Monday, December 19, 2016

ಆತ್ಮ ವಂಚನೆ..

            ಬಹಳ ಹಿಂದೆ ಊರಲ್ಲಿ ಅಂದರೆ ಪೈವಳಿಕೆಯಲ್ಲಿರುವಾಗ ಒಂದು ದಿನ ಮಧ್ಯಾಹ್ನ ನಾನು ಉಪ್ಪಳದಿಂದ ಮನೆ ಕಡೆಗೆ ಹೋಗುವುದಕ್ಕಾಗಿ ಉಪ್ಪಳದಿಂದ ಬಸ್ ಹತ್ತಿದೆ. ಉಪ್ಪಳವೆಂದರೆ ಮಂಗಳೂರಿನಿಂದ ಕಾಸರಗೋಡಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗುವ ಒಂದು ಪ್ರಾಮುಮುಖ್ಯ ನಗರ. ಬಸ್ಸು ಹೊರಡುವಾಗಲೇ ಕೆಲವು ನಿಮಿಷತಡವಾಯಿತು. ನಮ್ಮೂರಿನ ಖಾಸಗೀ ಬಸ್ಸಿನವರ ಲೆಕ್ಕದಲ್ಲಿ ನಿಮಿಷ ನಿಮಿಷವೂ ಅಮೂಲ್ಯ. ಸಮಯದ ಬೆಲೆ ತಿಳಿಯಬೇಕಾದರೆ ನಮ್ಮೂರಿನ ಖಾಸಗೀ ಬಸ್ಸುಗಳಲ್ಲಿ ಚಾಲಕ ಅಥವ ನಿರ್ವಾಹಕ ಇಲ್ಲವಾದರೆ ಕ್ಲೀನರ್ ನಾಗಿಯೋ ಇರಬೇಕು. ನಿಮಿಷಗಳಷ್ಟು ತಡವಾದ ಬಸ್ಸು ಅವಸರ ಅವಸರವಾಗಿ ಹೊರಡಲು ಸಿದ್ದತೆ ನಡೆಸಿತು. ಅದಾವಾಗಲೇ ಹಿಂದಿನ ಬಸ್ಸಿನ ಕಂಡಕ್ಟರ್ ಬಂದು ರಂಪಾಟ ನಡೇಸಿ ಬಸ್ಸು ದಬ ದಬ ಬಡಿದಾಗಿತ್ತು. ಊಹೂಂ ಅದಾರೋ ಕೆಲವು ಹತ್ತುವುದರಲ್ಲಿದ್ದರೂ ಬಸ್ಸು ಮತ್ತೂ ನಿಧಾನವಾಗಿ ಹೊರಟಿತು.
            ಬಸ್ಸು ನಿಧಾನವಾಗಿ ಹೊರಡುತ್ತಿದ್ದಂತೆ ಹಿಂದಿನ ಬಸ್ಸು ಇದರ ಹಿಂದೆಯೆ ಹೊರಟು ಬಂತು. ಉಪ್ಪಳದಂತೆ ಅದಕ್ಕೆ ಒತ್ತಿಕೊಂಡು ಕಿಲೊಮೀಟರ್ ದೂರದಲ್ಲಿ ಇರುವ ಇನ್ನೊಂದು ಊರು ಕೈಕಂಬ, ಇಲ್ಲಿಂದ ನಂತರ ಪೈವಳಿಕೆ ಬಾಯಾರು ಕಡೆಗೆ ರಸ್ತೆ ತಿರುಗುತ್ತದೆ. ಮಂಗಳೂರಿನಿಂದ ಬರುವಾಗ ಉಪ್ಪಳದಲ್ಲಿ ಬಸ್ಸು ತಪ್ಪಿ ಹೋದರೆ ನೇರ ಕೈಕಂಬದಲ್ಲಿ ಇಳಿದು ಅದೇ ಬಸ್ಸು ಹಿಡಿಯುವುದು ಸಾಮಾನ್ಯ ವಾಡಿಕೆ. ಹಾಗೆ ಕಾಸರಗೋಡಿನಿಂದ ಬರುವವರಿಗೂ ಇದು ಅನೂಕೂಲ ತಾಣ. ನಾನಿದ್ದ ಬಸ್ಸು ಕೈಕಂಬದಲ್ಲಿ ಬಂದು ನಿಂತಾಗ ಹಿಂದಿನ ಬಸ್ಸು ವೇಗವಾಗಿ ಬಂದು ಇದನ್ನು ಹಿಂದಿಕ್ಕಿ ಮುಂದಿನ ಇಕ್ಕಟ್ಟಾದ ಸಂದಿಯಲ್ಲಿ ಅಡ್ಡವಾಗಿ ನಿಂತು ಬಿಟ್ಟಿತು. ನಿಂತೊಡನೇ ಡ್ರೈವರ್ ಕಂಡಕ್ಟರ್ ಗಳ ಜಗಳ ಹತ್ತಿಕೊಂಡಿತು. ನಾವಿದ್ದ ಬಸ್ಸಿನ ಡ್ರೈವರ್ ಸೀಟಲ್ಲಿ ಕುಳಿತೇ ಏನೇನೋ ಸಮಜಾಯಿಷಿ ನೀಡಲಾರಾಂಭಿಸಿದ. ಊಹೂಂ, ಜಗಳ ಮತ್ತೂ ಜೋರಾಯಿತು. ಎರಡೂ ಬಸ್ಸು ನಿಂತಲ್ಲೆ. ಒಳಗೆ ಪ್ರಯಾಣಿಕರಲ್ಲಿ ಕೆಲವರು ಇಳಿದು ಜಗಳ ನೋಡತೊಡಗಿದರು. ಸುತ್ತ ಮುತ್ತಲಿನ ಜನಗಳೆಲ್ಲ ಇದೊಂದು ಸುಲಭದ ಮನರಂಜನೆ ಎಂಬೆಂತೆ, ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದಂತೆ ನಿಂತೇ ನೋಡುತ್ತಿದ್ದರು. ಬಹಳ ಹೊತ್ತು ಕಳೆಯಿತು. ನಮ್ಮ ಬಸ್ಸಿನಲ್ಲಿ ಹಿಂದೆ ಕುಳಿತ ಹಿಂದುಳಿದವನೊಬ್ಬ ಅಂಗಿಯ ತೋಳೆರಿಸಿ ಪಕ್ಕದಲ್ಲಿ ಇದ್ದವರೊಡನೆ ತಾನು ಅಡ್ಡ ಇರಿಸಿದ ಬಸ್ಸು ತೆಗೆಸಿಯೇ ತೀರುತ್ತೇನೆ ಎಂದು ಎದೆ ಮುಂದೆ ಮಾಡಿಕೊಂಡು ಪಂಚೆ ಮೇಲೆರಿಸಿ ಬಸ್ಸಿಳಿದು ಮುಂದೆ ಹೋದ. ಅಷ್ಟೆ ಅರ್ಧದಲ್ಲೇ ವಾಪಾಸು “ ಎಲ್ಲ ಞಮ್ಮಳ ಆಳ್.....” (ಎಲ್ಲಾ ನಮ್ಮದೇ ಜನ)  ಎನ್ನುತ್ತಾ ಸುಮ್ಮನೇ ತನ್ನ ಸೀಟಲ್ಲಿ ಕುಳಿತ.  ಅದುವರೆಗೂ ಎಲ್ಲರನ್ನು ತದುಕಿ ಬಸ್ಸು ಹೊರಡಿಸುತ್ತೇನೆ ಎಂದವನು ಸಮಾಧಾನದಿಂದ ಬಂದು ಕುಳಿತ.  ನಮ್ಮದೇ ಜನ ಅಲ್ಲದೇ ಇರುತ್ತಿದ್ದರೆ, ಈತ ಏನು ಮಾಡಬಹುದಿತ್ತು? ನ್ಯಾಯ ವೆಂಬುದು ನಮ್ಮದೇ ಜನಗಳನ್ನು ಹೊಂದಿಕೊಂಡು ಬದಾಲಾಗಿ ಬಿಡುತ್ತದೆ. ಇದನ್ನೇ ಹೇಳುವುದು ಆತ್ಮವಂಚನೆ ಎಂದು.
            ಪ್ರವಚನ ಒಂದರಲ್ಲಿ ಗುರುಗಳು ಸುಂದರವಾಗಿ ಪ್ರವಚಿಸುತ್ತಿದ್ದರು. ಕೈಯಲ್ಲಿ ಅದಾವುದೋ ಒಂದು ವಸ್ತುವನ್ನು ಹಿಡಿದು ಹೇಳುತ್ತಿದ್ದರು. ಈ ವಸ್ತು ಇದು ತಾತ್ಕಾಲಿಕವಾಗಿ ಬೇರೊಬ್ಬರಿಂದ ಈಗ ಹಿಂದಿರಿಗಿಸುತ್ತೇನೆ ಎಂದು ಎರವಲು ಪಡೆದುಕೊಂಡುದಾಗಿತ್ತು. ಈ ವಸ್ತುವನ್ನು ಒಂದು ಕ್ಷಣವಾದರೂ ಇದು ನನ್ನದಾಗಿದ್ದರೇ ಎಂದು ಮನಸ್ಸಿನ ಗ್ರಹಿಸಿದರೆ. ಈ ವಸ್ತು ನನ್ನದಾದರೆ  ಎಂದು ಆಶಿಸಿದರೆ ಅದು ಮಾನಸಿಕ ವ್ಯಭಿಚಾರವಾಗುತ್ತದೆ. ಬಹಳ ಸುಂದರವಾದ ಕಲ್ಪನೆ. ಕೇವಲ ಯೋಚಿಸುವುದೇ ಮಾನಸಿಕ ವ್ಯಭಿಚಾರ. ವ್ಯಭಿಚಾರ ಅಥವಾ ವೆತ್ಯಸ್ತವಾದ ಅಪಚಾರ ಅದು ಅಪರಾಧವವೇ. ಅದು ಮಾನಸಿಕವಾಗಿ ಅಥವಾ ದೈಹಿಕವಾಗಿ ಹೇಗೆ ಮಾಡಿದರೂ ಅದು ವ್ಯಭಿಚಾರ. ಅಪರಾಧ. ಇದರ ಅರಿವು ಮೂಡಬೇಕಾದರೆ ವಂಚನೆ ಇಲ್ಲದ ಮನಸ್ಸು ನಮ್ಮದಾಗಬೇಕು.

            ಹೌದು , ವ್ಯಭಿಚಾರ ಈಗ ಇದು ಮಾಡುವನಿಂದಲೂ ಅದನ್ನು ನೋಡಿ ತೋರಿಸಿಕೊಡುವವನೇ ಹೆಚ್ಚು ಅಪರಾಧಿಯಾಗುತ್ತಾನೆ. ಕೇವಲ ಮನಸ್ಸಿನಿಂದ ಗ್ರಹಿಸುವುದೇ ವ್ಯಭಿಚಾರ ಎಂದು ಪರಿಗಣಿಸುವ ಭಾರತೀ ಸಂಸ್ಕೃತಿಯಲ್ಲಿ ಹೀಗೂ ಕಂಡವರೂ ತೋರಿಸಿದವರೂ ಅಪರಾಧಿಗಳಾಗುವಾಗ ಆತ್ಮ ವಂಚನೆ ಎಂಬುದು ಅರ್ಥವನ್ನು ಕಳೆದುಕೊಳ್ಳುತ್ತದೆ. ಹೆತ್ತ ತಂದೆ ತನ್ನ ಮಗನ ಅಪರಾಧವನ್ನು ಮುಚ್ಚುವಲ್ಲಿ ಆತನ ವ್ಯಭಿಚರಿಕೆಯನ್ನು ಹಲವು ಕಾರಣ ನೀಡಿ ಸಮರ್ಥಿಸಬಹುದು. ಆದರೆ ವ್ಯಭಿಚಾರ ಅದಕ್ಕಿರುವ ಮಾನದಂಡ ಒಂದೇ  ಅದು ಅಪರಾಧ.  ಇಲ್ಲಿ ಆತ್ಮ ಎನ್ನುವುದರ ಅರಿವಿರಬೇಕು. ಆತ್ಮ ಮನಸ್ಸು ಇವುಗಳ ಕಲ್ಪನೆ ಇರಬೇಕು. ಯಾವಾತ ತನ್ನ ಮನಸ್ಸಿಗೆ ವಂಚನೆ ಮಾಡುತ್ತಾನೋ ಅತನೆಂದಿಗೂ ಪ್ರಾಮಾಣಿಕನಾಗಿ ಇರುವುದಕ್ಕೆ ಸಾಧ್ಯವಿಲ್ಲ. ಒಂದಿಲ್ಲೊಂದು ಬಗೆಯಲ್ಲಿ ಅದು ಸ್ವತಃ ತನಗೇ ಆದರೂ ಅತ ಅಪ್ರಾಮಾಣಿಕ ವ್ಯಕ್ತಿಯಾಗುತ್ತಾನೆ.  ತನಗೆ ತಾನು ವಂಚಿಸುವವನಲ್ಲಿ ಪ್ರಾಮಾಣಿಕತೆ ಇರುವುದಿಲ್ಲ. ಅಲ್ಲಿ ಪ್ರಾಮಾಣಿಕತೆ ಇದ್ದರೆ ಅದಕ್ಕೂ ಒಂದು ಬಣ್ಣವಿರುತ್ತದೆ. ಪ್ರಾಣಿ ಪಕ್ಷಿಗಳು ಆತ್ಮವಂಚನೆ ಎಸಗುವುದಿಲ್ಲ. ಮನುಷ್ಯನ ಅರ್ಹತೆಗಳಲ್ಲಿ ಒಂದು ಅರ್ಹತೆ ಅತ್ಮವಂಚನೆ ಇಲ್ಲದೇ ಬದುಕುವುದು. ಹಾಗಿದ್ದರೆ ಜಗತ್ತಿನಲ್ಲಿ ಪ್ರಾಣಿಗಳ ಸಂಖ್ಯೆಯೇ ಹೆಚ್ಚಾಯಿತು ಎಂದು ತಿಳಿಯಬೇಕು.