ನಂಬಿಕೆ ವಿಶ್ವಾಸ ಎಂದು ಬರುವಾಗ ನನಗೆ ನೆನಪಿಗೆ ಬರುವುದು "ಅದಾಮಿಂದೆ ಮಗನ್ ಅಬು " ಎಂಬ ಹಳೆಯ ಮಲಯಾಳಂ ಚಲನ ಚಿತ್ರ. ಇದರ ಬಗ್ಗೆ ಹಿಂದೆ ಕಾಶಿ ಯಾತ್ರೆಯ ಕುರಿತ ಲೇಖನದಲ್ಲಿ ಒಂದು ಸಲ ಬರೆದಿದ್ದೆ. ಈಗಲೂ ಅದೇ ಬಗೆಯ ವಿಷಯ ಹೇಳುವುದಕ್ಕೆ ಇದು ಬಿಟ್ಟರೆ ನನಗೆ ಬೇರೆ ಯಾವ ಸೂಕ್ತ ಉದಾಹರಣೆಯೂ ನೆನಪಿಗೆ ಬರುವುದಿಲ್ಲ. ಇದರಲ್ಲಿ ಕಥಾನಾಯಕ ಪತ್ನಿ ಸಹಿತ ಹಜ್ ಗೆ ಹೋಗುವ ಸಿದ್ದತೆಯ ಕಥಾವಸ್ತು. ಅದಾಂನ ಮಗ ಅಬುವಾಗಿ ಹಿರಿಯ ನಟ ಸಲೀಂ ಕುಮಾರ್ ಮನೋಜ್ಞವಾಗಿ ಅಭಿನಯಿಸಿದ ಚಲನಚಿತ್ರವಿದು. ಸಂಪ್ರದಾಯಸ್ಥ ಮುಸಲ್ಮಾನನಾಗಿ ಹಜ್ ಗೆ ಹೋಗುವುದಕ್ಕೆ ಆತ ಎಲ್ಲ ಸನ್ನಾಹವನ್ನೂ ಮಾಡುತ್ತಾನೆ. ಹೋಗುವ ಮೊದಲು ನಿಯಮದಂತೆ, ಪರಿಶುದ್ದನಾಗಬೇಕು. ಯಾರಿಗೂ ವಂಚನೆ ಮಾಡದೆ, ಇರುವ ಋಣ ಎಲ್ಲವನ್ನು ಸಂದಾಯ ಮಾಡಬೇಕು. ಯಾರಲ್ಲೇ ಆಗಲಿ ದ್ವೇಷ ಮನಸ್ತಾಪ ಇದ್ದರೆ ಅದನ್ನು ಪರಿಹರಿಸಿಕೊಳ್ಳಬೇಕು. ಶುದ್ದ ಮನಸ್ಸಿನಿಂದ ಶುದ್ದ ಅಂತಃಕರಣದಲ್ಲಿ ಹಜ್ ಯಾತ್ರೆ ಮಾಡಬೇಕು. ಚಲನ ಚಿತ್ರದ ಪ್ರತಿಯೊಂದು ಸನ್ನಿವೇಶವೂ ಈ ತತ್ವವನ್ನು ತೋರಿಸುತ್ತಾ ಸಾಗುತ್ತದೆ. ಎಲ್ಲಕ್ಕಿಂತ ಮೊದಲಾಗಿ ಭಗವಂತನ ಮೇಲೆ, ತನ್ನ ಧರ್ಮದ ಮೇಲೆ ಆತನಿಗಿರುವ ವಿಶ್ವಾಸ ನಂಬಿಕೆ ತುಂಬಾ ಗಾಢವಾಗಿರುತ್ತದೆ. ಭಗವಂತ ಮತ್ತು ಆತನ ಬಳಿಗೆ ಹೋಗುವ ಹಾದಿ ಪರಿಶುದ್ದತೆ ಇದೆಲ್ಲವನ್ನು ನೋಡಿದರೆ ಮನುಷ್ಯ ಕೇವಲ ಸ್ನಾನ ಮಾಡಿ ದೇಹ ಶುದ್ದಿ ಹೊಂದಿದರೆ ಸಾಲದು, ತನ್ನ ಮನಸ್ಸು, ಬದುಕಿನ ಹಾದಿ ಎಲ್ಲವೂ ಪರಿಶುದ್ದವಾಗಬೇಕು. ಇದೇ ರೀತಿ ಎಲ್ಲಾ ಪಾಪ ದುರಿತಗಳಿಂದ ಪರಿಶುದ್ಧನಾಗುವುದು ಎಂದರ್ಥ. ಎಲ್ಲ ಧರ್ಮದಲ್ಲಿರುವ ತತ್ವ ಇದೇ. ಅದರ ಮೇಲೆ ಇರಬೇಕಾದ ನಂಬಿಕೆಯೂ ಅದೇಆಗಿರುತ್ತದೆ. ಮನುಷ್ಯ ತನ್ನ ನಂಬಿಕೆಯ ವಿಷಯ ಬರುವಾಗ ಎಂದೂ ಆತ್ಮವಂಚನೆ ಮಾಡಲಾರ. ಮಾಡಿದರೆ ಆತನ ನಂಬಿಕೆ ಕಲುಷಿತವಾಗಿಬಿಡುತ್ತದೆ. ಆತ ಬಡತನದಲ್ಲೂ ಬಹಳ ಕಷ್ಟ ಪಟ್ಟು, ಜತೆಯಲ್ಲಿ ಯಾರೂ ಇಲ್ಲದೇ ಇದ್ದರೂ ಇದ್ದ ಮನೆ ವಸ್ತು ಎಲ್ಲವನ್ನು ಬಿಟ್ಟು ಹಜ್ ಗೆ ಹೋಗುವಾಗ ಮರಳಿ ಬರುವ ನಿರೀಕ್ಷೆ ಇರುವುದಿಲ್ಲ. ಆದರೂ ಹೋಗಬೇಕು ಎನ್ನುವ ಹಂಬಲ ಅದಕ್ಕಾಗಿ ಇರುವ ಪ್ರಯತ್ನ ಕೇವಲ ಆತನ ನಂಬಿಕೆ ವಿಶ್ವಾಸ. ಎಲ್ಲ ಧರ್ಮದ ನೆಲೆಗಟ್ಟು ಇರುವುದು ವಿಶ್ವಾಸದಲ್ಲಿ. ಅದನ್ನುಮೌಢ್ಯ ಎಂದು ವಿಶ್ವಾಸ ಬೆಲೆ ತಿಳಿಯದವರು ಹೇಳುತ್ತಾರೆ.
ಸಾವಿರ ಸಂಖ್ಯೆಯ ಜನ ಎನ್ನುವಾಗ ನಮಗೆ ಗಾಬರಿಯಾಗುತ್ತದೆ. ಆದರೆ ಪ್ರಯಾಗ್ ರಾಜ್ ನ ಮಹಾಕುಂಭದಲ್ಲಿ ಕೋಟಿ ಕೋಟಿ ಸಂಖ್ಯೆಯಲ್ಲಿ ಕೇವಲ ಗಂಗೆಯ ನೀರು ಸೋಕಿಸಿಕೊಳ್ಲುವುದಕ್ಕೆ ಬರುವುದೆಂದರೆ ವಿಶ್ವ ನಿಬ್ಬೆರಗಾಗುತ್ತದೆ. ಇದೊಂದು ಜಗತ್ತಿನ ಅದ್ಭುತ ಎನ್ನಬೇಕು. ಇಷ್ಟಾದರೂ ಗಂಗೆ ತನ್ನ ಮಡಿಲಲ್ಲಿ ಎಲ್ಲರನ್ನು ಸೇರಿಸಿ ಪಾವನವಾಗಿಸುತ್ತಾಳೆ. ಮನುಷ್ಯನ ನಂಬಿಕೆ ಎಂದರೆ ಅದೊಂದುಉತ್ಕಟ ಭಾವದ ಸಂಕೇತ.
ಇತ್ತೀಚೆಗೆ ದೇಶೀಯ ಉತ್ಸವವಾಗಿ ಆಚರಿಸಿದ ಮಹಾ ಕುಂಭ ಮೇಳ, ಮನುಷ್ಯನ ಈ ನಂಬಿಕೆಗಳಿಗೆ ಸಾಕ್ಷ್ಯವಾಗಿ ಕಣ್ಣ ಮುಂದೆ ನಿಂತರೂ ವಿವಾದಗಳು ಈ ನಂಬಿಕೆಗಳಿಗೆ ಸವಾಲಾಗಿ ನಿಂತು ಬಿಡುತ್ತದೆ. ಮನುಷ್ಯ ಮಾತ್ರ ಸಹಜವಾಗಿ ಈ ವಿವಾದಗಳ ಬಗ್ಗೆ ಪರಿವೆ ಇಲ್ಲದೆ ತನ್ನ ನಂಬಿಗೆ ವಿಶ್ವಾಸದ ಮೇಲೆ ಗಾಢವಾಗಿ ವರ್ತಿಸುತ್ತಾನೆ. ಪರಿಶುದ್ದನಾಗುವುದು ಮನುಷ್ಯ ಜನ್ಮದ ಮೂಲ ತತ್ವ. ಮಹಾ ಕುಂಭದಲ್ಲಿ ಮುಳುಗೆದ್ದವರಿಗೆ ಬೇರೆ ಯಾವ ಧ್ಯೇಯವೂ ಇದ್ದಂತಿಲ್ಲ. ಯಾವುದೋ ಇರಾದೆಯಿಂದ, ಸಂಕಲ್ಪದಿಂದ ಮನುಷ್ಯ ದೇವರ ಎದುರು ಹಲವು ಹರಿಕೆಗಳನ್ನು ಹೊರುತ್ತಾನೆ. ತನ್ನ ಹಲವಾರು ಹಂಬಲಗಳಿಗೆ ದೈವಾನುಗ್ರಹ ಒದಗಿ ಬರಲಿ ಎಂದು ಆಶಿಸುತ್ತಾನೆ. ಅದು ವ್ಯಾಪಾರ ವ್ಯವಹಾರದ ಅಭಿವೃದ್ಧಿಯಾಗಲಿ , ಮಕ್ಕಳ ಉಜ್ವಲ ಭವಿಷ್ಯತ್ ಗೆ ಆಗಲಿ , ಅಥವಾ ಎದುರಾದ ಕಷ್ಟ ನಷ್ಟ ಪರಿಹರಿಸುವುದಕ್ಕೆ ಹರಕೆ ಹೊತ್ತು ದೇವರಿಗೆ ಮೊರೆ ಹೋಗುತ್ತಾನೆ. ದೇವರು ಪರಿಹರಿಸುತ್ತಾನೋ ಇಲ್ಲವೋ ಆದರೆ ತನ್ನ ನಂಬಿಕೆಯ ಮೇಲೆ ಅಚಲ ವಿಶ್ವಾಸ. ಕಷ್ಟ ಪರಿಹಾರವಾಗದೇ ಇದ್ದರೂ ತನ್ನ ಕರ್ಮವನ್ನು ನೆನೆಯುತ್ತಾನೆ ಹೊರತು ತನ್ನ ನಂಬಿಕೆಯ ದೇವರನ್ನು ದೂರುವುದಿಲ್ಲ. ಈ ಮಹಾಕುಂಭದಲ್ಲಿ ಮಿಂದೆದ್ದ ಕೋಟಿ ಕೋಟಿ ಮಂದಿಗಳಲ್ಲಿ ಕೇಳಿದರೆ ಇಂತಹ ಯಾವ ಉದ್ದೇಶಗಳೂ ಇರುವುದಿಲ್ಲ. ಕೇವಲ ಕೇವಲ ತನ್ನ ಪಾಪ ಪರಿಹಾರಕ್ಕೆ ಗಂಗೆಯ ಮಡಿಲಿಗೆ ತಲೆ ಕೊಡುತ್ತಾನೆ. ಇದನ್ನು ವಿವಾದಕ್ಕೆ ಎಳೆಯುವವರಿಗೆ ಇಂತಹ ಪವಿತ್ರ ವಿಚಾರಗಳು ಅದರ ಗಂಭೀರತೆ ಅರ್ಥವಾಗುವುದಿಲ್ಲ. ಯಾರಾದರೂ ನನಗೆ ಘನ ಸಂಪತ್ತು ಐಶ್ವರ್ಯ ಒದಗಿಬರಲಿ ಎಂದು ಗಂಗೆಯಲ್ಲಿ ಮುಳುಗುವುದಿಲ್ಲ. ಮುಳುಗಿ ಪವಿತ್ರನಾಗುವುದು ಮಾತ್ರ ಆತನ ಧ್ಯೇಯ. ಅದು ಆದಾಂಮಿಂದೆ ಮಗ ಅಬುವಿನ ನಂಬಿಕೆಗಿಂತ ಏನೂ ಭಿನ್ನವಾಗಿ ಇಲ್ಲ.
ನಂಬಿಕೆಗಳು ವಿಶ್ವಾಸಗಳು ಅದರಲ್ಲೂ ಸನಾತನ ಹಿಂದೂ ಸಂಸ್ಕೃತಿ ಮೌಢ್ಯವಾಗಿ ಹಲವರಿಗೆ ಕಾಣುತ್ತದೆ. ಅದನ್ನು ಮೌಢ್ಯ ಎಂದು ಹೇಳುವುದರಲ್ಲೂ ಸ್ವಾರ್ಥವಿರುತ್ತದೆ. ಈ ಸ್ವಾರ್ಥದ ಅರಿವಿದ್ದೇ ಮನುಷ್ಯ ಕೋಟಿ ಸಂಖ್ಯೆಯಲ್ಲಿ ಮುಳುಗೇಳುತ್ತಿರುವುದು. ಒಂದು ಕೊಳಚೆ ಹೊಂಡದಲ್ಲಿ ಚಿನ್ನದ ತುಂಡು ಒಂದು ಬಿದ್ದಿರುತ್ತದೆ. ಆ ಚಿನ್ನ ಕೈವಶ ಮಾಡಿಕೊಳ್ಳುವುದಕ್ಕೆ ಕೊಳಚೆ ನೀರಾದರೂ ಅದನ್ನು ಲೆಕ್ಕಿಸದೆ ಹೊಂಡಕ್ಕೆ ಇಳಿದುಬಿಡುತ್ತಾನೆ. ಆ ನೀರು ಕೊಳಚೆ ಅಂತ ಆಕ್ಷಣಕ್ಕೆ ಅನಿಸುವುದಿಲ್ಲ. ಯಾರೋ ಒಬ್ಬ ಕೊಳಚೆ ಹೊಂಡಕ್ಕೆ ಬಿದ್ದು ಬಿಡುತ್ತಾನೆ. ಬಿದ್ದವನ ಜೀವದ ಮೌಲ್ಯವನ್ನು ಗ್ರಹಿಸಿ ಕೊಳಚೆಯನ್ನು ಲೆಕ್ಕಿಸದೆ ಹೊಂಡಕ್ಕೆ ಇಳಿದು ಬಿಡುತ್ತಾರೆ. ಇಲ್ಲಿನ ಕೊಳಕು ಗಮನಾರ್ಹವೆನಿಸುವುದಿಲ್ಲ. ಗಂಗೆಯ ನೀರು ಕಲ್ಮಷ ಅಂತ ಹೇಳಿದರೆ ಅದನ್ನು ಕೇಳಿಸಿಕೊಳ್ಳುವ ವ್ಯವಧಾನ ಇರುವುದಿಲ್ಲ. ಚಿನ್ನಕ್ಕಿಂತಲೂ ಜೀವಕ್ಕಿಂತಲೂ ಮಿಗಿಲಾದ ಒಂದು ಭಾವನೆ ಆ ಗಂಗೆಯಲ್ಲಿ ಅಡಕವಾಗಿರುತ್ತದೆ. ಒಂದು ಮುಳುಗಿನ ಜಲಸ್ಪರ್ಷದಲ್ಲಿ ಆ ಮಹತ್ವವಿರುತ್ತದೆ. ಆದರೆ ಇದನ್ನು ಲೇವಡಿ ಮಾಡುವ ಒಂದೇ ಉದ್ದೇಶದಲ್ಲಿ ಇನ್ನಿಲ್ಲದ ವಿವಾದ ಸೃಷ್ಟಿ ಮಾಡುತ್ತಾರೆ. ಗಂಗೆಯ ನೀರು ಸ್ನಾನಕ್ಕೆ ಯೋಗ್ಯವಲ್ಲ ಎಂದು ಹೇಳುವವರಿಗೆ ಈ ಗಂಗೆಯಲ್ಲಿ ಸಿಗುವ ಪರಿಶುದ್ದತೆಯ ಅರಿವು ಇರುವುದಿಲ್ಲ. ದೇಹ ಶುದ್ದಿಗಾಗಿ ಮನುಷ್ಯ ಇಲ್ಲಿ ಮುಳುಗುವುದಿಲ್ಲ. ಇಲ್ಲಿ ಆತ್ಮ ಶುದ್ಧಿ ಮಾತ್ರ ಮುಖ್ಯವಾಗುತ್ತದೆ. ಆದರೆ ಲೌಕಿಕ ಚಿಂತನೆಯ ಮೂರ್ಖ ಮನಸ್ಸುಗಳಿಗೆ ಇಲ್ಲಿ ಸಿಗುವ ಪರಿಶುದ್ದಿಯ ಜ್ಞಾನವಿರುವುದಿಲ್ಲ. ಈ ಘಳಿಗೆಯಲ್ಲಿ ಶುದ್ದವಾದ ದೇಹ....ಮತ್ತೊಂದು ಘಳಿಗೆಯಲ್ಲಿ ಮಲಿನವಾಗಬಹುದು. ಆದರೆ ಪೂರ್ಣ ಜನ್ಮವೇ ಪಾವನವಾಗಿ ಪರಿಶುದ್ದವಾಗುವ ನಂಬಿಕೆಯಲ್ಲಿ ಕ್ಷುಲ್ಲಕ ದೇಹ ಶುದ್ದಿ ಮುಖ್ಯವಾಗುವುದಿಲ್ಲ. ಆದರೆ ಗಂಗೆಯಲ್ಲಿ ಮಿಂದರೆ ಹೊಟ್ಟೆತುಂಬುತ್ತಾ ಎಂದು ಕೇಳುವ ಅದರ ಬಗ್ಗೆ ಅಪಸ್ವರ ಎತ್ತುವ ಮೂರ್ಖರಿಗೆ ಈ ಪಾವಿತ್ರ್ಯತೆ ಅರ್ಥವಾಗುವುದಿಲ್ಲ. ಕೇವಲ ಲೌಕಿಕ ಚಿಂತನೆ. ದೇಹದ ಹಸಿವಿನ ಬಗ್ಗೆ ಮಾತ್ರ ಯೋಚಿಸುವವನಿಗೆ ಅದರಿಂದಾಚೆಗಿನ ಜಗತ್ತಿನ ಹಸಿವು ಕಣ್ಣಿಗೆ ಕಾಣುವುದಿಲ್ಲ. ಮೋಕ್ಷದ ಅರ್ಥ ತಿಳಿಯದವನು ಹಸಿವಿನ ಹಿಂದೆ ಹೋಗುತ್ತಾನೆ. ಮನುಷ್ಯನಿಗೆ ಕೇವಲ ಹಸಿವು ಮಾತ್ರ ಮುಖ್ಯವಾಗುವುದಾದರೆ ಉಳಿದವುಗಳ ಹಿಂದೆ ಹೋಗುವ ಉದ್ದೇಶವಾದರೂ ಏನು?
ಯಾವುದೇ ಯಶಸ್ಸಿನ ಹಿಂದೆ ಒಂದು ಪರೀಕ್ಷೆ ಇರುತ್ತದೆ. ನಮ್ಮನ್ನು ಪರೀಕ್ಷಿಸದೇ ಪರೀಕ್ಷೆಗೆ ಒಡ್ಡದೆ ಸಿಗುವ ಯಾವುದೇ ಯಶಸ್ಸು ಅದು ನಮ್ಮ ಅರ್ಹತೆಯನ್ನು ಹೇಳುವುದಿಲ್ಲ. ಅದರಲ್ಲಿ ಆತ್ಮಾನಂದವೂ ಲಭಿಸುವುದಿಲ್ಲ. ಆದರೆ ಒಂದು ಯಶಸ್ಸು ನಮ್ಮನ್ನು ಪರೀಕ್ಷೆಗೊಡ್ಡಿ ನಮ್ಮನ್ನು ಅರೆದು ಅರೆದು ಕೊನೆಯಲ್ಲಿ ಒದಗಿ ಬರುವ ಯಶಸ್ಸುಅದು ಸಂತೋಷಕ್ಕೆ ಕಾರಣವಾಗುವುದು ಮಾತ್ರವಲ್ಲ ಆತ್ಮ ತೃಪ್ತಿಯನ್ನು ಒದಗಿಸುತ್ತದೆ. ನಾವದಕ್ಕೆ ಅರ್ಹರು ಎಂದಾಗುವಾಗ ಅದು ಅಭಿಮಾನಕ್ಕೆ ಕಾರಣವಾಗುತ್ತದೆ. ಹೀಗಿರುವಾಗ ಭಗವಂತನ ಪದವಿ ಎಂಬುದು ಸುಮ್ಮನೇ ಒದಗಿ ಬಂದರೆ ಅದು ಕ್ಷುಲ್ಲಕ ಪದವಿಯಾಗಬಹುದು. ಅದಕ್ಕೆ ಯಾವ ಮೌಲ್ಯವೂ ಇಲ್ಲದಾಗಬಹುದು. ಒಂದು ರೀತಿಯಲ್ಲಿ ಗಂಗೆಯಲ್ಲಿ ಸ್ನಾನ ಮಾಡಿದರೆ ಬಡತನ ನೀಗುತ್ತಾ? ಅಥವಾ ಹೊಟ್ಟೆಯ ಹಸಿವು ಶಮನವಾಗುತ್ತದಾ? ಎಂದು ಕೇಳಿದಂತೆ. ಅದಕ್ಕೆ ಅರ್ಥವೇ ಇರುವುದಿಲ್ಲ. ಹಾಗಾಗಿಯೇ ಭಗವಂತನ ಬಳಿಗೆ ಹೋಗುವಾಗ ಅಲ್ಲಿ ಹಸಿವು ಎಂಬುದನ್ನು ಮನುಷ್ಯ ಮೊದಲು ಪಣಕ್ಕೆ ಒಡ್ಡಿ ಬಿಡುತ್ತಾನೆ. ಗಾಂಧೀಜಿಯ ಸ್ವಾತಂತ್ರ್ಯ ಹೋರಾಟದ ಕಥೆಯಲ್ಲೂ ಇದೇ ಹಸಿವಿನ ತಂತ್ರವಿದೆ. ಒಂದು ಯಶಸ್ಸಿನ ಹಿಂದೆ ಒಮ್ದು ಹಸಿವು ಇದ್ದೇ ಇರಬೇಕು. ಹಸಿವಿನ ರೂಪ ವೆತ್ಯಸ್ತವಾಗಿರಬಹುದು. ಆದರೆ ಹಸಿವು....ಅದೊಂದು ಬದುಕಿನ ಪರೀಕ್ಷೆ.
ಮಹಾ ಕುಂಭ ಆರಂಭವಾದಂದಿನಿಂದ ಒಂದಲ್ಲ ಒಂದು ಅನರೀಕ್ಷಿತ ಘಟನೆಗಳು ನಡೆದವು. ಕೆಲವು ಅವಘಡಗಳು ನಡೆದವು. ಪ್ರತಿಯೊಂದು ಘಟನೆಯಲ್ಲೂ ಒಂದು ಪರೀಕ್ಷೆಯ ರಹಸ್ಯವಿತ್ತು. ಈ ಪರೀಕ್ಷೆಯ ಸೋಲು ಕೂಡ ಒಂದು ಅರ್ಹತೆ. ಅಲ್ಲೊಂದು ಪ್ರಾಮಾಣಿಕತೆಯ ಪದವಿ ಇರುತ್ತದೆ. ಆದರೆ ಪರೀಕ್ಷೆ ಅದು ಎದುರಿಸುವುದಕ್ಕೆ ಇರುವ ಒಂದು ಅವಕಾಶ. ಹಾಗಾಗಿ ಅಲ್ಲಿ ಸಾವಿನ ವರದಿ ಸಾವಿರ ಸಂಖ್ಯೆಯಲ್ಲಿ ಬಂದರೂ ಸಾವಿರದ ಮಂದಿ ಯಾರೂ ಇಲ್ಲ, ಸಾವೇ ಒಂದು ಪದವಿ ಎಂಬಂತೆ ಗಂಗೆಯ ಬಳಿಗೆ ತೆರಳಿದರು. ಸಾವು ಭಯವನ್ನು ಹುಟ್ಟಿಸಲಿಲ್ಲ. ಆ ಸಾವು ಜೀವನ ಪರೀಕ್ಷೆಯಲ್ಲಿ ಹಿಂಜರಿಯುವಂತೆ ಮಾಡಲಿಲ್ಲ. ಒಂದು ಅರ್ಥದಲ್ಲಿ ಸಾವು ಒಂದು ಪರೀಕ್ಷೆಯಾಗಿ ಬದಲಾಗಿ ಹೋದದ್ದು ಸನಾತನ ಧರ್ಮದ ಹಾದಿಯಲ್ಲಿದ್ದ ಬಹಳ ದೊಡ್ಡ ರಹಸ್ಯವಾಗಿ ರುಜುವಾತಾಯಿತು. ಸಾವನ್ನೂ ಸ್ವೀಕರಿಸುವ ಮನಸ್ಥಿತಿಯಲ್ಲಿ ಕೇವಲ ಹಸಿವಿನ ಚಿಂತೆ ಎಲ್ಲಿರುತ್ತದೆ. ಇದನ್ನು ತಿಳಿಯದವರು ಮೂರ್ಖತನದಿಂದ ಹೇಳಬಹುದು ಗಂಗೆಯಲ್ಲಿ ಮಿಂದರೆ ಬಡತನ ಹೋಗುತ್ತದಾ? ಹಸಿವು ನೀಗುತ್ತದಾ ಎಂದು. ಈ ಮರ್ತ್ಯ ಲೋಕದಲ್ಲಿ ಹಸಿವು ಎಂಬುದು ಅನಿವಾರ್ಯ. ಎಲ್ಲದಕ್ಕೂ ಅದೇ ಕಾರಣ. ಆದರೆ ಅದನ್ನು ಮೆಟ್ಟಿನಿಂತವನು . ಜೀವನ ಪರೀಕ್ಷೆಯನ್ನು ಗೆಲ್ಲುತ್ತಾನೆ. ಭಗವಂತನಿಗೆ ಪ್ರಿಯನಾಗುತ್ತಾನೆ. ಅದು ಪ್ರತೀ ಮನುಷ್ಯ ಜೀವಕ್ಕೆ ಪರಮ ಗುರಿಯಾಗಿರುತ್ತದೆ.
ಪ್ರತಿಯೊಂದು ಕೆಲಸದಲ್ಲು ವಿಘ್ನಗಳು ಇದ್ದೇ ಇರುತ್ತವೆ. ಅದು ಒದಗಿ ಬರುವುದು ಒಂದು ರೀತಿಯಲ್ಲಿ ನಮಗೆ ಪರೀಕ್ಷೆಯಾಗಿರುತ್ತದೆ. ಅಲ್ಲಿ ಅವ್ಯವಸ್ಥೆ ಇರುತ್ತದೆ. ಸೌಕರ್ಯದ ಕೊರತೆ ಇರುತ್ತದೆ. ಕೆಲವು ತೊಂದರೆಗಳು ಇರಬಹುದು. ಮನೆಗೆ ಒಂದು ಹತ್ತು ಜನ ಅತಿಥಿಗಳು ಬಂದರೆ ಅವರಿಗೆ ಒಪ್ಪತ್ತಿನ ಊಟ ಹಾಕುವಾಗ ನಮಗೆ ಹಲವು ಸಂಕಷ್ಟಗಳು ಎದುರಾಗುತ್ತವೆ. ಇನ್ನು ಕೋಟಿ ಕೋಟಿ ಸಂಖ್ಯೆಯ ಜನಗಳು ಬರುವಾಗ ಅದೊಂದು ದೊಡ್ಡ ಪರೀಕ್ಷೆಯಾದರೆ ಅದು ನಿರೀಕ್ಷತ ಎಂದು ತಿಳಿದು ಕೊಳ್ಳುವುದರಲ್ಲಿ ಯಶಸ್ಸಿನ ರಹಸ್ಯವಿರುತ್ತದೆ.
ಪ್ರತಿಯೊಂದು ಕೆಲಸದಲ್ಲು ವಿಘ್ನಗಳು ಇದ್ದೇ ಇರುತ್ತವೆ. ಅದು ಒದಗಿ ಬರುವುದು ಒಂದು ರೀತಿಯಲ್ಲಿ ನಮಗೆ ಪರೀಕ್ಷೆಯಾಗಿರುತ್ತದೆ. ಅಲ್ಲಿ ಅವ್ಯವಸ್ಥೆ ಇರುತ್ತದೆ. ಸೌಕರ್ಯದ ಕೊರತೆ ಇರುತ್ತದೆ. ಕೆಲವು ತೊಂದರೆಗಳು ಇರಬಹುದು. ಮನೆಗೆ ಒಂದು ಹತ್ತು ಜನ ಅತಿಥಿಗಳು ಬಂದರೆ ಅವರಿಗೆ ಒಪ್ಪತ್ತಿನ ಊಟ ಹಾಕುವಾಗ ನಮಗೆ ಹಲವು ಸಂಕಷ್ಟಗಳು ಎದುರಾಗುತ್ತವೆ. ಇನ್ನು ಕೋಟಿ ಕೋಟಿ ಸಂಖ್ಯೆಯ ಜನಗಳು ಬರುವಾಗ ಅದೊಂದು ದೊಡ್ಡ ಪರೀಕ್ಷೆಯಾದರೆ ಅದು ನಿರೀಕ್ಷತ ಎಂದು ತಿಳಿದು ಕೊಳ್ಳುವುದರಲ್ಲಿ ಯಶಸ್ಸಿನ ರಹಸ್ಯವಿರುತ್ತದೆ.