Sunday, November 21, 2021

ಹಂಪನಕಟ್ಟೆ ಹಳೆ ಬಸ್ ಸ್ಟಾಂಡ್ !!

     ಲ್ಲಾ ನಗರದಲ್ಲಿಯೂ ಈಗ ಹಳೆ ಬಸ್ ಸ್ಟಾಂಡ್ ಇದ್ದೇಇರುತ್ತದೆ. ಬೆಳೆಯುತ್ತಿರುವ ನಗರ ಇಂದು ಹಳೆಯದನ್ನಾಗಿಸಿ ಅದನ್ನು ನೆನಪಿನ ಬುಟ್ಟಿಗೆ ಸೇರಿಸಿಬಿಡುತ್ತದೆ.  ಆ ನೆನಪುಗಳನ್ನು ಮೆಲುಕಿಸುವುದೇ ಒಂದು ರೀತಿಯಲ್ಲಿ ಎದೆ ಹಾಲನ್ನು ಸ್ಮರಿಸಿದಂತೆ. ನಮ್ಮ ಜೀವನಾಡಿಯಾದ ನಮ್ಮ ಊರು ಅದು ಆ ಮಿಡಿತವನ್ನು ಇನ್ನೂ ಅನುಭಿಸುವಂತೆ ಮಾಡುತ್ತದೆ.

     ಹಂಪನಕಟ್ಟೆ..... ಮಂಗಳೂರು ಎಂದು ಅಧಿಕೃತವಾಗಿ ಕರೆಯುವುದೇ ಇದನ್ನು. ಅದೂ ಹಳೆ ಬಸ್ ಸ್ಟಾಂಡ್. ನಮ್ಮ‌ಬಾಲ್ಯದಲ್ಲಿ ಇದನ್ನು ಬೆರಗು ಕಣ್ಣಿಂದ ಕಂಡ ನೆನಪು ಈಗಲೂ ಇದೆ.ಹಲವರಲ್ಲಿ ಕೇಳಿ ಇದೇ ಬಸ್ ಸ್ಟಾಂಡ್ ನ ಹಲವು ನೆನಪುಗಳನ್ನು ಹೇಳಿಯಾರು. ಕಲವು ಸಂಭ್ತಮದ ಕಥೆಗಳಾದರೆ ಇನ್ನು‌ಕೆಲವು ಹತಾಶೆ ನೋವಿನ ಸಂಗತಿಗಳು.‌


ಹಂಪನಕಟ್ಟೆ ಹಳೆ ಬಸ್ ಸ್ಟಾಂಡ್.‌ಈಗಿನ ದೊಡ್ಡ ಸಿಗ್ನಲ್ ಬಳಿಯೇ ಇದೆ. ಮೊದಲು  ಅಲ್ಲಿರುವುದು ಹೊರಗೆಲ್ಲಾ ಕಂಡರೆ ಇಂದು ಕಟ್ಟಡಗಳು ಹುಲ್ಲಿನ ರಾಶಿಯಂತೆ ಬೆಳದು ಹಳೆಯದು ಅಲ್ಲಿ ಏನಿದೆ ಎಂದು ಹುಡುಕುವಂತಿದೆ. ಹಳೆ ಭಗ್ನಾವಶೇಷ ಕೂಡ ಇಲ್ಲ. ಈಗ ಏನಿದ್ದರೂ ಅಳಿಸದ ನೆನಪುಗಳು‌ಮಾತ್ರ. ಅಂದು  ನಡುವಿಗೆ ಒಂದು ದೊಡ್ಡ ಹಂಚಿನ ಕಟ್ಟಡ. ಸುತ್ತಲೂ ಬಗೆ ಬಗೆಯ   ಅಂಗಡಿಗಳು. ಖಾಸಗೀ ಬಸ್ ಕಂಡಕ್ಟರ್ ಏಜಂಟ್ ನವರ ಮೇಜು ಕುರ್ಚಿಗಳು, ಬದಿಯಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳುವ ತಿಟ್ಟೆಗಳು.   ಅಲ್ಲೊಂದು ಬಾವಿಯೂ ಇತ್ತು. ಅಲ್ಲಿನವರ ತೃಷೆ ಬಾಯಾರಿಕೆಯನ್ನು ಪರಿಹರಿಸುತ್ತಾ ಕೊನೆಗೊಮ್ಮೆ ವಯೋವೃದ್ಧ ತಾಯಿಯ ಎದೆಯಂತೆ ಎಲ್ಲಾ ಬತ್ತಿಸಿ ಬರಾಡಗಿ ಈಗ ನೆನಪೂ ಇಲ್ಲದಂತೆ ಅವಶೇಷವೂ ಮಾಯವಾಗಿದೆ.

ಕೆ ಎಸ್ ರಾವ್ ರಸ್ತೆಯಿಂದ ಒಳಬಂದ  ಖಾಸಗಿ  ಬಸ್ಸುಗಳು ಕಟ್ಟಡಕ್ಕೆ ಸುತ್ತು ಹೊಡೆದು ಉಡುಪಿ ಕುಂದಾಪುರ, ಕಾರ್ಕಳ ಕಾಸರಗೋಡು  ಕಡೆಗೆ ಹೋಗುವುದಕ್ಕೆ ಅಲ್ಲಲ್ಲಿ ನಿಲ್ಲುತ್ತಿದ್ದವು. ಬಹಳ ಹಿಂದೆ ಕೆ ಎಸ್ ಆರ್ ಟಿ ಸಿ ಬಸ್ಸುಗಳೂ ಸಹ ಇಲ್ಲೇ ಬಂದು ನಿಲ್ಲುತ್ತಿತ್ತಿದ್ದವು ಪುತ್ತೂರು ಧರ್ಮಸ್ಥಳ ಮುಂತಾದ ಕಡೆಗಲ್ಲದೆ ಹಾಸನ ಬೆಂಗಳೂರಿಗೂ ಇಲ್ಲಿಂದಲೇ ಹೊರಡುತ್ತಿತ್ತು.  1980 ರಲ್ಲಿ ಬೆಂಗಳೂರಿಗೆ ನಾನು ನಲ್ವತ್ತು ರೂಪಾಯಿ ಟಿಕೇಟ್ ಮುಂಗಡ ಖರೀದಿಸಿ ರಾತ್ರಿಯ ಬಸ್ಸಿಗೆ ಇಲ್ಲಿಂದಲೇ ಹತ್ತಿದ್ದೆ! ಆನಂತರ ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣ ಬಿಜೈಯ ಕಾವೂರು ಕ್ರಾಸ್ ರಸ್ತೆಯ ಗದ್ದೆ ಬಯಲಿಗೆ ವರ್ಗಾವಣೆಯಾಯಿತು.  ನಮ್ಮ ಹಂಪನಕಟ್ಟೆ ಇಕ್ಕಟ್ಟು ಅಂತ ಅನ್ನಿಸಲಿಕ್ಕೆ ತೊಡಗಿದ್ದು ಆವಾಗ. ಆದರೂ ಕೆ ಎಸ್ ರಾವ್ ರಸ್ತೆಯಿಂದ ಒಳಗೆ ಬಂದು ಬಸ್ ಸ್ಟಾಂಡ್ ಗೆ ಒಂದು ಸುತ್ತು ಬಂದು  ಆ ಇಕ್ಕಟ್ಟಿನಲ್ಲಿ ನುಗ್ಗಿ ಜನ ಹತ್ತಿಸಿಕೊಳ್ಳುತ್ತಿದ್ದ ಖಾಸಗಿ ಬಸ್ಸುಗಳ ಹೊಂದಾಣಿಕೆಯೇ ಬೇರೆ.  ಅದರ ನಡುವೆ ಆರೆಂಜ್ ಮುಸಂಬಿ ಮಾರಾಟ ಮಾಡುವ ಮಾರಾಟಗಾರರು ಬೆದ್ರ ಕಾರ್ಕಳ ಕೂಗಿ ಕರೆವ ಏಜಂಟ್ ಗಳು ಅಬ್ಬ ಬಾಲ್ಯದಲ್ಲಿ ಹಂಪನಕಟ್ಟೆಯಷ್ಟು ದೊಡ್ಡ ನಗರ ನೋಡಿಯೇ ತಿಳಿಯದು. 

        ಬಸ್ ಸ್ಟಾಂಡ್ ಕಟ್ಟಡದಲ್ಲಿದ್ದ ನಿತ್ಯಾನಂದ ಗ್ರಂಥಾಲಯ, ಬಹುಶಃ ನಾನು ಕಂಡ ವೈವಿಧ್ಯಮಯ ಪುಸ್ತಕ ಪೇಪರ್ ಅಂಗಡಿ ಎಂದರೆ ಇದುವೆ. ಇರುವ ಒಂದಿಷ್ಟು ಜಾಗದಲ್ಲಿ ಅಲ್ಲಿ ಸಿಗದ ಪುಸ್ತವೇ ಇರಲಿಲ್ಲ. ಭಜನೆ ಪುಸ್ತಕ ನಾಟಕ ಪುಸ್ತಕ ಚಿತ್ರಗೀತೆ ಹಲವು ಭಾಷೆಯ ಪತ್ರಿಕೆಗಳು ಹೀಗೆ ವೈವಿಧ್ಯಮಯ ಜಗತ್ತು ಆರಡಿ ಜಾಗದ ಜಗಲಿಯಲ್ಲಿತ್ತು.  ಕೆಲವುದರ ಹಿಂದೆ ನಿತ್ಯಾನಂದ ಗ್ರಂಥಾಲಯದ ಹೆಸರು ಇರುತ್ತಿತ್ತು. ಬಹುಶಃ ಈಗಲು ಹತ್ತಿರದ ಇನ್ನೊಂದು ಕಟ್ಟಡದಲ್ಲಿದೆ.  ಲಾಟರಿ ಅಂಗಡಿ ಹಣ್ಣಿನ ಅಂಗಡಿ ಒಂದೆಡೆಯಾದರೆ ಪ್ರಸಿದ್ಧವಾದ ಬಸ್ ಸ್ಟಾಂಡ್ ಕ್ಯಾಂಟೀನ್, ನಂತರ ಇದು ಮುಚ್ಚಿ ಹೋಗಿ ಆನಂತರ ಚಿಕ್ಕ ಕ್ಯಾಂಟೀನ್ ತೆರೆದಿತ್ತು. ಅಲ್ಲಿ ಸಾಯಂಕಾಲ ಸಿಗುತ್ತಿದ್ದ ರವಾ ದೋಸೆ ಪುಂಡಿಗಸಿಯ ಘಮ್ಮೆನ್ನುವ ಪರಿಮಳ ಬಸ್ಸಿನಲ್ಲಿದ್ದವರನ್ನು ಕೆಳಗಿಳಿವಂತೆ ಮಾಡುತ್ತಿದ್ದವು.  ದೂರದೂರಿಗೆ ಇಲ್ಲಿ ಕಾದು ಕುಳಿತು ಕತ್ತು ಉದ್ದ ಮಾಡಿ ಬರುವ ಬಸ್ಸನ್ನು ನೋಡುತ್ತಿದ್ದ ನೆನಪು. ಬಸ್ ಬಂದ ಕೂಡಲೆ ಸೀಟು ಹಿಡಿವ ಗಡಿಬಿಡಿ....ಬಸ್ಸು ಸಮಯವಾದಕೂಡಲೇ ಗದರಿ ಡಬ ಡಬ ಬಡಿದು ಹೊರಡಿಸುತ್ತಿದ್ದ ಎಜಂಟ್ ಗಳು ಕೆಲವರಾದರೆ ಲಗೇಜ್ ಸಹಿತ ಪ್ರಯಾಣಿಕರನ್ನು ಅನಾಮತ್ತಾಗಿ ಎತ್ತಿ ಹಾಕುವಂತೆ ಹೊರಡುವ ಬಸ್ಸ್ ಗೆ ತುರುಕುವ ಕಂಡಕ್ಟರ್ ಗಳು, ಛೇ ಹಂಪನ್ ಕಟ್ಟ ಒಂದು ಅದ್ಭುತ ರಮ್ಯ ಲೋಕ. 


    ಕಾಲ ಸರಿದಂತೆ ದೂರದೂರಿನಿಂದ ಹೆಚ್ಚು ಹೆಚ್ಚು ಬಸ್ಸುಗಳು ಬರುತ್ತಿದ್ದವು. ಬೇರೆಲ್ಲೂ ಕಾಣ ಸಿಗದ ಖಾಸಗೀ ಬಸ್ಸುಗಳು ಸಮಯ ಪಾಲನೆಯಲ್ಲಿ ಸೂರ್ಯನನ್ನೇ ಮೀರಿಸಿ ಚಟುವಟಿಕೆಯಲ್ಲಿರುತ್ತಿತ್ತು. ಒಂದೆರಡು ನಿಮಿಷವನ್ನೂ ಸೆಕೆಂಡು ಮುಳ್ಳಿನಲ್ಲಿ ಲೆಕ್ಕ ಹಾಕುವ ಕಂಡಕ್ಟರ್ ಗಳು ಬೇರೆಲ್ಲೂ ಕಾಣುವುದಕ್ಕೆ ಸಾಧ್ಯವಿಲ್ಲ. ನಮ್ಮೂರು ಪೈವಳಿಕೆಯಿಂದ ಇಲ್ಲಿಗೆ ಬರಬೇಕೆಂದರೆ ಮೊದಲು ಮೂರು ಬಸ್ ಬದಲಾವಣೆ ಮಾಡಬೇಕಿತ್ತು. ಪೈವಳಿಕೆಯಿಂದ ಉಪ್ಪಳ, ಉಪ್ಪಳದಿಂದ ತಲಪಾಡಿ, ತಲಪಾಡಿಯಿಂದ ಮಂಗಳೂರು. ಕ್ರಮೇಣ ನಮ್ಮ ಊರು ಬೆಳೆಯಿತು ನೇರ ಬಸ್ಸ್ ಆಯಿತು. ಕಂದು ಬಣ್ಣದ ಜನಪ್ರಿಯ ಬಸ್.......ವಿನಯದುರ್ಗ ಬಸ್, ಮನೆಯ ಬಳಿಯಿಂದ ಹತ್ತಿ ಕುಳಿತರೆ ಇದೇ ಹಂಪನ್ ಕಟ್ಟೆಯಲ್ಲಿ ಇಳಿಯುತ್ತಿದ್ದೆವು. ಜನಪ್ರಿಯ ಬಸ್ ನಲ್ಲಿ ದೇಖಾ ಹೈ ಪೆಹೆಲೀ ಬಾರ್ ಅಂತ ಸಾಜನ್ ಸಿನಿಮಾಹಾಡು ದೊಡ್ಡದಾಗಿ ಹಾಕಿ ನೆತ್ರಾವತಿ ಸಂಕದ ಮೇಲೆ ಹೋಗುತ್ತಿದ್ದ ಮಜವೇ ಬೇಎ. ಹೀಗೆ ಬಾಯಾರು ಪೈವಳಿಕೆ  ಎಂಬ ಊರಿನ ಹೆಸರು ನಮ್ಮ ಹಂಪನ ಕಟ್ಟೆಯಲ್ಲಿ ಮೊಳಗುವುದಕ್ಕೆ ಆರಂಭವಾಯಿತು. ಕೊಪ್ಪ ಶ್ರಿಂಗೇರಿ ಶಿವಮೊಗ್ಗಕ್ಕೆ ರಾತ್ರಿ ಬಸ್ ನಲ್ಲಿ ಸಂಚರಿಸಬೇಕಾದರೆ ರಾತ್ರಿ ಅಲ್ಲಿ ಕಾಯುತ್ತಿದ್ದ ದಿನಗಳು ಆ ಸಂಭ್ರಮದ ನೆನಪುಗಳನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಬಾಲ್ಯದಿಂದಲೇ ಲೋಕಜ್ಞಾನವನ್ನು ಒದಗಿಸಿದ ಹಂಪನಕಟ್ಟೆ ನಿಲ್ದಾಣ ಈಗ ಒಂದರ್ಥದಲ್ಲಿ ಪಳೆಯುಳಿಕೆಯಾಗುತ್ತಿದೆ.  ಈಗಲೂ ಇಲ್ಲಿ ಸಂಚರಿಸುವಾಗ ನಾವು ಓಡಾಡಿದ ಜಾಗ ನೆನಪಾಗದೇ ಇರುವುದಿಲ್ಲ. ಹಾಗೆ ಒಂದರೆ ಘಳಿಗೆ ಅಲ್ಲಿ ಸುತ್ತಾಡಿ ನೆನಪುಗಳನ್ನು ಮೆಲುಕು ಹಾಕುವುದರಲ್ಲಿ ಏನೋ ಒಂದು ಸುಖವಿದೆ.  

    ಐದು ದಶಕದ ಹಿಂದಿನ ಹಂಪನ ಕಟ್ಟೆ ಇಂದು ಹಳೆಯದಾಗಿ ಇನ್ನೇನೊ ಹೊಸತನ್ನು ತುಂಬುವ ಆತುರದಲ್ಲಿದೆ. ಹೊಸತಾಗಿ ಮೂರಂತಸ್ತಿನ  ವಾಹನ ತಂಗುದಾಣ ಬರುವುದಕ್ಕಿದೆ. ಅಲ್ಲಿಗೆ ಹಳೆಯ ಬಸ್ ನಿಲ್ದಾಣ ಹೆಸರು ಸಂಪೂರ್ಣ ಮಾಯವಾಗಲಿದೆ. ಎನ್ನೇನೋ ಹಳೆಯದಾಗುವುದಕ್ಕೆ ಹೊಸದರ ಆಗಮನವಾಗುತ್ತದೆ.   ಏನಿದ್ದರೂ ನಮ್ಮ ಹಂಪನಕಟ್ಟೆ ನಮಗದು ಅಭಿಮಾನ. ಆ ನೆನಪುಗಳು ಮಧುರ.



No comments:

Post a Comment