Monday, December 30, 2024

ಬಾಲ್ಯದ ಕಲ್ಲಂಗಡಿಹಣ್ಣು

ಹಸಿವು ಎಂದಾಕ್ಷಣ ನನಗೆ ಮೊದಲು ನೆನಪಾಗುವುದು ನನ್ನ ಬಾಲ್ಯ.  ಮನೆಯಲ್ಲಿ ತಿನ್ನುವ ಮತ್ತು ಗಂಜಿ ಉಪ್ಪು ಮೆಣಸು ಬಿಟ್ಟರೆ ಬೇರೆ ಆಹಾರ ಸಿಗುವುದೇ ಅಪರೂಪ. ಯಾರದೋ ಮನೆಯ ಪೂಜೆ ಶ್ರಾದ್ಧ ಇವುಗಳಷ್ಟೆ ಕರುಳಿನ ಸಾಮಾರ್ಥ್ಯವನ್ನು ಅಳೆಯುವ ಅವಕಾಶವನ್ನು ಒದಗಿಸುತ್ತಿದ್ದವು . ಅಂತಹ ಸಮಯದಲ್ಲಿ ಅಂಗಡಿಯ ತಿಂಡಿಗಳಂತೂ ಎಂದೋ ಕನಸಿನಲ್ಲಿ ಸಿಗುವ ವಿಶೇಷವಾಗಿತ್ತು. ಅಂತಹ ಒಂದು ದಿನ. ನನಗಾಗ ಎಳೆಂಟು ವರ್ಷದ ವಯಸ್ಸಾಗಿರಬಹುದು. ಒಂದು ದಿನ ಯಾವುದೋ ಕೆಲಸಕ್ಕೆ ನನ್ನನ್ನು ಬಾಯಾರು ಪದವಿಗೆ ಅಮ್ಮ ಕಳುಹಿಸಿದ್ದರು. ಆಗ ಕಾಯರ್ ಕಟ್ಟೆಯಿಂದ ಬಾಯಾರು ಪದವಿಗೆ ಹೋಗುವ ಶಂಕರ್ ವಿಠಲ್ ನ ಕಟ್ ಸರ್ವಿಸಿಗೆ ಹೋದರೆ ಪುನಹ ಅದೇ ಬಸ್ಸಿನಲ್ಲಿ ವಾಪಾಸಾಗಬೇಕು. ಕಾಯರ್ ಕಟ್ಟೆಯಿಂದ ಪದವಿಗೆ ಹತ್ತು ಪೈಸೆಯ ಅರ್ಧ ಟಿಕೇಟ್. ಅರ್ಧ ಟಿಕೇಟ್ ಆದರೂ ಕಂಡಕ್ಟರ್ ಕೊಡುವ ಚೀಟಿ ಅರ್ಧ ತುಂಡಾಗಿರಾದೆ ಇಡೀ ಚೀಟಿಯನ್ನೇ ಕಂಡಕ್ಟರ್ ಕೈಗೆ ಇಡುವಾಗ ಇದು ಅರ್ಧ ಟಿಕೇಟ್ ಹೇಗಾಗುತ್ತದೆ ಎಂದು ಅಚ್ಚರಿಯಾಗುತ್ತಿತ್ತು. ಆನಂತರ ಅದರಲ್ಲಿ ಅರ್ಧ ಸೀಟ್ ಅಂತ ಬರೆಯುತ್ತಿದ್ದದ್ದದ್ದು ಗೊತ್ತಿರಲಿಲ್ಲ. ಆಗ ಟಿಕೇಟಿಗೆ  ಕೈಗೆ ಇಪ್ಪತ್ತು ಪೈಸೆಯನ್ನಷ್ಟೇ ಕೊಟ್ಟು ಕಳುಹಿಸುವುದು ವಾಡಿಕೆ. ಬೇರೆ ಏನು ಬೇಕಿದ್ದರೂ ಕೊಂಡುಕೊಳ್ಳುವುದಕ್ಕೆ ಅವಕಾಶವಿಲ್ಲ. 

ಆಗ ಬಾಯಾರು ಪದವಿನಲ್ಲಿ   ಗೋವಿಂದಣ್ಣ  ಶಂಕರ್ ವಿಟ್ಟಲ್ ಟಿಕೆಟ್ ಏಜಂಟ್ ಆಗಿದ್ದರು. ಒಂದು ಪುಟ್ಟ ಗೂಡಂಗಡಿ ಇಟ್ಟುಕೊಂಡು ಬಸ್ ಪ್ರಯಾಣಿಕರಿಗೆ ಟಿಕೇಟ್ ಹರಿದು ಕೊಡುತ್ತಿದ್ದರು. ಅಂದು ಬಸ್ ಬಿಡುವುದಕ್ಕೆ ಇನ್ನೂ ಸಮಯವಿತ್ತು. ಅಲ್ಲೇ ಕಾದು ಕುಳಿತಿದ್ದೆ. ಅಂಗಡಿಯಲ್ಲಿ ಆಗ ತಾನೆ ತಂದ ಕಲ್ಲಂಗಡಿ ಹಣ್ಣನ್ನು ತುಂಡುಗಳನ್ನಾಗಿ ಮಾಡಿ ಅಲ್ಲಿ ಇಡುತ್ತಿದ್ದರು. ಕಲ್ಲಂಗಡಿ ಹಣ್ಣು....ಅದುವರೆಗೆ ನಾನು ಕಂಡವನಲ್ಲ. ಒಳಗೆ ಕೆಂಪಗಿರುವ ಈ ಕುಂಬಳಕಾಯಿಯಂತಹ ಹಣ್ಣು ನಿಜಕ್ಕೂ ನನಗೆ ಆಶ್ಚರ್ಯದ ವಸ್ತುವಾಗಿತ್ತು. ಆದರೆ ಅದನ್ನು ತಿನ್ನುವ ಬಗೆ ಹೇಗೆ?  ಒಂದು ತುಂಡು ಕಲ್ಲಂಗಡಿಗೆ ಹತ್ತು ಪೈಸೆ.  ಬಸ್ ಟಿಕೇ ಟ್ ಗೆ ಕೊಟ್ಟ  ಕೈಯಲ್ಲಿರುವ ಹತ್ತು ಪೈಸೆಯನ್ನು ಕೊಟ್ಟು ಕೊಂಡುಕೊಂಡರೆ ಮತ್ತೆ ಮನೆಗೆ ನಡೆದೇ ಹೋಗಬೇಕು. 

ಅಂಗಡಿಗೆ ಬಂದವರೆಲ್ಲ ಕಲ್ಲಂಗಡಿ ಹಣ್ಣಿನ ತುಂಡು ಕೈಯಲ್ಲಿ ಹಿಡಿದು ನೀರು ಸುರಿಸಿ ತಿನ್ನುವಾಗ ನನ್ನ ಬಾಯಲ್ಲಿಯೂ ನೀರು ಸುರಿಯುವುದಕ್ಕಾರಂಭಿಸಿತು. ಆದರೆ ನೀರು ಸುರಿಸುವುದಷ್ಟೇ  ನನ್ನ ಪಾ
ಲಿಗೆ. ಹಾಗೆ ಆಶೆಯಿಂದ ಪುಟ್ಟ ಬಾಲಕ ಬಿಟ್ಟ ಕಣ್ಣಿನಿಂದ ನೋಡುತ್ತಿದ್ದೆ. ಹಾಗೆ ನೋಡಬಾರದು ಎನ್ನು ಸಭ್ಯತೆ ಅರಿವಿರಲಿಲ್ಲ. ಆದರೆ ಮನಸ್ಸಿನ ಆಶೆ ಹತ್ತಿಕ್ಕುವುದಕ್ಕೆ ಸಾಧ್ಯವೆ? 

ಕೊನೆಗೊಮ್ಮೆ ಯಾರೋ ಒಬ್ಬರು ಹಣ್ಣು ಕೊಳ್ಳುವುದಕ್ಕೆ ಬಂದಾಗ ನಾನು ನಿಂತು ನೋಡುತ್ತಿರುವುದು ಗೋವಿಂದಣ್ಣನ ಗಮನಕ್ಕೆ ಬಂತು. ಕಲ್ಲಂಗಡಿಯಿಂದ ಪುಟ್ಟ ತುಂಡೊಂದನ್ನು ಮಾಡಿ ಕರೆದು ನನ್ನ ಕೈಗೆ ಇಟ್ಟರು. ಪುಟ್ಟ ಚಿಕ್ಕ ಹಣ್ಣಿನ ಚೂರಾದರೂ ನನ್ನ ಪಾಲಿಗೆ ಅದೊಂದು ನಿಧಿಯಾಗಿತ್ತು. ಕೈಯನ್ನು ಹಾಕಿಕೊಂಡ ಚಿಂದಿ ಅಂಗಿ ಚಡ್ಡಿಗೆ ಉಜ್ಜಿ ಕಲ್ಲಂಗಡಿಯನ್ನು ಕೈಯಲ್ಲಿ ಹಿಡಿದು ಬಾಯಿಗಿಟ್ಟಾಗ ಸ್ವರ್ಗವೇ ಕೈಗೆ ಸಿಕ್ಕಿದ ಅನುಭವ.  ಅಂದು ನಾನು ಮೊದಲಾಗಿ ಕಲ್ಲಂಗಡಿಯ ರುಚಿಯನ್ನು ನೋಡಿದೆ. ಆ ನಂತರ ಅದೆಷ್ಟೋ ಕಲ್ಲಂಗಡಿಯನ್ನು ತಿಂದಿರಬಹುದು. ಈಗ ರಸ್ತೆಯ ಬದಿಯಲ್ಲಿ ರಾಶಿ ಹಾಕಿ ಮಾರುವ ಕೆಂಪು ಕೆಂಪು  ಕಲ್ಲಂಗಡಿ ಹಣ್ಣನ್ನು ನೋಡಿರಬಹುದು. ಆದರೆ ಅಂದಿನ ಕಲ್ಲಂಗಡಿ ಹಣ್ಣಿನ ರುಚಿ ಮತ್ತೆಂದೂ ಸಿಕ್ಕಿರಲಿಲ್ಲ. ಬಾಲ್ಯದ ಆ ಕಲ್ಲಂಗಡಿ ಚೂರು ಮತ್ತೆ ಗೋವಿಂದಣ್ಣ ಎಂದು ಮರೆಯುವುದಕ್ಕಿಲ್ಲ. ಆ ರುಚಿ ಮತ್ತೆಂದೂ ಸಿಗುವುದಕ್ಕಿಲ್ಲ. ಈಗ ಪ್ರತಿ ಬಾರಿ ಕಲ್ಲಂಗಡಿ ರುಚಿ ನೋಡುವಾಗ ಬಾಲ್ಯದ ಆ ರುಚಿಯನ್ನು ಸ್ಮರಿಸಿಕೊಳ್ಳುತ್ತೇನೆ. ಆ ಹಸಿವಿನ ದಿನಗಳು ನೆನಪಾಗುತ್ತದೆ. ಅತೃಪ್ತಿಯಲ್ಲಿಯೂ ಸಿಗುವ ಸುಖ ಹಲವು ಸಲ ವಿಶಿಷ್ಟವಾಗಿರುತ್ತದೆ. ಮನುಷ್ಯನಿಗೆ ಹಸಿವಿನ ರುಚಿಯ ಅರಿವಿರಬೇಕು. ಮತ್ತು ಆ ಹಸಿವು ಇಂಗುವ ವಿಶ್ವಾಸ ಇಲ್ಲದೇ ಅದೇ ನಿರೀಕ್ಷೆಯಲ್ಲಿರಬೇಕು. ಆಗ ಸಿಗುವ ಜೀವನಾನುಭವ ಎಲ್ಲ ಪಾಠವನ್ನು ಕಲಿಸಿಬಿಡುತ್ತದೆ. ಶಾಲೆಯಲ್ಲಿ ಕಲಿತ ಉರು ಹೊಡೆದ ಪಾಠಗಳಾದರೂ ಮರೆತು ಹೋಗಿರಬಹುದು. ಆದರೆ  ಬಾಲ್ಯದ ಹಸಿವಿನಿಂದ ನಾನು ಕಲಿತ ಪಾಠಗಳು ಎಂದಿಗೂ ಮರೆಲಾರವು. 


Sunday, December 29, 2024

ಅನ್ನ ಬ್ರಹ್ಮ ಮುನಿದಾಗ.....

                 ತಲೆ ಬರಹ ವಿಚಿತ್ರವಾಗಿದೆ. ಆದರೆ ಮೊನ್ನೆ ಬೆಳಗ್ಗೆ ಆದ ದುರ್ಘಟನೆ ಯೋಚಿಸುವಾಗ ಹೀಗೆ ಅನಿಸುತ್ತದೆ. ನಮ್ಮ ತೀರ ಪಕ್ಕದ ಮನೆ ಅಂದರೆ ನಮ್ಮ ಮನೆಗೂ ಆ ಮನೆಗೂ ಇರುವ ಅಂತರ ಒಂದು ಗೋಡೆ ಮಾತ್ರ. ನಮ್ಮ ಮನೆಯಿಂದ ಎರಡು ಅಡಿಯ ಬಡಿಗೆ ಹಾಕಿದರೆ ಆ ಮನೆಯ ಒಳಗೆ ತೂರಿಬಿಡುತ್ತದೆ. ಬೆಂಗಳೂರಲ್ಲಿ ಇದು ವಿಶೇಷವಲ್ಲ. ಆ ಮನೆಯಲ್ಲಿ ಇದ್ದಕ್ಕಿದ್ದಂತೆ  ದೊಡ್ಡ ಸದ್ದು ಎದೆ ಬಿರಿಯುವಂತೆ ಕೇಳಿಸಿತು. ಅದೊಂದು ಸ್ಫೋಟವೋ ಏನೋ ಅಂತ ತಿಳಿಯುವುದಕ್ಕೆ ಕೆಲವು ಘಳಿಗೆಗಳೇ ಬೇಕಾಯಿತು. ಎರಡು ಬದಿಯಲ್ಲಿದ್ದ ಗಾಜಿನ ಕಿಟಿಕಿಗಳು ಸಿಡಿದು ಗಾಜುಗಳ ಚೂರುಗಳು ಛಿದ್ರ ಛಿದ್ರವಾಗಿ ರಸ್ತೆಗೆ ಪಕ್ಕದ ಮನೆಗೆ ಮಳೆಯಂತೆ ಬಿದ್ದು ಬಿಟ್ಟಿತು. ಏನಾಯಿತು ಅಂತ ಯೋಚಿಸುವ ಮೊದಲೇ ಆ ಮನೆಯಿಂದ ಹೆಣ್ಣಿನ ಆಕ್ರಂದನ ಎದೆ ಬಿರಿಯುವಂತೆ ಕೇಳಿಸಿತು. ನಮ್ಮ ಮನೆಯಲ್ಲಿ ಏನಾದರೂ ಆಯಿತಾ ಅಂತ ನಾವು ಆತಂಕಗೊಂಡೆವು. ನಮ್ಮದು ಮೂರು ಮಹಡಿಯ ಮನೆ. ಮೊದಲ ಮಹಡಿಯಲ್ಲಿ ಅಡುಗೇ ಕೋಣೆ. ನಾವೆಲ್ಲ ಎರಡನೇ ಮೂರನೆ ಮಹಡಿಯಲ್ಲಿದ್ದರೆ ಬೆಳಗ್ಗೆ ತಾಯಿ ಅಡುಗೆ ಮನೆಯಲ್ಲಿರುತ್ತಾರೆ. ತಾಯಿಗೆ ಏನಾದರೂ ಆಯಿತಾ ಅಂತ ನನಗೆ ಗಾಬರಿ. ಆದರೆ ಆಕ್ರಂದನ ಕೇಳಿಸಿದ್ದು ಪಕ್ಕದ ಮನೆಯಿಂದ ಅಂತ ಅರಿವಾಗಿ ಹೊರಗೆ ಬಂದು ಪಕ್ಕದ ಮನೆ ನೋಡಿದರೆ ದೊಡ್ಡ ಬಾಂಬ್ ವಿಸ್ಪೋಟಿಸಿದ ಹಾಗೆ ಕಿಟಿಕಿ ಬಾಗಿಲು ಹಾರಿ ಹೋಗಿತ್ತು. ಅಬ್ಬಾ ಅದೇನು ಸದ್ದು. ಇನ್ನೂ ಎರಡು ದಿನ ಕಳೆದರೂ ಆ ಸದ್ದಿನ ಧ್ವನಿ ಮಾರ್ದನಿಸುತ್ತದೆ. 




                ರಸ್ತೆಯ ಎಲ್ಲಾ ಮನೆಯವರು ಹೊರಗೆ ಬಂದು ನಮ್ಮ ಮನೆಯತ್ತ ನೋಡಿ ಏನಾಯಿತು ಅಂತ ಕೇಳಿದರೆ ಇನ್ನು ಕೆಲವರು ಮನೆಯ ಕೆಳಗೆ ಬಂದು ಮೇಲಕ್ಕೆ ನೋಡುತ್ತಾರೆ. ನಮ್ಮ ಪಕ್ಕದ ಮನೆಯೂ ಎರಡು ಮಹಡಿಯ ಮನೆ. ಎರಡನೇ ಮಹಡಿಯಲ್ಲಿ ಸ್ಫೋಟ ಸಂಭವಿಸಿ ಆನಾಹುತ ನಡೆದು ಹೋಗಿದೆ. ನಾನು ಬಗ್ಗಿ ಆ ಮನೆಯ ಕಿಟಿಕಿ ಒಳಗೆ ನೋಡಿದೆ. ಎಲ್ಲರೂ ಗ್ಯಾಸ್ ಸಿಲಿಂಡರ್ ಸ್ಪೋಟವಾಗಿದೆ ಅಂತ ತಿಳಿದಿದ್ದರು. ಬಗ್ಗಿ ನೋಡುವುದಕ್ಕೂ ಭಯ. ಕೆಳಗೆ ಮನೆಯ ಮೆಟ್ಟಿಲಲ್ಲೆ ಗೇಟ್ ಬಿಗ ಹಾಕಿದ ಕಾರಣ ಯಾರೂ ಮೇಲೆ ಹೋಗುವಂತಿರಲಿಲ್ಲ. ನಾನು ಬಗ್ಗಿ ನೋಡಿದಾಗ ಅಲ್ಲಿನ ಅಡುಗೆ ಕೋಣೆಯಲ್ಲಿ ಗ್ಯಾಸ್ ಸ್ಟೌ ಉರಿಯುತ್ತಾ ಇದ್ದ ಕಾರಣ ಅದು ಗ್ಯಾಸ್ ಸಿಲಿಂಡರ್ ಅಲ್ಲಾ ಅಂತ ಖಾತರಿಯಾಯಿತು. 

            ಮನೆಯೊಳಗಿನ ದೃಶ್ಯ ನೋಡಿದಾಗ  ಕುಕ್ಕರ್ ಮುನಿದರೆ ಹೇಗಿರುತ್ತದೆ ಎಂದು ಅರಿವಿಗೆ ಬಂತು. ಚೆಲ್ಲಾಪಿಲ್ಲಿಯಾಗಿ ಬಿದ್ದ ಮನೆಯ ವಸ್ತುಗಳು ಬಾಗಿಲೊಂದು ಮುರಿದು ಕಿತ್ತು ಮುರಿದು ಬಿದ್ದಿತ್ತು. ವಸ್ತುಗಳೆಲ್ಲಾ ಚೆಲ್ಲಾ ಪಿಲ್ಲಿಯಾಗಿತ್ತು. ಗಾಜಿನ ಚೂರು ಎಲ್ಲೆಂದರಲ್ಲಿ ಬಿದ್ದಿತ್ತು. ಅಚ್ಚರಿ ಎಂದರೆ ಅಡಿಗೆ ಕೋಣೆಯಲ್ಲಿದ್ದ ಮಹಿಳೆಗೆ ಗಾಯ ವಾಗಿದ್ದು ಬಿಟ್ಟರೆ ಅಲ್ಲಿದ್ದ ಪುಟ್ಟಮಗುವಿಗೆ ಮತ್ತು ಉಳಿದವರಿಗೆ  ಯಾವ ಗಾಯವೂ ಆಗಿರಲಿಲ್ಲ. 



              
 
ಎಲ್ಲರಿಗೂ ಕುಕ್ಕರ್ ಯಾಕೆ ಸ್ಫೋಟಗೊಂಡಿತು ಎಂಬುದು ಅಚ್ಚರಿಯಾಗಿತ್ತು. ಪ್ರತಿಯೊಂದು ಮನೆಯಲ್ಲೂ ಅತ್ಯಾವಶ್ಯಕ ಸಾಧನವೆಂದರೆ ಅದು ಕುಕ್ಕರ್. ಮನೆಯಾಗಿಯ ಬಿಸಿಯುಸಿರಿನ ಸ್ಪಂದನವೆಂದರೆ ಕುಕ್ಕರ್. ಅದು ಈ ಬಗೆಯಲ್ಲಿ ಮುನಿದರೆ ಮಾಡುವುದೇನು. ನಮ್ಮ ಮನೆಯಲ್ಲಿ ಕುಕ್ಕರ್ ಅಷ್ಟೊಂದು ಬಳಸುವುದಿಲ್ಲ. ತೀರ ಅನಿವಾರ್ಯವೆಂದಾದರೆ ಕೆಲವೊಮ್ಮೆ ಕಾಳುಗಳನ್ನು ಬೇಯಿಸುವುದಕ್ಕೆ, ಕುಚ್ಚಿಲಕ್ಕಿ ಗಂಜಿ ಮಾಡುವುದಕ್ಕೆ  ಉಪಯೋಗಿಸುವುದುಂಟು. ಉಳಿದಂತೆ ಎ ಎಂ ಸಿ ಕುಕ್ ವೆರ್  ಪಾತ್ರಗಳು ಹೆಚ್ಚು ಸುರಕ್ಷಿತವಾಗಿರುವುದರಿಂದ ಅದನ್ನೇ ಹೆಚ್ಚು ಉಪಯೋಗಿಸುತ್ತೇವೆ. ಆದರೂ ಅಗೊಮ್ಮೆ ಈಗೊಮ್ಮೆ  ಕುಕ್ಕರ್ ಉಪಯೋಗಿಸುವ ನಮಗೂ ಆತಂಕವಾಗಿದ್ದು ಸುಳ್ಳಲ್ಲ. ಆದರೆ ಅಲ್ಲಿ ಕುಕ್ಕರ್ ಸಿಡಿದ ಪರಿಣಾಮ ನಮ್ಮಮ್ಮ ಇದ್ದಾ ಎರಡು ಕುಕ್ಕರ್ , ಅದೂ ಇತ್ತೀಚೆಗೆ ಕೊಂಡು ತಂದ ಕುಕ್ಕರನ್ನು ತೆಗೆದು ಮೇಲೆ ಹಾಕಿಬಿಟ್ಟರು. ಈಗ ಎಲ್ಲವನ್ನು ಕುಕ್ ವೇರ್ ನಲ್ಲಿ ಮಾಡುತ್ತಿದ್ದೇವೆ. ಕುಕ್ ವೇರ್ ನಲ್ಲಿ ಮಾಡಿದ ಅಡುಗೆ ಅದ್ಭುತ ರುಚಿಯಿಂದ ಕೂಡಿರುತ್ತವೆ. 

            ಕುಕ್ಕರ್ ಗೆ ಸೇಪ್ಟಿ ವಾಲ್ವ್ ಇದ್ದರೂ ಅದು ಹೇಗೆ ಸಿಡಿಯಿತು ಎಂದು ಅಚ್ಚರಿಯಾಗಿತ್ತು. ಹಾಗಾದರೆ ಅದರ ಅವಶ್ಯಕತೆಯಾದರೂ ಏನು? ಕುಕ್ಕರ್ ನಲ್ಲಿ ನೀರು ಕಡಿಮೆಯಾದಾಗ ಹಲವು ಸಲ ವಾಲ್ವ್ ತೆರೆದು ಅನಾಹುತ ತಪ್ಪಿದರೂ ಅದನ್ನು ಪೂರ್ಣವಾಗಿ ನಂಬುವ ಹಾಗಿಲ್ಲ. ಕುಕ್ಕರ್ ನ  ವೈಟ್ ಅಂದರೆ ಅದರ ವಿಸಿಲ್ ಅದರಲ್ಲಿಆಹಾರ ಪದಾರ್ಥದ ಜಿಡ್ದು ಹಿಡಿದು ಅದರ ಮೇಲೆ ಕೆಳಗಿನ ತಡೆಯಾದಾಗ ಕುಕ್ಕರ್ ಒಳಗೆ ಒತ್ತಡ ಹೆಚ್ಚಾಗಿ ಅದು ಸಿಡಿಯುತ್ತದೆ. ಇಲ್ಲೂಅದೇ ಆಗಿ ಹೋದ ಪ್ರಮಾದ. ಕುಕ್ಕರ್ ಉಪಯೋಗಿಸುವಾಗ ಇದರ ಬಗ್ಗೆ ಹೆಚ್ಚು ಎಚ್ಚರ ವಹಿಸಬೇಕು. ಕುಕ್ಕರ್ ಸ್ವಚ್ಛವಾಗಿರಿಸಬೇಕು. ಅದರ ವೈಟ್ ಒಳಗಡೆ ಜಿಡ್ಡು ಅಥವಾ ಆಹಾರ ಪದಾರ್ಥದ ತುಣುಕು ಇರದಂತೆ ನೋಡಿಕೊಳ್ಳಬೇಕು. ಅದು ಒಲೆ ಮೇಲೆ ಇರಿಸುವ ಮೊದಲು ವಿಸಿಲ್ ಚಲನೆ ಸಲೀಸಾಗಿದೆಯೇ ಎಂದು ಪರೀಕ್ಷಿಸಬೇಕು. ಇಷ್ಟೆಲ್ಲಾ ಎಚ್ಚರ ವಹಿಸಿದರೆ ತಕ್ಕ ಮಟ್ಟಿಗೆ ಕುಕ್ಕರ್ ಉಪಯೋಗ ತೊಂದರೆ ಎಲ್ಲ ಎಂದುಕೊಳ್ಳಬಹುದು. 

            ಎಷ್ಟೇ ಎಚ್ಚರ ವಹಿಸಿದರೂ ಹಲವು ಸಲ ಅಪಾಯ ತಪ್ಪಿದ್ದಲ್ಲ. ಮಾತ್ರವಲ್ಲ ಕುಕ್ಕರ್ ನಲ್ಲಿ ಬೇಯಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ. ಕುಕ್ಕರ್ ನಲ್ಲಿ ಬೇಯಿಸಿದ ಆಹಾರದಲ್ಲಿ ಪೌಷ್ಟಿಕಾಂಶ ನಾಶವಾಗುತ್ತದೆ. ಮಾತ್ರವಲ್ಲ ಆಹಾರ ಜೀರ್ಣವಾಗುವುದಿಲ್ಲ. ಇದರಿಂದ ಅಜೀರ್ಣ ಮಲಬದ್ದತೆ ಮುಂತಾದ ಸಮಸ್ಯೆಗಳು ಸಾಮಾನ್ಯವಾಗಿರುತ್ತದೆ. ಕೊಲೆಸ್ಟರಾಲ್ ಸಮಸ್ಯೆ ಕುಕ್ಕರ್ ನಲ್ಲಿ ಬೇಯಿಸಿದ ಆಹಾರ ಸೇವನೆಯಿಂದ ಅಧಿಕವಾಗುತ್ತದೆ. ಹಾಗಾಗಿ ಕುಕ್ಕರ್ ನ್ನು ಆದಷ್ಟು ಉಪಯೋಗಿಸದೇ ಇರುವುದು ಉತ್ತಮ. ಕುಕ್ಕರ್ ನ ಆಹಾರ ಆರೋಗ್ಯಕ್ಕೆ ಹಾನಿಕರ. ಜತೆಯಲ್ಲಿ ಜೀವಕ್ಕೂ ಹಾನಿಕರ. 

Sunday, December 15, 2024

ದೈವಾನುಗ್ರಹ


ಹಲವು ಸಲ ಇಂದಿನ ಮಕ್ಕಳು ಕೇಳುವುದುಂಟು ದೇವರು ಇದ್ದಾನೆಯೇ?  ಆಗ ನನ್ನ ಸರಳವಾದ ಉತ್ತರ, ಎಲ್ಲಿವರೆಗೆ ನಮ್ಮಲ್ಲಿ ಭಯ ಎಂಬುದು ಇರುವುದೋ ಅಲ್ಲಿ ತನಕ ದೇವರು ಇದ್ದಾನೆ. ನಿಜವಾಗಿಯೂ ಇಲ್ಲಿ  ಭಯ ಅಲ್ಲ ಭಕ್ತಿ ಎಂದಾಗಬೇಕು. ಎಲ್ಲಿ ತನಕ ಭಕ್ತಿ ಇರುವುದೋ ಅಲ್ಲಿ ತನಕ ದೇವರು ಇದ್ದಾನೆ. ವ್ಯಾವಹಾರಿಕವಾಗಿ ಎಲ್ಲಿ ಗ್ರಾಹಕರಿರುತ್ತಾರೋ ಅಲ್ಲಿ ವರ್ತಕರು ಇರುತ್ತಾರೆ.   ಆದರೆ ಈಗ ಭಕ್ತಿಯ ಬದಲು ಭಯವೇ ಹೆಚ್ಚಾಗಿದೆ. ದೇವರನ್ನು ನಂಬದೇ ಇದ್ದರೆ ದೇವರು ಏನು ಮಾಡಿಬಿಡುತ್ತಾನೋ ಎಂಬ ಆತಂಕದ ಭಯ.  ಯಾರು ಹೆಚ್ಚು ಅಪ್ರಾಮಾಣಿಕರೋ ಯಾರು ಹೆಚ್ಚು ಆತ್ಮ ವಂಚನೆ ಮಾಡಿಕೊಳ್ಳುವರೋ ಅವರಿಗೆ ಹೆಚ್ಚು ಭಯ. ಭಕ್ತ ಪ್ರಹ್ಲಾದನಂತೆ ಯಾರಲ್ಲಿ ಹೆಚ್ಚು ಭಕ್ತಿ ಇದೆಯೋ ಅವರು ತಮ್ಮ ಭಕ್ತಿಯ ಮೇಲಿನ ವಿಶ್ವಾಸದಲ್ಲಿ ನಿರಾತಂಕವಾಗಿರುತ್ತಾರೆ.  ಶ್ರೀ ಹರಿ ಉಗ್ರ ನರಸಿಂಹನಾಗಿ ಪ್ರತ್ಯಕ್ಷವಾಗಿ ಹಿರಣ್ಯ ಕಶ್ಯಪನನ್ನು ಸಂಹರಿಸಿದಾಗ ದೇವತೆಗಳೆಲ್ಲ ಆ ಉಗ್ರ ರೂಪ ಕಂಡು ಭಯ ಭೀತರಾಗಿ ನಿಂತು ಬಿಟ್ಟರಂತೆ. ಅವರಿಗೆ ನರಸಿಂಹ ಸ್ವರೂಪವನ್ನು ಕಾಣುವುದಕ್ಕೆ ಸಾಧ್ಯವಾಗಲಿಲ್ಲ.  ದೇವತೆಗಳೆಲ್ಲ ಪ್ರಹ್ಲಾದನಲ್ಲಿ ಕೇಳಿಕೊಂಡರು,    ನರಸಿಂಹ ಭಯಂಕರ ರೂಪವನ್ನು ಕಾಣುವುದಕ್ಕೆ ಸಾಧ್ಯವಿಲ್ಲ. ಏನು ಮಾಡಲಿ?  ಆಗ ಪ್ರಹ್ಲಾದ ಹೇಳಿದನಂತೆ, ನೀವು ನರಸಿಂಹನ ಮೂರ್ತಿಯ ಮುಖವನ್ನೇಕೆ ನೋಡಬೇಕು. ಮುಖವನ್ನಲ್ಲ ನೋಡಬೇಕಾಗಿರುವುದು, ಆತನ ಪಾದಗಳನ್ನು ನೋಡಿ. ಭಯದ ಬದಲು ಭಕ್ತಿಇದ್ದಲ್ಲಿ ಮತ್ತು ಆ ಭಕ್ತಿಯ ಮೇಲೆ ವಿಶ್ವಾಸ ಇದ್ದಲ್ಲಿ ಭಯಕ್ಕೆ ಆಸ್ಪದವೇ ಇರುವುದಿಲ್ಲ. ಎಲ್ಲಿ ತನಕ ನಾವು ಸತ್ಯದ ಎದುರು ಶರಣಾಗುತ್ತೇವೋ ಅಲ್ಲಿ ತನಕ ನಾವು ಭಯ ಪಡುವ ಅಗತ್ಯವೇ ಇರುವುದಿಲ್ಲ. ಅದರೆ ನಾವು ದೇವರಲ್ಲಿ ಭಯವನ್ನು ಕಾಣುತ್ತೇವೆ. ಅದರ ಸ್ವರೂಪವೇ ಶನಿ ದೇವರು. ಬಹುಶಃ ಶನಿದೇವರನ್ನು ಭಯದಿಂದ ಕಾಣುವಷ್ಟು ಬೇರೆ ದೇವರನ್ನು ಕಾಣುವುದಿಲ್ಲ.

ನಮ್ಮೂರಲ್ಲಿ ಎಲ್ಲೂ ಇಲ್ಲದ ಶನಿದೇವಸ್ಥಾನ ಬೆಂಗಳೂರಲ್ಲಿ ಹಲವಿದೆ.  ಹತ್ತು ಹಲವು ದೇವಾಲಯ ಇದ್ದರೂ ಶನಿ ದೇವಸ್ಥಾನ ಯಾಕೆ ಇಲ್ಲ ಎಂದು ಹಲವು ಸಲ ಯೋಚನೆ ಬರುತ್ತದೆ. ಆದರೆ ಇಲ್ಲಿ ನಮ್ಮ ಮನೆಯ ಅಕ್ಕ ಪಕ್ಕದಲ್ಲೇ ಎರಡು ಮೂರು ಶನಿ ದೇವಾಲಯವಿದೆ. ಆ ರೀತಿಯಲ್ಲಾದರೂ ಮನುಷ್ಯ ಸನ್ಮಾರ್ಗದಲ್ಲಿ ನಡೆಯಲಿ ಎಂಬುದು ಉದ್ದೇಶವಾದರೂ ಹಲವು ಸಲ ಇದು ಆತ್ಮ ವಂಚನೆಗೆ ಎಡೆ ಮಾಡಿಕೊಟ್ಟಂತೆ ಭಾಸವಾಗುತ್ತದೆ.  ಒಂದು ವೇಳೆ ಶನಿದೇವ ಪೀಡೆ ಕೊಡುವುದಿಲ್ಲ ಎಂದು ಇರುತ್ತಿದ್ದರೆ ಹೀಗೆ ಭಯ ಹುಟ್ಟಿಕೊಳ್ಳುತ್ತಿತ್ತಾ ಎಂದು ಪ್ರಶ್ನೆ ಮೂಡುತ್ತದೆ. ಅಲ್ಲೆಲ್ಲಾ ಜನಸಂದಣಿಯನ್ನು ಕಾಣಬಹುದು. ಇದೊಂದು ರೀತಿಯಲ್ಲಿ ಭಯದ ಭಕ್ತಿ ಅಂತ ಅನ್ನಿಸಿಬಿಡುತ್ತದೆ. ಶನಿದೇವರನ್ನು ನಂಬದೇ ಇದ್ದರೆ, ಆತ ಏನು ಮಾಡಿಬಿಡುತ್ತಾನೋ ಎಂಬ ಭಯ. ಆಯ್ಯಾ ಶನಿದೇವ ನಮ್ಮನ್ನು ಪೀಡಿಸಬೇಡ ಎಂದು ಬೇಡಿಕೊಳ್ಳುವುದು,  ಇದೊಂದು ರೀತಿ ನಮ್ಮ ಕರ್ತವ್ಯ ಚ್ಯುತಿಗೆ ಅಭಯವನ್ನು ಅರಸಿಕೊಳ್ಳುವಂತೆ .    ಉಳಿದೆಲ್ಲ ಗ್ರಹಗಳಿಗಿಂತಲೂ ಭಯ ಭಕ್ತಿ ಶನಿದೇವರ ಮೇಲೆ ಮೂಡುತ್ತದೆ. ಆದರೆ ದೇವರ ದರ್ಶನಕ್ಕೆ ಸರದಿ ನಿಲ್ಲುವಾಗಲೇ ಜಗಳವಾಡುವಂತೆ, ನಮ್ಮ ಆತ್ಮವಂಚನೆ ಆರಂಭವಾಗುತ್ತದೆ.   

ಯಾವಾಗ ನಮ್ಮ ಕರ್ತವ್ಯವನ್ನು ನಾವು ಮರೆತು ಕರ್ಮ ಅಂದರೆ ಕರ್ತವ್ಯ ಭ್ರಷ್ಥರಾಗುತ್ತೇವೋ ಆಗ ಶನಿದೇವ ಪೀಡಿಸುವುದಕ್ಕೆ ತೊಡಗುತ್ತಾನೆ. ಶನಿದೇವ ಎಂದಿಗೂ ನನ್ನ ಪೂಜಿಸು ಅಂತ ಹೇಳುವುದಿಲ್ಲ. ಬದಲಿಗೆ ಪರಮಾತ್ಮನನ್ನು ಮರೆಯಬೇಡ ಅಂತ ಪ್ರಚೋದಿಸುತ್ತಾನೆ. ಪರಮಾತ್ಮನನ್ನು ಮರೆಯುವುದೆಂದರೆ ನಮ್ಮ ಕರ್ತವ್ಯದಿಂದ ನಾವು ವಿಮುಖರಾದಂತೆ.  ಪ್ರತಿ ಕ್ಷಣವೂ ಭಗವಂತನ ಸ್ಮರಣೆಯನ್ನು ತರಿಸುವವನೇ ಶನಿದೇವ. 

ಶನಿ ವಕ್ರಿಸಿದಾಗ ಸಹಜವಾಗಿ ನಾವು ಭಯ ಪಡುತ್ತೇವೆ. ಅದೇನೋ ಭಯ ಬಿಡದೇ ಮನಸ್ಸನ್ನು ಆವರಿಸುತ್ತದೆ. ನಮ್ಮ ಆತ್ಮಸ್ಥೈರ್ಯ ಕುಗ್ಗಿ ಹೋಗುತ್ತದೆ. ಪ್ರತಿಯೊಂದು ಅಪಜಯಕ್ಕೂ ಅದೇ ಕಾರಣವಾಗಿ ಭಾಸವಾಗುತ್ತದೆ. ಶನಿ ಎಂದರೆ ನಮ್ಮ ಕರ್ತವ್ಯ ಪ್ರಜ್ಞೆಯನ್ನು ಎಚ್ಚರಿಸುವ ದೈವ. ಆಗ ಮೊದಲಿಗೆ ನಮ್ಮ ಅತ್ಮ ಸ್ಥೈರ್ಯ ಹೆಚ್ಚಿಸಿಕೊಳ್ಳಬೇಕು. ಅದಕ್ಕೆ ದೈವಾನುಗ್ರಹ ಒದಗಿಬರಬೇಕು. ದೈವಾನುಗ್ರಹ ಒದಗಿಬರುವುದು ನಮ್ಮ ನಿತ್ಯ ಕರ್ಮಗಳಲ್ಲಿ. ಸಂಧ್ಯಾವಂದನೆ, ಪರಮಾತ್ಮನ ನಾಮಸ್ಮರಣೆ ಇವುಗಳಿಂದ ದೈವಾನುಗ್ರಹ ಜಾಗೃತವಾಗಿರುತ್ತದೆ.  ಶನಿ ವಕ್ರಿಸಿದಾಗ ಹಲವು ಸಲ ಇದನ್ನೆಲ್ಲ ಮಾಡಬೇಕೆಂದಿದ್ದರೂ ನಮಗೆ ಅವಕಾಶ ಒದಗಿಬರುವುದಿಲ್ಲ. ಸಮಯ ಸಂದರ್ಭಗಳೆಲ್ಲ ಇದೆಕ್ಕೆ ವಿರುದ್ದವಾಗಿರುತ್ತದೆ. ಮಾಡಲೇ ಬೇಕಾದ ಕೆಲಸವನ್ನು ಮಾಡುವುದಕ್ಕೆ ಅವಕಾಶವೇ ಸಿಗುವುದಿಲ್ಲ. ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಅ   ಆಗ ಪ್ರತಿಕೂಲ ಪರಿಸ್ಥಿತಿಯನ್ನು ಮೆಟ್ಟಿನಿಲ್ಲಬೇಕು. ಮಾಡಲೇ ಬೇಕಾದುದನ್ನು ಮಾಡಿಬಿಡಬೇಕು.  ಅದೇ ನಮ್ಮ ಬದ್ದತೆ. ಅದೇ  ಕರ್ತವ್ಯ ಪ್ರಜ್ಞೆ. 

ಸಂಧ್ಯಾವಂದನೆ ಅದು ಕೇವಲ ಒಂದು ಜಾತಿ ವರ್ಗಕ್ಕೆ ಸೀಮಿತವಲ್ಲ. ಸಂಧಿಕಾಲದಲ್ಲಿ ಮಾಡಬೇಕಾದ ಭಗವಂತನ ಸ್ಮರಣೆ. ಅದು ಅರ್ಘ್ಯ ಜಪ ಆಗಿರಬಹುದು, ಇಲ್ಲಾ ಕೇವಲ ನಾಮಸ್ಮರಣೆ ಧ್ಯಾನ ಭಜನೆಯೂ ಆಗಬಹುದು. ಪಡೆದುಕೊಂಡು ಬಂದ ಸಂಸ್ಕಾರಕ್ಕೆ ಸೀಮಿತವಾಗಿ ಆಚರಿಸುವುದೇ ಸಂಧ್ಯಾವಂದನೆಯಾಗುತ್ತದೆ. ಇದರಲ್ಲಿ ಯಾವುದು ಹೆಚ್ಚೂ ಇಲ್ಲ ಯಾವುದು ಕಡಿಮೆಯೂ ಇಲ್ಲ. ಎಲ್ಲವೂ ಭಗವಂತನಿಗೆ ಪ್ರಿಯ.    ದೇವಾಲಯ , ಯಜ್ಞ ಯಾಗ ಯಾವ ಸತ್ಕಾರ್ಯವಾದರೂ ನಿತ್ಯಕರ್ಮವನ್ನು ಹೊರತು ಪಡಿಸಿದರೆ ಅದಕ್ಕೆ ಮೌಲ್ಯವಿರುವುದಿಲ್ಲ.  ಪೂಜೆ ಪುನಸ್ಕಾರಗಳು ಅನ್ಯ ಆರಾಧನೆಗಳು ವೃತವಾಗುತ್ತದೆ.  ಸಂಧ್ಯಾ ವಂದನೆ ಅಥವಾ ನಿತ್ಯ ಪ್ರಾರ್ಥನೆ ಅದು ಮಾಡಲೇಬೇಕಾದ ಕರ್ಮ.  ವೃತ ಮತ್ತು ಕರ್ಮ ಎರಡೂ ಭಿನ್ನ. ಭಿಕ್ಷುಕನಿಗೆ ಅನ್ನ ಹಾಕಿ ದಾನ ಮಾಡುವುದು ವೃತವಾಗುತ್ತದೆ. ಅದೇ ವೃದ್ದ ತಂದೆ ತಾಯಿಗೆ ಅನ್ನ ಹಾಕುವುದು ಕರ್ತವ್ಯವಾಗಿ ಕರ್ಮವಾಗುತ್ತದೆ. ದೈವಾನುಗ್ರಹ ಸಿಗುವುದು ನಿತ್ಯ ಕರ್ಮಗಳಲ್ಲಿ. ಸಂಧ್ಯಾವಂದನೆಯಲ್ಲಿ. ಇದರಲ್ಲಿ ಪ್ರಾಪ್ತಿಯಾಗುವ ಅನುಗ್ರಹ ಬೇರೆ ಯಾವುದರಲ್ಲೂ ಪ್ರಾಪ್ತಿಯಾಗುವುದಿಲ್ಲ. 

ಸಂಧ್ಯಾವಂದನೆ ಕಣ್ಣು ಮುಚ್ಚಿ ಜಗತ್ತಿನ ಆಗು ಹೋಗುಗಳಿಂದ ದೂರವಾಗಿ  ಮಾಡುವ ಅಂತರ್ಮುಖೀ ವೃತ್ತಿ. ಇಲ್ಲಿ ದೇವರನ್ನು ಕಾಣಬಹುದು. ದೇವರನ್ನು ಕಾಣುವುದಕ್ಕೆ ಬೇರೇನೂ ಬೇಡ ದೇವರ ಹಾಗೆ ಚಿಂತಿಸಿ. ನಮ್ಮ ಚಿಂತನೆ ಅದು ದೇವರಂತೆ ಚಿಂತಿಸಬೇಕು. ನಮ್ಮ ಅಂತರಂಗದಲ್ಲೇ ಹುಡುಕಬೇಕು. ಅದೇ ಪರಮ ಪವಿತ್ರ ದೇವರು.  ನಮ್ಮ ಮಟ್ಟಿಗೆ ನಮ್ಮ ಅಂತರಂಗದಷ್ಟು ಪವಿತ್ರ ಸ್ಥಳ ಬೇರೊಂದಿಲ್ಲ.  ಉಳ್ಳವರು ಶಿವಾಲಯವ ಮಾಡುವರು, ನಾನೇನು ಮಾಡಲಯ್ಯ,  ಎನ್ನ ಕಾಲೇಕಂಬ ಶಿರವೇ ಹೊನ್ನ ಕಲಶವಯ್ಯ ಅಂತ ಹೇಳಿದ ಹಾಗೆ ನಮ್ಮ ಹೃದಯ ಭಗವಂತನ ಪವಿತ್ರ ಸ್ಥಾನ. ಅಂತಹ ದೇವರಿಗೆ ಭಯ ಪಡುವುದೆಂದರೆ ನಮಗೆ ನಾವೇ ಭಯ ಪಟ್ಟಂತೆ. ದೇವರೆಂದರೆ ಏಕೆ ಭಯ ಪಡಬೇಕು? ಸಕಲ ಭಯ ನಿವಾರಕ ಅಂತ ನಾವು ಭಗವಂತನನ್ನು ಕಾಣುವಾಗ ಅದೇ ಭಗವಂತ ಭಯೋತ್ಪಾದಕ ಹೇಗಾಗುತ್ತಾನೆ?    ಭಯ ಪಡಬೇಕಾಗಿರುವುದು ನಿಯಮದಲ್ಲಿ ಇಲ್ಲದ ದುಷ್ಟ ಶಕ್ತಿಗಳಿಗೆ. ಭೂತ ಪ್ರೇತಾದಿ ದೆವ್ವಗಳಿಗೆ. ದೇವರಿಗೆ ಭಯ ಪಡುವ ಅವಶ್ಯಕತೆ ಇಲ್ಲ. ಕೇವಲ ಭಕ್ತಿ ಗೌರವ ನಿಷ್ಠೆ ಇದ್ದರೆ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ. 

ಭಯದಿಂದ ಹುಟ್ಟುವ ಭಕ್ತಿ,  ಭಯ ಕರಗಿ ನಾಶವಾಗುವ ತನಕ ಇರುತ್ತದೆ. ಒಬ್ಬ ದೇವಾಲಯ ಕಟ್ಟಿದನಂತೆ. ರಾತ್ರೋ ರಾತ್ರಿ ಅದನ್ನು ಪೂರ್ಣ ಗೊಳಿಸಿ ಭಾಗಿಲು ಹಾಕಿ ಹೋದನಂತೆ. ಊರವರೆಲ್ಲ ನೋಡುತ್ತಾರೆ ದೇವಾಲಯ ಎದ್ದು ನಿಂತಿದೆ. ಎಲ್ಲರೂ ಮುಚ್ಚಿದ ಬಾಗಿಲು ತೆರೆಯದೆ ಹೊರಗಿನಿಂದಲೇ ಭಯ ಭಕ್ತಿಯಿಂದ ನಮಸ್ಕರಿಸುತ್ತಾರೆ. ಅವರಲ್ಲೊಂದು ಭಯವಿರುತ್ತದೆ. ನಮಸ್ಕರಿಸದಿದ್ದರೆ ಏನಾಗಿಬಿಡುವುದೋ ಎಂಬ ಅತಂಕವಿರುತ್ತದೆ. ಒಂದು ದಿನ ಒಬ್ಬಾತ ಅದರ ಬಾಗಿಲು ತೆಗೆದು ನೋಡಿದ. ಅಲ್ಲೇನು ಇದೆ? ದೇವರ ಮೂರ್ತಿ ಇಲ್ಲ. ಅಲ್ಲಿ ಕಟ್ಟಿದವನು ಬಿಟ್ಟು ಹೋದ  ತುಕು ಹಿಡಿದ ಹಾರೆ ಗುದ್ದಲಿ ಇರುತ್ತದೆ. ಅಷ್ಟೆ ಅದುವರೆಗೆ ಇದ್ದ ಭಯ ಹೋಯಿತು. ಭಕ್ತಿ ತಾನಾಗಿ ದೂರವಾಯಿತು.  ನಮ್ಮ ಅಮ್ಮ ಒಂದು ದಿನ ಹೇಳಿದರು ಮೊದಲೆಲ್ಲ ಹಿರಿಯರೆಂದರೆ ಎಷ್ಟು ಭಯ ಭಕ್ತಿ ಗೌರವ ಇರುತ್ತಿತ್ತು. ಈಗ ಕಾಲ ಬದಲಾಗಿದೆ. ಯಾರಿಗೂ ಭಯವೂ ಇಲ್ಲ ಭಕ್ತಿಯೂ ಇಲ್ಲ ಗೌರವ ಪ್ರೀತಿಯೂ ಇಲ್ಲ. ಅವರು ಹೇಳಿದ್ದರಲ್ಲಿ ಅರ್ಧ ಸತ್ಯಾಂಶ ಇದೆ. ನಾನು ಹೇಳಿದೆ ಭಯದಿಂದ ಹುಟ್ಟಿದ ಗೌರವ ಭಯ ನಾಶವಾಗುವ ತನಕ ಇರುತ್ತದೆ. ನಮ್ಮ ಅಪ್ಪ ಅಜ್ಜ ಹೀಗೆ ಹಿರಿಯರಾದಿಯಾಗಿ ಎಲ್ಲರೆಂದರೆ ನಮಗೆ ಭಯ. ಅವರು ಮನೆಯಲ್ಲಿದ್ದರೆ ನಾವು ಉಸಿರೆತ್ತುವ ಹಾಗಿಲ್ಲ. ಧ್ವನಿಯೆತ್ತಿ ಮಾತನಾಡುವ ಹಾಗಿಲ್ಲ. ಅದನ್ನೇ ಅವರು ಗೌರವ ಅಂತ ತಿಳಿದುಕೊಂಡಿದ್ದರು. ಆದರೆ ಆ ಭಯ ಎಲ್ಲಿಯ ತನಕ? ನಾವು ಮಕ್ಕಳಾಗಿರುವ ತನಕ... ಅದು ಕಳೆದು ದೊಡ್ಡವರಾದ ನಂತರ ನಮಗೆ ಲೋಕ ಅರಿವಾಗುತ್ತದೆ. ಸಹಜವಾಗಿ ಭಯ ದೂರವಾಗುತ್ತದೆ. ಅಪ್ಪ ಅಜ್ಜ ಎಂಬ ಭಯ ದೂರವಾಗುತ್ತದೆ. ಮತ್ತೆ ಅಲ್ಲಿ ಪ್ರೀತಿ ಎಲ್ಲಿ ಉಳಿಯುತ್ತದೆ? ಒಂದು ಸಲ ಹಿರಿಯರು ಈ ಭಯವನ್ನು ಸೃಷ್ಟಿಸುವ ಬದಲು ಸಲುಗೆ ಪ್ರೀತಿಯಿಂದ ಆತ್ಮೀಯತೆಯಿಂದ ವ್ಯವಹರಿಸಲಿ. ಆಗ ಹುಟ್ಟಿಕೊಳ್ಳುವ ಪ್ರೀತಿ ಅದು ವಯಸ್ಸು ಕಳೆದರೂ ಶಾಶ್ವತವಾಗಿರುತ್ತದೆ. ನನ್ನ ಅಪ್ಪ ನನ್ನ ಅಜ್ಜ ಎಂಬ ಪ್ರೀತಿ ಗೌರವ ಯಾರ ಅಪ್ಪಣೆಗೂ ಕಾಯದೆ ಸ್ಥಿರವಾಗಿ ಉಳಿಯುತ್ತದೆ. ಮಕ್ಕಳಲ್ಲಿ ಭಯ ಹುಟ್ಟಿಸಿ ಪಡೆದ ಪ್ರೀತಿ ಗೌರವ ಮಕ್ಕಳು ದೊಡ್ಡವರಾಗುವಾಗ ನಾಶವಾಗುತ್ತದೆ. ಯಾವಾಗ ಮನೆಯಲ್ಲಿ ಹಿರಿಯರ ಅಸ್ತಿತ್ವ ಇರುಸು ಮುರಿಸಿನಿಂದ ಬಂಧನಕ್ಕೆ ಕಾರಣವಾಗುತ್ತದೋ ಆಗ ಅಲ್ಲಿ ಗೌರವ ಪ್ರೀತಿ ಇರುವುದಕ್ಕೆ ಸಾಧ್ಯವಿರುವುದಿಲ್ಲ. ಕೇಳಿ ಪಡೆಯುವ ಪ್ರೀತಿಯಲ್ಲಿ ಕೇಳದೇ ಪಡೆಯುವ ದ್ವೇಷವೂ ಅಡಗಿರುತ್ತದೆ. 

ವರ್ಷವಿಡೀ ನೀರೆರೆಯದ  ಗಿಡಕ್ಕೆ ಒಣಗಿದಾಗ  ವರ್ಷಕ್ಕೆ ಒಂದು ಬಾರಿ ಕೊಡ ತುಂಬ ನೀರೆರದೆರೆ ಅದು ಚಿಗುರಬಹುದೇ ? ನಿತ್ಯ ಪೂಜೆ ಅಥವಾ ನಿತ್ಯ ಕರ್ಮಗಳು ನಿತ್ಯ ಗಿಡಕ್ಕೆ ನೀರು ಎರೆದಂತೆ. ವರ್ಷವಿಡೀ ನಾವು ನಿತ್ಯ ಕರ್ಮಗಳನ್ನು ಮಾಡದೆ ಯಾವಗಲೋ ಒಮ್ಮೆ ಕಾಶಿಗೆ ಹೋಗಿ ಪಾಪ ಪರಿಹಾರ ಮಾಡಿಬಿಡುತ್ತೇನೆ ಎಂದುಕೊಂಡರೆ ಸಾಧ್ಯವಾಗುವುದಿಲ್ಲ. ನಿತ್ಯ ಕರ್ಮ ಎಂಬುದು ಕರ್ತವ್ಯ, ಅದನ್ನು ಮಾಡದ ಕರ್ತವ್ಯ ಭ್ರಷ್ಟತೆ ಯಾವ ಕ್ಷೇತ್ರ ದರ್ಶನ ಮಾಡಿದರೂ ಪರಿಹಾರವಾಗುವುದಿಲ್ಲ.  ಮನೆಯಲ್ಲಿ ನಿತ್ಯ ಒಂದು ದೀಪ ಹಚ್ಚಿ ಕೈಮುಗಿದರೂ ಅದು ತೀರದ ಪಾಪವನ್ನು ಪರಿಹರಿಸಿ ಭಗವಂತನ ಸಾನ್ನಿಧ್ಯ ನಿತ್ಯ ದೊರಕುವಂತೆ ಮಾಡಿಬಿಡುತ್ತದೆ. ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸುವುದು ವೃತವಾದರೆ ನಿತ್ಯ ಮನೆಯಲ್ಲಿ ಆಚರಿಸುವುದು ಕರ್ತವ್ಯವಾಗಿಬಿಡುತ್ತದೆ. ವೃತ ಹಾಗೂ ಕರ್ಮದ ನಡುವೆ ವೆತ್ಯಾಸವಿದೆ. ಮನೆ ಬಾಗಿಲಿಗೆ ಬಂದ ಭಿಕ್ಷುಕನಿಗೆ ಅನ್ನ ಕೊಡುವುದು ದಾನವಾದರೆ, ಹೆತ್ತ ಅಮ್ಮನಿಗೆ ಆಹಾರ ಕೊಡುವುದು ಕರ್ತ್ಯವ್ಯವಾಗುತ್ತದೆ. ಅದೇ ರೀತಿ ನಮ್ಮ ಕರ್ತವ್ಯ ಮೊದಲು ಪಾಲಿಸಲ್ಪಡಬೇಕು.  

ಮೊನ್ನೆ ಮೊನ್ನೆ ರಚನೆಯಾದ ರಾಷ್ಟ್ರ ಗೀತೆ ಕೇಳುವಾಗ ಗೌರವ ಶ್ರಧ್ದೆಯಿಂದ ಎದ್ದು ನಿಲ್ಲುತ್ತೇವೆ. ಆ ಪ್ರಜ್ಞೆ ನಮ್ಮ ಧಾರ್ಮಿಕ ಕಾರ್ಯಗಳಲ್ಲಿ ಇಲ್ಲ. ಆನಾದಿ ಕಾಲದಿಂದ ನಮ್ಮವರೆಗೆ ಬಂದ ವೇದ ಮಂತ್ರ ಶ್ಲೋಕಗಳನ್ನು ಜಪಿಸುವಾಗ ಒಂದಿಷ್ಟು ಶ್ರದ್ಧೆ ಬೆಳೆಸಿದರೆ ಮುಂದಿನ ಪೀಳಿಗೆಗೆ ನಾವುಕೊಡುವ ದೊಡ್ಡ ಕೊಡುಗೆಯಾಗುತ್ತದೆ. ಈ ವೇದ ಮಂತ್ರಗಳು ಯಾವಾಗ ಹುಟ್ಟಿಕೊಂಡಿತು ಅದು ನಿಖರವಾಗಿ ತಿಳಿದಿಲ್ಲ. ಆದರೂ ಅದು ನಮ್ಮ ತನಕ ಬಂದು ನಿಂತಿದೆ.  ನಮ್ಮ ಹಿರಿಯರಿಂದ ನಮ್ಮಲ್ಲಿ ತನಕ ಬಂದ ಈ  ಗಾಯತ್ರಿ ಮಂತ್ರ ಅಥವ ಯಾವುದೋ ಸ್ತುತಿಯಾಗಿರಬಹುದು ಅದು ಯಾವಾಗ ರಚಿಸಲ್ಪಟ್ಟಿತೋ ಗೊತ್ತಿಲ್ಲ. ಎಲ್ಲಿ ಬರೆದಿಡಲಾಗಿದೆ ಗೊತ್ತಿಲ್ಲ. ಆದರೂ ಅದು ನಮ್ಮಲ್ಲಿವರೆಗೆ ಉಳಿದು ಬಂದಿದೆ. ಆದರೂ ಅದರ ಬಗ್ಗೆ ನಮಗೆ ಲಕ್ಷ್ಯವಿಲ್ಲ. ಕಾಟಾಚಾರಕ್ಕೆ ಅಥವಾ ಭಯದಿಂದ ನಾವು ಇವುಗಳನ್ನು ಅನುಸರಿಸುವ ಹಾಗಿಲ್ಲ. ಒಂದು ವೇಳೆ ಭಗವಂತ ನಮ್ಮನ್ನು ಇದೇ ರೀತಿ ಕಾಟಾಚರಕ್ಕೆ ಕಂಡರೆ ಅದಕ್ಕೆ ಪರಿಹಾರ ವಿರುವುದಿಲ್ಲ. ಭಗವಂತ ಕಾಟಾಚಾರಕ್ಕೆ ನಮ್ಮನ್ನು ಕಾಣಲಾರ ಎಂಬ ವಿಶ್ವಾಸ ನಮಗೆ ಇರುವುದರಿಂದ ನಾವು ಭಗವಂತನನ್ನು ಭಯದಿಂದ ಕಾಣುತ್ತೇವೆ. 

ಭಯವಿದ್ದರೆ ನಾವು ನಮ್ಮ ಹೆತ್ತ ಅಮ್ಮನ ಬಳಿಗೆ ಹೋಗುವುದು ಹೇಗೆ ಸಾಧ್ಯವಿಲ್ಲವೋ , ಅದೇ ರೀತಿ ಭಗವಂತನನ್ನು ನಾವು ಭಯದಿಂದ ಕಂಡರೆ ಆತನ ಬಳಿಗೆ ಹೋಗುವುದಕ್ಕೆ ಸಾಧ್ಯವಿಲ್ಲ. ಬದುಕಿನ ಪರಮ ಗುರಿಯತ್ತ ನಮಗೆ ಹೋಗುವುದಕ್ಕೆ ಸಾಧ್ಯವಿಲ್ಲ ಎಂದಾದರೆ ಬೇರೆ ಯಾವ ಕಡೆಗೆ ಹೋದರೂ ಬದುಕು ಸಾರ್ಥಕವಾಗುವುದಿಲ್ಲ. ಭಗವಂತ ನಮಗೆ ಕೊಟ್ಟ ಬದುಕಿನ ಬಗ್ಗೆ ನಮಗೆ ಅಭಿಮಾನವಿರಬೇಕು. ಅದರ ಬಗ್ಗೆ ಕೃತಜ್ಞತಾ ಭಾವವಿದ್ದರೆ ಭಕ್ತಿ ಜಾಗೃತವಾಗಿರುತ್ತದೆ. ಭಕ್ತಿ ಶ್ರಧ್ದೆಯಿಂದ ಕೂಡಿರಬೇಕು. ಅದು ಯಾವುದೇ ಭ್ರಮೆಗೆ ಒಳಗಾಗಿ ಪರತಂತ್ರವಾಗಿರಬಾರದು. ದುಃಖ ಸಂತೋಷ ನಗು ಅಳು ಈ ಎಲ್ಲ ಭಾವೋದ್ರೇಕದಿಂದ ಹೊರತಾಗಿ ಭಕ್ತಿ ನಿರ್ವಿಕಲ್ಪ ಭಾವದಿಂದ ನಿಸ್ವಾರ್ಥದಿಂದ ಕೂಡಿರಬೇಕು. ಯಾವುದೇ ಭಾವದಲ್ಲಿ ಇರುವ ಭಕ್ತಿ ಪರಿಪೂರ್ಣವಾಗುವುದಿಲ್ಲ.  ಯಾವುದೇ ಸ್ವಾರ್ಥಾಪೇಕ್ಷೆಯ ಪ್ರಭಾವದಲ್ಲಿ ಇರುವ ಭಕ್ತಿ ನಿರ್ವಿಕಲ್ಪವಾಗಿರುವುದಿಲ್ಲ.  ಭಕ್ತಿ ಎಂದರೆ ಅದು ಲಕ್ಷ್ಯ. ಭಗವಂತನ ಕಡೆಗೆ  ಇರುವ ಲಕ್ಷ್ಯ.