Sunday, June 19, 2011

ಧ್ಯಾನ ಯೋಗ

ಭಗವಂತ ಸೃಷ್ಟಿಸಿದ ಅಧ್ಬುತ ಮತ್ತು ಶ್ರೇಷ್ಠ ಜೀವಿಗಳಲ್ಲಿ ಮನುಷ್ಯನ ಸೃಷ್ಟಿಯೇ ಶ್ರೇಷ್ಠವಾದದ್ದು. ಭಗವಂತನಿಗೆ ಮನುಷ್ಯನ ಮೇಲೆ ಎಷ್ಟೊಂದು ಅಕ್ಕರೆ!!!  ತನ್ನ ಸೃಷ್ಟಿಗೆ ಕಾರಣವಾದ ಭಗವಂತನನ್ನು ಯಾವ ರೂಪದಲ್ಲೆ ಆಗಲಿ ಸ್ಮರಿಸಿ ಈ ಮಾನವ ಜನ್ಮ ಸಾರ್ಥಕಗೊಳಿಸುವುದು ಅನಿವಾರ್ಯ ಕರ್ಮಗಳಲ್ಲಿ ಒಂದು. ಪ್ರತಿಯೋಬ್ಬ ಮಾನವನ ನಿತ್ಯಕರ್ಮಾನುಷ್ಠಾನದ ಆದ್ಯತಾಭಾಗವೇ ಈ ಭಗವಂತನ ಸ್ಮರಣೆ. ಭಗವಂತನ ಸ್ಮರಣೆಯ ಸುಲಭಸಾಧನವೇ ಧ್ಯಾನ. ಅದು ಏಕ ಮನಸ್ಸಿನ ಧ್ಯಾನ.ಯಾವುದೇ ಕಾಲಮಾನಾಕ್ಕೂ ಇದು ಅನಿವಾರ್ಯವಾಗಿದೆ.

ಯೋಗಾಭ್ಯಾಸದಲ್ಲಿ ಧ್ಯಾನಕ್ಕೆ ವಿಶೇಷವಾದ ಸ್ಥಾನವಿದೆ. ಯೋಗ ಎಂದಾಕ್ಷಣ ಶಬ್ದಾರ್ಥವೇನೇ ಇರಲಿ ಮೊದಲು  ಮನಸ್ಸಿನಲ್ಲಿ ಉಂಟಾಗುವ ಭಾವನೆಯ ಸ್ವರೂಪವೇ ಧ್ಯಾನ ಮುದ್ರೆ. ಮನುಷ್ಯನ ಬದುಕಿಗೆ ಅವ್ಯಕ್ತವಾದ ಶಕ್ತಿಯನ್ನ ತುಂಬುವ ಚಿಲುಮೆಯೇ ಈಧ್ಯಾನ. ಇದರ ಆವಶ್ಯಕತೆ ಹಲವು ರೀತಿಯಲ್ಲಿ ಅಖ್ಯಾನಿಸರಬಹುದು. ಆದರೆ ಧ್ಯಾನ ಎಂಬುದು ಸ್ಥಿರತೆಯ ಸಂಕೇತ. ಮನಸ್ಸಿನ ಸ್ಥಿರತೆಯನ್ನು ಮೂಡಿಸುವುದಕ್ಕೆ ಅಥವಾ ಕಾಪಾಡುವುದಕ್ಕೆ ಧ್ಯಾನ ಅತ್ಯುತ್ತಮ ಸಾಧನ. ಧ್ಯಾನದ ಮತ್ತೊಂದು ರೂಪವೆ ಯೋಗ ಅಂತಲೂ ಗುರುತಿಸುವುದನ್ನು ಕಾಣಬಹುದು. ಧ್ಯಾನ ತಪಸ್ಸು ಪೂಜೆ ಆಹ್ನಿಕಗಳು ಹೀಗೆ ಭಗವಂತನ ಉಪಾಸಾನೆಗೆ ಹಲವು ಮಾರ್ಗಗಳಿದ್ದರೂ ಧ್ಯಾನದಷ್ಟು ಸುಲಭ ಮತ್ತು ಶ್ರಮ ರಹಿತ ಸಾಧನ ಬೇರೆ ಇಲ್ಲ ಎಂದೇ ನನ್ನ ಅನಿಸಿಕೆ. ಇದನ್ನು ಶ್ರಮರಹಿತ ಎಂದು ಹೇಳುವುದಕ್ಕೆ ಹಲವು ಕಾರಣಗಳಿವೆ. ಆರಂಭದಲ್ಲಿ ಇದು ಶ್ರಮ ದಾಯಕವೆಂದು ಕಂಡರೂ ಇದು ಮನಸ್ಸು ಶರೀರ ಇದನ್ನು ರೂಢಿಸಿಕೊಂಡ ಮೇಲೆ ಧ್ಯಾನವೆಂಬುದು ಪರಿಶ್ರಮವಿಲ್ಲದೆ ಮಾಡುವ ಪರಿಕ್ರಮ.
.
ಮನಸ್ಸಿನ ಚಾಂಚಲ್ಯವನ್ನು ತೊಲಗಿಸಿ ಏಕಮುಖದಲ್ಲಿ ಸಾಗುವ ಪ್ರಕ್ರಿಯೆ ಇದು. ಇದಕ್ಕೆ ಸಹಕಾರಿಯಾಗುವುದು ಪ್ರಾಣಾಯಾಮ.ಮೊದಲೆಲ್ಲ ಅಧ್ಬುತ ಸಾಧನೆಯನ್ನು ಮಾಡಬಲ್ಲ ಋಷಿಮುನಿಗಳಿಗೋ ಬೈರಾಗಿಗಳಿಗೊ ಸಿದ್ದಿಸಬಹುದಾದ ಈ ಕ್ರಿಯೆ ಅಷ್ಟು ಆಳವಾಗಿ ನಿಖರವಾಗಿ ಅಲ್ಲದಿದ್ದರೂ ತುಂಬ ಸರಳವಾಗಿ ಅನುಸರಿಸಬಹುದು. ನಿದ್ರೆಯಲ್ಲಿ ಇರುವಾಗ ಯಾವುದೋ ಭ್ರಮಾಲೋಕದಲ್ಲಿ ಇರುವ ನಮ್ಮ ಸುಪ್ತ ಮನಸ್ಸು ಎಚ್ಚರಗೊಂಡಾಗ ಒಮ್ಮಿಂದೊಮ್ಮೆಲೆ ರಂಗದ ಮೇಲೆ ಬದಲಾದ ದೃಶ್ಯದಂತೆ ವಾಸ್ತವ ಪ್ರಪಂಚಕ್ಕೆ ಕಾಲಿಡುತ್ತದೆ. ದೇಹ ಎಷ್ಟು ಆಲಸಿಯಾಗಿ ಜಡವಾಗಿರುವುದೋ ಮನಸ್ಸು ಗೊಂದಲಗೊಂಡು ಆಲಸ್ಯದ ಜತೆಗೆ ಮುಂದಿನ ಪ್ರಚೋದನೆಗಾಗಿ ಚಂಚಲಮುಖಿಯಾಗಿರುತ್ತದೆ. ಹಾಗಾಗಿ, ನಗರದ ಯಾವುದೋ ಹಲವು ರಸ್ತೆಗಳು ಒಂದಾಗಿ ಸೇರುವ ಕೇಂದ್ರದಲ್ಲಿ  ಯಾವ ದಿಕ್ಕಿಗೆ ಮುಖ ಮಾಡಿ ಪಯಣಿಸಬೇಕೆಂದು ಗೊಂದಲಕ್ಕೆ ಒಳಗಾದಂತೆ ಮನಸ್ಸು ಹಲವು ಚಿಂತನೆಗಳ ಧಾಳಿಯಿಂದ ಚಿಂತನೆಯನ್ನು ಯಾವ ದಿಕ್ಕಿಗೆ ಹರಿಸಬೇಕೆಂಬ ಗೊಂದಲದಲ್ಲಿರುತ್ತದೆ. ಆವಾಗ ಮನಸ್ಸನ್ನು ಕ್ರಿಯಾತ್ಮಕವಾಗಿ ಸಿದ್ದಪಡಿಸಿ ತುಕ್ಕು ಹಿಡಿದ ಆಯುಧವನ್ನು ಸಾಣೆಗೊಳಿಸಿ ಹರಿತಗೊಳಿಸಿದಂತೆ ಪ್ರಚೋದನೆಗೊಳಿಸುವುದೇ ಈ ಧ್ಯಾನ. ಸುಪ್ರಚೋದನೆ ಮನಸ್ಸಿನಲ್ಲಿ ಉಂಟಾಗಬೇಕಾದರೆ ಧ್ಯಾನ ಅತ್ಯಾವಶ್ಯ. ಧ್ಯಾನಗೈದ ಮನಸ್ಸಲ್ಲಿ ಉದ್ಭವಿಸಿದ ಪ್ರಚೋದನೆಯೂ ಆಷ್ಟೇ ಶಾಂತವಾಗಿರುತ್ತದೆ.

ಈ ಧ್ಯಾನದ ಕ್ರ್ಯಿಯಾತ್ಮಕವನ್ನು ಯೋಗಾಭ್ಯಾಸದ ಮೂಲಕ ಸರಳವಾಗಿ  ಸಾಧ್ಯವಾದಷ್ಟು ಮಟ್ಟಿಗೆ ಹೇಗೆ ಅಳವಡಿಸಬಹುದು.ಎಂಬುದರ ಸ್ವಾನುಭವದ ನಿವೇದನೆ ಇದು. ಹಾಗೆಂದು ಇದು ದೊಡ್ಡ ಸಾಧಕನ ಮಾತಲ್ಲ. ಸಾಧನೆಯಮಟ್ಟಿನಲ್ಲಿ ತೀರಾ ತೃಣಸದೃಶ ಅನ್ನಬಹುದಾದ ಅನುಭವ ಇದು. ಮಾತ್ರವಲ್ಲ ಇದರ ಆವಶ್ಯಕತೆಯನ್ನು ನನಗಾಗಿ ಹೇಗೆ ಕಂಡುಕೊಂಡೆ, ಇದರ ಮಧುರ ಸುಖಾನುಭವ ನನಗಾದ ಬಗೆ ಹೇಗೆ ಎಂಬುದೇ ಇದರ ಮೂಲ ಉದ್ದೇಶ.

ಆತ್ಮ ಮತ್ತು ಪರಮಾತ್ಮನ ಬಗ್ಗೆ ಈ ಮೊದಲಿನ ಅನುಭವ ಹೇಳಿದಂತೆ ಇದು ಸಹ. ಪರಿಶುದ್ದ  ಅರೋಗ್ಯವಂತ ದೇಹದಲ್ಲಿ ಆತ್ಮದ ಸಾನ್ನಿಧ್ಯ ಹೇಗೆ ಸಿದ್ದಿಸುತ್ತದೋ ಹಾಗೆ ಇಲ್ಲೀಯೂ ಪರಿಶುದ್ದ ದೇಹ ಮಾತ್ರವಲ್ಲ ಕಲ್ಮಶಗೊಂಡ ಮನಸ್ಸನ್ನು ಶುದ್ಧೀಕರಿಸುವುದೇ ಈ ಧ್ಯಾನದ ಮೂಲಕ. ಬೇರೆ ಯಾವ ಮಾರ್ಗದಲ್ಲೂ ಮನಸ್ಸು ಹೃದಯ ಈ ರೀತಿಯಲ್ಲಿ ಶುದ್ಧಿಯಾಗಲಾರದು. ಜಿಮ್ ಎರೊಬಿಕ್ ಹೀಗೆ ದೇಹ ದಂಡನೆಯ ದೈಹಿಕ ಆರೋಗ್ಯವನ್ನು ಕಾಪಾಡುವ ಹಲವು ವ್ಯಾಯಮ ವಿಧಾನಗಳಿರಬಹುದು. ಯಾವುದರಲ್ಲೂ ಮನಸ್ಸಿಗೆ ಧ್ಯಾನ ಮೂಲಕ ಸಿಕ್ಕಿದ ಪ್ರಚೋದನೆ ಸಿಗದು. ದೈಹಿಕ ವ್ಯಾಯಾಮದಿಂದ ದೇಹದ ಭುಜದ ಸ್ನಾಯುಗಳನ್ನು ಬಲವಾಗಿಸಿ ದೃಢಕಾಯವಾದ ಗಟ್ಟಿ ಶರೀರದಲ್ಲಿರುವ ಮನಸ್ಸಿನ ಪ್ರಚೋದನೆ ಹೇಗಿರಬಹುದು? ದೈತ್ಯ ದೇಹಿ ರಕ್ಕಸನಿಗೆ ವರಬಲ ಸಿಕ್ಕಿದಾಗ ಹೇಗೆ ಹಿಂಸಾತ್ಮಕವಾದ ಅತನ ದಾನವ ಮನಸ್ಸು ಒಳಗಾಗುತ್ತದೋ ಅದೇ ರೀತಿ, ಶಕ್ತಿಯುತವಾಗಿ ದೈತ್ಯವಾದ ಶರೀರಕ್ಕೆ ಎರಿದ ಮದ ಇಳಿಸುವ ಪ್ರಚೋದನೆ ಸಹಜವಾಗಿ ಹಿಂಸಾತ್ಮಕವಾಗಿಯೇ ಇರುತ್ತದೆ. ದೈಹಿಕ ಶಕ್ತಿಯಿಂದ ಎಲ್ಲವನ್ನು ಅಡಗಿಸುವ ಪ್ರಚೋದನೆಯದು. ಯೋಗಭ್ಯಾಸದಿಂದ ಧ್ಯಾನಯುಕ್ತವಾದ ಮನಸ್ಸಿನಿಂದ ಪ್ರಶಾಂತಗೊಂಡ ಮನಸ್ಸಿನಲ್ಲಿ ಸಹಜವಾಗಿ ಯಾವ ಬಗೆಯ ಪ್ರಚೋದನೆ ಉಂಟಾಗಬಹುದು ಎಂಬುದನ್ನು ಸುಲಭವಾಗಿ ಊಹಿಸಬಹುದು. ಶಾಂತಾವಾಗಿ ಇನ್ನೊಬ್ಬನನ್ನು ಗೆಲ್ಲುವ ಪ್ರಚೋದನೆ ಇರಬಹುದು. ಆ ಪ್ರಚೋದನೆ ಹಿಂಸ್ರವಾಗಿರದೆ  ಆತನ ಶರೀರವನ್ನು ಗೆಲ್ಲಬಯಸದೆ ಆತನ ಮನಸ್ಸನ್ನೇ ಗೆಲ್ಲಬಯಸುತ್ತದೆ. ಇದಲ್ಲವೇ ನಿಜವಾದಗೆಲುವು. ಅದಕ್ಕಾಗಿಯೇ ಹಿಂದೂ ಭಾರತ ಸಂಸ್ಕೃತಿಯೇ ಶಾಂತವಾಗಿ ಶಾಂತಿ ಮಂತ್ರವನ್ನು ಪಠಿಸುತ್ತದೆ. ಅದಕ್ಕಾಗಿ ಓಂ ಶಾಂತಿಃ ಶಾಂತಿಃ ಶಾಂತಿಃ ಎಂಬ ಶಾಂತಿ ಮಂತ್ರದ ಉಗಮಕ್ಕೆ ಇದುವೇ ನಿದರ್ಶನ. ಚಾಂಚಲ್ಯತೆ ತುಂಬಿದ ಮನಸ್ಸಿನಲ್ಲಿ ಭಗಂವತನ ಸಾನ್ನಿಧ್ಯ ಇರದು. ವ್ಯಾಕುಲತೆಯೇ ತುಂಬಿದ  ದುಮ್ಮಾನದಲ್ಲಿರುವ ಮನಸ್ಸು ಸದಾ ಜ್ವಾಲಾಮುಖಿಯಂತೆ ಸುಪ್ತವಾದ ಉದ್ವಿಗ್ನ ಯೋಜನೆಯನ್ನೆ ಮಾಡಿಕೊಂಡಿರುತ್ತದೆ. ವ್ಯಾಕುಲತೆಯನ್ನು ಬಿಟ್ಟ ಪ್ರಶಾಂತವಾದ ಸರೋರವರದಂತಿರುವ ಮನಸ್ಸಿನಲ್ಲಿ ಭಗಂತನ ನೆಲೆಯಾಗುತ್ತದೆ. ಭಗವಂತನಿರುವ ಮನಸ್ಸಿನ ಪ್ರಚೋದನೆಯೂ ಭಗವಂತ ರೂಪಿಯಾಗಿರುವುದು ಸಹಜವಲ್ಲವೆ? ಆದುದರಿಂದ ಧ್ಯಾನ ಮುಖಿಗಳಾಗಿ ಮನಸ್ಸಿನ ವ್ಯಾಕುಲತೆಯನ್ನು ದೂರಿಕರಿಸುವುದು ಅತ್ಯವಶ್ಯ. ಇದು ಏಕ ಕಾಲದಲ್ಲಿ ಒಂದಾಗಿಯೇ ಉಂಟಾಗುವ ಕ್ರಿಯೆ. ಅದಕ್ಕಾಗಿ ಮೊದಲು ಮನಸ್ಸಿನ ಕಲ್ಮಶವನ್ನು ದೂರಿಕರಿಸಬೇಕು. ಕಲ್ಮಶರಹಿತ ಮನಸ್ಸಾಗಬೇಕು.

ಈ ಧ್ಯಾನದ ಪರಿಕ್ರಮಕ್ಕೆ ಮನಸ್ಸನ್ನು ಸಿದ್ದಪಡಿಸುವಿಕೆ ಕೂಡ ತುಂಬ ಸರಳ. ಯೋಗಾಭ್ಯಾಸದ ಪ್ರಥಮಾರ್ಧವೇ ಇದು. ನಾವು ಮನೆ ಕಟ್ಟುವಾಗ ಅದಕ್ಕಾಗಿ ಹಲವು ಬಾರಿ ಯೋಚಿಸಿ ನೀಲ ನಕ್ಷೆಯನ್ನು ಸಿದ್ದಪಡಿಸುತ್ತೇವೆ. ಅಥವಾ ಮನೆಯನ್ನು ಕೊಂಡುಕೊಳ್ಳುವಾಗಲೂ ಅತ್ತ ಇತ್ತ ಒಳಗೆ ಹೊರಗೆ ನೋಡಿ ಕೊಳ್ಳುತ್ತೇವೆ. ಆಡುಗೇ ಕೋಣೆ ಹೀಗಿರಬೇಕು. ಶಯ್ಯಾಗಾರ ವಿಶಾಲಾವಾಗಿ ಗಾಳಿ ಬೆಳಕು ಸಿಗುವಂತಿರಬೇಕು. ವಿಶಾಲವಾದ ಚಾವಡಿಯಿರಬೇಕು. ಸಾಕಷ್ಟು ದೊಡ್ಡದಾದ ಸ್ನಾನ ಇತ್ಯಾದಿಯ ಕೋಣೆಯಿರಬೇಕು .. ದೇವರ ಕೋಣೇ ಇಂತಹ ದಿಕ್ಕಿನಲ್ಲಿ ಹೀಗೆ ಇರಬೇಕು.. ಈ ಆವಶ್ಯಕತೆಗಳಲ್ಲಿ ಒಂದನ್ನು ಸೇರಿಸುವುದು  ತೀರಾ ಅತ್ಯಾವಶ್ಯ ಎಂದೆನಿಸುತ್ತದೆ. ಅದೇ ಧ್ಯಾನ ಯೋಗಕ್ಕೆ ಸೂಕ್ತವಾದ ಜಾಗ. ತಕ್ಕ ಮಟ್ಟಿಗೆ ವಿಶಾಲವಾದ ಗಾಳಿ ಬೆಳಕು ಯಥೇಚ್ಚವಾಗಿರುವ ಶುಭ್ರವಾದ ಒಂದು ಕೋಣೆ.ಸೂರ್ಯೋದಯದ ಹೊಂಗಿರಣಗಳು ಬೀಳುವಂತಿದ್ದರೆ ಅತ್ಯಂತ ಸೂಕ್ತ.

         ಮುಂಜಾನೆಯ ಹೊತ್ತು ಧ್ಯಾನಕ್ಕೆ  ಅತ್ಯಂತ ಸೂಕ್ತವಾದ ಕಾಲ.ದೇಹ ಮನಸ್ಸನ್ನು ತೊಡಗಿಸುವುದು ಅತ್ಯಂತ ಸುಲಭ. ಸ್ನಾನ ಮಾಡಿ ಶುಚಿಯಾಗಿ ಬರಿದಾದ ಹೊಟ್ಟೆಗೆ ಕೇವಲ ನೀರನ್ನು ಸೇವಿಸಿ,  ಸ್ವಲ್ಪವಾದರೂ ನೀರು ಸೇವಿಸಿದರೆ ಎಲ್ಲವೂ ತಣ್ಣಗಾದ ಅನುಭವವಾಗುತ್ತದೆ. ಸಾಧ್ಯವಾದಷ್ಟು ಮಟ್ಟಿಗೆ ಶುಭ್ರವಾಗಿ ಗಾಳಿ ಬೆಳಕಿರುವ ಕೋಣೆಯ ಮಧ್ಯಭಾಗದಲ್ಲಿ ಜಮಖಾನೆ ಅಥವಾ ಚಾಪೆ ಇನ್ನಿತರ (ಹಾಸಿಗೆಯಲ್ಲದೆ) ಹಾಸನ್ನು ಹಾಸಿ ಮಧ್ಯ ಭಾಗದಲ್ಲಿ ಪದ್ಮಾಸನದಲ್ಲಿ ಅಥವಾ ವಜ್ರಾಸನ...ಇನ್ನಿತರ ಸುಖಾಸನ.... ಇಲ್ಲಿ ಗಮನಾರ್ಹವೆಂದರೆ  ಸೊಂಟದಿಂದ ಮೇಲೆ ನೇರವಾಗಿ ಸ್ಥಿರವಾಗಿ ಕುಳಿತುಕೊಳ್ಳುವುದು. ಈ ಸ್ಥಿರತೆಯೇ ಮಾನಸಿಕ ಸ್ಥಿರತೆಯನ್ನು ಮೊದಲಾಗಿ ಒದಗಿಸುತ್ತದೆ.

ನೇರವಾಗಿ ಅಲುಗಾಡದೆ ಸ್ಥಿರವಾಗಿ ಕುಳಿತ ನಂತರ ಕೈಯನ್ನು ಚಿನ್ ಮುದ್ರೆಯಲ್ಲಿರಿಸುವುದು. ಹೆಬ್ಬರಳು ಮತ್ತು ತೋರು ಬೆರಳನ್ನು ಸಾಧ್ಯವಾದಷ್ಟು ಬಿಗಿಯಾಗಿ ಸ್ಥಿರವಾಗಿ ಹಿಡಿದುಕೊಳ್ಳುವುದು. ನಿಧಾನವಾಗಿ ಕಣ್ಣರೆಪ್ಪೆಗಳನ್ನು ಮುಚ್ಚಿ ಕಣ್ಣೀನ ದೃಷ್ಟಿಯನ್ನು ಭ್ರೂ ಮಧ್ಯಕ್ಕೆ ಹೊಂದಿಸುವುದು. ಇದು ಒಂದೇ ಬಾರಿಗೆ ಸಿದ್ದಿಸದೆ ಇದ್ದರು ಪ್ರಯತ್ನಿಸುತ್ತಾ ಇದ್ದಲ್ಲಿ ಸಾಧನೆ ಕಷ್ಟವಲ್ಲ. ಮನಸ್ಸಿನ ಎಲ್ಲಾ ಯೋಚನೆಯನ್ನು  ಬದಿಗಿರಿಸಲು ಯತ್ನಿಸುವುದು.. ಸುತ್ತಲೂ ಕೇಳುವ ಹಕ್ಕಿಗಳ ಕಲರವ ವಾಹನ ಅಥವಾ ಇನ್ನಿತರ ಸದ್ದು ಗದ್ದಲದ ಕಡೆಗೆ ಔದಾಸಿನ್ಯವನ್ನು ತೋರುತ್ತ ಅದರತ್ತ ಗಮನ ಹರಿಸದಿರುವುದು.ತಮ್ಮ ಎಲ್ಲಾ ಗಮನವನ್ನು ಯೋಚನೆಯನ್ನು ಉಸಿರಿನತ್ತ ಕೇಂದ್ರೀಕರಿಸುತ್ತಾ  ದೀರ್ಘವಾದ ಉಸಿರನ್ನು ನಿಧಾನವಾಗಿ ಸಾವಧಾನದಲ್ಲಿ ತಡೆ ಇಲ್ಲದೆ ಒಳಕ್ಕೆ ಎಳೆದು ಕೊಳ್ಳುವುದು.ಹೀಗೆ ಒಳಕ್ಕೆಳೆದುಕೊಂಡಾಗ ಚೈತನ್ಯರೂಪವಾದ ಆಮ್ಲಜನಕವನ್ನು ಸಾಧ್ಯವಾದಷ್ಟು ಹೃದಯಕ್ಕೆ ತುಂಬಿಸಿಕೊಳ್ಳುತ್ತಿದ್ದೇವೆ ಎಂಬ ಭಾವನೆಯನ್ನು ಮನಸ್ಸಿನಲ್ಲಿ ಉಂಟುಮಾಡಿಕೊಂಡು ನಂತರ ನಿಧಾನವಾಗಿ ಉಸಿರನ್ನು ದೀರ್ಘವಾಗಿ ತಡೆಯಿಲ್ಲದೆ ಬಿಡುತ್ತಾ ನಿರಾಳತೆಯನ್ನು ಅನುಭವಿಸುವುದು. ಒಂದು ಬಾರಿಯ ಉಸಿರಿಗೆ  .  ಅದು ಎಷ್ಟು ಅವಧಿಯನ್ನು ತೆಗೆದುಕೊಂಡಿತೋ ಅಷ್ಟೇ ಅವಧಿಯನ್ನು ಹೊರಬಿಡುವ ಉಸಿರಲ್ಲೂ ತೆಗೆದು ಕೊಳ್ಳಲು ಪ್ರಯತ್ನಿಸುತ್ತಾ ಅದರತ್ತ ಗಮನ ಹರಿಸಬೇಕು. ಬೆನ್ನು ಸೊಂಟ ಒಟ್ಟಿನಲ್ಲಿ ದೇಹವೇ ನೇರವಾಗಿ ಸೆಟೆದು ನಿಂತಿರುವುದನ್ನು ಸಡಿಲ ಪಡಿಸದೇ ಇರಬೇಕು.ಒಂದು ಬಾರಿ ಅನುಲೋಮ ವಿಲೋಮ ಆದಕೂಡಲೆ ಎದೆ ಬಡಿತ ಕೇಳಲಾರಂಭಿಸುತ್ತದೆ. ದೀರ್ಘವಾದ ಉಸಿರಾಟಕ್ಕೆ ಹೃದಯ ಸ್ಪಂದನೆಯದು. ಇದೇ ಎಕಾಗ್ರತೆಯಿಂದ ಎಲ್ಲವನ್ನು ಮರೆತ್ತು ಕೇವಲ ಉಸಿರಿನತ್ತವೇ ಕೇಂದ್ರೀಕರಿಸಿ ನಿಧಾನವಾಗಿ ೨೦-೨೧ ಬಾರಿ ಉಸಿರನ್ನು ತೆಗೆದಾಗ ಸಮ್ಮೋಹನಕ್ಕೆ ಒಳಗಾದ ಅನುಭವಾಗಿ ನಿಲುಮೆ ಸ್ಥಿರವಾಗಿರುತ್ತದೆ.ಮನಸ್ಸು ಹೃದಯ ಶರೀರ ಶುಷ್ಕವಾದ ಅನುಭವಾಗುತ್ತದೆ. ಇದೇ ಸ್ಥಿಯಲ್ಲಿ ಕುಳಿತುಕೂಳ್ಳುವುದೇ ಯೋಗ ಎಂದು ಕರೆಸಲ್ಪಡುತ್ತದೆ.  ನಿಧಾನವಾದ ತಡೆಯಿಲ್ಲದ ನಿಃಶಬ್ಧ ಹಾಗು  ನಿಧಾನವಾದ ಉಸಿರಾಟ ಪ್ರಕ್ರಿಯೆ ಮುಂದುವರಿದಂತೆ ಹೃದಯ ಸ್ಪಂದಿಸುತ್ತ ದೇಹ ಮನಸ್ಸು ಉಲ್ಲಸಿತವಾಗುತ್ತದೆ. ಓಂಕಾರವನ್ನು  ಐದಾರು ಬಾರಿ ಗಂಟೆಯ ನಿನಾದದಂತೆ ಉಚ್ಚರಿಸಿದಂತೆ ಯೋಗದ ಪ್ರಥಮ ಮೆಟ್ಟಿಲನ್ನು ಏರಿನಿಂತಹಾಗೆ ಅಗುತ್ತದೆ. ಆರಂಭದಲ್ಲಿ ಈ ಹಂತವೇ ತುಂಬ ಕಠಿಣ ಅಂತೆನಿಸಿದರೂ ೨-೩ ದಿನದಲ್ಲಿ ಗಮನಾರ್ಹವಾದ ಸಾಧಾನೆಯನ್ನು ಸಾಧಿಸಬಹುದು. ಮುಂಜಾನೆಯ ಹೊತ್ತು ವಾತಾವರಣದಲ್ಲಿ ಸಹಜವಾಗಿ ಆಮ್ಲಜನಕದ ಪ್ರಮಾಣ ಹೆಚ್ಚಿರುತ್ತದೆ. ಹಾಗಾಗಿ ಅಧಿಕವಾದ ಆಮ್ಲಜನಕ ಹೃದಯವನ್ನು ಸೇರುತ್ತ ದೇಹದ ಚೈತನ್ಯವನ್ನು ಅಧಿಕಗೊಳಿಸಿ ದಿನಪೂರ್ತಿಯ ಚಟುವಟಿಕೆಗೆ ಬೇಕಾದಷ್ಟು ಶಕ್ತಿ ಸಂಚಯನವಾಗುವಂತಾಗುತ್ತದೆ.  ಹೀಗೆ ಸರಳವಾಗಿ ಸುಲಭವಾಗಿ ನಿರಾಯಾಸವಾಗಿ ಯಾವುದೇ ವಯೋಮಾನದವರು ಮಾಡಬಹುದಾದ ಈ ಧ್ಯಾನಯೋಗ ಮನಸ್ಸಿನ ಭಾವನೆಗೆ ಸೌಮ್ಯವಾದ ರೂಪವನ್ನು ಕೊಡುತ್ತದೆ. ದೇಹಕ್ಕೂ ಮನಸ್ಸಿಗೂ ಪ್ರಕೃತಿಗೂ ಇರುವ ಅವಿನಾಭಾವ ಸಂಬಂಧವನ್ನು ವ್ಯಕ್ತ ಪಡಿಸುತ್ತದೆ. ಮನುಷ್ಯ ಪ್ರಕೃತಿಯ ಒಂದು ಅಂಗ. ಈ ಪ್ರಕೃತಿ ಮನಸ್ಸು ಮತ್ತು ದೇಹದ ಸ್ಪಂದನೆಯ ಭಾಷೆಯ ಅರಿವಾದಾಗ ನಾವೇನ್ ನಮ್ಮ ದೇಹ ಏನು ನಮ್ಮ ಮನಸ್ಸೇನು ಅತ್ಮವೇನು ನಮ್ಮ ಭಾವನೆಯ ಉತ್ಪತ್ತಿ ಮತ್ತು ನಿಯಂತ್ರಣ ಹೇಗೆ .ಎಲ್ಲವೂ ಅರಿವಾದ ಹಾಗಾಗುತ್ತದೆ. ಪಾರಮಾರ್ಥಿಕ ಸತ್ಯದ ಅರಿವು ಸ್ವಲ್ಪ ಸ್ವಲ್ಪವೆ ಅರಿವಿಗೆ ಬರುತ್ತದೆ. ಇದಕ್ಕೆ ಯಾವುದೇ ಗ್ರಂಥವಾಗಲಿ ಪುಸ್ತಕವಾಗಲಿ ಅಧ್ಯಯನ ಮಾಡುವ ಆವಶ್ಯಕತೆ ಇರುವುದಿಲ್ಲ ತುಂಬ ಸರಳವಾದ ಸುಲಭವಾದ ವಿಧಾನದಲ್ಲಿ ಮಹತ್ವವಾದ ಸಾಧನೆಯನ್ನು ಮಾಡಿದ ಅನುಭವವಾಗುತ್ತದೆ. ಮನಸ್ಸಿನ ವ್ಯಗ್ರತೆ ಮರೆಯಾಗಿ ಸೌಮ್ಯತೆ ನೆಲೆಯಾಗುತ್ತದೆ. ಜೀವರಾಶಿ ಮಾತ್ರವಲ್ಲ ಸಮಷ್ಟಿಯಲ್ಲಿ ಪ್ರಕೃತಿಯ ಬಗ್ಗೆ ಅವ್ಯಕ್ತ ಮೋಹ ಉಂಟಾಗುತ್ತದೆ. ಮನುಷ್ಯ ಮನುಷ್ಯರ ನಡುವಿನ ದ್ವೇಷ ಅಸೂಯೆ ವೈಷಮ್ಯ ಮಾಯವಾದ ಅನುಭವಾಗಿ ಶಾಂತಿ ಮಂತ್ರದ  ಸಾರ್ಥಕತೆಯ ನಿಜ ಅರ್ಥ ಸ್ಪುರಿಸುತ್ತದೆ. ಹೊಸ ಜ್ಞಾನ ಪ್ರವಾಹಕ್ಕೆ ನಮ್ಮ ಹೃದಯ ಸರೋವರವಾಗುತ್ತದೆ.



2 comments:

  1. :) chennagi barediddeeri rajanna, kelavaradaroo upayoga madikoltare ee lekhanavannu

    ReplyDelete
  2. ಅಷ್ಟಾದರೆ ನಾನು ಧನ್ಯ. ಉಸಿರು ಹಿಡಿದಿಡುವ ಜೀವನವಾಗಬಾರದು ಉಸಿರು ಬಿಟ್ಟು ನಿರಾಳವಾಗುವ ಬದುಕಾಗಬೇಕು.ನಿರಾಳತೆ ಅನುಭವಕ್ಕೆ ಬರುವುದು ಅಲ್ಲೇ ಬಹುಶಃ ಮನುಷ್ಯನ ಎಲ್ಲ ನೋವು ನೀಗುವುದು ಸಾವಿನಲ್ಲೇ ಅಂತ ಹೇಳುವುದೂ ಇದಕ್ಕೆನೋ.

    ReplyDelete