಮಾನತೆಗೆ ಹೋರಾಡುವವರು, ಮಾನವ ಹಕ್ಕಿಗಾಗಿ ಕ್ಯಾಂಡಲ್ ಉರಿಸುವವರು ಬೀದಿಗೆ ಬರುತ್ತಿದ್ದರು. ಸ್ತ್ರಿ ಶೋಷಣೆ ಎಂದು ಪ್ರತಿಭಟಿಸುತ್ತಿದ್ದರು.   ಈಗ ಅವರೆಲ್ಲ ಒಂದೋ ಮೌನವಾಗಿದ್ದಾರೆ, ಮೌನ ಮುರಿದರೆ ಏನು ಹೇಳುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ.  ತತ್ವ ಸಿದ್ಧಾಂತಗಳು ತಮಗೆ ಬೇಕಾದಂತೆ ಆಚರಿಸುವ ವಿಷಯಗಳಾಗಿ ಬದಲಾಗಿದೆ. ವಸ್ತು ನಿಷ್ಠ ಸತ್ಯ ಪ್ರಾಮಾಣಿಕತೆ ಎಲ್ಲವನ್ನೂ ನಮ್ಮ ಸ್ವಾರ್ಥ ಆಹುತಿತೆಗೆದುಕೊಂಡಿದೆ. ಸಾರ್ವಜನಿಕವಾಗಿ ವ್ಯಕ್ತವಾಗುವ ತತ್ವ ಸಿದ್ಧಾಂತಗಳು ಟೀಕೆ ಟಿಪ್ಪಣಿಗಳು ಅದು ಕಾಲಕ್ಕೆ ತಕ್ಕಂತೆ ಸ್ವಾರ್ಥಮಯವಾಗಿರುತ್ತದೆ. ತಮಗೆ ಬೇಕಾದಂತೆ ಅದು ವ್ಯಕ್ತವಾಗುತ್ತದೆ. ಆದರೆ ವಾಸ್ತವ ಎಂಬುದೇ ಗಹನವಾದ ಸತ್ಯವಾಗಿರುತ್ತದೆ. 

        ಮೊನ್ನೆ ಒಂದು ಸಿನಿಮಾ ನೋಡಿದೆ. ಅದರಲ್ಲಿ ಒಬ್ಬ ಹೇಳುತ್ತಾನೆ ವಸ್ತ್ರ ಎಂಬುದು ನಾವು ಹುಟ್ಟು ಹಾಕಿದ್ದು. ಅದರಲ್ಲಿ ನಮ್ಮನ್ನು ಅಳೆಯಬಹುದು ದೇವರನ್ನು ಅಳೆಯುವುದಕ್ಕೆ ಸಾಧ್ಯವಿಲ್ಲ. ವಸ್ತ್ರದಿಂದ ದೇವರನ್ನು ಕಲ್ಪಿಸುವುದು ಸಾಧ್ಯವಿಲ್ಲ. ವಸ್ತ್ರವಾದರೂ ಇನ್ನೊಂದಾದರೂ ಅದು ನಾವು ಹುಟ್ಟುವಾಗ ತಂದಿರುವುದೂ ಇಲ್ಲ. ಹೋಗುವಾಗ ಕೊಂಡೊಯ್ಯುವುದೂ ಇಲ್ಲ. ವಸ್ತ್ರ ಇಲ್ಲದಿದ್ದರೆ ಎಲ್ಲವೂ ಒಂದೇ.  

    ಸರಕಾರಿ ವ್ಯವಸ್ಥೆಗಳು ಧಾರ್ಮಿಕ ಆಚರಣೆಯಿಂದ ದೂರವಿರಬೇಕು. ಹಾಗಿದ್ದಲ್ಲಿ ಮಾತ್ರವೇ ಜಾತ್ಯಾತೀತ ತತ್ವ ಪ್ರಾಮಾಣಿಕವಾಗಿರುತ್ತದೆ.  ಬೆಂಗಳೂರಲ್ಲಿ ಎಲ್ಲಾ ಸರಕಾರಿ ಕಛೇರಿಯಲ್ಲೂ ಶುಕ್ರವಾರ ಪೂಜೆ ಇರುತ್ತದೆ.  ಇದು ಯಾವ ಸಂವಿಧಾನದಲ್ಲಿ ಉಲ್ಲೇಖವಾಗಿದೆ?  ನವರಾತ್ರಿ ಬಂದಾಗ ಹಲವು ಸರಕಾರೀ ಕಛೇರಿಗಳಲ್ಲಿ ದಸರಾ ಆಯುಧ ಪೂಜೆ ಆಚರಣೆ ಇರುತ್ತದೆ. ಮಳೆಬಂದು ನದಿ ಉಕ್ಕಿ ಹರಿದು ಅಣೆಕಟ್ಟು ತುಂಬಿದಾಗ ಬಾಗೀನ ಬಿಡುತ್ತೇವೆ. ಇವುಗಳೆಲ್ಲ ಸೀಮಿತ ಧರ್ಮಾಚರಣೆಯಲ್ಲವೇ? ಕೇರಳದ ಯಾವುದೇ ಸರ್ಕಾರಿ ಕಛೇರಿಯಲ್ಲಿ ಸರಕಾರಿ ವ್ಯವಸ್ಥೆಯಲ್ಲಿ ಈ ಬಗೆ ಯ ಆಚರಣೆಗಳು ಕಾಣುವುದಕ್ಕಿಲ್ಲ. ಸರಕಾರಿ ಬಸ್ಸಿನಲ್ಲಿ ಯಾವುದೇ ದೇವರ ಧರ್ಮದ ಫೋಟೊಗಳಿರುವುದಿಲ್ಲ. ಮೊದಲು ಸರಕಾರೀ ವ್ಯವಸ್ಥೆ ಎಲ್ಲ ಧಾರ್ಮಿಕ ಆಚರಣೆಯಿಂದ ದೂರವಿರಬೇಕು. ಅದು ಧರ್ಮಾತೀತವಾಗಿರಬೇಕು.  ಇದನ್ನೆಲ್ಲ ವ್ಯಕ್ತ ಪಡಿಸುವಾಗ ಧರ್ಮ ವಿರೋಧ ಎಂದನಿಸಬಹುದು. ಆದರೆ ಧರ್ಮದ ಸೂಕ್ಷ್ಮ ಅರಿತಾಗ ಹಾಗನಿಸುವುದಿಲ್ಲ. ಯಾಕೆಂದರೆ ಧರ್ಮ ಆಚರಣೆ ಮತ್ತೊಬ್ಬರ ನಿಟ್ಟುಸಿರ ನೆರಳಲ್ಲಿ ಇರಬಾರದು. ಹಾಗಿದ್ದರೆ ಭಗವಂತ ಅದನ್ನು ಸ್ವೀಕರಿಸುವುದೂ ಇಲ್ಲ. ಒಂದು ಧರ್ಮ ಇನ್ನೊಂದು ಧರ್ಮಕ್ಕೆ ಪೂರಕವಾಗಿದ್ದಾಗ ಎಷ್ಟು ಸುಂದರವಾಗಿರುತ್ತದೆ, ಮುಳ್ಳಿನ ಗಿಡದಲ್ಲಿಅರಳಿದ ಗುಲಾಬಿಯಂತೆ. 

        ಯಾವುದೇ ಧರ್ಮವನ್ನು ದೇವರು ನಿರ್ಮಿಸಲಿಲ್ಲ.  ಮನುಷ್ಯನೇ ತನ್ನ ಸೌಕರ್ಯಕ್ಕೆ ನಿರ್ಮಿಸಿದ. ಇದನ್ನು ದೇವರ ಮೇಲೆ ಆರೋಪಿಸಿ ನಾವು ದೇವರನ್ನೂ ಪ್ರತ್ಯೇಕಿಸುತ್ತೇವೆ. ನಿಜಕ್ಕೂ ದೇವರು ತನ್ನನ್ನು ತಾನು ದೇವರು ಎಂದು ಕರೆದುಕೊಂಡಿಲ್ಲ. ನಾವೇ ಅಂತರಂಗದ ಶಕ್ತಿಯಿಂದ ಅದನ್ನು ಗುರುತಿಸಿದಾಗ ಈ ವೆತ್ಯಾಸ ಕಾಣುತ್ತೇವೆ. ನಾವು ದೇವರು ಎಂದು ನಮಸ್ಕರಿಸಿದರೆ ಇನ್ನಾರೋ ಬೇರೇನೋ ಹೇಳಿ ನಮಸ್ಕರಿಸುತ್ತಾನೆ. ದೇವರು ಎಂಬುದು ಕೆಲವು ಅಕ್ಷರ ಸೇರಿದ ಒಂದು ಶಬ್ದವಷ್ಟೇ.  

        ದೇವರು ಕನ್ನಡಿಯಂತೆ. ಕನ್ನಡಿ ಮುಂದೆ ನಿಂತು ನಾವು ಯಾವ ಭಾವದಲ್ಲಿ ನಿಲ್ಲುತ್ತೇವೋ ಅದೇ ಭಾವವನ್ನು ಕಾಣುತ್ತೇವೆ. ನಗು ಅಳು ಸಿಟ್ಟು ಎಲ್ಲವೂ ನಮ್ಮದೇ ನೆರಳುಗಳು. ಪರಮಾತ್ಮನಲ್ಲೂ ಇದೇ ವ್ಯಕ್ತವಾಗುತ್ತದೆ. ನಮ್ಮ ಮನಸ್ಸಿನ ವಿಕೃತಿಗಳು ನಮ್ಮ ಮುಖಕ್ಕೇ ರಾಚುತ್ತವೆ. ಪರಮಾತ್ಮನಿಗೆ ರೂಪವಿಲ್ಲ ಭಾವವಿಲ್ಲ. 

        ಮನೆಗೆ ತಂದ ಹಸುವನ್ನು ನೋಡಿದಾಗ ನನಗೆ ನಮ್ಮ ಸನಾತನ ಧರ್ಮಗಳು ನೆನಪಾಗುತ್ತವೆ. ಅದರ ಹಾಲನ್ನು ಹಿಂಡಿ ಕರೆವಾಗ ಒಬ್ಬರಿಗೆ ಕೊಟ್ಟಷ್ಟು ಮತ್ತೊಬ್ಬರಿಗೆ ಕೊಡುವುದಿಲ್ಲ. ಪ್ರತೀ ಹಸುವಿಗೂ ಈ ಒಂದು ಭಾವನಾತ್ಮಕ ಸಂಬಂಧವಿರುತ್ತದೆ. ಒಬ್ಬರಿಗೆ ತಂಬಿಗೆ ತುಂಬ ಹಾಲು ಕೊಟ್ಟರೆ ಮತ್ತೊಬ್ಬರು ಕೈ ಹಾಕುವಾಗ ತುಳಿಯಬಹುದು, ಹಾಯಬಹುದು. ಧರ್ಮವೂ ಇದೇ ರೀತಿಯಲ್ಲಿ, ಅದಕ್ಕೆ ಹೊಂದಿಕೊಂಡಾಗಲಷ್ಟೇ ಅದು ಸುಖವನ್ನು ತರಬಲ್ಲುದು. ಆ ಸುಖ ನಮ್ಮ ನಮ್ಮ ದೃಷ್ಟಿಕೋನದಲ್ಲಿರುತ್ತದೆ. 


ಧರ್ಮ ಎಂದರೆ ಅದು ಹರಿತವಾದ ಖಡ್ಗದಂತೆ. ಜ್ಞಾನಿಗಳು ಹೇಳುವ ಮಾತು ಇದು. ಅದನ್ನು ಉಪಯೋಗಿಸುವುದಕ್ಕೆ ತಿಳಿಯದೇ ಇದ್ದರೆ ಅದು ನಮ್ಮ ಕತ್ತನ್ನೂ ತರಿಯಬಲ್ಲುದು.