Tuesday, April 16, 2024

ಭಾಷೆ ಒಂದು ಸಂಸ್ಕಾರ

"ಭಾಷೆ ಉಳಿಯಬೇಕು. ಅದರೆ ಅದು ಹೇಗೆ ಉಳಿಯಬೇಕು?"

ಪ್ರತಿ ಬಾರಿ ಏನಾದರೊಂದು ವಿಚಾರವನ್ನು ಪ್ರಸ್ತಾಪಿಸಿ ಚರ್ಚೆಮಾಡಿ ಅಭಿಪ್ರಾಯ ಕೇಳುವುದು ನನ್ನ ಮಗಳ ಒಂದು ಹವ್ಯಾಸ. ಆಕೆಗೆ ಅನುಭವಕ್ಕೆ ಬರುವ ವಿಚಾರ ವೈವಿಧ್ಯಗಳು ತಂದು ನನ್ನಲ್ಲಿ ವಿನಿಮಯ ಮಾಡುತ್ತಿರುತ್ತಾಳೆ.   ಹಲವು ಸಲ ಗಂಭೀರ ವಿಚಾರಗಳು ನಮ್ಮೊಳಗೆ ಚರ್ಚೆಯಾಗುತ್ತವೆ. ಈ ಬಾರಿ ಆಕೆಯ ಕಾಲೇಜಲ್ಲಿ ನಡೆದ ಒಂದು ಘಟನೆಯ ಬಗ್ಗೆ ಚರ್ಚೆ. ಯಾರೋ ಒಬ್ಬರು ಹಿಂದಿ ಭಾಷೆಯವರು ಬಂದಿದ್ದರು. ಅವರು ಬಂದು ಮೂರು ವರ್ಷವಾದರೂ ಕನ್ನಡ ಭಾಷೆಯಲ್ಲಿ ಮಾತನಾಡುತ್ತಿರಲಿಲ್ಲ. ಆಗ ಒಬ್ಬಾಕೆ ಅವರಲ್ಲಿ ಕೇಳಿದಳಂತೆ ಕನ್ನಡ ರಾಜ್ಯದಲ್ಲಿ ಕನ್ನಡಕ್ಕೆ ಆದ್ಯತೆ. ಯಾಕೆ ಕನ್ನಡ ಕಲಿತಿಲ್ಲ? ಕರ್ನಾಟಕದಲ್ಲಿದ್ದರೆ ಕನ್ನಡ ಕಲಿಯಬೇಕು? ಇಲ್ಲಿ ಬಂದು ಹಿಂದಿ ಮಾತನಾಡುವ ಬದಲು ಕನ್ನಡವನ್ನು ಕಲಿತು ಮಾತನಾಡಬೇಕು. ಈಬಾರಿ ಇದರ ಬಗ್ಗೆ ನನ್ನಲ್ಲಿ ಅಭಿಪ್ರಾಯ ಕೇಳಿದಳು. ನನಗೂ ಇದರಲ್ಲಿ ತಪ್ಪೇನು ಕಾಣಲಿಲ್ಲ.  ಆದರೆ ಚಿಂತನೆ ಯಾವಾಗಲೂ ಸೀಮಿತವಾಗಿರಬಾರದು. ಚಿಂತನೆಯ ದೃಷ್ಟಿ ವಿಶಾಲವಾಗಿರಬೇಕು. ಇದು ನನ್ನ ಅಭಿಮತ. ಪ್ರತಿಬಾರಿಯು ಹಲವು ವಿಚಾರಗಳಲ್ಲಿ ವಿಷದವಾಗಿ ನನ್ನೊಡ ಪಾಟ್ ಕ್ಯಾಶ್ ಮಾಡುವ ಮಗಳಿಗೆ ನಾನು ಏನು ಹೇಳಬಲ್ಲೆ ಎಂಬ ಕುತೂಹಲವಿತ್ತು. ಆ ಹುಡುಗಿ ಹೇಳಿದ ಮಾತು  ಬಹಳ ನ್ಯಾಯವಾದ ಮಾತು. ಕನ್ನಡನಾಡಲ್ಲಿ ಕನ್ನಡವನ್ನು ಕಲಿತು ಮಾತನಾಡಬೇಕು. ಅದು ನಾಡಿಗೆ ಭೂಮಿಯ ಸಂಸ್ಕೃತಿಗೆ ಸಲ್ಲಿಸುವ ಗೌರವ.  ಚಿಂತನೆಯನ್ನು ಮತ್ತಷ್ಟು ವಿಶಾಲಗೊಳಿಸಿದರೆ, ನಾನು ಅದನ್ನೇ ಆಕೆಯಲ್ಲಿ ಹೇಳಿದೆ. ಭಾಷೆ ಉಳಿಯಬೇಕು. ಅದರೆ ಅದು ಹೇಗೆ ಉಳಿಯಬೇಕು ಯಾವ ಬಗೆಯಲ್ಲಿರಬೇಕು? ಎನ್ನುವುದು ಅಷ್ಟೇ ಮುಖ್ಯವಾಗುತ್ತದೆ.

  ಹಿಂದಿಯವರು ಒಂದುವೇಳೆ ಕನ್ನಡ ಕಲಿಯುವ ಮನಸ್ಸು ಮಾಡಿದರೆ ಅವರು ಕಾಣುವ ಕನ್ನಡ ಹೇಗಿರಬೇಕು ಎನ್ನುವುದು ಅಷ್ಟೇ ಪ್ರಾಮುಖ್ಯತೆಯನ್ನು ಕೊಡುತ್ತದೆ.  ಆಕೆಯ ಆವೇಶ ಭರಿತವಾದ ಗಂಭೀರವಾದಕ್ಕೆ ಎಲ್ಲರೂ ಚಪ್ಪಾಳೆ ಹೊಡೆಯುತ್ತಾರೆ. ಆದರೆ ಉಳಿದಂತೆ  ಭಾಷೆಯ ಬಗ್ಗೆ ಚಿಂತಿಸುವವರು ಕಡಿಮೆ.  ವಾಸ್ತವದ ಸ್ಥಿತಿ ಹೇಗಿರುತ್ತದೆ ಎಂದರೆ ಒಂದುವೇಳೆ ಆಕೆಯಲ್ಲೇ ಕೇಳಿದರೆ,  ಕನ್ನಡದ ಸಾಹಿತಿಗಳ ಹೆಸರು, ಕವಿಗಳ ಹೆಸರು. ಹೋಗಲಿ ಕನ್ನಡದ ಅಕ್ಷರಮಾಲೆಯನ್ನಾದರೂ ಹೇಳುವಷ್ಟು ಜ್ಞಾನ ಇರಬಹುದೇ? ನಂಬುವುದು ಕಷ್ಟ. ಸಾಹಿತಿ ಕವಿಗಳ ಹೆಸರಿಗಿಂತ ಅವರು ಬರೆದ ಪುಸ್ತಕಗಳಿಗಿಂತ ಸಿನಿಮಾ ನಟ ನಟಿಯರ ಬಗ್ಗೆ ಅವರ ಸಿನಿಮಾಗಳ ಬಗ್ಗೆ ತಿಳಿದಿರುತ್ತದೆ. ಬಾಯಾರಿದಾಗ ನೀರು ಕುಡಿಯಬೇಕು ಹೌದು. ನಾವು ಕುಡಿಯುವ ನೀರು ಪರಿಶುದ್ದವಾಗಿರಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. 

ಭಾಷೆ ಎಂಬುದು ಪರಸ್ಪರ ಸಂವಹನಕ್ಕೆ ಇರುವ ಒಂದು ಮಾಧ್ಯಮ. ಮನುಷ್ಯ ಮನುಷ್ಯನದ್ದು ಜೀವ ಜೀವಗಳ ಸಂಸ್ಕಾರ ಅರಿವಿಗೆ ಬರುವುದೇ ಭಾಷೆಗಳಿಂದ. ಅದು ಯಾವ ಭಾಷೆಯೂ ಇರಬಹುದು. ಒಂದು ಶುದ್ದ    ಸಂಸ್ಕಾರ ಒಂದು ಭಾಷೆಯಿಂದ ವ್ಯಕ್ತವಾಗುವಾಗ ಸಂಸ್ಕಾರಕ್ಕೆ ವ್ಯಕ್ತವಾಗುವ ಗೌರವ ಭಾಷೆಗೂ ವ್ಯಕ್ತವಾಗುತ್ತದೆ. ಅದರಂತೆ ಕೆಟ್ಟ ಸಂಸ್ಕಾರಕ್ಕೆ ಭಾಷೆ ಮಾಧ್ಯಮವಾಗುವಾಗ ಅಲ್ಲಿ ಭಾಷೆಗೂ ಸಲ್ಲುವ ಮಾನದಂಡ ಅದೇ ಆಗಿರುತ್ತದೆ. ಒಬ್ಬ ಪ್ರವಚನಕಾರ ಉದಾತ್ತ ತತ್ವಗಳನ್ನು ಭಾಷೆಯ ಮೂಲಕ ಪ್ರವಚಿಸುವಾಗ ಭಾಷೆಗೌರವಿಸುವಂತೆ, ಒಬ್ಬ ಮದ್ಯವ್ಯಸನಿ ಕುಡುಕ ಅದೇ ಭಾಷೆಯಲ್ಲಿ ಆವಾಚ್ಯತೆಯನ್ನು ಪ್ರದರ್ಶಿಸುತ್ತಾನೆ ಎಂದಾದರೆ ಭಾಷೆ ಯಾವ ಮಟ್ಟಕ್ಕೆ ಇಳಿದು ಬಿಡುತ್ತದೆ ಎಂದು ಅರಿವಾಗುತ್ತದೆ.  ಇದು ಒಂದಾದರೆ ಭಾಷೆ ಕೇವಲ ಮಾತುಗಳ ಶಕ್ತಿ, ಅಂದರೆ ವಾಕ್ ಸಾಮಾರ್ಥ್ಯವನ್ನು ಅನುಸರಿಸುತ್ತದೆ. ಹೀಗಿರುವಾಗ ಒಬ್ಬ ಮೂಗನಿಗೆ ಯಾವ ಭಾಷೆಯ ಬಾಂಧವ್ಯ ಒದಗಿ ಬರುತ್ತದೆ? ಆತನ ಸಂವಹನ ಸಲ್ಲಿಸುವ ಮಾತುಗಳು ಯಾವ ಭಾಷೆಯಲ್ಲಾದರೂ ಅದು ಒಂದೇ ಆಗಿರುತ್ತದೆ. ಕನ್ನಡವನ್ನು ಅರ್ಥವಿಸುವಂತೆ, ಅದನ್ನು ಹಿಂದಿಯವನೂ ಅರ್ಥವಿಸಿಕೊಳ್ಳಬಲ್ಲ. ಹಕ್ಕಿಯ ಕಲರವಕ್ಕೆ ಪ್ರಕೃತಿಯ ಸಂವೇದನೆಗಳಿಗೆ  ಯಾವ ಭಾಷೆಯ ಸೀಮೆಯೂ ಇರುವುದಿಲ್ಲ. ಕರ್ನಾಟಕದಲ್ಲಿ ಕೋಗಿಲೆ ಕೂಗಿದಂತೆ ಅಲ್ಲಿ ದೂರದ ಉತ್ತರದಲ್ಲೂ ಕೋಗಿಲೆ ಕೂಗಿಬಿಡುತ್ತದೆ. ಪ್ರಕೃತಿಯ ಸ್ಪಂದನೆಯೂ ಅದೇ ಬಗೆಯಲ್ಲಿರುತ್ತದೆ. ಕೂಗುವ ಕೋಗಿಲೆಗೆ, ಕೈ ಭುಜ ಕುಣಿಸುವ ಮೂಗನಿಗೆ ಇಲ್ಲದ ಭಾಷಾಭೇದ ನಾಲಿಗೆಯಲ್ಲಿ ವಾಕ್ ಶಕ್ತಿಯನ್ನು ಹೊಂದಿರುವವನಿಗೆ ಇರುತ್ತದೆ. ಮಾತನಾಡಬಲ್ಲವನು ಸಾಮರಸ್ಯ ಬಲ್ಲವನಲ್ಲ. 

ಯಾವುದೇ ವಸ್ತುವಿನ ಅಥವಾ ಜೀವಗಳ ಅಸ್ತಿತ್ವ ಇರುವುದು ಅದರ ಬಳಕೆಯಲ್ಲಿ ಮನುಷ್ಯನಾದರೂ ಜೀವದಲ್ಲಿರುವುದಕ್ಕಿಂತಲೂ ತಾನು ಹೇಗಿದ್ದೇ ಎಂಬುದರಲ್ಲಿ ಅಸ್ತಿತ್ವವನ್ನು ಕಾಣುತ್ತಾನೆ. ಹಾಡುವ ಸಂಗೀತ ಒಂದೇ ಆದರೂ ಬೀದಿ ಬದಿಯ ಭಿಕ್ಷುಕನ ಹಾಡಿಗೂ ವೇದಿಕೆಯ ಮೇಲಿನ ಗಾಯಕನ ಗಾಯನಕ್ಕೂ ಅಸ್ತಿತ್ವದಲ್ಲಿ ವೆತ್ಯಾಸವಿರುತ್ತದೆ.  ಭಾಷೆಯೂ ಹಾಗೆ ಅದರ ಉಪಯೋಗದಲ್ಲಿ ಅದರ ಅಸ್ತಿತ್ವ ಇರುತ್ತದೆ. ಲೋಟದಲ್ಲಿ ಹಾಲು ತುಂಬಿಸಿದರೂ ಮದ್ಯ ತುಂಬಿದರೂ ಕೆಲಸ ಒಂದೇ. ತುಂಬಿಸುವುದು. ಅದರಂತೆ ಭಾಷೆ. ಅದು ಪರಿಶುದ್ದವಾಗುವುದು ಅದರ ಬಳಕೆಯಲ್ಲಿ.  ಕನ್ನಡ ಎಷ್ಟು ಪರಿಶುದ್ದವಾಗಿ ಉಳಿದೆ ಎಂಬುದನ್ನು ಆತ್ಮಾವಲೋಕನ ಮಾಡಬೇಕು. ಬೆಂಗಳೂರಿನ ಹಾದಿ ಹೋಕನಲ್ಲಿ ಒಂದು ಸಲ ವಿಳಾಸ ವಿಚಾರಿಸಿ, ಆತ ಹೇಳುವ ವಿಳಾಸ, ಸ್ಟ್ರೈ ಟ್ ಹೋಗಿ, ಡೆಡ್ ಎಂಡಲ್ಲಿ ರೈಟ್ ತೆಗೆಯಿರಿ, ಹೀಗೆ ಕನ್ನಡವೇ ಇಲ್ಲದ ಕನ್ನಡ ಭಾಷೆಯ ಅನುಭವವಾಗುತ್ತದೆ. ಉಪಯೋಗಿಸುವ ಭಾಷೆಯಲ್ಲಿ ಅಲ್ಲೊಂದು ಇಲ್ಲೊಂದು ಕನ್ನಡವಿದ್ದರೆ ಅದು ಕನ್ನಡದ ಜೀವಂತಿಗೆಯ ಲಕ್ಷಣ ಎಂದು ತಿಳಿಯಬೇಕು. ನಮಗರಿವ ಇಂಗ್ಲೀಷ್  ಸಾಹೇಬನ ಭಾಷೆ ನಮಗೆ ಸುಲಭವಾಗಿ ಇಷ್ಟವಾಗುತ್ತದೆ. ಇಲ್ಲಿ ಇಂಗ್ಲೀಷ್ ಮಾತನಾಡಿದರೆ ತಪ್ಪಲ್ಲ. ಬದಲಿಗೆ ಹಿಂದಿಯೋ ತಮಿಳೋ ಮಲಯಾಳವೋ ಅಪ್ಪಟ ಭಾರತೀಯ ಭಾಷೆ  ಮಾತನಾಡಿದರೆ ಅಲ್ಲಿ ಭಾಷಾಭಿಮಾನದ ಪಾಠ ಎದುರಾಗುತ್ತದೆ.  ಇಂಗ್ಲೀಷ್ ಬೇಕಾಗುವವನಿಗೆ ನಮ್ಮದೆ ಹಿಂದಿ ತಮಿಳು ಯಾಕೆ ಬೇಡವಾಗುತ್ತದೆ? ನಿಜವಾಗಿಯೂ ನಮ್ಮಲ್ಲಿ ಆತ್ಮಾಭಿಮಾನ ಜಾಗೃತವಾಗಬೇಕಾಗಿರುವುದು ನಮ್ಮ ಸಾಹೋದರ್ಯದಲ್ಲಿ. ನಮ್ಮ ಒಡ ಹುಟ್ಟಿದವನ ಮಾತು ನಾವು ಕೇಳಲಾರೆವು. ಆತನನ್ನು ನಮ್ಮವ ಎಂದು ತಿಳಿಯಲಾರೆವು,  ಬದಲಿಗೆ ಯಾರೋ ಬೀದಿ ಹೋಕ, ತೃತಿಯ ಪ್ರಜೆ ನಮ್ಮ ಬಂಧುವಾಗುತ್ತಾನೆ. 

ಕನ್ನಡ ಭಾಷೆಯ ಪ್ರತಿನಿಧಿಗಳು ಎಂದು ಸ್ವತಃ ಕರೆಸಲ್ಪಡುವ ಸಿನಿಮಾ ನಟ ನಟಿಯರು ಆಗಾಗ ತಮ್ಮ ಅಸ್ತಿತ್ವ ಪ್ರದರ್ಶನಕ್ಕೆ ಮಾಧ್ಯಮಗಳ ಎದುರು ಬಂದು ಬಿಡುತ್ತಾರೆ. ತಮ್ಮ ಸಿನಿಮಾಗಳಲ್ಲಿ ಉದ್ದುದ್ದ ಭಾಷಾಭಿಮಾನವನ್ನು ತೋರಿಸುವ  ಇವರು ಅಭಿಮಾನಿಗಳ ಕರತಾಡನ ಗಿಟ್ಟಿಸುತ್ತಾರೆ. ಕರತಾಡನದೋಂದಿಗೆ ಅವರ ಸಿನಿಮಾಗಳೂ ಓಡುತ್ತವೆ, ಒಂದಷ್ಟು ಸಂಪಾದನೆಯೂ ಆಗಿಬಿಡುತ್ತದೆ. ಅದೇ ನಟ ನಟಿಯರು ಹೀಗೆ ಮಾಧ್ಯಮಗಳ ಎದುರು ಬಂದು ಮಾತನಾಡುವಾಗ ಅಲ್ಲಿ ಕನ್ನಡಕ್ಕಿಂತ ಹೆಚ್ಚು  ಆಂಗ್ಲ ಭಾಷೆ ಬಳಕೆಯಾಗುತ್ತದೆ. ಯಾಕೆಂದರೆ ಅವರಿಗೆ ಬರುವ ಕನ್ನಡ ಅಷ್ಟೇ. ಸಿನಿಮಾದಲ್ಲಿ ಅವರಿಗೆ ಸಹಾಯಕ್ಕೆ ಬರುವ ನಿರ್ದೇಶಕ, ಸಂಭಾಷಣೆ ಬರಹಗಾರ ಇಲ್ಲಿ ಸಹಾಯಕ್ಕೆ ಬರುವುದಿಲ್ಲ. ಹಾಗಾಗಿ ಸಿನಿಮಾದಲ್ಲಿ ವ್ಯಕ್ತವಾಗುವ ಭಾಷಾಭಿಮಾನದ ಕಾರಣ ವ್ಯಕ್ತವಾಗುತ್ತದೆ.  ಇತ್ತೀಚೆಗೆ ಹೋರಾಟಗಾರರೊಬ್ಬರು ಅನ್ಯ ಭಾಷೆಯವರಿಗೆ ಬೈಯುವ ಮಾತುಗಳನ್ನು ಕೇಳುವಾಗ ನಿಜಕ್ಕೂ ಆತಂಕವಾಗಿದ್ದು ಇದೂ ನಮ್ಮ ಕನ್ನಡ ಭಾಷೆಯಲ್ಲಿದೆಯಾ ...ಇದ್ದರೂ ಅದು ಹೀಗೂ ಬಹಿರಂಗ ಪ್ರದರ್ಶನಕ್ಕೆ ಬಂದು ವೀರಾವೇಶಕ್ಕೆ ಪ್ರತೀಕವಾಗಬೇಕಾ? ಹೋರಾಟ ಅತ್ಯವಶ್ಯ ಆದರೆ ಆ ಮೂಲಕ ಹೊರಗೆ ದರ್ಶಿಸಲ್ಪಡುವ ಸಂಸ್ಕಾರ ಭಾಷೆಯ ಗೌರವವನ್ನು ಹೇಗೆ ಅವನತಿಗೆ ತಳ್ಳಿಬಿಡುತ್ತದೆ ಎಂದು  ಯೋಚಿಸುವುದಿಲ್ಲ. ಕನ್ನಡ ಉಳಿಯಬೇಕು ನಿಜ. ಆದರೆ ಮುಂದಿನ ತಲೆಮಾರಿಗೆ ನಾವು ಎಂತಹ ಕನ್ನಡ ಭಾಷೆಯನ್ನು ಉಳಿಸಿಬಿಡುತ್ತೇವೆ ಎಂದರೆ ದಿಗಿಲಾಗಿಬಿಡುತ್ತದೆ. 

ಇದು ಕೇವಲ ಕನ್ನಡಕ್ಕೆ ಸೀಮಿತವಾಗಿಲ್ಲ. ಪ್ರತಿಯೊಂದು ಭಾಷೆಗೂ ಇದು ಅನ್ವಯವಾಗಬಹುದು. 


No comments:

Post a Comment