Thursday, April 10, 2025

ಧರ್ಮ ಜಾಗೃತಿ

             ನಮ್ಮ ಹಿರಿಯರು ಒಂದು ಕಥೆ ಹೇಳುತ್ತಿದ್ದರು. ಒಂದಾನೊಂದು ಊರಿನಲ್ಲಿ  ಒಬ್ಬ ಸೌದೆಗಾಗಿ  ಕಾಡಿಗೆ ಹೋದನಂತೆ. ಹಾಗೆ ಸೌದೆಯ ಮರ ಕಡಿಯಬೇಕಾದರೆ ಅದರಲ್ಲಿ ಒಬ್ಬ ರಾಕ್ಷಸ ಇದ್ದನು. ಆತ ಇವನನ್ನು ತಿನ್ನುವುದಕ್ಕೆ ಬಂದನು. ಈತ ಹೆದರಿ ಓಡುವುದಕ್ಕೆ ತೊಡಗಿದ. ರಕ್ಕಸ ಹಿಂಬಾಲಿಸಿ ಅಟ್ಟಿಸಿಕೊಂಡು ಬಂದ. ಆ ರಕ್ಕಸನಿಗೊಂದು ಏಕ ಮಾತ್ರ ಸದ್ಗುಣವಿತ್ತು. ಎಲ್ಲಿ ಗಂಟೆಯ ನಾದ ಕಿವಿಗೆ ಕೇಳಿಸುತ್ತದೋ ಅಲ್ಲಿ ಭಗವಂತನ ನೆನಪಾಗಿ ಸುಮ್ಮನೇ ನಿಂತು ಬಿಡುವುದು. ಹಾಗೆ ಅಟ್ಟಿಸಿ ಕೊಂಡು ಬರುವಾಗ ಒಂದು ಗುಡಿಯ ಬಳಿಯಲ್ಲೇ ಹಾದು ಹೋಗುವಾಗ ಮನುಷ್ಯನ ಕೈ ಅಲ್ಲಿ ನೇತು ಹಾಕಿದ್ದ ಗಂಟೆಗೆ ತಗಲುತ್ತದೆ. ಗಂಟೆಯ ಠಣ್ ಸದ್ದಿಗೆ ರಕ್ಕಸ ಸ್ತಬ್ಧನಾಗಿ ನಿಂತು ಬಿಡುತ್ತಾನೆ. ಈ ಅವಕಾಶ ಉಪಯೋಗಿಸಿ ಮನುಷ್ಯ ತಪ್ಪಿಸಿ ಓಡುತ್ತಾನೆ. ಗಂಟೆಯ ಸದ್ದು ನಿಂತೊಡನೆ ರಕ್ಕಸ ಪುನಃ ಹಿಂಬಾಲಿಸುತ್ತಾನೆ. ಮನುಷ್ಯ ಒಂದು ಉಪಾಯ ಮಾಡುತ್ತಾನೆ. ಗುಡಿಯ ಗಂಟೆ ಕೈಯಲ್ಲಿ ತೆಗೆದುಕೊಂಡು ರಕ್ಕಸ ಹತ್ತಿರ ಬರುತ್ತಿದ್ದಂತೆ ಗಂಟೆ ಬಾರಿಸುತ್ತಿದ್ದ. ರಕ್ಕಸ ಸುಮ್ಮನೇ ನಿಂತು ಬಿಡುತ್ತಿದ್ದ. ಹಾಗೆ ಮಾಡುತ್ತಾ  ಮನುಷ್ಯ ಊರಿನೊಳಗೆ ಬಂದು ಮನೆಯನ್ನು ಸೇರುತ್ತಾನೆ. ರಕ್ಕಸನಿಂದ ಮನುಷ್ಯ ಹೀಗೆ ಪಾರಾಗಿಬಿಡುತ್ತಾನೆ.  ರಕ್ಕಸನಲ್ಲಿ ಎಲ್ಲವೂ ಕೆಟ್ಟಗುಣಗಳಿತ್ತು. ಆದರೆ ಒಂದು, ಆತನಲ್ಲಿದ್ದ ದೈವ ಭಯ ಮನುಷ್ಯನಿಗೆ ರಕ್ಷಣೆಯನ್ನು ಒದಗಿಸಿತ್ತು. 

ಇದೇ ಬಗೆಯ ಭೀಮ ಪುರುಷಾಮೃಗದ ಕಥೆ ಮಹಾಭಾರತಲ್ಲಿ ರಾಜಸೂಯ ಸಂದರ್ಭದಲ್ಲಿ ಬರುತ್ತದೆ. ನಮ್ಮೂರಲ್ಲಿ ಇದನ್ನೇ ಯಕ್ಷಗಾನದಲ್ಲಿ ಆಡುತ್ತಾರೆ.  ಭೀಮ ಪುರುಷಾಮೃಗವನ್ನು ಕರೆತರುವುದಕ್ಕೆ ಹೋಗುತ್ತಾನೆ. ದಾರಿಯಲ್ಲಿಆತನಿಗೆ ಹನುಮಂತ ಸಿಗುತ್ತಾನೆ.ಆತ ಹನುಮಂತ ಎಂದು ತಿಳಿದಿರುವುದಿಲ್ಲ.   ಆತನ ಬಾಲ ಈತನ ಹಾದಿಗೆ ಅಡ್ಡವಾಗಿರುತ್ತದೆ. ಅದನ್ನು ದಾಟುವುದು ಸರಿಯಲ್ಲ ಎಂದು ತಿಳಿದು ಬಾಲವನ್ನು ಎತ್ತಿಡುವಂತೆ ಹನುಮನಿಗೆ ಹೇಳುತ್ತಾನೆ. ಕೃಷಾಕಾಯನಾಗಿ ವೃದ್ದಾಪ್ಯದಲ್ಲಿದ್ದ ಹನುಮ ನನ್ನಿಂದ ಬಾಲ ಎತ್ತುವುದಕ್ಕೂ ತ್ರಾಣವಿಲ್ಲ ನೀನೇ ಎತ್ತಿಟ್ಟು ಆಕಡೆಗೆ ಹೋಗು ಎನ್ನುತ್ತಾನೆ. ಭೀಮನಿಗೆ ಬಾಲ ಎತ್ತುವುದಕ್ಕಾಗದೆ ಬಸವಳಿಯುತ್ತಾನೆ. ನಂತರ ಭೀಮ ವಾಯು ಪುತ್ರ ಎಂದು ತಿಳಿದ ಮೇಲೆ ಹನುಮ ಆತನನ್ನು ಸಹೋದರ ಭಾವದಿಂದ ಕಂಡು ತನ್ನ ಬಾಲದ ಮೂರು ರೂಮಗಳನ್ನು ಕಿತ್ತು ಕೊಡುತ್ತಾನೆ. ಶಿವ ಸಂಭೂತನಾದ ಹನುಮನ ಬಾಲದ ರೋಮ ಎಲ್ಲೆಲ್ಲಿ ಹಾಕುವುದೋ ಅಲ್ಲಿ ಶಿವಲಿಂಗ ಉದ್ಭವವಾಗುತ್ತದೆ ಎಂದು ಹೇಳುತ್ತಾನೆ. ಪುರುಷಾಮೃಗದ ಬಳಿಗೆ ಹೋದಾಗ ಪುರುಷಾಮೃಗ ಭೀಮನನ್ನು ಅಟ್ಟಿಸಿಕೊಂಡು ಬರುತ್ತದೆ. ಭೀಮ ಓಡುತ್ತಾ ಒಂದೊಂದೇ  ಕಡೆಯಲ್ಲಿ ಹನುಮನ ಬಾಲದ ರೋಮವನ್ನು ಹಾಕುತ್ತಾನೆ. ಅಲ್ಲಿ ಲಿಂಗ ಉದ್ಭವವಾಗುತ್ತದೆ. ಆಗ ಪುರುಷಾ ಮೃಗ ಆಲಿಂಗಕ್ಕೆ ಪೂಜೆ ಮಾಡಿ ಮತ್ತೆ ಮುಂದುವರೆಯಬೇಕು. ಆಗ ಭೀಮನಿಗೆ ಮತ್ತಷ್ಟು ಮುಂದೆ ಓಡುವುದಕ್ಕೆ ಅವಕಾಶ ಸಿಗುತ್ತದೆ.  ಹೀಗೆ ಪ್ರತಿಯೊಂದು ಕಡೆಯಲ್ಲು ಭೀಮ ಪುರುಷಾಮೃಗದ ಕೈಗೆ ಸಿಗುತ್ತದೆ ಎನ್ನುವಾಗ ಈ ರೋಮವನ್ನು ಹಾಕಿಕೊಂಡು ಪುರುಷಾಮೃಗವನ್ನು ಕರೆದುಕೊಂಡು ಬರುತ್ತಾನೆ. 

ಈ ಕಥೆಯ ಸಾರಾಂಶ ಇಷ್ಟೇ...ಎಲ್ಲಿ ದೈವ ಭಕ್ತಿ ಇರುತ್ತದೋ ಅಲ್ಲಿ ನಿರ್ಭಯವಾಗಿ ನಿರಾತಂಕವಾಗಿ ಇರಬಹುದು.  ಯಾವುದೇ ಧರ್ಮ ಇರಬಹುದು ಅಲ್ಲಿ ದೈವ ಭಕ್ತಿ ಇದ್ದರೆ ಆ ಧರ್ಮವನ್ನು ನಿಂದಿಸುವುದು ಸರಿಯಲ್ಲ. ಧರ್ಮ ನಿಂದನೆ ಎಂದರೆ ಅದು ದೈವನಿಂದನೆಯಾಗುತ್ತದೆ. ಮನುಷ್ಯ ಮೇಲೆ ನೋಡಿ ಉಗುಳಿದಂತೆ ಅದು ಪರೋಕ್ಷವಾಗಿ ನಮ್ಮ ಮೂಲಕ್ಕೆ ಬಂದು ಬಿಡುತ್ತದೆ. ನಾವು ಭಯ ಆತಂಕ ಪಡಬೇಕಾಗಿರುವುದು ಯಾವುದೋ ಧರ್ಮಾಚರಣೆಗೆ ಅಲ್ಲ. ಆತ ಹಿಂದುವೊ ಮುಸ್ಲಿಂ ಕ್ರಿಶ್ಚನ್ ಅಥವಾ ಇನ್ನವುದೋ ಧರ್ಮವಾಗಿರಬಹುದು...ಅಲ್ಲಿ ಒಂದು ದೈವ ಭಕ್ತಿ ಇದ್ದೇ ಇರಬೇಕು. ನಾವು ಭಯ ಪಡಬೇಕಾಗಿರುವುದು...ಎಲ್ಲಿ ದೈವ ಭಯ ಇಲ್ಲವೋ ಎಲ್ಲಿ ಭಕ್ತಿ ಇಲ್ಲವೋ ಅಥವಾ ದೈವದ ಅಸ್ತಿತ್ವವನ್ನು ನಂಬದೇ ಇರುವಲ್ಲಿ ನಾವು ಭಯ ಪಡಬೇಕು. ದೈವ ಭಯ ಇದ್ದಲ್ಲಿ ಕೊನೇ ಪಕ್ಷ ಆ ದೈವ ಭಕ್ತಿಯಾದರೂ ನಮ್ಮನ್ನು ಕಾಪಾಡುತ್ತದೆ.  

ಹಿರಣ್ಯ ಕಶಿಪು  ಎಂಬ ದಾನವನಿದ್ದ.  ಪ್ರಹ್ಲಾದನ ಅಪ್ಪ . ನಾನೇ ದೇವರುಎಂದು ಕೊಂಡು ಈತ ದೌರ್ಜನ್ಯದಿಂದ ಮೆರೆಯುತ್ತಿದ್ದ.  ಪ್ರಹ್ಲಾದನಿಗೆ ಹರಿಯನ್ನು ನಂಬಬೇಡ ಅಂದರೆ ದೇವರನ್ನು ನಂಬ ಬೇಡ ಎಂದು ಹೇಳುತ್ತಿದ್ದ.  ಇಂತಹ ಹಿರಣ್ಯ ಕಶಿಪು ಸಂತಾನಗಳಿಗೆ ನಾವು ಆತಂಕ ಪಡಬೇಕು.  ಎಷ್ಟೋ ಧಾರ್ಮಿಕ ಕಾರ್ಯಕ್ರಮಗಳು ಆಗುತ್ತವೆ. ಉತ್ಸವಾಚರಣೆಗಳಲ್ಲಿ ಇಂದು ಸಭಾಕಾರ್ಯಕ್ರಮವೇ ಹೆಚ್ಚು ಪ್ರಧಾನವಾಗಿರುತ್ತವೆ.  ಧರ್ಮ ಜಾಗೃತಿ ಈ ಕಾರ್ಯಕ್ರಮಗಳ ಉದ್ದೇಶ. ಅದರಲ್ಲೇನು ತಪ್ಪಿಲ್ಲ. ಆದರೆ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಮತ್ತೊಂದು ಧರ್ಮವನ್ನು ನಿಂದಿಸುವ ಮಟ್ಟಕ್ಕೆ ಹೋಗಬಾರದು. ನಮ್ಮ ಧರ್ಮದ ಬಗ್ಗೆ ಹೇಳಬಹುದು. ನಮ್ಮ ಧರ್ಮದ ಹಾದಿಯನ್ನು ತೋರಿಸಬಹುದು...ಆದರೆ ಮತ್ತೊಂದು ಹಾದಿಯನ್ನು ನಿಂದಿಸುವುದು ಸರಿಯಲ್ಲ. ಧರ್ಮ ಧರ್ಮದ ನಡುವೆ ಹೋಲಿಕೆ ಇಂದಿನ ಕ್ಷೋಭೆಗೆ ಬಹು ಮುಖ್ಯ ಕಾರಣ. ಏನಿಲ್ಲ ಎಂದಿದ್ದರೂ ಅಲ್ಲೊಂದು ದೈವನಂಬಿಕೆ ಇದೆ ಎಂದು ತಿಳಿಯಬೇಕು. ದೇವರು ಎಲ್ಲಿದ್ದರೂ ದೇವರೆ. ಅದು ರೂಪವಿದ್ದೋ ರೂಪವಿಲ್ಲದೆಯೋ ಅಸ್ತಿತ್ವದಲ್ಲಿ ಇದೆ ಎಂದು ತಿಳಿವಲ್ಲಿ ಧರ್ಮದ ಅಸ್ತಿತ್ವ ಇರುತ್ತದೆ.  ನಾವು ಅಕ್ಕಿ ಅಂತ ಕರೆಯುವುದನ್ನು ಇನ್ನೊಬ್ಬರು ಏನೋ ಒಂದು ಕರೆದರೆ ಅದು ಅಕ್ಕಿಅಲ್ಲದೇ ಆಗುವುದಿಲ್ಲ. ಹಾಗಾಗಿಯೇ ಭಗವಂತನಿಗೆ ಸಹಸ್ರ ನಾಮಗಳಿರುತ್ತವೆ. 

ಧಾರ್ಮಿಕ ಆಚರಣೆಗಳ ಸಭೆಗಳಲ್ಲಿ ಧಾರ್ಮಿಕ ಆಚರಣೆಯ ಅರಿವನ್ನು ಮೂಡಿಸಬೇಕು. ಹಿಂದೆ ನಮ್ಮೂರ ದೇವಸ್ಥಾನದಲ್ಲಿ ಸಹಸ್ರ ಚಂಡಿಕಾ ಯಾಗ ನಡೆಯಿತು. ಆ ಸಂದರ್ಭದಲ್ಲಿ ಕ್ರಮದಂತೆ ಧಾರ್ಮಿಕ ಸಭೆ ನಡೆಯಿತು. ಅಲ್ಲಿ ಆಶೀರ್ವಚನ ನೀಡಿದ ಪೂಜ್ಯ ಶ್ರೀ ಶೃಂಗೇರಿ  ಜಗದ್ಗುರುಗಳು ಚಂಡಿಕಾ ಯಾಗದ ವಿಧಿ ವಿಧಾನಗಳನ್ನು ಅದರ ಮಹತ್ವವನ್ನು ದುರ್ಗಾ ಚಂಡಿಕೆ ಈ  ಅವತಾರದ ಕಾರಣಗಳನ್ನು ಸಪ್ತಶತಿ ಪಾರಾಯಣದ ಮಹತ್ವವನ್ನು ಸವಿಸ್ತಾರವಾಗಿ ಹೇಳಿದರು. ಅವರು  ಇದನ್ನು ಕೇಳಿದ ನಂತರ ಚಂಡಿಕಾಯಾಗದ ಪೂರ್ಣಾಹುತಿಯನ್ನು ಕಾಣುವಾಗ ಅದನ್ನು ಕಾಣುವ ದೃಷ್ಟಿಕೋನವೇ ಬದಲಾಗಿಬಿಟ್ಟಿತು. ಅವರು ಯಾವುದೇ ವ್ಯಕ್ತಿಯನ್ನು ದೂಷಿಸಲಿಲ್ಲ. ಯಾವುದೇ ಧರ್ಮವನ್ನು ನಿಂದಿಸಲಿಲ್ಲ. ನಿಂದಿಸುವುದು ಬಿಡಿ ವಿಮರ್ಶಿಸಲೂ ಇಲ್ಲ.  ಜಗದ್ಗುರು ಅನ್ನಿಸುವುದೇ ಇಂತಹ ಗುಣಗಳಿಂದ. ಇದು ಧಾರ್ಮಿಕ ಸಭೆಯ ಮಹತ್ವ. ಆಸ್ತಿಕನಾಗುವುದು ಮುಖ್ಯವಲ್ಲ. ಆದರ ಅರ್ಥವನ್ನು ತಿಳಿಯುವುದು ಮುಖ್ಯ ನಮ್ಮ ಧರ್ಮದ ಶ್ರೇಷ್ಠತೆಯನ್ನು ಹೇಳಬೇಕಾದರೆ ನಮ್ಮ ಧರ್ಮವನ್ನು ಅದರ ತತ್ವಗಳನ್ನು ಅಧ್ಯಯನ ಮಾಡಿ ತಿಳಿದುಕೊಳ್ಳಬೇಕು. ಅಧ್ಯಯನ ಸಾಧ್ಯವಾಗದಿದ್ದರೆ ಇಂಥ ಧಾರ್ಮಿಕ ಪ್ರವಚನಗಳು ಪ್ರೇರಕವಾಗಿರಬೇಕು. ಅದಲ್ಲದೇ ಯಾವುದೋ ಪರ ಧರ್ಮದ ಬಗ್ಗೆ ಹೇಳಬೇಕಾದರೆ ನಾವು ಪರಧರ್ಮವನ್ನು ಅಧ್ಯಯನ ಮಾಡಬೇಕು. ಇಲ್ಲಿ ನಮ್ಮ ಧರ್ಮದ ಅಧ್ಯಯನವೇ ಸಾಧ್ಯವಾಗುವುದಿಲ್ಲ ಎಂದಾಗ ಮತ್ತೊಂದು ಧರ್ಮದ ಬಗ್ಗೆ ಗಮನ ಹರಿಸಿ ಅದನ್ನು ವಿಮರಿಸುವ ಅವಶ್ಯಕತೆಯಾದರೂ ಯಾಕೆ ಬೇಕು. ಇಂದಿನ ಹಲವು ಸಮಸ್ಯೆಗಳು ಹುಟ್ಟಿಕೊಳ್ಳುವುದೇ ಇಲ್ಲಿಂದ. ಧರ್ಮ ಧರ್ಮದ ನಡುವೆ ವ್ಯಕ್ತಿಯ ವ್ಯಕ್ತಿಯ ನಡುವೆ ತುಲನೆ ಮಾಡುವುದು ಇದು ಆರೋಗ್ಯಕರ ಚಿಂತನೆ ಎನಿಸುವುದಿಲ್ಲ.  ಧರ್ಮದ ಅರಿವನ್ನುಮೂಡಿಸುವಲ್ಲಿ ಧಾರ್ಮಿಕ ಸಭೆಯ ಮಹತ್ವ ಬಹಳ ಇರುತ್ತದೆ. ದೇವರಿಲ್ಲ ಎನ್ನುವ ಚಿಂತನೆಯನ್ನು ದೂರವಿಟ್ಟು ದೇವರಿದ್ದಾನೆ ಎಂದು ನಂಬಿ ವಿಶ್ವಾಸದಲ್ಲಿ ನಡೆಯುವವನ್ನು ಗೌರವಿಸುವ. ಕೊನೇ ಪಕ್ಷ ಎಲ್ಲೋ ಒಂದು ಕಡೆ ಅವನಲ್ಲಿರುವ ದೇವರಿದ್ದಾನೆ ಎಂಬ ಭಾವ ಹುಲ್ಲುಕಡ್ಡಿಯಷ್ಟಾದರೂ ನಮಗೆ ರಕ್ಷಣೆಯನ್ನು ನೀಡಬಹುದು. 

ಈ ಚಿಂತನೆಗಳು ಎಷ್ಟು ಸೂಕ್ತವೋ ತಿಳಿಯದು. ಆದರೆ ಸನಾತನ  ಹಿಂದೂ ಧರ್ಮ ಎಲ್ಲ ಧರ್ಮಗಳ ಸಾರವನ್ನೂ ಒಳಗೊಂಡಿದೆ. ಹಾಗಾಗಿ ಇದೊಂದು ಹಿರಿಯಣ್ಣನಂತೆ. ಇದ

Thursday, April 3, 2025

ಮಧೂರು ಬ್ರಹ್ಮ ಕಲಶ

  ಪುರಾಣದಲ್ಲಿ ವಿಶ್ವಾಮಿತ್ರ ಮೊದಲಿಗೆ ಹಲವು ವಿಧದಲ್ಲಿ ವಸಿಷ್ಠರನ್ನು ಸೋಲಿಸುವುದಕ್ಕೆ ಪ್ರಯತ್ನಿಸುತ್ತಾನೆ. ದೈಹಿಕವಾಗಿ ಮಾನಸಿಕವಾಗಿ ಅತನೊಂದಿಗೆ ಹೋರಾಡುತ್ತಾನೆ. ಆದರೆ ಆತನನ್ನು ಸೋಲಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಪ್ರತಿಯೊಂದು ಹೋರಾಟದಲ್ಲೂ ಆತನಿಗೆ ಅಪಜಯವಾಗುತ್ತದೆ. ಅದು ಕೇವಲ ಅಪಜಯವಲ್ಲ. ಆತ ನಂಬಿದ ತತ್ವಗಳ ಸೋಲು. ವಸಿಷ್ಠ ಹೋರಾಡದೇ ಗೆಲ್ಲುತ್ತಾ ಹೋಗುತ್ತಾನೆ. ಆತ ಎಲ್ಲಿಯೂ ಸ್ಪರ್ಧೆಗೂ ನಿಲ್ಲುವುದಿಲ್ಲ, ಹೋರಾಟಕ್ಕೂ ಬರುವುದಿಲ್ಲ. ಆತನ ಬ್ರಹ್ಮ ವರ್ಚಸ್ಸು ಆತನನ್ನು ಗೆಲ್ಲಿಸಿಬಿಡುತ್ತದೆ. ಆ ಗೆಲುವನ್ನೂ ಆತ ಗೆಲುವು ಎಂದು ತಿಳಿಯುವುದಿಲ್ಲ. ಹೋರಾಟವೇ ಇಲ್ಲ ಎಂದು ತಿಳಿದವನಿಗೆ ಸೋಲು ಹೇಗೆ ಇಲ್ಲವೋ ಹಾಗೆ  ಗೆಲುವು ಎಂಬುದು ಇರುವುದಿಲ್ಲ. ಬ್ರಹ್ಮ ವರ್ಚಸ್ಸು ಎಂದರೆ ಅದು. ಬ್ರಹ್ಮ ಎಂದರೆ ಅತ್ಯಂತ ದೊಡ್ಡದು. ಅದಕ್ಕಿಂತ ಮಿಗಿಲು ಇನ್ನೊಂದು ಇಲ್ಲ. ಹಾಗೆ ವರ್ಚಸ್ಸು..ಅದು ಬ್ರಹ್ಮ ವರ್ಚಸ್ಸು ಅದಕ್ಕಿಂತ ಮಿಗಿಲು ಮತ್ತೊಂದು ಇರುವುದಕ್ಕೆ ಸಾಧ್ಯವಿಲ್ಲ.   ಅದರಲ್ಲಿ ವಿಶ್ವಾಸ ಇದ್ದವನಿಗೆ ಹೋರಾಟದ ಅವಶ್ಯಕತೆಯೇ ಇರುವುದಿಲ್ಲ. ಈ ಬ್ರಹ್ಮ ವರ್ಚಸ್ಸು ಒಲ್ಲಿದು ಬರುವುದು ಕೇವಲ ಭಗವಂತನ ಅನುಗ್ರಹದಿಂದ. ಬ್ರಾಹ್ಮಣ ಅಂತ ಹೇಳುವುದು ವ್ಯಕ್ತಿಗಲ್ಲ. ಆ ಅನುಗ್ರಹ ಲಭ್ಯವಾಗುವುದು ಭಗವಂತನ ಮೇಲಿನ ವಿಶ್ವಾಸದಿಂದ. ಇದು ನಮ್ಮ ಸನಾತನ ಧರ್ಮದ ನಂಬಿಕೆ. 


ನಾನು ಊರಿಗೆ ಹೋದರೆ ಎರಡು ಕ್ಷೇತ್ರಗಳಿಗೆ ಪದೇ ಪದೇ ಭೇಟಿ ಕೊಡುತ್ತೇನೆ. ಒಂದು ಮಧೂರು ಮದನಂತೇಶ್ವರ ಕ್ಷೇತ್ರ, ಇನ್ನೊಂದು ಆವಳ ದುರ್ಗಾಪರಮೇಶ್ವರಿ ಕ್ಷೇತ್ರ.  ಮತ್ತೆ ಕೆಲವೊಮ್ಮೆ ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರ. ದೇವಾಲಯಕ್ಕೆ ಹೋಗುವುದಾದರೆ ಹೆಚ್ಚು ಜನಸಂದಣಿ ಇಲ್ಲದ ದೇವಾಲಯಕ್ಕೆ ಹೋಗುವುದನ್ನು ಹೆಚ್ಚು ಬಯಸುತ್ತೇನೆ. ಗಂಟೆಗಟ್ಟಲೆ ದರ್ಶನಕ್ಕೆ, ಭೋಜನ ಪ್ರಸಾದಕ್ಕೆ    ಸರದಿಯಲ್ಲಿ ನಿಲ್ಲುವುದೆಂದರೆ ಯಾಕೋ ಹಿತ ಎನಿಸುವುದಿಲ್ಲ. ಆಧ್ವಾನ ಒತ್ತಡ ಇದೆಲ್ಲ ಮನಸ್ಸಿನ ಶಾಂತಿಯನ್ನು ಪರೀಕ್ಷಿಸಿ ಬಿಡುತ್ತವೆ. ಈಗೀಗಲಂತೂ ನಾನು ದೇವಾಲಯಕ್ಕೆ ಹೋಗುವುದನ್ನು ಬಿಟ್ಟಿದ್ದೇನೆ ಎನ್ನಬಹುದು. ನಿತ್ಯ ಕರ್ಮದಲ್ಲಿ , ಮತ್ತು ಧ್ಯಾನದಲ್ಲಿ  ಹೆಚ್ಚು ವಿಶ್ವಾಸ ಮತ್ತು ಆಸಕ್ತನಾಗಿ ನಿತ್ಯ ಮನೆಯಲ್ಲೇ ಆ ಅವ್ಯಕ್ತ ಸ್ವರೂಪ ದರ್ಶನ ಮಾಡುವುದರಲ್ಲೆ ಧನ್ಯತೆಯನ್ನೂ ಸಂತೋಷವನ್ನು ಕಾಣುತ್ತೇನೆ. ಹಾಗಂತ ಎಲ್ಲಾ ದೇವಾಲಯದ ಬಗ್ಗೆ ಅಲ್ಲಿಗೆ ಹೋಗುವವರ  ಬಗ್ಗೆ ಗೌರವದಿಂದ ಕಾಣುತ್ತೇನೆ. ಬ್ರಹ್ಮಾ ಶಿರಃ ವಿಷ್ಣುರ್ ಹೃದಯಂ ರುದ್ರೋಲಲಾಟಂ ಅಂತ ಹೇಳುವಾಗ ಭಗವಂತನ ಸ್ಥಾನ ನನ್ನಲ್ಲೇ ಇದೆ ಎನ್ನುವ ಅತೀವ ನಂಬಿಕೆ ನನಗೆ. ಇವುಗಳಿಗೆ ಪ್ರಥಮ ಆದ್ಯತೆ. ನಂತರ ಎಲ್ಲವೂ ದ್ವೀತಿಯ. ಬೇಕು ಎಂದನಿಸಿದರೆ ಹೋಗಿ ನೋಡುವುದು. 

ಮಧೂರು ಮತ್ತು ದುರ್ಗಾ ಪರಮೇಶ್ವರಿ ಕ್ಷೇತ್ರಗಳು ಕೇವಲ ಭಕ್ತಿಗೆ ಸೀಮಿತವಾಗಿ ಮಾತ್ರವಲ್ಲ, ಬಾಲ್ಯದ ಒಡನಾಟದ ಆ ಭಾವನಾತ್ಮಕ ಸಂಬಂಧಗಳು ಹೆಚ್ಚು ಈ ಕ್ಷೇತ್ರಕ್ಕೆ ಸಂಬಂಧಿಸಿ ಬೆಸೆದುಬಿಟ್ಟಿದೆ. ಮಧೂರು ಬಾಲ್ಯದಿಂದಲೇ ಭೇಟಿಕೊಡುವ ಪವಿತ್ರ ಸ್ಥಳ. ಆವಳ. ನನ್ನದೇ ಸ್ವಂತ ಮನೆ ಎಂಬಂತಹ ಬಾವನೆಯಾದರೆ ಕಟೀಲು, ನನಗೆ ಬ್ರಹ್ಮೋಪದೇಶ ಕಲ್ಪಿಸಿದ ಕ್ಷೇತ್ರ. ಈಗಿಗ ಇದು ಬಿಟ್ಟು ಬೇರೆ ಕಡೆಗೆ ನಿಯಮಿತ ಭೇಟಿ ಇಲ್ಲ. 

ಶ್ರೀ ಮಧೂರು ಮದನಂತೇಶ್ವರ ಕ್ಷೇತ್ರ ಈಗ ನವೀಕರಣಗೊಂಡು ಬ್ರಹ್ಮ ಕಲಶೋತ್ಸವದ ಸಂಭ್ರದಲ್ಲಿ ಕಂಗೊಳಿಸುತ್ತದೆ. ಹೋಗಿ ಭೇಟಿ ಕೊಡಬೇಕು ಎಂಬ ತೀವ್ರ ತುಡಿತವಿದ್ದರೂ ಕೆಲಸದ ಒತ್ತಡ ಮತ್ತಿನ್ನೇನೋ ಕೆಲವು ಕಾರಣಗಳಿಂದ ಹೋಗಲು ಸಾಧ್ಯವಾಗದೇ ಮಹಾಗಣಪತಿಗೆ ಇಲ್ಲಿಂದಲೇ ಪ್ರಣಾಮವನ್ನು ಸಲ್ಲಿಸುತ್ತೇನೆ. 

ದೇವಾಲಯ ಭೇಟಿ ಎಂದರೆ ಆಲಿ ಯಾವ ಸ್ವಾರ್ಥವೂ ಪ್ರತಿಷ್ಠೆಯೂ  ಇರಬಾರದು ಎಂಬ ಭಾವನೆ ನನ್ನದು. ದೇವರಲ್ಲಿ ಬೇಡಿಕೊಳ್ಳುವುದು ಏನಿದೆ? ಎಲ್ಲವೂ ಆತನಿಗೆ ತಿಳಿದಿರುವಾಗ ಆತನಲ್ಲಿ ಪ್ರಾರ್ಥಿಸುವುದಕ್ಕೂ ಒಂದು ಹಿಂಜರಿಕೆ, ನನ್ನ ಭಕ್ತಿಯ ಮೇಲೆ ಅವಿಶ್ವಾಸ ಮೂಡಿದಂತೆ ಭಾಸವಾಗುತ್ತದೆ. ದೇವರಲ್ಲಿ ಬೇಡುವುದೆಂದರೆ ಆತನ ಸ್ವಾಂತ್ರವನ್ನು ಕಸಿದಂತೆ.   ನಮ್ಮ ಹಂಗಿನಲ್ಲಿ ಸಿಲುಕಿಸಿದಂತೆ. ಆತನ ಅನುಗ್ರಹದ ಮೇಲೆ ಅವಿಶ್ವಾಸ ತಳೆದೆಂತೆ. ನಾವು  ಭಗವಂತನನ್ನು ಸರ್ವತಂತ್ರ ಸ್ವತಂತ್ರ ಎಂದು ಹೇಳುವಾಗ ಆತನನ್ನು ಸ್ವತಂತ್ರವಾಗಿ ಇರುವುದಕ್ಕೆ ಬಿಡುವುದಲ್ಲ ಆತ ಸ್ವತಂತ್ರ ಎಂದು ನಾವು ತಿಳಿಯಬೇಕು.   ಹಾಗಾಗಿ ಕೇವಲ ಶಾಂತ ಚಿತ್ತದಿಂದ ನಿರ್ಲಿಪ್ತ ಮನಸ್ಸಿನಿಂದ ಇರುವುದಕ್ಕೆ ಬಯಸುತ್ತೇನೆ. ಅಲ್ಲಿನ ಅಸೌಕರ್ಯ ಏನೇನೊ ತೊಂದರೆಗಳು ಇವೆಲ್ಲ ಪಾಲಿನ ಪಂಚಾಮೃತಗಳಾಗಿ ಸ್ವೀಕಾರ ಮಾಡಿಬಿಡುತ್ತೇನೆ. ದೇವರಲ್ಲಿ ಸ್ಪರ್ಧಿಸುವ ಮನೋಭಾವ ಸರಿಯಲ್ಲ. 

ಮಧೂರು ಕ್ಷೇತ್ರದ ನಿಮಿಷ ನಿಮಿಷದ ವರ್ತಮಾನಗಳು ಸಾಮಾಜಿಕ ಜಾಲತಾಣದಲ್ಲಿ ಹರಿದು ಬರುತ್ತವೆ. ಅದೆಲ್ಲವೂ ಒಂದು ಸಂಭ್ರಮವನ್ನು ಬಿಂಬಿಸಿದರೆ..ಅಲ್ಲಿ ಹುಟ್ಟಿದ ಕೆಲವು ವಿವಾದಗಳು ವಿದ್ಯಮಾನಗಳು ನಾವಿನ್ನೂ ಭಗವಂತನ ವಿಶ್ವಾಸದಲ್ಲಿ ಕೊರತೆಯನ್ನು ಅನುಭವಿಸುತ್ತೇವೆ ಎಂದು ತೋರಿಸುತ್ತದೆ. ಸಭಾ ಕಾರ್ಯಕ್ರಮಗಳು ಹಲವು ಸಲ ರಾಜಕೀಯ ಸಭೆಯಂತೆ ಭಾಸವಾಗುತ್ತದೆ. ಮುಖ್ಯವಾಗಿ ಇಂತಹ ಸನ್ನಿವೇಶಗಳು ಸನಾತನ ಧರ್ಮದ ಆಧ್ಯಾತ್ಮಿಕ ತತ್ವವವನ್ನು ಸಾರಬೇಕು. ಅಲ್ಲಿ ಅವುಗಳಿಗೆ ಹೆಚ್ಚು ಪ್ರಾಶಸ್ತ್ಯ ಲಭ್ಯವಾಗಬೇಕು. ಹತ್ತು ಹಲವು ಸಮಸ್ಯೆಗಳು ಬರುತ್ತವೆ. ಎಲ್ಲವೂ ಭಗವಂತನಿಗೆ ಸಮರ್ಪಿಸಿ ಬಿಡಬೇಕು. ಇಲ್ಲಿ ಪ್ರತಿಷ್ಠೆಗೆ ಅವಕಾಶ ಇರಬಾರದು. ಎಲ್ಲಿ ಅಹಂ ಇರುತ್ತದೋ ಅಲ್ಲಿ ಭಗವಂತನ ಅಸ್ತಿತ್ವ ಇರುವುದಿಲ್ಲ. ಎಲ್ಲ ಕಾರ್ಯದಲ್ಲೂ ಎಡರು ತೊಡರುಗಳು ಸಾಮಾನ್ಯ. ಅಷ್ಟಿದ್ದರೂ ಇಷ್ಟಾಗಿದೆಯಲ್ಲ ಅದು ಭಗವಂತನ ಕೃಪೆ ಎನ್ನುವ ಭಾವ ಇದ್ದರೆ  ಇನ್ನೊಬ್ಬರ ತಪ್ಪುಗಳ ಕಡೆಗೆ ಬೊಟ್ಟು ಮಾಡುವ ಅವಕಾಶ ಇರುವುದಿಲ್ಲ. 

ಯಾವುದೋ ಅನುದಾನ ಕೇಂದ್ರದಿಂದ ಬಂದಿಲ್ಲ ಎಂಬುದು ಹಲವು ವಿವಾದಗಳಿಗೆ ಭಿನ್ನಾಭಿಪ್ರಾಯಗಳಿಗೆ ಕಾರಣವಾಯಿತು. ಯಾವುದೇ ಆದರೂ ಅದಕ್ಕೆ ಮೋದಿ ಕಾರಣ ಎನ್ನುವ ಹಾಗೆ ಚಿತ್ರಿಸುವಾಗ ಕ್ಷುಲ್ಲಕ ಚಿಂತನೆ ಅನ್ನಿಸುತ್ತದೆ. ಇಷ್ಟೇಲ್ಲಾ ವಿವಾದವಾದರೂ ಅದು ಮೋದಿಯ ಅರಿವಿನಲ್ಲಿ ಇದೆಯೋ ಇಲ್ಲವೋ ಆ ಮಹಾಗಣಪತಿಗೆ ಗೊತ್ತು. ಆದರೂ ನಾವು ಹಳಿಯುವುದು  ವಿಚಿತ್ರ.  ಅನುದಾನ ಯಾಕೆ ಬರಲಿಲ್ಲ ಎಂಬುದಕ್ಕೆ ಯಾರನ್ನೋ ಹೇಳಿಕೊಂಡು ಅದನ್ನೇ ಪ್ರದರ್ಶನಕ್ಕಿಟ್ಟರೆ ಅದು ನಮ್ಮ ಕೊಂಕುತನವನ್ನು ತೋರಿಸುತ್ತದೆ. ಭಿನ್ನಾಭಿಪ್ರಾಯ ಯಾರಿಗಿರುವುದಿಲ್ಲ? ಸಪ್ತಪದಿ ತುಳಿದು ಅಗ್ನಿಸಾಕ್ಷಿಯಾಗಿ ಮದುವೆಯಾದ ಗಂಡಹೆಂಡತಿಯರ ನಡುವೆ ಇರುತ್ತದೆ. ಬದುಕಿನಲ್ಲಿ ಒಂದೇ ಒಂದು ಸಲವಾದರೂ ಜಗಳವಾಡದ ಗಂಡಹೆಂಡತಿ ಇರಬಹುದೇ? ಹಾಗಂತ ಅದನ್ನು ಪ್ರದರ್ಶನಕ್ಕಿಟ್ಟರೆ ಅದು ನಮ್ಮದೇ ಸೋಲಾಗಿಬಿಡುತ್ತದೆ. ಭಗವಂತನ ಎದುರು ಎಲ್ಲರೂ ಸಮಾನರಾಗುವಾಗ ಕೇವಲ ಗೆಲುವಿಗೆ ಮಾತ್ರ ಪಾಲುದಾರರಲ್ಲ ಅಲ್ಲಿನ ಸೋಲಿಗೂ ನಾವೇ ಕಾರಣರಾಗಬೇಕು. 

ಒಂದು ದೇವಸ್ಥಾನಕ್ಕೆ ಹೋಗುವಾಗ ಅಲ್ಲಿ ಅದು ಸರಿಇಲ್ಲ ಇದು ಸರಿ ಇಲ್ಲ, ಊಟಕ್ಕೆ ಜಾಗ ಇಲ್ಲ..ಪ್ರಸಾದ ಸಿಕ್ಕಿಲ್ಲ.ದರ್ಶನ ಸಿಗಲಿಲ್ಲ...ಹೀಗೆ ಎಲ್ಲ ಇಲ್ಲಗಳಿಗೆ ಕಾರಣ ನಮ್ಮ ಸೋಲು ಅಥವಾ ನಮ್ಮ ಪ್ರಾಪ್ತಿಯೇ ಹೊರತು ಅದಕ್ಕೆ ಕ್ಷೇತ್ರವಾಗಲೀ ವ್ಯಕ್ತಿಯಾಗಲಿ  ನಿಮಿತ್ತವಾಗುವುದಿಲ್ಲ. ದೇವರ ಸಾನ್ನಿಧ್ಯ ಎಂದರೆ ಹಾಗೆ. ಹೆಣ್ಣು ನಾಯಿಗೆ ಹಲವು ಮರಿಗಳಿರುತ್ತವೆ. ಅದರಲ್ಲಿ ಕೆಲವು ಮರಿಗಳಿಗೆ ಮೊಲೆ ಹಾಲು ಸಿಗುತ್ತದೆ. ಕೆಲವುದಕ್ಕೆ ಸಿಗುವುದಿಲ್ಲ ಸಿಗದೇ ಇದ್ದದ್ದು ಮತ್ತೊಂದನ್ನು ತುಳಿದು ಹೇಗಾದರೂ ಗಿಟ್ಟಿಸುವುದಕ್ಕೆ ನೋಡುತ್ತದೆ. ಅದು ಜ್ಞಾನವಿಲ್ಲದೇ ಇರುವ ಬದುಕಿನ ಹೋರಾಟ. ಇದು ಅರ್ಥ ಮಾಡಿಕೊಂಡಾಗ ಭಗವಂತನ ಅನುಗ್ರದ ವ್ಯಾಪ್ತಿ ಅರಿವಾಗುತ್ತದೆ. ಸಿಕ್ಕಿಲ್ಲ ಇಷ್ಟೇ ಅಂತ ತೃಪ್ತ ನಾಗಬೇಕು. ಅದು ದೈವಿಕ್ಷೇತ್ರದಲ್ಲಿ ಅನಿವಾರ್ಯ. ಈ ಮನೋಭಾವ ಇಲ್ಲದೇ ಇದ್ದರೆ ಯಾವ ಕ್ಷೇತ್ರಕ್ಕೆ ಹೋದರೂ ಶಾಂತಿ ನೆಮ್ಮದಿ ಸಿಗುವುದಕ್ಕೆ ಸಾಧ್ಯವಿಲ್ಲ. 

ನಮ್ಮಲ್ಲಿರುವ ಸಂಕುಚಿತ ಮನೋಭಾವ ದೂರವಾಗಬೇಕು. ಮನಸ್ಸಿನಲ್ಲಿ ಕೊಂಕು ಮೊದಲು ಕೊಂದು ಬಿಡಬೇಕು. ಎಲ್ಲಿವರೆಗೆ ಮನಸ್ಸಿನಲ್ಲಿ ಈ ನ್ಯೂನ್ಯತೆ ಇರುತ್ತದೋ ಅದು ಉಳಿದವರನ್ನು ಹಿಂಸಿಸುವುದಲ್ಲ ನಮ್ಮನ್ನೇ ಹಿಂಸಿಸುತ್ತದೆ.  ಊಗ್ರನರಸಿಂಹ ಅಥವಾ ಮಹಾಕಾಳಿಯ ರೂಪ ಉಗ್ರ ಇರಬಹುದು. ಆದರೆ ಉಗ್ರ ನರಸಿಂಹನನ್ನು ಹರಿಯಾಗಿ ಕಾಣುವ ಮನೋಭಾವ ಇರುವಾಗ ಆ ಉಗ್ರತೆ  ಅನುಭವಕ್ಕೆ ಬರುವುದಿಲ್ಲ. ನರಸಿಂಗಹನನ್ನು ನೋಡುವ ನಮ್ಮ ಮನೋಭಾವ ಬದಲಾಗಬೇಕು. ಭಗವಂತನಲ್ಲಿರುವ ವಿಶ್ವಾಸದ ಮೇಲೆ ಅಚಲವಾಗಿ ವಿಶ್ವಾಸ ಇರಬೇಕು. ಗುರಿಯನ್ನು ಗುರು ತೋರಿಸುತ್ತಾನೆ. ಮತ್ತು ಅದರ ಹಾದಿಯನ್ನು ತೋರಿಸುತ್ತಾನೆ. ಗುರಿ ಮತ್ತು ದಾರಿ ಎರಡು ಶುದ್ದವಾಗಿರಬೇಕು. ಕಸ ಮಲ ತುಂಬಿದ ಹಾದಿಯಲ್ಲಿ ತುಳಿದು ಗುರಿಯನ್ನು ಸಾಧಿಸಬಹುದು ಆದರೆ ನಾವು ತುಳಿದು ಬಂದ ಹಾದಿ ನಮ್ಮ ದೇಹವನ್ನೂ ಮನಸ್ಸನ್ನೂ ಕೆಡಿಸಿರುತ್ತದೆ.  ಮೊದಲು ನಾವು ಒಂದಾಗಬೇಕು. ಭಗವಂತನ ಸಾನ್ನಿಧ್ಯದಲ್ಲಾದರೂ ನಮ್ಮ ಭಿನ್ನಾಭಿಪ್ರಾಯಗಳು ನಾಶವಾಗಬೇಕು. ಅಲ್ಲಿ ನಮ್ಮದು ನನ್ನದು ಎಂಬ ಯಾವ ಭಾವವೂ ಮುಖ್ಯವಲ್ಲ. ಕೇವಲ ಭಗವಂತನ ಮೇಲಿನ ವಿಶ್ವಾಸ ಮಾತ್ರ ಮುಖ್ಯವಾಗಬೇಕು. 

ಮಹನೀಯರೊಬ್ಬರ ಭಾಷಣ ಕೇಳಿದೆ. ಹಲವು ಅಭಿಪ್ರಾಯಗಳನ್ನು ಬಹಳ ಚೆನ್ನಾಗಿ ಹೇಳಿದರು. ಆದರೆ ದೇವರ ಮೂರ್ತಿಗೆ ಬೆಳಕು ಹಾಕಬೇಕು. ಅಲ್ಲಿ ಪ್ರಕಾಶಮಾನವಾದ ದೀಪ ಬೆಳಗಿಸಬೇಕು. ಆ ಮೂರ್ತಿ ಸರಿಯಾಗಿ ಕಾಣಬೇಕು ಎಂದು ಹೇಳಿದರು. ಅವರ ಅಭಿಪ್ರಾಯ ತಪ್ಪಲ್ಲ. ಅದರ ಬಗ್ಗೆ ಗೌರವ ಇದೆ. ಆದರೆ ದೇವರು ಎಂದರೆ ವ್ಯಕ್ತ ಅವ್ಯಕ್ತ ಸ್ವರೂಪ. ಆತ ಕಂಡರೂ ಕಾಣದಿದ್ದರೂ ಅದನ್ನು ಕಾಣುವ ಸಾಮಾರ್ಥ್ಯ ನಮಗಿರಬೇಕು. ದೇವರ ಸ್ವರೂಪವನ್ನು ನೋಡಿ ಬರುವ ಭಕ್ತಿ ಕೇವಲ ತಾತ್ಕಾಲಿಕ. ಒಂದೇ ವಿಧದ ಮೂರ್ತಿಯನ್ನು ದಿನಾ ನೋಡುವಾಗ ಬದಲಾವಣೆಯನ್ನುಎಲ್ಲದರಲ್ಲೂ ಬಯಸುವ ನಮಗೆ ಕೊನೆಗೆ ಅದರಲ್ಲೂ ಬದಲಾವಣೆ ಬೇಕಾಗಬಹುದು. ದೇವರು ಅಸ್ಪಷ್ಟವಾಗಿ ಕಾಣಬೇಕು. ಬದುಕಿನಾದ್ಯಂತ ಅದು ಹೇಗಿರುತ್ತದೆ ಎಂಬ ಕುತೂಹಲವೇ ಶಾಶ್ವತವಾಗಿರಬೇಕು. ಕತ್ತಲೆಯಲ್ಲು ಬೆಳಕಿನಲ್ಲೂ ಭಗವಂತನನ್ನು ಕಾಣುವ ಮನಸ್ಸು ನಮ್ಮಲ್ಲಿರಬೇಕು. ಹಾಗಿರುವಾಗ ಕತ್ತಲೆ ಬೆಳಕಿನ ಪ್ರಶ್ನೆ ಇರುವುದಿಲ್ಲ. ದೇವರ ರೂಪ ಪ್ರಧಾನವಾಗುವುದಿಲ್ಲ. ಆತನನ್ನು ಕಾಣುವ ಭಾವವೇ ಪ್ರಧಾನ. ಮಂಗಳೂರಲ್ಲಿ ಒಂದು ಗುಳಿಗನ ದೇವಸ್ಥಾನಕ್ಕೆ ಹೋಗಿದ್ದೆ. ಅಲ್ಲಿನ ಗುಳಿಗನ ಕಲ್ಲು ಬಹುತೇಕ ನೆಲದಲ್ಲಿ ಹುದುಗಿತ್ತು. ಕಲ್ಲಿನ ಒಂದಿಷ್ಟು ತುದಿ ಮಾತ್ರ ಮೇಲೆ ಬಂದು ಕಣ್ಣಿಗೆ ಕಾಣುತ್ತಿತ್ತು. ಎಲ್ಲರೂ ಅಷ್ಟಕ್ಕೇ ಬಂದು ಭಕ್ತಿ ಗೌರವದಿಂದ ನಮಸ್ಕರಿಸುತ್ತಿದ್ದರು. ಅಲ್ಲಿ ರೂಪ ಮುಖ್ಯವಾಗುವುದಿಲ್ಲ. ಕೇವಲ ಭಾವಮಾತ್ರ ಮುಖ್ಯವಾಗುತ್ತದೆ. ದೇವರನ್ನು ನೋಡಿದವನಿಲ್ಲ. ಆದರೆ ಆ ದೇವರ ಅನುಭವವಾದವರು  ಇಲ್ಲದೇ ಇರುವುದಿಲ್ಲ. ದೇವರು ಇಲ್ಲ ಎಂದು ಹೇಳುವವನಿಗೂ ಅದು ಅನುಭವಾಗುತ್ತದೆ. ಅದು ಅನುಭವಾಗದೇ ಇದ್ದರೆ ಆತ ದೇವರನ್ನು ನಂಬುದಿಲ್ಲ ಅಂತ ಹೇಳುವುದಕ್ಕೂ ಸಾಧ್ಯವಿಲ್ಲ. ದೇವರು ಅಂತ ದೇವರು ಹೇಳುವುದಿಲ್ಲ . ಅದನ್ನೂ ನಾವೇ ಹೇಳಬೇಕು. 

ಮಧೂರು ಕ್ಷೇತ್ರದ ಬ್ರಹ್ಮ ಕಲಶದ ದೃಶ್ಯಾವಳಿಗಳನ್ನು ನೋಡುವಾಗ ಮನಸ್ಸು ಪುಳಕಿತವಾಗುತ್ತದೆ. ಆ ಸಂಭ್ರಮ ನಮ್ಮದಾಗಬೇಕು ಅಂತ ಮನಸ್ಸು ಬಯಸುತ್ತದೆ. ಆಲ್ಲಿ ಸನ್ನಿಧಿಯಲ್ಲಿ ಅದನ್ನು ಅನುಭವಿಸಿದವರ ಭಾಗ್ಯವನ್ನು ನೆನೆದು ಕೃತಾರ್ಥರಾಗಿ ಈ ಮಹಾ ಕಾರ್ಯಕ್ಕೆ ದುಡಿದ ಎಲ್ಲರಿಗೂ ಭಕ್ತಿ ಪೂರ್ವಕ ಪ್ರಣಾಮಗಳು. ಮುಂದೆಯೂ ಇಂತಹ ಮಾಹಾಕಾರ್ಯಗಳು ನೆರವೇರಲಿ. ಅದನ್ನು ಅನುಭವಿಸುವ ಭಾಗ್ಯ ನಮ್ಮದಾಗಲಿ. 

ಶ್ರೀ ಮಹಾಗಣಪತಯೇ ನಮೋ ನಮಃ