Sunday, April 20, 2025

ಯಜ್ಞೋಪವೀತ ದರ್ಶನ

ಬಾಲ್ಯದಲ್ಲಿ ಪ್ರಾಥಮಿಕ ಶಾಲೆಗೆ ಹೋಗುತ್ತಿರಬೇಕಾದರೆ ಬ್ರಹ್ಮೋಪದೇಶವಾಯಿತು. ಅದು ವರೆಗೆ ನನಗೆ ಯಾವಾಗ ಉಪನಯನ ಅಂತ ಕೇಳುತ್ತಿದ್ದವನಿಗೆ ಒಂದು ದಿನ ಉಪನಯನವಾಯಿತು. ಬಡತನದಲ್ಲಿದ್ದವರಿಗೆ ಈ ಮದುವೆಯಾದರೂ ಸುಲಭದಲ್ಲಿ ಆಗಬಹುದು. ಅಲ್ಲಿ ಗಂಡು ಹೆಣ್ಣು ಮೆಚ್ಚಿದರೆ ಈ ಕಾಲದಲ್ಲಿ ಮದುವೆಯಾಗಿಬಿಡುತ್ತದೆ. ಆದರೆ ಉಪನಯನ ಎಂಬುದು ಅಷ್ಟು ಸುಲಭದಲ್ಲಿ ಸಾಧ್ಯವಾಗುವುದಿಲ್ಲ. ಕೇವಲ ಒಬ್ಬ ಪುಟ್ಟ ಬಾಲಕನಿಗೆ ಆಗುವ ಒಂದು ಪುಟ್ಟ ಕಾರ್ಯಕ್ರಮವಾದರೂ ಅದಕ್ಕೆ ಹಲವಾರು ನಿಬಂಧನೆಗಳು ಇರುತ್ತವೆ. ಯಾಕೆಂದರೆ ಬ್ರಹ್ಮೋಪದೇಶ ಆ ಮಗುವಿಗೆ ಸಿಗುವ ಶಿಕ್ಷಣಕ್ಕೆ ಅಂದೇ ನಾಂದಿ. ಯಾವುದೇ ವ್ಯಕ್ತಿಯಾದರು ಹುಟ್ಟಿದ ಕೂಡಲೇ ಮೊದಲು ಸಿಗುವ ವಸ್ತುವೆಂದರೆ ಶಿಕ್ಷಣ. ಬದುಕಿನ ಕ್ಷಣ ಕ್ಷಣವೂ ಸಿಗುವುದಕ್ಕೆ ಶಿಕ್ಷಣ ಅಂತ ಹೇಳಬಹುದು.  ಆಗ ತಾನೆ ಹುಟ್ಟಿದ ನವಜಾತ ಶಿಶುವಿಗೆ ಬಾಯಿಗೆ ತೊಟ್ಟು ಹಾಲು ಸಿಗಬೇಕಾದರೆ ಅತ್ತರೆ ಸಿಗುತ್ತದೆ ಎಂಬ ಜ್ಞಾನ ಒದಗಿ ಬರುವಲ್ಲಿಂದ ಶಿಕ್ಷಣ ತೊಡಗಿಬಿಡುತ್ತದೆ. ಆದರೆ ಬದುಕಿನಲ್ಲಿ ನಾನು ಯಾಕೆ ಹುಟ್ಟಿದೆ ಅಂತ ತಿಳಿಯುವ ಶಿಕ್ಷಣ ಒದಗಿ ಬರುವುದು ಉಪನಯನದಿಂದ. ಅದೊಂದು ಮರು ಜನ್ಮ. ಹಾಗಾಗಿ ಅದಕ್ಕೆ ಮೂಹೂರ್ತ ಸುಲಭದಲ್ಲಿ ಸಿಗುವುದಿಲ್ಲ. ಬೇಕಾದರೆ ಜ್ಯೋತಿಷಿಗಳಲ್ಲಿ ಒಂದು ಸಲ ವಿಚಾರಿಸಿ. ತಂದೆ ಮಗನ ಗ್ರಹ ಬಲ ಜತೆಗೆ ಒದಗಿಬರಬೇಕು. ಹಾಗಾಗಿ ಬಡತನದಲ್ಲಿ ಉಪಯನ ಆಗುತ್ತದೆ ಎಂದು ವಿಶ್ವಾಸ ಇಡುವ ಹಾಗಿಲ್ಲ. ಆದರೂ ದೈವಾನುಗ್ರಹದಿಂದ ಉಪನಯನ ಆಯಿತು.  ಹಿರಿಯರು ಸಂಧ್ಯಾವಂದನೆ ಮಾಡುವಾಗ ಮಂತ್ರ ಹೇಳುವಾಗ ಮಕ್ಕಳು ಕುತೂಹಲದಿಂದ ಆಶೆ ಗಣ್ಣಿನಿಂದ ನೋಡುತ್ತೇವೆ. ಯಾಕೆಂದರೆ ಉಪಯನಯನವಾಗದೇ ಮಂತ್ರ ಹೇಳುವುದಕ್ಕೆ ಅಧಿಕಾರವಿಲ್ಲ. ಮಗುವಿಗೆ ಮೊದಲು ಬ್ರಹ್ಮೋಪದೇಶವಾಗಿ ಗಾಯತ್ರಿ ಮಂತ್ರದ ಉಪದೇಶವಾಗಬೇಕು.  ಕಾಲ ಯಾವುದೆಂದು ಗೊತ್ತಿಲ್ಲ. ಆ ಕಾಲದಿಂದ ವಿಶ್ವಾಮಿತ್ರ ಋಷಿಯ ಕಂಡ ಮಂತ್ರ ಗಾಯತ್ರಿ ಮಂತ್ರ. ಅದು  ನಮ್ಮ ನಾಲಿಗೆಯಲ್ಲಿ ಕುಣಿಯಬೇಕಾದರೆ ಅದಕ್ಕೊಂದು ಇತಿಹಾಸವಿದೆ. ಇತಿಹಾಸಕ್ಕಿಂತಲೂ ಅದಕ್ಕೊಂದು ಸಂಪ್ರದಾಯವಿದೆ. ಪೂರ್ಣವಿರಾಮ ಇಲ್ಲದ ಒಂದು ಸಂಪ್ರದಾಯವದು. 

ಸಂಧ್ಯಾವಂದನೆ....ಹೇಳುವುದಕ್ಕೆ ಒಂದು ಆಕ್ಷೇಪ ಉಂಟು. ಹಿಂದುಗಳೂ ಮೂರ್ತಿ ಪೂಜಕರು. ಸಾವಿರಾರು ದೇವರು ಇದ್ದಾರೆ...ಹೀಗೆ ಅಪೂರ್ಣ ಜ್ಞಾನದ ಸಂಗತಿಗಳು. ನಿಜಕ್ಕಾದರೆ ಸಂಧ್ಯಾವಂದನೆಯಲ್ಲಿ ಯಾವುದೇ ಮೂರ್ತಿಯೂ ಇಲ್ಲ. ಯಾವುದೇ ಕ್ಷೇತ್ರವೂ ಇಲ್ಲ.  ಯಾವುದೇ ಪರಿಕರದ ಅಗತ್ಯವೂ ಇರುವುದಿಲ್ಲ. ಬ್ರಹ್ಮೋಪದೇಶದ ನಂತರ ಅದು ಅನಿವಾರ್ಯ ಕರ್ಮ. ಮೂರೆಳೆ ಜನಿವಾರದಿಂದ ಬಂಧಿತವಾಗುವ ಅನಿವಾರ್ಯ ಕರ್ಮ ಅದು ಅಂತ ಹಲವರಿಗೆ ತಿಳಿದಿಲ್ಲ. ಹೊರಗೆ ಎಲ್ಲೂ ಕಾಣಲಾಗದ ಭಾವ ರೂಪವಿಲ್ಲದ ಭಗವಂತನನ್ನು ಆ ಪರಮೇಶ್ವರನನ್ನು ತನ್ನಲ್ಲೇ ಕಾಣುವ ಒಂದು ಪವಿತ್ರ ಕರ್ಮ. ಪವಿತ್ರ ಎಂದರೆ ಅಲ್ಲಿ ಪರಿಶುದ್ಧಿ ಇರಬೇಕು. ಆದರೆ ಪರಿಶುದ್ದಿ ಪಾವಿತ್ರ್ಯ ಎಂದರೆ ಇಂದಿಗೂ ಅದು ನಿಗೂಢ ಸತ್ಯ. ಹಲವರಿಗೆ ಅದು ತಿಳಿದಿಲ್ಲ. 

ಯಾವುದೇ ಪೂಜೆ ಪುನಸ್ಕಾರ, ಕರ್ಮಗಳನ್ನು ಮಾಡುವಾಗ ಪದೇ ಪದೇ ಅಚಮನ ಮಾಡುತ್ತಾರೆ. ಯಾಕೆಂದರೆ ಎಲ್ಲ ಭವ ಬಂಧನದ ಕಲ್ಮಷಗಳನ್ನು ಒಂದಿಷ್ಟಾದರೂ ಕಳೆದುಕೊಳ್ಳುವ ಸಾಮಾನ್ಯ ಕ್ರಿಯೆ. ಅಚಮನ ಮಾಡಿ ಪ್ರಾಣಾಯಾಮ ಮಾಡುತ್ತೇವೆ. ಪ್ರಾಣಾಯಾಮ ಎಂದರೆ ಏನು?  ಅಧುನಿಕ ಯೋಗ ಶಿಕ್ಷಣ ಹೇಳುತ್ತದೆ. ಪೂರಕ ರೇಚಕ ಕುಂಭಕದಲ್ಲಿ ಉಸಿರಾಟದ ತಂತ್ರಗಾರಿಕೆ. ಆದರೆ ಇದಿಷ್ಟೇ ಅಲ್ಲ. ಸನಾತನ ಧರ್ಮ ತೋರಿಸಿಕೊಡುವ ಪರಮ ಸತ್ಯ ಬೇರೆ  ಇದೆ. ಯಾವುದೇ ಪಾರಾಮಾರ್ಥಿಕ ಅನುಭವವಾಗಬೇಕಾದರೆ ನಾವು ನಮ್ಮ ಪಂಚೇಂದ್ರಿಯಗಳ ಸಂವೇದನೆ, ಪ್ರಚೋದನೆಯಿಂದ ದೂರಾಗಬೇಕು. ಕಣ್ಣು ಕಾಣಬಾರದು, ಕಿವಿ ಮೂಗು ತಟಸ್ಥವಾಗಬೇಕು. ದೇಹದ ಅಂಗಾಂಗಳು ಸ್ಪರ್ಶಜ್ಞಾನವನ್ನು ಕಳೆಯಬೇಕು. ವಿಸರ್ಜನಾಂಗಗಳು ತನ್ನ ಚಟುವಟಿಕೆಯನ್ನು ಸ್ತಭ್ದ ಗೊಳಿಸಬೇಕು. ಅದೊಂದು ಸ್ಥಿತಪ್ರಜ್ಞ ಸ್ಥಿತಿ. ಅದನ್ನು ಸಾಧಿಸುವ ಪುಟ್ಟ ಕ್ರಿಯೆ ಪೂರಕ ರೇಚಕ ಕುಂಭಕದ ಒಂದು ಕ್ರಿಯೆ. ಕೇವಲ ಮೂಗು ಹಿಡಿದು ಗಾಯತ್ರೀ ಮಂತ್ರ ಸ್ಮರಣೆಯಲ್ಲಿ ಪ್ರಾಣಾಯಾಮವಾಗುವುದಿಲ್ಲ. ಸೂರ್ಯ ಭೇದನ ಕ್ರಿಯೆಯಿಂದ ತೊಡಗುವ ಪ್ರಾಣಾಯಾಮ,  ಕಣ್ಣನ್ನು ಮುಚ್ಚಿಸುತ್ತದೆ. ಉಸಿರಾಟವನ್ನು ಸ್ತಬ್ಧಗೊಳಿಸುತ್ತದೆ.   ನಮ್ಮ  ದೇಹದ ಸ್ಪರ್ಶವನ್ನು ನಿಯಂತ್ರಿಸುತ್ತದೆ. ಈ ಅದ್ಭುತ ಕ್ರಿಯೆ ಎಂದರೆ ಅದು ಪರಿಶುದ್ದಿಯ ಸಂಕೇತ. ತಾನು ಈ ಭವಬಂಧನಿಂದ ಕ್ಷಣ ಹೊತ್ತಾದರೂ ಬೇರಾಗಿ ಪವಿತ್ರ ನಾದೆ ಎಂದು ತಿಳಿಯುವ ಕ್ರಿಯೆ. ದೇಹ ಸ್ಪರ್ಶಜ್ಞಾನದಿಂದ ದೂರಾಗುವುದೆಂದರೆ ಬಾಹ್ಯ ಜಗತ್ತಿನ ಅಂದರೆ ಈ ಲೌಕಿಕ ಜಗತ್ತಿನ ಸ್ಪರ್ಶವನ್ನು ದೂರಾಗಿಸುವುದೆಂದು ಅರ್ಥ ,.ಅದನ್ನು ಅಸ್ಪೃಶ್ಯತೆ ಅಂತ ಕೆಟ್ಟದಾಗಿ ವ್ಯಾಖ್ಯಾನಿಸುತ್ತಾರೆ. ಸ್ಪರ್ಶ ಎಂಬುದು ಲೌಕಿಕ ಜಗತ್ತಿನ ಸೆಳೆತ. ಪಾರಾಮಾರ್ಥಿಕ ಚಿಂತನೆ ಎಂದರೆ ಈ ಸೆಳೆತದಿಂದ ದೂರಾಗುವುದು. ಆದರೆ ಮೂರ್ಖರಿಗೆ ಅದು ಅರ್ಥವಾಗುವುದಿಲ್ಲ. ಅವರಿಗೆ ಲೌಕಿಕ ಜಗತ್ತೇ ಶ್ರೇಷ್ಠ. ಪರಮಾತ್ಮನ ಸಾನ್ನಿಧ್ಯದ  ಮತ್ತದರ  ಪಾವಿತ್ರತೆ ತಿಳಿಯದ ಅಜ್ಞಾನದ ಮುಸುಕಿನೊಳಗೆ ಚಡಪಡಿಸುವವರು ಇವರು.  ಪರಿಶುದ್ಧಿಯ ಪರಿಪೂರ್ಣ ಪವಿತ್ರ ಅರ್ಥ ತಿಳಿದಿವರಿಗೆ ಮಾತ್ರ ಅಸ್ಪೃಶ್ಯತೆಯ ಅರಿವಾಗಬಹುದು. ಹಾಗಾಗಿ ಸಂಧ್ಯಾವಂದನೆಗೆ ಕೇವಲ ಸ್ನಾನ ಮಾಡಿ ಪರಿಶುದ್ದಿಯಾದರೆ ಸಾಲದು. ಪ್ರಾಣಾಯಾಮದಿಂದ ಅಂತರಂಗವೂ ಪರಿಶುದ್ಧಿಯಾಗಿ ಮನಸ್ಸು ದೇವರಲ್ಲಿ ಐಕ್ಯವಾಗಿ ತಾನೂ ಈಶ್ವರನೆಂಬ ಅದ್ವೈತ ಜ್ಞಾನ ಸಿದ್ಧಿಯಾಗಬೇಕು. ಆದರೆ ಪಾಮರರಿಗೆ ಇದನ್ನು ತಿಳಿಸಿ ಹೇಳುವ ವ್ಯವಧಾನ ಯಾರಿಗೂ ಇಲ್ಲ. ಕೇವಲ ಅಸ್ಪೃಶ್ಯತೆಯ ಜಪ. 

ಬದುಕಿನ ಪಾವಿತ್ರ್ಯತೆಯ ಅರಿವು ಮೂಡುವುದಕ್ಕೆ ಸಂಧ್ಯಾವಂದನೆ ತೊಡಗಿಕೊಳ್ಳುವುದೇ ಬ್ರಹ್ಮೋಪದೇಶದಿಂದ. ಬ್ರಹ್ಮ ಪರಬ್ರಹ್ಮದ ಅರಿವಿದ್ದವರಿಗೆ ಮಾತ್ರ ಅದರ ಸತ್ಯ ಅರಿವಾಗುತ್ತದೆ. ಹಾಗಾಗಿ ಬ್ರಹ್ಮೋಪದೇಶ ಅದು ಕೇವಲ ಜಾತಿಯಿಂದ ಬ್ರಾಹ್ಮಣರಿಗೆ ಮಾತ್ರ ಅನಿವಾರ್ಯವಲ್ಲ. ಮನುಷ್ಯನಾಗಿ ಹುಟ್ಟಿದವನಿಗೆ ಇಹ ಪರದ ಚಿಂತನೆ ಇರುವವನಿಗೆ ಅದು ಅನಿವಾರ್ಯ. ಇಲ್ಲಿ ಸಂಸ್ಕಾರ ವೆತ್ಯಾಸವಿರಬಹುದು. ಆದರೆ ಕ್ರಿಯೆಯಲ್ಲಿ ವೆತ್ಯಾಸ ವಿರುವುದಿಲ್ಲ. ವಿಪರ್ಯಾಸವೆಂದರೆ ಇದನ್ನು ಕೇವಲ ಬ್ರಾಹ್ಮಣರಿಗೆ ಮಾತ್ರ ಸೀಮಿತವಾಗಿಸಿ ಪ್ರತ್ಯೇಕಿಸುತ್ತಾರೆ.  ಹಾಗಾಗಿ ಬಾಲ್ಯದಲ್ಲಿ ಉಪನಯನವಾಗುತ್ತದೆ. ಶಾಲೆಗೆ ಹೋಗುವುದರಿಂದ ಬಾಹ್ಯ ಪ್ರಪಂಚದ ವ್ಯವಹಾರ ತೊಡಗಿಬಿಡುತ್ತದೆ. ಅದುವರೆಗೆ ಹಾಗೇ ಬರುತ್ತಿದ್ದವನಿಗೆ ಕೆಲವೊಂದು ಶಿಸ್ತು ಕ್ರಮಗಳು ಒದಗಿಬರುತ್ತದೆ. ಎಲ್ಲದಕ್ಕೂ ಮೊದಲು ಎದೆಗೆ ಒತ್ತಿಕೊಂಡು ದೇಹವನ್ನು ಆವರಿಸಿ ಒಂದು ಯಜ್ಞೋಪವೀತದ ಬಂಧನವಿರುತ್ತದೆ. ನಮ್ಮ ಅಜ್ಜ ಹೇಳುತ್ತಿದ್ದರು, ಏನು ಮಾಡುವುದಿದ್ದರೂ ಒಂದು ಸಲ ಜನಿವಾರ ಮುಟ್ಟಿ ನೋಡು. ಅವರು ಹೇಳುತ್ತಿರಬೇಕಾದರೆ ಆಗ ಅದರ ಗಂಭೀರತೆ ಅರಿವಾಗಲಿಲ್ಲ. ಆದರೆ ಬದುಕು ಸವೆಸಿದಂತೆ ಈ ಜನಿವಾರ ಅದೆಂತಹ ಪರಮಾತ್ಮ ಸಾನ್ನಿಧ್ಯವನ್ನು ಒದಗಿಸುತ್ತದೆ ಎಂದರೆ ಅದನ್ನು ಧರಿಸಿ ಅದರ ಪಾವಿತ್ರ್ಯತೆಯನ್ನು ತಿಳಿವಾಗ ಅರಿವಾಗುತ್ತದೆ. ಇಲ್ಲಿ ಪಾವಿತ್ರ್ಯತೆಯನ್ನು ತಿಳಿವಾಗ ಎಂದು ಪದೇ ಪದೇ ಉಲ್ಲೇಖಿಸಬೇಕು. ಯಾಕೆಂದರೆ ಹಲವರಿಗೆ ಅದು ಕೇವಲ ಅಲಂಕಾರಿಕ ವಸ್ತುವಾಗುತ್ತದೆ. ಹಾಗಾಗಿ ಅವರು ಮನೆಯ ಮೊಳೆಗೆ ಜನಿವಾರವನ್ನು ನೇತು ಹಾಕಿ ಎಲ್ಲ ಕರ್ಮಗಳಿಂದಲೂ ಅಜ್ಞಾನ ಸ್ವಾತಂತ್ರ್ಯವನ್ನು  ಪಡೆಯುತ್ತಾರೆ !.

ಉಪನಯನವಾಗಿ ಹಣೆಗೆ ತಿಲಕ ನಾಮ ಇಟ್ಟು ಶಾಲೆಗೆ ಹೋದರೆ ಸಹಪಾಠಿಗಳಿಂದ ಲೇವಡಿ ಗೇಲಿ ಆರಂಭವಾಗಿಬಿಡುತ್ತದೆ. ಆಗಿನಿಂದಲೇ ಒಂದು ಅವಮಾನ ಎಂಬ ಭಾವನೆ ಮೊಳೆತರೂ ಅಂತರಂಗದ ಭಾವನೆ ದೃಢವಾಗಿರುತ್ತದೆ. ನಾವೇ ಹಲವು ಸಲ ಮನೆಯಿಂದ ಹೊರಡಬೇಕಿದ್ದರೆ ತಿಲಕ ನಾಮ ಎಲ್ಲವನ್ನು ಉಜ್ಜಿ ತೊಡೆದು ಹೊರಗೆ ಕಾಲಿಡುತ್ತಿದ್ದೆವು. ಹೊರಗಿನ ಪ್ರಪಂಚಕ್ಕೆ ನಾನು ಬ್ರಹ್ಮೋಪದೇಶ ಪಡೆದವನು ಎಂದು ತೋರಿಸಿಕೊಳ್ಳುವುದಕ್ಕೂ ಒಂದು ಹಿಂಜರಿಕೆ. ಬ್ರಹ್ಮೋಪದೇಶದಲ್ಲಿ ಯಾವುದೇ ಅನ್ಯಧರ್ಮವನ್ನು ಅನ್ಯ ಸಂಸ್ಕಾರವನ್ನು ಕೀಳಾಗಿ ಕಾಣು ಎಂದು ಹೇಳುವುದಿಲ್ಲ. ನಿನ್ನ ಧರ್ಮವನ್ನು ಒಪ್ಪಿಕೊಳ್ಳದವನ್ನು ಹಿಂಸಿಸು, ತುಚ್ಚವಾಗಿ ಕಾಣು ಎಂದು ಉಪದೇಶಿಸುವುದಿಲ್ಲ. ಕೇವಲ ನಿನ್ನ ಶ್ರೇಯೋಭಿವೃದ್ಧಿಗೆ ಇದನ್ನು ಅನುಸರಿಸು ಅಂತ ಉಪದೇಶಿಸುತ್ತಾರೆ. ಹಾಗಾಗಿ ಸಂಧ್ಯಾವಂದನೆ ತೊಡಗುವಾಗ ಮಮೋಪಾತ್ತ ದುರಿತಕ್ಷಯದ್ವಾರ ಅಂತ ಸಂಕಲ್ಪಿಸುತ್ತಾರೆ. ಮಮೋಪಾತ್ತ ದುರಿತದ ಕ್ಷಯ...ಅದು ಕೇವಲ ವೈಯಕ್ತಿಕ ನೆಲೆಗಟ್ಟಿಗೆ ಮಾತ್ರ ಸೀಮಿತ. ಇದೆಲ್ಲ ಹೊರಗಿನ ಜಗತ್ತಿಗೆ ಅರಿವಾಗುವುದಿಲ್ಲ. ಅರಿವಾಗಬೇಕಾದರೆ ಸರಿಯಾದ ಅಧ್ಯಯನ ಬೇಕು. ಇಂದು ವಿಮರ್ಶೆಗಳು ಪ್ರತಿಕ್ರಿಯೆಗಳು ಅಧ್ಯಯನ ವಿಲ್ಲದ ಮೂರ್ಖ ಪ್ರವಚನಗಳಾಗಿರುತ್ತವೆ. 

  ವಿದ್ಯಾರ್ಥಿ ಜೀವನದಲ್ಲೇ ಈ ಕೀಳರಿಮೆಯಿಂದ ಬೆಳೆಯುವಾಗ ಸಂವಿಧಾನ ಬದ್ಧವಾದ ಹಕ್ಕು ಸ್ವಾತಂತ್ರ್ಯದಿಂದ ನಾವು ವಂಚಿತರಾಗುತ್ತೇವೆ ಎಂಬ ಅರಿವಿರುವುದಿಲ್ಲ.  ಜನಿವಾರದ ಭಾರ ಭಾವನಾತ್ಮಕವಾಗಿ ಬ್ರಹ್ಮೋಪದೇಶ ಪಡೆದವನ ಮೇಲಿರುತ್ತದೆ. ಆದರೆನಾವು ಜನಿವಾರ ಹಾಕಿದರೆ ಅದರ ಭಾರ ಮತ್ತೊಬ್ಬರ ಹೆಗಲ ಮೇಲಿರುತ್ತದೆ. ವಿಚಿತ್ರ. ಮಂಗಳೂರಲ್ಲಿ ಪ್ರಾಥಮಿಕ ಶಾಲೆಗೆ ಹೋಗುವಾಗ ಒಂದು ಘಟನೆ, ಅದರ ವಿವರ ಸರಿಯಾಗಿ ಜ್ಞಾಪಕವಿಲ್ಲ.  ಒಬ್ಬ ಬ್ರಾಹ್ಮಣ ಹುಡುಗ ಉಪನಯನದ ನಂತರ ಶಾಲೆಗೆ ಬರುತ್ತಾನೆ. ಉಳಿದ ಮಕ್ಕಳು ಆತನ ಜನಿವಾರ ಹಿಡಿದೆಳೆದು ತಮಾಷೆ ನೋಡುತ್ತಾರೆ.  ಹೀಗೆ ಮಾಡಿ ಎಲ್ಲರೂ ಪುಕ್ಕಟೆ ಮನರಂಜನೆ ಅನುಭವಿಸುತ್ತಾರೆ. ಹುಡುಗ ಮಾತ್ರ ಅವಮಾನದಿಂದ ಕುಗ್ಗಿಬಿಡುತ್ತಾನೆ. ಮರುದಿನ ಜನಿವಾರ ಕಾಣಂತೆ ಇಡುತ್ತಾನೋ ಇಲ್ಲ ಕಳಚಿ ಮನೆಯಲ್ಲಿ ಬಿಟ್ಟು ಬಂದನೋ ಗೊತ್ತಿಲ್ಲ. ಆನಂತರ ಇದು ನಡೆಯಲಿಲ್ಲ. ಅದೇ ರೀತಿ ಒಬ್ಬನ ಟೊಪ್ಪಿ ತೆಗೆದು ಆಟವಾಡುತ್ತಾರೆ. ಅದೊಂದು ಧರ್ಮ ಬೇರೆಯೇ ಉಂಟು ಅಂತ. ಅಗ ನನಗೆ ಅರಿವಿಲ್ಲ. ಮರುದಿನ ಆ ಹುಡುಗನ ಮನೆಯಿಂದ ವಿಚಾರಿಸುವುದಕ್ಕೆ ಕೆಲವು ಮಂದಿ ಬರುತ್ತಾರೆ. ವೆತ್ಯಾಸ ಇಷ್ಟೆ. ವಿಚಾರಿಸುವುದಕ್ಕೆ ಬಂದುದಕ್ಕೆ ಆಕ್ಷೇಪವಲ್ಲ. ಆದರೆ ಇಲ್ಲಿ ಇಂತಹ ಖಾಸಗಿ ವಿಚಾರಗಳು ನಗೆ ಪಾಟಲಿಗೆ ಈಡಾಗುವುದು ನಿಜಕ್ಕೂ ಬೇಸರ ತರಿಸುತ್ತದೆ.  ಹಲವರ ಜೀವನದಲ್ಲೂ ಇದೇ ಬಗೆಯ ಘಟನೆಗಳು ನಡೆದಿರುತ್ತವೆ. ಹೆಚ್ಚಿನವರು ಇದು ಸಾಮಾನ್ಯ ಅಂತ ಹೇಳದೇ ಉಳಿಯುತ್ತಾರೆ. ವಿಚಿತ್ರವೆಂದರೆ ಇದು ಗಂಭೀರ ಅಂತ ಅನ್ನಿಸುವಾಗ ...ಕಾಲ ಮಿಂಚಿ ಹೋಗಿರುತ್ತದೆ. ಸ್ವಾತಂತ್ರ್ಯ ಅಂದರೆ ಏನು ಅಂತ ಯೋಚಿಸುವಂತಾಗುತ್ತದೆ. ಕಾನೂನು ನಿಯಮಗಳು ಎಲ್ಲವೂ ಸಮಾನವಾಗಿರಬೇಕು. ಇಲ್ಲವಾದರೆ ಅದು ನಾಗರೀಕ ಜೀವನದಕ್ಕು  ಜನೋಪಯೋಗಿಯಾಗುವುದಕ್ಕೆ ಸಾಧ್ಯವಿಲ್ಲ. 

ನಾನು ಒಂದು ಸಲ ಒಬ್ಬ ಹಿರಿಯರಲ್ಲಿ ಹೇಳಿದೆ, ಎಲ್ಲರೂ ಸೇರಿ ಸಂಧ್ಯಾವಂದನೆಯ ಅಭಿಯಾನವನ್ನು ಮಾಡಬೇಕು. ಹಲವರು ಹಲವು ಕಾರಣಗಳಿಂದ ಇದರಿಂದ ವಿಮುಖರಾಗಿರುತ್ತಾರೆ. ಅಥವಾ ಪುನಃ ತೊಡಗಿಸುವುದಕ್ಕೆ ಏನೋ ಹಿಂಜರಿಕೆ. ಮಂತ್ರಗಳು ಕಲಿತಿರುವುದಿಲ್ಲ. ಇಂತಹವರಿಗೆ ಪ್ರೇರಕವಾಗುವಂತೆ ಒಂದು ಅಭಿಯಾನ ಮಾಡಿ ಇದರ ಶಿಕ್ಷಣವನ್ನು ಒದಗಿಸಬೇಕು. ಎಲ್ಲರಿಗೂ ಇದರ ಮಹತ್ವವನ್ನು ಗಂಭೀರತೆಯನ್ನು ತಿಳಿಸಬೇಕು. ವಿಪರ್ಯಾಸವೆಂದರೆ ಇದಕ್ಕೆ ಯಾರೂ ಸ್ಪಂದಿಸಲಿಲ್ಲ. ನಮಗೆ ಗೌರವ ಸಿಗಬೇಕು. ನಮ್ಮ ಚಿಂತನೆಗಳಿಗೆ ನಮ್ಮ ಭಾವನೆಗಳಿಗೆ ಮನ್ನಣೆ ಸಿಗಬೇಕು ಅಂತ ಪ್ರತಿಯೊಬ್ಬರೂ  ಆಶಿಸುತ್ತಾರೆ. ಅದಕ್ಕೆ ಪ್ರತಿಯಾಗಿ ನಮ್ಮ ನಡವಳಿಕೆಗಳೂ ಅದಕ್ಕೆ ಅನುಗುಣವಾಗಿರಬೇಕು. ನಮ್ಮ ಧಾರ್ಮಿಕ ವಿಚಾರಗಳಿ ಮೊದಲು ನಾವು ಗೌರವ ಕೊಡಬೇಕು. ಸಂಧ್ಯಾವಂದನೆ , ಅನುಷ್ಠಾನ ನಿಯಮಗಳನ್ನು ನಾವು ಮೊದಲು ಗೌರವದಿಂದ ಅನುಸರಿಸಬೇಕು. ಮತ್ತೊಬ್ಬರು ಅದನ್ನು ಭಯದಿಂದ ಗೌರವದಿಂದ ಕಾಣುವಂತೆ ನಮ್ಮ ವರ್ತನೆ ಇರಬೇಕು. ಇದಕ್ಕೆ ವ್ಯತಿರಿಕ್ತವಾಗಿ ನಾವು ಇರುವಾಗ ಸಹಜವಾಗಿ ನಗೆ ಪಾಟಲಿಗೆ ನಾವು ಅಥವಾ ಇನ್ಯಾರೋ ಈಡಾಗಿ ಬಿಡುತ್ತಾರೆ. ಎಲ್ಲರಿಗೂ ಅವರವರ ಹಾದಿ ಆಯ್ಕೆ ಮಾಡುವ ಸ್ವಾತಂತ್ರ್ಯವಿರುತ್ತದೆ. ಒಬ್ಬರ ಸ್ವೇಚ್ಛಾಚಾರದಿಂದ ಅದರ ಗಂಭೀರತೆ ನಷ್ಟವಾಗಿ ಅದರ ಪರಿಣಾಮ ಇನ್ಯಾರದೋ ಮೇಲೆ ಆಗುವುದು ವಿಡಂಬನೆ. ಒಂದು ಮನೆಯಲ್ಲಿ ನಾನೇ ನೋಡಿದ್ದೇನೆ, ಜನಿವಾರ  ಗೋಡೆಗೆ ನೇತು ಹಾಕಿರುತ್ತದೆ. ಬೇಕಾಗುವಾಗ ಧರಿಸುವ ಉಡುಗೆಯಂತೆ. ಹೇಳಿಕೇಳಿ ಇದು ಯಜ್ಞೋಪವೀತ..ಅಂದರೆ ಉಪವಸ್ತ್ರ. ಅಕ್ಷರಶಃ ಇದು ವಿಪರೀತಾರ್ಥದಲ್ಲಿ ಬಳಕೆಯಾಗುತ್ತದೆ. ಇನ್ನು ಸಂಧ್ಯಾವಂದನೆ ಮಾಡುವಾಗಲಂತೂ ಮೊಬೈಲ್ ಹತ್ತಿರವೇ ಇರುತ್ತದೆ. ಇಲ್ಲ ಅದು ಕಾಟಾಚಾರಕ್ಕೆಂಬಂತೆ ಮಾಡುತ್ತಾರೆ. ಯಾರೊಂದಿಗೊ ಮಾತನಾಡುತ್ತಾ ಇನ್ನೇನೋ ಕೆಲಸ ಜತೆಯಲ್ಲಿ ಮಾಡುತ್ತಾ ಸಂಧ್ಯಾವಂದನೆ ಮಾಡುವುದರಲ್ಲಿ ಭಗವಂತನ ಮೇಲೆ ಗಮನ ಹೇಗೆ ಸಾಧ್ಯ. ಕೇವಲ ಒಂದು ಹತ್ತು ನಿಮಿಷ ಕೂಡಾ ಅದಕ್ಕೆ ಸಂಪೂರ್ಣವಾಗಿ ವಿನಿಯೋಗಿಸುವ ಮನಸ್ಸು ಇಲ್ಲವಾದರೆ ಅದನ್ನು ಆಚರಿಸಿ ಆ ದೇವರಿಗೆ ಸವಾಲೊಡ್ಡುವ ಅವಶ್ಯಕತೆ ಇದೆಯೇ ಅಂತ ಅನ್ನಿಸುತ್ತದೆ.  ಒಂದು ಕಾಲದಲ್ಲಿ ನಾನೂ ಇದನ್ನು ಅವಗಣನೆ ಮಾಡಿದ್ದೆ. ಆದರೆ ಜೀವನ ಶಿಕ್ಷಣ ಅನುಭವ ಎಂಬುದು ಪಾಠ ಕಲಿಸುವಾಗ ನಾವು ಏನೂ ಅಲ್ಲ ಎಂಬ ಶೂನ್ಯತೆಯ ಅರಿವಾಗುವಾಗ ಇವುಗಳ ಆದ್ಯತೆ ಅರಿವಾಗುತ್ತದೆ. 

ಈಗ ನಿಯಮಿತವಾಗಿ ಸಂಧ್ಯಾಕಾಲಾದಲ್ಲಿ ಈ ಸಂಧ್ಯಾವಂದನೆ ಮಾಡುತ್ತೇನೆ. ಅದು ಮನೆ ಬಿಟ್ಟು ಹೊರಗೆ ಹೋದಾಗಲೂ..ಆ ಸಮಯವನ್ನುಆದಷ್ಟು ಪ್ರಯತ್ನ ಪೂರ್ವಕ ಅದಕ್ಕೆ ವಿನಿಯೋಗ ಮಡುತ್ತೇನೆ. ಪ್ರಯಾಣದಲ್ಲಿ ಆ ಸಮಯ ಬಂದರೆ ಒಂದಷ್ಟು ಸುಮ್ಮನೆ ಕುಳಿತು ಧ್ಯಾನವನ್ನಾದರೂ ಮಾಡಿ ಬಿಡುತ್ತೇನೆ. ಹಲವು ಕಡೆ ಮದುವೆಯಂತಹ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿ ಕಷ್ಟಪಟ್ಟು ಸಂಧ್ಯಾವಂದನೆಗೆ ಕುಳಿತು ಬಿಡುತ್ತೇನೆ. ವಿಚಿತ್ರವೆಂದರೆ ಅಲ್ಲೂ ಕೆಲವರು ಅದೂ ಬ್ರಾಹ್ಮಣರೂ ವಿಚಿತ್ರವಾಗಿ ನೋಡುತ್ತಾರೆ.  ತಾವು ಮಾಡಲಾಗದ ಹತಾಶೆಯೋ ಅಲ್ಲ ನನ್ನದು ಢಂಭಾಚಾರವಾಗಿ ಕಾಣುವುದೋ ಗೊತ್ತಿಲ್ಲ ಅಂತೂ ಹಲವು ಸಲ ನನಗೇ ಹೀಗೆ ಅಂತ ಅನ್ನಿಸಿದ್ದಿದೆ. ಎಲ್ಲರಂತೆ ನಾನೂ ಮಾಡದೇ ಇರಬಹುದಲ್ಲ ಅಂತ ಅನ್ನಿಸಿದರೂ ಸಮಯ ಬಂದಾಗ ಉಳಿದವರಿಗಾಗಿ ನನ್ನದನ್ನು ನಾನೇಕೆ ಕಳೆದುಕೊಳ್ಳಬೇಕು. ಅಷ್ಟಾಗಿ ಇದು ಯಾರಿಗೂ ತೊಂದರೆ ಕೊಡುವ ಕಾರ್ಯವಲ್ಲ.  


ಇನ್ನು ನಮ್ಮ ಧಾರ್ಮಿಕ ವಿಧಿ ವಿಧಾನಗಳು ದೇಶ ಪ್ರದೇಶಕ್ಕೆ ಹೊಂದಿಕೊಂಡು ವಿಭಿನ್ನವಾಗಿರುತ್ತವೆ. ಹಿರಿಯರಿಂದ ಬಂದ ಸಂಸ್ಕಾರ ಯವುದಾದರೂ ಅದನ್ನು ಗೌರವದಿಂದ ಕಾಣುವ ಮನೋಭಾವ ನಮ್ಮಲ್ಲಿರಬೇಕು. ನಮ್ಮ ಬ್ರಾಹ್ಮಣರಲ್ಲೇ ತನ್ನದು ಮಾತ್ರ ಶ್ರೇಷ್ಠ ಎನ್ನುವ ಭಾವನೆ ಹಲವು ಕಡೆಯಲ್ಲಿ ಪ್ರಕಟವಾಗುತ್ತದೆ. ಒಂದು ಕಾರ್ಯಕ್ರಮದಲ್ಲಿ ಊಟಕ್ಕೆ ಕುಳಿತಾಗ ಅಲ್ಲಿ ದಕ್ಷಿಣ ಕನ್ನಡದವರು ನಾವಿಬ್ಬರೇ ಇದ್ದೆವು. ಹಸ್ತೋದಕ ತೆಗೆಯುವ ಕ್ರಮಕ್ಕೆ ಒಬ್ಬ ಪುರೋಹಿತರು ಕೊಂಕು ನುಡಿದರು. ಆಗ ನಾನು ತೀವೃವಾಗಿ ಸಮಾಧಾನದಿಂದ ಆಕ್ಷೇಪ  ವ್ಯಕ್ತಪಡಿಸಿದ್ದೆ. ವಿಧಿ ವಿಧಾನಗಳು ಹಿರಿಯರಿಂದ ಸಿಗುವ ಸಂಸ್ಕಾರಗಳು ವಿಭಿನ್ನವಾಗಿದ್ದರೂ ಅದು ತೆಗಳುವ ಸಾಧನವಲ್ಲ. ತನ್ನದು ಮಾತ್ರ ಶ್ರೇಷ್ಠ ಅಂತ ಯಾರು ತಿಳಿದಿರುತ್ತಾನೋ ಆತನಿಗೆ ಅಧ್ಯಯನಲ್ಲಿ ಅಧ್ಯಯನದ ಕೊರತೆ ಇರುತ್ತದೆ. ನಮ್ಮ ಹಿರಿಯರಿಂದ ಬಂದ ಸಂಸ್ಕಾರವನ್ನು ನಾವು ಅನುಸರಿಸಬೇಕು. ವಿಶ್ವಾಮಿತ್ರನ ಕಾಲದಿಂದ ಅದು ನಮ್ಮ ಪಿತೃಗಳ ತನಕ ಬಂದಿದೆ ಎಂದರೆ ಅದು ಸತ್ವಹೀನವಾಗುವುದಕ್ಕೆ ಸಾಧ್ಯವಿಲ್ಲ. ವೇದ ಅಂದರೆ ನಿಯಮ. ನಮ್ಮ ಬದುಕನ್ನು ರೂಪಿಸುವ ನಿಯಮ. ನಾವು ಹೀಗೆ ನಡೆಯಬೇಕು ಎಂದು ನಿರ್ದೇಶಿಸುವ ನಿಮಯಗಳು. ಇದರ ಅರ್ಥ ತಿಳಿಯದೇ ನಮ್ಮಲ್ಲೇ ನಾವು ಮತ್ತೊಬ್ಬರನ್ನು ಹೀನಾಯವಾಗಿ ಕಂಡರೆ ಉಳಿದವರಿಂದ ಗೌರವ ಸಿಗಬೇಕು ಎನ್ನುವ ಹಕ್ಕೇ ಉಳಿಯುವುದಿಲ್ಲ. ಜಾತಿ ಯಾವುದಾದರೇನು ಧರ್ಮ ಯಾವುದಾದರೇನು ಗಂಗೆ ಹರಿಯುವಲ್ಲೇ ಯಮುನೆಯೂ ಹರಿಯುತ್ತಾಳೆ.  ಪ್ರಕೃತಿ ತೋರಿಸುವ ಪಾಠವಿದು. 


ಯಾವುದೋ ಹುಡುಗನ ಜನಿವಾರ ಕಿತ್ತೆಸೆದಿದ್ದಾರೆ. ನಾವು ಅದರ ಬಗ್ಗೆ ಪ್ರತಿಭಟಿಸುತ್ತೇವೆ. ನಿಜಕ್ಕೂ ಇದೊಂದು ವಿಷಾದನೀಯ ಘಟನೆ. ಇಲ್ಲಿ ಏನಾದರೂ ಯಾರೂ ರಸ್ತೆಗೆ ನುಗ್ಗುವುದಿಲ್ಲ. ಕಲ್ಲು ಎಸೆಯುವುದಿಲ್ಲ. ವಾಹನ ಉರಿಸುವುದಿಲ್ಲ. ಹಾಗಾಗಿ ಇಂತಹ ಘಟನೆಗಳು ಲೋಕ ಮುಖದಲ್ಲಿ ಗಂಭೀರವಾಗುವುದಿಲ್ಲ. ಬದಲಾಗಿ ಅಪಸ್ವರವೇ ಮೂಡುತ್ತದೆ. ಈ ಪವಿತ್ರತೆ, ಪರಿಶುದ್ದಿ ಮೋಕ್ಷ ಇದೆಲ್ಲ ಚಲಾವಣೆಯಾಗದ ವಿಷಯಗಳು. ಸ್ವತಹ ನಮಗೇ ಅದರ ಅರ್ಥ ತಿಳಿಯದೇ ಇದ್ದರೆ ಆಗುವ ಅವಗಣನೆಗೆ ಪರೋಕ್ಷವಾಗಿ ನಾವೇ ಕಾರಣೀಭೂತರಾಗಿಬಿಡುತ್ತೇವೆ. ಹಲವು ಸಲ ಸಾರ್ವಜನಿಕವಾಗಿ ನಾನು ಬ್ರಾಹ್ಮಣ ಎಂದ ಕೂಡಲೆ ಹಲವರ ವಕ್ರ ನೋಟದ ಅನುಭವ ನನಗೂ ಆಗಿದೆ. ಬ್ರಹ್ಮ ಎಂಬುದು ಎಂದಿಗೂ ಸಣ್ಣದಾಗುವ ವಸ್ತುವಲ್ಲ. ಹಾಗಾಗಿ ಅದನ್ನು ಪಾಲಿಸುವವನು ಎಂದಿಗೂ ಸಣ್ಣದಾಗುವುದಿಲ್ಲ. ಲೋಕ ಕಾಣಬಹುದು, ಆದರೆ ಎಲ್ಲರೂ ನಂಬುವ ಭಗವಂತನಿಗೆ ಅರಿವಿಲ್ಲದೆ ಇರುವುದಕ್ಕೆ ಸಾಧ್ಯವಿಲ್ಲ. ಈ ವಿಶ್ವಾಸದಲ್ಲೇ ನಮ್ಮ ನಡೆ ಇರಬೇಕು. 



 

Sunday, April 13, 2025

ಶಿರಸ್ತ್ರಾಣ ಖಡ್ಡಾಯ


            ಮಲಯಾಳಂ ಚಲನ ಚಿತ್ರ ನಟ ನಿರ್ದೇಶಕ ಮಾತ್ರವಲ್ಲ ಚಿತ್ರಕಥೆಯನ್ನೂ ಬರೆಯುವ ಪ್ರತಿಭಾವಂತ ಶ್ರೀನಿವಾಸ್ ಇವರು  ತೀಕ್ಷ್ಣವಾದ ಪ್ರತಿಕ್ರಿಯೆಗಳನ್ನು ಹಲವು ಸಲ ನೀಡುತ್ತಾರೆ. ಇವರ ಸಿನಿಮಾಗಳಲ್ಲಿ  ಇಂತಹ ಸನ್ನಿವೇಶ ಸಂಭಾಷಣೆಗಳಲ್ಲಿ ಅದೇ ವೈಶಿಷ್ಟ್ಯವಾಗಿದೆ. ಹೀಗೆ ಕಾರ್ಯಕ್ರಮ ಒಂದರಲ್ಲಿ ಹೆಲ್ಮೆಟ್ ಖಡ್ಡಾಯದ ಬಗ್ಗೆ ಒಂದು ವಿಡಂಬನೆಯನ್ನು ಹೇಳುತ್ತಾರೆ. ನಮ್ಮ ಆಹಾರ ಜೀವನ ಎಲ್ಲವು ಎಷ್ಟು ಕಲುಷಿತವಾಗಿದೆ ಎಂದರೆ ಇಂದು ಕಲುಷಿತವಲ್ಲದೇ ಇದ್ದದ್ದು ಯಾವುದೂ ಸಿಗುವುದಿಲ್ಲ.  ಸಿಗುವ ತರಕಾರಿ ಎಲ್ಲಿಂದಲೋ ಬರುತ್ತದೆ, ಯಾವುದೋ ವಿಷಕಾರಿ ರಾಸಾಯನಿಕವನ್ನು ಹೊಂದಿದ್ದರೆ, ಇನ್ನು ಅಮೃತ ಎಂದು ಸಿಗುವ ಹಾಲು ಅದು ಮೂಲ ಸ್ವರೂಪದಲ್ಲಿ ಹಳ್ಳಿಯಲ್ಲೂ ಸಿಗುವುದಿಲ್ಲ. ಹೆಚ್ಚಿನವರಿಗೆ ತಿಳಿದಿಲ್ಲ. ಚಳಿಗಾಲದ ನಂತರ ಹಾಲು ಮೊಸರಿನ ಬೇಡಿಕೆ ಹೆಚ್ಚು ಇರುತ್ತದೆ. ಆದರೆ ಆಗ ಹಾಲು ಉತ್ಪಾದನೆ ಬಹಳ ಕಡಿಮೆ ಇರುತ್ತದೆ.  ಮಳೆಗಾಲದಲ್ಲಿ ಹಾಲಿನ ಉತ್ಪಾದನೆ ಅಧಿಕವಾಗಿದ್ದರೆ ಬೇಡಿಕೆ ಬಹಳ ಕಡಿಮೆ ಇರುತ್ತದೆ. ಹಾಗಾಗಿ ಮಳೆಗಾಲದಲ್ಲಿ ಉಳಿದ ಹಾಲನ್ನು ಸಂಸ್ಕರಿಸಿ ಪುಡಿ ಮಾಡಿ ಸಂಗ್ರಹಿಸುತ್ತಾರೆ, ನಂತರ ಅದನ್ನು ಬೇಸಗೆಯಲ್ಲಿ ಬೇಡಿಕೆ ಅಧಿಕವಾಗಿದ್ದಾಗ ಅದನ್ನು ದ್ರವೀಕರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ. ಹೀಗಾಗಿ ಪ್ರತಿ ಹಂತದಲ್ಲೂ ಅದಕ್ಕೆ ಹಲವಾರು ರಾಸಾಯನಿಕಗಳು ಸೇರಲೇ ಬೇಕಾಗುತ್ತದೆ. ಆದರೆ ಇದನ್ನೆಲ್ಲ ಪರಿಸ್ಥಿತಿಗೆ ಹೊಂದಿಕೊಂಡು ನಾವು ಒಪ್ಪಿಕೊಳ್ಳಲೇ ಬೇಕು. ಬೇಸಗೆಯಲ್ಲಿ ಸಿಗುವ ಹಾಲು ಯಾವುದೋ ಕಾಲದಲ್ಲಿ ಜಾನುವಾರು ನಿಂದ ಸಿಕ್ಕಿದ ಹಾಲಾಗಿರುತ್ತದೆ. ಇದು ಹಲವು ಸಲ ವಿಷಕಾರಿಯಾಗಿರುವುದು ವಿಪರ್ಯಾಸ. ಇನ್ನು ತಿನ್ನುವ ತರಕಾರಿ ಮತ್ತು ಈಗ ಮಾರುಕಟ್ಟೆಯಲ್ಲಿ ಸಿಗುವ ಆಹಾರದ ಕಥೆ ಹೇಳುವುದೇ ಬೇಡ. ಈಗ ಮನೆಯಲ್ಲಿ ದಿನ ನಿತ್ಯ ಸೇವಿಸುವ ಅನಿವಾರ್ಯ  ಆಹಾರವನ್ನು ಕೂಡ ಸ್ವಂತ ತಯಾರಿಸುವುದಿಲ್ಲ. ಅದನ್ನು ಹೊರಗಿನಿಂದ ತರಿಸುತ್ತಾರೆ. ಅದು ಎಲ್ಲೋ ಹೇಗೋ ತಯಾರಿಸಿ ನಮ್ಮ ಕೈಗೆ ಬಂದು ಬೀಳುತ್ತದೆ. ನಮ್ಮ ಸೌಕರ್ಯಕ್ಕೆ ನಾವು ಅದರ ಪರಿಶುದ್ದತೆಯ ಬಗ್ಗೆ ವಿಶ್ವಾಸವನ್ನಷ್ಟೇ ಇಡಬೇಕು. ಆದರೆ ಅದು ಅದಕ್ಕೆ ಅನುಗುಣವಾಗಿರುವುದಿಲ್ಲ.   ಶ್ರೀನಿವಾಸ್ ಹೇಳುತ್ತಾರೆ ದಾರಿ ಬದಿಯಲ್ಲಿ ಸಿಗುವ ಆಹಾರ ಹಣ್ಣು ಹಂಪಲು ತರಕಾರಿ ನಂತರ ಈ ಅರೋಗ್ಯ ಪೂರ್ಣ ಅಂತ ಸೇವಿಸುವ ಹಾಲು ಪ್ರತೀಕ್ಷಣವೂ ಜೀವಕ್ಕೆ ಅಪಾಯಕಾರಿಯಾಗಿರುವಾಗ....ಇದನ್ನೆಲ್ಲ ತಿಂದು ಶಿರಸ್ತ್ರಾಣ ಅಥವಾ ಹೆಲ್ಮೆಟ್ ಒಂದು ತಲೆಗೆ ಹಾಕಿಕೊಂಡು ವಾಹನದಲ್ಲಿ ಸುರಕ್ಷಿತರಂತೆ ಹೋಗುತ್ತೇವೆ. ತಿನ್ನುವ ಆಹಾರದಲ್ಲಿ ಇಲ್ಲದ ಭದ್ರತೆ....ಈ ಹೆಲ್ಮೆಟ್ ನಿಂದ ಸಿಗಬಹುದೇ..ವಿಪರ್ಯಾಸವೆಂದರೆ ಅದಕ್ಕೂ ಖಡ್ಢಾಯದ ನಿಯಮವಿದೆ. ಇದು ಯಾಕಾಗಿ? 

ಸುರಕ್ಷತೆಯ ದೃಷ್ಟಿಯಿಂದ ನಿಯಮ ಖಡ್ಡಾಯವಾಗಿ ಇರಲೇಬೇಕು. ಅದು ಅನಿವಾರ್ಯ. ಆದರೆ ಈ ಆಹಾರ ಹಾಲು  ಹಣ್ಣು ತರಕಾರಿ ಹೊಗಲಿ ಉಚಿತವಾಗಿ ಇರುವ ಗಾಳಿ ಇವುಗಳಿಗೆ ಇಲ್ಲದ ಸುರಕ್ಷತೆ ಕೇವಲ ತಲೆಗೆ ಮಾತ್ರ ಇರುವುದು ವಿಡಂಬನೆ ಎಂದನಿಸುತ್ತದೆ.  ಹೆಲ್ಮೆಟ್ ನಿಂದ ತಲೆ ಉಳಿದರೂ...ಈ ಕಲುಷಿತ ಆಹಾರ ಗಾಳಿಯನ್ನು ಸೇವಿಸಿ ಮನುಶ್ಯ ಎಷ್ಟು ಸಮಯ ಕ್ಷೇಮದಿಂದ ಬದುಕುಳಿದಾನು? ಆದರೂ ಅದಕ್ಕೊಂದು ಖಡ್ಡಾಯ ನಿಮಮ ನಮ್ಮನ್ನು ಅಣಕಿಸುತ್ತದೆ. 

ಪ್ಲಾಸ್ಟಿಕ ವಾತವರಣಕ್ಕೆ ಹಾನಿಕರ. ಪ್ಲಾಸ್ಟಿಕ್ ಚೀಲಗಳನ್ನು ಬಳಸುವುದು ನಿಷೇಧಿಸಲಾಗಿದೆ. ಆದರೂ ಬಳಕೆ ಎಲ್ಲಿ ಕಡಿಮೆಯಾಗಿದೆ. ನಿಯಮಾನುಸಾರ ಅದನ್ನು ಹಿಡಿದು ಕೊಂಡು ಹೋಗುವ  ಬಡಪಾಯಿಂದ ದಂಡ ವಸೂಲಿ ಮಾಡಬಹುದು. ಇನ್ನಿತರ ಶಿಕ್ಷೆ ವಿಧಿಸಬಹುದು. ಯಾಕೆಂದರೆ ಆತ ಸುಲಭದಲ್ಲಿ ಸಿಗುತ್ತಾನೆ. ಆದರೆ ಇದುವರೆಗೆ ಪ್ಲಾಸ್ಟಿಕ್ ಚೀಲ ಉತ್ಪಾದನೆ ಎಲ್ಲಾಗುತ್ತದೆ ಎಂದು ಪತ್ತೆ ಹಚ್ಚುವುದಕ್ಕೆ ಸಾಧ್ಯವಾಗಿಲ್ಲ. ಸಾಧ್ಯವಾದರೂ ಅದಕ್ಕೆ ಶಿಕ್ಷೆ ಅನ್ವಯವಾಗುವುದೇ ಇಲ್ಲ. ನಿಜಕ್ಕಾದರೆ ಉತ್ಪಾದನೆಯನ್ನು ತಡೆ ಹಿಡಿದರೆ ಬಳಕೆ ತನ್ನಿಂತಾನಾಗಿ ನಿಯಂತ್ರಿಸಲ್ಪಡುತ್ತದೆ. ಆದರೆ ಅದಕ್ಕೆ ಯಾವ ಪ್ರತಿಭಂಧಕವೂ ಇರದೇ ಎಲ್ಲಾ ನಿಯಮಗಳು ನಿಜ ಜೀವನವನ್ನು ಆಧ್ವಾನ ಮಾಡುವುದಕ್ಕಷ್ಟೇ ಸೀಮಿತವಾಗಿದೆ. 

ಸಾರ್ವಜನಿಕವಾಗಿ ಧೂಮ ಪಾನ ಮಾಡಬಾರದು ಎಂಬ ನಿಯಮವಿದೆ. ಈ ಬೆಂಗಳೂರು ಏಕೆ ಸಣ್ಣ ನಗರದಲ್ಲೂ ಇದು ಕೇವಲ ನಿಯಮವಾಗಿ ಮಾತ್ರ ಉಳಿದಿದೆ. ಸಾರ್ವಜನಿಕವಾಗಿ ಉಚಿತವಾಗಿ ಸಿಗುವ ಈ ಧೂಮವನ್ನು ಸೇವಿಸಿ ನಾವು ಸುರಕ್ಷಿತರಂತೆ ಹೆಲ್ಮೆಟ್ ಧರಿಸಿ ಅಭಿನಯಿಸುತ್ತೇವೆ. ವಿಚಿತ್ರ ಎನಿಸುವುದಿಲ್ಲವೆ. ಹಾಗಾಗಿ ಶ್ರೀನಿವಾಸ್ ಹೇಳಿದ್ದು ಹೆಲ್ಮೇಟ್ ಖಡ್ದಾಯ ಒಂದು ವಿಡಂಬನೆ. ದೊಡ್ಡ ಪ್ರಹಸನ.  ತ್ರಾಣವಿಲ್ಲದೇ ಇದ್ದರೂ ಶಿರಸ್ತ್ರಾಣ ಬೇಕು. 

Thursday, April 10, 2025

ಧರ್ಮ ಜಾಗೃತಿ

             ನಮ್ಮ ಹಿರಿಯರು ಒಂದು ಕಥೆ ಹೇಳುತ್ತಿದ್ದರು. ಒಂದಾನೊಂದು ಊರಿನಲ್ಲಿ  ಒಬ್ಬ ಸೌದೆಗಾಗಿ  ಕಾಡಿಗೆ ಹೋದನಂತೆ. ಹಾಗೆ ಸೌದೆಯ ಮರ ಕಡಿಯಬೇಕಾದರೆ ಅದರಲ್ಲಿ ಒಬ್ಬ ರಾಕ್ಷಸ ಇದ್ದನು. ಆತ ಇವನನ್ನು ತಿನ್ನುವುದಕ್ಕೆ ಬಂದನು. ಈತ ಹೆದರಿ ಓಡುವುದಕ್ಕೆ ತೊಡಗಿದ. ರಕ್ಕಸ ಹಿಂಬಾಲಿಸಿ ಅಟ್ಟಿಸಿಕೊಂಡು ಬಂದ. ಆ ರಕ್ಕಸನಿಗೊಂದು ಏಕ ಮಾತ್ರ ಸದ್ಗುಣವಿತ್ತು. ಎಲ್ಲಿ ಗಂಟೆಯ ನಾದ ಕಿವಿಗೆ ಕೇಳಿಸುತ್ತದೋ ಅಲ್ಲಿ ಭಗವಂತನ ನೆನಪಾಗಿ ಸುಮ್ಮನೇ ನಿಂತು ಬಿಡುವುದು. ಹಾಗೆ ಅಟ್ಟಿಸಿ ಕೊಂಡು ಬರುವಾಗ ಒಂದು ಗುಡಿಯ ಬಳಿಯಲ್ಲೇ ಹಾದು ಹೋಗುವಾಗ ಮನುಷ್ಯನ ಕೈ ಅಲ್ಲಿ ನೇತು ಹಾಕಿದ್ದ ಗಂಟೆಗೆ ತಗಲುತ್ತದೆ. ಗಂಟೆಯ ಠಣ್ ಸದ್ದಿಗೆ ರಕ್ಕಸ ಸ್ತಬ್ಧನಾಗಿ ನಿಂತು ಬಿಡುತ್ತಾನೆ. ಈ ಅವಕಾಶ ಉಪಯೋಗಿಸಿ ಮನುಷ್ಯ ತಪ್ಪಿಸಿ ಓಡುತ್ತಾನೆ. ಗಂಟೆಯ ಸದ್ದು ನಿಂತೊಡನೆ ರಕ್ಕಸ ಪುನಃ ಹಿಂಬಾಲಿಸುತ್ತಾನೆ. ಮನುಷ್ಯ ಒಂದು ಉಪಾಯ ಮಾಡುತ್ತಾನೆ. ಗುಡಿಯ ಗಂಟೆ ಕೈಯಲ್ಲಿ ತೆಗೆದುಕೊಂಡು ರಕ್ಕಸ ಹತ್ತಿರ ಬರುತ್ತಿದ್ದಂತೆ ಗಂಟೆ ಬಾರಿಸುತ್ತಿದ್ದ. ರಕ್ಕಸ ಸುಮ್ಮನೇ ನಿಂತು ಬಿಡುತ್ತಿದ್ದ. ಹಾಗೆ ಮಾಡುತ್ತಾ  ಮನುಷ್ಯ ಊರಿನೊಳಗೆ ಬಂದು ಮನೆಯನ್ನು ಸೇರುತ್ತಾನೆ. ರಕ್ಕಸನಿಂದ ಮನುಷ್ಯ ಹೀಗೆ ಪಾರಾಗಿಬಿಡುತ್ತಾನೆ.  ರಕ್ಕಸನಲ್ಲಿ ಎಲ್ಲವೂ ಕೆಟ್ಟಗುಣಗಳಿತ್ತು. ಆದರೆ ಒಂದು, ಆತನಲ್ಲಿದ್ದ ದೈವ ಭಯ ಮನುಷ್ಯನಿಗೆ ರಕ್ಷಣೆಯನ್ನು ಒದಗಿಸಿತ್ತು. 

ಇದೇ ಬಗೆಯ ಭೀಮ ಪುರುಷಾಮೃಗದ ಕಥೆ ಮಹಾಭಾರತಲ್ಲಿ ರಾಜಸೂಯ ಸಂದರ್ಭದಲ್ಲಿ ಬರುತ್ತದೆ. ನಮ್ಮೂರಲ್ಲಿ ಇದನ್ನೇ ಯಕ್ಷಗಾನದಲ್ಲಿ ಆಡುತ್ತಾರೆ.  ಭೀಮ ಪುರುಷಾಮೃಗವನ್ನು ಕರೆತರುವುದಕ್ಕೆ ಹೋಗುತ್ತಾನೆ. ದಾರಿಯಲ್ಲಿಆತನಿಗೆ ಹನುಮಂತ ಸಿಗುತ್ತಾನೆ.ಆತ ಹನುಮಂತ ಎಂದು ತಿಳಿದಿರುವುದಿಲ್ಲ.   ಆತನ ಬಾಲ ಈತನ ಹಾದಿಗೆ ಅಡ್ಡವಾಗಿರುತ್ತದೆ. ಅದನ್ನು ದಾಟುವುದು ಸರಿಯಲ್ಲ ಎಂದು ತಿಳಿದು ಬಾಲವನ್ನು ಎತ್ತಿಡುವಂತೆ ಹನುಮನಿಗೆ ಹೇಳುತ್ತಾನೆ. ಕೃಷಾಕಾಯನಾಗಿ ವೃದ್ದಾಪ್ಯದಲ್ಲಿದ್ದ ಹನುಮ ನನ್ನಿಂದ ಬಾಲ ಎತ್ತುವುದಕ್ಕೂ ತ್ರಾಣವಿಲ್ಲ ನೀನೇ ಎತ್ತಿಟ್ಟು ಆಕಡೆಗೆ ಹೋಗು ಎನ್ನುತ್ತಾನೆ. ಭೀಮನಿಗೆ ಬಾಲ ಎತ್ತುವುದಕ್ಕಾಗದೆ ಬಸವಳಿಯುತ್ತಾನೆ. ನಂತರ ಭೀಮ ವಾಯು ಪುತ್ರ ಎಂದು ತಿಳಿದ ಮೇಲೆ ಹನುಮ ಆತನನ್ನು ಸಹೋದರ ಭಾವದಿಂದ ಕಂಡು ತನ್ನ ಬಾಲದ ಮೂರು ರೂಮಗಳನ್ನು ಕಿತ್ತು ಕೊಡುತ್ತಾನೆ. ಶಿವ ಸಂಭೂತನಾದ ಹನುಮನ ಬಾಲದ ರೋಮ ಎಲ್ಲೆಲ್ಲಿ ಹಾಕುವುದೋ ಅಲ್ಲಿ ಶಿವಲಿಂಗ ಉದ್ಭವವಾಗುತ್ತದೆ ಎಂದು ಹೇಳುತ್ತಾನೆ. ಪುರುಷಾಮೃಗದ ಬಳಿಗೆ ಹೋದಾಗ ಪುರುಷಾಮೃಗ ಭೀಮನನ್ನು ಅಟ್ಟಿಸಿಕೊಂಡು ಬರುತ್ತದೆ. ಭೀಮ ಓಡುತ್ತಾ ಒಂದೊಂದೇ  ಕಡೆಯಲ್ಲಿ ಹನುಮನ ಬಾಲದ ರೋಮವನ್ನು ಹಾಕುತ್ತಾನೆ. ಅಲ್ಲಿ ಲಿಂಗ ಉದ್ಭವವಾಗುತ್ತದೆ. ಆಗ ಪುರುಷಾ ಮೃಗ ಆಲಿಂಗಕ್ಕೆ ಪೂಜೆ ಮಾಡಿ ಮತ್ತೆ ಮುಂದುವರೆಯಬೇಕು. ಆಗ ಭೀಮನಿಗೆ ಮತ್ತಷ್ಟು ಮುಂದೆ ಓಡುವುದಕ್ಕೆ ಅವಕಾಶ ಸಿಗುತ್ತದೆ.  ಹೀಗೆ ಪ್ರತಿಯೊಂದು ಕಡೆಯಲ್ಲು ಭೀಮ ಪುರುಷಾಮೃಗದ ಕೈಗೆ ಸಿಗುತ್ತದೆ ಎನ್ನುವಾಗ ಈ ರೋಮವನ್ನು ಹಾಕಿಕೊಂಡು ಪುರುಷಾಮೃಗವನ್ನು ಕರೆದುಕೊಂಡು ಬರುತ್ತಾನೆ. 

ಈ ಕಥೆಯ ಸಾರಾಂಶ ಇಷ್ಟೇ...ಎಲ್ಲಿ ದೈವ ಭಕ್ತಿ ಇರುತ್ತದೋ ಅಲ್ಲಿ ನಿರ್ಭಯವಾಗಿ ನಿರಾತಂಕವಾಗಿ ಇರಬಹುದು.  ಯಾವುದೇ ಧರ್ಮ ಇರಬಹುದು ಅಲ್ಲಿ ದೈವ ಭಕ್ತಿ ಇದ್ದರೆ ಆ ಧರ್ಮವನ್ನು ನಿಂದಿಸುವುದು ಸರಿಯಲ್ಲ. ಧರ್ಮ ನಿಂದನೆ ಎಂದರೆ ಅದು ದೈವನಿಂದನೆಯಾಗುತ್ತದೆ. ಮನುಷ್ಯ ಮೇಲೆ ನೋಡಿ ಉಗುಳಿದಂತೆ ಅದು ಪರೋಕ್ಷವಾಗಿ ನಮ್ಮ ಮೂಲಕ್ಕೆ ಬಂದು ಬಿಡುತ್ತದೆ. ನಾವು ಭಯ ಆತಂಕ ಪಡಬೇಕಾಗಿರುವುದು ಯಾವುದೋ ಧರ್ಮಾಚರಣೆಗೆ ಅಲ್ಲ. ಆತ ಹಿಂದುವೊ ಮುಸ್ಲಿಂ ಕ್ರಿಶ್ಚನ್ ಅಥವಾ ಇನ್ನವುದೋ ಧರ್ಮವಾಗಿರಬಹುದು...ಅಲ್ಲಿ ಒಂದು ದೈವ ಭಕ್ತಿ ಇದ್ದೇ ಇರಬೇಕು. ನಾವು ಭಯ ಪಡಬೇಕಾಗಿರುವುದು...ಎಲ್ಲಿ ದೈವ ಭಯ ಇಲ್ಲವೋ ಎಲ್ಲಿ ಭಕ್ತಿ ಇಲ್ಲವೋ ಅಥವಾ ದೈವದ ಅಸ್ತಿತ್ವವನ್ನು ನಂಬದೇ ಇರುವಲ್ಲಿ ನಾವು ಭಯ ಪಡಬೇಕು. ದೈವ ಭಯ ಇದ್ದಲ್ಲಿ ಕೊನೇ ಪಕ್ಷ ಆ ದೈವ ಭಕ್ತಿಯಾದರೂ ನಮ್ಮನ್ನು ಕಾಪಾಡುತ್ತದೆ.  

ಹಿರಣ್ಯ ಕಶಿಪು  ಎಂಬ ದಾನವನಿದ್ದ.  ಪ್ರಹ್ಲಾದನ ಅಪ್ಪ . ನಾನೇ ದೇವರುಎಂದು ಕೊಂಡು ಈತ ದೌರ್ಜನ್ಯದಿಂದ ಮೆರೆಯುತ್ತಿದ್ದ.  ಪ್ರಹ್ಲಾದನಿಗೆ ಹರಿಯನ್ನು ನಂಬಬೇಡ ಅಂದರೆ ದೇವರನ್ನು ನಂಬ ಬೇಡ ಎಂದು ಹೇಳುತ್ತಿದ್ದ.  ಇಂತಹ ಹಿರಣ್ಯ ಕಶಿಪು ಸಂತಾನಗಳಿಗೆ ನಾವು ಆತಂಕ ಪಡಬೇಕು.  ಎಷ್ಟೋ ಧಾರ್ಮಿಕ ಕಾರ್ಯಕ್ರಮಗಳು ಆಗುತ್ತವೆ. ಉತ್ಸವಾಚರಣೆಗಳಲ್ಲಿ ಇಂದು ಸಭಾಕಾರ್ಯಕ್ರಮವೇ ಹೆಚ್ಚು ಪ್ರಧಾನವಾಗಿರುತ್ತವೆ.  ಧರ್ಮ ಜಾಗೃತಿ ಈ ಕಾರ್ಯಕ್ರಮಗಳ ಉದ್ದೇಶ. ಅದರಲ್ಲೇನು ತಪ್ಪಿಲ್ಲ. ಆದರೆ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಮತ್ತೊಂದು ಧರ್ಮವನ್ನು ನಿಂದಿಸುವ ಮಟ್ಟಕ್ಕೆ ಹೋಗಬಾರದು. ನಮ್ಮ ಧರ್ಮದ ಬಗ್ಗೆ ಹೇಳಬಹುದು. ನಮ್ಮ ಧರ್ಮದ ಹಾದಿಯನ್ನು ತೋರಿಸಬಹುದು...ಆದರೆ ಮತ್ತೊಂದು ಹಾದಿಯನ್ನು ನಿಂದಿಸುವುದು ಸರಿಯಲ್ಲ. ಧರ್ಮ ಧರ್ಮದ ನಡುವೆ ಹೋಲಿಕೆ ಇಂದಿನ ಕ್ಷೋಭೆಗೆ ಬಹು ಮುಖ್ಯ ಕಾರಣ. ಏನಿಲ್ಲ ಎಂದಿದ್ದರೂ ಅಲ್ಲೊಂದು ದೈವನಂಬಿಕೆ ಇದೆ ಎಂದು ತಿಳಿಯಬೇಕು. ದೇವರು ಎಲ್ಲಿದ್ದರೂ ದೇವರೆ. ಅದು ರೂಪವಿದ್ದೋ ರೂಪವಿಲ್ಲದೆಯೋ ಅಸ್ತಿತ್ವದಲ್ಲಿ ಇದೆ ಎಂದು ತಿಳಿವಲ್ಲಿ ಧರ್ಮದ ಅಸ್ತಿತ್ವ ಇರುತ್ತದೆ.  ನಾವು ಅಕ್ಕಿ ಅಂತ ಕರೆಯುವುದನ್ನು ಇನ್ನೊಬ್ಬರು ಏನೋ ಒಂದು ಕರೆದರೆ ಅದು ಅಕ್ಕಿಅಲ್ಲದೇ ಆಗುವುದಿಲ್ಲ. ಹಾಗಾಗಿಯೇ ಭಗವಂತನಿಗೆ ಸಹಸ್ರ ನಾಮಗಳಿರುತ್ತವೆ. 

ಧಾರ್ಮಿಕ ಆಚರಣೆಗಳ ಸಭೆಗಳಲ್ಲಿ ಧಾರ್ಮಿಕ ಆಚರಣೆಯ ಅರಿವನ್ನು ಮೂಡಿಸಬೇಕು. ಹಿಂದೆ ನಮ್ಮೂರ ದೇವಸ್ಥಾನದಲ್ಲಿ ಸಹಸ್ರ ಚಂಡಿಕಾ ಯಾಗ ನಡೆಯಿತು. ಆ ಸಂದರ್ಭದಲ್ಲಿ ಕ್ರಮದಂತೆ ಧಾರ್ಮಿಕ ಸಭೆ ನಡೆಯಿತು. ಅಲ್ಲಿ ಆಶೀರ್ವಚನ ನೀಡಿದ ಪೂಜ್ಯ ಶ್ರೀ ಶೃಂಗೇರಿ  ಜಗದ್ಗುರುಗಳು ಚಂಡಿಕಾ ಯಾಗದ ವಿಧಿ ವಿಧಾನಗಳನ್ನು ಅದರ ಮಹತ್ವವನ್ನು ದುರ್ಗಾ ಚಂಡಿಕೆ ಈ  ಅವತಾರದ ಕಾರಣಗಳನ್ನು ಸಪ್ತಶತಿ ಪಾರಾಯಣದ ಮಹತ್ವವನ್ನು ಸವಿಸ್ತಾರವಾಗಿ ಹೇಳಿದರು. ಅವರು  ಇದನ್ನು ಕೇಳಿದ ನಂತರ ಚಂಡಿಕಾಯಾಗದ ಪೂರ್ಣಾಹುತಿಯನ್ನು ಕಾಣುವಾಗ ಅದನ್ನು ಕಾಣುವ ದೃಷ್ಟಿಕೋನವೇ ಬದಲಾಗಿಬಿಟ್ಟಿತು. ಅವರು ಯಾವುದೇ ವ್ಯಕ್ತಿಯನ್ನು ದೂಷಿಸಲಿಲ್ಲ. ಯಾವುದೇ ಧರ್ಮವನ್ನು ನಿಂದಿಸಲಿಲ್ಲ. ನಿಂದಿಸುವುದು ಬಿಡಿ ವಿಮರ್ಶಿಸಲೂ ಇಲ್ಲ.  ಜಗದ್ಗುರು ಅನ್ನಿಸುವುದೇ ಇಂತಹ ಗುಣಗಳಿಂದ. ಇದು ಧಾರ್ಮಿಕ ಸಭೆಯ ಮಹತ್ವ. ಆಸ್ತಿಕನಾಗುವುದು ಮುಖ್ಯವಲ್ಲ. ಆದರ ಅರ್ಥವನ್ನು ತಿಳಿಯುವುದು ಮುಖ್ಯ ನಮ್ಮ ಧರ್ಮದ ಶ್ರೇಷ್ಠತೆಯನ್ನು ಹೇಳಬೇಕಾದರೆ ನಮ್ಮ ಧರ್ಮವನ್ನು ಅದರ ತತ್ವಗಳನ್ನು ಅಧ್ಯಯನ ಮಾಡಿ ತಿಳಿದುಕೊಳ್ಳಬೇಕು. ಅಧ್ಯಯನ ಸಾಧ್ಯವಾಗದಿದ್ದರೆ ಇಂಥ ಧಾರ್ಮಿಕ ಪ್ರವಚನಗಳು ಪ್ರೇರಕವಾಗಿರಬೇಕು. ಅದಲ್ಲದೇ ಯಾವುದೋ ಪರ ಧರ್ಮದ ಬಗ್ಗೆ ಹೇಳಬೇಕಾದರೆ ನಾವು ಪರಧರ್ಮವನ್ನು ಅಧ್ಯಯನ ಮಾಡಬೇಕು. ಇಲ್ಲಿ ನಮ್ಮ ಧರ್ಮದ ಅಧ್ಯಯನವೇ ಸಾಧ್ಯವಾಗುವುದಿಲ್ಲ ಎಂದಾಗ ಮತ್ತೊಂದು ಧರ್ಮದ ಬಗ್ಗೆ ಗಮನ ಹರಿಸಿ ಅದನ್ನು ವಿಮರಿಸುವ ಅವಶ್ಯಕತೆಯಾದರೂ ಯಾಕೆ ಬೇಕು. ಇಂದಿನ ಹಲವು ಸಮಸ್ಯೆಗಳು ಹುಟ್ಟಿಕೊಳ್ಳುವುದೇ ಇಲ್ಲಿಂದ. ಧರ್ಮ ಧರ್ಮದ ನಡುವೆ ವ್ಯಕ್ತಿಯ ವ್ಯಕ್ತಿಯ ನಡುವೆ ತುಲನೆ ಮಾಡುವುದು ಇದು ಆರೋಗ್ಯಕರ ಚಿಂತನೆ ಎನಿಸುವುದಿಲ್ಲ.  ಧರ್ಮದ ಅರಿವನ್ನುಮೂಡಿಸುವಲ್ಲಿ ಧಾರ್ಮಿಕ ಸಭೆಯ ಮಹತ್ವ ಬಹಳ ಇರುತ್ತದೆ. ದೇವರಿಲ್ಲ ಎನ್ನುವ ಚಿಂತನೆಯನ್ನು ದೂರವಿಟ್ಟು ದೇವರಿದ್ದಾನೆ ಎಂದು ನಂಬಿ ವಿಶ್ವಾಸದಲ್ಲಿ ನಡೆಯುವವನ್ನು ಗೌರವಿಸುವ. ಕೊನೇ ಪಕ್ಷ ಎಲ್ಲೋ ಒಂದು ಕಡೆ ಅವನಲ್ಲಿರುವ ದೇವರಿದ್ದಾನೆ ಎಂಬ ಭಾವ ಹುಲ್ಲುಕಡ್ಡಿಯಷ್ಟಾದರೂ ನಮಗೆ ರಕ್ಷಣೆಯನ್ನು ನೀಡಬಹುದು. 

ಈ ಚಿಂತನೆಗಳು ಎಷ್ಟು ಸೂಕ್ತವೋ ತಿಳಿಯದು. ಆದರೆ ಸನಾತನ  ಹಿಂದೂ ಧರ್ಮ ಎಲ್ಲ ಧರ್ಮಗಳ ಸಾರವನ್ನೂ ಒಳಗೊಂಡಿದೆ. ಹಾಗಾಗಿ ಇದೊಂದು ಹಿರಿಯಣ್ಣನಂತೆ. ಇದ

Thursday, April 3, 2025

ಮಧೂರು ಬ್ರಹ್ಮ ಕಲಶ

  ಪುರಾಣದಲ್ಲಿ ವಿಶ್ವಾಮಿತ್ರ ಮೊದಲಿಗೆ ಹಲವು ವಿಧದಲ್ಲಿ ವಸಿಷ್ಠರನ್ನು ಸೋಲಿಸುವುದಕ್ಕೆ ಪ್ರಯತ್ನಿಸುತ್ತಾನೆ. ದೈಹಿಕವಾಗಿ ಮಾನಸಿಕವಾಗಿ ಅತನೊಂದಿಗೆ ಹೋರಾಡುತ್ತಾನೆ. ಆದರೆ ಆತನನ್ನು ಸೋಲಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಪ್ರತಿಯೊಂದು ಹೋರಾಟದಲ್ಲೂ ಆತನಿಗೆ ಅಪಜಯವಾಗುತ್ತದೆ. ಅದು ಕೇವಲ ಅಪಜಯವಲ್ಲ. ಆತ ನಂಬಿದ ತತ್ವಗಳ ಸೋಲು. ವಸಿಷ್ಠ ಹೋರಾಡದೇ ಗೆಲ್ಲುತ್ತಾ ಹೋಗುತ್ತಾನೆ. ಆತ ಎಲ್ಲಿಯೂ ಸ್ಪರ್ಧೆಗೂ ನಿಲ್ಲುವುದಿಲ್ಲ, ಹೋರಾಟಕ್ಕೂ ಬರುವುದಿಲ್ಲ. ಆತನ ಬ್ರಹ್ಮ ವರ್ಚಸ್ಸು ಆತನನ್ನು ಗೆಲ್ಲಿಸಿಬಿಡುತ್ತದೆ. ಆ ಗೆಲುವನ್ನೂ ಆತ ಗೆಲುವು ಎಂದು ತಿಳಿಯುವುದಿಲ್ಲ. ಹೋರಾಟವೇ ಇಲ್ಲ ಎಂದು ತಿಳಿದವನಿಗೆ ಸೋಲು ಹೇಗೆ ಇಲ್ಲವೋ ಹಾಗೆ  ಗೆಲುವು ಎಂಬುದು ಇರುವುದಿಲ್ಲ. ಬ್ರಹ್ಮ ವರ್ಚಸ್ಸು ಎಂದರೆ ಅದು. ಬ್ರಹ್ಮ ಎಂದರೆ ಅತ್ಯಂತ ದೊಡ್ಡದು. ಅದಕ್ಕಿಂತ ಮಿಗಿಲು ಇನ್ನೊಂದು ಇಲ್ಲ. ಹಾಗೆ ವರ್ಚಸ್ಸು..ಅದು ಬ್ರಹ್ಮ ವರ್ಚಸ್ಸು ಅದಕ್ಕಿಂತ ಮಿಗಿಲು ಮತ್ತೊಂದು ಇರುವುದಕ್ಕೆ ಸಾಧ್ಯವಿಲ್ಲ.   ಅದರಲ್ಲಿ ವಿಶ್ವಾಸ ಇದ್ದವನಿಗೆ ಹೋರಾಟದ ಅವಶ್ಯಕತೆಯೇ ಇರುವುದಿಲ್ಲ. ಈ ಬ್ರಹ್ಮ ವರ್ಚಸ್ಸು ಒಲ್ಲಿದು ಬರುವುದು ಕೇವಲ ಭಗವಂತನ ಅನುಗ್ರಹದಿಂದ. ಬ್ರಾಹ್ಮಣ ಅಂತ ಹೇಳುವುದು ವ್ಯಕ್ತಿಗಲ್ಲ. ಆ ಅನುಗ್ರಹ ಲಭ್ಯವಾಗುವುದು ಭಗವಂತನ ಮೇಲಿನ ವಿಶ್ವಾಸದಿಂದ. ಇದು ನಮ್ಮ ಸನಾತನ ಧರ್ಮದ ನಂಬಿಕೆ. 


ನಾನು ಊರಿಗೆ ಹೋದರೆ ಎರಡು ಕ್ಷೇತ್ರಗಳಿಗೆ ಪದೇ ಪದೇ ಭೇಟಿ ಕೊಡುತ್ತೇನೆ. ಒಂದು ಮಧೂರು ಮದನಂತೇಶ್ವರ ಕ್ಷೇತ್ರ, ಇನ್ನೊಂದು ಆವಳ ದುರ್ಗಾಪರಮೇಶ್ವರಿ ಕ್ಷೇತ್ರ.  ಮತ್ತೆ ಕೆಲವೊಮ್ಮೆ ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರ. ದೇವಾಲಯಕ್ಕೆ ಹೋಗುವುದಾದರೆ ಹೆಚ್ಚು ಜನಸಂದಣಿ ಇಲ್ಲದ ದೇವಾಲಯಕ್ಕೆ ಹೋಗುವುದನ್ನು ಹೆಚ್ಚು ಬಯಸುತ್ತೇನೆ. ಗಂಟೆಗಟ್ಟಲೆ ದರ್ಶನಕ್ಕೆ, ಭೋಜನ ಪ್ರಸಾದಕ್ಕೆ    ಸರದಿಯಲ್ಲಿ ನಿಲ್ಲುವುದೆಂದರೆ ಯಾಕೋ ಹಿತ ಎನಿಸುವುದಿಲ್ಲ. ಆಧ್ವಾನ ಒತ್ತಡ ಇದೆಲ್ಲ ಮನಸ್ಸಿನ ಶಾಂತಿಯನ್ನು ಪರೀಕ್ಷಿಸಿ ಬಿಡುತ್ತವೆ. ಈಗೀಗಲಂತೂ ನಾನು ದೇವಾಲಯಕ್ಕೆ ಹೋಗುವುದನ್ನು ಬಿಟ್ಟಿದ್ದೇನೆ ಎನ್ನಬಹುದು. ನಿತ್ಯ ಕರ್ಮದಲ್ಲಿ , ಮತ್ತು ಧ್ಯಾನದಲ್ಲಿ  ಹೆಚ್ಚು ವಿಶ್ವಾಸ ಮತ್ತು ಆಸಕ್ತನಾಗಿ ನಿತ್ಯ ಮನೆಯಲ್ಲೇ ಆ ಅವ್ಯಕ್ತ ಸ್ವರೂಪ ದರ್ಶನ ಮಾಡುವುದರಲ್ಲೆ ಧನ್ಯತೆಯನ್ನೂ ಸಂತೋಷವನ್ನು ಕಾಣುತ್ತೇನೆ. ಹಾಗಂತ ಎಲ್ಲಾ ದೇವಾಲಯದ ಬಗ್ಗೆ ಅಲ್ಲಿಗೆ ಹೋಗುವವರ  ಬಗ್ಗೆ ಗೌರವದಿಂದ ಕಾಣುತ್ತೇನೆ. ಬ್ರಹ್ಮಾ ಶಿರಃ ವಿಷ್ಣುರ್ ಹೃದಯಂ ರುದ್ರೋಲಲಾಟಂ ಅಂತ ಹೇಳುವಾಗ ಭಗವಂತನ ಸ್ಥಾನ ನನ್ನಲ್ಲೇ ಇದೆ ಎನ್ನುವ ಅತೀವ ನಂಬಿಕೆ ನನಗೆ. ಇವುಗಳಿಗೆ ಪ್ರಥಮ ಆದ್ಯತೆ. ನಂತರ ಎಲ್ಲವೂ ದ್ವೀತಿಯ. ಬೇಕು ಎಂದನಿಸಿದರೆ ಹೋಗಿ ನೋಡುವುದು. 

ಮಧೂರು ಮತ್ತು ದುರ್ಗಾ ಪರಮೇಶ್ವರಿ ಕ್ಷೇತ್ರಗಳು ಕೇವಲ ಭಕ್ತಿಗೆ ಸೀಮಿತವಾಗಿ ಮಾತ್ರವಲ್ಲ, ಬಾಲ್ಯದ ಒಡನಾಟದ ಆ ಭಾವನಾತ್ಮಕ ಸಂಬಂಧಗಳು ಹೆಚ್ಚು ಈ ಕ್ಷೇತ್ರಕ್ಕೆ ಸಂಬಂಧಿಸಿ ಬೆಸೆದುಬಿಟ್ಟಿದೆ. ಮಧೂರು ಬಾಲ್ಯದಿಂದಲೇ ಭೇಟಿಕೊಡುವ ಪವಿತ್ರ ಸ್ಥಳ. ಆವಳ. ನನ್ನದೇ ಸ್ವಂತ ಮನೆ ಎಂಬಂತಹ ಬಾವನೆಯಾದರೆ ಕಟೀಲು, ನನಗೆ ಬ್ರಹ್ಮೋಪದೇಶ ಕಲ್ಪಿಸಿದ ಕ್ಷೇತ್ರ. ಈಗಿಗ ಇದು ಬಿಟ್ಟು ಬೇರೆ ಕಡೆಗೆ ನಿಯಮಿತ ಭೇಟಿ ಇಲ್ಲ. 

ಶ್ರೀ ಮಧೂರು ಮದನಂತೇಶ್ವರ ಕ್ಷೇತ್ರ ಈಗ ನವೀಕರಣಗೊಂಡು ಬ್ರಹ್ಮ ಕಲಶೋತ್ಸವದ ಸಂಭ್ರದಲ್ಲಿ ಕಂಗೊಳಿಸುತ್ತದೆ. ಹೋಗಿ ಭೇಟಿ ಕೊಡಬೇಕು ಎಂಬ ತೀವ್ರ ತುಡಿತವಿದ್ದರೂ ಕೆಲಸದ ಒತ್ತಡ ಮತ್ತಿನ್ನೇನೋ ಕೆಲವು ಕಾರಣಗಳಿಂದ ಹೋಗಲು ಸಾಧ್ಯವಾಗದೇ ಮಹಾಗಣಪತಿಗೆ ಇಲ್ಲಿಂದಲೇ ಪ್ರಣಾಮವನ್ನು ಸಲ್ಲಿಸುತ್ತೇನೆ. 

ದೇವಾಲಯ ಭೇಟಿ ಎಂದರೆ ಆಲಿ ಯಾವ ಸ್ವಾರ್ಥವೂ ಪ್ರತಿಷ್ಠೆಯೂ  ಇರಬಾರದು ಎಂಬ ಭಾವನೆ ನನ್ನದು. ದೇವರಲ್ಲಿ ಬೇಡಿಕೊಳ್ಳುವುದು ಏನಿದೆ? ಎಲ್ಲವೂ ಆತನಿಗೆ ತಿಳಿದಿರುವಾಗ ಆತನಲ್ಲಿ ಪ್ರಾರ್ಥಿಸುವುದಕ್ಕೂ ಒಂದು ಹಿಂಜರಿಕೆ, ನನ್ನ ಭಕ್ತಿಯ ಮೇಲೆ ಅವಿಶ್ವಾಸ ಮೂಡಿದಂತೆ ಭಾಸವಾಗುತ್ತದೆ. ದೇವರಲ್ಲಿ ಬೇಡುವುದೆಂದರೆ ಆತನ ಸ್ವಾಂತ್ರವನ್ನು ಕಸಿದಂತೆ.   ನಮ್ಮ ಹಂಗಿನಲ್ಲಿ ಸಿಲುಕಿಸಿದಂತೆ. ಆತನ ಅನುಗ್ರಹದ ಮೇಲೆ ಅವಿಶ್ವಾಸ ತಳೆದೆಂತೆ. ನಾವು  ಭಗವಂತನನ್ನು ಸರ್ವತಂತ್ರ ಸ್ವತಂತ್ರ ಎಂದು ಹೇಳುವಾಗ ಆತನನ್ನು ಸ್ವತಂತ್ರವಾಗಿ ಇರುವುದಕ್ಕೆ ಬಿಡುವುದಲ್ಲ ಆತ ಸ್ವತಂತ್ರ ಎಂದು ನಾವು ತಿಳಿಯಬೇಕು.   ಹಾಗಾಗಿ ಕೇವಲ ಶಾಂತ ಚಿತ್ತದಿಂದ ನಿರ್ಲಿಪ್ತ ಮನಸ್ಸಿನಿಂದ ಇರುವುದಕ್ಕೆ ಬಯಸುತ್ತೇನೆ. ಅಲ್ಲಿನ ಅಸೌಕರ್ಯ ಏನೇನೊ ತೊಂದರೆಗಳು ಇವೆಲ್ಲ ಪಾಲಿನ ಪಂಚಾಮೃತಗಳಾಗಿ ಸ್ವೀಕಾರ ಮಾಡಿಬಿಡುತ್ತೇನೆ. ದೇವರಲ್ಲಿ ಸ್ಪರ್ಧಿಸುವ ಮನೋಭಾವ ಸರಿಯಲ್ಲ. 

ಮಧೂರು ಕ್ಷೇತ್ರದ ನಿಮಿಷ ನಿಮಿಷದ ವರ್ತಮಾನಗಳು ಸಾಮಾಜಿಕ ಜಾಲತಾಣದಲ್ಲಿ ಹರಿದು ಬರುತ್ತವೆ. ಅದೆಲ್ಲವೂ ಒಂದು ಸಂಭ್ರಮವನ್ನು ಬಿಂಬಿಸಿದರೆ..ಅಲ್ಲಿ ಹುಟ್ಟಿದ ಕೆಲವು ವಿವಾದಗಳು ವಿದ್ಯಮಾನಗಳು ನಾವಿನ್ನೂ ಭಗವಂತನ ವಿಶ್ವಾಸದಲ್ಲಿ ಕೊರತೆಯನ್ನು ಅನುಭವಿಸುತ್ತೇವೆ ಎಂದು ತೋರಿಸುತ್ತದೆ. ಸಭಾ ಕಾರ್ಯಕ್ರಮಗಳು ಹಲವು ಸಲ ರಾಜಕೀಯ ಸಭೆಯಂತೆ ಭಾಸವಾಗುತ್ತದೆ. ಮುಖ್ಯವಾಗಿ ಇಂತಹ ಸನ್ನಿವೇಶಗಳು ಸನಾತನ ಧರ್ಮದ ಆಧ್ಯಾತ್ಮಿಕ ತತ್ವವವನ್ನು ಸಾರಬೇಕು. ಅಲ್ಲಿ ಅವುಗಳಿಗೆ ಹೆಚ್ಚು ಪ್ರಾಶಸ್ತ್ಯ ಲಭ್ಯವಾಗಬೇಕು. ಹತ್ತು ಹಲವು ಸಮಸ್ಯೆಗಳು ಬರುತ್ತವೆ. ಎಲ್ಲವೂ ಭಗವಂತನಿಗೆ ಸಮರ್ಪಿಸಿ ಬಿಡಬೇಕು. ಇಲ್ಲಿ ಪ್ರತಿಷ್ಠೆಗೆ ಅವಕಾಶ ಇರಬಾರದು. ಎಲ್ಲಿ ಅಹಂ ಇರುತ್ತದೋ ಅಲ್ಲಿ ಭಗವಂತನ ಅಸ್ತಿತ್ವ ಇರುವುದಿಲ್ಲ. ಎಲ್ಲ ಕಾರ್ಯದಲ್ಲೂ ಎಡರು ತೊಡರುಗಳು ಸಾಮಾನ್ಯ. ಅಷ್ಟಿದ್ದರೂ ಇಷ್ಟಾಗಿದೆಯಲ್ಲ ಅದು ಭಗವಂತನ ಕೃಪೆ ಎನ್ನುವ ಭಾವ ಇದ್ದರೆ  ಇನ್ನೊಬ್ಬರ ತಪ್ಪುಗಳ ಕಡೆಗೆ ಬೊಟ್ಟು ಮಾಡುವ ಅವಕಾಶ ಇರುವುದಿಲ್ಲ. 

ಯಾವುದೋ ಅನುದಾನ ಕೇಂದ್ರದಿಂದ ಬಂದಿಲ್ಲ ಎಂಬುದು ಹಲವು ವಿವಾದಗಳಿಗೆ ಭಿನ್ನಾಭಿಪ್ರಾಯಗಳಿಗೆ ಕಾರಣವಾಯಿತು. ಯಾವುದೇ ಆದರೂ ಅದಕ್ಕೆ ಮೋದಿ ಕಾರಣ ಎನ್ನುವ ಹಾಗೆ ಚಿತ್ರಿಸುವಾಗ ಕ್ಷುಲ್ಲಕ ಚಿಂತನೆ ಅನ್ನಿಸುತ್ತದೆ. ಇಷ್ಟೇಲ್ಲಾ ವಿವಾದವಾದರೂ ಅದು ಮೋದಿಯ ಅರಿವಿನಲ್ಲಿ ಇದೆಯೋ ಇಲ್ಲವೋ ಆ ಮಹಾಗಣಪತಿಗೆ ಗೊತ್ತು. ಆದರೂ ನಾವು ಹಳಿಯುವುದು  ವಿಚಿತ್ರ.  ಅನುದಾನ ಯಾಕೆ ಬರಲಿಲ್ಲ ಎಂಬುದಕ್ಕೆ ಯಾರನ್ನೋ ಹೇಳಿಕೊಂಡು ಅದನ್ನೇ ಪ್ರದರ್ಶನಕ್ಕಿಟ್ಟರೆ ಅದು ನಮ್ಮ ಕೊಂಕುತನವನ್ನು ತೋರಿಸುತ್ತದೆ. ಭಿನ್ನಾಭಿಪ್ರಾಯ ಯಾರಿಗಿರುವುದಿಲ್ಲ? ಸಪ್ತಪದಿ ತುಳಿದು ಅಗ್ನಿಸಾಕ್ಷಿಯಾಗಿ ಮದುವೆಯಾದ ಗಂಡಹೆಂಡತಿಯರ ನಡುವೆ ಇರುತ್ತದೆ. ಬದುಕಿನಲ್ಲಿ ಒಂದೇ ಒಂದು ಸಲವಾದರೂ ಜಗಳವಾಡದ ಗಂಡಹೆಂಡತಿ ಇರಬಹುದೇ? ಹಾಗಂತ ಅದನ್ನು ಪ್ರದರ್ಶನಕ್ಕಿಟ್ಟರೆ ಅದು ನಮ್ಮದೇ ಸೋಲಾಗಿಬಿಡುತ್ತದೆ. ಭಗವಂತನ ಎದುರು ಎಲ್ಲರೂ ಸಮಾನರಾಗುವಾಗ ಕೇವಲ ಗೆಲುವಿಗೆ ಮಾತ್ರ ಪಾಲುದಾರರಲ್ಲ ಅಲ್ಲಿನ ಸೋಲಿಗೂ ನಾವೇ ಕಾರಣರಾಗಬೇಕು. 

ಒಂದು ದೇವಸ್ಥಾನಕ್ಕೆ ಹೋಗುವಾಗ ಅಲ್ಲಿ ಅದು ಸರಿಇಲ್ಲ ಇದು ಸರಿ ಇಲ್ಲ, ಊಟಕ್ಕೆ ಜಾಗ ಇಲ್ಲ..ಪ್ರಸಾದ ಸಿಕ್ಕಿಲ್ಲ.ದರ್ಶನ ಸಿಗಲಿಲ್ಲ...ಹೀಗೆ ಎಲ್ಲ ಇಲ್ಲಗಳಿಗೆ ಕಾರಣ ನಮ್ಮ ಸೋಲು ಅಥವಾ ನಮ್ಮ ಪ್ರಾಪ್ತಿಯೇ ಹೊರತು ಅದಕ್ಕೆ ಕ್ಷೇತ್ರವಾಗಲೀ ವ್ಯಕ್ತಿಯಾಗಲಿ  ನಿಮಿತ್ತವಾಗುವುದಿಲ್ಲ. ದೇವರ ಸಾನ್ನಿಧ್ಯ ಎಂದರೆ ಹಾಗೆ. ಹೆಣ್ಣು ನಾಯಿಗೆ ಹಲವು ಮರಿಗಳಿರುತ್ತವೆ. ಅದರಲ್ಲಿ ಕೆಲವು ಮರಿಗಳಿಗೆ ಮೊಲೆ ಹಾಲು ಸಿಗುತ್ತದೆ. ಕೆಲವುದಕ್ಕೆ ಸಿಗುವುದಿಲ್ಲ ಸಿಗದೇ ಇದ್ದದ್ದು ಮತ್ತೊಂದನ್ನು ತುಳಿದು ಹೇಗಾದರೂ ಗಿಟ್ಟಿಸುವುದಕ್ಕೆ ನೋಡುತ್ತದೆ. ಅದು ಜ್ಞಾನವಿಲ್ಲದೇ ಇರುವ ಬದುಕಿನ ಹೋರಾಟ. ಇದು ಅರ್ಥ ಮಾಡಿಕೊಂಡಾಗ ಭಗವಂತನ ಅನುಗ್ರದ ವ್ಯಾಪ್ತಿ ಅರಿವಾಗುತ್ತದೆ. ಸಿಕ್ಕಿಲ್ಲ ಇಷ್ಟೇ ಅಂತ ತೃಪ್ತ ನಾಗಬೇಕು. ಅದು ದೈವಿಕ್ಷೇತ್ರದಲ್ಲಿ ಅನಿವಾರ್ಯ. ಈ ಮನೋಭಾವ ಇಲ್ಲದೇ ಇದ್ದರೆ ಯಾವ ಕ್ಷೇತ್ರಕ್ಕೆ ಹೋದರೂ ಶಾಂತಿ ನೆಮ್ಮದಿ ಸಿಗುವುದಕ್ಕೆ ಸಾಧ್ಯವಿಲ್ಲ. 

ನಮ್ಮಲ್ಲಿರುವ ಸಂಕುಚಿತ ಮನೋಭಾವ ದೂರವಾಗಬೇಕು. ಮನಸ್ಸಿನಲ್ಲಿ ಕೊಂಕು ಮೊದಲು ಕೊಂದು ಬಿಡಬೇಕು. ಎಲ್ಲಿವರೆಗೆ ಮನಸ್ಸಿನಲ್ಲಿ ಈ ನ್ಯೂನ್ಯತೆ ಇರುತ್ತದೋ ಅದು ಉಳಿದವರನ್ನು ಹಿಂಸಿಸುವುದಲ್ಲ ನಮ್ಮನ್ನೇ ಹಿಂಸಿಸುತ್ತದೆ.  ಊಗ್ರನರಸಿಂಹ ಅಥವಾ ಮಹಾಕಾಳಿಯ ರೂಪ ಉಗ್ರ ಇರಬಹುದು. ಆದರೆ ಉಗ್ರ ನರಸಿಂಹನನ್ನು ಹರಿಯಾಗಿ ಕಾಣುವ ಮನೋಭಾವ ಇರುವಾಗ ಆ ಉಗ್ರತೆ  ಅನುಭವಕ್ಕೆ ಬರುವುದಿಲ್ಲ. ನರಸಿಂಗಹನನ್ನು ನೋಡುವ ನಮ್ಮ ಮನೋಭಾವ ಬದಲಾಗಬೇಕು. ಭಗವಂತನಲ್ಲಿರುವ ವಿಶ್ವಾಸದ ಮೇಲೆ ಅಚಲವಾಗಿ ವಿಶ್ವಾಸ ಇರಬೇಕು. ಗುರಿಯನ್ನು ಗುರು ತೋರಿಸುತ್ತಾನೆ. ಮತ್ತು ಅದರ ಹಾದಿಯನ್ನು ತೋರಿಸುತ್ತಾನೆ. ಗುರಿ ಮತ್ತು ದಾರಿ ಎರಡು ಶುದ್ದವಾಗಿರಬೇಕು. ಕಸ ಮಲ ತುಂಬಿದ ಹಾದಿಯಲ್ಲಿ ತುಳಿದು ಗುರಿಯನ್ನು ಸಾಧಿಸಬಹುದು ಆದರೆ ನಾವು ತುಳಿದು ಬಂದ ಹಾದಿ ನಮ್ಮ ದೇಹವನ್ನೂ ಮನಸ್ಸನ್ನೂ ಕೆಡಿಸಿರುತ್ತದೆ.  ಮೊದಲು ನಾವು ಒಂದಾಗಬೇಕು. ಭಗವಂತನ ಸಾನ್ನಿಧ್ಯದಲ್ಲಾದರೂ ನಮ್ಮ ಭಿನ್ನಾಭಿಪ್ರಾಯಗಳು ನಾಶವಾಗಬೇಕು. ಅಲ್ಲಿ ನಮ್ಮದು ನನ್ನದು ಎಂಬ ಯಾವ ಭಾವವೂ ಮುಖ್ಯವಲ್ಲ. ಕೇವಲ ಭಗವಂತನ ಮೇಲಿನ ವಿಶ್ವಾಸ ಮಾತ್ರ ಮುಖ್ಯವಾಗಬೇಕು. 

ಮಹನೀಯರೊಬ್ಬರ ಭಾಷಣ ಕೇಳಿದೆ. ಹಲವು ಅಭಿಪ್ರಾಯಗಳನ್ನು ಬಹಳ ಚೆನ್ನಾಗಿ ಹೇಳಿದರು. ಆದರೆ ದೇವರ ಮೂರ್ತಿಗೆ ಬೆಳಕು ಹಾಕಬೇಕು. ಅಲ್ಲಿ ಪ್ರಕಾಶಮಾನವಾದ ದೀಪ ಬೆಳಗಿಸಬೇಕು. ಆ ಮೂರ್ತಿ ಸರಿಯಾಗಿ ಕಾಣಬೇಕು ಎಂದು ಹೇಳಿದರು. ಅವರ ಅಭಿಪ್ರಾಯ ತಪ್ಪಲ್ಲ. ಅದರ ಬಗ್ಗೆ ಗೌರವ ಇದೆ. ಆದರೆ ದೇವರು ಎಂದರೆ ವ್ಯಕ್ತ ಅವ್ಯಕ್ತ ಸ್ವರೂಪ. ಆತ ಕಂಡರೂ ಕಾಣದಿದ್ದರೂ ಅದನ್ನು ಕಾಣುವ ಸಾಮಾರ್ಥ್ಯ ನಮಗಿರಬೇಕು. ದೇವರ ಸ್ವರೂಪವನ್ನು ನೋಡಿ ಬರುವ ಭಕ್ತಿ ಕೇವಲ ತಾತ್ಕಾಲಿಕ. ಒಂದೇ ವಿಧದ ಮೂರ್ತಿಯನ್ನು ದಿನಾ ನೋಡುವಾಗ ಬದಲಾವಣೆಯನ್ನುಎಲ್ಲದರಲ್ಲೂ ಬಯಸುವ ನಮಗೆ ಕೊನೆಗೆ ಅದರಲ್ಲೂ ಬದಲಾವಣೆ ಬೇಕಾಗಬಹುದು. ದೇವರು ಅಸ್ಪಷ್ಟವಾಗಿ ಕಾಣಬೇಕು. ಬದುಕಿನಾದ್ಯಂತ ಅದು ಹೇಗಿರುತ್ತದೆ ಎಂಬ ಕುತೂಹಲವೇ ಶಾಶ್ವತವಾಗಿರಬೇಕು. ಕತ್ತಲೆಯಲ್ಲು ಬೆಳಕಿನಲ್ಲೂ ಭಗವಂತನನ್ನು ಕಾಣುವ ಮನಸ್ಸು ನಮ್ಮಲ್ಲಿರಬೇಕು. ಹಾಗಿರುವಾಗ ಕತ್ತಲೆ ಬೆಳಕಿನ ಪ್ರಶ್ನೆ ಇರುವುದಿಲ್ಲ. ದೇವರ ರೂಪ ಪ್ರಧಾನವಾಗುವುದಿಲ್ಲ. ಆತನನ್ನು ಕಾಣುವ ಭಾವವೇ ಪ್ರಧಾನ. ಮಂಗಳೂರಲ್ಲಿ ಒಂದು ಗುಳಿಗನ ದೇವಸ್ಥಾನಕ್ಕೆ ಹೋಗಿದ್ದೆ. ಅಲ್ಲಿನ ಗುಳಿಗನ ಕಲ್ಲು ಬಹುತೇಕ ನೆಲದಲ್ಲಿ ಹುದುಗಿತ್ತು. ಕಲ್ಲಿನ ಒಂದಿಷ್ಟು ತುದಿ ಮಾತ್ರ ಮೇಲೆ ಬಂದು ಕಣ್ಣಿಗೆ ಕಾಣುತ್ತಿತ್ತು. ಎಲ್ಲರೂ ಅಷ್ಟಕ್ಕೇ ಬಂದು ಭಕ್ತಿ ಗೌರವದಿಂದ ನಮಸ್ಕರಿಸುತ್ತಿದ್ದರು. ಅಲ್ಲಿ ರೂಪ ಮುಖ್ಯವಾಗುವುದಿಲ್ಲ. ಕೇವಲ ಭಾವಮಾತ್ರ ಮುಖ್ಯವಾಗುತ್ತದೆ. ದೇವರನ್ನು ನೋಡಿದವನಿಲ್ಲ. ಆದರೆ ಆ ದೇವರ ಅನುಭವವಾದವರು  ಇಲ್ಲದೇ ಇರುವುದಿಲ್ಲ. ದೇವರು ಇಲ್ಲ ಎಂದು ಹೇಳುವವನಿಗೂ ಅದು ಅನುಭವಾಗುತ್ತದೆ. ಅದು ಅನುಭವಾಗದೇ ಇದ್ದರೆ ಆತ ದೇವರನ್ನು ನಂಬುದಿಲ್ಲ ಅಂತ ಹೇಳುವುದಕ್ಕೂ ಸಾಧ್ಯವಿಲ್ಲ. ದೇವರು ಅಂತ ದೇವರು ಹೇಳುವುದಿಲ್ಲ . ಅದನ್ನೂ ನಾವೇ ಹೇಳಬೇಕು. 

ಮಧೂರು ಕ್ಷೇತ್ರದ ಬ್ರಹ್ಮ ಕಲಶದ ದೃಶ್ಯಾವಳಿಗಳನ್ನು ನೋಡುವಾಗ ಮನಸ್ಸು ಪುಳಕಿತವಾಗುತ್ತದೆ. ಆ ಸಂಭ್ರಮ ನಮ್ಮದಾಗಬೇಕು ಅಂತ ಮನಸ್ಸು ಬಯಸುತ್ತದೆ. ಆಲ್ಲಿ ಸನ್ನಿಧಿಯಲ್ಲಿ ಅದನ್ನು ಅನುಭವಿಸಿದವರ ಭಾಗ್ಯವನ್ನು ನೆನೆದು ಕೃತಾರ್ಥರಾಗಿ ಈ ಮಹಾ ಕಾರ್ಯಕ್ಕೆ ದುಡಿದ ಎಲ್ಲರಿಗೂ ಭಕ್ತಿ ಪೂರ್ವಕ ಪ್ರಣಾಮಗಳು. ಮುಂದೆಯೂ ಇಂತಹ ಮಾಹಾಕಾರ್ಯಗಳು ನೆರವೇರಲಿ. ಅದನ್ನು ಅನುಭವಿಸುವ ಭಾಗ್ಯ ನಮ್ಮದಾಗಲಿ. 

ಶ್ರೀ ಮಹಾಗಣಪತಯೇ ನಮೋ ನಮಃ