Wednesday, December 16, 2020

ಬಾವನ ಮಗಳು ಭಾವನ....

 

            ಒಂದು ವರ್ಷದ ನಂತರ ಮಲೆನಾಡಿಗೆ  ಹೆಜ್ಜೆ ಇರಿಸಿದೆ.  ಕೊರೋನ ಕಾಲದಲ್ಲಿ ಎಲ್ಲವನ್ನೂ ಕಳೆದುಕೊಂಡೆ ಎಂಬ ಭಾವನೆಯ ನಡುವೆ ಈ ಮಲೆನಾಡ ಕೊಪ್ಪಕ್ಕೆ ಬಂದರೆಕಳೆದು ಹೊದವುಗಳನ್ನು ಕೈಸೆರೆ ಮಾಡಿಕೊಂಡ ಅನುಭವ. ಈ ಬಾರಿ ಅದೇಒಂದು ಮಲೆನಾಡ ಮದುವೆ.‌ ಆ ಚಿತೋಹಾರಿ‌ ಅನುಭವಗಳಿಗೆ ಸಹಜವಾಗಿ ಮನಸ್ಸು ತೆರೆದಿತ್ತು. ಆದರೆ ಕಾಲ ಎಂಬುದು ಒಂದಿದೆ   ಎಂಬುದನ್ನು ಮನಸ್ಸು ಮರೆತಿತ್ತು. 

 

            ನಮ್ಮ ತಲಮಕ್ಕಿ‌ ಮನೆ ಕೊಪ್ಪದಿಂದ ಗಾವುದ ದೂರದ ಪುಟ್ಟ ಹಳ್ಳಿ. ಹೇಳಿ ಕೇಳಿ‌ ಮಲೆನಾಡ ಟಿಪಿಕಲ್ ಉಪ್ಪರಿಗೆ ಮನೆ.‌ ಯಾವುದೇ ಅತಿಥಿ ಬಂದರೂ ಅತಿಥೇಯರಾಗಿ ಸಂಭ್ರಮಿಸುವ ಮಂದಿಯರ ಮದುವೆ ಎಂದರೆ ಕೇಳಬೇಕೆ? ಇದನ್ನು ಕಂಡಾಗ,  ಜಗತ್ತಿನಲ್ಲಿ ನಿಯಂತ್ರಣಕ್ಕೆ ಸಿಗದ ವಸ್ತುವೆಂದರೆ ಅದು ಭಾವನೆ...ಅದಿಲ್ಲಿ ನಿಯಂತ್ರಣವಿಲ್ಲದ ಹುಚ್ಚುಗುದುರೆಯಾಗುತ್ತದೆ.  ದೀರ್ಘವಾದ ನನ್ನ  ಜೀವನದಲ್ಲಿ ಕೂಡಾ ಇಲ್ಲಿ ಹಲವಾರು ವಿವಾಹಗಳನ್ನು ಕಂಡಿದ್ದೇನೆ. ಹಲವಲ್ಲಿ ಸಂಭ್ರಮಿಸಿದ್ದೇನೆ. ಇವಿಷ್ಟೇ ಆದರೆ ಈ ಅನುಭವ ಕಥನದಲ್ಲೇನಿದೆ? 

 

            ಇಂದಿನ ಕೌಟುಂಬಿಕ ಸ್ಥಿತಿಯಲ್ಲಿ ಮನೆ ಚಿಕ್ಕದಾಗುತ್ತದೆ, ಸಂಸಾರ ಮಾತ್ರ ಬೆಳೆದು ದೊಡ್ಡ ಆಗುತ್ತಿದೆ. ಮನೆ ಅಂತ ಹೇಳಿದ್ದು..‌ ಮನೆಯಲ್ಲಿ ಉಳಿವ ಮನೆ ಮಂದಿಯ ಸಂಖ್ಯೆಯನ್ನು.ದೊಡ್ಡದಾದ ಮನೆಯಲ್ಲಿ ಚಿಕ್ಕದಾಗಿರುವ ಈ ಮನೆ ಮಂದಿಗೆ ಮದುವೆಯಂತಹ ಸಂದರ್ಭವೂ ಅತಿ ಸಂಭ್ರಮ.

 

            ಮೂವತ್ತು ವರ್ಷಗಳ ಕೆಳಗೆ ಈ ಸಂಭ್ರಮದ ಪರಿಚಯವಾಯಿತು. ಆಗ ಸ್ವತಃ ವಿವಾಹವಾಗಿ ಹೊಸ ಸಂಭಂಧ ಬೆಸೆಯುವ ನನಗೆ ಎಲ್ಲವೂ ಸಂಭ್ರಮವಾಗಿ ಕಾಣುವುದು ಸಹಜ. ಆದರೆ ಪ್ರತೀ ಸನ್ನಿವೇಶದಲ್ಲೂ ಇದನ್ನು ಕಾಣುವಾಗ ಇದರೊಳಗಿರುವ ಸನ್ಮನಸ್ಸು ಸದ್ಭಾವನೆ ಎಲ್ಲವೂ ತನ್ನದೇ ಎಂಬಂತೆ ಕಾಣುವ ತುಡಿತದಲ್ಲಿ  ಎಲ್ಲವೂ ತನ್ನದೆಂಬ ಸ್ವಾರ್ಥವೂ ನಿಸ್ವಾರ್ಥವಾಗುತ್ತದೆ. ಯಾಕೋ ಎಲ್ಲ ದುಗುಡಗಳನ್ನು ಕಟ್ಟಿ ತಂದು ಇಲ್ಲಿ ಚೆಲ್ಲಿ ಬಿಡಬೇಕು ಎಂದನಿಸುತ್ತದೆ.  ಹೇಗಿದ್ದರೂ ಎಲ್ಲೋ ಹುಟ್ಟಿ ಬೆಳೆದ ನಾನೂ ಇಲ್ಲಿನ ವೃಕ್ಷಕ್ಕೆ ಕಸಿ ಕಟ್ಟಿದ ಬಿಳಲು.

 

            ಇದೀಗ ಮಗಳು ಭಾವನ ಕಣ್ಣೆದುರೆ ಶಿಶುವಾಗಿ  ಮಡಿಲಲ್ಲಿ ನಲಿದಾಡಿ ಎದೆ ಮಟ್ಟಕ್ಕೆ ಬೆಳೆದು ನಿಂತ ಸುಂದರಿ. ಈ ದಿನಗಳೇ ಹೀಗೆ,  ಸರಿದು ಹೋದ ಮೇಲೆ ನೆನಪುಗಳನ್ನು ಕಟ್ಟಿ ಕೊಡುತ್ತವೆ.  ಪುಟ್ಟ ಮಗುವಾಗಿ ಓಡಾಡುತ್ತಿದ್ದ ಬೆಳೆದು ಬೊಗಸೆ ಕಂಗಳ ಚೆಲುವೆಯಾಗಿ ಭುಜದಿಂದ ಎತ್ತರ ಬೆಳೆದು ಬಿಟ್ಟಿದ್ದಳು. ಈಗ  ಭಾವನ ಸರ್ವಾಲಂಕಾರೆಯಾಗಿ ರಂಗಿನ ಚಪ್ಪರದಲ್ಲಿ ರಂಗು ರಂಗಿನ ಕನಸುಗಳೊಂದಿಗೆ ಹಸೆಮಣೆ ತುಳಿದು ಪುಷ್ಪಾಹಾರಕ್ಜೆ ತಲೆ ಬಗ್ಗಿಸಿದಾಗ ನನ್ನ ನೆನಪು ಹಿಂದಕ್ಕೆ ಓಡುತ್ತದೆ.  ಈ ಹಿಂದೆ ಮೂವತ್ತು ವರ್ಷಗಳ ಕೆಳಗೆ ಹೀಗೆ ಕಂಪಿಸಿದ ಕೈ ನನ್ನ ಕೊರಳ ಬಳಿಗೂ ಬಂದಿತ್ತು. ಅದೇ ಜಾಗ ಅದೇ ರೀತಿ. ಇದೇ ಮನೆಯಲ್ಲಿ ನಾನೂ ಗೃಹಸ್ಥನಾಗಿ ಹೆಜ್ಜೆ ಇಟ್ಟದ್ದು ಇನ್ನೂ ಹಚ್ಚ ಹಸಿರಾಗಿದೆ. ಹಾಗಾಗಿ ಇಲ್ಲಿನ ಮದುವೆ ಎಂದರೆ ನನ್ನ ಕನಸಿನ ಮೆಲುಕು ಹಾಕುವಿಕೆಯೇ ಆಗಿರುತ್ತದೆ.  ವಿಶಾಲವಾದ ಮನೆ ಅಲ್ಲಿ ಮದುವೆ ಎಂದರೆ ಕೈಯಲ್ಲಿ ಹೂ ಎತ್ತಿಕೊಂಡಂತೆ ನಡೆದು ಬಿಡುತ್ತದೆ. ಅದು ನಮಗೆ ಕಾಣುವವರಿಗೆ ಮಾತ್ರ. ಆದರ ಹಿಂದೆ ಮನೆ ಮಂದಿಗಳ  ಪರಿಶ್ರಮ ಅಪಾರ. ಆ ಪರಿಶ್ರಮದ ಸವಾಲನ್ನೂ  ನಗುತ್ತಾ ಸ್ವೀಕರಿಸುವ ಇವರೆಲ್ಲರ  ಮನೋಭಾವ ಹಾಗಾಗಿಯೇ ಇಲ್ಲಿ ಮದುವೆ ಎಂದರೆ ಅದು ಕೇವಲ ಮದುವೆಯಾಗುವುದಿಲ್ಲ. ಹುಳಿ ಖಾರ  ಸಿಹಿ ಎಲ್ಲವೂ ಹಿತವಾಗಿ ಸೇರಿದ ರಸಪಾಕವೇ ಆಗಿಬಿಡುತ್ತದೆ.  ಕುಟುಂಬವರ್ಗದವರಿಗೆಲ್ಲ ತಲಮಕ್ಕಿ ಎಂಬುದು ತಮ್ಮ ಸಮಸ್ಯೆಗಳಿಗೆ ಕೊನೆಯ ಪರಿಹಾರ ಹಾದಿಯಾಗಿದೆ. ಹಾಗಾಗಿ ಇಲ್ಲಿ ಇಂತಹ ಕಾರ್ಯಗಳಲ್ಲಿ ಇಲ್ಲಿನ ದಾತೃತ್ವ ಗುಣವನ್ನು ಕಾಣಬಹುದು.

             

            ಹೆಣ್ಣೆಂದರೆ  ಅಂಗಳದ ವೃಂದೆಯಂತೆ. ವೃಂದಾ ಎಂದರೆ ತುಳಸಿ.  ಆಕೆ ಇರುವಲ್ಲೆಲ್ಲಾ ವೃಂದಾವನದ ಹಚ್ಚ ಹಸಿರು.   ಪುಟ್ಟ ತುಳಸೀ ಗಿಡವನ್ನು ಕಿತ್ತು ಸಂಬಂಧಗಳ ನೆನಪುಗಳ ಹಿಡಿ ಮಣ್ಣನ್ನು ಜತೆಯಾಗಿಸಿ ಮತ್ತೊಂದು ಮನೆಯಂಗಳಕ್ಕೆ ಬಂದಾಗ ಹೆಣ್ಣಿಗೆ ಕನಸಿರುತ್ತದೆ. ಜವಾಬ್ದಾರಿಯೂ ಹೆಗಲಿಗೇರಿರುತ್ತದೆ. ಮತ್ತೊಂದು ಅಂಗಳದಲ್ಲಿ ಗಿಡವಾಗಿ ಬೆಳೆಯಬೇಕಾದವಳು ಹೆಣ್ಣು. ತುಳಸಿಯಂತೆ ಪೂಜನೀಯಳು.  ಭಾವನ ಹೆಣ್ಣಾದಳು ತುಳಸಿಯಾದಳು. ಮತ್ತೊಂದು ಅಂಗಳದ ಗಿಡವಾದಳು. ಸುಂದರವಾದ ಕಟ್ಟೆಯನು ಕಟ್ಟಿ ತಂಬಿಗೆ ನೀರನ್ನು ಎರೆದು ಬೆಳೆಸುವ ಕೈಗಳಿಗೆ ನಡೆದು  ಹೋದಳು ಭಾವನ.

 

            ಮದುವೆ ಮನೆಯ ವಾಲಗದ ಗದ್ದಲ ಪುರೋಹಿತರ ಮಂತ್ರ ಘೋಷದ ನಡುವೆ ಕೈ ಹಿಡಿದ ಸಹಚರ,   ಎಲ್ಲಾ ಸಂಭ್ರಮ ಬದಿಗಿರಿಸಿ ಪುಟ್ಟ ಕಂದನ ಬಳಿಗೆ ಬಂದು ಆಕೆ ಲಲ್ಲೆಗರೆದಾಗ ಈ ಹೆಣ್ಣ ಕಣ್ಣಹಿಂದಿರುವ ಕನಸದೇನಾಗಿರಬಹುದು? ಭರವಸೆ ಏನಿರಬಹುದು? ಹೆಣ್ಣು ಕೇವಲ ಹೆಣ್ಣಲ್ಲ ಆಕೆ ಪ್ರಕೃತಿಯಲ್ಲವೇ ಅಂತ ತೋರಿತು. ಪುಟ್ಟ ಭಾವನ ಮೈಕೈ ತುಂಬಿಕೊಂಡು ಬಂಗಾರದ ಸೀರೆಯುಟ್ಟು  ಸರ್ವಾಲಂಕಾರೆಯಾಗಿದ್ದರೂ  ತನ್ನದೆಲ್ಲವನ್ನು ಮರೆತು ಪುಟ್ಟ ಮಗುವನ್ನು ಮುದ್ದಿಸುವಾಗ ಹೆಗಲ ಮೇಲೆ ಹೊತ್ತಿರುವ ಜವಾಬ್ದಾರಿಯ  ಭರವಸೆ ಆ ಕಣ್ಣಲ್ಲಿ ತುಂಬಿತ್ತು. ಕೊಪ್ಪದ ಮನೆಯಲ್ಲಿ ಸದಾ ಮರೆಯಲ್ಲೇ ಕಳೆಯುತ್ತಿದ್ದ ಚೆಲುವೆ  ಭಲೇ ಗಟ್ಟಿಗಿತ್ತಿ ಅಂದುಕೊಂಡೆ.

 

            ತಲಮಕ್ಕಿಯಲ್ಲಿ ಮದುವೆ ಎಂದರೆ ಸಿನಿಮಾದ ಚಿತ್ರಕಥೆಯಂತೆ. ಅದು ಹೀಗೆ ಹೀಗೆ ಅಂತ ಮೊದಲೇ ಬರೆದಿಟ್ಟ  ಸ್ಕೃಪ್ಟಿನಂತೆ  (Script) ನಂತೆ  ಶಿಸ್ತು ಬದ್ಧ.ಕೆಲವು ಪಾತ್ರಗಳು ಹೀಗೆ ಇರುತ್ತವೆ ಅಂತ ಮೊದಲೇ ಊಹಿಸಬಹುದು. ಇಲ್ಲಿ ಇಂದೂ ಹಾಗೆ,  ಏನೆಲ್ಲ ಆಗಬೇಕೊ ಅದೆಲ್ಲ ಸಹಜವಾಗಿ ನಡೆಯಿತು. ಊಟ ಉಪಹಾರ ತಿನ್ನುವ ಮೊದಲೇ ಸ್ವಾದ ರುಚಿಯಾದ ಅನುಭವ. ಆ ಉಪಚಾರ ಸತ್ಕಾರಕ್ಕೆ ನಮ್ಮೊಳಗಿನ ಅತಿಥಿ ಜಾಗೃತನಾಗಿಬಿಡುತ್ತಾನೆ.  ಸತ್ಕಾರ ಸತ್ಕಾರ್ಯವಾಗುವುದು ಮನಸ್ಸಿನಲ್ಲಿ ಸತ್ ಅಂದರೆ ಸತ್ಯ ಇದ್ದಾಗ ಮಾತ್ರ. ಮನಸ್ಸಿನಲ್ಲಿ ಕೈ ಹಿಸುಕುವ ಅಸಹನೆ ಇದ್ದರೆ ಸತ್ಕಾರ ಸತ್ಕಾರ್ಯವಾಗುವುದಿಲ್ಲ.  ಇವರಲ್ಲಿ ವಿದುರನ ಕುಡುತೆ ಹಾಲಿನ ಪ್ರಜ್ಞೆ ಸದಾ ಎಚ್ಚರವಾಗಿರುವುದೇ ಒಂದು ವಿಚಿತ್ರ.

 

            ಈ ಬಾರಿಯ ಮದಯವೆಯೂ ಬಿಟ್ಟ ಸಿನಿಮಾ ರೀಲಿನಂತೆ ಮಧ್ಯಾಹ್ನದ ಪ್ರದರ್ಶನದಂತೆ ರಾತ್ರಿಯ ದೇಖಾವೆ ಕೂಡ ಇತ್ತು. ವೆತ್ಯಾಸವೇ ಇಲ್ಲ. ಅದೇ ಸಂಭ್ರಮ ಅದೇ ಸತ್ಕಾರ. ಕೃಷ್ಣನೆದುರು ನಿಂತ ವಿದುರನಂತೆ. ಆದರೆ ಈ ಬಾರಿ ಒಂದು, ಮೂವತ್ತು ವರ್ಷಗಳ ಹಿಂದಿನ ಅದೇ ಮುಖಗಳು ಚಪ್ಪರ ತುಂಬಾ ಕಂಡವು. ಯುವಕರ ಸಂಖ್ಯೆ ತೀರಾ ಚಿಕ್ಕದು. ಮದುವೆಗೆ ಬಂದವರಲ್ಲಿ ಯಾರೆಲ್ಲ  ನವತರುಣರು  ಅಂತ ಕೇಳಿದರೆ ಮದುಮಗ ಮದುಮಗಳು ಎಂದು ಹೇಳುವ ಸ್ಥಿತಿ. ಕಾಲ ಬದಲಾಗಿದೆ. ಈ ಬಾರಿ ಯುವ ಜನರ ಕೊರತೆ ಎದ್ದು ಕಾಣುತ್ತಿತ್ತು.ಈಗೀಗ ಇಂತಹ ಕಾರ್ಯಕ್ರಮಗಳಲ್ಲಿ ಹೊಸ ತಲೆಮಾರಿಗೆ ಆಸಕ್ತಿ ಬಹಳ ಕಡಿಮೆಯಾಗಿದೆ.   ಬದಲಾದ ಕೆಲಸದ ಸಮಯ, ಅದರ ಒತ್ತಡ ಒಂದೆಡೆಯಾದರೆ, ಮದುವೆ ಎಂದರೆ ಬೋರು ಎಂಬ ಮನೋಭಾವವೂ ಕೇಳಿಬರುತ್ತದೆ.

 

            ಹೌದು, ನಮ್ಮ ಮದುವೆ ಕಾರ್ಯಕ್ರಮಗಳು ಬೋರು ಹೊಡೆಸುತ್ತವೆ. ಯಾಕೆಂದರೆ ಸದಾ ಚಟುವಟಿಕೆಯಲ್ಲಿರಬೇಕಾದ ಕೈಗಳು ನಿಸ್ತೇಜವಾದಂತೆ, ಯುವಕರು ಯುವತಿಯರು ಮಾಡಬೇಕಾದ ಕೆಲಸಗಳು ಗಣನೀಯವಾಗಿ ಕಡಿಮೆಯಾಗಿದೆ. ಈಗ ಕ್ಯಾಟರಿಂಗ್ ನಿಂದ ತೊಡಗಿ ಚಪ್ಪರ ಅಲಂಕಾರ ಮದುವೆ ಪರಿಕರಗಳೆಲ್ಲವನ್ನೂ ಒದಗಿಸುವ ಕಾಂಟ್ರಾಕ್ಟರು ಇದ್ದಾರೆ. ಮೊದಲು ಮದುವೆ ಮನೆಯಲ್ಲೇ ಎಲ್ಲರೂ ಸೇರಿ ಮಾಡುತ್ತಿದ್ದ ಅಡುಗೆಯನ್ನು ಕಂಡವನು ನಾನು.  ಈಗ ಮಧ್ಯಾಹ್ನ ಅಥವಾ ಹೊತ್ತಿಗೆ ಸರಿಯಾಗಿ ಆಹಾರ ಎಲ್ಲೋ ಸಿಧ್ದವಾಗಿ ಕೈಸೇರತ್ತದೆ. ತರಕಾರಿ ಹೆಚ್ಚುವ ಅಥವಾ ಇತರ ಚಟುವಟಿಕೆಗಳು ಶೂನ್ಯವಾಗಿವೆ. ಮದುವೆ ಕಾರ್ಯಕ್ರಮ ನಿರ್ವಹಿಸುವ ಮನೆಯವರಿಗೂ ಈಗಿನ ಈ ಹೊಸ ವ್ಯವಸ್ಥೆಗಳು ಅನುಕೂಲಕಾರವಾಗಿಯೇ ಇರುವಾಗ ಅದಕ್ಕೆ ಮೊರೆ ಹೋಗುವುದು ಸಹಜ. ಪರಿಣಾಮ ಎಲ್ಲರೂ ಸೇರಿ ತರಕಾರಿ ಹೆಚ್ಚುವ ಕೆಲಸವಾಗಲೀ ಇತರ ಕೆಲಸಗಳಾಗಲೀ ಇಲ್ಲದೆ ಬಂದ ಆಪ್ತರು ಸುಮ್ಮನೇ ಇರುವ ಪರಿಸ್ಥಿತಿ ಬಂದಿದೆ‌. ಪರಿಣಾಮದಲ್ಲಿ ಮದುವೆ ಎಂಬುದು ಬೋರು ಎಂಬಂತಾಗಿದೆ. ಚಪ್ಪರ ಅಲಂಕಾರ, ಆಸನ ಇನ್ನಿತರ ವ್ಯವಸ್ಥೆ ಊಟದ ಉಪಚಾರ ಎಲ್ಲವೂ ಕಾಂಟ್ರಾಕ್ಟ್ ರೂಪದಲ್ಲಿ ಒದಗಿ ಬರುತ್ತದೆ. ಹಲವು ಕಡೆಗಳಲ್ಲಿ ಅರ್ಚಕರೂ ಅಗ್ನಿಕುಂಡ ದರ್ಭೆ ಪಾತ್ರೆ ಪಗಡಿ ಹೀಗೆ ಏನೆಲ್ಲ ಬೇಕೋ ಅದೆಲ್ಲವನ್ನು ಪಟ್ಟಿಮಾಡಿಕೊಂಡು ತರುತ್ತಾರೆ. ಒಪ್ಪಂದದಂತೆ ಒಂದಷ್ಟು ದುಡ್ಡು ಕೊಟ್ಟರಾಯಿತು. ವಿಡಂಬನೆ ಎಂದರೆ ತನ್ನ ಪಾಲಿನ ದಾನವನ್ನೂ ತಾನೇ ಆಯ್ಕೆ ಮಾಡಿ ದುಡ್ಡುಕೊಟ್ಟು ತರುವುದು.  ಇದೆಲ್ಲ ಮದುವೆಯಂತಹ ಭಾವನಾತ್ಮಕ ಕಾರ್ಯಕ್ರಮವನ್ನು ಯಾಂತ್ರೀಕೃತಗೊಳಿಸಿವೆ. ಎಲ್ಲವನ್ನೂ ಕಾಂಟ್ರಾಕ್ಟ್ ಕೊಡುವಾಗ ಮದುವೆಯಾಗುವ  ಗಂಡು ಹೆಣ್ಣು ಮದುವೆ ಎಂಬುದನ್ನುಕಾಂಟ್ರಾಕ್ಟ್ ಅಂತ ತಿಳಿಯುವುದರಲ್ಲಿ ತಪ್ಪೇನಿದೆ? ಅವಿಷ್ಕಾರ ಎಂಬ ಮದ್ಯ ಬಹಳಬೇಗ ತನ್ನ ನಶೆಯನ್ನು  ತೋರಿಸುತ್ತದೆ.

 


            ತಕ್ಕಮಟ್ಟಿಗೆ ಆವಿಷ್ಕಾರ ಗಳು ಕಾಲಗತಿಗೆ ಅನಿವಾರ್ಯ ವಾಗಿ ಇದ್ದರೂ ತಲಮಕ್ಕಿ ಮದುವೆ ಬಹಳ ಸಾಂಪ್ರದಾಯಿಕವಾಗಿತ್ತು.ಮನೆಯಲ್ಲಿ ಆದುದರಿಂದ ಅದರ ಸಂಭ್ರಮ  ಉಲ್ಲಸಿತವಾಗಿತ್ತು. ಮನೆ ಮಂದಿಯ ಉಪಚಾರ ಕಾಳಜಿ ಹೃದ್ಯವಾಗಿ ಮದುವೆಯನ್ನು ಸಂಭ್ರಮಿಸುವಂತೆ ಮಾಡಿತ್ತು.  ಹಿಂದಿನಂತೆ ಇಂದೂ ಪುರೋಹಿತರು ಬರಿಗೈಯಲ್ಲಿ ಬರುತ್ತಾರೆ!!

 

             ಸಾಮಾನ್ಯವಾಗಿ ಮದುವೆ ಮುಗಿದು ಹೆಣ್ಣು ಗಂಡಿನೊಡನೆ ಹಜ್ಜೆ ಇಡುವಾಗ ತನ್ನ ಹೆತ್ತವರನ್ನೂ ಒಡಹುಟ್ಟಿದವರನ್ನೂ ಒಡನಾಡಿಗಳನ್ನೂ  ನೆನೆದು ಕಣ್ಣೀರು ಹಾಕುವುದು ಸಾಮಾನ್ಯ. ಹೆಣ್ಣು ಮಗಳ ಬೀಳ್ಕೊಡುಗೆ ಎಂಬುದು ಸಂಭ್ರಮದ ಮದುವೆಯಲ್ಲಿ ಕರುಳ ಹಿಂಡುವ ಸಂದರ್ಭ. ಆದರೆ ಬಾವನ ಮಗಳು ಭಾವನ ಎಲ್ಲ ದುಗುಡವನ್ನೂ ನುಂಗಿ ಗಟ್ಟಿಗಿತ್ತಿಯಾಗಿ ನಗುತ್ತಾ ಗಂಡನೊಡನೆ ಆತ್ಮವಿಶ್ವಾಸದಿಂದ ಹೆಜ್ಜೆ ಇಟ್ಟದ್ದು ಅತಿ ವಿಶೇಷ ವಾಗಿತ್ತು. ಆಕೆಯ ಅಪ್ಪ ನನ್ನ ಬಾವನೂ ಯೋಜನಾಬದ್ಧವಾಗಿ ಮಗಳ ಮದುವೆ ಮುಗಿಸಿದ ನಿರಾಳತೆಯಲ್ಲಿದ್ದರು ಮದುವೆ ಇವಿಷ್ಟು ವೈಶಿಷ್ಟ್ಯ ವನ್ನು ತುಂಬಿ ಯಶಸ್ವಿಯಾಗಿ ಮಂಗಳವಾಯಿತು. ಅವಿಷ್ಕಾರಗಳ ನಡುವೆಯೂ ತಲಮಕ್ಕಿ ಮದುವೆ ಇನ್ನೂ ಅದೇ ಸೊಗಡನ್ನು ಒಂದಷ್ಟು ಉಳಿಸಿಕೊಂಡಿದೆ. ಇದು ಉಳಿಯಬೇಕು ಎಂಬ ಆಶಯ ಎಲ್ಲರಲ್ಲೂ ಇದೆ. ಎಲ್ಲವನ್ನು ಸುಲಲಿತವಾಗಿ ನಿರ್ವಹಿಸಿ ತಮ್ಮ ಜೀವನದ ಮಹತ್ತರ ಜವಾಬ್ದಾರಿಯನ್ನು ನಿರ್ವಹಿಸಿದ ಬಾವ ದಂಪತಿಯರು ದಣಿವಿನಲ್ಲೂ ಸುಖವನ್ನು ಕಂಡರು.

 


 

ಕೊನೆಯಲ್ಲಿ ವಿದಾಯ ಹೇಳುವಾಗ ಬಾವನ ಮಗಳು‌ ಭಾವನ ಕಾಲಿಗರಗಿದಾಗ ಭಾವನಾತ್ಮಕವಾಗಿಯೇ ಎದೆಗೊತ್ತಿ ನಮ್ಮ ಮನೆ ಹೆಣ್ಣು ಮಗಳನ್ನು ಹರಸಿದೆ. ಸಹಚರನೊಂದಿಗಿನ ಹೊಸ ಬದುಕಿನಲ್ಲಿ ಸ್ನೇಹ ಸೌಹಾರ್ದ ಸಮೃದ್ಧಿಯಾಗಲಿ.ಬಾವನ ಮಗಳು ಭಾವನ ಸುಖಿಯಾಗಿರಲಿ.  

Thursday, December 3, 2020

ಹೇ ಭಗವಂತಾ..

ಹೇ ಭಗವಂತಾ..

 ಎಂಬ ಒಂದು ಉದ್ಗಾರ ಅತೀತವಾದ ಶಕ್ತಿಗೆ ದ್ಯೋತಕವಾಗಿ ನಮ್ಮಿಂದ ಹೊರಹೊಮ್ಮುತ್ತದೆ. ಭಗಂತ, ಪರಮಾತ್ಮ ದೇವರು ಹೀಗೆ ಅರ್ಥಗರ್ಭಿತವಾದ ಹೆಸರು ಹಲವು ಇರಬಹುದು. ಮನಸ್ಸಿಗೆ ಹತ್ತಿರವಾಗದೇ ಇದ್ದಾಗ ಇವೆಲ್ಲ ಕೇವಲ ಹೆಸರುಗಳಾಗುತ್ತವೆ.  ಪರಮಾತ್ಮ ರೂಪದಿಂದ ಭಾವದಿಂದ ವಿಶ್ವಾಸದಿಂದ ಮನಸ್ಸಿನಲ್ಲಿ ಭದ್ರವಾದ ಭಾವನೆಗಳು ಹಲವಿರಬಹುದು. ಆದರೆ ಈ ಭಾವನೆಗಳು ನಮ್ಮಲ್ಲಿ ತಾದಾತ್ಮ್ಯವನ್ನು ಆತ್ಮ ಸಂಬಂಧವನ್ನು ಹುಟ್ಟಿಸುತ್ತದೆ ಎಂಬುದು ಮನಸ್ಸಿನ ಏಕಾಗ್ರತೆಯನ್ನು ಹೊಂದಿಕೊಂಡಿರುತ್ತದೆ.

 

ನಾವು ಯಾರೊಂದಿಗೋ ಮಾತನಾಡುತ್ತಿರುತ್ತೇವೆ. ಆತನಿಗೊಂದು ಕರೆ ಬರುತ್ತದೆ. ಅಥವಾ ಅಲ್ಲೇ ಇದ್ದ ಮತ್ತೊಬ್ಬ ವ್ಯಕ್ತಿ ಆತನನ್ನು ಮಾತಿಗೆಳೆಯುತ್ತಾನೆ. ಅದುವರೆಗೆ ಆತ್ಮೀಯವಾಗಿ ಗಹನವಾಗಿ ಮಾತನಾಡುತ್ತಿದ್ದ ಆತನ ಗಮನ ಒಂದಿಷ್ಟು ಆಕಡೆಗೆ ಸೆಳೆಯಲ್ಪಡುತ್ತದೆ. ನಮ್ಮ ಮಾತುಗಳನ್ನು ಕೇಳುತ್ತಿದ್ದವನು ಹಾಗೇ ಮತ್ತೊಂದು ಕಡೆಗೆ ಹೂಂ ಗುಟ್ಟುತ್ತಾ ನಮ್ಮನ್ನು ಕಾಯಿಸುತ್ತಾನೆ. ಅಥವಾ ಆತನ ಪೋನ್ ಸಂಭಾಷಣೆ ಮುಗಿಯುವುದನ್ನೇ ಕಾಯುತ್ತಿರುತ್ತೇವೆ.  ಆಗ ನಮಗೆ ಒಂದು ರೀತಿ ಅವಮಾನವಾದಂತಾಗುತ್ತದೆ. ನನ್ನ ಮಾತಿಗೆ ಈತನ ಗಮನ ಇಲ್ಲ ಎಂಬ ಅನುಮಾನ ಉಂಟಾಗುತ್ತದೆ. ಅಸಮಾಧಾನ ಉಂಟಾಗಿ ಅತೃಪ್ತಿ ಉಂಟಾಗುತ್ತದೆ.  ಈಗೀಗಲಂತೂ ಮೊಬೈಲ್ ಎಂಬ ಸಾಧನ ನಿತ್ಯ ಕೈ ಆಯುಧದಂತೆ ಕೈಯಲ್ಲಿರುವಾಗ ನಮ್ಮಲ್ಲಿ ಮಾತನಾಡುತ್ತಿದ್ದಂತೆ ಎಲ್ಲೆಂದರಲ್ಲಿ ಆತನಿಗೆ ಕರೆ ಬರುತ್ತದೆ. ನಮ್ಮ ಮಾತಿಗೆ ಸಹಜವಾಗಿ ತಡೆಯಾಗುತ್ತದೆ. ಇದೊಂದು ಅಸಮಾಧಾನವನ್ನು ಸೃಷ್ಟಿಸುತ್ತದೆ. ಇನ್ನೊಬ್ಬರೊಡನೆ ವ್ಯವಹರಿಸುವಾಗ ನಮಗೇ ಇಷ್ಟು ಕಿರಿ ಕಿರಿಯಾಗಬೇಕಾದರೆ ನಮ್ಮ ನಡವಳಿಕೆಯಲ್ಲೂ ನಾವೂ ಅಷ್ಟೆ ಪರಿಶುದ್ದಿಯಾಗಬೇಕಲ್ಲ?

ಸ್ನಾನ ಮಾಡಿ ಮಡಿ ಉಟ್ಟು ನಾಮ ಬಳಿದು ಭಕ್ತಿಯಿಂದ ( ಇದು ಕೇವಲ ಅಭಿನಯಮಾತ್ರ ಅಂತ ಸ್ವಲ ಗಂಭೀರವಾಗಿ ಯೋಚಿಸಿದರೆ ಅರಿವಾಗುತ್ತದೆ.) ಸಂಧ್ಯಾವಂದನೆ ಅಥವಾ ಪೂಜೆಗೆ ಅಣಿಯಾಗುತ್ತೇವೆ. ದೀಪ ಹಚ್ಚುವಾಗಲೇ ಮನೆ ಮಂದಿಯೊಂದಿಗೆ ಮಾತುಕತೆ ಜಗಳ ಅಥವಾ ಇನ್ನೇನೋ ಮತ್ತೊಂದು ವ್ಯವಹಾರ ಇದ್ದೇ ಇರುತ್ತದೆ. ಅಲ್ಲೇ ಇದ್ದ ಮೊಬೈಲ್ ರಿಂಗ್ ಆಗುತ್ತದೆ, ಇಲ್ಲ ಕಣ್ಣಿಗೆ ಬೀಳುತ್ತದೆ. ಮೊಬೈಲ್ ಎಂಬ ವಸ್ತು ಹೇಗೆಂದರೆ ಅದು ಕಣ್ಣಿಗೆ ಬಿದ್ದಾಗ ಎತ್ತಿಕೊಳ್ಳಬೇಕು. ಅದರ ಲಾಕ್ ತೆರೆದು ಸಹಜವಾಗಿ ವಾಟ್ಸಪ್, ಫೇಸ್ ಬುಕ್ ಮೇಸೆಜ್ ಇವಿಷ್ಟು ನೋಡಲೇ ಬೇಕು. ನಾವು ಹೊರಟ ಕೆಲಸ ಎನೋ ನಾವು ಮಾಡುತ್ತಿರುವುದೇನೋ. ದೇವರು ಅಂತ ನಾವು ಭಾವನೆ ಏನಿರುತ್ತದೆಯೋ ಅದಕ್ಕೆ ನಮ್ಮ ಆದ್ಯತೆ ಕಡಿಮೆಯಾಗಿರುತ್ತದೆ.   ಅಷ್ಟಾಗಿ ನಮ್ಮದು ನಮ್ಮ ಮಟ್ಟಿಗೆ ಭಕ್ತಿಯ ಪರಾಕಾಷ್ಠೆಯಾಗಿರುತ್ತದೆ. ನಮ್ಮ ಕ್ರಿಯೆ ಹೇಗಿರುತ್ತದೆ ಎಂದರೆ, ದೀಪ ಹಚ್ಚದೇ ಇದ್ದರೆ ಪೂಜೆ ಮಾಡದೇ ಇದ್ದರೆ ದೇವರು ಎಲ್ಲಿ ಕೋಪಿಸುತ್ತಾನೋ ಎಂಬ ಭಾವ ಇರುತ್ತದೆ. ಇದು ಭಕ್ತಿಯಲ್ಲದೆ ಕೇವಲ ಭಯ. ಭಯದಲ್ಲಿ ಭಕ್ತಿ ಇರುವುದಕ್ಕೆ ಸಾಧ್ಯವಿದೆಯೇ? ಯೋಚಿಸುವ ನಮ್ಮ ಕ್ರಿಯೆ ದೇವರನ್ನು ಅವಹೇಳನ ಮಾಡಿದಂತೆ ಅಲ್ಲವೇ. ದೇವರು ಎಂದರೆ ಕೇವಲ ನಮ್ಮ ನಂಬಿಕೆಯ ಸಂಕೇತ. ನಮ್ಮ ನಂಬಿಕೆಗೆ ನಾವು ಅವಹೇಳನ ಮಾಡುತ್ತೇವೆ ಎಂದಾದರೆ ನಮ್ಮ ವ್ಯಕ್ತಿತ್ವ ಎಂತಹುದು?  ನಾವು ನಮ್ಮ ಪರಿಸರವನ್ನು ಹೇಗೆ ಗೌರವದಿಂದ ಕಾಣಬಲ್ಲೆವು?

ಮನೆಯಲ್ಲಿ ಪುಟ್ಟ ಮಗುವಿರುತ್ತದೆ. ಊಟ ಮಾಡುವುದಕ್ಕೆ ಅದು ಒಪ್ಪದೆ ಹಟ ಮಾಡುತ್ತದೆ. ಆಗ ಅಮ್ಮ ಸಹಜವಾಗಿ ಹೇಳುವ ಮಾತು ಇರುತ್ತದೆ. ನೋಡು ಊಟ ಮಾಡು ಇಲ್ಲಾದರೆ ಮಾಮಿ(ದೇವರು) ಶಾಪ ಕೊಡ್ತಾನೆ....ದೇವರು ಎಂದರೆ ಭಕ್ತಿಯ ಬದಲು ಭಯವನ್ನೇ ಹುಟ್ಟಿಸುತ್ತೇವೆ. ಒಂದು ರೀತಿಯ ಭಯೋತ್ಪಾದನೆ. ದೇವರು ದೆಂದರೆ ಭಯ ಭಕ್ತಿ ಬೇಕು ಎನ್ನುವಾಗ ಭಕ್ತಿ ಬೇಕು ಆದರೆ ಭಯ ಅದು ಯಾಕೋ ನಮ್ಮ ಮತ್ತು ನಮ್ಮ ಆತ್ಮದ ಮಾನಸಿಕ ಸಂಬಂಧವನ್ನು ದೂರ ಮಾಡುತ್ತದೆ. ಹೀಗೆ ನಮ್ಮ ಮನಸ್ಸಿನೊಳಗೆ ಇಳಿಯುವುದುನ್ನು ನಾವು ಬಾಲ್ಯದಿಂದಲೇ ಕಳೆದುಕೊಳ್ಳುತ್ತೇವೆ.  ದೇವರಲ್ಲಿ ತಾದಾತ್ಮ್ಯವಾದ ಸಂಬಂಧ  ಮೂಡಬೇಕಾದರೆ ಭಯಕ್ಕಿಂತ ಭಕ್ತಿ ಅತ್ಯವಶ್ಯ. ಭಯವಿಲ್ಲದ ಭಕ್ತಿಯಾಗಬೇಕು. ಯೋಚಿಸಿ ಪ್ರೀತಿಯಿಂದ ಕಥೆ ಹೇಳಿ ನಕ್ಕು ನಗಿಸುವ ಅಜ್ಜ ಇಷ್ಟವಾಗುತ್ತಾರೆ, ಹೊರತು ಅದೇ ಅಜ್ಜ ಸಿಡಿ ಮಿಡಿಗೊಂಡು ಬೈಯುತ್ತಿದ್ದರೆ...ಆ ಅಜ್ಜ ಎಷ್ಟೇ ದೊಡ್ಡವರಾಗಲಿ ಮಕ್ಕಳಿಗೆ ಇಷ್ಟವಾಗುವುದಿಲ್ಲ.

ಯಾವುದೇ ಕಾರ್ಯ ಮಾಡುವಾಗ ನಾವು ನಮ್ಮ ಮನಸ್ಸಿಗೆ ಕೇಳಿಕೊಳ್ಳಬೇಕು. ಆ ಕಾರ್ಯವನ್ನು ನಾವೇಕೆ ಮಾಡುತ್ತೇವೆ.? ಮಗುವನ್ನು ಎತ್ತಿ ಆಡಿಸುತ್ತೇವೆ. ಯಾಕೆ ಆಡಿಸುತ್ತಿದ್ದೇವೆ? ಮಗುವನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದೇವೆ. ಯಾಕೆ? ಹೀಗೆ ನಮ್ಮ ಪ್ರತಿಯೊಂದು ಕೆಲಸದಲ್ಲೂ ಉದಾತ್ತವಾದ ಕಾರಣಗಳಿರಬಹುದು. ಅದೇ ರೀತಿ ದೇವರ ಮುಂದೆ ನಿಂತು ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ. ದೇವರಿಗೆ ಕೈ ಮುಗಿದು ಕಣ್ಣು ಮುಚ್ಚುತ್ತೇವೆ..ಮನಸ್ಸಿಗೆ ಕೇಳಿಬಿಡುವ ನಾವೇಕೆ ಕೈ ಮುಗಿದು ನಿಂತುಕೊಂಡಿದ್ದೇವೆ? ಯಾಕೆಂದರೆ ನಮ್ಮ ಮನಸ್ಸು ಬೇರೆನನ್ನೋ ಯೋಚಿಸುತ್ತಿದೆ.  ಯಾರೊಂದಿಗೋ ನಾವು ಮಾತನಾಡುತ್ತಿರಬಹುದು. ಕೈ ಮುಗಿಯುವುದು ಯಾಕೆ? ಕೈ ಮುಗಿಯುವಾಗಲೂ ಆತ್ಮವಂಚನೆ!!

ಸಂಧ್ಯಾವಂದನೆಗೆ ಕುಳಿತುಬಿಡುತ್ತೇವೆ. ಆಚಮನ ಮಾಡಿ ಸಂಕಲ್ಪ ಮಾಡಬೇಕಾದರೆ ಯಥಾ ಪ್ರಕಾರ ಮನೆಯ ಹೊರಗೆ ಯಾರೋ ಬಂದಿರುತ್ತಾರೆ, ಇಲ್ಲ ಮೊಬೈಲ್ ಫೋನ್ ಸದ್ದು ಮಾಡುತ್ತದೆ. ನಾವು ಎಲ್ಲವನ್ನು ಬಿಟ್ಟು ಹೊರಬರುತ್ತೇವೆ. ಇಲ್ಲ ಅಲ್ಲಿಂದಲೇ ಕೂಗಿ ಹೇಳುತ್ತೇವೆ. ಯಾರದು ? ನೋಡು. ಮತ್ತದೇ ದೇವರಿಗೆ ಅವಮಾನ ಮಾಡುತ್ತಿದ್ದೇವೆ.  ದಿನದ ಇಪ್ಪತ್ತನಾಲ್ಕು ಗಂಟೆಯಲ್ಲಿ ಒಂದು ಹತ್ತು ನಿಮಿಷ ನಾವು ಸಂಪೂರ್ಣವಾಗಿ ಸಮಯವನ್ನು ಪರಮಾತ್ಮನಿಗೆ ಮೀಸಲಾಗಿ ಇಡುವುದಕ್ಕೆ ಸಾಧ್ಯವಿಲ್ಲವಾದರೆ ಆ ಭಕ್ತಿಯಾಗಲೀ ಭಯವಾಗಲೀ ಕೇವಲ ಅಭಿನಯವಲ್ಲವೇ? ಯಾರಿಗೋ ತೋರಿಸುವುದಕ್ಕೆ ಅಥವಾ ಹೇಳಿಕೊಳ್ಳುವುದಕ್ಕೆ, ಇಲ್ಲಾ,  ನಮ್ಮ ಮನಸ್ಸಿನ ತೃಪ್ತಿಗೆ ನಮ್ಮ ಕ್ರಿಯೆಯಾಗಿರುತ್ತದೆ. ನಮ್ಮ ತೃಪ್ತಿ ಎಂಬುದು ಸ್ವಾರ್ಥದ ಒಂದು ಅಲ್ಲೂ ನಮ್ಮ ಸ್ವಾರ್ಥವೇ ಮುಖ್ಯ. ಸಂಧ್ಯಾವಂದನೆ ಅಥವ ನಿತ್ಯ ಪ್ರಾರ್ಥನೆ ಅದು ನಮ್ಮ ಕರ್ತವ್ಯವಾಗಿರುತ್ತದೆ. ಯಾಕೆಂದರೆ ಅಲ್ಲಿ ಯಾವುದೇ ಬೇಡಿಕೆ ಇರಬಾರದು. ಸ್ವಾರ್ಥವಿರಬಾರದು.  ಆವಾಗಲೇ ಅದು ಕರ್ತವ್ಯವಾಗುತ್ತದೆ. ಮಾಡುವ ಕೆಲಸ ಕರ್ಮ ಎಂದಾಗುತ್ತದೆ. ಅದನ್ನೆ ಕರ್ಮಣ್ಯೆ ವಾಧಿಕರಸ್ಥೆ ಅಂತ ಪರಮಾತ್ಮ ಹೇಳಿರುವುದು. ಆದರೆ ನಾವು ಮಾಡುವ ಯಾವುದೇ ಕೆಲಸವನ್ನು ಯಾಕಾಗಿ ಮಾಡುತ್ತಿದ್ದೇವೆ ಅಂತ ಕೇಳುವುದಿಲ್ಲ. ಸಹಜವಾಗಿ ಅದು ಒಂದು ಅಭಿನಯವೇ ಆಗಿರುತ್ತದೆ. ದೇವರು ಎಂಬ ಭಾವನೆಯಲ್ಲಿ ನಾವಾಡುವ ದೊಡ್ಡ ನಾಟಕ.

ಇಂದು ಮನುಷ್ಯನಿಗೆ ಆವಶ್ಯವಿರುವುದು ನಿರಾಳತೆ. ಯಾರಲ್ಲೇ ಕೇಳಿ ಎಷ್ಟು ನೆಮ್ಮದಿಯಿಂದ ಇದ್ದವರು ಸಿಗುವುದು ಕೆಲವು ಮಂದಿ. ಅಷ್ಟರಲ್ಲೂ ಅವರು ಅನುಭವಿಸುವ ನಿರಾಳತೆ ಕೇವಲ ಲೌಕಿಕ ಜೀವನಕ್ಕೆ ಹೊಂದಿಕೊಂಡು ಅದು ಸೀಮಿತವಾಗಿರುತ್ತದೆ. ನಿಜವಾದ ನಿರಾಳತೆ ಪರಿಚಯವೇ ಇರುವುದಿಲ್ಲ. ಹಾಗಾದರೆ ಅದೆಲ್ಲಿ ಸಿಗುತ್ತದೆ. ನಮ್ಮೊಳಗೇ ಇರುತ್ತದೆ.

ಬಹಳ ವರ್ಷದಿಂದ ಶೀತ ನೆಗಡಿ ಅಲರ್ಜಿಯಿಂದ ತೊಂದರೆ ಅನುಭವಿಸುತ್ತಿದ್ದ ನಾನು ಶಾಶ್ವತ ಸಮಸ್ಯೆ ಪರಿಹಾರಕ್ಕೆ  ಇತ್ತೀಚೆಗೆ ವೈದ್ಯರ ಬಳಿಗೆ ಹೋದೆ. ಅದು ಹೋಮಿಯೊ ಪತಿ ವೈದ್ಯರು. ಅದರ ಕ್ರಮದಂತೆ ನನ್ನ ಚರಿತ್ರೆಯನ್ನು, ನನ್ನ ಜೀವನ ಶೈಲಿಯನ್ನು ನನ್ನ ಮನಸ್ಥಿತಿಯನ್ನು ಎಲ್ಲಾ ತಿಳಿದುಕೊಂಡರು. ಒಂದಷ್ಟು ಔಷಧಿ ಕ್ರಮದಂತೆ ನೀಡಿದರು. ಎರಡು ವಾರ ಕಳೆದೆ ಔಷಧಿ ಪರಿಣಾಮಕಾರಿ ಅಂತ ಅನ್ನಿಸಲಿಲ್ಲ. ನನಗೆ ಅರಿವಿತ್ತು. ಅದು ಔಷಧಿಯ ಅಥವಾ ಚಿಕಿತ್ಸೆಯ ತೊಂದರೆಯಲ್ಲ. ಅದು ನನ್ನದೇ ತೊಂದರೆ. ಅದಕ್ಕೆ ಹೊಂದಿಕೊಂಡೇ ವೈದ್ಯರು ಹೇಳಿದರು.

" ನಿಮ್ಮ ಜೀವನ ಶೈಲಿಗೆ ಈ ಅಲರ್ಜಿ ಬರಬಾರದಿತ್ತು. ಅದ್ಭುತ ಜೀವನವನ್ನು ಜೀವಿಸುತ್ತಿದ್ದೀರ. ಎರಡು ಗಂಟೆ ಯೋಗ, ಧ್ಯಾನ, ನಿಯಮಿತ ಆಹಾರ ಸಹಜ ನಡವಳಿಕೆ ಹೀಗೆ ಅಧ್ಬುತ ಜೀವನ. ಆದರೂ ನಿಮ್ಮಲ್ಲಿ ರೋಗನಿರೋಧಕ ಶಕ್ತಿಯ ಕೊರತೆ ಇದೆ. ನಾವು ಅದಷ್ಟನ್ನೇ ಚಿಕಿತ್ಸೆ ಕೊಟ್ಟು ನೋಡಬಹುದು. ಆದರೆ ನಿಮ್ಮ ಮನಸ್ಸಿನ ಯೋಚನೆಗಳನ್ನು ಚಿಂತೆಗಳನ್ನು ನೀವು ದೂರವಿಡಬೇಕು. ಅರ್ಥಾತ್ ಯೋಚಿಸುವುದನ್ನು ಬಿಡಬೇಕು. ನಿವೆಷ್ಟು ಯೋಚಿಸುವುದನ್ನು ಕಡಿಮೆ ಮಾಡುತ್ತೀರೋ ಅಷ್ಟು ಬೇಗ ನಿಮ್ಮ ಅಲರ್ಜಿಯಿಂದ ಹೊರ ಬರುತ್ತೀರಿ. ನಂತರ ನಿಮಗೆ ಔಷಧಿಯ ಅವಶ್ಯಕತೆ ಇರುವುದಿಲ್ಲ."  ಎಂತಹಾ ಸಲಹೆ? ಯೋಚನೆ ಬೇಡಾ ಎನ್ನುವ ನನಗೇ ಮತ್ತಷ್ಟು ಯೋಚನೆಯಾಯಿತು. ಇದಕ್ಕೆ ಒಂದೇ ಪರಿಹಾರ ನಿರಾಳತೆ ಒದಗಿಸಿಕೊಳ್ಳಬೇಕು. ನಾನೆಷ್ಟು ಚಿಂತಿಸುವುದನ್ನು ಕಡಿಮೆ ಮಾಡುತ್ತೇನೊ ಅಷ್ಟು ನನ್ನಲ್ಲಿ ಆಮ್ಲಜನಕ ತುಂಬಿಕೊಳ್ಳುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಮುತ್ತಿನಂತಹ ಸಲಹೆ.  ಹಾಗಾಗಿ ಮತ್ತಷ್ಟು ಅ ಬಗ್ಗೆ ಉದ್ಯುಕ್ತನಾದೆ. ನಾನು ಯಾರಿಂದ ಸಮಸ್ಯೆ ಅನುಭವಿಸುತ್ತೇನೋ ಎಲ್ಲರಲ್ಲೂ ಸಹಜವಾಗಿ ವ್ಯವಹರಿಸುವುದಕ್ಕೆ ಅಭ್ಯಾಸ ಮಾಡತೊಡಗಿದೆ. ಈಗ ಅದೇ ಹಾದಿಯಲ್ಲಿದ್ದೇನೆ. ನಿರಾಳತೆಯನ್ನು ಅನುಭವಿಸುತ್ತಿದ್ದೇನೆ. 

ದೇವರು  ಎಂಬ ಪರಮಾತ್ಮನಿಗೆ ಹಲವು ಹೆಸರುಗಳಿರಬಹುದು. ಎಲ್ಲದಕ್ಕೂ ಗಹನವಾದ ಗಂಭೀರವಾದ ಅರ್ಥವಿರಬಹುದು. ಅದೆಲ್ಲವನ್ನು ಬದಿಗಿರಿಸಿ, ಯಾಕೆಂದರೆ ಪರಮಾತ್ಮ ಚಿಂತನೆಯೊಂದೇ  ಪರ್ಯಾಪ್ತವಾದ ನಿರಾಳತೆಯನ್ನು ಒದಗಿಸಬಲ್ಲುದು. 

ಹೀಗೆ  ನಮ್ಮ ಮನೆಯಲ್ಲಿ ಪುಟ್ಟ ಮಗುವಿರುತ್ತದೆ. ಅದಕ್ಕೆ ನಿಜವಾದ ಹೆಸರು ಒಂದಿರುತ್ತದೆ. ಅದು ಸುಂದರವಾಗಿರುತ್ತದೆ. ಆದರೂ ನಾವು ಮುದ್ದಾಗಿ ಇನ್ನೊಂದು ಹೆಸರಿನಿಂದ ಕರೆಯುತ್ತೇವೆ....ತುಕ್ಕು ಪಕ್ಕು ಹೀಗೆ. ಅದು ನಮ್ಮ ಮನಸ್ಸಿಗೆ ಹಿತವಾದ ಅನುಭವವನ್ನು ಕೊಡುವ ಹೆಸರು. ಹಲವು ಸಲ ಆ ಹೆಸರಿನಿಂದ ಕರೆದರೆ ಮಾತ್ರಾ ಮಗು ನಗುತ್ತಾ ಹತ್ತಿರ ಬರುತ್ತದೆ. ಮುದ್ದಿಸಿಕೊಳ್ಳುತ್ತದೆ.  ನಿಜವಾದ ಹೆಸರಿಗಿಂತಲೂ ಈ ಮುದ್ದಾದ ಅಡ್ಡ ಹೆಸರೇ ಭಾವನಾತ್ಮಕವಾದ ಮಾನಸಿಕ ಸಂಭಂಧವನ್ನು ಹೊಂದಿರುತ್ತದೆ. ಹಲವು ಸಲ ಮಗು ಬೆಳೆದು ದೊಡ್ಡವನಾದರೂ ಈ ಅಡ್ಡ ಹೆಸರು ಶಾಶ್ವತವಾಗಿ ಆ ಮಾನಸಿಕ ಸಂಬಂಧಕ್ಕೆ ಸಾಕ್ಷಿಯಾಗಿರುತ್ತದೆ. ವಿಚಿತ್ರವೆಂದರೆ ಆ ಹೆಸರಿಗೆ ಅರ್ಥವೇ ಇರುವುದಿಲ್ಲ!

ಹೀಗೆ ಮುಖ್ಯವಲ್ಲದ ಅರ್ಥವಿಲ್ಲದ ಹೆಸರು ಬದುಕಿಗೆ ಪ್ರಧಾನವಾಗುವುದು ಅದರ ಅರ್ಥದಿಂದ ಅಲ್ಲ. ಅದರ ಭಾವದಿಂದ. ಯೋಚಿಸೋಣ ನಾವು ದೇವರನ್ನೂ ಇದೇ ಭಾವದಿಂದ ಒಂದು ಮುದ್ದಾದ ಹೆಸರನ್ನು ಹಿಡಿದು ಕರೆಯಬಾರದೇಕೆ?  ಬಹಿರಂಗವಾಗಿ ಅಲ್ಲದೇ ಇದ್ದರೆ ಕೇವಲ ನಮ್ಮ ಮನಸ್ಸಿನ ಒಳಗಿನಿಂದ ನಮ್ಮ ಭಗವಂತನನ್ನು ಕರೆಯಬಾರದೇಕೆ. ಈಗ ಮನಸ್ಸಿನಲ್ಲೇ ಉದ್ಗರಿಸಿ ಹೇ ಭಗವಂತ.. ಇಲ್ಲಿ ಕೃಷ್ಣನೂ ಇಲ್ಲ ಈಶ್ವರನೂ ಇಲ್ಲ ಯಾರೂ ಇಲ್ಲದ ಒಂದು ಆತ್ಮ ಸಂಬಂಧ ತಾದಾತ್ಯ್ಮವಾಗಿ ಬೆಳೆಯುತ್ತದೆ. ಮಾತ್ರವಲ್ಲ ಇದು ನಿಮ್ಮ ಉಳಿದೆಲ್ಲ ಕ್ರಿಯೆಯಿಂದಲು ನಿಮ್ಮನ್ನು ದೂರವಾಗಿರಿಸುತ್ತದೆ. ಮುಖ್ಯವಾಗಿ ಅದು ಉಚ್ಚರಿಸಿದಂತೆ ನಮ್ಮ ಮನಸ್ಸಿನಲ್ಲಿ ಭಗವಂತನಿದ್ದಾನೆ ಎಂಬ ಅನುಭವ ದಟ್ಟವಾಗುತ್ತದೆ.

ಪ್ರತಿಯೊಬ್ಬರ ಮನಸ್ಸಿನಲ್ಲೂ  ದೇವರಿದ್ದಾನೆ. ಆತ್ಮ ಎಂದರೆ ಪರಮಾತ್ಮ. ದೇಹ ಮನಸ್ಸು ಆತ್ಮ ಹೀಗೆ ಯೋಚಿಸುವುದೇ ಆಧ್ಯಾತ್ಮ. ಆಧ್ಯಾತ್ಮದಲ್ಲಿ ದೇವರು ಎಂಬುದು ಹೊರಗಿಲ್ಲ. ನಮ್ಮೊಳಗೇ . ಜ್ಞಾನಿಗಳು ಹೇಳುತ್ತಾರೆ. ಆಧ್ಯಾತ್ಮ ಅಂದರೆ ಏನು? ಇದುವೇ ಅದು. ಅದುವೇ ಇದು. ಈ ದೇಹವೇ ಪರಮಾತ್ಮ. ಆ ಪರಮಾತ್ಮನೇ ಈ ದೇಹ. ಅದನ್ನೇ ಅದ್ವೈತ ಎಂದು ಕರೆದರು.  ಬಹಳ ಸರಳವಾಗಿದೆ. ಮಾತ್ರ ಅಷ್ಟೆ ಕ್ಲಿಷ್ಟವಾಗಿದೆ. ಯಾಕೆಂದರೆ ನಮ್ಮ ದೇಹ ಮತ್ತು ಆತ್ಮದ ನಡುವೆ ಈ ಪ್ರಪಂಚ ಬೆಳೆದು ಬಿಟ್ಟಿದೆ. ಅದರ ವ್ಯವಹಾರ ತುಂಬಿಕೊಂಡಿದೆ. ನಾವು ಅದರಿಂದ ಹೊರಬರಬೇಕು. 

ಮನಸ್ಸಿನಲ್ಲಿ ಪರಮಾತ್ಮ ಇದ್ದಾನೆ. ನಮ್ಮೊಳಗೇ ದೇವರಿದ್ದಾನೆ. ಹೀಗೆ ಆಧ್ಯಾತ್ಮ ದಿವ್ಯ ತತ್ವವನ್ನು ಅರಿತಿದ್ದರೂ ನಾವು ಅದನ್ನು ನಂಬಿಕೊಂಡಂತೆ ಇರುವುದಿಲ್ಲ. ಯಾಕೆ ದೇವರನ್ನು ನಮ್ಮೊಳಗೆ ಇದ್ದಾನೆ ಎಂದು ನಾವು ಭಾವಿಸುತ್ತಿಲ್ಲ? ಕಾರಣ ಸುಲಭ... ದೇವರು ನಮ್ಮೊಳಗೆ ಇರುವಾಗ ನಾವು ಪ್ರಾಮಾಣಿಕರಾಗಿರಬೇಕಾಗುತ್ತದೆ. ಸತ್ಯವಂತರಾಗಿರಬೇಕಾಗುತ್ತದೆ. ಪವಿತ್ರ ಮನಸ್ಸು ಇರಬೇಕಾಗುತ್ತದೆ. ಸನ್ಮನಸ್ಸು ಸಚ್ಚಿಂತನೆ ಸದುದ್ದೇಶ, ಸತ್ ಸಂಕಲ್ಪ ಇರಬೇಕಾಗುತ್ತದೆ. ನಮ್ಮ ಜೀವನದಲ್ಲಿ ಅದನ್ನು ಕೈ ಬಿಡುತ್ತೇವೆ. ವಂಚನೆ ಸುಳ್ಳು ಇವುಗಳನ್ನೇ ನೆಚ್ಚಿಕೊಂಡು ನಾವು ಅಪ್ರಾಮಾಣಿಕರಾಗಿ ದೇವರನ್ನು ನಮ್ಮ ಒಳಗಿನಿಂದ ಹೊರ ಹಾಕುತ್ತೇವೆ. ಅಥವಾ ನಮ್ಮೊಳಗೆ ದೇವರಿದ್ದಾನೆ ಎಂದು ನಾವು ಯೋಚಿಸುವುದಿಲ್ಲ. ಅದ್ವೈತವನ್ನು ಬೋಧಿಸುವ ಆದಿ ಶಂಕರನನ್ನು ಮಹಾ ಗುರುವಾಗಿ ಕಾಣುತ್ತೇವೆ. ಆದರೆ ಅದ್ವೈತ  ಎಂಬುದು ನಮ್ಮ ಅನುಭವದಲ್ಲಿ ಇರುವುದಿಲ್ಲ. ದೇವರನ್ನು ಒಳಗಿನಿಂದ ತೆಗೆದು ದೂರದಲ್ಲಿ ಎಲ್ಲೋ ಇರಿಸಿ ಅಧ್ದೂರಿಯಿಂದ ವಿಜ್ರಂಭಣೆಯಿಂದ ಪೂಜೆ ಮಾಡುತ್ತೇವೆ. ನಮ್ಮೊಳಗಿನ ದೇವರಿಗಿಂತಲೂ ಆ ದೇವರನ್ನೆ ಹೆಚ್ಚು ನಂಬಿಕೊಳ್ಳುತ್ತೇವೆ. ಅಥವ ನಮ್ಮ ಮನಸ್ಸಿನ ದೇವರು ಅದೇ ಎಂದು ಭ್ರಮಾಧೀನರಾಗಿಬಿಡುತ್ತೇವೆ. ಯಾಕೆಂದರೆ ದೇವರನ್ನು ನಮ್ಮೊಳಗೆ ಇರಿಸುವ ಪ್ರಾಮಾಣಿಕತೆ ನಮ್ಮಲ್ಲಿ ಇದೆ ಎಂಬ ಭರವಸೆಯೇ ನಮ್ಮಲ್ಲಿ ಇರುವುದಿಲ್ಲ.

ಎಲ್ಲ ಪೂಜೆ ಪುನಸ್ಕಾರಗಳಿಂದಲು ನಾಮ ಸ್ಮರಣೆ ಅತ್ಯಂತ ಶ್ರೇಷ್ಠ. ದಾಸ ವರೇಣ್ಯರೂ ಸ್ವತಃ ಅನುಭವಿಸಿ ಹೇಳಿದ ಮಾತು. ಹನುಮನ ಕಥೆ, ಪ್ರಹ್ಲಾದ ಮಾರ್ಕಾಂಡೇಯರ ಕಥೆ ಇದನ್ನೇ ಹೇಳುತ್ತವೆ. ಈ ಭಕ್ತ ವರೇಣ್ಯರು ಯಾವ ಪೂಜೆಯನ್ನೂ ಮಾಡಲಿಲ್ಲ. ಯಾವ ಹರಕೆಯನ್ನು ಹೊರಲಿಲ್ಲ. ಯಾವ ದೇಗುಲಕ್ಕೂ ಪ್ರದಕ್ಷಿಣೆ ಬರಲಿಲ್ಲ. ಕೇವಲ ಪರಮಾತ್ಮನ ಸ್ಮರಣೆ ಮಾತ್ರ. ದೇವಾಲಯ ಎಂಬುದು ಭಕ್ತಿ ಮಾರ್ಗಕ್ಕೆ ಒಂದು ಪರಿಕರ. ಆದರೆ ಈ ಭಕ್ತಿ ಮಾರ್ಗದಲ್ಲಿ ನಾವೆಷ್ಟು ವಿಚಲಿತರಾಗುತ್ತೇವೋ ಅಷ್ಟು ಆ ಮಾರ್ಗ ಕ್ರಮವನ್ನು ಕಠಿಣಗೊಳಿಸುತ್ತದೆ. ದೇಹದ ಮೇಲೆ ನಾವೆಷ್ಟು ಆಡಂಬರದ ಉಡುಪು ಆಭರಣವನ್ನು ತೊಡುತ್ತೇವೋ ಅಷ್ಟು ನಮ್ಮನ್ನು ನಾವು ಕಳೆದುಕೊಳ್ಳುತ್ತೇವೇ. ಹಾಗಂತ ಲೌಕಿಕ ಪ್ರಪಂಚದಲ್ಲಿ ಎಲ್ಲವನ್ನು ಕಳೆದುಕೊಳ್ಳುವುದು ಸಭ್ಯತೆಯೂ ಅಲ್ಲ. ಆದರೂ ಮನಸ್ಸಿನಿಂದ ನಾವು ಎಲ್ಲವನ್ನು ಕಳೆದುಕೊಳ್ಳಬಹುದು. ಅರ್ಥಾತ್ ನಮ್ಮ ಆರಾಧನೆ ಕ್ರಮಗಳು ಸರಳವಾಗಬೇಕು. ಆಡಂಬರದ ಭಕ್ತಿ ಪರಮಾತ್ಮನ ಇರವನ್ನು ಮರೆಮಾಚುತ್ತದೆ. ನಾವು ಯಾವುದನ್ನೋ ಭಗವಂತ ದೇವರು ಎಂದು ಯೋಚಿಸಿ ನಿಜವಾದ ಪರಮಾತ್ಮ ಅನುಗ್ರಹದಿಂದ ದೂರಾಗುತ್ತಿದ್ದೇವೆ.

 

 


Monday, November 16, 2020

ನವರಸ ಬ್ರಹ್ಮ ಜಗತೀ ಶ್ರೀಕುಮಾರ್

 

ನಟನೆ,  ಜಗತ್ತಿನ ಅತ್ಯಂತ ದೊಡ್ಡ ಕಲೆ ಯಾವುದು ಅಂತ ಕೇಳಿದರೆ ಇದನ್ನೇ ಹೇಳಬಹುದೇನೋ. ಕಲೆ ಹಲವಿರಬಹುದು. ಅದರಲ್ಲಿ ಇದು ಮಿಳಿತವಾಗಿರುವುದೇ ಹೆಚ್ಚು.ಕೆಲವು ಕಲೆಯಲ್ಲಿ ಪ್ರಧಾನ ಅಂಗವೇ ಇದು. ನವರಸಗಳೇ ಈ ನಟನೆಯ ಪ್ರಧಾನ ಅಸ್ತ್ರಗಳು. ಯಾವ ನಟ ಈ ರಸದ ಅನುಭವವನ್ನು ಪಡೆಯುತ್ತಾನೋ ಆತ ಶ್ರೇಷ್ಠ ನಟನಾಗುತ್ತಾನೆ.

“ಉದಯನಾಣು ತಾರಂ” ಒಂದು ಜನಪ್ರಿಯ ಮಲಯಾಳಂ ಸಿನಿಮಾ. ಮೋಹನ್ ಲಾಲ್ ಪ್ರಧಾನ ನಟನಾಗಿರುವ ಈ ಸಿನಿಮಾದಲ್ಲಿ ಒಂದು ಸನ್ನಿವೇಶ ಇರುತ್ತದೆ. ಇಲ್ಲಿ ನಟನೆ ಎಂದರೇನೆಂದು ತಿಳಿಯದ ಮೂರ್ಖನಿಗೆ ನಟನೆ ಕಲಿಸುವುದಕ್ಕಾಗಿ ಒಬ್ಬ ಬರುತ್ತಾನೆ. ಆತ ಕ್ಷಣ ಮಾತ್ರದಲ್ಲಿ ನವರಸಗಳನ್ನು ಮುಖದಲ್ಲಿ ತೋರಿಸುವ ಸನ್ನಿವೇಶವಿದೆ. ಕೇವಲ ಕೆಲವೇ ಕ್ಷಣದಲ್ಲಿ ಅ ನವರಸಗಳನ್ನು ಒಂದಾದ ಮೇಲೊಂದರಂತೆ ತೋರಿಸುವ ಸನ್ನಿವೇಶವದು. ವಾಸ್ತವದಲ್ಲಿ ಹಾಸ್ಯ ಬಿಂಬಿಸುವ ಸನ್ನಿವೇಶವಾದರೂ ಆ ಹಾಸ್ಯಕಲಾವಿದನ ನವರಸ ಪ್ರಕಟನೆ ಮಾತ್ರ ಅಧ್ಬುತವಾಗಿರುತ್ತದೆ. ಸಾಲದೆಂಬಂತೆ ನವರಸಗಳು ಮುಗಿಸಿ ಹತ್ತನೆಯದ್ದು ನನ್ನದು ಅಂತ ವಿಭಿನ್ನ ಮುಖ ಭಾವವನ್ನು ತೋರಿದಾಗ ನಗದೇ ಇರುವ ಪ್ರೇಕ್ಷಕ ಇರುವುದಕ್ಕೆ ಸಾಧ್ಯವಿಲ್ಲ. ಹಲವು ಸಲ ನೋಡಿದರೂ ಒಂದು ಕಿರುನಗುವನ್ನಾದರೂ ತರಿಸುವ ಈ ಹಾಸ್ಯ ಮಯ ಸನ್ನಿವೇಶ ಆ ಸಿನಿಮಾದ ವಿಶೇಷಗಳಲ್ಲಿ ಒಂದು. ಆ ನವರಸವನ್ನು ತೋರಿಸಿದ ಮಹಾನ್ ನಟನೆಂದರೆ ಅದು ಸಿನಿಮಾ ಲೋಕ ಕಂಡ ಅದ್ಭುತ ಹಾಸ್ಯ ನಟ ಜಗತೀ ಶ್ರೀ ಕುಮಾರ್.

 ಜಗತೀ ಶ್ರಿಕುಮಾರ್ ಮಲಯಾಳಂ ಸಿನಿಮ ಕಂಡವರು ಈ ಹೆಸರನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಜಗತಿ ಎಂಬುದು ತಿರುವನಂತ ಪುರಂ ಸಮೀಪದ ಊರ ಹೆಸರು. ಆ ಊರಿಗೆ ಸಿನಿಮಾರಂಗದಲ್ಲಿ ಪ್ರಸಿದ್ಧಿಯನ್ನು ತಂದುಕೊಟ್ಟ ನಟ.

ನಾವು ನಮ್ಮ ಮನೆಯೊಳಗೆ ಸುತ್ತಾಡುವುದು ಸುಲಭ. ಅದರ ಸಂದುಗೊಂದುಗಳು ನಮಗೆ ಬೇಡವೆಂದರೂ ಚಿರಿಪರಿಚಿತ, ಆದರೂ ನಾವು ನಮ್ಮದೇ ಮನೆಯ ನೋಡದೇ ಇರುವ ಭಾಗ ಹಲವಿರಬಹುದು. ಅದನ್ನು ನೋಡುವ ತುಡಿತ ಒತ್ತಟ್ಟಿಗೆ ಇಟ್ಟು ಮತ್ತೊಬ್ಬರ ಮನೆಗೆ ಹೋಗುತ್ತೇವೆ. ಅಲ್ಲೆಲ್ಲ ಸುತ್ತಾಡುತ್ತೇವೆ. ಅಪರಿಚಿತ ಎನ್ನಿಸುವವುಗಳನ್ನು ಅರಿಯುವುದಕ್ಕೆ ಯತ್ನಿಸುತ್ತೇವೆ. ಇದು ಸಹಜ. ಹಾಗೆ ಮಲಯಾಳಂ ಚಿತ್ರಗಳು ನನಗೆ ಕೌತುಕವನ್ನು ಸೃಷ್ಟಿಸುತ್ತಾ ಹೋದವುಗಳು. ಆ ಕೌತುಕಗಳಲ್ಲಿ ಮಹಾ ಕೌತುಕವೆಂದರೆ ಈ ಜಗತೀ ಶ್ರೀ ಕುಮಾರ್ ನಟನ ಪಾತ್ರಗಳು.


ಚಾರ್ಲೀ ಚಾಪ್ಲಿನ್ , ಜಗತ್ತಿನ ಅತ್ಯಂತ ಶ್ರೇಷ್ಠ ನಟ. ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ನಟ ಯಾರೂಂತ ಕೇಳಿದರೆ ಹಲವು ಮಹನೀಯರು ಇದನ್ನೇ ಹೇಳುತ್ತಾರೆ. ಸಹಜ ಅಭಿನಯದ ಪರಾಕಾಷ್ಠೆಯದು. ಇಂದಿನ ಬಣ್ಣದ ಯುಗದಲ್ಲೂ ಆ ಕಪ್ಪು ಬಿಳುಪು ಕಾಲದ ನಟನನ್ನು ಹಿಂದಿಕ್ಕುವ ನಟ ಹುಟ್ಟಲಿಲ್ಲ ಎಂದರೆ ನಟನೆ ಎಂಬುದು ಇರುವುದು ಭಾಷೆಯಿಂದಲ್ಲ, ಆಡಂಬರದಲ್ಲಿ ಅಲ್ಲ. ಅದರ ಸಹಜತೆಯಲ್ಲಿ. ನೈಜ ನಟನೆ ಅಂತ ನಟನೆಯನ್ನು ಹೇಳುವುದಕ್ಕಿಲ್ಲ. ಯಾಕೆಂದರೆ ನಟನೆ ಎಂಬುದೇ ಕಪಟ. ಅಲ್ಲಿ ನೈಜತೆಯ ಸೃಷ್ಟಿಯಾಗಬೇಕಾದರೆ ಈ ಕಪಟತ್ವವನ್ನು ಅರಿಯಬೇಕು. ಚಾಪ್ಲೀನ್ ಪಾತ್ರಗಳು ಈ ಭ್ರಮೆಯನ್ನು ಸೃಷ್ಟಿಸುತ್ತವೆ. ಚಾಪ್ಲಿನ್ ಕಾಲ ಸಂದು ಹೋಯಿತು. ನನ್ನಲ್ಲಿ ಯಾರಾದರೂ ಶ್ರೇಷ್ಠ ನಟ ಯಾರೂ ಎಂದು ಕೇಳಿದರೆ ನಾನು ಹೇಳುವುದು ಜಗತಿ ಶ್ರೀಕುಮಾರ್. ಆ ಭ್ರಮೆಯನ್ನು ನನ್ನಲ್ಲಿ ಸೃಷ್ಟಿಸಿದ ಮಹಾನ್ ನಟ.

ಜಗತಿ ಅಭಿನಯಿಸದ ಪಾತ್ರಗಳಿರುವುದಕ್ಕೆ ಸಾಧ್ಯವೇ ಇಲ್ಲ. ಸುಮಾರು ಸಾವಿರಕ್ಕೂ ಮಿಕ್ಕಿ ಸಿನಿಮಾದಲ್ಲಿ ನಟಿಸಿದ ನಟ. ಅದರಲ್ಲು ಜಾಗತಿಕ ದಾಖಲೆಯನ್ನು ಬರೆದ ನಟ. ಇದು ಸಾರ್ವಕಾಲಿಕ ದಾಖಲೆ.  ಹಾಸ್ಯ ಒಂದು ರಸವಾದರೂ ಆ ಹಾಸ್ಯದಲ್ಲೇ ಎಲ್ಲವನ್ನು ತೋರಿಸುವ ನಟನಾ ಸಾಮಾರ್ಥ್ಯ ಈತನ ನಟನೆಯಲ್ಲಿದೆ. ಇಂತಹ ಪಾತ್ರ ಎಂದು ಈ ನಟನನ್ನು ವರ್ಗಿಕರಿಸುವುದಕ್ಕೆ ಸಾಧ್ಯವಿಲ್ಲದದಷ್ಟು ನಟನೆ ಬೆಳೆದು ಬಿಟ್ಟಿದೆ. ಪಾತ್ರ ಯಾವುದೇ ಇರಲಿ ಜಗತಿ ಶ್ರೀಕುಮಾರ್ ಅಭಿನಯ ಪ್ರತಿ ಪಾತ್ರವನ್ನು ಸೃಷ್ಟಿಮಾಡುತ್ತವೆ. 

ನಟನೆ ಎಂದಾಗ ಹಲವು ವ್ಯಾಖ್ಯಾನಗಳನ್ನು ಕೇಳಬಹುದು. ಒಬ್ಬ ನಟ ಒಳ್ಳೆಯ ಕಣ್ಣೀರು ಸುರಿಸಿ ಅಭಿನಯಿಸುತ್ತಿದ್ದರೆ ಅದನ್ನು  ಶ್ರೇಷ್ಠ ಅಭಿನಯ ಎಂದು ತಿಳಿಯುವವರಿದ್ದಾರೆ. ಆದರೆ ನಟನೆ ಎಂಬುದು ಕೇವಲ ಒಂದು ಭಾವಕ್ಕೆ ಸೀಮಿತವಾಗಿರುವುದಿಲ್ಲ ಎಂದು ಅರಿವಾಗಬೇಕಾಗದರೆ ಜಗತೀ ಪಾತ್ರಗಳನ್ನು ನೋಡಬೇಕು. ಆತನ ನಟನೆ ಎಂದರೆ ಏನು ಎಂಬುದರ ಪಾಠ ಇವುಗಳಲ್ಲಿ ಕಾಣಬಹುದು. ಹೀಗಾಗಿಯೆ ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಹೇಳುವಂತೆ ಜಗತೀ ಕ್ಯಾಮೆರಾದ ಎದುರು ನಟಿಸುತ್ತಿದ್ದರೆ ನಾವು ನಮ್ಮ ನಿರ್ದೇಶನವನ್ನು ಕ್ಯಾಮೆರಾವನ್ನು ಮರೆತುಬಿಡುತ್ತೇವೆ. ಒಬ್ಬ ಸಮರ್ಥ ನಿರ್ದೇಶಕ ನಟನ ಸಂಪೂರ್ಣ ಪ್ರತಿಭೆಯನ್ನು ಉಪಯೋಗಿಸುವುದಕ್ಕೆ ಯತ್ನಿಸುತ್ತಾನೆ. ಆದರೆ ಜಗತಿಯ ಪೂರ್ಣ ಪ್ರತಿಭೆಯನ್ನು ಉಪಯೋಗಿಸುವುದು ಯಾರಿಂದಲೂ ಸಾಧ್ಯವಿಲ್ಲ.

ಸಾಮಾನ್ಯವಾಗಿ ಒಬ್ಬ ಸಿನಿಮಾ ನಟನ ಪಾತ್ರಗಳನ್ನು ನೋಡುವಾಗ ಕೆಲವೇ ಕೆಲವು ಮಾತ್ರ ಇಷ್ಟ ಅಂತ ಹೆಸರಿಸುವುದಕ್ಕೆ ಸಾಧ್ಯವಾಗುತ್ತದೆ. ಆದರೆ ಜಗತಿಯ ಯಾವ ಪಾತ್ರವನ್ನೂ ಹೀಗೆ ವರ್ಗೀಕರಿಸುವುದು ಕಷ್ಟವಾಗುತ್ತದೆ. ಪ್ರತಿಯೊಂದರಲ್ಲೂ ಜಗತಿಯ ನೈಜತೆಯ ಭ್ರಮೆ ನಮ್ಮನ್ನು ಬಿಡುವುದೇ ಇಲ್ಲ. ಆದರೂ ಆತನ ಪಾತ್ರಗಳಲ್ಲಿ ನಮ್ಮ ಅಭಿರುಚಿಗೆ ತಕ್ಕಂತೆ ವರ್ಗೀಕರಿಸಿದರೂ ಅದು ಪರಿಪೂರ್ಣವಲ್ಲ, ಆದರೂ ಆತನ ಕೆಲವು ಪಾತ್ರಗಳನ್ನು ಉಲ್ಲೇಖಿಸಬಹುದು.  ವಿಕೀ ಪೀಡಿಯಾ ಕೂಡ ಆತನ ಸಂಪೂರ್ಣ ಪಾತ್ರಗಳನ್ನು ಹೇಳುವುದಕ್ಕೆ ಅಸಮರ್ಥವಾಗಿದೆ. ಅಷ್ಟೊಂದು ಸಿನಿಮಾಗಳು. ಮಲಯಾಳ ಚಿತ್ರರಂಗವನ್ನು ಈ ಬಗೆಯಲ್ಲಿ ವ್ಯಾಪಿಸಿದ ನಟ ಇನ್ನೊಬ್ಬ ಇರಲಾರ. ಬಹುಶಃ ಭಾರತೀಯ ಚಿತ್ರರಂಗದಲ್ಲೇ ಇರುವುದಕ್ಕೆ ಸಾಧ್ಯವಿಲ್ಲ.

ಕಿಲುಕ್ಕಂ ಚಿತ್ರದ ಫೋಟೋಗ್ರಾಫರ್ ಗೈಡ್ ನಿಶ್ಚಲ್, ಹಾಗೆ ಅವಿಟ್ಟಂ ತಿರುನಾಳ್ ಆರೋಗ್ಯ ಶ್ರೀಮಾನ್ ಸಿನಿಮಾದ ವಯೋವೃದ್ಧ ಅಚ್ಚುತ ಕುರುಪ್,ಕಾಬೂಲಿವಾಲದ ಕಡಲಾಸು, ಮಿಂಡಾ ಪೂಚಕ್ಕು ಕಲ್ಯಾಣಂ ನ   , ಹೆಂಡತಿ ಗುಲಾಮ ಇವುಗಳೆಲ್ಲ ಮತ್ತೊಬ್ಬ ನಟ ಹೀಗೆ ಅಭಿನಯಿಸುವುದಕ್ಕೆ ಸಾಧ್ಯವಿಲ್ಲ. ಯಾವುದೇ ಇಮೇಜ್ ಇಲ್ಲದ ಪಾತ್ರಗಳನ್ನು ಅಭಿನಯಿಸಿ ಸ್ವತಃ ಇಮೇಜ್ ಗಳಿಗೆ ಸವಾಲಾಗಿ ನಿಂತ ನಟ. ಒಬ್ಬ ನಟನಿಗೆ ಸಂಬಂಧಿಸಿದಂತೆ ಶರೀರ ಭಾಷೆ ಅತ್ಯಂತ ಪ್ರಧಾನವಾಗಿರುತ್ತದೆ. ಜಗತಿಯ ಪಾತ್ರಗಳು ಈ  ಶರೀರ ಭಾಷೆಯ ಆದ್ಯಾಕ್ಷರದಿಂದ ವ್ಯಾಕರಣದವರೆರೂ  ಪಾಠವನ್ನು ಕಲಿಸುತ್ತವೆ.

 ನಾವು ಸಿನಿಮಾವನ್ನು ಕಾಣುವಾಗ ಪಾತ್ರದ ಮುಖೇನ ಕಾಣಬೇಕು. ವ್ಯಕ್ತಿ ನಿಷ್ಠವಾಗಿ ಕಾಣಬಾರದು. ವ್ಯಕ್ತಿಯನ್ನು ಅಥವಾ ನಟನನ್ನು ಹೊಂದಿಕೊಂಡು ಪಾತ್ರ ಬೆಳೆಯಬಾರದು. ಪಾತ್ರವನ್ನು ಹೊಂದಿಕೊಂಡು ನಟ ಬೆಳೆಯಬೇಕು.  ಪಾತ್ರ ಪಾತ್ರದೊಳಗೆ ಆ ವ್ಯಕ್ತಿ ಗೋಚರವಾಗುತ್ತಾನೆ ಎಂದಾದರೆ ಅಲ್ಲಿ ನಟನೆ ಸೋಲುತ್ತದೆ ಎಂಬುದೇ ಅರ್ಥ. ಈ ವೆತ್ಯಾಸಗಳನ್ನು ಅರಿಯಬೇಕಾದರೆ ಜಗತಿಯ ಪಾತ್ರಗಳನ್ನು ನೋಡಬೇಕು. ಅಲ್ಲಿ ನಟನೆ ಇದೆ ಎಂದೇ ಅನಿಸುವುದಿಲ್ಲ. ಎಲ್ಲವು ಪರಕಾಯ ಪ್ರವೇಶದ ಸೀಮಾರೇಖೆಯನ್ನು ದಾಟುವ ಯತ್ನ ಮಾಡುತ್ತವೆ. ಒಬ್ಬ ನಟನಾದವನಿಗೆ ನವರಸಗಳೂ ಕೂಡ ಸವಾಲಾಗುತ್ತವೆ. ಯಾವುದೇ ಪಾತ್ರವನ್ನು ಪರಿಪೂರ್ಣವಾಗಿ ಅಭಿನಯಿಸುವ, ಅದು ಸಜ್ಜನ ನಾಯಕನಾಗಲೀ ಕಳ್ಳನಾಗಲೀ ಕುಡುಕನಾಗಲಿ ಸಮಾಜದ ಯಾವುದೇ ವ್ಯಕ್ತಿಯಾಗಲೀ ಎಲ್ಲ ಇಮೇಜ್ ಗಳನ್ನು ಮೀರಿ ಅಭಿನಯಿಸುವುದಕ್ಕೆ ಸಮರ್ಥನಾದರೆ ಮಾತ್ರ ಆತ ಪರಿಪೂರ್ಣನಾಗುತ್ತಾನೆ. ಹಾಗಾಗಿ ಜಗದೀಶ್ರೀಕುಮಾರನಂತೆ ಪರಿಪೂರ್ಣ ನಟ ಇನ್ನೊಬ್ಬ ಇರುವುದಕ್ಕೆ ಸಾಧ್ಯವಿಲ್ಲ ಎಂದನಿಸುತ್ತದೆ. ಈತನ ಪ್ರೈತಿಯೊಂದು ಪಾತ್ರಗಳು ಇದನ್ನು ಸಾರಿ ಹೇಳುತ್ತವೆ.

 

ಮಲಯಾಳಿಗರ ಪ್ರೀತಿಯ ಅಂಭಿಳಿ ಚೇಟ್ಟನ್ ಎಂದು ಕರೆಯಲ್ಪಡುವ ಜಗತೀ ಶ್ರೀಕುಮಾರ್ ಇತ್ತೀಚೆಗೆ ಕೆಲವು ವರ್ಷದಿಂದ ಸಿನಿಮಾದಲ್ಲಿ ನಟಿಸುತ್ತಿಲ್ಲ. ಒಂದು ದುರ್ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಇದೀಗ ಈ ದುರಂತದಿಂದ ಗುಣ ಮುಖರಾಗಿ ಜಗತೀ ಪುನರಾಗಮನವಾಗುತ್ತಿದೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಸಿನಿಮಾರಂಗ ಈ ಅದ್ಭುತನ ನಟನಿಗಾಗಿ ಕಾದು ಕುಳಿತಿದೆ ಎಂದರೂ ತಪ್ಪಾಗಲಾರದು.

ಭಾರತೀಯ ಚಿತ್ರರಂಗದ ಅತಿ ವಿಶಿಷ್ಟ ನಟ ಜಗತೀ ಮತ್ತೊಮ್ಮೆ ಬರಲಿ ಎಂಬ ಹಾರೈಕೆ.

Thursday, November 5, 2020

ಭೌತ ಶಾಸ್ತ್ರದ ಆ ಮೂರು ಅಂಕ.

 ...

ಕಥೆ : ಭೌತ ಶಾಸ್ತ್ರದ ಮೂರು ಅಂಕ
            ನಾನು ಪ್ರಣವನಿಗೆ  ಮೊಬೈಲ್ ಖರೀದಿಸುವಾಗಲೇ ಆಕೆ ಅಪಸ್ವರ ಎತ್ತಿದ್ದಳು. ಮಕ್ಕಳಿಗೆ ಏನಕ್ಕೆ ಮೊಬೈಲ್? ವಾಸ್ತವದಲ್ಲಿ ಆಕೆಯಲ್ಲಿದ್ದದ್ದು ಏಲ್ಲೋ ಬಿದ್ದಿರುತ್ತದೆ.  ಸಂದರ್ಭಾನುಸಾರ ಬೇಕಾಗುತ್ತದೆ ಅಂತ ಅವಳಿಗೂ ಒಂದು  ಕೊಡಿಸಿದ್ದೆ. ಹಲವು ಸಲ ಅನ್ನಿಸಿದ್ದಿದೆ ಅದು ಅಂಗಡಿಯಲ್ಲಾದರೂ ನೆಮ್ಮದಿಯಿಂದ ಇರುತ್ತಿತ್ತು. ಇಲ್ಲಿ ನನ್ನ ಕರೆಗೆ ಕಂಪಿಸಿ ಸುಸ್ತು ಹೊಡೆದಿದೆ. ಆಕೆಗೆ ಅದು ಅಗತ್ಯವಿದ್ದಂತಿಲ್ಲ. ಸಂದರ್ಭಾನುಸಾರ ಎಂಬುದು ಬರದೆ ಇರಲಿ ಎಂಬುದೇ ಅನಿಸಿಕೆ. ಹೋಗಲಿ ಮಗ ಬೆಳೆದು ನಿಂತ. ಇದೀಗ ಹತ್ತನೇ ತರಗತಿ. ಎಂಟು ಅಂಟುವಾಗಲೇ ಆತ ರಾಗ ಎಳೆದಿದ್ದ. ಹೋಗಲಿ  ಅಂತ ನನ್ನ ಹಳೆಯ ನೋಕಿಯ ಒಂದನ್ನು ಕೈಗೆ ಕೊಟ್ಟಿದ್ದೆ. ಅವನು ಅಷ್ಟೇ  ದನ್ನು ಬದಿಗಿಟ್ಟು ನನ್ನ ಸ್ಮಾರ್ಟ್ ಫೋನ್ ಎಲ್ಲಿ ಕೈಯಿಂದ ಕೆಳಗಿಡುತ್ತೆನೋ ಅಂತ ಕಾದು ನೋಡುತ್ತಾನೆ. ಇದೀಗ ಹತ್ತನೇ ತರಗತಿ. ಸ್ಮಾರ್ಟ್ ಫೋನ್ ಬೇಕೇ ಬೇಕು ಅಂತ ರಾಗ ಎಳೆದ. ಅದಿಲ್ಲದೇ ಹೋಗುವುದಿಲ್ಲ. ಹೌದು ಮಕ್ಕಳಿಗೆ ಮೊಬೈಲ್ ಕೊಡಲೇಬೇಕಾಗುತ್ತದೆ. ಅನಿವಾರ್ಯ ಸಂದರ್ಭದಲ್ಲಿ ತೀರ ಅವಶ್ಯಕ ಸಾಧನ. ಹಾಗಂತ ಹೇಳಿ ಹೊಸದಾದ ಸ್ಮಾರ್ಟ್ ಫೋನ್ ಕೊಡಿಸಿದೆ. ಆಕೆ ಅದನ್ನು ನೋಡಿದ್ದೇ ತಡ ಬೆಲೆ ಕೇಳಿ ಒಂದು ಸಲ ಹೌ ಹಾರಿದರೆ ಅವನಿಗೆ ಮೊಬೈಲ್ ಬೇಡವೇ ಬೇಡ ಮುಖ ಸಿಂಡರಿಸಿದಳು. ಆದರೆ ಅದನ್ನು ಕೇಳುವ ಸ್ಥಿತಿಯಲ್ಲಿ ನಾನೂ ಇಲ್ಲ ಪ್ರಣವ ಮೊದಲೇ ಇಲ್ಲ. ಮೊಬೈಲ್ ಕೊಡಿಸಿದೆ. ಈಗ ಕೊರೋನ ಸಮಯದಲ್ಲಿ ಮೊಬೈಲ್ ಬೇಕೇ ಬೇಕು. ಆನ್ ಲೈನು ಕ್ಲಾಸು ಅಂತ ಬೇಡದೇ ಇದ್ದದ್ದನ್ನು ಬಲವಂತವಾಗಿ ಕೊಡುವ ಅನಿವಾರ್ಯತೆ ಬಂದು ಬಿಟ್ಟಿದೆ. 



        ಒಂದು ದಿನ ಆಕೆ ಮತ್ತು ಆತನಿಗೆ ಜಗಳವೋ ಜಗಳ. ನನ್ನಲ್ಲಿ ಬಂದು ಒಂದೇ ರಾಗ ಮೊಬೈಲ್ ಯಾಕೆ ಕೊಟ್ಟದ್ದು. ಅವನು ಓದುವುದಿಲ್ಲ. ಟೀಚರ್ ಸದ್ದು ಕೇಳುವ ಬದಲು ಇನ್ನೇನೋ ಕೇಳುತ್ತಿರುತ್ತದೆ. ಅದರಲ್ಲಿ ಟೀಚರ್ ಮಾತು ಮಾತ್ರ ಕೇಳಬೇಕು. ಆಕೆಯ ವಾದ. ಹೌದು ಅವನು ಏನು ನೋಡುತ್ತಾನೋ? ಏನು ಮಾಡುತ್ತಾನೊ ?ಯಾರು ಗಮನಿಸಬೇಕು. ಆಗ ನಮಗಿರಬೇಕಾದದ್ದು ವಿಶ್ವಾಸ ಒಂದೇ. ಆದರೂ ವಿಶ್ವಾಸದ ಬುಡ ಅಲುಗಾಡುವ ಅನುಭವವಾಗುತ್ತದೆ. ಮಗ ಏನನ್ನೋ ನೋಡುತ್ತಾನೇ. ಯಾರಲ್ಲೋ ಮಾತನಾಡುತ್ತಾನೆ. ನಡು ರಾತ್ರಿಯಲ್ಲೂ ಮೊಬೈಲ್ ಸದ್ದು ಕೇಳುತ್ತದೆ. ಆತಂಕ ನನಗೆ. ಆಗ ನಾನು ಆತನನ್ನು ಹತ್ತಿರ ಕರೆದು ಹೇಳಿದೆ.
ಪ್ರಣವನಲ್ಲಿ ನಾನು ಸಹಜ  ಅಪ್ಪನಾಗಿ ವ್ಯವಹರಿಸುವುದಿಲ್ಲ. ನಾನು ಅಪ್ಪನೇ ಅಲ್ಲ ಎಂಬಂತೆ. ಆಗ ಆತ ಹೇಳುವುದುಂಟು ಅಪ್ಪನೆಂದರೆ ನನ್ನಪ್ಪನ ಹಾಗಿರಬೇಕು. ಅಪ್ಪ ಅಪ್ಪನಾಗಿರಬಾರದು. ಮತ್ತೇನು. ಹೋಗಲಿ ನಮ್ಮೊಳಗಿನ ಸಲುಗೆಯೇ ಅಂತಹುದು. ಆತನ ಅಂಗುಲ ಅಂಗುಲವೂ ಅರಿತವ ನಾನು. ಯಾವಾಗ ಹೇಗಿರುತ್ತಾನೆ ಕಣ್ಣಿಗೆ ಬಟ್ಟೆ ಕಟ್ಟಿ ಹೇಳಬಲ್ಲೆ. ಆತನು ಅಷ್ಟೇ ಅಪ್ಪನ ವಾಸನೆಯನ್ನು ಕ್ಷಣ ಮಾತ್ರದಲ್ಲಿ ಗ್ರಹಿಸಿಬಿಡುವವನು. ಈಗ ಈಕೆಯ ಮೊಬೈಲ್ ಗದ್ದಲ ಕೇಳಿ ಹತ್ತಿರ ಕರೆದೆ. ಕೇಳಿದೆ, ಮೊಬೈಲ್ ಮಧ್ಯ ರಾತ್ರಿಯೂ ಸದ್ದು ಮಾಡುತ್ತದಲ್ಲ. ಒಂದು ಸಣ್ಣ ಅನುಮಾನ ನನಗೂ ಇದ್ದರೆ ಅದು ತಪ್ಪಲ್ಲ. ಆತ ಹೇಳಿದ ಒಂದೆ ಮಾತು. 


“ ಅಪ್ಪ ನನ್ನಲ್ಲಿ ವಿಶ್ವಾಸ ಇಲ್ವಾ….ನಿಮ್ಮ ಮಗ ಇದು..ಹಾಗೆಲ್ಲ ಎನೂ ಇಲ್ಲ” ಅವನದ್ದು ಪ್ರಾಮಾಣಿಕ ಅನಿಸಿಕೆ. ನನ್ನಲ್ಲಿ ಆತನ ವ್ಯವಹಾರವೇ ಹಾಗೆ. ಮುಚ್ಚಿಡುವದ್ದು ಏನೂ ಇರುವುದಿಲ್ಲ. ಮುಚ್ಚಿಟ್ಟರೂ ಅದು ರಹಸ್ಯವಾಗಿ ಉಳಿಯುವುದಿಲ್ಲ. ಎಷ್ಟೋ ಸಲ ಹೇಳಿದ್ದೇ…ನೀನು ಏನೂ ಮಾಡು ಅಪ್ಪ ಅಮ್ಮನಿಗೆ ಪ್ರಾಮಾಣಿಕನಾಗಿರು. ನಾನು ನನ್ನ ಜೀವನದಲ್ಲಿ ಅತಿ ಹೆಚ್ಚು ಆದ್ಯತೆ ಕೊಟ್ಟದ್ದು ಎಂದರೆ ನನ್ನ ಪ್ರಾಮಾಣಿಕತೆಗೆ. ಈ ವಿಶ್ವಾಸ ಇಲ್ಲದೇ ಇದ್ದರೆ ನಾವುಗಳು ಬದುಕಿರುವುದಕ್ಕೆ ಅರ್ಥವಿಲ್ಲ. ನನ್ನ ಎದುರು ಎಲ್ಲ ಸರಿಯಾಗೇ ಇದ್ದರೂ ನನ್ನ ಹಿಂದೆ ಹೇಗೆ ಅಂತ ನಂಬುದುವುದು ಹೇಗೆ. ಹಾಗಾಗಿಯೇ ಆತನಿಗೆ ಮೊದಲಿನಿಂದಲೇ ಪ್ರಾಮಾಣಿಕತೆಯ ಉದಾತ್ತ ಧ್ಯೇಯವನ್ನು ತಿಳಿಸಿದ್ದೆ. ಇದೆಲ್ಲ ಆತನಿಗೆ ಅರಿವಿದೆ. ಆದರೂ ಇಂದು ಮತ್ತಷ್ಟು ಹೇಳಬೇಕು ಎನಿಸಿ ನನ್ನದೇ ಬದುಕಿನ ಕಥೆ ಹೇಳಿದೆ.
ನನ್ನಕೈಯಲ್ಲಿ ನನ್ನ ಹತ್ತನೇ ತರಗತಿಯ ಅಂಕ ಪಟ್ಟಿ ಇತ್ತು. ಇದನ್ನು ಹಲವು ಸಲ ಆತನೂ ನೋಡಿದ್ದ. ಅಪ್ಪನ ಶೇಕಡಾ ತೊಂಭತ್ತು ಅಂಕ ಆತನಿಗೆ ಹೆಮ್ಮೆಯ ವಿಚಾರ. ಇಂದು ಮತ್ತದೇ ಅಂಕ ಪಟ್ಟಿಯನ್ನು ತೋರಿಸಿ ಕೇಳಿದೆ. “ ನೋಡು ಅದರಲ್ಲಿ ಭೌತ ಶಾಸ್ತ್ರದ ಮಾರ್ಕ್ ಎಷ್ಟಿದೆ? “ ಹೌದು ಅದು ಐವತ್ತರಲ್ಲಿ ನಲ್ವತ್ತೇಳು... ಕೇವಲ ಮೂರು ಅಂಕಗಳ ಕೊರತೆ. ಅದು ಹೇಗೆ ಕಡಿಮೆ ಬಂತು? 


ನಾನು ಆ ಮೂರು ಅಂಕಗಳ ಕೊರತೆಯ ಕಥೆಯನ್ನು ಹೇಳುವುದಕ್ಕೆ ತೊಡಗಿದೆ. 


  ಅದು ಹತ್ತನೇ ತರಗತಿಯ ಕೊನೆಯ ಭೌತ ಶಾಸ್ತ್ರದ ಪರೀಕ್ಷೆ. ಐವತ್ತು ಅಂಕಗಳ ಎರಡು ಗಂಟೆಯ ಅವಧಿಯ ಪರೀಕ್ಷೆ. ಸಹಜವಾಗಿ ಶಾಲೆಯ ಪರಿಸರ ಶಾಂತವಾಗಿ ಮಧ್ಯಾಹ್ನದ ಗಾಳಿಯ ಸದ್ದಿಗೆ ಕಿವಿಯಾಗಿ ನಿಂತರೆ, ಮಕ್ಕಳ ಬಿಸಿ ಉಸಿರ ಸದ್ದೇ ಸುತ್ತಲಿನ ಬಿಸಿಯನ್ನು ಹೆಚ್ಚಿಸಿದಂತೆ ಬಿಸಿಲ ಸೆಖೆ. ಭೌತ ಶಾಸ್ತ್ರ್ರ ನನ್ನ ಪಾಲಿಗೆ ಬಹಳ ಸುಲಭದ ವಿಷಯ. ಪ್ರಶ್ನಾ ಪತ್ರಿಕೆಯ ಎಲ್ಲ ಪ್ರಶ್ನೆಗಳನ್ನು ಮೊದಲೇ ಅವಲೋಕನ ಮಾಡಿದ ನಂತರ ಮತ್ತಷ್ಟು ಉತ್ಸಾಹದಲ್ಲಿ ಉತ್ತರವನ್ನು ಬರೆಯುವುದರಲ್ಲಿ ಮಗ್ನನಾಗಿದ್ದೆ. ಸುತ್ತ ಮುತ್ತಲಿನ ಗಮನವೇ ಇಲ್ಲ. ಅಂದು ಪರಿಕ್ಷಾ ವೀಕ್ಷಕರಾಗಿ ಮೊದಲು ನಮ್ಮ ಶಾಲೆಯಲ್ಲಿ ಅಧ್ಯಾಪಕರಾಗಿದ್ದವರೇ ಪರೀಕ್ಷಕರಾಗಿ ಬಂದಿದ್ದರು. ಅಲ್ಲಿಂದಿಲ್ಲಿಗೆ ಇಲ್ಲಿಂದ ಅಲ್ಲಿಗೆ ಬಹಳ ನಿಶ್ಯಬ್ದವಾಗಿ ಕಾಲ ಹೆಜ್ಜೆಯ ಸಪ್ಪಳವಾಗದಂತೆ ಹಾಲ್ ತುಂಬ ಓಡಾಡುತ್ತಿದ್ದರು.  ನಮ್ಮೂರಿನ ವ್ಯಕ್ತಿ. ಮೊದಲಿನ ಪರಿಚಯ ಮಾತ್ರವಲ್ಲ ಒಂದು ರೀತಿಯ ಸಲುಗೆಯ ಸ್ನೇಹವೂ ಜತೆಗಿತ್ತು. ಹಾಗೆ ನೋಡಿದರೆ   ನಮ್ಮ  ಶಾಲೆಯ ಅಧ್ಯಾಪಕ ವೃಂದವೇ ಹಾಗೆ. ಮಕ್ಕಳ ಜತೆ ಹಲವರು ಮಿತ್ರರಂತೆ ಬೆರೆಯುತ್ತಿದ್ದರು. ನಾನು ಬೇರೆ,  ತರಗತಿಯ ಒಳ್ಳೆ ಕಲಿಯುವ ವಿದ್ಯಾರ್ಥಿ.  ಎಲ್ಲ ವಿಷಯದಲ್ಲೂ ಎಂಭತ್ತು ತೊಪ್ಪತ್ತು ಶೇಕಡಾ ಅಂಕ ಪಡೆಯುವವನು. ಸಹಜವಾಗಿ ಹಲವರ ಗಮನ ಇದ್ದೇ ಇರುತ್ತದೆ. 


     ಈ ಪರೀಕ್ಷಕ ಮಾಸ್ತರ್ ಕೂಡ  ನಮಗೆಲ್ಲ ಮಿತ್ರರಂತೆ. ಬಹಳ ಒಳ್ಳೆಯ ರೀತಿಯಲ್ಲಿ ಪಾಠ ಮಾಡುವ ಮಾಸ್ತರ್ ಅಂತನೇ ಜನ ಜನಿತವಾಗಿತ್ತು.   ಮೊದಲು ಅದೇ ಶಾಲೆಯಲ್ಲಿದ್ದು ನಮಗೆಲ್ಲ ಕಲಿಸಿದ್ದ ಪರಿಚಿತ  ಅಧ್ಯಾಪಕರು.  ಹಾಗಾಗಿ ಪರೀಕ್ಷಾ ಕೇಂದ್ರ ಆ ಅಮಟ್ಟಿಗೆ ಒತ್ತಡ ರಹಿತವಾಗಿತ್ತು.

ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಓಡಾಡುತ್ತಾ ನಮ್ಮನ್ನೆಲ್ಲ ಗಮನಿಸುತ್ತಿದ್ದವರು ಏಕಾ ಏಕಿ ನನ್ನ ಸುತ್ತವೇ ಸುತ್ತ ತೊಡಗಿದರು. ನನಗೆ ಯಾಕೋ ವಿಚಿತ್ರ ಅನಿಸಿತು. ಆದರೂ ಆತಂಕವಿಲ್ಲದೆ ನನ್ನ ಪಾಡಿಗೆ ಬರೆಯುತ್ತಿದ್ದೆ. ಹತ್ತಿರ ಬಂದವರೆ ನನ್ನ ಉತ್ತರ ಪತ್ರಿಕೆಯಲ್ಲಿ ಕೈ ಬೆರಳಲ್ಲಿ ಒಂದು ಉತ್ತರದತ್ತ ಬೆರಳು ಇಟ್ಟು ತಪ್ಪು ಅಂತ ಗೀಚಿದರು. ಅರೇ ನನಗೆ ಗೊತ್ತಿದ್ದ ಸುಲಭದ ಭೌತ ಶಾಸ್ತ್ರದ ಒಂದು ಲೆಕ್ಕದ  ಪ್ರಶ್ನೆ. ಬರೆದ ರೀತಿ ವಿಧಾನ ಎಲ್ಲವೂ ಸರಿಯಾಗೇ ಇತ್ತು. ಆದರೂ ತಪ್ಪು...!  ನೋಡಿದೆ ತಪ್ಪು ಯಾವುದೆಂದು ಅರ್ಥವಾಗಲೇ ಇಲ್ಲ. ಕೊನೆಯಲ್ಲಿ ನೋಡಿದರಾಯಿತು ಅಂತ ಉಳಿದೆಲ್ಲ ಪ್ರಶ್ನೆಗಳ ಉತ್ತರವನ್ನು ಬರೆದು ಮುಗಿಸಿದೆ. ಅಗಲೂ ಒಂದೆರಡು ಸಲ ಹತ್ತಿರ ಬಂದು ...." ಅದು ತಪ್ಪು ಮಾರಾಯ. ಸರಿ ಮಾಡು " ಅಂತ ಮೆತ್ತಗೆ ಯಾರಿಗೂ ಕೇಳದಂತೆ ಹೇಳಿದ್ದರು. ನನಗೆ ಆದರೂ ತಪ್ಪೇನು ಅರ್ಥವಾಗಲಿಲ್ಲ. ನಾನು ಅದೇ  ಪ್ರಶ್ನೆಯನ್ನೆ ಗಮನಿಸುತ್ತ ಇದ್ದೆ. ಹಲವು ಬಾರಿ ಮೇಲಿಂದ ಕೆಳಗೆ ನೋಡಿದೆ. ಇಲ್ಲ ತಿಳಿಯಲೇ ಇಲ್ಲ. ಬುದ್ಧಿಗೆ ಮಂಕು ಕವಿದಂತೆ.  ನಾನು ಉತ್ತರ ಸರಿಪಡಿಸದೇ ಇದ್ದದ್ದನ್ನು ಕಂಡ ಅವರು ಮತ್ತೂ ಮೆಲು ಧ್ವನಿಯಲ್ಲಿ ಹೇಳಿದರು 
" ನೀನು ಗುಣಿಸಿದ್ದು ತಪ್ಪಾಗಿದೆ. ಸರಿಯಾಗಿ ನೋಡು"

        ಹೌದು ನಾನು ಗುಣಿಸಿ ಬರೆದ ಉತ್ತರ ತಪ್ಪಾಗಿತ್ತು. ಅವಸರದಲ್ಲಿ ಉತ್ತರ ಗೊತ್ತಿದೆ ಎಂಬ ಉಡಾಫೆಯಲ್ಲಿ ನಾನು ತಪ್ಪಾಗಿ ಬರೆದಿದ್ದೆ. ಸಂದಿಗ್ಧದಲ್ಲಿ ಸಿಲುಕಿದೆ. ಛೇ ತಪ್ಪಾಗಿ ಹೋಯಿತು.  ಆಯಿತು ಹಾಗೆ ಸ್ವಲ್ಪ ಹೊತ್ತು ಕುಳಿತೆ. ಅಷ್ಟು ಹೇಳಿದ ಮಾಸ್ತರ್ ಮತ್ತೆ ತಮ್ಮ ಕುರ್ಚಿಯಲ್ಲಿ ಕುಳಿತು ಉತ್ತರ ಪತ್ರಿಕೆ ಬರೆದು ಇರಿಸಿ ಹೋಗುತ್ತಿದ್ದ ವಿದ್ಯಾರ್ಥಿಗಳನ್ನು ಗಮನಿಸುತ್ತಿದ್ದರು. ಒಬ್ಬೊಬ್ಬರಾಗಿ ಹೋಗುತ್ತಿದ್ದರು. ನಾನೂ ಎದ್ದೆ  ಬರೆದ ಪತ್ರಿಕೆಯ ಜತೆಯಲ್ಲಿದ್ದ ಇತರ ಪುಟಗಳನ್ನು ದಾರದಿಂದ ಕಟ್ಟಿದೆ.  ಎದ್ದು ಕುಳಿತು ಹಾಗೇ ಎದ್ದು ಮಾಸ್ತರ ಎದುರಿನ ಮೇಜಿನ ಮೇಲಿದ್ದ ಉತ್ತರ ಪತ್ರಿಕೆಗಳ ಮೇಲೆ ನನ್ನದನ್ನು ಇರಿಸಿದೆ. ಮಾಸ್ತರ್ ಒಂದುಸಲ ನನ್ನ ಪತ್ರಿಕೆಯನ್ನು ತೆರೆದು ನೋಡಿದರು. ನಾನು ಅಷ್ಟರಲ್ಲೇ ಬಾಗಿಲ ಹತ್ತಿರ ಹೋದೆ. ಅವರು ಸದ್ದು ಮಾಡಿದರು. ತಿರುಗಿ ನೋಡಿದಾಗ ನನ್ನನ್ನು ಆತಂಕದಂದಲೇ ನೋಡಿದರು. ನಾನು ತಿರುಗಿ ಒಂದು ಕಿರು ನಗೆ ನಕ್ಕು ಬಾಗಿಲು ದಾಟಿ ಹೊರ ಬಂದೆ. ಅದಾಗಲೆ ಶಾಲೆಯ ಪ್ಯೂನ್ ಗಂಟೆಯನ್ನು ಬಡಿದಾಗಿತ್ತು.

         ಆ ಮಾಸ್ತರ್ ತನ್ನ ವೃತ್ತಿಧರ್ಮವನ್ನು ಬದಿಗಿಟ್ಟು ನನಗಾಗಿ ಅವರು ತಪ್ಪೆಸಗಿದ್ದರು. ಅವರು ಎಸಗಿದ್ದು ಹೇಗೇ ಇರಲ್ಲಿ ನಿಜಕ್ಕಾದರೂ ಅದು ಅಪರಾಧವೇ. ಆದರೂ ನನ್ನ ಬಗೆಗಿನ ಕಾಳಜಿ ಪ್ರೀತಿಯನ್ನು ತೋರಿಸಿದ್ದರು. ಆದರೆ ನನಗೆ ಯಾಕೋ ನಾನು ಗಳಿಸಿದ್ದು ಅದು ನನ್ನದೇ ಆಗಿ ಪರಿಪೂರ್ಣವಾಗಿರಬೇಕು. ಇಲ್ಲವಾದರೆ ಅದಕ್ಕೆ ನಾನು ಅರ್ಹನಲ್ಲ ಎಂಬ ಭಾವನೆ ಬಂದಿತ್ತು. ಆ ಉತ್ತರ ಸರಿಪಡಿಸುವುದು ದೊಡ್ಡ ವಿಚಾರವಲ್ಲ. ಅದೇ ಪ್ರಶ್ನೆಯ ಉಳಿದೆಲ್ಲವನ್ನೂ ಸರಿ ಬರೆದಿದ್ದೆ. ಈಗ ಸಂಧಿಗ್ಧ ನನ್ನನ್ನು ಕಾಡಿತು. ಆ ಸಂದಿಗ್ದತೆ ತುಸು ಹೊತ್ತು ಅಷ್ಟೆ. ಯೋಚಿಸಿದೆ ಈ ಸಂದಿಗ್ದತೆ ಅದರಲ್ಲು ಈ ಸಂದಿಗ್ಧತೆ  ಕಾಡುವುದೇ ಒಂದು ಅಪರಾಧ.   ಹಾಗಾಗಿ ಅದನ್ನೇ ಮಾಡಿದೆ.  ಹೌದು, ನಾನು  ತಪ್ಪಾಗಿದ್ದ ಉತ್ತರವನ್ನು ಸರಿಪಡಿಸಲೇ ಇಲ್ಲ. ಯಾಕೆಂದರೆ ನನಗೆ ಆತ್ಮವಂಚನೆ ಸಾಧ್ಯವಾಗಲೇ ಇಲ್ಲ. ಅದೇ ಮಾಸ್ತರಿಂದ ಹಲವು ಪ್ರಾಮಾಣಿಕತೆಯ ಬಗ್ಗೆ ಸತ್ಯದ ಬಗ್ಗೆ ಪಾಠ ಕೇಳಿದ್ದ ನನಗೆ ಅವರು ಹೇಳಿಕೊಟ್ಟ ಉತ್ತರವನ್ನು ಬರೆಯುವುದಕ್ಕೆ ಸಾಧ್ಯವಾಗಲಿಲ್ಲ. ಒಂದು ರೀತಿಯಲ್ಲಿ ನಾನು ಬರೆದೆನೆಂದರೆ ಎಷ್ಟೆಂದರೂ ನಾನು ಅವರ ಇದಿರಿಗೆ ಪ್ರತಿಶತ ನೂರು ಪ್ರಾಮಾಣಿಕನಲ್ಲ.  ಒಂದು ವೇಳೆ ಅವರು ನನ್ನನ್ನು ಪರೀಕ್ಷೆ ಮಾಡಲು ಹೇಳಿರ ಬಾರದೇಕೆ ಅಂತ ಒಮ್ಮೆ ಯೋಚಿಸಿದೆ.  ಒಂದು ವೇಳೆ ಬರೆದರೆ ಅದು ನನ್ನ ನಿಜವಾದ ಅಂಕವಲ್ಲ ಎಂಬ ಭಾವನೆ.  ನಾನು ತಪ್ಪು ಉತ್ತರವನ್ನು ಸರಿ ಮಾಡಿ ದೊಡ್ಡ ತಪ್ಪು ಮಾಡುತ್ತಿದ್ದೇನೆ ಎಂದನಿಸಿತು. ಹೋಗಲಿ. ಪ್ರಶ್ನೆಯ ಉತ್ತರ ಅದರ ವಿಧಿ ವಿಧಾನವನ್ನು ಸರಿಯಾಗಿ ಬರೆದಿದ್ದೆ. ಕೊನೆಯಲ್ಲಿ ಉತ್ತರದ ಎರಡು ಅಕ್ಷರ ತಪ್ಪಾಗಿತ್ತು. ನಾನು ಫೇಲ್ ಅಂತೂ ಆಗುವುದಿಲ್ಲ. ಅದು ಖಾತರಿ ಇತ್ತು. ಮತ್ತೆ ಯೋಚಿಸಲಿಲ್ಲ. ನನ್ನದಲ್ಲದ ಆ ಮೂರು ಅಂಕದ ಬಗ್ಗೆ ಮತ್ತೆ ಚಿಂತಿಸಲಿಲ್ಲ.  ಪ್ರಶ್ನೆ ಪತ್ರಿಕೆ ತಪ್ಪು ಉತ್ತರದಲ್ಲೇ ಇಟ್ಟು ಬಂದೆ. ಅತೃಪ್ತನಾದರು ಆ ಅತೃಪ್ತಿಯಲ್ಲಿ ಒಂದು ತೃಪ್ತಿಯನ್ನು ಅನುಭವಿಸಿದ್ದೆ. ಅದೇ ನನ್ನ ಪ್ರಾಮಾಣಿಕತೆ. ಹೊರಗೆ ಬಂದಾಗ ಮಿತ್ರ ಸಹಪಾಠಿ ಇದ್ದ. ಅವನಲ್ಲಿ ಸಂಗತಿ ಹೇಳಿದೆ. ಅವನು ವಿಚಿತ್ರವಾಗಿ ನನ್ನತ್ತ ನೋಡಿದ. ಆ ಪರೀಕ್ಷೆಯಲ್ಲಿ ಅಂಕ ಐವತ್ತರಲ್ಲಿ ನಲ್ವತ್ತೇಳು ಬಂದಿತ್ತು.  ಬಹುಶಃ ಆ ಕಡಿಮೆಯಾದ ಮೂರು ಅಂಕ ಅದೇ ಆಗಿರಬೇಕು. ನನ್ನ ಪ್ರಾಮಾಣಿಕತೆಯ ಬೆಲೆ ಅದು.  ಇದು ನನ್ನ ಬೆನ್ನನ್ನು ನಾನೇ  ಚಪ್ಪರಿಸಲು ಹೇಳುತ್ತಿಲ್ಲ.ಈಗ ಹೀಗೆ ಮಗನ ಮುಂದೆ ಹೇಳುವುದು ಆತ್ಮ ಸ್ತುತಿಯಾಗಬಹುದು.  ನಾನು ಉತ್ತಮನಾಗಿ ಆ ಮಾಸ್ತರನ್ನು ಕೆಟ್ಟವರನ್ನಾಗಿ ಚಿತ್ರಿಸಬಾರದು.  ವೃತ್ತಿಧರ್ಮ ಏನೇ ಇರಲಿ ಅದು ನನ್ನದಲ್ಲದ ನಿಯಮ. ಮೊದಲು ನನ್ನ ಪರಿಶುದ್ದಿ.   ಈಗ ಸಾಮೂಹಿಕವಾಗಿ ಕದ್ದು ನೋಡಿ ಬರೆಯುವಾಗ  ಹೀಗೂ ಆಗಲು ಸಾಧ್ಯವೇ ಅಂತ ಮಗನಿಗೂ  ಆಶ್ಚರ್ಯ. ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಹಾಗೆ ಹೇಳಿಕೊಡುವುದು ನಿಯಮಾನುಸಾರ ತಪ್ಪಾಗಿರಬಹುದು. ಅವರು ಯಾವ ಉದ್ದೇಶದಲ್ಲಿ ಹೇಳಿರಲಿ ಅಲ್ಲಿ ಆ ತಪ್ಪು ಅಗಲಿಲ್ಲ.  ಈಗ ಹಿಗೆ ಹೇಳಿಕೊಟ್ಟು ದಕ್ಷಿಣೆ ಪಡೆಯುವವರು ಇದ್ದಿರಲೂ ಬಹುದು.

           ಸತ್ಯ  ಪ್ರಾಮಾಣಿಕತೆ ಸನ್ಮನಸ್ಸು ಇವುಗಳ ಲಾಭ ಅದನ್ನು ಹೊಂದಿರುವವನಿಗೆ ಆಗುವುದಕ್ಕೆ ಸಾಧ್ಯವಿಲ್ಲ. ಹಲವು ಸಲ ಅದು ಮೂರ್ಖತನವಾಗಿರಬಹುದು. ಆದರೆ ಸತ್ಯದ ಮೌಲ್ಯ ಮನಸ್ಸಿನ ವಿಶ್ವಾಸದ ಮೌಲ್ಯ. ಸತ್ಯದ ಎದುರು ಎಷ್ಟು ಶೂನ್ಯವನ್ನು ಸುತ್ತಿ ಅದರ ಮೌಲ್ಯ ಅಳೆಯಬಹುದು. ಅದು ನಾವು ಕಟ್ಟುವ ಮೌಲ್ಯವಾಗಬಹುದೇ ಹೊರತು ಸತ್ಯದ ಮೌಲ್ಯವಲ್ಲ. ಅದಕ್ಕಾಗೆ ಅದನ್ನು ಪರಮ ಸತ್ಯ ಎನ್ನುವುದು. ನಮ್ಮ ಪ್ರಾಮಾಣಿಕತೆಯಲ್ಲಿ ನಷ್ಟವಾಗುವದ್ದು ಹಲವಿರಬಹುದು. ಆದರೆ ಅದನ್ನು ನಾವು ಹೊಂದಿದ್ದೇ ವೆ ಎಂಬ ಒಂದು ಆತ್ಮ ತೃಪ್ತಿ ಸಾಕಾಗುತ್ತದೆ.

            ಮಗನಿಗೆ ಹೇಳಿದೆ ನಾನು ನಿನ್ನಿಂದ ಮೊಬೈಲ್ ಕಿತ್ತುಕೊಳ್ಳಬಹುದು. ಅದು ನನ್ನ ನಿನ್ನ ನಡುವಿನ ವಿಶ್ವಾಸವನ್ನು ಇಲ್ಲದಂತೆ ಮಾಡುತ್ತದೆ. ಅದು ನನ್ನಿಂದ ಸಹಿಸುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಇಲ್ಲಿ ವಿಶ್ವಾಸ ನೆಲೆ ನಿಲ್ಲುವುದಕ್ಕೆ ಪ್ರಾಮಾಣಿಕತೆ ಒಂದೇ ಆಯ್ಕೆ. ಮೊಬೈಲ್ ನಲ್ಲಿ ಪಾಠವನ್ನಷ್ಟೇ ಕೇಳಬೇಕೆಂದು ಹೇಳುತ್ತಿಲ್ಲ. ಏನೇ ಕೇಳು ಏನೆ ಮಾಡು ಅಪ್ಪ ಅಮ್ಮನಿಗೆ ಪ್ರಾಮಾಣಿಕನಾಗಿರು. ನಿನ್ನಿಂದ ಮೊಬೈಲ್ ಕಿತ್ತುಕೊಂಡು ಕೊರತೆಯಾದ ವಿಶ್ವಾಸದಲ್ಲಿ ನಂತರ ನೀನು ಓದುತ್ತಿ ಅಂತ ನಾನು ವಿಶ್ವಾಸ ಇಡಬೇಕು.

          ಮಗ ಒಂದು ಸಲ ನನ್ನತ್ತ ನೋಡಿದ. ಪ್ರಾಮಾಣಿಕತೆಯ ಬಗ್ಗೆ ಪಾಠ ಹೇಳುವ ಅಪ್ಪ ಸುಳ್ಳು ಹೇಳಲಾರ  ಎಂಬ ವಿಶ್ವಾಸ ಅಲ್ಲಿತ್ತು. ಬಹುಶಃ ನನ್ನಂತೆ ಅಪ್ಪ ಅಮ್ಮ ಎನಿಸಿಕೊಂಡವರು ಮಕ್ಕಳಿಂದ ಬಯಸಬೇಕಾಗಿರುವುದು ಇದನ್ನೆ. ನಮ್ಮ ಮಕ್ಕಳಲ್ಲಿ ಮೊದಲು ನಾವು ವಿಶ್ವಾಸ ಇಡಬೇಕು. ಆ ವಿಶ್ವಾಸ ಏನು ಎಂಬ ಅರಿವನ್ನು ಮೂಡಿಸಬೇಕು. ಅದಿಲ್ಲದೇ ಹೊದರೆ ಯಾವ ವಿಶ್ವ ವಿದ್ಯಾಲಯದ ಶಿಕ್ಷಣವಾದರೂ ಅದಕ್ಕೆ ಅರ್ಥವಿರುವುದಿಲ್ಲ.
 
      

      ಈಗ ಮಗನಿಗೆ ಅರ್ಥವಾಗಿದೆ. ಯಾಕೆಂದರೆ ಈಗ ಆತನ ಮೊಬೈಲ್ ಪಾಸ್ ವರ್ಡ್ ನನಗೆ ಗೊತ್ತಿದೆ. ಆತ ರಹಸ್ಯವಾಗಿ ಏನೇ ಮಾಡಿದರೂ ಅದು ನನ್ನಲ್ಲಿ ಬಹಿರಂಗವಾಗುತ್ತದೆ.  

      ಈಗಲೂ ಭೌತ ಶಾಸ್ತ್ರದ ಆ ಮೂರು ಅಂಕ ನನ್ನ ಪ್ರಾಮಾಣಿಕತೆಯ ಮೌಲ್ಯ.  ನನ್ನ  ಜೀವನ ಪರ್ಯಂತ ಮರೆಯುವುದಕ್ಕೆ ಸಾಧ್ಯವಿಲ್ಲ. ಪ್ರಾಮಾಣಿಕತೆ ಅದು ಮುಂದುವರೆಯಬೇಕು.  ಈ ಘಟನೆಯ ಮೂಲಕ ನನ್ನ ಮಗನಲ್ಲಿ ರವಾನಿಸಿದ್ದೇನೆ. ನನ್ನ ಮಗನಲ್ಲಿ ಅದು ಮುಂದುವರೆಯುವ ವಿಶ್ವಾಸವಿದೆ.

ಲೇಖಕರು: ಎಂ ರಾಜಕುಮಾರ್
ಪೈವಳಿಕೆ.


Sunday, October 25, 2020

ಮನೆಯಂಗಳದಲ್ಲಿ ಮಹಾ ಮಾರಿ

         ಬೇಲೂರು ಹಳೆಬೀಡು ಯಾರಿಗೆ ಗೊತ್ತಿಲ್ಲ ಬಿಡಿ. ನಾನು ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿರಬೇಕಾದರೆ ಸಾಮಾಜಿಕ ಅಧ್ಯಯನದಲ್ಲಿ ಹೊಯ್ಸಳರ ಬಗ್ಗೆ ಒಂದು ಪಾಠ ಇತ್ತು. ಬೇಲೂರು ಹಳೆಬೀಡುವಿನ  ಮಸುಕಾದ ಕಪ್ಪುಬಿಳುಪು ಚಿತ್ರ ಪಾಠ ಪುಸ್ತಕದಲ್ಲಿತ್ತು. ಆವಾಗ ಯೋಚಿಸುತ್ತಿದ್ದೆ ಹಳೆಬಿಡು ನಿಜಕ್ಕೂ ಇದೆಯಾ? ಇದ್ದರೂ ನಮಗೆಲ್ಲಿ ಕಾಣುವ ಭಾಗ್ಯವಿರುತ್ತದೆ? ಕಾಣುವುದಕ್ಕೆ ಸಾಧ್ಯವೇ ಇಲ್ಲ. ಶಾಲಾ ಸಹಪಾಠಿಗಳೊಂದಿಗೆ ಪ್ರವಾಸಕ್ಕೆ ಹೋಗುವ ಭರವಸೆ ಇಲ್ಲ. ಹಾಗೇ ಬೇಲೂರು ಕೇವಲ ಕನಸು. ಕಾಣುವುದಕ್ಕೆ ಸಾಧ್ಯವೇ ಇಲ್ಲವೆಂದು ಬಗೆದಿದ್ದೆ. ಆದರೆ ವಾಸ್ತವ ಹೇಗಾಯಿತು ಎಂದರೆ ಈಗ ಚಿಕ್ಕಮಗಳೂರು ಕೊಪ್ಪ ಹೋಗಬೇಕಾದರೆ ಬೇಲೂರು ಬಗಲಲ್ಲೇ ಹೋಗುತ್ತಿದ್ದೆವೆ. ಹಲವುಸಲ ಒಳಗೆ ಹೋಗಿ ಕಣ್ಣು ತುಂಬ ನೋಡಿಯೂ ಆಗಿದೆ. ಕಾಣುವುದಕ್ಕೆ ಸಾಧ್ಯವೇ ಇಲ್ಲವೆಂದು ತಿಳಿದದ್ದು ನಿತ್ಯ ಕಾಣುವ ವಿಷಯಗಳಾಗಿ ಬದಲಾಗುತ್ತವೆ. ಬದುಕಿನಲ್ಲಿ ಹೀಗೆ ಎಲ್ಲೋ ಹೇಗೋ ಅಂತ ತಿಳಿದದ್ದು ನಮ್ಮ ನಿತ್ಯಬದುಕಿನ ಅಂಗವಾಗುವಾಗುತ್ತದೆ. ಎಲ್ಲೋ ಇದೆ ಅಂತ ನಮ್ಮಲ್ಲಿಇಲ್ಲ ಅಂತ ತಿಳಿದದ್ದು ನಿತ್ಯ ಬದುಕಿನ ಅಂಗವಾಗುವುದು ಒಂದು ವಿಚಿತ್ರ. ಹೀಗೆ ಕೋರೋನ ಎಂ


ಬುದು ಆಗಿ ಹೋದದ್ದು ದುರ್ದೈವ ಎನ್ನಬೇಕು. ಒಬ್ಬ ಮಹಾಗುರು ಮಾಡಲಾಗದೇ ಇದ್ದದ್ದನ್ನು ಕೋರೋನ ಎಲ್ಲೋ ಇದ್ದುಕೊಂಡು ಜಗತ್ತಿಗೆ ಕಲಿಸಿಕೊಟ್ಟಿದೆ. ಏಳು ಜನ್ಮದ ವೈರಿಯೂ ಮಾಡಲಾಗದ ದುರವಸ್ಥೆಯನ್ನೂ ತಂದಿಟ್ಟಿದೆ. ಎಲ್ಲೋ ಇದೆ ಅಂತ ಬೇಲೂರಿನ ಹಾಗೆ ಬಗೆದರೆ ನಮ್ಮ ಕಲ್ಪನೆಯನ್ನೂ ಮೀರಿ ಘಟನೆಗಳು ನಡೆಯುತ್ತಾ ಇದೆ.

            ದೂರ ಚೀನದ ಯಾವುದೋ ಒಂದು ಊರಿನಲ್ಲಿ ಆದ ಘಟನೆ ಕೇಳಿದಾಗ,  ಓದಿದಾಗ ಓ ಅಂತ ರಾಗ ಎಳೆದು ಔದಾಸಿನ್ಯ ತೋರಿದ ನಮ್ಮ ಬದುಕಲ್ಲಿ ಯಃಕಶ್ಚಿತ್ ನನ್ನ ಬದುಕಲ್ಲೂ ಅದೇ ವಾಸ್ತವವಾದದ್ದು


  ಬದುಕಿನ ಅನುಭವದ ಸಾಲಿಗೆ ಒಂದನ್ನು ಸೇರಿಸಿತು. ಹೌದು, ಕೊರೋನ ಏಲ್ಲೋ ಇದೆ ಅಂತ ತಿಳಿದದ್ದು ಒಂದು (ಅ)ಶುಭ ಮುಹೂರ್ತದಲ್ಲಿ ನಮ್ಮ ಭಾರತಕ್ಕೂ ಕಾಲಿಡಬೇಕೆ? ಭಾರತಕ್ಕೆ ಬಂದದ್ದು ಮೊದಲು ನಮ್ಮ ಬೆಂಗಳೂರಿಗೆ ಬರಬೇಕೆ. ಹೋಗಲಿ ಬೆಂಗಳೂರಿನ ಯಾವುದೋ ಗಲ್ಲಿಯಲ್ಲಿ ಕೋರೋನ ಬಂತು ಸೀಲ್ ಡೌನ್ ಆಯಿತು. ಪೋಲಿಸ ವಾರಿಯರ್ ಗಳು ಜಿದ್ದಾ ಜಿದ್ದಿನ ಸೈನಿಕರಂತೆ ಬೆನ್ನಟ್ಟಿ ಹಿಡಿದು ಸೋಂಕಿನವರನ್ನು ಆಸ್ಪತ್ರೆಗೆ ಸೇರಿಸುತ್ತಿದ್ದದ್ದು ನೋಡಿ ಸದ್ಯ ನಮ್ಮ ಪ್ರದೇಶಕ್ಕೆ ಬರಲಿಲ್ಲ ಅಂತ ಸಮಾಧಾನದಿಮ್ದ ಇದ್ದರೆ ಒಂದು ದಿನ ನಮ್ಮ ಪಕ್ಕದ ರಸ್ತೆಗೇ ಬಂದು ಬಿಟ್ಟಿತು. ಪಕ್ಕದ ರಸ್ತೆ ಇದ್ದದ್ದು ನಮ್ಮ ರಸ್ತೆಯಾಗಬೇಕಾದರೆ ಒಂದೆರಡು ದಿನ ಸಾಕಾಯಿತು. ನಮ್ಮ ರಸ್ತೆಯ ಯಾರದೋ ಮನೆಗೆ ಬಂದ ಕೋರೋನ ಎಂಬ ನೆಂಟ ಕೊನೆಗೆ ನಮ್ಮ ಮನೆಗೂ ಬಂದು ಬಿಟ್ಟ. ನಾವು ಕೋರೋನ ರೋಗಿಯಾದದ್ದು  ಎಲ್ಲೋ ಏನೋ ಅಂತ ತಿಳಿದವರಿಗೆ ಬೇಲೂರಿನ ಪಾಠದಂತೆ ಆದದ್ದು ವಿಪರ್ಯಾಸ ಎನ್ನಬೇಕು.


            ನಮ್ಮ ಮನೆಗೆ ಹೇಗೆ ವಕ್ಕರಿಸಿತು? ನಮಗಿನ್ನೂ ಅಚ್ಚರಿಯ ವಿಚಾರ. ನನಗೂ ಚಿಕ್ಕ ಮಗನಿಗೂ ಇದರ ಬಗ್ಗೆ ವಿಪರೀತ ಎಂಬಂತೆ ಚರ್ಚೆಯಾಗಿದೆ. ಕಾರಣ ನನಗೆ ಬಂದ ಜ್ವರ ಅವನಿಗೆ ಬರದಿರುವುದಕ್ಕೆ ಸಾಧ್ಯವೇ ಇಲ್ಲ. ಕಾರಣ ಆತ ನನ್ನಿಂದ ಎತ್ತರ ಬೇಳೆದರೂ ನನ್ನ ಮೈಮೇಲೆ ಬೀಳುವಂತೆ ಈಗಲೂ ಇದ್ದು ಬಿಡುವವನು. ಒಂದು ದಿನ ನನಗೂ ಮೈ ಬಿಸಿಯಾಯಿತು. ಸದಾ ಅಲರ್ಜಿಯಿಂದ ಇಂತಹ ಸಮಸ್ಯೆಗೊಳಗಾಗುವ ನನಗೆ ಚಿತ್ರವಿಚಿತ್ರ ಅನುಭವಗಳಾಗಿಬಿಡುತ್ತವೆ. ಯೋಗಾಸನ ಪ್ರಾಣಾಯಾಮ ಎಂದು ಅದರೊಂದಿಗೆ ನಿತ್ಯ ಸಮರ ಸಾರುವ ನನಗೆ ಯಾವ ಅನುಭವಗಳೂ ವಿಶೇಷ ಎನಿಸಲಿಲ್ಲ. ಆದರೆ ಇದು  ಜ್ವರ....ಸುಮಾರು ಹದಿನೈದು ವರ್ಷದಿಂದ ನನ್ನ ಬಳಿಗೆ ಸುಳಿಯದ ಜ್ವರ ಈಗ ಬಂದೇ ಬಿಟ್ಟಿತು ನೂರರ ಆಸುಪಾಸಿನಲ್ಲಿ ಮೈ ಬೆಚ್ಚಗಾಗಿ ಅಲಕ್ಷಿಸಿ ಸುಮ್ಮನಿದ್ದೆ. ಆದರೆ ಮಗನಿಗೆ ಜ್ವರ ಬಂತು ನೆಗಡಿಯೂ ಬಂತು ಒಂದೇ ದಿನ. ನಂತರ ತಲೆನೋವು ಅಂತ ಇದ್ದವನು ಕೋವಿಡ್ ಪರೀಕ್ಷೆಗೆ ಹೋಗಿ ಎಂಜಲು  ಕಫ ಒಪ್ಪಿಸಿಬಂದ. ಮೊದಲು ನೆಗೆಟಿವ್ ಅಂತ ಬಂದು ನಿರಾಳವಾದರೆ ಮರುದಿನವೇ  ಆರೋಗ್ಯ ಕಛೇರಿಯಿಂದ ಆತಂಕದ ಕರೆ ಬಂತು. ಕೊವಿಡ್ ಪಾಸಿಟಿವ್!!!

            ಮಗನಿಗೆ ಬಂದಮೇಲೆ ಆರೋಗ್ಯಾಧಿಕಾರಿಗಳು  ಚುರುಕಾದರು. ಮಗನನ್ನು ಮನೆಯಲ್ಲೇ ಪ್ರತ್ಯೇಕವಾಗಿರುವಂತೆ ಹೇಳಿ ಮರುದಿನ ಮನೆ ಮಂದಿಯ ತಪಾಸಣೆಗಾಗಿ ಕೆಲವು ಸೈನಿಕರು (ವಾರಿಯರ್ಸ್) ಸಹಜವಾಗಿ ಎಲ್ಲಾ ಸಲಕರಣೆಯೊಂದಿಗೆ ಬಂದರು.  ಪಕ್ಕದ ರಸ್ತೆಯಲ್ಲೆಲ್ಲಾ ಓಡಾಡುತ್ತಿದ್ದ ಈ ವಾರಿಯರ್ಸ್ ನಮ್ಮ ರಸ್ತೆಗೂ ಬಂದಿದ್ದು ನಮ್ಮ ರಸ್ತೆಯವರು ಕತ್ತು ಉದ್ದ ಮಾಡಿ ವಿಚಿತ್ರವನ್ನು ವಿಚಿತ್ರವಾಗಿ ನೋಡುತ್ತಿದ್ದರು.

 

            ಬಿಳಿ ಕೋಟು ಧರಿಸಿ ಬರುವ ಈ ಸೇನಾನಿಗಳ ಕಾರ್ಯ ನಿಜಕ್ಕೂ ಶ್ಲಾಘನೀಯ. ಕೊರೋನ ಎಂದರೆ ಮೈಲು ದೂರ ಓಡಿ ಹಾವನ್ನು ಕಂಡವರಂತೆ ಆಡುವ ಸಂಬಂಧಿಗಳು ಸ್ನೇಹಿತರೂ ಇರುವಂತಹ ಕಾಲದಲ್ಲಿ ನಮ್ಮ ಮನೆಗೆ ಬಂದು ನಮ್ಮ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ ಆ ವೈದ್ಯ ತಂಡವನ್ನು ಮರೆಯುವುದಕ್ಕಿಲ್ಲ. ಬಂದ  ಹೆಣ್ಣು ಮಗಳೊಬ್ಬಳು ನಮ್ಮ ಮನೆಯಿಂದಲೇ ಕುಡಿಯುವ ನೀರು ಕೇಳಿ ಕುಡಿದಳು. ಬಂದವರು ಯಾವುದೇ ತೊಂದರೆ ಇದ್ದರೂ  ಕರೆ ಮಾಡುವಂತೆ ಹೇಳಿದಳು. ಅವರ ಧೈರ್ಯದ ನುಡಿಗಳು ಒಂದು ರೀತಿಯಲ್ಲಿ ಸಂಜೀವಿನಿಯಂತೆ ಕೆಲಸ ಮಾಡಿತ್ತು. ನಿತ್ಯವೂ ರೋಗ ಗ್ರಸ್ಥರನ್ನು ನೋಡುತ್ತಿದ್ದ ಅವರಿಗೆ ಇದು ಸಹಜವಾಗಿತ್ತು. ಕೋವಿಡ್ ದೃಢವಾಗುವಾಗಲೇ ಆರೋಗ್ಯ ಅಧಿಕಾರಿಗಳು ಆಸ್ಪತ್ರೆಯ ಅಥವಾ ಮನೆಯ ವಾಸದ ಆಯ್ಕೆಯನ್ನು ಕೊಡುತ್ತಾರೆ. ಯಾವುದೇ ಉಸಿರಾಟ ಇನ್ನಿತರ ತೊಂದರೆ ಇಲ್ಲವಾದರೆ ಮಾತ್ರ ಈ ಆಯ್ಕೆ ಇರುತ್ತದೆ. ಮನೆಯಲ್ಲೇ ಇರುವುದಾದರೆ ಒಂದು ಘೋಷಣಾ ಪತ್ರಕ್ಕೆ ಸಹಿ ಹಾಕಿ ಷರತ್ತುಗಳಿಗೆ ಸಮ್ಮತಿ ಕೊಡಬೇಕು. ನಮ್ಮದು ಮಹಡಿ ಮನೆಯಾದುದರಿಂದ ಬಂದ ವೈದ್ಯೆಯೇ ಹೇಳಿದಳು, ಮನೆಯಲ್ಲೇ ಇರಬಹುದು ನಿಮಗೆಲ್ಲ. ಏನೂ ತೊಂದರೆ ಇಲ್ಲ. ಪ್ರತ್ಯೇಕ ಶೌಚಾಲಯ ಕೋಣೆಗಳು ಇದ್ದರೆ ಸಾಕು.  ಕೋವಿಡ್ ಬಂದ ರೋಗಿಗಳನ್ನು ಬೆನ್ನಟ್ಟಿ ಹಿಡಿದು ವಾಹನಕ್ಕೆ ತುಂಬುತ್ತಿದ್ದ ಟಿ. ವಿ . ವಾರ್ತೆಯ ದೃಶ್ಯಗಳು ನೆನಪಿಗೆ ಬಂದವು. ನಿಜಕ್ಕೂ ವೈದ್ಯ ತಂಡದ ಧರ್ಯದ ಮಾತುಗಳು ಆತಂಕವನ್ನು ಕಡಿಮೆ ಮಾಡಿತ್ತು ಆದರೂ  ಸಹಜವಾಗಿ ಮನೆ ಮಂದಿಯೆಲ್ಲ ಆತಂಕಿತರಾಗಿದ್ದೆವು. ನಮ್ಮ ಮನೆಗೆ ಬಂದ ವಸ್ತುಗಳಲ್ಲಿ ಚೀನದ ಉತ್ಪನ್ನ ಯಾವುದು ಅಂತ ಇದುವರೆಗೆ ತಲೆಬಿಸಿ ಮಾಡಿಲ್ಲ. ಆದರೆ ಇದೊಂದು ಚೀನದ್ದೇ ಅಂತ ಖಾತರಿ. ಬಂದದ್ದು ಅನುಭವಿಸಲೇ ಬೇಕು ಎಂದು ಪರಸ್ಪರ ಧೈರ್ಯ ಹೇಳಿಕೊಂಡೆವು. ಬಂದ ವೈದ್ಯರು ಬಹಳ ಮುತು ವರ್ಜಿಯಿಂದ ಪ್ರತಿಯೊಬ್ಬರ ಕಫವನ್ನು ಪೆಟ್ಟಿಗೆ ಸೇರಿಸಿ ತೆಗೆದುಕೊಂಡು ಹೋದರು. ವಿಚಿತ್ರವೆಂದರೆ ನೆಗಡಿ ಖೆಮ್ಮು ಹೀಗೆ ಯಾವ ಅನುಭವವೂ ಇಲ್ಲದ ಮನೆ ಮಂದಿ ಒಂದಿಷ್ಟು ಧೈರ್ಯದಿಂದ ಇದ್ದರೂ ನಮಗೆ ಕೋವಿಡ್ ಬಂದಿರಬಹುದೇ ಎಂಬ ಆತಂಕ ಎಲ್ಲರಲ್ಲೂ ಇತ್ತು. ಆದರೆ ಕೊರೋನದ  ಯಾವ ಲಕ್ಷಣಗಳೂ  ಅನುಭವವೂ ಇಲ್ಲದೆ ಇರುವುದು ಆತಂಕವನ್ನು ಕಡಿಮೆ ಮಾಡಿತ್ತು. ಆದರೆ ಆತಂಕ ನಿಜವಾಗಿದ್ದು ಮರುದಿನ.

 

ಮನೆ ಮಂದಿಯ ಒಬ್ಬತ್ತು ಜನರಲ್ಲಿ ಆರು ಮಂದಿಗೆ ಕೊರೋನ ಬಂದು ಬಿಟ್ಟಿತ್ತು. ನನಗೂ ಪಾಸಿಟಿವ್. ಆದರೆ ನನಗೆ ಬಂದು ಹೋಗಿ ಅದಾಗಲೇ ನಾಲ್ಕು ದಿನ ಸಂದಿತ್ತು.  ಮತ್ತೆಲ್ಲರಿಗೂ ಕೋರೋನ ಪ್ರವೇಶವಾಗಿ ಅಲ್ಪಸ್ವಲ್ಪ ತನ್ನ ಪ್ರಭಾವವನ್ನು ತೋರಿಸಿತ್ತು. ಅಡಿಗೆ ಮನೆಯಲ್ಲಿ ಯಾವ ಒಗ್ಗರಣೆ ಕರಟಿದರೂ   ಮೆಣಸಿನಕಾಯಿ ಹುರಿದರೂ ಅರಿವಿಗೆ ಬರುತ್ತಿಲ್ಲ. ಎಲ್ಲ ವಸ್ತುವು ಪರಿಮಳವನ್ನು ಕಳೆದುಕೊಂಡ ಅನುಭವ ಕೆಲವರಿಗಾಯಿತು.ನಾಲಿಗೆ ರುಚಿಯೂ ಕಳೆದುಕೊಂಡು ಹಾಲಿಗೂ ಮಜ್ಜಿಗೆ ನೀರಿಗೂ  ವೆತ್ಯಾಸವೇ ಇಲ್ಲವಾಯಿತು.  ಮೈದ ಮತ್ತು ಡಿಡಿಟಿ ಎದುರು ಇಟ್ಟರೆ ವೆತ್ಯಾಸವೇ ತಿಳಿಯದು. ಮೈದ ಅಂತ ಡಿಡಿಟಿ ಕಲಸಿ ಗೋಳಿಬಜೆ ಮಾಡಿದರೆ ಕಥೆ ಗೋವಿಂದ.

ಎಲ್ಲರಿಗೂ ಕೊರೋನ ಬಾಧೆ ಬಂದ ಮರುದಿನವೇ ಅರೋಗ್ಯ ಕೇಂದ್ರದಿಂದ ನರ್ಸ್ ಇರಬೇಕು ಬಂದಳು. ಎಲ್ಲರ ಸಹಿ ಪಡೆದು ಎಲ್ಲರಿಗು ಸಾಕಾಗುವಷ್ಟು ವಿಟಮಿನ್ ಮಾತ್ರೆ ಜ್ವರದ ಮಾತ್ರೆ ಇವುಗಳನ್ನೊ ಕೊಟ್ಟಳು. ವಾಸ್ತವದಲ್ಲಿ ಅದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರಿಗೆ ಮಾತ್ರವೇ ಕೊಡುತ್ತಿದ್ದದ್ದು. ಆದರು ನಮ್ಮಲ್ಲಿ ಆರು ಮಂದಿಗೆ ಬಹಳ ಮಾತ್ರೆಯ ಆವಶ್ಯಕತೆ ಇತ್ತು.  ಇದಂತು ನಮಗೆ ಬಹಳ ಸಹಾಯವನ್ನು ಒದಗಿಸಿದಂತಾಗಿತ್ತು.

ದೊಡ್ಡ ಪಾತ್ರೆಯಲ್ಲಿ ತುಳಸೀ ಜೀರಿಗೆ ಹಾಕಿ ನೀರು ಕುದಿಸಿಟ್ಟು ಅದನ್ನೇ ನೀರಿನ ಬದಲು ಕುಡಿಯುತ್ತಿದ್ದೆವು. ಆತಂಕ ಯಾರಲ್ಲೂ ಇರಲಿಲ್ಲ. ವಯಸ್ಸಾದ ಅಮ್ಮನೇ ಒಂದಿಷ್ಟು ತಲೆನೋವು ಅಂತ ಇದ್ದದ್ದು ಮತ್ತೆಲ್ಲ ನಿರಾತಂಕವಾಗಿತ್ತು. ಮೊದಲ ಒಂದೆರಡು ದಿನ ಜ್ವರ ಇದೆಯೋ ಅಂತ ಪರೀಕ್ಷಿಸಿದ್ದು ಬಿಟ್ಟರೆ ನಿರಾಳವಾಗಿದ್ದೆವು. ಮನೆಯೊಳಗೇ ಹೋಮ್ ಕ್ವಾರಂಟೈನ್  ಇರುವುದು ಬಿಟ್ಟರೆ ಬೇರೆ ಯಾವ ತೊಂದರೆಯೂ ಕಾಣಿಸಲಿಲ್ಲ. ದೇಹದ ಆಮ್ಲಜನಕ ಮಟ್ಟ ಅಳೆಯುವುದಕ್ಕೆ ಒಂದು ಪುಟ್ಟ ಸಾಧನ ತಂದದ್ದು ಆಗಾಗ ಅಮ್ಲ ಜನಕ ಮಟ್ಟ ನೋಡುತ್ತಿದ್ದೆವು.  ನಾನಂತೂ ಮನೆಯನ್ನೇ ಕಛೇರಿಯನ್ನಾಗಿ ಮಾಡಿ ಎಂದಿನ ಕೆಲಸವನ್ನು ಯಾವುದೇ ತೊಂದರೆ ಇಲ್ಲದೆ ಮಾಡಿದೆ. ಎಲ್ಲರೂ ಖುಷಿಯಿಂದ ಮನೆಯಲ್ಲೇ ಇರುವುದು ಒಂದು ರೀತಿಯಲ್ಲಿ ಖುಷಿಯನ್ನೇ ತಂದಿತ್ತು. ಈ ಸಮಯದಲ್ಲಿ ಮಾನಸಿಕ ಒತ್ತಡ ಇಲ್ಲದಂತೇ ನೋಡಿಕೊಳ್ಳಬೇಕು. ನಮ್ಮ ಮನಸ್ಸಿನಲ್ಲಿ ಸ್ವಲ್ಪ ಅಸಹನೆ ಭಯ ಇದ್ದರೂ ಆಕ್ಸೀ ಮಿಟರ್ ನಲ್ಲಿ ತಿಳಿಯುತ್ತಿತ್ತು. ಯಾಕೆಂದರೆ ಆಮ್ಲಜನಕದ ಮಟ್ಟ ಕಡಿಮೆಯಾಗುತ್ತಿತ್ತು.

ಈ ನಡುವೇ ನಮ್ಮದೇ ರಸ್ತೆಯಲ್ಲಿ ಒಬ್ಬ ಕೋವಿಡ್ ನಿಂದ ಅಸುನೀಗಿದ ಸುದ್ದಿ ನನಗೆ ತಿಳಿದು ಬಂತು. ನಾವು ನಿತ್ಯವೂ ನೊಡುತ್ತಿದ್ದ ವ್ಯಕ್ತಿಯಾತ.  ನಾನದನ್ನು ಅಮ್ಮನಲ್ಲಿ ಹೇಳಲಿಲ್ಲ. ಹೇಳಿದರೆ ಎಲ್ಲಿ ಆತಂಕ ಪಡುತ್ತಾರೋ ಅಂತ ಹೆದರಿಕೆ.

            ದಿನದ ಮೂರು ಹೊತ್ತು ಭದ್ರ ಮುಷ್ಠಿ ತುಳಸಿ ಅಮೃತ ಬಳ್ಳಿ ಕಷಾಯ ನಿಯಮಿತವಾಗಿ ಮನೆ ಮಂದಿಯೆಲ್ಲ ಸೇವಿಸುತ್ತಿದ್ದೆವು. ನಾನಂತು ಮೊದಲೆ ಚಹ ಕಾಪಿ ತೆಗೆದುಕೊಳ್ಳುತ್ತಿರಲಿಲ್ಲ.  ಹೀಗೆ ಒಂದು ವಾರ ಕಳೆದ ನಂತರ ನಮಗೆ ನಾವೇ ಕೊವಿಡ್ ಮುಕ್ತರಾದಂತೆ ಸಮಾಧಾನವನ್ನು ಪಡೆದುಕೊಂಡೆವು. ತೊಂದರೆ ಇದ್ದಲ್ಲಿ ವೈರಸ್ ಬಾಧೆಯಾದ ವ್ಯಕ್ತಿ ಹದಿನೆಂಟು ದಿನದಲ್ಲಿ ಇಹಲೋಕ ತ್ಯಜಿಸುತ್ತಾನೆ ಎಂದು ಕೇಳಿದ್ದೆ. ಆ ಹದಿನೆಂಟು ದಿನವೂ ಕಳೆಯಿತು.  ಕೋವಿಡ್ ಬಂದರೂ ನನ್ನ ನಿಯಮಿತವಾದ ದಿನಚರಿಗೆ ಸ್ನಾನ ಜಪ ಯಾವುದಕ್ಕೂ ತೊಂದರೆ ಯಾಗಲಿಲ್ಲ. ಎಂದಿನಂತೆ ಮುಂಜಾನೆ ನಾಲ್ಕು ಗಂಟೆಗೆ ಎದ್ದು ಬಿಡುತ್ತಿದ್ದೆ. ತಣ್ಣೀರಲ್ಲಿ ಚೆನ್ನಾಗಿ ಸ್ನಾನ ಮಾಡಿ ಜಪ ಯೋಗಾಭ್ಯಾಸ ಮಾಡುತ್ತಿದ್ದೆ. ಕೋರೋನದ ಬಗ್ಗೆ ಒಂದಿಷ್ಟೂ ಆತಂಕವಿಲ್ಲದೇ ಮೊನ್ನೆಗೆ ನಿಗದಿಯಂತೆ ಇಪ್ಪತೊಂದು ದಿವಸವನ್ನೂ ಕಳೆದಾಯಿತು. ಮನೆಯಲ್ಲ ಸ್ವಚ್ಚ ಮಾಡಿ ವೈರಸ್ ಇಲ್ಲ ಅಂತ ಸಂಭ್ರಮಿಸಿದೆವು. ಮೊದಲು ಬಂದ ವೈದ್ಯ ತಂಡ ಮತ್ತೊಮ್ಮೆ ಬಂದು ಪರೀಕ್ಷೆಗೆ ಸ್ಯಾಂಪಲ್ ಪಡೆದು ಹೋದರು. ಇನ್ನೂ ನೆಗೆಟಿವ್ ಎಂದು ವರದಿ ಬಂದಿಲ್ಲ. ತೆಗೆದುಕೊಂಡು ಹೋಗಿ ವಾರ ಕಳೆಯಿತು. ಈಗ ಪಾಸಿಟಿವ್ ಇಲ್ಲ ಎಂಬ ಭರವಸೆ ಇದೆ.

            ಅಂತೂ ಕೋರೋನ ಎಂಬ ಅನುಭವ ಆಗಿಯೇ ಬಿಟ್ಟಿತು.

 

 

           

           


Sunday, October 4, 2020

ಮೊಬೈಲ್ ಭೂತ ದರ್ಶನ

         ಅನುತ್ಪಾದಕ ಬಯಕೆಗಳು ಮನುಷ್ಯನ ಅತೀ ದೊಡ್ಡ ದೌರ್ಬಲ್ಯ ಗಳು. ಮೊಬೈಲ್ ಎಂಬ ವಸ್ತು ಎರಡೂ ಅಗಿ ಭೂತವಾಗುವ ಅಪಾಯಕಾರಿ ವಸ್ತುವಾಗಿದೆ.‌ಈಗಿನ ಬೆಳೆಯುವ ತಂತ್ರಜ್ಞಾನದಲ್ಲಿ. ಕ್ಷಣಕ್ಕೂ ಮೊಬೈಲ್ ರೂಪ ಕಾರ್ಯ ಸಾಮಾರ್ಥ್ಯ ಬದಲಿಸುತ್ತವೆ ಅಂದರೆ ಅಪ್ಡೇಟ್ ಅಗುತ್ತವೆ ಮತ್ತು ತಮ್ಮ ಬೆಲೆಯನ್ನು ಹೆಚ್ಚುಸಿಕೊಳ್ಳುತ್ತವೆ.  

          ಒಂದು ಸಾಮಾನ್ಯ ಸರಳ ಮೊಬೈಲ್‌ ಪ್ರತಿಯೊಬ್ಬನ ಅತ್ಯಾವಶ್ಯಕ ಸಾಧನವಾಗಿದೆ. ಆದರೆ ಇದು ಅಸಾಮಾನ್ಯತೆಗೆ ಬದಲಾಗುವಾಗ ಅಪಾಯ ಕಟ್ಟಿಟ್ಟ ಬುತ್ತಿ. 

           ಹೊರ ಮತ್ತು ಒಳಬರುವ ಕರೆಗಳಿಗೆ, ಅತ್ಯಗತ್ಯ ಎನಿಸುವ ವಾಟ್ಸಪ್ ಇಮೇಲ್ ಬ್ಯಾಂಕಿಂಗ್ ಕೆಲಸಗಳು  ಮುಂತಾದ ಕೆಲವು ಸರಳ ಅವಶ್ಯಕತೆಗಳು ಹತ್ತರಿಂದ ಇಪ್ಪತ್ತು ಸಾವಿರದ ಮೊಬೈಲ್ ನಲ್ಲೂ ಏಕಪ್ರಕಾರವಾಗಿ ಪರಿಹರಿಸಲ್ಪಡುತ್ತದೆ. ಆದರೆ ಇದರಿಂದ ನಂತರದ ಬೆಲೆ ಬಾಳುವ ಮೊಬೈಲ್ ಗಳು ಅನುತ್ಪಾದಕ ವಸ್ತುವಾಗುವ ಅಪಾಯವೇ ಹೆಚ್ಚು. . 

          ಹಲವು ಮೊಬೈಲ್ ಕೆಲಸಗಳು ನಮ್ಮ ವೃತ್ತಿ ಜೀವನ ಆವಶ್ಯಜತೆಯನ್ನು ಪೂರೈಸಿ ಅದರಿಂದ ಒಂದಷ್ಟು ಅದಾಯಕ್ಕೆ ಸಹಾಯವಾದರೆ ಅದು ಉತ್ಪಾದಕ ವಸ್ತುವಾಗುತ್ತದೆ. ಹಲವರು ಖಾಸಗಿಯಾಗಿ ತಮ್ಮ ಮೊಬೈಲ್ ನ್ನೇ ಕಛೇರಿಯಾಗಿ ಪರಿವರ್ತಿಸುತ್ತಾರೆ. ಇದು ಮೊಬೈಲ್ ಮತ್ತು ಅದರೊಳಗಿನ ಉಪಯೋಗಗಳ ಸದ್ಬಳಕೆ. ಆದರೆ ಕೇವಲ ತಿಂಗಳ ಮಿತವಾದ ಅದಾಯದಲ್ಲಿ ತಿಂಗಳ ಸಂಬಳದಲ್ಲಿ ಬದುಕುವವನಿಗೆ ಇಪ್ಪತ್ತೈದು ಸಾವಿರದಿಂದ ದುಬಾರಿ ಮೊಬೈಲ್ ಅನಾವಶ್ಯಕ. ಆದರೆ ಇಂದು ತಮ್ಮಲ್ಲಿ ಇಲ್ಲದ ದುಡ್ಡಿನಲ್ಲಿ ಸಾಲ ಸೋಲ ಮಾಡಿ ಹೊಂದಾಣಿಕೆ ಮಾಡಿ 40  50 ಸಾವಿರದ ಮೊಬೈಲ್ ಕೊಳ್ಳುವುದು ಶೋಕಿಯಾಗುತ್ತದೆ. ತಮ್ಮ ಹಳೆಯ ಮೊಬೈಲ್ ನಲ್ಲಿ ಸಮಸ್ಯೆ ಇಲ್ಲದೇ ಇದ್ದರೂ ಆರು ತಿಂಗಳಿಗೊಮ್ಮೆ ಮೊಬೈಲ್ ಬದಲಿಸುವುದನ್ನು ನೋಡಬಹುದು. ಇದು ಶೋಕೀ ಜೀವನ.ಒಟ್ಟು ಬದುಕಿನಲ್ಲಿ ಎಲ್ಲ ಸುಖವನ್ನು ಹೊಂದಬೇಕು ಎನ್ನುವ ತುಡಿತ. ಇಂತಹ ತುಡಿತವನ್ನೇ ಮೊಬೈಲ್ ಕಂಪೆನಿಗಳು ಉಪಯೋಗಿಸುವ ಜಾಣತನವನ್ನು ತೋರುತ್ತವೆ. ಅದನ್ನು ತಿಳಿಯದೆ ಜನ ಹಳ್ಳಕ್ಕೆ ಬೀಳುತ್ತಾರೆ


         


ಪೇಸಬುಕ್ ವಾಟ್ಸಪ್ ಮುಂತಾದ ಸಾಮಾನ್ಯ ಸಂಗತಿಗಳು ಹತ್ತು ಸಾವಿರದ ಮೊಬೈಲ್ ನಲ್ಲೂ ಇರುತ್ತದೆ. ಅಷ್ಟೇ ಅವಶ್ಯಕತೆ ಇದ್ದರೂ ಸಾಲ ಮಾಡಿ ಐವತ್ತುಸಾವಿರದ ಮೊಬೈಲ್ ಹಿಂದೆ ಹೋಗುತ್ತಾರೆ.‌  ಹತ್ತು ಸಾವಿರದ ಮೊಬೈಲ್ನಲ್ಲಿ ಬರುವ ಫೇಸ್ ಬುಕ್ ಅದೇ ಐವತ್ತು ಸಾವಿರದ ದುಬಾರಿ ಮೊಬೈಲ್ ನಲ್ಲೂ ಬರುವುದು.  ದುಬಾರೀ ಸೌಲಭ್ಯಗಳನ್ನು ಪೂರ್ಣವಾಗಿ ಉಪಯೋಗಿಸುವುದಿಲ್ಲ ಮಾತ್ರವಲ್ಲ ಅದರ ಅಗತ್ಯವೂ ಇರುವುದಿಲ್ಲ.‌ಸುಮ್ಮನೇ ನಲ್ವತ್ತು ಸಾವಿರ ವನ್ನು ಪ್ರತಿಷ್ಠೆಗಾಗಿ ಸಾಲ ಮಾಡಿ ಕೊಳ್ಳುತ್ತಾರೆ. ಮುಂದೆ ಸಾಲದವರು ಕರೆ ಮಾಡಿದಾಗ ಒಂದೋ ಕರೆಯನ್ನ ಕಟ್ ಮಾಡುತ್ತಾರೆ ಇಲ್ಲ ತೆಗೆಯದೇ ಹಾಗೆ ಇಡುತ್ತಾರೆ. ಮೊಬೈಲ್ ಸದ್ದು ಮಾಡುತ್ತಿದ್ದಂತೆ ಅದೇ ದುಬಾರಿ ಮೊಬೈಲ್ ಭೂತವಾಗಿ ಕಾಡುತ್ತದೆ. 

Wednesday, September 16, 2020

ಭಾಷೆಯಲ್ಲಿನ ಬದುಕು



ಇತ್ತೀಚೆಗೆ ನಮ್ಮೂರಿನ ಮನೆಯ ಭೂ ತೆರಿಗೆ ಸಲ್ಲಿಸಬೇಕಿತ್ತು.  ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಪೈವಳಿಕೆ ಗ್ರಾಮದ ನಮ್ಮ ಸ್ಥಳ ಕೇರಳದ ಉತ್ತರದಲ್ಲಿದೆ. ಎಷ್ಟು ಉತ್ತರದಲ್ಲಿದ್ದರೂ ಉತ್ತರವಿಲ್ಲದ ಪ್ರಶ್ನೆಗಳು ಇಲ್ಲಿ ಸದಾ ಏಳುತ್ತದೆ. ಯಾಕೆಂದರೆ ಇದು ಕರ್ನಾಟಕಕ್ಕೆ ಹತ್ತಿರ. ತೆರಿಗೆ ಸಲ್ಲಿಸುವುದಕ್ಕೆ ಈಗ ಆನ್ ಲೈನ್ ವ್ಯವಸ್ಥೆ ಇದೆ. ಅಲ್ಲಿ ಹೆಸರು ದಾಖಲಿಸಿ ಇನ್ನೇನು ತೆರಿಗೆ ಸಲ್ಲಿಸಬೇಕು ಎನ್ನುವಾಗ ನಿಜವಾದ ಸಮಸ್ಯೆ ಎದುರಾದದ್ದು. ತಾಂತ್ರಿಕವಾಗಿ ಬಹಳ ಸರಳವಾಗಿ ಇದ್ದರೂ ನನ್ನೂರು ಪೈವಳಿಕೆ ಗ್ರಾಮವನ್ನು ಮಲೆಯಾಳದ ಸರಪಳಿಯೊಳಗೆ ಹುಡುಕಿತೆಗಿಯುವುದು ಬಹಳ ಶ್ರಮ ವಹಿಸಬೇಕಾಯಿತು. ನನಗೇನೋ ಅಲ್ಪಸ್ವಲ್ಪ ಮಲಯಾಳಮ್  ಓದುವುದಕ್ಕೆ ಸಾಧ್ಯವಿದೆ. ಅದೂ ತೀರ ಅತ್ಯಲ್ಪ ಜ್ಞಾನ. ಊರಲ್ಲಿ ಬಸ್ಸಿನ ಬೋರ್ಡ್ ನಲ್ಲಿ ಬರೆದ ಊರಿನ ಹೆಸರನ್ನು ಓದಿ ಊರನ್ನು ಗುರುತಿಸಬಲ್ಲೆ. ಆದರೆ ಎಲ್ಲರೂ ಹಾಗೆ ಇದ್ದಾರೆ ಎಂದು ತಿಳಿಯುವುದು ಮೂರ್ಖತನ. ಚಿತ್ರದಲ್ಲಿ ತೋರಿಸಿದಂತೆ ಇದರಲ್ಲಿ ಮಲಯಾಳ ತಿಳಿಯದೇ ಇದ್ದವರು ತಮ್ಮ ತಾಲೂಕೂ ಗ್ರಾಮವನ್ನು ಹೇಗೆ ಹುಡುಕಬಹುದು ತಿಳಿಸಿ. ಇಲ್ಲಿ ಯಾವ ಭಾಷಾಭಿಮಾನವೂ ರಕ್ಷಣೆಗೆ ಇಲ್ಲ. ತಮಗೆ ತೋಚಿದಂತೆ ಹೇಳುತ್ತಾ ಬಾವುಟ ಹಿಡಿವಾಗ ಜನಗಳು ಎದುರಿಸುವ ನಿಜವಾದ ಸಮಸ್ಯೆಯ ಅರಿವಿಲ್ಲ. ಕಾಸರಗೋಡು ಕನ್ನಡ ನಾಡೋ ಮಲಯಾಳವೋ ಹೇಗೂ ಇರಲಿ, ಭಾರತದಲ್ಲಿ ಇದ್ದರೆ ಸಾಕು ಎಂಬಂತಿರುವವರು ಇಲ್ಲಿನ ಜನ. ಇಲ್ಲಿ ಮಲಯಾಳ ಹೇರಿಕೆ ಅಂತ ಹೇಳಬಹುದು. ಹಾಗೇ ಯೋಚಿಸಿದರೆ, ಪ್ರತಿ ಗಡಿಭಾಗದ ಕಥೆಯು ಇದೇ ಆಗಿರುತ್ತದೆ. ಕನ್ನಡದ ಹೇರಿಕೆಯೂ ಇಲ್ಲದೇ ಇರುವುದಕ್ಕೆ ಸಾಧ್ಯವಿಲ್ಲ. ಮರಾಠಿ ಬಂಗಾಳಿ ತಮಿಳು ಹೀಗೆ ಭಾಷೆಗಳು ಹಲವಾದಂತೆ ಸಮಸ್ಯೆಗಳು ಹಲವಾಗುತ್ತವೆ. ಆದರೇನು ಮಾಡುವುದು ಕೋರೋನದ ಜತೆ ಮನುಷ್ಯ ಬದುಕಲು ಕಲಿತಂತೆ ಇದರ ನಡುವೆಯೂ ಜನ ಸಾಮಾನ್ಯ ಹೋರಾಡಿ ಬದುಕುವುದಕ್ಕೆ ಕಲಿಯುತ್ತಾನೆ. 


ಹಿಂದೀ ಹೇರಿಕೆ  ಎಂಬ ವಿವಾದ ಈಗ ದೇಶಾದ್ಯಂತ ಸುದ್ದಿಯಲ್ಲಿದೆ. ಹಲವರು ತಮ್ಮ ವಸ್ತುನಿಷ್ಠ ವಿಮರ್ಶೆಯಿಂದ ಪರ ವಿರೋಧ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ.  ಯಾವುದು ಸರಿ ಯಾವುದು ತಪ್ಪು ನಿರ್ಣಯಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಆದರೆ ಒಂದು ಭಾಷಾ ಪ್ರೇಮ ಕೇವಲ ಒಂದು ಭಾಷಿಗರಿಗೆ ಮೀಸಲಿಟ್ಟದ್ದಲ್ಲ. ಅವರ ಮಟ್ಟಿಗೆ ಅವರವರ ಭಾಷೆ ಸರ್ವ ಸುಂದರ. ನಾವು ಕನ್ನಡವನ್ನು ಹೇಳಬಹುದು. ಇಲ್ಲಿ ಸಾಹಿತ್ಯ ಶ್ರೀಮಂತಿಗೆ ವರ್ಣಸಿ ಅಭಿಮಾನಿಸಬಹುದು. ಆದರೆ ಅದು ನಮ್ಮ ಚಿಂತನೆಗಷ್ಟೇ ಸೀಮಿತ ಎಂಬುದನ್ನು ನಮ್ಮ ಅಭಿಮಾನದ ಹುಚ್ಚಿನಲ್ಲಿ ಮರೆಯುತ್ತೇವೆ. ಹಿಂದೀ ಹೇರಿಕೆ ಹೌದೋ ಅಲ್ವೋ. ಅದರ ಆವಶ್ಯಕತೆ ಇದೆಯೋ ಇಲ್ಲವೋ ಅದು ಒತ್ತಟ್ಟಿಗಿರಲಿ, ಆದರೆ ವ್ಯವಹಾರ ಲೋಕಕ್ಕೆ ಇಳಿದು ವಾಸ್ತವಕ್ಕೆ ಎರವಾದಾಗ ಯಾವ ಭಾಷಾಭಿಮಾನವೂ  ಉಪಯೋಗಕ್ಕೆ ಇಲ್ಲ. 


ಭಾಷೇ ಕೇವಲ ಜ್ಞಾನ ಕ್ಕಿರುವ ರಹದಾರಿ. ಅದು ಹೇಗೆ ಉಪಯೋಗಿಸಬೇಕು ಎಷ್ಟು ಅಭಿಮಾನ ಇಡಬೇಕು ಅದನ್ನು ತಿಳಿಯಬೇಕಾದರೆ ಕರ್ನಾಟಕದ ಕರಾವಳಿ ಭಾಗದ  ಜನರನ್ನು ನೋಡಿ ಕಲಿಯಬೇಕು. ಏನು ಇಲ್ಲಿನವರಿಗೆ ಭಾಷಾಭಿಮಾನ ಇಲ್ಲವೇ? ಉಳಿದೆಡೆಗಿಂತ ಆಂಗ್ಲ ಮಿಶ್ರವಿಲ್ಲದ ಕನ್ನಡ ಇಲ್ಲಿ ಕಾಣಬಹುದು. ಉಳಿದವರಿಗೆ ಅದು ಹಾಸ್ಯದವಸ್ತುವಾಗುವುದು ಒಂದು ದುರಂತ. ಹೋಗಲಿ. ಇಲ್ಲಿ ಕನ್ನಡ ಹಾಸುಹೊಕ್ಕಾಗಿ ಇದ್ದರೂ ಎಲ್ಲಾ ಜಾತಿಗೂ ಏಕ ಸ್ವಾಮ್ಯವಾಗಿ ಇರುವ ತುಳು ಜನರನ್ನು ಪರ ಊರಲ್ಲೂ ಬೆಸೆಯುತ್ತಿದೆ. 

ಹಿಂದಿ ಹೇರಿಕೆ ವಿಚಾರ ಹೇಗೂ ಇರಲಿ. ಕೇರಳದಲ್ಲಿ ತೆರಿಗೆ ಪಾವತಿಸುವುದಕ್ಕೆ ಮಲಯಾಳಂ ಒಂದೇ ಬೇಕಿತ್ತು. ಗಡಿ ಭಾಗದವರು ಏನು ಮಾಡಬೇಕು? ಹಾಗಿರುವಾಗಲೇ ಯೋಚನೆಗೆ ಬರುವುದು ದೇಶಾದ್ಯಂತ ಆಢಳಿತ ಏಕ ಸ್ವಾಮ್ಯದ ಏಕರೂಪದ ಭಾಷೆ ಬೇಕು. ಅದು ಯಾವುದೇ ಆಗಿರಲಿ. ಕನ್ನಡವೋ ತೆಲುಗೋ ಮತ್ತೊಂದೋ ಯಾವುದೇ ಆಗಿರಲಿ ದೇಶಾದ್ಯಂತ ಒಂದೇ ಭಾಷ ಆಢಳಿತ ಸಂವಹನಕ್ಕೆ ಮಾಧ್ಯಮವಾಗಬೇಕು. ಇಲ್ಲವಾದರೆ ನಮ್ಮ ಪೈವಳಿಕೆಯನ್ನು ಕಷ್ಟ ಪಟ್ಟು ಹುಡುಕಿದಂತೆ ದೇಶದ ಯಾವುದೋ ಭಾಗದಲ್ಲಿರುವ ನಮ್ಮೂರನ್ನೇ ಹುಡುಕುವುದಕ್ಕೆ ಬಹು ಭಾಷಾ ತಜ್ಞರಾಗಬೇಕಾದ ಅನಿವಾರ್ಯತೆ ಇದೆ. 

ಭಾಷಾವಾರು ವಿಂಗಡೆನೆ ಅವೈಜ್ಞಾನಿಕ, ಅದರಲ್ಲೂ ಭಾಷಾಭಿಮಾನ ಇನ್ನೂ ಅವೈಜ್ಞಾನಿಕ. ಬದುಕು ತಾಂತ್ರಿಕತೆಗೆ ಹತ್ತಿರವಾಗುವುದನ್ನು ನೋಡಿಯೂ ಸುಮ್ಮನಿರುತ್ತೇವೆ. ಆದರೆ ಭಾಷೆ ತಾಂತ್ರಿಕತೆ ವೈಜ್ಞಾನಿಕತೆಯನ್ನು ಮೀರಿ ಭಾವನಾತ್ಮಕ ಚಿಂತನೆಗೆ ಎರವಾಗುವುದು ವಿಪರ್ಯಾಸ. 



ದೇಶದ ಯಾವುದೇ ಭಾಗದಲ್ಲಿ ಭೂಮಿಯನ್ನೋ ಮನೆಯನ್ನೋ ಹೊಂದಿರುವುದು ಭಾರತದ ಪ್ರಜೆಯಾಗಿ ನಾಗರೀಕನಾಗಿ ಆತನ ಹಕ್ಕಾಗಿರುತ್ತದೆ. ಭಾಷೆ ಆ ಹಕ್ಕನ್ನು ಕಸಿಯುತ್ತದೆ ಎಂದಾದರೆ ಆ ಭಾಷೆ ಜನ ಸಾಮಾನ್ಯನಿಗೆ ಬೇಕಾಗಿರುವುದಿಲ್ಲ.