Sunday, November 21, 2021

ಹಂಪನಕಟ್ಟೆ ಹಳೆ ಬಸ್ ಸ್ಟಾಂಡ್ !!

     ಲ್ಲಾ ನಗರದಲ್ಲಿಯೂ ಈಗ ಹಳೆ ಬಸ್ ಸ್ಟಾಂಡ್ ಇದ್ದೇಇರುತ್ತದೆ. ಬೆಳೆಯುತ್ತಿರುವ ನಗರ ಇಂದು ಹಳೆಯದನ್ನಾಗಿಸಿ ಅದನ್ನು ನೆನಪಿನ ಬುಟ್ಟಿಗೆ ಸೇರಿಸಿಬಿಡುತ್ತದೆ.  ಆ ನೆನಪುಗಳನ್ನು ಮೆಲುಕಿಸುವುದೇ ಒಂದು ರೀತಿಯಲ್ಲಿ ಎದೆ ಹಾಲನ್ನು ಸ್ಮರಿಸಿದಂತೆ. ನಮ್ಮ ಜೀವನಾಡಿಯಾದ ನಮ್ಮ ಊರು ಅದು ಆ ಮಿಡಿತವನ್ನು ಇನ್ನೂ ಅನುಭಿಸುವಂತೆ ಮಾಡುತ್ತದೆ.

     ಹಂಪನಕಟ್ಟೆ..... ಮಂಗಳೂರು ಎಂದು ಅಧಿಕೃತವಾಗಿ ಕರೆಯುವುದೇ ಇದನ್ನು. ಅದೂ ಹಳೆ ಬಸ್ ಸ್ಟಾಂಡ್. ನಮ್ಮ‌ಬಾಲ್ಯದಲ್ಲಿ ಇದನ್ನು ಬೆರಗು ಕಣ್ಣಿಂದ ಕಂಡ ನೆನಪು ಈಗಲೂ ಇದೆ.ಹಲವರಲ್ಲಿ ಕೇಳಿ ಇದೇ ಬಸ್ ಸ್ಟಾಂಡ್ ನ ಹಲವು ನೆನಪುಗಳನ್ನು ಹೇಳಿಯಾರು. ಕಲವು ಸಂಭ್ತಮದ ಕಥೆಗಳಾದರೆ ಇನ್ನು‌ಕೆಲವು ಹತಾಶೆ ನೋವಿನ ಸಂಗತಿಗಳು.‌


ಹಂಪನಕಟ್ಟೆ ಹಳೆ ಬಸ್ ಸ್ಟಾಂಡ್.‌ಈಗಿನ ದೊಡ್ಡ ಸಿಗ್ನಲ್ ಬಳಿಯೇ ಇದೆ. ಮೊದಲು  ಅಲ್ಲಿರುವುದು ಹೊರಗೆಲ್ಲಾ ಕಂಡರೆ ಇಂದು ಕಟ್ಟಡಗಳು ಹುಲ್ಲಿನ ರಾಶಿಯಂತೆ ಬೆಳದು ಹಳೆಯದು ಅಲ್ಲಿ ಏನಿದೆ ಎಂದು ಹುಡುಕುವಂತಿದೆ. ಹಳೆ ಭಗ್ನಾವಶೇಷ ಕೂಡ ಇಲ್ಲ. ಈಗ ಏನಿದ್ದರೂ ಅಳಿಸದ ನೆನಪುಗಳು‌ಮಾತ್ರ. ಅಂದು  ನಡುವಿಗೆ ಒಂದು ದೊಡ್ಡ ಹಂಚಿನ ಕಟ್ಟಡ. ಸುತ್ತಲೂ ಬಗೆ ಬಗೆಯ   ಅಂಗಡಿಗಳು. ಖಾಸಗೀ ಬಸ್ ಕಂಡಕ್ಟರ್ ಏಜಂಟ್ ನವರ ಮೇಜು ಕುರ್ಚಿಗಳು, ಬದಿಯಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳುವ ತಿಟ್ಟೆಗಳು.   ಅಲ್ಲೊಂದು ಬಾವಿಯೂ ಇತ್ತು. ಅಲ್ಲಿನವರ ತೃಷೆ ಬಾಯಾರಿಕೆಯನ್ನು ಪರಿಹರಿಸುತ್ತಾ ಕೊನೆಗೊಮ್ಮೆ ವಯೋವೃದ್ಧ ತಾಯಿಯ ಎದೆಯಂತೆ ಎಲ್ಲಾ ಬತ್ತಿಸಿ ಬರಾಡಗಿ ಈಗ ನೆನಪೂ ಇಲ್ಲದಂತೆ ಅವಶೇಷವೂ ಮಾಯವಾಗಿದೆ.

ಕೆ ಎಸ್ ರಾವ್ ರಸ್ತೆಯಿಂದ ಒಳಬಂದ  ಖಾಸಗಿ  ಬಸ್ಸುಗಳು ಕಟ್ಟಡಕ್ಕೆ ಸುತ್ತು ಹೊಡೆದು ಉಡುಪಿ ಕುಂದಾಪುರ, ಕಾರ್ಕಳ ಕಾಸರಗೋಡು  ಕಡೆಗೆ ಹೋಗುವುದಕ್ಕೆ ಅಲ್ಲಲ್ಲಿ ನಿಲ್ಲುತ್ತಿದ್ದವು. ಬಹಳ ಹಿಂದೆ ಕೆ ಎಸ್ ಆರ್ ಟಿ ಸಿ ಬಸ್ಸುಗಳೂ ಸಹ ಇಲ್ಲೇ ಬಂದು ನಿಲ್ಲುತ್ತಿತ್ತಿದ್ದವು ಪುತ್ತೂರು ಧರ್ಮಸ್ಥಳ ಮುಂತಾದ ಕಡೆಗಲ್ಲದೆ ಹಾಸನ ಬೆಂಗಳೂರಿಗೂ ಇಲ್ಲಿಂದಲೇ ಹೊರಡುತ್ತಿತ್ತು.  1980 ರಲ್ಲಿ ಬೆಂಗಳೂರಿಗೆ ನಾನು ನಲ್ವತ್ತು ರೂಪಾಯಿ ಟಿಕೇಟ್ ಮುಂಗಡ ಖರೀದಿಸಿ ರಾತ್ರಿಯ ಬಸ್ಸಿಗೆ ಇಲ್ಲಿಂದಲೇ ಹತ್ತಿದ್ದೆ! ಆನಂತರ ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣ ಬಿಜೈಯ ಕಾವೂರು ಕ್ರಾಸ್ ರಸ್ತೆಯ ಗದ್ದೆ ಬಯಲಿಗೆ ವರ್ಗಾವಣೆಯಾಯಿತು.  ನಮ್ಮ ಹಂಪನಕಟ್ಟೆ ಇಕ್ಕಟ್ಟು ಅಂತ ಅನ್ನಿಸಲಿಕ್ಕೆ ತೊಡಗಿದ್ದು ಆವಾಗ. ಆದರೂ ಕೆ ಎಸ್ ರಾವ್ ರಸ್ತೆಯಿಂದ ಒಳಗೆ ಬಂದು ಬಸ್ ಸ್ಟಾಂಡ್ ಗೆ ಒಂದು ಸುತ್ತು ಬಂದು  ಆ ಇಕ್ಕಟ್ಟಿನಲ್ಲಿ ನುಗ್ಗಿ ಜನ ಹತ್ತಿಸಿಕೊಳ್ಳುತ್ತಿದ್ದ ಖಾಸಗಿ ಬಸ್ಸುಗಳ ಹೊಂದಾಣಿಕೆಯೇ ಬೇರೆ.  ಅದರ ನಡುವೆ ಆರೆಂಜ್ ಮುಸಂಬಿ ಮಾರಾಟ ಮಾಡುವ ಮಾರಾಟಗಾರರು ಬೆದ್ರ ಕಾರ್ಕಳ ಕೂಗಿ ಕರೆವ ಏಜಂಟ್ ಗಳು ಅಬ್ಬ ಬಾಲ್ಯದಲ್ಲಿ ಹಂಪನಕಟ್ಟೆಯಷ್ಟು ದೊಡ್ಡ ನಗರ ನೋಡಿಯೇ ತಿಳಿಯದು. 

        ಬಸ್ ಸ್ಟಾಂಡ್ ಕಟ್ಟಡದಲ್ಲಿದ್ದ ನಿತ್ಯಾನಂದ ಗ್ರಂಥಾಲಯ, ಬಹುಶಃ ನಾನು ಕಂಡ ವೈವಿಧ್ಯಮಯ ಪುಸ್ತಕ ಪೇಪರ್ ಅಂಗಡಿ ಎಂದರೆ ಇದುವೆ. ಇರುವ ಒಂದಿಷ್ಟು ಜಾಗದಲ್ಲಿ ಅಲ್ಲಿ ಸಿಗದ ಪುಸ್ತವೇ ಇರಲಿಲ್ಲ. ಭಜನೆ ಪುಸ್ತಕ ನಾಟಕ ಪುಸ್ತಕ ಚಿತ್ರಗೀತೆ ಹಲವು ಭಾಷೆಯ ಪತ್ರಿಕೆಗಳು ಹೀಗೆ ವೈವಿಧ್ಯಮಯ ಜಗತ್ತು ಆರಡಿ ಜಾಗದ ಜಗಲಿಯಲ್ಲಿತ್ತು.  ಕೆಲವುದರ ಹಿಂದೆ ನಿತ್ಯಾನಂದ ಗ್ರಂಥಾಲಯದ ಹೆಸರು ಇರುತ್ತಿತ್ತು. ಬಹುಶಃ ಈಗಲು ಹತ್ತಿರದ ಇನ್ನೊಂದು ಕಟ್ಟಡದಲ್ಲಿದೆ.  ಲಾಟರಿ ಅಂಗಡಿ ಹಣ್ಣಿನ ಅಂಗಡಿ ಒಂದೆಡೆಯಾದರೆ ಪ್ರಸಿದ್ಧವಾದ ಬಸ್ ಸ್ಟಾಂಡ್ ಕ್ಯಾಂಟೀನ್, ನಂತರ ಇದು ಮುಚ್ಚಿ ಹೋಗಿ ಆನಂತರ ಚಿಕ್ಕ ಕ್ಯಾಂಟೀನ್ ತೆರೆದಿತ್ತು. ಅಲ್ಲಿ ಸಾಯಂಕಾಲ ಸಿಗುತ್ತಿದ್ದ ರವಾ ದೋಸೆ ಪುಂಡಿಗಸಿಯ ಘಮ್ಮೆನ್ನುವ ಪರಿಮಳ ಬಸ್ಸಿನಲ್ಲಿದ್ದವರನ್ನು ಕೆಳಗಿಳಿವಂತೆ ಮಾಡುತ್ತಿದ್ದವು.  ದೂರದೂರಿಗೆ ಇಲ್ಲಿ ಕಾದು ಕುಳಿತು ಕತ್ತು ಉದ್ದ ಮಾಡಿ ಬರುವ ಬಸ್ಸನ್ನು ನೋಡುತ್ತಿದ್ದ ನೆನಪು. ಬಸ್ ಬಂದ ಕೂಡಲೆ ಸೀಟು ಹಿಡಿವ ಗಡಿಬಿಡಿ....ಬಸ್ಸು ಸಮಯವಾದಕೂಡಲೇ ಗದರಿ ಡಬ ಡಬ ಬಡಿದು ಹೊರಡಿಸುತ್ತಿದ್ದ ಎಜಂಟ್ ಗಳು ಕೆಲವರಾದರೆ ಲಗೇಜ್ ಸಹಿತ ಪ್ರಯಾಣಿಕರನ್ನು ಅನಾಮತ್ತಾಗಿ ಎತ್ತಿ ಹಾಕುವಂತೆ ಹೊರಡುವ ಬಸ್ಸ್ ಗೆ ತುರುಕುವ ಕಂಡಕ್ಟರ್ ಗಳು, ಛೇ ಹಂಪನ್ ಕಟ್ಟ ಒಂದು ಅದ್ಭುತ ರಮ್ಯ ಲೋಕ. 


    ಕಾಲ ಸರಿದಂತೆ ದೂರದೂರಿನಿಂದ ಹೆಚ್ಚು ಹೆಚ್ಚು ಬಸ್ಸುಗಳು ಬರುತ್ತಿದ್ದವು. ಬೇರೆಲ್ಲೂ ಕಾಣ ಸಿಗದ ಖಾಸಗೀ ಬಸ್ಸುಗಳು ಸಮಯ ಪಾಲನೆಯಲ್ಲಿ ಸೂರ್ಯನನ್ನೇ ಮೀರಿಸಿ ಚಟುವಟಿಕೆಯಲ್ಲಿರುತ್ತಿತ್ತು. ಒಂದೆರಡು ನಿಮಿಷವನ್ನೂ ಸೆಕೆಂಡು ಮುಳ್ಳಿನಲ್ಲಿ ಲೆಕ್ಕ ಹಾಕುವ ಕಂಡಕ್ಟರ್ ಗಳು ಬೇರೆಲ್ಲೂ ಕಾಣುವುದಕ್ಕೆ ಸಾಧ್ಯವಿಲ್ಲ. ನಮ್ಮೂರು ಪೈವಳಿಕೆಯಿಂದ ಇಲ್ಲಿಗೆ ಬರಬೇಕೆಂದರೆ ಮೊದಲು ಮೂರು ಬಸ್ ಬದಲಾವಣೆ ಮಾಡಬೇಕಿತ್ತು. ಪೈವಳಿಕೆಯಿಂದ ಉಪ್ಪಳ, ಉಪ್ಪಳದಿಂದ ತಲಪಾಡಿ, ತಲಪಾಡಿಯಿಂದ ಮಂಗಳೂರು. ಕ್ರಮೇಣ ನಮ್ಮ ಊರು ಬೆಳೆಯಿತು ನೇರ ಬಸ್ಸ್ ಆಯಿತು. ಕಂದು ಬಣ್ಣದ ಜನಪ್ರಿಯ ಬಸ್.......ವಿನಯದುರ್ಗ ಬಸ್, ಮನೆಯ ಬಳಿಯಿಂದ ಹತ್ತಿ ಕುಳಿತರೆ ಇದೇ ಹಂಪನ್ ಕಟ್ಟೆಯಲ್ಲಿ ಇಳಿಯುತ್ತಿದ್ದೆವು. ಜನಪ್ರಿಯ ಬಸ್ ನಲ್ಲಿ ದೇಖಾ ಹೈ ಪೆಹೆಲೀ ಬಾರ್ ಅಂತ ಸಾಜನ್ ಸಿನಿಮಾಹಾಡು ದೊಡ್ಡದಾಗಿ ಹಾಕಿ ನೆತ್ರಾವತಿ ಸಂಕದ ಮೇಲೆ ಹೋಗುತ್ತಿದ್ದ ಮಜವೇ ಬೇಎ. ಹೀಗೆ ಬಾಯಾರು ಪೈವಳಿಕೆ  ಎಂಬ ಊರಿನ ಹೆಸರು ನಮ್ಮ ಹಂಪನ ಕಟ್ಟೆಯಲ್ಲಿ ಮೊಳಗುವುದಕ್ಕೆ ಆರಂಭವಾಯಿತು. ಕೊಪ್ಪ ಶ್ರಿಂಗೇರಿ ಶಿವಮೊಗ್ಗಕ್ಕೆ ರಾತ್ರಿ ಬಸ್ ನಲ್ಲಿ ಸಂಚರಿಸಬೇಕಾದರೆ ರಾತ್ರಿ ಅಲ್ಲಿ ಕಾಯುತ್ತಿದ್ದ ದಿನಗಳು ಆ ಸಂಭ್ರಮದ ನೆನಪುಗಳನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಬಾಲ್ಯದಿಂದಲೇ ಲೋಕಜ್ಞಾನವನ್ನು ಒದಗಿಸಿದ ಹಂಪನಕಟ್ಟೆ ನಿಲ್ದಾಣ ಈಗ ಒಂದರ್ಥದಲ್ಲಿ ಪಳೆಯುಳಿಕೆಯಾಗುತ್ತಿದೆ.  ಈಗಲೂ ಇಲ್ಲಿ ಸಂಚರಿಸುವಾಗ ನಾವು ಓಡಾಡಿದ ಜಾಗ ನೆನಪಾಗದೇ ಇರುವುದಿಲ್ಲ. ಹಾಗೆ ಒಂದರೆ ಘಳಿಗೆ ಅಲ್ಲಿ ಸುತ್ತಾಡಿ ನೆನಪುಗಳನ್ನು ಮೆಲುಕು ಹಾಕುವುದರಲ್ಲಿ ಏನೋ ಒಂದು ಸುಖವಿದೆ.  

    ಐದು ದಶಕದ ಹಿಂದಿನ ಹಂಪನ ಕಟ್ಟೆ ಇಂದು ಹಳೆಯದಾಗಿ ಇನ್ನೇನೊ ಹೊಸತನ್ನು ತುಂಬುವ ಆತುರದಲ್ಲಿದೆ. ಹೊಸತಾಗಿ ಮೂರಂತಸ್ತಿನ  ವಾಹನ ತಂಗುದಾಣ ಬರುವುದಕ್ಕಿದೆ. ಅಲ್ಲಿಗೆ ಹಳೆಯ ಬಸ್ ನಿಲ್ದಾಣ ಹೆಸರು ಸಂಪೂರ್ಣ ಮಾಯವಾಗಲಿದೆ. ಎನ್ನೇನೋ ಹಳೆಯದಾಗುವುದಕ್ಕೆ ಹೊಸದರ ಆಗಮನವಾಗುತ್ತದೆ.   ಏನಿದ್ದರೂ ನಮ್ಮ ಹಂಪನಕಟ್ಟೆ ನಮಗದು ಅಭಿಮಾನ. ಆ ನೆನಪುಗಳು ಮಧುರ.



Wednesday, November 3, 2021

ಉಪ್ಪಳದ ಸಫಾಯರ್ ಚಿತ್ರ ಮಂದಿರ ಒಂದು ನೆನಪು

     ಉಪ್ಪಳ, ಅತ್ತ ನಗರವೂ ಅಲ್ಲದ ಇತ್ತ ಹಳ್ಳಿಯೂ ಅಲ್ಲದ ಒಂದು ಊರು. ತನ್ನ ಮೈಮೇಲೆ ರಾಷ್ಟ್ರೀಯ ಹೆದ್ದಾರಿಯನ್ನು ಹೊದ್ದು ಮಲಗಿದ ಉಪ್ಪಳ,  ಆ ಹೆದ್ದಾರಿ ಗಡಿಬಿಡಿಯನ್ನು ಆವಾಹಿಸಿಕೊಂಡು ಸದಾ ಜಾಗೃತವಾಗಿರುತ್ತದೆ. ಬಿಡುವಿಲ್ಲದೇ ಓಡುವ ವಾಹನಗಳು ಅತ್ತ ಇತ್ತ ಹರಿದಾಡುವ ವಿವಿಧ ಜನರು ಗಿಜಿಗುಟ್ಟುವ ಅಲ್ಲದಿದ್ದರೂ ನಮ್ಮ ಉಪ್ಪಳ ನಡುರಾತ್ರಿಯಲ್ಲೂ ಎಚ್ಚರವಿರುತ್ತದೆ. ನನ್ನ ಬಾಲ್ಯದಿಂದಲೂ ಸುಮಾರು ನಲ್ವತ್ತೈದೂ ವರ್ಷಗಳಿಂದಲೂ ಉಪ್ಪಳವನ್ನು ನೋಡುತ್ತೇನೆ. ಪ್ರತಿ ಹಂತದಲ್ಲೂ ಬದಲಾಗುವು ಉಪ್ಪಳ ಒಂದು ಸೋಜಿಗದ ತಾಣವಾಗಿದೆ. ಜೀವನ ಬಹು ಪಾಲು ಘಟನೆಗಳಿಗೆ ಸುಖ ದುಃಖ ಕಷ್ಟಗಳಿಗೆ ಉಪ್ಪಳ ಸಾಕ್ಷಿಯಾಗಿದೆ. 

ಎಪ್ಪತ್ತರ ದಶಕದಲ್ಲಿ ಉಪ್ಪಳದಲ್ಲಿ ಬೀದಿ ದೀಪಗಳು ಇಲ್ಲವೇ ಇಲ್ಲ ಎನ್ನಬಹುದು. ಬಹು ಪಾಲು ಅಂಗಡಿಗಳು ರಾತ್ರಿಯಾಗುತ್ತಿದ್ದಂತೆ ಪೆಟ್ರೋ ಮೇಕ್ಸ್ (ಗ್ಯಾಸ್ ಲೈಟ್) ಉರಿಸುತ್ತಿದ್ದವು. ಕೆಲವು ಬೆರಳೆಣಿಕೆಯ ಅಂಗಡಿಗಳಲ್ಲಿ ಝಗಮಗಿಸುವ ಲೈಟುಗಳಿದ್ದವು. ಇವುಗಳ ಬೆಳಕೇ ಸಾಕಷ್ಟು ಉಪ್ಪಳವನ್ನು ಅಲ್ಲಿ ಇಲ್ಲಿ ಬೆಳಗಿಸುತ್ತಿದ್ದವು. ಮಿಕ್ಕ ಜಾಗದಲ್ಲಿ ಉಪ್ಪಳ ಕತ್ತಲೆ ಕತ್ತಲೆ. ಗ್ಯಾಸ್ ಲೈಟ್ ನ್ನು ಬಾಡಿಗೆಗೆ ಕೊಡುವ ಪೊಡಿಚ್ಚನ ಅಂಗಡಿ, ಅದನ್ನುರಿಪೇರಿ ಮಾಡುವ ಮೂಕುಚಟ್ಟೆ (ಕ್ಷಮಿಸಿ ಹೆಸರು ಮರೆತು ಹೋಗಿದೆ)ಯವನ ಅಂಗಡಿ ಹಳೆಯ ಉಪ್ಪಳ ಮರೆತು ಹೋಗುವುದಕ್ಕಿಲ್ಲ. 

ಎಪ್ಪತ್ತರ ದಶಕದಲ್ಲಿ ಉಪ್ಪಳದ ಕೇಂದ್ರ ಭಾಗದಲ್ಲಿ ಒಂದು ಟಾಕೀಸ್ ಇತ್ತು. ನನಗೆ ಇನ್ನೂ ನೆನಪಿದೆ ಅದು ಆರಂಭವಾದ ಘಳಿಗೆ. ವಾರಕ್ಕೊಂದು ಸಿನಿಮ ಕನ್ನಡ ಹಿಂದಿ ಮಲಯಾಳಂ ತಮಿಳು ಹೆಚ್ಚೇಕೆ ತುಳು ಸಿನಿಮಾ ಕೂಡ ಅಲ್ಲಿ ಪ್ರದರ್ಶನಗೊಳ್ಳುತ್ತಿತ್ತು. ಉಪ್ಪಳದ ಕೇಂದ್ರಬಾಗದಲ್ಲಿ ಸ್ವಲ್ಪಒಳಗೆ ಈ ಥಿಯೇಟರ್ ಇತ್ತು. ಇದರ ಹೆಸರು ಸಫಾಯರ್ ಟಾಕೀಸ್. ಮುಂದಿನ ಸಾಲಿನಲ್ಲಿ ಮರದ ಬೆಂಚು ಸ್ವಲ್ಪ ಹಿಂದೆ ಬಂದರೆ ಕೆಲವು ಸ್ಟೀಲಿನ ಮತ್ತು ಮರದ ಕುರ್ಚಿಗಳು. ಫ್ಯಾನ್ ಗಳು ಇದ್ದ ನೆನಪಿಲ್ಲ.ಯಾಕೆಂದರೆ ಸಿನಿಮಾ ಶುರುವಾಗಬೇಕಿದ್ದರೆ ನಾವು ಬೆವರಿ ಒದ್ದೆಯಾಗುತ್ತಿದ್ದೆವು. ಕಿಕ್ಕಿರಿದು ಜನ ಸೇರಿದರೆ ಹತ್ತಿರದ ಹೋಟೇಲಿನಿಂದ ಬೆಂಚು ಕುರ್ಚಿ ತಂದು ಮಧ್ಯೆ ಇಡುತ್ತಿದ್ದರು. 

ರಾಜೆಶ್ ಖನ್ನಾ ನಟಿಸಿದ ಅಪ್ನಾ ದೇಶ್ ಎಂಬ ಹಿಂದಿ ಸಿನಿಮಾ ನಾನು ಮೊದಲು ನೋಡಿದ ಸಿನಿಮಾ ಅದನ್ನು ಇಲ್ಲೇ ನೋಡಿದ್ದು. ಆನಂತರ ಬಡವರ ಬಂಧು ಗಿರಿಕನ್ಯೆ, ದಾರಿ ತಪ್ಪಿದ ಮಗ, ಅದೃಷ್ಟವೋ ಅದೃಷ್ಟ, ಮುಯ್ಯಿಗೆ ಮುಯ್ಯಿ, ಕುದುರೆ ಮುಖ, ಬೊಳ್ಳಿದೋಟ ಈ ಸಿನಿಮಾಗಳನ್ನು ನೋಡಿದ ನೆನಪು ಈಗಲೂ ಇದೆ. ಆ ಕಾಲದಲ್ಲಿ ಜನುಮದಲ್ಲಿ ಸಿನಿಮಾ ನೋಡಿರದ ಮಂದಿಗೆ ಸಿನಿಮಾ ತೋರಿಸಿದ ಹೆಗ್ಗಳಿಕೆ ಈ ಸಿನಿಮಾ ಮಂದಿರಕ್ಕೆ ಇದೆ. ಮೊದಲ ಸಿನಿಮಾ ನೋಡಿದಾಗ  ಬೆರಗು ಕಣ್ಣಿಂದ ನೋಡಿದ್ದೆ. ತೆರೆಯ ಹಿಂದೇ ಯಾರಾದರೂ ಇದ್ದಾರೋ ಅಂತ ಸಿನಿಮಾ ಟಾಕಿಸಿ ಹಿಂದೆ ಹೋಗಿ ನೋಡಿದ್ದು ಈಗಲೂ ನೆನಪಿದೆ.  ಮೊದಲು ಕೇವಲ ಮ್ಯಾಟನಿ ಮಾತ್ರವೇ ಈ ಸಿನಿಮಾ ಮಂದಿರದಲ್ಲಿ ಪ್ರದರ್ಶನಗೊಳ್ಳುತಿತ್ತು.  ಈ ಟಾಕೀಸ್ ನಲ್ಲಿ ಶೌಚಾಲಯ ಇದ್ದ ನೆನಪಿಲ್ಲ. ವಿರಾಮದಲ್ಲಿ ಪಕ್ಕದ ವಿಶಾಲವಾದ ಖಾಲಿಜಾಗವೆ ಟಾಯ್ಲಟ್ ಆಗಿ ಬಳಕೆಯಾಗುತ್ತಿತ್ತು! ಇನ್ನು ಟಾಕೀಸಿ ಒಳಗಡೆ ತಿಂಡಿ ಸಿಗುತ್ತಿರಲಿಲ್ಲ. ಪಕ್ಕದ ಅಂಗಡಿಯಲ್ಲಿ ಸಿಗುತ್ತಿದ್ದ ಪುರಿಕಡ್ಲೆಯೇ ವಿರಾಮದ ತಿಂಡಿ. 

ಮಧ್ಯಾನ ಒಂದು ಘಂಟೆಯ ಸಾಯಿಬರ ಶಂಕರ್ ವಿಠಲ್ ಬಸ್ಸಿಗೆ ಹೊರಟರೆ ಅದು ಸಿನೆಮಕ್ಕೆ ಹೊರಟದ್ದು ಅಂತ ಊಹೆ. ಬಸ್ಸಿನಲ್ಲಿ ಡ್ರೈವರ್ ಆದಿಯಾಗಿ ಕೇಳುತ್ತಿದ್ದರು, "ಸಿನೇಮಕ್ಕೆ ಹೋಗುದಾ?" ಇಷ್ಟಾದರೂ ಸಿನೇಮಕ್ಕೆ ಹೋಗುವುದೆಂದರೆ ಒಂದು ರೀತಿಯ ಅಪರಾಧಿ ಭಾವನೆ ಜನರಲ್ಲಿ ಇತ್ತು. ಹಾಗಾಗಿ ಕೆಲವರು ತಲೆ ಮರೆಸಿಕೊಂಡು ಸಿನಿಮಾಕ್ಕೆ ಹೋಗುತ್ತಿದ್ದುದು ಸರ್ವೆ ಸಾಮಾನ್ಯ. ಸಾಹೇಬರ ಬಸ್ಸಿನಿಂದ ಇಳಿದು ಲಗುಬಗೆಯಲ್ಲಿ ಓಡಿಕೊಂಡು ಹೋಗುತ್ತಾ ಪಕ್ಕದ ಅಂಗಡಿಯಿಂದ ಹುರಿಗಡಲೆ ಕಟ್ಟಿಸಿ ತೆಗೆದುಕೊಂಡು ಹೋಗುವುದರಲ್ಲಿದ್ದ ಆ ಸಂಭ್ರಮ ಮತ್ತೆ ಬದುಕಲ್ಲಿ ಕಾಣಲಿಲ್ಲ. 

ಕೆಲವು ವರ್ಷ ಮಾತ್ರ ಸಿನಿಮಾ ತೋರಿಸುತ್ತಿದ್ದ ಸಫಾಯರ್ ಚಿತ್ರ ಮಂದಿರ ಮತ್ತೆ ತನ್ನ ಪ್ರದರ್ಶನವನ್ನು ನಿಲ್ಲಿಸಿತ್ತು. ಸುರತ್ಕಲ್ ಮೇಳದ ರಾಣಿ ರತ್ನಾವಳಿ ಎಂಬ ಯಕ್ಷಗಾನ ಬಯಲಾಟವನ್ನು ಮಳೆಗಾಲದಲ್ಲಿ ಇಲ್ಲಿ ನೋಡಿದ ನೆನಪಿದೆ.  ಮಳೆಗಾಲದಲ್ಲಿ ಯಕ್ಷಗಾನ ನೋಡುವುದೆಂದರೆ ಅದೊಂದು ಆಶ್ಚರ್ಯದ ಸಂಗತಿಯಾಗಿತ್ತು. ಅದರೇ ಕ್ರಮೇಣ ಟಾಕೀಸ್ ನಲ್ಲಿ ಸಿನಿಮಾ ಪ್ರದರ್ಶನ ನಿಂತಿತು. ಆದರೂ ಆ ಕಟ್ಟಡ ಬಹಳ ಸಮಯದವರೆಗೂ ಇತ್ತು ಮತ್ತು ಆ ನೆನಪನ್ನು ಕೊಡುತ್ತಿತ್ತು. ಈಗ ಅಲ್ಲಿ ಕಟ್ಟಡವೂ  ಇಲ್ಲ. ಹೀಗೆ ಗತಕಾಲದ ಉಪ್ಪಳದ ಮೊದಲ ಚಿತ್ರಮಂದಿರದ ನೆನಪು ಇನ್ನೂ ಕೆಲವರಲ್ಲಿಇದ್ದರೂ ಇರಬಹುದು.

ಅದರಂತೆ ಮಂಜೇಶ್ವರದಲ್ಲಿ ಒಂದು ಟಾಕೀಸ್ ಇತ್ತು. ಎಸ್ ಎ ಟಿ ಚಿತ್ರಮಂದಿರ. ಆನಂತರ ಹೊಸಂಡಿಯಿಂದ ಸುಂಕದಕಟ್ಟೆಗೆ ಹೋಗುವ ಮಾರ್ಗದಲ್ಲಿ ಹಿಲ್ ಸೈಡ್ ಚಿತ್ರ ಮಂದಿರ ತೆರೆಯಿತು. ಇದು ಬಹಳ ಕಾಲದವರೆಗೆ ಸಿನಿಮಾ ಪ್ರದರ್ಶನ ನೀಡುತ್ತಿತ್ತು. ಮುಳಿ ಹುಲ್ಲಿನ ಛಾವಣಿಯ ಈ ಚಿತ್ರಮಂದಿರದಲ್ಲಿ ಸಿನಿಮಾ ಆರಂಭವಾಗುವ ಮೊದಲು ಮೈಕ್ ನಲ್ಲಿ ಗಟ್ಟಿಯಾಗಿ ಹಾಡು ಹಾಕುತ್ತಿದ್ದರು. ಇಲ್ಲಿ ಸಿನಿಮಾ ಇದ್ದರೆ ಸುತ್ತಮುತ್ತಲಿನ ಬಹುದೂರದವರೆಗು ಸಿನಿಮಾ ಡೈಲಾಗ್ ಫೈಟಿಂಗ್ ಸದ್ದು ಕೇಳಿಬರುತ್ತಿತ್ತು. ಬಹುದೂರದವರೆಗೂ ಅದು ಕೇಳಿಸುತ್ತಿತ್ತು. ಮರದ ಕುರ್ಚಿಯಲ್ಲಿ ಕುಳಿತು ಸಿನಿಮಾ ನೋಡುತ್ತಿದ್ದ ಸಂಭ್ರಮವೇ ಬೇರೆ.   ಹೊಸಂಗಡಿಯಲ್ಲಿ ಬಸ್ ಇಳಿದು ಓಡಿಕೊಂಡು ಹೋಗುತ್ತಿದ್ದ ದೃಶ್ಯ ಈಗಲೂ ನೆನಪಿದೆ.  

ಪೋಟೊ ಸಹಾಯ ಅಂತರ್ಜಾಲದ ಅನಾಮಿಕರು ಅವರಿಗೂ ಧನ್ಯವಾದಗಳು
ಉಪ್ಪಳದ ಸುಂದರ ದೃಶ್ಯಫೋಟೋ ಕೃಪೆ : ಅಂತರ್ಜಾಲದ ಅನಾಮಿಕರು....ಅವರಿಗೂ ಧನ್ಯವಾದಗಳು


ಇನ್ನೂ ಅತ್ಯಂತ ಪ್ರಿಯವಾದ ಟಾಕಿಸ್ ಎಂದರೆ ಕೈಕಂಬದ ರಂಜೀತ್  ಟಾಕೀಸ್. ಹೆಚ್ಚಾಗಿ ಪರಿಚಿತರೇ ಇಲ್ಲಿದ್ದರು. ಹೊರ ಊರಿಗೆ ಹೋಗುವಾಗ ನಮ್ಮ ಸ್ಕೂಟರ್ ಇಲ್ಲೆ ಪಾರ್ಕ್ ಮಾಡಿ ಹೋಗುತ್ತಿದ್ದೆ. ಸಿನಿಮಾ ನೋಡುವುದಿದ್ದರೂ ಹಾಗೆ, ಟಿಕೇಟ್ ಪಡೆಯುವ ಮೊದಲೇ ಟಾಕೀಸ್ ಒಳಗೆ ಕುಳಿತುಕೊಳ್ಳುತ್ತಿದ್ದೆವು. ಆನಂತರ ಟಿಕೇಟ್ ಕುಳಿತಲ್ಲಿಗೇ ತಂದುಕೊಡುತ್ತಿದ್ದರು. ಈ ಸೌಲಭ್ಯ ಇಲ್ಲೇ ಇದ್ದದ್ದು ಒಂದು ವಿಚಿತ್ರ ! ಮೋಹನ್ ಲಾಲ್  ಶಿವಾಜಿ ಗಣೇಶನ್ ಅಭಿನಯದ ಯಾತ್ರಾಮೊಳಿ ಎಂಬ  ಮಲಯಾಳಂ ಸಿನಿಮಾ ತಡ ರಾತ್ರಿಯ  ಪ್ರದರ್ಶನ ನೋಡುವಾಗ ಟಾಕೀಸ್ ಬಹುತೇಕ ಖಾಲಿಯಾಗಿದ್ದು ಬಾಲ್ಕನಿಯಲ್ಲಿ ನಾನೊಬ್ಬನೇ ಕುಳಿತು ಸಿನಿಮಾ ನೋಡಿದ ಹೆಗ್ಗಳಿಕೆ ನನ್ನದು. 


ಹೀಗೆ ಗತಕಾಲದ ಉಪ್ಪಳದ ಗತಿಸಿ ಹೋದ ನೆನಪು ಬಹಳ ಮಧುರವಾಗಿದೆ. ಅದನ್ನು ಈಗ ಮೆಲುಕು ಹಾಕುವುದೇ ಒಂದು ಸಂತಸದ ವಿಚಾರ.