Thursday, April 25, 2024

ಬ್ರಹ್ಮ ಶಾಪ

         ಮೊನ್ನೆ ಬೆಂಗಳೂರಿನ ವಿಧಾನ ಸೌಧದ ಬಳಿಯ ಎಂ ಎಸ್ ಕಟ್ಟಡ ಸಂಕೀರ್ಣಕ್ಕೆ ಯಾವುದೋ ಕೆಲಸದ ನಿಮಿತ್ತ ಹೋಗಿದ್ದೆ. ದೊಡ್ಡ ದೊಡ್ಡ ಅಧಿಕಾರಿಗಳ ಸರಕಾರೀ ಇಲಾಖೆಗಳು ಇರುವ ಕರ್ನಾಟಕ ಸರಕಾರದ ಕಟ್ಟಡವಲ್ಲವೇ? ಯಾವಾಗ ನೋಡಿದರೂ ಜನ ಸಂದಣಿ. ಹಾಗೆ ಲಿಫ್ಟ್ ನಲ್ಲಿ ಹೋಗುವಾಗ ವಯಸಾದ ವ್ಯಕ್ತಿ ಸಿಕ್ಕಿದರು. ಬಹಳ ಸಾಧು ಸ್ವಭಾವದಂತೆ ಕಂಡರು. ನಾನು ಹೋಗುವ ಕಛೇರಿ ಯಾವ ಮಹಡಿಯಲ್ಲಿದೆ ಎಂದು ತಿಳಿದಿರಲಿಲ್ಲ. ಅವರೊಬ್ಬರೇ ಇರುವುದರಿಂದ ಅವರಲ್ಲಿ ಕೇಳಿದೆ.  ಅವರು ಈ ಮಹಡಿಯಲ್ಲಿ ಪಕ್ಕದ ಕಟ್ಟಡದ ನಾಲ್ಕನೇ ಮಹಡಿಯಲ್ಲಿದೆ. ಇಲ್ಲಿಂದ ಒಳಗಿನಿಂದಲೇ ಹೋಗುವುದಕ್ಕೆ ಸಾಧ್ಯವಿದೆ ಅಂತ ಲಿಫ್ಟ್ ಇಳಿದ ನಂತರ ಜತೆಗೆ ಬಂದು ತೋರಿಸಿಕೊಟ್ಟರು. ಆ ಕಟ್ಟಡ ನನಗೆ ಎನೂ ಹೊಸತಲ್ಲ. ಹತ್ತು ಹಲವು ಸಲ ಹೋಗಿದ್ದರೂ ಕೆಲವು ಕಛೇರಿಗಳು ಹುಡುಕುವುದರಲ್ಲೇ ಸುಸ್ತಾಗಿ ಬಿಡುತ್ತದೆ. ಕೆಳ ಅಂತಸ್ತಿನಲ್ಲಿ ಕಣ್ಣು ಕಾಣದವರೊಬ್ಬರು ಕುಳಿತಿರುತ್ತಾರೆ. ಅವರಲ್ಲಿ ಕಛೇರಿ ಹೆಸರು ಹೇಳಿದರೆ ಅದು ಯಾವ ಮಹಡಿಯಲ್ಲಿ ಎಷ್ಟನೇ ನಂಬರ್ ಅಂತ ಹೇಳಿಬಿಡುತ್ತಾರೆ. ನಾವು ಕಣ್ಣು ಕಾಣುವವರಿಗಿಂತಲೂ ಕಣ್ಣು ಕಾಣದವರು ಉತ್ತಮ ಅಂತ ಹಲವು ಸಲ ಅಂದುಕೊಂಡಿದ್ದೆ. ಆದಿನ ಅಲ್ಲಿ ಯಾರೂ ಇರಲಿಲ್ಲ. ಹಾಗಾಗಿ ಕಛೇರಿ ಹುಡುಕುವುದು ಕಷ್ಟವಾಗಿತ್ತು. 

        ನನ್ನ ಕೆಲಸ ಮುಗಿಸಿ ಕಛೇರಿಯಿಂದ ಹೊರಬರುವಾಗ ಅದೇ ವ್ಯಕ್ತಿ ಸಿಕ್ಕಿದರು. ನಗುತ್ತಾ ಸಿಕ್ಕಿತಾ ಕೆಲಸ ಆಯಿತ ಅಂತ ಕುಶಲ ವಿಚಾರಿಸಿದರು. ವಾಸ್ತವದಲ್ಲಿ ಬೆಂಗಳೂರಲ್ಲಿ ಹೀಗೆ ಕೇಳುವುದು ಬಹಳ ಅಪರೂಪ. ತಾವಾಯಿತು ತಮ್ಮ ಪಾಡಾಯಿತು ಅಂತ ಇರುವವರೆ ಹೆಚ್ಚು. ಪಕ್ಕದ ಮನೆಯಲ್ಲಿ  ಯಾರಿದ್ದಾರೆ? ಅಲ್ಲಿ ಏನಾಗುತ್ತಿದೆ? ಎಂದು ಈ ಮನೆಯಲ್ಲಿದ್ದವನಿಗೆ ತಿಳಿದಿರುವುದಿಲ್ಲ ಮಾತ್ರವಲ್ಲ, ಆತನಿಗೆ ಅದರ ಅವಶ್ಯಕತೆಯೇ ಇರುವುದಿಲ್ಲ. ಹಾಗಿರುವಾಗ ಈ ವ್ಯಕ್ತಿ ಬಂದು ವಿಚಾರಿಸುತ್ತಾರೆ ಎಂದರೆ ಬೆಂಗಳೂರಿನವರು ಆಗಿರಲಾರದು ಎಂದು ನನಗನಿಸಿತು. ಅವರು ನನ್ನ ಜತೆಯಲ್ಲೇ ಒಂದಷ್ಟು ದೂರ ಬಂದರು. ನಾನು ಬಂದ ಕೆಲಸದ ಬಗ್ಗೆ ವಿಚಾರಿಸಿದರು. ಹೀಗೆ ಲೋಕಾಭಿರಾಮ ಮಾತನಾಡುತ್ತಾ ಅವರ ಬಗ್ಗೆ ಕೇಳಿದೆ. ಅವರು ಭದ್ರಾವತಿಯಿಂದ ಬಂದಿದ್ದರು. ಅವರ ನಿವೃತ್ತಿ ವೇತನ (ಪೆನ್ಶನ್) ದ ಏನೋ ಸಮಸ್ಯೆ ಇತ್ತು. ನಾನು ನಿಮ್ಮ ಕೆಲಸ ಆಯಿತಾ ಎಂದು ಸಹಜವಾಗಿ ಕೇಳಿದೆ.  ಆಗ ಅವರು ಅವರ ಚರಿತ್ರೆಯನ್ನೇ ಬಿಚ್ಚಿಟ್ಟರು. 

        ಅವರು ಲೋಕೋಪಯೋಗಿ ಇಲಾಖೆಯಲ್ಲಿ ಗುಮಾಸ್ತರಾಗಿದ್ದರು. ಇದೇ ಬೆಂಗಳೂರಲ್ಲಿ ಒಂದಷ್ಟು ಸಮಯ ವೃತ್ತಿ ಮಾಡಿದ್ದರು. ಆದರೆ ಅವರಿಗೆ ಸಿಗಬೇಕಾದ ಪೆನ್ಶನ್ ಹಲವು ಕಾರಣಗಳಿಂದ ತಡೆ ಹಿಡಿಯಲ್ಪಟ್ಟಿತ್ತು. ಹಲವಾರು ಸಲ ಬೆಂಗಳೂರಿಗೆ ಬಂದರೂ ಪ್ರಯೋಜವಾಗಲಿಲ್ಲ. ಈ ವಯಸ್ಸಿನಲ್ಲಿ ದೂರದ ಊರಿನಿಂದ ಬಂದು ಹೋಗುವುದು ಬಹಳ ಕಷ್ಟವಾಗಿತ್ತು. ಇಷ್ಟೆಲ್ಲ ಮಾತನಾಡಿದ ಮೇಲೆ ಹೇಳಿದರು..".ನಾನು ಬ್ರಾಹ್ಮಣ. ವೃತ್ತಿಯಲ್ಲಿರುವಾಗಲೇ ಪ್ರಮೋಷನ್ ಇನ್ಕ್ರಿಮೆಂಟ್ ಸಿಬಗೇಕಾದದ್ದು ಸಿಗಲಿಲ್ಲ. ನನ್ನಿಂದ  ನಂತರ ಸೇರಿದವರು ಮೇಲೆ ಮೇಲೆ ಹೋಗಿ ಆಫೀಸರ್ ಕೂಡ ಆದರೂ ನಾನು ಮಾತ್ರ ಗುಮಾಸ್ತನಾಗಿಯೇ ಇದ್ದೆ.  ಈಗಲು ಅಷ್ಟೇ...ಪೆನ್ಷನ್ ಗೋಸ್ಕರ ಅಲೆಯುವಂತಹ ಸ್ಥಿತಿ. ಹೇಳಿಕೊಳ್ಳುವಂತಹ ಕಾರಣ ಯಾವುದೂ ಇಲ್ಲ. ಆದರೂ ಅನ್ಯಾಯ ಆಗುತ್ತಾ ಇದೆ. ಬ್ರಾಹ್ಮಣ್ಯ ಒಂದು ಶಾಪ ಅಂತ ಅನ್ನಿಸಿ ತುಂಬ ಕಾಲ ಆಯಿತು." 

        ನಾನು ಬ್ರಾಹ್ಮಣ ಅಂತ ನನ್ನ ಮುಖನೋಡಿಯೇ ಅವರು ಇದನ್ನು ಹೇಳಿದರು. ಅವರ ಕೊನೆಯ ಮಾತು ನನಗೇನೂ ಹೊಸತಲ್ಲ. ಹಲವು ಕಡೆ ಇದೇ ರೀತಿಯ ಮಾತುಗಳನ್ನು ಕೇಳುತ್ತಿದ್ದೇನೆ. ಅದು ವಿಶೇಷವೇನೂ ಅಲ್ಲ. ನನ್ನ ಮಗಳು ಮೊನ್ನೆ ಮೊನ್ನೆ ಕಾಲೇಜು ಸೇರಬೇಕಾದಾಗ ಇದೇ ಮಾತನ್ನು ಹೇಳಿದ್ದಳು.  ಶೇಕಡಾ ತೊಂಭತ್ತು ಅಂಕಗಳನ್ನು ಪಡೆದು ತೇರ್ಗಡೆಯಾದ ಅವಳು ಕಾಲೇಜ್ ಸೇರಬೇಕಾದರೆ, ಶೇಕಡಾ ನಲ್ವತ್ತು ಅಂಕ ಪಡೆದ ಆಕೆಯ ಸಹಪಾಠಿ ಸುಲಭದಲ್ಲೆ ಯಾವುದೇ ವೆಚ್ಚ ಇಲ್ಲದೇ ಕಾಲೇಜಿಗೆ ಸೇರಿದ್ದಳು. ಹಾಗಾಗಿ ಬ್ರಾಹ್ಮಣ ಎಂಬುದರ ಅರ್ಥ ಬೇರೆಯೇ ಆಗಿ ಹೋಗಿದೆ.   

        ಅವರಲ್ಲಿ ಕೇಳಿದೆ ಊಟ ಆಯಿತ ಅಂತ ವಿಚಾರಿಸಿದೆ. ಇಲ್ಲ ಇನ್ನು ಮಾಡಬೇಕು. ಬ್ರಾಹ್ಮಣರಲ್ವ...ಬನ್ನಿ ಮನೆಗೆ ಊಟ ಮಾಡೋಣ ಅಂತ ಕರೆದೆ. ಅವರು ನಯವಾಗಿ ನಿರಾಕರಿಸಿದರು.  ಅವರು  ಮತ್ತೆ ಮುಂದುವರೆದು ಹೇಳಿದರು, " ಕೆಲಸದಲ್ಲಿರುವವರೆಗೆ ಸಂಬಳ ಒಂದು ಬರುತ್ತದೆ, ಅದರಿಂದ ಜೀವನ ಒಂದು ಆಯಿತು ಎನ್ನುವುದು ಬಿಟ್ಟರೆ ಯಾವ ನೆಮ್ಮದಿಯೂ ಸಿಗಲಿಲ್ಲ. ಈಗ ಕೆಲಸ ಬಿಟ್ಟಮೇಲೂ ಅದೇ ಅವಸ್ಥೆ. ಬ್ರಾಹ್ಮಣ್ಯ ಒಂದು ಶಾಪ"

        ನಾನು ಇನ್ನೂ ಮುಂದೆ ಹೋಗಿ ಹೇಳಿದೆ, "ಬ್ರಹ್ಮ ಎಂಬುದರ ಅರ್ಥ ತಿಳಿಯದೇ ಇರುವಲ್ಲಿ ಬ್ರಾಹ್ಮಣನಾಗಿರುವುದೇ ಅಪರಾಧ."  ಮದ್ಯ ವ್ಯಸನಿಗಳ ನಡುವೆ ಮದ್ಯ ಮುಟ್ಟದವನು ಇದ್ದರೆ ಹೇಗೆ, ಹಾಗೆ. ಬಹಳ ವಿಶಾಲವಾದ ಅರ್ಥದಲ್ಲಿ ನಾನು ಹೇಳಿದ್ದೆ. ಆದರೆ ಅವರು ಅದನ್ನು ಹೇಗೆ ಸ್ವೀಕರಿಸಿಕೊಂಡರೋ ನನಗೆ ತಿಳಿಯದು. ಯಾಕೆಂದರೆ ಇಂತಹ ಗಹನ ಅರ್ಥದ ಮಾತುಗಳು ಎಲ್ಲರಿಗೂ ಅರ್ಥವಾಗುವುದಿಲ್ಲ. ಯಾಕೆಂದರೆ ಬ್ರಹ್ಮ ಶಬ್ದ ಅನರ್ಥವಾಗಿ ಯಾವುದೋ ಬಗೆಯಲ್ಲಿ ಸೀಮಿತ ವಾಗಿ ಹೋಗಿದೆ. ಬ್ರಾಹ್ಮಣರ ನಡುವೆ ಕೂಡ ನಾನು ಹೇಳಿದ ಮಾತು ಅನ್ವಯವಾಗುತ್ತದೆ ಎಂದು ಅವರಿಗೆ ಅರಿವಾಯಿತೊ ಇಲ್ಲವೋ ಗೊತ್ತಿಲ್ಲ. ನಮ್ಮಲ್ಲಿ ಒಂದು ಪ್ರವೃತ್ತಿ ಇದೆ, ಗಹನವಾದ ವಿಚಾರ ಪರೋಕ್ಷವಾಗಿ ಹೇಳೀದರೆ ನಮಗಲ್ಲ ಎಂದು ತಿಳಿಯುವ ಜಾಣರಿದ್ದಾರೆ.   ಬ್ರಹ್ಮ ಇದರ ಗಂಭೀರತೆ ಅರಿವಾಗಬೇಕಾದರೆ ಅದಷ್ಟು ಸುಲಭ ಸಾಧ್ಯವಲ್ಲ. ಬ್ರಾಹ್ಮಣ ಒಂದು ಶುದ್ದ ಸಂಸ್ಕಾರ ಎಂದು ತಿಳಿಯುವಾಗ  ಜೀವನವೇ ಕಳೆದು ಹೋಗಿರುತ್ತದೆ. ಈ ನಡುವೇ ನಾವು ಅದನ್ನು ತೀರ ಲೌಕಿಕವಾಗಿ ಅರ್ಥ ಮಾಡಿಕೊಳ್ಳುತ್ತಿದ್ದೇವೆ. ಪರಸ್ಪರ ಸಂಘರ್ಷಕ್ಕೆ ಇಳಿದು ಬಿಡುತ್ತೇವೆ. ಮುಂದೆ ಹೋಗುವ ಭರದಲ್ಲಿ ನಾವು ಏನನ್ನು ಹಿಂದಕ್ಕೆ ಹಾಕುತ್ತಿದ್ದೇವೆ ಎಂದು ಅರಿವಿರುವುದಿಲ್ಲ. ಬ್ರಾಹ್ಮಣ್ಯ ಆಗ ಒಂದು ಶಾಪವಾಗಿ ಕಾಣುತ್ತದೆ. 



Tuesday, April 16, 2024

ಭಾಷೆ ಒಂದು ಸಂಸ್ಕಾರ

"ಭಾಷೆ ಉಳಿಯಬೇಕು. ಅದರೆ ಅದು ಹೇಗೆ ಉಳಿಯಬೇಕು?"

ಪ್ರತಿ ಬಾರಿ ಏನಾದರೊಂದು ವಿಚಾರವನ್ನು ಪ್ರಸ್ತಾಪಿಸಿ ಚರ್ಚೆಮಾಡಿ ಅಭಿಪ್ರಾಯ ಕೇಳುವುದು ನನ್ನ ಮಗಳ ಒಂದು ಹವ್ಯಾಸ. ಆಕೆಗೆ ಅನುಭವಕ್ಕೆ ಬರುವ ವಿಚಾರ ವೈವಿಧ್ಯಗಳು ತಂದು ನನ್ನಲ್ಲಿ ವಿನಿಮಯ ಮಾಡುತ್ತಿರುತ್ತಾಳೆ.   ಹಲವು ಸಲ ಗಂಭೀರ ವಿಚಾರಗಳು ನಮ್ಮೊಳಗೆ ಚರ್ಚೆಯಾಗುತ್ತವೆ. ಈ ಬಾರಿ ಆಕೆಯ ಕಾಲೇಜಲ್ಲಿ ನಡೆದ ಒಂದು ಘಟನೆಯ ಬಗ್ಗೆ ಚರ್ಚೆ. ಯಾರೋ ಒಬ್ಬರು ಹಿಂದಿ ಭಾಷೆಯವರು ಬಂದಿದ್ದರು. ಅವರು ಬಂದು ಮೂರು ವರ್ಷವಾದರೂ ಕನ್ನಡ ಭಾಷೆಯಲ್ಲಿ ಮಾತನಾಡುತ್ತಿರಲಿಲ್ಲ. ಆಗ ಒಬ್ಬಾಕೆ ಅವರಲ್ಲಿ ಕೇಳಿದಳಂತೆ ಕನ್ನಡ ರಾಜ್ಯದಲ್ಲಿ ಕನ್ನಡಕ್ಕೆ ಆದ್ಯತೆ. ಯಾಕೆ ಕನ್ನಡ ಕಲಿತಿಲ್ಲ? ಕರ್ನಾಟಕದಲ್ಲಿದ್ದರೆ ಕನ್ನಡ ಕಲಿಯಬೇಕು? ಇಲ್ಲಿ ಬಂದು ಹಿಂದಿ ಮಾತನಾಡುವ ಬದಲು ಕನ್ನಡವನ್ನು ಕಲಿತು ಮಾತನಾಡಬೇಕು. ಈಬಾರಿ ಇದರ ಬಗ್ಗೆ ನನ್ನಲ್ಲಿ ಅಭಿಪ್ರಾಯ ಕೇಳಿದಳು. ನನಗೂ ಇದರಲ್ಲಿ ತಪ್ಪೇನು ಕಾಣಲಿಲ್ಲ.  ಆದರೆ ಚಿಂತನೆ ಯಾವಾಗಲೂ ಸೀಮಿತವಾಗಿರಬಾರದು. ಚಿಂತನೆಯ ದೃಷ್ಟಿ ವಿಶಾಲವಾಗಿರಬೇಕು. ಇದು ನನ್ನ ಅಭಿಮತ. ಪ್ರತಿಬಾರಿಯು ಹಲವು ವಿಚಾರಗಳಲ್ಲಿ ವಿಷದವಾಗಿ ನನ್ನೊಡ ಪಾಟ್ ಕ್ಯಾಶ್ ಮಾಡುವ ಮಗಳಿಗೆ ನಾನು ಏನು ಹೇಳಬಲ್ಲೆ ಎಂಬ ಕುತೂಹಲವಿತ್ತು. ಆ ಹುಡುಗಿ ಹೇಳಿದ ಮಾತು  ಬಹಳ ನ್ಯಾಯವಾದ ಮಾತು. ಕನ್ನಡನಾಡಲ್ಲಿ ಕನ್ನಡವನ್ನು ಕಲಿತು ಮಾತನಾಡಬೇಕು. ಅದು ನಾಡಿಗೆ ಭೂಮಿಯ ಸಂಸ್ಕೃತಿಗೆ ಸಲ್ಲಿಸುವ ಗೌರವ.  ಚಿಂತನೆಯನ್ನು ಮತ್ತಷ್ಟು ವಿಶಾಲಗೊಳಿಸಿದರೆ, ನಾನು ಅದನ್ನೇ ಆಕೆಯಲ್ಲಿ ಹೇಳಿದೆ. ಭಾಷೆ ಉಳಿಯಬೇಕು. ಅದರೆ ಅದು ಹೇಗೆ ಉಳಿಯಬೇಕು ಯಾವ ಬಗೆಯಲ್ಲಿರಬೇಕು? ಎನ್ನುವುದು ಅಷ್ಟೇ ಮುಖ್ಯವಾಗುತ್ತದೆ.

  ಹಿಂದಿಯವರು ಒಂದುವೇಳೆ ಕನ್ನಡ ಕಲಿಯುವ ಮನಸ್ಸು ಮಾಡಿದರೆ ಅವರು ಕಾಣುವ ಕನ್ನಡ ಹೇಗಿರಬೇಕು ಎನ್ನುವುದು ಅಷ್ಟೇ ಪ್ರಾಮುಖ್ಯತೆಯನ್ನು ಕೊಡುತ್ತದೆ.  ಆಕೆಯ ಆವೇಶ ಭರಿತವಾದ ಗಂಭೀರವಾದಕ್ಕೆ ಎಲ್ಲರೂ ಚಪ್ಪಾಳೆ ಹೊಡೆಯುತ್ತಾರೆ. ಆದರೆ ಉಳಿದಂತೆ  ಭಾಷೆಯ ಬಗ್ಗೆ ಚಿಂತಿಸುವವರು ಕಡಿಮೆ.  ವಾಸ್ತವದ ಸ್ಥಿತಿ ಹೇಗಿರುತ್ತದೆ ಎಂದರೆ ಒಂದುವೇಳೆ ಆಕೆಯಲ್ಲೇ ಕೇಳಿದರೆ,  ಕನ್ನಡದ ಸಾಹಿತಿಗಳ ಹೆಸರು, ಕವಿಗಳ ಹೆಸರು. ಹೋಗಲಿ ಕನ್ನಡದ ಅಕ್ಷರಮಾಲೆಯನ್ನಾದರೂ ಹೇಳುವಷ್ಟು ಜ್ಞಾನ ಇರಬಹುದೇ? ನಂಬುವುದು ಕಷ್ಟ. ಸಾಹಿತಿ ಕವಿಗಳ ಹೆಸರಿಗಿಂತ ಅವರು ಬರೆದ ಪುಸ್ತಕಗಳಿಗಿಂತ ಸಿನಿಮಾ ನಟ ನಟಿಯರ ಬಗ್ಗೆ ಅವರ ಸಿನಿಮಾಗಳ ಬಗ್ಗೆ ತಿಳಿದಿರುತ್ತದೆ. ಬಾಯಾರಿದಾಗ ನೀರು ಕುಡಿಯಬೇಕು ಹೌದು. ನಾವು ಕುಡಿಯುವ ನೀರು ಪರಿಶುದ್ದವಾಗಿರಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. 

ಭಾಷೆ ಎಂಬುದು ಪರಸ್ಪರ ಸಂವಹನಕ್ಕೆ ಇರುವ ಒಂದು ಮಾಧ್ಯಮ. ಮನುಷ್ಯ ಮನುಷ್ಯನದ್ದು ಜೀವ ಜೀವಗಳ ಸಂಸ್ಕಾರ ಅರಿವಿಗೆ ಬರುವುದೇ ಭಾಷೆಗಳಿಂದ. ಅದು ಯಾವ ಭಾಷೆಯೂ ಇರಬಹುದು. ಒಂದು ಶುದ್ದ    ಸಂಸ್ಕಾರ ಒಂದು ಭಾಷೆಯಿಂದ ವ್ಯಕ್ತವಾಗುವಾಗ ಸಂಸ್ಕಾರಕ್ಕೆ ವ್ಯಕ್ತವಾಗುವ ಗೌರವ ಭಾಷೆಗೂ ವ್ಯಕ್ತವಾಗುತ್ತದೆ. ಅದರಂತೆ ಕೆಟ್ಟ ಸಂಸ್ಕಾರಕ್ಕೆ ಭಾಷೆ ಮಾಧ್ಯಮವಾಗುವಾಗ ಅಲ್ಲಿ ಭಾಷೆಗೂ ಸಲ್ಲುವ ಮಾನದಂಡ ಅದೇ ಆಗಿರುತ್ತದೆ. ಒಬ್ಬ ಪ್ರವಚನಕಾರ ಉದಾತ್ತ ತತ್ವಗಳನ್ನು ಭಾಷೆಯ ಮೂಲಕ ಪ್ರವಚಿಸುವಾಗ ಭಾಷೆಗೌರವಿಸುವಂತೆ, ಒಬ್ಬ ಮದ್ಯವ್ಯಸನಿ ಕುಡುಕ ಅದೇ ಭಾಷೆಯಲ್ಲಿ ಆವಾಚ್ಯತೆಯನ್ನು ಪ್ರದರ್ಶಿಸುತ್ತಾನೆ ಎಂದಾದರೆ ಭಾಷೆ ಯಾವ ಮಟ್ಟಕ್ಕೆ ಇಳಿದು ಬಿಡುತ್ತದೆ ಎಂದು ಅರಿವಾಗುತ್ತದೆ.  ಇದು ಒಂದಾದರೆ ಭಾಷೆ ಕೇವಲ ಮಾತುಗಳ ಶಕ್ತಿ, ಅಂದರೆ ವಾಕ್ ಸಾಮಾರ್ಥ್ಯವನ್ನು ಅನುಸರಿಸುತ್ತದೆ. ಹೀಗಿರುವಾಗ ಒಬ್ಬ ಮೂಗನಿಗೆ ಯಾವ ಭಾಷೆಯ ಬಾಂಧವ್ಯ ಒದಗಿ ಬರುತ್ತದೆ? ಆತನ ಸಂವಹನ ಸಲ್ಲಿಸುವ ಮಾತುಗಳು ಯಾವ ಭಾಷೆಯಲ್ಲಾದರೂ ಅದು ಒಂದೇ ಆಗಿರುತ್ತದೆ. ಕನ್ನಡವನ್ನು ಅರ್ಥವಿಸುವಂತೆ, ಅದನ್ನು ಹಿಂದಿಯವನೂ ಅರ್ಥವಿಸಿಕೊಳ್ಳಬಲ್ಲ. ಹಕ್ಕಿಯ ಕಲರವಕ್ಕೆ ಪ್ರಕೃತಿಯ ಸಂವೇದನೆಗಳಿಗೆ  ಯಾವ ಭಾಷೆಯ ಸೀಮೆಯೂ ಇರುವುದಿಲ್ಲ. ಕರ್ನಾಟಕದಲ್ಲಿ ಕೋಗಿಲೆ ಕೂಗಿದಂತೆ ಅಲ್ಲಿ ದೂರದ ಉತ್ತರದಲ್ಲೂ ಕೋಗಿಲೆ ಕೂಗಿಬಿಡುತ್ತದೆ. ಪ್ರಕೃತಿಯ ಸ್ಪಂದನೆಯೂ ಅದೇ ಬಗೆಯಲ್ಲಿರುತ್ತದೆ. ಕೂಗುವ ಕೋಗಿಲೆಗೆ, ಕೈ ಭುಜ ಕುಣಿಸುವ ಮೂಗನಿಗೆ ಇಲ್ಲದ ಭಾಷಾಭೇದ ನಾಲಿಗೆಯಲ್ಲಿ ವಾಕ್ ಶಕ್ತಿಯನ್ನು ಹೊಂದಿರುವವನಿಗೆ ಇರುತ್ತದೆ. ಮಾತನಾಡಬಲ್ಲವನು ಸಾಮರಸ್ಯ ಬಲ್ಲವನಲ್ಲ. 

ಯಾವುದೇ ವಸ್ತುವಿನ ಅಥವಾ ಜೀವಗಳ ಅಸ್ತಿತ್ವ ಇರುವುದು ಅದರ ಬಳಕೆಯಲ್ಲಿ ಮನುಷ್ಯನಾದರೂ ಜೀವದಲ್ಲಿರುವುದಕ್ಕಿಂತಲೂ ತಾನು ಹೇಗಿದ್ದೇ ಎಂಬುದರಲ್ಲಿ ಅಸ್ತಿತ್ವವನ್ನು ಕಾಣುತ್ತಾನೆ. ಹಾಡುವ ಸಂಗೀತ ಒಂದೇ ಆದರೂ ಬೀದಿ ಬದಿಯ ಭಿಕ್ಷುಕನ ಹಾಡಿಗೂ ವೇದಿಕೆಯ ಮೇಲಿನ ಗಾಯಕನ ಗಾಯನಕ್ಕೂ ಅಸ್ತಿತ್ವದಲ್ಲಿ ವೆತ್ಯಾಸವಿರುತ್ತದೆ.  ಭಾಷೆಯೂ ಹಾಗೆ ಅದರ ಉಪಯೋಗದಲ್ಲಿ ಅದರ ಅಸ್ತಿತ್ವ ಇರುತ್ತದೆ. ಲೋಟದಲ್ಲಿ ಹಾಲು ತುಂಬಿಸಿದರೂ ಮದ್ಯ ತುಂಬಿದರೂ ಕೆಲಸ ಒಂದೇ. ತುಂಬಿಸುವುದು. ಅದರಂತೆ ಭಾಷೆ. ಅದು ಪರಿಶುದ್ದವಾಗುವುದು ಅದರ ಬಳಕೆಯಲ್ಲಿ.  ಕನ್ನಡ ಎಷ್ಟು ಪರಿಶುದ್ದವಾಗಿ ಉಳಿದೆ ಎಂಬುದನ್ನು ಆತ್ಮಾವಲೋಕನ ಮಾಡಬೇಕು. ಬೆಂಗಳೂರಿನ ಹಾದಿ ಹೋಕನಲ್ಲಿ ಒಂದು ಸಲ ವಿಳಾಸ ವಿಚಾರಿಸಿ, ಆತ ಹೇಳುವ ವಿಳಾಸ, ಸ್ಟ್ರೈ ಟ್ ಹೋಗಿ, ಡೆಡ್ ಎಂಡಲ್ಲಿ ರೈಟ್ ತೆಗೆಯಿರಿ, ಹೀಗೆ ಕನ್ನಡವೇ ಇಲ್ಲದ ಕನ್ನಡ ಭಾಷೆಯ ಅನುಭವವಾಗುತ್ತದೆ. ಉಪಯೋಗಿಸುವ ಭಾಷೆಯಲ್ಲಿ ಅಲ್ಲೊಂದು ಇಲ್ಲೊಂದು ಕನ್ನಡವಿದ್ದರೆ ಅದು ಕನ್ನಡದ ಜೀವಂತಿಗೆಯ ಲಕ್ಷಣ ಎಂದು ತಿಳಿಯಬೇಕು. ನಮಗರಿವ ಇಂಗ್ಲೀಷ್  ಸಾಹೇಬನ ಭಾಷೆ ನಮಗೆ ಸುಲಭವಾಗಿ ಇಷ್ಟವಾಗುತ್ತದೆ. ಇಲ್ಲಿ ಇಂಗ್ಲೀಷ್ ಮಾತನಾಡಿದರೆ ತಪ್ಪಲ್ಲ. ಬದಲಿಗೆ ಹಿಂದಿಯೋ ತಮಿಳೋ ಮಲಯಾಳವೋ ಅಪ್ಪಟ ಭಾರತೀಯ ಭಾಷೆ  ಮಾತನಾಡಿದರೆ ಅಲ್ಲಿ ಭಾಷಾಭಿಮಾನದ ಪಾಠ ಎದುರಾಗುತ್ತದೆ.  ಇಂಗ್ಲೀಷ್ ಬೇಕಾಗುವವನಿಗೆ ನಮ್ಮದೆ ಹಿಂದಿ ತಮಿಳು ಯಾಕೆ ಬೇಡವಾಗುತ್ತದೆ? ನಿಜವಾಗಿಯೂ ನಮ್ಮಲ್ಲಿ ಆತ್ಮಾಭಿಮಾನ ಜಾಗೃತವಾಗಬೇಕಾಗಿರುವುದು ನಮ್ಮ ಸಾಹೋದರ್ಯದಲ್ಲಿ. ನಮ್ಮ ಒಡ ಹುಟ್ಟಿದವನ ಮಾತು ನಾವು ಕೇಳಲಾರೆವು. ಆತನನ್ನು ನಮ್ಮವ ಎಂದು ತಿಳಿಯಲಾರೆವು,  ಬದಲಿಗೆ ಯಾರೋ ಬೀದಿ ಹೋಕ, ತೃತಿಯ ಪ್ರಜೆ ನಮ್ಮ ಬಂಧುವಾಗುತ್ತಾನೆ. 

ಕನ್ನಡ ಭಾಷೆಯ ಪ್ರತಿನಿಧಿಗಳು ಎಂದು ಸ್ವತಃ ಕರೆಸಲ್ಪಡುವ ಸಿನಿಮಾ ನಟ ನಟಿಯರು ಆಗಾಗ ತಮ್ಮ ಅಸ್ತಿತ್ವ ಪ್ರದರ್ಶನಕ್ಕೆ ಮಾಧ್ಯಮಗಳ ಎದುರು ಬಂದು ಬಿಡುತ್ತಾರೆ. ತಮ್ಮ ಸಿನಿಮಾಗಳಲ್ಲಿ ಉದ್ದುದ್ದ ಭಾಷಾಭಿಮಾನವನ್ನು ತೋರಿಸುವ  ಇವರು ಅಭಿಮಾನಿಗಳ ಕರತಾಡನ ಗಿಟ್ಟಿಸುತ್ತಾರೆ. ಕರತಾಡನದೋಂದಿಗೆ ಅವರ ಸಿನಿಮಾಗಳೂ ಓಡುತ್ತವೆ, ಒಂದಷ್ಟು ಸಂಪಾದನೆಯೂ ಆಗಿಬಿಡುತ್ತದೆ. ಅದೇ ನಟ ನಟಿಯರು ಹೀಗೆ ಮಾಧ್ಯಮಗಳ ಎದುರು ಬಂದು ಮಾತನಾಡುವಾಗ ಅಲ್ಲಿ ಕನ್ನಡಕ್ಕಿಂತ ಹೆಚ್ಚು  ಆಂಗ್ಲ ಭಾಷೆ ಬಳಕೆಯಾಗುತ್ತದೆ. ಯಾಕೆಂದರೆ ಅವರಿಗೆ ಬರುವ ಕನ್ನಡ ಅಷ್ಟೇ. ಸಿನಿಮಾದಲ್ಲಿ ಅವರಿಗೆ ಸಹಾಯಕ್ಕೆ ಬರುವ ನಿರ್ದೇಶಕ, ಸಂಭಾಷಣೆ ಬರಹಗಾರ ಇಲ್ಲಿ ಸಹಾಯಕ್ಕೆ ಬರುವುದಿಲ್ಲ. ಹಾಗಾಗಿ ಸಿನಿಮಾದಲ್ಲಿ ವ್ಯಕ್ತವಾಗುವ ಭಾಷಾಭಿಮಾನದ ಕಾರಣ ವ್ಯಕ್ತವಾಗುತ್ತದೆ.  ಇತ್ತೀಚೆಗೆ ಹೋರಾಟಗಾರರೊಬ್ಬರು ಅನ್ಯ ಭಾಷೆಯವರಿಗೆ ಬೈಯುವ ಮಾತುಗಳನ್ನು ಕೇಳುವಾಗ ನಿಜಕ್ಕೂ ಆತಂಕವಾಗಿದ್ದು ಇದೂ ನಮ್ಮ ಕನ್ನಡ ಭಾಷೆಯಲ್ಲಿದೆಯಾ ...ಇದ್ದರೂ ಅದು ಹೀಗೂ ಬಹಿರಂಗ ಪ್ರದರ್ಶನಕ್ಕೆ ಬಂದು ವೀರಾವೇಶಕ್ಕೆ ಪ್ರತೀಕವಾಗಬೇಕಾ? ಹೋರಾಟ ಅತ್ಯವಶ್ಯ ಆದರೆ ಆ ಮೂಲಕ ಹೊರಗೆ ದರ್ಶಿಸಲ್ಪಡುವ ಸಂಸ್ಕಾರ ಭಾಷೆಯ ಗೌರವವನ್ನು ಹೇಗೆ ಅವನತಿಗೆ ತಳ್ಳಿಬಿಡುತ್ತದೆ ಎಂದು  ಯೋಚಿಸುವುದಿಲ್ಲ. ಕನ್ನಡ ಉಳಿಯಬೇಕು ನಿಜ. ಆದರೆ ಮುಂದಿನ ತಲೆಮಾರಿಗೆ ನಾವು ಎಂತಹ ಕನ್ನಡ ಭಾಷೆಯನ್ನು ಉಳಿಸಿಬಿಡುತ್ತೇವೆ ಎಂದರೆ ದಿಗಿಲಾಗಿಬಿಡುತ್ತದೆ. 

ಇದು ಕೇವಲ ಕನ್ನಡಕ್ಕೆ ಸೀಮಿತವಾಗಿಲ್ಲ. ಪ್ರತಿಯೊಂದು ಭಾಷೆಗೂ ಇದು ಅನ್ವಯವಾಗಬಹುದು.