Friday, April 29, 2022

ಭಗವಂತ ಒಂದು ಅನುಭವ

 

"ಪಾಪ ಪ್ರಜ್ಞೆ ಎಂಬುದರ ಅರಿವಿದ್ದರೆ ಮಾತ್ರ ದೇವರು ಎಂದರೆ ಏನು ಎಂಬುದು ಅರ್ಥವಾಗಬಹುದು. ಇಲ್ಲವಾದರೆ ದೇವರು ಎಂಬುದು ಮೌಢ್ಯವಾಗುತ್ತದೆ. "

            ನಮ್ಮ ಮನೆಯ ಹುಡುಗ ಒಂದು ಸಲ ಕೇಳಿದ. ಕಣ್ಣಿಗೆ ಕಾಣುವಂತಹ ವಸ್ತುಗಳನ್ನು ಮಾತ್ರವೇ ನಂಬಬಹುದು. ಯಾಕೆಂದರೆ ಅದು ಕಣ್ಣಿಗೆ ಕಾಣುತ್ತದೆ. ಕಣ್ಣಿಗೆ ಕಾಣದ ಮಾತ್ರವಲ್ಲ ಎಂದೂ ಸಹ  ಕಾಣುವ ಭರವಸೆ ಇಲ್ಲದ ದೇವರನ್ನು ನಂಬುವುದು ಯಾಕೆ? ಆತನಿಗೆ ನಾನು  ಒಂದು ಸಣ್ಣ ಉತ್ತರ ಮೊದಲು ಕೊಟ್ಟೆ, ಗಾಳಿ ನಮ್ಮ ಸುತ್ತಲು ಚಲಿಸುತ್ತದೆ, ಅದರಲ್ಲೂ ಉಸಿರಾಡುವ ಗಾಳಿ ಚಲಿಸುವ ಅನುಭವವೂ ಆಗುವುದಿಲ್ಲ.  ಆದರೂ ನಾವು ಗಾಳಿ ಇದೆ ಎಂದು ನಂಬುತ್ತೇವೆ.  ಕತ್ತಲ ಕೋಣೆಯಲ್ಲೂ ನಾವು ಉಸಿರಾಡಬಲ್ಲೆವು  ಯಾಕೆ,  ಅದರ ಅನುಭವವನ್ನು ನಾವು ಗುರುತಿಸಬಲ್ಲೆವು. ದೇವರು.......  ಅದನ್ನು ಅನುಭವಿಸಿ ಅರಿಯಬೇಕು.  

                ದೇವರು ಎಂಬುದನ್ನು ನಾವು ಅರ್ಥವಿಸಿಕೊಳ್ಳುವ ರೀತಿಯಿಂದಾಗಿ ಆ ದೇವರ ಅನುಭವವೂ ಆಗುವುದಿಲ್ಲ. ಕಣ್ಣಿಗೂ ಕಾಣಿಸುವುದಿಲ್ಲ ದೇವರು ಇದನ್ನು ಅರ್ಥವಿಸುದರಲ್ಲಿ ನಾವು ಸದಾ ವಿಫಲರಾಗುತ್ತಿದ್ದೇವೆ.  ದೇವರು ಭಗವಂತ ಕೇವಲ ಅಕ್ಷರಗಳ ಪದಪುಂಜ ಮಾತ್ರ. ಈ ಪದ ಸೃಷ್ಟಿಯನ್ನೂ ನಾವೇ ಮಾಡಿರುತ್ತೇವೆ. ಯಾವುದನ್ನು ಹೀಗೆ ಕರೆಯುತ್ತೇವೆ ಎಂಬುದನ್ನು ಅರಿಯದೆ  ತಮ್ಮ ಭಾವನೆಗಳಿಗೆ ಸೀಮಿತವಾಗಿ ಅರ್ಥವನ್ನು ಕಂಡುಕೊಂಡು ಇದು ದೇವರು ಅಂತ ಭಾವಿಸುತ್ತೇವೆ. ಹಲವು ಸಲ ಇದೊಂದು ಧರ್ಮಕ್ಕೆ ಮಾತ್ರಾ ಸೀಮಿತವಾಗುವುದು ನಮ್ಮ ಸಂಕುಚಿತ ಮನಸ್ಸಿನ  ಭಾವರೂಪವೇ ಆಗುವುದು ವಿಪರ್ಯಾಸ. 

                ದೇವರು ಅದೊಂದು ಅನುಭವ. ರೂಪವಿಲ್ಲದ ಗುಣವಿಲ್ಲದ ಅವ್ಯಕ್ತವಲ್ಲದ ವ್ಯಕ್ತವಾಗುವ ಅನುಭವ. ಪ್ರಾಣವಾಯುವೇ ನಮ್ಮ ಅಸ್ತಿತ್ವಕ್ಕೆ ಮೂಲ ಸಾಕ್ಷಿಯಾಗುವಾಗ ಅದರ ಮೂಲಕವೇ ದೇವರನ್ನು ಕಾಣುವುದಕ್ಕೆ ಯತ್ನಿಸುವುದು ಸಾಮಾನ್ಯ. ದೇವರಿಗೆ ಕಾಲು ಕೈ ಕಣ್ಣು ಮುಖ ಚಿತ್ರಿಸಿ ನಮ್ಮ ಭಾವದಂತೆ ಇದು ದೇವರು ಅಂತ ನಂಬಿಕೊಂಡು ಒಂದು ರೂಪಕ್ಕೆ ಸೀಮಿತಗೊಳಿಸುವುದು ಚಿಂತನೆಯ ಮಿತಿಯನ್ನು ಮಾತ್ರವೇ  ತೋರಿಸುತ್ತದೆ. ಅದರೆ ದೇವರು ಅಷ್ಟೇ ಅಲ್ಲ ಎಂಬ ಅರಿವೂ ನಮಗಿದೆ. ಭಾವಕ್ಕೆ ರೂಪಕ್ಕೆ ಕೈಗೆ ನಿಲುಕದ ಈ ದೇವರನ್ನು ಕಾಣುವುದು ಹೇಗೆ?  ನಮಗೆ ನಾವು ಸಮಾಧಾನ ಮಾಡಿಕೊಳ್ಳುವ ಬಗೆ ಎಂದರೆ ಕಲಿಯುಗದಲ್ಲಿ ದೇವರು ಪ್ರತ್ಯಕ್ಷನಾಗಲಾರ. ವಿಚಿತ್ರವೆಂದರೆ ಒಂದು ವೇಳೆ ಪ್ರತ್ಯಕ್ಷವಾದರೂ ನಾವು ದೇವರು ಎಂದು ನಂಬುವುದಕ್ಕೂ  ಸಾಧ್ಯವಾಗುವುದಿಲ್ಲ.  ಒಂದರ್ಥದಲ್ಲಿ ದೇವರು ಕಣ್ಣಿಗೆ ಕಂಡರೆ ಅದು ದೇವರಾಗಿರುವುದಿಲ್ಲ.  ಹಾಗಾಗಿ ದೇವರು ಎಂದರೆ ಅದು ನಮ್ಮ ಕಲ್ಪನೆಗೆ ನಮ್ಮ ತಿಳುವಳಿಕೆಗೆ ಸೀಮಿತ. ಇದಕ್ಕೆ ಉತ್ತರವಾಗುವುದೇ ಧ್ಯಾನ. ಇಲ್ಲಿ ವ್ಯಕ್ತವಾಗುವ ಅವ್ಯಕ್ತ ಅನುಭವ ಬಹಳ ವಿಚಿತ್ರ.  ಈಶ್ವರನ ಭಾವ ಚಿತ್ರ ನೋಡಿದರೆ ಅಲ್ಲೂ ಸ್ವತಃ ಭಗವಂತನಾದ ಶಿವನೂ ಧ್ಯಾನ ಮುದ್ರೆಯಲ್ಲಿ ಕುಳಿತಿರುವುದನ್ನು ಕಾಣಬಹುದು. ಭಗವಂತನೂ ಯಾವುದರ ಬಗ್ಗೆ ಧ್ಯಾನ ಮಾಡಬಹುದು? ಅಚ್ಚರಿಯಾಗುತ್ತದೆ.  ಧ್ಯಾನ ಸ್ವರೂಪನೇ ಈಶ್ವರ. ಧ್ಯಾನ ಒಂದು ಅದ್ಭುತ ಅನುಭವ.

                ಧ್ಯಾನ ಎಂದರೆ ಏಕಾಂತವಾಸ. ಏಲ್ಲೇ ಇದ್ದರೂ ಇದನ್ನು ಮನಸ್ಸಿನಿಂದ ಸಾಧಿಸುವುದಕ್ಕೆ ಸಾಧ್ಯವಿದೆ.     ಏಕಾಂತದಲ್ಲಿ ಇರುವುದಕ್ಕು ಏಕಾಂಗಿಯಾಗುವುದಕ್ಕೂ ವೆತ್ಯಾಸವಿದೆ. ಏಕಾಂತದಲ್ಲಿ ನಮ್ಮ ಅಂತಃಕರಣ ವಿಶಾಲವಾಗಿ ಅದು ಕಣ್ಣಿಗೆ ಕಾಣುತ್ತದೆ. ಏಕಾಂಗಿತನದಲ್ಲಿ ಕಣ್ಣು ಕುರುಡಾಗಿ ಯಾವುದೂ ಸಮರ್ಪಕವಾಗಿ ಗೋಚರವಾಗುವುದಿಲ್ಲ.   ಮುಂಜಾನೆಯ ಏಕಾಂತದಲ್ಲಿ ನಾನು ಏಕಾಂಗಿಯಲ್ಲ ಎಂಬ ಭಾವನ್ನು ತೋರಿಸುವುದೇ ಭಗವಂತನ ಅನುಭವ. ಅದೊಂದು ದಿವ್ಯ ಅನುಭವ.  ಇಲ್ಲಿ ಶುದ್ಧಾಂತಃ ಕರಣವೇ ನಮ್ಮನ್ನು ಪರಿಶುದ್ದಿಯತ್ತ ಒಯ್ಯುತ್ತದೆ.  ಪರಿಶುದ್ದನಾಗುವುದು ಎಂದರೆ ದೇಹದಿಂದ ಬೇರಾಗಿ ಭಗವಂತನ ಸಾಕ್ಷಾತ್ಕಾರವನ್ನು ಹೊಂದುವುದೇ ಆಗಿರುತ್ತದೆ.  ಬದುಕಿನ ದುರಿತಗಳು ಎಂದರೆ ನಮ್ಮ ಕಲ್ಮಶಗಳು. ಅದೇ ನಮ್ಮ ಪಾಪಗಳು.  ಅದನ್ನು ಕಳೆದು ಕೊಳ್ಳಬೇಕು.  ನಿತ್ಯ ಮುಂಜಾನೆ ಎದ್ದು ಸ್ನಾನವನ್ನೇನೋ ಮಾಡಿ ದೇಹ ಶುಚಿಯಾಗಿಸಬಹುದು, ಆದರೆ ಮನಸ್ಸು? ಸ್ನಾನ ಮಾಡಿ ಭಗವಂತನ ಸ್ಮರಣೆ ಮಾಡಿದಾಗಲೇ ಮನಸ್ಸು ಪರಿಶುದ್ದವಾಗುತ್ತದೆ. ಇದಕ್ಕೆ ಸಂಧ್ಯಾವಂದನೆ ಅತ್ಯಂತ ಪೂರಕ. ಇಲ್ಲಿ ಮಮೋಪಾತ್ತ ದುರಿತ ಕ್ಷಯದ್ವಾರ ಎಂಬ ಸಂಕಲ್ಪ ಮಾತ್ರವೇ ಇದ್ದು ಬೇರೆ ಯಾವ ಸ್ವಾರ್ಥವು ಇರುವುದಿಲ್ಲ. ದೇವರ ಪ್ರತಿಮೆಯೋ ರೂಪವೋ ಯಾವುದು ಇಲ್ಲ. ಮೂರ್ತಿ ಪ್ರತಿಮೆ ಯಾವುದು ಇಲ್ಲದ ಮನಸ್ಸಿನ ಭಾವನೆಗಳೇ ಇಲ್ಲಿ ಸ್ಥಾಯಿಯಾಗುತ್ತವೆ. ಹಾಗಾಗಿ ಮನಸ್ಸಿನ ಅನುಭವವೇ ಮುಖ್ಯವಾಗುತ್ತದೆ. ಹೀಗೆ  ಮನಸ್ಸೇ ಒಂದು ಭಾವನಾ ಲೋಕವನ್ನು ಸಂಕಲ್ಪಿಸುತ್ತದೆ.  ಇದೇ ಭಾವದಲ್ಲಿ ಸಂಧ್ಯಾವಂದನೆ ಎಂದರೆ ನನಗೆ ನನ್ನನ್ನೇ ನಾನು ಕಳೆದುಕೊಳ್ಳುವ ಯಜ್ಞಸ್ವರೂಪವಾಗಿ ಕಾಣುತ್ತದೆ. 

                ಸಂಧ್ಯಾವಂದನೆ ಒಂದು ಭಗವಂತನ ಸಾಕ್ಷಾತ್ಕಾರಕ್ಕಿರುವ ಒಂದು ಉತ್ತಮ ರಹದಾರಿ. ಇಲ್ಲಿ ಮಾಡುವ ಒಂದೊಂದು ಆಚಮನದ ತೊಟ್ಟು ನೀರು ನಮ್ಮಲ್ಲಿನ ಕಲ್ಮಷ ಪ್ರಜ್ಞೆಯನ್ನು ಜಾಗ್ರತ ಗೊಳಿಸಬೇಕು.  ಇಲ್ಲಿ ಮನಸ್ಸನ್ನು ಶ್ರಧ್ಧೆಯಿಂದ ತೊಡಗಿಸಿದರೆ ಕಲ್ಪನೆಯಲ್ಲಿ ಇಲ್ಲದ ದೇವರನ್ನು ಕಾಣಬಹುದು. ಮೇಲಿನ ಎಲ್ಲ ಅನುಭವಗಳನ್ನು ನಮ್ಮದಾಗಿಸಬಹುದು. ಸಂಧ್ಯಾವಂದನೆಯಲ್ಲಿ ದೇವರಿಗೆ ರೂಪವಿಲ್ಲ.  ಭಾವವಿಲ್ಲ.  ಎಲ್ಲವೂ ನಾವೇ ಆಗಿರುತ್ತೇವೆ.  ಓಂ ಕಾರಕ್ಕೂ ಒಂದು ಸ್ವರೂಪದ ಅನುಭವವಾಗುತ್ತದೆ. ನನಗೆ ಸಂಧ್ಯಾವಂದನೆ ಅಪ್ಯಾಯಮಾನವಾಗುವುದು ಅದರಲ್ಲಿರುವ ಭಾವ ಸೌಂದರ್ಯಕ್ಕೆ. ಯಾವುದೇ ಪರಿಕರವಿಲ್ಲದೇ ಕೇವಲ ಅಂಜಲಿಯಲ್ಲಿ ಹಿಡಿವ ನೀರು ಇದ್ದರೆ ಯಜ್ಞ ಯಾಗಾದಿಗಳಿಂದಲೂ ಪ್ರಾಪ್ತಿಯಾಗದ ಮೋಕ್ಷ ಪ್ರಾಪ್ತಿಯಾಗುತ್ತದೆ. ಸಂಧ್ಯಾವಂದನೆಯ ಅನುಷ್ಠಾನವಿದ್ದರೆ ಯಾವ ಗ್ರಹದೋಷಕ್ಕೂ ಆತಂಕವನ್ನು ಅನುಭವಿಸಬೇಕಿಲ್ಲ. ನಿತ್ಯ ಮುಕ್ತವಾದ ಮನಸ್ಸನ್ನು ಹೊಂದಬಹುದು. ದೇಹ ಶುದ್ದಿಗೊಳಿಸಿ ಕೈ ಹಿಡಿಯ ಅರ್ಘ್ಯವನ್ನು ಸೂರ್ಯನಿಗೆ ಅರ್ಪಿಸಿ ಜಪ ಮಾಡುವುದಕ್ಕೆ  ತೊಡಗಿದರೆ, ಉಸಿರಾಟದಲ್ಲಿ ಗಮನ ಹರಿಯುತ್ತದೆ. ಉಸಿರಾಟ ಗಾಢವಾದಂತೆ ದೇಹದ ಅಸ್ತಿತ್ವ ಕ್ಷೀಣವಾದ ಅನುಭವವಾಗುತ್ತದೆ. ಪಂಚೇದ್ರಿಯಗಳು ಮೀರಿ ನಿಲ್ಲುವ ಹಂಬಲವಾಗುತ್ತದೆ. ಎಲ್ಲ ಇಂದ್ರಿಯಗಳನ್ನು ಮೀರಿ ಅಂತರಂಗಕ್ಕೆ ಇಳಿದಾಗ ಆಗುವ ಅನುಭವವೇ ಭಗವಂತನ ಸ್ವರೂಪ. ಭಗವಂತನೇ ಪ್ರತ್ಯಕ್ಷವಾದಂತೆ. ಸಾಮಾನ್ಯವಾಗಿ ಭಗವಂತ ಕಂಡರೆ ಕೇಳಿಕೊಳ್ಳುವ ಹಲವು ಬೇಡಿಕೆಗಳು ಇರುತ್ತವೆ. ಆದರೆ ಇಲ್ಲಿ ಯಾವ ಬೇಡಿಕೆಯೂ ಇಲ್ಲ. ಯಾವ ವರವೂ ಬೇಕಾಗಿಲ್ಲ. ನಮಗೇ ಎನು ಬೇಕೋ ಅದು ಸಿಕ್ಕ ಅನುಭವದಲ್ಲಿ ಯಾವ ಸ್ವಾರ್ಥವೂ ಇರುವುದಿಲ್ಲ.   ನಮ್ಮ ಮನಸ್ಸಿನ ಶ್ರಧ್ಧಾ ಭಕ್ತಿ ಎಷ್ಟಿದೆಯೋ ಅಷ್ಟಕ್ಕೇ ಸೀಮಿತವಾಗಿ ಭಗವಂತ ದರ್ಶನವಾಗುತ್ತದೆ. ನಮ್ಮ ಅಂತರಂಗದ ಕಣ್ಣು ತೆರೆಯುವ ಸಾಮಾರ್ಥ್ಯ ಎಷ್ಟಿದೆಯೋ ಅಷ್ಟು, ಯಾಕೆಂದರೆ ಭಗವಂತ ಆದಿ ಅಂತ್ಯವಿಲ್ಲದ ಒಂದು ಅನುಭವ. ಎಲ್ಲವನ್ನೂ ಕಾಣುವುದಕ್ಕೆ ಸಾಧ್ಯವಿಲ್ಲ. ನಮಗೆಷ್ಟು ಸಾಧ್ಯವೋ ಅಷ್ಟು.  ಹಾಗಾಗಿ ನಮ್ಮ ದೃಷ್ಟಿಯನ್ನು ವಿಶಾಲವಾಗಿಸಬೇಕು. ವಿಶಾಲವಾಗಿಸುವುದೆಂದರೆ ನಮ್ಮ ಅಂತಃ ಕರಣವನ್ನು ಶುದ್ದಿಯಾಗಿಸುವುದು. ಕಲಿಯುಗದಲ್ಲೂ ದೇವರ ದರ್ಶನವಾಗುವ ಬಗೆ ಇದು. 

                ಭಕ್ತಿ ಪರಮಾತ್ಮ ಒಲಿಯುವ ಏಕ ಮಾತ್ರ ಮಾರ್ಗ ಇದು. ಭಕ್ತಿ ಎಂದಾಕ್ಷಣ ದೇವರ ಎದುರು ನಿಂತುಕೊಂಡು ಭಾವುಕರಾಗಿ ಕಣ್ಣೀರು ಸುರಿಸುವುದನ್ನು ಕಾಣಬಹುದು. ಈ ಭಾವೋತ್ಕರ್ಷ ಯಾವ ರೂಪದಲ್ಲೇ ಇರಲಿ ಅದು ಪರಮಾತ್ಮನನ್ನು ಒಲಿಸುವ ಭಕ್ತಿಯಾಗುವುದಿಲ್ಲ. ಪರಿಶುದ್ದ ಭಕ್ತಿಯಲ್ಲಿ ಯಾವ ಭಾವನೆಗಳಿಗೂ ಅವಕಾಶವಿರುವುದಿಲ್ಲ. ನಾವು ಯಾವ ಭಾವನೆಗೆ ಒಳಗಾಗುತ್ತೇವೊ ಆಗ ಭಕ್ತಿ ಪ್ರಭಾವ ಕಡಿಮೆಯಾಗಿ ಆ ಭಾವನೆಯ ನಿಯಂತ್ರಣವೇ ಮನಸ್ಸಿನ ಮೇಲಾಗುತ್ತದೆ. ಭಕ್ತಿಯೂ ಹಾಗೆ ಅದರಲ್ಲಿ ಸ್ವಾರ್ಥ ಕಿಂಚಿತ್ ಆದರೂ ಇರಬಾರದು. ದೇವರ ಮುಂದೆ ನಿಂತಾಗ ನಾವು ಏನೇನೋ ಬೇಡಿಕೆಯನ್ನಿಟ್ಟು ಪ್ರಾರ್ಥನೆ ಮಾಡುತ್ತೇವೆ. ಸ್ವಾರ್ಥಮಯ ಭಕ್ತಿಯಾಗುತ್ತದೆ. ಅದು ಪರಿಪೂರ್ಣ ಎನಿಸಲ್ಪಡುವುದಿಲ್ಲ.  ಪ್ರಾಮಾಣಿಕ ಭಕ್ತಿಯಲ್ಲಿ ಯಾವುದೇ ಬೇಡಿಕೆ ಇರುವುದಿಲ್ಲ. ನಮ್ಮ ಮನಸ್ಸು ನಮ್ಮ ಚಿಂತನೆ ನಮ್ಮ ಬಯಕೆಗಳು ನಮ್ಮ ಅನಿವಾರ್ಯತೆಗಳು ಭಗವಂತನಿಗೆ ತಿಳಿದಿರುತ್ತವೆ. ಮತ್ತೆ ಅವನಲ್ಲಿ ಬೇಡಿಕೊಳ್ಳುವುದೇನಿದೆ.    ಮಗುವಿನ ಹಸಿವನ್ನು ಅರಿತು ಅಮ್ಮ ಹಾಲು ಕೊಟ್ಟಂತೆ ಭಗವಂತನೂ ಮಾಡುತ್ತಾನೆ ಎಂಬ ವಿಶ್ವಾಸ ಇರಬೇಕು.  ನಿಮಗೆ ಭಗವಂತನ ಮೇಲೆ ವಿಶ್ವಾಸ ಇಲ್ಲದೇ ಇದ್ದರೆ ಈ ಬಯಕೆಗಳನ್ನು ಈಡೇರಿಸುವಂತೆ ಪ್ರಾರ್ಥಿಸಬೇಕು. ಅಥವಾ ನಮಗೆ ಭಗವಂತನ ಮೇಲೆ ಅವಿಶ್ವಾಸ ಇದ್ದರೆ ಮಾತ್ರ ನಮ್ಮ ಬೇಡಿಕೆ ಇರುತ್ತದೆ. 

                ಭಗವಂತ ವಿಶ್ವರೂಪ ತೋರಿಸಿದ್ದು ಅರ್ಜುನನಿಗೆ ಮಾತ್ರ. ಭಗವಂತನಿಗೆ ತಿಳಿದಿತ್ತು. ಈ ಅರ್ಜುನನಿಗೆ ಈಗ ಅದರ ಆವಶ್ಯಕತೆ ಇದೆ. ಆತನ ಮನಸ್ಸಿಗೆ ಆವರಿಸಿದ ಮೋಹ ಏನಿದೆ ಅದು ಸುಳ್ಳಿನ ಪರದೆ ಎಂದು ತೋರಿಸಬೇಕಿತ್ತು. ವಿಶ್ವರೂಪವನ್ನು  ಕಾಣುವ ಸಾಮಾರ್ಥ್ಯವನ್ನು ಆತನಿಗೆ ಭವಂತನೇ ಕರುಣಿಸಿದ. ಆದರೆ ಅರ್ಜುನ ಕಾಣುವಾಗ ಅಲ್ಲಿ ಸಂಜಯನೂ ಕಾಣುತ್ತಿದ್ದ ಎಂಬುದು ಕೌತುಕ. ಸಂಜಯನಿಗೂ ಕಾಣುವಂತಹ ದೃಷ್ಟಿ ಒದಗಿಬಂದದ್ದು ಭಗವಂತನ ಕರುಣೆ. ಇದೇ ರೀತಿ ಭಗವದನುಗ್ರಹ ನಮಗೂ ಸಿಗಬೇಕು.  ಹಸಿವನ್ನು ಕೊಡುವವನೂ ಪರಮಾತ್ಮ ಆಹಾರವನ್ನು ಕೊಡುವವನು ಪರಮಾತ್ಮ. 

            ಭಗವಂತನನ್ನು ಪ್ರಾರ್ಥಿಸುವ ಆರಾಧಿಸುವ ಹಲವು ವಿಧಾನಗಳಿರಬಹುದು. ಎಲ್ಲದರಲ್ಲೂ ಒಂದು ನಿರ್ದಿಷ್ಟ ಭಾವ ಇರುತ್ತದೆ. ಆದರೆ  ಸಂಧ್ಯಾವಂದನೆ ಎಂದರೆ ಭಗವಂತನನ್ನು ಕಾಣುವ ಅಫೂರ್ವ ಮಾಧ್ಯಮ. ನಮ್ಮ ಕಲ್ಪನೆಯ ವೈಶಾಲ್ಯತೆ ಎಷ್ಟಿದೆಯೋ ಅಷ್ಟಕ್ಕೆ ಇದು ಸಾಧ್ಯವಾಗುತ್ತದೆ.  ಸಂಧ್ಯಾವಂದನೆ ಕೇವಲ ಖಾಸಗೀತನದ ಪ್ರಾರ್ಥನೆ.  ಯಾವ ಪರಿಕರವೂ ಇಲ್ಲದ ಕೇವಲ ಪ್ರಕೃತಿಯನ್ನೇ ಜತೆಯಾಗಿಸಿಕೊಂಡ ಪ್ರಾರ್ಥನೆ. ಇಲ್ಲಿ ಸ್ವಾರ್ಥವಿಲ್ಲ. ಭಗವಂತ ಹೇಳುವಂತೆ ಕೇವಲ ಕರ್ಮಾನುಷ್ಠಾನ. ಅತ್ಯಂತ ಸರಳ ಮತ್ತು ಮಾನಸಿಕ ಅನುಸಂಧಾನ ಇದು.  ಇಲ್ಲಿ ಮಾಡುವ ಗಾಯತ್ರೀ ಮಂತ್ರ ಜಪವೂ ಹಾಗೆ. ದೇವರ ರೂಪವನ್ನಾಗಲಿ ಭಾವವನ್ನಾಗಲೀ ಏಲ್ಲೂ ಹೇಳದೇ ಕೇವಲ ನಮ್ಮ ಮನಸ್ಸಿನ ಭಾವನೆಗೆ ಒಂದು ರೂಪವನ್ನು ಒಂದು ಕಲ್ಪನೆಯನ್ನು ಗಾಯತ್ರೀ ಮಂತ್ರ ಕೊಡುತ್ತದೆ. ಜಗತ್ತಿನ ಅತ್ಯಂತ ಶ್ರೇಷ್ಠ ಮರಮ ಉತ್ಕೃಷ್ಟ ಯಾವುದೋ ಅದು ನಮ್ಮ ಕಲ್ಪನೆಗೆ ಪರೀಕ್ಷೆಯನ್ನು ಒದಗಿಸುತ್ತದೆ. ಹಾಗಾಗಿಯೇ ಸಂಧ್ಯಾವಂದನೆಯ ಸಮಾಪ್ತಿಯಲ್ಲಿ ಮನಸ್ಸು ತೃಪ್ತವಾಗುತ್ತದೆ. ಬೇಡಿಕೆ ಇರುವುದಿಲ್ಲ. ಆ ಬೇಡಿಕೆ ಈಡೇರುತ್ತದೋ ಇಲ್ಲವೋ ಎಂಬ ಆತಂಕ ಇರುವುದಿಲ್ಲ. ಕೇವಲ ಧ್ಯಾನ. ಕೊನೆಯಲ್ಲಿ ಅಲ್ಲಿಂದ ಇಹಲೋಕದ ಅರಿವಿಗೆ ಮನಸ್ಸು ಹೊಂದಿಕೊಳ್ಳಲು ಯತ್ನಿಸುತ್ತದೆ. ಈ ಭಾವದಲ್ಲೇ ಮುಂಜಾನೆ ನನಗೆ ನಿಜಕ್ಕೂ ದೇವರ ದರ್ಶನವಾಗುತ್ತದೆ. ಆ ದಿವ್ಯ ಪ್ರಭೆಯಿಂದ ಮನಸ್ಸು ಪ್ರಫುಲ್ಲವಾದ ಅನುಭವವಾಗುತ್ತದೆ. ನಿಜಕ್ಕೂ ದೇವರು ಒಂದು ಅನುಭವಮಾತ್ರ. ಈ ಹಂತದಲ್ಲಿ ಪವಿತ್ರವಾದ ಸಂಧ್ಯಾವಂದನೆಯನ್ನು ಉಪದೇಶಿಸಿದ ಗುರುವಿಗೆ ಮನಸಾರೆ ಅಭಿವಾದನವನ್ನು ಸಲ್ಲಿಸುವ  ಪ್ರೇರಣೆಯಾಗುತ್ತದೆ.  ನನಗೆ ಬ್ರಹ್ಮೋಪದೇಶ ಬೋಧಿಸಿದ ನಮ್ಮಜ್ಜನ ನೆನಪಾಗುತ್ತದೆ. ಅದೆಂತಹ ದಿವ್ಯವಾದ ಉಪದೇಶ ನನಗಾಗಿದೆ. ನಿಜಕ್ಕೂ ನಾನು ಧನ್ಯ ಎಂಬ ಭಾವದಲ್ಲಿ ಗುರುವಿನ ಪಾದಕ್ಕೆ ವಂದಿಸುತ್ತೇನೆ.  ಈ ಆಧ್ಯಾತ್ಮ ತತ್ವದ ಮೊದಲ ಮೆಟ್ಟಿಲಲ್ಲಿ ಕುಳಿತು ಬದುಕಿನತ್ತ ಅವಲೋಕನ ಎಂದರೆ ಸಾರ್ಥಕ ಭಾವ ತುಂಬಿಬಿಡುತ್ತದೆ. 

             ಕೊನೆಯಲ್ಲಿ ಒಂದು ಜಗತ್ತಿನಲ್ಲಿ ಅತ್ಯಂತ ಪರಿಶುದ್ದವಾಗಿರುವುದು ಎಂದರೆ ಅದು ಅಧ್ಯಾತ್ಮ. ಆಧ್ಯಾತ್ಮದಷ್ಟು ಪರಿಶುದ್ದ ಬೇರೆ ಯಾವುದೂ ಇಲ್ಲ. 

Friday, April 15, 2022

ವಿಶ್ವಾಸ ಧರ್ಮ

        "ಧರ್ಮದ ಚಿಂತನೆ ಎಂದಿಗೂ ಹಾನಿ ತರುವುದಿಲ್ಲ. ಅದರೆ ಧರ್ಮದ ಪ್ರವೃತ್ತಿ ಹಲವು ಸಲ ಆತಂಕವನ್ನೇ ಸೃಷ್ಟಿಸುತ್ತದೆ." ಲೋಕ ಮುಖದಲ್ಲಿ ನಾವು ಭಾರತವನ್ನು ಏನೆಲ್ಲ ಚಿತ್ರಿಸುತ್ತೇವೆ. ವಿಶ್ವ ಬಂಧುತ್ವ ಅದು ಇದೂ ......ಆದರೆ ಇಲ್ಲಿ ಧರ್ಮದ ಪ್ರವೃತ್ತಿ ಸೃಷ್ಟಿಸುವ ಆತಂಕ ಬೇರೆಲ್ಲೂ ಸೃಷ್ಟಿಯಾಗುವುದಿಲ್ಲ ಎಂದನಿಸುತ್ತದೆ. ಇದು ಹಸಿವಿನ ಚಿಂತೆಯನ್ನೂ ಮೀರಿಸಿಬಿಡುವುದು ಹಸಿವು ಎಂಬುದು ಒಂದು ಸಮಸ್ಯೆಯೇ ಅಲ್ಲ ಎಂಬ ಭಾವನೆ ತರುತ್ತದೆ. ಬಹುಶಃ ಹಸಿವಲ್ಲದೇ ಬೇರೇ ಎನೂ ಇಲ್ಲದಂತಹ ಬರೀ ಹಸಿವೆ ಸಮಸ್ಯೆಯಾಗಿರುವ ಹಿಂದುಳಿದ ರಾಷ್ಟ್ರಗಳಿವೆ, ಬಹುಶಃ ಅಲ್ಲಿ ಯಾವ ಧರ್ಮವೂ ಸಮಸ್ಯೆಯಾಗಿಲ್ಲದೇ ಇರಬಹುದು.  ಮಧ್ಯಾಹ್ನದ ಹೊತ್ತು ಅತಿಥಿಯಾಗಿ ಒಂದು ಮನೆಗೆ ಹೋದರೆ ಮೊದಲು ನಮ್ಮೊಳಗಿನ ಹಸಿವು ಮಾತ್ರವೇ ಪ್ರಧಾನವಾಗಿರುತ್ತದೆ. ಒಂದು ಬಾರಿ ಆ ಹಸಿವು ಶಮನವಾಯಿತು ಎಂದ ಮೇಲೆ....ಮನೆಯ ಗೋಡೆ  ಮಾಡು ಪಕ್ಕಾಸು ಎಲ್ಲವೂ ಕಣ್ಣಿಗೆ ಕಾಣುತ್ತವೆ. 

        ಬೆಂಗಳೂರಿನ ಯಾವುದೋ ವಾಹಿನಿಯ ಸ್ಟುಡಿಯೋದಲ್ಲಿ ಕುಳಿತು ಡಿಬೇಟ್ ನಲ್ಲಿ ಚರ್ಚಿಸುತ್ತ ಮಹನೀಯರೊಬ್ಬರು ಹೇಳುತ್ತಾರೆ , ಯಾಕೆ ಕರಾವಳಿ ಕೋಮು ಸೂಕ್ಷ್ಮವಾಗುತ್ತದೆ? ಅಷ್ಟೇ ಹೇಳಿದರೆ ಅವರ ಆತಂಕ ಸರಿ ಎಂದು ಅನ್ನಿಸಿದರೂ, ಆ ಕೋಮು ಸಮಸ್ಯೆಗೆ ಅವರ ಚಿಂತನೆ ಕೇಳುವಾಗ ಉರಿದು ಹೋಗುತ್ತದೆ. ಯಾಕೆಂದರೆ ಕರಾವಳಿ ಜನರ ಜೀವಾಳ ಏನು ಎಂದು ಇಲ್ಲಿ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು, ವಿಧಾನ ಸೌಧದ ಪಡಸಾಲೆಯಲ್ಲಿ ಕುಳಿತು ಬಾಯಿಗೆ ತೋಚಿದಂತೆ ಹೇಳುವಂತಹುದಲ್ಲ. ಅಲ್ಲಿನ ಸಮಸ್ಯೆಯ ಮೂಲ ಅರಿಯಬೇಕಾದರೆ ಮೊದಲು, ಅಲ್ಲಿ ಜನ ಸಾಮಾನ್ಯನಂತೆ ಎರಡುವರ್ಷ ಜೀವನ ಮಾಡಬೇಕು. ಆಗಲೋ ಈಗಲೋ ಮಂಗಳೂರಿನ ದೇವಸ್ಥಾನಕ್ಕೆ ಅಥವಾ ಯಾವುದೋ ಸಭೆ ಸಮಾರಂಭಕ್ಕೆ ಹೋಗಿ ತಮಗೆ ಕಂಡಂತೆ ವಿಶ್ಲೇಷಿಸಿದರೆ ಅದರಲ್ಲಿ ಪರಿಪೂರ್ಣತೆ ಇರಲಾರದು. ಅಲ್ಲಿ ಕೂಲಿ ಕೆಲಸ ಮಾಡಿ, ಇಲ್ಲ ಸಣ್ಣ ಪುಟ್ಟ ವ್ಯಾಪಾರ ಕೃಷಿ ಮಾಡಿ ಬದುಕು ಸವೆಸಿದರೆ ಅಲ್ಲಿ ಕದಡಿದ ಕೋಮು ಸಾಮರಸ್ಯದ ಅರಿವಾದಿತು. ಯಾವುದೇ ಕಲ್ಮಶವಾಗಲೀ ಯಾವುದೇ ಬಾಧೆಯಾಗಲಿ ಮೊದಲು ಅರಿವಿಗೆ ಬರುವುದು ಪರಿಶುದ್ದ ಮನಸ್ಸಿನಿಂದ ಬದುಕುವ ಜನಸಾಮಾನ್ಯನಿಗೆ.  ಹಾಗಾಗಿ ಜನ ಸಾಮಾನ್ಯನಂತೆ ಬದುಕಬೇಕು. ಆಗ ಸಮಸ್ಯೆಯ ಮೂಲ ಅರಿವಾಗುತ್ತದೆ. ಜನ ಸಾಮಾನ್ಯನಿಗೆ ಜೀವನ ಬಿಟ್ಟು ಬೇರೆ ಏನೂ ಬೇಡ. ಹಾಗಾಗಿ ಸ್ನೇಹ ಸೌಹಾರ್ದ ಆತನಲ್ಲಿರುತ್ತದೆ. ಆದರೆ ಉತ್ತಮ ದಾರಿಯನ್ನು ತೋರಬೇಕಾದವರು ತಮಗೆ ತೋಚಿದಂತೆ ವಿಶ್ಲೇಷಣೆ ಮಾಡಿ ಚರ್ಚೆ ಮಾಡಿ ಈ ವಿಷ ಬೀಜವನ್ನು ಬಿತ್ತುತ್ತಾರೆ. 

            ಒಂದು ಸಲ ನಾನು ಉಪ್ಪಳದಿಂದ ನಮ್ಮೂರು ಬಾಯಾರು ಕಡೆಗೆ ಬಸ್ ಹತ್ತಿದ್ದೆ. ಬಸ್ ಉಪ್ಪಳ ಬಿಟ್ಟು ಬಾಯಾರು ರಸ್ತೆ ತಿರುಗುವಲ್ಲಿ ಈ ಬಸ್ಸಿನ ಹಿಂದೆ ಬರುವ ಬಸ್ಸಿನವ ವೇಗವಾಗಿ ಬಂದು ಈ ಬಸ್ಸು ಹೋಗದಂತೆ ತನ್ನ ಬಸ್ಸನ್ನು ಅಡ್ಡ ಇರಿಸಿದ. ವಾಸ್ತವದಲ್ಲಿ ಆ ಎರಡು ಬಸ್ಸಿನ ಮಾಲಿಕರೂ ಉಪ್ಪಳದ ಒಂದೇ ಧರ್ಮದವರು. ಚಾಲಕರು ಮಾತ್ರ ಬೇರೆ ಧರ್ಮದವರು. ಇಲ್ಲಿ ಧರ್ಮ ಮುಖ್ಯವಲ್ಲ ಎಂದು ಪ್ರತ್ಯೇಕವಾಗಿ ಉಲ್ಲೇಖಿಸುವುದಿಲ್ಲ. ಧರ್ಮ ಯಾವುದಾದರೇನು ಸಮಸ್ಯೆ ಮಾತ್ರ ಒಂದೇ. ಸರಿ ಎರಡೂ  ಬಸ್ಸಿನ ಚಾಲಕರೂ ನಿರ್ವಾಹಕರು ಜಗಳ ಆರಂಭಿಸಿದರು. ನಾವು ಹೊರಟ ಬಸ್ಸು ಕೆಲವು ನಿಮಿಷ ತಡವಾಗಿ ಹೊರಟದ್ದೇ ಜಗಳಕ್ಕೆ ಕಾರಣ. ನಮ್ಮೂರಲ್ಲಿ ಬಸ್ಸಿನವರು ನಿಮಿಷ ನಿಮಿಷವನ್ನೂ ಲೆಕ್ಖ ಹಾಕುವ ಸಮಯ ಪಾಲಕರು.  ಸರಿ ಜಗಳ ಬಹಳ ಹೊತ್ತು ಸಾಗಿತು.  ನಮ್ಮ ಬಸ್ಸಿನಲ್ಲಿ ಕುಳಿತ ಪ್ರಯಾಣಿಕರು ಹಲವರು ಅಪಸ್ವರ ಎತ್ತುವುದಕ್ಕೆ ಶುರು ಮಾಡಿದರು. ಕೊನೆಗೆ ಹಿಂದೆ ಕುಳಿತವನೊಬ್ಬ ನೋಡಿಯೇ ಬಿಡೋಣ ಎಂದು ಮುಂದೆ ಹೋದವನು ಹಾಗೇಯೇ ವಾಪಾಸು ಬಂದು ಹೇಳಿದ, ಬಸ್ ಅಡ್ಡ ಇಟ್ಟವನು ನಮ್ಮದೇ ಜನ ಅಂತ ಹೇಳಿ ಸುಮ್ಮನೇ ಕುಳಿತು ಬಿಟ್ಟ.  ತೊಂದರೆಯಾಗುವುದು  ನಮ್ಮದೇ ಸ್ವಧರ್ಮದವರಿಂದ ಎಂದಾದರೆ ಅವನಿಗೆ ಅಹವಾಲು ಸಮಸ್ಯೆಗಳು ಯಾವುದೂ ಇರಲಿಲ್ಲ.!  ಈ ಘಟನೆ ನಡೆದು ಸುಮಾರು ಮೂವತ್ತು ವರ್ಷದ ಮೇಲೆ ಆಗಿರಬಹುದು. ಯೋಚಿಸಿ, ಈಗ ದೊಡ್ಡದಾಗಿ ಕಾಣುವ ಬಹಿಷ್ಕಾರದಂತಹ ಸಮಸ್ಯೆಯ ಬೀಜ ಆಗಲೇ ತಿಳಿಯದಂತೆ ಮೊಳಕೆ ಒಡೆದಿತ್ತು.  

        ಅಲ್ಲಿ ಒಂದು ಬಸ್ ಹತ್ತುವುದಕ್ಕೂ,   ಬಸ್ ಮಾಲಕನ ಧರ್ಮ  ಪ್ರಧಾನವಾಗಿರುತ್ತದೆ. ಅಂಗಡಿ ಮತ್ತಿತರ ವ್ಯವಹಾರ ಮಾಡುವಾಗಲೂ ಧರ್ಮ ಗಮನಾರ್ಹವಾಗುತ್ತದೆ. ಇವುಗಳೆಲ್ಲ ಸುಮಾರು ದಶಕಗಳ ಹಿಂದಿನ ಕಥೆ.  ನಮ್ಮ ಸಾಮಾಜಿಕ ಸಮಸ್ಯೆಗಳಿಗೆ ಯಾವುದೇ ರೀತಿಯಲ್ಲೂ ಧರ್ಮ ಕಾರಣವಾಗುವುದಿಲ್ಲ. ಕೇವಲ ನಮ್ಮ ಮನಸ್ಸೇ ಕಾರಣವಾಗುತ್ತದೆ. 

ಊರಲ್ಲಿರುವಾಗ ನಮಗೆ ತಿಂಡಿಯ ವ್ಯಾಪಾರವಿತ್ತು. ರಂಜಾನ್ ಮಾಸ ಬಂದಾಗ ವ್ಯಾಪಾರ ತೀರ ಕಡಿಮೆಯಾಗಿ ಪರಿಸ್ಥಿತಿ ಹದಗೆಟ್ಟು ಹೋಗುತ್ತಿತ್ತು. ನಮಗೆ ಆಚರಣೆ ಇಲ್ಲದೇ ಉಪವಾಸ. ಕಾರಣ ಇಷ್ಟೇ, ದುಡ್ಡು ಕೊಟ್ಟು ತೆಗೆದುಕೊಳ್ಳುವುದಕ್ಕೆ ಯಾರೂ ಇಲ್ಲ ಎಂದಾಗುವಾಗ ವ್ಯಾಪಾರ ಹೇಗಾಗುತ್ತದೆ? ಹೀಗಿದ್ದರೂ ನಮ್ಮದು ಈಗ ವಿವಾದ ಹುಟ್ಟಿದಂತೆ ಹಲಾಲ್ ಪರವಾನಿಗೆ ಏನೂ ಇರಲಿಲ್ಲ. ಹೀಗಿದ್ದರೂ ಅದು ವಾಸ್ತವದ ಸತ್ಯವಾಗಿತ್ತು. ನಮ್ಮ ವ್ಯಾಪಾರ ಸಂಬಂಧದ ನೆಲೆಯೇ ಅಲ್ಲಿತ್ತು. 

        ಒಂದು ಬಾರಿ ಊರಿಗೆ ಹೋದಾಗ ನನ್ನ ಶಾಲಾಜೀವನದ ಸಹಪಾಠಿಯೊಬ್ಬ ಸಿಕ್ಕಿದ್ದ. ಆತ ಕೇವಲ ಸಹಪಾಠಿಯಾಗಿರಲಿಲ್ಲ. ಆತ್ಮೀಯ ಮಿತ್ರನಾಗಿದ್ದ. ಆತ ಈಗ ಗಲ್ಫ್ ಉದ್ಯೋಗಿಯಾಗಿದ್ದ. ಹಾಗಾಗಿ ಅವನು ನಾನು ಭೇಟಿಯಾಗದೆ ದಶಕಗಳೇ ಕಳೆದಿದ್ದವು. ಈಗಂತೂ ಕೂದಲು ನೆರೆಗಟ್ಟಿದೆ. ಮಧ್ಯ ಹರಯ ದಾಟಿದೆ. ನಾವು ಅ ಅಂದು ಇದ್ದ ಸ್ಥಿತಿಯಲ್ಲಿ ಅವನ ಮಕ್ಕಳು ಇದ್ದಾರೆ. ಆತ ಅನ್ಯ ಧರ್ಮದವನಾದರೂ ನಮ್ಮ ನಡುವಿನ ಸ್ನೇಹಕ್ಕೆ ಅಂದು ಅದು ವಿಷಯವೇ ಅನ್ನಿಸಲಿಲ್ಲ. ಅತನಿಂದ ನಾನು ಬಹಳಷ್ಟು ಸಹಾಯವನ್ನು ಪಡೆದಿದ್ದೆ. ನನ್ನ ಬಡತನದಲ್ಲಿ ಸಾಕಷ್ಟು ಸಹಾಯ ಮಾಡಿದ್ದ. ಆತ ಕಲಿಯುವುದರಲ್ಲಿ ಬಹಳ ಹಿಂದೆ ಮಾತ್ರವಲ್ಲ ದಡ್ಡನೇ ಆಗಿದ್ದ.  ಅಂಥವನು ಎಸ್ ಎಸ್ ಎಲ್ ಸಿ ತೇರ್ಗಡೆಯಾಗಬೇಕಿದ್ದರೆ ನನ್ನ ಯೋಗದಾನ ಬಹಳಷ್ಟು ಇತ್ತು. ಅದನ್ನು ಆತ ಬಹಳ ಸಲ ಹೇಳಿದ್ದ.  ಶಾಲಾ ಜೀವನ ಮುಗಿಸಿ ಆತ ಗಲ್ಫ್ ಗೆ ಹಾರಿದ್ದ. ಎಸ್ ಎಸ್ ಎಲ್ ಸಿ ಆಗಿರುವುದರಿಂದ ಅಲ್ಲಿ ಆತನಿಗೆ ಸ್ವಲ್ಪ ಒಳ್ಳೆ ಕೆಲಸ ಸಿಕ್ಕಿತ್ತು.ಗಲ್ಫ್ ನಿಂದ ಬಂದಾಗ ಒಂದು ಬಾರಿ ಸಿಕ್ಕಿದ್ದ. ಆಗ ನನ್ನ ಸಹಾಯವನ್ನು ಮನಸಾರೆ ಹೊಗಳಿದ್ದ. ಹೀಗೆ ನಾವು ಸಿಕ್ಕಿದಾಗಲೆಲ್ಲ ನಮ್ಮ  ವಿದ್ಯಾರ್ಥಿ ಜೀವನದಲ್ಲಿನ ಘಟನೆಗಳನ್ನು ಮೆಲುಕು ಹಾಕುತ್ತಿದ್ದೆವು. ಇಂತಹ ಸ್ನೇಹಿತ ಮೊನ್ನೆ ಸಿಕ್ಕಿದಾಗ ಮಾತಿಗೆ ತೊಡಗಿದೆವು. ಅದೂ ಇದು ಅಂತ ಹಲವು ವಿಚಾರ ಮಾತನಾಡಿದ್ದರೂ ಸಹ ನಮ್ಮ ನಡುವೆ ಏನೋ ಒಂದು ತೆರೆ ಎಳೆದ ಅನುಭವ ನನಗಾಗಿತ್ತು. ಯಾಕೆ ಹೀಗೆ? ಕಾರಣ ಇಷ್ಟೆ ನಮ್ಮ ಮನಸ್ಸಿನ ಮೇಲೆ ಧರ್ಮ ಸವಾರಿ ಮಾಡಿತ್ತು. ಆತನಿಗೆ ನಾನು ಬದಲಾದಂತೆ ಕಂಡರೆ ನನಗೆ ಆತ ಬದಲಾದಂತೆ ಭಾಸವಾಗಿತ್ತು.

       ಮನುಷ್ಯರು ಬದಲಾಗುವುದಲ್ಲ, ನಮ್ಮ ನಡುವಿನ ಸಂಬಂಧ ಬದಲಾಗುವುದಿಲ್ಲ. ಬದಲಾಗುವುದು ಕೇವಲ ಮನಸ್ಸು. ಈಗ ಕಂಡುಬರುವ ದಿಗ್ಬಂಧನ ಮುಂತಾದ ನಿಬಂಧನೆಗಳೆಲ್ಲವೂ ನೀರೊಳಗಿನ ಕಲ್ಮಶದಂತೆ, ಅದು ಮೇಲೆದ್ದು ಬಂದು ದಡಕ್ಕೆ ಅಪ್ಪಳಿಸುತ್ತದೆ. ನೀರೊಳಗಿದ್ದಾಗ ಅದು ಏನು ತೊಂದರೆಯಾಗದು ಎಂದು ತಿಳಿದಿದ್ದ ನಮಗೆ ಈಗ ನೀರನ್ನು ಸ್ಪರ್ಶಿಸದಂತೆ ಅದು ತಡೆಯುತ್ತದೆ. ಒಂದು ಕಾಲದಲ್ಲಿ ಹೀಗಿತ್ತಾ ಎಂಬ ಅನುಮಾನ ಈಗ ಮೂಡಿದರೆ ಅದಕ್ಕೆ ಕಾರಣ ಯಾವುದು? ಸ್ನೇಹ ಸೌಹಾರ್ದ ಅದೆಷ್ಟೋ ಕಂಡವರಿಗೆ ಈಗ ಅದು ಎಷ್ಟು ಗಾಢವಾಗಿದ್ದರೂ ಕೇವಲ ನಟನೆಯಂತೆ ಭಾಸವಾಗುತ್ತದೆ. ವಿಶ್ವಾಸವೇ ಒದಗಿಬರುವುದಿಲ್ಲ. ಏನೋ ಒಂದು ಅಪಶೃತಿ, ತಾಳ ಲಯಕ್ಕೆ ಹೊಂದಿಕೆಯಾಗದಂತೆ ತಡೆಯುತ್ತಾ ಇದೆ. 

            ನೆರೆಹೊರೆಯಲ್ಲಿ ವಿಶ್ವಾಸದ ಕೊರತೆಯಾಗುವಾಗ ನಮ್ಮ ಮನೆಯ ಬಾಗಿಲು ಭದ್ರವಾಗುತ್ತದೆ. ಸಾಲದು ಎಂಬಂತೆ ಬೀಗವೂ ಜಡಿಯುತ್ತೇವೆ. ಒಂದು ವೇಳೇ ನಮ್ಮ ನಡುವೆ ವಿಶ್ವಾಸ ಇದ್ದರೆ, ಇದರ ಆವಶ್ಯಕತೆಯೇ ಇರುವುದಿಲ್ಲ. ಅಮ್ಮ ಹಣ ಸಂಗ್ರಹಿಸಿ ಯಾವುದೋ ಅಕ್ಕಿ ಡಬ್ಬದ ಒಳಗೆ ಕಾಣದಂತೆ ಇಡುತ್ತಾಳೆ ಎಂದರೆ ಅದಕ್ಕೆ ಕಾರಣ ಯಾವುದು? ಕಡಿಮೆಯಾದ ವಿಶ್ವಾಸ. ಆ ವಿಶ್ವಾಸ ಇನ್ನು ಚಿಗುರೊಡೆಯುವುದು ಕಲ್ಪಿಸುವುದಕ್ಕೆ ಕಠಿಣವೆನಿಸುತ್ತದೆ. ವಿಶ್ವಾಸದ ತಳಿ ಎಂದೋ ನಾಶವಾಗಿದೆ. ಆದರೂ ಆಶಾಭಾವದಿಂದ ಬದುಕಬೇಕು.