Tuesday, December 31, 2019

ಬಿChi...ಭಯಾಗ್ರಫಿ

ಬಾಲ್ಯದಲ್ಲಿ ವಿದ್ಯಾರ್ಥಿಯಾಗಿದ್ದಾಗ ಹಲವು ಕಾದಂಬರಿಗಳನ್ನು ಓದುತ್ತಿದ್ದೆ. ಎಲ್ಲಿ ಹೋಗುತ್ತಿದ್ದರೂ  ಕೈ ಚೀಲದಲ್ಲಿ ಒಂದೆರಡು ಕಾದಂಬರಿ ಪುಸ್ತಕವಾದರೂ ಇರುತ್ತಿತ್ತು. ತರಾಸು, ಕೆಟಿ ಗಟ್ಟಿ, ಟಿ ಕೆ ರಾಮ ರಾವ್, ಅ ನ ಕೃ , ಬಿchi   ಯಂಡಮೂರಿ   ಮೊದಲಾದವರ ಕಾದಂಬರಿ ಪುಸ್ತಕಗಳನ್ನು ಓದುವುದೆಂದರೆ ಸಮಯ ಕಳೆದುದೇ ಅರಿವಿರುತ್ತಿರಲಿಲ್ಲ. ಈ ಎಲ್ಲ ಪುಸ್ತಕಗಳ ಸಾಲಿನಲ್ಲಿ ಅತ್ಯಂತ ವಿಶಿಷ್ಟವಾಗಿ ನಿಲ್ಲುತ್ತಿದ್ದುದು ಬಿ.chi. ಯವರ ಪುಸ್ತಕಗಳು. ಹಲವುಸಲ ಒಂದು ಸಲದ ಓದಿನಿಂದ ಅರ್ಥವಾಗದೆ ಪುನಃ ಪುನಃ ಓದಿ ಅರ್ಥವಾಗುವವರೆಗೂ ಕಾಡುತ್ತಿದ್ದ ಬಿchi ಯವರ ಪುಸ್ತಕಗಳು ಅದರ ಬರಹಗಳು ವಿಚಿತ್ರವಾಗಿ ಭಾಸವಾಗುತ್ತಿತ್ತು. ತೀವ್ರವಾದ ಆಸಕ್ತಿ ಇದ್ದಲ್ಲಿ ಮಾತ್ರವೇ ಬಿchiಯವರ ಪುಸ್ತಕಗಳನ್ನು ಓದಬಹುದು. ಕೇವಲ ಪಂಚರಂಗಿ ಪ್ರಣಯದ ಕಥೆಗಳ ಓದುಗರಿಗೆ ಇವುಗಳು ರುಚಿಸುವುದಿಲ್ಲ. ಆದರೆ ಮೌಲ್ಯಗಳ ಸಿದ್ದಾಂತಗಳ ಅನ್ವೇಷಣೆ ವಿಡಂಬನೆಗಳನ್ನು ಆಸ್ವಾದಿಸುವವರಿಗೆ  ಬಿchi ಯ ಬರಹಗಳು ಅಪ್ಯಾಯಮಾನವಾಗುತ್ತವೆ. ಕಂಡು ಕೇಳರಿಯದ ವಿಚಾರಗಳೂ ಸರಳ ಹಾಸ್ಯದಿಂದ ಮನಸ್ಸಿಗೆ ಹತ್ತಿರವಾಗುತ್ತದೆ. ಗೂಢಾರ್ಥ ದ್ವಂದ್ವಾರ್ಥಗಳ ವಿಚಾರಗಳು ನಾವು ಕಂಡು ಕೇಳರಿಯದ ಶಬ್ದಗಳ ಸರ್ಕಸ್ ಗಳು ಆಶ್ಚರ್ಯ ಹುಟ್ಟಿಸುತ್ತಿತ್ತು. 

ಎರಡು ದಿನ ಮೊದಲು ಅಂತರ್ಜಾಲದ ಮಾಧ್ಯಮಗಳಲ್ಲಿ ಬಿchi ಯ ಆತ್ಮಕಥೆಯನ್ನು ಆಧರಿಸಿದ ನಾಟಕದ ಪ್ರಕಟನೆಯನ್ನು ನೋಡಿ ಬಾಲ್ಯದ ಆಶೆ ಮತ್ತೊಮ್ಮೆ ಗರಿಗೆದರಿತು. ಮೊನ್ನೆ ಶನಿವಾರ ಸಾಯಂಕಾಲ ಮಲ್ಲೇಶ್ವರಂ ಸೇವಾಸದನದ ರಂಗ ಮಂದಿರದಲ್ಲಿ , ಶ್ರೀ ಬಸವರಾಜ ಎಮ್ಮಿಯವರ  ರಚನೆ ನಿರ್ದೇಶನದಲ್ಲಿ ಮಾನಸಪುತ್ರ ಎಂಬ ನಾಟಕ ಪ್ರದರ್ಶನಗೊಳ್ಳುವುದಿತ್ತು. ಸಮಯಕ್ಕೆ ತುಸು ಮುಂಚಿತವಾಗಿ ನಾಟಕದ ಪ್ರೇಕ್ಷಕನಾದೆ. 

’ಮಾನಸ ಪುತ್ರ’ ಬಿChi ಯವರ ಆತ್ಮಕಥೆಯನ್ನು ಆಧರಿಸಿ ಹಲವು ರಸವತ್ತಾದ ಘಟನೆಗಳೊಂದಿಗೆ ಹೆಣೆದ ನಾಟಕ. ರಚನೆ ನಿರ್ದೇಶನ ಬಸವರಾಜ ಎಮ್ಮಿಯವರ, ಬೆಂಗಳೂರಿನ ಕಲಾವಿಲಾಸಿ ತಂಡದವರು ಈ ನಾಟಕವನ್ನು ಪ್ರದರ್ಶಿಸಿದರು. 

ಖ್ಯಾತ ಸಾಹಿತಿಯ ಅದು ಅವಧೂತ ವ್ಯಕ್ತಿತ್ವದ ಸಾಹಿತಿಯೊಬ್ಬರ ಆತ್ಮಕಥೆಯನ್ನು ಆಧರಿಸಿದ ಕಥೆಯನ್ನು ರಂಗಕ್ಕೆ ಅಳವಡಿಸುವುದು ಬಹಳ ಸಾಹಸದ ಕೆಲಸ. ಬಹಳ ಶ್ರಮ ವಹಿಸಿ ಇದನ್ನು ಉತ್ತಮವಾಗಿ ನೆರವೇರಿಸಿದ್ದಾರೆ.  ಉಚಿತವಾದ ರಂಗ ಪರಿಕರಗಳು ದೃಶ್ಯ ಜೋಡಣೆಗಳು ನಾಟಕದ ಆಕರ್ಷಕ ಅಂಶಗಳಾಗಿ ಗೋಚರಿಸಿದವು.  ಆ ಕಾಲದ ಹಲವು ಘಟನೆಗಳು ಅದನ್ನು ಬಿChiಯವರು ಕಂಡರೀತಿ ಅದಕ್ಕೆ ಅನುಯೋಜ್ಯವಾಗುವಂತೆ ದೃಶ್ಯ ಸಂಯೋಜನೆ ಉತ್ತಮವಾಗಿತ್ತು. ಪ್ರತಿಯೋಂದು ಸನ್ನಿವೇಶದಲ್ಲೂ ಒಂದೊಂದು ಸಂದೇಶವನ್ನು ಒದಗಿಸುತ್ತಿತ್ತು. ಉದಾಹರಣೆಗೆ: ಮುದುಕನನ್ನು ಮದುವೆಯಾದ ಹುಡುಗಿಯೊಬ್ಬಳು ರಾತ್ರೋ ರಾತ್ರಿ ಕೆಲಸದಾಳಿನ ಜತೆ ಓಡಿ ಹೋದಾಗ ಊರವರು ಸೇರಿ ಇಬ್ಬರನ್ನು ಹಿಡಿದು ಬೈಯುವ ಸನ್ನಿವೇಶವಿದೆ. ಆಗ  ಉತ್ತಮ ಜಾತಿಯ ಹುಡುಗಿ ನೀಚ  ಜಾತಿಯವನೊಂದಿಗೆ ಹೋದದನ್ನೇ ಆಕ್ಷೆಪಿಸುತ್ತಾನೆ. ಇಲ್ಲಿ ಬಿChiಯವರು ಒಂದು ಮಾತು ಹೇಳುತ್ತಾರೆ, ಮಾಡುವ ಅನೈತಿಕಕ್ಕಿಂತ ಜಾತಿಯೇ ಮುಖ್ಯವಾಗುತ್ತದೆ. ತಪ್ಪು ಮಾಡಿದರೂ ಆದೀತು, ಅದು ಜಾತಿ ನೋಡಿ ಮಾಡಬೇಕು.  ಹಾಗೆ ಮದುವೆಗೆ ಒಪ್ಪದ ಮಗನನ್ನು ಮದುವೆಯಾಗುವಂತೆ ಪೀಡಿಸುವ ಅಪ್ಪ, ಆತ ಹೇಳುವ ಮಾತು  ಎಲ್ಲರೂ ಇರುವಾಗ ಆತ ಮದುವೆಯಾಗದೆ ಸುಖದಲ್ಲಿ ಇರಬಾರದು ಎಂಬ ಒಕ್ಕಣಿಕೆ ಬಹಲ ಇಷ್ಟವಾಗುತ್ತದೆ. ಮದುವೆಯಾದವರು ಸುಖದಲ್ಲಿರುವುದಕ್ಕೆ ಸಾಧ್ಯವೇ ಇಲ್ಲ.

ಹೀಗೆ ತಮ್ಮ ಆತ್ಮ ಕಥೆಯನ್ನು ಬಿChiಯವರು ಬರೆಯುತ್ತಾ ಅಲ್ಲಿನ ಘಟನೆಗಳಿಗೆ  ಸ್ವತಃ ಅವರೇ ದಂಗಾಗಿ ಬಿಡುತ್ತಾರೆ. ಹಾಗಾಗಿಯೆ ಅವರ ಆತ್ಮ ಕಥೆಯನ್ನು ಅವರು ಭಯಾಗ್ರಫಿ ಅಂತಲೇ ಕರೆಯುತ್ತಾರೆ.


ನಿರೀಕ್ಷೆಯಂತೆ ಬಿChi ಯವರ  ಗೂಡಾರ್ಥದ ದ್ವಂದ್ವಾರ್ಥ ಶಬ್ದಗಳ ರಸಮಾಲೆಯೇ ಸಂಭಾಷಣೆಯಲ್ಲಿ ಹಾಸು ಹೊಕ್ಕಾಗಿತ್ತು. ಇಲ್ಲಿ ದ್ವಂದ್ವಾರ್ಥವೆಂದರೆ ವಾಡಿಕೆಯ ದ್ವಂದ್ವಾರ್ಥವಲ್ಲ. ಬದಲಿಗೆ ಒಂದು ಶಬ್ದಕ್ಕೆ ವಕ್ರವಾದ ಅರ್ಥವೋ ಉಚ್ಚಾರವೋ ಒಳಗೊಂಡಿರುವುದು ಬಿChiಯವರ ಸಾಹಿತ್ಯದ ವೈಶಿಷ್ಟ್ಯ. ಯಾರೂ ಕಾಣದೆ ಇದ್ದ ಅಂಕುಡೊಂಕುಗಳನ್ನು ಬಿChi ಯವರು ಉಲ್ಲೇಖಿಸಿದಂತೆ ಅದನ್ನು ಯಥೇಚ್ಛವಾಗಿ  ಉತ್ತಮವಾಗಿ  ಬಳಸಿಕೊಂಡಿದ್ದರು. ಇದಕ್ಕಾಗಿಯೇ ಪ್ರೇಕ್ಷಕ ಜಾಗ್ರತನಾಗಿರುತ್ತಿದ್ದ. ಕೇಳದೇ ಎಲ್ಲಿ ಕಳೆದು ಹೋಗಿಬಿಡಬಹುದೋ ಎಂಬ ಆತಂಕ. ಆ ರೀತಿಯಲ್ಲಿ ಬಿChi ಸಾಹಿತ್ಯದ ರಸ ಸೃಷ್ಟಿಯಾಗಿತ್ತು. ಪ್ರಧಾನ ಭೂಮಿಕೆಯಲ್ಲಿ ಬಿChiಯ ಪಾತ್ರ ನಿರ್ವಹಣೆ ಉತ್ತಮವಾಗಿತ್ತು. ಆದರೂ ಇನ್ನೂ ಕೆಲವು ಅಂಶಗಳನ್ನು ಸೇರಿಸಿಬಿಡಬಹುದಿತ್ತೋ ಏನೋ ಅಂತ ಅನ್ನಿಸಿತು. ಮುಖ್ಯವಾಗಿ ಬಿChiಯವರು ಸಿಗರೇಟ್ ಸೇದುತ್ತಿದ್ದರು, ಧೂಮ ಪಾನದ ತೀವ್ರ ವ್ಯಸನಿಯಾಗಿದ್ದರು ಎಂದು ಕೇಳಿದ್ದೆ.  ಅದನ್ನು ಸಂಕೇತವಾಗಿಯಾದರೂ ಅಳವಡಿಸಿದರೆ ಬಿChi ಸಹಜತೆಗೆ ಹತ್ತಿರವಾಗುತ್ತಿದ್ದರು. ಈ  ಋಣಾತ್ಮಕ ಅಂಶಗಳ ಕೊರತೆ ಕಾಣುತ್ತಿತ್ತು.  ಆದರೂ ಬಿChiಯ ಪಾತ್ರ ಆಕರ್ಷಕವಾಗಿತ್ತು ಎಂಬುದರಲ್ಲಿ ಸಂಶಯವಿಲ್ಲ.    ಮತ್ತುಳಿದಂತೆ ಶರೀರ ಭಾಷೆಯಲ್ಲಿ ಕೆಲಸದಾಳುವಾಗಿದ್ದ ಕಲಾವಿದ ನಿರ್ವಹಣೆ ಉತ್ತಮವಾಗಿತ್ತು. ಅದಕ್ಕೆ ಕಾರಣ ಕೆಲಸದಾಳಿನಂತೆ ಆಕೆಯ ವಸ್ತ್ರವಿನ್ಯಾಸ. ಇದು ಅವರು ಬಾಣಂತಿಯಾಗಿ ನಿರ್ವಹಿಸುವಾಗಲೂ ಎದ್ದು ಕಾಣುತ್ತಿತ್ತು. ಪಾತ್ರದ ಸಹಜತೆಗೆ ಇದು ಅನಿವಾರ್ಯ.  ಇದರ ಜತೆಯಲ್ಲಿ ಮೊದಲು ಶಾಸ್ತ್ರಿಗಳಾಗಿ ನಿರ್ವಹಿಸಿದ ಪಾತ್ರಾಭಿನಯವೂ ಇಷ್ಟವಾಯಿತು.

ಇನ್ನು ಸೇರಿದ ಕಲಾವಿದರಲ್ಲಿ ಎಷ್ಟು ಮಂದಿ ಬಿChiಯವರ ಸಾಹಿತ್ಯಗಳನ್ನು ಓದಿದ್ದಾರೋ ತಿಳಿಯದು ಆದರೆ ರಂಗದಲ್ಲಿ ಪಾತ್ರವಾಗುವಾಗ ಅದರ ಕೊರತೆ ಎದ್ದುಕಾಣುತ್ತಿತ್ತು.  ಪಾತ್ರ ನಿರ್ವಹಣೆಯಲ್ಲಿ ಸಹಜತೆಯ ಕೊರತೆ ಇರುತ್ತಿತ್ತು. ವೃತ್ತಿಪರ ಕಲಾವಿದ ತನ್ನ ಪಾತ್ರಕ್ಕೆ ನ್ಯಾಯ ಒದಗಿಸುವುದಕ್ಕೆ ಬಿChi ಅವರ ಸಾಹಿತ್ಯದ ಅವಲೋಕನವೂ ಅತ್ಯವಶ್ಯ. ಇದು ವೃತ್ತಿ ಪರತೆ.  ಆಗ ಇನ್ನಷ್ಟು ಕಥೆಗೆ ಹತ್ತಿರವಾಗುವುದಕ್ಕೆ ಸಾಧ್ಯವಾಗುತ್ತದೆ. ಇದು ನನ್ನ ಅನಿಸಿಕೆ.  ಉದಾಹರಣೆ. ಬಿChiಯವರು ಮತ್ತು ಸಹಾಯಕ ತಮ್ಮದೇ  ಮನೆಯಲ್ಲಿ ಕುಳಿತು ಮಾತನಾಡುವ ಸನ್ನಿವೇಶವಿದೆ. ಅಲ್ಲಿ ಅವರು ಕುಳಿತ ಭಂಗಿಯಲ್ಲೆ ಒಂದು ಅಸಹಜತೆ ಇರುತ್ತಿತ್ತು. ತಮ್ಮದೇ ಮನೆಯಲ್ಲಿ ಬಂದ ನೆಂಟರಂತೆ ಶಿಸ್ತಿನಲ್ಲಿ ಕುಳಿತು ಮಾತನಾಡುವುದು ರಂಗ ತನ್ನದೂ ಎನ್ನುವ ಕೊರತೆ ಕಾಣುತ್ತಿತ್ತು. ತಮ್ಮ ಮನೆಯಲ್ಲಿ ಕುಳಿತುಕೊಳ್ಳುವಾಗ ಒಂದಷ್ಟು ಸ್ವೇಚ್ಛೆ ಸಹಜವಾಗಿ ಇರುತ್ತದೆ. ಕಾಲು ಮೇಲೆ ಹಾಕಿಯೋ ಕುಕ್ಕರಗಾಲಿನಲ್ಲೋ ಹೇಗೆ ಬೇಕೋ ಹಾಗೆ ನಮ್ಮ ಮನೆಯಲ್ಲಿ ಕುಳಿತು ಬಿಡುತ್ತೇವೆ. ಆ ನೈಜತೆ ಇಲ್ಲಿ ಕಂಡುಬಲಿಲ್ಲ. ಬಂದರೆ ಒಂದಷ್ಟು ಮಾರ್ಮಿಕವಾಗುತ್ತಿತ್ತೋ ಅಂತ ಅನ್ನಿಸುತ್ತದೆ.  ಅಂತಹ ಅಂಶಗಳು ಹಲವಾರನ್ನು ಇಲ್ಲಿ ಗುರುತಿಸಬಹುದು. ಬಹಳಷ್ಟು ಪಾತ್ರಗಳು ಸಂಭಾಷಣೆಯನ್ನು ಒಪ್ಪಿಸುವಾಗ ಸಂಭಾಷಣೆಯ ಗಂಭೀರತೆಯ ಬಗ್ಗೆ ಅನಗತ್ಯವಾಗಿ ಯೋಚಿಸುವಂತೆ ಕಂಡು ಬರುತ್ತಿತ್ತು. ಇದು ಸಹಜತೆಗೆ ಶರೀರ ಭಾಷೆಯ ನೈಜತೆಗೆ ಆಡ್ಡಿಯಾದಂತೆ ಭಾಸವಾಗುತ್ತಿತ್ತು. ನಾವು ಅಭಿನಯಿಸುತ್ತಿದ್ದೇವೆ ಎಂಬ ಭಾವನೆಯಿಂದ ಪಾತ್ರಗಳು ಹೊರಬಂದ್ರೆ ಸೂಕ್ತ.  ಆದರು ಕೆಲವು ಪಾತ್ರಗಳು ಉತ್ತಮವಾಗಿ ನಿರ್ವಹಿಸಿದ್ದನ್ನು ತಳ್ಳುವಹಾಗಿಲ್ಲ.  ಹೆಚ್ಚಿನ ಎಲ್ಲಾ ಪಾತ್ರಗಳು ಗರಿ ಗರಿ ಇಸ್ತ್ರಿ ಮಾಡಿದ  ಶುಭ್ರವಾದ  ವಸ್ತ್ರಗಳನ್ನು ಧರಿಸಿದ್ದು ಅದು ಅಸಹಜವಾಗಿತ್ತು. ಮನೆಯಲ್ಲಿರುವಾಗಲೂ ಶಿಸ್ತಿನ ಉಡುಗೆಯ ಆವಶ್ಯಕತೆ ಇರುತ್ತದೆಯೇ?

ಇತಿಹಾಸದ ವ್ಯಕ್ತಿಗಳನ್ನು ರಂಗದ ಮೇಲೆ ತರುವಾಗ ಜಾಗರೂಕರಾಗಿ ಎಚ್ಚರಿಕೆಯಿಂದ ನಿರ್ವಹಿಸಬೇಕಾಗುತ್ತದೆ. ತುಸು ಎಚ್ಚರ ತಪ್ಪಿದರೂ ಇತಿಹಾಸಕ್ಕೆ ಅಪಚಾರವೆಸಗಿದಂತೆ.  ಆ ವಿಚಾರದಲ್ಲಿ ಬಹಳ ಗಮನ ಹರಿಸಿದ್ದು ಪ್ರತಿ ಸನ್ನಿವೇಶದಲ್ಲೂ ಅರಿವಿಗೆ ಬರುತ್ತಿತ್ತು. ಇದೊಂದು ಆತ್ಮಕಥೆಯಾಧಾರಿತವಾದರೂ ಇದು ಆತ್ಮಕಥೆ ಎಂದು ಪ್ರೇಕ್ಷಕ ಎಚ್ಚರಿಕೆಯಿಂದ ಗಮನಿಸುವಂತೆ ಮಾಡುತ್ತಿತ್ತು. ಯಾಕೆಂದರೆ ಪ್ರತೀ ಸನ್ನಿವೇಶವೂ ಒಂದು ಸುಂದರ ಕಥೆಯಂತೆ ಭಾಸವಾಗುತ್ತಿತ್ತು. 

ತುಂಬಿದ ರಂಗ ಮಂದಿರದಲ್ಲಿ ಪ್ರೇಕ್ಷಕ ಪ್ರತಿಕ್ರಿಯೆ ಅಧ್ಬುತವಾಗಿತ್ತು ಕರತಾಡನದ  ಪೂರ್ಣ ಅಂಕ ಅದು ಬಿChiಯವರಿಗೆ ಸಲ್ಲುತ್ತದೆ. ಅಷ್ಟು ಅಧ್ಬುತವಾದ ಮಾತುಗಳು ಇಡೀ ನಾಟಕದ ಜೀವಾಳಎಂದರೆ ತಪ್ಪಿಲ್ಲ.

ನಾಟಕವನ್ನು ಒದಗಿಸಿದ ಅದರಲ್ಲಿ ಪರಿಶ್ರಮ ವಹಿಸಿದ ಎಲ್ಲಾ ಕಲಾವಿದ ವರ್ಗದವರಿಗೂ ಸಂಘದ ಸದಸ್ಯರಿಗೂ ಹೃತ್ಪೂರ್ವಕ ಕೃತಜ್ಞತೆಗಳು. ಇನ್ನು ಇನ್ನೂ ಉತ್ತಮವಾದ ಸೇವೆ ಒದಗಿಸುವಂತೆ ಚೈತನ್ಯ ಮೂಡಿಬರಲಿ ಎಂಬ ಆಶಯ. ಶ್ರಮ ವಹಿಸಿದ ಕಲಾವಿದನ ಶ್ರಮ ಸಾರ್ಥಕವಾಗಬೇಕಾದರೆ ಪ್ರೇಕ್ಷಕನೂ  ಬದ್ದತೆಯನ್ನೂ ತೊರಬೇಕು.  ತನ್ನ ಅನಿಸಿಕೆ ವ್ಯಕ್ತ ಪಡಿಸಿದಾಗ ಅದು ಇನ್ನಷ್ಟು ಚೈತನ್ಯವನ್ನು ಒದಗಿಸುತ್ತದೆ. ಮುಂದಿನ ಹೆಜ್ಜೆ ಇಡುವಲ್ಲಿ ಒಂದಷ್ಟು ಬೆಳಕನ್ನು ಒದಗಿಸುತ್ತದೆ. ಒಬ್ಬ ಸಾಮಾನ್ಯ ಪ್ರೇಕ್ಷಕನಾದ ನನ್ನ ಅನಿಸಿಕೆಗಳು ಇದು. ಇದರಲ್ಲಿ ಮಿಥ್ಯೆಗಳು ಇದ್ದರೂ ಇರಬಹುದು. ಇದು ಕೇವಲ ನನ್ನ ಅನಿಸಿಕೆಗಳಿಗೆ ಸೀಮಿತ.  

Wednesday, December 25, 2019

ಪೌರತ್ವದ ಲೆಕ್ಕಾಚಾರ. ..

ಮಧ್ಯಾಹ್ನದ ಊಟಕ್ಕೆ ಅನ್ನಕ್ಕೆ ಪಾತ್ರೆ ಇಡಬೇಕಾದರೆ ಮನೆಯಾಕೆ ಲೆಕ್ಕ ಹಾಕುತ್ತಾಳೆ, ಮನೆಯಲ್ಲಿ ಯಾರೆಲ್ಲ ಇರುತ್ತಾರೆ? ಎಷ್ಟು ಮಂದಿ ಊಟ ಮಾಡಬೇಕು? ಅದನ್ನು ಹೊಂದಿಕೊಂಡು ಆಕೆ ಪಾತ್ರೆಗೆ ಅಕ್ಕಿ ಸುರಿಯುತ್ತಾಳೆ. ಇದು ಒಂದು ಮನೆಯ ಲೆಕ್ಕಾಚಾರ.  ಒಂದು ಮದುವೆ ಪೂಜೆ ಇನ್ನಿತರ ಸಮಾರಂಭದಲ್ಲೂ ಅಷ್ಟೇ ಊಟ ತಿಂಡಿಗೆ ಎಷ್ಟು ಜನ ಸೇರಬಹುದು ಅಂತ ಲೆಕ್ಕ ಹಾಕುತ್ತಾರೆ. ಹೋಗಲಿ ದೇವರ ಪೂಜೆಗೆ ಪ್ರಸಾದ ನೈವೇದ್ಯ ಇಡುವುದು ದೇವರಿಗಾದರೂ ಭಕ್ತರು ಎಷ್ಟು ಸೇರುತ್ತಾರೆ ಎಂಬುದನ್ನು ಲೆಕ್ಕ ಹಾಕುತ್ತಾರೆ. ಹಾಗಿರುವಾಗೆ ದೇಶದೊಳಗೆ ರಾಜ್ಯ ಗ್ರಾಮದೊಳಗೆ ಎಷ್ಟು ಜನ ಇದ್ದಾರೆ ಎಂದು ಲೆಕ್ಕ ಹಾಕಬೇಡವೇ? ಒಂದು ಸುಸ್ಥಿರ ಆಢಳಿತಕ್ಕೆ , ಅಭಿವೃದ್ಧಿಗೆ ಇದು ಜನಗಣತಿ ಅನಿವಾರ್ಯ.  ಮಾತ್ರವಲ್ಲ ನಮ್ಮ ಮನೆಯಲ್ಲೇ ಆಗಲಿ ಯಾರೆಲ್ಲ ಇದ್ದಾರೆ ಎಂಬಲ್ಲಿ ನಮ್ಮ ಮನೆಯ ಡಾಟಾ ಬೇಸ್ ಸಿದ್ದವಾಗುತ್ತದೆ. ಹಾಗಿರುವಾಗ ಊರಿಗೆ ದೇಶಕ್ಕೆ ಅದು ಬೇಡ ಎನ್ನುವ ತೀರ್ಮಾನಕ್ಕೆ ಬರುವುದು ಮೂರ್ಖತನವಾಗುತ್ತದೆ. ವಾಸ್ತವದಲ್ಲಿ ಬೇಡ ಎಂದು ತೀರ್ಮಾನಕ್ಕೆ ಯಾವಾಗ ಬರುತ್ತಾರೆ? ಊರನ್ನು ಮನೆಯನ್ನು ನೋಡಿಕೊಳ್ಳುವವ ಬೇರೆ ಯಾವನೋ ಒಬ್ಬನಾಗಿದ್ದರೆ ಆತನಿಗೆ ಮನೆಯೊಳಗಿನ ಮಂದಿಯ ಲೆಕ್ಕ ಬೇಕು ಎನ್ನುವುದಕಿಂತ ಅದನ್ನು ಆತ ಅಲಕ್ಷಿಸುತ್ತಾನೆ. ಮಧ್ಯಾಹ್ನ ಹತ್ತು ಜನ ಊಟಕ್ಕಿದ್ದರೆ ಈತ ಲೆಕ್ಕ ಪುಸ್ತಕದಲ್ಲಿ ಹೈದಿನೈದು ಮಂದಿ ಇದ್ದರು ಎಂದು ತೋರಿಸಿ ಐದು ಊಟದ ಹೆಚ್ಚುವರಿ ಖರ್ಚನ್ನು ಲೆಕ್ಕದಲ್ಲಿ ತೋರಿಸಿ ಸ್ವಂತ ಜೇಬಿಗೆ ಇಳಿಸಬಹುದು. ಆಂದರೆ ಭ್ರಷ್ಟಾಚಾರ ಅಲ್ಲೇ ಆರಂಭವಾಗಿಬಿಡುತ್ತದೆ. ಕದಿಯುವವರಿಗೆ ನಿಖರ ಲೆಕ್ಕ ಯಾವಾಗಲೂ ತೊಂದರೆಯನ್ನು ಕೊಡುತ್ತದೆ.  ಇದು ಬಹಳ ಸಾಮಾನ್ಯ ಜ್ಞಾನ. ಇದನ್ನು ಅರಿಯುವುದಕ್ಕೆ ಆತ ದೊಡ್ಡ ಪದವಿ ಪಡೆದ ವಿದ್ಯಾವಂತನಾಗಬೇಕಿಲ್ಲ. ಹಾಗೇ  ನಮ್ಮ ಮನೆಯಲ್ಲಿ ಯಾರೋ ಒಬ್ಬ ಪರಿಚಯ ಇಲ್ಲದವನು ಇರುತ್ತಾನೆ ಎಂದರೆ ಊಹಿಸಿ ರಾತ್ರಿ ಮಲಗಿದರೆ ನಿರಾಳವಾದ ನಿದ್ದೆ ಸಾಧ್ಯವೇ?  ಮಲಗುವ ಮೊದಲು ಆತನ ಪರಿಚಯ ಸಂಬಂಧಿಸಿದವನು ಎಲ್ಲರಿಗೂ ಮಾಡಿಕೊಡಬೇಕು. ಇಲ್ಲವಾದರೆ ಉಳಿದುಕೊಳ್ಳುವ ಅಪರಿಚಿತ ತನ್ನ ಪರಿಚಯವನ್ನು ಎಲ್ಲರಿಗೂ ಮಾಡಿಕೊಡಲೇ ಬೇಕು.  ಇದು ಯಾರೂ ಅರ್ಥ ಮಾಡಿಕೊಳ್ಳಬಲ್ಲ ಸರಳ ತತ್ವಗಳು ರಾಜಕೀಯ ಮಂದಿಗೆ ಅರ್ಥವಾದರೂ ಅದು ಬೇಕಾಗಿಲ್ಲ ಎಂದರೆ ಆಶ್ಚರ್ಯವಾಗುತ್ತದೆ. 

ಇಂದು ದೇಶಾದ್ಯಂತ ಗಲಭೆ ಎಬ್ಬಿಸುವ CAB  ಅಂದರೆ ಪೌರತ್ವ ಕಾಯಿದೆ ಉಳಿದಂತೆ NCR ಮತ್ತು NPR(National Population Register) ಇವುಗಳ  ಬಗೆಗಿನ  ವಿರೋಧ ನೋಡಿದರೆ ಮೂರ್ಖತನದ ಅರಿವಾಗುತ್ತದೆ.  ಯಾಕಾಗಿ ವಿರೋಧಿಸಬೇಕು ಎನ್ನುವುದೇ ಸ್ಪಷ್ಟವಿಲ್ಲದ ಎಡಬಿಡಂಗಿ ಮನೋಭಾವ ಒಂದೆಡೆಯಾದರೆ, ಇದಕ್ಕೆ ಧರ್ಮಾಂಧತೆಯ ಬಣ್ಣ ಹಚ್ಚುವುದು ಮತ್ತೊಂದೆಡೆ. ಸರಕಾರ ಇದೇ ಗಣತಿಯನ್ನು ತೆಗೆದು ಲೆಕ್ಖ ಹಾಕಿ ಯೋಜನೆಯನ್ನು ರೂಪಿಸಿ ಅದರ ಫಲವನ್ನು ಪಡೆಯುವಲ್ಲಿ ಅಡ್ದಿಯಾಗದ ಧರ್ಮ, ಒಂದು ಕಾಯಿದೆ ರೂಪಿಸುವಾಗ ಧರ್ಮ ಅಡ್ಡಿಯಾಗುತ್ತದೆ. ಕುಂಬಳ ಕಾಯಿ ಕಳ್ಳ ಎಂಬಂತೆ ತಮ್ಮ ಹೆಗಲನ್ನು ತಾವೆ ಮುಟ್ಟಿನೋಡುತ್ತಾರೆ. 

ಮಾಜಿ ಮಂತ್ರಿಯೊಬ್ಬರು ಈ ಕಾಯಿದೆ ಯಾಕೆ ಬೇಡ ಎಂಬುದಕ್ಕೆ ಕಾರಣ ಕೊಡುತ್ತಾರೆ.  ಈ ಕಾನೂನಿನಂತೆ ಒಬ್ಬ ಪೌರನಿಗೆ ದಾಖಲಾತಿಗಳನ್ನು ಕೇಳಿದಾಗ, ಈ ದೇಶದ ಬುಡಕಟ್ಟು ಜನಾಂಗ ಅವಿದ್ಯಾವಂತರು, ದೀನ ದಲಿತರು ಈ ದಾಖಲೆಯನ್ನು ಒದಗಿಸಲು ಎಲ್ಲಿ ಹೋಗಬೇಕು? ಈ  ಕಾರಣ ಮೇಲ್ನೋಟಕ್ಕೆ ನ್ಯಾಯಯುತವಾದದ್ದು ಸರಿಯಾಗಿದ್ದದ್ದು ಎಂದು ಅನ್ನಿಸಿದರು ಅದನ್ನುಆಳವಾಗಿ ಯೋಚಿಸಿದಾಗ ಆ ಕಾರಣ ಎಷ್ಟು ಮೂರ್ಖತನದ್ದು ಎಂಬುದು ಅರಿವಾಗುತ್ತದೆ.  ಯೋಚಿಸಿ,  ಹಿರೋಶಿಮಾ ನಾಗಸಾಕಿಯಲ್ಲಿ  ಬಾಂಬ್ ಸುರಿದಾಗ ಆ ದೇಶ ಸಂಪೂರ್ಣವೆಂಬಂತೆ ನಾಶವಾದರೂ ಜಪಾನಿಗಳ ಬದ್ದತೆ ಕಾರ್ಯ ಕ್ಷಮತೆ ಆ ರಾಷ್ಟ್ರ ನಿರ್ಮಾಣದಲ್ಲಿ ಮುಖ್ಯ ಪಾತ್ರವಾಗುತ್ತದೆ. ಮಾತ್ರವಲ್ಲ ಬಹುರಾಷ್ಟ್ರಗಳಿಗೆ ಸಡ್ಡು ಹೊಡೆವಂತೆ ಜಪಾನ್ ಮತ್ತೆ ಎದ್ದು ನಿಲ್ಲುತ್ತದೆ. ಆ ರಾಷ್ಟ್ರವನ್ನು ನೋಡಿಯಾದರೂ ನಮ್ಮನ್ನು ಎಪ್ಪತ್ತು ವರ್ಷ ಆಳಿದವರು ನೋಡಿ ಕಲಿಯಬೇಕಿತ್ತು. ಜಪಾನಿನಷ್ಟು ಅಲ್ಲವಾದರು ಒಂದಿಷ್ಟು ನಾವು ಎದ್ದು ನಿಲ್ಲಬೇಕು ಎನ್ನುವ ಇಚ್ಛಾ ಶಕ್ತಿ ಪ್ರಜೆಗಳಲ್ಲಿ ಮೂಡಿಸಬೇಕಿತ್ತು. ಆದರೆ ಆದದ್ದೇನು ಬುಡಕಟ್ಟು ಜನಾಂಗ ಇನ್ನೂ ಕಾಡಲ್ಲೇ ಇದೆ.  ಎಪ್ಪತ್ತು ವರ್ಷವಾದರೂ ಊರು ಅವರಿಗೆ ಅರಿವಿಗೆ ಬಂದಿಲ್ಲ ಎಂದರೆ ಅದರ ವೈಫಲ್ಯ ಆಳಿದ ಮಂದಿಗಳ  ವೈಫಲ್ಯ ಯಾಕೆ ಆಗುವುದಿಲ್ಲ?  ಅವಿದ್ಯಾವಂತರಿಗೆ ಎಪ್ಪತ್ತು ವರ್ಷದಲ್ಲಿ ಸ್ವಲ್ಪವಾದರೂ  ವಿದ್ಯೆಯನ್ನು ಒದಗಿಸದ ಸ್ವಾತಂತ್ರ್ಯಾ ನಂತರದ ಆಢಳಿತ ಅದು ಎಂತದ್ದು?  ಸಂಗ್ರಹವಾದ ತೆರಿಗೆ ರಾಜ ದರ್ಬಾರಿಗೆ ಬಳಕೆ ಯಾಗುತ್ತಿದೆ ಎಂಬುದಕ್ಕೆ ಬೇರೆ ನಿದರ್ಶನ ಬೇಡ.  ಇನ್ನೂ ಅವಿದ್ಯಾವಂತರು ಸ್ವಂತ ದಾಖಲೆ ಇಟ್ಟುಕೊಳ್ಳದಷ್ಟು ಅರಿವಿಲ್ಲದ ಪ್ರಜೆಗಳು ಇದ್ದಾರೆ ಎಂದರೆ ಅದಕ್ಕೆ  ಎಪ್ಪತ್ತು ವರ್ಷದ ಆಢಳಿತ ಯಾಕೆ ಕಾರಣವಾಗುವುದಿಲ್ಲ?  ಬೇಡಾ ಅಂತ ಆಕ್ಷೇಪಿಸಿ ಕಾರಣಗಳನ್ನು ಒದಗಿಸುವಾಗ ಅದು ತಮ್ಮ ವೈಫಲ್ಯಗಳಾಗಿ ತಮ್ಮ ಕಾಲ ಬುಡಕ್ಕೆ ಬರುತ್ತದೆ ಎಂಬ ಪರಿಜ್ಞಾನ ಇಲ್ಲವೇ? 

ಎಪ್ಪತ್ತು ವರ್ಷ ಎಂದರೆ ಮನುಷ್ಯನ ಎರಡು ತಲೆಮಾರು ಎನ್ನಬಹುದು. ಈ ಎರಡು ತಲೆಮಾರಿನಲ್ಲಿ ಕೊನೆಯ ವ್ಯಕ್ತಿ ಇನ್ನೂ ತನ್ನ ಸ್ವಂತ ಅಸ್ತಿತ್ವಕ್ಕೆ ದಾಖಲೆಯನ್ನು ಒದಗಿಸುವುದಕ್ಕೆ ವಿಫಲನಾಗುತ್ತಾನೆ ಎಂದಾದರೆ ಅದರ ಹೊಣೆ ಯಾರದ್ದು? ಇಂದು ರಾಜಕೀಯದಲ್ಲಿ ವಿರೋಧಿಸುವುದಕ್ಕೆ ಕಾರಣ ಬೇಕಿಲ್ಲ? ಮಾಡುವುದು ’ಆತ’   ಎಂಬ ಒಂದೇ ಕಾರಣ ಸಾಕಾಗುತ್ತದೆ. ಅದನ್ನೆ ನಾನು ಮಾಡಿದರೆ ಅದು ಪರಮ ಪವಿತ್ರ ಕೆಲಸವಾಗುತ್ತದೆ. ಸ್ವಾತಂತ್ರ್ಯ ನಂತರ ಭಾರತದ ರಾಜಕೀಯ ಬೆಳೆದು ಬಂದ ರೀತಿ ಇದು. ಕೇವಲ ಮತಗಳಿಸುವುದು ಅಧಿಕಾರ ಉಳಿಸುವುದು ಸ್ವಜನ ಪಕ್ಷಪಾತ ಇವಿಷ್ಟೇ ರಾಜಕೀಯ ಎಂಬಂತಾಗಿ ಇಂದು ಭಾರತದ ಸಜ್ಜನ ಪ್ರಜೆ ರಾಜಕೀಯವನ್ನು ಛೀ ಥೂ ಅಂತ ದೂರವಿಡುವುದಕ್ಕೆ ಕಾರಣ ಹುಡುಕಿದರೆ,  ಅದೇ ಎಪ್ಪತ್ತುವರ್ಷದ ಇತಿಹಾಸ ಅತ್ಯಂತ ಹೀನಾಯವಾಗಿ ತೆರೆದುಕೊಳ್ಳುತ್ತದೆ.  ನಾವು ಬಾಲ್ಯದಲ್ಲಿರುವಾಗ ಪ್ರತಿ ದಿನವೂ ಒಂದು ಆಶಾವಾದವನ್ನು ಹೊಂದಿಕೊಳ್ಳುತ್ತಿದ್ದೆವು. ಕೆಟ್ಟು ನಿಂತ ರಸ್ತೆ, ಬಾರದ ವಿದ್ಯುತ್, ಕಲ ಬೆರೆಕೆ ಅಹಾರ, ಹೀಗೆ ಎಲ್ಲವನ್ನು ನೋಡಿದಾಗ ಇಂದಲ್ಲ ನಾಳೆ ಒಳ್ಳೆದಾಗುತ್ತದೆ ಎಂಬ ಆಶಾವಾದ ಇಟ್ಟು ನಿರೀಕ್ಷೆಯಲ್ಲಿ ದಿನ ಕಳೆದು ಕಳೆದು ಇದೀಗ ಐವತ್ತು ವರ್ಷ ಕಳೆದರೂ ನಿರೀಕ್ಷೆ ಸತ್ತು ಹೋಗಿದೆ. ಅದಕ್ಕೆ ಯಾರನ್ನು ಕಾರಣ ಮಾಡಬೇಕು. ಆಳುವ ಮಂದಿಗೆ ಒಂದಿಷ್ಟು ಸಾರ್ವಜನಿಕ ಇಚ್ಛಾ ಶಕ್ತಿ ಇಲ್ಲ ಎಂದಾದಾಗ ಅದು ಜನತೆಯ ಕೊರತೆಯೇ ಆಗಿ ಪರಿಣಮಿಸುತ್ತದೆ. 

  ಒಂದು ಮನೆಯ ಯಜಮಾನ ಪ್ರತಿಯೊಂದಕ್ಕೂ ಸರಿಯಾದ ಲೆಕ್ಕ ಇಡಬೇಕಾದದ್ದು ಆತನ ಅನಿವಾರ್ಯತೆಯಾಗುತ್ತದೆ. ಆದರೆ ಹಾಗೆ ಆತ ಪ್ರತಿಯೊಂದಕ್ಕು ಲೆಕ್ಕ ಇಡುವಾಗ ಆ ಮನೆಯಲ್ಲಿ ಕದಿಯುವವರು ವಂಚಿಸುವವರು ಇದ್ದರೆ ಅವರಿಗೆ ಸರಿಯಾದ ಲೆಕ್ಕ ಒದಗಿಸುವುದು ಕಷ್ಟವಾಗುತ್ತದೆ. ಸಹಜವಾಗಿ ತಳಮಳ ಶುರುವಾಗುತ್ತದೆ.  ನಾವು ಚಿಕ್ಕವರಿದ್ದಾಗ ಪಟ್ಟಿ ಬರೆದು, ಕೈಗೆ ಹಣ ಇಟ್ಟು ಅಂಗಡಿಗೆ ಕಳುಹಿಸುತ್ತಿದ್ದರು. ನಾವು ಮಾಡಿದ ಖರ್ಚನ್ನು ಸರಿಯಾಗಿ ಲೆಕ್ಕ ಒದಗಿಸಬೇಕಿತ್ತು.  ಕೈಯಲ್ಲಿದ್ದ ಹಣ ಕಡಿಮೆ ಬಂದಾಗ ಹಣ ಏನು ಮಾಡಿದೆ?  ಅಂತ ಜೋರು  ಮಾಡಿ ಗದರಿಸಿ ಕೇಳುತ್ತಿದ್ದರು .  ಮಧ್ಯೆ ಗೊತ್ತಿಲ್ಲದೆ ಬಿಸ್ಕತ್ತು ಚಾಕಲೇಟ್ ಗೆ ಖರ್ಚು ಮಾಡುವುದಿದ್ದರೂ ನಮಗೆ ತಳಮಳವಾಗುತ್ತಿತ್ತು.  ಕೊನೆಗೆ ಲೆಕ್ಕ ಸರಿ ಹೊಂದದೇ ಇದ್ದಾಗ ತಂದ ಅಕ್ಕಿ ಬೇಳೆಯ ಬೆಲೆಯನ್ನೇ  ವೆತ್ಯಾಸ ಮಾಡಿ ಹೇಳಿ ಬಚಾವ್ ಆಗುವ ಕುಟಿಲ ಉಪಾಯವೂ ನಮ್ಮಲ್ಲಿರುತ್ತಿತ್ತು. ಈ ನಡುವೆ ಅನಧಿಕೃತವಾಗಿ ನಮ್ಮ  ಕೈಯಲ್ಲಿ ಚಾಕಲೇಟ್ ಕಂಡರೆ ದುಡ್ಡು ಎಲ್ಲಿಂದ ಸಿಕ್ಕಿತು?  ನಾವು ಮನೆಯ ಒಳಗೆ ಕದ್ದೆವಾ?  ಇಲ್ಲ ಹೊರಗೆ ಕದ್ದೆವಾ? ಹಿರಿಯರ ಆತಂಕದ ಅರ್ಥ ವಾಗಬೇಕಾದರೆ ನಮ್ಮಲ್ಲೂ ಜವಾಬ್ದಾರಿ ಬರಬೇಕು.  ತರುವ ಸಾಮಾನಿಗೆ ದುಡ್ಡು ಮನೆಯ ಯಜಮಾನ ಕೊಡುತ್ತಾನೆ ಎಂದಾಗ ಅಂಗಡಿಯ ಸಾಮಾನಿನ ಬೆಲೆಯೂ ನಮಗೆ ಮುಖ್ಯವಾಗುವುದಿಲ್ಲ. ಅದೇ ನಾವೇ ನಮ್ಮ ಜೇಬಿನ ಹಣದಿಂದ ಏನಾದರೂ ಕೊಳ್ಳಬೇಕಿದ್ದರೆ ಹತ್ತು ಸಲ ಯೋಚಿಸುವುದಿತ್ತು. ಹಲವು ಅಂಗಡಿ ಸುತ್ತುವುದಿತ್ತು. ಇಂತಹ ಸಾಮಾನ್ಯ ಜ್ಞಾನವು ಇಂದು ಕಾಯಿದೆಯನ್ನು ಪ್ರಶ್ನಿಸುವವರಿಗೆ  ಅರ್ಥವಾಗುವುದಿಲ್ಲ. ಹೋಗಲಿ ಕಾಯಿದೆ ಕಾನೂನು ನಿಯಮಗಳು ರೂಪಿಸುವಾಗ ಅದರಲ್ಲಿ ಕುಂದುಕೊರತೆಗಳು ಸಾಮಾನ್ಯ. ಅದರ ಅನುಭವ ಬೇರೆಯೇ ಆಗಿರುತ್ತದೆ. ಹಾಗಂತ ಅದನ್ನು ವಿರೋಧಿಸುವುದಕ್ಕೂ ಒಂದು ನಿಯಮ ಇರುತ್ತದಲ್ಲವೆ? ವಿರೋಧಿಸುವುದೆಂದರೆ ಅದು ಏಳು ಜನ್ಮದ ವೈರಿಯೊಂದಿಗೆ ಯುದ್ದಕ್ಕೆ ಇಳಿದಂತೆ ಮಾಡಬೇಕೆ. ಮರು ದಿನ ನಾವುಗಳೇ ಇಲ್ಲಿ ಪರಸ್ಪರ ಮುಖ ನೋಡಿಕೊಂಡು ಬದುಕಬೇಕು ಎಂಬ ಸಾಮಾನ್ಯ ಅರಿವು ಇಲ್ಲದಂತೆ ಗಲಭೆ ಎಬ್ಬಿಸಬೇಕೆ. ಪ್ರಜಾ ಪ್ರಭುತ್ವದಲ್ಲಿ ನ್ಯಾಯಾಂಗ ವ್ಯವಸ್ಥೆ ಇದೆ ಎಂಬುದನ್ನೇ ಮರೆತು ಪ್ರತಿಭಟನೆ ವಿರೋಧ ಮಾಡುತ್ತಿದ್ದರೆ ಈ ದೇಶದಲ್ಲಿ ಅನಾಗರಿಕರು ಅವಿದ್ಯಾವಂತರು ಯಾರು ಎಂದು ಪ್ರಶ್ನೆ ಮಾಡುವ ಹಾಗಾಗುತ್ತದೆ.  ಆದಾಯ ತೆರಿಗೆಯ ನಿಯಮದಂತೆ ಲಾಭವಾದರೂ ನಷ್ಟವಾದರೂ ಅದಕ್ಕೊಂದು ಲೆಕ್ಕ ಬೇಕು. ಆದರೆ ರಾಜಕೀಯ ಮಂದಿಗಳು ಈ ಲೆಕ್ಕ ಮೊದಲು ತಪ್ಪಿಸುತ್ತಾರೆ. ಎಪ್ಪತ್ತು ವರ್ಷದ ರಾಜಕೀಯ ನಡೆದು ಬಂದ ರೀತಿ ಇದು. 

ಎಪ್ಪತ್ತು ವರ್ಷದ ಆಳ್ವಿಕೆ ಪ್ರಜೆಗಳಲ್ಲಿ ಜವಾಬ್ದಾರಿಯನ್ನು ತುಂಬಲಿಲ್ಲ. ಸಾಮಾನ್ಯ ಅರಿವನ್ನೂ ಮೂಡಿಸಲಿಲ್ಲ. ಪ್ರಜಾ ಕರ್ತವ್ಯದ ಅರಿವನ್ನು ಮೂಡಿಸಲಿಲ್ಲ. ದಿಕ್ಕು ತಪ್ಪಿಸುವ ರಾಜಕೀಯವನ್ನಷ್ಟೇ ಬಾರತ ಕಂಡದ್ದು. ಇನ್ನಾದರೂ  ನಮ್ಮಲ್ಲಿ ಉತ್ತಮ ಪ್ರಜಾ ಲಕ್ಷಣದ ಜವಾಬ್ದಾರಿ ಅರಿವು ಮೂಡಬೇಕು. ಭಾರತ ಜಪಾನಿನಂತೆ ಅಲ್ಲವಾದರು ಒಂದಿಷ್ಟು ಎದ್ದು ನಿಲ್ಲ ಬೇಕು ರಾಜಕೀಯ ಇಚ್ಛಾಶಕ್ತಿಗಳು ಬದಲಾಗಬೇಕು. ಇದು ಪ್ರತಿಯೊಬ್ಬ ಭಾರತೀಯನ ಬಯಕೆ. ಹಾಗಾಗಿ ಈ ಪೌರತ್ವ ಕಾಯಿದೆ ವಿರೋಧವಿಲ್ಲದೆ ಜಾರಿಗೆ ಬರಬೇಕು. ನಮ್ಮ ಲಾಭ ನಷ್ಟದ ಲೆಕ್ಕ ಇಲ್ಲಿಂದಲೇ ಆರಂಭವಾಗಬೇಕು. ನಮ್ಮ ಮನೆಯಲ್ಲಿ ಯಾರೆಲ್ಲ ಇದ್ದಾರೆ ಎಂಬ ಅರಿವು ನಮಗಾಗಬೇಕು. ಇಲ್ಲವಾದರೆ ಹಾವು ಹೆಗ್ಗಣ ಬಂದು ವಾಸವಾದರೂ ನಮ್ಮ ಅರಿವಿಗೆ ಬಾರದೆ ಇರಬಹುದು. ಒಮ್ಮೆ ಯೋಚಿಸೋ ಶಕ್ತಿ ನಮ್ಮಲ್ಲಿ ಮೂಡಲಿ. 



Sunday, December 22, 2019

ಹೋರಾಟ ಯಾರಿಗಾಗಿ?


ನಾವು ಊರಲ್ಲಿರುವಾಗ ನಮ್ಮ ಮನೆಗೆ  ಕೂಲಿಕೆಲಸಕ್ಕೆ ಒಬ್ಬಾತ ಮುಸ್ಲಿಂ ಹುಡುಗ ಬರುತ್ತಿದ್ದ. ಆತ ಹೇಳಿದ ಕಥೆ ಪ್ರಸ್ತುತ ಬಹಳ ನೆನಪಾಗುತ್ತಿದೆ. ಬಹಳ ಸಾಧು ಸಭ್ಯ ವಿದ್ಯಾವಂತ ಪದವೀಧರ ಹುಡುಗ ಕೂಲಿಯಾಳಾಗಿ ಮಣ್ಣಿನ ಕೆಲಸಕ್ಕೆ ಹೋಗುತ್ತಾನೆ ಎಂದರೆ ಆಶ್ಚರ್ಯವಾಗಬಹುದು. ಆದರೆ ಕೇರಳದಲ್ಲಿ ಇದು ಸಾಮಾನ್ಯ. ಗಾರೆ ಕೆಲಸದ ಮೇಸ್ತ್ರಿಯೂ ಕನಿಷ್ಠ ಪಕ್ಷ ಕಾಲೇಜ್ ಮೆಟ್ಟಲು ತುಳಿದಿರುತ್ತಾನೆ.

ಇದೇ ಹುಡುಗ ಒಂದು ದಿನ ಕಾಸರಗೋಡಿನ ಹಳೆ ಬಸ್ ಸ್ಟಾಂಡ್ ಪರಿಸರದಲ್ಲಿ ಪುಟ್ ಪಾತ್ ನಲ್ಲಿ ಹೋಗುತ್ತಿರಬೇಕಾದರೆ ಅಲ್ಲೇ ಯಾವುದೋ ರಾಜಕೀಯ ಪಕ್ಷದ ಸಭೆಯೊಂದು ನಡೆಯುತ್ತಿತ್ತು. ಯಾವ ಪಕ್ಷ ಎಂಬುದು ಇಲ್ಲಿ ಅಪ್ರಸ್ತುತ. ಪಕ್ಷದ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಒಟ್ಟು ಸೇರಿದ್ದರು. ಹುಡುಗನ ಮಿತ್ರನೊಬ್ಬ ಅದೇ ಗುಂಪಿನಲ್ಲಿ ಇರುವುದನ್ನು ಕಾಣುತ್ತಾನೆ. ಇಬ್ಬರೂ ಬಹಳ ಆತ್ಮೀಯ ಮಿತ್ರರು. ಆತನೂ ಹತ್ತಿರ ಬಂದು ಇವನಲ್ಲಿ ಮಾತನಾಡುತ್ತಾನೆ. ಬಹಳ ಅಪರೂಪಕ್ಕೆ ಸಿಕ್ಕಿದ ಮಿತ್ರ ಎಂದಾಗ ಮಾತನಾಡಿದಷ್ಟೂ ಸಂಗತಿಗಳು ಮುಗಿಯುವುದಿಲ್ಲ. ಅಲ್ಲಿ ಪಕ್ಷದ ಸಭೆ ನಡೆಯುತ್ತಿದ್ದಂತೆ ಏನೋ ಗದ್ದಲ ಶುರುವಾಗುತ್ತದೆ.  ಇವರಿಬ್ಬರೂ ಇಲ್ಲೇ ಮಾತನಾಡುತ್ತಿದ್ದಂತೆ ಲಾಠೀ ಪ್ರಹಾರ ಕಿರುಚಾಟ ಎಲ್ಲರೂ ಚೆಲ್ಲಾ ಪಿಲ್ಲಿ ಓಡುತ್ತಿದ್ದಂತೆ ಈ ಇಬ್ಬರು ಮಿತ್ರರು ಸಿಕ್ಕ ಸಿಕ್ಕಲ್ಲಿ ಓಡುತ್ತಾರೆ. ಆದರೆ ಪೋಲೀಸ್ ವಾಹನ ಅದು ಹೇಗೋ ಇವರನ್ನು ಹಿಂಬಾಲಿಸುತ್ತದೆ. ಎಲ್ಲರ ಜತೆಗೆ ಇವರೂ ಬಂಧನಕ್ಕೆ ಒಳಗಾಗುತ್ತಾರೆ. ಪಾಪ ಪುಟ್ ಪಾತ್ ನಲ್ಲಿ ಸುಮ್ಮನೇ ಓಡಾಡುತ್ತಿದ್ದವನೂ ನೂರಾರು ಕಾರ್ಯಕರ್ತರೊಂದಿಗೆ ಬಂಧಿಸಲ್ಪಟ್ಟ. ಕಥೆ ಅಲ್ಲಿಗೇ ನಿಲ್ಲುವುದಿಲ್ಲ. ಹಲವು ಸಲ ಹೀಗೆ ಬಂಧಿಸಿದವರನ್ನು ಗಲಾಟೆ ನಿಯಂತ್ರಣಕ್ಕೆ ಬರುತ್ತಿದ್ದಂತೆ ಹೆಸರು ವಿಳಾಸ ಬರೆದು ಹಾಗೇ ಬಿಟ್ಟು ಬಿಡುತ್ತಾರೆ. ದುರಂತವೆಂದರೆ  ಈ ಸಲ ಹಾಗಾಗಲೇ ಇಲ್ಲ.

ಬಂಧಿಸಿದ ಅಷ್ಟೂ ಮಂದಿಯ ಮೇಲು ಎಪ್ ಐ ಆರ್  ದಾಖಲಾಯಿತು. ನ್ಯಾಯಾಯಲಯಕ್ಕೆ ಹಾಜರು ಪಡಿಸಿ ಜಾಮೀನು ಸಿಕ್ಕಿತು.   ಸಾಮಾನ್ಯವಾಗಿ ರಾಜಕೀಯದಲ್ಲಿ ಜಾಮೀನು ಸಿಕ್ಕಿದರೆ ಬಿಡುಗಡೆ ಸಿಕ್ಕಿದಂತೆ ಎಂಬ ತಪ್ಪು ಕಲ್ಪನೆ ಇರುತ್ತದೆ. ಒಂದು ಸಲ ಪೋಲೀಸ್ ಕೇಸ್ ಆಯಿತು ಎಂದರೆ ಅದು ಚರಿತ್ರೆಯ ದಾಖಲೆಯಾಗುತ್ತದೆ. ಮೊದಲ ಒಂದೆರಡು ತಿಂಗಳು ಪಕ್ಷದ ವಕೀಲನೊಬ್ಬ ನ್ಯಾಯಾಲಯಕ್ಕೆ ಬರುತ್ತಿದ್ದ. ಕ್ರಮೇಣ ಆತ ಬಾರದೇ ಇವರಷ್ಟೇ ನ್ಯಾಯಾಲಯಕ್ಕೆ ಹಾಜರಾಗಬೇಕಾಯಿತು. ಒಂದು ದಿನ ಕೋರ್ಟ್ ಕೇಸ್ ಗೆ ಅದೂ ಕ್ರಿಮಿನಲ್ ಕೇಸ್ ಗೆ ಒಂದು ದಿನ ವ್ಯರ್ಥ ಕಳೆದಂತೆ. ಸರಿಯಾಗಿ ಊಟ ಮಾಡುವುದಕ್ಕೂ ಸಾಧ್ಯವಿಲ್ಲದಂತೆ ನ್ಯಾಯಾಲಯ ಬೆಂಚ್ ಮೇಲೆ ಕುಳಿತುಕೊಳ್ಳಬೇಕು. ಹೆಸರು ಯಾವಾಗ ಕೂಗುತ್ತಾರೋ ಎಂದು ಕಾಯಬೇಕು. ಮೂತ್ರ ಮಾಡುವುದಕ್ಕೂ ಹೋಗುವ ಹಾಗಿಲ್ಲ. ಹಾಗೇ ಕೇಸು ವಾಯಿದೆ ಅಂತ ಒಂದು ವರ್ಷ ಕಳೆಯಿತು. ಹುಡುಗ ಈ ನಡುವೆ ಹಲವು ಬಾರಿ ಕೋರ್ಟ್ ಮೆಟ್ಟಲು ಹತ್ತಿದ್ದ. ಹಲವು ಸಲ ಪಕ್ಷದ ನೇತಾರರ ಮನೆ ಬಾಗಿಲು ಬಡಿದ. ಒಂದು ಸಲ ಇದರಿಂದ ಮುಕ್ತಿ ಸಿಗುವಂತೆ ಕಾಡಿದ ಬೇಡಿದ.

ಪಕ್ಷದವರು ಮೊದ ಮೊದಲು ಸಭ್ಯತೆಯಿಂದ ವ್ಯವಹರಿಸಿದರೂ ಮತ್ತೆ ಮತ್ತೆ ಧ್ವನಿಯ ಶೈಲಿ ಬದಲಾಗುತ್ತಿತ್ತು. ಈತನಿಗೂ ಅಲೆದಾಟ ಸಾಕಾಗಿತ್ತು. ಹಲವರ ಕಾಲು ಹಿಡಿದ. ಅವರಿಗಾಗಿ ಒಂದಷ್ಟು ಹಣವನ್ನೂ ಖರ್ಚು ಮಾಡಿದ. ಆದರೆ ಕೋರ್ಟ್ ಕೇಸು ಮಾತ್ರ ಹಾಗೇ ಮುಂದುವರೆಯುತ್ತಿತ್ತು. ಒಂದು ವರ್ಷ ಎರಡು ವರ್ಷ ಅದು ಮುಗಿಯಲೇ ಇಲ್ಲ. ಈ ನಡುವೆ ಆತನಿಗೆ ಗಲ್ಫ್ ಗೆ ಹೋಗುವ ಅವಕಾಶ ಸಿಕ್ಕಿತು. ಸಂಬಂಧಿಗಳು ಯಾರೋ ವೀಸಾ ಸಿದ್ದ ಪಡಿಸಿ ಈತನನ್ನು ಕರೆದರೆ ಕ್ರಿಮಿನಲ್  ಕೇಸ್ ಇದ್ದ ಇವನಿಗೆ ಅನುಮತಿಯೇ ಸಿಗಲಿಲ್ಲ. ಯಾವ ರಾಜಕೀಯ ವ್ಯಕ್ತಿಗಳೂ ಸಹಾಯಕ್ಕೆ ಬರಲಿಲ್ಲ. ಅಲ್ಲಿ ಪಕ್ಷಕ್ಕಾಗಿ ಜೈಕಾರ ಹಾಕಿದವರು ಮುಖ ಮರೆಸಿ ಓಡಾಡಿದರು. ಪರಿಚಯದ ಮಿತ್ರ ನಂತರ ಮಿತ್ರನಾಗಿ ಉಳಿಯಲಿಲ್ಲ. ಮನೆಯ ಬಡತನನಿರುದ್ಯೋಗಈ ಕೋರ್ಟ್ ಕೇಸ್ ನ ಖರ್ಚು ಸಣ್ಣ ಪ್ರಾಯದ ಹುಡುಗ ನಿಜಕ್ಕೂ ಹೈರಾಣಾಗಿ ಹೋದ. ಉತ್ತಮ ಬದುಕು ಕಟ್ಟಿ ಮನೆ ಸಂಸಾರ ಅಂತ ಕನಸು ಕಟ್ಟಿದವನ ಕನಸು ಭಗ್ನವಾಯಿತು.  ಸರಿ ಸುಮಾರು ಐದು ವರ್ಷ ಆ ಕೇಸ್ ಮುಂದುವರೆಯಿತು.  ಹೇಗಾಗಬೇಡ ಯೋಚಿಸಿ.  ಮಣ್ಣಿನ ಬುಟ್ಟಿ ತಲೆಯಲ್ಲಿಟ್ಟು ಈ ಕಥೆಯನ್ನು ಆತ ವಿಷಾದಿಂದ ಹೇಳುತ್ತಿರಬೇಕಾದರೆ ಆತನಿಗೆ ಕಣ್ಣಲ್ಲಿ ನೀರು ಬರುತ್ತಿತ್ತು.

ರಾಜಕೀಯದ ಚಕ್ರವ್ಯೂಹವೇ ಹಾಗೇ. ಒಂದು ತಣ್ಣಗಿನ ವಿಷದಂತೆ.  ಮೊದ ಮೊದಲು ಹೆಗಲಿಗೆ ಕೈ ಹಾಕುವ ಪಕ್ಷದ ಸೇವಕರು ನಂತರ ಸಿಗುವುದಿಲ್ಲ. ಆ ಗಲಭೆಯಲ್ಲಿ ಪಕ್ಷದ ಯಾವ ಲೀಡರ್ ಗೆ ಸ್ವಾರ್ಥ ಸಾಧನೆಯಾಗಿದೆಯೋ , ಆದರೆ ಈ ಹುಡುಗನಂತಹ ಹಲವಾರು ಬದುಕುಗಳ ಕನಸು ಕರಗಿ ವಾಸ್ತವ ಅವರನ್ನು ಜೀವಿಸುವುದಕ್ಕೆ ಬಿಡುವುದಿಲ್ಲ. ಇದು ನೈಜ ಕಥೆ. ಒಂದು ಸಲ ಆವೇಶದಲ್ಲಿ ಪಕ್ಷದ ಲೀಡರ್ ಗೆ ಖುಷಿಯಾಗುವುದಕ್ಕೆ ಗಲಭೆ ಎಬ್ಬಿಸುತ್ತಾರೆ. ಕಲ್ಲು ಎಸೆಯುತ್ತಾರೆ. ಆ ಆವೇಶ ಕೇವಲ ಘಳಿಗೆಯ ಅವಧಿಗೆ. ಒಂದು ಹೊತ್ತಿನ ಊಟ ಮತ್ತೆ ಚಿಲ್ಲರೆ ದುಡ್ಡು ಇವಿಷ್ಟು ಅಷ್ಟನ್ನು ಮಾಡಿರುತ್ತದೆ. ಆದರೆ ಪೋಲೀಸ್ ಕೇಸು ಅಂತ ಕೊರಳಿಗೆ ಸುತ್ತಿಕೊಂಡರೆ ಅದು ವೈಯಕ್ತಿಕ ಬದುಕನ್ನು ಸುಡುತ್ತಾ ಹೋಗುತ್ತದೆ. ಪಕ್ಷದ ಧ್ವಜ ಗಾಳಿಯಲ್ಲಿ ಮೇಲೇರಿ ಮೇಲೆರಿ ಹಾರಾಡಿದರೆ ಇವರಿಗೆ ತುಂಡು ಬಟ್ಟೆಗೂ ಅಲೆದಾಡುವ ಸ್ಥಿತಿ ಬರುತ್ತದೆ. ಪಕ್ಷದ ನಾಯಕರು ಕಣ್ಣು ಮುಚ್ಚಿ ದೃಷ್ಟಿ ಬದಲಿಸುತ್ತಾರೆ. ಇದು ಒಂದು ಪಕ್ಷಕ್ಕೆ ಸೀಮಿತವಲ್ಲ

 ಕೌಟುಂಬಿಕವಾಗಿ ಸಾಮಾಜಿಕವಾಗಿ ರಾಜಕೀಯ ವ್ಯಕ್ತಿಗಳೆಂದರೆ ಪ್ರತ್ಯೇಕವಾಗಿ ನಿಲ್ಲುತ್ತಾರೆ. ಒಂದು ಕುಟುಂಬದ ಮದುವೆ ಮುಂತಾದ  ಕಾರ್ಯಕ್ರಮವಾದರೂ ಸರಿಅ ಕುಟುಂಬದಲ್ಲಿ ರಾಜಕೀಯ ವ್ಯಕ್ತಿ ಇದ್ದಾನೆ ಎಂದರೆ ಆ ಪ್ರತ್ಯೇಕವಾಗಿ ನಿಲ್ಲುತ್ತಾನೆ. ಕುಟುಂಬದ ಮಂದಿ ಮನೆ ಮಂದಿ ಆತನೊಡನೆ ಸಹಜವಾಗಿ ಬೆರೆಯುವುದಿಲ್ಲ. ಸೂಕ್ಷ್ಮವಾಗಿಯಾದರೂ ಕಣ್ಣಿಗೆ ಕಾಣದ ಅಡ್ಡ ಗೋಡೆಯೊಂದು ಮಧ್ಯೆ ತಡೆಯಾಗಿ ನಿಂತಿರುತ್ತದೆ. ಸಾರ್ವಜನಿಕ ಜೀವನವಾದರೂ ಹಾಗೆ. ರಾಜಕೀಯ ವ್ಯಕ್ತಿಗಳು ಪ್ರತ್ಯೇಕವಾಗಿರುತ್ತಾರೆ. ಎದುರಿಗೆ ಗೌರವ ಇದ್ದರು ಮನಸ್ಸಿನಲ್ಲಿ ಒಂದು ಅಸಹನೆ ಇದ್ದೇ ಇರುತ್ತದೆ.  ಹಲವು ಸಲ ಇದು ಅರಿವಿಗೆ ಬರುವುದಿಲ್ಲ. ಸೂಕ್ಷ್ಮವಾಗಿ ಗಮನಿಸಿದರೆ ಅರಿವಾಗುತ್ತದೆ. ಒಂದರ್ಥದಲ್ಲಿ  ಹೇಳುವುದಾದರೆ ಈ ಸಮಾಜದಲ್ಲಿ ಯಾವುದೋ ಒಂದು ಜಾತಿ ಪಂಗಡ ಅಸ್ಪೃಶ್ಯವಾಗಿ ಉಳಿಯುವುದಿಲ್ಲಬದಲಿಗೆ ರಾಜಕೀಯ ವ್ಯಕ್ತಿಗಳೇ ಅಸ್ಪ್ರ್ ಶ್ಯರಾಗಿ ಬಿಡುತ್ತಾರೆ. ಅವರೊಂದಿಗೆ ಬೆರೆಯುವುದೂ ಸಹ ಕೃತ್ರಿಮವಾಗಿ ಬಿಡುತ್ತದೆ. ರಾಜಕೀಯದವರಿಗೆ ಇದು ಅರ್ಥವಾದರೂ ಸ್ವಾರ್ಥ ಸಾಧನೆಯ ಹಾದಿಯಲ್ಲಿ ಇದನ್ನು ಬದಿಗೆ ತಳ್ಳಿಬಿಡುತ್ತಾರೆ.

ಈಗೀಗ ಪಕ್ಷದ ಪ್ರತಿಭಟನೆಗಳು ವರ್ಷಕ್ಕೆ ಒಂದು ಎರಡರಂತೆ ನಡೆಯುತ್ತದೆ. ಎಲ್ಲೋ ಇದ್ದ ಕಲ್ಲು ತಲೆಗೆ ಬಂದು ಬಡಿಯುತ್ತದೆ. ನಮ್ಮ ನಿಮ್ಮ ಸೊತ್ತು ನಾಶವಾಗುತ್ತದೆ.  ಎಲ್ಲಾ ತೆರಿಗೆಯನ್ನು ನ್ಯಾಯಯುತವಾಗಿ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಸಲ್ಲಿಸುವ ಜನಸಾಮಾನ್ಯನಿಗೆ ಸ್ವತಂತ್ರ ಭಾರತದ ರಸ್ತೆಯಲ್ಲಿ ಸಂಚರಿಸುವುದಕ್ಕೆ ಭಯವಾಗುತ್ತದೆ. ಆಸ್ಪತ್ರೆಯಲ್ಲಿರುವ ರೋಗಿಗೆ ಔಷಧಿ ಸಿಗುವುದಿಲ್ಲ. ಕಷ್ಟ ಪಟ್ಟು ಜೀವನಾಧಾರವಾಗಿ ಕಟ್ಟಿ ಬೆಳೆಸಿದ ಅಂಗಡಿ ಮುಂಗಟ್ಟುಗಳು ನಮ್ಮ ಕಣ್ಣೆದುರೇ ಎಸೆದ ಕಲ್ಲಿಗೆ ಹಚ್ಚಿದ ಬೆಂಕಿಗೆ ಬಲಿಯಾಗುತ್ತವೆ. ಕಾಲ ಕೆಳಗಿನ ಮಣ್ಣು ಜರೆದು ಹೊಂಡವಾದರೂ ಈಗಿನ ರಾಜಕೀಯ ಹಿಂಬಾಲಕರಿಗೆ ಅರ್ಥವಾಗುವುದಿಲ್ಲ. ಮತ್ತಷ್ಟು ಉದ್ವಿಗ್ನರಾಗಿ ಹೋರಾಟ ಮಾಡುತ್ತಾರೆ. ಪ್ರಜಾಪ್ರಭುತ್ವದ ಹಕ್ಕು ಅವರಿಗೆ ಮಾತ್ರ ಸೀಮೀತವಾಗುವಂತೆ ವರ್ತಿಸುತ್ತಾರೆ. ಮನೆಯಲ್ಲಿದ್ದ ಹೆತ್ತಮ್ಮ ಅಪ್ಪ ಅಣ್ಣ ತಂಗಿ ಕುಟುಂಬವನ್ನು ಕ್ಷಣ ಕಾಲ ಮರೆಯುತ್ತಾರೆ.

ಹೋರಾಟ ಪಕ್ಷದ ವಿರುದ್ಧ ಅಲ್ಲ ಸರಕಾರದ ವಿರುದ್ದ ಅಲ್ಲ. ಯಾವುದೋ ಕಾಯಿದೆ ಕಾನೂನಿನ ವಿರುದ್ದ ಅಲ್ಲ. ನಮ್ಮ ಮನೋಭಾವದ ವಿರುದ್ಧ ಹೋರಾಡಬೇಕಾಗಿದೆ. ಬದುಕುವ ಹಕ್ಕು ಭೂಮಿಯಲ್ಲಿ ಹುಟ್ಟಿದ ಪ್ರತಿಯೊಂದು ಪ್ರಾಣಿಗೂ ಇರುತ್ತದೆ. ಸಾಯುವುದಕ್ಕಾಗಿ ಯಾರೂ ಹುಟ್ಟುವುದಿಲ್ಲ. ಆದರೆ ಸಾವನ್ನು ತಾವೇ ಆಹ್ವಾನಿಸುವುದು ಮಾತ್ರವಲ್ಲ ಮತ್ತೊಬ್ಬರ ಬದುಕನ್ನು ನಾಶ ಮಾಡುತ್ತಾರೆ.