Saturday, August 9, 2025

ಪುರ್ಸಾದ


ಮೊನ್ನೆ ನಮ್ಮ ಬೀದಿಯಲ್ಲಿ ದೇವಿಯ ಉತ್ಸವ ಆಯಿತು.  ಯಾರೋ ಅಲ್ಲಿದ್ದವರು ಪ್ರಸಾದ ಆತನ ಭಾಷೆಯಲ್ಲಿ ಹೇಳುವುದಾದರೆ ಪುರ್ಸಾದ ತಂದು ಕೊಟ್ಟನು.  ಹೇಳುವುದು ಹೇಗೆ ಹೇಳಿದರೂ ಅದರಲ್ಲಿ ಅಭ್ಯಂತರವಿಲ್ಲ. ಕೇಳುವವನಿಗೆ ಅರ್ಥವಾದರೆ ಸಾಕು. ನಾನು ನನಗೆ ಬೇಡ ಅಂತ ಹೇಳಿದೆ. ಅಬ್ಬಾ ಏನು ದುರಹಂಕಾರ ಎನ್ನಬಹುದು. ಇಲ್ಲಾ ನಾಸ್ತಿಕ ಎನ್ನಬಹುದು. ನಾಸ್ತಿಕತೆಯಲ್ಲು ಆಸ್ತಿಕತೆ ಇದೆ ಅಂತ ಪ್ರತಿಪಾದಿಸುವವನು ನಾನು. ಪ್ರಸಾದ ತಂದವನು ವಿಚಿತ್ರವಾಗಿ ನೋಡಿದ.  ಇದು ಪುರ್ಸಾದ ಅಂತ ರಾಗ ಎಳೆದ. ನನಗೆ ಬೇಡ. ಈ ಜಗತ್ತಿನಲ್ಲಿ ಸಿಗುವ ಎಲ್ಲವೂ ಭಗವಂತನ ಪ್ರಸಾದ ಅಂತ ನಾನು ಹೇಳಿದೆ. ಭೂಮಿಯ ಹನಿ ಹನಿ ನೀರೂ ಭಗವಂತನ ಪ್ರಸಾದ ಅಂತ ವಿಶಾಲ ಭಾವದಲ್ಲಿ ತಿಳಿವಾಗ ಈ ಪ್ರಸಾದ ಬೇಡ ಅಂತ ಹೇಳುವುದಕ್ಕೆ ಕಾರಣ ಉಂಟು. ದೇವರು ಎಂದರೆ ಪವಿತ್ರತೆಯ ಸಂಕೇತ. ಅಲ್ಲಿ ಅದರ ಲೋಪ ಬಹಳಷ್ಟು ಸಂಭವಿಸಿದ್ದು ಮಾತ್ರವಲ್ಲ ಮನಸ್ಸಿಗೆ ಬಹಳಷ್ಟು ವಿಷಮ ಅಂತ ಅನ್ನಿಸಿದೆ. 

ಇಲ್ಲಿಯ ಚಿತ್ರಗಳನ್ನು ಒಮ್ಮೆ ಗಮನಿಸಿದರೆ ಸಾಕು,  ನನ್ನ ಭಾವನೆಗಳಿಗೆ ಒಂದಿಷ್ಟು ಅರ್ಥ ಕಾಣಬಹುದು. ಅದೇನೋ ಪ್ರಸಾದ ಅಂತ ಬೇಯಿಸುತ್ತಾರೆ, ಇದು ನಮ್ಮ ಮನೆಯಂಗಳದಲ್ಲಿ ತಯಾರಿಸಿದ  ನೈವೇದ್ಯದ ಚಿತ್ರಗಳು.  ಬೆಂಗಳೂರಿನ ಹಲವು ಉತ್ಸವಗಳ ಕಥೆ ಇದುವೇ ಆಗಿರುತ್ತದೆ. ಇಲ್ಲಿ ತೆರೆದ ಪ್ರದೇಶದಲ್ಲಿ ಬೇಯಿಸುತ್ತಾರೆ. ಸ್ಥಳಾಭಾವ ಇರಬಹುದು. ಇನ್ನು ನೈವೇದ್ಯ ಅಂತ ಮಾಡುವಾಗ ನಮ್ಮೂರ ಕಡೆ ದೇವರಿಗೆ ನೈವೇದ್ಯವಾಗುವುದಕ್ಕೆ  ಅಥವಾ ಪ್ರಸಾದ ಅಂತ ಸ್ವೀಕರಿಸುವಾಗ ಈರುಳ್ಳಿ ಬೆಳ್ಳುಳ್ಳಿ ಹಾಕುವ ಕ್ರಮ ಇಲ್ಲ. ಅದು ಹೇಗೂ ಇರಲಿ. ಆಯಾಯ ಪ್ರದೇಶದ ಸಂಸ್ಕಾರ. ಆದರೆ ದೇವರಿಗೆ ಅಂತ ಮಾಡುವಾಗ ಒಂದಷ್ಟು ಶುಚಿತ್ವ ಅದಕ್ಕೂ ಮೇಲೂ ಪಾವಿತ್ರ್ಯತೆ ಅನ್ನುವುದು ಇರಬೇಕು. ಇದನ್ನು ಸಿದ್ದ ಪಡಿಸುವವರೂ ಹಾಗೆ ಸ್ನಾನ ಮಾಡುವ ಕ್ರಮ ಇದೆಯೋ ಇಲ್ಲವೋ ಅಂತ ನೋಡುವಾಗ ಅನ್ನಿಸುತ್ತದೆ. ಬಾಯಲ್ಲಿ ಧೂಮ ಮಾಡುತ್ತಾ ಸಿದ್ದ ಪಡಿಸುವ ಆಹಾರದ ರುಚಿಯನ್ನು ನೋಡುತ್ತಾ ಮಾಡುವುದನ್ನು ನೋಡಿದರೆ ಪ್ರಸಾದವಾದರೂ ಸೇವಿಸುವ ಮನಸ್ಸು ಹೇಗಾಗಬಹುದು. 

ಇಲ್ಲಿ ತಯಾರಿಸಿದ ಅದೇನೋ ಅನ್ನ, ಬಹುಶಃ ಮೊಸರನ್ನ ಇರಬೇಕು. ಮೊದಲ ದಿನ ತಯಾರಿಸಿಟ್ಟು ಹೋಗಿದ್ದರು. ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಮುಚ್ಚಿ ಹೋಗಿದ್ದರು ಏನೋ ಸತ್ಯ.  ಆದರೆ ಮುಂಜಾನೆ ನಾನು ಮುಂಜಾನೆ ನೋಡುವಾಗ ನಾಯಿ ಬೆಕ್ಕು ಹೆಗ್ಗಣ ಅಲ್ಲೇ ಓಡಾಡುತ್ತಿದ್ದವು. ಇನ್ನು ನಾಯಿ ಕೇವಲ ಮೂಸುತ್ತದೆ ಎಂದು ವಿಶ್ವಾಸ ಇಟ್ಟರೆ ಅದು ಮೂರ್ಖತನವಾಗಬಹುದು. ಅದು ತನ್ನ ಸಹಜ ಸ್ವಭಾವವನ್ನು ಹುಟ್ಟುಗುಣವನ್ನು ಬಿಟ್ಟು ಬಿಟ್ಟರೆ ಅದು ಶ್ವಾನವಾಗುವುದಿಲ್ಲ.  ಮರುದಿನ ಅದನ್ನೇ ಪ್ರಸಾದ ಅಂತ ಕೊಡುವಾಗ ಅಯ್ಯೋ ಪಾಪ ಎನಿಸಿತು. ನಮ್ಮಮ್ಮ ಹೇಳಿದರು ಹಾಗೇ ಅಂತ ಇಲ್ಲಿ ಯಾವುದನ್ನು ಬಿಡುವುದಕ್ಕೆ ಸಾಧ್ಯವಿದೆ? ಅದನ್ನೆಲ್ಲ  ನೋಡಿದರೆ ತಿನ್ನುವುದಕ್ಕೆ ಯಾವುದೂ ಸೂಕ್ತವಲ್ಲ. ನೋಡಿದರೂ ನೋಡದಂತೆ ಇರಬೇಕು. ಹಲವು ಸಲ ನಮ್ಮ ಬಳಿಗೆ ಬರುವಾಗ ಸ್ವಚ್ಛವಾಗಿರುವ ಭಾವನೆ ಬಂದರೆ ಸಾಕು. ಮತ್ತೆ ದೇವರು ಎಂದರೆ ಅದು ನಮ್ಮ ಮನಸ್ಸಿನ ಭಾವನೆಗೆ ಸೀಮಿತವಾಗಿರುತ್ತದೆ. ಹಾಗಂತ ... ಹೀಗಾಗಿದೆ ಅಂತ ದೇವರು ಬಂದು ಹೇಳುವುದಿಲ್ಲ. ತನಗೇನು ಬೇಕೋ ಅಂತ ಯಾವ ದೇವರು ಹೇಳುವುದಿಲ್ಲ. ದೇವರು ಇರುವುದೇ ಭಕ್ತನ ಎಣಿಕೆಯಲ್ಲಿ. ಹಾಗಾಗಿ ತಾನೇನು ತನ್ನ ಮನಸ್ಸು ಪ್ರವೃತ್ತಿ ಏನು, ಅದಕ್ಕೆಹೊಂದಿಕೊಂಡು ದೇವರು ಇರುತ್ತಾನೆ. ಯಾಕೆಂದರೆ ನಮ್ಮ ಎಣಿಕೆಯಂತೆ ನಮ್ಮ ಮಕ್ಕಳೇ ಇರುವುದಿಲ್ಲ. ಹಾಗಾಗಿ ದೇವರಲ್ಲಿ ಅದನ್ನು ಕಂಡು ಅದನ್ನೇ ದೇವರಿಗೆ ಸಲ್ಲಿಸುವುದು.

ಆಹಾರ ತಯಾರಿಸಿದ ಪಾತ್ರೆಗಳನ್ನು ರಾತ್ರೆ ಹಾಗೇ ಬಿಟ್ಟು ಹೋಗಿದ್ದರು. ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಉಳಿದ ಅನ್ನ ಆಹಾರ ಹಾಗೇ ಉಳಿದಿತ್ತು. ಅದನ್ನು ತಿನ್ನುವುದಕ್ಕೆ ಬಂದ ನಾಯಿ ಆ ಪಾತ್ರೆಯ ಒಳಗೆ ಇಳಿದು ತಿನ್ನುತ್ತಿತ್ತು. ಮರುದಿನ ಅದೇ ಪಾತ್ರೆಯಲ್ಲಿ ಪ್ರಸಾದ ಸಿದ್ಧವಾಗುತ್ತಿತ್ತು. ಇದನ್ನು ಕಣ್ಣಾರೆ ಕಂಡ ಮೇಲೆ  ಯಾವ ದೇವರ ಪ್ರಸಾದವಾದರೂ ತಿನ್ನುವ ಧೈರ್ಯ ಆ ಭಗವಂತನಿಗೂ ಒದಗಿಸುವುದಕ್ಕೆ ಸಾಧ್ಯವಿಲ್ಲ. ಇನ್ನು ಈ ಆಹಾರ ತಿಂದರೆ ಆಗುವ ದೊಡ್ಡ ಉಪಕಾರವೆಂದರೆ ಭಗವಂತನ ಬಳಿಗೆ ಬೇಗನೇ ಹೋಗಿ ತಲಪಬಹುದು.  

             ದೇವರ ಪ್ರಸಾದ ಸೇವಿಸಿ ಪ್ರಾಣ ವಿಷ ಪ್ರಾಶಾನವಾಗಿ ಆಸ್ಪತ್ರೆ ಸೇರಿದ , ವೈಕುಂಠ ದರ್ಶನ ಮಾಡಿದ ನಿದರ್ಶನ ಹಲವಿದೆ. ಈ ರೀತಿ ಪ್ರಸಾದ ಸಿದ್ದವಾದರೆ ಸೇರುವ ಅವಧಿ ಕಡಿಮೆಯಾಗಿಬಿಡುತ್ತದೆ. ಹಾಗಾಗಿ ಕಾನೂನು ಇದೆ. ಪ್ರಸಾದ ವಿತರಣೆಯ ಮೊದಲು ಸಂಬಂಧ ಪಟ್ಟ ಇಲಾಖೆ ಮೊದಲು ಪರೀಕ್ಷೆ ಮಾಡಬೇಕು. ದೇವರ ನೈವೇದ್ಯ ದೇವರಿಗೆ ಅರ್ಪಣೆಯಾಗುವ ಮೊದಲು ರುಚಿ ನೋಡಬಾರದು. ಆದರೆ ನಮ್ಮ ಭಾವನೆಗಳಿಗೆ ಆಚರಣೆಗಳಿಗೆ ಮೌಢ್ಯದ ಲೇಪನ ಬಳಿದು ನಂಬಿಕೆಯನ್ನು ಮೊದಲೇ ನಾಶಮಾಡುವ ಸನ್ನಿವೇಶದಲ್ಲಿ ಪ್ರಸಾದ ಎಂಜಲಾಗಿ ಅರ್ಪಿಸುವ ಅನಿವಾರ್ಯತೆಯನ್ನು ನಾವೇ ಸೃಷ್ಟಿ ಮಾಡುತ್ತಿದ್ದೇವೆ. ಒಳ್ಳೆ ಶ್ರದ್ಧೆಯಿಂದ ಪರಿಶುದ್ದವಾಗಿ ನೈವೇದ್ಯ ಸಿದ್ದ ಪಡಿಸುವವರಿಗೆ  ನಿಯಮ ಭಾವನೆಗೆ ಧಕ್ಕೆಯನ್ನು ತಂದು ಕೊಡುತ್ತದೆ. ಆದರೆ ಅದಾವುದರ ಪರಿವೆ ಇಲ್ಲದೇ ಈ ರೀತಿ ಪ್ರಸಾದ ಸಿದ್ಧಪಡಿಸುವವರು ಉಳಿದ ಭಾವನೆಗೆ ಧಕ್ಕೆ ತರುವ ಕೆಲಸವನ್ನು ಮಾಡುತ್ತಾರೆ. 

ದೇವರು ಎಂದರೆ ಅದು ಪವಿತ್ರ ಸ್ಥಾನ. ಎಲ್ಲವನ್ನೂ ನುಂಗಿ ತಾನು ಸ್ವಚ್ಛವಾಗಿರುವ ಅಗ್ನಿಯಂತೆ. ಅಗ್ನಿ ಎಲ್ಲವನ್ನೂ ಸುಡುತ್ತದೆ. ಹವಿಸನ್ನೂ ಸುಟ್ಟಂತೆ ಕಸ ಮಾಲಿನ್ಯವನ್ನೂ ಸುಟ್ಟು ಬಿಡುತ್ತದೆ, ಆ ಪಾವಿತ್ರ್ಯತೆ ನಮ್ಮ ಭಾವದಲ್ಲಿರಬೇಕು. ಜೀವನ ಎಂದರೆ ಎಲ್ಲ ದುರಿತವನ್ನೂ ಕಳೆದು ಪರಿಶುದ್ದತೆಯ ಕಡೆಗೆ ಹೋಗುವ ಯಾನ. ಅದೊಂದು ಸಂಕ್ರಮಣದ ಕಡೆಗೆ ಚಲಿಸುವ ಪ್ರಯಾಣ, ಹಾಗಾಗಿ ದೇವರಿಗೆ ಸಂಬಂಧಿಸಿದ್ದೆಲ್ಲವೂ ಪರಿಶುದ್ದವಾಗಿ ಇರಬೇಕು ಎಂದು ತಿಳಿಯುತ್ತೇವೆ. ಸ್ನಾನ ಪಾನ ಎಲ್ಲವೂ ಇದರ ಸಂಕೇತ. ದೇವರು ಎಂಬುದು ಅಪವಿತ್ರವಾದರೆ ನಮ್ಮನ್ನು ಪವಿತ್ರಗೊಳಿಸುವ ಬೇರೆ ಯಾವ ಶಕ್ತಿಯೂ ಇರುವುದಿಲ್ಲ.  ಮೈ ತೊಳೆಯುವ ಮಾರ್ಜಕವೇ ಕೊಳೆ ಹಿಡಿದು ಮಲಿನವಾದರೆ ಇನ್ನು ನಮ್ಮ ಮೈ ಸ್ವಚ್ಛವಾಗುವ ಬಗೆಯಾದರೂ ಹೇಗೆ? ಮಣ್ಣು ಹೇಗಿದ್ದರೂ ಮಣ್ಣೇ. ಮಣ್ಣಲ್ಲಿ ಮಣ್ಣಾಗಿ ಹೋಗುವ ಈ ದೇಹ ಮನಸ್ಸು ಆತನಕ ಪವಿತ್ರವಾಗಿ ಇರಬೇಕು. ಅದು ಆ ಭಗವಂತನ ಇಚ್ಚೆಗೆ ಆತ ಪ್ರಸಾದಿಸಿದ ಈ ಜನ್ಮಕ್ಕೆ ನಾವು ಸಲ್ಲಿಸುವ ಕೃತಜ್ಞತೆ.

No comments:

Post a Comment