Saturday, October 8, 2011

ಯೋಗನಿದ್ರೆ - ಸುಖನಿದ್ರೆ



ಒಂದು ವಸ್ತುವಿಗೆ  ಮೌಲ್ಯವನ್ನು ನಿರ್ಧರಿಸಿ ಅದರ ಹಿಂದೆ ಹೋಗುವುದು ಕೈವಶವಾದಾಗ ಹಿಗ್ಗಿ ಸಂತೋಷಿಸಿದರೆ ಸಿಗದಾಗ ನಿರಾಶನಾಗುವುದು, ಸಾಧ್ಯವಾದರೆ ಮಗುದೊಮ್ಮೆ ಯತ್ನಿಸುವುದು. ಇದು  ಮಾನವನ ಐಹಿಕ ಜೀವನದಲ್ಲಿ ಕಂಡುಬರುವ ಪರಮ ಸತ್ಯ. ಮೌಲ್ಯವನ್ನು ನಿರ್ಧರಿಸುವುದೇ ಐಹಿಕ ಜಗತ್ತು.   ಮೌಲ್ಯಮಾಪನ ಎಂಬುದು ಆಗದೇ ಇರುತ್ತಿದ್ದರೆ, ಅತ್ಯಂತ ಮೌಲ್ಯಭರಿತ ವಸ್ತುವು ಯಃಕಶ್ಚಿತ್ ವಸ್ತುವಾಗಿಬಿಡುತ್ತದೆ.ಚಿನ್ನವೋ ಅಥವಾ ಇನ್ನಾವುದೋ ಅಮೂಲ್ಯವಸ್ತುವು ಅದು ಅಮೂಲ್ಯವಾಗುವುದು ಮನುಷ್ಯನಿಂದಲೇ. ಒಂದು ವೇಳೆ ಮೌಲ್ಯ ಅದಕ್ಕೆ ಇಲ್ಲದೇ ಇರುತ್ತಿದ್ದರೆ ಅದು ಬರಿದೇ ಒಂದು ಲೋಹ. ಅದರ ಗುಣದಿಂದಲೋ ಉಪಯೋಗದಿಂದಲೋ ಅದರ ಮೌಲ್ಯ ನಿರ್ಧರಿಸಲ್ಪಟ್ಟರೂ ಮೌಲ್ಯ ನಿರ್ಧಾರಣೆಯ ಮೂಲ ಇರುವುದು ಮನುಷ್ಯನಲ್ಲೇ.

            ತನಗೆ ಮೌಲ್ಯಯುತವಾದದ್ದು ಇನ್ನೋರ್ವನಿಗೆ ಅಪಮೌಲ್ಯ ಎನಿಸಿಬಿಡಬಹುದು. ಜಗನ್ನಿಯಾಮಕನಾದ ಭಗವಂತನು ಯಾವುದೇ ಒಂದು ವಸ್ತುವಿಗೆ ಕಾರಣೀಭೂತನಾದರೂ.. ಭಗವಂತ ಯವುದನ್ನು ಅಮೂಲ್ಯ  ಎಂದು ಪರಿಗಣಿಸಿರುತ್ತಾನೋ ಅದು ನಮ್ಮ ಅರಿವಿಗೆ  ಬರುವುದಿಲ್ಲಹೊರಗಿನ ಜಗತ್ತು ಮತ್ತದರ  ಸೃಷ್ಟಿ, ಮನುಕುಲ ಪ್ರಾಣಿ ಸಂಕುಲ ಹೀಗೆ ಬಾಹ್ಯ ಜಗತ್ತಿನ ಸೃಷ್ಟಿ ಕರ್ತ ಭಗವಂತ. ಎಲ್ಲವನ್ನೂ ಸೃಷ್ಟಿಸಿದ ಭಗವಂತ ಆತ್ಮವನ್ನು ಜತೆಗಿರಿಸಿಬಿಡುತ್ತಾನೆ. ಆತ್ಮ ಮೌಲ್ಯಯುತವೆಂದು ನಿರ್ಧರಿಸಿಯೂ ಬಿಡುತ್ತಾನೆ. ಆತ್ಮದ ಮೌಲ್ಯ ಅರಿಯುವುದೇ ಅಧ್ಯಾತ್ಮ . ಬಹುಶಃ  ಆತ್ಮದ ಅಧ್ಯಯನವೇ ಅಧ್ಯಾತ್ಮ ವಾಗಿರಬಹುದು.

            ಮುಂಜಾನೆ ನಸುಕಿನ ವೇಳೆ ಆತ್ಮವನ್ನು ಅರಿಯುವ ಅಮೃತ ಘಳಿಗೆ. ಏಕಾಂತದ ಧ್ಯಾನಾಸಕ್ತನಾಗಿ ಪ್ರಾಣಾಯಾಮದ ಮೊದಲ ಚರಣದಲ್ಲಿ ನಿಂತಿರುವಾಗ ಬದುಕು ಎಷ್ಟು  ಸುಂದರ ಎನಿಸಿದರೂ ಅದು ನಶ್ವರವಲ್ಲವೇ ಎಂಬ ಜಿಜ್ಞಾಸೆ ಮೂಡುತ್ತದೆ. ಬಹುಶಃ ದ್ವಂದ್ವಗಳ ಉಗಮ ಮೂಲವೇ ಇದು ಅನ್ನಿಸುತ್ತದೆ. ದ್ವಂದ್ವಮಯ ಬದುಕು ಅನಾವರಣಗೊಳ್ಳಲು ಆರಂಭಿಸುವುದು ಇಲ್ಲಿಂದಲೇ. ದೀರ್ಘವಾದ ಹಾಗು ನಿಧಾನವಾದ ಉಸಿರಾಟದಲ್ಲಿ ಚೈತನ್ಯ ಹೃದಯದ ಮೂಲಕ ದೇಹಾದ್ಯಂತ ವ್ಯಾಪಿಸಿದಾಗ.... ಹಾ ಉಸಿರಿನ ಮೌಲ್ಯ ಏನೆಂದು ಅರಿವಾಗುತ್ತದೆ. ಪ್ರಾಣಾಯಾಮದ ಮಜಲುಗಳು ಅವು ಕೊಡುವ ವಿಶಿಷ್ಟ ಅನುಭವಗಳು ಅದರಲ್ಲಿ ತನ್ಮಯರಾಗಿ ಅರ್ಥೈಸಿಕೊಳ್ಳಬೇಕು.


ನಿಧಾನವಾದ ಉಸಿರಾಟದ ಪ್ರಕ್ರಿಯೆಯಲ್ಲಿ ಗಾಳಿಯನ್ನು ಒಳಕ್ಕೆಳೆದು ಹೃದಯ ತುಂಬಿದ ಅನುಭವವಾಗಿ ಅದನ್ನು ನಿಧಾನಾವಾಗಿ ಬಿಡುತ್ತಿದ್ದಂತೆ ಹೊಕ್ಕಳಿನ ಸುತ್ತ ಸುತ್ತಿದ ಕರುಳಿನಲ್ಲಿ ಸಂವೇದನೆಯೊಂದು ಅನುಭವವಾಗುತ್ತದೆ.ಗಾಳಿತೆಗೆದ ಚೆಂಡಿನಂತೆ, ಸತ್ವ ಹೀನ ವಾಹನದ ಗಾಲಿಯಂತೆ ಹೊಟ್ಟೆಯಲ್ಲಿ ಒಳ ಸೆಳೆತ ಆರಂಭವಾಗುತ್ತದೆ. ನಿರ್ವಾತದ ಅನುಭವ ನಿಧಾನವಾಗಿ ಶರೀರದಾದ್ಯಂತ ವ್ಯಾಪಿಸಿ ಮನಸ್ಸಿನ ಯೋಚನೆಗೆ ಗುರಿಯೊಂದನ್ನು ಕಲ್ಪಿಸಿದ ಅನುಭವಾಗುತ್ತಿದ್ದಂತೆ ಶರೀರ, ಒಳಗಿನ ಆತ್ಮ ಇವುಗಳ ಸಂಬಂಧದ ಅರಿವಾಗುತ್ತದೆ. ಆಗಲೆ ಬದುಕಿನ ಜ್ಞಾನೋದಯದ ಜ್ಯೋತಿಯ ಅತ್ಯಂತ ಸೂಕ್ಷ್ಮ ಅನುಭವಾಗುವುದು. ಎಷ್ಟು ವಿಚಿತ್ರವಲ್ಲವೆ? ಇದುವೇ ಅಧ್ಯಾತ್ಮವಾಗಿರಬಹುದೇ?

ಬೊಜ್ಜು ತುಂಬಿದ ಹೊಟ್ಟೆ, ತನ್ನ ಅಸ್ತಿತ್ವವನ್ನು ಕಳೆದು ಕೊಂಡರೆ, ಜನಿಸಿದಾರಭ್ಯದಿಂದ ಯಾವುದನ್ನು ತುಂಬಿಸುವುದಕ್ಕಾಗಿ ಪ್ರತಿಯೊಂದು ಪ್ರಾಣಿಯೂ ಯತ್ನಿಸುವುದೋ ಅದೆಲ್ಲ ಕ್ಷಣದಲ್ಲಿ ಕ್ಷುಲ್ಲಕ ಎನಿಸಿಬಿಡುತ್ತದೆ. ಹಗುರವಾಗುವ ದೇಹ ಪಂಚಭೂತಗಳಲ್ಲಿ ಲೀನವಾಗುವುದೋ ಎಂಬ ಭ್ರಮೆ.   ನಿಧಾನವಾದ ದೀರ್ಘವಾದ ಉಸಿರಾಟದಲ್ಲಿ ಶ್ವಾಸ ಒಳಕ್ಕೆಳೆಯುತ್ತಿದ್ದಂತೇ, ಒಳಕ್ಕೆಳೆದ ಗಾಳಿ ನಾಸಿಕದಿಂದ ಶ್ವಾಸಕೋಶಕ್ಕೆ ಇಳಿದರೂ ತೆಲೆಯಿಂದ ಶರೀರದಾಂದ್ಯಂತ ಚೈತನ್ಯದ ವಿದ್ಯುತ್ ಪ್ರವಹಿಸಿದಂತೆ ಭಾಸವಾಗುವುದು. ಕೇವಲ ದೀರ್ಘ ಉಸಿರಾಟದಿಂದ ಹೀಗಾಗುವುದೆಂದರೆ,  ಆವಾಗ ಅನುಲೋಮ ವಿಲೋಮದ ಲೆಕ್ಕಾಚಾರ ಮನಸ್ಸಿನಲ್ಲ್ಲಿ ಮೂಡುವುದು. ಇರುಳಿನ ವಿರಾಮದಿಂದ ಶರೀರ ಕೊಡವಿಕೊಂಡು ಮೇಲೆದ್ದು ದಿನದ ಚಟುವಟಿಕೆಗೆ ಸಜ್ಜಾದಾಗ... ಮನೆಯೊಡತಿ ಅಡುಗೆ ಕೋಣೆ ಹೊಕ್ಕು ಅಹಾರದ ಸಿದ್ದತೆ ತೊಡಗಲು ಬೆಂಕಿ ಹಚ್ಚಿದಂತೆ.. ಪ್ರಾಣಾಯಾಮ ದೀರ್ಘ ಉಸಿರಾಟ ಆರಂಭವಾದಾಗ ಶರೀರದ ಅಡುಗೆ ಕೋಣೆಯಲ್ಲಿ ಬೆಂಕಿ ಹಚ್ಚಿ ಚೈತನ್ಯದ ಆಹಾರ ಸಿದ್ದವಾದಂತೆ.


ಪ್ರಾಣಾಯಾಮ ಮಾಡುತ್ತಿದ್ದಂತೆ ದಿನದಿಂದ ದಿನಕ್ಕೆ ಹೊಸ ಅನುಭವ ಉಂಟಾಗುವುದು ಸಾಮಾನ್ಯ. ಶ್ರದ್ದೆಯನ್ನು ಹೊಂದಿ ಎಕಾಗ್ರತೆ ಬರುತ್ತದೆ. ಅದರ ಜತೆಯಾಗಿ ವಿಬ್ಭಿನ್ನ ಪರಿಣಾಮಗಳು ಶರೀರದಲ್ಲಿ ಆಗತೊಡಗುತ್ತದೆ. ಪ್ರಾಣಾಯಮದ ಉತ್ತುಂಗಕ್ಕೆ ಸನಿಹವಾದಂತೆ ದೇಹ ಬೆವರುದಕ್ಕೆ ಆರಂಭಿಸುತ್ತದೆ. ಸಾಮಾನ್ಯವಾಗಿ ಮೈಗಂಟಿಕೊಂಡ ಬಟ್ಟೆಯನ್ನು ವೇಳೆಯಲ್ಲಿ ಧರಿಸಬಾರದೆಂದು ಸಲಹೆ ಮಾಡುತ್ತಾರೆ. ಬರಿ ಮೈ ಆದರೆ ಪರಿಣಾಮ ಇನ್ನೂ ಅಧಿಕ. ಶರೀರ ಹೊರ ಪ್ರಪಂಚಕ್ಕೆ ಸುಂದರವಾಗಿ ಸ್ಪಂದಿಸುವುದರ ಅನುಭವ ಆವಾಗ ಆಗುತ್ತದೆ. ಬರೀ ಉಸಿರಾಟ ಕ್ರಿಯೆಯಲ್ಲಿ ಮೈ ಬೆವರುವುದೆಂದರೆ, ವಿಚಿತ್ರ ಅನುಭವ.ಶರೀರ ಸ್ಪಂದಿಸಿದಂತೆಲ್ಲ ಎಕಾಗ್ರತೆ ಅಧಿಕವಾಗಿ ಬಾಹ್ಯಪ್ರಪಂಚದ ಅರಿವು ಕ್ಷೀಣವಾಗುತ್ತ ಹೋಗುತ್ತದೆ. ಉಸಿರಾಟದೊಂದಿಗೆ ಶರೀರ  ಮನಸ್ಸು ಸ್ಥಿರವಾಗಿ ಚಂಚಲತೆ ಮಾಯವಾಗಿ ಶರೀರ ಮತ್ತು ಆತ್ಮದ ಸಂಬಂಧ ಅರಿವು ಉಂಟಾಗುತ್ತದೆ. ಆವಾಗ ದೇಹಕ್ಕೆ ದಣಿವಿನ ಅರಿವಾಗ ತೊಡಗುತ್ತದೆ ಬೆವೆತ ಶರೀರ ಮತ್ತು ಆತ್ಮದ ಸಂಬಂಧ ಒಂದು ಉತ್ತುಂಗ ಶಿಖರಕ್ಕೆ ಒಂದು ಹಂತದವರೆಗೆ ಏರುತ್ತ ನಂತರ  ಇಳಿದು ಭಾಹ್ಯಪ್ರಪಂಚಕ್ಕೆ ಬಂದಾಗ ದೇಹಕ್ಕೆ ವಿಶ್ರಾಂತಿ ಮತ್ತು ಮನಸ್ಸಿಗೆ ನಿರಾಳತೆಯ ಅವಶ್ಯಕತೆ ಉಂಟಾಗುತ್ತದೆ. ಸ್ಥಿತಿಯಲ್ಲಿ ಅತಿಮುಖ್ಯವಾದ ಮುಂದಿನ ಹಂತವೇ ಶವಾಸನ.

ನಿದ್ರೆ ಎಂಬುದು ಒಂದು ಪ್ರಜ್ಞಾಹೀನ ಸ್ಥಿತಿ. ನಿಗದಿತ ಸಮಯದಲ್ಲಿ ಮನಸ್ಸು ದೇಹ ಬಳಲಿದಾಗ ಯಾವುದೇ ಜೀವಿ ನಿದ್ರಾ ಸ್ಥಿತಿಗೆ ಜಾರಿಕೊಂಡು ದೈನಿಕ ಬದುಕಿನ ಎಲ್ಲ ಜಂಝುಡಗಳಿಂದ ದೂರವಾದಂತೆ ಅನಿಸಿದರೂ ಕನಸಿನ ಮೂಲಕ ಕೆಲವೊಮ್ಮೆ ಮನಸ್ಸು ಜಾಗೃತವಾಗುವುದು. ಸಂತೋಷ ದುಃಖ ಭಯ ದುಮ್ಮಾನಗಳ ಅನುಭವ ಮನಸ್ಸಿಗೂ ದೇಹಕ್ಕೂ ಆಗಬಹುದು. ನಿದ್ದೆಯಲ್ಲೂ ಕಾಡುವ ಚಿಂತೆ ಯೋಚನೆಗಳು ಮನಸ್ಸಿಗೆ ಆವಶ್ಯವಿರುವ ನಿರಾಳತೆಯನ್ನು ಒದಗಿಸದೇ ಇರಬಹುದು. ಅದಕ್ಕಾಗಿಯೇ ಯೋಗದಲ್ಲಿ  ಶವಾಸನ ಅತ್ಯಂತ ಮಹತ್ವವನ್ನು ಪಡೆಯುತ್ತದೆ. ಶವಾಸನ..!! ಕಾಣುವುದಕ್ಕೆ ಹಾಸ್ಯಸ್ಪದವಾಗಿ ಕಂಡರೂ ಯೋಗಾಭ್ಯಸದ ಯಾವುದೇ ಘಟ್ಟದಲ್ಲೂ ಮಾಡಲೇಬೇಕಾದಂತಹ ಆಸನ ಶವಾಸನ (sleeping posture).

            ನಿದ್ರೆಯಲ್ಲಿ ಮನಸ್ಸು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದರೆ, ಯೋಗ ನಿದ್ರೆಯಲ್ಲಿ ದೇಹ ಸ್ತಬ್ಧವಾಗಿ ಚೇತನವು ಜಾಗೃತವಾಗಿರುತ್ತದೆ. ಊರ್ದ್ವಮುಖಿಯಾಗಿ ಮಲಗಿ ಶರೀರದ ಒಂದೋಂದೆ ಭಾಗವನ್ನು ತಮ್ಮ ನಿಯಂತ್ರಣದಿಂದ ದೂರವಿರಿಸುತ್ತಾ ನಿರಾಳತೆಯತ್ತ ಸಾಗುವುದೇ ಶವಾಸನ. ಕಾಲಿನ ಬೆರಳಿನಿಂದ ಆರಂಭಿಸಿ ಒಂದೊಂದನ್ನೆ ನಿಧಾವಾಗಿ ನಮ್ಮ ನಿಯಂತ್ರಣದ ಅರಿವಿನಿಂದ ದೂರವಿರಿಸುತ್ತಾ ಸಾಗಬೇಕು. ಅರಂಭದಲ್ಲಿ ಇದು ಬಹಳ ಕಷ್ಟಕರವಾಗಿ ಕಂಡರೂ ನಂತರ ಸಹಜ ಕ್ರಿಯೆಯಾಗಿ ಬದಲಾಗುತ್ತದೆ. ಕೈಕಾಲು ದೇಹ ಎಲ್ಲವನ್ನು ಸಡೀಲಿಸಿ ಮಲಗಿ ಕಾಲಿನಿಂದ ತೊಡಗಿ ತಲೆಯ ವರೆಗೂ ಒಂದೊಂದೇ ಭಾಗದ ನಿಯಂತ್ರಣವನ್ನು ಕಡಿದು ಕೊಳ್ಳುತ್ತ, ಮನಸ್ಸಲ್ಲಿ ಯಾವುದೇ ಯೋಚನೆ ಮಾಡದೆ ನಿರಾಳವಾಗಿ ಮಲಗಿ ಬಿಡುವುದು. ಸುತ್ತ ಮುತ್ತಲ ಸದ್ದು ಗದ್ದಲವನ್ನು ಗಣ್ಯ ಮಾಡದೆ ಅಲುಗಾಡದೆ ಶವದಂತೆ ಮಲಗಿ ಬಿಡುವುದು. ದೇಹದಲ್ಲಿ ಕೇವಲ ಉಸಿರಾಟ ಒಂದೇ ಕ್ರಿಯಾತ್ಮಕವಾಗಿರುತ್ತದೆ ಮತ್ತು ನಿರಾಳತೆಯ ಸಂಕೇತದಂತೆ ಮುಖದಲ್ಲಿ ಕಿರು ಮಂದಹಾಸ ಮೂಡಬೇಕು. ಉಳಿದಂತೆ ದೇಹ ಮನಸ್ಸು ಎಲ್ಲವೂ ಸ್ಥಭ್ದವಾಗಿಬಿಡಬೇಕು. ಹತ್ತರಿಂದ ಹದಿನೈದು ನಿಮಿಷಗಳ ಕಾಲ ಅದೇ ಸ್ಥಿತಿಯಲ್ಲಿದ್ದಾಗ ಕೆವಲ ಒಂದು ಸರಳ ರೇಖೆಯಲ್ಲಿ ದೇಹವು ಭೂಮಿಯನ್ನು ಸ್ಪರ್ಶಿಸಿದಂತೆ ಭಾಸವಾಗತೊಡಗುತ್ತದೆ.ಎಲ್ಲೆಡೆ ಶೂನ್ಯತೆಯ ಅನುಭವವಾಗುತ್ತದೆ. ನಿಧಾನವಾಗಿ ಮಾಡುತ್ತ ಸಾಗಿದಂತೆ ಆಗುವ ಅನುಭವಗಳು ಬಹಳ ವಿಚಿತ್ರವಾಗಿರುತ್ತದೆ.
           
                        ಶವಾಸನದ ಕೊನೆಯ ಹಂತದಲ್ಲಿ ಮನಸ್ಸು ಪ್ರಫುಲ್ಲತೆಯಲ್ಲಿ ಅರಳಿರುತ್ತದೆ. ದುಃಖವಿದ್ದಲ್ಲಿ ಸುಖಕತ್ತಲು ಇರುಳು , ಸುಳ್ಳು ಸತ್ಯ ಹೀಗೆ ಜಗತ್ತು ಹೇಗೆ ದ್ವಂದ್ವಮಯವಾಗಿದೆಯೋ ಮನಸ್ಸಿನ ಯೋಚನೆಗಳು ಅಷ್ಟೇ ದ್ವಂದ್ವಮಯವಾಗಿರುತ್ತದೆ. ಅಸತ್ಯದಿಂದ ಸತ್ಯದೆಡೆಗೆ, ತಮಸ್ಸಿನಿಂದ ಬೆಳಕಿನೆಡೆಗೆ, ಮೃತ್ಯುವಿನಿಂದ ಅಮೃತತ್ವದ ಕಡೆಗೆ, ಹೀಗೆ ಚಿಂತನೆಗಳು ಪ್ರಚೋದಿಸಲ್ಪಡುತ್ತದೆ. ಎಲ್ಲ ಬಗೆಯ ದ್ವಂದ್ವಗಳು ಮನಸ್ಸಿನಲ್ಲೇ ಹುದುಗಿರುತ್ತದೆ. ಪ್ರಚೋದನೆಗೆ ಹೊಂದಿಕೊಂಡು  ನಮ್ಮ  ವ್ಯಕ್ತಿತ್ವ ಬದಲಾಗುತ್ತದೆ. ವ್ಯಗ್ರತೆ ದೂರವಾಗಿ ಸೌಮ್ಯತೆ ಪ್ರಚೋದಿಸಲ್ಪಡುತ್ತದೆ.   ಪ್ರಚೋದನೆಯನ್ನು ಅರಿತು ನಮ್ಮ ಮನಸ್ಸನ್ನು ತೆರೆದಿಟ್ಟು ಸ್ಪಂದಿಸಬೇಕುಆಗಲೆ ಹೊರ ಜಗತ್ತು ಸುಂದರವಾಗಿ ಭಾಸವಾಗುವುದು. ಬದುಕಿನಲ್ಲಿ  ನಾವು ಕಳೆದ ದಿನಗಳ ಘಟನೆಗಳು ಸ್ಮೃತಿ ಪಟಲದಲ್ಲಿ ಮೂಡುವುದು.  ಅಸೂಯೆ ವಂಚನೆ ವೈಶಮ್ಯ ಸಮಸ್ತ ಷಡ್ವೈರಿ ಭಾವನೆಗಳು ಹೇಗೆ ನಮ್ಮ ಬದುಕನ್ನು ಘಾಸಿಗೊಳಿಸಿವೆ ಎಂಬುದು ಅರಿವಿಗೆ ಬರುತ್ತದೆ. ನಮ್ಮ ಸಹವರ್ತಿಗಳು.. ಅದು ಪತ್ನಿ ಯಾಗಿರಬಹುದು ತಾಯಿ ತಂದೆಯೇ ಮಕ್ಕಳೇ ಆಗಿರಬಹುದು, ಅಥವಾ ಪರಕೀಯ ವ್ಯಕ್ತಿಗಳೇ ಆಗಿರಬಹುದು ಅವರೊಂದಿಗಿನ  ನಮ್ಮ ವರ್ತನೆಯನ್ನು ಮನಸ್ಸು ಪರಾಮರ್ಶೆಗೊಳಿಸುತ್ತದೆ. ವ್ಯಗ್ರವಾಗಿಯೋ ಇನ್ನಿತರ ತಾಮಸೀ ಪ್ರವೃತ್ತಿಯ ನಮ್ಮ ವರ್ತನೆಗೆ ನಮ್ಮ ಮನಸ್ಸು ಪರಿತಪಿಸುವ ಹಂತಕ್ಕೆ ಬಂದು ಬಿಡುತ್ತದೆ. ಯಾಕೆ ಸಿಟ್ಟಾದೆ? ಯಾಕಿದೇ ವೈಷಮ್ಯಪ್ರತಿಯೊಂದು ಜೀವಿಯೂ ಪರಮಾತ್ಮನ ಪ್ರತಿನಿಧಿಯಾಗಿ ಭಾಸವಾಗಿ,   ಮುಂಬರುವ ಸಮಯವದಲ್ಲಿ ಎಲ್ಲಾ ತಾಮಸೀ ಸ್ವಭಾವದ ವರ್ತನೆ ದೂರಿಕರಿಸುವಂತಹ ಚಿಂತನೆ ಮನಸ್ಸಿನಲ್ಲಿ ಉದ್ಭವಿಸುತ್ತದೆ. ಒಟ್ಟಿನಲ್ಲಿ ಮನಸ್ಸಿನ ಚಿಂತನೆಯ ದಿಶೆಯೇ ಬದಲಾಗಿಬಿಡುತ್ತದೆ.

ಒಳಿತಾಗಲಿ ಕೆಡುಕಾಗಲಿ ಅದು ನಮ್ಮೋಳಗಿನ ಭಾವನೆಗಳು. ಅದರ ಹುಟ್ಟಿಗೆ ನಾವೇ ಕಾರಣರು. ಸ್ನೇಹವಾಗಲಿ ವೈಷಮ್ಯವಾಗಲೀ ಎರಡೂ ನಮ್ಮ ಮನಸ್ಸಲ್ಲೇ ನೆಲೆಯಾಗಿರುತ್ತದೆ. ಯಾವ ಭಾವನೆ ಪ್ರಚೋದನೆಗೆ ಒಳಗಾಗುವುದೋ ಅದು ಬಾಹ್ಯದಲ್ಲಿ ಅಭಿವ್ಯಕ್ತೀಕರಿಸಿಕೊಳ್ಳುತ್ತದೆ. ಪರರನ್ನು ಪ್ರೀತಿಸಿದವ ಪರರ ಆತ್ಮವನ್ನು ಗೌರವಿಸಿದಂತೆಆತ್ಮವನ್ನು ಗೌರವಿಸುವುದು ಪರಮಾತ್ಮನನ್ನು ಗೌರವಿಸಿದಂತೆ. ವಿಶ್ವದ ಶಾಂತಿ ಮಂತ್ರದ ಮೂಲಭೂತ ತತ್ವ ಅಡಗಿರುವುದೇ ಇಲ್ಲಿ.

            ತನ್ನನ್ನು ತಾನರಿಯುವುದು, ಒಂದುರೀತಿಯಲ್ಲಿ ತನ್ನೊಳಗಿನ ಅರಿ ಅಂದರೆ ವೈರಿ ಯನ್ನು ಅರಿಯುವುದು ಅಥವಾ ತನ್ನನ್ನೇ ತಾನು ವೈರಿಯೆಂದು ತಿಳಿಯುವುದು, ಇಲ್ಲಿ ಮನಸ್ಸಿನ ದುರ್ಯೋಚನೆಗಳೇ ವೈರಿಗಳು ಇದನ್ನು ಅರಿತರೆ ಜ್ಞಾನೋದಯವಾದಂತೆ. ಅಸತ್ಯದಿಂದ ಸತ್ಯದೆಡೆಗೆ, ತಮಸ್ಸಿನಿಂದ ಬೆಳಕಿನೆಡೆಗೆ ಮೃತ್ಯುವಿನಿಂದ ಅಮೃತತ್ವದ ಕಡೆಗೆ.. ಇಲ್ಲಿ ಅಮೃತತ್ವ ಹೇರಲ್ಪಡುವುದು ನಮ್ಮ ಸಧ್ಬಾವನೆಯ ಮೇಲೆ. ಸದ್ಭಾವನೆ ಸದ್ವಿನಿಯೋಗವಾಗಿ ಸ್ಥಾಯೀಯಾಗಿ ಉಳಿದಲ್ಲಿ ಅದುವೆ ಅಮರವಾದಂತೆ. ಪರೋಕ್ಷವಾಗಿ ನಮ್ಮ ಭಾವನೆಗಳೇ ಅಮರವಾದಂತೆ ಅಲ್ಲವೆ? ಯೋಗದಿಂದ ಕೇವಲ ದೈಹಿಕ ಮಾತ್ರವಲ್ಲ ಮಾನಸಿಕ ಆರೋಗ್ಯವೂ ಲಭ್ಯವಾಗಿ ಸುಂದರ ಆತ್ಮ ಶರೀರ ಹೊಂದಿ ಸುಂದರ ಪರಿಸರಕ್ಕೆ ನಾಂದಿಯಾಗುವುದು.


            .




1 comment: