Monday, June 7, 2021

ನೆನಪಿನ ಬುಟ್ಟಿ

  ನೆನಪುಗಳು ಹಳೆಯದಾದಷ್ಟು, ಉಪ್ಪಿನ ಮಾವಿನ ಕಾಯಿಯಂತೆ ರುಚಿ ಹೆಚ್ಚು. ನನ್ನ ಶೈಶವಾಸ್ಥೆಯಲ್ಲಿ ಅಂದರೆ ಮಗುವಿದ್ದಾಗ ಆರೋಗ್ಯದಲ್ಲಿ ಬಹಳಷ್ಟು ಕ್ಷೀಣವಾಗಿದ್ದೆ. ಹೀಗಾಗಿ ನನ್ನ  ಹೆತ್ತಮ್ಮ ನನ್ನ ಅಜ್ಜಿ ನನ್ನ ಆರೈಕೆಗೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅದರಲ್ಲೂ ನನ್ನಮ್ಮ ಎಲ್ಲೆಲ್ಲಿ ನನ್ನ ಹೊತ್ತುಕೊಂಡು ಹೋಗಿದ್ದಾರೆ ಎಂದು ಈಗ ಕಲ್ಪಿಸುವುದೂ ಕಷ್ಟ. ಕೃಶವಾಗಿದ್ದ ನಾನು ಬದುಕಿ ಉಳಿದದ್ದೇ ಸೋಜಿಗ. ಸದಾ ರೋಗಿಷ್ಠ. ಮಂಗಳೂರಲ್ಲಿ ಚಿಕ್ಕವನಿರುವಾಗ  ಕಾರ್ ಸ್ಟ್ರೀಟ್ ನಲ್ಲಿ ಒಬ್ಬರು ವೈದ್ಯರಿದ್ದರು. ನೀಲಕಂಠ ಶಾಸ್ತ್ರಿಗಳು


. ಹಳೆಯ ಕಾರ್ ಸ್ಟ್ರೀಟ್ ಅದು. ವೈದ್ಯರ ಜಗಲಿಯಲ್ಲಿ ಅಮ್ಮನೊಂದಿಗೆ ಕುಳಿತುಕೊಂಡು ರಸ್ತೆಯಲ್ಲಿ ಹೋಗುತ್ತಿದ್ದ ವಾಹನವನ್ನು ನೋಡುತ್ತಿದ್ದುದು ಈಗಲೂ ನೆನಪಿದೆ.  ಆಗ ಕಾರ್ ಸ್ಟ್ರೀಟ್ ರಸ್ತೆಯುದ್ದಕ್ಕೂ ಕೆಲವು ಮರಗಳು ಇತ್ತು.  ಈಗ ಎಲ್ಲವೂ ಬದಾಗಿದೆ.    ಕೊನೆಗೆ ಎಷ್ಟೋ ಹೊತ್ತಾದ ಮೇಲೆ ವೈದ್ಯರು ಕರೆಯುತ್ತಿದ್ದರು. ನನ್ನ ಕೈ ಹಿಡಿದು ನಾಡಿ ನೋಡುತ್ತಿದ್ದರು.  ಹೀಗೆ ಕೈ ಹಿಡಿವಾಗ ನಾನು ಬಹಳಷ್ಟು ಆತಂಕಕ್ಕೆ ಒಳಗಾಗುತ್ತಿದ್ದೆ. ಅಮ್ಮ ಹೇಳುತ್ತಿದ್ದರು, ಬಿಸ್ಕತ್ತು ಮಿಠಾಯಿ ಎಲ್ಲ ತಿನ್ನುವಂತಿರಲಿಲ್ಲ. ಹಾಗೆ ತಿಂದರೆ ವೈದ್ಯರಿಗೆ ಕೈ ಹಿಡಿವಾಗ ತಿಳಿದುಬಿಡುತ್ತಿತ್ತು. ಹಾಗೆ ನಾನು ತಿಂದದ್ದು ಗೊತ್ತಾಗಿ ವೈದ್ಯರು ಬಯ್ದರೆ ಎಂಬ ಆತಂಕ.  ಆನಂತರ ವೈದ್ಯರು ಅದೇನೋ ಕಷಾಯ ಕೊಡುತ್ತಿದ್ದರು. ಅದನ್ನು ನೋಡುವಾಗಲೇ ಭಯವಾಗುತ್ತಿತ್ತು. ನಾನು ಕೆಟ್ಟದ್ದು ತಿಂದಷ್ಟು,  ಆ ಕಷಾಯ ಕೆಟ್ಟದಾಗಿರುತ್ತಿತ್ತು. ಇನ್ನೊಂದು ಮಾತ್ರೆ ಅದು ಮಾತ್ರ ಬಹಳ ಇಷ್ಟ. ಅದನ್ನು ತಿನ್ನುವುದಕ್ಕೆ ಸಣ್ಣ ಬಾಟಲಿ ಜೇನು ತೆಗೆದುಕೊಳ್ಳುತ್ತಿದ್ದರು. ಆ ಜೇನು ಬಾಟಲ್ ಕೂಡ ಅಷ್ಟೆ, ಅದಕ್ಕೆ ಕೆಂಫು ಮಯಣದ ಮುಚ್ಚಳವಿರುತ್ತಿತ್ತು.  ಆಗ ನಮ್ಮ ಮನೆ ಉರ್ವ ಸ್ಟೋರ್ ನಲ್ಲಿಇಳಿದು ದೂರ ನಡೆದು ಹೋಗಬೇಕಿತ್ತು. ಕಾರ್ ಸ್ಟ್ರೀಟ್ ನಿಂದ ಉರ್ವ ಸ್ಟೋರ್ ಹೋಗಬೇಕಾದರೆ 13 ನಂಬರ್ ನ ಸಿ ಪಿ ಸಿ ಬಸ್ಸು  ಇರುತ್ತಿತ್ತು.  ಸಿ ಪಿ ಸಿ ಬಸ್ ಎಂದರೆ ಅದೊಂದು ವಿಚಿತ್ರ ಮಾದರಿಯ ಬಸ್, ಪ್ರೀಮಿಯರ್ ಕಂಪೆನಿಯ ಬಸ್, ಈಗ ಮಂಗಳೂರಲ್ಲಿ ಒಂದು ಕೂಡ ಇಲ್ಲ.


ಬಾಲ್ಯದಲ್ಲಿರುವಾಗ ಇನ್ನೊಂದು ಮುಖ್ಯ ವಿಷಯ. ಅದನ್ನು ಹೇಳುವುದೇ ಈ ಲೇಖನ ಉದ್ದೇಶ. ಆಗ ಆಟವಾಡುವಾಗಲೆಲ್ಲ ಬಿದ್ದು ಗಾಯವಾದರೆ ನಮ್ಮ ಮನೆಯ ಹತ್ತಿರವೆ ಒಬ್ಬರು ಬಾಯಮ್ಮ ಇದ್ದರು. ಮೆಡ್ ಬಾಯಿ ಅಂತ ಹೇಳುತ್ತಿದ್ದರು. ಹೆರಿಗೆ ಮತ್ತು ಸಣ್ಣ ಪುಟ್ಟ ವೈದ್ಯಕೀಯ ಚಿಕಿತ್ಸೆಗೆ ಇವರು ಕರೆದಲ್ಲಿಗೆ ಹೋಗುತ್ತಿದ್ದರು. ಈ ಬಾಯಮ್ಮ ಗಾಯಕ್ಕೆ ಅದೆಂಥದೋ ಒಂದು ಔಷಧಿ ಹಾಕುತ್ತಿದ್ದರು. ದೊಡ್ಡ ಬಾಟಲಿ ಮುಚ್ಚಳಕ್ಕೆ ತೆಂಗಿನ ಚೆಪ್ಪು...(ತೆಂಗಿನ ಹುರಿ) ಅದ್ದಿ  ಮದ್ದು ಹಚ್ಚುತ್ತಿದ್ದರು. ಅಬ್ಬಾ ನಮ್ಮ ಚೀರಾಟ ಕೇಳಬೇಕು.   ಇನ್ನು ಗಾಯಕ್ಕೆ ನಮ್ಮ ಮನೆಯಲ್ಲೇ ಒಂದು ಎಣ್ಣೆ ನಮ್ಮಜ್ಜಿ ಕಾಯಿಸಿ ಇಡುತ್ತಿದ್ದರು. ಈಗ ಕೇಳಿದರೆ ನಗು ಬರಬಹುದು. ಹೌದು, ಆ ಎಣ್ಣೆ ಮಾಡುವ ವಿಧಾನವೇ ಹಾಗೆ.   ಆಡು (ಮೇಕೆ) ಹಾಕಿದ  ಬಿಟ್ಟೆ ಅಂದರೆ ಆಡಿನ ಕಕ್ಕ...ಕಪ್ಪಗೆ ಕಡಲೆ ಕಾಳಿನಂತೆ ಇರುತ್ತದೆ. ಅದನ್ನು ಗುದ್ದಿ ಪುಡಿ ಮಾಡಿ ತೆಂಗಿನ ಎಣ್ಣೆಗೆ ಹಾಗಿ ಕಾಯಿಸಿ ಇಡುತ್ತಿದ್ದರು. ಅದನ್ನು ಗಾಯಕ್ಕೆ ಹಚ್ಚಿದರೆ ಗಾಯ ಬೇಗನೆ ವಾಸಿಯಾಗುತ್ತಿತ್ತು. ಈ ಔಷಧ ಕೆಲವರಿಗೆ ನೆನಪಿರಬಹುದು. ಆಡು ಬಿಟ್ಟೆಯ ಈ ಎಣ್ಣೆ ಅದ್ಭುತ ಔಷಧಿಯುಕ್ತ. ಆಡು ಮುಟ್ಟದಿದ್ದ ಸೊಪ್ಪು ಇಲ್ಲ. ಹಾಗಾಗಿ ಆಡಿನ ಬಿಟ್ಟೆ ಕೂಡ ಔಷಧಿಯುಕ್ತ.  ಇದು ಈಗ ಎಷ್ಟು ಜನರಿಗೆ ಗೊತ್ತಿದೆಯೋ ತಿಳಿಯದು. ಆದರೆ ಬಿಟ್ಟೆ ಸಿಕ್ಕಿದರೆ ಯಾರೂ ಪ್ರಯತ್ನಿಸಿ ನೋಡಬಹುದು. ಗಾಯಕ್ಕೆ ಒಂದು ಅತ್ಯುತ್ತಮ ಔಷಧಿ.