Friday, August 25, 2023

ಮಂತ್ರೋಪದೇಶ


    ನಾವು ಬಾಲ್ಯದಲ್ಲಿ ಭಜನೆ ಕಲಿಯುವಾಗ ಒಂದು ಸಲ ಭಜನೆಯಲ್ಲಿ ಬ್ರಹ್ಮ ಎಂಬ ಶಬ್ದ ಬಂತು. ನಾನು ಅದನ್ನು ತಪ್ಪಾಗಿ ಬ್ರಮ್ಮ ಎಂದು ಉಚ್ಚರಿಸುತ್ತಿದ್ದೆ. ಅದನ್ನು ಕೇಳಿದ ನನ್ನಜ್ಜ  ಅದನ್ನು ತಿದ್ದುವುದಕ್ಕೆ ಯತ್ನಿಸಿದರು. ಬ್ರಮ್ಮ ಅಲ್ಲ ಬ್ರಹ್ಮಾ...ಅಂತ ಒತ್ತಿ ಹೇಳಿದರು. ಮೊದಲಿಗೆ ನನಗೆ ಬ್ರಮ್ಮ ಮತ್ತು ಬ್ರಹ್ಮಕ್ಕೆ ವೆತ್ಯಾಸವೇ ತಿಳಿಯಲಿಲ್ಲ. ಆ ವಯಸ್ಸು ಅಂತಹದು. ಶಾಲೆಯಲ್ಲಿ ಅಧ್ಯಾಪಕರು ಏನು ಹೇಳುತ್ತಾರೋ ಅಥವಾ ನಾವು ಏನು ಕೇಳುತ್ತೇವೋ ಅದೇ ವೇದವಾಕ್ಯವಾಗಿ ಸ್ಥಿರವಾಗಿಬಿಡುತ್ತದೆ. ಬ್ರಮ್ಮ.. ಪದೇ ಪದೇ ಒತ್ತಿ ಹೇಳಿದೆ. ಅಜ್ಜ ಅಕ್ಷರದ ಸ್ವರಗಳನ್ನು ಬಿಡಿಸಿ ಒಂದೋಂದಾಗಿ ಹೇಳಿದಾಗ ಕೆಲವೊಮ್ಮೆ ಸರಿಯಾದರೂ ಅಕ್ಷರಗಳನ್ನು ಜೋಡಿಸಿ ಶಬ್ದ ಉಚ್ಚರಿಸುವಾಗ ಅದು ಬ್ರಮ್ಮವಾಗಿ ತಪ್ಪು ಉಚ್ಚಾರವೇ ಬಂದು ಬಿಡುತ್ತಿತ್ತು. ಮುಖ್ಯವಾಗಿ ನನಗೆ ತಪ್ಪು ಏನು ಎಂದು ಅರ್ಥವಾಗುವಲ್ಲಿ  ಅರ್ಧ ದಿನ ಕಳೆದು ಹೋಗಿತ್ತು. ಅಜ್ಜ ಹಟ ಬಿಡಲಿಲ್ಲ. ನಾನು ಸರಿಯಾಗಿ ಉಚ್ಚರಿಸುವ ತನಕ ಕುಳಿತಲ್ಲಿಂದ ಏಳುವುದಕ್ಕೆ ಬಿಡಲಿಲ್ಲ. ಬ್ರಹ್ಮ ಎಂಬುದು ಬ್ರಹ್ಮ ಸಮಸ್ಯೆಯಾಗಿ ಕೆಲವೊಮ್ಮೆ ಕಣ್ಣೀರು ಒತ್ತರಿಸಿ ಬಂತು ಅಜ್ಜ ಮತ್ತೂ ಅದನ್ನೆ ತಿದ್ದುವುದಕ್ಕೆ ಯತ್ನಿಸಿದರು.

ನಮ್ಮಜ್ಜ ವೇದ ಮೂರ್ತಿಗಳು.  ಋಗ್ವೇದದ ಎಂಟು ಅಷ್ಟಕವೂ  ಅವರ ನಾಲಿಗೆ ತುದಿಯಲ್ಲಿ ಕುಣಿದಾಡುತ್ತಿತ್ತು. ಸರಸ್ವತಿ ವರ ಪುತ್ರ. ಆ ಕಾಲದಲ್ಲಿ ಪುಸ್ತಕ ಇಲ್ಲದೆ ಗುರುಗಳಿಂದ ಬಾಯ್ದೆರೆಯಾಗಿ ಉಪದೇಶಗೊಂಡ ಮಂತ್ರವಿದ್ಯೆ ಅದು ಪರಿಶುದ್ಧವಾಗಿತ್ತು. ಮಂತ್ರದ ಉಚ್ಚಾರಗಳು ಅದರ ಸ್ಪಷ್ಟತೆ ಅದಕ್ಕೆ ಸಾಕ್ಷಿಯಾಗಿತ್ತು.  ಪುಸ್ತಕ ಓದಿ ಮಂತ್ರ ಕಲಿತರೆ ನಿಮ್ಮದೃಷ್ಟಿಯೂ ನಿಮ್ಮ ಗ್ರಹಿಕೆಯೂ ನಿಮ್ಮನ್ನು ವಂಚಿಸಬಹುದು. ಆದರೆ ಬಾಯ್ದೆರೆಯಾಗಿ ಗುರು ಹೇಳುವುದನ್ನು ಅನುಸರಿಸಿ ಪಠಿಸಿದಾಗ ನಾವು ಏನು ಹೇಳುತ್ತೇವೆ ಗುರುಗಳು  ಆಗಲೇ ಅದನ್ನು ಕೇಳುತ್ತಾರೆ. ತಪ್ಪುಗಳು ಬೇಗನೆ ಸರಿಯಾಗುತ್ತವೆ. ಅಥವಾ ತಪ್ಪುಗಳನ್ನು ಕಲಿಯುವ ಸಂಭವ ಕಡಿಮೆ. ನಾವು ಕಲಿಕೆಯಲ್ಲಿ ತಪ್ಪನ್ನು ಉಚ್ಚರಿಸಿದರೆ ಅದುವೇ ಶಾಶ್ವತವಾಗಿಬಿಡುತ್ತದೆ. ಸರಸ್ವತಿ ಅದನ್ನೇ ಅನುಗ್ರಹಿಸಿಬಿಡುತ್ತಾಳೆ.  ಮಂತ್ರ ಗುರೂಪದೇಶ ಇಲ್ಲದೆ ಉಚ್ಚರಿಸುವುದು ಸಾಧ್ಯವಿಲ್ಲ. ಗುರು ಅನುಗ್ರಹ ಇಲ್ಲದೇ  ಉಚ್ಚರಿಸುವುದೂ ಅಪರಾಧ.  ಇದು ಅಜ್ಜ ಹೇಳುತ್ತಿದ್ದ ನುಡಿಮುತ್ತುಗಳು.  ಅಜ್ಜನದ್ದು ಸ್ಪಟಿಕದಂತೆ ಸ್ಫುಟವಾಗಿ ಸ್ವಚ್ಛವಾಗಿ ನಿಸ್ಸಂದೇಹದ ಉಚ್ಚಾರ. ಮಂತ್ರ ಉಚ್ಚರಿಸುವ ಕ್ರಮವೇ ಹಾಗೆ. ಹಾಗಾಗಿ ನಾವು ಹೀಗೆ ಸಹಜವಾಗಿ ಮಾತನಾಡುವಾಗ ಅಕ್ಷರಗಳನ್ನು ತಪ್ಪಾಗಿ ಉಚ್ಚರಿಸಿದರೆ ’ಹ’ ದ ಬದಲು ’ಅ’  ಪ್ರಾಣಾಕ್ಷರವನ್ನು ಹಗುರವಾಗಿ ಉಚ್ಚರಿಸಿದರೆ ಅಜ್ಜ ಸಹಿಸುತ್ತಿರಲಿಲ್ಲ. ಅದನ್ನು ಸರಿಯಾಗಿ ಉಚ್ಚರಿಸುವ ತನಕ ಅವರು ನಮ್ಮನ್ನು ಬಿಡುತ್ತಿರಲಿಲ್ಲ. ಮಂತ್ರೋಚ್ಚಾರಣೆಯಲ್ಲಿ ಇದ್ದ ಶ್ರದ್ದೆ ಅದು ಸಹಜ ಮಾತಿನ ಪ್ರತೀ ಶಬ್ದದಲ್ಲೂ  ವ್ಯಕ್ತವಾಗುತ್ತಿತ್ತು. ಈಗಲೂ ನನಗೆ ಅರಿವಿಲ್ಲದೇ ಆ ಸ್ವಭಾವ ನನ್ನಲ್ಲೂ ಜಾಗೃತವಾಗಿದೆ. ಅದಕ್ಕೆ ಕಾರಣ ನನ್ನಜ್ಜನ ಮಂತ್ರೋಪದೇಶ. 

ಬ್ರಹ್ಮ  ಮತ್ತು ಬ್ರಮ್ಮ ಇದಕ್ಕೆ ವೆತ್ಯಾಸ ತಿಳಿಯದ ನಾನು ಸ್ಪಷ್ಟ ಉಚ್ಚಾರಕ್ಕೆ ಹೆಣಗಾಡಿದೆ. ಕೊನೆಗೆ ಅಜ್ಜ ಬ್ರಮ್ಮ ಎಂದು ಬರೆಯುವುದಕ್ಕೆ ಹೇಳಿದರು. ನಂತರ ಬ್ರಹ್ಮ ಎಂಬ ಶಬ್ದವನ್ನು ಬ್ರ್ +ಅ+ಹ್+ಮ. ಇದು ಕೇಳುವುದಕ್ಕೆ ಬಹಳ ಸುಲಭವಾದ ಶಬ್ದ. ಆದರೆ ಸರಿಯಾಗಿ ಕಲಿತವರು ಇಂದಿಗೂ ಇದನ್ನು ತಪ್ಪಾಗಿ ಉಚ್ಚರಿಸುವುದನ್ನು ಕೇಳಿ ಇರಿಸು ಮುರಿಸು ಅನುಭವಿಸಿದ್ದೇನೆ. ಬ್ರಹ್ಮ ಎಂದು ಹೇಳುವಾಗ ಹಲವು ಸಲ ಬ್ರ ಭ್ರ ಆಗಿ ಮಹಾ ಪ್ರಾಣವಾಗಿಬಿಡುತ್ತದೆ. ಇಲ್ಲ ಮ ಶಬ್ದಕ್ಕೆ ಒತ್ತು ಬಂದು ಹ ಉಚ್ಚಾರ ವ್ಯಯವಾಗಿಬಿಡುತ್ತದೆ. ನಿಜಕ್ಕೂ ನನ್ನ ಸತ್ವವನ್ನೇ ಹೀರಿದ ಶಬ್ದವಾಗಿತ್ತು. ಕೇವಲ ಎರಡಕ್ಷರದ ಶಬ್ದ ಅದೆಷ್ಟು ಕಠಿಣ? ಬ್ರಹ್ಮ ಅಥವಾ ಬ್ರಾಹ್ಮಣ ಎರಡೂ ಉಚ್ಚರಿಸುವುದೇ ಇಷ್ಟು ಕಷ್ಟವಾದರೆ....ಅದೇ ತತ್ವದಲ್ಲಿ ಬದುಕುವುದು ಎಷ್ಟು ಕಷ್ಟವಾಗಬೇಡ? ಇಲ್ಲಿ    ಬ್ರ ಸರಿಯಾಗುವಾಗ ಹ್ಮ ಸರಿಯಾಗದೆ ತೊಂದರೆ ಕೊಡುತ್ತಿತ್ತು. ಅಜ್ಜ ಬಿಡುವುದೇ ಇಲ್ಲ ಹತ್ತು ಸಲ ಬಿಟ್ಟು ನೂರಾರು ಸಲ ಉಚ್ಚರಿಸಿ, ಯಾವುದೋ ಶಬ್ದದ ಜತೆಗೆ ಸೇರಿಸಿ ಉಚ್ಚರಿಸುವಂತೆ ತೋರಿಸಿದರು. ಇಲ್ಲ ಸರಿಯಾಗಲೇ ಇಲ್ಲ. ಮುಖ್ಯವಾಗಿ ಉಚ್ಚಾರ ವೆತ್ಯಾಸ ತಿಳಿಯುವುದೇ ಕಷ್ಟವಾಗಿತ್ತು. ಬ್ರಹ್ಮ ಎಂದರೆ ದೊಡ್ಡದು...ನಿಜಕ್ಕೂ ನನಗೆ ಅದು ದೊಡ್ಡದಾಗಿ ಬ್ರಹ್ಮ ಸಮಸ್ಯೆಯೇ ಎದುರಾಗಿಬಿಟ್ಟಿತು. ಬ್ರಹ್ಮ ...ಬ್ರಾಹ್ಮಣ...ಹೀಗೆ ಬ್ರಾಹ್ಮಣನಾಗಿ ಇರುವುದು ಎಷ್ಟು ಕಷ್ಟವೋ ಅದನ್ನು ಉಚ್ಚರಿಸುವುದೂ ಅಷ್ಟೇ ಕಷ್ಟ ಎಂದು ಭಾಸವಾಯಿತು. ಕೊನೆಗೂ ನಾನು ಬ್ರಹ್ಮ ಎಂಬ ಸ್ಪಷ್ಟ ಉಚ್ಚಾರದಲ್ಲಿ ಅದನ್ನು ಹೇಳಿದಾಗ ಹೊತ್ತು ಸಂಜೆಯಾಗಿತ್ತು. ಪೂರ್ಣ ಶಬ್ದದ ಬ್ರಹ್ಮಾ ಎಂಬ ಉಚ್ಚಾರಕ್ಕೆ ಇಡೀದಿನ ತೆಗೆದುಕೊಂಡೆ. ಅಂದಿನಿಂದ ನಾನು ಶಬ್ದೋಚ್ಚಾರದಲ್ಲಿ ಹೆಚ್ಚು ಜಾಗರೂಕನಾದೆ. ಮೊದಲಿಗೆ ಬರೆದ ಅಕ್ಷರಗಳನ್ನು ಅರ್ಥವಿಸತೊಡಗಿದೆ.  ಅಜ್ಜನು ಅದೇ ರೀತಿ,  ಹೊರಗೆ ಎಷ್ಟೇ ಕಲಿಯಲ್ಲಿ ಅವರಲ್ಲಿ ಶಿಷ್ಯರಾಗುವಾಗ ಅವರು ಅಕ್ಷರ ಮಾಲೆಯಿಂದ ತೊಡಗುತ್ತಾರೆ. ಇದು ಸಿರಿಯಾದ ಶಿಕ್ಷಣ ಕ್ರಮ. ಮಂಗಳೂರಲ್ಲಿರುವಾಗ ನಗರದಲ್ಲಿ ದೊಡ್ಡ ಅಧಿಕಾರಿಯಾಗಿದ್ದವರು ಅವರ ಬಳಿ ಶ್ಲೋಕ ಕಲಿಯಲು ಬಂದರಂತೆ, ಇವರು ಶುರುವಿಗೆ ಅವರ ಉಚ್ಚಾರ ನೋಡಿ ಆ ಆ ಈಈ ಕ ಖ ಗ ಹೇಳಿಸುವುದಕ್ಕೆ ಪ್ರಯತ್ನ ಪಟ್ಟರು.    ಶಾಲೆಯಲ್ಲಿ ಅಧ್ಯಾಪಿಕೆಯರು....ಮೊದಲಿಗೆ ನನಗೆ ಗುರುಗಳಾಗಿ ಸ್ತ್ರೀಯರೇ ಇದ್ದರು. ಅವರು ತಪ್ಪಾಗಿ ಉಚ್ಚರಿಸುವುದನ್ನು ಕೇಳಿ ಹಲವುಸಲ ಇರಿಸು ಮುರಿಸು ಅನುಭವಿಸಿದ್ದೇನೆ. ಆದರೆ ಏನು ಟೀಚರ್ ಗೆ ನಾನು ಹೇಳುವುದಕ್ಕೆ ಸಾಧ್ಯವೇ? ಗುರು ಹೇಗಿದ್ದರೂ ಗುರು. ಅದು ಪ್ರಶ್ನಾತೀತ ಸ್ಥಾನ. ಅಲ್ಲಿ ನಾವು ಕಲಿಯಬೇಕಾದ ಜ್ಞಾನವಷ್ಟೇ ಪ್ರಧಾನ. ಗುರುವಿನ ವೈಯಕ್ತಿಕವಲ್ಲ. ಗುರುವಿನಲ್ಲಿ ನಾವು ಅರಿಯಬೇಕಾದ ಜ್ಞಾನವಿದ್ದರೆ ಅದೇ ಸರ್ವಸ್ವ. ಉಳಿದವುಗಳೆಲ್ಲ ಕ್ಷುಲ್ಲಕ. ಗುರುವಿನ ತಪ್ಪು ಪ್ರಮಾದಗಳೇನಿದ್ದರೂ ಅದು ಅವರ ಖಾಸಗೀತನದ ಲಾಭನಷ್ಟಗಳು. ಅದು ಅವರಿಗೇ ಮೀಸಲು! ಅಜ್ಜನ ಗುರು ಸ್ಥಾನದ ಬಗ್ಗೆ ನನಗಿದ್ದ ಭಾವನೆಗಳು ಇದು. ಅಜ್ಜ ಪ್ರಥಮದಿಂದ ಹೇಳುತ್ತಿದ್ದುದೇ ಹೀಗೆ, ನನ್ನನ್ನು ನೋಡಬೇಡ, ವಿದ್ಯೆಯನ್ನು ನೋಡು. ಜ್ಞಾನಾರ್ಥಗಳಿಗೆ ಗುರುವೇ ಪ್ರಥಮ ಗುರುವೇ ಅಂತಿಮ. 

ಬಾಲ್ಯದಲ್ಲೇ ನನಗೆ ಬ್ರಹ್ಮೋಪದೇಶವಾಯಿತು. ಅಜ್ಜನಿಂದಲೇ ಬ್ರಹ್ಮೋಪದೇಶ,ಜತೆಗೆ ಸಂಧ್ಯಾವಂದನೆ, ಒಂದಷ್ಟು ವೇದೋಪದೇಶವಾಯಿತು.ವೇದಾಧ್ಯಯನದ ಮೊದಲು ನನಗೆ ಅಕ್ಷರಾಭ್ಯಾಸ ಪುನಃ ಮಾಡಿಸಿದರು. ಆ ಸಮಯದಲ್ಲಿ ಉಚ್ಚಾರದ ಬಗ್ಗೆ ಅದೇ ಅಜ್ಜನಿಂದ ಶಭಾಶ್ ಗಿರಿಯನ್ನೂ ಪಡೆದಿದ್ದೆ. ಯಾಕೆಂದರೆ ಉಚ್ಚಾರದ ಬಗ್ಗೆ ನನಗಿದ್ದ ಆಸಕ್ತಿ.  ಅದುವರೆಗೆ ನಾನು ಶಾಲೆಯಲ್ಲಿ ಕಲಿತದ್ದು ಏನೂ ಅಲ್ಲ ಎಂಬ ಭಾವನೆ ಬಂದಿತ್ತು. ಕಾರಣ ಮಂತ್ರೋಚ್ಚಾರ ಅಷ್ಟು ಕಠಿಣವಾಗಿತ್ತು ಎಂದರೆ ನೆಟ್ಟಗೆ ಬಾಗದೆ ಕುಳಿತು ಮಂತ್ರ ಹೇಳುವಾಗ ಅದು ನಾಭಿಯಿಂದ ಸ್ವರ ಹೊರಡಬೇಕು. ಹೀಗೆ ಮಂತ್ರ ಉರು ಹೊಡೆದ ನಂತರ ಅದರ ಪಾಠ ಆದನಂತರ ಸುಸ್ತಾಗಿಬಿಡುತ್ತಿತ್ತು. ನಿಜಕ್ಕೂ ಮಂತ್ರೋಚ್ಚಾರ ಅದು ಸುಸ್ಪಷ್ಟವಾಗಿ ಸ್ಫಟಿಕದ ಉಚ್ಚಾರ ಇರಬೇಕು. ಅಕ್ಷರ ಉಚ್ಚಾರದಲ್ಲಿ ಗೊಂದಲ ಅನುಮಾನಗಳಿರಬಾರದು. ಎಲ್ಲಿ ಸ್ವರ ಭಾರ ಬೇಕೋ ಅಲ್ಲಿ ಸ್ಪಷ್ಟವಾಗಿ ಅದನ್ನು ಉಚ್ಚರಿಸಬೇಕು. ಉಚ್ಚಾರದಲ್ಲಿ ಅತೀ ಸಣ್ಣ ಸೂಕ್ಷ್ಮ ತಪ್ಪಾದರೂ ಅಜ್ಜ ಹುಡುಕಿ ತೆಗೆದು ಎಚ್ಚರಿಸುತ್ತಿದ್ದರು.  ಸ್ವತಃ ಅಜ್ಜನ ಮಂತ್ರೋಚ್ಚಾರವೂ ಹಾಗೆ. ನೂರು ಜನ ವೈದಿಕ ಪುರೋಹಿತರು ಮಂತ್ರ ಹೇಳಿದರೂ ಅಜ್ಜನ ಮಂತ್ರೋಚ್ಚಾರ ವಿಶೇಷವಾಗಿ ಗಮನಕ್ಕೆ ಬರುತ್ತಿತ್ತು. ಅಷ್ಟು ಸ್ಪಷ್ಟವಾದ ಉಚ್ಚಾರ. ಆಗ ಅದೆಲ್ಲ ಅಷ್ಟು ಗಂಭೀರ ಅನ್ನಿಸುತ್ತಿರಲಿಲ್ಲ. ಆದರೆ ಈಗ ಅದನ್ನೆಲ್ಲ ಯೋಚಿಸುತ್ತಿದ್ದಂತೆ ಅದೆಷ್ಟು ಪವಿತ್ರವಾದ ಪ್ರತಿಭೆ ಅದು ಅಂತ ಗೌರವ ಮೂಡುತ್ತದೆ. 

ವೇದ ಮಂತ್ರ ಉಚ್ಚಾರ ಎಂದರೆ ಅದು ಸುಮ್ಮನೇ ಒಲಿಯುವುದಿಲ್ಲ.  ಅದರ ಅಕ್ಷರಾಕ್ಷರದ ಉಚ್ಚಾರದಲ್ಲಿ ಸೂಕ್ಷ್ಮವಾದ ಸಂವೇದನೆ ಇರುತ್ತದೆ. ಸ್ವರಭಾರದಲ್ಲಿ ಸಣ್ಣ ವೆತ್ಯಾಸವಾದರೂ ಅದು ಬಹಳ ದೊಡ್ಡ ಪ್ರಮಾದವಾಗುತ್ತದೆ. ಒಂದೊಂದು ಅಕ್ಷರದ ಉಚ್ಚಾರದಲ್ಲಿ ಅರ್ಥ ವೆತ್ಯಾಸಗಳಿರುತ್ತವೆ.  ಶಿಸ್ತು ಬದ್ಧ ಮಂತ್ರೋಚ್ಚಾರಕ್ಕೂ ನಿಯಮವಿದೆ. ಮಂತ್ರಕ್ಕೂ ಶ್ಲೋಕಕ್ಕೂ ವೆತ್ಯಾಸವಿದೆ. ವೇದ ಮಂತ್ರವೆಂದರೆ ಅದು ಯಾರೋ ರಚಿಸಿದ್ದಲ್ಲ. ದೇವ ಕಲ್ಪ. ತಾನಾಗಿಯೇ ಋಷಿಗಳು ಕಂಡುಕೊಂಡದ್ದು.  ಇದರ ಬಗ್ಗೆ ಯೋಚಿಸುವಾಗ ಹಲವು ಸಲ ಅನ್ನಿಸುವುದುಂಟು ಇದರ ಸೃಷ್ಟಿ ಹೇಗೆ? ಜನಗಣ ಮನ ಬರೆದದ್ದು ರವೀಂದ್ರನಾಥ ಠಾಗೋರರು. ಇತಿಹಾಸದಲ್ಲಿ ಕಲಿತದ್ದು. ಎಲ್ಲದಕ್ಕೂ ಸಾಕ್ಷ್ಯವಿದೆ. ಆದರೆ ಮಂತ್ರ ಅದಕ್ಕೆ ಸಾಕ್ಷ್ಯದ ಜಿಜ್ಞಾಸೆಗಿಂತಲೂ ಇದು ಇಂದು ವಾಸ್ತವವಾಗಿ ನಮ್ಮ ಮುಂದೆ ಇದೆ. ಮಂತ್ರದ ವಿಶಿಷ್ಟತೆ ಅದು. 

ಮಂತ್ರ ಹೇಳುವಾಗ ನೆಟ್ಟಗೆ ಬೆನ್ನು ಬಾಗದೇ ಕುಳಿತುಕೊಳ್ಳಬೇಕು. ಸ್ಥಿರವಾದ ನಿಲುವು ಇರಬೇಕು. ಮಂತ್ರ ಉಚ್ಚರಿಸುವಾಗ ಸ್ವರ ಒಳಗಿನ ನಾಭಿಯಿಂದ ಬರಬೇಕು. ಹಾಗೆ ಮಂತ್ರ ಉಚ್ಚರಿಸಿದರೆ ಆತನ ದೇಹಕ್ಕೆ ರೋಗಬಾಧೆಗಳು ಸುಳಿಯುವುದಿಲ್ಲ. ಸುಳಿದರೂ ಅದು ಗಂಭೀರವಾಗುವುದಿಲ್ಲ. ಮಂತ್ರೋಚ್ಚಾರದ ಪ್ರಭಾವ ಅಂತಹುದು. ದೇಹ ಆರೋಗ್ಯವಂತ ಮಾತ್ರವಲ್ಲ. ದೈಹಿಕ ಆಕಾರವೂ ಸಮವಾಗಿರುತ್ತದೆ. ಹೊಟ್ಟೆ ಬೆಳೆಯುವುದಿಲ್ಲ.ಬೆನ್ನು ಬಾಗುವುದಿಲ್ಲ. ಒಂದು ವೇಳೆ ಇದಕ್ಕೆ ವಿಪರೀತವಾಗಿ ಇದ್ದರೆ ಅಲ್ಲಿ ಮಂತ್ರೋಚ್ಚಾರ ಸರಿಯಾಗಿಲ್ಲ ಎಂದೇ ಅರ್ಥ. ಇದು ನನ್ನಜ್ಜ ಹೇಳುತ್ತಿದ್ದ ಮಾತುಗಳು. ಮುಂಜಾನೆಯಿಂದ ಮಧ್ಯಾಹ್ನದ ತನಕ ನೇರ ಕುಳಿತು ವೇದ ಪಾಠ ಮಾಡಿದ ಬಳಿಕ ವೇದಾಧ್ಯಯನದಲ್ಲಿ ಅದನ್ನು ವರ್ಗ ಸಂತೆ...ಅಂದರೆ ಮಂತ್ರವನ್ನು ಆವರ್ತಿಸುತ್ತಾ ಉರು ಹೊಡೆದು ಅದನ್ನು ಅಭ್ಯಾಸ ಮಾಡುವುದು ಎಂದು ಹೇಳುತ್ತಾರೆ. ಅಷ್ಟು ಮಾಡಿ ಅದನ್ನು ಗುರುವಿಗೆ ಒಪ್ಪಿಸಿ ಆಶೀರ್ವಾದ ಪಡೆಯಬೇಕು. ಆಗಲೇ ಆ ವಿದ್ಯೆ ಒಲಿದು ಬರುತ್ತದೆ.  ಹೀಗೆ ವರ್ಗ ಸಂತೆ ಮಾಡಿ ಊಟಕ್ಕೆ ಕುಳಿತರೆ ನಮ್ಮ ದೊಡ್ಡಮ್ಮ..ಅಂದರೆ ಅಜ್ಜಿ..ನನ್ನ ತಾಯಿಯ ಅಮ್ಮ ನನಗೆ ತುಪ್ಪ ಬಡಿಸುತ್ತಿದ್ದರು. ಮಂತ್ರ ಹೇಳುವುದಕ್ಕೆ ತ್ರಾಣ ಬರಬೇಕಲ್ವ ಎಂದು ಅವರು ಊಟಕ್ಕೆ ತುಪ್ಪವನ್ನು ತಪ್ಪಿಸುತ್ತಿರಲಿಲ್ಲ. ಕುಳಿತು ಹೇಳುವುದಾದರೂ ಮಂತ್ರ ಹೇಳುವುದಕ್ಕೆ ಬಹಳ ಪರಿಶ್ರಮವಿದೆ. ಅದೇ ಮಂತ್ರದ ಶಿಸ್ತು. ಆದರೆ ಬರುತ್ತಾ ಬರುತ್ತಾ ನಾನು ಅದರಿಂದ ದೂರಾಗಿ ಹೋದದ್ದು ಬಹಳಷ್ಟು ಮಂತ್ರಗಳನ್ನು ಮರೆತುಬಿಟ್ಟದ್ದು ಈಗ ನಷ್ಟವನ್ನು ನೆನಪಿಸುವಂತೆ ಮಾಡುತ್ತದೆ. ಮಂತ್ರ ಎಂದರೆ ಸರಸ್ವತಿ. ಒಬ್ಬ ಸಂಗೀತಗಾರ ಸಂಗೀತವನ್ನು ಸ್ವರವನ್ನು ಹೇಗೆ ನಿತ್ಯ ಅಭ್ಯಾಸ ಮಾಡುತ್ತಾನೋ ಅದೇ ರೀತಿ ಬ್ರಾಹ್ಮಣನಾದವನು ಮಂತ್ರವನ್ನು ಸದಾ ಅಭ್ಯಾಸ ಮಾಡುತ್ತಿರಬೇಕು. ಅದುವೇ ಆತ ಸರಸ್ವತಿಯನ್ನು ಆರಾಧಿಸುವ ರೀತಿ. ಅದಿಲ್ಲದೇ ಹೋದರೆ ಸರಸ್ವತಿ ನಾಲಿಗೆಯಿಂದ ದೂರವಾಗಿಬಿಡುತ್ತಾಳೆ. ಮಂತ್ರದ ವಿಷಯದಲ್ಲಂತು ಇದು ಪರಮ ಸತ್ಯ. ಹಾಗಾಗಿ ನಾನು ಕಳೆದುಕೊಂಡದ್ದು ದೊಡ್ಡ ದೈವಾನುಗ್ರಹವನ್ನು. ಕೆಲವು ದಿನಗಳ ಹಿಂದೆ  ಅದರ ಗಂಭೀರತೆಯನ್ನು ಗ್ರಹಿಸಿ ಗುರುವಾದ ಅಜ್ಜನನ್ನು ಸ್ಮರಿಸಿ ಶ್ರೀ ರುದ್ರ ಮಂತ್ರವನ್ನು ಪುನಃ ಕರಗತ ಮಾಡಿಕೊಂಡೆ. ಆಗ ಆ ಅಜ್ಜನಿಗೆ ಸಲ್ಲಿಸಿದ ದೊಡ್ಡ ಪ್ರಣಾಮ ಎಂಬಂತೆ ಭಾಸವಾಯಿತು. ಈಗ ನಿಯಮಿತವಾಗಿ ಅಜ್ಜನ ಸ್ಮರಣೆಗೆ ರುದ್ರ ಪಾರಾಯಣ ಮಾಡುತ್ತಿದ್ದೇನೆ. 

ಅಜ್ಜ, ನನ್ನ ಮಟ್ಟಿಗೆ ಅದೊಂದು ದೊಡ್ಡವ್ಯಕ್ತಿತ್ವ. ಈಗ ಅದರ ವಿಸ್ತಾರ ಅರಿವಾಗುತ್ತದೆ. ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಸಂಧ್ಯಾವಂದನೆ ನನ್ನ ದಿನದ ಆದ್ಯತೆಯಲ್ಲಿ ಒಂದು. ಎಲ್ಲಕ್ಕೀಂತ ಮೊದಲು ದಿನದ ನಾಂದಿಯೇ ಅಲ್ಲಿಂದ ಆರಂಭವಾಗುತ್ತದೆ. ಮುಂಜಾನೆಯ ಮೌನದಲ್ಲಿ ಶ್ರೀ ಗುರುಭ್ಯೋ ನಮಃ  ಹರಿಃ ಓಂ ಎಂದು ಗುರುವನ್ನು ಸ್ಮರಿಸಿ ಸಂಧ್ಯಾವಂದನೆ ಆರಂಭಿಸುವಾಗ ಅಲ್ಲಿ ಗುರುವಿನ ಸ್ಥಾನದಲ್ಲಿ ಅಜ್ಜನನ್ನು ಕಾಣುತ್ತೇನೆ. ಸಂಧ್ಯಾವಂದನೆ ! ಬ್ರಹ್ಮೋಪದೇಶದ ನಂತರ ಅಜ್ಜ ಉಪದೇಶಿಸಿದ ಅನುಷ್ಠಾನ ಕ್ರಿಯೆ. ಓಂ ಕಾರದಲ್ಲಿ ಇಡೀ ವಿಶ್ವವೇ ಆಡಗಿದೆ ಎಂದು ಅಜ್ಜ ಹೇಳುತ್ತಿದ್ದರು. ನಾಭಿಯಿಂದ ಓಂಕಾರ ತೊಡಗಿ ಅದು ಬಾಯ್ದೆರೆಯಾಗಿ ಬಂದಾಗ ಹೃದಯದಲ್ಲಿ ಆಗುವ ಕಂಪನವೇ ದೈವ ಸಾನ್ನಿಧ್ಯ. ಆ ದೈವದ ಉಪಾಸನೆಯೇ ಸಂಧ್ಯಾವಂದನೆ. ಅಜ್ಜ ಹೇಳುತ್ತಿದ್ದ ಮಾತುಗಳಿವು. ಓಂಕಾರ ಅದು ಕೇವಲ ಅಕ್ಷರ ಜೋಡಿಸಿದ ಶಬ್ದವಲ್ಲ, ಅದು ಅಂತಂಗದ ಬಾಗಿಲ ತೆರೆಯುವ ಮಂತ್ರ.  ಮುಂಜಾನೆ ಎದ್ದಕೂಡಲೇ ಸ್ನಾನ, ಸಂಧ್ಯಾವಂದನೆ ಎಂದರೆ ಗುರು ಸ್ಮರಣೆ ಮತ್ತು ಪರಮಾತ್ಮ ಸ್ಮರಣೆ ಏಕ ಕಾಲದಲ್ಲಿ ಆಗಿಬಿಡುತ್ತದೆ. ಈಗ ಅನುಭವಿಸುವ ದೈವಾನುಭವಕ್ಕೆ ನನ್ನಜ್ಜನ ಯೋಗದಾನ ಪ್ರಧಾನವಾಗಿಬಿಡುತ್ತದೆ.  ಅಪ್ಪ ಅಮ್ಮ ಜನ್ಮದಿಂದ ಲೋಕವನ್ನು ತೋರಿಸಿದರೆ ಗುರುವಾದವನು ಈ ಲೋಕದಲ್ಲಿ ಇಲ್ಲದೇ ಇದ್ದದ್ದನ್ನು ತೋರಿಸುತ್ತಾನೆ. ಅದರ ಮೂಲ ಸ್ವರೂಪವೇ ಸಂಧ್ಯಾವಂದನೆ. ಅದು ಯಾವುದೇ ರೂಪದಲ್ಲಿ ಮಾಡಿದರೂ  ಪರಮಾತ್ಮನ ಸರಣೆ ಎಂಬುದು ಸಂಧ್ಯಾವಂದನೆಯಾಗುತ್ತದೆ. ತನ್ನಲ್ಲಿ ಏನಿದೆಯೋ ಅದನ್ನು ಕೊಟ್ಟು ಇಚ್ಛಾ ಕ್ರಿಯಾ ಜ್ಞಾನದ ಮೂಲಕ ಸರ್ವಸ್ವನ್ನೂ ಪರಮಾತ್ಮನಿಗೆ ಸಮರ್ಪಿಸುವುದು, ಸಂಧ್ಯಾವಂದನೆಯಲ್ಲಿ ಆಡಂಬರದ ದರ್ಶನವಿಲ್ಲ. ಯಾವುದೇ ಮೂರ್ತಿ ಪೂಜೆ ಇಲ್ಲ. ಆವಾಹನೆ ಪಾದ್ಯ ನೈವೇದ್ಯ ಪರಿಕರಗಳು ಯಾವುದು ಇಲ್ಲದ ತೀರಾ ಖಾಸಗಿಯಾದ ಒಂದು ಆರಾಧನೆ. ಪರಮಾತ್ಮನ ರೂಪ ನಮ್ಮ ಎಣಿಕೆಯಂತೆ ಕಲ್ಪಿಸಬೇಕು. ಯಾರೋ ಬರೆದಿಟ್ಟ ಚಿತ್ರವೂ ಅಲ್ಲ, ಯಾರೋ ಕೆತ್ತಿಕೊಟ್ಟ ಪ್ರತಿಮೆಯೂ ಅಲ್ಲ, ಅದಕ್ಕೆ ಯಾವುದೇ ಗುಡಿಯೂ ಇಲ್ಲ , ಪ್ರತಿಷ್ಠೆ ಅಭಿಷೇಕ ಯಾವುದೂ ಇಲ್ಲದ ಕೇವಲ ಅಂತರಂಗದ ಅನುಷ್ಠಾನ.  ಇದಕ್ಕಿರುವ ಮೌಲ್ಯ ಯಾವ ಯಜ್ಞ ಯಾಗಾದಿಗಳಿಗೂ ಇಲ್ಲ. ಮಾಡುವ ಸರ್ವ ಕರ್ಮ ಫಲಗಳು ಒದಗಿ ಬರಬೇಕಾದರೆ ಸಂಧ್ಯಾವಂದನೆ ಅನುಷ್ಠಾನ ಮೊದಲು ಆಗಬೇಕು. ಅದು ಆಗಬೇಕಾದರೆ ಮೊದಲು ಗುರುವಿನ ಸ್ಮರಣೆಯಾಗಬೇಕು. ಹಾಗಾಗಿ ಎಲ್ಲಕ್ಕಿಂತಲೂ ಮೊದಲು ಈ ಪವಿತ್ರವಾದ ಕರ್ಮವನ್ನು ಬೋಧಿಸಿದ ಅಜ್ಜನ ನೆನಪಾಗುತ್ತದೆ. ಆನಂತರವೇ ದೇವರ ಸಾಕ್ಷಾತ್ಕಾರ ಸಾಧ್ಯವಾಗುತ್ತದೆ. 

ನಮ್ಮ ಸಂಸ್ಕಾರ ನಮ್ಮ ಆರಾಧನ ಕ್ರಮವೆಂದರೆ ವಿಗ್ರಹಾರಾಧನೆ. ಕಣ್ಣಿಗೆ ವೇದ್ಯವಾಗುವ ಭಾಷೆ ಇದು.  ಪ್ರತಿಮೆಯ ರೂಪದಲ್ಲೇ ದೇವರನ್ನು ಸುಲಭದಲ್ಲೇ ಕಾಣುವ ಸಂಸ್ಕಾರ ನಮ್ಮದು. ಆದರೆ ಇದಕ್ಕಿಂತಲೂ ನಮ್ಮ ಭಾವನೆ ಗಾಢವಾಗುವುದು ಅಂತರಂಗದ ದರ್ಶನದಲ್ಲಿ. ಅಲ್ಲಿ ರೂಪವಿಲ್ಲ. ವಾಸ್ತವದಲ್ಲಿ ನಾವು ಕಾಣುವ ರೂಪಗಳು ಯಾರೋ ಬರೆದಿಟ್ಟ ಕೆತ್ತಿಕೊಟ್ಟ ಕಲ್ಪನೆಯ ಕೂಸುಗಳಾದರೆ ಅದಕ್ಕೊಂದು ಮಿತಿ ಅಲ್ಲಿಯೇ ನಿರ್ಣಯವಾಗಿಬಿಡುತ್ತದೆ. ಆದರೆ ಅಂತರಂಗದಲ್ಲಿ ಕಾಣುವ ರೂಪಕ್ಕೆ ನಾವೇ ಕತೃಗಳು. ನಮ್ಮ ಅಂತಃ ಸತ್ವದ ಪರಿಮಿತಿಯ ರೂಪಗಳು.  ಅಜ್ಜನ ಉಪದೇಶದ ಸಾರ ಯಾವ ರೂಪದಲ್ಲಿ ಯಾವ ಗಹನಾರ್ಥ ಅಡಕವಾಗಿತ್ತೊ ತಿಳಿಯದು. ಆದರೆ ಅದು ಈಗ ವಾಸ್ತವದ ಸತ್ಯವಾಗಿ ಕಣ್ಣ ಮುಂದೆ ನಿಂತಹಾಗೆ ಭಾಸವಾಗುತ್ತದೆ. ಇಲ್ಲಿನ  ಮೊದಲ ಹೆಜ್ಜೆಗೆ ಅಜ್ಜನ ಮಂತ್ರೋಪದೇಶವೇ ಕಾರಣವಾಗುತ್ತದೆ. ದೇವರು ಭಗವಂತ ಎಂದರೆ ಅದೊಂದು ಅರಿವು. ಅರಿವು ಅಂದರೆ ಜ್ಞಾನ.  ಗುರುವಿನ ಉಪದೇಶವೇ ಜ್ಞಾನ.  ಈ ಜ್ಞಾನದಲ್ಲೇ ಶ್ರೀಕೃಷ್ಣ ದರ್ಶನ. ಹಾಗಾಗಿಯೇ ಜ್ಞಾನ ರೂಪಿ ಭಗವಂತ. ಇಲ್ಲಿ ಜ್ಞಾನ ಎಂಬುದು ನಮ್ಮ ಸಾಮಾರ್ಥ್ಯಕ್ಕೆ ಹೊಂದಿಕೊಂಡಿರುತ್ತದೆ. ಸಮುದ್ರದ ಬದಿಯಲ್ಲಿ ತಂಬಿಗೆ ಹಿಡಿದು ನಿಂತಂತೆ. ನನ್ನಜ್ಜ ಆ ಸಾಗರದ ನೀರನ್ನು ನನ್ನ ಕೈಯ ತಂಬಿಗೆ ತುಂಬಿಸುತ್ತಾ ಇದ್ದಾರೆ. ತಂಬಿಗೆ ತುಂಬಿ ಬರುತ್ತದೆ. ಮತ್ತೆ ತುಳುಕುತ್ತದೆ. ಅದರಲ್ಲಿ ಇದ್ದ ನೀರಷ್ಟೇ ನನಗೆ ಪ್ರಾಪ್ತಿ. ಆದರೆ ಅಜ್ಜನ ಪ್ರಚೋದನೆ ಮತ್ತಷ್ಟು ಸಾಗರದತ್ತ ದೃಷ್ಟಿ ಹಾಯಿಸುವಂತೆ ಮಾಡುತ್ತದೆ. ಅಜ್ಜನ ಮಂತ್ರೋಪದೇಶ ಅದೊಂದು ದಿವ್ಯ ಅನುಭವ. 


Friday, August 18, 2023

ಭಾವ ರೂಪಗಳು

            ಬೆಂಗಳೂರಿಗೆ ಬಂದ ಆರಂಭದ ದಿನಗಳಲ್ಲಿ ಇಲ್ಲಿನ ಸಂಸ್ಕಾರ ಸಂಸ್ಕೃತಿ ಜನರ ನಡವಳಿಕೆಗಳು ಎಲ್ಲವೂ ಅಪರಿಚಿತವಾಗಿ ಹೊಸದಾಗಿತ್ತು. ನಮ್ಮ ಒಬ್ಬ ಕಕ್ಷಿದಾರರು ಚಿಕ್ಕಪೇಟೆಯ ಗಲ್ಲಿಯೊಂದರಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ವ್ಯವಹಾರ ನಡೆಸುತ್ತಿದ್ದರು. ಅವರ ಆದಾಯ ತೆರಿಗೆ ಮಾರಾಟ ತೆರಿಗೆ ಕೆಲಸಗಳಿಗೆ ನಾನು ಅಲ್ಲಿಗೆ ಹೋಗಬೇಕಾಗುತ್ತಿತ್ತು. ಮೊದಲಿನ ದಿನ ನಾನು ಹುಡುಕಿಕೊಂಡು ಚಿಕ್ಕಪೇಟೆ ಗಲ್ಲಿಯೊಳಗೆ ನುಗ್ಗಿದೆ. ಚಿಕ್ಕಪೇಟೆ ಸುತ್ತಮುತ್ತಲಿನ ಹಲವಾರು ಪೇಟೆಗಳಿವೆ ಅವುಗಳೆಲ್ಲ ಒಂದು ರೀತಿಯ ಚಕ್ರವ್ಯೂಹದಂತೆ ಭಾಸವಾಗುತ್ತಿತ್ತು. ಒಳ ಹೋದರೆ ಎಲ್ಲಿಂದ ಹೊರಬರಬೇಕು ಎಂದು ತಿಳಿಯುತ್ತಲಿರಲಿಲ್ಲ. ನೋ ಪಾರ್ಕಿಂಗ್ ಏಕ ಮುಖ ರಸ್ತೆಗಳು. ಸಂದಿಗೊಂದಿಯ ಅಗಲ ಕಿರಿದಾದ ರಸ್ತೆಗಳು ವಿಚಿತ್ರ ಅನುಭವವಾಗಿತ್ತು. ಎಲ್ಲೋ ವಾಹನ ನಿಲ್ಲಿಸಿ ವಿಳಾಸ ಹುಡುಕುತ್ತಾ ಹೋದರೆ ಮತ್ತೆ ಎಲ್ಲಿ ವಾಹನ ನಿಲ್ಲಿಸಿದ ಜಾಗ ಮರೆತು ಹೋಗಿ ಅದನ್ನು ಹುಡುಕುವುದು ಒಂದು ಕೆಲಸ. ಕೆಲವೊಮ್ಮೆ ಅಲ್ಲಿಂದಲೂ ಟ್ರಾಫಿಕ್ ಪೋಲೀಸರು ಎತ್ತಿಕೊಂಡು ಹೋಗುತ್ತಿದ್ದರು. ಇನ್ನು ಸಂದಿಗೊಂದಿಯಲ್ಲಿರುವ ಮನೆಗಳು ಅದರಲ್ಲಿ ವಾಸಿಸುವ ನೂರಾರು ಕುಟುಂಬಗಳು, ಮನೆ ಯಾವುದು ಜಗಲಿಯಾವುದು ಪಕ್ಕದ ಮನೆಯಾವುದು ಎಂದು ಅರಿವಾಗುತ್ತಿರಲಿಲ್ಲ. ಇಲ್ಲೇ ಶಾಶ್ವತ ಜೀವನವನ್ನು ನಡೆಸುವವರ ಸಹನೆ ಜೀವನ ಶೈಲಿ ಅಚ್ಚರಿಯಾಗುತ್ತಿತ್ತು.  ಹಾಗೆ ಒಂದು ದಿನ ಬಾರ್ ಹುಡುಕಿಕೊಂಡು ಹೋದೆ. ಕೊನೆಗೊಮ್ಮೆ ಸಿಕ್ಕಿ ಬಾರ್ ನೊಳಗೆ ಹೋದೆ. ಬೆಳಗ್ಗೆಯೇ  ಸಾಕಷ್ಟು ಜನ  ತೀರ್ಥ ಸೇವನೆ ಮಾಡುತ್ತಿದ್ದರು. ಬೆಂಗಳೂರಲ್ಲಿ ಇದಕ್ಕೆ ಸಮಯ ನಿಗದಿ ಇರುವುದಿಲ್ಲ. ಜೀವನದ ಸರ್ವಸ್ವವೇ ಅದಾಗಿರುತ್ತದೆ. ಅದೆಲ್ಲ ವೈಯಕ್ತಿಕ. ಬಾರ್ ನ ಮ್ಯಾನೆಜರ್ ಕ್ಯಾಶಿಯರ್ ಎಲ್ಲ ಒಬ್ಬನೇ. ನನಗೆ ಅಚ್ಚರಿಯಾದದ್ದು, ಗ್ರಾಹಕರು ಖಬಾಬ್ ಆಮ್ಲೇಟ್ ಆರ್ಡರ್ ಮಾಡಿದಾಗ  ಈತ ಕೂಗಿ ಹೇಳುತ್ತಿದ್ದ... ಭಟ್ರೆ ಒಂದು ಕಬಾಬ್....... ಭಟ್ರೆ ಒಂದು ಆಮ್ಲೇಟ್.  ನಮ್ಮೂರಿನ ಹೋಟೇಲಿನಲ್ಲಿ ಗೋಳಿಬಜೆಗೆ ಆರ್ಡರ್ ಮಾಡಿದಂತೆ ಇಲ್ಲಿ ಖಬಾಬ್ ಗೆ ಆರ್ಡರ್ ಮಾಡುತ್ತಿದ್ದರು.    ಅರೇ  ಯಾವ ಭಟ್ರು ಇಲ್ಲಿ ಇದನ್ನೆಲ್ಲ ಮಾಡ್ತಾರೆ? ಆಶ್ಚರ್ಯ. ಅಡುಗೆ ಕೋಣೆ ನೋಡುವ ಮನಸ್ಸಾದರೂ ನೋಡುವ ಬಗೆ ಹೇಗೆ? ಇನ್ನು ಆ ರಣರಂಗದ   ವಾತಾವರಣ ಹೇಗಿರುತ್ತದೆಯೋ ಅಂತ ಅಂಜಿಕೆ. ಕೊನೆಗೊಮ್ಮೆ ಭಟ್ಟರು ಹೊರಬಂದರು. ನೋಡಿದರೆ ನನ್ನ ಕಲ್ಪನೆಯ ನನ್ನೂರಿನ ಭಟ್ಟರಿಗೂ ಈ ಭಟ್ಟರಿಗೂ ಅಜಗಜಾಂತರ ವೆತ್ಯಾಸ. ನಾನು ಮತ್ತೆ ಮ್ಯಾನೆಜರ್ ನಲ್ಲಿ ಕೇಳಿದೆ ಇದು ಭಟ್ರಾ?  ಆತ ನಗುತ್ತಾ ಹೇಳಿದ...ಸಾರ್ ಇಲ್ಲಿ ಆಡುಗೆ ಯಾರು ಮಾಡಿದರೂ ಅವರನ್ನು ಭಟ್ರೆ ಅಂತ ಕರೆಯುವುದು.  ಅದು ಜಾತಿ ಸೂಚಕವಲ್ಲ. ಬಹುಶಃ ಇದು ಜಾತಿನಿಂದನೆ ಎಂಬ ಕಾನೂನಿಗೆ ಅನ್ವಯವಾಗುತ್ತಿಲ್ಲ ಕಾಣಬೇಕು. ಇಲ್ಲ ಅಸಲಿ  ಭಟ್ರುಗಳು ಇದನ್ನು ನೋಡುವ ಸಂಭವ ಕಡಿಮೆ.  ಹೀಗಾಗಿ ಇದು ಇನ್ನೂ ಕೇಸ್ ಆಗಿಲ್ಲ.  ಕೇಸ್ ಆಗಬೇಕೋ ಬೇಡವೋ ಎಂಬುದು ನನ್ನ ವಿಷಯವಲ್ಲ. ನಾನು ವಾಸ್ತವದ ವಿಚಾರಗಳನ್ನು ನನ್ನದೇ ವಿವೇಚನೆಯಲ್ಲಿ ನೋಡುವ ಜಾಯಮಾನದವನು.  ನಮ್ಮಗಳ  ಮನಸ್ಸಿನಲ್ಲಿ ಮೊದಲು ನ್ಯಾಯಾನ್ಯಾಯ ತೀರ್ಮಾನವಾಗಬೇಕು. ಆನಂತರ ನ್ಯಾಯಾಲಯ. ಹೇಗೂ ಇರಲಿ. 

ಭಟ್ಟರು ಎಂಬಂತೆ ಹಲವಾರು ಜಾತಿ ಸೂಚಕ ಶಬ್ದಗಳು ನಮ್ಮೊಳಗೆ ಇವೆ. ಕೆಲವರನ್ನುಹೆಸರು ಹಿಡಿದು ಕರಿಯುವ ಬದಲು ಓ ಶೆಟ್ರೆ, ಓ ಭಟ್ರೆ  ಅಥವಾ ಇನ್ನೊಂದು, ಹಾಗೆ ಕರೆದರೆ ಅವರಿಗೆ ಖುಷಿಯಾಗುತ್ತದೆ. ಅದೇ ಅವರಿಗೆ ಗೌರವ ಸೂಚಕವಾಗಿರುತ್ತದೆ. ಇಲ್ಲಿ ಜಾತಿ ಸೂಚಕ ಅಂತ ಅದಕ್ಕೆ ಮುದ್ರೆ ಒತ್ತುವುದು ನಾವೇ? ಆನಂತರ ಅದಕ್ಕೆ ಬೇಕಾಗಿ ಹೋರಾಡುವುದು ನಾವೇ? ಇಲ್ಲವಾದರೆ ಅದು ಕೇವಲ ಒಂದೆರಡು ಅಕ್ಷರಗಳ ಶಬ್ದಗಳು ಮಾತ್ರ. ಅದಕ್ಕೆ ಕೇಸ್ ವ್ಯಾಜ್ಯ  ಅಂತ ಹೊರಡುವಾಗ ಹಲುವು ಸಲ ನನಗೆ ಅರ್ಥವೇ ಕಾಣುವುದಿಲ್ಲ. ಇನ್ನೂ ಹೇಳುವುದೆಂದರೆ ಈಗಿನ ಜನಾಂಗ, ನಮ್ಮ ಮಕ್ಕಳು ಹೀಗೆ ಇವರಿಗೆಲ್ಲ ಹಲವು ಶಬ್ದಗಳು ತೀರಾ ಅಪರಿಚಿತ. ಎಲ್ಲೋ ಸಣ್ಣ ಪುಟ್ಟ ವರ್ಗಗಳ ಜಾತೀ ಸೂಚಕ ಪದಗಳು, ಅದು ಹಲವು ಸಲ ಅವಹೇಳನ ರೂಪದಲ್ಲೇ ಇರಬಹುದು ಅದರ ಪರಿಚಯವಿರುವುದಿಲ್ಲ. ಎಲ್ಲೋ ಹಾಗೆ ಹೀಗೆ ಕೇಳಿ ಅದನ್ನು ಉಚ್ಚರಿಸಿ ಬಿಟ್ಟರೆ ಈಗ ಅದು ಅಪರಾಧವಾಗಿಬಿಡುತ್ತದೆ. ಈಗೀಗ ಘೋರ ಅಪರಾಧಗಳೂ ಮಕ್ಕಳಾಟಿಕೆಯಂತೆ ಕೆಲವೊಮ್ಮೆ ಹಲವರಿಗೆ  ಭಾಸವಾಗುತ್ತದೆ.  ಹಾಗಿರುವಾಗ ಕೆಲವೆಲ್ಲ ಕರೆಗಳಿಗೆ ನಾವು ಔದಾಸಿನ್ಯ ತೋರಿಸುವುದೇ ಸೂಕ್ತ ಅನ್ನಿಸಬಹುದು.  ಒಬ್ಬನನ್ನು ನಾಯಿ ಮಂಗ ಅಥವಾ ಫಟಿಂಗ ಇನ್ನು ಕೆಟ್ಟದಾಗಿ ಹೇಳಬಹುದು. ಅಲ್ಲಿ ಹಲವು ಸಲ ಕರೆಯುವ ಭಾವನೆ ಯಾವುದು ಎಂಬುದೇ ಮುಖ್ಯವಾಗುತ್ತದೆ. ಮುದ್ದಿನಲ್ಲಿ ಸಲುಗೆಯಿಂದ ಇದನ್ನೇಲ್ಲ ಕರೆಯುವುದನ್ನು ನಾವು ಕಂಡು ಸುಮ್ಮನಿರುವುದಿಲ್ಲವೆ? ಯಾಕೆ ಆತ್ಮೀಯತೆಯ ಪರಿಧಿಯದು. ಹಾಗಾಗಿ ಯಾವುದೇ ಶಬ್ದಗಳು ಅವುಗಳ ಬಳಕೆ ಸಂದರ್ಭವೇ ಹೆಚ್ಚು ಪ್ರಧಾನವಾಗಿರುತ್ತವೆ ಹೊರತು ಅವುಗಳ ಜಾತಿಸೂಚಕಗಳಾಗಲಿ, ಅವುಗಳ ಶಬ್ದಾರ್ಥಗಳಾಗಲೀ ಮುಖ್ಯವಾಗುವುದಿಲ್ಲ. ಹಲವು ಸಲ ನಮಗೆ ಬೇಕಾದವರು....ಇಲ್ಲಿ ಬೇಕಾದವರು ಎನ್ನುವುದಕ್ಕೆ ವಿಶಾಲ ಅರ್ಥವಿದೆ. ಅವರು ಕರೆದಾಗ ಈ ಶಬ್ದಗಳ ಪ್ರಾಶಸ್ತ್ಯ ಮೌಲ್ಯ ಲೆಕ್ಕ ಹಾಕಲಾಗುತ್ತದೆ. 

ಶಬ್ದಾರ್ಥಗಳ ಹಿಂದೆ ಹೋದಾಗ ಇಲ್ಲಿ ಕೇವಲ ಕನ್ನಡ ಅಥವಾ ನಮಗೆ ತಿಳಿದ ಭಾಷೆಗೆ ಸೀಮಿತವಾಗಿ ಕರೆ ಇರುವುದಿಲ್ಲ. ಈಗ ನಮ್ಮ ಮನೆ ಮಾತೃ ಭಾಷೆ  ಮರಾಠಿ ಇದೆ. ಯಾರೋ ಒಬ್ಬನನ್ನು ತಾತ್ಸಾರವಾಗಿ ನಮ್ಮದೇ ಭಾಷೆಯಲ್ಲಿ ಆತನ ಜಾತಿಯ ಬಗ್ಗೆ ಅವಹೇಳನವಾಗಿ ಮಾತನಾಡಿದರೆ , ಮನೆಯವರಿಗೆ ಮಾತ್ರವೇ ಅರ್ಥವಾದೀತು. ಯಾರನ್ನು ತಿರಸ್ಕಾರದಿಂದ ಕಂಡಿದ್ದೇವೋ ಅವರಿಗೆ ಅರ್ಥವಾಗುವುದೂ ಇಲ್ಲ, ಅದು ವಿವಾದವಾಗುವುದೂ ಇಲ್ಲ.  ತಾತ್ಪರ್ಯ ಇಷ್ಟೆ ಶಬ್ದಗಳು ನಮಗೆ ಅರ್ಥವಾದಾಗ ಮಾತ್ರ ಅದು ಗಂಭೀರವಾಗುತ್ತದೆ. ಬೈಗುಳಗಳೂ ಅಷ್ಟೇ. ನಮ್ಮ ಕರಾವಳಿ ಜಿಲ್ಲೆಗಳಲ್ಲಿ ಇಂತಹ ಸಂಭವ ಬಹಳ ಕಡಿಮೆ. ಯಾಕೆಂದರೆ ಅಲ್ಲಿ ಯಾರಿಗೆ ಯಾವ ಭಾಷೆ ಬರುತ್ತದೆ ಎಂಬುದು ಬ್ರಹ್ಮನಿಗೂ ಊಹಿಸುವುದು ಕಷ್ಟ. 

ಯಾವುದೇ ವಿವಾದಗಳು ಹಲವು ಸಲ ಹುಟ್ಟಿಕೊಳ್ಳುವುದು ನಮ್ಮ ನಡುವಿನ ವಿಶ್ವಾಸದ ಕೊರತೆಯಿಂದ. ನಮ್ಮೊಳಗಿನ ಕೀಳರಿಮೆಯಿಂದ.  ನಾವದನ್ನು ಮೆಟ್ಟಿನಿಂತರೆ ನಮ್ಮ ಮನಸ್ಸು ಶುಚಿಯಾಗಿಬಿಡುತ್ತದೆ. ನಮ್ಮ ಮಾನ ಅವಮಾನಗಳೂ ಯಾರೊ ಒಬ್ಬನು ನಿರ್ಧರಿಸುತ್ತಾನೆ ಎನ್ನುವುದೇ ಕೆಲವು ಸಲ ಅಚ್ಚರಿಯ ವಿಷಯವಾಗುತ್ತದೆ. ಎಲ್ಲೋ ಓದಿದ ನೆನಪು ಯಾವುದೇ ಜಾತಿ ಸೂಚಕಗಳು ಮೇಲೆ ಹೇಳಿದಮ್ತೆ ವೃತ್ತಿಯಿಂದ ಬಂದಿರುತ್ತದೆ.  ವೃತ್ತಿ ಎಂಬುದು ಭಗವಂತ ಬದುಕುವುದಕ್ಕೆ ಕಲ್ಪಿಸಿಕೊಟ್ಟ ಅವಕಾಶ. ಅದನ್ನು ಯಾರೇ ಆಗಲೀ ಕೀಳಾಗಿ ಕಾಣುವುದೆಂದರೆ ಭಗವಂತನಲ್ಲಿ ನಂಬಿಕೆ ಇಟ್ಟವನಿಗೆ ಸೂಕ್ತವಾಗುವುದಿಲ್ಲ. ಆತನ ನಂಬಿಕೆಗೂ ಗೌರವ ಮೌಲ್ಯ ಕೊಡುವುದಿಲ್ಲ. ಪ್ರತಿಯೊಬ್ಬರೂ ಇಲ್ಲಿ ಬದುಕುವುದಕ್ಕಾಗಿ ಹುಟ್ಟಿ ಬರುತ್ತಾರೆ. ಸಾಯುವುದು ಗೊತ್ತಿದ್ದರೂ ಸಾಯುವುದಕ್ಕೆ ಯಾರೂ ಜೀವನ ಮಾಡುವುದಿಲ್ಲ. ಗಾಳಿ ನೀರು ಭೂಮಿ ಎಲ್ಲವು ಸಮಾನವಾಗಿರುವಾಗ ಇಲ್ಲಿ ಅಸಮಾನತೆಯನ್ನು ಗುರುತಿಸುವವನು ಜೀವನಕ್ಕೆ ಅರ್ಹತೆಯನ್ನು ಕಳೆದುಕೊಳ್ಳುತ್ತಾನೆ. 


Monday, August 14, 2023

ಶೆಟ್ರ ಬಸ್ಸು.....

         ಮುಷ್ಕರಗಳು, ಬಂದ್ ಗಳು ನಮ್ಮ ಕೇರಳಿಗರಿಗೆ ಹೊಸತಲ್ಲ. ಅದೊಂದು ಇಲ್ಲ ಎಂದರೆ ಇಲ್ಲಿ ಜೀವನವೇ ಇಲ್ಲವೇನೋ ಎನ್ನಿಸುವಷ್ಟು ಜನ ಅದಕ್ಕೆ ಮುಷ್ಕರದ ನಡುವಿನ ಹೋರಾಟಕ್ಕೆ ಒಗ್ಗಿಕೊಂಡಿದ್ದಾರೆ. ಬಾಲ್ಯದಲ್ಲಿ ನಮಗಂತು ಇದೊಂದು ಮಾಸಿಕದ ಪರ್ವಗಳಂತೆ. ಕೆಲವೊಮ್ಮೆ ಬಸ್ ಮುಷ್ಕರ ಶುರುವಾದರೆ ಒಂದು ವಾರಗಳ ತನಕ ಇರುತ್ತಿತ್ತು. ಪುಟ್ಟ ಜೀಪಿನಲ್ಲಿ ಒಂದಕ್ಕೆ ಎರಡು ಪಟ್ಟು ದುಡ್ಡು ತೆತ್ತು ಕಣ್ಣು ಮುಚ್ಚಿ ಕುಳಿತಂತೆ ಗೂಡಿನೊಳಗೆ ಮುಖಕ್ಕೆ ಮುಖ ತಾಗಿಸಿ ಕುಳಿತು ಪ್ರಯಾಣಿಸುವ ದಿನಗಳು ಇಂದಿಗೂ ನೆನಪಾಗಿ ಛೇ ಅದೆಷ್ಟು ಸುಂದರ ಅಂತ ಅನ್ನಿಸಿಬಿಡುತ್ತದೆ. ಆ ಕಷ್ಟಗಳಲ್ಲೂ ಇದ್ದ ಸುಖ ಸೌಂದರ್ಯ ಮರೆಯುವುದಕ್ಕಿಲ್ಲ. ಉಪ್ಪಳದಿಂದ ಪೈವಳಿಕೆ ಬಾಯಾರಿಗೆ ಹತ್ತು ಹನ್ನೆರಡು ಕಿಲೋಮೀಟರ್ ದೂರವಾದರೂ ಬೆಂಗಳೂರಿನಿಂದ ಮಂಗಳೂರಿಗೆ ಹೋದಾಗ ಸಿಗದ ಅನುಭವ ಇಲ್ಲಿ ಸಿಕ್ಕಿಬಿಡುತ್ತಿತ್ತು. ಪರಿಚಯ ಇಲ್ಲದ ಮುಖಗಳೇ ಇಲ್ಲಿ ಇಲ್ಲ. ಬೆಂಗಳೂರಲ್ಲಾದರೆ ಒಮ್ಮೆ ನೋಡಿದ ಮುಖವನ್ನು ಮತ್ತೊಮ್ಮೆ ಜನ್ಮದಲ್ಲಿ  ನೋಡುತ್ತೇವೆ ಎಂಬ ಭರವಸೆ ಇಲ್ಲ. ಅಷ್ಟೂ ಅಪರಿಚಿತರು. ಒಂದು ವೇಳೆ ಪರಿಚಯ ಇದ್ದರೂ ಸಂಬಂಧವೇ ಇಲ್ಲದಂತೆ ಮುಖ ಮುದುಡಿಸಿ ಮೌನ ಸನ್ಯಾಸಿಗಳಾಗಿಬಿಡುತ್ತೇವೆ. ಜತೆಗೆ ಮೊಬೈಲ್ ಇದ್ದರೆ ಮುಗಿಯಿತು. ಬೇರೆ ಪ್ರಪಂಚ ಇಲ್ಲ. ಇದರೆ ನಡುವೆ ಉಪ್ಪಳದ ಜೀವನ ನೆನಪಾಗುವಾಗ.....ಛೇ ಅದು ಮುಗಿದು ಹೋದ ಸಿನಿಮಾ ಕಥೆಯಾ ಅಂತ ಅನ್ನಿಸಿಬಿಡುತ್ತದೆ.  ನಮ್ಮ ಉಪ್ಪಳದ ಜನರಿಗೊಂದು ಸ್ವಭಾವ ಇದೆ, ಕೇರಳದಲ್ಲಿ ಮುಷ್ಕರ ಬಂದ್ ಆದರೆ ಅತ್ತ ಕರ್ನಾಟಕಕ್ಕೆ ಓಡಿ ಬಿಡುವುದು, ಅಲ್ಲಿ ಯಾವ ಕೆಲಸ ಇದೆ ಅಥವಾ ಊರು ಸುತ್ತುವುದಕ್ಕೆ ಹೋಗಿ ಬಿಡುವುದು. ಹೀಗೆ ಬಂದ್ ಅನುಭವವಾಗದಂತೆ ಜೀವನ ಕಳೆಯುವವರೂ ಆಗ ಇದ್ದರು. ಈ ಬಂದ್ ನ ನಡುವೆ ಒಂದು ವಿಪರ್ಯಾಸವೆಂದರೆ ಅದು ನಮ್ಮ ಶೆಟ್ಟರ ಶಂಕರ್ ವಿಠಲ್ ಬಸ್ಸು.  ಮುಂಜಾನೆ ಆರು ಗಂಟೆಗೆ ಉಪ್ಪಳ ಬಿಡುವ ಬಸ್ಸು ಪುನಃ ತವರಿಗೆ ವಾಪಾಸಾಗುವುದು ಸಂಜೆ ಆರಕ್ಕೆ. ಹೀಗಾಗಿ ಎಂತಹ ಬಂದ್ ಇದ್ದರೂ ಶೆಟ್ಟರ ಬಸ್ಸಿಗೆ ಬಾಧಕ ಇರುತ್ತಿರಲಿಲ್ಲ.  ಕೆಲವೊಮ್ಮೆ ನಮ್ಮ ಮುಷ್ಕರ ಬಾಂಧವರಿಗೆ ಈ ಬಸ್ಸನ್ನೂ ನಿಲ್ಲಿಸುವ ಹಟ ಬರುತ್ತಿತ್ತು. ಆಗ ನಮಗೆಲ್ಲ ಅನ್ನಿಸುತ್ತಿತ್ತು ಛೇ ಬಡಪಾಯಿ ಶೆಟ್ಟರ ಬಸ್ಸು. 

            ಉಪ್ಪಳ ಕೇರಳದ ತುತ್ತ ತುದಿಯಲ್ಲಿರುವ ಕರ್ನಾಟಕಕ್ಕೆ ತಾಗಿಕೊಂಡಿರುವ ಕರ್ನಾಟಕ ಬೇಕೋ ಕೇರಳ ಸಾಕೋ ಈ ದ್ವಂದ್ವದಲ್ಲೆ ಹಗಲು ರಾತ್ರಿಯ ನಿರೀಕ್ಷೆಯಲ್ಲಿ ದಿನಗಳನ್ನು ಕಳೆಯುವ ಊರು. ಉಪ್ಪಳದವರಿಗೆ ಪ್ರಾಮಾಣಿಕವಾಗಿ ಕೇಳಿದರೆ ಅವರು ಎರಡನ್ನೂ ಅಪ್ಪಿಕೊಳ್ಳುವ ವಿಶಾಲ ಹೃದಯವನ್ನು ತೋರಿಸುತ್ತಾರೆ. ಕೇರಳವೂ ಚಂದ...ಮಲಯಾಳಂ ನ ಸೊಗಸು ಕೇರಳದ ಸಂಸ್ಕಾರ ಒಂದೆಡೆಯಾದರೆ,  ಅಚ್ಚ ಕನ್ನಡದ ಭಾಷಾ ಮೆರುಗಿನ ಸಂವಹನ ಇನ್ನೊಂದೆಡೆ.  ಏನು ಬೇಕೆಂದರೂ ಹತ್ತಿರದ ಮಂಗಳೂರ್ರಿಗೆ ಹೋಗುವಾಗ ,  ಕೆಲವೊಂದಕ್ಕೆ ಕರ್ನಾಟಕವನ್ನು ಅಪ್ಪಿದರೆ ಇನ್ನು ಕೆಲವದಕ್ಕೆ ಕೇರಳವೇ ಇರಲಿ ಅಂತ ಸಂತುಷ್ಟರಾಗಿಬಿಡುತ್ತಾರೆ. ಪುಟ್ಟ ಮಗುವಿನಲ್ಲಿ ಅಪ್ಪ ಬೇಕೋ ಅಮ್ಮ ಬೇಕೋ ಎಂದು ಕೇಳಿದರೆ ಯಾರನ್ನು ಬೇಕು ಅಂತ ಹೇಳಬೇಕು? ಅಪ್ಪ ಹೊರಗೆ ಹೋಗುವಾಗ ಆ ಅಪ್ಪನ ಹೆಗಲಿಗೆ  ಜೋತು ಬಿದ್ದು ಹೋದರೆ, ಈ ಅಪ್ಪ ಯಾವಾಗಲೂ ಮನೆಯಲ್ಲಿರಬಾರದೇ ಅಂತ ಸುತ್ತದೆ.  ಅಪ್ಪನೇ ಬೇಕು ಎನ್ನುವಾಗ  ಅಮ್ಮನ ಅಕ್ಕರೆಯ ಪ್ರೀತಿಯ ಆರೈಕೆಯ ಸೆಳೆತ ಇನ್ನೊಂದೆಡೆ. ಇಬ್ಬರು ಮನೆಯಲ್ಲಿದ್ದರೆ ಅದೆಂತಹ ಸೊಗಸು. ಹಾಗೆ ಅತ್ತ ಕೇರಳ ಇತ್ತ ಕರ್ನಾಟಕ ಎರಡು ಅಪ್ಪ ಅಮ್ಮನಂತೆ ನಡುವಲ್ಲಿ ನಮ್ಮ ಕೈ ಹಿಡಿದು ಎಳೆದು ತಬ್ಬಿಕೊಳ್ಳುತ್ತಿದ್ದರೆ ಈ ಉಪ್ಪಳದ ಪರಿಸರಕ್ಕೆ ಮಾರುಹೋಗಬೇಕು. 

            ನಮ್ಮ ಉಪ್ಪಳ ಮತ್ತು ಸುತ್ತ ಮುತ್ತಲಿನ ಊರುಗಳ ಒಂದು ವಿಶೇಷತೆ ಎಂದರೆ, ಅದು ಎನೂ ಇಲ್ಲದ ಎಲ್ಲವೂ ಇರುವ ಒಂದು ವಿಶಿಷ್ಟ ಪರಿಸರವನ್ನು ಹೊಂದಿದೆ. ಅತ್ತ ಕೇರಳವೂ ಅಲ್ಲದ ಇತ್ತ ಕರ್ನಾಟಕವೂ ಅಲ್ಲದ ಒಂದು ವೈವಿಧ್ಯತೆ ಇಲ್ಲಿದ್ದರೆ,  ಕನ್ನಡ ಮಲಯಾಳಂ ಜತೆಗೆ ಹಿಂದಿ ಉರ್ದು ಕೊಂಕಣಿ ಇದೆಲ್ಲದಕ್ಕೆ ಸಂವಹನವಾಗಿ ತುಳು ಹೀಗೆ ವೈವಿಧ್ಯ ಮಯ ಸಂಸ್ಕಾರ ಇಲ್ಲಿದ್ದರೆ , ಹಿಂದಿನ ಇಲ್ಲಿನ ಜೀವನ ಆ ದಿನಗಳು ನಿಜಕ್ಕೂ ಒಂದು ಅಹ್ಲಾದಮಯ ನೆನಪುಗಳು ಇಲ್ಲಿ ಸುತ್ತಿಕೊಂಡುಬಿಟ್ಟಿದೆ. ಅತ್ತ ಹಳ್ಳಿಯೂ ಅಲ್ಲದ ಇತ್ತ ನಗರವೂ ಅಲ್ಲದ ಸುಂದರ ಕಡಲಿನ ತಡಿಯಲ್ಲಿರುವ ಇಲ್ಲಿನ ಪ್ರಾಕೃತಿಕ ಸೌಂದರ್ಯದ ಜತೆಗೆ ದಶಕ ಪೂರ್ವದ ದಿನಗಳ ಸ್ಮರಣೆಗಳು ಅದಕ್ಕೊಂದು ಮೆರುಗನ್ನು ಕೊಟ್ಟಂತೆ. ಅವುಗಳನ್ನು ಸ್ಮರಿಸುವುದೇ ಒಂದು ಸುಂದರ ಅನುಭವ. 

        ಇನ್ನು ಶೆಟ್ಟರ ಬಸ್ಸು,  ಬಾಲ್ಯದಲ್ಲಿ ನಮಗೆಲ್ಲ ಬೆಳಗಾಯ್ತು ಮತ್ತು ಸಾಯಂಕಾಲವಾಯ್ತ ಎಂದು ಗೊತ್ತಾಗಿಬಿಡುತ್ತಿದ್ದದ್ದು ಶೆಟ್ರ ಬಸ್ಸಿನ ಸಂಚಾರದಲ್ಲಿ. ಶೆಟ್ರ ಬಸ್ಸು ಬೆಳಗ್ಗೆ ಆರು ಘಂಟೆಗೆ ಕುರ್ಚಿಪಳ್ಳ (ಉಪ್ಪಳ) ದಿಂದ ಪುತ್ತೂರು ಮಂಗಳೂರಿಗೆ ಹೋಗುವಾಗ ಬೆಳಗಾಯ್ತು ಎಂದು ಹಿರಿಯರು ಸಿಹಿನಿದ್ದೆಯಲ್ಲಿದ್ದ ನಮ್ಮನ್ನು ಎಚ್ಚರಿಸುತ್ತಿದ್ದರು. ಇನ್ನು ಸಾಯಂಕಾಲ ಅದೇ ಬಸ್ಸು  ಮಂಗಳೂರಿನಿಂದ  ಪುತ್ತೂರಿಗೆ ಬಂದು ಅಲ್ಲಿಂದ ಉಪ್ಪಳಕ್ಕೆ ಹಿಂದಿರುಗಿ  ಬರುವಾಗ ಸಾಯಂಕಾಲ ಆರು ಘಂಟೆಯಾಗುತ್ತಿತ್ತು. ಆಗ ಹಿರಿಯರು ಕತ್ತಲಾಯ್ತು ಕೈ ಕಾಲು ತೊಳೆದು ಭಜನೆ ಮಾಡುವಂತೆ ಹೇಳುತ್ತಿದ್ದರು. ಇದರ ನಡುವೆ ದಿನದಲ್ಲಿ ಆ ಬಸ್ಸನ್ನು ಕಾಣುವುದಕ್ಕಿರಲಿಲ್ಲ.  ಬೆಳಗ್ಗೆ ಹಾಲಿನ ತಂಬಿಗೆ ಹಿಡಿದುಕೊಂಡು ಹಾಲು ಇರುವ ಮನೆಗೆ ಹೋಗಿ ಬರುತ್ತಿದ್ದರೆ ಆ ಹಾಲಿನ ಮಧುರ ನೆನಪು ಶೆಟ್ಟರ ಬಸ್ಸಿನೊಂದಿಗೆ ಬೆಸೆದುಕೊಂಡಂತೆ ಇದೆ. 

        ಶೆಟ್ರ ಬಸ್ಸು ಶಂಕರ್ ವಿಠಲ್ ಕಂಪೆನಿಯ ಬಸ್ಸಾದರೂ ಅದನ್ನು ಊರವರು ಕರೆಯುತ್ತಿದ್ದದ್ದು ಶೆಟ್ರ ಬಸ್ಸು. ಅದರಲ್ಲಿ ಕಂಡಕ್ಟರ್ ಚಕ್ಕರ್ ಇತ್ಯಾದಿ ಇದ್ದರೂ ಬಸ್ಸು ಡ್ರೈವರ್ ಹೆಸರಲ್ಲೇ ಕರೆಯಲ್ಪಡುತ್ತಿದ್ದದ್ದು ವಿಚಿತ್ರ. ಅದೇ ರೀತಿ ಕುರ್ಚಿಪ್ಪಳ್ಳ ಪುತ್ತೂರು ನಡುವೆ ಓಡುವ  ಫೀರು ಸಾಯಿಬರ ಬಸ್ಸು, ವಿಟ್ಲ ಪೆರ್ಮುದೇ ಹೋಗುವ ಗೋಪಾಲಣ್ಣನ ಬಸ್ಸು ಇವೆಲ್ಲ ಮಂಗಳೂರಿನಲ್ಲಿದ್ದ ಶಂಕರ್ ವಿಟ್ಠಲ್ ಕಂಪೆನಿಯ ಬಸ್ಸುಗಳು.  

        ಶೆಟ್ರ ಬಸ್ಸು ಬೆಳಗ್ಗೆ ಉಪ್ಪಳದಿಂದ ಹೊರಟರೆ ಬಾಯಾರುಕನ್ಯಾನ ವಿಟ್ಲ ಪುತ್ತೂರಿಗೆ ಹೋಗಿ, ಆನಂತರ ಅಲ್ಲಿಂದ ಮಾಣಿ ಬಂಟ್ವಾಳ ಮೂಲಕ ಮಂಗಳೂರಿಗೆ ಹೋಗುತ್ತಿತ್ತು. ಅದರ ಚಾಲಕರಾಗಿದ್ದವರು ಶ್ರೀ ಮಹಾಬಲ ಶೆಟ್ಟರು. ಬೆಳಗ್ಗೆ ಆರು ಘಂಟೆಗೆ  ಬಸ್ಸು ಹೋಗುತ್ತಿದ್ದುದರಿಂದ ಪುತ್ತೂರು ಕಡೆಗೆ  ಹೋಗುವವರು ಬೆಳಗ್ಗೆ ಸ್ನಾನ ಮಾಡಿ ಪಂಚೆ ವಸ್ತ್ರ ತೊಟ್ಟು ಕುಟುಂಬ ಸಹಿತ ರಸ್ತೆ ಬದಿಯಲ್ಲಿ ಕಾದು ನಿಲ್ಲುತ್ತಿದ್ದದ್ದು ಸಾಮಾನ್ಯವಾಗಿತ್ತು. ಸೂರ್ಯೋದಯದೊಂದಿಗೆ ಇದೊಂದು ನಿತ್ಯ ಕಾಣುವ ದೃಶ್ಯವಾಗಿತ್ತು. ಪಡುಗಡಲಿನ ದಿಕ್ಕಿನಿಂದ ಪೂರ್ವದ ಕಡೆಗೆ ಸೂರ್ಯನಿಗಭಿಮುಖವಾಗಿ ಶೆಟ್ರ ಬಸ್ಸು ಸಂಚರಿಸುತ್ತಿದ್ದರೆ ತನ್ನ ಹಾರನ್ ಶಬ್ದದಿಂದ ಊರವರನ್ನು ಎಚ್ಚರಿಸುತ್ತಾ ಸಾಗುತ್ತಿತ್ತು. ಮಹಾಬಲ ಶೆಟ್ಟರಿಗೆ ಉಪ್ಪಳದಿಂದ ಪುತ್ತೂರು ಮಂಗಳೂರಿನ ತನಕ ಊರವರ ಪರಿಚಯ ವಿರುತ್ತಿತ್ತು. ಬಸ್ಸು ಚಲಾಯಿಸುವುದರೊಂದಿಗೆ ಊರವರ ಸಣ್ಣ ಪುಟ್ಟ ವಸ್ತುಗಳನ್ನು ಒಂದೂರಿನಿಂದ ಇನ್ನೊಂದೂರಿಗೆ ಕೊಂಡೊಯ್ಯುವ ಪಾರ್ಸಲ್ ಸರ್ವೀಸು ಸಹ ಇರಿತ್ತಿತು. ಶೆಟ್ಟರು ಒಂದೂ ಸಹ ಅಪಘಾತ ವಿಲ್ಲದೆ ಚಾಲಕನಾಗಿ ಕೆಲಸ ಮಾಡಿದ ಹಿರಿಮೆಯನ್ನು ಗಳಿಸಿದ್ದರು. 

         ಶೆಟ್ರ ಬಸ್ಸು  ಸಾಯಂಕಾಲ ಉಪ್ಪಳದಲ್ಲಿ ಹಾಲ್ಟ್ ಆಗಿ ವಿರಮಿಸುತ್ತಿತ್ತು. ರೈಲ್ವೇ ಸ್ಟೆಶನ್ ರಸ್ತೆಯ ಕೊನೆಯ ತಿರುವಿನಲ್ಲಿ ಬಸ್ಸಿಗಾಗಿ ಒಂದು ಶೆಡ್ ಇತ್ತು.  ಅಲ್ಲೆ ಶಂಕರ್ ವಿಠಲ್ ಕಂಪೆನಿಯ ಬ್ರಾಂಚ್ ಆಫೀಸು ಕೂಡಾ ಇರುತ್ತಿತ್ತು. ಹೆಚ್ಚಾಗಿ ಮಂಗಳೂರಿನಿಂದ ಟಯರ್ ಇತ್ಯಾದಿ ಬಿಡಿಭಾಗಗಳು ಶೆಟ್ಟರ ಬಸ್ಸಿನಲ್ಲೇ ಬಂದು ಉಳಿದ ಬಸ್ಸುಗಳು ಅಲ್ಲಿಂದಲೇ ಅದನ್ನು ಏರಿಸಿಕೊಳ್ಳುತ್ತಿದ್ದವು.  ಬಹಳ ಇಕ್ಕಟ್ಟಾದ ರಸ್ತೆ. ಹಳೆಯ ಕಟ್ಟಡಗಳು. ಬಹುಶಃ ಹೆಚ್ಚಿನ ಕಟ್ಟಡಗಳು ಬ್ರಿಟೀಷರ ಕಾಲದವುಗಳು. ಅದೇ ವಾಸ್ತು ವಿನ್ಯಾಸವನ್ನು ನೆನಪಿಗೆ ತರುತ್ತಿತ್ತು. ಅಲ್ಲೇ ಇದ್ದ ಪರಿಸರದಲ್ಲಿ ಸಾಯಂಕಾಲದ ಕತ್ತಲೆ ಹೊತ್ತಲ್ಲಿ  ಹೋಗುತ್ತಿದ್ದರೆ ತಾಳ ಬಡಿದು ಭಜನೆ ಮಾಡುವ ಶಬ್ದ ಕೇಳುತ್ತಿತ್ತು. ಶೆಟ್ಟರು ಬಸ್ಸಿನ ಒಳಗೆ ಒಬ್ಬರೇ ಕುಳಿತು ತಾಳ ಬಡಿದು ಭಜನೆ ಹೇಳುತ್ತಿದ್ದುದು ಸಾಮಾನ್ಯವಾಗಿತ್ತು.  ಆ ನೀರವ ಮೌನದಲ್ಲಿ ಶೆಟ್ಟರು ಮಾಡುವ ಭಜನೆ ಜತೆಗೆ ಟಿಣ್ ಟಿಣ್ ಎನ್ನುವ ತಾಳದ ಸದ್ದು ನನಗೆ ಈಗಲೂ ರೈಲ್ವೇ ಸ್ಟೇಶನ್ ರಸ್ತೆಯಲ್ಲಿ ಹೋದರೆ ಕೇಳಿಸುತ್ತದೆ.  ಪರಿಸರ ಕತ್ತಲೆಗೆ ಜಾರುತ್ತಿದ್ದಂತೆ ಶೆಟ್ಟರು ಬಸ್ಸಿನ ಒಳಗೆ ಇದ್ದ ಶ್ರೀಕೃಷ್ಣನ ಫೋಟೋಕ್ಕೆ ದೀಪ ಹಚ್ಚಿ  ಸೀಟುಗಳ ಸಂದಿಯಲ್ಲಿ ಕುಳಿತು ಭಜನೆ ಮಾಡುತ್ತಾರೆ. ಅದೆಂತಹಾ ತನ್ಮಯತೆ.  ಆ ಕತ್ತಲೆಯ ಮೌನದಲ್ಲಿ...ಆಗೊಮ್ಮೆ ಈಗೊಮ್ಮೆ ರೈಲು ಹೋಗುವುದು ಬಿಟ್ಟರೆ ಅಲ್ಲಿ ಬೇರೆ ಯಾವ ಶಬ್ದವೂ ಇರುವುದಿಲ್ಲ. ಕೆಲವೊಮ್ಮೆ ಇವರ ಭಜನೆಗೆ ಜತೆಗೆ ಧ್ವನಿ ಸೇರಿಸುವುದಕ್ಕೆ ಹತ್ತಿರದ ಮಸೀದಿಯಿಂದ ಬಾಂಗ್ ಕೂಡಾ ಕೇಳಿ ಒಂದು ಮತ ಸೌಹಾರ್ದತೆಯ ಪರಿಮಳ ಆವರಿಸಿಬಿಡುತ್ತದೆ.  ಹಲವು ಸಲ  ನನಗೆ ಬಸ್ಸಿನ ಒಳಗೊಮ್ಮೆ ಇಣುಕಿ ನೋಡಬೇಕು ಎಂಬ ಕುತೂಹಲ ಇತ್ತು, ಒಂದು ದಿನ ನಿಶ್ಯಬ್ದವಾಗಿ ಹತ್ತಿ ನೋಡಿದ್ದೆ. ಶೆಟ್ಟರು ತನ್ಮಯರಾಗಿ   ಒಬ್ಬರೇ ಗಾನ ಯೋಗಿಯಂತೆ   ಭಜನೆ ಮಾಡುತಿದ್ದರು.  ಆ ಪರಿಸರ ಮತ್ತು ಶೆಟ್ಟರ ಭಜನೆ ನನಗೆ ಈಗಲೂ ನೆನಪಿದೆ. ಅಲ್ಲೆ ಒಂದು ತಮಿಳ ಅಣ್ಣಾಚಿಯ ಕ್ಷೌರದ ಅಂಗಡಿ ಇತ್ತು. ಆ ಅಣ್ಣಾಚಿಯ ಮನೆ ನಮ್ಮ ಪೈವಳಿಕೆಯಲ್ಲೇ ಇತ್ತು. ಆತ ಬಹಳ ಪರಿಚಿತ ಮಾತ್ರವಲ್ಲ ಒಬ್ಬ ಉತ್ತಮ ಮನುಷ್ಯ. ಸಾಮಾನ್ಯವಾಗಿ ನಾನು ಅಲ್ಲಿಗೆ  ಕ್ಷೌರಕ್ಕೆ ಹೋಗುತ್ತಿದ್ದೆ. ಹೀಗೆ ಈ ಎರಡು ಸಂಗತಿಗಳು ರೈಲ್ವೇ ಸ್ಟೇಶನ್ ರಸ್ತೆಯ ಆ ತಿರುವಿಗೆ ಬೆಸೆದುಕೊಂಡಿತ್ತು. 

    ಕೆಲವು ದಿನಗಳ ಹಿಂದೆ ಆ ರಸ್ತೆಯಲ್ಲೆ ನಡೆದುಕೊಂಡು ಹೋಗುವ ಮನಸ್ಸಾಯಿತು. ಉಪ್ಪಳದ ಮೇಲಿನ ಪೇಟೆಯಿಂದ ಹೆಜ್ಜೆ ಇಡುತ್ತಾ ರೈಲ್ವೇ ಸ್ಟೇಶನ್ ರಸ್ತೆಯಲ್ಲಿ ನಡೆಯುತ್ತಾ ಹೋದರೆ ಅದೆಂತಹಾ ಅನುಭವ?  ಹಳೆಯ ಘಟನೆಗಳು ವ್ಯಕ್ತಿಗಳು ಒಂದೊಂದಾಗಿ ನೆನಪಾಗುತ್ತಿದ್ದರೆ ಆ ತಿರುವು ಹತ್ತಿರಬರುತ್ತಿದ್ದಂತೆ ಶೆಟ್ಟರ ಬಸ್ಸು ಜತೆಗೆ ಶೆಟ್ಟರ ಭಜನೆ ನೆನಪಾಯಿತು. ಒಂದಷ್ಟು ಹೊತ್ತು ಅಲ್ಲೇ ಮೌನವಾಗಿ ನಿಂತೆ...ಹೌದು ಶೆಟ್ಟರ ಭಜನೆಯ ಧ್ವನಿ ಇನ್ನೂ ಕೇಳುವಂತೆ ಭಾಸವಾಯಿತು. ಶೆಟ್ಟರು ಶ್ರೀಕೃಷ್ಣನ ಪರಮ ಭಕ್ತರು. ಮುಂದೆ ಒಮ್ಮೆ ಅವರಿಗೆ ಸ್ವಂತ ಬಸ್ಸು ಬರುವಾಗ ಅದರ ಹೆಸರು ಕೂಡ ಶ್ರೀ ಕೃಷ್ಣ ಮೋಟರ್ ಸರ್ವೀಸ್ ಅಂತ ಇತ್ತು.  ಹಾಗಾಗಿ ಶೆಟ್ಟರು ಮತ್ತು ಭಗವಂತನ ನೆನಪು ಒಟ್ಟಿಗೇ ಆಗುತ್ತಿದ್ದರೆ ಹಳೆಯ ನೆನಪುಗಳಿಗೆ ಜಾರಿದ ಅನುಭವವಾಯಿತು. 


Saturday, August 12, 2023

ಸು-ಸಂಸ್ಕೃತ


        ಒಂದು ಸಣ್ಣ ಕಥೆ ಅಂತ ಪರಿಗಣಿಸಿ ಇಲ್ಲ ಯಾವುದೋ ಘಟನೆ ಅಂತ ತೆಗೆದುಕೊಳ್ಳಿ, ಆ ಅಪ್ಪ ಅಮ್ಮ ತಮ್ಮ ಏಕೈಕ ಗಂಡು ಮಗುವನ್ನು ಬಹಳ ಅಕ್ಕರೆಯಿಂದ ಶಿಸ್ತುಬದ್ದವಾಗಿ ಬೆಳೆಸಿದರು.  ಆ ಮಗುವಿಗೆ ಬೇಕಾದ ಪೋಷಕಾಹಾರ ಮಾತ್ರವಲ್ಲ ಎಲ್ಲವೂ ನಿದ್ದೆ ಆಹಾರ ಎಲ್ಲವನ್ನು ಶಿಸ್ತು ಬದ್ದವಾಗಿ ನೀಡುತ್ತಾ ಬೆಳೆಸಿದರು. ಅದು ಹೇಗಿತ್ತು ಎಂದರೆ  ಮಗು ಬೆಳೆದು ಶಾಲೆಗೆ ಹೋಗುವ ತನಕ ಮಗುವಿಗೆ ಚಾಕಲೇಟ್ ಬಿಸ್ಕತ್ ಎಂಬ ತಿಂಡಿ ಇದೆ ಎಂದೇ ಪರಿಚಯವಿರಲಿಲ್ಲ. ಹೊರಗೆ ಹೋದರೂ ಸಹ ಅದನ್ನು ಮಗುವಿನ ಗಮನಕ್ಕೆ ಬಾರದಂತೆ ಪ್ರಯತ್ನದಿಂದ ಸಾಕಿದರು. ನೆಂಟರಿಷ್ಟರು ಯಾರೇ ಮನೆಗೆ ಬಂದರೂ ಚಾಕಲೇಟ್ ಮುಂತಾದ ಅಂಗಡಿ ತಿಂಡಿಗಳನ್ನು ಮನೆಗೆ ತಾರದಂತೆ ಎಚ್ಚರ ವಹಿಸಿದ್ದರು. ಹೀಗೆ ಮಗು ಕೇವಲ ಮನೆಯ ಆಹಾರ ಮಾತ್ರವಲ್ಲ...ಆ ಮಗುವಿಗೆ ಕೆಟ್ಟ ಶಬ್ದವನ್ನೂ ಕೇಳುವುದಕ್ಕೆ ಆಸ್ಪದ ಕೊಡಲಿಲ್ಲ. ಅಪ್ಪ ಅಮ್ಮ ಸ್ವತಃ ತಾವೂ ಪರಸ್ಪರ ಜಗಳವಾಡದೇ ಜಗಳವಾಡಿದರೂ ಮಗುವಿನ ಗಮನಕ್ಕೆ ಬಾರದಂತೆ ಬಹಲ ಜತನದಿಂದ ಸಲಹಿದರು. ಮಗು ಸುಸಂಸ್ಕೃತವಾಗಿ ಪರಿಶುದ್ದ ಮನಸ್ಸಿನಿಂದ ಬೆಳೆಯಬೇಕು ಎಂಬುದೇ ಅವರ ಉದ್ದೇಶವಾಗಿತ್ತು. ತಮ್ಮ ಮಗು ಸಮಾಜಕ್ಕೆ ಒಂದು ಒಳ್ಳೆಯ ಕೊಡುಗೆಯಾಗಿ ಬೆಳೆಯಬೇಕು ಎಂಬ ಉದಾತ್ತ ಧ್ಯೇಯದೊಂದಿಗೆ ಮಗುವನ್ನು ಬೆಳೆಸಿದರು. ಕೆಟ್ಟದ್ದು ನೋಡದ ಕೆಟ್ಟದ್ದು ಆಡದ ಬೇಡದೇ ಇರುವುದನ್ನು ಸೇವಿಸದ ಆ ಮಗು ಬೆಳೆಯಿತು. ಕೇಳುವುದಕ್ಕೆ ಬಹಳ ಸುಂದರವಿದೆ. ಒಂದು ಆದರ್ಶ ಸಮಾಜ ಹೀಗೆ ರೂಪುಗೊಳ್ಳಬೇಕು ಎಂದನಿಸುತ್ತದೆ.  ಅಷ್ಟೇ ಆದರೆ ಸಾಕೆ? ಹಕ್ಕಿ ಗೂಡು ಬಿಟ್ಟು ಹಾರುವ ದಿನ ಬರಲೇ ಬೇಕಲ್ಲ.  ಪ್ರಥಮವಾಗಿ ವಿದ್ಯೆ ಕಲಿಯುವುದಕ್ಕೆ ಅಪ್ಪ ಮಗುವನ್ನು ಶಾಲೆಗೆ ಸೇರಿಸಿದ. ಬಹಳ ಎದೆಯುಬ್ಬಿಸಿ ತಾನೇನೊ ಘನ ಕಾರ್ಯಮಾಡಿದ ಸಂತೃಪ್ತಿ ಇತ್ತು. ಶಾಲೆಯ ಅಧ್ಯಾಪಕ ವೃಂದ ಎಲ್ಲರೂ ತನ್ನ ಮಗುವನ್ನು ಹೊಗಳುತ್ತಾರೆ. ಅದನ್ನು ಸಾಕಿ ಸಲಹಿದ ಅಪ್ಪ ಅಮ್ಮನ ಬಗ್ಗೆ ಹೇಳುತ್ತಾರೆ ಎಂದು ನಿರೀಕ್ಷೆಯಲ್ಲೇ ಕಳೆದ. ಇದು ಸಹಜ ತಾನೆ? ಒಂದೂ ಕೆಟ್ಟ ಗುಣಗಳಿರದ ಶುದ್ದ ಸುಸಂಸ್ಕೃತ ಮಗುವನ್ನು ಹೊಗಳದೇ ಇರುವುದಕ್ಕೆ ಸಾಧ್ಯವೇ? ಅದೂ ಈ ಕಾಲದಲ್ಲಿ. 

        ಸರಿ ಒಂದೆರಡು ದಿನ ಕಳೆಯಿತು. ಒಂದು ದಿನ ಮಗುವನ್ನು ಮಡಿಲಲ್ಲಿ ಕುಳ್ಳಿರಿಸಿ ಮಗುವಿನೊಂದಿ ಅಕ್ಕರೆಯಿಂದ ಕೇಳಿದ ಶಾಲೆಯಲ್ಲಿ ಏನು ಕಲಿಸಿದರು? ಟೀಚರ್ ಏನು ಹೇಳಿದರು? ಟೀಚರ್ ಹೇಳಿ ಕೊಟ್ಟದ್ದು ಎಲ್ಲಾ ಬರುತ್ತದೇಯೆ? ಹೀಗೆ ಕೇಳುತ್ತಾ ಹೋದರೆ ಮಗು ಪ್ರತಿಯೊಂದಕ್ಕು ಸಮರ್ಪಕ ಉತ್ತರವನ್ನೇ ಕೊಡುತ್ತಿತ್ತು. ಆತನಿಗೆ ಬಹಳ ಖುಷಿಯಾಯಿತು.  ಹೆಂಡತಿಯನ್ನು ಕರೆದು ಹೇಳಿದ ನೋಡು ಮಗು ಹೀಗೆ ಬೆಳೆಯಬೇಕು ಎಂದು ಹೇಳಿದ. ಅಪ್ಪ ಅಮ್ಮ ಖುಷಿಯಲ್ಲಿದ್ದರೆ ಮಗು ಕೊನೆಯಲ್ಲಿ ಹೇಳಿತು.  ತನ್ನದೇ ಭಾಶೆಯಲ್ಲಿ  ಹೇಳಿತು. ಎಲ್ಲ ಸರಿ, ಟೀಚರ್ ಹೇಳಿದವುಗಳು ಎಲ್ಲವು ಅರ್ಥವಾಗುತ್ತದೆ. ಆದರೆ ಅಷ್ಟೇ ಅಲ್ಲ ಅವರು ಹೇಳದೇ ಇರುವ ಅರ್ಥವಾಗದೇ ಇರುವದ್ದು  ಬೇರೆಯೇ   ಇದೆ. 

        ಇಬ್ಬರಿಗೂ ಆಶ್ಚರ್ಯವಾಯಿತು. ಏನದು?  ಮಗು ಮುಗ್ದವಾಗಿ ಹೇಳಿತು. ನಿಜಕ್ಕೂ ಅದು ಆ ಮಗುವಿಗೆ ಗೊತ್ತೇ ಇರಲಿಲ್ಲ...ಬೋ ...ಮಗ ಅಂದರೆ ಏನೂ? ಹಲ್ಕಾ ನನ್ಮಗ ಅಂದರೆ ಏನು? ಹೀಗೆ ಕೇಳುತ್ತಾ ಹೋದರೆ ಅಪ್ಪ ಅಮ್ಮ ಕಲ್ಲಾಗಿ ನಿಂತು ಬಿಟ್ಟರು. ಅದೂ ಕೇಳಲಾಗದ ಶಬ್ದಗಳನ್ನು ಮಗುವಿನ ಬಾಯಲ್ಲಿ ಕೇಳಿದಾಗ ನಿಜಕ್ಕೂ ದಂಗಾಗಿ ಬಿಟ್ಟರು. 

        ಸಾರಾಂಶ ಇಷ್ಟೇ...ಜಗತ್ತಿನಲ್ಲಿ ಒಳ್ಳೆಯದೇ ತಿಳಿಯಬೇಕು, ಒಳ್ಳೆಯದನ್ನೇ ಕಲಿಯಬೇಕು. ಅದರಲ್ಲೇ ಬೆಳೆಯಬೇಕು ಎಂಬ ಉದ್ದೇಶ ಬಯಕೆ ಎನೋ ಸರಿ.  ಸುಸಂಸ್ಕೃತ ವಿಚಾರಗಳು ಮಾತ್ರ ಬೇಕು ಎಂಬುದು ಸತ್ಯ. ಆದರೆ ಕೆಟ್ಟದ್ದು ಯಾವುದು ಅದು ಯಾಕೆ ಕೆಟ್ಟದ್ದು ಎಂಬುದರ ಪರಿಚಯವೂ ಇರಲೇ ಬೇಕಲ್ಲ. ಒಳ್ಳೆಯ ವಿಚಾರಗಳ ಅರಿವಿನೊಂದಿಗೆ ಕೆಟ್ಟ ವಿಚಾರ ತಿಳಿದಿರಬೇಕಾದದ್ದು ಅತ್ಯವಶ್ಯ. ಅದನ್ನು ತೋರಿಸಿ ಅದರ ಅರಿವಿನೊಂದಿಗೆ ಮನುಷ್ಯ ಬೆಳೆಯಬೇಕು. ಇಲ್ಲವಾದರೆ ರಾತ್ರಿ ಕಂಡ ಬಾವಿಗೆ ಹಗಲು ಬೀಳುವಂತಾಗಬಹುದು. ಹಗಲು ಕಂಡ ಬಾವಿಗೆ ರಾತ್ರಿ ಹುಡುಕಿಕೊಂಡು ಹೋಗಿ ಹಾರುವಂತಾಗಬಾರದಲ್ಲ್? 

Tuesday, August 8, 2023

ಬಿ ಆರ್ ಬೇಕರಿ...

            ಹೆಸರು ಕೇಳಿದರೆ ಹಲವರಿಗೆ ಅನ್ನಿಸಬಹುದು ಏನಿದರಲ್ಲಿ ವೈಶಿಷ್ಟ್ಯ. ಮೇಲು ನೋಟಕ್ಕೆ ಏನೂ ಇಲ್ಲದಿರಬಹುದು. ಕೆಲವೊಂದು ವಿಚಾರಗಳು, ವ್ಯಕ್ತಿಗಳು ವಸ್ತುಗಳು ವ್ಯಕ್ತಿ ರೀತಿಯಲ್ಲಿ ವೈಶಿಷ್ಟ್ಯ ಎನಿಸುವುದುಂಟು. ಒಬ್ಬರಿಗೇ ಏನೂ ಅಲ್ಲದಿರಬಹುದು , ಯಾರೋ ಒಬ್ಬರಿಗೆ ಅದುವೇ ಸರ್ವಸ್ವವಾಗಿಬಿಡುತ್ತದೆ. ಬದುಕಿನ ಅಮೂಲ್ಯಗಳಲ್ಲಿ ಒಂದಾಗಿರುತ್ತದೆ. 

            ಎರಡು ದಶಕಗಳ ಕೆಳಗೆ ಊರಲ್ಲಿ ನಮಗೊಂದು ಚಿಕ್ಕ ಉದ್ಯಮವಿತ್ತು. ಸುಸಂಸ್ಕೃತವಾಗಿ ಹೇಳುವುದೆಂದರೆ ಗೃಹ ಕೈಗಾರಿಕೆ. ಹೌದು, ನಮ್ಮ ಸಂಸಾರ ಜೀವನದ ತೊಟ್ಟಿಲು ತೂಗಿಕೊಂಡದ್ದೇ ಈ ಉದ್ಯಮದ ಆಧಾರದಲ್ಲಿ. ಅದು ಮನೆಯಲ್ಲೇ ಚಕ್ಕುಲಿ ಮಾಡಿ ಮಾರಾಟ ಮಾಡುವ ಉದ್ಯಮ. ಇಂದಿಗೂ ಅದರ ಹೆಸರಿನ ಪಳೆಯುಳಿಕೆ ಸಾಕಷ್ಟು ನೆನಪಿನಲ್ಲಿದೆ. ಇದರ ಕಥೆಗಳನ್ನು ಹೇಳಿಕೊಂಡರೆ ಅಲ್ಲಿ ಬಿ. ಆರ್. ಬೇಕರಿ ಹೆಸರು ಬಂದೇ ಬರಬೇಕು. ಅದು ಬಂದರೆ ರಾಜೀವಣ್ಣನ ಹೆಸರು ಬರಬೇಕು. 

            ಉಪ್ಪಳ....ನಮ್ಮ ಪೈವಳಿಕೆಗೆ ಸಂಬಂಧಿಸಿದರೆ ಪೇಟೆ ಎನ್ನಬೇಕು. ರಾಷ್ಟ್ರೀಯ ಹೆದ್ದಾರಿಯ ಒಂದು ತಿರುವು ಇಲ್ಲೇ ಇರುತ್ತದೆ. ಈಗ ಬಿಡಿ ಚತುಷ್ಪಥವಾಗಿ ಪರಿಚಯ ಸಿಗದಷ್ಟು ಬದಲಾಗಿದೆ. ಉಪ್ಪಳಕ್ಕೆ ಟಿಕೇಟ್ ತೆಗೆದು ಬಸ್ ಹತ್ತಿದರೆ....ಉಪ್ಪಳ ದಾಟಿ ಬಂದ್ಯೋಡು ಕುಂಬಳೆ ಮುಟ್ಟಿದರೂ ಅರಿವಾಗುವುದಿಲ್ಲ.ಹೀಗಿದ್ದ ಪುಟ್ಟ ಪೇಟೆಯ ರೈಲ್ವೇ ಸ್ಟೇಶನ್ ರಸ್ತೆ ಇದೆ. ಆ ಪೇಟೆಯ ಜೀವಾಳವೇ ಈ ರಸ್ತೆ. ಈಗ ಗತಕಾಲದ ನೆನಪುಗಳನ್ನು ಮಾತ್ರ ಹೊತ್ತು ಕುಳಿತಿದೆ. ಆ ರಸ್ತೆಯಲ್ಲಿ ಕೆಲವೇ ಕೆಲವು ಅಂಗಡಿಗಳಲ್ಲಿ ರಾಜೀವಣ್ಣನ ಬೇಕರಿಯೂ ಒಂದು. ಬಾಲ್ಯದಲ್ಲಿ ಮೊದಲು  ಬೇಕರಿಯನ್ನು ನೋಡಿದ್ದರೆ ಅದು ಈ ಬೇಕರಿಗೆ ಸಲ್ಲುತ್ತದೆ. ಆಗ ಉಪ್ಫಳದಲ್ಲಿ ಬಸ್ಸು ಇಳಿದರೆ ಈ ಬೇಕರಿಯ ಬ್ರೆಡ್ ಸುಡುವ ಘಂ ಪರಿಮಳ ಮೂಗಿಗೆ ಬಡಿದು ಹಸಿವನ್ನು ಎಬ್ಬಿಸುತ್ತಿತ್ತು. ಹಾಗೆ ನೋಡಿದರೆ ನಾವೆಲ್ಲ ಬ್ರೇಡ್ ಬಿಸ್ಕತ್ ಬಗೆ ಬಗೆಯ ಸಿಹಿತಿಂಡಿಗಳ ಪರಿಚಯವಾಗಿದ್ದರೆ ಅದು ಈ ಬೇಕರಿಯಿಂದ. ಈ ಬೇಕರಿಯ ಎದುರು ನಿಂತುಕೊಂಡು ಜೋಲ್ಲು ಸುರಿಸಿ ಉಗುಳು ನುಂಗಿಕೊಂಡ ದಿನಗಳಿಗೆ ಲೆಕ್ಕವಿಲ್ಲ. ಲಡ್ಡು ಜಿಲೇಬಿ ಹಲುವಾ ಛೇ ಒಂದು ತುಂಡು ಸಿಕ್ಕರೆ ಸಾಕು ಎಂದನಿಸುತ್ತಿತ್ತು. ಈ ಬೇಕರಿಯೊಡನೆ ನಮ್ಮ ಸಂಭಂಧ ಹುಟ್ಟಿಕೊಂಡದ್ದೇ ನಮ್ಮ ಚಕ್ಕುಲಿ ಉದ್ಯಮದಿಂದ. 

        ಆಗ ಚಕ್ಕುಲಿಯ ಚೀಲ ಹೆಗಲಿಗೆ ನೇತಾಡಿಸಿ ಅಂಗಡಿ ಅಂಗಡಿ ಅಲೆಯುತ್ತಿದ್ದೆವು. ಪ್ರತಿ ಅಂಗಡಿಗೆ ಹೋಗಿ ಬೇಕಿದ್ದರೆ ಚೀಲದಿಂದ ಒಂದೊಂದಾಗಿ ಎಣಿಸಿ ಕೊಡುವುದು. ಅಂಗಡಿಯವರು ಅದನ್ನು ಅಲ್ಲಿ ಭರಣಿಗೆ ತುಂಬಿಸಿ ಮಾರಟಕ್ಕೆ ಇಡುವುದು. ವ್ಯಾಪಾರವೂ ಅಷ್ಟಕ್ಕಷ್ಟೆ, ಹತ್ತು ಸಲ ಹತ್ತಿ ಇಳಿಯಬೇಕು. ಎಷ್ಟೋ ಸಲ ಚೀಲದಲ್ಲಿ ಹಾಗೇ ಉಳಿದು ಮನೆಗೆ ವಾಪಾಸಾಗುತ್ತಿತ್ತು. ಆಂತಹ ಸಮಯದಲ್ಲಿ ನಮ್ಮ ಅತಿ ದೊಡ್ಡ ಗ್ರಾಹಕರೆಂದರೆ ಈ ರಾಜೀವಣ್ಣ. ಉಳಿದ ಚಕ್ಕುಲಿ ಎಲ್ಲವನ್ನು ಅಲ್ಲಿ ಕೊಟ್ಟು ಚೀಲ ಬರಿದಾಗಿಸಿ ದುಡ್ಡು ಜೇಬಲ್ಲಿ ಇಟ್ಟು ಬರುವಾಗ ಕೈಯಲ್ಲಿದ್ದ ಹೊರೆ ಇಳಿಸಿದ ಅನುಭವವಾದರೆ, ಅಂದು ಗಂಜಿ ಊಟಮಾಡಬಹುದು ಎನ್ನುವ ನಿರೀಕ್ಷೆ ಬೇರೆ. ಅಂದು ನಾವು ಉಪ್ಪಳದಲ್ಲಿಎಲ್ಲಿಯೂ ಚಕ್ಕುಲಿ ಮಾರಾಟ ಮಾಡುವ ಹಾಗಿರಲಿಲ್ಲ. ಎಷ್ಟಿದ್ದರೂ ಇಲ್ಲಿಗೆ ತನ್ನಿ ಅಂತ ರಾಜೀವಣ್ಣ ಹೇಳುತ್ತಿದ್ದರು. ಉಳಿದ ಕಡೆ ಬಿಡಿ ಬಿಡಿಯಾಗಿ ಮಾರಾಟ ಮಾಡುತ್ತಿದ್ದರೆ ಇಲ್ಲಿ ಅದನ್ನು ಪ್ಯಾಕ್ ಮಾಡಿಕೊಡಬೇಕಿತ್ತು. ಅದಕ್ಕೆ ತಕ್ಕ ಹಾಗೇ ಪ್ಲಾಸ್ಟಿಕ್ ತೊಟ್ಟೆಗಳನ್ನು ರಾಜೀವಣ್ಣನೇ ಮಂಗಳೂರಿನಿಂದ ತರಿಸುತ್ತಿದ್ದರು. ಚಕ್ಕುಲಿ ಅಲ್ಲಿಗೆ ಕೊಂಡೊಯ್ದು ಅಲ್ಲಿ ಕುಳಿತು ಅದನ್ನು ಪ್ಯಾಕ್ ಮಾಡಿ ಕೊಡುತ್ತಿದ್ದ ದಿನಗಳು ಈಗಲೂ ನೆನಪಾಗುತ್ತದೆ. ಇತ್ತೀಚೇಗೆ ಒಂದು ಸಲ ಊರಿಗೆ ಹೋದಾಗ ರೈಲ್ವೇಸ್ಟೇಶನ್ ರಸ್ತೆಯಲ್ಲೇ ನಡೆದು ಕೊಂಡು ಹೋದೆ. ಹಳೆಯ ನೆನಪುಗಳು ಒಂದೊಂದಾಗಿ ಮರುಕಳಿಸುತ್ತಿತ್ತು. ಹಾಗೆ ಹೋದಾಗ ಬಿ ಆರ್ ಬೇಕರಿ ಇದ್ದ ಜಾಗದ ಎದುರು ನಿಂತು ಕ್ಷಣಕಾಲ ಮೌನಿಯಾದೆ.  ಆ ಹಳೆಯ ಕಟ್ಟಡ ಈಗ ಇಲ್ಲ. ಪಾಳು ಬಿದ್ದು ಹೋಗಿತ್ತು. ಬೇಕರಿ ಎಂದೋ ಮುಚ್ಚಿ ಹೋಗಿತ್ತು. ಎಲ್ಲವೂ ಬದಲಾದ ಹಾಗೇ ಅದೂ ಬದಲಾಗಿ ಹೋಗಿತ್ತು. ಅದನ್ನು ನೋಡಿ ಹೃದಯ ಭಾರವಾಗಿತ್ತು. ಅದೇ ಜಾಗದಲ್ಲಿ ನಿಂತುಕೊಂಡು ನಮ್ಮ ಬಾಲ್ಯವನ್ನು ಕಟ್ಟಿಕೊಳ್ಳುತ್ತಿದ್ದ ದಿನಗಳು ಮರೆಯಲು ಸಾಧ್ಯವೇ? 

            ರಾಜೀವಣ್ಣ...ದೊಡ್ಡ ಧಡೂತಿಯ ಆಜಾನು ಬಾಹು ವ್ಯಕ್ತಿತ್ವ. ದೊಡ್ಡ ಕನ್ನಡಕ ಅಗಲವಾದ ಮುಖ...ಗಟ್ಟಿಯಾದ ಧ್ವನಿ...ಅಲ್ಲಿ ಸುತ್ತುಮುತ್ತಲೆಲ್ಲ ಕೇಳಿಸುತ್ತಿತ್ತು. ಈಗಲೂ ಅಲ್ಲಿ ಕಾಲಿಟ್ಟರೇ ಅದೇ ಧ್ವನಿ ಕಿವಿಗೆ ಅಪ್ಪಳಿಸಿದಂತಾಗುತ್ತಿದೆ.  ಬೇಕರಿಯಲ್ಲಿ ದೇವರ ಫೋಟೋಗಳು ಹಲವಿತ್ತು. ಬೆಳಗ್ಗೆ ಸಾಯಂಕಾಲ ರಾಜೀವಣ್ಣ ಅದಕ್ಕೆ ದೀಪ ಹಚ್ಚುತ್ತಿದ್ದುದನ್ನು ನಾನು ನೋಡುತ್ತಿದ್ದೆ. ದೇವರ ಫೋಟೊದ ಬಳಿಯೇ ಇನ್ನೊಂದು ಫೋಟೋ ಇತ್ತು. ಅದು ಅವರ ಫೋಟೊದಂತೆ ಇತ್ತು. ಬಾಲ್ಯದಲ್ಲಿ ಏನೂ ತಿಳಿಯದೇ ಇದ್ದಾಗ ಇವರ ಫೋಟೋ ಯಾಕೆ ಅಲ್ಲಿಟ್ಟು ಪೂಜೆ ಮಾಡುತ್ತಾರೆ ಎಂದನಿಸಿತ್ತು. ಆದರೆ ಒಂದು ದಿನ ಅವರೇ ಹೇಳಿದ್ದರು ಅದು ಅವರ ಅಪ್ಪನ ಫೋಟೋ ನೋಡುವುದಕ್ಕೆ ಅವರ ಹಾಗೇ ಇತ್ತು. ಅಪ್ಪನ ಮೇಲೇ ಇನ್ನಿಲ್ಲದ ಭಕ್ತಿ. ಅದಕ್ಕೆ ನಮಸ್ಕರಿಸದೆ ಅವರ ವ್ಯವಹಾರ ಆರಂಭವಾಗುತ್ತಿರಲಿಲ್ಲ. ಅವರು ಹೇಳುತ್ತಿದ್ದರು ಬಹಳ ಕಷ್ಟ ಪಟ್ಟು ಜೀವನ ನಡೆಸುತ್ತಿದ್ದರು. 

            ರಾಜೀವಣ್ಣ ಮತ್ತು ಅವರ ಮಕ್ಕಳ್ಳನ್ನು ಅಲ್ಲಿ ನೋಡಿದ್ದೇನೆ. ಆಗ ಮಕ್ಕಳು ಒಂದಿಷ್ಟು ತಪ್ಪು ಮಾಡಿದ್ದರೂ ಮಕ್ಕಳನ್ನು ಅವರು ಗದರುತ್ತಿದ್ದರು. ಆಗೆಲ್ಲ ಅನಿಸುತ್ತಿತ್ತು ಇಷ್ಟು ವ್ಯಾಪಾರ , ತಕ್ಕ ಶ್ರೀಮಂತಿಗೆ ಎಲ್ಲ ಇದ್ದರೂ ಇವರು ಯಾಕೆ ಗದರುತ್ತಾರೆ ಎಂದು? ಅದಕ್ಕೆ ಮುಖ್ಯ ಕಾರಣ ಅವರು ಕಷ್ಟ ಪಟ್ಟು ನಡೆಸಿದ ಜೀವನ. ಮಕ್ಕಳೂ ಅದೇ ಪರಿಶ್ರಮವನ್ನು ಕಲಿಯಬೇಕು. ಜೀವನದಲ್ಲಿ ನಿಷ್ಠೆ ನಿಯಮಗಳನ್ನು ಅಳವಡಿಸಿಕೊಳ್ಳಬೇಕು ಎಂಬುದಾಗಿತ್ತು. ನಮ್ಮ ಚಕ್ಕುಲಿ ವ್ಯಾಪಾರಕ್ಕೆ ರಾಜೀವಣ್ಣನ ಕೊಡುಗೆ ಸಾಕಷ್ಟು ಇದೆ. ಆ ಕಾಲದಲ್ಲಿ ನಮ್ಮ ವ್ಯಾಪಾರದ ಮೂಲ ಆಧಾರವೇ ಬಿ ಆರ್ ಬೇಕರಿ. ಈಗ ಅದು ಕೇವಲ ನೆನಪಿಗೆ ಸಂದು ಹೋಗಿದೆ. ಕಾಲ ಬದಲಾಗಿದೆ. ರಾಜೀವಣ್ಣ ಅಗಲಿದ ವಿಚಾರ ಇತ್ತೀಚೆಗಷ್ಟೆ ತಿಳಿಯಿತು. 

            ಆನಂತರ ಬೇಕರಿ ಉಪ್ಪಳದ ಬಸ್ ಸ್ಟಾಂಡ್ ಹತ್ತಿರಕ್ಕೆ ಸ್ಥಳಾಂತರವಾಯಿತು. ಅದೇ ಹೆಸರಲ್ಲಿ ಯಾರೋ ಅದನ್ನು ನಡೆಸುತ್ತಿದ್ದರು. ಆನಂತರ ಅದರ ಹೆಸರು ಸ್ವಲ್ಪ ಬದಲಾವಣೆಯಾಗಿ ಬೇಕರಿಯೂ ಬದಲಾವಣೆಯಾಯಿತು. ಅಲ್ಲಿದ್ದವರನ್ನು ರಾಜೀವಣ್ಣನ ಬಗ್ಗೆ ಕೇಳುತ್ತಿದ್ದೆ. ಆರಾಮಾವಾಗಿದ್ದಾರೆ ಎಂದು ಹೇಳುತ್ತಿದ್ದರು. ಇತ್ತೀಚೆಗೆ ಹೋಗಲಿಲ್ಲ. ಮೊನ್ನೆ ಮೊನ್ನೆ ವರೆಗೂ ಹೋದ ಹಾಗೆ ನೆನಪು, ಆದರೆ ವರ್ಷಗಳು ಅದೆಷ್ಟು ಬೇಗ ಸಂದು ಹೋಯಿತು. ಮೊನ್ನೆ ಮೊನ್ನೆ ಎಂಬುದು ಕಳೆದು ಐದಾರು ವರ್ಷವಾಯಿತು. ರಾಜೀವಣ್ಣ ಅಗಲಿ ಎಳು ವರ್ಷಗಳೇ ಕಳೆಯಿತು ಎಂದು ಈಗ ತಿಳಿದು ಬಂತು.  ಕಳೆದ ದಿನಗಳು ನೆನಪಾಯಿತು. ಬಾಲ್ಯದಲ್ಲಿ ಮಂಗಳೂರಿನ ಮಾವನ ಮನೆಯಿಂದ ನಾನು ಬಸ್ ನಲ್ಲಿ ಬಂದು ಉಪ್ಪಳದಲ್ಲಿ ಇಳಿದರೆ ಮನೆಯಿಂದ ಬಸ್ ಚಾರ್ಜ್ ಗೆ ಕೊಟ್ಟ ದುಡ್ಡು ಖರ್ಚಾಗಿ ಹೋಗುತ್ತಿತ್ತು. ಮತ್ತೆ ಉಪ್ಪಳದಿಂದ ಪೈವಳಿಕೆಗೆ ಹೋಗಬೇಕಾದರೆ ದುಡ್ಡು ಬೇಕು. ಆಗ ನೇರವಾಗಿ ರೈಲ್ವೇ ಸ್ಟೇಶನ್ ರಸ್ತೆಯ ಬಿ ಆರ್ ಬೇಕರಿಗೆ ಹೋಗುತ್ತಿದ್ದೆ. ಬಸ್ ಗೆ  ಹಣ ಇಲ್ಲ ಎಂದು ಹೇಳಿ ಅಲ್ಲಿ ಕೇಳಿ ಪಡೆಯುತ್ತಿದ್ದೆ.  

             ಬಿ ಆರ್ ಬೇಕರಿ ಈಗ ಇಲ್ಲ. ಆದರೆ ಅದರ ಗಾಢವಾದ ನೆನಪುಗಳು ಅಚ್ಚಳಿಯದೇ ಹಾಗೇ ಉಳಿದಿದೆ. ಅದರೊಂದಿಗೆ ರಾಜೀವಣ್ಣನ ವ್ಯಕ್ತಿತ್ವ. ಅಲ್ಲಿಗೆ ಹೋಗಿ ಜಗಲಿಯಲ್ಲಿದ್ದ ಪುಟ್ಟ ಸ್ಟೂಲ್ ನಲ್ಲಿ ಕುಳಿತು ಬೇಕರಿಯ ಕಪಾಟಿನಲ್ಲಿದ್ದ ಸಿಹಿತಿಂಡಿಗಳನ್ನು ನೋಡುತ್ತಾ ಉಗುಳು ನುಂಗುತ್ತಿದ್ದರೆ...ರಾಜೀವಣ್ಣ ಕೈ ಮುಷ್ಠಿಯಲ್ಲಿ ಬಿಳಿ ಬಣ್ಣದ  ಮಿಠಾಯಿ ಕಡಲೆ  ತಂದು ಸುರಿಯುತ್ತಿದ್ದರು. ಬಾಲ್ಯದ ಆ ಸಿಹಿ ತಿನಿಸಿನ ಸಿಹಿ ಎಂದಿಗೂ ಮಾಸುವುದಿಲ್ಲ. ಒಂದು ಗಾದೆ ಉಂಟು ಐದು ವರ್ಷದ ಮಗುವಾಗಿದ್ದಾಗ ಸಿಗದೇ ಇದ್ದ ಐದು ಪೈಸೆಯ ಚಾಕಲೇಟ್...ಐವತ್ತು ವರ್ಷವಾದಾಗ ಸಿಕ್ಕಿದರೆ ಏನು ಪ್ರಯೋಜನ? ನನ್ನ ಮಟ್ಟಿಗೆ ಹಾಗಲ್ಲ... ಈಗಲೂ ಆ ಮಿಠಾಯಿ ಕಡಲೆ ಸಿಗಬಾರದೇ ಅಂತ ಅನ್ನಿಸುತ್ತದೆ. 

ತುಂಬ ತಡವಾಗಿಯಾದರೂ ರಾಜೀವಣ್ಣನಿಗೆ ಒಂದು ನುಡಿ ನಮನ.