Sunday, October 29, 2023

ವೈದಿಕ ಭೋಜನ

  ಕಳೆದ ವಾರ ಜಯನಗರದಿಂದ ಮೆಟ್ರೋದಲ್ಲಿ ಬರುವಾಗ ಬಸವನಗುಡಿಯಿಂದ ಒಬ್ಬರು ವೃದ್ದರು ಹತ್ತಿದವರು ನನ್ನ ಬಳಿಯೇ ಕುಳಿತರು. ನೋಡಿದರೆ ಬ್ರಾಹ್ಮಣ ಎಂಬುದರಲ್ಲಿ ಅನುಮಾನವಿಲ್ಲ. ವೃದ್ಧರಾದರೂ ಶರೀರದಲ್ಲಿ ಬಹಳ ಕಾಠಿಣ್ಯ ವಿತ್ತು. ಒಂದು ರೀತಿಯ ದೃಢತೆ ಇತ್ತು. ಬಿಳಿ ಪಂಚೆ ಒಂದು ಶಲ್ಯ ಮುಸುಕಾದ ಒಂದು ಶರ್ಟು ಕೈಯಲ್ಲಿ ಒಂದು ಚಿಕ್ಕ ಚೀಲ ಇತ್ತು. ಬಳಿಯಲ್ಲಿ ಕುಳಿತ ನನ್ನಲ್ಲಿ ಮಾತನಾಡುವುದಕ್ಕೆ ತೊಡಗಿದರು. ಅದು ಪಿತೃ ಪಕ್ಷ, ಅದೇ ಕಾರ್ಯಕ್ರಮಕ್ಕೆ ಹೋಗಿ ಬರುತ್ತಿದ್ದರು. ಮೊದಲೆಲ್ಲ ಇಂತಹ ಕಾರ್ಯಕ್ರಮಕ್ಕೆ ಹೋದವರು ಒಂದು ರೀತಿಯ ತಾತ್ಸಾರವನ್ನು ಅನುಭವಿಸುವುದನ್ನು ಕಣ್ಣಾರೆ ಕಂಡಿದ್ದೇನೆ. ಮನೆಯ ಕತ್ತಲೆಯಲ್ಲಿ ಊಟ ಮಾಡಿ ಅಲ್ಲಿಂದಲೇ ಎಲ್ಲೋ ಕರಗಿ ಕಣ್ಮರೆಯಾಗುತ್ತಿದ್ದರು. ಒಂದು ರೀತಿಯಲ್ಲಿ ಮುಖ ತೋರಿಸುತ್ತಿರಲಿಲ್ಲ.  ಆದರೆ ಈಗ ಕಾಲ ಬದಲಾಗಿದೆ, ಅಂದರೆ ಗೌರವ ಸಿಗುತ್ತದೆ ಎಂದಲ್ಲ, ಹೀಗೆ ಹೋಗುವವರ ಸಂಖ್ಯೆ ಬಹಳಷ್ಟು ಲುಪ್ತವಾಗಿ ಇಲ್ಲವೇ ಇಲ್ಲ ಎನ್ನುವಂತಹ ಸ್ಥಿತಿ.  ಈಗ ಶಾಸ್ತ್ರಕ್ಕೆ ಏನೋ ಒಂದು ಪರಿಹಾರವನ್ನು ಕಂಡುಕೊಂಡು ಸೀಯಾಳ ಎಲೆ ವಸ್ತ್ರ ಇಟ್ಟು ಬ್ರಾಹ್ಮಣ ಆವಾಹನೆಯಾಗಿಬಿಡುತ್ತದೆ. 

  ನಮ್ಮ ಬಾಲ್ಯದಲ್ಲಿ ಯಾವುದಾದರೇನು ಹೊಟ್ಟೆ ತುಂಬ ಊಟ ಸಿಗುತ್ತದಲ್ಲಾ ಎಂದು ಮೈಲು ಗಟ್ಟಲೆ  ಇಂತಹ ಕಾರ್ಯಕ್ರಮಕ್ಕೆ ನಡೆದು ಹೋಗುತ್ತಿದ್ದದ್ದು ನೆನಪಾಗುತ್ತದೆ. ಅದೆಷ್ಟು ಸಲ ಗುಂಪೆ ಗುಡ್ಡೆ ಹತ್ತಿ ಇಳಿದಿದ್ದೇವೋ ಗೊತ್ತಿಲ್ಲ. ಬೆಳಗ್ಗೆ ಮನೆಯಲ್ಲಿ ಇದ್ದರೆ ಉಂಟು ಇಲ್ಲದಿದ್ದರೆ ಇಲ್ಲ ಎಂದು ಸಿಕ್ಕಿದ್ದು ತಿಂದು ನಡೆಯುವುದಕ್ಕೆ ತೊಡಗಿದರೆ ಮೈಲಿ ನಡೆದು ವೈದಿಕ ಕ್ರಿಯೆ ನಡೆಯುವಲ್ಲಿಗೆ ತಲಪುವಾಗ ಮಧ್ಯಾಹ್ನವಾಗುತ್ತಿತ್ತು. ನಾವು ಬಾಲಕರು. ಯಾರ ಪರಿಚಯವೂ ಇರುತ್ತಿರಲಿಲ್ಲ. ಸಮಯವಾದಾಗ ಎಲ್ಲರ ಜೊತೆ ಊಟಕ್ಕೆ ಕುಳಿತುಬಿಡುವುದು.  ಯಾರ  ಪರಿಚಯ ಇಲ್ಲದಿದ್ದರೆ ಏನು, ಹೊಟ್ಟೆ ತುಂಬ ಊಟದ ಪರಿಚಯವಂತೂ ಆಗಿಬಿಡುತ್ತಿತ್ತು. ಅದೂ ....ಸಾಕು ಸಾಕು ಎನ್ನುವಷ್ಟು ಊಟ. ಮತ್ತೆ ಕೈಯಲ್ಲಿ ಒಂದಷ್ಟು ಚಿಲ್ಲರೆ ನಾಣ್ಯಗಳು. ನಾವೆಲ್ಲಆ ಪ್ರಾಯದಲ್ಲಿ  ಕೈಯಲ್ಲಿ ನಮ್ಮದೇ ಆದ ಕಾಸು ಕಂಡವರೇ ಅಲ್ಲ. ಒಂದು ವೇಳೆ ಕೈಯಲ್ಲಿ ಹಣ ಇದ್ದರೆ ಅದು ಚಿಲ್ಲರೆ ಕಾಸಾದರೂ ಹಿರಿಯರ ತನಿಖೆ ಇರುತ್ತಿತ್ತು.  ಸರಕಾರ ಆದಾಯ ತೆರಿಗೆ ಪರೀಕ್ಷೆ ಮಾಡಿದ ಹಾಗೆ.  ಈ ಕಾಸು ಮನೆಗೆ ಬಂದು ಹಳೆಯ ಡಬ್ಬದಲ್ಲಿ ತೆಗೆದಿಟ್ಟು ದಿನಕ್ಕೆ ಹತ್ತು ಬಾರಿ ಎಣಿಕೆ ಮಾಡುತ್ತಿದ್ದೆವು. ಆದರೆ ಮೊದಲು ನಮಗೆ ಹೊಟ್ಟೆ ತುಂಬ ಆಹಾರವೇ ಪ್ರಧಾನವಾಗಿತ್ತು. ಆದರೂ ಎಡಕೈಗೆ ಸಿಗುವ ಚಿಕ್ಕಾಸು ನಾಣ್ಯ ಬಹಳ ಖುಷಿಯನ್ನುಕೊಡುತ್ತಿತ್ತು.  ಇತ್ತೀಚೆ ಯಾರದೋ ವೈದಿಕ ಕಾರ್ಯಕ್ರಮಕ್ಕೆ ಯಾವುದೋ ಕೈವಲ್ಯ ಧಾಮಕ್ಕೆ ಹೋಗಿದ್ದೆ. ಊಟ ಮಾಡಿ ಹೊರಗೆ ಬರುವಾಗ ಯಾರೋ ಒಬ್ಬರು ಹಲವರು  ಕೈ ಒಡ್ಡುತ್ತಿದ್ದರು. ಇಲ್ಲಿ ಊಟಕ್ಕಿಂತಲೂ ಕಾಸು ಪ್ರಧಾನವಾದಂತೆ ಅನಿಸಿತ್ತು. ಕ್ರಿಯಾ ಭಾಗದಲ್ಲಿ ಅಷ್ಟೋ ಇಷ್ಟೊ ದಾನ  ಸಿಕ್ಕಿದರೂ ಹೀಗೆ ಭಿಕ್ಷೆ ಬೇಡುವುದು ಕಾಣುವಾಗ ಭಿಕ್ಷೆ ದಾನವಾಗುವುದು ಹೇಗೆ ಎಂಬ ಯೋಚನೆ ಬರುತ್ತದೆ. 

ವೃದ್ದರಲ್ಲಿ ನನ್ನ ಅನುಭವ ಹೇಳಿದೆ. ಕಾಲ ಬದಲಾಗಿದೆ ಎನ್ನುವುದಕ್ಕಿಂತಲೂ ಮನುಷ್ಯ ಬದಲಾಗಿದ್ದಾನೆ ಎನ್ನುವುದು ಸರಿ. ಅವರು ಹೇಳಿದರು, ಬದಲಾಗಬೇಕು, ಎಲ್ಲವೂ ಅಂದರೆ ಎಲ್ಲವೂ  ಮೊತ್ತ ಬದಲಾಗಬೇಕು, ಯಾಕೆಂದರೆ ಈಗ ಉಳಿದಿರುವಂತಹುದು ಒಂದೂ ಇಲ್ಲ. ಎಲ್ಲವನ್ನು ನಾವು  ಕಳೆದುಕೊಂಡಾಗಿದೆ.  ಬದಲಾಗಬೇಕು ಎಂಬುದೇನೋ ಸತ್ಯ . ಆದರೆ ನಾವು ಹೇಗೆ ಬದಲಾಗಬೇಕು ಎಂಬುದೇ ಮರೆತು ಹೋಗಿದೆ. ಸ್ಮರಣೆಗೆ ಬರಲಾದಷ್ಟು ಬದಲಾಗಿ ಹೋಗಿದ್ದೇವೆ. ಮೊದಲು ಯಾವುದಾದರೇನು ಊಟ ಎಂದರೆ ಸಾಕು ಎಂದುಕೊಂಡಿದ್ದರೆ ಈಗ ಊಟದಲ್ಲೂ ಆಯ್ಕೆ ಮಾಡುತ್ತಿದ್ದೇವೆ. ವೈದಿಕವೋ ತೀರ ಹತ್ತಿರದ ಕುಟುಂಬದೊಳಗಿದ್ದರೆ ಮಾತ್ರ ಹೋಗುತ್ತಿದ್ದೇವೆ. ವಿಚಿತ್ರವೆಂದರೆ ಊಟದ ವೈವಿಧ್ಯತೆಯೋ ಹಸಿವಿನ ವೆತ್ಯಾಸವೋ ಅರಿವಾಗುವುದಿಲ್ಲ. 

No comments:

Post a Comment