Monday, March 13, 2017

ಸವಿನೆನಪಾಗಿ ಕಾಡುವ ಬಾಲ್ಯ.....


ಬಾಲ್ಯವೆಂದರೆ ಜೀವನದ ಪುಟಗಳಲ್ಲಿ ಸುಂದರ ಬಣ್ಣದ ಚಿತ್ರಗಳನ್ನು ಬಿಡಿಸುತ್ತವೆ. ಇದಕ್ಕೆ ಬಡವ ಶ್ರೀಮಂತ ಎಂಬ ಭೇದವಿಲ್ಲ. ಕೆಳೆಯುವ ಘಳಿಗೆಗಳು ಸುಂದರ ಎಂಬ ಪರಿವೆ ಇಲ್ಲದೇ ಒಂದೊಂದೇ ಹೆಜ್ಜೆಗಳನ್ನು ಪ್ರೌಢಿಮೆಯತ್ತ ಇಡುವಾಗ ಬಾಲ್ಯ ಸಂದುದರ ಅರಿವಾಗುವುದಿಲ್ಲ.

ನಮ್ಮದು ಬಡತನದ ಬಾಲ್ಯ. ಹಾಗಿದ್ದರೂ  ಆ ಸುಂದರ ಬಾಲ್ಯ ಈಗಲೂ ನೆನಪಾಗುತ್ತದೆ. ಈಗಿನ ಮಾಗಿದ ಬದುಕಲ್ಲಿ ನಿಂತಾಗ  ಬಾಲ್ಯದ ಬದುಕಿನ ಬಣ್ಣಗಳು  ಗಾಢವಾಗಿ ಗೋಚರಿಸುತ್ತದೆ. ಅಥವಾ ಈಗಿನ ಬದುಕು ಬಾಲ್ಯದ ಬಣ್ಣ ಬಣ್ಣನೆಯ ಬದುಕಿನ ಬಣ್ಣಗಳನ್ನು ಗಾಢವಾಗಿಸುತ್ತವೆ ಎಂದರೂ ಸರಿ. ಆ ಬಾಲ್ಯವೆಂದರೆ ಅಡೆತಡೆ  ಮತ್ತು ಮುಚ್ಚು ಮರೆಯಿಲ್ಲದ  ಭಾವನೆಗಳು. ಬಡತನ ಬದುಕನ್ನು ಕಷ್ಟವಾಗಿಸಬಹುದು. ಆದರೆ ಬದುಕಿನ ಸುಂದರ ಬಣ್ಣಗಳನ್ನು ಅಳಿಸುವುದಿಲ್ಲ. ಹಸಿವು ಗಾಢವಾದಷ್ಟು ತಿಂಡಿಯ ರುಚಿ ಅಧಿಕವಾಗುತ್ತದೆ. ಹಾಗೇನೆ ಬಾಲ್ಯದ ಕೊರತೆಗಳು ಬದುಕಿಗೆ ಮತ್ತಷ್ಟು ಬಣ್ಣವನ್ನು ಕೊಡುತ್ತವೆ.

ನಮ್ಮದು ಒಂದಷ್ಟು ದೊಡ್ಡ ಕುಟುಂಬ. ಅಮ್ಮ , ಮಾವ ಅಜ್ಜ , ಮತ್ತವರ ಮಕ್ಕಳು ಅವರ ಒಡನಾಟ ಹೀಗೆ ಬಡತನ ಹಂಚಿಕೊಳ್ಳುವುದಕ್ಕೆ ಬಳಗದ ಗಾತ್ರವೂ ವಿಶಾಲವಾಗಿಯೇ ಇರುತ್ತದೆ. ಬಾಲ್ಯದ ಒಂದಷ್ಟು ದಿನಗಳು ಮಂಗಳೂರಿನ ಉರ್ವಸ್ಟೋರ್, ದೇರೆಬೈಲು ನೆಕ್ಕಿಲಗುಡ್ಡೆ ಹೀಗೆ ಕಳೆದರೆ ಬಹಳಷ್ಟು ದಿನಗಳು  ಕಾಸರಗೋಡಿನ ಬಾಯಾರು ಪೈವಳಿಕೆ ಕಾಯರ್ ಕಟ್ಟೆಗಳಲ್ಲಿ ಕಳೆದುಹೋಯಿತು.  ಬಾಲ್ಯವನ್ನು ಕಳೆದು ಹೋಯಿತು ಎನ್ನುವುದೇ ಅರ್ಥ ಪೂರ್ಣ. ಯಾಕೆಂದರೆ ಅದು ಮತ್ತೆಂದೂ ಸಿಗದ ಕಳೆದು ಹೋದ ವಸ್ತುವಿಗೆ ಸೇರಿ ಹೋಗುತ್ತದೆ.

ಅದು ಕಾಯರ್ ಕಟ್ಟೆಯ ಹೈಸ್ಕೂಲ್ ಬಳಿ ಇದ್ದ ದಿನಗಳು. ಆಗ ಈಗಿನಷ್ಟು ಜನವಸತಿ ಇಲ್ಲ. ಆಗಲೋ ಈಗಲೋ ಒಡಾಡುವ ವಾಹನಗಳನ್ನೇ ನಾವು ವಿಚಿತ್ರ ಕಣ್ಣುಗಳಿಂದ ನೋಡುತ್ತಿದ್ದೇವು. ಬಾಯಾರು ಉಪ್ಪಳ ರಸ್ತೆಯಲ್ಲಿ ಗಂಟೆಗೊಮ್ಮೆ ಅಥವಾ ಬೆಳಗ್ಗೆ ಮಧ್ಯಾಹ್ನ ಸಂಜೆ ಎಂದು ಸಂಚರಿಸುತ್ತಿದ ಬಿಳಿಯ ಡಬ್ಬಿ ಬಣ್ಣದ ಶಂಕರ್ ವಿಟ್ಠಲ್ ಬಸ್ಸು. ಅಂದು ನಾಲ್ಕೇ ನಾಲ್ಕು ಬಸ್ಸು ಸಂಚರಿಸುತ್ತಿದ್ದ ಕಾಲವದು. ಫೀರ್ ಸಾಯಿಬರ ಪುತ್ತೂರು ಬಸ್ಸು, ಮುಂಜಾನೆ ಎಲ್ಲರನ್ನೂ ಎಬ್ಬಿಸಿಕೊಂಡು ಬಂದು ನಿದ್ದೆಯ ಮಂಪರಿನಲ್ಲೇ ಹಾದು ಹೋಗುತ್ತಿದ್ದ ಗೋಪಾಲಣ್ಣನ ಬಸ್ಸು ಬೆಳಗ್ಗೆ ಹೋದರೆ ಮತ್ತೆ ಸಾಯಂಕಾಲವೇ ಬರುವ ಶೆಟ್ರ ಬಸ್ಸು. ಡ್ರೈವರ್ ಹೆಸರೇ ಬಸ್ಸಿಗೆ. ಹಾಗಾಗಿ ಶಂಕರ್ ವಿಟ್ಠಲ್ ಹೆಸರು ನಮಗೆ ಬರುವುದೇ ಇಲ್ಲ. ನಮ್ಮಗಳ ಪಾಲಿಗೆ ಈ ಡ್ರೈವರುಗಳೇ ದೈವಾಂಶ ಸಂಭೂತರು.   ರಸ್ತೆಯಲ್ಲಿ ಬಸ್ಸು ಹೋಗುತ್ತಿರಬೇಕಾದರೆ ರಸ್ತೆಯ ಬದಿ ನಿಂತು ಕೈಬೀಸುತ್ತಿದ್ದೆವು. ಹಲವು ಸಲ ಡ್ರೈವರು ಮುಗುಳು ನಗುತ್ತಾ ಕೈ ಬೀಸಿದರೆ ನಮಗೆ  ಲೋಕವನ್ನೇ ಗೆದ್ದ ಖುಷಿ.  ಅದರಲ್ಲೂ ಸಾಯಿಬರು ಮತ್ತು ಗೋಪಾಲಣ್ಣ ಮಕ್ಕಳ ಜತೆಗೆ ಸ್ನೇಹದಿಂದ ವರ್ತಿಸುತ್ತಿದ್ದರು.
ಛಾಯಾ ಚಿತ್ರ ಕೃಪೆ : ಅಂತರ್ಜಾಲದ ಅನಾಮಿಕ ಮಿತ್ರ.

  ಮನೆಯ ಹಿರಿಯರು ಹೊರಗೆ ಎಲ್ಲಾದರೂ ಹೋಗುತ್ತಿದ್ದರೆ , ಬಸ್ಸಿಗೆ ಕೈ ತೋರಿಸಿ ಬಸ್ಸು ನಿಲ್ಲಿಸುವ ಜವಾಬ್ದಾರಿಯನ್ನು ನಾವೇ ಸ್ವತಃ ಹೆಗಲಿಗೇರಿಸಿಕೊಳ್ಳುತ್ತಿದ್ದೆವು.    ಕೇವಲ ಲಂಗೋಟಿಯಲ್ಲೇ  ಆಟವಾಡುತ್ತಿದ್ದ ನಾವು ಅದೇ ದ್  ಡ್ರೆಸ್ಸ್ ನಲ್ಲೇ  ಹೋಗಿ ಬಸ್ಸಿಗೆ ಕೈ ಅಡ್ಡ ಹಿಡಿಯುತ್ತಿದ್ದೆವು.  ಬಸ್ಸು ಬಂದು ನಿಂತಾಗ ನಮ್ಮ ಸಾಮಾರ್ಥ್ಯದ ಮೇಲೆ ನಮಗೇ ಅಭಿಮಾನ ಬರುತ್ತಿತ್ತು.  ಹಲವು ಸಲ ಡ್ರೈವರ್ ಹೇಳುತ್ತಿದ್ದರು  “ಇಷ್ಟು ಸಣ್ಣ ಪಿಟ್ಟೀಸ್ ಇಷ್ಟು ದೊಡ್ಡ ಬಸ್ಸು ನಿಲ್ಲಿಸುದಾ?”
ನಮ್ಮ ಬಾಲ್ಯವೆಂದರೆ ಅದು ಲಂಗೋಟಿ ಬಾಲ್ಯ ಎನ್ನುವುದೇ ಸೂಕ್ತ. ಅಜ್ಜನಿಗೆ ದಾನವಾಗಿ ಸಿಕ್ಕಿದ್ದ ಬೈರಾಸುಗಳ ಅಂಚುಗಳು ನಮಗೆ ಲಂಗೋಟಿಗಳಾಗಿಬಿಡುತ್ತಿದ್ದವು. ಅದರಲ್ಲು ಹಳೆಯದು  ಹೋಗಿ ಹೊಸದು ಬಂದಾಗ ಅಲ್ಲೂ ಸಂಭ್ರಮ ವಿರುತ್ತಿದ್ದವು.   ಕೆಲವೊಮ್ಮೆ ಇದರ ಮೆಲೆ ತುಂಡು ಬೈರಾಸು ಬರುತ್ತಿತ್ತು. ತುಂಡು ಲಂಗೋಟಿಯಲ್ಲಿ ಕಾಯರ್ ಕಟ್ಟೇಯ ಪಾದೆಕಲ್ಲುಗಳಲ್ಲಿ ಸುತ್ತಾಡುವುದು ಮಾತ್ರವಲ್ಲ ದೂರದ ಆವಳದ ಮಠಕ್ಕೆ ಅದರಲ್ಲೇ ಹೋಗಿ ಬರುತ್ತಿದ್ದೆವು. ಇಂತಹ ದಿನದಲ್ಲೇ  ಮನೆ ಹತ್ತಿರ ಟೈಲರ್ ಮಾಮ ಉಳಿದ ಬಟ್ಟೆಯಲ್ಲಿ ಒಂದು ಅಂಡರ್ ವೇರ್ ಹೊಲಿಸಿಕೊಡುತ್ತಾನೆ. ಅದಕ್ಕೆ ಕೇವಲ ಲಾಡಿ ಮಾತ್ರವೇ ಇರುತ್ತದೆ. ವಾರದಲ್ಲಿ ಒಂದು ದಿನ ಮಾತ್ರವೇ ಈ ಚಡ್ಡಿ ಧರಿಸುವುದಕ್ಕೆ ಅವಕಾಶ. ವಿಚಿತ್ರವೆಂದರೆ ಲಾಡಿಯ ಅಂಡರ್ ವೇರ್ ಧರಿಸಿದ ದಿನದಂದೇ  ಲೂಸ್ ಮೋಷನ್ ಆಗಿ ಭೇದಿ ಸುರುವಾಗಿರುತ್ತದೆ.  ದೂರದ ಗುಡ್ಡದಲ್ಲಿ ಹೋಗಿ ಕುಳಿತುಕೊಳ್ಳುವಾಗ ಈ ದಾರ ಬಿಡಿಸಲಿಕ್ಕಾಗದೇ ಪಟ್ಟ ಶ್ರಮ ಈಗಲೂ ಕಣ್ಣಿಗೆ ಕಟ್ಟಿದಂತೆ ಇದೆ.  ಒಂದು ಕೈ ಚಡ್ಡಿಗೆ ಹಿಡಿದು ಇನ್ನೊಂದು ಕೈ ಹಿಂದಕ್ಕೆ ಒತ್ತಿ ಹಿಡಿದು ಗುಡ್ಡೆ ಬದಿಗೆ ಓಡುತ್ತಿರಬೇಕಾದರೆ ನಮ್ಮ ಮನೆಯ ಕಾಳು ಟಾಮಿಗಳು ಸೆಕ್ಯುರಿಟಿ ಗಾಗಿ ಹಿಂದೇ ಬರುತ್ತಿದ್ದವು. ನಾವು ಪಾದೆಗಳ  ಬಂಡೆ ಸಂದಿಯಲ್ಲಿ ಕುಳಿತಿದ್ದರೆ ನಾಯಿ ಒಂದಷ್ಟು ದೂರ ನಮ್ಮನ್ನೇ ನೋಡುತ್ತಾ ಬ್ಲಾಕ್ ಕಮಾಂಡೋ ರೀತಿಯಲ್ಲಿ ರಕ್ಷಣೆ ಕೊಡುತ್ತಿದ್ದವು.  ಹಲವು ಸಲ ಗುಡ್ಡಬದಿಗೆ ಓಡುವಾಗ ಬಸ್ಸು ಬಿಟ್ಟುಕೊಂಡು..ಪೀ ಪೀ ಅಂತ ಶಬ್ದ ಮಾಡಿಕೊಂಡು ಹೋಗುತ್ತಿದ್ದೆವು.
ಇವುಗಳೆಲ್ಲ ಅಶ್ಲೀಲವೆಂದು ಅನ್ನಿಸುತ್ತಿದೇಯೇ? ಸಹಜವಾಗಿ ಎಲ್ಲರ ಬಾಲ್ಯದಲ್ಲೂ ಇದೇ ಸಾಮ್ಯತೆಯಿರುತ್ತದೆ. ಬಾಲ್ಯದ ಜೀವನ ಕಲ್ಪಿಸುವಾಗ ’ಶೀಲ ಅಶ್ಲೀಲ’ ವೆಂಬುದು ನಮ್ಮ ಕಲ್ಪನೆ ಎಂಬಂತೆ ಭ್ರಮೆಯಾಗುತ್ತದೆ. ಕೇವಲ ಲಂಗೋಟಿಯಲ್ಲೇ ದಿಗ್ವಿಜಯಕ್ಕೆ ಹೋಗುತ್ತಿದ್ದ ನಮಗೆ ಅಶ್ಲೀಲತೆಯ ಅರಿವಾದರೂ ಎಲ್ಲಿ ಬರಬೇಕು? ಮಕ್ಕಳು ಹದಿ ಹರಯ ತಲಪುವ ತನಕ ಅಶ್ಲೀಲ ಕೆಟ್ಟದ್ದು ಎಂದು ನಿರ್ಬಂಧಿಸುವ ಹೆತ್ತವರು ಮದುವೆಯಾಗಿ ಮಕ್ಕಳಾಗದೇ ಇದ್ದಾಗ ಅದೇ ಅಶ್ಲೀಲತೆಯನ್ನೇ ಮತ್ತೂ ಮತ್ತು ಕೆದಕುತ್ತಾರೆ. ಅದರೂ ಬದುಕು ಒಂದೊಂದನ್ನೇ ಕಲಿಸುತ್ತಾ ಬರುತ್ತದೆ. ಕಲಿಸುತ್ತಾ ಬಂದಂತೆ ಸಂಸ್ಕಾರ ಬೆಳೆಯುತ್ತದೆ ಶೀಲ ಅಶ್ಲೀಲತೆಯ ನಡುವೆ ಗೆರೆಯೊಂದು ಎಳೆದಾಗಿರುತ್ತದೆ. ಮನೆಯ ಹೊಸ್ತಿಲಿನ ಒಳಗೆ ಕಲಿಯುವ ಪಾಠ  ಗಟ್ಟಿಯಾಗುತ್ತಿದ್ದಂತೆ ಸಂಸ್ಕಾರ ಬಲಿಯುತ್ತಾ ಸಾಗುತ್ತದೆ.

ಬದುಕಿನಲ್ಲಿ ಬಾಲ್ಯ ಸುಂದರವೋ ಯೌವನ ಸುಂದರವೋ ಎಂದು ಪ್ರಶ್ನೆ ಹಲವು ಸಲ ಎದುರಾಗುತ್ತದೆ. ಆದರೆ ಬಾಲ್ಯವನ್ನೇ ಸುಂದರ ಎಂದು ಪರಿಗಣಿಸುತ್ತಾರೆ. ಯಾಕೆಂದರೆ ಬಾಲ್ಯ ಸುಂದರವಾಗುವಾಗ ಅಲ್ಲಿ ಯಾವು ಕಟ್ಟುಪಾಡುಗಳಿರುವುದಿಲ್ಲ. ಬಡವ ಶ್ರೀಮಂತ ಎಂಬ ಭೇದವಿರುವುದಿಲ್ಲ. ಶ್ರೀಮಂತ ಮನೆಯ ಮಗು ಅಂಗಳದಲ್ಲಿ ಚೆಂಡಾಟವಾಡುತ್ತಿದ್ದರೆ ಅದೇ ಮನೆಯ ಕೆಲಸದಾಳಿನ ಮಗು ತೋಟಾದಲ್ಲಿ ತೆಂಡೆಲ್ ನೊಂದಿಗೆ  (ತೆಂಗಿನ ಮರದ ಎಳೆಯ ಕಾಯಿಗಳು) ಆಟವಾಡುತ್ತಿರುತ್ತವೆ. ಎರಡೂ ಕಡೆಯಲ್ಲೂ ಅವುಗಳು ಪಡೆಯುವ ಆನಂದ ಸಂತೃಪ್ತಿಗೆ ಬೆಲೆ ಕಟ್ಟುವುದಕ್ಕೆ ಸಾಧ್ಯವಾಗುವುದಿಲ್ಲ.  ಬಾಲ್ಯ ಸುಂದರವಾದಂತೆ ಯೌವನ ಸುಂದರವಾಗುವಲ್ಲಿ ಹಲವು ಅನಿವಾರ್ಯತೆಗೆಳು ಎದುರಾಗುತ್ತವೆ.  ಅವುಗಳು ಸಿಕ್ಕಿದರೆ ಮಾತ್ರ ಯೌವನ ಸುಂದರವಾಗುತ್ತದೆ. ಆದರೂ ಬಾಲ್ಯದ ಸೌಂದರ್ಯ  ನಿತ್ಯ ಯೌವನದ ಹುರುಪನ್ನು ತರುತ್ತದೆ. ಆ ನೆನಪೇ ಮಧುರ. ಆ ನೆನಪಿನಲ್ಲಿ ಅಮ್ಮನೆದುರು ಹೋದಾಗ ನಾವು ಇನ್ನೂ ಆ ಎಳೆ ಕಂದಮ್ಮಗಳೇ ಎಂದು ಭಾಸವಾಗುತ್ತಿರುತ್ತದೆ.
ಈ ಲೇಖನಕ್ಕೆ ಇಲ್ಲಿ ಹಾಕಿದ ಛಾಯಾಚಿತ್ರವೇ ಸ್ಫೂರ್ತಿ. ಅನಾಮಿಕ ಮಿತ್ರನಿಗೆ ಹೃದಯ ತುಂಬಿದ ನಮಸ್ಕಾರಗಳು.   

No comments:

Post a Comment