Wednesday, December 28, 2022

ಲೆಕ್ಕವಿಲ್ಲದೇ ಇದ್ದ ನೆನಪುಗಳು

          ಕೆಲವು ದಿನಗಳ ಹಿಂದೆ  ನಮ್ಮೂರಿನ ಪೈವಳಿಕೆಯ ಗ್ರಾಮ ಕಛೇರಿ (ವಿಲೇಜ್ ಆಫೀಸ್) ಗೆ ಹೋಗಿದ್ದೆ. ನಮ್ಮ ಊರಿನ ಜಮೀನಿನ ತೆರಿಗೆ ಕಟ್ಟುವುದಿತ್ತು. ಹಾಗೆ ಯಾವುದೋ ದಾಖಲಾತಿ ತೆಗೆಯುವುದಕ್ಕೆ ಅಲ್ಲಿ ಕಾದು ಕುಳಿತಿದ್ದೆ. ಹೊರಗಿನ ನಮ್ಮೂರಿನ ನೀರವ ವಾತಾವರಣವನ್ನು ಆಸ್ವಾದಿಸುತ್ತಾ ತಲ್ಲೀನನಾಗಿದ್ದೆ. ಸುತ್ತಲೂ ಕರಿ ಬಣ್ಣದ ಪಾದೆ ಕಲ್ಲುಗಳು,  ಅಲ್ಲೇ ಒಂದು ಗೋಳಿಮರದ ಕಟ್ಟೆ ಇತ್ತು ಅದು ಇಲ್ಲ, ಅದರ ಜತೆಗೆ ಅಲ್ಲಿ ಇಲ್ಲಿ ಉಳಿದುಕೊಂಡ ಪಳೆಯುಳಿಕೆಯಂತಹ ಮರಗಿಡಗಳು ಎಲ್ಲವೂ ಬದಲಾವಣೆಯಾದರೂ ನಮ್ಮ ಪೈವಳಿಕೆ ಇನ್ನೂ ಶಾಂತವಾಗಿದ್ದಂತೆ ಅನಿಸಿತ್ತು.  ಇದೀಗ ವಿಲೇಜ್ ಆಫೀಸ್ ಎದುರಿಗೆ ಅಟೋ ಸ್ಟಾಂಡ್ ಆಗಿದೆ. ನಮ್ಮ ಬಾಲ್ಯದಲ್ಲಿ  ಮೊದಲು ಆಟೋ ರಿಕ್ಷ ನೋಡಬೇಕಾದರೆ ಮಂಗಳೂರಿಗೆ ಇಲ್ಲಾ ಕಾಸರಗೋಡಿಗೆ ಹೋಗಬೇಕಿತ್ತು. ಹತ್ತಿರದ ಉಪ್ಪಳದಲ್ಲೂ ರಿಕ್ಷಾಗಳು ಇರಲಿಲ್ಲ.    ಅಬ್ಬಾಸ್ ಬ್ಯಾರಿಯ ಕಪ್ಪು ಬಣ್ಣದ  ಬಾಡಿಗೆ  ಅಂಬಾಸಿಡರ್ ಬಿಟ್ಟರೆ ಅಲ್ಲಿ ಬೇರೆ ವಾಹನಗಳಿರಲಿಲ್ಲ.  ಅದೂ ಯಾರನ್ನೂ ಕಾದು ಇರುತ್ತಿರಲಿಲ್ಲ. ಹೀಗೆ ಊರಿಗೆ ಹೋದಾಗ ಹಳೆಯ ನೆನಪುಗಳು ಕಾಡುತ್ತಿರುವಂತೆ ಈಗಲೂ ಅದೇ ನೆನಪಿನ ಹಗ್ಗ ಜಗ್ಗಾಟದಲ್ಲಿ ವಾಸ್ತವವನ್ನು ಮರೆತಂತೆ ಇದ್ದು ಬಿಟ್ಟೆ. 

ಈ ಚಿತ್ರದಲ್ಲಿನ ಕಟ್ಟಡದ ಕೊನೆಯಲ್ಲಿ ನಾನು ಕಲಿತ ಆರನೇ ತರಗತಿ

                                   ಈ ಚಿತ್ರದಲ್ಲಿನ ಕಟ್ಟಡದ ಕೊನೆಯಲ್ಲಿ ನಾನು ಕಲಿತ ಆರನೇ ತರಗತಿ 


         ತಲ್ಲೀನತೆಯಲ್ಲಿ ಎಲ್ಲವನ್ನೂ ಮರೆತಿರುವಾಗ ಹಿಂದಿನಿಂದ ಯಾರೋ ಬೆನ್ನು ತಟ್ಟಿದ ಅನುಭವವಾಗಿ ಹಿಂದೆ ತಿರುಗಿ ನೋಡಿದೆ. " ಏನು ರಾಜಕುಮಾರ್....." ಅದೇ ನೆನಪಿಗೆ ಸರಿದು ಹೋದ ಒಂದು ಧ್ವನಿ ಮತ್ತೆ ಮರುಕಳಿಸಿದಂತೆ ಭಾಸವಾಯಿತು. ಎದುರಿಗೆ ನಸು ನಗುತ್ತಾ ಬೊಚ್ಚು ಬಾಯಿಯನ್ನು ಅಗಲಿಸಿ ನಗುತ್ತಾ ವೃದ್ದರು ನಿಂತಿದ್ದರು. ಹತ್ತಿರದಲ್ಲಿ ಯುವಕನೊಬ್ಬ ಕೈ ಹಿಡಿದು ನಿಂತಿದ್ದ. ಅವರು ಬೇರೆ ಯಾರೂ ಅಲ್ಲ ಆರನೇ ತರಗತಿಯ ಲೆಕ್ಕದ ಪಾಠ ಮಾಡಿದ ಮಹಮ್ಮದ್ ಮಾಸ್ತರ್. ಸರಿ ಸುಮಾರು ಮೂವತ್ತೈದು ವರ್ಷದ ನಂತರ ನೋಡುತಿದ್ದೇನೆ. ಈಗಲೂ ನನ್ನ ಪರಿಚಯ ಹಿಡಿದು ರಾಜ ಕುಮಾರ್ ಅಂತ ಅವರು ಕರೆದು ಮಾತನಾಡಿಸಬೇಕಾದರೆ ಹಳೆಯನೆನಪುಗಳಿಗೆ ಸೇತುವೆಯಂತೆ ಈ ವಯೋವೃದ್ದ ಮಹಮ್ಮದ್ ಮಾಸ್ತರ್ ನಿಂತಿದ್ದರು. ನನ್ನಂತಹ ಎಷ್ಟೋ ಮಕ್ಕಳಿಗೆ ಲೆಕ್ಕದ ಬಾಲ ಪಾಠಗಳನ್ನು ಹೇಳಿಕೊಟ್ಟ ಮಹಮ್ಮದ್ ಮಾಸ್ತರ್ ನನ್ನನ್ನೂ ನನ್ನ ಹೆಸರನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ ಎಂದರೆ .....ಅದೂ ಈ ಇಳಿ ವಯಸ್ಸಿನಲ್ಲಿ ಆಶ್ಚರ್ಯವಾಯಿತು. ಅದಕ್ಕೆ ಕಾರಣ ನಮ್ಮ ನಡುವಿನ ಗುರುಶಿಷ್ಯ ಸಂಬಂಧ. ಕಾಯರ್ ಕಟ್ಟೆ ಹೈಸ್ಕೂಲಿನಲ್ಲಿ ಆರನೆ ತರಗತಿಯ ಆ ಕೋಣೆ ಮತ್ತೊಮ್ಮೆ ಕಣ್ಣೆದುರು ಬಂದು ನಿಂತಿತು. ಈಗಲೂ ಸರಳ ಬಡ್ಡಿ ಏನೂ ಎಂದು ಕೇಳಿಬಿಡುತ್ತಾರೋ ಎಂದು ಅವರ ಮುಖ ನೋಡಿದೆ. ವಯಸ್ಸಿನ ಭಾರಕ್ಕೆ ಅವರು ಬಹಳಷ್ಟು ಕೃಶರಾಗಿದ್ದರು. ಉತ್ಸಾಹದ ಚಿಲುಮೆಯಂತೆ ತರಗತಿ ತುಂಬ ಓಡಾಡಿಕೊಂಡಿದ್ದ ಮಹಮ್ಮದ್ ಮಾಸ್ತರ್ ಎಲ್ಲಿ?  ಈ ಯುವಕನ ಕೈ ಆಧರಿಸಿ ನಿಂತು ಕೊಂಡ ಈ ವಯೋವೃದ್ದ ಎಲ್ಲಿ?

        ಮಹಮ್ಮದ್ ಮಾಸ್ತರ್,  ಸದಾ ಬಿಳಿ ಪಂಚೆ ಅಂಗಿ ಧರಿಸಿ ಬರುತ್ತಿದ್ದ ಶ್ವೇತ ವಸನಿ ಅಚ್ಚ ಬಿಳುಗಿನ ಉಡುಗೆಯ ಮಾಸ್ತರ್, ಸದಾ ತಲೆ ಮೇಲೆ ಒಂದು ಕಪ್ಪು ಟೊಪ್ಪಿ ಇರುತ್ತಿತ್ತು.  ಅವರನ್ನು ಎಂದೂ ಬೇರೆ  ವರ್ಣಮಯ ಉಡುಗೆಯಲ್ಲಿ ಕಂಡದ್ದೇ ಇಲ್ಲ. ಇಂದೂ ಅದೇ ರೀತಿ ಬಿಳಿ ಪಂಚೆ ಮತ್ತು ಬಿಳಿ ಅಂಗಿ  !! ಸುತ್ತಿದ ಬಟ್ಟೆ ಹೊಸದಾಗಿರಬಹುದು, ಆದರೆ ಬಣ್ಣ ಮಾತ್ರ ಹಳೆಯದೆ, ಮಾತ್ರವಲ್ಲ ಮಾಸ್ತರೂ ಹಳೆಯವರೆ. ಮಹಮ್ಮದ್ ಮಾಸ್ತರ್     ಅನ್ವರ್ಥವಾಗಿ ಟೊಪ್ಪಿ ಮಾಸ್ತರ್ ಎಂದೇ ಕರೆಸಿಕೊಳ್ಳುತ್ತಿದ್ದ ಇವರು ನಮಗೆ ಲೆಕ್ಕದ ಮಾಸ್ತರ್. ಸದಾ ಜೇಬಿನಲ್ಲಿ ಕಬ್ಬಿಣದ ಕಡಲೆಯನ್ನೇ ತರುತ್ತಿದ್ದಾರೋ ಎಂದು ಅನ್ನಿಸುತ್ತಿತ್ತು. ಗುರು ಅಥವಾ ಅಧ್ಯಾಪಕ(ಪಿಕೆ) ಎಂದರೆ ಉರಿಯುವ ದೀಪದಂತೆ. ತಾನು ಉರಿಯುತ್ತಾ ಬೆಳಕನ್ನು ಕೊಡುತ್ತಾ ಸ್ವತಃ ಇಲ್ಲದೇ ಅಗುವುದು.  ಆಗ ಇವರು ಒಂದರಿಂದ ಇಪ್ಪತ್ತರವೆರೆಗಿನ ಮಗ್ಗಿ ಪುಸ್ತಕದ ಅಷ್ಟೂ ಮಗ್ಗಿಗಳನ್ನು ಮೇಲಿಂದ ಕೆಳಗೆ ಕೆಳಗಿಂದ ಮೇಲೆ ದರ್ ದರ್ ಅಂತ ಹೇಳುತ್ತಿದ್ದುದು ಕೌತುಕಮಯವಾಗಿತ್ತು. 

        ನಾಲ್ಕನೇ ತರಗತಿಯಿಂದ ಆರನೆ ತರಗತಿಯ ಮಧ್ಯಭಾಗದವರೆಗೂ ನಾನು ಮಂಗಳೂರಿನ ಶಾಲೆಯಲ್ಲಿ ಕಲಿತಿದ್ದೆ. ಆಮೇಲೆ ಅನಾರೋಗ್ಯ  ಮತ್ತೇನೋ ಕಾರಣಗಳಿಂದ ಶಾಲೆ ಅರ್ಧಕ್ಕೆ ಮೊಟಕುಗೊಳಿಸಿದುದರಿಂದ ಮತ್ತೆ ಮೂರು ವರ್ಷ ಕಳೆದು  ಪೈವಳಿಕೆಯ ಕಾಯರ್ ಕಟ್ಟೆ ಹೈಸ್ಕೂಲ್ ಗೆ ಆರನೇ ತರಗತಿಗೆ ಮತ್ತೆ ಸೇರಿಕೊಂಡೆ. ಕರ್ನಾಟಕದಿಂದ  ಬಂದ ವಿದ್ಯಾರ್ಥಿಗಳಿಗೆ ಕೇರಳದಲ್ಲಿ ಒಂದು ಪ್ರವೇಶ ಪರೀಕ್ಷೆ ಇರುತ್ತಿತ್ತು. ಕ್ಲಾಸ್ ಮಾಸ್ತರುಗಳೇ ನಡೆಸುವ ಈ ಪರೀಕ್ಷೆಯಲ್ಲಿ ಪಾಸಾದರೆ ಶಾಲೆಗೆ ಸೇರಿಸಿಕೊಳ್ಳಲಾಗುತ್ತಿತ್ತು. ಅಂದು ನನಗೂ ಪ್ರವೇಶ ಪರೀಕ್ಷೆ ಇತ್ತು. ಬರೆದಾದಾದ ಮೇಲೆ ಅದು ಪರೀಕ್ಷೆ ಎಂದು ನನಗೆ ಗೊತ್ತಾಗಿದ್ದು. ಮೂರು ವರ್ಷ ಶಾಲಾಜೀವನದಿಂದ ದೂರವೇ ಉಳಿದ ನಾನು ಪರೀಕ್ಷೆಯಲ್ಲಿ ಪೈಲ್ ಆಗಿದ್ದೆ. ಆದರೆ ನನಗೆ ಎಲ್ಲವನ್ನೂ ಹೇಳಿಕೊಟ್ಟು ಪಾಸ್ ಮಾಡಿದ್ದು ಈ ಮಹಮ್ಮದ್ ಮಾಸ್ತರ್.   ಅದುವರೆಗೆ ಲೆಕ್ಕದ ಭಿನ್ನ ರಾಶಿ ಎಂದರೆ ಏನೆಂದು ತಿಳಿಯದ ನನಗೆ ಒಂದಿಷ್ಟು ಗದರಿ ಅಕ್ಕರೆಯಿಂದ ಹೇಳಿಕೊಟ್ಟಿದ್ದರು.  ಅಲ್ಲಿಂದ ಆರಂಭವಾದ ಮಹಮ್ಮದ್ ಮಾಸ್ತರ್ ಸಂಪರ್ಕ ಆನಂತರ ಹಲವು ನೆನಪುಗಳನ್ನು ಕಟ್ಟಿಕೊಟ್ಟಿತ್ತು. 

         ಮೂರು ವರ್ಷದ ನಂತರ  ಶಾಲೆಗೆ ಸೇರಿದ್ದುದರಿಂದ ಉಳಿದ ಎಲ್ಲ ಮಕ್ಕಳಿಗಿಂತಲೂ ನಾನು ದೊಡ್ಡವನಾಗಿದ್ದೆ. ಹಾಗಾಗಿ ಕೊನೆಯ ಬೆಂಚ್ ನಲ್ಲಿ ಲಾಸ್ಟ್ ಬೆಂಚರ್ ಸ್ಟೂಡೆಂಟ್ ನಾನಾಗಿದ್ದೆ. ಇದು ಆರಂಭದಲ್ಲಿ ಹಲವು ಅಧ್ಯಾಪಕರಿಗೆ ನನ್ನ ಬಗ್ಗೆ ತಪ್ಪು ಕಲ್ಪನೆಯನ್ನು ತರಿಸಿತ್ತು. ಕೊನೆಯ ಬೆಂಚ್ ಎಂದರೆ ....ಎಲ್ಲದರಲ್ಲೂ ಕೊನೆಯ ಬೆಂಚ್. ಮಹಮ್ಮದ್ ಮಾಸ್ತರ್ ಗೂ ನನ್ನ ಮೇಲೆ ಹೆಚ್ಚು ಆಸಕ್ತಿ ಏನೂ ಇದ್ದ ಹಾಗಿಲ್ಲ. ಶಾಲೆಯ ಹತ್ತಿರವೇ ನಮ್ಮ ಮನೆ ಇದ್ದುದರಿಂದ ಶಾಲೆಯ ಹೊರಗೆ ಅಲ್ಲಿ ಇಲ್ಲಿ ಕಾಣುತ್ತಿದ್ದ ಮಾಸ್ತರು ಇಂದು ಕ್ಲಾಸಿನಲ್ಲಿ ಲೆಕ್ಕದ ಮಾಸ್ತರ್ ಆಗಿದ್ದರು. ಅದು ವರೆಗೆ ಸೀಮಿತವಾಗಿ ಪರಿಚಯವಿತ್ತು. ಪ್ರವೇಶ ಪರೀಕ್ಷೆಯಲ್ಲಿ ನಾನು ದಡ್ಡ ಎಂದು ಶ್ರುತ ಪಟ್ಟಿತ್ತು.  ಇದೆಲ್ಲ ಮೊದಲ ಎರಡು ತಿಂಗಳು ಅಷ್ಟೆ. ಮೊದಲ ಕ್ಲಾಸ್ ಪರೀಕ್ಷೆ. ಅಲ್ಲಿ ನಾನು ಮೊದಲ ಕ್ಲಾಸಿಗೆ ವಿದ್ಯಾರ್ಥಿಯಾಗಿ ಪರೀಕ್ಷೆಯಲ್ಲಿ ಅಂಕವನ್ನು ಗಳಿಸಿದಾಗ ಸ್ವತಃ ಮಹಮ್ಮದ್ ಮಾಸ್ತರ್ ಆಶ್ಚರ್ಯಗೊಂಡಿದ್ದರು. ಎಲ್ಲರಲ್ಲೂ ಆಗ ಹೇಳಿದ್ದರು ನೋಡಿದ ಹಾಗಲ್ಲ ಇವನು. ಅಂದಿನಿಂದ ನನ್ನನ್ನು ಕಾಣುವ ದೃಷ್ಟಿ ಬದಲಾಯಿತು. ಮಹಮ್ಮದ್ ಮಾಸ್ತರ್ ಮಾತ್ರವಲ್ಲದೇ ಶಾಲೆಯ ಎಲ್ಲಾ ಆಧ್ಯಾಪಕರಿಗೆ ನಾನು ಗುರುತಿಸಲ್ಪಟ್ಟೆ. ಅಂದಿನ ಹೆಚ್ಚಿನ ಎಲ್ಲಾ ಮಾಸ್ತರ್ ಗಳು ನಮ್ಮೊಂದಿಗೆ ಗುರು ಶಿಷ್ಯ ಸಂಬಂಧದಿಂದ ಕೂಡಿರದೆ ಒಳ್ಳೆ ಗೆಳೆಯರಂತೆ ನಮ್ಮೊಂದಿಗೆ ಬೆರೆಯುತ್ತಿದ್ದರು. ಅದೊಂದು ವಿಶಿಷ್ಟ ಸಂಭಂಧ.  ಹಾಗಾಗಿ ಕಾಯರ್ ಕಟ್ಟೆ ಹೈಸ್ಕೂಲಿನ ವಿದ್ಯಾರ್ಥಿ ಜೀವನದ ನೆನಪುಗಳು ಇಂದಿಗೂ ಅಚ್ಚಳಿಯದೇ ಮಧುರ ನೆನಪುಗಳಾಗಿ ಉಳಿದು ಬಿಟ್ಟಿದೆ. 

        ಮಹಮ್ಮದ್ ಮಾಸ್ತರ್ ಲೆಕ್ಕ ಪಾಠ,   ಕಲಿತ ಲೆಕ್ಕದಂತೆ ಅದೂ ಮರೆಯುವ ಹಾಗಿಲ್ಲ. ಸದಾ ಹಾಸ್ಯಮಯವಾಗಿ ಮಾತನಾಡುತ್ತಿದ್ದರು. ಮಕ್ಕಳೊಂದಿಗೆ ಪ್ರೀತಿಯಿಂದ ಬೆರೆಯುತ್ತಿದ್ದರು.  ಲೆಕ್ಕ ಎಂದರೆ ಅದು ಚೊಕ್ಕ ಎಂದು ಪದೇ ಪದೇ ಹೇಳುತ್ತಿದ್ದರು. ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಬರುವ ವಿಷಯವಿದ್ದರೆ ಅದು ಲೆಕ್ಕ ಮಾತ್ರ ಎಂದು ಪದೇ ಪದೇ ಹೇಳುತ್ತಿದ್ದರು. ಅವರು ಅಂದು ಹೇಳಿಕೊಟ್ಟ, ಸರಳ ಬಡ್ಡಿ ಚಕ್ರ ಬಡ್ಡಿ ಶೇಕಡಾ ಮಾನ ಇಂದಿಗೂ ಗಟ್ಟಿ ಅಸ್ತಿವಾರದ ಕಲ್ಲುಗಳಾಗಿವೆ.  ನಾನು ಏಳನೇ ತರಗತಿಯಲ್ಲಿದ್ದಾಗ ಮಾಸ್ತರ್ ಮಗ ಆರನೇ ತರಗತಿಯಲ್ಲಿ ವಿದ್ಯಾರ್ಥಿಯಾಗಿದ್ದ. ಒಂದು ದಿನ ವಿರಾಮದ ವೇಳೆಯಲ್ಲಿ ನಾನು ಕ್ಲಾಸ್ ನಲ್ಲಿ ಕುಳಿತುಕೊಂಡಿದ್ದಾಗ, ಮಾಸ್ತರ್ ತನ್ನ ಮಗನನ್ನು ದರ ದರ ಎಳೆದು ಕೊಂಡು ಬಂದು ನನ್ನ ಬಳಿ ಕುಳ್ಳಿರಿಸಿ, ಸ್ವಲ್ಪ ಇವನಿಗೆ ಹೇಳಿಕೊಡು ಮಾರಾಯ. ನನಗೆ ಹೇಳಿಕೊಟ್ಟು ಸಾಕಾಯಿತು. ಲೆಕ್ಕದ ಮಾಸ್ತರ್ ಮಗನೇ ಲೆಕ್ಕದಲ್ಲಿ ಹಿಂದುಳಿದಿದ್ದ. ಲೆಕ್ಕದ ಮಾಸ್ತರ್,  ಅವರ ಮಗನಿಗೆ ಲೆಕ್ಕ ಹೇಳಿಕೊಡುವುದಕ್ಕೆ ನನಗೆ ಒಪ್ಪಿಸಿದ್ದರು. ಲೆಕ್ಕದ ಮಾಸ್ತರ್ ನನಗೆ ಗುರುವಾಗಿದ್ದರೆ, ಅವರ ಮಗನಿಗೆ ತಾತ್ಕಾಲಿಕವಾಗಿ ನಾನು ಗುರುವಾದೆ. ಇಂತಹ ಆತ್ಮೀಯ ಸಂಬಂಧ ನಮ್ಮೊಳಗೆ ಇತ್ತು. ಇವರು ಎಂದಿಗೂ ನನಗೆ ಬೈದ ಹೊಡೆದ ಉದಾಹರಣೆ ಇಲ್ಲ. ಏನು ಕೆಲಸವಿದ್ದರೂ ಮೊದಲು ನನ್ನ ಮೇಲೆ ದೃಷ್ಟಿ ಬೀಳುತ್ತಿತ್ತು. ಒಂದು ಬಾರಿ ನನ್ನನ್ನೇ ಕ್ಲಾಸ್ ಲೀಡರ್ ಆಗಿ ಮಾಡಿ ಬೆನ್ನು ತಟ್ಟಿದ್ದರು.  ನಾನು ಒಂಭತ್ತನೆ ತರಗತಿಯಲ್ಲಿರುವಾಗ ಇರಬೇಕು, ಇವರು ಹತ್ತಿರದ ಪೈವಳಿಕೆ ನಗರದ ಹೈಸ್ಕೂಲಿಗೆ ವರ್ಗವಾಗಿದ್ದರು. ಆಗ ಯಾವುದೋ ಕೆಲಸ ನಿಮಿತ್ತ ಆ ಶಾಲೆಗೆ ಹೋಗಿದ್ದಾಗ ಇವರು ಯಾವುದೋ ತರಗತಿಯಲ್ಲಿ ಪಾಠ ಮಾಡುತ್ತಿದ್ದರು. ನನ್ನನ್ನು ಕರೆದು , ಈ ರಾಜ್ ಕುಮಾರ್ ನನ್ನ ಸ್ಟೂಡೆಂಟ್ ಅಂತ ಅಲ್ಲಿನ ವಿದ್ಯಾರ್ಥಿಗಳಿಗೆ ಪರಿಚಯಿಸಿದ್ದರು. ಈ ಅಭಿಮಾನ ಪ್ರೀತಿ ಎಂದೂ ಮರೆಯುವ ಹಾಗಿಲ್ಲ. ಈದೀಗ ಅದೇ ಮಾಸ್ತರ್ ವೃದ್ದರಾಗಿ ನಡುಗುತ್ತಾ ನಸು ನಗುತ್ತಾ ನಿಂತಿದ್ದಾರೆ. ನನ್ನ ಬಗ್ಗೆ ಕುಶಲ ಸಮಾಚಾರ ಕೇಳಿದರು. ಈಗಲೂ ಹೆಗಲ ಮೇಲೆ ಕೈ ಹಾಕಿ ಇನ್ನೊಂದು ಕೈಯಿಂದ ನನ್ನ ಕೈ ಹಿಡಿದು, ಏನು ಮಾಡ್ತಾ ಇದ್ದಿಯಾ?  ಎಂದು ಕೇಳಿದರೆ ನನಗೆ ಕ್ಷಣಕಾಲ ಉತ್ತರ ಹೊಳೆಯಲಿಲ್ಲ. ನಾನೆಂದೆ ಬೆಂಗಳೂರಲ್ಲಿ ತೆರಿಗೆ ಸಹಾಯಕನಾಗಿ ನೀವು ಕಲಿಸಿದ ಸರಳ ಬಡ್ಡಿ ಶೇಕಡಾ ಮಾನದ ನಡುವೆ ಸುತ್ತುತ್ತಾ ಇದ್ದೇನೆ ಎಂದು ಹೇಳಿದೆ. ನಗುತ್ತಾ ಬೆನ್ನು ತಟ್ಟಿದರು. 

        ಆ ಹೊತ್ತಿಗೆ ಕಛೇರಿ ಒಳಗೆ ಆಫೀಸರ್ ನನ್ನನ್ನು ಕರೆದ ಕಾರಣ ನಾನು ಅವರಿಗೆ ಮತ್ತೊಮ್ಮೆ ನಮಸ್ಕರಿಸಿ ಒಳಗೆ ಹೋದೆ. ನಂತರ ಹೊರಗೆ ಬಂದಾಗ ಮಹಮ್ಮದ್ ಮಾಸ್ತರ್ ಹೊರಟು ಹೋಗಿಯಾಗಿತ್ತು. ಛೇ ಒಂದು ಸೆಲ್ಫಿ ತೆಗೆದುಕೊಳ್ಳುವುದಕ್ಕೂ ನೆನಪಾಗಿಲ್ಲವಲ್ಲಾ ಎಂದು ಕೊಂಡೆ. ಈ ಮರೆವಿನ ಬಗ್ಗೆ ನೊಂದುಕೊಂಡರೂ ಎಂದಿಗೂ ಅಚ್ಚಳಿಯದ ಶಾಲಾ ದಿನದ ನೆನಪುಗಳಲ್ಲಿ ಕೆಲವು ಪುಟಗಳು ಈ ಮಹಮ್ಮದ್ ಮಾಸ್ತರ್ ಗೆ ಮೀಸಲಾಗಿ ದಾಖಲಾಗಿ ಹೋಗಿದೆ. 

Sunday, December 25, 2022

ಉಜ್ಜಾಯಿ ಪ್ರಾಣಾಯಾಮ

         ದಿನವೂ ಸುರಿವ ಬೆವರಿನ ನಾಡು ನಮ್ಮೂರು. ಸುಮ್ಮನೇ ಕುಳಿತರೂ ಸುರಿವ ಬೆವರು ಒರೆಸಿಕೊಳ್ಳುವುದಕ್ಕೇ ಒಂದು ಅಂಗವಸ್ತ್ರ ಸದಾ ಕೈಯಲ್ಲಿರಬೇಕು. ಸದಾ ಉರಿವ ಬಿಸಿಲು ಮಳೆಗಾಲದಲ್ಲೂ ನಮ್ಮೂರು ಬೆವರ ಹನಿಯನ್ನೇ ನೀಡುತ್ತದೆ ಎಂಬ ಅನಿಸಿಕೆ. ಸದಾ ಚಲನ ಶೀಲವಾಗಿ ಚಟುವಟಿಕೆಯಿಂದ ಇರುವುದರ ರಹಸ್ಯ ಈ ಊರಿನ ಬಿಸಿಲ ವಾತಾವರಣವೇ ಕಾರಣ. ಯಾಕೆಂದರೆ ಜಡತ್ವ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದಿಲ್ಲ.   ಅಂತಹ ಊರನ್ನು ಬಿಟ್ಟು ಜೀವನವನ್ನು ಕಟ್ಟುವುದಕ್ಕೆ ಬೆಂಗಳೂರಿಗೆ ಬಂದ ಮೊದಲು ಎಲ್ಲ ಹೊಸದರ ನಡುವೆ ಅಂಟಿಕೊಂಡ ಸ್ನೇಹಿತನಂತೆ ಅಪ್ಪಿಕೊಂಡು ಬಿಡದೇ ಕಾಡಿದ್ದು ಈ ಅಲರ್ಜಿ ಎಂಬ ಸಮಸ್ಯೆ. ಅದು ಅಲರ್ಜಿ ಎಂದು ಅರಿವಿಗೆ ಬರಬೇಕಾದರೆ ಬಹಳ ಸಮಯಗಳೇ ಬೇಕಾಯಿತು. ಎಲ್ಲೋ  ಯಾರಿಗೋ  ಇದೆ ಎಂದುಕೊಂಡು ಅಷ್ಟೂ ದಿನ ಇದ್ದೆ.  ನನಗೂ ಅದು ಇದೆ ಎಂದು ಹತಾಶೆ ನೋವನ್ನು ಅನುಭವಿಸಿದ್ದೆ.   ಮನೆಯಿಂದ ಒಂದಷ್ಟು ಹೊರ ಹೋಗಬೇಕೆಂದರೆ ಅರ್ಧ ಮುಖವನ್ನು ಮುಚ್ಚಿಕೊಂಡು ಸರಿಯಾಗಿ ಉಸಿರಾಡದಂತೆ ಮುಸುಕನ್ನು ಮೂಗಿಗೆ ಕಟ್ಟಿಕೊಳ್ಳುವಂತಾಗಿದ್ದು ಬಹಳ ಕಿರಿಕಿರಿಯನ್ನು ಉಂಟುಮಾಡುತ್ತಿತ್ತು. ಅಲರ್ಜಿ ಬಾಧೆ ಅದು ಅನುಭವಿಸಿದವನಿಗೆ ಮಾತ್ರ ಅದರ ನೋವು ಅರಿವಾಗುವುದು. ಎಲ್ಲರಂತೆ ತಾನಿಲ್ಲ ಎಂಬುದು ಪ್ರತಿಕ್ಷಣವೂ ಕೀಳರಿಮೆಯನ್ನು ತಂದು ಆತ್ಮ ಸ್ಥೈರ್ಯವನ್ನೇ ಕುಗ್ಗಿಸಿ ಬಿಡುತ್ತದೆ. ಇದು ಯಾವ ಯಾವ ವಿಧದಲ್ಲಿ ಬಾಧಿಸುತ್ತದೆ ಎಂದು ವಿವರಿಸುವುದು ಕಷ್ಟ. ಇದ್ದಕ್ಕಿದ್ದಂತೆ ಜ್ವರ ಬರುವುದು ಚಳಿಯಾಗುವುದು ಎದೆನೋವು ನೆಗಡಿ ಕಫ ಜೀವವೇ ಕಳಚಿ ಹೋಗುವಂತಹ ಸೀನು ಎಲ್ಲದಕ್ಕಿಂತಲೂ ಸಹನೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. 


        ಅಲರ್ಜಿಯಿಂದ ಹೊರಬರಬೇಕು, ಎಲ್ಲರಂತೆ ನಾನೂ ಮುಕ್ತವಾಗಿ ಉಸಿರಾಡಬೇಕು ಎಂದು ಬಯಸುತ್ತಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ. ವೈದ್ಯರ ಬಳಿಗೆ ಹೋದರೆ ಏನೋ ಒಂದು ಮಾತ್ರೆ ಕೊಡುತ್ತಿದ್ದರು. ಅದು ಒಂದೆರಡು ದಿನ ನಿರಾಳವನ್ನು ತಂದುಕೊಟ್ಟಂತೆ ಅನಿಸಿದರೂ ಆನಂತರ ಮೊದಲಿಗಿಂತಲೂ ಹೆಚ್ಚಿನ ಬಾಧೆ ಅನುಭವಿಸುವಂತಾಗುತ್ತಿತ್ತು. ಅಲರ್ಜಿಯ ಬಾಧೆ ಎಂದರೆ ವಿಚಿತ್ರ, ಹೊರಗಿನವರಿಗೆ ನೋಡಿದರೆ ಆರೋಗ್ಯವಂತ ಎಂದು ಕಂಡರೂ ನಾವು ಸರಿ ಇಲ್ಲ ಅಂತ ಕೀಳರಿಮೆ ಸದಾ ಇರುತ್ತದೆ. ಒಂದಿಷ್ಟು ಮೋಡ ಮುಸುಕಿದ ವಾತಾವರಣ ಮಬ್ಬು ಕವಿದರೆ ಅಲರ್ಜಿ ಬಾಧೆಯಲ್ಲಿ ಚಿತ್ರ ವಿಚಿತ್ರವಾದ ನೋವು ಅನುಭವಿಸುವಂತಾಗುತ್ತದೆ. ಮೈ ಕೈ ನೋವಿನಿಂದ ಹಿಡಿದು ನಗಡಿ ಕಫ ಯಾರಲ್ಲೂ ಹೇಳುವಂತಿಲ್ಲ,  ಬಿಡುವಂತಿಲ್ಲ.  ಅಲರ್ಜಿಯ ಬಾಧೆಯಲ್ಲಿ ಜೀವನ ಹೀಗೆ ಕಳೆದು ಬಿಡುತ್ತದೆ ಎಂಬ ಹತಾಶೆ ಸಂಕಟ ಅದು ಅನುಭವಿಸಿದವರಿಗೆ ಗೊತ್ತು. ಇಂತಹ ಅಲರ್ಜಿಯಿಂದ ಹೊರಬಂದದ್ದು ನನ್ನ ಅಪ್ರತಿಮ ಸಾಧನೆ ಎಂದು ನನಗೆ ಭಾಸವಾಗುತ್ತದೆ.  ಅದಕ್ಕೆ ಕಾರಣವಾದ ಯೋಗಭ್ಯಾಸ ಅದರಲ್ಲೂ ಕೆಲವು ತಿಂಗಳ ಹಿಂದೆ ಆರಂಭಿಸಿದ ಉಜ್ಜಾಯಿ ಪ್ರಾಣಾಯಾಮ. ಇದು ಇಷ್ಟೊಂದು ಪರಿಣಾಮಕಾರಿಯಾಗಬಹುದೆಂದು ಕಲ್ಪನೆಯೇ ಇರಲಿಲ್ಲ. ನನ್ನ ಅಲರ್ಜಿ ಬಾಧೆಗೆ ಇದು ರಾಮಬಾಣದಂತೆ ಕೆಲಸ ಮಾಡಿ ಬಿಟ್ಟಿತು. ಅದೂ ಕೇವಲ ಮೂರು ತಿಂಗಳಲ್ಲಿ! ಯಾವುದೇ ಔಷಧಿ ಕಷಾಯಕ್ಕೂ ಜಗ್ಗದ ಅಲರ್ಜಿ  ಬಾಧೆಯಿಂದ ನಾನು ಮುಕ್ತನಾಗಿದ್ದೇನೆ ಎಂದು ಆತ್ಮವಿಶ್ವಾಸದಿಂದ ಹೇಳಬಲ್ಲೆ. 

        ಉಜ್ಜಾಯಿ ಪ್ರಾಣಾಯಾಮ, ಇದೊಂದು ವಿಚಿತ್ರ ಬಗೆಯ ಪ್ರಾಣಾಯಾಮ. ಸಾಮಾನ್ಯವಾಗಿ ಪ್ರಾಣಾಯಾಮವನ್ನು ಖಾಲಿ ಹೊಟ್ಟೆಯಲ್ಲಿ ಅದರಲ್ಲೂ ಮುಂಜಾನೆ ಮಾಡುವುದು ಸೂಕ್ತ. ಆದರೆ ಉಜ್ಜಾಯಿ ಪ್ರಾಣಾಯಾಮ ಯಾವಾಗ ಬೇಕು ಆವಾಗ ಅಭ್ಯಾಸ ಮಾಡಬಹುದು. ನಡೆದಾಡುವಾಗ ಕೆಲಸ ಮಾಡುವಾಗ ಇದನ್ನು ಪರಿಣಾಮಕಾರಿಯಾಗಿ ಮಾಡಬಹುದು. 

            ಘನವಾದ ಯಾವುದೇ ಆರೋಗ್ಯದ ಸಮಸ್ಯೆ ಬಾಧಿಸಿದಾಗ ನಾನು ವೈದ್ಯರಿಗಿಂತ ಮೊದಲು ಕರೆ ಮಾಡುವುದು ಮಿತ್ರ ಹಾಗು ಯೋಗ ಗುರು ಹರೀಶನಿಗೆ. ನನ್ನ ಯೋಗಾಭ್ಯಾಸಕ್ಕೆ ಅದಮ್ಯವಾದ ಪ್ರೇರಣೆ ಕೊಟ್ಟ ಸನ್ಮಿತ್ರ. ಸಲುಗೆಯಿಂದ ಸ್ನೇಹದಿಂದ ಸದಾ ಸಂಪರ್ಕದಲ್ಲಿರುವ  ಈತ ನೀಡುವ ಪರಿಹಾರ ಅತ್ಯಂತ ಸರಳ ಹಾಗು ಅಧ್ಬುತ ಪರಿಣಾಮಕಾರಿಯಾಗಿರುತ್ತದೆ. ಒಂದು ಸಲ ಮಂಗಳೂರಿಗೆ ಹೋದಾಗ ಭೇಟಿಯಾದಾಗ ಹೇಗೆ ಮಾಡಬೇಕು ಎಂದು ಒಂದಷ್ಟು ತೋರಿಸಿಕೊಟ್ಟು ಅದನ್ನು ಅಭ್ಯಾಸ ಮಾಡಿ ನೋಡುವಂತೆ ಸಲಹೆ ಕೊಟ್ಟರು. ಆದರೆ ಅದನ್ನು ಇನ್ನಷ್ಟು ತಿಳಿದು ಸರಿಯಾಗಿ ಅಧ್ಯಯನ ಮಾಡಿ ಮಾಡಬೇಕು ಎಂದುಕೊಂಡು   ಇನ್ನೊಬ್ಬ ಮಿತ್ರ ಹೃಷೀಕೇಶ ಪೆರ್ನಡ್ಕ ಅವರನ್ನು ಸಂಪರ್ಕಿಸಿದೆ. ಇವರು ಮೂಲತಃ ನಮ್ಮೂರಿನವರು. ಯುವ ಪ್ರತಿಭಾವಂತ. ವಿದೇಶದಲ್ಲಿದ್ದು ಈಗ ಬೆಂಗಳೂರಲ್ಲಿದ್ದಾರೆ. ಯೋಗ ರೀತಿಯ ಚಿಕಿತ್ಸೆಯನ್ನೆ ವೃತ್ತಿಯನಾಗಿಸಿಕೊಂಡ ಸಹೃದಯಿ. ಒಂದು ದಿನ ವಿಡೀಯೋ ಕಾಲ್ ಮಾಡಿ ಉಜ್ಜಾಯಿ ಪ್ರಾಣಾಯಾಮ ಹೇಗೆ ಮಾಡಬೇಕು ಎಂದು ಕಲಿಸಿಬಿಟ್ಟರು. ನಿಜವಾಗಿ ಇದನ್ನು ಗುರುಗಳ ಸಮ್ಮುಖದಲ್ಲೇ ಮಾಡಬೇಕು. ಆದರೆ ಈ ಯೋಗಾಭ್ಯಾಸದಲ್ಲಿ ನಿರತನಾದ ನನಗೆ ಅವರು ಸುಲಭದಲ್ಲಿ ಕಲಿಸಿಕೊಟ್ಟರು. ಅದರ ಉಪಯೋಗಗಳನ್ನು ತಿಳಿಸಿದರು. 

        ಅಲ್ಲಿಂದ ನಂತರ  ನನ್ನ ಆರೋಗ್ಯದಲ್ಲಿ ಮತ್ತಷ್ಟು ಸುಧಾರಣೆಯಾಯಿತು. ಕೋವಿಡ್ ಸಮಯವಲ್ಲದೇ ಇದ್ದರೂ ಹೊರಗೆ ಓಡಾಡಬೇಕಾದರೆ ಸದಾ ಮಾಸ್ಕ್ ಧರಿಸಿ ಓಡಾಡುವ ನನಗೆ ಈಗ ಮಾಸ್ಕ್ ಅವಶ್ಯಕತೆ ಬೀಳುವುದಿಲ್ಲ. ಮಾತ್ರವಲ್ಲ ರಕ್ತದೊತ್ತಡದಿಂದ ಸಂಪೂರ್ಣ ಮುಕ್ತನಾಗಿಬಿಟ್ಟೆ. ಈಗ ಅನುಭವಿಸುವ ಸಂತೋಷ ಸಂತೃಪ್ತಿ ಅನೂಹ್ಯವಾದದ್ದು. ಇಷ್ಟು ಮಾತ್ರವಲ್ಲ ಪ್ರಾಣಾಯಾಮದಲ್ಲಿ ಮತ್ತಷ್ಟು ಸುಧಾರಣೆಯಾಗಿ ಧ್ಯಾನ ಏಕಾಗ್ರತೆ ದಿನನಿತ್ಯದ ಯೋಗಾಭ್ಯಾಸ ಹೊಸ ಮಜಲಿಗೆ ತಲುಪಿದ ಅನುಭವವಾಗತೊಡಗಿತು. 

        ಉಜ್ಜಾಯಿ ಪ್ರಾಣಾಯಾಮದ ಪರಿಣಾಮ ಉಪಯೋಗಗಳನ್ನು ಅಂತರ್ಜಾಲದಲ್ಲಿ ನೋಡಬಹುದು. ಹಲವಾರು ಆರೋಗ್ಯ ಸಮಸ್ಯೆಗೆ ಉಸಿರಾಟದ ಸಮಸ್ಯೆಗಳಿಗೆ ಇದು ಅತ್ಯಂತ ಸೂಕ್ತ ಪರಿಹಾರವನ್ನು ಒದಗಿಸುತ್ತದೆ. ಅಲರ್ಜಿಯ ಭಾಧೆಯಿಂದ ದೂರವಾಗುವಾಗ ಇದಕ್ಕೆ ಪ್ರೇರಣೆಕೊಟ್ಟ ಹರೀಶ್ ಯೋಗ ಮತ್ತು ಅದನ್ನು ಸರಳವಾಗಿ ತಿಳಿಸಿಕೊಟ್ಟ ಹೃಷಿಕೇಶ್ ಪೆರ್ನಡ್ಕ ಅವರ ನೆನಪು ಸದಾ ಪ್ರೇರಕವಾಗಿ ಪ್ರಚೋದಿಸಲ್ಪಡುತ್ತದೆ. ಅವರಿಗೆ ಈ ಮೂಲಕ ಹೃತ್ಪೂರ್ವಕ ಕೃತಜ್ಞತೆಗಳು. ಹಲವು ವರ್ಷದ ಬಾಧೆ, ಹಲವು ಔಷಧಿಗಳಿಗೆ ಜಗ್ಗದ ಸಮಸ್ಯೆ ಇಂದು ನನ್ನಿಂದ ಬಹಳಷ್ಟು ದೂರವಾಗಿದೆ. ಸಮರ್ಪಕ ಉಸಿರಾಟ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ. 


Wednesday, December 21, 2022

ಯಾತ್ರಾ ಸನ್ನಾಹ

ನಮ್ಮ ಮನೆಯಿಂದ ಹಿರಿಯರೆಲ್ಲ ಸೇರಿ ಕಾಶಿ ಯಾತ್ರೆಗೆ ಹೊರಡುವ ಸಿದ್ದತೆ ಮಾಡುತ್ತಿದ್ದೇವೆ. ಕಾಶಿ ಯಾತ್ರೆ ಎಂದರೆ ಹಿಂದುಗಳ ಜೀವನದ ಒಂದು ಗುರಿ ಎಂದರೂ ತಪ್ಪಲ್ಲ. ಮುಖ್ಯವಾಗಿ ನಮ್ಮ ಅಮ್ಮನಿಗೆ ಕಾಶಿಯನ್ನು ಕಾಣಬೇಕು, ಅಯೋಧ್ಯೆಗೆ ಹೋಗಿ ಬರಬೇಕು ಹೀಗೆ ಹಂಬಲ ಉಂಟಾಗಿ ಬಹಳ ವರ್ಷಗಳೇ ಕಳೆದುವು. ಆದರೆ ಅದಕ್ಕೆ ಸಮಯಾವಕಾಶ ಕೂಡಿಬರಲಿಲ್ಲ. ವೃದ್ದರಾದ ಅಮ್ಮನನ್ನು ಮಾತ್ರ ಕಳುಹಿಸುವುದು ಸಾಧ್ಯವಿಲ್ಲದೇ ಇರುವುದರಿಂದ ಅದು ಈ ವರೆಗೆ ಸಾಧ್ಯವಾಗದೇ ಹೋಯಿತು.  ಇದೀಗ ರಾಷ್ಟ್ರ ಜಾಗೃತಿ ಸಂಸ್ಥೆಯವರು ಅದಕ್ಕೆ ಒಂದಷ್ಟು ಅನುಕೂಲವನ್ನು ಒದಗಿಸಿ, ಆ ಸದವಕಾಶದಿಂದ ಹೋಗಿ ಬರುವ ಸಿದ್ದತೆ ನಡೆಯುತ್ತಾ ಇದೆ.  ಹೊರಡುವುದಕ್ಕೆ ಇನ್ನೆರಡು ತಿಂಗಳು ಇದೆ.  ಯಾವುದೇ ದೇವಸ್ಥಾನಗಳಿಗೆ ಅದೂ ಜನಸಂದಣಿಯ ನಡುವೆ ಹೋಗುವುದು ನನಗೆ ತೀರಾ ಇಷ್ಟವಿಲ್ಲದ ಕೆಲಸ. ಹಾಗಾಗಿ ಹಲವು ತೀರ್ಥ ಕ್ಷೇತ್ರ ದರ್ಶನದಿಂದ ಬಹಳ ದೂರವೇ ಉಳಿದಿದ್ದೇನೆ. ಇತ್ತೀಚೆಗೆ ಮಂತ್ರಾಲಯ ದರ್ಶನ ಮಾಡಿದ್ದೆ. ಅದೂ ಮುಂಜಾನೆ ಹೆಚ್ಚು ಜನರೂ ಯಾರೂ ಇಲ್ಲದೆ ಇದ್ದಕಾರಣ ಅದೊಂದು ಅಹ್ಲಾದಮಯವಾಗಿತ್ತು.  ನಿತ್ಯ ಮನೆಯಲ್ಲೇ ಮುಂಜಾನೆ ಎದ್ದು ಒಂದು ದಿನವೂ ಬಿಡದೇ ಬ್ರಾಹ್ಮೀ ಮುಹೂರ್ತದಲ್ಲಿ ಸಂಧ್ಯಾವಂದನೆ ಮತ್ತು  ತಾಸು ಪ್ರಾಣವಾಯುವಿನ ಏರಿಳಿತಕ್ಕೆ ತಲ್ಲೀನನಾಗಿ  ಏಕಾಂತ  ಧ್ಯಾನ ಮಾಡುವಾಗ ನಿಜವಾದ ಪರಮಾತ್ಮ ದರ್ಶನದ ಅನುಭವವಾಗುತ್ತದೆ. ಆ ಅನುಭವದಲ್ಲಿ ಅದನ್ನು ದಿನವೂ ಬಿಡದೆ ನಿಷ್ಠೆಯಿಂದ ಪಾಲಿಸಿಕೊಂಡು ಬಂದು ಬಿಟ್ಟಿದ್ದೇನೆ.  ಹಾಗಾಗಿ ದೇವಸ್ಥಾನ ದರ್ಶನ ಎಂಬುದು ಆ ನಂತರ ಉಳಿದುಕೊಂಡು ಯಾಕೋ ಅದರತ್ತ ಪ್ರಚೋದನೆಯೇ ಇಲ್ಲವಾಗುತ್ತದೆ. ಮನೆಯಲ್ಲಿ ಮನದಲ್ಲಿ ದೇವರ ದರ್ಶನವಾಗುವಾಗ ಎಲ್ಲದರಿಂದಲು ಅದು ಉತ್ಕೃಷ್ಠ ಎಂಬ ಭಾವನೆ ಬೆಳೆದು ಬಂದು ಬಿಟ್ಟಿದೆ. ಸತ್ಕಾರ್ಯಗಳು ಮನದಲ್ಲಿ ಹುಟ್ಟಿ ಮನೆಯಲ್ಲಿ ಮೊದಲು ಆಚರಿಸಲ್ಪಡಬೇಕು.  ನಿತ್ಯಕರ್ಮದಲ್ಲಿ ಮನೆಯಲ್ಲೇ ಆರಾಧಿಸುವ ದೇವರ ಮಹಿಮೆ ಅನುಗ್ರಹ ಅತ್ಯಂತ ಉತ್ಕೃಷ್ಟವಾಗಿರುತ್ತದೆ.  ಆದರೂ   ಹಲವು ಸಲ ಅನಿವಾರ್ಯವಾಗುವಾಗ ಜೀವನದ ಅಂಗ ಎಂದು ಹೋಗುವುದು ಇದೆ. ನಿಜಕ್ಕಾದರೆ ಜಾತ್ರೆ ಸಮಾರಂಭಕ್ಕಿಂತಲೂ ವಿಶೇಷವಲ್ಲದ ದಿನದಲ್ಲಿ ಅದೂ ಯಾರೂ ಹೋಗದಿರುವ ದೇವಸ್ಥಾನಗಳಿಗೆ ಹೋಗುವುದು ನನಗಿಷ್ಟ. ಈಗ ಕಾಶಿ ಎಂದರೆ ಕೇಳಬೇಕೆ? ಭಾರತ ದೇಶಕ್ಕೊಂದೇ ಕಾಶಿ....ಕುತೂಹಲ ಇದ್ದೇ ಇರುತ್ತದೆ. ತಾಯಿಗೆ ಕಾಶಿ ದರ್ಶನ ಮಾಡಿಸುವ ಕರ್ತವ್ಯ ಪ್ರಜ್ಞೆಯೂ ಜತೆಯಾಗಿರುತ್ತದೆ.

         ಹತ್ತು ವರ್ಷಗಳ ಹಿಂದೆ ಮಲಯಾಳಂ ಸಿನಿಮಾ ಒಂದು ನೋಡಿದ್ದು ಈಗ ನನಗೆ ನೆನಪಾಗುತ್ತಿದೆ. ಮಲಯಾಳಂ ನ ಖ್ಯಾತ ಹಾಸ್ಯ ನಟ ನಟಿಸಿ ನಿರ್ಮಿಸಿ ನಿರ್ದೇಶಿಸಿ ಪ್ರಧಾನ ನಟನಾಗಿ ನಟಿಸಿದ್ದ ಮಲಯಾಳಂ ಸಿನಿಮ "ಅದಾಮಿಂದೆ ಮಗನ್ ಅಬು."    ಪ್ರಧಾನವಾಗಿ ಇದು ಮುಸ್ಲಿಂ ಕಥಾ ಹಂದರ ಇರುವ ಸಿನಿಮ. ಆ ಕಾಲದಲ್ಲಿ ಅದಕ್ಕೆ ರಾಷ್ಟ್ರ ಪ್ರಶಸ್ತಿ ಪುರಸ್ಕಾರವೂ ಲಭ್ಯವಾಗಿತ್ತು.  ಅದು  ಈಗ ನನಗೆ ನೆನಪಾವುವುದಕ್ಕೆ ಕಾರಣ  ಆ ಸಿನಿಮಾದಲ್ಲಿ ಕಥಾನಾಯಕ ವಯೋವೃದ್ದ ಪತ್ನಿ ಸಹಿತ ಹಜ್ ಗೆ  ಯಾತ್ರೆ ಹೋಗಲು ಹಂಬಲಿಸುತ್ತಾನೆ.  ಹಿಂದುಗಳಿಗೆ ಕಾಶಿ ಹೇಗೋ ಮುಸ್ಲಿಂ ರಿಗೆ ಹಜ್ಅಥವಾ ಮೆಕ್ಕಾ. ತೀರಾ ಬಡವನಾದ ಆತ ಅತ್ತರ್ ವ್ಯಾಪಾರಿ. ಆತ ಹಜ್ ಗೆ ಹೋಗಲು ಸಿದ್ದತೆ ನಡೆಸುವುದು ನಿಜಕ್ಕೂ ಮನಮುಟ್ಟುವಂತೆ ಚಿತ್ರಿಸಲಾಗಿದೆ. ಈ ಸಿದ್ದತೆಯೇ ಸಿನಿಮಾದ ಕಥೆ. ಹಜ್ ಯಾತ್ರೆ ಎಂದರೆ ಅದು ಜೀವನದ ಗುರಿ. ಹೊರಡುವಾಗ ಹಿಂತಿರುಗಿ ಬರುವ ಹಂಬಲ  ಕೆಳೆದುಕೊಂಡು ಹೊರಡಬೇಕು. ಈ ಸಿನಿಮಾದಲ್ಲಿ ಅದನ್ನು ಎಳೆ ಎಳೆಯಾಗಿ ತೋರಿಸಲಾಗಿದೆ.   ಆತ ಮೊದಲಿಗೆ ತನ್ನ ಮನೆಯಲ್ಲಿದ್ದ ಸಾಕುವ ಹಸುವನ್ನು ಮಾರಾಟ ಮಾಡುತ್ತಾನೆ. ಆತನ ಪತ್ನಿಗೆ ಅದು ಜೀವಾಳವೇ ಆಗಿರುತ್ತದೆ. ಮನೆಯಲ್ಲಿ ಬೇರೆ ಯಾರೂ ಇಲ್ಲದಿರುವುದರಿಂದ ಆಕೆಗೆ ಅದು ಬಂಧುವಿನಂತೆ ಇರುತ್ತದೆ. ಅದನ್ನು ಮಾರಾಟ ಮಾಡುವಾಗ ಆಕೆ ( ನಟಿ ಜರಿನಾ ವಹಾಬ್) ಬಹಳ ಸಂಕಟ ಅನುಭವಿಸುತ್ತಾಳೆ. ಆದರೆ ಅವರಿಗೆ ಅದು ಅನಿವಾರ್ಯ.  ಹತ್ತಿರದ ನಗರಕ್ಕೆ ಹೋಗಿ ಪಾಸ್ ಪೋರ್ಟ್ ಅರ್ಜಿ ಹಾಕಿ ಪಡೆಯುತ್ತಾರೆ.  ಆತ ಅಲ್ಲಿ ಇಲ್ಲಿ ಮಾಡಿದ ಸಾಲಗಳನ್ನು ನೆನಪು ಮಾಡಿಕೊಂಡು ಚಿಕ್ಕಾಸೂ ಬಾಕಿ ಇಲ್ಲದೇ ತೀರಿಸುತ್ತಾನೆ.  ಹಜ್ ಗೆ ಹೋಗಬೇಕಾದರೆ ಎಲ್ಲರ ಋಣವನ್ನೂ ತೀರಿಸಿ ಹೋಗಬೇಕು. ಇಷ್ಟು ಮಾತ್ರವಲ್ಲ, ಕಾರಣಾಂತರದಿಂದ ಯಾರಲ್ಲೋ ಜಗಳವಾಡಿ ಏನೋ ವೈಷಮ್ಯ ಬೆಳೆದಿರುತ್ತದೆ. ಈತನ ನೆರೆ ಮನೆಯವನಾಗಿದ್ದವನು ಯಾವುದೋ ಕಾಲದಲ್ಲಿ ಇವರಲ್ಲಿ ಜಗಳಮಾಡಿ ದೂರ ಹೋಗಿದ್ದ. ಆತನನ್ನು ಹುಡುಕಿ ಆತನ ಮನೆಗೆ ಹೋಗಿ ಆ ವೈಷಮ್ಯವನ್ನು ಮರೆಯುವಂತೆ ಅದಕ್ಕೆ ಪರಿಹಾರವನ್ನು ಕಾಣುವುದಕ್ಕೆ ತೊಡಗುತ್ತಾನೆ. ಇದು ನಿಜಕ್ಕೂ ಭಾವನಾತ್ಮಕವಾಗಿರುತ್ತದೆ. ಇಷ್ಟೇ ಅಲ್ಲ ಹೋಗುವುದಕ್ಕೆ ಮತ್ತಷ್ಟು ಹಣದ ಅವಶ್ಯಕತೆ ಇರುತ್ತದೆ. ಮನೆಯ ಅಂಗಳದಲ್ಲಿರುವ ಹಲಸಿನ ಮರವನ್ನು ಮರದ ವ್ಯಾಪಾರಿಗೆ ಕೊಡುತ್ತಾನೆ. ಮರದ ವ್ಯಾಪಾರಿಯೂ ಅಷ್ಟೇ..ಮರ ಬೇಕಾಗಿಲ್ಲ ಹಣ ನೀನೆ ಇಟ್ಟುಕೋ ಎಂದರೂ ಈತ ಒಪ್ಪಿಕೊಳ್ಳುವುದಿಲ್ಲ. ಮರವನ್ನು ಕಡಿದು ಕೊಂಡೊಯ್ಯುವಂತೆ ಹೇಳುತ್ತಾನೆ. ತನಗೆ ಸಮಯ ಬಂದಾಗ ಕೊಂಡೊಯ್ಯುತ್ತೇನೆ ಎಂದುಕೊಂಡಿದ್ದ ವ್ಯಾಪಾರಿ ಒಂದು ದಿನ ಮರೆವನ್ನು ಕಡಿಯಲು ಮುಂದಾಗುತ್ತಾನೆ. ಆಗ ಮರದ ಒಳಗೆ ಸಂಪೂರ್ಣ ಟೊಳ್ಳಾಗಿರುತ್ತದೆ.  ಛೇ ಹೀಗಾಯಿತಲ್ಲ ಎಂದು ಅಬು ಮಮ್ಮಲ ಮರುಗುತ್ತಾನೆ. ವ್ಯಾಪಾರಿ ಪರವಾಗಿಲ್ಲ ನೀವು ಹೋಗಿ, ನೀವು ನನಗೆ ಮೋಸ ಮಾಡಿಲ್ಲ,   ಎಂದರೂ ಕೇಳದೆ, ನಿನಗೆ ಮೋಸಮಾಡಿ ಆ ಹಣವನ್ನು ಹಜ್ ಯಾತ್ರೆಗೆ ಉಪಯೋಗಿಸುವುದು ಸೂಕ್ತವಲ್ಲ. ಅದರ ಪಾವಿತ್ರ್ಯತೆ ಇಲ್ಲವಾಗುತ್ತದೆ ಎಂದು ಆ ಹಣವನ್ನು ಹಿಂದಿರುಗಿಸಿ  ಹಜ್ ಯಾತ್ರೆಗೆ ಹೋಗುವ ಬಯಕೆಯನ್ನು ಬಿಟ್ಟುಬಿಡುತ್ತಾನೆ. ಈ ಉದಾತ್ತವಾದ ತತ್ವ ನನಗೆ ನಿಜಕ್ಕೂ ಇಷ್ಟವಾಗುತ್ತದೆ. 

            ಕಾಶೀಯಾತ್ರೆಯ ಪಾವಿತ್ರ್ಯತೆಯ ಗಂಭೀರತೆ ಅರಿವಾಗುತ್ತಿದ್ದಂತೆ ಆತ್ಮ ಗಹನವಾದ ಪ್ರಶ್ನೆಗಳನ್ನು ಮಾಡುತ್ತಾ ಹೋಗುತ್ತದೆ. ಯಾರು ಹೇಗೂ  ಹೋಗಿ ಬರಬಹುದು. ಆದರೆ ಆತ್ಮ ವಂಚನೆ ಎಂಬುದು ಎಲ್ಲಕ್ಕಿಂತ ದೊಡ್ಡ ವಂಚನೆ. ಯಾರಿಗೋ ವಂಚಿಸಿದ ಹಣವಾಗಲಿ ಸಂಪತ್ತಾಗಲೀ ಇಲ್ಲಿಗೆ ಬಳಕೆಯಾಗಬಾರದು. ಯಾರಲ್ಲೋ ಇದ್ದ ವೈಷಮ್ಯವನ್ನು ಬಿಡುವ ಪ್ರಯತ್ನವನ್ನಾದರೂ ಮುಕ್ತ ಮನಸ್ಸಿನಿಂದ ಮಾಡಬೇಕು.   ನ್ಯಾಯವಾದ ಸ್ವಂತ ದುಡಿಮೆಯಿಂದ ಹೋಗಿಬರುವ ನಿಷ್ಠೆಯನ್ನು ಹೊಂದಬೇಕು.  ಧನ ಸಂಪತ್ತು ಹೇಗೋ ಸಂಪಾದಿಸುತ್ತಾರೆ. ಆದರೆ ವೈಷಮ್ಯ ಅದನ್ನು ದೂರ ಮಾಡುವುದು ಬಹಳ ಕಷ್ಟ.  ನೀರು ಭೂಮಿ ಗಾಳಿ ಹೀಗೆ ಪಂಚಭೂತಗಳನ್ನು ಎಲ್ಲಾ ಪ್ರಾಣಿ ಪಕ್ಷಿಯೊಂದಿಗೆ ಮನುಷ್ಯ ಸಮಾನವಾಗಿ ಅನುಭವಿಸುವಾಗ ಇಲ್ಲಿ ಯಾರೂ ಕನಿಷ್ಠರಲ್ಲ. ಎಲ್ಲರೂ ಶ್ರೇಷ್ಠರೆ. ಇನ್ನೊಬ್ಬರನ್ನು ಕನಿಷ್ಠ ಎಂದು ಕೀಳಾಗಿ ಕಾಣುವವನೇ ಸ್ವತಃ ಮನಸ್ಸಿನಲ್ಲಿ ಕೀಳು ಭಾವನೆಯನ್ನು ಹೊಂದಿರುತ್ತಾನೆ. ಕಾಶೀ ಯಾತ್ರಿಕನ ಒಂದು ಬೆರಳು ಹಿಡಿದು ಆಧರಿಸಿದರೂ ಕಾಶೀ ಯಾತ್ರೆಯ ಪುಣ್ಯ ಲಭಿಸುತ್ತದೆ. 

ಕಾಶೀ ಯಾತ್ರೆಯನ್ನು ಬೇರೆ ಯಾವುದಕ್ಕೂ ಸಮೀಕರಿಸುವುದು ಹೋಲಿಸುವುದು ಖಂಡಿತಾ ಸರಿಯಲ್ಲ. ಆದರೆ ಉದಾತ್ತವಾದ ಧ್ಯೇಯಗಳು ಎಲ್ಲೇ ಇರಲಿ ಅದು ಅನುಸರಣೀಯವಾಗಿರುತ್ತದೆ.  ಧರ್ಮಗಳು ಮನುಷ್ಯನ ಜನ್ಮದಿಂದ ಜತೆಯಾಗಿ ಬೆಳೆದು ಬರುತ್ತದೆ.  ತೆಂಗಿನ ಮರ ತನ್ನಲ್ಲಿ ಮಾವಿನ ಹಣ್ಣು ಇಲ್ಲದಿರುವುದಕ್ಕೆ ಬೇಸರಿಸುವುದಿಲ್ಲ. ಮಾವಿನ ಮರ ಮಾವಿನ ಹಣ್ಣನ್ನೇ ಕೊಡುತ್ತದೆ. ಮಲ್ಲಿಗೆಯ ಬಳ್ಳಿಯಲ್ಲಿ ಮಲ್ಲಿಗೆಯೇ ಅರಳುತ್ತದೆ. ಹೀಗೆ ವೈವಿಧ್ಯಮಯ ಎಂಬುದು ಪ್ರಕೃತಿ ಧರ್ಮ.  ನಾವು ಹುಟ್ಟಿ ಬೆಳೆಯುವ ಧರ್ಮವು ಅದೇ ಬಗೆಯಲ್ಲಿ ಪ್ರಕೃತಿ ಧರ್ಮವೇ ಹೊರದಲ್ಲಿ ಅದರಲ್ಲಿ ಭೇದವಿಲ್ಲ.   ಅದರಲ್ಲಿ ಯಾರು ಭೇದವನ್ನು ಕಾಣುತ್ತಾನೋ ಆತ ಎಂದಿಗೂ ಸ್ವಧರ್ಮಾಚರಣೆಯಲ್ಲಿಯೂ ನೆಮ್ಮದಿಯನ್ನು ಕಾಣಲಾರ.  ಮರಗಿಡ ಪಕ್ಷಿಗಳಿಗಿಲ್ಲದ ಧರ್ಮ ಭೇದ   ಮನುಷ್ಯನಲ್ಲಿ ಯಾಕಿರಬೇಕು?  ಇಂದು ಜಗತ್ತು  ಹಸಿವಿನಿಂದ ತತ್ತರಿಸುವುದಕ್ಕಿಂತಲೂ ಹೆಚ್ಚು ಧರ್ಮಾಂಧತೆಯ ಉರಿಗೆ ತತ್ತರಿಸುತ್ತಿದೆ.  ಹಿಂದೂ ಧರ್ಮದ ಮೂಲ ಸ್ವಭಾವವೇ ಪರಧರ್ಮ ಸಹಿಷ್ಣುತೆ. ಬೇರೆ ಯಾವಧರ್ಮವೂ ಮಾಡಿಕೊಡದ ಅವಕಾಶವನ್ನು ಹಿಂದೂ ಧರ್ಮ ಒದಗಿಸಿದ್ದನ್ನೂ ಚರಿತ್ರೆಯೇ ಹೇಳುತ್ತದೆ.  ಈಗ ಕಾಶಿ ಯಾತ್ರೆ ಸಿದ್ದತೆಯಾಗುವಾಗ ನಾನೆಷ್ಟು ಪ್ರಾಮಾಣಿಕನಾಗಿದ್ದೇನೆ ಎಂದು ಆತ್ಮವಂಚನೆ ಬಿಟ್ಟು ಒರೆಗೆ ಹಚ್ಚಬೇಕಾಗುತ್ತದೆ. ಆಗಈ ಸಿನಿಮಾದ ಅಬುವಿನ ಪಾತ್ರ ನೆನಪಾಗುತ್ತದೆ. ಏನೂ ಇಲ್ಲದ ಆ ಬಡವನಲ್ಲಿ ಇದ್ದದ್ದು ಪ್ರಾಮಾಣಿಕತೆ , ನಿಷ್ಠೆ ಮತ್ತು ಭಗವಂತನ ಮೇಲಿನ ಪ್ರೇಮ.  ಕಾಶೀ ಯಾತ್ರೆಯ ಅನುಭವದ ನಿರೀಕ್ಷೆಯಲ್ಲಿದ್ದೇನೆ.

 


Tuesday, December 20, 2022

ಸಂಗೀತ ಸಾಗರದ ತೀರದಲ್ಲಿ

      ನಾವು ಒಂದು ಕೋಣೆಯೊಳಗೆ ಬಾಗಿಲು ಹಾಕಿ ಕುಳಿತಿರುತ್ತೇವೆ. ಹಿತವಾದ ಒಂದು ಪರಿಮಳ ಎಲ್ಲಿಂದಲೋ ಮೂಗಿಗೆ ಬರುತ್ತದೆ. ಅಹಾ...ಮತ್ತಷ್ಟು ಗಾಢವಾಗಿ ಅನುಭವಿಸುವುದಕ್ಕೆ ಮನಸ್ಸಾಗುತ್ತದೆ. ಹೋಗಿ ಕಿಟಿಕಿ ಬಾಗಿಲು ತೆರೆದು ಇಡುತ್ತೇವೆ. ಸಾಧ್ಯವಾದರೆ ಹೊರಗೆ ಹೋಗಿ ನೋಡುತ್ತೇವೆ. ಈಗ ಪರಿಮಳ ಮತ್ತಷ್ಟು ಗಾಢವಾಗಿ  ಅನುಭವಕ್ಕೆ ಬರುತ್ತದೆ.  

ಚಲನ ಚಿತ್ರದಲ್ಲಿ ಅಥವಾ ಇನ್ನೆಲ್ಲೋ ಒಂದು ಜನಪ್ರಿಯ  ಹಾಡನ್ನು ಕೇಳುತ್ತೇವೆ. ಆಗ ನನಗೆ ಇದೇ ರೀತಿಯ ಅನುಭವವಾಗುತ್ತದೆ. ಆ ಹಾಡು ಯಾಕೆ ಮಧುರವಾಗಿ ಕೇಳಬೇಕೆನಿಸುತ್ತದೆ್?   ಕುತೂಹಲ ಜಾಸ್ತಿಯಾಗುತ್ತದೆ. ಆ ಹಾಡು ಸಂಗೀತದ ಯಾವ ರಾಗದಲ್ಲಿ ಸಂಯೋಜನೆ ಮಾಡಲಾಗಿದೆ ಎಂದು ತಿಳಿಯಲು ಪ್ರಯತ್ನಿಸುತ್ತೇನೆ. ಉದಾಹರಣೆಗೆ ಕಾಂತಾರ ಸಿನಿಮಾದ ವರಾಹ ರೂಪಂ ಹಾಡು, ಇದು ಪ್ರಧಾನವಾಗಿ  ತೋಡಿ ರಾಗದಲ್ಲಿ ಸಂಯೋಜಿಸಲಾಗಿದೆ.  ನನಗೆ ರಾಗದ ಬಗ್ಗೆ ಅಷ್ಟೊಂದು ಜ್ಞಾನ ಇಲ್ಲ. ಕೇವಲ ಅದರ ಶೈಲಿಯನ್ನು ರಾಗದ ಆರೋಹಣ ಅವರೋಹಣವನ್ನು ತನ್ಮಯನಾಗಿ ಅನುಭವಿಸುತ್ತೇನೆ. ಇದಕ್ಕೆ ಶಾಸ್ತ್ರೀಯ ಸಂಗೀತದ ಜ್ಞಾನ ಇರಬೇಕೆಂದೇನೂ ಇಲ್ಲ. ಆದರೆ ಶಾಸ್ತ್ರೀಯ ಸಂಗೀತದ ಕುತೂಹಲ ಇರುತ್ತದೆ. ಸರಿ ತೋಡಿ ರಾಗದ ಆರೋಹಣ ಅವರೋಹಣ ವಿಸ್ತಾರವಾಗಿರುವ ಶಾಸ್ತ್ರೀಯ ಸಂಗೀತವನ್ನು ಕೇಳುವ ಮನಸ್ಸಾಗುತ್ತದೆ. ಆಗ ಗಾಢವಾದ ತೋಡಿರಾಗದ ಅನುಭವಾಗುತ್ತದೆ. ಮಲಯಾಳಂ ನ ಜನಪ್ರಿಯ ಸಿನಿಮಾ ಹೃದಯಂ ನ ಒಂದು ಸುಂದರ ಹಾಡು "ಮನಸೇ ಮನಸೇ..." ಬಹಳ ಇಷ್ಟವಾಗುತ್ತದೆ. ಇದು ಆಭೇರಿ ರಾಗದಲ್ಲಿ ಸಂಯೋಜಿಸಲಾದ ಹಾಡು. ಮುಖ್ಯವಾಗಿ ಆ ಸಿನಿಮಾದ ಎಲ್ಲ ಭಾಗದ ಹಿನ್ನೆಲೆ ಸಂಗೀತದಲ್ಲಿ ಈ ರಾಗದ ಪ್ರಭಾವ ದಟ್ಟವಾಗಿ ಅನುಭವಕ್ಕೆ ಬರುತ್ತದೆ. ಸರಿ ಆಭೇರಿ ರಾಗದಲ್ಲಿರುವ  ಶಾಸ್ತ್ರೀಯ ಸಂಗೀತವನ್ನು ಹುಡುಕಿ ಕೇಳುತ್ತೇನೆ. ಭಜರೇ ಮಾನಸ....ಹಾಗೇ ಎಂದರೋ ಮಹಾನು ಭಾವುಲು ....ಸಿನಿಮಾದಲ್ಲಿ ಹಾಡಿನ ಸಾರಮಾತ್ರ ಅನುಭವಕ್ಕೆ ಬಂದರೆ ಶಾಸ್ತ್ರೀಯ ಸಂಗೀತದಲ್ಲಿ ಅದನ್ನು ಕೇಳುವಾಗ ಕಿಟಿಕಿ ಬಾಗಿಲು ತೆರೆದು ಗಾಢವಾದ ಪರಿಮಳವನ್ನು ಆಘ್ರಾಣಿಸಿದಂತೆ ಅನುಭವವಾಗುತ್ತದೆ.  ಇದೊಂದು ಅವ್ಯಕ್ತವಾದ ಆನಂದವನ್ನು ಕೊಡುತ್ತದೆ. ಇದರ ಅನುಭವ ಸಂಗೀತದ ರಸಿಕತೆಯನ್ನು ಹೆಚ್ಚಿಸುತ್ತದೆ. ಹಾಗೇ ಹಲವು ರಾಗಗಳು ನನಗೆ ಬಹಳ ಇಷ್ಟವಾಗುತ್ತದೆ. ಆ ರಾಗದ ಬಗ್ಗೆ ಯಾವ ಜ್ಞಾನವು ಇಲ್ಲದೇ ಇದ್ದರೂ ಈ ಅನುಭವ ಸುಖವನ್ನು ಕಾಣಬಹುದಾದರೆ ಇನ್ನು ಶಾಸ್ತ್ರೀಯ ಸಂಗೀತದ ರಾಗಗಳ ಬಗ್ಗೆ ತಿಳಿದಿದ್ದರೆ ಹೇಗಾಗಬೇಡ?  ನಿಜಕ್ಕೂ ಸಂಗೀತ ಎನ್ನುವುದು ಸಾಗರದಂತೆ. ಅದರ ತೀರದಲ್ಲಿ ನಿಲ್ಲುವುದಕ್ಕೂ ನಾವು ಪುಣ್ಯ ಮಾಡಿರಬೇಕು. 

ಸಿನಿಮಾ ಹಾಡುಗಳು ಕಳಪೆ ಅಂತ ಹೇಳುವುದಿಲ್ಲ. ಅವುಗಳು ಒಂದು ರೀತಿಯಲ್ಲಿ  ಕಿತ್ತಳೆ ಮಾವು ಹಣ್ಣಿಗಳ ರಸಮಾತ್ರ ಇರುವ ಪಾನೀಯ ಇದ್ದಂತೆ. ಫಿಲ್ಟರ್ ಕಾಫಿಯಂತೆ.  ಇದರ ಗಾಢ ಅನುಭವವನ್ನು ಪಡೆಯುವುದಕ್ಕೆ ನಾವು ಕಿತ್ತಳೆ ಹಣ್ಣನ್ನೇ ತಿನ್ನಬೇಕು. ಫಿಲ್ಟರ್ ಕಾಫಿಯ ಬದಲ್ಲು ಕಾಫೀ ಬೀಜದ ಪುಡಿಯ ಕಾಫಿಯನ್ನು ಸವಿಯಬೇಕು. ರಾಗಗಳ ಗಾಢ ಅನುಭವವಾಗುವುದು ಶಾಸ್ತ್ರೀಯ ಸಂಗೀತವನ್ನು ಆಲಿಸುವಾಗ.  ಯಾವುದೋ ಮದುವೆ ಮನೆಯಲ್ಲಿಯೋ ಅಥವಾ ಇನ್ನು ಯಾವುದೋ ಸಮಾರಂಭದಲ್ಲಿ ಯಾವುದರಲು  ಮಗ್ನರಾಗಿರುತ್ತೇವೆ. ಫಕ್ಕನೇ ಒಂದು ಇಂಪಾದ ಹಾಡನ್ನು ಸುಂದರವಾಗಿ ಹಾಡುವುದು ದೂರದಲ್ಲಿದ್ದ ನಮ್ಮ ಕಿವಿಗೆ ಬೀಳುತ್ತದೆ. ಆಗ ನಮ್ಮ ಮನಸ್ಸಿನಲ್ಲಿ ಕುತೂಹಲ ಮೂಡಿ ವೇದಿಕೆಯತ್ತ ಧಾವಿಸುತ್ತೇವೆ. ಯಾರಪ್ಪಾ ಇದು ಹಾಡುತ್ತಿರುವುದು ಎಂದು ಕುತೂಹಲವಿರುತ್ತದೆ. ಮತ್ತೆ ವೇದಿಕೆ ಎದುರು ನಿಂತು ಆ ಹಾಡನ್ನು ಅನುಭವಿಸುತ್ತೇವೆ. ಸಿನಿಮಾ ಹಾಡಿನಲ್ಲಿ ಸಂಗೀತದ ರಾಗವನ್ನು ಅನುಭವಿಸಬಹುದು, ಆದರೆ ಅದರ ಪೂರ್ಣ ಸ್ವಾದ ಅನುಭವಕ್ಕೆ ಬರಬೇಕಾದರೆ   ಅದೇ ರಾಗವನ್ನು ಶಾಸ್ತ್ರೀಯ ಸಂಗೀತಲ್ಲಿ ಕೇಳಬೇಕು. ಅದರ ಅನುಭವ ಅನುಭವಿಸಿ ತಿಳಿಯಬೇಕು.  ನಾವು ಕೋಣೆಯ ಒಳಗೆ ಇದ್ದಾಗ ಹೊರಗೆ ಜಗಲಿಯಲ್ಲಿ ಸುಂದರವಾದ ಉಡುಪು ಧರಿಸಿದ ಹೆಣ್ಣೊಬ್ಬಳು ಹಾದು ಹೋದರೆ ಯಾರಪ್ಪಾ ಇವಳು ಎಂದು ಕುತೂಹಲ ಮೂಡಿ ಹೊರಗೆ ಬಂದು ನೋಡಿದಂತೆ. ರಾಗದ ಪೂರ್ಣ ಸೌಂದರ್ಯ ಅನುಭವಕ್ಕೆ ಬರಬೇಕಾದರೆ ಶಾಸ್ತ್ರೀಯ ಸಂಗೀತ ಕೇಳಬೇಕು.  ಈಗೀಗ ಈ ಬಗೆಯ ಸಂಗೀತ ಆಸ್ವಾದನೆ ಅಹ್ಲಾದಮಯವನ್ನು ಸೃಷ್ಟಿಸುತ್ತದೆ. ರಾಗಗಳ ವೈವಿದ್ಯತೆಯನ್ನು ತಿಳಿಯುವ ಕುತೂಹಲ ಮೂಡುತ್ತದೆ.  ಹೃದಯಂ ನ ಮನಸೇ ಮನಸೇ ಹಾಡು ಕೇಳಿ ಆಭೇರಿ ರಾಗದ ಎಂದರೋ ಮಹಾನುಭಾವುಲು ಕೇಳುವಾಗ ನನಗೆ ನಾನು ಮೈಮರೆತಂತೆ ಅನುಭವವಾಗಿದೆ.  ಹೀಗೆ ಅದೆಷ್ಟೋ ರಾಗದ ಬಗ್ಗೆ ಅಲ್ಪ ತಿಳುವಳಿಕೆಯನ್ನು ಕೇವಲ ಕೇಳುವುದರಿಂದ ಗಳಿಸಿಕೊಂಡಿದ್ದೇನೆ. ನಿಜಕ್ಕೂ ಶಾಸ್ತ್ರೀಯ ಸಂಗೀತದ ರಸಿಕನಾಗುವುದು ಅದೊಂದು ದಿವ್ಯ ಅನುಭವ. 

ಇದೇ ರೀತಿ ನಮ್ಮ ಪ್ರತಿಯೊಂದು ನಡೆಗಳಲ್ಲೂ  ಒಂದು ಪರಂಪರೆ ಇರುತ್ತದೆ. ಮಾವಿನ ಮರದಲ್ಲೂ  ಮಾವು ಆದಂತೆ, ಮಲ್ಲಿಗೆ ಬಳ್ಳಿಯಲ್ಲಿ ಮಲ್ಲಿಗೆ ಮಾತ್ರ ಅರಳಿದಂತೆ ಈ ಪ್ರಕೃತಿ ಎಂಬುದು ಪರಂಪರೆಯ ಬಂಧನದಲ್ಲಿದೆ. ಅದರ ಜೀವಾಳವೇ ಪರಂಪರೆ. ಅದರಿಂದ ವಿಹಿತವಾಗಿ ಇರುವುದು ಅಸಾಧ್ಯವಾದ ಮಾತು. ಮಹಾನ್ ಸಂಗೀತ ನಿರ್ದೇಶಕ ಇಳಯರಾಜ ಸಂಯೋಜಿಸುವ ಹೆಚ್ಚಿನ ಹಾಡುಗಳು ಶಾಸ್ತ್ರೀಯ ಸಂಗೀತದ ರಾಗದ ಆಧಾರದಲ್ಲೇ ಸಂಯೋಜಿಸಲ್ಪಡುತ್ತದೆ. ಅದರ ಅರಿವಾದರೆ ಆ ಹಾಡುಗಳನ್ನು ಅನುಭವಿಸುವುದರಲ್ಲೂ ಒಂದು ರಸಿಕತನವಿರುತ್ತದೆ. ಗಾಢವಾದ ಮಾಧುರ್ಯದ ಅನುಭವಾಗುತ್ತದೆ. ಮಲಯಾಳಂ ಸಿನಿಮಾದ ಬಹುತೇಕ ಹಾಡುಗಳು ಈ ರಾಗದ ಆಧಾರದಲ್ಲೇ ಇರುತ್ತವೆ. ಅದಕ್ಕೆ ಕಾರಣಗಳು ಹಲವಾರು ಇದೆ. ಜೇಸುದಾಸ್, ಚಿತ್ರ ರಂತಹ ಸಂಗೀತ ದಿಗ್ಗಜರು ಗಾಯಕರಾಗಿರುವುದರಿಂದ ಇದು ಅಲ್ಲಿ ಹೆಚ್ಚು ಜನಪ್ರಿಯವಾಗುತ್ತದೆ. 


Friday, December 9, 2022

ಬ್ರಾಹ್ಮಣೋ ಸ್ಯಮುಖ ಮಾಸೀತ್

ಇತ್ತೀಚೆಗೆ ಒಂದು ಸಲ ಶಿವಮೊಗ್ಗದಿಂದ ಬೆಂಗಳೂರಿಗೆ ರೈಲಿನಲ್ಲಿ ಪಯಣಿಸುವಾಗ ಭದ್ರಾವತಿಯಿಂದ  ಒಬ್ಬರು ವ್ಯಕ್ತಿ ಬಂದು ಪಕ್ಕದಲ್ಲೇ ಕುಳಿತರು. ಬಹಳ ಸಾಧು ಮನುಷ್ಯ. ಅದು ಇದು ಲೋಕಾಭಿರಾಮ ಮಾತನಾಡುತ್ತ ನನ್ನಲ್ಲಿ ಕೇಳಿದರು ನೀವು ಮಂಗಳೂರಿನವರಾ?   ಬ್ರಾಹ್ಮಣರ? ಕಾರಣ  ನಾನು ಪಂಚೆ ಉಟ್ಟುಕೊಂಡಿದ್ದೆ. ಎಂದಿನಂತೆ ಮುಖದಲ್ಲಿ ಗಂಧದ ತಿಲಕ ಇತ್ತು. ಬಹುಶಃ ಇದನ್ನು ನೋಡಿ ಸ್ವತಃ ಬ್ರಾಹ್ಮಣರಾಗಿದ್ದ ಅವರು ಪ್ರಶ್ನೆ ಕೇಳಿದ್ದರಲ್ಲಿ ಅಚ್ಚರಿ ಏನೂ ಇರಲಿಲ್ಲ. ನಾನು ಸಹಜವಾಗಿ ಹೌದು ಎಂದು ಉತ್ತರಿಸಿದೆ. ಜಾತಿಯ ಬಗ್ಗೆ ಹೇಳಿಕೊಳ್ಳುವುದು ಮತ್ತು ತೋರಿಸಿಕೊಳ್ಳುವುದು  ಹಲವು ಸಲ ಇದು ಮುಜುಗರ ಉಂಟುಮಾಡುವ ವಿಷಯವಾಗುತ್ತದೆ. ಬಾಲ್ಯದಿಂದಲೂ ಈ ಸಂಕೋಚ ಅಂಟಿಕೊಂಡಿತ್ತು. ಸಾರ್ವಜನಿಕವಾಗಿ ಒಂದು ವಿಧದ ಹಾಸ್ಯ ವಿಡಂಬನೆಯ ವಿಷಯವಾಗಿ  ಜಾತಿಯ ಪ್ರಶ್ನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿತ್ತು. ಎಷ್ಟೋ ಸಲ ಜಪ ಮಾಡಿದಾಗ ಹಾಕುವ ಭಸ್ಮವನ್ನೂ ಉಜ್ಜಿಕೊಂಡು ಹೊರಗೆ ಹೋಗುತ್ತಿದ್ದ ನೆನಪು ಈಗಲೂ ಇದೆ. ಗೇಲಿ ಮಾಡುತ್ತಿದ್ದವರೇ ದಪ್ಪ ನಾಮ ಎಳೆದು ಕಪ್ಪು ವಸ್ತ್ರ ಧರಿಸಿ ಅಯ್ಯಪ್ಪ ಸ್ವಾಮಿಗಳಾಗಿ ಅವತರಿಸಿದಾಗ ವಿಚಿತ್ರ ಎನಿಸುತ್ತಿತ್ತು. ಅದೇನಿದ್ದರೂ ಅವರವರ ನಂಬಿಕೆ ಎಂದು ಅರಿವಾದ ಮೇಲೆ ಇದು ಸ್ವಾಭಿಮಾನದ ಸಂಕೇತವಾಗಿ ಬದಲಾದೆ. ಬೆಳಗ್ಗೆ ಹಾಕಿದ ತಿಲಕ ಸಾಯಂಕಾಲ ಪುನಃ ಸ್ನಾನ ಮಾಡುವ ತನಕವೂ ಇರುತ್ತಿತ್ತು.  ಈ ವಿಚಾರಗಳ ವಸ್ತುನಿಷ್ಠತೆ ಯಾವಾಗಲೂ ಕಠಿಣವಾಗಿರುತ್ತದೆ. ಬ್ರಾಹ್ಮಣ ಎಂದರೆ ದೇವಸ್ಥಾನಗಳಿಗೆ ಇನ್ನಿತರ ಸ್ಥಳಗಳಿಗೆ ಹೋಗದೇ ಇದ್ದಲ್ಲಿಗೇ ದೈವಾನುಗ್ರಹವನ್ನು ಪ್ರಸನ್ನೀಕರಿಸುವ ಶಕ್ತಿ. ಅದು ಜಾತಿಯಲ್ಲ. ಅದು ಪ್ರಕೃತಿಯೊಂದಿಗೆ ಒಂದಾಗಿ ಬದುಕುವ ಪ್ರಕೃತಿ ಧರ್ಮ. ಅದನ್ನು ಜಾತಿಯಾಗಿ ಕಂಡು ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುವಾಗ ಅನ್ನಿಸುತ್ತದೆ, ಹಾಲಿಗೆ ಜೇನು ಮತ್ತೀತರ ಸುವಸ್ತುಗಳನ್ನು ಹಾಕಿ ಅದನ್ನು ಅಮೃತ ತುಲ್ಯವಾಗಿ ಸೇವಿಸುತ್ತಾರೆ. ಅದಕ್ಕೆ ಕಾಫಿ ಎಂಬ ವಿಷವನ್ನು ಸೇರಿಸಿ ವಿಷವಾಗಿಸಿಯೂ ಸೇವಿಸುತ್ತಾರೆ. ಇಲ್ಲಿ ಹಾಲು ಎಂದಿಗೂ ಕೆಟ್ಟದಾಗುವುದಿಲ್ಲ. ಅದನ್ನು ಉಪಯೋಗಿಸುವ ಮನೋಭಾವವೇ ಕೆಟ್ಟದಾಗಿ ಅದು ಒಟ್ಟು ಪಾನೀಯದ ಮೇಲೆಯೇ ಅರೋಪಿಸಲಾಗುತ್ತದೆ. ಹಾಗೆಯೇ ಬ್ರಾಹ್ಮಣ್ಯ ಅದು ಎಂದಿಗೂ ಕೆಟ್ಟದಾಗುವುದಿಲ್ಲ, ಅದನ್ನು ಉಪಯೋಗಿಸುವ ಬಗೆಯಲ್ಲಿ ಅದು ಕೆಟ್ಟದಾಗುತ್ತದೆ. ಮನೋಭಾವ ವಿಕೃತವಾಗುವಾಗ ಉಪಯೋಗಿಸುವ ರೀತಿಯೂ ವಿಕೃತಿಯಾಗುತ್ತದೆ.  ಹಾಗೆ ನೋಡಿದರೆ ಪ್ರತಿಯೊಂದು ಧರ್ಮಗಳೂ ಹಾಗೆ. ನಮ್ಮ ಮನಸ್ಸು ಕೆಟ್ಟದಾದಂತೆ ಪ್ರಕೃತಿಯೂ ವಿಕೋಪವಾಗಿ ಪರಿಣಮಿಸುತ್ತದೆ. 

    ಇಲ್ಲಿ ಆ ವ್ಯಕ್ತಿ  ಬ್ರಾಹ್ಮಣರ ಹಲವಾರು ಸಮಸ್ಯೆಗಳು ಪ್ರಕೃತ ಘಟನೆಗಳು ಇದರ ಬಗ್ಗೆ ತುಸು ಹೆಚ್ಚು ಎನ್ನುವಂತೆ ವಿಷಯ ಹಂಚಿಕೊಂಡರು. ಅವರು ಹೇಳಿದ ಹಲವಾರು ವಿಚಾರಗಳಲ್ಲಿ ಒಂದು ವಿಚಾರಕ್ಕೆ ನಾನು ಸ್ವಲ್ಪ ನಿಷ್ಠೂರವಾಗಿ ಪ್ರತಿಕ್ರಿಯೆ ಕೊಡಬೇಕಾಯಿತು. ಪ್ರಸ್ತುತ ಬ್ರಾಹ್ಮಣರ ಸಮಸ್ಯೆಗಳಲ್ಲಿ ಒಂದು ವೈದಿಕ ಕಾರ್ಯಗಳಿಗೆ ಅಂದರೆ ಅಪರ ಕ್ರಿಯೆ ಸಂಸ್ಕಾರಗಳಿಗೆ ಬ್ರಾಹ್ಮಣರೇ ಸಿಗುತ್ತಿಲ್ಲ. ಅದರ ಬದಲಿಗೆ ಚಟ್ಟಕ ( ಎಳನೀರು ವಸ್ತ್ರ ಇತ್ಯಾದಿ ಬ್ರಾಹ್ಮಣರ ಸ್ಥಾನದಲ್ಲಿಡುವುದು) ಇಟ್ಟು ಸುಧಾರಿಸಿಕೊಳ್ಳುವ ಅನಿವಾರ್ಯತೆ ಇದೆ.  ನಾನು ಹೇಳಿದೆ, " ಒಂದು ವೇಳೆ ಯಾರಾದರೊಬ್ಬ ಬಡ ಬ್ರಾಹ್ಮಣ (ಬಡವನೇ ಬರಬೇಕು) ಆ ಕಾರ್ಯಕ್ಕೆ   ಬಂದರೂ ಅವರಿಗೆ ಎಷ್ಟು ಗೌರವ ಸಿಗುತ್ತದೆ?"  ಆ ವ್ಯಕ್ತಿ ಒಂದು ಕಿರುನಗುವನ್ನು ಬೀರಿದರೂ ನನ್ನ ಮಾತಿಗೆ ಅವರದ್ದು ಪೂರ್ಣ ಸಹಮತವಿರಲಿಲ್ಲ.  ಅವರು ಎಂದಲ್ಲ ಹಲವರು ಇದನ್ನು ಒಪ್ಪಿಕೊಳ್ಳುವುದಿಲ್ಲ.  ನಮಗೆ ತೀರ ಅವಶ್ಯವಿರುವುದನ್ನು ಮತ್ತೆ ನಿಕೃಷ್ಟವಾಗಿ ಕಾಣುವ ಪ್ರಕ್ರಿಯೆ ಸದಾ ಇದ್ದೇ ಇರುತ್ತದೆ. 

ಕಾಲ ಬಹಳ ಬದಲಾಗಿದೆ. ಅವರು ಹೇಳಿದ ಸಮಸ್ಯೆ ಬಹಳ ಗಂಭೀರವಾದದ್ದು. ನನಗೆ ಈ ಸಮಸ್ಯೆಯ ಅರಿವಿದೆ. ಇದರ ಗುಣಾವಗುಣಗಳು ಏನೇ ಇದ್ದರು ಕಾಲ ಈಗ ಬದಲಾಗಿದೆ. ದೇವರನ್ನು ತೆಂಗಿನಕಾಯಿ ಇಟ್ಟು ಆವಾಹನೆ ಮಾಡಿದಂತೆ ಬ್ರಾಹ್ಮಣ ತನ್ನ ಸ್ಥಾನಕ್ಕೂ ಜಡವಸ್ತುವಿನ ಮೊರೆ ಹೋಗುವ ಅನಿವಾರ್ಯತೆ ಸೃಷ್ಟಿಯಾಗಿದೆ. ಆ ವ್ಯಕ್ತಿಗೆ ಪ್ರತಿಕ್ರಿಯೆಯಾಗಿ ನಾನು ಹೇಳಿದೆ, ಬ್ರಾಹ್ಮಣರು ಪುರೋಹಿತರು ಸಿಗುವುದಿಲ್ಲ ಸತ್ಯ. ಆದರೆ ಈ ಸಮಸ್ಯೆ ಸೃಷ್ಟಿಯಾಗುವುದಕ್ಕೆ,   ಆ ವೃತ್ತಿನಿರತ ಬ್ರಾಹ್ಮಣರ ಕೊರತೆಯೇ ಬಹಳ ಮುಖ್ಯ ಕಾರಣ. ಈ ನಡುವೆ ಮನುಷ್ಯ ಸ್ವಭಾವ ಬದಲಾಗಿರುವುದೂ ಒಂದು ಕಾರಣ. ಒಂದು ವೇಳೆ ಯಾರಾದರೊಬ್ಬ ಬ್ರಾಹ್ಮಣ ಸಾಮಾನ್ಯವಾಗಿ ಆ ಸ್ಥಾನಕ್ಕೆ ಬಡ ಬ್ರಾಹ್ಮಣನೇ ಬರುವುದು, ಆ ಬ್ರಾಹ್ಮಣನಿಗೆ ಗೌರವ ಸಲ್ಲುವುದು ಅಲ್ಲಿ ಕುಳಿತಾಗ ಮಾತ್ರ. ಉಳಿದಂತೆ ಅವರಿಗೆ ಎಲ್ಲೂ ಮನ್ನಣೆ ಸಿಗುವುದಿಲ್ಲ. ಹಲವು ಕಡೆ ಸಹಪಂಕ್ತಿ ಕೂಡ ಸಿಗದೇ ಇರುವುದನ್ನು ಕಣ್ಣಾರೆ ಕಂಡಿದ್ದೇನೆ. ಆತ ತಿನ್ನುವ ಒಂದೊಂದು ತುತ್ತಿಗೂ ಆತನ ಬಡನವನ್ನು ಸಾಕ್ಷಿಯಾಗಿಸಿ ಕಾಣುವುದನ್ನು ಕಂಡಿದ್ದೇನೆ.   ಬಡತನದಿಂದ ಇದು ವರೆಗೆ ಎಲ್ಲವು ನುಂಗಿಕೊಂಡು ಇದ್ದವರು  ಈಗ ಸ್ವಾಭಿಮಾನದಿಂದ ಬದುಕುವ ದಾರಿ ಕಂಡುಕೊಂಡಿದ್ದಾರೆ.  ಈ ಪರಿಸ್ಥಿತಿಗೆ ಯಾರೆಲ್ಲ ಕಾರಣರಾಗುತ್ತಾರೆ? ವಿಶ್ಲೇಷಣೆ ಮಾಡಿದಂತೆ ಹಲವಾರು ಕಾರಣ ಸಿಗುತ್ತದೆ.  ಕಾರಣಗಳನ್ನು ಪರಿಹಾರಗಳನ್ನು ಹೇಳುವುದಕ್ಕೆ ಹೋಗುವುದಿಲ್ಲ. ಆದರೆ ತುಳಿತ ಎಂಬುದು ಕೇವಲ ಒಂದು ವರ್ಗಕ್ಕೆ ಅಥವಾ ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ ಎಂಬುದು ಸತ್ಯ.  ಮನೆಯಲ್ಲಿ ವೈದಿಕ ಶ್ರಾದ್ಧ ಅಪರಕ್ರಿಯೆಗಳು  ಇದ್ದರೆ ಇವರು ಹಿಂದಿನ ಬಾಗಿಲಿನಿಂದ ಬಂದು,  ಹೆಚ್ಚಾಗಿ ಉತ್ತರ ಕ್ರಿಯೆಗಳು ಮರೆಯಲ್ಲೇ ಕತ್ತಲ ಕೋಣೆಯಲ್ಲೇ ನಡೆಯುವುದರಿಂದ ಅಲ್ಲಿ ಕುಟುಂಬಸ್ಥರು ಪುರೋಹಿತರಲ್ಲದೆ ಬೇರೆ ಯಾರೂ ಹೋಗುವುದಿಲ್ಲ. ಕ್ರಿಯೆ ಮುಗಿದು ಬಂದ ವಿಪ್ರರು ಹಿಂದಿನ ಬಾಗಿಲಿನಿಂದಲೇ ಹೋಗಿ ಮರೆಯಾಗಿಬಿಡುತ್ತಾರೆ. ಅರ್ಥಾತ್ ಹೊರಗೆ ಬಂದು ಯಾರಿಗೂ ಮುಖವನ್ನೂ ತೋರಿಸುವುದಿಲ್ಲ.  ಇದನ್ನು ಹಲವು ಸಲ ಕಣ್ಣಾರೆ ಕಂಡವನು ನಾನು. ಆದರೆ ಈಗ ಸ್ಥಿತಿ ಬದಲಾಗಿದೆ. ಈಗ ಹೊಸ ತಲೆಮಾರಿನವರು ಹೆಚ್ಚು ಸ್ವಾಭಿಮಾನಿಗಳಾಗಿ ವೃತ್ತಿಯನ್ನೆ ಬದಲಿಸಿಕೊಂಡಿದ್ದಾರೆ.  ಆದರೆ ಇಂದು ಮನೋಭಾವ ಹೇಗಾಗಿದೆ ಎಂದರೆ ಬಡ ಬ್ರಾಹ್ಮಣ ಸ್ವಾಭಿಮಾನವನ್ನು ಹೊಂದಿವುರುವುದೇ ಅಪರಾಧ ಎಂಬಂತೆ ಭಾಸವಾಗುತದೆ. 

ಪ್ರತಿಯೊಂದು ವರ್ಗ ಪಂಗಡಗಳಿಗೂ ಈಗ ಸಂಘಟನೆಗಳಿವೆ. ಸಮಾಜ ಸಂಘಟನೆಗಳು ನೋಂದಾಯಿಸಿಕೊಂಡು ಕಾರ್ಯ ಪ್ರವೃತ್ತವಾಗಿದೆ. ಹಲವು ಸಂಘಟನೆಗಳು ಆರ್ಥಿಕವಾಗಿಯೂ ಸುದೃಢವಾಗಿದೆ. ಇವುಗಳ ಧ್ಯೇಯೋದ್ದೇಶ ಉತ್ತಮವಾಗಿದ್ದರೂ ಇಂತ ಸಂಕೀರ್ಣ ಸಮಸ್ಯೆಗಳತ್ತ ಯಾವ ಸಮಾಜ ಸಂಘಗಳೂ ಗಮನ ಹರಿಸುತ್ತಿಲ್ಲ ಎಂಬುದು ಸತ್ಯ. ವಾರ್ಷಿಕವಾಗಿ ಏನೋ ಒಂದು ಧಾರ್ಮಿಕ ಕಾರ್ಯಕ್ರಮ ಮಾಡಿ ವಿಜ್ರಂಭಣೆಯಿಂದ ಭೋಜನ ಸಂತರ್ಪಣೆ ಮಾಡಿ ಯಾಗ  ಯಜ್ಞಕ್ಕೇ ಕಾರ್ಯಕ್ಶೇತ್ರ ಸೀಮಿತವಾಗಿಬಿಡುತ್ತದೆ. ಹೆಚ್ಚೆಂದರೆ, ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಅನುದಾನವೊ, ಬಡವರಿಗೆ ಒಂದಷ್ಟು ಧನಸಹಾಯವೋ, ವೈದ್ಯಕೀಯ ಸಹಾಯವೋ  ಹೀಗೆ ಚಟುವಟಿಕೆ ಇರುತ್ತದೆ. ಇಂತಹ ಸಾಮಾನ್ಯ ಕಾರ್ಯಗಳನ್ನು ಮಾಡುವುದಕ್ಕೆ ಹಲವಾರು ಸಂಘಟನೆಗಳಿವೆ. ಆದರೆ ಬ್ರಾಹ್ಮಣ ಸಂಸ್ಕಾರಗಳು ನೆಲೆನಿಲ್ಲುವ ಇಂತಹ ಸಂಕೀರ್ಣ ಸಮಸ್ಯೆಗಳಿಗೆ ಎಲ್ಲಾ ಸಂಘಟನೆಗಳು ದಿವ್ಯ ನಿರ್ಲಕ್ಷವನ್ನು ತಳೆದಿವೆ ಎಂದರೆ ತಪ್ಪಾಗಲಾರದು. ಸಮಾಜ ಸಂಸ್ಕಾರ ಪರಂಪರೆಯಿಂದ ಬಹಳ ದೂರ ಸಾಗುತ್ತಾ ಇದೆ. ವೃತ್ತಿ ಪರವಾದ ಜೀವನ ಶೈಲಿ ಇದಕ್ಕೆ ಕಾರಣವಾದರೂ, ಕೆಲವೆಲ್ಲ ಶಾಸ್ತ್ರಕ್ಕೆ ಸಾಕು ಎಂಬಂತೆ ಕಾಟಾಚಾರಕ್ಕೆ ಸೀಮಿತವಾಗಿಬಿಡುತ್ತದೆ. ಸಂಧ್ಯಾವಂದನೆಯಲ್ಲಿ ನೂರ ಎಂಟು ಗಾಯತ್ರಿಮಂತ್ರ ಜಪ ಮಾಡಬೇಕು ಎಂದಿದ್ದರೆ, ಕೊನೆ ಪಕ್ಷ ಹತ್ತಾದರೂ ಮಾಡಿ ಅನುಷ್ಠಾನದಲ್ಲಿರಬೇಕು. ಆದರೆ ಸಮಯವಿಲ್ಲ ಎಂಬ ನೆವನದಿಂದ ಹತ್ತಕ್ಕಿಂತ ಒಂದು ಮೀರದಂತೆ ಕಾಟಾಚಾರಕ್ಕೆ ಗಡಿಬಿಡಿಯ ಜಪ ಮಾಡುವವರೂ ಇಲ್ಲದಿಲ್ಲ. ಪ್ರತಿಯೊಂದು ಸತ್ಕಾರ್ಯದಲ್ಲೂ ನಮ್ಮದೊಂದು ಸಿದ್ಧ ಮಂತ್ರವಿದೆ ಅಷ್ಟಾದರು ಮಾಡುತ್ತಾರಲ್ಲಾ? ತೀರ ಅನಿವಾರ್ಯ ಎನ್ನುವಂತಹ ಕ್ರಿಯೆಗಳು ಅಷ್ಟಾದರೂ ಮಾಡುವ ಹೊಂದಾಣಿಕೆಗೆ ಸೀಮಿತವಾಗುವುದು ನಮ್ಮ ಸಂಸ್ಕಾರದಲ್ಲಿನ ಅಗೌರವವನ್ನೇ ತೋರಿಸುತ್ತದೆ. ಹಲವು ಸಲ ಗಡಿಬಿಡಿಯಲ್ಲಿ ಜಪ ಮುಗಿಸಿ ವೃಥಾ ಪಟ್ಟಾಂಗ ಹೊಡೆಯುವುದಕ್ಕೋ ಇನ್ನೋಂದು ಕಾಲಹರಣಕ್ಕೋ ಸಮಯವನ್ನು ಒದಗಿಸುತ್ತದೆ.  ಭಗವಂತನಿಗೆ ನಾವು ಲೆಕ್ಕಾಚಾರ ತೋರಿಸುವಾಗ ಪ್ರತಿ ಭಗವಂತನು ಅದೇ ಲೆಕ್ಕಾಚಾರದಲ್ಲಿರುತ್ತಾನೆ. ಅಲ್ಲಿ ಒದಗಿ ಬರುವ ಕಾಟಾಚಾರ ನಮ್ಮಲ್ಲಿನ ಅತೃಪ್ತಿಯನ್ನು ನಮಗರಿವಿಲ್ಲದೇ ಹೆಚ್ಚಿಸುತ್ತದೆ.   ಜಾತಿ ಧರ್ಮಗಳು ಉಳಿಯುವುದು ಅದರಲ್ಲೂ ಬ್ರಾಹ್ಮಣ ಧರ್ಮ ಉಳಿಯುವುದು ಧಾರ್ಮಿಕ ಆಚರಣೆಗಳಿಂದ. ಧಾರ್ಮಿಕ ನಂಬಿಕೆಗಳಿಂದ. ಆದರೆ ಅದನ್ನು ಆಚರಿಸುವುದಕ್ಕೆ ಒಂದು ಸೂಕ್ತ ವಾತಾವರಣ ಕಲ್ಪಿಸುವುದರಲ್ಲಿ ಇಂದಿನ ಸಮಾಜ ಸಂಘಟನೆಗಳು ಔದಾಸಿನ್ಯವನ್ನು ತೋರಿಸುತ್ತವೆ,  ಇಲ್ಲ ಇದು ಒಂದು ಆದ್ಯತೆಯ ವಿಷಯವಾಗಿ ಗಮನಾರ್ಹವೆನಿಸಿಲ್ಲ. 

ಬ್ರಾಹ್ಮಣರು ಸಮಾಜದ ಮುಖಗಳು ಅಂತ ಹಿಂದಿನ ರಾಜರು ತಿಳಿದುಕೊಂಡಿದ್ದರಂತೆ.  ಇಂದು ರಾಜರಾಗಲೀ ಅಧಿಕಾರಿವರ್ಗವಾಗಲೀ ತಿಳಿದುಕೊಳ್ಳಬೇಕೆಂದು ಬಯಸುವ ಬದಲು ನಮ್ಮ ಮುಖವನ್ನು ನಾವು ಸ್ವಚ್ಛವಾಗಿಸಬೇಕು. ಹಾಗಂತ ಮಲಿನವಾಗಿದೆ ಎಂದಲ್ಲ. ಬ್ರಾಹ್ಮಣ್ಯ ಎಂಬುದು ಪರಿಶುದ್ದತೆಯ ಸಂಕೇತ. ಅಲ್ಲಿ ದೇಹ ಮನಸ್ಸು ಜೀವನ ಎಲ್ಲವೂ ಪರಿಶುದ್ದತೆಯತ್ತ ಸಾಗುವಂತಿರಬೇಕು. ತುಂಬ ಕಲ್ಮಷವಿದ್ದಲ್ಲಿ ಪರಿಶುದ್ದತೆಯು ಅಪವಾದವಾಗುವುದು ಸಹಜ. ಅಲ್ಲಿಗೆ ಅದು ಹೊಂದಿಕೊಳ್ಳುವುದಿಲ್ಲ. ಹಾಗೆಂದು ಅದನ್ನು ತೊರೆದು ಮಾಲಿನ್ಯವನ್ನು ಮೈಮೇಲೆ ಆವಾಹಿಸಿಕೊಳ್ಳುವುದಲ್ಲ. 

        ಕೆಲವು ವರ್ಷಗಳ ಹಿಂದೆ ತೆರಿಗೆ ಕಛೇರಿಗೆ ವೃತ್ತಿಯ ಕಾರಣದಿಂದ ಹೋಗಬೇಕಾಯಿತು.  ನಮ್ಮ ವರ್ತಕರೊಬ್ಬರಿಗೆ ಯಾವುದೋ ವಸ್ತುವಿಗೆ ತೆರಿಗ ಹಾಕಿ ಅದರ ಜತೆಗೆ ದಂಡವನ್ನು ಸೇರಿಸಿ ನೋಟೀಸು ನೀಡಿದ್ದರು. ವಾಸ್ತವದಲ್ಲಿ ಆ ವಸ್ತುವಿಗೆ ತೆರಿಗೆ ವಿನಾಯಿತು ಇರುವುದು ಎಲ್ಲೋ ಉಲ್ಲೇಖವಾಗಿರುವುದು ನಮ್ಮ ಗಮನಕ್ಕೆ ಬಂತು. ಹಾಗಾಗಿ ನೋಟಿಸಿನೊಂದಿಗೆ ನಾನು ಸಂಬಂಧಿಸಿದ ಕಛೇರಿಗೆ ಹೋಗಿದ್ದೆ.  ಅಲ್ಲಿ ಸಂಬಂಧಿಸಿದ ಅಧಿಕಾರಿಯ ಕೋಣೆಗೆ ಹೋಗಿ ಎಲ್ಲ ವಿವರಿಸಿದೆ ಸದರಿ ವಸ್ತುವಿಗೆ ತೆರಿಗೆ ವಿನಾಯಿತಿ ಇದೆ ಎಂದು ಹೇಳಿದೆ. ಆ ಅಧಿಕಾರಿ ಸ್ವಲ್ಪ ಪರಿಚಿತರು. ಹಲವಾರು ಸಂದರ್ಭಗಳಲ್ಲಿ ಅವರನ್ನು ಭೇಟಿಯಾಗಿದ್ದೆ.  ಕೆಲವು ಸಲ ಎಂತ ಭಟ್ರೆ ಅಂತ ಮಂಗಳೂರು ಭಾಷೆಯಲ್ಲಿ ಮಾತನಾಡುತ್ತಿದ್ದರು. ಆದಿನ ಮಾತ್ರ ಅವರು ಮೊದಲಿಗೆ ಒಪ್ಪಿಕೊಳ್ಳಲಿಲ್ಲ. ಹಾಗೆ ಹೀಗೆ ಎಂದು ಆಕ್ಷೇಪಿಸುತ್ತಾ ಹೋದರು. ಅದು ಅವರ ಕರ್ತವ್ಯ. ಸರಕಾರದ ಆದಾಯದ ದುಡ್ಡು ಯಾರೂ ವಂಚಿಸುವ ಹಾಗಿಲ್ಲ. ನಾನು ಮತ್ತೂ ವಿನಂತಿಸಿಕೊಂಡು ಮಾರಾಟ ತೆರಿಗೆಯ ನಿಯಮ ಪುಸ್ತಕದ ಯಾವುದೋ ಪುಟದಲ್ಲಿ ಉಲ್ಲೇಖಿಸಿದ ವಿನಾಯಿತಿಯನ್ನು  ತೋರಿಸಿದೆ. ಅವರಿಗೆ ಸ್ವಲ್ಪ ಸಂದೇಹ ಬಂತು. ಕೊನೆಗೆ ಕೆಲವರಿಗೆ ಕರೆ ಮಾಡಿ ಆ ನಿಯಮದ ಬಗ್ಗೆ ವಿಚಾರಿಸಿದರು. ಕೊನೆಗೆ ನನ್ನ ವಿನಂತಿಗೆ ಒಪ್ಪಿಕೊಳ್ಳದೆ ವಿಧಿ ಇಲ್ಲದಾಯಿತು. ಹಾಗೆ ಸಮಸ್ಯೆ ಪರಿಹರಿಸಿ ಅವರ ಕೋಣೆಯಿಂದ ಹೊರಬರಬೇಕಾದರೆ, ಅಲ್ಲೆ ಇದ್ದ ಸಹಾಯಕರಿಗೆ ಏನೋ ಗೊಣಗಿ ಹೇಳುವುದು ಕಿವಿಗೆ ಬಿತ್ತು." ಪುಳಿಚಾರ್ ಭಟ್ರು ಏನೋ ಓದಿಕೊಂಡು ಬಂದಿದ್ದಾರೆ....."( ಇದೇ ಅರ್ಥ ಬರುವ ಯಾವುದೋ ಶಬ್ದಗಳು ಅದು ನೆನಪಿಲ್ಲ)   ಅದು ಬಹಳ ಕ್ಷೀಣವಾದ ಧ್ವನಿಯಲ್ಲಿ ಹೇಳಿದ್ದರು.  ಒಂದು ಸಲ ತಿರುಗಿ ನೋಡಿದ್ದೆ. ಅವರಲ್ಲಿ ಆ ಬಗ್ಗೆ ಮಾತನಾಡುವುದು ವ್ಯರ್ಥ ಎನಿಸಿತ್ತು. ನನ್ನ ಬ್ರಾಹ್ಮಣ್ಯದ ಬಗ್ಗೆ ಅವರಿಗೆ ಸಮರ್ಥನೆ ಕೊಡುವ ಅವಶ್ಯಕತೆ ನನಗಿಲ್ಲ.  ಒಂದು ನಿಯಮ ಪುಸ್ತಕವನ್ನು ಓದುವುದು ಬ್ರಾಹ್ಮಣರು ಮಾತ್ರವಾ ಎಂಬ ಸಂದೇಹ ನನಗೆ ಬಂದು ಬಿಟ್ಟಿತು. ಎಲ್ಲರೂ ತಮಗೆ ಬೇಕಾಗಿರುವುದನ್ನು ಚರ್ಚಿಸುವುದು ಹಕ್ಕು. ಆದರೆ ಬ್ರಾಹ್ಮಣ ಚರ್ಚಿಸಿದರೆ ಅದು ನಿಂದನೆಯಾಗುತ್ತದೆ. ಒಬ್ಬ ಓದಿದ್ದಾನೆ ಎಂದರೆ ಅದು ಆತನ ದೃಷ್ಟಿಯಲ್ಲಿ ಬ್ರಾಹ್ಮಣನೇ ಆಗಿರುತ್ತಾನೆ. ಆತ ಹೇಳಿದ್ದು ನಿಂದನೆಯಾಗಲಿ, ಅಥವಾ ವ್ಯಂಗ್ಯವಾಲಿ ಅದಕ್ಕೆ ಆತನಿಗೆ ಧನ್ಯವಾದ ಹೇಳಬೇಕು ಎನಿಸಿತ್ತು. ಸಮಾಜದಲ್ಲಿ ಬ್ರಾಹ್ಮಣ ಎಂದರೆ ವಿದ್ಯಾವಂತ ಎಂಬ ಭಾವನೆ ದಟ್ಟವಾಗಿದೆ. ಸುಸಂಸ್ಕೃತ ಸಂಸ್ಕಾರ  ಎಂಬುದು ಸಮಾಜ ಎಂದೋ ಅಂಗೀಕರಿದೆ. ಇದು ವ್ಯಕ್ತವಾಗಿಯೋ ಅವ್ಯಕ್ತವಾಗಿಯೋ ಕೆಲವೊಮ್ಮೆ ಎದುರು ಬಂದು ಬಿಡುತ್ತದೆ. ಹೀಗಿರುವಾಗ ಬ್ರಾಹ್ಮಣ ಸ್ಥಾನ ಎಂಬುದು ಬಹಳ ಜವಾಬ್ದಾರಿಯುತ ಸ್ಥಾನ. ಅದು ಕೇವಲ ಪರಿಶುದ್ದಿಯ ಸಂಕೇತ ಮಾತ್ರವಲ್ಲ ಅರಿವಿನ ಜ್ಞಾನದ ಸಂಕೇತವೂ ಹೌದು. 



Friday, November 25, 2022

ಕಾಂತಾರಕ್ಕೂ ಭೂತ ಬಾಧೆ

 



"ಲಜ್ಜಾವತಿಯೇ ನಿಂದೆ ಕಳ್ಳಕಡಕಣ್ಣಿಲ್....."  ಕೆಲವು ವರ್ಷಗಳ ಹಿಂದೆ ಮಲಯಾಳಿಗರಲ್ಲಿ ಸಂಚಲನ ಮೂಡಿಸಿದ ಹಾಡು. ಪಾರ್ ದ ಪೀಪಲ್ ಎಂಬ ಸಿನಿಮಾದ ಈ ಹಾಡು ಬಹಳ ಜನಪ್ರಿಯವಾಗಿತ್ತು. ಯುವಜನಾಂಗ ಹುಚ್ಚೆದ್ದು ಕುಣಿದಿತ್ತು.   ಅದು ಕೇವಲ ಮಲಯಾಳಕ್ಕೆ ಸೀಮಿತವಾಗಿತ್ತು. ಆದರೆ ಕನ್ನಡದಲ್ಲಿ ಗಣೇಶ್ ನಾಯಕನಾದ ಒಂದು ಸಿನಿಮಾದಲ್ಲೂ ಅದನ್ನು ಯಥಾವತ್ ಆಗಿ ಬಳಸಿಕೊಳ್ಳಲಾಯಿತು. ಹೀಗೆ ಚರ್ಚೆ ಮಾಡುವಾಗ ಒಬ್ಬರಲ್ಲಿ ಹೇಳಿದೆ ಇದು ಲಜ್ಜಾವತಿಯೆ ಎಂಬ ಮಲಯಾಳಂ ಸಿನಿಮಾದ ಹಾಡು ಯಥಾವತ್ ನಕಲು ಮಾಡಿದ್ದಾರೆ. ಆತ ಒಪ್ಪಿಕೊಳ್ಳಲೇ ಇಲ್ಲ. ಆತ ಹೇಳಿದ ಯಾಕೆ ಕನ್ನಡದಿಂದ ಅವರು ನಕಲು ಮಾಡಿರಬಾರದು? ಆಗ ಅದರ ನಿರ್ಮಾಣದ ಬಿಡುಗಡೆಯ ದಿನಾಂಕವನ್ನು ದಾಖಲೆ ಸಹಿತ ಆತನ ಮುಂದಿಟ್ಟೆ.  ಆದರೆ ಇಲ್ಲಿ ಯಾರೂ ಅದರ ಬಗ್ಗೆ ಯೋಚಿಸಲಿಲ್ಲ. ಅದು ಹಕ್ಕು ಪಡೆದು ಉಪಯೋಗಿಸಿದರೂ ಮೂಲ ಸಿನಿಮಾದ ಉಲ್ಲೇಖ ಎಲ್ಲೂ ಇಲ್ಲದೆ ಅಮಾಯಕ  ಕನ್ನಡ ಪ್ರೇಕ್ಷಕ ಮಾತ್ರ ಅದು ಇಲ್ಲಿನದೇ ಕೃತಿ ಎಂದುಕೊಂಡ.  ರವಿಚಂದ್ರನ್ ನಟನೆಯ ರಣಧೀರ ಸಿನಿಮಾದಲ್ಲಿ ಒಂದಾನೊಂದು ಕಾಲದಲ್ಲಿ ಎಂಬ ಕೊಳಲಿನ ನಾದವಿತ್ತು. ಅದು ಕನ್ನಡದ್ದೇ ಟ್ಯೂನ್ ಅಂತ ತಿಳಿದಿದ್ದೆವು. ಸಂಪೂರ್ಣ ಹಕ್ಕು ಪಡೆದು ಚಿತ್ರ ನಿರ್ಮಿಸಿದ್ದರೂ ಕನ್ನಡದ ಬಹು ಪಾಲು ಪ್ರೇಕ್ಷಕರಿಗೆ ಇದು ಮೂಲದಲ್ಲಿ ಹಿಂದಿಯಲ್ಲಿ ಇತ್ತು ಎಂದು ತಿಳಿದಿರಲಿಲ್ಲ. ಆದರೆ ಹೀರೋ ಸಿನಿಮಾದ ಹಾಡು ಕೇಳಿದ ನಂತರ ಕನ್ನಡದಲ್ಲಿ ಅದು ಪುನರ್ ನಿರ್ಮಿಸಲಾಗಿದೆ ಎಂದು ತಿಳಿದು ಬಂತು. ಮೂಲ ಹಿಂದಿ ಸಿನಿಮಾಕ್ಕಿಂತಲೂ ಇದರಲ್ಲಿ ಉತ್ತಮವಾಗಿ ಬಳಸಲಾಗಿತ್ತು.  ಖಂಡಿತವಾಗಿ  ಇದು ಕೃತಿ ಚೌರ್ಯ ಅಲ್ಲದೇ ಇರಬಹುದು. ಆದರೂ ಪ್ರೇಕ್ಷಕನ ಕ್ಷಣದ ತಿಳುವಳಿಕೆ ಹೇಗಿರುತ್ತದೆ ಎಂಬುದಕ್ಕೆ ಇದು ನಿದರ್ಶನ.  ಸಿನಿಮಾದ ಜಾಹಿರಾತಿನಲ್ಲಿ ಎಲ್ಲೂ ಇದು ಇಂತಹ ಸಿನಿಮಾದ ಅವತರಣಿಕೆ ಎಂದು ಎಲ್ಲೂ ಉಲ್ಲೇಖಿಸುವುದಿಲ್ಲ. 


ಇದು ಕೇವಲ ಒಂದು ನಿದರ್ಶನ ಅಷ್ಟೇ. ಇಂತಹುದು ಬೇಕಾದಷ್ಟು ಸಿಗುತ್ತದೆ. ಹಲವು ಸಲ  ಮೂಲ ಕರ್ತೃವಿಗೆ ಸಿಗಬೇಕಾದ ಗೌರವ ಸಿಗುವುದೇ ಇಲ್ಲ.  ಕೆಲವರು ಇದು ಇದರ ಪ್ರೇರಣೆ ಅಂತ ಮೊದಲಾಗಿ ಹೇಳಿ ಗೌರವಿಸುತ್ತಾರೆ.  ಗೌರವ ಎಂದರೆ ಕೇವಲ ಹಕ್ಕುಗಳನ್ನು ಪಡೆಯುವುದಕ್ಕೆ ಸೀಮಿತವಾಗಿರುವುದಿಲ್ಲ. ಅದನ್ನು ಯಾವ ರೀತಿ ತೋರಿಸಿಕೊಡುತ್ತೇವೆ ಎನ್ನುವುದರಲ್ಲೂ ಇದೆ.  ಒಂದು ಕಡೆಯಲ್ಲಿ ಭಕ್ತಿ ಗೀತೆಯಾಗಿ ಉಪಯೋಗಿಸಿದ ಹಾಡನ್ನು, ಇನ್ನೊಂದು ಕಡೆಯಲ್ಲಿ ಹಕ್ಕು ಸ್ವಾಮ್ಯ ಪಡೆದು ಕ್ಯಾಬರೆಗೆ ಬಳಸಿಕೊಂಡರೆ ಹೇಗೆ?  ಏನಿದ್ದರೂ ಮೂಲದಲ್ಲಿ ಕೃತಿಯನ್ನು ಸೃಷ್ಟಿಸಿದವನ ಪ್ರತಿಭೆಗೆ ಹೆಚ್ಚು ಮೌಲ್ಯ. ಸ್ವಂತವಾಗಿ ಪ್ರತಿಭೆ ಇಲ್ಲದೇ ಇರುವಾಗ ಯಾವುದೋ ಕಾರಣಕ್ಕೆ ಮತ್ತೊಬ್ಬನ ಪ್ರತಿಭೆಯನ್ನು ಎರವಲು ಪಡೆದು ಇನ್ನೂ ಮುಂದಕ್ಕೆ ಹೋಗಿ ಕಳ್ಳತನ ಮಾಡಿ ತಮ್ಮದೇ ಪ್ರತಿಭೆ ಎಂದು ಮೀಸೆ ಮೇಲೆ ಕೈ ಹಾಕುವವರಿಗೆ ಏನೂ ಕಡಿಮೆ ಇಲ್ಲ.  ಹಲವು ಸಲ ಹಕ್ಕುಗಳನ್ನು ಪಡೆದರೂ ಹಕ್ಕುಗಳ ಉಲ್ಲಂಘನೆಯು ಆಗಿರುತ್ತದೆ. 


ಕಾಂತಾರ ಇದೀಗೆ ಅಂತರ್ಜಾಲದಲ್ಲಿ ಬಿಡುಗಡೆಯಾಗಿದೆ. ಮತ್ತೊಮ್ಮೆ ಮನೆಯವರೆಲ್ಲರೂ ಕಂಡಾಯಿತು. ಮೊದಲು ಕಂಡಿರುವುದರಿಂದ ಅದರ ಪ್ರಭಾವವೇ ಅಧಿಕವಾಗಿರುವುದರಿಂದ ವಿಶೇಷವೇನೂ ಅನಿಸಲಿಲ್ಲ. ಮತ್ತೊಮ್ಮೆ ಮರುಕಳೆಯಾಯಿತು ಅಷ್ಟೆ. ಕೊನೆಯಲ್ಲಿ ಅತೀ ಪ್ರಮುಖವೆನಿಸಿದ ಹಾಡು ಬದಲಾವಣೆಯಾಗಿರುವುದು ಎಲ್ಲರಿಗೂ ಒಂದು ಅಸಮಾಧಾನವಾಯಿತು. ಆದರೂ ಮತ್ತೆ ಜೋಡಿಸಿದ ಹಾಡು ಕಳಪೆ ಏನಲ್ಲ. ಮೊದಲ ಹಾಡಿನ ನೆಶೆ ಇದಕ್ಕಿಂತಲೂ ಗಾಢವಾಗಿರುವುದರಿಂದ ಇದರ ಪ್ರಭಾವ ಬಹಳಷ್ಟು ಕಡಿಮೆಯಾಯಿತು. ಇದೆಲ್ಲ ಮನರಂಜನೆಯ ಒಂದು ಭಾಗ. ಆದರೂ ಇಲ್ಲಿ ಗಮನಿಸಬೇಕಾದ ಅಂಶಗಳು ಹಲವು. ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆ ಇನ್ನೂ ಜೀವಂತವಾಗಿ ಮತ್ತು ಬಲಿಷ್ಠವಾಗಿದೆ.  ಹೀಗಿದ್ದರೂ ಕಾಂತಾರ ಮಾಡುವಷ್ಟು ಪ್ರಭಾವ ಸಮ್ಮೋಹನ ಅದಾಗಲೇ ಮಾಡಿಯಾಗಿರುವುದರಿಂದ ಈಗಿನ ಪ್ರೇಕ್ಷಕ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. 


ನಕಲಿ ಕೃತಿಚೌರ್ಯ ಹಲವು ಸಲ ವಂಚನೆ ಎಂದನಿಸುವುದೇ ಇಲ್ಲ. ಕದ್ದ ವಸ್ತುವಿನಲ್ಲಿ ಆರ್ಥಿಕವಾಗಿಯೋ ಅಥವ ಬೇರೆ ಯಾವುದೇ ರೂಪದಲ್ಲಿ ಲಾಭವಾದಾಗ ಅದು ಚೌರ್ಯದ ಸಾಲಿಗೆ ಸೇರಿಬಿಡುತ್ತದೆ. ಚೌರ್ಯ ಗಂಭೀರವಾಗುವುದು ಆವಾಗಲೇ. ದಾರಿಯಲ್ಲಿ ಸುಮ್ಮನೇ ಬಿದ್ದಿರುವ ವಸ್ತುವನ್ನು ತಿಳಿಯದೇ ತೆಗೆದುಕೊಂಡು ಹೋದರು, ತೆಗೆದುಕೊಂಡವರು ಅದರಲ್ಲಿ ಎಷ್ಟು ಲಾಭ ಗಳಿಸುತ್ತಾರೆ ಅದರ ಮೇಲೆಯೆ ವಂಚನೆಯ ಪ್ರಮಾಣ ಅಳಿಯುವುದು ಮಾತ್ರ ವಿಚಿತ್ರ ಅನಿಸುತ್ತದೆ. ಆನೆ ಕದ್ದರೂ ಕಳ್ಳ, ಅಡಿಕೆ ಕದ್ದರೂ ಕಳ್ಳ. ನಮ್ಮದಲ್ಲದ ವಸ್ತುವನ್ನು ಯಾರೇ ಕೈವಶ ಮಾಡಿಕೊಂಡರೂ ಒಂದೋ ಅದು ಅತಿಕ್ರಮಣವಾಗುತ್ತದೆ. ಇಲ್ಲ ಕಳ್ಳತನವಾಗುತ್ತದೆ. ನಮ್ಮ ಮನೋಭಾವಕ್ಕೆ ಹೊಂದಿಕೊಂಡು ಅದು ಗಂಭೀರತೆಯನ್ನು ಪಡೆಯುತ್ತದೆ.  ಇಲ್ಲವಾದರೇ ಎಲ್ಲೋ ಒಂದು ಯಾವುದೋ ಕಾಲದಲ್ಲಿ ಬಿಡುಗಡೆಯಾದ ಆಲ್ಬಂ ನ ಹಾಡಿನ ನೆರಳು ಈ ರೀತಿಯಾಗಿ ವಿವಾದ ಸೃಷ್ಟಿ ಮಾಡುತ್ತದೆ ಎಂದು ಯಾರುಬಲ್ಲರು. ಚೌರ್ಯ ಹೌದೋ ಅಲ್ಲವೋ ಅದು ನ್ಯಾಯಾಲಯಲದಲ್ಲಿ ಕಾನೂನಾತ್ಮಕವಾಗಿ ನಿರ್ಣಯವಾದರೂ ಈ ಚೌರ್ಯ ವೆಂಬುದು ಅಂತರಾತ್ಮದ ನಿರ್ಧಾರದ ಮೇಲೆಯೇ ನಿಂತಿರುತ್ತದೆ. ಅದನ್ನು ಇದರ ಸಂಗೀತ ನಿರ್ದೇಶಕ ಪ್ರಾಮಾಣಿಕವಾಗಿ ಸ್ಪಷ್ಟ ಪಡಿಸಬೇಕು. ಒಂದಿಷ್ಟಾದರೂ ಮೂಲ ಹಾಡಿನಿಂದ ಪ್ರಭಾವಿತನಾಗಿದ್ದರೆ ಅದು ಖಂಡಿತ ಕೃತಿ ಚೌರ್ಯವಾಗುತ್ತದೆ. ನ್ಯಾಯಾಲಯ ಏನೇ ಹೇಳಲಿ, ಏನೇ ನಿರ್ಣಯವಾಗಲಿ ಆತ್ಮ ವಂಚನೆ ಎಂಬುದು ಪ್ರಾಮಾಣಿಕತೆಯನ್ನು ನಿರ್ಣಯಿಸುತ್ತದೆ.  ಪ್ರಾಮಾಣಿಕತೆ ಇದ್ದರೆ ಒಂದು ಸಣ್ಣ ವಿಷಯಕ್ಕೂ ಮನ್ನಣೆ ಕೊಡುವ ಮನೋಭಾವ ಇರುತ್ತದೆ. ಅದರಲ್ಲಿ ಇರುವ ನಿರಾಳತೆ ಅದನ್ನು ಅನುಭವಿಸುವವರಿಗಷ್ಟೇ ತಿಳಿದಿರುತ್ತದೆ. 


ಕೃತಿ ಚೌರ್ಯದ ಬಗ್ಗೆ ಕೇಳುವಾಗ ಹಾಸ್ಯಾಸ್ಪದವೆನಿಸುತ್ತದೆ. ಆದರೆ ಎಲ್ಲಾ ಕಳ್ಳತನಕ್ಕಿಂತಲೂ ಇದು ಅತ್ಯಂತ ಗಂಭೀರ. ಒಬ್ಬನ ಪ್ರತಿಭೆಯನ್ನು ಉಪಯೋಗಿಸಬಹುದು, ಆದರೆ ಆ ಪ್ರತಿಭೆಗೆ ಗೌರವ ಕೊಡದೇ ಇರುವಾಗ ಅದು ವಂಚನೆಯಾಗುತ್ತದೆ. ಆದರೆ ಸಿನಿಮಾರಂಗ ಅದರಲ್ಲು ಇತ್ತೀಚಿಗಿನ ಕನ್ನಡ ಚಿತ್ರರಂಗ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದನಿಸುವುದೇ ಇಲ್ಲ.  ಹಲವು ಸಲ ಅತ್ಯಂತ ಹೆಚ್ಚು ಸುದ್ದಿ ಮಾಡಿದ ಸಿನಿಮಾ ನೋಡುವ ಮನಸ್ಸಾಗುತ್ತದೆ. ಮಾಧ್ಯಮಗಳಲ್ಲಿ ಅದರ ಬಗ್ಗೆ ಕೇಳುವಾಗ ಕುತೂಹಲದಿಂದ ನೋಡುತ್ತಿದ್ದಂತೆ  ಇದು ಎಲ್ಲೋ ನೋಡಿದ್ದೇನಲ್ಲ ಎಂದು ತಲೆಕೆರೆದುಕೊಳ್ಳುವಂತಾಗುತ್ತದೆ. ಮತ್ತೆ ತಿಳಿಯುತ್ತದೇ ಓಹ್ ಇದು ಅದೇ ಸಿನಿಮ, ಮೊದಲು ಯಾವುದೋ ಭಾಷೆಯಲ್ಲಿ ಬಂದ ಸಿನಿಮಾ ರೀ ಮೆಕ್ ಆಗಿ ಪುನಃ ಬಂದಿರುತ್ತದೆ. ಇಷ್ಟಾದರು ಮಾಧ್ಯಮದ ಯಾವುದೇ ಜಾಹಿರಾತಿನಲ್ಲೂ ಮೂಲ ಸಿನಿಮಾದ ಉಲ್ಲೇಖವೇ ಇರುವುದಿಲ್ಲ ! ಕಾನೂನು ಪ್ರಕಾರ ಹಕ್ಕುಗಳನ್ನು ಪಡೇದಿದ್ದರೂ ಸಹ ಅದನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳದೇ ನಮ್ಮದೇ ಬೆನ್ನನ್ನು ನಾವು ತಟ್ಟಿಕೊಳ್ಳುವ ಮನೋಭಾವ ಕಾಣಬಹುದು. 


ಕೆಲವು ವರ್ಷಗಳ ಹಿಂದೆ ಯಕ್ಷಗಾನ ವಲಯದಲ್ಲೂ ಇದೇ ರೀತಿ ಕೃತಿಯ ಹಕ್ಕು ಸ್ವಾಮ್ಯದ ಬಗ್ಗೆ ಒಂದು ವಿವಾದ ಉಂಟಾಗಿತ್ತು. ಆ ವಿವಾದ ಬಗೆಹರಿಯಲ್ಪಟ್ಟರೂ, ಕೃತಿ ಸ್ವಾಮ್ಯದ ಬಗ್ಗೆ ಯಕ್ಷಗಾನದಲ್ಲಿ ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಯಾರೋ ಪ್ರಸಂಗ ಬರೆಯುತ್ತಾರೆ. ಅದು ಎಲ್ಲೋ ಆಡಲ್ಪಡುತ್ತದೆ. ಹಲವು ಸಲ ಒಂದು ಪ್ರಸಂಗದ ಕೆಲವು ಪದಗಳನ್ನು ಭಾಗವತರ, ಕಲಾವಿದರ ಮರ್ಜಿಗೆ ಅನುಸಾರವಾಗಿ ಆಯ್ಕೆ ಮಾಡಿ ಹೊಸ ತಳಿಯನ್ನು ಕಸಿ ಮಾಡುವಂತೆ ಪ್ರಸಂಗ ಸೃಷ್ಟಿಯಾಗುತ್ತದೆ. ಇಲ್ಲೆಲ್ಲ ಮೂಲ ಕೃತಿಯವನ ಪರಿಶ್ರಮಕ್ಕೆ ಯಾವ ಮೌಲ್ಯವೂ ಇರುವುದಿಲ್ಲ. ಇನ್ನು ಈಗಿನ ಅಂತರ್ಜಾಲ ಮಾಧ್ಯಮದಲ್ಲಿ ಬೇಕಾಬಿಟ್ಟಿ ಎಂಬಂತೆ ಯಕ್ಷಗಾನ ವೀಡಿಯೋ ಆಡಿಯೋಗಳನ್ನು ಪ್ರಸಾರ ಮಾಡಲಾಗುತ್ತದೆ. ಹಲವು ಹಳೆಯ ಧ್ವನಿಮುದ್ರಣಗಳನ್ನು ಅದರ ನಿರ್ಮಾತೃಗಳ ಶ್ರಮಕ್ಕೆ ಬೆಲೆಯೇ ಇಲ್ಲದಂತೆ ಪ್ರಸಾರ ಮಾಡುತ್ತಾರೆ. ಹಲವಾರು ಹಳೆಯ ಧ್ವನಿ ಸುರುಳಿಗಳನ್ನು ಕಷ್ಟದಿಂದ ಸಂಗ್ರಹಿಸಿ ದುರಸ್ತಿಗೊಳಿಸಿ ಅದನ್ನು ಅದನ್ನು ಪರಿವರ್ತಿಸಿದ ನನಗೆ ಮೊದಲಿಗೆ ಕೃತಿಯ ಹಕ್ಕು ಸ್ವಾಮ್ಯದ ಬಗ್ಗೆ ಅಷ್ಟಾಗಿ ಅರಿವಿರಲಿಲ್ಲ. ನಾನೇ ಖುದ್ದಾಗಿ ಹಂಚಿದ ಧ್ವನಿಮುದ್ರಣಗಳು ಪುನಃ ನನ್ನ ಬಳಿಗೆ ಯಾರದೋ ಹೆಸರಿನಲ್ಲಿ ಬಂದಾಗ ಸಹಜವಾಗಿ ನನಗೆ ನೋವಾಗಿತ್ತು. ಆಗಲೇ ಇದರ ಮೂಲ ನಿರ್ಮಾಣದವರಿಗೆ ಹೇಗಾಗಬೇಡ ಎಂದು ಅರಿವಾಗಿತ್ತು. ಈ ಪ್ರಚಲಿತಲ್ಲಿ ಪ್ರಚಾರದಲ್ಲಿರಲು ಹೆಸರಿನ ಹಿಂದೆ ಹೋಗುವಾಗ ಮೂಲ ಕೃತಿ ಸ್ವಾಮ್ಯಕ್ಕೆ ಯಾರೂ ಗೌರವಿಸುವುದಿಲ್ಲ. ಇಲ್ಲಿ ಕೃತಿಚೌರ್ಯವೇ ಒಂದು ರೀತಿಯಲ್ಲಿ ಸಹಜ ಪ್ರಕ್ರಿಯೆಯಾಗಿದೆ. ಯಕ್ಷಗಾನದಲ್ಲಿ ಪ್ರತಿ ಸನ್ನಿವೇಶಗಳಿಗೂ ಪ್ರಸಂಗ ಕರ್ತ ಪದಗಳನ್ನು ರಚಿಸಿರುತ್ತಾನೆ. ಹಾಗಿದ್ದರೂ ದೇವೆಂದ್ರ ಒಡ್ಡೋಲಗಕ್ಕೆ ಅನಾದಿಕಾಲದಿಂದಲೂ ಅದೇ ಪದ ಬಳಕೆಯಾಗುವುದು ನಿಜಕ್ಕೂ ಪ್ರಸಂಗ ಕರ್ತನ ಶ್ರಮಕ್ಕೆ ನಾಗರೀಕತನದ ಗೌರವ ಒದಗಿಸುವುದರಲ್ಲಿ ಎಡವಿದೆ ಎಂದು ಹೇಳಬಹುದು. 


ಕೃತಿ ಚೌರ್ಯ,  ಇದು ಕಳ್ಳತನ ಎಂದು,  ಕದಿಯುವವನೇ ಮೊದಲು ನಿರ್ಣಯಿಸುತ್ತಾನೆ. ಆತನಿಗೆ ಅದು ತಿಳಿದಿರುತ್ತದೆ.  ಆದರೆ ಪ್ರಾಮಾಣಿಕತೆ ಇದ್ದರೆ ಇದು ಸೌಹಾರ್ದವಾಗಿ ಪರಿಹರಿಸಲ್ಪಡುತ್ತದೆ. ಹೆತ್ತವರು ಮಗುವಿಗೆ  ಜನ್ಮ ಕೊಡುತ್ತಾರೆ, ಆದರೆ ಆನಂತರ ಗುರುವಾದವನ್ನು  ಆ ಮಗುವಿಗೆ ವಿದ್ಯೆ ಕಲಿಸಿ ಒಂದು ಸಂಸ್ಕಾರವನ್ನು ಒದಗಿಸಿ ಅದನ್ನು ಉತ್ತಮವಾಗಿ ರೂಪಿಸುತ್ತಾನೆ.  ಮಗುವಿನ ಕರ್ತ್ರು  ಇಬ್ಬರೂ ಆಗಿರುತ್ತಾರೆ. ಇಲ್ಲಿ ಇದು ನನ್ನ ಮಗು ಅಂತ ಹೆತ್ತವರು ಅಭಿಮಾನ ಪಟ್ಟುಕೊಂಡರೆ ಕಲಿಸಿದ ಗುರು ತನ್ನ ಶಿಷ್ಯ ಎಂದು ಅಭಿಮಾನ ಗಳಿಸುತ್ತಾನೆ.  ಮುಖ್ಯವಾಗಿ ಒಂದು ಮಗು ಹುಟ್ಟಿದ ನಂತರ ಹೇಗೆ ಮತ್ತೆ ರೂಪವನ್ನು ಪಡೆಯುತ್ತದೆ ಎಂಬುದೇ ಮುಖ್ಯವಾಗುತ್ತದೆ. ಮಗು ಎಷ್ಟೇ ಸುಂದರವಾಗಿದ್ದರೂ ಆ ಮಗುವನ್ನು ನಂತರ ಹೇಗೆ ಉಪಯೋಗಿಸಿಕೊಳ್ಳುವುದು ಅತ್ಯಂತ ಮುಖ್ಯವಾಗುತ್ತದೆ.  ಇಲ್ಲಿ ತನ್ನದು ಎಂಬುದು ಸೌಹಾರ್ದಯುತವಾಗಿರುತ್ತದೆ. ಯಾವುದೇ ವಸ್ತುವಾದರು ನಿರ್ಮಿಸಿದ ನಂತರ ಅದು ಹೇಗೆ ಉಪಯೋಗಿಸಲ್ಪಡುತ್ತದೇ ಎಂಬುದೂ ಮುಖ್ಯ.  ಒಬ್ಬನಲ್ಲಿದ್ದ ಮರವನ್ನು ಕದ್ದು ತಂದು ಕೆತ್ತಿ ಸುಂದರ ಶಿಲ್ಪವನಾಗಿಸಿ ದೇವರ ಗುಡಿಯಲ್ಲಿಟ್ಟು ಪೂಜಿಸಿದರೆ, ಆ ಮರದ ಮಾಲೀಕ ಒಂದು ಸಮಾಧಾನ ಪಟ್ಟುಕೊಳ್ಳ ಬಹುದು, ಕದ್ದರೂ ನನ್ನ ವಸ್ತು ಉತ್ತಮ ಕಾರ್ಯಕ್ಕೆ ಬಳಕೆಯಾಯಿತಲ್ಲ? ಯಾರದೋ ತೋಟದ ಹೂವನ್ನು ತಂದು ದೇವರ ಪೂಜೆಗೆ ಬಳಸಿದರೆ  ತೋಟದವನು ಸಂತಸ ಪಡಬಹುದು, ತನ್ನ ತೋಟದ ಹೂವಿನ ಬಗ್ಗೆ ಸದ್ಬಳಕೆಯ ಬಗ್ಗೆ  ಅಭಿಮಾನ ಪಟ್ಟುಕೊಳ್ಳಬಹುದು.  ಅದಕ್ಕೆ ಸೌಹಾರ್ದಯುತ ಮನಸ್ಸು ಬೇಕು. ತಾನು ಹೆತ್ತ ಮಗು ಯಾರದೋ ಆಸರೆ ಉತ್ತಮ ಭವಿಷ್ಯ ರೂಪಿಸಿಕೊಂಡರೆ ಕಿಂಚಿತ್ತಾದರು ಸಂತಸವಾಗುವುದಿಲ್ಲವೇ?  ಈ ನಿಟ್ಟಿನಲ್ಲಿ ನೋಡಿದರೆ ಕಾಂತಾರದಲ್ಲಿ ಮೊದಲು ಸೇರಿಸಿದ ಹಾಡು ಚೌರ್ಯವಾದರು ಅದು ಚೌರ್ಯವಾಗುವುದಿಲ್ಲ. ಯಾಕೆಂದರೆ ಆ ಹಾಡಿಗೆ ಆ ಸಂಗೀತಕ್ಕೆ ಅದ್ಭುತವಾದ ಗೌರವವನ್ನು ಅಲ್ಲಿ ಒದಗಿಸಲಾಗಿದೆ. ಸೌಹಾರ್ದಯುತವಾಗಿ ಕಾಣುವುದಿದ್ದರೆ ಅದರ ಕೃತಿಯನ್ನು ರಚಿಸಿದವನೂ ಸಂತೋಷ ಪಟ್ಟುಕೊಳ್ಳಬಹುದಿತ್ತು. ತನ್ನ ಹಾಡು ಯಾವುದೋ ಕ್ಯಾಬರೆಗೆ ಬಳಕೆಯಾಗಿಲ್ಲವಲ್ಲಾ ಎಂದು. ಎಷ್ಟೇ ಉತ್ತಮ ಕೆಲಸವಾದರು ಕೃತಿ ಚೌರ್ಯ ಅದು ಕಳ್ಳನವೇ....ಅದಕ್ಕೆ ಬೇರೆ ಹೆಸರು ಇಲ್ಲ. ಆದರೂ ಒಂದು ಸೌಹಾರ್ದತೆಯ ಸದ್ಭಾವನೆ ಇದ್ದರೆ....ಕೊನೇ ಪಕ್ಷ ಈ ಸಂಗೀತಗಾರ ಮೂಲ ಸಂಗೀತದವನಿಗೆ ಒಂದಕ್ಷರದ ಸ್ಮರಣೆಯನ್ನಾದರೂ ಸೌಹಾರ್ದದಿಂದ ಪ್ರಾಮಾಣಿಕತೆಯಿಂದ ಸಲ್ಲಿಸಿದ್ದರೆ.....ಇಂದಿನ ಕಾಂತಾರ ಮಿಶ್ರತಳಿಯಾಗಿ ಹೊಸ ಅಲಂಕಾರ ಪಡೆಯುವ ಸ್ಥಿತಿಗೆ ಬರುತ್ತಿರಲಿಲ್ಲ. ಕೃತಿ ಚೌರ್ಯ ಎಂಬ ಭೂತ ಕಾಂತಾರದಲ್ಲೂ  ಬಾಧೆಯಾಗಿ ಕಾಡುತ್ತದೆ.  ಕಲಾವಿದ ಕಲಾವಿದನನ್ನುಮೊದಲು ಗೌರವಿಸಬೇಕು. ಆದರೂ ಒಂದು,  ಮುಂದಿನ ಶುಭ ನಿರೀಕ್ಷೆಯಲ್ಲಿ ನಾವಿರಬೇಕು.  ಕಾಂತಾರ ಮೂಲ ಹಾಡಿನೊಂದಿಗೆ ಪುನಃ ಬರಲಿ ಮತ್ತು ಅದೇ ರೀತಿ ಯಾವುದೇ ವೈಕಲ್ಯ ವಿಲ್ಲದೆ ನಮ್ಮ ನಡುವೆ ಇರಲಿ ಎಂಬ ಆಶಯ. 


Friday, November 11, 2022

ದಶಮಗ್ರಹದ ಭ್ರಮಣ ಪಥ

             ಮೊನ್ನೆ ದೀಪಾವಳಿಯ ಮುನ್ನಾದಿನ ನಡು ಮಧ್ಯಾಹ್ನ ಕೊಪ್ಪದಲ್ಲಿರುವ ನನ್ನ ಮಾವನ ಮನೆಯ (ಹೆಂಡತಿಯ ತವರು ಮನೆಯ)  ಮೆಟ್ಟಿಲು ತುಳಿವಾಗ ಒಂದು ವೈಶಿಷ್ಟ್ಯತೆ ಇತ್ತು.  ಎಂದಿನಂತೆ ಅತ್ತೆ ನಗು ಮುಖದಿಂದಲೇ ಓಹೋ....ಹೋ ಅಂತ ಎದಿರುಗೊಂಡು ಸ್ವಾಗತಿಸಿದರು. ವೈಶಿಷ್ಟ್ಯತೆ  ಎಂದರೆ, 1990ನೇ ಇಸವಿಯಲ್ಲಿ  ನನ್ನ ಮದುವೆಯಾಗಿತ್ತು. ಅದೇ ವರ್ಷ ದೀಪಾವಳಿಗೆ ಹೊಸ ಅಳಿಯನಾಗಿ ಹೊಸ ಹಬ್ಬಕ್ಕೆ ಇದೇ ಮೆಟ್ಟಲು ಹತ್ತಿದ್ದೆ. ಅದರ ನಂತರ ಸರಿ ಸುಮಾರು ಮೂವತ್ತೆರಡು ವರ್ಷಗಳ ನಂತರ ನಾನು ದೀಪಾವಳಿಗೆ ಮಾವನ ಮನೆಗೆ ಹೋಗುತ್ತಿರುವುದು ಈ ಬಾರಿಯ ವಿಶೇಷ !  ಅತ್ತೆ ಭಾವಂದಿರು, ಮತ್ತವರ ಪತ್ನಿಯರು ಹೀಗೆ ಅವರ ಸಂಭ್ರಮ ಸಡಗರ ಕಣ್ಣು ತುಂಬಿತು.  ಎಂತಹ ಬಡತನವಿರಲಿ ಸಿರಿವಂತಿಗೆ ಇರಲಿ ಸಂಭ್ರಮ ಎಂಬುದು ಸಮಾನವಾಗಿರುತ್ತದೆ. ಆ ಮನೆಗೆ ಒಬ್ಬಳೇ ಮಗಳು, ಹಾಗಾಗಿ ನಾನು ಒಬ್ಬನೇ ಅಳಿಯ ಜಾಮಾತಾ ದಶಮಗ್ರಹ ಎನ್ನುವಂತೆ. .  ಆ ಮನೆಯ    ಹತ್ತನೆಯ ಗ್ರಹ, ಅತ್ಯಂತ ಪ್ರಭಾವೀ ಗ್ರಹ ನಾನಾಗಿದ್ದೆ. ಒಬ್ಬಳೇ ಒಬ್ಬಳು ಮಗಳ ಕೈಹಿಡಿದ ಅಳಿಯ ಎಂದ ಮೇಲೆ ಕೇಳಬೇಕೆ?  ಅಳಿಯ ಎಂದಿಗೂ ಹೊರಗುಳಿಯ. 

           ಅಪ್ಪ ಅಮ್ಮ ಮಕ್ಕಳು ಒಡಹುಟ್ಟಿದವರನ್ನು ನಾವು ಕೇಳಿ ಪಡೆಯುವುದಿಲ್ಲ. ಅದು ಜನ್ಮದಿಂದ ಜತೆಯಾಗುತ್ತದೆ. ಆದರೆ ಪತಿ ಪತ್ನಿ  ಬಂಧು ಮಿತ್ರರರ ಆಯ್ಕೆ ನಮ್ಮಲ್ಲೇ ಇರುತ್ತದೆ. ಉತ್ತಮ ಮಿತ್ರರನ್ನು  ಹಾಗೆ ಉತ್ತಮ ಜೀವನ ಸಂಗಾತಿಯನ್ನು ಪಡೆಯುವ ಆಕಾಂಕ್ಷೆ ಎಲ್ಲರಲ್ಲೂ ಇರುತ್ತದೆ. ಆದರೆ ಇದು ಹಾರ್ದಿಕವಾಗಿ ಪರಿಪೂರ್ಣವಾಗಿ ಈಡೇರುವುದು ಸುಕೃತ ಫಲದಿಂದ ಮಾತ್ರ. ಕೆಲವೊಮ್ಮೆ ಎಲ್ಲವೂ ಇದ್ದರೂ ಏನೋ ಒಂದು ಇಲ್ಲದ ಕೊರತೆ ಬಾಧಿಸುತ್ತದೆ. ಹಲವು ಸಲ ಸನ್ಮನಸ್ಸು  ಸದ್ಭಾವನೆಗಳು ಎಲ್ಲ ಇದ್ದರೂ ಏನೋ ಒಂದು ವಿಷಯ ಹೊಂದಾಣಿಕೆಗಳಿಗೆ  ಪರೀಕ್ಷೆಯನ್ನೇ ತಂದೊಡ್ಡುತ್ತದೆ. ನಾವು ಪೇಟೆಯಿಂದ ಕೊಂಡು ತರುವ ಸಾಮಾಗ್ರಿಯಂತೆ ಈ ಬಂಧು ಬಳಗ. ಎಷ್ಟೇ  ಆಯ್ದು ಹುಡುಕಿ ಪರೀಕ್ಷೆ ಮಾಡಿ ತರಕಾರಿ ತಂದರೂ ಮನೆಗೆ ತಂದನಂತರ ಅದರಲ್ಲಿ ಹುಳು, ಕೊಳೆತು ಹಾಳಾಗಿರುವುದು ಸಿಗುವುದು ಸಾಮಾನ್ಯ. ಒಂದು ವೇಳೆ ಎಲ್ಲವೂ ಒಳ್ಳೆಯದಿದ್ದರೂ ದಿನ ಕಳೆದಂತೆ ಹಾಳಾಗುತ್ತದೆ.  ಈ ಸಂಭಂಧಗಳೂ ಹಾಗೆ , ಗಂಡಾಗಲೀ ಹೆಣ್ಣಾಗಲೀ ಸಂಬಂಧಗಳನ್ನು ಆಯ್ಕೆ ಮಾಡುವಾಗ ಚೌಕಾಶಿ ಮಾಡಿ ಅರಸಿ ಅರಸಿ ಸೋಸಿ ಹೇಗೆ ಸಾಧ್ಯವೋ ಹಾಗೆ ಸಾಮಾರ್ಥ್ಯವಿದ್ದಂತೆ   ಹುಡುಕಿ ಹೊಂದಿಸಿಕೊಂಡು ಸಂಪಾದಿಸುವುದು ಸಹಜ. ಬದುಕಿನ ಪಯಣದಲ್ಲಿ  ಹೊಸ ಸಂಬಂಧಗಳ ಆಯ್ಕೆ ಅನಿವಾರ್ಯ. ತರಕಾರಿ ಅಂಗಡಿಯಿಂದ ತಂದಂತೆ, ಯೋಗವಿದ್ದರೆ ಸಂಭಂಧಗಳು ಹಳಸದೆ ನಿತ್ಯ ಹಸಿರಾಗಿರುತ್ತದೆ.  ಇದನ್ನು ಪ್ರೀತಿ ವಿಶ್ವಾಸ ಎಂಬ ಫ್ರಿಜ್ ನಲ್ಲಿ ಭದ್ರವಾಗಿರಿಸಿಕೊಳ್ಳಬೇಕು. ಆದರೆ ಅದರಲ್ಲು ಎಲ್ಲವೂ ಸರಿ ಇದ್ದು ವಿದ್ಯುತ್ ಇಲ್ಲದೇ ಕೆಡುವಂತೆ, ನಮಗೆ ಯೋಗ ಇಲ್ಲದೇ ಇದ್ದರೆ ಕೆಟ್ಟು ಹೋಗುವುದು ಇಲ್ಲದಿಲ್ಲ. 


        ಮೊದಲೆಲ್ಲ ಮನೆ ಮನೆಯಲ್ಲಿ ತರಕಾರಿ ಸ್ವತಃ ಬೆಳೆಯುತ್ತಿದ್ದುದರಿಂದ ಅದಕ್ಕೆ ಗೌರವ ಅಭಿಮಾನ ಪ್ರೀತಿ ಎಲ್ಲವೂ ಇರುತ್ತಿತ್ತು. ಅದರೆ ಯಾವಾಗ ಹೊರಗೆ ಹೋಗಿ ಅಂಗಡಿಯಿಂದ ಖರೀದಿಸಿ ತರುವಾಗ ನಕಲಿ ವಂಚನೆ ಎಲ್ಲವು ಸಂಭವನೀಯ. ಅದರ ಅರ್ಥ ನಾವು ಮನೆಯಲ್ಲೇ ಬೆಳೆಯಬಹುದಾದ ಪ್ರೀತಿ ಸೌಹಾರ್ದತೆಯ ಕೊರತೆಯಾಗಿದೆ. ಆ ಪ್ರೀತಿ  ಸಂಭಂಧಗಳು ಇಂದು ಅಪರೂಪವಾಗಿವೆ.  ಇದ್ದರೂ ಕೃತಕವಾಗಿ ಅಭಿನಯವಾಗಿದೆ.  ಮನೆಯ ಒಳಗೆ ಪರಸ್ಪರ ವಿಡಿಯೋ ಕಾಲ್ ಮಾಡುವ ಕಾಲ ಇದು. ಕಾಣುವ ನಗು ವಿಶ್ವಾಸವನ್ನು ಅರಸುವಂತಾಗುತ್ತದೆ.  ಬಂಧುಗಳು ಹತ್ತಿರವಿದ್ದಷ್ಟೂ ಮಾನಸಿಕವಾಗಿ ದೂರವಿರುತ್ತಾರೆ.  ಇದು ವಾಸ್ತವ. 

        ದೀರ್ಘ ಕಾಲದ ವೈವಾಹಿಕ ಪಯಣದಲ್ಲಿ ದೈವ ನಿಮಿತ್ತವಾದ ಏರಿಳಿತಗಳು ಹಲವಿದ್ದರೂ ಇದುವರೆಗೆ ವಿದ್ಯುತ್ ಕಡಿತದ ಯೋಗ ವಿರಲಿಲ್ಲ. ಪ್ರೀತಿ ಅಭಿಮಾನ ಗೌರವ ಎಲ್ಲವನ್ನು ಮನಸೋ ಇಚ್ಛೆ ಅನುಭವಿಸಿದವನು ನಾನು. ಅದಕ್ಕೆ ಕಾರಣ ನನ್ನ ಮಾವನ ಮನೆಯ ಸದಸ್ಯರು.   ಮೂರು ದಶಕದ ಈ ಅಳಿಯನ ಪದವಿಯ ಉನ್ನತಿಯಲ್ಲಿ ಎಂದಿಗೂ ಪ್ರೀತಿಗೆ ಕೊರತೆಯಾಗಲಿಲ್ಲ. ದಶಕದ ಹಿಂದಿನ ಅದೇ ವಿಶ್ವಾಸ. ಮೂವತ್ತು ವರ್ಷಗಳ ಹಿಂದೆ ಪತ್ನಿ ತವರು ಮನೆಯಲ್ಲಿ ಇರುವಾಗ ಸಂಭ್ರಮದಿಂದ ಕೊಪ್ಪಕ್ಕೆ ಹೋಗುವ ದಿನಗಳು ಇಂದಿಗೂ ನೆನಪಾಗುತ್ತದೆ. ಈಗ ದಿನ ಮಾತ್ರ ಬದಲಾಗಿದೆ. ಆ ಸಂಭ್ರಮ ನಿರೀಕ್ಷೆ ಈಗಲೂ ಹಸಿರಾಗಿದೆ ಮಲೆನಾಡಿನ ಹಸಿರಂತೆ.  ಹಾಕಿದ ಉಡುಪು ಎಷ್ಟೇ  ಆಕರ್ಷಕವಾಗಿ ಬೆಲೆಬಾಳಲಿ, ಅದನ್ನು ತೊಟ್ಟವನ ವ್ಯಕ್ತಿತ್ವದ ಪ್ರಭಾವ ಅದರ ಮೇಲೂ ಇರುತ್ತದೆ. ಆತ ಕೆಟ್ಟವನಾದರೆ ಆ ಸುಂದರ ಉಡುಪಿನ ಬಗ್ಗೆಯೂ ಅಭಿಮಾನ ಇರುವುದಿಲ್ಲ. ಹಾಗೆ ಈ ಊರು ಹಿತವಾಗಿ ಅದೇ ಆಕರ್ಷಣೆ ಉಳಿದುಕೊಳ್ಳಲು ಈ ಬಂಧುವರ್ಗವೇ ಕಾರಣ ಎಂದು ಬೇರೆ ಹೇಳಬೇಕಿಲ್ಲ.   ಇದನ್ನೆಲ್ಲ ನೆನಪಿಸಿಕೊಳ್ಳುವಾಗ  ನಾನು ಮೇಲೆ ಹೇಳಿದ ವಾಕ್ಯ ...ಅಪ್ಪ ಅಮ್ಮನನ್ನು ಪಡೆಯುವುದು ನಮ್ಮೆಣಿಕೆಯಲ್ಲಿಲ್ಲ, ಆದರೆ ಬಂಧುಗಳನ್ನು ಗಳಿಸಿ ಅದರ ಔಚಿತ್ಯವನ್ನು ಉಳಿಸಿಕೊಳ್ಳುವಲ್ಲಿ ನಮಗೆ ಯೋಗ ಅತ್ಯಂತ ಅವಶ್ಯ. ಸಿಗದೇ ಇರುವುದನ್ನು ಪಡೆಯುವುದೇ ಯೋಗ. ಈ ಕಾಲದಲ್ಲಿ ಇಂತಹ ಸಂಭಂಧಗಳು ಪಡೆಯುವುದೇ ಯೋಗ ಎನ್ನುವುದು ಹೆಚ್ಚು ಅರ್ಥ ಪೂರ್ಣ. 

        ಅತ್ತೆ ಮಾವ ಹೆಂಡತಿಯನ್ನು ಹೊಗಳುವುದೆಂದರೆ ವಾಡಿಕೆಯಲ್ಲಿ ಒಂದಷ್ಟು  ಮುಜುಗರ ಇರುತ್ತದೆ. ಹೊಗಳುವಷ್ಟು  ವಿಶೇಷವೇನಿರುತ್ತದೆ?   ಹಲವು ಸಲ ಇದು ಅತಿರೇಕ ಅತಿಶಯ ಎನಿಸಿದರು ಅನುಭವಿಸಿದ ಸುಖ ಸಮೃದ್ಧಿಗೆ ಯೋಗ ಕೂಡಿಬರುವುದೇ ಇಲ್ಲಿಂದ ಎಂಬುದು ಸತ್ಯ.  ಪ್ರಯಾಣದಲ್ಲೋ ಇನ್ನೆಲ್ಲೋ ನಮಗೆ ಕ್ಷಣಿಕವಾಗಿಯಾದರೂ ಒಳ್ಳೆಯದನ್ನು ಮಾಡುವ ಅಪರಿಚಿತರನ್ನು ಹೊಗಳುತ್ತೇವೆ. ಬಸ್ಸಿನಲ್ಲಿ ಸಹಪ್ರಯಾಣಿಕ ಅಪರಿಚಿತ ಹತ್ತಿರದಲ್ಲೇ ಕುಳಿತಿದ್ದರೂ ಆ ಪ್ರಯಾಣದ ಅವಧಿಯಲ್ಲಾದರೂ ಆತನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ.   ಆತನ ಕೈ ಮೇಲಿದ್ದರೆ ನಮ್ಮದು ಕೆಳಗಿರುತ್ತದೆ! ಹೀಗಿರುವಾಗ ನಮ್ಮ ಜೀವನ ಪರ್ಯಂತ ಜತೆಯಾಗುವ ಉತ್ತಮ ಬಂಧುಗಳಿದ್ದರೆ ಅವರನ್ನು ಹೊಗಳುವುದರಲ್ಲಿ ಸಂಕೋಚ ಬಿಗುಮಾನ ಯಾಕಿರಬೇಕು? ಈ   ಸ್ನೇಹ ಗೌರವದ ಬಂಧುಗಳು ಪರಮಾತ್ಮನಿಗೆ ಸಮ, ಯಾಕೆಂದರೆ ಉತ್ತಮ ಬಂಧುಗಳು ಜತೆಗಿದ್ದರೆ ಪರಮಾತ್ಮನ ಸ್ಮರಣೆ ಕೂಡ ಆಗುವುದಿಲ್ಲವಂತೆ, ಹಾಗಾಗಿ ಬಂಧುಗಳು ಎನಗಿಲ್ಲ...ಎಂದು ದಾಸ ವರೇಣ್ಯರು ಹಾಡುತ್ತಾರೆ. 

        


ಮಾವ ಈಗ ನಮ್ಮೊಡನೆ ಇಲ್ಲ.  ಕಡಿದ ಮರ ಮತ್ತೂ ಚಿಗುರಿ ನನ್ನಲ್ಲಿನ್ನೂ ಈ ಪ್ರಕೃತಿಯ ಪ್ರೀತಿ ಹುದುಗಿದೆ ಎಂದು ತೋರಿಸುತ್ತದೆ ಇಲ್ಲಿನ ವಾತ್ಸಲ್ಯ  ಆ ಪ್ರೀತಿಯ ನೆರಳಿನಲ್ಲೇ ಬಂಧುತ್ವ ಮತ್ತೂ ಗಾಢವಾಗಿದೆ. ಮಾವನ ಎದುರು ಎಂದೂ ನಾನು ಪರಕೀಯ ಅನ್ನಿಸಲಿಲ್ಲ. ಪ್ರೀತಿಯ ಚಿಗುರು ಇನ್ನೂ ಹಸಿರಾಗಿಯೇ ಉಳಿದಿದೆ. ಆ ಅನುಭವ ಮಾಸದಂತೆ ಅತ್ತೆ ಭಾವಂದಿರು ಮತ್ತವರ ಸಹವರ್ತಿಗಳು ನೀರೆರೆದು ಈ  ಹಸಿರಿನ ಹಸಿವನ್ನು ಸದಾ ಜಾಗೃತ ಗೊಳಿಸಿದ್ದಾರೆ. ಈ ಬಾರಿಯ ದೀಪಾವಳಿ ಹೊಸ ಅಳಿಯನ ಮರು ಸೃಷ್ಟಿಯನ್ನು ನೀಡಿದೆ.  ಜಾಮಾತಾ  ದಶಮಗ್ರಹ....ಹೆಣ್ಣು ಹೆತ್ತವರಿಗೆ ಅಳಿಯ ಹತ್ತನೆಯ ಗ್ರಹ. ಒಂಭತ್ತಕ್ಕೆ ಗ್ರಹ ಶಾಂತಿ ಸುಲಭವಾಗಬಹುದು, ಹತ್ತನೆಯದರ ಪ್ರಭಾವ ಬಂಧುತ್ವದ ಸಂಭಂಧಗಳ  ಬುಡವನ್ನೇ ಅಲುಗಾಡಿಸುತ್ತದೆ.  ಇಲ್ಲಿ ದಶಮ ಗ್ರಹದ ಮೇಲೆ ಬಹಳ ಗೌರವ. ಮಾವನ ಊರು ಮೇಗೂರು ಇದೆ. ಅಲ್ಲಿ ಕೇವಲ ಅತ್ತೆ ಮಾವ ಮಾತ್ರವಲ್ಲ ಅಲ್ಲಿ ಬಂಧುವರ್ಗ ಮಾತ್ರವಲ್ಲ ಪರಿಸರ ಪ್ರಕೃತಿ ಎಲ್ಲವೂ ಅಳಿಯ ಗ್ರಹನನ್ನು ಗೌರವದಿಂದ ಕಾಣುತ್ತದೆ. ಇಲ್ಲಿನ ಶುದ್ದ ಸಂಸ್ಕಾರವದು. ಅಳಿಯ ಎಂದರೆ ಸಾಕ್ಷಾತ್ ದೇವರು. ನವಗ್ರಹದ ಚಲನೆಯನ್ನಾದರು ಮರೆತು ಬಿಡಬಹುದು, ಆದರೆ ಈ ಅಳಿಯನೆಂಬ ಹತ್ತನೆಯ ಗ್ರಹದ ಚಲನೆ ಮೇಲೆ ಸದಾ ಕಣ್ಣು. ಒಬ್ಬರಲ್ಲ ಒಬ್ಬರು ಗಮನಿಸುತ್ತಾ ಇರುತ್ತಾರೆ. ಅಳಿಯ...ಕಾಫಿ ಕುಡಿದರಾ, ಅಳಿಯ ನಿದ್ದೆಗೆ ಜಾರಿದರಾ, ಅಳಿಯನ ತಲೆಗಿಟ್ಟ ದಿಂಬು ಮೆತ್ತಗೆ ಇದೆಯಾ...ಹೀಗೆ ಹತ್ತು ಹಲವು ಅಳಿಯನ ಚಟುವಟಿಕೆಗಳು ಗಾಜಿನ ಮನೆಯಲ್ಲಿಟ್ಟಂತೆ ಸದಾ ಗಮನಾರ್ಹ. ಹಲವು ಸಲ ಅನ್ನಿಸಿದ್ದಿದೆ...ನನ್ನ ಹಿಂದೆ ಯಾವುದೋ ಸಿ ಸಿ ಕ್ಯಾಮೆರ ಇದೆ ಎಂದು. ನಾನು ಏನು ಮಾಡಿದರೂ  ಯಾರದರೊಬ್ಬರ ಮನಸ್ಸಿನಲ್ಲಿ ಅದು ದಾಖಲಾಗಿರುತ್ತದೆ.  ಹೀಗಿರುವುದರಲ್ಲೇ ಒಂದು ಗಾಂಭೀರ್ಯ. ಅಳಿಯ ಎಂದರೆ ಗಂಭೀರ. ನಿಮ್ಮಲ್ಲಿ ಇಲ್ಲದೇ ಇದ್ದರು ಅದನ್ನು ತುಂಬಿಸಿಬಿಡುತ್ತಾರೆ. ಆತ್ಮೀಯತೆ ಗೌರವ ನಿಮ್ಮ ಮನಸೋ ಇಚ್ಛೇ ಅಹಮಿಕೆ ಇಲ್ಲದೆ ಅನುಭವಿಸಬಹುದು. ಎಂತೆಂತಹ ದಶಮಗ್ರಹದ ಭ್ರಮಣವನ್ನು ಸಂಬಂಧಗಳನ್ನು ಕಂಡಿದ್ದೇನೆ. ಈ ಎಲ್ಲದರ ನಡುವೆ ನನ್ನದೇ ಅತ್ಯಂತ ವೈಶಿಷ್ಟ್ಯ ಎನಿಸುತ್ತದೆ. ಅದಕ್ಕೆ ಕಾರಣ ನಾನಂತೂ ಅಲ್ಲ ಎಂಬ  ಪ್ರಜ್ಞೆ ಸದಾ ಜಾಗ್ರತವಿರುತ್ತದೆ. ಅದೇ ದಶಮಗ್ರಹದ ಅನಗ್ರಹವೋ ಆಗ್ರಹವೋ ಹೇಳುವುದು ಕಷ್ಟ. 


ಈ ಬಾರಿ ದೀಪಾವಳಿಗೆ ಹೋಗಲೇ ಬೇಕೆಂಬ ಛಲದಲ್ಲಿ ಹೋದೆ. ಕಳೆದ ದಿನಗಳನ್ನು ಪುನಃ ನವೀಕರಿಸುವ ತವಕ. ಅದೇ ಸಂಭ್ರಮ ಅದೇ ಸಡಗರ. ಮಾವ ಇಲ್ಲದೇ ಇರುವುದೊಂದೆ ಕೊರತೆಯಾದರೂ ಅಳಿಯನೆಂಬ ಗ್ರಹಗತಿಯ ಚಲನೆಗೆ ಭಂಗವಿರಲಿಲ್ಲ. ದೀಪಾವಳಿ ಬೆಳಕಿನಲ್ಲಿಹಾರ್ದಿಕವಾದ  ಸಂತಸದ ಎರಡು ದಿನ ಕಳೆದು ನಿರ್ಗಮಿಸುವಾಗ ಯಥಾ ಪ್ರಕಾರ ಹೃದಯ ಭಾರವಾಗುತ್ತದೆ. ದಶಮಗ್ರಹ ಭಾರವಾದರು ಚಲನೆಯನ್ನು ಸ್ಥಗಿತಗೊಳಿಸುವಂತಿಲ್ಲ. ಅದು ಚಲನಶೀಲವಾಗಿ ಚಲಿಸುತ್ತ ಇರಬೇಕು. ಮುಂದಿನ ದೀಪಾವಳಿ ನಿರೀಕ್ಷೆಯಲ್ಲಿ ಮತ್ತೆ ಯಾವ ಮನೆಯಲ್ಲಿ ನೆಲೆಯಾಗುವುದೋ ಕಾಣಬೇಕು.  


 








Tuesday, November 8, 2022

ಉತ್ಕೃಷ್ಟ ಸಂದೇಶ

 

 ಮಂತ್ರಾಲಯದಲ್ಲಿ ಮುಂಜಾನೆ ಹೀಗೆ ಹರಿಯುವ ತುಂಗೆಯ ನಡುವೆ ಬಂಡೆಯ ಮೇಲೆ ಸುತ್ತಾಡಬೇಕಾದರೆ ಸುತ್ತಲೂ ಸುಂದರ ಬಯಲು ಸೀಮೆಯ ಪ್ರಕೃತಿಯಾದರೆ ಅಲ್ಲೇ ಗುಟುರು ಹಾಕುತ್ತಾ ಮೇಯುವ ಹಂದಿಯ ಹಿಂಡು ಕಾಣುತ್ತಿದ್ದಂತೆ ಮಗನಿಗೆ ಕಾಂತಾರ ಸಿನಿಮದ ಪಂಜುರ್ಲಿ ಸ್ಮರಣೆಗೆ ಬಂತು. ಹಂದಿ ಕಾಣುವುದಕ್ಕೆ ನಿಕೃಷ್ಟ ಪ್ರಾಣಿ ಆದರೆ ಆಗ ಅಲ್ಲಿ ಮನುಷ್ಯನ ವಿಕೃತಿ ನಿಕೃಷ್ಟತೆಯ ಪ್ರತೀಕದಂತೆ ಬಂಡೆಯ ಮೇಲೆ ಎಸೆದ ಕಸ ಆಹಾರದ ಮುದ್ದೆಗಳನ್ನು ಸ್ವಚ್ಛ ಮಾಡಿ ತನ್ನ ಉತೃಷ್ಟತೆಯನ್ನು ಪೂರ್ವ ದಲ್ಲಿ ಉದಿಸಿದ ಸೂರ್ಯನಿಗೆ ತೋರುಸುತ್ತಿತ್ತು.

ಕೇವಲ ಇಷ್ಟೇ ಅಲ್ಲ,
ನಗ್ನತೆ  ಹೊರಗೆ ಕಂಡಾಗ  ಸ‌ಭ್ಯತೆಯ ಮನಸ್ಸು  ವಸ್ತ್ರವನ್ನು ಧರಿಸಿಬಿಡುತ್ತದೆ.  ಕಣ್ಣು ಮುಚ್ಚಿಕೊಳ್ಳುತ್ತದೆ. ಅದು ಸಭ್ಯತೆ. ಅದು ಮೀರಿದರೆ ಹೊರಗೆ ವಸ್ರ ಧರಿಸಿದರೂ  ಮನಸ್ಸು ನಗ್ನತೆಯನ್ನೇ  ಕಾಣುತ್ತದೆ.  ಮನುಷ್ಯ ಮನಸ್ಸು ಅಮೀಬದಂತೆ ಯಾವರೂಪವನ್ನು ಕ್ಷಣದಲ್ಲಿ ಪಡೆಯಬಲ್ಲುದು. ಇದನ್ನೆ ಮನೋವಿಕಾರ ಎನ್ನುವುದು.  ಕ್ಷೇತ್ರ ಪರಿಸರದ ಮೌಲ್ಯ ಅರಿಯದೆ ಮನೋವಿಕಾರವನ್ನು ಪ್ರಚೋದಿಸುವ ಒಂದು ವರ್ಗವಿದ್ದರೆ, ಮನೋವಿಕಾರವನ್ನೇ ಭಂಡವಾಳ ಮಾಡಿಕೊಂಡ ಇನ್ನೊಂದು ವರ್ಗ. ಸಭ್ಯತೆಯ ತಕ್ಕಡಿ ಸಂತುಲನೆಯನ್ಮು ಕಳೆದುಕೊಂಡಂತೆ ನೇತಾಡುತ್ತಿದೆ. ನೇತಾರನೇ ನೇತಾಡಿದರೆ ಉಳಿದವರೂ ಅದೇ ಬಳ್ಲಿಗೆ ನೇತಾಡುತ್ತಾರೆ.


ಹಂದಿ ತುಳುವರ ಪಂಜಿ...ನೋಡುವುದಕ್ಕೆ ಭೀಭತ್ಸವಾದರೂ ಅದೇಕೊ ಅದರ ಪ್ರವೃತ್ತಿಯ ಬಗ್ಗೆ ಗೌರವ ಮೂಡಿತು. ಪವಿತ್ರ ಪಾವನ ತುಂಗೆ ಮನಷ್ಯನ ಅಪವಿತ್ರ ಧಾಳಿಗೆ ನಲುಗಿ ಎಲ್ಲೆಂದರಲ್ಲಿ ಎಸೆದ ಕಸ,  ಭಾಟಲಿ,  ಹರುಕು ಬಟ್ಟೆ ಇನ್ನೂ ಏನೇನೊ ನೋಡುವುದಕ್ಕೂ ಅಸಹ್ಯ ಎನಿಸುವಂತಹ ವಸ್ತುಗಳನ್ನು ಮೈಯೆಲ್ಲಾ ತುಂಬಿ, ಗುಣವಾಗದ ವೃಣದಿಂದ ರೋಧಿಸುವಂತೆ ಭಾಸವಾಯಿತು. ಇದರ ನಡುವೆ ಈ ಕಸದ ಸಂಹಾರವನ್ನು ಸಾಧು ವರಾಹ ರೂಪ ಸಂಹಾರ ಮಾಡುತ್ತಿತ್ತು. ಇದು ಸಾವಿರ ಪಂಜುರ್ಲಿಗಳು ಅವತಾರ ಎತ್ತಿದರೂ ಮನುಷ್ಯ ಪ್ರಬುದ್ದನಾಗುವುದಿಲ್ಲ ಎಂಬುದರ ಸಂಕೇತ.

ಹಂದಿಯನ್ನು ನೋಡುವಾಗ ಪೂಜ್ಯ ಪಂಜುರ್ಲಿಯ ನೆನಪಾಗಬೇಕಾದರೆ  ಕಾಂತಾರ ಪ್ರಚೋದಿಸಿದ ಆ ಭಾವನಾತ್ಮಕ ಭಕ್ತಿ ಏನಿರಬಹುದು? ನಮ್ನ ಸನಾತನ ಸಂಸ್ಕೃತಿಯ ಮೌಲ್ಯಗಳೇ ಹೀಗೆ. ಅದು ನಿಕೃಷ್ಟತೆಯಲ್ಲೂ ಉತ್ಕರ್ಷವನ್ನು ತೋರಿಸಿ, ಲೌಕಿಕ ಪ್ರಪಂಚದ ಉತ್ಕೃಷ್ಟತೆಯ ನಿಕೃಷ್ಟತೆಯನ್ನು ಆಧ್ಯಾತ್ಮಿಕ ದಲ್ಲೇ ತೋರಿಸುತ್ತವೆ. ಜಗತ್ತು ಇದನ್ನು‌ಕಾಣಬೇಕು. ಹಾಗಾಗಿಯೇ ಕಾಂತಾರ ಜಗತ್ತಿಗೆ ಕೊಡುವ ಸಂದೇಶದಲ್ಲಿ ಇದೂ ಒಂದು ಉತ್ಕೃಷ್ಟ ಸಂದೇಶ.

ನಾವು ಪ್ರಕೃತಿಯನ್ನು ಗೌರವಿಸಿ ಪೂಜಿಸಿದಷ್ಟು ಬೇರೆ ಯಾವ ಧರ್ಮವೂ ಪ್ರಕೃತಿಯನ್ನು ಕಂಡದ್ದಿಲ್ಲ. ಇಲ್ಲಿ ಮರಗಿಡಗಳೂ ಪಕ್ಷಿ ಪಶುಗಳೂ ಪೂಜಿಸಲ್ಪಡುವುದು ಮಾತ್ರವಲ್ಲ....ಹಂದಿಯೂ ದೈವಾಂಶವಾಗುತ್ತದೆ.  ಇದರ ಮೌಲ್ಯಗಳನ್ನು ತಿಳಿಯದೇ ಇದ್ದರೆ ಮನುಷ್ಯನೇ ಪ್ರಕೃತಿಯ ಎದುರು ಬೆತ್ತಲಾಗಿ ನಿಕೃಷ್ಟನಾಗುತ್ತಾನೆ.

Sunday, October 30, 2022

ಬೋಳಂಗಳದ ಸವಾರಿ ಸೇವೆ

  ಆದಿನ ನಮ್ಮೂರಿನ ಪೈವಳಿಕೆ ಬೋಳಂಗಳದ ನೇಮಕ್ಕೆ ಹೋಗಿ ಮತ್ತೆ ಉಪ್ಪಳ ಪೇಟೆಗೆ ಹೋಗಿ ಬರುವುದಕ್ಕೆ ತಡವಾಗಿಬಿಟ್ಟಿತು. ಹಾಗೆ ರಾತ್ರಿ ತಡವಾಗಿ ಉಪ್ಪಳದಿಂದ ಬಂದೆ. ಮನೆಗೆ ಬರುತ್ತಿದ್ದಂತೆ ಮನೆಯಲ್ಲಿ ನನ್ನನ್ನುಕಾಣುವುದಕ್ಕೆ ಬೋಳಂಗಳದಿಂದ ಬಂದಿದ್ದರು ಎಂದು ಹೇಳಿದರು. ನನಗೆ ಆಶ್ಚರ್ಯವಾಯಿತು. ಯಾಕಪ್ಪಾ ಏನಾಯಿತು? ಆಗಲೇ ರಾತ್ರಿ ಒಂಭತ್ತಾಗಿತ್ತು. ಇನ್ನೇನು ಕೈಕಾಲು ತೊಳೆಯೋಣವೆಂದು ಅಂಗಳಕ್ಕೆ ಇಳಿದರೆ ಅದೇ ಬೋಳಂಗಳದ ಆಡಳಿತ ವರ್ಗದಲ್ಲಿದ್ದ ಬಲ್ಲಾಳರು ಬಂದಿದ್ದರು. ಅದಾಗಲೇ ಏಳು ಘಂಟೆಯಿಂದ ನನ್ನನ್ನು ಇದಿರು ನೋಡುತ್ತಿದ್ದರು.  ಬಂದವರ ಮುಖದಲ್ಲಿ ಬಹಳ ಹತಾಶೆಯ ಭಾವವಿತ್ತು. ನಾನಂತು ಬೋಳಂಗಳದ ದೈವವನ್ನು ನಂಬಿಕೊಂಡಿದ್ದವನೇ ಹೊರತು ಅಲ್ಲಿಯ ಯಾವ ಕಾರ್ಯ ಕೆಲಸಗಳ ಜವಾಬ್ದಾರನಾಗಿರಲಿಲ್ಲ. ಹಾಗಾಗಿ ನನಗೆ ಬಹಳ ಅಚ್ಚರಿಯಾಯಿತು. ಪ್ರತಿ ಬಾರಿ ಉತ್ಸವಕ್ಕೆ ಹೋಗಿ ನಮಸ್ಕರಿಸಿ ಹರಿಕೆಸಲ್ಲಿಸಿ ಪ್ರಸಾದ ತರುವಷ್ಟಕ್ಕೆ ಸೀಮಿತ. 

ಬೋಳಂಗಳ, ಹೆಸರೇ ಹೇಳುವಂತೆ ಬೋಳು ಬೋಳಾದ ಅಂಗಳ. ನಮ್ಮ ಮನೆಯಿಂದ ಒಂದು ಹರ ದಾರಿಯಲ್ಲಿ ವಿಶಾಲವಾದ ಬಯಲು ಪ್ರದೇಶ. ಬಹಳ ವಿಸ್ತಾರವಾದ ಮೈದಾನ,  ಸುತ್ತಲು ಪ್ರಾಕೃತಿಕ ಕ್ರೀಡಾಂಗಣದಂತೆ ಎತ್ತರದ ಗುಡ್ಡಗಳು. ಮೈದಾನದ ಒಂದು ತುದಿಯಲ್ಲಿ  ಒಂದೆರಡು ಬೃಹದಾಕಾರದ ಮರಗಳು. ಅದರ ನೆರಳಿನಲ್ಲಿ ಎಂಬಂತೆ ಬೋಳಂಗಳ ದೈವದ ಗುಡಿ. ನಿತ್ಯದಲ್ಲಿ ಹಗಲಿನಹೊತ್ತಿನಲ್ಲೂ ಜಾತಿ ಧರ್ಮ ಭೇದವಿಲ್ಲದೆ ಜನ ಅಲ್ಲಿಗೆ ಹೋಗುವುದಕ್ಕೆ ಭಯ ಪಡುತ್ತಿದ್ದರು. ದೂರದಲ್ಲೇ ನಿಂತು ನಮಸ್ಕರಿಸುವುದಷ್ಟೇ ಕೆಲಸ.  ನಮ್ಮ ಪೈವಳಿಕೆ ಗ್ರಾಮದಲ್ಲಿ ಮೂರು ಪ್ರಧಾನ ದೈವ ವಿದೆ. ಒಂದು ಅಣ್ಣ ದೈವ ಇನ್ನೊಂದು ತಮ್ಮ ದೈವ ಮತ್ತೊಂದು ಅಕ್ಕ ಅಂದರೆ ಉಳ್ಳಾಳ್ತಿ ದೈವ. ಇದರಲ್ಲಿ ಉಳ್ಳಾಳ್ತಿ ದೈವ ಪೈವಳಿಕೆ ಗ್ರಾಮದೇವತೆ. ವರ್ಷಕ್ಕೊಮ್ಮೆ ಎಲ್ಲ ಕ್ಷೇತ್ರದಲ್ಲು ವರ್ಷಾವಧಿ ನೇಮ (ಉತ್ಸವ) ಭಕ್ತಿ ಗೌರವದಿಂದ ನಡೆಯುತ್ತದೆ. ಅದರಲ್ಲಿ ತಮ್ಮ ದೈವದ ಸ್ಥಾನವೇ ಬೋಳಂಗಳ. ಮತಭೇದವಿಲ್ಲದೆ ಭಯ ಭಕ್ತಿಯಿಂದ ಕಾಣುವ ದೈವ ಸ್ಥಾನ. 

ಬೋಳಂಗಳ ನೇಮ ಪ್ರತಿ ವರ್ಷವೂ ಆಗುವಾಗ ಮೊದಲ ರಾತ್ರಿ ಬೋಳಂಗಳದಿಂದ ಒಂದಷ್ಟು ದೂರವೇ ಇರುವ ಪೈವಳಿಕೆ ಚಿತ್ತಾರಿ ಚಾವಡಿಯಲ್ಲಿದ್ದ ಉಳ್ಳಾಳ್ತಿ ದೈವ ಇಲ್ಲಿನ ಉತ್ಸವಕ್ಕೆ ಬರುವುದು ವಾಡಿಕೆ. ರಾ
ತ್ರಿ ಸಿಡಿ ಮದ್ದು ವಾದ್ಯ ಢೋಲಿನೊಂದಿಗೆ  ಮೆರವಣಿಗೆ ಬರುತ್ತದೆ. ಮೊದಲೆಲ್ಲ ರಾತ್ರಿ ಬಹಳ ಹೊತ್ತಾಗುವಾಗ ವಾದ್ಯ ಡೋಲಿನ ಸದ್ದಿಗೆ ನಾವು ಭಯದಿಂದ ಎದ್ದು ಕುಳಿತುಕೊಳ್ಳುತ್ತಿದ್ದೆವು. ಅಲ್ಲಲ್ಲಿ ತೋರಣ ಕಟ್ಟಿ ಆ ದೈವವನ್ನು ಸ್ಥಳೀಯರು ಸ್ವಾಗತಿಸುತ್ತಿದ್ದರು. ನಮ್ಮ ಮನೆಯ ಹತ್ತಿರವೇ ಇದ್ದ ಕಾಜಿ ಕಟ್ಟೆ ವಾಸ್ತವದಲ್ಲಿ ಇದನ್ನೇ ಕಾಯರ್ ಕಟ್ಟೆ ಎಂದು ಕರೆಯುತ್ತಾರೆ. ಅಲ್ಲಿ ಉಳ್ಳಾಳ್ತಿ ದೈವ ಬಳೆ ಧರಿಸಿ ತಮ್ಮನ ಉತ್ಸವಕ್ಕೆ ಬರುವುದು ವಾಡಿಕೆ. ಹಾಗೆ ಬಂದ ದೈವದ ಕಿರೀಟ ಖಡ್ಗ ಇನ್ನು ಏನೇನೋ ಭಂಡಾರದ ವಸ್ತು ರೂಪದಲ್ಲೆ ಬರುವ ಉಳ್ಳಾಳ್ತಿಯನ್ನು ಬ್ರಾಹ್ಮಣರೊಬ್ಬರು ಹೊತ್ತು ತರುತ್ತಾರೆ. ಜತೆಗೆ ದರ್ಶನ ಪಾದ್ರಿ ಪೂಜಾರಿ ಇನ್ನಿತರ ಪರಿವಾರದವರು ಜತೆಗೆ ಇರುತ್ತಾರೆ.  ಹೀಗೆ ಸಂಭ್ರದಿಂದ ಬಂದ ಉಳ್ಳಾಳ್ತಿ ಮರುದಿನ ಸಾಯಂಕಾಲ ನೇಮ ಸಮಾಪ್ತಿಯಾಗುತ್ತಿದ್ದಂತೆ ಹಿಂತಿರುಗಿ ಹೋಗುವುದು ಪದ್ದತಿ. 

ಆದಿನ ಬಂದ ದೈವ ಹಿಂದಿರುಗಿ ಹೋಗುವುದಕ್ಕೆ  ದೈವವನ್ನು ಹೊರುವುದಕ್ಕೆ ಬ್ರಾಹ್ಮಣ ವ್ಯಕ್ತಿ ಯಾರೂ ಸಿಗಲಿಲ್ಲ. ಯಾವಾಗಲು ಕೊಂಡೊಯ್ಯುತ್ತಿದ್ದ ವ್ಯಕ್ತಿ ಕಾರಣಾಂತರದಿಂದ ಬರಲಿಲ್ಲ. ಅದು ಏನಾಯಿತು ಎನ್ನುವುದಕ್ಕಿಂತ ಅದಕ್ಕೆ ಪರಿಹಾರವಾಗಿ ನನ್ನ ಬಳಿಗೆ ಅ ರಾತ್ರಿ ಬಂದು ಬಿಟ್ಟರು. ನಾನು ಮೊದಲಿಗೆ ಸುತರಾಂ ಒಪ್ಪಿಕೊಳ್ಳಲಿಲ್ಲ. ಮುಖ್ಯವಾಗಿ ಆದಿನ ಬಿಡುವಿಲ್ಲದ ಕೆಲಸದಿಂದ ಬಹಳ ದಣಿದಿದ್ದೆ. ಇನ್ನೊಂದು ಅದಕ್ಕೆ ಅರ್ಹ ವ್ಯಕ್ತಿ ನಾನಲ್ಲ ಎಂಬ ಅಂತರಂಗದ ಭಾವವೂ ಕಾರಣ. ನಾನು ಬ್ರಾಹ್ಮಣನಾದರೂ ನನ್ನ ಬ್ರಾಹ್ಮಣ್ಯದ ಪರೀಕ್ಷೆ ಆರೀತಿಯಾಗುವುದು, ಇನ್ನೊಂದು ನನ್ನ ಧರ್ಮ ಆಚರಣೆ ಏನುಂಟು ಅದು ಕೇವಲ ಖಾಸಗಿಯಾಗಿ ನನಗೆ ಸಂಭಂಧಿಸಿದ್ದು. ಅದು ಸಾರ್ವಜನಿಕವಾಗುವುದಕ್ಕೆ ಇಷ್ಟವಿರಲಿಲ್ಲ. ನಾನು ಬರುವುದೇ ಇಲ್ಲ. ಅಲ್ಲೇ ಹತ್ತಿರದಲ್ಲೇ ಇದ್ದ ಇನ್ನೊಬ್ಬರನ್ನು ಉಲ್ಲೇಖಿಸಿ ಹೇಳಿದೆ. ನಿಜಕ್ಕೂ ಇನ್ನೊಬ್ಬರ ಬಗ್ಗೆ ನನಗೆ ಗೌರವ ಇತ್ತು. ಅದಕ್ಕೆ ಅವರು ಹೇಳಿದರು,   "ಸ್ವಲ್ಪ ಕ್ರಮದಲ್ಲಿ ಇರುವವರು ಆಗಬೇಕು ಹಾಗೆ ಇಲ್ಲಿಗೆ ಬಂದದ್ದು. " ನನ್ನಲ್ಲಿ ಅಂತಹ ವೈಶಿಷ್ಟ್ಯತೆ ಏನಿದೆಯೋ ಅಂತ ಅಚ್ಚರಿಯಾಯಿತು.  ತಕ್ಕ ಮಟ್ಟಿಗೆ ನನ್ನದೇ ಮಿತಿಯೊಳಗೆ ಇದ್ದದ್ದು ಬಿಟ್ಟರೆ ಮತ್ತೇನೂ ಇರಲಿಲ್ಲ. 


  ಬ್ರಾಹ್ಮಣ್ಯ ಅಸ್ತಿತ್ವ ಅತ್ಯಂತ ಚರ್ಚಿತ ವಿಷಯ. ಇದು ಅವಶ್ಯಕತೆ ಬೀಳುವಾಗ ಗೌರವಿಸಲ್ಪಡುತ್ತದೆ. ಮತ್ತೆ ಅದೇ ಕಡೆಗಣನೆ. ಏನೇನೋ ವಾದಗಳು. ಹಲವರು ಸಾರ್ವಜನಿಕವಾಗಿ ತೆಗಳುತ್ತಾರೆ, ತಮಗೆ ತಿಳಿದಂತೆ ವಿಮರ್ಶೆ ಮಾಡುತ್ತಾರೆ. ಇರಲಿ ಅದು ವೈಯಕ್ತಿ ಸ್ವಾತಂತ್ರ್ಯ. ಆದರೆ ಅವರವರ ಕಾರ್ಯಗಳಿಗಾಗುವಾಗ ಪರಿಶುದ್ದ ಬ್ರಾಹ್ಮಣ್ಯದ ಶರಣು ಹೋಗುತ್ತಾರೆ. ಈಗಿನ ಹಲವು ರಾಜಕೀಯ ನಾಯಕರ ರೀತಿ ಇದು.   ಬ್ರಾಹ್ಮಣರ ಪ್ರತಿಯೊಂದನ್ನು ಕಟುವಾಗಿ ವಿಮರ್ಶಿಸುವಾಗ ತನ್ನ ಮನೆಯ ಕಾರ್ಯಕ್ಕೆ ಬ್ರಾಹ್ಮಣರು ಬೇಡ ಎನ್ನುವ ಆತ್ಮ ಸ್ಥೈರ್ಯ  ಇರುವುದೇ ಇಲ್ಲ.  ಆಗ ಬ್ರಾಹ್ಮಣರು ಪರಿಶುದ್ದರಾಗಿಬಿಡುತ್ತಾರೆ.  ಆದರೆ ಅದೆಲ್ಲ ರಹಸ್ಯ. ಅದು ಅಪ್ರಸ್ತುತ.  ಹೋಗಲಿ ಮನೆಗೆ ಬಂದವರು ಈ ವರ್ಗಕ್ಕೆ ಸೇರಿದವರಲ್ಲ. ದಿನವೂ ಮುಖ ನೋಡಿ ಸೌಹಾರ್ದದಿಂದ ವ್ಯವಹರಿಸುವವರು. ಕೊನೆಗೆ ಅವರ ಮಾತಿಗೆ ಒಪ್ಪಿದೆ. ಮತ್ತೆ ಸ್ನಾನ ಮಾಡಿ ಒದ್ದೆ ಬಟ್ಟೆಯಲ್ಲಿ ಬರಿಗಾಲಲ್ಲೇ ಬೋಳಂಗಳಕ್ಕೆ ಹೋದೆ. ನನ್ನನ್ನು ಬರವಿನ ನಿರೀಕ್ಷೆಯಲ್ಲಿ  ಅಲ್ಲಿ ಹಲವರು ನಿಂತಿದ್ದರು. ನಾನು ಬಂದದ್ದು ದೊಡ್ಡ ಭಾರವನ್ನು ಇಳಿಸಿದಂತೆ ಅವರ ಭಾವ. ಆ ಭಾರ ನನ್ನ ಮೇಲೆ ರವಾನೆಯಾಗಿದೆ ಎಂಬುದು ಮತ್ತೊಂದು. 


ಮೊದಲಿಗೆ ದೈವದ ಖಡ್ಗ ಕಿರೀಟ ಪ್ರಭಾವಳಿ ಇನ್ನೇನು ಇತ್ತೋ ನನಗೆ ಅದರ ಅರಿವಿಲ್ಲ. ಯಾವಾಗಲೂ ಜಾತ್ರೆಯ ಸಮಯ ದೂರದಿಂದ ಭಯದಿಂದ ನಮಸ್ಕರಿಸಿ ಹೋಗುವ ದೈವ ನನ್ನಕೈಯಲ್ಲಿತ್ತು. ಬಾಲ್ಯದಿಂದಲೂ ನನಗೆ ಅರಿವು ಬಂದ ದಿನದಿಂದಲೂ ದೈವ ಭೂತ ಎಂದರೆ ಭಯ ಪಟ್ಟು ನೋಡುತ್ತಿದ್ದದ್ದು ಅಂದು ನನ್ನ ಕೈಯಲ್ಲಿ. ಒಂದು ವಿಚಿತ್ರ ಅನುಭವ.  ಆ ಕತ್ತಲೆಯಲ್ಲಿ ದೀವಟಿಗೆ ದೀಪದ ಬೆಳಕಿನಲ್ಲಿ ಬರಿಗಾಲಲ್ಲಿ ಅವರೊಂದಿಗೆ ಪೈವಳಿಕೆ ಚಿತ್ತಾರಿ ಚಾವಡಿ ಕಡೆ ಹೊತ್ತು ಸಾಗುವಾಗ, ಅದುವರೆಗೆ ಇದ್ದ ದಣಿವು ಮರೆತು ಹೋಯಿತು. ಚಾವಡಿಯಲ್ಲಿ ಇರಿಸಿ ಅಲ್ಲಿ ಪೂಜೆ ಸಲ್ಲಿಸಿ ಪುನಃ ಹಿಂತಿರುಗುವಾಗ ರಾತ್ರಿ ಹನ್ನೊಂದು ಘಂಟೆಯಾಗಿತ್ತು. ಹೀಗೆ ಅನಿರೀಕ್ಷಿತವಾಗಿ ಒಂದು ಭೂತದ ಸೇವೆ ದೈವದ ಸೇವೆ ಆಯಾಚಿತವಾಗಿ ನನ್ನ ಕೈಯಿಂದ ನೆರವೇರಿತು. 


ಇತ್ತೀಚೆಗೆ ನಮ್ಮಊರಿನ ಭೂತಗಳು ಹೆಚ್ಚು ಸದ್ದು ಮಾಡುತ್ತವೆ. ಅದರ ಮಹಿಮೆ ಕಥೆಗಳ ಬಗ್ಗೆ ಹಲವರಿಗೆ ಕುತೂಹಲ ಮೂಡಿದೆ. ಕಾಂತಾರ ಚಲನ ಚಿತ್ರ ನೋಡುವಾಗ ನಾನು ಒಂದು ದಿನ ಹೊತ್ತುಕೊಂಡಿದ್ದೆ  ಎಂಬ ಆ ಘಟನೆ ಮತ್ತೆ ನೆನಪಿಗೆ ಬಂತು. ಆ ದಿನ ನನಗೆ ಆ ಕಾರ್ಯ ಅಷ್ಟು ಗಂಭೀರ ಅಂತ ಅನ್ನಿಸಲೇ ಇಲ್ಲ. ಆದರೆ ಈಗ ಯೋಚಿಸುವಾಗ ಎಂತಹಾ ಒಂದು ಅದ್ಭುತ ಕಾರ್ಯ ನನ್ನಿಂದ ಆಗಿ ಹೋಗಿದೆ. ಈಗ ನಾನು ಬೇಕೆಂದರೂ ಅದು ಮಾಡುವುದಕ್ಕೆ ಸಾಧ್ಯವಿಲ್ಲ. ಅದಕ್ಕೆ ಅವಕಾಶವೂ ಇರಲಾರದು. ಹೀಗೆ ಆಯಾಚಿತವಾಗಿ ಬಂದ ಒಂದು ಅವಕಾಶ ಬದುಕಿನ ಶ್ರೇಷ್ಠದಿನಗಳಲ್ಲಿ ಒಂದಾಗಿ ದಾಖಲಾಗಿರುವುದು ಸತ್ಯ. 


ಬೋಳಂಗಳದ ಬಗ್ಗೆ ಬಹಳ ಹಿಂದೆ ಬರೆದ ಲೇಖನ ಇಲ್ಲಿದೆ. 

ಬೋಳಂಗಳ




Tuesday, October 25, 2022

ದೈವದ ಅರಿವು

 

       ಕಾಂತಾರ ಚಲನ ಚಿತ್ರ ಎಷ್ಟು ಜನ ನೋಡಿಲ್ಲ? ನಾಯಕ ಕನಸಿನಿಂದ ಪ್ರಚೋದನೆಗೊಳ್ಳುತ್ತಾನೆ. ಭೂತ ಅಂದರೆ ದೈವ ಪ್ರತ್ಯಕ್ಷವಾಗುತ್ತದೆ. ಎಲ್ಲವೂ ನೈಜ ಘಟನೆ ಎಂಬಂತೆ  ಭಾಸವಾಗುತ್ತದೆ. ಇಲ್ಲೂ ಒಂದು ಅಧ್ಯಾತ್ಮದ ಸಂದೇಶವಿದೆ. ಭಗವಂತ ಅಥವಾ  ದೇವರು ಅದು ಎಲ್ಲೂ ಕಾಣಿಸುವುದಿಲ್ಲ. ಅದು ನಮ್ಮ ಅನುಭವ ಮಾತ್ರ. ಕನಸಿನಂತೆ  ಮನಸ್ಸು ಅನುಭವಿಸುತ್ತದೆ. ಅದರೆ ಅದು ಸತ್ಯವಾಗಿರುವುದಿಲ್ಲ.  ನಾವು ಕಾಣುವ ಕನಸು,  ಇದು ನಮ್ಮ ನಿಯಂತ್ರಣದಲ್ಲಿರುವುದಿಲ್ಲ. ತಮಗೆ ಬೇಕಾದ ಕನಸು ಯಾರೂ ಎಂದಿಗೂ ಕಾಣುವುದಕ್ಕೆ ಸಾಧ್ಯವಿಲ್ಲ. ಹಾಗಾದರೆ ಈ ಕನಸನ್ನು ತೋರಿಸುವವನು ಯಾರು? ಅದೇ ರೀತಿ ನಮ್ಮ ಭಯ. ಮನಸ್ಸು ಭಯಗೊಳ್ಳುತ್ತದೆ. ನಾಯಕನೂ ಭೂತ ಕಂಡು ಬೆಚ್ಚಿ ಬೀಳುತ್ತಾನೆ. ವಾಸ್ತವದಲ್ಲಿ ಅಲ್ಲಿ ಭೂತ ಕಣ್ಣೆದುರಿಗೆ ಇರುವುದಿಲ್ಲ. ಅದೊಂದು ದಿವ್ಯ ಅನುಭವ ಮಾತ್ರ.


          ಭಗವಂತನ ಅಸ್ತಿತ್ವ ಇರುವುದು ನಮ್ಮ ಅನುಭವದಲ್ಲಿ. ಯಾವುದೇ ಅನುಭವವಾಗಿರಬಹುದು. ಪ್ರತ್ಯಕ್ಷವಾಗಿ ದೇವರು ಎಂದೂ ಕಾಣಿಸಲಾರ. ಒಂದು ವೇಳೆ ಕಾಣಿಸಿದರೆ ಅವನು  ಭಗವಂತನಾಗಲಾರ. ನಮಗಾದ ಅನುಭವವನ್ನು ನಾವು ಹೇಳುತ್ತೇವೆ. ಬಿಸಿಯಾದ ಕಬ್ಬಿಣದ ಬಿಸಿಯ ಅನುಭವವಾಗಬೇಕಿದ್ದರೆ ಮುಟ್ಟಿ ನೋಡಬೇಕು.  ವಿದ್ಯುತ್ ಹರಿವ ತಂತಿ ಅದರಲ್ಲಿರುವ ವಿದ್ಯುತ್ತಿನ ಅರಿವಾಗಬೇಕಾದರೆ ಅದನ್ನು ಮುಟ್ಟಿ ನೋಡಬೇಕು. ಇಲ್ಲ ವಿದ್ಯುತ್ ಉಪಯೋಗಿಸುವ ಉಪಕರಣದ ಸಂಪರ್ಕಕ್ಕೆ ಆ ತಂತಿ ಸಿಕ್ಕಿಬಿಡಬೇಕು. ಯಾರೋ ಹೇಳುತ್ತಾರೆ ಅದರಲ್ಲಿ ವಿದ್ಯುತ್ ಇದೆ. ಅದು ಅವರ ಅನುಭವ. ಮನುಷ್ಯ ತನ್ನೊಳಗಿನ ದೇವರನ್ನು ಸ್ವತಃ ಅರಿತಾಗ ತಾನೂ ದೇವರಾಗುತ್ತಾನೆ.

            ಕಾಂತಾರ ನೋಡಿದಾಗ ಹಳೆಯ ಪ್ರವಚನ ಬಹಳಷ್ಟು ನೆನಪಾಯಿತು. ಪ್ರವಚನದಲ್ಲಿ ದೈವತ್ವ ಅಥವಾ ದೇವರನ್ನು ಅನುಭವಕ್ಕೆ ಸಮೀಕರಿಸುತ್ತಾರೆ. ದೇವರು ಎಂದಿಗೂ ಬರುವುದಿಲ್ಲ. ಬಂದ ಅನುಭವ ಮಾತ್ರ ನಮ್ಮದಾಗುತ್ತದೆ. ಆ ಅನುಭವ ಅರಿಯ ಬೇಕಿದ್ದರೆ ಮನಸ್ಸು ಎಲ್ಲವನ್ನು ಮೀರಿ ನಿಲ್ಲಬೇಕು. ಕತ್ತಲೆಯ ಕೋಣೆಯೊಳಗೆ ಹೋಕ್ಕಿದಾಗ, ಬಲ್ಬನ್ನು ಎಲ್ಲರೂ  ತೋರಿಸಬಹುದು. ಬಲ್ಪು ನೋಡಿದರೆ ಬೆಳಕು ಸಿಗುವುದಿಲ್ಲ. ಬಲ್ಬ್ ತೋರಿಸಿದಂತೆ ಅದರ ಸ್ವಿಚ್ ನ್ನು ತೋರಿಸಬೇಕು. ಬಲ್ಪ್ ಎಲ್ಲರೂ ತೋರಬಹುದು, ಆದರೆ ಸ್ವಿಚ್ ನ್ನು  ತೋರಿಸುವರು ಇರುವುದಿಲ್ಲ. ಸ್ವಿಚ್ ಹಾಕಿದರೆ ಬಲ್ಪು ಉರಿಯುತ್ತದೆ. ಆಗ ವಿದ್ಯುತ್ ಇರಬೇಕು. ಅಂದರೆ ಯೋಗ ಇರಬೇಕು. ಅದಕ್ಕೇ ದೈವ ದರ್ಶನದ ಹಾದಿ ಅತ್ಯಂತ ದುರ್ಗಮ.

         ಒಂದು ಕತ್ತೆಗೆ ಒಂದು ಬಡಿಗೆ ಕಟ್ಟಿ ಬಡಿಗೆಯ ತುದಿಗೆ ಹುಲ್ಲನ್ನು ಕಟ್ಟಿದ ಚಿತ್ರವನ್ನು ಕಂಡಿರಬಹುದು. ಅದು ಕತ್ತೆ. ಅದಕ್ಕೆ ಬುದ್ದಿಯ ಅರಿವಿಲ್ಲ. ಒಂದು ನಾಯಿಗೂ ಇದೇ ರೀತಿ ಒಂದು ಬಡಿಗೆಯನ್ನು ಕಟ್ಟಿ ಅದರ ತುದಿಗೆ ಏನಾದರೂ ತಿನಿಸು ಇಟ್ಟರೆ, ಕತ್ತೆಯಾಗಲೀ ನಾಯಿಯಾಗಲೀ ಅದನ್ನು ತಿನ್ನುವುದಕ್ಕೋಸ್ಕರ ಬಡಿಗೆಯ ತುದಿಯನ್ನೇ ನೋಡುತ್ತಾ ಮುಂದೆ ಮುಂದೆ ಹೋಗುತ್ತದೆ. ವಾಸ್ತವದಲ್ಲಿ ಈ ತಿನಿಸನ್ನು ನಾನೇ ದೂರ ತಳ್ಳುತ್ತಾ ಇದ್ದೇನೆ ಎಂದು ಅದಕ್ಕೆ ಅರಿವಿರುವುದಿಲ್ಲ ! ಅದು ಮುಂದೆ ಹೋದಂತೆಲ್ಲಾ ತಿನ್ನುವ ಆಹಾರ ಮುಂದಕ್ಕೆ ಸೆಳೆಯಲ್ಪಡುತ್ತದೆ. ಇದೂ ಅಷ್ಟೇ ಆ ಸೆಳೆತಕ್ಕೆ ಒಳಗಾಗುತ್ತದೆ. ವಾಸ್ತವದಲ್ಲಿ ಅಲ್ಲಿರುವ ಆಹಾರವನ್ನು ಅದೇ ಹಿಡಿದುಕೊಂಡಿರುತ್ತದೆ.   ಹೀಗೆ  ಭಗವಂತ ಅಥವಾ ಪರಮಾತ್ಮ ನಮ್ಮೊಳಗೆ ಇರುತ್ತಾನೆ. ನಾವು ಎಲ್ಲೋ ಹುಡುಕುತ್ತಾ ಮುಂದೆ ಮುಂದೆ ಹೋಗುತ್ತಾ ಇರುತ್ತೇವೆ. ನಾವು ಮುಂದೆ ಮುಂದೆ ಹೋದಂತೆ ದೇವರೂ ಮುಂದೆ ಮುಂದೆ ಕೈಗೆ ಕಣ್ಣಿಗೆ ಸಿಗದಂತೆ  ಹೋಗುತ್ತಾನೆ. ನಮ್ಮ ಅಂತರಾತ್ಮದಲ್ಲಿರುವ  ಪರಮಾತ್ಮನನ್ನು ನಾವು ಗುರುತಿಸುವುದಿಲ್ಲ. ಹೊರಗೆಲ್ಲೋ ಹುಡುಕುತ್ತೇವೆ ಹಿಂಬಾಲಿಸುತ್ತೇವೆ, ಕತ್ತೆ ನಾಯಿಯಂತೆ ಅರಿವಿಲ್ಲದೆ.  ಕಾಂತಾರದ ನಾಯಕನಿಗೂ ಇದೇ ಅನುಭವ. ಕೊನೆಗೆ ಆತ ದೇವರಾಗುವುದು . ಇದೇ ಅನುಭವದಲ್ಲಿ. ಆಗಲೇ ನಾಯಕ ಬಂದು ಹೇಳುತ್ತಾನೆ ನಾನು ಪರಿಶುಧ್ದಿಯಾದೆ. ಮಳೆಯಿಂದ ನೀರಲ್ಲಿ‌ಮುಳುಗಿ ಶುಧ್ದವಾಗುವುದು ಬೇರೆ,  ಅಂತರಂಗದಿಂದ ಶುದ್ಧವಾಗುವುದು ಪರಿಪೂರ್ಣತೆ. ದೇಹಕ್ಕೆ ನೀರೆರೆದು ಸ್ನಾನ ಮಾಡಿದರೆ ದೇಹ ಶುದ್ದೀಕರಣವಾಯಿತು. ತಂಬಿಗೆಯನ್ನು ಹೊರಗಿಂದ ತೊಳೆದು ಇಟ್ಟಂತೆ, ಅದರಲ್ಲಿ ಹಾಲು ಹಾಕಬೇಕಾದರೆ ಪಾತ್ರೆಯನ್ನು ಒಳಗಿನಿಂದ ತೊಳೆಯಬೇಕು. ಪರಿಶುದ್ದತೆ ಎಂದರೆ ದೈವ ಸಾನ್ನಿಧ್ಯ.

         ನಾಯಕ ತನ್ನೊಳಗಿನ ದೇವರನ್ನು ಕಂಡಾಗ ಆತ ದೈವವೇ ಆಗಿ ಬದಲಾಗುತ್ತಾನೆ. ದೈವತ್ವ ಅದು ಹೊರಗೆಲ್ಲೂ ಇರುವುದಿಲ್ಲ. ಯಾವ ದೇವಾಲಯದಲ್ಲೂ ಇರುವುದಿಲ್ಲ. ಅದು ನಮ್ಮೊಳಗೆ ಇರುತ್ತದೆ. ಹೊರಗೆಲ್ಲ ಇರುವುದು ಬಡಿಗೆ ಅಂದರೆ ಮಾಧ್ಯಮ. ನಾವು ಅದನ್ನು ಗುರುತಿಸದೇ ಇದ್ದರೆ ಜೀವನ ಪರ್ಯಂತ ದೇವರ ದರ್ಶನವಾಗುವುದಕ್ಕೆ ಸಾಧ್ಯವಿಲ್ಲ. ಇದುವೆ ಅಂತರಂಗ ದರ್ಶನ. ತನ್ನ ಬಗಲಲ್ಲೇ ಪರಮಾತ್ಮನಿದ್ದರೂ ಅದನ್ನು ಗುರಿತಿಸದವನು ಹೊರಗೆಲ್ಲೋ ಹುಡುಕಿ ಸಿಗದೆ ಆದಾಗ ತನಗೆ ಹೇಳಿಕೊಳ್ಳುವುದು ಕಲಿಯುಗದಲ್ಲಿ ದೇವರು ಕಾಣುವುದಿಲ್ಲ. ತನ್ನ ಅನುಭವ ಏನಿದೆಯೋ ಅದೇ ಎಲ್ಲರ ಅನುಭವ ಎಂದು ತಿಳಿದುಕೊಳ್ಳುವುದು.

            ಕಾಡಿನಲ್ಲಿದ್ದ ಮಂಗನನ್ನು ಬಲವಂತದಿಂದ ಹಿಡಿದು ತಂದು ಮನುಷ್ಯ ಕಟ್ಟಿ ಹಾಕುತ್ತಾನೆ.  ಒಂದು ದಿನ ಮನುಷ್ಯ ಕರುಣೆ ತೋರಿ ಬಂಧ ಮುಕ್ತ ಗೊಳಿಸಿ ಮಂಗನನ್ನು ಕಾಡಿಗೆ ಬಿಟ್ಟು ಬಿಡಬಹುದು. ಆದರೆ ಉಳಿದ ಮಂಗಗಳು ಆವಾಗ ಅದನ್ನು ಸೇರಿಸುವುದಿಲ್ಲ. ಹೊಡೆದು ಕೊಂದು ಹಾಕಿಬಿಡುವ ಪ್ರಮೇಯವೂ ಇರುತ್ತದೆ. ಯಾಕೆಂದರೆ ಅದುವರೆಗೆ ಆ ಮಂಗ ಮನುಷ್ಯನ ಸಹವಾಸದಲ್ಲಿತ್ತು!   ಮನುಷ್ಯನ ಸಹವಾಸ ಎಷ್ಟು ಕೆಟ್ಟದು ಎಂದು ಪ್ರಾಣಿಗಳು ಈ ಮೂಲಕ ತೋರಿಸಿಕೊಡುತ್ತವೆ.  ಜಗತ್ತಿನಲ್ಲಿ ಮನುಷ್ಯನಷ್ಟು ಸುಳ್ಳು ಹೇಳುವ ಪ್ರಾಣಿ ಇನ್ನೊಂದಿಲ್ಲ. ಕಾಗೆ ಒಂದು ಅಗುಳು ಕಂಡರೆ ಮಾತ್ರ ತನ್ನ ಬಳಗವನ್ನು ಕರೆಯುತ್ತದೆ. ಅದು ಎಂದಿಗೂ ಸುಳ್ಳು ಹೇಳುವುದಿಲ್ಲ. ಪ್ರಾಣಿ ಪಕ್ಷಿಗಳು ಎಂದಿಗೂ ಸುಳ್ಳು ಹೇಳುವುದಿಲ್ಲ. ಮನುಷ್ಯ ಮಾತ್ರ ಸುಳ್ಳು ಹೇಳುತ್ತಾನೆ. ಯಾಕೆಂದರೆ ಸತ್ಯದಿಂದ ದೂರವಾಗುವುದನ್ನು ಆತ ಕಾಣುತ್ತಾನೆ. ಸತ್ಯ ಅಂದರೆ ಏನು ಅದೇ ಭಗವಂತ. ದೇವರಿಗೆ ಏನೇನೋ ಅಲಂಕಾರ ಮಾಡಿ ಚಿನ್ನ ಬೆಳ್ಳಿಯ ಕವಚ ಪ್ರಭಾವಳಿ ಹೀಗೆ ಆಡಂಬರದಿಂದ ಭಗವಂತನನ್ನು ಕಾಣುತ್ತೇವೆ. ನಾವು ನಿಜಕ್ಕೂ ಭಗವಂತನನ್ನು ಕಾಣುವುದಿಲ್ಲ. ಕೇವಲ ಆಡಂಬರವನ್ನುಕಂಡು ಅನುಭವಿಸುತ್ತೇವೆ.  ನಮ್ಮ ಮನಸ್ಸಿಗೆ ನಾವು ಸುಳ್ಳನ್ನೇ ಹೇಳಿಬಿಡುತ್ತೇವೆ.  ಪ್ರವಚನ ಒಂದರಲ್ಲಿ ವಿದ್ವಾಂಸರು ಹೇಳಿದ ಮಾತು, ವರ್ಷಕ್ಕೊಮ್ಮೆ ಗಣೇಶನನ್ನು ತಂದು ಕೂರಿಸುತ್ತೇವೆ. ಪೂಜೆ ಮಾಡುತ್ತೇವೆ. ಆದರೆ ಕೊನೆಗೆ ನೀರಿಗೆ ಹಾಕುವಾಗ ಕೇಕೆ ಹಾಕಿ ಕುಣಿದು ಕುಪ್ಪಳಿಸುತ್ತೇವೆ. ನಿಜಕ್ಕು ಇದು ಯಾಕೆ ಎಂದೆ ಅರಿವಾಗುವುದಿಲ್ಲ. ಯಾಕೆ ನಾವು ದೇವರಿಂದ ದೂರವಾಗುವುದನ್ನು ಸಂಭ್ರಮಿಸುತ್ತೇವೆ?
ಪೂಜೆಗೆ ಸ್ನಾನ‌ ಮಾಡಿ ಮಡಿಉಟ್ಟು ತಯಾರಾಗುತ್ತೇವೆ. ಆದರೆ ಮನಸ್ಸು!!  ಆ ಪೂಜೆಯನ್ನು ಮುಗಿಸಿ ಮಡಿಯನ್ನು ಕಳಚಿ ಸಹಜ ಸ್ಥಿತಿಗೆ ಬರಲು ಹಾತೊರೆಯುತ್ತದೆ. ಪರಿಶುಧ್ದತೆ ಎಂಬುದೇ ಅಸಹಜವಾಗಿ ಭಾಸವಾಗುತ್ತದೆ. ಪರಿಶುಧ್ದತೆ ಎಂಬುದೇ ಪರಮಾತ್ಮ. ಪರಿಶುದ್ಧ ಮನಸ್ಸು ಅದರ ಸಂಕೇತ.

           ಗಣ್ಯದಲ್ಲೂ ಶೂನ್ಯದಲ್ಲೂ ಭಗವಂತನಿದ್ದಾನೆ. ಹುಣಿಸೇ ಬೀಜ, ಚಿಕ್ಕದಾಗಿ ಬೆರಳ ತುದಿಯ ಗಾತ್ರದಲ್ಲಿರುತ್ತದೆ. ನಮ್ಮೂರಲ್ಲಿ ಇದಕ್ಕೆ ಅಡ್ಡ ಹೆಸರು ಇದೆ ’ಪುಳಿಂಕಟೆ’. ಕೇಳುವುದಕ್ಕೆ ವಿಚಿತ್ರವಾಗಿದೆ. ಕೈಯಲ್ಲಿ ಏನೂ ಇಲ್ಲದಾಗ ಹೇಳುವ ಮಾತುಂಟು....ಕೈಯಲ್ಲಿ ಏನುಂಟು ಪುಳಿಕಂಟೆಯೂ ಇಲ್ಲ. ಅವನಲ್ಲಿ ಎಂತ ಇರುವುದು ಪುಳಿಕಂಟೇಯಾ? ಹೀಗೆ ಏನೂ ಇಲ್ಲದ ಒಂದು ನಿಕೃಷ್ಟ ಸ್ಥಿತಿಯನ್ನು ಇದಕ್ಕೆ ಹೋಲಿಸಿ ಹೇಳುವುದುಂಟು.  ಆ ಹುಣಿಸೆ ಹಣ್ಣಿನ ಒಳಗೆ ಬೀಜ ಇರುತ್ತದೆ. ಬೀಜಕ್ಕೆ ಒಂದು ಸಿಪ್ಪೆ ಇರುತ್ತದೆ. ಆ ಸಿಪ್ಪೆಯನ್ನು ತೆಗೆದು ನೋಡಿದಾಗ ಒಳಗೆ ಒಂದು ತಿರುಳು ಇರುತ್ತದೆ. ಮತ್ತೂ ಅದನ್ನು ಗುದ್ದಿ ತೆರೆದರೆ ಒಳಗೆ ಏನೂ ಇಲ್ಲ. !! ಏನೂ ಇಲ್ಲದ ನಿಕೃಷ್ಟವಾಗಿರುವ ಬೀಜದಲ್ಲಿ ಅಷ್ಟು ದೊಡ್ಡ ಹುಣಿಸೆ ಮರ ಅಲ್ಲಿ ಹುಟ್ಟಿಕೊಳ್ಳುವುದಾದರೂ ಹೇಗೆ? ಪ್ರಕೃತಿ ವಿಸ್ಮಯ.  ಸಮುದ್ರದ ಬದಿಯಲ್ಲಿ ನಿಂತು ನೋಡಿದರೆ ಕಣ್ಣು ಹಾಯುವಷ್ಟು ದೂರವೂ ನೀರು ಬರೇ ನೀರನ್ನೇ ಕಾಣುತ್ತೇವೆ. ನಮ್ಮ ಕಣ್ಣಿಗೆ ಎಟುಕದಷ್ಟೂ ದೂರದಲ್ಲೂ ಇರುವುದು ನೀರು. ಅಷ್ಟು ನೀರು ಬರೀ ಉಪ್ಪು. ನೀರು ಕಾಣುತ್ತದೆ. ಉಪ್ಪು ಕಾಣುವುದೇ ಇಲ್ಲ. ಆದರೂ ಉಪ್ಪ ಇರುವುದರ ಅನುಭವ ಅಗುತ್ತದೆ. ಮತ್ತದನ್ನು ನಾವು ನಂಬುತ್ತೇವೆ. ಕಣ್ಣಿಗೆ ಕಾಣುವ ಈ ಪ್ರಕೃತಿಯನ್ನು ಕಣ್ಣಿಗೆ ಕಾಣಿಸದವನು ಮುಂದೆ ಇಟ್ಟಿದ್ದಾನೆ. ಅಷ್ಟಾಗಿಯೂ ಕಣ್ಣಿಗೆ ಕಾಣಿಸುವುದನ್ನು ಮಾತ್ರ ನಾವು ನಂಬುತ್ತೇವೆ.  ಮತ್ತೆ ಹುಡುಕುತ್ತೇವೆ. ನಿಜಕ್ಕಾದರೆ  ಕಣ್ಣಿಗೆ ಕಾಣದ ಶಕ್ತಿಯಿಂದ ಕಣ್ಣಿಗೆ ಕಾಣುವ ಈ ಪ್ರಪಂಚ ಸೃಷ್ಟಿಯಾಗಿದೆ.
ಕಾಂತಾರದಲ್ಲಿ ಪೋಲೀಸಪ್ಪನೊಬ್ಬನಿದ್ದಾನೆ..ಮೊದಲಿಗೆ ಆತ ಖಳನಂತೆ ಮೇಲೆರಗುತ್ತಾನೆ. ನಂತರ ಭೂತದ ಮಹಿಮೆ ಇಲ್ಲಾ ಭಯದಿಂದ ಸಾತ್ವಿಕನಾಗುತ್ತಾನೆ ಇರಬೇಕು. ಇಲ್ಲೂ ಆತನಿಗೆ ಆಗುವುದು ಅನಭವ. ಆ ಅನುಭವವನ್ನು ದೈವ ಹುಟ್ಟಿಸುತ್ತದೆ. ಭಯ ಭಕ್ತಿಯನ್ನು ಹುಟ್ಟಿಸುತ್ತದೆ, ಭಕ್ತಿ ಸಾತ್ವಿಕತೆಯ ಜ್ಞಾನವನ್ನು ಅರಿವನ್ನೂ ಹುಟ್ಟಿಸುತ್ತದೆ. ಆದರೂ ಭಕ್ತಿ ಎಂದರೇನು ಎಂದು ಯೋಚಿಸುವಂತಾಗುತ್ತದೆ. ಭಕ್ತಿಯ ಬಗ್ಗೆ ಯೋಚಿಸುವಾಗ ಅದು ಮತ್ತಷ್ಟು ವಿಶಾಲವಾಗುತ್ತದೆ.
ಭಯದಿಂದ ಭಕ್ತಿ ಹುಟ್ಟಬಹುದು. ಭಯ ಭಕ್ತಿಯಾಗುವುದು  ಒಂದು ಪರಿವರ್ತನೆ ಯಾಗಬಹುದು, ಆದರೆ ಭಯ ಶಾಶ್ವತವಾದರೆ ಭಕ್ತಿ ಪ್ರಾಮಾಣಿಕವಾಗುವುದಿಲ್ಲ.  ಭಯ ದೂರವಾದಾಗ ಭಕ್ತಿಯೂ ದೂರವಾಗುತ್ತದೆ. ಭಕ್ತಿ ದೂರವಾದರೆ ಮತ್ತೆ ಪರಿವರ್ತನೆಗೆ ಮೌಲ್ಯ ಸಿಗುವುದಿಲ್ಲ. ಪಾಪಭಯ ಇರಬೇಕು ಸತ್ಯ.  ಆದರೆ ಭಕ್ತಿ ಭಯಮುಕ್ತವಾಗಬೇಕು.‌

         ಬೆಟ್ಟ ಗುಡ್ಡಗಳನ್ನು ಹತ್ತುವಾಗ ಉಕ್ಕುವ ಪರಮಾತ್ಮನ‌ ಭಕ್ತಿ ‌ ಬೆಟ್ಟ ಇಳಿದಾಗ ಭಕ್ತಿಯೂ ದೂರವಾಗುವುದನ್ನು ಕಾಣಬಹುದು. ಗುಡಿಯ ಮುಂದೆ ಪ್ರತಿಮೆಯ ಮುಂದೆ ನಿಲ್ಲುವಾಗ ಮಾತ್ರ ಮೂಡಿದ ಭಕ್ಕಿ ಹೊರ ಬಂದಾಗ ತೀರ ವ್ಯಾವಹಾರಿಕವಾಗುತ್ತದೆ. ಹಲವುಸಲ ನಾಗನ‌ ಕಲ್ಲು ನೋಡಿದಾಗ ಹುಟ್ಡುವ ಭಕ್ತಿ ನಿಜವಾದ ನಾಗನನ್ನು ನೋಡಿದಾಗ ಭಯ ಮಾತ್ರವೇ ಉಳಿಯುತ್ತದೆ.  ದೇವರ ಎದುರು ನಿಂತಾಗ ಮಾತ್ರಾ ಪರಮ‌ ಧಾರ್ಮಿಕನಾಗಿ ಧರ್ಮ‌ ಜಾಗೃತವಾಗುತ್ತದೆ. ಹೊರಬಂದಾಗ ಮತ್ತದೇ ವ್ಯವಹಾರ ಸುಳ್ಳನ್ನು ಹೇಳಿಸಿ ವಂಚನೆಯನ್ಯ ಪ್ರಚೋದಿಸುತ್ತದೆ. ಜೀವನ ಎಂದರೆ ವ್ಯಾಪಾರ ಎಂದು ಹೇಳುತ್ತಾರೆ. ವ್ಯಾಪಾರ ಎಂದರೆ ಅಲ್ಲಿ ಸುಳ್ಳು ವಂಚನೆ ಇದ್ದೇ ಇರುತ್ತದೆ. ಲಾಭವಿದ್ದರೆ ಮಾತ್ರ ವ್ಯಾಪಾರ.  ಲೌಕಿಕತೆ ಭಕ್ತಿ ಯನ್ನು ದೂರವಿಡುತ್ತದೆ.  ಭಕ್ತಿ ಪರಿಶುಧ್ಧಿಯನ್ಮು ತಂದು ಪಾವಿತ್ರತೆಯತ್ತ ಒಯ್ಯಬೇಕು. ಮತ್ತೂ ಪಾಪಗಳಿಗೆ ದುರಿತಗಳಿಗೆ ವಶವಾದರೆ ಭಯದಿಂದ ಹುಟ್ಟಿದ ಭಕ್ತಿಯ ಅಗತ್ಯವನ್ನು ಪ್ರಶ್ನಿಸುತ್ತದೆ.

           ದೇವರು ಎಂದರೆ ನಾವು ಭಯವನ್ನು ಹುಟ್ಟಿಸುತ್ತೇವೆ. ದೇವರು ಶಪಿಸಬಹುದು ಎಂಬ ಭಯದಲ್ಲಿ ಹುಟ್ಟಿದ ಭಕ್ತಿ ಕೇವಲ ಭಯವನ್ನು ಮಾತ್ರಾ ಹೆಚ್ಚಿಸಿದರೆ  ಭಕ್ತಿ ಪರಿಪೂರ್ಣವಾಗುವುದಿಲ್ಲ. ಶಪಿಸುವ ದೇವರು ಎಂದೂ ದೇವರಲ್ಲ. ಗೌರವ ಮತ್ತು ಪ್ರೀತಿ ಎರಡೂ ನೋಡುವುದಕ್ಕೆ ಒಂದೇ ಇರಬಹುದು ಅದರೆ ಎರಡಕ್ಕೂ ವೆತ್ಯಾಸವಿದೆ. ಅಮ್ಮನ ಮೇಲೆ ನಮಗೆ ಗೌರವಕ್ಕಿಂತ ಹೆಚ್ಚು ಪ್ರೀತಿ ಇದೆ. ಆ ಪ್ರೀತಿ ಸಲುಗೆಯಾಗಿ ಭಕ್ತಿ ಎಂಬುದು ಇಲ್ಲಿ ಭಯದಿಂದ ಮುಕ್ತವಾಗಿರುತ್ತದೆ. ಭಕ್ಕಿಯ ಭಾವದಲ್ಲಿ ನಮ್ಮೊಳಗಿನ ದೈವದ ಅರಿವಾಗಬೇಕು. ಒಳಗಿನ ದೇವರನ್ನು ಅರಿತಾಗ ಮನುಷ್ಯನೂ ದೇವರಾಗುತ್ತಾನೆ. ಇದೇ ಕಾಂತಾರದ ನವಿರಾದ ತತ್ವ.
ದೇವರು ಸರ್ವಂತರ್ಯಾಮಿ  ಜ್ಞಾನದಲ್ಲೂ ಅಜ್ಞಾನದಲ್ಲೂ ಇರುತ್ತಾನೆ‌ ದೈವದ ಬಗ್ಗೆ ಯೋಚಿಸುವುದೇ ತಪಸ್ಸು.. ದೈವದ ಅರಿವೆ ಗಮ್ಯ.
      ಭಕ್ತಿ ಸ್ತಾಯಿಯಾಗಿ ಉಳಿಯಬೇಕಾದರೆ ಭಯ ದೂರವಾಗಬೇಕು. ಭಕ್ತಿ ಹೆಚ್ಚು ಹೃದಯಸ್ಪರ್ಶಿಯಾಗಬೇಕು. ಭಯವಿಲ್ಲದ ಪರಮಾತ್ಮ ಸ್ನೇಹಿತನಂತೆ ಬಳಿಯಲ್ಲೇ ಇರುತ್ತಾನೆ.

Tuesday, October 18, 2022

ಯಾವುದು ಸತ್ಯ?


    ಸತ್ಯ ಎನ್ನುವಾಗ  ಸತ್ಯ ಹರಿಶ್ಚಂದ್ರ ಮಾತ್ರಾ ಯಾಕೆ ನೆನಪಾಗುತ್ತಾನೆ? ಸತ್ಯದ ಮಾತೆತ್ತುವಾಗ ಸತ್ಯಹರಿಶ್ಚಂದ್ರನ ಹೆಸರೇ ಯಾಕೆ ಅನ್ವರ್ಥವಾಗುತ್ತದೆ. ಯಕ್ಷಗಾನ ಅರ್ಥಗಾರಿಕೆಯಲ್ಲಿ ಹೀಗೊಂದು ಜಿಜ್ಞಾಸೆ ವಿದ್ವಾಂಸರು ಮಾಡಿದ್ದನ್ನು ಕೇಳಿದ್ದೇನೆ. ಬಹಳ ಸ್ವಾರಸ್ಯವಾಗುತ್ತದೆ. ಲೋಕದಲ್ಲಿ ಅತ್ಯಂತ ಸತ್ಯವಂತ ಯಾರು ಎಂದು ದೇವೇಂದ್ರ     ನಾಕಲೋಕದಲ್ಲಿ ಪ್ರಶ್ನಿಸುತ್ತಾನೆ. ಎದ್ದು ನಿಂತ ವಸಿಷ್ಠ ಮುನಿಗಳು ಹೇಳುತ್ತಾರೆ ಅತ್ಯಂತ ಸತ್ಯವಂತ ಅದು ಮಹಾರಾಜ ಹರಿಶ್ಚಂದ್ರ.  ಇಲ್ಲಿ ಅಂತರಂಗದಲ್ಲಿ ಮತ್ತೊಂದು ಪ್ರಶ್ನೆ ಉದ್ಭವವಾಗುತ್ತದೆ. ಅತ್ಯಂತ ಸತ್ಯವಂತರ ಪಟ್ಟಿಯಲ್ಲಿ ವಸಿಷ್ಠರು ತಮ್ಮ ಹೆಸರು ಯಾಕೆ ಹೇಳುವುದಿಲ್ಲ? ವಸಿಷ್ಠರು ಸುಳ್ಳು ಹೇಳಿರಬಹುದೇ? ವಸಿಷ್ಠರ ಉತ್ತರಕ್ಕೆ ವಿಶ್ವಾಮಿತ್ರ ಕನಲಿ ಕೆಂಡವಾಗುತ್ತಾರೆ. ವಸಿಷ್ಠರು ಹಾಲು ಎಂದರೆ ನೀರು ಎನ್ನುವ ವಿಶ್ವಾಮಿತ್ರರು  ಹರಿಶ್ಚಂದ್ರನನ್ನು ಸುಳ್ಳುಗಾರನನ್ನಾಗಿ ಮಾಡುವ ಪ್ರತಿಜ್ಞೆ ತೊಡುತ್ತಾರೆ.  ವಸಿಷ್ಠರು ಒಂದು ವೇಳೆ ವಿಶ್ವಾಮಿತ್ರರ ಹೆಸರನ್ನು ಹೇಳಿದ್ದರೆ?  ಅದನ್ನು ಸತ್ಯ ಎಂದು ಒಪ್ಪಿಕೊಳ್ಳುತ್ತಿದ್ದರೋ ಎನೋ? ಆದರೆ ಹರಿಶ್ಚಂದ್ರನನ್ನು ಸುಳ್ಳುಗಾರನನ್ನಾಗಿ ಮಾಡುವುದರಲ್ಲಿ ಅವರ ಉದ್ದೇಶ ಒಂದೇ ವಸಿಷ್ಠರನ್ನು ಸುಳ್ಳುಗಾರನನ್ನಾಗಿ ಮಾಡುವುದು. ಇಲ್ಲವಾದರೆ ಹರಿಶ್ಚಂದ್ರ ಸತ್ಯವಂತನಾಗಿರುವುದರಲ್ಲಿ ಅವರಿಗೆ ಯಾವ ತೊಂದರೆಯೂ ಇಲ್ಲ. ಹೇಳಿ ಕೇಳಿ ಹರಿಶ್ಚಂದ್ರ ಯಾರು? ಇವರ ಸಂಕಲ್ಪ ದೇವೆಂದ್ರನಾದ ತ್ರಿಶಂಕು , ಸತ್ಯವೃತನ ಮಗ.  ವಸಿಷ್ಠರು ಸತ್ಯವೇ ಹೇಳಿರಬಹುದು. ಆದರೆ ಸತ್ಯ ಯಾವಾಗಲೂ ಪರೀಕ್ಷಿಸಲ್ಪಡಬೇಕು. ಸತ್ಯವನ್ನೇ ಪರೀಕ್ಷಿಸ ಬೇಕು. ಸುಳ್ಳನ್ನು ಪರೀಕ್ಷೆ ಮಾಡಿದರೆ ಏನು ಪ್ರಯೋಜನ? ಚಿನ್ನವನ್ನಷ್ಟೇ ಉಜ್ಜಿ ಉಜ್ಜಿ ಪರೀಕ್ಷೆ ಮಾಡುತ್ತಾರೆ. ಕಬ್ಬಿಣವನ್ನಲ್ಲ. ಯಾಕೆಂದರೆ ಚಿನ್ನವನ್ನು ಉಜ್ಜಿದರೆ, ಉಜ್ಜುವುದರಲ್ಲೆ ಸ್ವಲ್ಪ ಲಾಭವಿದೆ? ವಿಶ್ವಾಮಿತ್ರರ ದೂರದೃಷ್ಟಿ ಅದು. ಮುಂದೊಮ್ಮೆ ಹರಿಶ್ಚಂದ್ರನಿಗೆ ಒಂದು ಅಂಗೀಕಾರವಿರುತ್ತದೆ. ವಿಶ್ವಾಮಿತ್ರನಿಂದ ಪರೀಕ್ಷಿಸಲ್ಪಟ್ಟ ಸತ್ಯ.... ವಸಿಷ್ಠರು ಮೊದಲೇ ಅಂಗೀಕಾರ ನೀಡಿದ್ದರೂ ಅದಕ್ಕೆ ಮೌಲ್ಯವಿರುವುದೇ ಇಲ್ಲ! 

    ಹರಿಶ್ಚಂದ್ರ ಮಾತ್ರ ಯಾಕೆ ಸತ್ಯವಂತನಾಗುತ್ತಾನೆ. ಧರ್ಮ ರಾಯ ಯಾಕಲ್ಲ? ವಿಶ್ವಾಮಿತ್ರನ ಜಿಜ್ಞಾಸೆಗೆ ಆಗ ಧರ್ಮರಾಯ ಹುಟ್ಟದೇ ಇದ್ದಿರಬಹುದು. ಆದರೂ ಮಹಾ ಸತ್ಯವಂತ ಧರ್ಮರಾಯನ ಸತ್ಯ ಎಂದಿಗೂ ಪರೀಕ್ಷಿಸಲ್ಪಡುವುದಿಲ್ಲ. ಯಾವ ಮಹಾನುಭಾವನಿಗೂ ಅನುಮಾನ ಉಳಿಯುವುದಿಲ್ಲ. ಯಾಕೆಂದರೆ ಧರ್ಮರಾಯ ಹೇಳಿದ್ದನ್ನು ಸತ್ಯವನ್ನಾಗಿಸುವುದರಲ್ಲಿ ಶ್ರೀಕೃಷ್ಣನೊಬ್ಬನಿದ್ದ. ಇಲ್ಲವಾದರೆ ದ್ರೋಣ ಯಾಕೆ ಮೋಸ ಹೋಗುತ್ತಾನೆ. ತಾನೆ ಕಲಿಸಿದ ಶಿಷ್ಯ ವಂಚಿಸಿರಬಹುದೇ?  ಅಶ್ವತ್ಥಾಮ ಸತ್ತ......ಧರ್ಮರಾಯ ಹೀಗೆ ಹೇಳುವುದರಲ್ಲಿ ಯಕ್ಷಗಾನದಲ್ಲಿ ಮತ್ತೊಂದು ವಿಶ್ಲೇಷಣೆ ಇರಬಹುದು. ಕುರುಕ್ಷೇತ್ರದ ಯುದ್ಧದಲ್ಲಿ ಗುರು ದ್ರೋಣರ ಎದುರಾಳಿ ಪಟ್ಟ ಶಿಷ್ಯ ಅರ್ಜುನ. ದ್ರೋಣರಿಂದ  ಮಗನಿಂದಲೂ ಹೆಚ್ಚು ಮಮಕಾರ  ಅರ್ಜುನನಿಗೆ ಸಿಗುತ್ತದೆ. ಅದೇ ಅರ್ಜುನನ ಎದುರು ವೀರಾವೇಶದಿಂದ ಹೋರಾಡುವ ದ್ರೋಣರಿದ್ದರೆ ಮಗನಂತಹ ಅರ್ಜುನ ಸತ್ತಹಾಗೇ ಅಲ್ಲವೇ?  ಈ ಅರ್ಥದಲ್ಲು ಅಶ್ವತ್ಥಾಮ ಸತ್ತ ಎಂದು ಹೇಳುವುದು ಸಮರ್ಥನೀಯ. ಶ್ರೀ ಕೃಷ್ಣ ಒಂದರಿಂದ ಎಂಟರವರೆಗಿನ ಎಲ್ಲ ಸಂಖ್ಯೆಗಳನ್ನೂ ಎಂಟಾಗಿಸಬಲ್ಲ ತರ್ಕಬುದ್ದಿಯವನು. ಹಾಗಾಗಿ ಧರ್ಮರಾಯನ ಸತ್ಯ ಹೀಗೂ ಸಮರ್ಥಿಸಬಹುದು. ಆದರು ಸತ್ಯ ಯಾಕೆ ಪರೀಕ್ಷಿಸ ಬೇಕು ಎಂಬುದಕ್ಕೆ ದ್ರೋಣರು ಹೆಚ್ಚು ನಿದರ್ಶನವನ್ನೊದಗಿಸುತ್ತಾರೆ. ದ್ರೋಣರು ಎಸಗಿದ ದೊಡ್ಡ ಪ್ರಮಾದ ಎಂದರೆ, ಸತ್ಯ ಯಾವುದು ಎಂದು ಅವರು ಕಂಡುಕೊಳ್ಳದಿರುವುದು. ಸತ್ಯವನ್ನು ಅರಿಯದೇ ಇರುವುದು. ಇದು ಎಲ್ಲರೂ ಮಾಡುವ ತಪ್ಪು.! 

    ಸತ್ಯವನ್ನು ಎಲ್ಲರೂ ನಂಬಬೇಕು. ಆದರೆ ಎಡವುದು ಸತ್ಯವನ್ನು ಗುರುತಿಸುವುದರಲ್ಲಿ. ಯಾವುದು ಸತ್ಯ?  ಯಾಕೆಂದರೆ ಸುಳ್ಳು ಕೆಲವೊಮ್ಮೆ ಸತ್ಯವಾಗಬೇಕು. ಶ್ರೀಕೃಷ್ಣ ಮಾಡಿ ತೋರಿಸಿದ್ದೇ ಅದು. ಮಹಾ ವಿಷ್ಣುವಿನ ರಾಮ ಮತ್ತು ಕೃಷ್ಣರ ಅವತಾರ ಎರಡನ್ನೂ ಮುಂದೆ ಇಡುವಾಗ ಮನುಷ್ಯ ಅದನ್ನು ವಿವೇಚಿಸಬೇಕು. ಶ್ರೀರಾಮ ತಂದೆಯ ಮಾತನ್ನು ಸತ್ಯವಾಗಿಸುವುದಕ್ಕೆ ಹೊರಟ. ಅದು ಸತ್ಯವೋ ಸುಳ್ಳೋ ಎಂದು ವಿವೇಚನೆಯಾಗಿ ವಿಮರ್ಷೆಯಾಗಲಿ ಮಾಡುತ್ತ ಕಾಲ ಹರಣ ಮಾಡಲಿಲ್ಲ. ಯಾಕೆ ಕಾಲ ಕಳೆದಂತೆ ಸತ್ಯ ಸುಳ್ಳಾಗಬಹುದು, ಸುಳ್ಳು ಸತ್ಯವಾಗಬಹುದು. ಒಂದಂತು ಸತ್ಯ. ಸತ್ಯ ಹೇಳುವುದಕ್ಕಿಂತಲೂ ಸತ್ಯವನ್ನು ಅರಿಯಬೇಕು. ಅದೇ ಸತ್ಯಾನ್ವೇಷಣೆ. ಯಾವುದು ಸತ್ಯ? ಒಂದು ಕಥೆ ಇದೆ. ಕಾಡಿನಲ್ಲಿ ದರೋಡೆಕೋರರಿಂದ ತಪ್ಪಿಸಿಕೊಂಡ ಒಬ್ಬ ಆರ್ತ, ಓಡುತ್ತಾ ಬಂದು ತಪಸ್ಸಿನಲ್ಲಿದ್ದ ಋಷಿಯ ಆಶ್ರಮದಲ್ಲಿ ಅಡಗಿಕೊಳ್ಳುತ್ತಾನೆ. ಬೆನ್ನಟ್ಟಿ ಬಂದ ದರೋಡೆ ಕೋರರು ಋಷಿಯಲ್ಲಿ ವಿಚಾರಿಸುತ್ತಾರೆ. ಋಷಿ ಸತ್ಯವಂತ. ಸತ್ಯವನ್ನೇ ಹೇಳಿಬಿಡುತ್ತಾನೆ. ದರೋಡೆಕೋರರು ಮತ್ತೆ ಏನು ಮಾಡಿದರು ಎಂದು ಬಿಡಿಸಿ ಹೇಳಬೇಕಿಲ್ಲ. ಒಂದು ಸತ್ಯ ಪ್ರಾಣಕ್ಕೆ ಕುತ್ತು ತರುತ್ತದೆ ಎಂದಾದರೆ ಅದು ಸತ್ಯ ಹೇಗಾಗುತ್ತದೆ?  ಶ್ರೀಕೃಷ್ಣ ಮುಂದಿಡುವ ಪ್ರಶ್ನೆ ಇದು. ಸತ್ಯವೆಂಬುದು ಸತ್ ಅಂದರೆ ಒಳ್ಳೆಯದನ್ನು ಮಾಡುವಂತಿರಬೇಕು. ಉದ್ದೇಶ ಸದುದ್ದೇಶವಾಗಿರಬೇಕು. ಸತ್ ಸಂಕಲ್ಪವಾಗಿರಬೇಕು. ಆವಾಗ ಸತ್ಯ ಸತ್ಯವಾಗುತ್ತದೆ. ಸತ್ಯ ಹೇಳುವುದರಿಂದ ನಮಗೆ ಒಳ್ಳೆಯದಾಗದೇ ಇದ್ದರೂ ಮತ್ತೊಬ್ಬರಿಗೆ ಕೆಟ್ಟದಾಗಬಾರದು ಇದು ಜ್ಞಾನಿಗಳು ಹೇಳುವ ಮಾತು. ಆದರೂ ಸತ್ಯ ಅದೆಂದಿಗೂ ಸತ್ಯವಾಗಿಯೇ ಇರುತ್ತದೆ. ಅದು ಬದಲಾಗುವುದಿಲ್ಲ. ಬದಲಾಗುವುದು ನಮ್ಮ ನಂಬಿಕೆ ಮಾತ್ರ. 

Monday, October 3, 2022

"ಅರ್ಘ್ಯ"

 "ಅರ್ಘ್ಯ"  ಎಂದರೇನು? ಇದರ ಶಬ್ದಾರ್ಥ ತಿಳಿದರೆ ಆಶ್ಚರ್ಯವಾಗುತ್ತದೆ. 

"ಅರ್ಘ್ಯ" ಒಂದು ಪವಿತ್ರವಾದ ಶಬ್ದ.  ಇದನ್ನು ಸ್ಮರಿಸುವಾಗ ಒಂದು ದಿವ್ಯತೆಯ ಮತ್ತು ಪ್ರಕೃತಿಯ ಸಂಬಂಧದ ಬಗ್ಗೆ ಅನುಭವವಾಗುತ್ತದೆ. ಸಾಮಾನ್ಯವಾಗಿ ಅರ್ಘ್ಯ ಎಂದರೆ, ಬೊಗಸೆಯನ್ನು ಸೇರಿಸಿ ಅದರ ತುಂಬ ನೀರನ್ನು ಮೊಗೆದು ಸೂರ್ಯನಿಗೆ ಅಭಿಮುಖವಾಗಿ ಅರ್ಪಿಸುವುದು. ಇದು ಅರ್ಘ್ಯದ ಕ್ರಿಯೆಯನ್ನಷ್ಟೇ ಹೇಳುತ್ತದೆ. 

ಅರ್ಘ್ಯ  ಎಂದರೆ ಮೌಲ್ಯಯುತವಾದದ್ದು, ಆದರು ಅದೂ  ಅಮೂಲ್ಯವಾದದ್ದು ಎಂದು ಅರ್ಥವಿಸಬೇಕು. ಪರಿಮಿತಿಯೊಳಗೆ  ಮೌಲ್ಯ ಕಟ್ಟಲಾಗದೇ ಇದ್ದದ್ದು, ಹೀಗೆ ಮೌಲ್ಯವನ್ನು ಕಲ್ಪಿಸಲು ಆಸಾಧ್ಯವಾಗಿರುವದ್ದು ಕೇವಲ  ನಮ್ಮ ಬೊಗಸೆಯೊಳಗಿದೆ.  ದಾನ ಮಾಡುವಾಗ ನಮ್ಮ ಬೊಗಸೆ ತುಂಬಿಸಿ ಕೊಡುತ್ತೇವೆ.  ಅದು ಅಮೂಲ್ಯವಾಗಿದೆ ಎಂದೇ ತಿಳಿಯಬೇಕು.  ನಮ್ಮ ಬೊಗಸೆ ಅಮೂಲ್ಯವಾದದದ್ದು.  ಪರೋಕ್ಷವಾಗಿ ಇದನ್ನು ಮೀರಿ ನಾವು ಆಡಂಬರವಾಗಿ ವಿಜ್ರಂಭಣೆಯಿಂದ ಏನು ಆಚರಿಸುತ್ತೇವೆಯೋ ಅದು ಈ ಮೌಲ್ಯವನ್ನು ಸರಿದೂಗಿಸುವುದಿಲ್ಲ. ಭಗಂತನ ಹೆಸರಲ್ಲಿ ವಿನಿಯೋಗಿಸುವ ಯಾವುದೇ ಕ್ರಿಯೆಯಾಗಲಿ ಅದು ಭಕ್ತಿ ಶ್ರಧ್ಧೆಯನ್ನು ಪ್ರತಿನಿಧಿಸುತ್ತದೆ, ಹೊರತು ಯಾವುದೂ ಆಡಂಬರವನ್ನು ಬಿಂಬಿಸುವುದಿಲ್ಲ. ಒಂದು ವೇಳೆ ಅಲ್ಲಿ ಆಡಂಬರ ತಂದರೆ ಅದು ಅರ್ಥಹೀನವಾಗುತ್ತದೆ. ಒಂದು ಬೊಗಸೆ ನೀರು ಪ್ರದಾನ ಮಾಡುವಾಗ , ನನ್ನಲ್ಲಿರುವುದೆಲ್ಲಾ ನಿನ್ನದೇ ಎಂದು ಪ್ರತಿನಿಧೀಕರಿಸುವಂತೆ ಅರ್ಘ್ಯ ದಾನ ಅತ್ಯಂತ ಶ್ರೇಷ್ಠವಾಗುತ್ತದೆ. 

ಧನಿಕನಾಗಲೀ ಬಡವನಾಗಲೀ  ಭಗವಂತನಿಗೆ ಪ್ರಣಾಮವನ್ನು ಕೇವಲ ನಮಸ್ಕರಿಸಿಯೇ ಸಲ್ಲಿಸುತ್ತಾನೆ. ನಮಸ್ಕಾರ,   ಬಡವನ ಕೈ ಒಟ್ಟು ಸೇರಿದರೂ ಅದು ನಮಸ್ಕಾರ, ಧನಿಕನ ಕೈ ಒಟ್ಟು ಸೇರಿದರೆ ಅದು ನಮಸ್ಕಾರ ಇಲ್ಲಿ ಆಡಂಬರದ ಅವಶ್ಯಕತೆಯೇ ಇರುವುದಿಲ್ಲ. 

ಬ್ರಹ್ಮ ಸಂಸ್ಕಾರದಲ್ಲಿ ಸಂಧ್ಯಾವಂದನೆ, ಇನ್ನುಳಿದ ಸಂಸ್ಕಾರದಲ್ಲಿ ನಿತ್ಯ ಕರ್ಮಗಳು,  ಇವುಗಳು ಸರಳವಾಗಿ ಆಚರಣೆಯಲ್ಲಿದ್ದರೆ ಅದು ಉದಾತ್ತವಾಗಿ ಪರಮಾತ್ಮನಲ್ಲಿ ಐಕ್ಯವಾಗುವುದಕ್ಕೆ ಅನುಕೂಲವಾಗುತ್ತದೆ.  ಸಂಧ್ಯಾವಂದನೆ, ಯಾವ ಪರಿಕರವೂ ಇಲ್ಲದೇ ಇದನ್ನು ಶುದ್ದ ಮನಸ್ಸಿನಿಂದ ಆಚರಿಸಬಹುದು. ಇದಕ್ಕೆ ಯಾವುದೇ ದ್ರವ್ಯಗಳ ಆವಶ್ಯಕತೆ ಇರುವುದಿಲ್ಲ. ಯಾವುದೇ ಆಡಂಬರ ಇರುವುದಿಲ್ಲ. ಹಾಗಿದ್ದರೂ ಯಾವುದೇ ಶ್ರೇಷ್ಟ ದೈವ ಉಪಾಸನೆಗಿಂತಲೂ ಸಂಧ್ಯಾವಂದನೆ  ಅತ್ಯಂತ ಶ್ರೇಶ್

 ಅನ್ನ ಆಹಾರ, ವೃತ್ತಿ ಹೀಗೆ ಪ್ರತಿಯೊಂದಕ್ಕೂ ಅನಿವಾರ್ಯ ಎಂಬಂತೆ ನಾವು ಸಮಯವನ್ನು ನಿಗದಿಮಾಡುವ ಮೊದಲು ನಿತ್ಯಕರ್ಮಗಳಿಗೆ ಒಂದಷ್ಟು ಸಮಯವನ್ನು ನಿಗದಿಗೊಳಿಸಬೇಕು. ದಿನದ ಆರಂಭವೇ ನಿತ್ಯಕರ್ಮದಿಂದ ಕೂಡಿ ಶುದ್ದ ಮನಸ್ಸಿನಿಂದ ಅಹಂಕಾರ ವಿಕಾರಗಳನ್ನು ದೂರವಿರಿಸಿದಾಗ ನಮ್ಮೊಳಗಿನ ಪರಮಾತ್ಮ ದರ್ಶನವಾಗುತ್ತದೆ. ಯಾವ ಗುಡಿ ಕ್ಷೇತ್ರಗಳ ಅನಿವಾರ್ಯತೆ ಇಲ್ಲ. ಯಾವ ಧನ ಸಂಪತ್ತು ಆಡಂಬರದ ಅಗತ್ಯವಿರುವುದಿಲ್ಲ. ಕೇವಲ ಭಕ್ತಿ ಮತ್ತು ಶ್ರದ್ಧೆ ಮಾತ್ರ ಇಲ್ಲಿ ಅನಿವಾರ್ಯವಾಗುತ್ತದೆ. ಇದು ಅನಿವಾರ್ಯವಾದಷ್ಟು ಪರಮಾತ್ಮ ಸಾಕ್ಷಾತ್ಕಾರವಾಗುತ್ತದೆ. 


ದ್ವೇಷ, ವೈಷಮ್ಯ ಮತ್ಸರ ಸುಖ ದುಃಖ ದುಮ್ಮಾನ ಅಳು ನಗು  ಈ ಎಲ್ಲಾ ವಿಕಾರಗಳಿಂದ ದೂರಾಗಿ ಪರಿಶುದ್ಧ ಮನಸ್ಸಿನಿಂದ ಪರಮಾತ್ಮನ ಚಿಂತನೆಯಲ್ಲಿದ್ದಾಗ ಧ್ಯಾನ  ಪರಿಪೂರ್ಣವಾಗುತ್ತದೆ. ಧ್ಯಾನವೆಂದರೆ ಅಲ್ಲಿ ನಾವೇ ಪರಮಾತ್ಮವಾಗಿ ಅದ್ವೈತ  ಭಾವದಲ್ಲಿ ತಲ್ಲೀನವಾಗುವ  ಕ್ರಿಯೆ. ಯಾವುದೆ ಯಾಗ ಯಜ್ಞ ಪೂಜೆ ಪುನಸ್ಕಾರಗಳಿಗಿಂತಲೂ ಧ್ಯಾನದಲ್ಲಿ ಪರಮಾತ್ಮ ಸಾನ್ನಿಧ್ಯ ತೀರ ಹತ್ತಿರವಾಗಿರುತ್ತದೆ. ಮತ್ತು ಇದು ಎಲ್ಲಾಅಡಂಬರದಿಂದ ದೂರವಾಗಿ  ಬಹಳ ಸರಳವಾಗಿ ದೇಹ ಮನಸ್ಸು ಮಾತ್ರ ಪ್ರಧಾನವಾಗಿರುವ ದಿವ್ಯ ಕ್ರಿಯಾಯಾಗಿರುತ್ತದೆ. ಧ್ಯಾನ ಚಿತ್ತಹೊಂದಿದ ನಂತರ ಅಲ್ಲಿ ನಂತರ ಯಾವ ಅನಿವಾರ್ಯ ಬಂಧನಗಳೂ ಉಳಿಯುವುದಿಲ್ಲ. 


Saturday, September 17, 2022

ಸೆಂಟ್ರಲ್ ಮಾರ್ಕೆಟ್ ನಮ್ಮ ಕುಡ್ಲದ ಮಾರ್ಕೆಟ್

             ಬಾಲ್ಯದಲ್ಲಿ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯ ಬಳಿ ಬಸ್ಸು ಇಳಿದು ಹಾಗೇ ಅಡ್ಡ ರಸ್ತೆಯಲ್ಲಿ ನಡೆದು ಬಂದರೆ ಗಾಬರಿಯಾಗುತ್ತಿದ್ದೆ. ವರ್ಷಕ್ಕೊಮ್ಮೆ ನಮ್ಮೂರಿನ ನೇಮ ಜಾತ್ರೆಗೆ ಸಂತೆ ಇಡುವಂತೆ ಇಲ್ಲಿ ದಿನಾ ಸಂತೆ ಇರುತ್ತದೆ. ಬಗೆ ಬಗೆಯ ಅಂಗಡಿಗಳು. ಸುಮ್ಮನೇ ನೋಡುತ್ತಾ ಹೋದರೆ ಸಾಕು, ಮಂಗಳೂರಿಗೆ ಅತಿಥಿಯಾಗಿ ಬಂದಿದ್ದೇನೋ ಎಂದು ಅನುಮಾನಿಸುವ ಹಾಗೆ ಏನು ಬೇಕು? ಏನು ಬೇಕು? ಎಂದು ಕೇಳುವ ಅಂಗಡಿಯವರು. ಇನ್ನು ಅಲ್ಲಿ ನಡೆದಾಡಲು ಜಾಗವಿಲ್ಲ, ಹಲವು ಸಲ ಎರಡು ಕೈಯಲ್ಲಿ ಚೀಲ ಹಿಡಿದುಕೊಂಡು ಹೊದರೆ ಆ ಕಡೆ ಈ ಕಡೆ ಓಡಾಡುವ ಮಂದಿಗಳ ಕಾಲಿಗೆ ಚೀಲ ತಾಗಿ ಸುತ್ತು ತಿರುಗುತ್ತಿತ್ತು. ಕೊನೆಯಲ್ಲಿ ಬಸ್ ಹತ್ತಿರ ಬಂದು ಸ್ವಲ್ಪ ಹೊತ್ತು ಚೀಲ ಎತ್ತಿ ಹಿಡಿದು ತಿರುಗಿಸಿದ  ನಂತರ ಅದು ಪುನಃ  ಸರಿಯಾಗುತ್ತಿತ್ತು.  ಈ ರೀತಿಯಲ್ಲಿ ಜನಗಳು ನಮ್ಮೂರಿನ ಜಾತ್ರೆಯಲ್ಲೂ ಸೇರುತ್ತಿರಲಿಲ್ಲ. ಜನಗಳ  ನಡುವೆ ನುಸುಳಿಬರುವ ಅಟೋರಿಕ್ಷಾ ಕಾರುಗಳು. ಮುಂದೆ ಬಂದರೆ ಮಂಗಳೂರಿನ ಪ್ರಖ್ಯಾತ ಸೆಂಟ್ರಲ್ ಮಾರುಕಟ್ಟೆ  ಮತ್ತು ಭವಂತಿ ಸ್ಟ್ರೀಟ್. ಭವಂತಿ ಸ್ಟ್ರೀಟ್ ಹೇಳಿದರೆ ಎಷ್ಟು ಜನರಿಗೆ ತಿಳಿದಿದೆಯೋ ಗೊತ್ತಿಲ್ಲ. ಎಲ್ಲೋ ಕೆಲವು ಅಂಗಡಿಯ ಬೋರ್ಡ್ ಗಳಲ್ಲಿ ಇನ್ನೂ ಬರೆದುಕೊಂಡು ಉಂಟು.  ಮಾರ್ಕೆಟ್ ಎಂದರೆ ಅದು ಭವಂತೀ ರಸ್ತೆ. ಭವಂತ...ಎಂದರೆ ಕೊಂಕಣಿಯಲ್ಲಿ ತಿರುಗಾಡು ಎಂಬ ಅರ್ಥವಿದೆ. ಇಲ್ಲಿ ಬಂದರೆ ಅದನ್ನೇ ಮಾಡಬೇಕಿರುವುದರಿಂದ ಇದಕ್ಕೆ ಭವಂತಿ ರಸ್ತೆ ಎನ್ನುವುದೂ ಅರ್ಥ ಪೂರ್ಣ. ಭವಂತಿ ರಸ್ತೆ ಅಂದರೆ ಜನ ಗಲಾಟೆ ಎಂದೇ ಅರ್ಥ. ಇದೇ ರೀತಿ ಬಾಲ್ಯದಲ್ಲಿ ಉರ್ವ ಮಾರಿಗುಡಿ ಜಾತ್ರೆಗೆ ಹೋಗಿ ಆ ಜನ ಸಂದಣಿ ನೂಕು ನುಗ್ಗಲು ನೋಡಿ ಹಿರಿಯರ ಕೈಯನ್ನು ಭದ್ರವಾಗಿ ಹಿಡಿದ್ದೆ. 

            ಸೆಂಟ್ರಲ್ ಮಾರ್ಕೆಟ್ ನ ಒಂದು ಭಾಗದಲ್ಲಿ ನಗರದ ಖ್ಯಾತ ಸಿನಿಮಾ ಮಂದಿರವಾದ ರೂಪವಾಣಿ ಚಿತ್ರಮಂದಿರವಿದೆ. ಅಲ್ಲಿ ಅಷ್ಟು ಗಲಾಟೆ ಇದ್ದರೂ ಸಿನಿಮಾ ಮಂದಿರದೊಳಗೆ ನುಗ್ಗಿದರೆ ಎಲ್ಲವೂ ಮಾಯ.  ಮಾರ್ಕೆಟ್ ನ ಮತ್ತೊಂದು ಬದಿಯಲ್ಲಿ ಲೇಡಿಗೋಶನ್ ಸರಕಾರಿ ಆಸ್ಪತ್ರೆ. ನನ್ನಮ್ಮ ಐದು ದಶಕದ ಹಿಂದೆ ನನ್ನನ್ನು ಹೆತ್ತಿರುವುದು ಇದೇ ಆಸ್ಪತ್ರೆಯಲ್ಲಿ!  ಹಾಗಾಗಿ ಜನ್ಮದಲ್ಲೇ ಕೇಂದ್ರ ಮಾರುಕಟ್ಟೆಯ ಹತ್ತಿರದ ಸಂಬಂಧಂತೆ ಭಾಸವಾಗುತ್ತದೆ.  ಬಾಲ್ಯದಲ್ಲಿ ಅಮ್ಮನ ಕೈ ಹಿಡಿದುಕೊಂಡು ಹೋಗುತ್ತಿದ್ದ ನೆನಪಿನಂತೆ,  ಸೋದರಮಾವನ ಸೈಕಲ್ ನ ಮುಂದಿನ ರಾಡ್ ಮೇಲೆ ಕಾಲು ಆಚೆ ಈಚೆ ಹಾಕಿ ಕುಳಿತು ಸುತ್ತಾಡಿದ ನೆನಪು ಇನ್ನೂ ಇದೆ. ಸೆಂಟ್ರಲ್ ಮಾರ್ಕೆಟ್ ಅಂದರೆ ಕೇಂದ್ರ ಮಾರುಕಟ್ಟೆ  ಒಂದು ರೀತಿಯ ನೆನಪುಗಳಿಗೂ ಕೇಂದ್ರವಾಗಿಬಿಡುತ್ತದೆ. ಅಂದಿನ ಕಾಲದಲ್ಲಿ ಈ ಮಾರುಕಟ್ಟೆ ಬೆರಗಿನ ತಾಣ. ಇಲ್ಲಿ ಸಿಗದಿರುವುದು ಜಗತ್ತಿನ ಯಾವ ಮೂಲೆಯಲ್ಲೂ ಇಲ್ಲ ಎಂಬ ಅಚಲವಾದ ನಂಬಿಕೆ. ಭಾನುವಾರ ಹೋದರೆ ...ಅಂಗಡಿಗಳು ಮುಚ್ಚಿರುತ್ತವೆ, ಆದರೆ ಸುತ್ತ ಮುತ್ತ ಬೀದಿ ತುಂಬ ಬೀದಿ ಬದಿಯ ವ್ಯಾಪಾರಿಗಳ ಬಗೆ ಬಗೆಯ ಅಂಗಡಿಗಳು. ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುವ ವಸ್ತುಗಳು. ಸ್ಟೀಲ್ ಪ್ಲಾಸ್ಟಿಕ್ ವಸ್ತುಗಳಿಂದ ಹಿಡಿದು ಬಗೆ ಬಗೆಯ ಬಟ್ಟೇ ಉಡುಪುಗಳು. 

            ಮಾರುಕಟ್ಟೆಯ ಒಳಗೆ ಹೋದರೆ....ಅಬ್ಬಾ ನಮ್ಮೂರ ಗೂಡಂಗಡಿಯಲ್ಲಿ ಒಂದು ಬಾಸ್ಕೆಟ್ ಟೊಮೆಟೊ ಬಟಾಟೆ ತೊಂಡೆಕಾಯಿ ಇಟ್ಟ ತರಕಾರಿ ಅಂಗಡಿಯನ್ನೇ ದೊಡ್ಡದು ಎಂದು ತಿಳಿದುಕೊಂಡರೆ ಇಲ್ಲಿ ಕಂಡ ಟೋಮೆಟೋ ರಾಶಿ ನೋಡಿ ಹೌ ಹಾರಿದ್ದೇನೆ. ಆದರೆ ಬೆಂಗಳೂರಿನ ಕೆ ಆರ್ ಮಾರುಕಟ್ಟೆ ನೋಡಿದ ಮೇಲೆ ಅದು ಬದಲಾಗಿರುವುದು ಬೇರೆ ವಿಚಾರ. ಅದರಲ್ಲೂ ನೆಲಮಂಗಲದ ಬಳಿಯ  ದಾಬಸ್ ಪೇಟೆಯ ದೊಡ್ಡ ತರಕಾರಿ ಮಾರುಕಟ್ಟೇ ಇಪ್ಪತ್ತನಾಲ್ಕು ಗಂಟೆಯೂ ತೆರೆದಿರುವುದು ನೋಡಿ ನಮ್ಮ ಈ ಸೆಂಟ್ರಲ್ ಮಾರುಕಟ್ಟೆ ಏನೂ ಅಲ್ಲ ಅಂತ ಆಗಿತ್ತು. ಆದರೂ ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ಒಂದು ಕಾಲದ ಬೆರಗಿನ ತಾಣ ಎಂದರೆ ತಪ್ಪಾಗಲಾರದು. 

            ಮೊನ್ನೆ ಮೊನ್ನೆ ಹೀಗೆ ನಡೆದಾಡುತ್ತಾ ಹಂಪನ್ ಕಟ್ಟೆ ಸಿಗ್ನಲ್ ನಿಂದ ಮಾರುಕಟ್ಟೆ ರಸ್ತೆಯಲ್ಲಿ ಇಳಿದೆ. ಯಾಕೋ ರಸ್ತೆ ಬಹಳ ಇಕ್ಕಟ್ಟಾದಂತೆ ಅನಿಸಿತು. ರಸ್ತೆ ಚಿಕ್ಕದಾಗಿದೆಯೋ ಇಲ್ಲ ನನ್ನ ದೃಷ್ಟಿ ದೊಡ್ಡದಾಗಿದೆಯೋ ಅಂತ ಅನಿಸತೊಡಗಿತ್ತು. ಹೊಂಡ ಗುಂಡಿಗಳು ನೋಡಿ ರಸ್ತೆ ಇಲ್ಲವೇ ಇಲ್ಲವೇನೋ ಅನ್ನಿಸುತ್ತಿತ್ತು. ಎಲ್ಲ ನಗರಗಳಂತೆ ಮಂಗಳೂರು ಅಷ್ಟೆ ಅಂತ ತಿಳಿದು ಮುಂದೆ ಮುಂದೆ ಬಂದು ಸೆಂಟ್ರಲ್ ಮಾರುಕಟ್ಟೆಯ ಬಳಿ ಬಂದರೆ ....ಎಲ್ಲ ಬಟಾ ಬಯಲಿನಂತೆ. ಮೊದಲು ಅಂಗಡಿಯ ಬಾಗಿಲಲ್ಲಿ ಹೋಗಿನಿಂತರೂ ಕಾಣದ ಅಂಗಡಿ ಮುಂಗಟ್ಟುಗಳು ದೂರದಿಂದಲೇ ಕಾಣುತ್ತವೆ. ಕಾರಣ ಇಷ್ಟೆ ಸೆಂಟ್ರಲ್ ಮಾರ್ಕೆಟ್ ಸಂಪೂರ್ಣ ಧರಾಶಾಯಿಯಾಗಿದೆ. ಕೆಲವು ಸಮಯಗಳ ಹಿಂದೆ ಮಾರುಕಟ್ಟೆ ಒಳಗೆ ನುಗ್ಗಿ ತರಕಾರಿ ತಂದ ಆ ಕಟ್ಟಡ ಈಗ ನೆನಪು ಮಾತ್ರ. ಚಿತ್ರದಲ್ಲಿ ತೋರಿಸುವುದಕ್ಕಷ್ಟೇ ಸಾಧ್ಯ.

        ಮಂಗಳೂರು ಮಾರುಕಟ್ಟೆ , ಕೇವಲ ಮಂಗಳೂರಿನವರಿಗೆ ಬದುಕು ಕೊಟ್ಟಿರುವುದಲ್ಲ. ಇಲ್ಲಿಂದ ಸಂಪರ್ಕ ದಕ್ಷಿಣಕ್ಕೆ ದೂರದ ಕಾಸರಗೋಡು, ಅಂತೆ ಉತ್ತರಕ್ಕೆ ಉಡುಪಿ ಕುಂದಾಪುರತನಕದ ಜನಜೀವನದಲ್ಲಿ ಮಂಗಳೂರು ಮಾರುಕಟ್ಟೆ ತನ್ನ ಗಹನವಾದ ಸಂಭಂಧವನ್ನು ಬೆಳೆಸಿದೆ. ಈಗ ಆ ಸಂಭಂಧಗಳು ವಿಚ್ಛೇದನ ಪಡೆದಂತೆ ಕೇಂದ್ರ ಮಾರುಕಟ್ಟೆ ಧರಾಶಾಯಿಯಾಗಿ ಜಾಗತೀಕರಣದ ಭೂಕಂಪಕ್ಕೆ ಕುಸಿದು ಬಿದ್ದಂತೆ ಭಾಸವಾಗುತ್ತದೆ. ಇನ್ನು ಹೊಸ ಕಟ್ಟಡ ತಲೆ ಎತ್ತಬಹುದು. ಆದರೂ ಮೊದಲಿನಂತೆ ಜನ ಮಾರುಕಟ್ಟೆಯ ಜತೆ ಸಂಭಂಧವನ್ನು ವ್ಯವಹಾರವನ್ನು ಬೆಳೆಸಿಕೊಳ್ಳಬಹುದು ಎಂಬುದನ್ನು ನಂಬುವುದಕ್ಕಿಲ್ಲ. ಮೊದಲು ಸೊಂಟಕ್ಕೆ ಹಣದ ಪುಟ್ಟ ಚೀಲ ಸಿಕ್ಕಿಸಿಕೊಂಡು, ಅಥವಾ ಜೇಬು ತುಂಬ ದುಡ್ಡು ಇಟ್ಟುಕೊಂಡು ಬರುತ್ತಿದ್ದ ಜನಗಳು ಇನ್ನು ಅದೇ ರೀತಿ ಬರಬಹುದೇ? ಅನುಮಾನ. ಯಾಕೆಂದರೆ, ಮೊಬೈಲ್ ಅಥವಾ ಎಟಿಎಂ ಕಾರ್ಡ್ ಹಿಡಿದು ಸೂಪರ್ ಮಾರುಕಟ್ಟೆಗೆ ಹೋಗುವ ಈ ಪೀಳಿಗೆಯಲ್ಲಿ ಸೆಂಟ್ರಲ್ ಮಾರುಕಟ್ಟೆ ಜನ ಜೀವನದಿಂದ ಎಂದೋ ದೂರಾಗಿ ಹೋಗಿದೆ. ಮಂಗಳೂರಲ್ಲಿ ಇಪ್ಪತ್ತು ವರ್ಷದ ಮೊದಲು ಒಂದೆರಡು ಸೂಪರ್ ಮಾರುಕಟ್ಟೆ ಇದ್ದರೂ ಜನಗಳು ಅಲ್ಲಿಗೆ ಹೋಗುತ್ತಿದ್ದುದು ಕಡಿಮೆ. ಯಾಕೆಂದರೆ ಏನಾದರೂ  ಉಳಿಯಬೇಕಿದ್ದರೆ ಕೇಂದ್ರ ಮಾರುಕಟ್ಟೆಗೆ ಹೋಗುವುದನ್ನು ರೂಢಿಸಿಕೊಂಡಿದ್ದರು.  ಈಗ ಸೂಪರ್ ಮಾರುಕಟ್ಟೆ ಸಂಸ್ಕೃತಿ ರಕ್ಕಸ ಗಾತ್ರದ, ಸುಸಜ್ಜಿತ ಮಾಲ್ ಗಳು ಕೇಂದ್ರ ಮಾರುಕಟ್ಟೆಯ ಆವಶ್ಯಕತೆಯನ್ನು ದೂರ ಮಾಡಿದೆ. ಹಾಗಾಗಿ ಕೇಂದ್ರ ಮಾರುಕಟ್ಟೆಯ ಮೊದಲಿನ ಚುರುಕುತನ, ಚಟುವಟಿಕೆ ಆ ಅತ್ಮೀಯ ವ್ಯವಹಾರಗಳು ಇನ್ನು ಕಾಣುವುದಕ್ಕೆ ಸಾಧ್ಯವಿಲ್ಲ. ಮನುಷ್ಯ ತನ್ನ ಆಕಾರ ವೇಷಭೂಷಣ ಜೀವನ ಶೈಲಿಯನ್ನು ಬದಲಾಯಿಸಿದಂತೆ ಕೇಂದ್ರ ಮಾರುಕಟ್ಟೆಯು ಬದಲಾಗಬಹುದು. ಆದರೂ ಹಳೆಯ ನೆನಪುಗಳು ಆ ಆತ್ಮೀಯ ವ್ಯವಹಾರಗಳು ಬಡತನದಲ್ಲೂ ಕಾಣುವ ಸುಖದುಃಖ ದುಮ್ಮನಗಳೊಂದಿಗಿನ ಭಾವನಾತ್ಮಕ ಸಂಬಂಧಗಳು ಇನ್ನು ಕೇವಲ ನೆನಪು ಎಂಬುದಂತು ಸತ್ಯ. 

Saturday, September 10, 2022

ಓ ಅಣ್ಣಾ..... ಸಣ್ಣ ಕಥೆ

 

ಆತ ಪ್ರಶಾಂತ.  ಮದುವೆ ಪಾರ್ಟಿ ಮುಗಿದು ಎಲ್ಲರೂ ಹೋಗುತ್ತಿದ್ದಂತೆ ಆತ  ಕಲ್ಯಾಣ ಮಂಟಪದಿಂದ ಹೊರಟು ತನ್ನ ಮನೆಗೆ ಬಂದ. ಮೂರನೇ ಮಹಡಿಯಲ್ಲಿದ್ದ ಮನೆಯಲ್ಲಿ ಆತ ಒಬ್ಬನೇ ವಾಸವಾಗಿದ್ದ. ಒಂದೇ ಕೋಣೆಯ ಆ ಮನೆ ಅಕ್ಷರಶಃ ಅವ್ಯವಸ್ಥೆಯಿಂದ ಕೂಡಿತ್ತು. ಅಲ್ಲಿ ಇಲ್ಲಿ ಧರಿಸಿ ಬಿಚ್ಚಿಟ್ಟ ವಸ್ತ್ರಗಳು ನೇತಾಡುತ್ತಿದ್ದವು. ಇನ್ನು ಕೆಲವು ಹಾಸಿಗೆ ಮೇಲೆ ಮುದ್ದೆಯಾಗಿ ಬಿದ್ದುಕೊಂಡಿತ್ತು. ಮೂಲೆಯಲ್ಲಿದ್ದ ಗ್ಯಾಸ್ ಸ್ಟೌವ್ ನಲ್ಲಿ ಒಂದು ಪಾತ್ರೆ ಮುಚ್ಚಳವಿಲ್ಲದೇ ಇತ್ತು. ನಿನ್ನೆ ಮಾಡಿದ ಗಂಜಿಯ ತಿಳಿ ಹಾಗೆ ಉಳಿದುಕೊಂಡಿತ್ತು. ಸ್ಟೌ ಸುತ್ತ ಗ್ಲಾಸು ತಟ್ಟೇಗಳು ಹಾಗೇ ಬಿದ್ದುಕೊಂಡಿತ್ತು. ಆ ಅವ್ಯವಸ್ಥೆ ಆತನ ಗಮನಕ್ಕೆ ಬಂದಿತ್ತು.  ಮೊದಲಾದರೆ ಅದನ್ನೆಲ್ಲ ಶುಚಿಗೊಳಿಸಿ ಪಾತ್ರೆಗಳನ್ನೆಲ್ಲ ತೊಳೆದು ಬಟ್ಟೆ ತೊಳೆದು ಚೆನ್ನಾಗಿ ಇರಿಸುತ್ತಿದ್ದ. ಆದರೆ ಇಂದು ಅದಾವುದಕ್ಕೂ ಉತ್ಸಾಹವಿಲ್ಲದೇ ಹೋಯಿತು. ಎಂದಿಗೂ ವಿಚಲಿತಗೊಳ್ಳದೇ ಶಾಂತವಾಗಿರುವುದಕ್ಕೆ ಬಯಸುವ ಆತನಿಗೆ ಇಂದು ಇರುಳು ಕಳೆಯುವುದಕ್ಕಿಲ್ಲ ಅಂತ ಅನ್ನಿಸಿತ್ತು. ಹಾಗಾಗಿ ಏಕಾಂತವಾಗಿ ಇರುವುದಕ್ಕೇ ಒಂದು ರೀತಿಯ ಭಯ ಆತಂಕ ಉಂಟಾಗಿತ್ತು. ಕಲ್ಯಾಣ ಮಂಟಪದಲ್ಲೆ ಬಹಳಷ್ಟು ಹೊತ್ತು ಕಳೆದು ಈಗ ಮನೆಗೆ ಬಂದಿದ್ದ. ಕಟ್ಟಡದ ತುತ್ತ ತುದಿಯಲ್ಲಿದ್ದ ಆತನ ಮನೆ, ಅದನ್ನು ಮನೆ ಎನ್ನುವುದಕ್ಕಿಂತ ಕೋಣೆ ಎನ್ನಬಹುದೇನೋ. ಎಲ್ಲವು ಒಂದೇ ಕೋಣೆಯಲ್ಲಿ. ಕುಳಿತರೆ ಬೆಡ್ ಮೇಲೆ ಕುಳಿತುಕೊಳ್ಳಬೇಕು. ನಿಂತರೆ ಶೌಚಾಲಯದ ಬಳಿ ನಿಲ್ಲಬೇಕು. ತನಗೊಬ್ಬನಿಗೆ ಇಷ್ಟು ಸಾಕು ಎಂದೇ ಅದನ್ನು ಬಾಡಿಗೆಗೆ ಪಡೆದಿದ್ದ. ಇಂದು ಮನಸ್ಸಿನ ನೆಮ್ಮದಿ ಕದಡಿದಂತೆ ಇತ್ತು. ತನ್ನ ಸ್ಥಿಮಿತವನ್ನು ಎಂದೂ ಕಳೆದುಕೊಳ್ಳದವನು ಮ್ಲಾನತೆಯಿಂದ ಖಿನ್ನನಾಗಿದ್ದ.  ತನ್ನ ಮನಸ್ಸಿನ ನೆಮ್ಮದಿ ಕಳೆದುಕೊಂಡಿರುವುದಕ್ಕೆ ಯಾರನ್ನೋ ಕಾರಣ ಮಾಡಿ ಮನಸ್ಸಿಗೆ ಸಾಂತ್ವಾನ ತಂದುಕೊಳ್ಳಬಹುದು. ನಿಜಕ್ಕಾದರೆ ಅವರರವರ ಮನಸ್ಸಿನ ನೆಮ್ಮದಿ ಕಳೆಯುವುದಕ್ಕೆ ಅವರವರೇ ಕಾರಣರು. ರೋಗ ಬರುವುದಕ್ಕೆ ಶರೀರದ ರೋಗ ನೀರೋಧಕ ಶಕ್ತಿ ಹೇಗೆ ಕಡಿಮೆಯಾಗಿರುತ್ತದೋ ಮನಸ್ಸಿನ ನೆಮ್ಮದಿ ಕಳೆಯುವುದಕ್ಕೂ ಮನಸ್ಸು ದುಃಖ ನೋವುಗಳನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿರುವುದೇ ಕಾರಣವಾಗಿರುತ್ತದೆ.

 

            ಮನೆ ಒಳಗೆ ಕುಳಿತುಕೊಳ್ಳಲಾಗದೆ ಹೊರಬಂದ. ಹೊರಗೆ ವಿಶಾಲವಾದ ತಾರಸಿ. ಅದರ ಒಂದು ಬದಿಗೆ ಹಳೆಯ ಚಯರ್ ಒಂದಿತ್ತು. ಅದರಲ್ಲಿ ಕುಳಿತು ಕಾಲು ಚಾಚಿ ತಡೆ ಬೇಲಿ ಯಲ್ಲಿಟ್ಟು ಮೇಲೆ ಆಕಾಶವನ್ನು ನೋಡುತ್ತಾ ಕುಳಿತ. ರಾತ್ರಿ ಬಹಳವಾಗಿದ್ದುದರಿಂದ  ನಗರ ಸಾಕಷ್ಟು ಮೌನವಾಗಿತ್ತು.  ಬೀದಿ ನಾಯಿಗಳೂ ಸಹ ಎಲ್ಲೋ ಮೂಲೆಯಲ್ಲಿ ಸುಮ್ಮನೆ ಬಿದ್ದುಕೊಂಡಿದ್ದವು. ಹಾಗೆ ನೋಡುತ್ತಿದ್ದವನಿಗೆ ದುಃಖ ಒತ್ತರಿಸಿ ಬಂತು. ಅತ್ತರೆ ಯಾವ ಪ್ರಯೋಜನವೂ ಇಲ್ಲ. ದೂರದಲ್ಲಿ ಬೀದಿ ದೀಪ ಉರಿದಂತೆ....ಆ ದೀಪದ ಬೆಳಕನ್ನು ಉಪಯೋಗಿಸುವುದಕ್ಕೆ ಅಲ್ಲಿ ಒಬ್ಬರಾದರೂ ಬೇಕಲ್ಲ. ಯಾರೂ ಇಲ್ಲ. ತನ್ನ ನೋವು ದುಮ್ಮಾನ ಎಲ್ಲವೂ ಹಾಗೆ, ಸುಮ್ಮನೇ ಉರಿಯುತ್ತವೆ. ಇಷ್ಟು ಮೌನದಲ್ಲಿರಬೇಕಾದರೆ ದೂರದ ಗುಡಿಸಲಿನಲ್ಲಿ ಯಾವುದೋ ಒಂದು ಸಂಸಾರ ಜಗಳವಾಡುವುದು ಕೇಳುತ್ತಿತ್ತು. ಛೇ ಸುಮ್ಮನೇ ದುಃಖಿಸುವುದಕ್ಕೂ ಅವಕಾಶ ಇಲ್ಲವಲ್ಲಾ? ಗಾಳಿ ಬೆಳಕು ನೀರು ಇವು ಪ್ರತಿಯೊಬ್ಬನಿಗೂ ಸೇರಿದ್ದು. ಒಬ್ಬ ಅದನ್ನು ಅನುಭವಿಸುತ್ತಿದ್ದರೆ ಮತ್ತೊಬ್ಬನು ಅದಕ್ಕೆ ತಡೆ ಒಡ್ಡುವ ಹಾಗಿಲ್ಲ. ಈ ಗಾಳಿ ನೀರು ಬೆಳಕುಗಳ  ಪಂಚ ಭೂತಗಳಂತೆ  ಈ ಮೌನವೂ ಯಾಕೆ ಆಗಬರದು? ಮೌನವನ್ನು ಅನುಭವಿಸುವುದು ಒಂದು ಹಕ್ಕಲ್ಲವೇ? ಸುಮ್ಮನೇ ದುಃಖಿಸುವುದಕ್ಕೂ ಅದೃಷ್ಟ ಪಡೆದಿರಬೇಕು. ಮನಸ್ಸು ನೆನಪುಗಳ ಹಿಂದೆ ಹೋಯಿತು. ನೆನಪುಗಳೇನು ಸಿನಿಮಾ ರೀಲಿನಂತೆ ಸರದಿ ಪ್ರಕಾರ ಬರುವುದಿಲ್ಲ.  ಇಲ್ಲೂ ಹಾಗೆ ಆತನ ಯೋಚನೆ ಸರಿದದ್ದು ಹೀಗೆ.

 

            “ಮಂಜರಿ, ಆಕೆಯ ಹೆಸರು. ಏನು ಸುಂದರ ಹೆಸರು? ಬಹಳ ಕಾಲ ಆ ಹೆಸರೇ ಸುಂದರವಾಗಿತ್ತು. ಜಪವಾಗಿತ್ತು. ಆ ಕಾಲವೂ ಹಾಗಿತ್ತು. ಹದಿ ಹರಯಕ್ಕೆ ಬಾಲ ಹೆಜ್ಜೆ ಇಟ್ಟ ದಿನಗಳು. ಎಲ್ಲವೂ ಸುಂದರ. ಆಗ ಕೆಲಸಕ್ಕಾಗಿ ಬೆಂಗಳೂರಿಗೆ ಬಂದವನಿಗೆ ಮನೆ ಬಾಡಿಗೆ ಸಿಕ್ಕಿದ್ದು ಚಿಕ್ಕ ಪೇಟೆಯ ಗಲ್ಲಿಯೊಳಗೆ.  ಆ ಕಟ್ಟಡದಲ್ಲಿ ಸರಿ ಸುಮಾರು ಇಪ್ಪತ್ತು ಕುಟುಂಬಗಳಾದರೂ ಇರಬೇಕು.  ಒಬ್ಬನಿಗಲ್ಲವೇ ಅಂತ ಹೇಗೋ ಸುಧಾರಿಸಿಕೊಂಡೆ. ಚಿಲ್ಲರೆ ದುಡ್ಡಿಗೆ  ದೊಡ್ಡ ಬಡಾವಣೆಯಲ್ಲಿ ಸಿಕ್ಕಿತೇ? ಸಿಕ್ಕಿದರೂ ಅತ್ತಿತ್ತ ಹೋಗಿ ಬರುವುದಕ್ಕೆ ದುಪ್ಪಟ್ಟು ಖರ್ಚು. ನಾನಿದ್ದ ಕಟ್ಟಡದಲ್ಲೇ ಆಕೆ ಕೆಳ ಅಂತಸ್ಥಿನ ಮನೆಯಲ್ಲಿ ತನ್ನ ಕುಟುಂಬದ ಜತೆಗಿದ್ದಳು. ಅಪ್ಪ ಅಮ್ಮ ಇಬ್ಬರೂ ದುಡಿಯಲು ಹೊರಗೆ ಹೋದ ನಂತರ ಈಕೆ ಒಬ್ಬಳೇ .  ದಿನಾ ಮಧ್ಯಾಹ್ನದ ತನಕ ಕಾಲೇಜ್ ಹೋಗುತ್ತಿದ್ದವಳು ಆನಂತರ ಮನೆಯಲ್ಲಿ ಒಬ್ಬಳೇ ಇರುತ್ತಿದ್ದಳು.  ನಾನೂ ಕೆಲಸ ಮುಗಿಸಿ ಬಂದರೆ ರಾತ್ರಿಯ ತನಕವೂ ಆಕೆಯೊಂದಿಗೆ ಮಾತನಾಡುತ್ತಾ ಇರುತ್ತಿದ್ದೆ. ಮರೆತೇ ಹೋದಂತೆ ಇದ್ದ ನ್ನ ಹೆಸರನ್ನು ಕರೆಯುತ್ತಿದ್ದದ್ದು ಆಕೆ ಮಾತ್ರ. ಬೆಂಗಳೂರು ನಗರದಲ್ಲಿ ಅಷ್ಟು ಜನರಿದ್ದರೂ ನ್ನನ್ನು ಹೆಸರಿಂದ ಕರೆಯುವವರು ಒಬ್ಬರೂ ಇಲ್ಲ. ಮೊದ ಮೊದಲು ಟ್ಯೂಷನ್ ಪ್ರೆಂಡ್ಸ್ ಅಂತ ಹೊರಗೆ ಇರುತ್ತಿದ್ದವಳು ನ್ನ ಪರಿಚಯವಾದ ನಂತರ ಮನೆಯಲ್ಲೇ ಇರುತ್ತಿದ್ದಳು. ಪರಿಚಯ ಆತ್ಮೀಯತೆ ಬೀದಿ ಬದಿಯ ಪಾನೀಪೂರಿಯ ಅಂಗಡಿವರೆಗೂ ಹೋಗುತ್ತದೆ.  ಜತೆಯಾಗಿ ಗಲ್ಲಿಯ ಬೀದಿಯಲ್ಲಿ ಮಸಾಲಾ ಪೂರಿ ತಿನ್ನುತ್ತಿದ್ದವರಿಗೆ ಆ ಮಸಾಲೆ ಬದುಕಿನಲ್ಲೂ ಇದ್ದಂತೆ ಭಾಸವಾಗತೊಡಗಿತು.  ಹೀಗಿದ್ದರೂ ನಾನು ಆಕೆಯನ್ನು ಪ್ರೀತಿಸುತ್ತಿದ್ದೇನೆ ಎಂದು ನನಗೆ ಅನ್ನಿಸಲಿಲ್ಲ. ಅದು ಅನ್ನಿಸಿದ್ದು ಆಕೆ ಕೈತಪ್ಪಿ ಹೋದಾಗ. “

ಆತನ ಚಿಂತನೆಗಳು ಪುಂಖಾನು ಪುಂಖವಾಗಿ ಬರುತ್ತಿದ್ದವು. ಹುಲ್ಲು ಬೆಳೆದು ಪಾಚಿಗಟ್ಟಿದ ಕೊಳದ ಕೆಸರಿನಂತೆ ಚಿಂತೆ ಹೆಚ್ಚಾಯಿತು.

 

            ಊರಿನಿಂದ ಮಿತ್ರನೊಬ್ಬ ಬಂದಿದ್ದ. ಹೆಸರು ಆನಂದ. ಹೇಳಿ ಕೇಳಿ ದೂರದ ಸಂಬಂಧಿ. ಬೆಂಗಳೂರಲ್ಲಿ ಈತನಿದ್ದಾನೆ ಎಂದು ತಿಳಿದೇ ಬಂದಿದ್ದ. ಬೆಂಗಳೂರಿಗೆ ಬರುವುದೇ ಹಾಗೆ. ಆರಂಭದಲ್ಲಿ ಒಂದು ಹೆಜ್ಜೆ ಊರುವುದಕ್ಕೆ ಜಾಗ ಸಿಕ್ಕಿದರೆ ಸಾಕು. ಮತ್ತೆ ಬೆಂಗಳೂರು ಮುಂದಿನ ಹೆಜ್ಜೆಯನ್ನು ಊರುವುದಕ್ಕೆ ಹೇಳಿಕೊಡುತ್ತದೆ. ಹಾಗಾಗಿ ಮೊದಲ ಹೆಜ್ಜೆ ಊರಿದ್ದು ಈತನ ಒಂದೇ ಒಂದು ಕೋಣೆಯ ಮನೆಯನ್ನು  ಹಂಚಿಕೊಂಡು. ಒಂದೇ ಕೋಣೆಯಲ್ಲಿ ಇದ್ದರೆ ಕೇಳಬೇಕೆ? ಒಂದೇ ತಟ್ಟೆ ಒಂದೇ ಚಾಪೆ ಒಂದೇ ತಲೆದಿಂಬು ಕೊನೆಗೆ ಒಂದೇ ಚಾದರ. ಹೀಗೆ ಒಂದರಲ್ಲೇ ಹೊಂದಾಣಿಸಿಕೊಂಡದ್ದು ಹಲವು. ಪ್ರಶಾಂತ ಆನಂದ ಒಂದರ್ಥದಲ್ಲಿ ಹೆಸರಿನಂತೇ ಇದ್ದರು.

 

            ಮಂಜರಿ, ಯಾವಾಗಲೂ  ಪ್ರಶಾಂತ ಅಂತ ಕರೆಯುತ್ತಿದ್ದವಳು ಕ್ರಮೇಣ ಅದಕ್ಕೆ ಅಣ್ಣ ಅಂತ ಸೇರಿಸುವುದಕ್ಕೆ ತೊಡಗಿದಳು. ಯಾಕೆ ಹೀಗೆ? ಆಕೆಯ ಮನೆಯವರು ಅಗೊಮ್ಮೆ ಈಗೊಮ್ಮೆ ಸಿಕ್ಕಾಗ ಹಾಗೆ ಕರೆಯುತ್ತಿದ್ದರೆ ಈಕೆಯೂ ಅಣ್ಣಾ ಸೇರಿಸಿಬಿಟ್ಟಳು. ಹೋಗಲಿ ಎರಡು ಅಕ್ಷರದಲ್ಲಿ ಏನಿದೆ ಅಂತ ತನ್ನ ವೈಯಕ್ತಿಕ ಸಮಸ್ಯೆಗಳಲ್ಲೇ ಮುಳುಗಿ ಹೋದ.  ವೈರಸ್ ಸೋಂಕು ಆದದ್ದು ತಿಳಿಯ ಬೇಕಾದರೆ ಕೆಲವು ದಿನಗಳೇ  ಸಂದು ಹೋಗಿಬಿಡುತ್ತದೆ. ಹಾಗೆ ಈಕೆಯ ಅಣ್ಣಾ ಕರೆಗೆ ಅರ್ಥ ಸಿಕ್ಕಿದ್ದುಆ ಒಂದು ದಿನ. ಆದಿನ ಹೊರಗೆ ಹೋದವನು ಬೇಗ ಬಂದಿದ್ದ. ಸಹಜವಾಗಿ ಒಂದು ಕೋಣೆಯ ಮನೆಯ ಬಾಗಿಲು ಸರಿದು ಒಳ ಬರಬೇಕಾದರೆ ಆನಂದನ ತೋಳಿನಲ್ಲಿ ಮಂಜರಿ ಇದ್ದಳು. ಎಲ್ಲವನ್ನೂ ಹಂಚಿಕೊಂಡ ಮಿತ್ರ ಇದನ್ನೂ ಹಂಚಿಕೊಂಡದ್ದು ವಿಪರ್ಯಾಸ. ಎದೆಯೊಳಗೆ ಆಘಾತವಾದಂತೆ ನರಳಿತು ಮನಸ್ಸು. ಆಗ ಅರಿವಿಗೆ ಬಂತು ಮಂಜರಿ ತನ್ನವಳು ಎಂದು. ಆದರೆ ತಡವಾಗಿತ್ತು. ಬಿಟ್ಟ ಶಬ್ದದ ವಾಕ್ಯಕ್ಕೆ ಮಿತ್ರ ಶಬ್ದ ತುಂಬಿಸಿಯಾಗಿ ಹೋಗಿತ್ತು.ತಾನೇ  ಬರೆದ ವಾಕ್ಯ ತನ್ನನ್ನೇ ಲೇವಡಿಯ ಅರ್ಥವನ್ನು ತಂದಂತೆ, ತನ್ನದೇ ಮನೆಯ ತನ್ನದೇ ಕೋಣೆಯಲ್ಲಿ ತಾನು ಪರಕೀಯನಾದಂತೆ ಭಾಸವಾಯಿತು. ಆನಂತರ ಆ ಮನೆಯಲ್ಲಿ ಆತನಿಗೆ ಇರುವುದಕ್ಕೆ ಮನಸ್ಸಾಗಲಿಲ್ಲ. ನಾವಿಲ್ಲದಾಗ ಮನೆಯೊಳಗೆ ಕಳ್ಳ ಹೊಕ್ಕಿದ್ದಾನೆ ಎಂದು ತಿಳಿದರೆ ಮನದೊಳಗೆ ಆಗುವ ತಾಕಲಾಟ ಹೇಗಿರುತ್ತದೆ. ಮನೆಯ ಇಂಚಿಂಚೂ ಮಲೀನವಾದಂತೆ ಭಾಸವಾಗುತ್ತದೆ. ಕಳ್ಳ ಏನೊಂದೂ ಕದಿಯದೇ ಇದ್ದರೂ  ಮನಸ್ಸು,  ಎಲ್ಲವೂ ಬತ್ತಲಾದ ಅನುಭವದಂತೆ ತಳಮಳಿಸುತ್ತದೆ. ಮತ್ತೆ ಅದನ್ನು ಅನುಭವಿಸುವುದಕ್ಕೆ ಒಪ್ಪುವುದಿಲ್ಲ. ಅನಿವಾರ್ಯವಿದ್ದರೆ ಬೇರೆ. ಪ್ರಶಾಂತನಿಗೆ ತನ್ನದೇ ವಸ್ತುಗಳೆಲ್ಲವೂ ಮಲೀನವಾದ ಅನುಭವ. ತನ್ನದೇ ಭಾವನೆಗಳಲ್ಲಿ ಕೆಸರು ಬಿದ್ದಂತಾಗುವಾಗ ಭಾರ ಹೊತ್ತ ತನಗೆ ಇಡೀ ಜಗತ್ತೇ ಬಾರವಾದಂತೆ ಅನ್ನಿಸಿದ್ದರೆ ತಪ್ಪಿರಲಿಲ್ಲ.

 

            ಯಾವುದೋ ಕಾರಣ ಹೇಳಿ ಚಿಕ್ಕ ಪೇಟೆಯ ಗಲ್ಲಿ ಬಿಟ್ಟು ತಾನು ಶಿವಾಜಿ ನಗರಕ್ಕೆ ಬಂದ. ಒಬ್ಬನೇ ಕೆಲವು ಸಮಯ ಇದ್ದ. ತಾನಾಯಿತು ತನ್ನ ಕೆಲಸವಾಯಿತು. ಇಂದು ತನ್ನ ಸಹೋದ್ಯೋಗಿಯ ಮದುವೆ. ಹಾಗೇ ಬನಶಂಕರಿಯ ಕಲ್ಯಾಣ ಮಂಟಪಕ್ಕೆ ಹೋಗಿದ್ದ. ಸಾಕಷ್ಟು ಜನ ಬಂದಿದ್ದರು. ಅದೆಲ್ಲಿದ್ದಳೋ ಮಂಜರಿ ತಿಳಿಯದು. ಶುಭ ಹಾರೈಕೆಗೆ ಸರದಿಯ ಸಾಲಲ್ಲಿ ನಿಂತಿರಬೇಕಾದರೆ ಹಿಂದೆ ಬಂದು ಬೆನ್ನು ತಟ್ಟಿದಳು. ಆ ದಿನದ ಮದುಮಗಳು ಈಕೆಯ ಸಂಬಂಧಿಯಂತೆ. ಆಕೆ ಮಾತು ಮಾತಿಗೂ ಅಣ್ಣಾಎನ್ನುವಾಗ ಏನೋ ಕಸಿವಿಸಿ. ಕರಟಿ ತಳ ಹಿಡಿದ ನೆನಪುಗಳನ್ನೆಲ್ಲ ಮತ್ತೂ ಕೆರೆಸಿ ತೆಗೆದ ಹಾಗೆ ಭಾಸವಾಯಿತು. ತಮ್ಮ ಭಾವನೆಯಲ್ಲಿ ವಿಶ್ವಾಸವೇ ಇಲ್ಲದಂತೆ ಅಣ್ಣಾ ಎನ್ನುವ ಉದ್ಗಾರಕ್ಕೆ ಒತ್ತು ಕೊಡುವಾಗ ಭಾವನೆಗಳೂ ವೇಷ ತೊಟ್ಟುಕೊಂಡ ಬಸವನಂತೆ ಭಾಸವಾಗುತ್ತದೆ. ಅಣ್ಣಾ ಅಣ್ಣಾ ಎಂದು ಪ್ರತಿ ಮಾತಿಗೂ ಹೇಳಿದಾಗ ಆಕೆಯ ಮನಸ್ಸಿನ ಮೇಲೆಯೇ ಅನುಮಾನ ಬರುವಂತಾಗಿತ್ತು. ಮನಸ್ಸಿನ ಕಪಟವನ್ನು ಮುಚ್ಚಿಡುವುದಕ್ಕೆ ಈ ಅಣ್ಣಾ ಕರೆ ಇರಬಹುದೇ? ತಮ್ಮ ಮನಸ್ಸಿನಲ್ಲಿ ನಿಯಂತ್ರಣವಿಲ್ಲದೇ ಇರುವಾಗ ಈ ಅಣ್ಣ ಎಂಬ ಭಾವದಲ್ಲಿ ರಕ್ಷಣೆಯನ್ನು ಪಡೆದಂತೆ ಭಾಸವಾಗುತ್ತದೆ. ಒತ್ತು ಒತ್ತಿಗೂ ಅಣ್ಣಾ ಎನ್ನುವಾಗ ಆಕೆಗೆ ಆಕೆಯಬಗ್ಗೆ ವಿಶ್ವಾಸವಿಲ್ಲವೇನೋ ಎಂದುಕೊಂಡ. ಅಣ್ಣ ಎಂಬುದು ತಮ್ಮ ಮನಸ್ಸಿನ ಅವಿಶ್ವಾಸದ  ಸಂಕೇತ.

 

  ಸಾಹೋದರ್ಯ ಅದು ಹುಟ್ಟಿನಿಂದಲೇ ಬರುವಂತಹುದು. ಬಲವಂತವಾಗಿಯೋ ಕೇಳಿಯೋ ಅದು ಸಿಗುವುದಿಲ್ಲ. ಅದಲ್ಲವಾದರೆ ಸಾಹೋದರ್ಯ ಕೇವಲ ಭಾವದಿಂದ ಹುಟ್ಟಿಕೊಳ್ಳುತ್ತದೆ. ಇಲ್ಲಿ ಪ್ರಾಮಾಣಿಕತೆ ಒಂದೇ ಮಾನದಂಡ. ಯಾಕೆಂದರೆ ಬಾಯಿಯಲ್ಲಿ ಹೇಳಿದ್ದು ಮನಸ್ಸಿನಲ್ಲಿ ಇರಬೇಕೆಂದೇನು ಇಲ್ಲ. ಬಾಯಿಯಲ್ಲಿ ಅಣ್ಣಾ ತಂಗಿ  ಅಂತ ಕೂಗಿದರೂ ಮನಸ್ಸಿನಲ್ಲಿ ವಿಕಲ್ಪವಿದ್ದರೂ ಇರಬಹುದು. ಹುಟ್ಟಿನಿಂದ ಬಂದ ಸಾಹೋದರ್ಯ ಅದು ಅದ್ವಿತೀಯ ಭಾವದಲ್ಲಿರುತ್ತದೆ. ಅಲ್ಲಿ ಭಾವ ಹೇಗಿದ್ದರೂ ಸಾಹೋದರ್ಯ ತಪ್ಪುವುದಕ್ಕಿಲ್ಲ.  ಆಕೆಯಲ್ಲಿ ಪ್ರಾಮಾಣಿಕತೆಯ ನಿರೀಕ್ಷೆ ಮೂಡುವುದಾದರೂ ಹೇಗೆ?

 

ಒಪ್ಪಿಗೆ ಇಲ್ಲದ ಪಾತ್ರದಲ್ಲಿ ನಟನಾದವನು ತನ್ಮಯತೆಯನ್ನು ಹೇಗೆ ಕಾಣಬಲ್ಲ.? ಬೇಗನೆ ಪಾರ್ಟಿ ಮುಗಿಸಿದವನಿಗೆ ಎಲ್ಲವೂ ನಟನೆಯಂತೆ ಭಾಸವಾಯಿತು. ಮದುವೆಯೂ ಸುಮ್ಮನೆ ಪಾರ್ಟಿಯೂ ಸುಮ್ಮನೆ. ತಾನು ಕೇವಲ ನಟನಾಗಿ ಪಾರ್ಟಿ ಮುಗಿಸಿ ಬಂದುಬಿಟ್ಟ.

 

ಎಷ್ಟು ಹೊತ್ತಿಗೆ ನಿದ್ದೆಆವರಿಸಿತೋ ತಿಳಿಯದು. ಮುಂಜಾನೆ ಕಾಗೆ ಕಾ ಕಾ ಎಂದು ಕಿವಿಯ ಹತ್ತಿರವೇ ಕೀರುಗುಟ್ಟಿದಾಗ ಎಚ್ಚರವಾಯಿತು.  ಎದ್ದು ನಿಂತ ಸುತ್ತಲೂ ನೋಡಿದ. ಪೂರ್ವದಲ್ಲಿ ಸೂರ್ಯ ರಕ್ತ ಚೆಲ್ಲಿಯಾಗಿತ್ತು. ಮೊದಲ ದಿನದ ದುಃಖ ದುಮ್ಮಾನಗಳು ಕನಸಿನಂತೆ ಭಾಸವಾಯಿತು. ತನ್ನ ವಾಸ್ತವಕ್ಕೆ ತಾನು ಬರಬೇಕಿದೆ. ಮಂಜರಿಯ ನೆನಪು ಮಂಜಿನಂತೆ ಕಳೆಯಬೇಕು. ಆಕೆ ಆಭಿನಯಿಸಿದಳು. ತಾನು ಪ್ರೇಕ್ಷಕನಾದೆ ಎಂದು ತಿಳಿದುಕೊಂಡ. ತನ್ನಮ್ಮನ ನೆನಪಾಯಿತು. ಆಕೆಯ ಮಡಿಲಲ್ಲಿ ಹುಟ್ಟಿ ಬೆಳೆದಾಗ, ಆಕೆಯ ಲಾಲನೆಯಲ್ಲಿನ ನೈಜತೆಯ ನೆನಪಾಯಿತು. ಏನೆಂದು ಅಮ್ಮ ಪ್ರೀತಿಸಿದಳು? ಮುಂದೆ ಈ ಮಗು ಉತ್ತಮ ಬದುಕು ಕಾಣಲಿ. ಅದಕ್ಕಾಗಿ ಕಪಟವಿಲ್ಲದ ಮಮತೆ ತೋರಿದಳು. ಇದೀಗ ಮಂಜರಿಯ ಪಾತ್ರವನ್ನು ಆ ರಂಗವನ್ನೂ ಕನಸಿನಂತೆ ಕಂಡ. ಅಮ್ಮ ನನಗಿತ್ತ ಪ್ರೀತಿ ಉತ್ತಮ ಬದುಕು ನನ್ನದಾಗಬೇಕು. ತನ್ನಮ್ಮ ವಿದ್ಯಾವಂತಳಲ್ಲ. ಆದರೆ ಸನ್ಮಸ್ಸಿನ ಹೃದಯವಂತಳು.  ಯಾವಾಗಲೂ ಹೇಳುತ್ತಿದ್ದ ಮಾತೊಂದು ನೆನಪಾಯಿತು.  "ಪರರ ವಸ್ತುವನ್ನು ಬಯಸಬಾರದು. ನಿನ್ನದೇನಿದೆಯೋ ಅದನ್ನು ಪರರಲ್ಲಿ ಬಯಸಬೇಡ. ನಿನ್ನೊಳಗಿನ ಪ್ರೀತಿಗಿಂತಲೂ  ನಿನ್ನನ್ನು ಪ್ರೀತಿಸುವವರ ಪ್ರೀತಿಯ ಗಾತ್ರ ದೊಡ್ಡದು. "

 

ಅಮ್ಮ ಸುಮ್ಮನೇ ಹೇಳುವುದಿಲ್ಲ. ಆಕೆಯ ಪ್ರೀತಿಯನ್ನು ಕಂಡವನು. ತನ್ನ ಪ್ರೀತಿಯನ್ನು ಆಕೆ ಎಂದೂ ಬಯಸಲಿಲ್ಲ. ತನ್ನ ಮುನಿಸಲ್ಲಿ  ತನ್ನ ನಗುವನ್ನು ಕಂಡವಳು. ಪರರ ವಸ್ತುವನ್ನು ಪಯಸಬಾರದು.  ಮಂಜರಿಯ ಪ್ರೀತಿಯೂ ಅದೇ. ಆಕೆಯ ಪ್ರೀತಿ ಪರವಸ್ತುವಾಗಿ ಕಾಣಬೇಕು.  ಅದು ತನ್ನದಾಗಬೇಕು ಎಂದು ಬಯಸದೇ ಇರುವುದರಲ್ಲಿ ತನ್ನ ಭವಿಷ್ಯವಿದೆ. ತನ್ನಮ್ಮನ ಪ್ರೀತಿಯ ಸಾರ್ಥಕತೆ ಇದೆ.

 

ಹೊಸ ಹುರುಪಿನಿಂದ ಎದ್ದ. ಇರುಳಲ್ಲಿ ಕಂಡದ್ದೇಲ್ಲವೂ ನಿದ್ದೆಯ ಕನಸಿನಲ್ಲಿ ಸೇರಿ ಹೋಯಿತು.