Thursday, June 21, 2018

ಯೋಗವಿದ್ದರೆ ಒಂದೇ ದಿನ



ಶಾಲೆಗೆ ಹೋಗುವ ಪುಟ್ಟ ಕಂದಮ್ಮ ತನ್ನಷ್ಟೇ ಉದ್ದದ ಯೋಗ ಚಾಪೆ ಕಂಕುಳಿಗೆ ನೇತಾಡಿಸಿ ಶಾಲೆಗೆ ಹೊರಟಿತ್ತು.  “ನಾನು ಕೇಳಿದೆ ಏನಮ್ಮ? ಇದು? “
“ ಇವತ್ತು ಶಾಲೆಯಲ್ಲಿ ಯೋಗ ಪ್ರಾಕ್ಟೀಸ್ ಇದೆ. ಯೋಗ ಡೇ  ಗೆ ಶಾಲೆಯಲ್ಲಿ ಪ್ರೋಗ್ರಾಂ ಇದೆ.”
ಕೇವಲ ಯೋಗ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗುವ ಈ ಯೋಗಾಭ್ಯಾಸ ನೋಡಿದರೆ ಖೇದವೆನಿಸುತ್ತದೆ. ಮಕ್ಕಳಿಗೆ ಯೋಗಭ್ಯಾಸ ಮಾಡುವ ಹೊತ್ತಾದರೂ ಯಾವಾಗ? ಮಟ ಮಟ ಮಧ್ಯಾಹ್ನದ ಬಿಸಿಲಿಗೆ ಶಾಲೆಯ ಅಂಗಳದಲ್ಲಿ ಯೋಗ ಪ್ರಾಕ್ಟೀಸ್ ನಡೆಸುತ್ತಿದ್ದರು. ಇನ್ನು ಕಲಿಸುವ ಟೀಚರಮ್ಮನೋ , ಆಕೆಗೆ ಯೋ


ಗದ ಬಗ್ಗೆ ಎಷ್ಟು ಅರಿವಿದೆ ಎಂದು ಆಕೆಯನ್ನು ನೋಡಿದರೆ ಅರ್ಥವಾಗುತ್ತದೆ,. ಯೋಗವೆಂದರೆ ಒಂದು ಡ್ಯಾನ್ಸ್ ಪ್ರೋಗ್ರಾಂ ನಂತೆ ಪರಿಗಣಿಸುವ ಈ ಯೋಗಾಭ್ಯಾಸದ ಉದ್ದೇಶವಾದರೂ ಏನು?
ಈಗಿನ ಅಧುನಿಕ ಶಿಕ್ಷಣ ರೀತಿಯಾಗಲೀ ಜೀವನ ಶೈಲಿಯಲ್ಲೇ ಆಗಲಿ ಯೋಗಭ್ಯಾಸವೆಂದರೆ ಸಮಯ ವಿದ್ದಾಗ ಮಾಡುವ ಡಿಪ್ಲೋಮಾದಂತೆ. ಸರ್ಟಿ ಫಿಕೇಟ್ ಇಲ್ಲದೇ ಇದ್ದರೂ ಪರವಾಗಿಲ್ಲ ಎಂಬಂತಹ ಸ್ಥಿತಿ. 
ದೇಹ,  ಉಸಿರು ಮತ್ತು ಮನಸ್ಸು ಈ ಮೂರನ್ನೂ ತನ್ನ ನಿಯಂತ್ರಣದಲ್ಲಿರಿಸುವುದೇ ಯೋಗ. ನಿಜವಾಗಿಯೂ ಈ ಮೂರು ನಿಯಂತ್ರಣದಲ್ಲಿರಬೇಕಾದರೆ ಯೋಗ ಇರಲೇಬೇಕು.  ಈ ಮೂರು ನಿಯಂತ್ರಣದಲ್ಲಿದ್ದರೆ ಆ ಜೀವನ ಹೇಗಿರಬಹುದು ಎಂದು ಕಲ್ಪಿಸಿದರೆ  ಅದೊಂದು ಸುಯೋಗ. ಹಾಗಾಗಿಯೇ ಭಗವಂತ ಗೀತೆಯಲ್ಲಿ ಹೇಳಿರುವುದು “ಯೋಗಃ ಕರ್ಮಸುಕೌಶಲಂ” ಎಂದು.
ಈಗ ಯೋಗಜೀವನ ಪ್ರಪಂಚದಾದ್ಯಂತ ಜನಪ್ರಿಯವಾಗಿದೆ. ಯೋಗ ದಿನಾಚರಣೆಯನ್ನು ಲೋಕವೇ ಆಚರಿಸುತ್ತದೆ. ಆದರೂ ನಾವು ಯೋಗಾಭ್ಯಾಸವನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಹಲವರು ಹೇಳುವುದಿದೆ, ಯೋಗ ಮಾಡುವುದಕ್ಕೆ ಸಮಯ ಇಲ್ಲ. ಇದೊಂದು ಮೂರ್ಖತನದ ಅಭಿಪ್ರಾಯ. ಸಮಯ ಇಲ್ಲದವನಿಗೆ ಭೂಮಿ ಮೇಲೆ ಬದುಕುವುದಕ್ಕೂ ಸಮಯವಿಲ್ಲ. ಯೋಗಾಭ್ಯಾಸಕ್ಕೆ ಸಮಯ ಬೇಡ. ಮಾಡಬೇಕು ಎಂಬ ಅರ್ಪಣಾಭಾವ ತುಡಿತ ಮನಸ್ಸಿನಲ್ಲಿರಬೇಕಾದದ್ದು ಮುಖ್ಯ. ಬಹಳ ಮಂದಿಗೆ ಇರುವ ಕೊರತೆ ಅದೊಂದೇ. ಮಾಡಲೇ ಬೇಕು ಎಂಬ ಅರ್ಪಣಾ ಭಾವ ಇರುವುದಿಲ್ಲ. ದಿನದ ಇಪ್ಪತ್ತನಾಲ್ಕು ಘಂಟೆಗಳಲ್ಲಿ ಹದಿನೈದು ನಿಮಿಷವೂ ಸಮಯಾವಕಾಶ ಇಲ್ಲದೇ ಇರುವ ಜೀವನವಾದರೂ ಯಾವ ಸಾರ್ಥದಕತೆಗೆ?

ಒಂದು ದಿನ ಕೆಲಸದ ಒತ್ತಡ ತೀವ್ರವಾಗಿರುತ್ತದೆ. ಗಡಿಬಿಡಿಯಲ್ಲಿ ಹಲವು ಕೆಲಸವನ್ನು ಬೇಡ ಎಂದು ಬದಿಗಿಡುತ್ತೇವೆ. ವಿಪರ್ಯಾಸವೆಂದರೆ ಹಲವು ಕೆಲಸದ ಗಡಿಬಿಡಿ ಇದ್ದರೆ  ಯೋಗಭ್ಯಾಸವನ್ನು ನಾವು ಬೇಡ ಅಂತ ಮೊದಲು ಬದಿಗಿಡುತ್ತೇವೆ. ಇವತ್ತು ಆ ಕೆಲಸ ಅಗತ್ಯವಿದೆ. ಹಾಗಾಗಿ ಇವತ್ತಿಗೆ ಯೋಗಾಭ್ಯಾಸ ಬೇಡ.   ಯೋಗವೆಂದರೆ ಅದು ಸಮಯವಿದ್ದರೆ ಮಾತ್ರ ಮಾಡುವ ಸಾಧನ. ಯೋಗಾಭ್ಯಾಸಕ್ಕೆ ನಮ್ಮ ಧೋರಣೆಯನ್ನು ನಾವು ಬದಲಿಸಿಕೊಳ್ಳಬೇಕು.
ಇಷ್ಟು ವರ್ಷಗಳಲ್ಲಿ ಭಾರತ ಮತ್ತು ಹಿಂದೂ ಧರ್ಮ ಪ್ರಪಂಚಕ್ಕೆ ಏನು ಕೊಟ್ಟಿದೆ  ಎಂದು ತಿಳಿಯದೇ ಇರಬಹುದು. ಆದರೆ ವಿಶ್ವ ಯೋಗ ದಿನಾಚರಣೆ ಪ್ರಪಂಚಕ್ಕೆ ಹಿಂದೂ ಧರ್ಮದ ಮತ್ತು ಭಾರತದ ಕೊಡುಗೆ ಏನು ಎಂಬುದನ್ನು ನೆನಪಿಸಿಕೊಡುತ್ತದೆ. ವಿಶ್ವ ಯೋಗ ದಿನಾಚರಣೆ ಅದು ಕೇವಲ ಜಾಗೃತಿಯನ್ನು ಉಂಟು ಮಾಡುವುದಕ್ಕೆ ಮಾತ್ರ ಸೀಮಿತ. ಅದುವೇ ಯೋಗವಲ್ಲ. ಯೋಗವೆಂದರೆ ನಾವು ಕಾಣದ ಪ್ರಪಂಚ. ಆ ಪ್ರಪಂಚದ ರೂಪವನ್ನು ಯಾರೂ ವಿವರಿಸಲು ಸಾಧ್ಯವಿಲ್ಲ.  ಅದನ್ನು ಸಂಚರಿಸಿಯೇ ಅರಿಯಬೇಕು. ಆಗಲೇ ಈ ಪ್ರಪಂಚ ಜ್ಞಾನ ಲಭ್ಯವಾಗುತ್ತದೆ. ಹಾಗಾಗಿ ವಿಶ್ವ ಯೋಗದಿನಾಚರಣೆ ಆ ಯೋಗ ಪ್ರಪಂಚದ ಬಾಗಿಲಿಗೆ ನಮ್ಮನ್ನು ತಂದು ನಿಲ್ಲಿಸಬಹುದು. ಆ ಬಾಗಿಲು ದಾಟಿ ಮುಂದಕ್ಕೆ ಹೊಗಬೇಕಾದರೆ ನಮ್ಮಲ್ಲಿ ಅರ್ಪಣಾ ಮನೋಭಾವ ಮೂಡಬೇಕು.
ಯೋಗವೆಂಬುದು ಪ್ರದರ್ಶನಕ್ಕಾಗಲೀ, ಪ್ರಚಾರಕ್ಕಾಗಲೀ, ಅಥವಾ ಚಾಲೆಂಜ್ ಮಾಡುವುದಕ್ಕಾಗಲೀ ಇರುವ ವಿಷಯವಲ್ಲ. ಅದು ಕೇವಲ ಸ್ವಕೀಯ. ತೀರಾ ಖಾಸಗಿತನವನ್ನು ಅದರಲ್ಲಿ ಅನುಭವಿಸಿದರೆ ಹೆಚ್ಚು ಪರಿಣಾಮಕಾರಿ. ಮತ್ತು ಮನಸ್ಸಿಗೆ ಅತಿ ಹೆಚ್ಚು ಸಂತೋಷವನ್ನೂ ಸಮಾಧಾನವನ್ನು ನೀಡುತ್ತದೆ. ಇಲ್ಲಿ ಬಲವಂತದ ಒತ್ತಡ ಮನೋಭಾವ ಸಂಪೂರ್ಣ ದೂರವಿರಿಸಬೇಕು. ನಾವೆಷ್ಟು ಈ ಗುಣಗಳಿಗೆ ಸ್ಪಂದಿಸುತ್ತೇವೋ ಅದರ ಬಹುಪಾಲು ಪ್ರಭಾವವನ್ನು ಪರಿಣಾಮವನ್ನೂ ಯೋಗಾಭ್ಯಾಸದಿಂದ ಪಡೆಯಬಹುದು. ನಾವು ಮೂರಡಿ ಹೆಜ್ಜೆ ಇರಿಸಿದರೆ ಅದು ನೂರಡಿ ದೂರ ನಮ್ಮನ್ನು ಒಯ್ಯುತ್ತದೆ. ಆ ಮೂರಡಿ ಪ್ರಾರಂಭದಲ್ಲಿ ಇರಿಸುವ ನಿಷ್ಠೆ ನಮ್ಮಲ್ಲಿ ಬರಬೇಕು. ಇದು ಎಲ್ಲಾ ಕೆಲಸದ ನಂತರ ಮಾಡುವ ಕ್ರಿಯೆಯಲ್ಲ. ಎಲ್ಲ ಕೆಲಸಕ್ಕಿಂತಲೂ ಮೊದಲು ಮಾಡಲೇ ಬೇಕಾದ ಕ್ರಿಯೆಯೇ ಯೋಗಾಭ್ಯಾಸ. ಮೂಂಜಾನೆಯ ಅರ್ಧ ತಾಸು ನಿದ್ದೆಯನ್ನು ದೂರವಿರಿಸಿದರೆ ಅದು ದಿನದ ಎಲ್ಲ ಸಮಯವನ್ನು ಒದಗಿಸಿಕೊಡುತ್ತದೆ.  ಸಮಯಕ್ಕಿಂತಲೂ ಮಾಡಲೇ ಬೇಕು ಎನ್ನುವ ತುಡಿತ ಅದೊಂದೇ ಪ್ರಧಾನವಾಗುತ್ತದೆ.
ಯೋಗ ಅದು ಒಂದೇ ದಿನವಾಗಿರುತ್ತದೆ. ನಂತರ ಅದು ನಮ್ಮ ಅರ್ಹತೆಯಾಗಬೇಕು. ನಾವು ಆ ಅರ್ಹತೆಯನ್ನು ಗಳಿಸುವ ಇಚ್ಛಾಶಕ್ತಿಯನ್ನು ತೋರುವ ಸಂಕಲ್ಪಮಾಡಬೇಕು.