Thursday, November 5, 2020

ಭೌತ ಶಾಸ್ತ್ರದ ಆ ಮೂರು ಅಂಕ.

 ...

ಕಥೆ : ಭೌತ ಶಾಸ್ತ್ರದ ಮೂರು ಅಂಕ
            ನಾನು ಪ್ರಣವನಿಗೆ  ಮೊಬೈಲ್ ಖರೀದಿಸುವಾಗಲೇ ಆಕೆ ಅಪಸ್ವರ ಎತ್ತಿದ್ದಳು. ಮಕ್ಕಳಿಗೆ ಏನಕ್ಕೆ ಮೊಬೈಲ್? ವಾಸ್ತವದಲ್ಲಿ ಆಕೆಯಲ್ಲಿದ್ದದ್ದು ಏಲ್ಲೋ ಬಿದ್ದಿರುತ್ತದೆ.  ಸಂದರ್ಭಾನುಸಾರ ಬೇಕಾಗುತ್ತದೆ ಅಂತ ಅವಳಿಗೂ ಒಂದು  ಕೊಡಿಸಿದ್ದೆ. ಹಲವು ಸಲ ಅನ್ನಿಸಿದ್ದಿದೆ ಅದು ಅಂಗಡಿಯಲ್ಲಾದರೂ ನೆಮ್ಮದಿಯಿಂದ ಇರುತ್ತಿತ್ತು. ಇಲ್ಲಿ ನನ್ನ ಕರೆಗೆ ಕಂಪಿಸಿ ಸುಸ್ತು ಹೊಡೆದಿದೆ. ಆಕೆಗೆ ಅದು ಅಗತ್ಯವಿದ್ದಂತಿಲ್ಲ. ಸಂದರ್ಭಾನುಸಾರ ಎಂಬುದು ಬರದೆ ಇರಲಿ ಎಂಬುದೇ ಅನಿಸಿಕೆ. ಹೋಗಲಿ ಮಗ ಬೆಳೆದು ನಿಂತ. ಇದೀಗ ಹತ್ತನೇ ತರಗತಿ. ಎಂಟು ಅಂಟುವಾಗಲೇ ಆತ ರಾಗ ಎಳೆದಿದ್ದ. ಹೋಗಲಿ  ಅಂತ ನನ್ನ ಹಳೆಯ ನೋಕಿಯ ಒಂದನ್ನು ಕೈಗೆ ಕೊಟ್ಟಿದ್ದೆ. ಅವನು ಅಷ್ಟೇ  ದನ್ನು ಬದಿಗಿಟ್ಟು ನನ್ನ ಸ್ಮಾರ್ಟ್ ಫೋನ್ ಎಲ್ಲಿ ಕೈಯಿಂದ ಕೆಳಗಿಡುತ್ತೆನೋ ಅಂತ ಕಾದು ನೋಡುತ್ತಾನೆ. ಇದೀಗ ಹತ್ತನೇ ತರಗತಿ. ಸ್ಮಾರ್ಟ್ ಫೋನ್ ಬೇಕೇ ಬೇಕು ಅಂತ ರಾಗ ಎಳೆದ. ಅದಿಲ್ಲದೇ ಹೋಗುವುದಿಲ್ಲ. ಹೌದು ಮಕ್ಕಳಿಗೆ ಮೊಬೈಲ್ ಕೊಡಲೇಬೇಕಾಗುತ್ತದೆ. ಅನಿವಾರ್ಯ ಸಂದರ್ಭದಲ್ಲಿ ತೀರ ಅವಶ್ಯಕ ಸಾಧನ. ಹಾಗಂತ ಹೇಳಿ ಹೊಸದಾದ ಸ್ಮಾರ್ಟ್ ಫೋನ್ ಕೊಡಿಸಿದೆ. ಆಕೆ ಅದನ್ನು ನೋಡಿದ್ದೇ ತಡ ಬೆಲೆ ಕೇಳಿ ಒಂದು ಸಲ ಹೌ ಹಾರಿದರೆ ಅವನಿಗೆ ಮೊಬೈಲ್ ಬೇಡವೇ ಬೇಡ ಮುಖ ಸಿಂಡರಿಸಿದಳು. ಆದರೆ ಅದನ್ನು ಕೇಳುವ ಸ್ಥಿತಿಯಲ್ಲಿ ನಾನೂ ಇಲ್ಲ ಪ್ರಣವ ಮೊದಲೇ ಇಲ್ಲ. ಮೊಬೈಲ್ ಕೊಡಿಸಿದೆ. ಈಗ ಕೊರೋನ ಸಮಯದಲ್ಲಿ ಮೊಬೈಲ್ ಬೇಕೇ ಬೇಕು. ಆನ್ ಲೈನು ಕ್ಲಾಸು ಅಂತ ಬೇಡದೇ ಇದ್ದದ್ದನ್ನು ಬಲವಂತವಾಗಿ ಕೊಡುವ ಅನಿವಾರ್ಯತೆ ಬಂದು ಬಿಟ್ಟಿದೆ. 



        ಒಂದು ದಿನ ಆಕೆ ಮತ್ತು ಆತನಿಗೆ ಜಗಳವೋ ಜಗಳ. ನನ್ನಲ್ಲಿ ಬಂದು ಒಂದೇ ರಾಗ ಮೊಬೈಲ್ ಯಾಕೆ ಕೊಟ್ಟದ್ದು. ಅವನು ಓದುವುದಿಲ್ಲ. ಟೀಚರ್ ಸದ್ದು ಕೇಳುವ ಬದಲು ಇನ್ನೇನೋ ಕೇಳುತ್ತಿರುತ್ತದೆ. ಅದರಲ್ಲಿ ಟೀಚರ್ ಮಾತು ಮಾತ್ರ ಕೇಳಬೇಕು. ಆಕೆಯ ವಾದ. ಹೌದು ಅವನು ಏನು ನೋಡುತ್ತಾನೋ? ಏನು ಮಾಡುತ್ತಾನೊ ?ಯಾರು ಗಮನಿಸಬೇಕು. ಆಗ ನಮಗಿರಬೇಕಾದದ್ದು ವಿಶ್ವಾಸ ಒಂದೇ. ಆದರೂ ವಿಶ್ವಾಸದ ಬುಡ ಅಲುಗಾಡುವ ಅನುಭವವಾಗುತ್ತದೆ. ಮಗ ಏನನ್ನೋ ನೋಡುತ್ತಾನೇ. ಯಾರಲ್ಲೋ ಮಾತನಾಡುತ್ತಾನೆ. ನಡು ರಾತ್ರಿಯಲ್ಲೂ ಮೊಬೈಲ್ ಸದ್ದು ಕೇಳುತ್ತದೆ. ಆತಂಕ ನನಗೆ. ಆಗ ನಾನು ಆತನನ್ನು ಹತ್ತಿರ ಕರೆದು ಹೇಳಿದೆ.
ಪ್ರಣವನಲ್ಲಿ ನಾನು ಸಹಜ  ಅಪ್ಪನಾಗಿ ವ್ಯವಹರಿಸುವುದಿಲ್ಲ. ನಾನು ಅಪ್ಪನೇ ಅಲ್ಲ ಎಂಬಂತೆ. ಆಗ ಆತ ಹೇಳುವುದುಂಟು ಅಪ್ಪನೆಂದರೆ ನನ್ನಪ್ಪನ ಹಾಗಿರಬೇಕು. ಅಪ್ಪ ಅಪ್ಪನಾಗಿರಬಾರದು. ಮತ್ತೇನು. ಹೋಗಲಿ ನಮ್ಮೊಳಗಿನ ಸಲುಗೆಯೇ ಅಂತಹುದು. ಆತನ ಅಂಗುಲ ಅಂಗುಲವೂ ಅರಿತವ ನಾನು. ಯಾವಾಗ ಹೇಗಿರುತ್ತಾನೆ ಕಣ್ಣಿಗೆ ಬಟ್ಟೆ ಕಟ್ಟಿ ಹೇಳಬಲ್ಲೆ. ಆತನು ಅಷ್ಟೇ ಅಪ್ಪನ ವಾಸನೆಯನ್ನು ಕ್ಷಣ ಮಾತ್ರದಲ್ಲಿ ಗ್ರಹಿಸಿಬಿಡುವವನು. ಈಗ ಈಕೆಯ ಮೊಬೈಲ್ ಗದ್ದಲ ಕೇಳಿ ಹತ್ತಿರ ಕರೆದೆ. ಕೇಳಿದೆ, ಮೊಬೈಲ್ ಮಧ್ಯ ರಾತ್ರಿಯೂ ಸದ್ದು ಮಾಡುತ್ತದಲ್ಲ. ಒಂದು ಸಣ್ಣ ಅನುಮಾನ ನನಗೂ ಇದ್ದರೆ ಅದು ತಪ್ಪಲ್ಲ. ಆತ ಹೇಳಿದ ಒಂದೆ ಮಾತು. 


“ ಅಪ್ಪ ನನ್ನಲ್ಲಿ ವಿಶ್ವಾಸ ಇಲ್ವಾ….ನಿಮ್ಮ ಮಗ ಇದು..ಹಾಗೆಲ್ಲ ಎನೂ ಇಲ್ಲ” ಅವನದ್ದು ಪ್ರಾಮಾಣಿಕ ಅನಿಸಿಕೆ. ನನ್ನಲ್ಲಿ ಆತನ ವ್ಯವಹಾರವೇ ಹಾಗೆ. ಮುಚ್ಚಿಡುವದ್ದು ಏನೂ ಇರುವುದಿಲ್ಲ. ಮುಚ್ಚಿಟ್ಟರೂ ಅದು ರಹಸ್ಯವಾಗಿ ಉಳಿಯುವುದಿಲ್ಲ. ಎಷ್ಟೋ ಸಲ ಹೇಳಿದ್ದೇ…ನೀನು ಏನೂ ಮಾಡು ಅಪ್ಪ ಅಮ್ಮನಿಗೆ ಪ್ರಾಮಾಣಿಕನಾಗಿರು. ನಾನು ನನ್ನ ಜೀವನದಲ್ಲಿ ಅತಿ ಹೆಚ್ಚು ಆದ್ಯತೆ ಕೊಟ್ಟದ್ದು ಎಂದರೆ ನನ್ನ ಪ್ರಾಮಾಣಿಕತೆಗೆ. ಈ ವಿಶ್ವಾಸ ಇಲ್ಲದೇ ಇದ್ದರೆ ನಾವುಗಳು ಬದುಕಿರುವುದಕ್ಕೆ ಅರ್ಥವಿಲ್ಲ. ನನ್ನ ಎದುರು ಎಲ್ಲ ಸರಿಯಾಗೇ ಇದ್ದರೂ ನನ್ನ ಹಿಂದೆ ಹೇಗೆ ಅಂತ ನಂಬುದುವುದು ಹೇಗೆ. ಹಾಗಾಗಿಯೇ ಆತನಿಗೆ ಮೊದಲಿನಿಂದಲೇ ಪ್ರಾಮಾಣಿಕತೆಯ ಉದಾತ್ತ ಧ್ಯೇಯವನ್ನು ತಿಳಿಸಿದ್ದೆ. ಇದೆಲ್ಲ ಆತನಿಗೆ ಅರಿವಿದೆ. ಆದರೂ ಇಂದು ಮತ್ತಷ್ಟು ಹೇಳಬೇಕು ಎನಿಸಿ ನನ್ನದೇ ಬದುಕಿನ ಕಥೆ ಹೇಳಿದೆ.
ನನ್ನಕೈಯಲ್ಲಿ ನನ್ನ ಹತ್ತನೇ ತರಗತಿಯ ಅಂಕ ಪಟ್ಟಿ ಇತ್ತು. ಇದನ್ನು ಹಲವು ಸಲ ಆತನೂ ನೋಡಿದ್ದ. ಅಪ್ಪನ ಶೇಕಡಾ ತೊಂಭತ್ತು ಅಂಕ ಆತನಿಗೆ ಹೆಮ್ಮೆಯ ವಿಚಾರ. ಇಂದು ಮತ್ತದೇ ಅಂಕ ಪಟ್ಟಿಯನ್ನು ತೋರಿಸಿ ಕೇಳಿದೆ. “ ನೋಡು ಅದರಲ್ಲಿ ಭೌತ ಶಾಸ್ತ್ರದ ಮಾರ್ಕ್ ಎಷ್ಟಿದೆ? “ ಹೌದು ಅದು ಐವತ್ತರಲ್ಲಿ ನಲ್ವತ್ತೇಳು... ಕೇವಲ ಮೂರು ಅಂಕಗಳ ಕೊರತೆ. ಅದು ಹೇಗೆ ಕಡಿಮೆ ಬಂತು? 


ನಾನು ಆ ಮೂರು ಅಂಕಗಳ ಕೊರತೆಯ ಕಥೆಯನ್ನು ಹೇಳುವುದಕ್ಕೆ ತೊಡಗಿದೆ. 


  ಅದು ಹತ್ತನೇ ತರಗತಿಯ ಕೊನೆಯ ಭೌತ ಶಾಸ್ತ್ರದ ಪರೀಕ್ಷೆ. ಐವತ್ತು ಅಂಕಗಳ ಎರಡು ಗಂಟೆಯ ಅವಧಿಯ ಪರೀಕ್ಷೆ. ಸಹಜವಾಗಿ ಶಾಲೆಯ ಪರಿಸರ ಶಾಂತವಾಗಿ ಮಧ್ಯಾಹ್ನದ ಗಾಳಿಯ ಸದ್ದಿಗೆ ಕಿವಿಯಾಗಿ ನಿಂತರೆ, ಮಕ್ಕಳ ಬಿಸಿ ಉಸಿರ ಸದ್ದೇ ಸುತ್ತಲಿನ ಬಿಸಿಯನ್ನು ಹೆಚ್ಚಿಸಿದಂತೆ ಬಿಸಿಲ ಸೆಖೆ. ಭೌತ ಶಾಸ್ತ್ರ್ರ ನನ್ನ ಪಾಲಿಗೆ ಬಹಳ ಸುಲಭದ ವಿಷಯ. ಪ್ರಶ್ನಾ ಪತ್ರಿಕೆಯ ಎಲ್ಲ ಪ್ರಶ್ನೆಗಳನ್ನು ಮೊದಲೇ ಅವಲೋಕನ ಮಾಡಿದ ನಂತರ ಮತ್ತಷ್ಟು ಉತ್ಸಾಹದಲ್ಲಿ ಉತ್ತರವನ್ನು ಬರೆಯುವುದರಲ್ಲಿ ಮಗ್ನನಾಗಿದ್ದೆ. ಸುತ್ತ ಮುತ್ತಲಿನ ಗಮನವೇ ಇಲ್ಲ. ಅಂದು ಪರಿಕ್ಷಾ ವೀಕ್ಷಕರಾಗಿ ಮೊದಲು ನಮ್ಮ ಶಾಲೆಯಲ್ಲಿ ಅಧ್ಯಾಪಕರಾಗಿದ್ದವರೇ ಪರೀಕ್ಷಕರಾಗಿ ಬಂದಿದ್ದರು. ಅಲ್ಲಿಂದಿಲ್ಲಿಗೆ ಇಲ್ಲಿಂದ ಅಲ್ಲಿಗೆ ಬಹಳ ನಿಶ್ಯಬ್ದವಾಗಿ ಕಾಲ ಹೆಜ್ಜೆಯ ಸಪ್ಪಳವಾಗದಂತೆ ಹಾಲ್ ತುಂಬ ಓಡಾಡುತ್ತಿದ್ದರು.  ನಮ್ಮೂರಿನ ವ್ಯಕ್ತಿ. ಮೊದಲಿನ ಪರಿಚಯ ಮಾತ್ರವಲ್ಲ ಒಂದು ರೀತಿಯ ಸಲುಗೆಯ ಸ್ನೇಹವೂ ಜತೆಗಿತ್ತು. ಹಾಗೆ ನೋಡಿದರೆ   ನಮ್ಮ  ಶಾಲೆಯ ಅಧ್ಯಾಪಕ ವೃಂದವೇ ಹಾಗೆ. ಮಕ್ಕಳ ಜತೆ ಹಲವರು ಮಿತ್ರರಂತೆ ಬೆರೆಯುತ್ತಿದ್ದರು. ನಾನು ಬೇರೆ,  ತರಗತಿಯ ಒಳ್ಳೆ ಕಲಿಯುವ ವಿದ್ಯಾರ್ಥಿ.  ಎಲ್ಲ ವಿಷಯದಲ್ಲೂ ಎಂಭತ್ತು ತೊಪ್ಪತ್ತು ಶೇಕಡಾ ಅಂಕ ಪಡೆಯುವವನು. ಸಹಜವಾಗಿ ಹಲವರ ಗಮನ ಇದ್ದೇ ಇರುತ್ತದೆ. 


     ಈ ಪರೀಕ್ಷಕ ಮಾಸ್ತರ್ ಕೂಡ  ನಮಗೆಲ್ಲ ಮಿತ್ರರಂತೆ. ಬಹಳ ಒಳ್ಳೆಯ ರೀತಿಯಲ್ಲಿ ಪಾಠ ಮಾಡುವ ಮಾಸ್ತರ್ ಅಂತನೇ ಜನ ಜನಿತವಾಗಿತ್ತು.   ಮೊದಲು ಅದೇ ಶಾಲೆಯಲ್ಲಿದ್ದು ನಮಗೆಲ್ಲ ಕಲಿಸಿದ್ದ ಪರಿಚಿತ  ಅಧ್ಯಾಪಕರು.  ಹಾಗಾಗಿ ಪರೀಕ್ಷಾ ಕೇಂದ್ರ ಆ ಅಮಟ್ಟಿಗೆ ಒತ್ತಡ ರಹಿತವಾಗಿತ್ತು.

ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಓಡಾಡುತ್ತಾ ನಮ್ಮನ್ನೆಲ್ಲ ಗಮನಿಸುತ್ತಿದ್ದವರು ಏಕಾ ಏಕಿ ನನ್ನ ಸುತ್ತವೇ ಸುತ್ತ ತೊಡಗಿದರು. ನನಗೆ ಯಾಕೋ ವಿಚಿತ್ರ ಅನಿಸಿತು. ಆದರೂ ಆತಂಕವಿಲ್ಲದೆ ನನ್ನ ಪಾಡಿಗೆ ಬರೆಯುತ್ತಿದ್ದೆ. ಹತ್ತಿರ ಬಂದವರೆ ನನ್ನ ಉತ್ತರ ಪತ್ರಿಕೆಯಲ್ಲಿ ಕೈ ಬೆರಳಲ್ಲಿ ಒಂದು ಉತ್ತರದತ್ತ ಬೆರಳು ಇಟ್ಟು ತಪ್ಪು ಅಂತ ಗೀಚಿದರು. ಅರೇ ನನಗೆ ಗೊತ್ತಿದ್ದ ಸುಲಭದ ಭೌತ ಶಾಸ್ತ್ರದ ಒಂದು ಲೆಕ್ಕದ  ಪ್ರಶ್ನೆ. ಬರೆದ ರೀತಿ ವಿಧಾನ ಎಲ್ಲವೂ ಸರಿಯಾಗೇ ಇತ್ತು. ಆದರೂ ತಪ್ಪು...!  ನೋಡಿದೆ ತಪ್ಪು ಯಾವುದೆಂದು ಅರ್ಥವಾಗಲೇ ಇಲ್ಲ. ಕೊನೆಯಲ್ಲಿ ನೋಡಿದರಾಯಿತು ಅಂತ ಉಳಿದೆಲ್ಲ ಪ್ರಶ್ನೆಗಳ ಉತ್ತರವನ್ನು ಬರೆದು ಮುಗಿಸಿದೆ. ಅಗಲೂ ಒಂದೆರಡು ಸಲ ಹತ್ತಿರ ಬಂದು ...." ಅದು ತಪ್ಪು ಮಾರಾಯ. ಸರಿ ಮಾಡು " ಅಂತ ಮೆತ್ತಗೆ ಯಾರಿಗೂ ಕೇಳದಂತೆ ಹೇಳಿದ್ದರು. ನನಗೆ ಆದರೂ ತಪ್ಪೇನು ಅರ್ಥವಾಗಲಿಲ್ಲ. ನಾನು ಅದೇ  ಪ್ರಶ್ನೆಯನ್ನೆ ಗಮನಿಸುತ್ತ ಇದ್ದೆ. ಹಲವು ಬಾರಿ ಮೇಲಿಂದ ಕೆಳಗೆ ನೋಡಿದೆ. ಇಲ್ಲ ತಿಳಿಯಲೇ ಇಲ್ಲ. ಬುದ್ಧಿಗೆ ಮಂಕು ಕವಿದಂತೆ.  ನಾನು ಉತ್ತರ ಸರಿಪಡಿಸದೇ ಇದ್ದದ್ದನ್ನು ಕಂಡ ಅವರು ಮತ್ತೂ ಮೆಲು ಧ್ವನಿಯಲ್ಲಿ ಹೇಳಿದರು 
" ನೀನು ಗುಣಿಸಿದ್ದು ತಪ್ಪಾಗಿದೆ. ಸರಿಯಾಗಿ ನೋಡು"

        ಹೌದು ನಾನು ಗುಣಿಸಿ ಬರೆದ ಉತ್ತರ ತಪ್ಪಾಗಿತ್ತು. ಅವಸರದಲ್ಲಿ ಉತ್ತರ ಗೊತ್ತಿದೆ ಎಂಬ ಉಡಾಫೆಯಲ್ಲಿ ನಾನು ತಪ್ಪಾಗಿ ಬರೆದಿದ್ದೆ. ಸಂದಿಗ್ಧದಲ್ಲಿ ಸಿಲುಕಿದೆ. ಛೇ ತಪ್ಪಾಗಿ ಹೋಯಿತು.  ಆಯಿತು ಹಾಗೆ ಸ್ವಲ್ಪ ಹೊತ್ತು ಕುಳಿತೆ. ಅಷ್ಟು ಹೇಳಿದ ಮಾಸ್ತರ್ ಮತ್ತೆ ತಮ್ಮ ಕುರ್ಚಿಯಲ್ಲಿ ಕುಳಿತು ಉತ್ತರ ಪತ್ರಿಕೆ ಬರೆದು ಇರಿಸಿ ಹೋಗುತ್ತಿದ್ದ ವಿದ್ಯಾರ್ಥಿಗಳನ್ನು ಗಮನಿಸುತ್ತಿದ್ದರು. ಒಬ್ಬೊಬ್ಬರಾಗಿ ಹೋಗುತ್ತಿದ್ದರು. ನಾನೂ ಎದ್ದೆ  ಬರೆದ ಪತ್ರಿಕೆಯ ಜತೆಯಲ್ಲಿದ್ದ ಇತರ ಪುಟಗಳನ್ನು ದಾರದಿಂದ ಕಟ್ಟಿದೆ.  ಎದ್ದು ಕುಳಿತು ಹಾಗೇ ಎದ್ದು ಮಾಸ್ತರ ಎದುರಿನ ಮೇಜಿನ ಮೇಲಿದ್ದ ಉತ್ತರ ಪತ್ರಿಕೆಗಳ ಮೇಲೆ ನನ್ನದನ್ನು ಇರಿಸಿದೆ. ಮಾಸ್ತರ್ ಒಂದುಸಲ ನನ್ನ ಪತ್ರಿಕೆಯನ್ನು ತೆರೆದು ನೋಡಿದರು. ನಾನು ಅಷ್ಟರಲ್ಲೇ ಬಾಗಿಲ ಹತ್ತಿರ ಹೋದೆ. ಅವರು ಸದ್ದು ಮಾಡಿದರು. ತಿರುಗಿ ನೋಡಿದಾಗ ನನ್ನನ್ನು ಆತಂಕದಂದಲೇ ನೋಡಿದರು. ನಾನು ತಿರುಗಿ ಒಂದು ಕಿರು ನಗೆ ನಕ್ಕು ಬಾಗಿಲು ದಾಟಿ ಹೊರ ಬಂದೆ. ಅದಾಗಲೆ ಶಾಲೆಯ ಪ್ಯೂನ್ ಗಂಟೆಯನ್ನು ಬಡಿದಾಗಿತ್ತು.

         ಆ ಮಾಸ್ತರ್ ತನ್ನ ವೃತ್ತಿಧರ್ಮವನ್ನು ಬದಿಗಿಟ್ಟು ನನಗಾಗಿ ಅವರು ತಪ್ಪೆಸಗಿದ್ದರು. ಅವರು ಎಸಗಿದ್ದು ಹೇಗೇ ಇರಲ್ಲಿ ನಿಜಕ್ಕಾದರೂ ಅದು ಅಪರಾಧವೇ. ಆದರೂ ನನ್ನ ಬಗೆಗಿನ ಕಾಳಜಿ ಪ್ರೀತಿಯನ್ನು ತೋರಿಸಿದ್ದರು. ಆದರೆ ನನಗೆ ಯಾಕೋ ನಾನು ಗಳಿಸಿದ್ದು ಅದು ನನ್ನದೇ ಆಗಿ ಪರಿಪೂರ್ಣವಾಗಿರಬೇಕು. ಇಲ್ಲವಾದರೆ ಅದಕ್ಕೆ ನಾನು ಅರ್ಹನಲ್ಲ ಎಂಬ ಭಾವನೆ ಬಂದಿತ್ತು. ಆ ಉತ್ತರ ಸರಿಪಡಿಸುವುದು ದೊಡ್ಡ ವಿಚಾರವಲ್ಲ. ಅದೇ ಪ್ರಶ್ನೆಯ ಉಳಿದೆಲ್ಲವನ್ನೂ ಸರಿ ಬರೆದಿದ್ದೆ. ಈಗ ಸಂಧಿಗ್ಧ ನನ್ನನ್ನು ಕಾಡಿತು. ಆ ಸಂದಿಗ್ದತೆ ತುಸು ಹೊತ್ತು ಅಷ್ಟೆ. ಯೋಚಿಸಿದೆ ಈ ಸಂದಿಗ್ದತೆ ಅದರಲ್ಲು ಈ ಸಂದಿಗ್ಧತೆ  ಕಾಡುವುದೇ ಒಂದು ಅಪರಾಧ.   ಹಾಗಾಗಿ ಅದನ್ನೇ ಮಾಡಿದೆ.  ಹೌದು, ನಾನು  ತಪ್ಪಾಗಿದ್ದ ಉತ್ತರವನ್ನು ಸರಿಪಡಿಸಲೇ ಇಲ್ಲ. ಯಾಕೆಂದರೆ ನನಗೆ ಆತ್ಮವಂಚನೆ ಸಾಧ್ಯವಾಗಲೇ ಇಲ್ಲ. ಅದೇ ಮಾಸ್ತರಿಂದ ಹಲವು ಪ್ರಾಮಾಣಿಕತೆಯ ಬಗ್ಗೆ ಸತ್ಯದ ಬಗ್ಗೆ ಪಾಠ ಕೇಳಿದ್ದ ನನಗೆ ಅವರು ಹೇಳಿಕೊಟ್ಟ ಉತ್ತರವನ್ನು ಬರೆಯುವುದಕ್ಕೆ ಸಾಧ್ಯವಾಗಲಿಲ್ಲ. ಒಂದು ರೀತಿಯಲ್ಲಿ ನಾನು ಬರೆದೆನೆಂದರೆ ಎಷ್ಟೆಂದರೂ ನಾನು ಅವರ ಇದಿರಿಗೆ ಪ್ರತಿಶತ ನೂರು ಪ್ರಾಮಾಣಿಕನಲ್ಲ.  ಒಂದು ವೇಳೆ ಅವರು ನನ್ನನ್ನು ಪರೀಕ್ಷೆ ಮಾಡಲು ಹೇಳಿರ ಬಾರದೇಕೆ ಅಂತ ಒಮ್ಮೆ ಯೋಚಿಸಿದೆ.  ಒಂದು ವೇಳೆ ಬರೆದರೆ ಅದು ನನ್ನ ನಿಜವಾದ ಅಂಕವಲ್ಲ ಎಂಬ ಭಾವನೆ.  ನಾನು ತಪ್ಪು ಉತ್ತರವನ್ನು ಸರಿ ಮಾಡಿ ದೊಡ್ಡ ತಪ್ಪು ಮಾಡುತ್ತಿದ್ದೇನೆ ಎಂದನಿಸಿತು. ಹೋಗಲಿ. ಪ್ರಶ್ನೆಯ ಉತ್ತರ ಅದರ ವಿಧಿ ವಿಧಾನವನ್ನು ಸರಿಯಾಗಿ ಬರೆದಿದ್ದೆ. ಕೊನೆಯಲ್ಲಿ ಉತ್ತರದ ಎರಡು ಅಕ್ಷರ ತಪ್ಪಾಗಿತ್ತು. ನಾನು ಫೇಲ್ ಅಂತೂ ಆಗುವುದಿಲ್ಲ. ಅದು ಖಾತರಿ ಇತ್ತು. ಮತ್ತೆ ಯೋಚಿಸಲಿಲ್ಲ. ನನ್ನದಲ್ಲದ ಆ ಮೂರು ಅಂಕದ ಬಗ್ಗೆ ಮತ್ತೆ ಚಿಂತಿಸಲಿಲ್ಲ.  ಪ್ರಶ್ನೆ ಪತ್ರಿಕೆ ತಪ್ಪು ಉತ್ತರದಲ್ಲೇ ಇಟ್ಟು ಬಂದೆ. ಅತೃಪ್ತನಾದರು ಆ ಅತೃಪ್ತಿಯಲ್ಲಿ ಒಂದು ತೃಪ್ತಿಯನ್ನು ಅನುಭವಿಸಿದ್ದೆ. ಅದೇ ನನ್ನ ಪ್ರಾಮಾಣಿಕತೆ. ಹೊರಗೆ ಬಂದಾಗ ಮಿತ್ರ ಸಹಪಾಠಿ ಇದ್ದ. ಅವನಲ್ಲಿ ಸಂಗತಿ ಹೇಳಿದೆ. ಅವನು ವಿಚಿತ್ರವಾಗಿ ನನ್ನತ್ತ ನೋಡಿದ. ಆ ಪರೀಕ್ಷೆಯಲ್ಲಿ ಅಂಕ ಐವತ್ತರಲ್ಲಿ ನಲ್ವತ್ತೇಳು ಬಂದಿತ್ತು.  ಬಹುಶಃ ಆ ಕಡಿಮೆಯಾದ ಮೂರು ಅಂಕ ಅದೇ ಆಗಿರಬೇಕು. ನನ್ನ ಪ್ರಾಮಾಣಿಕತೆಯ ಬೆಲೆ ಅದು.  ಇದು ನನ್ನ ಬೆನ್ನನ್ನು ನಾನೇ  ಚಪ್ಪರಿಸಲು ಹೇಳುತ್ತಿಲ್ಲ.ಈಗ ಹೀಗೆ ಮಗನ ಮುಂದೆ ಹೇಳುವುದು ಆತ್ಮ ಸ್ತುತಿಯಾಗಬಹುದು.  ನಾನು ಉತ್ತಮನಾಗಿ ಆ ಮಾಸ್ತರನ್ನು ಕೆಟ್ಟವರನ್ನಾಗಿ ಚಿತ್ರಿಸಬಾರದು.  ವೃತ್ತಿಧರ್ಮ ಏನೇ ಇರಲಿ ಅದು ನನ್ನದಲ್ಲದ ನಿಯಮ. ಮೊದಲು ನನ್ನ ಪರಿಶುದ್ದಿ.   ಈಗ ಸಾಮೂಹಿಕವಾಗಿ ಕದ್ದು ನೋಡಿ ಬರೆಯುವಾಗ  ಹೀಗೂ ಆಗಲು ಸಾಧ್ಯವೇ ಅಂತ ಮಗನಿಗೂ  ಆಶ್ಚರ್ಯ. ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಹಾಗೆ ಹೇಳಿಕೊಡುವುದು ನಿಯಮಾನುಸಾರ ತಪ್ಪಾಗಿರಬಹುದು. ಅವರು ಯಾವ ಉದ್ದೇಶದಲ್ಲಿ ಹೇಳಿರಲಿ ಅಲ್ಲಿ ಆ ತಪ್ಪು ಅಗಲಿಲ್ಲ.  ಈಗ ಹಿಗೆ ಹೇಳಿಕೊಟ್ಟು ದಕ್ಷಿಣೆ ಪಡೆಯುವವರು ಇದ್ದಿರಲೂ ಬಹುದು.

           ಸತ್ಯ  ಪ್ರಾಮಾಣಿಕತೆ ಸನ್ಮನಸ್ಸು ಇವುಗಳ ಲಾಭ ಅದನ್ನು ಹೊಂದಿರುವವನಿಗೆ ಆಗುವುದಕ್ಕೆ ಸಾಧ್ಯವಿಲ್ಲ. ಹಲವು ಸಲ ಅದು ಮೂರ್ಖತನವಾಗಿರಬಹುದು. ಆದರೆ ಸತ್ಯದ ಮೌಲ್ಯ ಮನಸ್ಸಿನ ವಿಶ್ವಾಸದ ಮೌಲ್ಯ. ಸತ್ಯದ ಎದುರು ಎಷ್ಟು ಶೂನ್ಯವನ್ನು ಸುತ್ತಿ ಅದರ ಮೌಲ್ಯ ಅಳೆಯಬಹುದು. ಅದು ನಾವು ಕಟ್ಟುವ ಮೌಲ್ಯವಾಗಬಹುದೇ ಹೊರತು ಸತ್ಯದ ಮೌಲ್ಯವಲ್ಲ. ಅದಕ್ಕಾಗೆ ಅದನ್ನು ಪರಮ ಸತ್ಯ ಎನ್ನುವುದು. ನಮ್ಮ ಪ್ರಾಮಾಣಿಕತೆಯಲ್ಲಿ ನಷ್ಟವಾಗುವದ್ದು ಹಲವಿರಬಹುದು. ಆದರೆ ಅದನ್ನು ನಾವು ಹೊಂದಿದ್ದೇ ವೆ ಎಂಬ ಒಂದು ಆತ್ಮ ತೃಪ್ತಿ ಸಾಕಾಗುತ್ತದೆ.

            ಮಗನಿಗೆ ಹೇಳಿದೆ ನಾನು ನಿನ್ನಿಂದ ಮೊಬೈಲ್ ಕಿತ್ತುಕೊಳ್ಳಬಹುದು. ಅದು ನನ್ನ ನಿನ್ನ ನಡುವಿನ ವಿಶ್ವಾಸವನ್ನು ಇಲ್ಲದಂತೆ ಮಾಡುತ್ತದೆ. ಅದು ನನ್ನಿಂದ ಸಹಿಸುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಇಲ್ಲಿ ವಿಶ್ವಾಸ ನೆಲೆ ನಿಲ್ಲುವುದಕ್ಕೆ ಪ್ರಾಮಾಣಿಕತೆ ಒಂದೇ ಆಯ್ಕೆ. ಮೊಬೈಲ್ ನಲ್ಲಿ ಪಾಠವನ್ನಷ್ಟೇ ಕೇಳಬೇಕೆಂದು ಹೇಳುತ್ತಿಲ್ಲ. ಏನೇ ಕೇಳು ಏನೆ ಮಾಡು ಅಪ್ಪ ಅಮ್ಮನಿಗೆ ಪ್ರಾಮಾಣಿಕನಾಗಿರು. ನಿನ್ನಿಂದ ಮೊಬೈಲ್ ಕಿತ್ತುಕೊಂಡು ಕೊರತೆಯಾದ ವಿಶ್ವಾಸದಲ್ಲಿ ನಂತರ ನೀನು ಓದುತ್ತಿ ಅಂತ ನಾನು ವಿಶ್ವಾಸ ಇಡಬೇಕು.

          ಮಗ ಒಂದು ಸಲ ನನ್ನತ್ತ ನೋಡಿದ. ಪ್ರಾಮಾಣಿಕತೆಯ ಬಗ್ಗೆ ಪಾಠ ಹೇಳುವ ಅಪ್ಪ ಸುಳ್ಳು ಹೇಳಲಾರ  ಎಂಬ ವಿಶ್ವಾಸ ಅಲ್ಲಿತ್ತು. ಬಹುಶಃ ನನ್ನಂತೆ ಅಪ್ಪ ಅಮ್ಮ ಎನಿಸಿಕೊಂಡವರು ಮಕ್ಕಳಿಂದ ಬಯಸಬೇಕಾಗಿರುವುದು ಇದನ್ನೆ. ನಮ್ಮ ಮಕ್ಕಳಲ್ಲಿ ಮೊದಲು ನಾವು ವಿಶ್ವಾಸ ಇಡಬೇಕು. ಆ ವಿಶ್ವಾಸ ಏನು ಎಂಬ ಅರಿವನ್ನು ಮೂಡಿಸಬೇಕು. ಅದಿಲ್ಲದೇ ಹೊದರೆ ಯಾವ ವಿಶ್ವ ವಿದ್ಯಾಲಯದ ಶಿಕ್ಷಣವಾದರೂ ಅದಕ್ಕೆ ಅರ್ಥವಿರುವುದಿಲ್ಲ.
 
      

      ಈಗ ಮಗನಿಗೆ ಅರ್ಥವಾಗಿದೆ. ಯಾಕೆಂದರೆ ಈಗ ಆತನ ಮೊಬೈಲ್ ಪಾಸ್ ವರ್ಡ್ ನನಗೆ ಗೊತ್ತಿದೆ. ಆತ ರಹಸ್ಯವಾಗಿ ಏನೇ ಮಾಡಿದರೂ ಅದು ನನ್ನಲ್ಲಿ ಬಹಿರಂಗವಾಗುತ್ತದೆ.  

      ಈಗಲೂ ಭೌತ ಶಾಸ್ತ್ರದ ಆ ಮೂರು ಅಂಕ ನನ್ನ ಪ್ರಾಮಾಣಿಕತೆಯ ಮೌಲ್ಯ.  ನನ್ನ  ಜೀವನ ಪರ್ಯಂತ ಮರೆಯುವುದಕ್ಕೆ ಸಾಧ್ಯವಿಲ್ಲ. ಪ್ರಾಮಾಣಿಕತೆ ಅದು ಮುಂದುವರೆಯಬೇಕು.  ಈ ಘಟನೆಯ ಮೂಲಕ ನನ್ನ ಮಗನಲ್ಲಿ ರವಾನಿಸಿದ್ದೇನೆ. ನನ್ನ ಮಗನಲ್ಲಿ ಅದು ಮುಂದುವರೆಯುವ ವಿಶ್ವಾಸವಿದೆ.

ಲೇಖಕರು: ಎಂ ರಾಜಕುಮಾರ್
ಪೈವಳಿಕೆ.


No comments:

Post a Comment