Friday, November 8, 2013

ನಂಬಿಕೆಗೆ ಕೊನೆಯುಂಟೇ?


“ಆಗಮಾರ್ಥಂತು ದೇವನಾಂ ಗಮನಾರ್ಥಂತು ರಾಕ್ಷಸಾಂ ಕುರುವೆ ಘಂಟಾರವಂ ತತ್ರ ದೇವತಾಹ್ವಾನ ಲಕ್ಷಣಂ”
ಇದು ಘಂಟಾನಾದದ ಬಗ್ಗೆ ಇರುವ ಒಂದು ನಂಬಿಕೆ. ದೇವರನ್ನು ಸ್ವಾಗತಿಸುವುದಕ್ಕೆ ಅಥವಾ ಘಂಟಾನಾದ ಮೊಳಗಿದಲ್ಲಿ ದೇವರ ಅಸ್ತಿತ್ವ ಮೂಡಿ ಅಲ್ಲಿದ್ದ ಕ್ಷುದ್ರ ಶಕ್ತಿಗಳು ಅಂದರೆ ರಕ್ಕಸರು ನಿರ್ಗಮನ ವಾಗುತ್ತಾರೆ. ಹಾಗಾಗಿ ಘಂಟಾರವ ಎಲ್ಲಿರುತ್ತದೋ ಅಲ್ಲಿ ದೇವರ ಆಗಮನವಾಗಿ ಅಸುರಿ ಶಕ್ತಿ ನಿರ್ಗಮನವಾಗುತ್ತದೆ. ಇದು ಉಪಾಸಕನ ಒಂದು ನಂಬಿಕೆ.. ಅವರವರ ಮನಸ್ಸಿನ ನಂಬಿಕೆ ಅವರವರ ಮನದೊಳಗೆ ಇರುತ್ತದೆ. ಇನ್ನೊಬ್ಬರ ಮೇಲೆ ಹೇರುವ ಅನಿವಾರ್ಯತೆ ನಿಜವಾದ ಉಪಾಸಕನಿಗೆ ಇರುವುದೇ ಇಲ್ಲ ಆದರೆ ಅಸುರೀ ಶಕ್ತಿ ಪಾರಮ್ಯ ಮೆರೆದು ಆಳುವುದಕ್ಕೆ ತೊಡಗಿತು ಎಂದಾಗ.. ಉದಾಹರಣೆಗೆ ಪುರಾಣದಲ್ಲಿ ಬರುವಂತೆ ಮಹಿಷ, ಹಿರಣ್ಯಾಕ್ಷ ಹಿರಣ್ಯ ಕಷ್ಯಪು ಮುಂತಾದ ಅಸುರರಿಗೆ ಘಂಟಾರವ ಕೇಳಿದಾಗ ಅಲ್ಲಿರಲಾಗದೆ ಪಲಾಯನ ಮಾಡುವ ಪ್ರಮೇಯ ಉಂಟಾಗುತ್ತಿತ್ತು. ಆ ಸಮಯದಲ್ಲಿ ಅವರ ಅಳ್ವಿಕೆಯಲ್ಲವೇ ಒಂದು ಶಾಸನವನ್ನು ಮಾಡಿದರೂ ಗಂಟೆ ಬಾರಿಸುವುದು ಶಾಸನಾತ್ಮಕವಾಗಿ ಅಪರಾಧ. ಘಂಟೆಯ ದ್ವನಿಯಲ್ಲೂ ತೊಂದರೆ ಅನುಭವಿಸುವವರು ರಕ್ಕಸರೇ ಅಲ್ಲವೇ? ಅವರ ಆಡಳಿತದಲ್ಲಿ ಘಂಟಾರವ ನಿಷೇಧಿಸಲ್ಪಡುತ್ತದೆ.
ಮನುಷ್ಯ ಹುಟ್ಟಿದ ಕೂಡಲೇ ಅವನ ಜತೆ ಒಂದು ನಂಬಿಗೆಯ ಒಂದು ತಂತುವು ಉತ್ಪತ್ತಿಯಾಗುತ್ತದೆ. ಸ್ವಾಭಾವಿಕವಾಗಿ  ಹುಟ್ಟಿದ ಕೂಡಲೆ ಮಗುವಿಗೆ ಮೊದಲ ದರ್ಶನ ತನ್ನ ತಾಯಿಯದ್ದು. ಆನಂತರ ತಂದೆಯದ್ದು. ಆದರೆ ಆ ತಂದೆಯನ್ನು ತೋರಿಸುವುದು ಹೆತ್ತ ಅಮ್ಮ. “ ನೋಡು ಇದು ನಿನ್ನ ಅಪ್ಪ” ಮಗುವು ಅಷ್ಟೆ ಅಲ್ಲಿಂದ ನಂಬುಗೆ ಎಂಬ ಭಾವವನ್ನು ಬೆಳೆಸುತ್ತದೆ.ಯಾಕೆ ಅದಕ್ಕೆ ಅಮ್ಮನ ಮೇಲೆ ನಂಬಿಕೆ. ಅದು ಅದರ ಮನಸ್ಸಿನಲ್ಲಿ ಉಂಟಾಗುವ ಪ್ರೇರಣೆ. ಅಮ್ಮನನ್ನು ನಾನು ಹೇಗೆ ವಿಶ್ವಾಸದಿಂದ ಕಾಣಬಹುದೋ ಹಾಗೆ ಅಮ್ಮ ತೋರಿದ ವ್ಯಕ್ತಿ ನನ್ನ ಅಪ್ಪ.  ಈ ನಂಬಿಗೆ ಜೀವನ ಪರ್ಯಂತ ಉಳಿಯುತ್ತದೆ. ವಿಪರ್ಯಾಸವೆಂದರೆ ಭ್ರಾಂತಿಗೊಳಗಾದ ಪ್ರಪಂಚದಲ್ಲಿ  ಈ ನಂಬಿಕೆಯೂ ಮೂಢ ನಂಬಿಕೆ ಎಂದು ಕರೆಯಲ್ಪಟ್ಟರೆ ನಂಬಿಕೊಂಡು ಬಂದ ನಂಬಿಕೆಯನ್ನು ಹೇಗೆ ಹೊಸಕಿ ಹಾಕುವುದು?
ನಂಬಿಕೆ ವಿಶ್ವಾಸ ಅದು ಅಪರಾಧ ಎಂದು ಪರಿಗಣಿತವಾಗುವುದು ಯಾವಾಗ? ಆ ಭಾವನೆಯನ್ನು ಬಲವಂತವಾಗಿ ಹೇರಲ್ಪಟ್ಟಾಗ. ತನ್ನಮ್ಮ ಎಂದಂತೆ ಇವನು ತನ್ನಪ್ಪ ಎಂದು ಸ್ವತಃ  ನಂಬಿಕೊಳ್ಳುವುದು ಅದು ಅಪರಾಧವಾಗುವುದಿಲ್ಲ ಬದಲಾಗಿ ಇನ್ನೊಬ್ಬನಿಗೆ ಈ ನಂಬಿಕೆಯನ್ನು ಹೇರುವಾಗ... ಅವನ ನಂಬಿಕೆಯ ಬೇರನ್ನು ಅಲುಗಾಡಿಸುವಾಗ ಅದು ಅಪರಾಧವಾಗುತ್ತದೆ. ನಂಬಿಕೆಯ ಬೇರನ್ನು ಪ್ರಶ್ನಿಸುವಾಗ ಅದು ಅಪರಾಧವಾಗುತ್ತದೆ. ಈ ವೆತ್ಯಾಸದ ಸೂಕ್ಷ್ಮವನ್ನು ವಿದ್ಯಾವಂತರಾದವ ತನ್ನ ವಿದ್ವತ್ ಜ್ಞಾನದಿಂದ ಅರ್ಥೈಸಿಕೊಳ್ಳಬೇಕು.
“ನಾನು ದೇವರನ್ನು ನಂಬುತ್ತೇನೆ.  ನಾನು ಇಂತಹ ಶಕ್ತಿಯ ಅಸ್ತಿತ್ವದಲ್ಲಿ ವಿಶ್ವಾಸ ಇರಿಸಿದ್ದೇನೆ.” ಹೀಗೆ ದೇವರನ್ನು ನಂಬುವವನು ಅವನ ಪಾಡಿಗೆ ನಂಬಿಕೊಂಡರೆ ಅದನ್ನು ಎಷ್ಟೇ ಬಲವಂತವಾಗಿ ಶಿಕ್ಷಿಸಿ ಕಿತ್ತೆಸೆಯುವ ಪ್ರಯತ್ನ ಮಾಡಿದರೂ ಆ ಭಾವ ಅವನ ಮನದ ಮೂಲೆಯಲ್ಲಿ ಎಲ್ಲೋ ಇದ್ದೇ ಇರುತ್ತದೆ.  ಆದರೆ ಆತ ತಾನು ನಂಬಿಕೊಳ್ಳುತ್ತ ತನ್ನ ನಂಬಿಕೆಯನ್ನು ಪರರ ಮೇಲೆ ಹೇರಿದಾಗ ಅವನದ್ದು ಅಪರಾಧವಾಗುತ್ತದೆ. ಅಂತೆ ಈತನ ನಂಬಿಕೆಯನ್ನು ಬಲವಂತವಾಗಿ ಕಿತ್ತೆಸೆಯುವವನದ್ದು ಕೂಡ ಅಪರಾಧವಾಗುತ್ತದೆ. ಇದು ಸಾಮಾನ್ಯ ನ್ಯಾಯ. ಇದರ ಸೂಕ್ಷ್ಮ ವೇ ಅರ್ಥವಾಗದವನು ಇದನ್ನು ಮೂಢನಂಬಿಕೆ ಎಂದು ಕರೆದು ನಿಷೇಧಿಸಿದರೆ ಇದಕ್ಕೆ ಮೂರ್ಖತನ ಅಲ್ಲದೇ ಬೇರೆನು ಶಬ್ದವಿದೆ ಕರೆಯಲು?

ನಮ್ಮ ಮನೆಯಲ್ಲಿ ನಾವೊಂದು ನಿಯಮ ಮಾಡಿರುತ್ತೇವೆ. ನಮ್ಮ ಮನೆಯಲ್ಲವೇ. ....ಚಪ್ಪಲಿ ಹಾಕಿ ಒಳಗೆ ಬರಬಾರದು. ಮನೆಯೊಳಗೆ ಉಗುಳ ಬಾರದು. ಮನೆಯಲ್ಲಿ ನಾವು ಹೀಗೆಯೇ ಆಹಾರವನ್ನು ಸೇವಿಸುವುದು. ಅದು ಮನೆಯಲ್ಲಿ ಇರುವ ಎಲ್ಲ ಮಂದಿಯೂ ಒಪ್ಪಿಕೊಂಡು ಸಹಬಾಳ್ವೆಯನ್ನು ನಡೆಸುವಾಗ ಮನೆಯ ಹೊರಗಿದ್ದವನು ಅದನ್ನು ಅಕ್ಷೇಪಿಸುವುದು ಸಾಧ್ಯವಾಗುತ್ತದೆಯೇ? ಅವನು ಆ ಮನೆಯೊಳಗೆ ಪ್ರವೇಶಿಸಬೇಕಾದರೆ ಚಪ್ಪಲಿ ಕಳಚಿಯೇ ಪ್ರವೇಶಿಸಬೇಕು. ಅದು ಅವನ ಅಗತ್ಯವನ್ನು ಸಂಬಂಧಿಸಿ ಇರುತ್ತದೆ. ಹೊರತಾಗಿ ಆ ಮನೆಯ ನಿಯಮ ಅದು ಕಾನೂನು ಬಾಹಿರ ಎಂದರೆ ಏನನ್ನಬೇಕು? ಸಾರ್ವಜನಿಕ ನ್ಯಾಯಕ್ಕೂ ಒಂದು ಪರಿಧಿ ಎಂಬುದು ಇದೆಯಲ್ಲ? ಆ ಪರಿಧಿಯನ್ನು ಮೀರಿದಾಗ ಅದು ಸ್ವಾತಂತ್ರ್ಯ ಹರಣವಾಗುತ್ತದೆ. ಸರ್ವಾಧಿಕಾರವಾಗುತ್ತದೆ. ನಮ್ಮಹಸು ನಮಗೆ ಅಮೃತವನ್ನೇ ಕೊಡುತ್ತದೆ. ಅದು ನಮ್ಮ ನಂಬುಗೆ. ಅದು ವಿಷವನ್ನೇ ಕಕ್ಕುತ್ತದೆ ಎಂದು ಹೇಳೀದರೆ..ಹೇಳುವವರು ಹೇಳಲಿ ನಮ್ಮ ನಂಬಿಕೆ ನಮ್ಮ ಮನದ ಮೂಲೆಯಲ್ಲಾದರೂ ನಂಬಿಕೊಂಡು ಬರುತ್ತೇವೆ. ಇದುವೇ ಜೀವನದ ಅಂತರಂಗ ಸತ್ಯ.

No comments:

Post a Comment