Friday, August 6, 2021

ಬ್ರಹ್ಮ ತತ್ವ

 
ತತ್ವಗಳು ಓದುವುದಕ್ಕೆ ಅಥವಾ ಹೇಳುವುದಕ್ಕೆ ಚೆನ್ನಾಗಿರುತ್ತವೆ, ಆದರೆ ಆಚರಿಸುವುದಕ್ಕೆ ಕಠಿಣವಾಗಿರುತ್ತವೆ ಅಥವಾ ಅಸಾಧ್ಯವಾಗಿರುತ್ತದೆ.  ದೂರದ ಬೆಟ್ಟದಂತೆ ಅದು ಕಾಣುವುದಕ್ಕೆ ಮಾತ್ರ ,  ಏರುವುದಕ್ಕಲ್ಲ.  ಅದರಂತೆ ಬ್ರಾಹ್ಮಣ್ಯ, ಅದು ನೋಡುವುದಕ್ಕೆ ಬಹಳ ಲಘುವಾಗಿ ಭಾಸವಾಗುತ್ತದೆ. ಪುರಾಣಗಳಲ್ಲಿ ಓದಿರಬಹುದು. ಪಾಂಡವರು ಬ್ರಾಹ್ಮಣರಾಗುತ್ತಾರೆ. ಹನುಮಂತ ಮೊದಲು ರಾಮನನ್ನು ಕಾಣುವಾಗ ಬ್ರಾಹ್ಮಣನಾಗಿ ಹೋಗುತ್ತಾನೆ.  ಹೆಚ್ಚೇಕೆ ಪರಮಾತ್ಮನು ಹಲವು ಸಲ ಬ್ರಾಹ್ಮಣನಾಗಿ ವೇಷಧರಿಸಿದ್ದು  ಓದಿರಬಹುದು.  ಬ್ರಾಹ್ಮಣ ವೇಷ ಸುಲಭ ಮತ್ತು ಸರಳ. ಆದರೆ ಬ್ರಾಹ್ಮಣನಾಗಿ ಬದುಕುವುದು ಒಂದು ಸವಾಲಿನ ಕೆಲಸ. ಈಗಂತೂ ಅದು ಹೆಜ್ಜೆಯ ಅನುಭವ.  ಭಕ್ತರನ್ನು ಪರೀಕ್ಷಿಸುವುದಕ್ಕಾಗಿ ಪರಮಾತ್ಮ ಬ್ರಾಹ್ಮಣನಾಗಿ ಬಂದಿರುವುದೇ ಹೆಚ್ಚು. ವಿಪರ್ಯಾಸವೆಂದರೆ ಈಗ ಬ್ರಾಹ್ಮಣನೇ ಹೆಚ್ಚು ಪರೀಕ್ಷೆಗೆ ಒಳಗಾಗುತ್ತಾನೆ. 

ಬ್ರಾಹ್ಮಣ ಎಂದಾಕ್ಷಣ ಅದೇ ಸರಳ ವೇಷವೇ ಕಣ್ಣಿಗೆ ಬಡಿಯುತ್ತದೆ. ಆದರೂ ಅದನ್ನು ಸರಳ ಎಂದು ಹೇಳುವುದರಲ್ಲಿ ಕೆಲವೊಮ್ಮೆ ಅನುಮಾನಿಸಬೇಕಾಗುತ್ತದೆ. ಯಾಕೆಂದರೆ  ಸರಳತೆಯ ಒಳಗೆ , ಅದು ಸರಳ ವೇಷ ಎನ್ನುವುದಕ್ಕೆ ಸಾಧ್ಯವಿಲ್ಲ.  ಅದು ಗಾಂಭೀರ್ಯವನ್ನು  ಹೆಚ್ಚಿಸುತ್ತದೆ. ಮುಖದಕಳೆ ಪಾಂಡಿತ್ಯವನ್ನೂ ಪ್ರಕಾಶಿಸುತ್ತದೆ. ಹೊರಾವರಣದಂತೆ ಒಳಾವರಣದಲ್ಲಿ ಮನಸ್ಸು ಪ್ರಕಾಶಿಸಿದರೆ ಭೂಸುರ ಎನ್ನುವುದಕ್ಕೆ ಸಾರ್ಥಕವೆನಿಸುತ್ತದೆ. ನಿಜ್ಜಕ್ಕೂ ಅದು ದೇವರು. 

ಬ್ರಾಹ್ಮಣ  ಇದು ಜಾತಿ ಸೂಚಕ ಪದ ಎಂದು ಎಲ್ಲೂ ಇಲ್ಲ. ಆದರೆ ಅದು ಜಾತಿಯಾಗಿಯೇ ಬಿಂಬಿಸಲ್ಪಡುತ್ತದೆ. ಕಾರಣ ಅಷ್ಟೇ ಅದು ಸುಲಭದ ತತ್ವವಲ್ಲ. ಲೌಕಿಕತೆಯ ಗಾಢ ಅನುಭವದಲ್ಲಿ ಮುಳುಗಿರುವಾಗ ಬ್ರಹ್ಮ ಪದ ಹಾಸ್ಯಾಸ್ಪದವಾಗಿಯೇ ಭಾಸವಾಗುತ್ತದೆ. ಲೌಕಿಕವಾಗಿ ಚಿಂತಿಸುವವನಿಗೆ ಈ ಹಾದಿ ಕಲ್ಪಿಸುವುದಕ್ಕೂ ಸಾಧ್ಯವಿಲ್ಲ.  ಆದರೆ ಆ ಪರಮ ಅರ್ಥವನ್ನು ಅರ್ಥೈಸುವುದು ಮತ್ತು ಅದರಲ್ಲಿ ನಡೆಯುವುದು ಸೃಷ್ಟಿಯ  ಒಂದು ವೈಶಿಷ್ಟ್ಯ.  ಆ ವೈಶಿಷ್ಟ್ಯವನ್ನುಸಮಾಜ ಗುರುತಿಸುವ ರೀತಿ ಮಾತ್ರ ತೀರ ಭಿನ್ನ. ಬ್ರಾಹ್ಮಣ ಎಂಬುದನ್ನು ಸಮಾಜ ಪ್ರತ್ಯೇಕವಾಗಿ ಕಾಣುತ್ತದೆ. ಹಲವು ಸಲ ಸಮಾಜದ ಪ್ರತ್ಯೇಕ ಭಾಗವಾಗಿ ಗುರುತಿಸುತ್ತದೆ. ಯಾಕೆಂದರೆ ಬ್ರಾಹ್ಮಣ ಹಾದಿ ಅದು ಅನುಸರಣೆಗೆ ಸುಲಭವಲ್ಲ.  ಮತ್ತದು ಸಮಾಜಕ್ಕೆ ಸಹಜವಾಗಿಯೂ ಇರುವುದಿಲ್ಲ. ಬ್ರಹ್ಮ ಪದ ಬ್ರಾಹ್ಮಣ ಹಾದಿ ಇದೆಲ್ಲ ವಾಸ್ತವದಲ್ಲಿ ಅಸಹಜ ಅಂತಲೇ ಭಾಸವಾಗುತ್ತದೆ. ಹಾಗಾಗಿ ಬ್ರಾಹ್ಮಣನಾಗುವುದು ಮತ್ತು ಬದುಕುವುದು ವಾಸ್ತವದ ವಿರುದ್ದ ಅಂತಲೇ  ತಿಳಿದುಕೊಂಡಿರುತ್ತಾರೆ. 

ಜನ್ಮದಿಂದ ಬ್ರಾಹ್ಮಣ್ಯ ಲಭಿಸುವುದಿಲ್ಲ. ಹುಟ್ಟಿ ಮತ್ತೊಂದು ಜನ್ಮಕ್ಕೆ ಹೆಜ್ಜೆ ಇಟ್ಟಾಗಲೇ ಆತ ದ್ವಿಜನಾಗುವುದು. ಆನಂತರ ವೇದಾಧ್ಯಾಯನದ ನಂತರ ಆತ ಬ್ರಾಹ್ಮಣನಾಗುವುದು. ವೇದಾಧ್ಯಾಯ ಎಂದರೆ ಜ್ಞಾನ. ಜ್ಞಾನಿಯಾದವನು ಬ್ರಾಹ್ಮಣನಾದರೆ, ಉಳಿದವನು ಕೇವಲ ದ್ವಿಜನಾಗಿಯೇ ಉಳಿಯುತ್ತಾನೆ. ದ್ವಿಜತ್ವಕ್ಕೂ ಬ್ರಾಹ್ಮಣ್ಯಕ್ಕೂ ವೆತ್ಯಾಸವಿದೆ.  ಇಲ್ಲೊಂದು ಸಂಸ್ಕಾರವಿದೆ.  ಇದೊಂದು ಸುಂದರ ಅವಕಾಶ. ಗುರೂಪದೇಶವಾಗಿ ಪರಾತ್ಮರ ಪದವಿ ಎಂದರೆ ಏನು?  ಅದರ ಹಾದಿ ಯಾವುದು? ಇದುವೇ ಗುರೂಪದೇಶ. ಉತ್ತಮವಾದ ಜ್ಞಾನವನ್ನು ಪಡೆಯುವುದಕ್ಕೆ ಯಾವ ಸ್ಥಾನ ಪ್ರೇರಕವಾಗಿರುತ್ತದೋ ಅದೇ ಗುರು ಸ್ಥಾನ. ಆ ಪ್ರಚೋದನೆಯೇ ದಿವ್ಯ. ಹಾಗಾಗಿ ಆ ಹಾದಿಯೇ ಬ್ರಹ್ಮ ಪದದ ಹಾದಿ. ಬ್ರಹ್ಮನಿಗೂ ಬ್ರಾಹ್ಮಣನಾಗುವುದು ಕಠಿಣ. ಯಾಕೆಂದರೆ ಆ ತತ್ವ ಅನುಸರಿಸುವುದು ಅಷ್ಟೂ ಕಠಿಣ.  ಪ್ರಪಂಚದಲ್ಲಿ ಸರಳತೆಯೂ ಅಸಂಭವವಾಗುವುದು ವಿಪರ್ಯಾಸ ಎನ್ನಬೇಕು. ಲೌಕಿಕ ಪ್ರಪಂಚದಲ್ಲಿ ವೇಷವೇ ಪ್ರಧಾನ. 


ಇಷ್ಟೆಲ್ಲ ಇದ್ದರೂ ಅನುಸರಿಸುವುದಕ್ಕೆ ಕಠಿಣವಾಗುವಾಗ ನಾವು ಜಾಣರಾಗುವುದುಂಟು. ವೇಷದಂತೆ ತತ್ವವೂ ಸರಳೀಕೃತವಾಗುತ್ತದೆ. ನಾವು ತತ್ವದ ಕಡೆಗೆ ನೋಡುವುದಿಲ್ಲ. ಕೇವಲ ವರ್ಗಭೇದದ ಕಡೆಗೆ ನಮ್ಮ ಗಮನ ಹರಿಯುತ್ತದೆ. ಭೇದದ ಕಡೆಗೆ ಗಮನ ಹರಿಸಿ ತತ್ವವನ್ನು ಮರೆಯುತ್ತೇವೆ. ಭೇದ ಎಂದರೆ ಅದು ಪ್ರಕೃತಿಯ ಧರ್ಮ.  ಹಲವು ಮಾವಿನ  ಮರಗಳಿರುತ್ತವೆ.  ಆದರೆ ಹಣ್ಣು ಬೇರೆಯದೇ ಗುಣಗಳನ್ನು ಹೊಂದಿರುತ್ತವೆ. ಎಲ್ಲ ಹಣ್ಣಿನ ಉದ್ದೇಶ ಒಂದೇ ರುಚಿಯಾಗಿರುವುದು. ತಿನ್ನುವ ಅಕ್ಕಿ ಧಾನ್ಯ ಹೀಗೆ ಪ್ರತಿಯೊಂದರಲ್ಲೂ ಒಂದು ಭೇದವಿರುತ್ತದೆ. ಆದರೆ ಎಲ್ಲವೂ ಹಸಿವನ್ನು ನೀಗಿಸುತ್ತದೆ. ವರ್ಗ ಭೇದವೆಂದರೆ ಇಷ್ಟಕ್ಕೆ ಸೀಮಿತ. ನಮ್ಮ ಅಭಿರುಚಿ ಹೇಗೋ ಅದನ್ನು ಬಳಸಿಕೊಳ್ಳುವುದು ಅಷ್ಟೇ. ಬ್ರಾಹ್ಮಣ್ಯ ಕೇವಲ ಒಂದು ವರ್ಗದ ಹಣ್ಣಿನ ಮರ. ಅವುಗಳಲ್ಲಿ ಬಗೆ ಬಗೆಯ ಹಣ್ಣಿರಬಹುದು. ಮನೋಧರ್ಮಕ್ಕೆ ಹೊಂದಿಕೊಂಡು ಬಗೆ ಬಗೆಯ ರುಚಿಯ ಅನುಭವವಾಗುತ್ತದೆ. ಹಾಗಾಗಿ ಭೇದಕ್ಕೆ ಗಮನ ಕೊಡುವ ಬದಲು ತತ್ವಕ್ಕೆ ಗಮನಕೊಡಬೇಕು. ತತ್ವ ಎಂದರೆ ಅದು ಪರಾತ್ಪರ ತತ್ವ. ಇದರ ಸತ್ಯ ಅರಿಯದಿದ್ದರೆ ನಾವು ಮೂರ್ಖರಾಗುತ್ತೇವೆ.