ಹಿಂದಿನ ಲೇಖನವೊಂದರಲ್ಲಿ ಬೆಂಗಳೂರಿನ ಕರ್ಕಶ ಆಟೋಗಳ ಬಗ್ಗೆ ಬರೆದಿದ್ದೆ. ಇದು ಒಂದು ರೀತಿ ಆ ಬಗೆಯದ್ದೆ. ಬೆಂಗಳೂರಿನಲ್ಲಿ ಮನೆಯಿಂದ ಹೊರಬಂದು ಒಂದು ಫರ್ಲಾಂಗು ದೂರ ರಸ್ತೆಯಲ್ಲಿ ನಡೆದರು ಸಾಕು ಕನಿಷ್ಠ ಒಂದೆರಡಾದರೂ ಕಾಂಡಿಮೆಂಟ್ಸ್ ಅಂಗಡಿ ಸಿಗದೆ ಇರಲಾರದು. ಏನು ಈ ಕಾಂಡಿಮೆಂಟ್ಸು ಅಂಗಡಿಗಳ ತೊಂದರೆ ಎಂದು ತಲೆ ಕೆರೆದುಕೊಳ್ಳುವ ಅವಶ್ಯಕತೆ ಇಲ್ಲ. ತೊಂದರೆ ಖಂಡಿತ ಆ ವ್ಯವಹಾರ ಮಾಡುವ ಬಡಪಾಯಿಗಳದ್ದಲ್ಲ ಬಿಡಿ. ಇದು ಇಲ್ಲಿನ ವಿಚಿತ್ರ ಜನಜೀವನದ ರೀತಿಯ ಪರಿಣಾಮ.
ಓಹ್ ಮಾತು ಎಲ್ಲೇಲ್ಲಿಗೋ ಹೋಯಿತು. ವಿಷಯ ಪ್ರಸ್ತಾಪಿಸುವಾಗ ಒಂದೊಂದೇ ಜ್ಞಾಪಕಕ್ಕೆ ಬಂದು ಬಿಡುತ್ತದೆ. ಯಾವುದೇ ವಿಷಯವಾದರು ಬೆಂಗಳೂರಿಗೂ ನಮ್ಮೂರಿಗೂ ಮೊದಲು ನಾವು ಹೋಲಿಕೆ ಮಾಡಿಬಿಡುತ್ತೇವೆ. ಇಲ್ಲೂ ಅದೇ, ಇರಲಿ ಬಿಡಿ.
ಇಲ್ಲಿನ ಕಾಂಡಿಮೆಂಟ್ಸ್ ಅಂಗಡಿ ಸಾಮಾನ್ಯವಾಗಿ ಅಂಗಡಿ ಚಿಕ್ಕದಾಗಿದ್ದು ಗಿರಾಕಿಗಳೆಲ್ಲ ಪುಟ್ ಪಾತ್ ನಲ್ಲೇ ಟೀ ಕಾಫಿ ಹೀರುತ್ತಾ ಅತ್ತ ಇತ್ತ ಹೋಗುವವರಲ್ಲಿ ಯಾರು ಅಂಗಡಿ ಗಿರಾಕಿ ಯಾರು ಪಾದಾಚಾರಿ ಎಂಬುದೇ ಮೊದಲು ಅರಿವಾಗುದಿಲ್ಲ. ಆದರೇನಂತೆ ? ಇಲ್ಲೇ ಇದೆ ತೊಂದರೆ. ನಾನು ಕಂಡ ಇಲ್ಲಿನ ವಿಚಿತ್ರ ಪದ್ದತಿಯಲ್ಲಿ ಒಂದು ಇದು. ಜನ ಕಾಫಿ ಚಹದ ಜತೆ ಸಿಗರೇಟ್ ಸೇದುವುದು. ಕಾಫಿ ಟೀ ಜತೆ ಸಿಗರೇಟ್ ಹೋಗೆಯನ್ನು ನುಂಗುವ ವಿಚಿತ್ರ ಕ್ರಮ ಇಲ್ಲಿ ನಾನು ಮೊದಲು ಕಂಡದ್ದು. ನಮ್ಮೂರ ಗೂಡಂಗಡಿಯಲ್ಲಿ ಚಹದ ಜತೆ ಎನಾದರೂ ಕುರುಕಲು ತಿಂಡಿಯೊ, ಬ್ರೆಡ್ ಬನ್ನು ಮುಂತಾದುವನ್ನು ತಿಂದರೆ ಇಲ್ಲೇನು ವಿಚಿತ್ರ ಖಯಾಲಿ ಹೊಗೆಯನ್ನು ನುಂಗುವುದೇ? ಪಾನೀಯದ ಜತೆ ಹೊಗೆ ಒಳ ಹೋದರೆ “ಕಿಕ್” ಸ್ವಲ್ಪ ಸಿಗುವುದೇ ಎಂದು ಆಶ್ಚರ್ಯವಾಗುತ್ತದೆ. ವಿಚಿತ್ರ ಜೀವನ ಕ್ರಮಗಳು.!! ಕಾಪಿ ಹೀರುತ್ತಾ ಹೋಗೆ ಬಿಡುತ್ತಿದ್ದರೆ ಪಾದಾಚಾರಿಯಾಗಿ ನಡೆದಾಡುವ ಧೂಮ ವ್ಯಸನಿಯಲ್ಲದವ ಏನು ಮಾಡಬೇಕು? ಉಸಿರು ಬಿಗಿ ಹಿಡಿಯಬೇಕೆ? ಬೆಂಗಳೂರಿನಲ್ಲಿ ಅತ್ಯಧಿಕ ವಾಹನದಹೊಗೆಯ ಜತೆಗೆ ಈ ಸಿಗರೇಟು ಧೂಮಪಾನದ ಅನಿವಾರ್ಯತೆಯನ್ನು ಎಲ್ಲರಿಗೂ ತಂದಿಡುವ ಈ ಮಂದಿಯನ್ನು ಏನೆನ್ನಬೇಕು? “ಧೂಮ ಪಾನ ಆರೋಗ್ಯಕ್ಕೆ ಹಾನಿಕರ !!!!” ಇದನ್ನು ಓದುತ್ತಾ ಹೊಗೆಬಿಡುವ ಮಂದಿಗೆ ಈ ಹೊಗೆ ಯಾರ ಆರೋಗ್ಯಕ್ಕೆ ಹಾನಿಕರ ಎಂದು ತಿಳಿಯದೋ ಏನೋ? ಒಂದು ಕೈಯಲ್ಲಿ ಟೀ , ಕಾಫಿ ಲೋಟ ಮತ್ತೋಂದು ಕೈಬೆರಳ ಸಂದಿ ಹೊಗೆಯುಗುಳುವ ಸಿಗರೇಟು. ಪ್ರತೀ ಗುಟುಕಿನೊಂದಿಗೆ ಬುಸು ಬುಸು ಹೊಗೆ ಅಕ್ಕ ಪಕ್ಕದಲ್ಲಿ ಸಂಚರಿಸುವವರ ಮುಖಕ್ಕೆ ಬಿಡುವ ಇವರಿಗೆ ಅಲ್ಪ ಪರಿಜ್ಞಾನವೂ ಇಲ್ಲವಲ್ಲ. ಇದೆಂತಹ ಕ್ರಮ? ಯಾರನ್ನು ಹೇಳಬಲ್ಲೆವು. ಜೀವನೋಪಾಯಕ್ಕೆ ಅಂಗಡಿ ಇಟ್ಟವನನ್ನೆ? ಅಲ್ಲ ಲೋಕವೇ ಹಾಳಾಗಲಿ ಎಂದು ಧೂಮ ಬಿಡುವ ಧೂಮಕೇತುಗಳನ್ನೆ? ಇವರ ಅನಾಗರಿಕ ಚಟಕ್ಕೆ ಮಿಕ್ಕವರನ್ನೇಕೆ ಬಲಿಪಶುವಾಗಿ ಮಾಡಬೇಕು?
ತೊಂದರೆ ಎಂಬುದು ಅತ್ತ ಇತ್ತ ಹೋಗುವವರಿಗೆ , ಸುತ್ತಲ ಪರಿಸರಕ್ಕೆ ಮಾತ್ರವಲ್ಲ , ಈ ಅಂಗಡಿ ಇರುವಲ್ಲೆ ಮೇಲೆ ವಾಸದ ಮನೆ ಇರುತ್ತದೆ ಎಂದಿಟ್ಟುಕೊಂಡರೆ..(ಸಾಮಾನ್ಯವಾಗಿ ಹೀಗೆ ಇರುತ್ತದೆ) ಮೇಲೆ ಮಹಡಿಯಲ್ಲಿ ಮನೆ ಮಾಡಿ ವಾಸಿಸುವ ಮಂದಿಗೆ ಈ ನಿತ್ಯ ಹೋಗೆಯಿಂದ ಮುಕ್ತಿ ಇದೆಯೇ? ಯಾರು ಯೋಚಿಸಬಲ್ಲ? ಸಣ್ಣ ಸಣ್ಣ ಮಗುವಿಗೂ ಹೃದಯ ಬೇನೆ ಶುರುವಾಗುವಾಗ ನಾವು ಇದರ ಬಗ್ಗೆ ಚಿಂತಿಸುವುದೇ ಇಲ್ಲ. ಅಷ್ಟೊಂದು ಅನಿವರ್ಯವೇ ಈ ಧೂಮ ಪಾನ? ತನಗೂ ಪರರಿಗೂ ಪರಿಸರಕ್ಕೂ ಮಾರಕವಾಗುವ ಈ ಚಟವನ್ನು ಅಷ್ಟೇಕೆ ಮೋಹಿಸುತ್ತಾರೆ ಎಂಬುದೇ ಆಶ್ಚರ್ಯ. ಬೆಂಗಳೂರಿನ ಯಾವುದೇ ಗಲ್ಲಿಯಲ್ಲಿ ನೋಡಿ ಹಲವು ಅಂಗಡಿಗಳಿವೆ. ಎಲ್ಲ ಅಂಗಡಿ ಪರಿಸರಕೂಡ ಸಿಗರೇಟು ವಾಸನೆಯಿಂದ ಗಬ್ಬೆದ್ದು ಹೋಗಿರುತ್ತದೆ. ಈ ಕಾಂಡಿಮೆಂಟ್ಸ್ ಎಂಬ ಧೂಮ ಹಂಚುವ ಕೇಂದ್ರದ ಬಗ್ಗೆ ಯಾರಿಗೂ ಏನೂ ಅನ್ನಿಸುವುದಿಲ್ಲವೇಕೆ?
ಬೆಳಗ್ಗಿನ ಹವಾಸೇವನೆಗಾಗಿ ವಾಕಿಂಗ್ ಹೋರಟೆವೋ....ಇನ್ನು ವಿಚಿತ್ರ ಕೇಳಿ. ಹತ್ತಿರದ ಪಾರ್ಕ್ ಈ ವಾಕಿಗಳಿಂದ ಭರ್ತಿಯಾಗಿರುತ್ತದೆ. ಮಂಗಳೂರಿನ ಥಿಯೇಟರ್ ಎದುರು ಸಿನಿಮಾ ಬಿಟ್ಟಾಗ ಹೊರಬರುವ ಜನಸಂದಣಿಯಂತೆ ಪಾರ್ಕ್ ನೊಳಗೆ ಜನ ಸಂದಣಿಸಿ ಹೋಗಿರುತ್ತಾರೆ. ನಾನಾ ಕಸರತ್ತು ಮಾಡುತ್ತಾ ತಮ್ಮ ಆರೋಗ್ಯ ಪ್ರಜ್ಞೆ ಜಾಗೃತವಾಗಿದೆ ಎಂದು ಪ್ರದರ್ಶನ ಮಾಡುತ್ತಾರೆ. ಅದರ ಮಧ್ಯೆ ಕೆಲವರು ಸಿಗರೇಟ್ ಸೇದುವುದು ಇರುತ್ತದೆ...!!! ಎಂತಹ ಆರೋಗ್ಯ ಪ್ರಜ್ಞೆ..?!!! ಪಾರ್ಕ್ ಗೆ ಬರುವುದೇ ಅಲ್ಪ ಸ್ವಲ್ವ ಹದಗೆಡುವ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಡುವುದಕ್ಕಾಗಿ. ಆದರೆ ಅಲ್ಲೂ ಈ ಧೂಮಕೇತುಗಳ ಹಾವಳಿ. ಯಾರನ್ನು ದೂರಬೇಕು?
ಸಾರ್ವಜನಿಕ ಜಾಗಗಳಲ್ಲಿ ಧೂಮ ಪಾನ ನಿಶಿದ್ದ. ಇದು ಸುಪ್ರೀಂ ಕೊರ್ಟ್ ಆದೇಶಿಸಿದ ಕಾನೂನು. ಅದನ್ನು ಊಹಿಸಿಸುವಾಗಲೇ ಎಷ್ಟೊಂದು ಹಾಸ್ಯಾಸ್ಪದವಾಗಿ ಈ ಕಾನೂನುಗಳನ್ನು ಮಾಡಿಬಿಡುತ್ತಾರೆ. ಸ್ವಯಂ ಪ್ರಜ್ಞೆ ಇಲ್ಲವಾದರೆ ಯಾವ ಕಾನೂನು ಇದ್ದು ಏನು ಪ್ರಯೋಜನ?
ಮೊನ್ನೆ ಒಂದು ಪೋಲೀಸ್ ಸ್ಟೇಶನ್ ಎದುರು ನಡೆದು ಕೊಂಡು ಹೋಗುತ್ತಾ ಇದ್ದೆ. ಸ್ಟೇಶನ್ ನಿಂದ ಅನತಿ ದೂರದಲ್ಲೇ ಇದೇ ರೀತಿ ಒಂದು ಅಂಗಡಿ.ಕಾನ್ಸ್ ಟೇಬಲ್ ಒಬ್ಬಾತ ಕೈಯಲ್ಲಿ ಟೀ ಕಪ್ ಹಿಡಿದು ಮತ್ತೊಂದು ಕೈಯಲ್ಲಿ ಸಿಗರೇಟ್ ಸೇದುತ್ತ ಬುಸ ಬಸ ಹೊಗೆಯನ್ನು ಪಾದಾಚಾರಿಗಳಿಗೆ ನೈವೇದ್ಯ ಮಾಡುತ್ತಿದ್ದರೆ.. ಪೋಲಿಸ್ ಸ್ಟೇಶನ್ ಗೋಡಿಯಲ್ಲಿ ಬರೆದ ಬರಹ ಅಣಕಿಸುತ್ತಿತ್ತು - “ ಕಾನೂನನ್ನು ಗೌರವಿಸುವವರನ್ನು ನಾವೂ ಗೌರವಿಸುತ್ತೇವೆ ” ಉಚ್ಚ ನ್ಯಾಯಾಲಯದ ಕಾನೂನೇ ಇಲ್ಲಿ ನಗೆ ಪಾಟಲಾಗಿರುವಾಗ ಜನಸಾಮಾನ್ಯನ ಬದುಕು ಅಹವಾಲು ನೋಡುವವರು ಯಾರು?